ಮಂಗಳವಾರ, ಸೆಪ್ಟೆಂಬರ್ 18, 2018

ಮರ್ಯಾದಾ ಹತ್ಯೆ : ಕಾರಣಗಳು ಮತ್ತು ಪರಿಹಾರ


ತ್ತೀಚಿಗಷ್ಟೇ ನಾನು ಮರಾಠಿಯ ಪಸಿದ್ಧ ‘ಸೈರಾಟ್’ ಚನಲನಚಿತ್ರವನ್ನು ನೋಡಿ ಬಹಳ ಇಷ್ಟಪಟ್ಟಿದ್ದೆ ಮತ್ತು ಅದರ ಅಂತ್ಯಕ್ಕೆ ಬಹಳ ಬೇಸರವೂ ಆಗಿತ್ತು. ಹಾಗೇ ಕೆ. ನಲ್ಲತಂಬಿಯವರ ಅನುವಾದಿತ ಕಾದಂಬರಿಯಾದ ‘ಹೂ-ಕೊಂಡ’ವನ್ನೂ ಓದಿ ಮೆಚ್ಚಿದ್ದೆ, ಬೆಚ್ಚಿದ್ದೆ! ಎರಡೂ ಒಂದೇ ವಿಷಯವನ್ನು ಎತ್ತಿಹಿಡಿಯುತ್ತವೆ. ಅದೇ ಮರ್ಯಾದಾ ಹತ್ಯೆ!

ಈಗ ನೋಡಿದರೆ ತೆಲಂಗಾಣದ ಯುವ ಜೋಡಿಯ ದಾರುಣ ಕತೆ ಹೊರಬಿದ್ದಿದೆ! ಮಗಳು ತಮ್ಮ ಜಾತಿಯಲ್ಲದವನನ್ನು ಮದುವೆಯಾಗಿ ಸುಖವಾಗಿದ್ದಾಳೆ ಎಂಬ ಒಂದೇ ಕಾರಣಕ್ಕೆ, ತಮ್ಮ ಹುಸಿ ಪ್ರತಿಷ್ಠೆಗೆ ಕುಂದಾಯಿತು ಎಂದು ಕ್ರೋಧಗೊಂಡು ಸ್ವಂತ ತಂದೆಯೇ, ಹೆತ್ತ ಮಗಳ ಗಂಡನನ್ನು ಅವಳ ಕಣ್ಮುಂದೆ ಇರುದು ಕೊಲ್ಲಿಸಿದ ವೀಡಿಯೋ ಎಲ್ಲೆಡೆ ವೈರಲ್ ಆಗಿ ಎಲ್ಲರನ್ನೂ ತಲ್ಲಣಗೊಳಿಸಿದೆ. ಮಗಳು ಗರ್ಭಿಣಿಯಾಗಿದ್ದಾಳೆ, ಆ ಮಗುವಿಗೆ ಭವಿಷ್ಯವಿದೆ, ತಮಗೆ ಇಷ್ಟ ಇಲ್ಲದಿದ್ದರೆ ದೂರವಿದ್ದುಬಿಟ್ಟರಾಯಿತು ಎಂಬ ಕನಿಷ್ಟ ಕಾಳಜಿಯೂ ಇಲ್ಲದೆ ಪಶುವಿಗಿಂತ ಕಡೆಯಾಗಿಬಿಟ್ಟ ಆ ತಂದೆ ಎಂದೆನ್ನಿಸಿಕೊಂಡವನ ಕ್ರೌರ್ಯವಾದರೂ ಎಂಥದ್ದಪ್ಪಾ ಎಂದೆನಿಸಿಬಿಟ್ಟಿತು. ನಿಜಕ್ಕೂ ಇದೊಂದು ಹೇಯ ಮತ್ತು ತೀವ್ರ ಖಂಡನೀಯ ಘಟನೆ. ಆ ಯುವ ಜೋಡಿಯ ಕನಸುಕಂಗಳ ಭಾವಚಿತ್ರ ಇನ್ನೂ ಕಾಡುತ್ತಿದೆ ನನ್ನನ್ನು. ಕ್ಷುದ್ರ ಮನುಷ್ಯನ ವಿಕೃತಿಗಿಂತ ಅಪಾಯಕಾರಿಯಾದ್ದು ಬೇರೊಂದಿಲ್ಲ ಅನ್ನಿಸಿಬಿಟ್ಟಿತು. ಇದಾದ ನಂತರ ಸಹಜವಾಗಿಯೇ ಇಂಥಾ ದುರ್ಘಟನೆಯ ಹಿನ್ನಲೆ, ನಡೆಯುತ್ತಿರುವ ಪ್ರದೆಶಗಳ ಕುರಿತು ಮಾಹಿತಿ ಪಡೆಯಬೇಕೆಂದೆನ್ನಿಸಿತು. ಎಲ್ಲೆಲ್ಲಿ ಈ ಮರ್ಯಾದಾ ಹತ್ಯೆ ನಡೆದಿದೆ/ನಡೆಯುತ್ತಿದೆ ಎಂದು ಸ್ವಲ್ಪ ಹುಡುಕಾಡುತ್ತಿರುವಂತೆ ಇದರ ಆಳ, ಅಗಲ, ವಿಸ್ತಾರ ಜಗತ್ತಿನಾದ್ಯಂತ ಹರಡಿಕೊಂಡಿರುವುದು ಸ್ಪಷ್ಟವಾಗುತ್ತಾ ಹೋಯಿತು.
*HBV ಸರ್ವೆಯ ಪ್ರಕಾರ ಜಗತ್ತಿನಾದ್ಯಂತ ಪ್ರತಿವರುಷ ಸರಿಸುಮಾರು ೫,೦೦೦ ಹೆಣ್ಮಕ್ಕಳು ಮತ್ತು ಹುಡುಗಿಯರು ಈ ಮರ್ಯಾದಾ ಹತ್ಯೆಗೆ ಬಲಿಯಾಗುತ್ತಿದ್ದಾರೆ! ಇದು ವಿಶೇಷವಾಗಿ ಮಧ್ಯ ಪೂರ್ವ ಹಾಗೂ ದಕ್ಷಿಣ ಏಷ್ಯಾ ದೇಶಗಳಲ್ಲಿ ಹೆಚ್ಚು ಕಾಣಿಸುತ್ತಿದೆಯಂತೆ. ಇದರಲ್ಲಿ ಭಾರತ ಮತ್ತು ಪಾಕಿಸ್ತಾನ ದೇಶಗಳಲ್ಲಿ ಪ್ರತಿ ವರುಷ ತಲಾ ೧,೦೦೦ ಹತ್ಯೆಗಳಾಗುತ್ತಿದ್ದರೆ, ಇಂಗ್ಲೇಂಡಿನಲ್ಲೂ ವರುಷದಲ್ಲಿ ೧೨ ಇಂಥಾ ಹತ್ಯೆಗಳು ರಿಪೋರ್ಟ್ ಆಗುತ್ತಿರುತ್ತವಂತೆ. ಇನ್ನು ರಿಪೋರ್ಟೇ ಆಗದ ಪ್ರಕರಣಗಳು ಅದೆಷ್ಟು ಇರುತ್ತವೆಯೋ ಗೊತ್ತಿಲ್ಲ!  ಬಾಂಗ್ಲಾದೇಶ, ಭಾರತ, ಪಾಕಿಸ್ತಾನ, ಈಜಿಪ್ಟ್, ಇರಾನ್, ಇಸ್ರೇಲ್, ಜೋರ್ಡಾನ್, ಮೊರೊಕ್ಕೋ, ಯು.ಕೆ., ಅಮೇರಿಕಾ ಹೀಗೆ ಎಲ್ಲೆಡೆ ಈ ಒಂದು ದುರಂತ ಅವ್ಯಾಹತವಾಗಿ ನಡೆದುಹೋಗಿತ್ತಿದೆ.
*ಎಷ್ಟೋ ದೇಶಗಳಲ್ಲಿ ಇದನ್ನು ತಡೆಯಲು ಸಶಕ್ತ ಕಾನೂನೂ ಇಲ್ಲ, ಇದ್ದರೂ ಅದು ಸೂಕ್ತ ರೀತಿಯಲ್ಲಿ ಜಾರಿಗೆ ಬರುತ್ತಿಲ್ಲ. ಕೆಲವೆಡೆಯಂತೂ ಇದೊಂದು ಸಾಮಾನ್ಯ ವಿಷಯ!
*Iranian and Kurdish Rights Organization ಪ್ರಕಾರ ಯುರೋಪ್ ಮತ್ತು ಅಮೇರಿಕಾದಲ್ಲೂ ಮರ್ಯಾದ ಹತ್ಯೆಯ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿವೆಯಂತೆ!
* ಅಮೇರಿಕಾದ ೨೦೧೪ರ ಜನಾಂಗ ಸ್ಥಿತಿ (demographics) ವರದಿಯ ಪ್ರಕಾರ ಪ್ರತಿ ವರ್ಷ ಈ ದೇಶದಲ್ಲೇ ೨೩ ರಿಂದ ೨೭ ಮರ್ಯಾದಾ ಹತ್ಯೆಯ ಪ್ರಕರಣಗಳು ಕಾಣಿಸುತ್ತಿವೆಯಂತೆ! ಆದರೆ ಸಾಕಷ್ಟು ಮಾಹಿತಿ ದೊರಕದೇ ಇದರ ಬಗ್ಗೆ ಬೆಳಕಿಗೆ ಬರದೇ ಹೋಗುತ್ತಿದೆ ಎನ್ನಲಾಗಿದೆ.
*ಈ ಕೆಳಗಿನ ಲಿಂಕಿಗೆ ಹೋಗಿ ನೋಡಿದರೂ ಸಾಕು, ಜಗತ್ತಿನಾದ್ಯಂತ ಈ ಒಂದು ಮಾರಕ ಪಿಡುಗು ಹೇಗೆ ಹಬ್ಬಿ ಬಲಿತಿದೆ ಎಂದು ನಿಚ್ಚಳವಾಗುವುದು! (ಇನ್ನೂ ಕೆಲವು ಕೊಂಡಿಗಳನ್ನು ಕೊನೆಯಲ್ಲಿ ನೀಡಿದ್ದೇನೆ.)

ಭಾರತದಲ್ಲಿ ಮರ್ಯಾದಾ ಹತ್ಯೆ:-
ಭಾರತದಲ್ಲಿ ಇದು ಮತ್ತೆಮತ್ತೆ ಕೇಳಿಬರುತ್ತಿರುವ, ಕಂಡು ಬರುತ್ತಿರುವ ಹೇಯ ಕೃತ್ಯವಾಗಿದೆ. ವಿಶೇಷವಾಗಿ ಹರ್ಯಾಣ, ರಾಜಸ್ಥಾನ, ಉತ್ತರ ಪ್ರದೇಶ, ಬಿಹಾರ ರಾಜ್ಯಗಳಲ್ಲಿ ಗಣನೀಯವಾಗಿ ಹೆಚ್ಚಿವೆ. ಹರ್ಯಾಣದಲ್ಲಿ ಬಲಶಾಲಿಯಾಗಿರುವುದೇ ಅಲ್ಲಿಯ ‘ಖಾಪ್’ ಪಂಚಾಯಿತಿ! ಇಲ್ಲಿ ಕೋರ್ಟು, ಪೋಲೀಸ್ಟೇಶನ್ ಯಾವುದೂ ನಡೆಯುವುದಿಲ್ಲ ಎಂದು ಓದಿರುವೆ. ಮರ್ಯಾದಾ ಹತ್ಯೆಗೆ, ಹೆಣ್ಮಕ್ಕಳ ಹಕ್ಕು ಚ್ಯುತಿಗೆ ಈ ಖಾಪ್ ಪಂಚಾಯಿತಿಯ ಅಂಧಾ ಕಾನೂನೇ ಕಾರಣ. ನಮ್ಮ ಸುಪ್ರೀಂ ಕೋರ್ಟೇ ಇಂಥಾ ಪಂಚಾಯಿತಿಗಳನ್ನು ತೆಗೆದುಹಾಕಬೇಕೆಂದು ಅಲ್ಲಿನ ಎಸ್ಪಿಗಳಿಗೆ ಮಾಹಿತಿ ನೀಡಿದ್ದರೂ ಅವರ ರಾಜ್ಯಭಾರ ನಿಂತಂತಿಲ್ಲ. ಅವರ ಪ್ರಕಾರ ಸರ್ವೋಚ್ಚ ನ್ಯಾಯಾಲಯಕ್ಕೇ ಸರಿಯಾದ ನ್ಯಾಯ ಗೊತ್ತಿಲ್ಲ... ಅವರೇ ಸರಿ ಎಂಬಂತೇ ಧಿಮಾಕು ತೋರುವ ಹೇಳಿಕೆ ನೀಡಿದ್ದರು. ‘ಖಾಪ್’ ಪಂಚಾಯತಿಯ ದೌರ್ಜನ್ಯದ ವಿರುದ್ಧ ಸಿಡಿದೇಳುವ, ಜನರಲ್ಲಿ ಜಾಗೃತಿ ಮೂಡಿಸುವ ಅನೇಕ ಚಲನಚಿತ್ರಗಳು ಬಂದಿವೆ.
ಉದಾಹರಣೆಗೆ : ಹಿಂದಿಯ “ಖಾಪ್” ಎಂಬ ಹೆಸರನಿದೇ ಚಲನಚಿತ್ರ.
ಮದುವೆ ಎಂಬುದು ಎರಡು ಕುಟುಂಬಗಳ ನಡುವಿನ ಸುಂದರ ಬಂಧ, ಎರಡೂ ಕಡೆಯವರ ಅದರಲ್ಲೂ ವಿಶೇಷವಾಗಿ ಹೆತ್ತವರ ಸಮ್ಮತಿ ಇದ್ದರೆ ಅದಕ್ಕೊಂದು ಮೆರುಗು, ಹೆಚ್ಚು ಸಾಮಾಜಿಕ ಭದ್ರತೆ ದೊರಕುತ್ತದೆ, ಹೀಗಾಗಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂಬುದನ್ನೆಲ್ಲಾ ಒಪ್ಪೋಣ. ಆದರೆ ಎಷ್ಟೋಸಲ ಹೆತ್ತವರಿಗೆ ತಮ್ಮ ಮಕ್ಕಳ ಒಳಿತು ಕೆಡುಕು ತಮಗಿಂತ ಚೆನ್ನಾಗಿ ಬಲ್ಲವರು ಯಾರೂ ಇಲ್ಲ ಎಂಬ ಭ್ರಮೆ ಇದ್ದಿರುತ್ತದೆ. ತಮ್ಮ ಮಕ್ಕಳೂ ತಮ್ಮಷ್ಟೇ ಅವರ ಬದುಕನ್ನು ಇರ್ಧರಿಸುವ ಹಕ್ಕುಳ್ಳುವರು, ಅವರೂ ತಿಳುವಳಿಕೆ ಹೊಂದಿರುತ್ತಾರೆ ಎಂಬುದನ್ನು ಮರೆತುಬಿಡುವರು. ಅವರ ಇಷ್ಟವನ್ನರಿಯದೇ ತಮ್ಮ ದೃಷ್ಟಿಯಲ್ಲಿ ಸೂಕ್ತ ಎನ್ನಿಸುವ ಕಡೆಗೆ ಒತ್ತಾಯದಿಂದ ಮದುವೆಮಾಡಿಸಲು ನೋಡುವರು. ಹೆಚ್ಚಿನ ಸಮಯದಲ್ಲಿ ಆರ್ಥಿಕ ಅಸಮಾನತೆ, ಜಾತಿ ಅಸಮಾನತೆಯೇ ಇದಕ್ಕೆ ಮೂಲಕಾರಣವಾಗಿರುತ್ತದೆ. ಆದರೆ, ಪರಸ್ಪರರಲ್ಲಿ ಪ್ರೀತಿ, ವಿಶ್ವಾಸ, ಹೊಂದಾಣಿಕೆ ಇದ್ದರೆ ಎಲ್ಲದರೂ ಹೊಂದಾಣಿಕೆ ಸಾಧ್ಯ ಎನ್ನುವುದನ್ನೇ ಮರೆತುಬಿಡುತ್ತಾರೆ. ಇಷ್ಟಕ್ಕೂ ಸುದೀರ್ಘ ಬಾಳುವೆ ಮಾಡುವವರೇ ಅವರಿಬ್ಬರು ಎಂಬುದನ್ನು ಮರೆತು ತಾವು ಆಜೀವನ ಅವರಜೊತೆ ಇರುವವರು ಎಂದೇ ಭ್ರಮಿಸಿರುತ್ತಾರೆ. ಇದರ ಅರ್ಥ ಅಂತರ್ಜಾತೀಯ ವಿವಾಹಗಳೆಲ್ಲಾ ಯಶಸ್ವಿಯಾಗುತ್ತವೆ ಎಂದಲ್ಲ. ಹಾಗೆಯೇ ವಿಚ್ಛೇದನಗಳು ಸ್ವಜಾತೀಯ ವಿವಾಹಗಳಲ್ಲೂ ಸಾಕಷ್ಟು ಇರುತ್ತವೆ ಎಂಬುದನ್ನೂ ಮರೆಯದಿರೋಣ. ಯಾವುದೂ ಇದ ಮಿತ್ಥಂ ಎನ್ನುವಂತಿಲ್ಲ. ಹೀಗಿರುವಾಗ ತಮ್ಮ ಜಾತಿಯಲ್ಲ ಎಂದೋ, ತಮಗಿಂತ ಹಣಕಾಸಿನಲ್ಲಿ ದುರ್ಬಲರಾಗಿದ್ದಾರೆಂದೋ ತುಚ್ಛೀಕರಿಸುವುದು, ಹೀಗಳೆಯುವುದು, ತಿರಸ್ಕರಿಸುವುದು – ಹೋಗಲಿ ಅದೆಲ್ಲಾ ಮಾಡಿ ಅವರನ್ನು ಅವರಷ್ಟಕ್ಕೆ ಬಿಟ್ಟರೂ ಪುಣ್ಯ ಬರುವುದೇನೋ! ತಮ್ಮ ಇಲ್ಲದ ಪ್ರತಿಷ್ಠೆ, ಇರದ ಮಾನದ ಉಳಿವಿಗಾಗಿ ಕೊಲ್ಲಿಸುವಷ್ಟು ಕ್ರೌರ್ಯಕ್ಕೆ ಹೋಗುತ್ತಾರಲ್ಲ ಅದೆಂಥಾ ಮರ್ಯಾದೆ ಇವರದಪ್ಪಾ ಎಂದೆನಿಸಿಬಿಡುತ್ತದೆ!
ಪ್ರಸ್ತುತ ಪ್ರಕರಣವನ್ನೇ ತೆಗೆದುಕೊಂಡರೆ, ತೆಲಂಗಾಣದ ಅಮೃತ ಮತ್ತು ಪ್ರಣಯ್ ಜೋಡಿಯನ್ನು ಬೇರ್ಪಡಿಸಿ, ಗರ್ಭಿಣಿಯಾಗಿರುವ ಮಗಳ ಗಂಡನನ್ನೇ ಕೊಲ್ಲಿಸಿ ಈಗ ಪೂಲೀಸರ ಕಸ್ಟಡಿಯಲ್ಲಿರುವ ಅವಳ ತಂದೆಯ ಮರ್ಯಾದೆ, ಘನತೆ ಹೆಚ್ಚಾಯಿತೇ?! ಹುಟ್ಟಿನಿಂದ ಬೆಳೆಯುವವರೆಗೂ ಮುದ್ದಿನಿಂದ ಸಾಕಿದ ಮಕ್ಕಳನ್ನೇ ತರಿಯಲು ಅವರು ಬಲಿಗಾಗಿ ತಂದು ಸಾಕಿದ ಕುರಿ, ಕೋಣ, ಪ್ರಾಣಿಗಳಲ್ಲ ಅಲ್ಲವೇ? ಅಥವಾ ಇಂಥಾ ಹೆತ್ತವರಿಗೆ ಮಕ್ಕಳೆಂದರೆ ಅಷ್ಟೇಯೋ ಎಂಬುದೇ ಗೊತ್ತಾಗುತ್ತಿಲ್ಲ!
ಇನ್ನು ಈ ಮರ್ಯಾದಾ ಹತ್ಯೆಯನ್ನು ಕೇವಲ ತಂದೆಯೋ, ಚಿಕ್ಕಪ್ಪನೋ ಮಾಡಿಸುತ್ತಾರೆಂದುಕೊಳ್ಳಬೇಡಿ. ಸ್ವಂತ ತಾಯಿ, ಅಜ್ಜಿಯೂ ಮಾಡಿಸಬಲ್ಲರು! ಉದಾಹರಣೆಗೆ ಲಾಹೋರಿನ ಝೀನತ್ ಎಂಬ ಹದಿನೆಂಟರ ಹರೆಯದ ಮಗಳನ್ನು ಅವಳ ಸ್ವಂತ ತಾಯಿ ಪರ್ವೀನ್ ರಫೀಕ್ ಎಂಬಾಕೆ ಸಜೀವ ದಹನ ಮಾಡಿದ್ದಳು. ಇದಕ್ಕೆ ಕಾರಣ ಮಗಳು ತನ್ನಿಚ್ಛೆಯಂತೇ ಮದುವೆಯಾಗದೇ ತನ್ನ ಬಾಲ್ಯದ ಗೆಳೆಯನನ್ನು ವರಿಸಿದ್ದೇ ಆಗಿತ್ತಂತೆ! ಬಿಹಾರದಲ್ಲಿ, ಹರ್ಯಾಣದಲ್ಲಿ, ಕರ್ನಾಟಕದಲ್ಲಿ ಹೀಗೆ ಎಗ್ಗಿಲ್ಲದೇ ಎಲ್ಲೆಡೆಯೂ ಇಂಥ ಹತ್ಯೆಗಳು ಆಗುತ್ತಲೇ ಇವೆ. ಎಷ್ಟೋ ಬೆಳಕಿಗೇ ಬರುವುದಿಲ್ಲ! ಈ ರೀತಿ ಇಂಥಾ ಅನೇಕಾನೇಕ ಪ್ರಕರಣಗಳು ಎಲ್ಲೆಡೆಯೂ ಹೆಚ್ಚುತ್ತಿರುವುದು ದುರದೃಷ್ಟಕರ ಮತ್ತು ಖೇದನೀಯ ಸಂಗತಿ.

