ಗುರುವಾರ, ಡಿಸೆಂಬರ್ 31, 2009

ಅನ್ಯಾಯವನ್ನು ಕಾಪಿಡುತಿರುವ ಕಾನೂನಿನಡಿಯಲ್ಲಿ ಮಹಿಳೆಯೆಷ್ಟು ಭದ್ರ?!!!

"ಎಲ್ಲಿ ನಾರಿಯರನ್ನು ಪೂಜಿಸುತ್ತಾರೋ ಅಲ್ಲಿ ದೇವತೆಗಳು ವಾಸಿಸುತ್ತಾರೆ" -ಸಂಸ್ಕೃತ ಸುಭಾಷಿತವೊಂದು ತುಂಬಾ ಸುಂದರ ಸಂದೇಶವನ್ನು ನೀಡುತ್ತದೆ. ಅಂತೆಯೇ ಗಾಂಧೀಜಿ ಕೂಡ "ಎಂದು ಮಧ್ಯರಾತ್ರಿಯಂದೂ ಕೂಡ ಮಹಿಳೆ ನಿರ್ಭಯಳಾಗಿ ತಿರುಗುವಂತಾಗುವುದೋ ಅಂದೇ ನಮಗೆ ಸ್ವಾತಂತ್ರ್ಯ ಸಿಕ್ಕಿದಂತಾಗುವುದು" ಎಂದು ಹೇಳಿದ್ದಾರೆ. ಎಷ್ಟೊಂದು ಉದಾತ್ತ ವಿಚಾರಗಳಿವು! ಆದರೆ ಈ ಮೇಲಿನ ಹೇಳಿಕೆಗಳೆಲ್ಲಾ ಇಂದು ಕನಸಿನೊಳಗಿನ ಕನ್ನಡಿಗಂಟಿನಂತೇ ಸರಿ! ಎಂದೆಂದೂ ಈ ಸ್ವಾತಂತ್ರ್ಯ ಮಹಿಳೆಯದಾಗಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ ಇಂದಾಗಿದೆ. ಮುಂದೆ ಇದಕ್ಕಿಂತಲೂ ದುಃಸ್ಥಿತಿ ನಮ್ಮದಾಗಬಹುದು. ಮನೆಯೊಳಗೇ ಇರಲಿ ಇಲ್ಲಾ ಹೊರಜಗತ್ತಿನಲ್ಲೇ ಇರಲಿ ಮಹಿಳೆಯರ ಬದುಕು ಆತಂಕದೊಂದಿಗೇ ಕಳೆಯುವಂತಾಗಿರುವುದು ತುಂಬಾ ಖೇದಕರ!
"ಬಲಾತ್ಕಾರ, ಮಾನಭಂಗ, ಮಾನಹರಣ, ರೇಪ್" ಈ ಶಬ್ದಗಳನ್ನು ಕೇಳುವಾಗಲೇ ಮೊಗ ಕಪ್ಪಿಡುತ್ತದೆ. ಮನ ಭಯಗೊಳ್ಳುತ್ತದೆ. ಆ ಕೃತ್ಯ ಎಸಗಿದ ವ್ಯಕ್ತಿಯ ಮೇಲೆ ಅಗಾಧ ರೋಷ, ತಿರಸ್ಕಾರ, ಅಸಹ್ಯ ಮೂಡುತ್ತದೆ ನಮಗೆ. ಆದರೆ ಈ ದುಷ್ಕೃತ್ಯಕ್ಕೆ ಒಳಗಾದ ವ್ಯಕ್ತಿಗೆ ಯಾವ ರೀತಿ ಅನಿಸಬಹುದು? ಆಕೆ ಹೇಗೆ ತನ್ನ ತಾನು ಸಂಭಾಳಿಸಿಕೊಳ್ಳುವಳು? ಮುಂದೆ ಆಕೆಯ ಬದುಕು ಅವಳನ್ನು ಎಲ್ಲಿಗೆ ಒಯ್ಯಬಹುದು? ಎನ್ನುವ ಚಿಂತನೆಗೆ ಹೋಗುವವರು ಕಡಿಮೆಯೇ. ಆ ಕ್ಷಣದ ಕರುಣೆ, ಅನುಭೂತಿ, ಅಯ್ಯೋ ಪಾಪ ಎನ್ನುವ ಅನುಕಂಪವನ್ನಷ್ಟೇ ತೋರಿ, ಆ ಪಾಪಿಗೆ ಸರಿಯಾಗಿ ಶಿಕ್ಷೆಯಾಗಲೆಂದು ಹಾರೈಸಿ ಮರೆಯುತ್ತೇವೆ. ಆದರೆ ಅಂತಹ ಒಂದು ಮಹಾಪಾಪವನ್ನು ಎಸಗಿದ ವ್ಯಕ್ತಿಗೆ ಸರಿಯಾದ ಶಿಕ್ಷೆಯಾಗಿದೆಯೋ ಇಲ್ಲವೋ?! ಇಲ್ಲದಿದ್ದರೆ ಹೇಗೆ ಶಿಕ್ಷೆ ಆಗುವಂತೆ ಮಾಡಬೇಕು? ಎಂಬುದನ್ನು ನಾವು ಯೋಚಿಸುವುದೇ ಇಲ್ಲ. ಆ ಹೊತ್ತಿನ ಬಿಸಿ ಸುದ್ದಿಯನ್ನಷ್ಟೇ “Breaking News” ಆಗಿ ಪ್ರಸಾರಮಾಡುವ ಮಾಧ್ಯಮ, ತದನಂತರದ ಬೆಳವಣಿಗೆಯ ಬೆನ್ನತ್ತಿ ಹೋಗುವುದೂ ಇಲ್ಲ. ಆಘಾತಕ್ಕೊಳಗಾದ ಮಹಿಳೆಗೆ ತಮ್ಮ ಬೆಂಬಲ ಹಾಗೂ ಮಾನಸಿಕ ಶಕ್ತಿಯನ್ನು ನೀಡಿ, ಆ ಮೂಲಕ ಪಾಪಿಗೆ ಆಕೆಯೇ ಶಿಕ್ಷೆ ನೀಡುವಂತೆ ಮಾಡಲು ಸಹಕರಿಸುವ ನಿಟ್ಟಿನಲ್ಲಿ ನಮ್ಮ ಸಮಾಜವಾಗಲೀ, ಕಾನೂನಾಗಲೀ, ಕನಿಷ್ಠ ಆಕೆಯ ಮನೆಯವರಾಗಲೀ ಮುಂದುವರಿಯುವುದೇ ಇಲ್ಲ!
ನಮ್ಮ ಕಾನೂನಿನಲ್ಲಿ ಬಲಾತ್ಕಾರ ಎಸಗಿದವನಿಗೆ ಹೆಚ್ಚೆಂದರೆ ೭ ವರ್ಷ ಸಜೆ ಮಾತ್ರವಿದೆ. ಅದರಲ್ಲೂ ಆತ ಆ ಕೃತ್ಯ ಎಸಗಿದ ಮೇಲೆ ಆಕೆಗೆ ಹೆಚ್ಚು ದೈಹಿಕ ಹಲ್ಲೆ ಮಾಡದೇ ಹೋದರೆ ಕಡಿಮೆ ಶಿಕ್ಷೆಯಂತೆ. ಒಂದು ವೇಳೆ ಬಲಾತ್ಕಾರಕ್ಕೊಳಗಾದ ವ್ಯಕ್ತಿ ತದನಂತರ ಆಘಾತದಿಂದ ಕೋಮಾಕ್ಕೋ, ಇಲ್ಲಾ ಮೃತಳಾದರೆ ಆ ಕೃತ್ಯವೆಸಗಿದವನಿಗೆ ಹೆಚ್ಚೆಂದರೆ ಹತ್ತುವರ್ಷಗಳ ಸಜೆಯಂತೆ! ಇದೆಲ್ಲಾ ತಪ್ಪು ಸಾಬೀತಾದರೆ ಮಾತ್ರ! ಸಾಕ್ಷಿಗಳ ಕೊರತೆಯಿಂದಾಗಿಯೋ ಇಲ್ಲಾ ಇನ್ನವುದೋ ಪ್ರಭಾವಶಾಲೀ ವಶೀಲಿಯಿಂದಾಗಿಯೋ ಆ ವ್ಯಕ್ತಿ ಏನೂ ಶಿಕ್ಷೆ ಅನುಭವಿಸದೇ ಆರಾಮವಾಗಿ ಹೊರಬರುವ ಸಾಧತೆಯೇ ೯೫% ಹೆಚ್ಚು! ಆದರೆ ಇತ್ತ ಮಾನಭಂಗಕ್ಕೊಳಗಾದ ಮಹಿಳೆ ಮಾತ್ರ ಏನೊಂದೂ ತಪ್ಪು ಮಾಡದೇ ಜೀವನ ಪೂರ್ತಿ ಕೊರಗುತ್ತಾ, ಕುರುಡ ಸಮಾಜದ ಕಟು ನಿಂದೆಗೆ ಪ್ರತಿನಿಮಿಷ ಸಾಯುತ್ತಾ, ಜೀವಂತ ಹೆಣವಾಗಿರಬೇಕಾಗುತ್ತದೆ. ಇದು ೧೦೦% ಸತ್ಯ! ಇಂದು ನಮ್ಮ ಕಾನೂನು ೧೦೦ ಅಪರಾಧಿಗಳು ತಪ್ಪಿಸಿಕೊಂಡರೂ ಸರಿ ಓರ್ವ ನಿರಪರಾಧಿಗೆ ಸಜೆ ಆಗಬಾರದೆಂದು ಕೊಚ್ಚಿಕೊಳ್ಳುತ್ತಾ, ಸಾವಿರಾರು ನಿರಪರಾಧಿಗಳನ್ನು ಪ್ರತಿನಿತ್ಯ ಕೊಲ್ಲುತ್ತಿದೆ. ಹೆಚ್ಚಿನ ವಕೀಲರು ಹುಡುಕುವುದೇ ಎಲ್ಲಿ ಅಪರಾಧಿಗೆ ತಪ್ಪಿಸಿಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆಯೆಂದು. ನ್ಯಾಯ ಅನ್ಯಾಯದ ಪರಿಭಾಷೆ ನಿರಪರಾಧಿಗಳ ಕೈಯಲ್ಲೇ ಇಲ್ಲ! ಉಗುರಿನಿಂದ ತಲೆಯವರೆಗೂ ಇಂದು ಹಣ, ವಶಿಲೀಕರಣ, ಗದ್ದುಗೆ, ಅಧಿಕಾರವೇ ಎಲ್ಲವನ್ನೂ ನಿರ್ಧರಿಸುತ್ತದೆ. ಸಾಕ್ಷಿಗಳನ್ನು ಮಾರುತ್ತದೆ, ಕೊಂಡು ಕೊಳ್ಳುತ್ತದೆ. ಇನ್ನು ಹಲವರಂತೂ ಬಲಾತ್ಕಾರಕ್ಕೊಳಗಾದವರ ಪರ ಸಾಕ್ಷಿ ಹೇಳುವುದೂ ಒಂದು ಅವಮಾನಕರವೆಂಬ ಮೂರ್ಖ ಅನಿಸಿಕೆಯೊಂದಿಗೇ ಮುಂದೆ ಬರಲು ಹೆದರಿ ಮತ್ತಷ್ಟು ಸಹಾಯ ಮಾಡುತ್ತಾರೆ ಪಾಪಿಗಳನ್ನುಳಿಸಲು.
ತನ್ನ ಸ್ವಂತಿಕೆ, ಘನತೆ, ಗೌರವ, ಹೆಣ್ತತ, ದೇಹ, ಮನಸ್ಸು ಎಲ್ಲವುದರ ಮೇಲೆ ಆಗುವ ಘೋರಧಾಳಿಯನ್ನು ತಡೆದುಕೊಂಡು, ಸುತ್ತಮುತ್ತಲಿನ ಸಮಾಜ ನೀಡುವ ಪೊಳ್ಳು ಅನುಕಂಪ, ಉಪಯೋಗಕ್ಕೆ ಬಾರದ ಸಲಹೆ, ತಿವಿದು ಚುಚ್ಚುವ ನೋಟಗಳು, "ಇವಳಲ್ಲೇ ಏನೋ ತಪ್ಪಿರಬೇಕು" ಎಂಬ ಘನಾಂದಾರಿ ಮಾತುಗಳ ವಾಗ್ಬಾಣ- ಇವೆಲ್ಲವುಗಳನ್ನೂ ಎದುರಿಸಿಕೊಂಡು, ತುಸು ಧೈರ್ಯದಿಂದ ಆಕೆಯೇನಾದರೂ ಅಪ್ಪಿ ತಪ್ಪಿ ಕಾನೂನಿನ ಮೊರೆ ಹೋದಳೋ ಮುಗಿದೇ ಹೋಯಿತು. ಪ್ರತಿನಿತ್ಯ ಅಲ್ಲಿ ಅವಳ ಮಾನಹರಣ ನೆಡೆಯತೊಡಗುತ್ತದೆ. ಮಾಧ್ಯಮದವರಂತೂ ಆಕೆಗಾದ ಅನ್ಯಾಯವನ್ನು ಎತ್ತಿಹಿಡಿವ ಬದಲು ಆಕೆಯನ್ನು ಹೇಗೆ, ಎಲ್ಲಿ ಯಾವರೀತಿ ಬಲಾತ್ಕಾರಿಸಲಾತೆನ್ನುವುದನ್ನೇ ಪದೇ ಪದೇ ಹಾಕಿ ಅವಳನ್ನು ಕೊಂದೇ ಬಿಡುತ್ತಾರೆ. ಸಿಕ್ಕ ಸಾಕ್ಷಿಗಳನ್ನೇ ಹೆದರಿಸಿಯೋ ಇಲ್ಲಾ ಸತಾಯಿಸಿಯೋ, ಇಲ್ಲದ ಸಾಕ್ಷಿಗಳನ್ನು ಸೃಷ್ಟಿಸಿಯೋ ಕೋರ್ಟ್ ಕೊನೆಗೆ ಆರೋಪಿಯನ್ನು ನಿರಪರಾಧಿಯೆಂದು ಘೋಷಿಸಿ, ಇನ್ನೊಂದು ಮಾನಭಾಂಗಕ್ಕೇ ಅಲ್ಲೇ ನಾಂದಿ ಹಾಕಿಕೊಡುತ್ತದೆ. ಈಗೀಗ ಮುಗ್ಧ ಮಕ್ಕಳನ್ನೂ ಅಮಾನುಷವಾಗಿ ಬಲಾತ್ಕಾರಿಸುವುದು ತುಂಬಾ ಹೆಚ್ಚಳವಾಗುತ್ತಿದ್ದೆ. ನಮ್ಮಲ್ಲಿ ಅಮಾಯಕ ಮಕ್ಕಳ ಮುಗ್ಧತೆಯನ್ನು ಕೊಲ್ಲುವ ಪಾಖಂಡಿಗೂ ನೀಡುವ ಸಜೆ ಕೇವಲ ೭ ವರ್ಷಗಳು ಮಾತ್ರ!!! ಎಂತಹ (ಅ)ನ್ಯಾಯವಿದು?!!
ಉದಾಹರಣೆಗೆ ಅರುಣಾ ಶಾನಭಾಗ್ ಬಲಾತ್ಕಾರ ಪ್ರಕರಣ. ಈ ಒಂದು ಖೇದಕರ, ಅಮಾನುಷ ಘಟನೆ ನಮ್ಮ ಕಾನೂನಿನಲ್ಲಿರುವ ದೌರ್ಬಲ್ಯಕ್ಕೆ, ಅವ್ಯವಸ್ಥೆಗೆ ಕನ್ನಡಿ ಹಿಡಿವಂತಿದೆ.
