ಭಾನುವಾರ, ಜೂನ್ 15, 2014

ಬೆಳಕಿಂಡಿ

ಮರದೊಳಡಗಿದ ಬೆಂಕಿಯಂತೆ ಎಲ್ಲೋ ಮಲಗಿದೆ ಬೇಸರ;
ಎನೊ ತೀಡಲು ಏನೊ ತಾಡಲು ಹೊತ್ತಿ ಉರಿವುದು ಕಾತರ.

ಕಡುಗಪ್ಪು ಬಣ್ಣವನ್ನು ಹಂಡೆಯಲಿ ತುಂಬಿ ತುಂಬಿ ತಂದು, ಆಗಸದಲ್ಲಿ ಮಿನುಗುತ್ತಿದ್ದ ಒಂದೆರಡು ತಾರೆಗಳನ್ನೂ ತೋಯಿಸಿ, ನಿಶೆಯ ನಶೆಯನ್ನೇ ಹೊದ್ದು ಮಲಗಿಸಿದಂತಹ ರಾತ್ರಿ..... ಧೋ ಎಂದು ಬೀಳುತ್ತಿದ್ದ ಮಳೆಯ ಸದ್ದು, ಕಿಟಕಿಯ ಪಕ್ಕದಲ್ಲೇ ನೆಟ್ಟಿದ್ದ ಜಾಜಿ ಮೊಲ್ಲೆಯ ಕಂಪು, ಕೋಣೆಯ ಗೋಡೆಯಲ್ಲಿ ಕಥಕ್ಕಳಿ ಕುಣಿಯುತ್ತಿರುವ ಎರಡು ಜೋಡು ಮೊಂಬತ್ತಿಗಳ ನೆರಳುಗಳು, ಅವುಗಳ ಪಕ್ಕದಲ್ಲಿದ್ದ ಅಡಿಗರ ಸಮಗ್ರ ಕಾವ್ಯ, ಮನದೊಳಗೆ ರಿಂಗಣಿಸುತ್ತಿರುವ ನೆಚ್ಚಿನ ಕವಿತೆ ‘ಯಾವ ಮೋಹನ ಮುರಳಿ ಕರೆಯಿತೋ..’, ಇಷ್ಟೆಲ್ಲದರ ಸಾಥ್ ಇರುವಾಗ ತಾನು ಒಂಟಿಯಲ್ಲವೇ ಅಲ್ಲವೆಂದೆನಿಸಿತು ಆ ಕ್ಷಣಕೆ ಜಾನಕಿಗೆ. ಜೋರಾಗಿ ಬೀಸುತ್ತಿದ್ದ ಗಾಳಿಗೆ ಕಿರ್ರ್ ಎನ್ನುತ್ತಿದ್ದ ಕಿಟಕಿಯ ಸದ್ದು ಮಾತ್ರ ಮನದೊಳಗೆ ಗದ್ದಲವನ್ನೆಬ್ಬಿಸುತ್ತಿತ್ತು. ಕಿಟಕಿಯನ್ನು ಪೂರ್ತಿ ಮುಚ್ಚದಿದ್ದರೆ ನುಗ್ಗಿ ಬೀಸುತ್ತಿರುವ ಗಾಳಿಗೆ ಮೊಂಬತ್ತಿಗಳು ನಂದಿ, ಹೊರಗೆ ಚೆಲ್ಲುತ್ತಿರುವ ಕಪ್ಪು ಒಳಗಡಿಯಿಡುವ ಭಯ.... ಮುಚ್ಚಿದರೋ ಒಳ ತುಂಬಿಕೊಳ್ಳುತ್ತಿದ್ದ ಜಾಜಿ ಕಂಪು ಹೊರಗೇ ಸೋರಿ ಹೋಗುವ ತಳಮಳ. ದೀಪವಾರದಂತೇ ಹಳೆಯ ಪುಸ್ತಕದ ರಟ್ಟೊಂದನ್ನು ಅದರಸುತ್ತ ಅಡ್ಡವಿಟ್ಟು, ತುಸು ಹೊತ್ತಿನ ಮೊದಲು ಗೀಚಿದ್ದ ತನ್ನದೇ ಕವಿತೆಯ ಸಾಲುಗಳನ್ನು ಮತ್ತೆ ಓದತೊಡಗಿದಳು. 

ಹರಿವ ಲಹರಿಗಳೆಲ್ಲ ಸೇರಿ
ಸೋನೆ ಮಳೆಯಾಗಿ ಸೋರಿ
ಮನದ ಧಗೆಯನೆಲ್ಲ ಹೀರಿ
ಎದೆಯೊಳಗಿಳಿದಾದಿನಗಳು...

"ಛೇ ಆಗೋದೇ ಹೀಗೆ... ಕಥೆ ಬರೆಯ ಹೊರಟಾಗೆಲ್ಲಾ, ಕವಿತೆ ಜನ್ಮಿಸಿಬಿಡುತ್ತಾಳೆ. ಎಲ್ಲಿಗೂ ಕಳುಹಿಸಲಾಗದಿದ್ದರೂ ಸರಿಯೇ... ತುರ್ತಾಗಿ ನಾನೀಗ ಕಥೆಯೊಂದ ಬರೆಯಲೇಬೇಕಿದೆ... ಏನಾದರಾಗಲಿ ಈ ರಾತ್ರಿಯ ನೀರವತೆಯಲಿ ಕಥೆಯೊಂದನ್ನು ಹುಟ್ಟಿಸಿಬಿಡಬೇಕು..." ಎಂದು ಹಠದಿಂದ ಜಾನಕಿ ಪೆನ್ನಿಗೆ ಕೈ ಹಚ್ಚುವಾಗಲೇ, ನಿಯತಿ ನೆನಪಾದಳು.