ಮರ್ಯಾದಾ ಹತ್ಯೆಗೆ ಪ್ರಮುಖ ಕಾರಣಗಳು :-

ಮೊತ್ತಮೊದಲ ಕಾರಣವೇ ಸ್ವಪ್ರತಿಷ್ಠೆ, ಮೂಢತೆ ಮತ್ತು ದುರಹಂಕಾರದ ಪರಾಕಷ್ಠೆ.
ಇದರ ನಂತರ… (ಇದು ನಾನು ಅಲ್ಲಲ್ಲಿ ಓದಿದ, ಅನೇಕ ವರ್ಷಗಳಿಂದ ಕೇಳಿದ ಘಟನೆಗಳನ್ನಾಧರಿಸಿ ವಿಂಗಡಿಸುತ್ತಿರುವುದು…)
೧) ಜಾತೀಯತೆ(ಸ್ವಜಾತಿಯಲ್ಲೇ ಮೇಲ್ಜಾತಿ, ಕೀಳ್ಜಾತಿಯೆಂದು ಅಥವಾ ಅನ್ಯಜಾತಿಯವರೆಂದು)
೨) ಸಲಿಂಗಕಾಮ (ಸಲಿಂಗಕಾಮಿ ಎಂದಾಕ್ಷಣ ಆತ/ಆಕೆ ತಮ್ಮ ಮನೆತನಕ್ಕೆ ಕುಂದು ಎಂದು ಕೊಂದು ಬಿಟ್ಟಿರುವ ಅನೇಕ ಪ್ರಕರಣಗಳಿವೆ)
೩) ಅನೈತಿಕ ಸಂಬಂಧದ ನೆಪದಲ್ಲಿ (ವಿವಾಹೇತರ ಅಥವಾ ವಿವಾಹ ಪೂರ್ವದ್ದು)
೪) ಹೆಣ್ಣೆಂದರೆ ಸದಾ ತಮ್ಮ ಅಡಿಯಾಳು ಎಂದೇ ಭಾವಿಸಿಕೊಂಡು ಬಂದಿರುವ ದುಷ್ಟ ಮನಸ್ಥಿತಿ.
೫) ಆರ್ಥಿಕ ಅಸಮಾನತೆ (ತಮಗಿಂತ ಕಡಿಮೆ ದುಡ್ಡಿರವವರೆಂದೋ, ಬಡವರೆಂದೋ ತಾತ್ಸಾರದಲ್ಲಿ…)
೬) ವೈಯಕ್ತಿಕ ಅಥವಾ ಕೌಟುಂಬಿಕ ಕಲಹ/ದ್ವೇಷ (ಅಜ್ಜರ, ಪಿಜ್ಜರ ಕಾಲದ ಜಗಳದ ನೆಪದಲ್ಲಿ)
೭) ರಾಜಕೀಯ ಹಸ್ತಕ್ಷೇಪ, ಪಿತೂರಿ (ತನಗಾಗದ ಬಣದವರಿದ್ದರೆ ಅವರ ಕಡೆಯ ಹುಡುಗಿಯೋ/ಹುಡುಗನೋ ವಿರುದ್ಧ ಪಂಗಡದವರನ್ನು ಪ್ರೀತಿಸಿದ್ದು ತಿಳಿದುಬಂದರೆ, ಆ ಮನೆಯವರನ್ನು ಎತ್ತಿಕಟ್ಟಿ ಕೊಲ್ಲಿಸಿ ಅದನ್ನು ತಮ್ಮ ರಾಜಕೀಯಕ್ಕಾಗಿ ಬಳಸಿಕೊಳ್ಳುವ ಪ್ರಕರಣಗಳೂ ಹಲವು ಇರುತ್ತವೆ) ಹೀಗೆ ಕಾರಣಗಳು ಅನೇಕ.

ಪರಿಹಾರದ ಕುರಿತು ಒಂದು ಕಿರು ಚಿಂತನೆ :-

ಯಾವುದೇ ಸಮಸ್ಯೆಯಿರಲಿ ಅದನ್ನು ಕೇವಲ ಎದುರಿಟ್ಟು ಗೋಳಾಡುತ್ತಲೋ, ದೂರುತ್ತಲೋ ಇದ್ದುಬಿಟ್ಟರೆ ಪರಿಹಾರವೇನೂ ಸಿಗದು. ಖಂಡನೆಯ ಜೊತೆಗೆ ನಿವಾರಣೆಯೂ ಅತ್ಯಗತ್ಯ. ಕೊಲ್ಲುವುದಕ್ಕೆ ಪರಿಹಾರ ಮಾನವೀಯ ಸಂಸ್ಕಾರ ಬೆಳೆಸುವುದೊಂದೇ ಎನ್ನಿಸುತ್ತದೆ ನನಗೆ! ಈ ಸಮಸ್ಯೆಗೆ ಪರಿಹಾರ ತಕ್ಷಣಕ್ಕಂತೂ ಸಾಧ್ಯವಿಲ್ಲ. ಸಮಾಜದೊಳಗೆ ಆಳವಾಗಿ ಬೇರೂರಿರುವ ಈ ಮನಃಸ್ಥಿತಿಯನ್ನು ಬದಲಾಯಿಸುವ ಮನಸ್ಸು ನಾವು ಮಾಡಬೇಕಷ್ಟೇ. ಮುಂದಿನ ಪೀಳಿಗೆಯ ತಲೆಯಲ್ಲಿ ಕೌಟುಂಬಿಕ ಮರ್ಯಾದೆ, ಸ್ವಪ್ರತಿಷ್ಠೆ, ಮನೆತನದ ಗೌರವ ಎಲ್ಲದೂ ಇರುವುದು ನಮ್ಮ ಉತ್ತಮ ನಡತೆ, ಮೌಲ್ಯಯುತ ಬದುಕು ಹಾಗೂ ಜೀವನ ಕ್ರಮ ಹಾಗೂ ಸ್ವಾಭಿಮಾನದ ಬದುಕಿನಲ್ಲಿ… ಪರಸ್ಪರ ಕೊಲ್ಲದೇ ಸಹಬಾಳ್ವೆ ಮಾಡುವುದರ ಮೂಲಕ, ಎಲ್ಲರನ್ನೂ ಗೌರವಿಸುವುದರ ಮೂಲಕ, ನಮ್ಮ ಸಂಪ್ರದಾಯವನ್ನು ಘನತೆಯಿಂದ ಆಚರಿಸುತ್ತಲೇ ಮತ್ತೊಬ್ಬರ ಆಚರಣೆಯನ್ನೂ ಸಮ್ಮಾನಿಸುವುದರಲ್ಲಿ ಎಂಬ ಮನೋಭಾವವನ್ನು ಬೆಳೆಸುವುದರ ಮೂಲಕವಷ್ಟೇ ನಿಧಾನದಲ್ಲಿ ಇದನ್ನು ಪರಿಹಾರ ಮಾಡಬಹುದು. ಮೇಲು ಕೀಳು ಎನ್ನುವುದು ಹಣದಲ್ಲಾಗಲೀ, ಜಾತಿಯಲ್ಲಾಗಲೀ ಬರದೇ, ಗುಣ, ಸ್ವಭಾವದಲ್ಲಿ ಬರುವಂಥದ್ದು ಎನ್ನುವುದನ್ನು ತಿಳಿಸಿಕೊಡಬೇಕು. ಆದರೆ ಇಂಥ ಸಮಸ್ಯೆಗೆ ಪರಿಹಾರ ಏಕಪಕ್ಷೀಯವಾಗಂತೂ ಸಾಧ್ಯವಿಲ್ಲ. ಎಲ್ಲಾ ರೀತಿಯ ಜಾತಿ ಧರ್ಮಗಳಲ್ಲೂ ಆಗುತ್ತಾ ಹೋದರೆ ಮಾತ್ರ ಕ್ಷಿಪ್ರಗತಿಯಲ್ಲಿ ಬೆಳಕು ಕಾಣಬಹುದು. ಈಗಾಗುತ್ತಿರುವುದೆಲ್ಲಾ ತಾನು, ತಮ್ಮವರು ಶುದ್ಧರು, ಕ್ಷುದ್ರರೆಲ್ಲಾ ಎದುರಿನವರೇ ಎಂಬ ಅಲ್ಪಜ್ಞಾನ ಹಾಗೂ ಪಲಾಯನವಾದವೇ ಇದಕ್ಕೆ ಕಾರಣ. ಅಲ್ಲದೇ, ಅನಿಷ್ಟಕ್ಕೆಲ್ಲಾ ಶನೀಶ್ವರನೇ ಕಾರಣವೆಂಬಂತೇ ಎಂಥದ್ದೇ ದುರಂತ ಬರಲಿ, ವಿಪತ್ತು ಕಾಡಲಿ ಈ ದೇಶವನ್ನು, ರಾಜ್ಯವನ್ನು, ಜಿಲ್ಲೆಯನ್ನು, ಜಾತಿಯನ್ನು ನಿಂದನೆ ಮಾಡುವುದರಲ್ಲೇ ಕಾಲಹರಣಮಾಡಿದರೆ, ಮತ್ತಷ್ಟು ಬಿಗಡಾಯಿಸಿದಂತಾಗುವುದು ಅಷ್ಟೇ. ತಿವಿಯುವುದರಲ್ಲಿ, ಚುಚ್ಚುವುದರಲ್ಲಿ, ಕೆಡವುದರಲ್ಲಿ ಮೇಲೆತ್ತುವಿಕೆ, ಸುಧಾರಣೆ ಅಸಾಧ್ಯ. ಸುಧಾರಣೆ ಮಾಡುವುದಾದರೆ ನಮ್ಮ ಮನೆ-ಮನಗಳಲ್ಲಿ ಆರಂಭಿಸುವ. 
*ನಮ್ಮ ಮಕ್ಕಳಿಗೆ “There is no Honor in Killing”, ಮರ್ಯಾದೆ ಹೆಚ್ಚುವುದು ಅಮಾಯಕರನ್ನು ಕೊಲ್ಲುವುದರಲ್ಲಲ್ಲ, ಕಾಪಾಡುವುದರಲ್ಲಿ ಎಂಬುದನ್ನು ತಿಳಿಸೋಣ. ಇದೆಲ್ಲದರ ಜೊತೆಗೇ,
*ನೀನು ತೆಗೆದುಕೊಳ್ಳುವ ನಿರ್ಧಾರದ ಸಾಧಕ ಬಾಧಕಗಳ, ಕಷ್ಟ, ಸುಖಗಳ ಚಿಂತನೆಯೂ ನಿನ್ನ ಹಕ್ಕು, ಜವಾಬ್ದಾರಿ ಎನ್ನುವುದನ್ನೂ ತಿಳಿಸುತ್ತಾ ಹೋಗೋಣ. ಒಳಿತು ಕೆಡುಕು ಇದಾಗಿದ್ದರಬಹುದೇ ಎಂದು ಚರ್ಚಿಸುತ್ತಾ ಹೋಗೋಣ. ಅವರ ಜೊತೆಗೆ ನಿರ್ಧಾರ ಮಾಡೋಣ. 
*ಎಲ್ಲಕ್ಕಿಂತ ಮುಖ್ಯವಾಗಿ ಗಂಡು ಮಕ್ಕಳಿಗೆ ಮನೆಯ ಹೆಣ್ಮಕ್ಕಳನ್ನು ಗೌರವಿಸುವ, ಪ್ರೀತಿಸುವ, ಅವರು ತಮಗೆ ಸಮಾನರೆಂದು ತಿಳಿಯುವ ವಿವೇಕವನ್ನು ವಿನಮ್ರತೆಯನ್ನು ಬೆಳೆಸಿದರೂ ಸಾಕು. ಇಂಥಾ ಹತ್ಯೆಯ ಜೊತೆಗೆ ಅತ್ಯಾಚಾರದಂಥ ಪಿಡುಗೂ ಕಡಿಮೆಯಾಗುತ್ತಾ ಹೋಗುವುದು. 
*ಇನ್ನು ಅವರೇನಾದರೂ ತಾವು ತೆಗೆದುಕೊಂಡ ನಿರ್ಧಾರದಲ್ಲಿ (ಯಾವುದೇ ಇರಲಿ) ಅಪ್ಪಿತಪ್ಪಿ ಎಡವಿದಾಗ ಸಾಧ್ಯವಾದಷ್ಟು ಸಾಥ್ ಕೊಡಿ. ಅದೂ ಸಾಧ್ಯವಾಗದಿದ್ದರೆ ಸುಮ್ಮನಿದ್ದು ಬಿಡಿ. ಎಡವಿದಾಗಲೇ ಬದುಕು ತೆರೆದುಕೊಳ್ಳುವುದು. ಅಲ್ಲಿಂದ ಪಾಠ ಕಲಿತರೇ ಬೆಳೆಯಲಾಗುವುದು. ಕಲಿಯದಿದ್ದರೆ ಮತ್ತೆಮತ್ತೆ ಕಲಿಸಲು ಬದುಕಂತೂ ಜೊತೆಗಿದ್ದೇ ಇರುತ್ತದೆ. 
ಈರೀತಿ, ನಮ್ಮ ಮಕ್ಕಳಿಂದ, ಮುಂದಿನ ಪೀಳಿಗೆಯಿಂದಲಾದರೂ ಮರ್ಯಾದಾ ಹತ್ಯೆಯಂಥ ಸಾಮಾಜಿಕ ದುರಂತ ನಿಲ್ಲುವಂತಾಗಲಿ ಎಂದೇ ಹಾರೈಸೋಣ, ಪ್ರಯತ್ನಿಸೋಣ.
ಸೂಚನೆ:- ಈ ಕುರಿತು ಹೆಚ್ಚಿನ ಮಾಹಿತಿ ನೀಡುವ ಕೆಲವು ಅಂತರ್ಜಾಲ ಕೊಂಡಿಗಳು ಇಲ್ಲಿವೆ. ಜಗತ್ತಿನಲ್ಲಿ ಮತ್ತು ನಮ್ಮಲ್ಲಿ ನಡೆದಿರುವ ಕೆಲವು ಪ್ರಕರಣಗಳ ವಿವರಗಳೂ ಇವೆ. ನೀವೂ ಹುಡುಕಾಡಿದರೆ ಮತ್ತೂ ಹೆಚ್ಚಿನ ಮಾಹಿತಿಗಳು ಸಿಗಬಹುದು. ಪ್ರಸ್ತುತ ಲೇಖನವನ್ನೂ ನಾನು ಅಂತರ್ಜಾಲದ ಮಾಹಿತಿಗಳನ್ನಾಧರಿಸಿಯೇ ಬರೆದಿರುವುದು.

