ಸೋಮವಾರ, ಸೆಪ್ಟೆಂಬರ್ 29, 2014

ಕವಳದ ಕಳವಳ

೮ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಬಿಡುಗಡೆಗೊಂಡ ‘ಹರಟೆ ಕಟ್ಟೆ - ಹೊಸಕಾಲದ ಲಲಿತ ಪ್ರಬಂಧಗಳು’ ಪುಸ್ತಕದಲ್ಲಿ ಪ್ರಕಟಗೊಂಡಿರುವ ನನ್ನ ಲಲಿತ ಪ್ರಬಂಧ.

*******************************************************************************

ಮಲೆನಾಡು ಪ್ರಮುಖವಾಗಿ ಎರಡು ವಿಷಯಗಳಿಗೆ ಹೆಸರುವಾಸಿ. ಒಂದು ಅಡಿಕೆ ತೋಟಕ್ಕೆ, ಇನ್ನೊಂದು ಧೋ ಎಂದು ಬೀಳುವ ಮಳೆಗೆ. ಮಲೆನಾಡು ಎಂದರೆ ಹಲವರು ತೀರ್ಥಹಳ್ಳಿ, ಚಿಕ್ಕಮಗಳೂರು ಶೃಂಗೇರಿ ಎಂದೇ ಭಾವಿಸುವುದು ಹೆಚ್ಚು. ಆದರೆ ಬಾಲ್ಯಂದಿಂದಲೂ ನನಗಂತೂ ಮಲೆನಾಡೆಂದರೆ ಶಿರಸಿಯೇ! ನಮ್ಮೂರಲ್ಲಿ ವಿಶೇಷವಾಗಿ ಅಡಿಕೆಯೇ ಪ್ರಧಾನ. ಕೊಯ್ಲು ಎಂದರೆ ಅಲ್ಲಿ ಅಡಿಕೆಯದೊಂದೇ. ಗಂಡ ಅಂದಾಕ್ಷಾಣ ಹೆಂಡತಿ ಎನ್ನೋದು ಅದೆಷ್ಟು ಪೂರಕವೋ ಅಂತೆಯೇ ಅಡಿಕೆ ಎಂದಮೇಲೆ ಅಲ್ಲಿ ಎಲೆ ಇದ್ದಿರಲೇ ಬೇಕು. ನೇರ ದಿಟ್ಟ ನಿರಂತರವಾಗಿ ಮುಗಿಲೆತ್ತರ ನಿಲ್ಲುವ ಅಡಿಕೆ ಮರಗಳನ್ನು ಬಳುಕುತ್ತಾ, ಲಾಲಿತ್ಯದಿಂದ ಸುತ್ತಿರುವ ಎಲೆಬಳ್ಳಿಗಳ ಸೊಬಗನ್ನು ನೋಡಿಯೇ ಸವಿಯಬೇಕು. ಊಟ ಎಂದರೆ ಉಪ್ಪು-ಉಪ್ಪಿನಕಾಯಿ ಹೇಗೋ ಊಟನಂತರದ ಎಲೆ-ಅಡಿಕೆಯೂ ಇದ್ದಿರಲೇ ಬೇಕು. ಇನ್ನು ಊಟವೆಂದರೆ ಬರಿಯನ್ನವನ್ನಷ್ಟೇ ತಿನ್ನಲಾಗದು, ಜೊತೆಗೆ ಸಾರು, ಪಲ್ಯವಿದ್ದರೆ ಮಾತ್ರ ನಾಲಗೆ ಚಪ್ಪರಿಸೋದು. ಅಂತೆಯೇ ಎಲೆ-ಅಡಿಕೆಗಳಿಗೆ ಸಾಥ್ ನೀಡಿ ರಸಭರಿತ ಕವಳವಾಗಿ ಬಾಯಿ, ಹಲ್ಲು, ನಾಲಗೆಗಳೆಲ್ಲಾ ಕೆಂಪಾದವೋ ಎಲ್ಲಾ ಕೆಂಪಾದವೋ ಎಂದು ಹಾಡಿಕೊಳ್ಳಲು, ಸುಣ್ಣ, ತಂಬಾಕಿನ ಸಾಂಗತ್ಯವೂ ಅತ್ಯಗತ್ಯ. ಮಲೆನಾಡಿನ ಮನೆಗಳಲ್ಲಿ ಕವಳದ ಸಂಚಿ/ಬಟ್ಟಲು ಇಲ್ಲದ ಮನೆಯನ್ನು ಹುಡುಕುವುದು ಎಂದರೆ ಸಾವಿಲ್ಲದ ಮನೆಯ ಸಾಸಿವೆ ಹುಡುಕಿದಂತೇ! ಇನ್ನು ಈ ಎಲೆ ಅಡಿಕೆಯ ಮೇಲೆ ಅದೆಷ್ಟೋ ಒಗಟುಗಳೂ ಹುಟ್ಟಿಕೊಂಡಿವೆ. ‘ಬರೋವಾಗ ಹಸ್ರು, ಹೋಗೋವಾಗ ಕೆಂಪು... ನಾನ್ಯಾರು?’ ಎಂದು ಬಾಲ್ಯದಲ್ಲಿ ನಾವೆಲ್ಲಾ ಒಗಟು ಕೇಳುತ್ತಲೇ ಕವಳ ಜಡಿಯುತ್ತಿದ್ದುದು.
Courtesy: http://en.wikipedia.org/wiki/Paan

ಚಿಕ್ಕಂದಿನಲ್ಲಿ ಅಜ್ಜಿ ಮನೆಗೆ ಹೋದಾಗೆಲ್ಲಾ ಅಜ್ಜ ಊಟದ ನಂತರ ಮೊಮ್ಮಕ್ಕಳಿಗೆಲ್ಲಾ ಕವಳ ಕಟ್ಟಿಕೊಡುವ ಕೆಲಸವನ್ನು ಪ್ರೀತಿಯಿಂದ ಮಾಡುತ್ತಿದ್ದ. ಅದೊಂದು ಮರೆಯಲಾಗದ ಅನುಪಮ ಸಂಭ್ರಮವೇ ಸರಿ. ‘ಅಜ್ಜ ನಂಗೆ ಸುಣ್ಣ ಜಾಸ್ತಿ ಹಾಕದು ಬ್ಯಾಡ್ದೋ.. ತಲೆ ತಿರ್ಗೋಗ್ತು ಮತ್ತೆ..’ ಎಂದು ಬೊಬ್ಬಿರಿವ ನಮಗಾಗಿಯೇ ಅಜ್ಜನ ಸ್ಪೆಷಲ್ ವೀಳ್ಯ ತಯಾರಾಗುತ್ತಿತ್ತು. ಉಂಡಾದ ಮೇಲೆ ಒಂದು ಕವಳ ಹಾಕೋದು ಜೀವಕ್ಕೆ ಚೊಲೋವಾ, ಆದ್ರೆ ಅದೇ ಗೀಳಾಗಲಾಗ ಎನ್ನುವುದು ನನ್ನಜ್ಜನ, ಅಜ್ಜನಂಥವರ ಪ್ರಿನ್ಸಿಪಲ್ ಆಗಿತ್ತು. ಚಿಗುರೆಲೆಯ ತುದಿಯ ಮುರಿದು, ಹಿಂಬದಿಯ ನಾರನ್ನು ತೆಗೆದು, ಎಷ್ಟು ತೊಳೆದರೂ ಉಜಾಲ ಕಾಣದೇ ಮಣ್ಣು ಹಿಡಿದ ಅಂಗೋಸ್ತ್ರ ಪಂಜಿ ಸುತ್ತುವರಿದಿದ್ದ ತೊಡೆಯ ಮೇಲೆ ಎಲೆಗಳನ್ನು ಉಜ್ಜಿ ಉಜ್ಜಿ ತಿಕ್ಕಿ, ಅಡಕತ್ತರಿಯಿಂದ ತಲೆಗೆ ಸೊಕ್ಕೇರಿಸದ ಪಾಪದ ಎರಡೆರಡು ಅಡಿಕೆ ಹೋಳುಗಳನ್ನು  ಪ್ರತಿ ಎಲೆಗೂ ಹಾಕಿ, ಹೌದೋ ಅಲ್ಲವೋ ಎಂಬಂತೇ ಸುಣ್ಣವನ್ನು ಸವರಿ, ಅದರ ಮೇಲೆ ಒಂದು ಲವಂಗ, ಒಂದೇ ಒಂದು ಏಲಕ್ಕಿ, ಸೊಂಟಕ್ಕೆ ಸಿಕ್ಕಿಸಿರುವ ಸಂಚಿಯಿಂದ ಹೊರತೆಗೆದು ಹಾಕುವ ಒಂದೆಳೆ ಜಾಯಿಕಾಯಿ, ಬೇಕಾದರೆ ಎರಡು ಕಾಳು ಸಕ್ಕರೆ - ಇವಿಷ್ಟನ್ನು ಹಾಕಿ ಮಡಚಿ ‘ತಗ ಇದು ತೇಜುಗೆ, ಇದು ಪಯುಗೆ, ಇದು ಸಣ್ಣ ಕೂಸಿಗೆ..’ ಎಂದು ಕೊಡುವಾಗ, ಕವಳ ತಯಾರಿಸಿದ ರೀತಿಯನ್ನೇ ಮಂತ್ರಮುಗ್ಧರಂತೇ ನೋಡುತ್ತಿದ್ದ ನಮಗೆ ಏನೋ ಅತಿ ಅಮೂಲ್ಯವಾದುದ್ದನ್ನೇ ಪಡೆದಂತಹ ಅನುಭವ! ಬಾಯೊಳಿಟ್ಟು ಜಗಿದು ರಸವನ್ನು ಹೀರಿ ನಾಲಗೆಯ ತುದಿಗೆ ಜಿಗುಟು ತಂದು ಕೆನ್ನಾಲಗೆಯನ್ನು ಆಡಿಸಿ ಚಾಳಿಸಿಕೊಳ್ಳುವ ಭರದಲ್ಲಿ ಅದೆಷ್ಟೋ ರಸಭರಿತ ಕವಳಗಳು ನೆಲದಲ್ಲಿ ಬಿದ್ದು ರಂಗೋಲಿ ಬರೆದು ಉಗಿಸಿಕೊಂಡಿದ್ದು ಇನ್ನೂ ಹಸಿರಾಗಿದೆ. ಈ ವಿಶೇಷ ಕವಳಗಳ ಸರಬರಾಜು ಐದು ವರ್ಷದ ಮೇಲಿನ ಮಕ್ಕಳಿಗೆ ಮಾತ್ರವಾಗಿರುತ್ತಿತ್ತು. ಹಾಗಾಗಿ ಸಣ್ಣ ಪುಟ್ಟ ಚಿಳ್ಳೆ ಪಳ್ಳೆಗಳ ಕಣ್ತಪ್ಪಿಸಿ ಕವಳದ ಸೇವನೆ ನಡೆಸುವುದೇ ಒಂದು ತರಹ ಥ್ರಿಲ್ ತುಂಬುತ್ತಿತ್ತು. ಆದರೂ ಅದು ಹೇಗೋ ಚಿಳ್ಳೆಗಳಿಗೆ ನಮ್ಮ ಪ್ರೋಗ್ರಾಮಿನ ವಾಸನೆ ಬಡಿದು ತಾರಕಕ್ಕೇರಿದ ಸ್ವರದಲ್ಲಿ ಆಲಾಪನೆ ಶುರುಮಾಡಿಕೊಂಡು ಬಿಡುತ್ತಿದ್ದವು. ಅವರಿಗೆ ಅಜ್ಜ ಸುಳ್ಳೆ ಪುಳ್ಳೆ ಕವಳ ಮಾಡಿಕೊಡುತ್ತಿದ್ದ. ಅಡಿಕೆ ಹೋಳೊಂದನ್ನು ಸಣ್ಣ ಎಲೆಯ ಚೂರಲ್ಲಿ ಸುತ್ತಿ ಭರ್ಜರಿ ಬೆಲ್ಲ ಸವರಿ ಬಾಯಿಗಿಟ್ಟರೆ ಬಹು ಸುಲಭದಲ್ಲಿ ಲಾಲ್‌ಬಾಗ್, ಕಬ್ಬನ್ ಪಾರ್ಕ್ ಆ ಚಿಣ್ಣರ ಕಿವಿಯೇರಿಬಿಡುತ್ತಿದ್ದವು. ಇನ್ನು ನಾವು ತುಸು ದೊಡ್ಡವರಾದಂತೇ ‘ನಂಗೀಗ ಸಮಾ ಸುಣ್ಣ ಹಾಕಿದ್ರೂ ಎಂತಾ ಆಗ್ತಿಲ್ಲೆ ನೋಡು..’ ಎಂದು ಜಂಭದಿಂದ ಹೆಚು ಸುಣ್ಣ ಸವರಿಕೊಂದು ಕವಳ ಹಾಕಿ ಚೆನ್ನಾಗಿ ತಲೆ ತಿರುಗಿದರೂ ತೋರಿಸಿಕೊಳ್ಳದೇ ಸಾವರಿಸಿಕೊಂಡು ಪೋಸ್‌ಕೊಡುವ ನಮ್ಮಗಳ ಬಣ್ಣ ಬಯಲಾಗಲು ಹೆಚ್ಚು ಹೊತ್ತು ಬೇಕಾಗುತ್ತಿರಲಿಲ್ಲ. ಎಷ್ಟೋ ಸಲ ಅಪರೂಪಕ್ಕೆ ಕವಳ ಕಾಣುತ್ತಿದ್ದ ನಾಲಗೆ, ಅದನ್ನು ತಿಂದ ನಂತರ ತುಸು ಕಾಲ ಬೇರಾವ ತಿಂಡಿಯ ಸ್ವಾದವನ್ನೂ ಮೆದುಳಿಗೆ ರವಾನಿಸುತ್ತಿರಲಿಲ್ಲ! ದಪ್ಪಗೆ, ರುಚಿಯೇ ತಿಳಿಯದಂತ ಅನುಭೂತಿಯಿಂದ ‘ಸುಟ್ಟ ಕವಳ, ಇನ್ನು ತಿನ್ನಲಾಗ’ ಅನ್ನುವ ಪ್ರತಿಜ್ಞೆ ಮರುದಿನದ ಮಧ್ಯಾಹ್ನದವರೆಗಷ್ಟೇ ಗಟ್ಟಿಯಾಗಿರುತ್ತಿತ್ತು. ಏನೇ ಅನ್ನಿ ಸದಾಕಾಲ ಏಲಕ್ಕಿ, ಲವಂಗ ಜಾಯಿಕಾಯಿ ಚೂರುಗಳನ್ನು ತನ್ನೊಂದಿಗೇ ಇಟ್ಟುಕೊಂಡಿರುತ್ತಿದ್ದ ಅಜ್ಜನ ಮೈಯಿಂದ ಹೊರಬರುತ್ತಿದ್ದ ಆ ಅದ್ಭುತ ಸುವಾಸನೆಗೆ ಯಾವ ಸೆಂಟೂ ಸಾಟಿಯಾಗದು! ಈಗಲೂ ಅವನ ಹಾಸಿಗೆ, ಮೈಯಿಂದ ಹೊರಹೊಮ್ಮುತ್ತಿದ್ದ ಸುಗಂಧದ ಕಂಪು ಸ್ಮೃತಿಪಟಲವನ್ನು ತಾಗಿದಾಕ್ಷಣ ಅಪ್ರಯತ್ನವಾಗಿ ಕಣ್ಗಳು ಅರೆ ನಿಮೀಲಿತಗೊಳ್ಳುತ್ತವೆ.

