ಸೋಮವಾರ, ಅಕ್ಟೋಬರ್ 20, 2008

ಮರೆಯಲಾಗದ ನೆನಪು - ೨

***ನನ್ನ ಮನದೊಳಗೆ ಸದಾ ಹಸಿರಾಗಿರುವ ಈ ಘಟನೆಗೆ ಸಂಬಂಧ ಪಡುವವರ ಹೆಸರುಗಳನ್ನು ನಾನಿಲ್ಲಿ ಉಲ್ಲೇಖಿಸುತ್ತಿಲ್ಲ. ಅದಕ್ಕೆ ಪ್ರಮುಖ ಕಾರಣಗಳೆರಡು. ಮೊದಲನೆಯದಾಗಿ ನಾನು ಅವರುಗಳ ಒಪ್ಪಿಗೆಯನ್ನು ಪಡೆದುಕೊಂಡಿಲ್ಲವಾದ್ದರಿಂದ. ಎರಡನೆಯದಾಗಿ ಇಲ್ಲಿ ಪ್ರಸ್ತಾಪಿಸಲ್ಪಟ್ಟಿರುವ ವ್ಯಕ್ತಿಯೋರ್ವರು ಬ್ಲಾಗ್ ಮಂಡಲದಲ್ಲಿ ಸುಪರಿಚಿತರು. ಹೆಸರುವಾಸಿ. ತಮಗೆಲ್ಲಾ ಗೊತ್ತಿರುವವರೇ! ಹಾಗಾಗಿ ನಾನು ಅವರುಗಳ ಹೆಸರನ್ನಾಗಲೀ, ಆ ಪ್ರದೇಶನ ಪರಿಚಯವನ್ನಾಗಲೀ ನೀಡುತ್ತಿಲ್ಲ. ಒಂದೊಮ್ಮೆ ಈ ಬರಹವನ್ನೋದಿದ ಅವರು ಒಪ್ಪಿಗೆಯನ್ನಿತ್ತರೆ ಹೆಸರು ಹಾಗೂ ಊರನ್ನು ಪರಿಚಯಿಸುವೆ.***
-----------------------------------------------------------------------
ಈ ಘಟನೆ ನಡೆದದ್ದು ಸುಮಾರು ನಾಲ್ಕು ವರ್ಷಗಳ ಹಿಂದೆ. ನಮ್ಮ ಮದುವೆಯಾದ ಹೊಸತರಲ್ಲಿ. ಆಗಷ್ಟೇ ಯಜಮಾನರ ಇಷ್ಟಮಿತ್ರ, ಬಂಧು-ಬಳಗದವರ ಪರಿಚಯವಾಗತೊಡಗಿತ್ತು. ಅವರ ಸ್ನೇಹಿತರಲ್ಲನೇಕರನ್ನು, ಕೆಲ ಆಪ್ತರನ್ನು ಮದುವೆಯ ದಿನವೇ ನೋಡಿದ್ದೆ. ಹಾಗೆ ಬಂದವರಲ್ಲಿ ಅವರ ಆತ್ಮೀಯ ಗುರುಗಳೊಬ್ಬರೂ ಆಗಿದ್ದರು. ಅವರು ಯಜಮಾನರಿಗೆ ಪಿ.ಯು.ಸಿಯಲ್ಲಿ ಕನ್ನಡ ಕಲಿಸಿದ್ದರು. ಗುರು-ಶಿಷ್ಯರ ಸಂಬಂಧ ಕೇವಲ ಕ್ಲಾಸ್‌ರೂಂಗಷ್ಟೇ ಸೀಮಿತವಾಗದೆ, ಇಬ್ಬರೊಳಗೂ ಒಂದು ಗಾಢವಾದ ಆಪ್ತತೆಯನ್ನು ಬೆಳೆಸಿತ್ತು. ಕ್ರಮೇಣ ನನ್ನವರು ಅವರ ಮನೆಯಲ್ಲೋರ್ವ ಸದಸ್ಯರಂತಾಗಿಬಿಟ್ಟಿದ್ದರು. ಇದನ್ನೆಲ್ಲಾ ಯಜಮಾನರು ಮೊದಲೇ ನನಗೆ ಸಾಕಷ್ಟು ಸಲ ಹೇಳಿದ್ದರಿಂದ ಅವರ ಗುರುಗಳನ್ನು ನೋಡಿದಾಗ ಅಷ್ಟೊಂದು ಅಪರಿಚಿತರೆಂದೆನಿಸಿರಲೇ ಇಲ್ಲ. ಹಾಗಾಗಿಯೋ ಏನೋ ಒಂದು ದಿನ ನನ್ನವರು ತಮ್ಮ ಗುರುಗಳ ಮನೆಗೆ ಹೋಗಿ ಬರೋಣ ಎಂದಾಕ್ಷಣ ಕೂಡಲೇ ತಯಾರಾದೆ. ಅದೂ ಅಲ್ಲದೇ ನಂದೂ ಒಂದು ಸಣ್ಣ ಸ್ವಾರ್ಥವಿತ್ತೆನ್ನಿ. ಇವರ ಗುರುಗಳಿಗೆ ಕನ್ನಡ ಸಾಹಿತ್ಯದಲ್ಲಿ ಅಪಾರ ಪಾಂಡಿತ್ಯವಿದೆಯೆಂದು ಸಾಕಷ್ಟು ಸಲ ಕೇಳಿದ್ದೆ. ಹಾಗಾಗಿ ಮತ್ತೂ ಉತ್ಸುಕಳಾಗಿ ಹೊರಟೆ.

ಮಂಗಳೂರಿನಿಂದ ಅವರ ಮನೆ ಸುಮಾರು ೨೫-೩೦ ಕಿ.ಮೀ. ದೂರವಿತ್ತು. ಹಾಗಾಗಿ ಆದಷ್ಟು ಬೇಗ ಮನೆಯಿಂದ ಹೊರಡಬೇಕೆಂದು ಗಡಬಡಿಸಿದರೂ, ಹೊರಡುವಾಗಲೇ ಗಂಟೆ ೨ ದಾಟಿತ್ತು! "ನಿಂಗವು ರಾಶಿ ಲೇಟ್ ಮಾಡ್ಕಳಡಿ.. ಮಳೆಗಾಲ ಬೇರೆ. ದಾರಿ ಬೇರೆ ತಿರುವು ಮುರುವಿದ್ದು. ನಂಗೆ ಟೆನ್ಷನ್ ಆಗ್ತು" - ಎಂಬ ಅಮ್ಮನ ಈ ಎಚ್ಚರಿಕೆಯ ಮತುಗಳೊಂದಿಗೆಯೇ ನಾವು ಕಾರನ್ನೇರಿದೆವು. ಹೊರಟ ಮೇಲೆ ನಮ್ಮ ಪ್ರಯಾಣದಲ್ಲಿ ತುಸು ಬದಲಾವಣೆಯಾಗಿ ದಾರಿಯಲ್ಲೇ ಸಿಗುವ ಇವರ ಇನ್ನೋರ್ವ ಆತ್ಮೀಯರ ಮೆನೆಯನ್ನೂ ಹೊಕ್ಕು ಗುರುಗಳ ಮನೆ ಸೇರುವಾಗ ಸುಮಾರು ಐದುಗಂಟೇಯೇ ಆಗಿತ್ತು.

ಮದುವೆಗೆ ಗುರುಗಳು ಮಾತ್ರ ಬಂದಿದ್ದರು. ಕಾರಣಾಂತರಗಳಿಂದ ಅವರ ಪತ್ನಿಯಾಗಲೀ, ಮಗನಾಗಲೀ ಹಾಗೂ ಮಗಳಾಗಲೀ ಬಂದಿರಲಿಲ್ಲವಾದ್ದರಿಂದ ಇವರುಗಳೆಲ್ಲರನ್ನು ನಾನು ಮೊದಸಲ ಭೇಟಿಯಾಗಿದ್ದೆ....ಮನೆಯವರೆಲ್ಲರೊಡನೆ ಬೆರೆತು ಮಾತಾನಾಡುತ್ತಾ, ರಾಜೋಪಚಾರಗಳನ್ನು ಪಡೆಯುತ್ತಾ ಇದ್ದ ನಮಗೆ ಸಮಯದ ಅರಿವೇ ಆಗಲಿಲ್ಲ. ಅಲ್ಪ ಸಮಯದಲ್ಲೇ ನನಗಲ್ಲಿ ತುಂಬಾ ಆತ್ಮೀಯತೆ ದೊರಕಿತ್ತು. ಗುರುಗಳ ಪತ್ನಿ ನಮ್ಮೂರಿನವರೇ ಆಗಿದ್ದರಿಂದಲೋ ಏನೋ ನನಗರಿವಿಲ್ಲದಂತೇಯೇ ನಾನವರನ್ನು "ಅತ್ತೇ" ಎಂದು ಸಂಭೋಧಿಸತೊಡಗಿದ್ದೆ.

"ರಾಮು ಇಲ್ಲೇ ಹತ್ರದಲ್ಲಿ ಎಳ್ಳತ್ತೂರು ದೇವಸ್ಥಾನವಿದ್ದು. ಈಗಲ್ಲಿ ಬ್ರಹ್ಮಕಲಶದ ತಯಾರಿ ನಡೀತಾ ಇದ್ದು. ರಾಶಿ ಪ್ರಸಿದ್ಧ ದೇವಸ್ಥಾನ. ಸುಮಾರು ಜನ ನಡ್ಕ್ಯತ್ತ ಅದ್ಕೆ. ನಿಂಗವು ಅಲ್ಲಿಗೆ ಹೋಗಿ ನಿಮ್ಮ ಹತ್ರಾದಷ್ಟು ಸೇವೆ ಕೊಟ್ಟು ಮನೆಗೆ ಹೋಗಿ.. ಹೋಗ್ದೆ ಇರಡಿ. ಜಾಗ ಗೊತ್ತಗ್ದೇ ಹೋಕು ನಾನು ಮಗ್ಳ ಕಳಸ್ತೆ ಜೊತೆಗೆ..." ಎಂದು ಅತ್ತೆ ಹೇಳಿದಾಗಲೇ ನಾನು ಸಮಯ ನೋಡಿದ್ದು.. ಗಂಟೆ ಏಳಾಗಿ ಹೋಗಿತ್ತು. ಹೊರಗೆ ಕತ್ತಲು ತುಂಬಿತ್ತು.. ದೂರದಲ್ಲೇನೋ ಗುಡುಗಿದ ಸದ್ದು ಮಳೆಯಾರ್ಭಟಕ್ಕೆ ಮುನ್ನಚ್ಚರಿಕೆ ನೀಡುವಂತಿತ್ತು. ನನಗೋ ಮೊದಲೇ ಗುಡುಗು ಮಿಂಚು ಎಂದರೆ ಅವ್ಯಕ್ತ ಭಯ. ಜೊತೆಗೆ ಅಷ್ಟು ದೂರ ಹೋಗಬೇಕು. ರಸ್ತೆ ತುಂಬಾ ತಿರುವುಗಳಿಂದ ಬೇರೆ ಕೊಂಡಿತ್ತು. ಅಮ್ಮನನ ಎಚ್ಚರಿಕೆಯ ಮಾತುಗಳೂ ತಲೆಕೊರೆಯುತ್ತಿದ್ದವು.. ಆದರೂ ಅವರು ಹೇಳಿದ ಮೇಲೆ ದೇವಸ್ಥಾನಕ್ಕೆ ಹೋಗದಿರುವುದೂ ಸಲ್ಲ, ಹೋಗಿ ಒಂದು ಹಣ್ಣು-ಕಾಯಿಯನ್ನಾದರೂ ಮಾಡಿಸಿಕೊಂಡು ಬರುವ ಎಂದೆನಿಸಿದರೂ ಕಾಲದ ಪರಿಮಿತಿ ಕಟ್ಟಿಹಾಕಿತು. ತೀರಾ ಆಗದೆನ್ನಲಾಗದೇ ದಾಕ್ಷಿಣ್ಯದಿಂದ ಸುಮ್ಮನಾದೆ. ನನ್ನ ಮೌನವನ್ನೇ ಒಪ್ಪಿಗೆಯೆಂದರಿತೋ ಏನೋ ನನ್ನವರೂ ಸುಮ್ಮನಿದ್ದರು. ತಾಯಿಯ ಆಜ್ಞೆಯಂತೆ ಅವರ ಮಗಳು ನಮ್ಮೊಂದಿಗೆ ಬರಲು ಹೊರಟಳು. ಈಗ ನಾವು ದೇವಸ್ಥಾನಕ್ಕೆ ಹೋಗದೇ ಹಾಗೇ ಮರಳಲು ಸಾಧ್ಯವೇ ಇಲ್ಲದಂತಾಯಿತು. ಆಗ ಮುಂದೆ ಬಂದ ಅವರ ಮಗ "ನಾ ನಿಂಗ್ಳ ಜೊತೆ ಬತ್ತೆ.. ರಾಶೀ ಕತ್ಲಾಜು. ನನ್ನಾದ್ರೆ ಮನೆ ಹತ್ರನೇ ಬಿಡವು ಹೇಳಿಲ್ಲೆ..." ಎಂದು ಹೇಳುತ್ತಾ ತಂಗಿಯನ್ನು ತಡೆದು ತಾನೇ ಕಾರನ್ನೇರಿ ಬಿಟ್ಟ.......ಕಳೆಯುತ್ತಿದ್ದ ಸಮಯ ಹಾಗೂ ಹೆಚ್ಚುತ್ತಿದ್ದ ಗುಡುಗಿನ ಸದ್ದು ನನ್ನೊಳಗೆ ಕಳವಳವನ್ನುಂಟುಮಾಡಿದವು. ಎಲ್ಲವನ್ನೂ ಎಳ್ಳತ್ತೂರು ದೇವರಿಗೆ ಬಿಡುತ್ತೇನೆಂದುಕೊಂಡು, ನಾವು ಬರುವುದು ಹೊತ್ತಾಗುವುದೆಂದು ಅಮ್ಮನಿಗೆ ತಿಳಿಸೋಣವೆಂದು ಮೊಬೈಲ್ ತೆಗೆದರೆ NO SIGNAL!! ಇವರ ಗುರುಗಳ ಮನೆ ತುಸು ಹಳ್ಳಿಯಾದ್ದರಿಂದ ಸುಮಾರು ದೂರದವರೆಗೂ ಸಿಗ್ನಲ್ ಸಿಗುವಂತೆಯೂ ಇರಲಿಲ್ಲ!!