~ತೇಜಸ್ವಿನಿ ಹೆಗಡೆ



ಶುಕ್ರವಾರ, ಏಪ್ರಿಲ್ 27, 2018

ಮಹಾಯಾತ್ರಿಕ

ಬಿಭೂತಿಭೂಷಣ ವಂದ್ಯೋಪಾಧ್ಯಾಯರು ರಚಿಸಿದ “ಪಥೇರ್ ಪಾಂಚಾಲಿ” ಕಾದಂಬರಿ ಸುಪ್ರಸಿದ್ಧ. ಬಹಳ ಹಿಂದೆ ಈ ಕಾದಂಬರಿಯ ಹೆಸರು ಕೇಳಿದಾಗಿನಿಂದ ಇದನ್ನೋದಬೇಕೆಂದು ಬಯಸಿದ್ದೆ. ಅದೇನೋ ಹೇಳುತ್ತಾರಲ್ಲ, ಎಲ್ಲವುದಕ್ಕೂ ಕಾಲ ಕೂಡಿಬರಬೇಕೆಂದು. ಒಳ್ಳೆಯ ಪುಸ್ತಕವನ್ನೋದಿ ಅನುಭೂತಿಸಲೂ ಸುಮುಹೂರ್ತ ಕೂಡಿಬರಬೇಕಾಗುತ್ತದೆ ಮತ್ತು ಆ ಒಳ್ಳೆಯ ಘಳಿಗೆ ವೈಯಕ್ತಿಕವಾಗಿ ನಮಗೇನೋ ತುಸು ತೊಂದರೆಯನ್ನುಂಟುಮಾಡಿಯಾದರೂ ಸರಿಯೇ ಸಫಲವಾಗುತ್ತದೆ! ಕಾಲಿಗೆ ಮತ್ತು ಕೈಗೆ ಅನಿರೀಕ್ಷಿತ ಪೆಟ್ಟಾಗಿ ತುಸು ಹೆಚ್ಚೇ ವಿಶ್ರಾಂತಿಯನ್ನು ವೈದ್ಯರು ಹೇರಲು, ಮೊದಲು ಬಹಳ ಕಿರಿಕಿರಿಯಾದರೂ ತಕ್ಷಣ ನನ್ನ ಕಣ್ಣಿಗೆ ಬಿದ್ದಿದ್ದು, ಕೆಲವು ತಿಂಗಳ ಹಿಂದೆ ನಾನೇ ತರಿಸಿಟ್ಟಿದ್ದ “ಮಹಾಯಾತ್ರಿಕ” ಪುಸ್ತಕ! ತಕ್ಷಣ ನೋವು ಎಷ್ಟೋ ಶಮನವಾಗಿತ್ತು. ‘ಪಥೇರ್ ಪಾಂಚಾಲಿ’ಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಅಹೋಬಲ ಶಂಕರ ಅವರು. ಇದನ್ನು ಪ್ರಕಟಿಸಿದ್ದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ. ಏನೇನೋ ಕೆಲಸಗಳ ಭಾರದಲ್ಲಿ, ಕೆಲವು ನಾನೇ ಹೇರಿಕೊಂಡ ನೆಪಗಳೊಳಗೆ ಈ ಪುಸ್ತಕವನ್ನೋದುವುದೇ ಮರೆತುಬಿಟ್ಟಿದ್ದೆ. ಧುತ್ತನೆದುರಾದ ಪರಿಸ್ಥಿತಿ ತಲೆಗೊಂದು ಮೊಟಕಿ ಈ ಪುಸ್ತಕವನ್ನು ಕೈಯಲ್ಲಿ ಹಿಡಿಸಿತ್ತು. 