೨೪-೨೫ ವರುಷಗಳ ಸುಂದರ ತರುಣಿ ಅರುಣ. ಸೇವಾ ಮನೋಭಾವ ಹೊಂದಿದ, ಗಟ್ಟಿಗಾರ್ತಿಯಾದ ಈ ಯುವತಿ ೧೯೬೬ರಲ್ಲಿ ಮುಂಬಯಿಯ ಕೆ.ಇ.ಎಂ ಆಸ್ಪತ್ರೆಗೆ ನರ್ಸ್ ಆಗಿ ಸೇರುತ್ತಾಳೆ. ತನ್ನ ಕಾರ್ಯದಕ್ಷತೆಯಿಂದ ಬಹುಬೇಗ ಎಲ್ಲರ ಸ್ನೇಹಗಳಿಸಿ ಹೆಸರು ಮಾಡುತ್ತಾಳೆ. ಅದೇ ಆಸ್ಪತ್ರೆಯ ಯುವ ಡಾಕ್ಟರ್ ಒಬ್ಬ ಆಕೆಯನ್ನು ಮೆಚ್ಚಲು, ಮದುವೆಯೂ ನಿಶ್ಚಯವಾಗುತ್ತದೆ. ೧೯೭೩ರ ಆಸುಪಾಸಿನಲ್ಲಿ ಆಕೆಯನ್ನು ನಾಯಿಗಳ ಆರೋಗ್ಯ ತಪಾಸಣೆಯ ವಾರ್ಡ್‌ಗೆ ಮುಖ್ಯಸ್ಥಳನ್ನಾಗಿ ನೇಮಿಸುತ್ತಾರೆ. ಅಲ್ಲಿಯೇ ಅರೆಕಾಲಿಕ ವಾರ್ಡ್‌ಬಾಯ್ ಆಗಿ ಸೇರುವ ಸೋಹನ್‌ಲಾಲ್ ವಾಲ್ಮೀಕಿಗೂ ಈಕೆಗೂ ಹಲವಾರು ಬಾರಿ ಜಟಾಪಟಿ ಆಗುತ್ತದೆ. ಆತನ ಮೈಗಳ್ಳತನ, ಕದಿಯುವ ಬುದ್ಧಿ, ಒರಟುತನಕ್ಕೆ ಬೇಸತ್ತ ಆಕೆ ಮೇಲಧಿಕಾರಿಗಳಿಗೆ ದೂರನ್ನು ಕೊಡುತ್ತಾಳೆ. ಹಾಗೆ ಆಕೆ ದೂರು ಕೊಟ್ಟದ್ದು ನವೆಂಬರ್ ೨೩ ೧೯೭೬ರಂದು. ಅಂದೇ ಅಕೆ ಹಲವರಲ್ಲಿ ತಾನು ಮದುವೆಯಾಗುತ್ತಿರುವುದಾಗಿಯೂ ಕೆಲದಿನಗಳ ರಜೆಯ ಮೇಲೆ ಹೋಗುತ್ತಿರುವುದಾಗಿಯೂ ಹೇಳುತ್ತಾಳೆ. ಇದನ್ನೆಲ್ಲಾ ಅರಿತ ಹುಂಬ, ರಾಕ್ಷಸೀ ಮನೋಭಾವದ ವಾಲ್ಮೀಕಿ ಅಂದೇ ಸಂಜೆ ಆಕೆ ನಾಯಿಗಳ ವಾರ್ಡನಲ್ಲಿ ಒಬ್ಬಂಟಿಗಳಾಗಿರುವುದನ್ನು ನೋಡಿ ನಾಯಿಗಳನ್ನು ಕಟ್ಟಿಹಾಕಲು ಬಳಸುವ ಸರಪಳಿಯಿಂದಲೇ ಅವಳ ಕುತ್ತಿಗೆಯನ್ನು ಬಿಗಿದು ಅಮಾನುಷವಾಗಿ ಬಲಾತ್ಕಾರಿಸಿ ಪರಾರಿಯಾಗುತ್ತಾನೆ. ಸರಪಳಿಯ ಬಿಗಿತದಿಂದಾಗಿ ಮೆದುಳಿಗೆ ಆಕ್ಸಿಜನ್ ಪೂರೈಕೆ ಸ್ಥಗಿತಕೊಂಡು ಆಕೆ ಅಲ್ಲೇ ಕೋಮಾಕ್ಕೆ ಹೋಗುತ್ತಾಳೆ. ಮರುದಿನ ಅವಳನ್ನು ಆ ಸ್ಥಿತಿಯಲ್ಲಿ ಕಂಡ ಇತರರು ಟ್ರೀಟ್ಮೆಂಟ್‌ಗಾಗಿ ತುರ್ತುನಿಗಾಘಟಕಕ್ಕೆ ಸೇರಿಸಿದರೂ ಪ್ರಯೋಜನವಾಗದೇ ಆಕೆ ಶಾಶ್ವತ ಕೋಮಾಕ್ಕೆ ಹೋಗುತ್ತಾಳೆ. ಆಗಿನಿಂದ ಈಗಿನವರೆಗು ಆಕೆ ಹಾಸಿಗೆಯನ್ನಷ್ಟೇ ಆಶ್ರಯಿಸಿ ಬದುಕುತ್ತಿದ್ದಾಳೆ, ಬದುಕಿಯೂ ಸತ್ತಂತಿದ್ದಾಳೆ. ಅವಳ ಮೆದುಳಿನ ಒಂದು ಭಾಗ ಮಾತ್ರ ಸ್ವಲ್ಪ ಜೀವಂತವಾಗಿದೆ. ಆ ಭಾಗ ಆಕೆಗಾಗುತ್ತಿರುವ ದೈಹಿಕ ನೋವನ್ನು ಗ್ರಹಿಸುತ್ತದೆ. ದೀರ್ಘಕಾಲದ ಅಸ್ವಸ್ಥತೆಯಿಂದ ಕೈ, ಕಾಲು, ಬೆನ್ನು ಇತ್ಯಾದಿಭಾಗಗಳ ಮೂಳೆಗಳು ಒಳಬಾಗ ತೊಡಗಿವೆ ಈಗ. ಅವುಗ ಮಾರ್ಪಡುವಿಕೆಯಿಂದಾಗಿ ಅಸಾಧ್ಯ ನೋವುಂಟಾಗುತ್ತದೆ. ಇದನ್ನು ಆ ಮೆದುಳಿನ ಭಾಗ ಗ್ರಹಿಸಿ, ಅರಿವಿಲ್ಲದಂತೆಯೇ ಚೀತ್ಕಾರ ಆಕೆಯಿಂದ ಆಗಾಗ ಬರುತ್ತದೆಯಂತೆ. ಕೇವಲ ಕೃತಕ ಉಸಿರಾಟದ ಮೂಲಕ ೩೬ ವರುಷಗಳಿಂದ ಒಂದು ಮರದ ಕೊರಡಿನಂತೇ ಬದುಕಿರುವ ಅರುಣಾಳ ಕರುಣಾಜನಕ ಕಥೆಗೆ ಪಿಂಕಿ ವಿರಾನಿ ಅನ್ನೋ ಪತ್ರಕರ್ತೆ ಪುಸ್ತಕರೂಪ ಕೊಟ್ಟಿದ್ದಾಳೆ. "Aruna's Story" ಅನ್ನೋ ಈ ಪುಸ್ತಕದ ರಾಯಲ್ಟಿಯಲ್ಲಿ ೫೦% ಅರುಣಾಳ ಶುಶ್ರೂಷೆಗೆ ಹೋಗುತ್ತಿದೆ. ಕೆ.ಇ.ಎಂ ನಲ್ಲಿ ಅವಳೊಂದಿಗೆ ಕೆಲಸಮಾಡುತ್ತಿದ್ದ ಸ್ನೇಹಿತರು ಈಗಲೂ ಆಕೆಯನ್ನು ನೋಡಿಕೊಳ್ಳುತ್ತಿದ್ದಾರೆ. ಮಾನಸಿಕವಾಗಿ ಸತ್ತಿರುವ ಕೇವಲ ದೈಹಿಕವಾಗಿ ಬದುಕಿರುವ ಆಕೆಗೆ ದಯಾಮರಣ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ.ಆದರೆ ಇದೇ ಕಾನೂನು ಅರುಣಾಳ ಇಷ್ಟೆಲ್ಲಾ ಯಾತನೆಗೆ, ಹಿಂಸೆಗೆ ಕಾರಣೀಭೂತವಾದ ಸೋಹನ್‌ಲಾಲ್‌ಗೆ ನೀಡಿದ್ದು ಕೇವಲ ೭ ವರುಷ ಸಜೆ!!! ಮಾನಭಂಗಕ್ಕೆ ಒಳಗಾದ ಆಕೆಯ ಮನೆಯವರು ಹಾಗೂ ಅವಳ ಪ್ರಿಯಕರ ತಮಗೊದಗುವ ಅವಮಾನಕರ ಸನ್ನಿವೇಶವನ್ನು(?!) ತಪ್ಪಿಸಿಕೊಳ್ಳಲು ಸೋಹನ್‌ಲಾಲ್ ಕೇವಲ ಆಕೆಯನ್ನು ಘಾಸಿಗೊಳಿಸಿದ್ದಾನೆಂದೇ ಮೊದಲು ದೂರು ಧಾಖಲಿಸಿದ್ದಂತೆ. ಬಲಾತ್ಕಾರಕ್ಕೊಳಗಾದ ಬಗ್ಗೆ ಮೊದಲೇ ಪ್ರಕರಣ ದಾಖಲಿಸದೇ ಇದ್ದ ತಪ್ಪಿಗಾಗಿ ಸೋಹನ್‌ಲಾಲ್ ಕೇವಲ ದೈಹಿಕ ಹಲ್ಲೆಯ ಶಿಕ್ಷೆಗೆ ಮಾತ್ರ ಗುರಿಯಾದ! ಸೋಹನ್‌ಲಾಲ್ ಈಗ ನೆಮ್ಮದಿಯ ಬದುಕನ್ನು ಜೀವಿಸುತ್ತಿರಬಹುದು. ಅರುಣಾ ಮಾತ್ರ ಇಂದೂ ಪ್ರತಿನಿಮಿಷ ಸತ್ತು ಬದುಕುತ್ತಿದ್ದಾಳೆ! ಇಂತಹ ಕಾನೂನಿನಡಿಯಲ್ಲಿ ನಾವೆಷ್ಟು ಭದ್ರ?!!
ಒಂದು ವಿಶ್ವಾಸಾರ್ಹ ಮೂಲದ ಪ್ರಕಾರ ಅತ್ಯಾಚಾರ ಅಪರಾಧದಲ್ಲಿ ಭಾರತಕ್ಕೆ ಮೂರನೆಯ ಸ್ಥಾನ ಲಭಿಸಿದೆ! 2008 ರಲ್ಲಿ ನಡೆದ ಒಂದು ಸರ್ವೆಯ ಪ್ರಕಾರ, ಆ ಒಂದು ವರ್ಷದಲ್ಲಿ ಒಟ್ಟೂ 44,159 ವಿವಿಧ ರೀತಿಯ ಅತ್ಯಚಾರ ಪ್ರಕರಣಗಳು ದಾಖಲುಗೊಂಡಿವೆ. ಇನ್ನೊಂದು ಸರ್ವೆಯ ಪ್ರಕಾರ ನಮ್ಮಲ್ಲಿ 69 ಅತ್ಯಾಚಾರ ಪ್ರಕರಣಗಳಲ್ಲಿ ಕೇವಲ ಒಂದು ಪ್ರಕರಣ ಮಾತ್ರ ಬೆಳಕಿಗೆ ಬರುವುದು. ಹಾಗೆ ಬೆಳಕಿಗೆ ಬಂದ ಪ್ರಕರಣಗಳಲ್ಲೂ ಕೇವಲ 20% ಅತ್ಯಾಚಾರಿಗಳಿಗೆ ಮಾತ್ರ ತಕ್ಕ ಶಿಕ್ಷೆ ಆಗುವುದು. ಅಂದರೆ ನಮ್ಮ ಕಾನೂನು ಎಷ್ಟು ನಿಕ್ಷಪಕ್ಷವಾಗಿ ಕಾರ್ಯ ನಿರ್ವಹಿಸುತ್ತಿದೆ ಎನ್ನುವುದನ್ನು ನಾವು ಇದರಿಂದಲೇ ತಿಳಿದುಕೊಳ್ಳಬಹುದು! ಇನ್ನೊಂದು ಅಂಕಿ ಅಂಶದ ಪ್ರಕಾರ ಭಾರತದಲ್ಲಿ 50 ಮಹಿಳೆಯರಲ್ಲಿ ಐದು ಮಹಿಳೆಯರು ಈ ನೀಚ ಕೃತ್ಯಕ್ಕೆ ಬಲಿಯಾಗುತ್ತಿದ್ದಾರೆ! ಬೆಂಗಳೂರು ನಗರ ಪೋಲೀಸರ ಪ್ರಕಾರ, ೨೦೦೯ರ ಜವನರಿಯಿಂದ ನವೆಂಬರ್ ತನಕ ಅತ್ಯಾಚಾರ, ವರದಕ್ಷಿಣೆ ಕಿರುಕುಳ, ಭ್ರೂಣ ಹತ್ಯೆ ಸೇರಿದಂತೆ ಒಟ್ಟು 1395 ಪ್ರಕರಣಗಳು ಮಹಿಳೆಯರ ವಿರುದ್ಧ ನಡೆದಿವೆ. ಅದರಲ್ಲೂ ೫೭ ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದು, ೪೭ ಮಂದಿ ವರದಕ್ಷಿಣೆ ಕಿರುಕೊಳದಿಂದ ಸಾವಿಗೆ ಶರಣಾಗಿದ್ದಾರೆ.
ಇದು ನಮ್ಮ ದೇಶದ ಕಾನೂನಿನ ದೌರ್ಭಾಗ್ಯ. ಇಲ್ಲಿ ಪಾತಕಿಗಳು ಬಹು ಸುಲಭವಾಗಿ ಪರಾಗಬಹುದು. ಈ ಒಂದು ಕುಕೃತ್ಯಕ್ಕೆ ಮಹಿಳೆಯರು ಮಾತ್ರವಲ್ಲದೇ 6 ತಿಂಗಳ ಹಸುಳೆಯಿಂದ ಹಿಡಿದು, 70 ವರ್ಷದ ವೃದ್ಧೆಯವರೆಗೂ ಬಲಿಯಾಗುತ್ತಿರುವುದು ಮನುಷ್ಯನೊಳಗೆ ಹೆಚ್ಚುತ್ತಿರುವ ಪಾಶವೀ ಮನಃಸ್ಥಿತೆ ಹಿಡಿವ ಕನ್ನಡಿಯಾಗಿದೆ. ಇಂತಹ ಒಂದು ಮಹಾಪರಾಧವನ್ನು ನಮ್ಮ ಸಮಾಜ ಹಾಗೂ ಕಾನೂನು ಎರಡೂ ತುಂಬಾ ಹಗುರವಾಗಿ ತೆಗೆದುಕೊಂಡಿರುವುದೇ ಈ ಅಪರಾಧದ ಹೆಚ್ಚಳಕ್ಕೆ ಮೂಲ ಕಾರಣವಾಗಿದೆ ಎಂದರೆ ಖಂಡಿತ ತಪ್ಪಾಗದು. ಸಮಾಜದೊಳಗೆ ಯಾವುದೇ ರೀತಿಯ ಅಪರಾಧ ಕಡಿಮೆಯಗಲು ಅದಕ್ಕಿರುವ ಸಜೆ ಕಠಿಣವಾಗಿರಬೇಕು. ಕ್ಷಿಪ್ರವಾಗಿರಬೇಕು. ಆಗಲೇ ಅಪರಾಧಿ ಆ ಕೃತ್ಯವೆಸಗಲು ಹೆದರುತ್ತಾನೆ. ಆದರೆ ಇಲ್ಲಿ ಬಲಾತ್ಕಾರವೆಂದರೆ ನೀರುಕುಡಿದಷ್ಟೇ ಸುಲಭವೆಂದಾಗಿದೆ. ಹಾಗಾಗಿಯೇ ಭಾರತದಲ್ಲಿಂದು ಈ ಒಂದು ಅಮಾನವೀಯ ಕೃತ್ಯ ಎಲ್ಲೆಂದರಲ್ಲಿ, ಹಗಲಿರಲಿ, ರಾತ್ರಿಯಿರಲಿ, ಮನೆಯೊಳಗಿರಲಿ, ಹೊರಗಿರಲಿ ಎಗ್ಗಿಲ್ಲದೇ, ನಿರ್ಭಯದಿಂದ ನಡೆಯುತ್ತಿದೆ. ನರರೂಪಿ ರಾಕ್ಷಸರು ಆರಮಾಗಿ ಅಲೆದಾಡುತ್ತಲೇ ಇದ್ದಾರೆ.
