ಮಂಗಳವಾರ, ಮಾರ್ಚ್ 11, 2008

ಕಾರ್ಯಕ್ರಮದ ವರದಿ

ವಿಶ್ವಮಹಿಳಾದಿನಾಚರಣೆಗೆ ‘ಕಾಣ್ಕೆ’ಯಾದ ‘ಪ್ರತಿಬಿಂಬ’





ಮಾರ್ಚ್ 8ರಂದು ನಡೆದ ಪುಸ್ತಕ ಬಿಡುಗಡೆಯ ಸಮಾರಂಭ ಆಪ್ತರ, ಸಮಾನಮನಸ್ಕರ, ಅಪ್ಪಟ ಸಾಹಿತ್ಯಾಭಿಮಾನಿಗಳ ವೇದಿಕೆಯಾಗಿತ್ತೆನ್ನಬಹುದು. ಸುಮಾರು ೭೫ ಸಾಹಿತಿಗಳು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಸಾಹಿತ್ಯಪ್ರೇಮಿಗಳು ಉಪಸ್ಥಿತರಿದ್ದರು.
---
ಕಾರ್ಯಕ್ರಮ ಸುಮಾರು 5.14ಕ್ಕೆ ಹಳೆವಿದ್ಯಾತರ್ಥಿಸಂಘದ ಅಧ್ಯಕ್ಷರಾಗಿರುವ ಶ್ರೀ ವಿಠಲ ಕುಡ್ವ ಎಂ. ಅವರ ಸ್ವಾಗತದೊಡನೆ ಪ್ರಾರಂಭವಾಯಿತು. ತದನಂತರ ಕಾಲೇಜಿನ ಹಿರಿಯ ಪ್ರೊಫೆಸರ್ ಹಾಗೂ ಕಾರ್ಯಕ್ರಮದ ವ್ಯವಸ್ಥಾಪಕರೂ ಆಗಿರುವ ಡಾ.ಜಿ.ಎನ್.ಭಟ್ಟರು ವೇದಿಕೆಯಲ್ಲಿದ್ದ ಗಣ್ಯರ ಪರಿಚಯ ನೀಡಿದರು. ರಾಜ್ಯಮಟ್ಟದಲ್ಲಿ ಸಾಹಿತ್ಯ ಹಾಗೂ ಪತ್ರಿಕಾ ಕ್ಷೇತ್ರದಲ್ಲಿ ಅರ್ಹ ಗೌರವ ಪಡೆದಿರುವ ಶ್ರೀ ಮನೋಹರ ಪ್ರಸಾದ್ ಅವರು (ಮಂಗಳೂರು ಕರ್ಯಾಲಯದ ಉದಯವಾಣಿ ಮುಖ್ಯಸ್ಥರು) ಹಾಗೂ ‘ಸಂಪ್ರಭಾ’ ಕಿರು ಪತ್ರಿಕೆಯ ಸಂಪಾದಕರೂ, ಲಿಟ್ಲಫ್ಲವರ್ ಪ್ರೌಢ ಶಾಲೆಯಲ್ಲಿ ಕನ್ನಡ ಪ್ರಾಧ್ಯಾಪಕರೂ, ಕವಿಗಳೂ, ಲೇಖಕರೂ ಆಗಿರುವ ಶ್ರೀ ಸುಮುಖಾನಂದ ಜಲವಳ್ಳಿಯವರು ಸಂಕಲನಗಳ ಕುರಿತು ವಿಮರ್ಶೆ, ಸಲಹೆಗಳನ್ನಿತ್ತು ಶುಭಾಶಂಸನೆಗೈದರು.
---
‘ಕಾಣ್ಕೆ’ ಕಥಾಸಂಕಲನಕ್ಕೆ ಮುನ್ನುಡಿ ಬರೆದಿರುವ ಶ್ರೀಮತಿ ಭುವನೇಶ್ವರಿ ಹೆಗಡೆಯವರು ಹಾಗೂ ‘ಪ್ರತಿಬಿಂಬ’ ಕವನ ಸಂಕಲನಕ್ಕೆ ಮುನ್ನುಡಿ ಬರೆದಿರುವ ಶ್ರೀ ಶ್ರೀಧರ ಡಿ.ಎಸ್.ಅವರು ಆಯಾ ಸಂಕಲನದ ಕುರಿತು ಕಿರುಪರಿಚಯಮಾಡಿಕೊಟ್ಟು , ಲೇಖಕಿಯ ಹಿನ್ನಲೆಗಳನ್ನು ತಿಳಿಸಿದರು.
---
ಅಧ್ಯಕ್ಷರಾಗಿದ್ದ ಶ್ರೀ ಏರ್ಯ ಲಕ್ಷ್ಮೀನಾರಾಯಣ ಆಳ್ವರು ಕಥಾಸಂಕಲನವನ್ನೂ ಹಾಗೂ ಮುಖ್ಯ ಅತಿಥಿಗಳಾಗಿದ್ದ ಶ್ರೀ ಪ್ರದೀಪಕುಮಾರ್ ಕಲ್ಕೂರ್ ಅವರು ಕವನ ಸಂಕಲನವನ್ನು ಬಿಡುಗಡೆ ಮಾಡಿ, ಪುಸ್ತಕಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ, ಲೇಖಕಿಯನ್ನು ಆಶೀರ್ವದಿಸಿದರು.
---.
ಇತ್ತೀಚಿಗಷ್ಟೇ ರಾಜ್ಯಪ್ರಶಸ್ತಿ ವಿಜೇತ ಶ್ರೀ ಮನೋಹರ ಪ್ರಸಾದ್ ಅವರನ್ನೂ ಹಾಗೂ ಸಂಕಲನಗಳ ಲೇಖಕಿಯನ್ನೂ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರು ಶಾಲು ಹೊದೆಸಿ ಸನ್ಮಾನಿಸಿದರು.
‘ಪ್ರತಿಬಿಂಬ’ ಕವನ ಸಂಕಲನದಿಂದಾಯ್ದ ಕವನಗಳಾದ ‘ಆಸೆ’, ‘ಆರಿವು’ ಹಾಗೂ ‘ಸುಪ್ತಾಗ್ನಿ’ ಕವನಗಳಿಗೆ ರಾಗಸಂಯೋಜಿಸಿ ಸುಶ್ರಾವ್ಯವಾಗಿ ಹಾಡಿ ಕಾರ್ಯಕ್ರಮವನ್ನು ಮತ್ತಷ್ಟು ಸುಂದರವಾಗಿಸಿದವರು ಶ್ರೀಮತಿ ಜಯಶ್ರೀ ಅರವಿ0ದ್ ಅವರು. ಅವರಿಗೆ ತಬಲಾ ಸಾಥ್ ನೀಡಿದವರು ಅವರ ಮಗನಾದ ಮಾ.ಸನತ್.
--
ವಂದನಾರ್ಪಣೆಯೊಂದಿಗೆ ಸಮಾರಂಭವು ಸುಮಾರು ೮ ಗಂಟೆಯ ಹೊತ್ತಿಗೆ ಮುಕ್ತಾಯಗೊಂಡಿತು.
ಸಮಾರಂಭದ ಹೆಚ್ಚಿನ ಫೋಟೋಗಳು ಇಲ್ಲಿವೆ.

