ಬುಧವಾರ, ಮಾರ್ಚ್ 10, 2010

ಹೀಗೇಕೆ?!!


ನಿದ್ದೆಬರದ ರಾತ್ರಿಗಳಲ್ಲಿ,
ನೀಲಾಗಸವ ತುಂಬಿರುವ
ನಕ್ಷತ್ರಗಳ ಎಣಿಸಿದರೆ
ನಿದ್ದೆ ಬರುವುದೆಂದೆ ನೀನು
ಅದ ನಂಬಿ, ನಾನೆಣಿಸತೊಡಗಿದರೆ,
ಸೂರ್ಯೋದಯವಾಗಬೇಕೆ!

ಮನದೊಳಗಿನ ನೋವುಗಳ,
ಯಾತನೆಯ ಮರೆಯಲು
ಜೋರಾಗೊಮ್ಮೆ ನಕ್ಕುಬಿಡು...
ಹಗುರಾಗುವೆ ಎಂದೆ ನೀನು
ಅದ ನಂಬಿ, ನಾ ಜೋರಾಗಿ ನಗಲು
ಎದೆನೋವು ಶುರುವಾಗಬೇಕೆ!

ಚಿಂತೆಯಾಕೆ ಸುಮ್ಮನೇ
ಚಿನ್ಮಯನಿರುವಾಗ ಜೊತೆಗೆ
ಎಂದು ಅಭಯವನಿತ್ತೆ ನೀನು
ಅದ ನಂಬಿ, ನಾ ನಿಶ್ಚಿಂತಳಾದರೂ
ಆ ಚಿನ್ಮಯನ ಹುಡುಕುವ
ಹೊಸ ಚಿಂತೆ ನನ್ನದಾಗಬೇಕೆ!

- ತೇಜಸ್ವಿನಿ
(ಚಿತ್ರ ಕೃಪೆ - ಗೂಗಲ್)

28 ಕಾಮೆಂಟ್‌ಗಳು:

V.R.BHAT ಹೇಳಿದರು...

ಸಿಂಪಲ್ಲಾಗಿ ಚೆನ್ನಾಗಿದೆ ಕವನ !

kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ) ಹೇಳಿದರು...

ಹುಡುಕುವುದೆ೦ದರೆ ನಮ್ಮ ಜ್ನಾನವನ್ನು ಹೆಚ್ಹಿಸಿಕೊಳ್ಳುವುದೆ೦ದಲ್ಲವೇ?.
ಚೆನ್ನಾಗಿದೆ ಮೇಡ್೦ ಕವನ.

Unknown ಹೇಳಿದರು...

ಮುದ್ದಾದ ಕವನ ತೇಜಸ್ವಿನಿ ಅಕ್ಕ :) ಇಷ್ಟವಾಯಿತು.

ಸಾಗರದಾಚೆಯ ಇಂಚರ ಹೇಳಿದರು...

ತೇಜಸ್ವಿನಿಯವರೇ,
ಸುಂದರ ಕವನ
ಬದುಕು ಹಾಗೆಯೇ,
ಏನನ್ನೋ ಮಾಡಲು ಹೋಗಿ ಇನ್ನೇನೋ ಆಗಿರುತ್ತದೆ
ಮಾಡುವ ಉದ್ದೇಶ ಒಳ್ಳೆಯದಾಗಿದ್ದರೆ ಬರುವ ಪ್ರತಿಫಲವೂ ಒಳ್ಳೆಯದೇ ಆಗಿರುತ್ತದೆ
ನಮ್ಮ ಕರ್ತವ್ಯ ನಮಗೆ ಅಲ್ಲವೇ?
ತುಂಬಾ ಸುಂದರ ಕವನ,
ಹೀಗೇಕೆ ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಹೊರಟರೆ ಮತ್ತೆ ಹೀಗೇಕೆ? ಎಂಬ ಪ್ರಶ್ನೆಯೇ ಎದುರಾಗುತ್ತದೆ

sunaath ಹೇಳಿದರು...

ತೇಜಸ್ವಿನಿ,
ಕವನ ಸೊಗಸಾಗಿದೆ.

Guruprasad ಹೇಳಿದರು...