"ಜಾನು, ನೀ ಕಥೆ ಯಾಕೆ ಬರೆಯೋದು ಹೇಳು?" ಇಂತಹ ಒಂದು ಪ್ರಶ್ನೆಗೆ ಸಿದ್ಧವಿಲ್ಲದಿದ್ದವಳನ್ನು ಅಂದೊಮ್ಮೆ ನಿಯತಿ ಕೇಳಿದ್ದಳು. ಹೌದು... ಬರೆಯೋದು ಚಟವೋ, ಹವ್ಯಾಸವೋ ಇಲ್ಲಾ ಹೆಸರಿನ ಮೋಹವೋ...?! ಅವಳಿಗಿದು ಅಸ್ಪಷ್ಟ. "ನಾನು ಯೋಚಿಸಿಯೇ ಇಲ್ಲಾ.. ಬರೆಯೋದು ನನ್ನ ಅನಿವಾರ್ಯ ಕರ್ಮ.. ಬರೆದರಷ್ಟೇ ಏನೋ ತೃಪ್ತಿ... ಹಾಗಾಗಿ ಬರೀತಿನಿ ಅಷ್ಟೇ." ಆ ಕ್ಷಣಕ್ಕೆ ತೋಚಿದ್ದನ್ನು ಉತ್ತರಿಸಿದ್ದಳು. "ಊಹೂಂ.. ಕಂಡಿದ್ದು, ಕೇಳಿದ್ದನ್ನೆಲ್ಲಾ ಬರೆಯ ಹೋದರೆ, ತುಂಬಾ ಜೊಳ್ಳು, ಜಾಳು ಬರಹಗಳೇ ಹುಟ್ಟುತ್ತವೆ ಎಂದು ಅಜಿಂಕ್ಯ ರಾವ್ ಹೇಳಿದ್ದನ್ನು ಮರ್ತೇ ಬಿಟ್ಟೆಯಾ?" ಎಂದವಳ ಮಾತಿಗೆ ಜಾನಕಿ ಮೌನಿಯಾಗಿದ್ದಳು. ಹೂಂ.. ಅವಳೂ ಓದಿದ್ದಳು. ಅವಳ ನೆಚ್ಚಿನ ಲೇಖಕ.... ಅವಳ ಸ್ಪೂರ್ತಿ, ಪ್ರೇರಕ, ಅಜಿಂಕ್ಯ ರಾವ್‌ನ ಲೇಖನಗಳನ್ನು. ಆದರೆ ಅವನ ಇತ್ತೀಚಿನ ಪುಸ್ತಕ ಮಾತ್ರ ಅವಳನ್ನು ತುಂಬಾ ಕಾಡಿತ್ತು. "ಯಶಸ್ವಿ ಲೇಖಕನಾಗಲು ಹತ್ತು ಸೂತ್ರಗಳು".... ಅಬ್ಬಾ!! ಎಂತಹ ಮಾಂತ್ರಿಕ ಶೀರ್ಷಿಕೆಯದು! ಅದರಲ್ಲೂ ಮೊದಲ ಒಂಭತ್ತು ಸೂತ್ರಗಳಿಗಿಂತ ಹತ್ತನೆಯ ಸೂತ್ರವೇ ಅವಳನ್ನು ಬಹುವಾಗಿ ಚಿಂತನೆಗೆಳೆಸಿದ್ದು. ‘ಬರೆಯುವ ಮುನ್ನ, ಬರಹದ ವಿಷಯ ನಮ್ಮನ್ನು ಬಹು ಕಾಲದವರೆಗೆ ಕಾಡಬೇಕು... ಕಾದು ಕಾದು, ಕುದ್ದು, ಲಾವಾ ರಸವಾಗಿ ಹರಿದು, ಹೊರ ಹೊಮ್ಮಿದ ಬರಹ ಮಾತ್ರ ಚಿನ್ನದಂತೇ ಹೊಳೆಯುವುದು. ಕಾಡದ, ಮಾಗದ ಭಾವನೆಗಳನ್ನೆಲ್ಲಾ ಹೊರ ಚೆಲ್ಲಬೇಡಿ... ಅಕ್ಷರವನ್ನು ಕಾರಿ ಹೇವರಿಕೆ ತರಬೇಡಿ..’ ಎಂಬ ಅವನ ಕೊನೆಯ ಸೂತ್ರ ಓದಿದಾಗ ಮೊದಲು ಬಹು ಮೆಚ್ಚಿಕೊಂಡಿದ್ದಳು. ಅದನ್ನೇ ಮತ್ತೆ ಮತ್ತೆ ಓದಿ ಮನನ ಮಾಡಿಕೊಂಡಿದ್ದಳು. ಫೇಸ್‌ಬುಕ್, ಟ್ವಿಟ್ಟರ್ ಮುಂತಾದ ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡು ಲೈಕ್ಸ್‌ಗಳನ್ನು ಒತ್ತಿಸಿಕೊಂಡು ಹೆಮ್ಮೆಯ ನಗು ಬೀರಿದ್ದಳು. ಆದರೆ ಕ್ರಮೇಣ ಅವಳೊಳಗೇನೋ ಅರಿಯದಂತಹ ಬೇಗುದಿ, ತಳಮಳ ಅಸಹನೆ ತುಂಬ ತೊಡಗಿತ್ತು. ಅಂತಹ ದಿನಗಳಲ್ಲೇ ಅಜಿಂಕ್ಯನ ಪುಸ್ತಕದೊಳಗಿದ್ದ ಆ ಕೊನೆಯ ಸೂತ್ರದ ಪ್ರಸ್ತಾಪ ಮಾಡಿದ್ದಳು ನಿಯತಿ. ಇದರಿಂದಾಗಿ ಜಾನಕಿಯ ಒಳಗೊಳಗೇ ಹಬೆಯಾಡುತ್ತಿದ್ದ ಅಸಮ್ಮತಿಯ ಕಿಡಿಗೆ ಜೋರಾದ ಗಾಳಿ ಬೀಸಿದಂತಾಗಿತ್ತು. 

ಹುಚ್ಚೆದ್ದ ಮಳೆಯ ಅಬ್ಬರವನ್ನೂ ಮೀರಿಸುವ ಗುಡುಗಿನ ಸದ್ದಿಗೆ ಕಿಟಕಿಯ ಗಾಜಿನಲ್ಲೂ ನಸು ಕಂಪನವಾಗಲು ಬೆಚ್ಚಿದಳು ಜಾನಕಿ. ಎದುರಿದ್ದ ಹಾಳೆಗಳು ಅಕ್ಷರಗಳ ಭಾರವಿಲ್ಲದೇ  ಪಟ ಪಟನೆ ಹೊಡೆದುಕೊಳ್ಳಲು, ಅವುಗಳ ಮೇಲೆ ಪೇಪರ್‌ವೇಟ್‌ಅನ್ನು ಇಟ್ಟುಬಿಟ್ಟಳು. ಬಿದ್ದ ಭಾರಕ್ಕೆ ಹಾಳೆಗಳು ತೆಪ್ಪಗಾದರೂ ತುದಿಯಲ್ಲೇ ಅಲ್ಪ ಪ್ರತಿಭಟನೆ ತೋರಹತ್ತಿದವು. ಅವಳ ದೃಷ್ಟಿ ಅವುಗಳ ಮೇಲಿದ್ದರೂ, ಮನಸೊಳಗೆ ಮಾತ್ರ ಹತ್ತು ಹಲವು ಆಲೋಚನೆಗಳ ಮಂಥನ.

ತನಗೇಕೆ ಇತ್ತೀಚಿಗೆ ಒಂದಕ್ಷರವನ್ನೂ ಬರೆಯಲಾಗುತ್ತಿಲ್ಲವೋ...?! ಥೂ.. ಆ ಅಂಜಿಕ್ಯನ ಪುಸ್ತಕದ ಹಿಂದೆ ಬಿದ್ದು ತನ್ನೆಲ್ಲಾ ಆಲೋಚನಾ ಲಹರಿಯ ಸೂತ್ರವೇ ಹರಿದು ಹೋಗಿದೆಯೇನೋ?! ಹಾಗೆ ನೋಡ ಹೋದರೆ ಅಂವ ಹೇಳಿರುವಂತೇ ಮಾಡಲೆಣಿಸಿದರೆ, ಕಾದು ಕುದ್ದು ಕರಕಲಾದ ಅದೆಷ್ಟೋ ನೆನಪುಗಳನ್ನೆಲ್ಲಾ ಹಿಂಡಿ ಹೀರಿ ಹರಿಸಿ, ಅವುಗಳಿಂದ ಒಂದೆರಡು ಕಾದಂಬರಿಗಳನ್ನೇ ಸೃಷ್ಟಿಸಿಬಿಡಬಹುದು. ಸ್ಮೃತಿಯಿಂದುರುಳಿದ ಎಲ್ಲವನ್ನೂ ಸಮರ್ಥವಾಗಿ, ನೈಜರೂಪದಲ್ಲೇ ಹಿಡಿದಿಡುವ ಶಕ್ತಿ ಅಕ್ಷರಗಳಿಗಿವೆಯೇ? ಇದ್ದಿದ್ದರೆ ಇತಿಹಾಸವೇಕೆ ಇಷ್ಟು ಗೋಜಲಾಗಿರುತ್ತಿತ್ತು?! 

