ಸೋಮವಾರ, ಜುಲೈ 22, 2013

ಬಿಚ್ಚಿಡುವೆ ಓ ಗುರುವೆ ಅಂತರಾತ್ಮ....

ಗುರು ನೆನೆಯುವ ನಾ ನಿನ್ನ ನಾಮ
ಇರಲೆನ್ನ ಮೇಲೆ ನಿನ್ನ ಪ್ರೇಮ 

ಬಾಲ್ಯದಲ್ಲಿ ನನ್ನನ್ನು ಹುರಿದುಂಬಿಸಿ... ಸ್ಟೇಜ್ ಹತ್ತಿಸಿ, ಎಲ್ಲರಂತೇ ಎಲ್ಲಾ  ಚಟುವಟಿಕೆಗಳಲ್ಲೂ ಭಾಗವಹಿಸುವಂತೇ ಪ್ರೇರೇಪಿಸಿದ... ಈಕೆ ನರ್ತಿಸಬಲ್ಲಳೇ? ಎಂದು ಅನುಮಾನಿಸಿ ಹಿಂದೇಟು ಹಾಕಿದ ಗುರುಗಳಿಗೂ ಗುರುವಾಗಿ ನಿಂತು ಸ್ವತಃ ತಾನೇ ಹಾಡು ಕಟ್ಟಿ, ಸಂಗೀತ ಸಂಯೋಜಿಸಿ ನನಗೆ ಬೇಕಾದ ರೀತಿಯಲ್ಲೇ, ಕುಳಿತಲ್ಲೇ ಹೇಗೆ ಕೇವಲ ಕೈಗಳನ್ನಷ್ಟೇ ಉಪಯೋಗಿಸಿಯೂ, ಹಾವ ಭಾವಗಳ ಮೂಲಕವೂ ನೃತ್ಯವನ್ನು ಅಭಿವ್ಯಕ್ತಿಸಬಹುದೆಂದು ಎಲ್ಲರಿಗೂ (ನನಗೂ) ತೋರಿಸಿಕೊಟ್ಟ ನನ್ನ ಮೊತ್ತ ಮೊದಲ ಗುರು "ತಾಯಿ"ಗೆ (ಶ್ರೀಮತಿ ಜಯಲಕ್ಷ್ಮೀ ಭಟ್)....

Appa, Ammana naduve... :)
ನನ್ನೊಳಗೇ ಹುದುಗಿ ಅಲ್ಲೇ ಮಣ್ಣಾಗಬಹುದಿದ್ದ ಎಲ್ಲಾ ರೀತಿಯ ಪ್ರತಿಭೆಗಳನ್ನೂ ಆಯ್ದು ಹೊರ ತೆಗೆದು... ಅದಕ್ಕೆ ಸರಿಯಾದ ರೂಪು ರೇಶೆ ಕೊಡುತ್ತಾ..... ಮುಂದೆ ವಿಜ್ಞಾನ ನನ್ನ ಇಚ್ಛೆಯ ವಿಷಯವೆಂದು ಹೇಳಿದಾಗ, ಅಲ್ಲೂ ಅಷ್ಟೇ ಇವಳಿಂದ ವಿಜ್ಞಾನ ಹಾಗೂ ಅಲ್ಲಿ ಒದಗುವ ಪ್ರಾಕ್ಟಿಕಲ್ಸ್‌ಗಳನ್ನು ಮಾಡೋದು ಬಲು ಕಷ್ಟ ಎಂದವರಿಗೆಲ್ಲಾ ಸಹೃದಯ ಗುರುವಾಗಿ ಮಾದರಿಯನ್ನು ತೋರಿ, ನಾನು ಅತ್ಯುತ್ತಮ ಅಂಕದಿಂದ ಮೇಲೇರಲು ಕಾರಣರಾದ, ಸ್ವತಃ ಓರ್ವ ಯಶಸ್ವಿ, ಮಾದರಿ ಹಾಗೂ ಜನಪ್ರಿಯ ಪ್ರಾಧ್ಯಾಪಕರಾಗಿದ್ದು, ನಮಗೂ ಅತ್ಯುತ್ತಮ ಬದುಕಿನ ಪಾಠವನ್ನು ಬೋಧಿಸಿದ ನನ್ನ ಎರಡನೆಯ ಗುರು ನನ್ನ "ತಂದೆ"ಗೆ (ಡಾ.ಜಿ.ಎನ್.ಭಟ್)......  