ಸುಮಾರು ಅರ್ಧ ಕಿಲೋಮೀಟರ್ ಬಂದೊಡನೆ ಎರಡು ರಸ್ತೆಗಳ ಕೂಡು ಸಿಕ್ಕಿತು. ಒಂದು ದೇವಸ್ಥಾನಕ್ಕೆ ಹೋಗುವುದು, ಇನ್ನೊಂದು ಮಂಗಳೂರಿನ ಕಡೆಗೆ ಹೋಗುವುದು. ತತ್‌ಕ್ಷಣ ಹಿಂದಿನ ಸೀಟಿನಲ್ಲಿದ್ದ ಗುರುಗಳ ಮಗ "ರಾಮಣ್ಣ ಇಲ್ಲೇ ನಿಲ್ಸು.." ಎಂದು ಹೇಳುತ್ತಾ ನಿಲ್ಲಿಸಿದ ಕೂಡಲೇ ಕಾರಿನಿಂದಿಳಿದು ಬಿಟ್ಟ. "ಅತ್ಗೆ ನಿಂಗವು ಮಂಗ್ಳೂರಿಗೆ ಹೊರಡಿ.. ರಾಶಿ ಲೇಟಾಜು. ಅವ್ಳು ಬಂದ್ರೆ ತಪ್ಪಿಸ್ಕಂಬ್ಲೆ ಆಗ್ತಿಲ್ಲೆ ಹೇಳೆ ನಾ ಬಂದೆ.. ನಾ ಇಲ್ಲೇ ಒಂದರ್ಧ ಗಂಟೆ ತಿರ್ಗಾಡಿ ಮನೆಗೆ ಹೋಗ್ತೆ ಗೊತ್ತಾಗಲ್ಲೆ.. ಸರಿ.. ರೈಟೋ....."ಎಂದು ಬಡಬಡನೆ ಮಾತಾಡಿ ದಡದಡನೆ ಕತ್ತಲೆಲ್ಲೋ ಮರೆಯಾಗಿಯೇ ಬಿಟ್ಟ. ಬಿಟ್ಟ ಕಣ್ಣುಗಳಿಂದ ಆಶ್ಚರ್ಯಚಕಿತಳಾಗಿ ಇವರನ್ನು ನೋಡಿದರೆ ಇವನ ಈ ಸ್ವಭಾವ ನನಗೆ ಮೊದಲೇ ಗೊತ್ತಿದೆ ಎನ್ನುವಂತೆ ಮುಗಳ್ನಗುತ್ತಿದ್ದರು! ನಮ್ಮ ಸಂದಿಗ್ಧತೆಯನ್ನರಿತೋ ಇಲ್ಲಾ ಕತ್ತಲಾವರಿಸಿದ್ದನ್ನು ನೋಡಿಯೋ ನಮ್ಮನ್ನು ದೇವಸ್ಥಾನಕ್ಕೆ ಕರೆದೊಯ್ಯದೇ ಮಂಗಳೂರಿಗೆ ಕಳುಹಿಸಿಬಿಟ್ಟ.

ಆದರೆ ಆ ಕ್ಷಣಕ್ಕೆ ನನಗೆ ಅವನು ಮಾಡಿದ್ದು ದೊಡ್ಡ ಉಪಕಾರವೆಂದೆನಿಸಿತಾದರೂ ಕ್ರಮೇಣ ಪಾಪಪ್ರಜ್ಞೆ ಮನಸ್ಸನ್ನಾವರಿಸಿಕೊಳ್ಳತೊಡಗಿತು. "ಛೆ! ನಾವು ತುಸು ಮೊದಲೇ ಮನೆಯಿಂದ ಹೊರಡಬೇಕಿತ್ತು.. ಇಲ್ಲಾ ನೇರ ಇಲ್ಲಿಗೇ ಬರಬೇಕಾಗಿತ್ತು.. ಮೊದಲೇ ಹೇಳಿದ್ದರೆ ಬೇಗ ಹೊರಟು ದೇವಸ್ಥಾನವನ್ನು ಹೊಕ್ಕಿಯೇ ಹೊಗಬಹುದಾಗಿತ್ತು.. ಛೇ.. ನಮ್ಮ ಒಳಿತಿಗಾಗಿ ಸಲಹೆಯನ್ನಿತ್ತ ಅತ್ತೆಗೆ ನಾವು ವಂಚನೆ ಮಾಡಿದೆವೇನೋ.."ಎಂದೆಲ್ಲಾ ಕೊರಗುತ್ತಲೇ....ನನ್ನವರ ತಲೆಯನ್ನು ಕೊರೆಯುತ್ತಲೇ ಮನೆಗೆ ಬಂದೆ.

ಇದಾದ ಅದೆಷ್ಟೋ ದಿನಗಳವರೆಗೂ ದೇವಸ್ಥಾನವನ್ನು ಭೇಟಿನೀಡದೇ ಬಂದೆವಲ್ಲಾ....ಹಿರಿಯರ ಉಪದೇಶವನ್ನು ಕಡೆಗಣಿಸಿದೆವಲ್ಲಾ.. ತಿಳಿಯದಂತೆ ಮೋಸಮಾಡಿದೆವಲ್ಲಾ.. ಎಂಬ ಭಯ, ಆತಂಕಗಳು ನನ್ನನ್ನು ಕಾಡುತ್ತಲೇ ಇತ್ತು. ಆಗೆಲ್ಲಾ ಮನಸ್ಸು.. ಹಾಗೆ ಮಾಡುವುದು ಅನಿವಾರ್ಯವಾಗಿತ್ತು.. ಸಂದಿಗ್ಧತೆ ಇತ್ತು. ಹಾಗಾಗಿ ಆ ರೀತಿ ಮಾಡಬೇಕಾಯಿತು.. ತಪ್ಪೇನಿಲ್ಲ ಎಂದೆಲ್ಲಾ ಸಮಜಾಯಿಷಿ, ಸಮಾಧಾನಗಳನ್ನು ನೀಡುತ್ತಿತ್ತು. ಆದರೂ ಪಾಪಪ್ರಜ್ಞೆ ಮಾತ್ರ ಮರೆಯಾಗಲೇ ಇಲ್ಲ. "ಆಗ ಆ ರೀತಿ ನಮ್ಮನ್ನು ಹೋಗಲು ಅವರ ಮಗ ಬಿಡದೇ ಹೋಗಿದ್ದರೆ ದೇವಸ್ಥಾನಕ್ಕೆ ಹೋಗಿಯೇ ಮರುಳುತ್ತಿದ್ದೆವು.. ಈ ರೀತಿಯ ಭಯ.. ಪಶ್ಚಾತ್ತಾಪಗಳಿಗೆ ಆಸ್ಪದವೇ ಇರುತ್ತಿರಲಿಲ್ಲ.. ಯಾಕಾದರೂ ನಮ್ಮನ್ನು ಹೋಗಗೊಟ್ಟನೋ ಎಂದು.. ನಮಗೆ ಸಹಾಯ ಮಾಡಿದ ಇವರ ಗುರುಗಳ ಮಗನನ್ನೂ ಬೈದುಕೊಂಡದ್ದಿದೆ. ಆದರೆ ಆ ರೀತಿ ಮಾಡಿದ್ದು ನಮ್ಮ ಮನಸ್ಥಿತಿಯನ್ನರಿತೇ ಎನ್ನುವುದೂ ತಿಳಿದಿತ್ತು. ಆ ನಂತರ ಎಷ್ಟೋ ಸಲ ಅತ್ತೆಗೇ ಕಾಲ್ ಮಾಡಿ ಸುಳ್ಳನ್ನು ಹೇಳಬೇಕೆಂದುಕೊಂಡೆ. ಆದರೆ ಹಾಗೆ ಮಾಡಲು ಏನೋ ಅಳುಕು.. ಅದೂ ಅಲ್ಲದೆ ಅವರ ಮಗನನ್ನೂ ಸಿಕ್ಕಿಸಿಹಾಕಿದಂತಾಗುವುದೆಂದು ಸುಮ್ಮನಿದ್ದುಬಿಟ್ಟೆ.(ಆದರೆ ನಮ್ಮೀ ತಪ್ಪಿನಲ್ಲಿ ಸಹಭಾಗಿಯಾಗಿರುವ ಅವರ ಮಗನಿಗೆ ಈ ಘಟನೆ ನೆನಪಿದೆಯೋ ಇಲ್ಲವೋ ತಿಳಿಯದು :) )

ಕಾಲನ ಮಹಿಮೆಯಿಂದ ಈ ಘಟನೆ ಮನದ ಮೂಲೆಯಲ್ಲೆಲ್ಲೋ ಅಡಗಿಕೊಂಡರೂ ಆಗಾಗ ಹಸಿರಾಗಿ ಉಸಿರಾಡುತ್ತಲೇ ಇರುತ್ತದೆ. ಆಗೆಲ್ಲಾ ಪಾಪಪ್ರಜ್ಞೆಯೂ ಕಾಡುತ್ತದೆ. ಅದಕ್ಕಾಗಿಯೇ ಈಗ ಈ ಬರಹದ ಮೂಲಕ ಪ್ರಾಮಾಣಿಕವಾಗಿ ನಮ್ಮೆಲ್ಲಾ ತಪ್ಪನ್ನು ಮುಂದಿಟ್ಟು ಹಗುರಾಗುವ ಚಿಕ್ಕ ಪ್ರಯತ್ನ ಮಾಡುತ್ತಿದ್ದೇನೆ. ಪ್ರಾಮಾಣಿಕತೆಯಿಂದ ಪಶ್ಚಾತ್ತಾಪ ಪಟ್ಟರೆ ಕ್ಷಮಾದಾನ ಸಿಕ್ಕಿದಂತೇ ಎಂದು ಕೇಳಿರುವೆ. ಆದರೂ ನೇರವಾಗಿಯಲ್ಲದಿದ್ದರೂ ಈ ರೀತಿ ಬಹಿರಂಗವಾಗಿ ಅಂದು ನಮ್ಮಿಂದಾದ ತಪ್ಪಿಗೆ ಅತ್ತೆಯಲ್ಲಿ ಮನಃಪೂರ್ವಕವಾಗಿ ಕ್ಷಮೆಕೋರುತ್ತಿದ್ದೇವೆ. ಸಾಧ್ಯವಾದರೆ ಆದಷ್ಟು ಬೇಗ ಪುಟ್ಟಿಯ ಸಮೇತ ಎಳ್ಳತ್ತೂರಿಗೆ ಹೋಗಿ ದೇವಸ್ಥಾನಕ್ಕೆ ಭೇಟಿ ನೀಡಬೇಕೆಂಬ ಆಲೋಚನೆಯೂ ಇದೆ...(ತಪ್ಪು)ಕಾಣಿಕೆ ಹಾಕಿಬರಲು.

-ತೇಜಸ್ವಿನಿ ರಾಮಕೃಷ್ಣ ಹೆಗಡೆ.

ಗುರುವಾರ, ಅಕ್ಟೋಬರ್ 16, 2008

ಅರ್ಪಣೆ


ಭಾವಪೂರ್ಣ (ಕವ)ನಮನ


ಬಲು ಸುಂದರ, ಸುಭದ್ರ ಈ ಜಗತ್ತು
ತಾಯ ಅಪ್ಪುಗೆಯಲ್ಲಿರುವಷ್ಟು ಹೊತ್ತು
ನಾಳೆಯ ಹಂಗಿಲ್ಲ, ಇಂದಿನ ಪರಿವಿಲ್ಲ,
ಇರುವುದೊಂದೇ ಅರಿವು ಆ ಹೊತ್ತು
ಅಮ್ಮನ ಮಡಿಲೊಳಗಡಗಿಹುದು ಜಗತ್ತು.

ತನ್ನೊಳಗಿನ ಕಸುವನ್ನೆಲ್ಲಾ ಹಿಂಡಿ
ಪ್ರೇಮ ಸುಧೆಯ ಎದೆಯೊಳನಿಟ್ಟು
ಹನಿ ಹನಿಯಾಗಿ ಹಣಿಸಿ, ತಣಿಸಿ
ತಬ್ಬಿ ಸಿಹಿ ಮುತ್ತುಗಳನಿಟ್ಟು
ನೀನಿರುವೆ ಎನ್ನುಸಿರೊಳಗೆ ಕಂದಾ....
ನಿನ್ನಿಂದ ಈ ಬಾಳು ಪೂರ್ಣವೆಂದ,
ತಾಯ ಒಲುಮೆ ಪಡೆವಷ್ಟು ಹೊತ್ತು
ಬಲು ಸುಂದರ, ಸುಭದ್ರ ಈ ಜಗತ್ತು.

ಚಳಿಗೆ, ಮಳೆಗೆ ತನ್ನ ಮೈಯನೂಡ್ಡಿ,
ತಾ ಹಸಿದು, ಕುಡಿಗೆ ತುತ್ತನಿತ್ತು
ಅತ್ತಾಗ ಲಾಲಿಹಾಡು ಹಾಡಿ,
ಚಂದಿರನ ಕಥೆಯ ಹೇಳಿ ರಮಿಸಿ,
ಸವಿಗನಸ ಚಿತ್ತಾರವ ಬರೆದು,
ಅಂತಃಶಕ್ತಿಯನು ತುಂಬಿ ಕಾಯ್ವ,
ಜನನಿ ಬಳಿಯಲಿರುವಷ್ಟು ಹೊತ್ತು
ಅದೆಷ್ಟು ಸುಂದರ, ಸುಭದ್ರ ಈ ಜಗತ್ತು !!!