ಕಳೆದುಹೋದ ಸಿಹಿ ಬಾಲ್ಯದ ನೆನಪುಗಳ ಸವಿದಷ್ಟೂ ಮಧುರವೇ. ಮಣ್ಣೊಳಗೆ ಹೊರಳಾಡಿ, ಒಳಗೆಲ್ಲಾ ಬೆಳಕಾಗಿ ಹಬ್ಬಿ ಬೆಳೆದ, ಅವರಿವರ ಮಾತುಗಳಿಗೆ ಕಿವಿಯಾಗದೇ ನಾನು ನಾನಾಗೇ ಉಳಿದ, ಗೇರು ಹಣ್ಣುಗಳ ಆ ಮತ್ತೇರಿಸುವ ಪರಿಮಳವ ಹೀರಿ... ಬಿದ್ದು ಬಿರಿದ ಹಲಸಿನ ತೊಳೆಗಳ ಎಳೆದೆಳೆದು ಹರಿದು ಮುಕ್ಕಿ, ನಾಳೆಯ ಪರಿವಿರದೇ... ನಿನ್ನೆಯ ನೆನೆದು ಕೊರಗದೇ, ನೆಮ್ಮದಿಯ ನಗುವ ನಕ್ಕಿದ್ದ ಆ ಬಾಲ್ಯ ಇಂದು ನನ್ನ ಕಾಡುತಿದೆ. ಬರೆದು ಬಿಡಲೇ ಒಂದು ಚೆಂದದ ಕಥೆಯ ಆ ಬಾಲ್ಯದ ಮೇಲೆಯೇ? ಮೊದಲ ಪ್ರೇಮ, ತಿರಸ್ಕಾರ, ಅವಮಾನ, ಪ್ರತೀಕಾರ ಎಲ್ಲವೂ ಇನ್ನೂ ಹಸಿ ಹಸಿಯಾಗಿವೆ. ಮಾಗಲು ಕಾಯದೇ ಕಥೆಯ ರೂಪ ಕೊಟ್ಟರೆ ಹೇಗೆ? ಅಪ್ಪ ಕಟ್ಟಿದ್ದ ಗಂಡ ಮೊದಲ ರಾತ್ರಿಯೇ ಷಂಡ ಎಂದು ತಿಳಿದಾಗ, ಒದ್ದೆಯಾಗಿ ತೊಟ್ಟಿಕ್ಕುತ್ತಿದ್ದ ಕೆನ್ನೆಗಳ ಮೇಲೆ ಅಂವ ಸುಟ್ಟ ಸಿಗರೇಟಿನ ಹೊಗೆ ಮೆತ್ತಿದ್ದನ್ನೇ ಬರೆಯಲೇ? ವಿಚ್ಛೇದನ ನಾನೇ ಕೊಟ್ಟರೂ, ಗಂಡ ಬಿಟ್ಟವಳೆಂದು ಹಿಂದೆ ಬಿದ್ದು ನಕ್ಕ ಸಮಾಜವ ಬಿಚ್ಚಿ ಬಯಲಾಗಿಸಲೇ? ಒಂಟಿ ಹೆಣ್ಣೆಂದರೆ ಬೀದಿ ಬದಿಯ ಮಾವಿನ ಮರದಂತೇ ಎಂದು ಪೋಲಿಯಾಗಿ ನಕ್ಕಿದ್ದ ಸಹೋದ್ಯೋಗಿಯ ಮೇಲೆಯೇ ಒಂದು ಕಥೆ ಬರೆದು ಸೇಡು ತೀರಿಸಿಕೊಂಡರೆ ಹೇಗೆ? ಅವೆಲ್ಲಾ ಹೋಗಲಿ... ‘ನಿನ್ನ ಕವಿತೆಗಳಲ್ಲಿ ಒಂದು ನಶೆಯಿದೆ... ನನ್ನ ಕಥೆಗಳಲ್ಲಿ ಅದಿಲ್ಲ ನೋಡು... ನಾನೂ ಒಂಟಿ.... ನನ್ನ ಕಥೆಗಳೊಳಗಿನ ಪಾತ್ರಗಳೂ... ನಿನ್ನ ಕವಿತೆಗಳ ನಿಶೆಯ ಸಾಮೀಪ್ಯ ನನಗೂ ಕೊಡುವೆಯಾ...?’ ಎಂದು ಒಕ್ಕಣ್ಣು ಮಾಡಿ ಪೆಕರನಂತೇ ನಕ್ಕು, ತನ್ನೆದೆಯೊಳು ನೂರು ಮುಳ್ಳುಗಳನ್ನೇಳಿಸಿದ್ದ ಆ ಪಡಪೋಶಿ ಕಥೆಗಾರನನ್ನೇ ಒಂದು ಪಾತ್ರವಾಗಿಸಿ, ಕುಪ್ರಸಿದ್ಧನನ್ನಾಗಿಸಬಹುದು! ಊಹೂಂ... ನಾನು ಬರೆಯೋದು ಬರಹದ ದಾಹ ನೀಗಿಸಿಕೊಳ್ಳಲು... ನನ್ನೊಳಗಿನ ನನ್ನ, ನನಗಾಗಿ ಬಯಲಾಗಿಸಿಕೊಳ್ಳಲು... ಬರೆಯೋ ತುಡಿತಕೆ ಯಾರ ಅಪ್ಪಣೆಯೂ, ಹಂಗೂ ಬೇಕಾಗಿಲ್ಲ..." ಎಂದು ಸ್ವ ಸಮಜಾಯಿಷಿಕೊಟ್ಟುಕೊಂಡಾಗ ತುಸು ನಿರಾಳವೆನಿಸಿತು ಜಾನಕಿಗೆ. ಹಾಗೇ ಸುಖಾಸೀನಕ್ಕೊರಗಿ ಕಣ್ಮುಚ್ಚಿದಳು. ಹೊರಗಿನ ಮಳೆಯ ಆರ್ಭಟ ಕೊಂಚ ತಗ್ಗಿತ್ತು.... ಆದರೆ ಒಳಗಿನ ಗದ್ದಲಗಳು ಅಬ್ಬರಿಸುತ್ತಲೇ ಇದ್ದವು.

ಆಗಸದ ಅಸ್ತಿತ್ವವನ್ನು ಆಗೀಗ ತೋರುತ್ತಿದ್ದ ಕೋಲ್ಮಿಂಚೊಂದು ಕಿಟಕಿಯ ಗಾಜಿನ ಮೇಲೆ ವಿಕಾರ ನರ್ತನಗೈದು ಝಗ್ಗನೆ ಬೆಳಕ ಹೊತ್ತಿಸಿ ಕ್ಷಣ ಮಾತ್ರದೊಳಗೆ ಮರೆಯಾಯಿತು. ಎದುರಿದ್ದ ಕನ್ನಡಿಯಲ್ಲಿ ಮಿಂಚಿನ ಬೆಳಕು ಒಂದು ಕ್ಷಣ ಅವಳ ಪ್ರತಿಬಿಂಬವನ್ನು ತೋರಿಸಲು, ಸತ್ತಮೇಲೆ ತಾನು ಒಂದೊಮ್ಮೆ ಪ್ರೇತವಾದರೆ ಹೀಗೇ ಕಾಣಿಸುವೆನೇನೋ ಎಂದು ಕಲ್ಪಿಸಿ, ಹುಚ್ಚುಚ್ಚಾಗಿ ನಕ್ಕಳು. ನಗುವಿನಲೆಗಳ ಬೆನ್ನಿಗೇ ಛಳಕ್ ಎಂದಿತು ಪರಾಶರನ ನೆನಪು. ಇಪ್ಪತ್ತು ವರುಷದ ಹಿಂದೆ ತಾನು ಪತಿಯ ಮನೆಯನ್ನು ತೊರೆದು, ಎಲ್ಲೆಡೆಯಿಂದ ಅವಮಾನಗಳನ್ನು ಅನುಭವಿಸಿ ಹತಾಶಳಾಗಿದ್ದಾಗ ಹೆಗಲು ಕೊಟ್ಟಂತೆ ನಟಿಸಿ ಎಲ್ಲವನೂ ಪಡೆದವ! "ಮದುವೆಯ ಸಂಕೋಲೆಯೇ ನಮಗೆ ಬೇಡ ಜಾನು... ನೀ ನನಗೆ, ನಾ ನಿನಗೆ ಸಾಕಲ್ಲಾ? ಯಾವುದೇ ಬಂಧನವಿರದ ಬಾಂಧವ್ಯ ನಮ್ಮದಾಗಲಿ.." ಎಂದೆಲ್ಲಾ ಬೆಣ್ಣೆ ಸವರಿ, ತನ್ನ ಅಳಿದುಳಿದ ಬುದ್ಧಿಗೂ ಮಂಕು ಎರೆಚಿದವ.... ಮದುವೆಯ ಪ್ರಸ್ತಾಪ ಬಂದಾಗ, ಅಪ್ಪ ಅಮ್ಮನ ನೇಣಿಗೆ ಹಾಕಲಾರೆ ಜಾನು, ಎಂದು ಗೋಳಾಡಿ, ನುಣ್ಣಗೆ ಜಾರಿಕೊಂಡವ.... ಪ್ರತಿ ದಿನ ನರಕ ಕಾಣಿಸಿದ್ದ ಒಲ್ಲದ ಗಂಡನನ್ನೂ ಅಷ್ಟು ಶಪಿಸಿದ್ದಳೋ ಇಲ್ಲವೋ.. ಪರಾಶರ ಮಾತ್ರ ಈಗಲೂ ನಿತ್ಯ ಅವಳ ಒಂದು ಹೊತ್ತಿನ ಕಣ್ಣೀರಿಗೆ ಕಾರಣನಾದವ! 

