ಬುಧವಾರ, ಏಪ್ರಿಲ್ 27, 2011

ಸತ್ಯನಾರಾಯಣನಡಿಯಲ್ಲಿ...

CopyRight:Tejaswini Hegde

ಮೂಡಣದ ರವಿ ಹೊಸ ಬಾಳಿನೋದಯವ
ಹೊತ್ತು ತಂದಿದ್ದ ಆ ದಿನ...
ಕೈಗೆ ಕೈಯಬೆಸೆದು ಏಳು ಹೆಜ್ಜೆಯನಿಟ್ಟ-
ಆ ಸುದಿನದ ಮರುದಿನ..
ಉಷೆಯ ರಂಗನ್ನೇ ಕೆನ್ನೆಗೇರಿಸಿಕೊಂಡು
‘ಸತ್ಯನಾರಾಯಣನ’ ಕರೆದು
‘ಜೋಡಿ’ ಪೂಜೆಗೈದ ಆ ಕ್ಷಣ..
ಹಿರಿಯರ ಹಿತೋಪದೇಶ,
ಕಿರಿಯರ ಕೀಟಲೆ...
ಗೆಳೆಯರ ಚಟಾಕಿಯ ನಡುವೆ
`ನಾರಾಯಣ' ಬಂದು ಹೋಗಿದ್ದೇ ತಿಳಿಯಲಿಲ್ಲ!

ಆಶೀರ್ವದಿಸಿದ ಪುರೋಹಿತರು
ಹಸಾದವನಿತ್ತು ಅವನ ಕೈಗೆ,
‘ಅರ್ಧ ನಿನಗೆ ಉಳಿದರ್ಧ ಅರ್ಧಾಂಗಿಗೆ’ ಎಂದಾಗ...
ಮೊದಲಬಾರಿ ನಾ ಪೂರ್ಣಗೊಂಡ ಭಾವ..
ನಿನ್ನ ಕಣ್ಣೊಳಗೂ ತಿಂಗಳಬೆಳಕಿನ ತಂಪು

ಪತಿಪರಮೇಶ್ವರನ ಕಾಲಿಗೆರಗಿ
ಸ್ವೀಕರಿಸೆಂದು ಹಿರಿಯರೆಂದಾಗ,
ತಲೆಯೆತ್ತಿದ್ದೆ ನನ್ನೊಳಗಿನ ನಾನು...
‘ಎದೆಯೊಳಿದ್ದರೆ ಸಾಕಲ್ಲ... ಕಾಲಿಗೆ ಬೇರೆ ಬೇಕಿಲ್ಲ’
ನೀನೆಂದಾಗ, ನಸುನಕ್ಕಾಗ ಮಾತ್ರ
ಮನಸು ನಿನ್ನಡಿಗಳತ್ತ ಬಾಗಿತ್ತು..
ಕೈಗಳು ಅದನನುಸರಿಸಿದ್ದವು.

ಏರುವಿಕೆಯ ಹಂತವ, ಇಳಿಯುವಿಕೆಯಿಂದಲೇ
ತಿಳಿ ತಿಳಿಸಿದ ಈ ಸಂ-ಸಾರದ ಗುಟ್ಟು
ರಟ್ಟಾದಷ್ಟೂ ಗುಟ್ಟಾಗೇ ಉಳಿದಂತಿದೆ...
ಸೋತು ಗೆಲ್ಲುವ... ಗೆದ್ದೂ ಗೆಲ್ಲದಿರುವ
ಈ ಬದುಕಿನಾಟದಲ್ಲಿ ಇಬ್ಬರೂ ಸಮಾನರು
ಎಂದು ಸಾರಿದ ಆ ಸತ್ಯನಾರಾಯಣನ
ಸದಾ ನೆನೆ ನೆನೆದು ನಮಿಸುವೆ

-ತೇಜಸ್ವಿನಿ ಹೆಗಡೆ.

ಮಂಗಳವಾರ, ಏಪ್ರಿಲ್ 19, 2011

ಬದುಕಿಗಾಗಿ ಹೋರಾಡುತ್ತಿರುವೆ ಈ ದಿಟ್ಟೆ ನಿಜವಾಗಿಯೂ ಚಾಂಪಿಯನ್

ಸೂರ್ಯನಿಂದ ಹೊರ ಹೊಮ್ಮುವ ಅಪಾಯಕಾರಿ ವಿಕಿರಣಗಳನ್ನು ತಡೆದು ನಮ್ಮನ್ನೆಲ್ಲಾ ರಕ್ಷಿಸುವ ಓಜೋನ್ ಪದರದಂತೇ, ಮನುಷ್ಯನೊಳಗಿರುವ ಮೃಗೀಯ ಭಾವನೆಗಳನ್ನೆಲ್ಲಾ ಫಿಲ್ಟರ್ ಮಾಡಿ ಕೇವಲ ಸಾತ್ವಿಕ ಭಾವಗಳನ್ನೇ ಹೈಲೈಟ್ ಮಾಡುವಂತಹ ಯಾವುದಾದರೂ ಪದರವಿದ್ದಿದ್ದರೆ, ಅದೆಷ್ಟೋ ಅರುಣಾ, ಶೃತಿ, ಅರುಶಿ, ಅರುಣಿಮಾರೆಲ್ಲಾ ಇಂದು ನಗುತ್ತಿದ್ದರು... ಬೆಳಗುತ್ತಿದ್ದರು.... ಬೆಳಕಾಗುತ್ತಿದ್ದರು. 

ಮೊನ್ನೆ ಮೊನ್ನೆಯಷ್ಟೇ ದಯಾಮರಣದ ಚರ್ಚೆಗೆ ಗುರಿಯಾಗಿ ಸುದ್ದಿಯಾದ ನಿರ್ಭಾಗ್ಯೆ ಅರುಣಾ ಶಾನುಭಾಗಳ ಪ್ರಕರಣವೇ ಮರೆತಿಲ್ಲ... ಹೀಗಿರುವಾಗ ಈಗ ೨೩ ವರುಷದ ತರುಣಿ ಅರುಣಿಮಾ ಸಿನ್ಹಾ (ಸೋನು ಸಿನ್ಹಾ). ರಾಷ್ಟ್ರೀಯ ಮಟ್ಟದ ವಾಲಿಬಾಲ್ ಹಾಗೂ ಫುಡ್‌ಬಾಲ್ ಕ್ರೀಡಾಳುವಾಗಿದ್ದ ಈಕೆಯನ್ನು ಮುಂದೆಂದೂ ಸರಾಗವಾಗಿ ಓಡಾಡಲೂ ಆಗದಂತೇ ಮಾಡಿದ ಆ ದುರುಳರಿಗೆ ಬೇಕಾಗಿದ್ದು ಅವಳ ಕೊರಳೊಳಗಿನ ಪುಟ್ಟ ಚೈನ್ ಅಷ್ಟೇ! ಪರೀಕ್ಷೆಯೊಂದನ್ನು ಬರೆಯಲು ದೆಹಲಿಗೆ ತೆರಳಲು ಉತ್ತರಪ್ರದೇಶದ ಬರೇಲಿಯಲ್ಲಿ ಪದ್ಮಾವತ್ ಎಕ್ಸ್‌ಪ್ರೆಸ್ ರೈಲ್ ಅನ್ನು ಹತ್ತಿದ ಈಕೆಗೆ ತನ್ನ ಭವಿಷ್ಯದ ತುಂಬೆಲ್ಲಾ ಇನ್ನು ಪರೀಕ್ಷೆಗಳೇ ಎದುರಾಗುವುದು ತಿಳಿದಿರಲಿಲ್ಲ. ಅದೇ ಭೋಗಿಯನ್ನು ಹತ್ತಿದ್ದ ಮೂವರು ರೌಡಿಗಳು, ಅವಳ ಕೊರಳಲ್ಲಿದ್ದ ಚಿನ್ನದ ಸರಕ್ಕಾಗಿ ಕೈ ಹಾಕಿದಾಗ, ಸಹಜವಾಗಿಯೇ ಈಕೆ ಪ್ರತಿಭಟನೆ ತೋರಿದ್ದಾಳೆ. ಆದರೆ ಅದರ ಪರಿಣಾಮ ಮಾತ್ರ ಘೋರ! ಚೈನ್ ಎಳೆದಾಟದಲ್ಲಿ ರೊಚ್ಚಿಗೆದ್ದ ಆ ಪಾಪಿಗಳು ಕರುಣೆಯ ಲವಲೇಶವನ್ನೂ ತೋರದೇ ಚಲಿಸುತ್ತಿದ್ದ ರೈಲಿನಿಂದ ಆಕೆಯನ್ನು ದೂಡಿದ್ದಾರೆ. ಹೊರಬಿದ್ದ ಅರುಣಿಮಾ ಇನ್ನೇನು ಸಾವರಿಸಿಕೊಂಡು ಸರಿಯಬೇಕೆನ್ನುವಾಗಲೇ ಸಮಾನಾಂತರ ಹಳೆಯಿಂದ ಬರುತ್ತಿದ್ದ ಇನ್ನೊಂದು ರೈಲು ಅವಳ ಎಡಗಾಲನ್ನೇ ಜಜ್ಜಿಹಾಕಿದೆ.

