Courtesy - http://umic.miami.edu/ |
ಹೆತ್ತವರಿಗೆ ಮಾತ್ರ ಮಕ್ಕಳನ್ನು ಸಾಕುವ ಕಷ್ಟ ಗೊತ್ತಾಗುವುದು.. ಮಕ್ಕಳಿಲ್ಲದವರಿಗೆ ಅವರನ್ನು ಸಾಕುವ ಪ್ರಯಾಸ, ನೋವು ಅರ್ಥವಾಗೊಲ್ಲ... ಎನ್ನುವುದು ಕೇವಲ ಏಕಮುಖ ಅಭಿಪ್ರಾಯ. ಹಾಗೆ ನೋಡಿದರೆ ಮಕ್ಕಳಿದ್ದವರಿಗೆಂದೂ ತಾಯ್ತನದ ಭಾಗ್ಯವನ್ನು ಕಾಣದವರ ವೇದನೆ, ಅಸಹನೆ ಅರ್ಥವೇ ಆಗದು. ಈ ಒಂದು ಸೂಕ್ಷ್ಮತೆ ಅರ್ಥವಾಗದಿರುವವರು ತಮ್ಮಂತೇ ಹೆಣ್ಣಾಗಿರುವ, ತಾಯ್ತನದಿಂದ ವಂಚಿತರಾದವರನ್ನು ಬಂಜೆ, ಬರಡು, ಕೊರಡು, ಪೂರ್ವಜನ್ಮದ ಪಾಪದಿಂದಾಗಿಯೇ ಈಗ ಅನುಭವಿಸುತ್ತಿರುವವಳು- ಎಂದೆಲ್ಲಾ ಹೀಯಾಳಿಸಿ ಮತ್ತಷ್ಟು ಹಿಂಸೆ ನೀಡುತ್ತಾರೆ. ಸಂತಾನವಿಹೀನರಾಗಲು ಹೆಣ್ಣೊಂದೇ ಕಾರಣಳಾಗಿರಬೇಕೆಂದಿಲ್ಲ, ಗಂಡೂ ಕಾರಣನಾಗಿರಬಹುದು ಎಂಬ ಸಾಮಾನ್ಯ ಜ್ಞಾನವೂ ಇಲ್ಲದೇ, ಕೇವಲ ಆಕೆಯನ್ನು ಮಾತ್ರ ದೂಷಿಸುತ್ತಾರೆ. ಕಾಲ ಎಷ್ಟೇ ಬದಲಾಗಿರಲಿ, ವಿಜ್ಞಾನ ಎಷ್ಟೇ ಮುಂದುವರಿದಿರಲಿ, ನಮ್ಮಲ್ಲಿ ಮಾತ್ರ ಇಂದಿಗೂ ಈ ಒಂದು ಪಿಡುಗು ಸ್ತ್ರೀಯನ್ನು ಬಿಟ್ಟಿಲ್ಲ. ಮಕ್ಕಳಾಗದಿರಲು ಆಕೆಯೊಳಗಿನ ಕೊರತೆಯೇ ಕಾರಣ ಎಂಬ ತೀರ್ಮಾನಕ್ಕೆ ಬಹುಬೇಗ ಬಂದುಬಿಡುತ್ತದೆ ನಮ್ಮ ಸಮಾಜ!