**nostalgia ಬ್ಲಾಗ್‌ನಲ್ಲಿದ್ದ Mother ಎನ್ನುವ ಫೋಟೋವನ್ನು ನೋಡಿದಾಗ ಮೂಡಿದ ಕವನ.**




ಶನಿವಾರ, ಅಕ್ಟೋಬರ್ 4, 2008

ಕಥೆ

ಈ ಕಥೆಯನ್ನು ಇಲ್ಲಿಯೂ ನೋಡಬಹುದು. ಪ್ರಕಟಿಸಿದ ದಟ್ಸ್‌ಕನ್ನಡಕ್ಕೆ ಧನ್ಯವಾದಗಳು.
ಇರುವುದೆಲ್ಲವ ಬಿಟ್ಟು..
ಒಂದರ ಬೆನ್ನಹಿಂದೆ ಇನ್ನೊಂದು....ಶಿಸ್ತಿನ ಸಿಪಾಯಿಯಂತೆ ಅತ್ತಿತ್ತ ನೋಡದೆ, ಯಾವುದೇ ಸದ್ದಿಗೂ ವಿಚಲಿತವಾಗದೆ ಮರದ ಆ ತುದಿಯಿಂದ ಈ ತುದಿಗೆ, ಈ ತುದಿಯಿಂದಾತುದಿಗೆ ಸಾಲುಗಟ್ಟಿ ಹೋಗುತ್ತಿದ್ದ ಇರುವೆಗಳನ್ನೇ ತದೇಕ ಚಿತ್ತದಿಂದ ನೋಡುತ್ತಿದ್ದಂತೆ ಪೂರ್ಣಳ ತಲೆಯೊಳಗೊಂದು ಯೋಚನೆ ಬಂತು. ತಕ್ಷಣ ಇರುವೆಯ ಒಂದು ಸಾಲಿನ ನಡುವೆ ತನ್ನ ತೋರುಬೆರಳನ್ನಿಟ್ಟು ಅವುಗಳ ಪಯಣಕ್ಕೆ ತಡೆಹಾಕಿ ಕುತೂಹಲದಿಂದ ನೋಡತೊಡಗಿದಳು. ತಮ್ಮ ಕೆಲಸಕಾರ್ಯದಲ್ಲಿ ಇದೆಂತಹ ಅಡ್ಡಿ ಬಂತಪ್ಪ ಎಂದು ತುಸು ತಡಬಡಸಿ ಚೆಲ್ಲಾಪಿಲ್ಲಿಯಾದ ಇರುವೆಗಳು ಕ್ಷಣದಲ್ಲೇ ಸಾವರಿಸಿಕೊಂಡು, ಹೆದರದೆ ಮತ್ತೆ ಅದೇ ರೀತಿ ಸಾಲುಗಟ್ಟಿ, ಒಗ್ಗಟ್ಟಿನಲ್ಲಿ ಶಿಸ್ತಿನಿಂದ ಆಕೆಯ ಬೆರಳನ್ನೇರಿ ದಾಟಿ ಹೋಗತೊಡಗಿದವು.
‘ನಮ್ಮ ಮನಸ್ಸೂ ಈ ಇರುವೆಗಳಂತಾಗಿದ್ದರೆ ಎಷ್ಟು ಚೆನ್ನಾಗಿತ್ತು!! ಬಂದ ಕಷ್ಟಗಳನ್ನೆಲ್ಲಾ ಎಡರು-ತೊಡರುಗಳನ್ನೆಲ್ಲಾ ಹೀಗೇ ಇಷ್ಟೇ ಕ್ಷಿಪ್ರವಾಗಿ ದಾಟಿ, ನಿರಾಳವಾಗಿ ಮುಂದುವರಿಯುವಂತಾಗಿದ್ದರೆ... ಇಷ್ಟು ಸಣ್ಣ ಜೀವಿಯಲ್ಲಿರುವ ಧೃಢತೆ ನಮ್ಮಲ್ಲೇಕೆ ಕಾಣದೋ..?’ "ಪೂರ್ಣತ್ತೆ.. ನಾ ಒಂದು ಒಗ್ಟು ಕೇಳ್ತಿ ನೀ ಹೇಳು ನೋಡನಾ.. ಹೇಳ್ದ್ರೆ ನೀ ಗೆದ್ದೆ.. ಇಲ್ದೆ ಹೋದ್ರೆ ನೀ ಸೋತೆ ಅಕಾ?" ಅಲ್ಲೇ ಪೇರಳೆ ಹಣ್ಣಿನ ಮರವನ್ನೇರಿ ಕಾಯಿ ಕೀಳುತ್ತಿದ್ದ ಸುಜಾತಳ ಮಾತುಗಳು ಇರುವೆಯ ಸಾಲನ್ನೇನೂ ತುಂಡರಿಸದಿದ್ದರೂ ಪೂರ್ಣಳ ವಿಚಾರ ಸರಣಿಗೆ ತಡೆ ಹಾಕಿದವು."ಪುಟ್ಟಿ ಮೊದ್ಲು ನೀ ಮರದಿಂದ ಕೆಳ್ಗೆ ಇಳಿ.. ಅಣ್ಣಯ್ಯ ಏನಾರೂ ನೋಡಿರೆ ನಂಗೆ ಬೈತ. ನೀ ಕೆಳ್ಗೆ ಬಂದು ಒಗ್ಟ ಹೇಳು.. ನೋಡನ ಯಾರು ಗೆಲ್ತ ಹೇಳಿ" ಅತ್ತೆಯ ಮಾತಿನಿಂದ ಉತ್ತೇಜಿತಳಾದ ಪೋರಿ ಛಂಗನೆ ಒಂದೇ ನೆಗೆತದಲ್ಲಿ ಹಾರಿ ಅವಳ ಬಳಿ ಬಂದಳು."ಅಯ್ಯೋ ಪೂರ್ಣತ್ತೆ ಅಪ್ಪಯ್ಯ ಪೇಟಿಗೆ ಹೋಜ್ನಲೆ..ಅದೇ ನಿನ್ನ ಗೆಳತಿ ಧೃತಿಯಕ್ಕನ ಕರ್ಕ ಬಪ್ಪಲೆ.. ಅದ್ಕೇಯಾ ನಾ ಹತ್ತಿದ್ದು ಗೊತ್ತಾತಾ? ಸರಿ ಬಿಡು ಈಗ ಒಗ್ಟ ಕೇಳು..
ಮರದೊಳಗೆ ಮರ ಹುಟ್ಟಿ
ಮರ ಚಕ್ರ ಕಾಯಾಗಿ
ತಿನ್ನಲಾಗದ ಹಣ್ಣು ಬಲು ರುಚಿ- ಇದ್ರ ಬಿಡ್ಸು ನೋಡನಾ." ಎಂದು ಉತ್ತರಕ್ಕಾಗಿ ಪೂರ್ಣಳನ್ನೇ ನೋಡತೊಡಗಿದಳು ಸುಜಾತ. ಊಹೂಂ..ಎಷ್ಟೇ ತೆಲೆ ಓಡಿಸಿದರೂ ಪೂರ್ಣಳಿಗೆ ಹೊಳೆಯಲಿಲ್ಲ.. ಹೆಚ್ಚು ಯೋಚಿಸಲು ಮನಸ್ಸು ನಿರುಮ್ಮಳವೂ ಆಗಿರಲಿಲ್ಲ. ಹೆಚ್ಚು ಪ್ರಯತ್ನಿಸದೇ ಸೋಲೊಪ್ಪಿಕೊಂಡು ಅವಳಲ್ಲೇ ಉತ್ತರ ಕೇಳಿದಳು. ಆದರೆ ಬಡಪಟ್ಟಿಗೆ ಉತ್ತರ ಹೇಳಲೊಪ್ಪದ ಸುಜಾತ "ಅತ್ತೆ ಸೋತೆ ಕುಂಯ್ಯ ಹೇಳು.. ಹೇಳ್ತಿ" ಎನ್ನಲು ಮುಕ್ತವಾಗಿ ನಕ್ಕು ಬಿಟ್ಟಳು ಪೂರ್ಣ. "ಆತು ಮಹಾತಾಯಿ ನಾ ಸೋತೆ ಕುಂಯ್ಯಿ.. ಸಮಾಧಾನಾನ ಈಗ? ಸರಿ ಉತ್ತರ ಹೇಳು" ಎನ್ನಲು ಸುಜಾತ ತನ್ನ ಗೆಲುವಿನ ಪರಮಾನಂದದಲಿ ತಪ್ಪಾಳೆ ತಟ್ಟಿ ಕುಣಿಯುತ್ತಾ" ಅಯ್ಯೋ ಪದ್ದತ್ತೆ ಅಷ್ಟೂ ಗೊತ್ತಾಜಿಲ್ಯ ನಿಂಗೆ.. ಈ ಒಗ್ಟಿನರ್ಥ ‘ಮಗು’...ಹ್ಹೇ ಹ್ಹೇ..ಕೀಹಲಾಲೋ.. ನೀ ಸೋತೆ.. ಹೇ ಪಾರು ಪೂರ್ಣತ್ತೆ ಸೋತೋತು. ಪೂರ್ಣತ್ತೆ ಸೋತೋತು" ಎಂದು ಕೂಗುತ್ತಾ ಪಕ್ಕದ ಭಟ್ಟರ ಮನೆಯ ಪಾರ್ವತಿಯ ಜೊತೆ ಆಡಲು ಓಡಿದಳು. ದಣಪೆ ಹಾರಿ ಜಿಗಿಯುತ್ತಾ ಓಡಿತ್ತಿದ್ದ ಅವಳನ್ನೇ ಸ್ತಬ್ಧಳಾಗಿ ನೋಡಿದಳು ಪೂರ್ಣ. ಎದೆಯೊಳಗೆಲ್ಲೋ ಚೂರಿಯಿಂದ ತಿವಿದಂತಹ ಅನುಭವ...ಕಿವಿಯೊಳಗೆಲ್ಲಾ "ಪೂರ್ಣತ್ತೆ ಸೋತೋತು.. ಪೂರ್ಣತ್ತೆ ಸೋತೋತು" ಎಂಬ ಕೂಗಿನದೇ ಅನುರಣನ.
- 2 -
ದಣಪೆಯ ಮುಂದೆ ಬಂದು ನಿಂತ ಕಾರಿನಿಂದಿಳಿದ ಆತ್ಮೀಯ ಗೆಳತಿ ಧೃತಿಯನ್ನು ಕಂಡು ಪೂರ್ಣಳ ಮುಖ ಪೂರ್ಣ ಚಂದಿರನಂತಾಯಿತು. ಅರೆಕ್ಷಣ ಇಬ್ಬರೂ ಒಬ್ಬರನ್ನೊಬ್ಬರನ್ನು ನೋಡುತ್ತಾ ನಿಂತು ಬಿಟ್ಟರು. ಸುಮಾರು ೪ ವರ್ಷಗಳೇ ಕಳೆದುಹೋದವು ಒಬ್ಬರನ್ನೊಬ್ಬರು ನೋಡದೆ.. ಆಗಾಗ ಈ-ಮೈಲ್, ಫೋನ್ ಗಳ ಮೂಲಕ ಮಾತ್ರ ಕುಶಲೋಪರಿ ನಡೆಯುತ್ತಿತ್ತಷ್ಟೇ!
ಧೃತಿ ಹಾಗೂ ಪೂರ್ಣ ಮೈಕ್ರೋ ಬಯಾಲಜಿ ಮಾಡಿದ್ದು ಒಟ್ಟಿಗೇಯೇ. ಮೊದಲ ವರ್ಷದಲ್ಲೇ ಅಂಕುರಿಸಿದ ಇವರ ಸ್ನೇಹ ಓದು ಮುಗಿಯುವುದರೊಳಗೆ ತುಂಬಾ ನಿಕಟವಾಗಿಸಿತ್ತು. ಸ್ವಭಾವತಃ ಮೃದು, ಭಾವಜೀವಿ, ಸೂಕ್ಷ್ಮ ಸ್ವಭಾವದವಳಾಗಿದ್ದ ಪೂರ್ಣ ಅವಳಿಗೆ ವಿರುದ್ಧ ಸ್ವಭಾವದ, ತೀರಾ ವಾಸ್ತವವಾದಿಯಾಗಿದ್ದ ಧೃತಿಯೆಡೆಗೆ ಆಕರ್ಷಿತಳಾಗಿದ್ದು ಆಶ್ಚರ್ಯವೇ. ಪೊಸಿಟಿವ್ ಆಂಡ್ ನೆಗೆಟಿವ್ ಅಟ್ರೇಕ್ಟ್ಸ್ ಅನ್ನುವುದು ಇದಕ್ಕೇನೋ. ಕೋರ್ಸ್ ಮುಗಿದ ನಂತರ ಒಂದು ವರ್ಷ ಇಬ್ಬರೂ ಒಂದೇ ಫರ್ಮ್‌ನಲ್ಲಿ ಕೆಲಸವನ್ನೂ ಮಾಡಿದ್ದರು. ತದನಂತರ ಇನ್ನೂ ಹೆಚ್ಚಿನ ಕಲಿಕೆಗೋಸ್ಕರ ಧೃತಿ ಮುಂಬಯಿಗೆ ಹೋದರೆ ಪೂರ್ಣ ತನ್ನ ಸಹೋದ್ಯೋಗಿ ಸಂದೀಪನನ್ನು ಮೆಚ್ಚಿ ಮದವೆಯಾಗಿ ಬೆಂಗಳೂರಿನಲ್ಲೇ ನೆಲೆಸಿದಳು. ಸುಮಾರು ೪ ವರ್ಷಗಳ ಹಿಂದೆ ಪೂರ್ಣಳ ಮದುವೆಯಲ್ಲಿ ಆಕೆಯನ್ನು ನೋಡಿದ್ದ ಧೃತಿ ಈಗಲೇ ಮತ್ತೆ ಅವಳನ್ನು ಕಾಣುತ್ತಿರುವುದು. ಅದೂ ಪೂರ್ಣಳೇ ಆಕೆಯನ್ನು ಒತ್ತಾಯಮಾಡಿ ಕರೆಸಿಕೊಂಡಿದ್ದರಿಂದ!
"ಪ್ಲೀಸ್ ಧೃತಿ ನೀ ಬರ್ದೆ ಹೋದ್ರೆ ನಾ ನನ್ನನ್ನೇ ಕಳ್ಕೊಂಡು ಬಿಡ್ತೀನಿ ಕಣೆ. ಇನ್ಯಾವತ್ತೂ ನಿನ್ನಲ್ಲಿ ಏನನ್ನೂ ಕೇಳೊಲ್ಲ... ಇದೊಂದ್ಸಲ ನಂಗೋಸ್ಕರ ಬಾ ಪ್ಲೀಸ್. ನಿನ್ನ ಬರುವಿಕೆನೇ ಪ್ರತಿಕ್ಷಣ ಕಾಯ್ತಾ ಇರ್ತೀತಿ. ಈಗ್ಲೇ ನನ್ನ ಏನೂ ಕೇಳ್ಬೇಡ. ಫೋನ್‌ನಲ್ಲಿ ಎಲ್ಲಾ ಹೇಳೊಕಾಗೊಲ್ಲ.. ಹೇಳೋ ಸ್ಥಿತಿಲೂ ನಾನಿಲ್ಲ. ನೀ ಆದಷ್ಟು ಬೇಗ ಬಾ ಅಷ್ಟೇ. ಬೇಡ ಬೆಂಗಳೂರಿಗೆ ಬೇಡವೇ ಬೇಡ. ಶಿರಸಿಗೇ ಬಾ. ನಾ ನಾಳೆನೇ ಭೈರುಂಬೆಗೆ ಹೊರ್ಟಿದ್ದೀನಿ. ನೀನೂ ಸೀದಾ ಅಲ್ಲೇ ಬಾ..ಮತ್ತೆ ದಯಮಾಡಿ ಸಂದೀಪ್‌ಗೆ ಫೋನ್‌ ಮಾಡಿ ಏನನ್ನೂ ಕೇಳ್ಬೇಡ. ಬರ್ತೀಯಾ ತಾನೆ??" ಎಂದು ತುಂಬಾ ಗೋಗರೆದು ಫೋನ್ ಇಟ್ಟುಬಿಟ್ಟಿದ್ದಳು ಪೂರ್ಣ. ಅವಳ ಮಾತೊಳಗಿದ್ದ ಆತಂಕ, ನೋವು, ಅಸಹಾಯಕತೆಯ ಕಂಡು ತುಂಬಾ ಆಶ್ಚರ್ಯ, ಆತಂಕಗಳಾಗಿದ್ದು ಸುಳ್ಳಲ್ಲ. ಒಂದು ಕ್ಷಣ ಸಂದೀಪನನ್ನೇ ಕೇಳೋಣ ಎಂದೂ ಯೋಚಿಸಿದ್ದಳು. ಆದರೆ ಆಕೆಯ ಎಚ್ಚರಿಗೆ ಅವಳನ್ನು ತಡೆಯಿತು. ಹೆಚ್ಚು ಯೋಚಿಸದೇ ಶಿರಸಿಗೆ ಟಿಕೆಟ್ ಬುಕ್ ಮಾಡಿದ್ದಳು.
"ಎಂತ ಕೂಸೆ ಇದು?.. ಆವಾಗಿಂದ ಅದ್ರನ್ನ ಇಲ್ಲೇ ನಿಲ್ಸಕಂಡು ಸುಮ್ನೆ ನೋಡ್ತಾ ಇದ್ದೆ.. ಒಳ್ಗಾರೂ ಕರ್ಕ ಹೋಗು ಅಮೇಲೆ ನೋಡ್ಕ್ಯತ್ತಾನೇ ಇರ್ಲಕ್ಕಿ ಒಬ್ರನ್ನೊಬ್ರು" ಎಂದು ಛೇಡಿಸಿದ ದಿವಾಕರಣ್ಣನ ಮಾತಿಗೆ ನಾಚಿದ ಪೂರ್ಣ ಧೃತಿಯನ್ನಪ್ಪಿ ಅವಳಿಗಾತುಕೊಂಡೇ ಒಳನಡೆದಳು.
"ಏನೇ ಧೃತಿ, ಮುಂಬಯಿ ಗಾಳಿ ತುಂಬಾ ಚೆನ್ನಾಗಿ ತಾಗಿದ ಹಾಂಗಿದೆ. ಒಳ್ಳೆ ಮೈಕೈ ತುಂಬಿಕೊಂಡಿದೀಯ ನೋಡು.. ನಾವೆಲ್ಲಾ ಮರ್ತೇ ಹೋದೆವು ನಿಂಗೆ.." ಶಾರದತ್ತಿಗೆಯ ತಮಾಷೆಗೆ ನಕ್ಕು ಬಿಟ್ಟಳು ಧೃತಿ. "ಅತ್ಗೆ.. ಅದ್ಕೇ ನೋಡಿ ಇನ್ನೂ ಸ್ವಲ್ಪ ದಪ್ಪ ಅಗೋಣಾ ಅಂತ ನೆನಪು ಮಾಡಿಕೊಂಡು ಬಂದೆ.. ಎಲ್ಲಿ ನನ್ನ ಇಷ್ಟದ ತೆಳ್ಳೇವು ಕಾಯಿ ಚಟ್ನಿ?" ಎಂದು ಒಲೆಯ ಮುಂದೇಯೇ ಕೂರಲು ಪೂರ್ಣಳೂ ಜೊತೆ ಸೇರಿದಳು. ನಗು, ಹರಟೆ, ಕುಶಲೋಪರಿಯಲ್ಲಿ ತಿಂಡಿ ಮುಗಿಸಿದ್ದಾಯಿತು. ತಿನ್ನುತ್ತ, ಮಾತಾಡುತ್ತಲೇ ಧೃತಿ ಗೆಳತಿಯನ್ನೇ ಸೂಕ್ಷ್ಮವಾಗಿ ಗಮನಿಸುತ್ತಿದ್ದಳು. ಎಲ್ಲೂ ಎನೂ ಎದ್ದು ಕಾಣುವ ಸಮಸ್ಯೆ ಕಾಣುತ್ತಿಲ್ಲ! ಆದರೆ ಎಂದಿನ ಕಳೆಯಾಗಲೀ, ನಿರಾಳತೆಯಾಗಲೀ ಪೂರ್ಣಳ ಮುಖದಲ್ಲಿ ಕಾಣಲು ಸಿಗಲಿಲ್ಲ. ಕಣ್ಣೊಳಗೇನೋ ನೋವು.
ಜಗುಲಿಯಲ್ಲಿ ಫೋನ್ ಸದ್ದಾಗಲು ಧೃತಿಯನ್ನಾತು ಕುಳಿತಿದ್ದ ಪೂರ್ಣ ನೇರವಾದಳು. ಅವಳ ಮುಖದಲ್ಲುಂಟಾದ ಹಠಾತ್ ಬದಲಾವಣೆ ಕಂಡು ಧೃತಿಗೆ ಆಶ್ಚರ್ಯವಾಯಿತು. ಶಾರದತ್ತಿಗೆಯಲ್ಲೂ ಎನೋ ಕಳವಳ...ಕೆಲ ನಿಮಿಷಗಳಲ್ಲೇ ಒಳ ಬಂದ ದಿವಾಕರಣ್ಣನ ಮುಖವೂ ಇಳಿದಂತೆ ಕಂಡಿತು ಧೃತಿಗೆ. "ಪೂರ್ಣ ಸಂದೀಪ್ ಫೋನ್ ಮಾಡಿದ್ದ. ಲೈನ್‌ನಲ್ಲೇ ಇದ್ದ.. ಮಾತಾಡ್ತ್ಯ?" ಅಣ್ಣನ ಮಾತಿಗೆ ತಲೆ ತಗ್ಗಿಸಿದ ಪೂರ್ಣ "ನಾ ಕಡಿಗೆ ಮಾಡ್ತಿ ಹೇಳು" ಎಂದಷ್ಟೇ ಉತ್ತರಿಸಿ ಬಟ್ಟಲು, ಲೋಟ ತೊಳೆಯುವ ನೆಪಮಾಡಿ ಬಚ್ಚಲಿಗೆ ನಡೆದಳು. ಅಷ್ಟೊತ್ತೂ ನಗುವಿನಿಂದ ನಿರಾಳತೆಯಿಂದ ಕೂಡಿದ್ದ ವಾತಾವರಣದಲ್ಲೀಗ ಬರಿಯ ಮೌನ ತುಂಬಿತ್ತು.
ಪೂರ್ಣಳ ಕೆಂಪಡರಿದ್ದ ಕಣ್ಣುಗಳು, ಕಳಾಹೀನ ಮುಖ ನಿಜ ಕತೆ ಸಾರುತ್ತಿದ್ದರೂ "ಒಂದು ಪ್ಲೇಟು, ಲೋಟ ತೊಳೆಯಲು ನಿಂಗೆ ಅರ್ಧಗಂಟೆ ಬೇಕೇನೇ ಹುಡ್ಗಿ? ಅದ್ಯಾವಾಗಿಂದ ಇಷ್ಟು ಸ್ಲೋ ಆದೆ ನೀನು" ಎಂದು ತುಸು ನಗಿಸಲೆತ್ನಿಸಿದಳು ಧೃತಿ. "ನೀ ಬೇಗ ಫ್ರೆಶ್ ಆಗಿ ರೆಡಿ ಆಗು ಧೃತಿ.. ನಾವು ತೋಟದ ತೋಡಿನ ಹತ್ರ ಸ್ವಲ್ಪ ಹೊತ್ತು ಹೋಗಿಬರೋಣ" ಎಂದು ಮೌನವಾಗಿ ಒಳಕೋಣೆಗೆ ಹೋದ ಪೂರ್ಣಳನ್ನು ಕಂಡು ಅವಳ ಕುತೂಹಲ ಮತ್ತೂ ಹೆಚ್ಚಿತು."ಅತ್ಗೆ ಊಟಕ್ಕೆ ಯಂಗಳ ಕಾಯಾಡಿ ಹೊತ್ತಾಗ್ಲಕ್ಕು. ಅಣ್ಣಂಗೂ ಹೇಳ್ಬುಡು..." ಎಂದು ಆಕೆಯ ಪ್ರತ್ಯುತ್ತರಕ್ಕೂ ಕಾಯದೇ ಒಂದು ರೀತಿ ಧೃತಿಯನ್ನು ದಬ್ಬಿಕೊಂಡೇ ಮೆಟ್ಟಿಲು ಇಳಿಯುತ್ತಿದ್ದ ನಾದಿನಿಯನ್ನೇ ದಿಟ್ಟಿಸಿದಳು ಶಾರದೆ. ಆಕೆಯ ಕೈಯೊಳಗಿದ್ದ ಗುಲಾಬಿ ಫೈಲ್ ನೋಡಿ ಎಲ್ಲವೂ ಅರ್ಥವಾಗಿ ನಿಟ್ಟುಸಿರು ಹೊರಬಂತು. ಹಿಂತಿರುಗಿದರೆ ಪತಿಯ ಕಣ್ಗಳೂ ಅವರನ್ನೇ ದಿಟ್ಟಿಸುತ್ತಿದ್ದವು. ಅದರೊಳಗೆ ತುಂಬಿದ ನೀರು ಕ್ರಮೇಣ ಶಾರದೆಯ ಕಣ್ಗಳನ್ನೂ ತುಂಬ ತೊಡಗಿದವು.
-3-
ಪೂರ್ಣಳ ತುಂಬಾ ಒತ್ತಾಯದ ಮೇರೆಗೆ ಮೈಕ್ರೋ ಬಯಾಲಜಿಯ ಕೊನೆಯ ವರ್ಷದ ರಜೆಯಲ್ಲಿ ಇಲ್ಲಿಗೆ ಬಂದಿದ್ದಳು ಧೃತಿ. ಅಡಿಕೆ ತೋಟ, ಎಲೆ ಬಳ್ಳಿ, ಏಲಕ್ಕಿ ಗಿಡಗಳ ಪರಿಮಳ, ಕರಿಮೆಣಸಿನ ಬಳ್ಳಿ, ತೋಟದ ತುದಿಯಲ್ಲಿದ್ದ ತೋಡು, ಮಾಳ, ತೋಡಿನಾಚೆಯ ಭಟ್ಟರ ಮನೆಯ ತೊಡೆದೇವ... ಅವರ ಟ್ರಾನ್ಸಿಸ್ಟರ್ ಹುಚ್ಚಿನ ಪ್ರಸಂಗ ಎಲ್ಲವೂ ಒಂದು ಸಿಹಿ ಕನಸಿನಂತೆ, ಸದಾ ನೆನಪಿಡಲು ಬಯಸುವ ಒಂದು ಅಪೂರ್ವ ಘಳಿಗೆಯಂತೆ ಅವಳ ಸ್ಮೃತಿಪಟಲದಲ್ಲಿ ಅಚ್ಚೊತ್ತಿದ್ದವು. ಎಂತಹ ಸುದಿನಗಳಾಗಿದ್ದವು! ಹಗಲು ಬೇಣ, ಗುಡ್ಡ ತೋಟಗಳನ್ನು ಸುತ್ತುವುದು.. ರಾತ್ರಿ ಅಟ್ಟದಮೇಲೆ ಮುಚ್ಚಿ ಮಲಗಿ ಪಿಸು, ಪಿಸು ಮಾತುಗಳನ್ನಾಡುತ್ತಾ ಯಾವುದೋ ಜಾವದಲ್ಲಿ ನಿದ್ರೆಗೆ ಜಾರುವುದು. ನಾಳಿನ ಹಂಗೇ ನಮಗಿಲ್ಲ ಎನ್ನುವಂತೆ ಕುಣಿದಾಡಿದ್ದರು. ತಿಂಗಳ ರಜೆ ದಿನದಲ್ಲೇ ಕರಗಿದಂತಹ ಅನುಭವವಾಗಿತ್ತು. ಹಿಂದಿನ ಮಧುರ ನೆನಪುಗಳನ್ನೆಲ್ಲಾ ನೆನೆದು ತುಸು ಗೆಲುವೆನಿಸಿ ಪೂರ್ಣಳ ಕಡೆ ತಿರುಗಿ ನೋಡಿದರೆ.. ಅವಳು ಮಾತ್ರ ಅವಳದೇ ಗುಂಗಿನಲ್ಲಿದ್ದಂತೆ ಕಂಡಳು. ನೋಟ ಕೆಳಗೆ ನೆಟ್ಟಿದ್ದರೂ ಮನಸ್ಸು ಏನೋ ಗಂಭೀರ ಯೋಚನೆಯಲ್ಲಿದ್ದಂತಿತ್ತು. ಹೊರಡುವಾಗ ಎದೆಗವಚಿಕೊಂಡಿದ್ದ ಗುಲಾಬಿ ಫೈಲ್ ಕಂಡು ತುಂಬಾ ಕುತೂಹಲವಾಗಿದ್ದರೂ ಏನನ್ನೂ ಕೇಳದೇ ಅವಳ ಜೊತೆ ಬಂದಿದ್ದಳು.
ದಣಪೆ ದಾಟಿ ತೋಟವನ್ನಿಳಿದು ಹತ್ತು ನಿಮಿಷ ನಡೆದರೆ ಆ ತುದಿಯಲ್ಲಿಯೇ ಕಾಣುವುದು ಹಳ್ಳ. ದಾರಿಯುದ್ದಕ್ಕೂ ಅವರಿಬ್ಬರನ್ನು ಮೌನ ಮಾತಾಡಿಸುತ್ತಾ ಬಂದಿತು. ಇವಳ ಜೊತೆ ಹಳೆಯ ಮಧುರ ನೆನಪುಗಳಿದ್ದರೆ, ಅವಳ ಜೊತೆ ಮುಂದಿನ ದಿನಗಳ ನೆನೆದರೇ ಉಂಟಾಗುವ ಅಧೀರತೆ.ಹಳ್ಳದ ಪಕ್ಕದಲ್ಲೇ ಇದ್ದ ಕಲ್ಲು ಹಾಸಿನ ಮೇಲೆ ಕುಳಿತರು. ಮೌನ ಮತ್ತೂ ಅಸಹನೀಯ ವೆನಿಸಿತು ಧೃತಿಗೆ. ಆಗ ತೋಡಿನಾಚೆಯ ಭಟ್ಟರ ಮೆನೆಯಿಂದ ತೇಲಿ ಬಂದ ಹಾಡಿನ ತುಣುಕನ್ನು ಕೇಳಿ ಬರಲು ಚುರುಕಾದಳು
ಬಾನಿನಲ್ಲಿ ಒಂಟಿ ತಾರೆ
ಸೋನೆಸುರಿವ ಇರುಳ ಮೋರೆ
ಕತ್ತಲಲ್ಲಿ ಕುಳಿತೂ ಮುಳುಗಿ
ಬಿಕ್ಕುತಿಹಳು ಯಾರೋ ನೀರೆ..