ತೀವ್ರವಾಗಿ ಗಾಯಗೊಂಡಿದ್ದ ಆಕೆಯನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವಳ ಎಡಗಾಲನ್ನು ಉಳಿಸಲಾಗಲಿಲ್ಲ. ಬಲಗಾಲು ಹಾಗೂ ತಲೆಗೆ ತೀವ್ರ ಪೆಟ್ಟಾದರೂ ಸಾವನ್ನು ಗೆದ್ದು ಬದುಕಿಗಾಗಿ ಈಗ ಹೋರಾಡುತ್ತಿದ್ದಾಳೆ. ಚಾನಲ್ ಒಂದರ ಸಂದರ್ಶನದಲ್ಲಿ ಆಕೆ "ತನಗೆ ಫುಡ್‌ಬಾಲ್‌ನಲ್ಲಿ ಹೆಸರುಮಾಡಬೇಕಿತ್ತೆಂದೂ... ತಾನು ಉತ್ತಮ ರನ್ನರ್ ಹಾಗೂ ಗೋಲ್‌ಕೀಪರ್ ಆಗಿದ್ದೆಯೆಂದೂ... ಈ ಕ್ಷೇತ್ರದಲ್ಲೇ ಮುಂದುವರಿದು ಗುರಿ ಮುಟ್ಟಬೇಕಿದ್ದೆಯೆಂದೂ... ಆದರೆ ಇನ್ನೆಂದೂ ಈ ನನ್ನ ಕನಸು ನನಸಾಗದೆಂದು.." ತನ್ನ ನೋವನ್ನು, ದುಗುಡವನ್ನು, ಅಸಹಾಯಕತೆಯನ್ನು ತೋಡಿಕೊಂಡಿದ್ದಾಳೆ.

ಸರಕಾರ, ಆಟಗಾರರು, ಜನತೆ ಎಲ್ಲರೂ ಅವಳಿಗೆ ಸಹಾಯ ಹಸ್ತ ಚಾಚುತ್ತಿದೆ. ಇನ್ನೂ ಸಾಕಷ್ಟು ಬೆಂಬಲದ ಅತ್ಯಗತ್ಯ ಆಕೆಗಿದೆ. ಹುಟ್ಟಿನಿಂದಲೇ ಬಂದ ಅಂಗವೈಕಲ್ಯ ಮನುಷ್ಯನ ಮನಸ್ಸನ್ನೂ ಅದರೊಂದಿಗೆ ಬೆಳೆಸಿರುತ್ತದೆ. ಆದರೆ ಜೀವನ ಪ್ರಮುಖ ಘಟದಲ್ಲಿ.. ಅದೂ ಇನ್ನೇನು ಬದುಕು ಅರಳಬೇಕೆಂದಿರುವಾಗಲೇ ಅರುಣಿಮಾಳ ಜೊತೆ ಈ ದೌರ್ಭಾಗ್ಯ ನಡೆದಿದೆ. ಈ ಆಘಾತದಿಂದ, ನೋವಿನಿಂದ, ಭರಿಸಲಾಗದ ನಷ್ಟದಿಂದ ಹೊರಬರಲು, ಆಕೆಗೆ ಮಾನಸಿಕ ಬೆಂಬಲ, ಆತ್ಮವಿಶ್ವಾಸ, ಹೆತ್ತವರ ಹಾಗೂ ಸಮಾಜದ ನೆರವು, ಸಹಾಯದ ಅತ್ಯವಶ್ಯಕತೆಯಿದೆ. ಜೈಪುರ ಕಾಲಿನ ಜೋಡನೆಯ ಪ್ರಯತ್ನವೂ ಆಗುತ್ತಿದೆಯಂತೆ. ಇವೆಲ್ಲಾ ಉತ್ತಮ ಬೆಳವಣಿಗೆಯೇ. ಇತ್ತೀಚಿನ ಸುದ್ದಿಯ ಪ್ರಕಾರ...ಅವಳ ಸ್ಥಿತಿ ಗಂಭೀರವಾಗಿದ್ದರೂ ಸ್ಥಿರವಾಗಿದೆ... ಆಕೆಗೆ ಇನ್ನೂ ಹೆಚ್ಚಿನ ಹಾಗೂ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆಯನ್ನು ನೀಡುವ ಸಲುವಾಗಿ, ಉ.ಪ್ರ. ಸರಕಾರ ಅರುಣಿಮಾಳನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ಸಾಗಿಸಿದೆ.

ಅಸಾಧ್ಯವೆಂದರೆ ಯಾವುದೂ ಸಾಧ್ಯವಲ್ಲ. ಸಾಧ್ಯತೆ ಇರುವುದು ನಮ್ಮ ಮನದೊಳಗೇ. ಕೃತಕ ಕಾಲಿನ ಜೋಡಣೆಯಿಂದ, ಈಗಾಗಲೇ ಆಕೆ ತೋರುತ್ತಿರುವ ಆತ್ಮವಿಶ್ವಾಸ, ಸ್ಥೈರ್ಯ, ಧೈರ್ಯದಿಂದ ಅವಳ ಕನಸೂ ಮುಂದೆ ನನಸಾಗಬಹುದು. ಯಾರು ಕೇವಲ ತನ್ನ ಬಗ್ಗೆ ಮಾತ್ರ ಯೋಚಿಸದೇ ತನ್ನಂತವರ ಬಗ್ಗೆಯೂ ಯೋಚಿಸುತ್ತಾರೋ ಅವರೇ ನಿಜವಾದ ಮಾನವೀಯತೆ ಉಳ್ಳವರು. ಅರುಣಿಮಾ ತನಗಾಗಿ ಹರಿದು ಬರುತ್ತಿರುವ ಧನ ಸಹಾಯದಿಂದ ಕೇವಲ ಸಂತೋಷ ಪಡುತ್ತಿಲ್ಲ.. ಬದಲಿಗೆ ಮುಂದೆ ಸಂಗ್ರಹವಾದ ದುಡ್ಡಿನಿಂದ ತನ್ನಂತವರಿಗಾಗಿ ಕ್ರೀಡಾ ಶಾಲೆಯೊಂದನ್ನು ತೆರೆಯುವ ದೊಡ್ಡ ಕನಸು ಕಂಡಿದ್ದಾಳೆ. ತನ್ನ ಹಳೆಯ ಕನಸುಗಳಿಗೆಲ್ಲಾ ಅಲ್ಪವಿರಾಮ ಹಾಕಿ... ಹತಾಶೆಯ ನಡುವೆಯೂ ಆಶಾವಾದದ ಕನಸುಗಳನ್ನು ಕಾಣುತ್ತಾ, ಅಪಾರ ನೋವಿನಲ್ಲೂ ಛಲದಿಂದ ಬದುಕಿಗಾಗಿ ಹೋರಾಡುತ್ತಿರುವ ಅರುಣಿಮಾಳ ಬದುಕಲ್ಲಿ ನಿಜವಾದ ಅರುಣೋದಯ ಬಹು ಬೇಗವಾಗಲೆಂದು ಮನದಾಳದಿಂದ ಪ್ರಾರ್ಥಿಸುತ್ತಿರುವೆ. ಚಾಂಪಿಯನ್ ಆಗಬೇಕೆಂಬ ಆಕೆಯ ಕನಸು ಮುಂದೆ ನನಸಾಗಬಹುದು... ಆದರೆ ಛಲದಿಂದ, ಇದ್ದ ಬದ್ದ ಸ್ಥೈರ್ಯವನ್ನೆಲ್ಲಾ ಒಗ್ಗೂಡಿಸಿ ಬದುಕಿಗಾಗಿ ಹೋರಾಡುತ್ತಿರುವ ಅರುಣಿಮಾ ನನ್ನ ಪ್ರಕಾರ ಈಗಾಗಲೇ ಚಾಂಪಿಯನ್ ಆಗಿದ್ದಾಳೆ.

-ತೇಜಸ್ವಿನಿ ಹೆಗಡೆ.

ಗುರುವಾರ, ಏಪ್ರಿಲ್ 14, 2011

ನೆನಪುಗಳ ಮಾತೇ ಮಧುರ..

ಕೆಕ್ಕಾರಜ್ಜಿ

ಹೊನ್ನಾವರದಿಂದ ಅರೆಅಂಗಡಿ, ಹೆಬ್ಬಾನ್ಕೇರಿ ಬಸ್ ಹಿಡಿದು ತೇರುಬೀದಿಗೆ ಬಂದಿಳಿದರೆ ಸಾಕು... ಅಲ್ಲಿಂದ ಸರಿ ಸುಮಾರು ಅರ್ಧ ಮೈಲು ನಡೆದರೆ ಸಿಗುವುದೇ "ಕೆಕ್ಕಾರು".. ನನ್ನಜ್ಜಿಯ ಮನೆ... ಅಮ್ಮನ ಆಯಿಯ ಮನೆ. ತೇರುಬೀದಿಯಲ್ಲಿ ಕೆಂಪು ಬಸ್ಸು ನಮ್ಮನ್ನೆಲ್ಲಾ ಇಳಿಸಿದ ತಕ್ಷಣವೇ, ದಾರಿಯುದ್ದಕ್ಕೂ ಸಾಲು ಸಾಲಾಗಿರುವ ಗೇರು ಮರಗಳೆಲ್ಲಾ ತಮ್ಮ ಹಣ್ಣುಗಳ ಕಂಪನ್ನು ಬೀರುತ್ತಾ ನಮ್ಮನ್ನೆಲ್ಲಾ ಸ್ವಾಗತಿಸುತ್ತಿದ್ದವು. ಶಾಲೆ/ಕಾಲೇಜು, ಪರೀಕ್ಷೆ/ಸ್ಪರ್ಧೆ ಎಂದೆಲ್ಲಾ ವರ್ಷವಿಡೀ  ಪರದಾಡಿ ಹೈರಾಣಾಗಿರುತ್ತಿದ್ದ ನಾನೂ ಹಾಗೂ ನನ್ನ ಇಬ್ಬರು ತಂಗಿಯಂದರಿಗೆ  "ಕೆಕ್ಕಾರು" ಅತ್ಯಂತ ಪ್ರಶಸ್ತ  ವಿಶ್ರಾಂತಿಧಾಮವಾಗಿತ್ತೆಂದರೆ ಅಡ್ಡಿಯಿಲ್ಲ. ಯಾವುದೇ ಅಂಕೆ-ಅಡ್ಡಿಗಳಿಲ್ಲದೇ, ಸ್ವೇಚ್ಛವಾಗಿ ತಿರುಗಾಡಿಕೊಂಡು.. ಯತ್ಥೇಚ್ಛವಾಗಿ ಹಣ್ಣು, ಹಂಪಲುಗಳನ್ನು ಮುಕ್ಕಿಕೊಂಡು ಕಣ್ತುಂಬಾ ಹಸಿರನೇ ತುಂಬಿಕೊಂಡು ವಸಂತನಾಗಮದ ಹಬ್ಬವನ್ನು ಆಚರಿಸುತ್ತಿದ್ದೆವು. 