ಅವೇಳೆಯಲ್ಲಿ ಅಮಾನುಷವಾಗಿ ಕಾಡುವ ಈ ಯಾತನಾಮಯ ನೆನಪುಗಳನ್ನೆಲ್ಲಾ ಹೊರದೂಕಿ ಈ ಕರಾಳ ರಾತ್ರಿಯೊಳಗೆ ತುರುಕಿ, ಶೂನ್ಯ ತುಂಬಿದ ಮನಸಿನೊಂದಿಗೆ ಹಾಯಾಗಿರುವಂತಾಗಿದ್ದರೆ ತಾನೂ ಬದುಕನ್ನು ಉತ್ಕಟವಾಗಿ ಜೀವಿಸುತ್ತಿದ್ದೆನೇನೋ ಎಂದು ಚಡಪಡಿಸಿದಳು. ಅದೆಷ್ಟೋ ಹೊತ್ತಿನಿಂದ ಎಲ್ಲೋ ನೆಟ್ಟಿದ್ದ ದೃಷ್ಟಿ ಹಾಗೇ ಕಿಟಿಕಿಯ ಮೇಲೆ ಬೀದ್ದಿತು. ಗಾಳಿಗೆ ಓರೆಯಾಗಿದ್ದ ಕಿಟಕಿಯ  ಬಾಗಿಲುಗಳನ್ನು ಒಮ್ಮೆಲೇ ಸಂಪೂರ್ಣ ತೆಗೆದು ಬಿಡಲು, ಕತ್ತಲೆಗೆ ಹಬ್ಬವಾಯಿತು. ಜಾಜಿ ಮೊಲ್ಲೆಯ ಕಂಪು ಮಸ್ತಿಷ್ಕವನ್ನೇರಿ ಕುಳಿತು, ಮನದೊಳಗೆ ಹೂತಿಟ್ಟಿದ್ದ ಭೂತಗಳಿಗೆಲ್ಲಾ ಉಸಿರು ತುಂಬತೊಡಗಿತು. 

ಒಮ್ಮೊಮ್ಮೆ ಈ ನೆನಪುಗಳೇ ಹೀಗೆ.... ಕಾದ ಬಾಣಲೆಯೊಳಗಿನ ಎಣ್ಣೆಗೆ ಹನಿ ನೀರು ಬಿದ್ದು ಸಿಡಿವಂತಾದರೆ, ಕೆಲವೊಮ್ಮೆ, ಕೊಳದೊಳಗೆ ಹರಿದಾಡುವ ಕಿರು ಮೀನುಗಳು ಕಾಲ್ಬೆರಳುಗಳ ಕಚ್ಚಿ ಹಿತವಾದ ನೋವನೀವಂತೆ! ಈ ಅನುಭೂತಿಗಳದೆಷ್ಟು ವಿಭಿನ್ನ! ಊಹೂಂ.. ಯಾಕೋ ಇಂತಹ ಅನುಭವಗಳನ್ನು ನೆಚ್ಚಿ, ತನ್ನಿಂದ ಇನ್ನು ಏನನ್ನೂ ಗಟ್ಟಿಯಾಗಿ ಬರೆಯಲಾಗದೇನೋ.... ಎಂದೆನಿಸಿ ಅಧೀರಳಾದಳು ಜಾನಕಿ. ಬದುಕೆಂಬ ಹೊಲದಲ್ಲಿ ಕಾಳಿಗಿಂತ ಜೊಳ್ಳೇ ಹೆಚ್ಚಾದರೆ...? ಎಂಬ ಪ್ರಶ್ನೆಯೇ ಬೃಹದ್ರೂಪ ಪಡೆದಂತಾಗಿ ಸುಸ್ತಾದಳು. 

ತಾನೇ ಪೆದ್ದಿ.... ಅಜಿಂಕ್ಯ ಏನು ಬರೆದರೂ, ಓದಿದಾಕ್ಷಣ ಗೀತಾಸಾರದಂತೇ ಪಠಿಸಿ, ಕುಣಿದು ಕುಪ್ಪಳಿಸಿದೆ.... ಹೊಳೆಯುವುದೆಲ್ಲಾ ಚಿನ್ನವಲ್ಲ ಎಂದು ಅವನೇ ಹೇಳಿದ್ದನ್ನು ಮರೆತೇ ಬಿಟ್ಟೆ. ಕಾಡಬೇಕಂತೆ, ಕುಲುಮೆಯಲ್ಲಿ ಕಾಯಬೇಕಂತೆ.... ಹಾಗೆ ಕರಗಿ, ಕರಟಿಹೋದ ಮನಸಿನ ಅವಶೇಷಗಳನ್ನು ವಿಸರ್ಜಿಸುವ ಸಮಯದಲ್ಲಿ, ಬೇಯುವ ಕರ್ಮ ತನಗೇಕೆ? ಹೋದರೆ ಹೋಗಲಿ... ಹುಟ್ಟಲಾರದ ಕಥೆಯ ಹಂಗು ತನಗೂ ಬೇಕಾಗಿಲ್ಲ. ಅವಳೊಳಗೆದ್ದ ಅನೇಕ ಪ್ರಶ್ನೆಗಳಿಗೆ ಅವಳೇ ಉತ್ತರಿಸಲು ಸನ್ನದ್ಧಳಾದಳು. ಏನೋ ಹುಕ್ಕಿ ಒಳಗಿಂದೆದ್ದು ಮನವನ್ನೆಲ್ಲಾ ಅವಸರಿಸುತ್ತಿದ್ದಂತೇ, ಪೇಪರ್‌ವೇಟ್ ತೆಗೆದು, ಖಾಲಿಹಾಳೆಗಳ ಮೇಲೆ ನೀಲಿ ಶಾಯಿಯಲ್ಲಿ ದುಂಡಗೆ ಬರೆಯತೊಡಗಿದಳು......

ಒಂದೊಂದು ಕ್ಷಣಗಳನೂ ಸೆರೆ ಹಿಡಿದು
ಕಥೆಯಾಗಿಸಿ, ಅದರೊಳಗೆ 
ಬಂಧಿಯಾಗ ಹೊರಟೆ,
ನೆನಪುಗಳು ಸಾಸಿರ ಮೈಲಿ ವೇಗದಲಿ ಸಾಗಲು,
ವಿಮೋಚನೆಗೆ ಕಾದ,
ಅಹಲ್ಯೆಯಂತಾದೆ.

ಬರೆದ ಮೇಲೆ ಮತ್ತೊಮ್ಮೆ ಓದಿಕೊಂಡಳು. ಅಹಲ್ಯೆ ಪದದ ಮೇಲೆ ಅವಳ ದಿಟ್ಟಿ ನಿಂತು ಹೋಯಿತು. ರಾಮನ ಪಾದ ಸ್ಪರ್ಶದಿಂದ ಅಹಲ್ಯೆಗೆ ಮುಕ್ತಿ ಸಿಕ್ಕಿತೆನ್ನುವರು....ಹೌದೆ?! ಶಿಲೆಯಾಗಿದ್ದಾಗಲೇ ಆಕೆ ಬಹು ಸುಖಿಯಾಗಿದ್ದಳಲ್ಲವೇ? ರಾಮ ಉಳಿಸಿದ್ದು ಅಹಲ್ಯೆಯನ್ನೋ ಇಲ್ಲಾ ತನ್ನೊಳಗಿನ ದೈವತ್ವದ ಮೇಲಿದ್ದ ನಂಬಿಕೆಯನ್ನೋ? ಯಾಕೋ ಅವಳಿಗೆ ಕತ್ತಲು ಅಸಹನೀಯವೆನಿಸಿ, ಬೆಳಕು ಬೇಕೆಂದೆನಿಸಿತು. ಕಿಟಕಿಗಳನ್ನು ಮುಚ್ಚಿ, ಮೊಂಬತ್ತಿಗಳನ್ನು ಹಚ್ಚಿ, ಟೇಬಲ್ಲಿನ ಮೇಲಿಡಲು ಹೋದವಳಿಗೆ ಅದೇ ಕನ್ನಡಿ ಅವಳ ಮೊಗದ ನೈಜ ಪ್ರತಿಬಿಂಬವನೇ ತೋರಿಸಿತು. ನೆನಪುಗಳ ಕವಾಯತಿನಿಂದ ತನ್ನನ್ನು ತಾನು ಎಳೆದು ಹೊರತಂದ ಜಾನಕಿ ಮತ್ತೆ ತನ್ನನ್ನೇ ದಿಟ್ಟಿಸತೊಡಗಿದಳು. ಅಷ್ಟು ಹೊತ್ತೂ ಬೀಸುತ್ತಿದ್ದ ಗಾಳಿಗೆ ಅಮಲು ಹತ್ತಿದಂತೇ ಅತ್ತಿತ ಸಣ್ಣಗೆ ಓಲಾಡುತ್ತಿದ್ದ ಮೊಂಬತ್ತಿಯ ಬೆಳಕು, ಕನ್ನಡಿಯೊಳಗೆ ಹೊಕ್ಕು ತನ್ನೆದೆಯ ಮಟ್ಟದಲ್ಲಿ ಸ್ಥಾವರವಾಗಿದ್ದು ಕಂಡು ಏನೋ ಅರಿಯದ ಅನಿರ್ವಚನೀಯ ಅನುಭೂತಿಯಾಗಲು, ರೋಮಾಂಚಿತಳಾದಳು. ಕಂಡಿದ್ದೆಲ್ಲಾ ಭೂತಕ್ಕೆ ಸೇರಿದೆ.... ಕಾಣೋದು ಅನಿಶ್ಚಿತವಾಗಿದೆ... ಈಗ, ಈ ಕ್ಷಣ ಕಣ್ಗಳ ತಂಪಾಗಿಸುವ ಬೆಳಕಿನಡಿಯಲ್ಲಿ ತನ್ನನ್ನು ತಾನು ಕಂಡುಕೊಳ್ಳುತ್ತಿರುವ ಈ ಹೊತ್ತು ಮಾತ್ರ ಸುಂದರ ಸತ್ಯ ಎಂದೆನಿಸಿದ್ದೇ ಅವ್ಯಕ್ತ ಪ್ರಶಾಂತತೆ ಅವಳಲ್ಲಿ ತುಂಬತೊಡಗಿತು. 