ಆದರೆ ಯು.ಎಸ್.ಎ. ಹಾಗೂ ಇನ್ನಿತರ ಪಾಶ್ಚಾತ್ಯ ದೇಶಗಳಲ್ಲಿ ಕಾನೂನು ಇಷ್ಟೊಂದು ಸಡಿಲವಾಗಿಲ್ಲ. ನಮ್ಮ ಸಮಾಜದಂತೆ, ಅಲ್ಲಿಯ ಸಮಾಜ ಈ ಕೃತ್ಯಕ್ಕೆ ಒಳಗಾದವರನ್ನು ಒಂದು "ಎಲಿಯನ್" ಹಾಗೆ ನೋಡದೇ ತುಂಬಾ ಆತ್ಮೀಯವಾಗಿ ಕಾಣುತ್ತದೆ. ಮಾನಸಿಕ ಬೆಂಬಲ ತುಂಬಾ ಉತ್ತಮವಾಗಿ ದೊರಕುತ್ತದೆ. ಒಂದೊಮ್ಮೆ ಸರಿಯಾದ ನ್ಯಾಯ ಸಿಗದಿದ್ದರೂ ಸಾಂತ್ವನವಾದರೂ ದೊರಕುತ್ತದೆ. ಹಾಗಾಗಿಯೇ ತನಗುಂಟಾದ ಆಘಾತದಿಂದ ವ್ಯಕ್ತಿ ಆದಷ್ಟು ಬೇಗ ಹೊರಬರಲು ಸಹಕಾರಿಯಾಗುತ್ತದೆ. ಅಲ್ಲಿಯ ಕಾನೂನು ತೀರ್ಪುಕೊಡುವ ಅಧಿಕಾರವನ್ನು ಸಾರ್ವಜನಿಕಗೊಳಿಸಿದೆ. ಎರಡೂ ಕಡೆಯ ವಕೀಲರು ಒಟ್ಟು ಸೇರಿ ತಮಗೆ ಪರಿಚಯವಿಲ್ಲದ ಕೆಲವು ಸಾರ್ವಜನಿಕ ಉತ್ತಮ ಜನರನ್ನು ಜ್ಯೂರಿಗಳನ್ನಾಗಿ ನೇಮಿಸುತ್ತಾರೆ. ಈ ಜ್ಯೂರಿಗಳು ಯಾರೂ ಆಗಬಹುದು. ಸಾಮಾನ್ಯ ಗೃಹಿಣಿಯಿಂದ ಹಿಡಿದು ದೊಡ್ಡ ವ್ಯಕ್ತಿಯೂ ಆಗಿರಬಹುದು. ಹಾಗೆ ಆಯ್ದ ವ್ಯಕ್ತಿಗಳು ಪ್ರತಿ ಟ್ರಯಲ್‌ಗಳಿಗೂ ಹಾಜರಿರಬೇಕಾಗುತ್ತದೆ. ತದನಂತರ ಅವರೇ ಒಮ್ಮತದ ಒಂದು ತೀರ್ಪನ್ನು ನೀಡುತ್ತಾರೆ. ಈ ರೀತಿಯ ವ್ಯವಸ್ಥೆ ಇಲ್ಲಿಯೂ ಬಂದರೆ ತುಂಬಾ ಉತ್ತಮವಿತ್ತು. ಅಲ್ಲಿ ಬಲಾತ್ಕಾರಿಗೆ ಕನಿಷ್ಠ ಎಂದರೂ ಸುಮಾರು ೩೦-೪೦ ವರ್ಷಗಳ ಸಜೆಯಿದೆಯಂತೆ. ಹಲ್ಲೆಗೊಳಗಾಗಿ ವ್ಯಕ್ತಿ ಮೃತಪಟ್ಟರೆ ಜೀವಾವಧಿ ಶಿಕ್ಷೆಯಂತೆ. ಅಲ್ಲಿ ಜೀವಾವಧಿ ಎಂದರೆ ಸಾಯುವ ತನಕವೂ ಆತ ಜೈಲಿನಲ್ಲೇ ಕೊಳೆಯಬೇಕು.
ಆದರೆ ಭಾರತದಲ್ಲಿ ಜೀವಾವಧಿ ಶಿಕ್ಷೆ ಎಂದರೆ ಕೇವಲ ೧೪ ವರ್ಷಗಳು ಮಾತ್ರ. ಆತನದು ಎಷ್ಟೇ ದೊಡ್ಡ ಅಪರಾಧವಾಗಿದ್ದರೂ ೧೪ ವರುಷಗಳ ಸಜೆಯ ನಂತರ ಅವನು ಬಿಡುಗಡೆಗೊಳ್ಳುತ್ತಾನೆ! ಇದನ್ನು ನೋಡಿದರೆ ಅರುಣಾಳ ಅಪರಾಧಿಗೆ ಒಂದೊಮ್ಮೆ ಜೀವಾವಧಿ ಶಿಕ್ಷೆ ಆಗಿದ್ದರೂ ಆತ ಮುಕ್ತನಾಗಿ ಈಗ ೨೪ ವರ್ಷಗಳಾಗಿರುತ್ತಿತ್ತು. ಆದರೆ ಅವಳು ೩೬ ವರ್ಷಗಳಿಂದಲೂ ಶಿಕ್ಷೆಯನ್ನನುಭವಿಸುತ್ತಲೇ ಇದ್ದಾಳೆ. ಕೆಲವು ರಾಜಕಾರಣಿಗಳು, ವಕೀಲರು ಅತ್ಯಾಚಾರದಂತಹ ಮಹಾಪರಾಧಕ್ಕೆ ಗಲ್ಲು ಶಿಕ್ಷೆಯನ್ನು ಜಾರಿಗೆ ತರಬೇಕೆಂದು ಒತ್ತಾಯಿಸುತ್ತಲೇ ಇದ್ದಾರೆ. ಆದರೆ ಇದಕ್ಕೆ ಹಲವಾರು ಬುದ್ಧಿಜೀವಿಗಳು, ಹ್ಯೂಮನ್‌ರೈಟ್ಸ್ ಅವರು ತಡೆ ಹಾಕುತ್ತಿದ್ದಾರೆ. ಮನುಷ್ಯನನ್ನು ಮಾನಸಿಕವಾಗಿ ನಿಷ್ಕ್ರಿಯಗೊಳಿಸಿ ಆಜೀವ ಸಜೆಯಲ್ಲಿ ನೂಕುವ ಬಲಾತ್ಕಾರಕ್ಕೆ ಹಾಗೂ ಅದನ್ನೆಸಗುವ ಆ ಪಾಪಿಗೆ ಯಾಕಿಷ್ಟು ಬೆಂಬಲ ಹಾಗೂ ಕರುಣೆ? ಮಾನವತೆ ಪದದ ಅರ್ಥವೇ ಇವರಿಗೆ ಗೊತ್ತಿಲ್ಲವೇ? ಇಂತಹ ಪ್ರಕರಣಗಳಿಗೆ ಸಾಕ್ಷಿಯನ್ನು ಒದಗಿಸಲು ಅಸಮರ್ಥವಾದರೆ ಆ ಕೃತ್ಯವೇ ನಡೆದಿಲ್ಲವೆಂದು ಕೋರ್ಟ್ ಕಣ್ಮುಚ್ಚಿ ಕೂರಬಹುದು. ಆದರೆ ಅದನ್ನು ಅನುಭವಿಸಿ ಬದುಕುತ್ತಿರುವವರ ಪಾಡು ಏನಾಗಬೇಡ?

