ಶುಕ್ರವಾರ, ಡಿಸೆಂಬರ್ 23, 2011

‘ಇಲ್ಲ’ದೊಳಗಿನ ಇರುವಿಕೆಗೆ...

ಬೇಕಿಲ್ಲ...
ತಿರುಗಿ ನೋಡಬೇಕಾಗಿಲ್ಲ..
ಅಡ್ಡ ತಿಡ್ಡ, ತಿರುವು ಮುರುವು, ಕೊರಕಲು ದಾರಿಯನ್ನು,
ಬತ್ತಿದ, ಒರತೆಯ ಒಸರನ್ನೂ ಕಾಣಿಸದ
ಹಳ್ಳ, ತೊರೆ, ಕೆರೆ, ನದಿ ಕಾಲುವೆಗಳನ್ನು

ಸೋತಿಲ್ಲ...
ಸೋಲಬೇಕಾಗಿಲ್ಲ ಭಾರ ಹೊತ್ತು ಹತ್ತು,
ನೀರು ಕುಡಿದು ದಪ್ಪಗಾದ ಹತ್ತಿಯೂ
ತೂಗಿದರೆ ತೋರಬಲ್ಲದು ಮಣ ಭಾರವನ್ನು
ಹಿಂಜಿ ಹಗುರಾದರೆ ತಲುಪಬಲ್ಲದು ಆಗಸವನ್ನು!

ಕಂಡಿಲ್ಲ...
ಕಾಣಲೇಬೇಕೆಂದಿಲ್ಲ ನಾನು-ನೀನು,
ಎಲ್ಲರನೂ ಕುಣಿಸುತಿಹ ಸೂತ್ರಧಾರನನ್ನು
ಕಂಡರೆ ಸಾಕು ಮಿಡಿವ ಎದೆಬಡಿತದಲಿ,
ಮನದ ತಿಳಿಗೊಳದಲವನ ಪ್ರತಿಬಿಂಬವನು

-ತೇಜಸ್ವಿನಿ ಹೆಗಡೆ

ಸೋಮವಾರ, ಡಿಸೆಂಬರ್ 12, 2011

ಮೊಟ್ಟೆಸಂಪಿಗೆ


Courtesy -http://hindumane.blogspot.com 

ಡೆಬಿಡದೇ ಸುಮಾರು ಎರಡು ತಾಸು ಹುಚ್ಚು ಹಿಡಿದಂತೇ ಸುರಿದ ಜಡಿ ಮಳೆ ಆಗಷ್ಟೇ ನಿಂತಿತ್ತು. ಎಲೆಗಳಿಂದ ಹನಿಯುತ್ತಿದ್ದ ಹನಿಗಳಿಗೆಲ್ಲಾ ಈಗ ಪರ್ವ ಕಾಲ. ಅಂಗಳದ ಮೂಲೆಯಲ್ಲಿ ತುಂಬಿದ್ದ ಮಣ್ಣು-ಕಲ್ಲುಗಳೆಲ್ಲಾ ಮಳೆಯ ಆರ್ಭಟಕ್ಕೆ ಹೆದರಿ ಕೊಚ್ಚಿ ಹೋಗಿ, ಅಂಗಳವನ್ನೆಲ್ಲಾ ಚೊಕ್ಕಾಗಿಸಿದ್ದವು. ಮಟಮಟ ಮಧ್ಯಾಹ್ನವಾಗಿದ್ದರೂ ರವಿ ಕರಿ ಮೋಡಗಳ ಭಯದಿಂದಾಗಿ ಇನ್ನೂ ತನ್ನ ಕಿರಣಗಳ ಕೋಲನ್ನು ಹರಿಸಿರಲೇ ಇಲ್ಲ. ಮಾಡಿನಿಂದ, ಎಲೆಗಳಿಂದ ಉದುರುವ ಮಳೆಹನಿಗಳ ಚಟ ಪಟ ಸದ್ದು, ಮೋಡದೊಳಗಿಂದಿಣುಕಿಯಾಡುವ ತುಂಟ ರವಿ, ತಂಪಾದ ಭುವಿಯು ತನ್ನೊಡಲಿಂದ ಹೊರ ಹಾಕುತ್ತಿದ್ದ ಧಗೆಯ ಕಂಪು- ಯಾವುದೂ ಸಾಧ್ವಿಯ ಮನಸನ್ನು ಅರಳಿಸಲಿಲ್ಲ. ಇಂದು ಅವಳ ಮನಸು ಬಹು ವ್ಯಗ್ರವಾಗಿತ್ತು. ಮನೆಯ ಮೆಟ್ಟಿಲುಗಳನ್ನಿಳಿದು ಮುಂದಿರುವ ತೋಟದ ದಣಪೆಯ ಮುಂದೆ ಬಂದು ಸುಮ್ಮನೇ ನಿಂತಳು. ತಣ್ಣಗೆ ಬೀಸುತ್ತಿದ್ದ ಘಟ್ಟದ ಗಾಳಿ ಮೈ ಮನವನ್ನು ಸೋಕಲು ಗಂಟಿಕ್ಕಿಕೊಂಡಿದ್ದ ಮೊಗವು ತುಸು ಸಡಿಲವಾಯಿತು. ಕ್ರಮೇಣ ಮೂಗಿನ ಹೊಳ್ಳೆಗಳಿಗೆ ಮಣ್ಣಿನ ಕಂಪೂ ಸೋಕಲು ಹಾಗೇ ಕಣ್ಮುಚ್ಚಿ ಒಂದು ಸಲ ಉಸಿರನ್ನು ಜೋರಾಗಿ ಒಳಗೆಳೆದುಕೊಳ್ಳಲು....ಉರಿಯುತಿದ್ದ ಒಡಲೊಳಗೆಲ್ಲಾ ತಂಪಿನ ಸಿಂಚನ. ಹಾಗೇ ಅರಳಿದ್ದ ಹೊಳ್ಳೆಗಳಿಗೆ ಇನ್ನೇನೋ ಹೊಸ ಪರಿಮಳ ಅಡರಲು ಮುಚ್ಚಿದ ಕಣ್ಗಳು ತೆರೆದುಕೊಂಡವು. ಪರಿಮಳದ ಮೂಲ ತುಸು ದೂರದಲ್ಲೇ ಇದ್ದ ಮೊಟ್ಟೆ ಸಂಪಿಗೆಯದಾಗಿತ್ತು. "ಛೇ ಇಂದು ದೇವರಿಗೆ ಹೂ ಕೊಯ್ಯುವಾಗ ಈ ಹೂವನ್ನು ಮರೆತೇ ಹೋದೆನಲ್ಲಾ..."ಎಂದು ತನ್ನನ್ನೇ ಬೈದುಕೊಳ್ಳುತ್ತಾ ಗಿಡದ ಬಳಿ ಬಂದಳು. ತುಸು ಹಳದಿ ಮಿಶ್ರಿತ ಬಿಳಿಬಣ್ಣದ ಹೂವುಗಳನ್ನು ನೋಡುತ್ತಿರುವಂತೇ ಮತ್ತೆ ಆಕೆಯ ಮನಸು ಮುದುಡಿತು.....ಈ ಗಿಡವನ್ನು ನೆಟ್ಟಿದ್ದ ರಾಘವಣ್ಣನನ್ನು ನೆನೆದು....ಗಿಡದೊಳಗಿನ ಮೊಟ್ಟೆಸಂಪಿಗೆಯನ್ನು ತನ್ನ ಸುನಂದಕ್ಕನ ಬಾಳಿಗೆ ಹೋಲಿಸಿಕೊಂಡು.

ನೋಡಲು ಸುಂದರವಾಗಿದ್ದರೂ, ಸಾಮಾನ್ಯ ಸಂಪಿಗೆಯಷ್ಟು ಸುಕೋಮಲವಾಗಿರದೇ, ತುಸು ದಪ್ಪಗಿದ್ದು, ಮೊಟ್ಟೆಯಾಕಾರದಲ್ಲಿ ಕಂಗೊಳಿಸುವ ಈ ಮೊಟ್ಟೆಸಂಪಿಗೆಯ ಕಂಪು ತುಸು ಮತ್ತೇರಿಸುವ ವಾಸನೆಯೆಂದರೂ ತಪ್ಪಲ್ಲ. "ಅದೇನೇ ಸಾಧ್ವಿ.. ಆ ಹೂವು ಅಂದ್ರೆ ನಿಂಗೆ ಅಷ್ಟು ಮೆಚ್ಚು. ಥೂ..ಸಂಪಿಗೆ ಪರಿಮಳದ ಮುಂದೆ ಇದ್ರದ್ದು ಒಂಥರ ವಿಚಿತ್ರ ವಾಸನೆಯಪ್ಪಾ..."ಎಂದು ಗೆಳತಿ ಸ್ನೇಹಳ ಮಾತಿಗೆ ನಗುವುಕ್ಕಿ ಬರುತಿತ್ತು. ಕೈಲಿದ್ದ ಹೂವನ್ನು ಮತ್ತಷ್ಟು ಅವಳ ಮೂಗಿನ ಬಳಿ ಹಿಡಿದಿಡಿದು ಓಡಿಸಿಕೊಂಡು ಹೋಗುತ್ತಿದ್ದಳು ಸಾಧ್ವಿ. "ಸ್ನೇಹ ನಿಂಗೇನು ಗೊತ್ತು ಈ ಹೂವಿನ ಸೌಂದರ್ಯ.....ನೋಡೋಕೆ ಎಷ್ಟು ಚೆನ್ನಾಗಿದೆ... ಎಲ್ಲಾ ಹೂವಿಂದೂ ಒಂದೇ ರೀತಿಯ ಪರಿಮಳ ಇರ್ಬೇಕು ಅಂದ್ರೆ ಹೇಂಗೆ? ವಿವಿಧತೆಯಲ್ಲೇ ಸೌಂದರ್ಯ ಇರೋದು ತಿಳ್ಕೋ"ಎಂದು ಬುದ್ಧಿ ಹೇಳಿ ಅದೇ ಹೂವುಗಳನ್ನೇ ಮತ್ತಷ್ಟು ಕೊಯ್ದು ಮಡಿಲು ತುಂಬಿಕೊಂಡರೆ ಸಾಕು, ಸ್ನೇಹ ಅಲ್ಲಿಂದ ಮಾಯವಾಗಿ ಬಿಡುತ್ತಿದ್ದಳು. ಹಳೆಯ ಸವಿನೆನಪುಗಳಿಂದ ಮತ್ತೆ ಗೆಲುವಾದ ಸಾಧ್ವಿ ಹೂವೊಂದನ್ನು ಕೊಯ್ದು ಹಾಗೇ ತನ್ನ ಕೆನ್ನೆಗೆ ತಾಗಿಸಿಕೊಂಡಳು. ಮನಸು ಮತ್ತೆ ಸುನಂದಕ್ಕಳ ಸುತ್ತಲೇ ಗಿರಕಿ ಹೊಡೆಯತೊಡಗಿತು. ‘ಮನುಷ್ಯನ ಬದುಕೂ ಈ ಮೊಟ್ಟೆಹೂವಿನಂತೆಯೇ ಸರಿ....ನೋಡಲು ದೊಡ್ಡದಾಗಿದ್ದು, ಇತರ ಪುಷ್ಪಗಳಿಗಿಂತ ಗಟ್ಟಿಯಾಗಿದೆಯೆಂದೆನ್ನಿಸುವ ಈ ಹೂವನ ಆಯುಷ್ಯವೂ ಒಂದೇ ದಿನದ್ದು! ಮೊಗ್ಗಾಗಿ ಹುಟ್ಟಿ..ಸಂಪೂರ್ಣ ಅರಳದೇ ಬಾಡಿ, ಉದುರಿ ಮಣ್ಣ ಸೇರುವ, ಪೂರ್ಣವಾಗಿಯೂ ಅಪೂರ್ಣವಾದ ಈ ಹೂವಿನ ಬಾಳಂತೇ ಆಗೋಯ್ತಲ್ಲಾ ತನ್ನ ಸುನಂದಕ್ಕನ ಬದುಕೂ....ಕೇಶವ ಬಾವನೂ ನೋಡಲು ಎಷ್ಟು ಚೆನ್ನಾಗಿದ್ದ....ಕ್ರೀಡಾ ಪಟುವಾಗಿದ್ದ ಆತನ ಕೈರಟ್ಟೆ, ತೊಳ್ಬಲಗಳನ್ನು ಕಂಡು ತಾನೆಷ್ಟು ಸಲ ತಮಾಷೆ ಮಾಡಿದ್ದಿಲ್ಲ ಅಕ್ಕನಲ್ಲಿ....ಮದುವೆಯಾಗಿ ಎರಡು ವರುಷವೂ ತುಂಬಿರಲಿಲ್ಲ. ಪುಟ್ಟ ಶ್ವೇತಳಿಗೆ ತಿಂಗಳಾರು ತುಂಬಿದಾಗಲೇ ಅಲ್ಲವೇ....ಎಲ್ಲರೊಂದಿಗೆ ಮಾತನಾಡುತ್ತಾ ನಗುತ್ತಾ, ನಗಿಸುತ್ತಾ ಕುಳಿತಿದ್ದವ ಏನಾಯಿತೆಂದು ಅರಿವಾಗುವ ಮುಂಚೆಯೇ ಅಲ್ಲಿಯೇ ಹೃದಯಾಘಾತದಿಂದ ಕುಸಿದು ಶಾಶ್ವತವಾಗಿ ಕಣ್ಮುಚ್ಚಿದ್ದ. ಅಲ್ಲಿಂದಲೇ ಅಲ್ಲವೇ ನೋವಿನ ಹೊಸ ಅಧ್ಯಾಯ ಸುನಂದಕ್ಕಳ ಬಾಳಲ್ಲಿ ಶುರುವಾಗಿದ್ದು? ಛೇ... ವಯಸ್ಸಾದರೂ ಎಷ್ಟು ಆಕೆಯದು...ತನಗಿಂತ ೩ ವರುಷಕ್ಕಷ್ಟೇ ದೊಡ್ಡವಳು. ೨೮ಕ್ಕೆಲ್ಲಾ ವೈಧವ್ಯ ಕಾಡಿದ ಆಕೆಯ ಬದುಕನ್ನು ಶಪಿಸಬೇಕೋ...ಇಲ್ಲಾ ಕತ್ತಲೆಯನೋಡಿಸುವ ಬೆಳಗಿನ ಕಿರಣದಂತೇ ದಿನದಿಂದ ದಿನಕ್ಕೆ ಬೆಳಗುವ ಮಗು ಶ್ವೇತಾಳನ್ನು ನೋಡಿ ಸಮಾಧಾನಿಸಬೇಕೋ?’ ಈ ಹೂವಿನಂತೇ ಅರಳುವ ಮುನ್ನವೇ, ಪರಿಮಳ ಎಲ್ಲೆಡೆ ಹರಡುವ ಮೊದಲೇ ಕಮರಿದ ಕೇಶವ ಬಾವ ಹಾಗೂ ಅವರಿಬ್ಬರ ವೈವಾಹಿಕ ಬದುಕಿನ ಅಂತ್ಯ ನೆನೆದು ಮನಸೆಲ್ಲಾ ಒದ್ದೆಯಾದಂತೆನಿಸಿತು ಸಾಧ್ವಿಗೆ. ಸ್ವಂತ ಅಕ್ಕನಲ್ಲದಿದ್ದರೂ, ಸ್ವಂತಕ್ಕಿಂತ ತುಸು ಹೆಚ್ಚೇ ಅನ್ನಿಸುವಂತೆ ಹಚ್ಚಿಕೊಂಡಿದ್ದಕ್ಕೋ ಏನೋ, ಏನೂ ಬಂಧವಿಲ್ಲದೆಯೂ ಹೊಸಬಂಧವನ್ನು ಸಾಧ್ವಿ ಹಾಗೂ ಪಕ್ಕದಮನೆಯ ಸುನಂದಳ ನಡುವೆ ಬೆಸೆದಿತ್ತು. ಹಾಗಾಗಿಯೇ ಸುನಂದಳ ನೋವು, ಸಂಕಟ ಕಂಡಾಗೆಲ್ಲಾ ಒಳಗೊಳಗೆ ಸಾಧ್ವಿಯೂ ಬೇಯುತ್ತಿದ್ದಳು.

-೨-

"ನಿಂಗೆ ಯಾವ ಗಳಿಗೆಯಲ್ಲಿ ಸಾಧ್ವಿಯೆಂದು ಹೆಸರಿಟ್ಟೆವೋ ನಾವು.. ಯಾವಾಗ ನೋಡಿದ್ರೂ ಮರ, ಗಿಡ, ಹೂವು, ಗುಡ್ಡ ಎಂದೆಲ್ಲಾ ಅಲಿತಾನೇ ಇರ್ತೀಯಾ.. ಸ್ವಲ್ಪ ನಿನ್ನ ಕಡೆ, ಮನೆ ಕಡೆ ಲಕ್ಷ್ಯಕೊಡೂದನ್ನು ಕಲ್ತುಕೋ ಮಾರಾಯ್ತಿ.... ಸನ್ಯಾಸಿ ಆಗೋಕೆ ಯೋಚ್ನೆ ಮಾಡ್ಬೇಡ. ಒಬ್ಳೇ ಮಗ್ಳು ನಮ್ಗೆ... ಕನ್ಯಾದಾನದ ಪುಣ್ಯ ಸಿಗ್ಬೇಕು ನೋಡು...ಮದ್ವೆ ವಯಸ್ಸಿಗೆ ಬಂದಿದ್ದೀಯಾ...ಕಡ್ಮೆ ವರ್ಷಾನಾ ನಿಂಗೆ? ನಮ್ಮ್ ಕಾಲ್ದಲ್ಲಿ ೧೮ ತುಂಬೋದ್ರೊಳ್ಗೇ ಮದ್ವೆಯಾಗೋಗ್ತಿತ್ತು. ಅದೇನೋ ನೀನು ಎಮ್ಮೆ ಕಟ್ತೀನಿ ಅಂದು ಕುಣ್ದೆ.. ನಿಮ್ಮಪ್ಪನೂ ಜೊತೆಗೆ ಕುಣ್ದ್ರು....ಈಗ ವಯಸ್ಸು ೨೫ ಆಗ್ತಿದೆ ಅನ್ನೋ ಜ್ಞಾನಾನೂ ಇಲ್ಲಾ ಅವ್ರಿಗೆ.. ಇನ್ನು ನೀನೋ ನಿನ್ನ ವಿಚಾರಗಳೋ... ಅಯ್ಯೋ... ಯಾವಾಗ ನೋಡಿದ್ರೂ ತತ್ವಜ್ಞಾನವನ್ನೇ ಆಡ್ತೀಯಾ... ಆದರ್ಶ ಮಣ್ಣೂ ಮಸಿ ಅಂತೆಲ್ಲಾ ಅದ್ಯಾರು ನಿನ್ನ ತಲೆ ತುಂಬ್ತಾರೋ... ಅಂಥ ಗಂಡು ಸಿಗೋದೇ ಕಷ್ಟ ನೋಡ್ಕೋ... ಆಮೇಲೆ ಮುದ್ಕಿ ಆಗ್ತೀಯಾ ಅಷ್ಟೇ..."ಎಂದೆಲ್ಲಾ ತಾಯಿ ಜಾನಕಮ್ಮಾ ವಟಗುಟುತ್ತಿದ್ದರೆ ಮಗಳು ಸಾಧ್ವಿ ಮಾತ್ರ ನಗುತ್ತಾ ಶಾಂತವಾಗಿ ಉತ್ತರಿಸುತ್ತಿದ್ದಳು. "ಅಮ್ಮಾ... ನೀನ್ಯಾಕೆ ಇಷ್ಟೆಲ್ಲಾ ತಲೆಬಿಸಿ ಮಾಡ್ಕೋತೀಯಾ? ಆಗ್ಬೇಕು ಅಂದಾಗ ಆಗೇ ಅಗುತ್ತೆ ಅಂತ ನೀನೇ ಆವತ್ತು ಹೇಳ್ತಿದ್ದೆ ನೆನ್ಪಿದ್ಯಾ? ಇಷ್ಟಕ್ಕೂ ಮದ್ವೆನೇ ಮುಖ್ಯ ಅಂದ್ಕೊಂಡು, ಅದ್ಕಾಗಿ ತಲೆಕೆಡ್ಸಿಕೊಂಡು, ಯಾರನ್ನಾದ್ರೂ ಒಪ್ಪೋಕೆ ಆಗೊತ್ತಾ? ನಾನು ಮದ್ವೆ ಆದ್ರೆ ಪುರುಷೋತ್ತಮನಂತಹ ಗಂಡನ್ನೇ ಆಗೋದು ನೋಡು.."ಎಂದು ತುಂಟನಗೆ ಬೀರಿದರೆ ಜಾನಕಮ್ಮನ ಬಿ.ಪಿ. ಮತ್ತೂ ಏರುತಿತ್ತು. "ಯಾರೇ ಅದು ಪುರುಷೋತ್ತಮ ನಮ್ಗೇ ಗೊತ್ತಿಲ್ದಿರೋನು?"ಎಂದು ದನಿ ಎತ್ತರಿಸಿದಾಗ ನಗು ಮತ್ತಷ್ಟೂ ಉಕ್ಕುತಿತ್ತು "ನನ್ನ ಪೆದ್ದಮ್ಮಾ... ಪುರುಷೋತ್ತಮ ಅಂದ್ರೆ ಶ್ರೀರಾಮಚಂದ್ರ.... ಸುಮ್ನೇ ಬಿ.ಪಿ. ಜಾಸ್ತಿ ಮಾಡ್ಕೋಬೇಡ. ಅಂಥ ಹುಡ್ಗ ಸಿಕ್ಕಿದ್ರೆ ಹೇಳು ಇಲ್ಲೇ, ಈಗ್ಲೇ ರೈಟ್ ಅಂತೀನಿ" ಎನ್ನುತ್ತಿರುವಾಗಲೇ ಸ್ನೇಹ ಒಳಗೆ ಬಂದಿದ್ದಳು. "ಆಹಾ... ಶ್ರೀರಾಮಚಂದ್ರ ಬೇಕೇನೇ ನಿಂಗೆ? ಅದೇ ಶ್ರೀರಾಮ ತನ್ನ ಪತ್ನಿಯನ್ನು ಯಾರೋ ಅಗಸನ ಮಾತು ಕೇಳಿ ಕಾಡಿಗಟ್ಟಿದಂವ? ಚೆನ್ನಾಗಿದೆ ಕಲ್ಪನೆ.."ಎಂದು ಅವಹೇಳಿಸಿದಾಗ ಮಾತ್ರ ಸಿಟ್ಟು ಉಕ್ಕೇರಿತ್ತು. "ನೋಡು ಸ್ನೇಹ...ಗೊತ್ತಿಲ್ದೇ ಯಾವ್ದನ್ನೂ ಯಾರನ್ನೂ ಕೀಳಾಗಿ ಮಾತಾಡ್ಬಾರ್ದು. ನಿಜ-ಸುಳ್ಳು ಇವೆರಡು ನಮ್ಮಂತಹ ಸಾಮಾನ್ಯರಿಗೆ ನಿಲುಕದ್ದು. ನಮ್ಮ ನಮ್ಮ ಬುದ್ಧಿ ಮಟ್ಟಕ್ಕೆ ಅಂತಹ ಮಹಾನ್ ವ್ಯಕ್ತಿಯನ್ನು ಇಳಿಸಿಕೊಂಡು ತೂಗಿ ನೋಡಿದರೆ ನಾವೇ ಸಣ್ಣವರಾಗ್ತೀವಿ... ಛೇ.. ನಿಂಗ್ಯಾಕೆ ಇದ್ನೆಲ್ಲಾ ಹೇಳ್ತೀನೋ.. ಮಹಾ ನೀನು ನನ್ಮಾತು ಕೇಳೋ ಹಾಂಗೆ.."ಎಂದು ಕಟುವಾಗಿ ನುಡಿದು ಅಲ್ಲಿದೆಂದ್ದು ನಡೆದಿದ್ದಳು. ಇವಳ ಈ ಪರಿಯಾಟ ಕಂಡು ಜಾನಕಮ್ಮಾ ಹಾಗೂ ಸ್ನೇಹ ದಂಗಾಗಿಹೋಗಿದ್ದರು. 

ಸಾಧ್ವಿಯೂ ಹಿಂದೊಮ್ಮೆ ಶ್ರೀರಾಮನ ಪ್ರತಿ ಇದೇ ಭಾವ ತಾಳಿದವಳಾಗಿದ್ದಳು. ಆದರೆ  ಸಕಾಲದಲ್ಲಿ ಅವಳಜ್ಜ ವೆಂಕಟ ಜೋಯಿಸರು ಹೇಳಿದ ಬುದ್ಧಿ ಮಾತುಗಳು ಅವಳ ಕಣ್ತೆರೆಸಿದ್ದಲ್ಲದೇ ಮದುವೆಯಾದರೆ ಉತ್ತಮ ಆದರ್ಶಗಳನ್ನು ಹೊಂದಿದ್ದ, ಏಕ ಪತಿವ್ರತಸ್ಥನಾಗಿಯೇ ಬದುಕಿದ್ದ, ಸೀತಾರಾಮನಂತಹ ಹುಡುಗನನ್ನೇ ಆಗಬೇಕೆಂಬ ಹುಚ್ಚು ಕಲ್ಪನೆ ಅವಳೊಳಗೆ ಬಲವಾಗಿ ಮನೆಮಾಡಿತ್ತು. "ತಂಗೀ.. ಎಲ್ಲಾ ಹೇಳುವುದೇ ನಿಜವಲ್ಲ.... ಶ್ರೀರಾಮ ಸಾಮಾನ್ಯ ಅಗಸನ ಮಾತು ಕೇಳಿ ಹಾಗೆ ಮಾಡಿದ, ಸುಳ್ಳು ಆರೋಪಕ್ಕೆ ಬೆದರಿ ಅಗ್ನಿ ಪರೀಕ್ಷೆ ಒಡ್ಡಿದ ಎಂದು ದೂರುವುದು ಸಲ್ಲ....ಆತ ನನ್ನ ನಿನ್ನಂತೆ ಸಾಮಾನ್ಯನಲ್ಲ. ಮಹಾರಾಜನಾಗಿದ್ದ. ರಾಜನಾದವನಿಗೂ ಸಾಮಾನ್ಯ ಪ್ರಜೆಗೂ ವ್ಯತ್ಯಾಸವಿದೆ. ಮಹಾರಾಜನಿಗೆ ಅವನದೇ ಆದ ಇತಿ-ಮಿತಿ, ಕಟ್ಟಳೆ ಇರುತ್ತದೆ. ತನ್ನ ಪ್ರಜೆಗಳನ್ನೆಲ್ಲಾ ತನ್ನವರಂತೇ, ಮಕ್ಕಳಂತೇ ಸಲಹಿ, ಅವರ ಮನಸನ್ನೂ ಅರಿತು ರಾಜ್ಯಭಾರ ನಡೆಸಬೇಕಾಗುತ್ತದೆ. ರಾಮಾಯಣದಲ್ಲಿ ಎಲ್ಲಾ ಪಾತ್ರವೂ ಪೂರ್ವ ನಿರ್ಧಾರಿತ. ಏನೇ ಆದರೂ ಏನೇ ಬಂದರೂ ಏಕ ಪತ್ನಿವ್ರತಸ್ಥನಾಗಿರುವೆ ಎಂದು ಶಪಥಗೈದು ಅಂತೆಯೇ ಬಾಳಿ ಬದುಕಿದ ರಾಮನ ಅವತಾರ, ಉದ್ದೇಶ ನಮ್ಮಂತಹ ಸಾಮಾನ್ಯರ ಅರಿವನ್ನೂ ಮೀರಿದ್ದು. ಆ ದಾರಿ ಬಲು ಕಠಿಣ. ನಮ್ಮಿಂದ ಸಾಗಲಾಗದ್ದು. ಹಾಗಾಗಿಯೇ ಆತ ಪುರುಷೋತ್ತಮ...ಇದೆಲ್ಲಾ ಇಂದು ತಮ್ಮ ಸ್ವಾರ್ಥಕ್ಕಾಗಿಯೇ ಆಳ್ವಿಕೆ ಮಾಡುವ ಕೆಟ್ಟ ರಾಜಕೀಯಕ್ಕೆ, ರಾಜಕಾರಣಿಗಳಿಗೆ ಅರ್ಥವಾಗೊಲ್ಲ...ಅವ್ರೇನು ಮಾಡಿದ್ರು ಅದು ಅವ್ರಿಗಾಗಿ, ಅವ್ರ ಮನೆಯವ್ರಿಗಾಗಿ ಮಾತ್ರ....." ಎಂದೆಲ್ಲಾ ಸೋದಾಹರಣವಾಗಿ ಮನಮುಟ್ಟುವಂತೆ ಉಪದೇಶಿಸಿದ ಅಜ್ಜನ ಮಾತುಗಳು ಅವಳ ಮನದೊಳಗೆ ಘನವಾಗಿ ಮನೆಮಾಡಿದ್ದವು. ಆದರೆ ತನ್ನ ಮದುವೆಯ ಕುರಿತಾಗಿ ಕಲ್ಪನೆಕಾಣುವ ಹೊತ್ತಿನಲ್ಲೇ ಪ್ರೀತಿಯ ಸುನಂದಕ್ಕನ ಸಂಸಾರ ಪತನಗೊಂಡಿದ್ದು ನೋಡಿ ಆಘಾತಕ್ಕೊಳಗಾಗಿದ್ದಳು. ನೋವಿನ ಮೇಲೆ ನೋವೆಂಬಂತೆ ತನ್ನ ದೊಡ್ಡಪ್ಪನ ಮಗ, ಆತ್ಮೀಯ ರಾಘವಣ್ಣನ ಸಂಸಾರವೂ ಸುನಂದಕ್ಕನ ಬದುಕಂತೇ ಆದಾಗ ಮತ್ತೂ ಕುಸಿದು ಹೋಗಿದ್ದಳು ಸಾಧ್ವಿ. ಮದುವೆ ಎಂದರೇ ನೋವೇ? ಹೊಸ ಬಂಧ ಬೆಸೆದರೆ, ಸುಖದ ಜೊತೆ ಅಗಲುವಿಕೆಯ ಹೊಸ ನೋವು ಜೊತೆಗೇ ಬೆಸೆಯುತ್ತದೆಯೇ? ಆ ಸುಖವೂ ಬೇಡ... ಆಮೇಲೆ ಸಿಗುವ ನೋವೂ ಬೇಡ... ಒಟ್ಟಿನಲ್ಲಿ ಮದುವೇ ಬೇಡ..ಎಂಬ ನಿರ್ಲಿಪ್ತತೆಯೆಡೆ ಅವಳ ಮನ ವಾಲುತಿತ್ತು. 

ರಾಘವಣ್ಣ ಹಾಗೂ ಜ್ಯೋತಿಯತ್ತಿಗೆಯ ಬದುಕೂ ಎಷ್ಟು ಸುಂದರವಾಗಿತ್ತಲ್ಲಾ...ಮಗ ವಸಿಷ್ಠನಿಗೆ ನಾಲ್ಕಾಗಿತ್ತೋ ಇಲ್ಲವೋ..ರಿಕ್ಷಾದಲ್ಲಿ ಹೋಗುತ್ತಿದ್ದ ಜ್ಯೋತಿಯತ್ತಿಗೆಯೆಡೆ ಮರಣ ವೇಗವಾಗಿ ಮುನ್ನುಗಿದ ಲಾರಿಯೊಂದರಮೂಲಕ ಬಡಿದಪ್ಪಳಿಸಿತ್ತಲ್ಲಾ.... ಮೂರು ನಿಮಿಷದಲ್ಲಿ ವಸಿಷ್ಠ ತಬ್ಬಲಿಯಾದ....ರಾಘವಣ್ಣನ ಕಣ್ಣಲ್ಲಿ ಅನಾಥ ಕಳೆ. ತನ್ನ ಪ್ರೀತಿ ಪಾತ್ರರಿಬ್ಬರ ಬದುಕೂ ದುರ್ವಿಧಿಗೆ ಬಲಿಯಾದದ್ದು ನೋಡಿ ಒಂದು ರೀತಿಯ ನಿರ್ಲಿಪ್ತತೆ, ನಿರುತ್ಸಾಹ ತುಂಬಿತ್ತು ಸಾಧ್ವಿಯಲ್ಲಿ.  ಸಮಾಜ, ಅದರೊಳಗಿನ ಕೆಲವು ಜನರ ಮಾತು, ವರ್ತನೆಗಳು ಮಾತ್ರ ಅವಳಿಗೆ ದೊಡ್ಡ ಪ್ರಶ್ನೆಯಾಗಿತ್ತು. ಅಲ್ಪಜ್ಞರ ಮಾತುಗಳು ಅವಳನ್ನು ಮತ್ತಷ್ಟು ಹಿಂಸಿಸುತ್ತಿದ್ದವು. 

