ಬುಧವಾರ, ಅಕ್ಟೋಬರ್ 28, 2009

ಪ್ರಳಯಾಂತಕವೀ ಪ್ರಳಯದ ಆತಂಕ!

"ಅಯ್ಯೋ ಅಮ್ಮೋರೆ...ಯಾಕಾಗಿ ನಾನು ದುಡೀ ಬೇಕು? ಯಾರಿಗಾಗಿ ದುಡ್ಡು ಜೋಡಿಸಬೇಕು ಅಂತಾನೇ ಗೊತ್ತಾಗ್ತಿಲ್ಲ ನೋಡಿ...." ಎಂದು ಗೊಣಗುತ್ತಾ, ಸಪ್ಪೆ ಮುಖ ಹೊತ್ತು ಬಂದ ಸರೋಜಮ್ಮನ ಈ ಹೊಸ ವರಸೆಕಂಡು ತುಸು ಚಕಿತಳಾದೆ.
"ಯಾಕಮ್ಮಾ? ಏನಾಯ್ತು? ಗಂಡ ಏನಾದ್ರೂ ಮತ್ತೆ ಕುಡ್ದು ಬಂದು ಬೈದ್ನಾ? ಇಲ್ಲಾ ಮಗ ಮತ್ತೆ ಸ್ಕೂಲ್‌ಗೆ ಚಕ್ಕರ್ ಹಾಕಿದ್ನಾ?"ಎಂದು ಕೇಳಿದೆ.

"ಅಯ್ಯಾ.. ಬಿಡಿಯಮ್ಮ... ಇನ್ನು ಹಾಂಗೆಲ್ಲಾ ಆದ್ರೂ ಅಷ್ಟು ತಲೆಕೆಡ್ಸಿಕೊಳಾಕೆ ಹೋಗೋದಿಲ್ಲ... ಏನೇ ಆದ್ರೂ ಎಷ್ಟು ವರ್ಷ ಹೇಳಿ? ಅಬ್ಬಬ್ಬಾ ಅಂದ್ರೆ ಇನ್ನೊಂದ್ ಮೂರು ವರ್ಷ ತಾನೆ? ಆಮೇಲೆ ಎಲ್ಲಾ ಗೋಳಿಗೂ ಮುಕ್ತಿನೇಯಾ.. ಇರೋಷ್ಟು ದಿನಾ ಚೆನ್ನಾಗಿ ತಿಂದುಂಡು, ಆ ಸ್ವಾಮಿ ಪೂಜಿಸ್ತಾ ಇದ್ಬಿಡೋನಾ ಅಂತಿದ್ದೀನಿ.. ಕೂಡಿಟ್ಟಿದ್ನೆಲ್ಲಾ ನೀರು ಪಾಲು ಮಾಡೋಕೆ ನಾನ್ಯಾಕೆ ಹೀಂಗೆ ದುಡೀಲಿ ಅನ್ನೀ? ಎಲ್ಲಾರೂ ಎಲ್ಲಾನೂ ಮುಳ್ಗೇ ಹೋಗೋವಾಗ ನನ್ನ ಪುಡಿಗಾಸಿಗೇನು ಬೆಲೆ?" ಎನ್ನುತ್ತಾ ಎಲ್ಲಾ ಸಿಟ್ಟು, ಸಿಡುಕು, ಹತಾಶೆಗಳನ್ನೇ ಗುಡಿಸಿ ಗುಂಡಾಂತರ ಮಾಡುವಂತೆ ನೆಲವೇ ಕಿತ್ತು ಹೋಗುವಂತೆ... ಗುಡಿಸತೊಡಗಿದಳು. ಇನ್ನೇನು ನನ್ನೂ ಕಸದ ಜೊತೆ ಸೇರಿಸಿ ಬಿಡುತ್ತಾಳೇನೋ ಅಂತ ಹೆದರಿಕೆಯಾಗಿ ಆದಷ್ಟು ಪಕ್ಕಕ್ಕೆ ಸರಿದೆ. ಅಂಥದ್ದೇನು ಆಗಿರಬಹುದಪ್ಪಾ? ಎಲ್ಲಾರೂ ಎಲ್ಲದೂ ಮುಳುಗಿಹೋಗೋವಂಥದ್ದು? ಎನ್ನುವ ಕುತೂಹಲ ಮಾತ್ರ ಗುಡಿಸಿ ಹೋಗಲಿಲ್ಲ.

"ಅಲ್ಲಾ.. ಬೆಳಿಗ್ಗೆ ಬೆಳಿಗ್ಗೆ ಏನಾಯ್ತು ನಿಂಗೆ? ಹೀಗೆಲ್ಲಾ ಮಾತಾಡ್ತಿದ್ದೀಯಲ್ಲಾ? ಎಲ್ಲರೂ.. ಎಲ್ಲಾದೂ ಮುಳ್ಗಿ ಹೋಗೋಕೆ ಬೆಂಗ್ಳೂರಲ್ಲೇನು ಸುನಾಮಿ ಬರತ್ತೆ ಅಂದ್ರಾ? ಹಾಂಗೆ ಬರೋದಿದ್ರೂ ಅದು ಶಿರಾಡಿ ಘಟ್ಟ ಹತ್ತಿ ಬರ್ಬೇಕು ನೋಡು.." ಎಂದು ನನ್ನ ತಮಾಶೆಗೆ ನಾನೇ ನಕ್ಕರೂ ಆಕೆ ನಗಲೇ ಇಲ್ಲ!

"ಅಲ್ರಮ್ಮಾ.. ನೀವು ಟೀವಿ ನೋಡಿಲ್ವಾ ನಿನ್ನೆ? "ಹೀಗೂ ಉಂಟೆ..?" ಕಾರ್ಯಕ್ರಮದಲ್ಲಿ ಪ್ರಳಯ ಆಗತ್ತಂತೆ... ಅದೂ ಸರಿಯಾಗಿ ಮೂರುವರ್ಷದಲ್ಲಿ.. ಅಂದ್ರೆ ೨೦೧೨ ಡಿಸೆಂಬರ್ ೨೧ಕ್ಕಂತ್ರವ್ವ... ನಮ್ಮ ವಠಾರದಲ್ಲೆಲ್ಲಾ ಇದೇ ಮಾತು ನೋಡಿ.. ನೀವು ನೋಡಿದ್ರೆ ಎನೂ ಗೊತ್ತೆ ಇಲ್ಲಾ ಅಂತಿದ್ದೀರಾ..." ಎನ್ನಲು ನಿಜಕ್ಕೂ ನಾನು ಆಶ್ಚರ್ಯಚಕಿತಳಾದೆ. ನಾನು ಈ ಪ್ರೊಗ್ರಾಂ ನೋಡಿರಲಿಲ್ಲ.(ಹೀಗೂ ಉಂಟೆಗಿಂತಲೂ ಹೀಗಿರಲು ಸಾಧ್ಯವೇ ಇಲ್ಲಾ ಎನ್ನುವಂತೆ ಚಿತ್ರಿಸುವ ಆ ಚಾನಲ್ ಸ್ವಲ್ಪ ನನ್ನ ಕಣ್ಣಿಂದ ದೂರವೇ. ವೈಭವೀಕರಣಕ್ಕೆ ಇನ್ನೊಂದು ಹೆಸರು ಅದು ಎನ್ನುವುದು ನನ್ನ ಅಭಿಮತ...).

"ಅಲ್ವೇ.. ೨೧ಕ್ಕೇ ಎಲ್ಲಾ ಸರ್ವನಾಶ ಅಂತಾದ್ರೆ ಮರುದಿನದಿಂದ ಯಾವ ಜೀವಿಯೂ ಇರೋದಿಲ್ವಂತೋ? ಆಮೇಲೆ ಏನಾಗೊತ್ತಂತೆ?" ಎಂದು ಅವಳನ್ನು ಮತ್ತೆ ಪ್ರಶ್ನಿಸಿದೆ ನನ್ನ ನಗುವನ್ನು ಅದುಮಿಟ್ಟುಕೊಂಡು.

"ಹಾಂಗಲ್ಲಾ.. ಕೆಲವು ಒಳ್ಳೇವ್ರು ಮಾತ್ರ ಬುದ್ಧಿಭ್ರಮಣೆ ಆಗಿ ಬದ್ಕತಾರಂತೆ... ಅವ್ರಿಗೆ ಈ ಯುಗದ ನೆನಪ್ಯಾವ್ದೂ ಇರೋದಿಲ್ವಂತೆ.. ಎಲ್ಲಾ ಹೊಸತಾಗೇ ಶುರು ಆಗೊತ್ತಂತೆ.. ಅದ್ಯಾವ್ದೋ ಮಾಯಾಂಗನೆ ಕ್ಯಾಲೆಂಡರ್ ಪ್ರಕಾರವಂತೆ ಕಾಣಮ್ಮ..." ಎನ್ನಲು ನನ್ನ ನಗೆಬುಗ್ಗೆ ಯಾವ ತಡೆಯೂ ಇಲ್ಲದೇ ಹೊರಬಂತು. "ಅದು ಮಾಯಾಂಗನೆ ಕ್ಯಾಲೆಂಡರ್ ಅಲ್ವೇ.. ಮಾಯನ್ ಕ್ಯಾಲೆಂಡರ್... ಸರಿ ಸರಿ.. ಪ್ರಳಯ ಆಗೋಕೆ ಇನ್ನೂ ಸಮಯ ಇದೆ ಅಲ್ವಾ? ಈಗ ಸಧ್ಯಕ್ಕೆ ನನ್ನ ಕೆಲ್ಸ ಮಾಡ್ಕೊಡು ಮಾರಾಯ್ತಿ. ಪ್ರಳಯ ಅಗೊತ್ತೆ ಅಂತ ಕೆಲ್ಸ ಬಿಟ್ಟು ಹೋಗ್ಬಿಡ್ಬೇಡ.. ಹಾಗೇನಾದ್ರೂ ಆದ್ರೆ ಮುಂದೆ ಆಗೋ ಪ್ರಳಯ ಇಂದೇ ಇಲ್ಲೇ ನನ್ನ ಜೊತೆ ಆಗ್ಬಿಡೊತ್ತೆ.." ಎಂದು ಅವಳನ್ನೂ ನಗಿಸಿ ಕೆಲ್ಸದ ಕಡೆ ಗಮನ ಹರಿಸಿದೆ.