*****

[ಹೊಸದಿಗಂತ ಸಾಪ್ತಾಹಿಕದಲ್ಲಿ ಪ್ರಕಟಿತ]

ಗುರುವಾರ, ಜೂನ್ 12, 2014

ಚಾರುಕೇಶಿ

ಅಬ್ ಕೆ ಹಮ್ ಬಿಚಡೆ ತೊ ಶಾಯದ್ ಕಭಿ ಖ್ವಾಬೋ ಮೆ ಮಿಲೆ
ಜಿಸ್ ತರಹ ಸೂಖೆ ಹುಯೆ ಫೂಲ್ ಕಿತಾಬೊ ಮೆ ಮಿಲೆ

‘ಚಾರುಕೇಶಿ’...ಈ ಹೆಸರನ್ನು ಕೇಳಿದಾಗೆಲ್ಲಾ ಮೇಲಿನ ಗಝಲ್ ನೆನಪಿಗೆ ಬರುವುದು ಆಕಸ್ಮಿಕವೋ ಇಲ್ಲಾ ಅವಳ
ನೆನಪಿನೊಳಡಗಿರುವ ಅತೀವ ದುಃಖವೋ ಗೊತ್ತಿಲ್ಲ. ಸಂಗೀತವೆಂದರೆ ಸರಿಗಮಪ ಎಂದಷ್ಟೇ ತಿಳಿದಿದ್ದ ನನ್ನೊಳಗೆ ಸಪ್ತ ಸ್ವರಗಳ ನಿನಾದ ಹೊರಡಿಸಿ.. ಇಂದು ನನ್ನೊಳಗೆ ಹಬ್ಬಿರುವ ಸಂಗೀತ ಪ್ರೀತಿಗೆ ನಾಂದಿ ಹಾಕಿದವಳೇ ಚಾರುಕೇಶಿ.

"ನಮ್ಮ ನಗುವಿನಿಂದ ಹಿಡಿದು, ಅಳುವಿನವರೆಗೂ ರಾಗ ಮಿಳಿತವಾಗಿರೊತ್ತೆ ಗೊತ್ತಾ ಶಾಲ್ಮಲಿ? ಸುಮ್ಮನೆ ಕಣ್ಮುಚ್ಚಿ ಕುಳಿತರೆ ಸಾಕು.. ನೀ ಕೇಳೋ ಪ್ರತಿ ಶಬ್ದದಲ್ಲೂ ಒಂದು ಸಂಗೀತೆವಿದೆ... ಆಲಿಸು....." ಅವಳೆಂದಾಗ ಹಾಸ್ಯವೆನಿಸಿತ್ತು. ಆದರೆ ಇಂದು ಅವಳ ಆ ಮಾತೊಳಡಗಿದ್ದ ಸತ್ಯದ ರುಜುವಾತು ನನಗೆ ಕಾಣಿಸುತ್ತಿದೆ.
ಕೈಯೊಳಗಿರುವ ಗಝಲ್ ಪುಸ್ತಕ ಹಾಗೇ ಎದೆಗೊರಗಿದೆ. ಹೊರಗೆ ಮಳೆಯ ಅಬ್ಬರ ಜೋರಾಗಿದೆ. ಬಾನಿಗೆ ಗುನ್ನ ಹಾಕಿರುವ ಸೂರ್ಯ ಅರ್ಧ ದಿನ ರಜೆ ಹಾಕಿ ಮಲಗಿದಂತಹ ಕತ್ತಲು. ಆತ ಕೊರೆದಿರುವ ರಂಧ್ರದೊಳಗಿಂದ ವರ್ಷಧಾರೆ ಅವ್ಯಾಹತವಾಗಿ ಬಿಡದೇ ಸುರಿಯುತ್ತಿದೆ. ಜಗುಲಿ ಕಟ್ಟೆಯ ಮೇಲೆ ಕುಳಿತು ಹಾಗೇ ಕಣ್ಮುಚ್ಚಿದರೆ ಸಾಕು.... ಸುರಿವ ಮಳೆಯನ್ನೇ ತದೇಕಚಿತ್ತದಿಂದ ಆಲಿಸುತ್ತಿದ್ದರೆ ಅನಿರ್ವಚನೀಯ ಆನಂದ, ಪುಳಕ, ಅರಿವಿಗೆ ಬಾರದ ಅನುಭೂತಿ... ಜೊತೆಗೆ ಗಝಲ್ ಎಬ್ಬಿಸುತ್ತಿರುವ ಸಿಹಿ-ಕಹಿ ನೆನಪುಗಳು.

ಅಂದೂ ಮಳೆ ಹೀಗೇ ದಿಕ್ಕು ದೆಸೆಯಿಲ್ಲದೇ ಹೊಯ್ಯುತ್ತಿತ್ತು.  ಬಿ.ಎಸ್ಸಿ. ಮೊದಲ ವರ್ಷದ ಪ್ರಥಮ ತರಗತಿಗೆಂದು ಒಳ ಹೊಕ್ಕವಳನ್ನು ಕಂಡ ತಕ್ಷಣ ಸೆಳೆದವಳು ಚಾರುಕೇಶಿ. ಮೂರನೆಯ ಬೆಂಚಿನ ಎಡ ತುದಿಯಲ್ಲಿ ಕುಳಿತು, ಗಲ್ಲಕ್ಕೆ ಎಡಗೈಯನಿಟ್ಟು, ಬಲಗೈಯಲ್ಲಿ ಮೆಲ್ಲಗೆ ತಾಳ ಹಾಕುತ್ತಾ.... ತನ್ನೊಳಗೇ ಏನೋ ಗುನಗುನಿಸುತ್ತಾ, ನಸುನಗುತ್ತಿದ್ದವಳ ಕಣ್ಣೊಳಡಗಿದ್ದ ವಿಚಿತ್ರ ಕಾಂತಿ ನನ್ನ ಅವಳೆಡೆಗೇ ಸಾಗುವಂತೆ ಮಾಡಿತ್ತು. ಬಳಿ ಸಾರುತ್ತಿದ್ದ ನನ್ನ ಗಮನಿಸಿದವಳೇ ಮುಗುಳ್ನಕ್ಕು, ತಾಳ ಹಾಕುತ್ತಲೇ ಕೊಂಚ ಸರಿದು ಕುಳಿತುಕೊಳ್ಳಲು ಕಣ್ಣಲ್ಲೇ ಆಹ್ವಾನಿಸಿದ್ದ ಅವಳ ಆ ಪರಿ ಈಗಲೂ ಪಚ್ಚೆ ಹಸಿರು.

