ಮಂಗಳವಾರ, ಸೆಪ್ಟೆಂಬರ್ 18, 2018

ಮರ್ಯಾದಾ ಹತ್ಯೆ : ಕಾರಣಗಳು ಮತ್ತು ಪರಿಹಾರ


ತ್ತೀಚಿಗಷ್ಟೇ ನಾನು ಮರಾಠಿಯ ಪಸಿದ್ಧ ‘ಸೈರಾಟ್’ ಚನಲನಚಿತ್ರವನ್ನು ನೋಡಿ ಬಹಳ ಇಷ್ಟಪಟ್ಟಿದ್ದೆ ಮತ್ತು ಅದರ ಅಂತ್ಯಕ್ಕೆ ಬಹಳ ಬೇಸರವೂ ಆಗಿತ್ತು. ಹಾಗೇ ಕೆ. ನಲ್ಲತಂಬಿಯವರ ಅನುವಾದಿತ ಕಾದಂಬರಿಯಾದ ‘ಹೂ-ಕೊಂಡ’ವನ್ನೂ ಓದಿ ಮೆಚ್ಚಿದ್ದೆ, ಬೆಚ್ಚಿದ್ದೆ! ಎರಡೂ ಒಂದೇ ವಿಷಯವನ್ನು ಎತ್ತಿಹಿಡಿಯುತ್ತವೆ. ಅದೇ ಮರ್ಯಾದಾ ಹತ್ಯೆ!

ಈಗ ನೋಡಿದರೆ ತೆಲಂಗಾಣದ ಯುವ ಜೋಡಿಯ ದಾರುಣ ಕತೆ ಹೊರಬಿದ್ದಿದೆ! ಮಗಳು ತಮ್ಮ ಜಾತಿಯಲ್ಲದವನನ್ನು ಮದುವೆಯಾಗಿ ಸುಖವಾಗಿದ್ದಾಳೆ ಎಂಬ ಒಂದೇ ಕಾರಣಕ್ಕೆ, ತಮ್ಮ ಹುಸಿ ಪ್ರತಿಷ್ಠೆಗೆ ಕುಂದಾಯಿತು ಎಂದು ಕ್ರೋಧಗೊಂಡು ಸ್ವಂತ ತಂದೆಯೇ, ಹೆತ್ತ ಮಗಳ ಗಂಡನನ್ನು ಅವಳ ಕಣ್ಮುಂದೆ ಇರುದು ಕೊಲ್ಲಿಸಿದ ವೀಡಿಯೋ ಎಲ್ಲೆಡೆ ವೈರಲ್ ಆಗಿ ಎಲ್ಲರನ್ನೂ ತಲ್ಲಣಗೊಳಿಸಿದೆ. ಮಗಳು ಗರ್ಭಿಣಿಯಾಗಿದ್ದಾಳೆ, ಆ ಮಗುವಿಗೆ ಭವಿಷ್ಯವಿದೆ, ತಮಗೆ ಇಷ್ಟ ಇಲ್ಲದಿದ್ದರೆ ದೂರವಿದ್ದುಬಿಟ್ಟರಾಯಿತು ಎಂಬ ಕನಿಷ್ಟ ಕಾಳಜಿಯೂ ಇಲ್ಲದೆ ಪಶುವಿಗಿಂತ ಕಡೆಯಾಗಿಬಿಟ್ಟ ಆ ತಂದೆ ಎಂದೆನ್ನಿಸಿಕೊಂಡವನ ಕ್ರೌರ್ಯವಾದರೂ ಎಂಥದ್ದಪ್ಪಾ ಎಂದೆನಿಸಿಬಿಟ್ಟಿತು. ನಿಜಕ್ಕೂ ಇದೊಂದು ಹೇಯ ಮತ್ತು ತೀವ್ರ ಖಂಡನೀಯ ಘಟನೆ. ಆ ಯುವ ಜೋಡಿಯ ಕನಸುಕಂಗಳ ಭಾವಚಿತ್ರ ಇನ್ನೂ ಕಾಡುತ್ತಿದೆ ನನ್ನನ್ನು. ಕ್ಷುದ್ರ ಮನುಷ್ಯನ ವಿಕೃತಿಗಿಂತ ಅಪಾಯಕಾರಿಯಾದ್ದು ಬೇರೊಂದಿಲ್ಲ ಅನ್ನಿಸಿಬಿಟ್ಟಿತು. ಇದಾದ ನಂತರ ಸಹಜವಾಗಿಯೇ ಇಂಥಾ ದುರ್ಘಟನೆಯ ಹಿನ್ನಲೆ, ನಡೆಯುತ್ತಿರುವ ಪ್ರದೆಶಗಳ ಕುರಿತು ಮಾಹಿತಿ ಪಡೆಯಬೇಕೆಂದೆನ್ನಿಸಿತು. ಎಲ್ಲೆಲ್ಲಿ ಈ ಮರ್ಯಾದಾ ಹತ್ಯೆ ನಡೆದಿದೆ/ನಡೆಯುತ್ತಿದೆ ಎಂದು ಸ್ವಲ್ಪ ಹುಡುಕಾಡುತ್ತಿರುವಂತೆ ಇದರ ಆಳ, ಅಗಲ, ವಿಸ್ತಾರ ಜಗತ್ತಿನಾದ್ಯಂತ ಹರಡಿಕೊಂಡಿರುವುದು ಸ್ಪಷ್ಟವಾಗುತ್ತಾ ಹೋಯಿತು.
