ಬುಧವಾರ, ಅಕ್ಟೋಬರ್ 14, 2015

ಅಸತ್ಯದ ತಮಸ್ಸಿನಿಂದ ಸತ್ಯದ ತೇಜಸ್ಸಿನೆಡೆಗೆ ದಾರಿ ತೋರುವ ‘ನನ್ನಿ’


ಕಾರಣಾಂತರಗಳಿಂದಾಗಿ ನಾನು ನನ್ನ ಹೈಸ್ಕೂಲ್‌ಅನ್ನು (೮, ೯ ಮತ್ತು ೧೦ನೆಯ ತರಗತಿ) ಓದಿದ್ದು ಕ್ರಿಶ್ಚನ್ ಸಂಸ್ಥೆಯೊಂದರಲ್ಲಿಯೇ. ಮೊತ್ತ ಮೊದಲಬಾರಿ ನನ್ನದಲ್ಲದ ಧರ್ಮವೊಂದರ ಪರಿಚಯವಾಗಿದ್ದು ಅಲ್ಲಿಯೇ ನನಗೆ. ನಾನು ಅಲ್ಲಿ ಯಾವ ಪೂರ್ವಾಗ್ರಹಗಳಿಲ್ಲದೇ ಬೆರೆತದ್ದು, ಕಲಿತದ್ದು, ನಲಿದದ್ದು. ನನ್ನ ಹೆತ್ತವರು ಯಾವುದನ್ನೂ, ಯಾವತ್ತೂ ತಲೆಗೆ ತುಂಬಿಸಿರಲೂ ಇಲ್ಲ. ಮೂರುವರುಷಗಳಲ್ಲಿ ನಾನು ಅಲ್ಲಿಂದ ಪಡೆದದ್ದು ಅಸಂಖ್ಯಾತ! ಪ್ರತಿ ದಿವಸ ಪ್ರಾರ್ಥನೆಗೆ ಹಾಡುತ್ತಿದ್ದ ‘ಅಗಣಿತ ತಾರಾಗಣಗಳ ನಡುವೆ..’ ಹಾಡನ್ನು ಇಂದೂ ಗುನುಗುತ್ತಿರುತ್ತೇನೆ. ಆ ದಿನಗಳು ನಿಸ್ಸಂಶಯವಾಗಿಯೂ ಮಧುರ ನೆನಪುಗಳಿಂದ ತುಂಬಿದ ನನ್ನ ಅವಿಸ್ಮರಣೀಯ ಕಾಲಘಟ್ಟವಾಗಿವೆ. ಕಿನ್ನಿಗೋಳಿಯ ಲಿಟ್ಲ್‌ಫ್ಲವರ್ ಹೈಸ್ಕೂಲ್ ನನಗೆ ನನ್ನನ್ನು ಪರಿಚಯಿಸಿದ, ನನ್ನೊಳಗೆ ಚಿಗುರುತ್ತಿದ್ದ ಪ್ರತಿಭೆಯನ್ನು ಗುರುತಿಸಿದ ತಾಣ. ಸತ್ಯಕ್ಕೆ ಯಾವ ಬಣ್ಣವೂ ಇಲ್ಲವೆಂಬುದನ್ನು ಇಂದು ನನಗೆ ಮನಗಾಣಿಸಲು ಕಾರಣವಾದ ಜಾಗವೂ ಹೌದು. ಹಾಗಾಗಿ ನನಗೆ ಕಲಿಸಿದ ಅಲ್ಲಿಯ ಎಲ್ಲಾ ಸಿಸ್ಟರ್ಸ್‌ಗಳಿಗೂ ನಾನು ಸದಾ ಚಿರ ಋಣಿ. ಗುರುಭ್ಯೋ ನಮಃ ಎಂದೇ ಅಕ್ಷರ ತಿದ್ದಿಸಿದ ನನ್ನ ಅಪ್ಪನ ಬುನಾದಿಯಡಿ ನನ್ನ ಬಾಲ್ಯ, ಹದಿವಯಸ್ಸು ಅರಳಿದ್ದೂ ಇದಕ್ಕೆ ಕಾರಣವೆನ್ನಬಹುದು. 

ಈ ರೀತಿಯ ನನ್ನ ಪೀಠಿಕೆಗೆ ಒಂದು ಬಲವಾದ ಕಾರಣವಿದೆ. ‘ನನ್ನಿ’ ಎಂದರೆ ನನ್ ಓರ್ವಳ ಸತ್ಯಾನ್ವೇಷಣೆಯ ಕಥೆ ಎಂಬುದಷ್ಟೇ ನನಗೆ ಗೊತ್ತಿದ್ದುದು ಓದುವ ಮೊದಲು. ನಾನು ಹೈಸ್ಕೂಲ್ ಕಲಿತ ನನ್ನ ಶಾಲೆ, ಸಿಸ್ಟರ್ಸ್‌ಗಳೊಂದಿಗೆ ಒಡನಾಡಿದ್ದು, ಅಲ್ಲಿಯ ಆಶ್ರಮದಲ್ಲಿ ಓದುತ್ತಿದ್ದ ಕ್ರಿಶ್ಚನ್ ಗೆಳತಿಯರ ಒಳಗುದಿಯನ್ನು, ಅನಿಸಿಕೆಗಳನ್ನು ಕೇಳಿದ್ದು ಎಲ್ಲವೂ ಗಟ್ಟಿಯಾಗಿ ಇನ್ನೂ ಸ್ಮೃತಿಯಲ್ಲಿ ಉಳಿದುಕೊಂಡಿವೆ.. ಆಗಾಗ ನೆನಪಾಗಿ ನನ್ನ ಮತ್ತೆ ಗತಕಾಲಕ್ಕೆಳೆಯುತ್ತಿರುತ್ತವೆ. ಆ ದಿನಗಳ ನನ್ನ ಅನುಭವವೇ ಇಂದು ಈ ಕೃತಿಯನ್ನು ಮತ್ತಷ್ಟು ಆಪ್ತವಾಗಿ ಓದಿಸಿಕೊಳ್ಳಲು, ತೀರ ಭಿನ್ನವಲ್ಲದ ಪರಿಸರದೊಳಗೆ (ಕಾದಂಬರಿಯಲ್ಲಿ ಬರುವ) ನನ್ನನ್ನು ಸಮೀಕರಿಸಿಕೊಂಡು, ಹೆಚ್ಚು ತಾದಾತ್ಮ್ಯತೆಯಿಂದ ಒಳಗೆಳೆದುಕೊಳ್ಳಲು ಸಾಧ್ಯವಾಯಿತು ಎನ್ನಬಹುದು. ಅಂತೆಯೇ ಓದಲು ತೆಗೆದುಕೊಂಡಾಗಲೂ, ಓದುವಾಗಲೂ ಯಾವುದೇ ಪೂರ್ವಾಗ್ರಹವಿಲ್ಲದೇ ಓದಿದ್ದೇನೆ.. ವಿಶ್ಲೇಷಿಸಿದ್ದೇನೆ.. ಗಂಟೆಗಟ್ಟಲೇ ಚಿಂತಿಸಿದ್ದೇನೆ ಮತ್ತು ಸಂಶಯವಿದ್ದ ವಿಷಯಗಳ ಗುರುತು ಹಾಕಿಕೊಂಡು, ಕಾದಂಬರಿಯನ್ನೋದಿ ಮುಗಿಸಿದ ಮೇಲೆ, ಲೇಖಕರ ಪರಿಚಯ ಮಾಡಿಕೊಂಡು ಅವರೊಂದಿಗೇ ಖುದ್ದಾ ನನ್ನ ಸಂದೇಹಗಳನ್ನು ಕೇಳಿ ನಿವಾರಿಸಿಕೊಂಡಿದ್ದೇನೆ. ಇದು ಹಾಗೇ.. ಇದು ಹೀಗೇ.. ಇದು ಅದೇ... ಎಂಬೆಲ್ಲಾ ಸ್ವಯಂ ನಿರ್ಧಾರಕ್ಕೆ ಬರದೇ ಪರಾಮರ್ಶಿಸಿ ಅರಿಯಲು, ತಿಳಿಯಲು ಯತ್ನಿಸಿದ್ದು. ಹಾಗಾಗಿ ಅಷ್ಟೇ ವಸ್ತುನಿಷ್ಠವಾಗಿ ಈ ಪುಟ್ಟ ವಿಮರ್ಶೆಯನ್ನೂ ಬರೆಯಲು ಪ್ರಯತ್ನಿಸುತ್ತಿದ್ದೇನೆ. 

ಮೊದಲು ಕಥೆಯ ಸ್ಥೂಲ ಚಿತ್ರಣ : ‘ಸಿಸ್ಟರ್ ರೋಣಾ’ಳಿಂದ ಆರಂಭವಾಗುವ ಕಥೆ ‘ರೋಣಾ’ಳೊಂದಿಗೆ ಕೊನೆಯಾಗುವುದು. ರೋಣಾಳಿಂದ ಸಿಸ್ಟರ್ ರೋಣಾಳಾಗುವ ಪ್ರಕ್ರಿಯೆ... ಅದಕ್ಕಿರುವ ಹಿನ್ನಲೆ... ಆನಂತರ ಆಕೆ ಸ್ವಯಂ ವಿಮರ್ಶೆಗೆ, ವಿಶ್ಲೇಷಣೆಗೆ ಹೊರಟು, ಅಚಾನಕ್ಕಾಗಿ ಸಿಗುವ ಯುರೋಪ್ ಲೇಖಕ ಎಡಿನ್ ಬರ್ಗ್‌ನ ಪುಸ್ತಕಗಳ ಪ್ರಭಾವಕ್ಕೆ ಸಿಲುಕಿ ಸತ್ಯಾನ್ವೇಷಣೆಗೆ ಹೊರಟು.. ಆ ಪಥದಲ್ಲಿ ತನ್ನ ಸಹಜ ಗುಣ ಧರ್ಮದಿಂದ ಅದೇ ಸತ್ಯ ಅವಳನ್ನು ಸುಟ್ಟು, ಘಾಸಿಗೊಳಿಸಿ, ತಪದಲ್ಲಿ ಬೆಂದು ಬೆಳಗುವ ಚಿನ್ನದಂತೇ ಆಕೆ ಮತ್ತೆ ಎಲ್ಲಾ ಕಳಚಿ ರೋಣಳಾಗುವ ಕಥೆ. ಈ ಕಥೆ ಆರಂಭದಿದ್ದ, ಅಂತ್ಯದವರೆಗೂ ಬರುವ ಮತ್ತೊಂದು ಪಾತ್ರವಿದೆ. ಮೊದ ಮೊದಲು ಆ ಪಾತ್ರವೇ ಪ್ರಧಾನ ಪಾತ್ರವೆಂಬಂತೇ ಭಾಸವಾಗುವ.. ಕಥೆಯುದ್ದಕ್ಕೂ ಸುಳ್ಳಿಗೂ, ಸತ್ಯಕ್ಕೂ ಇರುವ ಅಂತರ ಅಂದರೆ ಬ್ಲಾಕ್ ಆಂಡ್ ವೈಟ್‌ಅನ್ನು ಸ್ಪಷ್ಟವಾಗಿ ಓದುಗರಿಗೆ ಕಾಣಿಸುವಂಥ ಪಾತ್ರ! ಅದೇ ಮದರ್ ಎಲಿಸಾರದ್ದು. ಈ ಮೂರು ಪ್ರಮುಖ ಪಾತ್ರಗಳಲ್ಲದೇ ಇನ್ನೂ ಹಲವು ಪಾತ್ರಗಳು ತಮಗೊದಗಿಸುವ ಅತ್ಯಗತ್ಯ ಕಾರ್ಯವನ್ನು ಮಾಡಿ, ತಮ್ಮ ತಮ್ಮ ಕೆಲಸದಾನಂತರ ಸತ್ಯಾನ್ವೇಷಣೆಗೆ ರೋಣಾಳನ್ನು ಇನ್ನಷ್ಟು ಉತ್ತೇಜಿಸಿ ಮಾಯವಾಗುತ್ತವೆ. (ಅತಿ ಕ್ಲುಪ್ತವಾಗಷ್ಟೇ ಕಥೆ ಹೇಳುತ್ತಿದ್ದೇನೆ. ಪೂರ್ತಿ ತಿಳಿಯಲು ‘ನನ್ನಿ’ಯ ಓದೊಂದೇ ದಾರಿ.)

ನನ್ನ ಪ್ರಕಾರ ಪ್ರತಿ ಕಾದಂಬರಿಯ ಒಂದೊಂದು ಪಾತ್ರವೂ ಆ ಕಾದಂಬರಿಯ ಜೀವಂತಿಕೆಯೇ ಆಗಿರುತ್ತದೆ. ಹೀಗಾಗಿ, ಆಯಾ ಕಾದಂಬರಿಯು ಅದರ ಓದುಗ ಓದುವಷ್ಟು ಹೊತ್ತೂ ಕಣ್ಮುಂದೆ ನಡೆವ ಒಂದು ತುಂಬು ಜೀವನವೆನಿಸಿಕೊಂಡು ಬಿಡುತ್ತದೆ. ನನ್ನಿಯ ಕೆಲವು ಓದುಗರಿಗೆ ಮದರ್ ಎಲಿಸಾರೋ, ‘ಸಿ.ರೋಣಾಳೊ’ ಅಥವಾ ಕೇವಲ ರೋಣಾಳೋ, ಮಿಲ್ಟನ್ ಫಾಬ್ರಿಗಾಸ್‌ನೋ, ತೇಗೂರಿನ ರಾಯಪ್ಪನೋ ಕಾದಂಬರಿಯ ಜೀವಾಳದಂತೇ, ಪ್ರಮುಖ ಪಾತ್ರ ಅಂದರೆ ಹೀರೋ/ಸೆಂಟರ್ ಎಂದು ಅನಿಸಿರಬಹುದು. ಆದರೆ ನನಗೆ ಮಾತ್ರ ‘ನನ್ನಿ’ ಕಾದಂಬರಿಯ ಜೀವನದೊಳಗಿನ ಸೆಂಟರ್ ಆಫ್ ಅಟ್ರಾಕ್ಷನ್, ಪ್ರಮುಖ ಪಾತ್ರಧಾರಿ ಎಂದೆನಿಸಿಕೊಂಡವ ಎರಿಕ್ ಬರ್ಗ್‌ನೇ. ಎರಿಕ್ ಯುರೋಪಿನಲ್ಲೆಲ್ಲೋ ಇರುವವನೆಂದು ಹೇಳುವ ಈ ಕಾದಂಬರಿ, ಅವನ ಮೂಲಕ ಹೇಳಿಸುವ ಕಟು ವಾಸ್ತಿವಿಕತೆಯನ್ನು ಬಿಚ್ಚಿ, ಎಳೆಯೆಳೆಯಾಗಿ ಹರವಿ, ಬೆಚ್ಚಿ ಬೀಳುವಂತಹ ಸತ್ಯ ಶೋಧನೆಯನ್ನು ಮಾಡಿಸುತ್ತದೆ. ಎರಿಕ್ ಬರೆದಿದ್ದು ಎನ್ನಲ್ಲಾಗುವ "ಸತ್ಯ ದಯೆ ಮತ್ತು ಸೇವೆ" ಹಾಗೂ "ಮಾನವ ಜಗತ್ತಿನ ಅಪಮೌಲ್ಯಗಳು" ಎಂಬೆರೆಡು ಪುಸ್ತಕಗಳೊಳಗಿನ ವಾಸ್ತವಿಕ ಅಂಶಗಳ ಮಂಥನದಿಂದ ಹೊರ ಬರುವ ಕಟು ಸತ್ಯಗಳು ಓದುಗರಿಗೆ ಜೀರ್ಣಿಸಿಕೊಳ್ಳಲು ತುಸು ತ್ರಾಸದಾಯಕವೂ ಆಗುವುದು. ಆ ನಿಟ್ಟಿನಲ್ಲಿ ಆಮೂಲಾಗ್ರವಾಗಿ ಇಂತಹ ಒಂದು ಸತ್ಯ ಶೋಧನೆಯತ್ತ ದಿಟ್ಟ ಹೆಜ್ಜೆಯನ್ನಿಟ್ಟ ಕರಣಂ ಪವನ್ ಪ್ರಸಾದ್ ಅವರ ಈ ಅಪೂರ್ವ ಪುಸ್ತಕ ‘ನನ್ನಿ’ ಎಂದರೆ ಖಂಡಿತ ಉತ್ಪ್ರೇಕ್ಷೆಯೆನಿಸದು.

ಕಾದಂಬರಿಯಲ್ಲಿ ಬರುವ ಪಾತ್ರಗಳಲ್ಲೊಂದಾದ ಎರಿಕ್ ಬರ್ಗ್ ಎಂಬ ಯುರೋಪಿಯನ್ ಸತ್ಯಶೋಧಕನಷ್ಟೇ ನನ್ನ ಕಾಡಿದ ಪಾತ್ರವೆಂದರೆ, ತೇಗೂರಿನ ರಾಯಪ್ಪ. ಕ್ರಿಶ್ಚನ್ ವಳಿಗನಾಗಿ ಬಾಳಿದ, ಬದುಕಲು ಹೆಣಗಾಡಿದ, ತಾ ಸಾಯುತ್ತಲೇ ತನ್ನ ಪೋಲಿಯೋ ಪೀಡಿತ ಮಗಳಿಗಾಗಿ ದುಡಿದು ದಣಿದ, ಆತನ ಆ ಬೆಚ್ಚಿ ಬೀಳಿಸುವ ಕೊನೆಯ ಎಣಿಸುವಾಗೆಲ್ಲಾ ಎದೆ ಝಿಲ್ಲೆನಿಸುತ್ತದೆ. ಈ ಪಾತ್ರದ ಕುರಿತು ನಾನು ಏನೇ ಹೇಳಿದರೂ ಅದು ಓದುಗರ ಓದುವ ಸುಖವನ್ನು ಕಸಿದುಕೊಂಡಂತಾಗುವುದು. ಈ ಪಾತ್ರ ಚಿತ್ರಣವನ್ನಷ್ಟೇ ಅಲ್ಲಾ, ಈ ಕಾದಂಬರಿಯ ಬೇರಾವ ಪಾತ್ರವನ್ನೂ ಹೆಚ್ಚು ವಿಶ್ಲೇಷಿಸಹೋಗುವುದು ಈ ನಿಟ್ಟಿನಲ್ಲಿ ಸಮಂಜಸವೆನಿಸದು. ಹಾಗಾಗಿ ನಾನು ಓದಿದಾಗಿನಿಂದ ನನ್ನ ಬಿಟ್ಟೂ ಬಿಟ್ಟೂ ಕಾಡುತಿಹ ನನ್ನಿಷ್ಟದ ಪಾತ್ರ, ಕಥೆಯ ಜೀವಾಳನಾಗಿರುವ (ನನ್ನ ವೈಯಕ್ತಿಕ ಅನಿಸಿಕೆಯಂತೇ) ಎಡಿನ್ ಬರ್ಗ್‌ನ ಕೆಲವು ಸಾರ್ವಕಾಲಕ ಸತ್ಯ ದರ್ಶನವನ್ನು, ರೋಣಾಳ ಮಂಥನವನ್ನು ಕಾದಂಬರಿಯಲ್ಲಿದ್ದ ಹಾಗೇ ಇಲ್ಲಿ ಹಂಚಿಕೊಳ್ಳಬಯಸುತ್ತಿದ್ದೇನೆ.  ಈ ಕೆಳಗಿನ ಪ್ರತಿ ಸಾಲೂ ಹೊಸ ಚಿಂತನೆಗಳಿಗೆ, ಹೊಳಹುಗಳಿಗೆ, ಮಂಥನಕ್ಕೆ ನಮ್ಮನ್ನೆಳೆಸುವಂತಿದ್ದು, ಓದುಗರನ್ನೂ ಸತ್ಯಾನ್ವೇಷಣೆಗೆ, ಸ್ವ ವಿಮರ್ಶೆಗೆ ಖಚಿತವಾಗಿಯೂ ಎಳೆಸುತ್ತವೆ ಎಂಬುದು ನನ್ನ ವಿಶ್ವಾಸ.

೧) ಪ್ರಚಾರ ಹೇಗೆ ಪಡೀಬೇಕು ಅನ್ನೋದು ಮುಖ್ಯವೇ ಹೊರತು, ಪ್ರಚಾರಕ್ಕಾಗಿ ಏನು ಮಾಡಿದೆವು ಅನ್ನೋದಲ್ಲ. ನಾನು ಪ್ರಚಾರಕ್ಕೆ ಇಳಿದಿದ್ದೇನೆ ಎಂದು ಪ್ರಚಾರಕ್ಕೆ ಇಳಿದವನಿಗೂ ಗೊತ್ತಾಗಬಾರದು. ಹಾಗೆ ನೋಡಿಕೊಳ್ಳೋದು ಜಾಣತನ. (ಫಾಬ್ರಿಗಸ್ ಹೇಳುವ ಈ ಮೇಲಿನ ಮಾತೊಳಗಿನ ಮೊನಚು, ವ್ಯಂಗ್ಯ.. ಅದರೊಳಗಿನ ವರ್ತಮಾನದ (ಪ್ರಸ್ತುತ) ಕಟು ವಾಸ್ತವ ಎಷ್ಟು ದಿಟ ಎಂದೆನಿಸಿತು.)

೨) "ಹೇಳಿಕೊಳ್ಳದ ತ್ಯಾಗಗಳಿಗೆ ಬೆಲೆ ಇರೋಲ್ಲ. ಹೇಳಿಕೊಂಡ ತ್ಯಾಗಗಳನ್ನು ನಂಬೋಕೆ ಆಗಲ್ಲ." 

೩) ಯಾವುದು ತಪ್ಪು ಎನ್ನಿಸುತ್ತದೋ ಆಗ ಅದನ್ನು ಸರಿಯೊಂದಿಗಿನ ಯಾವುದೋ ಒಂದು ಅಂಶದೊಂದಿಗೆ ಕೂಡಿಸಿ ತಪ್ಪನ್ನು ಸರಿ ಎನ್ನಿಸುವ ಕುಚೋದ್ಯ ಪ್ರಯತ್ನ ಇಲ್ಲಿ ಪುನರಾವರ್ತನೆ ಆಗುತ್ತಿಲ್ಲವೇ? (ರೋಣಾಳ ಜಿಜ್ಞಾಸೆ)

೪) ಕಾರಣ ಅಶುದ್ಧವಾದ ಮೇಲೆ ಕ್ರಿಯೆಯೂ ಅಶುದ್ಧವೇ, ಕ್ರಿಯೆಗಳಿಂದ ಕಾರಣ ಹುಟ್ಟುವುದಿಲ್ಲ. ಕಾರಣಗಳಿಂದಲೇ ಕ್ರಿಯೆ ಹುಟ್ಟುತ್ತದೆ. ಅದರಲ್ಲೂ ಕಾರಣವಿರುವ ಸೇವೆ!? ಇದರ ಆಳಕ್ಕೆ ಹೋಗಲು ಆಗುತ್ತಿಲ್ಲ. ಹೌದು ಜಗತ್ತಿನಲ್ಲಿ ಯಾವುದೂ ಸೇವೆಯಲ್ಲ. ಸಹಕಾರವಷ್ಟೇ ನಿಜ.

೫) ಮಾನವನು ಪ್ರಾರಂಭಿಸುವ ಪ್ರತಿಯೊಂದು ಸತ್ಕಾರ್ಯಗಳು ಮೂಲದಲ್ಲಿ ನಿಸ್ವಾರ್ಥ ಸೇವೆಯೇ ಆಗಿದ್ದು, ಅನಂತರ ಇಷ್ಟಾರ್ಥಕಾಮವಾಗೇ ಕೊನೆಗೊಳ್ಳುತ್ತದೆ.

೬) ಪ್ರಕೃತಿ ಯಾವುದನ್ನು ಹಿಡಿತದಲ್ಲಿಟ್ಟು, ಯಾವುದನ್ನು ಬೆಳೆಸಬೇಕು ಎಂದು ಆಲೋಚಿಸಿಯೇ ಪ್ರತಿ ಜೀವಿಗೂ ಗುಣಗಳನ್ನು ನೀಡಿದೆ. ಆದರೆ ಮಾನವನು ತನ್ನ ಪಾಕೃತಿಕ ಗುಣಗಳಿಂದ ದೂರವಾಗಿ, ವಿವೇಚನೆಯ ಹೆಸರಿನಲ್ಲಿ ಸಹಜೀವಿ, ಜಗತ್ತನ್ನೇ, ಹತೋಟಿಗೆ ತೆಗೆದುಕೊಂಡು ಹಾಳುಮಾಡುತ್ತಿದ್ದಾನೆ. ಮಾನವನ ಮೂಲ ಗುಣವೇ ಸ್ವಾರ್ಥ. ತನ್ನೆಲ್ಲಾ ಅಪಾಕೃತಿಕ ಗುಣಗಳನ್ನು ಹತೋಟಿಯಲ್ಲಿಟ್ಟುಕೊಂಡು, ಪ್ರಕೃತಿಯ ಜೊತೆ ಸಹಬಾಳ್ವೆ ನಡೆಸುತ್ತಿದ್ದ ಮಾನವ ಜನಾಂಗ ಮರೆಯಾಗುತ್ತಿದೆ. ಈಗಿರುವುದು ಮಿತಿಯನ್ನು ಮೀರಿದ ಕ್ರೂರ ಜೀವ ಸಂತತಿ....

೭) ಮನುಷ್ಯ ಹುಲಿಯನ್ನು ಕೊಂದರೆ ಶೌರ್ಯ, ಆದರೆ ಹುಲಿ ಮನುಷ್ಯನನ್ನು ಕೊಂದರೆ ಕ್ರೌರ್ಯ! (ಜಾರ್ಜ್ ಬರ್ನಾಡ್ ಶಾ) ನನ್ನ ಪ್ರಕಾರ ಪ್ರಾಣ ರಕ್ಷಣೆಗೆ ಹೊರತಾದ ಎಲ್ಲಾ ತರಹದ ಪ್ರಾಣಿಹತ್ಯೆಯೂ ಕ್ರೌರ್ಯವೇ... ಆದರೆ ಮನುಷ್ಯ ಕಾಡನ್ನು ನೆಲಸಮ ಮಾಡಿ, ಪ್ರಾಣ ರಕ್ಷಣೆಯೆಂದು ಆಗಲೂ ಪ್ರಾಣಿಹತ್ಯೆ ಮಾಡುತ್ತಾನೆ. ಮನುಷ್ಯನಿಗೆ ವಿಕೃತಿ ತೋರಲು ಕಾರಣ ಬೇಕು, ಅಷ್ಟೇ.

ನಾನಿಲ್ಲಿ ಕೊಟ್ಟಿರುವುದು ‘ನನಿ’ಯಲ್ಲಿ ದಾಖಲಾಗಿರುವ ಕೆಲವೇ ಕೆಲವು ನನ್ನಿಗಳನ್ನು. ಅವುಗಳ ಪೂರ್ಣ ಪಾಠಕ್ಕೆ ಕಾದಂಬರಿಯ ಸಮಗ್ರ ಓದು, ಚಿಂತನೆ ಅತ್ಯಗತ್ಯ. ಇಲ್ಲಿ ಕಾಣ ಸಿಗುವ, ಕುಕ್ಕುವ, ಕರಗಿಸುವ, ಬೆಚ್ಚಿಸುವ, ಕಣ್ಮುಚ್ಚಿ ದಿಟ್ಟಿ ಹೊರಳಿಸಲು, ನಿರ್ಲಕ್ಷಿಸಿ ತಾತ್ಕಾಲಿಕ ನೆಮ್ಮದಿ ಪಡೆಯಲು ಪ್ರೇರೇಪಿಸುವ ಸತ್ಯವು ನಿಜವಾಗಿಯೂ ಉರಿವ ಸೂರ್ಯನಂತೇ. ಹತ್ತಿರ ಹೋದರೂ ಸಾವು, ದೂರ ಹೋದರೂ ಸಾವೇ. ಕಾದಂಬರಿಯಲ್ಲೆಲ್ಲೋ ಬರುವಂತೇ.. ‘ಇಲ್ಲಿ ನಾವು ವಿಮರ್ಶಿಸಬೇಕಾದದ್ದು ಸತ್ಯಕ್ಕೆ ಯಾರು ಹತ್ತಿರವಿದ್ದಾರೆ ಎಂದೇ ಹೊರತು ಸತ್ಯವನ್ನು ಮುಟ್ಟಿದವರು ಯಾರು ಎಂದಲ್ಲ.’  ಅಂತಹ ಸತ್ಯವನ್ನು ಜಾಗೃತಿಯಲ್ಲೇ, ಜಾಗೃತೆಯಿಂದ ತಡವುವ, ಕೊಂಚ ವಿಶಾದದೊಂದಿಗೇ ಸ್ವೀಕರಿಸುವ ಸಣ್ಣ ಅವಕಾಶ ಓದುಗರಾದ ನಮಗೆ ಕಲ್ಪಿಸುತ್ತದೆ ‘ನನ್ನಿ’. 

