ಸೋಮವಾರ, ನವೆಂಬರ್ 14, 2011

ನಾ ಕಂಡ ಅಬ್ರಹಾಂ ಲಿಂಕನ್


ವಸಂತ ಪ್ರಕಾಶನ ಹಲವು ವಿಖ್ಯಾತರ ವ್ಯಕ್ತಿಚಿತ್ರ ಮಾಲೆಯನ್ನು ಬಿಡುಗಡೆಗೊಳಿಸಿದೆ. ವಿಶ್ವೇಶ್ವರಯ್ಯ, ಮಾರ್ಟಿನ್ ಲೂಥರ್ ಕಿಂಗ್, ಮದರ್ ತೆರೇಸಾ, ಭೀಮಸೇನ ಜೋಶಿ, ಅಬ್ದುಲ್ ಕಲಾಂ, ಗಾಂಧೀಜಿ, ಸಚಿತ್ ತೆಂಡುಲ್ಕರ್, ಚಾಣಾಕ್ಯ, ಬುದ್ಧ - ಹೀಗೇ ಹಲವು ವಿಶ್ವ ವಿಖ್ಯಾತರ ಜೀವನ ಚರಿತ್ರೆಯನ್ನು, ಅವರ ಸಾಧನೆ, ಮಹತ್ಕಾರ್ಯಗಳನ್ನು ಅಕ್ಷರ ರೂಪದಲ್ಲೆ ಮನದೊಳಗೆ ಮನೆಮಾಡಿಸುವ ಪ್ರಯತ್ನ ಮಾಡಿದೆ.

ಪ್ರಧಾನ ಸಂಪಾದಕರಾದ ಶ್ರೀಯುತ ದಿವಾಕರ್ ಅವರ ಮಾತಿನಂತೇ - "ವಸಂತ ಪ್ರಕಾಶನದ ಈ ವಿಖ್ಯಾತರ ವ್ಯಕ್ತಿಚಿತ್ರ ಮಾಲೆಯ ಉದ್ದೇಶ ಯಾವುದೇ ವಿಚಾರವನ್ನು ಸ್ಥೂಲವಾಗಿಯಾದರೂ ಗ್ರಹಿಸಲಾಗದ, ಗ್ರಹಿಸಬಯಸಿದರೂ ಅದಕ್ಕೆ ಅಗತ್ಯವಾದಷ್ಟು ಸಮಯವಿಲ್ಲದ ಜನಸಾಮಾನ್ಯರ ಹಾಗೂ ವಿದ್ಯಾರ್ಥಿ, ವಿಧಾರ್ಥಿನಿಯರ ಮನೋವಿಕಾಸ. ಈ ಮಾಲೆಯಲ್ಲಿ ಧರ್ಮ, ತತ್ವಶಾಸ್ತ್ರ, ವಿಜ್ಞಾನ, ಅರ್ಥಶಾಸ್ತ್ರ, ಪರಿಸರ, ಉದ್ಯಮ, ರಾಜಕೀಯ, ಸಮಾಜ ಸುಧಾರಣೆ, ಸಾಹಿತ್ಯ, ಸಂಗೀತ, ಲಲಿತ, ಕಲೆ ಕ್ರೀಡೆ ಮೊದಲಾದ ಕ್ಷೇತ್ರಗಳಲ್ಲಿ ಹೊಸ ಹೊಸ ಆವಿಷ್ಕಾರಗಳನ್ನೂ, ಅದ್ವಿತೀಯ ಸಾಧನೆಗಳನ್ನೂ ಮಾಡಿದ ಮೇಧಾವಿಗಳ ಜೀವನಚಿತ್ರಗಳಿವೆ. ಇವುಗಳಲ್ಲಿ ಪ್ರತಿಯೊಬ್ಬ ಮೇಧಾವಿಯ ವಿಚಾರಗಳನ್ನು ಅವನ ಕಾಲದ ಸಾಮಾಜಿಕ ಹಾಗೂ ಬೌದ್ಧಿಕ ಪರಿಸರದಲ್ಲಿಟ್ಟು ವಿಶ್ಲೇಷಿಸಲಾಗಿದೆ."