"ಹಾಯ್.. ನನ್ನ ಹೆಸರು ಚಾರುಕೇಶಿ... ನೀನು ಕನ್‌ಫ್ಯೂಸ್ ಆಗಿ ಮತ್ತೆ ನನ್ನ ಕೇಳೋ ಮೊದ್ಲೇ ಹೇಳಿಬಿಡ್ತೀನಿ... ಇದು ಒಂದು ರಾಗದ ಹೆಸರು... ಸಿಂಪಲ್ಲಾಗಿ ಹೇಳ್ಬೇಕು ಅಂದ್ರೆ ದುಃಖದೊಳಗೆ ಭಕ್ತಿಯನ್ನು ಬೆರೆಸಿ ಹಾಡೋ ರಾಗ... ಭಕ್ತ ದೇವ್ರನ್ನ ನನ್ನ ಈ ಬವಣೆಯಿಂದ ಮುಕ್ತಿ ಕೊಡೋ ತಂದೇ ಎಂದು ಮೊರೆಯಿಡೋ ರಾಗ.... ಇವತ್ತಿಂದ ನೀನೂ ಹಾಡ್ಕೊ ನನ್ಜೊತೆ... ಈ ತರ್ಲೆ ಹುಡ್ಗಿಯಿಂದ ಮುಕ್ತಿಕೊಡಪ್ಪಾಂತ ಬೇಡ್ಕೊಂಡ್ರೆ ಮೂರುವರ್ಷದ ಮೇಲಾದ್ರೂ ಬಿಡುಗಡೆ ಸಿಗಬಹುದು.." ಎಂದು ಕಿಲಕಿಲ ನಕ್ಕವಳ ಮಾತಿಗೆ ಮನಸಾರೆ ನಕ್ಕಿದ್ದೆ. ಒಳಗೆಲ್ಲೋ ಸ್ನೇಹ ಮೊಳಕೆಯೊಡೆದಿತ್ತು.

"ಶಾಲ್ಮಲಿ... ನಂಗೆ ಸಂಗೀತ ಅಂದ್ರೆ ಹುಚ್ಚು ಕಣೆ.. ನಮ್ಮೂರಲ್ಲಿ ಅಷ್ಟು ಚೆನ್ನಾಗಿ ಹೇಳಿಕೊಡೋರು ಯಾರೂ ಇಲ್ವೆ... ಹಾಗಾಗಿ ಅಕ್ಕನ ಮನೇಲಿ ಇದ್ಕೊಂಡು ಇಷ್ಟು ವರ್ಷ ಸ್ವಲ್ಪ ಕಲಿತೆ. ಈಗ ನಮ್ಮಕ್ಕ, ಭಾವ ಡೆಲ್ಲಿಗೆ ಹೋದ್ರು.. ಸೋ ನಾನು ನಮ್ಮೂರಿಗೆ ವಾಪಸ್ಸಾಗೋದು ಅಂತಿದ್ದೆ. ಆದರೆ ನನ್ನ ಸಪ್ಪೆ ಮುಖ ನೋಡಿ ಅಪ್ಪ ಅಂತೂ ಇಂತೂ ಒಪ್ಪಿ ಇಲ್ಲಿಗೆ ಕಳ್ಸಿದ್ದಾನೆ. ‘ಮಂಗಳೂರಲ್ಲಿ ಸರಸ್ವತಿ ಶೆಣೈ ಅನ್ನೋರಿದ್ದಾರೆ... ಅವ್ರು ತುಂಬಾ ಒಳ್ಳೇ ಸಂಗೀತ ಕಲಿಸಿ ಕೊಡ್ತಾರೆ.... ನಿಮ್ಮ ಮಗ್ಳು ಅವ್ರಲ್ಲೇ ಮುಂದುವರಿಸ್ಲಿ.. ನಾನು ಹೇಳಿರ್ತೀನಿ ಅವ್ರಿಗೆ’ ಅಂತ ಪಕ್ಕದ ಮನೆ ಪದ್ಮಾ ಆಂಟಿ ಹೇಳಿದ್ದಾ ತಡ ಓದೋ ನೆಪ ಮಾಡ್ಕೊಂಡು ಇಲ್ಲಿಗೆ ಹಾಜಾರ್ ನೋಡು... ಸರಸ್ವತಿ ಮೇಡಮ್ ಅವ್ರ ಮನೆ ಪಕ್ಕನೇ ಪಿ.ಜಿ. ಸಿಕ್ಕಿದೆ. ಲಕ್ಕಿ ಅಲ್ವಾ ನಾನು? ಮುಂದಿನ ವಾರದಿಂದ ಕ್ಲಾಸ್ ಶುರು.." ಎಂದೆಲ್ಲಾ ಬಡಬಡಿಸುತ್ತಿದ್ದವಳ ಸಂಗೀತ ಪ್ರೇಮ ಕಂಡು ಮೆಚ್ಚುಗೆಯಾಗಿತ್ತು. ಪಾಠ, ಆಟ ಎಲ್ಲವೂ ನಾದಮಯವೇ. ಡಿಸೆಕ್ಟ್ ಮಾಡುವಾಗ, ಆ ಕ್ಲೋರೋಫಾರ್ಂ ವಾಸನೆ ಕುಡಿಯುತ್ತಲೂ ಒಳಗೊಳಗೇ ಹಾಡಿಕೊಳ್ಳುವ ಅವಳ ತನ್ಮಯತೆಗೆ ಬೆರಗಾಗಿ ಹೋಗಿದ್ದೆ. ಅವಳು ಹುಟ್ಟಿದ್ದೇ ಸಂಗೀತಕ್ಕಾಗೇನೋ ಎಂದೆನಿಸುತ್ತಿತ್ತು.

"ಚಾರು... ನಿಂಗೆ ನಿನ್ನ ಹೆಸರನ್ನು ಮೊದಲ ಸಲ ಕೇಳಿದಾಗ ಏನು ಅನಿಸ್ಲಿಲ್ವಾ? ಅಲ್ಲಾ.. ಸ್ವಲ್ಪ ಡಿಫೆರೆಂಟ್ ಆಗಿದ್ಯಲ್ಲಾ.. ಸೋ..." ಒಮ್ಮೆ ಹೀಗೇ ಕುತುಹೂಲ ತೋರಿದ್ದೆ. "ಅಯ್ಯೋ ಇಲ್ವೇ... ನಂಗೆ ಬುದ್ಧಿ ಬರುವಾಗ್ಲೇ ಅಪ್ಪಾ ಸಂಗೀತಾಭ್ಯಾಸ ಶುರು ಮಾಡಿದ್ರು.... ‘ನಿನ್ನ ಹೆಸ್ರೂ ಒಂದು ರಾಗ ಕಾಣಮ್ಮಾ..... ನಮ್ಮ ದುಃಖ ದುಮ್ಮಾನಗಳಿಂದ ಮುಕ್ತಿಕೊಡಲು ಭಕ್ತಿಯಿಂದ ಅವನನ್ನು ಕೇಳಿಕೊಳ್ಳೋವಾಗ ಹಾಡುಕೊಳ್ಳೋ ರಾಗ..’ ಎಂದೆಲ್ಲಾ ಅಪ್ಪಾ ಹೇಳ್ತಾ ಇರ್ತಿದ್ರು. ಅದೂ ಅಲ್ದೇ ಇನ್ನೂ ಒಂದು ಇಂಟರೆಸ್ಟಿಂಗ್ ಕಥೆ ಇದೆ ಈ ಹೆಸ್ರ ಹಿಂದೆ.. ನನ್ನಮ್ಮ ಒಳಗಡೆ ಹೆರಿಗೆನೋವಲ್ಲಿ ಒದ್ದಾಡ್ತಿರೋವಾಗ, ನನ್ನಪ್ಪನ ತಲೆಯೊಳಗೆ ಇದೇ ರಾಗದಲ್ಲಿದ್ದ ಹಾಡೊಂದು ಯಾಕೋ ಪದೇ ಪದೇ ನೆನಪಾಗ್ತಾ ಇತ್ತಂತೆ... ಹಾಗಾಗಿ ಹುಟ್ಟಿದಾಕ್ಷಣ ಚಾರುಕೇಶಿ ಅಂತಾನೇ ಇಟ್ಬಿಟ್ರು..." ಎಂದಿದ್ದಳು ಹೆಮ್ಮೆಯ ನಗು ಬೀರಿ.