ಮೊದಲ ಹತ್ತಿಪ್ಪತ್ತು ಪುಟಗಳನ್ನೋದಲು ತುಸು ಕಠಿಣವಾಯಿತು. ಕಾರಣ, ಅಂದಿನ ವಂಗದೇಶದ, ಸಾವಿರದ ಒಂಬೈನೂರರ ಆಸು ಪಾಸಿನಲ್ಲಿ ನಡೆವ ಆ ಕಥಾಚಿತ್ರಣವನ್ನು ಹಾಗೂ ಮೂಲ ಭಾಷೆಯ ಸೊಗಡನ್ನು ಹೀರಿ ಅದನ್ನೇ ಇಲ್ಲಿ ಕಟ್ಟಿಕೊಡುವಾಗ ಅನುವಾದಕರು ಕೆಲವೊಂದು ಕಥಾ ಚಿತ್ರಣಗಳನ್ನು, ಅಲ್ಲಿನ ಭಾಷೆಯ ಶೈಲಿಯನ್ನು ಹಾಗೇ ಇಳಿಸಿದ್ದು ಓದಲು ತಿಣುಕಾಡುವಂತೆ ಮಾಡಿತು. ಆದರೆ ಒಮ್ಮೆ ಅದರ ಆತ್ಮವನ್ನು ಹೊಕ್ಕಿದ ಮೇಲೆ, ಈ ರೀತಿಯ ಅನುವಾದದ ಶೈಲಿಯನ್ನು, ಭಾಷೆಯನ್ನು ಅರ್ಥೈಸಿಕೊಂಡು ಅದರ ನಾಡಿಯನ್ನು ಹಿಡಿದ ಮೇಲೆ ನಾನೇ ಕಥೆ ನಡೆವ ಗ್ರಾಮದಲ್ಲಿದ್ದೆ!
ಈ ಕಾದಂಬರಿಯನ್ನೋದುವ ಮೊದಲು ಇದರ ಹಿನ್ನಲೆ, ಮುನ್ನಲೆ ಅಥವಾ ಕನಿಷ್ಟ ಕಥೆಯೇನೆನ್ನುವುದೂ ತಿಳಿದಿರಲಿಲ್ಲ. ಸತ್ಯಜಿತ್ ರೇ ಅವರ ಪಥೇರ್ ಪಾಂಚಲಿಯನ್ನೂ ನಾನು ನೋಡಿರಲಿಲ್ಲ. ಹೀಗಾಗಿ ಬಹಳ ಕುತೂಹಲದಿಂದಲೇ ಪುಸ್ತಕ ಹಿಡಿದದ್ದು. ಮಹಾಯಾತ್ರಿಕ ಎಂಬ ಶೀರ್ಷಿಕೆಯನ್ನೋದಿದ ಮೇಲೆ ಇದು ಬಹುಶಃ ಓರ್ವ ವ್ಯಕ್ತಿಯ ಯಾತ್ರೆಯ, ಪ್ರವಾಸದ ಕಥೆ ಎಂದು ತಿಳಿದಿದ್ದೆ. ಆತ ಬೇರೆ ಬೇರೆ ಪ್ರದೇಶಗಳನ್ನು ತಿರುಗಾಡುತ್ತಾ, ದೇಶಾಂತರ ಹೋಗುತ್ತಾ ತಾನು ಕಂಡದ್ದು ಹೇಳುತ್ತಾನೇನೋ ಎಂದು ಭಾವಿಸಿದ್ದೆ. ಆದರೆ ಸುಮಾರು ನೂರು ಪುಟಗಳನ್ನೋದುವಾಗ ಅರ್ಥವಾಯಿತು ಇದು ಬೇರೆಯದೇ ರೀತಿಯ ಪ್ರಯಾಣವೆಂದು! ಬಹಳ ಸುಂದರ, ಅಷ್ಟೇ ತ್ರಾಸದಾಯಕ, ಮನೋಹರ ಹಾಗೇ ಮನಕಲಕುವ ಕಥಾ ಹಂದರವುಳ್ಳ ವಿಶಿಷ್ಟ ಕಾದಂಬರಿಯಿದು! ಓರ್ವ ದೂರದೂರಿಗೆ ಹೋಗದೇ, ಹೊಸ ತಾಣಗಳನ್ನು ಕಾಣದೇ, ತನ್ನ ಪರಿಸರದ ಸುತ್ತಮುತ್ತಲನ್ನೇ ಸುತ್ತುಹಾಕುತ್ತಾ, ಪ್ರಕೃತಿ ಅಡಗಿಸಿರುವ ನಿಗೂಢನೆಯನ್ನು ಬಯಲಾಗಿಸುತ್ತಾ, ಅದರೊಳಗಿನ ಅನೇಕ ರಹಸ್ಯಗಳನ್ನು ಬಿಚ್ಚಿಡುತ್ತಾ ಹೋಗುವುದೂ ಒಂದು ಮಹಾಯಾತ್ರೆಯೇ, ಅದನ್ನು ನಡೆಸುವವರೆಲ್ಲಾ ಮಹಾಯಾತ್ರಿಕರೇ ಎಂಬುದನ್ನು ಈ ಕಾದಂಬರಿಯನ್ನೋದಿ ಅರಿತುಕೊಂಡೆ.
ಮುಕ್ಕಾಲುವಾಸಿ ಕಥೆ ನಡೆಯೋದು ವಂಗದೇಶದ(ಬಂಗಾಳ ಪ್ರಾಂತ್ಯ) ನಿಶ್ಚಿಂದಿಪುರದ ಸುಂದರ ಪರಿಸರದಲ್ಲಿ ಮತ್ತು ದುರ್ಗಾ ಎಂಬ ೧೩-೧೪ರ ಹರೆಯದ ಅಕ್ಕ ಹಾಗೂ ೮-೯ ವರುಷದ ತಮ್ಮ ಅಪುವಿನ ಸುತ್ತಮುತ್ತಲೂ.
ಸರ್ವಜಯಾ ಮತ್ತು ಹರಿಹರರಾಯ ದಂಪತಿಗಳ ಮಕ್ಕಳಾದ ಅಪು(ಅಪೂರ್ವಚಂದ್ರರಾಯ್) ಮತ್ತು ದುರ್ಗಾ, ಅವರ ಬದುಕಲ್ಲಿ ಯಥೇಚ್ಛಾಗಿ ತುಂಬಿದ ಕಡು ಬಡತನ, ಅವಮಾನ, ಪ್ರತಿ ದಿವಸದ ಕೂಳಿಗೋಸ್ಕರ ಅವರು ನಡೆಸುವ ಹೋರಾಟ ಇದಿಷ್ಟೇ ಎಳೆಯಿಟ್ಟುಕೊಂಡೇ ಅದ್ಭುತವಾಗಿ ಕಥೆ ಹಣೆಯಲಾಗಿದೆ. ಆದರೆ ಎಲ್ಲಿಯೂ ಅವರ ಬಡತನ ನಮ್ಮಲ್ಲಿ ಕೇವಲ ದುಃಖ, ಸಂಕಟವನ್ನು ತುಂಬದೇ, ಅವರನ್ನಾವರಿಸಿದ್ದ ಸುಂದರ ಪಕೃತಿ ನೀಡುವ ಸಾಂತ್ವನ, ಅದರ ಸಂಪತ್ತು ಅವರೊಳಗೆ ತುಂಬುವ ಅಪಾರ ಸಂತೋಷ, ವನದುರ್ಗೆ ಆ ಮುಗ್ಧ ಮಕ್ಕಳ ಮನಸ್ಸನ್ನು ತಿದ್ದಿ, ತೀಡಿ ವಿಕಸಗೊಳಿಸಿ ಅವರೊಳಗೆ ಹನಿಸುವ ಆನಂದಾಶ್ರುಗಳನ್ನು ನಮ್ಮಲ್ಲಿಗೂ ಹರಿಸಿ, ಹಲವೆಡೆ ನಮ್ಮ ಕಣ್ಣಂಚೂ ಒದ್ದೆಯಾಗಿಸಿಬಿಡುತ್ತದೆ. ಆ ಎಳೆಯ ಮಕ್ಕಳು ತಮ್ಮ ವಿಶಾಲ ಕಣ್ಗಳಿಂದ ಮನೆಯೊಳಗಿನ ಬಡತನವ ಮರೆತು ತಮ್ಮ ಗ್ರಾಮ ಸುತ್ತಮುತ್ತಲಿನ ಪ್ರಕೃತಿ ಸೌಂದರ್ಯವನ್ನು ಉಣ್ಣುತ್ತಾರೆ. ವನದೇವತೆಯು ತನ್ನ ಒಡಲೊಳಗೆ ತುಂಬಿಹ ವಿಪುಲತೆಯನ್ನು ತೋರಿ ಅವರಿಗೆ ಸಿಹಿಯಾದ ಆಹಾರವನ್ನು ನೀಡುತ್ತಾಳೆ. ಅದನ್ನೆಲ್ಲಾ ಮನಸೋ ಇಚ್ಛೆ ಸೇವಿಸುವ ಆ ಇಬ್ಬರು ಎಳೆಯರು ಕೊನೆ ಕೊನೆಗೆ ವಿಶ್ವವನ್ನೇ ಸ್ವಾಹಾ ಮಾಡಲು ಬಯಸುವಂಥ ಹಸಿವಿನಿಂದ ಕಂಡಂದ್ದನ್ನೆಲ್ಲಾ ಕಬಳಿಸುತ್ತಾ ನಮ್ಮೊಳಗೂ ಹಸಿವನ್ನು ಹುಟ್ಟಿಸಿಬಿಡುತ್ತಾರೆ. ಹಗಲಿರುಳೂ ಅವರು ತಿರುಗುವ ಅಂಥದ್ದೊಂದು ಅತ್ಯದ್ಭುತ ಪರಿಸರಕ್ಕೆ ಜೀವಿತದಲ್ಲೊಮ್ಮೆಯಾದರೂ ತಿರುಗಬೇಕೆಂಬ ಬಯಕೆ ಬೆಳೆದುಬಿಡುತ್ತದೆ. ಆದರೆ ಕ್ರಮೇಣ ಕಾದಂಬರಿಯೇ ನಮಗೆ ಕಟುವಾಸ್ತವಿಕತೆಗೂ, ಕಲ್ಪನೆಗೂ ಇರುವ ಅಂತರ ಹಾಗೂ ಮತ್ತೊಬ್ಬರ ಬದುಕಿನಲ್ಲಿ ನಾವು ಕಾಣುವ ಸುಂದರತೆಗೂ, ದೂರದ ಬೆಟ್ಟದ ಸೌಂದರ್ಯಕ್ಕೂ ಇರುವ ಸಾಮ್ಯವನ್ನು ತೋರಿಬಿಡುತ್ತದೆ.
ಆದರೂ ದುರ್ಗಾ ಹಾಗೂ ಅಪುವಿನಲ್ಲಿ ಹೇರಳವಾಗಿರುವ ಪ್ರಕೃತಿ ಜ್ಞಾನ ನಮ್ಮ ಅರಿವನ್ನೂ ಹೆಚ್ಚಿಸುತ್ತದೆ. ಅದರಲ್ಲೂ ವಿಶೇಷವಾಗಿ ಅಪುವಿನ ಕಲ್ಪನಾ ಶಕ್ತಿ, ಅದಕ್ಕೆ ಹದವಾಗಿ ಬೆರೆತ ಮುಗ್ಧತೆ, ಆತನ ಅಪಾರ ಸೌಂದರ್ಯ ಪ್ರಜ್ಞೆ ನಿಬ್ಬೆರಗಾಗಿಸುತ್ತದೆ. ಉದಾಹರಣೆಗೆ ಒಂದೆಡೆ ಅಪು ಗುಡುಗು ಸಿಡಿಲಿನ ಆರ್ಭಟವನ್ನು ಕಂಡು ಹೀಗೆ ಕಲ್ಪಿಸಿಕೊಳ್ಳುತ್ತಾನೆ... “ದೇವರು ಹೇಗೆ ಕತ್ತಿ ಮಸೆಯುತ್ತಾನೆ, ಅದಕ್ಕೇ ಆ ಹೊಳಪು! ಈಸಲ ಖಂಡಿತ ಘರ್ಜನೆ ಮಾಡುತ್ತಾನೆ.”
ಅದೇ ರೀತಿ ಇತ್ತ ದುರ್ಗಾ ಎಂಬ ಪುಟ್ಟ ಕೂಸು, ಕಾಡಿನ ಯಾವ ಮೂಲೆಯಲ್ಲಿ, ಯಾವ ಮರದಲ್ಲಿ ಎಂಥಾ ರೀತಿಯ ಹಣ್ಣು ದೊರಕುತ್ತದೆ, ಹುಲ್ಲುಗಾವಲಿನ ಬಯಲ ಸೌಂದರ್ಯವನ್ನು ಹೇಗೆ ಸವಿಯಬೇಕು, ಬಿದಿರುವನದಲ್ಲಿ ಎಂಥಾ ಬಿದುರು ಬೆತ್ತಕ್ಕೆ, ಕೊಳಲಿಗೆ ಯೋಗ್ಯ, ಯಾರ ಹಿತ್ತಲಿನ, ಯಾವ ಮರದ ಬುಡದಲ್ಲಿ ಗಡ್ಡೆ ಗೆಣಸಿರುತ್ತದೆ, ಎಂಥಾ ಸೊಪ್ಪು ಪದಾರ್ಥಕ್ಕೆ ಯೋಗ್ಯ ಎಂಬೆಲ್ಲಾ ವನ ಪಾಠವನ್ನು ತನ್ನ ತಮ್ಮನಿಗೆ ನೀಡುವಾಗ ನಾವೂ ಕಲಿಯುತ್ತಾ, ಗ್ರಾಮವನ್ನೆಲ್ಲಾ ಅವರೊಂದಿಗೆ ಸುತ್ತಿ, ಕಾಡು, ಮೇಡು, ಬೇಟ್ಟವನ್ನೆಲ್ಲಾ ತಿರುಗಿ ಹೊಟ್ಟೆಯನ್ನು ತುಂಬಿಸಿಕೊಂಡು ಆನಂದ ಪಡುತ್ತೇವೆ.