"ಹೇ ಪೂರ್ಣ ಕೇಳಿದ್ಯಾ ಇದು ನಿನ್ನ ಫೇವರೇಟ್ ಎನ್.ಎಸ್. ಅವರ "ಎಲ್ಲಿ ಜಾರಿತೋ ಮನವು.." ಹಾಡಲ್ಲವೇನೇ? ಮರ್ತು ಬಿಟ್ಯಾ? ನಾವು ಮೊದ್ಲು ಕೆಲ್ಸ ಮಾಡ್ತಿದ್ದ ಫರ್ಮನ ಫಂಕ್ಷನ್‌ನಲ್ಲಿ ನೀ ಇದೇ ಹಾಡನ್ನಲ್ವಾ ಹಾಡಿದ್ದು? ಎಷ್ಟು ಚೆನ್ನಾಗಿ ಹಾಡಿದ್ದೆ. ಇದೇ ಹಾಡಿಗೆ ಅಲ್ವಾ ನಮ್ಮ ಸಂದೀಪ ನಿಂಗೆ ಕ್ಲೀನ್ ಬೌಲ್ಡ್ ಆಗಿದ್ದು... ಹಂ ನಿಜ್ವಾಗ್ಲೂ ತುಂಬಾ ಸುಂದರ ಹಾಡು.. ಈಗ್ಲೂ ಒಮ್ಮೆ ಹಾಡು ನೋಡೋಣ.. ಅವ್ನಿಲ್ದೇ ಇದ್ರೆ ಏನಂತೆ ನಾನಿದ್ದೀನಲ್ಲಾ..ಆವಾಗಿನಿಂದ ಮುಖ ಕೆಳಗೆ ಹಾಕಿಕೊಂಡು ಅದೇನು ನೋಡ್ತಿದ್ದೀಯೋ ಏನೋ.." ಎಂದು ಛೇಡಿಸುತ್ತಾ ಅವಳ ಮುಖವನ್ನೆತ್ತಿ ನೋಡಿದರೆ ಕಣ್ಣು ಕೋಡಿ ಹರಿಸಿತ್ತು. ಥಟ್ಟನೆ ಅವಳ ಮಡಿಲಲಿ ಹುದುಗಿ ಬಿಕ್ಕಿ ಬಿಕ್ಕಿ ಅಳಹತ್ತಿದಳು ಪೂರ್ಣ.
ಒಂದೇ ಸಮನೆ ಅಳುತ್ತಿದ್ದ ಅವಳನ್ನು ಹೇಗೆ ಸಂತೈಸಬೇಕೆಂದೇ ತಿಳಿಯದಾಯಿತು ಧೃತಿಗೆ. ವಿಷಯ ಬೇರೆ ಗೊತ್ತಿರಲಿಲ್ಲ. ಕೊನೆಗೆ ಅವಳು ಅತ್ತು ಸಮಾಧಾನಿಸಿಕೊಂಡು ಮಾತಾಡಲಿ ಎಂದು ಅವಳನ್ನು ಸುಮ್ಮನೆ ಅಳಲು ಬಿಟ್ಟುಬಿಟ್ಟಳು. ಕೈ ಪೂರ್ಣಳ ತಲೆ ನೇವರಿಸುತ್ತಿತ್ತು. ಬೆಳಗ್ಗಿನಿಂದ ಕಟ್ಟಿದ ಮೋಡ ಮಧ್ಯರಾತ್ರಿ ಸುರಿದು ಬರಿದಾಗುವಂತೆ ಮನದೊಳಗಿನ ಭಾರವನ್ನೆಲ್ಲಾ ಹೊರಹಾಕಿ ತುಸು ಸುಧಾರಿಸಿಕೊಂಡ ಪೂರ್ಣ ತೋಡಿನ ನೀರಿನಲ್ಲಿ ಮುಖ ತೊಳೆದುಕೊಂಡು ಕುಳಿತಳು. ಪಕ್ಕದಲ್ಲೇ ಇಟ್ಟಿದ್ದ ಫೈಲ್ ಅನ್ನು ಧೃತಿಗೆ ಕೊಡಲು, ಮರು ಪ್ರಶ್ನಿಸದೇ ಅದನ್ನೆತ್ತಿ ಕೊಂಡು ಓದತೊಡಗಿದಳು ಧೃತಿ. ಹೆಚ್ಚು ಸಮಯವೇನೂ ಬೇಕಾಗಲಿಲ್ಲ ಅವಳಿಗೆ ಪೂರ್ಣಳ ಸಮಸ್ಯೆ ಅರಿಯಲು. ಇಷ್ಟೊತ್ತೂ ಅವಳ ತೆಲೆಯೊಳಗಿದ್ದ ಕುತೂಹಲಕ್ಕೆ, ಪ್ರಶ್ನೆಗಳಿಗೆ ಉತ್ತರ ಸಿಕ್ಕಿದ್ದರೂ ಅದರ ಜಾಗದಲ್ಲೀಗ ಹೊಸ ಸಂಶಯ, ಪ್ರಶ್ನೆಗಳು ಆಕ್ರಮಿಸಿಕೊಂಡವು.
"ಏನೇ ಪೂರ್ಣ ಇದು.. ಈ ವಿಷಯಕ್ಕೇನಾ ನೀ ಇಷ್ಟೊಂದು ಅಪ್‌ಸೆಟ್ ಆಗಿದ್ದು?! ನಂಗೆ ಅರ್ಥ ಆಗೊತ್ತೆ.. ನೀನೀಗ ಯಾವ ಸ್ಥಿತಿಯಲ್ಲಿದ್ದೀಯಾ ಅಂತ. ಅದ್ರೆ ಸಮಸ್ಯೆ ಹಾಗೂ ಪರಿಹಾರ ಎರಡೂ ನಿನ್ನ ಕೈಲೇ ಇದ್ಯಲ್ಲೇ? ಯೂ ಹ್ಯಾವ್ ಪ್ರಾಬ್ಲೆಮ್ಸ್ ವಿದ್ ಸೊಲ್ಯೂಷನ್ಸ್ ಡಿಯರ್.. ನೀನೇ ಹೇಳು ನಿನ್ನ ಮನಸಿನೊಳ್ಗೆ ಏನಿದೆ ಅಂತ... ಮುಕ್ತವಾಗಿ ಎಲ್ಲವನ್ನೂ ಹೊರ ಹಾಕು ಒಮ್ಮೆ.. ಆಗ ಎಷ್ಟೋ ಸಮಸ್ಯೆಗಳು ಗೊತ್ತಿಲ್ಲದೇ ಇಲ್ಲವಾಗುತ್ತ್ವೆ.." ಎನ್ನುತ್ತಾ ಮೆಲ್ಲನೆ ಪೂರ್ಣಳ ಕೈ ಅದುಮಿದಳು.
"ಧೃತಿ ಸಮಸ್ಯೆ ಈ ಫೈಲ್‌ನೊಳಗಿದ್ದಷ್ಟೇ ಆಗಿದಿದ್ದರೆ ನಾನೂ ಅಷ್ಟೊಂದು ಅಪ್‌ಸೆಟ್ ಆಗ್ತಿರ್ಲಿಲ್ವೇನೋ!! ನಾನು ತಾಯಾಗೋದು ಕಷ್ಟ ಅನ್ನೋ ಕಟು ವಾಸ್ತವದ ಜೊತೆ ಇನ್ನೊಂದು ಕಟು ಸತ್ಯನ ಎದುರಿಸಬೇಕಾಗಿದೆ.. ಈ ಸಮಸ್ಯೆಯ ಹೆಸರು "ಸಂದೀಪ". ಧೃತಿ ನಿಂಗೇ ಗೊತ್ತಲ್ಲ ಮೊದ್ಲಿಂದ್ಲೂ ನಂಗೆ, ಸಂದೀಪಂಗೆ ಮಕ್ಳು ಅಂದ್ರೆ ಪ್ರಾಣ. ನಮ್ಮದೇ ಅಂಶ ಪಡ್ದು ನಮ್ಮ ಪ್ರೀತಿಗೆ ಪ್ರತೀಕವಾಗಿರೋ ಮಗುವನ್ನು ಪಡೀಬೇಕು ಅಂತ ನಾವಿಬ್ರೂ ತುಂಬಾ ಕನಸು ಕಟ್ಟಿದ್ವಿ. ನನ್ನ ಮಗು ಹಾಗೂ ಸಂದೀಪನ ಜೊತೆ ಇರುವಾಗ ಎಷ್ಟೇ ಕಷ್ಟ ಬಂದ್ರೂ ಯಾವ ನೋವು ಬಂದ್ರೂ ಎದುರಿಸ್ತೀನಿ ಅನ್ನೋ ಆಶಾವಾದ, ಭರವಸೆಲಿ ನಾನಿದ್ದೆ. ಆದ್ರೆ ಈ ವಿಶ್ವಾಸಕ್ಕೆ ದೊಡ್ಡ ಪೆಟ್ಟು ಬಿದ್ದಿದ್ದು ಸುಮಾರು ಆರು ತಿಂಗಳ ಹಿಂದೆ.
ಮದ್ವೆಯಾದ ಮೊದ್ಲೆರ್ಡು ವರ್ಷ ಕೆಲ್ಸ, ಪ್ರೊಜೆಕ್ಟ ಅಂತೆಲ್ಲಾ ಜವಾಬ್ದಾರೀಲಿ ಅನಿವಾರ್ಯವಾಗಿ ಮಗುವಿನ ಯೋಚನೆ ಕೈ ಬಿಡ್ಬೇಕಾಯ್ತು. ಆಮೇಲೆ ಒಂದ್ವರ್ಷ ಕಾದ್ರೂ ನಾನು ತಾಯಾಗುವ ಲಕ್ಷಣಾನೇ ಕಾಣ್ಲಿಲ್ಲ ಕಣೆ. ಪ್ರತಿ ತಿಂಗಳೂ ಹೊಸ ಆಸೆ, ಕುತೂಹಲ, ನಿರೀಕ್ಷೆ.. ಅದ್ರ ಬೆನ್ನಿಗೇ ನಿರಾಸೆ, ಆತಂಕ, ಭಯ. ಕೊನೆಗೆ ಪರಿಚಯದ ಗೈನೋಕಾಲಜಿಸ್ಟ್ ಹತ್ರ ಹೋದ್ವಿ. ಸುಮಾರು ಟೆಸ್ಟ್‌ಗಳಾದ್ವು. ಆಗ ತಿಳ್ದಿದ್ದು ಮಗು ಪಡೆಯೋ ಸಾಮರ್ಥ್ಯ ನನ್ನೊಳಗೇ ಇಲ್ಲ ಅಂತ. ಆ ಆಘಾತಾನ ಅರಗಿಸಿಕೊಳ್ಳೋಕೇ ನಂಗೆ ನಾಲ್ಕು ತಿಂಗ್ಳು ಬೇಕಾಯ್ತು... ಸಂದೀಪ ಅಂತೂ ಫುಲ್ ಡಲ್ ಆಗೋಗಿದ್ದ. ಆದ್ರೂ ಅವ್ನಲ್ಲಿ ಅದೇನೋ ಆಶಾವಾದ. ಸೈನ್ಸ್ ಇಷ್ಟೊಂದು ಡೆವಲಪ್ ಆಗಿದೆ. ನಾವು ವಿಚಾರಿಸೋಣ. ಧೈರ್ಯವಾಗಿರು ಅಂತೆಲ್ಲಾ ಹೇಳಿ ಸಮಾಧಾನಿಸೋನು. ಈಗ್ಗೆ ಆರು ತಿಂಗಳಿನ ಹಿಂದೆ ಮತ್ತೆ ನಾವು ಡಾಕ್ಟರ್ ಭೇಟಿ ಆದ್ವಿ. ಆಗ ಅವ್ರು ಹೇಳಿದ ಪರಿಹಾರ ನನ್ನ ಪೂರ್ತಿ ಮುಗ್ಸಿ ಬಿಟ್ಟಿತು. ನನ್ನ ತಾಯ್ತನದ ಕನಸನ್ನೊಂದೇ ಚೂರು ಮಾಡ್ಲಿಲ್ಲ..ಸಂದೀಪನ ಮೇಲೆ ನಾ ಇಟ್ಟಿದ್ದ ಪ್ರೀತಿ, ವಿಶ್ವಾಸ, ಭರವಸೆ ಎಲ್ಲವನ್ನೂ ಕೊಂದು ಬಿಟ್ಟಿತ್ತು ಧೃತಿ.. ನನ್ನ ಸಂದೀಪನ್ನೇ ನಾನು ಕಳ್ದು ಕೊಂಡು ಬಿಟ್ಟೆ. ಈಗ ನನ್ನ ಹತ್ರ ಏನೂ ಇಲ್ಲ. ಯಾರೂ ಇಲ್ಲ...ನಾನೇ ಕಳ್ದು ಹೋಗಿದ್ದೀನಿ.. " ಮತ್ತೆ ಕಣ್ಣೀರು ಧಾರಾಕಾರವಾಗಿ ಸುರಿಯತೊಡಗಿತು. ಹಾಗೇ ಅವಳನ್ನಪ್ಪಿ ಸಂತೈಸತೊಡಗಿದಳು ಧೃತಿ.
"ಏನೇ ಇದು ಪೂರ್ಣ.. ಪೂರ್ತಿ ವಿಷ್ಯನಾದ್ರೂ ಹೇಳು.. ಅಲ್ಲಾ ಎಲ್ಲಾ ವಿಷ್ಯಕ್ಕೂ ಈ ರೀತಿ ಅಳೋದೇ ಪರಿಹಾರನಾ.. ಇಷ್ಟೊಂದು ಸೆನ್ಸಿಟಿವಿಟಿ ಒಳ್ಳೆದಲ್ಲಾ.. ಸಮಾಧಾನ ಮಾಡ್ಕೋ.. ಡಾಕ್ಟ್ರು ಏನಂದ್ರು? ಏನಂತೆ ಪರಿಹಾರ? ಸಂದೀಪ ಏನಾದ್ರೂ ಬೇಜಾರು ಮಾಡಿದ್ನ ನಿನ್ನ?.. ನೀ ಹೀಗೇ ಒಗ್ಟಾಗಿ ಮಾತಾಡಿದ್ರೆ ನಂಗೇನು ಅರ್ಥಾ ಆಗ್ಬೇಕು ಹೇಳು? ಪ್ಲೀಸ್ ಬಿ ಬ್ರೇವ್." ಎಂದು ಸಮಾಧಾನಿಸಿದ ಧೃತಿಯ ಸಾಂತ್ವನದಲ್ಲಿ ತುಸು ಚೇತರಿಸಿಕೊಂಡಳು ಪೂರ್ಣ.
"ಧೃತಿ ಡಾಕ್ಟ್ರು ನಿಮ್ಮ ಸಮಸ್ಯೆಗೆ ಪರಿಹಾರ ಇದೆ ಅಂದಾಗ ನಾನು ಪಟ್ಟ ಸಂತೋಷ ಅಷ್ಟಿಷ್ಟಲ್ಲ. ಅದೇ ಅವ್ರು ಹೇಳಿದ ಟ್ರೀಟಮೆಂಟ್ ಕೇಳಿದ ಮೇಲೆ ಮಾತ್ರ ನಂಗೆ ಎಲ್ಲಾ ಶೂನ್ಯ ಅನ್ನಿಸಿ ಬಿಡ್ತು. ನನ್ನ ಯುಟಿರಸ್ ಚೆನ್ನಾಗೇ ಇದೆ. ನಾನು ಮಗುವನ್ನು ಹೊರಲು, ಹೆರಲು ಏನೂ ಪ್ರಾಬ್ಲೆಮ್ ಇಲ್ಲಾ. ಆದ್ರೆ ಭ್ರೂಣ ಹುಟ್ಟಲು ಬೇಕಾದ ಎಗ್ ಪ್ರೊಡಕ್ಷನ್ ನನ್ನಲ್ಲಿ ಆಗುತ್ತಿಲ್ಲ...ಹಾಗೆ ಆಗುವ ಸಂಭವವೂ ಇಲ್ಲ..ಬಿಕೋಸ್ ಮೈ ಬೋತ್ ಓವರೀಸ್ ಆರ್ ನೋಟ್ ವೆಲ್ ಡೆವಲಪ್ಡ್... ಯಾವ್ದೇ ಮೆಡಿಸಿನ್‌ನಿಂದಾನೂ ಎಗ್ ಪ್ರೊಡಕ್ಷನ್ ಮಾಡ್ಸೋಕೆ ಆಗೊಲ್ಲಾ ಅಂದ್ಬಿಟ್ರು. ಆದ್ರೆ "ಎಗ್ ಡೊನೇಷನ್" ಅಥವಾ "ಓವಮ್ ಡೊನೇಷನ್" ಥೆರಪಿ ಮಾಡಿ "ಐ.ವಿ.ಎಫ್" ಮೂಲಕ ಎಂಬ್ರಿಯೋನ ನನ್ನ ಯುಟಿರಸ್ ಒಳ್ಗೆ ಇನ್ಸರ್ಟ್ ಮಾಡೋದ್ರಿಂದ ನಾನು ತಾಯಾಗ್ಬಹುದು... ಅಂದ್ರೆ ಇಲ್ಲಿ ಸೀಮನ್ ಸಂದೀಪಂದಾಗಿದ್ರೆ ಎಗ್ ಮಾತ್ರ ಬೇರೆ ಹೆಣ್ಣಿಂದಾಗಿರೊತ್ತೆ. "ಇನ್ವಿಟ್ರೋ ಫರ್ಟಿಲೈಸೇಷನ್" ಮೂಲಕ ಜೈಗೋಟ್ ನನ್ನೊಳ್ಗೆ ಹಾಕ್ತಾರೆ.. ಆಮೇಲೆ ಎಲ್ಲಾ ನೋರ್ಮಲ್ ಭ್ರೂಣದ ರೀತೇನೆ ಮಗು ಬೆಳೆದು ನಾರ್ಮಲ್ ಡೆಲಿವೆರಿ ಆಗೊತ್ತೆ ಅಂದ್ರು. ಇದ್ನ ಕೇಳಿ ನಾನು ಪೂರ್ತಿ ಶಾಕ್ ಆಗ್ಬಿಟ್ಟೆ.. ಆದ್ರೆ ಸಂದೀಪನ ಮುಖ ಮಾತ್ರ ಖುಶಿಯಿಂದ ಅರಳಿಬಿಟ್ಟಿತ್ತು.