*HBV ಸರ್ವೆಯ ಪ್ರಕಾರ ಜಗತ್ತಿನಾದ್ಯಂತ ಪ್ರತಿವರುಷ ಸರಿಸುಮಾರು ೫,೦೦೦ ಹೆಣ್ಮಕ್ಕಳು ಮತ್ತು ಹುಡುಗಿಯರು ಈ ಮರ್ಯಾದಾ ಹತ್ಯೆಗೆ ಬಲಿಯಾಗುತ್ತಿದ್ದಾರೆ! ಇದು ವಿಶೇಷವಾಗಿ ಮಧ್ಯ ಪೂರ್ವ ಹಾಗೂ ದಕ್ಷಿಣ ಏಷ್ಯಾ ದೇಶಗಳಲ್ಲಿ ಹೆಚ್ಚು ಕಾಣಿಸುತ್ತಿದೆಯಂತೆ. ಇದರಲ್ಲಿ ಭಾರತ ಮತ್ತು ಪಾಕಿಸ್ತಾನ ದೇಶಗಳಲ್ಲಿ ಪ್ರತಿ ವರುಷ ತಲಾ ೧,೦೦೦ ಹತ್ಯೆಗಳಾಗುತ್ತಿದ್ದರೆ, ಇಂಗ್ಲೇಂಡಿನಲ್ಲೂ ವರುಷದಲ್ಲಿ ೧೨ ಇಂಥಾ ಹತ್ಯೆಗಳು ರಿಪೋರ್ಟ್ ಆಗುತ್ತಿರುತ್ತವಂತೆ. ಇನ್ನು ರಿಪೋರ್ಟೇ ಆಗದ ಪ್ರಕರಣಗಳು ಅದೆಷ್ಟು ಇರುತ್ತವೆಯೋ ಗೊತ್ತಿಲ್ಲ!  ಬಾಂಗ್ಲಾದೇಶ, ಭಾರತ, ಪಾಕಿಸ್ತಾನ, ಈಜಿಪ್ಟ್, ಇರಾನ್, ಇಸ್ರೇಲ್, ಜೋರ್ಡಾನ್, ಮೊರೊಕ್ಕೋ, ಯು.ಕೆ., ಅಮೇರಿಕಾ ಹೀಗೆ ಎಲ್ಲೆಡೆ ಈ ಒಂದು ದುರಂತ ಅವ್ಯಾಹತವಾಗಿ ನಡೆದುಹೋಗಿತ್ತಿದೆ.
*ಎಷ್ಟೋ ದೇಶಗಳಲ್ಲಿ ಇದನ್ನು ತಡೆಯಲು ಸಶಕ್ತ ಕಾನೂನೂ ಇಲ್ಲ, ಇದ್ದರೂ ಅದು ಸೂಕ್ತ ರೀತಿಯಲ್ಲಿ ಜಾರಿಗೆ ಬರುತ್ತಿಲ್ಲ. ಕೆಲವೆಡೆಯಂತೂ ಇದೊಂದು ಸಾಮಾನ್ಯ ವಿಷಯ!
*Iranian and Kurdish Rights Organization ಪ್ರಕಾರ ಯುರೋಪ್ ಮತ್ತು ಅಮೇರಿಕಾದಲ್ಲೂ ಮರ್ಯಾದ ಹತ್ಯೆಯ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿವೆಯಂತೆ!
* ಅಮೇರಿಕಾದ ೨೦೧೪ರ ಜನಾಂಗ ಸ್ಥಿತಿ (demographics) ವರದಿಯ ಪ್ರಕಾರ ಪ್ರತಿ ವರ್ಷ ಈ ದೇಶದಲ್ಲೇ ೨೩ ರಿಂದ ೨೭ ಮರ್ಯಾದಾ ಹತ್ಯೆಯ ಪ್ರಕರಣಗಳು ಕಾಣಿಸುತ್ತಿವೆಯಂತೆ! ಆದರೆ ಸಾಕಷ್ಟು ಮಾಹಿತಿ ದೊರಕದೇ ಇದರ ಬಗ್ಗೆ ಬೆಳಕಿಗೆ ಬರದೇ ಹೋಗುತ್ತಿದೆ ಎನ್ನಲಾಗಿದೆ.