ತೇಜಸ್ವಿನಿ,
ಕವನ ತುಂಬಾ ಚೆನ್ನಾಗಿ ಇದೆ... ಹಾಗೆ ಅರ್ಥಗರ್ಭಿತ ವಾಗಿ ಕೂಡ.... good one

Subrahmanya ಹೇಳಿದರು...

ಎನ್ಮಾಡುದ್ರೂ ಪ್ರಾಬ್ಲೆಮ್ಮೇ....:)..ಚೆನ್ನಾಗಿದೆ ಕವನ.
ಧನ್ಯವಾದ

ಸವಿಗನಸು ಹೇಳಿದರು...

chennagidhe kavana....

Dr.D.T.Krishna Murthy. ಹೇಳಿದರು...

ಸರಳ ಸುಂದರ ಸ್ವಾಭಾವಿಕವಾಗಿ ಮೂಡಿ ಬಂದ ಕವನ .ಧನ್ಯವಾದಗಳು.

Raghu ಹೇಳಿದರು...

ತೇಜಸ್ವಿನಿ ಅವರೇ.. :)
ಚೆನ್ನಾಗಿದೆ ಕವನ.. ಒಟ್ಟಿನಲ್ಲಿ ಏನೋ ಮಾಡೋಕ್ಕೆ ಹೋಗಿ ಇನ್ನೇನೋ ಮಾಡ್ಕೊಂತಿರ ಅಂತಾಯಿತು..:)
ನಾನು ಇವತ್ತಿಂದ ನಗೋದು ಸ್ವಲ್ಪ ಕಮ್ಮಿ ಮಾಡಬೇಕು.. :)
ನಿಮ್ಮವ,
ರಾಘು.

umesh desai ಹೇಳಿದರು...

ಚೆನ್ನಾಗಿದೆ ಕವಿತೆ..

PARAANJAPE K.N. ಹೇಳಿದರು...

ಸರಳ ಸುಂದರ ಕವನ,ಚೆನ್ನಾಗಿದೆ

ಸೀತಾರಾಮ. ಕೆ. / SITARAM.K ಹೇಳಿದರು...

ಒ೦ದನ್ನು ಮರೆಯಲು ಇನ್ನೊ೦ದನ್ನು ಮೈ ಮೇಲೆ ಎಳೆದುಕೊ೦ಡ೦ತೆ. ಕೆಲವು ಮಧ್ಯವ್ಯಸನಿಗಳು ಅದನ್ನು ಬಿಡಲೂ ಸಿಗರೇಟ ಪ್ರಾರ೦ಭಿಸುವದು, ಸೀಗರೇಟ ಬಿಡಲೂ, ಗುಟ್ಕಾ ಕಾಕುವದು ಅಥವಾ ತ೦ಬಾಕೂ ಸೇವಿಸುವದು, ಅದನ್ನು ಬಿಡಲು ಚೂಯಿ೦ಗ ಗಮ್ ಅಥವಾ ಪೆಪ್ಪರಮಿ೦ಟ್ ಸೇವಿಸುವದು ನೆನಪಾಯಿತು. ಮನವೆ೦ಬ ಮರ್ಕಟ ಚೇಷ್ಟೇಗೆ ತೊಡಗಿದಾಗ ಶಾ೦ತಿ ಎಲ್ಲಿ?
ಚೆ೦ದದ ಕವನ ತೆಜಸ್ವೀನಿಯವರೇ.

ಮನಸು ಹೇಳಿದರು...

ಹಹಹ ಚೆನ್ನಾಗಿದೆ... ನಕ್ಷತ್ರ ಎಣಿಸೋಕೆ ಕಷ್ಟ ಆಗಿರಬೇಕು ಅಲ್ಲವೆ..? ಇಷ್ಟವಾಯಿತು ನಿಮ್ಮ ಕವನ.

Kirti ಹೇಳಿದರು...

nidde illavaadag chukke enisi suryodayvaadaru nimage niddey baralillavenba kaat tappitalwa adar khushi chennagirutte.
manavu novu tumbiddaru nakkiralla aavag ede novu bandarenaaytu nimma aa sundar manassin novannu maritiralla adar khushi aytu.. heege ondann mareyuva saluvaagi iruva bere kaarandalli navu khushi padabeku

ಕ್ಷಣ... ಚಿಂತನೆ... ಹೇಳಿದರು...