"ಪೂರ್ಣ ಎಷ್ಟೇ ಖರ್ಚಾದ್ರೂ ಸರಿ.. ನೀ ಹೆದರ್ಬೇಡ. ನಾನಿದ್ದೀನಿ...ಈಗಾಗ್ಲೇ ಎಲ್ಲಾ ವಿಚಾರ್ಸಿದ್ದೀನಿ... ಈ ಎಗ್ ಡೊನೇಷನ್ ಟ್ರೀಟ್ಮೆಂಟ್ ೭೦-೮೦% ಸಕ್ಸೆಸ್ ಆಗೊತ್ತೆ ಅಂತ ಹೇಳಿದ್ದಾರೆ ಡಾಕ್ಟರ್... ಅದೂ ಅಲ್ದೆ ಎಗ್ ಡೊನೇಟ್ ಮಾಡೋರ ಹೆಸ್ರು, ವಿಳಾಸ ಎಲ್ಲಾ ಗುಪ್ತವಾಗಿ ಇಡ್ತಾರೆಂತೆ.. ಸೋ ಡೋಂಟ್ ವರಿ.. ಮುಂದಿನ ತಿಂಗ್ಳೇ ನಾವು ಈ ಟ್ರೀಟ್ಮೆಂಟ್ ತೊಗೋಳೋಣ... ನಾ ನಾಳೇನೇ ಡಾಕ್ಟರ್ ಹತ್ರ ಮಾತಾಡಿ ಫಿಕ್ಸ್‌ಮಾಡಿ ಬರ್ತೀನಿ..." ಹೀಗೇ ಒಂದೇ ಸಮ್ನೆ ಬಡ ಬಡಿಸ್ತಾ ಎಗ್ಸೈಟ್ ಆಗ್ತಾ ಇದ್ದ ಸಂದೀಪನಲ್ಲಿ ನಾ ನನ್ನ ಸಂದೀಪನ ಹುಡ್ಕಿ ಸೋತೋದೇ ಕಣೆ. ಆಗ ನಂಗೆ ನಾನು ತಾಯಾಗಲಾರೆ ಎಂಬ ಸತ್ಯಕ್ಕಿಂತಲೂ ದೊಡ್ಡ ಆಘಾತವಾಗಿತ್ತು.. ‘ಪೂರ್ಣ ನಿಂಗೂ ಒಪ್ಗೇನಾ.. ನೀನೇನು ಹೇಳ್ತೀಯಾ?’ ಎಂದು ಒಮ್ಮೆಯೂ ಕೇಳುವ ಸೌಜನ್ಯವೂ ಇಲ್ಲವೇ ಎಂದೆನಿಸಿ ತುಂಬಾ ಸಂಕ್ಟ ಆಯ್ತು.
ನೀನೇ ಹೇಳು ಧೃತಿ ಒಂದ್ವೇಳೆ ಪ್ರಾಬ್ಲಮ್ ನನ್ನಲ್ಲೇನೂ ಇಲ್ದೇ ಹೋಗಿ, ಅವನಲ್ಲೇ ಇದ್ದಿದ್ರೆ..?! ಅವ್ನಲ್ಲಿ ಸೀಮನ್ ಕೌಂಟ್ ಇಲ್ಲಾ ಅಂತ ಹೇಳಿದಿದ್ರೆ, ಅವ್ನು "ಆರ್ಟಿಫಿಶಿಯಲ್ ಇನ್ಸೆಮಿನೇಷನ್"ಗೆ ಥಟ್ಟಂತ ಒಪ್ತಿದ್ನ? ಬೇರೊಬ್ಬನ ಸೀಮನ್ ನನ್ನೊಳ್ಗೆ ಇಂಜೆಕ್ಟ್ ಮಾಡೊಕೇ ನಿರಾಳವಾಗಿ ಒಪ್ಪಿಗೆ ಕೊಡ್ತಿದ್ನ? ದೇವರಾಣೆ ಹೇಳ್ತಿನಿ ಕಣೆ ಒಂದ್ವೇಳೆ ಅಂವ ಒಪ್ಪಿದಿದ್ರೂ ನಾ ಖಂಡಿತ ಒಪ್ತಿರ್ಲಿಲ್ಲ. ನನ್ನ ಪ್ರಕಾರ ಮಗು ಅಂದ್ರೆ ಇಬ್ಬರ ಪ್ರೇಮದ ಸಂಕೇತ. ಅದು ಇಬ್ರ ಜೀನ್ಸ್ ಅನ್ನೂ ಹೊತ್ತೇ ಹುಟ್ಬೇಕು. ಇಲ್ಲಾ ನಾವು ದತ್ತು ತಗೋ ಬಹುದು. ಇಲ್ಲಿ ಅವ್ನ ಜೀನ್ಸ್ ಎನೋ ಇರುತ್ತೆ ಆದ್ರೆ ನನ್ನ ಅಂಶನೇ ಇರೊಲ್ಲ. ಬೇರೊಂದು ಹೆಂಗಸಿನ ಎಗ್ ಜೊತೆ ಅವ್ನ ಅಂಶ ಹೊತ್ತಿರೋ ಭ್ರೂಣಾನ ನಾನು ಹೇಗೆ ಸರಾಗವಾಗಿ ನನ್ನೊಳ್ಗೆ ಇಟ್ಕೊಳ್ಲಿ? ಇಟ್ಸ್ ಜಸ್ಟ್ ಲೈಕ್ ಸರೋಗೇಟ್ ಮದರ್ ಟೈಪ್. ಇಲ್ಲಿ ನಾನು ನನ್ದೇ ಮಗುವಿಗೆ ಸರೋಗೇಟ್ ತಾಯಿ. ಅವ್ನ ಅಂಶ ಮಾತ್ರ ಇರೋ ಮಗುವಿಗೆ ನನ್ನ ಗರ್ಭಕೋಶ ಒಂಥರ ಬಾಡಿಗೆ ಕೊಟ್ಟಾಂಗೆ ಅಲ್ವಾ? ನಾನು ಈ ರೀತಿ ಟ್ರೀಟ್ಮೆಂಟ್ ವಿರೋಧಿ ಅಲ್ಲ. ಅಥವಾ ಈ ಟ್ರೀಟ್ಮೆಂಟ್ ಪಡೆಯೋರು, ಪಡಿದಿರೋರು ಎಲ್ಲಾ ಮೂರ್ಖರು ಅನ್ತಾ ಇಲ್ಲಾ. ಅದು ಅವರವರ ಭಾವಕ್ಕೆ, ಪರಿಸ್ಥಿತಿಗೆ, ಸಂತೋಷಕ್ಕೆ ಬಿಟ್ಟ ವಿಷ್ಯ. ಇಲ್ಲಿ ನಾ ಹೇಳ್ತಿರೋದು ನನ್ನ ವೈಯಕ್ತಿಕ ನಿಲುವು ಮಾತ್ರ. ಇದ್ರಲ್ಲಿ ನನ್ನ ಒಪ್ಗೆ, ಸಂತೋಷ ಮುಖ್ಯ ಅನ್ಸೊಲ್ವಾ? ಧೃತಿ ಯಾಕೋ ಏನೋ ಇದಕ್ಕೆ ನನ್ನ ದೇಹ ಮನಸ್ಸು ಎರ್ಡೂ ಒಪ್ತಾನೇ ಇಲ್ಲ. ಹಾಗಿರೋವಾಗ ಹೇಗೆ ನಾ ಆ ಮಗುನ ನನ್ನೊಳ್ಗೆ ಒಂಭತ್ತು ತಿಂಗ್ಳು ಇಟ್ಕೊಳ್ಳಲಿ? ಹೇಗೆ ಪ್ರೀತಿಸಲಿ? ಏನ್ ಮಾಡ್ಲಿ ನೀನೇ ಹೇಳು.." ಒಂದು ನಿಡಿದಾದ ಉಸಿರಿನೊಂದಿಗೆ ಅಲ್ಲೇ ಇದ್ದ ಅಡಿಕೆ ಮರಕ್ಕೊರೆಗಿ ಕಣ್ಮುಚ್ಚಿದಳು. ಮಾತಿನ ಭಾರಕ್ಕೋ ಇಲ್ಲ ಮನದೊಳಗಿನ ಭಾರಕ್ಕೋ ಆಯಾಸ ಮುಖದಲ್ಲಿ ಎದ್ದು ಕಾಣುತ್ತಿತ್ತು.
ಪೂರ್ಣಳ ಮಾತುಗಳನ್ನರಗಿಸಿಕೊಳ್ಳಲು ತುಸು ಹೊತ್ತೇ ಬೇಕಾಯಿತು ಧೃತಿಗೆ. ಕ್ರಮೇಣ ವಸ್ತುಸ್ಥಿತಿ, ಅವಳ ಮನಸ್ಥಿತಿಯ ಅರಿವಾಗತೊಡಗಿತು."ಪೂರ್ಣ ನೀನು ಈ ಎಲ್ಲಾ ನಿನ್ನ ಭಾವನೆಗಳನ್ನು ವಿವರವಾಗಿ, ಶಾಂತಳಾಗಿ ಬಿಡಿಸಿ ಸಂದೀಪನ ಜೊತೆ ಮಾತಾಡಿದ್ದೀಯಾ? ಅವನಿಗೂ ನಿನ್ನ ಈ ಅಭಿಪ್ರಾಯದ ಕುರಿತು ಯೋಚಿಸಲು, ಚಿಂತಿಸಲು ಸಮಯ ಕೊಟ್ಟಿದ್ದೀಯಾ? ನೀವಿಬ್ಬರೂ ಇದರ ಪರಿಣಾಮಗಳನ್ನು ಚರ್ಚಿಸಿದ್ದೀರಾ?" ಎಂದು ಮೆಲ್ಲನೆ ಕೇಳಲು, ಪಕ ಪಕನೆ ಹುಚ್ಚಿಯ ಹಾಗೆ ನಕ್ಕು ಬಿಟ್ಟಳು ಪೂರ್ಣ.
"ಅಯ್ಯೋ ಹುಚ್ಚಿ.. ಇದನ್ನೆಲ್ಲಾ ನಿನ್ನ ಹತ್ರ ಹೇಳೊ ಮೊದ್ಲು ಅವನ್ಹತ್ರ ಹೇಳಿಕೊಂಡಿರೊಲ್ಲಾ ಅಂತಾನಾ? ನನ್ನ ನಾ ಹೇಗೋ ಸಾವರಿಸಿಕೊಡು ಎಲ್ಲವನ್ನೂ ಸಾವಕಾಶವಾಗಿ ಹೇಳಿದೆ..ದತ್ತು ಬೇಕಾದ್ರೆ ತಗೋಳೋನಾ ಅಂತನೂ ಹೇಳ್ದೆ. ಕೆಲದಿನ ಸುಮ್ಮನಾದ. ಪೂರ್ತಿ ಮೌನಿಯಾಗಿ ನನ್ನ ಕಾಡಿದ. ಆದ್ರೂ ಸಮಯ ಸರಿದಂತೆ ಎಲ್ಲಾ ಸರಿ ಆಗಬಹುದೆಂದು ನನ್ನ ನಾನೇ ಸಮಾಧಾನಿಸಿಕೊಂಡೆ ಕೂಡಾ. ಆದ್ರೆ ಒಂದು ತಿಂಗ್ಳ ಹಿಂದೆ ಒಂದಿನ ನನ್ನ ಬಳಿ ಬಂದು ಹೇಳಿಯೇ ಬಿಟ್ಟ.. "ಪೂರ್ಣ ಐ ವಾಂಟ್ ಮೈ ಬೇಬಿ. ನಂಗೆ ನನ್ನ ಮಗೂನೇ ಬೇಕು. ದತ್ತು ಬೇಡ್ವೇ ಬೇಡ. ಹಾಗಂತ ನಿನ್ನ ಬಿಟ್ಟು ಬೇರೆ ಮದ್ವೆ ಆಗ್ಲಾರೆ. ನಾಳೆ ಜನ ನಿಂಗೆ ಮಕ್ಳು ಆಗೋದಿಲ್ಲ ಅಂತ ನಾ ಬೇರೆ ಆದೆ ಅಂತೆಲ್ಲ ಹೇಳಿಕೊಂಡು ನನ್ನೇ ಆಡ್ಕೊಳ್ತಾರೆ. ನೀ ಸ್ವಲ್ಪ ಸಮಯ ತಗೋ.. ಯೋಚ್ಸು. ಸುಮ್ನೆ ಕೆಲಸಕ್ಕೆ ಬಾರದ ಯೋಚ್ನೆ ತಲೆಗೆ ಹಾಕ್ಕೊಬೇಡ..ನಿನ್ನ ದೃಷ್ಟಿ ಸ್ವಲ್ಪ ವಿಶಾಲ ಮಾಡ್ಕೋ ಎಲ್ಲಾ ಸರಿ ಆಗೊತ್ತೆ.." ಅಂದ್ಬಿಟ್ಟ. ಆ ದಿನ ಮಾತ್ರ ನಾ ನನ್ನ ಬಗ್ಗೇ ತುಂಬಾ ಅಸಹ್ಯ ಪಟ್ಟೆ ಕಣೆ. ಇವನನ್ನೇ ನಾ ಮೆಚ್ಚಿ ಮದ್ವೆ ಆಗಿದ್ದು..?!! ನನ್ನ ತನು-ಮನವನ್ನು ಅರ್ಪಿಸಿ ಕೃತಾರ್ಥಳಾಗಿದ್ದು? ಅಂತ ತುಂಬಾ ಹಿಂಸೆ ಪಟ್ಟೆ. ಮರು ದಿನವೇ ಅಲ್ಲಿಂದ ಹೊರ್ಟು ಇಲ್ಲಿಗೆ ಬಂದ್ಬಿಟ್ಟೆ ಕಣೆ. ಹಾಗೇ ಬರೋ ಮುಂಚೆನೇ ನಿಂಗೆ ಫೋನ್ ಮಾಡಿದ್ದು. ಇದನ್ನು ಆದಷ್ಟು ಬೇಗ ನಿನ್ಜೊತೆ ಹಂಚಿಕೊಂಡ್ರೆ ಮಾತ್ರ ನಾ ಬದ್ಕಿ ಉಳೀಬಹುದೇನೋ ಅಂತ..ಆದ್ರೆ ಇಲ್ಲಿ ಬಂದ ಮೇಲೂ ಸುಖ ಇಲ್ಲ.. ಆಗಾಗ ಫೋನ್ ಮಾಡಿ "ಎನು ಯೋಚ್ನೆ ಮಾಡ್ದೆ.." ಎಂತ ಕೇಳ್ತಾನೆ ಇದ್ದಾನೆ... ಅದ್ಕೇ ಈಗ ಪೋನ್ ರಿಸೀವ್ ಮಾಡ್ತಾನೇ ಇಲ್ಲ.. ಸುಮ್ನೆ ಹಿಂಸೆ ನೋಡು.. ಏನೋ ಭಯ ಕೂಡ.."ಎಂದು ಮಾತುಗಳ ಭಾರದಿಂಡ ಬಾಯೊಣಗಿದಂತಾಗಿ ಉಗುಳು ನುಂಗಿ ತುಸು ಹೊತ್ತು ಮೌನವಾದಳು.
"ಧೃತಿ ಅಂವ ಹೇಳಿದ್ದು ನಂಗೆ ‘ನನ್ನ ಮಗು’ ಬೇಕು ಅಂತ.. ‘ನಮ್ಮ ಮಗು’ ಅಂತಲ್ಲಾ. ಅಂದ್ರೆ ಈಗಾಗ್ಲೇ ಆತ ಹುಟ್ದೇ ಇರೋ ಮಗುವಿನಿಂದ ನನ್ನ ಬೇರ್ಪಡಿಸಿದ್ದ.. ಹಾಗಿರುವಾಗ ನಾಳೆ ನನ್ನ ಗತಿ ಎನಾಗಬಹುದು ಹೇಳು? ನನ್ನ ಬಿಟ್ಟು ಬೇರೆ ಮದ್ವೆ ಬೇಕಿದ್ರೆ ಆಗು ಅಂದ್ರೆ ಅವನಿಗೆ ಸಮಾಜದ ಭಯ....ಹ್ಹ.. ನನ್ನ ಮದ್ವೆ ಆಗ್ಬೇಕಾದ್ರೆ, ಹಿಂದೆ ಬಿದ್ದು ಪ್ರೀತಿಸ್ಬೇಕಾದ್ರೆ ಬೇಡ್ವಾಗಿದ್ದ ಸಮಾಜ ಈಗ ಬೇಕಾಗಿದೆ ನೋಡು. ಮೊದ್ಲೆಲ್ಲಾ"ಚಿನ್ನು.. ನಿನ್ನ ಹೆಸ್ರನ್ನ ನನ್ನ ಮೊದಲ ಹೆಸ್ರಿನ ನಂತ್ರ ಹಾಕ್ಕೊಂಡ್ರೆ ನಾನೂ ನನ್ನ ಬದಕು ಎರಡೂ ಸಂಪೂರ್ಣ..ಅಲ್ಲಾ.. "ಸಂಪೂರ್ಣದೀಪ" ಅಂತೆಲ್ಲಾ ಮುದ್ದಾಡೋನು. ಆದ್ರೆ ನಮ್ಮ ಮಗುವಿನ ವಿಷ್ಯ ಬಂದಾಗ ನನ್ನ ನೋವಿನ ಜೊತೆ ಬಿಟ್ಟು.. ಸಂಪೂರ್ಣ ಮರೆತೇ ಬಿಟ್ಟ. ಈ ಪೂರ್ಣಳನ್ನು ನೀ ಅಪೂರ್ಣ ಅಂತ ತೋರಿಸ್ಬಿಟ್ಟ.
ನಿಂಗೆ ನೆನ್ಪಿದ್ಯಾ..ಮದ್ವೆ ಮೊದ್ಲು ನಂಗೆ ಎನ್.ಎಸ್ ರ ಕವನಗಳೆಂದರೆ ತುಂಬಾ ಇಷ್ಟ ಅಂತ ಗೊತ್ತಾದಾಗ ಅವರ ಒಂದು ಕವಿತೆಯನ್ನ ನಂಗೆ ಮೈಲ್ ಮಾಡಿದ್ದ.. ನಿಂಗೂ ತೋರ್ಸಿದ್ನಲ್ಲ....