-೩-

ಇಂದು ಅವಳ ಮನೆಯಲ್ಲಿ ಸತ್ಯನಾರಾಣ ಪೂಜೆ. ಎರಡಂಕಣದ ಮನೆಯ ಮೂಲೆ ಮೂಲೆಯನ್ನೂ ನೆಂಟರಿಷ್ಟರು, ಆಪ್ತೇಷ್ಟರು ತುಂಬಿದ್ದಾರೆ. ಜನವಿದ್ದಲ್ಲಿ ಮಾತುಗಳಿಗೇನು ಬರ? ಪುಟ್ಟ ಊರಾಗಿದ್ದರಿಂದ ಸುದ್ದಿ ದೂರದ್ದಾಗಿರದೇ ಹತ್ತಿರದೊಳಗೇ ಸುಳಿಯುವುದು ಸಹಜ. ಅಂತೆಯೇ ಸುನಂದ ಹಾಗೂ ರಾಘವನ ಬದುಕಿನ ಸುತ್ತವೇ ಸುತ್ತತೊಡಗಿತು.
"ಪಾಪ.. ಸುನಂದ... ಅವ್ಳಿಗೆ ಇಷ್ಟು ಚಿಕ್ಕ ವಯಸ್ಸಿನಲ್ಲೇ ಹೀಗಾಗ್ಬಾರ್ದಿತ್ತು.. ಪುಟ್ಟ ಮಗುವಿನ ಜವಾಬ್ದಾರಿ ಬೇರೆ.. ಅದ್ರಲ್ಲೂ ಹೆಣ್ಮಗು. ನಾಳೆ ಅಪ್ಪ ಇಲ್ಲದ ಹೆಣ್ಮಗುವಿನ ಓದು, ಮದ್ವೆ ಎಲ್ಲಾ ಹೇಗೆ ಮಾಡ್ತಾಳೋ..ಪ್ಚ್...ಪಾಪ.."ಎಂದು ಮೂಲೆ ಮನೆ ಸಾವಿತ್ರಿ ಬಾಯೆಳೆದರೆ..
"ಹೌದೇ ಸಾವಿತ್ರಿ.. ನಿಜ.. ಹೀಗಾಗ್ಬಾರ್ದಿತ್ತು....ಆದ್ರೆ ಅವ್ಳ ನೋಡಿದ್ರೆ ದುಃಖ ಇದ್ದ ಹಾಗೇ ಕಾಣ್ಸೊಲ್ಲ ನೋಡು.... ಮಗ್ಳ ಜೊತೆ ನಗ್ತಾ ಆಡ್ತಾ ಇರ್ತಾಳಪ್ಪಾ... ಯಾರಿಗೊತ್ತು ಯಾರ ಮನ್ಸು ಹೇಂಗೆ ಎಂದು..?"ಎಂದು ಮೊದಲ ಬಾಣ ಬಿಟ್ಟಳು ಸುಶೀಲೆ.
"ಹ್ಂ...ಸರಿಯಾಗಂದೆ ನೋಡು ಸುಶೀಲಾ.... ಇನ್ನೂ ಬಳೆಗಳನ್ನ, ಹೂವನ್ನ ತೆಗೀಲಿಲ್ಲ....ಎಲ್ರ ಹಾಗೇ ಹೋಗಿ ಬಂದು ಮಾಡ್ತಾ ಇರ್ತಾಳೆ... ಯಾರೋ ಹೇಳ್ತಿದ್ರಪ್ಪಾ ಅವ್ಳಿಗೆ ಇನ್ನೊಂದು ಮದ್ವೆ ಮಾಡೋ ಯೋಚ್ನೆ ಇದೆಯಂತೆ... ಎಂಥಾ ಹುಚ್ಚು ಯೋಚ್ನೆ ಅಂತೀನಿ.. ಹೆಣ್ಮಗು ಇರೋ ಅವ್ಳನ್ನ ಯಾರು ಮದ್ವೆ ಆಗ್ತಾರೆ? ಅಲ್ಲಾ..ಇವ್ಳಿಗಾದ್ರೂ ಯೋಚ್ನೆ ಬೇಡ್ವಾ? ಗಂಡನ ಸಾವಿಂದ ಬುದ್ಧಿ ಕಲ್ತಾದ್ರೂ ಇನ್ನು ದೇವ್ರ ಧ್ಯಾನ ಮಾಡ್ತಾ ಮಗ್ಳ ಜೊತೆ ಇರೋಕಾಗೊಲ್ವಾ? ಅದೇನು ಹುಚ್ಚು ಆಸೆಯಪ್ಪಾ?" ಎಂದು ಮತ್ತೊಬ್ಬಳ ಬಾಣ ಹೊರಬಿತ್ತು. ಬಿಲ್ಲಿನ ಸಹಾಯವಿಲ್ಲದೇ ಸರಾಗವಾಗಿ ತಮ್ಮ ತಮ್ಮ ಮನಸಿನ ಬತ್ತಳಿಕೆಯಿಂದ ಅವ್ಯಾಹತವಾಗಿ ಬಿಡುತ್ತಿದ್ದ ವಾಗ್ಬಾಣಗಳು ಅಲ್ಲೇ ದೂರ್‍ರದಲ್ಲಿ ಕುಳಿತಿದ್ದ ಸಾಧ್ವಿಯ ಮನಸ್ಸನ್ನು ಘಾಸಿಗೊಳಿಸಿದವು. ‘ಛೇ...ಎಂತಹ ಕೀಳು ಜನರಪ್ಪಾ ಇವ್ರೆಲ್ಲಾ? ಇವ್ರನ್ನೆಲ್ಲಾ ಯಾಕೆ ಅಮ್ಮಾ ಪೂಜೆಗೆ ಕರೆದ್ಲೋ? ಇವ್ರಿಗೇನು ಗೊತ್ತು ಸುನಂದಕ್ಕನ ಸಂಕಷ್ಟ. ತಾನು ಹೋದಾಗಲೆಲ್ಲಾ ಮೇಲಿನ ತನ್ನ ಕೋಣೆಗೆ ಕರೆದೊಯ್ದು ಮನಸೋ ಇಚ್ಛೆ ಅತ್ತು, ತೋಡಿಕೊಂಡು ಹಗುರಾಗಿ, ಮತ್ತೆ ಕೆಳಗಿಳಿದು ಮಗಳ ಜೊತೆ ಮಗುವಾಗಿ ನಗುವ ಅಕ್ಕನ ಮನೋಧೈರ್ಯದ ಮುಂದೆ ಎಷ್ಟು ಅಲ್ಪರಪ್ಪಾ ಇವರೆಲ್ಲಾ? ಹೂವು, ಬಳೆ, ಕುಂಕುಮ ನಾವು ಹುಟ್ಟಿದಾಗಲೇ ನಮ್ಮೊಂದಿಗೆ ಬಂದ ಬಳುವಳಿಗಳು.....ನಮ್ಮ ಸಂಸ್ಕ್ರ್‍ಋತಿ ನಮಗಿತ್ತ ವರ. ಕಾಲುಂಗುರ, ಕರಿಮಣಿ ಮಾತ್ರ ಮದುವೆಯಾನಂತರದ್ದು. ಹಾಗಿದ್ದರೂ ಪತಿಯ ಪ್ರೀತಿಯ, ಸವಿ ನೆನಪಿನ ದ್ಯೋತಕವಾಗಿ, ಸಮಾಜದೊಳಗೆ ಬದುಕಲು ಬೇಕಾದ ಭದ್ರತೆಗಾಗಿ ಕರಿಮಣಿ, ಕಾಲುಂಗರ ತೆಗೆಯದಿರುವುದೂ ಇವರಿಗೆಲ್ಲಾ ಒಂದು ಕುಹಕವೇ? ಹೋದವರ ಸವಿನೆನಪು ಮುಂದಿನ ಬಾಳಿಗೆ ಬೆಳಕಾಗಬೇಕು... ಅದು ಬಿಟ್ಟು ಅವರೊಂದಿಗೆ ನಮ್ಮ ವರ್ತಮಾನವನ್ನೂ ಸುಡುವುದು ಎಷ್ಟು ಸರಿ? ಬಳೆ, ಹೂವು ಇವೆಲ್ಲಾ ಇದ್ದರೆ ಆಕೆ ಪತಿವ್ರತೆಯಲ್ಲವೇ? ಹಾಗಿದ್ದರೆ ಅದನ್ನಳೆಯುವ ಮಾನದಂಡವೇನು? ಇಂಥವರಿಗೆಲ್ಲಾ ಬದುಕು ಇನ್ನೂ ಕಹಿ ಪಾಠ ಕಲಿಸಿಲ್ಲವೇ? ಇನ್ನೊಂದು ಮದ್ವೆ..ಹ್ಂ... ಅದ್ರ ಬಗ್ಗೆಯೇ ಯೋಚಿಸಿಲ್ಲ ಅಕ್ಕ.... ಆದ್ರೂ ಒಂದೊಮ್ಮೆ ಆಗೋದಾದ್ರೆ ಅದ್ರಲ್ಲೇನು ತಪ್ಪು? ಹೆಣ್ಮಗುವಂತೆ, ಅದ್ರ ಭವಿಷ್ಯವಂತೆ....ಯಾರ ಭವಿಷ್ಯ ಯಾರ ಕೈಲಿದೆ? ಈಗ ಅಕ್ಕನ ಭವಿಷ್ಯ ಹೀಗಾಗೊತ್ತೆ ಅಂತ ಯಾರಿಗೆ ಗೊತ್ತಿತ್ತು? ಮರು ಮದುವೆಯಿಂದ ಅವರಿಬ್ಬರ ಭವಿಷ್ಯತ್ತು ಸರಿಯಾಗಬಾರದೆಂದಿದೆಯೇ? ಇವರನ್ನೆಲ್ಲಾ ವಿಚಾರಿಸಿಕೊಳ್ಳಲೇ ಬೇಕು.."ಎಂದು ಎಣಿಸಿದವಳೇ ಜಾಗದಿಂದೆದ್ದು ಬರಲು ಅವರ ಮಾತು ರಾಘವನ ಕಡೆ ಹೊರಳಿದ್ದು ಕಂಡು ಅಲ್ಲೇ ಸುಮ್ಮನೆ ಕುಳಿತಳು ಕುತೂಹಲದಿಂದ.
"ಅಲ್ವೇ ಸುಶೀಲ... ಪಾಪ ರಾಘವ ಅವ್ನ ಬದ್ಕೂ ಮೂರಾಬಟ್ಟೆ ಆಗೋಯ್ತಲ್ಲಾ.... ಛೇ... ಈಗಿನ್ನೂ ಮದ್ವೆ ಆಗೋ ವಯಸ್ಸು ಅವಂದು..ಅದ್ರ ಮೇಲೆ ಪುಟ್ಟ ಹುಡ್ಗನನ್ನು ನೋಡ್ಕೋ ಬೇಕು... ಹೊರಗೆ ಒಳ್ಗೆ ದುಡ್ದು ಹೇಗೆ ಸಂಭಾಳಿಸಿಯಾನು? ಪ್ಚ್... ತುಂಬಾ ಬೇಜರಾಪ್ಪಾ.."ಎಂದಿದ್ದೇ ತಡ ಸಾವಿತ್ರಮ್ಮನ ಮುಖದಲ್ಲಿ ಹುರುಪು ಮೂಡಿತ್ತು.

"ಹೌದೇ.. ನೀನಂದಿದ್ದು ನಿಜ...ರಾಜ್ಕುಮಾರನಂತಿದ್ದಾನೆ ನಮ್ಮ ರಾಘು...ಹೂಂ ಅಂದ್ರೆ ಯಾರೂ ಹೆಣ್ಣು ಕೊಟ್ಟಾರು. ಅಷ್ಟು ಆಸ್ತಿಯಿದೆ... ಮೇಲಾಗಿ ನೌಕರಿಯಿದೆ. ಯಾವ್ದಕ್ಕೂ ಅಂವ ಒಪ್ಪಬೇಕಲ್ಲಾ.." ಯಾವುದೋ ಯೋಚನೆ ಅವಳ ಮನದಲ್ಲಿ ಈಗಾಗಲೇ ಮೂಡಿದ್ದು ಅದರ ಸಾಕಾರಕ್ಕಾಗಿ ಸಂಚು ನಡೆಸುವಂತಿತ್ತು ಅವಳ ಮಾತು.

"ಸಾವಿತ್ರಿ... ಹೂಂ ಅನ್ನದೇ ಏನು? ಅವನಿಗೂ ಆಸೆ, ಆಕಾಂಕ್ಷೆ ಇರೊಲ್ವಾ? ನಾವೇ ಮುಂದಾಗ್ಬೇಕಪ್ಪಾ... ಒಳ್ಳೇ ಸ್ವಭಾವ. ತುಂಬಾ ಮ್ರ್‍ಋದು ಬೇರೆ... ಹುಡ್ಗಿ ಹುಡ್ಕಿದ್ರೆ ಇನ್ನೊಂದು ತಿಂಗ್ಳಲ್ಲೇ ಖಾಯಂ ಆಗೊತ್ತೆ.... ಅವ್ನೂ ಹೂಂ ಅಂದಿದ್ದಾನೆ ಅಂತ ಅವ್ನ ಚಿಕ್ಕಮ್ಮ ಹೇಳ್ತಿದ್ಲಪ್ಪ... ನೋಡೋಣ... ಯಾವ್ದಕ್ಕೂ ಒಂದು ಕಣ್ಣಿಟ್ಟಿದ್ರೆ ಆಯ್ತು.." ಎಂದಿದ್ದೇ ತಡ ಇನ್ನು ತನಗಲ್ಲಿ ಇರಲಾಗದೆಂಬಷ್ಟು ಹೇಸಿಗೆಯ ಭಾವ ಮೂಡಲು ಹೊರಗೋಡಿ ಬಂದಿದ್ದಳು ಸಾಧ್ವಿ. ಅಶಾಂತವಾಗಿದ್ದ ಅವಳ ಮನಸ್ಸನ್ನು ಪ್ರಕೃತಿಯ ಸಹಜ ಸೌಂದರ್ಯ, ಹಾಗೂ ಅವಳಿಷ್ಟದ ಹೂವಿನ ಸೊಬಗು, ಪರಿಮಳ ತಕ್ಕ ಮಟ್ಟಿಗೆ  ಶಾಂತಗೊಳಿಸಿದ್ದವು. ಕೈ ಹೂವಿನ ಮೇಲ್ಮೈಯನ್ನು ಸವರುತ್ತಿದ್ದರೂ ಮನಸು ಮಾತ್ರ ರಾಘವಣ್ಣನ ನಿಲುವಿನ ಬಗ್ಗೇ ಯೋಚಿಸುತಿತ್ತು. ‘ತನ್ನ ರಾಘವಣ್ಣ ಇಷ್ಟು ಬೇಗ ಮರು ಮದುವೆಗೆ ಒಪ್ಪಿದನೇ? ಛೇ... ಇದು ಸುಳ್ಳಾಗಿರಬಹುದು... ಮದುವೆ ಆಗ ಬಾರದೆಂದಲ್ಲಾ.... ಆದರೆ ಅತ್ತಿಗೆ ಹೋಗಿ ಇನ್ನೂ ಮೂರು ತಿಂಗಳಾಗಿಲ್ಲ!’ ಎಲ್ಲೋ ಏನೋ ಅಪಶ್ರುತಿ.....ಜ್ಯೋತಿಯತ್ತಿಗೆಯ ನಗುಮುಖವೇ ಸುಳಿಯಲು ಹಾಗೇ ಕಣ್ಮುಚ್ಚಿದಳು.

-೪-

ಅಪ್ಪ ಅಮ್ಮನಿಗೆ ಏಕಮಾತ್ರ ಸಂತಾನವಾಗಿದ್ದ ಸಾಧ್ವಿಗೆ ದೊಡ್ಡಪ್ಪನ ಮಗ ರಾಘವನೇ ಅಣ್ಣ, ಗುರು, ಫಿಲಾಸಫರ್ ಎಲ್ಲಾ. ಗುಡ್ಡದ ಮೇಲಿನ ಪೇರಲೆ ಮರ ಹಣ್ಣು ಬಿಟ್ಟಾಗಲೆಲ್ಲಾ ಅವನ ಕೈ ಹಿಡಿದೆಳೆದು ಮರ ಹತ್ತಿಸಿ ತನ್ನ ಅಂಗಿಯನ್ನೇ ಬುಟ್ಟಿಯಾಗಿಸಿ ಹಣ್ಣುಗಳನ್ನೆಲ್ಲಾ ತುಂಬಿ ಕೊಂಡು ಒಂದೇ ಒಂದನ್ನು ಅವನಿಗೆ ಕೊಟ್ಟು ಮಿಕ್ಕದ್ದನ್ನೆಲ್ಲಾ ತನ್ನ ಪ್ರೀತಿಯ ಗೆಳತಿ ಶಾರದೆಯ ಜೊತೆ ಹಂಚಿಕೊಂಡು ತಿನ್ನುವುದೆಂದರೆ ಅತ್ಯಂತ ಇಷ್ಟದ ಕೆಲಸ ಸಾಧ್ವಿಗೆ. "ಶಾರಿ"...ಅವಳು ಅಪ್ಪ, ಅಮ್ಮ ಎಂದು ಕರೆಯುವಷ್ಟೇ ಪ್ರೀತಿಯಿಂದ ಕರೆಯುವ ಹೆಸರು. ಅದಕ್ಕೆ ಕಾರಣ ನೋವಿನಲ್ಲೂ ಸದಾ ನಗುವ ಅವಳ ಹಸನ್ಮುಖ, ಬೆಳಗುವ ಕಣ್ಗಳು. ಹುಟ್ಟಿದ ವರುಷದೊಳಗೇ ಪೋಲಿಯೋಗೆ ಬಲಿಯಾಗಿ, ತನ್ನ ಎಡಗಾಲಿನ ಶಕ್ತಿಯನ್ನಷ್ಟೂ ಕಳೆದುಕೊಂಡಿದ್ದರೂ ಕೈಗಳಿಗೆ ಕ್ಲಚ್ಚಸ್‌ಗಳನ್ನಿಟ್ಟುಕೊಂಡೇ ಸ್ಕೂಲು, ಕಾಲೇಜುಗಳನ್ನು ಮುಗಿಸಿದ್ದಲ್ಲದೇ, ಉತ್ತಮ ಅಂಕಗಳನ್ನೂ ಪಡೆದು, ಅರ್ಹತೆಯಾಧಾರದಿಂದಲೇ ಬ್ಯಾಂಕಿನಲ್ಲಿ ಉದ್ಯೋಗ ಪಡೆದ, ಸ್ವಾವಲಂಬನೆಯ ಬದುಕಿಗೆ ಮಾದರಿಯಾದ, ಅವಳ ಸ್ವಾಭಿಮಾನ, ಛಲ, ಆತ್ಮವಿಶ್ವಾಸವೆಲ್ಲವೂ ಸಾಧ್ವಿಗೆ ಬಲು ಅಚ್ಚುಮೆಚ್ಚು. ಸ್ನೇಹಳ ಬಂಧ ಶಾಲೆಯಿಂದ ಶುರುವಾದದ್ದು....ಅತ್ತ ಇಳಿಯದ ಇತ್ತ ಬೆಳೆಯದ ಗೆಳೆತನ. ಆದರೆ ಶಾರದೆಯ ಸ್ನೇಹ ಪ್ರತಿದಿನ ಅನೂಹ್ಯ, ಅನನ್ಯ. ಎಷ್ಟೋ ಸಲ ರಾಘವಣ್ಣ ಹಾಗೂ ಶಾರಿಯನ್ನು ಜೊತೆಯಾಗಿ ಕಲ್ಪಿಸಿಕೊಂಡು ರೋಮಾಂಚಿತಳಾಗಿದ್ದಳು ಸಾಧ್ವಿ. ಆದರೆ ಅವಳ ಕಲ್ಪನೆಗೆ ರೆಕ್ಕೆ ಮೂಡುವ ಮೊದಲೇ ರಾಘವ ಜ್ಯೋತಿಯನ್ನು ಮೆಚ್ಚಿಯಾಗಿತ್ತು. ಇನ್ನೂ ಎಳತಾಗಿದ್ದ ಕನಸೊಂದು ಬಲಿಯುವ ಮೊದಲೇ ಚಿರುಟಿಹೋಗಿತ್ತು. 
‘ಎಲ್ಲ ಮರೆತಿರುವಾಗ, 
ಇಲ್ಲ ಸಲ್ಲದ ನೆವವ 
ಹೂಡಿ ಬರದಿರು ಮತ್ತೆ 
ಹಳೆಯ ನೆನಪೇ... ’-ವ್ಹಾ....ಎಷ್ಟೊಂದು ಚೆನ್ನಾಗಿದೆ ನಿಸಾರ್ ಅವರ ಈ ಕವಿತೆ. ಈಗಿನ ತನ್ನ ಮನಃಸ್ಥಿತಿಯೂ ಹೀಗಾಗಿದೆ ಎಂದೆನಿಸುತ್ತಿದೆ... ಛೇ... ಬೇಡ ಬೇಡವೆಂದರೂ ಹಳೆಯ ಸಿಹಿ-ಕಹಿ ನೆನಪುಗಳು ಇಂದೇಕೆ ಇಷ್ಟು ಧಾಳಿಯಿಡುತ್ತಿವೆಯೋ ಎಂದು ಮಿಸುಕಾಡಿದಳು ಸಾಧ್ವಿ. ಅವಳ ಮನಸು ಮತ್ತೆ ಮತ್ತೆ ಹಿಂದೆ ಓಡುತಿತ್ತು....

"ರಾಘವಣ್ಣ... ಸ್ವಾಂತಂತ್ರ್ಯ ಅಂದ್ರೆ ಏನೋ? ನಮ್ಮಲ್ಲಿ ಕೆಲವ್ರು ‘ಇಂಗ್ಲೀಷರ ಕಾಲವೇ ಚೆನ್ನಾಗಿತ್ತು.. ಈಗ ಎಲ್ಲವುದಕ್ಕೂ ಕಟ್ಟು ಪಾಡು.... ಪಬ್ಬಿಗೆ ಹೋಗ್ಬೇಡ.... ಲವ್ ಮಾಡ್ಬೇಡ....ಜಾತಿ ಬಿಡ್ಬೇಡ...ಎಂದೆಲ್ಲಾ ಗಲಾಟೆ ಮಾಡೋ ಈ ಸ್ವಾತಂತ್ರ್ಯ ಬೇಕಾಗಿರ್ಲಿಲ್ಲ...’ಎಂದೆಲ್ಲಾ ಕೂಗಾಡ್ತಾ ಇರ್ತಾರೆ... ನಂಗೂ ಈ ಪಬ್ಬು ಮಣ್ಣು ಮಸಿ ಎಲ್ಲಾ ಸರಿ ಬರೊಲ್ಲಾ...ಅದ್ರೂ ನಾವ್ಯಾಕೆ ಇನ್ನೊಬ್ರಿಗೆ ಹೀಂಗ್ ಮಾಡು ಹಾಂಗ್ ಮಾಡ್ಬೇಡ ಅನ್ಬೇಕು?" ಎಂದೊಮ್ಮೆ ಕೇಳಿದ್ದಾಗ ಅದೆಷ್ಟು ಚೆನ್ನಾಗಿ ವಿವರಿಸಿದ್ದ ರಾಘವಣ್ಣ. "ತಂಗಿ...ನೀನಿವಿತ್ತು ಈ ಪ್ರಶ್ನೆ ಕೇಳೋ ಸ್ವಾತಂತ್ರ್ಯ ಕೊಟ್ಟಿರುವುದೇ ನಮಗೆ ದೊರಕಿದ ಸ್ವಾತಂತ್ರ್ಯ. ಇನ್ನು ಹಾಗೆಲ್ಲಾ ಕೂಗಾಡ್ತಾರೆ ನೋಡು ಅವರಿಗೆ ದಾಸ್ಯದ ಅನುಭೂತಿಯಾಗಿರದಿರುವುದೇ ಕಾರಣ. ಆ ಭಗವಂತ ನಮಗೆಲ್ಲಾ ಆ ಕಷ್ಟದ ಅನುಭವ ಕಾಣಿಸಿಲ್ಲ. ಇಂದು ಕೆಲವರು ಸ್ವಾತಂತ್ರ್ಯ ಅಂದರೆ ಏನು? ಅದೆಲ್ಲಾ ಬುರುಡೆ....ಹಿಂದೆಯೇ ಚೆನ್ನಾಗಿತ್ತು.. ಈಗಿಲ್ಲ...... ನಮ್ಮನ್ನು ಎಲ್ಲವುದಕ್ಕೂ ತಡೆದರೆ ಕೇಳೊಲ್ಲ... ಎಂದೆಲ್ಲಾ ಕೂಗ್ತಾರೆ....ಅದೂ ಸಾರ್ವಜನಿಕವಾಗಿ. ಆದ್ರೂ ಯಾರೂ ಅವರನ್ನು ತಡೆಯೊಲ್ಲ....ಹೊಡೆಯೊಲ್ಲ... ಜೈಲಿಗೆ ಹಾಕೊಲ್ಲ. ಆದರೆ ಹಾಗೆ ತಮ್ಮ ಅಭಿಪ್ರಾಯವನ್ನು ಅಭಿವ್ಯಕ್ತ ಗೊಳಿಸಲು ದೊರಕಿರುವುದೇ ಸ್ವಾತಂತ್ರ್ಯ ಎನ್ನುವ ಸಾಮಾನ್ಯ ಅರಿವೂ ಅವರಿಗಿರುವುದಿಲ್ಲ. ಅಂತಹವರ ಬಗ್ಗೆ ಅಪಾರ ಅನುಕಂಪ ನನಗಿದೆ. ‘ಹೌದು..ಹಿಂದೆಯೇ ಚೆನ್ನಾಗಿತ್ತೆಂದೋ....ಇಲ್ಲಾ... ಹಿಂದಿಗೂ ಇಂದಿಗೂ ವ್ಯತ್ಯಾಸವಿಲ್ಲ’ ಎನ್ನುವವರಿಗೆ ಯಾರಿಗಾದ್ರೂ ಅಂದಿನ ಜೀವನದ ಸಾದೃಶ್ಯವಾಗಿದೆಯೇ? ಅವ್ರು ಯಾರಾದ್ರೂ ಇಂಗ್ಲೀಷರ ದೌರ್ಜನ್ಯವನ್ನು ಕಂಡಿದ್ದಾರಾ? ಉಣ್ಣಲು ಪದಾರ್ಥವಿಲ್ಲದಿದ್ದರೂ ಸರಿ....ಉಪ್ಪು, ಮೆಣಸು ನಂಜಿ ಉಂಡೇನು ಅಂತಿರುವವರಿಗೆ ಉಪ್ಪೇ ಇಲ್ಲದಂತೆ ಮಾಡಿದ... ಅದಕ್ಕೂ ಕರ ನಿಗದಿ ಮಾಡಿದ ಅಂದಿನ ಸರಕಾರವೇ ಲೇಸೆನ್ನುವವರಿಗೆ ಏನು ಹೇಳೋಣ? ಇನ್ನು ಯಾರೂ ಪ್ರೀತಿ ಬೇಡವೆಂದಿಲ್ಲ. ನಿರ್ಮಲ ಪ್ರೀತಿ ನಮ್ಮ ಎದೆಯೊಳಗಿದ್ದರೆ ಸಾಕು. ಅದನ್ನು ಸಾರ್ವಜನಿಕವಾಗಿ ತೋರಿಸಿ, ಅಶ್ಲೀಲತೆಯ ಪ್ರದರ್ಶನ ಮಾಡುವುದು ಸರಿಯೇ? ಅಂತಹ ಪ್ರೀತಿ ಕಾಮವೇ ಸರಿ....ಇಂದಿನವರು ನಾಳೆಯವರಿಗೆ ಮಾದರಿ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ತಕ್ಷಣ ಗದ್ದುಗೆ ಹಿಡಿದ ಕೆಲವು ರಾಜಕಾರಣಿಗಳ ತಪ್ಪು ಮಾರ್ಗದರ್ಶನದಿಂದಾಗಿಯೇ ಇಂದು ಈ ಸ್ಥಿತಿಗೆ ಭಾರತ ಬಂದಿರುವುದು. ಬಿಡುಗಡೆಗಾಗಿ ಅವರು ತೆತ್ತ ಬೆಲೆ ತೀರಾ ಅಲ್ಪ ಅಥವಾ ಏನೂ ಇಲ್ಲ ಎಂದರೂ ಸರಿಯೇ....ಅಂತಹ ಗೋಸುಂಬೆ ರಾಜಕಾರಣಿಗಳು ಹಾಕಿಕೊಟ್ಟ ಮಾರ್ಗದರ್ಶನವೇ ಇಂದಿನ ಕೆಲವು ಪೀಳಿಗೆಯವರಿಗೆ ಮಾದರಿಯಾಗಿದೆ. ತಪ್ಪು ದಾರಿ ಹಿಡಿದು ಪಬ್ಬು, ವಿದೇಶ, ಮದ್ಯ ಎಂದೆಲ್ಲಾ ಮೇಲೆಯೇ ಹಾರಾಡುತ್ತಾ ತಮ್ಮ ತಾಯ್ನೆಲವನ್ನೇ ಕಡಗಣಿಸುತ್ತಿದ್ದಾರೆ. ನಮ್ಮ ಇಂದಿಗಾಗಿ ಅಂದು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ, ಭಗತ್ ಸಿಂಗ್, ಸುಖದೇವ್, ಸುಭಾಶ್ಚಂದ್ರ ಬೋಸ್- ಮುಂತಾದವರ ಬಲಿದಾನದಿಂದಲೇ ನಮಗೆ ಈ ಸ್ವಾತಂತ್ರ್ಯ ಸಿಕ್ಕಿದ್ದು. ಅವರ ತ್ಯಾಗದ ಬಲದಮೇಲೆಯೇ ಇಂದು ಇವರೆಲ್ಲಾ ಈ ರೀತಿ ಕೂಗಾಡಲು ಸಾಧ್ಯವಾಗಿರುವುದು. ತಮ್ಮ ಸಮುದಾಯಕ್ಕೆ ಹಿಂದಾದ ಅನ್ಯಾಯವನ್ನೇ ಮುಂದಿಡುತ್ತಾ....ಅದನ್ನೇ ಮೆರೆಸುತ್ತಾ.. ಅದಕ್ಕಾಗಿಯೇ ಹೋರಾಡುತ್ತಾ...ಅನ್ನ, ನೀರು, ನೆಲವನ್ನಿತ್ತು ಪೋಷಿಸುವ ದೇಶವನ್ನೇ ದೂರುವ ಈ ಒಳ ದೇಶದ್ರೋಹಿಗಳಿದಂದಲೇ ಇಂದು ಭಾರತ ದುರ್ಬಲವಾಗುತ್ತಿರುವುದು. ಗಳಿಸಿದ್ದೇನೂ ಇಲ್ಲದಿದ್ದರೂ ಪಡೆದದ್ದನ್ನೂ ಉಳಿಸುವ ಒಳ್ಳೆಯತನ ಇರದವರು ಇವರೆಲ್ಲಾ....ಸ್ವಾತಂತ್ರ್ಯದ ನಿಜವಾದ ಅರ್ಥ ತಿಳಿಯದೇ, ಅದಕ್ಕೆ ಸ್ವಚ್ಛಂದತೆಯ ರೂಪ ಕೊಟ್ಟು...ಅದಕ್ಕಾಗಿಯೇ ಹಪಹಪಿಸುವ ಮೂಢರು. ಸ್ವಾತಂತ್ರ್ಯಕ್ಕೂ, ಸ್ವಚ್ಛಂದತೆಗೂ ವ್ಯತ್ಯಾಸವಿದೆ. ವಿಕೃತಿಯಿಲ್ಲದ ಸ್ವಚ್ಛಂದತೆಗೆ ಉತ್ತಮ ಉದಾರಣೆ ಪ್ರಕೃತಿ. ನಿಸರ್ಗದಿಂದ ನಾವೆಲ್ಲಾ ತಿಳಿಯಬೇಕಾದ್ದು ಬಹಳಷ್ಟಿದೆ....ನಿಂಗೂ ಈ ಸತ್ಯ ಗೊತ್ತಿದೆ ಅಲ್ವಾ....ಏನಂತೀಯಾ?"ಎಂದಾಗ ನನ್ನೊಳಗೆ ನಾನರಿಯದ ಅಪೂರ್ವ ಭಾವವೊಂದು ಮೂಡಿತ್ತಲ್ಲಾ! ಇಂತಹ ಆದರ್ಶಗಳಿರುವ ಅಣ್ಣ ಐದು ವರುಷದ ಅತ್ತಿಗೆಯ ಪ್ರೀತಿ, ಸ್ನೇಹಗಳನ್ನು ಮೂರು ತಿಂಗಳೊಳಗೆ ಮರೆಯುವುದು ಸರಿಯೇ? ಅದೇ ವರುಷ ಕಳೆದರೂ ಕೇಶವ ಬಾವನ ನೆನಪಲ್ಲೇ ಕೊರಗುತ್ತಿರುವ ಸುನಂದಕ್ಕನಿಗೆ ಮಾತ್ರ ಬೇರೆ ಬದುಕು. ಜನ ಯಾಕೆ ಇಷ್ಟು ತಾರತಮ್ಯ ಮಾಡುತ್ತಾರೋ? ಕಣ್ಣಿಗೆ ಕಾಣುವ ಸತ್ಯಕ್ಕೂ ಸುಳ್ಳಿನ ಲೇಪನ. ಹೆಣ್ಣೆಂದರೆ ಯಾಕಿಷ್ಟು ಅಸಡ್ಡೆಯೋ? ಎಂದೆಲ್ಲಾ ಚಿಂತಿಸಿ ಅವಳ ಮನಸು ಮತ್ತಷ್ಟು ಮುದುಡಿತು. ಒಳಗೆ ನಡೆಯುತ್ತಿರುವ ಪೂಜೆಯ ನೆನಪಾಗಿ, ‘ಅಮ್ಮ ಇನ್ನೆಷ್ಟು ತನ್ನ ಬೈಯ್ದುಕೊಳ್ಳುತ್ತಿರುವಳೋ...’ಎಂದೆಣಿಸಿ ಲಗುಬಗೆಯಿಂದ ಅಲ್ಲಿಂದೆದ್ದು ಹೊರಟವಳಿಗೆ ಅತ್ತಲೇ ಬರುತ್ತಿರುವ ರಾಘವಣ್ಣ ಕಾಣಲು ಅಪ್ರಯತ್ನವಾಗಿ ಅವಳ ಹುಬ್ಬು ಗಂಟಾಯಿತು.

"ಏನಮ್ಮಾ.. ಎಲ್ಲಾ ಬಿಟ್ಟು, ಎಲ್ರನ್ನೂ ಬಿಟ್ಟು ಇಲ್ಲಿಗೆ ಬಂದಿದ್ದೀಯಾ? ಹೋಗ್ಲೀ....ನಿನ್ನ ರಾಘವಣ್ಣನಿಗೆ ಕಂಪೆನಿ ಕೋಡೋಕಾದ್ರೂ ಬರ್ಬಾರ್ದಾಗಿತ್ತಾ?"ಎಂದು ನಗುತ್ತಾ ಅವಳನ್ನೂ ಎಳೆದುಕೊಂಡು ತಾನೂ ಅಲ್ಲೇ ಹಾಕಿದ್ದ ಕಲ್ಲು ಸೀಟಿನ ಮೇಲೆ ಕುಳಿತನು. "ನಾನ್ಯಾಕೆ ಕಂಪೆನಿ ಕೊಡ್ಲಿ ಇನ್ನು...? ನಿಂಗೆ ಕಂಪೆನಿ ಕೊಡೊಕೆ ಅಂತಾನೇ ಎಲ್ರೂ ಹೊಸ ಅತ್ಗೆ ತರ್ತಾರಂತಲ್ಲಾ.... ನೀನೂ ಒಪ್ಪಿದ್ದಾಗಿದೆಯಂತೇ... ಮೊದ್ಲೇ ಶುಭಾಶಯಗಳು ನನ್ನ ಕಡೆಯಿಂದ.."ಎಂದು ವ್ಯಂಗ್ಯವಾಗಿ ಖಾರವಾಗಿ ಹೇಳಿದ್ದೇ ತಡ...ರಾಘವನ ಮುಖ ಸಂಪೂರ್ಣ ಕೆಂಪಾಯಿತು. "ಛೇ... ಏನು ಅಂತಾ ಆಡ್ತಿದ್ದೀಯಾ? ಅಲ್ಲಾ ಯಾರೀಗ ಹಾಗೆ ಹೇಳಿದ್ದು? ಎಲ್ರ ಹಾಗೇ ನೀನೂ ಕೂಡ.. ನನ್ನ ಬಗ್ಗೆ..." ಎಂದು ಮುಂದೆ ಮಾತಾಡದಂತಾಗಿ ಅಲ್ಲೇ ಸುಮ್ಮನಾದ. ಉಕ್ಕಿ ಬರುವ ದುಃಖವನ್ನು ಕಷ್ಟ ಪಟ್ಟು ತಡೆ ಹಿಡಿಯುವಂತಿದ್ದ ಅವನ ಪರಿಯನ್ನು ನೋಡಿ ತುಂಬಾ ಪಶ್ಚಾತ್ತಾಪವಾಯಿತು ಸಾಧ್ವಿಗೆ. "ಸ್ಸಾರಿ ಅಣ್ಣಾ.... ನಾನೂ ಅವ್ರಿವ್ರ ಮಾತು ಕೇಳಿ..... ವೆರಿ ಸ್ಸಾರಿ..... ಏನೋ ಭಾವೋದ್ವೇಗಕ್ಕೆ ಒಳಗಾಗಿದ್ದೆ....ನಿನ್ನ ಕೇಳ್ದೇ ನಂಬಬಾರ್ದಿತ್ತು...ಕ್ಷಮ್ಸಿಬಿಡು ಪ್ಲೀಸ್.."ಎಂದು ಅವನ ಕೈ ಹಿಡಿದು ಗೋಗರೆದಳು.

