ಗುರುವಾರ, ಮಾರ್ಚ್ 22, 2012

ಬೇವಿನ ಕಹಿ ಬಾಳಿನಲ್ಲಿ.... ಹೂವಿನ ನಸುಗಂಪು ಸೂಸಿ

ನಾವು ಚಿಕ್ಕವರಿದ್ದಾಗ.. ‘ಯುಗಾದಿಲಿ ಮಾತ್ರ ಎಂತಕ್ಕೆ ಬೇವು-ಬೆಲ್ಲಾ?’ ಎಂದು ಅಮ್ಮನನ್ನು ಕೇಳಿದಾಗ... "ಬದುಕೆಂದ್ರೆ ಸಿಹಿ ಒಂದೇ ಅಲ್ಲಾ.. ಕಹಿನೂ ಜೊತೆಗೇ ಇರುತ್ತದೆ... ಎರಡನ್ನೂ ಸಮಾನವಾಗಿ ಸ್ವೀಕರಿಸುವೆ ಎಂದು ಪ್ರತಿ ವರ್ಷ ಮನಸೊಳಗೇ ದೃಢ ಸಂಕಲ್ಪ ಮಾಡ್ಕೊಳೋಕೇ ತಿನ್ನೋದು.." ಅಂದಿದ್ಲು... ಈಗ್ಲೂ ಹೇಳ್ತಾ ಇರ್ತಾಳೆ. ಮನೋಸಂಕಲ್ಪ ಒಂದಿದ್ದ್ರೆ ಎಲ್ಲವೂ ಸಾಧ್ಯ ಅಂತಾನೆ ಗೀತೆಯ ಕೃಷ್ಣ.

ಆವಾಗೆಲ್ಲಾ ಅಮ್ಮನ ಮಾತಿನ ಒಳಾರ್ಥ ಅಷ್ಟು ಅರ್ಥ ಆಗ್ತಿರ್ಲಿಲ್ಲ.. ಇಲ್ಲಾ ಅರ್ಥ ಮಾಡ್ಕೊಂಡು ಹೋಗೋವಷ್ಟು ವಯಸ್ಸು ಆಗಿರ್ಲಿಲ್ಲ :). ಹಾಗಾಗಿ ಸಿಹಿ ಸ್ವಲ್ಪ ಜಾಸ್ತಿ ತಿಂದು, ಕಹಿ ಚೂರೇ ಚೂರು ತಿಂತಿದ್ದೆ. ಬೆಲ್ಲ ಜಾಸ್ತಿ ತಿಂದು ಬೇವು ಕಡ್ಮೆ ತಿಂದ್ರೆ ನೋವು, ಕಷ್ಟ ಆ ವರ್ಷ ಕಡ್ಮೆ ಸಿಗೊತ್ತೆ... ನಲಿವೇ ಜಾಸ್ತಿ ಆಗೊತ್ತೆ ಅನ್ನೋ ನನ್ನದೇ ತರ್ಕದಲ್ಲಿ ನಾನೇ ಸುಖಿಸುತ್ತಾ...:) 

ಈಗ ಗೊತ್ತಾಗಿದೆ... ಬೇವು-ಬೆಲ್ಲಾ ತಿನ್ಲಿ ಬಿಡ್ಲಿ.. ವರ್ಷದ ಪಂಚಾಂಗದ ಭವಿಷ್ಯದಲ್ಲೇ ಎನೇ ಬರ್ದಿರ್ಲಿ.. ನಮಗಾಗಿ ಏನು ಇದೆಯೋ... ಕಾದಿದೆಯೋ ಅದನ್ನು ತಪ್ಪಿಸಲು ಸಾಧ್ಯವೇ ಇಲ್ಲಾ! ಹಾಗಾಗಿ ಅಪ್ಪನಿಂದ, ಅಮ್ಮನಿಂದ, ಗುರುವಿನಿಂದ ಕಲಿತದ್ದನ್ನೆಲ್ಲಾ ಸೇರಿಸಿ, ಮಂಥಿಸಿ, ನಾನೇ ಒಂದು ಹೊಸ ಅರ್ಥವನ್ನು, ಹೊಳಹನ್ನು ಕೊಟ್ಟಿರುವೆ "ಯುಗಾದಿಗೆ". .-
ನಮ್ಮೊಳಗಿನ ಸಾತ್ವಿಕ ಭಾವನೆಯನ್ನು ಉದ್ದೀಪನಗೊಳಿಸಲು ಸಾತ್ವಿಕ ಆಹಾರಗಳು ಬಹು ಮುಖ್ಯ ಪಾತ್ರವಹಿಸುತ್ತವೆ.... ಹಾಗಾಗಿ ಸಿಹಿ=ಬೆಲ್ಲವನ್ನು ತಿನ್ನಬೇಕು. ದೇಹದೊಳಗಿನ ಕಲ್ಮಶತೆಯನ್ನು ಹೊರಹಾಗಿ ಆರೋಗ್ಯ ವೃದ್ಧಿಸಲು ಆಯುರ್ವೇದಿ ಗುಣವುಳ್ಳ ಕಹಿ=ಬೇವು ಅತ್ಯುತ್ತಮ ಔಷಧೀಯ ಸಸ್ಯ. ಇವೆರಡನ್ನೂ ಸಮ ಪ್ರಮಾಣದಲ್ಲಿ ಸ್ವೀಕರಿಸಿದರೆ ಮನಸೂ ಶಾಂತ, ದೇಹವೂ ಸುದೃಢ. 
ಹಾಗಾಗಿ ಬೇವು-ಬೆಲ್ಲವನ್ನು ಸಮನಾಗಿ ಸ್ವೀಕರಿಸಿ ಯುಗಾದಿಯನ್ನು ಸಂತೋಷದಿಂದ ಆಚರಿಸಿ.

ವರುಷಕೊಂದು ಹೊಸತು ಜನ್ಮ 
ಹರುಷಕೊಂದು ಹೊಸತು ನೆಲೆಯು 
ಅಖಿಲ ಜೀವಜಾಲಕೆ
ಒಂದೆ ಒಂದು ಜನ್ಮದಲಿ 
ಒಂದೆ ಬಾಲ್ಯ ಒಂದೆ ಹರೆಯ  
ನಮಗದಷ್ಟೆ ಏತಕೋ
ನಿದ್ದೆಗೊಮ್ಮೆ ನಿತ್ಯ ಮರಣ 
ಎದ್ದ ಸಲ ನವೀನ ಜನನ 
ನಮಗೆ ಏಕೆ ಬಾರದೋ


ಎಲರಿಗೂ ಯುಗಾದಿಯ ಹಾರ್ದಿಕ ಶುಭಾಶಯಗಳು :)

-ತೇಜಸ್ವಿನಿ ಹೆಗಡೆ.