ಮೊದಲು ನಾನೊಂದು Infertility Centreನಲ್ಲಿ ಕೆಲಸಮಾಡುತ್ತಿದ್ದೆ.(ಹೆಸರು, ಊರು, ಇತ್ಯಾದಿ ವಿವರಗಳನ್ನು ಅಲ್ಲಿಯ ಗೌಪ್ಯತೆಯ ದೃಷ್ಟಿಯಿಂದ ಉಲ್ಲೇಖಿಸಲಾರೆ.) ಅಲ್ಲಿಗೆ ಬರುತ್ತಿದ್ದ ದಂಪತಿಯ ಮ್ಲಾನವದನ, ನೋವು, ಅದರಲ್ಲೂ ವಿಶೇಷವಾಗಿ ಚಿಂತಾಕ್ರಾಂತ ಮುಖ ಹೊತ್ತ ಸ್ತ್ರೀಯರು, ಇವರನ್ನೆಲ್ಲಾ ನೋಡಿದಾಗ ಅನಿಸಿದ್ದು ಒಂದೇ. ಮಕ್ಕಳಾಗಲಿಲ್ಲ ಎಂದು ಕೊರಗುತ್ತಾ ಅದರಲ್ಲೇ ದಿನೇ ದಿನೇ ಕುಗ್ಗುತ್ತಿರುವ ಇವರ ದುಃಖದಲ್ಲಿ ನಾವೆಷ್ಟು ಭಾಗಿಗಳಾಗಲು ಸಾಧ್ಯ ಎಂದು! ಭಾಗಿಯಾಗುವುದು ಬೇಡ.... ಅವರ ನೋವನ್ನು, ದುಃಖವನ್ನು ಮತ್ತಷ್ಟು ಹೆಚ್ಚಿಸದಿರುವಂತೆ ವರ್ತಿಸಿದರೆ ಸಾಕಲ್ಲಾ. ಆದರೆ ಆ ಫರ್ಮ್ನಲ್ಲೇ ಕೆಲಸ ಮಾಡುತ್ತಿದ್ದ ಕೆಲವು ನರ್ಸ್ಗಳು, ಆಯಾಗಳು ಹಿಂದಿನಿಂದ ಅವರ ಬಗ್ಗೆ ಮಾತಾಡಿಕೊಳ್ಳುತ್ತಿದ್ದ ರೀತಿ, ವರ್ತನೆಗಳು ತುಂಬಾ ಸಂಕಟಕ್ಕೀಡುಮಾಡುತ್ತಿತ್ತು. ಒಂದು ತರಹದ ಉಸಿರುಗಟ್ಟಿದಂತಹ ವಾತಾವರಣ ನಿರ್ಮಾಣವಾಗುತ್ತಿತ್ತು. ಎಷ್ಟೋ ಸಲ ಆಯಾಗಳಿಗೆ ಮೆಲುವಾಗಿ ತಿಳಿ ಹೇಳಲು ಹೋಗಿ ನಾನೇ ಹೇಳಿಸಿಕೊಂಡದ್ದಿದೆ. ಆದರೆ ತಿರುಗಿ ನನಗೆ ಅವೆಲ್ಲಾ ಬೌನ್ಸ್ ಆಗ ತೊಡಗಿದ ಮೇಲೆ ಇಲ್ಲದ ಸಹನೆ ಹೊಂದಲೇ ಬೇಕಾಯಿತು. ನನ್ನ ಬಹು ಪರಿಚಿತರ ಆಗ್ರಹದ ಮೇಲೆ ಅಲ್ಲಿ ಸೇರಿದ್ದ ನಾನು ಅವರ ದಾಕ್ಷಿಣ್ಯಕ್ಕೆ ಕಟ್ಟು ಬಿದ್ದು ಹೇಗೋ ೬ ತಿಂಗಳುಗಳನ್ನು ಸವೆಸಿ ಆನಂತರ ಇರಲಾಗದೇ, ಮುಲಾಜಿಲ್ಲದೇ ಹೊರ ಬಂದುಬಿಟ್ಟೆ.