*ಈ ಕೆಳಗಿನ ಲಿಂಕಿಗೆ ಹೋಗಿ ನೋಡಿದರೂ ಸಾಕು, ಜಗತ್ತಿನಾದ್ಯಂತ ಈ ಒಂದು ಮಾರಕ ಪಿಡುಗು ಹೇಗೆ ಹಬ್ಬಿ ಬಲಿತಿದೆ ಎಂದು ನಿಚ್ಚಳವಾಗುವುದು! (ಇನ್ನೂ ಕೆಲವು ಕೊಂಡಿಗಳನ್ನು ಕೊನೆಯಲ್ಲಿ ನೀಡಿದ್ದೇನೆ.)

ಭಾರತದಲ್ಲಿ ಮರ್ಯಾದಾ ಹತ್ಯೆ:-
ಭಾರತದಲ್ಲಿ ಇದು ಮತ್ತೆಮತ್ತೆ ಕೇಳಿಬರುತ್ತಿರುವ, ಕಂಡು ಬರುತ್ತಿರುವ ಹೇಯ ಕೃತ್ಯವಾಗಿದೆ. ವಿಶೇಷವಾಗಿ ಹರ್ಯಾಣ, ರಾಜಸ್ಥಾನ, ಉತ್ತರ ಪ್ರದೇಶ, ಬಿಹಾರ ರಾಜ್ಯಗಳಲ್ಲಿ ಗಣನೀಯವಾಗಿ ಹೆಚ್ಚಿವೆ. ಹರ್ಯಾಣದಲ್ಲಿ ಬಲಶಾಲಿಯಾಗಿರುವುದೇ ಅಲ್ಲಿಯ ‘ಖಾಪ್’ ಪಂಚಾಯಿತಿ! ಇಲ್ಲಿ ಕೋರ್ಟು, ಪೋಲೀಸ್ಟೇಶನ್ ಯಾವುದೂ ನಡೆಯುವುದಿಲ್ಲ ಎಂದು ಓದಿರುವೆ. ಮರ್ಯಾದಾ ಹತ್ಯೆಗೆ, ಹೆಣ್ಮಕ್ಕಳ ಹಕ್ಕು ಚ್ಯುತಿಗೆ ಈ ಖಾಪ್ ಪಂಚಾಯಿತಿಯ ಅಂಧಾ ಕಾನೂನೇ ಕಾರಣ. ನಮ್ಮ ಸುಪ್ರೀಂ ಕೋರ್ಟೇ ಇಂಥಾ ಪಂಚಾಯಿತಿಗಳನ್ನು ತೆಗೆದುಹಾಕಬೇಕೆಂದು ಅಲ್ಲಿನ ಎಸ್ಪಿಗಳಿಗೆ ಮಾಹಿತಿ ನೀಡಿದ್ದರೂ ಅವರ ರಾಜ್ಯಭಾರ ನಿಂತಂತಿಲ್ಲ. ಅವರ ಪ್ರಕಾರ ಸರ್ವೋಚ್ಚ ನ್ಯಾಯಾಲಯಕ್ಕೇ ಸರಿಯಾದ ನ್ಯಾಯ ಗೊತ್ತಿಲ್ಲ... ಅವರೇ ಸರಿ ಎಂಬಂತೇ ಧಿಮಾಕು ತೋರುವ ಹೇಳಿಕೆ ನೀಡಿದ್ದರು. ‘ಖಾಪ್’ ಪಂಚಾಯತಿಯ ದೌರ್ಜನ್ಯದ ವಿರುದ್ಧ ಸಿಡಿದೇಳುವ, ಜನರಲ್ಲಿ ಜಾಗೃತಿ ಮೂಡಿಸುವ ಅನೇಕ ಚಲನಚಿತ್ರಗಳು ಬಂದಿವೆ.
ಉದಾಹರಣೆಗೆ : ಹಿಂದಿಯ “ಖಾಪ್” ಎಂಬ ಹೆಸರನಿದೇ ಚಲನಚಿತ್ರ.