ಆದರೂ ತಲೆಯೊಳಗೆ ಇದೇ ಯೋಚನೆ. ಏನಿದು ಮಾಯನ್ ಕ್ಯಾಲೆಂಡರ್ ಮಹಿಮೆ? ಜನ ಮರುಳೋ ಜಾತ್ರೆ ಮರುಳೋ? ಇತರರೂ ಈ ಪ್ರೊಗ್ರಾಂ ನೋಡಿರಬಹುದು.. ಇಲ್ಲಾ ಇದ್ರ ಬಗ್ಗೆ ಉಳಿದವರ ಯೋಚನೆ ಏನಾಗಿರಬಹುದು? ಎಂದು ತಿಳಿಯುವ ಸಣ್ಣ ಆಶಯ ಮನದೊಳಗೆ ಮೂಡಿತು. ನನಗೆ ಪರಿಚಯ ಇದ್ದವರೊಡನೆ, ಕೆಲವು ಸ್ನೇಹಿತರೊಡನೆ, ಆತ್ಮೀಯರೊಡನೆ, ಸಹ ಬ್ಲಾಗಿಗರೊಡನೆ ಮಾತಾಡುವಾಗ.. ಚಾಟ್ ಮಾಡುವಾಗ.. ಈ ವಿಷಯ ಪ್ರಸ್ತಾಪಿಸಿದೆ. ಚಾಟಿಂಗ್ ಸ್ಟೇಟಸ್‌ಬಾರ್ ನಲ್ಲೂ ಇದನ್ನು ಹಾಕಿದಾಗ ಹಲವರು ಪ್ರತಿಕ್ರಿಯಿಸಿದರು. ಈ ವಿಚಾರ ಮಂಥನದಲ್ಲಿ ಹಲವು ಸುಂದರ, ಹಾಸ್ಯಮಯ, ಚಿಂತನಾಶೀಲ ಅಭಿಪ್ರಾಯಗಳು ಹೊರಹೊಮ್ಮಿದವು. ಅವುಗಳನ್ನೆಲ್ಲಾ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ಮೊದಲಿಗೆ ನಾನು ಕಾಲ್ ಮಾಡಿದ್ದು ನನ್ನ ಬರಹಕ್ಕೆ ಅದರಲ್ಲೂ ವಿಶೇಷವಾಗಿ ಕಥಾರಚನೆಗೆ ಸ್ಪೂರ್ತಿಯಾಗಿರುವ ಭುವನೇಶ್ವರಿ ಹೆಗಡೆಯವರಿಗೆ. ಇದಕ್ಕೆ ಕಾರಣವೂ ಇದೆ. ಹತ್ತನೆಯ ತರಗತಿಯಲ್ಲೋ ಇಲ್ಲಾ ಒಂಭತ್ತನೆಯ ತರಗತಿಗೋ ನಮಗೆ ಅವರ ಲೇಖನವೊಂದರ ಪಾಠವಿತ್ತು. ಅದು ಪ್ರಳಯದ ಕುರಿತೇ ಆಗಿತ್ತು. ತುಂಬಾ ಹಾಸ್ಯಮಯವಾಗಿ ಬರೆದಿದ್ದರು. ಅದು ಇನ್ನೂ ನನ್ನ ಮನಃಪಟಲದಲ್ಲಿ ಹಸಿರಾಗಿಯೇ ಇದೆ. ಅಲ್ಲಿ ಅವರು "ಮೊಸರೊಳಗೆ ಬೆಣ್ಣೆ ಮುಳುಗಿದಾಗ ಪ್ರಳಯ ಆಗುತ್ತದೆಂದು" ಹೇಳಿ ಬರೆದಿದ್ದರು. ಅದನ್ನೋದಿ ನಾವೆಲ್ಲಾ ತುಂಬಾ ನಕ್ಕಿದ್ದೆವು. ಅದು ನೆನಪಾಗಿ ಅವರಿಗೇ ಕಾಲ್ ಮಾಡಿದೆ. ವಿಷಯ ತಿಳಿದ ಅವರು ಕೊಟ್ಟ ಮೊದಲ ಪ್ರತಿಕ್ರಿಯೆ ಒಂದು ದೊಡ್ಡ ನಗು. "ಮೊಸ್ರಲ್ಲಿ ಬೆಣ್ಣೆ ಮುಳ್ಗ್‌ದಾಗ ಪ್ರಳಯ ಆಗ್ತು ಹೇಳಿದ್ನಲೇ.. ಈಗೆಂತ ಮೊಸ್ರೊಳ್ಗೆ ಬೆಣ್ಣೆ ಮುಳ್ಗಿದ್ದಡ?" ಎಂದು ಕೇಳಿದಾಗ ನಗು ಈ ಕಡೆಯೂ ಹರಿದಿತ್ತು. ಮಾತು ಮಾತಲ್ಲಿ ಅವರೊಂದು ಸ್ವಾರಸ್ಯಕರ ಘಟನೆಯನ್ನೂ ಹಂಚಿಕೊಂಡರು.

ಕೆಲವು ವರುಷಗಳ ಹಿಂದೆ ಜನಪ್ರಿಯ ವಾರ ಪತ್ರಿಕೆಯೊಂದು ೨೦೦೦ದಲ್ಲಿ ಜಗತ್ ಪ್ರಳಯವಾಗುತ್ತದೆ ಎಂದು ಪ್ರಕಟಿಸಿತ್ತು. ಅತಿ ರಂಜಿತ, ಅದ್ಭುತ ಚಿತ್ರಗಳ ಮೂಲಕ ಓದುಗರನ್ನು ಸೆಳೆದಿತ್ತು. ನಾನಾಗ ಬಿ.ಎಸ್ಸಿ. ಓದುತ್ತಿದ್ದೆ. ಇನ್ನೂ ನನಗೆ ನೆನಪಿದೆ. ಕನ್ನಡ ಎಂದರೆ ಎನ್ನಡ ಎನ್ನುವ ಕಲವರೂ ಆಗ ಈ ಪತ್ರಿಕೆಯನ್ನು ತಂದು ಎಲ್ಲೆಂದರಲ್ಲಿ ಓದುತ್ತಿದ್ದರು. ಲ್ಯಾಬ್, ಕಾರಿಡಾರ್ ಎಲ್ಲ ಕಡೆ ಇದೇ ಸುದ್ದಿ... ಸಾವಿನ ಭೀತಿ ಅವರನ್ನು ಆ ರೀತಿ ಆಡಿಸಿತ್ತೇನೋ...! ಇದೇ ಸಮಯದಲ್ಲೇ ಭುವನೇಶ್ವರಿಯವರು ಕಾಲೇಜ್ ವಾರ್ಷಿಕೋತ್ಸವಕ್ಕೆಂದು ಗೆಸ್ಟ್ ಆಗಿ ಹೋಗಿದ್ದರಂತೆ. ಆ ಕಾಲೇಜಿನ ಪ್ರಿನ್ಸಿಪಾಲರು ಇವರಲ್ಲೊಂದು ಕೋರಿಕೆ ಮಾಡಿಕೊಂಡರಂತೆ. "ದಯವಿಟ್ಟು ನೀವು ನಿಮ್ಮ ಭಾಷಣದಲ್ಲಿ ಸ್ವಲ್ಪ ತಿಳಿ ಹೇಳಿ... ಪ್ರಳಯ ಆಗೋವಂಥದ್ದು ಏನೂ ಇಲ್ಲ ಎಂದು. ಭಯ ಬೇಡ ಎಂದು ಹೇಳಿ... ಹಲವು ವಿದ್ಯಾರ್ಥಿಗಳು ಭಯ ಪಟ್ಟು, ನಿರುತ್ಸಾಹಗೊಂಡು ಓದೂ ಬೇಡ ಎಂದು ಹೇಳುತ್ತಿದ್ದಾರೆ.." ಎಂದರಂತೆ! ಇದನ್ನು ಕೇಳಿ ಭುವನೇಶ್ವರಿ ಅವರಿಗೆ ತುಂಬಾ ಆಶ್ಚರ್ಯವಾಗಿತ್ತಂತೆ. ಅಂತೆಯೇ ಅಲ್ಲಿಯೂ ತಮ್ಮ ಹಾಸ್ಯ ಚಟಾಕಿಯ ಮೂಲಕ ನಗೆಬುಗ್ಗೆಯನ್ನು ಚಿಮ್ಮಿಸಿ, ಪ್ರಳಯದ ಭಯವನ್ನೋಡಿಸಲು ಬಹುಪಾಲು ಯತ್ನಿಸಿದ್ದರಂತೆ. ಇದನ್ನು ಕೇಳಿ ನನಗೆ ಮತ್ತೂ ಆಶ್ಚರ್ಯ ವಾಯಿತು.. "ಹೀಗೂ ಉಂಟೆ? " ಎಂದೆನಿಸಿಯೇ ಬಿಟ್ಟಿತು.

"ಪ್ರಳಯ ಅನ್ನೋದು ಕಪೋ ಕಲ್ಪಿತ. ಎಲ್ಲವೂ ಒಂದೇ ದಿವಸ ನಾಶ ಆಗೋಕೆ ಸಾಧ್ಯನೇ ಇಲ್ಲ. ಹಾಂ.. ಮನುಷ್ಯನ ದುರಾಸೆಗಳಿಂದಾಗಿ ಅಪಾರ ಜೀವ ಹಾನಿ ಆಗಬಹುದು. ಅದು ಆಗಾಗ ಆಗುತ್ತಲೇ ಇದೆ ಕೂಡ.. ಸುಮ್ಮಸುಮ್ಮನೇ ಜನರನ್ನು ಭೀತಿಗೊಳಿಸುವ ಯತ್ನವಿದೆಲ್ಲಾ.." ಎಂದು ಮೂರು ವರುಷದಲ್ಲಿ ಆಗುವ ದಿಢೀರ್ ಪ್ರಳಯದ ಯೋಚನೆಯೇ ಶುದ್ಧ ತಪ್ಪು ಎಂದರು.
ತದನಂತರ ನಾನು ಕೆಲವು ಬ್ಲಾಗಿಶ್ಚರುಗಳನ್ನು, ಸ್ನೇಹಿತರನ್ನು ಅವರ ಅಭಿಪ್ರಾಯ ತಿಳಿಯಲು ಸಂಪರ್ಕಿಸಿದೆ. ಅವರ ಉತ್ತರಗಳು, ಅನಿಸಿಕೆಗಳು ಈ ಕೆಳಗಿನಂತಿವೆ..

