ನನ್ನ ಈ ಲೇಖನವನ್ನು ಪ್ರಕಟಿಸಿ ಪ್ರೋತ್ಸಾಹಿಸಿದ ದಟ್ಸ್ಕನ್ನಡಕ್ಕೂ ಹಾಗೂ ಪ್ರತಿಕ್ರಿಯೆಗಳ ಮೂಲಕ ಪ್ರೇರೇಪಿಸಿದ ಎಲ್ಲಾ ದಟ್ಸ್ಕನ್ನಡ ಓದುಗರಿಗೂ ತುಂಬಾ ಧನ್ಯವಾದಗಳು.
-----------------------ಭಾರತದಲ್ಲಿ ಅದೆಷ್ಟೋ ಜ್ವಲಂತ ಸಮಸ್ಯೆಗಳ ಕುರಿತು ಚರ್ಚೆಗಳಾಗಿವೆ, ಆಗುತ್ತಿವೆ. ಸಮಸ್ಯೆಗಳಿಗಳ ಪರಿಹಾರಕ್ಕಾಗಿ, ಹೋರಾಟಕ್ಕಾಗಿ ಅಸಂಖ್ಯಾತ ಸಂಘಟೆನೆಗಳು ಹುಟ್ಟಿಕೊಳ್ಳುತ್ತವೆ. ತಕ್ಕಮಟ್ಟಿಗೆ ಪರಿಹಾರವನ್ನೂ ಕಂಡುಕೊಂಡಿವೆ. ಮಂತಾತರದ ಬಗ್ಗೆ, ಭಯೋತ್ಪಾದನೆಯ ಬಗ್ಗೆ, ರಾಜಕಾರಣ/ರಾಜಕಾರಣಿಗಳ ಬಗ್ಗೆ, ಸನ್ಸೆಕ್ಸ್ ಇತ್ಯಾದಿಗಳ ಬಗ್ಗೆ ಬುದ್ಧಿಜೀವಿಗಳು, ವಿದ್ಯಾವಂತರು, ಬುದ್ಧಿವಂತರು ಎಲ್ಲರೂ ಗಂಟೆಗಟ್ಟೆಲೆ ಮಾತಾಡುತ್ತಾರೆ.. ಪುಟಗಟ್ಟಲೆ ಬರೆಯುತ್ತಾರೆ. (ಹಾಗೆ ಮಾಡುವುದು ತಪ್ಪೆಂದು ಖಂಡಿತ ನಾನು ಹೇಳುತ್ತಿಲ್ಲ) ಆದರೆ ಸ್ವಾತಂತ್ರ್ಯ ಬಂದು ಇಷ್ಟು ವರುಷಗಳಾದರು ಯಾರೂ ದೈಹಿಕ/ಮಾನಸಿಕ ಅಂಗವೈಕಲ್ಯ ಹೊಂದಿದವರ ಕುರಿತು, ಅವರು ಹಾಗೂ ಅವರ ಮನೆಯವರು ಅನುಭವಿಸುವ ಕಷ್ಟ, ನೋವು, ಅವಮಾನ, ಹಿಂಸೆ, ಅನ್ಯಾಯಗಳ ಕುರಿತು ಸುದೀರ್ಘವಾಗಿ ಯೋಚಿಸಿ ಆ ನಿಟ್ಟಿನಲ್ಲಿ ಪರಿಹಾರ ಕಂಡುಕೊಳ್ಳುವ/ನೀಡುವ ರೀತಿಯಲ್ಲಿ ಈವರೆಗೂ ಯೋಚಿಸಲೇ ಇಲ್ಲ. ಇದೊಂದು ದೊಡ್ಡ ದುರಂತ.
ಇದು ಅವರ ಪ್ರಾರಾಬ್ಧ ಎಂದೋ, ಅಯ್ಯೋ ಪಾಪ ಎಂಬ ಅನುಕಂಪ ನೀಡಿಯೋ, ದೇವರಿದ್ದಾನೆ ಎಂಬ ಆಶಾಢಭೂತಿತನವನ್ನು ತೋರುವುದರಿಂದಲೋ ದೂರವೇ ಉಳಿಯುತ್ತಾರೆ. ವರುಷಕ್ಕೊಮ್ಮೆ ಅವರ ದಿನವನ್ನಾಚರಿಸಿ.. ವ್ಹೀಲ್ಚೇರ್ ನೀಡಿ ನೀವು ಇದರಲ್ಲಿ ಕುಳಿತಿರುವುದೇ ಲೇಸೆಂದು ಹಾರೈಸುತ್ತದೆ ಸರಕಾರ.