ಮದುವೆ ಎಂಬುದು ಎರಡು ಕುಟುಂಬಗಳ ನಡುವಿನ ಸುಂದರ ಬಂಧ, ಎರಡೂ ಕಡೆಯವರ ಅದರಲ್ಲೂ ವಿಶೇಷವಾಗಿ ಹೆತ್ತವರ ಸಮ್ಮತಿ ಇದ್ದರೆ ಅದಕ್ಕೊಂದು ಮೆರುಗು, ಹೆಚ್ಚು ಸಾಮಾಜಿಕ ಭದ್ರತೆ ದೊರಕುತ್ತದೆ, ಹೀಗಾಗಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂಬುದನ್ನೆಲ್ಲಾ ಒಪ್ಪೋಣ. ಆದರೆ ಎಷ್ಟೋಸಲ ಹೆತ್ತವರಿಗೆ ತಮ್ಮ ಮಕ್ಕಳ ಒಳಿತು ಕೆಡುಕು ತಮಗಿಂತ ಚೆನ್ನಾಗಿ ಬಲ್ಲವರು ಯಾರೂ ಇಲ್ಲ ಎಂಬ ಭ್ರಮೆ ಇದ್ದಿರುತ್ತದೆ. ತಮ್ಮ ಮಕ್ಕಳೂ ತಮ್ಮಷ್ಟೇ ಅವರ ಬದುಕನ್ನು ಇರ್ಧರಿಸುವ ಹಕ್ಕುಳ್ಳುವರು, ಅವರೂ ತಿಳುವಳಿಕೆ ಹೊಂದಿರುತ್ತಾರೆ ಎಂಬುದನ್ನು ಮರೆತುಬಿಡುವರು. ಅವರ ಇಷ್ಟವನ್ನರಿಯದೇ ತಮ್ಮ ದೃಷ್ಟಿಯಲ್ಲಿ ಸೂಕ್ತ ಎನ್ನಿಸುವ ಕಡೆಗೆ ಒತ್ತಾಯದಿಂದ ಮದುವೆಮಾಡಿಸಲು ನೋಡುವರು. ಹೆಚ್ಚಿನ ಸಮಯದಲ್ಲಿ ಆರ್ಥಿಕ ಅಸಮಾನತೆ, ಜಾತಿ ಅಸಮಾನತೆಯೇ ಇದಕ್ಕೆ ಮೂಲಕಾರಣವಾಗಿರುತ್ತದೆ. ಆದರೆ, ಪರಸ್ಪರರಲ್ಲಿ ಪ್ರೀತಿ, ವಿಶ್ವಾಸ, ಹೊಂದಾಣಿಕೆ ಇದ್ದರೆ ಎಲ್ಲದರೂ ಹೊಂದಾಣಿಕೆ ಸಾಧ್ಯ ಎನ್ನುವುದನ್ನೇ ಮರೆತುಬಿಡುತ್ತಾರೆ. ಇಷ್ಟಕ್ಕೂ ಸುದೀರ್ಘ ಬಾಳುವೆ ಮಾಡುವವರೇ ಅವರಿಬ್ಬರು ಎಂಬುದನ್ನು ಮರೆತು ತಾವು ಆಜೀವನ ಅವರಜೊತೆ ಇರುವವರು ಎಂದೇ ಭ್ರಮಿಸಿರುತ್ತಾರೆ. ಇದರ ಅರ್ಥ ಅಂತರ್ಜಾತೀಯ ವಿವಾಹಗಳೆಲ್ಲಾ ಯಶಸ್ವಿಯಾಗುತ್ತವೆ ಎಂದಲ್ಲ. ಹಾಗೆಯೇ ವಿಚ್ಛೇದನಗಳು ಸ್ವಜಾತೀಯ ವಿವಾಹಗಳಲ್ಲೂ ಸಾಕಷ್ಟು ಇರುತ್ತವೆ ಎಂಬುದನ್ನೂ ಮರೆಯದಿರೋಣ. ಯಾವುದೂ ಇದ ಮಿತ್ಥಂ ಎನ್ನುವಂತಿಲ್ಲ. ಹೀಗಿರುವಾಗ ತಮ್ಮ ಜಾತಿಯಲ್ಲ ಎಂದೋ, ತಮಗಿಂತ ಹಣಕಾಸಿನಲ್ಲಿ ದುರ್ಬಲರಾಗಿದ್ದಾರೆಂದೋ ತುಚ್ಛೀಕರಿಸುವುದು, ಹೀಗಳೆಯುವುದು, ತಿರಸ್ಕರಿಸುವುದು – ಹೋಗಲಿ ಅದೆಲ್ಲಾ ಮಾಡಿ ಅವರನ್ನು ಅವರಷ್ಟಕ್ಕೆ ಬಿಟ್ಟರೂ ಪುಣ್ಯ ಬರುವುದೇನೋ! ತಮ್ಮ ಇಲ್ಲದ ಪ್ರತಿಷ್ಠೆ, ಇರದ ಮಾನದ ಉಳಿವಿಗಾಗಿ ಕೊಲ್ಲಿಸುವಷ್ಟು ಕ್ರೌರ್ಯಕ್ಕೆ ಹೋಗುತ್ತಾರಲ್ಲ ಅದೆಂಥಾ ಮರ್ಯಾದೆ ಇವರದಪ್ಪಾ ಎಂದೆನಿಸಿಬಿಡುತ್ತದೆ!
