ಭಾನುವಾರ, ಡಿಸೆಂಬರ್ 26, 2010

ಆಹತ

Courtesy - http://ecx.images-amazon.com

ಕಡುಗಪ್ಪು ಕತ್ತಲೆಯ ಸ್ನೇಹ ಮಾಡ ಹೋದೆ,
ಕಿರು ಬೆಳಕಿನ ಕೋಲೂ ಬೆನ್ನು ಮಾಡಿತು
ಕಟ್ಟ ಕಡೆಯ ನಿನ್ನ ನೆನಪನೂ ಮರೆಯ ಹೊರಟೆ,
ಕಣ್ಣೀರ ಹನಿಗಳು ಕಣ್‌ರೆಪ್ಪೆಗಳ ತೊರೆದವು

ಇಳೆಯ ಬಂಜೆತನ ಕಳೆಯಲು
ಆಶಾಢನು ಕಿರು ಹನಿಯುತ ಬಂದರೆ,
ನನ್ನೊಳಗಿನ ಒಣಗಿದ ಕನಸುಗಳೆಲ್ಲಾ
ಹರಿದು, ಮನದ ನೆಲವೀಗ ಭಣ ಭಣ

ನನ್ನದಾದ ಒಂದು ಕಿರು ಬೆಳಕಿಗಾಗಿ
ಒಂದೊಂದು ಹೆಜ್ಜೆಯನೂ ಅಡವಿಡುತ್ತಾ ಬಂದೆ
ನೂರು ನೆನಪುಗಳ ಭಾರದಿಂದ ಅಡಿಯಿಡಲಾಗದೇ
ಒಂದಿರುಳಿನಲೇ ನೂರು ವರುಷಗಳ ಕಳೆದೆ

ನೂರು ಮಾತುಗಳು ಹೇಳಲಾಗದ್ದು
ಒಂದು ನೋಟ ಬಯಲಾಗಿಸಬಲ್ಲದು..
ಕಣ್ಣೋಟವ ಓದ ಹೊರಟರೆ ನಾನು
ಶಾಶ್ವತ ಕುರುಡನಾಗಿ ಹೋದೆಯಲ್ಲಾ ನೀನು!

ಒಂದೊಂದು ಕ್ಷಣಗಳನೂ ಸೆರೆ ಹಿಡಿದು
ಅದರೊಳಗೆ ಬಂಧಿಯಾಗ ಹೊರಟೆ,
ಬದುಕು ನೂರು ಮೈಲಿ ವೇಗದಲಿ ಸಾಗಲು,
ಉಸಿರಿಗಾಗಿ ಕಾದ ಅಹಲ್ಯೆಯಾಗಿ ಹೋದೆ!

-ತೇಜಸ್ವಿನಿ ಹೆಗಡೆ

ಗುರುವಾರ, ಡಿಸೆಂಬರ್ 23, 2010

ಯಾರಿವರು?......ಆತ್ಮರಹಿತರು?!


ಇವರಿಗೆ ಸ್ವಂತ ಉಸಿರಾಟದ ಶಕ್ತಿಯಿಲ್ಲ
ಪಾಪ, ಸ್ವತಃ ದುಡಿಮೆಗೆ ಕಸುವೂ ಇಲ್ಲ
ಅಲ್ಲಿ ಇಲ್ಲಿ ಬಿದ್ದಿರುವುದನೆಲ್ಲಾ ಹೊತ್ತು
ಅಧರ್ಮವ ಕಟ್ಟಿ, ಧರ್ಮವ ಸುಟ್ಟು
ಬರೀ ಕೊಳಕು ಕಶ್ಮಲಗಳನ್ನಷ್ಟೇ ಗುಡ್ಡೆ ಹಾಕಿ
ಅವುಗಳೊಳಗೇ ಮುಳುಗಿ ಸಂಭ್ರಮಿಸುವ
ಬಳಕುವ ಆಕಶೇರುಕಗಳಂತೇ
ಬದುಕುವ ಇವರಿಗೆ ಅಸ್ತಿತ್ವವೇ ಇಲ್ಲ!

ತನ್ನ ಹುಟ್ಟಿಗೆ ಅತ್ತು, ಪರರ ಹುಟ್ಟಿಗೆ ನಕ್ಕು
ಇಲ್ಲೇ ಹುಟ್ಟಿ, ಇಲ್ಲೇ ಮಣ್ಣಾಗೋ ನೆಲವ ಮಾರಿ
ಹಬ್ಬಿಕೊಂಡ ಬದುಕನೇ ಚಿಂದಿಯಾಗಿಸಿಕೊಂಡು
ಸಭ್ಯತೆಯ ಮುಖವಾಡದೊಳಗೆ ಅವಿತು
ಗಹಿ ಗಹಿಸಿ ನಗುವ ಮನೋವಿಕಲರು?
ಬುಡವಿರದ ಗೆದ್ದಲು ಮರವ ನೆಟ್ಟು,
ಓಲಾಡುತ್ತಾ ಆಗಸಕೇ ಕೈಚಾಚುವ ಇವರು
ಸ್ವಂತ ನೆಲೆಯಿಲ್ಲದ ಪರದೇಶಿಗಳು!

ಕುರುಡು ಕಾಂಚಣದ ಹಿಂದೆ ಬಿದ್ದು
ಮರುಳು ಕೀರ್ತಿಯನೇ ಹೊದ್ದು
ಜೊಳ್ಳು ಹೆಕ್ಕಿ, ಎಲ್ಲಾ ಕಾಳ ತೂರಿ,
ತನ್ನ ಪ್ರತಿಬಿಂಬವನೇ ಮೋಹಿಸುತ
ತನ್ನ ಹೆಸರಿನ ರಾಗವನೇ ಹಾಡುತ
ಬೇತಾಳ ನೃತ್ಯವನು ಮಾಡುತಿಹ
ಈ ಬುದ್ಧಿಹೀನರ ಸೋಗಿನಾಟಕೆ
ಭೂತ, ಪಿಶಾಚಿಗಳೂ ಬೆದರಿಹವು!

-  ತೇಜಸ್ವಿನಿ ಹೆಗಡೆ

ಶನಿವಾರ, ಡಿಸೆಂಬರ್ 18, 2010

ಹಿಡಿ ಹಿಡಿದಷ್ಟು ಸೋರುತಿದೆ ಕಾಲ...

ಬೇಕಿಲ್ಲ-
ಕಾಣದ ಸಂಕೋಲೆ-
ಗಳ ಹಿಡಿದು ಕಣ್ಮುಚ್ಚಿ ನಡೆ
ನಡೆದು ನಡುವೆ ಹಿಂತಿರುಗಿ
ನೋಡಿದರೂ ಏನೊಂದೂ ಕಾಣದ
ಆ ನನ್ನ ಭೂತಗಳು

ಸಾಕಾಗಿದೆ-
ಮುಂದಿರುವ ನಿನ್ನ-
ನಿನ್ನೆಗಳ ನನ್ನದಾಗಿಸಿಕೊಂಡು
ಹುಸಿನಕ್ಕು ನಗಿಸುತ ಸವೆದ ಆ
ದಾರಿಗಳೇ ಮತ್ತೆ ತಿರು ತಿರುಗಿ
ನನ್ನ ಭವಿತವ್ಯದಲೂ ಕಾಡುವುದು

ಹಿಡಿಯಬೇಕಾಗಿದೆ-
ಗುಟುಕು ಉಸಿರ ಹಿಡಿದಿರುವ-
ನಿನ್ನೊಳಗಿನ ನಾನು, ನನ್ನ
ಒಳಗಿನ ನೀನು, ಕುಟುಕು
ಜೀವವ ಹಿಡಿದು ಜೋತಾಡುತಿರುವ
ನಮ್ಮ ವರ್ತಮಾನವನು...

-ತೇಜಸ್ವಿನಿ ಹೆಗಡೆ

ಗುರುವಾರ, ಡಿಸೆಂಬರ್ 16, 2010

"ಸಂಸ್ಕೃತ ಸಾಹಿತ್ಯ ಹಾಗೂ ಬಾಹ್ಮಣ ಪರಿಕಲ್ಪನೆ ಮತ್ತು ಆಧುನಿಕ ಚಿಂತಕರು"

ಮಂಗಳೂರಿನ ಕೆನರಾ ಪದವಿ(ಡಿಗ್ರಿ) ಕಾಲೇಜಿನಲ್ಲಿ ಇದೇ ತಿಂಗಳ ೧೯ ಹಾಗೂ ೨೦ರಂದು "ಅಂತರ್ ವಿಷಯ ಸಂಸ್ಕೃತಾಧ್ಯಯನ ಮತ್ತು ಸಂಶೋಧನ ಕೇಂದ್ರದಡಿಯಲ್ಲಿ"(Centre for Inter disciplinary Studies and Research in Sanskrit (CISRS)) ಹಾಗೂ ಸಂಸ್ಕೃತ ಶೋಧ ಸಂಸ್ಥಾನ, ಶಿರಸಿ ಇದರ ಸಹಯೋಗದೊಂದಿಗೆ ರಾಷ್ಟ್ರಮಟ್ಟದ ವಿಚಾರಗೋಷ್ಠಿಯು ನಡೆಯಲಿದೆ. 

Invitation
ಕೆನರಾ ಶೈಕ್ಷಣಿಕ ಸಮೂಹ ಸಂಸ್ಥೆಗಳ ಸಂಸ್ಥಾಪಕರಾಗಿದ್ದ ದಿವಂಗತ ಶ್ರೀ ಅಮ್ಮೆಂಬಳ ಸುಬ್ಬ ರಾವ್ ಪೈ ಅವರ ಸ್ಮರಣಾರ್ಥವಾಗಿ ಕಳೆದ ಹದಿನೈದು ವರುಷಗಳಿಂದಲೂ ರಾಜ್ಯ ಹಾಗೂ ರಾಷ್ಟ್ರಮಟ್ಟದ ವಿಚಾರಗೋಷ್ಠಿಗಳನ್ನು CISRS ನಡೆಸುತ್ತಾ ಬಂದಿದೆ. ಕೆನರಾ ಪದವಿ ಕಾಲೇಜಿನಲ್ಲಿ ಸಂಸ್ಕೃತ ವಿಭಾಗದ  ಮುಖ್ಯಸ್ಥರೂ ಆಗಿರುವ ಪ್ರೊಫೆಸರ್ ಡಾ.ಜಿ.ಎನ್.ಭಟ್ಟರು ಈ ಸಂಶೋಧನಾ ಕೇಂದ್ರದ ನಿರ್ದೇಶಕರು.

ಪ್ರತಿವರುಷ ಬೇರೆ ಬೇರೆ ಕಾಲೇಜುಗಳ, ವಿಶ್ವವಿದ್ಯಾನಿಲಯಗಳ, ನಿವೃತ್ತ/ವೃತ್ತಿ ನಿರತ ಹಿರಿಹ ಕಿರಿಯ ವಿದ್ವಾಂಸರು, ಆಯಾ ಕ್ಷೇತ್ರದಲ್ಲಿ ಪರಿಣಿತರಾದವರು ಸೂಚಿಸಿದ ವಿಷಯದ ಪ್ರತಿ ತಮ್ಮ ತಮ್ಮ ನಿಲುವನ್ನು ಮಂಡಿಸುತ್ತಾರೆ. ಅವರೆಲ್ಲರ ಲೇಖನ ಮಾಲೆಕೆಗಳನ್ನು ಸಂಪಾದಿಸಿ ಅದಕ್ಕೊಂದು ಸುಂದರ ಪುಸ್ತಕ ರೂಪವನ್ನು ಕೊಟ್ಟು ಮರುವರುಷದ ವಿಚಾರಗೋಷ್ಠಿಯಂದು ಬಿಡುಗಡೆ ಮಾಡಲಾಗುತ್ತದೆ. ಹೀಗೆ ಒಟ್ಟೂ ಹದಿನೈದು ಪುಸ್ತಕಗಳನ್ನು ಈವರೆಗೆ ಬಿಡುಗಡೆಮಾಡಲಾಗಿದ್ದು, ಎಲ್ಲವೂ ಚಿಂತನಶೀಲ, ಅಧ್ಯಯನಶೀಲ ಲೇಖನಗಳಾಗಿವೆ. ಆ ಪುಸ್ತಕಗಳ ಹೆಸರು ಹಾಗೂ ಅವು ಬಿಡುಗಡೆಗೊಂಡ ಇಸವಿಯ ವಿವರ ಈ ಕೆಳಗಿನಂತಿದೆ. 

* Peep in to the past (1995)

* ರಾಮಾಯಣ ಮತ್ತು ಪರಂಪರೆ (1996)

* Sanskrit : A Source of Science (1997)

* Reincarnation : Concept and Implication (1998)

* Relevance of Plants and Herbs and Materials used in the Rituals (1999)

* ವ್ಯಕ್ತಿತ್ವ ವಿಕಸನ : ಭಾರತೀಯ ದೃಷ್ಟಿ (2000)
     Personality Development : Indian View

* ಗುರು - ಶಿಷ್ಯ ಸಂಬಂಧ : ಭಾರತೀಯ ದೃಷ್ಟಿ (2001)
     The Teachers and the Taught : Indian View 

* Parent - Children Relationship : Indian View (2002)

* Temple and Its Culture (2003)

* Concept of Value : A Universal Perception (2004)

* Economics and Commerce
                          Ancient Concept & Modern Relevance (2006)

* Concept of Beauty in the light of Cosmetics and Perfumes (2007)

* A Discourse of on Bliss (2009)

* ಸನಾತನ ವಿವಾಹ ಸಂಸ್ಕಾರ (in Kannada)
  Concept of Marriage (in English)                      (2010)

ಈ ಮೇಲಿನ ಕೆಲವು ಪುಸ್ತಕಗಳು ಕನ್ನಡ ಹಾಗೂ ಇಂಗ್ಲಿಷ್ ಎರಡೂ ಭಾಷೆಯ ಲೇಖನಗಳನ್ನೂ ಒಳಗೊಂಡಿವೆ. 

ಈ ವರುಷದ ವಿಚಾರಗೋಷ್ಠಿ ರಾಷ್ಟ್ರಮಟ್ಟದಾಗಿದ್ದು, ಈ ವಿಚಾರಗೋಷ್ಠಿಯ ವಿಷಯ "The Concept of Brahmana in Sanskrit literature and modern thinkers view"ಎಂದಾಗಿದೆ. ಬರುವ ೧೯ ಹಾಗೂ ೨೦ರಂದು ಕೆನರಾ ಪದವಿ ಕಾಲೇಜಿನ ಆವರಣದಲ್ಲಿ ನಡೆಯಲಿದ್ದು, ದೇಶದ ನಾನಾ ವಿಶ್ವವಿದ್ಯಾಲಯಗಳಿಂದ, ಕಾಲೇಜುಗಳಿಂದ ಆಹ್ವಾನಿತರಾದ ವಿದ್ವಾಂಸರು ತಮ್ಮ ತಮ್ಮ ವಿಚಾರಧಾರೆಯನ್ನು ಮಂಡಿಸಲಿದ್ದಾರೆ.

ಹೆಚ್ಚಿನ ಮಾಹಿತಿಗಳಿಗೆ ನನಗೆ ಮೈಲ್ ಮಾಡಬಹುದು.

-ತೇಜಸ್ವಿನಿ ಹೆಗಡೆ. 

ಬುಧವಾರ, ಡಿಸೆಂಬರ್ 15, 2010

ಒಗ್ಗರಣೆಯ ಮನೆಯೊಳಗೆ ಘಮ ಘಮವೆನುವ ಕಷಾಯ...

ಈ ಯೋಚನೆ ಇಂದು, ನಿನ್ನೆಯದಲ್ಲ. ದಟ್ಸ್‌ಕನ್ನಡದಲ್ಲಿ ನಾನು ಬರೆಯುತ್ತಿದ್ದ "ಶಿರಸಿ ಭವನ" ಅಂಕಣದ ಕಾಲದಿಂದಲೂ ಇತ್ತು. ಈಗ ಅದು ಕಾರ್ಯರೂಪಕ್ಕೆ ಬಂದಿದೆಯಷ್ಟೇ. ಹೌದು... ಇನ್ನು ರುಚಿ ರುಚಿ ಪದಾರ್ಥಗಳು, ತಿಂಡಿ ತಿನಸುಗಳು ನನ್ನ ಒಗ್ಗರಣೆ ಬ್ಲಾಗ್ ಮನೆಯಲ್ಲಿ ತಯಾರಿಸಲ್ಪಡುತ್ತವೆ. ಅಡುಗೆ ಆಸಕ್ತರು ಅದರಲ್ಲಿರುವ ತಿಂಡಿ ತಿನಸನ್ನು ಓದಿ, ಮಾಡಿ, ಸವಿದರೆ ನನಗಷ್ಟೇ ಸಾಕು. ಈ ಒಗ್ಗರಣೆ ಮನೆಯ ವಿಶೇಷವೇನೆಂದರೆ ಇದರಲ್ಲಿ ಹೆಚ್ಚಾಗಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಶಿರಸಿ ಕಡೆಯ ತಿನಸುಗಳನ್ನೇ ಹೆಚ್ಚಾಗಿ ತಯಾರಿಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಕಡಿಮೆ ತೆಂಗು, ಎಣ್ಣೆ ಕಾಗೂ ಮಸಾಲೆ ಪದಾರ್ಥಗಳನ್ನು ಬಳಸಿ ತಯಾರಿಸುವ ಪದಾರ್ಥಗಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಕಾರಣ ಒಗ್ಗರಣೆ ಮನೆಯೊಡತಿಯ ಪ್ರಕಾರ "ಆರೋಗ್ಯವೇ ಭಾಗ್ಯ" :)

ನನ್ನ ಒಗ್ಗರಣೆಗೆ ನಿಮ್ಮ ಒಗ್ಗರಣೆಯನ್ನೂ ಹಾಕಿ ಮತ್ತಷ್ಟು ರುಚಿಕರ ಮಾಡಬಹುದು. ನಿಮ್ಮ ಸಲಹೆ ಸೂಚನೆಗಳೇನಿದ್ದರೂ ಸದಾ ಸ್ವಾಗತ. ಆಸಕ್ತರು ತಮ್ಮ ಪಾಕಶಾಸ್ತ್ರವನ್ನೂ ನನಗೆ ಕಳುಹಿಸಿದಲ್ಲಿ ಅವರ ಹೆಸರಿನಲ್ಲಿಯೇ ಅದನ್ನು ಪ್ರಕಟಿಸಲಾಗುವುದು. ಮುಖ್ಯವಾಗಿ ರುಚಿಕರ ಹಾಗೂ ಆರೋಗ್ಯಕರ ತಿನಿಸಿನ ವಿಧಾನವನ್ನು ಹೆಚ್ಚಿನವರಿಗೆ ತಿಳಿಸುವುದೇ ಇದರ ಉದ್ದೇಶ. ಸದ್ಯಕ್ಕೆ ವಾರಕ್ಕೊಮ್ಮೆ ಈ ಅಡಿಗೆ ಮನೆಯಲ್ಲಿ ಹೊಸ ಬಗೆಯ ಅಡಿಗೆ ತಯಾರಿಯನ್ನು ಹಾಕಬೇಕೆಂದಿರುವೆ. 

ಚುಮು ಚುಮು ಚಳಿಗಾಳಿ ಬೀಸತೊಡಗಿದೆ. ರಗ್ಗಿನೊಳಗೆ ಮತ್ತಷ್ಟು ಹೊತ್ತು ಹುದುಗಿ ಮಲಗುವ ಆಸೆ ಯಾರನ್ನೂ ಹೊರ ಬಿಡುತ್ತಿಲ್ಲ. ಹೀಗಿರುವಾಗ ಬಿಸಿ ಬಿಸಿ ಕಾಫಿ ಕುಡಿಯುವ ಮನಸಾಗುವುದು ಸಹಜ. ಆದರೆ ಕಾಫಿ, ಟೀ ನಮ್ಮ ದೇಹಕ್ಕೆ ಎಷ್ಟು ಆರೋಗ್ಯಕರ ಎನ್ನುವುದು ಪ್ರಶ್ನೆ. ಗೂಗಲ್ ಮಾಡಿದರೆ ನಿಮಗೆ ಕಾಫಿಯ ಸತತ ಸೇವನೆಯಿಂದಾಗುವ ಅಡ್ಡ ಪರಿಣಾಮಗಳ ದೊಡ್ಡ ಲಿಸ್ಟೇ ಸಿಗುವುದು! ಹೀಗಿರುವಾಗ ಚಳಿಯನ್ನೋಡಿಸುವ, ರುಚಿಕರವಾಗಿರುವ ಜೊತೆಗೆ ಆರೋಗ್ಯಕರವೂ ಆಗಿರುವ ಪೇಯವೊಂದರ ಅಗತ್ಯತೆ ನಮಗಿದೆ. ನಮ್ಮಲ್ಲಿ ಅಂದರೆ ಶಿರಸಿಯ ಕಡೆ ಯಾರೇ ಬರಲಿ.. "ಒಂದು ಕುಡ್ತೆ ಕಷಾಯ"ವನ್ನಾದರೂ ಕೊಟ್ಟೇ ಕಳಿಸುವುದು ವಾಡಿಕೆ. ಊಟದ ಸಮಯವೇ ಆಗಿರಲಿ, ಇಲ್ಲಾ ಹೊದ್ದು ಮಲಗುವ ಸಮಯವೇ ಆಗಿರಲಿ... ಕಷಾಯ ನಮ್ಮ ಹಸಿವನ್ನು ತಣಿಸದು, ನಿದ್ದೆಯನ್ನು ಆರಿಸದು. ಬದಲಿಗೆ ಜೀರ್ಣಶಕ್ತಿಯನ್ನು ಹೆಚ್ಚಿಸಿ, ಸುಖಕರವಾದ ನಿದ್ದೆಗೆ ಪ್ರೇರೇಪಿಸುವುದು. ಇಂತಹ ಕಷಾಯವನ್ನು ತಯಾರಿಸಲು ನಿಮಗೆ ತಗಲುವ ಸಮಯ ಕೇವಲ ೨-೩ ನಿಮಿಷ! ಆದರೆ ಮೊದಲು ಕಷಾಯದ ಹುಡಿಯನ್ನು ಮಾಡಿಟ್ಟುಕೊಳ್ಳಬೇಕಾದ್ದು ಅತ್ಯಗತ್ಯ. ಇದನ್ನು ತಯಾರಿಸಲು ತಗಲುವುದು ಕೇವಲ ೧೦-೧೫ ನಿಮಿಷ. ಹೀಗೆ ತಯಾರಿಸಿಟ್ಟು ಕೊಂಡ ಹುಡಿಯನ್ನು ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟರೆ ತಿಂಗಳುಗಟ್ಟಲೆ ಬರುವುದು. ಈ ಪುಡಿಯನ್ನು ಉಪಯೋಗಿಸಿಯೇ ಕಷಾಯದ ಪೇಯವನ್ನು ತಯಾರಿಸುವುದು.

ಮೊದಲಿಗೆ ಕಷಾಯದ ಹುಡಿಯನ್ನು ಮಾಡುವ ವಿಧಾನ - 

ಹೆಚ್ಚಿನ ಓದಿಗೆ ಇನ್ನು ಒಗ್ಗರಣೆಯ ಮನೆಗೆ ಪ್ರವೇಶಿಸಿ.... :)

ಒಗ್ಗರಣೆ ಮನೆಯನ್ನು ಮಾನಸದಷ್ಟೇ ಆತ್ಮೀಯತೆಯಿಂದ ಸ್ವೀಕರಿಸಿ, ಇದರ ಪಾಕ ಪಾಠ ಶಾಲೆಯ ಸಹೋದ್ಯೋಗಿಗಳು/ವಿದ್ಯಾರ್ಥಿಗಳು/ಸಲಹೆಗಾರರು ಆಗಿ ಸೇರಿಕೊಳ್ಳುತ್ತೀರೆಂದು ಆಶಿಸುತ್ತೇನೆ....:)

-ತೇಜಸ್ವಿನಿ ಹೆಗಡೆ.

ಮಂಗಳವಾರ, ಡಿಸೆಂಬರ್ 7, 2010

ಜಗನ್ಮೋಹಿನಿ

ಜಗದ ಮಹಾತಾಯಿ ಈಕೆ
ಲಕ್ಷ, ಕೋಟಿ ಮಕ್ಕಳ
ಅನುಗಾಲವೂ ಸಲಹುತ
ತಾನು ಒಂದಿಂಚೂ ಸವೆಯದೇ
ಪಕ್ಷಕ್ಕೊಮ್ಮೆ ಚೆಲುವೆಯಾಗಿ ಮೆರೆದು
ಸಿಟ್ಟು ಬಂದಾಗ ಮಕ್ಕಳನೇ ಛೂ ಬಿಟ್ಟು
ಬೊಬ್ಬಿರಿದು, ಮೇಲೇರಿ ಬಂದು
ಸರ್ವನಾಶ ಗೈವ ಪಾಪನಾಶಿನಿ


ತಾ ಅಡಗಿಸಿಟ್ಟ ಅಪಾರ
ಸಿರಿ-ಸಂಪತ್ತುಗಳನೆಲ್ಲಾ
ಅದ್ಯಾರೋ ವಾನರ ವಿಕಸಿತ ರಾಕ್ಷಸರು
ಕದ್ದೊಯ್ಯುವುದನು ಕಂಡೂ
ಸುಮ್ಮನಿದ್ದು, ಬಿಮ್ಮನೆ ಕುಳಿತು
ಹೊಂಚು ಹಾಕಿ, ಸಂಚು ಮಾಡಿ
ಕಾಲೆಳೆದೆಳೆದು ಪ್ರಾಣ ಸೆಳೆವ ಸಮ್ಮೋಹಿನಿ

ತೆಕ್ಕೆಯೊಳಗಿಳಿಯದ ಪ್ರಿಯಕರನ
ಕಣ್ಣೆತ್ತಿ ನೋಡಿ, ಮೋಡಿ ಮಾಡಿ
ಆತನ ಒಮ್ಮೆ ಅರ್ಧವಾಗಿ,
ಮಗದೊಮ್ಮೆ ಇಡಿಯಾಗಿ ಹಿಡಿದು
ಕಬಳಿಸಿ, ನುಂಗಲು ಹಪ ಹಪಿಸಿ
ಸೋತು, ಸೊರಗಿ ಕೊರಗುವ ವಿರಾಗಿಣಿ


ಉಷೆಯ ಹಿಂಬಾಲಿಸಿ, ಹಠ ಮಾಡಿ
ತಾಸಿಗೊಮ್ಮೆ ರಂಗು ರಂಗಿನ
ಬಣ್ಣಗಳ ಧರಿಸಿ, ಮಿನುಗಿ
ನಿಶೆಯ ಮೇಲೇರಿ ಕುಳಿತು, ಬೀಗಿ
ಕಿಲ ಕಿಲನೆ ನಗುವ ಸುಹಾಸಿನಿ

ಕರೆದಷ್ಟೂ ಮುಗಿಯದ
ನಿನ್ಹೆಸರುಗಳ ಜಪವೇ
ಹೆಜ್ಜೇನು ಸವಿದಂತೆ ಮನಮೋಹಿನಿ

[ಕವನವೆನ್ನುವುದು ಅವರವರ ಭಾವಕ್ಕೇ ಬಿಟ್ಟಿದ್ದಾದರೂ, ಈ ಕವಿತೆಯನ್ನು ಯಾರ ಮೇಲೆ ಬರೆದಿದ್ದು ಎನ್ನುವುದನ್ನು ಹೇಳಬಲ್ಲಿರಾ? :)]

- ತೇಜಸ್ವಿನಿ ಹೆಗಡೆ

ಬುಧವಾರ, ಡಿಸೆಂಬರ್ 1, 2010

ಮುಸುಕು

ಮಾಘ ಮಾಸದ ಚಳಿ ಎಲ್ಲಾ ಕಡೆ ತನ್ನ ಪ್ರಭಾವವನ್ನು ತೋರುತ್ತಿದ್ದರೆ, ಘಟ್ಟದಲ್ಲಂತೂ ಚರಮ ಸೀಮೆಯನ್ನು ತಲುಪಿತ್ತು. ಅಲ್ಲಿಯ ನಡುಗುವ ಜನರಿಗೆ ಮಟ ಮಧ್ಯಾಹ್ನದಲ್ಲೂ ಸೂರ್ಯ ತನ್ನ ಬಿಸಿಲಿನ ಕೊಡೆಯ ಬಿಡಿಸಲು ಅಸಮರ್ಥನಾಗಿದ್ದ. ರಾತ್ರಿರಾಣಿ ಬೀಸಿಡುವ ಚಳಿಯ ಗಾಳದೊಳಗೆ ಸಿಲುಕಿ ರವಿ ಒದ್ದಾಡುತ್ತಿದ್ದ. ತನ್ನ ಕಿರಣಗಳನ್ನು ತೂರಿ ತೂರಿ ಶೀತಗಾಳಿಯ ಸೀಳಿದರೂ, ಅವುಗಳ ಬಿಸಿ ಧರೆಯ ತಲುಪುವಾಗ ಮಾತ್ರ ತಣ್ಣಗಾಗಿಹೋಗುತ್ತಿತ್ತು. ಗಂಟೆ ಎಂಟಾದರೂ, ಪ್ರಕೃತಿ ಹೊದ್ದಿರುವ ಮಂಜಿಗೆ ಹೆದರಿ ಎಂದೂ ಒಂಬತ್ತರ ಕಡಿಮೆ ತನ್ನ ಹೊದಿಕೆ ತೆಗೆಯದ ಚಂದ್ರಶೇಖರ ಅಂದು ಮಾತ್ರ ಮುಂಜಾವು ಆರಕ್ಕೆಲ್ಲಾ ಬಚ್ಚಲಿಗೆ ಓಡಿದ್ದು ನೋಡಿ, ಆಗಷ್ಟೇ ಎದ್ದು ಅಲ್ಲೇ ಬೆಂಕಿ ಕಾಯಿಸುತ್ತಿದ್ದ ಲಕ್ಷ್ಮಿ ಬೆಪ್ಪಾಗಿ ಪರಿವೆಯಿಲ್ಲದೇ ಬಿಸಿ ಸೌದೆ ಕೋಲೊಂದನ್ನು ಮುಟ್ಟಿ ಕಿರುಬೆರಳನ್ನು ತುಸು ಸುಟ್ಟುಕೊಂಡುಬಿಟ್ಟಳು. ಬೇರೆ ದಿನಗಳಲ್ಲಿ ನೀರಿಗಿಳಿಯಲು ಮಧ್ಯಾಹ್ನ ಎರಡು ಗಂಟೆಯ ಕಡಿಮೆ ಮುಹೂರ್ತ ನೋಡದ ಚಂದ್ರು, ಬಚ್ಚಲ ಒಳಹೊಕ್ಕರೂ ಹೆಂಡತಿಗೆ ಸಹಸ್ರನಾಮಾರ್ಚನೆ ಮಾಡುತ್ತಲೇ ತನ್ನ ತಲೆಗೆ ಅಭಿಷೇಕ ಮಾಡಿಕೊಳ್ಳುವುದು. "ಹೌದನೇ.... ಬೆಳಗ್ಗಿಂದ ಬೆಂಕಿ ಕಾಯ್ಸ್ತಾ ಇರ್ತ್ಯಪ, ಸರಿ ಸೌದೆ ಒಡ್ಡಲೂ ಬತ್ತಿಲ್ಯ ಹಂಗಿದ್ರೆ? ಅಲ್ಲಾ... ನಾ ಒಳಹೋಗ್ಬೇಕಿರೇ ನೀರು ಕಾದು ತಂಪಾಗಿರ್ತು ಹೇಂಗೆ? ತಣ್ಣೀರೇ ಮಿಂದು ಗಂಡಾ ಹೇಳಂವ ನೆಗ್ದು ಬಿದ್ದು ಹೋಗ್ಲಿ ಹೇಳಾ ಹೇಂಗೆ...? ನೀ ಮಾತ್ರ ಒಂದು ಹಂಡೆ ಪೂರ್ತಿ ಬಿಸ್ನೀರು ಮಿಂದ್ರೆ ಆತಾ..?" ಎಂದೆಲ್ಲಾ ಗೊಣಗಾಡದ ಹೊರತು ಮಿಂದ ತೃಪ್ತಿ ಅವನಿಗಾಗದು. ಲಕ್ಷ್ಮಿಯೇನು ಕಡಿಮೆಯೇ? "ಅಲ್ಲಾ.. ನಂಗೆಂತ ಮಳ್ಳ ನಿಮ್ಗೆ ತಣ್ಣೀರಿಟ್ಟು ನಾ ಮಾತ್ರ ಬಿಸ್ನೀರು ಮೀಯಲೇ? ಶುಕ್ರವಾರವಾಗಿ ಎಂತ ಮಳ್ಳ್ ಮಾತಾಡ್ತ್ರಿ? ನಾಳೆಯಿಂದ ಗ್ಯಾಸ್ನಲ್ಲಿ ಕುದಿಯೋ ನೀರು ತಂದುಕೊಡ್ತಿ, ಪಟ್ಟಾಗಿ ಮೀಲಕ್ಕಿ..ಈಗ ತೆಪ್ಪಗೆ ಮಿಂದ್ಕ ಬನ್ನಿ.. ಇಲ್ದೇ ಹೋದ್ರೆ ಬಿಸಿ ಅನ್ನನೂ ಆರಿ ಚಿತ್ರಾನ್ನ ಆಗ್ತು ಅಷ್ಟೇಯಾ..." ಎಂದು ತಿರುಗೇಟು ಕೊಡುತ್ತಾ ಬಟ್ಟಲು ಲೋಟ ಜಡಿದರೇ ಇವಳಿಗೂ ಉಂಡ ತೃಪ್ತಿ. ಆದರೆ ಇಂದು ಮಾತ್ರ ಎಲ್ಲಾ ತಲೆಕೆಳಗು. ಬೆಳ್ಳ್ಂಬೆಳಗ್ಗೆಯೇ ಎದ್ದು, ಕಮಕ್‌ಕಿಮಕ್ ಎನ್ನದೇ ಎರಡು ತಂಬಿಗೆ ಹಾಗೆ ಎರಡು ಹೀಗೆ ಎಂಬಂತೆ ಸುರಿದುಕೊಂಡ ಪತಿ, ಒದ್ದೆ ಟವೆಲನ್ನೇ ಸುತ್ತಿಕೊಂಡು ಬಟ್ಟೆ ಬದಲಾಯಿಸಲು ಮೆತ್ತಿಗೆ ಓಡಿದ್ದು ನೋಡಿಯಂತೂ ಲಕ್ಷ್ಮಿಗೆ ತುಂಬಾ ದಿಗಿಲಾಗಿತ್ತು.