ಒಂದು ಅಂಕಿಯ ಪ್ರಕಾರ ಭಾರತದಲ್ಲಿ ಈಗ ೭೦ ಮಿಲಿಯನ್ ಅಂಗವಿರಲರಿದ್ದಾರೆ. ಅವರಲ್ಲಿ ಕೇವಲ ೨% ಅಂಗವಿಕಲರು ಮಾತ್ರ ವಿದ್ಯೆಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರೆ, ೧% ಜನರು ಮಾತ್ರ ಉದ್ಯೋಗಿಗಳಾಗಿದ್ದಾರೆ!! ಭಾರತದ ಪ್ರಜೆ ೭೨,೦೦೦ ಕೋಟಿ ರೂಗಳನ್ನು ಅಂಗವಿಕಲರಿಗಾಗಿ ವಿನಿಯೋಗಿಸುತ್ತಿದ್ದಾನೆ. ಆದರೆ ಅದರಲ್ಲಿ ಅಂಗವಿಕಲರಿಗಾಗಿ ಸರಕಾರ ಕೊಡುತ್ತಿರುವುದು ಮಾತ್ರ ಅತ್ಯಲ್ಪ!!!
ದೈಹಿಕವಾಗಿ ಅಂಗನ್ಯೂನತೆ ಹೊಂದಿದವರು ನೈತಿಕ, ಸಾಮಾಜಿಕ ಹಾಗೂ ಆರ್ಥಿಕ ಭದ್ರತೆಯಿದ್ದರೂ ಯಾವರೀತಿಯ ಹೋರಾಟಗಳನ್ನೆಲ್ಲಾ ಮಾಡಬೇಕಾಗುತ್ತದೆ, ಎಷ್ಟೆಲ್ಲಾ ಮಾನಸಿಕ ಹಿಂಸೆ, ಅನ್ಯಾಯ, ಅಪಮಾನಗಳನ್ನು ಎದಿರುಸಿ, ಸಹಿಸಿ ಮುನ್ನೆಡಯಬೇಕಾಗುತ್ತದೆ ಅನ್ನುವುದಕ್ಕೆ ಸ್ವತಃ ನಾನೇ ಉದಾಹರಣೆ.
ಹುಟ್ಟಿನಿಂದಲೂ ನನ್ನೆರಡೂ ಕಾಲ್ಗಳಿಗೂ ಶಕ್ತಿಯಿಲ್ಲ. ಆದರೆ ವಿಕಲಚೇತನವಾಗಿರುವುದು ನನ್ನ ಅಂಗಗಳಿಗೆ ಆದರೆ ನನ್ನ ಬುದ್ಧಿಗಲ್ಲವೆಂದೇ ತಿಳಿದು ಮನಃಶಕ್ತಿಯಿಂದಲೇ ೨೯ ವರುಷಗಳನ್ನು ಸಾಮಾನ್ಯರಂತೆಯೇ ಕಳೆದವಳು. ಯಾವುದೇ ಅಂಗವಿಕಲ ಸೌಕರ್ಯವನ್ನೂ ಪಡೆಯದೇ ಮೇಲೆ ಬಂದವಳು. ಆದರೂ ಆಗಾಗ ಭಾರತದಲ್ಲಿ ವಿಕಲಚೇತನರ ಪ್ರತಿ ಇರುವ ಶುದ್ಧ ನಿರ್ಲಕ್ಯತನ, ಬೇಜಾವಾಬ್ದಾರಿತನ, ಅವರ ಪ್ರತಿ ತೊರುವ ತೋರಿಕೆಯ ಕಾಳಜಿ ಕಂಡು ತುಂಬಾ ನೋವು, ಸಿಟ್ಟು ಬರುತ್ತಲಿತ್ತು. ಬುದ್ಧಿ ಮತ್ತೆಯಿದ್ದರೂ ಆಸಕ್ತಿಯಿದ್ದರೂ, ಬೇಕಾದಷ್ಟು ಮಾರ್ಕ್ಸ್ ಗಳಿದ್ದರೂ ನನಗೆ ಪಿ.ಯು.ಸಿ ನಂತರ ಮೆಡಿಕಲ್ ಆಗಲೀ, ಬಿ.ಎಸ್ಸಿ. ನಂತರ ಮೈಕ್ರೋಬಯೋಲಾಜಿಯಾಗಲೀ ಮಾಡಲಾಗಲಿಲ್ಲ (ಸೀಟ್ ಸಿಕ್ಕಿದ್ದರೂ). ಕನ್ನಡ ಸಾಹಿತ್ಯದಲ್ಲಿ ಎಂ.ಎ.ಯನ್ನು ಕೂಡ ನಾನು "ಮೈಸೂರು ಮುಕ್ತ ವಿಶ್ವವಿದ್ಯಾಲಯದ" ಮೂಲಕ ಮಾಡಬೇಕಾಗಿ ಬಂತು. ಕಾರಣ ಇಲ್ಲಿ ೯೯% ಕಟ್ಟಡಗಳಿರುವುದೂ ಫ್ಲೋರ್ಗಳಲ್ಲಿ ಅದೂ ವಿದೌಟ್ ಲಿಫ್ಟ್!!! ನೈತಿಕ, ಆರ್ಥಿಕ ಬೆಂಬಲಗಳಿದ್ದರೂ ನನಗೆ ಅದೆಷ್ಟೋ ಕನಸುಗಳನ್ನು ಸಾಕಾರಿಸಿಕೊಳ್ಳಲಾಗಲಿಲ್ಲ. ಕಾರಣ ನನ್ನ ದೈಹಿಕ ವಿಕಲಚೈತನ್ಯ. ಇನ್ನು ಏನೂ ಇಲ್ಲದ, ಯಾರ ಬೆಂಬಲವೂ ಸಿಗದ ಆದರೆ ಅಪಾರ ಬುದ್ಧಿಮತ್ತೆ ಇರುವ ಇತರ ವಿಕಲಚೇತನರ ಗತಿ ಎಣಿಸಿದರೆ ತುಂಬಾ ನೋವಾಗುವುದು.