ತುಸುಕಾಲ ಇಬ್ಬರೊಳಗೆ ಮೌನ ಮಾತಾಡಿತ್ತು. ಮುದ್ದಿನ ತಂಗಿಯ ಅಳುಮುಖವನ್ನು ಕಂಡು ತುಸು ಸಮಾಧಾನ ತಂದುಕೊಂಡ. ಮದೊಳಗೇನೋ ನಿರ್ಧರಿಸಿದವನೇ ಸಾಧ್ವಿಯ ಕಡೆ ತಿರುಗಿ ನಿಶ್ವಯದ ಧ್ವನಿಯಲ್ಲಿ "ಸಾಧ್ವಿ.. ನಂಗೆ ನೀನು ಅಂದ್ರೆ ಒಂಥರಾ ಹೆಮ್ಮೆ. ಚಿಕ್ಕ ವಯಸ್ಸಿನಲ್ಲೇ ನೀನು ಬೆಳೆಸಿಕೊಂಡಿರುವ ಉತ್ತಮ ವಿಚಾರಗಳನ್ನು ಕಂಡಾಗ ತುಂಬಾ ಸಂತೋಷವಾಗುತ್ತದೆ. ಅಂತಹ ತಂಗಿಯೂ ನನ್ನ ಇಷ್ಟು ಕೀಳಾಗಿ ಕಂಡಾಗ ನೋವಾಗುವುದು ಸಹಜ ಅಲ್ವೇ? ಆದ್ರೆ ನಿನ್ನ ಮನಃಸ್ಥಿತಿಯೂ ಅರ್ಥ ಆಗುತ್ತೆ.... ಆದ್ರೆ ಇವತ್ತು ನೀನು ಸರಿಯಾಗಿ ತಿಳ್ಕೋ.... ನಾನ್ಯಾರಿಗೂ ಯಾವತ್ತೂ ಹೇಳಿಲ್ಲ ಇನ್ನೊಂದು ಮದ್ವೆ ಮಾಡಿ ಎಂದು. ಅದಕ್ಕೆ ನನ್ನ ಸಮ್ಮತಿಯೂ ಇಲ್ಲ. ಜ್ಯೋತಿಯೊಂದಿಗೆ ಬಾಳಿದ ಐದು ವರುಷದ ಸವಿ ನೆನಪೇ ಸಾಕು ನಾನೂ ಹಾಗೂ ವಸಿಷ್ಠ ಬಾಳಲು. ಹ್ಮ್ಂ... ಒಂದೊಮ್ಮೆ ಮುಂದೆ ವಸಿಷ್ಠ ತಾಯಿಗಾಗಿ ಹಠ ಮಾಡಿದರೆ.... ನನಗೆ ಮನೆ-ಮನಸಿನಾಧಾರಕ್ಕಾಗಿ ಸಹಧರ್ಮಿಣಿ ಬೇಕೆಂದೆನಿಸಿದರೆ ನಿನ್ನ ಸುನಂದಕ್ಕನಂತಹವರನ್ನೋ ಇಲ್ಲಾ ಶಾರದೆಯಂತಹವರನ್ನೋ ಸ್ವಾಗತಿಸುತ್ತೇನೆ.. ಹಾಂ... ಇದರರ್ಥ ಅವರಿಗೆ ನಾನು ಏನೋ ದೊಡ್ಡ ಉಪಕಾರ ಮಾಡುತ್ತಿರುವೆನೆಂದೋ..ಇಲ್ಲಾ ನಾನು ದೊಡ್ಡ ಆದರ್ಶವಾದಿಯೆಂದೋ ತಿಳಿಯಬೇಕಾದ್ದಿಲ್ಲ. ನೋವಿಗೆ ನೋವೇ ಮದ್ದು... ಕಳೆದುಕೊಂಡದ್ದನ್ನು ಕಳೆದುಕೊಂಡಲ್ಲಿಯೇ ಹುಡುಕಬೇಕಂತೇ... ಸೂತ್ರವೇ ಇದೆಯಲ್ಲಾ... ನೆಗೆಟಿವ್ ಮತ್ತು ನೆಗೆಟಿವ್ ಸೇರಿ ಪೊಸಿಟಿವ್ ಆಗೊತ್ತೆ ಅಂತ... ಹಾಗೇ ಇಬ್ಬರ ನೋವೊಳಗೇ ನಲಿವನ್ನು ಅರಳಿಸುವ ಪ್ರಯತ್ನ ಅಷ್ಟೇ. ಅದೆಲ್ಲಾ ಮುಂದಿನ ಮಾತು. ಸದ್ಯಕ್ಕೆ ಜ್ಯೋತಿಯ ನೆನಪು ನಮ್ಮಿಬ್ಬರೊಂದಿಗಿದೆ. ಅದೇ ನನ್ನ ಬದುಕಿಗೆ ಸಾರಥಿಯಾಗಿ ಮುನ್ನಡೆಯಿಸುತ್ತದೆ...ಇಲ್ಲದ್ದೆಲ್ಲಾ ಹಚ್ಕೋ ಬೇಡ.... ನಗ್ತಾ ಇರು.. ನಗಿಸ್ತಾ ಇರು.."ಎಂದು ತಲೆ ಸವರಿ ನಕ್ಕ ಅಣ್ಣನ ಕಣ್ಣಲ್ಲಿ ಸತ್ಯದ ತೇಜಸ್ಸನ್ನೂ, ಪುರುಷೋತ್ತಮನ ಛಾಯೆಯನ್ನೂ ಕಂಡಳು ಸಾಧ್ವಿ. ಎಲೆಯ ಮರೆಯಲ್ಲಡಗಿದ್ದ ಅರೆಬಿರಿದ ಮೊಟ್ಟೆಸಂಪಿಗೆಯೊಂದು ಇಣುಕಿ ನಗುತ್ತಿತ್ತು.

(**ಉತ್ಥಾನ** ಪತ್ರಿಕೆಯಲ್ಲಿ ಪ್ರಕಟಿತ)

-ತೇಜಸ್ವಿನಿ ಹೆಗಡೆ.

ಮಂಗಳವಾರ, ಡಿಸೆಂಬರ್ 6, 2011

ಹಂಗು


ಬೇಕಿಲ್ಲ ನಿನ್ನೆಯ ನೆನಪುಗಳ ಹಂಗು
ಇಂದಿನ ವಾಸ್ತವಿಕತೆಯ ಬದುಕಲು,
ಅಂದುಕೊಂಡಾಗೆಲ್ಲಾ ಇರಿದು ಕೊಲ್ಲುವವು,
ವರ್ತಮಾನದ ಪ್ರತಿ ದಿವಸಗಳು...

ಲೇಪನವ ಹಚ್ಚಿ, ತೇಪೆಯನು ನೇಯ್ದು,
ಕೀವನ್ನು ಹೀರಿ, ಗಾಯವ ಮಾಗಿಸಲು
ಹಳೆಯ ನೆನಪುಗಳ ಸಾಥ್ ಪಡೆಯಹೋದರೆ,
‘ಹಂಗಿನರಮನೆಗಿಂತ ಹುಲ್ಲಿನ ಮನೆಲೇಸೆಂಬಂತೆ’
ಗಹಗಹಿಸಿ ನಕ್ಕು ನೂಕುವವು ಕನವರಿಕೆಗಳು!

ನಿಶೆಯ ನಶೆಯೇರಿಸುತ್ತಿದ್ದ ಶೀತಲ ಚಂದಿರ,
ಮನವ ಹಗಲಾಗಿಸುತ್ತಿದ್ದ ದಿವ್ಯ ದಿನಕರ,
ಹಕ್ಕಿಗಳ ಇಂಚರದೊಳಗಿದ್ದ ಸಂಗೀತ,
ಹರಿವ ತೊರೆಯೊಳಗಿದ್ದ ಕಿಲ ಕಿಲ
ಎಲ್ಲವೂ ಭೂತದೊಳಗೇ ಸೇರಿ, ಸೋರಿ,
ಇಂದು ಬರಿಯ ಕಣ್ಣುರಿ, ಕಣ್ಣೀರಾಗಿದ್ದೇಕೋ...?!

‘ನೀನ್ಯಾಕೋ ನಿನ್ನ ಹಂಗ್ಯಾಕೋ’ ಎಂದ ದಾಸರನ್ನೇ ನೆನೆದು
ಹಳೆಯ ನೆನಪಿನ ಹಂಗನ್ನೇ ತೊರೆಯ ಹೊರಟಂತೇ...
ಚುಚ್ಚಿ ಘಾಸಿಗೊಳಿಸುವ ವರ್ತಮಾನದ ಪ್ರತಿ ದಿವಸಗಳು
ಮುಕ್ತಿಪಡೆಯದ ಕಟು ವಾಸ್ತವಿಕತೆಗಳು....

-ತೇಜಸ್ವಿನಿ ಹೆಗಡೆ

ಸೋಮವಾರ, ನವೆಂಬರ್ 14, 2011

ನಾ ಕಂಡ ಅಬ್ರಹಾಂ ಲಿಂಕನ್


ವಸಂತ ಪ್ರಕಾಶನ ಹಲವು ವಿಖ್ಯಾತರ ವ್ಯಕ್ತಿಚಿತ್ರ ಮಾಲೆಯನ್ನು ಬಿಡುಗಡೆಗೊಳಿಸಿದೆ. ವಿಶ್ವೇಶ್ವರಯ್ಯ, ಮಾರ್ಟಿನ್ ಲೂಥರ್ ಕಿಂಗ್, ಮದರ್ ತೆರೇಸಾ, ಭೀಮಸೇನ ಜೋಶಿ, ಅಬ್ದುಲ್ ಕಲಾಂ, ಗಾಂಧೀಜಿ, ಸಚಿತ್ ತೆಂಡುಲ್ಕರ್, ಚಾಣಾಕ್ಯ, ಬುದ್ಧ - ಹೀಗೇ ಹಲವು ವಿಶ್ವ ವಿಖ್ಯಾತರ ಜೀವನ ಚರಿತ್ರೆಯನ್ನು, ಅವರ ಸಾಧನೆ, ಮಹತ್ಕಾರ್ಯಗಳನ್ನು ಅಕ್ಷರ ರೂಪದಲ್ಲೆ ಮನದೊಳಗೆ ಮನೆಮಾಡಿಸುವ ಪ್ರಯತ್ನ ಮಾಡಿದೆ.

ಪ್ರಧಾನ ಸಂಪಾದಕರಾದ ಶ್ರೀಯುತ ದಿವಾಕರ್ ಅವರ ಮಾತಿನಂತೇ - "ವಸಂತ ಪ್ರಕಾಶನದ ಈ ವಿಖ್ಯಾತರ ವ್ಯಕ್ತಿಚಿತ್ರ ಮಾಲೆಯ ಉದ್ದೇಶ ಯಾವುದೇ ವಿಚಾರವನ್ನು ಸ್ಥೂಲವಾಗಿಯಾದರೂ ಗ್ರಹಿಸಲಾಗದ, ಗ್ರಹಿಸಬಯಸಿದರೂ ಅದಕ್ಕೆ ಅಗತ್ಯವಾದಷ್ಟು ಸಮಯವಿಲ್ಲದ ಜನಸಾಮಾನ್ಯರ ಹಾಗೂ ವಿದ್ಯಾರ್ಥಿ, ವಿಧಾರ್ಥಿನಿಯರ ಮನೋವಿಕಾಸ. ಈ ಮಾಲೆಯಲ್ಲಿ ಧರ್ಮ, ತತ್ವಶಾಸ್ತ್ರ, ವಿಜ್ಞಾನ, ಅರ್ಥಶಾಸ್ತ್ರ, ಪರಿಸರ, ಉದ್ಯಮ, ರಾಜಕೀಯ, ಸಮಾಜ ಸುಧಾರಣೆ, ಸಾಹಿತ್ಯ, ಸಂಗೀತ, ಲಲಿತ, ಕಲೆ ಕ್ರೀಡೆ ಮೊದಲಾದ ಕ್ಷೇತ್ರಗಳಲ್ಲಿ ಹೊಸ ಹೊಸ ಆವಿಷ್ಕಾರಗಳನ್ನೂ, ಅದ್ವಿತೀಯ ಸಾಧನೆಗಳನ್ನೂ ಮಾಡಿದ ಮೇಧಾವಿಗಳ ಜೀವನಚಿತ್ರಗಳಿವೆ. ಇವುಗಳಲ್ಲಿ ಪ್ರತಿಯೊಬ್ಬ ಮೇಧಾವಿಯ ವಿಚಾರಗಳನ್ನು ಅವನ ಕಾಲದ ಸಾಮಾಜಿಕ ಹಾಗೂ ಬೌದ್ಧಿಕ ಪರಿಸರದಲ್ಲಿಟ್ಟು ವಿಶ್ಲೇಷಿಸಲಾಗಿದೆ."

ಇಂತಹ ಮೇಧಾವಿಗಳಲ್ಲಿ ಓರ್ವರಾದ "ಅಬ್ರಾಹಂ ಲಿಂಕನ್" ಅವರ ವಿಶೇಷ ವ್ಯಕ್ತಿತ್ವ, ಮಹತ್ ಸಾಧನೆ, ಹೋರಾಟಗಳನ್ನೊಳಗೊಂಡ ಕಿರು ಹೊತ್ತಗೆಯನ್ನು ಬರೆದು ಕೊಡುವ ಸೌಭಾಗ್ಯ ನನ್ನ ಪಾಲಿಗೆ ಒದಗಿತು. ಅಂತೆಯೇ ೫-೬ ತಿಂಗಳುಗಳ ಹಿಂದೇ ಬರೆದು ಕೊಟ್ಟಿದ್ದ ಈ ಹೊತ್ತಗೆಯ ೧೫ ಪ್ರತಿಗಳು ಇಂದು ಅಂದರೆ "ಮಕ್ಕಳ ದಿನಾಚರಣೆಯ ದಿನದಂದೇ" ನನ್ನ ಕೈ ಸೇರಿದ್ದು ನನಗೆ ಮತ್ತೂ ಸಂತೋಷ ತಂದಿದೆ.

ವಸಂತ ಪ್ರಕಾಶನ ಈ ಮಾಲಿಕೆಯನ್ನು ಹೊರ ತಂದಿರುವುದರ ಉದ್ದೇಶ ವಿದ್ಯಾರ್ಥಿಗಳ ಮನೋವಿಕಾಸ. ಅಂತೆಯೇ ತೀರಾ ಕಡಿಮೆ ಬೆಲೆಯಲ್ಲಿ ವಿಶ್ವ ವಿಖ್ಯಾತರ ವ್ಯಕ್ತಿ ಚಿತ್ರಣಗಳು ಮಾರುಕಟ್ಟೆಯಲ್ಲಿ ಲಭ್ಯ. "ವಿಖ್ಯಾತರ ವ್ಯಕ್ತಿಚಿತ್ರ ಮಾಲೆ : ಅಬ್ರಾಹಂ ಲಿಂಕನ್" - ಈ ಪುಸ್ತಕದ ಬೆಲೆ ಕೇವಲ ೩೫ ರೂ. ಸಾರ್ವಕಾಲಿಕ ಮೌಲ್ಯಗಳನ್ನು, ಧ್ಯೇಯಗಳನ್ನು ಜನರಿಗೆ ಕಾಣಿಸಿದ, ಅಂತೆಯೇ ಬದುಕಿ ಮಾದರಿಯಾದ ಮಹನೀಯರ ಜೀವನ ಚರಿತ್ರೆ ಕೇವಲ ವಿದ್ಯಾರ್ಥಿಗಳಿಗೆ ಮಾತ್ರವಲ್ಲ ಎಲ್ಲರಿಗೂ ಅವಶ್ಯಕವಾದದ್ದು.

ನಾನು ಅಬ್ರಹಾಂ ಲಿಂಕನ್ ಅವರ ಕುರಿತು ಬರೆಯಲು ಹೊರಟಾಗ ಬಹು ಹಿಂದೆ ಶಾಲೆಯ ದಿನಗಳಲ್ಲಿ ಅವರ ಬಗ್ಗೆ ತಿಳಿದುಕೊಂಡಿದ್ದ ಅತ್ಯಲ್ಪ ಮಾಹಿತಿಯನ್ನಷ್ಟೇ ನೆನಪಿಗೆ ತಂದುಕೊಂಡಿದ್ದೆ. "ಗುಲಾಮಗಿರಿಯನ್ನು ನಿರ್ಮೂಲನಗೊಳಿಸಲು ಹೋರಾಡಿದವರು" ಎಂಬ ಕಿರು ಚಿತ್ರಣವಷ್ಟೇ ನನ್ನೊಳಗಿತ್ತು. ಆದರೆ "ಲಾರ್ಡ್ ಚರ್ನ್‌ವುಡ್" ಅವರು ಬರೆದ “A Biography - Abraham Lincoln” ಪುಸ್ತಕವನ್ನು ಓದತೊಡಗಿದಂತೇ ಅವರ ವ್ಯಕ್ತಿಚಿತ್ರಣ ನನಗೆ ಸರಿಯಾಗಿ ತಿಳಿದದ್ದು. ನಾನು ತಿಳಿದುಕೊಂಡಿದ್ದು ಏನೂ ಅಲ್ಲಾ... ಅವರ ಸಾಧನೆ, ಹೋರಾಟ, ಸರಳತೆ, ಛಲ, ದೃಢತೆ ಅದೆಷ್ಟು ಅಗಾಧ, ಎತ್ತರವಾಗಿದೆ ಎಂದು ಅರಿವಾಯಿತು. ಇಂತಹ ನಾಯಕರ ಕೊರೆತೆಯೇ ಇಂದಿನ ನಮ್ಮ ದೇಶದೊಳಗೆ, ವಿಶ್ವದೊಳಗೆ ತುಂಬಿರುವ ಅವ್ಯವಸ್ಥೆಗೆ, ಭ್ರಷ್ಟತೆಗೆ ಮೂಲ ಕಾರಣವೇನೋ ಎಂದೆನಿಸಿತು. ದೇಶಭಕ್ತಿ, ಪ್ರಜಾಪ್ರಭುತ್ವ, ಸತ್ಯತೆ, ನಿಷ್ಠೆ, ಜ್ಞಾನದಾಹ, ಏಕತೆ, ಸ್ವಾಭಿಮಾನ - ಇವೆಲ್ಲವುದರ ಪರಿಭಾಷೆಗೆ ಸರಿಯಾದ ನಿಲುವು ಕಲ್ಪಿಸಿದ್ದಾರೆ, ಕಾಣಿಸಿದ್ದಾರೆ ಲಿಂಕನ್ನರು.

 ಈ ಮಹನೀಯರ ಜೀವನ ಚರಿತ್ರೆಯನ್ನು ಬರೆಯಲು ಪ್ರೇರೇಪಿಸಿ, ನನ್ನ ಹೆಸರನ್ನು ದಿವಾಕರ್ ಅವರಿಗೆ ಸೂಚಿಸಿದ "ಜೀವನ್ಮುಖಿ" ಬ್ಲಾಗಿನ ಶ್ರೀಯುತ ಪರಾಂಜಪೆ ಅವರಿಗೆ ಹಾಗೂ ಬರವಣಿಗೆಯ ಕಾಲದಲ್ಲಿ ನನ್ನೊಳಗೆ ಮೂಡಿದ ಸಂದೇಹಗಳಿಗೆ ಉತ್ತರ ಹುಡುಕಿಕೊಳ್ಳುವಲ್ಲಿ ಸಹಕರಿಸಿದ "ನಾವೇಕೆ ಹೀಗೆ?" ಬ್ಲಾಗಿನ ಶ್ರೀಮತಿ ಲಕ್ಷ್ಮೀ ಅವರಿಗೆ ತುಂಬಾ ಧನ್ಯವಾದಗಳು.

ನನ್ನ ಬರಹವನ್ನು ಒಪ್ಪಿ, ತಿದ್ದಿ, ಪ್ರಕಟಿಸಿದ ವಸಂತ ಪ್ರಕಾಶನಕ್ಕೆ ಹಾಗೂ ಪ್ರಧಾನ ಸಂಪಾದಕಾರಾದ ಎಸ್.ದಿವಾಕರ್ ಅವರಿಗೆ ತುಂಬಾ ಧನ್ಯವಾದಗಳು.


ಪುಸ್ತಕಗಳು ಇಲ್ಲಿ ಲಭ್ಯ - :
Vasantha Prakashana
No. 360
10th B Main, 3rd Block, 
Jayanagara, Bangalore - 560 011



-ತೇಜಸ್ವಿನಿ ಹೆಗಡೆ.

ಮಂಗಳವಾರ, ಅಕ್ಟೋಬರ್ 25, 2011

ಭೂಮಿ-ಸ್ತ್ರೀ-ಗೋವು : ಇವರ ನಡುವಿನ ಅವಿನಾಭಾವ ಬಂಧ



Courtesy- http://www.gits4u.com/women/womenf21.htm 
ಗೋವು ಧರ್ಮದ ಸಂಕೇತ. ಇಲ್ಲಿ ಧರ್ಮ ಎಂದರೆ ಗೌರವಿಸುವುದು. ಗೋವನ್ನು ಪೂಜಿಸುವುದು, ಆದರಿಸುವುದೇ ನಿಜ ಧರ್ಮ ಹಾಗೂ ನಮ್ಮ ಕರ್ತವ್ಯ. ಧರ್ಮ ಎಂದರೆ ಜೀವನವೂ ಹೌದು. ಜೀವನಕ್ಕೆ ಆಧಾರವಾಗುರುವಂಥದ್ದೇ ನಿಜವಾದ ಧರ್ಮ. ಆ ನಿಟ್ಟಿನಲ್ಲಿ- ಆರ್ಥಿಕವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ ನಮ್ಮೊಡನೆ ಒಂದಾಗಿ ಸಹಜೀವಿಯಾಗಿರುವ ಗೋವು  ಸುಖಜೀವನಕ್ಕೆ ಮೂಲಾಧಾರ ಎನ್ನಬಹುದು.

ಕೌಟಿಲ್ಯ ತನ್ನ ಅರ್ಥಶಾಸ್ತ್ರದಲ್ಲಿ ಹೇಳಿದ್ದಾನೆ... ಸುಖದ ಮೂಲ ಧರ್ಮ-ಧರ್ಮದ ಮೂಲ ಅರ್ಥ-ಅರ್ಥದ ಮೂಲ ರಾಜ್ಯ-ರಾಜ್ಯನಿರ್ವಹಣೆ ಸಮರ್ಪಕವಾಗಿದ್ದಲ್ಲಿ ಸುಖಜೀವನ ತನ್ನಿಂದ ತಾನೇ ಪ್ರಾಪ್ತಿಯಾಗುವುದೆಂದು. ಸಹಜೀವಿಗಳೊಡನೆ ಪರಸ್ಪರ ಗೌರವದಿಂದ ಇದ್ದರೆ, ಸ್ಪಂದಿಸುವ, ಸ್ಪಂದನೆಗೆ ಪ್ರತಿಸ್ಪಂದಿಸುವ ಮಾನವೀಯತೆಯಿದ್ದರೆ ಸುಖ ತನ್ನಿಂದ ತಾನೇ ಲಭ್ಯವಾಗುತ್ತದೆ... ಅಲ್ಲಿ ಧರ್ಮ ನೆಲೆಯಾಗಿರುತ್ತದೆ.

ಗೋವು ಎಂದರೆ ಮಾತೆ. ಮಕ್ಕಳನ್ನು ಸಲಹುವವಳು. ಹುಟ್ಟಿದ ಶಿಶುವಿಗೆ ತಾಯಿಯ ಹಾಲು ಎಷ್ಟು ಪ್ರಾಮುಖ್ಯವೋ, ತಾಯಿಯ ಹಾಲಿನ ಮುಂದೆ ಬೇರೆಲ್ಲವೂ ನಗಣ್ಯವೋ ಹಾಗೇ ಬೆಳೆವ ಮಕ್ಕಳಿಗೆ ಹಸುವಿನ ಹಾಲು ಅತ್ಯವಶ್ಯಕ. ಹಸುವಿನ ಹಾಲಿನೊಳಗಿರುವ ಪೌಷ್ಟಿಕತೆಯನ್ನು ಬೇರಾವ ಕೃತಕ ಪಾನೀಯಗಳೂ ನೀಡಲಾರವು. ಹುಟ್ಟಿದ ಕಂದನಿಗೆ ಕಾರಣಾಂತರಗಳಿಂದ ತಾಯಿಯ ಹಾಲು ಲಭ್ಯವಾಗದಿದ್ದಲ್ಲಿ ಥಟ್ಟನೆ ನೆನಪಿಗೆ ಬರುವುದು ಹಸುವಿನ ಹಾಲೇ, ಕುರಿ ಅಥವಾ ಆಡಿನ ಹಾಲಲ್ಲ. ಹಾಗಾಗೇ ಪುರಾಣಕಾಲದಿಂದಲೂ ಗೋವಿಗೆ ಮಾತೆಯ ಸ್ಥಾನ ನೀಡಿದ್ದಾರೆ. 

ಮನುಜನಿಗೆ, ಗೋವಿಗೆ ಸಕಲ ಜೀವಜಂತುಗಳಿಗೆ ಮೂಲಾಧಾರ "ಭೂಮಿ". ಇಳೆ, ಧರಾ - ಎಂಬೆಲ್ಲಾ ಹೆಸರನ್ನು ಹೊತ್ತಿರುವ ಭೂಮಿಯಲ್ಲೂ ಮಾತೆಯನ್ನೇ ಕಂಡಿದ್ದಾರೆ ನಮ್ಮ ಪೂರ್ವಿಕರು. ಭೂತಾಯಿಯ ಗರ್ಭದಿಂದ ಮೊಳಕೆ ಚಿಗುರೊಡದು ಫಲ ಹೊರಬಂದು ನಮ್ಮೆಲ್ಲರ ಹಸಿವು ನೀಗಲು ನೇಗಿಲೂಡಬೇಕು. ನೇಗಿಲೂಡಿ, ಪೈರು ಹೊರ ಹೊಮ್ಮಲು ಗೋಮಾತೆಯ ಪಾತ್ರವೇ ಮಹತ್ವವಾದದ್ದು. ತೆನೆಯೊಳಗಿನ ಹಾಲಿಗೆ ಸಗಣಿಯ ಗೊಬ್ಬರವೇ ಶ್ರೇಷ್ಠ. ಗೋವಿನ ಎಲ್ಲಾ ವಿಸರ್ಜನೆಗಳೂ ಅಮೂಲ್ಯವೇ. ಸಗಣಿಯಿಂದ ಹಿಡಿದು ಹಾಲಿನವರೆಗೂ, ಗೋಮೂತ್ರದಿಂದ ಹಿಡಿದು ತುಪ್ಪದವರೆಗೂ ಅತ್ಯವಶ್ಯಕ. ವೈಜ್ಞಾನಿಕವಾಗಿಯೂ ಪಂಚಗವ್ಯ ಅಂದರೆ ಗೋಮಯ (ಸಗಣಿ), ಗೋಮೂತ್ರ, ತುಪ್ಪ, ಮೊಸರು, ಹಾಲು - ಇವು ಔಷಧೀಯ ತತ್ವವನ್ನು ಒಳಗೊಂಡಿವೆ ಎಂಬುದು ಸಾಬೀತಾಗಿದೆ.

ಕುಟುಂಬ ನಿರ್ವಹಣೆಗೆ, ಜೀವನಾಧಾರಕ್ಕೆ ಗೋವಿನ ಸಂತತಿಯ ಹೆಚ್ಚಳಿಕೆಯಾಗಬೇಕಾಗಿದೆ. ಗೋಪಾಲನೆಗೆ ಮುಖ್ಯವಾಗಿ ಬೇಕಾಗಿರುವುದು ಸಹನೆ, ಸಂಯಮ ಹಾಗೂ ವಾತ್ಸಲ್ಯ. ಸ್ತ್ರೀ ತನ್ನ ಮಗುವನ್ನು ಕಾಪಿಡುವಂತೇ ಜೋಪಾನವಾಗಿ ಗೋವನ್ನು ಸಲಹುವಳು. ಗೋವಿನೊಡನೆ ಸಂಭಾಷಣೆಯನ್ನೂ ನಡೆಸಬಲ್ಲಳು. ತನ್ನ ಕುಡಿಯ ನೋವನ್ನು ಅರಿಯುವಂತೇ ಮೂಕಪ್ರಾಣಿಯ ಮೂಕಭಾಷೆಯನ್ನೂ ತಿಳಿಯಬಲ್ಲಳು. ಹಿಂದೆ ಕೊಟ್ಟಿಗೆಯೇ ಆಕೆಗೆ ಪ್ರಧಾನವಾಗಿತ್ತು. ಮುಂಜಾನೆಯ ಆರಂಭ ಮುಸ್ಸಂಜೆಯ ಸೂರ್ಯಾಸ್ತ ಕೊಟ್ಟಿಗೆಯಲ್ಲೇ ಆಗುವುದು ಪ್ರತೀತಿ. ಆಕೆಯ ಸ್ಪರ್ಶ, ಅನುನಯಿಸುವ ಮಾತು, ವಾತ್ಸಲ್ಯದಿಂದ ನೀಡುವ ಹಿಂಡಿ, ಹುಲ್ಲು-ಇವೆಲ್ಲವುಗಳಿಗೆ ಗೋವುಗಳೂ ಸ್ಪಂದಿಸುತ್ತವೆ. ಹಾಗಾಗಿಯೇ ಪ್ರತಿನಿತ್ಯ ತಮ್ಮನ್ನು ಮುದ್ದಿಸುವ ಒಡತಿ ಒಂದು ದಿನ ಕಾಣದಾದರೂ ತಿನ್ನುವುದನ್ನೂ, ಹಾಲು ನೀಡುವುದನ್ನೂ ನಿಲ್ಲಿಸಿಬಿಡುತ್ತವೆ. ಅಪರಿಚಿತರು, ಹೆಚ್ಚು ಕೊಟ್ಟಿಗೆಯನ್ನು ಹೊಕ್ಕದವರು ಹಾಲು ಕರೆಯಲೋ, ಹಿಂಡಿ ನೀಡಲೋ ಬಂದರೆ ತಿವಿಯಲೂ ಹಿಂಜರಿಯವು. ಅಷ್ಟೊಂದು ಉತ್ಕಟ ಬಂಧ ಅವರಿಬ್ಬರ ನಡುವೆ ಉಂಟಾಗಿರುತ್ತದೆ. 

ಆಪತ್ಕಾಲದಲ್ಲಿ ಕುಟುಂಬ ನಿರ್ವಹಣೆಗೆ, ತನ್ನ ಸಣ್ಣ ಪುಟ್ಟ ಖರ್ಚು ವೆಚ್ಚಗಳಿಗೆ ಮಹಿಳೆ ಆಧರಿಸುವುದು ಗೋಮಾತೆಯ ಹಾಲನ್ನೇ. ಹಾಲು, ಮೊಸರು, ತುಪ್ಪ-ಇವುಗಳ ಮಾರಾಟವೇ ಮಹಿಳೆಯ ಧನಸಂಗ್ರಹಕ್ಕೆ ಮೂಲ ಆಧಾರ. ಹಿಂದೆ ಋಷಿ-ಮುನಿಗಳ ಕಾಲದಲ್ಲಿ ಒಂದು ಗೋವಿನಿಂದಲೇ ಅವರ ಕುಟುಂಬದ ನಿರ್ವಹಣೆಯಾಗುತ್ತಿತ್ತು. ಈಗಲೂ ಹಳ್ಳಿಯ ಅದೆಷ್ಟೋ ಕುಟುಂಬ ತಮ್ಮ ಜೀವನ ನಿರ್ವಹಿಸುವುದು ಗೋಮಾತೆಯ ಕೃಪೆಯಿಂದಲೇ. ಭೂಮಿ, ಗೋವು, ಸ್ತ್ರೀ - ಈ ಮೂವರೊಳಗಿನ ಅವಿನಾಭಾವ ಬಂಧವೇ ಜೀವಿಯ ಹುಟ್ಟಿಗೆ, ಬೆಳವಣಿಗೆಗೆ ಮೂಲಕಾರಣ ಎನ್ನಬಹುದು. 