ಒಂದನೆ ತರೆಗತಿಯಲ್ಲಿ ನನ್ನನ್ನು ಬಲುವಾಗಿ ಪ್ರೀತಿಸಿ ಎಲ್ಲವನ್ನೂ ಅರಿತು ಪ್ರೋತ್ಸಾಹಿಸಿ ನನ್ನ ತಾಯಿಗೆ ಬೆಂಬಲವಾಗಿ ನಿಂತ ನನ್ನ ಕ್ಲಾಸ್ ಟೀಚರ್ ಶ್ರೀಮತಿ "ಲಿಂಗು ಟೀಚರ್"ಗೆ,

ಹೈಸ್ಕೂಲ್‌ನಲ್ಲಿ ಎಲ್ಲೋ ಗೀಚಿ ಅಪ್ಪನಿಗಷ್ಟೇ ತೋರಿಸಿ ಸುಮ್ಮನಾಗಿದ್ದ ನನ್ನ ಕವಿತೆಗಳನ್ನೆಲ್ಲಾ ಹೊರತೆಗೆದು ಓದಿ ತಿದ್ದಿ, ಹತ್ತನೆಯ ತರಗತಿಯಲ್ಲೇ ಮೊದಲ ಕವನಸಂಕಲನ ಪ್ರಕಟಿಸುವಂತೇ ಪ್ರೋತ್ಸಾಹಿಸಿ ಪ್ರೀತಿಯಿಂದ ಮುನ್ನುಡಿಯನ್ನೂ ಬರೆದ ನನ್ನ ಕನ್ನಡ ಪ್ರಾಧ್ಯಾಪಕರೂ ಅತ್ಯುತ್ತಮ ಲೇಖಕರೂ ಆಗಿರುವ ಶ್ರೀಯುತ "ಸುಮುಖಾನಂದ ಜಲವಳ್ಳಿ"ಯವರಿಗೆ....

ಕಾಲೇಜಿನಲ್ಲಿ ಕೆಮಿಸ್ಟ್ರಿ ಎಂದರೆ ಯಾಕಿಷ್ಟು ಮಿಸ್ಟ್ರಿಯಪ್ಪಾ ಎಂದು ತಲೆಬಿಸಿಮಾಡಿಕೊಂಡಾಗ, ಫಾರ್ಮುಲಾಗಳೆಲ್ಲಾ ಹೇಗೆ ಬದುಕೊಳಗೆ ಹಾಸುಹೊಕ್ಕಾಗಿವೆ ಎಂದು ಸರಳವಾಗಿ, ಸುಲಭವಾಗಿ ನನಗೆ ಪರಿಚಯಿಸಿ ಮುಂದೆ ಅದೇ ನನ್ನ ಅಚ್ಚುಮೆಚ್ಚಿನ ವಿಷಯವಾಗಲು ಕಾರಣರಾದ ಶ್ರೀಯುತ ಪ್ರೊಫೆಸರ್ "ಡಾ. ಬಿ.ಎಸ್.ಮೂಡಿತ್ತಾಯ" ಅವರಿಗೆ....

ಬದುಕು ಹೇಗೆ? ಎನು? ಎತ್ತ? ನಾನೆಷ್ಟು ನಿಮಿತ್ತ? ತಿಳಿದಷ್ಟೂ ತಿಳಿಯಲು ಸಾಕಷ್ಟಿದೆ.... ಪ್ರತಿ ದಿವಸವೂ ವಿನೂತನವೇ.... ನಗು ನಗುತ್ತಾ ಸಮಸ್ಯೆಯನ್ನು ಒಮ್ಮೆ ಎದುರಿಸತೊಡಗಿದರೆ ಅದೂ ನಮ್ಮನ್ನು ಮುಂದೆ ಬಿಟ್ಟು ಹಿಂಬಾಲಕನಾಗುತ್ತದೆ ಎನ್ನುವ ಸತ್ಯದರ್ಶನ ಮಾಡಿಸಿದ- ಗೀತೆಯ ಕೃಷ್ಣ, ರಾಮಕೃಷ್ಣ ಪರಮಹಂಸರು, ಶಂಕರಾಚಾರ್ಯರು - ಇಂತಹ ಪರಮಗುರುಗಳ ಪದತಲಕ್ಕೆ.....

ಹತ್ತು ಹಲವು ರೀತಿಯಲ್ಲಿ ನನಗೆ ಮಾದರಿಯಾದ, ಅನುಭವ ಕಲಿಸಿದ, ಪಕ್ವವಾಗುವ ಪ್ರಕ್ರಿಯೆಯಲ್ಲಿ ಸಹಕರಿಸಿದ ಎಲ್ಲಾ ಸ್ನೇಹಿತವರ್ಗಕ್ಕೆ, ಆತ್ಮೀಯರಿಗೆ... -

ಇವರೆಲ್ಲರಿಗೂ ಗುರು ಪೂರ್ಣಿಮೆಯ ಸಹಸ್ರ ನಮನಗಳು.
ಮನಃಪೂರ್ವಕವಾಗಿ ಎದೆದುಂಬಿ ತಲೆಬಾಗುವೆ.

-ತೇಜಸ್ವಿನಿ ಹೆಗಡೆ.