ಇಲ್ಲಿಯ ದುರವಸ್ಥೆಕಂಡು ನಾನು ಅದೆಷ್ಟೋ ಸಲ ಯೋಚಿಸಿದ್ದಿದೆ. ಬೇರೆ ದೇಶಗಳಲ್ಲಿಯೂ ಇವರ ಸ್ಥಿತಿ ಹೀಗೇಯೇ ಎಂದು. ಆಗ ಹೊರದೇಶಗಳಲ್ಲಿರುವ ನನ್ನ ಆತ್ಮೀಯರನ್ನು ವಿಚಾರಿಸಿದೆ. ಅಲ್ಲಿ ಅವರನ್ನು ಯಾವ ರೀತಿ ಗೌರ್ವಯುತವಾಗಿ ನಡೆಸಿಕೊಳ್ಳಲಾಗುತ್ತದೆ ಎಂಬುದು ಹೆಚ್ಚಿನವರಿಗೆ ತಿಳಿದೇ ಇದೆ. ಅಮೇರಿಕಾ, ಇಂಗ್ಲೇಡ್, ನ್ಯೂಜಿಲೇಂಡ್ ಮುಂತಾದ ಪಾಶ್ಚಿಮಾತ್ಯ ದೇಶಗಳಲ್ಲಿ ಅಂಗವಿಕಲರನ್ನು ತುಂಬಾ ಗೌರವಯುತವಾಗಿ ನಡೆಸಿಕೊಳ್ಳುವರೆ. ಕೇವಲ ಅನುಕಂಪ ತೋರದೇ ಅವರಿಗೆ ಸಲ್ಲಬೇಕಾದ ಹಕ್ಕು ಸೌಲಭ್ಯ, ಸಹಕಾರ ಮೊದಲು ಸಿಗುವುದು. ಯಾವುದೇ ಅಂಗಡಿ ಮುಂಗಟ್ಟುಗಳಿರಲಿ ಅಲ್ಲಿಗೆ ಅಂಗವಿಕಲರೂ ಸುಲಭವಾಗಿ ಹೋಗುವ ಎಲ್ಲಾ ಸೌಕರ್ಯಗಳಿವೆ. ಆಸ್ಪತ್ರೆಗಳಲ್ಲಿ ಡಾಕ್ಟರ್ಗಳು ಮೊದಲು ಅವರ ತಪಾಸಣೆ ಮಾಡಬೇಕು. ಅವರನ್ನು ನೋಡೆನೆಂದ ಡಾಕ್ಟರ್ ತಕ್ಷಣ ಕೆಲಸ ಕಳೆದುಕೊಳ್ಳುವನು.
ಆದರೆ ಇಲ್ಲಿ ಮಾತ್ರ ಓರ್ವ ಡಾಕ್ಟರ್ ಕ್ಲಿನಿಕ್ ಕೂಡಾ ಕನಿಷ್ಠ ಪಕ್ಷ ೪-೫ ಮೆಟ್ಟಿಲುಗಳನ್ನೊಳಗೊಂಡಿರುತ್ತದೆ!!!! ಕೆಲವು ಡಾಕ್ಟರ್ಗಳಂತೂ ತಮ್ಮ ವೃಧ್ಧಿ ಧರ್ಮವನ್ನೇ ಮರೆತು ಅಮಾನವೀಯತೆಯ ಪರಾಕಷ್ಠೆಯನ್ನು ಮುಟ್ಟುತ್ತಾರೆ. ಮೊನ್ನೆ ಸ್ವತಃ ನನ್ನೊಂದಿಗೆ ನಡೆದ ಅಮಾನವೀಯ ಘಟನೆಯನ್ನೇ ಹೇಳುವೆ. ಇದನ್ನು ಹೇಳುವ ಮೊದಲೇ ನಾನು ಸ್ಪಷ್ಟ ಪಡಿಸುವೆ. ನನಗೆ ಆ ಡಾಕ್ಟರ್ ಮೇಲೆ ಯಾವ ಪೂರ್ವಾಗ್ರಹವಾಗಲೀ, ದ್ವೇಷವಾಗಲೀ ಖಂಡಿತ ಇಲ್ಲ. ಅವನ ವರ್ತನೆಗೆ, ಯೋಚನೆಗೆ ಮಾತ್ರ ತೀವ್ರ ಖಂಡನೆ ಹಾಗೂ ನೋವಿದೆ ಅಷ್ಟೇ.