ಅನುವಾದಕರಾದ ಅಹೋಬಲ ಶಂಕರ ಅವರು ತಮ್ಮ “ಅರಿಕೆ”ಯಲ್ಲಿ ಹೀಗೆ ಹೇಳುತ್ತಾರೆ...
“ವಂಗಸಾಹಿತ್ಯದಲ್ಲಿ ಪಥೇರ್ ಪಾಂಚಾಲಿಯಂತಹ ಕಾದಂಬರಿ ಯಾರೂ ಬರೆದಿರಲಿಲ್ಲ. ಎಲ್ಲಾ ಹೊಸದೇ ಅದರಲ್ಲಿ - ವಸ್ತು ಮತ್ತು ಪಾತ್ರಸೃಷ್ಟಿ ಸರಳವಾದರೂ, ಕಣ್ಣಿಗೆ ಕಟ್ಟುವ ವರ್ಣನೆಗಳು; ಹೆಚ್ಚಾಗಿ ಕಥೆಯಲ್ಲಿ ಮೊದಲಿನಿಂದ ಕಡೆಯವರೆಗೂ ಮನ ಸೆಳೆಯುವ ಅದರ ವಿಚಾರ ದೃಷ್ಟಿ, ಜೀವವರ್ಗದ ಬಗ್ಗೆ ಹೊರಹೊಮ್ಮುವ ಅಂತಃಕರಣ, ವಂಗದೇಶದ ಆತನ ಗ್ರಾಮ ಜೀವನವನ್ನು ವರ್ಣಿಸುವಾಗ ಅತಿಸಾಮಾನ್ಯ, ಅತಿ ಕ್ಷುದ್ರವೆಂಬಂತಹುದನ್ನೂ ಅತಿ ದೊಡ್ಡ ಘಟನೆಯಂತೆಯೇ ಸೂಕ್ಷ್ಮವಾಗಿ, ಅಂತರಂಗಿಕವಾಗಿ ಬಿಡಿಸಿ ಹೇಳುವಿಕೆ, ಹಳ್ಳಿಯ ಜನರ ಜೀವನದಲ್ಲಿ ಹಾಸು ಹೊಕ್ಕಾಗಿ ಬರುವ ಮುಗ್ಧ ಹಾಸ್ಯದೊಂದಿಗೆ ಕರುಳು ಕುಯ್ಯುವ ಒಳವೇಡನೆ, ದಾರಿದ್ರ್ಯದಿಂದ, ಮೌಢ್ಯ-ಅಸಹನೆಗಳಿಂದ ಮನುಷ್ಯನೇ ಮನುಷ್ಯನಾತ್ಮಕ್ಕೆ ಮಾಡುವ ಘೋರ ಅಪಮಾನ-ಇವುಗಳೆಲ್ಲವನ್ನೂ ಉತ್ಪ್ರೇಕ್ಷೆಯಿಲ್ಲದೇ, ರೋಷವಿಲ್ಲದೆ, ಭಾವೋತ್ಕಟನೆಯಿಲ್ಲದೇ ಕಲಾತ್ಮಕವಾಗಿ ನಿರೂಪಿಸಿರುವ ಜಾಣ್ಮೆ, ಬೇರೆ ಯಾರೂ ಪಡೆಯದಿದ್ದ ಹೊಸ ಬಗೆಯ ಕಥನ ಶೈಲಿ, ಕೆಲವೇ ಪದಗಳಲ್ಲಿ ಮನಸ್ಸಿನಲ್ಲಿ ಸದಾ ನಿಲ್ಲಿವಂತೆ ಚಿತ್ರಗಳನ್ನು ಕಟ್ಟುವ ಕುಶಲತೆ-ಇವೆಲ್ಲ ಪಂಡಿತ ಪಾಮರರನ್ನು ಬೆರಗುಗೊಳಿಸಿಬಿಟ್ಟವು.”
***
ತಾಯಿ ಹಾಗೂ ಮಗು ಹೇಗೆ ಪರಸ್ಪರ ಕೊಡುಕೊಳ್ಳುವಿಕೆಯ ಮೂಲಕ ಈ ಅನೂಹ್ಯ ಬಾಂಧವ್ಯವನ್ನು ಬೆಸೆದುಕೊಳ್ಳುತ್ತಾರೆ, ಕೇವಲ ತಾಯಿ ಮಾತ್ರ ಕೊಡುವವಳಲ್ಲ, ಮಗುವೂ ತಾಯಿಗೆ ಏನೇನೆಲ್ಲಾ ಧಾರೆಯೆರೆಯುತ್ತದೆ ಎಂಬುದನ್ನು ಬಹಳ ಚೆನ್ನಾಗಿ ವಿವರಿಸಿ ನಮ್ಮ ದೃಷ್ಟಿಕೋನವನ್ನೇ ತೆರೆಯುತ್ತಾರೆ ಲೇಖಕರು.
ಈ ಯಾನದಲ್ಲಿ ನಗುವಿದೆ, ನಿಶ್ಶಬ್ದ ಅಳುವಿದೆ, ಕರುಳು ಕೊರೆವ ಯಾತನೆಯಿದ್ದರೂ ಪ್ರಕೃತಿ ಲೇಪಿಸುವ ಸಾಂತ್ವನವಿದೆ. ಕರ್ಮಫಲ, ಅಂದರೆ ಈ ಜನ್ಮದಲ್ಲಿ ನಾವು ಗೊತ್ತಿದ್ದೋ ಗೊತ್ತಿಲ್ಲದೆಯೋ, ಅರೆತೋ ಅರಿಯದೆಯೋ ಮತ್ತೊಂದು ಜೀವಕ್ಕೆ ಕೊಡುವ ನೋವಿನ ಫಲ, ಮತ್ತೋರ್ವ ವ್ಯಕ್ತಿಯನ್ನು ಹಿಂಸಿಸುವ ಫಲ ಈ ಜನ್ಮದಲ್ಲೇ ತೀರಿಸುತ್ತೇವೆ ಅನ್ನೋ ಒಂದು ಕಾನ್ಸೆಪ್ಟ್ (ಇದು ಎಷ್ಟರಮಟ್ಟಿಗೆ ನಿಜ ಅನ್ನೋದರ ಕುರಿತು ಇನ್ನೂ ಸಣ್ಣ ಅನುಮಾನ ಇದೆ ನನ್ನೊಳಗೆ) ಪ್ರಸ್ತುತ ಕಾದಂಬರಿಯ ಕೊನೆಯಲ್ಲಿ ದುರ್ಗಾಳ ಅಮ್ಮ ಹರಿಸುವ ಪಶ್ಚಾತ್ತಾಪದ ಕಣ್ಣೀರಿನಲ್ಲಿ ಎದ್ದು ಕಾಣಿಸುತ್ತದೆ. ಒಂದೆರಡು ಪ್ರಸಂಗಗಳನ್ನೋದಿಯಂತೂ ಪುಸ್ತಕವನ್ನು ಮುಚ್ಚಿಟ್ಟು, ಕಣ್ಮುಚ್ಚಿ ಒಳಗೊಳಗೇ ಅತೀವ ದುಃಖ ಅನುಭವಿಸಿಬಿಟ್ಟೆ. ಅಷ್ಟು ತೀವ್ರವಾಗಿದೆ ಯಾನದ ಆ ಘಟ್ಟ! ಅದನ್ನಿಲ್ಲಿ ಬೇಕೆಂದೇ ಉಲ್ಲೇಖಿಸುತ್ತಿಲ್ಲ. ಓದುಗರು ಓದುತ್ತಾ ಹೋಗುವಾಗ ಹಠಾತ್ ಅದು ಎದುರಾದಾಗಲೇ ಅದರ ಸಹಜ ಭಾವವನ್ನು ಹೀರಬಹುದೆಂದು ಆ ದೃಶ್ಯದ ವರ್ಣನೆಗೆ ಹೋಗುತ್ತಿಲ್ಲ. ಅಲ್ಲದೇ, ಅಲ್ಲಲ್ಲಿ ಬರುವ ಸಣ್ಣ ಕವಿತೆಗಳು, ಜನಪದ ಹಾಡುಗಳೊಳಗಿನ ವಿಡಂಬನೆ ಎಲ್ಲವೂ ಕಥೆಯ ಸ್ವಾದವನ್ನು ಹೆಚ್ಚಿಸುವಂತಿವೆ.
ಮೂಲ ಕಾದಂಬರಿಯನ್ನು ನಾನು ಓದಲು ಸಾಧ್ಯವಿಲ್ಲ. ಆದರೆ ಅನುವಾದ ಬಹಳ ಸಶಕ್ತವಾಗಿ ನಮ್ಮನ್ನಾವರಿಸುವುದಂತೂ ಖಂಡಿತ. ಕೆಲವೊಂದೆಡೆ ಅನುವಾದ ತುಸು ಸಂಕೀರ್ಣವಾಗಿದ್ದು, ಎರಡು ಸಲ ಓದನ್ನು ಬೇಡುವಂತಿದ್ದರೂ, ಓದಿನ ಸುಖಕ್ಕೆ ಅಷ್ಟು ತ್ರಾಸ ತೆಗೆದುಕೊಳ್ಳುವುದು ಒಳ್ಳೆಯದೇ ಎನ್ನಬಹುದು.
ಕಾದಂಬರಿಯನ್ನೋದಿದ ಮೇಲೆ ಅಪಾರ ಕುತೂಹಲದಿಂದ, ಬಹು ಚರ್ಚಿತ, ಎಲ್ಲೆಡೆ ಮಾನ್ಯಗೊಂಡ ಸತ್ಯಜಿತ್ ರೇ ಅವರ ಪಥೇರ್ ಪಾಂಚಾಲಿ ಚಿತ್ರದ ಕೆಲವು ತುಣುಕುಗಳನ್ನು ಹುಡುಕಿ ನೋಡಿದೆ. ಸ್ವಲ್ಪ ನಿರಾಸೆಯಾಯ್ತು. ಯಾವೆಲ್ಲಾ ದೃಶ್ಯಗಳನ್ನು ಪುಸ್ತಕದಲ್ಲೋದಿ ಪುಳಕಿತಳಾಗಿದ್ದೆನೋ ಅದೇ ದೃಶ್ಯವನ್ನೊಳಗೊಂಡ ಒಂದೆರಡು ತುಣುಕುಗಳೇ ಸಿಕ್ಕಿವು ನನಗೆ. ಆದರೆ ಚಿತ್ರದಲ್ಲಿ ಅವುಗಳನ್ನು ಬಹಳ ನೀರಸ ಸಪ್ಪೆಯಾಗಿ ಕಥೆಯನ್ನು ತುಸು ಬದಲಾಯಿಸಿದಂತೇ ಕಂಡಿತು. ಹಾಗೆಯೇ, ಗೂಗಲ್ ಮಾಡಿದಾಗ ಅಪು ದೊಡ್ಡವನಾಗಿ, ಮದುವೆಯಾಗಿ, ಆಮೇಲೆ ಅವನ ಬದುಕು ಬದಲಾದ ಕ್ರಮವೂ ಕಾದಂಬರಿಯಲ್ಲಿದೆ ಎಂಬಂತಹ ಮಾಹಿತಿಗಳೂ ಸಿಕ್ಕವು. ಆದರೆ ಪ್ರಸ್ತುತ ಅನುವಾದಿತ ಕಾದಂಬರಿಯಲ್ಲಿ ಆ ಘಟ್ಟವಿಲ್ಲ! ಮೂಲ ಓದಿದವರು ಅಥವಾ ಬಲ್ಲವರು ಹೇಳಿದರೆ ಬಹಳ ಒಳ್ಳೆಯದು. ಒಟ್ಟಿನಲ್ಲಿ ೪೦೦ ಪುಟಗಳ ಈ ಕಾದಂಬರಿಯ ಯಾನವು ಓದುವಷ್ಟು ಹೊತ್ತು ಮತ್ತು ಓದಿದಾನಂತರವೂ ನಮ್ಮನ್ನು ಬೇರೆಯದೇ ಲೋಕಕ್ಕೆ ಒಯ್ಯಲು ಸಮರ್ಥವಾಗಿದೆ ಎನ್ನುವುದು ನನ್ನ ಅನಿಸಿಕೆ. ಒಮ್ಮೆ ನೀವೂ ಈ ಯಾನದಲ್ಲಿ ಪಾಲ್ಗೊಂಡು ಆ ಇಬ್ಬರು ಪುಟ್ಟ ಮಹಾನ್ ಯಾತ್ರಿಕರ ಸಂಗಡ ಪ್ರಯಾಣಿಸಿ ನೋಡಿ, ಹಾಗೆಯೇ ನಿಮ್ಮ ಅನುಭವವನ್ನೂ ಹಂಚಿಕೊಳ್ಳಿ.
ನಾನಂತೂ ವಿಭೂತಿಭೂಷಣರ ಕಥೆಗಳ, ಶೈಲಿಯ ಅಭಿಮಾನಿಯಾಗಿಬಿಟ್ಟಿರುವೆ. ಈಗ ನನ್ನ ಮಗಳು ಹಾಗೂ ತಂಗಿಯ ಮಗನಿಗೆ ಅಪೂ ಮತ್ತು ದುರ್ಗಾರ ಸಾಹಸಗಾಥೆಯನ್ನು, ಬದುಕಲ್ಲಿ ಅವರು ಕಾಣುವ ಕಷ್ಟಗಳು, ನಡೆಸುವ ಹೋರಾಟ, ವನದೇವತೆಯೊಳಗಿರುವ ಸಂಪತ್ತು ಇವೆಲ್ಲವನ್ನೂ ರಸವತ್ತಾಗಿ ಕಥೆ ಹೇಳಲು ತೊಡಗಿರುವೆ. ಆ ಮೂಲಕ ನನ್ನ ಯಾತ್ರೆ ಇನ್ನೂ ಜಾರಿಯಲ್ಲಿದೆ!
ಅಂದಹಾಗೆ "ಪಥೇರ್ ಪಾಂಚಾಲಿ" ಎಂದರೆ Song of the Little Road.
*
ಮಹಾಯಾತ್ರಿಕ
(ಪಥೇರ್ ಪಾಂಚಾಲಿ)
ಮೂಲ : ವಿಭೂತಿಭೂಷಣ ವಂದ್ಯೋಪಾಧ್ಯಾಯ
ಅನು: ಅಹೋಬಲ ಶಂಕರ
ಪುಟಗಳು : ೪೦೨
~ತೇಜಸ್ವಿನಿ ಹೆಗಡೆ.