೧. "ವಿಕಾಸವಾದ"ದಲ್ಲಿ ತೊಡಗಿರುವ ವಿಕಾಸ್ ಹೆಗಡೆ - "ಹೌದಾ.. ಹಾಂಗೆ ಹೇಳಿದ್ವಾ? ಅಯ್ಯೋ... ಸರಿ ಹಾಂಗಿದ್ದ್ರೆ... ಮೂರುವರ್ಷದೊಳ್ಗೆ ನಾನು ಮದ್ವೆ ಮಾಡ್ಕೊಬೇಕು... ಬ್ಯಾಚುಲರ್ ಆಗಿ ಸಾಯೋಕೆ ಇಷ್ಟ ಇಲ್ಲೆ.. ಹ್ಹ ಹ್ಹ ಹ್ಹ.." (ಹ್ಮಂ.. ಆದಷ್ಟು ಬೇಗ ನಾಲ್ಕನೆ ಗೆಟಗರಿಯಿಂದ ಭಡ್ತಿ ಪಡೀತೆ ಹೇಳಾತು ಹಾಂಗಿದ್ರೆ....:) )
೨. "ನಾವೇಕೆ ಹೀಗೆ?" ಎನ್ನುವ ಲಕ್ಷ್ಮಿ - "ನಂಬೊಲ್ಲ ಒಂದ್ಸರ್ತಿ.. ನಂಬೊಲ್ಲ ಎರಡಸರ್ತಿ.. ನಂಬೊಲ್ಲ ಮೂರಸರ್ತಿ....ಮಾಯನ್ ಕ್ಯಾಲೆಂಡರ್ ತುಂಬಾ ಕ್ರೂಡ್ ರಚನೆ ಆಗಿರೋದು. ಅವರು ಚಂದ್ರನ ದೂರ ತಿಳ್ಕೊಂಡ ತಕ್ಷಣ ಅವ್ರ ಎಲ್ಲಾ ಪ್ರಿಡಿಕ್ಷನ್ನೂ ಸರಿ ಎನ್ನೋಕೆ ಆಗಲ್ಲ.. ಇದೆಲ್ಲಾ ಬರೀ ಸುಳ್ಳು.."

೩. "ಅಂತರ್ವಾಣಿ"ಯನ್ನು ಹಂಚಿಕೊಂಡ ಜಯಶಂಕರ್ - "ಹೌದಾ ತೇಜಕ್ಕ.. ಗೊತ್ತಿರ್ಲಿಲ ನೋಡಿ.. ಒಂದು ಲೆಕ್ಕದಲ್ಲಿ ಒಳ್ಳೇದು ಬಿಡಿ.. ಮನೆಕಟ್ಟಿ ಸಾಲದಲ್ಲಿದ್ದೀನಿ. ಜೀವ್ನ ಪೂರ್ತಿ ತೀರ್ಸೊದಲ್ಲೇ ಆಗೊತ್ತೆ ಅಂತಿದ್ದೆ. ಪ್ರಳಯ ಆಗಿ ಸಾಲದಿಂದನೂ ಮುಕ್ತಿ ಸಿಗೊತ್ತೆ ಬಿಡಿ... :) " (ಇದನ್ನು ಕೇಳಿ ಮನಃಪೂರ್ತಿ ನಕ್ಕು ಬಿಟ್ಟಿದ್ದೆ..:)).
೪. "ತುಂತುರು ಹನಿ" ಸಿಂಪಡಿಸುವ ಶ್ರೀನಿಧಿ - "ಅಯ್ಯೋ ನಿಂಗೆ ತೀರಾ ಮಳ್ಳಾಗೋಜೆ ಅತ್ಗೆ.. ನೀ ಇಂಥದ್ದನ್ನೆಲ್ಲಾ ಪ್ರಶ್ನೆ ಕೇಳೋದೇ ಅಲ್ಲಾ.." (ಮುಂದೆ ನಾನು ಮಾತಾಡೋ ಹಾಂಗೇ ಇಲ್ಲಾ.. ಗಪ್‌ಚುಪ್!)
೫. "ಮೌನ ಗಾಳ" ಹಾಕಿ ಕುಂತ ಸುಶ್ರುತ - "ಹೋದ್ರೆ ಹೋಗ್ಲಿ ಬಿಡೆ.. ಎಲ್ರ ಜೊತೆ ನಾವೂ ಹೋಗೋದಾದ್ರೆ ಹೋಗಾಣ ಅದ್ಕೇನಂತೆ.. ಎಲ್ಲಾ ಒಂದ್ಸಲ ಫಿನಿಶ್ ಆಗ್ಬೇಕು.. ಒಬ್ಬಿಬ್ರು ಉಳ್ಯೋದಾದ್ರೆ ಬೇಡ.. ಎಲ್ಲಾ ಹೋಗ್ಲಿ.. ನಂದಂತೂ ಸಹಮತಿ ಇದ್ದು ನೋಡು.." (ಪ್ರಳಯಕ್ಕೆ ಇವರ ಸಹಮತಿ ಇದೆ,, ನೋಟೆಡ್!!! :) ).

೬. "ಮನಸೆಂಬ ಹುಚ್ಚು ಹೊಳೆಯಲ್ಲಿ" ಈಜುತ್ತಿರುವ ಚಿತ್ರ - "ಅಯ್ಯೋ.. ನಿಂಗೇನಾಯ್ತೆ? ಇನ್ನೂ ನೀನು ಈ ಪ್ರಳಯದ ಹುಚ್ಚಿಂದ ಹೊರ್ಗೆ ಬಂದಿಲ್ವಾ? ಹ್ಮ್ಂ.. ಹಾಂಗಾಗೋದಾದ್ರೆ ಅಮೇರಿಕಾಕ್ಕೆ ಪ್ಲೇನ್ ಟಿಕೆಟ್ ಮೊದ್ಲೇ ಮಾಡ್ಸಿ ಇಟ್ಕೋಬೇಕು.. " ನಂಗೆ ಆಶ್ಚರ್ಯ "ಯಾಕೆ ಚಿತ್ರಕ್ಕ? ಎಲ್ಲಾ ಕಡೆನೂ ಪ್ರಳಯ ಆಗಿರೊತ್ತಲ್ಲಾ..?" "ಅಯ್ಯೋ ಅವ್ರ ಪ್ರಕಾರ ಡಿಸೆಂಬರ್ ೨೧ಕ್ಕೆ ಅಲ್ದಾ? ಅಮೇರಿಕಾಕ್ಕೆ ೨೧ ಡೇಟ್ ಆಗೋದು ಮರುದಿನ...ಸೋ... ಈ ದಿನ ನಾವು ಪ್ಲೇನ್ ಹತ್ತಿದ್ರೆ ಅಲ್ಲಿ ಪ್ರಳ ಆಗೋಮುಂಚೆ ಇರ್ತಿವಿ. ಭಾರತದಲ್ಲಿ ಪ್ರಳಯ ಶುರು ಆಗೋವಾಗ ನಾವು ಪ್ಲೇನ್‍ನಲ್ಲಿ ಇರ್ತಿವಲ್ಲಾ... ಹಾಗೆಯೇ ಅಲ್ಲಿ ಪ್ರಳಯ ಶುರು ಆಗೋ ಮೊದಲು ಮತ್ತೆ ಹೊರಟ್ರೆ ಇಲ್ಲಿಗೆ ನೀರ ಮೇಲೆ ಲ್ಯಾಂಡ್ ಆಗ್ಬಹುದು ನೋಡು.." (ಭಾರೀ ಯೋಚನೇನೆ.. ಆದ್ರೆ ಜೊತೆಗೆ ಹಡಗಿನ ಟಿಕೆಟ್ ಕೂಡಾ ಮಾಡ್ಸಿ ಇಟ್ಕೊಂಡಿರ್ಬೇಕು... ಲ್ಯಾಂಡ್ ಆಗೋಕೆ ಹಡಗು ಬೇಕು ತಾನೆ? :)).
೭. "ಕ್ಷಣ ಚಿಂತನೆಯ" ಚಂದ್ರಶೇಖರ್ - "ಹೌದು ಮೇಡಂ... ಹೀಗೂ ಉಂಟೆ? ಪ್ರೋಗ್ರಾಂನಲ್ಲಿ "ಬ್ರಹ್ಮ ರಹಸ್ಯ" ಅಂತ ಬಂದಿತ್ತು ಅದನ್ನ ನೋಡಿದ್ದೆ. ಈ ಬ್ರಹ್ಮ ರಹಸ್ಯ ಬರೆದಿದ್ದು ಪಿ.ಯು.ಸಿ ಓದಿದ ಹುಡುಗನಂತೆ ಮೇಡಂ... ಅದು ಭಾಗ-೧, ೨ ಹಾಗೂ ೩ ಇದೆಯಂತೆ.. ನಂಬೋಕಂತೂ ಆಗೊಲ್ಲಾ ನೋಡಿ..." (ಓಹೋ ಇದು ಬ್ರಹ್ಮ ರಹಸ್ಯದ ಕಥೆಯೋ... ಹಾಗಿದ್ದರೆ ಇದೊಂದು ಸುಳ್ಳಿನ ಬ್ರಹ್ಮ ಗಂಟೇ ಸರಿ ಎಂದೆನಿಸಿತು ನನಗೆ).
೮. "ಮಧುವನದಲ್ಲಿ" ವಿಹರಿಸುತ್ತಿರುವ ಮಧುಸೂದನ್ - "ಇದ್ರಲ್ಲಿ ನಂಬಿಕೆ ಇಲ್ಲಾ...ಸಾಕಷ್ಟು ವೈಜ್ಞಾನಿಕ ಸಾಕ್ಷಿಗಳೂ ಇಲ್ಲಾ... ಆದ್ರೆ ಒಂದೇ ಸಲ ಎಲ್ಲರೂ ಹೋಗೋದಾದ್ರೆ ಒಳ್ಳೇದೇ.. ಆಗ್ಲಿ ಬಿಡು.... ಎಲ್ಲರಿಗೂ ಒಟ್ಟಿಗೇ ಮೋಕ್ಷ ಸಿಕ್ಕಿದಂತಾಗ್ತು.."

ತಮ್ಮ ತಮ್ಮ ಕ್ಷೇತ್ರದಲ್ಲಿ ವಿಜ್ಞಾನಿಗಳಾಗಿರುವ "ಸಾಗರದಾಚೆಯ ಇಂಚರ"ಹೊರಡಿಸುವ ಡಾ.ಗುರುಮೂರ್ತಿ ಹಾಗೂ "ಜಲನಯನ"ದ ಮೂಲಕ ನೋಡುವ ಡಾ.ಆಝಾದ್ ಅವರು ವೈಜ್ಞಾನಿಕ ನೆಲೆಯಲ್ಲಿ ಈ ವಿಷಯವನ್ನು ಅಲ್ಲಗಳೆದರು.