ಅಸಲಿಗೆ ನನಗೆ ಸಂತಾನ ಸಮಸ್ಯೆಗಳಿಗೆ ಪರಿಹಾರಕ್ಕಾಗಿ ಅಲ್ಲಿಗೆ ಬರುತ್ತಿದ್ದ ದಂಪತಿಯನ್ನು "ಪೇಷೆಂಟ್" ಎಂದು ಸಂಬೋಂಧಿಸುವುದೇ ಅಸಂಬದ್ಧ ಎಂದೆನಿಸುತ್ತಿತ್ತು. ಅವರ ಕೇಸ್ ಹಿಸ್ಟರಿಗಳನ್ನು, ಮೆಡಿಸಿನ್ಸ್ ಹಿಸ್ಟರಿಗಳನ್ನು, ಸಮಸ್ಯೆಗಳ ರೆಕಾರ್ಡ್ಗಳನ್ನು, ಕೊಡುತ್ತಿರುವ ಚಿಕಿತ್ಸೆಗಳ ವಿವರಗಳನ್ನು ಎಲ್ಲವನ್ನೂ ಪ್ರೋಗ್ರಾಮಿಂಗ್ ಮೂಲಕ ಜೋಡಿಸಿಡುವ ಕಾರ್ಯ, ಸಕಾಲದಲ್ಲಿ ಅದನ್ನು ಬೇಕಾದವರಿಗೆ ಒದಗಿಸಿ, ಮಾಹಿತಿಗಳನ್ನು ಒದಗಿಸುವ ಕಾರ್ಯ, ಹಾಗೆಯೇ ಒಮ್ಮೊಮ್ಮೆ(ನಾನೂ ಈ ವಿಷಯವನ್ನು ತುಸು ಅಭ್ಯಸಿಸಿದ್ದರಿಂದ) ಅವರನ್ನು ಹಿತವಾಗಿ ಮಾತನಾಡಿಸಿ, ಮನಸೊಳಗಿನ ಟೆನ್ಷನ್ ಹಾಗೂ ಕಳವಳಗಳನ್ನು ದೂರಮಾಡುವ ಕೆಲಸಗಳನ್ನೂ ಮಾಡುತ್ತಿದ್ದೆ. (ಅಲ್ಲೇ ಕೆಲಸ ಮಾಡುತ್ತಿದ್ದ ಪ್ರಧಾನ ಕೌನ್ಸಲರ್ ನನ್ನ ಆತ್ಮೀಯ ಫ್ರೆಂಡ್ ಆಗಿದ್ದರು. ಅವರು ನನಗೆ ಸ್ವಲ್ಪ ದಿನ ಟ್ರೈನಿಂಗ್ ಕೊಟ್ಟು ಆಮೇಲೆ ಅವರು ತುಂಬಾ ಬ್ಯುಸಿ ಇದ್ದಾಗ ಕೆಲವೊಂದು ಸಲ ನನಗೂ ಕೆಲಸ ಕೊಡುತ್ತಿದ್ದರಷ್ಟೇ). ಆದರೆ ಸರಿ ಸುಮಾರು ಅರ್ಧವರ್ಷಗಳವರೆಗೆ ಅಲ್ಲೇ ಕೆಲಸಮಾಡಿದ್ದರಿಂದ, ಹಲವಾರು ತರಹದ ಸಮಸ್ಯೆಗಳನ್ನು, ಸಂತಾನವಿಹೀನತೆಗೆ ಇರಬಹುದಾದ ಕಾರಣಗಳು ಹಾಗೂ ಮೆಡಿಕಲ್ ಪರಿಹಾರಗಳನ್ನು ಅಭ್ಯಸಿಸುವ ಸದವಕಾಶ ನನ್ನದಾಯಿತು. ಆ ಮಟ್ಟಿಗೆ ನಾನು ಆ ಸಂಸ್ಥೆಗೆ ಹಾಗೂ ನನ್ನ ಅಲ್ಲಿಗೆ ಬರಲು ಪ್ರೇರೇಪಿಸಿದ ಆ ಹಿತೈಷಿಗಳಿಗೆ ಸದಾ ಋಣಿ. ಅಂತಹ ಒಂದು ಫರ್ಮ್ನಲ್ಲಿ ಕೆಲಸಮಾಡುವಾಗ ನಮ್ಮೊಳಗೇ ನಾವು ತೆಗೆದುಕೊಳ್ಳ ಬೇಕಾಗಿರುವ ಮೊದಲ ಪ್ರತಿಜ್ಞೆ ಎಂದರೆ ಎಂದೂ ಎಲ್ಲೂ ಅದರೊಳಗಿನ, ಹಾಗೂ ಅಲ್ಲಿಗೆ ಬರುವ ಯಾರ ಕುರಿತೂ ಸಾರ್ವಜನಿಕವಾಗಿ ಮಾತಾಡಬಾರದು. ಗೌಪ್ಯತೆಯನ್ನು ಕಾಪಾಡುವಲ್ಲಿ ಬದ್ಧರಾಗಿರಬೇಕು. ಅದಕ್ಕಾಗಿ ನಾನು ಅಲ್ಲಿಯ ಕೆಲಸ ಕಾರ್ಯಗಳ ಕುರಿತಾಗಲೀ, ಕುಂದು ಕೊರತೆಗಳ ಬಗ್ಗೆಯಾಗಲೀ ಏನನ್ನೂ ಹೇಳಲಾರೆ. ಹೇಳುವುದೂ ಸಲ್ಲ. ಆದರೆ ಸಂತಾನವಿಹೀನತೆಯಿಂದುಂಟಾಗುವ ಸಾಮಾಜಿಕ, ಮಾನಸಿಕ ಸಮಸ್ಯೆಗಳು ಹಾಗೂ ಅದಕ್ಕೆ ಈಗಿರುವ ಪ್ರಮುಖ ವೈಜ್ಞಾನಿಕ ಪರಿಹಾರಗಳನ್ನಷ್ಟೇ ಹೇಳುತ್ತಿದ್ದೇನೆ. ಅಂತೆಯೇ ಇಲ್ಲಿ ನಾನು ಹೇಳುತ್ತಿರುವುದು ಸರಳ ಭಾಷೆಯಲ್ಲಿ. ಕಾರಣ ತೀರ ಮೆಡಿಕಲ್ ಭಾಷೆಯಲ್ಲಿ ಹೇಳಲು ನನಗೆ ಬರದು. ನಾನು ಅದನ್ನು ಕಲಿತೂ ಇಲ್ಲ. ಅಲ್ಲಿ ನಾನು ಕಲಿತುಕೊಂಡ ಹಾಗೂ ಸ್ವಯಂ ಆಸಕ್ತಿಯಿಂದ ಪುಸ್ತಕಗಳನ್ನು ಅಭ್ಯಸಿಸಿ ತಿಳಿದುಕೊಂಡ ಕೆಲವು ವಿಷಯಗಳನ್ನಷ್ಟೇ ಹೇಳುತ್ತಿದ್ದೇನೆ. ನಾನಿಲ್ಲಿ ಹೇಳಿರುವ ವಿಷಯಗಳಲ್ಲಿ ಏನಾದರೂ ತಪ್ಪಿದ್ದಲ್ಲಿ ನಿಸ್ಸಂಕೋಚವಾಗಿ ತಿಳಿದವರು ತಿಳಿಸಬೇಕಾಗಿ ವಿನಂತಿ. ಇದರಿಂದ ಕಲಿಕೆಗೆ ಹಾಗೂ ಜ್ಞಾನರ್ಜನೆಗೆ ಎಲ್ಲರಿಗೂ ಸುಲಭವಾಗುವುದು.
ಅಸಲಿಗೆ ಈ ಒಂದು ಸಮಸ್ಯೆಯಿಂದ ಕೊರಗುತ್ತಿರುವವರು ಇಂತಹ ಫರ್ಮ್ಗೆ ಬಂದು ಚಿಕಿತ್ಸೆ ಪಡೆಯುವುದೂ ಒಂದು ಅವಮಾನಕರ, ನಾಚಿಕೆಗೇಡಿನ ವಿಷಯವೆಂದು ತುಂಬಾ ತಪ್ಪಾಗಿ ಭಾವಿಸಿರುತ್ತಾರೆ. ಇದರಿಂದಾಗಿಯೇ ಬಹಳಷ್ಟು