ಇಂತಹ ಮೇಧಾವಿಗಳಲ್ಲಿ ಓರ್ವರಾದ "ಅಬ್ರಾಹಂ ಲಿಂಕನ್" ಅವರ ವಿಶೇಷ ವ್ಯಕ್ತಿತ್ವ, ಮಹತ್ ಸಾಧನೆ, ಹೋರಾಟಗಳನ್ನೊಳಗೊಂಡ ಕಿರು ಹೊತ್ತಗೆಯನ್ನು ಬರೆದು ಕೊಡುವ ಸೌಭಾಗ್ಯ ನನ್ನ ಪಾಲಿಗೆ ಒದಗಿತು. ಅಂತೆಯೇ ೫-೬ ತಿಂಗಳುಗಳ ಹಿಂದೇ ಬರೆದು ಕೊಟ್ಟಿದ್ದ ಈ ಹೊತ್ತಗೆಯ ೧೫ ಪ್ರತಿಗಳು ಇಂದು ಅಂದರೆ "ಮಕ್ಕಳ ದಿನಾಚರಣೆಯ ದಿನದಂದೇ" ನನ್ನ ಕೈ ಸೇರಿದ್ದು ನನಗೆ ಮತ್ತೂ ಸಂತೋಷ ತಂದಿದೆ.

ವಸಂತ ಪ್ರಕಾಶನ ಈ ಮಾಲಿಕೆಯನ್ನು ಹೊರ ತಂದಿರುವುದರ ಉದ್ದೇಶ ವಿದ್ಯಾರ್ಥಿಗಳ ಮನೋವಿಕಾಸ. ಅಂತೆಯೇ ತೀರಾ ಕಡಿಮೆ ಬೆಲೆಯಲ್ಲಿ ವಿಶ್ವ ವಿಖ್ಯಾತರ ವ್ಯಕ್ತಿ ಚಿತ್ರಣಗಳು ಮಾರುಕಟ್ಟೆಯಲ್ಲಿ ಲಭ್ಯ. "ವಿಖ್ಯಾತರ ವ್ಯಕ್ತಿಚಿತ್ರ ಮಾಲೆ : ಅಬ್ರಾಹಂ ಲಿಂಕನ್" - ಈ ಪುಸ್ತಕದ ಬೆಲೆ ಕೇವಲ ೩೫ ರೂ. ಸಾರ್ವಕಾಲಿಕ ಮೌಲ್ಯಗಳನ್ನು, ಧ್ಯೇಯಗಳನ್ನು ಜನರಿಗೆ ಕಾಣಿಸಿದ, ಅಂತೆಯೇ ಬದುಕಿ ಮಾದರಿಯಾದ ಮಹನೀಯರ ಜೀವನ ಚರಿತ್ರೆ ಕೇವಲ ವಿದ್ಯಾರ್ಥಿಗಳಿಗೆ ಮಾತ್ರವಲ್ಲ ಎಲ್ಲರಿಗೂ ಅವಶ್ಯಕವಾದದ್ದು.