ಗುರುಮೂರ್ತಿ - "ನೋ ಛಾನ್ಸ್... ಪ್ರಳಯ ಆಗೋಕೆ ಸಾಧ್ಯನೇ ಇಲ್ಲಾ. ಇನ್ನೇನಾದ್ರೂ ಭೂಮಿ ತನ್ನ ಅಕ್ಷಾಂಶದಿಂದ ದಿಕ್ಕು ತಪ್ಪಿದರೆ ಮಾತ್ರ ಹಾಗಾಗಬಹುದಷ್ಟೇ. ಆದರೆ ಅದೂ ಅಷ್ಟು ಸುಲಭವಲ್ಲ. ಇನ್ನು ಸಮುದ್ರ ಮಟ್ಟ ಪ್ರತಿ ವರ್ಷ ಏರುತ್ತಲೇ ಇದೆ. ಇದೆಲ್ಲಾ ಗ್ಲೋಬಲ್ ವಾರ್ಮಿಂಗ್‌ನಿಂದಾಗುತ್ತಿದ್ದು.. ಇದು ಸುಮಾರು ೨೦೦ ವರ್ಷಗಳಿಂದಲೂ ನಡೆಯುತ್ತಿದೆ. ಎಲ್ಲೋ ಒಂದಿಷ್ಟು ಭೂಭಾಗಳು ಮುಳುಗಡೆ ಆಗಬಹುದು ಕ್ರಮೇಣ... ಬಿಟ್ಟರೆ ಸಂಪೂರ್ಣ ನಾಶ ಸಾಧ್ಯವೇ ಇಲ್ಲ. ಇನ್ನು ಮನುಷ್ಯರೇ ಅಣುಬಾಂಬುಗಳ ಮೂಲಕ ಕೃತ್ರಿಮ ಪ್ರಳಯ ತಂದರೆ ತರಬಹುದಷ್ಟೇ. ಸ್ವಾಭಾವಿಕವಾಗಿ ಭೂಮಿಯ ಸಂಪೂರ್ಣ ನಾಶ ಆಗೊಲ್ಲ.. ನನ್ನ ಅಭಯ ಇದ್ದು..೨೦೦% ಹೆದ್ರಿಕೆ ಬೇಡ.. ಪ್ರಳಯ ಆಗ್ತಿಲ್ಲೆ....:)" (ಇಷ್ಟು ಅಭಯ ಸಿಕ್ಕರೆ ಸಾಕಲ್ಲಾ....:) ).

ಆಝಾದ್ - "ನಿಮ್ಗೆ ಈ ಪ್ರಳಯದ ಯೋಚ್ನೆ ಯಾಕೆ ತಲೆ ತಿನ್ತಾ ಇದೆ?... ಆ ಮಾಯನ್ ಕ್ಯಾಲೆಂಡರ್ ಅವರ ಸಂಖ್ಯಾಕ್ರಮ ವಿಚಿತ್ರವಾಗಿದೆ. ಹಾಗೊಂದು ವೇಳೆ ೨೦೧೨ಗೆ ಪ್ರಳಯ ಆಗ್ಬೇಕು ಅಂತಾಗಿದ್ರೆ ಅದ್ರ ಇಫೆಕ್ಟ್ ಸುಮಾರು ೫೦-೬೦ ವರ್ಷಗಳ ಮೊದಲೇ ಆಗಬೇಕಾಗುತ್ತಿತ್ತು. ಸಿಂಪಲ್ ರೊಟೇಷನ್, ರೆವಲ್ಯೂಷನ್, ಲೈಟ್ ಟ್ರಾವೆಲ್, ಎನರ್ಜಿ ಡಿಸಿಪೀಷನ್ ಇವುಗಳನ್ನು ಲೆಕ್ಕ ಹಾಕಿ ಎಲ್ಲ ಡೈನಾಮಿಸಮ್ ಎಕ್ಸ್ಟ್ರಾಪೊಲೇಟ್ ಮಾಡಿದ್ರೆ.. ಇದು ಇನ್ನು ಮೂರುವರ್ಷದೊಳಗಂತೂ ಅಸಾಧ್ಯ. ರಾತ್ರಿ ಆಗುವ ಮೊದಲು ಸಂಜೆ ಆಗ್ಬೇಕು ತಾನೆ? ಹಾಗೇ ಏನಾದ್ರೂ ಒಂದು ದೊಡ್ಡ ವಿಪತ್ತು ಬರುವ ಮೊದಲು ಅದರ ಮುನ್ಸೂಚನೆ ಸಿಗ್ಬೇಕು. ದೊಡ್ಡ ಉಲ್ಕೆಯೋ ಇನ್ನಾವುದೋ ಈ ಭೂಮಿಯನ್ನು ಬಡಿಯಬೇಕೆಂದರೆ ಅದು ಬಹು ದೂರವನ್ನು ಕ್ರಮಿಸಬೇಕಾಗುತ್ತದೆ. ಅದಕ್ಕೆ ಸಮಯ ಹಿಡಿಯುವುದು ಮತ್ತು ಅದು ನಮ್ಮ ಗಮನಕ್ಕೂ ಬರುವುದು. ನಿಮಗೆ ಇನ್ನೊಂದು ವಿಷಯ ಗೊತ್ತೇ?.... ಸೌದಿ ರಾಷ್ಟ್ರಗಳಲ್ಲಿ ಇತ್ತೀಚಿಗೆ ಕೆಲವಡೆ ಸ್ನೋ ಫಾಲ್ ಆಗುತ್ತಿದೆಯಂತೆ..!!! ಸುಮಾರು ೫೩ ಡಿಗ್ರಿ ತಾಪಮಾನ ಇರುವ ಪ್ರದೇಶವದು. ಜನರ ದುರಾಸೆ, ಪ್ರಕೃತಿಯೊಂದಿಗಿನ ದುರ್ವರ್ತನೆಯಿಂದ ಹವಾಮಾನ ವೈಪರೀತ್ಯವಾಗುತ್ತಿದೆ. ಇದರಿಂದ ಅನೇಕ ಜೀವ ಹಾನಿ ಮುಂದೆ ಆಗಬಹುದಷ್ಟೇ. ಅಲ್ಲಾರಿ ಅಷ್ಟಕ್ಕೂ ಪ್ರಳಯ ಆಗೇ ಆಗೊತ್ತೆ ಅಂತಾದ್ರೆ ಏನು ಮಾಡೋಕೆ ಆಗೊತ್ತೆ? ಒಂದು ಬಿಲ್ಡಿಂಗ್ ಬೀಳೊತ್ತೆ ಅಂದ್ರೆ ಜನ ಓಡಿ ಬಚಾವ್ ಆಗ್ತಾರೆ. ಆದ್ರೆ ಇಡೀ ಭೂಮಿನೇ ಇರೊಲ್ಲ ಅಂದ್ರೆ ಏನು ಮಾಡೋಕೆ ಆಗೊತ್ತೆ?...." (ಹ್ಮ್ಂ.. ನಿಜ. ಆಗದೇ ಹೋಗದೇ ಇರೋ ವಿಚಾರಕ್ಕೆ ಜನ ಯಾಕೆ ಇಂದೇ ಈಗಲೇ ತಲೆ ಕೆಡಿಸಿಕೊಂಡು ಕಾಣದ ಪ್ರಳಯದ ಆತಂಕಕ್ಕೆ ಕೆಲ ಕಾಲವಾದರೂ ತುತ್ತಾಗುತ್ತಾರೋ ನಾ ಕಾಣೆ!!!).

ಇವಿಷ್ಟು ನನ್ನ ಮಂಥನದೊಳಗೆ ಸಿಕ್ಕ ವಿಚಾರಧಾರೆಗಳು. ಅದೆಷ್ಟೋ ಸಹಮಾನಸಿಗರಲ್ಲೂ ಕೇಳಬೇಕೆಂದಿದ್ದೆ. ಆಗಲಿಲ್ಲ. ಈ ವಿಷಯದ ಕುರಿತಾಗಿ ನೀವೂ ನಿಮ್ಮ ಅಭಿಪ್ರಾಯಗಳನ್ನು... ಇತರರಿಂದ ಕೇಳಿದ, ಓದಿದ ವಿಷಯಗಳನ್ನು ಇಲ್ಲಿ ಹಂಚಿಕೊಳ್ಳಬೇಕಾಗಿ ವಿನಂತಿ.