ಹೆಣ್ಣು ಹುಟ್ಟಿದಾಗಿನಿಂದ ಅಂತ್ಯದವರೆಗೂ ಪರರಿಗಾಗಿ ಬದುಕುವುದನ್ನು ಕಲಿಯುತ್ತಾ ಬೆಳೆವಳು. ಹೊಸ ಜೀವಿಗೆ ಜನ್ಮವನಿತ್ತು, ತನ್ನೊಳಗಿನ ಸತ್ವವನ್ನು ಉಣಿಸಿ ಸಲಹಿ ಪೋಷಿಸುವಳು. ಹಳೆ ಸಂಬಂಧದ ಜೊತೆ ಹೊಸ ಬಂಧವ ಬೆಸೆವ ಕೊಂಡಿಯಾಗುವಳು. ತನ್ನ ಅಸ್ತಿತ್ವನ್ನೇ ಅಳಿಸಿಹಾಕಿ ಸಿಕ್ಕ ಪಾತ್ರದೊಳಗೆ ಒಂದಾಗುವಳು. ಅಂತೆಯೇ ಗೋವು ತನಗಾಗಿ ಮಾತ್ರ ಏನನ್ನೂ ಉಳಿಸಿಕೊಳ್ಳದೇ ಎಲ್ಲವನ್ನೂ ತನ್ನ ಸಲಹುವವರಿಗೆ ನೀಡುವುದು. ಹಾಗಾಗಿಯೇ ಅದನ್ನು "ಕಾಮಧೇನು", "ಪುಣ್ಯಕೋಟಿ" ಎಂದೆಲ್ಲಾ ಹಾಡಿ ಹೊಗಳಿರುವುದು. ಅಲ್ಲದೇ ನಮ್ಮ ಪೂರ್ವಿಕರು ಪಂಚ ಮಹಾ ಪಾತಕಗಳಲ್ಲಿ, ಗೋ ಹತ್ಯೆ ಹಾಗೂ ಸ್ತ್ರೀ ಹತ್ಯೆಯನ್ನು ಸೇರಿಸಿ ಇವರಿಬ್ಬರಿಗೂ ಸಲ್ಲಬೇಕಾಗಿರುವ ಆದ್ಯತೆ, ಗೌರವವನ್ನು ಎತ್ತಿಹಿಡಿದಿದ್ದಾರೆ.

"ಅಂಬಾ..." ಎನ್ನುವ ಪದಕ್ಕೂ "ಅಮ್ಮಾ..." ಎನ್ನುವ ಪದಕ್ಕೂ ತುಂಬಾ ಸಾಮಿಪ್ಯವಿದೆ. ಸ್ತ್ರೀ-ಗೋವಿನ ನಡುವಿನ ಅವಿನಾಭಾವ ಬಂಧಕ್ಕೆ ಮುಗಿಯದ ನಂಟು ನಮ್ಮ ಅರಿವಿನಾಚೆಯಿಂದ ಅಂಟಿ ಬಂದಿದೆ ಎನ್ನುವುದನ್ನು ಸೂಚಿಸುತ್ತದೆ. ಪ್ರಸಿದ್ಧ ಗೋವಿನ ಹಾಡಾದ "ಧರಣಿ ಮಂಡಲ ಮಧ್ಯದೊಳಗೆ.." ಪದ್ಯದಲ್ಲಿ ಬರುವ ಗೋಮಾತೆಯ ತಳಮಳ, ಸಂಕಟ ಮಾನವೀಯತೆಯುಳ್ಳವರ ಹೃದಯವನ್ನು ತಟ್ಟದೇ ಬಿಡದು. ಹುಲಿರಾಯನಲ್ಲಿ ಕಾಡಿ ಬೇಡಿ, ತನ್ನ ಮಗುವಿಗೆ ಹಾಲೂಡಲು ಓಡಿಬಂದು, ತದನಂತರ ಕೊಟ್ಟ ಮಾತಿನಂತೇ ಸಾಯಲು ಹೊರಟ ಸತ್ಯವಂತ ಗೋವಿನೊಳಗಿನ ಸ್ತ್ರೀ ಪಾತ್ರ ನಮ್ಮ ನಡುವೆಯೂ ಅಡಗಿದೆ. ತನ್ನ ಕುಡಿಗಾಗಿ ತನ್ನನ್ನೇ ಮಾರಿಕೊಳ್ಳುವ, ತನ್ನವರಿಗಾಗಿ ತನ್ನ ಪ್ರಾಣವನ್ನೇ ಪಣವಾಗಿಡುವ ತ್ಯಾಗಶೀಲೆ ಹಿಂದಿನಿಂದ ಇಂದಿನವರೆಗೂ ಇದ್ದಾಳೆ. ಗೋವಿನ ಹಾಡಿನಲ್ಲಿ ಗೋವು ಸಾಂಕೇತಿಕ. ಅದರೊಳಗಿನ ಸ್ತ್ರೀತ್ವ ಸಾರ್ವತ್ರಿಕ. ಹೆಣ್ಣಿನೊಳಗಿನ ಸಹನೆ, ತ್ಯಾಗ, ವಾತ್ಸಲ್ಯ, ದೃಢತೆಯ ಪ್ರತೀಕವಾಗಿ ಗೋವನ್ನು ಕಂಡಿದ್ದಾರೆ ಪುಣ್ಯಕೋಟಿ ಹಾಡನ್ನು ಹೊಸೆದ ನಮ್ಮ ಜನಪದರು.

ಹೆಣ್ಣು ಹೊತ್ತಾಗ, ಹೆತ್ತಾಗ, ಆಧರಿಸಿದಾಗ, ಪೋಷಿಸಿದಾಗ ತಾಯಾಗುತ್ತಾಳೆ... ಪೂಜನೀಯಳೆನಿಸುತ್ತಾಳೆ. ಅದೇ ರೀತಿ ಗೋಮಾತೆ ತನ್ನವರಿಗಾಗಿ ಹಾಲನಿತ್ತು, ತನ್ನೆಲ್ಲಾ ವಿಸರ್ಜನೆಯನ್ನೂ ಕೊಟ್ಟು, ಇಳೆಯ ಸಮೃದ್ಧಿಗೆ ನೇಗಿಲಾಗಿ, ಗೊಬ್ಬರವಾಗಿ ಹಸಿವನ್ನು ತಣಿಸುತ್ತಾಳೆ, ಮನುಕುಲವನ್ನೇ ಪೋಷಿಸುತ್ತಾಳೆ. ಮಕ್ಕಳಿಂದ ವೃದ್ಧರವರೆಗೂ ನೈಸರ್ಗಿಕ ಪೌಷ್ಟಿಕತೆಯನ್ನು ತುಂಬಿ ಸಲಹುವ ಗೋಮಾತೆ ಸದಾ ಪೂಜನೀಯಳು, ಮಾನನೀಯಳು. ಅವಳ ಪ್ರಾಣ ರಕ್ಷಣೆ, ಪೋಷಣೆ ಸರ್ವರ ಕರ್ತವ್ಯವೂ ಹೌದು. ಅವಳೊಳಗಿನ ನಿಃಸ್ವಾರ್ಥತೆಯನ್ನು ಅರಿತು ನಡೆದರೆ ಬತ್ತಿದ ಗೋವಿನ ಸಗಟು ಮಾರಾಟವನ್ನು ನಿಶ್ಚಲವಾಗಿ ತಡೆಯಬಹುದು.

("ಬೋಧಿ ವೃಕ್ಷ"  ಪತ್ರಿಕೆಯಲ್ಲಿ ಪ್ರಕಟಿತ)

Copy right : Tejaswini Hegde


ಎಲ್ಲರಿಗೂ ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಕಾಮನೆಗಳು. ಮನ-ಮನದೊಳಗೆ ಹೊಸ ಜ್ಞಾನ ದೀವಿಗೆಯನ್ನು ಹಚ್ಚಿ ಎಲ್ಲೆಡೆ ಸುವಿಚಾರಗಳನ್ನು ಬೆಳಗುವ ಸಂಕಲ್ಪ ನಮ್ಮೊಳಗೆ ತುಂಬಲೆಂದು ಹಾರೈಸುವೆ.

-ತೇಜಸ್ವಿನಿ ಹೆಗಡೆ. 

ಶುಕ್ರವಾರ, ಅಕ್ಟೋಬರ್ 7, 2011

ಚಂದಿರನೇತಕೆ ಓಡುವನಮ್ಮಾ...

http://www.desktopnexus.com/tag/seaside/
ದೆಷ್ಟು ಹೊತ್ತಾಗಿತ್ತೋ ಆಕೆ ಹಾಗೆ ತದೇಕ ಚಿತ್ತದಿಂದ ನೀಲಾಗಸವನ್ನೇ ದಿಟ್ಟಿಸುತ್ತಾ ಕುಳಿತು. ಎತ್ತಿದ್ದ ತಲೆಯ ಭಾರವನ್ನು ಹೊತ್ತು, ಕುತ್ತಿಗೆಯೂ ಸೋತು ಬಂದು, ಆ ನೋವಲ್ಲೇ ಹಿತಕಾಣುವಷ್ಟು ಹೊತ್ತು ನೋಡುತ್ತಲೇ ಇದ್ದಳು. ಅಲ್ಲಲ್ಲಿ ಚೆಲ್ಲಿರುವ ತಾರೆಗಳಿಂದ ಆಗೊಮ್ಮೆ ಈಗೊಮ್ಮೆ ಮಿನುಗುತ್ತಿರುವ ಆಗಸದೊಳಗೇ ನೆಟ್ಟ ನೋಟವಿಟ್ಟವಳ ಕಣ್ಗೋಲಿಗಳು ಒಳಗೊಳಗೇ ಹುಡುಕುತ್ತಿದ್ದುದು ಆ ಚಂದಿರನನ್ನೇ. ಮೋಡದ ಮರೆಯೊಳಗೆ, ತೆಂಗಿನ ಗರಿ ನಡುವೆ, ಹಬ್ಬಿರುವ ಚಪ್ಪರ ಬಳ್ಳಿಯ ಕಿರು ಸಂದಿ ಗೊಂದಿಗಳೊಳಗೆಲ್ಲಾ ಹುಡುಕಿ ಸುಸ್ತಾಗಿ ಕೊನೆಗೆ ಮಿನುಗು ತಾರೆಗಳನ್ನಷ್ಟೇ ತುಂಬಿಕೊಳ್ಳುತ್ತಿದ್ದಳು. ಕಾಲು ಚಾಚಿ ಕೈಗಳನ್ನು ಊರಿ ಕುಳಿತಿದ್ದರೂ, ಅಡಿಯಿದ್ದ ಮರಳು ತನ್ನ ಎಳೆದೆಳೆದು ಒಳಗೆಳೆಯುವಂತಹ ಭಾಸ... ನಿಮಿಷಕೊಂದು ನಿಟ್ಟುಸಿರು.... ಎದೆಯೊಳಗೆಲ್ಲಾ ಭಾವದಲೆಗಳ ಭೋರ್ಗರೆತ. ಕ್ಷಣ ಕ್ಷಣಕ್ಕೂ ಶಶಿಯಿಲ್ಲದ ಸುವಿಶಾಲ ಬಾನು ತನಗೆ ಆಪ್ತವಾಗುತ್ತಿರುವಂತೆ ಅವಳಿಗನಿಸತೊಡಗಿದ್ದು ಅವನಿಲ್ಲದ ತನ್ನ ಈ ಬದುಕಿನಿಂದಲೋ ಎಂತೋ ಎಂದೆನಿಸಿ ಕಣ್ಮುಚ್ಚಿದವಳ ರೆಪ್ಪೆಯ ಮೇಲೆ ಬಿದ್ದವು ಎರಡು ದಪ್ಪ ಹನಿಗಳು.

ಹೊರಗೆ ತೊಯ್ದು ತೊಪ್ಪೆಯಾದರೂ ಒಳಗೆಲ್ಲಾ ಉರಿಯ ತಾಪ... ಸುಡುವ ಸೂರ್ಯನನೇ ಹಿಡಿದು ಒಡಲೊಳಗೆ ನೂಕಿದಂತಹ ಅನುಭವ. ಚಂದ್ರಮನಿಲ್ಲದ ನೀಲಾಗಸದ ಖಾಲಿತನವನ್ನೇ ಹೋಲುತ್ತಿರುವ ಬರಡು ಬದುಕು. ಬೋಳು ಹಣೆಗೆ ಕೆಂಪಿಟ್ಟರೇನು? ಕಪ್ಪಿಟ್ಟರೇನು? ಇಟ್ಟ ಮಾತ್ರಕೆ ಬೆಳಗುವುದೇ ಸಿಂದೂರ ಅವನ ಸ್ಪರ್ಶವಿಲ್ಲದೇ!!? ನೀಲಾಗಸಕಾದರೂ ಹದಿನೈದು ದಿನಕ್ಕೊಮ್ಮೆ ಮತ್ತೊಂದು ಸದವಕಾಶವಿದೆ. ಆದರೆ ತನ್ನ ಬಾಳ ಚಂದಿರ ಆ ಆಗಸವನ್ನೂ ದಾಟಿ ಇನ್ನೆಲ್ಲೋ ಅವಿತಿರುವಾಗ ಯಾವ ಹುಣ್ಣಿಮೆ ಯಾವ ಅಮವಾಸ್ಯೆ?? ಗರ್ಭದೊಳಗೆ ಮಿಸುಕಾಡುವ ಜೀವದ ಚಲನೆ ಆಗೀಗ ನೆನಪಿಸುತ್ತಿರುತ್ತದೆ.... ಬದುಕು ನಿನ್ನದೊಂದೇ ಹಕ್ಕಲ್ಲಾ ಎಂದು ಸದಾ ಎಚ್ಚರಿಸುತ್ತಿರುತ್ತದೆ.

ಒಮ್ಮೊಮ್ಮೆ ಅವಳಿಗನ್ನಿಸಿದ್ದಿದೆ... ಶಪಿಸಿಬಿಡಬೇಕು ಆ ಚಂದಿರನ, ನನ್ನವನ ನೆನಪ ಕೊರೆಕೊರೆದು ತನ್ನ ಶೀತಲ ಕಿರಣಗಳಿಂದ ಘಾಸಿಗೊಳಿಸುವ ಹಾಳು ಶಶಿಯ ಸುಟ್ಟು ಬಿಡಬೇಕು ಆ ರವಿಯ ಛೂ ಬಿಟ್ಟು. ಮರುಕ್ಷಣ ಮರುಕವುಕ್ಕುವುದು ನೀಲಾಗಸದ ಮೇಲೆ... ಕೈ ಅಪ್ರಯತ್ನವಾಗಿ ಹುಬ್ಬುಗಳ ಮಧ್ಯೆ ನಿಂತು ನಡು ಬೆರಳಿಂದ ಹಾಗೇ ಸವರುವುದು ಎಂದೂ ಮಾಗದ ಗಾಯವೊಂದನು.

"ಅಂತಕನ ದೂತರಿಗೆ ಕಿಂಚಿತ್ತೂ ದಯವಿಲ್ಲ ..." ಒಳಮನೆಯ ಮೂಲೆಯಲ್ಲಿ ಮಗ್ಗುಲಾಗಿದ್ದ ಅಜ್ಜಮ್ಮನ ಒಡಲೊಳಗಿಂದ ಎದ್ದು ಬರುತ್ತಿದ್ದ ಹಾಡು ಮತ್ತಷ್ಟು ಇವಳ ಉರಿಗೆ ತುಪ್ಪಹಾಕುತ್ತಿದೆ. ಆಗೊಮ್ಮೆ ಈಗೊಮ್ಮೆ ಗಂಟಲು ಅಮುಕಿದಂತಾಗಿ ಅಲ್ಲಲ್ಲಿ ತುಂಡರಿಸುವ ದನಿ ಮತ್ತೆ ಮತ್ತೆ ಮೆಲ್ಲನೆದ್ದು ತಾರಕಕ್ಕೇರಿ ಅಪ್ಪಳಿಸುವ ಅಲೆಯಂತೆ ಎದೆಯ ತಟ್ಟಿ ಭೋರ್ಗರೆಯುತಿದೆ. ಅವಳ ಮನಸು ಸಾವಿರಸಲ ಅದನೇ ಗುನುಗುನಿಸುತ್ತಿದೆ... ಬೆರಳುಗಳು ಮರಳೊಳಗೆ ಅಂತಕನ ದೂತರಿಗೆ ಓಲೆಯೊಂದನು ಗೀಚುತ್ತಲೇ ಇವೆ. ನಿರ್ದಯಿ ಅಲೆಗಳು ಉರುಳುರುಳಿ ಬಂದು ಅಳಿಸುತ್ತಲೇ ಇವೆ....

----

ಓಡುವ ಚಂದಿರನ ನೋಡು ನೋಡುತಲೇ, ತೆರೆಗಳು ಹೊತ್ತು ತರುವ ಮರಳುಗಳ ಮೇಲೆ ಗೀಚುತ್ತಲೇ... ವರುಷ ನಾಲ್ಕು ಕಳೆದುಹೋದವು. ದೃಶ್ಯ ಒಂದೇ, ಆದರೆ ನೋಟ ಬೇರೆ! ಪುಟ್ಟನಿಗೆ ಚಂದ್ರಮ ವಿಶಿಷ್ಟನಾಗಿ ಕಂಡರೆ, ಆಕೆಗೆ ಸದಾ ಒಳ ಬೇಗುದಿಯ ಕೆದಕಿ ಕೆಣಕಿಯಾಡುವ ಕಟುಕ. ಒಳಮನೆಯಜ್ಜಿಯ ಯಾತನೆಯ ಕಂಡು ಅಂತಕನ ದೂತರಿಗೂ ಎಲ್ಲೋ ಸಣ್ಣ ಕರುಣೆ ಬಂದಿರಬೇಕು... ಅವಳನ್ನೂ ಜೊತೆಗೊಯ್ದಿದ್ದರು ವರುಷದ ಹಿಂದೆಯೇ! ತೆರೆಗಳು ಮಾತ್ರ ತನ್ಮಯತೆಯಿಂದ ಅವಳು ಅವನ ಹೆಸರು ಬರೆದಷ್ಟೂ ಬೇಸರಿಸದೇ, ತುಸು ನಿಮಿಷವೂ ಕಾಯದೇ, ಹಾಗೇ ಅಳಿಸುತ್ತಲೇ ಇದ್ದವು ಅವನ ಹೆಸರನ್ನೂ ಅವಳನ್ನೂ....

"ಹೃದಯ ಬಯಸುವುದು ಸಿಗದ ಬಯಕೆಗಳನ್ನೇ... ಅದುಮಿದಷ್ಟೂ ಒತ್ತಡದ ಪ್ರಕ್ರಿಯೆ ಹೆಚ್ಚು....ಬಿಟ್ಟು ಬಿಡು ಒಮ್ಮೆ.. ಹಾರಿದಷ್ಟು ಹಾರಲಿ... ಉಳಿದಷ್ಟು ಉಳಿಯಲಿ... ಮಿಕ್ಕಿದ ಜಾಗದಲ್ಲಿ ತುಂಬು ಹೊಸ ಆಸೆ, ಕನಸುಗಳನ್ನ.." ಎಂದು ಸ್ವಾಂತನ ನೀಡಿದ್ದ ಗೆಳತಿಗೇನು ಗೊತ್ತು.... ನನ್ನೊಳಗಿನ ಕುದಿವ ಲಾವಾ ಉಕ್ಕಿದಷ್ಟೂ ಅಕ್ಷಯವಾದದ್ದೆಂದು! ನಿಟ್ಟುಸಿರ ರಭಸವೂ ಯಾರಿಗೂ ಕೇಳದು ಉಬ್ಬರಗಳ ಅಬ್ಬರಗಳ ಭರದಲ್ಲಿ! ಓಡುವ ಚಂದ್ರಮನ ಹಿಡಿದೊಮ್ಮೆ ನಿಲ್ಲಿಸಿ, ನೀಲಾಗಸದಿಂದ ಕಿತ್ತು ತನ್ನ ಭ್ರೂಮಧ್ಯೆ ನಿಲ್ಲಿಸಬೇಕೆಂಬ ಹುಚ್ಚು ಕಲ್ಪನೆಗಳಿಗೇನೂ ಕೊನೆಯಿರಲಿಲ್ಲ. ಆದರೇನಂತೇ.... ತಕ್ಷಣ ನೆನಪಿಗೆ ಬರುವುದು, ಶಶಿಯ ನೋಡಿ ಸಂಭ್ರಮಿಸುವ ತನ್ನ ಕುಡಿಯ ಮೊಗ. ಕಣ್ಣಂಚಿನ ಬಿಂದುವಿಗೆ ತಡೆಯಾಗುವ ಕೈ ನಸುನಗುತ್ತಾ ಮಗುವ ಕೈ ಹಿಡಿದು ಹಿಂತಿರುಗುವಳು. ಮತ್ತೆ ಮರುದಿನದ ಸಂಜೆಯ ನಿರೀಕ್ಷೆಯಲ್ಲಿ... ಅತ್ತ-ಇತ್ತ, ಸುತ್ತ-ಮುತ್ತಲೆಲ್ಲಾದರೂ ಚಂದ್ರಮನ ಚೂರೇನಾದರೂ ಸಿಗಬಹುದೇನೋ ಎಂಬ ಹೊಸ ಹುಡುಕಾಟದಲ್ಲಿ....

---

ಚಂದ್ರನ ಚೂರನ್ನು ಅರಸಿ ಹೋದಂತೆಲ್ಲಾ ಸಿಕ್ಕಿದ್ದು ಬೆಳಚು ಕಲ್ಲೇ ಆಗಿದ್ದು ಅವಳ ದುರದೃಷ್ಟವೋ ಇಲ್ಲಾ ಕಲ್ಲುಗಳು ಚುಚ್ಚುವ ಮೊದಲೇ ಅವಳು ಎಚ್ಚೆತ್ತುಕೊಂಡಿದ್ದು ಅದೃಷ್ಟವೂ.... ಆದರೆ ವರುಷಗಳು ಮತ್ತೆ ನಾಲ್ಕು ಕಳೆದಿದ್ದವು. ಮಗನ ಆಟ ಪಾಠಗಳ ನಡುವೆ ಹಳೆನೆನಪುಗಳ ಹರಿತಗೊಳಿಸಲು ಸಮಯ ಸಾಲುತ್ತಿರಲಿಲ್ಲ..... ನೋವಿನ ತೀವ್ರತೆ ಸ್ಥಿತ್ಯಂತರಗೊಂಡಿತ್ತು ಅಲ್ಲೇ ಹೆಪ್ಪುಗಟ್ಟಿ. ಒಂದು ಸುದಿನ ಬೆಳಚುಕಲ್ಲೆಂದೇ ಬಗೆರು ಎಸೆಯ ಹೊರಟಿದ್ದ ಚಂದ್ರಮನ ಚೂರೊಂದು ಅವಳ ಬದುಕನ್ನು ಬೆಳಗಲು, ಒಳಗೆಲ್ಲೋ ತಿಂಗಳ ಬೆಳಕಿನ ಶೀತಲತೆ! 

ಆಗಸದ ಮೇಲಿರುವವನ ನೆನೆಯುತ್ತಾ, ಹಣೆಗೆ ಬೆಳಕಾದವನ ಜೊತೆಗೂಡಿ, ಮತ್ತದೇ ಸಾಗರಿಯ ಬಳಿ ಬಂದಾಗ ಕೈಗಳು ಮಾತ್ರ ಏನನ್ನೂ ಬರೆಯಲೊಲ್ಲವು. ಆದರೆ ಮಗರಾಯ ಮಾತ್ರ ಎಡೆ ಬಿಡದೇ ಬರೆಯುತಿರುವ ಹೊಸ ಶಾಲೆಯಲ್ಲಿ ಕಲಿತ ಹೊಸ ಹಾಡಿನ ಸೊಲ್ಲುಗಳನ್ನು. ತೆರೆಗಳ ತೆಕ್ಕೆಗಳು ಅಳಿಸಲಾಗಷ್ಟು ದೂರದಲ್ಲಿ ಕುಳಿತು ಏಕಾಗ್ರತೆಯಿಂದ ಬರೆಯುತ್ತಲೇ ಇದ್ದವನ ಬಳಿ ಬಂದು ಇಣುಕಿ ಓದುತ್ತಿರುವಂತೇ ಕಣ್ಣ ಹನಿಗಳ ಜೊತೆ ಮುಗುಳ್ನಗುವೂ ಹೊರಬಿತ್ತು.

ಚಂದಿರನೇತಕೆ ಓಡುವನಮ್ಮಾ
ಮೋಡಕೆ ಬೆದರಿಹನೆ? 
ಬೆಳ್ಳಿಯ ಮೋಡದ ಅಲೆಗಳ ಕಂಡು 
ಚಂದಿರ ಬೆದರಿಹನೆ? - ಎಂದು ಸೊಟ್ಟ ಅಕ್ಷರಗಳಲ್ಲಿ ಓರೆಕೋರೆ ಗೀಚಿದ ಮಗನ ತಲೆಯನ್ನು ಪ್ರೀತಿಯಿಂದ ಎದೆಗೊತ್ತಿಕೊಂಡಳು ಆಕೆ. "ಪುಟ್ಟಾ, ಚಂದಿರ ಸ್ಥಿರ.... ಮೋಡಗಳೇ ಚಂಚಲ. ಚಲಿಸುವ ಅವುಗಳು ನೀರುಗಳ ಚಾದರಹೊದ್ದು, ಅವನ ಬೆಳಕನ್ನಷ್ಟೇ ಮುಚ್ಚಿಹಾಕಬಲ್ಲವು.. ಆದರೆ ಅವನೊಳಗಿನ ಬೆಳಗೋ ಗುಣವನ್ನು ತಡೆಯಲಾರವು....ಒಂದೆಲ್ಲಾ ಒಂದು ದಿನ ಸುರಿದು ಹರಿದು ಹೋಗಲೇ ಬೇಕಿರುವ ಮೋಡಗಳಿಗೆ ಬೆದರಿಕೆ ಏಕೆ? ನಿನ್ನ ಚಂದಿರ ಅನುರೂಪನೇ ಸರಿ....ಅವನು ಮೇಲಿಂದ ನಮ್ಮ ನಗುವ ನೋಡಿ ನಗುತಿರಲಿ.... ನಮಗಿಬ್ಬರಿಗೆ ಅವನ ತಿಂಗಳಷ್ಟೇ ಸಾಕು ಈ ಬದುಕ ಜೀವಿಸಲು...." ಎಂದು ನಕ್ಕವಳನ್ನೇ ನೋಡಿ ತಾನೂ ನಕ್ಕ ಪುಟ್ಟ. ಅಮ್ಮನ ಮಾತುಗಳೊಂದೂ ಅರ್ಥವಾಗದಿದ್ದರೂ ಅವಳೊಳಗಿನ ಆ ಅಪರೂಪದ ಸಂಭ್ರಮದ ಅನುಭೂತಿ, ಅವನೊಳಗೂ ಸಂತಸವ ತುಂಬಿತ್ತು. ಅವಳ ಮನ ಹಾಡಿನ ಕೊನೆಯ ಸಾಲನ್ನು ಮತ್ತೆ ಮತ್ತೆ ಹಾಡುತ್ತಿತ್ತು...
ಬಾ ಬಾ ಚಂದಿರ ಬೆಳ್ಳಿಯ ಚಂದಿರ
ನಮ್ಮಯ ಮನೆಗೀಗ
ನಿನ್ನಯ ಬೆಳಕನು ಎಲ್ಲೆಡೆ ಚೆಲ್ಲಿ
ಮನವನು ಬೆಳಗೀಗ

-ತೇಜಸ್ವಿನಿ ಹೆಗಡೆ.


ಸೋಮವಾರ, ಸೆಪ್ಟೆಂಬರ್ 12, 2011

ಹನಿ ಬದುಕಿನ ನಿರೀಕ್ಷೆ....

ಬಾನೊಳಗಿಂದಲೆಲ್ಲೋ ಅಲೆಯೆದ್ದ ಕಂಪನದ ಛಳಕು
ಕಣ್ಣು ಕಿರಿದಾಗಿಸಿದರೂ ಕಾಣಲಿಲ್ಲ ಮಿಂಚಿನ ಗುರುತು,
ಮೇಲೆ ನೋಡೆ, ಬಸಿರು ಹೊತ್ತ ನಿಂತ ಕಾರ್ಮೋಡಗಳು
ತಾಸುಗಳು ಕಳೆದರೂ ಹನಿ ಬಿಂದೂ ಹಣೆ ತಾಗದು!
ಮತ್ತೆ ದೂರದಲ್ಲೆಲ್ಲೋ ಸಣ್ಣ ಗುಡುಗಿದ ಸದ್ದು...

ಒಡಲಾಳದ ಧಗೆಯಿಂದ ಬೆವರಿಟ್ಟ ಧರೆಯು
ಸೀಳು ಬಾಯ್ತೆರೆದು ಹಪ ಹಪಿಸುತಿಹುದು,
ಮುತ್ತಾಗಲು ಕಾಯುತಿಹ ಅದೆಷ್ಟೋ ಚಿಪ್ಪುಗಳು
ಮಳೆಗಪ್ಪೆಗಳ ಭವಿಷ್ಯವನೇ ಬಹು ನೆಚ್ಚಿಕೊಂಡಿಹವು.
ಕೋಲ್ಮಿಂಚಿಗೆ ನಲಿಯಲು ನವಿಲುಗಳು ಕಾದಿದ್ದರೂ
ಹನಿ ನೀರ ಸುಳಿವಿಲ್ಲ, ಗಾಳಿಯೊಳು ಕಂಪಿಲ್ಲ,
ಮತ್ತಷ್ಟು ದೂರದಲಿ ಗುಡುಗಿದೆ ಸದ್ದು....

ಹಾರುವ ಪುಗ್ಗೆಯಿಂದ ಗಾಳಿ ಸುಯ್ಯೆನ್ನಲು ಸಾಕು
ಒಂದೇ ಒಂದು ಸಣ್ಣ, ಮಿರುಮಿರುಗೋ ಸೂಜಿಯ ಮೊನೆ
ಉಬ್ಬಿಹ ಕರಿ ಮೋಡಗಳು ಹಗುರಾಗಲು ಬೇಕು
ಸಣ್ಣನೆಯ ಕೋಲ್ಮಿಂಚುಗಳ ತಿವಿತದ ಬರೆ.
ಹನಿ ಹನಿ ಸೇರಿ, ಶರಧಿಗಳಾಗಿ ಒಡಲೊಳು ನೆಟ್ಟು,
ಹಸಿವು ತಣಿದು, ಹಸಿರಾಗಿ ಬೆಳೆದು, ಫಲವ ನೀಡೆ
ಚಾಚಿದ ಕೈಗಳಿಗೂ ಬಿತ್ತು ಒಂದೊಂದೇ ತುತ್ತು..
ಮತ್ತೆಲ್ಲೋ ಸಣ್ಣಗೆ ಗುಡುಗಿದ ಸದ್ದು!

-ತೇಜಸ್ವಿನಿ ಹೆಗಡೆ


ಮಂಗಳವಾರ, ಆಗಸ್ಟ್ 16, 2011

ಪ್ರಶ್ನೆಯಾಗಿ ಕಾಡಿದ ಮೌನ

ಅವನು ಕೇಳುತ್ತಲೇ ಇರುತ್ತಾನೆ
ಬರೆದಿಟ್ಟದ್ದೆಲ್ಲಾ ಮನದೊಳಗಿನದ್ದೇ?
ಇಲ್ಲಾ, ಇಲ್ಲದ್ದನ್ನು ಕಾಣುವ ಮನಃಸ್ಥಿತಿಯೇ?
ನಾನು ಒಳಗೊಳಗೇ ಕುದಿಯುತ್ತೇನೆ...
ಬೇಯುತ್ತೇನೆ ಕರಗಿ ಕರಟಿ ಹೊಗೆಯಾಗಿ,
ಹೊರ ಉಗುಳುತ್ತೇನೆ ನನ್ನೊಳಗಿನ
ನಿನ್ನಿನದೆಲ್ಲಾ ಕಹಿ ನೆನಪುಗಳನ್ನ...

ಹರಿವ ನೀರು ಮೇಲೇರಿ ಘನ ಮೋಡವಾಗಿ,
ಹನಿದು ತಂಪಾಗಿಸೋ ಮುನ್ನ,
ಧಗೆಯುರಿಯಿಂದ ಮೈ ಮನ ಸುಡುವಂತೆ...
ಹೊರ ಉಗುಳುತ್ತೇನೆ ನನ್ನೊಳಗಿನ
ನಿನ್ನಿನದೆಲ್ಲಾ ಕಹಿ ನೆನಪುಗಳನ್ನ...

ಬಿರಿದ ಹೂವೊಂದು, ಬಾಡಿ, ಉದುರಿ ಕೊಳೆತು,
ಮತ್ತೆ ಮೊಗ್ಗಾಗಿ, ಅರಳಿ ನಳನಳಿಸುವ ಮುನ್ನ-
ಮಣ್ಣೊಳಗೆ ಹೊಕ್ಕು ಕರಿ ಗೊಬ್ಬರವಾಗುವಂತೆ,
ಹೊರ ಉಗುಳುತ್ತೇನೆ ನನ್ನೊಳಗಿನ
ನಿನ್ನಿನದೆಲ್ಲಾ ಕಹಿ ನೆನಪುಗಳನ್ನ...

ಒಳಗಿನ ಭಾರದಿಂದ ಬಾಗಿದ ಎವೆಗಳನ್ನು ದಾಟಿ,
ಒಂದೊಂದಾಗಿ ಹಪಹಪಿಗಳು ಉದುರಿ,
ಕೆನ್ನೆಯ ಮೇಲೆ ನವ್ಯ ಚಿತ್ರಕಲೆ ಬರೆಯಲೆಂದೇ
ಹೊರ ಉಗುಳುತ್ತೇನೆ ನನ್ನೊಳಗಿನ
ನಿನ್ನಿನದೆಲ್ಲಾ ಕಹಿ ನೆನಪುಗಳನ್ನ...

ಬರೆದಿಟ್ಟದ್ದು, ಬರೆದಿರುವುದು, ಬರೆಯುವಂಥದ್ದು
ಬಹು ಅಲ್ಪ, ಅಮೂಲ್ಯ, ಸಹ್ಯ.
ನಿನ್ನೊಳಗಿನ ಪ್ರಶ್ನೆ ಮಾತ್ರ ನನ್ನೊಳಗಿನ
ನನ್ನನ್ನೇ ಹಿಂಡುವಂತಿದೆ, ಇದು ಅಸಹನೀಯ.
ತನ್ನೆರಡು ಪ್ರಶ್ನೆಗಳಿಗೆ ಸಾವಿರ ಉತ್ತರ ಪಡೆದ
ಅವನೀಗ ಸಂಪೂರ್ಣ ಮೌನಿ!!

-ತೇಜಸ್ವಿನಿ ಹೆಗಡೆ.

ಬುಧವಾರ, ಆಗಸ್ಟ್ 3, 2011

ನಾಲ್ಕು ತುಂಬಿತು ಹರುಷಕೆ

Aditi Hegde

ಮುಷ್ಠಿಯಾಗಿದ್ದ ಪುಟ್ಟ ಕೈಬೆರಳುಗಳ ಬಿಡಿಸೆ,
ಥಟ್ಟೆಂದು ನನ್ನ ಬೆರಳೊಂದನು ಹಿಡಿದ ನಿನ್ನ ಸ್ಪರ್ಶಕೆ
ತುಂಬಿದವಿಂದು ನಾಲ್ಕು ವರುಷಗಳು!