"ಅಲ್ಲಾ..ನಿನ್ನೆನೇ ಒಂದು ಮಾತು ಹೇಳಿಯಿದ್ರೆ ಸ್ವಲ್ಪ ಬೇಗ ಎದ್ಕಂಡು ನೀರು ಕಾಯ್ಸಿ, ದೋಸೆ ಎರ್ದು ಆಸ್ರಿಗೆ ಮಾಡೂ ಇಡ್ತಿದ್ದಿ. ಈಗಿನ್ನೂ ಹಾಲು ಕರ್ದೂ ಆಯ್ದಿಲ್ಲೆ.....ಅದೆಂತಾ ಕೋರ್ಟಿಗೆ ಹೋಗವ ನಿಮ್ಗೆ? ಇಷ್ಟು ಬೇಗ ಎಂದ್ಕಂಡಿದ್ದು ಎಂತಕ್ಕೋ? ರಾತ್ರಿ ಸರಿಯಾಗಿ ಊಟಾನೂ ಮಾಡಿದ್ರಿಲ್ಲೆ...ನಿದ್ದೆನೂ ಮಾಡ್ದೇ ಅತ್ಲಾಗಿಂದಿತ್ಲಾಗೆ ಹೊರಳಾಡ್ತಾ ಇದ್ದಿದ್ರಿ...ಹೌದು....ಶಿರಸಿಗೆ ಬಸ್ಸಿಪ್ಪದೂ ಏಳ್‌ಗಂಟೆಗೆ. ಇಷ್ಟ ಬೇಗ ಎಲ್ಲಿಗೆ ಹೊರಟ್ರಿ?" ಎಂದೆಲ್ಲಾ ಪಿರಿಪಿರಿ ಮಾಡುತ್ತಿದ್ದರೂ, ಅಲ್ಲೇ ತಯಾರಾಗುತ್ತಿದ್ದ ಚಂದ್ರು ಏನೊಂದೂ ಹೇಳಲು ಹೋಗಲಿಲ್ಲ. ಅಸಲಿಗೆ ಸ್ವತಃ ಅವನಿಗೇ ಗೊತ್ತಿರಲಿಲ್ಲ ಇಂದು ಅಂವ ಶಿರಸಿಗೆ ಹೋಗುತ್ತಾನೆಂದು. ರಾತ್ರಿಯಿಡೀ ಇಬ್ಬದಿಗೆಯ ತಾಕಲಾಟದಲ್ಲಿ ಕೆಂಗೆಟ್ಟವನಿಗೆ ಬೆಳಗಿನ ಜಾವವೇ ತುಸು ನಿದ್ದೆ ಹತ್ತಿದ್ದು. ಆದರೆ ಇಂದಿನ ಕಾರ್ಯದ ಕುರಿತು ಮನದಲ್ಲೇ ನಿರ್ಧಾರ ಗಟ್ಟಿಯಾಗಲು ದಢಕ್ಕನೆ ಎದ್ದಿದ್ದ. "ನೋಡೆ.. ಗಂಡಸ್ರ ಕಾರುಬಾರು ನೂರಿರ್ತು. ಎಲ್ಲಾದನ್ನೂ ಹೇಳ್ತಾ ಕೂತ್ರೆ ಆದಾಂಗೆಯಾ ಕೆಲ್ಸ....ನೀ ಎಂತೂ ಮಾಡದು ಬೇಡ, ಶಿರಸಿಯ ಸುಬ್ಬಣ್ಣನ ಹೋಟೆಲ್‌ನಲ್ಲಿ ಆಸ್ರಿಗೆ ಕುಡೀತಿ. ಈಗ ವೆಂಕಪ್ಪ ಹಾಲು ಕೊಡಲೆ ಪೇಟೆಗೆ ಹೋಗ್ತಾ ಇದ್ದ. ನಾನೂ ಅವ್ನ ಜೊತೆ ಗಾಡೀಲಿ ಪೇಟಿಗೆ ಹೋಗ್ತಿ....ಅಲ್ಲಿಂದ ಬೆಳ್ಮನೆಗೆ ಹೋಗವು. ಕಮಲಕ್ಕನ ನೋಡ್ದೇ ರಾಶಿ ದಿನ ಆತು. ಈಗ ಬಸ್ಸಿಗಾಗಿ ಕಾಯೋ ವ್ಯವಧಾನ ಇಲ್ಲೆ. ಹಾಂ...ಬಪ್ಪದು ರಾತ್ರಿಯಾಗ್ಗು.. ನಿಂಗವೆಲ್ಲ ಊಟಮಾಡಿರಿ. ಎಲ್ಲಾ ಬಂದ್ಮೇಲೆ ಹೇಳ್ತಿ...ಈಗ ನೀನು ಕೊಟ್ಗೆ ಕೆಲ್ಸಕ್ಕೆ ಹೋಗು...ದೂಸರಾ ಮಾತು ಬೇಡ.." ಎಂದು ತಾಕೀತು ಮಾಡಿ ಅವಳ ಉತ್ತರಕ್ಕೂ ಕಾಯದೇ ಅಲ್ಲಲ್ಲಿ ತೂತು ಬಿದ್ದಿದ್ದ ಸ್ವೆಟರನ್ನೇ ಏರಿಸಿಕೊಂಡು ಬಗಲಿಗೊಂದು ಬ್ಯಾಗು ನೇತುಹಾಕಿ ಹೊರಟೇ ಬಿಟ್ಟ ಚಂದ್ರಶೇಖರ. ಅಂಗಳ ದಾಟಿ, ದಣಪೆ ಸರಿಸಿಕೊಂಡು ತೋಟವಿಳಿದು, ವೆಂಕಪ್ಪನ ಮನೆಕಡೆಗೆ ಹೊರಟ ಗಂಡ ಕ್ರಮೇಣ ಮಂಜಿನೊಳಗೇ ಮರೆಯಾದುದನ್ನು ಎವೆಯಿಕ್ಕದೇ ನೋಡುತ್ತಿದ್ದ ಲಕ್ಷ್ಮಿಗೆ ಕಮಲತ್ತಿಗೆಯ ನೆನಪಾಗಿ ಸಂಕಟವಾಯಿತು. ಯಾವುದೋ ನೆನಪಿನ ಗುಂಗಿನಲ್ಲೇ ಸುಮಾರು ಹೊತ್ತು ಕಂಬದಂತೇ ನಿಂತಿದ್ದ ಅವಳನ್ನು ಎಚ್ಚರಿಸಿದ್ದು ತಮ್ಮ ಮೇವಿಗಾಗಿ ಕಾದು ಸುಸ್ತಾಗಿ, ಹಸಿವಿನಿಂದ "ಅಂಬಾ.." ಎಂದು ಕೂಗತೊಡಗಿದ ದನಕರುಗಳು.

-೨-

"ಕಮಲಕ್ಕ, ನಂಗೆ ಬರೀ ಕಷಾಯ ಸಾಕೇ.. ಎಂತದೂ ಮಾಡದು ಬೇಡ. ಈಗಷ್ಟೇ ಸುಬ್ಬಣ್ಣನ ಹೋಟೇಲಲ್ಲಿ ಭರ್ಜರಿ ಮಸಾಲ್ ದೋಸೆ ಸಮಾರಾಧನೆ ಆಜು...ಇವತ್ತಿನ ಮಧ್ಯಾಹ್ನದ ಕವಳ ಇಲ್ಲೇಯಾ ಮತ್ತೆ....ಅಪ್ಪೆಹುಳಿ, ಕೆಸುವಿನೆಲೆ ಗೊಜ್ಜು ಸಾಕು. ಹೌದು.... ಬಾವ ಎಲ್ಲಿ ಕಾಣಿಸ್ತಾ ಇಲ್ಲೆ... ಎಷ್ಟು ದೂರ?" ಎಂದು ಕೇಳುತ್ತಾ ಅಡಿಗೆ ಮನೆ ಹೊಕ್ಕ ತಮ್ಮ ಚಂದ್ರುವನ್ನು ಆಕೆ ತಿರುಗಿ ನೋಡುವುದಕ್ಕೂ ಗ್ರಹಿಸದೇ ಆತ ತಗ್ಗಿನಲ್ಲಿದ್ದ ನಾಗಂದಿಗೆಯನ್ನು ಹಣೆಗೆ ಬಡಿದುಕೊಳ್ಳುವುದಕ್ಕೂ ಸಮನಾಯಿತು. "ಅಲ್ದೋ ಮಾರಾಯ.. ಎಷ್ಟು ಸಲ ಬಂದೆ ಈ ಮನೆಗೆ ಇನ್ನೂ ಅಡಿಗೆ ಮನೆಯ ಈ ನಾಗಂದಿಗೆ ಪರಿಚಯ ಆಜಿಲ್ಲೆ ನೋಡು ನಿಂಗೆ. ಮೆನೆಯೊಳಗಿಂದೆಲ್ಲಾ ಮರ್ತೇ ಹೋತ ಹೇಂಗೆ ನಿಂಗೆ? ನೀ ಇಲ್ಲಿಗೆ ಬರ್ದೇ ಎರ್ಡು ತಿಂಗ್ಳ ಮೇಲಾತು ನೋಡು... ಹ್ಮ್ಂ ಎಷ್ಟಂದ್ರೂ ನಾ ನಿನ್ನ ಸ್ವಂತ ಅಕ್ಕಯ್ಯನ ಬಂದು ಹೋಗಿ ಮಾಡಲೆ...? ಚಿಕ್ಕಯ್ಯ ಬದ್ಕಿದ್ದಿದ್ರೆ ಸರಿ ಮಾಡ್ತಿದ್ದ ನಿನ್ನ. ಇತ್ಲಾಗ್ ಬಾ ಮಾರಾಯ ಮತ್ತೆ ಬಡ್ದು ಹೋಕು..ಪುಣ್ಯಕ್ಕೆ ರಾಶೀ ಪೆಟ್ಟಾಜಿಲ್ಲೆ...ಸ್ವಲ್ಪ ಕೆಂಪಾಜು ಹಣೆ ಅಷ್ಟೇಯಾ.....ತಗ ತೆಂಗಿನೆಣ್ಣೆ ಹಚ್ಕ.. ಸಮಾ ಆಗ್ತು..." ಎಂದು ರೇಗುತ್ತಲೇ, ತಮ್ಮನನ್ನು ಮಣೆಹಾಕಿ ಕುಳ್ಳಿರಿಸಿ ಉಪಚರಿಸಲು ಮುಂದಾದಳು ಕಮಲ. "ಅಯ್ಯೋ ಮಾರಾಯ್ತಿ.. ಎಂತಕ್ಕೆ ಹೀಂಗೆಲ್ಲಾ ಹೇಳೀ ಸಾಯಸ್ತೆ ನನ್ನ? ನಿನ್ನ ಬಿಟ್ರೆ ನಂಗ್ಯಾವ ಅಕ್ಕ ತಂಗಿ ಇದ್ವಪ್ಪ? ನಂಗೆ ದೊಡ್ಡೊಪ್ಪ ಬೇರೆ ಯನ್ನಪ್ಪಯ್ಯ ಬೇರೆನಾ? ಇಷ್ಟಕ್ಕೂ ನಂಗೆ ಸ್ವಂತ ಅಕ್ಕ, ತಂಗಿಯರು ಬೇರೆ ಯಾರಾದ್ರೂ ಇದ್ರೆ ತಾನೇ ನಾನು ಬೇಧ ಮಾಡದು? ನೀ ಹೀಂಗೆಲ್ಲಾ ಮಾತಾಡಿ ಸುಮ್ನೇ ನನ್ನ ಚುಚ್ತಾ ಇರ್ತೆ..ಹಣೆಗೆಂತೂ ಆಜಿಲ್ಲೆ ಬಿಡು. ಸ್ವಲ್ಪ ಹೊತ್ತು ಉರೀತು ಆಮೇಲೆ ಅಲ್ಲೇ ಸರಿಯಾಗ್ತು. ಹಾಂಗೆ ನೋಡಿದ್ರೆ ಈ ನೋವೆಲ್ಲಾ ಎಷ್ಟ್ರದ್ದು ನಿನ್ನ, ಶಂಕ್ರಬಾವ್ನ ನೋವಿನ ಮುಂದೆ.." ಎಂದವನು ಅಲ್ಲೇ ನಾಲಿಗೆ ಕಚ್ಚಿ ಹಿಡಿದ. ತನ್ನ ಕೊನೆಯ ಮಾತಿನ ಅಚಾತುರ್ಯದಿಂದಾಗಿ, ತಕ್ಷಣ ಅಕ್ಕನ ಮುಖ ನೋಡಲೂ ಸಂಕೋಚವಾಗಿ ಮುಖ ತೊಳೆಯುವ ನೆಪಮಾಡಿ ಬಚ್ಚಲಿಗೆ ಹೋದರೆ, ಅತ್ತ ಕಮಲಳಿಗೂ ಎಲ್ಲೋ ಏನೋ ಬಲವಾಗಿ ಚುಚ್ಚಿದ ಅನುಭವ. "ಹಾಳದ್ ಗ್ಯಾಸು ಇವತ್ತೇ ಮುಗ್ದು ಹೋಜು... ಇನ್ನು ಸೌದೆ ಒಡ್ಡಿ ಸಾಯವು....." ಎಂದು ತನ್ನೊಳಗೇ ಗೊಣಗುತ್ತಾ, ಆಗಷ್ಟೇ ಕೆಂಡಹಾಕಿ ಕಟ್ಟಿಗೆ ತೂರಿದ್ದ ಒಲೆಯಕಡೆಗೆ ತುಸು ಹೆಚ್ಚೇ ಬಗ್ಗಿ ಜೋರಾಗಿ ಗಾಳಿ ಊದಲು, ಹೊರ ಚಿಮ್ಮಿದ ಹೊಗೆಯ ನೆಪಮಾಡಿ ಮೊದಲೇ ತುಂಬಿದ್ದ ಕಣ್ಣೀರಿಗೆ ಹೊರಧುಮುಕಲು ಅನುವುಮಾಡಿಕೊಟ್ಟಳು.

"ಬಾವ್ನ ಚಡ್ಡಿ ದೋಸ್ತ ಕೃಷ್ಣ ಶಾಸ್ತ್ರಿಗೆ ಹುಶಾರಿಲ್ಲೆ ಹೇಳಿ ಮೊನ್ನೆ ಯಾರೋ ಹೇಳಿಯಿದ್ದೋ. ಆದ್ರೆ ಇಷ್ಟು ಸೀರಿಯಸ್ ಹೇಳಿ ಗೊತ್ತಿತ್ತಿಲ್ಲೆ. ಹಾಂಗಿದ್ರೆ ಭಾವ ಹುಬ್ಳಿಯಿಂದ ನಾಳೇನೇ ಬರದು ಹೇಳಾತು ಅಲ್ದಾ? ಆದ್ರೂ ನೀನು ಹಿಂಗೆಲ್ಲಾ ಒಬ್ಬಂಗೇ ಹೋಪಲೆ ಕೊಡಕಾಗಿತ್ತಿಲ್ಲೆ. ವಯಸ್ಸಾತು ಅವಂಗೆ....ಈಗ ಮೊದ್ಲಿನ ಹಾಂಗಲ್ಲಾ. ಮಂಡಿ ನೋವು ಬೇರೆ ಹೆಚ್ಚಾಜು ಹೇಳ್ತಿದ್ದ ಆವತ್ತು. ನೀ ಬೇರೆ ನಾಳೆವರೆಗೂ ಒಬ್ಬನೇ ಭೂತದ ಹಾಂಗೆ ಇಲ್ಲಿರವು ಹೇಳೂ ಅನ್ಸಿದ್ದಿಲ್ಯಾ ಅವಂಗೆ?" ಎಂದು ಕಷಾಯದ ಪರಿಮಳದ ಜೊತೆಗೆ ಸ್ವಾದವನ್ನೂ ಗುಟುಕಾಗಿ ಹೀರತೊಡಗಿದ. "ನಾ ಹೇಳಿದ್ರೆಲ್ಲಾ ಕೇಳ್ತ್ವೇನೋ ನಿನ್ನ ಭಾವ? ಇಷ್ಟಕ್ಕೂ ನಿಂಗ ಗಂಡಸ್ರು ಎಲ್ಲಿ ನಂಗ್ಳ ಮಾತು ಕೇಳ್ತ್ರಿ? ಹೆಂಗಸ್ರೆಲ್ಲಾ ಕೆಲ್ಸಕ್ಕೆ ಬಾರ್ದವು ಹೇಳೇ ನಿಂಗ ತಿಳ್ಕತ್ರಿ....ಹಾಂಗ್‌ನೋಡಿದ್ರೆ ಅವ್ರು ಮೊದ್ಲೆಷ್ಟು ನನ್ನ ಮಾತು ಕೇಳ್ತಿದ್ರು ಹೇಳು? ನನ್ನ ಮಾತು ಒಂಚೂರಾದ್ರೂ ಕೇಳಿಯಿದ್ರೆ ನಮ್ಗೆ ಈ ಕೇಡ್ಗಾಲ ಬರ್ತಿತ್ತಿಲ್ಲೆ......." ಎನ್ನುತ್ತಿರುವಂತೆಯೇ ಒಳಗೆ ಕಟ್ಟಿದ್ದ ಅಳು ಹೊರ ನುಗ್ಗಿಬಂದಂತಾಗಿ, ಅಲ್ಲಿಂದೆದ್ದು ಒಳನಡೆದು ಬಿಟ್ಟಳು. ಚಂದ್ರುವಿಗೆ ಕುಡಿಯುತಿದ್ದ ಕಷಾಯದ ಸ್ವಾದವೆಲ್ಲಾ ನಾಲಗೆಯಲ್ಲೇ ಮರಗಟ್ಟಿದಂತಾಗಿ ಗುಟುಕೂ ಗಂಟಲೊಳಗೇ ಸಿಕ್ಕಿಕೊಂಡತಹ ಅನುಭವವಾಯಿತು. ತಾನು ಇಲ್ಲಿಗೆ ಬಂದ ಉದ್ದೇಶವನ್ನು ನೆರವೇರಿಸುವುದರ ಬಗ್ಗೇ ದೊಡ್ಡ ಸಂಶಯ ಉಂಟಾಯಿತೀಗ. ಅಕ್ಕಯ್ಯನ ಬಳಿ ಆ ವಿಷಯವನ್ನು ಹೇಳುವುದೋ ಬೇಡವೋ ಎನ್ನುವ ಗೊಂದಲ. ಹೇಳದೇ ಇರಲೂ ಆಗದಲ್ಲಾ....ಇಂದಲ್ಲಾ ನಾಳೆ, ನಾನಲ್ಲದಿದ್ದರೆ ಮತ್ತಾರೋ ಬಂದು ಹೇಳಿಯೇ ತೀರುತ್ತಾರೆ. ಇಂತಹ ವಿಷಯವನ್ನು ಹೇಳಬೇಕಾದವರು ಹೇಳುವ ರೀತಿಯಲ್ಲಿ ಹೇಳಿದರೇ ಅದರ ಘೋರ ಪರಿಣಾಮ ತುಸು ಕಡಿಮೆಯಾಗುವುದು ಎಂದು ಒಳ ಮನಸು ನೀಡಿದ ಸಮಜಾಯಿಷಿ ಅವನಿಗೆ ಮತ್ತಷ್ಟು ಬೆಂಬಲ ನೀಡಿತು. ಹೇಳಿಯೇ ತೀರುತ್ತೇನೆ...ಬಂದ ಕೆಲಸ ಮಾಡಿಯೇ ಬಿಡಬೇಕೆಂದು ನಿರ್ಧರಿಸಿದ್ದೇ ತಡ, ಲೋಟವನ್ನು ಅಲ್ಲೇ ಇಟ್ಟು ಅಕ್ಕನನ್ನು ಹುಡುಕಿ ಹೊರಟ.

ಹಿತ್ತಲಲ್ಲಿ ಸವತೆ ಮಿಡಿಯ ಚಪ್ಪರಕ್ಕೆ ಕೊಟ್ಟಿದ್ದ ಕಂಬಕ್ಕೊರಗಿ ನಿಂತಿದ್ದ ಅಕ್ಕಯ್ಯನನ್ನು ನೋಡಿ ತುಂಬಾ ಬೇಸರವಾಯಿತು ಚಂದ್ರುವಿಗೆ. ಹೇಗಿದ್ದ ಅಕ್ಕಯ್ಯ ಹೇಗಾಗಿ ಹೋದಳು....ಇದಕ್ಕೆಲ್ಲಾ ಕಾರಣಳಾದ ನಯನಳ ಮೇಲೆ ಅಸಾಧ್ಯ ಕೋಪವುಕ್ಕಿ ಬಂತು. ಬೆನ್ನ ಹಿಂದೆ ಬಂದು ನಿಂತಿದ್ದ ತಮ್ಮನ ಅರಿವಿದ್ದರೂ ಆಕೆ ಚಪ್ಪದರದೊಳಗೆ ಬಿಟ್ಟಿದ್ದ ಮಿಡಿಗಳನ್ನೇ ತದೇಕಚಿತ್ತದಿಂದ ನೋಡತೊಡಗಿದಳು. "ಚಂದ್ರು ಮೊನ್ನೆ ಆ ಕೆರೆ ಮೂಲೆಲಿದ್ದ ಚಪ್ಪ್ರದಲ್ಲಿ ಸೌತೇಕಾಯಿ ಬೆಳದ್ದು ಹೇಳಿ ಇವು ಹಶಿ ಮಾಡಲೆ ತಗಬಂದ್ವೋ.. ನಾನು ಕೊಯ್ದು ಸುಮ್ನೇ ಬಾಯಿಗೆ ಹಾಯ್ಕಂಡ್ನೋ ಇಲ್ಯೋ.. ಕೆಟ್ಟ ಕಹಿ ಮಾರಾಯಾ. ಹೊರಗಿಂದ ನೋಡಲೆ ಒಳ್ಳೆ ರಸ ತುಂಬ್ಕಂಡು ಆಸೆ ಬಪ್ಪಂಗೆ ಇತ್ತು. ಆದರೆ ಒಳ್ಗೆ ಎಷ್ಟು ಕಹಿ ಇತ್ತು ಗೊತ್ತಿದ್ದಾ? ಈಗ ಈ ಚಪ್ಪರ್ದ ಸೌತೇಮಿಡಿನೂ ಬೆಳ್ದ ಮೇಲೆ ಹೇಂಗಿರ್ತೋ..ಏನೆಂತೋ...?! ನೀರಲ್ಲೇನೂ ಬೆರ್ಕೆ ಇಲ್ಲ್ಯೋ.....ನಂಗ ದಿವ್ಸಾ ಕುಡ್ಯ ಕೆರೆ ನೀರೇ ಹಾಕ್ತ್ಯ ಇದ್ಕೆಲ್ಲಾ... ಆದ್ರೂ ಆ ಚಪ್ರ ಕಹಿ ಬಿತ್ತು. ಈಗ ಈ ಚಪ್ರದ ಸೌತೇಮಿಡೀನ ತಿಂದು ನೋಡಿರೆ ಹೇಂಗೇ ಹೇಳಿ ಯೋಚಿಸ್ತಾ ಇದ್ದಿ.....ಕಹಿ ಇದ್ದ್ರೆ ನೀರೇ ಹೊಯ್ತ್ನಿಲ್ಲೆ. ಸುಮ್ನೇ ಶ್ರಮ ದಂಡ. ಚಪ್ಪರ ತೆಗ್ಸಿ ಹಾಕ್ವುಡ್ತೆ.. ಎಂತೆ ಹೇಳ್ತೆ..?"ಎಂದು ಕೇಳಿದ ಅಕ್ಕನನ್ನೇ ಬೆಪ್ಪಾಗಿ ನೋಡಿದ ಚಂದ್ರು. ಅಕ್ಕನ ಸರಳ ಮಾತೊಳಗೆ ನೂರರ್ಥ ಕಂಡಿತು ಅವನಿಗೆ. ಇದೇ ಸಂದರ್ಭವೆಂದು ಅರಿತು ತನ್ನ ಉದ್ದೇಶಕ್ಕೆ ತಯಾರಾದ. "ಅಕ್ಕಯ್ಯ ಇಲ್ಲೇ ಸ್ವಲ್ಪ ಹೊತ್ತು ಕುಂತ್ಕಂಬನ....ಹೇಂಗಿದ್ರೂ ಅಡ್ಗೆಗೆ ಅರ್ಜೆಂಟಿಲ್ಲೆ. ಬಿಸ್ಲಿಗೆ ಮೈ ಕಾಸ್ಕಂಡು ಒಳ್ಗೆ ಹೋಪನ.." ಎನ್ನುತ್ತಾ ತುಸು ದೂರದಲ್ಲಿ ಹಾಸಿದ್ದ ಕಲ್ಲು ಚಪ್ಪಡಿಯ ಕಡೆ ನಡೆಯಲು ಕಮಲಳೂ ಅವನನ್ನು ಅನುಸರಿಸಬೇಕಾಯಿತು.

"ಅಕ್ಕಯ್ಯಾ.. ನೀಯೇನು ಆ ಸೌತೆಮಿಡಿಯೆಲ್ಲಾ ಹಾಳಾಗ್ಲಿ ಹೇಳೇ ನೀರು ಹಾಕ್ತ್ಯಾ? ಇಲ್ಲೆ ಅಲ್ದಾ? ಎಲ್ಲಾ ಆ ದೈವಿಚ್ಛೆ....ವಿಧಿಯಾಟ. ಬೆಳ್ದಮೇಲೆ ಕಹಿ ಆಗ್ಗು ಹೇಳಿ ನೀ ಒಂದೊಂದು ಸೌತೆಮಿಡಿನೂ ರುಚಿ ನೋಡಲೆ ಹೋದ್ರೆ ಚಪ್ಪ್ರಾನೇ ಹಾಳಾಗ್ತು ಅಲ್ದಾ? ಅಪ್ಪುದನ್ನು ನೀನು, ಬಾವ, ನಾನು ಯಾರೂ ತಡ್ಯಲಾಗ್ತಿಲ್ಲೆ. ಕಹಿ ಹೇಳಿ ನೀ ಸೌತೇಕಾಯಿನ ಬಿಸಾಕ್ತೆ. ಆದ್ರೆ ಮನುಷ್ಯರಿಗೂ ಸೌತೆಕಾಯಿಗೂ ವ್ಯತ್ಯಾಸ ಇದ್ದು ಅಲ್ದಾ?" ಎಂದು ಪೀಠಿಕೆ ಹಾಕಲು ಒಂದು ಕ್ಷಣ ಏನೂ ತಿಳಿಯಲಿಲ್ಲ ಕಮಲಳಿಗೆ. ಆದರೆ ಆತ ಏನೋ ಮುಖ್ಯವಾದದ್ದು ಹೇಳಹೊರಟಿರುವ ಸುಳಿವು ಮಾತ್ರ ಸಿಕ್ಕಿ ಮನ ಅಸ್ಥಿರಗೊಳ್ಳತೊಡಗಿತು. ಆ ಪ್ರಮಾದ ನೆಡೆದು ವರುಷ ಒಂದು ಕಳೆದಿದ್ದರೂ ಎಲ್ಲವೂ ಎಲ್ಲರ ಮನಸಿನಲ್ಲೂ ಹಸಿರಾಗಿಯೇ ಇದೆ. ಎರಡು ತಿಂಗಳಿಂದ ಈ ಕಡೆಗೇ ತಲೆಹಾಕಿರದ ತಮ್ಮ ಇಂದು ಬೆಳಗ್ಗೆಯೇ ಬಂದಿರುವುದು, ಊಟಕ್ಕೂ ನಿಂತಿರುವುದು, ಹೀಗೆ ಮಾತಿಗೆ ಕರೆದಿರುವುದು ಎಲ್ಲವೂ ಆಕೆಗೆ ಮೊದಲೇ ಪೂರ್ವಸೂಚನೆ ಕೊಟ್ಟಿದ್ದರೂ ಸುಮ್ಮನಿದ್ದಳು. ಈಗ ಅವನ ಮಾತಿನ ಒಳಾರ್ಥ ಪೂರ್ಣ ಆಗದಿದ್ದರೂ ಅದು ಯಾವ ವಿಷಯಕ್ಕೆ ಮುನ್ನುಡಿಯಾಗಿರಬಹುದೆಂಬುದನ್ನು ಮಾತ್ರ ಅರ್ಥೈಸಿಕೊಂಡಳು.

"ನೀ ಎಂತ ಹೇಳಲೆ ಇಲ್ಲಿಗೆ ಬಂಜೆ ಚಂದ್ರು? ಸುತ್ತು ಬಳಸಿ ಮಾತಾಡಿದ್ರೆ ಹೇಳ್ವವ್ಕೂ, ಕೇಳ್ವವ್ಕೂ ಸುಸ್ತು ಜಾಸ್ತಿಯಾಗ್ತು..."ಎಂದು ತುಸು ಬಿಗಿಯಾಗಿ ಹೇಳಲು, ಅಷ್ಟೊತ್ತು ಒದ್ದಾಡುತ್ತಿದ್ದ ಚಂದ್ರು ಮೆಲ್ಲನೆ "ನಿನ್ನೆ ಶಿರಸಿ ಬಳೆ ಪೇಟೇಲಿ ನಾನು ನಮ್ಮನೆ ನಯನಾನ ನೋಡ್ದೇ.."ಎಂದು ಸಣ್ಣದೊಂದು ಬಾಂಬ್ ಹಾಕಿಯೇ ಬಿಟ್ಟನು. ಅವನ ಮಾತನ್ನು ಕೇಳಿದವಳಿಗೆ, ಒಡಲಾಳದಲ್ಲೆಲ್ಲೋ ಶುರುವಾದ ನೋವೊಂದು ಅಲೆಯಲೆಯಾಗಿ ಎದೆಯನ್ನೆಲ್ಲಾ ವ್ಯಾಪಿಸಿದ ಅನುಭವ. "ನೀ ಎಂತ ಹೇಳ್ತಾ ಇದ್ದೆ ಹೇಳೂದಾದ್ರೂ ಗೊತ್ತಿದ್ದೇನೋ ನಿಂಗೆ? ನೀನೇ ಖುದ್ದಾಗಿ ನೋಡೀದ್ಯಾ ಅದ್ನಾ? ಮಾತಾಡಿದ್ಯ ಅದ್ರ ಹತ್ರ? ಸುಮ್ನೇ ಅಡಪಡ ಸುದ್ದಿ ಎಲ್ಲಾ ತಗಬಂಜಿಲ್ಲೆ ಅಲ್ದಾ?" ಎಂದು ಬಹು ಕಷ್ಟಪಟ್ಟು ಉದ್ವೇಗವನ್ನು ಹತ್ತಿಕ್ಕಿಕೊಳ್ಳುತ್ತಾ ಕೇಳಿದಳು. "ಅಕ್ಕಯ್ಯಾ ನಾನು ನಿಂಗೆ ಈ ವಿಷ್ಯಾನ ಬೇರೆಯವ್ರ ಮಾತು ಕೇಳಿ ಹೇಳ್ತ್ನಾ? ಅಲ್ಲಾ... ನಂಗೇ ನಂಬ್ಕೆ ಬರ್ದೆ ಹೋಗಿಯಿದ್ರೆ ಹೇಳ್ತಿದ್ನಾ? ನಾನೇ ನಿಂಗೆ ಹೇಳವೋ ಬ್ಯಾಡ್ದೋ ಹೇಳಿ ಒದ್ದಾಡ್ತಾ ಇದ್ದಿದ್ದೆ ನಿನ್ನೆಯಿಂದ. ಸುಮ್ನೆ ಇರದು ತಪ್ಪು ಹೇಳಿ ಬೆಳಗ್ಗೆನೇ ಓಡಿ ಬಂದಿ. ದೇವ್ರಾಣೆಗೂ ಇದು ಸತ್ಯ. ನಮ್ಮನೆ ನೈನಾನ ನಾನು ನಿನ್ನೆ ಬಳೆಪೇಟೆಯಲ್ಲಿ ನೋಡ್ದಿ. ಬಳೆ ಅಂಗ್ಡಿ ಇಟ್ಕಂಡಿದ್ದು...ನಾನು ಅದ್ರ ನೋಡ್ತಾ ಇದ್ರೂ ಅದ್ಕೆ ನಾ ಕಂಡಿದ್ನಿಲ್ಲೆ....ಕೆಲ್ಸದಲ್ಲಿತ್ತು. ಮಾತಡ್ಸಲೆ ಹೋಗವು ಅಂದ್ಕಂಡೆ, ಆಯ್ದೇ ಇಲ್ಲೆ. ಅದೂ ಅಲ್ದೇ...ಈಗ ಅದು..."ಎಂದು ಮಾತನ್ನು ಅಷ್ಟಕ್ಕೇ ಮೊಟಕುಗೊಳಿಸಿಬಿಟ್ಟ. ತಾನಲ್ಲಿ ಕಂಡ ದೃಶ್ಯದ ಉಳಿದ ವಿವರಣೆಗಳನ್ನು ಎಷ್ಟು ಯತ್ನಿಸಿದರೂ ಅವನಿಗೆ ಹೇಳಲಾಗಲಿಲ್ಲ.