ಸಮಯವನ್ನು ಹಾಳುಮಾಡಿಕೊಂಡು, ವಯಸ್ಸು ಹೆಚ್ಚಾದಂತೇ ಪರಿಹಾರವೂ ಕ್ಲಿಷ್ಟವಾಗುವುದೆಂದು ತಿಳಿಯದೇ ಮನದಲ್ಲೇ ನರಳುತ್ತಾ, ಅಂತಿಮವಾಗಿ ಬಂದಿರುತ್ತಾರೆ (ಹೆಚ್ಚಿನವರು). ಅಂತಹವರಿಗೆ ಚಿಕಿತ್ಸೆ ಕೊಡುವ ಮೊದಲು ಅವರನ್ನು ಮಾನಸಿಕವಾಗಿ ಸದೃಢರನ್ನಾಗಿಸಿ ಚಿಕಿತ್ಸೆಗೆ ತಯಾರುಮಾಡುವುದೇ ಒಂದು ಸವಾಲು. ಆದರೂ ಅದೆಷ್ಟೋ ದಂಪತಿಗಳು ಅರ್ಧದಲ್ಲೇ ಹಿಂತಿರುಗುವುದೂ ಇದೆ. ಜನ ಏನೆನ್ನುತ್ತಾರೋ? ಸಮಾಜ ಏನೆನ್ನುತ್ತದೆಯೋ? ನಾವಿಲ್ಲಿ ಬಂದಿದ್ದು ಗೊತ್ತಾದರೆ ನಮ್ಮ ಗುಟ್ಟು ಎಲ್ಲಿ ಎಲ್ಲರಿಗೂ ಗೊತ್ತಾಗುವುದೋ? ಎಂಬೆಲ್ಲಾ ಆತಂಕಗಳಿಂದ, ಗೊಂದಲಗಳಿಂದ ಮೂಲ ಸಮಸ್ಯೆಯನ್ನೇ ಮರೆಯುತ್ತಾರೆ. ಇಂತಹವರಿಗೆ ಮೊದಲು ಬೇಕಾಗಿರುವುದು ಗೌಪ್ಯತೆಯ ಆಶ್ವಾಸನೆ ಹಾಗೂ ಮನದೊಳಗೆ ಆತ್ಮವಿಶ್ವಾದ ಮೊಳಕೆ. ಆಗ ಅರ್ಧ ಸಮಸ್ಯೆ ಅಲ್ಲೇ ಪರಿಹಾರವಾದಂತೇ. ಅವರ ಸೂಕ್ಷ್ಮ ಮನಸ್ಸನ್ನರಿತು, ನೋವಿಗೆ ಸ್ಪಂದಿಸಿ, ನಾಲ್ಕು ಹಿತ ಮಾತಾಡಿದರೂ ಸಾಕು ಹೊಸ ಆಶಾಭಾವ ಮೂಡಬಲ್ಲದು. ಆಶಾವಾದಿ ಮನಸ್ಸಿನಿಂದ ಏನನ್ನೂ ಸಾಧಿಸಬಲ್ಲೆವು. ಪರಿಹಾರವೂ ಸಿಗುವುದು ಕಷ್ಟವಾಗದು. ಆ ನಿಟ್ಟಿನಲ್ಲಿ ನಮ್ಮ ದೇಶ ಹಾಗೂ ಸಮಾಜ ತೀರಾ ಕೆಳಮಟ್ಟದಲ್ಲಿದೆ ಎಂದು ವಿಷಾದದಿಂದ ಹೇಳಬೇಕಾಗುತ್ತದೆ. ನನ್ನ ಆತ್ಮೀಯ ಗೆಳತಿಯೋರ್ವಳು ಡಾಕ್ಟರ್. ಅವಳು ಹೇಳಿದ ಒಂದು ಘಟನೆ ನನ್ನನ್ನು ತುಂಬಾ ಆಶ್ಚರ್ಯಚಕಿತಳನ್ನಾಗಿಸಿತು. ಹೀಗೂ ಉಂಟೆ? ಎಂದು ಒಂದು ಕ್ಷಣ ಅನಿಸಿದ್ದಂತೂ ಸುಳ್ಳಲ್ಲ.