ನೆತ್ತಿಯ ಮೃದು ಭಾಗವ ಮೂಸಿ, ಆಸ್ವಾದಿಸಿ
ಕಡಲೇ ಹಿಟ್ಟಿನ ಪರಿಮಳವ ಒಳ ತುಂಬಿಕೊಂಡ
ಆ ಘಳಿಗೆಗೆ ಇಂದು ನಾಲ್ಕು ವರುಷಗಳು!

ಕೋಣೆಯ ತುಂಬಿದ ಸಾಂಬ್ರಾಣಿ ಹೊಗೆಯ ಘಾಟಿಗೆ
ಕಣ್ಮುಚ್ಚಿ ಬೋರೆಂದು ಅತ್ತ ನಿನ್ನ ಹಿಡಿದಪ್ಪಿದಾಗ
ಹಾಗೇ ನಿದ್ದೆಗೆಳೆದ ಗೊಂಬೆಗಿಂದು ನಾಲ್ಕು ವರುಷಗಳು!

ಬಂಧು ಬಳಗವೆಲ್ಲಾ ನಿನ್ನ ಅಪ್ಪಿ ಮುದ್ದಾಡುತ್ತಿದ್ದರೂ,
‘ಅಮ್ಮಾ’ ಎಂದು ಮೊದಲ ಬಾರಿ ಕರೆದು ನನ್ನೊಳಗಿನ ತಾಯ್ತನಕ್ಕೆ
ಸಾಕ್ಷಿಯೊದಗಿಸಿದ ಕಿನ್ನರಿಗೀಗ ನಾಲ್ಕು ವರುಷಗಳು!

ನನ್ನೊಳಗಿನ ನೀನು, ನಿನ್ನನೊಳಗಿನ ನಾನು ಒಳಗೊಳಗೆ ವಿಕಸಿತಗೊಂಡು,
ಮೊದಲ ನೋಟ, ಮೊದಲ ಸ್ಪರ್ಶ, ಸುಧೆಯ ಹನಿಯ ತುಟಿಗಿತ್ತ
ಆ ದಿನದಗಳ ನೆನಪಿಗಿಂದು ನಾಲ್ಕು ವರುಷಗಳು!

‘ಅದಿತಿಗಾಗಿ’ :)


-ತೇಜಸ್ವಿನಿ ಹೆಗಡೆ.

ಶುಕ್ರವಾರ, ಜುಲೈ 15, 2011

ನೀ ಬೆಳಗಿದ ಹಣತೆಯಡಿಯಲ್ಲೇ ಸಾಗಲೆನ್ನ ಬದುಕು...

ಅಮ್ಮಾ....

ಅಮ್ಮಾ... (ಜಯಲಕ್ಷ್ಮೀ ಭಟ್)
ಹೇಗಿದ್ದೀಯಮ್ಮಾ? ನನಗೆ ಗೊತ್ತು.. ನನ್ನೀ ಪತ್ರವನ್ನೋದಿ ನಿನಗೆ ಆಶ್ಚರ್ಯವೇ ಆಗಬಹುದು. ಈವರೆಗೆ ಒಂದೂ ಪತ್ರವನ್ನು ಬರೆಯದವಳಿಂದ ಇಷ್ಟುದ್ದದ ಪತ್ರ ನೋಡಿ ವಿಚಿತ್ರವೆನಿಸಬಹುದು. ದಿನಕ್ಕೊಂದು ಹತ್ತಾರು ಬಾರಿ ಫೋನು ಮಾಡಿಟ್ಟು ನಿನ್ನ ತಲೆತಿಂದು, ನಾ ನಿರುಮ್ಮಳಳಾಗುತ್ತಿರುವಾಗ.... ನೂರಾರು ಕವಿತೆ, ಕಥೆಗಳ ಬರೆದು, ಅದನ್ನೇ ನಿನ್ನೊಂದಿಗೆ ಹಂಚಿಕೊಂಡು ಬೀಗುತ್ತಿರುವಾಗ.... ಮೊಮ್ಮಗಳ ಆಟೋಟವನ್ನು ಕೇಳಿದಷ್ಟೂ ದಣಿಯದ ನೀನು.. ಹೇಳಿದಷ್ಟೂ ನಿಲ್ಲದ ನಾನು...ಕೊನೆಗೊಮ್ಮೆ ಮನಃಪೂರ್ತಿ ನಗುವ ನಾವು.... ಇವೆಲ್ಲವುಗಳ ನಡುವೆ ಪತ್ರಕ್ಕೆ ಸೂಜಿಮೊನೆಯಷ್ಟಾದರೂ ಜಾಗವೆಲ್ಲಿತ್ತು? ಆದರೆ ಅಂದು ನಿದ್ದೆಯಿಲ್ಲದೇ ನಾನು ಹೊರಳಾಡುವಾಗ.... ನಾಳೆಯಿಂದ ಆರಂಭವಾಗುವ ನನ್ನ ಮಗಳ ಬದುಕಿನ ಹೊಸ ಅಧ್ಯಾಯವನ್ನು ನೆನೆದು ತುಸು ತಳಮಳಗೊಳ್ಳುವಾಗ... ನೆಮ್ಮದಿಯ ನಿದ್ದೆಯನ್ನರಿಸಿ ಆ ಹಾಡನ್ನು ಕೇಳತೊಡಗಿದೆ ನೋಡು... ಅದೆಲ್ಲಿತ್ತೋ ದುಃಖ... ನಿನ್ನಳಿಯನ ಜೊತೆ ಮೊದಲಬಾರಿ ನನ್ನತ್ತೆ ಮನೆಗೆ ಹೊರಟಾಗ ನಾಭಿಯಿಂದೆದ್ದು ಬಂದಿತ್ತಲ್ಲಾ ದುಃಖ... ಅದೇ ತರಹ ಆಯಿತು ನೋಡು! ಅದೆಷ್ಟು ಹೊತ್ತು ಅತ್ತೆನೋ.. ಅದೆಷ್ಟು ಹೊತ್ತು ನಿದ್ದೆ ಮಾಡಿದೆನೋ ನಾ ಕಾಣೆ. ಆ ಕ್ಷಣಕ್ಕೆ ನನ್ನ ಮನಸು ದೂರದೂರಲ್ಲಿದ್ದ ನನ್ನಮ್ಮನ ಮನೆಯೊಳಗೆ ಹೊಕ್ಕು, ನೀ ಮಲಗಿದ್ದ ಮಂಚದ ಬದಿಗೆ ಕುಳಿತು ನಿನ್ನ ತಲೆ ನೇವರಿಸುತ್ತಿತ್ತು... ನಿನ್ನ ತಬ್ಬಿ ನಾ ಮಲಗಿ ಪುಟ್ಟ ಮಗುವಾದಂತೆ ಭಾಸವಾಗುತ್ತಿತ್ತು. ಕಣ್ಬಿಟ್ಟರೆ ಸಾಕು... ಮನದೊಳಗೆ ಆ ಹಾಡಿನ ಸೊಲ್ಲುಗಳೇ ಮತ್ತೆ ಮತ್ತೆ ರಿಂಗುಣಿಸುತ್ತಿದ್ದವು...

"ಕಪ್ಪು ಕಡಲಿನಲ್ಲಿ ದೋಣಿ ದಿಕ್ಕು ತಪ್ಪಲು,
ದೂರದಲ್ಲಿ ತೀರವಿದೆ ಎಂದು ತೋರಲು...
ಅಮ್ಮಾ... ಹಚ್ಚಿದೊಂದು ಹಣತೆ ಇನ್ನೂ ಬೆಳಗಿದೆ, 
ಮನಕೆ ಮಬ್ಬು ಕವಿಯದಂತೆ ಸದಾ ಕಾದಿದೆ.." 

ಅಮ್ಮಾ.... ಮೊದಲ ಬಾರಿ ನನ್ನ ಶಾಲೆಗೆ ಕಳುಹಿಸುವಾಗ ನೀನದೆಷ್ಟು ಮನದೊಳಗೇ ಹೊಯ್ದಾಡಿದ್ದೆಯೋ ಏನೋ... ನಾನು ಅತ್ತು ಗೋಳಾಡುವಾಗ ಅದೆಷ್ಟು ಒಳಗೊಳಗೇ ಅತ್ತಿದ್ದೆಯೋ ಏನೋ... ಎದುರು ಮಾತ್ರ ಅದೇ ಹಸನ್ಮುಖ ಹೊತ್ತು.. ನನ್ನ ಸಮಾಧಾನಿಸಿ, ಕಳುಹಿಸಿಕೊಡುತ್ತಿದ್ದೆ. ಆಗೆಲ್ಲಾ ನನಗನಿಸಿದ್ದು.. ಈ ಅಮ್ಮನಿಗೆ ನಾ ಬೇಡವೇ? ಎಂದು. ಆದರೆ ನನ್ನ ಪುಟ್ಟಿಯೂ ಈಗ ಹೊಸ ಸ್ಕೂಲ್‌ಗೆ ತಯಾರಾಗಿ ನಿಂತಿದ್ದಾಳೆ. ಮೊಗದಲ್ಲಿ ದುಗುಡ ಮಡಗಟ್ಟಿ ನಿಂತಿದ್ದರೂ ಹನಿಗಣ್ಣಾಗಿ ತಲೆಬಾಗಿದ್ದರೂ, ದುಃಖ ತಡೆಹಿಡಿಯುತ್ತಿರುವ ಅವಳ ಪರಿಗೆ ನಾನೇ ಮಗುವಾಗುತ್ತಿರುವೆ. ನನ್ನೊಳಗಿನ ಉಮ್ಮಳಕ್ಕೆ ಅವಳೇ ಸಮಾಧಾನ ಹೇಳುವಂತಿದೆ. ನಾನೂ ಈಗ ನಿನ್ನಂತೇ ನಗುತ್ತಿದ್ದೇನೆ ಅಮ್ಮಾ.... ಅವಳಿಗೆ ಅವಳ ಭವಿಷ್ಯತ್ತಿನ ಹೊಸ ಬಣ್ಣವನ್ನು, ಹೊಸ ಕನಸನ್ನು ಕಟ್ಟಿಕೊಡುತ್ತಿದ್ದೇನೆ. ಹೊಸ ಲೋಕಕ್ಕೆ ಅವಳನ್ನು ಪರಿಚಯಿಸುತ್ತಿದ್ದೇನೆ. ಅಮ್ಮನಾಗಿ ಮಗಳನ್ನು ಸಂತೈಸುತ್ತಿರುವಾಗೆಲ್ಲಾ ನಿನ್ನ ನೆನಪೇಕೋ ಮತ್ತೆ ಮತ್ತೆ ಕಾಡುತ್ತಿದೆ. ಅಮ್ಮಾ.. ಅಂದು ನೀ ನನ್ನ ಹಾಗೆ ಕಳುಹದಿದ್ದಿದ್ದರೆ ನಾನಿಂದು ನಿನಗೆ ಈ ಪತ್ರ ಬರೆಯಲಾಗುತ್ತಿತ್ತೆ?! ಈಗ ಸಂಪೂರ್ಣ ಅರಿವಾಗಿದೆ ‘ತಾಯಿಯೇ ಮೊದಲ ಗುರು’ ಅನ್ನೋ ನಾಣ್ನುಡಿಯ ಅರ್ಥ. ಜೊತೆಗೆ ತಾಯಿಯಾಗಿ ನನ್ನ ಜವಾಬ್ದಾರಿಗೆ ನಾನೂ ಪಕ್ವವಾಗುತ್ತಿದ್ದೇನಮ್ಮಾ.

ಅಡುಗೆಮನೆ ಕೆಲಸ, ಬಂದ ನೆಂಟರ ಸುಧಾರಣೆ, ನಡು ನಡುವೆ ನಮ್ಮ ಬೇಕು ಬೇಡಗಳ ಗಲಾಟೆ.... ಇವೆಲ್ಲವುಗಳ ಮಧ್ಯೆಯೂ ಅದು ಹೇಗೆ ನಿನಗೆ ಸಮಯ ಸಿಗುತ್ತಿತ್ತೋ ಕಾಣೆ.. ನನಗೆ ನನ್ನ ಇಬ್ಬರು ತಂಗಿಯರಿಗೆ ಜಡೆ ಹಾಕಿ ನೀನೇ ಬಾಳೆದಿಂಡಿನ ದಾರದಲ್ಲಿ ಹಣೆದಿಟ್ಟ ಪುಟ್ಟ ನಿತ್ಯಮಲ್ಲಿಗೆಯ ಹೂವಿನ ಮಾಲೆಯನ್ನು ಮುಡಿಸಿ ಮುತ್ತಿಡುತ್ತಿದ್ದೆ... ಕಪ್ಪು ರಿಬ್ಬನ್‌ಅನ್ನು ಜಡೆಯ ಜೊತೆ ಹಣೆದು ಕೊನೆಗೆ ಜಡೆಯನ್ನು ಮಡಚಿ ಮತ್ತೆ ಮೇಲೆ ಕಟ್ಟಿ ಚೆಂದದ ರಿಬ್ಬನ್ ಗೊಂಡೆಯನ್ನು ಮಾಡಿದಾಗ ನಿನ್ನ ಮೊಗದಲ್ಲರಳುತ್ತಿದ್ದ ಆ ನಗುವಿನ ಬೆಳಕು ಇಂದೂ ನನ್ನ ಕಣ್ಣೊಳಗಿದೆ ಅಮ್ಮಾ. ಚಿಕ್ಕ ತಂಗಿ "ಇಶೀ.. ಇದು ಬೇಡ ನಂಗೆ... ಎಲ್ಲಾ ತಮಾಶೆ ಮಾಡ್ತೋ... ನೀ ಹಾಂಗೇ ಜಡೆ ಹಾಕು ನಂಗೆ.. ಹೀಂಗಲ್ದೇ.. ಸ್ನೇಹ ಹಾಕ ಬತ್ಲು ನೋಡು ಹಾಂಗೇ ಹಾಕು... ನಿನ್ನ ಕನ್ನಡ ಶಾಲೆ ಹಾಂಗೆ ನಂಗೆ ಹಾಕಡ...." ಎಂದು ವರಾತ ಎಬ್ಬಿಸುವಾಗಲೂ ಅಷ್ಟೇ ಸಹನೆಯಿಂದ ಮತ್ತೆ ಬಿಚ್ಚಿ ಕಟ್ಟುವಾಗ ನಿನ್ನೊಳಗೆ ಒಮ್ಮೆಯೂ ಬೇಸರ ಮೂಡಲಿಲ್ಲವೇ? "ಈ ಅಂಗಿ ಬೇಡ ನಂಗೆ.. ಇದ್ರ ಬಣ್ಣ ಚೊಲೋ ಇಲ್ಲೆ.. ನಂಗೆ ನೀಲಿ ಬಣ್ಣದ್ದೇ ಹಾಕು.." ಎಂದು ಗಲಾಟೆ ಎಬ್ಬಿಸಿದಾಗ ನಾನು, ಆಸೆ ಪಟ್ಟು ನೀ ತಂದಿದ್ದ ಗುಲಾಬಿ ರಂಗಿನ ಫ್ರಾಕ್ ಮಂಚದಲ್ಲಿ ಹಾಗೇ ಮುದುಡಿತ್ತು... ನಿನ್ನ ಮನವೂ ಆಗ ಹಾಗೇ ಆಗಿರಬೇಕಲ್ಲವೇ? ಅಮ್ಮಾ... ಈಗ ನಿನ್ನ ಮೊಮ್ಮಗಳು ನನಗೆ ಹೊಸ ರೀತಿಯಲ್ಲಿ ಹಳೇ ಪಾಠವನ್ನು ಕಲಿಸುವಾಗಲೆಲ್ಲಾ ನೀನೆ ನನ್ನೆದುರು ನಿಂತು ನಸುನಕ್ಕಂತಾಗುತ್ತದೆ!

"ಅಯ್ಯೋ.. ಹೀಂಗೆ ಕೂದ್ಲು ಬಾಚಡ.... ಚೊಲೋ ಕಾಣ್ತಿಲ್ಲೆ... ಲೆಫ್ಟ್ ಕಡೆ ರಾಶಿ ಕೂದ್ಲು ಇದ್ದು.. ರೈಟ್‌ನಲ್ಲಿ ಕೂದ್ಲೇ ಸರಿ ಆಜಿಲ್ಲೆ.. ಈ ಹೇರ್ ಬ್ಯಾಂಡ್ ಬೇಡ... ಆ ಕಲರ್ ಬೇಕು... ಈ ಫ್ರಾಕ್ ಸರಿ ಇಲ್ಲೆ... ಇದಡ್ಡಿಲ್ಲೆ.. ನಿಂಗೆಂತದೂ ಗೊತ್ತಾಗ್ತೇ ಇಲ್ಲೆ.. ಹ್ಮ್ಂ..." ಎಂದು ನನ್ನ ಮಗಳು ಗೊಣಗಿದಾಗಲೆಲ್ಲಾ ನಾನು ನಿನ್ನೆದುರೇ ನಿಂತಂತಾಗುತ್ತದೆ. ಆ ತಿಂಡಿ ಬೇಡ.. ಈ ಊಟ ರುಚಿಯಿಲ್ಲ.. ಇಂದು ಚಪಾತಿಯೇ ಬೇಕು... ಉಪ್ಪಿಟ್ಟು ಸೇರೊಲ್ಲ... ಎಂದೆಲ್ಲಾ ಗಲಾಟೆ ಮಾಡಿದಾಗ ಒಮ್ಮೂಮ್ಮೆ ನೀನೂ ಸೋತು, ಬೇಸತ್ತು ಚೆನ್ನಾಗಿ ಗದರಿಬಿಡುತ್ತಿದ್ದೆ.. "ನಿಂಗನೂ ದೊಡ್ಡಾಗಿ, ಮದ್ವೆಯಾಗಿ ಮುಂದೆ ನಿಂಗ್ ನಿಂಗ್ಳ ಮಕ್ಕ, ಮರಿಗೆ ಬೇಯಿಸಿ ಹಾಕ್ಬೇಕಿದ್ರೆ ಗೊತ್ತಾಗ್ತು.. ಮನೆ, ಮಕ್ಕಳನ್ನು ಸುಧಾರಿಸದು ಎಷ್ಟು ಕಷ್ಟ ಹೇಳಿ.. ಅಮ್ಮನ ಕಷ್ಟ ಎಂತು ಹೇಳಿ ಗೊತ್ತಾಗದಿಲ್ಲೆ ಈಗ..." ಎಂದಾಗ ನಾವೆಲ್ಲಾ ಅರೆಕ್ಷಣ ಪೆಚ್ಚಾದರೂ.. ಮತ್ತೊಂದು ಕ್ಷಣಕ್ಕೆ ನೀ ಮಾಡಿ ಕೊಡುವ ಬಿಸಿ ಬಿಸಿ ರವೆಲಾಡಿನ ಜೊತೆ ಎಲ್ಲವೂ ಕರಗಿ ಹೋಗುತ್ತಿತ್ತು. ಆದರೆ ಇಂದು ಮ್ಯಾಗಿ, ಬ್ರೆಡ್ ಜಾಮ್, ಪಾಸ್ತಾ, ಕುಕ್ಕಿಸ್ ಬಿಸ್ಕೀಟ್ ಎಂದೆಲ್ಲಾ ಮಗಳು ಗಲಾಟೆ ಮಾಡುವಾಗ ಸಮಾಧಾನಿಸಿ, ಸುಧಾರಿಸಿ ಸುಸ್ತಾಗುವಗ ನನ್ನೊಳಗೆ ಮತ್ತೆ ನಿನ್ನದೇ ಕನವರಿಕೆ. ನಿನ್ನಂತೇ ರುಚಿ ರುಚಿಯಾಗಿ ರವೆಯುಂಡೆಯನ್ನಾದರೂ ಮಾಡಿಕೊಡೋಣ ಎಂದರೆ ಹಾಳಾದ ಆ ಲಾಡು ಕಟ್ಟಲೇ ಆಗುತ್ತಿಲ್ಲ... ಕಲಿತುಕೋ ಎಂದು ಒತ್ತಾಯಿಸಿದ ನಿನ್ನೇ ಲಾಡು ಮಾಡಿ ಕಳುಹಿಸಲು ಹೇಳಬೇಕೆಂದು ಎಣಿಸಿ, ಕೈ ಮೊಬೈಲ್ ಅನ್ನು ಒತ್ತುತ್ತದೆ.

ನಾಲ್ಕು ಗೋಡೆಯ ಮಧ್ಯೆ ಕುಳಿತು ಮಗಳು ಹೊರ ಓಡಲು ಬೊಬ್ಬಿರಿವಾಗ ಮನಸು ಹೌಹಾರುವುದು. ಹೊರ ಕಳುಹಿದರೆ ಆಗಂತುಕರ ಕಾಟ, ರಸ್ತೆಯಲ್ಲಿ ವಿಮಾನದಂತೇ ಹಾರಿ ಬರುವ ವಾಹನಗಳ ಭಯ. ಒಳಕುಳಿತೇ ಅವಳ ಜೊತೆ ಆಡುತ್ತಾ, ಹಾಗೇ ಬಿಳಿ ಬಣ್ಣದ ಹಾಳೆಯ ಮೇಲೆ ಬಣ್ಣ ಬಣ್ಣದ ಚಿತ್ತಾರವ ಬಿಡಿಸಲು ಅವಳ ಕೈಗೆ ಕೊಟ್ಟು ಅವಳು ಸುಮ್ಮನಾಗಲು ಮತ್ತೆ ನನ್ನ ಬಾಲ್ಯ ನೆನಪಾಗುತ್ತದೆ. ಆಡಲು ಜೊತೆಗಾರರಿಲ್ಲದೇ ನಾ ಒಂಟಿಯಾದಾಗಲೆಲ್ಲಾ ಚಂದಮಾಮ, ಡಿಂಗ, ಬಾಲಮಂಗಳವನ್ನು ಮುಂದಿಡುತ್ತಿದ್ದೆ..."ಬದ್ಕಲ್ಲಿ ಯಾರು ಕೈ ಕೊಟ್ರೂ ನಾವು ಕಲಿತ ವಿದ್ಯೆ, ಓದುವ ಉತ್ತಮ ಪುಸ್ತಕ ನಮ್ಮ ಕೈ ಬಿಡದಿಲ್ಲೆ.. ಸದಾ ನೆನ್ಪಿಡು.." ಎಂದು ಉಪದೇಶಿಸುತ್ತಿದ್ದೆ. ಆ ಉಪದೇಶ ಮೊದ ಮೊದಲು ಕಿರಿ ಕಿರಿ ಆದರೂ ಕ್ರಮೇಣ ಅದರೊಳಗಿನ ನಿತ್ಯ ಸತ್ಯ ಅರಿವಾಗಿ ನಾನೂ ಓದುವ ಉತ್ತಮ ಗೀಳಿಗೆ ಬಿದ್ದೆ ನೋಡು.. ಮತ್ತೆ ಏಕಾಂತದಲ್ಲೂ ಗುಂಪಿನಲ್ಲಿರುವ ಅನುಭವವಾಗತೊಡಗಿತು ನನಗೆ. ‘ಉತ್ತಮ ಪುಸ್ತಕಗಳನ್ನು ಅಪ್ಪಿಕೋ.. ಅವೇ ನಿನ್ನ ಮುನ್ನೆಡೆಸುತ್ತವೆ’ ಎಂದು ಸದಾ ಹೇಳುತ್ತಿದ್ದ ನಿನ್ನ ನೆನೆ ನೆನೆದೇ ಇಂದು ಮಗಳ ಮುಂದೆ ಬಾಲಮಂಗಳ, ಚಂದಮಾಮರನ್ನು ಹರಡಲು ಕೈ ತಡವುತ್ತೇನೆ. ಅವರೆಲ್ಲಾ ಅಂತರಜಾಲದ ಒಳಹೊಕ್ಕಿ ಇಣುಕುತ್ತಿರುವುದು ಅರಿವಾಗಲು ನನ್ನೊಳಗೆ ಕೊಂಚ ವಿಷಾದ, ಕೊಂಚ ನಗು.

"ನೀನೂ ಸ್ಪರ್ಧೆಗೆ ಭಾಗವಹಿಸವು.. ಅದರಲ್ಲೆಂತ ಭಯ? ಎಲ್ಲರ ಮುಂದೆ ನಿಂತು ನಿಂಗೆ ಗೊತ್ತಿಪ್ಪ ವಿಷ್ಯ ಹೇಳಿರೆ ಆತು... ಪ್ರೈಸ್ ಬಗ್ಗೆ ತಲೆ ಕೆಡಸಕಳಡ... ನಾವು ನಮ್ಮ ಕರ್ತವ್ಯ ಮಾಡವು.. ಫಲ ನಮ್ಮದಲ್ಲ ಹೇಳಿದ್ದ ಕೃಷ್ಣ ಪರಮಾತ್ಮ.. ಅದನ್ನೇ ನೆನ್ಪಿಟ್ಕಂಡು ಸ್ಟೇಜ್ ಹತ್ತು.." ಎಂದು ಅಂದು ನೀ ನನ್ನ ಹುರಿದುಂಬಿಸಿದ್ದೆ. ನಿನ್ನ ಆಶೀರ್ವಾದದ ಫಲವೋ ಇಲ್ಲಾ ಗೀತಾವಾಕ್ಯದ ಮಹಿಮೆಯೋ.. ಪದವಿಯವರೆಗೂ ಒಂದೆರಡಾದರೂ ಪದಕ ನನ್ನ ಕೊರಳ ಸೇರಿ ನಿನ್ನ ಮಡಿಲ ತುಂಬಿತ್ತಲ್ಲ! ಈಗ ನೀನು ಹಾಕಿಕೊಟ್ಟ ದಾರಿಯಲ್ಲೇ ನಾನು ನಡೆಯಬೇಕಿದೆ ಅಲ್ಲವೇ? ನಿನ್ನ ಮೊಮ್ಮಗಳನ್ನೂ ಬದುಕೆಂಬ ಸ್ಪರ್ಧೆಗೆ ಛಲದಿಂದ ತಯಾರಿಸಬೇಕಿದೆ. ಆತ್ಮವಿಶ್ವಾಸ ಎಂದರೆ ಏನೆಂದು ನೀನಂದು ತಿಳಿಸಿದೆ.. ಅದನ್ನೇ ನನ್ನ ಮಗುವಿಗೂ ನಾನು ಹೇಳಿಕೊಡಬೇಕಿದೆ. ನಾಳೆ ಅವಳು ಎಲ್ಲಿಯೇ ಇರಲಿ... ಅವಳ ವ್ಯಕ್ತಿತ್ವದಲ್ಲಿ ನನ್ನ, ನಿನ್ನ ಛಾಪಿರಬೇಕು. ಜೊತೆಗೆ ಇಂದು ನಾನು ನಿನ್ನ ನೆನೆದು, ಆ ನೆನಪಲ್ಲೇ ಮಿಂದು ಕೃತಾರ್ಥಳಾಗುವಂತೇ ಅವಳೂ ಅವಳಮ್ಮನ ನೆನೆದು ತಂಪಾಗುವಂತಾಗಲೆಂದಷ್ಟೇ ಹಾರೈಸುವೆ. ಅಮ್ಮಾ.... ನಿನ್ನ ಹಾರೈಕೆಯೂ ಇದೇ ಆಗಿರುತ್ತದೆ ಎಂದು ನಾನು ಚೆನ್ನಾಗಿ ಬಲ್ಲೆ.

‘ಕೃತಕ ದೀಪ ಕತ್ತಲಲ್ಲಿ ಕಳೆದುಹೋಗದಂತೆ, ಸೂರ್ಯ ಚಂದ್ರ ತಾರೆಯಾಗಿ ಹೊಳೆದು ಬಾಳುವಂತೆ’ ನೀ ನನ್ನ ಬೆಳೆಸಿದ ಪರಿಗೆ, ನನ್ನ ಬದುಕ ಬೆಳಗಿಸದ ರೀತಿಗೆ, ನನ್ನ ವ್ಯಕ್ತಿತ್ವವ ರೂಪಿಸಿದ ನಿನ್ನ ನೀತಿಗೆ ನನ್ನ ಸಾಸಿರ ನಮನ. ನಿನ್ನ ಋಣ ತೀರಿಸುವ ಯೋಚನೆಯೂ ನನಗಿಲ್ಲ.. ತೀರಿದರೆ ತೀರುವಂತಹ ಬಂಧವೂ ನಮ್ಮದಲ್ಲ. ನೀ ಬೆಳಗಿನ ಹಣತೆಯಡಿಯಲ್ಲೇ ನನ್ನ ಬದುಕು ಬೆಳೆದು, ಕುಡಿಯೊಡೆದಿರುವ ಹೊಸ ಬತ್ತಿಗೆ ಬೆಳಕನ್ನೀವ ಶಕ್ತಿ ನನಗೆ ದಯಪಾಲಿಸೆಂದು ಸದಾ ನಿನ್ನ ನನಗಿತ್ತ... ನಿನ್ನದೇ ಪಡಿಯಚ್ಚಿರುವ ಮಗಳ ನನ್ನ ಮಡಿಲಿಗಿತ್ತ, ಆ ಭಗವಂತನ ಸ್ಮರಿಸುತ್ತೇನೆ... ಅವನಲ್ಲಿ ಪ್ರಾರ್ಥಿಸುತ್ತೇನೆ.

ನಿನ್ನ ನೆನಪಲೇ ಸದಾ ಮುಳುಗಿರುವ ನಿನ್ನೊಲವಿನ,

-ತೇಜಸ್ವಿನಿ

ಈ ಲೇಖನ ನನ್ನ ಅಮ್ಮನಿಗೆ ಅರ್ಪಿತ.

[ಉದಯವಾಣಿಯ ಮಹಿಳಾಸಂಪದದಲ್ಲಿ ಪ್ರಕಟಿತ.]

ಗುರುವಾರ, ಜುಲೈ 14, 2011

ಇಳಿಸಂಜೆಯ ಕನವರಿಕೆ

ಮುಚ್ಚಿರುವ ಎವೆಗಳ ಹಿಂದೆ
ಗತದಿನಗಳದ್ದೇ ಸಿಹಿ-ಕಹಿ ನೆನಪು
ಸಿಗದ ಸಂತಸದ ಕ್ಷಣಗಳ ಮೆಲುಕು,
ಮುಪ್ಪಲ್ಲೂ ಕಾಡುವುದು ಸವಿಗನಸು

ಸುಕ್ಕುಗಟ್ಟಿದ ಚರ್ಮ, ದೇಹಕ್ಕಂಟಿಹುದು
ವಯಸಿನ ಲೆಕ್ಕಾಚಾರ ಒಮ್ಮೊಮ್ಮೆ
ಈ ಮನಸಿಗಂತೂ ಸಿಗದು..

ನೆರೆತ ಕೂದಲುಗಳ ಸಿಕ್ಕು
ಬಿಡಿಸುವಾಗೆಲ್ಲಾ ಮಬ್ಬು ಮಬ್ಬು
ಕೊರಳೊಳಗಿನ ಒಂಟಿ ಸರದೊಳು
ಹುಡುಕುತಿವೆ ಕಪ್ಪು ಮಣಿಗಳನೇ
ಅದುರುವ ಕೈಬೆರಳುಗಳು.

ಹಿಂತಿರುಗಿದಷ್ಟೂ ಭೂತಗಳದೇ ಕಾಟ
ಭವಿತವ್ಯದ ಕೊನೆಹೆಜ್ಜೆಯತ್ತ
ಸಾಗುತಿದೆ ಇಳಿಸಂಜೆಯ ಈ ಪಯಣ...
ಇಂದು ಮಾತ್ರ ಒಳ ಹೊರಗೆಲ್ಲಾ,
ತುಂಬಿಹುದು ಬರೀ ಶೂನ್ಯ.

--ತೇಜಸ್ವಿನಿ ಹೆಗಡೆ.

ಗುರುವಾರ, ಜುಲೈ 7, 2011

ತಾಯಿಬೇರನರಸಿ...

ಹೊರಗಿನ ಧೋ ಮಳೆಯ ಪೈಪೋಟಿಗೆ ನಿಂತ
ಒಳಗಿನ ದೊಡ್ಡ ಗಂಟೆಯ ಸದ್ದು,
ಹೊರಬಿದ್ದರೆ ಸಾಕು ನಿಂತ ಕೆನ್ನೀರಿನೊಳಗೆ
ಪುಟ್ಟ ಪುಟ್ಟ ಚುಕ್ಕಿಗಳ ಸಾಲು..

ಒಂದು ಹೊಂಡದೊಳಗೊಂದು ಕಾಲು
ಮತ್ತೊಂದರಲ್ಲೊಂದು ಚಪ್ಪಲ್ಲು
ಬಟ್ಟೆ ತುಂಬಾ ಕೆಂಪು ಚುಕ್ಕಿ
ಮೊಗದ ತುಂಬಾ ನಗೆಯ ಹುಕ್ಕಿ

ಅಪ್ಪನ ಗದರುವಿಕೆಗೆ ಬೆದರಿ,
ಬಿಮ್ಮನೆ ಧರಿಸಿ ಕುಳಿತ ರೈನ್‌ಕೊಟು,
ಕದ್ದು ಮೆಲ್ಲನೆ ಮೊಗವ ಮೇಲನೆತ್ತಿ
ಮಳೆಗೆ ಒಡ್ಡುವ ಹುಚ್ಚು ಮನಸು

‘ಅ, ಆ, ಇ, ಈ’ ಎನ್ನುವ ಆ ಪಾಠ
‘ಎ, ಬಿ, ಸಿ ಡಿ’ ಎನ್ನುತಿವೆ ಈ ಪಾಠ
ನೋಟ ಬೇರೆ, ಆಟ ಬೇರೆ, ಮನದೊಳಗಿನ-
ನಸುನಗೆಯ ತುಂಬಾ ಕರಿಮೋಡಗಳ ಛಾಯೆ!

ಬೇಕಾಗಿದೆ ನನ್ನಂತಹ ಪುಟ್ಟ ಶಾಲೆಯೊಂದು
ನಲಿಯುತ ಕಲಿಯಲು, ಕಲಿತು ಕುಣಿಯಲು
ಹೂವಿನ ನಗುವನರಸಿ ಅರಳಲು,
ಬೇರು ಒಳ ಇಳಿದು ಮೇಲ್ ಜಿಗಿಯಲು...

-ತೇಜಸ್ವಿನಿ ಹೆಗಡೆ.