ಇನ್ನು ಕೊನೆಯದಾಗಿ ನಾನು ಅಂದರೆ "ಮಾನಸ" -

ಆ ಚಾನಲ್‌ನಲ್ಲಿ ಈ ಪ್ರೋಗ್ರಾಂ ಪ್ರಸಾರವಾಗಿದ್ದು ನಾನು ನೋಡಲಿಲ್ಲ ಎಂದು ಮೊದಲೇ ಹೇಳಿದ್ದೇನೆ. ಮೊದಲಸಲ ನಾನು ಕೇಳಿದ್ದೇ ನಮ್ಮ ಮನೆಯ ಕೆಲಸಕ್ಕೆ ಬರುತ್ತಿದ್ದ ಸರೋಜಳ ಮೂಲಕ. ಆಮೇಲೆ ನೋಡಿದರೆ ನಮ್ಮ ಫ್ಲ್ಯಾಟ್ ತುಂಬಾ ಇದೇ ಸುದ್ದಿ. ಏನೋ ಆಗುವುದಿದೆ.. ಅದು ನಾಳೆಯೇ ಘಟಿಸುತ್ತದೆ ಅನ್ನೋ ರೀತಿಯಲ್ಲಿ ಎಲ್ಲರೂ ಇದನ್ನೇ ಮಾತಾಡಿಕೊಳ್ಳುತ್ತಿದ್ದರು. "ಅಲ್ಲಾರೀ.. ಹೀಗಾದ್ರೆ ಹೇಗೆ? ಎಷ್ಟು ಕಷ್ಟ ಪಟ್ಟು ಮಗ್ನ "ಆ" ಸ್ಕೂಲ್‌ಗೆ ಒಂದೂವರೆ ಲಕ್ಷ ಕೊಟ್ಟು ಸೇರ್ಸಿದೀವಿ. ಅದೆಲ್ಲಾ ವೇಸ್ಟ್ ಆಗೊಲ್ವಾ? ಛೇ ಏನೂ ಬೇಡ ಅನ್ಸೊತ್ತೆ ಇದ್ನ ಕೇಳಿದ್ರೆ.." ಎಂದು ಒಬ್ಬರು ಅಂದ್ರೆ... "ನಾನಂತೂ ನನ್ನ ಮಗ್ಳ ಇಂಜಿನೀಯರಿಂಗ್ ಸೀಟ್‌ಗೆ ಡೊನೇಷನ್ ಒಟ್ಟು ಹಾಕಲ್ಲ ಇನ್ನು.. ಸುಮ್ನೇ ಒದ್ದಾಡಿ ಸಾಯೋಕಾ...!" ಅಂತ ಇನ್ನೊಬ್ರ ವರಾತ. "ಯೇ ಸಬ್ ಪ್ರಭೂಕಿ ಪ್ರಕೋಪ್ ಹೈ... ಅಗರ್ ಆಪ್ ಕಲ್ಕಿ ಭಗವಾನ್ ಕೋ ಪೂಜತೇ ಹೈಂ ತೋ ಕುಛ್ ನಹಿ ಹೋಗಾ.. ಆಜ ಸೇ ಹೀ ಕಲ್ಕಿ ಭಗವಾನ್ ಕೋ ಮಾನಿಯೇ,,"(="ಇದೆಲ್ಲಾ ದೇವರ ಕೋಪದಿಂದಾಗುತ್ತಿರುವುದು.. ನೀವು ಕಲ್ಕಿ ಭಗವಾನ್‌ರನ್ನು ಪೂಜಿಸಿ.. ಅವರನ್ನು ಪೂಜಿಸುವವರಿಗೆ ಎನೂ ಆಗೊಲ್ಲವಂತೆ... ಇವತ್ತಿನಿಂದಲೇ ಅವರ ಅನುಯಾಯಿಯಾಗಿ...") ಅಂತ ಮತ್ತೋರ್ವರ ಪುಕ್ಕಟೆ ಸಲಹೆ. ಈ ಕಲ್ಕಿ ಭಗವಾನ್‌ನ ಮಾಯೆಯ ಪ್ರಭಾವದ ಕುರಿತು ಈ ಮೊದಲೇ ಲೇಖನವೊಂದನ್ನು ಬರೆದಿದ್ದೆ. ಓದಿದ್ದರೆ ನಿಮಗೂ ಅನಿಸಬಹುದು ಈಗ "ಜೈ ಕಲ್ಕಿ ಭಗವಾನ್" ಎಂದು :) ಸಾವಿಗಂಜಿ ಬದುಕಲು ಹೆದರುವ ಮನುಷ್ಯರಿಗೆ ಏನೆನ್ನೋಣ? ಪ್ರಳಯಾಂತಕವೀ ಪ್ರಳಯದ ಆತಂಕ ಎಂದೆನಿಸಿತು!

ಪ್ರಳಯ ಅನ್ನೋದು ಎಂದೋ ಮುಂದಾಗುವಂತದ್ದಲ್ಲ. ಅದು ಆಗದೆಯೂ ಇರಬಹುದು. ಆಗಲೂ ಬಹುದು. ಆದಿ ಇದ್ದ ಮೇಲೆ ಅಂತ್ಯ ಇದ್ದೇ ಇದೆ ಎಂದು ನಂಬುವವಳು ನಾನು. ಆದರೆ ಆ ಅಂತ್ಯ ದಿಢೀರ್ ಎಂದು... ಇಂಥದ್ದೇ ದಿನವೆಂದು ಹೇಳಿದರೆ ಖಂಡಿತ ನಂಬಲಾಗದು. ಮುಂದಾಗುವ ದುರಂತದ ಸಣ್ಣ ಚಿತ್ರಣ ಇಂದೇ ಕೆಲವು ಕಡೆ ದೊರಕಿದೆ.. ದೊರಕುತ್ತಲೂ ಇದೆ... ಮುಂದೆಯೂ ಕಾಣಸಿಗುವುದು. ಮನುಷ್ಯ ತನ್ನ ಉಳಿವಿಗೆ ಹಾಗೂ ಅಳಿವಿಗೆ ತಾನೇ ಜವಾಬ್ದಾರ ಎಂದು ಮೊದಲು ತಿಳಿಯಬೇಕು. ಪ್ರಕೃತಿಯೊಡನೆ ಚೆಲ್ಲಾಟ ಪ್ರಾಣ ಸಂಕಟ ಎನ್ನು ಸತ್ಯ ಮನದಟ್ಟಾದರೆ ಇನ್ನೂ ಸ್ವಲ್ಪ ಕಾಲ ಈ ಕಲಿಯುಗ ಬಾಳಿಕೆಗೆ ಬರಬಹುದು. ಹುಟ್ಟು ಹೇಗೆ ಅನಿಶ್ಚಿತವೋ ಸಾವೂ ಹಾಗೆಯೇ... ಯಾರ ಸಾವನ್ನೂ ಯಾರೂ ಮೊದಲೇ ನಿಶ್ಚಯ ಮಾಡಲಾರರು. ಅದನ್ನು ಊಹಿಸಬಹುದಷ್ಟೇ! ಊಹೆ ಯಾವತ್ತೂ ಸತ್ಯವಲ್ಲ. ಅದಕ್ಕೆ ಅದರದ್ದೇ ಆದ ಅಸ್ತಿತ್ವವೂ ಇಲ್ಲ! ಪ್ರಳಯವೇ ಆಗಿರಲಿ..ಇಲ್ಲಾ ಇನ್ನಾವುದೇ ವಿಷಯವಾಗಿರಲಿ.. ಅದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯದೇ.. ಕೇವಲ ಕಪೋ ಕಲ್ಪಿತ ಸುದ್ದಿಯನ್ನು ನಂಬುವುದರ ಮೂಲಕ ನಾವು ನಮ್ಮ ಇಂದಿನ ಬಾಳ್ವೆಯನ್ನು ಮಾತ್ರ ನಾಶ ಮಾಡಿಕೊಳ್ಳುತ್ತೇವೆ. ಇದು ಮಾತ್ರ ಸತ್ಯ.

- ತೇಜಸ್ವಿನಿ ಹೆಗಡೆ.

ಗುರುವಾರ, ಅಕ್ಟೋಬರ್ 22, 2009

"ನಿಂತು ನೋಡುವ ಜನರೇ ನಿಮ್ಮ ಸರದಿ ದೂರವಿಲ್ಲ"

ನಾ ಮೆಚ್ಚಿದ ಕೃತಿ(ಒಳಗೊಂದು ಕಿರುನೋಟ)-೩

"ನಿಂತು ನೋಡುವ ಜನರೇ ನಿಮ್ಮ ಸರದಿ ದೂರವಿಲ್ಲ" - ಹೀಗೊಂದು ಎಚ್ಚರಿಕೆಯ ಜೊತೆಗೆ ಅನ್ಯಾಯ ಎಲ್ಲೇ ಆಗಲಿ ಅದನ್ನು ಹಿಮ್ಮೆಟ್ಟಿಸಲು ಸಂಘಟಿತ ಪ್ರತಿಭಟನೆಯೇ ಸರಿಯಾದ ಮದ್ದು ಎನ್ನುವ ಸುಂದರ ಸಂದೇಶವನ್ನೂ ನೀಡುವ ಅಪರೂಪದ ಕಾದಂಬರಿ "ಯಾದ್ ವಶೇಮ್". ಇತ್ತೀಚಿಗೆ ನಾನು ಓದಿದ ಕಾದಂಬರಿಗಳಲ್ಲೇ ಬಹು ಇಷ್ಟಪಟ್ಟ, ಸತ್ಯಕ್ಕೆ ಬಲು ಹತ್ತಿರವಾದ ಈ ಕೃತಿಯನ್ನು ಬರೆದವರು ಪ್ರಸಿದ್ಧ ಲೇಖಕಿ "ನೇಮಿಚಂದ್ರ".


೧೯೪೩ರ ಸುಮಾರಿಗೆ ಯುರೋಪಿನಿಂದ "ಹಿಟ್ಲರ್"ನ ಪಾಶವೀ ಹಿಡಿತದಿಂದ ಹೇಗೋ ಪಾರಾಗಿ ಶಾಂತಿದೂತನಾಗಿದ್ದ ಬಾಪೂಜಿಯ ನಾಡಿಗೆ ಓಡಿ ಬಂದ ಹ್ಯಾನಾಳ ಬದುಕಿನ ಕಥೆಯಿದು. ಆದರೆ ಮೇಲ್ನೋಟಕ್ಕೆ ಹಾಗೆನಿಸಿದರೂ ಇದು ಪ್ರತಿಯೊಬ್ಬನ ಬದುಕನ್ನೇ ಬಗೆದು ನೋಡುವ, ಆತನ ಎದೆಯಾಳದೊಳಗೆ ಬೇರೂರಿದ ದ್ವೇಷವನ್ನೇ ಅಲುಗಾಡಿಸುವ, ಪ್ರೀತಿಯ, ಶಾಂತಿಯ ಹೊಸ ಬೀಜ ಬಿತ್ತುವ...ಒಟ್ಟಿನಲ್ಲಿ ಬದುಕನ್ನು ಪ್ರೀತಿಸುವ ಹಾಗೆ ಪ್ರೀತಿಸಲು ಕಲಿಸುವ ಸುಂದರ ಕಥೆಯಿದು. ಇದರಲ್ಲಿ ಅಸಹನೀಯ ನೋವಿದೆ, ಯಾತನೆಯಿದೆ, ಪಾಪಪ್ರಜ್ಞೆಯಿದೆ, ಆಕ್ರೋಶವಿದೆ, ತಿರಸ್ಕಾರವಿದೆ, ಕೊನೆಯಿಲ್ಲದ ಪ್ರಶ್ನೆಗಳಿವೆ, ಸಿಕ್ಕು ಸಿಕ್ಕಾದ ಉತ್ತರಗಳಿವೆ...ಆದರೆ ಜೊತೆಜೊತೆಗೇ ಎಲ್ಲವುದಕ್ಕೂ ಕಾರಣ ನಾವೇ ಅಂದರೆ ಮನುಷ್ಯರೇ ಎನ್ನುವ ಸಮರ್ಪಕ ಉತ್ತರವೂ ಇದೆ.

