ಶುಕ್ರವಾರ, ಜುಲೈ 18, 2014

ಈ ಅಸ್ಪೃಶ್ಯರನ್ನು ಅಸ್ಪೃಶ್ಯರಂತೇ ಕಾಣಿ!

ಉತ್ತರ ಪ್ರದೇಶದ ಕುಗ್ರಾಮವಿರಲಿ, ದೆಹಲಿಯಂತಹ ಮಹಾನಗರವೇ ಆಗಿರಲಿ... ಮೆಟ್ರೋಸಿಟಿ ಬೆಂಗಳೂರೇ ಇದ್ದಿರಲಿ, ಹುಬ್ಬಳ್ಳಿಯಲ್ಲಿರುವ ಒಂದು ಪುಟ್ಟ ಹಳ್ಳಿಯೇ ಆಗಿದ್ದಿರಲಿ.. ಅವ್ಯಾಹತವಾಗಿ, ನಿರ್ಭೀತಿಯಿಂದ, ಅಮಾನುಷವಾಗಿ, ಹೇಯ ರೀತಿಯಲ್ಲಿ ಹೆಣ್ಣಿನ ಮೇಲೆ ದೌರ್ಜನ್ಯ/ಅತ್ಯಾಚಾರ ನಾನಾ ರೀತಿಯಲ್ಲಿ ನಡೆಯುತ್ತಿದೆ. ಹುಟ್ಟಿ ಆರುತಿಂಗಳಿನ ಮಗುವಿನಿಂದ ಹಿಡಿದು ೮೦-೯೦ರ ವೃದ್ಧರನ್ನೂ ಬಿಡುವುದಿಲ್ಲ ಈ ಪಿಶಾಚಿಗಳು! ಇದರ ವಿರುದ್ಧ ಎಷ್ಟೇ ನಾನು, ನೀವು ಸಾಮಾಜಿಕ ಜಾಲದಲ್ಲಿ, ಪೇಪರ್, ನ್ಯೂಸ್‌ಗಳಲ್ಲಿ ಅದೆಷ್ಟೇ ಬೊಬ್ಬಿರಿದರೂ, ಆಕ್ರೋಶ ವ್ಯಕ್ತ ಪಡಿಸಿದರೂ ಮನುಷ್ಯಾಕಾರದ ಆ ರಕ್ಕಸರಿಗೆ ಅವೆಲ್ಲಾ ಕೇಳಿಸುವುದೂ ಇಲ್ಲ.. ತಾಗುವುದೂ ಇಲ್ಲ!  

ಕೂಲಿ ಕಾರ್ಮಿಕರ, ಗುಡಿಸಲುವಾಸಿಗಳ ಹೆಣ್ಮಕ್ಕಳು ಇಂತಹ ರಕ್ಕಸರ ಧಾಳಿಗೆ ಸುಲಭವಾಗಿ ಸಿಗುವಂತಾಗಿದ್ದು, ಕಾನೂನು ಕೂಡ ಅಸಡ್ಡೆಯ ತೋರಣೆ ಧಾರಾಳವಾಗಿ ಇವರ ಪ್ರತಿ ತೋರುತ್ತಿರುವುದು ತುಂಬಾ ವಿಷಾದನೀಯ. ಇಲ್ಲಿ ಕಾನೂನು ಅಂದರೆ ಕೋರ್ಟ್ ಎಂದಷ್ಟೇ ಆಗುವುದಿಲ್ಲ. ಮುಖ್ಯವಾಗಿ ನಮ್ಮ ಪೋಲೀಸ್ ವ್ಯವಸ್ಥೆಯ ಬಗ್ಗೆಯೇ ನಾನು ಹೇಳುತ್ತಿರುವುದು. ಶ್ರೀಮಂತ, ಶಕ್ತಿಶಾಲಿ ವರ್ಗದವರ ಮಾನ, ಪ್ರಾಣಗಳನ್ನು ಮಾತ್ರ ಕಾಪಾಡುವವರೆನ್ನುವ ಧೋರಣೆಯೇ ಇವರಲ್ಲಿ ಹೆಚ್ಚಾಗಿ ಕಂಡುಬರುತ್ತಿರುತ್ತದೆ (ಕಲವೇ ಕೆಲವರನ್ನು ಹೊರತುಪಡಿಸಿ). ನಮ್ಮ ಈ ಅವ್ಯವಸ್ಥೆಯಿಂದಾಗಿಯೇ, ಬಡವರು, ದುರ್ಬಲರು, ಅಸಹಾಯಕರು ಇವರೆಲ್ಲಾ.... ಯಾರೂ ದಿಕ್ಕಿಲ್ಲದವರಿವರೆಲ್ಲಾ ಎಂಬ ನಿರ್ಲಕ್ಷ್ಯತನ, ಉಡಾಫೆಯಿಂದಾಗಿಯೇ ಪಾಪದ ಮುಗ್ಧರನ್ನು ಸುಲಭವಾಗಿ ಹೊಸಕಿಹಾಕಿ ರಾಕ್ಷಸರು ಸುಲಭವಾಗಿ ಪಾರಾಗಿಬಿಡುತ್ತಾರೆ!

