ಲಹರಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಲಹರಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಫೆಬ್ರವರಿ 25, 2018

ಭಯದ ಬೆನ್ನೇರಿ!


ಅದೊಂದು ದಿವಸ ಮೂಢನಂಬಿಕೆಗಳ ಮೇಲೆ ಬರೆದಿದ್ದ ಒಂದು ಹಾಸ್ಯ ಪ್ರಬಂಧವನ್ನು ಓದುತ್ತಾ ಉರುಳಾಡಿ ನಗುತ್ತಿದ್ದೆ. ಅದೇ ಸಮಯದಲ್ಲೇ ನನ್ನ ಹತ್ತು ವರುಷದ ಮಗಳು ಸಣ್ಣ ಮುಖ ಮಾಡಿಕೊಂಡು ಬರಲು, ನಗುವನ್ನು ಸಂಭಾಳಿಸಿಕೊಳ್ಳುತ್ತಲೇ “ಏನಾಯ್ತು?” ಎಂದು ನಾನು ಕೇಳಿದೆ. ಎಷ್ಟು ತಡೆಹಿಡಿದರೂ, ನಗು ಉಕ್ಕುತ್ತಲೇ ಇತ್ತು. ಇದನ್ನು ಕಂಡು ಮಗಳು ಮುಖ ಗಂಟಿಕ್ಕಿಕೊಂಡಳು. “ಅಮ್ಮಾ ನೀ ಒಂದೋ ನಗು ಇಲ್ಲಾ ಮಾತನಾಡು... ನಾನೆಷ್ಟು ಬೇಜಾರಿನಲ್ಲಿದ್ದೇನೆ ಈಗ ಗೊತ್ತಾ? ನೀ ಹೀಂಗೆಲ್ಲಾ ನಗ್ತಾ ಕೇಳಿದ್ರೆ ನಾ ಹೇಂಗೆ ನಿನ್ನ ಹತ್ರ ವಿಷ್ಯ ಹೇಳೋದು?” ಎಂದು ಕೇಳಲು ಥಟ್ಟನೆ ಗಂಭೀರತೆ ತಂದುಕೊಂಡು ಅವಳನ್ನು ಸಮಾಧಾನಗೊಳಿಸುತ್ತಾ ವಿಷಯ ಕೇಳಿದೆ. “ನನ್ನ ಶಾಲೆಯಲ್ಲಿ ಕೆಲವು ಫ್ರೆಂಡ್ಸು ಬ್ಲಡ್ಡಿ ಮೇರಿ ಎಂಬ ದೆವ್ವದ ಬಗ್ಗೆ ಕಥೆ ಹೇಳಿದ್ದಾರೆ ಗೊತ್ತಾ... ಆ ದೆವ್ವದ ಹೆಸ್ರನ್ನು ಮೂರು ಸಲ ಹೇಳಿಬಿಟ್ರೆ ಅದು ನಮ್ಮಲ್ಲಿಗೇ ಬರುತ್ತದೆಯಂತೆ! ನಾನು ಈಗಾಗಲೇ ಬಹಳ ಸಲ ಆ ದೆವ್ವದ ಹೆಸ್ರನ್ನು ಹೇಳಿಬಿಟ್ಟಿದ್ದೇನೆ... ಹೀಗಾಗಿ ನಂಗೆ ಬಹಳ ಟೆನ್ಷನ್ ಆಗ್ತಿದೆ ಅಮ್ಮಾ...” ಎನ್ನಲು ನಗು ಒದ್ದುಕೊಂಡು ಬಂದರೂ, ಅದನ್ನು ತಡೆಹಿಡಿಯಲು ಹೆಣಗಾಡುತ್ತಾ, “ಓಹೋ... ಇದು ವಿಷಯ! ನೋಡು ಪುಟ್ಟಿ, ಇದೆಲ್ಲಾ ಸುಳ್ಳೆಪುಳ್ಳೆ ಕಥೆಗಳು ಅಷ್ಟೇ. ದೇವರಿರೋ ಕಡೆ ದೆವ್ವವಿರೋಕೆ ಸಾಧ್ಯವೇ ಇಲ್ಲಾ. ದೇವರು ಎಲ್ಲಾ ಕಡೆ ಇದ್ದಾನೆ... ನಮ್ಮೊಳಗೂ ಇದ್ದಾನೆ ಅಂತ ಹೇಳಿದ್ದೇನಲ್ಲಾ ನಿಂಗೆ ಎಷ್ಟೋ ಸಲ... ಸೋ ಈ ಬ್ಲಡಿ ಮೇರಿ ಎಲ್ಲಾ ಬರೋದಿಲ್ಲ” ಎನ್ನುವಾಗಲೇ ಆಕೆ ನಡುವೆ ಬಾಯಿ ಹಾಕಿ “ಬ್ಲಡಿ ಅಲ್ಲಾ ಬ್ಲಡ್ಡಿ ಅಂತ ಹೇಳು... ಬ್ಲಡ್ ಬಡ್ಕೊಂಡಿರತ್ತಂತೆ ಅದ್ರ ಮುಖದ ತುಂಬಾ” ಎಂದು ಕಿರುಚಲು ನನಗೂ ನಾನು ದೆವ್ವದ ಹೆಸರನ್ನು ತಪ್ಪು ಉಚ್ಚರಿಸಿ ಏನೋ ಅನಾಹುತವೇ ಮಾಡಿಬಿಟ್ಟೆನೇನೋ ಎಂದೆನಿಸಿಬಿಟ್ಟಿತು. ಅರೆಕ್ಷಣ ಆಲೋಚನೆಗೆ ಬಿದ್ದ ಅವಳ ಮುಖದಲ್ಲಿ ಇದ್ದಕ್ಕಿದ್ದಂತೇ ಸಾವಿರ ಕ್ಯಾಂಡಲ್ ಬಲ್ಬಿನ ಬೆಳಕು ಮೂಡಿತು. ಸದ್ಯ ನನ್ನ ಮಾತು ಇಷ್ಟು ಬೇಗ ಪರಿಣಾಮ ಬೀರಿತೆಂದು ಬೀಗುವಾಗಲೇ, “ಐಡಿಯಾ ಅಮ್ಮಾ! ನನ್ನ ಫ್ರೆಂಡ್ಸ್ ಇದನ್ನೂ ಹೇಳಿದ್ದಾರೆ... ನಾವು ನಮ್ಮ ಎಡಗೈ ಮೇಲೆ ಬಲಗೈಯಿಯ ಮೂರು ಬೆರಳುಗಳಿಂದ ರಾಮ, ಕೃಷ್ಣ, ಸೀತೆ ಎಂದು ಗುಟ್ಟಾಗಿ ಹೇಳಿ ಜೋರಾಗಿ ಹೊಡೆಯಬೇಕಂತೆ... ಆಗ ಮೂರು ಕೆಂಪು ಬಣ್ಣದ ಗೆರೆಗಳು ಬಿದ್ರೆ ಬ್ಲಡ್ಡಿ ಮೇರಿ ಬರೋದಿಲ್ವಂತೆ! ನನ್ನ ಕೈ ತುಂಬಾ ಸಣ್ಣ... ಎಲ್ಲಿ ನಿನ್ನ ಕೈ ಕೊಡು ಟ್ರೈ ಮಾಡುವ” ಎನ್ನಲು, ನನಗೀಗ ನಿಜಕ್ಕೂ ಬ್ಲಡ್ಡಿ ಮೇರಿಯ ಮೇಲೆ ಸಿಟ್ಟು ಬಂದಿತ್ತು. ನಾನೇನಾದರೂ ಸಮಜಾಯಿಶಿ ಕೊಡುವ ಮುನ್ನವೇ, ಒತ್ತಾಯದಿಂದ ನನ್ನ ಎಡಗೈಯನ್ನು ಎಳೆದುಕೊಂಡ ಆಕೆ, ಎಡ ಮೊಣಕೈಯಿಯ ಮೇಲ್ಭಾಗದಲ್ಲಿ ತನ್ನ ಬಲಗೈಯ ನಡುವಿನ ಮೂರು ಬೆರಳುಗಳಿಂದ ಜೋರಾಗಿ ಹೊಡೆಯಲು ಅಪ್ರಯತ್ನವಾಗಿ ರಾಮಕೃಷ್ಣರನ್ನು ನೆನೆಯಬೇಕಾಯ್ತು. ಕೈ ಮೇಲೆ ರಾಮ, ಸೀತೆ, ಲಕ್ಷ್ಮಣರ ಕೆಂಪು ಗೆರೆಯ ರೂಪದಲ್ಲಿ ಅರೆಕ್ಷಣ ಮೂಡಿ ನಿಧಾನಕ್ಕೆ ಮಾಯವಾಗತೊಡಗಿದರು. ಬಹಳ ಸಮಾಧಾನ ಹೊಂದಿದ ಮಗಳು, ನನಗೆ ಹೊಡೆದು ಉರಿಸಿದ್ದರಿಂದ ನನ್ನ ಕೈಗೆ ಐದಾರು ಸಲ ಮುತ್ತುಕೊಟ್ಟು ಸಾಂತ್ವನ ನೀಡಿ ನೆಮ್ಮದಿಯಿಂದ ಓದಲು ಹೋಗಲು ನನಗೂ ಎಷ್ಟೋ ಸಮಾಧಾನವಾಗಿತ್ತು. ಆದರೆ ಈ ಮೂಢನಂಬಿಕೆಗಳು ಅನ್ನೋದು ಅನಾದಿ ಕಾಲದಿಂದ ನಮ್ಮೊಳಗೇ ಹಾಸುಕೊಕ್ಕಾಗಿ ಬಿಟ್ಟಿರುತ್ತವೆ. ಎಷ್ಟೋ ಸಲ ನಮ್ಮನ್ನು ಭಯಬೀಳಿಸುತ್ತಿರುತ್ತವೆ.
ನಾನಾಗ ಮೂರನೆಯ ತರಗತಿಯಲ್ಲಿದ್ದೆ. ನನ್ನೊಳಗೆ ಇದ್ದಕ್ಕಿದ್ದಂತೆ ಸಂಗೀತ ಕಲಿಯುವ ಹುಚ್ಚು ಹುಟ್ಟಿಬಿಟ್ಟಿತ್ತು. ಅದಕ್ಕೆ ಬಹು ಮುಖ್ಯ ಕಾರಣವೇನೆಂದರೆ, ದೂರದರ್ಶನದಲ್ಲಿ ಪ್ರಸಾರಗೊಳ್ಳುತ್ತಿದ್ದ ಚಿತ್ರಹಾರಗಳು! ಅದೊಂದು ದಿವಸ ಪ್ರಸಾರವಾಗುತ್ತಿದ್ದ ಹಾಡಿನಲ್ಲಿ ರೀನಾ ರಾಯ್ ಕಪ್ಪು ಲೆಹೆಂಗಾ ಧರಿಸಿ, ತಲೆಯ ಮೇಲೆ ಸೆರಗು ಹೊದ್ದು, ಇಷ್ಟುದ್ದದ ಮೈಕಿನಲ್ಲಿ “ಶೀಶಾ ಹೋ ಯಾ ದಿಲ್ ಹೋ ಆಖಿರ್ ಟೂಟ್ ಜಾತಾ ಹೈ...” ಎಂದು ಹಾಡುತ್ತಿರುವುದನ್ನು ಕಂಡು ಬಹಳ ಪ್ರಭಾವಿತಳಾಗಿಬಿಟ್ಟಿದ್ದೆ. ನಾನೂ ಮುಂದೊಂದು ದಿನ ಹೀಗೇ ಹಾಡಬೇಕು, ಸಭೆಯಲ್ಲಿರುವವರೆಲ್ಲಾ ಎದ್ದು ನಿಂತು ಚಪ್ಪಾಳೆ ಹೊಡೆಯಬೇಕು... ಎಂದೆಲ್ಲಾ ಕನಸು ಕಂಡಿದ್ದೆ. ಆಗ ನನಗೆ ಇದನ್ನು ಹಾಡಿದ್ದು ಲತಾ ಮಂಗೇಶ್ವರ್, ಆಕೆ ಪ್ರಸಿದ್ಧ ಹಿನ್ನಲೆ ಗಾಯಕಿ ಎಂಬುದೆಲ್ಲಾ ಗೊತ್ತೇ ಇರಲಿಲ್ಲ. ಸರಿ, ನನ್ನ ಹಠಕ್ಕೆ ಸೋತು ಅಪ್ಪ ಸಂಗೀತ ಕ್ಲಾಸಿಗೆ ಸೇರಿಸಿದ್ದಾಯ್ತು. ಅವರೋ ಸಂಗೀತ ಹೇಳಿಕೊಡುವುದಕ್ಕಿಂತ ಹೆಚ್ಚಾಗಿ ಬಾಯಲ್ಲಿ ಬೈಯ್ಗಳುಗಳ ತಬಲಾ ಬಾರಿಸಿದ್ದೇ ಹೆಚ್ಚು! ಇದ್ಯಾಕೋ ಸರಿ ಹೋಗ್ತಿಲ್ಲ ಅಂದ್ಕೊಂಡು ಬಿಟ್ಟುಬಿಟ್ಟೆ. ಅದೊಂದು ದಿವಸ ನನಗಿಂತ ಎರಡು ವರುಷ ದೊಡ್ಡವಳಾಗಿದ್ದ ಗೆಳತಿ ಸಂಗೀತಾ “ನನ್ನತ್ತೆ ಎಷ್ಟು ಚೆಂದ ಹಾಡ್ತಾರೆ ಗೊತ್ತುಂಟಾ? ಆದ್ರೆ ಅವ್ರೇನೂ ಸಂಗೀತ ಕಲ್ತಿಲ್ಲಪ್ಪ” ಎನ್ನಲು ನನಗೆ ಬಹಳ ಕುತೂಹಲವಾಗಿ ಆಸೆ ಮತ್ತೆ ಗರಿಕೆದರಿತ್ತು. “ಮತ್ತೆ, ಅದು ಹೇಂಗೆ ಕಲಿತದ್ದಂತೆ ಮಾರಾಯ್ತಿ?” ಎಂದು ಕೇಳಿದಾಗ, ಆಕೆ ತೀರಾ ತಗ್ಗಿದ ಧ್ವನಿಯಲ್ಲಿ... “ಕಂಠ ಒಳ್ಳೆದಾಗ್ಲಿಕ್ಕೆ ಹಿಸ್ಕು (ಬಸವನ ಹುಳ) ತಿನ್ಬೇಕಂತೆ ನೋಡು... ಅದನ್ನು ತಿಂದವರ ಕಂಠ ಬಹಳ ಚೆಂದ ಆಗ್ತದಂತೆ” ಎಂದಿದ್ದೇ ವಾಯಕ್ ಎಂದುಬಿಟ್ಟಿದ್ದೆ. ನೋಡಲೂ ಒಂಥರ ಅನ್ನಿಸುವ ಹಿಸ್ಕನ್ನು, ಅಪ್ಪಿ ತಪ್ಪಿ ಮುಟ್ಟಿದರೂ ಲೋಳೆಯಾಗುವ ಆ ಅಂಟು ಜೀವಿಯನ್ನು ಹಿಡಿಯುವುದಲ್ಲದೇ, ತಿನ್ನುವುದು ಎಂದರೆ... ಅಲ್ಲಿಗೆ ನನ್ನ ಅಳಿದುಳಿದ ಆಸೆಯೂ ಟೂಟ್ ಗಯಿ.
ನಮ್ಮೂರಿನಲ್ಲಿ ನಾಗಪ್ಪ ಎಂಬವನಿದ್ದ. ಬೇಸಿಗೆ ರಜೆಯಲ್ಲಿ ಅಜ್ಜನ ಮನೆ ಸೇರಿ ಲಾಗ ಹಾಕಿ ಗಲಾಟೆ ಎಬ್ಬಿಸುತ್ತಿದ್ದ ನಮಗೆಲ್ಲಾ ವರ್ಣರಂಜಿತ ಕಥೆಗಳನ್ನು ಹೇಳುವ ಕೆಲಸ ಅವನದಾಗಿತ್ತು. ಹೀಗೆ ಒಂದು ದಿವಸ ನಾವು ಕಥೆ ಕೇಳುತ್ತಿರುವಾಗಲೇ, ಅಷ್ಟು ದೂರದಿಂದ ದೊಡ್ಡ ಲಕ್ಷ್ಮೀ ಚೇಳು ಸರಸರನೆ ಹರಿದು ಹೋಗಿದ್ದು ನನ್ನ ಕಣ್ಣಿಗೇ ಬಿದ್ದುಬಿಟ್ಟಿತ್ತು. (ಅದಕ್ಕೆ ಲಕ್ಷ್ಮೀ ಚೇಳು ಅಂತ ಯಾಕೆ ಕರೀತಾರೋ ಎಂಬುದು ಇನ್ನೂ ನನಗೆ ಗೊತ್ತಾಗಿಲ್ಲ!) ಸರಿ, ನನಗೋ ಈ ಸರೀಸೃಪ ಜಾತಿಯ ಮೇಲೆ ವಿಶೇಷ ಭಯ! ಎರೆಹುಳ, ಚೇರಂಟೆಗಳಿಂದ ಹಿಡಿದು ಕಾಳಿಂಗದವರೆಗೂ, ಏಕರೀತಿಯ ಭಯವನ್ನು ನನ್ನೊಳಗೆ ಆ ಸೃಷ್ಟಿಕರ್ತ ಭರಪೂರ ಹಂಚಿಬಿಟ್ಟಿದ್ದಾನೆ. ಹೀಗಾಗಿ ಆ ಚೇಳನ್ನು ಕಂಡಿದ್ದೇ, ಜೋರಾಗಿ ಬೊಬ್ಬಿರಿದು ಮನೆಯವರನ್ನೆಲ್ಲಾ ಒಟ್ಟುಗೂಡಿಸುವಷ್ಟರಲ್ಲಿ ಆ ಚೇಳೆಲ್ಲೋ ಮಾಯವಾಗಿಬಿಟ್ಟಿತ್ತು. ಅಷ್ಟು ಚಿಕ್ಕ ವಿಷಯಕ್ಕೆ ಕೂಗಿ ಗಾಭರಿಗೊಳಿಸಿದ್ದಕ್ಕಾಗಿ ಎಲ್ಲರೂ ನನಗೆ ಸಮಾ ಬೈಯ್ದುಬಿಡಲು, ನನ್ನ ಓರಗೆಯವರ ಮುಂದೆ ನನಗೆ ಬಹಳ ಅವಮಾನವೆನಿಸಿಬಿಟ್ಟಿತ್ತು. “ಹೌದೌದು... ನಿಮಗೆಲ್ಲಾ ಏನು ಗೊತ್ತು... ಆ ಚೇಳು ನನ್ನ ಬಳಿಯೇ ಬರುವಂತಿತ್ತು... ಅಷ್ಟು ಜೋರಾಗಿ ನಾನು ಕೂಗಿಕೊಂಡಿದ್ದು ಕೇಳಿ ಹೆದರಿ ಓಡಿ ಹೋಯ್ತು. ಅದೇನಾದ್ರೂ ನನ್ನ ಕಚ್ಚಿ, ನಾ ಸತ್ತು ಹೋಗಿದ್ದಿದ್ರೆ, ದೆವ್ವವಾಗಿ ಬಂದು ನಿಮ್ಮನ್ನೆಲ್ಲಾ ಕಾಡ್ತಿದ್ದೆ...” ಎಂದು ಒದರಿಬಿಟ್ಟಿದ್ದೆ. ಅದಕ್ಕೆ ಕೂಡಲೇ ನನ್ನ ತಂಗಿ “ಈಗೆಂತ ಆಗಿದ್ದಿ ನೀ ಮತ್ತೆ...” ಎಂದು ಹಲ್ಕಿರಿಯಲು, ಅವಳ ಬೆನ್ನಿಗೊಂದು ಸಮಾ ಗುದ್ದಿಬಿಟ್ಟಿದ್ದೆ. ನಮ್ಮಿಬ್ಬರ ಜಗಳ ವಿಪರೀತಕ್ಕೆ ಹೋಗ್ತಿರೋದು ಕಂಡ ನಾಗಪ್ಪ, “ತಂಗಿ, ಇಷ್ಟಕ್ಕೆಲ್ಲಾ ಹೆದರಬಾರದು... ಚೇಳು ಕಚ್ಚಿದರೆ ಅದನ್ನ ಕೂಡಲೇ ಹಿಡಿದುಕೊಂಡು ಅದಕ್ಕೆಷ್ಟು ಕಲ್ಗಳಿವೆ ಎಂದು ಎಣಿಸಿದರಾಯ್ತು... ವಿಷ ಏರೋದೇ ಇಲ್ಲಾ... ಗಾಯವೂ ಥಟ್ಟನೆ ಮಾಯವಾಗ್ತದೆ...” ಎಂದಿದ್ದೇ, ದೊಡ್ಡವರೆಲ್ಲಾ ಕಿಸಕ್ಕನೆ ನಕ್ಕು ಒಳಗೆ ಹೋಗಿಬಿಟ್ಟಿದ್ದರು. ನನಗೋ ಪೂರ್ತಿ ಪುಕುಪುಕು ನಿಂತಿರಲಿಲ್ಲ. “ನಾಗಪ್ಪ, ನಂಗೇನಾದ್ರೂ ಆ ಚೇಳು ಮತ್ತೆ ಬಂದು ಕಚ್ಚಿದರೆ ನೀನೇ ಅದನ್ನ ಹಿಡ್ಕಂಡು ಅದರ ಕಾಲುಗಳನ್ನೆಲ್ಲಾ ಲೆಕ್ಕ ಮಾಡ್ಬಿಡು ಹಾಂ...” ಎಂದು ಆದೇಶಿಸಿಬಿಟ್ಟಿದ್ದೆ. ಈಗಲೂ ಇದನ್ನು ನೆನೆದಾಗೆಲ್ಲಾ ನಗುವುಕ್ಕಿ ಬರುತ್ತದೆ. ಆದರೆ ಚೇಳಿನ ಭಯ ಮಾತ್ರ ಸ್ವಲ್ಪವೂ ಕಡಿಮೆಯಾಗಿಲ್ಲ!
ಅದೇ ರೀತಿ, ನಾಗರ ಹಾವು ಕಚ್ಚಿದರೆ ಅದರ ಹೆಡೆಯಿಂದ ಕೆಳಗೆ ಗಟ್ಟಿಯಾಗಿ ಹಿಡಿದು ಆಸ್ಪತ್ರೆಗೆ ಹೋಗಬೇಕು... ಆಗ ನಮ್ಮೊಳಗೆ ಅದರ ವಿಷ ಏರದು... ಚೇರಂಟೆಯ ಕಾಲುಗಳನ್ನು ಲೆಕ್ಕ ಮಾಡಿದರೆ ದುಡ್ಡು ರಾಶಿ ಸಿಗುತ್ತದೆ.... ದೂರದ ಘಟ್ಟದಲ್ಲಿ ಘಟ ಸರ್ಪಗಳಿವೆ ಅವು ರಾತ್ರಿ ಹೊತ್ತು ಸಿಳ್ಳೆ ಹಾಕಿಕೊಂಡು ಬರುತ್ತಿರುತ್ತವೆ, ಪ್ರತಿಯಾಗಿ ನಾವೂ ಸಿಳ್ಳೆ ಹಾಕಿದರೆ ತಕ್ಷಣ ನಮ್ಮಲ್ಲಿಗೇ ಬಂದುಬಿಡುತ್ತವೆ... ಬಿಳಿ ಜಿರ್ಲೆ ಕಚ್ಚಿದ್ರೆ ಅದೃಷ್ಟ ಹೆಚ್ಚಾಗ್ತದೆ... ಹೀಗೆ ಇಂತಹ ಅನೇನಾನೇಕ ಅಸಾಧ್ಯ ಸಂಗತಿಗಳನ್ನೇ ಕಥೆಯಲ್ಲಿ ತುಂಬಿ ಹೇಳಿ ನಮ್ಮ ಮಂಗಬುದ್ಧಿಗೊಂದು ಅಂಕೆ ಹಾಕಿಡುತ್ತಿದ್ದ ನಾಗಪ್ಪ. 
ಮೊನ್ನೆ ಹೀಗೇ ಈ ಕಥೆಗಳನ್ನೆಲ್ಲಾ ಗೆಳತಿಯೊಂದಿಗೆ ಹಂಚಿಕೊಳ್ಳುತ್ತಿದ್ದೆ. ಆಗ ಆಕೆ ಇದರ ಹಿನ್ನಲೆಯೊಳಗೆ ಅಡಗಿರಬಹುದಾದಂಥ ಹೊಸ ಹೊಳಹೊಂದನ್ನು ತೆರೆದಿಟ್ಟಳು! ಚೇಳು, ಹಾವು ಇನ್ನಿತರ ಜಂತುಗಳು ಕಚ್ಚಿದಾಗ, ನಾವು ಅತಿಯಾದ ಭಯಕ್ಕೆ ಒಳಗಾಗಿಬಿಡುತ್ತೇವೆ. ಆಗ ನಮ್ಮ ಮನಸ್ಸನ್ನು ಬೇರೆಡೆಗೆ ಹೊರಳಿಸಲೂ ಇಂಥಾ ಕಥೆಗಳನ್ನು ಕಟ್ಟಿರುವ ಸಾಧ್ಯತೆಯಿದೆಯೆಂದು ಅವಳು ಹೇಳಿದಾಗ ಹೌದಲ್ಲಾ ಎಂದೆನಿಸಿತು. ವಿಷಜಂತುಗಳು ಕಚ್ಚಿದಾಗ ಉದ್ವೇಗ, ಆತಂಕ ಹೆಚ್ಚಾಗಿ, ಅದರಿಂದ ಬಿ.ಪಿ. ಜಾಸ್ತಿಯಾಗಿ, ವಿಷ ಬಹುವೇಗದಲ್ಲಿ ಏರತೊಡಗುತ್ತದೆ. ಇದನ್ನು ತಪ್ಪಿಸಲೂ, ಇಂಥಾ ಕಾಲ್ಪನಿಕ ಕಥೆಗಳನ್ನು ಹೊಸೆದಿರಬಹುದು ಎಂದೆನಿಸಿತು. ಅದೇನೇ ಹಿನ್ನಲೆ ಇದ್ದಿರಲಿ, ರೆಪ್ಟೈಲ್ ಸ್ಪೀಶೀಸ್‌ಗಳನ್ನು ಕಂಡರೇ ಹೌಹಾರುವ ನನ್ನಂಥವರಿಗೆ ಇಂಥಾ ಕಥೆಗಳನ್ನು ಹೇಳಿಬಿಟ್ಟರೆ, ಕಚ್ಚಿದ ಭಯದ ಜೊತೆಗೇ ಅದನ್ನು ಹಿಡಿಯುವ, ಹಿಡಿದು ಕಾಲುಗಳನ್ನು ಬೇರೆ ಎಣಿಸುವ ಕಲ್ಪನೆಯಿಂದಲೇ ಮತ್ತಷ್ಟು ಬಿ.ಪಿ. ಏರಿಬಿಡುವುದು ಗ್ಯಾರಂಟಿ! ಅಂಥ ಸಮಯದಲ್ಲಿ ವಿಷ ನಿಜವಾಗಿಯೂ ಹೊಕ್ಕಿರದಿದ್ದರೂ, ಅತೀವ ಭಯದಿಂದಲೇ ಮೂರ್ಛೆ ತಪ್ಪಿದರೂ ಅಚ್ಚರಿಯಿಲ್ಲ!
*****
(25-02-2018ರ ಉದಯವಾಣಿಯಲ್ಲಿ ಪ್ರಕಟಿತ)

~ತೇಜಸ್ವಿನಿ ಹೆಗಡೆ

ಬುಧವಾರ, ಏಪ್ರಿಲ್ 23, 2014

ಮಕ್ಕಳ ಜೊತೆಯಲಿ ಸುಂದರ ಪಯಣ.....

ಮರೆಯಲಾಗದ ಅನುಭವಗಳು, ಕೆಲವು ಸಲಹೆಗಳು....

ಅದಿತಿಗೆ ಆಗ ಏಳು ತಿಂಗಳಾಗಿತ್ತಷ್ಟೇ. ಪ್ರಪಂಚವನ್ನು ತನ್ನ ಪುಟ್ಟ ಪುಟ್ಟ ಕಣ್ಗಳಲ್ಲಿ ತುಂಬಿಕೊಳ್ಳಲು ಆಗಷ್ಟೇ ಶುರುವಿಟ್ಟುಕೊಂಡಿದ್ದಳು ಪುಟ್ಟಿ. ಆವರೆಗೂ  ಅವಳು ಜನ್ಮಿಸಿದ ಮಂಗಳೂರಿನ ಆಸು ಪಾಸಿಗಷ್ಟೇ ಅವಳ ವಿಹಾರ ಸೀಮಿತವಾಗಿತ್ತು. ಮೊತ್ತ ಮೊದಲ ಬಾರಿ ತನ್ನ ಅಜ್ಜನ ಮನೆಯಾದ ಶಿರಸಿಯೆಡೆಗೆ ಪಯಣ ಬೆಳೆಸಲು ಹೊರಟಿದ್ದಳು. ಮನದೊಳಗೆ ಏನೋ ಆತಂಕ. ರಾತ್ರಿ ಸ್ಲೀಪಿಂಗ್ ಬಸ್ಸ್‌ನಲ್ಲಿ ಪ್ರಯಾಣಿಸುವಾಗ ಹೇಗಾದರೂ ಮಾಡಿ ಮಲಗಿಸಿ ಪಯಣ ಸಾಗಿಸಬಹುದೇನೋ! ಆದರೆ ಕಾರಿನಲ್ಲಿ ಹಗಲು ಪಯಣದಲ್ಲಿ ಪುಟ್ಟ ಮಕ್ಕಳನ್ನು ದೂರದೂರಿಗೆ ಕರೆದೊಯ್ಯುವುದು ಬಲು ಪ್ರಯಾಸ ಅನ್ನೋದು ಹಲವರ ಅನುಭವ, ಅಂಬೋಣ. ನನ್ನದೇ ಅನಿವಾರ್ಯ ಕಾರಣಗಳಿಂದ, ಈ ದೇಶದಲ್ಲಿ ವಿಶಿಷ್ಟ ಚೇತನರಿಗಿರುವ (ಅ)ವ್ಯವಸ್ಥೆಯಿಂದ ಬಸ್ಸಿನಲ್ಲಿ ಸುಲಭ ಪಯಾಣ ನನ್ನ ಮಟ್ಟಿಗೆ ಅಸಾಧ್ಯವೇ! ಹಾಗಾಗಿ ಸದಾಕಾಲ ಕಾರಿನಲ್ಲೇ ಪಯಣಿಸುವುದು ನನ್ನ ಹಣೆಯಲ್ಲಿ ಬರೆದಿರುವ ರಾಜಯೋಗವೇ ಅನ್ನಿ :) ಆಗ ನಾನೋ ತಾಯ್ತನದ ಹೊಸತನದಲ್ಲಿ ಹೊಸ ಹೊಸ ಅನುಭವಗಳನ್ನು ಅವಳಷ್ಟೇ ಬೆರಗುಗಣ್ಣಿನಿಂದ ನೋಡುತ್ತಿದ್ದೆ. ಅವಳಪ್ಪನಿಗಂತೂ ಮಗಳ ಮುಂದೆ ಏನೂ ಕಾಣದು. ಎಲ್ಲಿ ಅವಳು ಅತ್ತು, ಕರೆದು ರಂಪ ಮಾಡಿ, ಗಲಾಟೆ ಎಬ್ಬಿಸುವಳೋ, ನಾನೆಂತು ಸಂಭಾಳಿಸಲಿ ಎಂದು ಚಿಂತಿಸುವಾಗ ಅನುಭವಿ ಹಸ್ತಗಳೆರಡು ನನ್ನ ಜೊತೆ ಸೇರಿದ್ದವು. ಅದೇ ಅವಳಜ್ಜಿ ಅಂದರೆ ನನ್ನಮ್ಮನ ಸಾಥ್! ಆದರೂ ಸ್ವತಃ ನನ್ನಮ್ಮನೇ ಹಲವು ಸಲಹೆಗಳನ್ನು ನೀಡಿದ್ದರೂ, ಏನೂ ಆಗೊಲ್ಲಾ ಎನ್ನುತ್ತಾ ಜೊತೆಗೂಡಿದ್ದರೂ, ಈ ತಾಯಿಯ ಮನಸಿಗೆ ಸಮಾಧಾನವಿಲ್ಲ. "ಬೆಳಗ್ಗೆ ಬೇಗ ಹೊರಡನ, ಆಗ ಪಾಪುಗೆ ಅಷ್ಟು ತ್ರಾಸ್ ಆಗದಿಲ್ಲೆ.." ಎಂದು ಅಮ್ಮ ಹೇಳಿದಾಗ, ಚೆನ್ನಾಗಿ ನಿದ್ದೆಯಾಗೆದ್ದ ಮೇಲೇ ಹೊರಟರೆ ಸುಮ್ಮನಿದ್ದಾಳೆಂದು ನಾನೇ ಭಾವಿಸಿ ಆರಾಮಾಗೇ ಪಯಣ ಆರಂಭಿಸಿದ್ದಾಗಿತ್ತು. ಮೊದಲೊಂದು ತಾಸು ಪುಟ್ಟಿ ಬೆರಗುಗಣ್ಣಿಂದ ಹಿಂದೆ ಸಾಗುವ ದೃಶ್ಯಗಳನ್ನೇ ದಿಟ್ಟಿಸುತ್ತಾ ಸುಮ್ಮನೆ ಬೆಚ್ಚಾಗಿ ಕೂತಿದ್ದರೂ, ಆಮೇಲೆ ಎಲ್ಲಾ ಕಿತಾಪತಿಗಳೂ ಶುರುವಾಗಿಹೋಗಿದ್ದವು. ಎದುರಿಗೆ ನನ್ನ ಜೊತೆ ಕೂರಿಸಿಕೊಂಡಾಗ, ಕಿರುಗಾಲಲ್ಲೆ ಕೈಯಲ್ಲೇ ಡ್ರೈವ್ ಮಾಡುತ್ತಿದ್ದ ಅವಳಪ್ಪನ ಎಳೆಯುವುದು, ಕಾರಿನ ಗ್ಲಾಸ್ ಹಾಕಿದರೆ ಬಡಿದು ಒಡೆದೇ ಬಿಡುವಳೇನೋ ಎಂಬಂತೆ ಭೀತಿ ಹುಟ್ಟಿಸುವುದು, ಹಿಂಬದಿಯಲ್ಲಿ ಕುಳಿತಿದ್ದ ಅಜ್ಜಿಯಲ್ಲಿ ಬಿಟ್ಟರೆ ಸಣ್ಣ ದನಿಯಲ್ಲೇ ಕುಂಯ್ಯ್‌ಗುಡುತ್ತಾ ಎದೆಯೊಳಗೆ ಅವಲಕ್ಕಿ ಕೂಟ್ಟಿದಂತೇ ಇನ್ನೇನು ಕಾದಿದೆಯಪ್ಪಾ, ಇನ್ನೆಷ್ಟು ದೂರವಿದೆಯಪ್ಪಾ.. ಇವಳು ಯಾವಾಗ ಮಲಗುತ್ತಾಳೋ ಎಂದು ಪರಿತಪಿಸುವಂತೇ ಮಾಡಿಬಿಟ್ಟಿದ್ದಳು. ಅಂತಹ ದೊಡ್ಡ ಗಲಾಟೆ ಏನೂ ಮಾಡದಿದ್ದರೂ, ಪಯಣದ ಮೊದಲು ಅಮ್ಮ ಹೇಳಿದ್ದ ಹಲವು ಉಪಾಯಗಳನ್ನು ಮರೆತಿದ್ದು, ಕೆಲವು ಸುಲಭ ಪರಿಹಾರಗಳಿಗೆ ನಾವು ಗಮನ ಹರಿಸದ್ದು ನಮ್ಮ ಸಮಸ್ಯೆಗಳನ್ನು ಹೆಚ್ಚಿಸಿದ್ದಂತೂ ಹೌದು. ಮಂಗಳೂರಿನಿಂದ ಶಿರಸಿಯಕಡೆ ಹೊರಡುವಾಗ ಕುಮಟಾದ ನಂತರ ದೇವಿಮನೆ ಘಟ್ಟ ಸಿಗುತ್ತದೆ. ಶಿರಾಡಿ ಘಾಟ್, ಚಾರ್ಮಾಡಿ ಘಾಟ್‌ನಷ್ಟು ದೊಡ್ಡ ಘಟ್ಟವಲ್ಲದಿದ್ದರೂ, ಸಣ್ಣದೂ ಅಲ್ಲ. ಘಟ್ಟ ಹತ್ತುವಾಗ ಹಾಲೂಡಿಸುವುದು ಕಷ್ಟವೆಂದು ಕುಮಟಾದ ಹತ್ತಿರವೇ ಹಾಲು ಕೊಟ್ಟು ಬಿಟ್ಟೆ "ಈಗ ಕೊಡಡ, ಮಣ್ಣಿ ಹಾಕ್ತೆ, ಹಣ್ಣೆಂತಾರು ಚೀಪಲೆ ಕೊಡನ... ಘಟ್ಟದಲ್ಲಿ ಹಾಲು ಕೊಡ್ತು ವಾಂತಿ ಆಗ್ತು.." ಎಂದು ಅಮ್ಮಾ ಹೇಳಿದ್ದಳು. ಆದರೆ ಆಗ ನಾನೇ ಮಹಾತಾಯಿ ಎಂಬಂತೆ, ಮಗಳ ಕಿರಿಕಿರಿಗೆ, ಹಾಲು ಕೊಟ್ಟರೆ ತೆಪ್ಪಗೆ ಮಲಗಿಯಾಳು.. ಘಟ್ಟ ಹತ್ತುವುದು ಸುಲಭವಾಗುವುದೆಂದು ಬಗೆದು ಅಮ್ಮನನ್ನೂ ಸುಮ್ಮನಿರಿಸಿ ಹಾಲುಕೊಟ್ಟುಬಿಟ್ಟೆ. ಘಟ್ಟ ಹತ್ತಲು ಶುರುವಾಗಿ ೧೦ ನಿಮಿಷವಾಗಿತ್ತೋ ಇಲ್ಲವೋ.... ಕುಡಿದಿದ್ದ ಹಾಲೆಲ್ಲಾ ನನ್ನಮ್ಮನ ಸೀರೆಯ ಮೇಲೆ ಹರಡಿದ್ದವು. ವಾಂತಿ ನಿಲ್ಲಿಸಲೂ ಅಸಾಧ್ಯವಾದಂತಾಗಿ, ದಿಕ್ಕು ದೋಚದೇ ಬದಿಯಲ್ಲಿ ಕಾರು ನಿಲ್ಲಿಸಿಬಿಟ್ಟೆವು. ಅಮ್ಮ ಮುಂದಾಲೋಚನೆಯಿಂದ ಮಕ್ಕಳಿಗೆ ಸಾಮಾನ್ಯವಾಗಿ ಕೊಡುವ (ಡಾಕ್ಷರ್ ಸಲಹೆ ಕೊಟ್ಟಿದ್ದ) ‘ಡೊಮ್‌ಸ್ಟೇಲ್’ ಸಿರಪ್ ತಂದಿದ್ದರಿಂದ ಮಗಳು ಚೇರಸಿಕೊಂಡು ಪಯಣ ನಿಧಾನವಾಗಿ ಮುಂದುವರಿಯಿತು. ನನ್ನೊಳಗೆ ಅಪರಾಧಿ ಪ್ರಜ್ಞೆ. ಮುಂದೆಂದೂ ಅಮ್ಮನ ಎಚ್ಚರಿಕೆಯನ್ನು ಕಡೆಗಣಿಸುವ ಸಾಹಸಕ್ಕೆ ಕೈ ಹಾಕಲೇ ಇಲ್ಲ. ಮುಂದಿನ ತಿಂಗಳೇ ಪಯಣ ಬೆಂಗಳೂರಿನತ್ತ. ಈ ಸಲ ಮಂಗಳೂರಿನಿಂದ ಹೊರಡುವಾಗಲೇ ಎಲ್ಲಾ ಮುಂಜಾಗ್ರತೆ ತೆಗೆದುಕೊಂಡಿದ್ದರಿಂದ ಶಿರಾಡಿ ರಾಡಿಯೆಬ್ಬಿಸಲಿಲ್ಲ. ಅಲ್ಲಿಂದ ಎಡೆಬಿಡದೇ ಮಗಳೊಡನೆಯೇ ಸಾಗಿದ ನಮ್ಮ ದೂರದೂರಿನ ಪಯಣಗಳು ಹಲವಾರು ಅನುಭವಗಳನ್ನು ಕಟ್ಟಿಕೊಟ್ಟಿವೆ. ಈಗ ಅದಿತಿಗೆ ೭ ವರ್ಷಗಳು ನಡೆಯುತ್ತಿದ್ದು, ಈ ವಯಸ್ಸಿನ ಮಕ್ಕಳನ್ನು ಹಲಗಲು ದೂರದ ಪಯಣಗಳಿಗೆ ಸಜ್ಜಾಗಿಸುವಷ್ಟೂ ಅನುಭವ ನನ್ನನ್ನು ಗಟ್ಟಿಯಾಗಿಸಿದೆ. ನಾನು ಎಡವಿ ಕಲಿತ, ಕಲಿತು ನುರಿತ ಅನುಭವಗಳಿಂದ, ಈಗಿನ್ನೂ ಪುಟ್ಟ ಕಂದಮ್ಮಗಳ ಜೊತೆ ವಾಹನದಲ್ಲಿ ಹಗಲು ಪಯಣಿಸುವವರಿಗೆ ಸಣ್ಣ ಪುಟ್ಟ ಸಹೆಗಳನ್ನಿತ್ತರೆ, ಅವುಗಳಿಂದ ಅವರಿಗೆಲ್ಲಾ ಏನಾದರೂ ಒಂದು ಸಣ್ಣ ಸಹಾಯವಾದರೂ ಸರಿಯೇ... ನನಗೆಷ್ಟೂ ನೆಮ್ಮದಿಯೆನಿಸಿತು. ಹಾಗಾಗಿ ನನ್ನ ಅನುಭವಕ್ಕೆ ಬಂದ ಕೆಲವು ಸರಳ ಸುಲಭ ಟಿಪ್ಸ್‌ಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ... ನಿಮಗೆ ಇಷ್ಟವಾದರೆ, ನೀವೂ ಇತರರೊಂದಿಗೆ ಹಂಚಿಕೊಳ್ಳಿರಿ.

(ವಿ.ಸೂ. :- ಮಗುವಿನಿಂದ ಮಗುವಿಗೆ ಸ್ವಭಾವ ಭಿನ್ನವಾಗಿರುತ್ತದೆ. ಹಾಗಾಗಿ ನಾನು ಕಂಡುಕಂಡ ಅನುಭವವೇ ಪರಮಸತ್ಯ, ಸಾರ್ವಕಾಲಿಕ ಮಾನ್ಯ ಎಂದು ಖಂಡಿತ ಹೇಳುತ್ತಿಲ್ಲ. ಸಾಮಾನ್ಯವಾಗಿ ಇಂತಹ ಅನುಭವಗಳು ಎಲ್ಲರಿಗೂ ಆಗುವಂಥದ್ದು... ಆಗ ಹೀಗಿದ್ದರೆ ಚೆನ್ನ ಎಂದಷ್ಟೇ ಹೇಳುವುದು ನನ್ನ ಉದ್ದೇಶ. ಅವರವರ ಮಕ್ಕಳ ಮನೋಭಿಲಾಷೆ, ವರ್ತನೆ ಹೆತ್ತವರಿಗೇ ಚೆನ್ನಾಗಿ ತಿಳಿದಿರತ್ತದೆ. ಅದನ್ನವಲಂಬಿಸಿ ಮಾರ್ಪಾಡುಗಳನ್ನು ಮಾಡಿಕೊಳ್ಲಬೇಕಾಗುತ್ತದೆ.)


೧. ಚಿಕ್ಕ ಮಕ್ಕಳಿದ್ದಾಗ ಮಾತ್ರವಲ್ಲ, ದೊಡ್ಡವರಿಗೂ ಕೂಡ ಬೆಳಗ್ಗೆ ಬೇಗನೆದ್ದು ಪಯಾಣ ಆರಂಭಿಸಿದರೆ ಆಯಾಸ ಅಷ್ಟು ಬಾಧಿಸದು. ಇನ್ನು ಪುಟ್ಟ ಮಕ್ಕಳಿದ್ದರೆ ಅದು ಮತ್ತಷ್ಟು ಅನುಕೂಲ. ಹೇಗಿನ್ನುವಿರಾ? ನೋಡಿ... ಬೇಗನೆಬ್ಬಿಸಿ, ಹೊರಡಿಸುವ ಉತ್ಸಾಹ ತೋರಿದಾಗ ಅವರೂ ಹೊರಗೆಲ್ಲೋ, ಅಷ್ಟು ಮುಂಜಾನೆಯೇ ಹೋಗುವ, ಹೊಸಬಟ್ಟೆ ಧರಿಸುವ ಖುಶಿಯಲ್ಲಿ ಬಹು ಬೇಗ ತಯಾರಾಗುತ್ತಾರೆ. ಬಿಸಿಲೇರುವ ಮುನ್ನ ನೀವು ಸಾಕಷ್ಟು ದೂರ ಸಾಗುವಿರಿ. ನಡುವೆ ಆಹಾರವನ್ನಿತ್ತರೆ, ಅರ್ಧ ದಾರಿ ಕ್ರಮಿಸುವಷ್ಟರಲ್ಲೇ ಬೇಗನೆದ್ದುದರಿಂದ ಕಣ್ಣು ಕೂರಲು ಶುರುವಾಗಿ ನಿದ್ದೆಗೆ ತೊಡಗುತ್ತಾರೆ. ಪಯಣದ ಬಹಳಷ್ಟು ಸಮಯ ನಿದ್ದೆಯಲ್ಲೇ ಅವರು ಕಳೆವಂತಾಗುತ್ತದೆ. ಸಂಭಾಳಿಸುವುದು ಸುಲಭ! (ಹಾಂ. ಡ್ರೈವ್ ಮಾಡುವವರು ಮಾತ್ರ ಬೆಳಗ್ಗೆ ಬೇಗನೆ ಹೊರಡಲು, ರಾತ್ರಿ ಬೇಗ ನಿದ್ದೆ ಮಾಡುವುದು ಕಡ್ಡಾಯ :))

೨. ಪುಟ್ಟ ಕಂದಮ್ಮಗಳನ್ನು ಕೊಂಡೊಯ್ಯುವಾಗ, ಹಾಲು, ಪೇಯಗಳನ್ನು ಘಟ್ಟಹತ್ತುವ ತುಂಬಾ ಮೊದಲು ಅಥವಾ ಘಟ್ಟ ಹತ್ತಿದಾನಂತರವಷ್ಟೇ ನೀಡಿ. ಘಟ್ಟ ಹತ್ತುವಾಗ ಆದಷ್ಟು ಆಹಾರ ಕೊಡುವುದನ್ನು ತಪ್ಪಿಸಿ. ಒಂದೊಮ್ಮೆ ತೀರಾ ಹಠ ಮಾಡಿದರೆ ಚೀಪಲು ಸಿಪ್ಪೆ ತೆಗೆದ ಮೃದು ಆಪ್ಪಲ್ ಹೋಳು, ಮೇಲಿನ ಸಿಪ್ಪೆ ತೆಗೆದಿಟ್ಟ ಕ್ಯಾರೆಟ್ ತುಂಡು ಇಂಥದ್ದೇನಾದರೂ ಕೊಟ್ಟಿರಿ (ಇವುಗಳನ್ನು ಹೊರಡುವ ಮೊದಲೇ ಸಿದ್ಧವಿಟ್ಟುಕೊಂಡಿರಿ). ಅವರಿಷ್ಟದ ಬಣ್ಣ ಬಣ್ಣದ ಆಟಿಕೆಗಳನ್ನು ಡಿಕ್ಕಿಗೆ ಹಾಕದೇ ಪಕ್ಕದಲ್ಲೇ ಇಟ್ಟುಕೊಂಡಿರಿ. ಬೇಸರವಾದಾಗ ಆಡಿಸಲು, ಅವರ ಮನಸ್ಸನ್ನು ತಿರುಗಿಸಲು ಇದು ಬಹಳ ಉಪಯುಕ್ತ. ಬಣ್ಣ ಬಣ್ಣದ, ದೊಡ್ಡ ಚಿತ್ರಗಳಿರುವ ಪುಸ್ತಗಳೂ ಜೊತೆಗಿರಲಿ. ಕಾರಿನಲ್ಲಿ ನಿಮಗಿಷ್ಟವಾದ ಹಾಡಿನ ಬದಲು ಅವರಿಷ್ಟದ ರೈಮ್ಸ್, ಜೋಗುಳದ ಹಾಡು, ಸುಮಧುರ ವಾದನಗಳ ಸಿ.ಡಿ ಹಾಕಿರಲಿ. ಅವರ ಕಿವಿಗಳಿಗೆ ಇಂಪಾಗುವ ಮೆಲು ಹಾಡಿಗಳಿದ್ದರೆ ಚೆನ್ನ. 

೩. ಕಾರಿನ ಹಿಂಬದಿಯ ಸೀಟಿಗೆ ಕಡುಬಣ್ಣದ ಶಾಲ್ ಅಥವಾ ಇನ್ನಿತರ ಬಟ್ಟೆಯ ತುಂಡನ್ನು ಕಟ್ಟಿ, ಗೂಡಿನಂತೇ ಮಾಡಿ ಅದರೊಳಗೆ ಅವರನ್ನು ಕೂಡಿಸಿದರೆ ಅವರಿಗೆ ಇನ್ನಿಲ್ಲದ ಖುಶಿಯಾಗುತ್ತದೆ. (ಹೊಸ ಹೊಸ ವರಸೆಗಳನ್ನು ನೀವೂ ಸ್ವತಃ ಮಾಡಿ ನೋಡಿ ಕಲಿಯಬಹುದು :)). ಎರಡು ವರುಷಗಳಾದ ಕಂದಮ್ಮಗಳಿಗೆ ಹೊರಗಿನ ಪ್ರಪಂಚದ ಪರಿಚಯ ಮಾಡುತ್ತಾ, ಪ್ರಾಣಿ, ಮರಗಳ ತೋರಿಸುತ್ತಾ, ಕಥೆ ಹೇಳಿತ್ತಾ ತುಸು ಸಾಗಿದರೆ ಅಲ್ಲೇ ನಿದ್ದೆ ಹೋಗುವ ಸಂಭವ ಬಲು ಹೆಚ್ಚು. ಸೆಖೆ ಜಾಸ್ತಿ ಆದಾಗ ತೆಳು ಬಟ್ಟೆಗಳನ್ನು ಹಾಕಿಡಿ. ಅವರಿಗೆ ಇರಿಸು ಮುರಿಸುವಾಗುವಂತಹ ಬಟ್ಟೆಗಳನ್ನು, ಬಿಗಿ ಉಡುಗೆಗಳನ್ನು ಪಯಣ ಕಾಲದಲ್ಲೇ ಹಾಕಲೇ ಹೋಗಬೇಡಿ. ಮೂರು ಜೊತೆ ಬಟ್ಟೆಗಳನ್ನು ಹೆಚ್ಚುವರಿಯಾಗಿ ನಿಮ್ಮ ಜೊತೆಗಿರುವ ಚೀಲದಲ್ಲೇ ಇಟ್ಟುಕೊಂಡಿರಿ.

೪. ಹೋಟೇಲಿನ ತಿಂಡಿ ತಿನ್ನಲಾಗದ ಮಕ್ಕಳಿಗೆ ಮನೆಯಿಂದ ಚಪಾತಿ, ದೋಸೆ, ಇಡ್ಲಿ ಏನಾದರೂ ಮಾಡಿ ಕೊಂಡೊಯ್ದರೆ ಉತ್ತಮ. ದಾರಿಯ ಮಧ್ಯೆ ಪೀಡಿಯಾಶ್ಯೂರ್, ಹಾರ್ಲಿಕ್ಸ್ ಮುಂತಾದ ಪೇಯ ಕೊಡಬೇಡಿ. ಹೊಟ್ಟೆ ತೊಳೆಸಿ, ವಾಂತಿಯಾಗುವ ಸಂಭವ ಇವುಗಳಿಂದ ಹೆಚ್ಚಿರುತ್ತದೆ. (ತಾಯಿಯ ಹಾಲಿಗೆ ತೊಂದರೆಯಿಲ್ಲ).

೫. ಮೂರುವರ್ಷದ ನಂತರ ಮಕ್ಕಳನ್ನು ಸಂಭಾಳಿಸಲು ಅವರಿಗಿಷ್ಟದ ತಿಂಡಿಗಳು, ಕಾರಿನಲ್ಲಿ ವಿಡಿಯೋ ಪ್ಲೇಯರ್ ಇದ್ದರೆ, ಅವರಿಷ್ಟ ಕಾರ್ಟೂನ್ ಹಾಗೂ ರೈಮಿಂಗ್ ಸಿ.ಡಿ.ಗಳು, ಕಥೆ ಪುಸ್ತಕಗಳು, ಇವೆಲ್ಲಾ ಬಲು ಪ್ರಯೋಜನಕಾರಿಯಾಗಿವೆ.

೬. ೫ ವರ್ಷದ ನಂತರ ಕಾರಿನಲ್ಲಿ ನಾವು ಅವರೊಂದಿಗೆ ಸಣ್ಣ ಪುಟ್ಟ ಆಟಗಳನ್ನಾಡುವುದರ ಮೂಲಕ ಸ್ವತಃ ನಾವೂ ಪಯಣವನ್ನು ಆಹ್ಲಾದಿಸಬಹುದು. ೬ ವರ್ಷದ ಮೇಲಿನ ಮಕ್ಕಳು ಹಗಲು ನಿದ್ದೆ ಕಡಿಮೆ ಮಾಡುವುದರಿಂದ ತುಸು ವಿಭಿನ್ನ ರೀತಿಯಲ್ಲಿ ಅವರನ್ನು ಸಂಭಾಳಿಸಬೇಕಾಗುತ್ತದೆ. ಅವರ ಜೊತೆಗೆ ನಾವೂ ಮಗ್ಗಿ (ಟೇಬಲ್ಸ್) ಹೇಳುವುದರ ಮೂಲಕ, ಕನ್ನಡ/ ಇಂಗ್ಲಿಷ್ ಪದಗಳನ್ನು ಹೇಳುವುದು/ಹೇಳಿಸುವುದು, ಬಂಡಿಯಾಟ, ಪುಟ್ಟ ಪುಸ್ತಕದಲ್ಲಿ ಪದಬಂಧ ಹಾಕಿ ಹುಡುಕಲು ಹೇಳುವುದು, ಗಮ್ಯ ತಲುಪಿದ ಮೇಲೆ ಏನೆನು ಮಾಡಬೇಕೆಂಬುದನ್ನೆಲ್ಲಾ ಅವರೊಂದಿಗೆ ಚರ್ಚಿಸುತ್ತಾ ಆನಂದದಿಂದ ಪಯಣ ಸಾಗಬಲ್ಲೆವು. ೭-೮ ವರ್ಷಗಳವರೆಗಷ್ಟೇ... ಆಮೇಲೆ ಅವರು ಅವರದ್ದೇ ಲೋಕದಲ್ಲಿ, ಅವರದ್ದೇ ಆದ ರೀತಿಯಲ್ಲಿ ನಮ್ಮೊಂದಿಗಿದ್ದೂ, ಇಲ್ಲದಂತೇ, ಪುಸ್ತಕ ಹಿಡಿದೋ, ಸಂಗೀತವನ್ನು ಆಹ್ಲಾದಿಸುತ್ತಾ ಸಾಗಿಬಿಡುತ್ತಾರೆ ಎನ್ನುವುದು ಆದಿತಿಗಿಂತ ದೊಡ್ಡ ಮಕ್ಕಳಿರುವ ನನ್ನ ಸ್ನೇಹಿತೆಯರ ಅನುಭವದ ಮಾತು.

ಗುರಿಗಿಂತ ಪಯಣದ ದಾರಿಯೇ ಸುಂದರ ಎನ್ನುವ ಒಂದು ನಾಣ್ನುಡಿಯಿದೆ. ಆ ದಾರಿಯ ಸುಂದರತೆಯನ್ನು ನಾವು, ನಮ್ಮ ಜೊತೆ ನಮ್ಮ ಕಂದಮ್ಮಗಳಿಗೆ ಮನಗಾಣಿಸುವುದು ನಮ್ಮ ಕರ್ತವ್ಯ. ಮುಂದೆ ಅವರೇ ಪ್ರತಿ ದಾರಿಯೊಳಗಿರುವ ವಿಭಿನ್ನ ಸೌಂದರ್ಯವನ್ನು ಅವರೇ ಕಂಡುಕೊಳ್ಳಲು ನಮ್ಮ ಈ ಪುಟ್ಟ ಪರಿಚಯವೇ ನಾಂದಿಯಾಗಿರುತ್ತದೆ.

Aditi Hegde :)
"ಶುಭ ಪ್ರಯಾಣ" :) :)

-ತೇಜಸ್ವಿನಿ.

ಮಂಗಳವಾರ, ಅಕ್ಟೋಬರ್ 15, 2013

ಕಲ್ಲೆಂದು ಒಗೆಯದೇ..... ಕಾಪಿಟ್ಟೆ ಕನಸೊಂದ

ಸರಿಸುಮಾರು ಅರ್ಧ ರಾತ್ರಿ ಕಳೆದ ಮೇಲೇ ಇರಬೇಕು.. ಇಂಥದ್ದೊಂದು ಲಹರಿಯೋ, ಕಥೆಯೋ, ಚಿಂತನೆಯೋ, ಆಲೋಚನೆಯೋ, ಹುಚ್ಚು ಕಲ್ಪನೆಯೋ.. ಏನೋ ಒಂದು ತಲೆಯೊಳಗೆ ಮಿಣ ಮಿಣಗೆ ಹೊಳೆದು ಅರೆ ಎಚ್ಚರವಾಗಿದ್ದು. ತಲೆಯ ಮೂಲೆ ಮೂಲೆಯನ್ನೂ ಕೊರೆದು.. ಕೆರೆದು ಬೆಳೆಯ ತೊಡಗಿದಂತೇ... ಇನ್ನು ಅಸಾಧ್ಯ ಎಂದೆನಿಸಿ, ಆ ಅದನ್ನು ಬರೆದೇ ಬಿಡುವುದೆಂದು ನಿರ್ಧರಿಸಿದ್ದು.

ಅದು ಹೀಗಿತ್ತು....

ಇಬ್ಬರು ದಾರಿಯಲ್ಲಿ ನಡೆದುಕೊಂಡು ಹೋಗುತ್ತಿರುತ್ತಾರೆ. ಆ ಇಬ್ಬರು ಗಂಡಸರೋ, ಹೆಂಗಸರೋ, ಒಂದು ಗಂಡು, ಒಂದು ಹೆಣ್ಣೋ.. ಸಂಬಂಧಿಗಳೋ, ಸ್ನೇಹಿತರೂ... ಎನ್ನುವುದೂ ಮೊದಲು ತೀರಾ ಅಸ್ಪಷ್ಟವಾಗಿತ್ತು... ಅರೆ ಎಚ್ಚರಗೊಂಡು ಹೊಳೆದದ್ದನ್ನು ಮತ್ತೆ ಮೆಲುಕುಹಾಕತೊಡಗಿದಂತೇ ಆ ಅವರಿಬ್ಬರು ಪರಸ್ಪರ ಪರಿಚಿತ ಗಂಡೇ ಇರಬೇಕೆಂದು ಕಲ್ಪಿಸಿಕೊಂಡೆ. ಹಾಗೇ ಆ ಗಂಡಸರಿಬ್ಬರು ದಾರಿಯಲ್ಲಿ ಸಾಗುತ್ತಿರುವಾಗಲೇ ಅವರಿಗೆ ಕಂಡಿದ್ದು ದೂರ‍ದಲ್ಲೆರಡು ಹೊಳೆವ ಕಲ್ಲುಗಳು(?). ಮುಖ್ಯವಾಗಿ ಅವೆರಡೂ ಕಲ್ಲುಗಳೋ, ಇಲ್ಲಾ ವಜ್ರದ ಹರಳುಗಳೋ, ಇಲ್ಲಾ ಒಂದು ಕಲ್ಲು, ಇನ್ನೊಂದು ವಜ್ರವೋ ಎಂದು ತಿಳಿಯದ ಸಂದಿಗ್ಧತೆ ಅವರಿಬ್ಬರೊಳಗೂ. ಆದರೆ ಸಾಣೆ ಹಿಡಿದು ನೋಡಲು ಅವರು ಜೊಹರಿಗಳಂತೂ ಆಗಿರಲಿಲ್ಲ ಅನ್ನುವುದು ಮಾತ್ರ ನನ್ನೊಳಗೆ ಸುಸ್ಪಷ್ಟ. ಸರಿ... ಹೊಳೆದದ್ದೆಲ್ಲಾ ಚಿನ್ನವಲ್ಲಾ ಎನ್ನುವುದು ಇಲ್ಲಿ ತಾಗಿಸಲಾಗದು. ಕಾರಣ ಅದು ಚಿನ್ನವಂತೂ ಅಲ್ಲವೇ ಅಲ್ಲಾ ಎನ್ನುವುದು ಅವರಿಬ್ಬರಿಗೂ ಗೊತ್ತು. ಕಣ್ಣು ಕೋರೈಸುತ್ತಾ ಹೊಳೆಯುತ್ತಿದ್ದ ಆ ಹರಳುಗಳಲ್ಲಿ ವಜ್ರ ಯಾವುದು? ಬಿಳಿ ಹರಳು ಯಾವುದು? ಇಲ್ಲಾ ಎರಡೂ ವಜ್ರಗಳೋ, ಹರಳುಗಳೋ ಇರಬೇಕೆಂದು ಬಗೆದು.. ಇರಲಿ.. ವಜ್ರಗಳೇ ಆಗಿರಬಾರದೇಕೆ ಎಂದು ಆಶಿಸುತ್ತಾ ಒಂದು ತನಗೆ, ಇನ್ನೊಂದು ನಿನಗೆ ಎಂದು ಎತ್ತಿಕೊಂಡು ಹೊರಟವರು ಮನೆಯ ಪಿಠಾರಿಯೊಳಗಿರುವ ವೆಲ್ವೆಟ್ ಬಟ್ಟೆಯೊಳಗಿಟ್ಟು ಭದ್ರವಾಗಿ ಬೀಗ ಜಡಿದಿದ್ದಾರೆ. 

ಹೊತ್ತು ತಂದಿದ್ದು ಏನೆಂದು ಮೊದಲು ಅರಿಯುವ ತವಕ ಇಬ್ಬರಿಗೂ. ಹಾಗೆ ಅರಿಯಲು ಅವರಿಗಿರುವುದೂ ಎರಡೇ ಎರಡು ದಾರಿ. ಒಂದೋ ವಜ್ರದ ವ್ಯಾಪಾರಿಗೆ ಕೊಡುವುದು... ಆದರೆ ಹಾಗೆ ಕೊಡುವಾತ ತುಂಬಾ ನಂಬಿಗಸ್ಥನಾಗಿದ್ದಿರಬೇಕು. ಇಲ್ಲಾ ಅಂದರೆ ಇವೆರಡನ್ನೂ ಅವನು ಸುಳ್ಳೇ ಪುಳ್ಳೇ ಬಿಳಿಯ ಹರಳೆಂದು ಶರಾ ಬರೆದು, ತಾವು ಬೇಸೆತ್ತು ಹೊರ ಬಿಸುಟಮೇಲೆ, ಕಾದು ಹೊತ್ತೊಯ್ಯಬಾರದೆಂದಿಲ್ಲ! ಎರಡರಲ್ಲಿ ಒಂದು ವಜ್ರವಾದರೂ ಮಾಲು ಅವನ ಜೇಬಿಗೇ ತಾನೆ? ಒಂದೊಮ್ಮೆ ಆತ ಸಾಚಾ ಆಗಿ ಒಂದು ವಜ್ರವೆಂದು ಹೇಳಿದರೂ ಕಷ್ಟವೇ! ಇಬ್ಬರಲ್ಲಿ ಒಬ್ಬರ ಹೆಣ ಯಾರಿಂದಲೂ ಬೀಳಬಹುದು.. ಇಲ್ಲಾ ಬದುಕು ಹೆಣಕ್ಕಿಂತ ಕಡೆಯಾಗಲೂ ಬಹುದು. ಹೀಗಾಗಿ ಮೊದಲ ಸಾಧ್ಯತೆಯೆಡೆ ಸಾಗುವುದು ಅವರಿಬ್ಬರಿಗೂ ಸರಿ ಬರಲಿಲ್ಲ.

ಇನ್ನು ಎರಡನೆಯ ಸಾಧ್ಯತೆ, ಎರಡೂ ಕಲ್ಲುಗಳನ್ನು ಪ್ರಾಣಿಗೋ, ಆಗದ ಹೋಗದ ಯಾರ ಕೈ, ಮೈ, ಕಾಲಿಗಾದರೂ, ಯಾವುದೀ ಮಾಯದಲ್ಲಿ ಗೀರಿಯೋ.. ಇಲ್ಲಾ ಅರೆದು ಕುಡಿಸಿಯೋ ನೋಡುವುದು. ಅದೂ ಕಷ್ಟವೇ.... ತುಸು ಪುಡಿಮಾಡಿದರೂ, ಅದು ವಜ್ರವೇ ಆಗಿಬಿಟ್ಟಲ್ಲಿ ಅಷ್ಟೇ ಚೂರು ಲುಕ್ಸಾನು ಆಗಿಬಿಡುವ ಭಯ! 

ಊಹೂಂ.. ಇವ್ಯಾವುದರ ಉಸಾಬರಿಯೂ ಬೇಡ... ಮಾರದಿದ್ದರೂ ವಜ್ರಕ್ಕೆ ಅದರದ್ದೇ ಬೆಲೆ ಇದ್ದೇ ಇರುವುದು.. ಸಧ್ಯ ತಮ ತಮಗೆ ಸಿಕ್ಕಿದ್ದು ವಜ್ರವೆಂದೇ ಬಗೆದು ಜೀವನ ಪೂರ್ತಿ ವಜ್ರದ ಮಾಲೀಕನಾಗಿ ಬದುಕಿ, ಕೊನೆಗೆ ವಜ್ರವಿರುವ ಸುಳಿಹೂ ಕೊಡದೇ ಸತ್ತುಹೋಗುವುದೆಂದು ನಿರ್ಧರಿಸಿದ ಅವರಿಬ್ಬರೂ ತಮ್ಮ ತಮ್ಮ ಪಿಠಾರಿಯನ್ನು ಮನೆಯ ಹಿತ್ತಲಲ್ಲಿ ಆಳಕ್ಕೆ ಅಗೆದು ಹೂತು ಹಾಕಿ ಬಿಟ್ಟರು.

----

ಹಾಗೆ ಹೂತು ಹಾಕುವಾಗಲೇ ಪೂರ್ತಿ ಎಚ್ಚರವಾದ ನನ್ನ ಕಣ್ಗಳು ಬಿಳಿ ಹರಳಿನ ಹುಡುಕಾಟದಲ್ಲಿ ತೊಡಗಿವೆ. ವಜ್ರಗಳಿಗಿಂತ ಬಿಳಿ ಕಲ್ಲುಗಳೇ ತುಂಬಾ ಲೇಸು.... ಯಾವ ಎಡರು ತೊಡರು, ಸಾಣೆ, ಸಾಕಣೆಯ ಕಷ್ಟಗಳಲಿಲ್ಲದೇ ಹಾಗೇ ಟೇಬಲಿನ ಮೇಲಿಟ್ಟುಕೊಂಡು ಸಪ್ತವರ್ಣಗಳ ಹಾಯಿಸಿಕೊಂಡು ಹಾಯಾಗಿರಬಹುದೆಂದು.

-ತೇಜಸ್ವಿನಿ

ಮಂಗಳವಾರ, ಮಾರ್ಚ್ 5, 2013

ನೀರ್ಕಡ್ಡಿ


ಕೆಲವು ತಿಂಗಳ ಹಿಂದೆ ಊರಿಗೆ ಹೋದಾಗ ಪುಟ್ಟಿ "ಅಮ್ಮಾ ಇದೆಂಥದೇ ಮಜಾ ಇದ್ದು.. ಹಿಂಡಿದ್ರೆ ನೀರು ಬತ್ತು.. ಇದ್ನ ಕುಡೀಲಕ್ಕಾ?" ಎಂದು ಕೇಳುತ್ತಾ ನೀರುಕಡ್ಡಿ ಗಿಡವನ್ನು ಹಿಡಿದು ಬಂದಳಾ.....ನನಗೆ ನನ್ನ ಬಾಲ್ಯದ ನೆನಪುಗಳೆಲ್ಲಾ ಒಂದೊಂದಾಗಿ ಧಾಳಿಯಿಡತೊಡಗಿದವು. "ತಂಗಿ ಅದು ಕುಡ್ಯ ನೀರಲ್ಲಾ.. ಪಾಟಿ ಒರ್ಸಲೆಲ್ಲಾ ಬಳಸ್ತೊ... ನೀರ್ಕಡ್ಡಿ ಹೇಳ್ತೋ ಇದ್ಕೆ... ನೀ ಆಡಿದ್ಮೇಲೆ ಚೆನ್ನಾಗಿ ಕೈ ತೊಳ್ಕೊ.. ಬಾಯಿಗೆಲ್ಲಾ ಹಾಕಡ..." ಎಂದೆ. ತಿರುಗಿ ಹೊರಟವಳು ಮತ್ತೆ ನಿಂತು... "ಅಮ್ಮಾ ಪಾಟಿ ಒರ್ಸದಾ? ಅಪ್ಪ ಆಡಲೆ ಹೇಳಿ ಚಾಕ್ ಪೀಸ್ ತಗಬಂಜನಲೆ ಅದ್ರಲ್ಲಿ ಬರ್ದು ಒರ್ಸದಾ" ಎಂದು ಕೇಳಿದಾಗ ಒಂದು ಕ್ಷಣ ಅಯ್ಯೋ ಎನಿಸಿತು. ಈಗಿನ ಮಕ್ಕಳು ಅದರಲ್ಲೂ ‘ಸಿಟಿ’ ಮಕ್ಕಳು ಬರೆಯೋದನ್ನು ಆರಂಭಿಸುವುದೇ ಪೆನ್ಸಿಲ್ಲು, ಪುಸ್ತಕದಲ್ಲಿ! ಬಳಪದ ಕಡ್ಡಿ, ರಂಗುರಂಗಿನ ಪ್ಲಾಸ್ಟಿಕ್ ಚೌಕಟ್ಟುಗಳಿಂದ ಕಂಗೊಳಿಸುತ್ತಿದ್ದ ಕರಿ ಸ್ಲೇಟು‌ಗಳನ್ನು ಹೊತ್ತು ಬೀಸುತ್ತಾ ಸಾಗುತ್ತಿದ್ದ ಪಾಟೀಚೀಲ, ಅದರ ಕಿರುಗಿಸೆಯಲ್ಲಿ ತುರುಕಿರುತ್ತಿದ್ದ ನೀರ್ದಂಟು....ಇವೆಲ್ಲಾ ನಮ್ಮ ಕಾಲದಲ್ಲೇ ಮುಗಿದು ಹೋದವು. ಆದರೂ ಅದೇ ಸವಿನೆನಪಿಗಾಗಿಯೇ.. ನನ್ನ ಖುಶೀಗೋಸ್ಕರ ಇವಳಿಗೂ ಒಂದು ಪಾಟಿಯನ್ನು ತಂದು ಕೊಟ್ಟಿದ್ದೇನೆ... ನಮ್ಮ ಕಾಲದಂಥದ್ದಲ್ಲದೇ ಹೋದರೂ ಸರಿಸುಮಾರು ಅಂಥದ್ದೇ... ಇದರಲ್ಲಿ ಬರೆದು ಒರೆಸಲೆಂದೇ ಪುಟ್ಟ ಡಸ್ಟರ್ ಅನ್ನೂ ಸಿಕ್ಕಿಸಿಟ್ಟಿರುತ್ತಾರೆ. ಹಾಗಾಗಿ ನೀರ್ಕಡ್ಡಿ, ಒದ್ದೆ ಬಟ್ಟೆ ಎಲ್ಲಾ ಬೇಕಾಗಿಲ್ಲ.  
Courtesy : http://oppanna.com/?p=1921

ತುಸು ಕಂದು ಮಿಶ್ರಿತ ಕೆಂಪು ದಂಟಿನ ತುದಿಯಲ್ಲಿ ಹಸಿರೆಲೆಗಳಿಂದ ಕಂಗೊಳಿಸುವ ಇದನ್ನು ಕನ್ನಡದಲ್ಲಿ ನೀರು ದಂಟು, ನೀರ್ಕಡ್ಡಿ ಎಂದು ಕರೆದರೆ, ತುಳುವಿನಲ್ಲಿ ನಿರ್ಕಲ್ ಎನ್ನುತ್ತಾರೆ. ಏನೇ ಅನ್ನಿ... ಈ ತೆಳು ಕಡ್ಡಿಯನ್ನು ಹಿಂಡಿ, ಅದರ ರಸವನ್ನು ಪಾಟಿಯ ಮೇಲೆ ಹೊಯ್ದು, ಹರಿದು ಬೊಕ್ಕಣವಾದ ಹಳೇ ಬಟ್ಟೆ ಚೂರಲ್ಲೋ.. ಇಲ್ಲಾ ತೊಟ್ಟಿದ್ದ ಲಂಗದ ಕೊನೆ ತುದಿಯಿಂದಲೋ ಗಸ ಗಸನೆ, ಮೈ ಮೇಲೆ ಶೀತದ ಗುಳ್ಳೆ ಎಳೋ ಹಾಗೇ ಉಜ್ಜುವ ಆ ಮಜವೇ ಬೇರೆ. ನೀರ್ಕಡ್ಡಿಯನ್ನು ಹಿಂಡಿದಾಗ ಬರುವ ವಿಚಿತ್ರ ವಾಸನೆಯ ಕಂಪು ಇನ್ನೂ ನನ್ನ ಮೂಗಿನ ಗೃಂಥಿಯಲ್ಲೆಲ್ಲೋ ಹಾಗೇ ಶಾಶ್ವತವಾಗಿ ಉಳಿದುಕೊಂಡುಬಿಟ್ಟಿದೆ. ಬಸಳೆ ಸೊಪ್ಪನ್ನು ಅರ್ಧಂಬರ್ಧ ಬೇಯಿಸಿದಾಗ ಬರುವ ಒಂಥರಾ ವಾಸನೆಯದು! ಅಂದು... ಯಾರ ಬಳಿ ಎಷ್ಟು ಬಳಪ ಇದೆ? ಅದರಲ್ಲೂ ಬಿಳಿದೆಷ್ಟು? ಕರಿಯದೆಷ್ಟು? ಯಾರ ಬಳಪ ಹೆಚ್ಚು ಉದ್ದವಿದೆ? ನೀರ್ಕಡ್ಡಿಯನ್ನು ಯಾರೆಷ್ಟು ಒಟ್ಟು ಹಾಕಿದ್ದಾರೆ? ಎಂದೆಲ್ಲಾ ಲೆಕ್ಕಾಚಾರ ಹಾಕೊಕೊಳ್ಳುವುದು, ಅದರ ಮೇಲೆ ಕೊಡು-ಕೊಳ್ಳುವಿಕೆಯ ವ್ಯವಹಾರ ಮಾಡುವುದು ಸಾಮಾನ್ಯವಾಗಿತ್ತು. ಬಳಪವೋ, ನೀರ್ಕಡ್ಡಿಯೋ ಕಡಿಮೆ ಇದ್ದವರಿಂದ ಮನೆಯ ರುಚಿ ರುಚಿ ತಿಂಡಿಯನ್ನು ತರಿಸಿಕೊಂಡು, ಅವುಗಳ ಬದಲಾಗಿ ನಮ್ಮ ಒಂದೆರಡು ಬಳವನ್ನೋ ಅಥವಾ ನೀರ್ಕಡ್ಡಿಯನ್ನೋ ವಿನಿಮಯಮಾಡಿಕೊಳ್ಳುವುದು... ಇವೆಲ್ಲಾ ಒಂದು ತರಹದ ಸಂಭ್ರಮವೇ ಆಗಿದ್ದವು. ಮಂಗಳೂರಿನ ಗಾಂಧೀನಗರದ ಆ ಪುಟ್ಟ ಶಾಲೆಯಲ್ಲಿ ಕಲಿಯುತ್ತಿದ್ದ ಪ್ರತಿಮಕ್ಕಳಿಗೂ ನೀರ್ಕಡ್ಡಿಯ ಮಹತ್ವ ಚೆನ್ನಾಗಿ ತಿಳಿದಿತ್ತು. ಒಂದೆರಡು ದಿವಸಗಳಿಗಿಂತ ಜಾಸ್ತಿ ಉಳಿಯದ ಈ ನೀರ್ಕಡ್ಡಿ ಹಾಗೇ ಇಟ್ಟಲ್ಲಿ.. ಅಲ್ಲೇ ಕೊಳೆತು ನಾರುವುದೂ ಇತ್ತು. ಆದರೆ ಇಲ್ಲಿ..... ಬೆಂಗಳೂರಲ್ಲಿ.. ಹಾಗೇ ಈಗೀಗ ಮಂಗಳೂರಿನಲ್ಲೂ ಈ ನೀರೆಯನ್ನು ಕಾಣುವುದೇ ಅಪರೂಪವಾಗಿ ಹೋಗಿದೆ! ಬಹುಶಃ ನಮ್ಮ ಪಾಟೀಚೀಲದ ಜೊತೆ ಅದೂ ಅಸ್ತಂಗತವಾಗಿ ಹೋಗಿದೆಯೇನೋ!

ಓದು, ಬರಹ, ಆಟ, ಪಾಠ ಎಲ್ಲವೂ ಈಗ ಹೈಟೆಕ್! ಈಗಿನ ಮಕ್ಕಳು ಆಡೋದೇನಿದ್ರೂ ವಿಡಿಯೋ ಗೇಮ್, ಮೊಬೈಲ್, ಟ್ಯಾಬ್ಲೆಟ್... ಇತ್ಯಾದಿ. ಇಷ್ಟೆಲ್ಲಾ ಧಾಂ ಧೂಂ ನಡುವೆಯೂ ಇನ್ನೂ ಉಸಿರಾಡುತ್ತಿವೆ ನಮ್ಮ ಮುಟ್ಟಾಟ, ಕಣ್ಣಾ-ಮುಚ್ಚೆ, ಕೆರೆ-ದಡ, ಲಗೋರಿ! ಅವತ್ತೊಂದು ದಿನ ಚಿಕ್ಕಮ್ಮನ ಮಗಳಿಗೆ ನನ್ನ ಬಾಲ್ಯದ ಗುಂಗಿನಲ್ಲೇ... ಕಾಯಿ ತುರ್ದು ಖಾಲಿಯಾಗಿದ್ದ ಗೆರಟೆಯನ್ನು ಕೊಟ್ಟು.. "ನೀನು ಅದಿತಿ ಇದ್ರಲ್ಲಿ ಅಡಿಗೆ ಆಟ ಆಡ್ಕೊಳ್ಳಿ ಹೋಗಿ.." ಎಂದು ತಪ್ಪಿ ಹೇಳಿ ಬಿಟ್ನಾ....? ಅವಳು ತನ್ನ ಮೊಗದಲ್ಲಿ ತೋರಿದ ಆ ವಿಚಿತ್ರ ಭಾವವನ್ನು ಯಾವತ್ತೂ ಮರೆಯೋ ಹಾಗಿಲ್ಲ! "ಅಯ್ಯೋ ಅತ್ತೆ ಇದೂ ಒಂದು ಆಟದ ವಸ್ತುವಾ? ಕಾಯಿ ಜುಬ್ರೆಲ್ಲಾ ಅಲೀತಾ ಇದ್ದು.. ಇಶ್ಯೀ...ನನ್ನ ಹತ್ರ ‘ಕಿಚನ್ ಸೆಟ್’ ಇದೆ ಬಿಡು..." ಎನ್ನುತ್ತಾ ಕಸದಬುಟ್ಟಿಗೆ ಹಾಕಿ ತನಗಾಗಿ ತಂದಿದ್ದ ಕಲರ್ ಕಲರ್ ಅಡಿಗೆ ಮಾಡೋ ಆಟಿಕೆಗಳನ್ನು ಒಟ್ಟು ಹಾಕಿ ಕೂತಳು. ಖಾಲಿ ಗೆರಟೆಗಳಲ್ಲಿ ನೀರು, ಸೊಪ್ಪು, ಮಣ್ಣು ಎಲ್ಲವನ್ನೂ ಕದಡಿ.. ಮೈ-ಮೊಗ-ಮನಗಳ ತುಂಬೆಲ್ಲಾ ರಂಗು ತುಂಬಿಕೊಂಡು ಮಜಾ ಮಾಡುತ್ತಿದ್ದ ಆ ದಿನಗಳ ಭಾಗ್ಯ ಈಗಿನ ಪ್ಲಾಸ್ಟಿಗ್ ಯುಗದ ಮಕ್ಕಳಿಗೆಲ್ಲಿ ತಿಳೀಬೇಕು?! 

ಆದರೆ ಒಂದಂತೂ ಸತ್ಯ.. ಅಂದಿಗೂ ಇಂದಿಗೂ ಅಜ್ಜನ ಮನೆಗೆ ಹೋಗೋ ಸಂಭ್ರಮ ಮಾತ್ರ ಬದಲಾಗಿಲ್ಲ. ನನ್ನ ಪುಟ್ಟಿಗೆ ವರ್ಷಕ್ಕಿರೋದು ಎರಡೇ ತಿಂಗಳು... ಎಪ್ರಿಲ್ ಮತ್ತು ಮೇ! ನಾವೂ ಅಷ್ಟೇ.. ಚಿಕ್ಕೋರಿದ್ದಾಗ, ಊರಿಗೆ ಹೋಗೋ ದಿನಕ್ಕಾಗಿ ಚಾತಕ ಪಕ್ಷಿಗಳಾಗುತ್ತಿದ್ದೆವು. ಪಕ್ಕದ್ಮನೆ ವೀಣ, ಮೂಲೆ ಮನೆ ಸಾತಿ, ಕೆಳ್ಗಿನ್ಮನೆ ಶಾರಿ, ಅತ್ತೆ, ಚಿಕ್ಕಮ್ಮಂದಿರ ಮಕ್ಕಳೆಲ್ಲಾ ಒಟ್ಟಿಗೆ ಸೇರಿ ಹಿತ್ತಲಿನಲ್ಲಿ ಸೇರಿದ್ರೆ ಮನೆಸೇರೋದು ಸೂರ್ಯ ಮುಳ್ಗೋ ಹೊತ್ತಲ್ಲೇ. ಊಟಕ್ಕೆ ಕರೆದು ಕರೆದು ಸುಸ್ತಾದ ಮನೆಯವರು.. ಕೊನೆಗೆ ನಮ್ಮ ಹಠಕ್ಕೆ ಮಣಿದೋ ಇಲ್ಲಾ ಪುಟ್ಟತ್ತೆಯ ಉದಾರತೆಗೆ ಒಪ್ಪಿಯೋ ಅಲ್ಲೇ ಬಾಳೆ ಎಲೆ ಹಾಕಿ ಊಟ ಬಡಿಸಿ ಹೋಗುತ್ತಿದ್ದರು. ತಿಂದಿದ್ದೆಷ್ಟೋ.. ಚೆಲ್ಲಿದ್ದೆಷ್ಟೋ!! ಇರುವೆ, ಹೆಗ್ಗಣ, ಹುಳ-ಹಪ್ಪಟೆಗಳಿಗೂ ಭೂರಿ ಭೋಜನ.

ಹುಣ್ಸೆ ಹಣ್ಣಿಗೆ ಉಪ್ಪು, ಸೂಜಿ ಮೆಣಸು ನುರಿದು, ಚೆನ್ನಾಗಿ ಮೊದಲೇ ತೊಳೆದು ಒಣಗಿಸಿಟ್ಟಿಕೊಂಡಿದ್ದ ತೆಂಗಿನ ಗರಿಗಳ ಕಡ್ಡಿಯ ತುದಿಗೆ ಸಿಕ್ಕಿಸಿ ಗೋಲ ಮಾಡಿ ಚೀಪ್ತಾ ಇದ್ರೆ ಸ್ವರ್ಗ ಅಂದ್ರೆ ಇದೇ ಇರ್ಬೇಕಪ್ಪಾ ಅನಿಸುತ್ತಿತ್ತು. ಹಿತ್ತಲಿನಲ್ಲಿದ್ದ ತೋತಾಪುರಿ ಮಾವಿನ ಕಾಯಿ, ಪುನ್ನೇರ್ಲ ಹಣ್ಣು, ಪೇರಳೆ ಹಣ್ಣು, ಜಾಂಬ್ಳೆ ಹಣ್ಣು, ಕುಸುಮಾಲೆ ಹಣ್ಣು ಎಲ್ಲಾ ನಮ್ಮ ಹೊಟ್ಟೆ ಸೇರಿ ಪಾವನವಾಗುತ್ತಿದ್ದವು. ಆವಾಗೆಲ್ಲಾ ಈ ಮಿಲ್ಕಿ ಬಾರು, ತರಾವರಿ ಲಾಲಿ ಪಾಪ್ಪು, ಕೊಕ್ಕೋ, ಕ್ರೀಂ ಬಿಸ್ಕಿಟ್ಟು ಎಲ್ಲಾ ಎಲ್ಲಿ ಸಿಗುತ್ತಿದ್ದವು? ಹೆಚ್ಚು ಅಂದರೆ ಲಿಂಬೆ ಪೆಪ್ಪರ್‌ಮೆಂಟು, ಪಾರ್ಲೆ ಬಿಸ್ಕಿಟ್ಟು ಮತ್ತು ಹಳದಿ ಬಣ್ಣದ ಲಿಮ್ಚಿ ಬಿಸ್ಕತ್ತುಗಳಷ್ಟೇ ನಮಗೆ ಅಪರೂಪಕ್ಕೊಮ್ಮೆ ದರ್ಶನಕೊಡುತ್ತಿದ್ದವು.

ಆಟದಲ್ಲೂ ಮನೆಯಾಟ ನಮ್ಮ ನೆಚ್ಚಿನ ಆಟವಾಗಿತ್ತು. ಅದರಲ್ಲೂ ರಾಜಕೀಯ ನಡೆಯುವುದು ಸಾಮಾನ್ಯವಾಗಿತ್ತು ಬಿಡಿ. ಯಾರು ಸೊಪ್ಪು, ನೀರು, ಮಣ್ಣು ಎಲ್ಲಾ ಒಟ್ಟು ಹಾಕಿ, ಮಡಲಲ್ಲಿ, ಹರಿದ ಪಂಜೆ, ಸೀರಿಯನ್ನು ಮರದ ರೆಂಭೆ, ಕೊಂಬೆಗಳಿಗೆಲ್ಲಾ ಸಿಕ್ಕಿಸಿ... ಮನೆಯೆಂಬ ಪುಟ್ಟ ಟೆಂಟ್ ಕಟ್ಟಿ ವ್ಯವಸ್ಥೆ ಮಾಡುವರೋ ಅವರೇ ಯಜಮಾನ. ಆ ದಿನವಿಡೀ ಅವರದೇ ಪಾರುಪತ್ಯ. ಅತೀ ಹೆಚ್ಚು ಗರಟೆ ಒಟ್ಟು ಹಾಕಿ ತಂದವಳೇ ಯಜಮಾನ್ತಿ. ಅಡುಗೆ ಮಾಡೋದು.. ಸುಳ್ಳೆ ಪುಳ್ಳೆ ತಿನ್ನೋದು.. ಅದ್ರಲ್ಲೇ ಮಜ ಸೂರೆ ಹೊಡೆದು ತೇಗೋದು. ದಿನಾ ಇದೇ ಆಟ ಆಡಿ ಬೇಜಾರದ ಒಂದು ದಿನ ಮದುವೆ ಆಟಕ್ಕೆ ತೊಡಗಿಕೊಂಡೆವು. ಮೇಕಪ್ ಮಳ್ಳಿ ಸುಬ್ಬಿ, ಮನೆಯಿಂದ ಆಯಿಯ ಪೌಡರ್, ಟಿಕಲಿ, ಲಾಲಿ ಎಲ್ಲಾ ಕದ್ದು ತಂದು.. ತನಗೆ ತಿಳಿದ ರೀತಿಯಲ್ಲಿ ಬಳಿದುಕೊಂಡು ಬಾರದ ನಾಚಿಕೆ ತಂದುಕೊಂಡು ಕೂತರೆ, ಸ್ವಲ್ಪ ಗಂಡುಬೀರಿ ಅನ್ನೋ ಪಟ್ಟ ಹೊತ್ತಿದ್ದ ಶಾಂತಿ ಪಂಜೆಯುಟ್ಟು ಮದುಮಗನಾದಳು. ಮದುವೆ ನಡೆಸುತ್ತಿದ್ದ ಪುರೋಹಿತ(ತಿ) ಶಾಂಭವಿ ತನಗೆ ಗೊತ್ತಿದ್ದ ಏನೋ ಒಂದು ಮಂತ್ರವನ್ನೇ ಹೇಳುತ್ತಿದ್ದಳಾ... ಇದ್ದಕ್ಕಿದ್ದಂತೇ ನಿಲ್ಲಿಸಿ "ಅಲ್ಲಾ ಮದ್ವೆ ಆದ್ಮೇಲೆ ಸಿಹಿ ಊಟ ಹಾಕವಲಿ.. ಖಾರನೂ ತಿಂಬಲೆ ಏನೂ ಇಲ್ಲೆ....... ಈ ಮಳ್ಳು ಮಣ್ಣು, ನೀರು ತಿನ್ನದೆಂತು?" ಎಂದಿದ್ದೇ ತಡ.. ನಾಚುತ್ತಿದ್ದ ಸುಬ್ಬಿ ಛಂಗನೆ ಹಾರಿ.. "ತಡಿ ಮೆತ್ತಿ ಮೇಲೆ ಹೋಳ್ಗೆ ಅಡಗ್ಸಿಟ್ಟಿದ್ದೋ.. ನಾ ನೋಡಿದ್ದಿ.. ತಗ ಬತ್ತಿ.." ಎಂದು ಲಂಗವೆತ್ತಿಕೊಂಡು ಓಡಿದರೆ... ಮದುಮಗ ಅಲ್ಲೇ ಇದ್ದ ಮಾವಿನ ಮರ ಹತ್ತಿ ತೋತಾಪುರಿಗೆ ಕೈ ಹಾಕಿದ್ದ. ಸರಿ ಎಲ್ಲರೂ ಸೇರಿ ತೋತಾಪುರಿಗೆ ಉಪ್ಪು, ಮೆಣಸು ನುರಿದು, ಹೋಳಿಗೆಗೆ ತುಪ್ಪ ಹಚ್ಚಿಟ್ಟು.. ತಿನ್ನಲೆ ಎಲ್ಲವನ್ನೂ ತಯಾರಿಟ್ಟುಕೊಂಡು ಮತ್ತೆ ಮದುವೆ ಮುಂದುವರಿಸಲು... ಎಲ್ಲರ ಹೊಟ್ಟೆಯಲ್ಲೂ ಸುಮೂಹೂರ್ತೇ ಸಾವಧಾನ!.

ಎಲ್ಲವನ್ನೂ ತಿಂದು ತೇಗಿ.. ಮನೆಗೆ ಬಂದಾಗ ಊಟದ ಸಮಯವೂ ಮೀರಿಹೋಗಿತ್ತು. ಹಸಿವಾದರೂ ಎಲ್ಲಿತ್ತು? ಮನೆಯವರ ಬೈಗುಳಕ್ಕೆ ಹೆದರಿ ತಿಂದ ಶಾಸ್ತ್ರ ಮಾಡಿ ಬಿದ್ದವರಿಗೆ ರಾತ್ರಿಯಾಗುತ್ತಿದ್ದಂತೇ ಮಾವಿನಕಾಯಿ, ಉಪ್ಪು, ಹುಳಿ, ಕಡಲೇಬೇಳೇಗಳು ತಮ್ಮ ನರ್ತನವನ್ನು ತೋರಿದ್ದವು. ಹೊಟ್ಟೆಯ ಗುಟ್ಟು ಹೊರಬರಲು ಎಲ್ಲರೂ ಸೇರಿ ಸಮಾ ಬೈದಿದ್ದರು. 

ನಮ್ಮ ಈ ಮದುವೆಯಾಟದ ನೆನಪಾದಾಗೆಲ್ಲಾ ನೆನಪಿಗೆ ಬರೋದು ಮಕ್ಕೀಗದ್ದೆ ಪಾರ್ವತಿ ಮದುವೆಯ ಮಹಾ ಪ್ರಸಂಗ! ಆಗಿದ್ದಿಷ್ಟೇ... ಪಾತಕ್ಕನ ತಾಯಿ ಸೀತತ್ತೆಗೆ ತನ್ನ ಮಗಳನ್ನು ಬೊಂಬಾಯಿಯಲ್ಲಿದ್ದ ವರನಿಗೇ ಕೊಡಬೇಂಬ ಹುಚ್ಚು ಆಸೆ. ಹುಡುಕಿ ಹುಡುಕಿ ಸಾಗಾಗಿ ಕೊನೆಗೆ ಗುರುತಿದ್ದವರೋರ್ವರ ಮುಖಾಂತರ ಬೊಂಬಾಯಿಯಲ್ಲೇ ಕೆಲಸಕ್ಕಿದ್ದ ಗಂಡೇ ಸಿಕ್ಕಿ, ಮದುವೆ ನಿಕ್ಕಿಯಾಗಲು, ಸೀತತ್ತೆಯ ಕಾಲು ಭೂಮಿಯಮೇಲೇ ಇರಲಿಲ್ಲ. ಸ್ವತಃ ಪಾತಕ್ಕನಿಗೂ ಅಷ್ಟು ಖುಶಿಯಾಗಿರಲಿಕ್ಕಿಲ್ಲ. ಆ ಸಂತೋಷದಲ್ಲೇ ಮೈಮರೆತ ಸೀತತ್ತೆ...ತನ್ನ ನಾದನಿಯ ಬಳಿ "ಯಮ್ಮನೆ ಕೂಸಂತೂ ಪಾರಾತೇ ಲಲ್ತೆ... ಈಗೆಲ್ಲಾ ಎಲ್ಲಿ ಸಿಗ್ತು ಇಂಥಾ ಬಂಗಾರದಂಥಾ ಸಂಬಂಧ?" ಎಂದು ಹೇಳಿದ್ದೇ ತಡ ಇನ್ನೂ ಮದುವೆಯಾಗದೇ ಇದ್ದ ತನ್ನ ಮಗಳಿಗೇ ಅತ್ತಿಗೆ ಕೊಂಕಾಡಿದಳೆಂದು ತಿಳಿದ ಲಲಿತೆ ಒಳಗೊಳಗೇ ಕುದ್ದು, ಸರಿಯಾದ ಸಮಯಕ್ಕೆ ಕಾಯುತ್ತಿದ್ದಳು. ಆ ಸುಸಮಯ ಅವಳಿಗೆ ಸಿಕ್ಕಿದ್ದಾದರೂ ಎಂದು.. ಪಾತಿಯ ಮದುವೆಯ ದಿನವೇ! ಗೌರಿ ಪೂಜೆಯಾಗಿ.. ಧಾರೆಯಾಗಿ.. ಲಾಜ ಹೋಮ ಇನ್ನೇನು ಶುರುವಾಗಬೇಕೆನುವಾಗಲೇ.... ಆಚೀಚೆ ತಿರುಗಾಡುತ್ತಾ, ಸೀತತ್ತೆಯ ಬಳಿಯೇ ಸುಳಿದಾಡುತ್ತಾ ಮೆಲ್ಲನೆ ಎಂದೋ ಕೇಳಿದ್ದ ಹಾಡನ್ನು ಹಾಡತೊಡಗಿದಳು ಲಲಿತೆ....

"ಆಚೆ ಮನೆ ಶಣ್ಣು ಭಾವ ಮಗ್ಳ ಮದ್ವೆ ಮಾಡಿದ್ನಡ 
ಮಹಾರಾಷ್ಟ್ರದ್ ಬದಿಗೆಲ್ಲೋ ಕೊಟ್ಟಿದ್ನಡ
ಆ ಬದಿಯ ಬ್ರಾಹ್ಮಣ್ರಡ ದಲ್ಲಾಳಿಂದ ಆಗಿತ್ತಡ
ತಿಂಗ್ಳೊಳ್ಗೆ ಕೂಸಿನ್ ಸುದ್ದಿ ಪತ್ತೆ ಇಲ್ಯಡ.."

ಬೇಕೆಂತಲೇ ತುಸು ಗಟ್ಟಿಯಾಗಿ ಹಾಡಿಕೊಳ್ಳುತ್ತಿದ್ದ ಲಲಿತೆಯ ಹಾಡು ಅಲ್ಲೇ ಇದ್ದ ಸೀತತ್ತೆಗಲ್ಲದೇ, ಈ ಮದುವೆಗೆ ರಾಯಭಾರಿಯಾಗಿದ್ದ ಆ ಸಂಬಂಧಿಕನ ಕಿವಿಗೂ ಬಿದ್ದು... ದೊಡ್ಡ ಗಲಾಟೆಯೇ ಆಗಿ.... ಕೊನೆಗೆ ಎಲ್ಲರೂ ಲಲಿತೆಯನ್ನೇ ದೂರಲು... ಸಿಟ್ಟಾದ ಆಕೆ ಊಟವನ್ನೂ ಮಾಡದೇ ಹೋದವಳು ತನ್ನ ಮಗಳ ಮದುವೆಯ ಕರೆಯೋಲೆಯನ್ನೂ ಕಳುಹಿಸಲಿಲ್ಲವೆಂಬುದೇ ಹಲವು ಕಾಲ ಸುದ್ದಿಯಲ್ಲಿತ್ತು. ಆವಾಗ ನಮಗೆಲ್ಲಾ ಅದೊಂದು ಅತಿ ರಂಜನಾತ್ಮಕ ಕಥೆಯಾಗಿತ್ತು. ಅಜ್ಜಿಯ ಬಾಯಲ್ಲಿ ಕೇಳಿದಷ್ಟೂ ಸಾಕಾಗದೇ ಮತ್ತೆ ಮತ್ತೆ ಕೆದಕಿ ಕೇಳಿ ಬೈಸಿಕೊಳ್ಳುತ್ತಿದ್ದೆವು.

ಮಣ್ಣು, ನೀರು, ಸೊಪ್ಪು, ಗೆರಟೆ ಇಂತಹ ನೈಸರ್ಗಿಕ ವಸ್ತುಗಳ ಜೊತೆಯೇ ಬೆಳೆದ ನಮ್ಮ ಬಾಲ್ಯದ ಆ ಸಂತಸ ತೃಪ್ತಿಯನ್ನೆಲ್ಲಾ ನೆನಸಿದಾಗ ನಮ್ಮ ಮಕ್ಕಳ ಪಾಲಿಗೆ ಇವೆಲ್ಲಾ ಎಂದೂ ಇಲ್ಲವಲ್ಲಾ ಎನ್ನುವ ನೋವು ಕಾಡುತ್ತಿರುತ್ತದೆ. ನಮ್ಮ ಕಪ್ಪು-ಬಿಳುಪು, ರಂಗು ರಂಗಿನ ಇಂದಿನವರಿಗೆ ಎಷ್ಟು ಪ್ರಿಯವಾಗಬಹುದು? "ಕಾಲಕ್ಕೆ ತಕ್ಕಂತೆ ಕೋಲ" ಅನ್ನೋದೊಂದು ಗಾದೆಯಿದೆ. ಅದು ನೂರಕ್ಕೆ ನೂರು ಸತ್ಯವೆನಿಸುತ್ತದೆ. ಆದರೂ... ನನ್ನಜ್ಜಿಯ ರಂಗುರಂಗಿನ ಕಥೆ ಕೇಳುವಾಗ ಹೇಗೆ ನನ್ನ ಕಣ್ಣರಳುತ್ತಿತ್ತೋ.. ಮನಸೊಳಗೆ ಕಲ್ಪನೆ ಮೂಡಿ ಮುದಗೊಳ್ಳುತ್ತಿದ್ದೆನೋ ಹಾಗೇ ನನ್ನ ಮಗಳೂ ಕಣ್ಣು ದೊಡ್ಡದಾಗಿ ಮಾಡಿ ನನ್ನ ಬಾಲ್ಯದ ಪರಾಕ್ರಮವನ್ನು ಕೇಳುವಾಗ, ಮತ್ತೆ ಮತ್ತೆ ಬಯಸಿ "ಹೂಂ...ಹೇಳು.. ನೀ ಚೌಡೀ ಹಿತ್ಲಲ್ಲಿ ಆಡಿದ್ ಕಥೆ ಹೇಳು...." ಎಂದು ಪೀಡಿಸುವಾಗ, ವಂಡರ್‌‍ಲಾ, ಪಿಲಿಕುಳ‌ಗಳಂತಹ ಕೃತಕ ನೀರಿನ ಧಾಮಗಳಿಗಿಂತ, ಊರಿನ ಚಿಕ್ಕ ತೊರೆ, ಹಳ್ಳ, ನದಿ, ಸಮುದ್ರ - ಇವೇ ಚೊಲೋವಾ ಅಮ್ಮಾ.. ಎಂದು ಕುಣಿದಾಡುವಾಗ.... - ಕೃತ್ರ್‍ಇಮತೆಯನ್ನಪ್ಪದ, ಸಹಜತೆಯನ್ನೊಪ್ಪುವ ಆ ಮುಗ್ಧ ಬಾಲ್ಯತನ ಯಾವ ಕಾಲ, ದೇಶ, ಊರಾದರೂ ಒಂದು ಸಾಮ್ಯತೆಯನ್ನು ಕಾಯ್ದುಕೊಂಡಿರುತ್ತದೆಯೇನೋ ಎಂದೆನಿಸುತ್ತದೆ. ತುಸು ಸಮಾಧಾನವಾಗುತ್ತದೆ. ಹಾಗಾಗಿ ಒಳಗೆಲ್ಲೋ ಹೂತು ಹೋಗಿರುವ ನೀರ್ಕಡ್ಡಿಯ ಕಂಪು ಆಗಾಗ ಎದ್ದು ಬಂದು ಉಸಿರಾಡುತ್ತಲೇ ಇರುತ್ತದೆ.

-ತೇಜಸ್ವಿನಿ ಹೆಗಡೆ.

ಬುಧವಾರ, ಮಾರ್ಚ್ 23, 2011

ಗಾಢ ನೀಲಿಯ ಮುಂದಿನ ಬಿಳಿನೊರೆಗಳಂತೆ.....

Courtesy : http://www.deceptivemedia.co.uk

"ವಿಷಾದದ ಬಗ್ಗೆ ಬರಿ ಅಕ್ಕ... ವಿಷಾದದ ಜೊತೆ ವಿಡಂಬನೆನೂ ಸೇರ್ಸಿ ಬರದ್ರೆ ಮತ್ತೂ ಚೊಲೋವಾ.... ಸ್ವಲ್ಪ ಡಿಫರೆಂಟ್ ಆಗಿರ್ಲಿ..." ಎಂದು ಮಧು ಹೇಳಿದಾಗಲೇ ನಾನು ಯೋಚಿಸಿದ್ದು.... ವಿಷಾದ ಅಂದರೆ ಏನು?! ಹಾಗೆ ನೋಡ ಹೋದರೆ ಪ್ರತಿಯೊಬ್ಬರ ಬಾಳಲ್ಲೂ ಎಲ್ಲೆಂದರೆಲ್ಲಿ.. ಸಂದಿಗೊಂದಿಯಲ್ಲಿ... ಸಮಯದ ಹೊತ್ತೂ ಗೊತ್ತೂ ಇಲ್ಲದೇ... ಒಂದಿನಿತು ಸುಳಿವನ್ನೂ ನೀಡದೇ ತಣ್ಣನೆ ಒಳ ಬಂದು, ಬಿರುಗಾಳಿ ಎಬ್ಬಿಸಿ, ಬಹು ಕಾಲ ಇದ್ದು... ಒಮ್ಮೊಮ್ಮೆ ಎಂದೂ ಮರೆಯಲಾಗದ... ಮಗದೊಮ್ಮೆ ಮಗ್ಗುಲು ಬದಲಿಸಿ ಒಮ್ಮೆ ಬೆನ್ನನ್ನೂ, ಮತ್ತೊಮ್ಮೆ ಮುಖವನ್ನೂ ಕಾಣಿಸುವ ಈ "ವಿಷಾದ"- ಒಂದು ಅರಿಯಲಾಗದ..... ವಿಚಿತ್ರ ಭಾವವೇ ಸರಿ ಎಂದೆನಿಸುತ್ತದೆ ನನಗೆ. ಆದರೆ ಸಂತಸದ ಕತೆಯೇ ಬೇರೆ. ಅದು ಬರುವಾಗ ತನ್ನ ಸುಳಿವನ್ನು ಕೊಟ್ಟು ಬರುವುದೇ ಹೆಚ್ಚು. ಹಾಗಾಗಿ ಮನ ಅದರ ಆಗಮನಕ್ಕಾಗಿ ಕಾತುರವಾಗಿದ್ದು ತುದಿಗಾಲಲ್ಲಿ ನಿಂತಿರುತ್ತದೆ. ಇನ್ನೇನು ಬಲಗಾಲಿಡಬೇಕೆನ್ನುವ ಹೊತ್ತಿನಲ್ಲೇ ಕೆಲವೊಮ್ಮೆ ಅಲ್ಲೇ ಮರೆಯಲ್ಲಡಿಗಿ ಹೊಂಚುಹಾಕುತ್ತಿರುವ ದುಃಖ ಸಂತಸವನ್ನು ನೂಕಿ ಕೆಡವಿ ನಿರಾಸೆಯೊಂದಿಗೆ ಎಡಗಾಲನ್ನಿಟ್ಟು ಪ್ರವೇಶ ಮಾಡಿಯಾಗಿರುತ್ತದೆ. ಆಗ ಮನಕೆ ಬಡಿಯುವ ವಿಷಾದದ ಹೊಡೆತ ಯಾವ ಸುನಾಮಿ ಅಲೆಗಿಂತಲೂ ಕಡಿಮೆಯದ್ದಾಗಿರದು.

ಅದೆಷ್ಟೋ ಸಲ ನಾನು ಕಡಲಂಚಿನಲ್ಲಿ ಜಾರುವ ಸೂರ್ಯನನ್ನೇ ನೋಡುತ್ತಿರುವಾಗ ಹೀಗೊಂದು ಆಲೋಚನೆ ಆಗಾಗ ಬಂದಿದ್ದಿದೆ... ‘ಪ್ರತಿದಿನ ಹೊಸ ಕಿರಣಗಳನ್ನು ಹೊತ್ತು ಮೇಲೇರುವ ಈತ, ತನ್ನೆಲ್ಲಾ ಕಿರಣಗಳ ಜಗಕೆ ತೆತ್ತು ತೆತ್ತು.. ಸುಸ್ತಾಗಿ ಸೊಪ್ಪಾಗಿ, ದಿನದ ಕೊನೆಯಲ್ಲಿ ಕಳೆದುಕೊಂಡುದರ ವಿಷಾದಕ್ಕಾಗಿ ಮುಳುಗು ಹಾಕುತ್ತಾನೇನೋ' ಎಂದು. ಹಾಗೆ ಅಂದು ಕೊಂಡಾಗಲೆಲ್ಲಾ ಬಾನಲ್ಲಿ ನಗುವ ಚಂದಿರನೂ ಹೆಚ್ಚಾಗಿ ಕಂಡಿದ್ದು ಸುಳ್ಳಲ್ಲ. ಇದೇ ಬಹುಶಃ ಆಶಾವಾದವಿರಬೇಕು. "ಒಂದ ಕೊಟ್ಟರೆ ಶಿವ ಒಂದು ಕೊಡಾ" ಎಂದು ಅಮ್ಮ ಹೇಳಿದಾಗ ನಾನು,. "ಈ ಶಿವ ಅಷ್ಟು ಚಾಲಾಕಿಲ್ಲೆ ಕಾಣ್ತು ಅಮ್ಮ.... ಒಂದು ಕೊಟ್ರೆ ಇನ್ನೊಂದು ಫ್ರೀ ಹೇಳಿ ಇಟ್ಟಿದಿದ್ರೆ ಮತ್ತೂ ಹೆಚ್ಚು ಜನ ಅವ್ನ ಹಿಂದೆ ಬೀಳ್ತಿದ್ದೋ ಅಲ್ದಾ?" ಎಂದು ನಕ್ಕು ಬಿಡುತ್ತಿದ್ದೆ. ಆದರೆ ಮನಸು ಮಾತ್ರ ಮೌನವಾಗಿ ಆ ಶಿವನಲ್ಲಿ ಬೇಡುತ್ತಿತ್ತು.. "ಕೊಟ್ಟದ್ದನ್ನಾದ್ರೂ ಕಿತ್ಕಳ್ದೇ ಇರಪ್ಪಾ ತಂದೆ..." ಎಂದು. ಹ್ಮ್ಂ... ಇದೂ ಒಂಥರ ವಿಷಾದಭರಿತ ಯಾಚನೆಯೇ ಸರಿ!

ನಮಗೋರ್ವ ಅತ್ಯುತ್ತಮ ಫಿಸಿಕ್ಸ್ ಪ್ರೊಫೆಸರ್ ಸಿಕ್ಕಿದ್ದರು (ಪಿ.ಯು.ಸಿ ಟ್ಯೂಷನ್‌ನಲ್ಲಿ). ಅಲೋಶಿಯಸ್ ಕಾಲೇಜಿನಲ್ಲಿ ಫಿಸಿಕ್ಸ್ ಕಲಿಸುತ್ತಿದ್ದ ಅವರ ಹೆಸರು ಪ್ರೊ. ಐ.ವಿ.ರಾವ್. ತುಂಬಾ ಚೆನ್ನಾ ಪಾಠ ಮಾಡುತ್ತಿದ್ದರು. ಈಗ ವಯಸ್ಸಿನ ಪ್ರಭಾವದಿಂದ ನಿವೃತ್ತಿ ಪಡೆದಿದ್ದಾರೆ. ಅವರು ಭೌತಶಾಸ್ತ್ರವನ್ನು ಆಧ್ಯಾತ್ಮದೊಂದಿಗೆ ಸಮೀಕರಿಸಿ ವಿವರಿಸುತ್ತಿದ್ದ ಪರಿ ನಮ್ಮನ್ನೆಲ್ಲಾ ಮಂತ್ರಮುಗ್ಧರನ್ನಾಗಿಸುತಿತ್ತು. ಕೇಸರಿ, ನೀಲಿ, ಗಾಢ ನೀಲಿ, ಗುಲಾಬಿ, ಹಳದಿ, ಬಿಳಿ, ಕಪ್ಪು - ಹೀಗೆ ಒಂದೊಂದು ಬಣ್ಣಕ್ಕೂ ಇರುವ ಮಹತ್ವವನ್ನು, ಅವು ನಮ್ಮ ಮನಸಿನ ಮೇಲೆ ಬೀರುವ ಪರಿಣಾಮವನ್ನು ವಿವಿರಿಸಿದ್ದರು. ಆಗ ತಕ್ಷಣ ನನ್ನ ಮನೆಯ ಗೋಡೆಗಳ ಬಣ್ಣಗಳನ್ನೆಲ್ಲಾ ಬದಲಿಸುವ ಆಲೋಚನೆ ಬಂದು...ಅದು ಕೊನೆಗೆ ನನ್ನ ಕೋಣೆಯೊಂದರ ಬಣ್ಣ ಬದಲಾಯಿಸುವುದರೊಂದಿಗೇ ಕೊನೆಗೊಂಡಿತ್ತು. ಗಾಢ ನೀಲ ಬಣ್ಣ ವಿಷಾದ ಭಾವಕ್ಕೆ ಹೊಂದುವುದು ಎಂದು ಹೇಳಿದಾಗ ಥಟ್ಟನೆ ನೆನಪಾಗಿದ್ದು ಸಾಗರವೇ! ಅದರ ಕಡುಗಪ್ಪು ಮೈ ನೋಡಿದ ತಕ್ಷಣವೇ ನನಗರಿಯದಂತೇ ಒಂದು ನಿಟ್ಟುಸಿರು ಪ್ರತಿ ಸಲ ಹೊರಬರುವುದಂತೂ ಆ ಸಾಗರದಾಣೆಗೂ ಸತ್ಯ! ಆದರೆ ಮರುಕ್ಷಣ ಬಿಳಿ ನೊರೆಚೆಲ್ಲುವ ಅದರ ಪರಿಗೆ ಮೋಡಿಯಾಗಿ.. ಆ ಬಿಳಿ ನೊರೆಗಳನ್ನೇ ನೋಡುತ್ತಾ ಕಿರುನಗು ಮೂಡುವುದೂ ಅಷ್ಟೇ ಸತ್ಯ. ಬಿಳಿ ಆಶಾವಾದದ, ಪ್ರಶಾಂತತೆಯ, ನಿರ್ಮಲತೆಯ ಸಂಕೇತ. ಪ್ರಕೃತಿಯೇ ತನ್ಮೂಲಕ ಎಲ್ಲಾ ಸಂಕೇತವನ್ನು ಅದೆಷ್ಟು ಸೂಕ್ಷ್ಮವಾಗಿ ಆದರೆ ನಿಖರವಾಗಿ ತೋರುತ್ತದೆ ಎಂದು ಬಹು ಅಚ್ಚರಿ ಪಡುತ್ತಿರುತ್ತೇನೆ. ಹಸಿರು ಕಂಡಾಗಲೆಲ್ಲಾ ಹುಚ್ಚೇಳುವ ಮನ... ಏನೋ ತುಂಬಿಕೊಂಡಂತಹ ಭಾವ.. ಉಲ್ಲಾಸ. ಹಾಗಾಗಿಯೇ ಹಿರಿಯರು ಗರ್ಭಿಣಿ ಸ್ತ್ರೀಯರ ಉಡಿ ತುಂಬುವಾಗ ಹಸಿರು ಬಳೆ, ಕಣ, ಸೀರೆ ಕೊಡುವ ಪ್ರತೀತಿ ಮಾಡಿದ್ದಾರೆ. ಪ್ರಕೃತಿಯ ಜೊತೆ ಜೊತೆಗೇ ಮಾನವನ ಮನಸೂ ಸ್ಪಂದಿಸುತ್ತದೆ ಎನ್ನುತ್ತಿದ್ದರು ನನ್ನ ಫಿಸಿಕ್ಸ್ ಗುರುಗಳು. ಹಂತ ಹಂತವಾಗಿ ಅದು ಎಷ್ಟು ಸತ್ಯ ಎಂದು ಇಂದಿಗೂ ನನಗೆ ಮನವರಿಕೆಯಾಗುತ್ತಲೇ ಇದೆ.

ಹ್ಮ್ಂ... ಎಷ್ಟು ಪ್ರಯತ್ನಿಸಿದರೂ ಪೂರ್ತಿ ವಿಷಾದವನ್ನು.. ವಿಷಾದವಾಗಿಯೇ ಕಾಣಿಸಲು ಸಾಧ್ಯವಾಗುತ್ತಿಲ್ಲ!:-/ ಬಹುಶಃ ನನ್ನೊಳಗಿನ ಆಶಾವಾದ ಅದನ್ನು ತಡೆಹಿಡಿದಿರಬಹುದು. ಅದೇನೇ ಇರಲಿ... ಡಿಫರೆಂಟ್ ಕೊಡಲು ಯತ್ನಿಸಿದ್ದೇನೆ. ವಿಷಾದದ ಮೂಲಕ ಆಶಾವದದ ಹೊಂಗಿರಣವನ್ನು ಹೊಮ್ಮಿಸುವುದೂ ಅತಿ ಪ್ರಯಾಸದ ಆದರೆ ಅಷ್ಟೇ ವಿಭಿನ್ನ ಹಾಗೂ ವಿಶಿಷ್ಟವಾದ ಕಾರ್ಯ ಎಂದು ಭಾವಿಸಿರುವೆ ನಾನು. ತಮಸ್ಸನ್ನೊಂದೇ ಕಾಣಲು ಹೋದರೆ ಏಣೋ ಕಾಣದು.. ಬರೀ ಅಂಧಕಾರವೇ ತುಂಬಿಕೊಂಡು ಎಲ್ಲವೂ ಶೂನ್ಯವೇ ಆಗುವುದು. ಒಂದು ಬೆಳಕಿನ ಕಿರಣವನ್ನಿಟ್ಟುಕೊಂಡರೆ ತಮಸ್ಸನ್ನೂ ಕಾಣಬಹುದು... ಹಾಗೇ ಅದನ್ನು ಹೊಡೆದೋಡಿಸಲು ಕೇವಲ ಒಂದು ಕಿರಣದ ಅವಶ್ಯಕತೆ ಮಾತ್ರ ಇರುವುದೆನ್ನುವದರ ಅರಿವೂ ನಮ್ಮದಾಗುವುದು...

* ಈ ಬರಹವನ್ನು ಬರೆಯಲು ಪ್ರೇರೇಪಿಸಿದ ನನ್ನ ಆತ್ಮೀಯ ಮಾನಸ ಸಹೋದರ ಮಧುಸೂದನ್‌ಗೆ ಧನ್ಯವಾದಗಳು :)

-ತೇಜಸ್ವಿನಿ ಹೆಗಡೆ.

ಗುರುವಾರ, ಮಾರ್ಚ್ 17, 2011

ಒಲವಿನ ಗೆಳೆಯನೆ ನಿನಗೆ ಕೈ ಮುಗಿವೆ...

ಪ್ರಿಯ ಗೆಳೆಯ,

Courtesy : http://www.flickr.com/photos/ 
ಹೇಗಿದ್ದೀಯಾ? ಈಗ ನಿನ್ನ ಅದೇ ಹಳೆಯ ಪ್ರಶಾಂತ ಶುಭ್ರ ನಗೆ ಚೆಲ್ಲುತ್ತಾ ಆರಾಮಾಗೇ ಇದ್ದೀಯೆಂದು ಗೊತ್ತು. ಹಾಗಾಗಿಯೇ ಈ ಪತ್ರ ಬರೆಯುವ ಧೈರ್ಯ ನಾನು ಮಾಡ್ತಿರೋದು. ಅಂದ ಹಾಗೆ ಅದೆಂಥಾ ಕೋಪವಯ್ಯ ನಿಂದು?!! ಅಲ್ಲ... ಇದೇ ಮೊದಲ ಸಲವೇನಲ್ಲಾ ನಾನು ನಿನ್ನ ಈ ರೂಪ ನೋಡ್ತಿರೋದು ಬಿಡು....ನಂಗೆ ನಿನ್ನ ಕೋಪದ, ಅದರ ಆರ್ಭಟದ ಅರಿವು ಈ ಹಿಂದೆಯೂ ಆಗಿತ್ತು. ಅದೇ ....ಆರು ವರುಷದ ಹಿಂದೆ ನಾನು ನನ್ನವನ ಕೈ ಹಿಡಿವ ಸಮಯದಲ್ಲೇ ನಿಂಗೆ ಉಕ್ಕಿತ್ತು ಭಯಂಕರ ಸಿಟ್ಟು. ಆದರೆ ಆವಾಗೇನೋ ನಿಂಗೆ ಕೋಪ ಬಂದಿದ್ದು ನಂಗೆ ಅಲ್ಪ ಸ್ವಲ್ಪ ಅರ್ಥವಾಗಿತ್ತು... ಈಗೇನಾಯ್ತಾಪ್ಪಾ?!! ಕಳೆದವಾರ ನನ್ನ ಮಂಗಳೂರಿನ ಗೆಳತಿ ಫೋನ್ ಮಾಡಿ "ನೋಡಿದೆಯೋ ನಿನ್ನ ಪ್ರಿಯ ಗೆಳೆಯನ ಮಂಗಾಟವ? ಎಂತಾ ಮಂಡೆ ಬೆಚ್ಚ ಆಗುವಂತಿದೆ ಮಾರಾಯ್ತಿ... ಇನ್ನೂ ಅವನ ಮೋಹ ನೀನು ಬಿಟ್ಟಿಲ್ಲವೆಂದರೆ ನಿಂಗೂ ಅದೇ ಗತಿ ಆಗುವುದುಂಟು ನೋಡು...ಮತ್ತೆ ನೀನು ಇಲ್ಲಿಗೆ ಬಂದಾಗ ಅವನನು ಕಾಣಲು ಹೋಗುತ್ತೇನೆ ಎಂದರೆ ಎಲ್ಲರೂ ನಿನ್ನ ಅಟ್ಟಿಸಿಕೊಂಡು ಬಂದು ಹೊಡೆದಾರು ಮಾರಾಯ್ತಿ...ಆಮೇಲೆ ನಾನು ಹೇಳಲಿಲ್ಲವೆಂದು ಹೇಳಬೇಡ..." ಎಂದು ಕಿಚಾಯಿಸಿದಾಗ ತುಂಬಾ ಬೇಸರವಾಗಿತ್ತು.. ಜೊತೆ ನಿನ್ನ ಮೇಲೆ ಅತಿ ಕೋಪ ಕೂಡ ಬಂದಿತ್ತು.

ಅಲ್ಲಾ.. ನಿಂಗೇನು ಬಂದಿತ್ತು ರೋಗ ಅಷ್ಟು ಪ್ರತಾಪ ತೋರ್ಸೋಕೆ? ಅದೂ ಎಲ್ಲರ ಕಣ್ಣಿಗೂ ಕಿಸುರಾಗೋ ಹಾಗೆ....! ಇಷ್ಟು ದಿನ ಎಲ್ರ ಮುಂದೆ ಹೆಮ್ಮೆಯಿಂದ ನಿನ್ನ ಗುಣಗಾನ ಮಾಡ್ತಿದ್ದೆ... ಈಗ ನಾನು ಹಾಗೆ ಮಾಡಿದ್ರೆ ಸುಮ್ನಿರ್ತಾರಾ? ಹೋಗ್ಲಿ... ನಿಂಗೇನು ಅಂಥ ಕಷ್ಟ ಬಂದಿದ್ದು? ಕೋಪ ಬಂದಿದ್ರೆ ತಡ್ಕೊಳೋಕೆ...ಇಲ್ಲಾ ಹೊರ ಹಾಕೋಗೆ ನೂರು ಮಾರ್ಗವಿದೆ ನಿನ್ನ ಹತ್ರ.. ಅದೆಲ್ಲಾ ಬಿಟ್ಟು ಸಿಕ್ಕ ಸಿಕ್ಕವ್ರ ಮೇಲೆಲ್ಲಾ ಹುಚ್ಚಾಪಟ್ಟೆಯಾಗಿ ಏರಿ ಹೋಗಿ ಹೊಡ್ದು ಹಾಕ್ದೆಯಲ್ಲಾ.... ನನ್ನ ಪ್ರತಿಷ್ಠೆ ಏನಾಗ್ಬೇಡ? ಒಪ್ಕೊಂಡೆ.. ನಾನು ನಿನ್ನ ಹುಚ್ಚಿಯಾದ್ರೆ ನೀನು ಅವಳ ಮಳ್ಳ ಅಂತ. ನಾನ್ಯಾವತ್ತೂ ಅದ್ಕೆ ವಿರೋಧ ತೋರ್ಸಿದ್ದೀನಾ? ನನ್ಜೊತೆನೂ ಅನ್ಯಾಯ ತುಂಬಾ ಸಲ ಆಗಿದೆಯಪ್ಪಾ... ಹಾಗಂತಾ ನಾನ್ಯವತ್ತೂ ಅವ್ಳ ರೀತಿ ನಿಂಗೆ ಚುಚ್ಚಿ ನಿನ್ನ ಪ್ರತಾಪ ತೋರ್ಸು ಅಂದಿಲ್ಲ... ಹಾಗಿರೋವಾಗ ಆ ಇಳಾ ಹುಚ್ಚುಚ್ಚಾಗಿ ಕುಣುದ್ಲು ಅಂತ ನೀನ್ಯಾಕೆ ಎಲ್ರ ಮೇಲೇರಿ ಹೋದ್ಯೋ?!!! ನಂಗೆಷ್ಟು ಬೇಜಾರಾಯ್ತು ಗೊತ್ತಾ? ಅತ್ಲಾಗೆ ನಿನ್ನ ಸಮರ್ಥಿಸಿಕೊಳ್ಳೋಹಾಗಿಲ್ಲ.. ಇತ್ಲಾಗೆ ನಿನ್ನ ಸಿಟ್ಟಿಗೆ ಬಲಿಯಾದ ಆ ಪಾಪದ ಜನ್ರ ಗೋಳು ನೋಡೋ ಹಾಗಿಲ್ಲ. ಅಲ್ವೋ ನಿಂಗೆ ಅನ್ಯಾಯ ಆಗಿದ್ರೆ ಸರಿ.... ಅದ್ಕಾದ್ರೂ ಸಿಟ್ಟು ತೋರ್ಸು... ಅದ್ನ ಬಿಟ್ಟು ಆ ಇಳಾ ಸಿಟ್ಟಿಗೆಲ್ಲಾ ನೀನು ಉರಿದೇಳೋದು ಬೇಡ....ತಿಳೀತಾ?

ಹ್ಮ್ಂ.... ನಿನ್ನೊಳಿದೆ ನನ್ನ ಮನಸು... ಎಂದೆಲ್ಲಾ ಹಾಡಿದ್ದೆ... ಹೊಗಳಿದ್ದೆ. ಈಗ ನೋಡಿದ್ರೆ ಎಲ್ರ ಮನಸೂ ನಿನ್ನೊಳಿದೆ. ಆದ್ರೆ ಅವ್ರು ಯಾರೂ ನಿನ್ನ ಕೊಂಡಾಡ್ತಾ ಇಲ್ಲಾ ತಿಳ್ಕೊ ಪೆದ್ದ. "ಹುಟ್ಟಿದ-ಹುಟ್ಟದ ನನ್ನೊಳಗಿನ ಕವಿತೆಯೂ ನೀ..." ಎಂದೂ ತಿಳ್ಕೊಂಡಿದ್ದೆ. ಆದ್ರೆ ಮೊನ್ನೆಯ ನಿನ್ನ ಭಯಂಕರ ರೂಪ ನೋಡಿ... ಒಂದು ಹನಿ ಕವಿತೆಯೂ ಹುಟ್ತಿಲ್ಲ ನೋಡು...! ನಿಜ ಹೇಳ್ಲಾ... ಇನ್ನು ಇದ್ಕೂ ಸಿಟ್ಟು ಮಾಡ್ಕೋಬೇಡ... ಮೊದ್ಲು ನಂಗೆ ನಿನ್ನ ಕಂಡ್ರೆ ಬರೀ ಪ್ರೀತಿ, ಸ್ನೇಹವಿತ್ತು. ಆದ್ರೆ ಈಗ ಸ್ವಲ್ಪ.... ಸ್ವಲ್ಪಕ್ಕಿಂತ ತುಸು ಹೆಚ್ಚೆ ಭಯವೂ ಕಾಡ್ತಿದೆ. ನಾಳೆ ನನ್ನ ಮೇಲಿನ ಸಿಟ್ಟಿಗೋ... ನನ್ನ ಮೇಲಿನ ಹೊಟ್ಟೆಕಿಚ್ಚಿಗೆ ಆ ಇಳಾ ನಿನ್ ಕಿವಿ ಚುಚ್ಚಿಯೋ... ನೀನು ನನ್ನೂರಿನ ಜನ್ರಿಗೂ ತೊಂದ್ರೆ ಕೊಟ್ರೆ? ಆವಾಗ ಮಾತ್ರ ನಾನು ಸುಮ್ನಿರೊಲ್ಲ ನೋಡು. 

ಅದ್ಯಾರೋ ಮೊನ್ನೆ ಹಾಡ್ಕೊತ್ತಿದ್ರಪ್ಪಾ "ಕಡಲ ಮೆಲೆ ಸಾವಿರರು ಮೈಲಿ ಸಾಗಿಯೂ, ನೀರಿನಾಳ ತಿಳಿಯಿತೇನೆ ಹಾಯಿದೋಣಿಗೆ...." ಎಂದು. ಅದು ಈಗ ನಿನ್ನ ನೋಡಿದ್ರೆ ಹೌದು ಅನ್ಸೊತ್ತೆ. ನಿನ್ನ ಅರ್ಥ ಮಾಡ್ಕೊಳೋಕೆ ನಂಗಿನ್ನೂ ಆಗಿಲ್ಲ ಅಂತ ದುಃಖ ಆಗ್ತಿದೆ. ಆದ್ರೂ ಅರ್ಥ ಮಾಡ್ಕೊಳೋಕೆ ಪ್ರಯತ್ನಿಸ್ತೀನಿ... ಹೇಗಿದ್ರೂ ಮುಂದಿನ ತಿಂಗ್ಳು ಬರ್ತಿದ್ದೀನಿ ಅಲ್ಲಿಗೆ... ಅಲ್ಲೀವರೆಗೆ ಹಾಯಾಗಿರು. ಆಮೆಲೆ ನಾ ತಗೋಳೋ ಕ್ಲಾಸ್‌ಗೆ ನೀನು ತಯಾರಾಗ್ಬೇಕಾಗೊತ್ತೆ! ಆದ್ರೆ ಮಾರಾಯಾ ಮೊದ್ಲೇ ಹೇಳ್ಬಿಡು.. ನಿನ್ನ ಗೆಳತಿ ಇಳೆ ಏನಾದ್ರೂ ಕಾರಾಮತಿನೋ ಭಾನಮತಿನೋ ಮಾಡೋರೀತಿಲಿ ಇದ್ದಾಳ ಅಂತ.. ಯಾವ್ದಕ್ಕೂ ಆಕೆ ಜೊತೆಯೂ ಒಂದು ಒಪ್ಪಂದ ಮಾಡ್ಕೊಂಡೇ ಬರೋದು ಲೇಸೇನೋ... ನನ್ನವ್ರಿಗೂ ಹೇಳಿ ಹೇಳಿ ಸಾಕಾಗಿದೆ... ನಿನ್ನ ಗೆಳತಿಗೆ ತುಂಬಾ ತೊಂದ್ರೆ ಕೊಡ್ಬೇಡಿ.. ಆಕೆಗೆ ಸಿಟ್ಟು ಬಂದ್ರೆ ನಿನ್ನ ಚುಚ್ಚಿ ಎಬ್ಬಿಸ್ತಾಳೆ ಅಂತ... ಕೇಳೋದೇ ಇಲ್ಲಾ ನೋಡು... ನಂಗೋ ಗೊಂದಲ.... ಅತ್ತ ಅವ್ರನ್ನ ಬಿಡ್ಲಾರೆ.. ಇತ್ತ ನಿನ್ನ ಮೋಹನೂ ಬಿಡ್ಲಾರೆ... ಹ್ಮ್ಂ.. ಅವ್ರೆಲ್ಲಾ ನಿನ್ಮುಂದೆ ಚಿಕ್ಕೋರಪ್ಪಾ.. ನೀನೇ ಸ್ವಲ್ಪ ಸುಧಾರಿಸ್ಕೊಂಡು ಹೋಗು. ಹೇಗಿದ್ರೂ ಈಗ ಸ್ವಲ್ಪ ಬುದ್ಧಿ ಕಲ್ಸಿದೀಯಾ ಅಂದ್ಕೋತೀನಿ.... ತಿದ್ಕೊಳೋರಾದ್ರೆ ತಿದ್ಕೊತಾರೆ. ಆದ್ರೆ ಅಲ್ಲಿವರೆಗಾದ್ರೂ ಸ್ವಲ್ಪ ಸಮಯ ಕೊಟ್ಟು ನೋಡು. ನಿನ್ಮೇಲೆ ನಾನಿಟ್ಟಿರೋ ಪ್ರೀತಿ ಮೇಲಾಣೆ... ಸ್ವಲ್ಪ ತಾಳ್ಮೆ ತಂದ್ಕೊ. ಹೆಚ್ಚು ಕಾಯ್ಸೊಲ್ಲ.. ಒಂದೇ ತಿಂಗ್ಳು.... ಬೇಗ ಬರ್ತೀನಿ... ನಿನ್ನ ಅಹವಾಲನ್ನೆಲ್ಲಾ ಖುದ್ದಾಗಿ ಕೇಳಿ ತಿಳ್ಕೊತೀನಿ. ನನ್ನ ಮೇಲಿನ ಪ್ರೀತಿಗಾದ್ರೂ ನೀನು, ನೀನಿದ್ದಲ್ಲೇ ಶಾಂತವಾಗಿ ಕಾಯ್ತಿರ್ತೀಯಾ ಅಂತ ಆಶಿಸುತ್ತಾ...

ಇತಿ,
ನಿನ್ನ ಪ್ರೀತಿಯ...

------
-ತೇಜಸ್ವಿನಿ ಹೆಗಡೆ.

ಮಂಗಳವಾರ, ಫೆಬ್ರವರಿ 8, 2011

ಬದುಕು ಪಗಡೆಯ ಆಟ... ದಾಳ ಅದರ ಸಾಹೇಬ

ಇತ್ತೀಚಿಗೆ ಈ ಪಗಡೆಯಾಟದ ಹುಚ್ಚು ತುಸು ಜಾಸ್ತಿಯೇ ಆಗುತ್ತಿದೆ... (ಲೂಡೋ). ಹಿಂದೆ ಚಿಕ್ಕವರಿದ್ದಾಗ ಊರಿಗೆ ಹೋದಾಗ ನಾನೂ ನನ್ನ ಚಿಕ್ಕಪ್ಪನ ಮಕ್ಕಳೆಲ್ಲಾ ಸೇರಿ "ಬಳೇವೋಡಾಟ" ಆಡುತ್ತಿದ್ದೆವು. ಈ ಆಟವೂ ಪಗಡೆಯಾಟದಂಥದ್ದೇ. ಮನೆಯ ಮೇಲಂಕಣದಲ್ಲಿ ಸಗಣಿಯಿಂದ ನುಣ್ಣಗೆ ಸಾರಿಸಿದ್ದ ಮೆತ್ತಿಯ ನೆಲದ ಮೇಲೆ ಸೀಮೆಸುಣ್ಣದಲ್ಲಿ ಪಗಡೆಯ ಮನೆ ಬರೆದು (ಲೂಡೋ ಬೋರ್ಡ್ ನಕ್ಷೆ) ೬ ಪಗಡೆಗಳನ್ನೇ ದಾಳವಾಗಿ ಉಪಯೋಗಿಸಿ ಆಡುತ್ತಿದ್ದೆವು. ಮನೆಯನ್ನು ನಡೆಸಲು ಕಾಳುಗಳಾಗಿ ಒಡೆದ ಬಳೆಗಳನ್ನು ಬಳಸುತ್ತಿದ್ದೆವು. ರಂಗು ರಂಗಿನ ಪುಟ್ಟ ಪುಟ್ಟ ಬಣ್ಣದ ಬಳೆಗಳನ್ನು ಉಪಯೋಗಿಸಿ ಆಡುತ್ತಿದ್ದ ಆ ದಿನಗಳ ನೆನಪು ಮಾತ್ರ ಹಚ್ಚ ಹಸಿರು.

ಒಂದೇ ಬಣ್ಣದ ನಾಲ್ಕು ಬಳೆಚೂರುಗಳನ್ನು ಇಟ್ಟುಕೊಂಡು, "ವಚ್ಚಿ(=ಒಂದು), ದುಕ್ಕಿ(=ಎರಡು)..." ಎಂದೆಲ್ಲಾ ದಾಳ ಹಾಕುತ್ತಾ... ಮುನ್ನೆಡೆಯುತ್ತಿರುವಾಗಲೇ ಹಿಮ್ಮೆಟ್ಟಿ ಬರುವ ಬೇರೆ ಮನೆಯ ಬೇರೆ ಬಣ್ಣದ ಬಳೆ ಚೂರುಗಳು ಸಮಯ ಸಾಧಿಸಿ ನನ್ನ ಬಳೆಚೂರನ್ನು ಹೊಡೆದು ಮತ್ತೆ ಪ್ರಾರಂಭಕ್ಕೇ ತಂದು ನಿಲ್ಲಿಸಿ ಮುನ್ನೆಡೆವಾಗ ಮಾತ್ರ ಅಸಾಧ್ಯ ಕೋಪವೇ ಬಂದು ಬಿಡುತ್ತಿತ್ತು. ಆದರೂ ಮತ್ತೆ ಯತ್ನವ ಮಾಡಿ ಆರು ಬೀಳಿಸಿ ಹೊರ ಬಂದು ಹೊಡೆದವರಿಗೇ ಮತ್ತೆ ಹೊಡೆತ ಕೊಟ್ಟು ಮುನ್ನುಗ್ಗಿ ಅಂತಿಮವಾಗಿ ಮನೆ ತಲುಪಿದಾಗ "ಅಬ್ಬಾ! ಮಲಗ್ದಿ.." ಅನ್ನೋ ನಿರುಮ್ಮಳತೆಯನ್ನು ಮಾತ್ರ ಈವರೆಗೂ ಯಾವುದರಲ್ಲೂ ಪಡೆದಿಲ್ಲ!:)

ಅಂದಿನ ಬಳೆವೋಡಾಟ, ಪಗಡೆಯಾಟ, ಇಂದಿನ ಲೂಡೋ ರೂಪ... ಎಲ್ಲವೂ ಒಂದೇ. ಅದೇ ಆಟ, ಅದೇ ಕಾಳುಗಳು, ಒಂದರಿಂದ ಆರು ಚುಕ್ಕಿಗಳನ್ನೊಳಗೊಂಡ ದಾಳ... ಹಿಮ್ಮೆಟ್ಟಿ ಸಾಗುವಾಗ ನಡುವೆ ಸಿಗುವವರ ಕಾಳುಗಳನ್ನು ಹೊಡೆದು ಮುನ್ನುಗ್ಗುವಿಗೆ, ಹೊಡೆತ ತಿಂದು ಹಿಮ್ಮೆಟ್ಟುವಿಕೆ... ಎಲ್ಲವೂ ಅದೇ. ಆದರೆ ಬಾಲ್ಯದ ಆ "ಮಲಗ್ದಿ.." ಅನ್ನೋ ನಿರುಮ್ಮಳತೆಯ ಭಾವ ಮಾತ್ರ ಹೆಚ್ಚು ಕಾಲ ಬಾಳುವಂಥದ್ದಲ್ಲ.

ಕೆಲ ದಿನಗಳಿಂದ ನಾವೂ ಈ ಲೂಡೋ(ಪಗಡೆಯಾಟ) ಆಟವನ್ನು ದಿನವೂ ಆಡುತ್ತಿದ್ದೇವೆ. ಪುಟ್ಟಿಗಂತೂ ಒಂದು ಬಿದ್ದರೂ, ನಾಲ್ಕು ಬಿದ್ದರೂ ಆರೇ ಬೇಕೆಂಬ ಹಠ. ಅದಕ್ಕಾಗಿ ಚೆನ್ನಾಗಿ ಆರನ್ನೇ ಆರಿಸಿ ಇಟ್ಟು ಬಿಡುತ್ತಾಳೆ. ಒಪ್ಪಿಕೊಳ್ಳುವ ಅನಿವಾರ್ಯತೆ ನಮ್ಮದು...:) ಅವಳಿಗೆ ಸೋಲಿನ ಪರಿಭಾಷೆ ಗೊತ್ತಿಲ್ಲ... (ಸದ್ಯ ಗೊತ್ತಾಗುವುದೂ ಬೇಡ)... ಹಾಗಾಗಿ ಎಲ್ಲಾ ಆಟದಲ್ಲೂ ಗೆಲುವು ಅವಳದೇ.

ಬದುಕೂ ಇದೇ ತರಹ ಪ್ರತಿ ಸೋಲಿನಲ್ಲೂ ಗೆಲುವನ್ನೇ ಕಾಣುಸಿವಂತಿದ್ದರೆ.... ಎಲ್ಲಾ ಸಲವೂ ದಾಳದಲ್ಲಿ ಆರೇ ಬೀಳುವಂತಿದ್ದರೆ.... ನಾಲ್ಕೂ ಕಾಳುಗಳೂ ಸರಾಗವಾಗಿ, ಹೊಡೆತವನ್ನೇ ತಿನ್ನದೇ ಸಾಗಿ, ಮನೆಯನ್ನು ಮುಟ್ಟಿ ಮಲಗುವಂತಿದ್ದರೆ.... - ಊಹೂಂ... ಇಲ್ಲಿ ಮಾತ್ರ ಈ ‘ರೆ’ಗಳು ಇಷ್ಟವಾಗವು. ಆಟದ ಮಜವಿರುವುದು ಸೋಲಿನಲ್ಲಿ.. ಸೋತು ಗೆಲ್ಲುವುದರಲ್ಲಿ.... ಹೊಡೆತ ತಿನ್ನುವುದರಲ್ಲಿ.. ತಿಂದು ಮತ್ತೆ ತಿರುಗಿ ಬರುವುದರಲ್ಲಿ. ಎಲ್ಲವನ್ನೂ ಜಯಸಿ ಆಮೇಲೆ ಮನೆ ಸೇರುವುದರಲ್ಲಿರುವ ಸಂತೋಷ ಆ ‘ರೆ’ಗಳಲ್ಲಿಲ್ಲ.

ಪಗಡೆಯಾಟದಂತೇ ಇಲ್ಲೂ... ಅಂದರೆ ಬದುಕಲ್ಲೂ ಯಾರೂ ಮಿತ್ರರಲ್ಲ.. ಯಾರೂ ಶತ್ರುವಲ್ಲ. ಆ ಕ್ಷಣಕ್ಕೆ ನಮ್ಮನ್ನು ಹೊಡೆಯದವ.. ನಮ್ಮನ್ನು ಸುಮ್ಮನೇ ಬಿಟ್ಟು ದಾಟಿದವ ಮಿತ್ರ... ಹೊಡೆದವ... ಹೊಡೆಯಲೆಂದೇ ಹಿಂದೆ ಬಿದ್ದವ ಮಾತ್ರ ಶತ್ರು. ಎಲ್ಲಾ ಭಾವಗಳ ಮೇಲಾಟ. ಆರಂಭದಿಂದ ಅಂತ್ಯದವರೆಗೂ ಅನಿಶ್ಚಿತತೆಯ, ಅನುಮಾನದ, ಅದೃಷ್ಟದ ಆಟ. ಕೇವಲ ದಾಳ ಮಾತ್ರ ಅದರ ಗತಿಯನ್ನು, ಗೆಲುವಿನ ರೂಪವನ್ನು ಕಾಣಿಸಬಹುದು. ಒಂದು ಬಿದ್ದರೆ ಮನೆಯನ್ನೂ ಸೇರಬಹುದು.. ಮುಂದಿದ್ದವರನ್ನೂ ಹೊಡೆಯಬಹುದು ಹಾಗೇ ನಮಗೂ ಹೊಡೆತ ನೀಡಬಹುದು. ಆದರೆ ಆರು ಮಾತ್ರ ಸದಾ ಮುನ್ನೆಡೆಸುತ್ತಲೇ ಇರುತ್ತದೆ.. ಹೊಡೆತ ಕೊಟ್ಟರೂ ಮತ್ತೆ ಹೊರ ಬರಲೂ ಕಾರಣವಾಗಿರುತ್ತದೆ. ಅಂತಹ ಆರು ಚುಕ್ಕೆಯ ಬೀಳುವಿಕೆಗಾಗಿ ಆ ದಾಳದ ಮೊರೆ ಹೋಗುವುದು ಮಾತ್ರ ನಮ್ಮ ಕೈಲಿದೆ. ಬಿದ್ದರೆ ಮುಂದೆ.. ಬೀಳದಿದ್ದರೆ ಇನ್ನೊಂದು ಅವಕಾಶಕ್ಕಾಗಿ ನಿರೀಕ್ಷೆ ಅಷ್ಟೇ!

ಒಮ್ಮೆ ಮುಂದಿದ್ದವ ಸಂಪೂರ್ಣವಾಗಿ ಪುನರಾರಂಭ ಮಾಡುವಂತಾಗಬಹುದು. ತೀರಾ ಹಿಂದೆ ಬಿದ್ದವ ಒಮ್ಮೆಲೇ ಮುನ್ನುಗ್ಗಿ ಮನೆ ಸೇರುವಂತಾಗಲೂ ಬಹುದು. ಎಲ್ಲವೂ ಆ ಸೂತ್ರಧಾರನ ಕೈಲಿದೆ. ಆತನೇ ದಾಳ... ನಾವೆಲ್ಲಾ ಕಾಳುಗಳು(ಬಳೆವೋಡುಗಳು), ಈ ನಮ್ಮ ಬದುಕೇ ಪಗಡೆಯ ಮನೆ.... ಪಯಣ ಮನೆಯ ಕಡೆಗೆ... ವಚ್ಚಿ, ದುಕ್ಕಿ, ಮೂರು, ಆರು... ಎನ್ನುತ್ತಾ ಸಾಗುವುದೇ ಜೀವನ.

-ತೇಜಸ್ವಿನಿ ಹೆಗಡೆ

Pics Courtesy : 1. http://www.bombayharbor.com/Product/28920/M_Folding_Ludo_Game.html
                 2. http://www.alibaba.com
                 3. http://www.grand-illusions.com 

ಶುಕ್ರವಾರ, ಆಗಸ್ಟ್ 27, 2010

ನಿನ್ನೊಳಿದೆ ನನ್ನ ಮನಸು...

ಚಿತ್ರ ಕೃಪೆ: www.yobserver.com/reports/10015111.html

ಈ ಸಂಜೆ ಎಂದಿನಂತಿಲ್ಲ ಎಂದೆನಿಸುತ್ತಿದೆ ನನಗೆ. ಏನೋ ಕಾತುರ....ಅರಿಯದ ತಳಮಳ. ಅದೆಷ್ಟು ತಿಂಗಳುಗಳಾದವೋ ಆತನನ್ನು ನಾನು ಕಾಣದೇ....ಮಾತನಾಡಿಸದೇ....ಸ್ಪರ್ಶಿಸದೇ. ಇಂದು ಅವನ ಭೇಟಿ ನಿಶ್ಚಿತ....ಆತನಿದ್ದಲ್ಲಿಗೇ ಸಾಗುತಿದೆ ನನ್ನ ಪಯಣ. ಗಮ್ಯ ದೂರವೇನಿಲ್ಲ...ಆದರೂ ಪ್ರತಿ ನಿಮಿಷವೂ ಅಸಹನೆಯನ್ನು ತರುತ್ತಿದೆ. ಉದ್ವೇಗದಿಂದ ನನ್ನ ಹಣೆಯ ಮೇಲೆ ಹೊಳೆಯುತಿದ್ದ ಸ್ವೇದ ಬಿಂದುಗಳನ್ನು ಕರಗಿಸಲು, ಮಂದವಾಗಿ ಬೀಸುತ್ತಿದ್ದ ತಂಗಾಳಿ ಕೂಡ ಸೋಲುತಿದೆ. ಅಗೋ... ಅಲ್ಲೇ ದೋರದಲ್ಲಿ ಕಾಣುತ್ತಿದ್ದಾನೆ...ಅವನೇ ಹೌದೋ ಅಲ್ಲವೋ? ಇಲ್ಲಾ ಈ ಹಾಳಾದ ರವಿಯ ಪ್ರಖರತೆಯಿಂದ ಉಂಟಾದ ಮರೀಚಿಕೆಯೋ...? ಮನಸೊಳಗೇ ಶಪಿಸುತ್ತಲೇ ಮತ್ತೂ ಕಣ್ಗಳನ್ನು ಹಿರಿದಾಗಿಸಿ ನೋಡಿದೆ. ಸಂಶಯವೇ ಇಲ್ಲ... ಇದು ಅವನೇ. ಕಡುನೀಲ ಬಣ್ಣದ ನಡುವೆ ಬಿಳಿ ಬಣ್ಣದ ಗೆರೆಗಳಿರುವ ಶರ್ಟ್ ತೊಟ್ಟು, ಶುಭ್ರವಾಗಿ ನಗುತ್ತಾ ನನಗಾಗಿ ಕಾಯುತ್ತಿರುವವನನ್ನು ಅಷ್ಟು ದೂರದಿಂದಲೇ ನೋಡಿ ಸಂತಸ ತಡೆಯಲಾಗಲಿಲ್ಲ. ಹಾರಿ ಆತನ ತೆಕ್ಕೆಯೊಳಗೆ ಸೇರಬೇಕೆಂದಿದ್ದ ನನ್ನ ಏನೋ ಜಗ್ಗಿದಂತಾಯಿತು. ಇಷ್ಟು ದಿನ ಕಾಣಲಾಗದಿದ್ದ ತವಕ, ಅಸಹನೆ, ಅರಿಯದ ಮುಜುಗರವನ್ನು, ಮುನಿಸನ್ನು ನನ್ನೊಳಗೆ ತುಂಬಲು, ಅವನ ಬಳಿಯಲ್ಲೇ.....ಆದರೆ ತುಸು ದೂರ ಸರಿದು ಕುಳಿತೆ.

ನನ್ನ ಈ ಪರಿಯನ್ನು ಕಂಡೋ ಏನೋ ಅವನು ಪಕ ಪಕನೆ ನಗುತ್ತಲೇ ಇದ್ದ....ಆಗೀಗ. ಆತನ ಅದೇ ಶುಭ್ರ ಬಿಳಿ ಹಾಲಿನಂತಹ ನಗುವ ಕಂಡಾಗಲೆಲ್ಲಾ ನನ್ನೊಳಗೆ ಸಂಚಲನ. ಸಾಕಿನ್ನು ಈ ಬಿಗುಮಾನ ಈಗಲೇ ಹೋಗಿ ಹಿಡಿಯಲೇ ಆ ನಗುವ ಎನ್ನುವಷ್ಟು ತವಕ. ಆತ ನನ್ನ ಸತಾಯಿಸುತ್ತಿರುವನೋ ಇಲ್ಲಾ ನಾನೇ ನನ್ನ ಸತಾಯಿಸುತ್ತಿರುವೇನೋ ಅರಿಯದ ಅಯೋಮಯ ಸ್ಥಿತಿಯಿಂದ ಅಸಹನೆ ಹೆಚ್ಚಾಗುತ್ತಿತ್ತು. ಬರುವುದಿದ್ದರೆ ಬಳಿ ಅವನೇ ಮೊದಲು ಬರಲೆಂಬ ನನ್ನ ಎಂದಿನ ಹಠಕ್ಕೇ ಮಣಿದಿರಬೇಕು... ಆತನೇ ಮೆಲ್ಲ ಮೆಲ್ಲನೆ ಅದೇ ನಗೆಯ ತುಳುಕಿಸುತ್ತಾ ಹತ್ತಿರ ಬರತೊಡಗಿದ. ಕಿರುಗಣ್ಣಿನಂದಲೇ ಅವನನ್ನು ನೋಡುತ್ತಾ, ತಡೆಯಲಾಗದೇ ಸೋತು....ಕಿರುನಗೆಯ ಮೂಲಕ ನಾನೂ ಸ್ವಾಗತಿಸಿದೆ. ಇದರಿಂದ ಹುಮ್ಮಸ್ಸು ಪಡೆದ ಆತ ತುಸುವೇ ನನ್ನ ಕಾಲ್ಬೆರಳುಗಳನ್ನು ಸೋಕಿ ಮತ್ತೆ ಹಿಂದೆ ಸರಿದು ಬಿಟ್ಟ. ಈಗ ನನ್ನೊಳಗೂ ಅವನದೇ ಹುಚ್ಚು ನಗು ತುಂಬಿತು. ಇಬ್ಬರೂ ಮನಸೋ ಇಚ್ಛೆ ನಕ್ಕುಬಿಟ್ಟೆವು. ಅಗೀಗೊಮ್ಮೆ ಕೇವಲ ಕಾಲ್ಬೆರುಗಳನ್ನಷ್ಟೇ ಸ್ಪರ್ಶಿಸಿ ದೂರ ಸರಿಯುತ್ತಿದ್ದ ಆತನ ಹೊಸ ಪರಿಯಿಂದ ನನ್ನ ಮನದ ತುಂಬೆಲ್ಲಾ ನೂರು ನವಿಲುಗಳ ನರ್ತನ!

"ಇವತ್ಯಾಕೆ ಇಷ್ಟೊಂದು ಮುನಿಸು ನನ್ಮೇಲೆ ತೇಜು?" ಮೌನ ಮುರಿದಿತ್ತು ಅವನ ಶಾಂತ ಗಂಭೀರ ವಾಣಿ.

"ಹೂಂ ಮತ್ತೆ... ಎಷ್ಟು ತಿಂಗ್ಳಾದ್ವು... ನಾವಿಬ್ರೂ ಹೀಗೆ ಸೇರದೇ...ನಿನ್ನ ನೋಡ್ದೇ ನಂಗೆ ತುಂಬಾ ಬೇಜಾರು ಬಂದಿತ್ತು ಗೊತ್ತಾ?" ನನಗೂ ಮೌನ ಸಾಕಾಗಿತ್ತು.

"ಆಹಾ.... ಇದಪ್ಪಾ ವರಸೆ.... ನಾನು ನೀನಿದ್ದಲ್ಲಿಗೇ ಬರೋಕೆ ಆಗೊತ್ತಾ? ಅದು ಅಸಾಧ್ಯ ಅಂತ ನಿಂಗೂ ಗೊತ್ತು. ನಾನೇನಾದ್ರೂ ಅಲ್ಲಿಗೆ ಬಂದ್ರೆ...ಗತಿ ಅಷ್ಟೇ! ಹಾಗಿದ್ಮೇಲೆ ನೀನೇ ತಾನೇ ಇಲ್ಲಿಗೆ ಬರೋದು? ನೀನು ಯಾವಾಗ್ಬೇಕಾದ್ರೂ ಬಾ....ನಾನಿಲ್ಲೇ ನಿನ್ನ ಸ್ವಾಗತಿಸ್ತೀನಿ ಅಂತ ಪ್ರಾಮಿಸ್ ಮಾಡಿದ್ದೆ ನೆನ್ಪಿದ್ಯಾ? ಹಾಗಿದ್ಮೇಲೆ ಯಾಕೆ ನೀನೂ ಬಂದಿಲ್ಲ? ಸಿಟ್ಟು ನಾನು ಮಾಡ್ಕೋಬೇಕು ನೋಡು ಈಗ.." ಬಾಣ ನನ್ನೆಡೆ ತಿರುಗಿದ್ದು ಕಂಡು ಸ್ವಲ್ಪ ಮೆತ್ತಗಾದೆ.

"ಹೌದಪ್ಪಾ.. ಎಲ್ಲಾ ನಂದೇ ತಪ್ಪು ಸರೀನಾ... ನೀನು ನನ್ನ ಹತ್ರ ಬರೋಕೆ ಆಗೊಲ್ಲಾ ಆಯ್ತು.... ಆದ್ರೆ ನಾನೂ ಮನ್ಸಾದಾಗೆಲ್ಲಾ ನಿನ್ನ ಹತ್ರ ಬರೋಕೆ ಆಗೊಲ್ಲ ಅನ್ನೋದೂ ನಿಂಗೆ ಗೊತ್ತಿರ್ಬೇಕು. ನನ್ನವರ, ಮನೆಯವರ ಕಣ್ತಪ್ಪಿಸಿ ಇಲ್ಲಿಗೆ ಬರೋದು ಅಂದ್ರೆ ಎಷ್ಟು ಕಷ್ಟ ಗೊತ್ತಾ? ಇವತ್ತಾದ್ರೂ ನಾನು ಎಷ್ಟು ಕಷ್ಟ ಪಟ್ಟು ಎಲ್ಲರಿಂದ ತಪ್ಪಿಸಿಕೊಂಡು ಇಲ್ಲಿಗೆ ಬಂದಿದ್ದೀನಿ... ನಾನೇನಾದ್ರೂ ಒಬ್ಳೇ ಇಲ್ಲಿಗೆ ಹೀಗೆ ನಿನ್ನ ನೋಡೋಕೆ ಬಂದಿದ್ದು ನನ್ನವ್ರಿಗೆ ಗೊತ್ತಾದ್ರೆ.... ಅಷ್ಟೇ! ನಿಂಗೇನೂ ಮಾಡೊಲ್ಲ... ಮಾಡೋಕೂ ಆಗೊಲ್ಲ ಬಿಡು... ಆದ್ರೆ ನನ್ಗತಿ? ಆದ್ರೂ ಬಂದಿದ್ದೀನಿ ನೋಡು..." ನನಗೇ ನನ್ನ ಸಾಹಸ ಕಂಡು ಹೆಮ್ಮೆ ಮೂಡಿತು.

"ತುಂಬಾ ಸಂತೋಷ ತೇಜು.... ಅದ್ಕೇ ನಂಗೆ ನೀನು ಅಂದ್ರೆ ಎಲ್ರಿಗಿಂತಲೂ ಪಂಚಪ್ರಾಣ. ನೀನು ಎಲ್ಲಿದ್ರೂ, ಹೇಗಿದ್ರೂ ನನ್ನ ಮರೆಯೊಲ್ಲ. ಬೇರೆಯೋರಿಗೆಲ್ಲಾ ನಾನು ಏನೂ ಅಂತ ಗೊತ್ತಿಲ್ಲ... ಆದ್ರೆ ನಿಂಗೆ ಮಾತ್ರ ನಾನಂದ್ರೆ ತುಂಬಾ ಮೆಚ್ಚು ಅಂತ ಚೆನ್ನಾಗಿ ಗೊತ್ತು..." ಅಭಿಮಾನ ಅವನ ಮೊಗದತುಂಬಾ ಬೆಳಗುತಿತ್ತು. ನನ್ನೊಳಗೇನೋ ಸಾರ್ಥಕತೆ.

"ಹ್ಮ್ಂ.... ಇಷ್ಟೆಲ್ಲಾ ಗೊತ್ತಿದ್ದೋನು.. ಅಪರೂಪಕ್ಕೆ ಬರ್ತೀನಿ ಅಂತ ಗೊತ್ತಿದ್ದೂ ಯಾಕೆ ಬರೀಕೈಲಿ ಬಂದೆ? ಇಲ್ಲೊಂದೇ ಅಲ್ದೇ ವಿದೇಶಗಳಿಗೂ ಮುತ್ತು, ಹವಳಗಳನ್ನ ಎಕ್ಸ್‌ಪೋರ್ಟ್ ಮಾಡ್ತೀಯಂತೆ.... ನಂಗೇ ಅಂತ ಅಟ್‌ಲೀಸ್ಟ್ ಒಂದು ಪರ್ಲ್ ಸೆಟ್ ತರೋಕೆ ಆಗ್ಲಿಲ್ವಾ? ಬರೀ ಕಂಜೂಸು ನೀನು" ನನ್ನ ಛೇಡಿಸುವಿಕೆ ಅವನಿಗೇನೂ ಹೊಸತಲ್ಲ.

"ಛೇ... ಏನು ಮಾತಾಡ್ತೀಯಮ್ಮಾ.... ಅಷ್ಟೊಂದು ದೊಡ್ಡ ಬಿಸ್ಸಿನೆಸ್ ಮ್ಯಾಗ್ನೆಟ್ ಆಗಿರೂ ನಾನೇ ನಿನ್ನೆದುರಿಗೆ ಸಲಾಮು ಹೊಡೀತಿದ್ದೀನಿ... ಹಾಗಿರೋವಾಗ ನೀನು ಯಕಃಶ್ಚಿತ್ ಪರ್ಲ್ ಸೆಟ್ ಕೇಳೋದಾ? ಇಡೀ ಮುತ್ತು, ಹವಳದ ಮೆನುಫ್ಯಾಕ್ಚರಿಂಗ್ ಫ್ಯಾಕ್ಟರಿಯೇ ನಿಂದು ಸರೀನಾ?" ಅವನ ನಾಟಕೀಯತೆಯೂ ನಂಗೆ ಹೊಸತಲ್ಲ.

"ಆಹಾ... ಇದಕ್ಕೇನೂ ಕಮ್ಮಿಯಿಲ್ಲ.... ಹೋಗ್ಲಿ ಬಿಡು. ನಾನು ಅವ್ರ ಹತ್ರ ಕೊಡ್ಸೋಕೆ ಹೇಳ್ತೀನಿ... ನೀನಿಲ್ದೇ ಹೋದ್ರೆ ನಂಗೆ ಅವ್ರಿಲ್ವಾ? ನಿಂದೇನು ಮಹಾ..."ಎಂದು ಧೈರ್ಯ ಮಾಡಿ ಕಟಕಿಯೇ ಬಿಟ್ಟೆ. ಇವನ ಹುಚ್ಚು ಕೋಪದ ಅರಿವು ನೋಡಿ ಬಲ್ಲೆ ನಾನು. ಆದರೂ ಇಂದು ಬಾಯಿ ತಪ್ಪಿ ಆಡಿಬಿಟ್ಟಿದ್ದೆ. ತುಸು ಅಧೈರ್ಯದಿಂದ ಅವನೆಡೆ ನೋಡಿದರೆ ಅವನೊಳಗೆ ಅದೇ ಶಾಂತ ಶುಭ್ರ ನಗು. ಅಬ್ಬಾ! ಬದುಕಿದೆ ಬಡಜೀವವೇ ಎಂದೆನಿಸಿತು.

"ಆಯ್ತಮ್ಮಾ.. ನೀನು ನಿನ್ನ ಆ ಅವರ ಹತ್ತಿರನೇ ತಗೋ.. ನಾನು ಕೊಟ್ರೂ ಅವ್ರು ಕೊಟ್ರೂ ಒಂದೇ. ಅವ್ರು ಕೊಡೋ ಮುತ್ತಿನ ಸೆಟ್‌ನಲ್ಲೂ ನನ್ನ ಫ್ಯಾಕ್ಟರೀ ಮುತ್ತುಗಳೇ ಇರೋದು ತಿಳ್ಕೋ..." ಅವನ ಈ ವರಸೆಗೆ ನಾನು ಸುಸ್ತು.

"ಹಂ....ಅಂತೂ ನೀನು ಕೊಡೊಲ್ಲ ಅಂತಾಯ್ತು. ಸರಿ.... ನಂಗೇನೂ ನಿನ್ನ ಆಸ್ತಿ ಬೇಡಪ್ಪಾ... ನನ್ನವ್ರು ನಂಗಾಗಿ ಏನು ಬೇಕಿದ್ರೂ ಕೊಡ್ತಾರೆ.." ಮೊದಲಿನ ಧೈರ್ಯದಿಂದಲೇ ಇರಿದಿದ್ದೆ.

"ಗೊತ್ತು... ನಿಂಗೆ ನನ್ನಷ್ಟೇ... ಅಲ್ಲಲ್ಲಾ... ನನಗಿಂತ ಒಂದು ಪಟ್ಟು ಹೆಚ್ಚು ನಿನ್ನ ಆ ಅವರು ನಿನಗಿಷ್ಟ ಎಂದು. ಅದ್ರ ಬಗ್ಗೆ ನಾನೆಂದೂ ಆಕ್ಷೇಪ ಎತ್ಲೇ ಇಲ್ಲ....ಆದ್ರೂ ನೀನು ನನ್ನ ಮರೀದೇ ನನಗಾಗಿ ಬರ್ತೀಯಲ್ಲಾ ಅದೇ ನಂಗೆ ಸಾಕು..." ಈ ಆತ್ಮೀಯತೆಯೇ, ನಿಸ್ವಾರ್ಥ ಪ್ರೀತಿಯೇ ಪ್ರತಿಸಲ ನನ್ನ ಇವನ ಕಡೆ ಸೆಳೆಯುವುದು.

"ಪ್ಲೀಸ್.. ನಂಗೋಸ್ಕರ.... ನನ್ನಿಷ್ಟದ ಆ ಹಾಡನ್ನು ಹಾಡ್ತೀಯಾ..?" ಏಕೋ ಆ ಭಾವಗೀತೆಯನ್ನು ಕೇಳಬೇಕೆನಿಸಿತು ಆ ಕ್ಷಣ.

"ನೀ ಕೇಳೊದು ಹೆಚ್ಚೋ..ನಾನು ಹಾಡೋದೋ... ಆದ್ರೆ ಪೂರ್ತಿ ಹಾಡು ಮರ್ತು ಹೋಗಿದೆ.... ಒಂದು ಚರಣ ನೆನ್ಪಿದೆ.... ಅಷ್ಟೇ ಹಾಡ್ತೀನಿ.. ಏನದು... ಹಾಂ..

ಸಾಗರನ ಹೃದಯದಲಿ ರತ್ನಪರ್ವತಮಾಲೆ
ಮಿಂಚಿನಲಿ ಮೀವುದಂತೆ
ತೀರದಲಿ ಬಳುಕುವಲೆ ಕಣ್ಣಚುಂಬಿಸಿ ಮತ್ತೆ
ಸಾಗುವುದು ಕನಸಿನಂತೆ

ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ
ನಿನ್ನೊಳಿದೆ ನನ್ನ ಮನಸು
ಹುಣ್ಣಿಮೆಯ ರಾತ್ರಿಯಲಿ ಉಕ್ಕುವುದು ಕಡಲಾಗಿ
ನಿನ್ನೊಲುಮೆ ನನ್ನ ಕಂಡು
ನಿನ್ನೊಳಿದೆ ನನ್ನ ಮನಸು.....

ಮಂದವಾಗಿದ್ದ ಗಾಳಿ ಈಗ ಸ್ವಲ್ಪ ಸ್ವಲ್ಪವಾಗಿ ವೇಗ ಪಡೆಯುತ್ತಿತ್ತು. ರವಿಗೂ ಶಶಿಗೂ ಬಾನಂಚಿನಲ್ಲಿ ಯುದ್ಧವಾಗುವ ಸಮಯ. ಹಗಲ ಸಾಮ್ರಾಜ್ಯವನ್ನು ಕೊನೆಗೊಳಿಸಿ, ಚಂದ್ರಮನಿಗೆ ಪಟ್ಟಾಭಿಷೇಕ ಮಾಡಿ, ತನ್ನ ರಾಜ್ಯ ಪ್ರತಿಷ್ಠಾಪನೆಗೆ ಇರುಳು ನಕ್ಷತ್ರಗಳ ಸೈನ್ಯದೊಂದಿಗೆ ಬರುವ ಹೊತ್ತು. ಇವನ ಸಾಮೀಪ್ಯ, ಈ ಹಾಡು, ನನ್ನ ಆ ಅವರ ನೆನಪು.... ನನ್ನೊಳಗೆ ಹೊಸ ಆಹ್ಲಾದತೆಯನ್ನು ತುಂಬಿತ್ತು. ಅದು ಹೇಗೋ ಮನದೊಳಗೇ ನಾನು ಗುನಗುನಿಸುತ್ತಿದ್ದ ನನ್ನಿಷ್ಟದ ಇನ್ನೊಂದು ಭಾವಗೀತೆ ತುಟಿಯ ದಾಟಿ ಹೊರ ಬರತೊಡಗಿತು...

ಕಾಣದ ಕಡಲಿಗೆ ಹಂಬಲಿಸಿದೆ ಮನ
ಕಾಣಬಲ್ಲನೆ ಒಂದು ದಿನ ಕಡಲನು
ಕೂಡಬಲ್ಲನೆ ಒಂದು ದಿನ

ಸಾವಿರ ಹೊಳೆಗಳು ತುಂಬಿ ಹರಿದರೂ
ಒಂದೇ ಸಮನಾಗಿಹುದಂತೆ
ಸುನೀಲ ವಿಸ್ತರ ತರಂಗ ಶೋಭಿತ
ಗಂಭೀರಾಂಬುಧಿ ತಾನಂತೆ
ಮುನ್ನೀರಂತೆ ಅಪಾರವಂತೆ
ಕಾಣಬಲ್ಲೆನೇ ಒಂದು ದಿನ
ಅದರೊಳು ಕರಗಲಾರನೇ ಒಂದು ದಿನ....

ಇನ್ನೂ ಹಾಡುತ್ತಿದ್ದೆನೋ ಏನೋ...ಪಕ್ಕದಲ್ಲಿದ್ದ ಅವನ ಸಿಟ್ಟಿನ ನಿಟ್ಟುಸಿರು ಕ್ರಮೇಣ ಬುಸುಗುಡ ತೊಡಗಿದ್ದು ನನ್ನ ಎಚ್ಚರಿಸಿತು. ಅವನೆಡೆ ನೋಡಿದರೆ ಮೊಗದ ಬಣ್ಣ ಕಡುಗಪ್ಪಾಗಿತ್ತು!

"ಏನಾಯ್ತು? ಯಾಕೋ ಸಿಟ್ಟು ಬಂದಹಾಗಿದೆ ತಮಗೆ!" ನನ್ನೊಳಗೇನೋ ತಳಮಳ.

"ಮತ್ತೆ.. ನೀನು ಹಾಡಿದ್ದು ಸರೀನಾ? ಯಾರೋ ಕಾಣದ ಕಡಲನ್ನು ಸೇರೋಕೆ.. ನೋಡೋಕೆ ನಿನ್ನ ಮನ ಇಷ್ಟ ಪಡೋದು ಅಂದ್ರೆ ಏನು? ನಿನ್ನೆದುರಿಗೇ ನಾನು ಕಾಣ್ತಿರೋವಾಗ... ಕಾಣದ ಕಡಲಿಗೆ ಹಂಬಲವಂತೆ... ಸುನೀಲವಂತೆ....ಗಂಭೀರವಂತೆ...ಕಾಣದೇನೇ ಅದು ಹೇಗೆ ಹೊಗಳ್ತಿದ್ದೀಯಾ ನೋಡು....ಶುದ್ಧ ತರ್ಲೆ....ನಿಂಗೆ ಮಾಡ್ತೀನಿರು ಇವತ್ತು..."ಎಂದವನೇ ಬೀಸಿ ನನ್ನ ಕೆನ್ನೆಗೆ ತನ್ನ ದೊಡ್ಡ ತೆರೆಯಿಂದ ಹೊಡೆದಾಕ್ಷಣ ಧಿಗ್ಗನೆದ್ದು ಕುಳಿತಿದ್ದೆ.

ವಾಸ್ತವಕ್ಕೆ ಮರಳಲು ಕೆಲನಿಮಿಷಗಳೇ ಬೇಕಾದವು. ನನ್ನ ಮೆಚ್ಚಿನ ಸಾಗರದ ಸವಿಗನಸಿನಿಂದ ನನ್ನೆಬ್ಬಿಸಿದ ಆ ಕಾಣದ ಕಡಲಿಗೆ ಹಿಡಿ ಶಾಪ ಹಾಕುತ್ತಿರುವಾಗಲೇ....ಪಕ್ಕದ ಮನೆಯಲ್ಲಿ ಯಾರೋ ಹಾಡೊಂದನ್ನು ಮತ್ತೆ ಮತ್ತೆ ಅರಚುತಿದ್ದರು.....
"ನೀರಿನ ಮೇಲೆ ಗುಳ್ಳೆ ಉಂಟು....ಬಾಳಿನ ಬಣ್ಣ ನೂರ ಎಂಟು...ನಮ್ಮದೇನಿದ್ರು ಬ್ಲಾಕ್ ಅಂಡ್ ವೈಟು...ಲೈಫು ಇಷ್ಟೇನೆ... ಲೈಫು ಇಷ್ಟೇನೆ..."

-ತೇಜಸ್ವಿನಿ ಹೆಗಡೆ.