ಅಂದು ನಾಜಿಗಳಿಂದಾಗುತ್ತಿದ್ದ ಅತ್ಯಾಚಾರಗಳಿಂದ ಮುಕ್ತಿಗೊಳಿಸಿರೆಂದು ಜಗತ್ತನ್ನೇ ಮೊರೆಯಿಟ್ಟಿದ್ದರು ಯಹೂದಿಯರು. ಅದರಲ್ಲೂ ವಿಶೇಷವಾಗಿ ಬ್ರಿಟಿಷರ ಸಹಾಯವನ್ನು ನಿರೀಕ್ಷಿಸಿದ್ದರೆಂದು ಈ ಪುಸ್ತಕವು ಹೇಳುತ್ತದೆ. ಆದರೆ ಸಕಾಲದಲ್ಲಿ ನೆರವು ಸಿಗದೇ, ಹಿಟ್ಲರನ ನರಮೇಧ ಕ್ಯಾಂಪ್‌ಗೆ ಸುಮಾರು ಆರು ಮಿಲಿಯ ಅಮಾಯಕ ಯಹೂದಿಯರು ಬಲಿಯಾಗುತ್ತಾರೆ. ಒಂದೇ ಉಸುರಿಗೆ ಅವರೆಲ್ಲರ ಪ್ರಾಣ ಹೋಗಿರುವುದಿಲ್ಲ. ಕ್ರಮೇಣ, ಹಂತ ಹಂತವಾಗಿ, ನಿಧಾನವಾಗಿ, ಅತ್ಯಂತ ಕ್ರೂರ ರೀತಿಯಲ್ಲಿ ಬದುಕನ್ನು ಇಷ್ಟಿಷ್ಟೇ ಎಂಬಂತೆ ಕಸಿದುಕೊಂಡಿದ್ದ ಆತ!! ಅಂತಹ ಒಂದು ದುರ್ದಿನಗಳಲ್ಲಿ ತಾಯಿ, ಅಕ್ಕ ಹಾಗೂ ತಮ್ಮನನ್ನು ನಾಜಿಗಳು ತನ್ನ ಕಣ್ಮುಂದೇ ಎಳೆದೊಯ್ದ ಕರಾಳ ನೆನಪನ್ನೇ ಹೊತ್ತು ಅಸಹಾಯಕತೆ ಬೆರೆತ ಕ್ರೋಧ, ನೋವು, ಅನಾಥಪ್ರಜ್ಞೆಯೊಂದಿಗೆ ತನ್ನ ತಂದೆಯೊಡಗೂಡಿ, ಅಹಿಂಸೆಯಿಂದ ಮಾತ್ರ ವಿಮೋಚನೆ ಸಾಧ್ಯವೆಂದು ಸಾರುತ್ತಿದ್ದ ಗಾಂಧಿಯ ನಾಡಿಗೆ ಬಂದವಳು ಹ್ಯಾನಾ. ಬ್ರಿಟಿಷರ ನೆರವನ್ನು ಆಶಿಸಿ ಸಿಗದೇ ಅವರಿಂದಲೇ ತುಳಿತಕ್ಕೊಳಗಾಗಿ ಹೋರಾಡುತ್ತಿದ್ದ ಭಾರತ ಅವಳಿಗೆ ಹೊಸ ಬದುಕನ್ನೇ ನೀಡಿತು. ಇಲ್ಲಿನ ಸಂಸ್ಕೃತಿ, ನೆಲ, ಜನ ಎಲ್ಲವೂ ಅವಳ ಕತ್ತಲು ತುಂಬಿದ್ದ ಮನಸಿಗೆ, ಬಾಳಿಗೆ ಬೆಳಕಾಗಿ ಬಂದವು. ತನ್ನ ಗತಕಾಲದ ನೆನಪಿನ ಕಡೆಯ ಕೊಂಡಿಯಾಗಿದ್ದ ತಂದೆಯನ್ನೂ ಕಳೆದುಕೊಂಡ ಮೇಲೆ ಹ್ಯಾನಾ "ಅನಿತಾ" ಆದಳು. ಆಶ್ರಯವಿತ್ತು ಆದರ ತೋರಿದ ಮನೆಯವರ ಮಗನನ್ನೇ ಮದುವೆ ಆಗಿ ತಾನು ಕನಸಲ್ಲೂ ಆಶಿಸದ ಸುಂದರ ಸುಭದ್ರ ಬದುಕನ್ನು ಪಡೆದಳು. ಅನಿತಾ ಎಂದು ಅನಿಸಿಕೊಂಡ ಮೇಲೂ ಹ್ಯಾನಾಳಾಗಿಯೇ ಅವಳು ಬದುಕಲು ಸಾಧ್ಯವಾಗಿದ್ದು ಆಕೆ ಇಲ್ಲಿ ಅಂದರೆ ಈ ನಾಡಿನಲ್ಲಿದ್ದುದರಿಂದ ಮಾತ್ರ ಎಂಬುದನ್ನು ಲೇಖಕಿ ಹಲವಾರು ಉದಾಹರಣೆಗಳ ಮೂಲಕ, ಘಟನಾವಳಿಗಳ ಮೂಲಕ ಮನಗಾಣಿಸಿದ್ದಾರೆ. ಅವೆಲ್ಲಾ ಬಲು ಸುಂದರವಾಗಿವೆ. ಮಾಸದ ನೆನಪನ್ನು ನಮ್ಮೊಳಗೂ ಮೂಡಿಸುತ್ತವೆ.

ಲೇಖಕಿಯೇ ಒಂದು ಕಡೆ ಹೇಳಿದಂತೆ, "ಮನುಷ್ಯನನ್ನು ಧರ್ಮದ ಹೆಸರಿನಲ್ಲಿ ಒಡೆಯುವ ಚರಿತ್ರೆಗಿಂತ ಒಂದುಗೂಡಿಸುವ ಚರಿತ್ರೆಯೇ ಮಹತ್ವದ್ದು..." - ಈ ಒಂದು ವಾಕ್ಯ ಅದೆಷ್ಟು ನಿತ್ಯ ಸತ್ಯ ಎನ್ನುವುದು ಈ ಕಾದಂಬರಿಯನ್ನೋದಿದಮೇಲೆ ಸರಿಯಾಗಿ ಮನದಟ್ಟಾಗುತ್ತದೆ. ಯಾವುದೋ ಪೂರ್ವಾಗ್ರಹಕ್ಕೀಡಾಗಿ, ಕೇವಲ ನೆಪವನ್ನು ಮಾತ್ರ ದ್ವೇಷಕ್ಕೆ ಕಾರಣವನ್ನಾಗಿಸಿಕೊಂಡು ಅಮಾಯಕ ಯಹೂದಿಗಳ ಮಾರಣಹೋಮ ಮಾಡಿದ ಹಿಟ್ಲರ್ ಹಾಗೂ ಆತನ ಸಂಗಡಿಗರಾದರೂ ನೆಮ್ಮದಿಯ ಬದುಕು ಕಂಡಿರಬಹುದೇ? ಖಂಡಿತ ಇಲ್ಲವೆನ್ನುತ್ತದೆ ಮನಸ್ಸು. "ಬದುಕಬಹುದು ಹಂಚಿಕೊಂಡು ಬದುಕಬಹುದೇ ಕಿತ್ತುಕೊಂಡು?" ಎಂದು ಹ್ಯಾನಾಳ ಮೂಲಕ ಪ್ರಶ್ನಿಸುವ ಲೇಖಕಿಯ ಈ ಒಂದು ಪ್ರಶ್ನೆಗೆ ಉತ್ತರವೂ ನಮ್ಮೊಳಗೇ ಅಡಗಿದೆ. ಹಿಟ್ಲರ್ ಅವನ ಜನಾಂಗಕ್ಕೆ ಸ್ವಾತಂತ್ರ್ಯ ಪಡೆದುಕೊಂಡದ್ದು ಇತರರ ಸ್ವಾತಂತ್ರ್ಯವನ್ನು ಹರಣಮಾಡುವುದರ ಮೂಲಕ. ಆದರೆ ನಾವು ಬಹು ಭಾಗ್ಯಶಾಲಿಗಳು. ನಮ್ಮ ಸ್ವಾತಂತ್ರ್ಯವನ್ನು ಕಸಿದಾಳುತ್ತಿದ್ದ ಬ್ರಿಟಿಷರನ್ನು ಅಹಿಂಸಾ ಮಾರ್ಗವನ್ನೇ ಪ್ರಮುಖವಾಗಿ ಅನುಸರಿಸಿ ಹೊರದಬ್ಬಿದೆವು. "ನಮ್ಮ ಸ್ವಾತಂತ್ರ್ಯ ಯಾರದೋ ಸ್ವಾತಂತ್ರ್ಯದ ಹರಣದ ಮೇಲೆ ನಿಂತಿಲ್ಲ" ಎನ್ನುವ ಸಮಾಧಾನವಾದರೂ ನಮ್ಮೊಂದಿಗಿದೆ.