ಇದರರ್ಥ ಹೈ ಸೊಸೈಟಿಗಳಲ್ಲಿ ಅತ್ಯಾಚಾರಗಳಿಲ್ಲವೇ ಇಲ್ಲಾ ಎಂದಲ್ಲಾ! ಅಲ್ಲಿರುವ ಬಲಾತ್ಕಾರಿಗಳೆಲ್ಲಾ  ಹೆಚ್ಚು ಗೋಮುಖ ವಾಘ್ರಗಳೇ! ನಿನ್ನೆ, ಮೊನ್ನೆ ನಡೆದ ಕಾಲೇಜು ವಿಧ್ಯಾರ್ಥಿನಿಯ ಮೇಲಿನ ಬಲಾತ್ಕಾರ, ಪ್ರತಿಷ್ಟಿತ ಶಾಲೆಯೆಂದು(?!) ಹೇಳಿಕೊಂಡಿದ್ದ ವಿಬ್‍ಗಯಾರ್(VIBGYOR) ಶಾಲೆಯಲ್ಲಿ ನಡೆದ ಎಳೆಯ ಕಂದಮ್ಮನ ಮೇಲಿನ ಲೈಂಗಿಕ ದೌರ್ಜನ್ಯ - ಇವೆಲ್ಲಾ ಬಲಾತ್ಕಾರಿಗಳಿಗೆ ವಿಕೃತಿಯ, ವಿಕೃತ ಸಂತಸದ ಮುಂದೆ ಮತ್ತೆಲ್ಲವೂ ಶೂನ್ಯ ಎನ್ನುವುದನ್ನು ಎತ್ತಿ ಎತ್ತಿ ತೋರಿಸುತ್ತಿದೆ. ಸ್ವಂತ ಮನೆಯೊಳಗೇ ಅವಿತಿದ್ದರೂ ತಿಳಿಯದ, ತಿಳಿದರೂ ಮರ್ಯಾದೆ, ಪ್ರತಿಷ್ಠೆಗಳಿಗೆ ಬಲಿಯಾಗುವ ಅದೆಷ್ಟೋ ಹೆಣ್ಣು ಜೀವಗಳು, ಅವುಗಳ ನರಳಾಟಗಳು ಇನ್ನೂ ನ್ಯಾಯಕ್ಕಾಗಿ ಕೂಗುತ್ತಲೇ ಇವೆ!

ಹೀಗಿರುವಾಗ ನಾವು, ಅಂದರೆ ನಮ್ಮಿಂದಲೇ ಆಗಿರುವ ಈ ಸಮಾಜ, ಇದರೊಳಗಿನ ಸಹೃದಯ ಮನುಷ್ಯರಾದ ನಾನು, ನೀವು ಏನು ಮಾಡಬಹುದು? ಇದಕ್ಕೇನು ಪರಿಹಾರ? ಏನೂ ಸಾಧ್ಯವಿಲ್ಲವೇ? ಕೇವಲ ಪ್ರತಿಭಟನೆ, ಮುಂಬತ್ತಿ ಜಾಥಾ, ಪ್ರಾರ್ಥೆನೆಗಳಿಂದ ಸುಧಾರಣೆ ಸಾಧ್ಯವೇ? ಬಲು ಕಷ್ಟ! ಹೀಗಿರುವಾಗ ಪ್ರಜ್ಞಾವಂತ, ಕಳಕಳಿಯಿಂದ ಮಿಡಿವ ಸಮಾಜ ಏನು ಕಠಿಣ ನಿರ್ಧಾರ ತೆಗೆದುಕೊಂಡರೆ ತುಸು ಮಟ್ಟಿಗಾದರೂ ಜಾಗೃತಿ ಮೂಡಬಹುದು? ಎಂದೆಲ್ಲಾ ನಾನು ತುಂಬಾ ಚಿಂತಿಸಿದ ಮೇಲೆ ನನಗೆ ಸಿಕ್ಕ ಅತಿ ಚಿಕ್ಕ ಪರಿಹಾರವೆಂದರೆ ‘ಅಸ್ಪೃಶ್ಯತೆ’ಯನ್ನು ಕಡ್ಡಾಯ ಜಾರಿಗೆ ಗೊಳಿಸುವುದು!