ಆದರೆ ಈ ಕವಳದ ಗಮ್ಮತ್ತನ್ನೂ ಮೀರಿ ಇಂದೂ ನನ್ನ ಮೈನವಿರೇಳಿಸುವುದು ಅಜ್ಜಿ ಹೇಳುತ್ತಿದ್ದ ಕವಳದ ಹಿಂದಿನ ಕೆಲವು ಭಯಾನಕ ಕಥೆಗಳು! ಅವೆಷ್ಟು ಸತ್ಯವಾಗಿದ್ದವೋ ಇಲ್ಲವೋ ತಿಳಿಯದು. ಚಿಕ್ಕಂದಿನಲ್ಲಿ ಮುಸ್ಸಂಜೆಯ ಹೊತ್ತಿನಲ್ಲಿ, ಕರೆಂಟ್ ಇಲ್ಲದ ಜಗುಲಿಯ ಮೇಲೆ ಲ್ಯಾಟೀನ್ನು ಹಚ್ಚಿಟ್ಟುಕೊಂಡು ಅದರ ಸುತ್ತ ಕುಳಿತು ಕುಂಯ್ ಕುಂಯ್‌ಗುಡುತ್ತಿದ್ದ ನಮ್ಮನೆಲ್ಲಾ ಗಪ್‌ಚುಪ್ ಮಾಡಿಸುತ್ತಿದ್ದುದು ಅಜ್ಜಿಯ ದೆವ್ವದ ಕಥೆಗಳೇ. ತನ್ನ ಬಾಲ್ಯದ ಘಟನೆಗಳನ್ನು, ಯಾರಿಂದಲೇ ತನ್ನ ಕಿವಿಗೆ ಬಿದ್ದಿದ್ದ ಕಥೆಗಳನ್ನೆಲ್ಲಾ ಹರವಿಕೊಂಡು ರಸವತ್ತಾಗಿ, ಕಣ್ಣಿಗೆ ಕಟ್ಟುವಂತೇ ಆಕೆ ಹೇಳತೊಡಗಿದಂತೇ ಹೊರಗೆ ಆವರುಸುತ್ತಿದ್ದ ಕತ್ತಲೆಗೂ ಹೊಸ ಆಕಾರ, ವಿಕಾರಗಳು ಹುಟ್ಟಿಕೊಳ್ಳುತ್ತಿದ್ದವು. ಅಮಾವಾಸ್ಯೆಯಂದು ತೋಟದ, ಗುಡ್ಡದ ಕಡೆಗೆ ಹೊರಟರೆ ಮನುಷ್ಯಾಕಾರದ ಹೆಣ್ಣು ಪಿಶಾಚಿ ಬರುತ್ತಾಳೆ. ಅವಳ ಕಾಲು ಉಲ್ಟಾ ಇರುತ್ತದೆ... ನೆಲಕ್ಕೆ ಕಾಲು ತಾಗಿಸದೇ ತುಸು ಮೇಲೆ ತೇಲುತ್ತಿರುತ್ತಾಳೆ. ಅಲ್ಲದೇ ಅವಳು ಸೀರೆಯನ್ನೂ ಉಲ್ಟಾ ಉಟ್ಟಿರುತ್ತಾಳೆ.... ಅವಳ ಸೊಂಟದಲ್ಲೊಂದು ಕವಳದ ಸಂಚಿ ಇರುತ್ತದೆ.... ನಿಮ್ಮನ್ನು ಕಂಡಾಕ್ಷಣ ಎಲೆ, ಅಡಿಕೆ ತೆಗೆದು, ಚೆಂದದ ಕವಳ ಮಾಡಿ ‘ಬೇಕನೆ ಕೂಸೆ, ಬೇಕನೋ ಮಾಣಿ’ ಎಂದು ಕೇಳುತ್ತಾಳೆ.. ಅಪ್ಪಿ ತಪ್ಪಿ ಕೈಯೊಡ್ಡಿದಿರೋ ಕವಳವನ್ನು ಕೆಳಗೆ ಬೀಳಿಸಿ, ನೀವು ತೆಗೆಯಲು ಬಗ್ಗಿದರೆ ನಿಮ್ಮ ತಲೆಗೆ ಫಟ್ ಎಂದು ಹೊಡೆದು ಪ್ರಜ್ಞೆ ತಪ್ಪಿಸುತ್ತಾಳೆ ಎಂದೆಲ್ಲಾ ಹೇಳುವಾಗ ಕಾಣದ ಆ ಹೆಣ್ಣು ಪಿಶಾಚಿಯ ರೂಪ ರೇಶೆಗೆ ಮನಸ್ಸು ಎಳೆಯತೊಡಗುತ್ತಿತ್ತು. ಅಲ್ಲಾ ಉಲ್ಟಾ ಕಾಲು ಎಂದರೆ ತಿಳಿಯುತ್ತದಪ್ಪಾ.. ಈ ಉಲ್ಟಾ ಸೀರೆ ಎಂದರೆ ಹೇಗೇ? ಅನ್ನೋ ಅನುಮಾನ ನನ್ನ ತುಂಬಾ ಸಲ ಕಾಡಿ, ಕೊರೆದು, ಅಜ್ಜಿಯನ್ನು ಕೇಳಲು, ಅವಳಿಂದ ಹಾರಿಕೆಯ ಉತ್ತರ ಸಿಕ್ಕಲು, ಸಮಾಧಾನವಾಗದೇ, ನಾವು ನಾವೇ ಗಂಭೀರ ಚರ್ಚೆಗೆ ತೊಡಗಿದಾಗ, ನನಗಿಂತ ಒಂದು ವರುಷ ದೊಡ್ಡವಳಾಗಿದ್ದ ಸುಮಕ್ಕಳಿಗೆ ಹಿತ್ತಲಿನ ಚಿಕ್ಕು ಮರದ ಕೆಳಗೆ ಜ್ಞಾನೋದಯವಾಗಿತ್ತು. ‘ಅಯ್ಯೋ ಮಳ್ಳಿ ಅಷ್ಟೂ ತಿಳ್ಯದಿಲ್ಯಾ? ಸೀರೆ ಕೆಳ್ಗೆ ಫಾಲ್ಸ್ ಇರ್ತಲೆ ಅದ್ನ ಮೇಲೆ ಸುತ್ಕಂಬದು, ಸೆರ್ಗ ಕೆಳ್ಗ ಉಟ್ಕಂಬದು’ ಎಂದು ಹೇಳಿದಾಗಲೇ ನನಗೆ ಸಮಾಧಾನವಾಗಿದ್ದು. ಆದರೆ ಈ ಸಮಜಾಯಿಷಿ ಒಂದು ಫಚೀತಿಗೆ ಕಾರಣವಾಗಿದ್ದು ಮಾತ್ರ ನನ್ನ ದುರದೃಷ್ಟವೇ. ಆಗಿದ್ದಿಷ್ಟೇ... ನನಗೋ ಆಗ ಹನ್ನೆರಡು ವರ್ಷವಿದ್ದಿರಬಹುದು. ಆರನೇ ಕ್ಲಾಸು ಪಾಸಾಗಿ ಬೇಸಿಗೆ ರಜೆಗೆ ಊರಿಗೆ ಹೋಗಿದ್ದೆ. ಈಗಿನ ಜನರೇಷನ್ನಿನಷ್ಟು ಆಗಿನವು ಅಂದರೆ ನಮ್ಮ ಕಾಲದ ಮಕ್ಕಳು ಬಹು ಬೇಗ ಪ್ರಬುದ್ಧರಾಗಿದ್ದಿರಲಿಲ್ಲ. ಅಂದರೆ ಈ ಹೆಣ್ಣು ಪಿಶಾಚಿ ಹೇಗಿರುತ್ತಾಳೆ? ಅವಳು ಓಡಾಡುವ ಪ್ರದೇಶಗಳು ಯಾವವು? ಎಕ್ಸಾಕ್ಟ್ ಸಮಯವೇನು? ಆಕೆ ಉಲ್ಟಾ ಸೀರೆ ಹೇಗೆ ಉಡುತ್ತಾಳೆ? ಇಂಬಿತ್ಯಾದಿ ವಿವರಣೆಗಳನ್ನು ಸಚಿತ್ರವಾಗಿ ವಿವರಿಸಲು ಆಗ ಗೂಗಲ್, ಯಾಹೂ, ಫೇಸ್‌ಬುಕ್ಕುಗಳಿರಲಿಲ್ಲ ನೋಡಿ. ಹಾಗಾಗಿ ವರುಷ ೧೬ ಆದರೂ ಒಂದು ರೀತಿಯ ಮುಗ್ಧತೆ, ಭಯ ಅಂದಿನ ಮಕ್ಕಳಲ್ಲಿ ಇದ್ದೇ ಇರುತ್ತಿತ್ತು ಅನ್ನಿ. ಆದಿನ ನನ್ನ ಕಮಲತ್ತೆಯ ದೊಡ್ಡ ಮಗಳ ಮದುವೆ ಗೋಧೂಳಿ ಮುಹೂರ್ತದಲ್ಲಿತ್ತು. ಸಂಧ್ಯೆ ಬಲಗಾಲಿಟ್ಟು ಒಳಬಂದು ನಂದಾದೀಪವ ಬೆಳಗುವ ಸಮಯ. ನನಗೋ ಕಳೆದ ದಿನವಷ್ಟೇ ಮತ್ತೆ ಅದೇ ಕಥೆಯನ್ನು ಅಜ್ಜಿಯ ಬಾಯಲ್ಲಿ ಕೇಳಿದ್ದರ ಎಫೆಕ್ಟ್ ಕಡಿಮೆಯಾಗಿರಲಿಲ್ಲ. ನೆಂಟರಲ್ಲಿ ಯಾರೋ ಸೀರೆ ಉಡಲು ಕೋಣೆಗೆ ಹೋದಾಗಲೇ ಕರೆಂಟ್ ಹೋಗಲು, ಪಾಪ ತಿಳಿಯದೇ ಆಕೆ ಉಲ್ಟಾ ಸೀರೆಯುಟ್ಟು (ಥೇಟ್ ನನ್ನ ಸುಮಕ್ಕ ವಿವರಿಸಿದ್ದಂತೇ) ಹೊರ ಬೀಳುವುದಕ್ಕೂ ಅಲ್ಲೇ ಹೊರಗೆ ಜಗುಲಿಯಲ್ಲಿ ಕುಳಿತಿದ್ದ ನನ್ನ ಕಣ್ಣಿಗೇ ಮೊದಲು ಬೀಳುವುದಕ್ಕೂ ಸರಿಹೋಯಿತು. ಹಳ್ಳಿಮನೆ, ಕತ್ತಲು ಆವರಿಸುವ ಹೊತ್ತು, ಕರೆಂಟ್ ಬೇರೆ ಟಾಟಾ ಹೇಳಿತ್ತು, ಅಂತಹ ಸಮಯದಲ್ಲೇ ಸಾಲಂಕೃತ ವಧು ಹೊರಬರುವುದನ್ನೇ ಕಾತುರದಿಂದ ಎದುರು ನೋಡುತ್ತಿದ್ದ ನನಗೆ, ಒಳಗಿಂದ ಆ ಮಹಿಳೆ ಆ ರೀತಿ ಸೀರೆಯುಟ್ಟು ಹೊರ ಬಂದಾಗ, ಗ್ಯಾಸ್ ಲೈಟಲ್ಲಿ ಆಕೆ ಬಳಿದುಕೊಂಡಿದ್ದ ಢಾಳಾದ ಪೌಡರ್, ಮೇಕಪ್ ಎಲ್ಲವುದರ ಜೊತೆಗೇ ತಿರ್ಗಾಮುರ್ಗಾ ಸೀರೆಯನ್ನೂ ನೋಡಿ, ಕಿರುಚಲೂ ಬಾಯಿ ಬಾರದಷ್ಟು ಭಯಭೀತಳಾದ ನಾನು, ಆಕೆಯ ಕಾಲ್ಗಳನ್ನು ನೋಡಲು ಮರೆತು (ನೋಡಿದ್ದರೂ ಆ ಮಬ್ಬಿನಲ್ಲೇನೂ ಸರಿಯಾಗಿ ಕಾಣುತ್ತಿರಲಿಲ್ಲವೇನೋ..), ಅಲ್ಲೇ ಕಂಬಕ್ಕೊರಗಿ ಹೆಂಗೆಳೆಯರ ಜೊತೆ ಮಾತಿಗಿಳಿದಿದ್ದ ನನ್ನಜ್ಜಿಗೆ ಆ ಮಹಿಳೆಯನ್ನು ತೋರುತ್ತಾ ‘ಅಜ್ಜಿ ನೀ ಹೇಳಿದ್ದ ಕಥೆಯಲ್ಲಿ ಬಂದಿದ್ದ ಹೆಣ್ಣ್ ಪಿಶಾಚಿ ಥರಾನೇ ಸೀರೆ ಉಟ್ಕಂಜಲೆ ಅದು.. ಅದೇನಾದ್ರೂ ಭೂತ, ಪಿಶಾಚಿ ಆಗಿರ್ಲಿಕ್ಕಿಲ್ಲೆ ಅಲ್ದಾ....?’ ಎಂದು ಕೇಳಲು ಅಜ್ಜಿಯ ಮುಖದ ತುಂಬಾ ಪ್ರೇತ ಕಳೆ ಬಡಿದುಕೊಂಡಿದ್ದು ಇನ್ನೂ ನೆನಪಿದೆ! ಪುಣ್ಯಕ್ಕೆ ಅಲ್ಲಿದ್ದವರೆಲ್ಲಾ ಹೆಣ್ಣಿನ ಕಡೆಯವರೇ ಆಗಿದ್ದರಿಂದ, ಸುದ್ದಿ ಹೆಚ್ಚು ಗುಲ್ಲಾಗದೇ ಅಲ್ಲೇ ಮಗುಮ್ಮಾಗಿ, ನನ್ನಪ್ಪನ ಬೈಗಳುಗಳಿಂದ ಬಚಾವಾಗಿದ್ದೆ. ಆದರೆ ಆಗೀಗ ಬಗ್ಗಿ ಬಗ್ಗಿ ಕಳ್ಳನೆ ಅವಳನ್ನೇ ನೋಡುವಾಗೆಲ್ಲಾ ಆಕೆ ಚೆನ್ನಾಗಿ ಕವಳ ಮೆಲ್ಲುತ್ತಾ, ಕೆಂಪಗಿನ ನಾಲಗೆ ಚಾಚಿ ದೊಡ್ಡದಾಗಿ ನಗುತ್ತಿದ್ದ ಆ ದೃಶ್ಯ ಮಾತ್ರ ಇನ್ನೂ ಚೆನ್ನಾಗೇ ಮನದೊಳಗೇ ಅಚ್ಚಾಗಿದೆ. ಇಂದೂ ಎಷ್ಟೋ ಸಲ ಮದುವೆ, ಉಪನಯನ ಸಮಾರಂಭಗಳಲ್ಲಿ ಬೀಡ ಜಗಿದು ಕೆಂಪೇರಿಸಿಕೊಂಡು ಮಾತನಾಡುವ ಮಹಿಳೆರನ್ನು ಕಂಡಾಗೆಲ್ಲಾ ಫಕ್ಕನೆ ಆ ಗೋಧೂಳಿ ಸಮಯದ ಪೇಚಿನ ಪ್ರಸಂಗದ ನೆನಪಾಗಿ ಬುಸಕ್ಕನೆ ನಗುವುಕ್ಕುತ್ತಿರುತ್ತದೆ. ಇದು ನನ್ನ ಎಡವಟ್ಟಿನ ಕಥೆಯಾದರೆ ನನ್ನ ಚಿಕ್ಕಪ್ಪನ ಮಗಳಂತೂ ಎಷ್ಟೋ ಕಾಲದವರೆಗೂ ಕವಳ ಬೀಳಿಸಿದವರಿಗೆ ಹೆಕ್ಕಿ ಕೊಡುವುದು ಹೋಗಲಿ, ಸ್ವತಃ ತನ್ನ ಕೈಯಿಂದ ಎಲೆ ಜಾರಿದರೂ ಹೆಕ್ಕಿಕೊಳ್ಳದೇ ಹೊಸ ಎಲೆಗೇ ಕೈಹಾಕುತ್ತಿದ್ದಳು! ಹಾಗಿತ್ತು ನಮ್ಮಜ್ಜಿಯ ಕವಳದ ಕಥೆಯ ಎಫೆಕ್ಟು!