ಬಿಟ್ಟು ಬಂದ ಆ ನೆಲದವಳಾಗಿಯೂ ಬಾಳದೇ, ಈಗಿರುವ, ಆಶ್ರಯಿಸಿದ ಈ ನೆಲವನ್ನೂ ಸೇರದೇ ಅನಾಥಪ್ರಜ್ಞೆಯಿಂದ ಬಳಲುವ ಅದೆಷ್ಟು ಹ್ಯಾನಾರನ್ನು ನಾವು ಅಫಘಾನಿಸ್ತಾನ, ಪಾಕಿಸ್ತಾನ, ಅಸ್ಸಾಂ, ಬಾಂಗ್ಲಾದೇಶ ಇತ್ಯಾದಿ ನಿರಾಶ್ರಿತರಲ್ಲಿ ಕಂಡಿಲ್ಲ?! ಇವರೆಲ್ಲಾ ಯಾರದೋ ಅಟ್ಟಹಾಸಕ್ಕೆ, ಅಂಹಕಾರಕ್ಕೆ, ಮೂರ್ಖತನದ ಪರಮಾವಧಿಗೆ ಬಲಿಯಾದವರು. ಏನೂ ತಪ್ಪನ್ನು ಮಾಡದೇ ತಮ್ಮವರಿಂದ, ಮನೆ, ಮಠದಿಂದ ವಂಚಿತರಾದವರು. ಅಂದು ಹಿಟ್ಲರ್‌ನ ಹುಚ್ಚುತನದ ಪರಮಾವಧಿಯನ್ನು ಇಡೀ ಜಗತ್ತೇ ನಿಂತು ನೋಡಿತ್ತು ನಿಜ.. ಆದರೆ ಇಂದು ಅದೆಷ್ಟೋ ಹಿಟ್ಲರ್‌ಗಳು ಅಸಂಖ್ಯಾತ ಅಮಾಯಕರ ನರವಧೆಯನ್ನು ಬಹು ಸುಲಭವಾಗಿ ಯಾವುದೇ ನಾಜಿ ಕ್ಯಾಂಪಿನ ಸಹಾಯವಿಲ್ಲದೆಯೇ ಮಾಡುತ್ತಿದ್ದಾರೆ.. ನಮ್ಮ ಕಣ್ಮುಂದೆಯೇ. ಇಂದೂ ನಾವು ಅಂದರೆ ಜಗತ್ತು ದೂರದಲ್ಲೆಲ್ಲೋ ನಡೆಯುವ ಈ ನರಮೇಧವನ್ನು ನಿಂತು ನೋಡುತ್ತಲೇ ಇದ್ದೇವೆ.!!! "ನಿಂತು ನೋಡುವ ಜನರೇ ನಿಮ್ಮ ಸರದಿ ದೂರವಿಲ್ಲ" ಎಂದು ಹ್ಯಾನಾ ಎಚ್ಚರಿಸುವ ಈ ಮಾತು ಕಾದಂಬರಿಯನ್ನೋದಿದ ಮೇಲೆಯೂ ಸದಾ ತಲೆಯೊಳಗೇ ಗುಂಯ್ಯ್ ಎನ್ನುತ್ತಿರುತ್ತದೆ. ಎಚ್ಚರಿಕೆಯ ಗಂಟೆಯನ್ನು ಅರಿತು ನಡೆದರೆ ನಮ್ಮ ಸರದಿಯನ್ನಾದರೂ ನಾವು ತಪ್ಪಿಸಿಕೊಳ್ಳಬಹುದೇನೋ ಎಂದೆನಿಸುತ್ತದೆ.

"ಟ್ರಾನ್ಸ್‌ಯುರೇನಿಕ್ಸ್" ಕಂಡು ಹಿಡಿದ ಜಗತ್ ಪ್ರಸಿದ್ಧ ಯಹೂದಿ ವಿಜ್ಞಾನಿ ಲೀ ಮೆಟ್ನರ್. ಈಕೆ ಕೂಡಾ ಹಿಟ್ಲರ್‌ನ ಹಿಡಿತದಿಂದ ಪಾರಾಗಲು ಪರದಾಡಿದವಳು. ಅಂದು ಯಹೂದಿಗಳಲ್ಲಿ ಕೆಲವರು ತಲೆಮರೆಸಿಕೊಂಡು ತಮ್ಮ ವ್ಯಕ್ತಿತ್ವವನ್ನೇ ನಶಿಸಿಕೊಂಡು ಬಾಳಿದರೆ ಅಸಂಖ್ಯಾತರು ಆತನ ಕ್ರೂರತ್ವಕ್ಕೆ, ಪಾಶವೀ ಕೃತ್ಯಕ್ಕೆ ಗುರಿಯಾಗಿ, ನಾಜಿ ಕ್ಯಾಂಪ್‌ಗಳಲ್ಲಿ ಸತತ ಅತ್ಯಾಚಾರಕ್ಕೆ ಒಳಗಾಗುತ್ತಾ ಬದುಕಿ ಬದುಕಿ ಸತ್ತವರು. ಎಷ್ಟು ಅಮಾನವೀಯವಾಗಿ ಪಶುವಂತೆ, ಮನುಷ್ಯರೆಂದೂ ಪರಿಗಣಿಸದೇ ಆತ ಯಹೂದಿಗಳನ್ನು ನಡೆಸಿಕೊಂಡನೆಂದು ಹ್ಯಾನಾಳ ಅಕ್ಕ ರೆಬೆಕ್ಕಳ ಕಥೆಯ ಮೂಲಕ ನಮಗೆ ತೋರಿಸುತ್ತಾರೆ ನೇಮಿಚಂದ್ರ. ಓದುವುದೇ ಅಷ್ಟು ಕಷ್ಟವೆನಿಸುವಾಗ ಅದು ಹೇಗೆ ಆ ಮುಗ್ಧರು ಸಹಿಸಿದರೋ!!!? ಆ ಭಗವಂತನ ಬಿಟ್ಟರೆ ಹಿಟ್ಲರ್ ಒಬ್ಬನಿಗೆ ತಿಳಿದರಬಹುದೇನೋ!!

ಹಿಂದೆ ಆಗಿದ್ದ ಅನ್ಯಾಯವನ್ನು ಮರೆತೋ ಇಲ್ಲಾ ಅಂದು ಆಗಿದ್ದ ಅನ್ಯಾಯದ ಸೇಡಿಗೋ ಎಂಬಂತೆ ಇಂದು ಯಹೂದಿಗಳ ರಾಷ್ಟ್ರ ಇಸ್ರೇಲ್ ವರ್ತಿಸುತ್ತಿರುವುದು ಈ ಕಾದಂಬರಿಯಲ್ಲಿ ನಿಚ್ಚಳವಾಗಿ ಕಾಣುತ್ತದೆ. ಒಡೆದು ಆಳುವ ನೀತಿಯನ್ನು ಅನುಸರಿಸುವ ಬ್ರಿಟಿಷರು, ೧೯೪೮ರಲ್ಲಿ ಯಹೂದಿಗಳಿಗಾಗಿಯೇ, ಅಂದು ಮುಸಲ್ಮಾನರು ಆಳುತ್ತಿದ್ದ ಪ್ಯಾಲಿಸ್ಟೈನ್ ಅನ್ನು ನೀಡುತ್ತಾರೆ. ಅಲ್ಲಿದ್ದ ಮುಸಲ್ಮಾನರನ್ನು ಹೊರಗಟ್ಟುವ ಯಹೂದಿಗಳು ಇಸ್ರೇಲ್ ಅನ್ನು ಸ್ಥಾಪಿಸುತ್ತಾರೆ. ಅಳಿದುಳಿದ ಪ್ಯಾಲಿಸ್ಟೈನ್‌ರು ತುಂಡು ನೆಲದಲ್ಲಿ ಅವರದೇ ರಾಷ್ಟ್ರದಿಂದ ಬೇರಾಗಿ ಜೀವಿಸುತ್ತಾರೆ. ಎಂತಹ ವಿಪರ್ಯಾಸ!!! ಹಿಂದೆ ಜರ್ಮನಿಯಲ್ಲಿ ನಡೆದ ಚರಿತ್ರೆಯನ್ನೇ ಮರೆತು ಇಂದು ಹೊಸ ಇತಿಹಾಸವನ್ನು ಬರೆದವರು ಇದೇ ಯಹೂದಿಗಳು. ಆದರೆ ಇದಕ್ಕೆಲ್ಲಾ ಕಾರಣವೇನು? ಯಾಕೆ ಇತಿಹಾಸ ಮತ್ತೆ ಮತ್ತೆ ಪುನರಾವರ್ತಿಸುತ್ತದೆ? "ಇತಿಹಾಸವನ್ನು ಮರೆತವರು ಮತ್ತೆ ಚರಿತ್ರೆಯ ಪುನಾರವರ್ತನೆಗೆ ಕಾರಣರಾಗುತ್ತಾರೆ.. ನೆನಪಿರಲಿ.. ನೆನಪಿರಲಿ.." ಎಂದು ಇಸ್ರೇಲಿನ "ಯಾದ್ ವಶೇಮ್" ಮ್ಯೂಸಿಯಂನ ಗರುಡಗಂಬದಲ್ಲಿ ಕೆತ್ತಿದ ಈ ಸಾಲು ಎಷ್ಟು ಪರಮಸತ್ಯವೆಂದು ಅನಿಸುತ್ತದೆ.

ತಮ್ಮ ಇತಿಹಾಸವನ್ನೇ ಮರೆತು ಇಸ್ರೇಲ್ ಈಗ ಸದಾ ಕಾಲ ಕದನದಲ್ಲೇ ತೊಡಗಿದೆ. ಶಾಂತಿಗಾಗಿ ಪರಿತಪಿಸಿದ ಅದೇ ಜನ ಇಂದು ಪ್ರತಿ ನಿಮಿಷವೂ ಯುದ್ಧದ ಭೀತಿಯಲ್ಲಿ, ಅಶಾಂತಿಯ ನಡುವೆಯೇ ಜೀವಿಸುತ್ತಿದ್ದಾರೆ. ಒಂದು ಕಡೆ ಲೇಖಕಿ ಹ್ಯಾನಾಳ ಮೂಲಕ ಹೀಗೆ ಕೇಳುತ್ತಾರೆ.... "ತುಂಡು ನೆಲ ಗಾಜಾವನ್ನು ಪ್ಯಾಲಿಸ್ಟೈನ್‌ರಿಗೇ ಬಿಟ್ಟುಕೊಟ್ಟು ಇಡಿಯ ಇಸ್ರೇಲ್ ಅನ್ನು ಶಾಂತಿಯಿಂದ ಜೀವಿಸಲು ಬಿಡಬಹುದಲ್ಲಾ" ಎಂದು. ಇದು ಹೌದು..ನಿಜ... ಎಂದೆನಿಸಿದರೂ ನನ್ನ ಮನದೊಳಗೊಂದು ಪ್ರಶ್ನೆ ಮೂಡುತ್ತದೆ. ಇಂದು ನಾವೂ ಅದೇ ಕೆಲಸವನ್ನು ಮಾಡಿಯೂ ಏಕೆ ಶಾಂತಿಯಿಂದ ಯಾವುದೇ ಭಯೋತ್ಪಾದನೆಯ ಭೀತಿಯಿಂದ ಜೀವಿಸುತ್ತಿಲ್ಲ? ಗಾಂಧಿಜಿ ಅಂದು ತೆಗೆದುಕೊಂಡ ನಿರ್ಧಾರ ಸರಿಯೆಂದೆಣಿಸಿದರೆ, ಪಾಕಿಸ್ತಾನದ ಹುಟ್ಟು ಚಿರ ಶಾಂತಿ, ಸ್ನೇಹದ ಬಾಂಧವ್ಯಕ್ಕಾಗಿಯೇ ಇತ್ತೆಂದು ಸಮರ್ಥಿಸಿಕೊಂಡರೆ, ಇಂದಿನ ಭಾರತದ/ಭಾರತೀಯರ ಸ್ಥಿತಿಯೇ ಪರಿಹಾಸಕ್ಕೆ ಒಳಗಾಗದೇ? ಕುಟಿಲ ನೀತಿಯ ಇಂಗ್ಲೀಷರೇನೋ ಇಬ್ಭಾಗ ಮಾಡಿದರು. ಸೌಹಾರ್ದತೆಯ ಸಂಕೇತವಾಗಿ ಭಾರತವೂ ಸುಮ್ಮನಾಯಿತು. ಆದರೆ ಅದೇ ತುಂಡು ನೆಲ ಪಡೆದುಕೊಂಡ ಪಾಕಿಸ್ತಾನ ಮಾಡಿದ್ದೇನು? ಮಾಡುತ್ತಿರುವುದೇನು? ಇಸ್ರೇಲ್ ಕೂಡಾ ಈ ಭೀತಿಯಿಂದಲೇ ಎಲ್ಲವನ್ನು ತನ್ನೊಳಗೇ ಎಳೆದುಕೊಳ್ಳಲು ಹೊರಟಿರಬಾರದೇಕೆ? ಭವಿಷ್ಯದ ಚಿಂತೆ ಭೂತದ ಕರಿ ನೆನಪನ್ನೇ ಅಳಿಸಿಹಾಕಿರ ಬಾರದೇಕೆ? "ಕಾಲದ ಕಡಲಲಿ ನೆನಪಿನ ದೋಣಿಯ ತೇಲಿಸಿದವರಿಲ್ಲ..." ಅಲ್ಲವೇ?