ಕೆಕ್ಕಾರಿನ ಕಳೆಯೇ ನನ್ನ "ಕೆಕ್ಕಾರಜ್ಜಿ"ಯಾಗಿದ್ದಳೆಂದರೆ ಅತಿಶಯೋಕ್ತಿಯಲ್ಲ. ಕೆಲಸಕ್ಕೆ ಬರುವ ಆಳುಗಳಿಗೆ... ಅಚೆಕೇರಿ, ಅಚೆಕೆಕ್ಕಾರು, ಬಸ್ತಿಮಸ್ಕಿ - ಮುಂತಾದ ೨ ಮೈಲು ಊರಿನ ಜನರಿಗೆಲ್ಲಾ ಆಕೆ ಚಿರಪರಿಚಿತ. ಶಾಂತ ಸ್ವಭಾವದ, ಸದಾ ಒಂದೆಲ್ಲಾ ಒಂದು ಕೆಲಸದಲ್ಲೇ ಮುಳುಗಿರುತ್ತಿದ್ದ... ಬಂದು ಹೋಗುವ ಜನರನ್ನೆಲ್ಲಾ ಆದರಿಸುತ್ತಿದ್ದ "ಸರಸ್ವತಕ್ಕ" ಎಂದರೆ ಎಲ್ಲರಿಗೂ ಅಚ್ಚು ಮೆಚ್ಚು. ಅದರಲ್ಲೂ ವಿಶೇಷವಾಗಿ ಆಳುಗಳಿಗೆ ಕೆಕ್ಕಾರಜ್ಜಿ ಎಂದರೆ ಬಲು ಪ್ರೀತಿ. ಅಜ್ಜ ಸ್ವಭಾವತಃ ಮುಂಗೋಪಿ... ಆಳುಗಳು ಏನಾದರೂ ಪದೇ ಪದೇ ಕೇಳಿದರೆ ಸಿಟ್ಟೇ ಉಕ್ಕಿ ಬರುತ್ತಿದ್ದು. ಹಾಲನ್ನೋ, ಮೊಸರನ್ನೋ ಇಲ್ಲಾ ಇನ್ನಾವುದೋ ಪದಾರ್ಥವನ್ನೋ ಪದೇ ಪದೇ ಮುಂಬಾಗಿಲಲ್ಲಿ ಕೇಳಿ ನಿರಾಸೆ ಹೊಂದುತ್ತಿದ್ದವರಿಗೆಲ್ಲಾ ಹಿಂಬಾಗಿಲು ತೆರೆದಿರುತ್ತಿತ್ತು. ಅಜ್ಜನ ಕಣ್ತಪ್ಪಿಸಿ ಆಳುಗಳಿಗೆ ಹಾಲು, ಮೊಸರು, ಪದಾರ್ಥಗಳನ್ನು ಕೊಡುತ್ತಿದ್ದ ಅಜ್ಜಿಯ ವಹಿವಾಟು ಅಜ್ಜನಿಗೂ ಗೊತ್ತಿದ್ದದ್ದೇ. ಒಮ್ಮೊಮ್ಮೆ ಸಹಿಸದೇ ಅಜ್ಜ ಗದರುತ್ತಿದ್ದರಂತೆ.. "ಹೌದೇ...ಆಳ್ ಮಕ್ಕಗೆಲ್ಲಾ ನೀನು ಭಾಗ್ಯಲಕ್ಷ್ಮಿ.. ನಾನು ದರಿದ್ರ ನಾರಾಯಣ.." ಎಂದು. ಆದರೆ ಇದಾವುದೂ ಕೆಕ್ಕಾರಜ್ಜಿಯ ಸಮಾಜ ಸೇವೆಗೆ ಧಕ್ಕೆ ಆಗಲೇ ಇಲ್ಲ. "ನಾಳೆ ನಾವು ಸತ್ತೆ ಅಂದ್ರೂ ಬಪ್ಪವು ಅವೇಯಾ... ನಮ್ಗೆ ಹೇಳಿ ದುಡೀತ್ವಿಲ್ಯ? ಕುಡ್ತೆ ಹಾಲು, ಮೊಸ್ರು ಕೊಟ್ರೆ ನಮ್ಗೇನು ದರಿದ್ರ ಬತ್ತಿಲ್ಲೆ.." ಎಂದು ದಬಾಯಿಸಿದರೆ ಅಜ್ಜ ಮತ್ತೆರಡು ಹೆಚ್ಚು ಅಡಿಕೆ ಹೋಳನ್ನು ಜಗಿಯುತ್ತಿದ್ದರಷ್ಟೇ. ನಾಲ್ಕನೆಯ ಇಯತ್ತೆಯವರೆಗೆ ಮಾತ್ರ ಕಲಿತಿದ್ದ ಕೆಕ್ಕಾರಜ್ಜಿ ತನ್ನ ಹಾಲಿನ ಲೆಕ್ಕವನ್ನು ಬರೆದಿಟ್ಟುಕೊಳ್ಳುತ್ತಿದ್ದ ಚಾರ್ಟ್ ಮಾತ್ರ ನಮಗೆಲ್ಲಾ ಬಲು ಮೋಜಾಗಿತ್ತು. ಸ್ವ ಹಸ್ತಾಕ್ಷರದಲ್ಲಿ ಆಕೆ ಬರೆದಿದ್ದ "ಕಮಲಕ ಹಲು..(ಕಮಲಕ್ಕನ ಹಾಲು)" ಮಾತ್ರ ಆ ಚಾರ್ಟ್‌ನಲ್ಲಿ ಕಂಡಿದ್ದು ಇಂದಿಗೂ ಹಸಿರಾಗಿದೆ.

ಸರಿಯಾಗಿ ಎಪ್ರಿಲ್, ಮೇ ತಿಂಗಳಲ್ಲಿ ರಜೆ ಆರಂಭವಾದರೆ, ಮಂಗಳೂರಿನಿಂದ ಹೊನ್ನಾವರಕ್ಕೆ ನಮ್ಮ ದೌಡೂ ಪ್ರಾರಂಭ. ಅಮ್ಮನ ಪ್ರೀತಿಯ "ಆಯಿ" ನಮಗೆಲ್ಲಾ "ಕೆಕ್ಕಾರಜ್ಜಿ"ಯಾಗಿ, ಉತ್ತಮ ಮಾರ್ಗದರ್ಶಿಯಾಗಿ, ಸ್ನೇಹಿತೆಯಾಗಿ, ಮಕ್ಕಳಜೊತೆ ಮಕ್ಕಳಾಗಿ, ಸವಿ ತಿನಸುಗಳನೀವ ಕಾಮಧೇನುವಾಗಿ, ನಮ್ಮ ಬೇಸಿಗೆ ರಜೆಯ "ಸಮ್ಮರ್ ಕ್ಯಾಂಪ್" ಆರ್ಗನೈಜರ್ ಆಗಿರುತ್ತಿದ್ದಳು. ಚಿಕ್ಕವರಿದ್ದಾಗ ನಾವೆಲ್ಲಾ ಕೆಕ್ಕಾರಜ್ಜಿ/ಅಜ್ಜರನ್ನು ಬಹಳಷ್ಟು ಕಾಡಿಸುತ್ತಿದ್ದೆವು. ನಮ್ಮ ಮೂವರಲ್ಲೇ ನನ್ನ ಕಿರಿಯ ತಂಗಿ ಸ್ವಲ್ಪ ಹೆಚ್ಚು ತುಂಟಿಯಾಗಿದ್ದಳು. ಮನೆಯ ಹಿತ್ತಲಿನಲ್ಲಿದ್ದ ಏಕೈಕ ಚಿಕ್ಕುಮರವನ್ನೇರಿ ಹೀಚುಕಾಯಿಗಳನ್ನೆಲ್ಲಾ ಕೊಯ್ದು ಹಾಕುವುದೋ... ನಾಳೆ ಹೂ ಬಿಡಬೇಕೆಂದಿರುವ ಮೊಗ್ಗುಗಳನು ತರಿದುಹಾಕುವುದೋ... ಅಜ್ಜನ ಪಂಜಿಯಯನ್ನು ಎಳೆದು ಓಡಿಹೋಗುವುದೋ - ಮುಂತಾದ ಕೀಟಲೆಗಳಿಂದಾಗಿ ಸದಾ ಕಾಲ ಅಜ್ಜಿಯ ಬೊಚ್ಚು ಬಾಯಿಯ ನಗುವಿಗೆ ಕಾರಣಳಾಗುತ್ತಿದ್ದಳು. ಆಗೆಲ್ಲಾ ಅಮ್ಮ ತಂಗಿಯನ್ನು ಅಟ್ಟಿಸಿಕೊಂಡು ಹೊರಟರೆ... ಆಕೆ ಹಿತ್ತಲಿನ ಚಿಕ್ಕು ಮರವನ್ನೇರಿ ಬೊಬ್ಬೆ ಹಾಕುತ್ತಿದ್ದಳು. "ಮರ್ಯಾದೆ ತೆಗ್ಯಡ್ದೇ ಮಾರಾಯ್ತಿ ಹೊಡೆತ್ನಿಲ್ಲೆ ಕೆಳ್ಗೆ ಇಳಿ.." ಎಂದು ಹಲ್ಕಚ್ಚಿ ಅಮ್ಮ ಗದರುತ್ತಿದ್ದರೆ... ಅಜ್ಜಿ ಬೈಯುತ್ತಿದ್ದುದು ಅಮ್ಮನನ್ನೇ. "ನೀ ಎಂತ ಮಾಡ್ತಿದ್ದೆ ಹೇಳು ಜಯ? ನಾ ಎಂತಾರೂ ಬೈದ್ರೆ.. ಇಲ್ಲಾ ಇವು ಹೊಡ್ದ್ರೆ ಗೇರು ಗುಡ್ಡೆ ಹತ್ತಿ ಊರಿಡೀ ಕೇಳು ಹಾಂಗೆ ಕೂಗ್ತಿದ್ದಿಲ್ಯ.. ನಿಂದೇ ಕೂಸು.. ಚಿಕ್ಕು ಮರವಾದ್ರೂ ಹತ್ತಿದ್ದು.. ನಿನ್ನ್ ಹಾಂಗೆ ಗುಡ್ಡೆ ಹತ್ತಿದ್ದೆಲ್ಲೆ..." ಎಂದು ದೊಡ್ಡದಾಗಿ ನಕ್ಕಾಗ....ಅಳುತ್ತಿದ್ದ ತಂಗಿಯೂ ಗೊಳ್ಳೆಂದು ನಕ್ಕಿದ್ದಳು.... ಅಮ್ಮನ ಕೋಪವೂ ನಗುವಾಗಿ ಹೊರಬಂದಿತ್ತು.