ಈಗಲೂ ಅಜ್ಜಿ-ಅಜ್ಜರಿಲ್ಲದ ಮನೆಗೆ ಹೋಗುತ್ತೇವೆ... ಕವಳದ ಸಂಚಿಯೂ ಎಲ್ಲೋ ಒಂದೆಡೆ ಬಿದ್ದಿರುತ್ತದೆ.... ಕಂಬಗಳೆಲ್ಲಾ ಮುದುಕಾಗುತ್ತಿವೆ... ಹೊಸ ಕಥೆಗಳನ್ನು ಹೇಳುತ್ತಿವೆ...! ಎಲೆ-ಅಡಿಕೆ ಕ್ರಮೇಣ ಗುಟ್ಕಾ, ಸುಫಾರಿ ಆಗಿ ಮಾರ್ಪಾಡಾದದ್ದು, ಅದರ ಸಮ್ಮೋಹನಕ್ಕೆ ಒಳಗಾದ ಮುದುಕರಾದಿ ಯುವಕರೆಲ್ಲಾ ಜರ್ದಾರಿಗಳಾಗಿರುವುದು, ಪೇಟೆಯ ವ್ಯಾಮೋಹದ ಭೂತಕ್ಕೆ ಬಲಿಯಾಗಿ, ಕವಳಕ್ಕಾಗಿ (ಅಂದರೆ ಊಟ ಎಂಬರ್ಥವೂ ಹೌದು!) ಕೆಲಸಗಳನ್ನು ಅರಸಿ ಪರವೂರನ್ನು ಸೇರಿದ ಮಂದಿಗಳಿಂದಾಗಿಯೇ ಊರಿನ ಅದೆಷ್ಟೋ ಮನೆಗಳು ಭೂತ ಬಂಗ್ಲೆ ಆಗಿರುವುದು ಮುಂತಾದ ಸತ್ಯ ಕಥೆಗಳು ಸಾಕ್ಷಿ ಸಮೇತ ಕಣ್ಣೆದುರು ಬರುತ್ತಿರುತ್ತವೆ... ಅದೂ ಹೊಸ ಹೊಸ ರೂಪದಲ್ಲಿ, ಹೊಸ ಹೊಸ ರೀತಿಯಲ್ಲಿ!  ಅಜ್ಜಿ ಹೇಳುತ್ತಿದ್ದ ಆ ಹೆಣ್ಣು ದೆವ್ವ ಈಗ ಹಳ್ಳಿಗಳನ್ನು ಹೊಕ್ಕಿರುವ ಮಾಯಾವಿಗಿಂತಲೂ ಭಯಾನಕಳಾಗಿದ್ದಳೆಯೇ? ಎಂಬ ಭೂತಾಕಾರದ ಪ್ರಶ್ನೆಗೆ ಉತ್ತರ ಒಳಗೆಲ್ಲೂ ಗೊತ್ತಿದ್ದರೂ, ಒಪ್ಪಿಕೊಳ್ಳಲು ಮನಸ್ಸು ಭೀತಗೊಳ್ಳುತ್ತದೆ. ಇವೆಲ್ಲವನ್ನೂ ಮರೆಯಲು, ನನ್ನ ಮಗಳಿಗೆ ನನ್ನಜ್ಜಿಯ ಕವಳದ ಕಥೆಯನ್ನೂ, ಆ ಕಥಾ ನಾಯಕಿ ಕಮ್ ವಿಲನ್‌ಳಾದ ಹೆಣ್ಣು ಪಿಶಾಚಿಯನ್ನೂ, ತಿರ್ಗಾ ಮುರ್ಗಾ ಸೀರೆಯನ್ನೂ ರೋಚಕವಾಗಿ ಹೇಳುತ್ತಿರುತ್ತೇನೆ. ಆಕೆಯಲ್ಲಿ ವಯಸ್ಸಿಗನುಗುಣವಾದ ಮುಗ್ಧತೆ ಇನ್ನೂ ಜೀವಂತವಾಗಿದೆಯೆನ್ನುವುದಕ್ಕೆ ಕಥೆ ಕೇಳುವಾಗ ದೊಡ್ಡದಾಗಿ ಅರಳಿಕೊಳ್ಳುವ ಅವಳ ಕಣ್ಗಳೊಳಗಿನ ಥ್ರಿಲ್, ಸಣ್ಣ ಕಳವಳವೇ ಸಾಕ್ಷಿ. ಗೂಗಲ್ ಮಾಡಿ ಆ ಹೆಣ್ಣು ಪಿಶಾಚಿಯ ಬಯೋಡಾಟ ನೋಡುವಷ್ಟು ಚಾಣಾಕ್ಷ್ಯತನ ಅವಳಲ್ಲಿ ಬರುವವರೆಗೂ ಅಜ್ಜಿಯ ಆ ಕವಳದ ಹಿಂದಿನ ಕಳವಳದ ಕಥೆ ನಮ್ಮಿಬ್ಬರ ನಡುವೆಯಂತೂ ಜೀವಂತವಾಗಿರುತ್ತದೆ.