ಹಲವು ದಿನಗಳಿಂದ ಜ್ವರದಲ್ಲಿ ಬಳುತ್ತಿದ್ದ ನಾನು ನಿನ್ನೆ ರಾಜರಾಜೇಶ್ವರಿ ನಗರದಲ್ಲಿರುವ ಓರ್ವ ಡಕ್ಟರ್ ಕ್ಲಿನಿಕ್ಗೆ ಹೋದೆ. ನಮಗೆ ಪರಿಚಯ ಇದ್ದ ಡಾಕ್ಟರ್ ಊರಲ್ಲಿರದಿದ್ದ ಕಾರಣ ನನ್ನ ಯಜಮಾನರ ಫ್ರೆಂಡ್ ಓರ್ವ ಹೇಳಿದ ಈ ಕ್ಲಿನಿಕ್ಗೇ ಹೋಗಬೇಕಾಯಿತು. ನನ್ನ ಹೆಲ್ಪರ್ಗೂ ಸೌಖ್ಯವಿರದಿದ್ದ ಕಾರಣ ಅವಳನ್ನು ಕರೆದುಕೊಂಡು ಹೋಗಿದ್ದೆ.ಕ್ಲಿನಿಕ್ಕಿಗೆ ಹೋಗಲೂ ೬-೭ ಮೆಟ್ಟಿಲುಗಳನ್ನು ಇಳಿಯಬೇಕಿತ್ತು (ಭಾರತದ ಎಲ್ಲಾ ಕ್ಲಿನಿಕ್ಗಳ ದುರವಸ್ಥೆ ಇದು.. ಆಸ್ಪತ್ರೆಗಳನ್ನು ಬಿಟ್ಟು). ಹಾಗಾಗಿ ಹೆಲ್ಪರ್ ಹಾಗೂ ನನ್ನವರು ಒಳಗೆ ಹೋದರು. ನಾನು ಕಾರಿನಲ್ಲೇ ಕುಳಿತಿದ್ದೆ. ಕ್ಲಿನಿಕ್ ಕೇವಲ ೫-೧೦ ಹೆಜ್ಜೆ ದೂರವಷ್ಟೇ ಇತ್ತು. ಇವರು ಡಾಕ್ಟರ್ ಬಳಿ "ನಾನು "Physically Challenged ಎಂದು ಹೇಳಿ ಕೇವಲ ಜ್ವರವಿದೆ ಕಾರ್ ಬಳಿ ಬಂದು ನೋಡುವಿರಾ "ಎನ್ನಲು ಮೊದಲು ಆಯಿತೆಂದರು. ನನ್ನ ಹೆಲ್ಪರ್ ಚೆಕ್ಅಪ್ ಮಾಡಿ ಬಿಲ್ ಪಡೆದ ನಂತರ ನಾನು ಕಾರ್ ಬಳಿ ಬರುವುದಿಲ್ಲ.. "I feel very Odd to test" ಏನೇ ಆದರೂ ಅವರೇ ಇಲ್ಲಿಗೆ ಬರಬೇಕು. ಇಲ್ಲಾ ಬೇರೆ ಕಡೆ ಹೋಗಿ" ಅಂದು ಬಿಟ್ಟ. ನಂತರ ನಾವು ಅಲ್ಲೇ ಪಕ್ಕದಲ್ಲಿದ್ದ ಇನ್ನೊಂದು ಕ್ಲಿನಿಕ್ಗೆ ಹೋದೆವು. ಆ ಡಾಕ್ಟರ್ ಕಾರ್ ಬಳಿಯೇ ಬಂದು ನೋಡಿ ಮೆಡಿಸಿನ್ ಕೊಟ್ಟರು.