ಹೀಗೇ ಒಮ್ಮೆ ತಂಗಿಯನ್ನು ಗದರುತ್ತಿದ್ದ ಅಮ್ಮನನ್ನು ತಡೆದ ಕೆಕ್ಕಾರಜ್ಜಿ "ನೀ ಎಂತ ಕಡ್ಮೆ ಫಟಿಂಗ ಆಗಿಯಿದ್ಯನೇ? ಸಣ್ಣಿರ್ಬೇಕಿದ್ರೆ ನೀ ಮಾಡಿದ್ದ್ ಕೆಲ್ಸ ಒಂದೋ ಎರ್ಡೋ ಅಂಬೆ... ನೆನ್ಪಿಲ್ಯಾ ರಾಮಚಂದ್ರಂಗೆ ಕಾಟ ಕೊಟ್ಟಿದ್ದು ನೀನು ನಿನ್ ಗೆಳ್ತಿ ಸೇರ್ಕಂಡು?" ಎಂದು ಗದರಲು... ಅಮ್ಮನೂ ಮುಸಿ ಮುಸಿ ನಗತೊಡಗಿದಳು. ನಮಗೆಲ್ಲಾ ಕೆಟ್ಟ ಕುತೂಹಲ. ನಮ್ಮ ಕಿರಿಯಮಾವನಿಗೆ(ಅಮ್ಮನ ತಮ್ಮ) ನಮ್ಮಮ್ಮ ಕೊಟ್ಟ ಕಾಟದ ಪ್ರಹಸನ ಕೇಳಲು ಅಜ್ಜಿಯನ್ನು ಸುತ್ತುವರಿದು ಕುಳಿತೇಬಿಟ್ಟೆವು. "ಹೋಗೇ ಆಯಿ.. ನೀ ಅಂತುವ.. ಇವ್ಕೆಲ್ಲಾ ಎಂತಾ ಅದ್ನ ಹೇಳ್ತೆ.. ಈ ಕಿರಿ ಕೂಸು ಕೇಳ್ಕಂಡ್ರೆ ನಾಳೆ ನಂಗೇ ಉತ್ರ ಕೊಡ್ತು ಅಷ್ಟೇಯಾ.."ಎಂದು ಅಮ್ಮ ಒಳಸೇರಿದರೆ.. ಅಜ್ಜಿ ತಮ್ಮ ಕತೆಯೊಳಗೆ ನಮ್ಮನ್ನೆಳೆದೊಯ್ದರು.

ಏಳು ಮಕ್ಕಳ ದೊಡ್ಡ ಸಂಸಾರವನ್ನು ನಿಭಾಯಿಸುವ ಪರದಾಟ ನಮ್ಮಜ್ಜಿಯದಾಗಿತ್ತು. ಒಳ ಹೊರಗೆಲ್ಲಾ ಹೊರೆಯಾಗುವಷ್ಟು ಕೆಲಸ. ಹಾಗಿರುವಾಗ ಕಿರಿಯ ಮಗನನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಹಿರಿಯಕ್ಕನಾದ ನಮ್ಮಮ್ಮನಿಗೇ ವಹಿಸಿದ್ದರು ಮನೆಯವರು. ಅಮ್ಮನಿಗೋ ಆಗ ೧೦-೧೨ ವಯಸ್ಸು. ಆಟವಾಡಿಕೊಂಡು.. ತಿರುಗಾಡಿಕೊಂಡಿರುವ ದಿನಗಳು. ಆದರೆ ಪುಟ್ಟ ತಮ್ಮ ಯಾವುದಕ್ಕೂ ಬಿಡಲೊಲ್ಲ... ಏನು ಮಾಡುವುದೆಂದು ಯೋಚಿಸಿ, ಚಿಂತಿಸಿ ಒಂದು ಉಪಾಯ ಹುಡುಕಿದಳಂತೆ. ಆಗಷ್ಟೇ ಕೆಳಗಿಳಿಸಿದ್ದ ಹಲಸಿನ ಕಾಯಿಯನ್ನು ಕೊರೆದು ಅದರ ಗಟ್ಟಿ ಮೇಣಗಳನ್ನೆಲ್ಲಾ ಬಗರಿ.. ತಮ್ಮನ ಕೈಗೆ ಮೆತ್ತಿದಳು... ಘನಘೋರ ಮೇಣವೆಲ್ಲಾ ಕೈಗಳೊಳಗೆ ತುಂಬಲು.. ಆ ಪುಟ್ಟ ಹುಡುಗ ಎರಡೂ ಕೈಯನ್ನು ಬೇರ್ಪಡಿಸಲು.. ಮೇಣವನ್ನು ತೆಗೆಯಲು ಪ್ರಯತ್ನಿಸ ತೊಡಗಿದ... ಅವನಿಗಿದೊಂದು ಹೊಸ ಆಟವೆನಿಸಿರ ಬೇಕು.. ಯಾರನ್ನೂ ಕೂಗದೇ.. ತನ್ನ ಕಾರ್ಯದಲ್ಲೇ ಮಗ್ನನಾದ. ಇದನ್ನು ನೋಡಿದ ಅಮ್ಮ.. ತನ್ನ ಉಪಾಯ ಫಲಿಸಿತೆಂದು ಬೀಗಿ ಗೆಳತಿಯೊಂದಿಗೆ ಬೆಟ್ಟ, ಬೇಣ ತಿರುಗಲು ಹೋದವಳು ೩-೪ ತಾಸು ಕಳೆದು ಬಂದಾಗ ತಮ್ಮ ಕಾಣದೇ ಮನೆಯೊಳಗೆ ಗಾಬರಿಯಿಂದ ಬಂದರೆ ಅಳುತ್ತಿದ್ದ ತಮ್ಮನನ್ನು ಸಮಾಧಾನಿಸುತ್ತಿದ್ದ ಮನೆಯವರ ಕೆಂಗಣ್ಣು ಅವಳನ್ನು ಸ್ವಾಗತಿಸಿತ್ತು. ಅಜ್ಜಿಯಿಂದ ಈ ಪ್ರಸಂಗ ಕೇಳಿದ ಮೇಲೆ ನಾವೆಲ್ಲಾ ಬಹು ನಕ್ಕಿದ್ದೆವು. ಅಮ್ಮನನ್ನು ರೇಗಿಸಲು ನಮಗೆ ಹೊಸತೊಂದು ಅಸ್ತ್ರ ಸಿಕ್ಕಂತಾಗಿತ್ತು. ಅದರಲ್ಲೂ ತಂಗಿಗೆ ತನ್ನ ತುಂಟತನವನ್ನು ಸಮರ್ಥಿಸಲು ಹೊಸ ಕಾರಣ ಸಿಕ್ಕಿಬಿಟ್ಟಿತ್ತು.. "ನೀ ಎಂತೆಲ್ಲಾ ಮಾಡಿದ್ದೆ ಹೇಳಿ ನಂಗೊತ್ತಾಜು.. ನನ್ನ ಬೈಯಡಾ.." ಎಂದೇ ಬೀಗಿ ತಿರುಗುತ್ತಿದ್ದಳು.

ಎರಡು ತಿಂಗಳು ಎರಡು ದಿನಗಳಂತೇ ಕಳೆದು.. ಬಾನ ತುಂಬೆಲ್ಲಾ ಮೋಡಗಳ ಸವಾರಿ ಕಾಣಿಸಿದಂತೇ ಭಾರವಾದ ಮನಸಿನೊಡನೆ ನಮ್ಮ ಪಯಣ ಮತ್ತೆ ಮಂಗಳೂರಿನ ಕಡೆ ಸಾಗುತ್ತಿತ್ತು. ಎರಡು ತಿಂಗಳಲ್ಲಿ ಒಂದು ತಿಂಗಳನ್ನು ಕೆಕ್ಕಾರಲ್ಲೂ.. ಮತ್ತೊಂದು ತಿಂಗಳನ್ನು ಶಿರಸಿಯ ಹರಿಗಾರಲ್ಲೂ (ಅಪ್ಪನ ಮನೆ) ಕಳೆದು.. ಎಲ್ಲಾ ಸವಿ ನೆನಪುಗಳನ್ನೂ ಹೊತ್ತು ಮತ್ತೊಂದು ವರುಷದ ರಜೆಗಾಗಿ ಕಾಯುವ ಚಾತಕ ಪಕ್ಷಿಯಂತಾಗುತ್ತಿದ್ದೆವು ನಾವು.

