ಮಂಗಳವಾರ, ಅಕ್ಟೋಬರ್ 20, 2020

ಮಧ್ಯಘಟ್ಟ

ಕಾಡನ್ನು ಬಹಳ ಪ್ರೀತಿಸುವ, ಹಸಿರನ್ನು ಧ್ಯಾನಿಸುವ, ವನ್ಯಜೀವಿಗಳ ಕುರಿತು, ಅಲ್ಲಿಯ ಸಸ್ಯಸಂಕುಲಗಳ ಕುರಿತು ಅಪಾರ ಆಸಕ್ತಿಯುಳ್ಳ, ಅಧ್ಯಯನ ಮಾಡುತ್ತಿರುವ/ಮಾಡಬೇಕೆಂದಿರುವ, ದೂರದ ನಗರಗಳಲ್ಲಿದ್ದೂ ತಮ್ಮ ಹುಟ್ಟೂರಿನಲ್ಲಿ(ಹಳ್ಳಿಗಳಲ್ಲಿ) ಅದರ ಸುತ್ತಲಿನ (ಅಳಿದುಳಿದ) ಕಾಡುಗಳಲ್ಲಿ, ಪರಿಸರದಲ್ಲಿ ಮನಸ್ಸನ್ನು ನೆಟ್ಟಿರುವ, ಕನವರಿಸುತ್ತಿರುವ – ಇವರೆಲ್ಲರೂ ಮುದ್ದಾಂ ಓದಲೇಬೇಕಾದ ಸತ್ಯಘಟನೆಯಾಧಾರಿತ ಅಪರೂಪದ ಕಾದಂಬರಿಯಿದು! ಈ ಕಾದಂಬರಿಯ ಲೇಖಕರು ಶ್ರೀಯುತ ಶಿವಾನಂದ ಕಳವೆಯವರು.
ಕಾಡನ್ನು ಅರಿಯಲು, ಅದರ ನಿಗೂಢತೆಯನ್ನು, ಜೀನಾಡಿಯನ್ನು ಅಭ್ಯಸಿಸಲು ಪರಿಸರಪ್ರೇಮ, ಅಪಾರ ತಾಳ್ಮೆ, ಪರಿಶ್ರಮ, ಕುತೂಹಲಭರಿತ ಆಸಕ್ತಿ ಅತ್ಯಗತ್ಯ ಎಂದು ಹಿರಿಯರು ಹೇಳಿದ್ದು ಕೇಳಿದ್ದೇನೆ. ಇದೆಲ್ಲವೂ ಈ ಕಾದಂಬರಿಯ ಓದಿಗೂ ಅತ್ಯಗತ್ಯ.
ಕಾಡನ್ನು ಅದರ ಗರ್ಭದೊಳು ಹೊಕ್ಕಿಯಲ್ಲದಿದ್ದರೂ, ಕನಿಷ್ಟ ಅಂಚನ್ನಾದರೂ ಸವರಿಯೋ ಒಳಗೆಳೆದುಕೊಳ್ಳುವ ಅದಮ್ಯ ಆಶಯ ನನ್ನೊಳಗಿದ್ದರೂ ಸದ್ಯಕ್ಕಂತೂ ಅದು ನೆರವೇರುವ ಲಕ್ಷಣ ಕಾಣದಿದ್ದಾಗ ಮಧ್ಯಘಟ್ಟ, ಪುನರ್ವಸು, ತಲೆಗಳಿ - ಇಂತಹ ಹಸಿರೇ ಉಸಿರಾಗಿರುವ, ಹಸಿರಿನೊಡನೆ ಸಮಸ್ತ ಜೀವಿಗಳನ್ನು ಬೆಸೆದಿರುವ ಅಪೂರ್ವ ಪುಸ್ತಕಗಳ ಓದು ದಟ್ಟ ಕಾನಿನೊಳಗೆ ಹೊಕ್ಕಂತಹ ಅನುಭವವನ್ನೇ ನೀಡಿದೆ. ಇದಕ್ಕಾಗಿ ನಾನು ಈ ಎಲ್ಲಾ ಪುಸ್ತಕಗಳ ಲೇಖಕರಿಗೆ ಕೃತಜ್ಞಳಾಗಿದ್ದೇನೆ. ನನ್ನದಲ್ಲದ, ನಾ ಕಾಣಲಾಗದ ಆ ಅದ್ಭುತ ಜಗತ್ತನ್ನು ನನ್ನೊಳಗೆ ಸಶಕ್ತವಾಗಿ ತುಂಬಿಕೊಟ್ಟಿವೆ ಈ ಎಲ್ಲಾ ಪುಸ್ತಕಗಳು.
ಇನ್ನು ಪ್ರಸ್ತುತ ಮಧ್ಯಘಟ್ಟ ಕಾದಂಬರಿಯ ಕುರಿತು ಹೇಳಬೇಕೆಂದರೆ…
ಸ್ವಾತಂತ್ರ್ಯ ಸಿಗುವ ಸಮಯದಲ್ಲೇ ದೂರದ ತ್ರಿಶೂಲಿನಿಂದ ಶಿರಸಿಯ ಮಧ್ಯಘಟ್ಟ (ಈಗಿನ ಮತ್ತಿಘಟ್ಟ)ದ ಕೆಳಗಿನಕೇರಿಯ ಹೊಸಕಟ್ಟಿನ 60ರ ಹರೆಯದ ವಿಧುರ ಗೋಪಯ್ಯ ಹೆಗಡೆ ಅವರಿಗೆ ಎರಡು ವರುಷಗಳ ಹಿಂದೆ ಮದುವೆ ಮಾಡಿಕೊಟ್ಟಿದ್ದ ತನ್ನ 18ರ ಹರೆಯದ ಮಗಳು ಶ್ರೀದೇವಿಯನ್ನು ಕಾಣಲೋಸುಗ ಹನ್ನೆರಡರ ಮಗ ವಾಸುದೇವ ನಂಬೂದರಿ ಹಾಗೂ ಹಾಗೂ ಆರು ತಿಂಗಳ ಶಿಶುವನ್ನು ಹಿಡಿದು ಕಾಲ್ನಡಿಗೆಯುಲ್ಲಿ ಹೊರಟುಬರುವ ರೋಚಕ ಕಥಾನಕದೊಂದಿಗೆ ಆರಂಭವಾಗುವ ಕಥೆ ಮುಂದೆ ಭೂದೇವಿ ಹೇಗೆ ತನ್ನೂರಿನ ಕುಂಬ್ಳಕಾಯಿಯ ಬಳ್ಳಿಯನ್ನು ಹೊಸಕಟ್ಟಿನ ತುಂಬಾ ಹಬ್ಬಿಸಿ, ಅದರ ಪಾಯಸದ ಘಮದೊಳಗೆ ತನ್ನ ಮೂಲ ಅಸ್ತಿತ್ವನ್ನು ಬೆರೆಸಿ ಆ ಪರಿಸರದೊಳೊಂದಾಗಿಬೆರೆತು ಮಲೆಯಲ್ಲಿ ಹಬ್ಬಿದಳು ಎಂಬಲ್ಲಿಗೆ ಕೊನೆಯಾಗುತ್ತದೆ.
ಹಾಗೆಂದು ಇದು ಅವಳದೊಂದೇ ಕಥೆಯಲ್ಲ. ಇದೊಂದು ಇಳೆಯನ್ನೇ ಕೆಂದ್ರಬಿಂದುವಾಗಿಟ್ಟುಕೊಂಡು ಲೇಖಕರು ಆ ಕಾಲಮಾನದ ಶಿರಸಿ ಸೀಮೆ, ಅದರ ಸುತ್ತಮುತ್ತಲಿನ ಹಳ್ಳಿಗಳು, ಜನಜೀವನ ಎಲ್ಲವನ್ನೂ ತೆರೆದಿಡುತ್ತಾ... ಕಾಡಿನ ಪ್ರದೇಶಗಳ ವಿಶೇಷತೆಯ ಕುರಿತು ಅವರು ಮಾಡಿರುವ ಗಾಢ ಅಧ್ಯಯನವನ್ನು ನೇಯ್ದು ನಮಗೆ ನೀಡುತ್ತಾ ಹೋಗುತ್ತಾರೆ.
ಕಾನನ್ನು ಗೌರವಿಸಿ, ವಿನೀತರಾಗಿ ಅದರ ಬಳಿ ಹೋದರೆ ಅದು ನನ್ನ ಒಡಲಿನಿಂದ ಏನೇನನ್ನೆಲ್ಲಾ ಮೊಗೆದು ತೆಗೆದುಕೊಡಬಲ್ಲದು ಎಂಬ ವಿಸ್ಮಯ ಇಲ್ಲಿ ಅನಾವರಣಗೊಂಡಿದೆ ಸಂತಾನಹೀನತೆಯಿಂದ ಹಿಡಿದು ಮಧುಮೇಹ ರೋಗದವರೆಗಿನ ಸಮಸ್ಯೆಗಳಿಗೆಲ್ಲಾ ಪರಿಹಾರವನ್ನು ಹೇಗೆ ನೀಡಬಲ್ಲದು… ಹಸಿವಿನಿಂದ ಸೊರಗುವ ಜೀವಿಗಳಿಗೆ ಎಷ್ಟೆಲ್ಲಾ ಪೌಷ್ಟಿಕ ಆಹಾರವನ್ನು ಒದಗಿಸಬಲ್ಲದು –ಹೀಗೆ ಎಲ್ಲವನ್ನೂ ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತಾ ಹೋಗುತ್ತದೆ ಮಧ್ಯಘಟ್ಟ.
ಉದಾರಣೆಗೆ:-
ಕಬ್ಬಿನಹಾಲು ಹುಳಿಯಾಗದಂತೇ ಅದಕ್ಕೆ ಎರಡು ತುಂಡು ಕಬ್ಬನ್ನು ಹಾಕಿಡುವುದು, ಮೇಯಲು ಹೋಗುವ ದನಗಳಿಗೆ ಬಾಲ ತುಂಡುಗುತ್ತಿದ್ದುದು ಹೇಗೆ, ನಾವು ಈಗ ಡಯಟ್ಟಿಗೋಸ್ಕರ ಬಾಯಿ ಕಟ್ಟುತ್ತಿರುವಾಗ ಕಾಡಿನ ಸಿಗುವ ಮಧುನಾಶಿನಿ ಎಂಬ ಅಪರೂಪದ ಎಲೆ ಹೇಗೆ ಆ ತಿನ್ನುವ ಹಪಹಪಿಯನ್ನು ತಾತ್ಕಾಲಿಕವಾಗಿ ತಡೆಯುತ್ತದೆ, ಈವರೆಗೂ ನಾನು ಕೇಳಿರದಿದ್ದ ‘ಕಳ್ಳರಕೊಳ್ಳಿ’ ಎನ್ನುವ (ಮಳೆಗಾಲದಲ್ಲಿ ಕಡಿನ ಒಣಗಿದ ಮರದ ಮೇಲೆ ಬೆಳೆದು ರಾತ್ರಿ ಬೆಳಕು ಬೀರುವ ಲೂಸಿಫೆರಿನ್ ಕಿಣ್ವದಿಂದಾಗಿ) ಟ್ಯೂಬಲೈಟಿನಂತೇ ಹೊಳೆವ ಅಪರೂಪದ ಕಟ್ಟಿಗೆ… ಹಾಗೆಯೇ,
ವನದೊಳಗೆ ಸಮೃದ್ಧವಾಗಿ ಬೆಳೆದಿರುವ ಅಪರೂಪದ ಔಷಧಗಳು ಮತ್ತು ಅವುಗಳನ್ನು ಉಪಯೋಗಿಸಲು, ಬಗೆದು ತೆಗೆಯಲು ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳು, ಕಾದಂಬರಿಯ ಕೊನೆಗೆ ಸವಿಸ್ತಾರವಾಗಿ ಕೊಟ್ಟಿರುವ ಅಲ್ಲಿಯ ಕೆಲವೊಂದು ಆಡುಭಾಷೆಯ ಅರ್ಥಗಳು ಹಾಗೂ ಆ ಭಾಗದ ಕೃಷಿ ಮೂಲದ ಸಸ್ಯಗಳು, ಕಾಡಿನ ಪ್ರಾಣಿಗಳ ವಿವರ, ವನ್ಯಸಸ್ಯಗಳ ಸ್ಥಳೀಯ ಹೆಸರುಗಳು – ಹೀಗೆ ಎಲ್ಲಾ ವಿಧದಲ್ಲೂ ಇದೊಂದು ಸಂಗ್ರಹಯೋಗ್ಯ ಹಾಗೂ ಅಧ್ಯಯಶೀಲ ಕಾದಂಬರಿಯಾಗಿದೆ.
ಕಾದಂಬರಿಯಲ್ಲಿ ಬಳಕೆಯಾಗಿರುವ ಭಾಷಾ ವೈಶಿಷ್ಟ್ಯ:-
ಕಾದಂಬರಿಯುದ್ದಕ್ಕೂ ಬಹಳಷ್ಟು ಕಡೆ ಬಳಸಿದ್ದು ಆ ಪ್ರದೇಶದ ಹವ್ಯಕ ಭಾಷೆ. ಹೀಗಾಗಿ ಉತ್ತರ ಕನ್ನಡದಲ್ಲೇ ಹುಟ್ಟಿ ಬೆಳೆದವರಿಗೆ ಅಷ್ಟು ಸಮಸ್ಯೆಯಾಗದಿದ್ದರೂ ತೀರಾ ಏನೂ ಗೊತ್ತಿಲ್ಲದವರಿಗೆ ಸ್ವಲ್ಪ ಕಷ್ಟವಾಗಬಹುದೇನೋ. ಆದರೆ ಅಲ್ಲಿಯ ಜನರ (ಕೇವಲ ಹವ್ಯಕರು ಮಾತ್ರವಲ್ಲ, ಕಾಡೊಳಾಗಿರುವ ಮರಾಠಿಗರು, ಕರೆವೊಕ್ಕಲಿಗರು, ಹಾಲಕ್ಕಿಗರು.. ಹಾಗೆಯೇ ಗೌಡರು, ನಾಯ್ಕರು…) ಜೀವನಕ್ರಮ, ಆಹಾರ, ವಿಹಾರ, ವ್ಯವಹಾರ, ಸಂಪ್ರದಾಯಗಳನ್ನು ತೆರೆದಿಡಲು ಆಡುಭಾಷೆಯ ಬಳಕೆ ಅತ್ಯಗತ್ಯ. ಅದು ಕಥೆಯ ಸೊಗಡನ್ನು ಹೆಚ್ಚಿಸುತ್ತದೆ. ಅದರಲ್ಲೂ ಇದು ಕೇರಳದಿಂದ ಶಿರಸಿ ಸೀಮೆಯನ್ನು ಜೋಡಿಸುವ ತಂತುವಾಗಿರುವುದರಿಂದ ಶುದ್ಧ ಕನ್ನಡವೊಂದನ್ನೇ ಬಳಸಿದ್ದರೆ ಸೂಕ್ತವೆನಿಸುತ್ತಿರಲಿಲ್ಲ.