ಪುಸ್ತಕವನ್ನು ಇಲ್ಲಿ ಕೊಳ್ಳಬಹುದು..  "ಕ್ಲಿಕ್ಕಿಸಿ-ನನ್ನಿ"

~ತೇಜಸ್ವಿನಿ ಹೆಗಡೆ.

ಶುಕ್ರವಾರ, ಅಕ್ಟೋಬರ್ 9, 2015

`ಓದಿರಿ’ ಓದಿದ ಮೇಲೆ....


`ಓದಿರಿ' ಕಾದಂಬರಿಯ ಲೇಖಕರಾದ ಬೊಳುವಾರು ಮಹಮದ್ ಕುಂಞಿಯವರ ಪರಿಚಯ ‘ಓದಿರಿ’ಯನ್ನು ಓದುವ ಮೊದಲು ನನಗೆ ಇರಲೇ ಇಲ್ಲಾ! ಮುಖಗೋಡೆಯಲ್ಲಿ ಮೊತ್ತ ಮೊದಲ ಬಾರಿ ‘ಓದಿರಿ’ ಐತಿಹಾಸಿಕ ಕಾದಂಬರಿಯ ಕುರಿತು ಪ್ರಸ್ತಾವನೆಯಾದಾಗಲೇ ಗಮನ ಅತ್ತ ಹೋಗಿದ್ದು. ಈ ಮೊದಲು ಪ್ರಕಟಗೊಂಡಿದ್ದ ಎನ್ನಲಾಗಿರುವ ಅವರ ಕಾದಂಬರಿಗಳಾದ ಜಿಹಾದ್, ಸ್ವಾತಂತ್ರ್ಯದ ಓಟ ಮತ್ತು ಅವರ ಸಣ್ಣ ಕಥೆಗಳ ಪ್ರಾಕಾರಗಳನ್ನು.. ಯಾವುದನ್ನೂ ನಾನು ಓದಿಲ್ಲ. ಹಾಗಾಗಿ ನಾನು ಈಗ ಓದಿರುವ ‘ಓದಿರಿ’ ಕಾದಂಬರಿಯೇ ಈ ಲೇಖಕರ ಮೊತ್ತ ಮೊದಲ ಬರಹ ಎನ್ನಬಹುದು. ಮುಖಗೋಡೆಯಲ್ಲೂ ಅಷ್ಟೇ.., ‘ಓದಿರಿ’ ಕಾದಂಬರಿಯ ಕುರಿತು ನನ್ನ ಓದಲು ಪ್ರೇರೇಪಿಸಿದ್ದು ಅವರೇ ಹಾಕಿಕೊಂಡಿದ್ದ ಈ ಸಾಲು.. “ಪ್ರವಾದಿ ಮುಹಮ್ಮದರ ಜೀವನಾಧಾರಿತ ಮೊತ್ತ ಮೊದಲ ಐತಿಹಾಸಿಕ ಕಾದಂಬರಿ”! ಹೌದು ಇದು ಸುಮಾರು ಒಂದೂವರೆ ಸಾವಿರ ವರ್ಷಗಳ ಹಿಂದೆ ಹುಟ್ಟಿದ ಇಸ್ಲಾಮ್ ಧರ್ಮದ ಪ್ರವಾದಿಯೊಬ್ಬರ  ಕಥೆ.

ನಾನು ಈ ಮೊದಲೆಲ್ಲೂ ಪ್ರವಾದಿ ಮುಹಮ್ಮದರ  ಕುರಿತಾದ ಯಾವುದೇ ಖಚಿತ ಪುಸ್ತಕವನ್ನೋದಿರಲೂ ಇಲ್ಲಾ. ಇಸ್ಲಾಂ ಬಗ್ಗೆ ಹಲವು ಮಾಹಿತಿಗಳನ್ನು ಓದಿದ್ದೆನಾದರೂ ಅವೆಲ್ಲಾ ತುಣುಕುಗಳಲ್ಲಿ.. ಸಣ್ಣ ಪುಟ್ಟ ಲೇಖನಗಳಲ್ಲಿ... ಮುಲ್ಲಾಗಳ ಪ್ರವಚನಗಳನ್ನು ಸಾರುವ ವಿಡಿಯೋ ತುಣುಕುಗಳಲ್ಲಿ.. ಧಾರಾವಾಹಿ/ಚಲನಚಿತ್ರಗಳಲ್ಲಿ ಬರುವ ಕೆಲವು ಆಚರಣೆ/ಕಟ್ಟಳೆಗಳಲ್ಲಿ ಅಷ್ಟೇ. ಆ ನಿಟ್ಟಿನಲ್ಲಿ ಈ ಕಾದಂಬರಿ ನನ್ನಂಥವರಿಗೆ ಇಸ್ಲಾಂ ಅನ್ನು, ಮುಸ್ಲಿಮರ ಪ್ರವಾದಿ ಮುಹಮ್ಮದರನ್ನು ಸ್ಪಷ್ಟವಾಗಿ ತೆರೆದು ಕೊಡುವ ಪುಸ್ತಕ ಎಂದೆನ್ನಬಹುದು. ಇಂದು ನಾನು ಸ್ಪಷ್ಟವಾಗಿ ಹಿಂದು, ಮುಸ್ಲಿಂ, ಕ್ರಿಶ್ಚನ್ ಎಂಬ ಆಯಾ ಧರ್ಮದ ಹೆಸರಿನಲ್ಲೇ ಉಲ್ಲೇಖಿಸಲು (ಪ್ರಸ್ತುತ ಲೇಖನದುದ್ದಕ್ಕೂ) ಈ ಕಾದಂಬರಿಯ ಲೇಖಕರೇ ಕಾರಣ. ಅವರು ‘ಆ ಪ್ರವಾದಿಯ ಹೆಸರಲ್ಲಿ ನಿತ್ಯ ಮಾರಣ ಹೋಮಗಳೇ ನಡೆಯುತ್ತಿರುವಾಗ ಅವರ ತಂಟೆಗೆ ಹೋಗದಿರುವುದೇ ಕ್ಷೇಮ’ ಎಂದು ಹಿಂಜರಿಯದೇ, ಪ್ರಾಮಾಣಿಕವಾಗಿ, ಅಪಾಯದ ಮಟ್ಟ ಮೀರದಿರುವ ಜಾಗೃತಿಯೊಂದಿಗೇ, ಓರ್ವ ಮೂರನೆಯ ವ್ಯಕ್ತಿಯಾಗಿ ಬರೆದಿದ್ದಾರೆ ಈ ಪುಸ್ತಕ, ಎಂದೆನಿಸಿತು.

‘ಓದಿರಿ’ಕಾದಂಬರಿಯನ್ನೋದುತ್ತಾ ಕಾಡಿದ ಹತ್ತು ಹಲವು ಸಂದೇಹಗಳ ಪರಿಹಾರಕ್ಕಾಗಿ ಈ ಬರಹದ ಲೇಖಕರನ್ನೇ ಸಂಪರ್ಕಿಸುವುದು ಉತ್ತಮ ಎಂದು ನಿರ್ಧರಿಸಿದ ನಾನು ಗೆಳೆಯನೋರ್ವನಿಂದ ಬೋಳುವಾರು ಅವರ ನಂಬರ್ ಪಡೆದು ಮೊದಲ ಬಾರಿ ಫೋನಾಯಿಸಿದಾಗ ಸಹಜವಾಗಿಯೇ ಹಿಂಜರಿಕೆ ಬಲು ಇತ್ತು. ಆದರೆ ಅವರ ಮಾತುಗಳೊಳಡಗಿದ್ದ ಮುಕ್ತತೆ, ಪ್ರಾಮಾಣಿಕತೆ, ಸರಳತೆ, ನಿಸ್ಸಂಕೋಚವಾಗಿ ಹಿಂಜರಿಯುತ್ತಲೇ ಪ್ರಶ್ನಿಸುತ್ತಿದ್ದ ನನ್ನ, “ಮಗು ನಿಂಗೆ ಅನಿಸಿದ್ದು ಕೇಳು..” ಎಂದು ಪ್ರೋತ್ಸಾಹಿಸಿದಾಗ ಮುಂದಿನ ಸಂವಹನಗಳೆಲ್ಲಾ ಸರಾಗವಾಗಿಬಿಟ್ಟವು. ಲೇಖಕರು ಸ್ವಯಂ ಯಾವುದೇ ತಡೆಯನ್ನು ಹಾಕಿಕೊಳ್ಳದೇ, ನನಗೂ ಹಾಕದೇ ಆದಷ್ಟು ನನ್ನ ಸಂದೇಹಗಳನ್ನು ಪರಿಹರಿಸಿ, ಆ ಮೂಲಕ ನನ್ನೊಳಗೆ ನಿರ್ಭೀತಿಯನ್ನು ತುಂಬಿದ ಅವರಿಗೆ ತುಂಬು ಮನದ ಕೃತಜ್ಞತೆಗಳು. ಅವರೊಂದಿಗೆ ಸಂವಹಿಸುವಾಗ ‘ನಮ್ಮಲ್ಲಿ’, ‘ನಿಮ್ಮಲ್ಲಿ’ ಎಂದೇ ಮೊದ ಮೊದಲು ನಾನು ಪ್ರಶ್ನಿಸತೂಡಗಿದ್ದೆ. ಆಗ ಅವರು ಸ್ಪಷ್ಟವಾಗಿ, ‘ಹಾಗೆ ಹೇಳುವುದೇ ತಪ್ಪು, ಹಿಂದುಗಳಲ್ಲಿ, ಮುಸ್ಲಿಮ್ಮರಲ್ಲಿ ಎಂದೇ ಹೇಳಿ.’. ಅದು ಸತ್ಯ, ವಾಸ್ತವ.. ಎಂದು ಹೇಳಿದಾಗ, ಅರೆ ಹೌದಲ್ಲಾ ಅದ್ಯಾಕೆ ಹಾಗೆ ಸಂಬೋಧಿಸಲೂ ಮುಜುಗುರ ಇರಬೇಕು ನನ್ನಲ್ಲಿ? ಎಂದೇ ಅರಿವಾಗಲು ಲೇಖನದುದ್ದಕ್ಕೂ ಆ ಹಿಂಜರಿಕೆಯನ್ನು ಬಿಟ್ಟು, ‘ಓದಿರಿ’ ಓದಿದ ನನ್ನೊಳಗಿನ ಹರಿವನ್ನು, ಹರವನ್ನು, ಸಂದೇಹಗಳನ್ನು ಪ್ರಾಮಾಣಿಕವಾಗಿ ಯಾವುದೇ ಪೂರ್ವಾಗ್ರಹವಿಲ್ಲದೇ ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಇಲ್ಲಿ ನಾನು ಹೇಳಿಕೊಳ್ಳುತ್ತಿರುವ ನನ್ನ ಅಭಿಪ್ರಾಯಗಳು, ಪ್ರಶ್ನೆಗಳು, ಸಂದೇಹಗಳು ಎಲ್ಲವೂ ನನ್ನ ವೈಯಕ್ತಿಕ ಅನಿಸಿಕೆಗಳು ಮತ್ತು ಯಾವುದೇ ವ್ಯಂಗ್ಯ, ಕೊಂಕು, ತಿವಿತಗಳ ಕುರುಡತ್ವವನ್ನು ಹೊಂದಿದವಂಥವಲ್ಲ ಎಂದು ಮೊದಲೇ ಸ್ಪಷ್ಟ ಪಡಿಸುತ್ತಿದ್ದೇನೆ. ಓದುಗರೂ ಇರುಳುಗಣ್ಣಿನಿಂದ ನೋಡದೇ ಅರ್ಥೈಸಿಕೊಳ್ಳುವಿರೆಂದು ಆಶಿಸುವೆ.

ಪ್ರಸ್ತಾವನೆ:-


‘ಓದಿರಿ’ಯ ಪ್ರಸ್ತಾವನೆಯನ್ನೋದುವಾಗ ನನ್ನ ಬಹುವಾಗಿ ಹಿಡಿದಿಟ್ಟ ಸಾಲುಗಳಿವು :-“ದೈವ ನಂಬುಗೆಯ ಸಾಮಾನ್ಯನಿರಲಿ, ಕಟ್ಟಾ ಕೋಮುವಾದಿ ಅಥವಾ ರೋಸಿಹೋಗಿರುವ ನಿರೀಶ್ವರವಾದಿಯೇ ಆಗಿರಲಿ, ಅನ್ಯರ ಪ್ರಾಮಾಣಿಕ ಧಾರ್ಮಿಕ ನಂಬುಗೆಯನ್ನು ಅಷ್ಟೇ ಪ್ರಾಮಾಣಿಕತೆಯಿಂದ ತಿರಸ್ಕರಿಸುತ್ತಾನೆ ಅಥವಾ ಮೌನವಾಗಿರುತ್ತಾನೆ. ಅಂತ್ಯಪ್ರವಾದಿಯ ಮಾತುಗಳನ್ನೇ ಪರಮ ಸತ್ಯವೆಂದು ನಂಬುವವರು, ಶ್ರೀಕೃಷ್ಣನನ್ನು ಪರಮಾತ್ಮನೆಂದು ಹೇಗೆ ಒಪ್ಪಲಾರರೋ, ಅಂತೆಯೇ ಶ್ರೀರಾಮನ ಪೂಜಕರು ಪ್ರವಾದಿಯ ಮಾತುಗಳಿಗೆ ಮತ ಹಾಕಲಾರರು. ಆದ್ದರಿಂದಲೇ, ಯಾವುದೇ ಬಗೆಯ ಧರ್ಮ ಪ್ರಚಾರದ ಬರಹಗಳು ಅನ್ಯ ಧರ್ಮದ ಓದುಗರನ್ನು - ಉಚಿತ ವಿತರಣೆಯಾದಾಗಲೂ ಪ್ರೀತಿಯಿಂದ ಓದಿಸಿಕೊಳುವುದಿಲ್ಲ.” ಎಂಬ ಈ ಸಾಲುಗಳು  ಎಷ್ಟು ನಿಜ ಅನ್ನಿಸಿತು.


ನನ್ನ ನಂಬುಗೆಯು ನನಗೆ ಸತ್ಯ.. ಉಳಿದೆದ್ದಲ್ಲಾ, ಉಳಿದವರ ನಂಬುಗೆಯೆಲ್ಲಾ ಸುಳ್ಳು ಎನ್ನುವ ಭಾವವೇ ಘರ್ಷಣೆಗೆ, ಗಲಭೆಗೆ ನಾಂದಿಯಾಗಿದ್ದು, ಆಗುತ್ತಿದ್ದುದು ಎಂದೆನಿಸಿತು. ಕಾದಂಬರಿಯ ಮೊತ್ತ ಮೊದಲು ಹೇಳಿರುವಂತೇ ಯಾವುದೇ ಧರ್ಮದ ಕುರಿತು ಓದಿಕೊಳ್ಳದೇ, ಪೂರ್ವಾಗ್ರಹದಿಂದ, ಅಲ್ಲಲ್ಲಿ ಕೇಳಿದ್ದನ್ನೇ ನಂಬಿ ವ್ಯಾಖ್ಯಾನಿಸುವುದು, ಟೀಕಿಸುವುದು ಬಲು ತಪ್ಪು ಎಂಬುದನ್ನೂ ಒಪ್ಪುವೆ. ಆ ನಿಟ್ಟಿನಲ್ಲಿ ‘ಓದಿರಿ’ ಬಲು ಸಹಕಾರಿಯಾಗಿದೆ. ಈ ಪುಸ್ತಕವನ್ನೋದಿ ಮುಗಿಸಿದ ಮೇಲೆ, ನಾನು ನನ್ನ ನಂಬುಗೆ, ವಿಶ್ವಾಸ, ಸಿದ್ಧಾಂತಗಳ ಜೊತೆಯೂ, ಇಸ್ಲಾಂನಲ್ಲಿ ಮುಹಮ್ಮದ್ ಅವರು ಹೇಳಿರುವ ಸಂದೇಶಗಳಲ್ಲಿ ನನಗೆ ಸ್ಪಷ್ಟವಾದ, ಅರ್ಥವಾದ ಕೆಲವು ಒಳ್ಳೆಯ ಮಾತುಗಳನ್ನೂ ಒಪ್ಪಿರುವೆ, ಸತ್ಯವಿದೆಯೆಂದು ಅರಿತಿರುವೆ! ಈ ಮೊದಲು ಅಂದರೆ ಪುಸ್ತಕವನ್ನೋದುವ ಮೊದಲು ನನ್ನಲ್ಲಿ ಹಲವು ತಪ್ಪು ಗ್ರಹಿಕೆಗಳಿದ್ದವು. ಅದರಲ್ಲಿ ಕೆಲವಷ್ಟಕ್ಕಾದರೂ ಪರಿಹಾರ ಕಂಡಿವೆ.

ನನ್ನ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಕ್ಕಿದೆಯೆಂದಲ್ಲಾ.. ಆದರೆ ಕೆಲವು ತಪ್ಪು ಗ್ರಹಿಕೆಗಳು ನಿವಾರಣೆಯಾಗಿವೆ. ಈವರೆಗೂ ಶೂನ್ಯ ಜ್ಞಾನವಿದ್ದ (ಇಸ್ಲಾಂ ಬಗ್ಗೆ), ಕೆಲವು ಋಣಾತ್ಮಕ ವಿಷಯಗಳನ್ನೇ ಎಷ್ಟೋ ಕಡೆ ನೋಡಿ, ಕಂಡು, ಓದಿದ್ದ ನನ್ನೊಳಗೆ ಎಲ್ಲಾ ನೋಟಗಳಾಚೆ ಇನ್ನೊಂದು ದೃಶ್ಯವಿದೆ ಎಂಬ ನನ್ನ ನಂಬುಗೆಗೆ ಮತ್ತಷ್ಟು ಇಂಬು ಕೊಟ್ಟಿತು ಈ ‘ಓದಿರಿ’ಯ ಓದು. ಆ ನಿಟ್ಟಿನಲ್ಲಿ ಲೇಖಕರು ಇದನ್ನೊಂದು ಐತಿಹಾಸಿಕ ಕಾದಂಬರಿ ಎಂಬ ಗಡಿ ರೇಖೆಹಾಕಿ ಎದುರಾಗಬಹುದಾದ ಅಪಾಯವನ್ನು ತಡೆದಿದ್ದರೂ, ‘ಓದಿರಿ’ ನನ್ನಂಥವರಿಗೆ ಅದಕ್ಕೂ ಮೀರಿದ, ಒಂದು ಹೊಸ ಧರ್ಮವನ್ನರಿವ, ಸ್ಥೂಲವಾಗಿ ಅರ್ಥೈಸಿಕೊಳ್ಳುವ ಪಾಠ ಪುಸ್ತಕವಾಗಿದೆ ಎನ್ನಬಹುದು. ಉದಾಹರಣೆಗೆ ಹಿಂದುಗಳಲ್ಲಿರುವಂತೇ ಇಸ್ಲಾಂ’ನಲ್ಲೂ ಗೋತ್ರ ಪದ್ಧತಿಯಿತ್ತು ಎನ್ನುವ ಸತ್ಯ ನನಗೆ ಗೊತ್ತಾಗಿದ್ದೇ ಇಲ್ಲಿ!

ಓದಿರಿ ಕಾದಂಬರಿಯೊಳಗಿನ ಸ್ಥೂಲ ಕಥಾ ಚಿತ್ರಣ. :- ಹಾಶಿಮ್ ಗೋತ್ರದ ಅಬ್ದುಲ್ ಮುತ್ತಲಿಬರ ಪುತ್ರ ಅಬ್ದುಲಾರವರು ಮತ್ತು ನಜ್ಜಾರ್ ಗೋತ್ರದ ಆಮಿನಾರ ಪುತ್ರ ಮುಹಮ್ಮದರು. ‘ಮುಹಮ್ಮದ್’ ಎಂದರೆ ಎಲ್ಲರಿಂದ ಹೊಗಳಿಸಿಕೊಳ್ಳುವವನು ಎಂಬಲ್ಲಿಂದ ಆರಂಭವಾದ ಕಥೆ.. ಬೆಳೆಯುತ್ತಾ ‘ಸಫಾ’ ಬೆಟ್ಟದ ಗುಹೆಯಲ್ಲಿ ಅಲ್ಲಾಹು ಕಳುಹಿಸಿದ ದೇವದೂತ ಜಿಬ್ರೀಲರಿಂದ ಜನರನ್ನು ಸಂಘಟಿಸಿ, ಇಸ್ಲಾಂ ಅನ್ನು ಬೆಳೆಸುವ ಸಂದೇಶ ಪಡೆದು, ಅಂತೆಯೇ ಪ್ರವಾದಿಯಾಗಿ ಅರಬರನ್ನು ಎಚ್ಚರಿಸಿ, ಹಲವು ವಿರೋಧಗಳನ್ನೆದುರಿಸುತ್ತಾ, ಕುರೈಶ್ ಮನೆತನದ ಒಡೆತನದಲ್ಲಿದ್ದ ಕ‌ಅಬಾದಲ್ಲಿನ ಬಹು ವಿಗ್ರಹಗಳನ್ನು ಒಡೆದು, ಹಜರುಲ್ ಅಸ್ವದ್ ಪವಿತ್ರ ಕಲ್ಲೊಂದನ್ನು ಮಾತ್ರ ಉಳಿಸಿ, ಯಸ್ರಿಬ್‌ನಲ್ಲಿ [ಮದೀನಾದಲ್ಲಿ] ಮಸೀದಿಯೊಂದನ್ನು ಕಟ್ಟಿಸಿ, ಏಕದೇವೋಪಾಸನೆಯನ್ನು ಎಲ್ಲೆಡೆ ಪಸರಿಸಬೇಕೆಂಬ ಸಂದೇಶ ಕೊಟ್ಟು ನಿರ್ಗಮಿಸಿದ ಪ್ರವಾದಿಯವರು, ಅಲ್ಲಾಹು ಭೂಮಿಗೆ ಕಳುಹಿಸಿದ ಅಂತ್ಯಪ್ರವಾದಿ ಎಂದೆನಿಸಿಕೊಂಡಿದ್ದಾರೆ. ‘ಕುರ್‌ಆನ್’ ಮುಸ್ಲಿಮರ ಏಕೈಕ ಪವಿತ್ರ ಗ್ರಂಥ. ಇವಿಷ್ಟು ಸ್ಥೂಲ ಚಿತ್ರಣ. ಪೂರ್ಣ ಕಥೆಗೆ, ಕಥೆ ಬೆಳೆದ ರೀತಿಗ, ಪ್ರವಾದಿಯವರ ಸಂದೇಶಗಳಿಗೆ ‘ಓದಿರಿ’ಯನ್ನೇ ಓದಿಬಿಡಿ.

ಈಗ ಮೊದಲಿಗೆ ನನ್ನಲ್ಲಿದ್ದ ಕೆಲವು ಪ್ರಶ್ನಗಳಿಗೆ ಪಡೆದ ಉತ್ತರ. (ಸ್ಪಷ್ಟವಾಗಿ ಹೇಳಿ ಬಿಡುವೆ.. ಈ ಉತ್ತರಗಳೆಲ್ಲಾ ನನಗೆ ‘ಓದಿರಿ’ಯಲ್ಲಿ ಸಿಕ್ಕಂಥವು, ಕೆಲವು ಲೇಖಕರನ್ನು ದೂರವಾಣಿಯಲ್ಲಿ ಸಂಪರ್ಕಿಸಿ ಪಡೆದುಕೊಂಡು ನನ್ನದೇ ಮಾತುಗಳಲ್ಲಿ ಬರೆದುಕೊಂಡಂಥವು)

ಪ್ರ. ೧ ಇಸ್ಲಾಂ ಧರ್ಮ ಎಂದರೆ ಏನು? ಮುಸಲ್ಮಾನರು ಎಂದರೆ ಯಾರು?
ಉ: ಇಸ್ಲಾಂ ಎಂದರೆ ಶಾಂತಿ, ಸಮರ್ಣಣೆ. ಇಸ್ಲಾಂ ಧರ್ಮದಲ್ಲಿ ವಿಶ್ವಾಸವಿರಿಸಿದವರೆಲ್ಲ, ಅದನ್ನು ಪ್ರಶ್ನಿಸದೆ ಅನುಸರಿಸುವವರೆಲ್ಲರೂ ಮುಸ್ಲಿಮರು.

೨) ಪ್ರವಾದಿ ಮುಹಮ್ಮದ್ ಮುಸ್ಲಿಮರ ದೇವರೇ?
ಉ: ಅಲ್ಲ. ಅವರು ಸಾಮಾನ್ಯ ಮನುಷ್ಯರೇ. ಆದರೆ ಮನುಷ್ಯರಲ್ಲಿ ಅತಿ ಒಳ್ಳೆಯ ಗುಣವುಳ್ಳವರು. ಮುಸಲ್ಮಾನರ ಏಕೈಕ ಆರಾಧ್ಯನಾಗಿರುವ ‘ಅಲ್ಲಾಹು’ ಕಳುಹಿಸಿದ ದೇವದೂತ ಜಿಬ್ರೀಲರಿಂದ ಸಂದೇಶ ಪಡೆದು ಇಸ್ಲಾಮಿನ ಪುನರುತ್ಥಾನಕ್ಕಾಗಿ ಕಳುಹಿಸಲ್ಪಟ್ಟ ಸಂದೇಶವಾಹಕ.  ತನ್ನನ್ನು ಅಂತಿಮ ಪ್ರವಾದಿ ಎಂದು ಸಾರಿ, ಅಲ್ಲಾಹುವಿನ ಸಂದೇಶವನ್ನು ಜನರಿಗೆ ಹೇಳಿದವರು. ‘ಕುರ್‌ಆನ್’ ಪ್ರವಾದಿಯ ಮೂಲಕ  ಭೂಮಿಗೆ ಇಳಿದ ಅಲ್ಲಾಹುವಿನ ಆದೇಶಗಳು

೩) ಯಹೂದೀಯರು, ಕ್ರೈಸರು ಮುಸ್ಲಿಮ್ಮರು ಹೇಗೆ ಲಿಂಕ್ ಆಗಿದ್ದಾರೆ?
ಉ: ಇಸ್ಲಾಮ್ ನಂಬಿಕೆಯ ಪ್ರಕಾರ ಯಹೂದಿಯರು, ಕ್ರಿಸ್ತರು ಮಾತ್ರವಲ್ಲ ಭೂಮಿಯ ಮೇಲೆ ಹುಟ್ಟಿದವರೆಲ್ಲರೂ ಮೂಲತಃ, ಆದಿ ಪ್ರವಾದಿಯಾದ ಆದಮ್ ಮತ್ತು ಈವ್ ಎಂಬ ಗಂಡು ಹೆಣ್ಣಿನಿಂದ ಹುಟ್ಟಿದವರೇ. ಎಲ್ಲರೂ ಮೂಲತಃ ಇಸ್ಲಾಂ ಧರ್ಮದವರೇ. ಅವರೆಲ್ಲರ ಪ್ರವಾದಿ ಹಾಗೂ ಇಸ್ಲಾಮಿನ ಪ್ರವಾದಿಗಳೆಲ್ಲಾ ಒಬ್ಬರೇ. ಆದರೆ ಕಾಲ ಕ್ರಮೇಣ ಅಭಿಪ್ರಾಯ ಬೇಧಗಳಿಂದ ತಮ್ಮ ತಮ್ಮ ಸಿಧ್ದಾಂತಗಳಿಗಾಗಿ ಬೇರ್ಪಟ್ಟವರು.

೪) ಡೇವಿಡ್-ದಾವೂದ್, ಏಸು-ಈಸಾ, ಅಬ್ರಹಾಂ-ಇಬ್ರಾಹಿಂ, ಮೋಸೆಸ್-ಮೂಸಾ ಇವರೆಲ್ಲಾ ಯಾರು?
ಉ: ಯಹೂದಿಯರ ಪ್ರವಾದಿ ಡೇವಿಡ್. ಅವರೂ ದಾವೂದರೂ ಒಬ್ಬರೇ. ಅಲ್ಲಿ ಡೇವಿಡ್ ಇಸ್ಲಾಮಿನಲ್ಲಿ ದಾವೂದ್ ಎಂದು ಕರೆದರು. ಅದೇ ರೀತಿ ಅಬ್ರಾಹಾಂ, ಇಬ್ರಾಹಿಂ, ಮೋಸೆಸ್ಸ್ ಮೂಸಾ. ಏಸು ಈಸಾ. ಇದನ್ನು ಯಹೂದಿಗಳು, ಕ್ರೈಸ್ತರು ಒಪ್ಪುತ್ತಾರೋ ಬಿಡುವರೋ ಗೊತ್ತಿಲ್ಲ.. ಆದರೆ ಇಸ್ಲಾಂ ಹಾಗೇ ಹೇಳುತ್ತದೆ.