ಪ್ರಸ್ತುತ ಪ್ರಕರಣವನ್ನೇ ತೆಗೆದುಕೊಂಡರೆ, ತೆಲಂಗಾಣದ ಅಮೃತ ಮತ್ತು ಪ್ರಣಯ್ ಜೋಡಿಯನ್ನು ಬೇರ್ಪಡಿಸಿ, ಗರ್ಭಿಣಿಯಾಗಿರುವ ಮಗಳ ಗಂಡನನ್ನೇ ಕೊಲ್ಲಿಸಿ ಈಗ ಪೂಲೀಸರ ಕಸ್ಟಡಿಯಲ್ಲಿರುವ ಅವಳ ತಂದೆಯ ಮರ್ಯಾದೆ, ಘನತೆ ಹೆಚ್ಚಾಯಿತೇ?! ಹುಟ್ಟಿನಿಂದ ಬೆಳೆಯುವವರೆಗೂ ಮುದ್ದಿನಿಂದ ಸಾಕಿದ ಮಕ್ಕಳನ್ನೇ ತರಿಯಲು ಅವರು ಬಲಿಗಾಗಿ ತಂದು ಸಾಕಿದ ಕುರಿ, ಕೋಣ, ಪ್ರಾಣಿಗಳಲ್ಲ ಅಲ್ಲವೇ? ಅಥವಾ ಇಂಥಾ ಹೆತ್ತವರಿಗೆ ಮಕ್ಕಳೆಂದರೆ ಅಷ್ಟೇಯೋ ಎಂಬುದೇ ಗೊತ್ತಾಗುತ್ತಿಲ್ಲ!
ಇನ್ನು ಈ ಮರ್ಯಾದಾ ಹತ್ಯೆಯನ್ನು ಕೇವಲ ತಂದೆಯೋ, ಚಿಕ್ಕಪ್ಪನೋ ಮಾಡಿಸುತ್ತಾರೆಂದುಕೊಳ್ಳಬೇಡಿ. ಸ್ವಂತ ತಾಯಿ, ಅಜ್ಜಿಯೂ ಮಾಡಿಸಬಲ್ಲರು! ಉದಾಹರಣೆಗೆ ಲಾಹೋರಿನ ಝೀನತ್ ಎಂಬ ಹದಿನೆಂಟರ ಹರೆಯದ ಮಗಳನ್ನು ಅವಳ ಸ್ವಂತ ತಾಯಿ ಪರ್ವೀನ್ ರಫೀಕ್ ಎಂಬಾಕೆ ಸಜೀವ ದಹನ ಮಾಡಿದ್ದಳು. ಇದಕ್ಕೆ ಕಾರಣ ಮಗಳು ತನ್ನಿಚ್ಛೆಯಂತೇ ಮದುವೆಯಾಗದೇ ತನ್ನ ಬಾಲ್ಯದ ಗೆಳೆಯನನ್ನು ವರಿಸಿದ್ದೇ ಆಗಿತ್ತಂತೆ! ಬಿಹಾರದಲ್ಲಿ, ಹರ್ಯಾಣದಲ್ಲಿ, ಕರ್ನಾಟಕದಲ್ಲಿ ಹೀಗೆ ಎಗ್ಗಿಲ್ಲದೇ ಎಲ್ಲೆಡೆಯೂ ಇಂಥ ಹತ್ಯೆಗಳು ಆಗುತ್ತಲೇ ಇವೆ. ಎಷ್ಟೋ ಬೆಳಕಿಗೇ ಬರುವುದಿಲ್ಲ! ಈ ರೀತಿ ಇಂಥಾ ಅನೇಕಾನೇಕ ಪ್ರಕರಣಗಳು ಎಲ್ಲೆಡೆಯೂ ಹೆಚ್ಚುತ್ತಿರುವುದು ದುರದೃಷ್ಟಕರ ಮತ್ತು ಖೇದನೀಯ ಸಂಗತಿ.

ಮರ್ಯಾದಾ ಹತ್ಯೆಗೆ ಪ್ರಮುಖ ಕಾರಣಗಳು :-

ಮೊತ್ತಮೊದಲ ಕಾರಣವೇ ಸ್ವಪ್ರತಿಷ್ಠೆ, ಮೂಢತೆ ಮತ್ತು ದುರಹಂಕಾರದ ಪರಾಕಷ್ಠೆ.