ದೂರದ ಕೇರಳವಾಗಲೀ, ಈ ಕಡೆಯ ಮಧ್ಯಘಟ್ಟವಾಗಲೀ ಮೊದಲಿನಿಂದಲೂ ವಂಶೋದ್ಧಾರಕನೆಂದೆನಿಸಿಕೊಳ್ಳುವ ಮಗನಿಗೆ ಹೆಚ್ಚು ಪ್ರಾಶಸ್ತ್ಯ ಸಿಕ್ಕಿ ಹೆಣ್ಣು ಕೂಸುಗಳು ಹೇಗೆ ಬವಣೆಗಳನ್ನು ಪಡುತ್ತಿದ್ದರೆಂಬುದು(ಇದು ಈಗಲೂ ದೇಶದ ಹಲವು ಭಾಗಗಳಲ್ಲಿ ನಡೆಯುತ್ತಿರುವ ವಿಷಾದಕರ ಸಂಗತಿ) ಸಂಕಟವನ್ನುಕ್ಕಿಸುತ್ತದೆ. ಕೇರಳದ ಕಡೆಗೋ ಹೆಣ್ಣು ಸಂತಾನ ಹೆಚ್ಚಾಗಿತ್ತು. ಹೀಗಾಗಿ ಮದುವೆಮಾಡಲು ದುಡ್ಡಿಲ್ಲದೇ ಕಂಡು ಕೇಳರಿಯದ ದಟ್ಟ ಕಾನುಗಳೊಳಗೆ ಹುದುಗಿರುವ ಮಧ್ಯಘಟ್ಟ ಹಾಗೂ ಅದರ ಅಕ್ಕಪಕ್ಕದ ಹಳ್ಳಿಗಳಲ್ಲಿರುವ ಮದುವೆ ವಯಸ್ಸು ಮೀರಿದವರಿಗೋ ವಿಧುರರಿಗೋ ಇಲ್ಲಾ ವಯಸ್ಸಾದ ಮುದುಕರಿಗೋ ಮದುವೆ ಮಾಡಿಕೊಡುತ್ತಿದ್ದರೆ, ಇತ್ತ ಈ ಕಡೆಗೋ ಕಾಡಿನ ನಡುವೆಯಿದ್ದ ಊರುಗಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದ ರೋಗರುಜಿನಗಳಿಂದಾಗಿ ತಕ್ಷಣಕ್ಕೆ ಸೂಕ್ತ ಚಿಕಿತ್ಸೆ ಸಿಗದೆಯೋ ಇಲ್ಲಾ ಹೆಣ್ಣು ಕೂಸೆಂಬ ತಾತ್ಸಾರಕ್ಕೋ ಬಲಿಯಾಗುತ್ತಿದ್ದ ಹೆಣ್ಮಕ್ಕಳಿಂದ ಗಂಡು ಸಂತಾನಗಳೇ ಹೆಚ್ಚಾಗುತ್ತಾ ಹೋಗಿ, ಇದರಿಂದಾಗಿ ವಯಸ್ಸು ಮೀರಿದರೂ ಮದುವೆಗೆ ಹೆಣ್ಣು ಸಿಗದೇ ಪರದಾಡುತ್ತಾ ಸಾಲ ಸೋಲ ಮಾಡಿ ಭಾಷೆಯೂ ತಿಳಿಯದ ಹೆಣ್ಣುಗಳನ್ನು ದೂರದಿಂದ ವರಿಸಿ ತರುತ್ತಿದ್ದರು. ಕಥೆಯ ಆರಂಭ ಇಲ್ಲಿಂದ ಸಾಗುತ್ತಾ ಹೋಗಿ ಆಮೇಲೆ ಒಂದು ಘಟ್ಟದಲ್ಲಿ ನಿಲ್ಲುತ್ತದೆ. ಮುಖ್ಯ ಕಥೆಯ ಸುತ್ತ ಹುತ್ತಗಟ್ಟುವ ಉಪಕಥೆಗಳು…. ಕಥೆಯೊಳಗೊಂದು ಕಥೆ, ಅದರೊಳಗೊಂದು ಘಟನೆ, ಅದರ ಹಿಂದೊಂದು ಹಿನ್ನಲೆ – ಈ ರೀತಿ ಇದು ನಲ್ವತ್ತು ಪುಟ್ಟಪುಟ್ಟ ಮಣಿಗಳನ್ನು ದಾರವೊಂದರಲ್ಲಿ ಪೋಣಿಸಿರುವ ಕಾದಂಬರಿ. ಇದರ (ಸೂತ್ರ) ದಾರ ಹೊಸಕಟ್ಟಿನ ಗೋಪಯ್ಯ ಹೆಗಡೆ ಹಾಗೂ ಅವರ ಕುಟುಂಬ. ಅವರ ಸುತ್ತಲು ನಡೆಯುವ ಘಟನಾವಳಿಗಳು, ಬಂದುಹೋಗುವ, ಸಂಪರ್ಕಕ್ಕೆ ಬರುವ ಪಾತ್ರಗಳೆಲ್ಲಾ ಮಣಿಗಳು.
ಕಾದಂಬರಿಯಲ್ಲಿ ಬಹಳ ಇಷ್ಟವಾದ, ಮನಸ್ಸನ್ನು ಹೊಕ್ಕಿ ಕಾಡಿದ ಪಾತ್ರಗಳು – ಪುಡಿಯಮ್ಮ, ಶ್ರೀದೇವಿ, ಭೂದೇವಿ, ಗಣಪತಿ ಭಟ್ಟರ ಬಡತನದ ಬೇಗೆಯ ಕಥೆ, ಕಾಡನ್ನು ಪೂಜಿಸುವ, ಆರಾಧಿಸುವ ಅಲ್ಲಿಯ ಒಕ್ಕಲಿಗರು ಹಾಗೂ ದೇವಿಕಾನು ಹಾಗೂ ಮಧ್ಯಘಟ್ಟದ ಸುತ್ತಮುತ್ತಲಿನ ಅಪರೂಪದ ಜೀವವಿಸ್ಮಯಗಳು.
ಇನ್ನು, ಪುಡಿಯಮ್ಮನ ಪಾತ್ರ ನನಗೆ ಬಹಳಷ್ಟು ರೀತಿಯಲ್ಲಿ ಎಂ.ಕೆ.ಇಂದಿರಾ ಅವರ ಕಾದಂಬರಿಯಾದ ‘ಫಣಿಯಮ್ಮ’ನನ್ನೇ ಮತ್ತೆಮತ್ತೆ ನೆನಪಿಸಿತ್ತು. ಆ ಕಾಲದಲ್ಲಿ ಇಂತಹ ಅಪರೂಪದ ಸ್ತ್ರೀರತ್ನರು ಅಂದರೆ ಒಳಗಿಂದ ಬಲಿತು ಗಟ್ಟಿಗಿತ್ತಿಯಾಗಿದ್ದವರೆಲ್ಲಾ ಜಗತ್ತಿಗೆ ಬೆಳಕಾದವರೇ ಸೈ ಅನ್ನಿಸಿತು. ದೂರದ ಕೇರಳದಿಂದ ಮಧ್ಯಘಟ್ಟಕ್ಕೆ ಬಂದು ಕಕ್ಕಾಬಿಕ್ಕಿಯಾಗಿ ನಿಂತ ಶ್ರೀದೇವಿಗೆ ಮನೆಯನ್ನು/ಮನೆಯವರನ್ನು ಪರಿಚಯಿಸುವ ಮುನ್ನ ಅಲ್ಲಿಯ ಪರಿಸರವನ್ನು, ಅದರೊಳಗಿನ ಜೀವನ ತತ್ವವನ್ನು ಅರುಹಿ ಧೈರ್ಯ ತುಂಬುತ್ತಾಳೆ ಪುಡಿಯಮ್ಮ. ಆಕೆಯೂ ಬಹಳ ಹಿಂದೆ ಕೇರಳದಿಂದಲೇ ಮಧ್ಯಘಟ್ಟಕ್ಕೆ ಬಂದವಳು… ಕಾರಣಾಂತರಗಳಿಂದ ಅಲ್ಲಿಯ ನಿವಾಸಿಗಳೇ ಆಗಿಬಿಟ್ಟಿದ್ದರಿಂದ ಆ ಪರಿಸರದ ಜೀವನಾಡಿಯನ್ನು ಚೆನ್ನಾಗಿ ಅರಿತವಳು. ಮಾತ್ರವಲ್ಲ, ತನ್ನೂರಿನಿಂದ ಕುಂಬಳಕಾಯಿಯ ಬೀಜವನ್ನು ಬರುವಾಗಲೇ ತಂದು ಅಲ್ಲಿಯವರಿಗೆಲ್ಲಾ ಹಂಚಿ ಆ ಮೂಲಕ ತನ್ನ ಮೂಲ ನೆಲೆಯನ್ನೂ ಸುತ್ತಮುತ್ತಲೆಲ್ಲಾ ಹಬ್ಬಿಸಿದವಳು. ಕಾಡನ್ನು ಆಕೆ ಶ್ರೀದೇವಿಗೆ ಪರಿಚಯಿಸುತ್ತಾ, ಆ ಮೂಲಕ ಆಕೆ ಶ್ರೀದೇವಿಗೆ ಒದಗಿರುವ ಆ ಅನಿವಾರ್ಯದ ಬದುಕನ್ನು ಎದುರಿಸುವ, ನಿಭಾಯಿಸುವ ಕಲೆಯನ್ನು ಕಲಿಸುವ ಅವಳ ಜಾಣ್ಮೆ, ತಿಳಿವು ಮನಸೂರೆಗೊಳ್ಳುತ್ತದೆ.
ಕಾದಂಬರಿಯೊಳಗಿನ ಮತ್ತೊಂದು ವಿಶೇಷತೆಯೇನೆಂದರೆ, ಇಲ್ಲಿ ನಾವು ಮನುಷ್ಯರ ನಡುವೆ ಪರಸ್ಪರ ಬಾಂಧವ್ಯವಿರುವಂತೇ ಕಾಡಿನ ಸಸ್ಯಗಳ ನಡುವೆಯೂ ಗಾಢ ನಂಟು, ಸಹಕಾರ ಹೇಗಿರುತ್ತದೆ ಎಂಬುದರ ವಿವರಗಳನ್ನು ಕಾಣುತ್ತೇವೆ. ಉದಾಹರಣೆಗೆ ಬಿದಿರಿನ ಸಸಿಗಳ ಸುತ್ತ ಕೇದಿಗೆವನ ಹಬ್ಬಿ ಅದು ಇನ್ನೇನು ಚಿಗುರುತ್ತಿರುವ ಬಿದಿರ ಸಸ್ಯಗಳಿಗೆ ವನ್ಯ ಜೀವಿಗಳ ಬಾಯಿಯಿಂದ, ಮನುಷ್ಯರಿಂದ ರಕ್ಷಣೆ ನೀಡುವುದು… ಇತ್ಯಾದಿ. “ಮಕ್ಕಳ ತೂಗೋ ತೊಟ್ಟಿಲಾಗುವ ಬಿದಿರಿಗೆ ಕೆಂದಿಗೆ ಕಂಟಿನೇ ತಾಯಿ ಆಗ್ತದೆ!” ಎನ್ನುವ ಪುಡಿಯಮ್ಮನ ಮಾತಿನೊಳಗೆ ನೂರು ಮರ್ಮ ಅಡಗಿದೆ.
ಹಿಂದೆ ಜನರಲ್ಲಿ ತಂತ್ರಜ್ಞಾನವಿರಲಿಲ್ಲ.. ಅಕ್ಷರ ಜ್ಞಾನವೂ ದುರ್ಲಭವಾಗಿತ್ತು. ಆದರೆ ಅವರು ತಮ್ಮ ಪರಿಸರವನ್ನು, ಕಾಡನ್ನು ಚೆನ್ನಾಗಿ ಅಧ್ಯಯನ ಮಾಡಿದ್ದರು/ಮಾಡುತ್ತಿದ್ದರು. ಆಮೂಲಕ ಆ ಹಸಿರಿನ ಚೈತನ್ಯ ಅವರೊಳಗೆ ನಿರಂತರವಾಗಿ ಕಾನಿನ ತೊರೆಗಳೆಂತೇ ಉಕ್ಕಿ ಹರಿಯುತ್ತಿತ್ತು. ಸಿರಿವಂತಿಕೆ ಇರುತ್ತಿರಲಿಲ್ಲ, ಆದರೆ ಮನುಷ್ಯತ್ವ, ಮಾನವ ಧರ್ಮವನ್ನು ಮೈಗೂಡಿಸಿಕೊಂಡಿದ್ದರು. ಒಡೆಯ ಆಳು ಎಂಬ ಸಾಮಾಜಿಕ ಶ್ರೇಣಿಯಿದ್ದಿದ್ದರೂ ಇಬ್ಬರಲ್ಲೂ ಪರಸ್ಪರ ಪ್ರೀತಿ, ವಿಶ್ವಾಸ, ಕಾರುಣ್ಯ ಹರಿದಾಡುತ್ತಿತ್ತು. ನಿಯತ್ತು ಎನ್ನುವುದು ಅಘೋಷಿತ ಪ್ರಮಾಣವಾಗಿತ್ತು. ಆದರೆ ಕಾಲಕ್ರಮೇಣ ಸುಧಾರಣೆಯ ನೆಪದಲ್ಲೋ ಇಲ್ಲಾ ಆ ಹೆಸರಿನ ಮುಸುಕಿನೊಳಗೇ ಮೂಲ ಅಂತಃಸತ್ವವಕ್ಕೇ ಧಕ್ಕೆ ತರುವಂತೇ ಬದಲಾವಣೆಗಳಾಗುತ್ತಾ ಹೋಗಿ, ತಂತ್ರಜ್ಞಾನ ಜೀವಕ್ಕಿಂತ ಮುಂದೆ ನಡೆದು ನಿಲ್ಲದ ಅನಾಹುತಗಳು ಸಂಭವಿಸಿದವು. ನಮ್ಮ ಇಂದಿನ ಓದು, ಅಕ್ಷರ ಜ್ಞಾನ, ತಂತ್ರಜ್ಞಾನಗಳು ನಮಗೆ ಕಾಡಿನ ಕುರಿತು ಅದರ ಉಳಿಸುವಿಕೆ, ಬೆಳೆಸುವಿಕೆ ಕುರಿತು ಜಾಗೃತಿ ನೀಡುತ್ತಿವೆಯೇ? ಹಿಂದಿನಿವರು ಮಣ್ಣಿನಲ್ಲಿ/ಮಣ್ಣಿನಿಂದ ಕಲಿತಿದ್ದ ಅರಿವನ್ನು ನಾವು ಇಂದು ಸಿಕ್ಕಸಿಕ್ಕಲ್ಲಿ ಗುಡ್ಡವನ್ನು, ಪರ್ವತವನ್ನು ನಮ್ಮ ದುರಾಸೆಗಾಗಿ ಅಗೆದು ಮೊಗೆದು ತೋಡುವುದರಿಂದ ಕಲಿಯಲು ಸಾಧ್ಯವೇ? – ಓದು ಮುಗಿದರೂ ಪ್ರಶ್ನೆಗಳು, ಮಂಥನ-ಚಿಂತನೆಗಳು ಮಾತ್ರ ಮನದೊಳಗೆ ನಿಲ್ಲುತ್ತಿಲ್ಲ. “ಕಾಡಿನಲ್ಲಿ ಕಂಡಿದ್ದೆಲ್ಲಾ ಮುಟ್ಟಡ, ನೋಡಿದ್ದೆಲ್ಲ ಕೆದಕಡ. ಮನುಷ್ಯ ಜನ್ಮ ಈ ಭೂಮಿಗೆ ಬಂದಿದ್ದು ನಿಂತು ಕೈಮುಗಿದು ಹೋಪಲೆ ಹೊರತೂ ಎಲ್ಲದನ್ನೂ ಎತ್ತಿ ಬಾಚಿ ತಗಂಡು ಗಂಟು ಕಟ್ಟಿಕೊಂಡು ಹೋಪಲೆ ಅಲ್ಲ.”- ಎಂದು ಬುದ್ಧಿ ಹೇಳುವ ವರದಪ್ಪ ಹೆಗಡೆಯವರ ಮಾತುಗಳು ನಮಗೆಲ್ಲಾ ಎಚ್ಚರಿಕೆಯ ಗಂಟೆಯಾಗಿದೆ.
ಮನವನ್ನು ಹೊಕ್ಕಿ, ಅಲ್ಲೇ ಬೇರು ಬಿಟ್ಟ ಒಂದಿಷ್ಟು ಸಾಲುಗಳು:-
*ಪರೂರು (ಅಪರಿಚಿತ) ಹೊಳೆ, ಊರ ಸ್ಮಶಾನ ಯಾವತ್ತೂ ಹೆದರಿಸುತ್ತದೆ
*ಇವಳ ಗಂಡ ಹೀಗಂತೆ ಎಂದು ನಗುವವರು ಸಿಕ್ಕಾರೆಯೇ ಹೊರತು ಗಂಡಸನ್ನು ದಾರಿಗೆ ತರುವವರು ಎಲ್ಲಾದರೂ ಸಿಕ್ಕಾರೆಯೇ?
*ದೇವರು ಸಂಕಷ್ಟ ಮತ್ತು ಪರಿಹಾರ ಒಟ್ಟಿಗೆ ಇಟ್ಟು ಭೂಮಿಯಲ್ಲಿ ಆಟ ಆಡತ. ಹುದುಕಲೆ ಕಣ್ಣಿದ್ದರೆ ಇಲ್ಲೆ ಎಲ್ಲವೂ ಇದ್ದು.
*ಕಾಡು ಜಗತ್ತಿನಲ್ಲಿ ಕೂಡುವ ಕಾಲ ಮುಗಿದು ಇನ್ನು ಕಳೆದುಕೊಳ್ಳುವ ಕಾಲ ಶುರುವಾಯ್ತು.
*ಹಣೆಯ ಕುಂಕುಮ ಅಳಚಿ ಹೋತು ಅಂದ್ರೆ ಹಣೆಬರಹವೇ ಬದಲಾತು ಹೇಳ?
*ಸುಖ ಬಂತು ಹೇಳಿ ದುಡಿಯದು ಬಿಟ್ಟರೆ ಕಷ್ಟ ಎದುರಿಸಲೆ ಶಕ್ತಿ ಇರತಿಲ್ಲೆ ಮಾರಾಯ.