ನಾನು ಅಬ್ರಹಾಂ ಲಿಂಕನ್ ಅವರ ಕುರಿತು ಬರೆಯಲು ಹೊರಟಾಗ ಬಹು ಹಿಂದೆ ಶಾಲೆಯ ದಿನಗಳಲ್ಲಿ ಅವರ ಬಗ್ಗೆ ತಿಳಿದುಕೊಂಡಿದ್ದ ಅತ್ಯಲ್ಪ ಮಾಹಿತಿಯನ್ನಷ್ಟೇ ನೆನಪಿಗೆ ತಂದುಕೊಂಡಿದ್ದೆ. "ಗುಲಾಮಗಿರಿಯನ್ನು ನಿರ್ಮೂಲನಗೊಳಿಸಲು ಹೋರಾಡಿದವರು" ಎಂಬ ಕಿರು ಚಿತ್ರಣವಷ್ಟೇ ನನ್ನೊಳಗಿತ್ತು. ಆದರೆ "ಲಾರ್ಡ್ ಚರ್ನ್‌ವುಡ್" ಅವರು ಬರೆದ “A Biography - Abraham Lincoln” ಪುಸ್ತಕವನ್ನು ಓದತೊಡಗಿದಂತೇ ಅವರ ವ್ಯಕ್ತಿಚಿತ್ರಣ ನನಗೆ ಸರಿಯಾಗಿ ತಿಳಿದದ್ದು. ನಾನು ತಿಳಿದುಕೊಂಡಿದ್ದು ಏನೂ ಅಲ್ಲಾ... ಅವರ ಸಾಧನೆ, ಹೋರಾಟ, ಸರಳತೆ, ಛಲ, ದೃಢತೆ ಅದೆಷ್ಟು ಅಗಾಧ, ಎತ್ತರವಾಗಿದೆ ಎಂದು ಅರಿವಾಯಿತು. ಇಂತಹ ನಾಯಕರ ಕೊರೆತೆಯೇ ಇಂದಿನ ನಮ್ಮ ದೇಶದೊಳಗೆ, ವಿಶ್ವದೊಳಗೆ ತುಂಬಿರುವ ಅವ್ಯವಸ್ಥೆಗೆ, ಭ್ರಷ್ಟತೆಗೆ ಮೂಲ ಕಾರಣವೇನೋ ಎಂದೆನಿಸಿತು. ದೇಶಭಕ್ತಿ, ಪ್ರಜಾಪ್ರಭುತ್ವ, ಸತ್ಯತೆ, ನಿಷ್ಠೆ, ಜ್ಞಾನದಾಹ, ಏಕತೆ, ಸ್ವಾಭಿಮಾನ - ಇವೆಲ್ಲವುದರ ಪರಿಭಾಷೆಗೆ ಸರಿಯಾದ ನಿಲುವು ಕಲ್ಪಿಸಿದ್ದಾರೆ, ಕಾಣಿಸಿದ್ದಾರೆ ಲಿಂಕನ್ನರು.

 ಈ ಮಹನೀಯರ ಜೀವನ ಚರಿತ್ರೆಯನ್ನು ಬರೆಯಲು ಪ್ರೇರೇಪಿಸಿ, ನನ್ನ ಹೆಸರನ್ನು ದಿವಾಕರ್ ಅವರಿಗೆ ಸೂಚಿಸಿದ "ಜೀವನ್ಮುಖಿ" ಬ್ಲಾಗಿನ ಶ್ರೀಯುತ ಪರಾಂಜಪೆ ಅವರಿಗೆ ಹಾಗೂ ಬರವಣಿಗೆಯ ಕಾಲದಲ್ಲಿ ನನ್ನೊಳಗೆ ಮೂಡಿದ ಸಂದೇಹಗಳಿಗೆ ಉತ್ತರ ಹುಡುಕಿಕೊಳ್ಳುವಲ್ಲಿ ಸಹಕರಿಸಿದ "ನಾವೇಕೆ ಹೀಗೆ?" ಬ್ಲಾಗಿನ ಶ್ರೀಮತಿ ಲಕ್ಷ್ಮೀ ಅವರಿಗೆ ತುಂಬಾ ಧನ್ಯವಾದಗಳು.

ನನ್ನ ಬರಹವನ್ನು ಒಪ್ಪಿ, ತಿದ್ದಿ, ಪ್ರಕಟಿಸಿದ ವಸಂತ ಪ್ರಕಾಶನಕ್ಕೆ ಹಾಗೂ ಪ್ರಧಾನ ಸಂಪಾದಕಾರಾದ ಎಸ್.ದಿವಾಕರ್ ಅವರಿಗೆ ತುಂಬಾ ಧನ್ಯವಾದಗಳು.


ಪುಸ್ತಕಗಳು ಇಲ್ಲಿ ಲಭ್ಯ - :
Vasantha Prakashana
No. 360
10th B Main, 3rd Block, 
Jayanagara, Bangalore - 560 011



-ತೇಜಸ್ವಿನಿ ಹೆಗಡೆ.