ನೀ ಸಿಗದೆ ನಾನೆಂತು ಅರಿವೆನೇ ನನ್ನ.
ನೀ ಸಿಗದೆ ನಾನೆಂತು ಅರಿವೆನೇ ನನ್ನ
ಸಾಣೆ ಗೆರೆ ಮಿಂಚದೆ ತಿಳಿವರೇ ಹೊನ್ನ ?

ಇದೇ ಕವಿತೆ ಅಲ್ವಾ ನನ್ನ ಅವನ ಕಡೆ ಮತ್ತಷ್ಟೂ ಸೆಳೆದಿದ್ದು?! ಈ ಕವಿತೆಯನ್ನ ನಾ ನನ್ನ ಬೆಡ್ರೂಂನಲ್ಲೂ ಹಾಕಿಟ್ಟಿದ್ದೆ. ಆದ್ರೆ ಈಗ...! ಹ್ಹ... ಅವನ್ನ ಪೂರ್ತಿ ಪಡೆದ ಮೇಲೆನೇ ನಾ ಅವ್ನ ನಿಜ್ವಾಗ್ಲೂ ಅರಿತಿದ್ದು. ಆದ್ರೆ ಅವನು ನನ್ನ ಮಾತ್ರ ಅರಿಯಲೇ ಇಲ್ಲ ಕಣೆ ಎಂಥ ವಿಪರ್ಯಾಸ ಅಲ್ವಾ?
ಸೋತೋದೆ ಕಣೆ...ಸಂಪೂರ್ಣ ಸೋತೋದೆ.. ಇನ್ನು ಸಾಧ್ಯವೇ ಇಲ್ಲಾ ಅನ್ಸಿಬಿಟ್ಟಿದೆ. ತಾಯಿ ಆಗ್ಲಾರೆ. ಗಂಡನ ಮೇಲೆ ಪ್ರೀತಿ, ವಿಶ್ವಾಸ, ಭರವಸೆ ಉಳಿದಿಲ್ಲ. ಒಂದೇ ಸಲ ಎಲ್ಲಾನೂ ಕಳ್ದು ಕೊಂಡು ನಿಂತಿದ್ದೀನಿ. ಪುಣ್ಯಕ್ಕೆ ಅಮ್ಮಾ, ಅಪ್ಪ ಮೊದ್ಲೇ ಹೋಗಿ ಬಿಟ್ರು. ಇಲ್ದೇ ಹೋಗಿದ್ರೆ ನನ್ನ ದುಃಖ ನೋಡಿ ಖಂಡಿತ ಸಹಿಸಿಕೊಳ್ಳುತ್ತಿರಲಿಲ್ಲ. ಇನ್ನು ಅಣ್ಣ, ಅತ್ಗೆ... ಅವ್ರಿಗೆ ಪಾಪ ಇದೆಲ್ಲಾ ಸೂಕ್ಷ್ಮತೆ ಅರ್ಥನೇ ಆಗೊಲ್ಲಾ.. ವಿವರಿಸಿ ಪ್ರಯೋಜನ ಇಲ್ಲ. ನಿನ್ನಿಷ್ಟ ಅಂದ್ಬಿಟ್ಟಿದ್ದಾರೆ. ಆದ್ರೆ ಅವ್ರಿಗೂ ತುಂಬಾ ದುಃಖ ಆಗಿರೋದು ಮಾತ್ರ ಸತ್ಯ. ಈಗ ನೀನೇ ಹೇಳು ನನ್ನ ನಾ ಹೇಗೆ ಉಳಿಸಿಕೊಳ್ಲಿ? ಯಾವ ದಾರಿ ಇದೆ ನಂಗೆ? ನಿನ್ನಷ್ಟು ಪ್ರಾಕ್ಟಿಕಲ್ ಅಲ್ಲ ನಾ. ಸಂದೀಪನ ವರ್ತನೆ, ಮಾತುಗಳ ಹಿಂಸೆ ಒಂದೆಡೆ, ನನ್ನೊಳಗಿನ ಕೊರತೆಯ ಕೊರಗು ಇನ್ನೊಂದೆಡೆ. ತಾಯಾಗಲಾರೆ ಎಂಬ ಕುಂದು ನನ್ನ ಗಂಡನನ್ನೂ ನನ್ನಿಂದ ಕಸಿಯಿತು ಧೃತಿ.. ಎನೂ ಇಲ್ಲಾ ಈಗ ನನ್ನಲ್ಲಿ.. ಎನೂ ಇಲ್ಲ.."ಎನ್ನುತ್ತಾ ತನ್ನ ಮಂಡಿಯೊಳಗೆ ಮುಖ ಹುದುಗಿಸಿ ಕುಳಿತು ಬಿಟ್ಟಳು.ಸೂರ್ಯ ಯಾವಾಗಲೋ ತನ್ನ ಪ್ರಖರತೆಯನ್ನು ಕಳೆದುಕೊಂಡು ಪಡುವಣದ ದಾರಿಯನ್ನು ಹಿಡಿಯುವಂತಿದ್ದ. ಇಬ್ಬರೊಳಗೂ ಹಸಿವಿನ ಅರಿವಿಲ್ಲ. ಹೊತ್ತಿನ ಪರಿವೆಯಿಲ್ಲ. ತುಸು ಹೊತ್ತಿನ ನಂತರ ಧೃತಿ ಪೂರ್ಣಳನ್ನೆಬ್ಬಿಸಿ ಕೊಂಡು ತೋಡಿನ ಬಳಿ ಬಂದಳು.
-4-
"ಪೂರ್ಣ..ಈ ಹಳ್ಳವನ್ನು ನೋಡಿದ್ಯಾ? ಎಷ್ಟು ನಿರಾಳವಾಗಿ ಶಾಂತವಾಗಿ ಹರೀತಿದೆ. ಹಾಂಗಂತ ಇದ್ರೊಳ್ಗೂ ಕಸ, ಕಡ್ಡಿ, ಮಣ್ಣು ಎಲ್ಲಾ ಇರುತ್ವೆ. ಆದ್ರೆ ಹೊಸ ನೀರು ಬಂದ ಹಾಗೇ ಅವು ನೀರೊಳ್ಗೆ ತೇಲಿ ಹೋಗಿ ಬಿಡುತ್ವೆ. .. ಇಲ್ಲಾ ಬದಿಗೆ ಅಂಟಿಕೊಡು ಗುಂಪಿನಲ್ಲಿ ಗೋವಿಂದ ಆಗಿಬಿಡುತ್ವೆ. ನಮ್ಮ ಮನಸ್ಸೂ ಹೀಗೇ ಇದ್ರೆ ನಮಗೇ ಒಳ್ಳೇದು ಪೂರ್ಣ. ಎನೇ ಕಷ್ಟ, ದುಃಖ, ನೋವು ಮನಸ್ಸೊಳ್ಗೆ ಹೊಕ್ಕಿದ್ರೂ ಹೊಸ ಹೊಸ ಯೋಚನೆಗಳನ್ನು ಆಗಾಗ ಹರಿಯ ಬಿಡುವುದರಿಂದ ಇವುಗಳನ್ನೆಲ್ಲಾ ತೊಳೆದುಬಿಡಬಹುದು. ಹಾಗೆ ಮರೆಯಲೇ ಸಾಧ್ಯವಾಗದಂತಹವುಗಳನ್ನು ಮನದ ಯಾವುದೋ ಮೂಲೆಯಲ್ಲಿರಿಸಿ ಮುಚ್ಚು ಬಿಟ್ಟು ಆ ಕಡೆ ತಿರುಗಿಯೂ ನೋಡದಂತಿರಬೇಕು. ತುಂಬಾ ಕಷ್ಟ ಇದು.. ಒಪ್ಪುವೆ. ಆದ್ರೆ ಅಸಾಧ್ಯವೇನಲ್ಲಾ. ನಂಗೊತ್ತು ನೀ ಅಂದ್ಕೋಬಹುದು..ಇವಳಿಗೇನು ಗೊತ್ತು ನನ್ನ ಕಷ್ಟ.. ಹೇಳೋದು ಸುಲಭ ಅಂತ... ಯಾಕಂದ್ರೆ ನಿನ್ನ ನೋವಿನ ತೀವ್ರತೆಯನ್ನು ನಾನು ಅನುಭವಿಸಿಲ್ಲ.. ಅನುಭವಿಸಲು ಸಾಧ್ಯವೂ ಇಲ್ಲ. ಸಮಸ್ಯೆಗಳನ್ನು ಸ್ವತಃ ಅನುಭವಿಸದೇ ಅದಕ್ಕೆ ಪರಿಹಾರ ಕೊಡೋದು ತುಂಬಾ ಕಷ್ಟ. ಆದ್ರೆ ನನ್ನ ಪ್ರಕಾರ ಯಾವುದೇ ಸಮಸ್ಯೆಗೆ ಪರಿಹಾರ ಇಲ್ಲ ಅಂದುಕೊಳ್ಳೋದೇ ಒಂದು ದೊಡ್ಡ ಸಮಸ್ಯೆ.
ಮೊದ್ಲು ನಿನ್ನ ನೀನು ಈ ರೀತಿ ಕುಗ್ಗಿಸ್ಕೊಳ್ಳೋದ್ನ ನಿಲ್ಲಿಸ್ಬಿಡು ಪೂರ್ಣ .. ಹೆಣ್ಣು ಪೂರ್ಣಳಾಗೋದು ತಾಯಾಗೊದ್ರಿಂದ ಅಲ್ಲ, ತಾಯ್ತನವ ಅನುಭವಿಸೋದ್ರಿಂದ. ನೀನ್ಯಾಕೆ ನಿನ್ನ ಸ್ವಂತ ಮಗು ಆದ್ರೆ ಮಾತ್ರ ನೀನು ಪೂರ್ಣಳು ಅಂದ್ಕೋತೀಯಾ?!! ನಿಂಗಿಷ್ಟ ಇದ್ದ್ರೆ.. ಮನಸ್ಸೊಪ್ಪಿದ್ರೆ ಈ ಟ್ರೀಟ್ ಮೆಂಟ್ ತಗೋಬಹುದು.. ಇಲ್ಲಾ ದತ್ತು ಪಡೆಯಬಹುದು. ದತ್ತು ಪಡೆಯಲು ಸಂದೀಪನ ಒಪ್ಗೆ ಇಲ್ಲಾ ಅಂದ್ರೂ ಅವ್ನಿಂದ ಬೇರೆಯಾಗಿ ನೀನೊಬ್ಬಳೇ ಸಾಕಲೂ ಬಹುದು.. ಇನ್ನು ಇದ್ಯಾವ್ದೂ ಬೇಡ ಅಂದ್ರೆ ಯಾವ್ದಾದ್ರೂ ಸಂಸ್ಥೆಗೆ ನಿನ್ನ ಸೇವೆಕೊಡೋದ್ರ ಮೂಲಕನೂ ನೆಮ್ಮದಿ ಪಡೀಬಹುದು. ತಾಯ್ತನ ಅಂದ್ರೆ ಕೇವಲ ಸ್ವಂತ ಮಗುವಿಗೆ ನಿನ್ನ ಮಮತೆ ಕೊಡೋದು ಮಾತ್ರ ಅಲ್ಲ ತಾನೆ? ಪೂರ್ಣ ನೀನು ಏನು ಕಳ್ಕೊಂಡೀ ಅಂತ ಎಣಿಸ್ಬೇಡ್ವೇ.. ಏನನ್ನ ಪಡ್ಕೊಂಡಿದ್ದೀ ಅಂತ ಯೋಚ್ಸು.. ಆಗಾ ನಿಂಗೇ ಎಲ್ಲಾ ಅರ್ಥ ಆಗೊತ್ತೆ. ಹಾಗೆ ನೋಡಿದ್ರೆ ಎಷ್ಟೋ ಜನ ತಮ್ಮ ಸಮಸ್ಯೆಗಳಿಗೆ ಪರಿಹಾರವೇ ಕಾಣ್ದೇ ಒದ್ದಾಡ್ತಾರೆ.. ಅದ್ರೆ ಇಲ್ಲಿ ನೀನು ಲಕ್ಕಿ.. ಸಮಸ್ಯೆಗಳ ಜೊತೆ ಪರಿಹಾರಗಳೂ ನಿನ್ನ ಮುಂದಿವೆ. ಯಾವ್ದ ಬೇಕಿದ್ರೂ ಆರಿಸ್ಕೋಬಹುದು ನೀನು.