ತೇಜಸ್ವಿನಿಯವರೆ, ಸರಳ, ಮತ್ತು ಪ್ರಶ್ನೆಗಳಮಾಲೆಯಲಿ ಪೋಣಿಸಿದ ಕವಿತೆ ಚೆನ್ನಾಗಿದೆ.
ಜೀವನದಲ್ಲಿ 'ಹೀಗೇಕೆ'? ಎಂಬ ಪ್ರಶ್ನೆಯನ್ನು ಸರಳವಾಗಿ ಹುಡುಕುವಂತಿದೆ.

ಬಿಸಿಲ ಹನಿ ಹೇಳಿದರು...

maLe sahajavAgi baruvaMte nimma kavana saraLa hAgU sahajavAgi mUDi baMdide.

ಸಾಗರಿ.. ಹೇಳಿದರು...

ತೇಜಸ್ವಿನಿ ಅವರೇ
ಬಹಳ ಸುಂದರವಾದ ಕವನ.

ಜಲನಯನ ಹೇಳಿದರು...

ತೇಜಸ್ವಿನಿ....ಹಾಸ್ಯಮಿಶ್ರಿತ ವೈಚಾರಿಕತೆಗೆ ದಾರಿಮಾಡುವ ಸರಳ ಪದಗಳ ಪಂಜರ ನಿಮ್ಮ ಈ ಕವನ...ಅದರಲ್ಲೂ ಮೊದಲ ಚರಣ...
ನಿದ್ದೆಬರದ ರಾತ್ರಿಗಳಲ್ಲಿ,
ನೀಲಾಗಸವ ತುಂಬಿರುವ
ನಕ್ಷತ್ರಗಳ ಎಣಿಸಿದರೆ
ನಿದ್ದೆ ಬರುವುದೆಂದೆ ನೀನು
ಅದ ನಂಬಿ, ನಾನೆಣಿಸತೊಡಗಿದರೆ,
ಸೂರ್ಯೋದಯವಾಗಬೇಕೆ!

ಕೋಪ ಬಂದಾಗ, ಶಮನಕ್ಕೆ
ಹತ್ತರವರೆಗೆ ಎಣಿಸೆಂದೆ..
ಹೆಂತಿಮ್ಯಾಲ ಬಂದ ಕೋಪಾನ
ಏಣಿಸ್ಕೋತಾ ಕಾಮ್ಮಿಮಾಡುವಾಗ
ಇದೇನ್ರಿ..ಹೀಂಗ್ ಮಕ್ಕಳಾಟ ಅಂದವಳ
ಕಪಾಳಕ್ಕೆ ಬಿಗಿದೇ ಬಿಟ್ಟೆ.....ಹಹಹ...

ಮುತ್ತುಮಣಿ ಹೇಳಿದರು...

ಕವನ ಬಗ್ಗೆ ಇನ್ನೇನು ಹೇಳುವುದು?! ಇದು ನಿಮ್ಮ ಹಳೆಯ ಕಲೆಕ್ಷನ್‌ಗಳ ಪದ್ಯವಾ? ಚೆನ್ನಾಗಿದೆ.

ದಿನಕರ ಮೊಗೇರ ಹೇಳಿದರು...

ತೇಜಸ್ವಿನಿ ಮೇಡಂ.....
ಸೂಪರ್ ಕವನ..... ಅದರಲ್ಲೂ ಈ ಸಾಲುಗಳು ಚೆನ್ನಾಗಿವೆ...
ಚಿಂತೆಯಾಕೆ ಸುಮ್ಮನೇ
ಚಿನ್ಮಯನಿರುವಾಗ ಜೊತೆಗೆ
ಎಂದು ಅಭಯವನಿತ್ತೆ ನೀನು
ಅದ ನಂಬಿ, ನಾ ನಿಶ್ಚಿಂತಳಾದರೂ
ಆ ಚಿನ್ಮಯನ ಹುಡುಕುವ
ಹೊಸ ಚಿಂತೆ ನನ್ನದಾಗಬೇಕೆ!
ಧನ್ಯವಾದ.....