ಬುಧವಾರ, ಜೂನ್ 29, 2011

ವಿಲಾಪ

ಕೆಲವೊಂದು ಹಾಡುಗಳೇ ಹಾಗೇ... ಮನಸೊಳಗೆ ಒಮ್ಮೆ ಹೊಕ್ಕರೆ ಅಲ್ಲೇ ಗುನುಗುತ್ತಿರುತ್ತವೆ.. ಕಣ್ಣಂಚಿನ ಹನಿಯೊಡನೆ ಜಿನುಗುತ್ತಿರುತ್ತವೆ... ಮನದಾಳವ ಹೊಕ್ಕು ಎದೆಯೊಳು ಮನೆಮಾಡಿ ಸದಾಕಾಲ ಹಾಡುತ್ತಲೇ ಇರುತ್ತವೆ. ಇಂತಹ ಒಂದು ಸುಂದರ, ಸುಶ್ರಾವ್ಯ ಹಾಡನ್ನು ಕೇಳುವ ಭಾಗ್ಯ ಎರಡು ದಿನಗಳ ಹಿಂದೆ ನನಗೊಲಿಯಿತು. ಹೀಗೇ ಚಾನಲ್‌ಗಳನ್ನು ಬದಲಾಯಿಸುತ್ತಿರುವಾಗ ಹಿಂದಿ ಧಾರಾವಾಹಿಯೊಂದರಲ್ಲಿ ಆಗಷ್ಟೇ ಆರಂಭವಾಗಿದ್ದ ಹಾಡಿನ ಪ್ರಾರಂಭ ನನ್ನ ಅಲ್ಲೇ ನಿಲ್ಲುವಂತೆ ಮಾಡಿತು. 

ಪಾತ್ರ ಚಿತ್ರಣ : ನಾಯಕಿಯ ಪತಿ ಅವಳನ್ನು ತೊರೆದು ಬೇರೋರ್ವಳನ್ನು ಮೆಚ್ಚಿ ಮದುವೆಯಾಗಿ ಅವಳ ಮುಂದೆಯೇ ಎರಡನೇ ಪತ್ನಿಯನ್ನು ಕರೆದುಕೊಂಡು ಹೊರಡುತ್ತಾನೆ. ಹಾಗೆ ಹೋಗುವಾಗ ಮುಗ್ಧ, ಸೌಮ್ಯ ನಾಯಕಿ ತನ್ನ ಮನದಳಲನ್ನು ತೋಡಿಕೊಳ್ಳುವಾಗ ಹಿನ್ನಲೆಯಾಗಿ ಬಂದ ಹಾಡಿದು. ನನ್ನ ಪ್ರಕಾರ ಈ ಹಾಡನ್ನು ನನ್ನ ಅಚ್ಚುಮೆಚ್ಚಿನ ಶ್ರೇಯಾ ಘೋಶಾಲ್ ಹಾಡಿರಬೇಕು. ಆ ಹಾಡು ನನ್ನ ಅದೆಷ್ಟು ಕಾಡಿತೆಂದರೆ ಅದೇ ಹಾಡಿನ ಸೊಲ್ಲುಗಳು ಕನಸಲೂ ಗುನುಗುನಿಸುತ್ತಿದ್ದವು.

ಬೆಳಗೆದ್ದು ಗೂಗಲ್‌ನಲ್ಲೆಲ್ಲಾ ಜಾಲಾಡಿದರೂ ಹಾಡು ಸಿಗಲಿಲ್ಲ. ಕಾರಣ ಅದು ಯಾವುದೇ ಚಲನಚಿತ್ರ ಅಥವಾ ಆಲ್ಬಮ್‌ನ ಹಾಡಾಗಿರಲಿಲ್ಲ. ಕೇವಲ ಆ ಧಾರಾವಾಹಿಗಾಗಿ ರಚಿಸಿದ್ದಾಗಿತ್ತು. ಅಂತೂ ಕೊನೆಗೆ ಯೂಟ್ಯೂಬ್‍ನಲ್ಲಿ ಧಾರಾವಾಹಿಯ ತುಣುಕು ಸಿಕ್ಕಿತು. ನನ್ನವರ ಸಹಾಯದಿಂದ ಅಲ್ಲಿನ ವಿಡಿಯೋ ತುಣುಕನ್ನು Mp3 Formateಗೆ ಭಟ್ಟಿ ಇಳಿಸಿಕೊಂಡೆ. 

ಅದೇಕೋ ಎಂತೋ ಹಾಡಿನ ರಾಗ, ಸ್ವರ, ಲಯ ಬಹು ಇಷ್ಟವಾಯಿತು. ಸಾಹಿತ್ಯವೂ ತುಂಬಾ ಚೆನ್ನಾಗಿದೆ. ಹಾಡು ಸ್ವಲ್ಪ ಕನ್ನಡದ "ನೀನಿಲ್ಲದೇ ನನಗೇನಿದೆ.." ಹಾಡಿನ ಭಾವವನೇ ಸ್ಪುರಿಸುತ್ತದೆ.

ಮೂಲ ಹಾಡನ್ನು ಮೈಲ್ ಮಾಡಲಾಗದು. ಕಾರಣ ಅದು 10MB ಗಿಂತ ಜಾಸ್ತಿ ಇದೆ. ಮೊದಲು ಬರುವ ಮಾತುಗಳನ್ನು ಕತ್ತರಿಸಿ ಕೇವಲ ಹಾಡಿನ ತುಣುಕನ್ನಷ್ಟೇ ತಯಾರಿಸುತ್ತಿದ್ದೇನೆ. Editing ಆದ ಮೇಲಷ್ಟೇ ಎಲ್ಲರಿಗೂ ಕೇಳಿಸಬಹುದು. 

 ಕನ್ನಡಕ್ಕೆ ಅನುವಾದಿಸಬೇಕೆಂದು ಅನ್ನಿಸಿತು. ಪ್ರತಿ ಪದಗಳನ್ನೂ ಇದ್ದ ಹಾಗೇ ಅನುವಾದಿಸಲಾಗದು. ಆದಷ್ಟು ಹಾಡು ಇದ್ದಹಾಗೇ, ಮೂಲ ಹಿಂದಿ ಹಾಡಿನ ರಾಗದಲ್ಲೇ ಹಾಡಿಕೊಳ್ಳಲು ಅನುಕೂಲವಾಗುವಂತೇ ಅನುವಾದಿಸಲು ಯತ್ನಿಸಿದ್ದೇನೆ. 

ಆ ಹಿಂದಿ ಹಾಡಿನ ಕನ್ನಡಾನುವಾದ ಹೀಗಿದೆ :

ಇನಿಯಾ ಹೇಗೆ ಕಳೆಯಲಿ ನೀನಿರದ ನಿಶೆಯ.. 
ಈ ನಿಶೆ ತಂದಿದೆ ಶೂನ್ಯ ಭಾವ...
ಹೇಗೆಂದು ಹೇಳಲಿ ಈ ನೋವ...
ಇನಿಯಾ ಹೇಗೆ ಕಳೆಯಲಿ ನೀನಿರದ ನಿಶೆಯ..

ಯುಗವೊಂದು ಕಳೆಯಿತು ಪ್ರತಿ ಕ್ಷಣ ವಿರಹದಿ, ನೀ ಬರದೆ ಬಳಿ ನೋಡ...
ಯಾವ ಮೋಹಿನಿಯೋ, ಕಾಮಿನಿಯೋ ನಿನ್ನ, ಸೆಳೆದಿಹಳೋ ಬಲು ದೂರ..
ಇನಿಯಾ ಹೇಗೆ ಕಳೆಯಲಿ ನೀನಿರದ ನಿಶೆಯ..

ನೀನಿರದೇ ಬಳಿ ಸುಳಿಯದಯ್ಯ ನಿದಿರೆಯ ಸುಳಿವೂ ಸನಿಹ
http://enchantingkerala.org
ಕಾಲದ ಕೈಯೊಳು ಘಮಘಮಿಸುವುದು ನಿನ್ನದೇ ಕನಸಿನ ಮೋಹ
ಇನಿಯಾ ಹೇಗೆಕಳೆಯಲಿ ನೀನಿರದ ನಿಶೆಯ
ಈ ನಿಶೆ ತಂದಿದೆ ಶೂನ್ಯ ಭಾವ...
ಹೇಗೆಂದು ಹೇಳಲಿ ಈ ನೋವ...
ಇನಿಯಾ ಹೇಗೆಕಳೆಯಲಿ ನೀನಿರದ ನಿಶೆಯ


ಹಿಂದಿ ಹಾಡಿನ ಸಾಹಿತ್ಯ:

ಸಜನಾ ಕೈಸೆ ಕಟಿ ತೇರೆ ಬಿನ್ ರತಿಯಾ...
ಮೆರಿ ರತಿಯಾ ಹಾಯ್ ಸೂನಿ ರತಿಯಾ...
ಕಬ್ ಕಾಸೆ ಬತಿಯಾ...

ಯುಗಪೆಹೆಲೆ ಪರದೇಸಗಯಾ ತೂ ಲೌಟಕೆ ಫಿರ ನಾ ಆಯಾ
ಕಿಸ್ ಬೇರನ್ ನೆ ಕಿಸ್ ಸೌತನ್ ನೆ ಹೈ ತುಝ್ ಕೊ ಭರಮಾಯಾ
ಸಜನಾ ಕೈಸೆ ಕಟಿ ತೇರೆ ಬಿನ್ ರತಿಯಾ...

ನಾ ತೂ ಆಯಾ ನಾ ಆಯಿ ಹೈ ನಿಂದಿಯಾ ನೈನನ ದ್ವಾರೆ
ಪಲ ಪಲ ಕಿ ಗಲಿಯನ ಮೆ ಮೆಹೆಕೆ ಮೇರೆ ಖ್ವಾಬ್ ತುಮ್ಹಾರೆ..

ಸಜನಾ ಕೈಸೆ ಕಟಿ ತೇರೆ ಬಿನ್ ರತಿಯಾ...
ಮೆರಿ ರತಿಯಾ ಹಾಯ್ ಸೂನಿ ರತಿಯಾ...
ಕಬ್ ಕಾಸೆ ಬತಿಯಾ...

ಸೂಚನೆ : ಹಾಡನ್ನು ಈ ಲಿಂಕ್‌ನಲ್ಲಿ ಕೇಳಬಹುದು. ಆದರೆ ಮೊದಲ 3.2 ನಿಮಿಷ ಬರುವ ಧಾರಾವಾಹಿ ಸಂಭಾಷಣೆಗಳನ್ನು ಮುಂದೋಡಿಸಿದ ಮೇಲಷ್ಟೇ ಹಾಡು ಆರಂಭವಾಗುವುದು. 


-ತೇಜಸ್ವಿನಿ.

ಶುಕ್ರವಾರ, ಜೂನ್ 24, 2011

ತುಣುಕುಗಳು...

ಆಸೆ

ಮತ್ತೆ ಮತ್ತೆ ದಡವ ಬಡಿದು
ನುಗ್ಗಿ ನುಗ್ಗಿ ಸುಸ್ತಾಗಿ, ಸೋತರೂ
ಸೋಲೊಪ್ಪದೇ, ಹೊಸ ಹುರುಪಿಂದ
ಮತ್ತೆ ಮತ್ತೆ ತೆರಳಿ, ಹೊರಳಿ
ಮರಳುವ ಮರುಳು ತೆರೆಗಳಂತೆ


ನಿರಾಸೆ

ನಾಜೂಕಾಗಿ ನೇಯ್ದ ನುಣ್ಣನೆಯ
ಗೂಡೊಳಗೆ ಮೊಟ್ಟೆಯಿಟ್ಟು
ಹಗಲಿರುಳು ಕಾವುಕೊಟ್ಟು
ಇನ್ನೇನು ಮರಿ ಹೊರಬರುವಾಗ
ಮೊಟ್ಟೆ ಹಾವಿನ ಹೊಟ್ಟೆಸೇರಿದಂತೆ

ನಿರೀಕ್ಷೆ

ಅಂತಿಮ ಪರೀಕ್ಷೆಯ
ಕೊನೆಯ ಪ್ರಶ್ನೆಗೆ ಉತ್ತರಿಸಿದವ
ಹೊರಬಂದು, ಬರೆದ ಉತ್ತರ
ಸರಿಯೋ ತಪ್ಪೋ ಎಂದು ಚಡಪಡಿಸಿ
ಪುಸ್ತಕದ ಪ್ರತಿ ಹಾಳೆಯನ್ನೂ
ತೆರೆತೆರೆದು ಹುಡುಕಾಡಿದಂತೆ


ಕೆಲವು ಹಳೆಯ ತುಣುಕುಗಳು....

-ತೇಜಸ್ವಿನಿ ಹೆಗಡೆ.

ಭಾನುವಾರ, ಜೂನ್ 19, 2011

‘ನೀಲ ಕಡಲ ಬಾನು’

ಮಂಗಳತ್ತೆಯ ಪಾತ್ರದಲ್ಲಿ ಗಮನಸೆಳೆದು ಯಶಸ್ವಿಯಾಗಿರುವ ‘ಜಯಲಕ್ಷ್ಮಿ ಪಾಟೀಲ್’ ಅವರು ಓರ್ವ ಉತ್ತಮ ಕವಯಿತ್ರಿಯೂ ಆಗಿರುವರೆಂದು ನನಗೆ ಅರಿವಾದದ್ದೇ ಅಂದು ಇದ್ದಕಿದ್ದಂತೇ ಅವರು ಕಳುಹಿಸಿದ, ಅವರದೇ ಕವನಸಂಕಲನವನ್ನೊಳಗೊಂಡ ಮಿಂಚoಚೆಯಿಂದ!

"ನೀಲ ಕಡಲ ಬಾನು"- ಆಹ್.. ನನ್ನ ಅಚ್ಚುಮೆಚ್ಚಿನ ಕಡಲಿನ ಜೊತೆ ಅತಿ ಮೆಚ್ಚಿನ ನೀಲಬಣ್ಣದ ಮಿಶ್ರಣ! ಸಂಕಲನದ ಶೀರ್ಷಿಕೆಯೇ ಒಮ್ಮೆ ನನ್ನ ಸೆಳೆಯಿತು. ಮಿಂಚಿಂಚೆಯಿಂದ ಕವನ ಸಂಗ್ರಹವನ್ನು ಭಟ್ಟಿಯಿಳಿಸಿ ನಿಧಾನವಾಗಿ ತಲೆಯೊಳಗೆ ಹೀರಿಕೊಳ್ಳುತ್ತಿರುವಾಗಲೇ ಅನಿಸಿದ್ದು... ಕೆಲವೊಂದು ಕವಿತೆಯ ಸಾಲುಗಳು ಅದೆಷ್ಟು ಚೆನ್ನಾಗಿ ನನ್ನ ಭಾವಗಳನ್ನೇ ಸ್ಪುರಿಸುತ್ತಿವೆಯಲ್ಲಾ...! ಇಲ್ಲಾ ಹೆಚ್ಚಿನ ಹೆಣ್ಮಕ್ಕಳ ಭಾವನೆಗಳೆಲ್ಲಾ ಹೀಗೇ ಇರುತ್ತವೋ ಎಂತೋ... ಎನ್ನುವಷ್ಟು ಆಪ್ತವಾದವು... ಹೃದ್ಯವಾದವು. 

ಈ ಕವನ ಸಂಕಲನವು ೨೦೦೮ರಲ್ಲಿ "ಸಿವಿಜಿ" ಪಬ್ಲಿಕೇಷನ್ ಅವರಿಂದ ಪ್ರಕಟಣೆಗೊಂಡಿದೆ. ಈ ಕವನಸಂಕಲನದಲ್ಲಿ ಒಟ್ಟೂ ೮೪ ಪುಟಗಳಿದ್ದು ಒಟ್ಟೂ ೫೧ ಕವನಗಳನ್ನೊಳಗೊಂಡಿದೆ. ಡಾ.ಎಚ್.ಎಲ್ ಪುಷ್ಪ ಅವರು ಮುನ್ನುಡಿ ಬರೆದಿದ್ದಾರೆ.

ಆದರೆ ಈ ಪುಸ್ತಕದ ಪ್ರತಿಗಳು ಈಗ ಅವರಲ್ಲಿಲ್ಲವಂತೆ. ಬಹು ಹಿಂದೆ ಪ್ರಕಟವಾಗಿ.. ತದನಂತರ ಪ್ರಕಟನೆಗೆ ಪ್ರಕಾಶಕರು ಸಿಗದೇ ಹಾಗೇ ಉಳಿದಿದೆ. 

ಈ ಕವನಸಂಗ್ರಹದಲ್ಲಿ ನನಗಿಷ್ಟವಾದ ಕವನಗಳಿಷ್ಟು - 
ಅರಿಕೆ, ತಾಯಿಮತ್ತು ಮಗಳಿಗೆ, ರೂಪಕ, ಬತ್ತಲಾಗುವುದೆಂದರೆ..., ಸೆಲೆ, ನಾನು Vs ನೀನು, ವಿಲಾಸಿ, ಅಂತರಂಗ, ಬಿಂಬ, ಗಾಯ, ಸಮುದ್ರ, ವಾಚಾಳಿ, ಅನುಭವ್ಸು, ವಿರಹ, ಹೂ ಹಾಸು ನಾ ಹಾಗೂ ದಿನ(ಕರ)ಚರಿ.

ನಾನು Vs ನೀನು ಕವನದ ಕೊನೆಯಲ್ಲಿ ಬರುವ ಈ ಸಾಲುಗಳು ನನಗೆ ಬಹು ಇಷ್ಟವಾದವು. 
"ಒಂಟಿ, ವಿರಹಿ ನದಿ ನಾನು
ನೀನೋ ಸಮುದ್ರ!" - ಈ ಎರಡು ಸಾಲುಗಳಲ್ಲಿ ಅಡಕವಾಗಿರುವ ವ್ಯಂಗ್ಯ, ನೊವು, ಹತಾಶೆ ಮನತಟ್ಟಿದವು. ಎರಡೇಸಾಲುಗಳು ಸಂಪೂರ್ಣಕವಿತೆಯ ಅಂದವನ್ನು ಎತ್ತಿಹಿಡಿವಂತೆ, ನೂರು ಭಾವಗಳನ್ನು ಸ್ಫುರಿವಂತೆ ಭಾಸವಾದವು.

‘ನೀಲ ಕಡಲ ಬಾನು’ವಿನಿಂದ ಇಳಿದು ಬಂದ ಕೆಲವು ಹನಿಗಳಿವು... - (Click on the Photo to read)






ತಮ್ಮ ಈ ಸುಂದರ ಕವನಸಂಗ್ರಹವನ್ನು ನನಗೆ ಕಳುಹಿಸಿ ಓದಲು ಅವಕಾಶವನ್ನಿತ್ತ ಜಯಲಕ್ಷ್ಮೀ ಅವರಿಗೆ ತುಂಬಾ ಧನ್ಯವಾದಗಳು. ಈ ಪುಸ್ತಕ ಮತ್ತೆ ಪ್ರಕಟಣೆಗೊಳ್ಳುವಂತಾಗಲಿ ಎಂದು ಹಾರೈಸುವೆ.

-ತೇಜಸ್ವಿನಿ ಹೆಗಡೆ.

ಸೋಮವಾರ, ಜೂನ್ 13, 2011

ಆರದಿರಲಿ ಬೆಳಕು...

Courtesy:http://en.wikipedia.org/wiki/File:Karthigai_Deepam.jpg

ಪುಟ್ಟ ಹಾಸಿಗೆಯ ಮೇಲೆ ಚೊಕ್ಕ ಬಿಳಿ ಬಟ್ಟೆ
ಹಚ್ಚಗಾಗಲು ಮೆತ್ತನೆಯ ಚಾದರ, ದಿಂಬು
ಅಕ್ಕ ಪಕ್ಕ ನಿಂತು ಪಿಳಿಗುಡಿಸುತ್ತಿರುವ
ನಾಲ್ಕು ಜೋಡಿ ಪುಟ್ಟ ಕಣ್ಗಳು
ತುಸು ದೂರ ನಿಂತು ಕೈಕಟ್ಟಿದವನ
ಕಣ್ಗಳ ತುಂಬಾ ಅವಳದೇ ನೋವು

ನಾವಿಬ್ಬರು, ನಮಗಿಬ್ಬರೆಂದವರ
ಜೊತೆಗೂಡಲು ಬಂದಿತೊಂದು ಹೆಮ್ಮಾರಿ
‘ಅರ್ಬುದದ’ ರೂಪದಲಿ ಒಳಹೊಕ್ಕು,
ಕೊರೆಯತೊಡಗಿತ್ತವಳ ಬಳಿಸಾರಿ

ಹುಟ್ಟಿದಮೇಲೆ ಸಾವಿಗೆ ಅಂಜಿದೊಡೆಂತಯ್ಯಾ-
ಎಂಬಂತೆ ಸೆಟೆದು ನಿಂತವಳ
ಜೊತೆಯಾದರು ಆ ಮೂವರು...
ವಿಧಿಗೆಲ್ಲೋ ಸಣ್ಣ ನಡುಕ, ಯಮನೂ ಅಯೋಮಯ

ಭೂತದ ಸವಿ ನೆನಪುಗಳನೆಲ್ಲಾ
ಕಟ್ಟಿ ಗಂಟ, ಗಟ್ಟಿಯಾಗಿ ತಳವೂರಲು
ಇಂದಿನ ನೋವಿಗೆ ತುಸು ಅಲ್ಪ-ವಿರಾಮ,
ಜೊತೆಯಾದವರ ಪ್ರೀತಿಯು ಭವಿಷ್ಯತ್ತಿಗಿರಲು
ಹೆಮ್ಮಾರಿಗೂ ಬೀಳಬಹುದು ಪೂರ್ಣವಿರಾಮ.
........
[ಕ್ಯಾನ್ಸರ್ ರೋಗದೊಂದಿಗೆ ಛಲದಿಂದ ಹೋರಾಡಿತ್ತಿರುವ ಸಣ್ಣವಯಸಿನ, ಇಬ್ಬರು ಪುಟ್ಟ ಮಕ್ಕಳ ತಾಯಿಯೋರ್ವಳಿಗೆ ಈ ಕವನ ಅರ್ಪಿತ. ಸಾವಿಗಂಜದೇ, ಸಾವನ್ನೇ ಬೆದರಿಸುತ್ತಿರುವ ಅವಳ ಛಲಕ್ಕೆ, ಸ್ಥೈರ್ಯಕ್ಕೆ ಮನಃಪೂರ್ವಕ ನಮನಗಳು. ಆಕೆಯ ಹಾಗೂ ಆಕೆಯ ಪುಟ್ಟ ಸಂಸಾರದ ಉತ್ತಮ ಭವಿಷ್ಯಕ್ಕಾಗಿ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.]

- ತೇಜಸ್ವಿನಿ ಹೆಗಡೆ

ಬುಧವಾರ, ಮೇ 25, 2011

ಒಲವು-ಚೆಲುವು

ತಿಳಿ ನೀಲಾಗಸದಿ ಚಂದಿರನು ಬಂದಾಗ,
ಹುಣ್ಣಿಮೆಯು ಸುರಿವಂತೆ ನಿನ್ನ ನೆನಪು..

ತಾರೆಗಳ ಗುಂಪಿಂದ ಅರುಂಧತಿ ನಕ್ಕಾಗ,
ಸಪ್ತಪದಿ ತುಳಿದಂತೆ ನಿನ್ನ ಕನಸು...

ಚುಮು ಚುಮು ಬೆಳಗಲಿ ಇಬ್ಬನಿ ಸೋಕಲು,
ಚಿಲಿ ಪಿಲಿ ಗಾನದೊಳು ನಿನ್ನ ಹೆಸರು..

ಸಾಗರದೊಳಗಿಂದ ಅಲೆಗಳು ಎದ್ದಾಗ,
ಉಕ್ಕುವ ನೊರೆಯೊಳು ನಿನ್ನ ನಗುವು...

ಮುಗಿಲನು ಮುಟ್ಟಿದ ಮರವನು ತಬ್ಬಿದ,
ಲತೆಯೊಳು ಬಿರಿದ ಹೂ ನಮ್ಮ ಒಲವು...


-ತೇಜಸ್ವಿನಿ ಹೆಗಡೆ

ಸೋಮವಾರ, ಮೇ 16, 2011

ಗ್ರೀಷ್ಮದ ಹೊಸ್ತಿಲಲ್ಲಿ...

ನೀಲ ಮುಗಿಲ ತುಂಬ ತುಂಬೆ
ದಟ್ಟ ಕಪ್ಪು ಮೋಡ
ಸುರಿಯತೊಡಗಿ ಮೈಯ ತುಂಬ
ಬೆವರಿನ ಹನಿ ನೋಡ

ಗಾಳಿಯೊಳಗು ಹಬೆಯ ಉರಿ
ಉರಿದುರಿದು ಬೆಂದ ಭುವಿ
ಬಾಯ್ತೆರೆದು ಕುಳಿತ ಕಪ್ಪೆ
ಚಿಪ್ಪಿಗೀಗ ಮುತ್ತ ಚಿಂತೆ

ಮಿಂಚು ಬಳಸಿ ಬಂದ ಗುಡುಗು
ಜೊತೆಗೆ ಬರಲು ಗಾಳಿ ಜೋರು
ಸ್ವೇದಬಿಂದುಗಳೆಲ್ಲಾ ಮಾಯ
ನೆಲದ ತುಂಬ ಮಳೆಯ ಮಾಲೆ

ಎಡ ಬಲ ಬಾಗುವ ಗಿಡಗಂಟೆ
ಜಾರಿ ತೂರಿ ಹಾರುವ ತರಗೆಲೆ
ನೀರಕುಡಿದು ತಂಪಾದ ಧರೆ
ವಸಂತ ಋತುವಿಗಿನ್ನು ತೆರೆ

ಮೊದಲ ಹನಿಯ ಸ್ಪರ್ಶದಿಂದ
ಮೈ ಮನಗಳಲ್ಲಿ ಮಿಡಿದ ಸ್ಪಂದ
ಕಣ್ಮುಚ್ಚಿ ಮೊಗವ ಮೇಲೆ ನೋಡೆ
ಮನದ ತುಂಬ ಸ್ವಾತಿ ಮುತ್ತು


- ತೇಜಸ್ವಿನಿ ಹೆಗಡೆ

ಬುಧವಾರ, ಮೇ 4, 2011

ತಿರುಗುಬಾಣ

"ಪದ್ದಕ್ಕ... ರೀ ಪದ್ದಕ್ಕ...ಎಲ್ಲಿದ್ದೀರಾ? ಬೇಗ ಬನ್ರೀ.." ಎಂದು ಕೂಗುತ್ತಾ ಬಾಗಿಲನ್ನು ಒಂದೇ ಸಮನೆ ಬಡಿಯುತ್ತಿದ್ದ ಶ್ಯಾಮಲಳ ಬೊಬ್ಬೆ ಕೇಳಿ ಅಚ್ಚರಿಗೊಂಡ ಪದ್ಮಜ ಲಗುಬಗನೆ ಬಾಗಿಲ ತೆರೆದರೆ ಕಂಡದ್ದು ರಾವು ಬಡಿದಂತಿದ್ದ ಶ್ಯಾಮಲಳ ಮುಖ. "ಏನಾಯ್ತೇ ಶ್ಯಾಮಲಾ? ಅದ್ಯಾಕೆ ಹೀಂಗೆ ಕೂಗ್ತಾ ಇದ್ದಿ? ಅಂಥದ್ದೇನಾಯ್ತು ಈಗ? ಮೊದ್ಲು ಒಳ್ಗೆ ಬಾ.. ಕೂತ್ಕೋ.. ತಡೀ ನೀರು ತರ್ತೀನಿ.." ಎಂದು ಹೇಳುತ್ತಾ, ಒಳ ಹೋಗಿ ಆಕೆ ತಂದ ನೀರನ್ನು ಒಂದೇ ಉಸುರಿಗೆ ಕುಡಿದ ಶ್ಯಾಮಲ ಅಲ್ಲೇ ಇದ್ದ ಆರಾಮ್ ಕುರ್ಚಿಯ ಮೇಲೆ ಕುಸಿದಳು.

ನಗರ ಸಂಪರ್ಕದಿಂದ ಸ್ವಲ್ಪ ದೂರವೇ ಉಳಿದ ಪಾಂಡವಪುರದ ಸುಬ್ಬಮ್ಮನ ವಠಾರದಲ್ಲಿರುವ ಹತ್ತು ಮನೆಗಳಲ್ಲಿ ವೆಂಕಟ ಜೋಯಿಸರದ್ದೂ ಒಂದು. ಅವರ ಧರ್ಮ ಪತ್ನಿಯೇ ಪದ್ಮಜ. ಜಾತಕ, ಅಂಜನ, ಹೋಮ, ಹವನ, ಪಾಪ ಪರಿಹಾರ, ನವಗ್ರಹ ಪೀಡೆ - ಎಲ್ಲವುದಕ್ಕೂ ಆ ವಠಾರದವರಿಗೆ ಜೋಯಿಸರೇ ಬೇಕು. ಹಾಗಾಗಿ ಸಹಜವಾಗಿಯೇ ಅವರ ಹಾಗೂ ಅವರ ಮನೆಯಾಕೆಗೆ ಸ್ವಲ್ಪ ಹೆಚ್ಚು ಗೌರವ ಸಿಗುತ್ತಿತ್ತು. ತಾವು ಕೈಗೊಂಡ ಶುಭ ಕಾರ್ಯದಲ್ಲಿ ಏನೇ ವಿಘ್ನ ಕಂಡು ಬಂದರೂ ಜೋಯಿಸರ ಸಲಹೆಯನ್ನು ಕೇಳದೇ ಮುಂದುವರಿಯುತ್ತಿರಲಿಲ್ಲ. ಇತ್ತೀಚಿಗಷ್ಟೇ ಜೋಯಿಸರು ಯಂತ್ರ-ತಂತ್ರಗಳನ್ನೂ ಅಭ್ಯಸಿಸಿ ಸಕಲ ವಿದ್ಯೆಗಳಲ್ಲೂ ಪಾರಂಗತ ಎಂದು ಸ್ವಯಂ ಘೋಷಿಸಿಕೊಂಡ ಮೇಲೆ ಚಿಕ್ಕ ಪುಟ್ಟ ಪ್ರೇತ ಚೇಷ್ಟೆಗಳಿಗೂ ಇವರೇ ಬೇಕೆನ್ನುವಂತಾಗಿದೆ. ಅಸಲಿಗೆ ವೆಂಕಟ ಜೋಯಿಸರು ತಮ್ಮ ಅಜ್ಜ ಸುಬ್ಬಾ ಜೋಯಿಸರಿಂದ ಕಲಿತದ್ದು ಅಲ್ಪ ಸಲ್ಪ ಜಾತಕವನ್ನೋದುವುದು ಹಾಗೂ ಸಣ್ಣ ಪುಟ್ಟ ಹೋಮ-ಹವನಗಳನ್ನು ನಡೆಸುವ ಕ್ರಮಗಳನ್ನಷ್ಟೇ. ಅವರು ತಮ್ಮ ಮೂಲ ಊರಾದ ಶಿವನಕೆರೆಯಿಂದ ಪಾಂಡವಪುರಕ್ಕೆ ಬಂದಿದ್ದು ವೈದಿಕಕ್ಕೇ ಆಗಿತ್ತು. ಹಾಗೆ ಬಂದವರು ಕ್ರಮೇಣ ಅಲ್ಲಿಯ ಹತ್ತಾರು ಮನೆಗಳಲ್ಲಿ ತಮ್ಮ ಇಲ್ಲದ ಪಾಂಡಿತ್ಯವನ್ನು ಮೆರೆಸುತ್ತಾ, ಅವರ ಅಜ್ಞಾನ ಹಾಗೂ ಮುಗ್ಧತೆಗಳನ್ನೇ ಬಂಡವಾಳ ಮಾಡೊಕೊಂಡು ತಮ್ಮ ಪ್ರವೃತ್ತಿಯನ್ನೇ ವೃತ್ತಿಯನ್ನಾಗಿಸಿಕೊಂಡರು. ಹೆಚ್ಚು ಕಲಿತಿರದ, ಕೂಪ ಮಂಡೂಕಗಳಂತಿದ್ದ ಅಲ್ಲಿಯ ಜನರಿಗೆ ಇವರೇ ಎಲ್ಲವುದಕ್ಕೂ ಸೈ ಅನ್ನಿಸಿದ್ದರಲ್ಲೇನೂ ವಿಷೇಶವೂ ಇರಲಿಲ್ಲ. ಕಾಗೆ ಕೂಗುವದಕ್ಕೂ ನೆಂಟ ಬರುವುದಕ್ಕೂ ಸಮವಾಯಿತೆಂದಂತೆ ಅವರು ಹೇಳಿದ ಒಂದೆರಡು ಭವಿಷ್ಯಗಳೂ ನಿಜವಾಗಿಬಿಟ್ಟವು. "ಮುಂದಿನ ಮಾಘ ಮಾಸದೊಳಗೆ ನಿಮ್ಮ ಮಗಳ ವಿವಾಹವಾಗುವುದು.." ಎಂದು ಹೇಳಿದ ಎರಡು ತಿಂಗಳಿಗೆ ಶಾರದಮ್ಮನ ಮೊದಲ ಮಗಳ ಮದುವೆ ನಡೆದು ಹೋದರೆ, ತಾನೇ ಮಂತ್ರಿಸಿದ್ದೇನೆಂದು ಹೇಳಿ ಕೊಟ್ಟಿದ್ದ ನಿಂಬೆಹಣ್ಣಿನಿಂದಾಗಿ ಸುಶೀಲಮ್ಮನ ಕಳೆದು ಹೋದ ದನ ಸಿಕ್ಕಿ ಬಿಟ್ಟಿತು. ಇಂತಹ ಅಲ್ಲೊಂದು ಇಲ್ಲೊಂದು ಚಮತ್ಕಾರಗಳ ನಂತರ ಜೋಯಿಸರ ಮಾತೇ ವೇದವಾಕ್ಯ ಎಂಬ ಭ್ರಮೆ ಕ್ರಮೇಣ ಅಲ್ಲಿದ್ದ ೬-೮ ಮನೆಗಳಲ್ಲಿ ಮನೆಮಾಡಿಬಿಟ್ಟಿತು. ಹಾಳೂರಿನಲ್ಲಿದ್ದವನೇ ಗೌಡ ಎನ್ನುವಂತೇ ಆ ವಠಾರಕ್ಕೆ ತಾವೇ ಮುಖಂಡರೆಂದು ಬೀಗುತ್ತಿದ್ದರು ಜೋಯಿಸ ದಂಪತಿಗಳು. ಅಂತೆಯೇ ಇಂದು ಕಂಡ ವಿಪತ್ತಿನ ಪರಿಹಾರಕ್ಕಾಗಿ ಶ್ಯಾಮಲಾಳೂ ಓಡೋಡಿ ಬಂದಿದ್ದು.