ಪುಸ್ತಕ – ಮಧ್ಯಘಟ್ಟ
ಲೇಖಕರು -
Shivanand Kalave
ಪ್ರಕಾಶಕರು – ಸಾಹಿತ್ಯ ಪ್ರಕಾಶನ
ಬೆಲೆ – ೨೫೦/-
ಪುಟಗಳು – ೨೩೧

~ತೇಜಸ್ವಿನಿ ಹೆಗಡೆ
Like
Comment
Share

ಭಾನುವಾರ, ಅಕ್ಟೋಬರ್ 4, 2020

ಪುನರ್ವಸು

ಜೋಗದ ಸೌಂದರ್ಯವನ್ನು ನಮ್ಮ ನಾಡಿನ ಹಲವು ಕವಿಗಳು ಅದ್ಭುತವಾಗಿ ಹಾಡಿಹೊಗಳಿದ್ದಾರೆ. ನಿತ್ಯೋತ್ಸವ ಗೀತೆಯನ್ನು ಕೇಳದವರೇ ಇಲ್ಲ ಎನ್ನಬಹುದು. ಹಾಗೆ ನೋಡಿದರೆ ನನ್ನ ಹುಟ್ಟೂರಿನಿಂದ ಜೋಗ ಬಹಳ ದೂರವೇನಿಲ್ಲ. ಶಿರಸಿಯಿಂದ ಒಂದೂವರೆ ತಾಸಿನ ಪ್ರಯಾಣವಷ್ಟೇ. ಚಿಕ್ಕವಳಿದ್ದಾಗಲೊಮ್ಮೆ ಅಪ್ಪನೊಂದಿಗೆ ಹೋಗಿ ಜೋಗವನ್ನು ನೋಡಿದ್ದೆ. ತದನಂತರ ಎರಡು ವರುಷಗಳ ಹಿಂದೆಯಷ್ಟೇ ಏನೋ ಕಾರ್ಯದ ನಿಮಿತ್ತ ಅತ್ತ ಹೋಗಿದವಳು ಮಳೆಗಾಲದ ಒಂದು ದಿವಸ ಜೋಗದ ಅದ್ಭುತ ಸೌಂದರ್ಯದ ದರ್ಶನವನ್ನು ಮಾಡಿದ್ದರ ನೆನಪು ಇನ್ನೂ ಹಸಿರಾಗಿದೆ. ಆದರೆ ಈ ಜೋಗಜಲಪಾತ ತನ್ನ ಮೂಲ ಆರ್ಭಟವನ್ನು, ಸೌಂದರ್ಯವನ್ನು ಕಳೆದುಕೊಂಡು ಸೊರಗಿದ್ದರ ಹಿಂದಿನ ಕಥೆ, ಶರಾವತಿ ನದಿಗೆ ಕಟ್ಟಿರುವ ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣದ ಹಿಂದಿನ ಕಟು ವಾಸ್ತವಿಕತೆ, ಅ ಸಮಯದಲ್ಲಿ ಉಂಟಾದ ತ್ಯಾಗ, ಬಲಿದಾನಗಳು, ಮುಳುಗಡೆಯ ಯಾತನಾಮಯ ವ್ಯಥೆಗಳು ಇವೆಲ್ಲವುಗಳ ವಿವರಣೆ ನನಗೆ ಗೊತ್ತಿರಲಿಲ್ಲ. ಮುಳುಗುವುದು ಕೇವಲ ನೆಲ ಹಾಗೂ ಜನರ ಆಸ್ತಿಪಾಸ್ತಿ ಮಾತ್ರವಲ್ಲ, ಒಂದಿಡೀ ಸಮುದಾಯದ ಅಸ್ತಿತ್ವ, ಕನಸು, ಸಹಜೀವಿಗಳ, ಮೂಕಪ್ರಾಣಿಗಳ ಜೊತೆಗಿನ ನಂಟು, ಹೊಲ, ತೋಟ, ಕಾಡು – ಇವೆಲ್ಲವುಗಳೊಂದಿಗೆ ಬೆಸೆದಿರುವ ಅವಿನಾಭಾವ ಬಂಧವೊಂದು ಮಹತ್ತರ ಉದ್ದೇಶದಡಿಯಲಿ ಸಿಲುಕಿ ನಜ್ಜುಗುಜ್ಜಾಗಿ ಸವೆದು ಬೆಳಕನ್ನು ನೀಡುತ್ತಿದೆ ಎಂಬುದನ್ನು ಬಹಳ ವಿಸ್ತಾರವಾಗಿ, ಮನದೊಳಗೆ ಇಳಿದು ಕಾಡುವಂತೆ, ಹಲವೆಡೆ ಓದುಗನ ಮನಸ್ಸನ್ನು ಎಳೆದು ನಾನಾ ವಿಧದ ಚಿಂತನೆಗಳೆಡೆ ಎಳೆಯುವಂತೆ ಪ್ರಸ್ತುತ ಕಾದಂಬರಿಯನ್ನು ರಚಿಸಿದ್ದಾರೆ ಲೇಖಕ ಶ್ರಿ ಗಜಾನನ ಶರ್ಮ ಅವರು.(ನಾ. ಡಿಸೋಜಾ ಅವರ ಮುಳುಗಡೆ ಕಾದಂಬರಿಯನ್ನು ಬಹಳ ಹಿಂದೆ ಓದಿದ್ದೆ. ಅದನ್ನೂ ನೆನಪಿಸಿತ್ತು ಈ ಪುಸ್ತಕ.)