-ತೇಜಸ್ವಿನಿ ಹೆಗ್ಡೆ.

ಶುಕ್ರವಾರ, ಸೆಪ್ಟೆಂಬರ್ 19, 2014

ಪಯಣ ಹೋರಾಟದ ಜೊತೆಗೆ.....

ಭಾರತದಲ್ಲಿ ಹೆಣ್ಣು ಎರಡನೆಯ ದರ್ಜೆಯ ಪ್ರಜೆ ಹೌದು/ಅಲ್ಲಾ ಎಂಬೆಲ್ಲಾ ವಾದ ನಡೆಯುತ್ತಲೇ ಇದೆ. ಅದು ನಿಲ್ಲುವುದು ಎಂದೋ ಎನ್ನುವುದೂ ತಿಳಿಯದು. ಆದರೆ ಹೆಣ್ಣು, ಗಂಡು, ಬಡವ, ಶ್ರೀಮಂತ, ಬ್ರಾಹ್ಮಣ, ದಲಿತ, ಹಿಂದು ಮುಸ್ಲಿಮ್ ಈ ಎಲ್ಲಾ ಗೊಂದಲ, ಗಲಾಟೆ, ಚರ್ಚೆ, ಹೋರಾಟ, ಪರದಾಟಗಳ ನಡುವೆ ನಾವು ಅಂದರೆ ವಿಶೇಷವಾಗಿ ಭಾರತೀಯರು ಮರೆತಿರುವುದು ಸಾಮಾಜಿಕ, ಆರ್ಥಿಕ, ಕೌಟುಂಬಿಕ ಎಲ್ಲಾ ರೀತಿಯಲ್ಲೂ ಇನ್ನೂ ಸಾಕಷ್ಟು ಹಿಂದುಳಿದಿರುವ, ಕುಗ್ಗಿ ಮೇಲೇರಲು ಇನ್ನಿಲ್ಲದಂತೇ ಪ್ರಯತ್ನಿಸುತ್ತಾ ಸೋತು ಸೊಪ್ಪಾಗುವ, ಬದುಕುವುದಕ್ಕಾಗಿ ಪ್ರತಿ ಕ್ಷಣ ಹೋರಾಡುವ, ಯಾವ ದರ್ಜೆಗೆ ಸೇರಿದರೆಂದೇ ತಿಳಿಯಲಸಮರ್ಥರಾಗಿರುವ, ಜಾತಿ-ಮತ-ಪಂಥ ಬೇಧವಿಲ್ಲದ ಒಂದು ವರ್ಗವನ್ನು!! ಹೌದು ನಾನಿಲ್ಲಿ ಹೇಳುತ್ತಿರುವ ಅಂಗವಿಕಲ ಬಗ್ಗೆ...! ನಮ್ಮ ಸಮಾಜದಲ್ಲಿ ಇನ್ನೂ ಅವರ ಬಗ್ಗೆ ಆಳವಾಗಿ ಬೇರು ಬಿಟ್ಟಿರುವ ಒಂದು ರೀತಿಯ ಉಡಾಫೆ, ನಿರ್ಲಕ್ಷ್ಯತನ, ಸಲ್ಲದ ಕರುಣೆ, ಅನುಕಂಪದ ಭಾವದ ಪ್ರದರ್ಶನ, ಅವರ ಸಮಸ್ಯೆ, ಹಕ್ಕುಗಳ ಪ್ರತಿ ತೋರುವ ಅಸಡ್ಡೆಯ ಬಗ್ಗೆ.

ಆಮೀರ್ ನಡೆಸಿಕೊಡುತ್ತಿರುವ ಸತ್ಯಮೇವ ಜಯತೇ ನನಗೆ ಬಹುವಾಗಿ ಮೆಚ್ಚುಗೆಯಾಗಿದ್ದು ಅವನು ನೀಡುತ್ತಿದ್ದ ನಿಖರ ಅಂಕಿ-ಅಂಶಗಳನ್ನು ನೋಡಿ, ಸಮಸ್ಯೆಗೊಳಗಾದ ಜನರ ಬಾಯಿಯಿಂದಲೇ ಹೊರಡಿಸುತ್ತಿದ್ದ ಸತ್ಯಾಪಸತ್ಯೆಗಳ ವೈಖರಿಯನ್ನು ನೋಡಿ. ಮೂರು ಕೋಟಿ ಪಡೆದಿರುವ, ಅಷ್ಟು ಹಣಗಳಿಸಿರುವ.. ಹಾಗೆ ಹೀಗೆ ಎಂದೆಲ್ಲಾ ಆರೋಪಗಳನ್ನು ಪಕ್ಕಕ್ಕಿರಿಸಿ ನನ್ನ ಸೆಳೆದದ್ದು.... ಹೌದು ಇಂಥದ್ದೊಂದು ರಿಯಾಲಿಟೀ ಶೋ ಬೇಕಿತ್ತು... ಇಂಥ ಒಂದು ಸಾಮಾಜಿಕ ಚಳುವಳಿ, ಜಾಗೃತಿಯನ್ನುಂಟು ಮಾಡುವ ಕಾರ್ಯ ಅದೆಷ್ಟು ನಟರು ಮಾಡುತ್ತಿದ್ದಾರೆ ಹೇಳಿ? ಆ ನಿಟ್ಟಿನಲ್ಲೇ ನನಗೆ ಈ ಶೋ ಹೆಚ್ಚು ಇಷ್ಟವಾದದ್ದು.. ವರದಕ್ಷಿಣೆ, ಭ್ರೂಣ ಹತ್ಯೆ, ಅತ್ಯಾಚಾರ, ಭ್ರಷ್ಟಾಚಾರ ಈ ಎಲ್ಲಾ ಪಿಡುಗಗಳ ನಡುವೆ ಆತ ಅಂಗವಿಕಲ ಸಮಸ್ಯೆಗಳು, ಅವರ ದಿನದ ಬವಣೆಗಳು, ಅದಕ್ಕಿರುವ ಪರಿಹಾರ, ಅವರ ಹಕ್ಕುಗಳ ಕುರಿತು ದನಿಯೆತ್ತಿದ್ದ. ಈ ನಡುವೆ ಸ್ಟಾರ್‌ಪ್ಲಸ್‌ನಲ್ಲಿ ಸತ್ಯಮೇವ ಜಯತೆ ಕಾರ್ಯಕ್ರಮದ ಪ್ರಭಾವದಿಂದ ಏನೆಲ್ಲಾ ಸುಧಾರಣೆ, ಜಾಗೃತಿ ಉಂಟಾಗಿದೆ ಅನ್ನುವುದನ್ನು ತೋರುತ್ತಿದ್ದಾರೆ. ಅದರಲ್ಲಿ ಪ್ರಮುಖವಾಗಿ ನನ್ನ ಸೆಳೆದದ್ದು ಗ್ವಾಲಿಯರ್‌ನ ಜಿಲ್ಲಾಧಿಕಾರಿಯೋರ್‍ವ ತನ್ನ ವ್ಯಾಪ್ತಿಗೆ ಬರುವ ಕಾರ್ಯಕ್ಷೇತ್ರದಲ್ಲೆಲ್ಲಾ ಅಂಗವಿಕಲರಿಗಾಗಿ ರ್ಯಾಂಪ್(Ramp) ಹಾಕಿಸಿದ್ದು...! ಸ್ಕೂಲ್, ಕಾಲೇಜು, ಕ್ಲಿನಿಕ್ ಹೀಗೆ ಎಲ್ಲಾ ಸಾರ್ವಜನಿಕ ಜಾಗಗಳಲ್ಲಿ ಅಂಗವಿಕಲರೂ ಸುಲಭವಾಗಿ ಹೋಗಿ ಬರುವಂತೆ ರೇಂಪ್ ಹಾಕಿಸಿದ್ದನ್ನು ತೋರಿಸಿದಾಗ ಎಲ್ಲೋ ಎನೋ ಸಮಾಧಾನದ ಭಾವ. ಸಂತಸವುಂಟಾಗಲು ಇನ್ನೂ ತುಂಬಾ ಕಾಲ ಕಾಯಬೇಕಿದೆ! ಟಿ.ವಿ ತೋರಿಸಿದ್ದು ಉತ್ಪ್ರೇಕ್ಷೆ, ಅಥವಾ ತುಸು ಹೆಚ್ಚುಗಾರಿಕೆಯಲ್ಲೇ ತೋರಿಸಿದ್ದಾರೆ ಎಂದು ನೀವು, ನಾನು ಭಾವಿಸಿದರೂ... ಅವರು ಹೇಳಿದ್ದರಲ್ಲಿ ಕಾಲು ಪರ್ಸೆಂಟ್ ಆದರೂ ನಿಜವಾಗಿದ್ದರೆ.. ಅದಕ್ಕಿಂತ ದೊಡ್ಡ ಜಾಗೃತಿ ಬೇರಿಲ್ಲ. ಹೀಗಿರುವಾಗ ಈ ಜಾಗೃತಿ ದೇಶದೆಲ್ಲೆಡೆ ಯಾಕಾಗಬಾರದು?

ನಾನು ನನ್ನೊಂದಿಗಾದ ಅತಿ ಸಣ್ಣ ಕಹಿ ಘಟನೆಯನ್ನೂ, ಮತ್ತು ಅದನ್ನು ನಾನು ಎದುರಿಸಿದ್ದ ರೀತಿಯನ್ನೂ ತುಂಬಾ ಹಿಂದೆ ದಟ್ಸ್‌ಕನ್ನಡದಲ್ಲಿ ಬರೆದಿದ್ದೆ.. ಬ್ಲಾಗಲ್ಲೂ ಹಾಕಿದ್ದೆ.. ಲಿಂಕ್ ಇಲ್ಲಿದೆ...

&


ಮೇಲಿನ ಲಿಂಕ್‌ನಲ್ಲಿ ನಾನು ಹೇಳಿದ್ದು ಅತಿ ಸಣ್ಣ ಘಟನೆ.. ಆದರೆ ಇಂಥದ್ದನ್ನು ಪ್ರತಿ ಕ್ಷಣ, ಪ್ರತಿ ದಿವಸ ಎಲ್ಲೆಂದರೆಲ್ಲಿ ನಾನು, ನನ್ನಂಥವರು ಎದುರಿಸುತ್ತಿರುತ್ತೇವೆ. ಉದಾಹರಣೆಗೆ :-