ಇಂತಹ ಅಮಾನವೀಯತೆ ಕಂಡು ತುಂಬಾ ನೋವಾಯಿತು. ಇಲ್ಲಿ ನನ್ನ ಭಾವನೆ ಅಪ್ರಸ್ತುತ. ನನ್ನ ಬಳಿ ಕಾರಿತ್ತು.. ಎಲ್ಲಾ ಸೌಕರ್ಯವಿತ್ತು.. ಹಾಗಾಗಿ ತುರ್ತಾಗಿ ಬೇರೆಡೆ ಹೋದೆ. ಆದರೆ ಏನೂ ಇಲ್ಲದ.. ದುಡ್ಡು ಚೆಲ್ಲಿ ಆಟೊದಲ್ಲೋ ಇಲ್ಲಾ ಬಸ್ಸಿನಲ್ಲೋ ಬಂದ ಬಡ ಅಂಗವಿಕಲರು ಏನು ಮಾಡಬೇಕು? ಮೆಟ್ಟಿಲುಗಳನ್ನು ಇಳಿಯಲಾಗದೇ ಇದ್ದರೆ ಎಲ್ಲಿ ಹೋಗಬೇಕು? ಅವರನ್ನು ನೋಡೆನು ಎನ್ನುವ ಇಂತಹ ಡಾಕ್ಟರ್ ಗಳನ್ನು ಸುಮ್ಮನೇ ಸಹಿಸಬೇಕೆ?
ಅದಕ್ಕಾಗಿಯೇ ನಂತರ ಚೆನ್ನಾಗಿ ಯೋಚಿಸಿ ಪೇಪರ್ಗಳಲ್ಲಿ ಇಂತಹವರ ಕುರಿತು ಹಾಕಬೇಕೆಂದಿರುವೆ. ಇಷ್ಟು ವರುಷ ನನ್ನೊಂದಿಗಾದ, ನನ್ನಂತಹವರೊಂದಿಗಾದ ಅದೆಷ್ಟೋ ಅನ್ಯಾಯಗಳನ್ನು ನಾನು ಸಹಿಸಿ ನಾನೇ ತಪ್ಪು ಮಾಡಿರುವೆ. ಅದರೆ ಈಗ ಈ ಘಟನೆಯನ್ನು ಹೊರತಂದರೆ ನಾಳೆ ಆತ ಬೇರೆ ಯಾರಿಗೂ ಹೀಗೆ ಮಾಡದಿರಲಿ..ಆತನ ಹೆಸರು ಬಯಲಾಗದಿದ್ದರೂ, ಪೇಪರಿನಲಿ ಬಂದರೆ, ಆತನಿಗೂ ಆ ಪೇಪರ್ ಒಂದನ್ನು ಪೋಸ್ಟ್ ಮಾಡುವ ಮೂಲಕ ಎಚ್ಚರಿಕೆ ಕೊಡುವೆ. ಅದೂ ಅಲ್ಲದೇ ಈ ಘಟನೆಯನ್ನೋದುವ ಮೂಲಕ ಇನ್ನೋರ್ವ ಡಾಕ್ಟರ್ ಇಂತಹ ಯೋಚನೆಯಿದ್ದರೆ ಕೈಬಿಟ್ಟು, ಆತ್ಮಸಾಕ್ಷಿಗೆ ಓಗುಟ್ಟರೆ, ನನ್ನಂತಹ ಅದೆಷ್ಟೋ ನೊಂದವರಿಗೆ ಮುಂದೆ ಸಹಾಯವಾಗುವುದು.
ಹಾಗಾಗಿಯೇ ವಿಜಯಕರ್ನಾಟಕ, ಉದಯವಾಣಿ, ಪ್ರಜಾವಾಣಿ, ಪತ್ರಿಕೆಗಳಿಗೆಲ್ಲಾ ಈ ಘಟನೆಯನ್ನು ಕಳುಹಿಸಿರುವೆ. ಹಾಕುವುದು ಬಿಡುವುದು ಅವರಿಚ್ಚೆ. ಒಂದು ವೇಳೆ ಯಾವುದಾದರೂ ಒಂದು ಪೇಪರಿನಲ್ಲಾದರೂ ಬಂದರೆ ಆ ಪೇಪರ್ ಪ್ರತಿಯೊಂದನ್ನು ಆ ಡಕ್ಟರ್ಗೂ ಪೋಸ್ಟ ಮಾಡಬೇಕೆಂದಿರುವೆ.