1916ರಲ್ಲಿ ಸರ್. ಎಂ.ವಿಶ್ವೇಶ್ವರಯ್ಯನವರು ಜೋಗಕ್ಕೆ ಭೇಟಿ ನೀಡಿ ವಿದ್ಯುತ್ ಯೋಜನೆಗೆ ಸಮೀಕ್ಷೆ ನಡೆಸಲು ಆದೇಶಿಸುವ ಘಟನೆಯೊಂದಿಗೆ ಶುರುವಾಗುವ ಕಥೆಯು, ಮುಂದೆ ಅವರೇ ಮೊದಲು ಕಟ್ಟಿಸಿದ್ದ ಹಿರೇಭಾಸ್ಕರ ಅಣೆಕಟ್ಟಿನ ಜೊತೆಗೇ ಸಮೃದ್ಧವಾಗಿದ್ದ ಪ್ರದೇಶಗಳು, ಜನಜೀವನ, ಅವರ ಬದುಕು ಎಲ್ಲಾ ಮುಳುಗಡೆಯಾಗುವುದರೊಂದಿಗೆ ಮುಗಿಯುತ್ತದೆ. ಈ ಸುದೀರ್ಘಾವಧಿಯ ಸಮಯದಲ್ಲಿ ಸ್ವಾತಂತ್ರ್ಯ ಪೂರ್ವದ ಹಾಗೂ ಆ ನಂತರದ ಶರಾವತಿ ತೀರದ ಹಳ್ಳಿಗರ ಬದುಕು ಅದು ಹೇಗೆ ಈ ಒಂದು ಪ್ರಾಜೆಕ್ಟಿನಿಂದ ಬದಲಾಗುತ್ತಾ ಹೋಯಿತು, ಅಭಿವೃದ್ಧಿಯ ಹೆಸರಿನಲ್ಲಿ ಒಳಗೆ ಬಲಿದು ಹೊರಗೆ ಬೆಳೆಯುವ ಬದಲು, ಒಳಗೆ ಸಂಕುಚಿತಗೊಳ್ಳುತ್ತಾ ಹೊರಗೆ ವಿರಾಟ್ ಸ್ವರೂಪ ಪಡೆಯಿತು ಎಂಬೆಲ್ಲಾ ಚಿತ್ರಣಗಳು ನಮ್ಮೊಳಗೆ ಅಚ್ಚಾಗುತ್ತಾ ಹೋಗುತ್ತವೆ.
ಸರ್ ಎಂ.ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್, ಕಡಾಂಬಿ, ಫೋರ್ಬ್ಸ್ – ಮುಂತಾದ ನಿಷ್ಟಾವಂತ, ದೇಶಕ್ಕೆ ಒಳಿತಾಗಲು ಆಲೋಚಿಸುವ ಜನರಿರುವ ತನಕ ಕೆಲಸಗಾರರಲ್ಲಿ, ಅಧಿಕಾರಿಗಳಲ್ಲಿ ಪ್ರಕೃತಿಯ ಕುರಿತು ಒಂದು ಒಲವು, ಸಹಾನುಭೂತಿಯೂ ಇತ್ತು. ತಮ್ಮ ಪ್ರಾಜೆಕ್ಟಿನಿಂದಾಗುವ ಪ್ರಕೃತಿ ನಾಶ, ಹಳ್ಳಿಗರ ಜನಜೀವಕ್ಕಗುತ್ತಿರುವ ಧಕ್ಕೆಯ ಕುರಿತು ಪಶ್ಚಾತ್ತಾಪ, ಮರುಗುವಿಕೆಯಾದರೂ ಕಾಣಿಸುತ್ತಿತ್ತು. ಹೀಗಾಗಿ ಮೊದಮೊದಲು ಆದಷ್ಟು ಮೆಲುವಾಗಿ, ಸ್ಪಂದನೆಯೊಂದಿಗೆ ಸಾಗುವ ಹಿರೇಭಾಸ್ಕರ ಅಣೆಕಟ್ಟಿನ ದಾರಿ, ಲಿಂಗನಮಕ್ಕಿ ಪ್ರಾಜೆಕ್ಟಿಗೆ ಬರುವಷ್ಟರಲ್ಲಿ ಏನೇನೆಲ್ಲಾ ರಾಜಕೀಯ ಆಟಾಗಳು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಅಧಿಕಾರಿ ವರ್ಗಗಳಲ್ಲಿ ನಡೆದವು, ಹೇಗೆಲ್ಲಾ ವಂಚನೆಗಳು ತೆರೆಯ ಹಿಂದೆ/ಮುಂದೆ ನಡೆದಿದ್ದವು – ಇವನ್ನೆಲ್ಲಾ ಸ್ಪಷ್ಟವಾಗಿ ಓದುತ್ತಿರುವಾಗ, ರಾಜಕೀಯ ಎನ್ನುವುದು ಅಂದು ಹಾಗೂ ಇಂದೂ ಒಂದೇ ರೀತಿ ಇದೆ.. ಸ್ವರೂಪ ಬದಲಿಸಿರುತ್ತದೆ ಅಷ್ಟೇ ಎಂಬುದು ಮನದಟ್ಟಾಗುತ್ತದೆ.
554 ಪುಟಗಳ ಈ ಬೃಹತ್ ಕದಂಬರಿ ಕೇವಲ ಶರಾವತಿ ನಡಿಗೆ ಅಣೆಕಟ್ಟುಗಳನ್ನು (ಹಿರೇಭಾಸ್ಕರ ಅಣೆಕಟ್ಟು ಮತ್ತು ಲಿಂಗನಮಕ್ಕಿ) ಕಟ್ಟುವುದು, ಅದರಿಂದ ಆ ಪರಿಸರದ ಮೇಲೆರಗಿದ ವಿಪತ್ತುಗಳ ಚಿತ್ರಣವನ್ನು ಮಾತ್ರ ಹೇಳುವುದಿಲ್ಲ. ನಾಡಿಗೆ ಬೆಳಕು ನೀಡಲು ಹೇಗೆ ಅಲ್ಲಿಯ ಜನರು, ಒಂದಿಡೀ ಸಮುದಾಯ ತಮ್ಮ ಅಸ್ತಿತ್ವವನ್ನು, ಬದುಕನ್ನು ಕತ್ತಲೆಗೆ ನೂಕಿಕೊಂಡರು ಎಂಬುದನ್ನು ತೆರೆದು ತೋರಿಸುತ್ತದೆ. ದೀಪದ ಬುಡ ಕತ್ತಲು ಎಂಬ ಗಾದೆ ಇಲ್ಲಿ ನಿಚ್ಚಳವಾಗಿದೆ. ಈಗಲೂ ನಮ್ಮೂರಿನ ಹಳ್ಳಿಗಳು ಜೋರು ಮಳೆ ಬರಲಿ, ಬೇಸಿಗೆಯ ಬಿರು ಬಿಸಿಲಿರಲಿ, ದಿನದ ಬಹುತೇಕ ಕರೆಂಟಿಲ್ಲದೇ ಬದುಕುವುದನು ಕಲಿತಾಗಿದೆ. ನಗರಗಳ ದೊಡ್ಡ ಹೊಟ್ಟೆ ತುಂಬಿಸುವ ತವಕದಲ್ಲಿ ಜೋಗದ ಬುಡ, ಆಸು ಪಾಸಿನ ಊರುಗಳ ಪರಿಸ್ಥಿತಿ ಎಷ್ಟು ಸುಧಾರಿಸಿದೆ? ಉತ್ತರ ಕರ್ನಾಟಕ ಜಿಲ್ಲೆಗೆ ಯಾವೆಲ್ಲಾ ಸೌಲಭ್ಯ, ಸೌಕರ್ಯಗಳು ಈಗ ದೊರಕುತ್ತಿವೆ ಎಂಬ ಪ್ರಶ್ನೆಯೂ ಮೂಡುತ್ತದೆ.
ಆ ಕಾಲಘಟ್ಟದಲ್ಲಿ ಈ ಪ್ರಾಜೆಕ್ಟಿನ ಸಾಧಕ ಬಾಧಕಗಳನ್ನು ಜನರಿಗೆ ತಲುಪಿಸುತ್ತಿದ್ದ ಪತ್ರಿಕಾವರದಿಗಳು, ವಸ್ತುನಿಷ್ಟವಾಗಿರುತ್ತಿದ್ದ ಲೇಖನಗಳು, ಅವುಗಳ ಕೆಲವೊಂದು ತುಣುಗಳು, ಜಲಪಾತಗಳಿಗೆ ರಾಜ, ರೋರರ್, ರಾಕೆಟ್, ಲೇಡಿ – ಈ ಹೆಸರುಗಳು ಹೇಗೆ ಬಂದವು ಮತ್ತು ಅವುಗಳ ಹಿಂದಿನ ಕಥೆಯೇನು ಮುಂತಾದ ವಿವರಗಳು ಬಹಳ ಆಸಕ್ತಿಕರವಾಗಿ ನಮ್ಮ ಮುಂದೆ ತೆರೆದುಕೊಳ್ಳುತ್ತವೆ. ಲಿಂಗನಮಕ್ಕಿ ಜಲಾಶಯ ಕಟ್ಟುವಾಗ ಬರುವ ಸವಿಸ್ತಾರವಾದ ತಾಂತ್ರಿಕ ಹಾಗೂ ಆರ್ಕಿಟೆಕ್ಟ್ ವಿವರಣೆಗಳು, ಅಂಕಿ-ಅಂಶಗಳೆಲ್ಲಾ ಆ ವಿಷಯದಲ್ಲಿ ಅಷ್ಟು ಅರಿವಿಲ್ಲದ ನನಗೆ ಆಸಕ್ತಿ ಅನ್ನಿಸದಿದ್ದರೂ ಈ ನಿಟ್ಟಿನಲ್ಲಿ ಓದುತ್ತಿರುವವರಿಗೆ, ಅಧ್ಯಯನ ಮಾಡುತ್ತಿರುವವರಿಗೆ ಇದೊಂದು ಒಳ್ಳೆಯ ಮಾಹಿತಿ ಅನ್ನಿಸಿತು.
ಇನ್ನು, ಜನರು ನೆಲೆಯನ್ನು ತೊರೆದು ಸಾಗುವಾಗಿನ ಕರಣಾಜನಕ ಚಿತ್ರಣವನ್ನೋದುತ್ತಿರುವಾಗ ಮತ್ತೆ ಮನಸ್ಸು ಒಂದು ಸುದೀರ್ಘ ನಿಲುಗಡೆಯನ್ನು ಪಡೆದಿತ್ತು. ಸ್ವಾತಂತ್ರ್ಯದ ಸಮಯದಲ್ಲಿ ಒಂದಿಷ್ಟು ನಾಯಕರ ಸ್ವಾರ್ಥವೋ, ದುರಾಸೆಯೋ, ಅಸಹಾಯಕತೆಯೋ, ಮುಂದಾಲೋಚನೆಯಿಲ್ಲದ ದುಡುಕು ನಿರ್ಧಾರವೋ, ರಾಜಕೀಯ ಜಿದ್ದಾಜಿದ್ದಿಯೋ – ಇವೆಲ್ಲವುಗಳಿಂದಾಗಿ ಕೋಟಿಗಟ್ಟಲೆ ಜನ ತಮ್ಮ ಹುಟ್ಟೂರನ್ನು, ಮನೆ, ಜಾನುವಾರು, ಹೊಲಗಳನ್ನೆಲ್ಲಾ ಉಟ್ಟಬಟ್ಟೆಯಲ್ಲಿ ತೊರೆದು ಬರುವಾಗ, ದ್ವೇಷದ ದಳ್ಳುರಿಗೆ ಸಿಲುಕಿ ಪ್ರಾಣ ಬಿಡುವಾಗ ಹೇಗೆ ನೋವನ್ನನುಭವಿಸಿರಬಹುದುದು ಎಂಬ ಆಲೋಚನೆಗೆ ಮನಸು ಎಳೆಯಿತು. ಈ ಕಾದಂಬರಿಯ ಆ ಚಿತ್ರಣ ನನಗೆ ಅಮೃತ ಪ್ರೀತಂ ಅವರ ‘ಪಿಂಜಾರಾ’ ಕಾದಂಬರಿಯನ್ನು ನೆನಪಿಸಿತು. ಪುನರ್ವಸುವಿನಲ್ಲಿ ಮುಳುಗಡೆಯ ಅವಾಂತರವನ್ನು ವಿವರಿಸುತ್ತಾ, “ಇರುವೆಗೆ ಮೂತ್ರವೇ ಪ್ರಳಯ, ದೊಡ್ಡವರು ಮಹತ್ವದ ಕಾರಣವಿಲ್ಲದೆಯೂ ತೆಗೆದುಕೊಳ್ಳುವ ಒಂದು ನಿರ್ಧಾರ, ಸಣ್ಣವರ ಪಾಲಿಗೆ ಪ್ರಾಣಾಂತಿಕವಾಗಿಬಿಡಬಹುದು” ಎನ್ನಲಾಗಿದೆ!
ಅಣೆಕಟ್ಟನ್ನು ಆ ದುರ್ಗಮ ಜಾಗದಲ್ಲಿ, ಅಪಾಯಕಾರಿ ಕಣಿವೆಯಲ್ಲಿ ಕಟ್ಟುವಾಗ ಬಲಿಯಾದ ಅಸಂಖ್ಯಾತ ಕಾರ್ಮಿಕರು, ಮನಸ್ಸಿಲ್ಲದಿದ್ದರೂ ಒತ್ತಾಯದಲ್ಲಿ ತಮ್ಮ ನೆಲ, ತೋಟ, ಜಾನುವಾರುಗಳನ್ನೆಲಾ ತೊರೆದು ತಬ್ಬಲಿಗಳಂತೆ ಗುಳೆ ಹೊರಟ ಜನರು – ಕಣ್ಣಿಗೆ ಕಟ್ಟುವಂತೆ ವಿವರಿಸಲ್ಪಟ್ಟಿದ್ದು, ಇದು ಆಗಾಗ ಓದಿನ ಓಘಕ್ಕೆ ಒಂದು ಸುದೀರ್ಘ ನಿಲುಗಡೆ ನಿಲ್ಲಿಸಿ, ನಿಟ್ಟುಸಿರು ತಂದುಬಿಡುತ್ತದೆ. ಜಗತ್ತು ಬದಲಾದಂತೆ, ಹೊಸಹೊಸ ಆವಿಷ್ಕಾರಕ್ಕೆ ತೆರೆದುಕೊಂಡಂತೆ ಹಿಂದೆ ಬೀಳುವ ಹಳೆಯ ತಲೆಮಾರು, ಅವರ ಕುಲಕಸುಬುಗಳು, ಹೊಸ ಕಾಲದ ಸೆಳೆತಕ್ಕೆ ಸಿಲುಕಿ ಉನ್ಮಾದದಲ್ಲಿ ತಮ್ಮ ಬೇರನ್ನೇ ಮರೆತು ಕಡಿದುಕೊಂಡು ಓಡುವ ಯುವಜನಾಂಗ – ಇವೆಲ್ಲಾ ಇಂದಿಗೂ, ಎಂದಿಗೂ ಬಹಳ ಪ್ರಸ್ತುತವೆನ್ನಿಸುತ್ತವೆ. ಅಲ್ಲಿಯ ಜನತೆ ಮೊದಲು ಬ್ರಿಟಿಶ್ ಸರ್ಕಾರದ ವಿರುದ್ಧ ಹೋರಾಡಿ, ಆಮೇಲೆ ತಮ್ಮ ಉಳಿವಿಗಾಗಿ, ಹಕ್ಕಿಗಾಗಿ ನವ ಭಾರತದ ಹೊಸ ಸರ್ಕಾರದ ವಿರುದ್ಧ ಹೋರಾಡಲಾಗದೇ ಅಸಹಾಯಕರಾಗುವ ಚಿತ್ರಣ ಮನದೊಳಗೆ ಹಲವು ಪ್ರಶ್ನೆಗಳನ್ನು ಎಬ್ಬಿಸಿಬಿಡುತ್ತದೆ.