ಘಟನೆ ಇಂತಿದೆ : ಅವಳ ಬಳಿ ದಂಪತಿ ಬಂದಿದ್ದಾರೆ. ಗಂಡ ಕೊಲ್ಲಿಯಲ್ಲಿ ಕೆಲಸಮಾಡುತ್ತಿದ್ದಾನೆ. ಹೆಂಡತಿ ಭಾರತದಲ್ಲಿರುವವಳು. ಮದುವೆಯಾಗಿ ಎರಡು ವರುಷವಾಗಿದೆ. ಮಕ್ಕಳಾಗಿಲ್ಲ. ಸಮಸ್ಯೆಗೆ ಪರಿಹಾರ ಬೇಕೆಂದು ಬಂದ್ದರು. ಆದರೆ ಅವರಿಂದ ವಿವರ ಪಡೆದ ಆಕೆಗೂ ಆಗಿದ್ದು ದೊಡ್ಡ ಆಶ್ಚರ್ಯವೇ! ಕಾರಣ ಮದುವೆಯಾದ ಆತ ಒಂದು ವಾರಕ್ಕೇ ಕೊಲ್ಲಿಗೆ ಹೋದವ ಎರಡು ವರುಷದ ನಂತರ ಈಗ ತಿಂಗಳೊಪ್ಪತ್ತಿನ ರಜೆಗೆ ಭಾರತಕ್ಕೆ ಬಂದಿದ್ದಾನೆ. ಈ ಒಂದು ತಿಂಗಳೊಳಗೇ ತನ್ನ ಪತ್ನಿ ಗರ್ಭ ಧರಿಸಲೇಬೇಕು...ಇಲ್ಲದಿದ್ದರೆ ಮತ್ತೆರಡು ವರುಷಗಳು ನಾನು ಬರುವಂತಿಲ್ಲ. ಇದಕ್ಕೇನಾದರೂ ಪರಿಹಾರವಿದೆಯೇ ಎಂದು ಕೇಳುತ್ತಿದ್ದಾನೆ ಆ ಮನುಷ್ಯ! ಆತನ ಹೆಂಡತಿ ಮಾತ್ರ ಕಣ್ತುಂಬಿಕೊಂಡು ತಲೆತಗ್ಗಿಸಿ ಕುಳಿತಿದ್ದಳಂತೆ. ನನ್ನ ಗೆಳತಿ ಹೇಳಿದ ಪರಿಹಾರ, ಆತನಿಗೆ ನೀಡಿದ ಉಪದೇಶ ಇಲ್ಲಿ ಅಷ್ಟು ಅಗತ್ಯವಿಲ್ಲ. ಆದರೆ ಕೊಲ್ಲಿಯಿಂದ ಆತ ಬರುವವರೆಗೂ ಇತರರ ಮಾತುಗಳನ್ನು, ಮನೆಯವರ ಸಂಶಯ ದೃಷ್ಟಿಯನ್ನು ಎದುರಿಸುವ ಆ ಹೆಣ್ಣಿನ ಮನಃಸ್ಥಿತಿಯನ್ನು ಮಾತ್ರ ನಾವು(ಸಮಾಜ) ನೋಡಹೋಗುವುದೇ ಇಲ್ಲ! ಇದು ನಮ್ಮಲ್ಲಿನ ಸಂತಾನವಿಹೀನತೆಗೆ ನಾನು ಕೊಡುತ್ತಿರುವ ಅತೀ ಸಣ್ಣ ಕಾರಣ ಅಷ್ಟೇ!!
ನಾನು ನನ್ನ ಕೆಲಸದ ಸಮಯದಲ್ಲಿ ತಿಳಿದುಕೊಂಡ ಹಾಗೂ ಓದಿಕೊಂಡ ಕೆಲವು ಪ್ರಮುಖ ಪರಿಹಾರ ಕ್ರಮಗಳನ್ನು ಸಂಕ್ಷಿಪ್ತವಾಗಿ ಇಲ್ಲಿ ನೀಡುತ್ತಿದ್ದೇನೆ.
೧. AI (Artificial insemination )
೨. IUI (Intravaginal insemination)
೩, IVF (Invitro Fertilization)
4. ICSI (Intracytoplasmic sperm Injection)
ಈ ಮೇಲಿನ ಚಿಕಿತ್ಸಾವಿಧಾನಗಳ ಕುರಿತು ಹೆಚ್ಚಿನ ಮಾಹಿತಿಗಳನ್ನು ಪಡೆಯಲು ಈ ಕೆಳಗಿನ ವೈದ್ಯಕೀಯ ಲಿಂಕ್ಗಳಿಗೆ ಭೇಟಿ ನೀಡಬಹುದು.