ಭಾನುವಾರ, ಫೆಬ್ರವರಿ 25, 2018

ಭಯದ ಬೆನ್ನೇರಿ!


ಅದೊಂದು ದಿವಸ ಮೂಢನಂಬಿಕೆಗಳ ಮೇಲೆ ಬರೆದಿದ್ದ ಒಂದು ಹಾಸ್ಯ ಪ್ರಬಂಧವನ್ನು ಓದುತ್ತಾ ಉರುಳಾಡಿ ನಗುತ್ತಿದ್ದೆ. ಅದೇ ಸಮಯದಲ್ಲೇ ನನ್ನ ಹತ್ತು ವರುಷದ ಮಗಳು ಸಣ್ಣ ಮುಖ ಮಾಡಿಕೊಂಡು ಬರಲು, ನಗುವನ್ನು ಸಂಭಾಳಿಸಿಕೊಳ್ಳುತ್ತಲೇ “ಏನಾಯ್ತು?” ಎಂದು ನಾನು ಕೇಳಿದೆ. ಎಷ್ಟು ತಡೆಹಿಡಿದರೂ, ನಗು ಉಕ್ಕುತ್ತಲೇ ಇತ್ತು. ಇದನ್ನು ಕಂಡು ಮಗಳು ಮುಖ ಗಂಟಿಕ್ಕಿಕೊಂಡಳು. “ಅಮ್ಮಾ ನೀ ಒಂದೋ ನಗು ಇಲ್ಲಾ ಮಾತನಾಡು... ನಾನೆಷ್ಟು ಬೇಜಾರಿನಲ್ಲಿದ್ದೇನೆ ಈಗ ಗೊತ್ತಾ? ನೀ ಹೀಂಗೆಲ್ಲಾ ನಗ್ತಾ ಕೇಳಿದ್ರೆ ನಾ ಹೇಂಗೆ ನಿನ್ನ ಹತ್ರ ವಿಷ್ಯ ಹೇಳೋದು?” ಎಂದು ಕೇಳಲು ಥಟ್ಟನೆ ಗಂಭೀರತೆ ತಂದುಕೊಂಡು ಅವಳನ್ನು ಸಮಾಧಾನಗೊಳಿಸುತ್ತಾ ವಿಷಯ ಕೇಳಿದೆ. “ನನ್ನ ಶಾಲೆಯಲ್ಲಿ ಕೆಲವು ಫ್ರೆಂಡ್ಸು ಬ್ಲಡ್ಡಿ ಮೇರಿ ಎಂಬ ದೆವ್ವದ ಬಗ್ಗೆ ಕಥೆ ಹೇಳಿದ್ದಾರೆ ಗೊತ್ತಾ... ಆ ದೆವ್ವದ ಹೆಸ್ರನ್ನು ಮೂರು ಸಲ ಹೇಳಿಬಿಟ್ರೆ ಅದು ನಮ್ಮಲ್ಲಿಗೇ ಬರುತ್ತದೆಯಂತೆ! ನಾನು ಈಗಾಗಲೇ ಬಹಳ ಸಲ ಆ ದೆವ್ವದ ಹೆಸ್ರನ್ನು ಹೇಳಿಬಿಟ್ಟಿದ್ದೇನೆ... ಹೀಗಾಗಿ ನಂಗೆ ಬಹಳ ಟೆನ್ಷನ್ ಆಗ್ತಿದೆ ಅಮ್ಮಾ...” ಎನ್ನಲು ನಗು ಒದ್ದುಕೊಂಡು ಬಂದರೂ, ಅದನ್ನು ತಡೆಹಿಡಿಯಲು ಹೆಣಗಾಡುತ್ತಾ, “ಓಹೋ... ಇದು ವಿಷಯ! ನೋಡು ಪುಟ್ಟಿ, ಇದೆಲ್ಲಾ ಸುಳ್ಳೆಪುಳ್ಳೆ ಕಥೆಗಳು ಅಷ್ಟೇ. ದೇವರಿರೋ ಕಡೆ ದೆವ್ವವಿರೋಕೆ ಸಾಧ್ಯವೇ ಇಲ್ಲಾ. ದೇವರು ಎಲ್ಲಾ ಕಡೆ ಇದ್ದಾನೆ... ನಮ್ಮೊಳಗೂ ಇದ್ದಾನೆ ಅಂತ ಹೇಳಿದ್ದೇನಲ್ಲಾ ನಿಂಗೆ ಎಷ್ಟೋ ಸಲ... ಸೋ ಈ ಬ್ಲಡಿ ಮೇರಿ ಎಲ್ಲಾ ಬರೋದಿಲ್ಲ” ಎನ್ನುವಾಗಲೇ ಆಕೆ ನಡುವೆ ಬಾಯಿ ಹಾಕಿ “ಬ್ಲಡಿ ಅಲ್ಲಾ ಬ್ಲಡ್ಡಿ ಅಂತ ಹೇಳು... ಬ್ಲಡ್ ಬಡ್ಕೊಂಡಿರತ್ತಂತೆ ಅದ್ರ ಮುಖದ ತುಂಬಾ” ಎಂದು ಕಿರುಚಲು ನನಗೂ ನಾನು ದೆವ್ವದ ಹೆಸರನ್ನು ತಪ್ಪು ಉಚ್ಚರಿಸಿ ಏನೋ ಅನಾಹುತವೇ ಮಾಡಿಬಿಟ್ಟೆನೇನೋ ಎಂದೆನಿಸಿಬಿಟ್ಟಿತು. ಅರೆಕ್ಷಣ ಆಲೋಚನೆಗೆ ಬಿದ್ದ ಅವಳ ಮುಖದಲ್ಲಿ ಇದ್ದಕ್ಕಿದ್ದಂತೇ ಸಾವಿರ ಕ್ಯಾಂಡಲ್ ಬಲ್ಬಿನ ಬೆಳಕು ಮೂಡಿತು. ಸದ್ಯ ನನ್ನ ಮಾತು ಇಷ್ಟು ಬೇಗ ಪರಿಣಾಮ ಬೀರಿತೆಂದು ಬೀಗುವಾಗಲೇ, “ಐಡಿಯಾ ಅಮ್ಮಾ! ನನ್ನ ಫ್ರೆಂಡ್ಸ್ ಇದನ್ನೂ ಹೇಳಿದ್ದಾರೆ... ನಾವು ನಮ್ಮ ಎಡಗೈ ಮೇಲೆ ಬಲಗೈಯಿಯ ಮೂರು ಬೆರಳುಗಳಿಂದ ರಾಮ, ಕೃಷ್ಣ, ಸೀತೆ ಎಂದು ಗುಟ್ಟಾಗಿ ಹೇಳಿ ಜೋರಾಗಿ ಹೊಡೆಯಬೇಕಂತೆ... ಆಗ ಮೂರು ಕೆಂಪು ಬಣ್ಣದ ಗೆರೆಗಳು ಬಿದ್ರೆ ಬ್ಲಡ್ಡಿ ಮೇರಿ ಬರೋದಿಲ್ವಂತೆ! ನನ್ನ ಕೈ ತುಂಬಾ ಸಣ್ಣ... ಎಲ್ಲಿ ನಿನ್ನ ಕೈ ಕೊಡು ಟ್ರೈ ಮಾಡುವ” ಎನ್ನಲು, ನನಗೀಗ ನಿಜಕ್ಕೂ ಬ್ಲಡ್ಡಿ ಮೇರಿಯ ಮೇಲೆ ಸಿಟ್ಟು ಬಂದಿತ್ತು. ನಾನೇನಾದರೂ ಸಮಜಾಯಿಶಿ ಕೊಡುವ ಮುನ್ನವೇ, ಒತ್ತಾಯದಿಂದ ನನ್ನ ಎಡಗೈಯನ್ನು ಎಳೆದುಕೊಂಡ ಆಕೆ, ಎಡ ಮೊಣಕೈಯಿಯ ಮೇಲ್ಭಾಗದಲ್ಲಿ ತನ್ನ ಬಲಗೈಯ ನಡುವಿನ ಮೂರು ಬೆರಳುಗಳಿಂದ ಜೋರಾಗಿ ಹೊಡೆಯಲು ಅಪ್ರಯತ್ನವಾಗಿ ರಾಮಕೃಷ್ಣರನ್ನು ನೆನೆಯಬೇಕಾಯ್ತು. ಕೈ ಮೇಲೆ ರಾಮ, ಸೀತೆ, ಲಕ್ಷ್ಮಣರ ಕೆಂಪು ಗೆರೆಯ ರೂಪದಲ್ಲಿ ಅರೆಕ್ಷಣ ಮೂಡಿ ನಿಧಾನಕ್ಕೆ ಮಾಯವಾಗತೊಡಗಿದರು. ಬಹಳ ಸಮಾಧಾನ ಹೊಂದಿದ ಮಗಳು, ನನಗೆ ಹೊಡೆದು ಉರಿಸಿದ್ದರಿಂದ ನನ್ನ ಕೈಗೆ ಐದಾರು ಸಲ ಮುತ್ತುಕೊಟ್ಟು ಸಾಂತ್ವನ ನೀಡಿ ನೆಮ್ಮದಿಯಿಂದ ಓದಲು ಹೋಗಲು ನನಗೂ ಎಷ್ಟೋ ಸಮಾಧಾನವಾಗಿತ್ತು. ಆದರೆ ಈ ಮೂಢನಂಬಿಕೆಗಳು ಅನ್ನೋದು ಅನಾದಿ ಕಾಲದಿಂದ ನಮ್ಮೊಳಗೇ ಹಾಸುಕೊಕ್ಕಾಗಿ ಬಿಟ್ಟಿರುತ್ತವೆ. ಎಷ್ಟೋ ಸಲ ನಮ್ಮನ್ನು ಭಯಬೀಳಿಸುತ್ತಿರುತ್ತವೆ.
ನಾನಾಗ ಮೂರನೆಯ ತರಗತಿಯಲ್ಲಿದ್ದೆ. ನನ್ನೊಳಗೆ ಇದ್ದಕ್ಕಿದ್ದಂತೆ ಸಂಗೀತ ಕಲಿಯುವ ಹುಚ್ಚು ಹುಟ್ಟಿಬಿಟ್ಟಿತ್ತು. ಅದಕ್ಕೆ ಬಹು ಮುಖ್ಯ ಕಾರಣವೇನೆಂದರೆ, ದೂರದರ್ಶನದಲ್ಲಿ ಪ್ರಸಾರಗೊಳ್ಳುತ್ತಿದ್ದ ಚಿತ್ರಹಾರಗಳು! ಅದೊಂದು ದಿವಸ ಪ್ರಸಾರವಾಗುತ್ತಿದ್ದ ಹಾಡಿನಲ್ಲಿ ರೀನಾ ರಾಯ್ ಕಪ್ಪು ಲೆಹೆಂಗಾ ಧರಿಸಿ, ತಲೆಯ ಮೇಲೆ ಸೆರಗು ಹೊದ್ದು, ಇಷ್ಟುದ್ದದ ಮೈಕಿನಲ್ಲಿ “ಶೀಶಾ ಹೋ ಯಾ ದಿಲ್ ಹೋ ಆಖಿರ್ ಟೂಟ್ ಜಾತಾ ಹೈ...” ಎಂದು ಹಾಡುತ್ತಿರುವುದನ್ನು ಕಂಡು ಬಹಳ ಪ್ರಭಾವಿತಳಾಗಿಬಿಟ್ಟಿದ್ದೆ. ನಾನೂ ಮುಂದೊಂದು ದಿನ ಹೀಗೇ ಹಾಡಬೇಕು, ಸಭೆಯಲ್ಲಿರುವವರೆಲ್ಲಾ ಎದ್ದು ನಿಂತು ಚಪ್ಪಾಳೆ ಹೊಡೆಯಬೇಕು... ಎಂದೆಲ್ಲಾ ಕನಸು ಕಂಡಿದ್ದೆ. ಆಗ ನನಗೆ ಇದನ್ನು ಹಾಡಿದ್ದು ಲತಾ ಮಂಗೇಶ್ವರ್, ಆಕೆ ಪ್ರಸಿದ್ಧ ಹಿನ್ನಲೆ ಗಾಯಕಿ ಎಂಬುದೆಲ್ಲಾ ಗೊತ್ತೇ ಇರಲಿಲ್ಲ. ಸರಿ, ನನ್ನ ಹಠಕ್ಕೆ ಸೋತು ಅಪ್ಪ ಸಂಗೀತ ಕ್ಲಾಸಿಗೆ ಸೇರಿಸಿದ್ದಾಯ್ತು. ಅವರೋ ಸಂಗೀತ ಹೇಳಿಕೊಡುವುದಕ್ಕಿಂತ ಹೆಚ್ಚಾಗಿ ಬಾಯಲ್ಲಿ ಬೈಯ್ಗಳುಗಳ ತಬಲಾ ಬಾರಿಸಿದ್ದೇ ಹೆಚ್ಚು! ಇದ್ಯಾಕೋ ಸರಿ ಹೋಗ್ತಿಲ್ಲ ಅಂದ್ಕೊಂಡು ಬಿಟ್ಟುಬಿಟ್ಟೆ. ಅದೊಂದು ದಿವಸ ನನಗಿಂತ ಎರಡು ವರುಷ ದೊಡ್ಡವಳಾಗಿದ್ದ ಗೆಳತಿ ಸಂಗೀತಾ “ನನ್ನತ್ತೆ ಎಷ್ಟು ಚೆಂದ ಹಾಡ್ತಾರೆ ಗೊತ್ತುಂಟಾ? ಆದ್ರೆ ಅವ್ರೇನೂ ಸಂಗೀತ ಕಲ್ತಿಲ್ಲಪ್ಪ” ಎನ್ನಲು ನನಗೆ ಬಹಳ ಕುತೂಹಲವಾಗಿ ಆಸೆ ಮತ್ತೆ ಗರಿಕೆದರಿತ್ತು. “ಮತ್ತೆ, ಅದು ಹೇಂಗೆ ಕಲಿತದ್ದಂತೆ ಮಾರಾಯ್ತಿ?” ಎಂದು ಕೇಳಿದಾಗ, ಆಕೆ ತೀರಾ ತಗ್ಗಿದ ಧ್ವನಿಯಲ್ಲಿ... “ಕಂಠ ಒಳ್ಳೆದಾಗ್ಲಿಕ್ಕೆ ಹಿಸ್ಕು (ಬಸವನ ಹುಳ) ತಿನ್ಬೇಕಂತೆ ನೋಡು... ಅದನ್ನು ತಿಂದವರ ಕಂಠ ಬಹಳ ಚೆಂದ ಆಗ್ತದಂತೆ” ಎಂದಿದ್ದೇ ವಾಯಕ್ ಎಂದುಬಿಟ್ಟಿದ್ದೆ. ನೋಡಲೂ ಒಂಥರ ಅನ್ನಿಸುವ ಹಿಸ್ಕನ್ನು, ಅಪ್ಪಿ ತಪ್ಪಿ ಮುಟ್ಟಿದರೂ ಲೋಳೆಯಾಗುವ ಆ ಅಂಟು ಜೀವಿಯನ್ನು ಹಿಡಿಯುವುದಲ್ಲದೇ, ತಿನ್ನುವುದು ಎಂದರೆ... ಅಲ್ಲಿಗೆ ನನ್ನ ಅಳಿದುಳಿದ ಆಸೆಯೂ ಟೂಟ್ ಗಯಿ.
ನಮ್ಮೂರಿನಲ್ಲಿ ನಾಗಪ್ಪ ಎಂಬವನಿದ್ದ. ಬೇಸಿಗೆ ರಜೆಯಲ್ಲಿ ಅಜ್ಜನ ಮನೆ ಸೇರಿ ಲಾಗ ಹಾಕಿ ಗಲಾಟೆ ಎಬ್ಬಿಸುತ್ತಿದ್ದ ನಮಗೆಲ್ಲಾ ವರ್ಣರಂಜಿತ ಕಥೆಗಳನ್ನು ಹೇಳುವ ಕೆಲಸ ಅವನದಾಗಿತ್ತು. ಹೀಗೆ ಒಂದು ದಿವಸ ನಾವು ಕಥೆ ಕೇಳುತ್ತಿರುವಾಗಲೇ, ಅಷ್ಟು ದೂರದಿಂದ ದೊಡ್ಡ ಲಕ್ಷ್ಮೀ ಚೇಳು ಸರಸರನೆ ಹರಿದು ಹೋಗಿದ್ದು ನನ್ನ ಕಣ್ಣಿಗೇ ಬಿದ್ದುಬಿಟ್ಟಿತ್ತು. (ಅದಕ್ಕೆ ಲಕ್ಷ್ಮೀ ಚೇಳು ಅಂತ ಯಾಕೆ ಕರೀತಾರೋ ಎಂಬುದು ಇನ್ನೂ ನನಗೆ ಗೊತ್ತಾಗಿಲ್ಲ!) ಸರಿ, ನನಗೋ ಈ ಸರೀಸೃಪ ಜಾತಿಯ ಮೇಲೆ ವಿಶೇಷ ಭಯ! ಎರೆಹುಳ, ಚೇರಂಟೆಗಳಿಂದ ಹಿಡಿದು ಕಾಳಿಂಗದವರೆಗೂ, ಏಕರೀತಿಯ ಭಯವನ್ನು ನನ್ನೊಳಗೆ ಆ ಸೃಷ್ಟಿಕರ್ತ ಭರಪೂರ ಹಂಚಿಬಿಟ್ಟಿದ್ದಾನೆ. ಹೀಗಾಗಿ ಆ ಚೇಳನ್ನು ಕಂಡಿದ್ದೇ, ಜೋರಾಗಿ ಬೊಬ್ಬಿರಿದು ಮನೆಯವರನ್ನೆಲ್ಲಾ ಒಟ್ಟುಗೂಡಿಸುವಷ್ಟರಲ್ಲಿ ಆ ಚೇಳೆಲ್ಲೋ ಮಾಯವಾಗಿಬಿಟ್ಟಿತ್ತು. ಅಷ್ಟು ಚಿಕ್ಕ ವಿಷಯಕ್ಕೆ ಕೂಗಿ ಗಾಭರಿಗೊಳಿಸಿದ್ದಕ್ಕಾಗಿ ಎಲ್ಲರೂ ನನಗೆ ಸಮಾ ಬೈಯ್ದುಬಿಡಲು, ನನ್ನ ಓರಗೆಯವರ ಮುಂದೆ ನನಗೆ ಬಹಳ ಅವಮಾನವೆನಿಸಿಬಿಟ್ಟಿತ್ತು. “ಹೌದೌದು... ನಿಮಗೆಲ್ಲಾ ಏನು ಗೊತ್ತು... ಆ ಚೇಳು ನನ್ನ ಬಳಿಯೇ ಬರುವಂತಿತ್ತು... ಅಷ್ಟು ಜೋರಾಗಿ ನಾನು ಕೂಗಿಕೊಂಡಿದ್ದು ಕೇಳಿ ಹೆದರಿ ಓಡಿ ಹೋಯ್ತು. ಅದೇನಾದ್ರೂ ನನ್ನ ಕಚ್ಚಿ, ನಾ ಸತ್ತು ಹೋಗಿದ್ದಿದ್ರೆ, ದೆವ್ವವಾಗಿ ಬಂದು ನಿಮ್ಮನ್ನೆಲ್ಲಾ ಕಾಡ್ತಿದ್ದೆ...” ಎಂದು ಒದರಿಬಿಟ್ಟಿದ್ದೆ. ಅದಕ್ಕೆ ಕೂಡಲೇ ನನ್ನ ತಂಗಿ “ಈಗೆಂತ ಆಗಿದ್ದಿ ನೀ ಮತ್ತೆ...” ಎಂದು ಹಲ್ಕಿರಿಯಲು, ಅವಳ ಬೆನ್ನಿಗೊಂದು ಸಮಾ ಗುದ್ದಿಬಿಟ್ಟಿದ್ದೆ. ನಮ್ಮಿಬ್ಬರ ಜಗಳ ವಿಪರೀತಕ್ಕೆ ಹೋಗ್ತಿರೋದು ಕಂಡ ನಾಗಪ್ಪ, “ತಂಗಿ, ಇಷ್ಟಕ್ಕೆಲ್ಲಾ ಹೆದರಬಾರದು... ಚೇಳು ಕಚ್ಚಿದರೆ ಅದನ್ನ ಕೂಡಲೇ ಹಿಡಿದುಕೊಂಡು ಅದಕ್ಕೆಷ್ಟು ಕಲ್ಗಳಿವೆ ಎಂದು ಎಣಿಸಿದರಾಯ್ತು... ವಿಷ ಏರೋದೇ ಇಲ್ಲಾ... ಗಾಯವೂ ಥಟ್ಟನೆ ಮಾಯವಾಗ್ತದೆ...” ಎಂದಿದ್ದೇ, ದೊಡ್ಡವರೆಲ್ಲಾ ಕಿಸಕ್ಕನೆ ನಕ್ಕು ಒಳಗೆ ಹೋಗಿಬಿಟ್ಟಿದ್ದರು. ನನಗೋ ಪೂರ್ತಿ ಪುಕುಪುಕು ನಿಂತಿರಲಿಲ್ಲ. “ನಾಗಪ್ಪ, ನಂಗೇನಾದ್ರೂ ಆ ಚೇಳು ಮತ್ತೆ ಬಂದು ಕಚ್ಚಿದರೆ ನೀನೇ ಅದನ್ನ ಹಿಡ್ಕಂಡು ಅದರ ಕಾಲುಗಳನ್ನೆಲ್ಲಾ ಲೆಕ್ಕ ಮಾಡ್ಬಿಡು ಹಾಂ...” ಎಂದು ಆದೇಶಿಸಿಬಿಟ್ಟಿದ್ದೆ. ಈಗಲೂ ಇದನ್ನು ನೆನೆದಾಗೆಲ್ಲಾ ನಗುವುಕ್ಕಿ ಬರುತ್ತದೆ. ಆದರೆ ಚೇಳಿನ ಭಯ ಮಾತ್ರ ಸ್ವಲ್ಪವೂ ಕಡಿಮೆಯಾಗಿಲ್ಲ!
ಅದೇ ರೀತಿ, ನಾಗರ ಹಾವು ಕಚ್ಚಿದರೆ ಅದರ ಹೆಡೆಯಿಂದ ಕೆಳಗೆ ಗಟ್ಟಿಯಾಗಿ ಹಿಡಿದು ಆಸ್ಪತ್ರೆಗೆ ಹೋಗಬೇಕು... ಆಗ ನಮ್ಮೊಳಗೆ ಅದರ ವಿಷ ಏರದು... ಚೇರಂಟೆಯ ಕಾಲುಗಳನ್ನು ಲೆಕ್ಕ ಮಾಡಿದರೆ ದುಡ್ಡು ರಾಶಿ ಸಿಗುತ್ತದೆ.... ದೂರದ ಘಟ್ಟದಲ್ಲಿ ಘಟ ಸರ್ಪಗಳಿವೆ ಅವು ರಾತ್ರಿ ಹೊತ್ತು ಸಿಳ್ಳೆ ಹಾಕಿಕೊಂಡು ಬರುತ್ತಿರುತ್ತವೆ, ಪ್ರತಿಯಾಗಿ ನಾವೂ ಸಿಳ್ಳೆ ಹಾಕಿದರೆ ತಕ್ಷಣ ನಮ್ಮಲ್ಲಿಗೇ ಬಂದುಬಿಡುತ್ತವೆ... ಬಿಳಿ ಜಿರ್ಲೆ ಕಚ್ಚಿದ್ರೆ ಅದೃಷ್ಟ ಹೆಚ್ಚಾಗ್ತದೆ... ಹೀಗೆ ಇಂತಹ ಅನೇನಾನೇಕ ಅಸಾಧ್ಯ ಸಂಗತಿಗಳನ್ನೇ ಕಥೆಯಲ್ಲಿ ತುಂಬಿ ಹೇಳಿ ನಮ್ಮ ಮಂಗಬುದ್ಧಿಗೊಂದು ಅಂಕೆ ಹಾಕಿಡುತ್ತಿದ್ದ ನಾಗಪ್ಪ. 
ಮೊನ್ನೆ ಹೀಗೇ ಈ ಕಥೆಗಳನ್ನೆಲ್ಲಾ ಗೆಳತಿಯೊಂದಿಗೆ ಹಂಚಿಕೊಳ್ಳುತ್ತಿದ್ದೆ. ಆಗ ಆಕೆ ಇದರ ಹಿನ್ನಲೆಯೊಳಗೆ ಅಡಗಿರಬಹುದಾದಂಥ ಹೊಸ ಹೊಳಹೊಂದನ್ನು ತೆರೆದಿಟ್ಟಳು! ಚೇಳು, ಹಾವು ಇನ್ನಿತರ ಜಂತುಗಳು ಕಚ್ಚಿದಾಗ, ನಾವು ಅತಿಯಾದ ಭಯಕ್ಕೆ ಒಳಗಾಗಿಬಿಡುತ್ತೇವೆ. ಆಗ ನಮ್ಮ ಮನಸ್ಸನ್ನು ಬೇರೆಡೆಗೆ ಹೊರಳಿಸಲೂ ಇಂಥಾ ಕಥೆಗಳನ್ನು ಕಟ್ಟಿರುವ ಸಾಧ್ಯತೆಯಿದೆಯೆಂದು ಅವಳು ಹೇಳಿದಾಗ ಹೌದಲ್ಲಾ ಎಂದೆನಿಸಿತು. ವಿಷಜಂತುಗಳು ಕಚ್ಚಿದಾಗ ಉದ್ವೇಗ, ಆತಂಕ ಹೆಚ್ಚಾಗಿ, ಅದರಿಂದ ಬಿ.ಪಿ. ಜಾಸ್ತಿಯಾಗಿ, ವಿಷ ಬಹುವೇಗದಲ್ಲಿ ಏರತೊಡಗುತ್ತದೆ. ಇದನ್ನು ತಪ್ಪಿಸಲೂ, ಇಂಥಾ ಕಾಲ್ಪನಿಕ ಕಥೆಗಳನ್ನು ಹೊಸೆದಿರಬಹುದು ಎಂದೆನಿಸಿತು. ಅದೇನೇ ಹಿನ್ನಲೆ ಇದ್ದಿರಲಿ, ರೆಪ್ಟೈಲ್ ಸ್ಪೀಶೀಸ್‌ಗಳನ್ನು ಕಂಡರೇ ಹೌಹಾರುವ ನನ್ನಂಥವರಿಗೆ ಇಂಥಾ ಕಥೆಗಳನ್ನು ಹೇಳಿಬಿಟ್ಟರೆ, ಕಚ್ಚಿದ ಭಯದ ಜೊತೆಗೇ ಅದನ್ನು ಹಿಡಿಯುವ, ಹಿಡಿದು ಕಾಲುಗಳನ್ನು ಬೇರೆ ಎಣಿಸುವ ಕಲ್ಪನೆಯಿಂದಲೇ ಮತ್ತಷ್ಟು ಬಿ.ಪಿ. ಏರಿಬಿಡುವುದು ಗ್ಯಾರಂಟಿ! ಅಂಥ ಸಮಯದಲ್ಲಿ ವಿಷ ನಿಜವಾಗಿಯೂ ಹೊಕ್ಕಿರದಿದ್ದರೂ, ಅತೀವ ಭಯದಿಂದಲೇ ಮೂರ್ಛೆ ತಪ್ಪಿದರೂ ಅಚ್ಚರಿಯಿಲ್ಲ!
*****
(25-02-2018ರ ಉದಯವಾಣಿಯಲ್ಲಿ ಪ್ರಕಟಿತ)

~ತೇಜಸ್ವಿನಿ ಹೆಗಡೆ

ಬುಧವಾರ, ಜನವರಿ 10, 2018

ತೆರೆ ಸರಿದಾಗ...