ಕೊಲೆಯಾದರೆ ಜೀವ ಒಂದೇಸಲ ಹೋಗಿ ಮುಕ್ತನಾಗುತ್ತಾನೆ ಮನುಷ್ಯ. ಆದರೆ ಬಲಾತ್ಕಾರಕ್ಕೊಳಗಾದ ವ್ಯಕ್ತಿಯ ಬದುಕು ಮಾತ್ರ ಆ ನೋವು, ಅವಮಾನ, ಹಿಂಸೆ, ಆಘಾತದಿಂದ ಎಂದೂ ಮುಕ್ತವಾಗದು. ಅತ್ತ ಸಾಯಲೂ ಆಗದೇ ಇತ್ತ ಬದುಕಲೇ ಆಗದೆ ನರಳುತ್ತಿರುತ್ತಾಳೆ ಆಕೆ. ಅಂತಹವಳ ಮುಂದೆ ಅವಳ ಅಪರಾಧಿಯನ್ನು ನಿರಪರಾಧಿಯೆಂದು ಘೋಷಿಸಿ ಹೊರಬಿಡುತ್ತದೆ ಕಾನೂನು. ಆದ ತಪ್ಪನ್ನು ಮರೆತು ಬಿಡು, "ಎಲ್ಲಾ ಮಾಮೂಲು, ಮುಂದೆ ನಡಿ" ಎಂದು ಬಿಟ್ಟಿ ಸಲಹೆಯನ್ನೋ, "ಎಲ್ಲೋ ನಿಂದೇ ತಪ್ಪು, ಒಂಟಿಯಾಗಿ ಹೆಣ್ಣು ತಿರುಗಬಾರದೆಂದು ಗೊತ್ತಿಲ್ಲವೇ?" ಎಂಬ ಮಾತಿನ ಬರೆಯನ್ನೋ, "ಹೀಗೆ ಬದುಕುವುದಕ್ಕಿಂತ ಸಾವು ಮೇಲು" ಎಂಬ ತನ್ನದೇ ಘನ ತೀರ್ಮಾನವನ್ನು ನೀಡುವ ಸಮಾಜ, ಎಂದೂ ಮರೆಯಲಾಗದ ಕಹಿ ನೆನಪನ್ನು ಆಕೆಯೊಂದಿಗೆ ಬಿಟ್ಟು, ಆ ಕೃತ್ಯವನ್ನೆಸಗಿದ ವ್ಯಕ್ತಿಯನ್ನೂ ಮರೆತುಬಿಡುತ್ತದೆ.
ಅರುಣಾಳಂತಹ ಅಸಂಖ್ಯಾತ ಅಭಾಗಿನಿಯರು ನ್ಯಾಯಕ್ಕಾಗಿ ನಮ್ಮ ಬೆಂಬಲಕ್ಕಾಗಿ ಕಾಯುತ್ತಲೇ ಇದ್ದಾರೆ. ನಮ್ಮಿಂದ ಈ ತುಕ್ಕು ಹಿಡಿದ ಕಾನೂನನ್ನು ಬಹು ಬೇಗ ಬದಲಿಸಲಾಗದು. ಆದರೆ ಪ್ರಯತ್ನವಿಲ್ಲದೇ ಫಲವಿಲ್ಲ. ಅದೇ ರೀತಿ ಈ ರೀತಿಯ ಘಟನೆ ನಡೆದಾಗ ಹೇಗಾಯಿತು? ಏನಾಯಿತು? ಎಂದೆಲ್ಲಾ ಹಿಂಸಿಸದೇ ಮುಂದೇನಾಗಬೇಕು? ಯಾವ ರೀತಿ ಸಮಾಧಾನ, ಮಾನಸಿಕ ಶಾಂತಿ ಆಕೆಗೆ ನೀಡಬಹುದು ಎಂಬ ನಿಟ್ಟಿನಲ್ಲಿ ನಾವು ಯೋಚಿಸುವಂತಾದರೆ ಅಷ್ಟೇ ಸಾಕು.
ಅರ್ಧರಾತ್ರಿಯಲ್ಲಿ ಮಹಿಳೆ ನಿರ್ಭಯಳಾಗಿ ಓಡಾಡುವ ಸ್ವಾತಂತ್ರ ಕನಸೇ ಸರಿ. ನಡು ಮಧ್ಯಾಹ್ನವಾದರೂ ಆಕೆ ಒಬ್ಬಂಟಿಯಾಗಿ ಯಾರ ಭಯವಿಲ್ಲದೇ ಎಲ್ಲಿ ಬೇಕಾದರೂ ಓಡಾಡುವಂತೆ ಆದರೆ ಅಷ್ಟೇ ಸಾಕು!!
.............
@ ಹೊಸ ದಿಗಂತ ಪತ್ರಿಕೆಯ ಧರಿತ್ರಿ ಪುರವಣಿಯಲ್ಲಿ ಪ್ರಕಟಿತ ಲೇಖನ.
ಚಿತ್ರ ಕೃಪೆ : ಗೂಗಲ್
- ತೇಜಸ್ವಿನಿ.