ಮಾವಿನ ಹಣ್ಣಿನ, ಹಲಸಿನ ಹಣ್ಣಿನ "ಹಣ್ಣೇವು", ಹಸಿ ಗೇರುಬೀಜದ ಪಲ್ಯ, ಒಣಗಿದ ಗೇರು ಬೀಜವನ್ನು ಒಲೆಯಲ್ಲಿ ಸುಟ್ಟು ಗುದ್ದಿ ಒಂದೊಂದನ್ನೇ ಬಾಯಳಿಟ್ಟು ಕರಗಿಸಿದ ಆ ಕ್ಷಣ, ನಮಗಾಗಿ ಅಜ್ಜ ಕುಮಟೆಯಿಂದ ತರುತ್ತಿದ್ದ ಏಕ ಮಾತ್ರ "ಲಿಮ್ಚಿ" ಬಿಸ್ಕೆಟ್, ಆಗಾಗ ಪೊದೆಯಿಂದ ಹೊರ ಬಂದು ನನ್ನ ಹೆದರಿಸುತ್ತಿದ್ದ ಕೇರೆ ಹಾವಿನ ಮೋರೆ... ದೊಡ್ಡ ಗುಡ್ಡವನ್ನೇರಿ ಅಂಚನ್ನು ತಲುಪಿದಾಗ ಕಾಣುತ್ತಿದ್ದ ಪುಟ್ಟ ಸೂರ್ಯ, ಚಿಕ್ಕು ಮರಕ್ಕೆ ನೇತಾಕಿರುತ್ತಿದ್ದ ಬಟ್ಟೆ ಜೋಕಾಲಿ... ಸದಾ ನನ್ನ ಹರಕೆಗೆ ಬೆಂಗಾವಲಾಗಿದ್ದ ಬಟ್ಟೆವಿನಾಯಕನ ದೇವಸ್ಥಾನ.. ಎಲ್ಲವೂ ನೆನಪಾಗುತ್ತಿದೆ. ಕೆಕ್ಕಾರಜ್ಜಿಯ ವಾಯಿಲ್ ಸೀರೆಯ ಮಡಿಲಿನ ಕಂಪಿನ್ನೂ ಮೂಗನ್ನು ಅರಳಿಸುತ್ತಲೇ ಇದೆ... ಅಜ್ಜಿಯ ಸೊಂಟವೇರಿ ಕುಳಿತು ಬಾಳೇ ಮರದ ಕುಂಡಿಗೆಯ ತುಪ್ಪವನ್ನು ಹೀರಿದ ಸವಿ ನಾಲಗೆಯಲ್ಲಿನ್ನೂ ಹಾಗೇ ಇದೆ.... ಬಟ್ಟೆವಿನಾಯಕನೂ ಬರಿದಾದ ದಾರಿಯನ್ನೇ ನೋಡುತ್ತಾ ಕಾಯುತ್ತಲಿದ್ದಂತೆ ಭಾಸವಾಗುತ್ತಿದೆ... ಈಗತಾನೇ ಹಣ್ಣು ಹೊತ್ತಿರುವ ಗೇರು ಮರ ಪರಿಮಳ ಬೀರಲು ಸಜ್ಜಾಗಿದೆ... ಮಾವು, ಹಲಸು, ಚಿಕ್ಕು ಎಲ್ಲವೂ ಇದ್ದಲ್ಲೇ ಇವೆ. ಆದರೆ..... ನನ್ನಜ್ಜಿ.. ಕೆಕ್ಕಾರಜ್ಜಿಯೇ ಕೆಕ್ಕಾರಿನಲ್ಲಿಲ್ಲ! ದೂರ ತೀರಯಾನಕೆ ಹೋಗಿ ಮೂರುವರುಷಗಳ ಮೇಲಾದರೂ.... ಮೂರು ನಿಮಿಷವೂ ನನ್ನ ನೆನಪಿಂದ ದೂರವಾಗದ ಆ ಅದಮ್ಯ ಚೈತನ್ಯಕ್ಕೆ ನನ್ನ ಸಹಸ್ರ ನಮನ.

-ತೇಜಸ್ವಿನಿ ಹೆಗಡೆ.   

ಶುಕ್ರವಾರ, ಏಪ್ರಿಲ್ 8, 2011

ಒಂದು ಪುಟ್ಟ ವಿನಮ್ರ ವಿನಂತಿ.....

ಜವರಿ ೧೪ ೧೯೪೦ರಂದು ಹುಟ್ಟಿ.. ಸಾಮಾನ್ಯನಂತೇ ಬೆಳೆದು...ಮುಂದೆ ಭಾರತೀಯ ಸೈನ್ಯಕ್ಕೆ ಸೇರಿ, ಅಲ್ಲಿ ಚಾಲಕನಾಗಿ ದುಡಿದು.. ದೇಶಪ್ರೇಮವನ್ನು ಬೆಳೆಸುಕೊಂಡು.. ಉಳಿಸುಕೊಂಡು.. ಈ ಮಣ್ಣಿಗಾಗಿ, ಇಲ್ಲಿನ ಜನರಿಗಾಗಿ ಹೋರಾಡಿದ... ಹೋರಾಡುತ್ತಿರುವ ಆ ಚೇತನವೇ ಕಿಶನ್ ಬಾಪಟ್ ಬಾಬೂರಾವ್ ಹಜಾರೆ... ಎಲ್ಲರ ಮನದೊಳಗೆ ಮನೆಮಾಡಿರುವ ಶ್ರೀ ಅಣ್ಣಾ ಹಜಾರೆ. 

Courtesy : http://www.trendingindia.com 

೧೯೬೫ರಲ್ಲಿ ನಡೆದ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ಭಾರತೀಯ ಸೈನಿಕರನ್ನು ಹೊತ್ತು ಹೋಗುತ್ತಿದ್ದ ಟ್ರಕ್ ಒಂದರ ಮೇಲೆ ಧಾಳಿ ನಡೆದಾಗ ಅದರೊಳಗೆ ಬದುಕಿ ಬಂದಿದ್ದ ಏಕೈಕ ವೈಕ್ತಿಯೇ ಅಣ್ಣಾ ಹಜಾರೆ! ಸ್ವಾಮಿ ವಿವೇಕಾನಂದ, ಮಹಾತ್ಮಾ ಗಾಂಧಿ - ಇಂತಹ ಮಾನುಭಾವರ ಆತ್ಮ ಚರಿತ್ರೆಗಳನ್ನು ಓದುತ್ತಾ ಪ್ರಭಾವಿತರಾಗಿ ದೇಶ ಸೇವೆಗೆಂದೇ ತಮ್ಮನ್ನು ಮುಡಿಪಿಟ್ಟ ಅವರು ತಮ್ಮ ಸಮಾಜಸೇವೆಯನ್ನು ಪ್ರಾರಂಭಿಸಿದ್ದು ಮಹಾರಾಷ್ಟ್ರದ ಅಹಮದ್ ನಗರದ "ರಾಲೆಗಾಂವ್ ಸಿದ್ದಿ" ಎನ್ನುವ ಪುಟ್ಟ ಕುಗ್ರಾಮದಿಂದ.

ಕುಡಿತ, ಬಡತನ, ಅನಕ್ಷರತೆಯ ದಾಸ್ಯಕ್ಕೆ ಸಿಲುಕಿ ನರುಳುತ್ತಿದ್ದ ಅಲ್ಲಿಯ ಜನರೊಳಗೆ, ಸಾಕ್ಷರತೆ, ನೈರ್ಮಲ್ಯ, ಮೌಲ್ಯಗಳನ್ನು ತುಂಬಿದ್ದಲ್ಲದೇ ಕುಡಿತದ ಚಟ ಇರುವವರನ್ನು ನಯದಿಂದ ತಿದ್ದಿ.. ಬಗ್ಗದವರನ್ನು ಶಿಕ್ಷೆಯಿಂದ ದಾರಿಗೆ ತಂದು ಆದರ್ಶ ಗ್ರಾಮವನ್ನಾಗಿಸಲು ದುಡಿದವರು. ಈಗ ಈ ಪುಟ್ಟ ಗ್ರಾಮ ದೇಶದಲ್ಲೇ ಶ್ರೀಮಂತ ಹಾಗೂ ಮಾದರಿ ಗ್ರಾಮವಾಗಿ ಪ್ರಚಲಿತಗೊಂಡಿದೆ. ಸೌರಶಕ್ತಿಯ ಬಳಕೆಯ ಮೂಲಕ ಇಂಧನ ಉಳಿತಾಯದಂತಹ ಸದುದ್ದೇಶಗಳನ್ನು ಪ್ರೇರೇಪಿಸಿದ ಈ ಸಮಾಜ ಸೇವಕ ಸದಾ ದೇಶದ ಸರ್ವತೋಮುಖ ಏಳಿಗೆಯನ್ನು ಬಯಸಿದವರು. ಅವರ ಮಹತ್ಸಾಧನೆಗಾಗಿ ಭಾರತ ಸರಕಾರ "ಪದ್ಮ ಭೂಷಣ", "ಪದ್ಮಶ್ರೀ ಪ್ರಶಸ್ತಿಯನ್ನು" ಕೊಟ್ಟು ಗೌರವಿಸಿದೆ. 

ಆದರೆ ಇದೇ ಸರಕಾರ ಜನಪರವಾಗಿರುವ ಅವರ  ಜನ ಲೋಕಪಾಲ್ ಬಿಲ್ ಅನ್ನು ಒಪ್ಪಿಕೊಳ್ಳಲು ಸತ್ವವಿಲ್ಲದ ಕಾರಣಗಳನ್ನು ನೀಡಿ ನಿರಾಕರಿಸುತ್ತಿದೆ. ಸೋಲೊಪ್ಪದ ಅಣ್ಣಾ ಹಜಾರೆ ಅವರು ಈ ಮಸೂದೆಯನ್ನು ಜಾರಿಗೆ ತರಲು ಪಟ್ಟು ಹಿಡಿದು, ಏಪ್ರಿಲ್ ೫ರಿಂದ ನಿರಾಹಾರಿಯಾಗಿ ಸತ್ಯಾಗ್ರಾಹಕ್ಕೆ ಕುಳಿತಿದ್ದಾರೆ. ಮಸೂದೆಯಲ್ಲಿರುವ ಕೆಲವೊಂದು ಸೂಚನೆಗಳು.. ಸಲಹೆಗಳು ಸರಕಾರಕ್ಕೆ ಅಪಥ್ಯವಾಗಿದೆ. ಕಾರಣ... ಭ್ರಷ್ಟಾಚಾರ ಅಷ್ಟು ಆಳವಾಗಿ ಬೇರೂರಿದೆ. ಯಾರೂ ಪರಿಶುದ್ಧರಲ್ಲ. ಹಾಗಾಗಿ ಯಾವ ಪಾರ್ಟಿಯವರಿಗೂ ಇದರ ಮಂಡನೆ ಬೇಕಾಗಿಲ್ಲ. ಕೇವಲ ಬಾಯಿ ಮಾತಿಗಾಗಿ ತಮ್ಮ ಬೆಂಬಲವಿದೆ ಎಂದು ಸಾರುತ್ತಿದ್ದಾರೆ...ಇಲ್ಲದ ಅಸಹಾಯಕತೆಯನ್ನು ತೋಡಿಕೊಳ್ಳುತ್ತಿದ್ದಾರೆ. ಆದರೆ ಯಾರ ಕೋರಿಕೆಗೂ, ಬೆದರಿಕೆಗೂ, ಪ್ರಲೋಭನೆಗೂ ಬಗ್ಗದ ಅಣ್ಣ ಹಜಾರೆ, ಯಾವ ಪಾರ್ಟಿಯನ್ನೂ ಮೊರೆ ಹೋಗದೇ ತಮ್ಮ ಸ್ವಂತ ಬಲದ ಮೇಲೆ... ಜನ ಬೆಂಬಲದೊಂದಿಗೆ ಸತ್ಯಾಗ್ರಹದ ಮೂಲಕ ಮಂಡನೆಗಾಗಿ ಆಗ್ರಹಿಸುತ್ತಿದ್ದಾರೆ. 

ಇವರು ಹೋರಾಡುತ್ತಿರುವುದು ನಮಗಾಗಿ.. ನಮ್ಮ ಮುಂದಿನ ಭವಿಷ್ಯತ್ತಿಗಾಗಿ. ಭ್ರಷ್ಟಾಚಾರವನ್ನು ಸಂಪೂರ್ಣವಾಗಿಯಲ್ಲವಾದರೂ ತುಸುವಾದರೂ ಈ ಮಸೂದೆಯಿಂದ ನಿಯಂತ್ರಿಸಲು ಸಾಧ್ಯವಾದರೆ ಅಷ್ಟೇ ಸಾರ್ಥಕ. 

ವಿನಮ್ರ ವಿನಂತಿ
ಬನ್ನಿ ನಮಗಾಗಿ ಹೋರಾಡುತ್ತಿರುವ ಅವರ ಈ ಶಾಂತಿಯುತ, ಸತ್ವಯುತ ಹೋರಾಟದಲ್ಲಿ ನಾವೂ ನಮಗಾದಂತೇ ಪಾಲ್ಗೊಳ್ಳೋಣ. ಒಂದು ದಿನ ನಾವೆಲ್ಲರೂ ನಿರಾಹಾರಿಗಳಾದಿದ್ದು ಮೌನವಾಗಿ ಆ ಭಗವಂತನಲ್ಲಿ ಅವರ ಹಾಗೂ ನಮ್ಮ ಜಯಕ್ಕಾಗಿ ಪ್ರಾರ್ಥಿಸೋಣ. ನಿರಾಹಾರಿಗಳಾಗಿರಲು ಆರೋಗ್ಯ ಸಮಸ್ಯೆ ಇದ್ದವರು ಹಣ್ಣು-ಹಂಪಲು, ಪೇಯಗಳ ಮೂಲಕವಾದರೂ ಪಾಲ್ಗೊಳ್ಳಬಹುದು. ನಿರ್ಮಲ ಮನಸಿನ ಪ್ರಾರ್ಥನೆ, ಸಂಕಲ್ಪ ಅತ್ಯವಶ್ಯಕ. ಪ್ರಾರ್ಥನೆಯಲ್ಲಿ ಶಕ್ತಿಯಿದೆ. ಸಾತ್ವಿಕತೆಯಲ್ಲಿ ಬಲವಿದೆ... ಈ ಮೂಲಕವಾದರೂ ಸರಕಾರಕ್ಕೆ ಸದ್ಬುದ್ಧಿ ಬಂದು ಜನ ಲೋಕಪಾಲ್ ಮಸೂದೆಗೆ ಹಸಿರು ನಿಶಾನೆ ಸಿಗಬಹುದು.

ನೆನಪಿಡಿ ಒಗ್ಗಟ್ಟಿನಲ್ಲಿ ಬಲವಿದೆ.. ಒಗ್ಗಟ್ಟಿನಲ್ಲಿ ಮಾತ್ರ ಬಲವಿರುವುದು!

ನಿಮ್ಮ ಸೂಚನೆಗಾಗಿ: ಸರಕಾರ ತಿದ್ದುಪಡಿ ಮಾಡಿರುವ ಲೋಕಪಾಲ್ ಬಿಲ್ ಹಾಗೂ ಹಜಾರೆ ಅವರು ಮಂಡಿಸಿರುವ ಮಸೂದೆಯ ನಡುವಿನ ಅಂತರ ನೋಡಿ.. ನೀವೇ ನಿರ್ಧರಿಸಿ ಯಾವುದು ಜನಪರ ಹಾಗೂ ಯಾವುದು ರಾಜಕೀಯಪರವೆಂದು!

Differences between Draft Lokpal Bill 2010 and Jan Lokpal Bill
Draft Lokpal Bill 2010Jan Lokpal Bill
Lokpal will have no power to initiate suo moto action or receive complaints of corruption from the general public. It can only probe complaints forwarded by LS Speaker or RS Chairman.Lokpal will have powers to initiate suo moto action or receive complaints of corruption from the general public.
Lokpal will only be an Advisory Body. Its part is only limited to forwarding its report to the "Competent Authority"Lokpal will be much more than an Advisory Body. It should be granted powers to initiate Prosecution against anyone found guilty.
Lokpal will not have any police powers. It can not register FIRs or proceed with criminal investigations.Lokpal will have police powers. To say that it will be able to register FIRs.
CBI and Lokpal will have no connection with each other.Lokpal and anti corruption wing of CBI will be one Independent body.
Punishment for corruption will be minimum 6 months and maximum up-to 7 years.The punishment should be minimum 7 years and maximum up-to life imprisonment.
Lokpal will not be a monopoly for particular area.

(ಕೃಪೆ: http://en.wikipedia.org)

ನಾನು ಭ್ರಷ್ಟಾಚಾರವನ್ನು ತೀವ್ರವಾಗಿ ವಿರೋಧಿಸುತ್ತೇನೆ. ಅದರ ದಮನಕ್ಕಾಗಿ ಹೋರಾಡುತ್ತಿರುವ ಅಣ್ಣಾ ಹಜಾರೆ ಅವರ ಹೋರಾಟಕ್ಕೆ ನನ್ನ ಬೆಂಬಲಿದೆ. ಒಂದು ದಿನದ ಉಪವಾಸ ಮಾಡುವುದರ ಮೂಲಕ ನನ್ನ ಬೆಂಬಲವನ್ನು ನೀಡುತ್ತಿದ್ದೇನೆ.


-ತೇಜಸ್ವಿನಿ ಹೆಗಡೆ.

ಮಂಗಳವಾರ, ಏಪ್ರಿಲ್ 5, 2011

ತಾಯಿ ಮೊದಲ ಗುರು ಮಾತ್ರವಲ್ಲ, ವೈದ್ಯೆಯೂ ಆಗಬೇಕು...


Courtesy : http://www.healthheap.com  
"ಅಮ್ಮಾ.. ಪಾರ್ಕಿಗೆ ಹೋಪನ.... ಪೀಜ್.... ಎಷ್ಟು ದಿನ ಆತು ಜೋಜೋ ಮಾಕಂಡು... ನಾನು ಹಠ ಮಾತಿಲ್ಲ... ಹೋಪನ..." ಎಂದು ಒಂದೇ ಸಮನ ಪಿಟೀಲು ಬಾರಿಸುತ್ತಿದ್ದವಳಿಗಾಗಿಯೇ ಅಂದು ಮನೆ ಹತ್ತಿರದ ಉದ್ಯಾನವನಕ್ಕೆ ಹೋಗಿದ್ದು. ನನ್ನ ತಂಗಿಯ ಮನೆಯವರೂ ನಮ್ಮೊಂದಿಗೆ ಸೇರಿಕೊಳ್ಳಲು..ಎಲ್ಲಾ ಒಟ್ಟಿಗೆ ಪುಟ್ಟಿಯ ಪಾರ್ಕಿಗೆ ಧಾಳಿ ಇಟ್ಟೆವು. ಜೋಜೋ... ಜಾರುಬಂಡಿ ಎಲ್ಲಾ ಆಗಿ ಮಣ್ಣಾಟ ಆಡುತ್ತಿರುವ ಚಿಣ್ಣರನ್ನು ಕಣ್ತುಂಬಿಕೊಂಡು ಹಾಗೇ ಒಂದು ಸುತ್ತು ಹಾಕಲು ನಾನೂ ನನ್ನ ತಂಗಿ ಹೊರಟಾಗಲೇ ಆಕೆ ನಮ್ಮ ಬಳಿ ಬಂದಿದ್ದು. 