ಒಂದ್ಸಲ ಯೋಚ್ಸು ನಿನ್ನ ಹತ್ರ ಏನಿಲ್ಲ?!.. ವೆಲ್ ಎಡ್ಜ್ಯುಕೇಟಿವ್, ಒಳ್ಳೆ ಜೋಬ್ ಇದೆ, ಪ್ರೀತಿಸೋ ಅಣ್ಣ ಅತ್ಗೆ, ಸ್ನೇಹಿತರು ಎಲ್ಲಾ ಇದ್ದಾರೆ. ಸ್ವಂತ, ಪರಕೀಯ ಅನ್ನೋದು ಹೊರಗೆಲ್ಲೋ ಇಲ್ವೆ.. ನಮ್ಮೊಳ್ಗೇ ಇರೋದು. ನಿಂಗೆ ಸಂದೀಪನ ಮೇಲೆ ಪ್ರೀತಿ ವಿಶ್ವಾಸ ಇನ್ನೂ ಉಳ್ದಿದ್ರೆ ಅವನ ಇನ್ನೊಮ್ಮೆ ಮಾತಾಡ್ಸು.. ಕನ್ವಿನ್ಸ್ ಮಾಡ್ಸು. ಅವನಿಗೆ ಪಶ್ಚಾತ್ತಾಪ ಆಗ್ಲೂ ಬಹುದು.. ಇಲ್ಲಾ ಅಂದ್ರೆ ಅವನ ಪಾಡಿಗೆ ಅವನ ಬಿಟ್ಟು ನಿನ್ನ ಜೀವನ ನೀನೇ ರೂಪಿಸ್ಕೋ. ಬದುಕು ನಮ್ಮಷ್ಟು ಸೆನ್ಸಿಟಿವ್ ಅಲ್ಲ ಪೂರ್ಣ. ಅದು ನಾವು ಹೇಳಿದಂತಿರೊಲ್ಲ.. ನಾವು ಬದುಕಿನ ಜೊತೆ ಹೊಂದಿಕೊಂಡು ಬಾಳ್ಬೇಕಷ್ಟೇ! ನಾನು ಹೇಳ್ತಿರೋದು ಈಗ ನಿಂಗೆ ಪಥ್ಯ ಆಗ್ದೇ ಇರ್ಬಹುದು.. ಆದ್ರೆ ಶಾಂತಳಾಗಿ ಯೋಚಿಸಿದ್ರೆ ನಿಂಗೇ ಅರ್ಥ ಆಗೊತ್ತೆ.
ಪೂರ್ಣ ನೀನು ಯಾವಾಗ್ಲೂ ನನ್ನ ತುಂಬಾ ಪ್ರಾಕ್ಟಿಕಲ್ ಅಂತೀಯ.. ನಿಜ.... ಅಪ್ಪ, ಅಮ್ಮ, ಸಂಬಂಧಿಕರು ಯಾರೂ ಇಲ್ಲ್ದೇ ಅನಾಥಾಶ್ರಮದಲ್ಲಿ ಬೆಳ್ದ ನಂಗೆ ಬದುಕು ಕಲಿಸಿದ ಪಾಠ ಇದು. ಅದ್ಕೇ ನಾನು ನಿಂಗೆ ಹೀಗೆ ಹೇಳಬಲ್ಲೆ..ಇನ್ನು ನಾ ಹೆಚ್ಚೇನು ಹೇಳೊಲ್ಲ. ಈಗ ನಾ ಹೆಚ್ಚು ಹೇಳಿದ್ರೂ ನಿಂಗರ್ಥ ಆಗೊಲ್ಲ. ಆದ್ರೆ ಪ್ಲೀಸ್...ನೀನು ನಿನ್ನ ಸಮಸ್ಯೆಯಿಂದಾಗ್ಲೀ ಸಂದೀಪನ ಫೋನ್ ಕಾಲ್ ನಿಂದಾಗ್ಲೀ ಎಸ್ಕೇಪ್ ಆಗ್ಬೇಡ. ಅದು ಮತ್ತಷ್ಟೂ ನಿನ್ನ ಹಿಂಸೆ ಮಾಡುತ್ತೆ. ಭಯ ಕೊಡುತ್ತೆ. ಜಸ್ಟ್ ಟಾಕ್ ಟು ಹಿಮ್. ಆದಷ್ಟು ನಾರ್ಮಲ್ ಆಗಿ ಮಾತಾಡು. ಬಟ್ ಸ್ಪಷ್ಟತೆ ಇರ್ಲಿ. ಆಗ ನೋಡು ನೀನು ಅದೆಷ್ಟೋ ನಿರಾಳವಾಗ್ತಿಯ. ಎಲ್ಲಕ್ಕಿಂತ ಮೊದ್ಲು ನೀನು ಈ ರೀತಿ ಒಂಟಿಯಾಗಿ ಕೂತ್ಕೊಂಡು ಚಿಂತಿಸೋದ್ನ ನಿಲ್ಸು. ನಾಳೆಯ ಬಗ್ಗೆ ಚಿಂತನೆ ಮಾತ್ರ ಇರ್ಲಿ ಓಕೆ?. ಹ್ಹಾಂ ನಾಡಿದ್ದೇ ಮುಂಬಯಿಗೆ ಟಿಕೆಟ್ ಬುಕ್ ಮಾಡ್ತೀನಿ. ನೀನೂ ನನ್ನ ಜೊತೆ ಬರ್ತಾ ಇದ್ದೀಯಾ.. ಹೊಸ ವಾತಾವರಣ, ಜನರ ಸಂಪರ್ಕ ನಿಂಗೇ ಒಂದು ಹೊಸತನ ತರಬಹುದು. ಅವನಿಗೂ ಹೇಳೇ ಹೋಗೋಣ. ಸರಿ ಸರಿ..ಇನ್ನು ಏಳು ಮೇಲೆ ತುಂಬಾ ಹೊತ್ತಾಯ್ತು.. ಗಂಟೆ ನಾಲ್ಕು ಗೊತ್ತಾ? ಅಣ್ಣ ಅತ್ಗೆ ಗಾಬ್ರಿ ಆಗಿರ್ಬಹುದು.." ಎಂದು ಧೃತಿ ಅವಸರಿಸಲು ಮೌನವಾಗಿ ಅವಳನ್ನು ಹಿಂಬಾಲಿಸಿದಳು.
ತನ್ನ ಭರವಸೆಯ ಮಾತಿಗೋ ಇಲ್ಲಾ ಭಾರವನ್ನು ಹಂಚಿಕೊಂಡು ತುಸು ಹಗುರಾದ ಭಾವಕ್ಕೋ ಪೂರ್ಣ ತುಂಬಾ ಸಮಾಧಾನಗೊಂಡಿರುವಂತೆ ಕಂಡಳು ಧೃತಿಗೆ. ಮೊಗದಲ್ಲಿ ಮಂಕುತನವಿನ್ನೂ ಕವಿದಿದ್ದರೂ ನೋವಿನ ತೀವ್ರತೆ ಮೊದಲಿನಷ್ಟು ಕಂಡುಬರಲಿಲ್ಲ.
ಇತ್ತ ಅವರು ಹೊರಡುವುದಕ್ಕೂ.. ತೋಟದ ಕಡೆಯಿಂದ ಸುಜಾತ ಬರುವುದಕ್ಕೂ ಸಮನಾಯಿತು. "ಏನೇ ಪುಟ್ಟಿ ಈ ಕಡೆ ಬಂದೆ? ಊಟ ಆಯ್ತಾ ನಿಂದು?" ಎಂದು ಕೆನ್ನೆ ಹಿಂಡಿದ ದೃತಿಯ ಕಡೆ ತುಸು ವಿಚಿತ್ರ ನೋಟ ಬೀರಿದಳು ಸುಜಾತ. "ಅಯ್ಯೋ ಅಕ್ಕ.. ಗಂಟೆ ನಾಲ್ಕಾಯ್ತು ಗೊತ್ತಾ? ಎಷ್ಟು ಮಾತಾಡ್ತೀರಾ ನೀವು.. ನಿಮ್ಗೆ ಹಶ್ವಾಗೊಲ್ವಾ? ಅಪ್ಪ ನಿಮ್ಮ ನೋಡ್ಕೊಂಡು ಬಾ ಹೇಳಿದ್ರು.. ಅದ್ಕೇ ಬಂದೆ. ಪೂರ್ಣತ್ತೆ ನೀ ಎಂತಕ್ಕೆ ಬೇಜಾರಲ್ಲಿದ್ದೆ? ಧೃತಿಯಕ್ಕ ನಾಡಿದ್ದು ಹೋಪದಲ್ದ?" ಎಂದು ಆಕಯ ಕೈ ಹಿಡಿಯಲು ಪೂರ್ಣ ಮುಗುಳ್ನಕ್ಕಳು."ಹೇ ಪೂರ್ಣತ್ತೆ ನಾ ಮತ್ತೆ ಒಂದು ಒಗ್ಟು ಕೇಳ್ತಿ.. ಉತ್ರ ಹೇಳು ನೋಡಾನ. ಇವಾಗಷ್ಟೇ ಓದ್ಕ ಬಂದಿ..ಪ್ಲೀಸ್ ಪ್ಲೀಸ್ ನೀ ಈಗ ಬೇಡ ಹೇಳಡಾ ಮತ್ತೆ.. ಕೇಳ್ಲಾ?"ಎಂದು ಗೋಗರೆದಾಗ ಬೇಡವೆನ್ನಲಾಗಲಿಲ್ಲ ಪೂರ್ಣಳಿಗೆ.
"ಸರಿ ಮಾರಾಯ್ತಿ.. ಒಳ್ಳೆ ಒಗ್ಟಿನ ಮಳ್ಳಾಗೋಜೆ ಈಗ ನೀನು.. ಕೇಳು ಗೊತ್ತಿದ್ದ್ರೆ ಹೇಳ್ತಿ.." ಎಂದು ಹೇಳಿದ್ದೇ ತಡ ಅತ್ಯುತ್ಸಾಹದಲ್ಲಿ ಸುಜಾತ ತಯಾರದಳು.
"ಒಗಟಿನೊಳಗೊಂದು ಒಗಟು
ಮುಟ್ಟಹೋದಷ್ಟೂ ಜಿಗುಟು
ಬಿಚ್ಚಹೋದಷ್ಟೂ ಗಂಟು
ಬಿಡಿಸಬಲ್ಲನು ಅವನು
ಇದಕುತ್ತರವೇನು? " - ಗೆಲುವು ತನ್ನದೇ ಎಂಬ ವಿಶ್ವಾಸದಲ್ಲಿ "ಎಂತು ಹೇಳು ನೊಡಾನ" ಎಂದು ಅವಳನ್ನೇ ನೋಡಿದಳು ಸುಜಾತ.
"ಕೂಸೆ ಇದು ಅಣ್ಣಯ್ಯ ನಿನ್ನೆ ತಂದ ಪೇಪರಿನಲ್ಲಿತ್ತು ಅಲ್ದಾ? ನಾ ಮೊದ್ಲೇ ಓದಿದ್ದಿ.. ಉತ್ತರ "ಬದುಕು" ಅಲ್ದ? ಆದ್ರೆ ದಯಮಾಡಿ ಇನ್ನು ಈ ಉತ್ತ್ರ ಹೇಂಗಾಗ್ತು ಹೇಳಿ ಮಾತ್ರ ಕೇಳಡ.. ಆದ್ರೆ ಸರಿ ಉತ್ರ ಅಂತೂ ನಾ ಕೊಟ್ಟಿದ್ದಿ ಹಾಂಗಾಗಿ ಯಾನೇ ಗೆದ್ದಿ ನೋಡು." ಎಂದು ಅವಳ ಗಲ್ಲಕ್ಕೊಂದು ಮುತ್ತು ಕೊಡಲು.. ತಾನು ಸೋತ ಬಗ್ಗೆ ಇನಿತೂ ಬೇಸರಸಿದೆ.."ಹೋಹೋ.. ಪೂರ್ಣತ್ತೆ ಗೆತ್ತು.. ಪೂರ್ಣತ್ತೆ ಗೆತ್ತು.." ಎಂದು ಕೂಗುತ್ತಾ ಮುಂದೆ ಓಡಿದಳು ಸುಜಾತ.
---***---