ಮನೆಯ ದಿನಸಿ, ಸಾಮನುಗಳನ್ನು ತರಲು ನಾವು ಮಾಲ್‌ಗಳಿಗೇ ಹೋಗಬೇಕಾಗುತ್ತದೆ (ಬಿಗ್ ಬಝಾರ್ ಅಂಥದ್ದು..). ಕಾರಣ ಲಿಫ್ಟ್ ಇರೋದೇ ಅಂಥ ದೊಡ್ಡ ಅಂಗಡಿಗಳಲ್ಲಿ!!! :( ತಕ್ಕಮಟ್ಟಿಗೆ ಆರ್ಥಿಕವಾಗಿ ಸಬಲರಾದವರಾದರೆ ಸರಿ.. ಹೇಗೋ ಹೋಗಬಹುದು.. ಇಲ್ಲಾ ಅಂದರೆ...? ಇನ್ನು ನನ್ನಂಥವರು ಮಾಲ್‌ಗೆ ಹೋಗಿ ಸಾಮಾನು ಕೊಳ್ಳಲು ಹೋದರೆ... ಮೇಲಿಟ್ಟಿರುವ ಸರಕುಗಳಿಗೆ ಸಹಾಯ ಬೇಕಾದಾಗ, ಅಲ್ಲಿರುವವರು ಸಹಕರಿಸುತ್ತಾರೆ.. ಇಲ್ಲಾ ಎಂದಲ್ಲಾ.. ಆದರೆ ಜೊತೆಗೊಮ್ಮೊಮ್ಮೆ ಈ ರೀತಿಯ ಮಾತೂ ಬರುವುದು "ಛೇ.. ಪಾಪ ಇಷ್ಟು ದೂರ.. ಸಾಮಾನಿಗಾಗಿ ಇಂಥವರು ಬರ್ಬೇಕಾ? ಮನೆಯವ್ರು ಬಂದ್ರೆ ಸಾಕಾಗೊಲ್ವಾ?" ಇತ್ಯಾದಿ... ಇದು ಅನುಕಂಪ ಎಂದು ಸುಮ್ಮನಿದ್ದರೂ, ಮತ್ತೆ ಕೆಲವರು "ವ್ಹೀಲ್‌ಚೇರ್ ಆಚೀಚೆ ಹೋಗೋವಾಗ ಇಕ್ಕಟ್ಟಾಗೊತ್ತೆ.. ಇವ್ರಿಂದ ನಮ್ಗೆ ತೊಂದ್ರೆ ಸಾಮಾನು ಸರ್ಸೋದು, ಇಡೋದು.. ಜೊತೇಲಿರೋವ್ರು ಕೆಲ್ಸ ಮಾಡ್ಬಾರ್ದಾ...?" ಅನ್ನೋ ಅಸಹನೆಯ ಉತ್ತರವೂ ಅದೆಷ್ಟೋ ಸಲ ಕೇಳಿದ್ದೇನೆ....!! ಜನ ಇಲ್ಲಿ ಮರೆವುದು ಒಂದೇ.. ಯಾರೂ ಯಾರಿಗೂ ಅವಲಂಬಿತವಾಗಿ ಬದುಕಲಾಗದು. ಅವರವರ ಬದುಕು ಅವರದ್ದು.. ಸಹಕಾರ, ಸಲಹೆಗಳಿಗೆ ಸದಾ ಸ್ವಾಗತ.. ಬೇಕಾದ್ದು. ಅದು ಬಿಟ್ಟು ನಿನ್ನಿಂದಾಗದು, ಅಶಕ್ತ, ಸುಮ್ಮನೆ ಕೂತಿರು.. ನಾವಿದ್ದೀವಿ ಎಂದು ಹೇಳುವುದರಿಂದ ಗಟ್ಟಿ ಮುಟ್ಟಾದ ಮನುಷ್ಯನೂ ಕುಗ್ಗೇ ಹೋಗುತ್ತಾನೆ ಕ್ರಮೇಣ. ಇಂತಿರುವಾಗ ಅಂಗವಿಕಲರ ಪಾಡೇನು? ಇಲ್ಲಿ ನನ್ನ ವಿಷಯವೇ ಬೇರೆ... ನಾನೆಂದೂ ಇಂಥಾ ಮಾತುಗಳಿಗೆ, ವರ್ತನೆಗೆ ತಲೆಕೆಡಿಸಿಕೊಳ್ಳುವುದ ಬಿಟ್ಟು ದಶಕಗಳೇ ಸಂದಿವೆ... ಆದರೂ ಒಮ್ಮೊಮ್ಮೆ ರೋಸಿ ಹೋಗಿ ಕಟುವಾಗಿ ಉತ್ತರಿಸುವುದುಂಟು. ಆದರೆ ಸರಿಯಾದ ರೀತಿಯಲ್ಲಿ ಪ್ರೋತ್ಸಾಹ ಸಿಗದ, ಆರ್ಥಿಕವಾಗಿ, ಸಾಮಾಜಿಕವಾಗಿ ಬೆಂಬಲವಿಲ್ಲದ ಅಂಗವಿಕಲರ ಗತಿಯೇನು? ಸಮಾಜ ಅವರಿಗಾಗಿ ಎಷ್ಟು ಕಾರ್ಯೋನ್ಮುಖವಾಗಿದೆ? ಇವೆಲ್ಲವನ್ನೂ ನೋಡಾಲೇಬೇಕಾಗಿದೆ. ಜಾಗೃತಿ ಮೂಡಿಸಲೇಬೇಕಾಗಿದೆ.

ಎಲ್ಲರಂತೆ ಸಹಜವಾಗಿ, ನಿರ್ಭಯವಾಗಿ, ಸ್ವಾಲಂಬನೆಯಿಂದ ಬದುಕುವ ಹಕ್ಕು ಅಂಗವಿಕಲರದ್ದೂ ಹೌದು. ಆ ಹಕ್ಕನ್ನು ನಮ್ಮ ಸರ್ಕಾರ, ಸಮಾಜ ಕೆಲಸಕ್ಕೆ ಬಾರದ, ಕಾನೂನಿನಲ್ಲಿದ್ದರೂ ಸಮರ್ಪಕವಾಗಿ ಜಾರಿಗೆ ಬರದ ಕಾಯಿದೆಗಳಿಂದ ವಂಚಿತಗೊಳಿಸಿದೆ. ಯಾವುದೇ ಅಂಗಡಿಗಳಿರಲಿ, ಎಂಥಕ್ಕೇ ಸಾರ್ವಜನಿಕ ಸ್ಥಳವಾಗಿರಲಿ.. ಅಂಗನ್ಯೂನತೆಯುಳ್ಳವರು ಸುಲಭವಾಗಿ ಹೋಗಿ ಬರುವಂತೇ ವ್ಯವಸ್ಥೆ ಕಲ್ಪಿಸಲು ಕನಿಷ್ಠ ರೇಂಪ್ ವ್ಯವಸ್ಥೆಯೂ ಇರುವುದಿಲ್ಲ ಎಷ್ಟೋ ಕಡೆ!! ಮೆಟ್ಟಿಲುಗಳಿಲ್ಲದೇ ಯಾವುದೇ ಕಟ್ಟಡ ಕಟ್ಟಲಾಗದು ಒಪ್ಪುವೆ.. ಅದರೆ ಬದಿಯಲ್ಲೊಂದು ರೇಂಪ್ ಹಾಕಿಸಲು ಲಕ್ಷಗಟ್ಟಲೆ ಬೇಕೆ? ಕಟ್ಟು ನಿಟ್ಟಾದ ಕಾನೂನು ಯಾಕಿಲ್ಲ? ಕಟ್ಟಡ ಕಟ್ಟುವಾಗಲೇ ಇಂಥಾ ಒಂದು ಸೌಲಭ್ಯವಿದೆಯೇ ಎಂದು ನೋಡಿಯೇ ಒಪ್ಪಿಗೆ ನೋಡಲು ಸರ್ಕಾರ ಮುಂದಾಗ ಬೇಕು. ನಮ್ಮಲ್ಲಿ ತಮಾಷೆ ಎಂದರೆ ಒರ್ಥೋಪೆಡಿಕ್ ಡಾಕ್ಟರ್ ಇರೋದು ಎರಡನೆಯ ಮಹಡಿಯಲ್ಲಿ ಅದೂ ಲಿಫ್ಟ್ ಇಲ್ಲದೇ!!! ಸರ್ವರಿಗೂ ಸಮಬಾಳು, ಸಮಾನತೆ ಎಲ್ಲಿದೆ ಇವರ ವಿಷಯದಲ್ಲಿ? ಈ ನಿಟ್ಟಿನಲ್ಲಿ ನಿಜಕ್ಕೂ ವಿದೇಶದಲ್ಲಿರುವ ಸುವ್ಯವಸ್ಥೆ, ಅಲ್ಲಿಯ ಜನರ ವರ್ತನೆ (ಅಂಗವಿಕಲರ ಪ್ರತಿ..) ತುಂಬಾ ಮಾದರಿ!!!

ಒಟ್ಟಿನಲ್ಲಿ ಆರ್ಥಿಕವಾಗಿ ಸಬಲರೋ ದುರ್ಬಲರೋ ಹೋರಾಟ, ಮಾನಸಿಕ ತೊಳಲಾಟ, ಹಿಂಸೆ ಇವರಿಗೆ ಕಟ್ಟಿಟ್ಟದ್ದೇ! ಇಂಥವರು ಇಂಥಾ ಕೆಲಸಕ್ಕೆ ಮಾತ್ರ ಲಾಯಕ್ಕಿ‌ಇ... ಇಲ್ಲದ ಹೋಗದ ಉಪಧ್ವಾನ ಯಾಕೆ ಅನ್ನೋ ಚೌಕಟ್ಟಿನ ದೃಷ್ಟೀಕೋನದಿಂದ ಸಮಾಜ ಮುಕ್ತವಾಗೇ ಇಲ್ಲಾ ಇನ್ನೂ! ನನ್ನ ತಂದೆ, ತಾಯಿ, ತಂಗಿಯರ ಪ್ರೋಸಾಹ, ಅರೆ ನಿಮಿಷವೂ ನಾನು ಹೀಗೆ ಎನ್ನುವ ತುಸು ಭಾವವೂ ಬರದಂತೇ ಬೆಳೆಸಿದ ಅವರ ಆತ್ಮವಿಶ್ವಾಸ ಭರಿತ ಬೆಂಬಲದಿಂದ ನಾನಿಂದು ಕೀಳಿರಮೆ.. ಅಥವಾ ಯಾವುದೇ ಹಿಂಜರಿಕೆಯಿಂದ ಕುಗ್ಗಿಲ್ಲ.. ಆ ರೀತಿ ನನ್ನ ಬಾಲ್ಯದಿಂದಲೂ ಬೆಳೆಸಲೂ ಇಲ್ಲಾ. ಆದರೆ ಎಷ್ಟು ಜನ ಮನೆಯವರು, ಹೆತ್ತವರು, ಸ್ನೇಹಿತರು ಈ ರೀತಿಯ ಬೆಂಬಲ, ಪ್ರೋತ್ಸಾಹ, ಬದುಕಿನಿದ್ದಕ್ಕೂ ತಾಳ್ಮೆಯ ಸಹಕಾರ ನೀಡುತ್ತಾರೆ? ಆ ನಿಟ್ಟಿನಲ್ಲಿ ನಾನು ಪುಣ್ಯವಂತೆಯೇ!! ಆದರೆ ನನಗೊಲಿದಿರುವ ಸವಲತ್ತುಗಳಿಂದ ನಾನು ಖುಶಿ ಪಡುವ ಬದಲು ಪ್ರತಿ ದಿವಸ ನನ್ನಂಥವರಿನ್ನೂ ಕತ್ತಲ ಕೂಪದಲ್ಲಿ ಬೇಯುತ್ತಿರುವುದನ್ನು.. ಹಣವಿದ್ದರೂ ಮನೆಯವರ ಪ್ರೋತ್ಸಾಹವಿಲ್ಲದೇ ಅನಕ್ಷರಸ್ಥರಾಗಿರುವುದನ್ನು... ಹಲವೆಡೆ ಹೆತ್ತವರ, ನೆಂಟರಿಷ್ಟರ, ಸಮಾಜದ ತಿರಸ್ಕಾರಕ್ಕೊಳಗಾಗಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವುದನ್ನು ಕಂಡು ತುಂಬಾ ಹಿಂಸೆ ಅನುಭವಿಸುತ್ತಿರುತ್ತೇನೆ. ಅಸ್ಪೃಶ್ಯತೆ ಜಾತಿಗೆ ಮಾತ್ರವಲ್ಲ.. ನಮ್ಮಂಥವರನ್ನೂ ಕಾಡುತ್ತಿದೆ... ಆದರೆ ನಿಜವಾಗಿ ಸಹಕಾರ, ಬೆಂಬಲ ಸಿಗಬೇಕಾದವರಿಗಾಗಿ ಸಮಾಜದ ಅರ್ಧದಷ್ಟು ಭಾಗವೂ ನಿಲ್ಲುತ್ತಿಲ್ಲ!! ಇದರರ್ಥ ಎಲ್ಲರೂ ಹೀಗೇ ಎಂದು ಖಂಡಿತ ಹೇಳುತ್ತಿಲ್ಲಾ. ನಾನು ಬೆಳೆದ ರೀತಿಗೆ, ನನ್ನೊಳಗಿನ ಆತ್ಮವಿಶ್ವಾಸಕ್ಕೆ ಸ್ನೇಹಿತರ, ಇದೇ ಸಮಾಜದ ಹಲವು ಸಹೃದಯರು ಕಾರಣ. ಆದರೆ ಅವರ/ಅಂಥವರ ಸಂಖ್ಯೆ ಹೆಚ್ಚಾಗಬೇಕು. ಕಾರಣ ಎಲ್ಲರೂ ನನ್ನಂಥ ಬಾಳ್ವೆ ಸಮನಾಗಿ ಅರ್ಹರು ಮತ್ತು ಅದು ಅವರ ಹಕ್ಕು!!