೫) ಇಸ್ಲಾಂ ಹುಟ್ಟಿದ್ದು ಹೇಗೆ? ಯಾಕೆ? ಮುಸ್ಲಿಮರೇಕೆ ವಿಗ್ರಹಾರಾಧನೆಯನ್ನು ವಿರೋಧಿಸುತ್ತಾರೆ?
ಉ: ಇಸ್ಲಾಂ ಹುಟ್ಟಿದ್ದು ಅಲ್ಲಾನಿಂದ ಎಂಬ ನಂಬಿಕೆ ಮುಸ್ಲಿಮರದ್ದು. ಮೂಲ ಪ್ರವಾದಿಯಾದ ಆದಮ್ ಮತ್ತು ಅವರ ಪತ್ನಿ ಈವ್‌ನಿಂದ ಹುಟ್ಟಿದ್ದು. ಕ‌ಅಬಾದಲ್ಲಿದ್ದ ಮಸೀದಿಯಲ್ಲಿ ಹಿಂದೆ ಅರಬರು ತಾವು ತಾವು ನಂಬಿದ್ದ, ಅನೇಕರ ಮೂರ್ತಿಗಳನ್ನು ತಂದು ಸ್ಥಾಪಿಸಿ ಪೂಜಿಸುತ್ತಿದ್ದರು. ಅದರಲ್ಲಿ ಹಲವು ಮೂರ್ತಿಗಳು ಆಯಾ ಮನೆತನದವರ ಪೂರ್ವಿಕರ ಮೂರ್ತಿಗಳೂ ಆಗಿದ್ದವು. ಅವನ್ನೆಲ್ಲಾ ತ್ಯಜಿಸಿ ಏಕದೇವೋಪಾಸನೆಯನ್ನು ಪ್ರತಿಪಾದಿಸಿದವರು ಮುಹಮ್ಮದರು.

೬) ಬುರ್ಖಾ ಪದ್ಧತಿಯನ್ನು ಪ್ರವಾದಿಯವರೇ ಹೇಳಿದ್ದೇ? ಮಹಿಳೆಯ ಮೇಲಿರುವ ಅಷ್ಟು ಕಟ್ಟುನಿಟ್ಟಿನ ಕಟ್ಟಳೆಗಳು ಹೇಗೆ ಬಂದವು?
ಉ: ಇದಕ್ಕೆ ಲೇಖಕರು ನೀಡಿದ ಉತ್ತರ ನನಗೆ ಸ್ಪಷ್ಟವಾಗಲಿಲ್ಲ. ತಾವು ಓದಿರುವ ಸಾವಿರಗಟ್ಟಲೆ ಪುಟಗಳ ನೂರಾರು  ಗ್ರಂಥಗಳ ಸಾರವನ್ನು ೩೦೦ ಪೇಜಿಗೆ ಇಳಿಸಿದ್ದೇನೆ. ಹಾಗಾಗಿ ಇಲ್ಲಿ ಕೆಲವನ್ನಷ್ಟೇ ಕೊಟ್ಟಿರುವೆ ಎಂದರು. ‘ಓದಿರಿ’ಯಲ್ಲೆಲ್ಲೂ ಪ್ರವಾದಿಯವರು ಹೆಣ್ಮಕ್ಕಳು ಬುರ್ಖಾ ಧರಿಸಬೇಕು ಎಂಬ ನಿಯಮ ಹೇಳಿದ್ದು ಕಂಡು ಬಂದಿಲ್ಲ. ಅಲ್ಲದೇ ಈಗ ಮುಸ್ಲಿಮ್ ಹೆಣ್ಮಕ್ಕಳಿಗೆ ಹಾಕಿರುವ ಕಟ್ಟುಪಾಡುಗಳ ಉಲ್ಲೇಖವೂ ಪುಸ್ತಕದಲ್ಲಿ ದೊರಕುವುದಿಲ್ಲ.

೭) ಶಿಯಾ, ಸುನ್ನಿ ಪಂಗಡಗಳ ಹುಟ್ಟು ಹೇಗಾಗಿದ್ದು? ಮತ್ತು ಯಾಕೆ?
ಉ: ಮುಹಮ್ಮದರ ದೇಹಾಂತ್ಯದ ಬಳಿಕದ ದಿನಗಳಲ್ಲಿ ಹುಟ್ಟಿದ ಅಧಿಕಾರ ಲಾಲಸೆ, ಗೊಂದಲ, ಗಲಾಟೆಯಿಂದಾಗಿ ಪ್ರವಾದಿಯವರ ಸಾಕು ಪುತ್ರನ ಬೆಂಬಲಿಗರು ಶಿಯಾ ಎಂದು ಕರೆಸಿಕೊಂಡರೆ, ಉಳಿದವರು ಸುನ್ನಿ ಪಂಗಡವಾಗಿ ಉಳಿದುಕೊಂಡರು.

೮) ಹದೀಸ್ ಬರೆದದ್ದು ಯಾರು? ಪ್ರವಾದಿಯವರೇ ಖುದ್ದಾ ಹೇಳಿ ಬರೆಸಿದ್ದೆ?
ಉ : ಹದೀಸ್ ಬರೆದದ್ದು ಪ್ರವಾದಿಯವರಲ್ಲ. ಅವರ ಜೊತೆಯಲ್ಲಿ ಸಂಗಾತಿಗಳಾಗಿದ್ದವರು ಬರೆದಿರಿಸಿಕೊಂಡಿದ್ದ ಪ್ರವಾದಿಯವರ ಮಾತುಗಳನ್ನು, ಅವರಾನಂತರದ ತಲೆಮಾರುಗಳಲ್ಲಿ ಅವರ ನಿಕಟವರ್ತಿಗಳಿಂದ ಸಂಗ್ರಹಿಸಿದ ಮಾಹಿತಿಗಳಿಂದ ಕ್ರೂಢೀಕರಿಸಿ ಬರೆದದ್ದು. ಇದರಲ್ಲಿ ಬುರ್ಖಾ ಪದ್ಧತಿ, ಇನ್ನಿತರ ಕಟ್ಟು ಪಾಡುಗಳ ಉಲ್ಲೇಖವಿದೆಯೆಂದು ಕೇಳಿದ್ದೇನೆ.

ಈಗ ಬರುವ ಬಹು ಮುಖ್ಯ ಪ್ರಶ್ನೆಯೆಂದರೆ ಕುರ್‌ಆನ್‌ನಲ್ಲಿ ಏನು ಹೇಳಿದ್ದಾರೆ ಮುಹಮ್ಮದರು? ಪೂರ್ಣ ಕುರ್‌ಅನ್ ನಾನು ಓದಿಲ್ಲ. ಆದರೆ ‘ಓದಿರಿ’ಯಲ್ಲಿ ಬರುವ ಕೆಲವೊಂದು ಸಂದೇಶಗಳನ್ನೋದಿದಾಗ ಅಲ್ಲಲ್ಲಿ ನನಗೆ ದ್ವಾಪರಯುಗದಲ್ಲಾದ ನನ್ನ ಗೀತೆಯಕೃಷ್ಣನ ಗೀತೋಪದೇಶ, ತ್ರೇತಾಯುಗದಲ್ಲಾದ ರಾಮಾಯಣದ ಶ್ರೀರಾಮ ಹೇಳಿದ್ದ ಹಿತವಚನಗಳು, ವೇದಗಳಲ್ಲಿನ ಉಪನಿಷತ್ತುಗಳ ಕೆಲವು ಸಂದೇಶಗಳೇ ನೆನಪಿಗೆ ಬಂದವು! ಹಾಗೇ ಹನ್ನೆರಡನೆಯ ಶತಮಾನದ ಬಸವಣ್ಣನವರು ಹೇಳಿದ್ದೂ ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ ಎಂಬುದೂ ನೆನಪಾಯ್ತು.

ಅಲ್ಲದೇ ರಾಮಾಯಣದಲ್ಲಿ ಸೀತೆಗುಂಟಾದ ಅನುಮಾನದ ಅಗ್ನಿಪರೀಕ್ಷೆ, ಮಹಾಭಾರತದ ಧರ್ಮಯುದ್ಧ, ದೇವಿಕಿಯಿಂದ ಬೇರ್ಪಟ್ಟು ಯಶೋದೆಯ ಮಡಿಲಲ್ಲಿ ಬೆಳೆವ ಬಾಲ ಕೃಷ್ಣ ಇತ್ಯಾದಿ ಘಟನಾವಳಿಗಳೆಲ್ಲವೂ ದಿಟ್ಟೋ ಪ್ರವಾದಿಯವರ ಬದುಕಿನಲ್ಲೂ ನಡೆದಿರುವುದು! (ಕಥೆಯ ತಿಳಿಯಲು ಪುಸ್ತಕ ಓದಿರಿ) ಆದರೆ ಬಹು ಮುಖ್ಯ ವ್ಯತ್ಯಾಸವೆಂದರೆ ಮುಹುಮ್ಮದರು ಅಲ್ಲಾನ ಸಂದೇಶವಾಹಕರು. ನಾವು ಪೂಜಿಸುವ ಶ್ರೀರಾಮ ಕೃಷ್ಣರು ಭಗವಂತನ ಅವತಾರಿಗಳು.

ನನ್ನ ಪ್ರಮುಖ ಸಂದೇಹಗಳಲ್ಲೊಂದು.. ಇಸ್ಲಾಂ ಧರ್ಮದ ಸ್ಥಾಪನೆಗಾಗಿ ಪ್ರವಾದಿಯವರು ಎಲ್ಲೆಡೆ ಪ್ರವರ್ತಕರನ್ನು ಕಳುಹಿಸುವುದು. ಅಲ್ಲಾಹು ಹೇಳಿದ್ದಕ್ಕೆ ತಾನು ಮುಸ್ಲಿಮ್ಮರನ್ನು ಹೆಚ್ಚು ಹೆಚ್ಚು ಬೆಳೆಸಲು ತನ್ನ ಮತಕ್ಕೆ ಬರಲು ಕೋರುತ್ತಿದ್ದೇನೆ. ಏಕ ದೇವೋಪಾಸನೆಯನ್ನು ಒಪ್ಪಲು ಹೇಳುತ್ತಿದ್ದೇನೆ ಎಂದಿದ್ದಾರೆ. ಅವರ ಪೂರ್ವಜರು, ಹೆಂಡ, ಮೋಜು, ಕಪಟ, ಸುಳ್ಳಿನಿಂದ ಹಾದಿ ತಪ್ಪಿದ್ದು ಕಂಡು ಅವರು ಆ ರೀತಿ ಆ ಕಾಲ ಘಟ್ಟದಲ್ಲಿ ಮಾಡಿದ ಆ ನಿಯಮಗಳು ಆಯಾ ಕಾಲ ಘಟಕ್ಕೆ, ಅಲ್ಲಿನ ಸ್ಥಿತಿ ಗತಿಗೆ ತಕ್ಕುದಾಗಿದ್ದವು ಎಂದೂ ಒಪ್ಪೋಣ. ಆದರೆ ಅಂದಿನ ಅವರ ಸಾರಾಂಶಗಳಲ್ಲಿನ ಉತ್ತಮ ಅಂಶಗಳನ್ನು ಮರೆತು, ಇಂದಿನ, ವರ್ತಮಾನದ ಸ್ಥಿತಿಗತಿಯ ನಿರ್ಲಕ್ಷಿಸಿ, ಎಲ್ಲರ ನಂಬಿಕೆಯನ್ನೂ ಗೌರವಿಸಿ ನಡೆಯಬೇಕೆಂದು ಅರಿಯದೇ, ರಕ್ತಪಾತವನ್ನು ಮಾಡುತ್ತಿರುವ ಕೆಲವು ಧರ್ಮಾಂಧರ ನಡೆ ನುಡಿಗಳು ಇಸ್ಲಾಂ ವಿರುದ್ಧವಲ್ಲವೇ? ಪ್ರವಾದಿಯವರೂ ರಕ್ತಪಾತ ಬಯಸಿರಲೇ ಇಲ್ಲಾ ಎಂದು ‘ಓದಿರಿ’ ಹೇಳುತ್ತದೆ. ಅನಿವಾರ್ಯವಾದಾಗ ಕತ್ತಿ ಹಿಡಿದದ್ದು ಎಂದೂ ಕಾಣಿಸುತ್ತದೆ. ಅಂಥದ್ದರಲ್ಲಿ, ಒತ್ತಾಯದಿಂದ ದಬ್ಬಾಳಿಕೆ ಮಾಡುತ್ತಿರುವುದು ಇಂದಿಗೆ ಎಷ್ಟು ಪ್ರಸ್ತುತ? ಇಂಥಾ ಕ್ರೌರ್ಯ ಸರಿಯೇ? ಎಂಬ ಪ್ರಶ್ನೆ ಕಾಡಿತು. ಅಲ್ಲದೇ ವಿಮರ್ಶಿಸಿದಾಗ, ‘ಹದೀಸ್‌’ಗಳಲ್ಲಿದೆ ಎನ್ನಲಾಗುವ ಎಷ್ಟೋ ವಿಷಯಗಳಿಗೂ, ಸ್ವತಃ ಸಂದೇಶ ನೀಡಿದ ಪ್ರವಾದಿಯವರ ನುಡಿಗಳಿಗೂ ತುಂಬಾ ವ್ಯತ್ಯಾಸ ಕಂಡು ಬಂದು ಅನುಮಾನ ಕಾಡುತ್ತದೆ. ಇಷ್ಟಕ್ಕೂ ಕಾದಂಬರಿಯ ಪ್ರಸ್ತಾವನೆಯ ಕೊನೆಗೆಯಲ್ಲಿ ಲೇಖಕರು ಹೀಗೆ ಹೇಳಿಬಿಟ್ಟಿದ್ದಾರೆ :- “ಈ ಕಾದಂಬರಿಯಲ್ಲಿ ಕಾಣಿಸಿರುವ ವಿವರಗಳಷ್ಟೇ ಪರಿಪೂರ್ಣವೂ ಅಲ್ಲ, ಅಂತಿಮ ಸತ್ಯವೂ ಅಲ್ಲ. ಆ ಹುಡುಕಾಟದ ಸಾವಿರಾರು ಮುಖಗಳಲ್ಲಿ ಮೊದಲ ಮುಖ ಮಾತ್ರ. ಈ ಕೃತಿಯನ್ನು ತಿದ್ದಿ ಮತ್ತೊಂದು ಮುಖವನ್ನು ಚಿತ್ರಿಸುವ ಸ್ವಾತಂತ್ರ್ಯ ಎಲ್ಲರಿಗೂ ಇದೆ.” ಈ ಜಾಣ್ಮೆಯ ಮಾತುಗಳು ಸಮಾಧಾನದ ಜೊತೆಗೆ ಮತ್ತಷ್ಟು ಗೊಂದಲಗಳನ್ನೂ ಕೊಟ್ಟು ಬಿಡುತ್ತವೆ.

ಶಾಂತಿಯ ಸಂಕೇತವಾದ ಇಸ್ಲಾಂ, ವೈರಿಗಳನ್ನೂ ಪ್ರೀತಿಸಿ ಎಂದ ಮುಹಮ್ಮದರು.. ಮೋಜು, ಹೆಂಡ, ಅತ್ಯಾಚಾರಗಳ ತಡೆಯಲೆಂದೇ ಹುಟ್ಟಿದ್ದು ಎಂದು ಹೇಳಲಾದ ಮುಸ್ಲಿಮ್. ಆದರೆ ಇಂದೇಕೆ ‘ಜಿಹಾದ್’ ಅನ್ನುವ ಪದವೇ ದುರ್ಬಳಕೆ ಆಗಿ ಸಿರಿಯಾದಿಂದ ಹಿಡಿದು ಭಾರತದವರೆಗೂ ಧರ್ಮಾಂಧತೆಗೆ ನಲುಗಿ ಹೋಗುತ್ತಿದೆ?! ಯಾವ ಧರ್ಮದ ಸ್ಥಾಪನೆಗಾಗಿ ರಕ್ತದ ಕೋಡಿ ಹರಿಸುತ್ತಿದ್ದಾರೋ ಅಂಥಾ ಭಯೋತ್ಪಾದಕರಿಗೆಲ್ಲಾ, ‘ಓದಿರಿ’ ಪುಸ್ತಕದ ಒಂದೊಂದು ಕಾಪಿಯನ್ನಾದರೂ ಉಚಿತವಾಗಿ ನೀಡಿದರೆ, ಸಹನೆಯಿಂದ, ಶಾಂತಿಯಿಂದ ಓದಿರಿಯನ್ನು ಅವರೂ ಓದಿದರೆ ಸಿರಿಯಾದಿಂದ ಗುಳೆಯೆದ್ದು ಹೋಗುತ್ತಿರುವ ವಲಸಿಗರಿಗೆ ನೆಲೆ ಸಿಗಬಹುದೇನೋ.. ನಮ್ಮಲ್ಲಿಯ ಕಾಶ್ಮೀರ ತಂಪಾಗಿ, ಪರಸ್ಪರರ ನಂಬುಗೆ, ಶ್ರದ್ಧೆಯ ಮೇಲೆ ಪ್ರಹಾರವಾಗದೇ, ಸೌಹಾರ್ದತೆಯಿಂದ ಬಾಳ್ವೆ ಮಾಡಲಾಗುವುದೇನೋ.. ಎಂದೆಲ್ಲಾ ಅರೆಕ್ಷಣ ಅನಿಸಿದರೂ, ಅದು ಕನಸೇ ಸರಿ ಎಂದೆನಿಸಿಬಿಡುತ್ತದೆ. ಸಂಭವಾಮಿ ಯುಗೇ ಯುಗೇ ಎಂದ ಕೃಷ್ಣನ ನೆನಪಾಗುತ್ತದೆ.

ಕೊನೆಯಲ್ಲಿ :
“ಈ ವೇದ, ಉಪನಿಷತ್, ತ್ರಿಪಿಟಕಾ, ಭಗವದ್ಗೀತೆ, ಜಿನಶಾಸನ, ತೌರಾಹ್, ಝಬೂರ್, ಬೈಬಲ್, ಕುರ್’ಆನ್ ಅಥವಾ ಗ್ರಂಥಸಾಹಿಬ್ ಯಾ ಮತ್ತೊಂದು; ಧರ್ಮಗ್ರಂಥಗಳು ಯಾವುದೇ ಇರಲಿ, ಅವುಗಳು ಬೆಲೆಬಾಳುವುದು ಗ್ರಂಥಾವಲಂಬಿಗಳ ಸದ್ವರ್ತನೆಗಳಿಂದ ಮಾತ್ರ” - ‘ಓದಿರಿ’ಯ ಮೊದಲಲ್ಲಿ ಲೇಖಕರು ಹೇಳಿದ, ನಾನೂ ಒಪ್ಪುವ ಈ ಮೇಲಿನ ಸಾಲುಗಳಂತೇ ಎಲ್ಲವೂ ಬೆಳೆಯುವುದು ಗ್ರಂಥಾವಲಂಬಿಗಳ ಸದ್ವರ್ತನೆಯಿಂದ ಮಾತ್ರ ಎಂಬುದನ್ನು ಎಲ್ಲರೂ ನೆನಪಿಡಬೇಕಾದ್ದು.

ನಿನ್ನೆ ರಾತ್ರಿ ಫೋನ್ ಮಾಡಿದಾಗ ಮುದ್ರಿತ ಪ್ರತಿಗಳೆಲ್ಲ ಮಾರಾಟವಾಗಿದ್ದು, ಮರು ಮುದ್ರಣದ ತಯಾರಿಯಲ್ಲಿದ್ದೇನೆ ಎಂದಿದ್ದರು. ಅವರದೇ ಮಾತಿನಂತೆ ‘ಎಲ್ಲದಕು ಕಾರಣರು  ಮುಖಗೋಡೆಯ ಗೆಳೆಯ ಗೆಳತಿಯರು’. ಎಲ್ಲರಿಗೂ ಅವರು ಕೃತಜ್ಞತೆ ತಿಳಿಸಲು ಹೇಳಿದ್ದಾರೆ.

ಪುಸ್ತಕವನ್ನು ಇಲ್ಲಿ ಕೊಳ್ಳಬಹುದು..  "ಕ್ಲಿಕ್ಕಿಸಿ-ಓದಿರಿ"

~ತೇಜಸ್ವಿನಿ ಹೆಗಡೆ.

ಸೋಮವಾರ, ಆಗಸ್ಟ್ 31, 2015

ಕನವರಿಕೆ

ಕಳೆದ ಬಾರಿ ಎಂದು? ಯಾವಾಗ? ಎಲ್ಲಿ? ಒಟ್ಟಾಗಿ ಕುಳಿತು
ಪಾರಿಜಾತದ ಘಮವ ಹೀರಿದೆವು ಹೇಳು?!
ಎದೆಯೊಳಿಹ ಮಧು ಬಟ್ಟಲ ಅದೆಂದು ಹಂಚಿಕೊಂಡೆವು ಹೇಳು?!
ಹಾಲಾಹಲವ ಕುಡಿದ ನೀಲಕಂಠನೇ ಕುಡಿವಾಗೆಲ್ಲೋ,
ಸಿಡಿದ ಹನಿಗಳು ಕಡಲ ಸೇರಿ, ಕಡುನೀಲವಾದ
ಸಾಗರನು, ಜಲಚಕ್ರದ ಪ್ರಭಾವದೊಳು ಸಿಲುಕಿ,
ಅದರೊಳು ಒದ್ದಾಡುತಿಹ ಮೀನಿನಂತಾಗಿಹೆವು ಯಾಕಿಂದು ಹೇಳು?!

ಅತ್ತ ದರಿ, ಇತ್ತ ಪುಲಿ ಎನ್ನುವಂತಿಹ ಪುಟ್ಟ ದಾರಿಯ,
ಇಣುಕಿದರೆ ಸಾಕು ಪ್ರಪಾತದ ಭಯ!
ಸವೆಸುವುದು ಬಲು ಕಷ್ಟ, ಹಿಂತಿರುಗಲಾಗದು ಅದು ‘ಆತನ’ ಆದೇಶ
ಮೇಲೇರ ಹೊರಟರೋ, ಕಾಡುವ ಉಬ್ಬಸ...
ಹೂಕಣಿವೆಯ ಕಲ್ಪನೆಯಲೇ ಮುಗಿಸಿ ಬಿಡೋಣ ಪಯಣ.

ಗಿಜುಗುಡುವ ಸಂತೆಯಲಿ ಮೌನ ತಾಣವ ಅರುಸುವುದು,
ಕಡಲಲೆಯ ತೆರೆಗಳಲಿ ಬೆಳ್ನೊರೆಯ ಆಯುವುದು,
ಮರಳ ಮುಷ್ಟಿಯೊಳಿಟ್ಟು ಕಾಲವ ಬಂಧಿಸುವುದು.
‘ಕನ್ನಡಿಯೊಳಗಿನ ಗಂಟು ಕಂಡು ಕಳ್ಳ ಕನ್ನವಿಕ್ಕಂತೇ’ ಸರಿ ಬಿಡು!
ಪಲ್ಕಿರಿತು ತಾಳಿಕೊಳುವುದಷ್ಟೇ ಉಳಿದಿರುವುದು ನನಗೂ, ನಿನಗೂ....

~ತೇಜಸ್ವಿನಿ.

ಮಂಗಳವಾರ, ಆಗಸ್ಟ್ 18, 2015

ಲಲಿತೋಪಾಸನೆಯ ಮಹತ್ವ, ಅಗತ್ಯ ಮತ್ತು ಅಪಾರ್ಥದಿಂದಾಗುವ ಅನರ್ಥಗಳು.

ಸರಾಯಿ, ಶರಾಬು, ಹೆಂಡ ಕುಡಿಯುವುದರ ಪರ ಮತ್ತು ವಿರೋಧದ ಬಗ್ಗೆ ಹಲವು ಚರ್ಚೆಗಳು ಬಹಳ ಸಲ ಎದ್ದಿವೆ.. ಏಳುತ್ತಿರುತ್ತವೆ. ಉದಾಹರಣೆಗೆ ಇತ್ತೀಚಿನ ಒಂದು ಘಟನೆಯನ್ನೇ ತೆಗೆದುಕೊಂಡರೆ.... ವಿದ್ಯಾರ್ಥಿನಿಯರಿಬ್ಬರು ಮೋಜಿಗಾಗಿ ವಿಹಾರಕ್ಕೆ ಹೋಗಿ ಕುಡಿದ ಫೋಟೋದಿಂದ ಡಿಬಾರ್ ಆಗಿರುವ ಸುದ್ದಿ ಹಲವೆಡೆ ಸಾಮಾಜಿಕ ತಾಣಗಳಲ್ಲಿ ಕಂಡು ಬಂದಿದೆ. ಈ ಘಟನೆಯ ಸತ್ಯಾಪಸತ್ಯತೆಯ ಬಗ್ಗೆ ತಿಳಿದಿಲ್ಲ. ತಿಳಿದುಕೊಳ್ಳುವ ವಿನಾಕಾರಣ ಕುತೂಹಲ ನನಗಿಲ್ಲ. ಆದರೆ ಅವರು ಹೆಣ್ಣುಮಕ್ಕಳು, ಹೆಣ್ಣುಮಕ್ಕಳು ಕುಡಿಯಬಾರದು, ಗಂಡು ಮಕ್ಕಳು ಕುಡಿಯಬಹುದು ಎಂಬ ತಾರತಮ್ಯ ಭಾವದಿಂದ ನಿರ್ವಹಿಸಿದ್ದರೆ ಅದನ್ನು ಖಂಡಿಸುವೆ. ಇಷ್ಟಕ್ಕೂ ಇದು ಅವರನ್ನು ಡಿಬಾರ್ ಮಾಡಲು ಕಾರಣವಾಗಬಾರದಿತ್ತು.. ತಿಳಿ ಹೇಳಿಯೋ ಇಲ್ಲಾ ಅವರಲ್ಲಿ ವಿಶ್ವಾಸವಿಟ್ಟೋ ತಿದ್ದಬೇಕಿತ್ತು. ಆದರೆ ಪ್ರತಿಯೊಂದು ಶೈಕ್ಷಣಿಕ ಸಂಸ್ಥೆಯೂ ತನ್ನದೇ ಆದ ಕೋಡ್ ಆಫ್ ಕಾಂಡೆಕ್ಟ್ ಅನ್ನು ರೂಪಿಸಿರುತ್ತದೆ. ಅವರ ನಿಯಮಾವಳಿಯ ಪ್ರಕಾರ, ಅಸಭ್ಯ ವರ್ತನೆ, ಪೋಲೀಸ್ ಕೇಸು, ಸಾರ್ವಜನಿಕ ದೂರನ್ನು ಪರಿಗಣಿಸಬೇಕಾಗುತ್ತದೆ. ಆದರೆ ಸಂದರ್ಭಾನುಸಾರ ನಿರ್ಧಾರ ತೆಗೆದುಕೊಂಡರೆ ಚೆನ್ನ. ಅದೇನೇ ಇದ್ದರೂ, ಈಗ ನಾನು ಚರ್ಚಿಸುತ್ತಿರುವುದು ಆ ಘಟನೆಯ ನಂತರ ಹೊರ ಹೊಮ್ಮಿದ ವಿವಿಧ ಅಭಿಪ್ರಾಯ, ಕುಡಿತದ ಸಮರ್ಥನೆಗಳನ್ನು ಓದಿದ ಮೇಲೆ ಮತ್ತು ಎಲ್ಲಕ್ಕಿಂತ ಬಹು ಮುಖ್ಯವಾಗಿ ಆ ಸಮರ್ಥನೆಗೋಸ್ಕರ ಲಲಿತಾಸಹಸ್ರನಮಾದ ಕೆಲವೇ ಕೆಲವು ಪದಗಳನ್ನು ಬಳಸಿಕೊಂಡದ್ದು ಅದೆಷ್ಟು ಅಸಂಬದ್ಧ ಎನ್ನುವುದನ್ನು ವಿವರಿಸಲು.