ಮುಂಜಾನೆಯೋ, ಮುಸ್ಸಂಜೆಯೋ,
ಅದೊಂದು ಅಯೋಮಯ ಘಳಿಗೆ!
ಅರೆತೆರೆದ ಕಣ್ಣಿಂದ ಹೊಕ್ಕಿದ ಸ್ವಪ್ನದಲ್ಲಿ
ಅಜ್ಜಮ್ಮನ ಸೀರೆಯ ಸೆರಗಿನಂಚು ಸೋಕಿ,
ಅವಳ ಕಣ್ಗಳಿಂದ ಸುರಿದ ಪ್ರೀತಿ
ಹರಿದು ಧಾರೆಯಾಗಿ,
ನನ್ನೆದೆಯುರಿಯ ತಣಿಸಿದ ಹೊತ್ತು!
ಅವಳ ಹೆಗಲೇರಿ ಹೊರೆಟೆನೋ,
ಸೊಂಟವನ್ನೇರಿ ಕುಳಿತೆನೋ...
ಸಾಗಿದ ದಾರಿ ಮಾತ್ರ ಅದೇ ತೋಟ, ಗದ್ದೆ, ಗುಡ್ಡ, ಕಾಡು...
ಆಗಾಗ ಹೊಳೆದು ಕಣ್ಸೆಳೆಯುತ್ತಿತ್ತು ಅವಳ ಮೂಗುತಿಯ ನತ್ತು
ತೋರಿದ್ದಳಜ್ಜಿ ಪುಟಾಣಿ ಗಿಡದ ತುಂಬೆಲ್ಲಾ ತುಂಬಿದ್ದ
ಅಚ್ಚಬಿಳಿ ಹೂವುಗಳ, ಎಲೆಮರೆಯ ಕಾಯಿಗಳ
ಬುಡದಲ್ಲುದುರಿ ಒಣಗಿದ್ದ ತರಗೆಲೆಗಳ
ಅಂಟಂಟು ಅಂಟಿದಷ್ಟೂ ಕೂಸೆ, ಅಂಟದಿರು
ಯಾರಿಗೂ ಯಾವುದಕ್ಕೂ...
ಅಂಟಿಬಿಟ್ಟೆಯೋ ಕೆಟ್ಟೆ! ಕೆಟ್ಟರೂ ಸರಿಯೇ,
ಕೊಡವಿ ಮುನ್ನಡೆವುದನ್ನು ಸರಿಯಾಗಿ ಕಲಿಯೇ...
ನೋಡಲ್ಲಿ ಹೂವ ತೊಟ್ಟನು,
ಇನ್ನೇನು ಕಳಚಲು ಸನ್ನದ್ಧವಾಗಿದೆ...
ಅದಕಿಲ್ಲ ಯಾವ ಶೋಕ, ಗಿಡಕೂ ಇಲ್ಲ ಹನಿ ಪಶ್ಚಾತ್ತಾಪ
ಚಕ್ರ ತಿರುಗಲು ಉರುಳಲೇ ಬೇಕದು ಅನವರತ...
ಕೇಳಿಲ್ಲಿ ತಂಗಿ, ನಿನಗೆ ದಕ್ಕಿದ್ದಷ್ಟೇ ಪ್ರಾಪ್ತಿ
ಮಿಕ್ಕಿದ್ದು ಕೃಷ್ಣಾರ್ಪಣಮಸ್ತು!
ನಮ್ಗೆ ನಾವು ಗೋಡೆಗೆ ಮಣ್ಣು
ಉಳ್ದಿದ್ದೆಲ್ಲಾ ಶಿವನ ಮೂರನೆಯ ಕಣ್ಣು
ಹತ್ತಿರವಿದ್ದೂ ದೂರನಿಲ್ಲುವ ಪಾಠವ ಕಲಿಸಿ,
ಅಂಗೈ ಬಿಡಿಸಿ, ಕಿರು ಬೆರಳ ತುದಿಯನ್ನಷ್ಟೇ
ಸೋಕಿಸಿ ಸಾಗುವ ಪರಿ ತೋರಿ,
ನಿಂತ ನೀರಾಗಿದ್ದ ನೋಟವ ತಿರುಗಿಸಿ,
ಮಡಿಲೇರಿದವಳಿಗೆ ಅಮಲೇರಿಸಿದ್ದಳಾ ಅಜ್ಜಮ್ಮ
ಕಣ್ಬಿಟ್ಟಾಗ ಮುಂಜಾವೋ, ಮುಸ್ಸಂಜೆಯೋ!
ದಿಂಬಿನ ಹಸಿ ಒದ್ದೆಯಲ್ಲಿ
ಅವಳುಟ್ಟಿದ್ದ ಪತ್ತಲದ ಘಮಲು ಮಾತ್ರ
ಹಾಗೇ ಅಂಟಿಕೊಂಡಿತ್ತು.
~ತೇಜಸ್ವಿನಿ

ಸಾವಿನ ದಶಾವತಾರ

ಕೆ.ಸತ್ಯನಾರಾಯಣ ಅವರ ಬರಹಗಳನ್ನು ನಾನು ಓದಲು ಶುರುಮಾಡಿದ್ದು ತೀರಾ ಮೂರು ವರುಷಗಳ ಹಿಂದೆಯಷ್ಟೇ. ಅವರ ಕಥಾಸಂಕಲನವೊಂದನ್ನು ಓದಿ ಬಹಳ ಪ್ರಭಾವಿತಳಾಗಿರುವಾಗಲೇ ಅಚಾನಕ್ಕಾಗಿ ಕಾಲಜಿಂಕೆಎನ್ನುವ ಅಪರೂಪದ ಕಾದಂಬರಿ ಕಣ್ಣಿಗೆ ಬೀಳಲು, ಅದನ್ನು ಮೊದಲು ಓದಲು ಆಯ್ದಿಕೊಂಡಿದ್ದು ಅದರ ಶೀರ್ಷಿಕೆಯೊಳಡಗಿದ್ದ ಆಕರ್ಷಣೆಯೇ ಕಾರಣವಾಗಿತ್ತು. ಬಹಳ ಅಪರೂಪದ ಕಾದಂಬರಿಯದು! ಅದನ್ನೋದಿ ಪ್ರಭಾವಿತಳಾಗಿ, ಅವರ ಇನ್ನೂ ಕೆಲವು ಹೊತ್ತಗೆಗಳನ್ನು ಓದಲು ಶುರುವಿಟ್ಟುಕೊಂಡೆ. ವಿಕಲ್ಪ’, ‘ವೃತ್ತಿ ವಿಲಾಸಇವೆಲ್ಲಾ ಅವರದ್ದೇ ವಿಶಿಷ್ಟ ಶೈಲಿಯಲ್ಲಿ ನಿರೂಪಣೆಗೊಂದ ಹೊತ್ತಗೆಗಳೇ. ಆದರೆ ಅವರ ಇತ್ತೀಚಿನ ಸಾವಿನ ದಶಾವತಾರಬಹಳ ಕಾಡಿ, ಬಿಡದೇ ಓದಿಸಿಕೊಂಡಿತು.
ಇದು ಒಂದೇ ಗುಕ್ಕಿನಲ್ಲಿ ಖಂಡಿತ ಓದಿಸಿಕೊಳ್ಳುವುದಿಲ್ಲ! ಬಹಳ ತಿಣುಕಾಡಿಸುತ್ತದೆ... ಕಾಡಿಸುತ್ತದೆ... ನೋಯಿಸುತ್ತದೆ... ನಮ್ಮೊಳಗೆ ಹೊಕ್ಕಿರುವ ನಮ್ಮ ಸಾವಿನ ಭಯವನ್ನೆಬ್ಬಿಸಿ ಹುಯಿಲೆಬ್ಬಿಸುತ್ತದೆ... ಪ್ರಶ್ನಿಸುತ್ತದೆ... ಕೆಲವೊಂದಕ್ಕೆ ಉತ್ತರಿಸುತ್ತದೆ ಕೂಡ... ಹಾಗೇ ಎಷ್ಟೋ ಪ್ರಶ್ನೆಗಳನ್ನು ಹಾಗೇ ಉಳಿಸಿಯೂ ಬಿಡುತ್ತದೆ! 


ನನಗೆ ಸದಾ ಅನ್ನಿಸುತ್ತಿರುತ್ತದೆ. ನಮಗೆ ನಮ್ಮ ಸಾವಿನ ಭಯಕ್ಕಿಂತ ನಮ್ಮವರ ಅಗಲಿಕೆಯ ಆತಂಕವೇ ಹೆಚ್ಚು ಕಾಡುತ್ತಿರುತ್ತದೆ, ಜೊತೆಗೇ ನಮ್ಮ ಸಾವಿನಾನಂತರ ನಮ್ಮವರು ಅನುಭವಿಸುವ ನೋವು ದುಃಖದ ಕಲ್ಪನೆಯೇ ನಮ್ಮೊಳಗೆ ಹೆಚ್ಚು ಸಂಕಟವನ್ನುಂಟುಮಾಡುತ್ತದೆ ಎಂದು. ಅಲ್ಲಾ ಮಾರಾಯ್ತಿ, ನೀನು ಸತ್ತ ಮೇಲೆ ಏನಾದರೇನು? ಕಾಲ ಹೀಗೇ ನಿಲ್ಲೊಲ್ಲ.. ಕ್ರಮೇಣ ಎಲ್ಲಾ/ಎಲ್ಲರೂ ಸಮಾ ಆಗುವುದು/ಆಗುವರುಎಂದಿರಾದರೆ ನನಗೆ ತಕ್ಷಣಕ್ಕೆ ಈ ಮಾತೊಳಗೆ ಪರಮ ಸ್ವಾರ್ಥವೇ ಕಂಡೀತು! ನಾನು ಸತ್ತಮೇಲೆ ಈ ಜಗತ್ತಿನಲ್ಲಿ ಏನೇ ದುರಂತಗಳು, ಆಗು ಹೋಗುಗಳಾದರೂ ಆಗಿ ಹೋಗಲಿ.. ನೋಡಲು, ಪರಿತಪಿಸಲು ನಾನಂತೂ ಇರುವುದಿಲ್ಲವಲ್ಲ ಎನ್ನುವ ಭಾವವೇ ಮತ್ತಷ್ಟು ಹಿಂಸೆ ನೀಡುವಂಥದ್ದು ಎನ್ನಿಸುವುದು. ಆದರೆ ಇಂದಿನ ಯುಗದಲ್ಲಿ ಮತ್ತೊಬ್ಬರ ಸಾವೂ ಒಂದು ಸಾಧಾರಣದ ಉದಾಸೀನ, ಅತಿ ಸಾಮಾನ್ಯ, ಅನಿವಾರ್ಯ ಕರ್ಮ ಅಷ್ಟೇ ಎಂಬ ತಣ್ಣನೆ ಕ್ರೌರ್ಯ ಬೆರೆತ ಫಿಲಾಸಫಿಯಿಂದ ನೋಡುವುದೇ ಸಾಮಾನ್ಯವಾಗಿಬಿಟ್ಟೀದೆ. ಸ್ವಂತ ಸಾವಿನ ಕುರಿತು ನಮ್ಮ ನಂತರ ಉಳಿದವರಿಗೇನು ತೊಂದರೆಯಾವುದೋ ಎಂಬ ಮಿಡುಕಿಗಿಂತಲೂ, ಅವರೆಲ್ಲಾ ಈ ಬದುಕಿನಲ್ಲೂ ಇನ್ನೂ ಹೆಚ್ಚು ಕಾಲ ಬದುಕನ್ನು ಅನುಭವಿಸುತ್ತಾ, ಸಂಭ್ರಮಿಸುತ್ತಾ ಇರುತ್ತಾರಲ್ಲ ಎಂಬ ಅಸೂಯೆಯೇ ಹೆಚ್ಚಿನ ಸಮಯದಲ್ಲಿ ತಲೆ ಕೊರೆಯುತ್ತಿರುತ್ತದೆಯೇನೋ ಎಂದೆನಿಸಿಬಿಟ್ಟಿತು. 

ಇಂಥೆಲ್ಲಾ ಹುಚ್ಚುಚ್ಚೋ ಇಲ್ಲಾ ಹುಚ್ಚೊಳಗಿನ ಸತ್ಯವೋ ನನ್ನೊಳಗೆ ಎದ್ದಿದ್ದು, ಎದ್ದು ನನ್ನ ಕೆರಳಿಸಿದ್ದು, ತಾಕಲಾಡಿದ್ದು ಸಾವಿನ ದಶಾವತಾರಕಾದಂಬರಿಯನ್ನೋದಿದಾಗ!
ಸಾವು ಸಂಭವಿಸಿದ ಮೇಲೆ ಮಾಡಬೇಕಾದ ಅಪರ ಕರ್ಮಗಳನ್ನು ನಡೆಸಿಕೊಡುವುದನ್ನೇ ತನ್ನ ವೃತ್ತಿಯನ್ನಾಗಿಸಿಕೊಂಡ ನಾಯಕ (event management ತರಹ ಸಾವಿನಾನಂತರದ ವಿಧಿಗಳನ್ನು ಆಯಾ ಸಾವಿನ ಹಿನ್ನಲೆಗನುಗುಣವಾಗಿ ನೆರವೇರಿಸುವಂಥ ವೃತ್ತಿ!), ತನ್ನ ಬದುಕಿನ ಸಣ್ಣ ಸಣ್ಣ ಕಥೆಗಳನ್ನು ನಿರೂಪಿಸುವುದರ ಮೂಲಕ ಸಾವು ಹೇಗೆಲ್ಲಾ ತನ್ನ ಮುಖವನ್ನು, ವಿರಾಟ್ ಸ್ವರೂಪವನ್ನು, ಕರಾಳತೆಯನ್ನು, ವಿಕೃತೆಯನ್ನು ತೆರೆಯಬಹುದು, ಕ್ರೌರ್ಯದ ಪರಾಕಷ್ಠೆ ಹೇಗೆಲ್ಲಾ ಇದ್ದಿರುತ್ತದೆ ಎಂಬುದನ್ನು ತಣ್ಣಗೆ, ಮೆಲು ಧ್ವನಿಯಲ್ಲಿ ನಿರೂಪಿಸುತ್ತಾ ಹೋಗುತ್ತಾನೆ. ಕ್ರಿಯಾಕರ್ಮಗಳಿಗೆ ಜನರನ್ನು ಹೊಂದಿಸುವುದು.. ವಿಧಿ ನಡೆವ ದಿನಗಳಲ್ಲೇ, ಸ್ಥಳದಲ್ಲೇ ಎದ್ದೇಳುವ ಆಸ್ತಿ ವಿವಾದ, ಕುಟುಂಬ ಕಲಹ, ದೋಷಾರೋಪಗಳಿಗೆಲ್ಲಾ ಕಾನೂನು ಸಲಹೆ, ಸಂಪರ್ಕ, ಇನ್ನಿತರ ವ್ಯವಸ್ಥೆಗಳನ್ನೊದಗಿಸಿವುದು... ಆ ಸಮಯದುದ್ದಕ್ಕೂ ಮನೆಯವರೊಂದಿಗೆ ಒಂದು ನಶ್ವರ ಬಂಧವನ್ನೇರ್ಪಡಿಸಿಕೊಂಡು, ತದನಂತರ ಅದಕ್ಕೊಂದು ಶಾಶ್ವತ ಕೊನೆ ಕಲ್ಪಿಸಿಬಿಡುವುದು... ಮತ್ತೆ ಮತ್ತೊಂದು ಸಾವಿಗೆ ಕಾಯುತ್ತಿರುವುದು. ಇಂತಹ ವಿಶಿಷ್ಟ ವೃತ್ತಿಯನ್ನು ಯಶಸ್ವಿಯಾಗಿ ನಡೆಸುತ್ತಿದ್ದವನ್ನು ಸಂದರ್ಶಿಸಲು ಬರುವ ಚಿತ್ರಣದೊಂದಿಗೆ ಕಾದಂಬರಿ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. 
ಆ ಸಂದರ್ಶನಕ್ಕೆ ಉತ್ತರಿಸುವ ನೆಪದಲ್ಲಿ ಆತ ತನಗೆ ತಾನೇ ಉತ್ತರಿಸುತ್ತಾ, ನಮ್ಮೊಳಗೂ  ಪ್ರಶ್ನೆ ಎಬ್ಬಿಸಿ  ಸ್ವಯಂ ಉತ್ತರಿಸಿಕೊಳ್ಳಲು ಪ್ರೇರೇಪಿಸುತ್ತಾ, ಅಲ್ಲಲ್ಲಿ ಹೊಸ ಪ್ರಶ್ನೆಗಳನ್ನೂ ಹುಟ್ಟಿಸಿಬಿಡುತ್ತಾನೆ.
ಉದಾಹರಣಗೆ ನನ್ನಲ್ಲಿ ಹುಟ್ಟಿದ ಪ್ರಶ್ನೆಗಳಿವು :-
*ನಾವು ಮಾಡುತ್ತಿರುವ ವೃತ್ತಿ ಅಥವಾ ಅಳವಡಿಸಿಕೊಂಡಿರುವ ಪ್ರವೃತ್ತಿ ನಮ್ಮ ಆಯ್ಕೆಯೇ? ನಿಜವಾಗಿಯೂ ಬಾಲ್ಯದಲ್ಲಿ ಅದರ ಕನಸು ಕಂಡಿದ್ದೆವೆಯೇ? ಅದು ನನಸಾಗಿದೆಯೇ?
*ನನ್ನ ವೃತ್ತಿಯ ಕುರಿತು ನಮಗೆ ಗೌರವವಿದೆಯೇ? ಅದನ್ನು ಮತ್ತೊಬ್ಬರಿಗೆ ಹಸ್ತಾಂತರಿಸಲು ಅಥವಾ ಇತರರು ಅನುಸರಿಸಲೆಂಬ ಆಶಯವಿದೆಯೇ?
*ಎದುರಾಗುವ ಸವಾಲುಗಳನ್ನೆಷ್ಟು ಸಮರ್ಥವಾಗಿ ಎದುರಿಸಿದ್ದೇವೆ?
*ನಮ್ಮ ವೃತ್ತಿ ಸಮಾಜವೊಡ್ಡುವ ಮಿತಿಗಳನ್ನು ಮೀರಲೆಷ್ಟು ಸಹಕಾರಿಯಾಗಿದೆ?
*ಮಾಡುತ್ತಿರುವ ಕೆಲಸವನ್ನು ನಿಲ್ಲಿಸಬೇಕೆಂದು ಅನಿಸಿದ್ದಿದೆಯೇ? ಹಾಗೆನಿಸಲು ಕಾರಣ? - ಹೀಗೆ ಹಲವಾರು ಪ್ರಶ್ನೆಗಳನ್ನು ಸ್ವಯಂ ಹಾಕುತ್ತಾ ಹೋಗಿದ್ದೇನೆ ನಾಯಕನ ಜೊತೆಗೇ!