ಬಾಲ್ಯದಲ್ಲಿ ಮೊತ್ತ ಮೊದಲು ನನ್ನ ಶಾಲೆಗೆ ಸೇರಿಸುವಾಗ ಅಪ್ಪನ ಸ್ನೇಹಿತವರ್ಗ, ಸಮಾಜ ಅವರಿಗಿತ್ತ ಸಲಹೆ ಎಂದರೆ ‘ಇಂಥವರಿಗಾಗಿಯೇ ಇರುವ ವಿಶೇಷ ಸ್ಕೂಲ್‌ಗೆ ಸೇರಿಸಿಬಿಡಿ..." ಆದರೆ ನನ್ನ ಚೈತನ್ಯದ ಪ್ರತಿರೋಧ, ಅಪ್ಪ ಅಮ್ಮನ ಧೈರ್ಯ ಹಾಗೆ ಮಾಡದೇ ಎಲ್ಲರಂತೇ ನಾರ್ಮಲ್ ಸ್ಕೂಲ್‌ಗೇ ಸೇರಿಸಲು ಪ್ರೇರೇಪಿಸಿತು. ಇದರ್ಥ.. ಅಂಥ ಸ್ಕೂಲ್‌ಗೆ ಹೋಗಲೇ ಬಾರದೆಂದಲ್ಲಾ... ಸಾಧ್ಯವಾದಷ್ಟೂ ಅಂಗವಿಕಲರು ಸಮಾಜದ ಮುಖ್ಯವಾಹಿನಿಯ ಜೊತೆ ಜೊತೆಯಲ್ಲೇ.. ಎಲ್ಲರಂತೇ ನಾವು ಎನ್ನುವ ಭಾವದಲ್ಲಿ ಬೆರೆತು ಬೆಳೆದಂತೇ ಆತ್ಮವಿಶ್ವಾಸ, ಧೈರ್ಯ ತನ್ನಿಂದ ತಾನೇ ಬಲಿಯುವುದು.. ಬಲಿಷ್ಠಗೊಳ್ಳುವುದು! ಆದರೆ ಒಂದನೆಯ ತರಗತಿಯಲ್ಲಿ ಮಂಗಳೂರಿನ ಶಾಲೆಯೊಂದು ನನಗೆ ಪ್ರವೇಶ ಕೊಡಲು ಹಿಂದೇಟು ಹಾಕಿತ್ತು! ಕಾರಣ ನಾನು ನಡೆಯಲಾಗದು... ನನ್ನಂಥವರಿಗೆ ಕಲಿಸುವುದು ಹೇಗೆ? ಇವಳಿಂದ ಇತರರಿಗೂ ತೊಂದರೆ ಆಗಬಹುದು ಅನ್ನೋ ಕ್ಷುಲ್ಲಕ ಪ್ರಶ್ನೆ ಮುಂದೂಡಿ! ಹಠ ಹೊತ್ತ ಅಪ್ಪ ಹೋರಾಡಿ ಅಲ್ಲೇ ಒಂದು ವರುಷ ಓದಿಸಿ ಮರುವರುಷ ಕೆನರಾ ಸ್ಕೂಲ್‌ಗೆ ದಾಖಲಿಸಿದ್ದ. (ಆ ಸ್ಕೂಲ್‌ನಲ್ಲಿ ಏನೂ ತೊಂದರೆ ಆಗದೇ ಪ್ರವೇಶ ಸಿಕ್ಕಿತ್ತು.) ಎಲ್ಲಾ ಒಂದೇ ರೀತಿ ಇರದು.. ಆದರೆ ಇನ್ನೂ ಆ ಭಾವ ಸಾಕಷ್ಟು ಇದೆ ನಮ್ಮಲ್ಲಿ!! ಈಗಲೂ ಅಂಗವಿಕಲರನ್ನು ಪ್ರತಿಷ್ಠಿತ ಸ್ಕೂಲ್‌ಗಳಲ್ಲಿ ಸೇರಿಸಿಕೊಳ್ಳುವಾಗ ತುಸು ಅನುಮಾನ ತೋರಿದ್ದ ಘಟನೆಗಳೂ ಕೇಳಿ ಬಂದಿವೆ!! ಮುಂದೆ ಕಾಲೇಜಿನಲ್ಲಿ ಸೈನ್ಸ್ ತೆಗೆದುಕೊಳ್ಳ ಹೊರಟಾಗ ‘ಇವಳಿಂದ ಪ್ರಾಕ್ಟಿಕಲ್ಸ್ ಸಾಧ್ಯವೇ? ಕಷ್ಟ... ಬೇಡ’ ಎಂದವರೇ ನೂರಾರು ಜನ! ಇಲ್ಲಿ ಹಠ ನನ್ನದಾಗಿತ್ತು... ಕೆಮೆಸ್ಟ್ರಿಯಲ್ಲಿ ಹೈಯೆಸ್ಟ್ ಸ್ಕೋರ್ ಮಾಡಿ ಬಿ.ಎಸ್ಸಿ. ತೇರ್ಗಡೆ ಮಾಡಿದಾಗ ಅಭಿನಂದಿಸಿದವರೂ ಅವರೇ ಆಗಿದ್ದರು. ಪಿ.ಯು.ಸಿಯಲ್ಲಿ ಉತ್ತಮ ಅಂಕ ಇದ್ದು ಮೆರಿಟ್‌ನಲ್ಲೇ ವೈದ್ಯಕೀಯ ಶಿಕ್ಷಣಕ್ಕೆ ಸೀಟ್ ಸಿಕ್ಕಿದ್ದರೂ, ನಾನು ಮಾಡದಿರುವುದಕ್ಕೆ ಕಾರಣ ಕಟ್ಟಡಗಳು ನನ್ನ ಹೊತ್ತಲು ಅಸಮರ್ಥವಾಗಿದ್ದು! ಲಿಫ್ಟ್ ಇಲ್ಲದ ಮಹಡಿಗಳಿಂದಾಗಿ ಓದಲು ಆಗದಿದದ್ದು!! ಬಿ.ಎಸ್ಸಿ.ಯಲ್ಲಿ ಅತ್ಯುತ್ತಮ ಅಂಕಗಳಿದ್ದರೂ ನನ್ನಿಷ್ಟದ ಮೈಕ್ರೋ ಬಯಾಲಜಿ ಮಾಡಲಾಗದಿದ್ದುದಕ್ಕೂ ಕಾರಣ ಇದೇ...!!! ಈಗ ಹೇಳಿ ಆರ್ಥಿಕವಾಗಿ ಸ್ವಲ್ಪ ಮಟ್ಟಿಗೆ ಉತ್ತಮ ಸ್ಥಿತಿಯಲ್ಲಿದ್ದೂ, ಹೆತ್ತವರ, ಸ್ನೇಹಿತರ ಬೆಂಬಲವಿದ್ದೂ ನನ್ನಿಂದಾಗದ್ದು, ಏನೂ ಇಲ್ಲದ, ಸಾಧಿಸುವ ಹುಮ್ಮಸ್ಸಿದ್ದೂ ಮಾಡಲಾಗದ.. ಒಂದಿಂಚೂ ನಡೆಯಲಾಗದೇ ಹೊರ ಪ್ರಪಂಚದಿಂದಲೇ ವಿಮುಖವಾಗಿರುವ ಅದೆಷ್ಟು ಅಂಗವಿಕಲರಿದ್ದಾರೆ ನಮ್ಮೊಂದಿಗೆ?! ಮೇಲೆ ಹೇಳಿರುವ ಘಟನೆ ಒಂದೆರಡು ಸ್ಯಾಂಪಲ್ಸ್ ಅಷ್ಟೇ. ಹುಟ್ಟಿದ ದಿನದಿಂದ, ಈವರೆಗೂ, ಈ ಕ್ಷಣವೂ ಸಾಕಷ್ಟು ಅನುಭವಗಳನ್ನು ಬದುಕು ನೀಡುತ್ತಲೇ ಬಂದಿದೆ. ಆದರೆ ಸಮಾಜ ತನ್ನ ದೃಷ್ಟೀಕೋನದಲ್ಲಿ, ವರ್ತನೆಯಲ್ಲಿ ಸಾಕಷ್ಟು ಸುಧಾರಣೆಯನ್ನೂ ತೋರುತ್ತಿರುವುದು ತುಸು ಸಮಾಧಾನವನ್ನೂ ತಂದಿದೆ.

ನಾನಿದನ್ನೆಲ್ಲಾ ಹೇಳಿದ್ದು ನಾನೇನೋ ಸಾಧನೆ ಮಾಡಿರುವೆ ಎಂದು ಹೇಳಿಕೊಳ್ಳಲು ಅಲ್ಲವೇ ಅಲ್ಲಾ... ಅಥವಾ ಯಾವುದೇ ದಯೆ, ಅನುಕಂಪಕ್ಕಂತೂ ಖಂಡಿತ ಅಲ್ಲಾ! ತಿಳಿಯದ, ಅರಿವಿಗೆ ಬಾರದ ಸಹೃದಯವುಳ್ಳ ಎಲ್ಲರಲ್ಲೂ ಜಾಗೃತಿ ಮೂಡಿಸಲು. ಇಷ್ಟೆಲ್ಲ ಕಳಕಳಿ ಇರುವ ನಾನೇನು ಮಾಡಿರುವೆ? ಎಂದೆಣಿಸದಿರಿ... ನನ್ನದೇ ಆದ ರೀತಿಯಲ್ಲಿ... ಶಕ್ತಿ ಮೀರಿ ಪ್ರಯತ್ನಿಸುತ್ತಲೇ ಇದ್ದೇನೆ. ನನ್ನಂಥವರಿಗೆ ಪ್ರೇರಣೆಯಾಗಿ ಮಾಲತಿ ಹೊಳ್ಳರಂಥ ವಿಶಿಷ್ಟ ಸಾಧಕರಿದ್ದಾರೆ. ಜಾತಿ ಮತ ಬೇಧವಿಲ್ಲದೇ ರಾಜ್ಯದ ನಾನಾ ಭಾಗದಿಂದ ಅವರು ಬಡ ಅಂಗವಿಕಲ ಮಕ್ಕಳನ್ನು ಕರೆತಂದು ಉಚಿತವಾಗಿ ಅವರಿಗೆಲ್ಲಾ ಊಟ, ವಸತಿ, ಬಟ್ಟೆಯ ಜೊತೆಗೇ ಆತ್ಮವಿಶ್ವಾಸ, ಶಿಕ್ಷಣ ಸೌಲಭ್ಯವನ್ನು ನೀಡಿ ಮಾತೃ ಪ್ರೇಮವನ್ನು ಸ್ಫುರಿಸುತ್ತಿರುವ ಅವರ ‘ಮಾತೃ ಛಾಯಾ’ವಿದೆ. ಹೆಚ್ಚಿನ ಮಾಹಿತಿಗೆ ಈ ಲಿಂಕ್- http://www.manasa-hegde.blogspot.in/2011/01/blog-post_17.html

ಇದು ಕೇವಲ ದೈಹಿಕ ಅಂಗವೈಕಲ್ಯವಿರುವರ ಪಾಡಾದರೆ, ತುಸು ಮಾನಸಿಕ ಅಸ್ವಸ್ಥರ ಪಾಡು ಕೇಳುವುದೇ ಬೇಡಾ!!! ಆಟಿಸ್ಟಿಕ್‌ಗೂ ಬುದ್ಧಿ ಮಾಂದ್ಯರಿಗೂ ಎಂಥಾ ದೊಡ್ಡ ವ್ಯತ್ಯಾಸವಿದೆ.. ಪ್ರತಿಯೊಂದು ಸಮಸ್ಯೆಯೂ ಹೇಗೆ ವಿಭಿನ್ನವಾಗಿದೆ... ಪ್ರತಿ ಸಮಸ್ಯೆಯನ್ನೂ ಎದುರಿಸಲೂ ಎಷ್ಟೆಲ್ಲಾ ಮಾನಸಿಕ ತಯಾರಿ ಸ್ಥೈರ್ಯ ಬೇಕಾಗುತ್ತದೆ ಎನ್ನುವುದನ್ನೆಲ್ಲಾ ಸಮಾಜಕ್ಕೆ ಎಡ್ಯುಕೇಟ್ ಮಾಡಲೇಬೇಕಾಗಿದೆ ಇಂದು! ಈ ಸಮಾಜದಲ್ಲಿ ಹಲವರು ಅದೆಷ್ಟು ಅಸೂಕ್ಷ್ಮತೆ ಹಾಗೂ ಸಂವೇದನಾರಹಿತರಾಗಿರುತ್ತಾರೆ ಎಂದರೆ, ಆಟಿಸ್ಟಿಕ್ ಎಂದರೆ ‘ಹುಚ್ಚನಾ/ಹುಚ್ಚಳಾ’ ಎಂದು ಕೇಳುವಷ್ಟು!!! :( ಸಮಾಜ ಆ ಮಗುವನ್ನು, ಮನೆಯವರನ್ನು ಇನ್ನಿಲ್ಲದಂತೇ ಘಾಸಿಗೊಳಿಸಿದ್ದನ್ನು.... ಅಂಥವರಿಗೆ ನಾನು ತಿಳಿ ಹೇಳಲು ಹೋಗಿ ನಾನೇ ಚುಚ್ಚು ಮಾತು ಕೇಳಿದ್ದನ್ನೂ ಹೇಳಿದರೆ ಕುರೂಪ ಇನ್ನೂ ವಿಕಾರಗೊಳ್ಳಬಹುದು.