ಕುಡಿತದಂಥ ವ್ಯಸನ ನನ್ನ ಮಟ್ಟಿಗೆ ಸಹನೀಯವಲ್ಲ. ನಾನು ಈ ಕುಡಿತ, ಡ್ರಗ್ಸ್, ಧೂಮ್ರಪಾನ, ಇನ್ನಿತರ ಅನಾರೋಗ್ಯಕರ ಚಟುವಟಿಗಳನ್ನು ಯಾವುದೇ ‘ಲಿಂಗ ಬೇಧ’ವಿಲ್ಲದೇ ಖಂಡಿಸುತ್ತೇನೆ. ಮೊದ ಮೊದಲು ಹವ್ಯಾಸವಾಗಿರುವ ಇವುಗಳೆಲ್ಲಾ ಅದೆಂತು? ಹೇಗೆ? ಚಟವಾಗಿ, ವ್ಯಸನವಾಗಿ ನಮ್ಮನ್ನು ಬಲಿ ತೆಗೆದುಕೊಳ್ಳಬಲ್ಲವು ಎಂಬುದನ್ನು ನೋಡಿರುತ್ತೇವೆ, ಕೇಳಿರುತ್ತೇವೆ, ಓದಿರುತ್ತೇವೆ. ಅದರಲ್ಲೂ ಎಳವೆಯಲ್ಲಿ, ವಿದ್ಯಾರ್ಥಿ ಜೀವನದಲ್ಲಿ ಈ ಕ್ಷಣಿಕ ಸುಖಕ್ಕಾಗಿ ಬಲಿಯಾದವರು ಅಸಂಖ್ಯ. ಅದಕ್ಕೆ ಹುಟ್ಟಿರುವ, ಹುಟ್ಟುತ್ತಿರುವ ಮನಃಪರಿವರ್ತನೀಯ ಶಾಖೆಗಳೇ ಸಾಕ್ಷಿ! ಇದನ್ನು ಒಂದು ‘ಮೋಜು’ ‘ತಪ್ಪಿಲ್ಲ’ ಎನ್ನುವ ಸಮರ್ಥನೆಗೆ ಪುರಾಣ, ದೇವ, ದೇವಿ, ಸ್ತುತಿಗಳ ಉದಾಹರಣೆ ತೆಗೆದುಕೊಳ್ಳುತ್ತಾರೆ. ಆದರೆ ನನಗೆ ಅನಿಸಿದ್ದು.. ಅದೆಂತು ಇದು ಲೌಕಿಕವಾಗಿ ಮತ್ತು ಅಲೌಕಿಕವಾಗಿ ಭಿನ್ನವಾಗಿದೆ ಎಂಬುದನ್ನು ತಿಳಿಯದೇ ಪ್ರತಿಪಾದಿಸುತ್ತಾರಪ್ಪಾ ಎಂದು! ಈ ಕಾಲದ ವ್ಯಸನಕ್ಕೆ, ಮೋಜಿಗೆ ಆ ಅಲೌಕಿಕ, ಆಧ್ಯಾತ್ಮಿಕ ಉದಾಹರಣೆಗಳನ್ನು ತೆಗೆದುಕೊಳ್ಳುವುದು ವಿತಂಡವಾದವಾಗುವುದು, ಅಸಮ್ಮತವೆನಿಸುವುದು ಎಂಬುದನ್ನು ತುಸು ವಿಶ್ಲೇಷಿಸಿ ಬರೆಯುತ್ತಿದ್ದೇನೆ. ಇದು ನನ್ನ ಓದಿನ ಪರಿಧಿ, ತಿಳಿದವರ, ಅರಿತವರ ಜೊತೆಗಿನ ಚರ್ಚೆ, ಮನದೊಳಗಿನ ಮಂಥನ ಇವುಗಳಿಂದ ಹುಟ್ಟಿದ್ದು. ಇಷ್ಟವಾಗುವುದು ಬಿಡುವುದು ಅವರವರಿಗೆ ಬಿಟ್ಟದ್ದು. ಯಾವುದೇ ಹೇರಿಕೆ, ಒತ್ತಾಯ, ವೈಯಕ್ತಿಕೆ ನಿಂದನೆಗಳಿಗಲ್ಲ.

ದೇವಿ, ದೇವ, ದೇವತೆಯರು, ಪುರಾಣಗಳು ಇವನ್ನೆಲ್ಲಾ ನಂಬದವರು ಅದೆಂತು ಅಲ್ಲಿಯ ಉದಾಹರಣೆಗಳನ್ನು ತಮ್ಮ ದೌರ್ಬಲ್ಯಗಳ ಸಮರ್ಥನೆಗೆ ತೆಗೆದುಕೊಳ್ಳುವರು? ಎಂಬುದು ನನ್ನ ಪ್ರಥಮ ಪ್ರಶ್ನೆ.

ಎರಡನೆಯ ಬಹು ಮುಖ್ಯವಾಗಿ ಲಲಿತಾಸಹಸ್ರನಾಮದಲ್ಲಿ ಬರುವ ‘ಮದ’ ಅನ್ನೋ ಪದದ ಬಗ್ಗೆ

ಲಲಿತಾ ಸಹಸ್ರನಮಾಮ ಹಾಗೂ ಇನ್ನಿತರ ಪುರಾಣ ಸ್ತುತಿಗಳಲ್ಲಿ ಬರುವ ಈ ಮಧುಪಾನದ ಸಂದರ್ಭ. ಅಲ್ಲಿ ಬರುವ ಸುರಪಾನ, ಸೋಮರಸ, ಅಮೃತಪಾನ ಇವೆಲ್ಲಾ ಇಂದಿನ ಗಡಂಗು, ಶರಾಬು, ಸೇಂದಿ, ಹಲವು ರಾಸಯನಿಕ ಕ್ರಿಯೆಗಳಿಗೊಳಪಟ್ಟ ವಿವಿಧ ರೀತಿಯ ಮತ್ತಿನ ಪಾನೀಯಗಳೊಂದಿಗೆ ಸಮೀಕರಿಸುವುದು, ಸಾಮ್ಯ ಕಲ್ಪಿಸುವುದು ಸಲ್ಲ ಮತ್ತು ಅದು ಹಾಗಿಲ್ಲವೂ ಇಲ್ಲ. ಲಲಿತಾ ಸಹಸ್ರನಾಮದಲ್ಲಿ ಕಾದಂಬಿನಿ ಪ್ರಿಯ ಅಂದರೆ ಕಾದಂಬನಿ ವೃಕ್ಷದ ರಸದಿಂದ ಉನ್ಮತ್ತಳಾದ ಅನ್ನೋ ಅರ್ಥದಲ್ಲಿ, ಮದಶಾಲಿನಿ, ವಾರುಣಿ ಮದ ವಿಹ್ವಲ ಇತ್ಯಾದಿ ಪದಗಳಿವೆ. ಅಲ್ಲಿಯ ದೇವಿಯ ಅಲೌಕಿಕ ಉನ್ಮತ್ತ ಸ್ಥಿತಿಗೂ, ಇಂದು ಕುಡಿದು ನಶೆಯೇರಿಸಿಕೊಂಡು ಹದ ತಪ್ಪುವ ಸ್ಥಿತಿಗೂ ಎತ್ತಣ ಸಾಮ್ಯ?! ಇನ್ನು ಆ ದೇವಿ ಸ್ವರೂಪವೇ ನಮಗಿಂತ ವಿಭಿನ್ನ. ಅವಳದು ಅಲೌಕಿಕ ಶರೀರ. ಕಾದಂಬಿನಿ ರಸ ಪ್ರಿಯೆ ಅಂದರೆ ಇಲ್ಲಿಯ ಮನುಷ್ಯರು ತಮ್ಮ ಗ್ಲಾಸಿಗೆ ಶರಾಬು ಸುರಿದು ಕುಡಿದಂತೆಯೂ ಅಲ್ಲ. ನಮ್ಮಂಥ ಸಾಮಾನ್ಯರ ಊಹೆಗೂ ನಿಲುಕದ ವಿರಾಟ್ ಸ್ವರೂಪವನ್ನು ಲಲಿತಾ ಸಹಸ್ರನಾಮದಲ್ಲಿ ಕಟ್ಟಿಕೊಡಲಾಗಿದೆ.

ಶ್ರೀಯುತ ತೋಳ್ಪಾಡಿಯವರೊಡನೆ ಲಲಿತಾ ಸಹಸ್ರನಾಮದಲ್ಲಿ ಬರುವ ಈ ಪದಗಳ ಹಿಂದಿನ ಒಳಾರ್ಥಗಳ ಕುರಿತು ಚರ್ಚೆ ನಡೆಸಿದಾಗ ನನ್ನ ಅರಿವಿಗೆ ನಿಲುಕಿದ್ದು ಇಷ್ಟು. :- ಲಲಿತಾ ಸಹಸ್ರನಾಮ ಒಂದು ಆಧ್ಯಾತ್ಮಿಕ ಸಾಧನೆ, ಉಪಾಸನೆ. ನಾವು ಲೌಕಿಕ ಭೋಗ ವಸ್ತುವೇ ವಾಸ್ತವ, ಇದುವೇ ಜೀವನ, ಇದೇ ಸತ್ಯ ಎಂದಾದಲ್ಲಿ ಈ ಉಪಾಸನೆಯ ಅಗತ್ಯತೆಯಾದರೂ ಯಾಕೆ? ಆಂತರಿಕವಾಗಿ ಪ್ರತಿಯೊಬ್ಬರಿಗೂ ಗೊತ್ತಿರುತ್ತದೆ. ಪ್ರಜ್ಞೆಗೆ ಬೇರೆಯಾದ ಸ್ತರವಿದೆ ಎಂದು. ನಮ್ಮ ಒಳಗೆ ಒಂದು ತುಡಿತವಿದೆ. ನಾವು ಪ್ರಪಂಚಕ್ಕೆ ತೋರಿಸುವುದು ಒಂದು, ವಾಸ್ತವಿಕವಾಗಿ ಇರುವುದು ಒಂದು. ಇವುಗಳೆರಡರ ನಡುವೆ ನಿರಂತರ ತಾಕಲಾಟವಿರುತ್ತದೆ. ನಮ್ಮ ಒಳಗಿನ ತುಡಿತವ ತಿಳಿಯಲು, ಅರಿಯಲು ಬಹಿರ್ಮುಖ ಸಾಧನಗಳಿಂದ ಅಸಾಧ್ಯ. ಇದು ಹೊರಗಿನ ವ್ಯವಹಾರಕ್ಕೆ ಸಿಗದ್ದು. ಅಂತರ್ಮುಖ ವ್ಯವಹಾರ ತಿಳಿಯಲು ಈ ಆಧ್ಯಾತ್ಮಿಕ ಸಾಧನೆ, ಉಪಾಸನೆ ಎಲ್ಲವೂ ಅತ್ಯಗತ್ಯ. ಲೋಕಕ್ಕೆ ನಾವು ಏನನ್ನು ತೋರಬಯಸುವೆವು? ಲೋಕ ನಮ್ಮನ್ನು ಹೇಗೆ ಕಾಣಬಯಸುತ್ತದೆ? ಎಂಬುದನ್ನು ದಾಟದೇ ಆಧ್ಯಾತ್ಮಿಕ ಸಾಧನೆ ಅಸಾಧ್ಯವಾದ್ದು. ಅಂತಹದ್ದು ಬೇಕಾಗೂ ಇಲ್ಲ. ಇನ್ನು ಲಲಿತಾಸಹಸ್ರನಾಮದಲ್ಲಿ ಬರುವ ಮದೋನ್ಮತ್ತ ಸ್ಥಿತಿ :- ಇದು ಆಧ್ಯಾತ್ಮಿಕ, ಅಲೌಕಿಕ ಉನ್ಮತ್ತ ಸ್ಥಿತಿ. ಈ ಉನ್ಮತ್ತತೆಗೆ ಒಳಗಾಗುವವರು ಬಾಹ್ಯದ ನಶೆಯಿಂದ ಬೇರ್ಪಟ್ಟು ಮೇಲ್‍ಸ್ತರಕ್ಕೆ ಒಯ್ಯಲ್ಪಡುತ್ತಾರೆ. ಅಂದರೆ ಅಲೌಕಿಕ ಉನ್ಮತ್ತ ಸ್ಥಿತಿಗೆ ಯಾವುದೇ ಬಾಹ್ಯ ವಸ್ತುವಿನ ಪ್ರಲೋಬನೆ ಇರುವುದಿಲ್ಲ.. ಬೇಕಾಗೂ ಇಲ್ಲ. ಅಂಥದ್ದು ನಮ್ಮನ್ನು ಮೇಲೇರಿಸುತ್ತದೆ. ಅದೇ ಬಾಹ್ಯ ವಸ್ತುಗಳಾದ, ನಶೆಯನ್ನೇರಿಸುವ ಕುಡಿತ, ಮಾದಕ ವಸ್ತುಗಳೆಲ್ಲಾ ನಮ್ಮನ್ನು ಉನ್ಮತ್ತಗೊಳಿಸಿದರೂ ಮತ್ತಷ್ಟು ದುರ್ಬಲಗೊಳಿಸುವಂಥವು, ಅಧಃಪತನಕ್ಕೆ ಎಳೆಸುವಂಥವು. ಹೀಗಿರುವಾಗ ದೇವ, ದೇವಿ, ಶಕ್ತಿಯನ್ನು ಅವರ ಆ ವಿರಾಟ್ ಸ್ವರೂಪವನ್ನು, ಉನ್ಮತ್ತತೆಯನ್ನು ಲೌಕಿಕತೆಗೆ ಎಳೆದು ತಂದು ಸಮರ್ಥಿಸಿಕೊಳ್ಳುವುದು, ಸಮರ್ಥಿಸುವುದು ನಮ್ಮ ದೌರ್ಬಲ್ಯಗಳನ್ನು ಅಡಗಿಸಿಕೊಳ್ಳಲು ಮಾಡುವ ಕ್ರಿಯೆ.. ತಿರುಚುವ ಪ್ರಕ್ರಿಯೆಯಾಗುತ್ತದೆ.

ಲಲಿತೆ ನಿಶ್ಚಲ, ನಿರಂಹಾಕಾರಿ, ‘ಮದನಾಶಿನಿ’, ‘ಮಧುಪ್ರೀತಾ’ ಭೀಭತ್ಸ, ಭಯಂಕರಿ, ಅಭಯಂಕರಿ, ಮನಸ್ವಿನಿ, ಮಾನವತಿ, ವಿಶ್ವಮಾನ್ಯ, ಇಚ್ಛಾಶಕ್ತಿ, ಜ್ಞಾನ ಶಕ್ತಿ, ಕ್ರಿಯಾ ಶಕ್ತಿ ಸ್ವರೂಪಿ, ನಿರ್ಮಲ (ಅವಳನ್ನು ಹಾಗೆ ಕಾಣುವವರಿಗೆ) ಇತ್ಯಾದಿ ಗುಣ ವಿಶೇಷಣಗಳಿಂದ, ಅಲಂಕಾರಗಳಿಂದ ಸಹಸ್ರನಾಮದಲ್ಲಿ ಸ್ತುತಿಸಲ್ಪಟ್ಟವಳು. ಸರ್ವವನ್ನೂ ಒಳಗೊಂಡವಳು.. ಅಬೇಧ್ಯಳು, ಚಿದೇಕರಸರೂಪಿಣಿ ಲಲಿತೆ. ಅಲ್ಲದೇ, ಆಕೆ ಹೊರಜಗತ್ತಿಗೆ ಕಾಣಿಸಲಾರದಂಥವಳು, ಒಳಗಣ್ಣಿಗೆ ಪ್ರಕಟಗೊಳ್ಳುವವಳು. ಆಕೆ ಎಲ್ಲಾ ಗುಣವಿಶೇಷಣಗಳಿಂದ ಪ್ರಕಟಗೊಳ್ಳುವಾಗ ಅವಳ ವಿರಾಟ್ ಸ್ವರೂಪ ತೆರೆದುಕೊಳ್ಳುವುದು. (ಅಂತರ್ಮುಖ ಸಮಾರಾಧ್ಯ, ಬಹುರ್ಮುಖ ಸುದುರ್ಲಭ) ಯುದ್ಧ ಸಮಯದಲ್ಲಿ, ಶತ್ರು ಸಂಹಾರಕ್ಕಾಗಿ, ದುಷ್ಟರಿಗೆ ಭೀಭತ್ಸ ಭಯಂಕರಿಯಾಗಿ ಹೂಂಕರಿಸುತ್ತಾ, ‘ಮದವೇರಿಸಿಕೊಂಡು’ ಹೊರಡುತ್ತಾಳೆ. ಹಾಗಾಗಿ ಯಾವುದೇ ಒಂದು ಪದವಾದ - ಮಧು, ಮದ ಇತ್ಯಾದಿಗಳಿಂದ ‘ಮಾತ್ರ’ ವಿಶ್ಲೇಷಿಸುವುದು ಅಸಮಂಜಸ, ಅಸಮ್ಮತ. ಇಷ್ಟಕ್ಕೂ ಲಲಿತೆ ಯಾವುದೇ ಇದ ಮಿತ್ಥಂ ಅನ್ನೋ ಅರ್ಥಕ್ಕೆ ಸಿಗದಂಥವಳನ್ನು, ಎಲ್ಲವನ್ನೂ ದಾಟಿ ಬೆಳೆವ ವಿರಾಟ್ ಶಕ್ತಿ.

ಕೊನೆಯದಾಗಿ :- ವೇದ, ಪುರಾಣಗಳು, ಸ್ತುತಿಗಳಿಗೂ, ಲೌಕಿಕತೆಗೂ ಅಜಗಜಾಂತರ ವ್ಯತ್ಯಾಸವಿದೆ. ಒಂದು ಅಲೌಕಿಕ/ಆಧ್ಯಾತ್ಮಿಕ. ಮತ್ತೊಂದು ಲೌಕಿಕ/ಬಾಹ್ಯ. ಅಲ್ಲಿಯ ಸುರಪಾನವನ್ನು, ಸೋಮರಸ ಪದಗಳನ್ನು ಬಳಸಿಕೊಂಡು, ಇಲ್ಲಿನ ಕಳ್ಳಿಗೆ, ಶರಾಬಿಗೆ ಇಳಿಸುವುದು, ತಿರುಚುವುದು ಖೇದಕರ. ಇದಕ್ಕೆ ಯಾವುದೇ ಲಿಂಗ ತಾರತಮ್ಯವನ್ನು ತಳುಕು ಹಾಕುವುದೂ ಅಮಾನ್ಯ. ಮೋಜಿಗಾಗಿ ಸ್ವೇಚ್ಛೆಗಾಗಿ ಯಾವುದನ್ನೇ ನೆಚ್ಚಿಕೊಂಡರೆ ಅದೇ ವ್ಯಸನ, ಚಟವಾಗುವುದರಲ್ಲಿ ದೂರವಿಲ್ಲ. ಸ್ವಾತಂತ್ರ್ಯಕ್ಕೂ, ಸ್ವೇಚ್ಛೆಗೂ ಇರುವ ವ್ಯತ್ಯಾಸ ತಿಳಿಯದ ಹಗಲುಗುರುಡು ವೇದ, ಪುರಾಣಗಳೆಲ್ಲಾ, ಉಪಾಸನೆಗಳಲ್ಲಿ ಇರುವುದನ್ನು ತಿರುಚಲು ಯತ್ನಿಸುತ್ತದೆ. ನಮ್ಮ ದೌರ್ಬಲ್ಯಗಳಿಗೆ ಹೇಗೆ ಅವು ಸಮರ್ಥನೀಯವಾಗಬಲ್ಲವು, ಉತ್ತರವಾಗಬಲ್ಲವು ಎಂಬ ಹುಡುಕಾಟಕ್ಕೆ ಕಾರಣವಾಗುವ ಅಪಾಯಗಳು ಬಹಳ ಇವೆ. ವ್ಯಸನ ಮುಕ್ತ ಭಾರತದತ್ತ ಎಲ್ಲರೂ ಅದರಲ್ಲೂ ಯುವ ಜನತೆ ಮುಂದಾಗುವುದು ಇಂದಿನ ತುರ್ತು. ತಮಗೆ ತೋಚಿದಂತೇ ತಾವು ಸೀಮಿತಾರ್ಥದಲ್ಲಿ ಅರ್ಥೈಸಿಕೊಂಡಂತೇ ಅಲ್ಲೆಲ್ಲೋ ಕುಡಿದ್ದಾರೆ, ನೀವೂ ಕುಡಿಯಿರಿ ಅದು ನಿಮ್ಮ ಸ್ವಾತಂತ್ರ್ಯ ಅನ್ನೋದು ನೋವಿನ ಸಂಗತಿ.

Disclaimer :- ನೈತಿಕ ಬದುಕನ್ನು ಅನುಸರಿಸುವ, ಆ ದೃಷ್ಟಿಕೋನವನ್ನು ಬೆಂಬಲಿಸುವ ಬಯಕೆಯಿದ್ದಲ್ಲಿ ಕಾಣುವುದೆಲ್ಲಾ ನೈತಿಕವಾಗೇ ಇರುತ್ತದೆ. ಹಾಗಾಗಿ ನಾನು ಈ ಲೇಖನ ಬರೆದದ್ದು ಆ ದೃಷ್ಟಿಕೋನವನ್ನಿಟ್ಟುಕೊಂಡು. ಇದು ಸಮರ್ಥನೀಯವಲ್ಲ, ಸರಿಯಿಲ್ಲ ಎಂದು ತಾವು ತಿರುಚಿ ಅರ್ಥೈಸಿಕೊಂಡ ವ್ಯಾಖ್ಯಾನಗಳ ಮೂಲಕ ವಿತಂಡ ವಾದಕ್ಕೆ ಬರುವವರಿಗೆ ಉತ್ತರಿಸಿ ಫಲವಿಲ್ಲ. :)

~ತೇಜಸ್ವಿನಿ.

ಗುರುವಾರ, ಜುಲೈ 2, 2015

ಕಾದಿರುವಳು...

ಮನದ ಕೋಣೆಗಳಲಿ ತುಂಬಿಹ ಸವಿ ನೆನಪುಗಳ
ಧೂಳು ಕೊಡವಿ, ನವಿರಾಗಿ ಸವರಿ, ಆಘ್ರಾಣಿಸಿ,
ಅನುಕ್ರಮವಾಗಿ ಜೋಡಿಸಿಡಬೇಕಾಗಿದೆ..

ತುಸು ಹಳತಾದ, ಮಾಸಿದ, ಅಲ್ಲಲ್ಲಿ ಹರಿದ
ನೆನಪುಗಳಿಗೆ ತೇಪೆ ಹಾಕಲು ನಿನ್ನ-
ಸಹಾಯ ಹಸ್ತಕ್ಕಾಗಿ ಕಾದಿರುವ ಮನಸು...
ಬೇಡವೆಂದರೂ ಕಾಡುತಿದೆ ನಿಸಾರರ ಹಾಡಿನ ಸಾಲು..
‘ಬರುವೆಯೋ ಬಾರೆಯೋ ನೀನೆನ್ನುತಿದೆ ಸಂದೇಹ’

ಜೀರ್ಣಾವಸ್ಥೆಯಲ್ಲಿಹ ನೆನಪುಗಳು ಒಂದಿಷ್ಟು
ಗುಟುಕು ಜೀವ ಹಿಡಿದು ಹುಡಿ ಹಾರಿಸುತಿವೆ
ಸುಪ್ತಾವಸ್ಥೆಯಲೂ ನರಳಿ, ನನ್ನ ಜೀವ ಹಿಂಡುತಿವೆ!
ಕೇಳಲಾಗದು ನಿನ್ನ ಒಪ್ಪಿಗೆಯ...
ಹಾಗೇ ಮೂಟೆ ಕಟ್ಟಿ ಕಾಯಬೇಕಾಗಿದೆ
ಎಂದೂ ಬಾರದ ರದ್ದಿಯವನ ದಾರಿಯ ನೋಡುತ್ತಾ....

ಇನ್ನೂ ಕೆಲವು ಕೋಣೆಗಳಿವೆ, ಬಳಿ ಸಾರಲೂ ಭಯ ಮೂಡುವುದು!
ಘನ ಘೋರ, ಭೀಕರ ಕನವರಿಕೆಗಳು,
ಸುಟ್ಟು ಕರಕಲಾದ ಕನಸುಗಳ ಅವಶೇಷಗಳು,
ಕಾರ್ಕೋಟಕದಂಥ ವಿಷವ ಹೊತ್ತ ಕಟು ನೆನಪುಗಳು
ಮೆಲ್ಲನೆ ಬಹು ಮೆಲ್ಲನೆ ಪರುಚುತ್ತಿವೆ ಮುಚ್ಚಿದ ಬಾಗಿಲುಗಳಂಚನ್ನು.
ಮನಸಿನೊಳಗಿನ ಗೀರುಗಳ ಲೆಕ್ಕವಿಟ್ಟವರಾರು?!

ಅವುಗಳನೆಲ್ಲಾ ನಾನೊಬ್ಬಳೇ ತೊಳೆಯಲಾಗದು ನೋಡು...
ಹೊರ ಚೆಲ್ಲಿದರದರ ನಾತ ಹರಡುವುದು ಬಹು ಬೇಗ!
ಕೆಲವು ನಿನ್ನದೇ ದೇಣಿಗೆ, ಹಲವು ನಮ್ಮಿಬ್ಬರ ಕಾಣಿಕೆ
ಹಂಚಿಕೊಳಬೇಕಿದೆ ಒಂದಿಷ್ಟನ್ನು, ಹನಿ ಹನಿಯಾಗಾದಾರೂ ಸೈ!
ತುಸು ನಾ ಹಗುರಾಗಿ, ಸ್ವಲ್ಪ ನೀ ಸ್ಥೂಲವಾಗಲು...

ತಲೆಗೆ ತಲೆಕೊಟ್ಟು ಕಳುಹಿಸಲೇ? ಭುಜಕೊರಗಿ ಹರಿಸಲೇ?
ಉಸಿರೊಳಗೆ ಬೆರೆಸಿ, ಉಸಿರಾಗಿಸಿ ಒಳ ದಬ್ಬಲೇ?
ತುರ್ತಾಗಿ ನಿಭಾಯಿಸಬೇಕಿದೆ ಈ ಕೋಣೆಗಳ ಉಸ್ತುವಾರಿಯ
ನಿರಾಳವಾಗಬೇಕಿದೆ ಹೊರಯಿಳಿಸಿಕೊಂಡು ಈ ಜವಾಬ್ದಾರಿಯ
ಮತ್ತದೇ ಹಾಡು, ಅದೇ ಸಾಲು...
‘ಬರುವೆಯೋ ಬಾರೆಯೋ ನೀನೆನ್ನುತಿದೆ ಸಂದೇಹ’

~ತೇಜಸ್ವಿನಿ ಹೆಗಡೆ.

ಶುಕ್ರವಾರ, ಏಪ್ರಿಲ್ 24, 2015

ಮಿಥುನ

“ಜಾನಕಿ ದೀಪದ ಬುಡ್ಡಿ ತೀರಾ ಚಿಕ್ಕದಾಗಿ ಬಿಟ್ಟಿದೆ ನೋಡೆ.... ಸ್ವಲ್ಪ ದೊಡ್ಡದು ಮಾಡು ಬಾ... ಕೂಸಿಗೆ ಧಾರೆ ಸೀರೆ ಉಡಿಸ್ಬೇಕು... ಗೋಧೋಳಿ ಮುಹೂರ್ತಕ್ಕೆ ಹೆಚ್ಚು ಹೊತ್ತು ಉಳಿದಿಲ್ಲ...” ವೆಂಕಜ್ಜಿಯ ಮಾತಿಗೆ ಕುಳಿತಲ್ಲೇ ಕಣ್ಣು ಕೂರುತ್ತಿದ್ದ ಹದಿನಾಲ್ಕರ ಹುಡುಗಿ ಥಟ್ಟನೆ ಕಣ್ಬಿಟ್ಟಳು. ಈ ಕ್ಷಣಕ್ಕಾಗಿಯೇ ಆಕೆ ಅಷ್ಟೊತ್ತೂ ಕಾದಿದ್ದು.....! ‘ಆಯಿ ಕಲಾಳ ಧಾರೆ ಸೀರೆ ಒಂದ್ಸಲ ನೋಡುವೆ... ಹಾಳು ಮಾಡಲ್ಲ.... ಕೊಳಕು ಕೈ ತಾಗಿಸೊಲ್ಲ... ಒಂದೇ ಒಂದು ಸಲ ಮುಟ್ಟಿ ಪಿಟಾರೆ ಒಳ್ಗೆ ಇಟ್ಟು ಬಿಡುವೆ...’ ಅದೆಷ್ಟು ಸಲ ತಾಯಿಯನ್ನ ಗೋಗರೆದಿದ್ದಳೋ ಎಂತೋ... ಆದರೆ ಸುಬಮ್ಮಳ ಮನೋವೇದನೆಯೇ ಬೇರೆಯದ್ದಾಗಿತ್ತು. “ಸಾಕೆ ಸುಮ್ಮನಿರು ಸ್ವಲ್ಪ.... ಹಾಗೆ ನೋಡಿದರೆ ಇವತ್ತು ನಿನ್ನ ಮದುವೆಯೂ ಆಗಬೇಕಿತ್ತು....... ಸರಿ ಸುಮಾರು ಒಂದೇ ಓರಗೆಯವರು ನೀವಿಬ್ರು...  ಭಾವಯ್ಯನೋರು ಒಟ್ಟಿಗೇ ಮಾಡೋಣ ಅಂದಿದ್ರೂ, ನಿಮ್ಮಪ್ಪಯ್ಯನ ತಲೆಗೇನೋ ಗಾಂಧಿ ಭೂತ ಹೊಕ್ಕಿದೆ ನೋಡು. ಎರಡು ವರ್ಷದ ಹಿಂದೆ ಅದೆಂತೋ ಚಳುವಳಿ ಅಂತ ಕುಣದ್ರಪ್ಪಾ... ಹೆಸ್ರೂ ನೆನ್ಪಿಲ್ಲ...‘ಅಯ್ಯೋ ಆಯಿ.... ಅದು ಕ್ವಿಟ್ ಇಂಡಿಯಾ ಚಳುವಳಿ.. ಫಿರಂಗಿಗಳನ್ನೆಲ್ಲಾ ತೊಲಗಿ ಅನ್ನೋದು...’ ಮಧ್ಯೆ ಬಾಯಿ ಹಾಕಿ ಉತ್ತರಿಸಿದ ಮಗಳ ತಲೆಗೊಂದು ಮೊಟಕಿ, ಎಂಥದ್ದೋ ಒಂದು... ಗಟ್ಟಿ ಮಾತಾಡ್ಬೇಡ.... ಯಾರಿಗಾದ್ರೂ ಕೇಳಿದ್ರೆ ಎಂತ ಗತಿ? ಎಲ್ಲ ನನ್ನ ಕರ್ಮ.... ಮಗಳು ಮೈ ನೆರೆದು ಎರಡು ತಿಂಗಳಾಯಿತು... ಆದರೂ ತಲೆ ಇಲ್ಲಾ! ಊರೂರು ತಿರುಗುವುದೇ ಆಯಿತು ಮಹಾರಾಯರದು. ನಾನೋ ಸಿಕ್ಕವರಿಗೆಲ್ಲಾ ಇನ್ನೂ ಹನ್ನೆರಡೂ ಮೆಟ್ಟಿಲ್ಲಾ ಎಂದು ಸುಳ್ಳುಸುಳ್ಳೇ ಹೇಳ್ತಾ ತಿರಗ್ತಾ ಇದ್ದೇನೆ... ಎಷ್ಟು ದಿನ ಮುಚ್ಚಿಡ್ಲಿ ಹೇಳು? ನಾನು ಜಾಸ್ತಿ ಪಿರಿ ಪಿರಿ ಮಾಡಿದರೆ, ಹೆಣ್ಮಕ್ಕಳೂ ಓದೋದು ಒಳ್ಳೇದು ಅನ್ನೋ ಪುಗ್ಸಟ್ಟೆ ಸಲಹೆ ಬೇರೆ... ಹ್ಮ್ಂ... ಅಕ್ಕ, ಭಾವನೋರಿಗೆ ಇದೇ ಒಳ್ಳೇದಾಗಿದೆ... ತಮ್ಮ ಮಗಳ ಮದುವೆಯನ್ನು ಧಾಂ ಧೂಂ ಅಂತಾ ಮಾಡ್ತಿದ್ದಾರೆ... ನಿಂಗೆ ಚೊಂಬೇ ಗತಿ... ಅನುಭವ್ಸಿ ಇಬ್ರೂ....” ನೆರೆದಿದ್ದ ನೆಂಟರಿಷ್ಟರಿಗೆ ಕೇಳದಂತೇ ತೀರಾ ಪಿಸುದನಿಯಲ್ಲೇ ಹಲ್ಲುಕಚ್ಚಿ ಮಗಳ ಮೇಲೆ ಹರಿಹಾಯ್ದು, ಸೆರಗಿನಂಚಿಗೆ ಕಣ್ಣೀರ ಜೊತೆ ಸಿಂಬಳವನ್ನೂ ಒರೆಸಿಕೊಳ್ಳುತ್ತಾ ಅಡುಗೆಮನೆಯಲ್ಲಿದ್ದ ಅಕ್ಕನಿಗೆ ನೆರವಾಗಲು ಹೋಗಿದ್ದಳು. ಹದಿನಾಲ್ಕರ ಬಾಲೆಗೆ ತಾಯಿಯ ಈ ಒದ್ದಾಟ, ತೊಳಲಾಟ ಒಂದೂ ಅರ್ಥವಾಗದೇ ಸೀರೆ ಕೇಳಲು ವೆಂಕಜ್ಜಿಯ ಬಳಿ ಹೋದರೆ, ಆಕೆಯೋ ‘ವಧುವಿಗೆ ಸೀರೆ ಉಡಿಸುವಾಗಲೇ ಸಮಾ ಮಾಡಿ ನೋಡು ಕೂಸೆ’ ಎಂದು ಬಿಟ್ಟಿದ್ದರು. ಈಗ ಆ ಘಳಿಗೆ ಸನ್ನಿಹಿತವಾಗಿದ್ದೇ, ಗಂಟೆಗೂ ಮುನ್ನ ತಾನು ತಯಾರಾಗಿ ಕಲಾಳಿದ್ದ ಕೋಣೆಯನ್ನು ಹೊಕ್ಕಿ ಕುಳಿತಿದ್ದಕ್ಕೂ ಸಾರ್ಥಕವೆಂದೆನಿಸಿ ಬಿಟ್ಟಿತು ಜಾನಕಿಗೆ.