೧. ಪ್ರಗತಿ ಎಂದರೇನು? ಅದಕ್ಕಿರುವ ಮಾನದಂಡವೇನು? ಎಲ್ಲಾ ಯೋಜನೆಗಳು ಆರಂಭದಲ್ಲಿ ಒಳಿತಿಗೆ, ಉನ್ನತಿಗೆ ಎಂಬಂತೇ ತೋರುತ್ತವೆ ಅಥವಾ ಹಾಗೆ ಕಾಣಿಸಲ್ಪಡುತ್ತವೆ. ಆದರೆ ಅದರ ಹಿಂದಿನ ಉದ್ದೇಶ, ಮುಂದಿನ ಪರಿಣಾಮ, ಸುದೀರ್ಘಾವಧಿಯಲ್ಲಿ ಅದರಿಂದ ಆಗುವ ಲಾಭ ನಷ್ಟಗಳ ಪರಿಗಣನೆ – ಇವೆಲ್ಲಾ ನಿಷ್ಪಕ್ಷವಾಗಿ ಆಗುತ್ತವೆಯೇ?
೨. ಎಲ್ಲಾ ಅವನತಿಗೂ ಕೇವಲ ಜಾಗತೀಕರಣ ಮಾತ್ರ ಕಾರಣವೇ? ಮನುಷ್ಯ ತನ್ನ ಮಹಾತ್ವಾಕಾಂಕ್ಷೆಯ ಮಾಂತ್ರಿಕ ಶಕ್ತಿಗೆ ಸಿಲುಕಿ, ಕುರುಡಾಗಿ ಸ್ವನಿಯಂತ್ರಣ, ಸಂಯಮ, ತುಸು ನಿಲುಗಡೆಯನ್ನು ಹಾಕಿಕೊಳ್ಳದಿರುವುದೂ ಕಾರಣ ತಾನೇ?
೩. ಯೋಜನೆಗಳೆಲ್ಲಾ ಬೃಹತ್ ಆಗಿದ್ದಷ್ಟು ಯೋಚನೆಗಳು ಸಂಕುಚಿತಗೊಳ್ಳುತ್ತಾ ಹೋಗುವುದು ಏಕೆ?
೪. ಬ್ರಿಟೀಶರನ್ನು ಓಡಿಸಿ ಹೋರಾಟದಲ್ಲಿ ಗೆದ್ದ ನಾವುಗಳು ನಮ್ಮೊಳಗಿನ (ಅದು ಹೊರಗಿರಬಹುದು ಅಥವಾ ನಮ್ಮ ಒಳಗಿನ ಗುಣವೇ ಆಗಿದ್ದಿರಬಹುದು) ಅವಗುಣಗಳು, ಕೊಳ್ಳುಬಾಕತನ, ದೇಶದ್ರೋಹಿತನವನ್ನು ಗೆಲ್ಲಲು ಯಾಕೆ ಆಗಲಿಲ್ಲ? ಕಾದಂಬರಿಯಲ್ಲೇ ಒಂದೆಡೇ ಬರುವಂತೆ, ಪ್ರಾಜೆಕ್ಟ್ ಅಳೆಯೋಕೆ ಬಂದ ಜನರೇ ಆಮೇಲೆ ಆ ಪ್ರದೇಶವನ್ನೇ ವಶಪಡಿಸಿಕೊಂಡು ಅಲ್ಲಿನ ಮೂಲ ನಿವಾಸಿಗಳನ್ನೆ ಆಳಲು ಹೊರಡುವುದು. ಇದೊಂಥರ ಬೆಂಕಿಯಿಂದ ಬಾಣಲೆಗೆ ಬಿದ್ದ ಪರಿಸ್ಥಿತಿ. ವ್ಯಾಪರದ ನೆಪದಲ್ಲಿ ನುಸುಳಿದ ಬ್ರಿಟೀಶರು ದೇಶವನ್ನೇ ಆಳಿದಂತೇ ಶರಾವತಿ ನದಿತೀರದ ಮುಗ್ಧ ಜನರು ಒದ್ದಾಡಿದ ಬಗೆಯನ್ನು ಓದಿದಾಗ ಅನ್ನಿಸಿದ್ದು.
೫. ಆ ಕಾಲದಿಂದ ಈ ಕಾಲದವರೆಗೂ, ತರತಮ ಬೇಧ ಇವೆಲ್ಲವೂ ಇರುವುದು ಅಧಿಕಾರ, ಅಂತಸ್ತು, ಐಶ್ವರ್ಯ ಉಳ್ಳುವರು ಮತ್ತು ಅವುಗಳಿಲ್ಲದವರ ನಡುವೆ ಮಾತ್ರವೇ ಅಲ್ಲವೇ?
*
ಹಾಗೆಂದು ಕಾದಂಬರಿಯ ತುಂಬಾ ನೋವಿನ ಚಿತ್ರಣವೇ ತುಂಬಿದೆ ಎಂದಲ್ಲ. ಮಲೆನಾಡಿನ ಸುಂದರ ಪ್ರಕೃತಿಯ ವರ್ಣನೆ, ಅಲ್ಲಿಯ ಹಳ್ಳಿಗರ ವಿಶಾಲ ಮನಸ್ಸು, ಆತಿಥ್ಯ, ಉಣಿಸು-ತಿನಿಸುಗಳು, ವಿಶೇಷ ಭಕ್ಷ್ಯಗಳು, ಆರ್ಭಟಿಸುವ ಮಳೆಯ ಅದ್ಭುತ ವರ್ಣನೆ, ಕಚಗಳಿಯಿಡುವ ಭೂತ, ಯಕ್ಷಿ, ಜಟ್ಟಿಗಳ ಭಯಾನಕ ಕತೆಯ ಪ್ರಸ್ತಾಪ, ಅಡಿಕೆ ಕೊಯ್ಲು, ಅದಕ್ಕೆ ಮಾಡಿಕೊಳ್ಳುವ ತಯಾರಿ, ಜಲಪಾತದ ಸೌಂದರ್ಯವನ್ನು ತೆರೆದಿಡುವ ರೀತಿ – ಹೀಗೆ ನಡುನಡುವೆ ಅನೇಕ ಮುದ ನೀಡುವಂತಹ ಕಥನಗಳನ್ನು ನೀಡುತ್ತಲೇ ವಾಸ್ತವಿಕ ಚಿತ್ರಣವನ್ನು ನೀಡುತ್ತಾ ಹೋಗಿ, ಅದು ನನ್ನ ಬಾಲ್ಯ, ಬೆಳೆದ ಪರಿಸರ, ಅಜ್ಜಿಯಿಂದ ಕೇಳಿದ್ದ ಭೂತದ ಕಥೆಗಳು ಇವೆಲ್ಲವುಗಳನ್ನು ನೆನಪಿಸಿತು.
ಕಾದಂಬರಿಯನ್ನು ಮುಗಿಸಿದ ಮೇಲೆ ನನಗೆ ಅನ್ನಿಸಿದ್ದು...
ಔದ್ಯೋಗೀಕರಣ, ಜಾಗತಿಕರಣ – ಇವೆಲ್ಲಾ ತಡೆಯಲಾಗದಂಥದ್ದು. ಅಭಿವೃದ್ಧಿಗೆ ವಿದ್ಯುತ್ ಬೇಕೇಬೇಕು, ಅನಿವಾರ್ಯ ಎಲ್ಲವೂ ಸರಿಯೇ. ಆದರೆ ಇದಕ್ಕೆ ತೆರೆಬೇಕಾದ, ತೆತ್ತಿರುವ ಬೆಲೆಯಾದರೂ ಏನು? ಪ್ರಕೃತಿಯ ನಾಶವಿಲ್ಲದೇ ಯಾವುದೇ ಅಭಿವೃದ್ಧಿ ಸಾಧ್ಯವಿಲ್ಲವೇ? ಕಾಡನ್ನು, ವನವನ್ನು ಆಶ್ರಯಿಸಿ ಬದುಕುತ್ತಿರುವ ಅಸಂಖ್ಯಾತ ಜೀವಿಗಳ ನಾಶ, ಆ ಮೂಲಕ ನಮ್ಮ ಭವಿಷ್ಯತ್ತಿಗೆ ಅಂಧಕಾರವನ್ನೆಳೆದುಕೊಳ್ಳುವ ರೀತಿಯ ಹುಚ್ಚುಚ್ಚಾದ ಅಭಿವೃದ್ಧಿಗಳು ಅಗತ್ಯವೇ? ಒಂದು ನಿಯಂತ್ರಣ, ದೂರದರ್ಶಿತ್ವ, ಸಂಯಮ, ಸಹ ಜೀವಿಗಳ ಕುರಿತು ಕಾಳಜಿ – ಇವುಗಳನ್ನೆಲ್ಲಾ ಮರೆತ ಓಟ ನಮ್ಮನು ಮುಗ್ಗರಿಸದಿರದೇ? ನಾವಿಲ್ಲದಿದ್ದರೂ ನಮ್ಮೆದುರು ಇರುವ ಕಾರ್ಯ ಸಫಲವಾಗಿ ಸಮಾಜ ಅದರ ಫಲವನ್ನುಣ್ಣುವಂತಾಗಬೇಕು, ಅದೇ ನಿಜವದ ವೃತ್ತಿಧರ್ಮ – ಎಂದು ನಾಡಿಗಾಗಿ ನಿಸ್ಪ್ರಹತೆಯಿಂದ ದುಡಿದಿದ್ದ ಕಡಾಂಬಿಯಂತವರ ಸದ್ಭಾವನೆ, ಸದುದ್ದೇಶ ಆಮೇಲೆ ನಿಜವಾಗಿಯೂ ಈಡೇರಿತೆ? ನಗರಗಳು ಬೆಳಕು, ಸಕಲ ಸೌಲಭ್ಯಗಳನ್ನು ಹೊಂದಿದರೂ ಮುಳುಗಡೆಯಿಂದ ನೊಂದ ಆ ಪ್ರದೇಶದ ಜನರು, ಅವರ ಜೀವನ ಅಷ್ಟೇ ಪ್ರಗತಿ ಕಂಡಿತೆ? ಆಮೇಲಾದರೂ ಉಳಿದ, ಕಾಡು, ಜಲಗಳ ಸಂರಕ್ಷಣೆಗೆ ಸರಕಾರ ಏನು ಕೊಡುಗೆ ನೀಡಿತು? ಗತಕಾಲದ ಜೋಗದ ವೈಭವ ಮತ್ತೆ ಮರುಕಳಿಸೀತೆ? – ಹೀಗೆ ಕೊನೆಯಲ್ಲಿದ ಅನೇಕ ಪ್ರಶ್ನಾವಳಿಗಳನ್ನು ಓದುಗರ ಮನದೊಳಗೆ ಬಿತ್ತಿಬಿಡುತ್ತದೆ.
ಪುನರ್ವಸು – ಕಾದಂಬರಿಯ ಈ ಶೀರ್ಷಿಕೆಯೇ ನನ್ನನ್ನು ಮೊದಲು ಸೆಳೆದದ್ದು, ಕುತೂಹಲ ಮೂಡಿಸಿದ್ದು. ಪುನರ್ವಸು ಎಂದರೆ ಇಪ್ಪತ್ತೇಳು ಮಳೆ ನಕ್ಷತ್ರಗಳಲ್ಲೊಂದು ಎಂದಷ್ಟೇ ಅರಿತಿದ್ದೆ. ಆದರೆ ಈ ಹೆಸರಿನ ಹಿಂದೆ ಅದೆಷ್ಟು ಅರ್ಥವತ್ತಾದ ಕಥೆಯಿದೆ, ಬಹಳ ಉದಾತ್ತವಾದ ಅರ್ಥವಿದೆ ಎಂಬುದನ್ನು ಓದಿ ತಿಳಿದುಕೊಂಡೆ. ಮನುಷ್ಯನ ಕ್ರೌರ್ಯಕ್ಕೆ, ಹಪಹಪಿಗೆ, ನಿಲ್ಲದ ದಾಹಕ್ಕೆ ನಲುಗಿರುವ ಪ್ರಕೃತಿ ತಾನೇ ಸಂಯಮ, ಕಡಿವಾಣ, ಆಗೀಗ ಹಾಕಿಕೊಳ್ಳುತ್ತಲೇ ಬರುತ್ತಿದ್ದಾಳೆ. ಕ್ರಮೇಣ ವಸುಂಧರೆ ತನ್ನ ಮೊದಲಿನ ರಸ, ಗಂಧ, ಫಲಗಳಿಂದ ಕಂಗೊಳಿಸಲಿ, ಆಕೆ ಪುನರ್ವಸುವಾಗಲಿ ಎಂದು ಹಾರಿಸುವುದು ಮಾತ್ರ ಸದ್ಯ ಸಾಧ್ಯವಾಗುತ್ತಿದೆ. ಜೋಗದ ಸಿರಿ ಬೆಳಕಿನಡಿಯಲ್ಲಿರುವ ಇರುಳುಗತ್ತಲೆಯನ್ನು ಹೊರಗೆಳೇದು ತೋರಿಸಿ, ಹಿನ್ನಲೆ-ಮುನ್ನಲೆಗಳ ಸಮಗ್ರ ಮಾಹಿತಿಗಳನ್ನು ಒದಗಿಸಿ, ಆ ಮೂಲಕ ಒಂದು ಎಚ್ಚರಿಕೆ, ಜಾಗೃತಿಯನ್ನು, ಸಾಮಾಜಿಕ ಕಳಕಳಿಯನ್ನು ಮೂಡಿಸುವಂತಹ ವಸ್ತುನಿಷ್ಟವಾದ ಅಪೂರ್ವ ಕಾದಂಬರಿಯನ್ನು ನೀಡಿದ್ದಕ್ಕಾಗಿ ಲೇಖಕರಿಗೆ ಅಭಿನಂದನೆಗಳು.