******************

ಹೊಸ ವರುಷ ಹಳೆಯ ವರುಷದಲ್ಲಿ ನೋವುಂಡ ಮನಸುಗಳಿಗೆಲ್ಲಾ ನವ ಚೈತನ್ಯವನ್ನೂ ಹೊಸ ಹುರುಪನ್ನೂ ತುಂಬಿ ಹೊಸ ಹರುಷ ತರುವಂತಾಗಲೆಂದು ಹಾರೈಸುವೆ.

೨೦೧೦ ಎಲ್ಲರಿಗೂ ಶುಭದಾಯಕವಾಗಲೆಂದು ಶುಭಕೋರುವೆ.

- ತೇಜಸ್ವಿನಿ ಮಾನಸ ಹೆಗಡೆ

ಗುರುವಾರ, ಡಿಸೆಂಬರ್ 3, 2009

ಕೊಳೆಯದಿರಲಿ..ನನ್ನೆದೆಯ ಫಸಲು...

ಗಾಢ ನೀಲ ಬಣ್ಣವನು ತುಂಬಿ
ಕರಿಮೋಡದ ಭಾರ ಹೊತ್ತ,
ಅಯೋಮಯ ಭಾವವೊಂದು
ಆವರಿಸುತಿದೆ ನನ್ನೊಳಗೆ

ಎಲ್ಲಿಂದ ಬಂತೋ ನಾ ಕಾಣೆ
ಇಲ್ಲೇ ಮನೆ ಮಾಡಿಕೊಂಡು
ಈಗಲೋ ಆಗಲೋ,
ಸುರಿಯುವಂತಿದೆ...
ನನ್ನೆದೆಯ ಫಸಲನ್ನೇ
ಕೊಳೆಸುವಂತಿದೆ...

ಬಯಸಿದ್ದೆ ತಿಳಿ ನೀಲಿ ಬಣ್ಣವ
ಹೋಗಲಿ ಬೇಡ, ಸಿಗಬಾರದೇ
ಬಿಳಿ ಬಣ್ಣವಾದರೂ?

ಬಿಳಿಯೊಳಗೆ ಬೇಕಾದ ರಂಗು ತುಂಬಿ,
ಸಪ್ತವರ್ಣವನ್ನೇ ಕಾಣಿಸುತ್ತಿದ್ದೆ
ಫಸಲಿಂದ ಹೊಸ ಬೀಜವ ಹೆಕ್ಕಿ
ಹೊಸ ಪೈರ ಬೆಳೆಯುತ್ತಿದ್ದೆ.

ಬೇಡವೆಂದರೂ ಬಂದಿದೆ
ಗಾಢ ನೀಲಿಯ ವೇಷ ಧರಿಸಿ,
ಮಳೆಮೋಡದ ಮುಸುಕು ಹಾಕಿ

ಬರಲಿ ಬಿಡಿ, ಈಗಿಲ್ಲ ಚಿಂತೆ...
ಹಾಕಿರುವೆ ಬಿಳಿಯ ಟರ್ಪಾಲು
ನನ್ನೆದೆಯ ಫಸಲ ಮೇಲೆ
ಬಿದ್ದರೆ ಹೇಳಿ ಈಗ
ಹನಿ ನೀರು!!

ಶುಕ್ರವಾರ, ನವೆಂಬರ್ 27, 2009

ಅಳುವ ಕಡಲೊಳು ತೇಲಿ ಬರುತಲಿದೆ ನಗೆಯ ಹಾಯಿ ದೋಣಿ...

ಬಾನಿನೊಳು ಚಂದ್ರ ಇನ್ನೇನು ಹುಟ್ಟೋ ಹೊತ್ತು....ಹುಟ್ಟಿನೊಂದಿಗೆ ಸಾವು ಇರಲೇ ಬೇಕು ತಾನೇ? ಹಾಗಾಗಿಯೇ ರವಿ, ದೀಪವು ಆರುವ ಮುನ್ನ ಪ್ರಖರವಾಗಿ ಬೆಳಗುವಂತೆ, ಕೆಂಬಣ್ಣವ ಮೆತ್ತಿಕೊಂಡು ಕಡಲೊಳು ಅಸ್ತವಾಗಲು ಹೊರಟಿದ್ದಾನೆ. ಹೋಗುವ ಮುನ್ನ ಕೇಸರಿಯಂಚಿನ ಹಳದಿ ಬಣ್ಣದ ಸೀರೆಯ ತುಣುಕೊಂದನ್ನು ಬಾನಿಗೆ ಅರೆ ಬರೆಯಾಗಿ ತೊಡಿಸಿ, ತಿಳಿ ನೀಲಿ ಮೈಯ ಅಂದವನ್ನು ಹೆಚ್ಚಿಸಿದ್ದಾನೆ. ಆದರೆ...ನಿನ್ನ ಬರುವಿನ ಸುಳಿವೆಲ್ಲೂ ಕಾಣದಂತಿದೆ ನನಗೆ! ನನ್ನೆದೆಯೊಳಗಿನ ತುಮುಲಗಳ ಪರಿವಿಲ್ಲದೇ ಹಾಯಾಗಿದ್ದಾಳೆ ಪ್ರಕೃತಿ. ನನ್ನೊಳಗೆ ಬೆರೆತಿಹ ನಿನ್ನರಿವನ್ನೇ ಮರೆಸುವಂತೆ ಹಾಯಾಗಿ ಬೀಸುತಿದೆ ತಂಗಾಳಿ. ನನ್ನಣಕಿಸಿ ಕಿಲಕಿಲನೆ ನಗುತಿದೆ ಸಾಗರಿ. ಮುಸ್ಸಂಜೆ ಸುಡುತಿದೆ ಈ ಮನವ, ಮೋಹಕ ನಗುವ ಬೀರಿ....."ಬರುವೆಯೋ ಬಾರೆಯೋ ನೀನೆನ್ನುತಿದೆ ಸಂದೇಹ‌ ".
ಕಣ್ಣನೆ ದಣಿಸುವ ಈ ಪಡುವಣ ಬಾನ್ಬಣ್ಣಗಳು
ಮಣ್ಣನೆ ಹೊನ್ನಿನ ಹಣ್ಣಾಗಿಸುವೀ ಕಿರಣಗಳು
ಹಚ್ಚನೆ ಹಸುರಿಗೆ ಹಸೆಯಿಡುತಿರುವೀ ಖಗಗಾನ‌
ಚಿನ್ನ ನೀನಿಲ್ಲದೆ ಬಿಮ್ಮೆನ್ನುತಿದೆ ರಮ್ಯೋದ್ಯಾನ....
ಮತ್ತದೇ ಬೇಸರ, ಅದೆ ಸಂಜೆ ಅದೆ ಏಕಾಂತ‌
ನಿನ್ನ ಜೊತೆ ಇಲ್ಲದೆ, ಮಾತಿಲ್ಲದೆ ಮನ ವಿಭ್ರಾಂತ..