1. http://en.wikipedia.org/wiki/Artificial_insemination
2. http://www.ehow.com/about_5057777_types-artificial-insemination-humans.html
3. http://www.ivf-infertility.com/ivf/standard/procedure/index.php
4. http://www.babycenter.in/preconception/fertilitytreatments/icsi/#2
ತಮ್ಮ ಪತ್ನಿಯನ್ನು ಆಕೆಯ ತೀವ್ರ ಪ್ರತಿರೋಧವಿದ್ದರೂ, ಬೆದರಿ, ಕಾಡಿಸಿ, ಅಂಗಲಾಚಿ, ಬೇರೆ ಗಂಡಿನ ವೀರ್ಯಾಣುವನ್ನು ಇಂಜೆಕ್ಟ್ ಮಾಡಿಸಿಯಾದರೂ ಗರ್ಭಧರಿಸುವಂತೆ ಒತ್ತಾಯಿಸಿ, ಆ ಮೂಲಕ ತಾನೂ ಸಮರ್ಥ ಗಂಡು(?) ಎಂದು ಸಮಾಜಕ್ಕೆ, ಮನೆಯವರಿಗೆ ತೋರಿಸಿಕೊಡುವ ದುರಾಲೋಚನೆಯ ಗಂಡಂದಿರೂ ಸಾಕಷ್ಟು ಇದ್ದಾರೆ. ತಾಯ್ತನದ ನಿರ್ಧಾರ ಹೆಣ್ಣಿನದು. ಈ ರೀತಿ ಬಲಾತ್ಕಾರ, ಬೆದರಿಕೆಗಳಿಂದ ಅಮಾನುಷವಾಗಿ ಹಿಂಸಿಸಿ ತನ್ನ ಪುರುಷಾರ್ಥವನ್ನು ಮೆರೆಸಲು ಯತ್ನಿಸುವುದೂ ದೊಡ್ಡ ಅತ್ಯಾಚಾರವೇ ಸರಿ. ವಿಜ್ಞಾನ ಮುಂದುವರಿದಷ್ಟೂ ನಮ್ಮೊಳಗಿನ ಕ್ರೌರ್ಯತೆಯೂ ಬೆಳೆಯುತ್ತಾ ಹೋಗುವುದೇ? ಎನ್ನುವ ಪ್ರಶ್ನೆಯೊಂದು ನನ್ನನ್ನು ಸದಾ ಕಾಡುತ್ತಿರುತ್ತದೆ. ಒಳಗೆಲ್ಲೋ ಮನಸ್ಸು "ಹೌದು" ಎನ್ನುವ ಉತ್ತರವನ್ನೂ ಕೊಟ್ಟುಬಿಡುತ್ತದೆ!
ಇನ್ನು ಈ ಮೇಲಿನ ಚಿಕಿತ್ಸೆಗಳೆಲ್ಲ ಬಹು ದೊಡ್ಡ ಮಟ್ಟದ ಹಾಗೂ ಅತಿ ದುಬಾರಿಯಾದವುಗಳು ( AI ಹಾಗೂ IUI ಚಿಕಿತ್ಸೆಗಳನ್ನು ಬಿಟ್ಟು). ಫಲಕಾರಿಯಾಗುವ ಗ್ಯಾರಂಟಿ ಕೂಡ ೧೦೦% ಕೊಡಲಾಗದಂಥವುಗಳು. ಇವುಗಳಲ್ಲದೇ ಇನ್ನೂ ಅನೇಕ ಚಿಕ್ಕ ಪುಟ್ಟ ಚಿಕಿತ್ಸೆಗಳು ಲಭ್ಯವಿವೆ. ಅಲೋಪತಿ ಚಿಕಿತ್ಸೆಗಳಲ್ಲದೇ ಅನೇಕ ಹೋಮಿಯೋಪತಿ, ಆಯುರ್ವೇದಿಕ್, ಯುನಾನಿ ಇತ್ಯಾದಿ ಚಿಕಿತ್ಸೆಗಳೂ ಕೈಗೆಟಕುವ ದರದಲ್ಲೇ ಲಭ್ಯವಿವೆ. ಯಾವುದಕ್ಕೂ ಮಾನಸಿಕ ಶಕ್ತಿ ಹಾಗೂ ಸಂಕಲ್ಪ ಇರಬೇಕಷ್ಟೇ. ಅತಿ ನಿರಾಸೆ, ಒತ್ತಡ, ಭಾವೋದ್ವೇಗಗಳೇ ತುಂಬಿದ್ದರೆ ಯಾವ ಚಿಕಿತ್ಸೆಯೂ ಫಲಿಸದು. ನಂಬಿಕೆ ಎಲ್ಲಕ್ಕಿಂತ ಮುಖ್ಯ. ಅದೊಂದಿದ್ದರೆ ಯಾವುದೂ ಸರಳ ಸುಲಭ.
- ತೇಜಸ್ವಿನಿ ಹೆಗಡೆ.