"ಅಯ್ಯೋ ಏನು ಹೇಳ್ಲಿ ಪದ್ದಕ್ಕ.. ನಾನು ಸುಶೀಲಕ್ಕಳ ಮನೆಯಿಂದ ಈಚೆ ಬಂದು ಹಾಗೇ ನಮ್ಮನೆ ಕಡೆಗೆ ಹೋಗ್ತಿದ್ನಾ, ನೋಡ್ತೀನಿ...ಕೂಡು ರಸ್ತೆಯ ಮೇಲೆ ಒಂದು ದೊಡ್ಡ ತೆಂಗಿನಕಾಯಿ..!!! ಅದ್ರ ಮೇಲೆ ಕುಂಕುಮ ಬೇರೆ!! ನನ್ನೆದೆ ಹಾಗೇ ಅಲ್ಲಾಡಿ ಹೋಯ್ತು. ಶಿವ ಶಿವ ಅಂದ್ಕೋತಾ ಕಣ್ಮುಚ್ಚಿ ಹೇಗೋ ಇಲ್ಲಿಗೆ ಓಡಿ ಬಂದೆ. ಮಟ ಮಧ್ಯಾಹ್ನದಲ್ಲಿ ಮಂತ್ರದ ಕಾಯಿ ನೋಡ್ಬಿಟ್ಟಿದ್ದೀನಿ. ಮೊದ್ಲೇ ಶನಿ ದೆಸೆ ಅಂತ ಜೋಯಿಸರು ಹೇಳಿದ್ದಾರೆ. ರಾಹು ಬೇರೆ ಎಂಟನೆಯ ಮನೆಯಲ್ಲಿದ್ದಾನಂತೆ. ಹೀಗಿರುವಾಗ ಹೀಂಗಾಗಿದೆ. ಇನ್ನೇನು ಕಾದಿದ್ಯೋ ಅಂತ ಹೆದ್ರಿಕೆ... ಸ್ವಲ್ಪ ನಿಮ್ಮವರಿಗೆ ಹೇಳಿ ತಾಯಿತ ಮಾಡ್ಸಿಕೊಡಿಯಕ್ಕ..." ಎಂದು ಗೋಗರೆಯುತ್ತಾ ಹಾಗೇ ಕಣ್ತುಂಬಿಕೊಂಡಳು ಶ್ಯಾಮಲ. ಇನ್ನೇನು ತನ್ನ ಜೀವನದ ಕೊನೆ ಹತ್ತಿರದಲ್ಲಿದ್ದಂತೆ ಭಾಸವಾಗಿತ್ತು ಆಕೆಗೆ. ಬಂದ ಗಂಡುಗಳೆಲ್ಲಾ ಶ್ಯಾಮಲಾಳ ಇದ್ದಿಲು ಮೊಗ ನೋಡಿ ಹೋದಮೇಲೆ ಆನಂದ ರಾಯರು ಮಗಳ ಜಾತಕವನ್ನು ವೆಂಕಟ ಜೋಯಿಸರಿಗೇ ತೋರಿಸಿದ್ದರು. ಅವರು ಹೇಳಿದ ಪರಿಹಾರದಂತೇ ಅವರ ಕೈಯಲ್ಲೇ ಶಾಂತಿ ಹೋಮವನ್ನು ಮಾಡಿಸಿ ಕೈತುಂಬ ದಕ್ಷಿಣೆಯನ್ನೂ ತುಂಬಿದ್ದಾಗಿತ್ತು. "ಸುಮ್ನೇ ಯಾಕೆ ಚಿಂತೆ ಮಾಡ್ತೀರಿ ರಾಯರೇ? ನಾನೇ ನಿಂತು ಪಾರ್ವತಿ ಸ್ವಯಂವರ ಪೂಜೆ ಮಾಡ್ಸಿದ್ದೀನಲ್ಲಾ.. ನೋಡ್ತಿರಿ.. ಇನ್ನೊಂದು ತಿಂಗಳಲ್ಲಿ ಎಲ್ಲಾ ಸರಿಯಾಗಿ ಯೋಗ್ಯವರ ಸಿಕ್ಕಿ ಥಟ್ ಅಂತ ಮದ್ವೆ ಆಗೇ ಹೋಗುತ್ತೆ...ಧೈರ್ಯದಿಂದಿರಿ" ಎಂದು ಅಭಯವಿತ್ತ ಅವರ ಪಾದಗಳಿಗೆ ಅಡ್ಡಬಿದ್ದೇ ಶಾಂತವಾಗಿದ್ದರು ರಾಯರು. ಈಗ ನೋಡಿದರೆ ನಾಲ್ಕು ಮನೆಗಳ ಮಧ್ಯೆ ಇರುವ ಕೂಡು ರಸ್ತೆಯಲ್ಲಿರುವ ಕುಂಕುಮಭರಿತ ತೆಂಗಿನ ಕಾಯಿ ಮೊದಲು ಶ್ಯಾಮಲಾಳಿಗೇ ಕಾಣಿಸಬೇಕೆ? ‘ಈ ರೀತಿ ತನ್ನ ಕಣ್ಣಿಗೇ ಬೀಳಲು, ಇದು ತನ್ನ ಕೇಡಿಗೇ ಸೈ’ ಎಂದು ಭ್ರಮಿಸಿ, ದಿಕ್ಕೆಟ್ಟು ಓಡಿಬಂದಿದ್ದಳು. ಮದುವೆಗೆ ತನ್ನೊಂದಿಗೆ ಪೈಪೋಟಿ ನಡೆಸುತ್ತಿರುವ ಶಾರದಮ್ಮನ ಕಿರಿ ಮಗಳಾದ ಶ್ವೇತಳೇ ಹೀಗೆ ಮಾಡಿಸಿರಬಹುದೆಂಬ ಗುಮಾನಿ ಬೇರೆ ತಲೆಯಲ್ಲಿ. ಆದರೆ ಪದ್ಮಜಳ ಚುರುಕು ಬುದ್ಧಿ ಮಾತ್ರ ಬೇರೆಯೇ ಒಂದು ಸ್ಕೆಚ್ ಹಾಕತೊಡಗಿತು.

ಮೊದಲೇ ಶ್ಯಾಮಲಾಳ ಬಾಯಿ ಜೋರು. ಅಂಥದ್ದರಲ್ಲಿ ಇವತ್ತು ಕಂಡ ವಿಪತ್ತಿನಿಂದ ಇದ್ದ ಶಕ್ತಿಯನ್ನೆಲ್ಲಾ ಹಾಕಿ ಬೊಬ್ಬಿರಿಯುತ್ತಾ ಬಂದಿದ್ದಳು. ಹಾಗಾಗಿ ಉಳಿದ ಮನೆಯ ಹೆಂಗಸರೂ ಅಷ್ಟರೊಳಗೆ ಪದ್ಮಜಳ ಮನೆಯನ್ನು ಸೇರಿಯಾಗಿತ್ತು. ಹಾಗೆ ಬಂದವರಲ್ಲಿ ಕೆಲವರು ತಾವೂ ಆ ತೆಂಗಿನ ಕಾಯನ್ನು ನೋಡಿ ಬರುತ್ತಿರುವುದಾಗಿ ಸ್ಪಷ್ಟಪಡಿಸಲು, ಸರ್ವರೂ ಸಮೂಹ ಸನ್ನಿಗೊಳಗಾದಂತೆ ತೆಂಗಿನ ಕಾಯಿಯೆಂಬ ಪೆಡಂಭೂತಕ್ಕೆ ಭಯಭೀತರಾದರು.
"ಅಲ್ರೀ ಶಾರದಮ್ಮ... ಯಾರು ಮಂತ್ರಿಸಿಟ್ಟಿರಬಹುದು? ಈ ವಠಾರಾನ ದೊಡ್ಡ ಬಿಲ್ಡಿಂಗ್ ಮಾಡ್ತೀನಿ ಅಂತಿದ್ನಲ್ಲಾ ಆ ಶೆಟ್ಟಿಗಾರು.. ಅವ್ನೇ ಏನಾದ್ರೂ ತಂದಿಟ್ಟಿರ್ಬಹುದಾ? ನಮ್ಮನ್ನೆಲ್ಲಾ ನಯಾ ಪೈಸೆ ಕರ್ಚು ಇಲ್ದೇ ಮೇಲೆ ಕಳ್ಸಿ ಎಲ್ಲಾನೂ ಗುಡ್ಸಿ ಗುಂಡಾಂತರ ಮಾಡೋ ಯೋಚ್ನೆ ಇರ್ಬೇಕು ನೋಡಿ.." ಎಂದು ಮೂರನೆಯ ಮನೆ ಸುಶೀಲ ಹೇಳಿದರೆ-
"ಇಲ್ಲಾರೀ.. ಆ ಶೆಟ್ಟಿಗಾರು ದೇಶಾಂತರ ಹೋಗಿದ್ದಾನಂತ....ನಮ್ಮೋರು ಮೊನ್ನೆ ಅವ್ನ ತಮ್ಮನ್ನ ಹೀಂಗೇ ಕೇಳಿದ್ದಾಗ, ಏನೋ ಲಫಡ ಮಾಡ್ಕೊಂಡು ಊರು ಬಿಟ್ಟಿದ್ದಾನೆಂದು ತಿಳೀತಂತೆ. ಅದೂ ಅಲ್ದೇ ಅವ್ನಿಗೆ ಎಲ್ಲಿಂದ ಅಷ್ಟೊಂದು ದೊಡ್ಡ ಜೋಯಿಸರ ಪರಿಚಯ ಆಗ್ಬೇಕು ಹೇಳಿ? ವೆಂಕಟ ಜೋಯಿಸರಂತಹ ತಿಳಿದೋರು ಹೀಂಗೆಲ್ಲಾ ಮಾಡೋರೆ ಅಲ್ಲಾ ಬಿಡಿ..." ಎಂದು ಒಗ್ಗರಣೆ ಹಾಕಿದಳು ಸಾವಿತ್ರಿ. ಅವಳ ಮಾತೊಳಗೆ ಜೋಯಿಸರ ವಿದ್ವತ್ತನ್ನು ಹೊಗಳುವುದಕ್ಕಿಂತ ಹೆಚ್ಚಾಗಿ ಅವರು ಈ ರೀತಿ ಮಾಡಲು ಸಾಧ್ಯವಿಲ್ಲ ಎನ್ನುವುದನ್ನು ತನಗೆ ತಾನೇ ಸ್ಪಷ್ಟಿಸಿಕೊಳ್ಳುವುದನ್ನೂ ಕಾಣಬಹುದಿತ್ತು. ಮೊದಲಿನಿಂದಲೂ ಆಕೆಗೆ ಜೋಯಿಸರ ಕುಟುಂಬದ ಮೇಲೆ ಏನೋ ಗುಮಾನಿ. ತನ್ನ ತಮ್ಮ ಶಂಭು ಭಟ್ಟನನ್ನು ಒಂದು ಹೋಮಕ್ಕೆ ಬರ ಹೇಳಬೇಕೆಂದು ಬಯಸಿದ್ದಳು ಆಕೆ. ಆದರೆ ಪದ್ಮಜ ದಂಪತಿಗಳ ಕಿತಾಪತಿಯಿಂದ ಆತ ಈ ವಠಾರಕ್ಕೇ ಬರದಂತಾಗಿತ್ತು. ಆ ಕೋಪ ಒಳಗೊಳಗೇ ಕುದಿಯುತ್ತಿದ್ದರೂ ಅವರ ಪ್ರಭಾವ ಬಹಳ ಇರುವುದರಿಂದ ತೆಪ್ಪಗಿದ್ದಳು. ಆದರೆ ಸಮಯಕ್ಕಾಗಿ ಸದಾ ಕಾಯುತ್ತಿರುವುದು ಪದ್ಮಜಳಿಗೂ ಗೊತ್ತಿತ್ತು.

"ಹೌದೇ ಸಾವಿತ್ರಿ... ನೀ ಹೇಳಿದ್ದು ಖರೇ ನೋಡು. ಇವ್ರಷ್ಟು ತಿಳ್ಕೊಂಡೋರು ಈಗ ಇಲ್ಲಿ ಯಾರಿದ್ದಾರೆ ಹೇಳು? ಈ ರೀತಿ ಕಾಯಿ ಮಂತ್ರಿಸಿ ತರೋಕೆ ಇವ್ರನ್ನು ಬಿಟ್ಟ್ರೆ ಕೇರಳಕ್ಕೇ ಹೋಗ್ಬೇಕಂತೆ. ಅಲ್ಲಿಗೆಲ್ಲಾ ಹೋಗಿ ಬರೋವಷ್ಟು ಆ ನಾಗಪ್ಪ ಚಾಲಾಕಿಲ್ಲ ಬಿಡು. ಇವ್ರೋ ಈ ವಠಾರಕ್ಕಾಗೇ ಇಲ್ಲಿದ್ದೋರು....ನಾನು ಅವ್ರಿಗೆ ಹೇಳ್ತಿನಿ. ಎಷ್ಟೇ ದೊಡ್ಡ ಪೂಜೆಯಾದ್ರೂ ಸರಿ.. ಶತಾಯುಗತಾಯು ಮಾಡ್ಬೇಕು... ಎಲ್ಲಾ ಕೆಲ್ಸನೂ ಬಿಟ್ಟು ಈ ಮಂತ್ರದ ಕಾಯನ್ನು ಮುಕ್ತ ಗೊಳಿಸ್ಬೇಕು ಅಂತೀನಿ. ನೀವೆಲ್ಲಾ ಹೆದ್ರಬೇಡಿ. ಒಂದ್ ಕೆಲ್ಸ ಮಾಡಿ ಇವ್ರು ಇನ್ನೊಂದೆರ್ಡು ತಾಸ್‌ನಲ್ಲಿ ಬರ್ತಾರೆ. ಬಂದಿದ್ದೇ ತಡ.. ಫಲಹಾರ ಕೊಟ್ಟು ಪೂಜೆಗೆ ಕೂರ್ಸಿ, ಎಲ್ಲರಿಗೂ ತಾಯಿತ ಮಾಡೋಕೆ ಹೇಳ್ತೀನಿ. ನೀವೆಲ್ಲಾ ಸಂಜೆ ಬಂದು ತಾಯಿತ ಕಟ್ಸ್‌ಕೊಂಡು ಹೋಗಿ. ಯಾರಿಗ್ಬೇಕು? ಯಾವ ಭೂತ ಹೊಕ್ಕಿದ್ಯೋ ಎಂತೋ.. ಏನೆಂದ್ರೂ ಒಂದೆರ್ಡು ದಿವ್ಸನೇ ಬೇಕಾಗ್ಬಹುದು ಉಚ್ಛಾಟನೆಗೆ..." ಎಂದು ಪದ್ಮಜ ಹೇಳಿದ್ದೇ ತಡ. ಎಲ್ಲರೂ ತಲೆ ಅಲ್ಲಾಡಿಸಿಯೇ ಬಿಟ್ಟರು. "ಹೌದು ಪದ್ದಕ್ಕ.. ನೀವು ಹೇಳಿದ್ದು ಸರಿನೇ... ನಾವೆಲ್ಲಾ ಸಂಜೆ ಬರ್ತೀವಿ. ತಾಯಿತ ರೆಡಿ ಮಾಡ್ಸಿಡಿ... ಯಾಕೋ ಏನೋ ನನ್ನ ಎಡಗಣ್ಣು ಬೇರೆ ಕುಣೀತಾ ಇದೆ..." ಎಂದ ಶ್ಯಾಮಲಳ ಮಾತಿಗೆ ಉಳಿದವರ ಸಮ್ಮತಿಯೂ ಸಿಕ್ಕಿತು. ಸಂಪೂರ್ಣ ಒಪ್ಪಿಗೆ ಇಲ್ಲದ ಸಾವಿತ್ರಿಯೂ ಒಪ್ಪಲೇ ಬೇಕಾಯಿತು. ಆದರೂ ಪಟ್ಟು ಬಿಡದಂತೆ......"ಅದೆಲ್ಲಾ ಸರಿ ಪದ್ಮ... ತಾಯಿತಕ್ಕೆ ಎಷ್ಟಾಗೊತ್ತೆ ಅಂತ ಗೊತ್ತಾದ್ರೆ... ತರೋಕೆ ಸುಲಭ ಆಗೊತ್ತೆ.." ಎಂದು ರಾಗವೆಳೆದಾಗ ತುಸು ಕಕ್ಕಾಬಿಕ್ಕಿ ಆದಳು ಪದ್ಮಜ. "ಅಯ್ಯೋ.. ನಿಮ್ಮಿಂದೆಲ್ಲಾ ತಗೋತೀವೆ? ಆದರೂ ತಾಯಿತಗಳನ್ನು ನಾವೂ ದುಡ್ಡುಕೊಟ್ಟೇ ತರೋದು ನೋಡಿ. ಅದಕ್ಕೆ ಬೇಕಾದ ಭಸ್ಮ, ಕುಂಕಮ ಅದೂ ಇದು ಅಂತ ಅಲ್ಪ ಖರ್ಚು ಇರುತ್ತೆ ಅಲ್ವೇ? ಇವ್ರ ಪೂಜೆಯ ದುಡ್ಡು ಖಂಡಿತ ಬೇಡಪ್ಪ.. ನೀವೂ ನಮ್ಮೋರೆ ಅಲ್ವೇ? ಒಂದ್ನೂರು ರೂಪಾಯಿ ಸಾಕಪ್ಪ. ಹಾಂಗೆ ನೋಡಿದ್ರೆ ಖರ್ಚು ಇನ್ನೂರಕ್ಕಿಂತ ಕಡ್ಮೆ ಆಗೊಲ್ಲ.. ಏನೋ ನಮ್ಮ ಜನ ಅಂತ ಹೇಳ್ತಿದ್ದೀನಿ ಅಷ್ಟೇ.." ಎಂದು ಉದಾರವಾಗಿ ಮಾತಾಡಿದಾಗ ತೆಪ್ಪಗೆ ಎಲ್ಲರೂ ಹೂಂ ಗುಟ್ಟುವುದೊಂದೇ ಮಾಡಲು ಆಗಿದ್ದು.

ಎಲ್ಲರನ್ನೂ ಸಾಗ ಹಾಕಿ, ಮನಸಿನೊಳಗೇ ಮಂಡಿಗೆ ತಿನ್ನುತ್ತಾ ಒಳ ಬಂದ ಪದ್ಮಳಿಗೆ ಕಂಡದ್ದು ಭಯಗ್ರಸ್ಥ ಮಗಳ ಮುಖ. "ಅಲ್ವೇ ಸುಮ ಅವ್ರೆಲ್ಲಾ ಬಂದಾಗ ಎಲ್ಲಿ ಹೋಗಿದ್ಯೆ ನೀನು? ಹೌದು ಯಾಕೆ ಹೀಂಗೆ ಹೆದ್ರಿದ್ದಿ? ಮಂಕೆ ಏನೂ ಆಗಲ್ಲ.... ಹೆದ್ರಬೇಡ. ಹೀಂಗೆ ಯಾರೇ ಮಾಡಿರ್ಲಿ ಅವ್ರನ್ನ ಅಪ್ಪಯ್ಯ ಬಿಡೋಲ್ಲ. ಸುಮ್ನೇ ನೀನು ಇದ್ಕೆಲ್ಲಾ ತಲೆ ಕೆಡಿಸ್ಕೋಬೇಡ.....ಓದ್ಕೋ..." ಎನ್ನುತಾ ಅಡುಗೆ ಕೆಲ್ಸಕ್ಕೆ ತೊಡಗಿದಳು. ಕೈಗಳು ಯಾಂತ್ರಿಕವಾಗಿ ಕೆಲಸ ಮಾಡುತ್ತಿದ್ದರೂ ಮನಸೆಲ್ಲಾ ಪತಿಯಾಗಮನದ ಕಡೆಗೇ ಇತ್ತು. ತುಸು ಹೊತ್ತಿನಲ್ಲೇ ವೆಂಕಟ ಜೋಯಿಸರ ಆಗಮನವಾಗಲು ಆತುರಾತುರವಾಗಿ ಕೆಲಸಕಾರ್ಯಗಳನ್ನು ಮುಗಿಸಿ ಹೊರಬಂದಳು ಪದ್ಮಜ. 

ಪತ್ನಿಯಿಂದ ಎಲ್ಲಾ ಪ್ರವರವನ್ನು ಕೇಳಿದ ವೆಂಕಟ ಜೋಯಿಸರಲ್ಲಿ ಹೊಸ ಹುರುಪು ಮೂಡಿತು. "ಸರಿಯಾಗಿ ಮಾಡಿದ್ದಿ ಕಣೆ.. ಬರ್ಲಿ.. ಎಲ್ರಿಗೂ ತಾಯಿತ ಕಟ್ಟೇ ಬಿಡೋಣವಂತೆ... ಹಾಂಗೇ ನಾನೊಂದು ದೊಡ್ಡ ಯೋಜನೇನಾ ಹಾಕಿದ್ದೀನಿ. ಇದೇನಾದ್ರೂ ಕೈಗೂಡಿದ್ರೆ ಈ ಸಲ ನಿಂಗೆರಡು ಜೊತೆ ಬಳೆ ಗ್ಯಾರಂಟಿ..." ಎನ್ನಲ್ಲು ಮೊರದಗಲವಾಯಿತು ಪದ್ಮಜಳ ಮುಖ. ಆ ಖುಶಿಯಲ್ಲೇ ಪಾಯಸಕ್ಕೆಂದು ಶೇವಿಗೆ ಹುರಿಯ ತೊಡಗಿದರೆ, ಜೋಯಿಸರು ಪಂಚಾಗ ತೆಗೆದು ಕುಳಿತರು. ಅಲ್ಲೇ ಮೂಲೆಯಲ್ಲಿ ಕುಳಿತು ಅಪ್ಪ ಅಮ್ಮನ ಮಾತುಗಳನ್ನು ಕೇಳುತ್ತಿದ್ದ ಬಡಪಾಯಿ ಸುಮಳ ಬಾಡಿದ ಮುಖ, ತುಂಬಿದ ಕಣ್ಗಳು ಅವರಿಬ್ಬರಿಗೂ ಕಾಣಲೇ ಇಲ್ಲ!!

-೨-

"ಜೋಯಿಸ್ರೆ, ನಾವೆಲ್ಲಾ ನಿಮ್ಮನ್ನೇ ನಂಬಿದ್ದೀವಪ್ಪ... ನೀವೇ ಇದಕ್ಕೆಲ್ಲಾ ಏನಾದ್ರೂ ಏರ್ಪಾಡು ಮಾಡ್ಬೇಕು... ಈಗ ಆ ಕೂಡು ರಸ್ತೆಯ ಕಡೆಯಿಂದ ಬರೋಕು ಹೆದ್ರಿಕೆ. ಹಾಂಗಾಗಿ ಹಿಂದಿನ ಬಾಗಿಲನ್ನು ತೆಕ್ಕೊಂಡು ಹಿತ್ತಲ ಕಡೆಯಿಂದ ಬಂದೆವು. ಹಾಳಾದ್ ಆ ಕಾಯಿ ನಮ್ಮ ದಾರಿಯ ಮಧ್ಯದಲ್ಲೇ ಇದೆಯಲ್ಲಾ... ದಯವಿಟ್ಟು ಏನು ಪರಿಹಾರ ಅಂತ ಹೇಳಿಯಪ್ಪ..." ಎಂದು ಶಾರದಮ್ಮನ ಯಜಮಾನರಾದ ರಮಾನಂದ ಪೈಗಳು ಬಿನ್ನವಿಸಲು, ಪದ್ಮಜಳ ಮುಖದಲ್ಲಿ ಅಪೂರ್ವ ಬೆಳಕು ತುಂಬಿತು.

ಸಂಜೆಯಾಗುತ್ತಿದ್ದಂತೆ ವಠಾರದಲ್ಲಿದ್ದ ಹೆಂಗಸರು ಹಾಗೂ ಅವರವರ ಯಜಮಾನರು ವೆಂಕಟ ಜೋಯಿಸರ ಮನೆಗೆ ಬಂದಿದ್ದರು. ಅವರೆಲ್ಲರ ಆಗಮನವನ್ನು ಮೊದಲೇ ಅರಿತಿದ್ದಿ ಜೋಯಿಸರು ಎಲ್ಲರಿಗೂ ಕಾಣುವಂತೆ ಚಾಪೆಯನ್ನು ಹಾಕಿಕೊಂಡು ಢಾಳಾಗಿ ವಿಭೂತಿಯನ್ನು ಹಣೆಗೆ, ಕೈಗಳಿಗೆ ಬಳಿದುಕೊಂಡು ಎಡಬದಿಯಲ್ಲೊಂದು ದೀಪವನ್ನು ಹಚ್ಚಿ, ಪದ್ಮಾಸನ ಹಾಕಿ ಕುಳಿತಿದ್ದರು. ಜೋಯಿಸರ ವೇಷಭೂಷಕ್ಕೆ ಪ್ರಭಾವಿತರಾದ ಅವರೆಲ್ಲಾ ಭಕ್ತಿಪೂರ್ವಕವಾಗಿ ವಂದಿಸಿ ಅವರ ಮುಂದೆ ತಾವೂ ಕುಳಿತುಕೊಂಡರು. ಇದ್ದುದರಲ್ಲಿಯೇ ಸ್ವಲ್ಪ ಪುಕ್ಕಲು ಸ್ವಭಾವದ ಪೈಗಳು ಎಲ್ಲರ ಪರವಾಗಿ ಜೋಯಿಸರನ್ನು ವಿನಂತಿಸಿಕೊಳ್ಳಲು, ಇನ್ನು ತನ್ನ ಕೆಲಸ ಸುಗಮವೆಂದುಕೊಂಡರು ಜೋಯಿಸರು.

"ರಮಾನಂದ.. ನೀನ್ಯಾಕೆ ಅಷ್ಟು ತಲೆಬಿಸಿ ಮಾಡ್ಕೋತೀಯಪ್ಪ.. ನಾನಿದ್ದೀನಲ್ಲಾ.. ಸ್ವಲ್ಪ ಹೊತ್ತಿನ ಹಿಂದೆ ನಾನೂ ನೋಡಿ ಬಂದೆ. ಅದು ಮಾಟ-ಮಂತ್ರದ ಕಾಯಿಯೇ ಸರಿ. ಆದ್ರೆ ಯೋಚ್ನೆ ಮಾಡ್ಬೇಡಿ... ಅಲ್ಲಾ ನಿಮಗೆಲ್ಲಾ ಬಂದಿರೋ ಈ ವಿಪತ್ತು ನನ್ನ ಬಿಟ್ಟೀತೇ? ಈಗ ನಾನು ಆ ತೆಂಗಿನ ಕಾಯಿಯಿಂದ ಮಂತ್ರೋಚ್ಛಾಟನೆ ಮಾಡುವುದು ಅಷ್ಟು ಸುಲಭವಲ್ಲ. ಹಾಗೆ ಮಾಡಲು ಹೋದರೆ ಅದು ನನ್ನ ಬಿಟ್ಟೀತೇ? ಆದರೂ ನಾ ಬಿಡೆನಪ್ಪ... ಶತಾಯುಗತಾಯು ಅಲ್ಲಿಂದ ಅದನ್ನು ತೊಲಗಿಸಿಯೇ ತೀರುವೆ. ಈ ವಠಾರವನ್ನು ಮುಳುಗಿಸಲು ಸಂಚು ಹಾಕಿದವರನ್ನ ಹಾಗೇ ಬಿಡಲಾಗದು. ಹ್ಮಾಂ...ನಾಳೆಯಿಂದಲೇ ಕೆಲಸಕ್ಕೆ ಶುರು ಹಚ್ಚಿಕೊಳ್ಳೋಣ. ಅದು ಎಷ್ಟೇ ದೊಡ್ಡ ಮಾಟ-ಮಂತ್ರವಾಗಿರಲಿ.. ಯಾರೇ ಅಲ್ಲಿ ತಂದಿಟ್ಟಿರ್ಲಿ ಅವ್ರು ನನ್ನ ಪ್ರತಿತಂತ್ರದಿಂದ ತಪ್ಪಿಸ್ಕೊಂಡು ಹೋಗೋಕೇ ಆಗೋದಿಲ್ಲ... ರಕ್ತಕಾರಿ ನರಳ್ತಾರೆ... ಹಾಂಗೆ ಮಾಡ್ತೀನಿ..ನೀವೆಲ್ಲಾ ನೋಡ್ತಿರಿ ಈ ಜೋಯಿಸನ ಪಾಂಡಿತ್ಯಾನಾ. ಹಾಂ.. ಎಲ್ಲವುದಕ್ಕೂ ಮೊದಲು ಹೋಮ ಕುಂಡಕ್ಕೆ ಸಾಮಗ್ರಿಗಳ ಹೊಂದಾಣಿಗೆ ಅಗ್ಬೇಕು. ಅದಕ್ಕಾಗಿ ನಾನು ಬೆಳಗ್ಗಿನೇ ಪೇಟೆಗೆ ಹೋಗ್ಬೇಕು. ಎನೇನು ಬೇಕು ಅಂತ ಹೇಳಿದ್ರೂ ನಿಮಗೆಲ್ಲಾ ಅದು ತಿಳಿಯದು. ಆಮೇಲೆ ಒಂದಕ್ಕೊಂದು ಆದರೆ ಏನು ಗತಿ? ನೀವೆಲ್ಲಾ ನಿಮ್ಮ ನಿಮ್ಮ ವಂತಿಗೆ ಇಂತಿಷ್ಟು ಎಂದು ಕೊಟ್ಟು ಬಿಡಿ. ಅದಕ್ಕೆ ನನ್ನದೂ ಸೇರಿಸಿ ಎಲ್ಲಾ ಏರ್ಪಾಡು ಮಾಡುವೆ. ಮೊದಲು ಎಲ್ಲರೂ ತಾಯಿತ ಕಟ್ಟಿಸಿಕೊಂಡು ಹೋಗಿ.. ಆರಾಮವಾಗಿ ನಿದ್ರಿಸಿ. ನಿಮ್ಮೆಲ್ಲರ ಪರವಾಗಿ ನಾನು ನಿದ್ದೆಗೆಟ್ಟು ನಾಳೆಯ ತಯಾರಿ ನಡೆಸುವೆ.. ಸರೀ ತಾನೇ?" ಎಂದು ಅಭಯವಿತ್ತಿದ್ದೇ ತಡ ರಮಾನಂದ ದಂಪತಿಗಳು ಅವರ ಕಾಲಿಗೆ ಅಡ್ಡ ಬಿದ್ದರು. ಅವರ ಜೊತೆಗೆ ಉಳಿದವರೂ ನಮಸ್ಕರಿಸಿದರು. ಆದರೆ ಸಾವಿತ್ರಮ್ಮನ ತಲೆಯೊಳಗೆ ಮಾತ್ರ ಇನ್ನೂ ಹುಳ ಕೊರೆಯುತ್ತಲೇ ಇತ್ತು. 

"ಹೌದು ಜೋಯಿಸರೆ.. ನೀವು ಅಂದ್ದು ನಿಜ... ಎಲ್ಲಾ ಸಾಮಗ್ರಿಗಳನ್ನು ನೀವೇ ತನ್ನಿ... ಆದರೆ ಎಷ್ಟೆಷ್ಟು ವಂತಿಗೆ ನೀಡಬೇಕಾಗುತ್ತದೆಂದೂ ಈಗಲೇ ಹೇಳಿದ್ದರೆ ನಾಳೆ ಹೊಂದಿಸಲು ಸುಲಭವಾಗುತ್ತಿತ್ತು.."ಎಂದು ಹೇಳಲು ಪದ್ಮಜ ಒಳಗೊಳಗೇ ಉರಿದುಕೊಂಡಳು. ಆದರೆ ಈಗ ಜೋಯಿಸರೇ ಸಾವಿತ್ರಮ್ಮನಿಗೆ ಉತ್ತರಿಸಿದರು.

"ಸಾವಿತ್ರಮ್ಮ.. ಅದನ್ನು ಈಗಲೇ ಹೇಳಲಾಗದು.. ನಾನು ಲೆಕ್ಕ ಹಾಕಿ, ಆದಷ್ಟು ಭಾರ ನಿಮ್ಮಗಳ ಮೇಲೆ ಬೀಳದಂತೇ ನೋಡಿಕೊಂಡು ನಾಳೆ ಬೆಳಗ್ಗೆಯೇ ಹೇಳುವೆ. ಯಾವ ತಾಂತ್ರಿಕನೂ ನನ್ನಷ್ಟು ಸುಲಭವಾಗಿ ಕಡಿಮೆ ಖರ್ಚಿನಲ್ಲಿ ಮಾಡಲಾರ. ಬೇಕಿದ್ದರೆ ನಿಮ ತಮ್ಮನನ್ನೇ ಕೇಳಿಕೊಳ್ಳಿ.. ಆಮೇಲೆ ನನ್ನ ಬಳಿ ಏನೂ ದೂರದಿರಿ. ಅವರೇ ಎಲ್ಲಾ ನೋಡಿಕೊಳ್ಳುವುದಿದ್ದರೆ ನನ್ನ ಅಭ್ಯಂತರವಿಲ್ಲ.." ಎಂದು ಕೈ ಎಳೆದಂತೆ ಮಾಡಲು ಉಳಿದವರು ನೀವೇ ಸರಿ ಎಂದು ಸಮಾಧಾನಿಸಿ ಬಿಟ್ಟರು. ಮತ್ತೆ ನಿರುಪಾಯಳಾದ ಸಾವಿತ್ರಿ ಸುಮ್ಮನಾಗಬೇಕಾಯಿತು. ಹೊರಗೆ ಕತ್ತಲು ನಿಧಾನ ಸುರಿಯುತ್ತಿರುವುದನ್ನು ಕಂಡ ವಠಾರದವರು... ಹೆಚ್ಚು ಹೊತ್ತು ಹೊರಗಿರಲು ಇಚ್ಛಿಸದೇ ಹೊರಡಲನುವಾದರು. ಹೋಗುವ ಮೊದಲು ಮಾತಿನಂತೇ ನೂರುರೂಪಾಯಿ ತೆತ್ತು, ತಾಯಿತ ಕಟ್ಟಿಸಿಕೊಂಡು, ತೆಂಗಿನ ಕಾಯಿ ಇರುವ ಕೂಡು ದಾರಿ ಕಡೆ ಹೋಗದೆ, ಬಳಸು ದಾರಿ ಹಿಡಿದು ಮನೆಯಕಡೆ ಹೊರಟರು.