"ಕೈಸೆ ಹೋ ಆಪ್? ಯೆ ಮೇರಿ ದೀದಿ ಹೈ..." ಎಂದು ನನ್ನನ್ನು ಆಕೆಗೂ... "ಇವ್ರು ನನ್ನ ಮನೆ ಹತ್ತಿರದಲ್ಲೇ ಇಪ್ಪದು... ಚೆನ್ನೈ ಕಡೆಯವು... ಉತ್ತರಭಾರತದಲ್ಲಿ ಮೊದ್ಲು ಇದ್ದಿದ್ದು.. ಈಗ ಇಲ್ಲಿಗೆ ಟ್ರನ್ಸ್‌ಫರ್ ಆಜೋ..."ಎಂದು ಆಕೆಯನ್ನು ನನಗೂ ಪರಿಚಯಿಸಿದಳು ತಂಗಿ. ಆಕೆಯ ಹೆಸರು... ಊಹೂಂ.. ಎಷ್ಟು ನೆನಪಿಸಿಕೊಂಡರೂ ನೆನಪಿಗೇ ಬರುತ್ತಿಲ್ಲ ಈಗ... ಆದರೆ ಆಕೆಯ ಕಂಕುಳಲ್ಲಿದ್ದ ಎರಡೂವರೆ ವರುಷದ ಹುಡುಗ ಮಾತ್ರ ದಿನಕ್ಕೊಂದು ಹತ್ತಾರು ಸಲವಾದರೂ ನೆನಪಾಗುತ್ತಿರುತ್ತಾನೆ!

ಮೂರು ಜನ ತಾಯಂದಿರು ಸೇರಿದರೆ ಸಹಜವಾಗಿಯೇ ಅವರ ಬಹು ಪಾಲು ಮಾತು ತಮ್ಮ ಮನೆ, ಮಕ್ಕಳ ಸುತ್ತಲೇ ಸುತ್ತುತ್ತದೆ. ಅದರಲ್ಲೂ ಅವರ ಶಾಲೆ, ಆಟ, ತುಂಟಾಟಗಳತ್ತಲೇ ಹೊರಳುತ್ತಿರುತ್ತದೆ. ಅಂತೆಯೇ ಅಂದು ಆಕೆ ಭೇಟಿ ಆದಾಗ ನಾವು ಮೂವರೂ ನಮ್ಮ ನಮ್ಮ ಮಕ್ಕಳ ತುಂಟಾಟ, ಪಾಠ, ಮುಂದಿನ ಕಲಿಕೆ, ಸ್ಕೂಲ್ ಅಡ್ಮಿಷನ್ ಎಲ್ಲದರ ಬಗ್ಗೆ ಮಾತಾಡುತ್ತಿದ್ದೆವು. ಅವರಿಗೆ ಒಂದನೇ ತರಗತಿಯಲ್ಲಿ ಓದುತ್ತಿರುವ ಒಂದು ಹುಡುಗಿ ಹಾಗೂ ಆಕೆ ಕಂಕುಳಲ್ಲೆತ್ತಿಕೊಂಡುರುವ ಎರಡೂವರೆ ವರುಷದ ಹುಡುಗ ಎಂದು ತಿಳಿಯಿತು. ಅಲ್ಲೇ ಹತ್ತಿರ ಆಡುತ್ತಿದ್ದ ಹುಡುಗಿಯ ಚುರುಕುತನ ಮನಸೆಳೆಯುವಂತಿತ್ತು. ಆದರೆ ಹುಡುಗ.....!!! 

ಕನ್ನಡ ಬರದ ಆಕೆ ಹಿಂದಿ-ಇಂಗ್ಲೀಷ್ ಭಾಷೆಗಳಲ್ಲೇ ಹೆಚ್ಚು ಸಂಭಾಷಿಸುತ್ತಿದ್ದಳು. ತನ್ನ ಮಗಳನ್ನು ತುಸು ದೂರವಾದರೂ ಉತ್ತಮ ಹೆಸರಿರುವ ಶಾಲೆಯೊಂದಕ್ಕೆ ಸೇರಿಸಿರುವೆನೆಂದೂ... ತಮ್ಮನೆಂಬ ಕಾರಣಕ್ಕೆ ತನ್ನ ಮಗನಿಗೂ ಪ್ರಿ-ನರ್ಸರಿಯಿಂದ ಅಲ್ಲಿಯೇ ಸೀಟು ಸಿಗಬಹುದೆಂದೂ.. ಅಲ್ಲಿಯವರೆಗೆ ಒಂದು ವರುಷ ಹತ್ತಿರದಲ್ಲಿರುವ ಪ್ರತಿಷ್ಠಿತ ಪ್ಲೇ ಹೋಂ‌ಗೆ ಹಾಕಬೇಕಿರುವೆನೆಂದೂ... ಹಾಗೆ ಮಾಡಬೇಕೆಂದಿರುವೆ.. ಇವನನ್ನು ಅಲ್ಲಿ ಓದಿಸಬೇಕೆಂದಿರುವೆ... ಅವಳನ್ನು ಆ ರೀತಿ ತಯಾರು ಮಾಡಬೇಕೆಂದಿರುವೆ.... - ಹೀಗೆ ಒಂದೇ ಸಮನೆ ಮಗಳ ಅದರಲ್ಲೂ ಮಗನ ಭವಿಷ್ಯತ್ತಿನ ಬಗ್ಗೆ ಕನಸು ಕಾಣುತ್ತಿದ್ದ... ಅದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ ಆಕೆಯ ಮೇಲೆ ಮಾತ್ರ ತುಂಬಾ ಸಿಟ್ಟು, ಸ್ವಲ್ಪ ಕರುಣೆ... ಹಾಗೂ ಅತಿ ಹೆಚ್ಚು ಅನುಕಂಪವೂ ಮೂಡುತ್ತಿತ್ತು ನನಗೆ. ಸಿಟ್ಟು ಮೂಡಿದ್ದು- ಒಂದು ಮಗುವನ್ನೂ ಹೆತ್ತೂ, ಅನುಭವಸ್ಥೆಯಾಗಿಯೂ ತನ್ನ ಎರಡನೆ ಮಗುವಿನ ಬೆಳವಣಿಗೆಯ ಪ್ರತಿ ಆಕೆ ತೋರುತ್ತಿರುವ ನಿರ್ಲಕ್ಷತನಕ್ಕೆ... ಕರುಣೆ ಮೂಡಿದ್ದು- ಅವಳ ಪರಿಸ್ಥಿತಿಗೆ.... ಅನುಕಂಪ ಮೂಡಿದ್ದು- ಅವಳ ಅತಿಯಾದ ದಡ್ಡತನಕ್ಕೆ. ಅದಕ್ಕೆ ಕಾರಣ ಅವಳ ಮಗನ ಮಾನಸಿಕ ಸ್ಥಿತಿ!

ಮೊದಲ ನೋಟದಲ್ಲೇ ಅಲ್ಪವಾದರೂ ಜ್ಞಾನವಿರುವವರು ಯಾರೇ ಆಗಿದ್ದರೂ ಊಹಿಸಬಲ್ಲರು... ಆ ಹುಡುಗ ಸಾಮಾನ್ಯ ಮಕ್ಕಳಂತಿಲ್ಲ. ಆತನ ಮಾನಸಿಕ ಸ್ಥಿತಿ ಸಾಮಾನ್ಯ ಮಕ್ಕಳಂತಿಲ್ಲ... ಅವನ ಆಟೋಟ.. ಕಣ್ಣೋಟ.. ಅಷ್ಟೇ ಏಕೆ ನಡಿಗೆ ಯಾವುದೂ "ನಾರ್ಮಲ್" ಆಗಿಲ್ಲ! ದೃಷ್ಟಿ ಅಸಮರ್ಪಕವಾಗಿದೆ... ನಡಿಗೆ ತಪ್ಪಾಗುತ್ತಿದೆ... ಚುರುಕು ನೋಟವಾಗಲೀ... ಮಾತಾಗಲೀ... ಆಟೋಟವಾಗಲೀ ಇಲ್ಲ... ಮಾತೂ ಬರುತ್ತಿಲ್ಲ! "ಅಟಿಸ್ಟಿಕ್(Autistic)" ಇರುವ ಮಕ್ಕಳ ಹೆಚ್ಚಿನ ಚಿಹ್ನೆ ಆತನಲ್ಲಿ ಕಂಡು ಬಂತು. ಹೀಗೇ ಎಂದು ಹೇಳಲು ಈಗಲೇ ಸಾಧ್ಯವಿಲ್ಲ ನಿಜ.... ಆದರೆ ಆ ಪುಟ್ಟ ಹುಡುಗನಲ್ಲಿ ಅಸಮರ್ಪಕ ವರ್ತನೆ ಇರುವುದಂತೂ ಶತ ಸತ್ಯ ಎಂಬುದನ್ನು ಮಾತ್ರ ಖಂಡಿತವಾಗಿಯೂ ಹೇಳಬಲ್ಲೆ! "ವೋ ಅಭೀ.. ಸಿರ್ಫ್ ಡಾಡಾ... ಬೋಲ್ತಾ ಹೈ.. ಏಕ್ ಬಾರ್ ಸ್ಕೂಲ್ ಡಾಲೂಂಗೀ ತೋ ಸೀಕ್‌ಲೇಗಾ ನಾ..." ಎಂದು ಹೇಳುತ್ತಿರುವುದು ಅವಳ ಮುಚ್ಚುವಿಕೆಯೋ ಇಲ್ಲಾ ಅಜ್ಞಾನವೋ ತಿಳಿಯದು! ಅವನದೇ ವಯಸ್ಸಿನ ನನ್ನ ತಂಗಿಯ ಮಗನ ವರ್ತನೆ... ಆಟ... ಮಾತು.. ಅಷ್ಟೇ ಏಕೆ ಅವನಿಗಿಂತ ಚಿಕ್ಕ ವಯಸ್ಸಿನ ಮಕ್ಕಳ ಆಟೋಟ ಎಲ್ಲವೂ ತೂಗಿದರೂ ಸಾಕು ಆಕೆಗೆ ಅರಿವಾಗಲು... ಅವನಿಗೆ ಉತ್ತಮ ಸ್ಕೂಲಿನ ಬದಲಾಗಿ ಅತ್ಯುತ್ತಮ ವೈದ್ಯಕೀಯ ಸಲಹೆಯ ಅತ್ಯಗತ್ಯತೆ ಇದೆ ಎಂದು!