ಸಮಾಜ ಬದಲಾಗುತ್ತಿದೆ.. ನಿಜ... ಮತ್ತು ಕೆಲವೊಂದು ಬದಲಾವಣೆಗಳು ನಿಧಾನವಾಗಿ ಆಗಬೇಕಾಗುತ್ತದೆ. ಆದರೆ ಪ್ರತಿ ಹೆಜ್ಜೆಯೂ ನಮ್ಮದು ಧನಾತ್ಮಕ ಬದಲಾವಣೆಯತ್ತ ಸಾಗಿದಾಗ ಮಾತ್ರ ಅದು ಯಶಸ್ಸುಗೊಳ್ಳುವುದು. ನಮ್ಮಲ್ಲಿ ಈಗಲೂ ಧಾರಾವಾಹಿಗಳಲ್ಲಿ, ಚಲನಚಿತ್ರಗಳಲ್ಲಿ ಅಂಗವಿಕಲರೆಂದರೆ ಅಪಾರ ಕರುಣೆ, ದಯೆಗೆ ಪಾತ್ರರು.. ಅವರಿಂದ ಏನೂ ಸಾಧ್ಯವಿಲ್ಲ.. ನಿಃಶ್ಯಕ್ತರೆಂದೇ ತೋರಿಸಲಾಗುತ್ತದೆ. ಅದರ ಬದಲು ಅವರಿಂದೇನೆನು ಸಾಧ್ಯ ಎನ್ನುವುದನ್ನು ಸಹಜವಾಗಿ ತೋರಿಸುವ ಯತ್ನ ಮತ್ತಷ್ಟು ಆದರೆ ಜನಜಾಗೃತಿ ಬಹು ಸುಲಭವೆಂದೆನಿಸುತ್ತದೆ. ಆ ನಿಟ್ಟಿನಲ್ಲೂ ಚಿಂತನೆ ಅತ್ಯಗತ್ಯ.

ಕಳಕಳಿಯ ವಿನಂತಿ:-
ದಯವಿಟ್ಟು ನೀವು ನಿಮ್ಮ ಸುತ್ತ ಮುತ್ತ ಅಂಗವಿಕಲರನ್ನು ಕಂಡರೆ, ಸಾರ್ವಜನಿಕ ಸ್ಥಳಗಳಲ್ಲಿ, ಮಾಲ್‌ಗಳಲ್ಲಿ ಅವರೊಂದಿಗೆ ಯಾರಾದರೂ ಒರಟಾಗಿ ವರ್ತಿಸುವುದೋ, ಇಲ್ಲ ಅಸಹಕಾರ ನೀಡುವುದೋ ಮಾಡುವುದ ಕಂಡರೆ ಪ್ರತಿಭಟಿಸಿ. ಅವರೂ ನಿಮ್ಮಂತೇ ಎಲ್ಲಾ ರೀತಿಯಲ್ಲೂ ಶಕ್ತರು ಎನ್ನುವುದನ್ನು ಮನಗಂಡೇ ಸಹಕಾರ ನೀಡಿ. ಇಷ್ಟು ಕಷ್ಟ ಪಟ್ಟು ಇವರ್ಯಾಕೆ ಬಂದರೋ ಪಾಪ? ಯಾರೂ ಇಲ್ಲವೇ ಇವರಿಗೆ? ಎಂಬ ಸಲ್ಲದ ಕರುಣೆ ಬೇಡ. ನಿಮ್ಮ ಪರಿಸರದಲ್ಲಿ ಅನಕ್ಷರಸ್ಥರಿದ್ದರೆ ಕಲಿಕೆಗೆ ಪ್ರೇರೇಪಿಸಿ.... ಸಹಕರಿಸಿ. ವಿದ್ಯೆ ಅತ್ಯವಶ್ಯಕ... ಅದರಿಂದಲೇ ಹೊರ ಪ್ರಪಂಚಕ್ಕೆ ನಾವು ತೆರೆದುಕೊಳ್ಳಬಲ್ಲೆವು. ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲೂ ಅಂಗವಿಕಲರು ಸುಲಭವಾಗಿ ಹೋಗಿ ಬರುವಂತೇ ವ್ಯವಸ್ಥೆ ಕಲ್ಪಿಸಲು ಎಲ್ಲರೂ ಒಗ್ಗಟ್ಟಾಗಿ ಸರಕಾರವನ್ನು ಒತ್ತಾಯಿಸಬೇಕು. ಅಂಗವಿಕಲತೆ ಒಂದು ಶಾಪ, ಪ್ರಾರಾಬ್ಧ ಕರ್ಮ ಅನ್ನುವ ಕೂಪ ಮಂಡೂಕತ್ವವನ್ನು ತೊಡೆದು ಹಾಕಿ ಒಳಗಿನ ಚೈತನ್ಯದ ಮುಂದೆ ಎಲ್ಲವೂ ನಗಣ್ಯ ಅನ್ನುವುದನ್ನು ಉದ್ದೀಪನಗೊಳಿಸಿಗೊಳ್ಳಬೇಕು.. ಹಾಗೆ ಉದ್ದೀಪಿಸಿಕೊಳ್ಳಲು ಪ್ರೇರೇಪಿಸಬೇಕು. ಮುಖ್ಯವಾಹಿನಿಗೆ ಇವರೂ ಬಂದು.. ಸಮಬಾಳು, ಸಮ ಪಾಲು/ಹಕ್ಕು ಇವರಿಗೂ ಸಿಗಲೇಬೇಕು. ಆ ನಿಟ್ಟಿನಲ್ಲಿ ಸಮಾಜ ಕಾರ್ಯೋನ್ಮುಖವಾಗಲೇ ಬೇಕು. ಸಕಾಲದಲ್ಲಿ, ಸರಿಯಾದ ರೀತಿಯಲ್ಲಿ, ತುಸುವೇ ತುಸು ತಾಳ್ಮೆಯಿಂದ ಮನೆಯವರು, ಬಾಲ್ಯದಲ್ಲೇ ಪ್ರೋತ್ಸಾಹ, ಬೆಂಬಲ ಸಹಕಾರ ನೀಡಿದರೆ ಎಂಥಾ ನ್ಯೂನ್ಯತೆಯನ್ನೂ ಜಯಿಸಬಹುದು... ಓರ್ವ ಅಂಗವಿಕಲನೂ ಎಲ್ಲರಂತೇ ಸಾಮಾನ್ಯವಾಗಿ ಎಲ್ಲಾ ರೀತಿಯ ಅಂದರೆ ಮಗುವಿನ ಪಾಲನೆ, ಬಟ್ಟೆ, ಪಾತ್ರೆ, ಅಡಿಗೆ ಇತ್ಯಾದಿ ಮೆನವಾರ್ತೆಗಳ ಜೊತೆಗೇ ಹೊರಗಿನ ಕಾರ್ಯಗಳನ್ನೂ ನಿಭಾಯಿಸಬಲ್ಲ ಎನ್ನುವುದಕ್ಕೆ ಸಾಕ್ಷಿ ನಾನೇ :) ಹೀಗಾಗಿಯೇ ಹೆತ್ತವರು, ಆಪ್ತೇಷ್ಟರು, ಸ್ನೇಹಿತರು, ಸಹೃದಯರು ಈ ನಿಟ್ಟಿನಲ್ಲಿ ಒಮ್ಮೆ ಚಿಂತನೆ ನಡೆಸಿ... ಎಂದು ಎದೆಯಾಳದಿಂದ ವಿನಂತಿಸುತ್ತಿರುವೆ.

(ಸಹನೆಯಿಂದ ಲಿಂಕ್‌ಗಳ ಜೊತೆಗೆ ಲೇಖನವನ್ನೋದಿದವರಿಗೆಲ್ಲಾ ಧನ್ಯವಾದಗಳು. :) ) 

-ತೇಜಸ್ವಿನಿ.

ಸೋಮವಾರ, ಸೆಪ್ಟೆಂಬರ್ 1, 2014

ಅವಧೇಶ್ವರಿ

ಎಲ್ಲಿಯವರೆಗೆ ಪರಿಸ್ಥಿತಿ ವಿಚಾರದ ಸಾಧ್ಯಾಸಾಧ್ಯತೆಯ ಅಂಕೆಯಲ್ಲಿ ಇರುತ್ತದೆ, ಅಲ್ಲಿಯವರೆಗೆ ವೈಚಾರಿಕತೆ ಕೆಲಸ ಮಾಡಬಲ್ಲದು. ಎಲ್ಲಿ ವಿಚಾರದ ಅಂಕೆಗೆ ಸಿಕ್ಕದ ತೊಡುಕು ಉಂಟಾಗುತ್ತದೆ, ಅಲ್ಲಿ..... ಬುದ್ಧಿವಂತ ಕೆಂಗೆಡುತ್ತಾನೆ. ಶ್ರದ್ಧಾವಂತ ದೇವರಿಗೆ ಮೊರೆ ಹೋಗುತ್ತಾನೆ. ದೇವರನ್ನು ನಂಬದವನಿಗೆ ದೇವರೇ ಗತಿ. ಒಳಗೆಯೇ ಕನಲಿ ಬೆಂಡಾಗುತ್ತಾನೆ.

****

ಯುದ್ಧದ ಬೆದರಿಕೆ ಹಾಕಬೇಕೇ ಹೊರತು ಪ್ರತ್ಯಕ್ಷ ಯುದ್ಧ ಸಾರಬಾರದು. ಬಹಿರಂಗ ವೈಮನಸ್ಯ ತೋರಿದರೆ ಬಾಳುವುದು ಕಷ್ಟ. ರಾಜ್ಯದ ಆಸ್ತಿವಾರ ಸಡಿಲಾಗುತದೆ. ರಾಜ-ಪ್ರಜೆ, ಅಧಿಕಾರಿ-ಸೇವಕ, ತಂದೆ-ಮಗ, ಬ್ರಾಹ್ಮಣ-ಕ್ಷತ್ರಿಯ, ಋಗ್ವೇದಿ-ಅಥರ್ವವೇದಿ, ಈ ಓಣಿಯವ-ಆ ಓಣಿಯವ .... ವಿಘಟನೆಗೆ ಮಿತಿಯುಂಟೇ? ನಮ್ಮ ಉದ್ದಿಶ್ಯಗಳು ಶುದ್ಧವಾಗಬೇಕು. ನಾಲ್ಕು ಜನರು ಮನಮೆಚ್ಚುವಂತಿರಬೇಕು. ಹೃದಯ ಸಾಕ್ಷಿ ಹೇಳುವಷ್ಟು ಪರಿಶುದ್ಧ ಧೋರಣೆ ಇರಬೇಕು. ವಿರೋಧವಾದಾಗ್ಯೂ ಸ್ವಂತದ ಅಂತರಾತ್ಮ ಕದಡಬಾರದು. (-`ಅವಧೇಶ್ವರಿ' ಕಾದಂಬರಿಯಿಂದಾಯ್ದ ನನ್ನ ಮೆಚ್ಚಿನ ಸಾಲುಗಳು..)