-೩-

"ಅಲ್ಲಾ ರೀ.. ತುಂಬಾ ಚೆನ್ನಾಗಿದೆ ನಿಮ್ಮ ತಲೆ...ಇದಕ್ಕೇನಾ ನೀವು ಹೇಳಿದ್ದು ನಂಗೆ ಬಳೆ ಗ್ಯಾರಂಟಿ ಅಂತ... ವ್ಹಾರೆವ್ಹಾ.. ಆ ಸಾವಿತ್ರಿ ಬಾಯನ್ನೂ ಮುಚ್ಚಿಸ್ಬಿಟ್ರಿ. ಯಾರೋ ಏನೋ ಅಪ್ಪಿ ತಪ್ಪಿ ಕಾಯಿ ಇಟ್ಟು ಹೇಗೋ ಕುಂಕುಮ ಬಿದ್ದಿರ್ಬೋದು.. ಮಂತ್ರದ್ದೇ ಆಗಿದ್ರೂ ನಮ್ಗೇನು. ಪ್ರಾಯಶ್ಚಿತ್ತ ಏನಾದ್ರೂ ಇದ್ದೇ ಇರೊತ್ತೆ. ನಮ್ಮೂರಿನ ಅರ್ಚಕರನ್ನು ಕೇಳಿ ಮಾಡ್ಕೊಂಡ್ರೆ ಆಯ್ತು. ಈ ಪೆದ್ದುಗಳಿಗೆ ತಲೆ ಇಲ್ಲಾ.... ಹೆದ್ರಿಕೊಂಡು ಬಂದ್ವು. ನಾವೇನೂ ಕರ್ಸಿದ್ದಲ್ವಲ್ಲಾ.. ಏಳಿ ಮೊದ್ಲು ನೀವು ನಾಳೆ ಯಾರಿಂದ ಎಷ್ಟು ತಗೋ ಬೇಕು ಲೆಕ್ಕಾ ಹಾಕಿ ಬೇಗ... ನಂಗೆ ನನ್ನ ಬಳೆಗೆ ಲೆಕ್ಕ ಹಾಕೋಕೆ ಸುಲಭವಾಗೊತ್ತೆ...."ಎಂದು ಗಂಡನಿಗೆ ಗಡಿಬಿಡಿ ಮಾಡಿದಳು. ಆಗತಾನೇ ಕೈತುಂಬಿದ ಲಕ್ಷ್ಮಿಯನ್ನೆಣಿಸುತ್ತಾ ಕಣ್ತುಂಬಿಕೊಳ್ಳುತ್ತಿದ್ದ ಜೋಯಿಸರು- "ಸ್ವಲ್ಪ ತಡಿಯೆ ಮಾರಾಯ್ತೀ.. ಆತುರಗಾರನಿಗೆ ಬುದ್ಧಿ ಮಟ್ಟ ಅಂತಾರೆ. ಅವಸರ ಮಾಡ್ಬೇಡ. ಈಗ ಕೂಡು ರಸ್ತೆ ಅಕ್ಕ ಪಕ್ಕ ಇರೋ ಶಾರದಮ್ಮ, ಸುಶೀಲ, ಸಾವಿತ್ರಿ, ಆನಂದ ರಾಯರ ಮನೆಗೆ ಸ್ವಲ್ಪ ಹೆಚ್ಚು ವಂತಿಗೆ ಹಾಕ್ತೀನಿ.. ಕಾರಣ ಕೇಳಿದ್ರ ತೆಂಗಿನ ಕಾಯಿಯ ಪ್ರಭಾವ ಅವ್ರ ಮನೆಗೆ ಜಾಸ್ತಿ ಇದೆ ಅಂತೀನಿ.. ಹೇಂಗೂ ನಾಲ್ಕು ಕೂಡು ರಸ್ತೆಯ ಅಕ್ಕ ಪಕ್ಕದಲ್ಲೇ ಇವರುಗಳ ಮನೆನೇ ಇದ್ಯಲ್ಲ.. ಆಮೇಲೆ ಉಳಿದವ್ರಿಗೆಲ್ಲಾ ಸ್ವಲ್ಪ ಕಡಿಮೆ ಹಾಕ್ತೀನಿ, ಆವಾಗ ಅವ್ರಿಗೆಲ್ಲಾ ನಂಬಿಕೆ ಬರೊತ್ತೆ.. ನಿಜ ಅನ್ಸೊತ್ತೆ.. ಏನಂತೀ? ಹಾಂ.. ಮೊದಲ  ನಾಲ್ಕು ಮನೆಗಳಿಗೆ ೧೦೦೦ ರೂ ಹಾಕಿದ್ರೆ ಉಳಿದ ೬ ಮನೆಗಳಿಗೆ ೫೦೦ ಹಾಕ್ತೀನಿ. ನಿನ್ನ ಹಳೇ ಪಳೇ ಮುರ್ದ ಚಿನ್ನ ಇದ್ರೆ ಅದ್ನೂ ಸೇರ್ಸಿ ಬಳೆ ಮಾಡಿಸ್ಕೋ.. ಆಮೇಲೆ ನನ್ನ ಜೀವ ತಿನ್ನೋದು ಬಿಡು. ಏನೂ ಮಾಡ್ಸಿಲ್ಲಾ ಅಂತಾ.. ಹಾಂ.. ಮಾಡ್ಸಿದ್ ಕೂಡ್ಲೇ ಎಲ್ರೀಗೂ ತೋರ್ಸಿ ಕುಣೀಬೇಡ. ಆ ಸಾವಿತ್ರಿಗೆ ಸಂಶಯ ಬರೊತ್ತೆ. ನಾಲ್ಕು ದಿನ ಕಳೀಲಿ. ಊರಿಗೆ ಹೋಗ್ಬಾ. ತವ್ರಿಂದ ಬಂದಿದ್ದು ಅಂತ ಹೇಳೋಕೆ ಆಗೊತ್ತೆ. ಏನು? ಅರ್ಥ ಆಯ್ತು ತಾನೇ?" ಎಂದು ಹೇಳಿದ ಜೋಯಿಸರ ಮಾತಿಗೆಲ್ಲಾ ಪದ್ಮಜ ನಗುತ್ತಾ ತಲೆತೂಗಿದಳು. ಪತಿಯ ಬುದ್ಧಿಮತ್ತೆ ಕಂಡು ಅವಳಿಗೆ ಹೆಮ್ಮೆ ಎನಿಸಿತು. ಚಿನ್ನದ ಬಳೆಗಳು ತುಂಬಿದ ಕೈಗಳನ್ನು ಆ ಸಾವಿತ್ರಿ ಮುಂದೆ ಹಿಡಿದಾಗ ಆಗುವ ಆತ್ಮ ತೃಪ್ತಿಯನ್ನು ನೆನೆಯುತ್ತಾ ಅವಳ ಮನ ಸಂಭ್ರಮಿಸಿತು. 

"ಅಮ್ಮಾ... ಅಪ್ಪಯ್ಯ... ಬೇಡಪ್ಪಯ್ಯಾ.. ಹೀಂಗೆಲ್ಲಾ ಮಾಡ್ಬೇಡಿ... ನಾ ಸಾಯೊಲ್ಲಾ... ಊ‌ಊ‌ಊಂ.." ಎಂದು ಒಂದೇ ಸಮನೆ ಅಳುತ್ತಾ ಬಳಿ ಬಂದ ಮಗಳ ರಂಪಾಟಕ್ಕೆ ಪದ್ಮಜ ಬೆಚ್ಚಿಬಿದ್ದಳು.
"ಏನೇ ರೋಗಬಂತೇ ನಿಂಗೆ.. ಸಾಯೋ ಅಂತದ್ದು ಏನಾಗಿದೆ ಈಗ? ನಾವಿಲ್ಲಿ ಭವಿಷ್ಯ ಯೋಚಿಸ್ತಾ ಇದ್ದ್ರೆ.. ನೀನು ಸಾಯೋ ಮಾತಾಡ್ತಿದ್ದೀಯ.. ಕತ್ತೆ... ಓದ್ಕೋ ಅಂದ್ರೆ ಇಲ್ಲದ ತಲಹರೆಟೆ ಮಾಡ್ತಾಳೆ. ವರ್ಷ ಹತ್ತಾಗಿದ್ರೂ ಬುದ್ಧಿ ಮಾತ್ರ ಐದಕ್ಕೇ ಸರಿ..." -ತನ್ನ ಸಂಭ್ರಮಕ್ಕುಂಟಾದ ಭಂಗಕ್ಕೆ ಮಗಳ ಮೇಲೆ ಕೋಪಗೊಂಡಳು ಪದ್ಮಜ.
"ಪಾಪ ಯಾಕೆ ಹಾಗೆ ಕೂಗಾಡ್ತೀಯಾ? ಏನೋ ಮಗು ಹೆದ್ರಿದೆ ಇದನ್ನೆಲ್ಲಾ ನೋಡಿ.. ನಾ ಕೇಳ್ತೀನಿ ಇರು.. ಬಾ ಪುಟ್ಟ.. ಏನಾಯ್ತು? ಯಾರಿಗೂ ಏನೂ ಆಗೊಲ್ಲಾಮ್ಮ. ನಾನೆಲ್ಲ ನೋಡ್ಕೋತೀನಿ.." ಎಂದು ಮುದ್ದುಕುವರಿಯನ್ನು ಹತ್ತಿರ ಎಳೆದುಕೊಂಡರು ಜೋಯಿಸರು.
"ಅಪ್ಪಯ್ಯ..ನೀ ರಮಾನಂದ ಅಂಕಲ್ ಹತ್ರ ಹೇಳ್ತಾ ಇದ್ದೆ.. ಪೂಜೆ ಮಾಡಿದ್ರೆ ಅಲ್ಲಿ ಆ ಕಾಯಿ ಇಟ್ಟವ್ರು ರಕ್ತ ಕಾರಿ ನರಳ್ತಾರೆ ಅಂತ.. ನಂಗೆ ಭಯ ಅಪ್ಪಯ್ಯ.. ಊ‌ಊಂ.."ಎಂದು ಮತ್ತೆ ಅಳಲು ಜೋಯಿಸ ದಂಪತಿಗಳಿಗೆ ತುಸು ಆತಂಕವಾಯಿತು.
"ಯಾಕಮ್ಮಾ? ನಿಂಗ್ಯಾಕೆ ಭಯ ಆಗ್ಬೇಕು? ಅದನ್ನು ಅಲ್ಲಿ ಇಟ್ಟವರಿಗೆ ಹಾಗೆ ಆಗೋದು.. ಹೆದ್ರಕೋಬೇಡ" ಎಂದು ಪದ್ಮಜಳೂ ಈಗ ಸಮಾಧಾನಿಸಿದಳು.
"ಇಲ್ಲಮ್ಮಾ.. ಅದೂ....ಅದೂ.. ಅದನ್ನ ನಾನೇ ಅಲ್ಲಿಟ್ಟಿದ್ದು.." ಎಂದು ಮೆಲ್ಲನೆ ಬಿಕ್ಕುತ್ತಾ ಸುಮ ಹೇಳಿದಾಗ ಅವರಿಬ್ಬರಿಗೂ ಆಕಾಶವೇ ಕಳಚಿಬಿದ್ದಂತಾಯಿತು.
"ಏನು ಹೇಳ್ತಾ ಇದ್ದೀಯೇ ಮಂಕೆ? ನೀನ್ಯಾಕೆ ಅಲ್ಲಿಡ್ಬೇಕು? ಹುಚ್ಚುಚ್ಚಾಗಿ ಆಡ್ಬೇಡ?"-ಎಂದು ಗದರಿಸಿದ ಪದ್ಮಜಳ ದನಿಯೊಳಗೆ ಸಣ್ಣ ಕಂಪನ.

"ಅದೂ... ಅದೂ.. ಅಮ್ಮಾ ಆವತ್ತು ಶೆಟ್ಟಿಗಾರು ತೋಟದ ಕಡೆಯಿಂದ ನಾವು ಬರ್ತಿರ್ಬೇಕಿದ್ರೆ ಒಂದು ತೆಂಗಿನ್ಕಾಯಿ ಬಿದ್ದಿದ್ದನ್ನ ಕಂಡು ಮೆಲ್ಲಗೆ ಎತ್ಕೊಂಡು ಬಾ ಅಂದಿದ್ಲು. ಆದ್ರೆ ನಾನು ತರೋಕೆ ಹೋದಾಗ ಯಾರಾದ್ರೂ ನೋಡಿದ್ರೆ ಅಂತ ಹೆದ್ರಿ ಹಾಂಗೇ ಬಂದ್ಬಿಟ್ಟಿದ್ದೆ. ಆಗ ಅಮ್ಮ ನಾನು ದಡ್ಡಿ, ಯಾವ್ದಕ್ಕೂ ಲಾಯಕ್ಕಲ್ದವ್ಳು ಅಂತೆಲ್ಲಾ ತುಂಬಾ ಬಯ್ದಿದ್ಲು. ಇವತ್ತು ಬೆಳ್ಗೆ ಅದೇ ದಾರಿಲಿ ಬರ್ತಿದ್ನಾ.. ಬೇಲಿ ಪಕ್ಕದಲ್ಲೇ ಮತ್ತೊಂದು ತೆಂಗಿನಕಾಯಿ ಕಂಡೆ. ತಗೊಂಡು ಬಂದ್ರೆ ಅಮ್ಮಂಗೆ ಖುಶಿ ಆಗೊತ್ತೆ ಅಂತ ದೈರ್ಯ ಮಾಡಿ ಎತ್ಕೊಂಡು ಹೊರ್ಟೆ....ಸ್ವಲ್ಪ ದೂರ ಹೋಗ್ಬೇಕಾದ್ರೆ ಸುಶೀಲಕ್ಕ ಕರೆದ್ರು..ದೇವಸ್ಥಾನದ ಪ್ರಸಾದ ಅಂತ ಕುಂಕುಮ ಕಟ್ಟಿ ಕೊಟ್ರು.. ಹಾಂಗೇ ಕೂಡು ರಸ್ತೆ ಹತ್ರ ಬರ್ತಿರ್ಬೇಕಾದ್ರೆ ದೂರದಲ್ಲಿ ಶೆಟ್ಟಿಗಾರು ತಮ್ಮ ಕಂಡ. ಅವ್ನಿಗೆ ನಾನು ಕಾಯಿ ಕದ್ದಿರೋದು ಗೊತ್ತಾದ್ರೆ ಅಂತ ಹೆದ್ರಿ ಅಲ್ಲೇ ಕಾಯಿ ಇಡೋವಾಗ ಕುಂಕಮಾನೂ ಬಿದ್ಬಿಡ್ತು. ಭಯದಿಂದ ಎತ್ಕೊಳ್ದೇ ಹಾಂಗೇ ಓಡಿ ಬಂದ್ಬಿಟ್ಟೆ.. ಊ‌ಊ‌ಊಂ... ನಂದೇನೂ ತಪ್ಪಿಲ್ಲಪ್ಪಯ್ಯ... ನೀವು ಆ ಪೂಜೆ ಮಾಡಿಸ್ಬೇಡಿ.." ಎಂದು ಜೋರಾಗಿ ಅಳತೊಡಗಿದಂತೇ ದಂಪತಿಗಳಿಗೆ ದಿಕ್ಕೇ ತೋಚದಂತಾಯ್ತು.

"ಅಯ್ಯೋ ಕತ್ತೆ... ಎಂತಾ ಕೆಲ್ಸ ಮಾಡ್ದ್ಯೇ? ಮಾಡೋದೇನೋ ಮಾಡ್ದೆ.. ಮೊದ್ಲೇ ಹೇಳೋಕೆ ಏನಾಗಿತ್ತು? ಈಗ ಇಷ್ಟೆಲ್ಲಾ ಅದ್ಮೇಲೆ ಹೀಂಗೆ ಹೇಳಿದ್ಯಲ್ಲಾ....ಈಗ ಬೊಬ್ಬೆ ಹಾಕಿ ಅಕ್ಕ ಪಕ್ಕದವ್ರಿಗೂ ಗೊತ್ತಗೋ ಹಾಗೆ ಮಾಡ್ಬೇದ... ಬಾಯಿ ಮುಚ್ಚು ಮೊದ್ಲು.." ಎಂದು ಕೂಗಾಡುತ್ತಾ ಮಗಳನ್ನು ತಾರಾಮಾರ ಹೊಡೆಯ ತೊಡಗಿದಳು ಪದ್ಮಜ.

ಮಗಳ ಹೆಡ್ಡುತನ ಕಂಡು ಜೋಯಿಸರಿಗೆ ಬೇಸರವಾದರೂ ಮುದ್ದು ಮಗಳು ಹೊಡೆತ ತಿನ್ನುವುದನ್ನು ನೋಡಲಾಗದೇ ತಪ್ಪಿಸಿ, ಹೇಗೋ ಸಮಾಧಾನ ಮಾಡಿ ಒಳ ಕಳುಹಿಸಿದರು. ಇತ್ತ ಅವರ ಧರ್ಮ ಪತ್ನಿ ತನ್ನ ಬಳೆಯ ಕನಸೆಲ್ಲಾ ಚೂರು ಚೂರಾದಂತೆ ಅನಿಸಿ ತಲೆ ಮೇಲೆ ಕೈ ಹೊತ್ತು ಕುಳಿತಳು.

"ಏನಾಗಿ ಹೋಯ್ತ್ರೀ? ಇವಳಿಂದಾಗಿ ಮರ್ಯಾದೆ ಹೋಗೋ ಹಾಂಗೆ ಕಾಣೊತ್ತೆ... ನಾಳೆ ದಿನ ಇವ್ಳು ಹೆದ್ರಿ ಬಾಯಿ ಬಿಟ್ರೆ ಏನು ಗತಿ? ಆ ಸಾವಿತ್ರಿ ಚಾಲಾಕಿ. ಅವ್ಳ ಮಗ್ಳ ಜೊತೆ ಇವ್ಳೇನಾದ್ರೂ ಭಯದಿಂದ ಬಾಯ್ಬಿಟ್ರೆ ಅಷ್ಟೇ. ನಾವು ಈ ಪೂಜೆ ಮಾಡ್ಸೋ ಹಾಂಗಿಲ್ಲಾ....ಹಾಗೇನಾದ್ರೂ ಮಾಡ್ಸಿದ್ರೆ ಇವ್ಳು ನಾವು ಮಾಡ್ತಿರೋದೆಲ್ಲಾ ನಿಜ ಅಂತ ನಂಬಿ ಅಲ್ಲೇ ಹೇಳಿದ್ರೂ ಹೇಳೋಳೇ.. ಹ್ಮ್ಂ.. ಎಲ್ಲಾ ಪಡ್ಕೊಂಡು ಬರ್ಬೇಕು... ಈಗೇನು ಮಾಡೋದು ಯೋಚ್ಸಿ.." ಎನ್ನುತ್ತಾ ನಿರಾಸೆಯಿಂದುಕ್ಕಿ ಬಂದ ಕಣ್ಣೀರನ್ನು ಸೆರಗಿನಿಂದ ಒತ್ತಿ ಹಿಡಿದಳು ಪದ್ಮಜ.

ಗಂಟೆ ಒಂದಾದರೂ ಮೂವರಿಗೂ ನಿದ್ದೆಯಿಲ್ಲ. ಅತ್ತ ಒಳಗೋಣೆಯಲ್ಲಿ- ‘ಅಪ್ಪಯ್ಯ ಏನಾದ್ರೂ ಪೂಜೆ-ಗೀಜೆ ಮಾಡ್ಸಿದ್ರೆ ಏನು ಮಾಡುವುದು?ನಾನು ರಕ್ತ ಕಾರೋವಂತಾದ್ರೆ ಏನು ಗತಿ?’ ಎಂದೆಲ್ಲಾ ಯೋಚಿಸುತ್ತಾ ಬೆಚ್ಚುತ್ತಿದ್ದ ಸುಮ ಸುಮ್ಮನೇ ಪಿಳಿ ಪಿಳಿ ಕಣ್ಣು ಬಿಡುತ್ತಾ ಮಲಗಿದ್ದರೆ, ಇತ್ತ ಎಷ್ಟು ಯೋಚಿಸಿದರೂ ಉಪಾಯಗಾಣದೇ ಜೋಯಿಸರು ಚಡಪಡಿಸುತ್ತಿದ್ದರು. ಸಮಯ ಹೀಗೇ ಕಳೆದುಹೋಗುತ್ತಿರಲು, ಪದ್ಮಜಳಿಗೆ ಏನೋ ಒಂದು ಹೊಳೆಯಿತು. ತನ್ನ ಬುದ್ಧಿವಂತಿಕೆ ತಾನೇ ಸಂತಸಪಡುತ್ತಾ ಅದನ್ನು ಪತಿಗೆ ಹೇಳಲು, ಅವರಿಗೂ ಅದು ಸಮ್ಮತವಾಯಿತು. ಅಬ್ಬಾ! ಅಂತೂ ಏನೋ ಒಂದು ಉಪಾಯ ಕಂಡು ಹಿಡಿದ ನಿರಾಳತೆಯೊಂದಿಗೆ ಅಳಿದುಳಿದ ರಾತ್ರಿಯನ್ನಾದರೂ ನಿದ್ದೆಯಲ್ಲಿ ಕಳೆಯಲು ಕೋಣೆಗೆ ಬಂದರು. ನೋಡಿದರೆ ಅಲ್ಲಿ ಪುಟ್ಟ ಸುಮ ಇನ್ನೂ ಮಲಗದೇ ಮಗ್ಗಲನ್ನು ಬದಲಾಯಿಸುತ್ತಿದ್ದಳು. ಸ್ವಲ್ಪ ಹೊತ್ತಿನ ಹಿಂದೆ ತಾನು ತಾರಾಮಾರ ಹೊಡೆದದ್ದು ನೆನಪಾಗಿ ಪದ್ಮಜಳಿಗೆ ತುಂಬಾ ಬೇಸರವಾಯಿತು. ತನ್ನಿಂದ ಈ ಹುಡುಗಿ ನೋವು ಪಡುವಂತಾಯಿತಲ್ಲ ಎಂದು ಮರುಗಿದ ತಾಯಿ ಹೃದಯ ಹಾಗೇ ಅವಳ ಮೈದಡವಲು, ಇದ್ದ ಬದ್ದ ದುಃಖವೂ ಉಕ್ಕಿ ಬಂದಿತು ಸುಮಳಿಗೆ.

"ಇಲ್ಲಮ್ಮಾ.. ನಾವು ಆ ಪೂಜೆ ಮಾಡ್ಸೊಲ್ಲ. ನೀ ಹೆದ್ರಬೇಡ. ಆ ತೆಂಗಿನ ಕಾಯಿಗೂ ವ್ಯವಸ್ಥೆ ಮಾಡ್ತೀವಿ. ನೋಡು ಸುಮ, ಆದ್ರೆ ನೀ ಮಾತ್ರ ಆಣೆ ಕೊಡು ನಮ್ಗೆ. ಯಾವುದೇ ಕಾರಣಕ್ಕೂ ಆ ಕಾಯಿ ಇಟ್ಟವ್ಳು ನೀನು ಅಂತ ಯಾರಿಗೂ ಹೇಳ್ಬಾರ್ದು. ಆಣೆ ಮಾಡಿದ್ದಮೇಲೂ ನೀನೇನಾದ್ರೂ ಹೇಳಿದ್ರೆ ನಾವು ರಕ್ತ ಕಾರ್ಕೋತೀವಿ ಅಷ್ಟೇ! ತಿಳೀತೋ ಹೇಂಗೇ? ಈಗ ನೀನು ಆರಾಮವಾಗಿ ಮಲ್ಕೋ. ನಾವು ನೋಡ್ಕೋತೀವಿ.." ಎಂದು ಜೋಯಿಸರು ಸಮಾಧಾನಿಸಲು ಸುಮಳಿಗೆ ಧೈರ್ಯ ಬಂತು. ಮಗಳಿಂದ ಆಣೆಯನ್ನು ತೆಗೆದುಕೊಂಡ ಮೇಲೆ ಜೋಯಿಸ ದಂಪತಿಗಳು ಮಲಗಹೊರಟರೆ, ಅಪ್ಪ ಅಮ್ಮನಿಂದ ತಾನು ಬಚಾವಾಗುವುದನ್ನು ಖಾತ್ರಿಮಾಡಿಕೊಂಡ ಸುಮಳೂ ನಿದ್ರಾ ದೇವಿಗೆ ಶರಣಾದಳು.

-೪-

"ನೋಡಿ ಆನಂದ ರಾಯರೇ.. ನಿನ್ನೆಯೆಲ್ಲಾ ನಿದ್ದೆಗೆಟ್ಟು ನಾನು ಮಾಟ-ಮಂತ್ರಕ್ಕೆ ಪರಿಹಾರವನ್ನು ಹೇಳಿರುವ ಗ್ರಂಥಗಳನ್ನೆಲ್ಲಾ ಜಾಲಾಡಿದೆ. ಅವುಗಳಲ್ಲಿ ಹೇಳಿರುವುದೆಲ್ಲಾ ಆಗು ಹೋಗುವಂಥದ್ದಲ್ಲ ಬಿಡಿ.. ಅದೂ ಅಲ್ಲದೇ ನನಗನ್ನಿಸಿದ್ದೇನೆಂದರೆ, ಏನೂ ತಪ್ಪು ಮಾಡದ ಈ ವಠಾರದವರಿಂದ ದುಡ್ಡು ವಸೂಲಿ ಸರಿಯಲ್ಲ ಎಂದು. ಹಾಗಾಗಿ ಬೆಳ್ಳಂಬೆಳಗ್ಗೆಯೇ ನನಗೆ ತುಂಬಾ ಪರಿಚಯ ಇರೋ ಪ್ರಸಿದ್ಧ ತಾಂತ್ರಿಕರಾದ ಶಂಭು ಭಟ್ಟರಿಗೆ ಫೋನಾಯಿಸಿದೆ. ಅವರು ಒಂದು ಸುಲಭ ಹಾಗೂ ನಯಾ ಪೈಸೆ ಖರ್ಚಿಲ್ಲದ ಪರಿಹಾರ ಹೇಳಿದ್ದಾರೆ. ಇವತ್ತು ಸಂಜೆ ನಾನು ಆ ಕಾಯಿಯ ಸುತ್ತ ಅರಿಶಿನ ಕುಂಕುಮದಿಂದ ಬಂಧ ಹಾಕಿಡುವೆ. ಮಂತ್ರದ ಪ್ರಭಾವದಿಂದ ಅದರೊಳಗಿನ ಶಕ್ತಿ ಹೊರ ಹೋಗದಂತಾಗುವುದು. ಈ ರಾತ್ರಿಯೇ ಸ್ವತಃ ಆ ಕಾಯನ್ನು ಅಲ್ಲಿಟ್ಟವರೇ ಬಂದು ಅದನ್ನು ಎತ್ತೊಯ್ಯುವಂತೆ ಮಾಡುವೆ ಎಂದು ಭಟ್ಟರೇ ಹೇಳಿದ್ದಾರೆ. ಅಲ್ಲಿಂದಲೇ ಇದನ್ನೆಲ್ಲಾ ಮಾಡುವಷ್ಟು ಶಕ್ತಿಯುಂಟು ಅವರಿಗೆ. ಬೆಳಗಾಗುವದರೊಳಗೆ ಆ ತೆಂಗಿನ ಕಾಯಿ ಅಲ್ಲಿ ನಿಮಗೆ ಕಂಡರೆ ಹೇಳಿ! ನನಗೆ ತುಂಬಾ ಬೇಕಾದವರಾದ್ದರಿಂದ ಈ ಸಲ ದುಡ್ಡು ಕಾಸು ಬೇಡ ಅಂದಿದ್ದಾರೆ. ಹಾಗೆ ನಾನು ಅವರನ್ನು ಒಪ್ಪಿಸಿದ್ದೇನೆ ಅನ್ನಿ... ಹಾಂ..ಆದ್ರೆ ಒಂದು ಮಾತು.. ಈ ರಾತ್ರಿ ಮಾತ್ರ ಯಾರೊಬ್ಬರೂ ತಪ್ಪಿಯೂ ತಮ್ಮ ತಲೆಯನ್ನು ಹೊರ ಹಾಕಬಾರದೆಂದು ಕಟ್ಟಪ್ಪಣೆ ಮಾಡಿದ್ದಾರೆ ಭಟ್ಟರು. ನೀವೆಲ್ಲ ಉಂಡು ಬೇಗ ಮಲಗಿಬಿಡಿ ಇವತ್ತು. ಹೆದರಬೇಡಿ.. ಎಲ್ಲಾ ಸರಿಯಾಗುವುದು.." ಎನ್ನಲು ಮಹದಾನಂದವಾಯಿತು ವಠಾರದ ಮಂದಿಗೆ. ಬೆಳಗ್ಗೆಯೇ ಜೋಯಿಸರ ಸುತ್ತ ಜಮಾಯಿಸಿದ್ದ ಅವರಿಗೆಲ್ಲಾ ಇನ್ನೆಷ್ಟು ದುಡ್ಡು ಖರ್ಚಾಗುವುದೋ ಎಂಬ ಆತಂಕವುಂಟಾಗಿತ್ತು. ಆದರೆ ಇಲ್ಲಿ ನೋಡಿದರೆ ಚಿತ್ರಣವೇ ಬೇರೆಯಾಗಿತ್ತು. ನಯಾ ಪೈಸೆಯ ಖರ್ಚಿಲ್ಲದೇ ಬಂದ ವಿಪತ್ತು ದೂರಾಗುತ್ತಿರುವುದು ಕಂಡು ಜೋಯಿಸರನ್ನು ಕೊಂಡಾಡುತ್ತ ಮನೆಗೆ ತೆರೆಳಿದರು. ‘ಅದು ಹೇಗೆ ಇಷ್ಟೊಂದು ಉದಾರ ಬುದ್ಧಿ ಬಂತಪ್ಪಾ ಇವರಿಗೆ ’ ಎಂಬ ಸಣ್ಣ   ಅನುಮಾನ ಸಾವಿತ್ರಮ್ಮನಿಗೆ ಬಂದರೂ, ಬಾಯ್ಬಿಟ್ಟರೆ ಎಲ್ಲಿ ಮತ್ತೆ ಖರ್ಚು ಬಾಬ್ತಿನ ಸುದ್ದಿ ಬರುವುದೋ ಎಂದು ಮರುಮಾತಾಡದೇ ತೋರಿಕೆಗೆ ಎರಡು ಒಳ್ಳೆಯ ಮಾತು ಆಡಿ ಹೊರಟಳು. ಈಗ ಜೋಯಿಸರ ಮೊಗದಲ್ಲಿ ಕೊಂಚ ನಿರುಮ್ಮಳತೆ ಕಂಡರೆ, ಪದ್ಮಜಳ ಮುಖ ಮಾತ್ರ ಸಂಪೂರ್ಣ ಬಾಡಿ ಹೋಗಿತ್ತು.

ಮುಸ್ಸಂಜೆಯಾಗುತ್ತಿದ್ದಂತೇ ಜೋಯಿಸರು ಬಟ್ಟಲಲ್ಲಿ ಅರಿಶಿನ ಕುಂಕುಮ ಹಾಕೂ ಅಕ್ಕಿ ಕಾಳುಗಳನ್ನು ತಂದು ಕಲಸಿ, ಒಳಬಾಯಿಯಲ್ಲಿಯೇ ಎನೋ ಮಂತ್ರವನ್ನು ಪಠಿಸುತ್ತಾ, ತೆಂಗಿನ ಕಾಯಿಯ ಸುತ್ತ ವೃತ್ತಾಕಾರದ ಬಂಧವನ್ನೆಳೆದರು. ಹಿಂತಿರುಗುವ ಮೊದಲು ಮತ್ತೊಮ್ಮೆ ಎಲ್ಲರನ್ನೂ ಆ ರಾತ್ರಿ ಹೊರಬರದಂತೇ ಎಚ್ಚರಿಸಲು ಮಾತ್ರ ಮರೆಯಲಿಲ್ಲ. ಅಂದು ವಠಾರದಲ್ಲಿ ಹೆಚ್ಚಿನವರಿಗೆ ನಿದ್ದೆ ಬರಲಿಲ್ಲ. ಮನೆಯವರೆಲ್ಲಾ ಹತ್ತು ಗಂಟೆಯೊಳಗೇ ತಮ್ಮ ಹೊರಗಿನ ಕೆಲಸಕಾರ್ಯಗಳನ್ನೆಲ್ಲಾ ಮುಗಿಸಿ ಕಿಟಕಿ ಬಾಗಿಲುಗಳನ್ನೆಲ್ಲಾ ಭದ್ರಪಡಿಸಿ ಮುಸುಕು ಬೀರಿ ಮಲಗಿದ್ದರೂ...ಹೊದಿಕೆಯೊಳಗಿಂದಲೇ ಹೊರಗೇನಾದರೂ ಸದ್ದಾಗುತ್ತಿದೆಯೋ ಎಂದು ಗ್ರಹಿಸುತ್ತಾ.. ಕೇಳಿದ ಹಾಗೂ ಕೇಳದ ಸದ್ದಿಗೆಲ್ಲಾ ಬೆವರುತ್ತಾ ಬೆಳಗಿಗಾಗಿ ಕಾಯತೊಡಗಿದರು.

ಸೂರ್ಯೋದಯಕ್ಕಾಗಿಯೇ ರಾತ್ರಿಯಿಡೀ ಕಾದಿದ್ದ ಜನ.. ಬಾನಂಚಿನಲ್ಲಿ ಕೆಂಬಣ್ಣ ಹೌದೋ ಅಲ್ಲವೋ ಎಂಬಂತೆ ಮೂಡಿದ್ದೇ ತಡ ಒಬ್ಬೊಬ್ಬರಾಗಿ ಮೆಲ್ಲನೆ ಹೊರ ಬಂದು ಒಟ್ಟುಗೂಡಿ ಕೂಡು ರಸ್ತೆಯ ಕಡೆಗೆ ನಡೆದರು. ನೋಡಿದರೆ.. ಕಾಯಿಯೂ ಇಲ್ಲಾ, ಹಿಂದಿನ ದಿನ ಸಂಜೆ ಜೋಯಿಸರು ಹಾಕಿಟ್ಟಿದ್ದ ಅರಿಶಿನ ಕುಂಕುಮದ ಬಂಧವೂ ಕಾಣೆ. ಎಲ್ಲರ ಮನದಲ್ಲೂ ನಿರಾಳತೆ ಮೂಡಿ, ಸಮಾಧಾನದ ನಿಟ್ಟುಸಿರುಗಳು ಹೊರಬಂದವು. ಒಟ್ಟಾಗಿ ಎಲ್ಲರೂ ಜೋಯಿಸರನ್ನು ಅಭಿನಂದಿಸಲು ಹೊರಟರೆ, ಅತ್ತ ಪದ್ಮಜ ಬೆಳಗಿನ ದೋಸೆಗೆ ನಂಜಿಕೊಳ್ಳಲು ಚಟ್ನಿಗಾಗಿ ತೆಂಗಿನ ಕಾಯಿ ರುಬ್ಬುತ್ತಿದ್ದಳು.

***ಕರ್ಮವೀರದಲ್ಲಿ ಪ್ರಕಟಿತ***

-ತೇಜಸ್ವಿನಿ ಹೆಗಡೆ.