ಕಾದಂಬರಿ : ಪುನರ್ವಸು
ಲೇಖಕ : ಡಾ. ಗಜಾನನ ಶರ್ಮ
ಪ್ರಕಟನೆ : ಅಂಕಿತ ಪ್ರಕಾಶನ
ಪುಟಗಳು : ೫೪೪
ಬೆಲೆ : ೪೫೦ ರೂ.
~ತೇಜಸ್ವಿನಿ ಹೆಗಡೆ

ದೈತ್ಯರ ಗುರುವಿನ ಜೀವನಚರಿತ್ರೆ

‘ಅಸುರಗುರು ಶುಕ್ರಾಚಾರ್ಯ’- ಈ ಕಾದಂಬರಿಯ ಕುರಿತು ಮಾಹಿತಿ ದೊರೆತ ಕ್ಷಣದಿಂದ ಓದಲು ಕೌತುಕಳಾಗಿದ್ದೆ. ಇದಕ್ಕೆ ಪ್ರಮುಖ ಕಾರಣ ಉಶನ ಎಂಬ ಹೆಸರು! ಬಿ.ಎಸ್ಸಿ. ಮುಗಿಸಿದ ವರುಷ ನಾನು ನನ್ನ ಮೊತ್ತಮೊದಲ ಈ-ಮೈಲ್ ಐಡಿ Yahoo.comನಲ್ಲಿ ತೆಗೆದದ್ದು “Ushana”ಎನ್ನುವ ಹೆಸರನಲ್ಲೇ ಆಗಿತ್ತು! ಈ ಹೆಸರಿನ ಮೇಲೆ ಆಕರ್ಷಣೆ ನನಗೆ ಮೊದಲಬಾರಿ ಮೂಡಿದ್ದು ಪ್ರೈಮರಿಯಲ್ಲಿ ಟೀಚರ್ ಭಗವದ್ಗೀತೆಯ ಹತ್ತನೇ ಅಧ್ಯಾಯದ ಶ್ಲೋಕವೊಂದನ್ನು ಪಠಿಸಿದಾಗ. “ಕವೀನಾಮ್ ಉಶನಾ ಕವಿಃ” ಎಂಬ ಸಾಲೊಂದು ಭಗವದ್ಗೀತೆಯ ವಿಭೂತಿಯೋಗದಲ್ಲಿ ಬರುತ್ತದೆ. ಆ ಕ್ಷಣದಿಂದ ‘ಉಶನ’ ಎನ್ನುವ ಹೆಸರನ್ನು ಮನಸ್ಸು ಕಚ್ಚಿಹಿಡಿದೇಬಿಟ್ಟಿತ್ತು. ಹೀಗಾಗಿ ಅದೇ ಮುಂದೆ ನನ್ನ ಪ್ರಥಮ ಈ-ಮೈಲ್ ಐಡಿಯಾಗಿಯೂ ಬಂದು ಕೂತಿದ್ದು. ಆಮೇಲೆ ಗೊತ್ತಾಗಿದ್ದು ಗೀತೆಯೊಳಗಿನ ಉಶನಕವಿಯೇ ದೈತ್ಯಗುರು ಶುಕ್ರಾಚಾರ್ಯರಾಗಿ ಜಗತ್ಪ್ರಿಸಿದ್ಧರಾದವರು ಎಂದು! ಈ ಎಲ್ಲಾ ಕಾರಣಗಳಿಂದಾಗಿಯೇ ನಾನು ಶುಕ್ರಾಚಾರ್ಯರ ಬಯೋಗ್ರಫಿಯಾಗಿರುವ ಶ್ರೀಯುತ ಶ್ರೀಧರ ಡಿ.ಎಸ್. ಅವರು ಬರೆದ “ಅಸುರಗುರು ಶುಕ್ರಾಚಾರ್ಯ” ಕಾದಂಬರಿಯನ್ನೋದಲು ಬಹಳ ಕಾತುರಳಾಗಿದ್ದು.