****

‘ಅವಧೇಶ್ವರಿ’ ಪುಸ್ತಕವನ್ನೋದಿಯಾಯಿತು! ಅಬ್ಬಾ ಎಂಥಾ ಅದ್ಭುತ ಪರಿಕಲ್ಪನೆ! ಹಂತ ಹಂತದಲ್ಲೂ ಪ್ರಸ್ತುತ ರಾಜಕೀಯ ಸ್ಥಿತಿ-ಗತಿಯನ್ನು, ಜನರ ಮನೋವ್ಯಾಪಾರಗಳನ್ನು, ಸಮಾಜದೊಳಗಿನ ವ್ಯವಸ್ಥೆ/ಅವ್ಯವಸ್ಥೆಯನ್ನು, ವೇದ ಕಾಲದ ರಾಜಕೀಯ ಸ್ಥಿತಿಗತಿಗಳೊಂದಿಗೆ, ಜನ ಜೀವನ, ರೀತಿ-ನೀತಿಗಳೊಂದಿಗೆ ಮನಸ್ಸು ಅಪ್ರಯತ್ನವಾಗಿ ಹೋಲಿಸಿಕೊಂಡು ನೋಡುತ್ತಿದೆ!!! ಪ್ರತಿ ಪುಟವೂ ಅದೆಷ್ಟೋ ಚಿಂತನೆಗಳಿಗೆ ಒರೆಹಚ್ಚುವಂತಿದೆ!! ಲೇಖಕರು ತಮ್ಮ ಮಾತುಗಳಲ್ಲಿ ಈ ಕಾದಂಬರಿಗೆ ಆಧಾರವಾಗಿರುವ ಸಾಕ್ಷಿಗಳನ್ನು, ತಾಳೆಗರಿ, ವಸ್ತುಸಂಗ್ರಹಗಳನ್ನು ನಮ್ಮ ಮುಂದಿರಿಸಿದ್ದರಿಂದಲೋ ಇಲ್ಲಾ ಕಾದಂಬರಿಯಲ್ಲಿ ಬರುವ ಪಾತ್ರಗಳು ಒದಗಿಸಿರುವ ಅಚ್ಚ ಪ್ರಾಮಾಣಿಕತೆಯಿಂದಲೋ ಇಲ್ಲಾ ಅಲ್ಲಿ ನಡೆವ ಎಲ್ಲಾ ರಾಜಕೀಯ, ಸಾಮಾಜಿಕ ಘಟನೆಗಳೆಲ್ಲವೂ ಇಂದೂ, ಈ ಕ್ಷಣವೂ ತೀರಾ ಪ್ರಸ್ತುತ ಎಂದೆನೆಸಿ, ಸತ್ಯತೆ ಆಪ್ತವಾಗುವುದರಿಂದಲೋ ಇದನ್ನೊಂದು ಕೇವಲ ಕಾಲ್ಪನಿಕ ಕಾದಂಬರಿ ಎಂದು ಪರಿಗಣಿಸಲು ಸಾಧ್ಯವೇ ಆಗದು! (ನನ್ನ ಮಟ್ಟಿಗಂತೂ) ಇದರೊಳಗಿನ ವಿಷಯಗಳೆಲ್ಲಾ ನಮ್ಮ ಇಂದಿನ ರಾಜಕೀಯತೆಗೆ, ರಾಜಕಾರಣಿಗಳ ಕುತ್ಸಿತತೆಗೆ, ಚದುರಂಗ ದಾಳಗಳಿಗೆ, ಮೇಲಾಟ, ಕಾಲೆಟ, ಕಾಲ್ತುಳಿತಗಳಿಗೆ ಎಲ್ಲವುದಕ್ಕೂ ಇಲ್ಲಿ ನಿದರ್ಶನಗಳು ಸಿಗುತ್ತವೆ. ಆದರೆ ಎಲ್ಲವೂ ಒಂದು ಪ್ರಾಮಾಣಿಕತೆ, ದೇಶದ ಹಿತ ದೃಷ್ಟಿ, ಜನತೆಯ ಹಿತದೃಷ್ಟಿಯಲ್ಲಿಟ್ಟುಕೊಂಡು! ಕೇವಲ ತಾನು, ತನ್ನದು ಅನ್ನುವ ಪರಮ, ನೀಚ ಸ್ವಾರ್ಥ ಅಂದಿನ ರಾಜಕೀಯತೆಯಲ್ಲಿರಲೇ ಇಲ್ಲಾ! ಅದೊಂದೇ ಕೊರತೆ, ಅದೇ ಒಂದು ದೊಡ್ಡ ಕೊರತೆ ಇಂದು ಎದ್ದು ಕಾಣುತಿರುವುದು! ನಿಜಕ್ಕೂ ಮೊಕಾಶಿಯವರ ಈ ಅಮೋಘ ಕಾದಂಬರಿ ಚಿಂತನೆಗೆಳೆಸುವಂಥದ್ದು. ಅದರಲ್ಲೂ ವಿಶೇಷವಾಗಿ ನಿಯೋಗ ಪದ್ಧತಿ ನನ್ನ ಗಮನ ಸೆಳೆದದ್ದು.

ವ್ಯಾಸರ ಮೊದಲೇ ಕಾದಂಬರಿಯ ನಾಯಕಿಯಾದ ಪುರುಕುತ್ಸಾನಿ ಈ ಒಂದು ಪ್ರಕ್ರಿಯೆಗೆ ಮನಸ್ಸು ಮಾಡುವುದು.... ಮತ್ತು ಅದೆಷ್ಟು ವ್ಯವಸ್ಥಿತವಾಗಿ, ಯಾರಿಗೂ ಎಲ್ಲೂ ಅನೈತಿಕ ಎಂಬ ಭಾಸವೂ ಬಾರದಂತೇ ನಿರೂಪಿಸಲಾಗಿದೆ ಎಂದರೆ.. ಇಂತಹ ಒಂದು ವ್ಯವಸ್ಥೆ ನಮ್ಮ ಇಂದಿನ ಸಮಾಜಕ್ಕೆ ಅಂದರೆ ಸಂತಾನ ಹೀನರಿಗೆ ಇದ್ದಲ್ಲಿ ತುಂಬಾ ಚೆನ್ನ ಎಂದೆನಿಸಿ ಬಿಟ್ಟಿತು!

ಹೌದು... ಇಂದು ಪತಿ ನಿರ್ವೀಯನಾದರೆ Artificial Insemination (AI) ಚಿಕಿತ್ಸೆಯ ಮೂಲಕ ಪತ್ನಿಗೆ ಗರ್ಭಧರಿಸುವಂತೆ ಮಾಡುವ ಆಧುನಿಕ ವೈದ್ಯಕೀಯ ಚಿಕಿತ್ಸೆಯಿದೆ. ಆದರೆ ಅದೆಷ್ಟು ಮಾನಸಿಕ ಕ್ಷೋಭೆಯನ್ನು ಹೆಣ್ಣಿಗೆ ಮನೆಯವರಿಂದ, ಸ್ವಂತ ಪತಿಯಿಂದ ತರುತ್ತದೆಯೆನ್ನುವುದನ್ನು,  Infertility center ಒಂದರ ಕೌನ್ಸಲಿಂಗ್‌ ಡೆಪಾರ್ಟ್‌ಮೆಂಟ್‍ನಲ್ಲಿ ತುಸು ಕಾಲ ಕಾರ್ಯ ನಿರ್ವಹಿಸಿದ್ದ ನಾನು ಸ್ವತಃ ಅವರ ಅನುಭವದ ಮಾತುಗಳಿಂದ ಕೇಳಿದ್ದೇನೆ. ತನ್ನ ಪ್ರತಿಷ್ಠೆಗಾಗಿ, ತಮ್ಮ ಮನೆಯ ಪೊಳ್ಳು ಅಭಿಮಾನದ ಉಳಿವಿಗಾಗಿ ಮನಸ್ಸಿದೆಯೋ ಇಲ್ಲವೋ ಪತ್ನಿಯನ್ನು/ಸೊಸೆಯನ್ನು ಮನವೊಲಿಸಿ, ಬೆದರಿಸಿ ಒಪ್ಪಿಸಿರುತ್ತಾರೆ. ಒಂದು ವೇಳೆ ಆಕೆ ಖುಶಿಯಿಂದ ಒಪ್ಪಿದ್ದರೂ, ಆಮೇಲೆ ಕುಹಕ, ಭರ್ತ್ಸನೆ, ಇಲ್ಲಾ ನಿರ್ಲಕ್ಷ್ಯತನ ಸರ್ವೇಸಾಮಾನ್ಯ! ಇಂಥ ಒಂದು ಸಾಮಾಜಿಕ ಸಂಕುಚಿತತೆ, ಮಾನಸಿಕ ಧೋರಣೆಯಿಂದ ವಿಜ್ಞಾನ ಎಷ್ಟು ಮುಂದುವರಿದರೇನು? ಅಂದಿನ ಸಮಾಜದ ಪರಿಕಲ್ಪನೆ, ಸಹಜ ಸ್ವೀಕಾರ, ಅಲ್ಲೊಂದಿಲ್ಲೊಂದು ಅಪಸ್ವರ ಎದ್ದಾಗಲೂ ಸಮಾಜವೇ ಅದನ್ನು ತುಳಿದು ಅಡಗಿಸಿದ ಉದಾರತೆ ಎಲ್ಲವೂ ಮಾನನೀಯ, ನಿದರ್ಶನ ಎಂದೆನಿಸಿತು. ಇದೊಂದು ಚಿಕ್ಕ ಉದಾಹರಣೆಯಷ್ಟೇ... ಇನ್ನೂ ಹಲವಾರು ನಿದರ್ಶನಗಳು, ಶ್ರೇಷ್ಠ ರಾಜಕೀಯತೆ, ರಾಜನ ಕಾರ್ಯವೈಖರಿ, ಹೆಣ್ಣಿನ ಧೀಃಶಕ್ತಿಯ ಅನಾವರಣ ಎಲ್ಲವೂ ‘ಅವಧೇಶ್ವರಿ’ನಮಗೆ ಕಾಣಿಸುತ್ತಾಳೆ. ಆದರೆ ಕಾದಂಬರಿಯುದ್ದಕ್ಕೂ ಹೆಣ್ಣೇ ಪ್ರಧಾನವಾಗಿ ಹರಿದು ಬಂದರೂ, ಪ್ರಮುಖವಾಗಿ ನನ್ನ ಗಮನ ಸೆಳೆದವನೆಂದರೆ ಗುಲಾಮನಿಂದ ಸೇವಕನಾಗಿ, ಸೇನಾನಿಯಿಂದ ರಾಜನ ಆಪ್ತ ಸಲಹೆಗಾರನಾಗಿ, ರಾಜ್ಯ ಭಾರದ ಸೂತ್ರಧಾರನಾಗಿ, ರಾಣಿಯ ಆಪ್ತನಾಗಿ ಕಾದಂಬರಿಯೊಳಗೆ ಹಾಗೂ ನಮ್ಮೊಳಗೆ ಬೆಳೆಯುತ್ತಾ ಹೋಗುವ ‘ತಾರ್ಕ್ಷ್ಯ’!!

ಆದರೆ ಕೊನೆಯಲ್ಲಿ ಬರುವ ಒಂದು ಘಟನೆ ಯಾಕೋ ನನ್ನಲ್ಲಿ ಕಸಿವಿಸಿ ತುಂಬಿ ಬಿಟ್ಟಿತು..! ಆವರೆಗೂ ತುತ್ತತುದಿಯಲ್ಲಿದ್ದ ಒಂದು ಪಾತ್ರ ಅದೆಂತು ಆ ರೀತಿ ವರ್ತಿಸಿತೆಂದೇ ಅರಿಯದಾಯಿತು....! ಆ ಘಟನೆಯನ್ನು, ಪಾತ್ರ, ಸನ್ನೀವೇಶವನ್ನು ಬಿತ್ತರಿಸಿದರೆ ಓದುಗರಿಗೆ ಓದಲು ಸಹಜ ಕುತೂಹಲ, ಆ ಪಾತ್ರದ ಮೇಲೆ ಘನತೆ ಬರಲು ಸಾಧ್ಯವಾಗದು. ಹಾಗಾಗಿ ಇಲ್ಲಿ ಹೇಳುತ್ತಿಲ್ಲ. ಕಾದಂಬರಿಯ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಅಥವಾ ಕಥಾ ಹಂದರವನ್ನು ಅರುಹಿ ಓದುಗರ ಕುತೂಹಲವನ್ನು ತಣಿಸುವ ಕಾರ್ಯ ಮಾಡೆನು.. ಇಷ್ಟವಾದಲ್ಲಿ ಓದಿ, ನಿಮ್ಮ ಓದನ್ನು ನನ್ನೊಂದಿಗೂ ಹಂಚಿಕೊಳ್ಳಿ.. :)


-ತೇಜಸ್ವಿನಿ ಹೆಗಡೆ.