ಅಂತರ್ವಾಣಿ ಹೇಳಿದರು...

ಹಾಸ್ಯ ಮಿಶ್ರಿತ ಪ್ರಣಯ ಕವನ :)
ಒಳ ಅರ್ಥ ನಿಮ್ಮನ್ನೇ ಕೇಳ್ತೀನಿ..

Narayan Bhat ಹೇಳಿದರು...

ಕವನ ಚೆನ್ನಾಗಿದೆ...ಆದರೆ ಚಿನ್ಮಯ ನಮ್ಮೊಳಗೇ ಇದ್ದಾನಂತೆ ಅಲ್ವೇ.

ಮನದಾಳದಿಂದ............ ಹೇಳಿದರು...

ಚನ್ನಾಗಿದೆ ನಿಮ್ಮ ಕವನ, ಏನೋ ಮಾಡಲು ಹೋಗಿ ಏನೋ ಆಯಿತು. ನಿಮ್ಮವರು ಏನೇ ಹೇಳಿದ್ರೂ ಅದನ್ನ ಮಾಡ್ತೀರಾ ಅಂತಾಯ್ತು!:)

ತೇಜಸ್ವಿನಿ ಹೆಗಡೆ ಹೇಳಿದರು...

ಪ್ರತಿಕ್ರಿಯೆಯ ಮೂಲಕ ಪ್ರೋತ್ಸಾಹಿಸಿದ ಎಲ್ಲರಿಗೂ ತುಂಬಾ ಧನ್ಯವಾದಗಳು. ಯಾವುದೇ ಕವನವನ್ನು ಹೀಗೇ ಎಂದು ಹೇಳಲಾಗದು. ಒಂದು ಕವಿತೆಯ ಆಶಯ, ಒಳಾರ್ಥ, ಭಾವಾರ್ಥ ಎಲ್ಲವೂ ಅವರವರ ಭಾವಕ್ಕೇ ಬಿಟ್ಟೀದ್ದು. ಕವಿಯ ಆಶಯ ಒಂದಾಗಿದ್ದರೆ ಅದನ್ನೋದುವ, ಅರಿಯುವ ಓದುಗರ ಕಲ್ಪನೆ ಹಲವಾರು ರೀತಿಯಲ್ಲಿರುತ್ತವೆ. ಕವನ ಹಾಗಾಗಿಯೇ ಕಥೆ/ಲೇಖನ/ವಿಮರ್ಶೆ ಇವೆಲ್ಲವುಗಳಿಗಿಂತಲೂ ಭಿನ್ನವಾಗಿರುತ್ತದೆ ಎನ್ನುವುದು ನನ್ನ ಅಭಿಪ್ರಾಯ.

ಸಹಮಾನಸಿಗರ ಜೊತೆ ಹೀಗೇ ಸದಾ ನನ್ನ ಮಾನಸದೊಂದಿಗಿರಲಿ..:)

ಮನಸಿನಮನೆಯವನು ಹೇಳಿದರು...

'ತೇಜಸ್ವಿನಿ ಹೆಗಡೆ' ಅವ್ರೆ..,

ಚೆನ್ನಾಗಿದೆ..
'ಮನದೊಳಗಿನ ನೋವುಗಳ,
ಯಾತನೆಯ ಮರೆಯಲು
ಜೋರಾಗೊಮ್ಮೆ ನಕ್ಕುಬಿಡು...
ಹಗುರಾಗುವೆ ಎಂದೆ ನೀನು
ಅದ ನಂಬಿ, ನಾ ಜೋರಾಗಿ ನಗಲು
ಎದೆನೋವು ಶುರುವಾಗಬೇಕೆ!' ಇಲ್ಲಿ ಮಾತು ಕೇಳಿ ಜೋರಾಗಿ ನಗಲು ಎದೆನೋವು ಶುರುವಾಯಿತು ಎಂದಿದ್ದು ತುಸು ಚಂದವಿಲ್ಲ.. ಭಾವನೆ ಕೆಡಿಸುತ್ತಿದೆ ಎನಿಸುತ್ತಿದೆ..

ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ: http://manasinamane.blogspot.com

ತೇಜಸ್ವಿನಿ ಹೆಗಡೆ ಹೇಳಿದರು...

ಗುರು-ದೆಸೆ !! ಅವರೆ,

ಮೊದಲು ನಿಮ್ಮ ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು.

'ಮನದೊಳಗಿನ ನೋವುಗಳ,
ಯಾತನೆಯ ಮರೆಯಲು
ಜೋರಾಗೊಮ್ಮೆ ನಕ್ಕುಬಿಡು...
ಹಗುರಾಗುವೆ ಎಂದೆ ನೀನು
ಅದ ನಂಬಿ, ನಾ ಜೋರಾಗಿ ನಗಲು
ಎದೆನೋವು ಶುರುವಾಗಬೇಕೆ!’


ಇಲ್ಲಿ ಕೇವಲ ವಾಚ್ಯಾರ್ಥವನು ಮಾತ್ರ ನೋಡಿದರೆ ಹಾಗೆನಿಸಬಹುದು. ಕಾವ್ಯಕ್ಕೆ ಕೇವಲ ಸೂಕ್ತ ಪದಜೋಡಣೆಯಿಂದ ಮಾತ್ರ ಅಂದವನ್ನು ಕೊಡಲಾಗದು ಎನ್ನುವುದು ನನ್ನ ಅಭಿಪ್ರಾಯ.

ಪ್ರಸ್ತುತ ಸಾಲುಗಳಲ್ಲಿ... ಜೋರಾಗಿ ನಕ್ಕಾಗ ಮನದ ನೋವು ಕಡಿಮೆಯಾಗುವುದು ಎನ್ನುವ ಸಲಹೆ ಉತ್ತಮ. ಆದರೆ ಅದನ್ನೇ ನಂಬಿ, ಊಲ ಉದ್ದೇಶವನ್ನು ಮರೆತು ಕೇವಲ ಪ್ರಾಯೋಗಿಕವಾಗಿ ಮಾತ್ರ ದೈಹಿಕ ಶ್ರಮ ಹಾಕಿ ನಗಲು ಹೋದರೆ ಎದೆನೋವು ಬರುವುದು ಸಹಜ ಎನ್ನುವುದನ್ನು ಕಾಣಿಸಿದ್ದೇನೆ. ಇದು ಒಂದರ್ಥವಾದರೆ ಇನ್ನೊಂದು...

ಮರೆವು ಎನ್ನುವುದು ತಾತ್ಕಾಲಿಕ. ಅದು ಶಾಶ್ವತ ಎಂದು ಅಂದುಕೊಳ್ಳುವುದೂ ಒಂದು ಮಿಥ್ಯವೇ. ಇಂದು ಮರೆತೆ ಎಂದು ಅಂದುಕೊಳ್ಳುವ ವಿಷಯ ನಾಳೆ ಯಾವ ರೂಪಧರಿಸಿ ನೆನಪಾಗಿ ಕಾಡುವುದೋ ಯಾರು ಬಲ್ಲರು? ಅದೇ ರೀತಿ ಮನದ ನೋವು ಮರೆಯಲು ಜೋರಾಗಿ ನಗುವಾಗ ಇನ್ನಾವುದೋ ಹಳೆಯ ನೋವು(ನಗುವಿನೊಂದಿಗೇ ಬೆಸೆದಿರುವ..) ನೆನಪಾಗಿ ನಗುವಿನೊಂದಿಗೆ ಬೆರೆತು ಎದೆಯೊಳಗೆ ಯಾತನೆಯಾಯಿತು ಎಂದೆನ್ನುವುದನ್ನೂ ಅರ್ಥೈಸಿಕೊಳ್ಳಬಹುದು.

ಮೊದಲೇ ಅಂದಂತೆ.. ಕವನ ಅವರವರ ಭಾವಕ್ಕೆ ಬಿಟ್ಟಿದ್ದು.

ದೀಪಸ್ಮಿತಾ ಹೇಳಿದರು...

ಕವನ ಇಷ್ಟವಾಯಿತು