ಪ್ರಸ್ತುತ ಕಾದಂಬರಿಯು ಉಶನ ಎಂಬ ಮಹಾನ್ ಕವಿ ಹೇಗೆ ತನ್ನ ಸಾಧನೆಗಳ ಮೂಲಕ ಮಹಾನ್ ಗುರು ಶುಕ್ರಾಚಾರ್ಯನಾದ… ಆಮೇಲೆ ಅದೆಂತು ಅಸುರಗುರವೆಂಬ ಪದವಿ ಪಡೆದು, ಅಂತಿಮವಾಗಿ ಹರಿಯ(ವಾಮನ) ವರದಿಂದ ಶುಭಫಲ ಸೂಚಿಸುವ ಶುಕ್ರಗ್ರಹ ಪಟ್ಟವನ್ನೇರುತ್ತಾನೆ ಎಂಬುದನ್ನು ಸವಿಸ್ತಾರವಾಗಿ ಹಂತಹಂತದಲ್ಲಿ ಓದಗರಿಗೆ ಉಣಬಡಿಸುತ್ತದೆ.
ಯಾರು ಎಷ್ಟೇ ವಿವೇಕಿ, ಜ್ಞಾನಿಯಾಗಿದ್ದರೂ, ಮಹಾನ್ ಸಾಧನೆಗಳನ್ನು ಮಾಡಿದ್ದರೂ, ಅನೇಕ ವಿದ್ಯೆಗಳನ್ನು ಗಳಿಸಿಕೊಂಡಿದ್ದರೂ, ದೈವಬಲದ ಕೊರತೆಯಿಂದ ಹಾಗೂ ವಿಧಿಯ ನಿಯಮಕ್ಕೆ ಒಳಪಟ್ಟು ಸಾಮಾನ್ಯರು ಪಡುವ ಎಲ್ಲಾ ಸಂಕಟವನ್ನೂ, ಹಿಂಸೆಯನ್ನೂ ಅನುಭವಿಸಲೇಬೇಕಾಗುತ್ತದೆ. ಅಂತೆಯೇ ‘ಅನುಭವಿಸುವುದೂ ಒಂದು ತಪಸ್ಸು’ ಎಂಬಂತೆ ಬಾಳಿಬದುಕಿ ಆದರ್ಶ ತೋರಿದ ಅಸುರಗುರು ಶುಕ್ರಾಚಾರ್ಯರ ಜೀವನಚರಿತ್ರೆಯಿದು.
ಗುರುವಾದವನು ಯಾವರೀತಿ ಔದಾರ್ಯ ತೋರಬೇಕು, ತಾನು ನಿಷ್ಪಕ್ಷಪಾತಿಯಾಗಿದ್ದು ತನ್ನ ಶಿಷ್ಯರ ಏಳಿಗೆಗಾಗಿ ಹೇಗೆ ನಿಷ್ಠನಾಗಿರಬೇಕು ಎಂಬುದನ್ನು ಶುಕ್ರಾಚಾರ್ಯರಲ್ಲಿ ನಾವು ಕಾಣುತ್ತೇವೆ. ತನಗೆ ಸಿಕ್ಕ ಶಿಷ್ಯರೇ ಅಸಮರ್ಥರು, ಆಸುರೀ ಸ್ವಭಾವವುಳ್ಳವರು, ಅಧಮರು – ಎಂದೆಲ್ಲಾ ಕೈಕೊಡವಿ ಅವರು ದೂರವಿದ್ದುಬಿಡಬಹುದಿತ್ತು. ಆದರೆ ಅದನ್ನೇ ಸವಾಲಾಗಿಸಿಕೊಂಡು ಪ್ರಹ್ಲಾದನಿಗೆ ಮಾರ್ಗದರ್ಶನನೀಡಿ ಅಂತಿಮವಾಗಿ ಬಲಿಚಕ್ರವರ್ತಿಯಂತಹ ಅಪ್ರತಿಮ ಅಸುರನನ್ನು ಸುರರ ಮಟ್ಟಕ್ಕೆ ಬೆಳೆಸುವಲ್ಲಿ ಸಫಲರಾಗುತ್ತಾರೆ. ಅಸುರರ ಏಳಿಗೆಗಾಯೇ ಕಠಿಣ ತಪಸ್ಸನ್ನು ಗೈದು ಶಿವನನ್ನು ಒಲಿಸಿಕೊಂಡು ಮೃತಸಂಜೀವಿನಿ ವಿದ್ಯೆಯನ್ನೂ ಪಡೆಯುತ್ತಾರೆ. ದೃಢಸಂಕಲ್ಪವಿದ್ದರೆ ಸಾಧನೆ ವ್ಯರ್ಥವಾಗದು ಎಂಬುದು ಅಲ್ಲಿ ಸಾಬೀತಾಗುತ್ತದೆ.

“’ಎಂತಹ ಸಾಧನೆಯಾದರೂ ಅರ್ಥವಾಗುವವರ ನಡುವೆ ಬೆಲೆ ಬರುತ್ತದೆ. ಗುಣಿಗಳ ಗುಣ ತಿಳಿಯುವುದೂ ಗುಣಿಗಳಿಗೇ ಹೊರತು ದುರ್ಗುಣಿಗಳಿಗಲ್ಲ.” – ಈ ಒಂದು ಸಾಲು ಶುಕ್ರಾಚಾರ್ಯರ ಸಾಮರ್ಥ್ಯವನ್ನು, ಸಾಧನೆಗಳ ಸಾಫಲ್ಯವನ್ನು, ಮತ್ತು ಅದು ಹೇಗೆ ಪ್ರಕಟಗೊಳ್ಳಲು ಬೇಕಾಗಿದ್ದ ಉತ್ತಮ ವಾತಾವರಣ ಹಾಗೂ ಸದ್ಗುಣಿ ಶಿಷ್ಯಗಣದ ಕೊರತೆಯಿಂದ ಹೊರಹೊಮ್ಮಲು ಪರದಾಡಿತು, ಆಮೂಲಕ ಅವರಿಗೆ ಮುಳುವಾಯಿತು ಎಂಬುದನ್ನೂ ಎತ್ತಿಹಿಡಿಯುತ್ತದೆ.
ತಮಗೆ ದೊರೆತ ಶಿಷ್ಯವೃಂದಕ್ಕೆ ಯಾವ ಲೋಪವೂ ಬರದಂತೇ ವಿದ್ಯೆಯನ್ನು ಧಾರೆಯೆರೆದು, ಅವರನ್ನು ಸುರರಿಗೆ ಸಮನಾಗಿಸಲು ಶುಕ್ರಾಚಾರ್ಯರು ಪಡುವ ಪ್ರಯಾಸ, ಒದ್ದಾಟಗಳು ನಿಜಕ್ಕೂ ಅಭಿನಂದನೀಯ. ಆದರೆ ತಮ್ಮ ಶಿಷ್ಯವೃಂದ ಅಸುರರಾಗಿದ್ದರೂ, ಪ್ರತಿದಿವಸ ಅವರೊಂದಿಗಿದ್ದರೂ ಶುಕ್ರಾಚಾರ್ಯರೆಂದೂ ಅವರಂತಾಗಲಿಲ್ಲ, ಬದಲು, ಅವರನ್ನು ತಮ್ಮ ದಾರಿಗೆ ತರಲು ಶ್ರಮಿಸಿದರು. ಇವೆಲ್ಲವೂ ಅವರನ್ನು ನನ್ನ ದೃಷ್ಟಿಯಲ್ಲಿ ಬಹಳ ಎತ್ತರದ ಸ್ಥಾನಕ್ಕೆ ಒಯ್ದುಬಿಟ್ಟವು.
ಗುರುವಿನಷ್ಟೇ ಶಿಷ್ಯನೂ ಸಮರ್ಥನಾಗಿದ್ದಾಗ ಮಾತ್ರ ಸಂಪೂರ್ಣ ವಿದ್ಯೆ ಫಲಿತವಾಗುತ್ತದೆ ಎನ್ನುತ್ತಾರೆ. ಅಸುರರೊಳಗಿನ ಆಸುರೀಭಾವ, ಶಿಸ್ತಿಗೆ ಒಳಪಡಲು ಒಪ್ಪದ ಸ್ವಚ್ಛಂದತೆ, ದೈವೀಬಲದ ಕುರಿತು ತೋರುವ ತಿರಸ್ಕಾರ, ಹುಂಬತನ – ಈ ಎಲ್ಲಾ ಅವಗುಣಗಳಿಂದ ಅವರ ಬೆನ್ನಿಗೆ ಓರ್ವ ಶ್ರೇಷ್ಠ ಗುರುವಿದ್ದರೂ ‘ನಾವು ಇರುವಲ್ಲೇ ಇರುತ್ತೇವೆ’ ಎಂದು ಹಠ ಹಿಡಿದು ನೆಲಕಚ್ಚಿದ್ದೇ ಹೆಚ್ಚು. ಆದರೆ ಅವರೆಲ್ಲರ ನಡುವೆ ವಿಭಿನ್ನವಾಗಿ, ವಿಶಿಷ್ಟವಾಗಿ ನಿಲ್ಲುತ್ತಾರೆ ಅಸುರರಾದ ಪ್ರಹ್ಲಾದ ಮತ್ತು ಬಲಿಚಕ್ರವರ್ತಿ.
ಕಾದಂಬರಿಯಲ್ಲೇ ಒಂದೆಡೆ ಬರುವಂತೆ - “ಒಳ್ಳೆಯ ಪ್ರಜೆಗಳಿಗೆ ಒಳ್ಳೆಯ ಅರಸ ಸಿಗುವುದು ದುರ್ಲಭವಾದಂತೆ, ಒಳ್ಳೆಯ ಅರಸನಿಗೆ ಒಳ್ಳೆಯ ಪ್ರಜೆಗಳು ಸಿಗುವುದೂ ಕಷ್ಟ.”

ಇನ್ನು ಕಾದಂಬರಿಯೊಳಗಣ ಪಾತ್ರಚಿತ್ರಣದ ಕುರಿತು ಹೇಳಬಹುದಾದರೆ…
ಇಂದ್ರಾದಿ ದೇವತೆಗಳಿರಲಿ, ವೃಷಪರ್ವನಂತಹ ಅಸುರನೇ ಆಗಿರಲಿ – ಎಲ್ಲಿಯೂ ಲೇಖಕರು ತಮ್ಮ ಅಭಿಪ್ರಾಯವನ್ನು ಹೇರಿಂದತೆ ಕಾಣುವುದಿಲ್ಲ. ಪ್ರತಿ ಪಾತ್ರಗಳನ್ನೂ ಇದ್ದಹಾಗೆ ಬಿಂಬಿಸಲಾಗಿದೆ. ದೇವತೆಗಳಾದ್ದರಿಂದ ಎಲ್ಲವೂ ಒಳ್ಳೆಯದೇ, ಅಸುರರೆಂದರೆ ರಕ್ಕಸರು ಮಾತ್ರ ಎಂಬಂತೆ ಕಪ್ಪು-ಬಿಳುಪಾಗಿ ತೋರದೇ ಒಳಿತು ಮತ್ತು ಕೆಡುಕುಗಳು ಎಲ್ಲರಲ್ಲೂ ಹೇಗೆ ಹುದುಗಿರುತ್ತದೆ, ಯಾವ ರೀತಿ ಕೆಡುಕಿಗೆ ಪ್ರಾಶಸ್ತ್ಯಕೊಟ್ಟಾಗ ಅದೇ ಹೆಚ್ಚು ಪ್ರಕಟಗೊಂಡು ಕೆಡುಕನ್ನೇ ಮಾಡುತ್ತದೆ, ಯಾಕಾಗಿ ನಮ್ಮೊಳಗಿನ ಅಸುರನನ್ನು ಮಟ್ಟಹಾಕಿ ಒಳಿತಿಗೆ ಮಣೆಹಾಕಬೇಕು ಎಂಬುದನ್ನು ಈ ಕಾದಂಬರಿಯಲ್ಲಿ ಕಾಣಬಹುದು. ಇಂದ್ರನೊಳಗಿನ ಕಪಟತನದ ಜೊತೆಗೆ, ಪ್ರಹ್ಲಾದನಂತಹ ಸಾತ್ವಿಕ ಗುಣಗಳುಳ್ಳ ಅಸುರ ಅರಸನನ್ನೂ ಕಾಣುತ್ತೇವೆ. ಬಲಿಚಕ್ರವರ್ತಿಯಂತಹ ಅಪ್ರತಿಮ ಸಾಹಸಿ, ಪ್ರಾಮಾಣಿಕ ಅಸುರನ ಜೊತೆಗೆ ಇಕ್ಷ್ವಾಕು ವಂಶದ ದಂಡಕನಂತಹ ನೀಚನಿರುವುದನ್ನೂ ಕಾಣುತ್ತೇವೆ. ಕಾದಂಬರಿಯುದ್ದಕ್ಕೂ ನನ್ನನ್ನು ಸೆಳೆದದ್ದು ಅಸುರಗುರ ಶುಕ್ರಾಚಾರ್ಯರ ಕಾರ್ಯ ನಿಷ್ಠೆ, ಅಸುರರ ಉನ್ನತಿಗಾಗಿ ಅವರು ಪಡುವ ಶ್ರಮ, ತಮ್ಮ ಶಿಷ್ಯರ ಶ್ರೇಯೋಭಿವೃದ್ಧಿಯ ಪ್ರತಿ ಅವರಿಗಿದ್ದ ಬದ್ಧತೆ – ಇವೆಲ್ಲವನ್ನು ಹಲವು ಕಥೆಗಳು/ಉಪಕಥೆಗಳ ಮೂಲಕ, ಸೋದಾರಣವಾಗಿ, ಮನವನ್ನು ಹೊಕ್ಕಿ ಕಾಡುವ ಸಂಭಾಷಣೆಗಳು, ಸ್ವಗತಗಳಿಂದ ಸೂಕ್ಷ್ಮವಾಗಿ ನೇಯ್ದು ತೋರಿಸಲಾಗಿದೆ. ವಂಚನೆಯಿಂದ ಮೃತಸಂಜೀವನಿ ವಿದ್ಯೆತರಲು ಮಗನನ್ನು ಕಳುಹಿಸುವ ಸುರಗುರು ಬ್ರಹಸ್ಪತಿ ಒಂದೆಡೆಯಾದರೆ, ಅಪ್ಪಟ ಪ್ರಾಮಾಣಿಕ, ಸಚ್ಚಾರಿತ್ರ್ಯನಾದ ಅವನದೇ ಮಗ ಕಚ ಇನ್ನೊಂದೆಡೆ! ಋಷಿಕುಮಾರಿಯಾಗಿಯೂ ದರ್ಪ, ಅಹಂಕಾರ, ಶ್ರೇಷ್ಠತೆಯ ವ್ಯಸನ ತೋರುವ ದೇವಯಾನಿ ಒಂದೆಡೆಯಾದರೆ, ಅಸುರ ಕುವರಿಯಾಗಿಯೂ ನುಡಿದಂತೇ ನಡೆವ ಛಲ, ತನ್ನ ಮನೋಸಂಕಲ್ಪದಿಂದಲೇ ಮಗ ಪುರುವಿನೊಳಗೆ ಆದರ್ಶತುಂಬಿ ಬೆಳೆಸಿ ಅವನನ್ನು ಚಕ್ರವರ್ತಿಯನ್ನಾಗಿಸುವ ಶರ್ಮಿಷ್ಠೆ ಮತ್ತೊಂದೆಡೆ. ಹೀಗೆ ಪ್ರತಿ ಪಾತ್ರದೊಳಗೂ ಒಳಿತು-ಕೆಡುಕುಗಳ ಮಿಶ್ರಣ ಕಾಣಸಿಗುತ್ತದೆ. ನನಗೆ ಪೂರ್ವಾಗ್ರಹ ಕಾಣಿಸಲಿಲ್ಲ. ಸ್ವತಃ ಶುಕ್ರಾಚಾರ್ಯರೇ ಎಷ್ಟೇ ದೊಡ್ಡ ಸಾಧಕರೆನಿಸಿಕೊಂಡಿದ್ದರೂ ತಮ್ಮ ಕೆಲವೊಂದು ದುಡುಕು ನಿರ್ಧಾರಗಳು, ಮಗಳ ಮೇಲಣ ಅತಿಯಾದ ಮೋಹ ಹಾಗೂ ತಮ್ಮ ಅನಿಯಂತ್ರಿತ ಸಿಟ್ಟಿಗೆ ಸಿಲುಕಿ ಬಹಳಷ್ಟು ಅವಗಡಗಳಿಗೆ, ಅನಾಹುತಗಳಿಗೆ ಕಾರಣರಾಗುತ್ತಾರೆ. ಮನುಷ್ಯದೇಹವನ್ನು ಹೊತ್ತ ಮೇಲೆ ಯಾರೆಷ್ಟೇ ಶ್ರೇಷ್ಠರಾಗಿದ್ದರೂ ಮನುಜ ಜನ್ಮದ ಕಟ್ಟುಪಾಡುಗಳಿಂದ, ಲೋಪದೋಷಗಳಿಂದ ಮುಕ್ತರಾಗುವುದು ಸುಲಭವಲ್ಲ, ವಿಧಿಯ ನಿಯಮಗಳಿಂದ ಪಾರಾಗಲು ಸಾಧ್ಯವಿಲ್ಲ ಎಂಬುದನ್ನು ಕಾಣುತ್ತೇವೆ.

ಮನದಲ್ಲಿ ಕೂತ ಸಾಲುಗಳು ಹಲವು, ಅವುಗಳಲ್ಲಿ ಒಂದಿಷ್ಟು-
*ಆಲದಮರ ಒಳ್ಳೆಯದೇ, ಅದರಡಿಯಲ್ಲಿ ಬೆಳೆದ ಮುಳ್ಳು ಚುಚ್ಚದಿರುತ್ತದೆಯೇ?
*ಒಳ್ಳೆಯ ಆಡಳಿತ ಒಳ್ಳೆಯ ವ್ಯಕ್ತಿತ್ವದಿಂದ ಮಾತ್ರ ಬರಲಾರದು. ತಂತ್ರಗಾರಿಕೆ, ಚಾತುರ್ಯ ಮೊದಲಾದ ಗುಣಗಳು ಬೇಕಾಗುತ್ತದೆ.
*ಗೊಬ್ಬರವಿಕ್ಕಿ ಬೆಳೆಸಿದ ತೋಟಕ್ಕೆ, ಗೊಬ್ಬರವೂ ಬೇಡದೇ ಬೆಳೆಯುವ ಕಳೆಯೇ ತೊಂದರೆ ಕೊಡುತ್ತದೆ.
*ಕಟುಕನ ಕತ್ತಿ ಎಷ್ಟು ಹೊಳೆದರೇನು? ಮಾಡುವ ಕಾರ್ಯ ಕಡಿಯುವುದೇ.
*ಬೇರು ಕತ್ತರಿಸುವ ದಾನ ಧರ್ಮವೇ ಆಗದು.
*ಮೃತ್ಯುವಿನಿಂದ ಪಾರುಮಾಡಲು ಮೃತ್ಯುವಾಗುವುದು ತಪ್ಪಲ್ಲ.
*ಸುಖವಿರಲಿ, ದುಃಖವಿರಲಿ, ಭೋಗ-ಯೋಗ ಏನೇ ಇದ್ದರೂ ಪ್ರಾಪ್ತಿಸಿಕೊಂಡ ಪುಣ್ಯ-ಪಾಪಗಳಿಂದಲೇ ಜಗತ್ತಿನಲ್ಲಿ ಬದುಕು ಸಾಗುತ್ತದೆ.
*ಈ ಜಗದ್ವ್ಯವಸ್ಥೆಯಲ್ಲಿ ಎಲ್ಲರೂ ಸುರರಾದರೆ ಮತ್ತೇನು ಉಳಿದೀತು? ಸುರತ್ವದ ಸ್ವಾರಸ್ಯ ಇರುವುದೇ ಅಸುರತ್ವದಲ್ಲಲ್ಲವೇ? ಸುರರು ಸರಿಯಾದ ಎಚ್ಚರದಲ್ಲಿಲ್ಲದೆ ಅನೇಕ ಬಾರಿ ಅಸುರರಾದುದೂ ಉಂಟಲ್ಲ. ಸುರಾಸುರ ಸಂಘರ್ಷದಲ್ಲಿ ಲೋಕ ಪಕ್ವಗೊಳ್ಳುತ್ತಾ ಸಾಗುವುದು ನಿರಂತರ ಪ್ರಕ್ರಿಯೆ.

ಈ ರೀತಿ ಶುಕ್ರಾಚಾರ್ಯರ ಬದುಕಿನ ಸುದೀರ್ಘ ಪಯಣವನ್ನು ಸತ್ವಯುತವಾಗಿ, ಶಕ್ತಿಯುತ ಹಾಗೂ ರಸವತ್ತಾದ ನಿರೂಪಣೆಯಿಂದ, ಮನಮುಟ್ಟುವ ಸಂಭಾಷಣೆಗಳಿಂದ ಸವಿಸ್ತಾರವಾಗಿ ವಿವರಿಸುತ್ತಾ ಹೋಗಿದ್ದಾರೆ ಲೇಖಕರು. ಆ ಪಯಣದಲ್ಲೇ ನಮಗೆ ಅನೇಕ ಹೊಸ ಹೊಳಹುಗಳು, ಚಿಂತನೆಗಳು, ಈವರೆಗೂ ವಿವರವಾಗಿ ದೊರಕದಿದ್ದ ಹಲವಾರು ಪ್ರಸಂಗಗಳ ಕುರಿತು ಮಾಹಿತಿಗಳು – ಇವೆಲ್ಲವೂ ದೊರಕುತ್ತಾ ಹೋಗುತ್ತದೆ. ಹೀಗಾಗಿ ನಿಶ್ಚಿತವಾಗಿಯೂ ಇದೊಂದು ಸಂಗ್ರಹಯೋಗ್ಯ ಕಾದಂಬರಿ.



#ಅಸುರಗುರು_ಶುಕ್ರಾಚಾರ್ಯ
#ಉಶನಕವಿ
#ಪುಸ್ತಕ_ವಿಮರ್ಶೆ

~ತೇಜಸ್ವಿನಿ ಹೆಗಡೆ.

ಪುಸ್ತಕ : ಅಸುರಗುರು ಶುಕ್ರಾಚಾರ್ಯ
ಲೇಖಕರು : ಶೀಧರ ಡಿ.ಎಸ್.
ಪ್ರಕಾಶಕರು : ಸಾಹಿತ್ಯ ಭಂಡಾರ
ಪುಟಗಳು : ೩೭೯
ಬೆಲೆ : ೩೫೦