ಪರಿಚಯ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಪರಿಚಯ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಏಪ್ರಿಲ್ 11, 2021

ಬೆಟ್ಟವೇರಿದ ಮೇಲೆ ಹನಿದ ಕಾಲದೊಂದೊಂದೇ ಹನಿಗಳು...

"ಆತ್ಮಕಥೆ ಎನ್ನುವುದು ತುಂಬಾ ದೊಡ್ಡ ಅರ್ಥವ್ಯಾಪ್ತಿಯನ್ನು ಹೊಂದಿರುವಂಥದ್ದು. ಆ ಅರ್ಥವ್ಯಾಪ್ತಿಗೆ ಅನುಗುಣವಾಗುವಂತಹ ವಿಷಯ ನನ್ನಲ್ಲಿ ಇದೆ ಎನ್ನುವುದರ ಬಗ್ಗೆ ನನಗೆ ನಂಬಿಕೆಯಿಲ್ಲ. ಯಾವ ಆತ್ಮಕಥೆಯೂ ಕೂಡಾ ಪರಿಪೂರ್ಣವಲ್ಲ; ಹೇಳಬಹುದಾದಂಥದ್ದು ಅಥವಾ ಹೇಳುವುದಕ್ಕಿಂತ, ಹೇಳದೆ ಇರುವುದೇ ಜಾಸ್ತಿ ಇರುತ್ತದೆ ಎನ್ನುವುದು ನನ್ನ ಅಭಿಪ್ರಾಯ. ಪ್ರತಿಯೊಂದು ಆತ್ಮಕಥೆಯೂ ಒಂದೋ ತನ್ನನ್ನು ತಾನು ವೈಭವಿಸಿಕೊಳ್ಳುವಂತಹ ರೀತಿಯದ್ದು ಅಥವಾ ತನ್ನನ್ನು ತಾನು ಹೀನಯಿಸಿಕೊಳ್ಳುವ ರೀತಿಯದ್ದು ಆಗಿರುವಂತಹ ಸಾಧ್ಯತೆ ಇದೆ" - ಎಂದು ವಿವರಿಸುತ್ತಾ, ಹೇಗೆ ‘ಕಾಲದೊಂದೊಂದೇ ಹನಿ...’ ತಮ್ಮ ಆತ್ಮಕಥೆಯಲ್ಲ ಎನ್ನುವುದನ್ನು ‘ಶ್ರೀಯುತ ಸುಬ್ರಾಯ ಚೊಕ್ಕಾಡಿ’ಯವರು ಹೇಳಿಬಿಡುತ್ತಾರೆ. ಮುಂದೆ, "ನನಗೆ ವೈಯಕ್ತಿಕವಾಗಿ ಆದಂತಹ ಅನುಭವ, ನನ್ನ ಮತ್ತು ಸುತ್ತಲಿನ ಸಮಾಜದ ಮುಖಾಮುಖಿಯಾಗಿ ಅರಿವಿಗೆ ಸಿಕ್ಕಿದಂತಹ ಅನುಭವಗಳು, ನಾನು ಕೇಳಿದ-ನೋಡಿದ ವಿಚಾರಗಳಿಂದ ನನಗೆ ದೊರಕಿದ ಅನುಭವಗಳು ಈ ಎಲ್ಲವೂ ಸೇರಿ ಇದೊಂದು ಅನುಭವ ಕಥನವಾಗಿದೆ" ಎಂದು ಮೊದಲ ಅಧ್ಯಾಯದಲ್ಲೇ ಸ್ಪಷ್ಟಪಡಿಸುತ್ತಾರೆ. ಹೀಗಾಗಿ ಆರಂಭದಲ್ಲೇ ನಮ್ಮ ಓದಿಗೆ ಒಂದು ಸ್ಪಷ್ಟ ಪರಿಕಲ್ಪನೆಯನ್ನೊದಗಿಸುತ್ತಾ, ಆತ್ಮಕಥೆಯ ನಿಟ್ಟಿನಲ್ಲಿ ನಾವು ಓದಲು ಹೋಗದೇ ಅವರ ಅನುಭವಗಳನ್ನು ಒಳಗೆಳೆದುಕೊಳ್ಳುವ, ಆ ಮೂಲಕ ನಮ್ಮ ಬದುಕು ನಮಗೆ ಕಲಿಸಿದ ಪಾಠ, ಅನುಭವಗಳಿಗೆ ಒಂದು ಸೇತುವನ್ನೇರ್ಪಡಿಸಿಕೊಂಡು ಸಾಗುವ ಪಯಣವಾಗಿಬಿಡುತ್ತದೆ.

‘ನಾನೇರಿದೆತ್ತರಕೆ ನೀನೇರಬಲ್ಲೆಯ’ ಎಂದು ಸವಾಲು ಹಾಕುವಂತಹ ಬಂಟಮಲೆ ಬೆಟ್ಟದ ತಪ್ಪಲಿನಲ್ಲಿರುವ ‘ಚೊಕ್ಕಾಡಿ’ ಎಂಬ ಪುಟ್ಟ ಸುಂದರ ಊರು ಹೇಗೆ ಅಂತಹ ಮಹತ್ವದ ಸ್ಥಳವಲ್ಲದೆಯೂ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ತನ್ನದೇ ಆದ ವಿಶಿಷ್ಟ ಛಾಪನ್ನು, ಮಹತ್ವವನ್ನು ಪಡೆದುಕೊಂಡಿದೆ ಎಂಬುದನ್ನು ವಿವರಿಸಿದ ರೀತಿ ನಮಗೂ ಆ ಊರನ್ನು ಬಹಳ ಆಪ್ತಗೊಳಿಸಿಬಿಡುತ್ತದೆ. ಇಲ್ಲಿ ಲೇಖಕರು ತಮ್ಮ ಬದುಕು ಹೇಗೆ ತಾವಿದ್ದ ತಾವಿನಿಂದಲೇ ಹದಗೊಂಡು ಗಟ್ಟಿಯಾಗುತ್ತಾ ಸಾಗಿತು, ಯಾವ ರೀತಿ ಚೊಕ್ಕಾಡಿ ತಮ್ಮ ಜೀವನ ಸಂಘರ್ಷದಲ್ಲಿ ಮಹತ್ವದ ಪಾತ್ರವನ್ನು ವಹಿಸಿತು ಎನ್ನುವುದನ್ನು ವಿವರಿಸುತ್ತಾ ಹೋದಂತೇ ಅದು ನಮ್ಮನ್ನು ನಮ್ಮ ಬಾಲ್ಯ, ಓದು, ಆರಂಭದ ಹೋರಾಟ ದಿನಗಳು - ಇವೆಲ್ಲಾ ಜರುಗಿದ ನಮ್ಮ ಪರಿಸರದ ಕಡೆಗೆ ಎಳೆದುಕೊಂಡು ಹೋಗಿಬಿಡುತ್ತದೆ.
ತಮ್ಮ ಊರಿನ ಮೇಲೆ ಅವರಿಟ್ಟಿರುವ ಅಭಿಮಾನ, ಪ್ರೀತಿಯನ್ನು ಅಕ್ಷರಗಳಲ್ಲಿ ಸಶಕ್ತವಾಗಿ ಪ್ರಾಮಾಣಿಕವಾಗಿ ಕಟ್ಟಿಕೊಡುವಾಗ ಓದುಗನೂ ಅವನ ಮನದಲ್ಲಿ ಬಲವಾಗಿ ಬೇರೂರಿದ, ನೋವು-ನಲಿವು ಕಂಡು-ಉಂಡು ಬೆಳೆದ ಊರು, ಪರಿಸರಕ್ಕೆ ಹಾರಿಬಿಡುತ್ತಾನೆ.

ಅಮರಪಡ್ನೂರಿನ ಅಜ್ಜನಗದ್ದೆಯಿಂದ ಆರಂಭವಾಗುವ ಜೀವನದ ಪಯಣದ ಬೀಜವು ಚೊಕ್ಕಾಡಿಯಲ್ಲಿ ಸ್ಥಿರಗೊಂಡು, ಅಲ್ಲೇ ಬೇರೂರಿ ಎಲ್ಲೆಡೆ ಹಬ್ಬಿಬೆಳೆದು, ಎದುರಾದ ಅಸಂಖ್ಯಾತ ಎಡರುತೊಡರುಗಳು, ನೋವು-ನಲಿವುಗಳು, ಕಹಿ ಘಟನೆಗಳು, ಸಂಕಷ್ಟದ ದಿನಗಳು ಎಲ್ಲವನ್ನೂ ಹೀರಿಕೊಂಡು ಈ ಅನುಭವ ಕಥನದಲ್ಲಿ ದಟ್ಟ ಹೆಬ್ಬಲಸಿನ ಮರವಾಗಿ ಹಬ್ಬಿ ಬೆಳೆದಿದೆ. 355 ಪುಟಗಳ (ಮೊದಲ ಓದಿನ ಸ್ಪಂದನಗಳನ್ನು ಬಿಟ್ಟು) ಈ ಸುದೀರ್ಘ ಅನುಭವ ಕಥನದಲ್ಲಿ ಹಲವು ಘಟನೆಗಳನ್ನು ಈಗಾಗಲೇ ನಾನು ಚೊಕ್ಕಾಡಿಯವರಿಂದಲೇ ಮುಖತಃ ಒಂದೆರಡು ಬಾರಿ ಕೇಳಿದ್ದರೂ, ಅವನ್ನೆಲ್ಲಾ ಸಮಗ್ರವಾಗಿ ಅನುಕ್ರಮದಲ್ಲಿ ಜೋಡಿಸಿ ಕೊಟ್ಟಾಗ ಒಂದೇ ಕಡೆ ಓದಿಕೊಳ್ಳುವಾಗ ಸಿಗುವ ಸಮಾಧಾನವೇ ಬೇರೆ. ಇಲ್ಲಿಯ ಪ್ರಸಂಗಗಳು, ಅನುಭವಗಳು ನಮ್ಮೊಳಗಿನ ಸೂಕ್ಷ್ಮ ಭಾವಗಳನ್ನು, ದುಃಖ-ದುಮ್ಮಾನಗಳನ್ನು ನೇವರಿಸುತ್ತಾ, ಸಂತೈಸುತ್ತಾ, ಸಾಂತ್ವನವನ್ನೂ ನೀಡುತ್ತವೆ. ಹೀಗಾಗಿ ಈ ಕಥನ ಒಂದು ತರಹ ಕೊಡುಕೊಳ್ಳುವ ರೀತಿಯದ್ದು ಅನ್ನಬಹುದು.

‘ದೊಡ್ಡವರು ನೀವು ಕುಬ್ಜರು ನಾವಲ್ಲ’(ಅಡಿಗರು), ‘ಇದ್ದಲ್ಲೇ ಇಡು ದೇವರೆ’ ಹಾಗೂ ‘ಈಸಬೇಕು ಇದ್ದು ಜಯಿಸಬೇಕು’ – ನಾನು ಸದಾ ಸ್ಮರಿಸುವ ಈ ಮೂರು ವಾಕ್ಯಗಳು ಈ ಅನುಭವ ಕಥನದ ಆಧಾರ ಸ್ತಂಭಗಳಾಗಿವೆ ಎಂಬುದು ನನ್ನ ಅನಿಸಿಕೆ.

1.ದೊಡ್ಡವರು ನೀವು, ಕುಬ್ಜರು ನಾವಲ್ಲ
ನಮ್ಮ ಅಭಿಮಾನ, ಸ್ವಾಭಿಮಾನ, ಪ್ರಾಮಾಣಿಕತೆಗೆ ಧಕ್ಕೆ ಬಂದಾಗ, ನಾವು ಸತ್ಯ ಪಥದಲ್ಲಿದ್ದಾಗ, ಎದುರಿನವರು ಎಂತಹ ದೊಡ್ಡ ಹುದ್ದೆಯಲ್ಲಿರುವ, ಪ್ರಸಿದ್ಧ ವ್ಯಕ್ತಿಯೇ ಆಗಿದ್ದರೂ ಬಾಗಬೇಕಾಗಿಲ್ಲ. ಇದರಿಂದ ನಮ್ಮೊಳಗೆ ದೃಢತೆ, ಛಲ ಗಟ್ಟಿಯಾಗತ್ತಲೇ ಹೋಗುತ್ತದೆ. ಆ ಕ್ಷಣಕ್ಕೆ ಬೇಸರ, ಸಮಸ್ಯೆಗಳು ಎದುರಾದರೂ ಅದು ಬದುಕಲ್ಲಿ ಬೆಳೆಸುವ ಧೈರ್ಯ, ಕೊಡುವ ಧೈರ್ಯ ಅನನ್ಯ ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳು ಇಲ್ಲಿ ದೊರಕುತ್ತವೆ. ಎಂತಹ ಕಷ್ಟಕರ ಸಮಯದಲ್ಲೂ ತಮ್ಮ ಸ್ವಾಭಿಮಾನ, ಆತ್ಮವಿಶ್ವಾಸವನ್ನು ಅಡವಿಡದ, ಯಾವ ಬೆದರಿಕೆಗೂ ಬೆದರದೇ ಎದುರಾದ ಸವಾಲುಗಳನ್ನು ಸ್ವೀಕರಿಸಿದ ರೀತಿಯನ್ನು ಲೇಖಕರು ಹಲವು ಪ್ರಸಂಗಗಳ ಮೂಲಕ ನಮ್ಮೆದುರು ತೆರೆದಿಟ್ಟಿದ್ದು ಮಾದರಿಯಾಗಿದೆ.

2.ಇದ್ದಲ್ಲೇ ಇಡು ದೇವ್ರೆ
ಹಲವು ಒಳ್ಳೊಳ್ಳೆಯ ಅವಕಾಶಗಳು ಬದುಕಲ್ಲಿ ಮುಂದೆ ದೊರತಾಗಲೂ ತಮ್ಮ ಗ್ರಾಮ, ಊರಿನ ಜನ, ಶಾಲೆಯ ಮಕ್ಕಳನ್ನು ತೊರದು ಹೋಗದದಿದ್ದು, ಅನ್ಯಾಯ, ಸಂಕಷ್ಟಗಳು ಧುತ್ತನೆ ಎದುರಾದಾಗ, ಅಪಮಾನಗಳು ಹಲವು ಬಗೆಯಲ್ಲಿ ಸಮಾಜದಿಂದ ಹಾಗೂ ಕುಟುಂಬದೊಳಗಿನಿಂದಲೂ ಹೊಡೆತ ನೀಡಿದಾಗಲೂ ಧೃತಿಗೆಡದೇ, ಊರು, ಮನೆ ಬಿಟ್ಟು ಹೋಗದೇ, ಅಲ್ಲೇ ಬೇರೂರಿ ನಿಂತು ಸಡ್ಡು ಹೊಡೆದದ್ದು - ಹೀಗೆ ಇರುವಲ್ಲಿಯೇ ಲೋಕ ಜ್ಞಾನವನ್ನು ಪಡೆಯಲು ನಿರ್ಧರಿಸಿದ್ದು, ಸುಖ ಮತ್ತು ನೆಮ್ಮದಿಯಲ್ಲಿ ನೆಮ್ಮದಿಯನ್ನು ಆಯ್ದುಕೊಂಡು ಹೊರಟಿದ್ದು ಎಲ್ಲವೂ ಹೊಸ ಹೊಳಹನ್ನು ನೀಡಿ ಮಾರ್ಗದರ್ಶನವನ್ನು ಮಾಡುತ್ತವೆ.

3.ಈಸಬೇಕು ಇದ್ದು ಜಯಿಸಬೇಕು
ಎಲ್ಲಕ್ಕಿಂತ ಮುಖ್ಯ ಬದುಕು ಮತ್ತು ಅದನ್ನು ಘನತಯಿಂದ ಬದುಕುವುದರಲ್ಲಿರುವುದು ಎಂಬುದು ಇಲ್ಲಿ ನಿಚ್ಚಳವಾಗಿ ತೋರುತ್ತದೆ. ಜೀವನಕ್ಕೆ ವಿಮುಖನಾಗಿಬಿಡುವುದು ಸುಲಭ, ಅದಕ್ಕೆ ಮನಸ್ಸು ಹಾಗೂ ಪ್ರಸಂಗಗಳು ಹಲವಾರು ಕಾರಣಗಳನ್ನು ನೀಡುತ್ತವೆ. ಆದರೆ ಅವುಗಳಿಗೆ ಶರಣಾಗದೇ ಸ್ಪಷ್ಟ ಗುರಿಯೊಡನೆ, ಸಂಕಲ್ಪದೊಂದಿಗೆ ಮುನ್ನುಗ್ಗಿದಾಗ ಕಾಲವೂ ಶರಣಾಗುತ್ತದೆ ಎನ್ನುವ ಒಳ್ಳೆಯ ಸಂದೇಶವನ್ನೂ ನೀಡುತ್ತದೆ.

ಶ್ರೀಯುತ ಚೊಕ್ಕಾಡಿಯವರ ಸಮಗ್ರ ಕಾವ್ಯದಲ್ಲಿರುವ "ಧಾನಸ್ಥ’ ಎನ್ನುವ ಕವಿತೆಯನ್ನು ಆಗಾಗ ಓದುತ್ತಿರುತ್ತೇನೆ. ಇದು ಅವರ ಈ ಅನುಭವ ಕಥನದ ಸಾರವನ್ನೇ ಹಿಂಡಿ ಕೊಡುತ್ತದೆ ಎಂದು ಈಗ ನನಗನ್ನಿಸುತ್ತಿದೆ.

-ಎಲ್ಲ ಗತ ಇತಿಹಾಸವಾಗುವ ಹಾಗೆ
ಇದಲ್ಲ ಇದಲ್ಲ ಎಂದು ಸಾರುವ ಹಾಗೆ
ಎದುರು ನಿಂತಿದೆ ಇಲ್ಲಿ ತ್ರಿಭಂಗಿ ನಿಲುವಲ್ಲಿ ಧ್ಯಾನಸ್ಥ
ಆಕಾಶಕ್ಕೆ ಲಗ್ಗೆಯಿಟ್ಟಂಥ ಪಾರಿಜಾತ.
....
ಕಾಣ್ಕೆ-ಕಣ್ಕಟ್ಟುಗಳ ನಡುವೆ ತೆಳುಗೆರೆ ಹರಿದು
ಆಚೆಗೆ ಚಾಚಿಕೊಳ್ಳುವ ಸಿದ್ಧಿಯಾಕಾಂಕ್ಷೆಯಲಿ
ಎದುರು ನಿಂತಿದೆ ಇಲ್ಲಿ ತ್ರಿಭಂಗಿ ನಿಲುವಲ್ಲಿ ಧಾನ್ಯಸ್ಥ
ಆಕಾಶಕ್ಕೆ ಲಗ್ಗೆಯಿಟ್ಟಂಥ ಪಾರಿಜಾತ.

ಅಲ್ಲದೇ, ಈ ಅನುಭವ ಕಥನವನ್ನು ಓದುತ್ತಿರುವಾಗ ಪದೇಪದೇ ಜಿ.ಎಸ್.ಶಿವರುದ್ರಪ್ಪನವರ ನನ್ನಚ್ಚುಮೆಚ್ಚಿನ ‘ಶಕ್ತಿಯ ಕೊಡು ಹೇ ಪ್ರಭು..’ ಕವಿತೆ ನೆನಪಿಗೆ ಬರುತ್ತಿತ್ತು.
ಎಡರ ಕಡಲ ತೆರೆಹೆಡೆಗಳು
ಭೋರ್ಗರೆಯುತ ಬಂದರೂ
ತಡೆದು ನಿಲುವ ಮಳಲ ತಡಿಯ
ಛಲವ ನೀಡು ಶ್ರೀಗುರು- ಎಂಬ ಸಾಲುಗಳು ಹಲವು ಅಧ್ಯಾಯಗಳನ್ನೋದುವಾಗ ನೆನಪಾಗಿ ಆರ್ದ್ರಗೊಂಡಿದ್ದಿದೆ.
ಅಲ್ಲದೇ, ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರ ಕವಿತೆಯೊಂದರ,
ಜೀವ ಭಾವ ಕಾವು ನಿಂತು
ಬೆರಗು ಮುಳ್ಳು ಕಲ್ಲಿಗೂ
ಕವಿತೆ ಬೆಳೆದ ಕಂಪು ಬಂತು,
ಅಲ್ಲಿ ಇಲ್ಲಿ ಎಲ್ಲಿಗೂ.. - ಈ ಸಾಲುಗಳೂ ನೆನಪಾಗಿ ಬಹಳ ಸಮಾಧಾನವನ್ನೂ ನೀಡಿದೆ.

ಇದು ಲೇಖಕರ ವೈಯಕ್ತಿಕ ಕಥನ ಮಾತ್ರವಲ್ಲ.
ಈ ಅನುಭವ ಕಥನ ಓರ್ವ ವ್ಯಕ್ತಿಯ ಸುದೀರ್ಘ ಎಂಭತ್ತು ವರುಷಗಳ ಸಾಹಿತ್ಯಿಕ ಹಾಗೂ ಸಾಮಾಜಿಕ ಬದುಕಿನ ಕಥೆ ಮಾತ್ರ ಎಂದೆನ್ನಿಸುವುದಿಲ್ಲ. ಆ ಕಾಲಘಟ್ಟದ ಸಮಗ್ರ ಚಿತ್ರಣವನ್ನು ಕಾಣಿಸುವಂಥದ್ದೂ ಹೌದು ಎನ್ನಬಹುದು. ಈ ಒಂದು ಓದಿನ ಪಯಣದಲ್ಲಿ ಅಂದಿನ ದಕ್ಷಿಣ ಕನ್ನಡದ ಜನಜೀವನ, ಸಮಾಜಿಕ ಚಿತ್ರಣ, ಸಾಂಸ್ಕೃತಿಕ-ಸಾಹಿತ್ಯಿಕ ವಲಯಗಳಲ್ಲಿ ಆಗುತ್ತಿದ್ದ ವಿಪ್ಲವಗಳು, ರಾಜ್ಯದ ರಾಜಕೀಯಗಳು, ಅದರ ಹಳವಂಡಗಳು ಹಾಗೂ ಗುದ್ದಾಟಗಳು... ಅಡಿಗರು, ಕಾರಂತರು, ಚಿತ್ತಾಲರು - ಮುಂತಾದ ಹಿರಿಯ ಸಾಹಿತಿಗಳೊಡನೆ ಅವರ ಒಡನಾಟ, ಅನುಭವಗಳು - ಇವೆಲ್ಲದರ ಮಾಹಿತಿಗಳನ್ನು ನೀಡುತ್ತಾ ಹೋಗುತ್ತದೆ. ಅಂತೆಯೇ, ಅಂದಿನ ಶಾಲೆಗಳ ಕಾರ್ಯವೈಖರಿ, ಶಿಕ್ಷಣ ಪದ್ಧತಿ, ಶಿಕ್ಷಕರಿಗೆ ನೀಡುತ್ತಿದ್ದ ತರಬೇತಿ, ಅಂದಿನ ರಾಜಕೀಯ ನಿಲುವುಗಳು, ಸೈದ್ಧಾಂತಿಕ ಗುದ್ದಾಟಗಳು... ಇನ್ನು, ಕವಿತೆ ಎಂದರೆ ಏನು? ಕಾವ್ಯ ಪ್ರಕಾರ ಹೇಗೆ ವಿಶಿಷ್ಟವಾಗಿದೆ, ಕವಿತೆ ಬರೆಯಲು ಯಾವೆಲ್ಲಾ ಪೂರ್ವ ತಯಾರಿಗಳು ಅತ್ಯಗತ್ಯ, ಕವಿ ಮತ್ತು ಕಾವ್ಯ ಹೇಗೆ ಭಿನ್ನ, ಕಾವ್ಯವನ್ನು ಏಕೆ ಬರೆಯುತ್ತಾರೆ/ಬರೆಯಬೇಕು - ಹೀಗೆ ಈ ಎಲ್ಲಾ ಅಂಶಗಳನ್ನೊಳಗೊಂಡ ಒಂದು ಅಪರೂಪದ ಮಾಹಿತಿಪೂರ್ಣ ಪುಸ್ತಕವೂ ಹೌದು. ಇವೆಲ್ಲಾ ಕಥನ ಶೈಲಿಯಲ್ಲಿರುವುದರಿಂದ ಅಕೆಡಮಿಕ್ ನಿರೂಪಣೆಯ ಕ್ಲಿಷ್ಟತೆಯಿಲ್ಲದೇ ಸರಾಗವಾಗಿ ಓದಿಸಿಕೊಳ್ಳುತ್ತವೆ. ಆ ಕಾಲದ ಶಿಕ್ಷಣ ಪದ್ಧತಿಯು ಮಕ್ಕಳಲ್ಲಿ ಬಾಲ್ಯದಿಂದಲೇ ಬದುಕನ್ನು ಹತ್ತಿರದಿಂದ ನೋಡುವ, ಸಂಪೂರ್ಣವಾಗಿ ಜೀವಿಸುವ, ಸೋಲನ್ನು ಎದುರಿಸುವ ಶಿಕ್ಷಣವನ್ನು ಕಲಿಸುತ್ತಿತ್ತು. ಬಹುಮುಖ್ಯವಾಗಿ ನಮ್ಮ ಪರಿಸರ, ಸಹಜೀವಿಗಳನ್ನು ಗೌರವಿಸುವ, ಪ್ರೀತಿಸುವ ಬಗೆಯನ್ನು ಕಲಿಸುತ್ತಿತ್ತು ಎನ್ನುವುದು ಸ್ಪಷ್ಟವಾಗುತ್ತದೆ. ಇಂದು ನಾವು, ನಮ್ಮ ಮಕ್ಕಳು ಎಂತಹ ಶಿಕ್ಷಣವನ್ನು ಪಡೆದಿದ್ದೇವೆ/ಪಡೆಯುತ್ತಿದ್ದೇವೆ ಎಂಬ ಕಟು ವಾಸ್ತವಿಕತೆಯೂ ಅರಿವಾಗುತ್ತದೆ. ಬೇರನ್ನೂರಿ ಆಗಸಕ್ಕೆ ಜಿಗಿವ ಶಿಕ್ಷಣವು ಅಂದಿನದ್ದಾಗಿದ್ದರೆ, ಇಂದೋ ಬೇರನ್ನೇ ಕತ್ತರಿಸಿ ಗಾಳಿಯಲ್ಲಿ ತೇಲುವ, ಮತ್ತೆಲ್ಲೋ ಹಾರಿ ಬಿದ್ದರೂ ತೆವಳಲೂ ಗೊತ್ತಿರದಂತಹ ಕಲಿಕೆಯ ಮಟ್ಟದಲ್ಲಿದ್ದೇವೆಯೇನೋ ಎಂದೆನಿಸಿ ಕಳವಳವಾಗುತ್ತದೆ!