ಆದರೆ ಹ್ಯಾನಾಳ ಒಂದು ಮಾತಿಗೆ ನನ್ನ ಸಂಪೂರ್ಣ ಒಪ್ಪಿಗೆ ಇದೆ. "ಯುದ್ಧದಲ್ಲಿ ಸೋತವರು ಗೆದ್ದವರು ಎಂಬವರಿಲ್ಲ. ಇಲ್ಲಿ ಗೆದ್ದವರೂ ಸೋಲುತ್ತಾರೆ." ನಿಜ. ಪ್ರೀತಿ, ಸ್ನೇಹವೂ ಇದೇ ತರಹವೇ. ಇಲ್ಲಿಯೂ ಸೋಲು ಗೆಲುವೆಂಬುದಿಲ್ಲ. ಆದರೆ ಇಲ್ಲಿ ಮಾತ್ರ ಸೋತವರೂ ಗೆದ್ದಿರುತ್ತಾರೆ. ಸೋತರೂ ಗೆಲ್ಲುವ ಈ ಪ್ರೀತಿಯನ್ನು ಹೊರಹಾಕಿ ಗೆದ್ದರೂ ಸೋಲುವ ಯುದ್ಧವನ್ನು, ದ್ವೇಷವನ್ನು ಮನುಷ್ಯ ಏಕೆ ಅಪ್ಪಿಕೊಳ್ಳುತ್ತಾನೋ?

ಯುದ್ಧ ಹುಟ್ಟುವುದು ಕೆಲವು ನರರೂಪಿ ರಾಕ್ಷಸರ ಹೃದಯದಲ್ಲಿ ಎನ್ನುತ್ತಾಳೆ ಹ್ಯಾನಾ.. ಒಪ್ಪುವೆ. ಆದರೆ ನನ್ನ ಪ್ರಕಾರ ಇದಕ್ಕೆ ಪ್ರಮುಖ ಕಾರಣ ಮೂರು. ಅಹಂ, ಸ್ವಾರ್ಥದ ಪರಮಾವಧಿ ಹಾಗೂ ಕೊಳಕು ರಾಜಕೀಯ. ಹಿಟ್ಲರ್‌ನ ಹುಚ್ಚಿಗೂ ಆತನ ಪಾಶವೀ ಕೃತ್ಯಕ್ಕೂ ಇದೇ ಕಾರಣವೆನ್ನುತ್ತದೆ ಚರಿತ್ರೆ ಹಾಗೂ ಈ ಕಾದಂಬರಿ. ಜಗತ್ತು, ಆ ದೇಶದ ಜನರೂ, ಅಮಾಯಕ ಯಹೂದಿಯರ ಬಲಿಗೆ ಮೂಕ ಪ್ರೇಕ್ಷಕರಾಗಿರಲೂ ಈ "ಸ್ವಯಂ ಲಾಭ"ವೇ ಕಾರಣವೆನ್ನುತ್ತಾಳೆ ಹ್ಯಾನಾ. ಅದು ನಿಜ ಕೂಡ. ಶ್ರೀಮಂತ ಯಹೂದಿಗಳ ಪರ್ಯಾವಸಾನದಿಂದ ಅವರ ಹಣ, ಆಸ್ತಿ ಎಲ್ಲಾ ಸಿಗುವುದು ಯಾರಿಗೆ ಹೇಳಿ? ಈ ಒಂದು ಲಾಭಕೋರತನವೇ ಬಹುಶಃ ಅಂದು ಅಲ್ಲಿಯ ಆರ್ಯ ಜನರು ನಿಂತು ನೋಡಲು ಸಾಧ್ಯವಾಗಿದ್ದು. ತಮ್ಮ ಬುಡಕ್ಕೆ ಬಂದಾಗ, ಜಗತ್ತನ್ನೇ ಆಳುವ ಭ್ರಮೆಗೆ ಹಿಟ್ಲರ್ ಒಳಗಾದಾಗ ಅಮೇರಿಕಾ, ಬ್ರಿಟನ್ ಮುಂತಾದ ಬಲಿಷ್ಠರು ಎದುರು ನಿಂತಿದ್ದು. ಈ ಸರದಿಗಾಗಿ ಕಾಯುವ ಅಗತ್ಯವಿತ್ತೆ? ಆರು ಮಿಲಿಯ ಯಹೂದಿಗಳ ಅಂತ್ಯಕ್ಕೆ ತಾಳ್ಮೆಯ ಲೇಪನ ಬೇಕಿತ್ತೆ? ನರರೂಪಿ ರಾಕ್ಷಸರ ಅಟ್ಟಹಾಸಕ್ಕೆ ಮನುಷ್ಯತ್ವವನ್ನೇ ಕಳೆದುಕೊಂಡು ಲಾಭಕ್ಕಾಗಿ ಸುಮ್ಮನಿದ್ದ ಅಂದಿನ ಜರ್ಮನರನ್ನು ಇತಿಹಾಸ ಕ್ಷಮಿಸಿದರೂ ಅವರ ಅಂತರಾತ್ಮ ಕ್ಷಮಿಸಿರಬಹುದೇ? ಊಹೂಂ ಇಂತಹ ಪ್ರಶ್ನೆಗಳಿಗೆ ಉತ್ತರ ನಾವೇ ಕಂಡು ಹಿಡಿದುಕೊಳ್ಳಬೇಕಿದೆ.

ಮುಂದೆ ಎಂದೂ ಹಿಟ್ಲರ್ ನಮ್ಮೊಳಗೆ, ನಮ್ಮ ನಡುವೆ, ನಮ್ಮಿಂದ ದೂರವೇ ಆಗಿರಲಿ ಹುಟ್ಟದಿರುವಂತೆ ನೋಡಬೇಕು. ಆತನ ದಮನಕ್ಕೆ ನಮ್ಮ ಎದೆಯಗೂಡನ್ನೆ ಬಗೆದು ಅದರೊಳಗೆ ಬಿತ್ತಿರುವ ನೆಪಮಾತ್ರದ ದ್ವೇಷವನ್ನೇ ಕೆಡವಿಹಾಕಬೇಕು. ಹೊಸ "ಮಾಯಾದೀಪವನ್ನು" ಬೆಳಗಿದರೆ ಮಾತ್ರ ಸ್ವಾರ್ಥದ ಕತ್ತಲೆ ನಮ್ಮ ಮನದ ಮೂಲೆಯಿಂದಲೂ ಮರೆಯಾಗಬಹುದು. "ಇತಿಹಾಸ ತಿಳಿದರಬೇಕು ಅಷ್ಟೇ. ಆದರೆ ಅದೇ ಆದರ್ಶವಾಗಿರಬಾರದು" ಎಂಬ ಸುಂದರ ಸಂದೇಶವನ್ನು ನೀಡುವ ಈ ಕಾದಂಬರಿ ಇಸ್ಲಾಂ, ಯಹೂದಿ, ಕ್ರಿಶ್ಚನ್ - ಈ ಮೂರು ಧರ್ಮಗಳೂ ಹೇಗೆ ಒಂದು ಜೆರೂಸಲೇಂ‌ನೊಳಗೇ ಬೆಸೆದಿವೆ.. ಯಾವ ರೀತಿ ಈ ಮೂರು ಧರ್ಮಗಳು ಒಂದೇ ಹಳೆಯ ಒಡಂಬಡಿಕೆಯಡಿ ನೆಲೆನಿಂತಿವೆ ಎನ್ನು ಸತ್ಯವನ್ನೂ ಕಾಣಿಸುತ್ತದೆ. ಈವರೆಗೆ ನಾವು ಓದಿದರದ, ತಿಳಿದಿರದ ಹಲವಾರು ವಿಷಯಗಳ ಕುರಿತು, ನಿಷ್ಪಕ್ಷ್ಯಪಾತವಾಗಿ ಹೊಸ ಬೆಳಕನ್ನು, ಆಯಾಮವನ್ನು ನೀಡಿದ್ದಾರೆ ಲೇಖಕಿ.

"ನಮ್ಮ ನಡುವೆ ಎಲ್ಲಿ ಕೂಡ ಹುಟ್ಟಿಬಿಡಬಲ್ಲ, ನಮ್ಮೊಳಗೇ ಜನಿಸಿಬಿಡಬಲ್ಲ ಹಿಟ್ಲರ್‌ನನ್ನು ತಡೆಹಿಡಿವ ಹೊಣೆ ನಮ್ಮದು" ಎನ್ನುವ ಸುಂದರ, ಅಪೂರ್ವ ಸಂದೇಶವನ್ನು ನೀಡುವ "ಯಾದ್ ವಶೇಮ್" ಎಲ್ಲರೂ ಓದಬೇಕಾದ, ಸಂಗ್ರಹಕ್ಕೆ ಯೋಗ್ಯವಾದ ಅತ್ಯುತ್ತಮ ಪುಸ್ತಕ ಎನ್ನಲು ಯಾವುದೇ ಸಂಶಯವಿಲ್ಲ.

- ತೇಜಸ್ವಿನಿ ಹೆಗಡೆ