ಕೆಲಹೊತ್ತು ಇಬ್ಬರ ನಡುವೆ ಕೇವಲ ಮೌನ ಮಾತಾಡಿತು. ಆವರೆಗೂ ಯಾರ ನೆನಪು ಯಾವ ಅಡೆತಡೆಯಿಲ್ಲದೇ, ಎಲ್ಲೆಂದರಲ್ಲಿ ಕಣ್ಣೀರನ್ನು ಹೊರತರುತ್ತಿತ್ತೂ, ಅದೇ ನೆನಪು ಈಗ ಮತ್ತೆ ಜೀವಪಡೆಯಲು, ಒಂದು ರೀತಿಯ ಹುಚ್ಚು ನಿರ್ಲಿಪ್ತತೆಯನ್ನು ತಂದುಹಾಕಿತ್ತು ಕಮಲಳಲ್ಲಿ. ನಿಟ್ಟುಸಿರೊಂದನ್ನು ಹೊರಹಾಕಿದ ಕಮಲ ಏನೋ ನಿರ್ಧರಿಸಿ ಥಟ್ಟನೆ ಎದ್ದವಳು, ಜೊತೆಗೇ ಎದ್ದು ನಿಂತ ಚಂದ್ರುವಿನ ಎಡಗೈ ಹಿಡಿದು ಆತ ಕಟ್ಟಿದ್ದ ಕೈಗಡಿಯಾದರದ ಕಡೆ ನೋಡಿದಳು. ತಾನು ನಿರೀಕ್ಷಿಸಿರದ ಅಕ್ಕಯ್ಯನ ಈ ವಿಚಿತ್ರ ಮೌನ, ವರ್ತನೆಗಳಿಂದ ಚಂದ್ರು ಅಧೀರಗೊಂಡ. "ಈಗಿನ್ನೂ ಹತ್ತೂವರೆ. ಬೆಳ್ಮನೆ ಕತ್ರಿಗೆ ಹೋದ್ರೆ ಹನ್ನೊಂದೂವರೆಗೆಲ್ಲಾ ಶಿರಸಿಗೆ ಹೋಪ ಬಸ್ಸು ಸಿಗ್ತು. ಹತ್ತೇ ನಿಮಿಷದಲ್ಲಿ ತಯಾರಾಗಿ ಬರ್ತಿ. ದಯವಿಟ್ಟು ನನ್ನ ನೈನ ಇಪ್ಪಲ್ಲಿಗೆ ಕರ್ಕ ಹೋಗು. ಅಷ್ಟು ಮಾಡಿ ನೀ ಪುಣ್ಯ ಕಟ್ಕ. ಹೇಂಗಿದ್ರೂ ಇವ್ರು ಇವತ್ತು ಬರದಿಲ್ಲೆ. ಅವ್ರು ಬಂದ್ಮೇಲೆ ನಂಗೆ ಹೋಪಲೂ ಕೊಡ್ತ್ರಿಲ್ಲೆ ಬಿಡು....ಅವ್ರ ವಿರುದ್ಧ ನಂಗೆ ಹೋಪಲೂ ಮನ್ಸಾಗ್ತಿಲ್ಲೆ. ನೀ ಇವತ್ತು ಬಂದಿದ್ದೇ ಚೊಲೋ ಆತು...ಒಂದ್ಸಲ ದೂರದಿಂದನೇ ಅದ್ನ ನೋಡ್ಕಂಡು, ಸಾಧ್ಯವಾದ್ರೆ "ನೀನಾದ್ರೂ ಸುಖವಾಗಿದ್ಯಾ ಕೂಸೆ?" ಹೇಳಿ ಕೇಳವು. ಅಷ್ಟೇ... ಮತ್ತೆಂತೂ ಹೇಳದಿಲ್ಲೆ, ಕೇಳದಿಲ್ಲೆ....ಹಾಂಗೇ ಮನೆಗೆ ವಾಪಸ್ ಬರದು....ಅಕ್ಕಯ್ಯ ಹೇಳು ಅಭಿಮಾನ ಇದ್ರೆ, ಇದೊಂದನ್ನ ನೀನು ನಡ್ಸಿಕೊಡ್ಲೇ ಬೇಕು...." ಎಂದು ಕೈಮುಗಿದು ಕೇಳಿಕೊಂಡವಳೇ ಅವನ ಒಪ್ಪಿಗೆಗೂ ಕಾಯದೇ ದಾಪುಗಾಲಿಕ್ಕುತ್ತಾ ಒಳನಡೆದುಬಿಟ್ಟಳು. ಇತ್ತ ಚಂದ್ರುವಿಗೆ ಅಕ್ಕನ ಆಜ್ಞಾಪೂರಿತ ಕೋರಿಕೆಯನ್ನು ಕೇಳಿ ಆಕಾಶವೇ ಕಳಚಿಬಿದ್ದಂತಾಯಿತು. ತಾನು ಶಂಕ್ರಬಾವನಿಲ್ಲದ ಹೊತ್ತಿನಲ್ಲೇ ಈ ಸುದ್ದಿ ಕೊಟ್ಟಿದ್ದು ತಪ್ಪೇನೋ ಎಂದೆನಿಸಿತು. ‘ನಾ ಈ ದಿವ್ಸ ಬರ್ಲೇ ಬಾರ್ದಿತ್ತು...ಬಂದ್ರೂ ಈ ಸುದ್ದಿ ಹೇಳಕಾಗಿತ್ತೇ ಇಲ್ಲೆ. ಈಗ ಅಕ್ಕಯ್ಯ ಹಠಕ್ಕೆ ಬಿದ್ದು, ಅಲ್ಲಿಗೆ ಹೋಗವು ಹೇಳ್ತಾ ಇದ್ದು....ಅವ್ಳ ಹಠದ ಮುಂದೆ ನನ್ನ್ ಮಾತೊಂದೂ ನಡೀತಿಲ್ಲೆ. ಸಿಟ್ಟುಬಂದು ಒಬ್ಳೇ ಹೊರಟ್ರೂ ಆಶ್ವರ್ಯವಿಲ್ಲೆ. ಛೇ....ನಾನೊಂದು ಎಡವಟ್ಟು....ಹೊಂಡಕ್ಕೆ ಬಿದ್ದಿ ಈಗ...ಅನುಭವ್ಸು ದಡ್ಡ...’ ಎಂದೆಲ್ಲಾ ತನ್ನನ್ನು ತಾನೇ ಶಪಿಸಿಕೊಳ್ಳುತ್ತಾ ಸೋತ ಹೆಜ್ಜೆಯೊಂದಿಗೆ ಆತ ಹೊರಜಗುಲಿಗೆ ಬರುವುದಕ್ಕೂ, ಒಳಗಿಂದ ತಯಾರಾಗಿ ಕಮಲ ಹೊರಬರುವುದಕ್ಕೂ ಸಮನಾಯಿತು. ಕೈಗೆ ಸಿಕ್ಕ, ಸಾಧಾರಣವಾದ ಸೀರೆಯೊಂದನ್ನು ಸುತ್ತಿಕೊಂಡು, ಕೂದಲಿಗೆ ಬಾಚಣಿಗೆ ತಾಗಿಸಿದಂತೇ ಮಾಡಿ, ಚಪ್ಪಟೆಯಾದ ಪರ್ಸೊಂದನ್ನು ಕಂಕುಳಲ್ಲಿ ಸಿಕ್ಕಿಸಿ ಅವನಿಗಿಂತ ಮುಂದಾಗಿ ದಣಪೆಯ ಬಳಿ ನಡೆದವಳನ್ನು, ಅರೆಮನಸ್ಸಿನಿಂದ ಹಿಂಬಾಲಿಸಲಷ್ಟೇ ಆಗಿದ್ದು ಚಂದ್ರುವಿಗೆ. ಆದರೂ ಯಾವುದೋ ದೂರದಾಸೆಯಿಂದ ದಾರಿಯುದ್ದಕ್ಕೂ ತನ್ನ ಬುದ್ಧಿಯನ್ನೆಲ್ಲಾ ಖರ್ಚು ಮಾಡಿ ಸಾಕಷ್ಟು ಸಮಾಧಾನಿಸಲು ನೋಡಿದ. ಆದರೆ ಕಮಲ ಮಾತ್ರ ಜಪ್ಪಯ್ಯ ಅಂದರೂ ಹಿಂತಿರುಗಲು ಒಪ್ಪಲೇ ಇಲ್ಲ. ಟಾರು ರಸ್ತೆಗೆ ಸೇರಿದ ತುಸು ಹೊತ್ತಿನಲ್ಲೇ ಬಂದ ಶಿರಸಿಯ ಬಸ್ಸನ್ನು ತಡಮಾಡದೇ ಆಕೆ ಹತ್ತಿಬಿಟ್ಟಾಗ ಮಾತ್ರ ನಿರುಪಾಯನಾಗಿ ತಾನೂ ಏರಿದ. ತುಂಬಿದ ಬಸ್ಸು ಅಲ್ಲಲ್ಲಿ ನಿಲ್ಲುತ್ತಾ, ಜನರನ್ನು ಹೊರಹಾಕುತ್ತಾ, ಒಳತುಂಬುತ್ತಾ, ನಿಧಾನವಾಗಿ ಅವರು ಸೇರಬೇಕಿರುವ ಗಮ್ಯದ ಕಡೆ ಸಾಗುತ್ತಿದ್ದರೆ, ಕಮಲಳ ಮನದ ತುಂಬಾ ಹಳೆಯ ನೆನಪುಗಳ ಜಗ್ಗಾಟ ಶುರುವಾಯಿತು.

-೩-

ಇಪ್ಪತೈದು ವರುಷದ ಶಂಕರ ಭಟ್ಟರನ್ನು ಕೈಹಿಡಿದು ಬೆಳ್ಮನೆಗೆ ಬಂದಾಗ ಕಮಲಳಿಗೆ ಕೇವಲ ಹದಿನೆಂಟು ವರುಷ. ಅತ್ತೆ, ಮಾವ, ಗಂಡ - ಈ ಮೂವರ ಜೊತೆ ನಾಲ್ಕನೆಯವಳಾಗಿ ಸೇರಿ, ಪುಟ್ಟ ಕುಟುಂಬದಲ್ಲಿ ಬೆಚ್ಚಗೆ ಹೊಂದಿಕೊಂಡಿದ್ದ ಅವಳನ್ನು ಕ್ರಮೇಣ ಕಾಡಿದ್ದು ಕುಡಿಯೊಂದರ ಕೊರತೆ. ಮದುವೆಯಾಗಿ ಐದು ವರುಷವಾದರೂ ಬಸಿರಾಗುವ ಲಕ್ಷಣವೂ ಕಾಣದಾದಾಗ ತುಂಬಾ ಕೆಂಗೆಟ್ಟಳು. ಅತ್ತೆ ಹೇಳಿದ ವ್ರತ, ನಿಯಮಗಳನ್ನೆಲ್ಲಾ ನಿಷ್ಠೆಯಿಂದ ಮಾಡಿದ್ದರೂ ಫಲ ಸಿಕ್ಕಿರಲಿಲ್ಲ. ಇದ್ದೊಬ್ಬ ಮಗನಿಗೇ ಹೀಗಾಯಿತಲ್ಲಾ ಎಂಬ ಕೊರಗು ಹಿರಿಯರನ್ನು ಹಿಂಡುತ್ತಿತ್ತು. ಇದೇ ಕೊರಗಲ್ಲೋ ಇಲ್ಲಾ ವಯಸ್ಸಿನ ಪ್ರಭಾವದಿಂದಲೋ ಮುಂದೆ ವರುಷಗಳೊಳಗೇ ತಿಂಗಳಂತರದಲ್ಲಿ ಇಬ್ಬರೂ ಕಣ್ಮುಚ್ಚಿದರು. ಪವಾಡವೋ ಇಲ್ಲಾ ನಿಯತಿಯೋ ಎಂಬಂತೆ ಹಿರಿಯರು ಹೋದ ಎರಡು ತಿಂಗಳಲ್ಲೇ ಕಮಲಳಿಗೆ ಶುಭ ಸೂಚನೆ ಕಂಡಾಗ ಬರಡಾದ ಮನೆ-ಮನದೊಳಗೆಲ್ಲಾ ಹೊನಲು ತುಂಬಿತ್ತು. ಹೆರಿಗೆಯ ಸಮಯದಲ್ಲಿ ಬಹು ಕಷ್ಟವಾಗಿದ್ದರಿಂದ ಮುಂದೆ ಮಕ್ಕಳಾಗಬಾರದೆಂದು ವೈದ್ಯರು ತಾಕೀತು ಮಾಡಿಬಿಟ್ಟಿದ್ದರು. ಬರೋಬ್ಬರಿ ಏಳು ವರುಷಗಳ ತರುವಾಯ ಮಡಿಲು ತುಂಬಿದ ಹಾಲುಬಿಳುಪಿನ ಹೆಣ್ಣುಕೂಸನ್ನು ದಂಪತಿಗಳು ಕಣ್ತುಂಬಿಕೊಂಡು, ಪ್ರೀತಿಯಿಂದ ‘ನಯನ’ ಎಂದು ಹೆಸರಿಟ್ಟರು. ದಿನಗಳು ನಿಮಿಷಗಳಂತೇ ಓಡುತ್ತಾ ನಯನಳ ಆಟ ಪಾಠಗಳಲ್ಲೇ ತಮ್ಮ ಬದುಕಿನ ಬಹುಬಣ್ಣಗಳನ್ನು ಕಾಣುತ್ತಿದ್ದ ದಂಪತಿಗಳಿಗೆ, ಮುದ್ದು ಮಗಳು ಮಾಡಿದ್ದೆಲ್ಲಾ ಚೆನ್ನ. ಅದರಲ್ಲೂ ಭಟ್ಟರಿಗೆ ಮಾತ್ರ ಕಮಲಳಿಗಿಂತ ತುಸು ಹೆಚ್ಚೇ ಎನ್ನುವ ಪ್ರೀತಿ ಮಗಳ ಮೇಲೆ. ಆಕೆ ಏನು ಹೇಳಿದರೂ, ಏನು ಕೇಳಿದರೂ ಎಲ್ಲವುದಕ್ಕೂ ಸೈ. ಇದರಿಂದ ಒಂದು ತರಹದ ಹಠ, ಮೊಂಡುತನ ಬೆಳೆಸಿಕೊಳ್ಳತೊಡಗಿದ ಮಗಳ ವರ್ತನೆಯಿಂದ ಮೊದಲು ಎಚ್ಚೆತ್ತು ಕೊಂಡಿದ್ದು ತಾಯಿಯೇ. ಒಮ್ಮೊಮ್ಮೆ ತುಸು ಅತಿ ಎನಿಸಿದಾಗ ಪತಿಯನ್ನು ಗದರಿಸಿದರೂ ತಲೆಗೆ ಹಚ್ಚಿಕೊಳ್ಳದ ಪತಿಯ ನಿರ್ಲಕ್ಷತನ ನಯನಳ ಹಠಕ್ಕೆ ಮತ್ತಷ್ಟು ಬಲ ನೀಡತೊಡಗಿತು. ಹೈಸ್ಕೂಲ್ ವಿದ್ಯಾಭ್ಯಾಸವೇನೋ ಮನೆಯ ಹತ್ತಿರದ ಶಾಲೆಯಲ್ಲೇ ನಿರಾತಂಕವಾಗಿ ನಡೆಯಿತು. ಓದಿನಲ್ಲಿ ತಕ್ಕ ಮಟ್ಟಿಗೆ ಚುರುಕಿದ್ದ ಅವಳನ್ನು ಮುಂದೆ ಡಾಕ್ಟರ್ ಮಾಡುವ ಹಂಬಲ ಭಟ್ಟರದು. ಅದಕ್ಕೆಂದೇ ಶಿರಸಿಯ ಸರಕಾರಿ ಕಾಲೇಜಿಗೆ ಸೇರಿಸಿದೇ ಪ್ರೈವೇಟ್ ಕಾಲೇಜಿಗೆ ಹಾಕಿದ್ದಾಯಿತು. ಪಿ.ಯು.ಸಿಯನ್ನು ಶಿರಸಿಯಲ್ಲಿದ್ದ ಭಟ್ಟರ ದಾಯವಾದಿ ತಮ್ಮ ಮೋಹನನ ಮನೆಯಲ್ಲೇ ಮುಗಿಸಿದ ನಯನ ಅಂತಿಮ ವರುಷದಲ್ಲಿ ತುಂಬಾ ಕಡಿಮೆ ಮಾರ್ಕ್ಸ್ ಪಡೆದಳು. ಭಟ್ಟರೇನೋ ದುಡ್ಡು ದಂಡಮಾಡಿ ಮಗಳಿಗೆ ಡಾಕ್ಟರಿಕೆ ಕಲಿಸಲು ಮುಂದಾಗಿದ್ದರೂ, ನಯನಳೇ ಉತ್ಸಾಹ ತೋರದಿದ್ದಾಗ ಡಿಗ್ರಿಗೆ ಸೇರಿಸಿದರು. ಆದರೆ ತಕರಾರು ಬಂದದ್ದೇ ಆವಾಗ. "ನಾನು ಇನ್ನು ಮೋಹನ್ ಚಿಕ್ಕಯ್ಯನ ಮನೆಯಲ್ಲಿ ಇದ್ಕಂಡು ಹೋಗ್ತ್ನಿಲ್ಲೆ. ನಂಗೆ ಅಲ್ಲಿ ಸರಿ ಬತ್ತಿಲ್ಲೆ... ಪಾತಿಚಿಕ್ಕಮ್ಮ ಕಿರಿಕ್ ಮಾಡ್ತು. ಟ್ಯೂಷನ್ ಇದ್ದು ಲೇಟಾಗ್ತು ಅಂದ್ರೆ ಹತ್ತು ಪ್ರಶ್ನೆ ಮಾಡ್ತು.. ನಾನು ನನ್ನ ಫ್ರೆಂಡ್ ರೂಮ್‌ನಲ್ಲಿರ್ತಿ..." ಎಂದು ಎರಡು ದಿನ ಸತತವಾಗಿ ಗೋಗರೆದು, ಮುದ್ದು ಮಾಡಿ, ಅಂಗಲಾಚಿದಾಗ ಭಟ್ಟರು ಅರೆಮನಸಿನಿಂದ ಒಪ್ಪಿಗೆ ಇತ್ತರೂ ಕಮಲ ಮಾತ್ರ ಗಲಾಟೆ ಮಾಡಿದ್ದಳು. "ಹೆಣ್ಣು ಕೂಸು... ವಯಸ್ಸಿಗೆ ಬಂಜು. ಸಂಬಂಧಿಕರ ಮನೆಲಿದ್ರೆ ನಮ್ಗೂ ಸಮಾಧಾನ. ಆನು ಪಾರ್ವತಿಯನ್ನೇ ಕೇಳಿದ್ದಿ. ಇದೇ ಒಂದೆರ್ಡುಸಲ ಸುಳ್ಳು ಹೇಳಿ ಪಿಕ್ಚರಿಗೆ ಹೋಗಿತ್ತಡ. ನಾನೇನಾದ್ರೂ ಹೇಳಿದ್ರೆ ನೀವು ನನ್ನೇ ಬೈತ್ರಿ.. ಹುಡುಗು ಬುದ್ಧಿ ಸುಮ್ನಿರು ಹೇಳಿ... ಇದೆಲ್ಲಾ ಸರಿ ಬತ್ತಿಲ್ಲೆ...ಬ್ಯಾಡ ನನ್ಮಾತೊಂದ್ಸಲ ಕೇಳಿ....." ಎಂದು ಪರಿ ಪರಿಯಾಗಿ ತಿಳಿಹೇಳಿದ್ದರೂ ಭಟ್ಟರು ಮಗಳ ಮೋಹಕ್ಕೆ ಕಟ್ಟು ಬಿದ್ದು ಸುಮ್ಮನಾಗಿದ್ದರು. "ನಾವು ನಮ್ಮ ಮಗ್ಳನ್ನ ನಂಬ್ದೇ ಇನ್ಯಾರು ನಂಬ್ತ? ಅದು ನನ್ನ ಮಗ್ಳು. ನನ್ನ ವಿಶ್ವಾಸಕ್ಕೆ ಧಕ್ಕೆ ತತ್ತಿಲ್ಲೆ ಹೆದ್ರಡ. ರಾಶಿ ನಾವು ಒತ್ತಾಯ ಮಾಡ್ಲಾಗ. ಇಷ್ಟಕ್ಕೂ ಶಿರಸಿಲೇ ಇರ್ತಲ್ಲಿ....ಗೊತ್ತಾಗ್ತಾ ಇರ್ತು ವಿಷ್ಯ ಎಲ್ಲಾ... ತಲೆಗೆ ಹಚ್ಕಳಡ" ಎಂದು ತೆಪ್ಪಗಾಗಿಸಿದ್ದರು. ಇನ್ನೆರಡು ವರುಷ ತಾನೇ? ಆಮೇಲೆ ಸೂಕ್ತ ಗಂಡು ಹುಡುಕಿ, ಕೊನೆಯ ವರ್ಷ ಮುಗಿದದ್ದೇ ಮದುವೆ ಮಾಡಿದರೆ ನಿಶ್ಚಿಂತೆ ಎಂದು ಎಣಿಸಿ ಆಕೆಯೂ ಸುಮ್ಮನಾಗಿದ್ದೇ ಮುಳುವಾಯಿತು. ಮಗಳು ಡಿಗ್ರಿಯ ಎರಡನೇ ವರುಷದಲ್ಲಿದ್ದಾಗ ಕೆಳಗಿನ ಮನೆಯ ವಿಶ್ವ ತಂದ ಆ ಘೋರ ಸುದ್ದಿ ಇಬ್ಬರಿಗೂ ತಡೆಯಲಾಗದ ಹೊಡೆತವನ್ನು ನೀಡಿತ್ತು.

"ಭಟ್ರೇ...ನಿಮ್ಮ ಮಗ್ಳ ಬಗ್ಗೆ ಎಂತೋ ಸುದ್ದಿ ಸಿಕ್ತಲಿ.. ಕೇಳಿ ನಂಗಂತೂ ನಂಬಲೇ ಆಜಿಲ್ಲೆ.. ಎಲ್ಲ ಸುಳ್ಳಾದಿಕ್ಕು ಬಿಡಿ.. ಆದ್ರೂ ನೀವು ಒಂದ್ಸಲ ವಿಚಾರ್ಸದು ಒಳ್ಳೇದು.." ಎಂದು ವಿಶ್ವ ಹೇಳಿದಾಗ ನಖಶಿಖಾ ಅಂತ ಉರಿದಿದ್ದರು ಭಟ್ಟರು. "ಹಾಳಾದ್ ಜನ ಇಲಿ ಹೋತು ಅಂದ್ರೆ ಹುಲಿ ಹೋತು ಹೇಳ್ತೋ... ಹೊಟ್ಟೆ ಕಿಚ್ಚಿನ ಪಾಪಿಷ್ಟ್ರು...." ಎಂದೆಲ್ಲಾ ಕೂಗಾಡಿದ್ದರು. ಆದರೆ ಅದಾದ ಮರುದಿನವೇ ಮೋಹನ ತಂದ ಸುದ್ದಿ ದಂಪತಿಗಳಿಬ್ಬರನ್ನೂ ಅರೆಜೀವಮಾಡಿಬಿಟ್ಟಿತು. ನಮ್ಮ ಮುದ್ದು ಮಗಳು ನಾವಿಟ್ಟಿದ್ದ ವಿಶ್ವಾಸಕ್ಕೇ ಕೊಡಲಿಯಿಟ್ಟು, ಗ್ಯಾರೇಜಿನಲ್ಲಿ ಕೆಲಸ ಮಾಡುತ್ತಿರುವ ಯುವಕನೊಂದಿಗೆ ಓಡಾಡುತ್ತಿರುವುದು, ಅದೂ ಆ ಹುಡುಗನ ಹೆಸರು "ಅನ್ವರ್ ಖಾನ್" ಎಂದೂ ತಿಳಿದ ಮೇಲೆ ಕಮಲ ತಲೆ ತಿರುಗಿ ಬಿದ್ದುಬಿಟ್ಟಳು. ಇನ್ನು ಭಟ್ಟರಂತೂ ಆ ರಾತ್ರಿಯನ್ನು ಹೇಗೆ ಕಳೆದರೆಂದು ಅವರಿಗೂ ತಿಳಿಯದು. ಮರುದಿನ ಮೋಹನನ್ನೇ ಕಳುಹಿಸಿ ಹೇಗೋ ಉಪಾಯವಾಗಿ ನಯನಳನ್ನು ಮನೆಗೆ ಕರೆಸಿಕೊಂಡವರೇ ಮೊದಲ ಬಾರಿ ಮಗಳ ಮೇಲೆ ಕೈ ಮಾಡಿದ್ದರು. "ನನ್ನ ಮಾನ ಮೂರುಕಾಸಿಗೆ ಹರಾಜ್‌ಹಾಕ್ದೆ ಮನೆಹಾಳಿ.....ನಿನ್ನ ಆಯಿ ಅಂತು, ತಲೆ ಮೇಲೆ ಕೂರ್ಸಕಳಡಿ ಹೇಳಿ.. ನಾನೇ ತಪ್ಪು ಮಾಡ್ದೆ.....ಇವತ್ತು ನಿನ್ನಿಂದ ಊರಲ್ಲಿ ತಲೆ ಎತ್ತಲೇ ಆಗ್ತಾ ಇಲ್ಲೆ....ಎಲ್ಲಾ ಬಿಟ್ಟು ಆ ಹುಡ್ಗನ್ನ ಅದೂ...." ಎಂದು ಮುಂದೆ ಒಂದಕ್ಷರ ನುಡಿಯಲಾಗದೇ ಅಲ್ಲೇ ಕುಸಿದ ಅವರನ್ನು ಮೋಹನ ಹಾಗೂ ಕಮಲ ಸೇರಿ ಸುಧಾರಿಸಿದ್ದರು. ನಯನ ಮಾತ್ರ ಅಪ್ಪನ ಹೊಡೆತಕ್ಕೆ, ಕೂಗಾಟಕ್ಕೆ, ಅಮ್ಮನ ಬೈಗುಳಗಳಿಗೆ ಕಲ್ಲಾಗಿಹೋಗಿದ್ದಳು. ಅವರನ್ನು ಅವರ ಪಾಡಿಗೆ ಬಿಟ್ಟು ತನ್ನ ಕೋಣೆಯನ್ನು ಸೇರಿದ್ದಳು. ಮಗಳ ಈ ವರ್ತನೆಯೇ ಅವರಿಬ್ಬರನ್ನು ಮತ್ತೂ ಹಿಂಸಿಸಿದ್ದು. ಕಮಲಳಿಗಂತೂ ಮಗಳ ಚಿಂತೆಗಿಂತಲೂ ಗಂಡನ ಚಿಂತೆಯೇ ಹೆಚ್ಚಾಗಿ, "ಇವ್ರಿಗೆಲ್ಲಾದ್ರೂ ಹೆಚ್ಚು ಕಮ್ಮಿಯಾದ್ರೆ ನಾನೂ ಕೆರೆ ಬಾವಿ ನೋಡ್ಕತ್ತಿ.. ಅಮೇಲೆ ನೀನು ನಿಂಗೆ ಇಷ್ಟ ಬಂದಾಂಗೆ ಮಾಡು... ಅಲ್ಲಿವರೆಗಾದ್ರೂ ಮನೆಯಲ್ಲಿ ತೆಪ್ಪಗೆ ಬಿದ್ದಿರು ಮಾರಾಯ್ತಿ..." ಎಂದು ಮಗಳಲ್ಲಿ ಕಣ್ಣೀರಿಟ್ಟು ಬೇಡಿಕೊಂಡಿದ್ದರು. ಆ ದಿನದಿಂದಲೇ ನಯನಳ ಓಡಾಟ, ಓದಾಟ, ಕೊಂಡಾಟಕ್ಕೆಲ್ಲಾ ಸಂಪೂರ್ಣ ತಿಲಾಂಜಲಿಯಿಟ್ಟ ಭಟ್ಟರು ಅಕ್ಷರಶಃ ಮನೆಯೊಳಗೆ ಬಂಧಿಯಾಗಿಸಿದರು. ಸದಾಕಾಲ ಕಣ್ಣೀರಿಡುವ ಅಮ್ಮನ ಗೋಳಿಗೆ, ಅಪ್ಪನ ನೋವಿಗೆ ನಯನಳ ಕಣ್ಗಳು ಮಾತ್ರ ಹೊಸ ಪ್ರೀತಿಯ ನಲಿವಿನಿಂದ ಕುರುಡಾಗಿದ್ದವು.