ಭಾರತದಲ್ಲಿ ಎಲ್ಲೇ ಆಗಲೀ, ಯಾವುದೇ ಮಾಲ್ಗಳಾಗಿರಲಿ(ಬಿಗ್ಬಜಾರ್ ಬಿಟ್ಟು), ಅಂಗಡಿಗಳಾಗಿರಲಿ, ಸಿನಿಮಾ ಥಿಯೇಟರ್ಗಳಾಗಿರಲೀ, ಬಿಡಿ.. ಸಣ್ಣ ಕ್ಲಿನಿಕ್ಗಳು ಕೂಡಾ ಮೆಟ್ಟುಲುಗಳಿಲ್ಲದೇ ಇಲ್ಲ!! ಕಲಿಯುವ ವಿದ್ಯಾಕೇಂದ್ರಗಳಲ್ಲೂ ಅಂಗವಿಕಲರಿಗಾಗಿ ಬೇರೆ ಸುಲಭ ಮಾರ್ಗವಿಲ್ಲ. ಇನ್ನು ವ್ಹೀಲ್ಚೇರ್ ಮೇಲೆ ಹೋಗುವ ಮಾತು ಬಲು ದೂರ. ಬೇಕಿದ್ದರೆ ಅವರು ಅವರಿಗಾಗಿಯೇ ಇರುವ ಸ್ಮೆಷಲ್ ಸ್ಕೂಲ್ಗಳಿಗೆ ಹೋಗಲಿ ಎಂಬ ಭಂಡತನದ ಮತುಗಳನ್ನು ನಾನೇ ಕೇಳಿ ಅನುಭವಿಸಿದ್ದೇನೆ.... ಎದುರಿಸಿದ್ದೇನೆ. "ನಿನಗೇಕೆ ಬೇಕು ಸೈನ್ಸ್ ಓದು? ನಿನ್ನಿಂದಾಗದು ಈ ಪ್ರಾಕ್ಟಿಕಲ್ ಎಲ್ಲಾ... ಸುಮ್ಮನೆ ಬಿ.ಎ. ಮಾಡು" ಎಂದು ನನಗೆ ದೊಡ್ಡ ಉಪದೇಶ ಕೊಟ್ಟವರೇ ಬಹಳಷ್ಟು ಜನ. ಆದರೆ ದೇವರ ದಯೆ ಹಾಗೂ ನನ್ನ ಹೆತ್ತವರ ಸಂಪೂರ್ಣ ಸಹಕಾರ, ಮನೋಧೈರ್ಯದಿಂದ ಎಲ್ಲ ವಿದ್ಯಾರ್ಥಿಗಳಂತೆಯೇ ಕಾಲೇಜಿಗೆ ಹೋಗಿ ಪ್ರಾಕ್ಟಿಕಲ್ ಕೂಡಾ ಮಾಡಿ ಉತ್ತಮ ಅಂಕಗಳನ್ನು ಪಡೆದು ಪಾಸಾದೆ. ಆದರೆ ಮನೆಯವರ ಅಸಹಕಾರವಿರುವ, ಆರ್ಥಿಕ ಬೆಂಬಲ ಇರದ ಬುದ್ಧಿವಂತ ಅಂಗವಿಕಲರು ಏನು ಮಾಡಬೇಕು? ಎಲ್ಲಿಗೆ ಹೋಗ ಬೇಕು. ಸಾಮಾನ್ಯರಂತೇ ಕಾಲೇಜಿನಲ್ಲಿ ಓದುವ ಹಕ್ಕು ಅವರಿಗೇಕಿಲ್ಲ?
ಹಾಗಿದ್ದರೆ ಅಂಗವಿಕಲರಾದವರು ಸ್ವಂತ ವ್ಹೀಲ್ಚೇರ್ ಮೇಲಾದರೂ ತಮಗಿಷ್ಟ ಬಂದ ಕಡೆ ಸುಲಭವಾಗಿ ಹೋಗಿ ತಮ್ಮ ಕೆಲಸ ಕರ್ಯಗಳನ್ನು ತಾವೇ ಸ್ವತಃ ಮಡಿಕೊಳ್ಳುವ ಕಾಲ ಭಾರತದಲ್ಲಿ ಬರದೇ? ಅವರಲ್ಲಿ ಸ್ವಾಭಿಮಾನ, ಆತ್ಮಶಕ್ತಿಯನ್ನು ವೃದ್ಧಿಸುವ ಕಾರ್ಯಗಳನ್ನು ಸರಕಾರ ಮಾಡದಿದ್ದರೆ ಸರಿ.. ಜನ ಸಾಮಾನ್ಯರಾದರೂ ಎಚ್ಚೆತ್ತು ಕೊಳ್ಳಬಾರದೇ? ಸುತ್ತಮುತ್ತಲಿರುವ ಅಂಗವಿಕಲರು ಪಡುತ್ತಿರುವ ಪಾಡು, ಕಷ್ಟಗಳನ್ನು ನೋಡಿಯಾದರೂ ಸಮಾಜ ತನ್ನೊಳಗಿನ ವ್ಯವಸ್ಥೆಗಳಲ್ಲಿ ಬದಲಾವಣೆ ತರಬಾರದೇಕೆ? ಅವರಿಗೂ ಎಲ್ಲರಂತೇ ಜೀವಿಸುವ, ಓದುವ, ದುಡಿಯುವ, ಎಲ್ಲಾ ಕಡೆಯೂ ಹೋಗುವ ಹಕ್ಕಿದ, ಸ್ವಾತಂತ್ರ್ಯವಿದೆ. ಇವರಿಗಾಗಿ ಜನಜಾಗೃತಿಯಾಗುವುದು ಯಾವತ್ತು?!! ಅಂಗವಿಕಲರ ಸಮಸ್ಯೆಗಳು ಅಷ್ಟೊಂದು ದೊಡ್ಡ ಸಮಸ್ಯೆಯೇ? ಪರಿಹರಿಸಲಾರದಷ್ಟು?