‘ದೊಡ್ಡ ಹೊಟ್ಟೆಯವನ ಹಸಿವು ಗೊತ್ತಾಗುವುದಿಲ್ಲ, ಉಬ್ಬು ಹಲ್ಲಿನವನ ದುಃಖ ಗೊತ್ತಾಗುವುದಿಲ್ಲ ’ - ಎಂಬ ಗಾದೆಯ ಮಾತೊಂದು ಇಲ್ಲಿ ಉಲ್ಲೇಖವಾಗಿದ್ದು, ಅದು ಬಹಳ ಕಾಡುತ್ತದೆ. ಇದು ಹೇಗೆ ಈ ಅನುಭವ ಕಥನದುದ್ದಕ್ಕೂ ಹಾಸುಹೊಕ್ಕಾಗಿದೆ ಎಂಬುದನ್ನು ಅರಿತಾಗ ಮನಸು ಆರ್ದ್ರಗೊಳ್ಳುತ್ತದೆ. ಹಸಿವು ಮತ್ತು ದುಃಖವನ್ನು ಅಡಗಿಸಿ ಬದುಕುವ ಕಲೆ ಸಿದ್ಧಿಸಿದರೆ ಮತ್ತೇನೂ ಅಷ್ಟು ಕಾಡದೇನೋ ಅನ್ನಿಸಿಬಿಡುತ್ತದೆ. ಎಷ್ಟೋ ಸಲ ನಾವು ನಮ್ಮ ಸಂಕಟಗಳನ್ನು, ಎದುರಿಸಿದ ಸವಾಲುಗಳನ್ನು, ಅವಮಾನ, ನೋವುಗಳನ್ನು ಕುಟುಂಬದವರೊಡನೆ ಹಂಚಿಕೊಳ್ಳುತ್ತಾ ಹೋಗದಿದ್ದರೆ ಅದರ ಪರಿಣಾಮ ಯಾವ ರೀತಿಯ ವೈಪರಿತ್ಯಕ್ಕೂ ಕಾರಣವಾಗಿಬಿಡುವುದು ಎಂಬುದರ ಸ್ಥೂಲ ಪರಿಕಲ್ಪನೆ ಸಿಗುತ್ತದೆ. ಸುಖವನ್ನು ಹಂಚುವುದು ಮಾತ್ರವಲ್ಲ, ಅದನ್ನು ಪಡೆಯಲು ಸವೆಸಿದ ಕಷ್ಟದ ಹಾದಿಯ ಗುರುತನ್ನೂ ನಮ್ಮ ಸಹಜೀವಿಗಳಿಗೆ ನೀಡುತ್ತಿರಬೇಕೆಂಬ ಪಾಠವೂ ದೊರಕುತ್ತದೆ.

ಆದರೆ ಈ ಸುದೀರ್ಘ ಅನುಭವ ಕಥನವನ್ನೋದಿ ಮುಗಿಸಿದಾಗ ಅಲ್ಲಲ್ಲಿ ಕೆಲವೊಂದು ಪ್ರಸಂಗಗಳನ್ನು ಮತ್ತೂ ಸಂಕ್ಷಿಪ್ತವಾಗಿ ತರಬಹುದಿತ್ತು, ಕೆಲವೊಂದು ವಿವರಗಳನ್ನು ಕ್ಲುಪ್ತವಾಗಿಸಿದ್ದರೆ ಓದಿನ ಓಘಕ್ಕೆ ಅದು ಮತ್ತಷ್ಟು ಸಹಕಾರಿಯಾಗುತ್ತಿತ್ತು ಎಂದೂ ಅನ್ನಿಸಿತು. ಅದೇನೇ ಇದ್ದರೂ ಇದು ಅನುಭವ ಕಥನವಾಗಿರುವುದರಿಂದ ಹೇಳಬೇಕಾದ್ದಷ್ಟನ್ನು ಹೇಳುವ ರೀತಿಯಲ್ಲಿ ಹನಿಸುವ ಹಕ್ಕು ಲೇಖಕರದ್ದೇ ಎನ್ನುವುದೂ ಸತ್ಯವೇ.

ಇಷ್ಟು ದೊಡ್ಡ ಕಥನವನ್ನು ರೆಕಾರ್ಡ್ ಮಾಡಿಕೊಂಡು ಚಾಚೂ ತಪ್ಪದೇ ಬಹಳ ಸಹನೆಯಿಂದ ನಿಷ್ಠೆಯಿಂದ ಎಲ್ಲವನ್ನೂ ಅಕ್ಷರಗಳಲ್ಲಿ ಹಿಡಿದು ಚೆನ್ನಾಗಿ ನಿರೂಪಿಸಿದ ಲೇಖಕಿ ಅಂಜನಾ ಹೆಗಡೆ ಅವರ ಕೊಡುಗೆ ನಿಜಕ್ಕೂ ಶ್ಲಾಘನೀಯ. ಸ್ವತಃ ಚೊಕ್ಕಾಡಿಯವರೇ ಬರೆದಿದ್ದರೆ ಇದರ ಶೈಲಿ ಹೇಗಿರುತ್ತಿತ್ತೋ ಗೊತ್ತಿಲ್ಲ. ಆದರೆ ಅನುಭವ ಕಥನಕ್ಕೆ ಶೈಲಿಯ ಹಂಗಿಲ್ಲ, ಅಲ್ಲಿ ಕಥೆ ಮತ್ತು ಅದು ಓದುಗನಿಗೆ ದಾಟಿಸಲು ಸುಲಭವಾಗುವಂತಹ ಒಂದು ಸಹಜ ಶೈಲಿ ಇದ್ದರೆ ಸಾಕಾಗುತ್ತದೆ. ಹೀಗಾಗಿ ಇದು ನಿರೂಪಕನ ಶೈಲಿ ಎಂದು ಅನ್ನಿಸದೇ ಲೇಖಕರೇ ಮೌಖಿಕವಾಗಿ ಹೇಳುತ್ತಾ ಸಾಗಿದಂತೆ ಭಾಸವಾಗಿಬಿಡುತ್ತದೆ. ಆ ಮಟ್ಟಿಗೆ ಇದು ಯಶಸ್ವಿಯಾಗಿದೆ.

ಎಲ್ಲಕ್ಕಿಂತ ಮುಖ್ಯವಾಗಿ ನನಗೆ ತಲೆಬಾಗಬೇಕು ಅನ್ನಿಸಿದ್ದು ಶ್ರೀಯುತ ಚೊಕ್ಕಾಡಿಯವರ ಜೋಡಿ ಹಕ್ಕಿಯಾದ, ಬಂಟಮಲೆಯ ಅಗೋಚರ ಶಿಖರದಂತಿರುವ ಶ್ರೀಮತಿ ಲಕ್ಷ್ಮೀ ಚೊಕ್ಕಾಡಿಯವರಿಗೆ!
ಪುಸ್ತಕದ ಹಲವೆಡೆ ಅವರ ಸಹಕಾರ, ತ್ಯಾಗ, ಸಹನೆ, ಸಜ್ಜನಿಕೆಯನ್ನು ಕೆಲವು ಘಟನೆಗಳ ಮೂಲಕ ಲೇಖಕರು ಸ್ಮರಿಸಿಕೊಂಡಿದ್ದಾರೆ. ಆದರೆ ಇಡೀ ಪಯಣದುದ್ದಕ್ಕೂ ಅವರು ಶ್ರೀಯುತ ಸುಬ್ರಾಯ ಚೊಕ್ಕಾಡಿಯವರ ಗುರಿಯಿಟ್ಟ ಸಾಧನೆಯ ಬಾಣದ ಹಿಂಭಾಗದ ಗರಿಯಂತೇ ಭಾಸವಾದರು! ಇಷ್ಟೆಲ್ಲಾ ಸಾಮಾಜಿಕ, ಸಾಹಿತ್ಯಕ ವೈವಿಧ್ಯಮ ಚಟುವಟಿಕೆಗಳನ್ನು ನಡೆಸುವಾಗ ಅವರು ಮನೆಯೊಳಗೆ ಏನೆಲ್ಲಾ ಪರಿಸ್ಥಿತಿ ಎದುರಿಸಿದರು, ಆ ಸಂಕಷ್ಟಗಳನ್ನು ನಿವಾರಿಸಿಕೊಂಡು ಉತ್ಸಾಹದಿಂದ ಸಂಗಾತಿಯ ಬದುಕಿಗೆ ಬಲವಾಗಲು ಅದ್ಯಾವ ಶಕ್ತಿಮಂತ್ರವನ್ನು ವಶಪಡಿಸಿಕೊಂಡಿದ್ದರು, ಎಲ್ಲವೂ ಆಗಿಯೂ ಎದುರಿಗೆ ಕಾಣಿಸಿಕೊಳ್ಳದೇ ನಿಜಾರ್ಥದಲ್ಲಿ ಶಿವನ ಶಕ್ತಿಯಂತೇ ಪ್ರವಹಿಸಿದ ಆ ಅಮ್ಮನ ಜೀವನಗಾಥೆಯನ್ನು, ಅನುಭವ ಕಥನವನ್ನು ಕೇಳುವ ಅತೀವ ಆಸಕ್ತಿ, ಉತ್ಸಾಹ, ನಿರೀಕ್ಷೆ ಮೂಡಿಬಿಟ್ಟಿತು. ಎಂದಾದರೊಂದು ದಿನ ಬಂಟಮಲೆಯ ತಪ್ಪಲಿಗೆ ಹೋದಲ್ಲಿ, ಅದಕ್ಕೆದುರಾಗಿ ಕೂತು ಅವರ ಅನುಭಾವಮೃತದ ಹನಿಗಳನ್ನು ಹೀರಿ ಬರುವ ಸಂಕಲ್ಪ ನನ್ನದಾಗಿದೆ.

ಲೇಖಕರೇ ಒಂದೆಡೆ ಬರೆದುಕೊಂಡಿರುವಂತೇ ‘I am free as the rooted tree is free’ ಎಂಬ ಲಾರೆನ್ಸಿನ ಸಾಲಿನಂತೇ ನಿಂತ ಕಡೆಯೇ ಬೇರನೂರಿ ಆಳ ಅಗಲ ಹರಡಿ ಶಾಪ ವಿಮೋಚನೆಗೆ ಧಾನ್ಯಸ್ಥರಾದ ಈ ಪಾರಿಜಾತದ ಮರದ ಕಥೆಯನ್ನು ಓದುವಾಗ ಹೊರಹೊಮ್ಮುವ ಭಾವಗಳು ಅನೇಕ ಮತ್ತು ಅನನ್ಯ.
ಅಂದು ಬಂಟಮಲೆ ಹೇಗೆ ಚೊಕ್ಕಾಡಿಯವರಿಗೆ ಮೇಲೇರಲು, ಒಳಗಣ ಬೇಗುದಿಯನ್ನು ಅಕ್ಷರಗಳ ಮೂಲಕ ಹೊರಹಾಕಿ ನಿರುಮ್ಮಳರಾಗಲು ಪ್ರೋತ್ಸಾಹಿಸಿತೋ, ಪ್ರೇರಣೆ ನೀಡಿತೋ, ಅಂತೆಯೇ ತಮ್ಮ ಮೇರು ವ್ಯಕ್ತಿತ್ವದ ಮೂಲಕ ಶ್ರೀಯುತ ಚೊಕ್ಕಾಡಿಯವರೂ ಸಹ ಕಿರಿಯ ಬರಹಗಾರರನ್ನು ಮುಲಾಜಿಲ್ಲದೇ ತಮಗೆ ಕಂಡ ತಪ್ಪನ್ನು ತಿದ್ದುತ್ತಿದ್ದಾರೆ. ಉತ್ಸಾಹದಿಂದ ಬರೆಯಲು ಹೊರಟವರಿಗೆ ಮತ್ತಷ್ಟು ಪ್ರೇರೇಪಿಸುತ್ತಾ, ಸಹನೆಯಿಂದ ತಮ್ಮೊಳಗಿನ ಜ್ಞಾನವನ್ನು ಧಾರೆಯೆರೆಯುತ್ತಿದ್ದಾರೆ. ಈ ಹನಿಗಳು ಹನಿಯುವ ಪಯಣವು ನಿರಂತರವಾಗಿರಲಿ ಎಂದು ಪ್ರಾರ್ಥನೆ.

#ಪುಸ್ತಕ_ಪರಿಚಯ #ಅನಿಸಿಕೆ

ಪುಸ್ತಕ: ಕಾಲದೊಂದೊಂದೇ_ಹನಿ...
(Subraya Chokkady ಅನುಭವ ಕಥನ)
ನಿರೂಪಣೆ : ಅಂಜನಾ ಹೆಗಡೆ
ಪ್ರಕಾಶನ : ವಿಕಾಸ ಪ್ರಕಾಶನ, ಬೆಂಗಳೂರು
ಪುಟಗಳು : 16+384
ಬೆಲೆ : 350/-

~ತೇಜಸ್ವಿನಿ ಹೆಗಡೆ.

ಮಂಗಳವಾರ, ಮಾರ್ಚ್ 7, 2017

B-ಪಾಸಿಟಿವ್ ಎಂಬ ಮೆಸ್ಸೇಜ್ ಕೊಡುವ B-ಕ್ಯಾಪಿಟಲ್

ಜೋಗಿಯವರ B-ಕ್ಯಾಪಿಟಲ್ ಪುಸ್ತಕವನ್ನೋದಿ ಮುಗಿಸಿದೆ. ತುಂಬಾ ಇಷ್ಟವಾಯಿತು... ಆಪ್ತವೆನಿಸಿತು. ಅವರ ಕುರಿತು ಗೌರವ ಹೆಚ್ಚಾಯಿತು ಈ ಪುಸ್ತಕವನ್ನು ಓದಿ. ಬರೆದರೆ ಇಂಥಾ ಬಯೋಗ್ರಾಫಿ (ಈ ಶೈಲಿಯಲ್ಲಿ, ತಂತ್ರದಲ್ಲಿ.. ಕಥಾವಸ್ತು ರೂಪದಲ್ಲಿ) ಬರೆಯಬೇಕು ಎಂದೆನಿಸಿತು. ಬೆಂಗಳೂರನ್ನು ನಮ್ಮ ಬಳಿ ತರುತ್ತಲೇ ಅವರನ್ನೂ ಓದುಗರಿಗೆ ಪರಿಚಯಸುತ್ತಾ ಹೋಗಿದ್ದಾರೆ. “ಸಾಕಪ್ಪಾ ಈ ಬೆಂಗಳೂರು.. ಇಷ್ಟ ಇಲ್ಲದಿದ್ದರೂ ಇರಬೇಕಾಗಿದೆ.. ಊರು ಕರೆಯುತ್ತಿದೆ..” ಎಂದು ಗೋಳಾಡಿದವರ ಪಟ್ಟಿಯಲ್ಲಿ ನಾನೂ ಇದ್ದೇನೆ. ಮದುವೆಗೂ ಮುನ್ನ ಬೆಂಗಳೂರಿಗೆ ಬಂದಿದ್ದು ಅನಿವಾರ್ಯ ಕಾರಣಕ್ಕೆ ಮಾತ್ರ ಆಗಿತ್ತು. ಒಂದು ದಿನದ ಆ ಒಂದೆರಡು ಭೇಟಿಯಲ್ಲೇ ಜಪ್ಪಯ್ಯಾ ಅಂದ್ರೂ ಈ ಊರು ಬೇಡ ಅಪ್ಪಾ ಅಂದು ಬಿಟ್ಟಿದ್ದೆ. ಆದರೆ ನಿಯತಿ ಬಿಡಲಿಲ್ಲ.. ಮದುವೆಯಾದ ಮೂರು ತಿಂಗಳಿಗೇ ಉಡುಪಿಯ ಸಂತೆಕಟ್ಟೆಯಲ್ಲಿದ್ದ ನಮ್ಮ ಬೆಚ್ಚನೆಯ ಗೂಡನ್ನು ಇಲ್ಲಿಗೆ ತಂದು ಹಾಕಿತ್ತು. ಹೊಸ ಊರು, ಹೊಸ ಜನ, ಹೊಸ ಬದುಕು ಎಂಬುದೆಲ್ಲವನ್ನೂ ಮೀರಿ, ನಾನು ಎಂದೂ ಬರಲು ಇಷ್ಟಪಡದಿದ್ದ ಊರಿಗೆ ಇಷ್ಟ ಪಟ್ಟವನ ಜೊತೆ ಬಂದಿದ್ದೆ. ಒಂದು ಗುಮಾನಿ, ಅನುಮಾನ, ಅಸಹನೆ, ನಿರಾಕರಣೆಯ ಜೊತೆಗೇ ಮೊದಲ ಕೆಲವು ವರ್ಷಗಳನ್ನು ಈ ಊರಲ್ಲಿ ಕಳೆದದ್ದಾಯಿತು. ಕ್ರಮೇಣ ಸಹಾನುಭೂತಿಯಿಂದ ಈ ಊರು ನನ್ನ ಸಂಭಾಳಿಸಿತೋ ಇಲ್ಲಾ ನಾನಿದನ್ನು ಒತ್ತಾಯದಲ್ಲಿ ಒಪ್ಪಿಕೊಂಡೆನೋ ತಿಳಿಯೆ. ಆದರೆ ಇಂದು ಇಲ್ಲೊಂದು ನಮದೇ ಮನೆ ಬೇಕೆಂದು ಬಯಸಿ, ಹಾಗೇ ಕಟ್ಟಿಕೊಂಡು.. ಬೆಂಗಳೂರು ಮತ್ತಷ್ಟು ಹಾಳಾಗದಿರಲಿ, ವೃಷಭಾವತಿ ಶುದ್ಧಳಾಗಲಿ, ಬೆಳ್ಳಂದೂರು ಕೆರೆ ಸ್ವಸ್ಥವಾಗಲಿ.. ಕುಡೀವ ನೀರಿನ ಸಮಸ್ಯೆ ನೀಗಲಿ.. ಕಾವೇರಿ ಜಗಳ ಆಗದಿರಲಿ.. ಇಂಬಿತ್ಯಾದಿ ಹಾರೈಕೆ ಮನಸು ನೀಡುತ್ತಿದೆ. ಇದು ನನ್ನ ಸ್ವಾರ್ಥವೋ ಇಲ್ಲಾ ನಿಜಕ್ಕೂ ಈ ಊರಿನ ಮೇಲೆ ಕಾಳಜಿ ಬಂದಿದೆಯೋ ಎಂದು ಸ್ಪಷ್ಟವಾಗಿ ಹೇಳಲು ಆಗದು. ಎರಡೂ ಇದ್ದಿರಬಹುದು. ಇಷ್ಟೆಲ್ಲಾ ಸ್ವ ವಿಮರ್ಶೆ, ಚಿಂತನೆಗೆ ಎಳೆಸಿದ್ದು ಇದೇ B-ಕ್ಯಾಪಿಟಲ್ ಪುಸ್ತಕ!

ಇಡೀ ಪುಸ್ತಕದಲ್ಲಿ ನನಗೆ ಬಲು ಮೆಚ್ಚುಗೆಯಾದ ಭಾಗವೆಂದರೆ “ಪರರ ಮನೆಯ ಪರಸಂಗ”. ಓದುತ್ತಿರುವಂತೇ ನಾನೇ ಅಲ್ಲಿ ಬರೆದಂತೆ ಭಾಸವಾಯ್ತು. ಬೆಂಗಳೂರಿಗೆ ಬಂದು ೧೨ ವರುಷಗಳಾದ್ವು. ಈವರೆಗೂ ಏಳು ಮನೆಗಳನ್ನು ಬದಲಾಯಿಸಿದ್ದೇವೆ. ಪ್ರತಿ ಸಲ ಬದಲಾಯಿಸುವಾಗಲೂ ಥತ್.. ಇದೆಂಥಾ ಗೋಳು.. ಕಷ್ಟದ ಬಾಳು.. ಸ್ವಂತದ್ದು ಅಂತ ಒಂದಿದ್ರೆ ಈ ಎಲ್ಲಾ ಪರದಾಟಕ್ಕೆ ತಿಲಾಂಜಲಿ ಆಗ್ತಿತ್ತು ಎಂದು ಹಳಿದಿದ್ದೇವೆ. ಆದರೆ ಇಲ್ಲಿ ಬರೆದಿರುವಂತೇ ಪ್ರತಿ ಸಲ ಮನೆ ಹುಡುಕುವಾಗಲೂ ಏನೋ ಕಾತುರ, ಖುಶಿ, ಕುತೂಹಲ ಮತ್ತು ನಿರೀಕ್ಷೆ.. ಈ ಸಲದ ಮನೆ ಹೇಗಿದ್ದಿರಬಹುದು? ಯಾವ ಆಕಾರ, ಬಣ್ಣ, ನೆರೆ-ಕೆರೆ, ಗೇಟು, ಹೂದೋಟ, ಜಾಗವನು ಹೊಂದಿರಬಹುದು? ಎಂಬೆಲ್ಲಾ ಕಾತುರತೆಯಿಂದ ಮನೆ ಹುಡುಕುತ್ತಿದ್ದ ಆ ಜೀವಂತಿಕೆಗೆ ಫುಲ್ಸ್ಟಾಪ್ ಬಿದ್ದೀಗ ವರುಷ ಕಳೆದಿದೆ! ನಮ್ಮದೇ ಮನೆಯಾಗಿ ನಾವು ಸ್ಥಳಾಂತರಗೊಂಡಿದ್ದೇವೆ. ಇಲ್ಲೀಗ ಬದುಕು ಒಂದು ಗಮ್ಯವನ್ನು ಸೇರಿದಂತೆ ಆಗಿದೆ. ಅದೇ ಬಾಡಿಗೆ ಮನೆ ಹುಡುಕುವಾಗ “ಇದು ಬೇಡ.. ಸರಿ ಇಲ್ಲ.. ಅಲ್ಲಿ ಸಮಸ್ಯೆ ಇದೆ..” ಎಂದೆಲ್ಲಾ ಕಡ್ಡಿಗೂ ಗುಡ್ಡ ಮಾಡಿಯೋ.. ಥಟ್ಟನೆ ತಿರಸ್ಕರಿಸಿ, ಮುಂದೆ ಬೇರೆ ಹುಡುಕುವ ಗತ್ತು, ಗಮ್ಮತ್ತು ಇತ್ತು. ಈಗ ಇದ್ದಿರುವ ಮನೆಯೇ ಈವರೆಗೆ ನಾವು ಉಳಿದಿದ್ದ ಮನೆಯೆಲ್ಲದುಕ್ಕಿಂತಲೂ ಅದ್ಭುತ, ಚೆಂದ, ಸರಿಯಾಗಿದೆ ಎಂದುಕೊಳ್ಳಲೇಬೇಕು ಮತ್ತು ಇದು ನಿಜವೂ ಆಗಿದ್ದಿರಬಹುದು. “ಒಳ್ಳೆಯ ಮಾಲೀಕ ಸಿಗುವುದು ಬಾಡಿಗೆದಾರದ ಪುಣ್ಯ, ಒಳ್ಳೆಯ ಬಾಡಿಗೆದಾರ ಸಿಗುವುದು ಮಾಲೀಕನ ಪುಣ್ಯ” ಎಂಬ ಸಾಲು ಬಹಳ ಇಷ್ಟವಾಯಿತು. ಇದನ್ನೋದುತ್ತಿದ್ದಂತೇ ಮನಸು ಬೇರೇನನ್ನೋ ಚಿಂತಿಸಿಬಿಟ್ಟಿತು. ಆತ್ಮ ದೇಹವನ್ನು ತ್ಯಜಿಸಿದ ಮೇಲೆಯೂ ಅದಕ್ಕೆ ಹಳೆಯ ಜನ್ಮದ ಸ್ಮರಣೆಯ, ಪುಣ್ಯ, ಪಾಪ ಫಲಗಳ ವಾಸನೆ ಮೆತ್ತಿಯೇ ಇರುತ್ತದೆ. ಅದರಿಂದ ಬಿಡುಗಡೆ ಬೇಕೆಂದರೆ ಮುಕ್ತಿ ಪ್ರಾಪ್ತಿಯಾಗಬೇಕು. ಇಲ್ಲಾ ಅದು ಮತ್ತೆ ಮತ್ತೆ ಈ ಭವಕ್ಕೇ ಮರಳಿ ಹೊಸ ದೇಹ ಧರಿಸುತ್ತಿರುತ್ತದೆ ಎಂದು ಎಲ್ಲೋ ಓದಿದ್ದೆ/ಹಿರಿಯರಿಂದಲೂ ಕೇಳಿದ್ದೆ. ಅದು ನೆನಪಾಯಿತು. ಒಂದೊಮ್ಮೆ ಇದು ನಿಜವಾಗಿದ್ದರೆ.. ಒಳ್ಳೆಯ ಸ್ಮರಣೆ, ಉತ್ತಮ ವಿಚಾರಗಳಿಂದ ಮೆತ್ತಿರುವ ಆತ್ಮಕ್ಕೆ ಸದೃಢ ದೇಹ ಸಿಗುವುದು.. ಅದೇ ಒಳ್ಳೆಯ ಕಾಯಕ್ಕೆ ಅಷ್ಟೇ ಉತ್ತಮ ಆತ್ಮ ದೊರಕುವುದು ಅದೂ ಪುಣ್ಯವೇನೋ ಎಂದೆನಿಸಿತು. 