ಆ ದಿನ ಇನ್ನೂ ನೆನಪಿದೆ. ಪ್ರತಿ ದಿನ ಎಂಟಕ್ಕೆಲ್ಲಾ ಎದ್ದು ಮೆತ್ತಿಯಿಂದ ಕೆಳಗಿಳಿಯುತ್ತಿದ್ದ ಮಗಳು ಇನ್ನೂ ಬಾರದಿದ್ದುದನ್ನು ಕಂಡು ಗುಮಾನಿಯಾಗಿ ಮೇಲೇರಿ ನೋಡಲು ಕಮಲಳನ್ನು ಸ್ವಾಗತಿಸಿದ್ದು ಹೊದಿಕೆಯ ಮೇಲಿದ್ದ ಅವಳ ಕಾಗದ. "ಅಪ್ಪಯ್ಯ, ಆಯಿ, ನಾನು ಅನ್ವರ್ ಜೊತೆ ದೂರ ಹೋಗ್ತಾ ಇದ್ದಿ. ನಿಂಗ್ಳಿಂದ ದೂರವಾಗಿರ್ತಿ. ನಿಂಗಕಿಗೆ ಏನೂ ತೊಂದ್ರೆ ಕೋಡ್ತ್ನಿಲ್ಲೆ. ನಂಗವು ಈ ಊರಿಂದಲೇ ದೂರ ಹೋಗ್ತಾ ಇದ್ಯೋ.....ಎಲ್ಲಿದ್ದೋ ಹೇಳಿ ಹುಡ್ಕದು ಬೇಡ. ಅವ್ನ ಮದ್ವೆಯಾಗಿ ನಾನು ಸುಖವಾಗಿರ್ತಿ ಹೇಳು ನಂಬ್ಕೆ ನಂಗಿದ್ದು. ಆಯಿ... ಸುಮ್ನೇ ಪೋಲೀಸು, ಕಂಪ್ಲೇಟು ಎಲ್ಲಾ ಗಲಾಟೆ ಬೇಡ ಹೇಳು ಅಪ್ಪಯ್ಯಂಗೆ. ನಂಗೂ ಈಗ ೨೧ ವರ್ಷ ಆಜು. ನನ್ನಿಂದಾದ ನೋವಿಗೆ ಕ್ಷಮೆ ಇರ್ಲಿ..." ಎಂಬ ನಾಲ್ಕು ಸಾಲಿನ ಪತ್ರದಿಂದ ಶಂಕರ ದಂಪತಿಗಳ ಬದುಕು ಹೊಸ ತಿರುವನ್ನು ಪಡೆಯಿತು. "ನಿಂಗವು ಸುಮ್ನಿಪ್ಪದು ಸರಿಯಲ್ಲ...ಕಂಪ್ಲೇಟು ಕೊಟ್ಟು ಅವ್ನ ಒಳಹಾಕಿಸಿ, ನಯನಾನ ಎಳ್ಕತನ್ನಿ.... ಅವಂಗೆ ಕುಮ್ಮಕ್ಕು ಯಾರು ಕೊಡ್ತಿದ್ದೊ ಗೊತ್ತಿದ್ದು... ತಕ್ಕ ಶಾಸ್ತಿ ಮಾಡನ...ಗಲಾಟೆ ಮಾಡ್ದೇ ನ್ಯಾಯ ಸಿಗದಿಲ್ಲೆ...."ಎಂದೆಲ್ಲಾ ತಲೆಗೊಂದರಂತೇ ಸಲಹೆಗಳನ್ನು ನೀಡುತ್ತಾ ಊರವರು ಬಹು ಒತ್ತಾಯಿಸಿದರೂ ಭಟ್ಟರು ಉಭಶುಭ ಅನ್ನಲಿಲ್ಲ. "ನಂಗ್ಳ ಕೂಸೇ ಸರಿ ಇಲ್ದಿದ್ಮೇಲೆ ಯಾರಿಗೇನು ಮಾಡಿ ಉಪಯೋಗ....ಇದೇ ಓಡಿ ಹೋದ್ಮೇಲೆ ಅಂವಂಗೆಂತ ಹೇಳದು? ಇದ್ನ ಒತ್ತಾಯದಲ್ಲಿ ಎಳ್ಕ ಬಂದ್ರೂ, ಮುಂದೆ ಸರಿ ಇರ್ತು ಅನ್ನೋ ಖಾತ್ರಿ ಎಲ್ಲಿದ್ದು? ಇನ್ನು ಅದ್ರ ಬಗ್ಗೆ ಎಂತದೂ ಮಾತುಕತೆ ಬೇಡ. ನಾನೂ ಕಮಲಿ ಅದು ಹುಟ್ಟೋ ಮೊದ್ಲು ಹೇಂಗಿದ್ದಿದ್ವೋ ಹಾಂಗೇ ಇರಲೆ ನೊಡ್ತ್ಯ. ನಮ್ಗೆ ಮಕ್ಕಳೇ ಇಲ್ಲೆ ಹೇಳಿ ತೆಳ್ಕತ್ಯ... ನಂಗಕಿಗೂ ಅದ್ಕೂ ಋಣ ಇಷ್ಟೇ ಇತ್ತು.. ಅದು ಇಂದು ಖಡ್ದು ಹೋತು..." ಎಂದು ಎಲ್ಲರ ಮುಂದೆ ಘೋಷಿಸಿ, ಅಂಗಳದಲ್ಲಿದ್ದ ಬಾವಿಯಿಂದ ನಾಲ್ಕು ತಂಬಿಗೆ ನೀರು ಸುರಿದುಕೊಂಡು ಒಳ ಬಂದುಬಿಟ್ಟರು. ಅಂದಿನಿಂದ ಅವರಿಬ್ಬರೂ ಬದುಕಲೇಬೇಕೆಂಬ ಹಠಕ್ಕೆ ಬಿದ್ದವರಂತೇ ಜೀವಿಸುತ್ತಿದ್ದಾರಷ್ಟೇ! ಊರೊಳಗಿನ ಯಾವ ಕಾರ್ಯಕ್ಕೂ ಹೋಗದೇ, ತಾವೂ ಯಾರನ್ನೂ ಹಚ್ಚಿಕೊಳ್ಳದೇ ಏನನ್ನೋ ಬೇಯಿಸಿಕೊಂಡು ತಿನ್ನುತ್ತಾ ಇಲ್ಲದ ಕೆಲಸಗಳನ್ನು ಹುಡುಕಿ ಮಾಡುತ್ತಾ ರಾತ್ರಿ ಬೆಳಗನ್ನು ಹಾಯಿಸುತ್ತಿದ್ದಾರೆ. ಒಮ್ಮೊಮ್ಮೆ ಪತಿ ಒಳಗಿನ ವೇದನೆಯಿಂದ ರಾತ್ರಿಯಿಡೀ ಒದ್ದಾಡುವುದನ್ನು ಕಂಡಾಗ ಕಮಲಳಿಗೆ ಮಗಳನ್ನು ಶಪಿಸಬೇಕೆಂದೆನಿಸಿದ್ದೂ ಇದೆ. ಆದರೆ ತತ್‌ಕ್ಷಣ ತಾನು ಪ್ರತಿದಿನ ಹೇಳುವ ಶಂಕರಾಚಾರ್ಯರ ಸ್ತೋತ್ರ ವಿವೇಕ ಹೇಳುತ್ತಿತ್ತು. "ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ..." ಎಂದು ಹೇಳಿದ ನಾಲಗೆಯಿಂದಲೇ ಹೇಗೆ ಶಪಿಸಿಯಾಳು ಹೆತ್ತ ಮಗಳನ್ನ! ಊರೊಳಗೇ ಅಜ್ಞಾತವಾಸಿಗಳಂತಿದ್ದ ಅವರನ್ನು ಚಂದ್ರಶೇಖರ ಮಾತ್ರ ಒಂಟಿಯಾಗಿರಲು ಬಿಟ್ಟಿರಲಿಲ್ಲ. ತಮ್ಮ ಕಷ್ಟಕಾಲದಲ್ಲಿ ಬೆಂಗಾವಲಾಗಿ, ನಾಲ್ಕು ಸಮಾಧಾನದ ಮಾತಾಡಿ, ತನ್ನ ಮನೆಯನ್ನೂ ನಿರ್ಲಕ್ಷಿಸಿ ತಿಂಗಳುಗಳ ಕಾಲ ಜೊತೆಗಿದ್ದ ಕಮಲಳ ಚಿಕ್ಕಪ್ಪನ ಮಗ ಚಂದ್ರಶೇಖರನ ಮೇಲೆ ಮಾತ್ರ ಭಟ್ಟರಿಗೂ ವಿಶೇಷ ಅಭಿಮಾನ. ಹಾಗಾಗಿ ಆತ ಮಾತ್ರ ಆಗಾಗ ಬಂದು ಹೋಗಿ ಮಾಡುತ್ತಿದ್ದ. ಕೊನೆ ಕೊಯ್ಲಿನ ಗಲಾಟೆಯಿಂದಾಗಿ ಅವನಿಗೂ ಇತ್ತೀಚಿಗೆ ಈ ಕಡೆ ಬರಲಾಗಿರಲಿಲ್ಲ. ಆದರೆ ನಿನ್ನೆ ಬಳೆಪೇಟೆಯಲ್ಲಿ ನಯನಳನ್ನು ಕಂಡ ಮೇಲೆ ಮಾತ್ರ ಸುಮ್ಮನಿರಲಾಗದೇ ಓಡಿಬಂದವ, ಮುಂದಿನ ಪರಿಣಾಮದ ವಿವೇಚನೆ ಮಾಡದೇ ಎಲ್ಲವನ್ನೂ ಅಕ್ಕನಿಗೆ ಹೇಳಿಯೂಬಿಟ್ಟ!

-೪-

ಶಿರಸಿ ಬಸ್ಟಾಂಡಿನಿಂದ ಪೇಟೆಯೊಳಗೆ ಹೋಗುವಾಗ ಇದ್ದಕ್ಕಿದ್ದಂತೇ ಕಮಲಳ ಕಾಲ್ಗಳು ನಡುಗತೊಡಗಿದವು. ಆದರೂ ಯಾವುದೋ ಒಂದು ಅದೃಶ್ಯ ಶಕ್ತಿ ಮಾತ್ರ ಆಕೆಯನ್ನು ಮುನ್ನೆಡೆಸತೊಡಗಿತು. "ಆಯಿ ನಾನು ಓದಿ ನೌಕರಿ ಮಾಡ್ತೆ.. ನಿಂಗೆ ಸೀರೆ ತತ್ತೆ..."ಎಂದು ಪುಟ್ಟ ನಯನ ಎದೆಯುಬ್ಬಿಸಿ ಅಂದೊಮ್ಮೆ ಹೇಳಿದಾಗ ಕಮಲಳ ಮನಸು ತುಂಬಿಬಂದಿತ್ತು. ಈ ಕ್ಷಣ ಅದೇಕೋ ನೆನಪಾಯಿತವಳಿಗೆ. ಇಂದು ಮಗಳ ಅಂಗಡಿಯ ಮುಂದೆ ಅವಳಿಗಾಗಿ ಹುಡುಕುವ ಕರ್ಮ ತನ್ನದಾಯಿತಲ್ಲಾ.. ಎಂದು ಒಳಗೊಳಗೇ ಬೇಯತೊಡಗಿತು ಮನಸ್ಸು. "ಚಂದ್ರು ಅದ್ರ ಅಂಗ್ಡಿ ಯಾವ್ದೋ..? ಹೆಸ್ರೆಂತು ಹೇಳು..ನಾ ಹುಡ್ಕಿ ನೋಡ್ತೆ...ನೀ ಏನೂ ತ್ರಾಸ್ ತಗಳಡ. ನಿಂಗೂ ನೂರಾಯೆಂಟು ತಾಪತ್ರಯ ಇದ್ದಿಕ್ಕು ಮನೆಕಡೆ. ನೀ ಇನ್ನು ಹೋರ್ಡು....ಇಷ್ಟು ದೂರ ಬಂದ್ಯಲಿ ಅಷ್ಟೇ ಸಾಕು.."ಎನ್ನಲು ಚಂದ್ರಶೇಖರ ಮಾತ್ರ ಸುತಾರಾಂ ಒಪ್ಪಲಿಲ್ಲ. ಆ ಒಂದು ಕ್ಷಣದಲ್ಲಿ ಕಮಲಳಿಗೆ ಯಾರೂ ತನ್ನೊಂದಿಗಿರುವ ಇಚ್ಛೆಯಾಗಲಿಲ್ಲ. ಕಳೆದು ಹೋದ ಮಗಳನ್ನು ಹುಡುಕಿ, ಒಬ್ಬಳೇ ಎದುರಿಸುವ ಹೆಬ್ಬು ಧೈರ್ಯ ಅವಳಲ್ಲಿ ಮನೆಮಾಡಿತ್ತು. "ಅಕ್ಕಯ್ಯ ನೀ ಎಂತ ಹೇಳಿದ್ರೂ ಕೇಳ್ತೆ, ಆದ್ರೆ ಇದೊಂದನ್ನ ನಾ ಕೇಳದಿಲ್ಲೆ. ಎಂತ ತಲೆ ಹೋಪ ಕಾರ್ಯನೂ ಇಲ್ಲೆ ಮನೇಲಿ. ಅಂಗ್ಡಿ ಹೆಸ್ರು ಅದೆಂತೋ ಇತ್ತಪ್ಪ....ಹಾಂ.....‘ಎ.ಕೆ. ಬ್ಯಾಂಗಲ್ ಸ್ಟೋರ್’ ಹೇಳಿ...ಅವ್ನ ಹೆಸ್ರಲ್ಲೇ ಇದ್ದು ಕಾಣ್ತು....." ಎಂದು ಮೆಲುದನಿಯಲ್ಲಿ ಹೇಳಿದಾಗಲೇ ಅವಳಿಗೆ ಆ ಹುಡುಗನ ಹೆಸರು ನೆನಪಾಗಿದ್ದು. ಚಂದ್ರು ತೋರಿದ ಮೂಲೆಗೆ ತಿರುಗಿ ಎಡಬದಿಗೆ ನೋಡುತ್ತಾ ಹೋದಂತೇ ದಪ್ಪಗೆ ಕೆಂಪಕ್ಷರದಲ್ಲಿ ಬರೆದಿದ್ದ ಅಂಗಡಿಯ ಹೆಸರು ಕಣ್ಣಿಗೆ ರಾಚಲು ಅಧೀರಳಾದಳು. ಪುಟ್ಟ ಅಂಗಡಿಯ ತುಂಬಾ ಗ್ರಾಹಕರು ತುಂಬಿದ್ದರು. ಆ ಗುಂಪೊಳಗೆ ತನ್ನ ನಯನಳನ್ನು ಹುಡುಕಿ ಅವಳ ಕಣ್ಗಳು ಸೋತವು. ಮುಂದಡಿಯಿಡಲು ಏನೋ ಹಿಂಜರಿತ. ಚಂದ್ರುವಿನ ಕೈಕಾಲುಗಳು ಆಗಲೇ ಸಂಪೂರ್ಣ ಸೋಲತೊಡಗಿದ್ದವು. ಗಂಟಲಾರಿ ಬವಳಿ ಬಂದಂತಾಗುತ್ತಿತ್ತು. ‘ಆದಷ್ಟು ಬೇಗ ಅಕ್ಕಯ್ಯನ ಇಲ್ಲಿಂದ್ ಕರ್ಕಂಡು ಹೋಗವು...ನಾ ನಿನ್ನೆ ಕಂಡ ದೃಶ್ಯ ಏನಾದ್ರೂ ಇದ್ರ ಕಣ್ಣಿಗೆ ಬಿದ್ರೆ, ಮುಗ್ದೇ ಹೋತು ಕತೆ....ಕೂಸು ಅಂಗ್ಡಿಯಲ್ಲಿ ಇಲ್ದೆ ಹೋದ್ರೆ ಸಾಕು ದೇವ್ರೇ.." ಎಂದು ಮೊರೆಯಿಡತೊಡಗಿದ. ತುಸು ಹೊತ್ತಿನಲ್ಲೇ ತುಂಬಿದ್ದ ಅಂಗಡಿ ಸ್ವಲ್ಪ ಖಾಲಿಯಾಗಲು, ಕೌಂಟರಿನಲ್ಲಿ ಕುಳಿತು ಹಣ ಎಣಿಸುತ್ತಿದ್ದ ಯುವತಿಯೊಬ್ಬಳು ಅಚಾನಕ್ಕಾಗಿ ತಲೆಯೆತ್ತಿದಳು. ಒಮ್ಮೆಲೇ ನಾಲ್ಕು ಕಣ್ಗಳು ಒಗ್ಗೂಡಲು ಇಬ್ಬರ ಮುಖವೂ ಒಬ್ಬರಿಗೊಬ್ಬರು ಕಾಣದಂತೇ ಮಂಜಾಗತೊಡಗಿತು.

"ಇಶ್ಶೀ.. ಇದೆಂಥದೇ ಕೂಸೇ, ಉದ್ದ ಕೈನ ಚೂಡಿದಾರ ಹಾಕ್ದೇ ಇಷ್ಟು ಗಿಡ್ಡ ಕೈದ್ನ ಹಾಕ್ಕಂಜೆ... ಅದೂ ಅಲ್ದೇ ಬೆನ್ನೆಲ್ಲಾ ಎಷ್ಟು ಕಾಣಸ್ತು ಈ ಅಂಗೀಲಿ.. ಬೇರೇದ್ನ ಹಾಯ್ಕೋ....ಎಂತೆಂಥ ಮಳ್ಳ್ ಪ್ಯಾಶನ್ ಬಂಜೋ ಈಗ.." ಎಂದೊಮ್ಮೆ, ಆಗಷ್ಟೇ ಪೇಟೆಯಿಂದ ಬಂದಿದ್ದ ಮಗಳನ್ನು ಗದರಿದ್ದಳು ಕಮಲ. "ಹೋಗೇ ಆಯಿ..ನಿಂಗೆಂತದೂ ಗೊತ್ತಾಗ್ತಿಲ್ಲೆ... ಈಗ ಇದೇ ಪ್ಯಾಶನ್. ಉದ್ದ ಕೈ ಹೊಲಿಸ್ಕಂಡ್ರೆ ಸೆಕೆಯಲ್ಲಿ ಬೆಂದೇ ಹೋಗ್ತಿ ನಾನು....ನೀ ಸುಮ್ನಿರು.." ಎಂದು ಬಾಯಿ ಮುಚ್ಚಿಸಿದ್ದಳು. ಈಗ ನೋಡಿದರೆ....ತಲೆಯ ಮೇಲಿನಿಂದ ಪಾದದವರೆಗೂ ಮುಚ್ಚಿರುವ ಒಂದೇ ಕಪ್ಪಂಗಿ ಕೇವಲ ಕಣ್ಣು, ಮೂಗು, ಬಾಯಿಯನ್ನು ಮಾತ್ರ ಹೊರ ಕಾಣಿಸುತ್ತಿತ್ತು. ತುಟಿಯಮೇಲಿದ್ದ ಅದೇ ಕಂದುಬಣ್ಣದ ದೊಡ್ಡ ಮಚ್ಚೆ ಮಾತ್ರ ನಯನಳ ಅಸ್ತಿತ್ವವದ ಗುರುತಾಗಿತ್ತು. ಆದರೆ ಮೇಲಿನಿಂದ ಕೆಳಗೆ ನೋಡಿದರೆ ಏನೊಂದೂ ವ್ಯತ್ಯಾಸ ತೋರದಂತೇ ಮುಚ್ಚಿದ್ದ ಬುರ್ಖಾ ಕೂಡ ಉಬ್ಬಿರುವ ಹೊಟ್ಟೆಯನ್ನು ಅಡಗಿಸಲು ಅಸಮರ್ಥವಾಗಿತ್ತು. ಬೋಳು ಹಣೆಯ, ಬಿಳಿಪೇರಿದ್ದ ಮೊಗದ ಮಗಳನ್ನು ಹೆತ್ತ ಕರಳು ಗುರುತಿಸಿದರೆ ಒಂದಡಿ ದೂರದಲ್ಲಿದ್ದ ಹೆತ್ತತಾಯಿಯನ್ನು ಗುರುತುಹಿಡಿಯಲು ಕ್ಷಣ ತಡವಾಗಲಿಲ್ಲ ನಯನಳಿಗೆ. ಅದೇನನ್ನಿಸಿತೋ ಏನೋ, ಹಿಂದೆ ಸರಿಸಿದ್ದ ತೆಳು ಪರದೆಯನ್ನು ಥಟ್ಟನೆ ಎಳೆದ ನಯನ, ಆವರೆಗೂ ಕಾಣುತ್ತಿದ್ದ ತನ್ನ ಮೊಗವನ್ನೂ ಅಡಗಿಸಿಕೊಳ್ಳಲು, ಮೊದಲೇ ಮಂಜಾಗಿದ್ದ ಕಣ್ಗಳಿಗೆ ಮತ್ತೂ ಮಬ್ಬಾಯಿತು ಮಗಳ ಮುಖ. ಆದರೂ ಮನಸು ಕೇಳದೇ, ತನ್ನನ್ನು ಎಳೆಯುತ್ತಿದ್ದ ತಮ್ಮನ ಕೈಗಳನ್ನೂ ದೂಡಿ ಮುಂದಡಿಯಿಟ್ಟ ಕಮಲ, ಅವಳ ಹೆಸರೆತ್ತಿ ಕೂಗಬೇಕೆನ್ನುವಾಗಲೇ ಒಳಗಿಂದ "ನಸ್ರೀನ್...ಜರಾ ಅಂದರ್ ಆವೋ... ಇನ್ಕೋ ಕುಚ್ ಚಾಹಿಯೇ ದೇಖೊ..." ಎನ್ನುವ ಗಂಡಸಿನ ಧ್ವನಿಗೆ ತಿರುಗಿದ ಮಗಳನ್ನು ಕಂಡು ಪೂರ್ತಿ ಕತ್ತಲಾವರಿಸಿದಂತಾಗಿ ಅಲ್ಲೇ ಕುಸಿದು ಬಿದ್ದಳು.

[೨೦೧೦ರ ‘ಅಕ್ಕ’ ಕಥಾಸ್ಪರ್ಧೆಯಲ್ಲಿ ಆಯ್ಕೆಯಾಗಿ, ಆಯ್ಕೆಗಾರರಲ್ಲೋರ್ವರಾಗಿದ್ದ ವೀಣಾ ಶಾಂತೇಶ್ವರ್ ಅವರ ಮೆಚ್ಚುಗೆಗೆ ಪಾತ್ರವಾದ ಹಾಗೂ "ದೀಪ ತೋರಿದೆಡೆಗೆ" ಕಥಾಸಂಕಲದಲ್ಲಿ ಸೇರ್ಪಟ್ಟ ಕಥೆ]


-ತೇಜಸ್ವಿನಿ ಹೆಗಡೆ.

ಗುರುವಾರ, ನವೆಂಬರ್ 18, 2010

ಮಿಷ್ಟಿ

ಸುಜಯಳ ಹೊಸ ಮನೆಯನ್ನು ಹುಡುಕುವುದೇನೋ ಅಷ್ಟು ಕಷ್ಟವಾಗಲಿಲ್ಲ. ತೀರಾ ಒಳದಾರಿಗಳಿಲ್ಲದ್ದರಿಂದ ರಿಕ್ಷಾದವನೂ ಕಷ್ಟಪಡದೇ ನೇರ ಮನೆಯ ಮುಂದೇ ತಂದು ನಿಲ್ಲಿಸಿದ್ದ. ಸುಜಯ ಶ್ರೀಕಾಂತ್ ದಂಪತಿಗಳಿಗೆ ವಿಷ್ ಮಾಡಿ, ತಂದಿದ್ದ ಪುಟ್ಟ ಉಡುಗೊರೆಯನ್ನು ಕೊಟ್ಟು, ಗೃಹ ಪ್ರವೇಶಕ್ಕೆಂದು ಬಂದಿದ್ದ  ಜನರ ಗುಂಪಿನಿಂದ ದೂರಾಗಿ ಮನೆಯ ಹಿತ್ತಲಿನ ಮೂಲೆಯಲ್ಲಿದ್ದ ಮಾವಿನಮರದ ಕೆಳಗೆ ಹಾಸಿದ್ದ ಕಲ್ಲು ಬೆಂಚಿನ ಮೇಲೆ ಕುಳಿತು ಇನ್ನೇನು ಉಸ್ಸೆನ್ನಬೇಕು...ದೊಡ್ಡ ನಗು ಅಲೆ‌ಅಲೆಯಾಗಿ ನನ್ನ ಕಿವಿಯನ್ನಪ್ಪಳಿಸಿ ದೃಷ್ಟಿಯನ್ನು ಒಡತಿಯೆಡೆಗೆ ಸೆಳೆಯಿತು. ಹಳದಿ ಬಣ್ಣದ ಖಾದಿ ಸೆಲ್ವಾರ್ ತೊಟ್ಟು ಕೈಯಲ್ಲಿ ಒಂದು ಬೌಲ್ ಹಿಡಿದು ಅದರೊಳಗಿದ್ದ ಬಿಳಿ ಬಣ್ಣದ ಸಿಹಿ ತಿಂಡಿಯನ್ನು ಒಂದೊಂದಾಗಿ...ಇಡಿಯಾಗಿ ಬಾಯೊಳಗಿಟ್ಟು ನುಂಗಿ ಕಣ್ಮುಚ್ಚಿ ಆಸ್ವಾದಿಸುತ್ತಾ... ಪಕ್ಕದಲ್ಲಿದ್ದವರ ಮಾತಿಗೆ ದೊಡ್ಡದಾಗಿ ನಗುತ್ತಾ ನಿಂತಿದ್ದ ಆ ಹಾಲು ಬಿಳುಪಿನ ಹುಡುಗಿಯಲ್ಲಿ ಮೊದಲ ನೋಟದಲ್ಲೇ ಅದೇನೋ ಆಕರ್ಷಣೆ ಮೂಡಿತು. ಹರಡಿದ್ದ ಸೊಂಪಾದ ಕರಿ ಕೂದಲಿಗಿಂತಲೂ ನಗುವಾಗ ಎರಡೂ ಕೆನ್ನೆಗಳಲ್ಲಿ ಮುಡುತ್ತಿದ್ದ ಗುಳಿಗಳು ಆಕೆಯನ್ನು ಮತ್ತೂ ಚೆಲುವೆಯನ್ನಾಗಿಸಿದ್ದವು. ಒಂದು ಕೋನದಲ್ಲಿ ಹಿಂದಿಯ ನಟಿ ಶರ್ಮಿಳಾ ಟಾಗೋರಳನ್ನು ಹೋಲುತ್ತಿದ್ದ ಆಕೆಯ ಮಾತು ಆ ಗುಂಪಿನಲ್ಲೇ ದೊಡ್ಡದಾಗಿತ್ತು. ಸುಮಾರು ಇಪ್ಪತ್ತರ ಆಸುಪಾಸಿನಲ್ಲಿರಬೇಕು ಹುಡುಗಿ ಎಂದೆನಿಸುತ್ತಿರುವಾಗಲೇ ಸುಜಯ ಲಘುವಾಗಿ ಬೆನ್ನಿಗೆ ಗುದ್ದಿದಳು. "ಏನೇ.. ನಾನೂ ಆಗ್ನಿಂದ ಗಮನಿಸ್ತಾನೇ ಇದ್ದೀನಿ.. ನೀನು ಅವ್ಳನ್ನೇ ನೋಡ್ತಾ ಇದ್ದೀಯಾ..? ಹೂಂ...ನಿನ್ನ ತಪ್ಪಲ್ಲಮ್ಮಾ....ನಮ್ಮ್ ಹುಡ್ಗಿ ಹಾಗೇ ಇದ್ದಾಳೆ ಬಿಡು... ಯಾರೇ ಆಗ್ಲಿ ಒಮ್ಮೆ ನೋಡಿದ್ಮೇಲೆ ನೋಡ್ತಾನೇ ಇರ್ತಾರೆ....ಅವ್ಳು ಶ್ರೀಕಾಂತ್ ಚಿಕ್ಕಮ್ಮನ ಮೊಮ್ಮಗ್ಳು. ಇವ್ರ ತಂಗೀದು ಲವ್ ಮ್ಯಾರೇಜ್....ಕಲ್ಕತ್ತಾದ ಹುಡ್ಗ ಶಾಂತನು ಬ್ಯಾನರ್ಜಿ....ಅವ್ರ ಮಗ್ಳೇ ಈ ಸುಂದರಿ...ತುಂಬಾ ಒಳ್ಳೇ ಹುಡ್ಗಿ...ಸದ್ಯ ಬೆಂಗಳೂರಲ್ಲೇ ನರ್ಸಿಂಗ್ ಕೋರ್ಸ್ ಮಾಡ್ತಿದ್ದಾಳೆ...ಆಗಾಗ ಬಂದು ಹೋಗಿ ಮಾಡ್ತಿರ್ತಾಳೆ...ಅಲ್ಲಿಯವಳಾದ್ರೂ ಕನ್ನಡ ಅಂದ್ರೆ ತುಂಬಾ ಇಷ್ಟ...ಒಂದು ವರ್ಷದಲ್ಲೇ ಕನ್ನಡವನ್ನ ತುಂಬಾ ಚೆನ್ನಾಗಿ ಮಾತಾಡೋಕಲ್ದೇ ಬರೆಯೋಕೂ ಕಲ್ತಿದ್ದಾಳೆ ಗೊತ್ತಾ!...ಬಾ ಪರಿಚಯ ಮಾಡಿಸ್ತೀನಿ ನಿಂಗೆ.." ಎಂದು ಸ್ವಲ್ಪ ನನ್ನೆಳೆದುಕೊಂಡೇ ಕರೆದೊಯ್ದಳು. "ಮಿಷ್ಟಿ.... ಈಕೆನೇ ನಾನು ನಿಂಗೆ ಹೇಳಿದ್ದ ನನ್ನ್ ಬೆಸ್ಟ್ ಫ್ರೆಂಡ್...ಇಲ್ಲಿಯ ವಿಮೆನ್ಸ್ ಕಾಲೇಜಿನಲ್ಲಿ ಕನ್ನಡ ಸಾಹಿತ್ಯದ ಪ್ರೊಫೆಸರ್...ಹೇಳಿದ್ನಲ್ಲಾ ಮೊದ್ಲೇ....ಹಾಂ.... ಕನ್ನಡ ಭಾಷೆಯ ಇತಿಹಾಸ ತಿಳ್ಕೋಬೇಕು ಅಂತಿದ್ಯಲ್ಲಾ... ಪರಿಚಯ ಮಾಡ್ಕೋ.. ತುಂಬಾ ಚೆನ್ನಾಗಿ ಹೇಳ್ಕೊಡ್ತಾಳೆ...."ಎಂದು ಪರಿಚಯಿಸಿದಾಗ ಮೊದಲೇ ಅರೆಬಿರಿದಿದ್ದ ತುಸು ಉದ್ದದ ಬಾಯನ್ನು ಸಂಪೂರ್ಣ ತೆರೆದು ನಗುತ್ತಾ ಕೈ ಕುಲುಕಲು ಆ ಗುಳಿಗಳಿಗಿಂತ ನನ್ನ ಸೆಳೆದದ್ದು ಅವಳ ಹೆಸರು... ಈ ಹೆಸ್ರನ್ನು ಎಲ್ಲೂ ಕೇಳಿದ ನೆನಪಾಗಲಿಲ್ಲ. ನನ್ನ ಮನದ ಡಿಕ್ಷನರಿಯನ್ನೆಲ್ಲಾ ಕೆದಕಿದರೂ ಸರಿಯಾದ ಅರ್ಥ ಹೊಳೆಯದೇ ಚಡಪಡಿಸಿದೆ...ಕೇಳೋಣವೆಂದು ತಿರುಗಿದರೆ ಸುಜಯ ಅದೆಲ್ಲೋ ಮಾಯ!.... ಹುಡುಗಿ ನನ್ನೆಡೆಯೇ ನೊಡುತ್ತಿದ್ದಳು.. ಬಹುಶಃ ನನ್ನ ಮಾತಿಗಾಗಿಯೇ ಕಾಯುತ್ತಿದ್ದಳು. ಮೊದಲ ಬಾರಿಯೇ ಹೆಸರಿನರ್ಥ ಕೇಳೋದು ಸರಿಯೆನಿಸಲಿಲ್ಲ. "ಮಿಸ್ಟಿ... ನೀನು ತುಂಬಾ ಮುದ್ದಾಗಿದ್ದೀಯಮ್ಮಾ... ಕನ್ನಡ ಭಾಷೆಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋ ನಿನ್ನ ಆಸೆ ಕೇಳಿ ತುಂಬಾ ಸಂತೋಷವಾಯ್ತು... ಏನು ಓದ್ತಾ ಇದ್ದೀಯಾ?" ಎಂದು ಕೇಳಿದೆ. "ದೀದಿ..ನಾನು ನಿಮ್ಮನ್ನ ದೀದಿ ಅಂತೀನಿ ಪರ್ವಾಗಿಲ್ಲತಾನೆ? ನಮ್ಮಲ್ಲಿ ನಮ್ಗಿಂತ ದೊಡ್ಡೋರನ್ನ ಹೀಗೇ ಕರ್ಯೋದು...ನೀವ್ಯಾಕೆ ಬೇಡಾ ಅಂತೀರ ಅಲ್ವಾ? ಹಾಂ.. ದೀದಿ ನನ್ನ ಹೆಸ್ರು ಮಿಸ್ಟಿ ಅಲ್ಲಾ.. ಮಿಷ್ಟಿ ಅಂತಾ... ಗೊತ್ತು ಬಿಡಿ.. ಮೊದ್ಲು ಎಲ್ರಿಗೂ ಕಷ್ಟ ಆಗೊತ್ತೆ ಹೇಳೋಕೆ. ನಮ್ಮ ಬಂಗಾಲಿ ಭಾಷೇನೇ ಹಾಗೆ ಉಚ್ಛರಿಸೋಕೆ ಸ್ವಲ್ಪ ಕಷ್ಟ..."ಎಂದವಳೇ ನನ್ನ ಉತ್ತರಕ್ಕೂ ಕಾಯದೇ ಬೌಲಿನಲ್ಲಿ ಉಳಿದಿದ್ದ ಒಂದೇ‌ಒಂದು ಸ್ವೀಟನ್ನು ಹಾಗೇ ತೆಗೆದು ಬಾಯಿಗೆ ಹಾಕಿಕೊಂಡು ಮತ್ತೆ ಕಣ್ಮುಚ್ಚಿದಳು. ಅದೇನೆನ್ನಿಸಿತೋ ತಟ್ಟೆಂದು ಕಣ್ತೆರೆದವಳೇ "ಸ್ಸಾರಿ ದೀದಿ.. ನಿಮ್ಮನ್ನ ಕೇಳೋಕೇ ಮರ್ತೆ.. ನಾನೊಂದು ಈ ರೊಸೊಗೊಲ್ಲದ ಹುಚ್ಚಿ.. ತಿಂತಾ ಇದ್ರೆ ಎಲ್ಲಾ ಮರ್ತು ಹೋಗೋತ್ತೆ...ನಾನೇ ಕಳ್ದು ಹೋಗ್ತಿನಿ ಅಂದ್ರೆ ನಂಬ್ತೀರಾ... ನಿಮ್ಗೆ ಬೇಕಾ ರೊಸೊಗೊಲ್ಲ? ತರ್ಲಾ ನಿಮ್ಗೂ?... ಈ ಸ್ವೀಟು ನನ್ನ ಫೇವರೇಟ್... ಹಾಗೆ ನೋಡಿದ್ರೆ ನನಗೆ ಈ ಹೆಸ್ರಿಟ್ಟಿದ್ದು ಸರಿಯಾಗೇ ಇದೆ ಬಿಡಿ..."ಎಂದು ಮತ್ತೆ ದೊಡ್ಡದಾಗಿ ನಕ್ಕಾಗ ನನಗೂ ನಗು ಮೂಡಿತು, ಅವಳು ರಸಗುಲ್ಲಾವನ್ನು ಉಚ್ಚರಿಸಿದ ರೀತಿಗೆ.....ಅವಳ ಮಾತೊಳಗಿನ ಮುಕ್ತತೆಗೆ. ಇದೇ ತಕ್ಕ ಸಮಯ ನನ್ನ ಕೊರೆಯುತ್ತಿರುವ ಪ್ರಶ್ನೆಗೆ ಉತ್ತರ ಪಡೆಯಲು ಎಂದೆಣಿಸಿ "ಓಹೋ... ಹಾಗಿದ್ರೆ ನಿನ್ನ ಹೆಸ್ರಿನ ಅರ್ಥ "ರಸಗುಲ್ಲಾ" ಅಂತಾನಾ?"ಎಂದಿದ್ದೇ ತಡ ಪಕಪಕನೆ ನಕ್ಕಿದ್ದು ನೋಡಿ ನನಗೆ ತುಸು ಆಭಾಸವೆನಿಸಿತು. "ದೀದಿ ತಪ್ಪು ತಿಳಿಯಬೇಡಿ... ನೀವು ನನ್ನ ಹೆಸರೇ ರೊಸೊಗೊಲ್ಲ ಅಂದ್ರಲ್ಲಾ ಅದ್ನ ಕೇಳಿ ಖುಶಿನೂ ಆಯ್ತು.. ತಮಾಷೇನೂ ಅನ್ನಿಸ್ತು. ನನ್ನ ಬಾಬಾ...ಪ್ಚ್...ಅಂದ್ರೆ ನನ್ನ ಪಪ್ಪನೂ ಹೀಗೇ ಕರೀತಾರೆ ನನ್ನ ರೊಸೊಗೊಲ್ಲ ಅಂತಾ...ಆದ್ರೆ ನನ್ನ ಹೆಸರಿನರ್ಥ ಅದಲ್ಲಾ....ಬಂಗಾಲಿಯಲ್ಲಿ "ಮಿಷ್ಟಿ" ಅಂದ್ರೆ ಸ್ವೀಟ್ ಅಂತ...ಸ್ವೀಟಿ ಅಂತಾನೂ ತಿಳ್ಕೋಬಹುದು.. ಹಾಗೆ ನೋಡೋಕೆ ಹೋದ್ರೆ ನಾನು ಹಾಗೇ ಇದ್ದೀನಲ್ವಾ? ಹಾಂ..ತರ್ಲಾ ನಿಮ್ಗೆ ಸ್ವೀಟ್?" ಎಂದು ಕೇಳಿದವಳೇ ಹೊರಟದ್ದು ನೋಡಿ ಭಯವಾಯಿತು. ಒಂದು ರಾಶಿ ತಂದು ನನ್ನ ಬಾಯಿಗೂ ತುರುಕಿಬಿಟ್ಟರೇನು ಗತಿಯಪ್ಪಾ ಎಂದೆಣಿಸಿ ಆಕೆಯ ಕೈ ಹಿಡಿದು ಕುರ್ಚಿಯಲ್ಲಿ ಕೂರಿಸಿದೆ. "ಬೇಡಮ್ಮಾ... ನಂಗೆ ಸಿಹಿ ಅಂದ್ರೆ ಅಷ್ಟಿಷ್ಟ ಅಲ್ಲಾ... ಅದೂ ಅಲ್ದೇ ಈಗಿನ್ನೂ ನಂದು ಊಟಾನೂ ಆಗಿಲ್ಲ. ನಿನ್ನ ಹೆಸರಿನ ಅರ್ಥ ತುಂಬಾ ಚೆನ್ನಾಗಿದೆ. ಹೌದು.. ನೀನು ಏನು ಓದಿದ್ದೀಯಾ? ಕೊಲ್ಕೊತ್ತಾದಲ್ಲೇ ಇರೋದಾ ನಿಮ್ಮ ಮನೆಯವ್ರೆಲ್ಲಾ?"ಎಂದು ಕೇಳಿದ್ದೇ ತಡ ಅವಳಲ್ಲಿ ಉತ್ಸಾಹ ಹೆಚ್ಚಿತು.

"ದೀದಿ ನಾವು ಅಂದ್ರೆ ಬಾಬಾ, ಮಾ, ಥಾಕುಮಾ....ಅಂದ್ರೆ ನಮ್ಮಜ್ಜಿ, ಆಶೀಶ್ ನನ್ನ್ ತಮ್ಮ...ಎಲ್ಲಾ ಅಲ್ಲೇ ಇರೋದು. ನಾನು ಪಿ.ಯು.ಸಿ ನಂತ್ರ ನರ್ಸಿಂಗ್ ಕೋರ್ಸ್ ಮಾಡೋಕೆ ಇಷ್ಟಪಟ್ಟೆ. ಮೊದ್ಲು ಅಪ್ಪ ಬೇಡ ಅಂದ್ರು.....ಆಮೇಲೆ ಒಪ್ಕೊಂಡ್ರು...ಬೆಂಗ್ಳೂರಿಗೆ ಬರ್ಬೇಕು ಅಂತಿದ್ದೆ.....ಹೇಗಿದ್ರೂ ಸುಜಯ ಆಂಟಿ ಇಲ್ಲೇ ಇದ್ರಲ್ಲಾ...ಅದ್ಕೇ ಇಲ್ಲಿಗೇ ಬಂದ್ಬಿಟ್ಟೆ. ಸೋ ಈಗೊಂದೆರಡು ವರ್ಷದಿಂದ ಇಲ್ಲೇ ಇದ್ದೀನಿ. ರಜೆಯಲ್ಲಿ ಮಾತ್ರ ಕೊಲ್ಕತ್ತದಲ್ಲಿ. ದೀದಿ ನಂಗೆ ನಿಮ್ಮ್ ಕನ್ನಡ ಭಾಷೆ ತುಂಬಾ ಇಷ್ಟವಾಯ್ತು. ಆದ್ರೆ ನಂಗಿನ್ನೂ ಹೆಚ್ಚು ಕಲೀಬೇಕು ಇದ್ನ ಅಂತ ಆಸೆ. ಅದ್ಕೆ ನಿಮ್ಮ ಹಲ್ಪ್ ಬೇಕು. ಹೇಗಿದ್ರೂ ನೀವು ಇದ್ರಲ್ಲಿ ಎಕ್ಸ್‌ಪರ್ಟ್ ಅಲ್ವಾ? ಹಾಂ... ಡೋಂಟ್ ವರಿ... ಇದ್ರ ಬದ್ಲು ನಾನು ನಿಮ್ಗೆ ನಮ್ಮ ಬಂಗಾಳಿ ಭಾಷೆ ಕಲ್ಸ್ ಕೊಡ್ತೀನಿ.. ರೈಟ್?" ಎಂದು ಕೇಳಿದಾಗ ಸುಮ್ಮನೆ ನಕ್ಕರೂ ಒಳಗೊಳಗೇ ತುಸು ಭಯವಾಗತೊಡಗಿತು. ಹಠ ಹಿಡಿದು ಬಂಗಾಳಿ ಕಲಿಸತೊಡಗಿದರೆ.... ಒಳ್ಳೇ ಫಚೀತಿ ಬಂತಲ್ಲಪ್ಪಾ ಎಂದೆಣಿಸಿ ತಪ್ಪಿಸಿಕೊಳ್ಳಲು ಯೋಚಿಸಿದೆ. ಆದರೆ ಆಕೆ ನಿಶ್ಚಯಿಸಿಯಾಗಿತ್ತು ನನ್ನ ಬೆಂಬಿಡದಿರಲು. ಅಂತೂ ಅಲ್ಲಿಂದ ಹೊರಡುವ ಮೊದಲು ಸುಜಯಳ ಶಿಫಾರಿಸಿನ ಮೇಲೆ ನಾನು ಅರೆಮನಸಿನಿಂದಲೇ ಅವಳಿಗೆ ಬೇಕಾದ ಮಾಹಿತಿ ನೀಡಲು ಒಪ್ಪಬೇಕಾಯಿತು. ಮರುದಿನವೇ ಗೊತ್ತಾಯಿತು....ಅವಳ ಪಿ.ಜಿ. ನನ್ನ ಮನೆಯ ಹತ್ತಿರದಲ್ಲೇ ಇರುವುದೆಂದು. ಸುಜಯಳಿಂದ ಅಡ್ರೆಸ್ ಪಡೆದವಳೇ ಮನೆಗೆ ಹಾರಿ ಬಂದಿದ್ದಳು. ಮೊದಲಿನಿಂದಲೂ ಏಕಾಂಗಿಯಾಗಿದ್ದು, ಏಕಾಂಗಿತನವನ್ನೇ ಅಪ್ಪಿದ್ದ ನನಗೆ ಸ್ವಲ್ಪ ಸಮಯ ಕಿರಿಕಿರಿ ಎನಿಸತೊಡಗಿದ್ದು ಹೌದು. ಆದರೆ ಅದು ಹೇಗೋ ಏನೊ... ಅಷ್ಟು ದೊಡ್ಡ ವಯಸ್ಸಿನ ಅಂತರವಿದ್ದರೂ, ಎರಡು ತಿಂಗಳಾಗುವಷ್ಟರಲ್ಲಿ ಹುಡುಗಿ ತುಂಬಾ ಆಪ್ತವಾಗಿ, ನನ್ನಾವರಿಸಿಕೊಂಡು ಬಿಟ್ಟಳು. ಮುಗ್ಧತೆ ತುಂಬಿದ ಮುಕ್ತವಾದ ಮಾತು, ನಗೆ, ನಡತೆ, ತುಂಟತನ ಎಲ್ಲವೂ ಇಷ್ಟವಾದವು. ಅದೊಂದು ದಿನ ಇದ್ದಕ್ಕಿದ್ದಂತೆ ಆಕೆ "ದೀದಿಮೋನಿ...ಎಲ್ಲಿದ್ದೀರಾ?"ಎನ್ನುತ್ತಾ ಒಳಹೊಕ್ಕಲು ಆಶ್ಚರ್ಯವಾಯಿತು. ಹೊಸ ಹೆಸರನ್ನಿಡುವ ಹುನ್ನಾರವೇನೋ ಎಂದೆನಿಸಿ ಹುಶಾರಾದೆ. "ಏನಮ್ಮಾ ಮಿಸ್ಟಿ ಇದು... ದೀದಿ ಅಂತಿದ್ದೋಳು ದೀದಿಮೋನಿ.. ಅಂತಿದ್ದೀಯಲ್ಲಾ.. ಏನೋ ಹೊಸ ಕಿಲಾಡಿತನಕ್ಕೆ ಹೊರ್ಟಂತಿದೆ.." ಎಂದು ನಗಲು ಹುಸಿಮುನಿಸು ತೋರಿದಳು. "ಓ ಬಾಬಾ...ತುಮಿ ಕೊಬೆ ಬಾಂಗ್ಲಾ ಶೀಕ್ಬೆ?"ಎಂದವಳೇ ಲಘುವಾಗಿ ತನ್ನ ಹಣೆ ಚಚ್ಚಿಕೊಳ್ಳಲು ನಾನು ಕಕ್ಕಾಬಿಕ್ಕಿಯಾದೆ. ನನ್ನ ಸ್ಥಿತಿಯ ಅರಿವಾಗಿರಬೇಕು.."ದೀದಿಮೋನಿ... ನಾನು ಹೇಳಿದ್ದು ಬಾಂಗ್ಲಾದಲ್ಲಿ.. ಅದ್ರ ಅರ್ಥ "ಅಯ್ಯೋ ದೇವ್ರೇ ನೀವ್ಯಾವಾಗ ಬಾಂಗ್ಲಾ ಭಾಷೆ ಕಲೀತೀರಾ ಅಂತಾ.. ಅಷ್ಟೇ.. ಹ್ಮ್ಂ... ಎಷ್ಟು ಸಲ ಹೇಳಿದ್ದೀನಿ ನನ್ನ ಹೆಸ್ರು ಮಿಸ್ಟಿ ಅಲ್ಲಾ ಮಿಷ್ಟಿ.... ಇರ್ಲಿ ಬಿಡಿ.. ನಿಮ್ಗೆ ಕಲಿಸ್ತಾ ನಾನೇ ಮರ್ತು ಬಿಡ್ತೀನೇನೋ ನನ್ನ ಭಾಷೇನಾ.."ಎಂದು ಗಲ್ಲ ಉಬ್ಬಿಸಿದಾಗ ಮತ್ತೂ ಚಿಕ್ಕವಳಾಗಿ ಕಂಡಳು. "ನಂಗೆ ವಯಸ್ಸಾಯ್ತಮ್ಮ.. ಈಗೀರೋ ನಾಲೆಜ್ ನೆನ್ಪಿಟ್ಕೊಂಡ್ರೆ ಸಾಕಾಗೊತ್ತೆ.. ಹೊಸತನ್ನ ಕಲೀಯೋಕೆ ಮನ್ಸಿಲ್ಲಾ ಅಂತಲ್ಲಾ.. ಯಾಕೋ ಉತ್ಸಾಹ ಹೆಚ್ಚು ಬರೊಲ್ಲಾ ನೋಡು... ಆದ್ರೂ ಖಂಡಿತ ಪ್ರಯತ್ನಿಸ್ತೀನಿ.. ನಂಗೂ ಹೊಸ ಭಾಷೆ ಕಲ್ತಾಂಗೆ ಆಗೊತ್ತೆ.."ಎಂದಾಗ ಮತ್ತೆ ಪುಟಿಯುವ ಉತ್ಸಾಹ ಅವಳಲ್ಲಿ. "ಹಾಂ.. ಈಗ ಹೇಳ್ತೀನಿ ಕೇಳಿ.. ನಮ್ಮಲ್ಲಿ ತುಂಬಾ ಆತ್ಮೀಯರನ್ನು... ಪ್ರೀತಿ ಪಾತ್ರರನ್ನು.. ದೊಡ್ಡವರಾಗಿದ್ದರೆ ದೀದಿಮೋನಿ ಅಂತಾರೆ... ಹೀಗಂದ್ರೆ ನಿಮ್ಮಲ್ಲಿ ದೊಡ್ಡಕ್ಕ ಅಂತಾಗುತ್ತೇನೋ.. ಹೌದು.. ಹಾಗೇ ಆಗೊತ್ತೆ.. ಹೆಚ್ಚು ಗೌರವ ಕೊಟ್ಟು ಕರೆಯೋದು... ನಂಗೆ ನೀವು ನನ್ನ ದೊಡ್ಡಕ್ಕನ ಹಾಗೇ ಕಾಣಿಸ್ತೀರಾ ಅದಕ್ಕೇ ಹಾಗೆ ಕರ್ದೆ.. ಇನ್ನು ಹೀಗೇ ಕರೀತಿ ಸರೀನಾ? ನೀವ್ಯಾಕೆ ಬೇಡ ಅಂತೀರಾ ಬಿಡಿ.."ಎಂದು ಎಂದಿನಂತೇ ನನ್ನ ಉತ್ತರಕ್ಕೂ ಕಾಯದೇ ತೀರ್ಮಾನ ಕೊಟ್ಟುಬಿಟ್ಟಳು. ಅಂದಿನಿಂದ ನನಗೂ ಅವಳ ಭಾಷೆಯ ಬಗ್ಗೆ ಕುತೂಹಲ ಮೂಡತೊಡಗಿತು. ನಾನೂ ಡಿಕ್ಷನರಿ ಹಿಡಿದುಕೊಂಡು ಕೆಲವೊಂದು ಸರಳ ಪದಗಳನ್ನು ತಿಳಿದುಕೊಳ್ಳತೊಡಗಿದೆ. ಒಂಟಿತನ ಕಳೆಯಲು ಎಂದಾದರೂ ಟಿ.ವಿ. ಚಾನಲ್‌ಗಳನ್ನು ತಿರುವಿ ಹಾಕುವ ಅಭ್ಯಾಸ ನನಗೆ. ಅಂದೂ ಹಾಗೆ ಮಾಡುತ್ತಿರುವಾಗ ಹಠಾತ್ತನೆ ನನ್ನ ರಿಮೋಟ್ ಬಾಂಗ್ಲಾ ಚಾನಲ್‌ಗೆ ಬಂದು ನಿಂತಿತ್ತು. ಯಾವುದೋ ಧಾರಾವಾಹಿ ನಡೆಯುತ್ತಿತ್ತು. ಭಾಷೆ ಅರ್ಥವಾಗದಿದ್ದರೂ ವೇಷ ಭೂಷಣ ನೋಡ ತೊಡಗಿದೆ. ಅಲ್ಲಿಯ ರೀತಿಯಲ್ಲೇ ಉಡಿಗೆ ಹಾಕಿದ್ದ ಆ ಮಹಿಳೆಯಲ್ಲಿ ನನ್ನನ್ನು ಸೆಳೆದದ್ದು ಅವಳ ಎಡಗೈಯೊಳಗಿದ್ದ ಮೂರು ಬಳೆಗಳು. ಒಂದು ಕಬ್ಬಿಣದಂತಹ ಬಳೆ, ಅದರ ನಂತರ ಬಿಳಿ ಶಂಖದಂಥದ್ದು, ತದನಂತರ ಕೆಂಪು ಬಣ್ಣದ ಬಳೆ. ತುಂಬಾ ಸುಂದರವೆನಿಸಿತು.

"ಮಿಷ್ಟಿ....ನಿಮ್ಮಲ್ಲಿ ವಿಶೇಷರೀತಿಯ ಮೂರು ಬಳೆಗಳನ್ನು ಹಾಕ್ತಾರಲ್ಲಾ.. ಮೊನ್ನೆ ಟಿವಿ.ಯಲ್ಲಿ ನೋಡ್ದೆ... ನೀನ್ಯಾಕೆ ಹಾಕಲ್ಲಾ? ತುಂಬಾ ಚೆನ್ನಾಗಿತ್ತು.. ನಿಂಗೆ ಮತ್ತೂ ಚೆನ್ನಾಗಿ ಕಾಣ್ಸೊತ್ತೆ....ಹಾಕಿ ಬಾ ಒಮ್ಮೆ.." ಎಂದಾಕ್ಷಣ ಆಕೆ ಬಿದ್ದೂ ಬಿದ್ದೂ ನಗ ತೊಡಗಿದಳು. ನನಗೆ ಅವಮಾನವಾದಂತೆನಿಸಿ ನಾನೆಲ್ಲಿ ತಪ್ಪಿದೆನೆಂದು ಯೋಚಿಸತೊಡಗಿದೆ. ಅದೂ ಅಲ್ಲದೇ ಈ ಸಲ ನಾನು ಅವಳ ಹೆಸರನ್ನೂ ಸರಿಯಾಗಿಯೇ ಉಚ್ಚರಿಸಿದ್ದೆ! "ದೀದಿಮೋನಿ....ನೀವೊಂದು ಪೆದ್ದುವೇ ಸರಿ... ನಮ್ಮಲ್ಲಿ ಆ ಬಳೆಗಳನ್ನು ಮದುವೆಯದಿನ ವಧುವಿಗೆ ಹಾಕ್ತಾರೆ. ಆ ಮೂರು ಬಳೆಗಳು ಎಡಗೈನಲ್ಲಿದ್ದರೆ ಅವಳಿಗೆ ಮದುವೆಯಾಗಿದೆ ಅಂತ ಅರ್ಥ....ಒಳ್ಳೇ ದೀದಿಮೋನಿ...ನಾನೇನಾದ್ರೂ ಅದ್ನ ಹಾಕ್ಕೋಬೇಕು...ಅದ್ನ ನೀವು ನೋಡ್ಬೇಕು ಅಂದ್ರೆ ನಂಗೆ ಮದ್ವೆ ಆಗ್ಬೇಕು..ಅದೂ ಬೇಗ.."ಎಂದು ಕಣ್ಣು ಹೊಡೆಯಲು ನನಗೂ ಜೋರು ನಗು ಬಂತು...ಜೊತೆಗೆ ಒಂದು ತುಂಟ ಆಲೋಚನೆಯೂ ಮೂಡಿತು. "ಹೌದು ಮಿಸ್ಟಿ.... ನೀನೂ ಬೇಗ ಮದ್ವೆಯಾಗ್ಬಿಡು....ಆಗ ಆ ಬಳೆಗಳಲ್ಲಿ ನಿನ್ನ ನೋಡ್ಬೇಕೂ ಅನ್ನೋ ನನ್ನಾಸೆನೂ ಈಡೇರೊತ್ತೆ..."ಎಂದೆ. ಆಕೆಯೂ ಪಟ್ಟು ಬಿಡದೇ..."ಆಯ್ತು ದೀದಿಮೋನಿ.... ಹುಡ್ಗನ್ನ ನೀವೇ ಬೇಗ ಹುಡ್ಕಿ....ನಂಗೆ ಟೈಮಿಲ್ಲ... ಅದೂ ಅಲ್ದೇ ನೀವು ದೊಡ್ಡೋರು... ಚೆನ್ನಾಗಿ ಹುಡ್ಕ್ತೀರಾ...ನನ್ನ ಮನೆಯವರಿಗೂ ಕಷ್ಟ ತಪ್ಪೊತ್ತೆ..."ಎಂದಾಗ ಚುರುಕಾದೆ. "ಸರಿಯಮ್ಮಾ.... ಹಾಗೇ ಮಾಡೋಣವಂತೆ....ಸದ್ಯಕ್ಕೆ ಹುಡ್ಗನ ಹೆಸ್ರನ್ನ ಆರ್ಸಿಟ್ಟಿದ್ದೀನಿ....ಆದಷ್ಟು ಬೇಗ ಅದೇ ಹೆಸ್ರಿನ ಹುಡ್ಗನ್ನೂ ಹುಡ್ಕಿ ತರ್ತಿನಿ ಬಿಡು..."ಎನ್ನಲು ಅವಳ ಮೊಗದಲ್ಲಿ ಅತಿ ಕುತೂಹಲಮಿಳಿತ ಅಪೂರ್ವ ಕಾಂತಿ ಕಂಡೆ. ಒಳಗೊಳಗೇ ಖುಶಿಯೂ ಆಗುತಿತ್ತು... ಗುಂಡಿಗೆ ಬೀಳುತ್ತಿದ್ದಾಳೆಂದು. "ದೀದಿಮೋನಿ...ಏನು ಹೆಸ್ರು ಹೇಳಿ ಪ್ಲೀಸ್? ಅದೂ ಅಲ್ದೇ ಮೊದ್ಲು ಹೆಸ್ರನ್ನ ಆರ್ಸೋದು ಅಂದ್ರೆ ಏನರ್ಥ? ಅದೇನು ಹೇಳಿ.."ಎಂದು ಗೋಗರೆಯಲು ಗೆದ್ದ ನಗು ನನ್ನಲ್ಲಿ. "ನೋಡಮ್ಮಾ.. ನೀನು ಮಿಷ್ಟಿ... ಸೋ... ನಿನ್ನ ಹುಡ್ಗನ ಹೆಸ್ರು ‘ತೆತೋ’ಬ್ಯಾನರ್ಜಿನೋ ಇಲ್ಲಾ ಮುಖರ್ಜಿನೋ ಎಂದಾದ್ರೆ ಚೆನ್ನಾ ಅಲ್ವಾ? ಎಷ್ಟೆಂದ್ರೂ ಪೊಸಿಟಿವ್ ಅಟ್ರಾಕ್ಟ್ಸ್ ನೆಗಿಟಿವ್ ಏನಂತೀಯಾ?" ಎಂದು ನಗು ತಡೆಹಿಡಿಯಲು ಅವಳಿಗೆ ಮೊದಲು ಹೊಳೆಯಲಿಲ್ಲ. ಹೊಳೆದನಂತರ ಹೊಟ್ಟೆ ಹಿಡಿದುಕೊಂಡು ನಗತೊಡಗಿದಳು. ‘ಕಹಿ’ಗೆ ಬಂಗಾಲಿಯಲ್ಲಿ ‘ತೆತೋ’ ಎನ್ನುತ್ತಾರೆಂದು ಮೊದಲೇ ತಿಳಿದುಕೊಂಡಿದ್ದು ಸಾರ್ಥಕವಾಯಿತೆಂದು ಬೀಗಿದೆ. ಕೆಲವು ದಿನಗಳಲ್ಲೇ ನನ್ನ ವಯಸ್ಸು ತುಂಬಾ ಕಡಿಮೆಯಾದಂತೆ ಭಾಸವಾಯಿತು.

ಕನ್ನಡ ಭಾಷೆಯನ್ನು ಮಿಷ್ಟಿ ಹಿಡಿದುಕೊಂಡಷ್ಟು ಆಪ್ತವಾಗಿ ಬಂಗಾಳಿ ಭಾಷೆ ನನ್ನ ಹಿಡಿದುಕೊಳ್ಳದಿದ್ದರೂ, ಆಕೆ ಮಾತ್ರ ನನ್ನೊಳಗೇ ಇಳಿದು ಬಿಟ್ಟಿದ್ದಳು. ಆ ಗುಳಿ ಗಲ್ಲಗಳ ಒನಪು, ಮಳೆಯಂತೇ ಸುರಿಯುವ ಮಾತು, ಅವಳ ಮಾತಿಗೂ, ಮನಃಸ್ಥಿತಿಗೂ ಕನ್ನಡಿ ಹಿಡಿವಂತಿದ್ದ ಅವಳ ಹರಡಿದ ಕೂದಲು, ಅಂಟಿಕೊಂಡಷ್ಟೂ ಹತ್ತಿರವಾಗುವ ಆಕೆಯ ಆಪ್ತತೆ - ಎಲ್ಲವೂ ಅರಿಯದ ಮಮತೆಯನ್ನು ಆಕೆಯೆಡೆ ಮೂಡಿಸಿತ್ತು. ಈಕೆಯನ್ನು ಮೊದಲಬಾರಿ ನೋಡಿದಾಗಲೇ ಹದಿನೈದು ವರುಷದ ಕೆಳಗೆ ಆಕ್ಸಿಡೆಂಟ್ ಒಂದರಲ್ಲಿ ದೂರಾದ ತನ್ನವರಲ್ಲಿ ಓರ್ವಳಾಗಿದ್ದ ಪುಟ್ಟ ತಂಗಿಯ ನೆನಪಾಗಿತ್ತು. ಅದಕ್ಕೆ ಕಾರಣವೂ ಅದೇ ಗುಳಿ ಬೀಳುವ ಗಲ್ಲ...ಆಕೆಗೂ ಗುಳಿಗೆನ್ನೆಗಳಿದ್ದವು...ನಗುವಾಗ ಆಳವಾಗಿ ಕಣ್ಸೆಳುವ ಗುಲಾಬಿ ಗಲ್ಲಗಳು.....ಅಪ್ಪ, ಅಮ್ಮ, ಅಕ್ಕ ಎಲ್ಲರನ್ನೂ ಬಲಿತೆಗೆದುಕೊಂಡ ವಿಧಿ ನನ್ನ ಪ್ರೀತಿಯ ತಂಗಿಯನ್ನೂ ದೂರವಾಗಿಸಿತ್ತು. ಅದೇ ಕೊರಗು ಇಷ್ಟು ವರುಷವೂ ನನ್ನ ಜೊತೆಗಾರನಾಗಿದ್ದು.....ಬೇರೆ ಯಾರ ಸಂಗವೂ ಬೇಡವೆನಿಸಿತ್ತು ನನಗೆ. ಆದರೆ ಇಂದು ತಂಗಿ ಬದುಕಿದ್ದರೆ ಇವಳಷ್ಟೇ ವಯಸ್ಸಾಗಿರುತ್ತಿತ್ತಲ್ಲಾ ಎಂದೆಣಿಸಿಯೋ ಏನೋ....ಮಿಷ್ಟಿ ಬಹು ಬೇಗ ಆತ್ಮೀಯಳಾದಳೆನ್ನಬಹುದು. ನನ್ನ ಹುದುಗಿದ್ದ ಭಾವಗಳಿಗೆ ನೀರೆರೆದವಳೂ ಇವಳೇ ಅಲ್ಲವೇ? ದೀದಿಮೋನಿ..ಎಂದು ಬಾಯ್ತುಂಬ ಕರೆದು ಹೊಸ ಬಂಧವನ್ನೇ ಬೆಸೆದುಬಿಟ್ಟಳು ಪೋರಿ.

ಆದರೆ ಅದೇಕೋ ಎಂತೋ ಇತ್ತೀಚಿಗೆ ಆಕೆ ತೀರಾ ಇಳಿದು ಹೋದಂತೆ ಕಾಣಿಸುತ್ತಿದ್ದಳು. "ನೀನು ಈಗ ಮಿಷ್ಟಿ ತಿನ್ನೋದನ್ನೇ ಬಿಟ್ಟಿದ್ಯಾ ಹೇಗೆ? ಅಥವಾ ಬೆಂಗ್ಳೂರಲ್ಲಿ ನಿನ್ನ ಇಷ್ಟದ ರೊಸೊಗೊಲ್ಲ ಸಿಕ್ತಾ ಇಲ್ವಾ? ತುಂಬಾ ಸಣ್ಣಗಾಗ್ತಿದ್ದೀಯಾ... ಕಣ್ಣೂ ಆಳಕ್ಕೆ ಬಿದ್ದಂತಿದೆ.."ಎಂದ ನನ್ನ ಕಳಕಳಿಗೂ ಅದೇ ದೊಡ್ಡ ನಗು. "ದೀದಿಮೋನಿ.. ನೀವೂ ನನ್ನಮ್ಮನಂತೇ... ಅತೀ ಕಾಳಜಿ ಮಾಡ್ತೀರ... ಹೌದು.. ನಿಮ್ಮ ಕಣ್ಣು ಬಿತ್ತು ನೋಡಿ... ಅದ್ಕೇ ಸಿಹಿ ತಿಂತಾ ಇಲ್ಲಾ ಈಗ... ನೀವೊಂದು.." ಎಂದು ಹಾರಿಸಿ ತನ್ನ ರೂಮಿಗೆ ಹಾರಿದವಳು ವಾರವಾದರೂ ಪತ್ತೆಯಾಗದಿರಲು ದಿಗಿಲಾಯಿತು. ಇನ್ನು ಕಾಯಲು ಅರ್ಥವಿಲ್ಲವೆಂದೆಣಿಸಿದವಳೇ ಈ ಮೊದಲು ಕೆಲವು ಬಾರಿ ಭೇಟಿ ಕೊಟ್ಟಿದ್ದ ಅವಳ ರೂಮಿಗೇ ಹೊರಟೆ. ಕೇವಲ ಹದಿನೈದು ನಿಮಿಷದ ಹಾದಿ.....ತುಸು ದೂರ ಕ್ರಮಿಸಿದ ಕೂಡಲೇ ದೂರದಲ್ಲೆಲ್ಲೋ ಗುಡುಗಿದ ಸದ್ದಾಗಲು, ಮೇಲೆ ನೋಡಿದರೆ ಆಗಸದ ತುಂಬಾ ಕರಿಮೋಡಗಳ ಮೆರವಣಿಗೆ. ಕೊಡೆ ತರದ ನನ್ನ ಮರೆವಿಗೆ ಮನದಲ್ಲೇ ಬೈದುಕೊಳ್ಳುತ್ತಾ ಆಕೆಯ ರೂಮೊಳಗೆ ಹೊಕ್ಕೆ. ನೋಡಿದರೆ ಈಕೆ ಮಿಷ್ಟಿಯೇ ಹೌದೇ ಎನ್ನುವಷ್ಟು ಸಣ್ಣಗಾಗಿದ್ದಳು! ಮೊದಲಬಾರಿ ಆಕೆಯನ್ನು ನೋಡಿದಾಗ ತೊಟ್ಟಿದ್ದ ಅದೇ ಹಳದಿ ಖಾದಿ ಸೆಲ್ವಾರ್ ಹಾಕಿದ್ದಳು. ಕೈಯಲ್ಲೊಂದು ಪುಸ್ತಕವಿತ್ತು. ದೃಷ್ಟಿ ಮಾತ್ರ ಎಲ್ಲೋ ನೆಟ್ಟಿತ್ತು. ಕೆನ್ನೆಯೊಳಗಿನ ಗುಳಿ ದೊಡ್ಡದಾಗಿತ್ತೋ ಇಲ್ಲಾ ತುಂಬಿದ ಗಲ್ಲಗಳೇ ಗುಳಿ ಬಿದ್ದಿದ್ದವೋ ತಿಳಿಯದಂತಾಯಿತು. ಸದಾ ಹರಡಿರುತ್ತಿದ್ದ ಕೂದಲೂ ಇಂದು ಕಟ್ಟಿತ್ತು. ಸಣ್ಣಗೆ ನಡುಕವೊಂದು ಬೆನ್ನ ಹುರಿಯಲ್ಲಿ ಹುಟ್ಟಿ ಒಡಲಾಳದೊಳಗೆ ಹಬ್ಬಿದಂತಹ ಅನುಭವ. ಸದ್ದಿಲ್ಲದೇ ಒಳಹೋದವಳೇ ಅವಳ ಪಕ್ಕದಲ್ಲಿದ್ದ ಸ್ಟೂಲಿನ ಮೇಲೆ ಕುಳಿತು ಆಕೆಯ ತೊಡೆಯ ಮೇಲಿದ್ದ ಅವಳ ಎಡೆಗೈಯನ್ನು ಮೃದುವಾಗಿ ಮುಟ್ಟಿದೆ. ಬೆಚ್ಚಿದ ಆಕೆ ನನ್ನ ನೋಡಿದವಳೇ ಅದೇ ಮಾಸದ ದೊಡ್ಡ ನಗುವನ್ನು ಕಾಣಿಸಲು ತುಸು ತಂಪಾಯಿತು. "ಏನ್ ಹುಡ್ಗೀನೇ... ಇಷ್ಟು ದಿನಾ ಆದ್ರೂ ಬಂದಿಲ್ಲ.. ಹೆಸ್ರಿಗೆ ಮಾತ್ರ ದೀದಿಮೋನಿ... ನೋಡೋಕೆ ಬರೋಕೆ ಆಗೊಲ್ಲ ಅಲ್ವಾ? ಕಾದು ಕಾದು ಸಾಕಾಗಿ ನಾನೇ ಬಂದೆ ನೋಡು... ಈ ವಯಸ್ಸಲ್ಲಿ ನನ್ನೇ ಓಡಾಡಿಸ್ತೀಯಾ ನೀನು.. ಹೌದು ಏನಾಯ್ತು ಅಂತಾ ಹಿಗಿದ್ದೀಯಾ? ಹುಶಾರಿಲ್ವಾ?" ಎಂದು ಅವಳಂತೇ ಪಟಪಟನೆ ಮಾತಾಡಲು ಅವಳು ಕೊಟಿದ್ದು ಅದೇ ನಗು... ಗುಳಿಗಳು ಮಾತ್ರ ಮೊದಲಿಗಿಂತಲೂ ಆಳವಾದಂತೆನಿಸಿದವು.

"ದೀದಿಮೋನಿ... ನೀವು ಎಷ್ಟು ಟೆನ್ಷನ್ ಮಾಡ್ಕೋತೀರಪ್ಪಾ.. ಒಳ್ಳೇದಲ್ಲಾ ನೋಡಿ... ಹ್ಮ್ಂ.... ನಿಮ್ಗೊಂದು ಶಾಕಿಂಗ್ ನ್ಯೂಸ್... ನನ್ನ ಮದ್ವೆ ಆಯ್ತು..."ಎಂದು ನಗಲು ಬೆಸ್ತು ಬಿದ್ದೆ. ಆದರೆ ನೇರವಾಗಿ ನೋಡಲು, ಅವಳ ನಗುವಿನೊಳಗೆ ತುಂಟತನಕ್ಕಿಂತಲೂ ಬೇರೇನೋ ಭಾವ ಗೋಚರಿಸಿದಂತಾಯಿತು. "ನೋಡು.. ತಮಾಷೆ ಸಾಕು.. ನನ್ನ ಪ್ರಶ್ನೆಗಳಿಗೆ ಉತ್ತರ ಬೇಕು... ಮದ್ವೆ ಅಂತೆ... ಆಗೋಯ್ತಂತೆ.. ಯಾವಾಗ? ಯಾರು ಹುಡ್ಗ ಅದ್ನೂ ಹೇಳು.."ಎಂದು ಗದರಿದೆ. "ದೀದಿಮೋನಿ... ಹುಡ್ಗ ನಿಮ್ಗೆ ಚೆನ್ನಾಗಿ ಗೊತ್ತು... ಇನ್‌ಫಾಕ್ಟ್ ಅವ್ನ ಹೆಸ್ರನ್ನ ನೀವೇ ಮೊದ್ಲು ಹೇಳಿದ್ದು.."ಎನ್ನಲು ತುಂಬಾ ಗೊಂದಲ ನನ್ನಲ್ಲಿ. "ಯಾರೇ ಅದು? ಸುಮ್ನೆ ತಮಾಷೆ ಬೇಡ..."ಎಂದಿದ್ದೇ ತಡ ಎದ್ದು ನಾಲ್ಕು ಹೆಜ್ಜೆ ಹೋಗಿ ನನಗೆ ಬೆನ್ನಾಗಿಸಿದವಳೇ "ದೀದಿಮೋನಿ ಆ ಹುಡ್ಗನ ಹೆಸ್ರೂ ‘ತೆತೋ’... ಹೌದು...ಈ ಹೆಸ್ರಿನ ಜೊತೆನೇ ಇನ್ನು ನನ್ನ ವಾಸ.... ಇದ್ರೊಳ್ಗೆ ಮಿಷ್ಟಿ ಕಳ್ದೇ ಹೋದ್ಲು... ಇನ್ನು ಮಿಷ್ಟಿಗೆ ಅಸ್ತಿತ್ವನೇ ಇಲ್ಲಾ ಗೊತ್ತಾ... ಈ ಹುಡ್ಗನ ಜೊತೆಗೇ ನನ್ನ ಮದ್ವೆ ಮೊದ್ಲೇ ಆಗೋಗಿತ್ತು. ಎಷ್ಟು ದಿನದ ಹಿಂದೆ ಅಂತಾನೇ ಗೊತ್ತಿಲ್ಲಾ...ನಂಗೆ ಗೊತ್ತಾಗಿದ್ದು ವಾರದ ಹಿಂದೆ.... ತುಂಬಾ ಸುಸ್ತು ಅಂತಾ ಟೆಸ್ಟಿಗೆ ಹೋಗಿದ್ದೆ ನನ್ನ ಪರಿಚಯ ಡಾಕ್ಟರ್ ಹತ್ರ... ಕೆಲವೊಂದು ಟೆಸ್ಟ್ ನಂತ್ರ ಗೊತ್ತಾಯ್ತು ನೊಡಿ.... ನಂಗೆ ಸಿವಿಯರ್ ಡಯಾಬಿಟಿಸ್ ಇದೆ ಅಂತ... ಸೋ.. ಇನ್ಮುಂದೆ ಕಂಪ್ಲೀಟ್ಲೀ ನೋ ಟು ಮಿಷ್ಟಿ... ಯೆಸ್ ಟು ಓನ್ಲೀ ತೆತೋ.....ಅಂದ್ರೆ ಏನು ಹೇಳಿ ನೋಡೋಣ......" ಎಂದು ತಿರುಗಿದವಳೇ ಪಕಪಕನೆ ನಗಲು, ಹೊರಗೆ ಸೋನೆ ಮಳೆ ಶುರುವಾಯಿತು.....ಒಳಗೆಲ್ಲಾ ಮುಸಲಧಾರೆ!


***ನವೆಂಬರ್ ೨೧ರ ಕರ್ಮವೀರದಲ್ಲಿ ಪ್ರಕಟಿತ***


-ತೇಜಸ್ವಿನಿ ಹೆಗಡೆ.


ಬುಧವಾರ, ನವೆಂಬರ್ 17, 2010

ಸಾವಿನಾಚೆಯ ಬದುಕು...

ಗೋಲಿಯಾಡುತಿದ್ದ ಪುಟ್ಟನ ಕೈಯಿಂದ
ಗೋಲಿಯೊಂದುರುಳಿ ಮಾಯವಾಗಲು,
ಅಳುತ್ತಳುತ್ತಾ ಅಮ್ಮನ ಬಳಿ ಓಡಿದ.
‘ಅಳದಿರು ಕಂದಾ, ಕೊಡುವೆ ಹೊಸ ಗೋಲಿಯನ್ನೊಂದ’
ಎಂದು ತಬ್ಬಿ ಮುತ್ತನಿತ್ತ ಅಮ್ಮನ ಕಣ್ಗಳೊಳಗೆ
ಪುಟ್ಟನಿಗೇನೂ ಕಾಣಿಸಲೇ ಇಲ್ಲ!

ನಗುನಗುತ್ತಾ ಆಡ ಹೊರಟ ಪುಟ್ಟನ
ತಲೆಯೊಳಗೆಲ್ಲಾ ಹೊಸ ಗೋಲಿಯದೇ ಯೋಚನೆ....
ಆಕೆಯ ಮುಚ್ಚಿದ ಕಣ್‌ರೆಪ್ಪೆಗಳಂಚಿಂದ
ಅವ್ಯಾಹತ ನೀರ ಧಾರೆಯ ಕೋಡಿ....
ಆಕೆಯೂ ಬೇಡುತಿಹಳು ಎರಡೇ ಎರಡು ಗೋಲಿಗಳ
ಎರಡಿಲ್ಲದಿರೆ ಬೇಡ, ಒಂದಾದರೂ ಬೇಕಾಗಿದೆ,
ಗೋಲಿಯಾಡುವ ಪುಟ್ಟನ ಮುದ್ದು ಮೊಗವ ಸೆರೆ ಹಿಡಿಯಲು

ಪುಟ್ಟನ ಆಟದ ಗೋಲಿಗಳೋ
ತಟ್ಟೆಂದು ತರಬಲ್ಲಂಥವುಗಳೇ.
ಆದರೆ ಅವಳ ನಿರ್ಜೀವ ಖಾಲಿ ಕಣ್ಗಳಿಗೆ,
ಉಸಿರಿಲ್ಲದ ದೇಹದ ಗೋಲಿಗಳೇ ಜೀವ ತುಂಬ ಬಲ್ಲವು!
ತಡವರಿಸುವ ಕೈಗಳಿಗೆ, ಎಡವುವ ಕಾಲ್ಗಳಿಗೆ
ದಾರಿದೀವಿಗೆಯಾಗಬಲ್ಲ ಗೋಲಿಗಳ ದಾನವನ್ನಿತ್ತರೆ,
‘ಆತನ’ ಸನ್ನಿಧಿಯಲ್ಲೊಂದು ಸ್ಥಾನ ಖಾಯಂ ಆಗುವುದಂತೆ.

- ತೇಜಸ್ವಿನಿ ಹೆಗಡೆ

ಬುಧವಾರ, ನವೆಂಬರ್ 10, 2010

ಆಲಾಪಿನಿ


Courtesy - http://media.photobucket.com/
ನಿನ್ನ ಖಾಲಿ ಬದುಕೊಳಗೆ ರಂಗುಗಳನ್ನು
ನಾ ತುಂಬುತ್ತಾ ತುಳುಕುತ್ತಾ
ನನ್ನೊಳಗಿನ ನಾನು ಬಣ್ಣಗೆಟ್ಟು
ಖಾಲಿಯಾಗತೊಡಗಿದೆನಲ್ಲಾ...
ನೀ ಮಿಡಿದ ಶ್ರುತಿ ಲಯಕ್ಕೆ
ನಾ ತಾಳ ಹಾಕುತ್ತಾ ಕುಣಿಯುತ್ತಾ
ಅಪಸ್ವರವೊಂದು ನಡುವೆಲ್ಲೋ ಹುಟ್ಟಿ
ಮೆಲ್ಲನೆ ಕುಂಟತೊಡಗಿದೆನಲ್ಲಾ...

ಸಾಗರಿಯ ಬಿಳಿಯಂಚಿನ ಕಪ್ಪು ಸೀರೆ ಬೇಡ
ಸುಗಂಧಿಯ ಸುವಾಸನೆಯ ಮತ್ತೂ ಬೇಡ
ಮುಡಿಗೆ ಮಿನುಗುವ ತಾರೆಗಳು ಬೇಡ
ಕಿವಿಗಳಿಗೆ ವಜ್ರದೋಲೆಯೂ ಬೇಡ

ನನ್ನೊಳಗಿನ ಮಾಸಲು ಭಾವಗಳಿಗೆ
ನಿನ್ನ ಪ್ರೀತಿಯ ರಂಗುಗಳ ತುಂಬು
ನನ್ನೆದೆಯ ವೀಣಾವಾದನಕ್ಕೆ
ನೀ ರಾಗಮಾಂತ್ರಿಕನಾಗಿ ಸಾಥ್ ನೀಡು
ಇನ್ನೇನೂ ಕೇಳೆನು, ನಾನು ನಿನ್ನೇನೂ ಬೇಡೆನು
ಸಪ್ತವರ್ಣಗಳೊಳಗಿನ ಸುಪ್ತ ಸ್ವರಗಳ
ನುಡಿಸಿ ಬಿಡು ಒಮ್ಮೆ!

-ತೇಜಸ್ವಿನಿ

ಶುಕ್ರವಾರ, ನವೆಂಬರ್ 5, 2010

ಹಚ್ಚಿಡುವೆ ಸವಿ ನೆನಪುಗಳ ದೀಪ

ಹತ್ತು ವರುಷದ ಹಿಂದೆಯೂ ಹೀಗೇ ಬೆಳದಿಂಗಳಿತ್ತು. ದೀಪದ ಸಾಲುಗಳು ನಗುತ್ತಿದ್ದವು. ಗಂಟೆ ಹತ್ತಾದರೂ ನಿದ್ದೆ ಬಾರದ ಕಣ್ಗಳಿಗೆ ಸೋಲು ತರಲು ಕಿಟಿಕಿಯಿಂದ ಇಣುಕಾಡುವ ತಾರೆಗಳನ್ನು ಏಣಿಸುತ್ತಿದ್ದೆ. ಅಂತೂ ಹೊತ್ತಲ್ಲದ ಹೊತ್ತಿನಲ್ಲಿ ಸೋತು ಸೊಪ್ಪಾದ ರೆಪ್ಪೆಗಳು ಇನ್ನೇನು ಬಾಗ ಬೇಕು.... ಆಗ ಕೇಳಿತ್ತು ನಿಮ್ಮಿಬ್ಬರ ಕಿಲ ಕಿಲ ನಗು...ಪಿಸು ಪಿಸು ಮಾತು. ಇನ್ನೇನು ಸೋಲೊಪ್ಪಿಕೊಳ್ಳಲು ಬಾಗಿದ್ದ ರೆಪ್ಪೆಗಳು ಫಟ್ ಎಂದು ತೆರೆದಿದ್ದವು. ಗೆಲುವು ಅವುಗಳದ್ದಾಗಿತ್ತು. ಬಾನ ತಾರೆಗಳೆಲ್ಲಾ ಒಂದು ಕ್ಷಣ ದೀರ್ಘವಾಗಿ ಮಿಂಚಿ ನಗೆಯಾಡಿದ್ದವು.....ನಿದ್ದೆ ಬಂದಂತೆ ನಟಿಸಲು ಎಂದೋ ಕಲಿತಿದ್ದ ಕಣ್ಗಳಿಗೆ ಹೊಸತೇನೂ ಹೇಳಿಕೊಡಬೇಕಾಗಲಿಲ್ಲ. ನನ್ನ ನಿದ್ದೆಯ ನಂಬಿಯೋ ಇಲ್ಲಾ ನಂಬಿದಂತೇ ನಟಿಸಿಯೋ ನೀವಿಬ್ಬರೂ ಪಕ್ಕದಲ್ಲಿದ್ದ ಸ್ಟೂಲಿನ ಮೇಲೆ ಆ ಪೆಟ್ಟಿಗೆಯನ್ನಿಟ್ಟಿರಿ. ಆಗ ಕೇಳಿತು ಹಾಲ್‌ನಲ್ಲಿದ್ದ ಗಡಿಯಾರದ ಸದ್ದು. ಗಂಟೆ ಹನ್ನೆರಡಾದದ್ದೇ ತಡ, ಕೋಣೆಯ ಲೈಟ್ ಬೆಳಗಿ, ಎಚ್ಚರದಿಂದಲೇ ಇದ್ದ ನನ್ನ ಎಬ್ಬಿಸಿದಿರಿ. ಮುಂದಿನದೆಲ್ಲಾ ದೊಡ್ಡ ದೀಪಾವಳಿ! ನಗು, ಪಿಸು ಮಾತು, "ಶ್‌ಶ್‌ಶ್.. ಸಣ್ಣಕೆ ಮಾತಾಡು.. ಪಕ್ಕದ ಕೋಣೇಲಿಪ್ಪ ಅಪ್ಪ ಅಮ್ಮಂಗೆ ಎಚ್ಚರಾ ಆದ್ರೆ ಬೈತ್.." ಅನ್ನೋ ಸಣ್ಣ ಗದರಿಕೆಯ ನಡುವೆಯೇ ತೂರಿಕೊಳ್ಳುವ ಮುಸಿ ಮುಸಿ ನಗು. ರಟ್ಟಿನ ಪೆಟ್ಟಿಗೆಯೊಳಗಿನ ಕೇಕ್ ನಮ್ಮ ಹೊಟ್ಟೆಯ ಸೇರಿ ತುಂಬಿದ ಮೇಲೆ, ನನ್ನಪ್ಪಿ ಶುಭ ಕೋರಿದ ನೀವಿಬ್ಬರೂ ಹಾಯಾಗಿ ನಿದ್ದೆಗಿಳಿದಿರಿ. ಅಂದು ಇಪ್ಪತ್ತಕ್ಕೆ ಮತ್ತೊಂದು ವರುಷ ಸೇರಿಸಿಕೊಂಡು ನಿಮಗೆ ದೊಡ್ಡಕ್ಕನಾದ ನಾನು ಮತ್ತಷ್ಟು ಹಿರಿದಾಗಿಹೋಗಿದ್ದೆ. ಮರುದಿನ ಬೆಳಗ್ಗೆ ಸೂರ್ಯ ಕಣ್ ಚುಚ್ಚಿ ಎಬ್ಬಿಸುವಾಗಲೇ ಕೇಳಿತ್ತು ಅಮ್ಮನ ಸಿಹಿ ಧ್ವನಿ.. "ಹೇ ಎದ್ಕಳ್ರೇ.. ಅಕ್ಕಂಗೆ ವಿಶ್ ಮಾಡ್ತ್ರಿಲ್ಯ?.. ಮರ್ತೇ ಹೋಜ? ಅದು ಎದ್ಕಂಬದ್ರೊಳ್ಗೆ ನಿಂಗ ಎದ್ಕಂಡು ವಿಶ್ ಮಾಡಿ..". ಅಮ್ಮನ ಮಾತುಗಳನ್ನು ಕೇಳುತ್ತಾ ನಾನು ಮತ್ತೂ ನಿದ್ದೆಗೆ ಜಾರತೊಡಗಿದರೆ ನಿಮ್ಮಿಬ್ಬರ ದೊಡ್ಡ ನಗು ಅಲೆ ಅಲೆಯಾಗಿ ನನ್ನ ಅಪ್ಪಿ ಎಬ್ಬಿಸುತ್ತಿತ್ತು.

ಇಂದು....ಸರಿಯಾಗಿ ಹತ್ತುವರುಷಗಳಾನಂತರವೂ.....ಬಾನಲ್ಲಿ ಅದೇ  ಬಣ್ಣದ ಬೆಳಕಿನ ಚಿತ್ತಾರವಿದೆ....ದೀಪಗಳು ಸಾಲುಗಟ್ಟಲು ಸಜ್ಜಾಗಿವೆ....ಗಂಟೆ ಹನ್ನೆರಡು ಕಳೆದೇ ಹಲವು ತಾಸು ಕಳೆದಿವೆ. ಆದರೆ ನೀವಿಬ್ಬರು ಮಾತ್ರ ನನ್ನೊಂದಿಗಿಲ್ಲ. ಅಪ್ಪ ಅಮ್ಮನ ಮಮತೆಯ ಅಪ್ಪುಗೆಯೂ ಇಲ್ಲ. ನನ್ನ ಸಾಗರನೂರಿನಲ್ಲಿರುವ ನೀವೆಲ್ಲರು ಜಂಗಮ ವಾಣಿಯಿಂದ ಹೇಳಿದ ಶುಭ ಕೋರಿಕೆಗಳು ಮನಸನ್ನಾಗಲೀ ಹೊಟ್ಟೆಯನ್ನಾಗಲೀ ತುಂಬಲಿಲ್ಲ. ಆದರೆ ಕಳೆದ ಸವಿ ನೆನಪುಗಳ ಮೆರವಣಿಗೆ ಮಾತ್ರ ಮನಸೊಳಗೆ ಸಾಲು ದೀಪಗಳನ್ನು ಹಚ್ಚಿ ಸದಾ ಬೆಳಗುತ್ತಲೇ ಇದೆ. ‘ಸವಿ ನೆನಪುಗಳು ಬೇಕು ಸವಿಯಲೀ ಬದುಕು’



ಮನದ ಮೂಲೆಯ
ಕಡೆಯ ಕೊಳೆಯನೂ
ಕಳೆದು ಹಾಕುವ ಬನ್ನಿರಿ...
ಕನಸುಗಳ ರಂಗೋಲಿಯೆಳೆದು
ನಡುವೆ ದೀಪವ ಹಚ್ಚಿರಿ... 





ಸಹಮಾನಸಿಗರೆಲ್ಲರಿಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು :)



-ತೇಜಸ್ವಿನಿ ಹೆಗಡೆ.

ಗುರುವಾರ, ಅಕ್ಟೋಬರ್ 28, 2010

ಮಗುವ ನಗುವಿರಲವ್ವ ಮನದ ತುಂಬಾ.....


Courtesy - http://umic.miami.edu/

ಕೆಲವು ವರ್ಷಗಳ ಹಿಂದಿನ ಮಾತು. ಪೂಜೆಗೆಂದು ಕರೆದಿದ್ದ ಆತ್ಮೀಯರ ಮನೆಗೆ ಹೋಗಿದ್ದೆ. ಸಮಾರಂಭ ಎಂದ ಮೇಲೆ ನೂರು ಮಾತು, ಹರಟೆ, ಕುಶಲೋಪರಿ, ಕೊಂಚ ಗಾಸಿಪ್ ಇದ್ದಿದ್ದೇ. ನಾನೋ ಅಲ್ಲೇ ಆಡುತ್ತಿದ್ದ ಪುಟ್ಟ ಮಕ್ಕಳ ಹಿಂಡಿನ ಹಿಂದೆ ಬಿದ್ದು ಅವರ ನೈಜ ಸಂತೋಷವನ್ನೇ ಕಣ್ತುಂಬಿಕೊಳ್ಳತೊಡಗಿದ್ದೆ. ೫-೬ ಮಕ್ಕಳ ಆ ಗುಂಪಿನಲ್ಲಿ ಓರ್ವ ಹುಡುಗ ಮಾತ್ರ ತುಸು ಹೆಚ್ಚು ತುಂಟನಾಗಿದ್ದ. ಜೊತೆಯಲ್ಲಿ ಆಡುತ್ತಿರುವವರನ್ನು ವಿನಾಕಾರಣ ಸ್ವಲ್ಪ ದೂಕುವುದು, ಕಾಣದಂತೇ ಚಿವುಟುವುದು, ಜಡೆ ಎಳೆದು ಓಡುವುದು ಮಾಡುತ್ತಿದ್ದ. ಅವನ ತುಂಟಾಟದಿಂದ ಬೇಸತ್ತ ಇತರ ಮಕ್ಕಳು ಅಲ್ಲೇ ಸ್ವಲ್ಪ ದೂರದಲ್ಲಿ ಕುಳಿತು ಮಾತೊಳಗೆ ಮುಳುಗಿದ್ದ ಅವನ ತಾಯಿಗೆ ದೂರೊಯ್ದರು. ಅಮ್ಮನ ಹುಸಿಮುನಿಸಿಗೂ ಜಗ್ಗದ ಆ ನಾಲ್ಕು ವರುಷದ ಪೋರ ಉಳಿದ ಮಕ್ಕಳಿಗೆಲ್ಲಾ ನಾಲಿಗೆ ತೋರಿಸಿ ಚಾಳಿಸಿ ಓಡಿ ಮರೆಯಾದ. ಆಗ ಆ ಗುಂಪಿನಲ್ಲೇ ಇದ್ದ ಸುಮಾರು ೩೫ ವರುಷದ ಗೃಹಿಣಿಯೋರ್ವರು "ನಿಮ್ಮ ಮಗ ತುಂಬಾ ತುಂಟ ಇದ್ದಾನಲ್ಲ....ಅಬ್ಬಾ ಹೇಗೆ ಸಂಭಾಳಿಸುತ್ತೀರೋ ಏನೋ... ಈಗಿನ ಮಕ್ಕಳೆಲ್ಲಾ ಹೀಗೇ ಎಂದೆನಿಸುತ್ತದೆ. ಆದರೆ ಇವನು ಬಹಳ ಜೋರಿದ್ದಾನೆ ಎಂದೆನಿಸುತ್ತದೆ. ಕಷ್ಟವಾಗುತ್ತಿರಬೇಕು ನಿಮಗೆ ಅಲ್ಲವೇ?" ಎಂದು ಸಹಜವಾಗಿ ಕೇಳಿದರು. ಅದೇನನಿಸಿತೋ ಆ ತಾಯಿಗೆ ಮುಖ ಊದಿಸಿಕೊಂಡು "ಅಯ್ಯೋ ಇವತ್ತೇ ಇಲ್ಲೇ ಹೀಗೆಲ್ಲಾ ಆಡ್ತಿರೋದು. ಇಲ್ದೇ ಹೋದ್ರೆ ಅವ್ನು ತುಂಬಾ ಜಾಣ ಹುಡ್ಗ. ನನ್ನ ಮಾತನ್ನು ಸ್ವಲ್ಪವೂ ಮೀರೊಲ್ಲ...ಹಾಗೆ ನೋಡಿದ್ರೆ ಇಷ್ಟೂ ತುಂಟಾಟ ಮಾಡದಿದ್ದರೆ ಮಕ್ಕಳು ಅನ್ನೋದು ಯಾಕೆ?" ಎಂದು ತುಸು ಬಿಗಿಯಾಗಿ ಉತ್ತರಿಸಲು, ಆ ಗೃಹಿಣಿಗೂ ತುಸು ಪಿಚ್ಚೆನಿಸಿರಬೇಕು. ಅಲ್ಲಿಂದ ಮೆಲ್ಲನೆ ಜಾರಿಕೊಂಡು ಬೇರೆಲ್ಲೋ ನಡೆದರು. ಆದರೆ ಆಕೆ ಅತ್ತ ಹೋಗಿದ್ದೇ ತಡ ಆ ಹುಡುಗನ ತಾಯಿ ಜೊತೆಯಲ್ಲಿದ್ದ ಇತರ ಗೆಳತಿಯರನುದ್ದೇಶಿಸಿ "ಇವರಿಗೇನು ಗೊತ್ತು ಮಕ್ಕಳ ಕಷ್ಟ? ಅವರ ತುಂಟಾಟ? ಹೆತ್ತವರಿಗೆ ತಾನೇ ಗೊತ್ತಾಗುವುದು ಮಕ್ಕಳನ್ನು ಸಾಕುವುದರ ಸಂಕಟ? ಹೊರಲಿಲ್ಲ ಹೆರಲಿಲ್ಲ.. ದೊಡ್ಡದಾಗಿ ಹೇಳೋಕೆ ಬಂದ್ಬಿಟ್ರು ಮಕ್ಕಳ ಸ್ವಭಾವದ ಬಗ್ಗೆ..."ಎಂದು ಇನ್ನೂ ಏನೇನೋ ವಟಗುಡುತ್ತಲೇ ಇದ್ದರು. ಜೊತೆಗಿದ್ದವರು ಇಷ್ಟ ಇದ್ದೋ ಇಲ್ಲದೆಯೋ ಹೌದು ಬಸವಣ್ಣ ಹೌದು ಅಲ್ಲ ಬಸವಣ್ಣ ಅಲ್ಲಾ... ಎನ್ನುವಂತೆ ಗೋಣಾಡಿಸುತ್ತಾ ಬಿಮ್ಮನೆ ಕುಳಿತಿದ್ದರು. ನನಗೆ ಮಾತ್ರ ಅಸಾಧ್ಯ ಸಿಟ್ಟು, ಬೇಸರವಾಯಿತು ಅವರ ಹೀಯಾಳಿಕೆಯನ್ನು ಹಾಗೂ ಹಿಂದಿನಿಂದ ಆಡಿಕೊಂಡ ಮಾತುಗಳನ್ನು ಕೇಳಿ.

ಹೆತ್ತವರಿಗೆ ಮಾತ್ರ ಮಕ್ಕಳನ್ನು ಸಾಕುವ ಕಷ್ಟ ಗೊತ್ತಾಗುವುದು.. ಮಕ್ಕಳಿಲ್ಲದವರಿಗೆ ಅವರನ್ನು ಸಾಕುವ ಪ್ರಯಾಸ, ನೋವು ಅರ್ಥವಾಗೊಲ್ಲ... ಎನ್ನುವುದು ಕೇವಲ ಏಕಮುಖ ಅಭಿಪ್ರಾಯ. ಹಾಗೆ ನೋಡಿದರೆ ಮಕ್ಕಳಿದ್ದವರಿಗೆಂದೂ ತಾಯ್ತನದ ಭಾಗ್ಯವನ್ನು ಕಾಣದವರ ವೇದನೆ, ಅಸಹನೆ ಅರ್ಥವೇ ಆಗದು. ಈ ಒಂದು ಸೂಕ್ಷ್ಮತೆ ಅರ್ಥವಾಗದಿರುವವರು ತಮ್ಮಂತೇ ಹೆಣ್ಣಾಗಿರುವ, ತಾಯ್ತನದಿಂದ ವಂಚಿತರಾದವರನ್ನು ಬಂಜೆ, ಬರಡು, ಕೊರಡು, ಪೂರ್ವಜನ್ಮದ ಪಾಪದಿಂದಾಗಿಯೇ ಈಗ ಅನುಭವಿಸುತ್ತಿರುವವಳು- ಎಂದೆಲ್ಲಾ ಹೀಯಾಳಿಸಿ ಮತ್ತಷ್ಟು ಹಿಂಸೆ ನೀಡುತ್ತಾರೆ. ಸಂತಾನವಿಹೀನರಾಗಲು ಹೆಣ್ಣೊಂದೇ ಕಾರಣಳಾಗಿರಬೇಕೆಂದಿಲ್ಲ, ಗಂಡೂ ಕಾರಣನಾಗಿರಬಹುದು ಎಂಬ ಸಾಮಾನ್ಯ ಜ್ಞಾನವೂ ಇಲ್ಲದೇ, ಕೇವಲ ಆಕೆಯನ್ನು ಮಾತ್ರ ದೂಷಿಸುತ್ತಾರೆ. ಕಾಲ ಎಷ್ಟೇ ಬದಲಾಗಿರಲಿ, ವಿಜ್ಞಾನ ಎಷ್ಟೇ ಮುಂದುವರಿದಿರಲಿ, ನಮ್ಮಲ್ಲಿ ಮಾತ್ರ ಇಂದಿಗೂ ಈ ಒಂದು ಪಿಡುಗು ಸ್ತ್ರೀಯನ್ನು ಬಿಟ್ಟಿಲ್ಲ. ಮಕ್ಕಳಾಗದಿರಲು ಆಕೆಯೊಳಗಿನ ಕೊರತೆಯೇ ಕಾರಣ ಎಂಬ ತೀರ್ಮಾನಕ್ಕೆ ಬಹುಬೇಗ ಬಂದುಬಿಡುತ್ತದೆ ನಮ್ಮ ಸಮಾಜ!

ಮೊದಲು ನಾನೊಂದು Infertility Centreನಲ್ಲಿ ಕೆಲಸಮಾಡುತ್ತಿದ್ದೆ.(ಹೆಸರು, ಊರು, ಇತ್ಯಾದಿ ವಿವರಗಳನ್ನು ಅಲ್ಲಿಯ ಗೌಪ್ಯತೆಯ ದೃಷ್ಟಿಯಿಂದ ಉಲ್ಲೇಖಿಸಲಾರೆ.) ಅಲ್ಲಿಗೆ ಬರುತ್ತಿದ್ದ ದಂಪತಿಯ ಮ್ಲಾನವದನ, ನೋವು, ಅದರಲ್ಲೂ ವಿಶೇಷವಾಗಿ ಚಿಂತಾಕ್ರಾಂತ ಮುಖ ಹೊತ್ತ ಸ್ತ್ರೀಯರು, ಇವರನ್ನೆಲ್ಲಾ ನೋಡಿದಾಗ ಅನಿಸಿದ್ದು ಒಂದೇ. ಮಕ್ಕಳಾಗಲಿಲ್ಲ ಎಂದು ಕೊರಗುತ್ತಾ ಅದರಲ್ಲೇ ದಿನೇ ದಿನೇ ಕುಗ್ಗುತ್ತಿರುವ ಇವರ ದುಃಖದಲ್ಲಿ ನಾವೆಷ್ಟು ಭಾಗಿಗಳಾಗಲು ಸಾಧ್ಯ ಎಂದು! ಭಾಗಿಯಾಗುವುದು ಬೇಡ.... ಅವರ ನೋವನ್ನು, ದುಃಖವನ್ನು ಮತ್ತಷ್ಟು ಹೆಚ್ಚಿಸದಿರುವಂತೆ ವರ್ತಿಸಿದರೆ ಸಾಕಲ್ಲಾ. ಆದರೆ ಆ ಫರ್ಮ್‌ನಲ್ಲೇ ಕೆಲಸ ಮಾಡುತ್ತಿದ್ದ ಕೆಲವು ನರ್ಸ್‌ಗಳು, ಆಯಾಗಳು ಹಿಂದಿನಿಂದ ಅವರ ಬಗ್ಗೆ ಮಾತಾಡಿಕೊಳ್ಳುತ್ತಿದ್ದ ರೀತಿ, ವರ್ತನೆಗಳು ತುಂಬಾ ಸಂಕಟಕ್ಕೀಡುಮಾಡುತ್ತಿತ್ತು. ಒಂದು ತರಹದ ಉಸಿರುಗಟ್ಟಿದಂತಹ ವಾತಾವರಣ ನಿರ್ಮಾಣವಾಗುತ್ತಿತ್ತು. ಎಷ್ಟೋ ಸಲ ಆಯಾಗಳಿಗೆ ಮೆಲುವಾಗಿ ತಿಳಿ ಹೇಳಲು ಹೋಗಿ ನಾನೇ ಹೇಳಿಸಿಕೊಂಡದ್ದಿದೆ. ಆದರೆ ತಿರುಗಿ ನನಗೆ ಅವೆಲ್ಲಾ ಬೌನ್ಸ್ ಆಗ ತೊಡಗಿದ ಮೇಲೆ ಇಲ್ಲದ ಸಹನೆ ಹೊಂದಲೇ ಬೇಕಾಯಿತು. ನನ್ನ ಬಹು ಪರಿಚಿತರ ಆಗ್ರಹದ ಮೇಲೆ ಅಲ್ಲಿ ಸೇರಿದ್ದ ನಾನು ಅವರ ದಾಕ್ಷಿಣ್ಯಕ್ಕೆ ಕಟ್ಟು ಬಿದ್ದು ಹೇಗೋ ೬ ತಿಂಗಳುಗಳನ್ನು ಸವೆಸಿ ಆನಂತರ ಇರಲಾಗದೇ, ಮುಲಾಜಿಲ್ಲದೇ ಹೊರ ಬಂದುಬಿಟ್ಟೆ.

ಅಸಲಿಗೆ ನನಗೆ ಸಂತಾನ ಸಮಸ್ಯೆಗಳಿಗೆ ಪರಿಹಾರಕ್ಕಾಗಿ ಅಲ್ಲಿಗೆ ಬರುತ್ತಿದ್ದ ದಂಪತಿಯನ್ನು "ಪೇಷೆಂಟ್" ಎಂದು ಸಂಬೋಂಧಿಸುವುದೇ ಅಸಂಬದ್ಧ ಎಂದೆನಿಸುತ್ತಿತ್ತು. ಅವರ ಕೇಸ್ ಹಿಸ್ಟರಿಗಳನ್ನು, ಮೆಡಿಸಿನ್ಸ್ ಹಿಸ್ಟರಿಗಳನ್ನು, ಸಮಸ್ಯೆಗಳ ರೆಕಾರ್ಡ್ಗಳನ್ನು, ಕೊಡುತ್ತಿರುವ ಚಿಕಿತ್ಸೆಗಳ ವಿವರಗಳನ್ನು ಎಲ್ಲವನ್ನೂ ಪ್ರೋಗ್ರಾಮಿಂಗ್ ಮೂಲಕ ಜೋಡಿಸಿಡುವ ಕಾರ್ಯ, ಸಕಾಲದಲ್ಲಿ ಅದನ್ನು ಬೇಕಾದವರಿಗೆ ಒದಗಿಸಿ, ಮಾಹಿತಿಗಳನ್ನು ಒದಗಿಸುವ ಕಾರ್ಯ, ಹಾಗೆಯೇ ಒಮ್ಮೊಮ್ಮೆ(ನಾನೂ ಈ ವಿಷಯವನ್ನು ತುಸು ಅಭ್ಯಸಿಸಿದ್ದರಿಂದ) ಅವರನ್ನು ಹಿತವಾಗಿ ಮಾತನಾಡಿಸಿ, ಮನಸೊಳಗಿನ ಟೆನ್ಷನ್ ಹಾಗೂ ಕಳವಳಗಳನ್ನು ದೂರಮಾಡುವ ಕೆಲಸಗಳನ್ನೂ ಮಾಡುತ್ತಿದ್ದೆ. (ಅಲ್ಲೇ ಕೆಲಸ ಮಾಡುತ್ತಿದ್ದ ಪ್ರಧಾನ ಕೌನ್ಸಲರ್ ನನ್ನ ಆತ್ಮೀಯ ಫ್ರೆಂಡ್ ಆಗಿದ್ದರು. ಅವರು ನನಗೆ ಸ್ವಲ್ಪ ದಿನ ಟ್ರೈನಿಂಗ್ ಕೊಟ್ಟು ಆಮೇಲೆ ಅವರು ತುಂಬಾ ಬ್ಯುಸಿ ಇದ್ದಾಗ ಕೆಲವೊಂದು ಸಲ ನನಗೂ ಕೆಲಸ ಕೊಡುತ್ತಿದ್ದರಷ್ಟೇ). ಆದರೆ ಸರಿ ಸುಮಾರು ಅರ್ಧವರ್ಷಗಳವರೆಗೆ ಅಲ್ಲೇ ಕೆಲಸಮಾಡಿದ್ದರಿಂದ, ಹಲವಾರು ತರಹದ ಸಮಸ್ಯೆಗಳನ್ನು, ಸಂತಾನವಿಹೀನತೆಗೆ ಇರಬಹುದಾದ ಕಾರಣಗಳು ಹಾಗೂ ಮೆಡಿಕಲ್ ಪರಿಹಾರಗಳನ್ನು ಅಭ್ಯಸಿಸುವ ಸದವಕಾಶ ನನ್ನದಾಯಿತು. ಆ ಮಟ್ಟಿಗೆ ನಾನು ಆ ಸಂಸ್ಥೆಗೆ ಹಾಗೂ ನನ್ನ ಅಲ್ಲಿಗೆ ಬರಲು ಪ್ರೇರೇಪಿಸಿದ ಆ ಹಿತೈಷಿಗಳಿಗೆ ಸದಾ ಋಣಿ. ಅಂತಹ ಒಂದು ಫರ್ಮ್ನಲ್ಲಿ ಕೆಲಸಮಾಡುವಾಗ ನಮ್ಮೊಳಗೇ ನಾವು ತೆಗೆದುಕೊಳ್ಳ ಬೇಕಾಗಿರುವ ಮೊದಲ ಪ್ರತಿಜ್ಞೆ ಎಂದರೆ ಎಂದೂ ಎಲ್ಲೂ ಅದರೊಳಗಿನ, ಹಾಗೂ ಅಲ್ಲಿಗೆ ಬರುವ ಯಾರ ಕುರಿತೂ ಸಾರ್ವಜನಿಕವಾಗಿ ಮಾತಾಡಬಾರದು. ಗೌಪ್ಯತೆಯನ್ನು ಕಾಪಾಡುವಲ್ಲಿ ಬದ್ಧರಾಗಿರಬೇಕು. ಅದಕ್ಕಾಗಿ ನಾನು ಅಲ್ಲಿಯ ಕೆಲಸ ಕಾರ್ಯಗಳ ಕುರಿತಾಗಲೀ, ಕುಂದು ಕೊರತೆಗಳ ಬಗ್ಗೆಯಾಗಲೀ ಏನನ್ನೂ ಹೇಳಲಾರೆ. ಹೇಳುವುದೂ ಸಲ್ಲ. ಆದರೆ ಸಂತಾನವಿಹೀನತೆಯಿಂದುಂಟಾಗುವ ಸಾಮಾಜಿಕ, ಮಾನಸಿಕ ಸಮಸ್ಯೆಗಳು ಹಾಗೂ ಅದಕ್ಕೆ ಈಗಿರುವ ಪ್ರಮುಖ ವೈಜ್ಞಾನಿಕ ಪರಿಹಾರಗಳನ್ನಷ್ಟೇ ಹೇಳುತ್ತಿದ್ದೇನೆ.  ಅಂತೆಯೇ ಇಲ್ಲಿ ನಾನು ಹೇಳುತ್ತಿರುವುದು ಸರಳ ಭಾಷೆಯಲ್ಲಿ. ಕಾರಣ ತೀರ ಮೆಡಿಕಲ್ ಭಾಷೆಯಲ್ಲಿ ಹೇಳಲು ನನಗೆ ಬರದು. ನಾನು ಅದನ್ನು ಕಲಿತೂ ಇಲ್ಲ. ಅಲ್ಲಿ ನಾನು ಕಲಿತುಕೊಂಡ ಹಾಗೂ ಸ್ವಯಂ ಆಸಕ್ತಿಯಿಂದ ಪುಸ್ತಕಗಳನ್ನು ಅಭ್ಯಸಿಸಿ ತಿಳಿದುಕೊಂಡ ಕೆಲವು ವಿಷಯಗಳನ್ನಷ್ಟೇ ಹೇಳುತ್ತಿದ್ದೇನೆ. ನಾನಿಲ್ಲಿ ಹೇಳಿರುವ ವಿಷಯಗಳಲ್ಲಿ ಏನಾದರೂ ತಪ್ಪಿದ್ದಲ್ಲಿ ನಿಸ್ಸಂಕೋಚವಾಗಿ ತಿಳಿದವರು ತಿಳಿಸಬೇಕಾಗಿ ವಿನಂತಿ. ಇದರಿಂದ ಕಲಿಕೆಗೆ ಹಾಗೂ ಜ್ಞಾನರ್ಜನೆಗೆ ಎಲ್ಲರಿಗೂ ಸುಲಭವಾಗುವುದು.

ಅಸಲಿಗೆ ಈ ಒಂದು ಸಮಸ್ಯೆಯಿಂದ ಕೊರಗುತ್ತಿರುವವರು ಇಂತಹ ಫರ್ಮ್‌ಗೆ ಬಂದು ಚಿಕಿತ್ಸೆ ಪಡೆಯುವುದೂ ಒಂದು ಅವಮಾನಕರ, ನಾಚಿಕೆಗೇಡಿನ ವಿಷಯವೆಂದು ತುಂಬಾ ತಪ್ಪಾಗಿ ಭಾವಿಸಿರುತ್ತಾರೆ. ಇದರಿಂದಾಗಿಯೇ ಬಹಳಷ್ಟು ಸಮಯವನ್ನು ಹಾಳುಮಾಡಿಕೊಂಡು, ವಯಸ್ಸು ಹೆಚ್ಚಾದಂತೇ ಪರಿಹಾರವೂ ಕ್ಲಿಷ್ಟವಾಗುವುದೆಂದು ತಿಳಿಯದೇ ಮನದಲ್ಲೇ ನರಳುತ್ತಾ, ಅಂತಿಮವಾಗಿ ಬಂದಿರುತ್ತಾರೆ (ಹೆಚ್ಚಿನವರು). ಅಂತಹವರಿಗೆ ಚಿಕಿತ್ಸೆ ಕೊಡುವ ಮೊದಲು ಅವರನ್ನು ಮಾನಸಿಕವಾಗಿ ಸದೃಢರನ್ನಾಗಿಸಿ ಚಿಕಿತ್ಸೆಗೆ ತಯಾರುಮಾಡುವುದೇ ಒಂದು ಸವಾಲು. ಆದರೂ ಅದೆಷ್ಟೋ ದಂಪತಿಗಳು ಅರ್ಧದಲ್ಲೇ ಹಿಂತಿರುಗುವುದೂ ಇದೆ. ಜನ ಏನೆನ್ನುತ್ತಾರೋ? ಸಮಾಜ ಏನೆನ್ನುತ್ತದೆಯೋ? ನಾವಿಲ್ಲಿ ಬಂದಿದ್ದು ಗೊತ್ತಾದರೆ ನಮ್ಮ ಗುಟ್ಟು ಎಲ್ಲಿ ಎಲ್ಲರಿಗೂ ಗೊತ್ತಾಗುವುದೋ? ಎಂಬೆಲ್ಲಾ ಆತಂಕಗಳಿಂದ, ಗೊಂದಲಗಳಿಂದ ಮೂಲ ಸಮಸ್ಯೆಯನ್ನೇ ಮರೆಯುತ್ತಾರೆ. ಇಂತಹವರಿಗೆ ಮೊದಲು ಬೇಕಾಗಿರುವುದು ಗೌಪ್ಯತೆಯ ಆಶ್ವಾಸನೆ ಹಾಗೂ ಮನದೊಳಗೆ ಆತ್ಮವಿಶ್ವಾದ ಮೊಳಕೆ. ಆಗ ಅರ್ಧ ಸಮಸ್ಯೆ ಅಲ್ಲೇ ಪರಿಹಾರವಾದಂತೇ. ಅವರ ಸೂಕ್ಷ್ಮ ಮನಸ್ಸನ್ನರಿತು, ನೋವಿಗೆ ಸ್ಪಂದಿಸಿ, ನಾಲ್ಕು ಹಿತ ಮಾತಾಡಿದರೂ ಸಾಕು ಹೊಸ ಆಶಾಭಾವ ಮೂಡಬಲ್ಲದು. ಆಶಾವಾದಿ ಮನಸ್ಸಿನಿಂದ ಏನನ್ನೂ ಸಾಧಿಸಬಲ್ಲೆವು. ಪರಿಹಾರವೂ ಸಿಗುವುದು ಕಷ್ಟವಾಗದು. ಆ ನಿಟ್ಟಿನಲ್ಲಿ ನಮ್ಮ ದೇಶ ಹಾಗೂ ಸಮಾಜ ತೀರಾ ಕೆಳಮಟ್ಟದಲ್ಲಿದೆ ಎಂದು ವಿಷಾದದಿಂದ ಹೇಳಬೇಕಾಗುತ್ತದೆ. ನನ್ನ ಆತ್ಮೀಯ ಗೆಳತಿಯೋರ್ವಳು ಡಾಕ್ಟರ್. ಅವಳು ಹೇಳಿದ ಒಂದು ಘಟನೆ ನನ್ನನ್ನು ತುಂಬಾ ಆಶ್ಚರ್ಯಚಕಿತಳನ್ನಾಗಿಸಿತು. ಹೀಗೂ ಉಂಟೆ? ಎಂದು ಒಂದು ಕ್ಷಣ ಅನಿಸಿದ್ದಂತೂ ಸುಳ್ಳಲ್ಲ.

ಘಟನೆ ಇಂತಿದೆ : ಅವಳ ಬಳಿ ದಂಪತಿ ಬಂದಿದ್ದಾರೆ. ಗಂಡ ಕೊಲ್ಲಿಯಲ್ಲಿ ಕೆಲಸಮಾಡುತ್ತಿದ್ದಾನೆ. ಹೆಂಡತಿ ಭಾರತದಲ್ಲಿರುವವಳು. ಮದುವೆಯಾಗಿ ಎರಡು ವರುಷವಾಗಿದೆ. ಮಕ್ಕಳಾಗಿಲ್ಲ. ಸಮಸ್ಯೆಗೆ ಪರಿಹಾರ ಬೇಕೆಂದು ಬಂದ್ದರು. ಆದರೆ ಅವರಿಂದ ವಿವರ ಪಡೆದ ಆಕೆಗೂ ಆಗಿದ್ದು ದೊಡ್ಡ ಆಶ್ಚರ್ಯವೇ! ಕಾರಣ ಮದುವೆಯಾದ ಆತ ಒಂದು ವಾರಕ್ಕೇ ಕೊಲ್ಲಿಗೆ ಹೋದವ ಎರಡು ವರುಷದ ನಂತರ ಈಗ ತಿಂಗಳೊಪ್ಪತ್ತಿನ ರಜೆಗೆ ಭಾರತಕ್ಕೆ ಬಂದಿದ್ದಾನೆ. ಈ ಒಂದು ತಿಂಗಳೊಳಗೇ ತನ್ನ ಪತ್ನಿ ಗರ್ಭ ಧರಿಸಲೇಬೇಕು...ಇಲ್ಲದಿದ್ದರೆ ಮತ್ತೆರಡು ವರುಷಗಳು ನಾನು ಬರುವಂತಿಲ್ಲ. ಇದಕ್ಕೇನಾದರೂ ಪರಿಹಾರವಿದೆಯೇ ಎಂದು ಕೇಳುತ್ತಿದ್ದಾನೆ ಆ ಮನುಷ್ಯ! ಆತನ ಹೆಂಡತಿ ಮಾತ್ರ ಕಣ್ತುಂಬಿಕೊಂಡು ತಲೆತಗ್ಗಿಸಿ ಕುಳಿತಿದ್ದಳಂತೆ. ನನ್ನ ಗೆಳತಿ ಹೇಳಿದ ಪರಿಹಾರ, ಆತನಿಗೆ ನೀಡಿದ ಉಪದೇಶ ಇಲ್ಲಿ ಅಷ್ಟು ಅಗತ್ಯವಿಲ್ಲ. ಆದರೆ ಕೊಲ್ಲಿಯಿಂದ ಆತ ಬರುವವರೆಗೂ ಇತರರ ಮಾತುಗಳನ್ನು, ಮನೆಯವರ ಸಂಶಯ ದೃಷ್ಟಿಯನ್ನು ಎದುರಿಸುವ ಆ ಹೆಣ್ಣಿನ ಮನಃಸ್ಥಿತಿಯನ್ನು ಮಾತ್ರ ನಾವು(ಸಮಾಜ) ನೋಡಹೋಗುವುದೇ ಇಲ್ಲ! ಇದು ನಮ್ಮಲ್ಲಿನ ಸಂತಾನವಿಹೀನತೆಗೆ ನಾನು ಕೊಡುತ್ತಿರುವ ಅತೀ ಸಣ್ಣ ಕಾರಣ ಅಷ್ಟೇ!!

ನಾನು ನನ್ನ ಕೆಲಸದ ಸಮಯದಲ್ಲಿ ತಿಳಿದುಕೊಂಡ ಹಾಗೂ ಓದಿಕೊಂಡ ಕೆಲವು ಪ್ರಮುಖ ಪರಿಹಾರ ಕ್ರಮಗಳನ್ನು ಸಂಕ್ಷಿಪ್ತವಾಗಿ ಇಲ್ಲಿ ನೀಡುತ್ತಿದ್ದೇನೆ.

೧. AI (Artificial insemination )

೨. IUI (Intravaginal insemination)

೩, IVF (Invitro Fertilization)

4. ICSI (Intracytoplasmic sperm Injection)
ಈ ಮೇಲಿನ ಚಿಕಿತ್ಸಾವಿಧಾನಗಳ ಕುರಿತು ಹೆಚ್ಚಿನ ಮಾಹಿತಿಗಳನ್ನು ಪಡೆಯಲು ಈ ಕೆಳಗಿನ ವೈದ್ಯಕೀಯ ಲಿಂಕ್‍ಗಳಿಗೆ ಭೇಟಿ ನೀಡಬಹುದು.


1. http://en.wikipedia.org/wiki/Artificial_insemination
2. http://www.ehow.com/about_5057777_types-artificial-insemination-humans.html
3. http://www.ivf-infertility.com/ivf/standard/procedure/index.php
4. http://www.babycenter.in/preconception/fertilitytreatments/icsi/#2

ತಮ್ಮ ಪತ್ನಿಯನ್ನು ಆಕೆಯ ತೀವ್ರ ಪ್ರತಿರೋಧವಿದ್ದರೂ, ಬೆದರಿ, ಕಾಡಿಸಿ, ಅಂಗಲಾಚಿ, ಬೇರೆ ಗಂಡಿನ ವೀರ್ಯಾಣುವನ್ನು ಇಂಜೆಕ್ಟ್ ಮಾಡಿಸಿಯಾದರೂ ಗರ್ಭಧರಿಸುವಂತೆ ಒತ್ತಾಯಿಸಿ, ಆ ಮೂಲಕ ತಾನೂ ಸಮರ್ಥ ಗಂಡು(?) ಎಂದು ಸಮಾಜಕ್ಕೆ, ಮನೆಯವರಿಗೆ ತೋರಿಸಿಕೊಡುವ ದುರಾಲೋಚನೆಯ ಗಂಡಂದಿರೂ ಸಾಕಷ್ಟು ಇದ್ದಾರೆ. ತಾಯ್ತನದ ನಿರ್ಧಾರ ಹೆಣ್ಣಿನದು. ಈ ರೀತಿ ಬಲಾತ್ಕಾರ, ಬೆದರಿಕೆಗಳಿಂದ ಅಮಾನುಷವಾಗಿ ಹಿಂಸಿಸಿ ತನ್ನ ಪುರುಷಾರ್ಥವನ್ನು ಮೆರೆಸಲು ಯತ್ನಿಸುವುದೂ ದೊಡ್ಡ ಅತ್ಯಾಚಾರವೇ ಸರಿ. ವಿಜ್ಞಾನ ಮುಂದುವರಿದಷ್ಟೂ ನಮ್ಮೊಳಗಿನ ಕ್ರೌರ್ಯತೆಯೂ ಬೆಳೆಯುತ್ತಾ ಹೋಗುವುದೇ? ಎನ್ನುವ ಪ್ರಶ್ನೆಯೊಂದು ನನ್ನನ್ನು ಸದಾ ಕಾಡುತ್ತಿರುತ್ತದೆ. ಒಳಗೆಲ್ಲೋ ಮನಸ್ಸು "ಹೌದು" ಎನ್ನುವ ಉತ್ತರವನ್ನೂ ಕೊಟ್ಟುಬಿಡುತ್ತದೆ!

ಇನ್ನು ಈ ಮೇಲಿನ ಚಿಕಿತ್ಸೆಗಳೆಲ್ಲ ಬಹು ದೊಡ್ಡ ಮಟ್ಟದ ಹಾಗೂ ಅತಿ ದುಬಾರಿಯಾದವುಗಳು ( AI ಹಾಗೂ IUI ಚಿಕಿತ್ಸೆಗಳನ್ನು ಬಿಟ್ಟು). ಫಲಕಾರಿಯಾಗುವ ಗ್ಯಾರಂಟಿ ಕೂಡ ೧೦೦% ಕೊಡಲಾಗದಂಥವುಗಳು. ಇವುಗಳಲ್ಲದೇ ಇನ್ನೂ ಅನೇಕ ಚಿಕ್ಕ ಪುಟ್ಟ ಚಿಕಿತ್ಸೆಗಳು ಲಭ್ಯವಿವೆ. ಅಲೋಪತಿ ಚಿಕಿತ್ಸೆಗಳಲ್ಲದೇ ಅನೇಕ ಹೋಮಿಯೋಪತಿ, ಆಯುರ್ವೇದಿಕ್, ಯುನಾನಿ ಇತ್ಯಾದಿ ಚಿಕಿತ್ಸೆಗಳೂ ಕೈಗೆಟಕುವ ದರದಲ್ಲೇ ಲಭ್ಯವಿವೆ. ಯಾವುದಕ್ಕೂ ಮಾನಸಿಕ ಶಕ್ತಿ ಹಾಗೂ ಸಂಕಲ್ಪ ಇರಬೇಕಷ್ಟೇ. ಅತಿ ನಿರಾಸೆ, ಒತ್ತಡ, ಭಾವೋದ್ವೇಗಗಳೇ ತುಂಬಿದ್ದರೆ ಯಾವ ಚಿಕಿತ್ಸೆಯೂ ಫಲಿಸದು. ನಂಬಿಕೆ ಎಲ್ಲಕ್ಕಿಂತ ಮುಖ್ಯ. ಅದೊಂದಿದ್ದರೆ ಯಾವುದೂ ಸರಳ ಸುಲಭ.


- ತೇಜಸ್ವಿನಿ ಹೆಗಡೆ.

ಭಾನುವಾರ, ಅಕ್ಟೋಬರ್ 10, 2010

ಪಡೆಯಬೇಕಿದೆ ಮತ್ತೆ ನ(ನಿ)ನ್ನ ನಿನ್ನೆಗಳ...

ಕೊಟ್ಟು ಬಿಡು ನೀನೊಮ್ಮೆ
ಮತ್ತೆ ಆ ಸವಿ ನೆನಪುಗಳ
ಮೊದಲ ಮಳೆಯ ಸ್ಪರ್ಶಕೇಳುವ
ಇಳೆಯ ಕಂಪಿನಂತಹ ಕನಸುಗಳ

ಸಾಗರನ ಸಾಕ್ಷಿಯಿಟ್ಟು, ಬೆರಳಿಗೆ ಅಲೆಗಳುಂಗುರವಿತ್ತ,
ತಿಳಿ ಬಾನ ಕೇಳಿ ಪಡೆದ ಒಂಟಿ ತಾರೆಯ ಹಣೆಗಿತ್ತ,
ಬಿದಿಗೆ ಚಂದಿರನ ಕರಗಿಸಿ ಮೂಗಿನ ಬೊಟ್ಟಿಗಿಟ್ಟ,
ನನ್ಹೆಸರ ದಾರದಲಿ ನಿನ್ಹೆಸರ ಮಣಿಪೋಣಿಸಿ ಕೊರಳಿಗಿತ್ತ,
ಕೊಟ್ಟು ಬಿಡು ಮತ್ತೊಮ್ಮೆ ನಿನ್ನೊಲವಿನ ಉಡುಗೊರೆಗಳ..

ಕೈಯೊಳಗೆ ಕೈ ಬೆಸೆದು ಮೂಡಿದ್ದ ಕೆಂಪು ಗೆರೆಗಳಾ ಬಳೆಗಳು,
ತೊಳೆದರೂ ತೊಡೆಯದಿದ್ದ ನಿನ್ನ ಹೆಸರಿನಾ ಮದರಂಗಿ,
ನೀನಿತ್ತ ಮುಗುಳ್ನಗೆಯ ಚಿಲುಮೆ ನೂಪುರವಾಗಿತ್ತು ಕಾಲ್ಗಳಿಗೆ,
ನೀನಿತ್ತ ಮಲ್ಲಿಗೆಯ ಕಂಪು ಬಾಡಿದ್ದರೂ ಒಳಗಿತ್ತು ಉಸಿರಾಗಿ,
ತುಂಬಿ ಬಿಡು ಮತ್ತೊಮ್ಮೆ ನನ್ನೊಳಗದೇ ಬಣ್ಣವ...

ಕಣ್ಣಂಚುಗಳಿಂದುದುರುತಿದ್ದ ಹನಿಗಳನ್ನೆಲ್ಲಾ ಪೋಣಿಸಿ,
ಮುತ್ತಿನ ಹಾರವ ಮಾಡಿ ಕೊಟ್ಟಿದ್ದೆ ನೀನೆನಗಂದು,
ಕರಗಿ ಹನಿಯುತಿವೆ, ಒಂದೊಂದಾಗುದುರುತಿವೆಯೀಗ,
ಹನಿ ಹನಿಯೂ ನದಿಯಾಗಿ ಮುಳುಗಿಸುತಿದೆ ಮನವ
ಕೊಡಲಾರೆಯಾ ಮತ್ತೊಮ್ಮೆ ನನಗಾಗಿ ಮಣಿಮಾಲೆಯ ?!


ಕೊಟ್ಟು ಬಿಡು ನೀನೊಮ್ಮೆ
ಮತ್ತೆ ಆ ಸವಿ ನೆನಪುಗಳ
ಮೊದಲ ಮಳೆಯ ಸ್ಪರ್ಶಕೇಳುವ
ಇಳೆಯ ಕಂಪಿನಂತಹ ಕನಸುಗಳ

-ತೇಜಸ್ವಿನಿ ಹೆಗಡೆ

ಬುಧವಾರ, ಅಕ್ಟೋಬರ್ 6, 2010

ಪ್ರಾರ್ಥನೆ


Courtesy - www.downtownstudentministries.org

ಇಷ್ಟು ಶಕ್ತಿಯ ಕೊಡು ಭಗವಂತ
ಮಾನಸಿಕ ಶಕ್ತಿ ದುರ್ಬಲವಾಗದಿರಲಿ
ಒಳ್ಳೆಯ ದಾರಿಯಲ್ಲಿ ಸಾಗುತಿಹ ನಮ್ಮಿಂದ
ತಪ್ಪಿಯೂ ಯಾವ ತಪ್ಪೂ ಉಂಟಾಗದಿರಲಿ.

ದೂರವಾಗಿಸಿ ಅಜ್ಞಾನದ ಕತ್ತಲ, ಜ್ಞಾನದ ಬೆಳಕನು ನೀಡು
ಎಲ್ಲಾ ಕೆಡುಕಿಂದ ಬದುಕಿರುವ ನಮಗೆ, ಸಿಕ್ಕಷ್ಟೇ ಸರಿ ಉತ್ತಮ ಬದುಕ ನೀಡು
ಯಾರ ಕುರಿತೂ ಯಾರಿಗೂ ದ್ವೇಷವುಂಟಾಗದಿರಲಿ, ಹಗೆಯ ಭಾವ ಮನದೊಳು ಮನೆಮಾಡದಿರಲಿ
ಒಳ್ಳೆಯ ದಾರಿಯಲ್ಲಿ ಸಾಗುತಿಹ ನಮ್ಮಿಂದ
ತಪ್ಪಿಯೂ ಯಾವ ತಪ್ಪೂ ಉಂಟಾಗದಿರಲಿ.

ನಮಗೇನು ದೊರಕಿದೆ ಎಂದು ನಾವು ಯೋಚಿಸದೇ, ನಾವೇನು ಅರ್ಪಿಸಿದ್ದೇವೆಂದು ಯೋಚಿಸುವ
ಎಲ್ಲರಿಗೆ ಹಂಚುತ ಸಂತಸದ ಹೂವುಗಳ, ಎಲ್ಲರ ಜೀವನ ಮಧುವನವಾಗುಸುವ
ನಿನ್ನ ಕರುಣಾರಸವನು ನೀ ಹರಿಸಿ, ಪಾವನಗೊಳಿಸು ಮನದ ಪ್ರತಿ ಕೋಣೆಯ
ಒಳ್ಳೆಯ ದಾರಿಯಲ್ಲಿ ಸಾಗುತಿಹ ನಮ್ಮಿಂದ
ತಪ್ಪಿಯೂ ಯಾವ ತಪ್ಪೂ ಉಂಟಾಗದಿರಲಿ
ಇಷ್ಟು ಶಕ್ತಿಯ ಕೊಡು ಭಗವಂತ
ಮಾನಸಿಕ ಶಕ್ತಿ ದುರ್ಬಲವಾಗದಿರಲಿ
 

[ಇದು ನಾನು ಸದಾ ಗುನುಗುವ ನನ್ನ ಬಹು ಮೆಚ್ಚಿನ ಹಾಡುಗಳಲ್ಲೊಂದು. ಹಿಂದಿ ಚಲನಚಿತ್ರದ ಜನಪ್ರಿಯ ಹಾಡೊಂದರ ಕನ್ನಡಾನುವಾದವಿದು. ನನ್ನ ಮೊದಲ ಪ್ರಯತ್ನ. ತಪ್ಪಿರಬಹುದು. ಇದ್ದಲ್ಲಿ ತಿದ್ದಬೇಕಾಗಿ ವಿನಂತಿ. ಹಾಗೇ ಇದು ಯಾವ ಚಿತ್ರದ ಯಾವ ಹಾಡೆನ್ನುವುದನ್ನು ನೀವೇ ಕಂಡುಹಿಡಿದುಕೊಳ್ಳಬೇಕು :) ಈ ಹಿಂದಿ ಹಾಡು ಬೇಕಿದ್ದಲ್ಲಿ (mp3 format) ತಿಳಿಸಿ. ಲಿಂಕ್ ಮೈಲ್ ಮಾಡುವೆ..]

-ತೇಜಸ್ವಿನಿ.

ಮಂಗಳವಾರ, ಅಕ್ಟೋಬರ್ 5, 2010

ಬುದ್ಧಿ-ಹೀನ ಜೀವಿಗಳು?

"ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ" - ಶಂಕರಾಚಾರ್ಯರ ದೇವ್ಯಾಪರಾಧ ಕ್ಷಮಾಪಣ ಶ್ಲೋಕದ ಈ ಸಾಲನ್ನು ಪ್ರತಿ ಬಾರಿ ಹೇಳುವಾಗಲೂ ಕಣ್ತುಂಬಿಕೊಳ್ಳುತ್ತದೆ. ಹೆತ್ತ ಮಕ್ಕಳು ಕುಖ್ಯಾತರಾಗಬಹುದು. ಆದರೆ ಆ ಕುಖ್ಯಾತ ಮಕ್ಕಳನ್ನೂ ಅವರನ್ನು ಹೆತ್ತ ತಾಯಿ ಪ್ರೀತಿಸುತ್ತಾಳೆ. ಅವರ ಬದುಕಿಗಾಗಿ ಪ್ರಾರ್ಥಿಸುತ್ತಾಳೆ(ಇದಕ್ಕೆ ಅಪವಾದವೆಂಬಂತೆ ಈ ಕಲಿಯುಗದಲ್ಲಿ ಕೆಲವು ತಾಯಂದಿರೂ ಇದ್ದಾರೆ...ಮಕ್ಕಳನ್ನು ಶೋಷಿಸುವವರು. ಆದರೆ ಕೆಟ್ಟ ಮಕ್ಕಳಷ್ಟು ಕೆಟ್ಟ ತಾಯಂದಿರು ತೀರಾ ಕಡಿಮೆಯೇ.)

ಮಕ್ಕಳು ಎಷ್ಟೇ ಮಾನಸಿಕ/ದೈಹಿಕ ಹಿಂಸೆಯನ್ನಿತ್ತರೂ ಕೂಡ ಆಕೆಯೆಂದೂ ಹೆತ್ತ ಮಗುವಿಗೆ ಕೇಡನ್ನು ಬಯಸಳು. ವೇಶ್ಯೇಯೇ ಆಗಿರಲಿ.. ಆಕೆ ತನ್ನ ಮೈ ಮಾರಿಕೊಂಡಾದರೂ ಸರಿಯೇ ತನ್ನ ಮಗುವಿಗೆ ಉನ್ನತ ಭವಿಷ್ಯ ಕೊಡಲು ಯತ್ನಿಸುವಳು. ತನಗೆ ಜೀವವನ್ನಿತ್ತ, ಬದುಕನ್ನಿತ್ತ, ಹಾಲುಣಿಸಿ ಸಲಹಿದ ತಾಯಿಗೆ ಅತೀವ ಪ್ರೀತ್ಯಾದರ ತೋರುವುದು ಬೇಡ, ಕನಿಷ್ಠ ಗೌರವವನ್ನಾದರೂ ಕೊಟ್ಟರೆ ಆತ ಹುಟ್ಟಿದ್ದಕ್ಕೂ ಒಂದು ಅರ್ಥ ಬರುವುದು. ಆದರೆ ಕೆಲವರು, ಬುದ್ಧಿಜೀವಿಗಳಲ್ಲೇ ಅತೀ ದೊಡ್ಡ ಬುದ್ಧಿಜೀವಿಗಳೆನ್ನಿಸಿಕೊಳ್ಳುವ ತೆವಲಿಗೆ ಬಿದ್ದು, ತಮ್ಮ ಅಪೂರ್ವ(???) ಬರಹಕ್ಕೆ ಆತ್ಮ ಚರಿತ್ರೆ ಎಂಬ ಸುಂದರ ಶೀರ್ಷಿಕೆಯನ್ನು ಕೊಟ್ಟು ಅದರಲ್ಲಿ ತನ್ನ ಕೆಟ್ಟ ಅವಗುಣಗಳಿಗೆಲ್ಲಾ ಮನೆಯವರ/ಪರಿಸರದ ಕಾರಣಗಳನ್ನು ಕೊಡುತ್ತಾ, ಹೆತ್ತ ತಾಯಿಯನ್ನೂ ನಿಕೃಷ್ಟವಾಗಿ ಚಿತ್ರಿಸಿ ತಾನೆಷ್ಟು ನಿಷ್ಪಕ್ಷಪಾತಿ ಎಂದು ಸಾರುತ್ತಾ ಆ ಮಾನಸಿಕ ಅಸ್ವಸ್ಥತೆಯಲ್ಲೇ ಮುಳುಗೇಳುತ್ತಿರುತ್ತಾರೆ. ಇಂತಹದೇ ಒಂದು ಕೀಳುಮಟ್ಟದ ಬರಹ (ಹೆಸರಿಗೆ ಆತ್ಮ ಚರಿತ್ರೆ) ಪ್ರಜಾವಾಣಿ ದಿನಪತ್ರಿಕೆಯ ಸಾಪ್ತಾಹಿಕ ಪುರವಾಣಿಯಲ್ಲಿ ಧಾರಾವಾಹಿಯಂತೆ ಕಳೆದ ಆದಿತ್ಯವಾರದಿಂದ(೩.೧೦.೨೦೧೦)ಬರುತ್ತಿದೆ. ಈ ಘನ(!!!?) ಲೇಖನವನ್ನು ಬರೆದವರು ಮಹಾನ್ ಬುದ್ಧಿಜೀವಿಯಾದ ಗಿರೀಶ್ ಕಾರ್ನಾಡರು. ಅದರ ಲಿಂಕ್ ಈ ಕಳಗಿದೆ. ನೀವೂ ಓದಿ. ನನ್ನ ಅಭಿಪ್ರಾಯ ತಪ್ಪೆಂದು ಎಣಿಸಿದರೆ ನೇರವಾಗಿ ಕಮೆಂಟಿಸಿ.




ವೈಯಕ್ತಿಕ ವಿಷಯಗಳನ್ನು ಸಾರ್ವಜನಿಕವಾಗಿಸುವುದು ತಪ್ಪೆಂದು ಹೇಳುತ್ತಿಲ್ಲ. ಆದರೆ ಜನ್ಮವಿತ್ತ ತಾಯಿಯ ವೈಯಕ್ತಿಕ ಬದುಕನ್ನು, ಆಕೆಯ ನೈತಿಕತೆಯನ್ನೇ ಸಾರ್ವಜನಿಕವಾಗಿ ಪ್ರಶ್ನಿಸುವ, ಕೀಳು ಮಟ್ಟದ ಭಾಷೆಯನ್ನು ಉಪಯೋಗಿಸಿ ವಿಜೃಂಭಿಸುವ ಈ ಪರಿ ನನ್ನನ್ನು ಬಹು ದಿಗ್ಭ್ರಾಂತಳನ್ನಾಗಿಸಿತು. ಜೊತೆಗೆ ಆ ಎಳೆಯ ಪ್ರಾಯದ ತಾಯಿಯ ಫೋಟೋ ನೋಡಿ ಮನದುಂಬಿಯೂ ಬಂತು. ಮಾನಸಿಕ ಅಸ್ವಸ್ಥೆಯ ಪರಾಕಷ್ಠೆಯಿದು ಎಂದರೂ ತಪ್ಪಾಗದು. ಇಂತಹ ಲೇಖಕರಿಗೆಲ್ಲಾ ಜ್ಞಾನಪೀಠ ಕೊಡುವ ನಮ್ಮ ಘನ ಸರಕಾರದ ಅಸ್ವಸ್ಥತೆಯೂ ಮುಚ್ಚಿಲ್ಲ ಅನ್ನುವುದೂ ಬೇರೆ ಮಾತು. ಈ ಕಳಪೆ ಲೇಖನಕ್ಕೆ ಗೌರವಕೊಟ್ಟು, ಕನ್ನಡದ ಹೆಮ್ಮೆಯ ಬರಹಗಾರ ಎಂದೆಲ್ಲಾ ಹೊಗಳಿ, ಮುಖಪುಟದಿಂದಲೇ ಪ್ರಕಟಿಸಿದ ಪತ್ರಿಕೆಯ ಬಗ್ಗೆಯೂ ತೀವ್ರ ಅಸಮಾಧಾನವಿದೆ.

ಬುದ್ಧಿಜೀವಿಗಳೆಲ್ಲಾ ಸೇರಿ ಭೈರಪ್ಪನವರ ಕವಲು ಕಾದಂಬರಿಯನ್ನು ಟೀಕಿಸಿದ್ದರು. ಸ್ತ್ರೀಯರನ್ನು ಗೌರವಿಸಿಲ್ಲ ಎಂದು ಕೂಗಾಡಿದ್ದರು. (ಇದರರ್ಥ ನಾನು ಕವಲನ್ನು ಸಂಪೂರ್ಣವಾಗಿ ಸಮರ್ಥಿಸುವವಳೆಂದಲ್ಲ). ಆದರೆ ಅಲ್ಲಿ ಭೈರಪ್ಪನವರ ಕವಲಿನಲ್ಲಿ ಚಿತ್ರಿತರಾಗಿರುವ ಸ್ತ್ರೀಯರು ಕಾಲ್ಪನಿಕ ಪಾತ್ರಗಳು. ವಾಸ್ತವಿಕ ಕಲ್ಪನೆಯನ್ನು ಕಟ್ಟಿಕೊಡುವಂತಹವು ಮಾತ್ರ. ಆದರೆ ಇಲ್ಲಿ ಈ ಲೇಖಕರು ತಮ್ಮ ತಾಯಿಗೆ ಕೊಟ್ಟಿರುವ ಅಗೌರವ, ಅನಾದರ, ಅನೈತಿಕತೆಯ ಪಟ್ಟ- ಎಲ್ಲವನ್ನೂ ಕಂಡಾಗ ತುಂಬಾ ನೋವು, ಅಸಹನೆ, ಕೋಪ, ತಿರಸ್ಕಾರ ಮೂಡುವುದಂತೂ ಸತ್ಯ. ಇದು ನನ್ನ ವೈಯಕ್ತಿಕ ಭಾವನೆ ಅಷ್ಟೇ. ಆದರೆ ಕೂಲಂಕುಶವಾಗಿ ಓದಿದರೆ ನಿಮಗೂ ಹಾಗನ್ನಿಸದಿರದು.

ಬುದ್ಧಿಜೀವಿಗಳೆಂದರೆ ಬುದ್ಧಿಯಿಂದಲೇ ಜೀವಿಸಲು ಹೆಣಗಾಡುವ ನಿರುಪದ್ರವಿಗಳೆಂದುಕೊಂಡಿದ್ದೆ. ಈಗ ಭಯವಾಗುತ್ತಿದೆ! ಕಾರ್ನಾಡರ ಈ ಲೇಖನಕ್ಕೆ ನನ್ನ ಧಿಕ್ಕಾರವಿದೆ! ಸಮಾಜದಲ್ಲಿ ಗಣ್ಯರೆನಿಸಿಕೊಂಡು ಪೋಸುಕೊಡುವ ಇಂತಹವರ ಮಾನಸಿಕ ಅಸ್ವಸ್ಥೆಯಿಂದ ಸಾಮಾಜಿಕ ಸ್ವಾಸ್ಥ್ಯ ಕೆಡುವುದರ ಬಗ್ಗೆ ಕಳಕಳಿಯಿದೆ. ಹ್ಮ್ಂ.... ಆರು ತಿಂಗಳಲ್ಲಿ ಮೂರು ದಿನಪತ್ರಿಕೆಯನ್ನು ಬದಲಿಸಿರುವೆ. ಈಗ ಮತ್ತೆ ಆ ಸಂದರ್ಭ ಒದಗಿಬಂದಿದೆ! ಆರು ಹಿತವರು ನಿನಗೆ ಈ ಮೂವರೊಳಗೆ ಎಂದು ಯೋಚಿಸುತ್ತಿರುವೆ.

-ತೇಜಸ್ವಿನಿ ಹೆಗಡೆ.

ಸೋಮವಾರ, ಸೆಪ್ಟೆಂಬರ್ 20, 2010

ಪಯಣ ನಾಳೆಯ ಕಡೆಗೆ...

ಸುಟ್ಟುಹಾಕಬೇಕಿದ ಈ ಎದೆಯ 
ಚುಚ್ಚಿ ರಕ್ತಜಿನುಗಿಸುವಾ ನೆನಪುಗಳ,
ಉರಿಯೆಬ್ಬಿಸಿ ನಗುವ ಸತ್ತ ಕನಸುಗಳ,
ಆ ಚಾಣಾಕ್ಯ ಕಾಲಿಗೆ ಸಿಕ್ಕ
ಮುಳ್ಳನ್ನು ಕಿತ್ತು ಸುಟ್ಟಂತೆ....

ನುಗ್ಗಬೇಕಿದೆ ಮುಂದೆ, ಸರಿಸಿ ಈ
ಕಷ್ಟ-ನಷ್ಟಗಳ, ದುಃಖ-ನೋವುಗಳ
ಆ ಕಡಲು ತಡಿಯನು ಒಡೆದು ಮುನ್ನುಗ್ಗಿ
ಸುನಾಮಿಯಾಗಿ ಬೆಳೆದು, ಎಳೆದೆಲ್ಲವ
ನುಂಗಿ, ಮತ್ತೆ ನಿರುಮ್ಮಳವಾಗುವಂತೆ....

ಹಾರಬೇಕಿದೆ ಮೇಲೆ ಹಕ್ಕಿಯನೂ ಮೀರಿ
ಒಳಗೆಳೆದು ಹುದುಗಿಸುವ ನಿನ್ನೆಗಳ,
ಹಿಂಸಿಸುವ ಮಾತುಗಳ ಬಿಟ್ಟು,
ಆಗಸವನಿಣುಕಿ ತಾರೆಗಳನೋದುವ
ಆ ಉಪಗ್ರಹದಂತೆ, ತಿಳಿಯಬೇಕಿದೆ ನನ್ನ ನಾಳೆಗಳ...

ಆ ಲೋಕದಲ್ಲಿರುವ ಪರಮಾತ್ಮನ
ಈ ಲೋಕದಲ್ಲಿ ಕಾಣುವುದೆಂತೋ?!
ನಮ್ಮೊಳಗಿರುವ ಆತ್ಮನ ಕಂಡು
ಇಂದೊಮ್ಮೆ ಮನಸಾರೆ ನಗಬೇಕಿದೆ
ನನಗಾಗಿ ನಗುವವರನ್ನು ನಾ ನಗಿಸಬೇಕಿದೆ...

-ತೇಜಸ್ವಿನಿ ಹೆಗಡೆ

ಬುಧವಾರ, ಸೆಪ್ಟೆಂಬರ್ 15, 2010

ಕೃಷ್ಣಾರ್ಪಣಮಸ್ತು


http://devotionalonly.com/2009/11/

 
ಮೂಕಂ ಕರೋತಿ ವಾಚಾಲಂ ಪಂಗುಂ ಲಂಘಯತೇ ಗಿರಿಂ
ಯತ್ಕೃಪಾ ತಮಹಂ ವಂದೇ ಪರಮಾನಂದಮಾಧವಮ್
(ಭಗವದ್ಗೀತೆ, ಧ್ಯಾನಶ್ಲೋಕ)

[ಮೂಗನನ್ನು ಮಾತಾಡಿಸುತ್ತಾನೆ, ಕಾಲಿಲ್ಲದವನನ್ನು ಪರ್ವತವನ್ನು ಹತ್ತುವಂತೇ ಮಾಡುತ್ತಾನೆ, ಅಂತಹ ಕೃಪಾಳುವಾಗಿರುವ, ಪರಮಾನಂದವನ್ನು ನೀಡುವ ಮಾಧವನನ್ನು ನಾನು ವಂದಿಸುವೆ]

 ದೈಹಿಕವಾಗಿ ಅಶಕ್ತನಾಗಿರುವವನನ್ನೂ ಮಾನಸಿಕವಾಗಿ ಸಶಕ್ತನನ್ನಾಗಿಸುವ ಕರುಣಾಳು ಶ್ರೀಕೃಷ್ಣ ಎಂಬುದು ಮೇಲಿನ ಶ್ಲೋಕದೊಳಗಿನ ತಿರುಳು. "ಉದ್ಧರೇದಾತ್ಮನಾತ್ಮಾನಂ.." ಅಂದರೆ ನಿನ್ನ ಆತ್ಮದ ಉದ್ಧಾರ, ನಿನ್ನ ಏಳು ಬೀಳು ಎಲ್ಲಾ ನಿನ್ನ ಕೈಯಲ್ಲೇ ಇದೆ...ನಿನ್ನ ಮನೋಬಲದಲ್ಲಿದೆ. ನೀನೇ ನಿನ್ನ ಉನ್ನತಿಗೆ ಹಾಗೂ ಅವನತಿಗೆ ಮೂಲ ಕಾರಣ ಎಂಬ ಸುಂದರ ಸಂದೇಶವನ್ನಿತ್ತ ಶ್ರೀಕೃಷ್ಣ ಹುಟ್ಟಿದ್ದು ಶ್ರಾವಣ ಬಹುಳ, ಅಷ್ಟಮಿಯಂದು ರೋಹಿಣಿ ನಕ್ಷತ್ರದಲ್ಲಿ. ಹಾಗಾಗಿ ಈ ದಿನವನ್ನು ಕೃಷ್ಣಾಷ್ಟಮಿ ಎಂದು ಕರೆಯುತ್ತಾರೆ. ಕೃಷ್ಣನ ಜನ್ಮದಿನಾಚರಣೆಯನ್ನು ಎರಡು ರೀತಿಯಲ್ಲಿ ಆಚರಿಸುವ ಸಂಪ್ರದಾಯವಿದೆ. ಸಾಮಾನ್ಯವಾಗಿ ಎಲ್ಲರೂ ಒಂದೇ ದಿನ ಆಚರಿಸಿದರೂ ಕೆಲವೊಮ್ಮೆ ತಿಥಿ ಹಾಗೂ ನಕ್ಷತ್ರಗಳು ಬೇರೆಯಾಗಲು ಭಿನ್ನವಾಗಿಯೂ ಆಚರಿಸುತ್ತಾರೆ. ಈ ದಿನವನ್ನು ಸೌರಮಾನದವರು ಸಿಂಹಮಾಸದಲ್ಲಿ, ರೋಹಿಣಿ ನಕ್ಷತ್ರದ ದಿನದಂದು ಜಯಂತಿ ಎಂದು ಆಚರಿಸಿದರೆ, ಚಾಂದ್ರಮಾನದವರು ತಿಥಿ ಪ್ರಕಾರ ಅಂದರೆ ಶ್ರಾವಣ ಮಾಸದ ಕೃಷ್ಣಪಕ್ಷದಲ್ಲಿ ಬರುವ ಅಷ್ಟಮಿಯಂದು ಆಚರಿಸುತ್ತಾರೆ. ಇದೇ ದೇಶದ ಹಲವೆಡೆ ಪ್ರಚಲಿತವಾಗಿರುವ ಕೃಷ್ಣಾಷ್ಟಮಿ. ಸೌರಮಾನದವರೂ ಇದೇ ದಿನ ರೋಹಿಣಿ ನಕ್ಷತ್ರವೂ ಕೂಡಿ ಬಂದರೆ ಅಂದೇ ಕೃಷ್ಣಾಷ್ಟಮಿಯನ್ನು ಆಚರಿಸುವರು. ಆಗ ಏಕದಿನದಂದೇ ಜನ್ಮಾಷ್ಟಮಿಯ ಆಚರಣೆ ಎಲ್ಲಾ ಕಡೆಯೂ ಆಗುವುದು. ಈ ರೀತಿ ಸೌರಮಾನದವರಿಗೆ ಈ ದಿನ ನಕ್ಷತ್ರ ಪ್ರಧಾನವಾಗಿದ್ದರೆ, ಚಾಂದ್ರಮಾನದವರಿಗೆ ತಿಥಿ ಪ್ರಧಾನ. ಹಾಗಾಗಿ ಒಮ್ಮೊಮ್ಮೆ ಕೃಷ್ಣಾಷ್ಟಮಿ ಎರಡೆರಡು ಬಾರಿ ಬರುವುದೂ ಉಂಟು.

"ಕೃಷ್ಣ" ಪದದ ಅರ್ಥ ಕಪ್ಪು. ಶ್ರೀಕೃಷ್ಣ ಶ್ರೀವಿಷ್ಣು ಅಂದರೆ ಹರಿಯ ಅವತಾರ. ವಿಷ್ಣುವಿನ ಆಕರ, ಮೂಲ ತತ್ವ ಆಕಾಶ. ಆಕಾಶ ನೀಲಬಣ್ಣದ್ದಾಗಿರುವುದರಿಂದ, ಆತನ ಅಂಶವಾಗಿರುವ ಕೃಷ್ಣನಿಗೆ ನೀಲಮೇಘ ಶ್ಯಾಮ ಎಂದೂ ಕರೆಯುತ್ತಾರೆ. ಕೃಷ್ಣ ಎಂದರೆ ಎಲ್ಲರನ್ನೂ ಆಕರ್ಷಿಸುವವ ಎಂದೂ ಆಗುತ್ತದೆ. ಅಂತೆಯೇ ಆತನ ಮಾಯೆಯ ಸೆಳೆತದಿಂದ ಯಾರೂ ತಪ್ಪಿಸಿಕೊಳ್ಳಲಾಗದು. ಹಾಗಾಗಿಯೇ ಆತ ಮಾಯಾವಿ...ಈಭವದ ಬಂಧನದಿಂದ, ಮೋಹಜಾಲದಿಂದ, ಮಾಯೆಯಿಂದ ನಮ್ಮನ್ನು ಬಿಡಿಸಿ, ತನ್ನೆಡೆಗೆ ಸೆಳೆಯುವ ಮಾಯಾವಿ. ಆತ ಹುಟ್ಟಿದ್ದು ಕೃಷ್ಣಪಕ್ಷದ ನಡುರಾತ್ರಿಯಲ್ಲಿ. ಕಡುಗತ್ತಲೆಯಲ್ಲಿ ಬೆಳಕತೋರಲು ಜನಿಸಿದವ. ಇದರಿಂದಲೂ ಆತನಿಗೆ ಕೃಷ್ಣ ಎಂಬ ಹೆಸರು ಬಂತೆನ್ನಬಹುದು. ವಸುದೇವ, ದೇವಕಿಯರ ಎಂಟನೆಯ ಮಗುವಾಗಿ ಜನಿಸಿದ್ದರಿಂದ "ವಾಸುದೇವ" ಎಂಬ ಹೆಸರೂ ಬಂತು. ಹುಟ್ಟಿದ್ದು ಮಥುರಾದಲ್ಲಿರುವ ಸೋದರಮಾವನ ಸೆರೆಮನೆಯಲ್ಲಾದರೂ ಬೆಳೆದದ್ದೆಲ್ಲಾ ಗೋಕುಲದಲ್ಲಿದ್ದ ಯಶೋದೆಯ ಮಡಿಲಲ್ಲಿ... ಹಾಗಾಗಿ ಈ ದಿನವನ್ನು ಗೋಕುಲಾಷ್ಟಮಿ ಎಂದೂ ಕರೆಯುತ್ತಾರೆ.

ಶೀಕೃಷ್ಣನ ಅವತಾರದ ಮೂಲೋದ್ದೇಶ :

ಭೂಭಾರಹರಣ...ಅಂದರೆ ಭೂಮಿಯ ಮೇಲೆ ತುಂಬಿದ್ದ ಅಸುರರನ್ನು, ದುಷ್ಟರನ್ನು ಸಂಹರಿಸುವುದು. ಕ್ರೂರಿಯಾಗಿದ್ದ ಮಾವ ಕಂಸನನ್ನು ಸಂಹರಿಸುವುದು, ಪಾಂಡವರನ್ನು ಕಾಪಾಡಲಿಕ್ಕಾಗಿ. ಅಲ್ಲದೇ ಅಧರ್ಮಾಲ್ಲಿ ನಡೆಯುತ್ತಿದ್ದ ವೃಷ್ಣಿ ವಂಶಸ್ಥರನ್ನು ಅಂದರೆ ಅವನ ವಂಶವಾದ ಯಾದವ ಕುಲದವರನ್ನೂ ನಾಶಗೈದ. ಇವೆಲ್ಲಾ ಕಾರ್ಯಗಳ ಸಿದ್ಧಿಗಾಗಿ ಸ್ವಯಂ ಹರಿಯೇ ಕೃಷ್ಣನಾಗಿ ಧರೆಗೆ ಅವತರಿಸಿದ. ಆ ದಿನವನ್ನೇ ನಾವು ಕೃಷ್ಣಾಷ್ಟಮಿಯನ್ನಾಗಿ ಆಚರಿಸುತ್ತೇವೆ. ಕೃಷ್ಣ ಅಧರ್ಮವನ್ನು ನಾಶಗೈಯಲು, ಧರ್ಮವನ್ನು ಎತ್ತಿಹಿಡಿಯಲು ತನ್ನವರನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. ಇದಕ್ಕೆ ಅಧರ್ಮದಲ್ಲಿ ಸಾಗುತ್ತಿದ್ದ ತನ್ನದೇ ಸೋದರಮಾವನ ವಧೆ ಹಾಗೂ ಅನೀತಿಯಲ್ಲಿ ಸಾಗುತಿದ್ದ ತನ್ನದೇ ಯಾದವ ಕುಲದವರ ಪತನವೇ ಸಾಕ್ಷಿ. ಧರ್ಮದ ರಕ್ಷಣೆಯಲ್ಲಿ ಸಂಬಂಧದ ಬಂಧವಿಲ್ಲ ಎಂದು ತೋರಿದವ ಶ್ರೀಕೃಷ್ಣ.

ಈ ದಿನದಂದು ಭಕ್ತಾದಿಗಳು ತಮ್ಮ ಇಂದ್ರಿಯಗಳಿಗೆ ಆಹಾರವನ್ನೊದಗಿಸದೇ ಅಂದರೆ ರಾಗ, ದ್ವೇಷಗಳಿಂದ ದೂರವುಳಿದು, ನಿರಾಹಾರ ಅಥವಾ ಅಲ್ಪ ಆಹಾರವನ್ನಷ್ಟೇ ದೇಹಕ್ಕೆ ಒದಗಿಸಿ, ಆತನನ್ನು ಧ್ಯಾನದಮೂಲಕ ಸಾಕ್ಷಾತ್ಕಾರಗೊಳಿಸಲೆತ್ನಿಸುತ್ತಾರೆ. ಹಾಲು, ಅಕ್ಷತ, ಹೂವಿನ ಅರ್ಘ್ಯಕೊಡುತ್ತಾರೆ. ರಾತ್ರಿಯಲ್ಲಿ ಆತನ ಜನನವಾದ್ದರಿಂದ ಮಧ್ಯರಾತ್ರಿಯ ಹೊತ್ತಿಗೆ ದೇವಾಲಯಗಳಲ್ಲಿ, ಮನೆಗಳಲ್ಲಿ ವಿಶೇಷ ಪೂಜೆ, ಭಜನೆಗಳನ್ನು ಏರ್ಪಡಿಸುತ್ತಾರೆ. ಹೊದ್ದಲಿನಿಂದ ತಯಾರಿಸಿದ ಲಡ್ಡು, ಸಿಹಿ ಅವಲಕ್ಕಿ, ತುಳಸಿಮಾಲೆಯನ್ನು ಅರ್ಪಿಸುತ್ತಾರೆ. ಕೃಷ್ಣ ತುಲಸಿ(ಕಪ್ಪು ತುಲಸಿ) ಆತನಿಗೆ ಬಲು ಪ್ರಿಯ. ಅಂತೆಯೇ ಅವಲಕ್ಕಿಯೂ ಕೂಡ. ಬಡ ಸುಧಾಮನಿಂದ ಆತ ಬಯಸಿದ್ದು ಬರೀ ಅವಲಕ್ಕಿಯನ್ನೇ. ಆ ಮೂಲಕ ಆತ ಸ್ಪಷ್ಟಪಡಿಸುತ್ತಾನೆ, ತನಗೆ ಭಕ್ತಿಯಿಂದ ಪತ್ರೆಯನ್ನಾಗಲೀ, ಫಲವನ್ನೇ ಆಗಲೀ ಕೊನೆಗೆ ಬರೀ ನೀರನ್ನೇ ಆಗಲಿ ನೀಡಿದರೆ ಸಾಕು, ನಾನು ಅವನೊಳಗೆ, ಅವನು ನನ್ನೊಳಗೆ ಇರುತ್ತಾನೆಂದು.

ಶ್ರೀಕೃಷ್ಣ ಸದಾ ಮನುಜನ ಮನಸಿಗೆ ಹೆಚ್ಚು ಪ್ರಾಧಾನ್ಯತೆ ಕೊಟ್ಟವನು. ನಮ್ಮ ಮನಸ್ಸೇ ನಮ್ಮನ್ನು ನಿಗ್ರಹಿಸುತ್ತದೆ. ಅದನ್ನೊಮ್ಮೆ ನಾವು ನಿಗ್ರಹಿಸತೊಡಗಿದರೆ ನಮ್ಮ ಏಳಿಗೆ ನಿಶ್ಚಿತ. ಯಾವ ಕೆಡುಕೂ ನಮಗಾಗದು....ನಮ್ಮಿಂದಲೂ ಯಾರಿಗೂ ಕೆಡುಕಾಗದು ಎಂಬ ಸಂದೇಶವನ್ನು ತನ್ನ ಭಗವದ್ಗೀತೆಯಲ್ಲಿ ಸಾರುತ್ತಾನೆ. "ಕರ್ಮವನ್ನು ಮಾಡುತ್ತಿರು. ನಿನ್ನ ಕರ್ಮದಲ್ಲಿ ನಿನಗೆ ನಿಷ್ಠೆಯಿರಲಿ. ಆದರೆ ಅದರಿಂದ ಬರುವ ಫಲದ ಪ್ರತಿ ಅಪೇಕ್ಷೆ ಸಲ್ಲ. ನಾವು ನಮ್ಮ ನಮ್ಮ ಕರ್ಮವನ್ನು ಮಾಡುತ್ತಿರಬೇಕು. ಅದನ್ನು ನಿಲ್ಲಿಸುವುದೇ ದೊಡ್ಡ ಅಪರಾಧ" ಎಂದು ಸಾರಿದ್ದಾನೆ. "ನಾವು ನಮ್ಮ ಹೃದಯ ದೌರ್ಬಲ್ಯಗಳಿಂದ ಮೇಲೆದ್ದಾಗ ಮಾತ್ರ ಬದುಕಿನ ಹೋರಾಟದಲ್ಲಿ ಗೆಲ್ಲಬಲ್ಲೆವು" ಎಂಬ ಪಾಠವನ್ನು ಅರ್ಜುನನ ಮೂಲಕ ನಮಗೆ ತಿಳಿಸಿದ್ದಾನೆ. ಭಗವದ್ಗೀತೆಯನ್ನು ಸರಿಯಾದ ರೀತಿಯಲ್ಲಿ ಅರ್ಥೈಸಿಕೊಂಡು ಅಳವಡಿಸಿಕೊಂಡರೆ ಯಾವ ಸೋಲೂ ನಮ್ಮನ್ನು ಕುಗ್ಗಿಸದು...ಎಂತಹ ಗೆಲವೂ ನಮ್ಮನ್ನು ಉಬ್ಬಿಸದು.

ಶ್ರೀಕೃಷ್ಣಾಷ್ಟಮಿ ಎಲ್ಲರಿಗೂ ಮಂಗಳವನ್ನುಂಟುಮಾಡಲಿ, ನಮ್ಮೊಳಗಿನ ಅರಿಷಡ್ವೈರಿಗಳನ್ನು ಹೊರದೂಡಿ, ಸಾತ್ವಿಕತೆಯನ್ನು ತುಂಬಲೆಂದು ಮನಃಪೂರ್ವಕವಾಗಿ ಪಾರ್ಥಿಸುತ್ತೇನೆ.

[ನನ್ನ ತಾಯಿ ಶ್ರೀಮತಿ ಜಯಲಕ್ಷ್ಮೀ ಭಟ್ ರಚಿಸಿದ ಈ ಹಾಡು ನಿಮಗಾಗಿ. ಬಾಲ್ಯದಿಂದಲೂ ನಾನು ಅಮ್ಮನೊಂದಿಗೆ ಹಾಡುತ್ತಿರುವ ಈ ಹಾಡು ನನ್ನ ಮೆಚ್ಚಿನ ಹಾಡುಗಳಲ್ಲೊಂದು]


ಜೀವಿಸುವ ಪರಿ ಎಂತು
ನಿನ್ನ ನಾಮವ ಮರೆತು
ಜೀವಿಗಳಿಗಾಧಾರ
ಗೋಪಾಲಕೃಷ್ಣ |ಜೀ|

ಬಾಲಕನು ನೀನಾಗ
ಪೂತನಿಯ ಸಂಹಾರ
ಮಾವ ಕಂಸನೆ ನಿನಗೆ ಪರಮ ಶತ್ರು
ಗೋವುಗಳ ಕಾಯ್ದಿರುವೆ
ಗೋಪಿಯರ ಕಾಡಿರುವೆ
ನಂದಗೋಪಕೆ ನೀನು ಆನಂದ ಕಂದ |ಜೀ|

ನಾರಿಮಣಿ ದ್ರೌಪದಿಯ
ಮಾನಹರಣದ ಸಮಯ
ಮಾನರಕ್ಷಕನಾಗಿ ಓ ಎಂದು ಬಂದೆ
ಧರ್ಮಮೂರ್ತಿಯು ನೀನು
ಧರ್ಮರಾಯಗೆ ಒಲಿದೆ
ಪಾರ್ಥ ಸಾರಥಿಯೆಂಬ ಬಿರುದು ನಿನಗೆ |ಜೀ|

ಕುಲದೇವ ನೀ ಎಮ್ಮ
ಕುಲವನುದ್ಧರಿಸಯ್ಯ
ಕುಲದ ಕೀರ್ತಿಯ ಬೆಳೆಸಿ ಬಾರೋ ತಂದೆ
ದುಷ್ಟರನು ಶಿಕ್ಷಿಸುವೆ
ಶಿಷ್ಟರನು ರಕ್ಷಿಸುವೆ
ನೀ ಎಮ್ಮ ಕಷ್ಟಗಳ ನೀಗೊ ತಂದೆ |ಜೀ|

 {ಈ ಲೇಖನ "ಮರಳ ಮಲ್ಲಿಗೆ" ಪತ್ರಿಕೆಯಲ್ಲಿ ಪ್ರಕಟಿತ. ಕೃಷ್ಟಾಷ್ಟಮಿಯಂದೇ ಬ್ಲಾಗಿನಲ್ಲಿ ಪ್ರಕಟಿಸಬೇಕೆಂದು ಮಾಡಿದ್ದೆ. ಆದರೆ ಅದರ ಹಿಂದಿನ ದಿನದಂದೇ ಅಕಾಲಿಕ ಮರಣಕ್ಕೆ ತುತ್ತಾದ ನನ್ನ ಚಿಕ್ಕಪ್ಪನ ಅಗಲಿಕೆಯ ಆಘಾತದಿಂದ ಪ್ರಕಟಿಸಿರಲಿಲ್ಲ...}

-ತೇಜಸ್ವಿನಿ ಹೆಗಡೆ

ಬುಧವಾರ, ಸೆಪ್ಟೆಂಬರ್ 1, 2010

ಶಕ್ತಿಯ ಕೊಡು ಹೇ ಪ್ರಭು...

ನಿನಗೆ ಉತ್ತಮರೆಂದರೆ ಬಲು ಇಷ್ಟವಂತೆ
ನಾಲ್ಕು ಮಂದಿಗೆ ಅನ್ನ ಹಾಕುವವರು,
ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸುವವರು,
ಸದಾ ಹಸನ್ಮುಖಿಗಳು, ಮೃದು ಮಾತುಗಾರರು,
ಅನ್ಯಾಯ ಬಗೆಯದವರು, ಅಕ್ರಮ ಸಹಿಸದವರು,
ನಿನ್ನ ನಾಮವ ಜಪಿಸುತ, ನಿನ್ನ ನಂಬಿದವರು,
ಇಂಥವರೇ ನಿನಗೆ ಬಲು ಇಷ್ಟವಂತೆ....

ಆದರೆ...

ನಿನಗಿಂತಲೂ ಪ್ರೀತಿಸುವ, ಅವರ ಸ್ವಂತದವರು
ನಿನಗೇಕೆ ಕಾಣಲಿಲ್ಲವೋ? ನೀ ಸ್ವಾರ್ಥಿಯೋ?!
ಕರುಣಾಳು ಬಾ ಬೆಳಕೆ... ಎಂದು
ಸದಾ ನಿನ್ನ ಕರೆಯಬೇಕೆಂದಿದ್ದರೆ ಹೇಳು..
ನಿನ್ನಿಷ್ಟದವರ ಬಾಯಿಂದಲೇ
ಒಂದೇನು! ನೂರು ಬಾರಿ ಹೇಳಿಸಿಯೇನು....

ಆದರೆ....

ದಯಮಾಡಿ ಕೊಟ್ಟುಬಿಡು ಮತ್ತೆ
ಅವರ ಸ್ವತ್ತ ಅವರಿಗೆ ನೀ ಹೇ ದೇವ
ನಿನ್ನಿಷ್ಟದ ಆತ್ಮ ಅವರ ಅಂತರಾತ್ಮವೂ ಹೌದು
ಕಸಿದುಕೊಂಡು ನೀ ಏನು ಪಡಿದೀಯೇ?
ಕೊಟ್ಟು ಬಿಡು ನಿಜ ಧೈರ್ಯ-ಸ್ಥೈರ್ಯವ
ಬಾಳಬೇಕಿದೆ ಉಳಿದು ಹೋದವರು,
ನಿನ್ನ ಮೇಲಿರುವ ನಂಬಿಕೆಗಾಗಿ....

[ಮಂಗಳವಾರ ಹುಬ್ಬಳ್ಳಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ ತೀರಿ ಹೋದ ನನ್ನ ಆತ್ಮೀಯ, ಅತ್ಯಂತ ಆಪ್ತ ಹಾಗೂ ಪ್ರೀತಿಯ ಚಿಕ್ಕಪ್ಪ ಜಿ.ಎನ್.ಭಟ್(ನನ್ನ ತಂದೆಯವರ ಕಿರಿಯ ತಮ್ಮ) ಅವರಿಗಾಗಿ ಅರ್ಪಿತ ಈ ಕವನ...:( ಸಾವು ಅನಿವಾರ್ಯ, ಆದರೆ ದುರ್ಮರಣ ಅನ್ಯಾಯ...ಅದರ ನೋವೂ ಅಷ್ಟೇ ತೀವ್ರ ಹಾಗೂ ನಿರಂತರ.....:( ]

-ತೇಜಸ್ವಿನಿ ಹೆಗಡೆ.