ಎಲ್ಲಾ ಸಮಸ್ಯೆಗಳಿಗೂ ಖಂಡಿತ ಪರಿಹಾವಿದೆ ಎಂದು ನಂಬಿರುವವಳು ನಾನು. ಹಾಗಾಗಿ ಕೇವಲ ಸಮಸ್ಯೆಗಳನ್ನಲ್ಲದೇ. ಅದಕ್ಕೆ ತಕ್ಕುದಾದ ನನ್ನದೇ ರೀತಿಯ ಪರಿಹಾರಗಳನ್ನೂ ಮುಂದಿಟ್ಟಿರುವ. ಈ ಪರಿಹಾರಗಳನ್ನು ತಕ್ಷಣ ಜಾರಿಗೆ ತರಬೇಕೆಂದು ಹೇಳುತ್ತಿಲ್ಲ. ಆದರೆ ಈ ನಿಟ್ಟಿನಲ್ಲಿ ಇನ್ನಾದರೂ ಜನಜಾಗೃತಿಯಾಗಬೇಕಿದೆ. ಈ ಪರಿಹಾರಗಳು ಓದುಗರಾದ ತಮಗೆ ಸರಿಯೆನಿಸಿದರೆ ದಯವಿಟ್ಟು ಜಾರಿಗೆ ತರುವನಿಟ್ಟಿನಲ್ಲಿ ನಿಮ್ಮದೇ ಕೊಡುಗೆ ನೀಡಿ ಎಂದು ವಿನಂತಿಸುವೆ.
ಪರಿಹಾರಕ್ರಮಗಳು:
೧.ಮೊದಲಿಗೆ ಅವರ ದಿನಾಚರಣೆಯ ಕ್ರಮವೇ ಸರಿಯಲ್ಲ. ಅಂಗವಿಕಲರು ವಿಶೇಷರಲ್ಲ. ಅವರೂ ಸಾಮಾನ್ಯರಂತೆ, ಆದರೆ ಅಂಗದಲ್ಲಿ ವಿಶೇಷ ಊನವಾಗಿರುವವರು ಅಷ್ಟೇ ಎಂದು ತಿಳಿಯಬೇಕು. ಅವರ ಪ್ರತಿ ಸ್ನೇಹವಿರಲಿ. ಅತಿಯಾದ ಅನುಕಂಪ ಆತ್ಮಸ್ಥೈರ್ಯ ಕೊಡದು. ತಿರಸ್ಕಾರ ಬೇಡ. ಸಮಾನತೆಯೊಂದೇ ದಾರಿ.
೨. ಮಾನೋವಿಕಲರನ್ನು ಬಿಟ್ಟು ಕೇವಲ ದೈಹಿಕ ನ್ಯೂನತೆಯಾದವರಿಗೆ ಎಲ್ಲರಂತೆ ಓದಲು, ಉದ್ಯೋಗ ಮಾಡಲು ಅವಕಾಶಗಳನ್ನು ನೀಡಬೇಕು. ಇದು ಕೇವಲ ಇಂತಿಷ್ಟು %ಗಳಲ್ಲಿಡುವುದರಿಂದ ಪರಿಹಾರವಾಗದು. ಎಲ್ಲಾ ವಿದ್ಯಾಕೇಂದ್ರಗಳನ್ನು, ಕಚೇರಿಗಳನ್ನು, ಅಂಗಡಿಗಳನ್ನು, ಮಾಲ್ಗಳನ್ನು ವ್ಹೀಲ್ಚೇರ್ ಹೋಗುವಂತೆ ವಿನ್ಯಾಸಗೊಳಿಸಬೇಕು.
೩. ಬಹುಮಡಿ ಕಟ್ಟಡಗಳಲ್ಲಿ, ಬಹು ಅಂಕಣಗಳಿರುವ ಮನೆಗಳನ್ನು ಕಟ್ಟುವಾಗ ಲಿಫ್ಟ್ ಸೌಲಭ್ಯವಿರುವಂತೆ ನೊಡಬೇಕು.
೪.ಕ್ಲಿನಿಕ್ಗಳು ಎಷ್ಟೇ ಸಣ್ಣವಾಗಿರಲಿ ಕಡ್ಡಾಯವಾಗಿ ರೋಗಿಗಳು ಸುಲಭವಾಗಿ ಒಳಹೋಗುವಂತೆ ಮಾಡಬೇಕು. ಮೆಟ್ಟುಲುಗಳನ್ನಿಡಲೇ ಬಾರದು. ಇಟ್ಟರೆ ಲಿಫ್ಟ್ ಸೌಲಭ್ಯವಿರಲೇಬೇಕು.