ಬದನೇಕಾಯಿ ಬಣ್ಣದ ರೇಷಿಮೆ ಪಟ್ಟೆ ಸೀರೆ... ಅಂಗೈ ಅಗಲದ ಚಿನ್ನದಂಚು, ಒಡಲ ತುಂಬಾ ಶ್ರೀ ಆಕಾರದಲ್ಲಿದ್ದ ಚಿನ್ನದ ಕುಸುರಿ. ದೊಡ್ಡೋರ ಮನೆಯ ಹುಡುಗಿಯ ಮದುವೆ, ಅದೂ ಪಕ್ಕದೂರಿನ ಶಾನುಭೋಗರ ಮಗನ ಜೊತೆಯಲ್ಲಿ... ಕೇಳಬೇಕೆ ವೈಭವವ! ಕೆಂಪು ಹರಳ ಜುಮುಕಿ, ಸೊಂಟಕ್ಕೆ ಚಿನ್ನದ ಪಟ್ಟಿ, ಕೊರಳಲ್ಲಿ ಎರಳೆಳೆಯ ಅವಲಕ್ಕಿ ಸರ, ಹೊಸ ಮೂಗುತಿಯ ಕೆಳಗೆ ಹೊಳೆಯುತಿರುವ ಬಿಳಿ ಮುತ್ತು... ತೋಳುಗಳಿಗೆ ತೋಳಬಂಧಿ, ಕೆನ್ನೆ ತುಂಬಾ ಮೆತ್ತಿದ್ದ ಅರಿಶಿನದ ಮೆರುಗು... ಕಾಸಗಲದ ಕುಂಕುಮ, ಮೈ ತೂಕಕ್ಕಿಂತ ತುಸು ಹೆಚ್ಚೇ ಎನ್ನಿಸುವಂತೆ ಸುತ್ತುವರಿದಿದ್ದ ಹೊಸ ಸೀರೆಯ ಕಳೆ ಹೆಚ್ಚಿಸುತ್ತಿದ್ದ ಉದ್ದ ಕೈಯಿನ ಕೆಂಪು ಬ್ಲೌಸು.... ಹದಿನಾಲ್ಕರ ಹೊಸ್ತಿಲಲ್ಲಿ ಅರೆಬಿರಿದ ಮಲ್ಲೆ ಮೊಗ್ಗು! ಸಹಜ ಸುಂದರಿಯಾಗಿದ್ದ ಕಲಾವತಿ ಇಂದು ಮಂಗಳ ಗೌರಿಯೇ ಆಗಿದ್ದಳು. ದೊಡ್ಡಪ್ಪನ ಮಗಳಾಗಿದ್ದರೂ ಒಡ ಹುಟ್ಟಿದವರಂತೇ ತುಂಬು ಕುಟುಂಬದಲ್ಲಿ ಬೆಳೆದಿದ್ದ ಜಾನಕಿಗೆ ಹೆಚ್ಚು ಕಡಿಮೆ ತನ್ನದೇ ವಯಸ್ಸಿನವಳ ಮದುವೆ ನಿಶ್ಚಯವಾದಾಗಲೂ ಏನೂ ಬೇಸರವಾಗಿರಲಿಲ್ಲ. ಆದರೆ ಇಂದು ಹೀಗೆ ಸರ್ವಾಲಂಕೃತ ಭೂಷಿತಳಾಗಿ ನಿಂತಿದ್ದು ಕಂಡು ‘ಛೇ ತಾನೂ ಮದುವೆಯಾಗಿಬಿಡಬೇಕಿತ್ತು.... ಅಮ್ಮಾ ಹೇಳಿದ್ದು ಸುಳ್ಳಲ್ಲಾ... ಅಬ್ಬಬ್ಬಾ.. ಕಲ್ಲೆ ಅದೆಷ್ಟು ಚೆಂದ ಕಾಣ್ತಿದ್ದಾಳೆ...! ನನ್ನ ಮದ್ವೆಗೂ ಇಂಥದ್ದೇ ಸೀರೆ ತರಿಸಿಕೊಳ್ಳೋದೇ.. ಎಂದು ಮನಸಲ್ಲೇ ಮಂಡಿಗೆ ತಿನ್ನುತ್ತಾ ಆಗೀಗ ವೆಂಕಟಜ್ಜಿಯಿಂದ ತಲೆಗೆ ಮೊಟಕಿಸಿಕೊಳ್ಳುತ್ತಾ, ಕಲಾವತಿಯ ನೆರಿಗೆಯನ್ನು ಸರಿಪಡಿಸುವ ನೆಪದಲ್ಲಿ ಮತ್ತೆ ಮತ್ತೆ ಆ ಮೆದು ರೇಷಿಮೆ ಸೀರೆಯನ್ನು ಮುಟ್ಟಿಯೇ ಮುಟ್ಟಿದಳು. ಬಿಟ್ಟ ಕಣ್ಣು ಬಿಟ್ಟುಕೊಂಡು ತನ್ನ ನೋಡುತ್ತಾ ಸೀರೆ ಸವರುತ್ತ ಕುಳಿತವಳ ಕಂಡು ನಗುವುಕ್ಕಿತು ಕಲಾವತಿಗೆ. “ನೀನೇನೂ ಚಿಂತೆ ಮಾಡ್ಬೇಡಮ್ಮಾ... ನನ್ನಪ್ಪಯ್ಯನ ಹತ್ರ ಹೇಳಿ ನಿಂಗೂ ಇಂಥದ್ದೇ ಸೀರೆ ತರಿಸಿಕೊಡ್ತೀನಿ ನಿನ್ನ ಮದುವೆಗೂ..” ಎನ್ನಲು ನಾಚಿದಳು ಜಾನಕಿ.
“ಅತ್ತೆಯವರೆ ಕಲಾವತಿಯನ್ನ ಗೌರಿ ಪೂಜೆಗೆ ಕರೀತಾ ಇದ್ದಾರೆ.. ಕರೆದುಕೊಂಡು ಹೋಗಲಾ? ನಿಮ್ಮನ್ನ ಮಾವನೋರು ಕರೀತಾ ಇದ್ರು.. ತಡ ಮಾಡಿದರೆ ಸಿಟ್ಟಾದಾರು...” ಎನ್ನುತ್ತಾ ಕೂಸಿನ ತಾಯಿ, ಹಿರಿ ಸೊಸೆ ಲಕ್ಷ್ಮಮ್ಮ ಬರಲು, ಗಡಬಡಿಸಿ ಓಡಲಾಗದಿದ್ದರೂ, ಓಡೋಡುತ್ತಲೇ ಪತಿಯಿದ್ದೆಡೆಗೆ ನಡೆದರು ವೆಂಕಜ್ಜಿ.
“ಮಗಳೇ.... ಏನ್ ಚೆಂದ ಕಾಣುತ್ತಿದ್ದೀಯೇ.. ನನ್ನ ದೃಷ್ಟೀಯೇ ಬೀಳುವ ಹಾಗಿದ್ದೀಯಾ ನೋಡು.. ಮದುವೆ ಗಡಿಬಿಡಿಲಿ ನಾಲ್ಕು ಮಾತೂ ಆಡಾಲಾಗಿಲ್ಲ ನಂಗೆ... ಗೌರಿ ಪೂಜೆ ಇನ್ನೂ ಸ್ವಲ್ಪ ಹೊತ್ತಿದೆ ಬಿಡು... ನಿನ್ನ ಜೊತೆ ಸ್ವಲ್ಪ ಮಾತನಾಡೋದಿದೆ... ಗಂಡನ ಮನೇಲಿ ತಗ್ಗಿ ಬಗ್ಗಿ ನಡೆದುಕೊಳ್ಳೋದೆಲ್ಲಾ ಗೊತ್ತಿದ್ದಿದ್ದೇ... ಆದರೆ ಗಂಡನ ಕೂಡೆ ಚೆನ್ನಾಗಿ ಬಾಳೋದೂ ಗೊತ್ತಿರ್ಬೇಕು... ಅಂವಂಗೆ ಹೊಂದಿಕೊಂಡು ಬಾಳ್ಬೇಕು... ನಿನ್ನ ಅಕ್ಕ ಶಾರದೆ ಎಲ್ಲವನ್ನೂ ತಿಳಿಸಿ ಹೇಳಿದ್ದಾಳೆ ಅಲ್ವಾ ನಿಂಗೆ?” ಎಂದು ಸೂಕ್ಷ್ಮವಾಗಿ ನೋಡಲು... ಕೆಂಪು ಕೆಂಪಾದ ಕಲ್ಲೆಯ ಮೊಗ ನೋಡಿ ಅಚ್ಚರಿಗೊಂಡಳು ಜಾನಕಿ. ‘ಅರೆ ಅದ್ಯಾವಗ ಶಾರದಕ್ಕ ಮತ್ತು ಇವಳು ಗುಟ್ಟು ಮಾಡಿಕೊಂಡ್ರೋ...! ನನಗೆ ಹೇಳೇ ಇಲ್ಲಾ... ಸರಿ ಮಾಡ್ತೀನಿ ಇವ್ರಿಗೆ... ಎರಡು ದಿನ ಠೂ ಬಿಟ್ರೆ ಎಲ್ಲಾ ಹೊರಗೆ ಬರುವುದು...’ ಎಂದು ಕೊಳ್ಳುತ್ತಾ ಮಾತನಾಡದೇ ಹರಡಿದ್ದ ವಸ್ತ್ರಗಳ ಸರಿ ಮಾಡಲು ತೊಡಗಿದರೆ, ಇವಳ ಸೆಡವಿನ ಕಡೆ ಇನಿತೂ ಗಮನವಿರದ ಕಲಾವತಿ ಹೊಸ ಬಾಳಿನ ಕನಸಲ್ಲಿ ಮುಳುಗಿ ಹೋಗಿದ್ದಳು. ಅಮ್ಮನ ಜೊತೆ ಗೌರಿ ಪೂಜೆಗೆ ಅವಳು ಹೊರಟರೂ, ಅವರನ್ನು ಹಿಂಬಾಲಿಸಲು ಉತ್ಸಾಹ ತೋರದ ಜಾನಕಿ ಹಾಗೇ ಸುಮ್ಮನೆ ಕೋಣೆಯ ಕಿಟಕಿ ತೆರೆದು ಹೊರಗಿನ ತಂಗಾಳಿಗೆ ತನ್ನ ಮೊಗವಿಟ್ಟು ಕುಳಿತಳು.
ನೀಲಾಗಸದ ತುಂಬಾ ಬಿಳಿ ಚುಕ್ಕೆಗಳು ಹರಡಿದ್ದವು. ಹೊಟ್ಟೆ ಬಾಕ ಚಂದ್ರಮ ತನ್ನ ಅರ್ಧಂಬರ್ಧ ತುಂಬಿದ ಹೊಟ್ಟೆಯ ತುಂಬಲು ಹಲವು ತಾರೆಗಳ ನುಂಗಿ ಉಬ್ಬಿಹನೋ ಎಂಬಂತೆ ಮುಕ್ಕಾಲುವಾಸಿ ಊದಿಕೊಂಡು ತೇಲುತ್ತಿದ್ದ. ಜಾನಕಿಗೆ ಪೂರ್ಣ ಚಂದ್ರನಿಗಿಂತ ಅರ್ಧ ಚಂದ್ರನೆಂದರೆ ಬಲು ಪ್ರೀತಿ. ಮದುವೆಯಲ್ಲಿ ಮದುಮಗನ ಹಣೆಯಲ್ಲಿ ಹೆಂಗೆಳೆಯರು ಇಡುತ್ತಿದ್ದ ಕುಂಕುಮದ ಅರ್ಧಚಂದ್ರನನ್ನು ಕಂಬದ ಮರೆಯಿಂದಿಣುಕಿ ಮನಸಾರೆ ನೋಡುತ್ತಿದ್ದಳು. ಹಾಗೆ ನೋಡುವಾಗೆಲ್ಲಾ ಅಮ್ಮಾ, ಅಜ್ಜಿ, ದೊಡ್ಡಮ್ಮ ಎಲ್ಲಾ ಇನ್ನಿಲ್ಲದಂತೇ ಬೈದಿದ್ದೂ ಇದೆ. ‘ಎಂತಾ ಮಳ್ಳು ನೀನು ಹಾಂಗೆಲ್ಲಾ ಮಾಣಿನ ನೇರ ನೋಡಬಾರದು.. ಗಂಡು ಬೀರಿ, ನಾಚ್ಕೆನೇ ಇಲ್ಲಾ ಅಂತಾರೆ.. ಆಮೇಲೆ ನಿನ್ನ ಯಾರೂ ಮದುವೆ ಆಗುವುದಿಲ್ಲ ಗೊತ್ತಾ?’ ಎಂದು ಗದರಿದರೂ ಆಕೆ ಬಿಡುತ್ತಿರಲಿಲ್ಲ. ಅರ್ರೆ.... ಕಲ್ಲೆಯ ಗಂಡಿಗೂ ಹಾಗೇ ಅರ್ಧಚಂದ್ರ ಕುಂಕುಮ ಇಟ್ಟಿರ್ತಾರೆ ಅಲ್ಲವಾ? ಹಾಯ್... ನಾನು ನೋಡ್ಲೇಬೇಕು. ಮನೆ ಮದುವೆ.. ನೇರ ನೋಡಿದ್ರೂ ಯಾರೂ ಬೈಯಲಿಕ್ಕಿಲ್ಲ... ಯಾರಿಗೂ ಪುರುಸೊತ್ತೂ ಇರುವುದಿಲ್ಲ... ನೋಡೇ ಬಿಡ್ತೀನಿ... ಆಮೇಲೆ ಕಣ್ಣೆಳೆದು ನಿದ್ದೆ ಬಂದೇ ಹೋಗುತ್ತದೆ... ಎಂದುಕೊಳ್ಳುತ್ತಾ ನೆಲತಾಗುತ್ತಿದ್ದ ಕೈಮಗ್ಗದ ಪತ್ತಲದ ನೆರಿಗೆಯನ್ನು ಮೊಳಗಾಲಿನವರೆಗೆ ಎತ್ತಿ ಹಿಡಿದು ಓಡೋಡಿ ಹೊರ ಬರುವುದುಕ್ಕೂ, ಬಾಗಿಲಿಗೆ ಬಂದಿದ್ದ ಶ್ರೀಕಾಂತನ ಎದೆಗೆ ತನ್ನ ತಲೆಯನ್ನು ಢಿಕ್ಕಿ ಹೊಡೆಯುವುದಕ್ಕೂ ಸಮನಾಯಿತು. ಗಾಭರಿಯಿಂದ ಆಕೆ ಎರಡೆಜ್ಜೆ ಹಿಂದೆ ಸರಿದರೆ, ತನ್ನ ಬಲಗೈಯಲ್ಲಿದ್ದ ದೀಪದ ಬುಡ್ಡಿಯನ್ನು ತಮ್ಮಿಬ್ಬರ ನಡುವೆ ಹಿಡಿದ ಶ್ರೀಕಾಂತ.
ಕೆಂಪುಬಣ್ಣದ ಪತ್ತಲವನ್ನು ಎತ್ತಿ ಹಿಡಿದಿದ್ದರಿಂದ, ದಪ್ಪ ಕಾಲ್ಗಜೆಯ ಅಪ್ಪಿದ್ದ ಪುಟ್ಟ ಪಾದಗಳ ಚಿಗುರು ಬೆರಳುಗಳು ಎದ್ದು ಕಾಣುತ್ತಿದ್ದವು. ಬಿಳಿಯ ಬಣ್ಣದ ಪುಗ್ಗ ಕೈಯನ ರವಿಕೆಯೊಳಗಿಂದ ಹೊರ ಮಿಂಚುತ್ತಿದ್ದ ಹಾಲು ಬಣ್ಣದ ಎಳೆಯ ಕೈಗಳು ಮಿಡಿ ನಾಗರದಂತೇ ಹೊಳೆಯುತ್ತಿದ್ದವು. ಬೆದರಿ, ತಲೆ ತಗ್ಗಿಸಿದ್ದ ಅವಳ ಹಣೆಯ ತುಂಬೆಲ್ಲಾ ಮಣಿಯ ಬಾಸಿಂಗ, ಹನಿವ ನೀರಿಗೆ ತುಸು ಕರಗಿ ಹರಡಿದಂತಾದ ಹಣೆಯ ಬಿಂದಿ, ತಗ್ಗಿದ್ದ ಕಣ್ಗಳಿಂದ ಅವಳೊಳಗಿನ ಭಾವ ಮಾತ್ರ ಆತನಿಗೆ ತಿಳಿಯಲಾಗಲಿಲ್ಲ.
“ಅಲ್ಲಾ ಹೆಣ್ಮಕ್ಕಳು ಮುಂದಾಗಬೇಕೆಂದು ನಾಯಕರು ಕರೆ ಕೊಡುತ್ತಿದ್ದಾರೆ ಎಂದು ಗೊತ್ತಿತ್ತು.. ಇಷ್ಟು ಮುಂದೋಡಬೇಕೆಂದು ಹೇಳಿದ್ದಾರೆಯೇ? ಕಣ್ಣಿರುವುದು ಮುಂದೆ ನೋಡಿ ನಡೆಯಲು ತಾನೆ? ಅದೇನು ಅವಸರವಪ್ಪಾ ಈ ಹುಡುಗಿಯರಿಗೆ ನಾ ಕಾಣೆ! ಮದುವೆ ಕೂಸು ಮಂಟಪದಲ್ಲಿ ಕೂತಿದ್ದು ನೋಡಿದ್ದೇನೆ... ಎರಡು ಮದುವೆಯಿದೆಯೇ ಈ ಮನೆಯಲ್ಲಿ?” ಎಂದು ಒಳನಗೆ ನಕ್ಕವನ ಮಾತಿಗೆ ರಂಗಾದಳು ಕೋಪದಿಂದ.
ಥಟ್ಟನೆ ತಲೆಯೆತ್ತಿದವಳ ಕಣ್ಣಲ್ಲಿ ತೆಳು ನೀರಿನ ಪೊರೆಯ ಜೊತೆ ಕೋಪದ ಕೆಂಬಣ್ಣ. ತಾನು ಆಡಿದ್ದು ಹೆಚ್ಚಾಯಿತೇನೋ ಎಂದು ಪರಿತಪಿಸಿದ ಶ್ರೀಕಾಂತ. ಮಾರುತ್ತರ ಕೊಡಬೇಕೆಂದು ಒಂದು ಹೆಜ್ಜೆ ಮುಂದಿಟ್ಟವಳಿಗೆ ದೀಪದ ಬೆಳಕಿನಲ್ಲಿ ಅವನ ಬಿಳಿ ಖಾದಿ ಕುರ್ತದ ಮೇಲೆ ತನ್ನ ಹಣೆಯ ಕುಂಕುಮದ ಕಲೆ ಕಾಣಲು ನಾಚಿ, ಅನುಮಾನಿಸುತ್ತಲೇ ಮುಂಬರಲು, ಅವನು ತುಸು ಸರಿದದ್ದೇ ತಡ, ಮೆಲ್ಲನೆ ಬಾಗಿಲು ದಾಟಿ, ಅಲ್ಲಿಂದ ಓಡಿ ಹೋಗಿಬಿಟ್ಟಳು. ಗಜ್ಜೆಯ ನಾದ ಮರೆಯಾದ ಅದೆಷ್ಟೋ ಹೊತ್ತಿನ ನಂತರವೂ ಆತ ನಿಂತಲ್ಲೇ ಮೂರ್ತಿಯಾಗಿದ್ದ.
~~~~~
ಪುಟ್ಟ ತಲೆಯ ಸಂಪೂರ್ಣ ತಗ್ಗಿಸಿಕೊಂಡು ಸೆರಗ ಹೊದ್ದು ಕುಳುತಿದ್ದ ಕಲಾವತಿಯ ಪಕ್ಕದಲ್ಲೇ ಕುಳಿತಿದ್ದ ತಾಯಿ ತನ್ನ ಸೆರಗಿನಂಚನ್ನು ಬಾಯಿಗಿಟ್ಟು ಸೊರ ಸೊರಗುಡುವುದು ನಡೆಯುತ್ತಲೇ ಇತ್ತು. ‘ಸಾಕೇ ಲಕ್ಷ್ಮೀ ಅತ್ತಿದ್ದು.. ಕೂಸೇನು ದೂರ ಹೋಗೋದಿಲ್ಲ... ಹತ್ತು ಮೈಲಿನ ದಾರಿ ಅಷ್ಟೇ. ಧಾರೆಗೆ ನೀರನ್ನು ಬಿಡು.. ಕಣ್ಣೀರನ್ನಲ್ಲಾ..’ ಎಂದು ಅತ್ತೆಯಮ್ಮ ಮೆಲುವಾಗಿ ಗದರಿದ್ದೇ ಒಂದೇ ಪೆಟ್ಟಿಗೆ ಅವಳ ಅಳು ನಿಂತಿತು. ಎಲ್ಲರೂ ಹೆಣ್ಣು, ಗಂಡಿನ ಮದುವೆಯಲ್ಲಿ, ಹೊಸ ಬಟ್ಟೆ, ಊಟದ ಮಾತೊಳಗೆ ಮುಳುಗಿದ್ದರೆ, ಇಬ್ಬರು ಮಾತ್ರ ಅವರಿವರ ಕಣ್ತಪ್ಪಿಸಿ ಒಬ್ಬರನ್ನೊಬ್ಬರ ಹುಡುಕುವುದರಲ್ಲೇ ಮುಳುಗಿಹೋಗಿದ್ದರು. ರಾಯರ ಮನೆಯ ಮದುವೆಗೆ ನಾಲ್ಕೂರಿನಿಂದ ಬಂಡಿ ಕಟ್ಟಿ ಬಂದಿದ್ದ ನೆಂಟರಿಷ್ಟರ ನಡುವೆ, ಕಿರು ಬೆಳಕಿನಲ್ಲಿ ಕಂಡ ಆ ಕೆಂಬಣ್ಣದ ಸೀರೆಯ ಹುಡುಗಿಯ ಹುಡುಕುವುದು ಪ್ರಯಾಸವಾಗಿತ್ತು ಶ್ರೀಕಾಂತನಿಗೆ. ಇತ್ತ ಆಕೇಗೋ ಅಂವ ಎಲ್ಲಿ ಕಲೆಯಾಗಿದ್ದರ ಹಿಂದಿನ ಕಥೆಯ ದೋಸ್ತರಿಗೆಲ್ಲಾ ಹೇಳಿ ತನ್ನ ಲೇವಡಿ ಮಾಡಿಬಿಡುವನೋ... ಅದ ತಿಳಿದ ಅಪ್ಪಯ್ಯ, ಆಯಿ ಎಲ್ಲಿ ತನ್ನ ಹೊಡೆದು ಬಿಡುವರೋ ಎಂಬ ಭಯ ಬೆಂಬಿಡದೇ ಕಾಡುತ್ತಿತ್ತು. ಹೇಗಾದರೂ ಮಾಡಿ ಆತನ ಸಂಧಿಸಿ, ಯಾರ ಬಳಿಯೂ ಪ್ರಸ್ತಾಪಿಸದಂತೇ ನಿವೇದಿಸಿಕೊಳ್ಳಲು ಕಾಯುತ್ತಿದ್ದಳು. ಆ ಸದಾವಕಾಶ ಅವಳಿಗೊದಗಿದು ಮಾಂಗಲ್ಯ ಧಾರಣೆಯ ನಂತರ..... ಪುರೋಹಿತರು ಬೆಲ್ಲದ ಪಂಜಕಜ್ಜಾಯವನ್ನು ಎಲ್ಲರಿಗೂ ಹಂಚಲು ಹೇಳಿದಾಗ.
ಸಭೆಯಲ್ಲಿ ಎದುರಾದವರಿಗೆಲ್ಲಾ ಒಂದೊಂದು ಚಮಚ ಸಿಹಿ ಹಂಚುತ್ತಾ ಹೋದವಳ ಕಣ್ಗಳು ಅವನನ್ನೇ ಹುಡುಕುತ್ತಿದ್ದವು. ಇದನ್ನು ಗಮನಿಸಿದ ಆತ ಅವಳಿಗೆ ಆದಷ್ಟೂ ಮರೆಯಾಗಿ ನಿಂತು, ಆಮೇಲೆ ಅವಳಿಗೆ ಸ್ಪಷ್ಟವಾಗಿ ಕಾಣುವಂತೆಯೇ ಎದ್ದು ಹೊರಟು ಹಿತ್ತಲ ಕಡೆ ನಡೆದನು. ಅವಳ ಕಣ್ಗಳಲ್ಲಿ ಮಿಂಚಿನ ಛಳಕು. “ಆಯಿ ಹಿತ್ತಲ ಕಡೇಯೂ ಸುಮಾರು ಜನ ಇದ್ದಾರೆ ಕೊಟ್ಟು ಬರುವೆ...” ಎಂದವಳೇ ಲಗುಬಗನೆ ಅತ್ತ ನಡೆದಿದ್ದಳು. ಜಗುಲಿಯನ್ನು ಬಳಸಿದ್ದ ಅಷ್ಟುದ್ದದ ಹೇಡಿಗೆಯಲ್ಲಿ ಬೆಳಕು ಕ್ಷೀಣವಾಗಿತ್ತು. ಅಲ್ಲಲ್ಲಿ ಸಿಲುಕಿಸಿಟ್ಟಿದ್ದ ಲಾಟೀನುಗಳು ಕತ್ತಲೆಯನ್ನಂತೂ ದೂರ ಓಡಸಲು ಸಫಲವಾಗಿದ್ದವು. ಹಿಂಬದಿಯ ಅಂಗಳದ ಬಲ ಮೂಲೆಯಲ್ಲಿದ್ದ ಸುರಗಿ ಮರದ ಕೆಳಗೆ ಬಿಳಿ ಧೋತ್ರವನ್ನುಟ್ಟಿ ನಿಂತಿದ್ದ ಯುವಕನ ಕಾಣಲು, ಇದು ಅವನಲ್ಲದೇ ಬೇರಾರೂ ಇರಲು ಸಾಧ್ಯವೇ ಇಲ್ಲಾ ಎಂಬ ಹೆಬ್ಬು ಧೈರ್ಯದಲ್ಲೇ ಅತ್ತ ಸಾಗಿದಳು ಜಾನಕಿ. ಹಿಡಿದಿದ್ದ ಪಂಜಕಜ್ಜಾಯದ ಬಟ್ಟಲು ಸಣ್ಣಗೆ ಅಲುಗಾಡತೊಡಗಿತ್ತು. ಬೀಳದಂತೇ ಬಿಗಿಯಾಗಿ ಹಿಡಿದು, ಹೆಜ್ಜೆ ತಡವರಿಸದಂತೇ ಸಾವರಿಸಿಕೊಳ್ಳುತ್ತಾ, ಗೆಜ್ಜೆಯ ಸಪ್ಪಳ ಆದಷ್ಟು ಮೆಲುವಾಗಿರುವಂತೇ ಸಾಗಿದವಳ ಎದೆಬಡಿತ ಅವಳಿಗೆ ಎಲ್ಲವನ್ನೂ ಬಯಲಾಗಿಸುವ ಹುನ್ನಾರದಲ್ಲಿದ್ದಂತೆ ಹೊಡೆದುಕೊಳ್ಳುತ್ತಿತ್ತು. ಹುಡುಗಿ ಮರವನ್ನು ಸಮೀಪಿಸುತ್ತಿದ್ದಂತೇ ಹಿಂದಿನ ರೆಂಬೆಯಲ್ಲಿ ಸಿಕ್ಕಿಸಿಟ್ಟಿದ್ದ ಲಾಟೀನನ್ನು ಆಚೆ ತೆಗೆದು, ದೊಡ್ಡದಾಗಿಸಿ ಅವಳಿಗೆ ದಾರಿ ಕಾಣಿಸಲು ನೆರವಾದ ಶ್ರೀಕಾಂತ. ಒಂದೇ ಒಂದು ಕ್ಷಣ ಕತ್ತನೆತ್ತಿ ಅವನೇ ಎಂದು ಖಾತ್ರಿ ಮಾಡಿಕೊಂಡವಳೇ ಮತ್ತೆ ತಗ್ಗಿಸಿದ ತಲೆಯನ್ನೆತ್ತದೇ ಸಿಹಿಯನ್ನು ನಡುಗುವ ಕೈಯಿಂದ ಮುಂದೆ ಹಿಡಿಯಲು, ಕೈಯೊಡ್ಡಿದವನಿಗೆ ಅವಳು ಹಾಕಿದ್ದೆಷ್ಟೋ, ಅಂವ ತಿಂದಿದ್ದೆಷ್ಟೋ! ನೆಲದ ಮೇಲಿನ ಇರುವೆಗಳ ಪಾಲಿಗಂತೂ ಮದುವೆಯ ಸಂಭ್ರಮ.
“ನೋಡಿ... ಏನೋ ಅರಿಯದೇ ಅನಾಹುತ ಆಗೋಯ್ತು.. ಕಲೆ ಬೇಕಿದ್ರೆ ನಾನೇ ತೆಗೆದು ಕೊಡುವೆ... ನೀವು ನಾಳೆ ಇಲ್ಲೇ ಉಳಿದುಕೊಂಡಾರೆ, ನಿಮ್ಮ ಅಂಗಿಯನ್ನು ಬಚ್ಚಲ ಬಳಿ ಇರುವ ದಾಸವಾಳದ ಗಿಡದ ಮೇಲಿಟ್ಟು ಹೋಗಿ... ನಾನೇ ಖುದ್ದಾಗಿ ಚೆನ್ನಾಗಿ ತೊಳೆದು ಹರವಿ ಬಿಡುವೆ. ದಯವಿಟ್ಟು ನನ್ನಿಂದ ಹೀಗಾಯಿತು ಎಂದು ಯಾರ ಬಳಿಯೂ ಹೇಳದಿರಿ... ಮನೆಯ ಮದುವೆಗೆ ಬಂದವರಿಗೆ ಇಂಥಾ ಮಾರ್ಯಾದೆ ಮಾಡುವುದೇ ಎಂದು ಛೇಡಿಸಿಯಾರು ಎಲ್ಲಾ ನನ್ನನ್ನು....” ಮಾತು ಹೂತು, ಗಂಟಲುಬ್ಬಿ, ಕಣ್ಣಿಂದ ದಳ ದಳನೆ ಹನಿಗಳುರುಳಲು, ಅವನು ತನ್ನ ಕಿಸೆಯಿಂದ ಕರವಸ್ತ್ರ ತೆಗೆದು ಮೆಲ್ಲನೆ ಅವಳ ಕೈಗಳ ಮೇಲಿಟ್ಟ. 
ದೊಡ್ಡ ದೊಡ್ಡ ನಾಯಕರ ನಡುವೆ ಓತಪ್ರೋತವಾಗಿ ಭಾಷಣ ಬಿಗಿವ ಶ್ರೀಕಾಂತನ ಬಾಯಿಯೂ ಇಂದೇಕೋ ಕಟ್ಟಿ ಹೋಗಿತ್ತು. ಏನೋ ಹಿಂಜರಿಕೆ, ಸಂಕೋಚ. ಏನು ಹೇಳಲಿ? ಏನ ಕೇಳಲಿ? ಒಂದು ಹೇಳಿ ಇನ್ನೊಂದಾಗಬಾರದು.. ಹೇಳುವಂಥದ್ದು ಬಾಕಿಯೂ ಉಳಿಯಬಾರದು... ಹೇಗೆ ಹೇಳಲಪ್ಪಾ.. ಎನ್ನುವ ತಳಮಳದಲ್ಲಿಯೇ ಐದು ನಿಮಿಷ ಕಳೆದುಹೋಯಿತು. ಆಕೆ ಹಿಂದಿರುಗುವ ಹವಣಿಕೆಯಲ್ಲಿರುವುದ ಕಂಡು ಮೆಲುವಾಗೊಮ್ಮೆ ಕೆಮ್ಮಿಕೊಂಡು, “ಅಯ್ಯೋ ದಯಮಾಡಿ ಬೇಸರ ಬೇಡ... ಅಂಥದ್ದೇನೂ ಆಗಿಲ್ಲ... ನಿಜವಾಗಿಯೂ ನಾನು ಯಾರ ಬಳಿಯೂ ಹೇಳಿಲ್ಲ.. ಹೇಳುವುದೂ ಇಲ್ಲಾ.. ಈ ಕಲೆ ಒಂಥರಾ ಚೆನ್ನಾಗಿದೆ.. ನನಗೆ ಇಷ್ಟವಾಯಿತು... ಹೀಗೇ ಇರಲಿ ಬಿಡು.... ಅಂದ ಹಾಗೆ ನಾನು ಶ್ರೀಕಾಂತ, ವರನ ದೋಸ್ತ. ನಿನ್ನಣ್ಣ ಸುಧಾಮನಿಗೆ ಚೆನ್ನಾಗಿ ಪರಿಚಯವಿದೆ ಬಿಡು... ನಿನ್ನ ಹೆಸರು ಜಾನಕಿ ಎಂದು ತಿಳಿಯತು... ಚೆನ್ನಾಗಿದೆ ನಿನ್ನ ಹೆಸರು....” ಮುಂದೇನೋ ಹೇಳ ಹೊರಟವನು ನಾಲಗೆ ಕಚ್ಚಿಕೊಂಡ. ತನ್ನ ಹೆಸರನ್ನು ಅಷ್ಟು ಅಕ್ಕರೆಯಿಂದ ಉಸುರಿದ್ದು ಇವನೇ ಮೊದಲಿಗನೇನೋ ಎಂದೆನಿಸಿತು ಅವಳಿಗೆ. ಮನದೊಳಗೆ ಏನೇನೋ ಭಾವಗಳ ತಾಕಲಾಟ. ಅರಿತರೂ ಅರಿವಾಗದ್ದಂಥದ್ದು. ಒಳಗಡೆಯಿಂದ ಯಾರೋ ಬರುವ ಸಪ್ಪಳ ಕೇಳಿದ್ದೇ ಆಕೆ ಸ್ವಲ್ಪವೂ ತಡ ಮಾಡದೇ ಥಟ್ಟನೆ ಜಗುಲಿಯ ಕಡೆಗೆ ಓಡಿ ಮರೆಯಾಗಿ ಬಿಟ್ಟಳು. ಸುರಗಿ ಮರದ ಬುಡದಲ್ಲೀಗ ಮತ್ತೆ ಕತ್ತಲು.
~೨~
“ಆಯಿ ನಿಮಗೆ ಬುದ್ಧಿ ಇಲ್ಲಾ ನೋಡಿ... ಕಲಾವತಿಯ ಗಂಡನ ಬಗ್ಗೆ ಸರಿಯಾಗಿ ವಿಚಾರಿಸಿದ್ದೀರಾ ಎಂತಾ? ಮತ್ತೇನಿಲ್ಲಾ ಮದುವೆಯಲ್ಲಿ ಶ್ರೀಕಾಂತನ ಓಡಾಟ ಜೋರಾಗಿತ್ತು. ಆತ ನಮ್ಮ ಭಾವಯ್ಯನ ಪರಮಾಪ್ತ ಸ್ನೇಹಿತನಂತೆ! ಆ ಶ್ರೀಕಾಂತ ಬರೀ ಜಟಾಪಟಿಯವನು... ಮಹಾನ್ ಕೋಪಿಷ್ಠ... ಗಾಂಧೀಜಿಯವರ ಶಾಂತಿ ತತ್ತ್ವಗಳಿಗೆ ತದ್ವಿರುದ್ಧವಾಗಿ ಆಡುತ್ತಿರುತ್ತಾನೆ.... ಅವನದೊದ್ದು ಸಣ್ಣ ಗುಂಪೇ ಇದೆ.... ಅವರಿಗೆಲ್ಲಾ ಕ್ರಾಂತಿಕಾರಿ ಭಗತ್ ಸಿಂಗನೇ ಆದರ್ಶ. ಇವನಂತೂ ಭಗತ್‌ನ ನಂತರ ತಾನೇ ಮಹಾನ್ ಕ್ರಾಂತಿಕಾರಿ ಹೋರಾಟಗಾರನೆಂದುಕೊಂಡಿದ್ದಾನೆ. ನಾವೆಲ್ಲಾ ಪುಗ್ಸಟ್ಟೆ, ಕೆಲ್ಸಕ್ಕೆ ಬಾರದ ಶಾಂತಿ, ಅಹಿಂಸೆ ಹೇಳುತ್ತಾ ಕೂರೋರಂತೆ... ನಮ್ಮ ಕಲಾಳ ಗಂಡನೂ ಇವರಂತೇ ಕ್ರಾಂತಿ, ಹೋರಾಟ ಎಂದೆಲ್ಲಾ ಹೋಗ್ಬಿಟ್ರೆ ಹನ್ನೆರಡು ವರುಷಗಳ ಹಿಂದೆ ಭಗತ್ ಸಿಂಗ, ರಾಜ್‌ಗುರು ಮತ್ತು ಸುಖದೇವರಿಗೆಲ್ಲಾ ಗಲ್ಲಾಯಿತಲ್ಲಾ... ಅದೇ ಗತಿ ನಮ್ಮ ಭಾವಯ್ಯನಿಗೂ ಆಗಿ ಬಿಟ್ಟರೇನು ಮಾಡುವುದು? ಆ ಶ್ರೀಕಾಂತ ಮನೆ ಮಠ ಬಿಟ್ಟು ತಿರುಗುವ ಪರದೇಶಿ.... ವರುಷ ಇಪ್ಪತ್ತರ ಆಸುಪಾಸಾದರೂ, ಇನ್ನೂ ಮದುವೆ, ಸಂಸಾರದ ಆಸ್ಥೆ ಇಲ್ಲದ ಸನ್ಯಾಸಿ ಅಂವ... ನಮ್ಮ ಕಲಾಳ ಪತಿಗೇನಂಥಾ ದೋಸ್ತಿಯೋ ಅವನ ಜೊತೆಯಲ್ಲಿ....” ಎಂದು ಒಳಗಿಂದ ಹೊರಗೆ ತಿರುಗುತ್ತಾ ಕೂಗುತ್ತಿದ್ದ ಸುಧಾಮನ ಮಾತು ಕೇಳಿ ಅದೇನೋ ಎಂತೋ ತುಸು ಹೆಚ್ಚೇ ಕಿಡಿ ಕಿಡಿ ಆದಳು ಜಾನಕಿ.
“ಛೇ... ಬಿಡ್ತು ಅನ್ನು ಅಣ್ಣಯ್ಯ...ಎಂತದೋ ನಿಂದು ವ್ಯರ್ಥ ಪ್ರಲಾಪ... ನಿನ್ನ ಲೆಕ್ಕದಲ್ಲಿ ಕ್ರಾಂತಿಕಾರಿಗಳೆಲ್ಲಾ ದೇಶದ್ರೋಹಿಗಳೇನೋ?! ನಿಮ್ಮಂಥವರು ಮಾತ್ರ ನಿಜವಾದ ಸ್ವಾತಂತ್ರ್ಯ ಹೋರಾಟಗಾರರೋ?! ಗಲ್ಲು ಶಿಕ್ಷೆ ನಿಮ್ಮ ಕಡೆಯಲ್ಲೂ ಸುಮಾರು ಜನರಿಗೆ ಅಗಿದೆ ಅಲ್ಲವಾ? ಆ ಫಿರಂಗಿಗಳೇನೋ ಅಷ್ಟು ಅಹಿಂಸಾವಾದಿಗಳೊ... ಕ್ರಾಂತಿಕಾರಿಗಳಿಗೆ ಮಾತ್ರ ಗಲ್ಲು ನೀಡಿ ಸಾಯಿಸಲು...!! ಮಳ್ಳು ಮಾತಾಡೋದು ಬಿಡು...” ಜಾನಕಿಗೂ ಅವಳಣ್ಣನಿಗೂ ಅಷ್ಟಕಷ್ಟೇ ಅನ್ನೋದು ಮನೆಯವರಿಗೆ ಗೊತ್ತಿದ್ದರೂ, ಎಂದೂ ಅವಳ ಮಾತು ಇಷ್ಟು ಹರಿತವಾಗಿರಲಿಲ್ಲ. ಎಲ್ಲರಿಗೂ ಅಚ್ಚರಿ ಆಗಿ ಸ್ವಲ್ಪ ಹೊತ್ತು ಮಾತೇ ಹೊರಡಲಿಲ್ಲ. ತಂಗಿಯ ನೇರ ವಾಗ್ದಾಳಿಯಿಂದ, ಉತ್ತರಿಸಲಾಗದೇ ಸುಧಾಮನ ಕ್ರೋಧ ನೆತ್ತಿಗೇರಿತು. “ನೋಡಿ ದೊಡ್ಡಪ್ಪ, ನೋಡೋ ಅಪ್ಪಯ್ಯ ನಿನ್ನ ಮಗಳ ಅಣಿ ಮುತ್ತುಗಳ... ನೀವೇ ಇವ್ಳನ್ನ ತಲೆ ಮೇಲೆ ಕೂರಿಸಿ ಹೀಗಾಗಿದ್ದು... ಓದಿನಲ್ಲಿ ಚುರುಕು ಅಂತ ಆರನೆಯ ಇಯತ್ತೆಗೂ ಹಾಕಿದ್ರಲ್ಲಾ... ಈಗ ನೋಡಿ ಸ್ವಂತ ಅಣ್ಣ ಅನ್ನೋ ಮರ್ಯಾದೆನೋ ಇಲ್ಲಾ ಇದಕೆ..” ಎಂದು ಕೂಗಾಡಲು, ವೆಂಕಜ್ಜಿಯ ಪತಿ ರಾಜರಾಮ ರಾಯರು ಮಧ್ಯೆ ಬರಲೇ ಬೇಕಾಯಿತು. “ತಮ್ಮಾ.. ದುಡುಕಿ ಮಾತನಾಡಬೇಡ... ನಿನ್ನ ಭಾವಯ್ಯನ ಬಗ್ಗೆ, ಈ ಮನೆ ಅಳಿಯನ ಕುರಿತು ಅದೆಂಥಾ ಕೆಡುಕು ಆಲೋಚನೆ ನಿಂದು ಛೆ....! ಇಷ್ಟಕೂ ಜಾನಕಿ ಹೇಳಿದ್ದರಲ್ಲಿ ಏನು ತಪ್ಪಿದೆ? ಎಲ್ಲರೂ ದೇಶಕ್ಕಾಗಿಯೇ ಹೋರಾಟ ಮಾಡೋರು... ನೀವು ಮಾತ್ರ ಮೇಲೆ, ಆ ಮಾಣಿ ಕೆಳಗೆ ಅನ್ನೋದು ಬಿಡು... ಈಗ ಎಲ್ಲಾ ಮಲಗಿ ಮೊದಲು..... ನಾಳೆ ಬೀಗರ ಮನೆಗೆ ಪೂಜೆಗೆ ಹೋಗಬೇಕು....” ಅಜ್ಜಯ್ಯನ ಖಡಕ್ ಮಾತು ಕೇಳಿದ್ದೇ ಸುಧಾಮನ ಪುಂಗಿ ಬಂದಾಯಿತು. ‘ಎಷ್ಟೆಂದರೂ ನಿಮಗೆಲ್ಲಾ ಇವಳೇ ಮುದ್ದು...’ ಎಂದು ಮನಸಲ್ಲೇ ಬೈದುಕೊಳ್ಳುತ್ತಾ ಹಾಸಿಗೆಯ ಮೇಲೆ ಬಿದ್ದುಕೊಂಡ. 
~~~~~~
ಮದುವೆಯಾಗಿ ಎರಡು ದಿನಗಳಷ್ಟೇ ಕಳೆದಿದ್ದರೂ, ಆಗಲೇ ಅದೇನೋ ಹೊಸ ಕಳೆಯಿಂದ ಬೀಗುತ್ತಿದ್ದ ಕಲಾವತಿಯ ಈ ಬದಲಾವಣೆ ಅಚ್ಚರಿ ತಂದಿತ್ತು ಜಾನಕಿಯಲ್ಲಿ. ಸತ್ಯನಾರಾಯಣ ಪೂಜೆಗೆಂದು ಪತಿಯ ಪಕ್ಕದಲ್ಲಿ ಕುಳಿತಿದ್ದವಳನ್ನೇ ಕದ್ದು ನೋಡುತ್ತಿದ್ದ ಭಾವಯ್ಯ, ಅದನರಿತೇ ಆಗಾಗ ನಾಚಿ ತಲೆ ತಗ್ಗಿಸುತ್ತಿದ್ದ ಅಕ್ಕಯ್ಯ. ಬೇಡ ಬೇಡವೆಂದರೂ ಅವಳಿಗೆ ಶ್ರೀಕಾಂತ ನೆನಪಾಗುತ್ತಿದ್ದ. ತಿನ್ನಲು ಹಠ ಮಾಡುತ್ತಿದ್ದ ತನ್ನ ಒಂದೂವರೆ ವರುಷದ ಮಗನನ್ನು ಎಳೆದು ಕೂರಿಸಿಕೊಂಡ ಶಾರದೆ ಹೇಗೋ ಜಾನಕಿಯ ಸಹಾಯದಿಂದ ಅವನಿಗೆ ನಾಲ್ಕು ತುತ್ತು ತುರುಕಿಸಿ, ಅಮ್ಮನ ಬಳಿ ಬಿಟ್ಟು ಸ್ವಸ್ಥಾನಳಾಗಿ ಉಸ್ಸೆಂದಳು. ಆ ದಿನದಿಂದಲೂ ತನ್ನೊಳಗೇ ಕೊರೆಯುತ್ತಿದ್ದ ಪ್ರಶ್ನೆಯ ಕೇಳಲು ಇದೇ ಸುಸಮಯವೆಂದರಿತ ಜಾನಕಿ ಮೆಲ್ಲನೆ ಶಾರದಕ್ಕಳಲ್ಲಿ... “ನಿನ್ನ ಹತ್ರ ನಾ ಠೂ ಬಿಟ್ಟೀದ್ದೀನಿ ಗೊತ್ತಾ ಅಕ್ಕಯ್ಯ.. ಆದರೂ ಮಾತಾಡ್ತಿದ್ದೀನಿ.. ನೀ ನಾಳೆ ನಿನ್ನೂರಿಗೆ ಹೋಗುತ್ತಿದ್ದೀಯಾ ನೋಡು ಅದಕ್ಕೇ... ನೀನೇನೋ ಗುಟ್ಟು ಹೇಳಿದ್ದೀಯಂತೆ ಕಲ್ಲೆಗೆ.. ನಂಗೆ ಮಾತ್ರ ಹೇಳಿಲ್ಲಾ ಅಲ್ವಾ? ಹೋಗೇ ನೀನು...” ಎಂದು ಮೊಗ ತಿರುವಿ ಹುಸಿಗೋಪ ತೋರಿದವಳ ತಲೆಗೊಂದು ಮೊಟಕಿ ನಕ್ಕಳು ಶಾರದೆ. “ಅಯ್ಯೋ ಪೆದ್ದಿ.. ಅದು ಮದ್ವೆ ಆಗೋ ಕೂಸು.. ತಿಳಿದುಕೊಳ್ಳೋದು ಬಹಳ ಇತ್ತು ಹೇಳ್ದೆ... ನಿನ್ನ ಮದ್ವೆ ನಿಕ್ಕಿ ಆಗ್ಲಿ.. ನಿಂಗೂ ಹೇಳೋದೇ....” ಎಂದು ಸಮಾಧಾನಿಸಿದರೂ ಅವಳು ನಗಲಿಲ್ಲ. ಇವತ್ತಲ್ಲಾ ನಾಳೆ ಇವಳೂ ಮದುವೆಯಾಗೋ ಹುಡುಗಿಯೇ.. ತೀರಾ ಎಳಸಲ್ಲಾ... ತಿಳಿದಿದ್ದರೆ ಒಳಿತೇ ಎಂದುಕೊಂಡ ಶಾರದೆ... ಗಂಡು ಹೆಣ್ಣಿನ ನಡುವೆ ಏರ್ಪಡುವ ಸುಮಧುರ ಬಾಂಧವ್ಯದ ಗುಟ್ಟನ್ನು, ಪ್ರೀತಿಯ ಸಂವೇದನೆಯ ಸೂಕ್ಷ್ಮತೆಯನ್ನು ಪಿಸುದನಿಯಲ್ಲುಸುರಲು ಜಾನಕಿಯ ಒಳಗೆಲ್ಲೋ ಬಿರಿದ ಸದ್ದು! ಆವರೆಗೂ ಅರಿವಾಗದಿದ್ದ ಹೊಸ ತಿಳಿವನ್ನು ಹನಿ ಹನಿಯಾಗಿ ಎದೆಗಿಳಿಸಿಕೊಂಡಂತಾಗಿ ಝಿಲ್ಲನೆ ಬೆವರಿದಳು. ಅಕ್ಕಯ್ಯನನ್ನು ತಲೆಯೆತ್ತಿ ನೋಡಲೂ ಭಯವಾಯಿತು.... ಎಲ್ಲಿ ತನ್ನೊಳಗಿನ ಗುಟ್ಟು ಬಯಲಾಗಿಬಿಡಬಹುದೋ ಎಂದು. ಏನೋ ನೆಪವೊಡ್ಡಿ ಹೊರ ಬಾಗಿಲಿನ ಕಡೆ ಹೊರಡಲು, ತನಗೆ ಯಾರೋ ಅಡ್ಡ ಬಂದಂತಾಗಲು, ಸಾವರಿಸಿಕೊಂಡು ನಿಂತು ತಲೆಯೆತ್ತಿದರೆ, ಎದುರಿಗೆ ಶ್ರೀಕಾಂತ!
ಕ್ಷಣ ಎತ್ತಿದ್ದ ದಿಟ್ಟಿಯ ಹಾಗೇ ಕೆಳಗಿಳಿಸಿದವಳೇ ಊರಿದ್ದ ಪಾದವ ಕಿತ್ತುಕೊಂಡು ಮತ್ತೆ ಶಾರದಕ್ಕಳ ಪಕ್ಕದಲ್ಲೇ ಕೂತು ಬಿಟ್ಟಳು. ಅವಳೆದೆ ಆಗ ತಾನೇ ಪಂಜರದಲ್ಲಿ ಕೂಡಿ ಹಾಕಿಟ್ಟಿದ್ದ ಪಕ್ಷಿಯಂತೇ ತಟಪಟನೆ ಹಾರುತ್ತಿತ್ತು. “ಇಶ್ಶಿ... ಇದೇನೇ ನೀನು... ಪ್ರೀತಿ ಪದ ಕೇಳಿಯೇ ಹೀಂಗೆ ಆಗೋದೆ.... ಮತ್ತೆ ಭಾರಿ ಗುಟ್ಟು ಕೇಳೋ ಆಸೆ ನೋಡು...” ಎಂದು ಅಕ್ಕಯ್ಯ ಕಿಚಾಯಿಸಿದರೂ ಬಿಮ್ಮನೆ ಕುಳಿತಳು. ಮಗ ಮತ್ತೆ ಗಲಾಟೆಯೆಬ್ಬಿಸಲು ಅತ್ತ ಹೋದ ಅಕ್ಕನನ್ನೇ ಹಿಂಬಾಲಿಸಿಬಿಟ್ಟಳು ಜಾನಕಿ. ಎರಡು ಕಣ್ಗಳು ಅವಳನ್ನೇ ನೋಡುತ್ತಿದ್ದುದು ಅವಳಿಗೂ ಗೊತ್ತಿತ್ತು.
ಬೀಗರೂಟದ ಸಂಜೆ ಹುಡುಗರೆಲ್ಲಾ ಸೇರಿ ತಾಳ ಮದ್ದಲೆ ಏರ್ಪಡಿಸಿದ್ದರು. ಎಲ್ಲೆಡೆ ನಗು, ಕೇಕೆ ಮಾತುಗಳ ಗದ್ದಲ. ಹಿರಿಯರೆಲ್ಲಾ ಮಾಳಿಗೆ ಹತ್ತಿ ವಿಶ್ರಾಂತಿಗೆ ತೊಡಗಿಯಾಗಿತ್ತು. ಜಗುಲಿಯಲ್ಲಿ ಹರೆಯದ ಹೆಣ್ಮಕ್ಕಳೆಲ್ಲಾ ಅಮ್ಮಂದಿರ ಬೆದರಿಕೆಗೆ ಹೆದರಿ ಮಲಗಿದ್ದಲ್ಲಿಂದಲೇ ಹೊರಗಿನ ನಗುವಿಗೆ ಸಾಥ್ ನೀಡುತ್ತಿದ್ದರು. ಜಾನಕಿಗೋ ನಿದ್ದೆಯ ಸುಳಿವೂ ಇಲ್ಲಾ. ಬೆಳಗಿನ ಆ ಜೋಡಿ ಕಣ್ಗಳೊಳಗಿನ ಬೆಳಕೇ ಕಣ್ಕುಕ್ಕಿ ಎಬ್ಬಿಸುತ್ತಿತ್ತು. ಅದರ ಮೇಲೆ ತುಸು ಹೆಚ್ಚೇ ಪಾನಕ ಕುಡಿದಿದ್ದರಿಂದ ಶರೀರ ಬಾಧೆ ಕಾಡಿಸತೊಡಗಿತ್ತು. ಎದ್ದು ಹೊರ ಹೋಗಬೇಕೆಂದರೂ ನಾಚಿಕೆ. ಹೊಸ ಜಾಗ ಬೇರೆ. ಪಕ್ಕದಲ್ಲೇ ಮಲಗಿದ್ದ ಶಾರದಕ್ಕಳ ಎಬ್ಬಿಸಿ ಕಷ್ಟ ತೋಡಿಕೊಂಡಳು. ಅವಳ ಸಂಕಟ ಅರಿತ ಶಾರದೆ ಪರಸ್ಥಳವಾದ್ದರಿಂದ ಕಲಾವತಿಯ ಪತಿಯ ಚಿಕ್ಕಮ್ಮನಾದ ಸೀತಮ್ಮಳನ್ನೂ ಎಬ್ಬಿಸಿದಳು. ಮೂವರೂ ಹಿತ್ತಲ ಕಡೆ ಹೊರಟರು ಹಿಂಭಾಗಿಲಿನಿಂದ. ಬಚ್ಚಲಲ್ಲಿ ಕೈ ಕಾಲು ತೊಳೆದವರೇ ಒಳ ಹೊಕ್ಕಲು ಹೊರಟಾಗ ಯಾರೂ ತಮ್ಮತ್ತಲೇ ಬರುತ್ತಿದ್ದುದು ತಿಳಿದು ಹಾಗೇ ನಿಂತರು. ತುಸು ಕೆಮ್ಮಿ ಗಂಟಲು ಸರಿಪಡಿಸಿಕೊಂಡ ಆತ “ಕ್ಷಮಿಸಿ, ತೊಂದರೆ ಕೊಡುತ್ತಿದ್ದೇವೆ... ಯಾರೂ ಎದ್ದಿಲ್ಲ ಎಂದು ನಾವೇ ಹುಡುಕಿ ಸಿಗದೇ ಸೋತು ಹಿಂದೆ ಹೋಗಿದ್ದೆವು.... ಈಗ ನೀವು ಎದ್ದಿದ್ದು ಕಂಡು ನಾನು ಬಂದೆ. ಅಲ್ಲಿ ಹಲವರಿಗೆ ಬಾಯಾರಿಕೆ ಆಗಿದೆ. ಕುಡಿಯುವ ನೀರಿನ ಜೊತೆ ಬೆಲ್ಲದಚ್ಚುಗಳು ಸಿಕ್ಕಿದ್ದರೆ ಚೆನ್ನಾಗಿತ್ತು... ನೀರು ತುಂಬಿಸಲು ದೊಡ್ಡ ಚಂಬು ಸಿಗಲೇ ಇಲ್ಲಾ.. ಹಾಗಾಗಿ..” ಎಂದು ಬಾಯೆಳೆಯಲು ನಕ್ಕ ಸೀತಮ್ಮಾ,  “ತೊಂದರೆ ಇಲ್ಲಾ ಬಿಡಿ ಕೊಡುವೆ.... ಇಲ್ಲೇ ಇರಿ ಒಳಗೆ ಕತ್ತಲಿದೆ ಎಂದು ತಡವುತ್ತಾ ಒಳ ಹೋಗಿ ಅಲ್ಲೇ ಕಪಾಟಿನ ಮೇಲಿಟ್ಟುಕೊಂಡಿದ್ದ ದೀಪಹಚ್ಚಿಕೊಂಡು ಹೊರ ಬರಲು ಅಷ್ಟೊತ್ತೂ ಆಕಳಿಕೆ ತೆಗೆಯುತ್ತಾ ಸುಮ್ಮನಿದ್ದ ಜಾನಕಿಯ ಕಣ್ಣಿಗೆ ಆತ ಬಿದ್ದ. ಹೊರಗಿನಿಂದ ಬೀಸುತ್ತಿದ್ದ ಕುಳಿರ್ಗಾಳಿಯೂ ಅವಳ ಬೆವರ ಸೆಲೆಯನ್ನೋಡಿಸಲು ವಿಫಲವಾಯಿತು. ಅಲ್ಲೇ ಮರದ ಗೂಟಕ್ಕೆ ಸಿಕ್ಕಿಸಿಟ್ಟಿದ್ದ ಲಾಟೀನಿನ ಮಂದ ಬೆಳಕನ್ನು ಹಿರಿದಾಗಿಸಿದ ಸೀತಮ್ಮಾ ಅಡುಗೆ ಮನೆಯ ಕಡೆ ಹೋದರೂ, ಜಾನಕಿಯ ಕಾಲ್ಗಳು ಮಾತ್ರ ಏಳಲೇ ಇಲ್ಲಾ. ಅತ್ತಿತ್ತ ನೋಡಿ, ನಿಧಾನ ಅವಳ ಬಳಿ ಬಂದ ಶ್ರೀಕಾಂತ, ಅವಳ ಬಲಗೈಯನ್ನು ಮೆಲುವಾಗಿ ಹಿಡಿದು, ‘ಜಾನಕಿ.. ಮೊದಲ ನೋಟದಲ್ಲೇ ನಾನು ನಿನಗೆ ಮನ ಸೋತು ಹೋದೆ... ಮನೆ, ಮಠ, ಸಂಸಾರ ಬೇಡ  ಎಂದಿದ್ದವನ ಕಟ್ಟಿ ಹಾಕಿದ್ದು ನೀನೇ.... ದೇಶ ಸೇವೆಯೇ, ಸ್ವಾತಂತ್ರ್ಯವೇ ನನ್ನ ಮೊದಲ ಪ್ರೀತಿ ಇಂದಿಗೂ... ನನ್ನ ಸಂಕಲ್ಪಗಳಿಗೆ ಇಂಬಾಗಿ ನೀನು ಜೊತೆಗೂಡುವಿಯಾ? ಸುಖದ ಸುಪ್ಪತ್ತಿಗೆ ಕೊಡಲಾರೆ.. ಒಲುಮೆಯ ಕೊಪ್ಪರಿಗೆ ಮಾತ್ರ ಅಕ್ಷಯವಾಗಿರುತ್ತದೆ... ಅಷ್ಟು ಭರವಸೆ ಕೊಡಬಲ್ಲೆ... ಮುಂದೆ ದೇವರ ಚಿತ್ತ..” ಎಂದವನೇ ಅವಳ ಕೈ ಬಿಟ್ಟು ಹಿಂದೆ ಸರಿದು ಕೈಕಟ್ಟಿ ನಿಂತ. ಹೊರ ಬಂದ ಸೀತಮ್ಮರಿಂದ ನೀರು ತುಂಬಿದ್ದ ದೊಡ್ಡ ಹೂಜೆ ಹಾಗೂ ಬೆಲ್ಲದಚ್ಚುಗಳನ್ನು ಪಡೆದು ತಿರುಗಿ ನೋಡದೇ ಹೊರಟವನು ಮರೆಯಾಗುವವರೆಗೂ ನೋಡುತ್ತಿದ್ದಳು ಜಾನಕಿ. ಅವಳ ಕಣ್ಣಲ್ಲೀಗ ಪೂರ್ಣಚಂದಿರನಿದ್ದ.
~೩~
‘ಅತ್ತರೆ ಅಳಲವ್ವಾ ಈ ಕೂಸು ನನಗಿರಲಿ... ಕೆಟ್ಟರೆ ಕೆಡಲಿ ಮನೆಗೆಲಸ..’ ಎಂದು ರಾಗದಲ್ಲಿ ಮೆಲುದನಿಯಲ್ಲಿ ಹಾಡುತ್ತಾ ತನ್ನ ಒಂದು ವರುಷದ ಕೂಸಿಗೆ ಎಣ್ಣೆ ಹಚ್ಚುತ್ತಿದ್ದವಳ ಪಕ್ಕದಲ್ಲೇ ಕುಳಿತು ಮಂದಸ್ಮಿತನಾದ ಶ್ರೀಕಾಂತ. “ಎತ್ತ ಹೋಗಿತ್ತೋ ಸವಾರಿ ಬೆಳ್ಳ್ಂಬೆಳಗ್ಗೇ! ಮನೇಲಿ ಇರೋರು ನಾವಿಬ್ರೇ ಅನ್ನೋದೂ ನೆನ್ಪಿಲ್ವಾ? ಅತ್ತೆಮ್ಮ, ಮವಯ್ಯನೋರು ಕಾಶಿಯಾತ್ರೆಯಿಂದ ಬರಲಿ, ಹಬ್ಬ ಇದೆ ನಿಮಗೆ ಅಂತ ಹೇಳು ಪುಟ್ಟಮ್ಮಾ...” ಎಂದು ಹುಸಿಗೋಪದಿಂದ ಕಂದಮ್ಮನಿಗೊಂದು ಮುತ್ತಿಟ್ಟವಳನ್ನೇ ಪ್ರೇಮದಿಂದ ನೋಡಿದ ಶ್ರೀಕಾಂತ. ಸ್ವಂತ ಅಣ್ಣನ ಪ್ರತಿರೋಧವನ್ನೂ ಲೆಕ್ಕಿಸದೇ, ಮನೆಯವರೆಲ್ಲರ ಅರೆಮನಸ್ಸಿನ ಒಪ್ಪಿಗೆಯಲ್ಲೇ ಅತಿ ಸರಳವಾಗಿ ತನ್ನ ವರಿಸಿ, ಮನೆ-ಮನದುಂಬಿ ಬಂದ ಪುಟ್ಟ ಹುಡುಗಿ ನಾಲ್ಕು ವರುಷಗಳಲ್ಲೇ ಹೆಣ್ಣಾಗಿ, ತಾಯಾಗಿ, ಹಬ್ಬಿ ತಬ್ಬಿದ್ದು ಅವನೊಳಗೂ ಒಂದು ಅರಿಯದ ಅಚ್ಚರಿಯೇ. “ಪುಟ್ಟಕ್ಕ ನಿನ್ನಾಯಿ ನಿಂಗೆ ಈಗ ಕೊಟ್ಟಿತಲ್ಲಾ.. ಅದೇ ನಂಗೂ ಸಿಗತ್ತೆ ಅಂತಾದ್ರೆ ಎಂತಾ ಶಾಸ್ತಿಗೂ ನಾನು ತಯಾರು ಎಂದು ಹೇಳಮ್ಮಾ....” ಎನ್ನಲು ಮೆಲ್ಲನೆ ಅವನ ಹೆಗಲಿಗೊಂದು ಏಟು ಹಾಕಿ ಮುಸಿನಕ್ಕಳು ಜಾನಕಿ.
“ನಾನು ಹೋಗಿದ್ದು ಬೇರೆಲ್ಲೋ ಅಲ್ಲವೇ.. ಪೇಟೆಯ ಕಡೆಗೇ. ಸ್ವಲ್ಪ ಕಾಸು ಬರುವುದು ಬಾಕಿ ಇತ್ತು... ಹಾಗಾಗಿ ಅಡಿಕೆ ಮಂಡಿಗೆ ಹೋಗಿದ್ದೆ. ಈಗ ಮೊದಲಿನಷ್ಟು ಸಾಲ ಇಲ್ಲಾ ನೋಡು... ನಾವು ಬೆಳೆದ ಬೆಳೆ ನಮಗೆ.. ಫಿರಂಗಿಗಳ ಓಡಿಸಿ ಒಂದು ವರುಷದ ಮೇಲಾಯಿತು! ಹಾಗಾಗಿ ಈಗ ಸ್ವಲ್ಪ ದುಡ್ಡು ಕೈಗೆ ಸಿಗುತ್ತಿದೆ. ಆ ಹಣ ಪಡೆದು ಸೀದಾ ಗಜಾನನ ಸೀರೆಯಂಗಡಿಗೆ ಹೋಗಿ ನಿನಗೇ ಎಂದು ಈ ರೇಷ್ಮೆ ಸೀರೆಯನ್ನು ಕೊಂಡು ತಂದೆ....” ಎನ್ನುತ್ತಾ ಖಾದಿಯ ಕೈಚೀಲದೊಳಗಿಂದ ಅದನ್ನು ತೆಗೆದು ಮೆಲ್ಲನೆ ಅವಳ ಕೈಗಿಡಲು ಹೋಗಲು, ಪತಿಯ ತಡೆದಳು ಜಾನಕಿ. “ಅಯ್ಯೋ ತಡೀರಿ ಮಾರಾಯ್ರೆ.. ಎಣ್ಣೆ ಕೈ.. ತೊಳೆದು ಬರುವೆ..” ಎಂದು ಎದ್ದವಳೇ ಹೊರಬಾಗಿಲಿನಲ್ಲಿ ತುಂಬಿದ್ದ ನೀರಿನ ತೊಟ್ಟಿಯಿಂದ ನೀರು ಮೊಗೆದುಕೊಂಡು ಚೆನ್ನಾಗಿ ತೊಳೆಯುತ್ತಾ ಮತ್ತೆ ಶುರುವಿಟ್ಟಳು... “ಅಲ್ಲಾ ಇದಕ್ಕೇನು ಅವಸರ ಇತ್ತು? ನಾನ್ಯಾವತ್ತು ಬೇಕು ಅಂದಿದ್ದೆ... ಅತ್ತೆಮ್ಮನ ರೇಷ್ಮೆ ಸೀರೆ ಇತ್ತಲ್ಲಾ... ಮದುವೆಯಲ್ಲಿ ಅಪ್ಪಯ್ಯ ಸಾಧಾರಣ ಕೈಮಗ್ಗದ ಸೀರೇಲೇ ಧಾರೆಯೆರೆದುಕೊಟ್ಟಿದ್ದರೂ ನನಗೇನೂ ಬೇಸರವಾಗಿರಲಿಲ್ಲ.... ನೀವು ಸಿಕ್ಕಿದ್ದೇ ನನ್ನ ಪಾಲಿಗೆ ದೊಡ್ಡ ಉಡುಗೊರೆ....” ಪತ್ನಿಯ ಅರಳಿದ ಮೊಗವನ್ನೇ ನೋಡುತ್ತಾ ಆತ ಸೀರೆಯನ್ನು ಕೊಡಲು, ಅದನಾಕೆ ಆಸ್ಥೆಯಿಂದ ಬಹಳ ನಾಜೂಕಾಗಿ ಪಡೆದು, ಹಾಗೇ ಒಮ್ಮೆ ಸವರಿ, ಕಣ್ತುಂಬಿಕೊಂಡು ಪತಿಗೆ ನಮಸ್ಕರಿಸಿದಳು. ಮಡದಿಯನ್ನು ಪ್ರೇಮದಿಂದ ಹಿಡಿದೆತ್ತಿದ ಶ್ರೀಕಾಂತ ಬೆಳಕನ್ನು ಮುಂದಿರಿಸಿ, ಅವಳು ಸೀರೆಯಂದವನ್ನು ಚೆನ್ನಾಗಿ ನೋಡಲು ಸಹಕರಿಸಿದ. ನಾಲ್ಕು ವರ್ಷದ ಹಿಂದೆ ತವರಿನಲ್ಲಿ ನಡೆದಿದ್ದ ಕಲಾವತಿಯ ಮದುವೆಯಲ್ಲಿ, ಆಕೆ ಉಟ್ಟಿದ್ದ ಬದನೆಕಾಯಿ ಬಣ್ಣದ ರೇಷ್ಮೆ ಸೀರೆ... ಕೈ ಅಗಲದ ಚಿನ್ನದಂಚು, ಒಡಲ ತುಂಬಾ ಅದೇ ಶ್ರೀ ಆಕಾರದ ಚಿನ್ನದ ಕುಸುರಿ!
“ನೀನು ಇಂಥದ್ದೇ ಸೀರೆಯನ್ನ ನಿನ್ನ ಮದುವೆಯಲ್ಲೂ ಉಟ್ಟುಕೊಳ್ಳಬೇಕೆಂದಿದ್ದೆಯಂತೆ.... ನಿನ್ನ ಮದುವೆಯ ದಿನ ಕಲಾವತಿ ಇಂಥದ್ದೇ ಸೀರೆ ಉಟ್ಟು ಬಂದಿದ್ದಳು ಮತ್ತು ಯಾರ ಬಳಿಯಲ್ಲೋ ನಿನ್ನಾಸೆಯನ್ನು ಹೇಳುತ್ತಿದ್ದಳು... ನಾನು ಕೇಳಿಸಿಕೊಂಡಿದ್ದೆ. ಅಂದೇ ಸಂಕಲ್ಪ ಮಾಡಿದ್ದೆ... ಆದರೆ ಇವತ್ತಿನವರೆಗೂ ಕೈಗೂಡಿರಲಿಲ್ಲ.... ಇಂದು ತಂದೇ ಬಿಟ್ಟೆ. ಜಾನಕಿ ನಿನಗಿಷ್ಟವಾಯ್ತು ತಾನೆ?” ಎಂದವನ ಎದೆಗೊರಗಿ ಕಣ್ಮುಚ್ಚಿದವಳ ಕೆನ್ನೆಯಿಂದ ಮುತ್ತುಗಳುರುಳಿ ಅವನೆದೆಯನ್ನು ತೋಯ್ದವು. ಆಡು ಹಸೆಯಲ್ಲಿದ್ದ ಪುಟ್ಟ ಮಗು ಅತ್ತಿತ್ತ ಓಲಾಡುತ್ತಿದ್ದ ದೀಪವನ್ನು ದೊಡ್ಡ ಕಣ್ಣು ಬಿಟ್ಟುಕೊಂಡು ನೋಡುತ್ತಾ ಕೇಕೇ ಹಾಕುತ್ತಿತ್ತು.
{ತುಷಾರ  ಸಾಹಿತ್ಯಾಂಜಲಿ (ಕ್ಯಾಲಿಫೋರ್ನಿಯಾ) ಕಥಾಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದ ಕಥೆ}
-ತೇಜಸ್ವಿನಿ
******




ಶುಕ್ರವಾರ, ಜನವರಿ 30, 2015

ತಪ್ತ

ಹನಿಯಲೆಂದೇ ಸಿದ್ಧವಾಗಿಹ ತುಂಬಿದ ಮನ,
ಬಿಳಿ ಮೋಡಗಳ ನಡುವೆ ರಾಟೆ ತಿರುಗಿಸುವ ಕರಿ ಚಂದ್ರ....
ಅಂಚಿಂದೆದ್ದು ಬರುತಿವೆ ಕೆಂಬಣ್ಣದ ಕೋಲ್ಮಿಂಚುಗಳು,
ಸಿಡಿಲು-ಗುಡುಗುಗಳೆಲ್ಲಾ ಮೌನದೊಳು ಮಗುಮ್ಮಾ!

ಆರೋಹಣದಲ್ಲಿಹ ಎದೆಬಡಿತ,
ಅವರೋಹಣದಲ್ಲಿರುವ ಉಸಿರು,
ಒಳಸರಿದ ಕೆಳ್ದುಟಿ, ಮಂದ್ರಕ್ಕಿಳಿದ ಕಸುವು.

ಕರವಸ್ತ್ರವಾಗದ ಕವಿತೆ,
ಕಂಡಷ್ಟೇ ಕಾಣಿಸಿದ ಕಡಲು,
ಅಪಸ್ವರ ನುಡಿಸುತಿದೆ ಮುರಿದು ಬಿದ್ದ ಕೊಳಲು...

ಕತ್ತಲ ಹುಡುಕಿ ಹೊರಟರೆ,
ಬೆಳಕೇ ಕಣ್ಮುಚ್ಚುವುದು..!
ಇರದುದರೆಡೆ ತುಡುಯುವುದು
ಎರಡು ದೋಣಿ ಪಯಣವು!