---
ಕೊನೆಯದಾಗಿ...ಸಮಾರಂಭಕ್ಕೆ ಬಂದು ಶುಭಕೋರಿದ, ಬರಲಾಗದೇ ಈ-ಮೈಲ್ ಹಾಗೂ ಪೋಸ್ಟುಗಳ ಮೂಲಕ ನನ್ನನ್ನು ಪೋತ್ಸಾಹಿಸಿದ, ಮನದಲ್ಲೇ ಶುಭ ಹಾರೈಸಿದ ಸರ್ವರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಗಳು.

-
- ತೇಜಸ್ವಿನಿ ಹೆಗಡೆ.

ಮಂಗಳವಾರ, ಮಾರ್ಚ್ 4, 2008

ಪ್ರತಿಬಿಂಬ

ಪ್ರತಿಬಿಂಬ
---
ಕಲ್ಲಾಗಿದ್ದೆ ಹಲವಾರು ವರುಷ
ರಾಮನಿಗಾಗಿ ಕಾದು ಬೆಂಡಾದ
ಅಹಲ್ಯೆಯಂತೆ,
ನೀನಿತ್ತ ಈ ಸ್ಪರ್ಶಮಣಿಯಿಂದ
ನಿರ್ಜೀವ ಪಾದಗಳೂ ಹಾರುತಿವೆ,
ಬಾನಾಡಿಯಂತೆ.
---
ಕೇಳಲಿಲ್ಲ ನಾ ಸಾವಿರಾರು ನಕ್ಷತ್ರಗಳ
ತುಂಬಿದೆ ತಾರಾ ಕಾಂತಿಗಳ
ಈ ಜೋಡಿ ಕಣ್ಗಳೊಳಗೆ,
ಬೇಡಲಿಲ್ಲ ನಾ ಮುತ್ತು-ಹವಳಗಳ
ತುಂಬಿದೆ ಅವುಗಳಂದವ
ಈ ಪುಟ್ಟ ತುಟಿಗಳಿಗೆ
---
ಕಾರಿರುಳಿನಲೂ ಬೀರಿದೆ

ಹುಣ್ಣಿಮೆಯ ಹೊನಲು,
ಕಾರ್ಮುಗಿಲನು ಸೀಳಿತು
ರವಿಯ ಹೊಂಬೆಳಕು,
ಬಾಳ ಲತೆಯಲರಳಿದೆ
ಬ್ರಹ್ಮಕಮಲದ ಹೂವು.
---
ಅದಿತಿಯೋ, ಅಂತಃಶಕ್ತಿಯೋ!
ನಂದಿನಿ ನದಿಯ ನಡುವೆ
ನಿಂತ ಮೂರ್ತಿಯೋ!!
ಕಾಮಧೇನುವೋ, ಕಲ್ಪವೃಕ್ಷವೋ!
ಕನ್ನಡಿಯಿಂದೆದ್ದು ಬಂದ
ನನ್ನ ಪ್ರತಿಬಿಂಬವೋ!!
---
("ಪ್ರತಿಬಿಂಬ"ದಿಂದಾಯ್ದ ಕವನ..)

ಶನಿವಾರ, ಮಾರ್ಚ್ 1, 2008

ಆಹ್ವಾನ ಪತ್ರಿಕೆ

ಆತ್ಮೀಯ ಬ್ಲಾಗ್ ಬಂಧುಗಳೇ,

ಮಾರ್ಚ್ ೮ ರಂದು ಸಂಜೆ ೫ ಗಂಟೆಗೆ ಮಂಗಳೂರಿನ ಕೆನರಾ ಕಾಲೇಜಿನಲ್ಲಿ ನನ್ನ ಕಥಾಸಂಕಲನ (ಕಾಣ್ಕೆ) ಹಾಗೂ ಕವನ ಸಂಕಲನ (ಪ್ರತಿಬಿಂಬ) ಪುಸ್ತಕಗಳ ಬಿಡುಗಡೆಯಿದೆ. ಹೆಚ್ಚಿನ ಮಾಹಿತಿ ಈ ಕೆಳಗಿನ ಆಹ್ವಾನ ಪತ್ರಿಕೆಯಲ್ಲಿದೆ. ಸರ್ವರಿಗೂ ಆದರದ ಸ್ವಾಗತ. ತಾವೆಲ್ಲರೂ ಈ ಪುಟ್ಟ ಸಮಾರಂಭಕ್ಕೆ ಬಂದು ನನ್ನನ್ನು ಪ್ರೋತ್ಸಾಹಿಸುವಿರೆಂದು ಆಶಿಸುವೆ.
ತೇಜಸ್ವಿನಿ ಹೆಗಡೆ.

(ಎಷ್ಟೋ ಬ್ಲಾಗ್ ಬಂಧುಗಳ e-mail ID ಸಿಗಲಿಲ್ಲ. ದಯಮಾಡಿ ಈ ಮೇಲಿನ ಆಹ್ವಾನ ಪತ್ರಿಕೆಯನ್ನೇ ಪರಿಗಣಿಸಿ, ಸಮಾರಂಭಕ್ಕೆ ಬರಬೇಕಾಗಿ ವಿನಮ್ರ ವಿನಂತಿ.)