೫. ಅವರಿಂದ ಈ ಕಲಿಕೆ/ಕೆಲಸವಾಗದು ಎಂದು ಇತರರು ನಿರ್ಧರಿಸಬಾರದು. ಅಂತಿಮ ನಿರ್ಧಾರ ಆತನದಾಗಿರಬೇಕು.
೬. ಅಂಗವೈಕಲ್ಯ ಪ್ರಾರಾಬ್ಧ ಕರ್ಮ, ಒಂದು ಶಾಪ ಅನುಭವಿಸಲೇ ಬೇಕಾದ್ದು ಎಂಬ ಮುಢತೆಯನ್ನು ತೊರೆಯಬೇಕು. ಕೇವಲ ಅನುಕಂಪ, ಕರುಣೆ ತೋರದೇ. ಅವರಿಂದಲೂ ಸಾಧಿಸಲು ಸಾಧ್ಯ ಎನ್ನುವ ಮಾನಸಿಕ ಬೆಂಬಲ ನೀಡಬೇಕು. ಸಹಕಾರವಿರಲಿ.
೭. ಎಲ್ಲಕ್ಕಿಂತ ಮುಖ್ಯವಾಗಿ ವಿಕಲಚೇತನರು ತಮ್ಮನ್ನು ತಾವು ಹಳಿದುಕೊಳ್ಳುವುದು, ಕುಗ್ಗಿಸಿಕೊಳ್ಳುವುದು, ತಾವು ಅಸಮರ್ಥರೆಂಡು ಕೊರಗುವುದನ್ನು ಬಿಡಬೇಕು. "ನಮ್ಮನ್ನು ನಾವೇ ಉದ್ಧಾರಮಾಡಿಕೊಳ್ಳಬೇಕು. ಯಾರೋ ಬಂದು ನಮ್ಮನ್ನು ಮೇಲೆತ್ತರು. ನಾವು ಮನೋಬಲ ಹೊಂದಿದಾಗ ಸಮಾಜವೂ ನಮ್ಮೊಂದಿಗೆ ಒಂದಲ್ಲಾ ಒಂದು ದಿನ ಬರುವುದು ಎನ್ನುವದನ್ನು ಮನಗೊಳ್ಳಬೇಕು."
ಕೊನೆಯದಾಗಿ : ಸಾವಿರಾರು ಮಾತುಗಳನ್ನು ಒಂದು ಕವನವು ಹೇಳುವುದು.
ಆಶಾಜ್ಯೋತಿ
ನೂರು ಕನಸ ಕಣ್ಣೊಳಿಟ್ಟು,
ಜಗವ ಪಡೆವ ಕೆಚ್ಚುಹೊತ್ತು
ಸದಾ ನಗುವ ತುಟಿಯೊಳಿಟ್ಟು
ಹತಾಶೆಯ ಕೊರಗು ಬಿಟ್ಟು,
ಹೋರಾಟವು ನಮ್ಮ ಬದುಕು,
ಮುಂದಿದೆ ಬಾಳ ಬೆಳಕು;
ಸಮಾನತೆಯು ಇರೆ ಜೊತೆಗೆ
ಏರುವೆವು ಪರ್ವತವನೇ
ಕರುಣೆ ಇರದೆ ಸ್ನೇಹ ನೀಡೆ
ದಾಟುವೆವು ಸಾಗರವನೇ
ತಳ್ಳಲಾರರು ಯಾರೂ
ಬಗ್ಗದ ಮರ ನಾವು,
ಒಡೆಯಲಾರರು ಮನವ
ಇದು ಬಂಡೆ ಕಲ್ಲು.
ಹೂವಂಥ ಮನದೊಳು
ವಜ್ರದ ಬಲವಿರಲು
ಹೊಸಕಲಾರರು ಯಾರೂ
ಇದು ಬಾಡದ ಹೂವು.
ನೀಡುತಿರೆ ನೀವು ಸದಾ
ವಿಶ್ವಾಸ ಪ್ರೀತಿ,
ಬೆಳಗಬಲ್ಲೆವು ನಾವು
ಹೊಸ ಆಶಾಜ್ಯೋತಿ.
"ಬದಲಾವಣೆ ಒಂದು ದಿನದಲ್ಲಾಗದು..ಒಂದು ಬರಹದಲ್ಲಾಗದು.. ಆದರೆ ಬದಲಾವಣೆಯ ಪ್ರಾರಂಭ ಒಂದು ಬರಹದಿಂದಲಾದರೂ ಆದರೆ ಅಷ್ಟೇ ಸಾಕು"
-ತೇಜಸ್ವಿನಿ ಹೆಗಡೆ.