ಕೆಲಸದ ಹುಡುಗಿಯ ಪ್ರಕರಣ, ಸೈಕಲ್ ಪ್ರಕರಣ, ಮಗಳಿಗೊಂದು ಗೊಂಬೆ, ನಾಯಿ ಮತ್ತು ಪಾಪಪ್ರಜ್ಞೆ - ಈ ಭಾಗಗಳು ಮಾತ್ರ ಬಹಳ ಕಾಡುತ್ತಿವೆ.. ಕಾಡುವಂಥವು ಕೂಡ.

ಒಂದೊಳ್ಳೆಯ ಓದನ್ನು, ಪ್ರಾಮಾಣಿಕವಾಗಿ ಓದುಗರಿಗೆ ಕೊಟ್ಟಿದ್ದಕ್ಕೆ ಜೋಗಿಯವರಿಗೆ ಧನ್ಯವಾದಗಳು. ಅವರ ಬೆಂಗಳೂರು ಮಾಲಿಕೆಯ ಮುಂದಿನ ಭಾಗಕ್ಕಾಗಿ ಕಾಯುತ್ತಾ...

~ತೇಜಸ್ವಿನಿ.

ಸೋಮವಾರ, ಫೆಬ್ರವರಿ 20, 2017

ಅಂಗೈಯಲ್ಲಿ ಅಡುಗೆ ಮನೆ....

ಈ ವಾರದ (೧೯-೦೨-೨೦೧೭) ನನ್ನ ಉದಯವಾಣಿ ಅಂಕಣವನ್ನೋದಿ ಬಹಳ ಜನ ನನ್ನ ಹೊಸ ಮನೆಯ ಅಡುಗೆಮನೆಯ ವಿಶಿಷ್ಟ ಜೋಡಣೆಯನ್ನು ನೋಡ ಬಯಸಿದ್ದರಿಂದ ಅದರ ಚಿತ್ರಗಳನ್ನು ವಿವರಣೆ ಸಮೇತ ಹಾಕುತ್ತಿದ್ದೇನೆ. ಇದರ ಉದ್ದೇಶ, ನಿಂತು ಅಡುಗೆ ಮಾಡಲು ಅಸಾಧ್ಯವಾದವರು ಇಂಥದ್ದೊಂದು ಸಾಧ್ಯತೆಯ ಬಗ್ಗೆ ಅರಿತುಕೊಳ್ಳಲೆಂಬುದೇ ಆಗಿದೆ. ಅಲ್ಲದೇ, ಹಳೆಯ ಕಾಲದಲ್ಲೂ ಇಂಥದ್ದೇ ಮಾದರಿಯಿತ್ತು.. ಫಿಸಿಯೋ ಥೆರಪಿಸ್ಟ್ಸ್ ಕೂಡ ಸ್ವಸ್ಥರಾಗಿದ್ದವರೂ ಬಹು ಕಾಲ ನಿಂತು ಅಡುಗೆ ಮಾಡುವುದು ಒಳ್ಳೆಯದಲ್ಲ ಆರೋಗ್ಯಕ್ಕೆ ಎಂದೇ ಹೇಳುತ್ತಾರೆ. ಅದಕ್ಕೆಂದೇ ಬಹುಶಃ ಹಿಂದೆ ಕುಳಿತಡಿಗೆಯೇ ಮಾಡುತ್ತಿದ್ದರು!

ಚಿತ್ರ - ೧




ಇದು ನನ್ನ ಅಡಿಗೆ ಕಟ್ಟೆ..  ಸ್ಟೂಲ್ ಇದೆಯಲ್ಲಾ .. ಅದರ ಮೇಲೆ ಕುಳಿತು ಅಡುಗೆ ಮಾಡುತ್ತೇನೆ.. ಒಮ್ಮೊಮ್ಮೆ ಸೀದಾ ಕಟ್ಟೆಯ ಮೇಲೇ ಕುಳಿತು ಒಲೆಯನ್ನು ನನ್ನತ್ತ ತಿರುಗಿಸಿಕೊಂಡು ಮಾಡುವುದೂ ಇದೆ. ಒಲೆಯ ಪೈಪ್ ಬಹಳ ಉದ್ದವಿಟ್ಟುಕೊಂಡು ಸಿಕ್ಕಿಸಿಕೊಂಡಿರುವೆ. ಬೇಕಾದಾಗ ಸಡಿಲಗೊಳಿಸಿಕೊಂಡು ಎಷ್ಟು ದೂರದವರೆಗೂ ಎಳೆದುಕೊಳ್ಳಲು ಸಹಕಾರಿಯಾಗುವಂತೆ. ಅಲ್ಲಿರುವ ಎಲ್ಲಾ ಸಾಮಾನುಗಳೂ ನನಗೆ ಸಿಗುವಂತಿವೆ. ಅಲ್ಲೇ ಪಕ್ಕದಲ್ಲಿ ಕೆಳಗೆ ಸಿಂಕ್ ಇದೆ.

ಚಿತ್ರ - ೨




ಈ ಚಿತ್ರದಲ್ಲಿ ಫ್ರಿಜ್ ಇದೆ. ಅದರ ಬಾಗಿಲು ಕಿಚನ್ ಎಂತ್ರೆನ್ಸ್ ಅಭಿಮುಖವಾಗಿಟ್ಟುಕೊಂಡಿರುವೆ.. ಕಾರಣ.. ವ್ಹೀಲ್ ಚೇರಿನಲ್ಲಿ ಸೀದಾ ಬಂದೂ ಬಾಗಿಲು ತೆಗೆದು ಬೇಕಾದ್ದನ್ನು ಪಡೆಯುವಂತೆ ಇಲ್ಲಾ ಕುಳಿತಿರುವಾಗಲೂ ಸ್ಟೂಲ್ ನಿಂದಲೇ ಬಾಗಿಲು ತೆಗೆದುಕೊಳ್ಳುವಂತೇ.. ಸದ್ಯಲ್ಲೇ ಅಂಥದ್ದೇ ಮರದ ಪುಟ್ಟ ಸ್ಟೂಲ್ ಮಾಡಿಸಿ ಅದ ಕಾಲ್ಗಳಿಗೆ ಪುಟ್ಟ ವ್ಹೀಲ್ಸ್ ಹಾಕಿಕೊಂಡು ಕಿಚ ಸುತ್ತಾ ಕುಳಿತಲ್ಲೇ ತಿರುಗುವಂತೇ ಮಾಡಿಸಿಕೊಳ್ಳಬೇಕೆಂದಿರುವೆ. ಆಫೀಸ್ ಚೇರ್ನಂತೇ. ಅದು ಎತ್ತರವಾಗುತ್ತದೆ.. ಜಾಗ ಬಹಳ ತಿನ್ನುತ್ತದೆ.. ಎಕ್ಸ್‍ಪೆನ್ಸಿವ್ ಕೂಡ. ಅದೇ ಇಂಥಾ ಪುಟ್ಟ ಸ್ಟೂಲ್ ಸಕಲ ರೀತಿಯಲ್ಲೂ ಅನುಕೂಲಕರ. ಯಾರೂ ಬಳಸಬಹುದು. ಉಳಿತಾಯವೂ ಕೂಡ.. ವ್ಹೀಲ್ ಹಾಕಿಸಿಕೊಂಡರೆ ಆಯಿತು ಕೆಳಗೆ.

ಚಿತ್ರ - ೩




ಇದು ಪಕ್ಕದಲ್ಲೇ ಇರುವ ತುಸು ಎತ್ತರದ ಅಡುಗೆ ಕಟ್ಟೆ. ಆದರೆ ಅದರ ಕೆಳಗೆ ಇರುವುದೆಲ್ಲಾ ಕಪಾಟುಗಳು.. ನನಗೆ ಸಿಗುವ ರೀತಿಯಲ್ಲಿವೆ. ಮೇಲಿನ ಕಟ್ಟೆಯಲ್ಲಿ ಬಾಸ್ಕೆಟ್ ಇಡುವೆ. .ವ್ಹೀಲ್‍ಚೇರಿನಲ್ಲಿ ಬಂದಾಗ ಸಿಗುವಂತೆ. ಒಮ್ಮೊಮ್ಮೆ ಅಮ್ಮ ಅಡುಗೆ ಅಲ್ಲೂ ಒಂದು ಸಿಂಕ್ ಇದೆ.. ಕೆಳಗೆ ಬಗ್ಗಲು ತೊಂದರೆ ಆಗುವವರಿಗೆ ಮೇಲೆಯೇ ಕೈ ತೊಳೆಯಲೆಂದು ಒಂದು ಪುಟ್ಟ ಸಿಂಕ್.

ಚಿತ್ರ ೪



ಸಿಂಕ್ ತುಂಬಾ ತಳಮಟ್ಟದಲ್ಲಿದೆ.. ಅಡುಗೆ ಕಟ್ಟೆಯನ್ನು ನಾನು ತೊಳೆದರೂ ನೀರೆಲ್ಲಾ ಅದರೊಳಗೇ ಬೀಳುವಂತಿದೆ. ಅದರ ಮೇಲೆಯೇ ಸೌಟು, ಚಮಚಗಳನ್ನು ತೂಗುಹಾಕುವ ಸ್ಟ್ಯಾಂಡ್. ಸಿಂಕ್ ಪೈಪ್ ಕೂಡ ಅದಕ್ಕೆ ಪೂರಕವಾಗಿ ಬೇಕಾದಂತೆ ಹಾಕಿಕೊಂಡಿರುವೆ. ನೆನಪಿರಲಿ.. ಇದೂ ಅಷ್ಟು ಎಕ್ಸ್‌ಪೆನ್ಸಿವ್ ಅಲ್ಲಾ. :)


ಚಿತ್ರ ೫


ಇದು ಕುಡಿವ ನೀರಿನ ಫ್ಲಿಲ್ಟರ್. ಇದೂ ತಗ್ಗಿನಲ್ಲಿದೆ. ಇದರ ನೀರು ಹೊರಗೆ ಹೋಗಲು ಪೈಪ್ ಕೂಡ ಕೆಳಗಿರಿಸಲಾಗಿದೆ. ಕಟ್ಟೆಯ ಮೇಲೆ ಕುಳಿತರೆ ಸರಾಗವಾಗಿ ನೀರು ಸಿಗುವುದು.

ಚಿತ್ರ ೬




ಫ್ರಿಜ್ ಪಕ್ಕದಲ್ಲೇ ಒಂದು ಪುಟ್ಟ ಕಪಾಟು. ನನಗೇ ಸಿಗುವಷ್ಟು ಎತ್ತರದಲ್ಲಿದೆ. ಬೇಕಾದ ರೀತಿಯಲ್ಲಿ ಡಿಸೈನ್ ಮಾಡಿಸಿ ಮಾಡಿಕೊಂಡಿದ್ದು.


ಚಿತ್ರ ೭


ಅಡುಗೆ ಮನೆಯ ಪಕ್ಕದಲ್ಲೇ ಪುಟ್ಟ ಸ್ಟೋರೇಜ್, ಹಾಗೆಯೇ ಅತ್ತ ಕಡೆ (ಮಿಶನ್ನಿಗೆ ಅಭಿಮುಖವಾಗಿದೆ.. ಇಲ್ಲಿ ಸ್ಪಷ್ಟವಾಗಿ ಕಾಣುತ್ತಿಲ್ಲ..) ಕುಳಿತೇ ಪಾತ್ರೆ, ಸಣ್ಣ ಪುಟ್ಟ ಬಟ್ಟೆ ತೊಳೆಯುವ ಜಾಗ ಮತ್ತು ವಾಶಿಂಗ್ ಮೆಶಿನ್ ಇಟ್ಟಿದ್ದೇವೆ. ನಾನೇ ಬಟ್ಟೆಗಳನ್ನು ಕೆಳಗೇ ಕುಳಿತೂ ತೊಳೆಯಬಹುದು.. ಇಲ್ಲಾ ಮಿಶಿನ್ನಿಗೆ ಹಾಕಿ ತೊಳೆಯಲೂಬಹುದು. ಇನ್ನು ಬಹು ಮುಖ್ಯವಾಗಿ ಅಲ್ಲಿ ಹಾಲಿನಲ್ಲಿ ಚೌಕಾಕಾರದ ಬಾಗಿಲು ಕಾಣಿಸುವುದೇ? ಅದೇ ಲಿಫ್ಟ್ ಬಾಗಿಲು. ಕಡಿಮೆ ವೆಚ್ಚದಲ್ಲಿ ಬೇಸಿಕ್ ಸೆಟ್ಟಿಂಗ್ಸ್ ಮೂಲಕ ಸ್ಪೆಶಲ್ ಆಗಿ ಚೆನ್ನೈನಿಂದ ಜನ ಕರೆಸಿ ಡಿಸೈನ್ ಮಾಡಿಸಿದ್ದು. ಮಾಮೂಲಿ ಲಿಪ್ಟ್ ಆದರೆ ತುಂಬಾ ಖರ್ಚಾಗುವುದು.

ಇದಿಷ್ಟು ನನ್ನ ಪುಟ್ಟ ಅಡುಗೆಮನೆ :) ನಮ್ಮದು ೩೦*೪೦ ಕಾರ್ನರ್ ಸೈಟ್. ಅದರೊಳಗೇ ಸಾಕಷ್ಟು ವಿಶಾಲವಾಗಿ.. ಸರಾಗವಾಗಿ ವ್ಹೀಲ್‍ಚೇರ್ ತಿರುಗುವಂತೇ, ಜೊತೆಗೇ ನನಗೆ ಬೇಕಾದ ರೀತಿಯಲ್ಲಿ.. ಕೈಯಳತೆಗೆ ಎಟಕುವ ರೀತಿಯಲ್ಲಿ ಆದಷ್ಟು ಡಿಸೈನ್ ಮಾಡಿಸಿಕೊಂಡಿದ್ದು. ಬದುಕಲು ಬೇಕಾಗುವ ಅನುಕೂಲಕ್ಕೆ ಪ್ರಧಾನ ಆದ್ಯತೆ ನೀಡಿದ್ದೇವೆಯೇ ಹೊರತು ಯಾವುದೇ ರೀತಿಯ ದುಬಾರಿ ಇಂಟೀರಿಯರಿಗಲ್ಲ. ಈ ಚಿತ್ರಗಳಿಂದ, ವಿವರಣೆಯಿಂದ ಯಾರೋ ಒಬ್ಬರಿಗೆ ಅನುಕೂಲವಾದರೂ ಅದೇ ಸಂತೋಷ. ಹೆಚ್ಚಿನ ಮಾಹಿತಿಗೆ ನನಗೆ ಮೈಲ್ ಮಾಡಬಹುದು. ಪ್ರಾಮಾಣಿಕ, ನೈಜ ಮೈಲ್‍ಗಳಿಗೆ ಖಂಡಿತ ಉತ್ತರಿಸುವೆ..


~ತೇಜಸ್ವಿನಿ ಹೆಗಡೆ. 

ಶುಕ್ರವಾರ, ಏಪ್ರಿಲ್ 15, 2016

ಶಬರಿ


“ಕಾದಿರುವಳು ಶಬರಿ, ರಾಮ ಬರುವನೆಂದು,
ತನ್ನ ಪೂಜೆಗೊಳುವನೆಂದು..” - ವಿ.ಸೀತಾರಮಯ್ಯನವರ ಈ ಸುಪ್ರಸಿದ್ಧ ಹಾಡನ್ನು ಕೇಳದವರೇ ಇಲ್ಲ ಎನ್ನಬಹುದು. ಅಷ್ಟು ಜನಪ್ರಿಯ ಹಾಡಿದು. ಈ ಹಾಡಿನಷ್ಟೇ ಜನಪ್ರಿಯ ರಾಮಾಯಣದಲ್ಲಿ ಬರುವ ಶಬರಿಯ ಪಾತ್ರವೂ ಕೂಡ.
pic courtesy : http://devdutt.com/

ಮೊತ್ತ ಮೊದಲ ಬಾರಿ ರಾಮಾಯಣ ಕಥೆಯನ್ನೋದುವಾಗ ನನ್ನನ್ನು ಬಹುವಾಗಿ ಸೆಳೆದದ್ದು ಶಬರಿಯ ಕಥೆಯೆ. ಶರಣಾಗತಿಯಿಂದ ಕೂಡಿದ ಭಕ್ತಿ ಅದೆಷ್ಟು ಶ್ರೇಷ್ಠವೆಂದು ತೋರಿದ ಕಥಾನಕವಿದು. ‘ಪುರಾಣ ಭಾರತಕೋಶ’ ಪುಸ್ತಕದಲ್ಲಿ ಉಲ್ಲೇಖಿಸಿರುವಂತೆ, ಶಬರಿ ಆನೆಗೊಂದಿಯಲ್ಲಿದ್ದ ಓರ್ವ ಬೇಡತಿ. ಬೇಡರ ರಾಜನ ಮಗಳಾಗಿದ್ದ ಶಬರಿ ವೈರಾಗ್ಯದಿಂದ ಮನೆಯನ್ನು ತೊರೆದು, ಮಾತಂಗ ಮುನಿಯ ಶಿಷ್ಯೆಯಾಗುತ್ತಾಳೆ. ಮುಂದೆ ಮುಕ್ತಿಗಾಗಿ ಆಕೆ ಪರಿತಪಿಸುತ್ತಿದ್ದಾಗ, ಋಷಿವರ್ಯರು ‘ನೀನು ಶ್ರೀರಾಮನ ಜಪ ಮಾಡಿದರೆ, ಆತ ನಿನ್ನ ಬಳಿ ಬರುತ್ತಾನೆ. ಹಾಗೆ ಬಂದಾಗ, ಅವನನ್ನು ಪ್ರೀತ್ಯಾದರಗಳಿಂದ ಸತ್ಕರಿಸಿದರೆ ಖಂಡಿತ ಮುಕ್ತಿ ಪ್ರಾಪ್ತಿಯಾಗುವುದು’ ಎನ್ನಲು ಅಂತೆಯೇ ಶಬರಿ ರಾಮನಿಗಾಗಿ ಉತ್ಕಠ ಭಕ್ತಿಯಿಂದ ಕಾಯುತೊಡಗುತ್ತಾಳೆ. ಮೂಲ ವಾಲ್ಮೀಕಿ ರಾಮಾಯಣದಲ್ಲಿ ಬರುವ ಶಬರಿಯ ಕಥೆಗೂ, ಪುರಾಣಗಳಲ್ಲಿ ಬರುವ ಅವಳ ಕಥನಕ್ಕೂ ಕೆಲವು ವ್ಯತ್ಯಾಸಗಳಿವೆ.   

ವಾಲ್ಮೀಕಿ ರಾಮಾಯಣದಲ್ಲಿ ಚಿತ್ರಿಸಲ್ಪಟ್ಟಿರುವಂತೇ, ರಾಮನ ಆಗಮನಕ್ಕಾಗಿ ಕಾತುರಳಾಗಿದ್ದ ಶಬರಿ, ಶ್ರೀರಾಮ ಬರಲು, ಆತನಿಗೆ ಅರ್ಘ್ಯಪಾದ್ಯಗಳನ್ನಿತ್ತು ಉಪಚರಿಸಿ, ಬಗೆ ಬಗೆಯ ಪದಾರ್ಥಗಳನ್ನು ತಿನ್ನಲು ನೀಡಿ ಸತ್ಕರಿಸುತ್ತಾಳೆ. ಇದರಿಂದ ಸಂಪ್ರೀತನಾದ ರಾಮ ಅವಳಿಗೆ ಮುಕ್ತಿ ಕರುಣಿಸುತ್ತಾನೆ. 

ಆದರೆ ಪದ್ಮಪುರಾಣದಲ್ಲಿರುವಂತೇ, ಶಬರಿ ರಾಮನನ್ನು ಸಂಪ್ರೀತಿಗೊಳಿಸಲು, ಪ್ರತಿ ದಿವಸ ಕಾಡಿಗೆ ಹೋಗಿ, ಬೋರೆ ಹಣ್ಣುಗಳನ್ನು ಕೊಯ್ದು, ಹಣ್ಣು ಸಿಹಿಯೇ? ಹುಳಿಯೇ? ಎಂದರಿಯಲು ಚೂರು ಕಚ್ಚಿ ತಿಂದು ನೋಡಿ, ಸಿಹಿಯಿರುವ ಹಣ್ಣುಗಳನ್ನೆಲ್ಲಾ ಆಯ್ದು, ಬೇರ್ಪಡಿಸಿ, ರಾಮನಿಗಾಗಿ ತೆಗೆದಿಡುತ್ತಾಳೆ. ರಾಮ ಇಂದು ಬರುವ, ನಾಳೆ ಬರುವ ಎಂದುಕೊಳ್ಳುತ್ತಲೇ, ಇನಿತೂ ಬೇಸರಿಸದೇ ಪ್ರತಿ ದಿವಸ ಅವನಿಗಾಗಿ ಈ ಹಣ್ಣುಗಳನ್ನಾಯ್ದು ಇಡುವ ಕಾರ್ಯವನ್ನು ಮಾಡುತ್ತಿರುತ್ತಾಳೆ. ಅಂತೂ ಕೊನೆಗೆ ಆಕೆಯ ಈ ನಿಃಸ್ವಾರ್ಥ ತಪಸ್ಸಿಗೆ ಮೆಚ್ಚಿ ಬರುವ ರಾಮ, ಅವಳು ಎಂಜಲು ಮಾಡಿಟ್ಟ ಆ ಹಣ್ಣುಗಳನ್ನೇ ಸಂತೋಷದಿಂದ ಸ್ವೀಕರಿಸಿ ಅವಳಿಗೆ ಮುಕ್ತಿ ಕರುಣಿಸುತ್ತಾನೆ.

ಇಲ್ಲಿ ನಮ್ಮನ್ನು ಹಿಡಿದಿಡುವುದು ಪದ್ಮಪುರಾಣದಲ್ಲಿ ಬರುವ ಶಬರಿಯ ಕಥಾನಕವೇ! ಶಬರಿಯದು ಇಲ್ಲಿ “ಮುಗ್ಧ ಭಕ್ತಿ” ಮತ್ತು “ಅಖಂಡ ತಾಳ್ಮೆ”!. ತನ್ನ ದೇವರಿಗೆ ಒಳ್ಳೆಯ ಸಿಹಿಯ ಹಣ್ಣನ್ನಷ್ಟೇ ಕೊಡಬೇಕು, ಆ ಮೂಲಕ ಸತ್ಕರಿಸಬೇಕೆಂಬ ಮುಗ್ಧತೆಯಷ್ಟೇ ಅವಳಲ್ಲಿದ್ದಿದ್ದು. ಅದಕ್ಕಾಗಿ ಅವಳು ವರುಷಗಳವರೆಗೂ ಕಾಯುತ್ತಾ ಕುಂತಳು. ತನ್ನ ಎಂಜಲನ್ನು ಕೊಡಬಹುದೇ? ಯಾರಿಗಾದರೂ ಎಂಜಲನ್ನು ಬಡಿಸುತ್ತಾರೆಯೇ? ಅದು ಸೂಕ್ತವೇ? ಎಂಬಿತ್ಯಾದಿ ಜಿಜ್ಞಾಸೆಗೆ ಹೋಗದೇ, ರಾಮನಿಗೆ ಭಕ್ತಿಯಿಂದ ಹಣ್ಣುಗಳನ್ನು ಅರ್ಪಿಸಿದ್ದು. ಶ್ರೀರಾಮನೂ ಅಷ್ಟೇ... ಇನಿತೂ ಬೇಸರಿಸದೇ, ಆ ಮುಗ್ಧ ಭಕ್ತೆಯ ಭಕ್ತಿಗೆ ಒಲಿದು ಸಂತಸದಿಂದಲೇ ಸ್ವೀಕರಿಸಿದ್ದು. ಇಂಥ ಭಕ್ತಿಗೆ ಕಪಟ, ಗೊಂದಲ, ಸರಿ ತಪ್ಪುಗಳ ಪರಿವೆಯೇ ಇರದು. ಅಲ್ಲಿರುವುದು ನಿರ್ಮಲ ಪ್ರೀತಿ, ಶರಣಾಗತಿ ಅಷ್ಟೇ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ್ದೂ ಇದೇ...- “ಯಾವ ಭಕ್ತನು ನನಗೆ ಎಲೆ, ಹೂವು, ಹಣ್ಣು, ನೀರು ಇತ್ಯಾದಿಗಳನ್ನು ಭಕ್ತಿಯಿಂದ, ಪರಿಶುದ್ಧ ಮನಸ್ಸಿನಿಂದ ಅರ್ಪಿಸುತ್ತಾನೋ, ನಾನದನ್ನು ಪ್ರೀತಿಯಿಂದ ಸೇವಿಸುತ್ತೇನೆ...” ಎಂದು.

ಒಂದು ಪುಟ್ಟ ಉದಾಹರಣೆಯನ್ನು ತೆಗೆದುಕೊಂಡು ಹೇಳಬೇಕೆಂದರೆ... ಹೇಗೆ ಪುಟ್ಟ ಮಕ್ಕಳು ತಾವು ಕಚ್ಚಿ ತಿಂದ ತಿನಸನ್ನೇ ಅರ್ಧ ತಿಂದು, ತಮ್ಮ ಪ್ರೀತಿಯ ಅಪ್ಪ, ಅಮ್ಮನೂ ತಿನ್ನಬೇಕೆಂಬ ಆಶಯದಿಂದ, ಅವರ ಬಾಯೊಳಗೆ ತುರುಕಿಸಿ ನಗುತ್ತಾರೋ, ಸಂತಸ ಪಡುತ್ತಾರೋ ಅಂಥ ಭಾವ, ಭಕ್ತಿಯೇ ನನಗೆ ಶಬರಿಯಲ್ಲೂ ಕಾಣಿಸಿದ್ದು. ಹೆತ್ತ ಅಮ್ಮ ಅಪ್ಪನೂ ತಮ್ಮ ಮಗುವು ಪ್ರೀತಿಯಿಂದ ಬಾಯಿಗೆ ಹಾಕಲು ಬಂದಾಗ, ಎಂಜಲೆಂದು ಪರಿಗಣಿಸದೇ, ಥೂ ಛೀ ಎನ್ನದೇ, ತಿಂದುಬುಡುತ್ತಾರೆ... ಮುದ್ದಾಡುತ್ತಾರೆ... ಆ ಮಗುವಿಗೆ ಸಂತೃಪ್ತಿ ಕೊಡುತ್ತಾರೆ. ಅದೇ ಚಿತ್ರಣ ನನಗೆ ಶಬರಿಯಲ್ಲೂ ಕಂಡಿದ್ದು. ಅಂತಹ ಭಕ್ತಿಯ ಪರಾಕಷ್ಠೆಗೆ ಭಗವಂತ ಒಲಿಯದೇ ಇರುವನೇ?

ಇನ್ನು ಈ ಪುರಾಣ ಕಥೆಗಳೆಲ್ಲಾ ಕೇವಲ ಕಾಲ್ಪನಿಕ, ರಾಮಾಯಣ ಒಂದು ಸುಂದರ ಖಂಡ ಕಾವ್ಯ ಅಷ್ಟೇ.. ನಿಜದಲ್ಲಿ ಆಗದ್ದು - ಇತ್ಯಾದಿ ಏನೇ ಪ್ರವರಗಳಿದ್ದರೂ, ಹಾಗೆಲ್ಲಾ ವಾದಿಸುವವರನ್ನೂ ಅಪ್ಪಿಕೊಳ್ಳುತ್ತಾ, ರಾಮಾಯಣದಲ್ಲಿ ಬರುವ ಇಂತಹ ಅನೇಕ ಪಾತ್ರಗಳೊಳಗಿನ ಧನಾತ್ಮಕತೆಯನ್ನು ಸ್ವೀಕರಿಸುವುದರಿಂದ ಕೆಡುಕಂತೂ ಆಗದು ಎಂಬುದನ್ನೂ ಸಾರೋಣ! ಬೇಡತಿಯಾಗಿದ್ದ ಶಬರಿಯ ಎಂಜಲನ್ನು ಸ್ವೀಕರಿಸಿದ ರಾಮನ ಈ ಕಥೆಯಿಂದ ನಾವು - ಈ ಮೇಲು, ಕೀಳು, ಎಂಬ ತಾರತಮ್ಯ ಮಾಡದೇ, ನಿಷ್ಕಲ್ಮಶ ಮನಸಿನ ವ್ಯಕ್ತಿಗಳನ್ನು, ಅವರ ಪರಿಶುದ್ಧ ಪ್ರೀತಿಯನ್ನು ಅಷ್ಟೇ ತೆರೆದ ಮನಸ್ಸಿನಿಂದ, ಸಂತೋಷದಿಂದ ಒಪ್ಪಿ, ಅಪ್ಪಿಕೊಳ್ಳಬೇಕು ಎಂಬ ಅತ್ಯುತ್ತಮ ನೀತಿಯನ್ನು ಶಬರಿಯ ಕಥೆಯಿಂದ ಕಲಿಯುತ್ತೇವೆ. 

~ತೇಜಸ್ವಿನಿ ಹೆಗಡೆ.

ಶುಕ್ರವಾರ, ಏಪ್ರಿಲ್ 1, 2016

ಶೂದ್ರ ತಪಸ್ವಿ

“ಸಮಾಹಿತ’ ಎನ್ನುವ ದ್ವಿಪಾಕ್ಷಿಕ ಪತ್ರಿಕೆಯಲ್ಲಿ ಪ್ರಕಟಗೊಂಡಿರುವ ಮಾಲಿನಿ ಗುರುಪ್ರಸನ್ನ ಅವರ ಈ ವಿಮರ್ಶಾತ್ಮಕ, ಚಿಂತನಶೀಲ ಉತ್ತಮ ಲೇಖನವನ್ನು ಎಲ್ಲರ ಓದಿಗಾಗಿ ನನ್ನ ಮಾನಸದಲ್ಲಿ ಪ್ರಕಟಿಸುತ್ತಿದ್ದೇನೆ.

~ತೇಜಸ್ವಿನಿ.
~~~~~~~~~~~~~~~~~~~~~~

ಶೂದ್ರ ತಪಸ್ವಿ - ನನ್ನ ಓದು


ಶೂದ್ರ ತಪಸ್ವಿ - ಇದು ನಿಸ್ಸಂದೇಹವಾಗಿ ನನ್ನ ಪ್ರಮುಖ ಓದುಗಳಲ್ಲೊಂದು. ಹಾಗೆ ನೋಡಿದರೆ ಈ ಕೃತಿಯ ಬಗ್ಗೆ ಮೊದಮೊದಲು ನೂರು ಅಸಮಾಧಾನಗಳಿದ್ದವು. ಓದಿದ್ದನ್ನು ಮನಸ್ಸು ಒಪ್ಪಿಕೊಳ್ಳಲು ನಿರಾಕರಿಸುತ್ತಿತ್ತು. ಓದು ಕಲಿಸಿದ ತಂದೆಯ ಬಳಿ ಈ ಬಗ್ಗೆ ಪ್ರಶ್ನಿಸಿದಾಗಲೆಲ್ಲಾ ಮರು ಓದಿನ ಬಗ್ಗೆ ಸಲಹೆ ಸಿಗುತ್ತಿತ್ತೇ ವಿನಹ ಮತ್ತಾವ ಉತ್ತರವೂ ಸಿಗುತ್ತಿರಲಿಲ್ಲ. ನನ್ನ ನಿಲುವುಗಳ ಬಗ್ಗೆ ಅವರು ಅಸಮಾಧಾನ ಹೊಂದಿದ್ದಾರೆನೋ ಎಂಬ ಅನುಮಾನ ಪದೇ ಪದೇ ನನ್ನನ್ನು ಕಾಡುತ್ತಿತ್ತು. ಆ ಉತ್ತರಗಳನ್ನು ನಾನೇ ಹುಡುಕಿಕೊಳ್ಳಬೇಕೆಂಬುದು ಅವರ ಅಪೇಕ್ಷೆಯಾಗಿತ್ತು ಎಂದು ಈಗ ಅನ್ನಿಸುತ್ತಿದೆ.
ಮೂಲದ ಈ ಪ್ರಸಂಗದ ಬಗ್ಗೆ ಎರಡು ರೀತಿಯ ವಾದಗಳಿವೆ. ಮೊದಲನೆಯದು ಮತ್ತು ಬಹಳ ಪ್ರಮುಖವಾದುದು ಇದನ್ನೊಂದು ಪ್ರಕ್ಷಿಪ್ತ ಭಾಗವೆಂದು ಅನೇಕರು ಪರಿಗಣಿಸಿರುವುದು. ( ಉತ್ತರ ರಾಮಾಯಣವೇ ವಾಲ್ಮೀಕಿ ವಿರಚಿತವಲ್ಲ , ಅಗಸನ ಸೀತೆಯ ಕುರಿತ ನಿಂದನೆ, ಶಂಭೂಕ ವಧೆ ಮುಂತಾದ ಪ್ರಕರಣಗಳು ಇದಕ್ಕೆ ಇಂಬು ಕೊಡುತ್ತವೆ ಎಂಬ ಪ್ರಬಲ ವಾದವೂ ಉಂಟು) ಇದು ಹಲ ಮಟ್ಟಿಗೆ ಒಪ್ಪತಕ್ಕದ್ದು ಕೂಡಾ. ರೂಢಿಯಲ್ಲಿರುವ ಲಭ್ಯ ಜಾನಪದ ಕಥೆಗಳ ಪ್ರಕಾರ ಸ್ವಯಂ ವಾಲ್ಮೀಕಿಗಳೇ ಶೂದ್ರಾತಿಶೂದ್ರರು. ರಾಮ ಎಂಬ ಶಬ್ಧವನ್ನೂ ಉಚ್ಚರಿಸಲು ಬಾರದೇ ಮರಾ,ಮರಾ ಎಂದು ಹೇಳುತ್ತಾ ರಾಮ ಪದದ ಜಪಿಸುವಿಕೆಯಿಂದಲೇ ರಾಮಾಯಣದಂತಹ ಬೃಹತ್ ಗ್ರಂಥ ಬರೆದಂತಹ ವಾಲ್ಮೀಕಿ ಶೂದ್ರಾತಿಶೂದ್ರನಿಂದ ಋಷಿಯಾಗಿ ಪರಿವರ್ತಿತರಾದವರು, ತಮ್ಮ ಋಷ್ಯಾಶ್ರಮದಲ್ಲಿ ಸೀತೆಯನ್ನು ಸಲಹಿದವರು, ಸಮಕಾಲೀನ ಋಷಿಮುನಿಗಳಿಂದ ಗೌರವಿಸಲ್ಪಟ್ಟವರು. ಇಂತಹ ಹಿನ್ನೆಲೆಯುಳ್ಳ ವಾಲ್ಮೀಕಿಯವರು ತಪಸ್ಸು ಮಾಡುತ್ತಿದ್ದವನನ್ನು ಶೂದ್ರನೆಂಬ ಏಕೈಕ ಕಾರಣಕ್ಕೆ ರಾಮನ ಕೈಯಿಂದ ಹತ್ಯೆ ಮಾಡಿಸುತ್ತಾರೆ ಎಂಬ ಕಲ್ಪನೆಯೇ ಹಾಸ್ಯಾಸ್ಪದವಾದುದು. ಉತ್ತರ ರಾಮಾಯಣದ ಪ್ರಕಾರ ವಾಲ್ಮೀಕಿಗಳು ರಾಮನ ಸಮಕಾಲೀನರು. ತ್ರೇತಾಯುಗದಲ್ಲೇ ಜೀವಿಸಿದ್ದವರು. ನಾರದರ ಮಾತುಗಳಲ್ಲಿ ಹೇಳುವುದಾದರೆ

"ತ್ರೇತಾಯುಗೇ ಚ ವರ್ತಂತೇ ಬ್ರಾಹ್ಮಣಾಃ ಕ್ಷತ್ರಿಯಾಶ್ಚ ಯೇ/
ತಪೋ ತಪ್ಯಂತ ತೇ ಸರ್ವೇ ಶಶ್ರೂಷಾಮಪರೇ ಜನಾಃ /
ಸ ಧರ್ಮಃ ಪರಮಸ್ತೇಷಾಂ ವೈಶ್ಯಶೂದ್ರಂ ಸಮಾಗಮತ್/
ಪೂಜಾಂ ಚ ಸರ್ವವರ್ಣಾನಾಂ ಶೂದ್ರಾಶ್ಚಕ್ರುರ್ವಿಶೇಷತಃ/ "

"ತ್ರೇತಾಯುಗದಲ್ಲಿ ಬ್ರಾಹ್ಮಣರೂ, ಕ್ಷತ್ರಿಯರೂ ತಪಸ್ಸನ್ನಾಚರಿಸುತ್ತಿದ್ದರು. ವೈಶ್ಯಶೂದ್ರರು ಶುಶ್ರೂಷಾದಿ ವೃತ್ತಿಯಲ್ಲಿ ನಿರತರಾದರು. ಅದು ಅವರಿಗೆ ಪರಮ ಧರ್ಮವಾಯಿತು. ಶೂದ್ರರು ವಿಶೇಷವಾಗಿ ಇತರ ವರ್ಣದವರನ್ನು ಗೌರವಿಸುತ್ತಿದ್ದರು." ಈ ಮಾತುಗಳನ್ನೇ ಅಂದಿನ ಕಾಲದ ಧರ್ಮವೆಂದು ಒಪ್ಪುವುದಾದರೆ ವಾಲ್ಮೀಕಿಗಳೂ ಅಧರ್ಮಿಗಳೇ. ಅವರ ಆಶ್ರಮವೂ ರಾಮನ ಆಡಳಿತದ ಪರಿಧಿಯಲ್ಲೇ ಇತ್ತಾದ್ದರಿಂದ ಶೂದ್ರಕನಿಗೆ ಸಿಕ್ಕ ಶಿಕ್ಷೆಯೇ ವಾಲ್ಮೀಕಿಗಳಿಗೂ ಸಿಗಬೇಕಿತ್ತು. ಹಾಗಾಗಿ ಶಂಭೂಕ ವಧೆಯನ್ನು ಪ್ರಕ್ಷಿಪ್ತ ಎಂದು ಪರಿಗಣಿಸಬೇಕಾಗುತ್ತದೆ.

ಇತ್ತೀಚೆಗೆ ಶಂಕರಾಚಾರ್ಯರ ಅದ್ವೈತ ಸಿದ್ಧಾಂತದ ಕುರಿತು ಓದುತ್ತಿದ್ದಾಗ ಶಾಂಕರ ದರ್ಶನದಲ್ಲಿ ಮಿಥ್ಯೆಯ ಕುರಿತು ಒಂದು ಪ್ರಸ್ತಾಪ, ಅದನ್ನು ಓದುತ್ತಿದ್ದಂತೇ ಮೈ ರೋಮಾಂಚನವಾಯಿತು. ಅದಕ್ಕೂ ಈ ವಾಲ್ಮೀಕಿ ವಿರಚಿತ ಶಂಭೂಕ ವಧೆಗೂ ಯಾವುದೇ ನೇರ ಸಂಬಂಧವಿಲ್ಲದಿದ್ದಾಗ್ಯೂ ಈ ಶಂಭೂಕ ಎಂಬ ಪದಕ್ಕಿರುವ ಅರ್ಥಸಂಬಂಧದಿಂದ ಇಲ್ಲಿ ಅದನ್ನು ಅನ್ವಯಿಸಿಕೊಳ್ಳಬಹುದೇನೋ ಅನ್ನಿಸಿತು.ಕಪ್ಪೆಚಿಪ್ಪಿಗೆ ಸಂಸ್ಕೃತದಲ್ಲಿ ಶಂಭೂಕ ಎನ್ನುತ್ತಾರೆ. ಒಂದು ಬೆಳದಿಂಗಳ ರಾತ್ರಿಯಲ್ಲಿ ನದಿಯ ತೀರದಲ್ಲಿ ಏಕಾಂತವಾಗಿ ಸಂಚರಿಸುತ್ತಿರುವಾಗ ಕೆಳಗೆ ಬಿದ್ದ ಕಪ್ಪೆಚಿಪ್ಪು (ಶಂಭೂಕ) ಬೆಳ್ಳಿಯಂತೆ ಹೊಳೆಯುತ್ತಿರುತ್ತಾ ಆಕರ್ಶಿಸುವಂತಿರುತ್ತದೆ. ಕೈಗೆತ್ತಿಕೊಳ್ಳುವ ಬಯಕೆ ಮೂಡಿಸುತ್ತದೆ. ಅಥವಾ ಒಂದು ವೇಳೆ ನಿಜವಾದ ಬೆಳ್ಳಿ ಬಿದ್ದಿದ್ದರೂ ಅದನ್ನು ನಾವು ಕಪ್ಪೆಚಿಪ್ಪು ಎಂದು ನಿರ್ಲಕ್ಷಿತವಾಗುವ ಸಾಧ್ಯತೆಯೂ ಉಂಟು. ಇದು ಮಿಥ್ಯೆ. ಮಿಥ್ಯೆಯೆಂದರೆ ಅಸತ್ಯವಲ್ಲ. ಮಿಥ್ಯೆ ಬೇರೆ, ಅಸತ್ ಬೇರೆ. ಅಸತ್ ಎಂದರೆ ಅಸ್ತಿತ್ವದಲ್ಲಿ ಇಲ್ಲದ್ದು. ಮಿಥ್ಯೆಯೆಂದರೆ ಒಂದನ್ನು ಇನ್ನೊಂದಾಗಿ ಭ್ರಮಿಸುವುದು. ಹೀಗೆ ತುಂಬಾ ಶಂಭೂಕಗಳ ಮಧ್ಯದಲ್ಲಿ ಬೆಲೆಬಾಳುವ ರಜತ ಬಿದ್ದಿದ್ದರೂ ಸುತ್ತಲೂ ಶಂಭೂಕಗಳಿರುವುದರಿಂದ ಆ ರಜತಕ್ಕೆ ದೊರಕಬೇಕಾದ ಬೆಲೆ ದಕ್ಕದೇ ಹೋಗಬಹುದು. ಅದನ್ನು ಯಾರೂ ಗಮನಿಸದಿರಬಹುದು. ಅಥವಾ ಹೊಳೆಯುತ್ತಿರುವ ಶಂಭೂಕಗಳ ಆಕರ್ಷಣೆಯಲ್ಲಿ ಅವುಗಳನ್ನೇ ರಜತವೆಂದು ಒಪ್ಪಿಕೊಂಡು ಮೋಸ ಹೋಗಬಹುದು. ಒಬ್ಬರು ಇನ್ನೊಬ್ಬರ ಕಾರ್ಯಕ್ಷೇತ್ರದಲ್ಲಿದ್ದಾಗ ಈ ರೀತಿಯ ಅವಘಡಗಳು ಸಂಭವಿಸುತ್ತವೆ. ಯಾರು ಯಾವ ಕೆಲಸವನ್ನು ಮಾಡತಕ್ಕದ್ದೋ ಅದನ್ನೇ ಮಾಡುವುದು ಒಳಿತು ಎಂದು ಈ ಶಂಭೂಕ ರಜತ ಸಿದ್ಧಾಂತ ಹೇಳುತ್ತದೆ. ಈ ತತ್ವವನ್ನೇ ಅನ್ವಯಿಸಿ ನೋಡುವುದಾದರೆ ಅಲ್ಲಿ ತಪಸ್ಸು ಮಾದುತ್ತಿದ್ದ ಶಂಭೂಕನಿಗೆ (ಜಾತಿಯಾಧಾರಿತವಾಗಲ್ಲದೆ) ಆ ಯೋಗ್ಯತೆ ಇದ್ದಿರಲಾರದು. ತಾನು ಅರ್ಹನಲ್ಲದ ಸ್ಥಾನಕ್ಕೆ ಏರಲು ಆತ ಪ್ರಯತ್ನಿಸುತ್ತಿದ್ದಿರಬಹುದು ಮತ್ತು ಆ ಕಾಲದ ನಿಜವಾದ ಅರ್ಹತೆಯುಳ್ಳ ತಪಸ್ವಿಗಳಿಗೆ ( ಅವರ ಹುಟ್ಟು ಯಾವುದೇ ಜಾತಿಯಲ್ಲಿ ಸಂಭವಿಸಿರಲಿ) ಇಂತಹವರ ಮಧ್ಯೆಬೆಲೆ ಸಿಗಲಾರದೆಂಬ ಕಾರಣಕ್ಕೆ ರಾಮನ ಕೈಯಿಂದ ವಾಲ್ಮೀಕಿಗಳು ಆತನ ಹತ್ಯೆ ಮಾಡಿಸಿರಬಹುದು.

ಆದರೆ ವಾಲ್ಮೀಕಿಗಳೂ ತಪ್ಪು ಮಾಡಬಾರದೆಂದಿಲ್ಲ.. ಆ ಕಾವ್ಯದ ಒಪ್ಪುಗಳೊಟ್ಟಿಗೇ ತಪ್ಪುಗಳನ್ನೂ ಒಪ್ಪಿಕೊಳ್ಳುತ್ತಾ ಆ ತಪ್ಪುಗಳಿಗೆ ಸಮಜಾಯಿಷಿ ನೀಡದೇ ಅವುಗಳನ್ನು ಸ್ವೀಕರಿಸದಿರುವುದು ಸರಿಯಾದ ಕ್ರಮವೆಂಬುದು ಇನ್ನೊಂದು ವಾದ.

ಆದರೆ ಕುವೆಂಪು ಈ ಪ್ರಸಂಗವನ್ನು ಶಂಭೂಕ ವಧೆಯಿಂದ ಶೂದ್ರ ತಪಸ್ವಿಯಾಗಿ ಬದಲಾಯಿಸಿ ಕೊಂಡಿದ್ದಾರೆ... ಹೀಗೆ ಅವರು ಬದಲಾಯಿಸಿಕೊಂಡಿರುವುದು ಬರೀ ಹೆಸರನ್ನಷ್ಟೇ ಅಲ್ಲ, ಇಡೀ ಕಥೆಯನ್ನೇ. ಆಶಯಗಳೇನೇ ಇದ್ದರೂ ಒಂದು ಕೃತಿಯನ್ನು ಅದೂ ಪುರಾಣವನ್ನು ಮೂಲದಿಂದ ಎರವಲು ಪಡೆದಾಗ ಎಷ್ಟರ ಮಟ್ಟಿಗೆ ಅದನ್ನು ಬದಲಾಯಿಸಿಕೊಳ್ಳಬಹುದು? ಏಕೆಂದರೆ ತಪೋನಂದನ ಕೃತಿಯಲ್ಲಿ ಕುವೆಂಪುರವರೇ ಒಂದು ಕಡೆ ಬರೆಯುತ್ತಾರೆ. ' ಪುರಾಣ ಕಥೆಗಳು ಭೂಲೋಕ್ಕೂ ಸ್ವರ್ಗಕ್ಕೂ ನಡುವೆ ನಿರ್ಮಿಸಿದ ಸುವರ್ಣ ಸೇತುವೆಗಳು. ಇವುಗಳನ್ನು ಹೇಗಿದೆಯೋ ಹಾಗೆಯೇ ಆ ಕಾಲದೇಶಕ್ಕನುಗುಣವಾಗಿಯೇ ಇದ್ದಂತೆಯೇ ಓದಬೇಕಲ್ಲದೆ ಘನೀಕೃತ ವಾಸ್ತವಕ್ಕಿಳಿಸಿ ನೋಡಲಾಗದು ' ಮತ್ತೊಂದು ಕಡೆ ಮಾಸ್ತಿಯವರಿಗೆ ಕೊಟ್ಟ ಉತ್ತರದಲ್ಲಿ ಅವರು 'ಹಳೆಯ ಕಥೆಯನ್ನು ಹೊಸ ಸಾಹಿತಿ ತನ್ನ ಕೃತಿಗೆ ತನ್ನಿಷ್ಟದಂತೆ ಉಪಯೋಗಿಸಿಕೊಳ್ಳುವ ಪದ್ಧತಿಯೂ ಮಹಾಕವಿ ಸಂಪ್ರದಾಯ ಸಿದ್ಧವಾದುದು. ಪುರಾಣದಲ್ಲಿ ಬದಲಾವಣೆಯನ್ನು ಮಹಾಕವಿಗಳೆಲ್ಲರೂ ಮಾಡಿಕೊಂಡಿದ್ದಾರೆ. " ಸತ್ಸಂಗಜಾನಿ ನಿಧನಾನ್ಯಪಿ ತಾರಯಂತಿ". ಮಹಾಕವಿಗಳೊಟ್ಟಿಗಿನ ತಪ್ಪು ಒಪ್ಪು ನನಗೆ ಎಂದು'. ಒಂದು ಮಟ್ಟಿಗೆ ಈ ವಾದವನ್ನು ಒಪ್ಪಿಕೊಳ್ಳಬಹುದು. ಈ ಎರಡೂ ಹೇಳಿಕೆಗಳಲ್ಲಿ ಮೇಲ್ನೋಟಕ್ಕೇ ವಿರೋಧಾಭಾಸ ಎದ್ದು ತೋರುತ್ತದೆ.

ಕೃತಿಯನ್ನು ನೇಯುವಾಗ ಪಂಪ, ರನ್ನ ಕೂಡಾ ಬದಲಾಯಿಸಿಕೊಂಡವರೇ. ಪಂಪನ ಭಾರತದಲ್ಲಿ ಧರ್ಮರಾಯನ ಬದಲಾಗಿ ಅರ್ಜುನನಿಗೆ ಪಟ್ಟವಾಗುತ್ತದೆ, ಅವನೊಡನೆ ಪಟ್ಟವೇರುವವಳು ದ್ರೌಪದಿಯಲ್ಲ, ಸುಭದ್ರೆ.,ಅಲ್ಲಿ ನಾಯಕ ಅರ್ಜುನ. ರನ್ನನ ಗದಾ ಯುದ್ಧದಲ್ಲಿ ನಾಯಕ ಭೀಮ. ಸಮರ ನಡೆದ ನಂತರ ಪಟ್ಟವಾಗುವುದು ಭೀಮನಿಗೆ. ಇಂತಹಾ ಬದಲಾವಣೆಗಳು ಪ್ರಮುಖವೆನಿಸುವುದಿಲ್ಲ. ಇವುಗಳಿಂದ ಕಥೆಯ ಆಶಯಕ್ಕೆ ಯಾವ ಧಕ್ಕೆಯೂ ಇಲ್ಲ. ನಿಜವಾಗಿಯೂ ಕಥೆಯನ್ನು ಬದಲಾಯಿಸಿ ಕೊಳ್ಳುವುದು ಎಂದ ಕೂಡಲೇ ನೆನಪಾಗುವವನು, ಬದಲಾಯಿಸಿಕೊಂಡವನು ಭಾಸ. ಭಾಸ ತನ್ನ ಹದಿಮೂರೂ ನಾಟಕಗಳನ್ನೂ ಪುರಾಣದಿಂದಲೇ ಎತ್ತಿಕೊಳ್ಳುತ್ತಾನೆ, ಅವೆಲ್ಲವನ್ನೂ ತನಗೆ ಬೇಕಾದಂತೆಯೇ ತಿರುಚಿದ್ದಾನೆ. ಇದು ಎಷ್ಟರಮಟ್ಟಿಗೆಂದರೆ ಅವನ "ಪಂಚ ರಾತ್ರಂ" ನಾಟಕ ಮಹಾಭಾರತದ ಕಥೆಯನ್ನಾಧರಿಸಿದ್ದರೂ ಅಲ್ಲಿ ಯುದ್ಧವೇ ನಡೆಯುವುದಿಲ್ಲ. ಆ ಐದು ರಾತ್ರಿಗಳಲ್ಲಿ ನಡೆವ ಕಥೆಯಲ್ಲಿ ದುರ್ಯೋಧನ ಪಾಂಡವರಿಗೆ ಅರ್ಧ ರಾಜ್ಯವನ್ನು ಯುದ್ಧವಿಲ್ಲದೇ ಕೊಟ್ಟುಬಿಡುತ್ತಾನೆ. ಕೌರವರು ಮತ್ತು ಪಾಂಡವರೀರ್ವರೂ ತಮ್ಮ ತಮ್ಮ ರಾಜ್ಯಗಳನ್ನು ಧರ್ಮದಿಂದ ಆಳುತ್ತಾ ಸುಖವಾಗಿದ್ದರು ಎಂಬಲ್ಲಿಗೆ ಭಾಸೋ ಹಾಸಃ ಎಂಬ ಮಾತನ್ನು ಸಾರ್ಥಕ ಮಾಡಿಕೊಂಡಿದ್ದಾನೆ. ಭಾಸನ ನಾಟಕಗಳ ಹಿನ್ನೆಲೆಯಲ್ಲಿ ನೋಡಿದರೆ ಮಹಾಭಾರತದಲ್ಲಿ ಕೃಷ್ಣ ಅರ್ಜುನನಿಗೆ ಭಗವದ್ಗೀತೆ ಬೋಧಿಸಲು ಅವಕಾಶವೇ ಲಭಿಸುವುದಿಲ್ಲ, ಅರ್ಜುನ ಯುದ್ಧವನ್ನೂ ಮಾಡುವುದಿಲ್ಲ, ದ್ರೋಣನನ್ನು ಕೊಲ್ಲುವ ಸಲುವಾಗಿಯೇ ಹುಟ್ಟಿ ಬಂದ ದೃಷ್ಟದ್ಯುಮ್ನ, ಡಂಭಾಸುರನೆಂಬ ಕರ್ಣನ ಹೆಸರಿನಲ್ಲಿ ಹುಟ್ಟಿಬಂದ ರಾಕ್ಷಸನನ್ನು ಕೊಲ್ಲುವ ಸಲುವಾಗಿ ಸಹಸ್ರ ವರ್ಷ ತಪಸ್ಸು ಮಾಡಿ ಅವತಾರವೆತ್ತಿದ ನರ (ಅರ್ಜುನ), ಭೀಷ್ಮನನ್ನು ಹಣಿಯಲೆಂದೇ ದೇಹತ್ಯಾಗ ಮಾಡಿ ಶಿಖಂಡಿಯಾಗಿ ಹುಟ್ಟಿದ ಅಂಬೆ......... ಇವರುಗಳಿಗೆ ಕೆಲಸವೇ ಇಲ್ಲ. ಭೀಷ್ಮ ಶರಶಯ್ಯೆಯಲ್ಲಿ ಮಲಗುವುದಿಲ್ಲ, ಧರ್ಮರಾಯ ಸುಳ್ಳು ಹೇಳುವುದಿಲ್ಲ...

ಭಾಸನ ಪ್ರತಿಮಾ ನಾಟಕದಲ್ಲೂ ಕೈಕೇಯಿಯನ್ನು ಅದೆಷ್ಟು ಉದಾತ್ತವಾಗಿ ಚಿತ್ರಿಸುತ್ತಾನೆಂದರೆ ಹೀಗೇ ಮೂಲ ಪಾತ್ರಗಳೂ ಇರಬಾರದಿತ್ತೇ ಎಂದು ಹಂಬಲಿಸುವಷ್ಟು ತೀವ್ರವಾಗಿ. ಭಾಸನಿಗೂ ಬದಲಿಸಲಾಗದ ಪಾತ್ರಗಳೆಂದರೆ ಶಕುನಿ, ಮಂಥರೆ ಮಾತ್ರ. ಈ ಬದಲಾವಣೆಗಳು ಬಹಳ ದೊಡ್ಡ ಮಟ್ಟದ ಬದಲಾವಣೆಗಳೇ ಆಗಿದ್ದರೂ ಒಂದು ವಿಷಯ ಅತ್ಯಂತ ಅವಶ್ಯವಾಗಿ ನೆನಪಿನಲ್ಲಿಡಲೇ ಬೇಕು, ಇವೆಲ್ಲವನ್ನೂ ಆತ ನಾಟಕದ ಉದಾತ್ತೀಕರಣಕ್ಕಾಗಿ ಮಾಡಿಕೊಂಡಿದ್ದಾನೆ. ಭಾಸ ಯಾರನ್ನೂ ತಪ್ಪಿತಸ್ಥರನ್ನಾಗಿ ಮಾಡಲಾರ, ಯಾರನ್ನೂ ನೋಯಿಸಲಾರ.. ಪ್ರತೀ ಪಾತ್ರವೂ ಭಾಸನ ಕೈಯಲ್ಲಿ ತನ್ನ ಔನ್ನತ್ಯವನ್ನು ತಲುಪುತ್ತದೆ, ಓದುಗರಲ್ಲಿ ನವಿರು ಭಾವನೆಗಳನ್ನೂ, ಸಜ್ಜನಿಕೆಯನ್ನೂ ಉದ್ದೀಪಿಸುತ್ತದೆ. ಓದುತ್ತಿದ್ದಾಗ ಪ್ರಪಂಚ ಸುಂದರವಾಗಿ, ಸುಭಿಕ್ಷವಾಗಿ, ಎಲ್ಲರೂ ಕುಟಿಲರಹಿತರಾಗಿ ಗೋಚರಿಸುವುದರೊಂದಿಗೆ ಭಾಸೋ ಹಾಸಃ ..... ಬದಲಾವಣೆಯ ಹಿಂದಿನ ಅವನ ಉದ್ದೇಶ ಸ್ಪಷ್ಟವಾಗುತ್ತದೆ.

ಕುವೆಂಪುರವರೂ ಭಾಸನಂತೆಯೇ ತಮ್ಮೆಲ್ಲ ನಾಟಕಗಳ ವಸ್ತುಗಳನ್ನೂ ಪುರಾಣದಿಂದಲೇ ಎತ್ತಿಕೊಳ್ಳುತ್ತಾರೆ. ಬೆರಳ್ ಗೆ ಕೊರಳ್, ಯಮನ ಸೋಲು, ಸ್ಮಶಾನ ಕುರುಕ್ಷೇತ್ರಂ, ವಾಲ್ಮೀಕಿಯ ಭಾಗ್ಯ... ಇವೆಲ್ಲವುಗಳನ್ನೂ ಅನೇಕ ಬದಲಾವಣೆಗಳ ಸಹಿತವಾಗಿ. ಶೂದ್ರ ತಪಸ್ವಿಯನ್ನು ಅವರು ಉತ್ತರ ರಾಮಾಯಣದಿಂದ ಆರಿಸಿಕೊಳ್ಳುತ್ತಾರೆ. ವಿಭಿನ್ನ ದೃಷ್ಟಿಕೋನದಿಂದ ಈ ಕಥೆಯನ್ನು ಹೇಳಹೊರಡುವ ಅವರು ಬಹಳ ಪ್ರಮುಖ ಬದಲಾವಣೆಗಳನ್ನೇ ಮಾಡಿಕೊಂಡಿದ್ದಾರೆ.

ಮೊದಲನೆಯದಾಗಿ ಮೂಲ ಉತ್ತರ ರಾಮಾಯಣದಲ್ಲಿ ಬ್ರಾಹ್ಮಣನಿಗೆ ಎಲ್ಲೋ ಇದ್ದ ಶಂಭೂಕನ ತಪಸ್ಸಿನ ಕುರಿತು ಅರಿವಿರುವುದಿಲ್ಲ. ತನ್ನ ಮಗ ಸತ್ತಿದ್ದಾನೆ, ಅದಕ್ಕೆ ಕಾರಣ ಅವನಿಗೆ ಬೇಕಿಲ್ಲ, ಪರಿಹಾರ ಬೇಕಿದೆ. ತನ್ನ ಮಗ ಮರಳಿ ಬರಬೇಕಿದೆ, ತಾನು ಧರ್ಮವನ್ನೇ ಪಾಲಿಸುತ್ತಿರುವುದರಿಂದ ಈ ಅಕಾಲ ಮರಣ ತನ್ನದೋ, ತನ್ನ ಮಗನ ತಪ್ಪಿನಿಂದ ಸಂಭವಿಸಿದ್ದೋ ಅಲ್ಲ. ಇದಾದದ್ದು ರಾಜ್ಯದಲ್ಲಿ ಸಂಭವಿಸಿರಬಹುದಾದ ಯಾವುದೋ ಒಂದು ಅಧರ್ಮ ಕಾರ್ಯದಿಂದ ಹಾಗೂ ಆ ಅಧರ್ಮ ಕಾರ್ಯವನ್ನು ತಡೆಗಟ್ಟಲಾರದ ರಾಜನ ತಪ್ಪಿನಿಂದ. ಹೀಗಾಗಿ ಅವನು ಆರ್ತನಾಗಿ ರಾಜನಲ್ಲಿಗೆ ಬಂದಿದ್ದಾನೆ, ಪರಿಹಾರ ಕೇಳುತ್ತಿದ್ದಾನೆ. ಶೂದ್ರತಪಸ್ವಿಯಲ್ಲಿ ಹಾಗಿಲ್ಲ, ಇಲ್ಲಿ ಬ್ರಾಹ್ಮಣನಿಗೆ ತನ್ನ ಮಗನ ಸಾವಿನ ಕಾರಣ ಸ್ಪಷ್ಟವಾಗಿ ತಿಳಿದಿದೆ. ಶೂದ್ರನೊಬ್ಬ ತಪಸ್ಸನ್ನು ಆಚರಿಸುತ್ತಿರುವುದೇ ಅಧರ್ಮವೆಂಬಂತೆ. ಅವನ ಆಶ್ರಮದೊಳಗೆ ಕಾಲಿಟ್ಟಿದ್ದೇ ಪರಮ ಪಾಪವೆಂಬಂತೆ.ಬ್ರಾಹ್ಮಣನನ್ನು ಅವರು ಚಿತ್ರಿಸಿರುವ ರೀತಿ ನೋಡಿ,

ಅಲ್ಲಿ ರಾಮನು ಬ್ರಾಹ್ಮಣನನ್ನು ಕೇಳುತ್ತಾನೆ
"ನಮಸ್ಕಾರಂಗೆಯ್ದಿರೇನ್?"
ಬ್ರಾಹ್ಮಣನ ಉತ್ತರ ನೋಡಿ.
" ಶಿವ ಶಿವ ಶಿವ !
ಅಂತಪ್ಪ ಘೋರಮಂ ನಾವೆಸಗಿದೆವಲ್ತು.
ಅರಿಯದಾ ಕುವರಂ ಕೈಮುಗಿಯಲಿರ್ದನ್;
'ಮಾಣ್, ಶೂದ್ರಂಗೆ ತುಳಿಲ್ ಗೆಯ್ಯಲಾಗ !'
ಎಂದಾಂ ಬುದ್ಧಿಯಂ ತಿದ್ದಿ ತಡೆದನ್."
ಆಗ " ಎಂತಾದೊಡೆಂ ತಾವು ವೇದಮೂರ್ತಿಗಳಲ್ತೆ" ಎಂಬ ಶ್ರೀರಾಮನ ವ್ಯಂಗ್ಯ ಕೂಡಾ ಬ್ರಾಹ್ಮಣನಿಗೆ ಅರಿವಾಗುವುದಿಲ್ಲ. ಹೀಗೆ ಪರಿಚಯಿಸುತ್ತಾರೆ ಓದುಗರಿಗೆ ಬ್ರಾಹ್ಮಣನ ಮನಸ್ಥಿತಿಯನ್ನು
ಎರಡನೆಯದು ಮೂಲದಲ್ಲಿ ರಾಮ ತನ್ನ ಆಳ್ವಿಕೆಯಲ್ಲಿ ಸಂಭವಿಸಿದ ಅಧರ್ಮದ ಬಗ್ಗೆ ತಿಳಿಯುವುದು ಋಷಿ ಮುನಿಗಳಿಂದ. ಅವನು ಕರೆಸುವ ಮುನಿಗಳ ಪಟ್ಟಿ ನೋಡಿ ವಶಿಷ್ಟ, ಮಾರ್ಕಂಡೇಯ, ಮೌದ್ಗಲ್ಯ, ವಾಮದೇವ, ಕಶ್ಯಪ, ಕಾತ್ಯಾಯನ, ಜಾಬಾಲಿ, ಗೌತಮ ಮತ್ತು ನಾರದರು. ಇವರಲ್ಲಿ ತನ್ನ ಆಳ್ವಿಕೆಯಲ್ಲಿ ನಡೆದಿರಬಹುದಾದ ಅಧರ್ಮದ ಬಗ್ಗೆ ಪ್ರಶ್ನಿಸಿದಾಗ ಶಂಭೂಕನ ಕುರಿತು, ಅವನು ಆಚರಿಸುತ್ತಿರುವ ಅಧಾರ್ಮಿಕ ತಪಸ್ಸಿನ ಕುರಿತು ವಿವರಿಸುವವರು ನಾರದರು. ಶೂದ್ರನೊಬ್ಬ ತಪಸ್ಸು ಮಾಡಲು ತ್ರೇತಾಯುಗದಲ್ಲಿ ಅನರ್ಹ, ಈ ದುಷ್ಕೃತ್ಯವನ್ನು ನಿವಾರಿಸುವುದು ಅನಿವಾರ್ಯ ಮತ್ತು ಅದು ರಾಜನಾದವನ ಕರ್ತವ್ಯ ಕೂಡ. ಹೀಗೆ ಹೇಳುತ್ತಾ ರಾಮನನ್ನು ಶಂಭೂಕ ವಧೆಗೆ ಪ್ರಚೋದಿಸುವ ಕೆಲಸವನ್ನು ನಾರದರು ಮಾಡುತ್ತಾರೆ.


"ಅಧೀತಸ್ಯ ಚ ತಪ್ತಸ್ಯ ಕರ್ಮಣಃ ಸುಕೃತಸ್ಯ ಚ /
ಷಷ್ಠಂ ಭಜತಿ ಭಾಗಂ ತು ಪ್ರಜಾ ಧರ್ಮೇಣ ಪಾಲಯನ್//
ಷಡ್ಭಾಗಸ್ಯ ನ ಭೋಕ್ತಾಸೌ ರಕ್ಷತೇ ನ ಪ್ರಜಾಃ ಕಥಮ್/
ಸ ತ್ವಂ ಪುರುಷಶಾರ್ದೂಲ ಮಾರ್ಗಸ್ವ ವಿಷಯಂ ಸ್ವಕಮ್//

ಹೇಗೆ ಪ್ರಚೋದಿಸುತ್ತಾರೆ ನೋಡಿ. ರಾಜನು ಧರ್ಮದಿಂದ ಪ್ರಜೆಗಳನ್ನು ಪಾಲಿಸುತ್ತಿದ್ದರೆ ದೇಶದಲ್ಲಿ ನಡೆಯುವ ವೇದಾಧ್ಯಯನ, ತಪಸ್ಸು, ಪುಣ್ಯ ಕಾರ್ಯ ಇವುಗಳ ಆರನೆಯ ಒಂದಂಶವು ರಾಜನಿಗೆ ಸೇರುತ್ತದೆ ಎಂಬ ಮಾತಿನ ಜೊತೆಗೇ ಹೀಗೆ ಆರನೆಯ ಒಂದು ಭಾಗವನ್ನು ಹಕ್ಕಿನಂತೆ ಪಡೆಯುವ ರಾಜ ತನ್ನ ಪ್ರಜೆಗಳನ್ನು ರಕ್ಷಿಸುವುದಿಲ್ಲವೆಂದರೇನು ಎಂಬ ಧರ್ಮಸೂಕ್ಷ್ಮವನ್ನು ಮುಂದಿಡುತ್ತಾರೆ.

ಕುವೆಂಪು ತಮ್ಮ ನಾಟಕದಲ್ಲಿ ಈ ಪ್ರಸಂಗದ ಪ್ರಧಾನ ಪಾತ್ರಧಾರಿ ನಾರದರನ್ನೇ ಕೈ ಬಿಡುತ್ತಾರೆ. ಅಲ್ಲಿ ಈ ಯಾವ ಮುನಿಗಳ ಪ್ರಸ್ತಾಪವೂ ಬರುವುದಿಲ್ಲ. ತನ್ನ ಮಗನನ್ನು ಕಳೆದುಕೊಂಡ ಬ್ರಾಹ್ಮಣನೇ ಸ್ವತಃ ವಕೀಲನಾಗಿ ಬಿಡುತ್ತಾನೆ. ಅಧರ್ಮವೆಲ್ಲಿದೆ ಎಂದು ತಿಳಿಸುತ್ತಾನೆ, ತನ್ನ ಕರ್ತವ್ಯವನ್ನು ನಿರ್ವಹಿಸುವಂತೆ ರಾಜನಿಗೆ ಬೋಧಿಸುತ್ತಾನೆ. ರಾಮನಿಗೆ ಅಧರ್ಮವೆಲ್ಲಿದೆ ತಿಳಿಸಿಹೇಳುತ್ತಾನೆ. ಮಗನ ಸಾವಿಗೆ ಕಾರಣ ಶೂದ್ರನಿಗೆ ನಮಸ್ಕರಿಸಿದ್ದೇ ಎಂಬ ರಾಮನ ವ್ಯಂಗ್ಯಕ್ಕೆ ಬ್ರಾಹ್ಮಣ ಕೊಡುವ ಉತ್ತರ,

" ಅಲ್ತಲ್ತು, ರಾಮಚಂದ್ರ,
ಶೂದ್ರನ್ ತಪಂಗೆಯ್ವೊಂದು ಅಧರ್ಮಕ್ಕೆ,
ವರ್ಣಾಶ್ರಮ ಧರ್ಮದುಲ್ಲಂಘನೆಯ ಪಾಪಕ್ಕೆ
ನಿನ್ನ ಬಾಲಪ್ರಜೆಯೋರ್ವನ್ ಬಲಿಯಾದನ್-
ಮುಂದಾವ ಮಹತ್ಕಾರ್ಯಮಂ ಗೆಯ್ಯಲಿರ್ದನೋ?
ಆವ ಶಾಸ್ತ್ರವನೊರೆಯಲಿರ್ದನೋ?
ಆವ ಕಬ್ಬಮಂ ಕಟ್ಟಲಿರ್ದನೋ?
ಆವ ತಪದಿಂದಾವ ಸಿದ್ಧಿಯ ಪಡೆಯಲಿರ್ದನೋ?
ಆ ಪ್ರಜೆ ಶೂದ್ರನ ತಪೋದುಷ್ಕೃತಿಗೆ ಬೇಳ್ವೆಯಾದನ್!
ಪಾವಗಿದು ತೀರ್ದನ್ ! "

ಹೀಗೆ ರಾಮನಿಗೆ ಶೂದ್ರನ ತಪ್ಪನ್ನು ಮನವರಿಕೆ ಮಾಡಿಕೊಡಲೆತ್ನಿಸುತ್ತಾನೆ. ಶಾಸ್ತ್ರವನ್ನು ಪೊರೆಯುವುದೇ ಜೀವನದ ಪರಮೋದ್ದೇಶವೆಂಬಂತೆ.

ಮೂರನೆಯದು ವಾಲ್ಮೀಕಿ ರಾಮಾಯಣದಲ್ಲಿ ಶೈವಲವೆಂಬ ಪರ್ವತದ ಉತ್ತರ ಪಾರ್ಶ್ವದಲ್ಲಿ ಒಂದು ದೊಡ್ಡ ಸರಸ್ಸಿನ ತೀರದಲ್ಲಿ ಶಂಭೂಕ ತಲೆಕೆಳಗಾಗಿ ತಪಸ್ಸು ಮಾಡುತ್ತಿರುತ್ತಾನೆ. ರಾಮನು ಅವನನ್ನು ಅವನ ಜಾತಿಯ ಕುರಿತು ಪ್ರಶ್ನಿಸಿದಾಗ ತಾನು ಶೂದ್ರಯೋನಿಯಲ್ಲಿ ಜನಿಸಿರುವುದಾಗಿಯೂ, ಸಶರೀರ ಸಹಿತನಾಗಿ ದೇವತ್ವವನ್ನು ಬಯಸುತ್ತಿದ್ದೇನೆ ಎನ್ನುತ್ತಿದ್ದಂತೆಯೇ ಮುಂದೇನೂ ಕೇಳಿಸಿಕೊಳ್ಳಲು ಬಯಸದ ರಾಮ ಖಡ್ಗದಿಂದ ಅವನ ಶಿರಚ್ಛ್ಹೇಧ ಮಾಡುತ್ತಾನೆ. ದೇವತೆಗಳು ಸಾಧು ಸಾಧು ಎಂದು ಕೊಂಡಾಡುತ್ತಾರೆ.

ಶೂದ್ರತಪಸ್ವಿಯಲ್ಲಿ ರಾಮನಿಗೆ ತಪಸ್ವಿಯ ಹುಟ್ಟಿನ ಕುರಿತು ಖಚಿತ ತಿಳಿವಿದೆ, ಆತನ ಬಗ್ಗೆ ಅಸೀಮ ಗೌರವವೂ ಇದೆ. ಶಂಭೂಕ ತಪೋನಿರತನೇ ಆಗಿ ವಲ್ಮಿಕದೊಳಗೇ ಇರುತ್ತಾನೆ. ರಾಮ ಅವನನ್ನು ಖಡ್ಗದಿಂದ ಸಂಹರಿಸ ಹೊರಡುವುದಿಲ್ಲ, ಬದಲಾಗಿ ಬ್ರಾಹ್ಮಣನ ಅಣತಿಯಂತೇ ಬ್ರಹ್ಮ್ಮಾಸ್ತ್ರವನ್ನು ಪ್ರಯೋಗಿಸುತ್ತಾನೆ. ಅದು ಶಂಭೂಕನನ್ನು ಮುಟ್ಟದೇ ಹಿಂತಿರುಗಿ ಬ್ರಾಹ್ಮಣನನ್ನೇ ಬೆನ್ನತ್ತುತ್ತದೆ. ಬ್ರಾಹ್ಮಣನು ರಾಮನ ಅಪ್ಪಣೆಯ ಮೇರೆಗೆ ಶಂಭೂಕನಿಗೆ ಶರಣಾಗುತ್ತಾನೆ. ಪ್ರಕೃತಿ ಸಂಭ್ರಮಿಸುತ್ತದೆ.

ಉತ್ತರ ರಾಮಾಯಣದಲ್ಲಿ ಬರುವ ಈ ಪ್ರಸಂಗ ಕುವೆಂಪು ಶೂದ್ರ ತಪಸ್ವಿಯಲ್ಲಿ ಸಂಪೂರ್ಣ ಬದಲಾಗಿಬಿಡುತ್ತದೆ. ಹೀಗೆ ಆರಂಭದಿಂದ ಮುಕ್ತಾಯದವರೆಗೂ ಬದಲಾವಣೆಗಳ ಸರಮಾಲೆಯನ್ನೇ ಹೊತ್ತು, ಆ ಕಥೆಯ ಆಶಯವನ್ನೂ ಬದಲಾಯಿಸಿಕೊಂಡ ಹಾಗೂ ಪ್ರಮುಖವಾಗಿ ನಾರದರ ಪಾತ್ರದ ಕಣ್ಮರೆಯ ಉದ್ದೇಶದ ಬಗ್ಗೆ ಅನುಮಾನ ಮೂಡುತ್ತದೆ. ಮೂಲ ರಾಮಾಯಣದಲ್ಲಿ ಮಗನನ್ನು ಕಳೆದುಕೊಂಡು ಆರ್ತನಾಗಿ ರೋಧಿಸುವ ಬ್ರಾಹ್ಮಣನ ಮೇಲೆ ಮೂಡುವ ಕರುಣೆ ಶೂದ್ರತಪಸ್ವಿಯ ಬ್ರಾಹ್ಮಣನ ಮೇಲೆ ಮೂಡುವುದಿಲ್ಲ. ನಾರದರ ಪಾತ್ರದ ಕೆಲಸವನ್ನೂ ಬ್ರಾಹ್ಮಣನ ಪಾತ್ರವೇ ನಿರ್ವಹಿಸುವುದರಿಂದ ಇಲ್ಲಿ ಬ್ರಾಹ್ಮಣನ ಬಗ್ಗೆ ತಿರಸ್ಕಾರವೇ ಮೂಡುತ್ತದೆ ಅಥವಾ ತಿರಸ್ಕಾರ ಮೂಡಿಸಲೆಂದೇ ಈ ಬದಲಾವಣೆ ಮಾಡಲಾಗಿದೆ. ಇದು ಮೇಲ್ನೋಟಕ್ಕೇ ಬಹುವಾಗಿ ಕಾಡಿಬಿಡುತ್ತದೆ. ಏಕೆಂದರೆ ಇಲ್ಲಿ ಅವರು ರಾಮನ ಪಾತ್ರವನ್ನು ಉದಾತ್ತೀಕರಿಸಿದ್ದಾರೆ, ಪ್ರಾಜ್ಞನಂತೆ, ಉದಾರಿಯಂತೆ, ಸ್ವಯಂ ನಿರ್ಣಯ ತೆಗೆದುಕೊಳ್ಳಬಲ್ಲ ಶಕ್ತ ರಾಜನಂತೆ. ಆದರೆ ಮೂಲ ಕಥೆಯ ರಾಮ ಈ ಸನ್ನಿವೇಶದಲ್ಲಿ ಗುರುಹಿರಿಯರ ಮಾತಿನಂತೆ ನಡೆಯುತ್ತಾನೆ, ತನಗೊಂದು ಸ್ವಂತ ಅಭಿಪ್ರಾಯವೇ ಇಲ್ಲವೆಂಬಂತೆ, ಕೀಲು ಕೊಟ್ಟ ಗೊಂಬೆಯಂತೆ.

ಹೀಗೆ ಶಕ್ತಿಯಿಲ್ಲದ ಬ್ರಾಹ್ಮಣನನ್ನು ಶಾಸ್ತ್ರ ಸಂಭ್ರಾಂತ ಕುಟಿಲನಂತೆಯೂ, ಕೀಲುಗೊಂಬೆ ರಾಮನನ್ನು ಸಶಕ್ತ ರಾಜನಂತೆಯೂ, ದುರುದ್ದೇಶದಿಂದ ತಪಸ್ಸನ್ನಾಚರಿಸುತ್ತಿದ್ದ ತಪಸ್ವಿಯನ್ನು ಸಾತ್ವಿಕ ತಪಸ್ವಿಯಂತೆಯೂ ಬದಲಾಯಿಸಿಕೊಂಡು ನಾಟಕ ಕಟ್ಟಿದ ಕುವೆಂಪುರವರ ಉದ್ದೇಶದ ಬಗ್ಗೆ ಮೊದಲ ಓದಿಗೇ ನೂರು ಪ್ರಶ್ನೆಗಳು ಮೂಡುತ್ತವೆ, ಈ ಮೂರೂ ಪಾತ್ರಗಳ ಬದಲಾವಣೆ ಯೋಚಿಸ ಹಚ್ಚುತ್ತದೆ.

ಮತ್ತು ಶಂಭೂಕ ಪಾತ್ರದ ಬದಲಾವಣೆ. ಶಂಭೂಕ ಮೂಲದಲ್ಲಿ ಲೋಕ ಕಲ್ಯಾಣಕ್ಕೋ, ಪಾರಮಾರ್ಥ ಸಿದ್ಧಿಗೋ ತಪಸ್ಸನ್ನಾಚರಿಸುತ್ತಿಲ್ಲ. ಸಶರೀರನಾಗಿ ಸ್ವರ್ಗ ಪ್ರವೇಶಿಸಬೇಕೆಂಬ ಹಠದಲ್ಲಿ ಘೋರ ತಪಸ್ಸನ್ನು ಆಚರಿಸುತ್ತಿದ್ದಾನೆ. ಅದು ಲಂಬಮಾನಮಧೋಮುಖನಾಗಿ ಎಂಬ ವಾಕ್ಯದಲ್ಲೇ ಇದು ಧರ್ಮಸಮ್ಮತವಾದುದಲ್ಲ ಎಂಬ ಧ್ವನಿ ಹೊಮ್ಮುತ್ತಿದೆ. ಕುವೆಂಪು ಈ ತಪಸ್ಸಿನ ರೀತಿಯನ್ನೂ ಬದಲಾಯಿಸಿದ್ದಾರೆ, ಇಲ್ಲಿನ ಶಂಭೂಕ ಲೋಕಕಲ್ಯಾಣಾರ್ಥವಾಗಿ ತಪಸ್ಸು ಮಾಡುತ್ತಿರುವವನು, ಸಕಲರಿಗೂ ಸನ್ಮಂಗಳವನ್ನುಂಟು ಮಾಡುವವನು. ಇವನ ತಪಸ್ಸಿನ ಪ್ರಭಾವದಿಂದ ಪ್ರಕೃತಿ (ವಟತರು) ಮೃತ್ಯುವನ್ನೇ ಹಿಮ್ಮೆಟ್ಟಿಸುವಷ್ಟು ಧರ್ಮಬಲ ಹೊಂದಿಬಿಡುತ್ತದೆ. ಧರ್ಮದೇವತೆ ಕೂಡಾ ಬ್ರಾಹ್ಮಣನಿಗೆ ಬುದ್ಧಿ ಕಲಿಸಲು ಮೃತ್ಯುವನ್ನೇ ಕಳಿಸುತ್ತದೆ. ವಟತರು, ಮೃತ್ಯುದೇವತೆ, ಧರ್ಮದೇವತೆ, ರಾಮ ಎಲ್ಲರೂ ಬ್ರಾಹ್ಮಣನ ವಿರೋಧಿಗಳಂತೆ ವರ್ತಿಸುತ್ತಾರೆ. ವಿಪರ್ಯಾಸವೆಂದರೆ ಮಗನನ್ನು ಕಳೆದು ಕೊಂಡಿರುವ ಸಂತ್ರಸ್ತ ಬ್ರಾಹ್ಮಣ, ಶೋಕಿಸುತ್ತಿರುವವನು ಬ್ರಾಹ್ಮಣ.

ಕುವೆಂಪು ಮಾಸ್ತಿಯವರಿಗೆ ಉತ್ತರ ಕೊಟ್ಟ ಮಾರ್ನುಡಿಯಲ್ಲಿ ಈ ಬದಲಾವಣೆಗಳು ಜಾತಿಮಾತ್ಸರ್ಯದಿಂದ ಪ್ರೆರಿತವಾದ ಮೂದಲಿಕೆಯಲ್ಲ ಎಂಬ ಸ್ಪಷ್ಟೀಕರಣವನ್ನೂ , ಈ ಭಾವನೆ ಹೊಗಳಿಕೆ ಮತ್ತು ತೆಗಳಿಕೆ ಎರಡಕ್ಕೂ ಕಾರಣವಾಗಿದೆ ಎಂದೂ ವಿಷಾದ ವ್ಯಕ್ತ ಪಡಿಸುತ್ತಾರೆ. ಇಂತಹ ಪೂರ್ವಗ್ರಹ ಮತ್ತು ಪಕ್ಷಪಾತಗಳ ದೆಸೆಯಿಂದ ಕೃತಿಕಾರನ ಮುಖ್ಯಾಶಯ, ರಸಪ್ರಯೋಜನ ಶೀಲವಾದ ಸತ್ಯಬೋಧನ, ತತ್ಕಾಲಕ್ಕಾದರೂ ವ್ಯರ್ಥವಾಯಿತೆಂದು ತೋರುತ್ತದೆ ಎಂಬ ನೋವನ್ನು ತೋಡಿಕೊಳ್ಳುತ್ತಾರೆ. ವರ್ಣಾಶ್ರಮದ ಪರಿಣಾಮವಾಗಿ ಹೊರಹೊಮ್ಮಿದ ಬ್ರಾಹ್ಮಣ ಪಾರಮ್ಯದ ಬಗ್ಗೆ ಕುವೆಂಪು ಅವರಿಗೆ ಅಸಹನೆಯಿತ್ತಾ? ಅದಕ್ಕಾಗಿಯೇ ಬ್ರಾಹ್ಮಣನನ್ನು ಈ ರೀತಿ ಚಿತ್ರಿಸಿದರಾ? ಈ ಕೆಳಗಿನ ಸಾಲುಗಳನ್ನು ಓದಿದರೆ ಹಾಗೇನೂ ಅನ್ನಿಸುವುದಿಲ್ಲ." ಬ್ರಾಹ್ಮಣೇತರರಲ್ಲಿ ಕೆಲವರು ಕೃತಿಯ ಕಾವ್ಯತ್ವಕ್ಕಿಂತಲೂ ಹೆಚ್ಚಾಗಿ ಈ ಕೃತಿ ಬ್ರಾಹ್ಮಣರಿಗೆ ಚೆನ್ನಾಗಿ ಏಟು ಕೊಡುತ್ತದೆ ಎಂಬ ಅಸತ್ಯವೂ, ಅಪ್ರಕೃತವೂ, ಅವಿವೇಕವೂ ಆದ ಕಾವ್ಯವಿಮರ್ಶೇತರ ಕಾರಣವನ್ನು ಆರೋಪಿಸಿಕೊಂಡು ಅದನ್ನು ಸ್ತುತಿಸಿದರೆಂದು ಕೇಳಿದ್ದೇನೆ " ಇಂತಹ ಸಾಲುಗಳು ನಿಜಕ್ಕೂ ಪ್ರಾಮಾಣಿಕವೆನ್ನಿಸಿ ಈ ಬದಲಾವಣೆಗಳ ಕಾರಣಗಳ ಬಗ್ಗೆ ಯೋಚಿಸಹಚ್ಚುತ್ತವೆ. ಕೃತಿಯನ್ನೂ, ಕೃತಿಕಾರನನ್ನೂ ಬೇರ್ಪಡಿಸಿ ಕೇವಲ ರಸಗ್ರಹಣಕ್ಕಾಗಿ ಈ ಕೃತಿಯನ್ನು ಓದಲು ಸಾಧ್ಯವೇ ? ಅವರ ನೆನಪಿನ ದೋಣಿಯಲ್ಲೇ ಪಯಣಿಸಬೇಕು ಈ ಎಲ್ಲ ಪ್ರಶ್ನೆಗಳ ಉತ್ತರಕ್ಕೆ.

ಅವರ ಆತ್ಮ ಕಥನದನ್ವಯ ಅವರು ಬ್ರಾಹ್ಮಣ ವಿರೋಧಿಯಾಗಿರಲಿಲ್ಲ. ಬ್ರಾಹ್ಮಣರಾಗಿದ್ದ ಟಿ. ಎಸ್. ವೆಂಕಣ್ಣಯ್ಯನವರನ್ನು ಪಿತೃಸಮಾನರೆಂದು ಗೌರವಿಸುತ್ತಿದ್ದವರು ಕುವೆಂಪು. ತಮ್ಮ ಉನ್ನತಿಗೆ ಕಾರಣರಾದ ಅನೇಕ ಬ್ರಾಹ್ಮಣರನ್ನು ಬಹಳ ಪ್ರೀತಿಗೌರವಗಳಿಂದಲೇ ತಮ್ಮ ಆತ್ಮ ಕಥನದಲ್ಲಿ ಸ್ಮರಿಸುತ್ತಾರೆ. ಕುಮಾರವ್ಯಾಸ ಭಾರತಕ್ಕೆ ಅವರು ಬರೆದ ತೋರಣ ನಾಂದಿ, ರಾಮಕೃಷ್ಣಪರಮಹಂಸ, ಶ್ರೀ ರಾಮಾಯಣ ದರ್ಶನಂ ಮುಂತಾದುವುಗಳು ಅವರ ಅಪ್ರತಿಮ ಪ್ರತಿಭೆಗೆ, ಅಧ್ಯಯನ ಶೀಲತೆಗೆ ಸ್ಪಷ್ಟ ಸಾಕ್ಷಿಗಳಾಗಿವೆ. ಇಂತಹಾ ಕವಿ ಕೇವಲ ಜಾತಿ ಮಾತ್ಸರ್ಯದಿಂದ ಬ್ರಾಹ್ಮಣರ ವಿರುದ್ಧವಾಗಿ ಬರೆದರೆಂಬುದನ್ನು ಒಪ್ಪುವುದೂ ಕಷ್ಟ. ಬ್ರಾಹ್ಮಣ ಪದದ ನಿಜಾರ್ಥ ಅಧ್ಯಯನ ಶೀಲ ಎಂಬುದೇ ಆಗಿದ್ದಲ್ಲಿ ಅಂತಹ ಯಾವುದೇ ಅರ್ಹತೆಯಿಲ್ಲದ ಕೇವಲ ಹುಟ್ಟಿನಿಂದ ಮಾತ್ರ ಬ್ರಾಹ್ಮಣರೆಂದು ಬೀಗುತ್ತಾ ಉಳಿದವರನ್ನು ಕೀಳಾಗಿ ಕಾಣುತ್ತಿದ್ದವರ ಬಗ್ಗೆ ಅವರಿಗೆ ಅಸಹನೆಯಿತ್ತು. ಜನ್ಮದತ್ತ ಹಕ್ಕೆಂಬಂತೆ ತೋರಿಸಿಕೊಳ್ಳುತ್ತಿದ್ದ ಹುಸಿ ಪಾರಮ್ಯದ ಬಗ್ಗೆ ಆಕ್ರೋಶವಿತ್ತು.

ಆ ಕಾಲದಲ್ಲಿ ಶೂದ್ರನೆಂಬ ಪದ ಅದೆಷ್ಟು ಕೆಳಮಟ್ಟದಲ್ಲಿ ಬಳಕೆಯಾಗುತ್ತಿತ್ತೆಂದರೆ ಬ್ರಾಹ್ಮಣನೊಬ್ಬ ಯಾವುದೋ ತಪ್ಪು ಮಾಡಿದಲ್ಲಿ ಆತನನ್ನು ಶೂದ್ರನೆಂದು ಸಂಬೋಧಿಸಲಾಗುತ್ತಿತ್ತು. ಶೂದ್ರ ಎಂಬ ಪದ ಕಾಯಕ ಸೂಚಕವಾಗುಳಿಯದೇ ಕೆಳಮಟ್ಟದ ವರ್ತನೆಗೆ, ಕೀಳು ಮನಸ್ಥಿತಿಗೆ, ಬೌದ್ಧಿಕ ದಾರಿದ್ರ್ಯಕ್ಕೆ ಪರ್ಯಾಯವಾಗಿ ಬಳಸಲಾಗುತ್ತಿತ್ತು, ಇದೆಷ್ಟರಮಟ್ಟಿಗೆಂದರೆ ಶೂದ್ರನೊಬ್ಬ ಸಜ್ಜನನೆಂಬ ಪದಕ್ಕೆ ಅರ್ಹನೇ ಅಲ್ಲವೆಂಬ ರೀತಿಯಲ್ಲಿ, ಹಾಗೊಮ್ಮೆ ಅವನು ಸಜ್ಜನನಾಗಿದ್ದೇ ಆದರೆ ಅವನನ್ನು ಬ್ರಾಹ್ಮಣ ಸಮಾನನೆಂದು ಕರೆದು ಶೂದ್ರ ಎಂಬ ಪದಕ್ಕೇ ಅವಮಾನವಾಗುವ ರೀತಿಯಲ್ಲಿ.

ಶೂದ್ರರ ಅಥವಾ ಶೂದ್ರ ಪದದ ಸ್ಥಿತಿಯೇ ಹೀಗಿದ್ದಲ್ಲಿ ಅತಿಶೂದ್ರರ ಕತೆಯಂತೂ ಶೋಚನೀಯವಾಗಿತ್ತು. ಇದು ಶೂದ್ರರ ಗಮನಕ್ಕೆ ಬಂದಿದ್ದು ಮತ್ತು ಈ ಶೂದ್ರಪ್ರಜ್ಞೆ ಪ್ರಜ್ಞಾಪೂರ್ವಕವಾಗಿ ಎಚ್ಚೆತ್ತುಕೊಂಡಿದ್ದು ಕಾಡಲಾರಂಭಿಸಿದ್ದು ಬ್ರಿಟೀಷರ ಆಗಮನದಿಂದ, ಅವರ ಆಡಳಿತದಿಂದ. ಅತಿಶೂದ್ರಪ್ರಜ್ಞೆ ಭಾರತಕ್ಕೆ ಗಾಂಧೀಜಿಯವರ ಆಗಮನದಿಂದ. ಬ್ರಿಟೀಷರ ಆಗಮನದಿಂದ ಭಾರತಕ್ಕಾದ ಬಹುದೊಡ್ಡ ಲಾಭವೆಂದರೆ ಪಾಶ್ಚಾತ್ಯ ಸಾಹಿತ್ಯದ ಪರಿಚಯ. ಸಾಂಸ್ಕೃತಿಕ ಲೋಕದಲ್ಲಿ ಆ ಕಾಲಕ್ಕನುಗುಣವಾಗಿ ಸಹಜವಾಗೇ ಬ್ರಾಹ್ಮಣರಿಗಿದ್ದ ಹಿಡಿತ, ಬ್ರಾಹ್ಮಣ ಪಾರಮ್ಯ , ಮತ್ತು ಕೇವಲ ಹುಟ್ಟಿನಿಂದ ಮಾತ್ರ ಬ್ರಾಹ್ಮಣರಾಗಿರಲು ಯೋಗ್ಯರಾದವರೂ ಆ ಪಾರಮ್ಯತೆಯ ನೆರಳಲ್ಲಿ ಮೆರೆಯುತ್ತಿದ್ದ ರೀತಿ ಇವೆಲ್ಲವೂ ಶೂದ್ರರ ಗಮನಕ್ಕೆ ಬಂದುದು ಬ್ರಿಟೀಶರ ಆಳ್ವಿಕೆಯಲ್ಲೇ. ಬ್ರಾಹ್ಮಣ ಶೂದ್ರರ ನಡುವೆಯಿದ್ದ ಸಾಂಸ್ಕೃತಿಕ ವ್ಯತ್ಯಾಸಗಳನ್ನು ಬ್ರಿಟೀಶರು ಎತ್ತಿ ತೋರಿಸುತ್ತಾ ಬಂದರು. ಅಲ್ಲಿಯವರೆಗೂ ಶೂದ್ರ ಪ್ರಜ್ಞೆ ಇರಲಿಲ್ಲವೆಂದಲ್ಲ, ಆ ಮನಸ್ಥಿತಿ ಅವರಿಗೆ ಅಭ್ಯಾಸವಾಗಿತ್ತು, ರೂಢಿಗತವಾಗಿತ್ತು. ನಮ್ಮ ಸಾಮಾಜಿಕ ಜನಜೀವನದ ಹುಳುಕುಗಳು, ಯೋಗ್ಯರಲ್ಲದವರೂ ಹಾಕುವ ಯೋಗ್ಯರ ವೇಷ ಇವುಗಳ ತೀವ್ರತೆ ಶೂದ್ರರಿಗೆ ಮನದಟ್ಟಾಗಲಾರಂಭಿಸಿತು. ಇವುಗಳನ್ನು ಶೂದ್ರರಿಗೆ ತೋರಿಸುವ ಹಪಾಹಪಿ ಬ್ರಿಟೀಷರಿಗಿತ್ತೇ ವಿನಹ ಅತಿಶೂದ್ರರ ಬಗ್ಗೆ ಅವರ ಗಮನವಿರಲಿಲ್ಲ. ಅದನ್ನು ನಿರ್ವಹಿಸಿದವರು ಗಾಂಧೀಜಿ.

ಇವೆಲ್ಲವೂ ಕುವೆಂಪುರವರನ್ನು ಗಾಢವಾಗಿ ಕಾಡಿತ್ತು. ಮೊಟ್ಟಮೊದಲು ಅವರಿಗೆ ಸಂಸ್ಕೃತ ತರಗತಿಯಲ್ಲಾದ ಅವಮಾನ ಬೇರೆ ಯಾರಿಗೇ ಆಗಿದ್ದರೂ ಸಂಸ್ಕೃತದಿಂದ ಶಾಶ್ವತವಾಗಿ ದೂರ ಸರಿದು ಬಿಡುತ್ತಿದ್ದರೇನೋ, ಕುವೆಂಪು ಅದನ್ನೊಂದು ಸವಾಲಾಗಿ ಸ್ವೀಕರಿಸಿದರು. ಸಂಸ್ಕೃತವನ್ನು ಕಲಿತು ಪ್ರಾಚೀನ ಸಂಸ್ಕೃತ ಕಾವ್ಯಗಳನ್ನು ತಮ್ಮದಾಗಿಸಿಕೊಂಡರು. ಅವರ ವಿಶೇಷತೆಯೆಂದರೆ ಶೂದ್ರರಾಗಿದ್ದುಕೊಂಡೂ ಬ್ರಾಹ್ಮಣರ ನಡುವೆ ಯಾವುದೇ ಕೀಳರಿಮೆಯಿಲ್ಲದೆ ಸಹಜವಾಗಿ ಸರಿಸಮಾನರಾಗಿ ಬದುಕಿದ್ದುದು, ಸಂಸ್ಕೃತದ ಮೂಲಕ ಸಂಸ್ಕೃತೀಕರಣಕ್ಕೆ ಸಂಬಂಧ ಪಟ್ಟಿದ್ದನ್ನು, ಭಾರತೀಯ ಪುರಾಣಗಳನ್ನು ವಿಭಿನ್ನವಾಗಿ ಅರಗಿಸಿಕೊಂಡಿದ್ದು, ಕನ್ನಡದ ಹಳೆಗನ್ನಡ, ನಡುಗನ್ನಡದ ಕಾವ್ಯಗಳನ್ನು ಅಭ್ಯಾಸ ಮಾಡಿದ್ದುದು, ಪಾಶ್ಚಾತ್ಯ ಸಾಹಿತ್ಯವನ್ನು ಅಭ್ಯಸಿಸುವ ಮೂಲಕ ಅಂದಿನ ಬಹುತೇಕ ಬ್ರಾಹ್ಮಣರನ್ನು ಮೀರಿಸುವ ಆಧುನಿಕತೆ ಮತ್ತು ವೈಚಾರಿಕತೆಯ ಕಡೆ ನುಗ್ಗಿದ್ದು ( ಸುಮಾರು ೪೦ನೇ ಇಸವಿಯ ಹೊತ್ತಿಗೇ ಕುವೆಂಪು ಜಾಗತಿಕವಾಗಿ ಸುಪ್ರಸಿದ್ಧವಾದ ಬಹುತೇಕ ಎಲ್ಲ ಕೃತಿಗಳನ್ನು ಓದಿ ಮುಗಿಸಿದ್ದರು). ಇವೆಲ್ಲವೂ ಕುವೆಂಪುರವರ ವ್ಯಕ್ತಿತ್ವವನ್ನು ಬಹಳ ಸಶಕ್ತವಾಗಿ ರೂಪಿಸಿದವೆನ್ನಬಹುದು.
ಜೊತೆಗೆ ವಿವೇಕಾನಂದ, ರಾಮಕೃಷ್ಣರ ಪ್ರಭಾವ ತಂದು ಕೊಟ್ಟ ಹೊಳಹುಗಳ ಹಿನ್ನೆಲೆಯಲ್ಲಿ ಅವರು ಸಾಹಿತ್ಯವನ್ನು ಬೇರೆಯದೇ ಆದ ರೀತಿಯಲ್ಲಿ ನೋಡಲಾರಂಭಿಸಿದರು, ತರತಮಗಳನ್ನು ಪತ್ತೆ ಹಚ್ಚಿದರು, ಎಲ್ಲೆಲ್ಲಿ ಅವಮಾನಗಳಾಗಿವೆಯೋ ಅವುಗಳನ್ನು ತಮ್ಮದೇ ರೀತಿಯಲ್ಲಿ ಪ್ರತಿಭಟಿಸಿದರು... ಬಹಳ ಮುಖ್ಯವಾಗಿ ಶೂದ್ರ ತಪಸ್ವಿಯಂತಹ ನಾಟಕಗಳ ರೂಪದಲ್ಲಿ.

ಮನರಂಜನೆಯೊಂದೇ ನಾಟಕಗಳ ಉದ್ದೇಶವಾಗಿದ್ದ, ಗುರಿಯಾಗಿದ್ದ ಕಾಲದಲ್ಲಿ ಕಥೆಗಳೂ ಅದಕ್ಕೆ ತಕ್ಕಂತೆಯೇ ಇರುತ್ತಿದ್ದವು. ಕಾಲಕ್ರಮೇಣ ನಮ್ಮ ನಡುವೆ ಜ್ವಲಂತವಾಗಿರುವ ಸಮಸ್ಯೆಗಳು ಮತ್ತು ಅವುಗಳನ್ನು ಎತ್ತಿ ತೋರುವ ಮೂಲಕ ಸಾಮಾಜಿಕ ಪರಿವರ್ತನೆಯ ಪ್ರಯತ್ನ ನಾಟಕಗಳ ಪ್ರಮುಖ ಗುರಿಯಾಗತೊಡಗಿತು. ಕುವೆಂಪುರವರ ನಾಟಕಗಳು ಈ ದಿಕ್ಕಿನಲ್ಲಿ ಮೊದಲ ಅಂತಹಾ ಪ್ರಯತ್ನಗಳು. ಅವುಗಳು ರಂಗದ ಮೇಲೆ ಪ್ರಯೋಗಿಸಲ್ಪಡುವುದೆಂಬ ನಂಬಿಕೆ ಸ್ವಯಂ ಕುವೆಂಪು ಅವರಿಗೇ ಇರಲಿಲ್ಲ. "ಶೂದ್ರ ತಪಸ್ವಿಯಲ್ಲಿ ಶಂಭೂಕನ ಕಥೆಯ ಸಾಮಗ್ರಿ ಹೊಸ ರೀತಿಯಿಂದ ದೃಶ್ಯವಸ್ತುವಾಗಿದೆ. ಈ ನಾಟಕ ಆಡುವ ದೃಷ್ಟಿಯಿಂದ ನಿಷ್ಪ್ರಯೋಜಕ. ಅದರ ಚಿತ್ರಗಳ ಬೃಹತ್ತನ್ನೂ ಮಹತ್ತನ್ನೂ ಹೊರಗಡೆಯ ಅಲ್ಪ ವೇದಿಕೆಯ ಮೇಲೆ ಕೃತಕಾಭಿನಯದಿಂದ ಪ್ರದರ್ಶಿಸುವುದೂ ಅಸಾಧ್ಯ. ಆದ್ದರಿಂದ ಕಲ್ಪನಾ ತಪಸ್ಸಾಧ್ಯವಾದ ಮನೋ ರಂಗಭೂಮಿಯಲ್ಲಿಯೇ ಅದನ್ನು ಸೃಷ್ಟಿಸಿ ದೃಷ್ಟಿಸಬೇಕು." ಎಂಬ ಮಾತನ್ನು ಕುವೆಂಪುರವರೇ ಹೇಳುತ್ತಾರೆ.

ಶೂದ್ರನ ತಪಸ್ಸು ಪ್ರಕೃತಿಯ ಮಡಿಲಲ್ಲಿ, ಪ್ರಕೃತಿಗೆ ಪೂರಕವಾಗಿ ನಡೆಯುತ್ತಿರುತ್ತದೆ. ಪ್ರಕೃತಿಯೂ ಶೂದ್ರನನ್ನು ಆರಾಧಿಸುತ್ತಿರುತ್ತದೆ, ಮೃತ್ಯುವನ್ನೂ ಎದುರು ಹಾಕಿಕೊಳ್ಳುವಷ್ಟು, ಮೃತ್ಯುವಿಗೇ ಸವಾಲು ಹಾಕುವಷ್ಟು. ಶಂಭೂಕನ ಪಾತ್ರವನ್ನು ಅವರು ಚಿತ್ರಿಸಿರುವ ರೀತಿಯೂ ಇಂದಿಗೆ ಬಹಳ ಪ್ರಸ್ತುತವೆನಿಸುತ್ತದೆ. ಬ್ರಾಹ್ಮಣನು ರಾಮನನ್ನು ಶೂದ್ರ ತಪಸ್ವಿಯ ಬಳಿ ಕರೆತರುವಾಗ, ಅವನ ಮೇಲೆ ಆರೋಪವನ್ನು ಮಾಡುವಾಗ ಶಂಭೂಕ ನಡೆದು ಕೊಳ್ಳುವ ರೀತಿ ಅತ್ಯಂತ ಸ್ತುತ್ಯರ್ಹವಾದುದು ಮತ್ತು ಒಬ್ಬ ಪ್ರಾಜ್ಞ ನಿಜವಾಗಿಯೂ ನಡೆದುಕೊಳ್ಳಬೇಕಾಗಿರುವಂಥದ್ದು. ಮೌನವಾಗಿ ತಪಗೈಯುತ್ತಿದ್ದ ಮುನಿಯ ಮೇಲೆ ವಿನಾಕಾರಣ ಆರೋಪ ಮಾಡಿದರೂ ಮುನಿ ತನ್ನನ್ನು ಸಮರ್ಥಿಸಿಕೊಳ್ಳುವುದಿಲ್ಲ, ವಾದಿಸುವುದಿಲ್ಲ. ವಲ್ಮಿಕದೊಳಗೆ ತಪಸ್ಸು ಮಾಡುತ್ತಿದ್ದ ಮುನಿಗೆ ಎಲ್ಲವೂ ತಿಳಿಯುತ್ತಿರುತ್ತದೆ ಎಂಬುದಕ್ಕೆ ಕಡೆಯ ದೃಶ್ಯದಲ್ಲಿ ಬ್ರಾಹ್ಮಣ ನಮಸ್ಕರಿಸಿದಾಗ ಶಂಭೂಕ ಮುನಿಯ ಕೈಗಳು ಹೊರಬಂದು ಹರಸುವುದೇ ಸಾಕ್ಷಿ.. ರಾಮನು ಈ ಮುನಿಯನ್ನು ಸಂಹರಿಸಲು ಸಾಮಾನ್ಯ ಆಯುಧ ಸಮರ್ಥವಾಗದೆಂದು ಬ್ರಾಹ್ಮಣನಿಗೆ ಮನದಟ್ಟು ಮಾಡಲೆತ್ನಿಸಿದಾಗ ಬ್ರಾಹ್ಮಣ " ಆವ ದಿವ್ಯಾಸ್ತ್ರದಿಂ ದೈತ್ಯೇಂದ್ರಂ ರಾವಣನ ದಶಶಿರಗಳುರುಳಿದವೋ ಅದನೆ ತುಡು, " ಎಂದಾಗಲೂ ತಡೆಯಲು ಎದ್ದುಬರುವುದಿಲ್ಲ. ಕೊನೆಗೆ ಬ್ರಾಹ್ಮಣನ ಅಣತಿಯ ಮೇರೆಗೆ ರಾಮ ಬ್ರಹ್ಮಾಸ್ತ್ರವನ್ನೇ ಪ್ರಯೋಗಿಸಿದರೂ ವಿಚಲಿತನಾಗುವುದಿಲ್ಲ. ರಾಮ ಬ್ರಹ್ಮಾಸ್ತ್ರವನ್ನು ತೊಟ್ಟಾಗ ಭೂಮಿ ನಡುಗುತ್ತದೆ, ಗಗನ ಗುಡುಗುತ್ತದೆ. ತನ್ನನ್ನೇನೂ ಮಾಡದು, ಅದು ಶೂದ್ರನ ಸಂಹಾರಕ್ಕೆ ತೊಟ್ಟದ್ದೆಂದು ತಿಳಿದಿದ್ದ ಬ್ರಾಹ್ಮಣ ಹೆದರಿ, ಸೆಡೆತು, ರಾಮನ ಮೊರೆಗೆ ಹೋಗುತ್ತಾನೆ. ಆದರೂ ಶೂದ್ರ ಬೆಚ್ಚುವುದಿಲ್ಲ, ವಲ್ಮಿಕದಿಂದ ಹೊರಬರುವುದಿಲ್ಲ. ಬ್ರಹ್ಮಾಸ್ತ್ರ ತಪಸ್ವಿಯನ್ನು ಗೌರವಿಸಿ ಬ್ರಾಹ್ಮಣನನ್ನೇ ಆಹುತಿ ತೆಗೆದುಕೊಳ್ಳಲು ಹಿಂತಿರುಗುತ್ತದೆ. ಬ್ರಾಹ್ಮಣನು ನಿಜವಾದ ಅಧ್ಯಯನಕ್ಕೆ, ಜ್ಞಾನಕ್ಕೆ ಶರಣಾಗುವುದರೊಂದಿಗೆ ಎಲ್ಲವೂ ಮಂಗಳವಾಗುತ್ತದೆ, ನಿಜವಾಗಿ ಗೌರವಿಸಬೇಕಾದ್ದು ಹುಟ್ಟಿನ ಮೂಲವನ್ನಲ್ಲ, ಶಾಸ್ತ್ರಸಂಭ್ರಾಂತರನ್ನಲ್ಲ, ಮಾನವೀಯತೆಯ ಲವಲೇಶವೂ ಇಲ್ಲದ ಅಸಮಾನತೆಯನ್ನಲ್ಲ, ಬೆಲೆ ಕೊಡಬೇಕಾದ್ದು ನಿಜವಾದ ಮಾನವೀಯತೆಗೆ, ಅಧ್ಯಯನ ತಂದುಕೊಡಬಲ್ಲ ಜ್ಞಾನಕ್ಕೆ, ಸಜ್ಜನಿಕೆಗೆ, ತಾನು ಉತ್ತರಿಸಬೇಕಿಲ್ಲದ ಪ್ರಶ್ನೆಗಳ ಬಗ್ಗೆ ತಲೆಕೆಡಿಸಿಕೊಳ್ಳದೇ ಮೌನವಾಗಿ ತನ್ನ ಕಾರ್ಯವನ್ನು ತಾನು ನಿರ್ವಹಿಸುತ್ತಿರುವ ಸ್ಥಿತಪ್ರಜ್ಞತೆಗೆ.  ಇಲ್ಲಿ ಶರಣಾಗುವುದು ಬ್ರಾಹ್ಮಣನಲ್ಲ, ಶಾಸ್ತ್ರಸಂಭ್ರಾಂತ ಮನಸ್ಥಿತಿ. ಗೆಲ್ಲುವುದು ಶೂದ್ರನಲ್ಲ , ನಿಜವಾದ ಅಧ್ಯಯನ, ನಿಜ ಪಾಂಡಿತ್ಯ. ಇಂದು ಅಸಹಿಷ್ಣುತೆಯ ಹೆಸರಿನಲ್ಲಿ ಕೂಗಾಡುತ್ತಿರುವವರೆಲ್ಲಾ ಈ ವಿಷಯವನ್ನು ಅತ್ಯಂತ ಅವಶ್ಯಕವಾಗಿ ಅನುಸರಿಸಲೇ ಬೇಕಾದ ಅಗತ್ಯವಿದೆ. 

ಶೂದ್ರತಪಸ್ವಿಯೊಡನೆ ತಮ್ಮನ್ನು ಕವಿ ಗುರುತಿಸಿಕೊಂಡಿದ್ದಾರಾ? ನಿಜವಾದ ಅಧ್ಯಯನ ಶೀಲ ತಾನು, ರಜತ ಮನುಷ್ಯ ತಾನು.., ಅಧ್ಯಯನದಿಂದ ಜ್ಞಾನವನ್ನು ಪಡೆಯದೇ ಕಂದಾಚಾರದಲ್ಲಿ ತೊಡಗಿರುವ ನೀವು ನಿಜವಾದ ಶಂಭೂಕಗಳು(ಕಪ್ಪೆ ಚಿಪ್ಪು) ಎಂದು ಹೇಳುತ್ತಿದ್ದಾರಾ? ಮರುಓದು ಹೌದೆನ್ನುತ್ತದೆ.

ಇಲ್ಲಿ ಅವರು ನಾರದರ ಪಾತ್ರವನ್ನು ಅದಕ್ಕಾಗಿಯೇ ಬ್ರಾಹ್ಮಣನೇ ನಿರ್ವಹಿಸುವಂತೆ ಮಾಡಿದ್ದಾರೆ. ಬ್ರಾಹ್ಮಣರ ಬಗ್ಗೆ ಬರೆದುದಲ್ಲವೆಂದು ಅವರೆಷ್ಟೇ ಸ್ಪಷ್ಟೀಕರಣ ಕೊಟ್ಟರೂ ಅದನ್ನು ಒಪ್ಪಿಕೊಳ್ಳಲಾಗುವುದಿಲ್ಲ. ಅದು ನಿಸ್ಸಂದೇಹವಾಗಿ ಬ್ರಾಹ್ಮಣರ ಬಗ್ಗೆಯೇ ಬರೆದುದಾಗಿದ್ದರೂ ಎಲ್ಲ ಬ್ರಾಹ್ಮಣರ ವಿರುದ್ಧವೂ ಅಲ್ಲ. ಅಂದು ಸಮಾಜದಲ್ಲಿ ಅಸ್ತಿತ್ವದಲ್ಲಿದ್ದ ಪುರೋಹಿತಶಾಹಿ ಪರಂಪರೆಯನ್ನು, ವೈದಿಕ ಬ್ರಾಹ್ಮಣರ ಕರ್ಮಠ ಶಾಸ್ತ್ರಗಳನ್ನು, ಹುಸಿ ಬ್ರಾಹ್ಮಣ ಪಾರಮ್ಯವನ್ನು ಈ ರೀತಿಯಾಗಿ ಪ್ರಶ್ನಿಸುತ್ತಾರೆ, ಧಿಕ್ಕರಿಸುತ್ತಾರೆ. ಅವರ ಅಸಮಾಧಾನ ಪ್ರಾಜ್ಞ ಬ್ರಾಹ್ಮಣರ ಕುರಿತಲ್ಲ ಎಂಬುದು ಈ ಎಲ್ಲ ಹಿನ್ನೆಲೆಯಲ್ಲಿ ಸ್ಪಷ್ಟವಾಗುತ್ತಾ ಹೋಗುತ್ತದೆ.


ಇಲ್ಲಾಗಿರುವುದು ಬದಲಾವಣೆಯ ಜೊತೆಜೊತೆಗೇ ಉದಾತ್ತೀಕರಣ. ಭಾಸನ ಉದಾತ್ತೀಕರಣದಂತೆಯೇ ಕುವೆಂಪು ಶೂದ್ರ ತಪಸ್ವಿಯ ಉದಾತ್ತೀಕರಣವೂ ಬಹಳ ಪರಿಣಾಮಕಾರಿಯಾಗಿ ಮೂಡಿ ಬಂದಿದೆ. ಯಾವುದೇ ನಾಟಕವನ್ನು ನೋಡುವಾಗ , ಓದುವಾಗ ಪ್ರತಿಯೊಬ್ಬ ಓದುಗನೂ ಯಾವುದಾದರೊಂದು ಪಾತ್ರದಲ್ಲಿ ತನ್ನನ್ನು ಗುರುತಿಸಿಕೊಳ್ಳುತ್ತಾನೆ. ಹುಟ್ಟಿನ ಮೂಲದ ಪ್ರಭ್ಹಾವದಲ್ಲಿ ನೋಡಿದರೆ ಬ್ರಾಹ್ಮಣನಿಗೆ ಕುವೆಂಪು ಖಳನಾಯಕರಂತೆಯೂ, ಶೂದ್ರರ ದೃಷ್ಟಿಯಲ್ಲಿ ನೋಡಿದರೆ ಬ್ರಾಹ್ಮಣರ ಮರ್ಮಸ್ಥಾನಕ್ಕೇ ಪ್ರಬಲವಾದ ಹೊಡೆತ ಕೊಟ್ಟ ಧೀಮಂತ ನಾಯಕನಂತೆಯೂ ಕಾಣಿಸಬಹುದು. ಇವೆರಡೂ ಕುವೆಂಪುರವರ ಆಶಯವಾಗಿರಲಿಲ್ಲವೆಂಬುದು ಅವರೇ ಹೇಳಿದ ಮಾತಿನಿಂದ ಸ್ಪಷ್ಟವಾಗುತ್ತದೆ. ಅದನ್ನವರು ಕಲೆಯ ಉದ್ದೇಶವೇ ಕೊಲೆಯಾದಂತೆ ಎಂದಿದ್ದಾರೆ.ಇಷ್ಟಾಗಿಯೂ ಕೆಲವೊಮ್ಮೆ ಬ್ರಾಹ್ಮಣರ ವಿರುದ್ಧದ ಮನಸ್ಥಿತಿಯೇ ಶೂದ್ರತಪಸ್ವಿಯ ರಚನೆಗೆ ಕಾರಣ ಎಂದನ್ನಿಸಿದರೆ ಒಂದು ಮಾತು. ಒಂದು ಶೂದ್ರ ತಪಸ್ವಿಯ ಓದು ಬ್ರಾಹ್ಮಣರಲ್ಲಿ ಇಷ್ಟು ಸಂಚಲನ ಉಂಟು ಮಾಡಿದರೆ , ಅದು ಅವಹೇಳನಕಾರಿ ಎಂದು ಬೊಬ್ಬೆ ಹೊಡೆದರೆ ಅನಾದಿ ಕಾಲದಿಂದ ಶಂಭೂಕ ವಧೆಯನ್ನು ಓದುತ್ತಾ, ಅದನ್ನೊಂದು ಹರಿಕಥೆಯಂತೆ ಭಕ್ತಿಯಿಂದ ಕೇಳುತ್ತಾ ಬಂದ ಶೂದ್ರರ ಮನಸ್ಥಿತಿಯ ಬಗ್ಗೆಯೂ ಒಮ್ಮೆ ಯೋಚಿಸುವುದು ಒಳಿತು. ಅವರಿಗೆ ಹೀಗನ್ನಿಸಬಾರದು ಎಂದು ಹೇಗೆ ನಿರೀಕ್ಷಿಸಲಾದೀತು? ಮಾನವೀಯತೆಯ, ಮನುಷ್ಯತ್ವದ ಹಿನ್ನೆಲೆಯಲ್ಲಿ ಯಾವುದೇ ಪಕ್ಷೋದ್ರೇಕ ಹೊಂದದೇ ಸಮಾಧಾನವಾಗಿ ಓದಿದರೆ ಕುವೆಂಪು ಪ್ರಜ್ವಲಿಸುತ್ತಾರೆ, ಶೂದ್ರ ತಪಸ್ವಿ ನಿಗಿನಿಗಿ ಹೊಳೆಯುತ್ತದೆ

~ಮಾಲಿನಿ ಗುರುಪ್ರಸನ್ನ

(ಸಮಹಿತ ಪತ್ರಿಕೆಯಲ್ಲಿ ಪ್ರಕಟಿತ)

ಮಂಗಳವಾರ, ನವೆಂಬರ್ 12, 2013

ಅಡಿಗರ ಅಡಿಗೆ ನಮಿಸುತ್ತಾ...

ಕೆಲವು ಹಾಡುಗಳೇ ಹಾಗೇ.... ಕಾಲ, ದೇಶ, ಸ್ಥಿತಿ ಎಲ್ಲವನ್ನೂ ಮೀರಿ ಜನಮಾನಸದ ಮೇಲೆ ಬೆಳೆಯುತ್ತಲೇ ಹೋಗುತ್ತವೆ. ಕೇಳುತ್ತಿದ್ದಂತೇ ಪ್ರಸ್ತುತ ಮನಃಸ್ಥಿತಿಗೆ ಕನ್ನಡಿ ಹಿಡವಂತಿವೆಯೇನೋ ಎಂಬ ಭಾಸ ಕೇಳುಗರಲ್ಲಿ/ಓದುಗರಲ್ಲಿ ಉಂಟುಮಾಡುತ್ತವೆ. ಬಹು ಹಿಂದೆ ರಚಿತವಾದ ಹಾಡುಗಳದೆಷ್ಟೋ ಇಂದಿಗೂ ಬಹು ಪ್ರಸ್ತುತ ಎಂದೆನಿಸಿಕೊಳ್ಳುತ್ತವೆ. ಕವಿ ರಚಿಸುವಾಗ ಇದ್ದ ಚಿತ್ರಣ, ಅವನ ಕಲ್ಪನೆಗೆ ಆ ಕ್ಷಣಕ್ಕೆ ಹೊಳೆದ ಯಾವುದೋ ದೃಶ್ಯಾನುಭೂತಿ, ತನ್ನೊಳಗೆ ಆವಿರ್ಭವಿಸಿದ್ದ ಹಳೆಯ ಅನುಭವಗಳ ಹೂರಣ - ಇದ್ಯಾವುವೂ ಇದ್ದಹಾಗೇ ಓದುಗರನ್ನು ತಟ್ಟದಿದ್ದರೂ... ಸಾಮಾನ್ಯರಿಂದ ಹಿಡಿದು ಸಾಹಿತ್ಯಪ್ರಿಯ ಓದುಗರನ್ನೆಲ್ಲಾ ಸೆಳೆದು ಹಿಡಿದಿಟ್ಟುಕೊಳ್ಳುವ ಹಾಡುಗಳೇ ಜನಪ್ರಿಯ ಎಂದೆನಿಸಿಕೊಳ್ಳುತ್ತವೆ. 

ಕವಿತೆ ಕಾವ್ಯವಾಗುವುದು ಅದಕ್ಕೊದಗುವ ಇಂಪಾದ ಸಂಗೀತದಿಂದ. ಕಾವ್ಯದೊಳಗಿನ ಗಾಢಾರ್ಥವನ್ನು, ಗೂಢಾರ್ಥವನ್ನು ಕಿವಿಯಮೂಲಕ ಸಮರ್ಥವಾಗಿ ಹೃದಯಕ್ಕೊಯ್ಯಲು ಸಾಹಿತ್ಯದಷ್ಟೇ ಸುಂದರ, ಮೋಹಕ ಸಂಗೀತದ ಆವಶ್ಯಕತೆ ಇರುತ್ತದೆ. ಗೇಯತೆಯಿಂದಕೂಡಿದ ಕವನ ಬಹು ಬೇಗ ಜನರ ಮನಸನ್ನು ತಟ್ಟುತ್ತದೆ, ದೀರ್ಘಕಾಲ ಬಾಳುತ್ತದೆ. ಹಾಗೆ ನೋಡಿದರೆ ಎಲ್ಲಾ ಕವಿತೆಗಳೂ ಸಂಗೀತದ ಚೌಕಟ್ಟಿಗೇ ನಿಲುಕಬೇಕೆಂಬ ನಿಯಮವೇನೂ ಇಲ್ಲ. ಸುಂದರ, ಸರಳ, ಹೃದ್ಯ ಅದೆಷ್ಟೋ ಕವಿತೆಗಳು ನಮ್ಮ ಮುಂದಿವೆ. ಆದರೆ ಹಾಡಾಗುವ ಕವನಗಳೇ ಹೆಚ್ಚು ಹೆಚ್ಚು ನಮ್ಮನ್ನು ಕಾಡುವವು ಎಂಬುದೂ ಅಷ್ಟೇ ಸತ್ಯ.

ಅಂತಹ ಜನಪ್ರಿಯ ಕವಿತೆಯೊಂದರ ಕಿರು ಪರಿಚಯ ಇಲ್ಲಿದೆ. ಶ್ರೀಯುತ ಗೋಪಾಲಕೃಷ್ಣ ಅಡಿಗರ "ಕಟ್ಟುವೆವು ನಾವು" ಕವನ ಸಂಕಲನದಲ್ಲಿರುವ "ಮೋಹನ ಮುರಲಿ" ಎಂಬ ಪ್ರಸಿದ್ಧ ಹಾಡು ಇಂದಿಗೂ ಎಲ್ಲರ ಮನದೊಳಗೆ ಶಾಶ್ವತವಾಗಿ ಮನೆಮಾಡಿದೆ. ಈ ಹಾಡನ್ನು ಗುನುಗಿಕೊಳ್ಳದಿರುವವರೇ ತೀರಾ ಕಡಿಮೆ ಎನ್ನಬಹುದು. ಇದಕ್ಕೆ ಕಾರಣ ಕವಿತೆಯೊಳಗಿರುವ ಕಾವ್ಯಲಯ ಮತ್ತು ಗೇಯತೆ. ಏನೂ ಅರ್ಥ ಆಗದಿರುವವರಿಗೂ ಎನೋ ಒಂದು ಅರ್ಥವನ್ನು ಹೊಳಹಿಸುತ್ತದೆ ಈ ಹಾಡಿನಲ್ಲಿ ಭಾವನೆಯೇ ತುದಿಯಿಂದ ಬುಡದವರೆಗೂ ನಾದವಾಗಿ ಹರಿಯುತ್ತದೆ. 

ಹಾಡಿನ ಶೈಲಿ :-

ಮೊದ ಮೊದಲು ಅಡಿಗರು ನವೋದಯ ಶೈಲಿಯಲ್ಲಿ ಕಾವ್ಯ ರಚಿಸಿದರೂ ಆಮೇಲೆ ನವ್ಯ ಶೈಲಿಯಲ್ಲೇ ಹೆಚ್ಚು ಕವಿತೆಗಳನ್ನು ರಚಿಸಿದರು. ಆದರೆ ಅವರ ಹೆಚ್ಚಿನ ಕವಿತೆಗಳೆಲ್ಲಾ ಪಾರಮಾತ್ಮಿಕ, ಆಧ್ಯಾತ್ಮಿಕ ಚಿಂತನೆಯನ್ನು ಹೊಳಹಿಸುತ್ತವೆ. ಅವರ "ಮೋಹನ ಮುರಲಿ" ಕವನ ನವ್ಯಕಾವ್ಯದ ಛಾಪನ್ನು ಹೊಂದಿರುವ ನವೋದಯ ಕವಿತೆಯಾಗಿದೆ. ನವ್ಯ ಶೈಲಿಯಲ್ಲಿ ಅನೇಕರು ಉತ್ತಮ ಕವಿತೆಗಳು ಬರೆದಿದ್ದಾರೆ. ಆದರೆ ಅಡಿಗರಷ್ಟು ಎತ್ತರಕ್ಕೇರಲು ಯಾರಿಗೂ ಸಾಧ್ಯವಾಗಲಿಲ್ಲ ಎಂದರೆ ಅತಿಶಯೋಕ್ತಿಯಿಲ್ಲ. 

ಕವಿತೆಯ ಪೂರ್ಣ ಸಾಹಿತ್ಯ :

ಮೋಹನ ಮುರಲಿ 

ಯಾವ ಮೋಹನ ಮುರಲಿ ಕರೆಯಿತು ದೂರ ತೀರಕೆ ನಿನ್ನನು?
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು?

ಹೂವು ಹಾಸಿಗೆ ಚಂದ್ರ ಚಂದನ ಬಾಹುಬಂಧನ ಚುಂಬನ;
ಬಯಕೆತೋಟದ ಬೇಲಿಯೊಳಗೆ ಕರಣಗಣದೀ ರಿಂಗಣ; 

ಒಲಿದ ಮಿದುವೆದೆ, ರಕ್ತಮಾಂಸದ ಬಿಸಿದುಸೋಂಕಿನ ಪಂಜರ;
ಇಷ್ಟೆ ಸಾಕೆಂದಿದ್ದೆಯಲ್ಲೋ! ಇಂದು ಏನಿದು ಬೇಸರ?

ಏನಿದೇನಿದು ಹೊರಳುಗಣ್ಣಿದ ತೇಲುನೋಟದ ಸೂಚನೆ?
ಯಾವ ಸುಮಧುರ ಯಾತನೆ? ಯಾವ ದಿವ್ಯದ ಯಾಚನೆ?

ಮರದೊಳಡಗಿದ ಬೆಂಕಿಯಂತೆ ಎಲ್ಲೋ ಮಲಗಿದೆ ಬೇಸರ;
ಎನೊ ತೀಡಲು ಏನೊ ತಾಡಲು ಹೊತ್ತಿ ಉರಿವುದು ಕಾತರ.

ಸಪ್ತಸಾಗರದಾಚೆಯೆಲ್ಲೋ ಸುಪ್ತ ಸಾಗರ ಕಾದಿದೆ,
ಮೊಳೆಯದಲೆಗಳ ಮೂಕ ಮರ್ಮರ ಇಂದು ಇಲ್ಲಿಗು ಹಾಯಿತೆ? 

ವಿವಶವಾಯಿತು ಪ್ರಾಣ; ಹಾ! ಪರವಶವು ನಿನ್ನೀ ಚೇತನ;
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ? 

ಯಾವ ಮೋಹನ ಮುರಲಿ ಕರೆಯಿತು ಇದ್ದಕಿದ್ದೊಲೆ ನಿನ್ನನು?
ಯಾವ ಬೃಂದಾವನವು ಚಾಚಿತು ತನ್ನ ಮಿಂಚಿನ ಕೈಯನು?


ಈ ಹಾಡಿಗೆ ಪ್ರಥಮಬಾರಿ ಸಂಗೀತ ಸಂಯೋಜಿಸಿದ್ದು ಶ್ರೀಯುತ ಮೈಸುರು ಅನಂತಸ್ವಾಮಿಯವರು. ಸುಶ್ರಾವ್ಯವಾಗಿ ಹಾಡಿದವರು ಶ್ರೀಮತಿ ರತ್ನಮಾಲಾ ಪ್ರಕಾಶ್. ಕಲ್ಪನಾಲೋಕದಲ್ಲಿ ವಿಹರಿಸುವ ಪ್ರಣಯಿಗಳ, ರಾಧಾಕೃಷ್ಣರನ್ನು ಆರಾಧಿಸುವ ಭಕ್ತರ, ಪ್ರೀತಿಯನ್ನಗಲಿದ ವಿರಹಿಗಳ, ಕಾವ್ಯರಸಿಕರ - ಇವರೆಲ್ಲರ ಬಾಯಲ್ಲಿ ಮೋಹನ ಮುರಳಿ ಈಗಲೂ ನಲಿಯುತ್ತಿದ್ದಾನೆ. ಅಡಿಗರ ಕವನದೊಳಗಿನ ವಿರಹ, ಪ್ರಣಯ, ಆರ್ತನಾದ, ಭಕ್ತನ ಮೊರೆ, ತುಡಿತ, ಬಯಕೆ - ಇವೆಲ್ಲವೂ ಅನಂತಸ್ವಾಮಿಯವರ ಸಂಗೀತ ಹಾಗೂ ರತ್ನಮಾಲಾರ ಕಂಠದಲ್ಲಿ ಹದವಾಗಿ ಮಿಳಿತಗೊಂಡು ಕೇಳುಗರ ಎದೆಯಲ್ಲಿ ಶಾಶ್ವತ ಛಾಪನ್ನು ಮೂಡಿಸಿದೆ.

ಚಲನಚಿತ್ರದಲ್ಲಿ "ಮೋಹನ ಮುರಲಿ" :-

೧೯೯೭ ರಲ್ಲಿ ಬಿಡುಗಡೆಗೊಂಡ ನಾಗತಿಹಳ್ಳಿ ಚಂದ್ರಶೇಖರ್ ಅವರ ನಿರ್ದೇಶನದ "ಅಮೇರಿಕಾ ಅಮೇರಿಕಾ" ಚಲನಚಿತ್ರದಲ್ಲಿ ಅಡಿಗರ ಇದೇ ಕವಿತೆಯನ್ನು ಬಹು ಸಮರ್ಥವಾಗಿ ಬಳಸಿಕೊಳ್ಳಲಾಯಿತು. ಸಾಂಪ್ರದಾಯಿಕ ಸಂಗೀತ ಶೈಲಿಗಿಂತ ಭಿನ್ನವಾದ ಸಂಗೀತವನ್ನು ಕೊಟ್ಟವರು ಶ್ರೀ ಮನೋಮೂರ್ತಿಯವರು. ಹಾಡಿದವರು ರಾಜು ಅನಂತಸ್ವಾಮಿ ಹಾಗೂ ಸಂಗೀತ ಅವರು. ಆ ಸಮಯದಲ್ಲಿ ಯಾವುದೋ ಒಂದು ಪತ್ರಿಕೆಯಲ್ಲಿ ಓದಿದ್ದ ನೆನಪು..‘ಈಗಾಗಲೇ ರತ್ನಮಾಲಾರ ಹಾಡಿನಲ್ಲಿ ಜನಪ್ರಿಯಗೊಂಡಿರುವ ಈ ಕವಿತೆಗೆ ಭಿನ್ನವಾದ ಸಂಗೀತವನ್ನಿತ್ತರೆ ಸಫಲರಾಗುವರೇ?? ಚಿತ್ರಕತೆಯಲ್ಲಿ ಈ ಹಾಡಿನ ಬಳಕೆ ಸಮರ್ಪಕವಾಗಿದೆಯೇ??" ಎಂಬಿತ್ಯಾದಿ ಸಂಶಯಗಳು, ಪ್ರಶ್ನೆಗಳು ಹಲವರಲ್ಲಿ ಮೂಡಿತ್ತು. ಆದರೆ ಚಿತ್ರ ಬಿಡುಗಡೆಗೊಂಡಾಗ ಈ ಹಾಡಿಗೆ ಒದಗಿಸಲಾದ ಹೊಸ ಸಂಗೀತ ಅದೆಷ್ಟು ಹೆಸರುಗಳಿಸಿತೆಂದರೆ ಹಳೆಯ ಸಂಗೀತದ ನೆನಪನ್ನೂ ತುಸು ಮಬ್ಬಾಗಿಸಿತೆನ್ನಬಹುದು. ಈ ಕ್ರಾಂತಿಯಾಗಿದ್ದು ಕೇವಲ ಸಂಗೀತಮಾತ್ರದಿಂದ ಎನ್ನಲಾಗದು. ಹಾಡನ್ನು ಚಿತ್ರದಲ್ಲಿ ಬಳಸಿಕೊಂಡ ಸಂದರ್ಭವೂ ಅಷ್ಟೇ ಪ್ರಮುಖ ಪಾತ್ರ ನಿರ್ವಹಿಸಿದೆ ಎಂಬುದು ನನ್ನ ಅಭಿಮತ.

ಹಾಡಿನ ಹಿನ್ನೆಲೆ :-

ಅಡಿಗರು ಈ ಕವಿತೆಯನ್ನು ರಚಿಸಿದ್ದು ಸಿದ್ಧಾರ್ಥ ಗೌತಮಬುದ್ಧನಾಗಲು ಹೊರಟ ಸಂದರ್ಭವನ್ನು ನೆನೆದು ಎನ್ನುವ ಊಹೆ ಕೆಲವು ಕಾವ್ಯ ಪಂಡಿತರದ್ದು. ಇದಕ್ಕೆ ಸಾಕಷ್ಟು ಪುಷ್ಟಿಕೊಡುವಂತಿದೆ ಕವಿತೆಯ ಸಾಹಿತ್ಯ. ಇನ್ನು ಕೆಲವರ ಪ್ರಕಾರ, ಕವನ ಆತ್ಮ-ಪರಮಾತ್ಮನ ನಡುವಿನ ಸೂಕ್ಷ್ಮ ಎಳೆಯನ್ನು, ಜೀವಾತ್ಮ ದೇಹವನ್ನು ತೊರೆದು ಭಗವಂತನಲ್ಲಿ ಲೀನವಾಗಲು ಮೊರೆಯಿಡುತ್ತಿರುವುದನ್ನು, ಬಿಟ್ಟೂ ಬಿಡದ ಮಾಯೆಯೊಳಗೆ ಸಿಲುಕಿ ಮಿಸುಕಾಡುವ ತುಡಿತವನ್ನು ಪ್ರತಿಬಿಂಬಿಸುತ್ತಿದೆ. ಒಟ್ಟಿನಲ್ಲಿ ಹೀಗೇ ಎಂದು ಖಚಿತವಾಗಿ ಅರ್ಥೈಸಿಕೊಳ್ಳಲಾಗದಷ್ಟು ಎತ್ತರಕ್ಕೇರಿರುವ ಈ ಹಾಡು ಕೇಳುಗರಲ್ಲಿ, ಓದುಗರಲ್ಲಿ, ವಿಮರ್ಶಕರಲ್ಲಿ ಬೇರೆ ಬೇರೆ ಅರ್ಥಗಳನ್ನೇ ಹುಟ್ಟುಹಾಕಿದೆ. ಆದ್ಯಾತ್ಮ ಚಿಂತಕರಲ್ಲಿ ಲೌಕಿಕತೆಯಿಂದ ಅಲೌಕಿಕತೆಯೆಡೆಗೆ ಎಳೆಯುವ ಹಾಡು ಎಂದೆನಿಸಿಕೊಂಡರೆ, ಯುವಕರಿಗಿದು ಪ್ರೇಮಗೀತೆ.... ವಿರಹಗೀತೆ! 

"ಅಮೇರಿಕಾ ಅಮೇರಿಕಾ" ಚಿತ್ರದಲ್ಲಿ ಈ ಹಾಡನ್ನು ನಾಯಕ ಹುಟ್ಟಿದ ಊರು, ಮನೆ, ದೇಶವನ್ನು ತೊರೆದು ಪರದೇಶಕ್ಕೆ ಹೊರಟಾಗ ಅವನು ಬಿಟ್ಟು ಹೋಗುವ ಸ್ನೇಹಿತರು, ಆಪ್ತೇಷ್ಟರು, ಹೆತ್ತವರ ಮನಃಸ್ಥಿತಿಯನ್ನು ಬಿಂಬಿಸುವಾಗ ಬಳಸಿಕೊಳ್ಳಲಾಗಿದೆ. ಚಿತ್ರಕಥೆಯ ಕೊನೆಯಲ್ಲಿ ಹುಟ್ಟಿದೂರಿನ ಮಹತ್ವವನ್ನರಿತ ನಾಯಕ ಮರಳಲು ಯತ್ನಿಸಿದರೂ, ಹಿಂತಿರುಗಲಾಗದೇ ಹೊರದೇಶದಲ್ಲೇ ಅಸುನೀಗುವಾಗಿನ ಕ್ಷಣದಲ್ಲಿ.... "ವಿವಶವಾಯಿತು ಪ್ರಾಣ ಹಾ.." ಎಂದು ಹಾಡು ಬರುತ್ತದೆ. ಆಗ ಎಂತಹವರ ಮನಸೂ ದ್ರವಿಸದಿರದು. ಆ ಸಂದರ್ಭದಲ್ಲಿ ಬಳಸಿಕೊಂಡ ಹಾಡಿನ ಸಾಹಿತ್ಯ ಬೇರೇ ಅರ್ಥವನ್ನೇ ಕಲ್ಪಿಸಿಕೊಡುತ್ತದೆ. ದೇಶಾಭಿಮಾನ, ತನ್ನವರ ತೊರೆದು ಬದುಕಲು ಪರದಾಡುವ ಮನವನ್ನು ನೋಡುಗರ ಮನದೊಳಗೆ ಗಾಢವಾಗಿ ಛಾಪಿಸುತ್ತದೆ.

ನಾ ಕಂಡಂತೆ "ಮೋಹನ ಮುರಲಿ" :-

"ಕೃಷ್ಣ" ಸದಾ ನನ್ನ ಕಾಡಿದವ. ಗೀತೆಯಕೃಷ್ಣನ ಮೇರುವ್ಯಕ್ತಿತ್ವ, ವಿಶ್ವರೂಪ ಭಕ್ತಿ, ಗೌರವ ತುಂಬಿದರೆ, ಮೋಹನ್ಮುರಲಿಯನ್ನು ಕಲ್ಪಿಸಿಕೊಂಡರೆ ಸಾಕು- ಅಷ್ಟೇ ಸೂಕ್ಷ್ಮವಾಗಿ, ಸರಳ ಸುಲಭವಾಗಿ ನನ್ನ ಮುಂದೆ ನಿಂತಂತಾಗುತ್ತಾನೆ. ಕೊಳಲಗಾನ ಎಂದರೇ ಏನೋ ತಲ್ಲೀನತೆ, ತನ್ಮಯತೆ. ಓರ್ವ ಅತ್ಯಂತ ಆಪ್ತ ಗೆಳೆಯನಂತೆ, ಹಿತೈಷಿಯಂತೆ, ಸಹೋದರನಂತೆ, ಪ್ರಿಯಕರನಂತೆ - ಎಲ್ಲಾ ರೀತಿಯಲ್ಲೂ, ಎಲ್ಲಾ ರೂಪದಲ್ಲಿ ಸುಳಿದಾಡಿ ಸನಿಹಗೊಳ್ಳುವ ಮೋಹನನ ಕುರಿತಾದ ಪ್ರಸ್ತುತ ಈ ಹಾಡು ಅವನ ಪ್ರತಿಯೊಂದು ಲೀಲೆಯನ್ನೂ, ಅವನ ಕೊಳಲೊಳಗಿಂದ ಹೊರಹೊಮ್ಮುವ ಮಂತ್ರಮುಗ್ಧ ನಾದವನ್ನೂ ಪದಪದದಲ್ಲೂ, ಪ್ರತಿ ಪ್ರಾಸದಲ್ಲೂ ಕಾಣಿಸುತ್ತದೆ ಎಂದೆನಿಸುತ್ತದೆ ನನಗೆ. "ಮೋಹನ ಮುರಲಿ" ಹಾಡನ್ನು ರತ್ನಮಾಲಾಪ್ರಕಾಶ್ ಅವರ ಸಂಗೀತದಲ್ಲಿ ಕೇಳುವಾಗ ಒಂದು ರೀತಿಯ ಅನುಭೂತಿಯಾದರೆ, "ಅಮೇರಿಕಾ ಅಮೇರಿಕಾ" ಚಲನಚಿತ್ರದಲ್ಲಿ ಬಳಸಿಕೊಂಡ ಸಂಗೀತ ಕೇಳಿದಾಗ ಬೇರೆಯದೇ ರೀತಿಯ ಅನುಭೂತಿಯಾಗುವುದು. ಮೂಲ ಸಂಗೀತ ಕೇಳುತ್ತಿದ್ದಂತೆ ಕಣ್ಣು ಅಪ್ರಯತ್ನವಾಗಿ ಅರೆನಿಮೀಲಿತಗೊಂಡು ಬೃಂದಾವನದೆಡೆಗೇ ಹೋದಂತೆ... ಶಾಂತ ರಸ, ಕರುಣ ರಸ ನನ್ನೊಳಗೆ ಪ್ರವಹಿಸಿದಂತೆ ಭಾಸವಾದರೆ, ಮನೋಮೂರ್ತಿಯವರ ಸಂಗೀತದ ತುಂಬೆಲ್ಲಾ ಶೋಕರಸದ ಆವಿರ್ಭಾವವೊಂದೇ ಉಂಟಾಗುತ್ತದೆ.

ಎರಡೂ ಸಂಗೀತಗಳು ನಮ್ಮನ್ನು ತಟ್ಟುತ್ತವೆ, ಕಾಡುತ್ತವೆ, ಬೇರೆಯೆ ಲೋಕಕ್ಕೇ ನಮ್ಮನೆಳೆಸುತ್ತವೆ. ನನಗೆ ಉಂಟಾದಂತಹ ಅನುಭೂತಿಯೇ ಇತರರಿಗೂ ಆಗಬೇಕೆಂದಿಲ್ಲ. ಆದರೆ ಯಾವುದೋ ಒಂದು ಅನುಭವವನ್ನು ಕೇಳುಗರಲ್ಲಿ ಖಚಿತವಾಗಿ ಉಂಟುಮಾಡುವಲ್ಲಿ ಮಾತ್ರ ಸಫಲವಾಗಿದೆ ಅಡಿಗರ ಈ ಪ್ರಸಿದ್ಧ ಹಾಡು. ಅಷ್ಟೊಂದು ಶಕ್ತಿಯಿದೆ ಅವರ ಹಾಡಿನೊಳಗಿನ ಸಾಹಿತ್ಯದಲ್ಲಿ, ಕವಿತೆಯೊಳಡಗಿರುವ ಅರ್ಥಗಳಲ್ಲಿ.

ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ? 

ಈ ಸಾಲೊಂದೇ ಸಾಕು ಈ ಕವಿತೆಯೊಳಡಗಿರುವ ಕಾವ್ಯಶಕ್ತಿಯನ್ನು ಕಾಣಲು. ಹಲವರ ಪ್ರಕಾರ ಅಡಿಗರು ಈ ರೀತಿ ಹೇಳಿದ್ದು ಒಂದು ಹೇಳಿಕೆಯ ಹಾಗೆ.... ಅನುಭವದ ನುಡಿಯಂತೇ! ಬದುಕೆಂದರೆ, ವಯೋಮಿತಿಯ ಹಂಗಿಲ್ಲದೇ ಆಬಾಲವೃದ್ಧರಾಗಿ... ನಮ್ಮೊಳಗಿರದ್ದನ್ನು, ನಮಗೆ ಹೊರತಾದದ್ದನ್ನು ಬಯಸುವುದು- ಎಂದೇ ಈ ಸಾಲನ್ನು ಅರ್ಥೈಸಿಕೊಂಡವರು ಹೆಚ್ಚು. ಆದರೆ ನನ್ನ ಪ್ರಕಾರ ಮೂಲ ಕವಿತೆಯನ್ನು ಸರಿಯಾಗಿ ಗಮನಿಸಿದರೆ ಈ ಸಾಲಿನ ಕೊನೆಯಲ್ಲಿರುವ ಪ್ರಶ್ನಾರ್ಥಕ ಚಿಹ್ನೆ ಕವಿಮನಸಿನ ನಿಜ ಭಾವದ ಸುಳಿವೊಂದನ್ನು ನಮಗೆ ತಿಳಿಸುತ್ತದೆ. ನಮ್ಮೊಳಗಿನ ದಾಹಕ್ಕೆ, ಆಶಯಕ್ಕೆ, ಆಕಾಂಕ್ಷೆಗಳಿಗೆ ಎಂದಾದರೂ ಕೊನೆಯಿದೆಯೇ?? ನಿರಂತರ ಹುಡುಕಾಟ, ಕಾಣದ ಗುರಿಯೆಡೆ ಪಯಣವೇ ಬದುಕೇ?? ದೇಹದಿಂದ ಮುಕ್ತಗೊಂಡು ಪರಮಾತ್ಮನನ್ನು ಸೇರುವ ಆತ್ಮದ ತುಡಿತದ ಫಲ ಜೀವನವೇ??? - ಎಂಬಿತ್ಯಾದಿ ಹತ್ತು ಹಲವು ಪ್ರಶ್ನೆಗಳು ಇದರಲ್ಲಡಗಿದೆಯೇನೋ ಎಂಬ ಭಾಸ ನಮಗಾಗುತ್ತದೆ. ಈ ಸಾಲಿನ ಮುಂದೆ "ಪೂರ್ಣವಿರಾಮ" ಅಥವಾ "ಅಲ್ಪವಿರಾಮ"ವಿದ್ದಿದ್ದರೆ ಅರ್ಥವೇ ಬೇರೆಯಾಗುತ್ತಿತ್ತೇನೋ! ಅಡಿಗರ ಆಶಯ ಏನಾಗಿತ್ತೆಂದು ಯಾರೂ ಹೀಗೇ ಎಂದು ಹೇಳಲಾಗದು. ಸೂಕ್ಷ್ಮಗ್ರಹಿಕೆಯನ್ನಷ್ಟೇ ನೀಡಬಹುದು. ಆದರೆ ಬದುಕನ್ನು ಕೇವಲ ಒಂದು ಸಾಲಿನಲ್ಲಿ ವಿವರಿಸುವ ಶಕ್ತಿ ಅಡಿಗರ ಈ ಕವನಕ್ಕಿದೆ ಎಂದು ಮಾತ್ರ ನಿಖರವಾಗಿ ಹೇಳಬಹುದು.

ಕೊನೆಯಲ್ಲಿ :-

ಕವಿತೆಯೆಂದರೆ "ಅವರವರ ಭಾವಕ್ಕೆ... ಅವರವರ ಭಕುತಿಗೆ" ಬಿಟ್ಟದ್ದೇ. ಒಮ್ಮೆ ಅದು ಕವಿಯಿಂದ ಹೊರಬಂದಮೇಲೆ ಸಾರ್ವತ್ರಿಕವೇ. ಕವಿಯ ಮನದೊಳಗಿನ ಭಾವವನ್ನೇ ಓದುಗನೂ ಹೊಂದಬೇಕೆಂದಿಲ್ಲ. ಹಾಗಾಗಿ ಒಂದು ಕವಿತೆಗೆ ಹಲವು ಅರ್ಥಗಳು. ಆರೋಗ್ಯಕರ ಮನಸು ಮಾತ್ರ ಸುಂದರ ಕವಿತೆಗಳನ್ನು ಓದುವ, ಅಸ್ವಾದಿಸುವ, ಅದು ನೀಡುವ ಅನುಭೂತಿಯನ್ನು ಅನುಭವಿಸುವ ಅವಕಾಶಗಳನ್ನು ಕೊಡುತ್ತದೆ. ಹಾಡನ್ನು ಜೀವಂತವಾಗಿರಿಸುವುದೇ ಅದು ಸ್ಫುರಿಸುವ ಭಾವಗಳು. ಸದಾ ಒಂದು ಸೂತ್ರಕ್ಕೇ ಅಂಟಿಕೊಂಡಿರದ ಸಂಚಾರಿಭಾವಗಳೇ ಒಂದು ಹಾಡಿಗೆ ಬೇರೆ ಬೇರೆ ಅರ್ಥಗಳನ್ನು ಕಲ್ಪಿಸಿಕೊಡುತ್ತವೆ. ಬಹುಶಃ ಅದಕ್ಕೇ ಇರಬೇಕು ಡಾ.ಜಿ.ಎಸ್.ಶಿವರುದ್ರಪ್ಪನವರು ಹೀಗೆ ಹೇಳಿದ್ದು- "ಹಾಡು ಹಳೆಯದಾದರೇನು ಭಾವ ನವನವೀನ..".

-ತೇಜಸ್ವಿನಿ ಹೆಗಡೆ

(ಕೆಲವು ತಿಂಗಳ ಹಿಂದೆ "ಅವಧಿ"ಯಲ್ಲಿ ಪ್ರಕಟಗೊಂಡಿತ್ತು...)


-----

ಸೂಚನೆ : ಮೂಲ ಹಾಡಿನಲ್ಲಿರುವ ಮೂರನೆಯ, ನಾಲ್ಕನೆಯ ಹಾಗೂ ಐದನೆಯ ಚರಣಗಳು ಚಲನಚಿತ್ರದಲ್ಲಾಗಲೀ, ರತ್ನಮಾಲಾ ಪ್ರಕಾಶ್ ಅವರ ಹಾಡಿನಲ್ಲಾಗಲೀ ಕಾಣಸಿಗವು!

ಶಬ್ದಾರ್ಥ:-

ಬಿಸಿದುಸೋಂಕಿನ = ಜೀವಂತ ಸ್ಪರ್ಶದ ಸೋಂಕು=ಸ್ಪರ್ಶ

ಮಿದುವೆದೆ= ಆರ್ದ್ರ ಎದೆ, ಪ್ರೀತಿ, ಸ್ನೇಹ ತುಂಬಿದ ಹ್ರ್‍ಋದಯ.


ಆಧಾರ :- "ಆಧುನಿಕ ಕನ್ನಡ ಕಾವ್ಯ" - ಡಾ.ಎಚ್. ತಿಪ್ಪೇರುದ್ರಸ್ವಾಮಿ.
             ಅಂತರ್ಜಾಲ