ಹೆಚ್ಚು ಹೊತ್ತು ನನಗೆ ಅವರೊಡನೆ ವ್ಯವಹರಿಸಲೇ ಆಗಲಿಲ್ಲ. ಅವಳ ಮಾತು, ವರ್ತನೆ... ಎಲ್ಲವೂ ಭವಿಷ್ಯತ್ತಿನೆಡೆಗೇ ಇತ್ತು... ತನ್ನ ಮಗನ ಸ್ಥಿತಿ-ಗತಿ.. ಅವನ ಮಾನಸಿಕ ಅಸಮತೋಲನತೆ ಇದಾವುದರ ಬಗೆಗೂ ಪರಿವೆಯೇ ಇದ್ದಂತಿರಲಿಲ್ಲ.. ಎಲ್ಲರೂ ಒಂದೇ ತರ ಇರರು.... ಒಪ್ಪುವೆ. ಆದರೆ ತೀರಾ ಅಸಹಜತೆ ಯಾವತ್ತೂ ಉತ್ತಮವಲ್ಲ. ತಾಯಿಯಾದವಳು ತನ್ನ ಮಗುವಿನ ಬೆಳವಣಿಗೆ, ಮನೋಗತಿ.. ಕಲಿಕೆ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿರಬೇಕು. ಚಿಕ್ಕ ವಯಸ್ಸಿನಲ್ಲೇ ಸರಿಯಾದ ಸಲಹೆ, ಚಿಕಿತ್ಸೆ ಸಿಕ್ಕರೆ ದೊಡ್ಡ ಅಪಾಯ ತಪ್ಪಬಹುದು. ಕಾಲ ಕಳೆದಂತೇ ಎಲ್ಲವೂ ಕಷ್ಟಕರವೇ. ಆ ಹುಡುಗನ ಭವಿಷ್ಯತ್ತು ಆಕೆಯ ಕೈಯಲ್ಲಿದೆ... ಇನ್ನೂ ಕಾಲ ಮಿಂಚಿಲ್ಲ... ಸರಿಯಾದ ಮಾರ್ಗದರ್ಶನ ದೊರೆತರೆ.. ವೈದ್ಯರ ನೆರವು ಪಡೆದರೆ ಆತನೂ ಎಲ್ಲರಂತೇ ಬಾಳ ಬಹುದು. ಇದನ್ನೇ ನಾನು ನನ್ನ ತಂಗಿಯ ಬಳಿಯೂ ಹೇಳಿದೆ. "ನನಗೂ ಇದು ಮೊದಲ ಭೇಟಿಯಲ್ಲೇ ಅರಿವಾಗಿತ್ತು... ಆದರೆ ಹೇಗೆ ಆಕೆಗೆ ತಿಳಿಸುವುದು? ತಪ್ಪು ತಿಳಿದರೆ? ತಾಯಿ ಆದವಳು ಇನ್ನೊಬ್ಬರು ಹೇಳಿದ್ದನ್ನು ಸಹಜವಾಗಿ ತೆಗೆದುಕೊಂಡು ಪರಿಶೀಲಿಸುವುದು ತೀರಾ ಕಡಿಮೆ.. ಹಾಗಾಗಿ ಸುಮ್ಮನಾದೆ. ಅವಳಿಗೆ ಯಾಕೆ ತಿಳಿಯುತ್ತಿಲ್ಲವೋ.. ಕಲಿತವಳು.. ಲೋಕ ನೋಡಿದವಳು.. ಆದರೂ ನಿರ್ಲಕ್ಷಿಸುತ್ತಿದ್ದಾಳೆ..." ಎಂದು ಅಲವತ್ತು ಕೊಂಡಳು ನನ್ನ ತಂಗಿ ಕೂಡ...!

ಹೇಗೆ ಓರ್ವ ತಾಯಿ ತನ್ನ ಅಜ್ಞಾನ, ಅಲ್ಪಜ್ಞಾನದಿಂದಾಗಿ ತನ್ನದೇ ಮಗುವಿನ ಭವಿಷ್ಯವನ್ನು ಹಾಳುಗೆಡವಹುದು ಎನ್ನುವುದಕ್ಕೆ ಇದೊಂದು ಚಿಕ್ಕ ಉದಾಹರಣೆ ಅಷ್ಟೇ. ವಿದ್ಯೆ ಪುಸ್ತಕದ ಬದನೆಕಾಯಿಯಂತೇ ಆಗುತ್ತಿದೆ ಈಗ... ಸಾಮಾನ್ಯ ಜ್ಞಾನದ ಕೊರತೆ ಎದ್ದು ಕಾಣುತ್ತಿರುವುದು ಹೆಚ್ಚಾಗಿ ವಿದ್ಯಾವಂತರಲ್ಲೇ! ಮಗುವಿನ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುವುದು ಆಕೆಯದೊಂದೇ ಕರ್ತವ್ಯವಲ್ಲ. ತಂದೆಯಾದವನೂ ತನ್ನ ಮಕ್ಕಳ ಪ್ರತಿ ಜವಾಬ್ದಾರಿಯುತ ಹೊಣೆ ಹೊರಬೇಕಾಗುತ್ತದೆ. ಕೇವಲ ಅವರ ಓದು, ಆಟ, ಬಟ್ಟೆ ಬರೆ, ಉತ್ತಮ ಸೌಕರ್ಯ ಕಲ್ಪಿಸುವಿಕೆ - ಇವುಗಳಷ್ಟೇ ಹೊಣೆ ಎಂದರಿಯಬಾರದು. ಆಯಾ ವಯಸ್ಸಿಗೆ ತಕ್ಕಂತೇ ಮಾನಸಿಕ, ದೈಹಿಕ ಬೆಳವಣಿಗೆ ಇದೆಯೇ? ಯಾವ ರೀತಿ ಸಾಮಾಜಿಕ ಸ್ಪಂದನೆ ಇದೆ? ಯಾವ ರೀತಿ ತನ್ನ ಭಾವನೆಗಳನ್ನು ಅಭಿವ್ಯಕ್ತಿಸುತ್ತಿದ್ದಾನೆ? ಎಂಬುದನ್ನೂ ಗಮನಿಸುತ್ತಿರಬೇಕು. ಮಗು ಹೆಚ್ಚು ಅಂಟಿಕೊಳ್ಳುವುದು, ಭಾವನಾತ್ಮಕವಾಗಿ ಬೆಸೆದುಕೊಂಡಿರುವುದು ತಾಯಿಯ ಜೊತೆಗೇ. ಹಾಗಾಗಿ ಆಕೆಯ ಹೊಣೆಯೇ ಮಹತ್ತರವಾದದ್ದು. ಹೊತ್ತು ಹೆತ್ತು ಮುದ್ದಿನಿಂದ ಸಾಕಿದರೆ ಮಾತ್ರ ತಾಯ್ತನ ಸಾರ್ಥಕವಾಗದು. ತನ್ನ ಮಗುವಿನ ಸರ್ವತೋಮುಖ ಬೆಳವಣಿಗೆಗೆ ತನ್ನೆಲ್ಲಾ ಶ್ರದ್ಧೆ, ಶ್ರಮವನ್ನು ಧಾರೆ ಎರೆಯುವುದು.. ತನ್ನ ಇಷ್ಟಾನಿಷ್ಟಗಳನ್ನೂ ಒಮ್ಮೊಮ್ಮೆ ತ್ಯಾಗ ಮಾಡಿ ಪ್ರೋತ್ಸಾಹ, ಬೆಂಬಲ ನೀಡುವುದು- ಇದರಲ್ಲೇ ನಿಜವಾದ ತಾಯ್ತನ ಅಡಗಿರುವುದು. ಇದನ್ನು ಸಾರ್ಥಕಗೊಳಿಸಿಕೊಳ್ಳಲು ಸ್ವತಃ ಹೊತ್ತು ಹೆರಬೇಕೆಂದೂ ಇಲ್ಲ. ಎಲ್ಲವುದಕ್ಕೂ ನಮ್ಮೊಳಗಿನ ಸ್ವಂತಿಕೆ, ತಿಳುವಳಿಕೆ, ಶ್ರದ್ಧೆ, ಪ್ರಾಮಾಣಿಕತೆಯೇ ಮುಖ್ಯವಾಗುತ್ತದೆ.

ಆ ತಾಯಿಯ ಮನದೊಳಗೂ ಸತ್ಯದ ಅರಿವಾಗಿ.. ಆ ಮಗುವೂ ಸರ್ವತೋಮುಖ ಬೆಳವಣಿಗೆ ಕಾಣಲೆಂದು ಮನಃಪೂರ್ವಕವಾಗಿ ಪ್ರಾರ್ಥಿಸುತ್ತಿರುವೆ. ಮತ್ತೆ ಎಂದಾದರೂ ಆಕೆ ಸಿಕ್ಕರೆ ನಾನು ಕೆಟ್ಟವಳಾದರೂ ಸರಿ.. ಮೆಲ್ಲನೆ.. ಸೂಕ್ಷ್ಮವಾಗಿ ಆಕೆಗೆ ತಿಳಿಸಿಯೇ ತೀರುತ್ತೆನೆಂದು ಪಣತೊಟ್ಟಿರುವೆ.

-ತೇಜಸ್ವಿನಿ ಹೆಗಡೆ.