ಶನಿವಾರ, ಆಗಸ್ಟ್ 3, 2013

ಶ್ರೀಯುತ ಟಿ.ಎನ್.ಎಸ್ ಅವರಲ್ಲೊಂದು ವಿನಮ್ರ ವಿನಂತಿ.

ಗೌರವಾನ್ವಿತ, ಆದರಣೀಯ ಶ್ರೀಯುತ ಟಿ.ಎನ್.ಸೀತಾರಾಮ್ ಅವರಿಗೆ,

ನನ್ನ ಹೆಸರು ತೇಜಸ್ವಿನಿ ಹೆಗಡೆ. ಮೊದಲಿನಿಂದಲೂ ನಿಮ್ಮ ಎಲ್ಲಾ ಧಾರಾವಾಹಿಗಳನ್ನೂ ತಪ್ಪದೇ ವೀಕ್ಷಿಸುತ್ತಾ ಬಂದವಳು ನಾನು. ನನ್ನ ಅಚ್ಚುಮೆಚ್ಚಿನ ಧಾರಾವಾಹಿಗಳೆಲ್ಲಾ ತಮ್ಮ ನಿರ್ದೇಶನದ್ದೇ ಎಂದರೆ ಅದರಲ್ಲೇನೂ ಉತ್ಪ್ರೇಕ್ಷೆಯಿಲ್ಲ. ನೀವು ಪಾತ್ರ ಚಿತ್ರಣವನ್ನು ಮನಸ್ಸಿಗೆ ನಾಟುವಂತೆ ಕಟ್ಟಿಕೊಡುವ ರೀತಿ.. ಅವುಗಳನ್ನು ಬೆಳೆಸುವ ರೀತಿ, ಸಂಭಾಷಣೆಗಳಲ್ಲಿನ ಚುರುಕುತನ, ನವೀನತೆ  ಅಷ್ಟೇ ಅಲ್ಲಾ ನಿಮ್ಮ ಧಾರಾವಾಹಿಗಳಲ್ಲಿ ಅಭಿನಯಿಸುವ ನಟ/ನಟಿಯರಿಂದ ನೀವು ಹೊರಹೊಮ್ಮಿಸುವ ನಟನಾಸಾಮರ್ಥ್ಯ, ಎಲ್ಲಕ್ಕಿಂತ ಮುಖ್ಯವಾಗಿ ಶೀರ್ಷಿಕೆ ಗೀತೆಗಳೊಳಗಿನ ಮಾಧುರ್ಯ, ಅರ್ಥವತ್ತಾದ ಸಾಹಿತ್ಯ... ಎಲ್ಲವೂ ನನಗೆ ಬಲು ಮೆಚ್ಚು. ಮನಃಪೂರ್ವಕವಾಗಿ ನಾನು ನಿಮ್ಮ ನಿರ್ದೇಶನದ ಧಾರಾವಾಹಿಗಳನ್ನು ಹೊಗಳಿದ್ದೇನೆ... ಮೆಚ್ಚಿದ್ದೇನೆ.
courtesy : http://www.in.com