ಹೌದು.... ಬಲಾತ್ಕಾರಿ ಮನೋಭಾವ ಹೊಂದಿದ ಮನುಷ್ಯರೆಲ್ಲಾ ನೀಚರೇ... ಈ ನೀಚ ಜಾತಿಯಲ್ಲಿ ಹುಟ್ಟಿದವರನ್ನು ಸಂಫೂರ್ಣ ಅಸ್ಪೃಶ್ಯರನ್ನಾಗಿಸಬೇಕು ಈ ಸಮಾಜ! ಯಾರು ಹೆಣ್ಣಿನ ಮೇಲೆ ವರದಕ್ಷಿಣೆ ಕಿರುಕುಳ, ಬಲಾತ್ಕಾರ, ಹೊಡೆತ, ಮಾನಸಿಕ ದೌರ್ಜನ್ಯಗಳನ್ನು ಎಗ್ಗಿಲ್ಲದೇ ಮಾಡುತ್ತಾರೋ, ಹಾಗೆ ಮಾಡಿರುವುದಕ್ಕೆ ನಮ್ಮೊಳಗಿನ ಪ್ರಜ್ಞೆ ಸಾಕ್ಷಿಯನ್ನೊದಗಿಸಿರುತ್ತದೋ.. ಅಂತಹವರೆಲ್ಲಾ ನಿಜವಾದ ರೀತಿಯಲ್ಲಿ ಅಧಮರೆಂದು ಪರಿಗಣಿಸಬೇಕು. ಕಾರಣ, ನೀಚ ಜಾತಿ ಎಂಬುದೊಂದಿದ್ದರೆ ಅದು ಇಂಥವರದ್ದು ಮಾತ್ರ! ಇಂತಹವರು ಯಾವುದೇ ಸಾಮಾಜಿಕ ಮನ್ನಣೆ, ಬಳಕೆ, ಸಭೆ ಸಮಾರಂಭಗಳಿಗೆ, ಪವಿತ್ರ ಸ್ಥಳಗಳ ಪ್ರವೇಶಕ್ಕೆ ಅನರ್ಹರು, ಅಯೋಗ್ಯರು. ನಿಜವಾದ ರೀತಿಯಲ್ಲಿ ಮತ್ತು ಎಲ್ಲಾ ರೀತಿಯಲ್ಲೂ ಅಸ್ಪೃಶ್ಯರೆಂದರೆ ಈ ಜನರು ಮಾತ್ರ. ಇವರಲ್ಲಿ ಹೆಣ್ಣು-ಗಂಡೆಂಬ ಬೇಧವಿಲ್ಲದೇ ಕಠಿಣವಾಗಿ ಈ ಸ್ವಯಂಘೋಷಿತ ಕಾನೂನನ್ನು ನಾವು ನಾವೇ ಜಾರಿಗೆ ತರಬೇಕು. ಅದಕ್ಕಾಗಿ ಕೆಲವು ಸೂತ್ರಗಳನ್ನು ಮನದಟ್ಟುಮಾಡಿಕೊಂಡರೆ ಸುಲಭ. 
ಅವು ಇಂತಿವೆ :-