"ಸಾಕು ಸುಮ್ನೀರೇ ಮಾರಾಯ್ತಿ.. ಯಾವಾಗ ನೋಡಿದ್ರು.. ಆ ಸ್ವರ, ಈ ರಾಗ... ಅಂತ ಕೊರೆಯೋದು... ಅದ್ಯಾವ ಮುಹೂರ್ತದಲ್ಲಿ ನಿಂಗೆ ಈ ಹೆಸ್ರು ಇಟ್ರೋ... ಏನಾದ್ರೂ ಹಾಡಿಕೊಳ್ತಾನೇ ಇರ್ತೀಯಾ.... ಈ ಸುಖಕ್ಕೆ ನಾನು ನಿನ್ಜೊತೆ ಯಾಕೆ ಕಾಲಹರಣ ಮಾಡ್ಲಿ?" ಎಂದೊಮ್ಮೆ ಸಿಡುಕಿದ್ದಕ್ಕೆ... "ಚಂದ್ರೋದಯದ ಮುಹೂರ್ತ ನೋಡು... ರಾತ್ರಿ ಹಾಡಿಕೊಳ್ಳೋ ರಾಗಾನೇ ನಾನು.. ಅಂದರೆ ಚಾರುಕೇಶಿ. ಅಲ್ವೇ.. ಸುಮ್ಮನೇ ಯಾಕೆ ಕೂರೋದು? ಖಾಲಿ ಮನಸ್ಸು ಸೈತಾನನ ಆಗರ ಗೊತ್ತಾ? ಹಾಗಾಗಿ ಸೈತಾನನ ಓಡಿಸ್ಲಿಕ್ಕೇ ಸಂತ ತುಕಾರಾಮನ ಈ ಹಾಡನ್ನು ಕೇಳು.. .‘ಭೆಟಿಲಾಗಿ  ಜೀವ  ಲಾಗಲೀಸೆ ಆಸ್..’" ಎಂದು ತುಕಾರಾಮರ ಮರಾಠಿ ಅಭಂಗ್‌ಅನ್ನು ಸುಶ್ರಾವ್ಯವಾಗಿ ಹಾಡತೊಡಗಿದಾಗ ನಾನೂ ಮೈಮರೆತಿದ್ದೆ.
ಎರಡು ವರುಷಗಳು ಅದು ಹೇಗೆ ಕಳೆದವೋ ತಿಳಿಯಲೇ ಇಲ್ಲಾ! ಸಂಗೀತವೆಂದರೆ ಅಷ್ಟಕಷ್ಟೇ ಅಂತಿದ್ದ ನನ್ನೊಳಗೂ ಅದರ ಮೇಲೆ ಆಸಕ್ತಿ ಕೆರಳಿಸಿದ್ದಲ್ಲದೇ, ಪ್ರೀತಿಯನ್ನೂ ಹುಟ್ಟು ಹಾಕಿದ್ದಳು ಚಾರು. ಸಹವಾಸ ದೋಷವೋ ಎಂತೋ.. ನಾನೂ ಈಗ ಹಾಡುಗಳಲ್ಲಿರುವ ರಾಗವನ್ನು ಗುರುತಿಸತೊಡಗಿದ್ದೆ. 

"ಇನ್ನೊಂದೇ ವರುಷ ಶಾಲಿ.. ಆಮೇಲೆ ನಾನು ಸಂಗೀತದಲ್ಲೇ ಹೈಯರ್ ಸ್ಟಡೀಸ್ ಮಾಡೋಕೆ ಹೋಗ್ಬೇಕು ಅಂತಿದ್ದೀನಿ.. ಈ ಡೆಸೆಕ್ಷನ್ ಕಂಡ್ರೆ ಆಗೊಲ್ಲಾ.. ಬಾಟನಿ ಇದೆ ಅಂತಾ ಈ ಕಾಂಬಿನೇಷನ್ ತಗೊಂಡೆ.. ಗೊತ್ತಲ್ಲಾ ನಮ್ಮ ಬೋಸ್ ಸಾಹೇಬ್ರು ಹೇಳಿದ್ದಾರೆ ಸಂಗೀತಕ್ಕೂ, ಸಸ್ಯಕ್ಕೂ ತುಂಬಾ ನಂಟಿದೆ ಅಂತಾ...." ಎಂದವಳ ಮಾತಿಗೆ ನಗುವುಕ್ಕಿದ್ದರೂ, ಮನಸ್ಸು ಬಾಡಿತ್ತು. ಸಂಗೀತಕ್ಕೂ ವಿಜ್ಞಾನಕ್ಕೂ ಇರುವ ಯಾವುದೋ ಒಂದು ವಿಶಿಷ್ಟ ಲಿಂಕ್ ಇವಳಲ್ಲಿ ಕಂಡುಕೊಂಡಿದ್ದೆ..... ನಾನು ಅರಿಯದಂತೇ ನನ್ನೊಳಗೆ ಆಳವಾಗಿ ಬೇರೂರಿದವಳ ಅಗಲಿಕೆಯ ಕಲ್ಪನೆಯಿಂದಲೇ ಮನಸ್ಸು ಆರ್ದ್ರವಾಗಿತ್ತು. ಆದರೆ ನಿಯತಿ ಹಾಡುವ ರಾಗಕ್ಕೆ ಶ್ರುತಿಯಿರಲೇಬೇಕೆಂದ ನಿಯಮವಿಲ್ಲ ಎನ್ನುವ ಕಹಿ ಸತ್ಯವನ್ನು ಮರೆತಿದ್ದೆ.

"ಡಿಯರ್ ಸ್ಟುಡೆಂಟ್ಸ್... ನಿಮ್ಮ ಮೆಚ್ಚಿನ ಸಹಪಾಠಿ.. ಉತ್ತಮ ಸಂಗೀತಗಾರ್ತಿ ಚಾರುಕೇಶಿ ಇಂದು ಬೆಳಗ್ಗೆ ದೊಡ್ಡ ಅಪಘಾತಕ್ಕೆ ಗುರಿಯಾಗಿ, ಕೆ.ಎಂ.ಸಿಯಲ್ಲಿ ಅಡ್ಮಿಟ್ ಆಗಿದ್ದಾಳೆ. ಚಲಿಸುತ್ತಿದ್ದ ಬಸ್‌ನಿಂದ ಆಯತಪ್ಪಿ ಬಿದ್ದು ಬಿಟ್ಟಳಂತೆ.... ಬಹುಶಃ ತುದಿಯಲ್ಲಿ ನಿಂತಿದ್ದಳೇನೋ... ತಲೆಯ ಹಿಂಭಾಗಕ್ಕೆ ತುಂಬಾ ಪೆಟ್ಟಾಗಿದೆಯಂತೆ.... ಕ್ರಿಟಿಕಲ್ ಕಂಡೀಷನ್ ಅಂದಿದ್ದಾರೆ ಡಾಕ್ಟರ್ಸ್.. ಪ್ಲೀಸ್ ಪ್ರೇ ಫಾರ್ ಹರ್.. ನಾನೀಗ ಅಲ್ಲಿಗೇ ಹೊರಟಿದ್ದೇನೆ..." ಎಂದು ಪ್ರಿನ್ಸಿಪಾಲರು ಎರಡನೇ ತರಗತಿಯ ನಡುವೆ ಬಂದು ಅನೌನ್ಸ್ ಮಾಡಿದಾಗಲೇ ನನಗೂ ವಿಷಯ ತಿಳಿದಿದ್ದು!