ಇದರ ನಂತರ… (ಇದು ನಾನು ಅಲ್ಲಲ್ಲಿ ಓದಿದ, ಅನೇಕ ವರ್ಷಗಳಿಂದ ಕೇಳಿದ ಘಟನೆಗಳನ್ನಾಧರಿಸಿ ವಿಂಗಡಿಸುತ್ತಿರುವುದು…)
೧) ಜಾತೀಯತೆ(ಸ್ವಜಾತಿಯಲ್ಲೇ ಮೇಲ್ಜಾತಿ, ಕೀಳ್ಜಾತಿಯೆಂದು ಅಥವಾ ಅನ್ಯಜಾತಿಯವರೆಂದು)
೨) ಸಲಿಂಗಕಾಮ (ಸಲಿಂಗಕಾಮಿ ಎಂದಾಕ್ಷಣ ಆತ/ಆಕೆ ತಮ್ಮ ಮನೆತನಕ್ಕೆ ಕುಂದು ಎಂದು ಕೊಂದು ಬಿಟ್ಟಿರುವ ಅನೇಕ ಪ್ರಕರಣಗಳಿವೆ)
೩) ಅನೈತಿಕ ಸಂಬಂಧದ ನೆಪದಲ್ಲಿ (ವಿವಾಹೇತರ ಅಥವಾ ವಿವಾಹ ಪೂರ್ವದ್ದು)
೪) ಹೆಣ್ಣೆಂದರೆ ಸದಾ ತಮ್ಮ ಅಡಿಯಾಳು ಎಂದೇ ಭಾವಿಸಿಕೊಂಡು ಬಂದಿರುವ ದುಷ್ಟ ಮನಸ್ಥಿತಿ.
೫) ಆರ್ಥಿಕ ಅಸಮಾನತೆ (ತಮಗಿಂತ ಕಡಿಮೆ ದುಡ್ಡಿರವವರೆಂದೋ, ಬಡವರೆಂದೋ ತಾತ್ಸಾರದಲ್ಲಿ…)
೬) ವೈಯಕ್ತಿಕ ಅಥವಾ ಕೌಟುಂಬಿಕ ಕಲಹ/ದ್ವೇಷ (ಅಜ್ಜರ, ಪಿಜ್ಜರ ಕಾಲದ ಜಗಳದ ನೆಪದಲ್ಲಿ)
೭) ರಾಜಕೀಯ ಹಸ್ತಕ್ಷೇಪ, ಪಿತೂರಿ (ತನಗಾಗದ ಬಣದವರಿದ್ದರೆ ಅವರ ಕಡೆಯ ಹುಡುಗಿಯೋ/ಹುಡುಗನೋ ವಿರುದ್ಧ ಪಂಗಡದವರನ್ನು ಪ್ರೀತಿಸಿದ್ದು ತಿಳಿದುಬಂದರೆ, ಆ ಮನೆಯವರನ್ನು ಎತ್ತಿಕಟ್ಟಿ ಕೊಲ್ಲಿಸಿ ಅದನ್ನು ತಮ್ಮ ರಾಜಕೀಯಕ್ಕಾಗಿ ಬಳಸಿಕೊಳ್ಳುವ ಪ್ರಕರಣಗಳೂ ಹಲವು ಇರುತ್ತವೆ) ಹೀಗೆ ಕಾರಣಗಳು ಅನೇಕ.

ಪರಿಹಾರದ ಕುರಿತು ಒಂದು ಕಿರು ಚಿಂತನೆ :-

ಯಾವುದೇ ಸಮಸ್ಯೆಯಿರಲಿ ಅದನ್ನು ಕೇವಲ ಎದುರಿಟ್ಟು ಗೋಳಾಡುತ್ತಲೋ, ದೂರುತ್ತಲೋ ಇದ್ದುಬಿಟ್ಟರೆ ಪರಿಹಾರವೇನೂ ಸಿಗದು. ಖಂಡನೆಯ ಜೊತೆಗೆ ನಿವಾರಣೆಯೂ ಅತ್ಯಗತ್ಯ. ಕೊಲ್ಲುವುದಕ್ಕೆ ಪರಿಹಾರ ಮಾನವೀಯ ಸಂಸ್ಕಾರ ಬೆಳೆಸುವುದೊಂದೇ ಎನ್ನಿಸುತ್ತದೆ ನನಗೆ! ಈ ಸಮಸ್ಯೆಗೆ ಪರಿಹಾರ ತಕ್ಷಣಕ್ಕಂತೂ ಸಾಧ್ಯವಿಲ್ಲ. ಸಮಾಜದೊಳಗೆ ಆಳವಾಗಿ ಬೇರೂರಿರುವ ಈ ಮನಃಸ್ಥಿತಿಯನ್ನು