~ತೇಜಸ್ವಿನಿ




ಸೋಮವಾರ, ಜನವರಿ 26, 2015

ಇರುವೆ

ಧಾಳಿಲಿ ಕುದುರೆ ವೈಯಾರದಿ ಕುಣಿಯಲು
ಧೂಳು ರವಿಯ ಮೇಲೆ ಮುಸುಕುವುದೆ...
ನಾ ನಿನ್ನ ಧ್ಯಾನದೊಳಿರಲು ಮಿಕ್ಕ
ಹೀನ ಮಾನವರೇನು ಮಾಡಬಲ್ಲರೋ ರಂಗ ....
ಬಲಗಾಲನ್ನು ಮಡಚಿಟ್ಟು, ಎಡಗಾಲನ್ನು ಬಿಚ್ಚಿ, ಮಜ್ಜಿಗೆ ಬೊಡ್ಡೆಯನ್ನಿಟ್ಟು
ಕೊಂಡು ಕಡೆಯುತ್ತಾ ಮೆಲುದನಿಯಲ್ಲಿ ದಾಸರ ಕೀರ್ತನೆಯನ್ನು ಶಾಂತತ್ತೆ ಹಾಡಿಕೊಳ್ಳುತ್ತಿದ್ದಂತೇ, ಹುರುಪಿಂದ ಮಜ್ಜಿಗೆಯೂ ಸೊರೋಬೊರೋ ಎಂದು ತನ್ನ ದನಿಯನ್ನೂ ಸೇರಿಸತೊಡಗಿತು. ಇವರಿಬ್ಬರ ಕುಣಿತಾಟಕ್ಕೆ ಒಳಗಿರಲಾರೆ ಮೇಲೇರಲಾರೆ ಎಂಬಂತೇ ಒಡಲೊಳಗಿಂದ ಬೆಣ್ಣೆ ಮುದ್ದೆ ಮೆಲ್ಲಗೆ ತೇಲತೊಡಗಿತು. ’ಅಜ್ಜಿ ಎಷ್ಟೊಂದು ಗೋವಿಂದೆರ ನೋಡು!! ಕಪ್ಪಿರುವೆ ಬಂದ್ರೆ ರಾಶಿ ದುಡ್ಡು ನಮ್ಮನೆಗೆ ಬತ್ತು ಹೇಳಲ್ದಾ?!" ಎಂಟು ವರ್ಷದ ಲಾಸ್ಯ ಜೋರಾಗಿ ಕಿರುಚಲು, ಅಲ್ಲೇ ಪಕ್ಕದಲ್ಲಿ ಕುಳಿತು ಕಡುಬಿಗೆ ಗೋವೆ ಕಾಯಿ ಹೆಚ್ಚುತ್ತಿದ್ದ ಅಪರ್ಣ ಮಗಳ ತಲೆಗೊಂದು ಮೆಲ್ಲನೆ ಕುಟ್ಟಿದಳು. "ಮಳ್ಳನೆ ನಿಂಗೆ... ಇರುವೆ ಬಂದ್ರೆ ದುಡ್ಡು ಬರ್ತು ಅಂತ ಯಾರು ಹೇಳಿದ್ವೆ? ಅಜ್ಜಿ ಎಷ್ಟು ಚೊಲೋ ಹಾಡು ಹೇಳ್ತಾ ಇದ್ದು.. ಅದ್ನ ಕೇಳದು ಬಿಟ್ಟು..." ಎಂದು ಸಣ್ಣಗೆ ಗದರಲು ಶಾಂತತ್ತೆ, "ಅಯ್ಯೋ ಕೂಸಿಗೆ ಎಂತ ಗೊತ್ತಾಗ್ತೆ? ಅದ್ರ ಮುಗ್ಧತೆ ನೋಡಿ ಸಂತೋಷ ಪಡವು ನಾವು... ಯಾರೋ ಹೇಳಿದ್ದು ಕೇಳಿಕ್ಕು... ಕಪ್ಪಿರುವೆ ಮನೆಗೆ ಬಂದ್ರೆ ಶುಭ ಹೇಳಿ.. ನೀ ಗದರಡ....." ಎಂದು ಸಮಾಧಾನಿಸುತ್ತಾ ತೇಲುತ್ತಿದ್ದ ಬೆಣ್ಣೆ ಮುದ್ದೆಯನ್ನು ತೆಗೆದು ಮತ್ತೊಂದು ಪಾತ್ರೆಗೆ ಹಾಕಿ, ಬೆರಳ ತುದಿಯಿಂದ ಸ್ವಲ್ಪ ಬೆಣ್ಣೆ ತೆಗೆದುಕೊಂಡು ಮಜ್ಜಿಗೆ ಬೊಡ್ಡೆಗೂ ಸವರಿ, ಕೂತು ಸೊಂಟ ಹಿಡಿದಿದ್ದರಿಂದ ಕೈಯಾಧಾರಿಸುತ್ತಾ ತುಟಿ ಕಚ್ಚಿ ಮೇಲೇಳಲು ಸೊಸೆ ಅಪರ್ಣೆಗೆ ಪಿಚ್ಚೆನಿಸಿತು. "ಅತ್ತೆ ನೀವ್ಯಾಕೆ ಇಲೆಕ್ಟ್ರಿಕ್ ಮೆಷಿನ್ ತಗಳಲಾಗ? ಹೀಂಗೆ ಕಡೆದಾಗ ಮಾತ್ರ ಮಜ್ಜಿಗೆ ರುಚಿ ಅಂತ ಸುಮ್ನಾಗಿಸದಾತು..... ನಿಮ್ಮ ಮಗನಿಗೇ ಹೇಳಿ ಈ ಸಲ ಬೆಂಗ್ಳೂರಿಂದ ಮಜ್ಜಿಗೆ ಕಡೆಯೋ ಮೆಷಿನ್ ತರದೇಯಾ ನೋಡಿ.." ಎನ್ನಲು ಮನಸೊಳಗೇ ನಕ್ಕರು ಶಾಂತತ್ತೆ. "ನನ್ನ ಮೈಯಲ್ಲಿ ಕಸುವಿರೋವರ್ಗೆ ಅವೆಲ್ಲಾ ಬೇಡಾ.... ಎಲ್ಲಾ ಶಕ್ತಿ ಹೋದ್ಮೇಲೆ ನಾನೇ ನೀವಿದ್ದಲ್ಲಿಗೆ ಬರದು ಆತಾ?" ಎಂದು ಚಿಕ್ಕ ಬೌಲಿನಲ್ಲಿ ಆಗ ತಾನೇ ಕಡೆದಿದ್ದ ಬೆಣ್ಣೆ ಮುದ್ದ್ದೆಯ ಚೂರೊಂದನ್ನು ಲಾಸ್ಯಳಿಗೆ ಹಾಕಿ ಕೊಟ್ಟರು. "ಅಜ್ಜಿ ವಾವ್ ಯಮ್ಮಿ ಇದ್ದು.. ಥಾಂಕ್ಸ್.. ಅಮ್ಮಾ ಬೆಂಗಳೂರಲ್ಲಿ ಕೊಡದೇ ಇಲ್ಲೆ.. ಶೀತ ಆಗ್ತು.. ಕೆಮ್ಮ ಹೇಳಿ ಬೈತು.. ಅಜ್ಜಿ.. ನೀ ಎಂತಕ್ಕೆ ಚೂರು ಬೆಣ್ಣೆ ಆ ಚರಿಗೆಗೂ ಬಡಿದದ್ದು?" ಎನ್ನುತ್ತಾ ನಾಲ್ಕೂ ಬೆರಳುಗಳಿಗೆ ಬೆಣ್ಣೆ ಮೆತ್ತಿಕೊಂಡು ನೆಕ್ಕ ತೊಡಗಿದವಳನ್ನು ತಲೆ ಸವರಿ, "ಹ್ಹಿ ಹ್ಹಿ... ನೀ ನೋಡಿದ್ಯಾ ಅದ್ನಾ? ಪಾಪ ಮಜ್ಜಿಗೆ ಬೊಡ್ಡೆ ನಮ್ಗಾಗಿ ಕಡೆದು ಬೆಣ್ಣೆ ಕೊಡ್ತು ಅಲ್ದಾ? ಹಾಂಗಾಗಿ ಅದ್ಕೂ ಸ್ವಲ್ಪ ಬೆಣ್ಣೆ ಇರ್ಲಿ ಹೇಳಿ ಬಡ್ಯದು...". "ಓಹ್ಹೋ... ಮಿಸ್ಸ್ ಹೇಳಿದ್ರು.. ವಿ ಶುಡ್ ಶೇರ್ ಅವರ್ ಫುಡ್ ವಿದ್ ನೀಡೀ....." ಅಂತ... ವೆರಿ ಗುಡ್ ಅಜ್ಜಿ ಎಂದು ಪುಟ್ಟಿ ಸರ್ಟಿಪಿಕೇಟ್ ಕೊಡಲು ಅತ್ತೆ ಸೊಸೆ ಇಬ್ಬರೂ ಗೊಳ್ಳನೆ ನಕ್ಕು ಬಿಟ್ಟರು. ಇದಾವುದರ ಪರಿವೆಯೇ ಇಲ್ಲದೇ ಲಾಸ್ಯ ತುಪ್ಪದ ಪಾತ್ರೆ ಏರಲು ಹರ ಸಾಹಸ ಮಾಡುತ್ತಿದ್ದ ದೊಡ್ಡ ಕಪ್ಪಿರುವೆಯನ್ನೇ ನೋಡುತ್ತಾ "ಇರುವೆ ಇರುವೆ ಕರಿಯ ಇರುವೆ ನಾನು ಜೊತೆಗೆ ಬರುವೆ.. ತಿನಲು ನಿನಗೆ ಬೆಣ್ಣೆಯ ಚೂರು ಕೊಡುವೆ..." ಎಂದು ಮುದ್ದಾಗಿ ಹಾಡಿಕೊಳ್ಳತೊಡಗಿದಳು.
  "ಅಪ್ಪಿ... ನಾನು ವಿಶ್ವಂಗೂ ಹೇಳಿದ್ದೆ ನಾರಿಮನೆ ಲಕ್ಷ್ಮಕ್ಕ ಹಾಸಿಗೆಗೆ ಬಿದ್ದು ಮೂರು ತಿಂಗ್ಳ ಮೇಲಾತು... ದೇಹ ಪೂರ್ತಿ ಕೊಳೀತಾ ಇದ್ದಡ.. ಇಂದೋ ನಾಳೇನೋ ಗೊತ್ತಿಲ್ಲ ಅಂಬ.. ಒಂದ್ಸಲ ನೀವಿಬ್ರೂ ಹೋಗಿ ನೋಡ್ಕ ಬನ್ನಿ.... ನಾನು ಹೋಗಿ ನೋಡಿ ಬಂದಾಯ್ದು..." ಬೆಳಗಿನಿಂದ ಮೂರನೆಯ ಬಾರಿ ಅಪರ್ಣೆಗೆ ನೆನಪಿಸುತ್ತಿರುವುದು ಆಕೆ. ಆದರೆ ಪ್ರತಿ ಸಲವೂ ಹಾಂ, ಹೂಂ ಹೇಳದೇ ಮೌನವಾಗುವ ಸೊಸೆಯ ಹೊಸ ವರಸೆ ಮಾತ್ರ ದೊಡ್ಡ ಪ್ರಶ್ನೆಯಾಗಿತ್ತು ಶಾಂತತ್ತೆಗೆ. ಸ್ವಭಾವತಃ ಶಾಂತ ಸ್ವಭಾವದ ಸೊಸೆ ಯಾವತ್ತು ಅತ್ತೆಯ ಮಾತಿಗೆ ಎದುರಾಡಿದವಳೇ ಅಲ್ಲಾ. ಮದುವೆಯ ಮೊದಲೇ ಗುಡ್ಡೆಮನೆಯ ಕಷ್ಟ-ಕಾರ್ಪಣ್ಯಗಳನ್ನು ಬಹು ಹತ್ತಿರದಿಂದ ಬಲ್ಲವಳು ಆಕೆ. ಗುಡ್ಡೆಮನೆಗೆ ಶಾಂತತ್ತೆ ಸೊಸೆಯಾಗಿ ಬಂದಾಗ ಅವಳನ್ನು ಸ್ವಾಗತಿಸಿದ್ದು ದಟ್ಟ ದಾರಿದ್ರ್ಯವೊಂದೇ. ಹೇಗೋ ಎಂತೋ ಬದುಕು ಮುಂದೆ ಸಾಗುತ್ತಿರುವಾಗ ಕೈಗೆರಡು ಮಕ್ಕಳನ್ನಿತ್ತ ಪತಿ ಮಂಜುನಾಥ ಹಾವು ಕಚ್ಚಿ ಅಕಾಲ ಮರಣವನ್ನಪ್ಪಲು ಬದುಕು ಅಕ್ಷರಶಃ ಶಾಪವೆನಿಸಿತ್ತು. ಗುಡ್ಡೆಮನೆಯಿಂದ ಎರಡೇ ಮೈಲು ದೂರವಿದ್ದ ಅಪರ್ಣೆಯ ಅಬ್ಬೆ, ಅಪ್ಪಯ್ಯನಿಗೆ ಶಾಂತತ್ತೆಯ ಮೇಲೆ ಸಹಾನುಭೂತಿಯಿದ್ದರೂ, ಅವರ ಸ್ಥಿತಿಯೂ ಅಷ್ಟಕಷ್ಟೇ. ಇದ್ದ ಒಂದು ತುಂಡು ಹೊಲದಲ್ಲೇ ಮೈ ಮುರಿದು ದುಡಿಯುತ್ತಾ, ಅವರಿವರ ಮನೆಯಲ್ಲಿ ತಿಂಡಿ ತಿನಸು ಮಾಡಿಕೊಡುತ್ತಾ, ತವರಿನಿಂದ ಅಣ್ಣ ಕಳುಹಿಸುತ್ತಿದ್ದ ಅಷ್ಟಿಷ್ಟು ಧನ ಸಹಾಯದಿಂದಲೇ ಮಕ್ಕಳನ್ನು ಬೆಳಸಿದ್ದಳು. ಓದಿನಲ್ಲಿ ಬಲು ಚುರುಕಾಗಿದ್ದ ವಿಶ್ವನಾಥ ಎಂ.ಬಿ‌ಎ. ಮಾಡಿ ಉತ್ತಮ ಪಗಾರದ ನೌಕರಿ ಹಿಡಿದಾಗಲೇ ಆ ಜೀವ ನೆಮ್ಮದಿಯ ನಿದ್ದೆ ಕಂಡಿದ್ದು. ತಮ್ಮನನ್ನು ಓದಿಸಿ, ಮುರುಕಲು ಮನೆಯನ್ನೂ ರಿಪೇರಿ ಮಾಡಿಸಿ, ಅಮ್ಮನಿಗೆ ಮನೆ ಒಳ-ಹೊರಗೆಲ್ಲಾ ಸವಲತ್ತು ಮಾಡಿಕೊಟ್ಟೇ, ಮೊದಲಿನಿಂದಲೂ ಗುಟ್ಟಾಗಿ ಪ್ರೀತಿಸುತ್ತಿದ್ದ ತನ್ನದೇ ಊರಿನ ಅಪರ್ಣಾಳನ್ನು ವರಿಸಿದ್ದ. ಚಿಕ್ಕವಳಿದ್ದಾಗಿನಿಂದ ನೋಡಿದ್ದ ಶಾಂತತ್ತೆಗೂ ಮಗನ ಆಯ್ಕೆ ನೆಮ್ಮದಿ ತಂದಿತ್ತು. ಊರಿಗೆ ಬಂದಾಗೆಲ್ಲಾ ಅತ್ತೆಗೆ ನೆರವಾಗುತ್ತಾ, ನೆರಳಾಗಿರುತ್ತಿದ್ದ ಅಪರ್ಣಾ ಇಂದು ಮಾತ್ರ ಅವಳ ಸಣ್ಣ ಕೋರಿಕೆಗೂ ಸ್ಪಂದಿಸದಂತಿದ್ದುದು ದೊಡ್ಡ ವಿಪರ್ಯಾಸವಾಗಿತ್ತು. 
"ಅಲ್ದೇ ನಂಗೆ ಸುತ್ತು ಬಳಸಿ ಮಾತು ಬರದಿಲ್ಲೆ.. ಬೆಳ್ಗೆ ಎರ್ಡು ಸಲ ಹೇಳಿದಾಗ್ಲೂ ನೀ ಸುಮ್ನಿದ್ದಿದ್ದೆ.. ವಿಶ್ವ ಬೇರೆ ಮುಖ ಒಂಥರಾ ಮಾಡಿಕೊಂಡು ನಿನ್ನ ನೋಡಿದ.. ಅದೆಂಥಕೆ ನಿಂಗಕಿಗೆ ಆ ಮುದಿ ಜೀವ ನೋಡದು ಇಷ್ಟ ಇಲ್ಲೆ? ನಿಂಗ್ಳನ್ನ ಎಷ್ಟು ಕೇಳ್ತಿತ್ತು ಗೊತ್ತಿದ್ದಾ? ಹೊಟ್ಟೆಗಿಲ್ದೇ ಹೋದಾಗ ಎಷ್ಟೋ ಸಲ ಮಜ್ಜಿಗೆ, ಸಾರು ಕೊಟ್ಟಿದ್ದು... ಒಂದ್ಸಲ ನೋಡಿ ಬರದಲ್ದಾ? ಇಲ್ಲಿಂದ ಬರೀ ಅರ್ಧ ಕಿಲೋಮೀಟರ್ ದೂರಾಗ್ತು...." ಎಂದು ನೇರಾನೇರ ಕೇಳಿ ಬಿಟ್ಟಳು. ಅಷ್ಟತ್ತೂ ತಲೆತಗ್ಗಿಸಿ ಹೆಚ್ಚಿದ್ದ ಹೋಳುಗಳನ್ನೇ ಹೆಚ್ಚುತ್ತಿದ್ದ ಅಪರ್ಣೆಗೆ ಅತ್ತೆಯ ಬಾಯಿಂದ ಲಕ್ಷ್ಮತ್ತೆಯ ಗುಣಗಾನ ಕೇಳಿ, ಅದರಲ್ಲೂ ಮಜ್ಜಿಗೆ ಕೊಟ್ಟ ಪ್ರಸ್ತಾಪ ಬರಲು, ಹೊಟ್ಟೆ ತೊಳಸಿದಂತಾಗಿ,ಉಮ್ಮಳಿಸಿ ಹಿತ್ತಲ ಕಡೆ ಓಡಿ ಬಿಟ್ಟಳು. 
’ಹೇಗೆ ಹೇಳಲಿ ಅತ್ತೆಗೆ ಆ ಲಕ್ಷ್ಮಕ್ಕನ ನಿಜ ಮುಖದ ಬಗ್ಗೆ? ತನಗೇನೂ ಆ ಲಕ್ಷ್ಮತ್ತೆಯ ಮೇಲೆ ಅನುಕಂಪವಿಲ್ಲ.... ಆದರೆ ನಿಜ ವಿಷಯ ತಿಳಿದರೆ ಅತ್ತೆ ಅದೆಷ್ಟು ನೊಂದು ಕೊಂಡಾರು? ಸಂಕಟ ಪಟ್ಟಾರು? ಮದುವೆಯ ನಂತರ ಒಮ್ಮೆ ತಡೆಯಲಾರದೇ ವಿಶ್ವನ ಬಳಿ ಹೇಳಿಕೊಂಡಿದ್ದಕ್ಕೆ ಆತನೇ ಅದೆಷ್ಟು ಅತ್ತಿದ್ದಿಲ್ಲ!! ಎರಡು ದಿನ ನಿದ್ದೇಯೇ ಮಾಡಿರಲಿಲ್ಲ... ಅಮ್ಮನಿಗೆ ಇದನ್ನೆಲ್ಲಾ ಹೇಳ್ಬೇಡ ಎಂದ್ಬಿಟ್ಟಿದ್ದ. ಆದರೆ ಅತ್ತೆ ಮಾತ್ರ ಒಂಟಿ ಕಾಲಲ್ಲಿ ನಿಂತು ಒತ್ತಾಯಿಸುತ್ತಿದ್ದಾರಲ್ಲಾ.. ಏನು ಮಾಡಲಿ? ಛೇ...." ಮನದೊಳಗೇ ಅಲವತ್ತುಕೊಳ್ಳುತ್ತಿದ್ದ ಅಪರ್ಣೆಗೆ ಬೇಡ ಬೇಡವೆಂದರೂ ಗತಕಾಲದ ಆ ಕಹಿ ಘಟನೆ ಮತ್ತೆ ನೆನಪಾಗತೊಡಗಿತು.
ನಾರಿಮನೆಗೆ ಶ್ರೀಲಕ್ಷ್ಮೀ ಹಿರಿ ಸೊಸೆಯಾಗಿ ಬಂದಾಗ ಅಲ್ಲಿ ತುಂಬಿದ್ದ ಸಿರಿ-ಸಂಪತ್ತನ್ನು ಕಂಡು ಹಿರಿ ಹಿಗ್ಗಿ ಹೋಗಿದ್ದಳು. ತವರಿನಲ್ಲೂ ಹೇಳುಕೊಳ್ಳುವಂಥ ಕಷ್ಟ ಇರಲಿಲ್ಲವಾದ್ದರಿಂದ ದರ್ಪ, ಅಹಂಕಾರ ಸ್ವಭಾವತಃ ಕೊಡುಗೆಯಾಗಿ ಬಂದಿತ್ತು. ಬಡವರು, ಆಳುಗಳು, ಪಾಪದ ಜನರೆಲ್ಲಾ ಅವಳ ಕಡೆಗಣ್ಣಿಗೆ ಸಮ. ಬಡತನವನ್ನೇ ಹೊದ್ದಿದ್ದ ಶಾಂತತ್ತೆ ಹೊಟ್ಟೆಗೇನೂ ಇಲ್ಲದ ದಿನ ಗಂಜಿ ಬೇಯಿಸಿಟ್ಟುಕೊಂಡು ನೆಂಜಿಕೊಳ್ಳಲು ಸಾರನ್ನೋ, ಮಜ್ಜಿಗೆಯನ್ನೋ ಕೇಳಲು ಬಂದಾಗ ಒಂದು ಲೋಟದಲ್ಲಿ ಅರ್ಧ ಹುಳಿ ಮಜ್ಜಿಗೆಯನ್ನೋ, ಇನ್ನೇನು ಹಳಸಲಿದ್ದ ನಿನ್ನೆಯ ಸಾರನ್ನೋ ಕೊಟ್ಟು ಅದನ್ನೇ ನಾಲ್ಕು ಜನರಲ್ಲಿ ಹೇಳಿಕೊಂಡು ತಿರುಗುತ್ತಿದ್ದರೂ, ನಿರ್ಮಲ ಮನಸಿನ ಶಾಂತತ್ತೆಗೆ ಮಾತ್ರ ಅವಳು ಕರುಣಾಳುವೇ ಆಗಿದ್ದಳು.  
ಅಂದು ಮಹಾಚೌತಿಯಾಗಿತ್ತು. ಹನ್ನೆರಡರ ಬಾಲೆಯಾಗಿದ್ದ ಅಪರ್ಣೆಗೋ ಟೋಳಿ ಕಟ್ಟಿಕೊಂಡು ಮನೆ ಮನೆ ತಿರುಗಿ ಗಣಪನ ನೋಡುವ ಹುಚ್ಚು. ಅಂದು ತನ್ನ ಓರಗೆಯ ಮಕ್ಕಳ ಜೊತೆ ಲಕ್ಷ್ಮತ್ತೆಯ ಮನೆಗೂ ಬಂದಿದ್ದಳು. ಜರಿತಾರೆ ಸೀರೆಯುಟ್ಟು ಒಳ ಕೋಣೆಯಲ್ಲಿ ಆಸರಿಗೆ ಕುಳಿತಿದ್ದ ದೊಡ್ಡ ಜನರ ನಡುವೆ ಈ ಮಕ್ಕಳಿಗೆ ಎಲೆ ಹಾಕದೇ, ಅಡುಗೆ ಕೋಣೆಯ ಓರಿಯೊಳಗೆ ತಿಂಡಿ ನೀಡಿದ್ದರು. "ಅಯ್ಯೋ ನಿನ್ನೆ ಮಜ್ಜಿಗೆ ವಿಪರೀತ ಹುಳಿಯಾಗೋಯ್ದು.. ಸುಟ್ಟ್ ಕಪ್ಪಿರುವೆ ರಾಶಿ ರಾಶಿ ತುಂಬಿದ್ದೋ.. ದನದ ಅಕ್ಕಚ್ಚಿಗೆ ಹಾಕದೇಯಾ.. ಕೆಟ್ಟ್ ಹುಳಿ..." ಎಂದು ತನ್ನಷ್ಟಕ್ಕೇ ಹಲುಬುತ್ತಾ ದೊಡ್ಡ ಹುಳಿ ಮಜ್ಜಿಗೆಯ ಚರಿಗೆಯನ್ನು ಹೊತ್ತು ಬಾಗಿಲ ಸಂದಿಯಲ್ಲಿಟ್ಟ ಲಕ್ಷ್ಮಕ್ಕನನ್ನು ಹಿಂಬಾಗಿಲಿನಾಚೆಯಿಂದ ಕರೆದಿದ್ದಳು ಶಾಂತತ್ತೆ. ಆರಾಮಾಗಿ ಚಕ್ಕುಲಿ ತಿನ್ನುದ್ದಿದ್ದ ಅಪರ್ಣೆಗೆ ಹುಳಿ ಮಜ್ಜಿಗೆ ವಾಸನೆ ಬಡಿದು ಅತ್ತ ನೋಡಲು, ಸಣ್ಣ ದೊಡ್ಡ ಇರುವೆಗಳ ರಾಶಿಯೇ ಆ ಚರಿಗೆಯ ಬಾಯಿಯನ್ನು ಇಂಚೂ ಬಿಡದೇ ಮುತ್ತಿಕೊಂಡು, ಅದರ ಒಳ ಹೊರಗೆಲ್ಲಾ ಬುಳು ಬುಳುನೆ ಬೀಳುತ್ತಿರುವುದನ್ನು ಕಂಡು ಅಸಹ್ಯವೆನಿಸಿಬಿಟ್ಟಿತ್ತು. ಅತ್ತ ಕೈತುಂಬ ತುಂಬಿಕೊಂಡಿದ್ದ ಚಿನ್ನದ ಬಳೆ ಪ್ರದರ್ಶಿಸುತ್ತಾ ಲಕ್ಷ್ಮಕ್ಕ -ಯಾರು? ಗುಡ್ಡೆಮನೆ ಶಾಂತಿನಾ? ಇವತ್ತೂ ಉಪವಾಸನಾ? ಮಜ್ಜಿಗೆಗೆ ಬಂದ್ಯನ ಅಲ್ದಾ? ಇರು ಕೊಡ್ತೆ..... ಇಂದು ನಿನ್ನ ಪುಣ್ಯಕ್ಕೆ ಸುಮಾರು ಉಳದ್ದು... ಎಂದು ಸಂಭ್ರಮದಿಂದಲೇ ದೊಡ್ಡ ಗಿಂಡಿಯ ತುಂಬಾ ಅದೇ ಮಜ್ಜಿಗೆಯನ್ನು ಸುರಿದು, ಬಿದ್ದಿದ್ದ ಇರುವೆಗಳನ್ನೆಲ್ಲಾ ಸೋಸಿ ಉದಾರತೆಯಿಂದ ಅವಳ ಪಾತ್ರೆಗೆ ಹಾಕಿದ್ದನ್ನು ಕಣ್ಣಾರೆ ಕಂಡ ಅಪರ್ಣೆಗೆ ವಾಕರಿಗೆ ಬಂದು ಎಲ್ಲವನ್ನೂ ಹಾಗೇ ಬಿಟ್ಟು ಮನೆಗೆ ಓಡಿದ್ದಳು. ಅಕ್ಕಚ್ಚಿಗಾಗಿ ತಂದಿಟ್ಟಿದ್ದ ಆ ಬೊಡ್ಡೆಯ ಬಾಯಿಗೆಲ್ಲಾ ಮೆತ್ತಿಕೊಂಡಿದ್ದ ಇರುವೆಗಳ ಸಾಲು, ಅದನ್ನೇ ಲಕ್ಷ್ಮಕ್ಕ ಸೋಸಿ ನೀಡಿದ್ದ ದೃಶ್ಯ ಅವಳಿಂದ ಮರೆಯಾಗದೇ, ಛೇ... ಕೊಡದಿದ್ದರೂ ನಡೆಯುತ್ತಿತಲ್ಲಾ ಎಂದು ಸಂಕಟ ಪಟ್ಟಿದ್ದಳು. ಆ ದಿನದ ನಂತರ ಮತ್ತೆಂದೂ ಆಕೆ ಲಕ್ಷ್ಮಕ್ಕನ ಮನೆಗೆ ಕಾಲಿಡಲೇ ಇಲ್ಲಾ. ಇಂದು ಈ ಮನೆಯ ಸೊಸೆ ತಾನು.. ಈಗ ಅತ್ತೆಯೇ ಆ ಮನೆಗೆ ಹೋಗಿ ವಿಚಾರಿಸಿಕೊಂಡು ಬಾ ಎನ್ನುವಾಗ.... ಅಲ್ಲಿಗೆ ಹೋಗಿ ಹೇಗೆ ನಾಟಕವಾಡಲಿ..? ಎಂಬುದೇ ಅವಳ ದೊಡ್ಡ ಚಿಂತೆ. 
ದೀರ್ಘಾಲೋಚನೆಯಲ್ಲೇ ಮುಳುಗಿದ್ದವಳನ್ನು, ಅವಳತ್ತೆ ಬಂದು ಮೆಲ್ಲನೆ ಮುಟ್ಟಲು, ಬೆಚ್ಚಿ ಹಿಂತಿರುಗಿದವಳಿಗೆ ಕಂಡಿದ್ದು ನಸುನಗುತ್ತಿದ್ದ ಶಾಂತ ಮೊಗ. "ಹುಚ್ಚು ಕೂಸೆ... ವಿಶ್ವ ಎಲ್ಲಾ ವಿಶ್ಯ ಹೇಳಿದ.. ಮಳ್ಳಿ, ಇದಕ್ಕಿಂತಲೂ ಹೆಚ್ಚಿನ ತಿರಸ್ಕಾರ ಕಂಡ ಜೀವ ಇದು. ಹಣ ಇಲ್ದಾಗ ನಾ ಗುಡ್ಡೆಮನೆ ಶಾಂತಿ ಆಗಿದ್ದೆ... ಈಗ ಶಾಂತಮ್ಮಾ ಆಯ್ದೆ! ಇಂಥದ್ದೆಲ್ಲಾ ಅನುಭವಿಸಿ, ದಾಟಿ ಬಂದಾಯ್ದು.... ಎಲ್ಲಾ ಕಾಲದ ಮಹಿಮೆ! ಏನೇ ಆದ್ರೂ ಈಗ ನೀವಿಬ್ರು ಮಾಡ್ತಿರದು ದೊಡ್ಡ ತಪ್ಪು. ಸಾಯುವ ವ್ಯಕ್ತಿಯ ಜೊತೆಯೆಂಥಾ ದ್ವೇಷಾ? ಅಪ್ಪಿ, ಜನ ನನ್ನ ನೋಡಿ ಅಪಹಾಸ್ಯ ಮಾಡ್ತಿದ್ದಾಗ ತುಂಬಾ ನೊಂದಿದ್ದೆ... ಆದ್ರೆ ಆಗ ನಂಗೆ ದೈರ್ಯ ತುಂಬಿದ್ದು ಅಪ್ಪಯ್ಯ ಕೊಟ್ಟಿದ್ದ ಭಗವದ್ಗೀತೆ. ’ಕ್ಷುದ್ರಂ ಹೃದಯ ದೌರ್ಬಲ್ಯಂ ತ್ಯಕ್ತ್ವೋತ್ತಿಷ್ಠ ಪರಂತಪ’ ಎಂದ ಕೃಷ್ಣನ ಧೈರ್ಯದ ಮಾತನ್ನೇ ನಂಬಿ ಬದ್ಕಿದ್ದು ನಾನು. ಮನಸ್ಸನ್ನು ದುರ್ಬಲಗೊಳಿಸಿಕೊಳ್ಳಲೇ ಬಾರ.... ನಮ್ಮನ್ನು ಕುಗ್ಗಿಸೋ ವಿಷ್ಯಗಳನ್ನು ಬಿಟ್ಟು ಮೇಲೇರಿದಾಗ್ಲೇ ಗೆಲುವು ಸಿಗದು. ಸಣ್ಣತನ ಅಂಥವ್ಕೇ ಇರ್ಲಿ... ನಾವು ದೊಡ್ಡತನ ತೋರ್ಸನ. ಗೊತ್ತಿದ್ದೋ ಗೊತ್ತಿಲ್ದೇನೋ ನಮ್ಮಿಂದನೂ ತಪ್ಪು ಆಗ್ತಾ ಇರ್ತು... ತಪ್ಪು ಅಂತ ಗೊತ್ತಾದ್ಮೇಲೆ ಸರಿ ಮಾಡವು ಅಲ್ದಾ? ಇಬ್ರೂ ಹೋಗ್ಬನ್ನಿ. ಅಲ್ದೇ, ನಮ್ಮ್ ಲಾಸ್ಯ ಹೇಳ್ದಾಂಗೆ ಇರುವೆ ಶ್ರೀಮಂತಿಕೆ ತರದು ಸತ್ಯವಾದಿಕ್ಕು ನೋಡು..... ಅದ್ರಿಂದನೇ ನಮ್ಮ ಸ್ಥಿತಿನೂ ಸುಧಾರ್ಸಿಕ್ಕು....! " ಎಂದು ಮುಕ್ತವಾಗಿ ನಗಲು ಅಪರ್ಣ ಹನಿಗಣ್ಣಾದಳು.

*****

[ 25-01-2015 ರ ಉದಯವಾಣಿ ಸಾಪ್ತಾಹಿಕದಲ್ಲಿ ಪ್ರಕಟಿತ]

ಗುರುವಾರ, ಜನವರಿ 15, 2015

ಸಂಚಾರಿ ಭಾವಗಳು....

ಕೆಲವು ಭಾವಗಳೇ ಹೀಗೆ-
ಧುಮ್ಮಿಕ್ಕಿ ಹರಿಯುವ ಜಲಧಾರೆಯೊಂದು
ಥಟ್ಟನೆ ನಿಂತು ತಣ್ಣಗೆ ಹರಿವ ಹೊಳೆಯಾದಂತೆ
ನಿಶೆಯ ಗರ್ಭವನೇ ಸೀಳಲು ಹೊರಟ ಕೋಲ್ಮಿಂಚು
ತನ್ನ ಬೆಳಕಿಗೆ ತಾನೇ ಉರಿದು ಮತ್ತೆ ಕಪ್ಪಾಗುವಂತೆ.
ಇಂದು ಬದುಕಿರುವಂತೆ ಕಾಣುವಾತ,
ನಾಳೆ ಭೂತವಾಗಿ ಕಾಡುವಂತೆ!


ಕೆಲವು ಭಾವಗಳು ಹೀಗೂ-
ಕಲಾವಿದನೋರ್ವ ತನ್ನ ಸುಂದರ ಚಿತ್ರಕೆ
ಅರೆಬರೆ ಬಣ್ಣವ ಬಳಿದು ಬಿಟ್ಟಂತೆ
ತಾಯ ಗರ್ಭದೊಳು ನೀರಾಡುವ ಶಿಶುವಿಗೆ
ಇಳೆ ಗರ್ಭದಿಂದುಕ್ಕಿದ ನೀರು ಚಳಿಯಾಗುವಂತೆ.
ಚಿಕ್ಕ ಸವತೆ ಮಿಡಿಯಂತಹ ಪುಗ್ಗವೊಂದು ಉಬ್ಬಿ,
ಸೂಜಿಮೊನೆಯೊಂದರ ಮುತ್ತಿಗೆ ಠುಸ್ ಎನ್ನುವಂತೆ.

ಕೆಲವೊಂದು ಭಾವಗಳು ಹೀಗೆಲ್ಲಾ-
ಉಷಾಕಾಲದೊಳು ತಲೆಯ ಹೊಕ್ಕಿ,
ಮಟ ಮಧ್ಯಾಹ್ನದೊಳು ಕಕ್ಕಾಬಿಕ್ಕಿಯಾಗಿ
ಸಧ್ಯಾರಾಗದಲ್ಲೇ ಕಣ್ಮುಚ್ಚಿ ಅಂತ್ಯವಾಗುವ,
ಈ ಹುಚ್ಚು ಯೋಚನೆಗಳೆಲ್ಲಾ ಹೀಗೇ....

-ತೇಜಸ್ವಿನಿ ಹೆಗಡೆ.

ಬುಧವಾರ, ಜನವರಿ 7, 2015

ಮಿಥುನ

Tejaswini & Ramakrishna

ಆ ಬಲಗೈ ಬೆಸೆದಿದ್ದ ಬೆಸುಗೆಯಿಂದಲೋ
ಭಾವ ಮಂಥನದ ನಡುಕದಿಂದಲೋ
ಬೆವರಿದ ನನ್ನ ಬಲಗೈಯಿಂದೆದ್ದು,
ಹನಿಯುತ್ತಿದ್ದ ಬೆವರಿನಹನಿಗಳನ್ನೇ
ಬಾಗಿ ನೋಡುತ್ತಿದ್ದ ನೊಸಲ ಹನಿಗಳು.....
ಹೊಸ ರೇಶಿಮೆ ಸೀರೆಯ ಸರಪರದ ಸದ್ದು,
ಜೊತೆಗೆ ಮಲ್ಲೆ ಹೂವುಗಳ ಮತ್ತು,
ಅನೂಹ್ಯ ರೋಮಾಂಚನಕೆಳೆಸಿದ ಆ
‘ಸುಲಗ್ನೇ ಸಾವಧಾನ....ಸುಮುಹೂರ್ತೇ ಸಾವಧಾನ..’

ಲಾಜಹೋಮದಲ್ಲಿ ತುಸು ಬಿಸಿಯಾದ
ಕೈ ಸವರಿ ಮೆಲುನಕ್ಕಿದ ಆ ಪರಿ,
ಅರಳು ಹೊಯ್ದು ಮರಳು ಮಾಡಿ
ಕಣ್ಸೆರೆ ಹಿಡಿದು ಕೆಂಪಾಗಿಸಿದಾ ನೋಟ,
ಕೊರಳೊಳಗಿನ ಕರಿ ಮಣಿಗಳ
ಪಿಸುದನಿಗಳ ಕಚಗುಳಿಗಳು,
ಸುಖಾಸುಮ್ಮನೆ ಹೊಡೆದುಕೊಳ್ಳುತ್ತಿದ್ದ
ಎದೆಬಡಿತದ ಸದ್ದು...

ಎಲ್ಲವೂ ಹಸಿಯಾಗಿ ಹಸಿರಾಗಿವೆ....
ಹರುಷಕೆ ಹತ್ತು ವರುಷಗಳಾದರೂ!

ದಶಕಗಳನು ಹತ್ತೇ ನಿಮಿಷಗಳಲಿ,
ಕೂಡಿ ಕಳೆದಂತೆ.... ಕಳೆದು ಕೂಡಿದಂತೇ...
ಸಾಗಿಹುದು, ಸಾಗುತಿದೆ ಬಾಳ ಪಯಣ
ಸವಿಗನಸಿನಂತೇ....

-ತೇಜಸ್ವಿನಿ ರಾಮಕೃಷ್ಣ ಹೆಗಡೆ.



ನಾನೇ ಕಲಿತು ಮೊದಲ ಬಾರಿ ತಯಾರಿಸಿದ 2 ನಿಮಿಷಗಳಪುಟ್ಟ ಮೂವಿಯ ಲಿಂಕ್ ಇಲ್ಲಿದೆ..... :)
https://www.youtube.com/watch?v=HaoFV6hdEpc&feature=youtu.be