ಆದರೆ...... ಅದ್ಯಾಕೋ ಎಂತೋ "ಮಹಾಪರ್ವ" ಧಾರಾವಾಹಿಯಲ್ಲಿನ "ಮಂದಾಕಿನಿ" ಪಾತ್ರ ಮಾತ್ರ ಯಾಕೋ ಸರಿಯಾದ ಸಂದೇಶವನ್ನು ಸಮಾಜಕ್ಕೆ, ಅಂಗವಿಕಲರಿಗೆ ನೀಡುತ್ತಿಲ್ಲ ಎನ್ನುವ ಮನದಾಳದ ಅನಿಸಿಕೆ ನನ್ನದು. ನಾನೂ ಓರ್ವ ಹುಟ್ಟಾ ಅಂಗವಿಕಲೆಯಾಗಿದ್ದು, ವ್ಹೀಲ್ ಚೇರ್ ಉಪಯೋಗಿಸುತ್ತಿರುವ.. ಅದಿಲ್ಲದೇ ಹೊರ/ಹೊಳ ಜಗತ್ತನ್ನು ಸಂಚರಿಸಲಾಗದ, ಆದರೆ ಅದೊಂದು ಬಿಟ್ಟರೆ ಮಿಕ್ಕೆಲ್ಲಾ ವಿಷಯಗಳಲ್ಲೂ ಇತರ ಸಾಮಾನ್ಯರಂತೇ ಬದುಕನ್ನು  ಸಂಪೂರ್ಣವಾಗಿ ಆಸ್ವಾದಿಸುತ್ತಿರುವ ವ್ಯಕ್ತಿ. ಆರು ವರುಷದ ಮಗಳ ತಾಯಿ. ಹಾಗಾಗಿ ವ್ಹೀಲ್‌ಚೇರ್ ಬೌಂಡೆಡ್ ವ್ಯಕ್ತಿಗಳ ಸಮಸ್ಯೆ, ಅವರ ಹೋರಾಟ, ಅವರ ಸವಾಲುಗಳು ಹೇಗೆ ಚೆನ್ನಾಗಿ ಗೊತ್ತೋ ಹಾಗೇ ಅವರಿಂದ ಎಲ್ಲಾ ರೀತಿಯ ಮನೆಗೆಲಸಗಳು, ಉನ್ನತ ವಿದ್ಯಾಭ್ಯಾಸಗಳು, ಹೊರ-ಒಳ ಜಗತ್ತಿನ ಕೆಲಸಕಾರ್ಯಗಳು "ಮನಸ್ಸು ಇದ್ದರೆ.. ಸದೃಢವಾಗಿದ್ದರೆ" ಸಾಧ್ಯ ಅನ್ನೋದನ್ನು ನಂಬಿದವಳು.. ಅಂತೆಯೇ ನಡೆದವಳು.. ಇನ್ನೂ ನಡೆಯುತ್ತಿರುವವಳು. ಬಟ್ಟೆ, ಪಾತ್ರೆ, ಅಡುಗೆ, ಮನೆಯವರ ಬೇಕು ಬೇಡಗಳು, ಎಲ್ಲಾ ಕೆಲಸಗಳನ್ನು ಚೆನ್ನಾಗಿ ನಿರ್ವಹಿಸಿದವಳು.. ಈಗಲೂ ನಿರ್ವಹಿಸುತ್ತಿರುವವಳು. ಇದನ್ನೆಲ್ಲಾ ನಾನು ನನ್ನ ಮೆರೆಸುಲೋಸುಗ ಖಂಡಿತ ಹೇಳುತ್ತಿಲ್ಲ. ನನಗೆ ಯಾರ ಅನುಕಂಪ ಅಥವಾ ಅತಿ ಹೊಗಳಿಕೆಯಂತೂ ಖಂಡಿತ ಬೇಕಾಗಿಲ್ಲ. 

ಮೊದಲಿನಿಂದಲೂ ನನಗೆ ಸರಿ ಕಾಣದ್ದು ಮಂದಾಕಿನ ಪಾತ್ರ ಚಿತ್ರಣ. ಓರ್ವ ಅಂಗವೈಕಲ್ಯವುಂಟಾದ ವ್ಯಕ್ತಿಯ ಚಿತ್ರಣ ನಿಮ್ಮಿಂದ ಯಾವ ರೀತಿ ಬರುವುದೆಂದು ಬಹು ಉತ್ಸುಕಳಾಗಿದ್ದೆ ಮೊದಮೊದಲು. ಆದರೆ ಕ್ರಮೇಣ ಅಸಹನೆ ತುಂಬತೊಡಗಿತು. ಮಂದಾಕಿನಿ ಸದಾ ನಿಸ್ಸಾಯಕಳಾಅಗಿ ಕೂತಿರೋದು.... "ನನ್ನಿಂದಂತೂ ಯಾವ ಕೆಲಸವೂ ಮಾಡಿಕೊಡಾಲು ಆಗುತ್ತಿಲ್ಲ...." ಅನ್ನೋ ಮಾತನ್ನೇ ಪದೇ ಪದೇ ಆಗಾಗ ಹೇಳುವುದು... ಅಲ್ಲದೇ, ಅದರಲ್ಲೂ ನಿನ್ನೆಯ ಅಂದರೆ ೦೨-೦೮-೨೦೧೩ ಶುಕ್ರವಾರದ ಕಂತಿನಲ್ಲಿ ಒಂದು ತಪ್ಪು ಸಂದೇಶವನ್ನು ಸಾರುವ ಮಾತನ್ನು ಅವಳ ಸ್ವಂತ ಮಗಳಾದ, ಅತೀವ ಸೂಕ್ಷ್ಮ ಮನಸ್ಸಿನ ಪರಿಣಿತಳ ಬಾಯಿಯಿಂದಲೇ ಹೇಳಿಸಿದ್ದು ಮಾತ್ರ ಒಪ್ಪಿಕೊಳ್ಳಲೇ ಆಗಲಿಲ್ಲ.

"ನೀನು ಯಾವಾಗಲೂ ವ್ಹೀಲ್‌ಚೇರನಲ್ಲೇ ಕೂತಿರ್ತಿಯಲ್ಲಾ.. ಅದ್ಕೇ ನಿಂಗೇ ಅಂತ ಮಾಯಾಮೃಗ ಸಿ.ಡಿ. ತಂದಿದ್ದೀನಿ.." ಅಂತ ಮಗಳು ತಾಯಲ್ಲಿ ಹೇಳಿದ್ದು ನೋಡಿ ಮೊದಲು ಸಿಟ್ಟು ಬಂದರೂ ಮರುಕ್ಷಣ ನಗುವೂ ಬಂತು. ಇಲ್ಲಿ "ನೀನು ಸದಾ ವ್ಹೀಲ್‍ಚೇರ್‌ನಲ್ಲೇ ಕೂತಿರ್ತೀಯಲ್ಲಾ ಅದ್ಕೇ ತಂದೇ" ಅನ್ನೋ ಒಂದು ಪುಟ್ಟ ವಾಕ್ಯದ ಅವಶ್ಯಕತೆ ಇರಲಿಲ್ಲ. ನಿಜ, ಸಾಮಾನ್ಯವಾಗಿ ಸಮಾಜದ, ಜನರ ಎಲ್ಲರ ವಿಚಾರಧಾರೆಯೂ ಇದೇ ಆಗಿದೆ. ಸಮಾಜ ಅಂಗವಿಕಲರು, ವ್ಹೀಲ್‌ಚೇರ್‌ನಲ್ಲಿ ಇರುವವರ ಪ್ರತಿ ಅಪಾರ, ಅನವಶ್ಯಕ ಅನುಕಂಪವನ್ನಷ್ಟೇ ತೋರುತ್ತಿರುತ್ತದೆ. ಅವರಿಂದ ಏನೇನು ಸಾಧ್ಯ ಅನ್ನೋದನ್ನು ಯೋಚಿಸುವುದು ತೀರಾ ಕಡಿಮೆ ಜನ. ಇಲ್ಲಿಯೂ ಅದೇ ಆಗುತ್ತಿರುವುದು. ಮಂದಾಕಿನ ವ್ಹೀಲ್‌ಚೇರ್‌ನಲ್ಲೇ ಕುಳಿತು ಎಷ್ಟೆಲ್ಲಾ ಕೆಲಗಳನ್ನು ಮಾಡಬಹುದು ಯೋಚಿಸಿ? ತರಕಾರಿ ಹೆಚ್ಚೋದು, ಅಡಿಗೆ ಮಾಡೋಡು (ಅಡಿಗೆ ಕಟ್ಟೆಯನ್ನು ತುಸು ತಗ್ಗಿಸಿ.. ಕುಳಿತಲ್ಲೇ...) ಪುಸ್ತಕ ಓದುವ ಹವ್ಯಾಸವಿರೋದನ್ನು ಹೇಳಿದ್ದೀರಿ.. ಬರೆಯೋದು, ಅದರಲ್ಲೇ ಪ್ರಗತಿ ಸಾಧಿಸೋದು... ಗಿಡಗಳಿಗೆ ನೀರುಣಿಸೋದು... ಎಲ್ಲವೂ ಸಾಧ್ಯ. ಹೀಗಿರೋವಾಗ ಅದರಲ್ಲೇ ಕುಳಿತು ಬೋರಾಗೊತ್ತೆ ಹಾಗಾಗಿ ಸಿ.ಡಿ. ಅಂತ ಮಗಳು ಅನ್ನೋದು.. ನನ್ನಿಂದ ಎನೂ ಆಗೊಲ್ಲಾ ಅನ್ನೋ ರೀತಿಯ ಮಾತುಗಳನ್ನು ಮಂದಾಕಿನಿ ಆಡೋದು ತುಂಬಾ ಅಸಹನೆ ತುಂಬುತ್ತದೆ. ಇದು ಇತರೆಲ್ಲಾ ನೋಡುಗರಿಗೆ ಏನೂ ಅನ್ನಿಸದೇ ಇರಬಹುದು.. ಸಾಮಾನ್ಯದಲ್ಲಿ ಸಾಮಾನ್ಯವೆಂದೇ ಹೇಳಬಹುದು ಆದರೆ ಇದರಿಂದ ಸಮಾಜಕ್ಕೆ, ಅಂಗವಿಕಲರಿಗೆ ತಪ್ಪು ಸಂದೇಶ ಹೋಗುವುದು ಎನ್ನುವುದು ನನ್ನ ಅಭಿಪ್ರಾಯ.

ನಿಮ್ಮ ಧಾರಾವಾಹಿ ಎಂದರೆ ಅದಕ್ಕೆ ಅಪಾರ ಪ್ರೇಕ್ಷಕ ವರ್ಗವಿದೆ. ನಿರೀಕ್ಷೆಗಳಿವೆ. ಮೆಚ್ಚುಗೆ ಇದೆ. ಅಭಿಮಾನಿಗಳಿದ್ದಾರೆ (ನನ್ನನ್ನೂ ಸೇರಿಸಿ). ಹೀಗಿರುವಾಗ ಅಂಗವಿಕಲರೆಂದರೆ ನಿಸ್ಸಹಾಯಕರು, ಕೆಲಸ ಮಾಡಲಾಗದವರು.. ಕುಳಿತಲ್ಲೇ ಕುಳಿತು ಬೋರ್ ಹೊಡಿಯುತ್ತಿರುವವರೆಂದು ಜನಸಾಮಾನ್ಯರಿಗೂ... ಅಂತೆಯೇ "ನನ್ನಿಂದ ಏನೂ ಆಗೊಲ್ಲಾ ನಿಜ.. ನನಗೆ ಎಲ್ಲವುದಕ್ಕೂ ಇತರರ ಸಹಾಯ ಅನಿವಾರ್ಯ... ಛೇ.." ಅನ್ನೋ ಸ್ವ-ಅನುಕಂಪ ಪಡೋ ಅಂಗವಿಕಲರಿಗೆ ಪುಷ್ಟಿಕೊಡೋ ರೀತಿ ಇದೆ ಎಂದೆನಿಸಿತು. (ನನಗೆ ಖಂಡಿತ ಅನುಕಂಪ ಮೂಡಿದ್ದು ಹೌದು.. ನನ್ನ ಮೇಲೆ ಅಲ್ಲವೇ ಅಲ್ಲಾ.. ಈ ಆಲೋಚನೆಯ ಮೇಲಷ್ಟೇ.).

ನಿಮ್ಮ ಧಾರಾವಾಹಿಗಳ ಕಟ್ಟಾ ಅಭಿಮಾನಿಯಾಗಿ, ಅಂಗವಿಕಲರ ಸಹಚಾರಿಣಿಯಾಗಿ.... ಮಹಾಪರ್ವವನ್ನು ತಪ್ಪದೇ ವೀಕ್ಷಿಸುತ್ತಿರುವ ಓರ್ವ ವೀಕ್ಷಗಳಾಗಿ, ದಯವಿಟ್ಟು ಇನ್ನಾದರೂ "ಅಂಗವೈಕಲ್ಯತೆ"ಯನ್ನು ಪ್ರೊಜೆಕ್ಟ್ ಮಾಡುತ್ತಿರುವ ಈ ರೀತಿಯ ಋಣಾತ್ಮಕ ಚಿತ್ರಣವನ್ನು ಬಿಟ್ಟು, ಧನಾತ್ಮಕತೆಯನ್ನು ಹೆಚ್ಚು ಕಾಣಿಸುವ ಚಿತ್ರಣ ಮೂಡಿಬರಲೆಂದು ವಿನಮ್ರವಾಗಿ ವಿನಂತಿಸುತ್ತಿದ್ದೇನೆ. ನೀವು ಆ ಪಾತ್ರವನ್ನು ಅಸಾಮಾನ್ಯಳಂತೇ ಬಿಂಬಿಸಬೇಕೆಂದು ಖಂಡಿತ ಕೇಳುತ್ತಿಲ್ಲ.... ಅತಿ ಯಾವತ್ತೂ ಸಲ್ಲ ಕೂಡ. ಸಾಮಾನ್ಯವನ್ನೇ ತೋರಿಸಿ.. ಏನೆಲ್ಲಾ ಸಾಮಾನ್ಯ, ಸಹಜ, ಸಾಧ್ಯವೆನ್ನುವುದನ್ನಷ್ಟೇ ತೋರಿಸಿ.... ಸಾಮಾನ್ಯರಿಗೆ, ನನ್ನಂಥಹ ಇತರರಿಗೆ. ಆದರೆ ಅಸಹಾಯಕತೆಯ, ಅನುಕಂಪದ ನೆರಳೂ ಸೋಕದಿರಲಿ. ನಿಮ್ಮಂತ ಉತ್ತಮ ನಿರ್ದೇಶಕರು, ಸಹೃದಯ ವ್ಯಕ್ತಿಗಳು ನನ್ನ ಮಾತಿನೊಳಗಿರುವ ನೈಜ ಕಾಳಜಿ, ವಿನಂತಿ, ಕಳಕಳಿಯನ್ನು ಯಾವುದೇ/ಯಾರದೇ ತಪ್ಪು ಗ್ರಹಿಕೆಗೆ ಎಡೆಗೊಡದೇ ತಿಳಿದುಕೊಳ್ಳುತ್ತೀರೆಂದು ನಂಬಿದ್ದೇನೆ.... ಹಾಗೇ ಆಶಿಸುತ್ತೇನೆ. :)

ವಂದನೆಗಳು.

ಆದರಾಭಿಮಾನಗಳೊಂದಿಗೆ,
ತೇಜಸ್ವಿನಿ ರಾಮಕೃಷ್ಣ ಹೆಗಡೆ.

ಸೋಮವಾರ, ಜುಲೈ 22, 2013

ಬಿಚ್ಚಿಡುವೆ ಓ ಗುರುವೆ ಅಂತರಾತ್ಮ....

ಗುರು ನೆನೆಯುವ ನಾ ನಿನ್ನ ನಾಮ
ಇರಲೆನ್ನ ಮೇಲೆ ನಿನ್ನ ಪ್ರೇಮ 

ಬಾಲ್ಯದಲ್ಲಿ ನನ್ನನ್ನು ಹುರಿದುಂಬಿಸಿ... ಸ್ಟೇಜ್ ಹತ್ತಿಸಿ, ಎಲ್ಲರಂತೇ ಎಲ್ಲಾ  ಚಟುವಟಿಕೆಗಳಲ್ಲೂ ಭಾಗವಹಿಸುವಂತೇ ಪ್ರೇರೇಪಿಸಿದ... ಈಕೆ ನರ್ತಿಸಬಲ್ಲಳೇ? ಎಂದು ಅನುಮಾನಿಸಿ ಹಿಂದೇಟು ಹಾಕಿದ ಗುರುಗಳಿಗೂ ಗುರುವಾಗಿ ನಿಂತು ಸ್ವತಃ ತಾನೇ ಹಾಡು ಕಟ್ಟಿ, ಸಂಗೀತ ಸಂಯೋಜಿಸಿ ನನಗೆ ಬೇಕಾದ ರೀತಿಯಲ್ಲೇ, ಕುಳಿತಲ್ಲೇ ಹೇಗೆ ಕೇವಲ ಕೈಗಳನ್ನಷ್ಟೇ ಉಪಯೋಗಿಸಿಯೂ, ಹಾವ ಭಾವಗಳ ಮೂಲಕವೂ ನೃತ್ಯವನ್ನು ಅಭಿವ್ಯಕ್ತಿಸಬಹುದೆಂದು ಎಲ್ಲರಿಗೂ (ನನಗೂ) ತೋರಿಸಿಕೊಟ್ಟ ನನ್ನ ಮೊತ್ತ ಮೊದಲ ಗುರು "ತಾಯಿ"ಗೆ (ಶ್ರೀಮತಿ ಜಯಲಕ್ಷ್ಮೀ ಭಟ್)....

Appa, Ammana naduve... :)
ನನ್ನೊಳಗೇ ಹುದುಗಿ ಅಲ್ಲೇ ಮಣ್ಣಾಗಬಹುದಿದ್ದ ಎಲ್ಲಾ ರೀತಿಯ ಪ್ರತಿಭೆಗಳನ್ನೂ ಆಯ್ದು ಹೊರ ತೆಗೆದು... ಅದಕ್ಕೆ ಸರಿಯಾದ ರೂಪು ರೇಶೆ ಕೊಡುತ್ತಾ..... ಮುಂದೆ ವಿಜ್ಞಾನ ನನ್ನ ಇಚ್ಛೆಯ ವಿಷಯವೆಂದು ಹೇಳಿದಾಗ, ಅಲ್ಲೂ ಅಷ್ಟೇ ಇವಳಿಂದ ವಿಜ್ಞಾನ ಹಾಗೂ ಅಲ್ಲಿ ಒದಗುವ ಪ್ರಾಕ್ಟಿಕಲ್ಸ್‌ಗಳನ್ನು ಮಾಡೋದು ಬಲು ಕಷ್ಟ ಎಂದವರಿಗೆಲ್ಲಾ ಸಹೃದಯ ಗುರುವಾಗಿ ಮಾದರಿಯನ್ನು ತೋರಿ, ನಾನು ಅತ್ಯುತ್ತಮ ಅಂಕದಿಂದ ಮೇಲೇರಲು ಕಾರಣರಾದ, ಸ್ವತಃ ಓರ್ವ ಯಶಸ್ವಿ, ಮಾದರಿ ಹಾಗೂ ಜನಪ್ರಿಯ ಪ್ರಾಧ್ಯಾಪಕರಾಗಿದ್ದು, ನಮಗೂ ಅತ್ಯುತ್ತಮ ಬದುಕಿನ ಪಾಠವನ್ನು ಬೋಧಿಸಿದ ನನ್ನ ಎರಡನೆಯ ಗುರು ನನ್ನ "ತಂದೆ"ಗೆ (ಡಾ.ಜಿ.ಎನ್.ಭಟ್)......  


ಒಂದನೆ ತರೆಗತಿಯಲ್ಲಿ ನನ್ನನ್ನು ಬಲುವಾಗಿ ಪ್ರೀತಿಸಿ ಎಲ್ಲವನ್ನೂ ಅರಿತು ಪ್ರೋತ್ಸಾಹಿಸಿ ನನ್ನ ತಾಯಿಗೆ ಬೆಂಬಲವಾಗಿ ನಿಂತ ನನ್ನ ಕ್ಲಾಸ್ ಟೀಚರ್ ಶ್ರೀಮತಿ "ಲಿಂಗು ಟೀಚರ್"ಗೆ,

ಹೈಸ್ಕೂಲ್‌ನಲ್ಲಿ ಎಲ್ಲೋ ಗೀಚಿ ಅಪ್ಪನಿಗಷ್ಟೇ ತೋರಿಸಿ ಸುಮ್ಮನಾಗಿದ್ದ ನನ್ನ ಕವಿತೆಗಳನ್ನೆಲ್ಲಾ ಹೊರತೆಗೆದು ಓದಿ ತಿದ್ದಿ, ಹತ್ತನೆಯ ತರಗತಿಯಲ್ಲೇ ಮೊದಲ ಕವನಸಂಕಲನ ಪ್ರಕಟಿಸುವಂತೇ ಪ್ರೋತ್ಸಾಹಿಸಿ ಪ್ರೀತಿಯಿಂದ ಮುನ್ನುಡಿಯನ್ನೂ ಬರೆದ ನನ್ನ ಕನ್ನಡ ಪ್ರಾಧ್ಯಾಪಕರೂ ಅತ್ಯುತ್ತಮ ಲೇಖಕರೂ ಆಗಿರುವ ಶ್ರೀಯುತ "ಸುಮುಖಾನಂದ ಜಲವಳ್ಳಿ"ಯವರಿಗೆ....

ಕಾಲೇಜಿನಲ್ಲಿ ಕೆಮಿಸ್ಟ್ರಿ ಎಂದರೆ ಯಾಕಿಷ್ಟು ಮಿಸ್ಟ್ರಿಯಪ್ಪಾ ಎಂದು ತಲೆಬಿಸಿಮಾಡಿಕೊಂಡಾಗ, ಫಾರ್ಮುಲಾಗಳೆಲ್ಲಾ ಹೇಗೆ ಬದುಕೊಳಗೆ ಹಾಸುಹೊಕ್ಕಾಗಿವೆ ಎಂದು ಸರಳವಾಗಿ, ಸುಲಭವಾಗಿ ನನಗೆ ಪರಿಚಯಿಸಿ ಮುಂದೆ ಅದೇ ನನ್ನ ಅಚ್ಚುಮೆಚ್ಚಿನ ವಿಷಯವಾಗಲು ಕಾರಣರಾದ ಶ್ರೀಯುತ ಪ್ರೊಫೆಸರ್ "ಡಾ. ಬಿ.ಎಸ್.ಮೂಡಿತ್ತಾಯ" ಅವರಿಗೆ....

ಬದುಕು ಹೇಗೆ? ಎನು? ಎತ್ತ? ನಾನೆಷ್ಟು ನಿಮಿತ್ತ? ತಿಳಿದಷ್ಟೂ ತಿಳಿಯಲು ಸಾಕಷ್ಟಿದೆ.... ಪ್ರತಿ ದಿವಸವೂ ವಿನೂತನವೇ.... ನಗು ನಗುತ್ತಾ ಸಮಸ್ಯೆಯನ್ನು ಒಮ್ಮೆ ಎದುರಿಸತೊಡಗಿದರೆ ಅದೂ ನಮ್ಮನ್ನು ಮುಂದೆ ಬಿಟ್ಟು ಹಿಂಬಾಲಕನಾಗುತ್ತದೆ ಎನ್ನುವ ಸತ್ಯದರ್ಶನ ಮಾಡಿಸಿದ- ಗೀತೆಯ ಕೃಷ್ಣ, ರಾಮಕೃಷ್ಣ ಪರಮಹಂಸರು, ಶಂಕರಾಚಾರ್ಯರು - ಇಂತಹ ಪರಮಗುರುಗಳ ಪದತಲಕ್ಕೆ.....

ಹತ್ತು ಹಲವು ರೀತಿಯಲ್ಲಿ ನನಗೆ ಮಾದರಿಯಾದ, ಅನುಭವ ಕಲಿಸಿದ, ಪಕ್ವವಾಗುವ ಪ್ರಕ್ರಿಯೆಯಲ್ಲಿ ಸಹಕರಿಸಿದ ಎಲ್ಲಾ ಸ್ನೇಹಿತವರ್ಗಕ್ಕೆ, ಆತ್ಮೀಯರಿಗೆ... -

ಇವರೆಲ್ಲರಿಗೂ ಗುರು ಪೂರ್ಣಿಮೆಯ ಸಹಸ್ರ ನಮನಗಳು.
ಮನಃಪೂರ್ವಕವಾಗಿ ಎದೆದುಂಬಿ ತಲೆಬಾಗುವೆ.

-ತೇಜಸ್ವಿನಿ ಹೆಗಡೆ.