ಬದಲಾಯಿಸುವ ಮನಸ್ಸು ನಾವು ಮಾಡಬೇಕಷ್ಟೇ. ಮುಂದಿನ ಪೀಳಿಗೆಯ ತಲೆಯಲ್ಲಿ ಕೌಟುಂಬಿಕ ಮರ್ಯಾದೆ, ಸ್ವಪ್ರತಿಷ್ಠೆ, ಮನೆತನದ ಗೌರವ ಎಲ್ಲದೂ ಇರುವುದು ನಮ್ಮ ಉತ್ತಮ ನಡತೆ, ಮೌಲ್ಯಯುತ ಬದುಕು ಹಾಗೂ ಜೀವನ ಕ್ರಮ ಹಾಗೂ ಸ್ವಾಭಿಮಾನದ ಬದುಕಿನಲ್ಲಿ… ಪರಸ್ಪರ ಕೊಲ್ಲದೇ ಸಹಬಾಳ್ವೆ ಮಾಡುವುದರ ಮೂಲಕ, ಎಲ್ಲರನ್ನೂ ಗೌರವಿಸುವುದರ ಮೂಲಕ, ನಮ್ಮ ಸಂಪ್ರದಾಯವನ್ನು ಘನತೆಯಿಂದ ಆಚರಿಸುತ್ತಲೇ ಮತ್ತೊಬ್ಬರ ಆಚರಣೆಯನ್ನೂ ಸಮ್ಮಾನಿಸುವುದರಲ್ಲಿ ಎಂಬ ಮನೋಭಾವವನ್ನು ಬೆಳೆಸುವುದರ ಮೂಲಕವಷ್ಟೇ ನಿಧಾನದಲ್ಲಿ ಇದನ್ನು ಪರಿಹಾರ ಮಾಡಬಹುದು. ಮೇಲು ಕೀಳು ಎನ್ನುವುದು ಹಣದಲ್ಲಾಗಲೀ, ಜಾತಿಯಲ್ಲಾಗಲೀ ಬರದೇ, ಗುಣ, ಸ್ವಭಾವದಲ್ಲಿ ಬರುವಂಥದ್ದು ಎನ್ನುವುದನ್ನು ತಿಳಿಸಿಕೊಡಬೇಕು. ಆದರೆ ಇಂಥ ಸಮಸ್ಯೆಗೆ ಪರಿಹಾರ ಏಕಪಕ್ಷೀಯವಾಗಂತೂ ಸಾಧ್ಯವಿಲ್ಲ. ಎಲ್ಲಾ ರೀತಿಯ ಜಾತಿ ಧರ್ಮಗಳಲ್ಲೂ ಆಗುತ್ತಾ ಹೋದರೆ ಮಾತ್ರ ಕ್ಷಿಪ್ರಗತಿಯಲ್ಲಿ ಬೆಳಕು ಕಾಣಬಹುದು. ಈಗಾಗುತ್ತಿರುವುದೆಲ್ಲಾ ತಾನು, ತಮ್ಮವರು ಶುದ್ಧರು, ಕ್ಷುದ್ರರೆಲ್ಲಾ ಎದುರಿನವರೇ ಎಂಬ ಅಲ್ಪಜ್ಞಾನ ಹಾಗೂ ಪಲಾಯನವಾದವೇ ಇದಕ್ಕೆ ಕಾರಣ. ಅಲ್ಲದೇ, ಅನಿಷ್ಟಕ್ಕೆಲ್ಲಾ ಶನೀಶ್ವರನೇ ಕಾರಣವೆಂಬಂತೇ ಎಂಥದ್ದೇ ದುರಂತ ಬರಲಿ, ವಿಪತ್ತು ಕಾಡಲಿ ಈ ದೇಶವನ್ನು, ರಾಜ್ಯವನ್ನು, ಜಿಲ್ಲೆಯನ್ನು, ಜಾತಿಯನ್ನು ನಿಂದನೆ ಮಾಡುವುದರಲ್ಲೇ ಕಾಲಹರಣಮಾಡಿದರೆ, ಮತ್ತಷ್ಟು ಬಿಗಡಾಯಿಸಿದಂತಾಗುವುದು ಅಷ್ಟೇ. ತಿವಿಯುವುದರಲ್ಲಿ, ಚುಚ್ಚುವುದರಲ್ಲಿ, ಕೆಡವುದರಲ್ಲಿ ಮೇಲೆತ್ತುವಿಕೆ, ಸುಧಾರಣೆ ಅಸಾಧ್ಯ. ಸುಧಾರಣೆ ಮಾಡುವುದಾದರೆ ನಮ್ಮ ಮನೆ-ಮನಗಳಲ್ಲಿ ಆರಂಭಿಸುವ. 