"ನಾಳೆ ನಾನು ಬರೋದು ಡೌಟು ಶಾಲಿ... ಸಂಗೀತ ಟೀಚರ್ ಜೊತೆ ಒಂದು ಫಂಕ್ಷನ್‌ಗೆ ಹೋಗ್ಬೇಕು.. ಅಲ್ಲಿ ಹೊಸ ಹಾಡನ್ನು ಹಾಡ್ತಿದ್ದಾರಂತೆ ಇವತ್ತು... ಹೇಗಿದ್ರೂ ಇಂಪಾರ್ಟೆಂಟ್ ಕ್ಲಾಸ್‌ಗಳಿಲ್ಲ... ಸೋ.. ಬಂಕ್ ಮಾಡ್ತೀನಿ ನಾನು.." ಎಂದು ಹಿಂದಿನ ದಿನವೇ ಹೇಳಿದ್ದರಿಂದ ಇಂದು ಗೈರುಹಾಜರಿಯಾದವಳ ಬಗ್ಗೆ ಆಷ್ಟೊಂದು ಯೋಚಿಸಿರಲೇ ಇಲ್ಲ. ಅಚಾನಕ್ಕಾಗಿ ಬಂದಪ್ಪಳಿಸಿದ ಅವಳ ಅಪಘಾತದ ಸುದ್ದಿ ನನ್ನನ್ನು ಸಂಫೂರ್ಣ ನಿಷ್ಕ್ರೀಯಗೊಳಿಸಿಬಿಟ್ಟಿತ್ತು. ತಾಸೊಳಗೇ ಸಹಪಾಠಿಗಳೆಲ್ಲಾ ಅವಳಿದ್ದ ಆಸ್ಪತ್ರೆಯೆಡೆ ಹೊರಟಿದ್ದರೆ, ನಾನು ಮನೆಯ ದಾರಿ ಹಿಡಿದಿದ್ದೆ. ಯಾಕೋ ವಾಸ್ತವಿಕತೆಯನ್ನೇ ಸುಳ್ಳೆನ್ನುತ್ತಿತ್ತು ನನ್ನ ಮನಸ್ಸು. 

~~~~
ಚಾರುಕೇಶಿ ಅನಂತದಲ್ಲಿ ಲೀನವಾಗಿ ವಾರಗಳು ಕಳೆದಿದ್ದರೂ, ಹೆಪ್ಪುಗಟ್ಟಿದ ಭಾವ ಹರಿದಿರಲೇ ಇಲ್ಲಾ. ಹುಚ್ಚು ಮೇಲೇರಿದಂತೇ ಅಭ್ಯಾಸದಲ್ಲಿ ಮುಳುಗಿ ಹೋಗಿದ್ದೆ. ಅವಳಿದ್ದಳು, ಈಗಿಲ್ಲಾ ಅನ್ನೋ ವಸ್ತುಸ್ಥಿತಿಯನ್ನೇ ಎಲ್ಲೋ ಮೂಲೆಗೆ ತಳ್ಳಿಬಿಟ್ಟಿದ್ದೆ.  ಆದರೆ ಅಂತಹ ಸ್ಥಿತಿಯಲ್ಲೂ ನನ್ನೊಳಗೆ ಅವಳಿಷ್ಟದ "ಅಲಬೇಲಾ ಸಜನ್ ಆಯೋರೆ..." ಹಾಡು ಸಂಚರಿಸುತ್ತಲೇ ಇದ್ದಿದ್ದು ಇಂದಿಗೂ ನನಗೆ ಸೋಜಿಗ! ಅವಳ ಪ್ರೇತವೇನಾದರೂ ನನ್ನೊಳಗೆ ಸೇರಿರಬಹುದೇ? "ಮಲಯ ಮಾರುತದ" ಚಲನಚಿತ್ರದಲ್ಲೂ ಹೀಗೇ...... ನಾಯಕ ತನ್ನ ಸಂಗೀತ ಗುರುಗಳ ಗೋರಿಯ ಬಳಿ ಕುಳಿತು ದುಃಖಿಸುವಾಗ ಗುರುವಿನ ಆತ್ಮ ಇವನೊಳಗೆ ಸೇರಿ ಅವನೊಬ್ಬ ದೊಡ್ಡ ಸಂಗೀತಗಾರನಾಗುತ್ತಾನೆ... ಹಾಗೇ ಇವಳು ನನ್ನ ಮೂಲಕ ತನ್ನ ಸಂಗೀತ ತೃಷೆ ತೀರಿಸಿಕೊಳ್ಳಲು ಬಂದಿರಬಾರದೇಕೆ? ಎಂಬೆಲ್ಲಾ ಕ್ಷುದ್ರ ಯೋಚನೆಗಳಿಂದ ಕೆಂಗೆಟ್ಟು ಹೋಗಿದ್ದೆ. ಮನೆಯವರೆಲ್ಲಾ ನನ್ನ ಸಮಾಧಾನಕ್ಕೆ ಸಾಕಷ್ಟು ಯತ್ನಿಸಿದರೂ ದುಃಖ ಕಣ್ಣೀರಾಗಿ ಹರಿಯಲೇ ಇಲ್ಲಾ. ಒಳಗೇ ಗಟ್ಟಿಯಾಗಿ ಕುಂತು, ಆಗೀಗ ಸಂಗೀತ ನಾದವನ್ನು ಹೊರಡಿಸುತ್ತಲೇ ಇತ್ತು! ಈ ಕಟ್ಟೆ ಒಡೆದು, ನೋವು ನೀರಾಗಿ ಹರಿಯಲು ಬರೋಬ್ಬರಿ ಒಂದು ವರುಷ ತಗುಲಿದ್ದವು. ಅದೂ ಅವಳೇ ನನ್ನ ಯಾತನೆಯ ಮುಕ್ತಿಗೆ ಕಾರಣೀಭೂತಳಾಗಿದ್ದು ಮತ್ತೊಂದು ವಿಸ್ಮಯ.

ಮಗಳ ಸಾವಿನಿಂದ ಕೆಂಗೆಟ್ಟಿದ್ದರೂ ಅವಳಪ್ಪ, ಚಾರುಕೇಶಿಯ ಹೆಸರಿನಲ್ಲಿ ಒಂದು ಟ್ರಸ್ಟ್ ಮಾಡಿದ್ದಲ್ಲದೇ, ಪ್ರತಿ ವರುಷ ಸಂಗೀತದ ನಂತರ ಅವಳು ಬಲು ಇಷ್ಟಪಡುತ್ತಿದ್ದ "ಬಾಟನಿ" ವಿಷಯದಲ್ಲಿ ಯಾರು ಹೆಚ್ಚು ಅಂಕ ಗಳಿಸುವರೋ ಅವರಿಗೆ ಐದು ಸಾವಿರವನ್ನು ಬಹುಮಾನವಾಗಿ ಕೊಡಬೇಕೆಂದು ವಿನಂತಿಸಿಕೊಂಡಿದ್ದರು. ಅಂತೆಯೇ ಆ ವರುಷ ಬಾಟನಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ್ದ ನನಗೇ ಪ್ರಿನ್ಸಿಪಾಲರು "ಇದು ಚಾರುಕೇಶಿಯ ಸವಿನೆನಪಲ್ಲಿ ಅವಳ ತಂದೆವರು ಕೊಡುತ್ತಿರುವ ಬಹುಮಾನ.." ಎನ್ನುತ್ತಾ ಚೆಕ್‌ಅನ್ನು ನನಗೆ ಕೊಡುವಾಗಲೇ ಹರಿಯತೊಡಗಿದ್ದು ಮಡಗಟ್ಟಿದ್ದ ಯಾತನೆ!  ಅಂದಿನಿಂದ ಇಂದಿನವರೆಗೂ ಆ ಹಣ ಹಾಗೇ ಭದ್ರವಾಗಿದೆ ಬೀರುವಿನಲ್ಲಿ.... ನನ್ನೊಳಗೆ ಬಂಧಿಯಾಗಿರುವ ಅವಳ ಮಧುರ ಸ್ನೇಹದಂತೇ.

ಇಂದೆಕೋ ಚಾರು ನನ್ನ ಬಹುವಾಗಿ ಕಾಡುತ್ತಿದ್ದಾಳೆ. ಕಣ್ಮುಂದೆ ಮಲ್ಹಾರ ರಾಗ ನುಡಿಸುತ್ತಿರುವ ಮಳೆಯರಾಯನಿಂದಾಗಿರಬೇಕು. ಇಳೆಯೊಳಗೆಬ್ಬಿಸುತ್ತಿದ್ದ ನೀರಲೆಗಳ ಜೊತೆಯಲ್ಲೇ, ಹೂತ ನೂರಾರು ನೆನಪಿನ ತರಂಗಗಳನ್ನೂ ಎಬ್ಬಿಸುತ್ತಿದ್ದಾನೆ. ಆದರೆ ಅಂದಿನ ಯಾತನೆಯ ಉರಿಯಿಲ್ಲ ಎದೆಯೊಳಗೆ.... ತನ್ನ ಹೆಸರಿಗೆ ಅನ್ವರ್ಥವಾಗಿ ನನ್ನೊಳಗಿನ ದುಃಖಕ್ಕೆ ಬಿಡುಗಡೆ ನೀಡಿದ್ದಾಳೆ ಚಾರುಕೇಶಿ.

[*ವಿಜಯ ನೆಕ್ಸ್ಟ್ ಪೇಪರಿನಲ್ಲಿ ಪ್ರಕಟಿತ.]

-ತೇಜಸ್ವಿನಿ ಹೆಗಡೆ.