೧. ನಮ್ಮ ನೆಂಟರಲ್ಲಿ, ಬಂಧು-ಬಾಂಧವರಲ್ಲಿ, ಸ್ನೇಹಿತವರ್ಗಗಳಲ್ಲಿ ಯಾರೇ ಆಗಿದ್ದಿರಲಿ ಅತ್ಯಾಚಾರಿಗಳು, ಹೆಣ್ಣಿನ ಜೊತೆ ಅಸಭ್ಯವಾಗಿ ವರ್ತಿಸುವವರು, ಹೆಂಡತಿಯನ್ನು ಪಶುವಂತೆ ನಡೆಸಿಕೊಳ್ಳುವವರು ನಿಮಗೆ ತಿಳಿದು ಬಂದರೆ, ಅವರು ಅಂತಹವರೇ ಎನ್ನುವುದು ನಿಮ್ಮ ಆತ್ಮಸಾಕ್ಷಿಗೆ ಮನದಟ್ಟಾದರೆ, ಅವರನ್ನು ಮನೆಯೊಳಗೆ ಹೊಕ್ಕಿಸಿಕೊಳ್ಳುವುದಾಗಲೀ, ಆದರಾತಿಥ್ಯಕೊಡುವುದಾಗಲೀ, ಯಾವುದೇ ರೀತಿಯ ಮರ್ಯಾದೆ, ಸಂಬೋಧನೆ ಕೊಟ್ಟು ಗೌರವಿಸುವಾದಗಲೀ ಮಾಡಲುಹೋಗದಿರುವುದು. ಇಂತಹ ಕುಕೃತ್ಯಕ್ಕೆ ಕುಮ್ಮಕ್ಕು, ಸಹಾಯ, ಸಲಹೆಗಳನ್ನಿತ್ತ ಹೆಂಗಸರನ್ನೂ ಸರ್ವವಿಧದಲ್ಲೂ ದೂರವಿಟ್ಟುಬಿಡುವುದು. ಈ ವರ್ತನೆಗೆ ಯಾವುದೇ ರೀತಿ ಲಿಂಗ ತಾರತಮ್ಯವನ್ನು ತೋರದೆ ನಿರ್ದಯವಾಗಿ ಜಾರಿಗೆ ತರುವುದು.

೨. ಮುಖಗೋಡೆ (Facebook), ಅಂತರ್ಜಾಲ ಹಾಗೂ ಯಾವುದೇ ರೀತಿಯ ಸಾಮಾಜಿಕ ಜಾಲಗಳಲ್ಲಿ ಇಂತಹ ದುಷ್ಟರಿರುವುದು ಸಾಕ್ಷಿ ಸಮೇತ ಗೊತ್ತಾದಲ್ಲಿ ಅಂತಹವರನ್ನು ಬ್ಲಾಕ್ ಮಾಡಿ ಸಂಪರ್ಕವನ್ನು ಸಂಫೂರ್ಣ ಖಡಿದುಕೊಳ್ಳುವುದು. ಎಷ್ಟೋ ಸಲ ನಮಗೆ ಸತ್ಯ ಗೊತ್ತಿರುತ್ತದೆ ಆದರೆ ನಮಗೇಗೆ? ನಮ್ಮ ಜೊತೆ ಆತ/ಆಕೆ ಸರಿಯಿದ್ದಾಳೆ ತಾನೆ? ನಾವೇಕೆ ಅವರೊಂದಿಗೆ ವೈರ ಕಟ್ಟಿಕೊಳ್ಳುವುದು? ಆತ ಅವಳೊಂದಿಗೆ ಅಸಭ್ಯವಾಗಿ ಚಾಟ್ ಮಾಡಿದ್ದರೆ, ನಡೆದುಕೊಂಡಿದ್ದರೆ ಇದು ಅವರಿಬ್ಬರ ಸಮಸ್ಯೆಯೇ ಸರಿ... ಇಷ್ಟಕ್ಕೂ ಆತ ದೊಡ್ಡ ಮನುಷ್ಯ, ನಾಳೆ ಯಾವುದಾದರೂ ನಮ್ಮ ಕೆಲಸಕ್ಕೆ ಬೇಕಾಗುವಂಥವನು.... ಅನ್ನುವ, ಅವಕಾಶವಾದಿತನ, ನಿರ್ಲಕ್ಷ್ಯ, ಅನವಶ್ಯಕ ಉದಾರತನ ಖಂಡಿತ ಸಲ್ಲ. ಇಂದು ದಡ ಮೀರಿದ ಹೊಳೆ, ನಾಳೆ ನಮ್ಮ ಮನೆ ಹೊಸ್ತಿಲ ದಾಟದೇ ಇರದು ಎನ್ನುವುದು ನೆನಪಿಡುವುದು ಅವಶ್ಯಕ!

೩. ನಮ್ಮೊಂದಿಗೆ ಅಂದರೆ ಹೆಣ್ಮಕ್ಕಳ ಜೊತೆ ಅಸಭ್ಯವಾಗಿ ಯಾರೇ ನಡೆದುಕೊಂಡರು, ಅದು ಎಷ್ಟೇ ಅಲ್ಪ ಪ್ರಮಾಣದಲ್ಲಿದ್ದರೂ, ಅದನ್ನು ಸಶಕ್ತವಾಗಿ ವಿರೋಧಿಸುವುದು, ಖಂಡಿಸುವುದು ಸೂಕ್ತ ಕ್ರಮ ಕೈಗೊಳ್ಳುವುದು ಅತ್ಯವಶ್ಯಕ. ಇಷ್ಟರಲ್ಲೇ ಹೋಯಿತಲ್ಲಾ ಎಂದರೆ ಅದು ಮಹಾಮಾರಿಯಾಗಿ ಬೇರೊಬ್ಬರ ಮೇಲೆರೆಗಬಹುದು!! ಸಾಮಾಜಿಕ ತಾಣದಲ್ಲಿ ಅವರ ಕುಲ ಗೋತ್ರವನ್ನು, ತಮ್ಮೊಂದಿಗೆ ಆತ ನಡೆದಿಕೊಂಡ ರೀತಿಯನ್ನೂ ನೇರಾನೇರ ಹೇಳಿಕೊಳ್ಳುವುದರ ಮೂಲಕ, ಪ್ರತಿಷ್ಠೆಯ ಹಪಾಹಪಿಯಿರುವ ಕೆಲವು ಗೋಮುಖ ವ್ಯಾಘ್ರಗಳಾದರೂ ತುಸು ಎಚ್ಚೆತ್ತುಕೊಂಡು ಹಿಮ್ಮೆಟ್ಟಬಹುದು.. ಇದರಿಂದ/ಇವರಿಂದ ಕೆಲವು ಮುಗ್ಧ ಹೆಣ್ಣು ಮನಸುಗಳು ನರಳುವುದನ್ನು ತಪ್ಪಿಸಬಹುದು!

ಪಕ್ಷಾತೀತವಾಗಿ, ಜಾತ್ಯಾತೀತವಾಗಿ, ಲಿಂಗಾತೀತಾವಾಗಿ ಮತ್ತು ಧರ್ಮಾತೀತವಾಗಿ ಅತ್ಯಾಚಾರವನ್ನು, ಅತ್ಯಾಚಾರಿಗಳನ್ನು ಮನಃಪೂರ್ವಕವಾಗಿ ನಾವು ವಿರೋಧಿಸಿದರೆ, ಆ ವಿರೋಧವನ್ನು ಮುಕ್ತವಾಗಿ, ನಿರ್ಭೀತಿಯಿಂದ ಹೊರ ತೋರಿದರೆ, ಇದರಿಂದಾಗಿ ಸಾವಿರದಲ್ಲಿ ಒಬ್ಬನಾದರೂ ಹಿಂಜರಿದರೆ, ಇಲ್ಲಾ ಈ ಕುಕೃತ್ಯಕ್ಕೆ ಕೈಹಾಕುವಾಗ ಬೆದರಿ ಹಿಮ್ಮೆಟ್ಟಿದರೆ, ನಮ್ಮ ದೃಢಸಂಕಲ್ಪಕ್ಕೆ ಅಷ್ಟೇ ಸಾರ್ಥಕ್ಯ ದೊರಕಿದಂತಾಗುವುದು!

ನಾನಂತೂ ನಿರ್ಧರಿಸಿಯಾಗಿದೆ. ನನ್ನ ಆಪ್ತೇಷ್ಟರಲ್ಲಿ, ಸ್ನೇಹಿತರಲ್ಲಿ ಯಾರೇ ಇಂತಹ ಒಂದು ದುಷ್ಕೃತ್ಯಕ್ಕೆ (ಅಸಭ್ಯ ವರ್ತನೆ, ಚಾಟ್, ದೌರ್ಜನ್ಯ.. ಇತ್ಯಾದಿ ಎಲ್ಲಾ ರೀತಿಯ ಮಾನಸಿಕ/ದೈಹಿಕ ಅತ್ಯಾಚಾರಗಳು) ಕೈಹಾಕಿದ್ದರು/ಹಾಕಿದ್ದಾರೆ ಎಂದು ತಿಳಿದುಬಂದರೆ, ನಾನು ಸರ್ವವಿಧದಲ್ಲೂ ಅವರ ಬಗ್ಗೆ ಸತ್ಯಾಪಸತ್ಯತೆಗಳನ್ನು ತಿಳಿದುಕೊಳ್ಳಲು ಯತ್ನಿಸುತ್ತೇನೆ. ಹಾಗೆ ಒಮ್ಮೆ ಅದು ಸತ್ಯವೆಂದು ನಿಶ್ಚಿತವಾದಾಕ್ಷಣ ಅಂತಹವರ ಪಾಲಿಗೆ ನನ್ನ ಮನೆ-ಮನಸ್ಸನ್ನು ಸಂಪೂರ್ಣ ಮುಚ್ಚಿಬಿಡುತ್ತೇನೆ. ಪಶ್ಚಾತ್ತಪದ ತಪದಲ್ಲಿ ಬೇಯಲೂ ಪ್ರಜ್ಞಾವಂತ, ಆರೋಗ್ಯವಂತ ಮನಸ್ಸು ಬೇಕಾಗುತ್ತದೆ. ಆದರೆ ಹೆಣ್ಮಕ್ಕಳ ಮೇಲೆ, ಮಕ್ಕಳ ಮೇಲೆ, ದುರ್ಬಲರ ಮೇಲೆ ದೌರ್ಜನ್ಯವೆಸುಗುವ ಮನಸ್ಸುಗಳಲ್ಲಿ ಕೇವಲ ವಿಕೃತಿಮಾತ್ರ ತುಂಬಿರುತ್ತದೆ. ಅಂತಹವರಲ್ಲಿ ಪಶ್ಚಾತ್ತಾಪ ಹುಡುಕುವುದೇ ಒಂದು ವಿಕಟ ಹಾಸ್ಯ! 

ನಮ್ಮ ಮನೆಯ ಪರಿಸರವನ್ನು ಚೊಕ್ಕವಾಗಿಟ್ಟುಕೊಳ್ಳುವುದ ನಮ್ಮ ಕರ್ತವ್ಯ. ನಮ್ಮ ಮನೆ-ಮನಸ್ಸೊಳಗೆ ಇಂತಹ ಕ್ರಿಮಿಗಳು ಪ್ರವೇಶಿಸದಂತೆ ಅಸ್ಪೃಶ್ಯತೆಯನ್ನು ಜಾರಿಗೆ ತಂದು.. ನೋಡು ನೀನು ಹೀಗೆ ಅವಳ ಜೊತೆ ನಡೆದುಕೊಂಡರೆ, ಇಂತಹ ಒಂದು ಸಾಮೂಹಿಕ ತಿರಸ್ಕಾರ, ನಿರ್ಲಕ್ಷ್ಯತನದ ಶಿಕ್ಷೆ ನಿನಗೆ ಕಾದಿದೆ ಅನ್ನುವ ಒಂದು ಜಾಗೃತಿಯನ್ನು ನಾವು ಮೂಡಿಸಿದಂತಾಗುತ್ತದೆ. 

ಸದ್ಯಕ್ಕೆ ನನಗೆ ತೋಚಿದ ಅತ್ಯಲ್ಪ ಪರಿಹಾರವಿದು. ಎಷ್ಟು ಸಹಕಾರಿಯಾಗಬಲ್ಲದು ಗೊತ್ತಿಲ್ಲ. ಆಶಾವಾದಿಯಂತೂ ಆಗಿದ್ದೇನೆ. ನಿಮ್ಮಲ್ಲಿಯೂ ಇನ್ನೂ ಅನೇಕ ಉತ್ತಮ ಪರಿಹಾರಗಳು ಇದ್ದಿರಬಹುದು. ಹಂಚಿಕೊಳ್ಳುವಿರಿ ತಾನೆ? :)

-ತೇಜಸ್ವಿನಿ.

ಗುರುವಾರ, ಜುಲೈ 10, 2014

ಆಗಮನದಾಶಯದಲ್ಲಿ.....

ಪುಟ್ಟ ಪೋರಿಯ ಕಣ್ಣೆಲ್ಲಾ ನೆಟ್ಟಿದೆ ಅರೆ ಮುಸುಕೆಳೆದಿಹ ಬಾನಿನ ಮೇಲೆ
ಉಂಗುಷ್ಟದ ತುತ್ತತುದಿಯೇರಿ, ಪುಟ್ಟ ಪಾದಗಳ ಮೇಲೇರಿಸಿ
ಎವೆಯಿಕ್ಕದೇ ನೋಡುತ್ತಾ, ಅಂಗಲಾಚಿಸುತ್ತಿದ್ದಾಳೆ ಚಿಗರೆ ಕಂಗಳ ಹರಿಸಿ

ಜಡೆಹಾಕಲೆಳೆವ ಅಮ್ಮ, ಚಿವುಟಿ ಕಾಲೆಳವ ತಮ್ಮ, ಆಗೀಗ ಗಡಬಡಿಸುವ ಅಪ್ಪ
ಇದಾವುದೂ ತಾಗುತಿಲ್ಲವಿಂದು! ಕಾರಣ ಗಮನವೆಲ್ಲಾ ಬಾನು, ಸೂರ್ಯನ ಮುಂದು

ಹೊರಲಾಗದ ಮಣಭಾರದ ಪಾಟೀ ಚೀಲವ ಹೊತ್ತು, ನಿರಾಸೆಯ ನಿಟ್ಟುಸಿರಿಗೆ ಬಾಗಿದೆ ಕತ್ತು
ಇನ್ನೇನು ಧುಮ್ಮಿಕ್ಕಲು ಹೊರಟಿಹ ಅಣೆಕಟ್ಟು, ಮನದ ತುಂಬೆಲ್ಲಾ ಕರಿಮೋಡದ ಚಿತ್ತು

ಮನೆಯಿಂದ ಬಸ್ಸೇರಲಿರುವುದು ಹತ್ತೇ ಹತ್ತು ಹೆಜ್ಜೆ, ಮೆದು ಪಾದದಿ ಘಲ್ಲೆನ್ನುತಿವೆ ಎರಡೆಳೆಯ ಕಾಲ್ಗೆಜ್ಜೆ
ಹತ್ತೇ ಹತ್ತು ನಿಮಿಷದೊಳು ಬಂದು ಬಿಡುವುದು ಬಸ್ಸು, ಆಮೇಲೆ ದಿನವೆಲ್ಲಾ ಇದ್ದಿದ್ದೇ ನೋಟ್ಸು, ಮಿಸ್ಸು, ಕ್ಲಾಸು

ಬಂದು ಬಿಡು ಮಾರಾಯ ಓ ಮಳೆರಾಯ ಬಹು ಬೇಗ, ಕಾದಿಹಳು ಶಬರಿಯಂತೆ  ಕಾಣಲು ನಿನ್ನ ಆವೇಗ
ಬಲಗೈ ಏರಿರುವ ಚೀಲದೊಳು ನೋಡೆ, ಬೆಚ್ಚಗೆ ಕುಳಿತಿದೆ ಅವಳ ಹೊಚ್ಚ ಹೊಸತಾದ ಕೊಡೆ.

ಕರಿಮೋಡ ನೂರ್ಮಡಿಸಿ, ಜಡಿ ಮಳೆ ಜಡೆ ಬಿಡಿಸಿ, ಹರಿದು ಬಿಡಲೊಮ್ಮೆ ಜಲಧಾರೆ
ಕಾಮನಬಿಲ್ಲಿನ ಬಣ್ಣವನೇ ಹೊತ್ತಿಹ ಅಚ್ಚು ಮೆಚ್ಚಿನ ಕೊಡೆ ಬಿಚ್ಚಿ ಕೂಸು ನಗಲೊಮ್ಮೆ ಮನಸಾರೆ.

-ತೇಜಸ್ವಿನಿ.