ಈಗ ನಾವು ಬದುಕುತ್ತಿರುವುದು ಮುಗಿದುಹೋದ ಕಾದಂಬರಿಯ ಕೊನೆಯ ಪುಟಗಳ ನಂತರ ಸುಮ್ಮನೆ ಬಿಡುವ ಖಾಲಿ ಒಂದು ಪುಟವನ್ನು ಮಾತ್ರಎಂಬ ಸಾಲು ನಮ್ಮನ್ನು ತಣ್ಣಗಾಗಿಸಿಬಿಡುತ್ತದೆ.
ಆಯ್ಕೆ ನಾವು ಮಾಡಿದಾಗ ಇಲ್ಲ ನಮ್ಮನ್ನು ಮತ್ತೊಬ್ಬರು ಆಯ್ಕೆ ಮಾಡಿದಾಗಲೂ ಆಯ್ಕೆಯೇ ಇಲ್ಲದಿರಬಹುದುಎಂಬ ಮಾತು ತುಸು ಗೊಂದಲವನ್ನು ಹುಟ್ಟಿಸಿಬಿಡುತ್ತದೆ. ನಾವೇ ಆಯ್ಕೆ ಮಾಡಿಕೊಂಡ ಸಂಬಂಧಗಳ ಜೊತೆಗೆ ನಮ್ಮ ನಿತ್ಯ ಬದುಕಿನ ಅನಿವರ್ಯತೆ ಹುಟ್ಟಿಸುವ ಸಂಬಂಧಗಳು - ಇವುಗಳೂ ಕೂಡ ಯಾರ ಅರಿವಿಗೂ ಬಾರದಂತೇ ತಣ್ಣಗೆ ಕರಗಿ ಹೋಗುತ್ತಿರುವುದರ ಅನುಭವ ನಿಚ್ಚಳವಾಗಿ ಇಲ್ಲಿ ನಮಗೆ ದೊರಕುತ್ತದೆ.

ಪದಗಳ ಶ್ರೀಮಂತಿಕೆಗೆ, ಕುಕ್ಕಲಾತಿಗೆ ಬಿಂಬವೂ ಇಲ್ಲ, ಪ್ರತಿಬಿಂಬವೂ ಇಲ್ಲವೇನೋ. ಸುಮ್ಮನೇ ಹುಟ್ಟುತ್ತವೆ. ಸುಮ್ಮನೇ ಇರುತ್ತವೆ. ಅಷ್ಟೇ ಎಂಬ ಮಾತುಗಳನ್ನೋದಿದ ತಕ್ಷಣ ಅದೇಕೋ ಎಂತೋ ನನಗೆ  ಭೈರಪ್ಪನವರ ದಾಟುಕಾದಂಬರಿಯಲ್ಲಿ ಬರುವ ಪ್ರಳಯ ಜಲದಲ್ಲಿ ಬಿಂಬವೂ ಇಲ್ಲ, ಬಿಂಬಿಯೂ ಇಲ್ಲ ಎಂಬ ಸಾಲು ನೆನಪಿಗೆ ಬಂದು ಬಿಟ್ಟಿತು. ಇಂದಿನ ಅಂತರ್ಜಾಲ ಯುಗದಲ್ಲಿ, ವಾಟ್ಸ್‌ಆಪ್, ಫೇಸ್ಬುಕ್ ಜಮಾನದಲ್ಲಿ ನಾವು ಬಳಸುವ ಇಮೋಟಿಕಾನ್ಸ್‌ಗಳ ಕುರಿತು ರಪ್ಪನೆ ಮುಖಕ್ಕೆ ಹೊಡೆದು ಹೇಳುವಂತಿದೆಯೇನೋ ಈ ಸಾಲು ಎಂದು ನನಗೆ ಭಾಸವಾಯಿತು. ಎಗ್ಗಿಲ್ಲದೇ ಬಳಸುವ ಕೆಂಪು, ಗುಲಾಬಿ ಬಣ್ಣದ ಹಾರ್ಟ್, ಕಿಸ್ಸಿಂಗ್, ಲವ್ ಎಕ್ಸ್‌ಪ್ರೆಶೆನ್ಸ್ ಇಮೋಜಿಗಳು ಬರೀ ಪದಗಳನ್ನು ಶೃಂಗರಿಸಬಲ್ಲವೇ ಹೊರತು, ನಮ್ಮೊಳಗಿನ ನಿಜ ಭಾವವನ್ನು ತೋರ್ಪಡಿಸಲಾರವು. ಅಲ್ಲದೇ, ಪರದೆಯ ಮೇಲೆ ಎಗ್ಗಿಲ್ಲದೇ ಇಮೋಜಿ ಹೃದಯಗಳನ್ನು ಬಿಚ್ಚಿಡುವ ತೆರೆಮರೆಯ ಮನಸುಗಳು, ಪರಸ್ಪರ ಎದುರಾದಾಗ ತೋರುವ ನಿರ್ಲಿಪ್ತತೆ, ಸಣ್ಣ ನಿರ್ಲಕ್ಷ್ಯತನಕ್ಕೆ ಕನ್ನಡಿ ಹಿಡಿದಂತಿದೆ ಎಂದೆನಿಸಿಬಿಟ್ಟಿತು.

ಮತ್ತೆ ಮತ್ತೆ ಓದಿಸಿಕೊಂಡು ಮೆಲುಕು ಹಾಕಿದಂಥ ಸಾಲುಗಳು :-

೧) ಹಿಡಿದಿಟ್ಟ ದುಃಖ, ಹಿಂಡಿಬಿಡುವ ದುಃಖ ಎಂಬ ಮಾತೇ ಸುಳ್ಳು. ಯಾವುದೂ ಹಿಡಿದಿಡುವುದಿಲ. ಯಾವುದೂ ಹಿಂಡಿಬಿಡುವುದಿಲ್ಲ. ಕಾಲವು ದುಃಖವನ್ನು ಕೂಡ ಸೋಸಿಬಿಡುತ್ತದೆ. ಮುಂದಿನ ಕ್ಷಣ, ಮುಂದಿನ ಅನುಭವ ಇರುವುದೇ ಹಿಂದಿನ ಕ್ಷಣ, ಹಿಂದಿನ ಅನುಭವದ ಮೇಲೆ ದಬ್ಬಾಳಿಕೆ ನಡೆಸಲು.
೨) ಕಾಲವು ದುಃಖದ ಪ್ರಮಾಣವನ್ನು ಕಡಿಮೆ ಮಾಡಬಹುದು. ಶಾಪದ ಪ್ರಮಾಣವನ್ನಲ್ಲ (ಇಲ್ಲಿ ಶಾಪವೆಂದರೆ ದುಃಖದಲ್ಲಿ ನಾವು ಮತ್ತೊಬ್ಬರಿಕೆ ಹಾಕುವಂಥದ್ದಲ್ಲ. ನಮ್ಮ ದುಃಖಕ್ಕೆ ಕಾರಣವಾದ ಘಟನೆ ಜೀವನದುದ್ದಕ್ಕೂ ಕಟು ವಾಸ್ತವವಾಗಿ ನಮ್ಮೊಂದಿಗಿದ್ದುಬಿಡುವುದು)
೩) ಈ ಜಗತ್ತಿನಲ್ಲಿ ತಪ್ಪು ಅಂತ ಯಾರೂ ಮಾಡುವುದಿಲ್ಲ. ಅವರು ಸರಿ ಎಂದುಕೊಂಡು ಮಾಡಿದ್ದು ತಪ್ಪಾಗಿರುತ್ತದೆ ಅಷ್ಟೆ. (ಈ ಸಾಲು ಮಾತ್ರ ನನ್ನೊಳಗೆ ಹೊಸ ಆಲೋಚನ ಕ್ರಮವನ್ನೇ ಹುಟ್ಟು ಹಾಕಿಬಿಟ್ಟಿತು!)
೪) ನಾವು ಅಸತ್ಯದ, ಅನ್ಯಾಯದ ಪರವಾಗಿ ಸಕ್ರಿಯವಾಗಿ ಇರುವುದಿಲ್ಲ. ಸತ್ಯ, ನ್ಯಾಯದ ಬಗ್ಗೆ ಉದಾಸೀನವಾಗಿ ಗೊತ್ತಿದ್ದು ಗೊತ್ತಿದ್ದೂ ಇರುತ್ತೇವೆ. (ಎಷ್ಟು ಸತ್ಯ!)
೫) ಯಾರೊಬ್ಬರ ಸಾವು, ನಮ್ಮ ಸಾವೂ ಕೂಡ ಸೇರಿದಂತೆ ಅಸತ್ಯದ ಬಗ್ಗೆ ನಮಗಿರುವ ಆಂತರಿಕ ಒಲವನ್ನು, ಸತ್ಯದ ಬಗ್ಗೆ ಇರುವ ಉದಾಸೀನವನ್ನು ಕೊಂಚವೂ ವಿಚಲಿತಗೊಳಿಸಲಾರದಲ್ಲ! (ಕಟು ಸತ್ಯ!)
೬) ನಮ್ಮ ನಮ್ಮ ಸ್ವಭಾವವೆಂದರೆ ಶನಿ ಮಹಾತ್ಮ ಇದ್ದ ಹಾಗೇ. ನಾವೂ ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ಇನ್ನೊಬ್ಬರೂ ಬದಲಾಯಿಸಲಾಗುವುದಿಲ್ಲ.
೭) ವಿಚಾರಕ್ಕೆ ತಕ್ಕಂತೆ ಬದುಕಬೇಕೋ, ಇಲ್ಲ ಸ್ವಭಾವಕ್ಕೆ, ಪ್ರಾಮಾಣಿಕವಾಗಿರಬೇಕೋ ಎಂಬುದೇ ತಿಳಿಯದಾಗಿದೆ. ಎರಡೂ ತರದವರನ್ನು ಹತ್ತಿರದಿಂದ ಕಂಡು, ಅನುಭವಿಸಿ, ಆತ್ಮೀಯರನ್ನಾಗಿ ಕೂಡ ಮಾಡಿಕೊಂಡು, ಅವರು ಬದಲಾದಂತೆ ನಾನೂ ಗೋಸುಂಬೆ ಆಗುತ್ತಾ ಜೀವನದ ಅಷ್ಟೊಂದು ಭಾಗವನ್ನು ಮುಗಿಸಿಯೇಬಿಟ್ಟಿದ್ದೇನೆ.

ಆದರೆ,
ಸಂಬಂವನ್ನು ಬಯಸಿದವರ ಜೊತೆ ಮಾತ್ರ ಸಂಬಂಧ ಇಟ್ಟುಕೊಳ್ಳಬೇಕೆ? ಯಾವ ಸಂಬಂಧವನ್ನು ಇನ್ನೊಬ್ಬರು ನಮ್ಮ ಬಗ್ಗೆ obligeಆಗಿರಲಿ ಎನ್ನುವ ಕಾರಣಕ್ಕೆ ಇಟ್ಟುಕೊಳ್ಳಬಾರದು” - ಎಂಬ ಮಾತು ಮಾತ್ರ ಯಾಕೋ ಪೂರ್ತಿ ಒಪ್ಪಿತವಾಗಲಿಲ್ಲ. ಪ್ರತಿ ಜೀವಿಯೂ ಸಂಬಂಧ ಏರ್ಪಡಿಸಿಕೊಳ್ಳಲು ಬಯಸುವುದು, ಅದು ಉಳಿವುದು ಎದುರಿನ ವ್ಯಕ್ತಿಯ ಪ್ರತಿಕ್ರಿಯೆಯ ಮೇಲೆಯೇ ಅಲ್ಲವೇ? ಆತ ಒಪ್ಪಲಿ ಬಿಡಲಿ, ಪ್ರೀತಿಸಲಿ ತಿರಸ್ಕರಿಸಲಿ ನಾನು ಮಾತ್ರ ಸಂಬಂಧ ಉಳಿಸಿಕೊಂಡು ಹೋಗುವೆ ಎನ್ನುವ ಸಂಕಲ್ಪ ಎಷ್ಟು ದಿವಸ ಗಟ್ಟಿಯಾಗಿರಬಹುದು ಎಂದೆನಿಸಿತು. 
ಅಲ್ಲದೇ,
Bits of paperಗಳಂಥ ಚಿಕ್ಕ ಕಥೆಗಳು/ಘಟನಾವಳಿಗಳು ಕೆಲವೆಡೆ ಓವರ್ ಲ್ಯಾಪ್ ಆಗಿ ಮತ್ತೊಮ್ಮೆ ಓದಿ ನೆನಪಿಸಿಕೊಳ್ಳುವಂತೆ ಆಗುತ್ತವೆ.

ಬಹು ಮುಖ್ಯವಾದ ವಿಷಯ!

ಈ ಕಾದಂಬರಿ ದೇಹ ದಾನದೊಳಗೆ ಅಡಗಿರುವ ಕರಾಳತೆಯನ್ನು, ಪರಮ ನಿರ್ಲಕ್ಷ್ಯತನವನ್ನು, ವಿಕಾರತೆಯನ್ನು, ಹೇವರಿಕೆ ಹುಟ್ಟಿಸುವಂಥ ಸತ್ಯವನ್ನು ಹಸಿ ಹಸಿಯಾಗಿ ತೆರೆದಿಟ್ಟು, ‘ಅಂತಹ ಕ್ರಮಕ್ಕೆ ನಾನೆಂದೂ ನನ್ನ ಆಪ್ತರನ್ನು ಒಡ್ಡಲಾರೆ, ಸ್ವತಃ ಒಳಗೊಳ್ಳಲಾರೆಎಂಬ ನನ್ನ ನಿರ್ಧಾರವನ್ನು ಮತ್ತಷ್ಟು ಬಲವಾಗಿಸಿಕೊಳ್ಳಲು ನೆರವಾಯಿತು!

ಗಹನ ಚಿಂತನೆಗೆ ಒರೆ ಹಚ್ಚುವ ೧೭೨ ಪುಟಗಳ ಈ ಹೊತ್ತಗೆ ಮತ್ತೆ ಮತ್ತೆ ಓದಿಗೆ ಪ್ರೇರೇಪಿಸುವಂಥದ್ದು. ಒಮ್ಮೆ ಓದಿ, ಸುಲಭವಾಗಿ ಮರೆತುಬಿಡುವಂಥದ್ದಲ್ಲ, ಮರೆಯಲು ಬಿಡುವುದೂ ಇಲ್ಲ!


~ತೇಜಸ್ವಿನಿ ಹೆಗಡೆ.