*ನಮ್ಮ ಮಕ್ಕಳಿಗೆ “There is no Honor in Killing”, ಮರ್ಯಾದೆ ಹೆಚ್ಚುವುದು ಅಮಾಯಕರನ್ನು ಕೊಲ್ಲುವುದರಲ್ಲಲ್ಲ, ಕಾಪಾಡುವುದರಲ್ಲಿ ಎಂಬುದನ್ನು ತಿಳಿಸೋಣ. ಇದೆಲ್ಲದರ ಜೊತೆಗೇ,
*ನೀನು ತೆಗೆದುಕೊಳ್ಳುವ ನಿರ್ಧಾರದ ಸಾಧಕ ಬಾಧಕಗಳ, ಕಷ್ಟ, ಸುಖಗಳ ಚಿಂತನೆಯೂ ನಿನ್ನ ಹಕ್ಕು, ಜವಾಬ್ದಾರಿ ಎನ್ನುವುದನ್ನೂ ತಿಳಿಸುತ್ತಾ ಹೋಗೋಣ. ಒಳಿತು ಕೆಡುಕು ಇದಾಗಿದ್ದರಬಹುದೇ ಎಂದು ಚರ್ಚಿಸುತ್ತಾ ಹೋಗೋಣ. ಅವರ ಜೊತೆಗೆ ನಿರ್ಧಾರ ಮಾಡೋಣ. 
*ಎಲ್ಲಕ್ಕಿಂತ ಮುಖ್ಯವಾಗಿ ಗಂಡು ಮಕ್ಕಳಿಗೆ ಮನೆಯ ಹೆಣ್ಮಕ್ಕಳನ್ನು ಗೌರವಿಸುವ, ಪ್ರೀತಿಸುವ, ಅವರು ತಮಗೆ ಸಮಾನರೆಂದು ತಿಳಿಯುವ ವಿವೇಕವನ್ನು ವಿನಮ್ರತೆಯನ್ನು ಬೆಳೆಸಿದರೂ ಸಾಕು. ಇಂಥಾ ಹತ್ಯೆಯ ಜೊತೆಗೆ ಅತ್ಯಾಚಾರದಂಥ ಪಿಡುಗೂ ಕಡಿಮೆಯಾಗುತ್ತಾ ಹೋಗುವುದು. 
*ಇನ್ನು ಅವರೇನಾದರೂ ತಾವು ತೆಗೆದುಕೊಂಡ ನಿರ್ಧಾರದಲ್ಲಿ (ಯಾವುದೇ ಇರಲಿ) ಅಪ್ಪಿತಪ್ಪಿ ಎಡವಿದಾಗ ಸಾಧ್ಯವಾದಷ್ಟು ಸಾಥ್ ಕೊಡಿ. ಅದೂ ಸಾಧ್ಯವಾಗದಿದ್ದರೆ ಸುಮ್ಮನಿದ್ದು ಬಿಡಿ. ಎಡವಿದಾಗಲೇ ಬದುಕು ತೆರೆದುಕೊಳ್ಳುವುದು. ಅಲ್ಲಿಂದ ಪಾಠ ಕಲಿತರೇ ಬೆಳೆಯಲಾಗುವುದು. ಕಲಿಯದಿದ್ದರೆ ಮತ್ತೆಮತ್ತೆ ಕಲಿಸಲು ಬದುಕಂತೂ ಜೊತೆಗಿದ್ದೇ ಇರುತ್ತದೆ. 
ಈರೀತಿ, ನಮ್ಮ ಮಕ್ಕಳಿಂದ, ಮುಂದಿನ ಪೀಳಿಗೆಯಿಂದಲಾದರೂ ಮರ್ಯಾದಾ ಹತ್ಯೆಯಂಥ ಸಾಮಾಜಿಕ ದುರಂತ ನಿಲ್ಲುವಂತಾಗಲಿ ಎಂದೇ ಹಾರೈಸೋಣ, ಪ್ರಯತ್ನಿಸೋಣ.
ಸೂಚನೆ:- ಈ ಕುರಿತು ಹೆಚ್ಚಿನ ಮಾಹಿತಿ ನೀಡುವ ಕೆಲವು ಅಂತರ್ಜಾಲ ಕೊಂಡಿಗಳು ಇಲ್ಲಿವೆ. ಜಗತ್ತಿನಲ್ಲಿ ಮತ್ತು ನಮ್ಮಲ್ಲಿ ನಡೆದಿರುವ ಕೆಲವು ಪ್ರಕರಣಗಳ ವಿವರಗಳೂ ಇವೆ. ನೀವೂ ಹುಡುಕಾಡಿದರೆ ಮತ್ತೂ ಹೆಚ್ಚಿನ ಮಾಹಿತಿಗಳು ಸಿಗಬಹುದು. ಪ್ರಸ್ತುತ ಲೇಖನವನ್ನೂ ನಾನು ಅಂತರ್ಜಾಲದ ಮಾಹಿತಿಗಳನ್ನಾಧರಿಸಿಯೇ ಬರೆದಿರುವುದು.

~ತೇಜಸ್ವಿನಿ ಹೆಗಡೆ