ಕಣ್ಣೆತ್ತಿ ನೋಡಿದರೆ, ‘ಹುಣ್ಣಿಮೆ ಆಗಸದ ಬಣ್ಣದ ಚುಕ್ಕಿಯು.. ಮೆಲ್ಲನೆ ತಾನಾಗೆ ಹೆಚ್ಚಿದೆ.’ ಕಾಲ ಕೆಳಗೋ, ಹೆಜ್ಜೆ ಮೂಡಿಸುವ ಮರಳ ಕಣಗಳು...ದಡವ ಬಡಿದು ಹಿಂತಿರುಗುತ ಲಾಸ್ಯವಾಡುತಿರುವ ತೆರೆಗಳಾಟ, ನೆನಪು-ಕನಸುಗಳ ಜೊತೆ ಉಯ್ಯಾಲೆಯಾಡುತಿರುವ ಈ ಮನಕೆ ಸಾಥ್ ನೀಡುವಂತಿವೆ....‘ನೀ ನುಡಿಯದಿರಲೇನು ಬಯಲಾಗಿಹುದು ಎಲ್ಲಾ....’ ಎಂಬಂತೆ ನನ್ನ ಮೈ ಸೋಕಿ ಮರೆಯಾಗುತಿವೆ. ದೂರದಲ್ಲೆಲ್ಲೋ ಪುಟ್ಟ ದೋಣಿಯೊಳಗಿಂದ ಇಣುಕುವ ಕಿರು ದೀಪ, ಒಂಟಿ ದ್ವೀಪದಂತೆ ಕುಳಿರುವ ನನ್ನ ಕಂಡು ಮಬ್ಬಾಗುತಿದೆ....ಅಲೆಯೊಡನೆ ಅಲೆಯಲೆಯಾಗಿ ಬರುತಿರುವ ನಾವಿಕನ ಹಾಡು ನಿನ್ನ ನೆನಪಿನ ಕಂಪನ್ನೂ ಅಲೆಯಾಗಿ ಬಡಿಯುತಿದೆ ನನ್ನ ಮನದಡಕೆ.

"ತುಂಬಾ ಹಿತವೆನಿಸುತಿದೆ ಈ ಕಡಲ ತಡಿ, ಈ ತಂಗಾಳಿ, ಈ ತಿಳಿ ಬಾನು, ಮೋಡದೊಂದಿಗೆ ಸರವಾಡುತ ನಮ್ಮ ನೋಡಿ ನಗುವ ಶಶಿ..ಇವೆಲ್ಲವುದರ ಜೊತೆಗೆ ನಿನ್ನ ಜೊತೆಯೊಂದೇ ಭಿನ್ನವಾದ ಅನುಭೂತಿ ನೀಡುತಿದೆ...." ಎಂದು ಅಂದು ನೀ ಹೇಳಿದ್ದ ಸಾಲುಗಳು ಈ ಮನವ ಕೊರೆಕೊರೆದು ಘಾಸಿ ಮಾಡುತಿವೆ. ಕಣ್ಣೀರ ಹನಿಗಳೆಲ್ಲಾ ಮರಳನ್ನು ಸೇರಿ ಹುದುಗಿ ಇಂಗಿಹೋಗುತಿವೆ....ಉಪ್ಪುನೀರ ಜೊತೆ ಉಪ್ಪು ನೀರು ಸೇರಿ ಕಣ್ಣೀರೇ ಕಡಲಾಗುತಿದೆ. ಒಣಗಿದೆನ್ನೆದೆಗೆ ಮಳೆಯ ಸುರಿದು, ಇನ್ನೇನು ಹಸಿರು ಉಸಿರಾಡಬೇಕೆಂದಿರುವಾಗಲೇ ಮಾಯವಾಗಿರುವ ನಿನ್ನ ‘ಯಾವ ಮೋಹನ ಮುರಳಿ ಕರೆಯಿತೋ ದೂರ ತೀರಕೆ ನಿನ್ನನು..."

ಎಂದು ಕಳೆದು ಹೋದೆಯೋ ನಾ ಕಾಣೆ... ಇಂದೂ ಹುಡುಕುತಿರುವೆ ನಾ ನಿನ್ನ, ಆಗಸದ ತುಂಬೆಲ್ಲಾ ಬಿಳಿ ವಜ್ರಗಳಂತೆ ಮಿನುಗುವ ತಾರೆಗಳಲ್ಲಿ...ರಾತ್ರಿ ರಾಣಿಯ ಪರಿಮಳದಲ್ಲಿ...ನಾವಿಕನ ಹಾಡಿನಲ್ಲಿ....ಬೆರಳುಗಳ ಸಂದಿಯಿಂದ ಸದ್ದಿಲ್ಲದೇ ಸೋರಿಹೋಗುತಿರುವ ಮರಳ ಕಣ ಕಣದಲ್ಲಿ, ನಿನಗಾಗಿ ಉದುರುತಿರುವ ಕಣ್ಣೀರ ಹನಿಗಳಲ್ಲಿ... ಹುಡುಕಿ ಹುಡುಕಿ ಸೋತು ಕುಸಿದ ನನ್ನ ಕಂಡು ಹುಣ್ಣಿಮೆಯೂ ಕೂಡ ಶೋಕಗೊಂಡು, ಮೋಡದ ತೆರೆಯೊಂದರಿಂದ ತನ್ನ ಕಣ್ಣೀರ ಒರೆಸಿಕೊಳುತಿದೆ.
ಆದರೂ ಅದೇಕೋ ಏನೋ...

ಈ ಕಪ್ಪು-ಬಿಳಿ ತೆರೆಗಳ ಏರಿಳಿತಗಳಂತೇ ಆಶಾಜ್ಯೋತಿಯೊಂದು ಆಗೀಗ ಬೆಳಗುತಿದೆ ಮಾನಸವ. ನಿನ್ನಾಗಮನದ ಕಿರು ಸುಳಿವಿಗಾಗಿ ಜಾತಕ ಪಕ್ಷಿಯಂತೆ ನಾ ಮರುಳಾಗಿರುವೆ. ಮರಳೊಳು ನಿನ್ನ ಹೆಸರನೇ ಬರೆದು, ಅದಕೊಂದು ವೃತ್ತವ ಎಳೆದು ತೆರೆಗಳ ತಡೆಹಿಡಿದು ನಿಲ್ಲಿಸಿರುವೆ ಅಳಿಸದಂತೇ....ಅಳಿಸಿದರೂ ನನಗೇನು? ಈ ಮನದ ತಾವಿನಲಿ ಬೆಚ್ಚಗೆ ಕುಳಿತಿದೆಯಲ್ಲಾ ನಿನ್ನದೇ ನೆನಪು.. ಪ್ರೀತಿಗೆ ಮರೆವಿನ ಹಂಗಿಲ್ಲ ತಾನೇ? ಯಾವ ಮರೆವಿನ ತೆರೆಯೂ ಅಳಿಸದು ಆ ನಿನ್ನ ಪ್ರೀತಿಯ ನೆನಪ. ‘ನಿನ್ನೊಲುಮೆಯಿಂದಲೇ ಈ ಬಾಳು ಬೆಳಕಾಗಿರಲು’, ನಿನ್ನಾಗಮನದ ನಿರೀಕ್ಷೆಯ ನೆಪವೊಂದೇ ಸಾಕು, ಹಾಗೇ ಸುಮ್ಮನಿದ್ದು ಬಿಡುವೆ ಇಲ್ಲೇ ಹೀಗೆ... ಜೊತೆಗಿರಲು ಈ ತಂಗಾಳಿ, ಕಡಲ ಸಂಗೀತ, ಮರಳ ಹಾಸಿಗೆ, ತಿಳಿಬಾನಿಂದಿಣುಕುವ ಚಂದಿರ. ನವಿರಾದ ನಿನ್ನೊಲವಿನ ಸವಿ ನೆನಪೇ ಸಾಕೆನಗೆ ಕಿರು ನಗುವೊಂದ ಬೀರುತ್ತಾ ನಗುವಿನಲೆಗಳ ಹಂಚಲು.... ಆದರೂ ಸಣ್ಣ ಅಳುಕೊಂದು ಎದೆಯ ಮೂಲೆಯಿಂದೆದ್ದು ಬರುವುದು ಛಳ್ಳೆನ್ನುವ ನೋವಿನಂತೆ... ನರಳುವ ಮನದೊಂದಿಗೆ, ನಗುