ಗುರುವಾರ, ಜುಲೈ 14, 2011

ಇಳಿಸಂಜೆಯ ಕನವರಿಕೆ

ಮುಚ್ಚಿರುವ ಎವೆಗಳ ಹಿಂದೆ
ಗತದಿನಗಳದ್ದೇ ಸಿಹಿ-ಕಹಿ ನೆನಪು
ಸಿಗದ ಸಂತಸದ ಕ್ಷಣಗಳ ಮೆಲುಕು,
ಮುಪ್ಪಲ್ಲೂ ಕಾಡುವುದು ಸವಿಗನಸು

ಸುಕ್ಕುಗಟ್ಟಿದ ಚರ್ಮ, ದೇಹಕ್ಕಂಟಿಹುದು
ವಯಸಿನ ಲೆಕ್ಕಾಚಾರ ಒಮ್ಮೊಮ್ಮೆ
ಈ ಮನಸಿಗಂತೂ ಸಿಗದು..

ನೆರೆತ ಕೂದಲುಗಳ ಸಿಕ್ಕು
ಬಿಡಿಸುವಾಗೆಲ್ಲಾ ಮಬ್ಬು ಮಬ್ಬು
ಕೊರಳೊಳಗಿನ ಒಂಟಿ ಸರದೊಳು
ಹುಡುಕುತಿವೆ ಕಪ್ಪು ಮಣಿಗಳನೇ
ಅದುರುವ ಕೈಬೆರಳುಗಳು.

ಹಿಂತಿರುಗಿದಷ್ಟೂ ಭೂತಗಳದೇ ಕಾಟ
ಭವಿತವ್ಯದ ಕೊನೆಹೆಜ್ಜೆಯತ್ತ
ಸಾಗುತಿದೆ ಇಳಿಸಂಜೆಯ ಈ ಪಯಣ...
ಇಂದು ಮಾತ್ರ ಒಳ ಹೊರಗೆಲ್ಲಾ,
ತುಂಬಿಹುದು ಬರೀ ಶೂನ್ಯ.

--ತೇಜಸ್ವಿನಿ ಹೆಗಡೆ.

ಗುರುವಾರ, ಜುಲೈ 7, 2011

ತಾಯಿಬೇರನರಸಿ...

ಹೊರಗಿನ ಧೋ ಮಳೆಯ ಪೈಪೋಟಿಗೆ ನಿಂತ
ಒಳಗಿನ ದೊಡ್ಡ ಗಂಟೆಯ ಸದ್ದು,
ಹೊರಬಿದ್ದರೆ ಸಾಕು ನಿಂತ ಕೆನ್ನೀರಿನೊಳಗೆ
ಪುಟ್ಟ ಪುಟ್ಟ ಚುಕ್ಕಿಗಳ ಸಾಲು..

ಒಂದು ಹೊಂಡದೊಳಗೊಂದು ಕಾಲು
ಮತ್ತೊಂದರಲ್ಲೊಂದು ಚಪ್ಪಲ್ಲು
ಬಟ್ಟೆ ತುಂಬಾ ಕೆಂಪು ಚುಕ್ಕಿ
ಮೊಗದ ತುಂಬಾ ನಗೆಯ ಹುಕ್ಕಿ

ಅಪ್ಪನ ಗದರುವಿಕೆಗೆ ಬೆದರಿ,
ಬಿಮ್ಮನೆ ಧರಿಸಿ ಕುಳಿತ ರೈನ್‌ಕೊಟು,
ಕದ್ದು ಮೆಲ್ಲನೆ ಮೊಗವ ಮೇಲನೆತ್ತಿ
ಮಳೆಗೆ ಒಡ್ಡುವ ಹುಚ್ಚು ಮನಸು

‘ಅ, ಆ, ಇ, ಈ’ ಎನ್ನುವ ಆ ಪಾಠ
‘ಎ, ಬಿ, ಸಿ ಡಿ’ ಎನ್ನುತಿವೆ ಈ ಪಾಠ
ನೋಟ ಬೇರೆ, ಆಟ ಬೇರೆ, ಮನದೊಳಗಿನ-
ನಸುನಗೆಯ ತುಂಬಾ ಕರಿಮೋಡಗಳ ಛಾಯೆ!

ಬೇಕಾಗಿದೆ ನನ್ನಂತಹ ಪುಟ್ಟ ಶಾಲೆಯೊಂದು
ನಲಿಯುತ ಕಲಿಯಲು, ಕಲಿತು ಕುಣಿಯಲು
ಹೂವಿನ ನಗುವನರಸಿ ಅರಳಲು,
ಬೇರು ಒಳ ಇಳಿದು ಮೇಲ್ ಜಿಗಿಯಲು...

-ತೇಜಸ್ವಿನಿ ಹೆಗಡೆ.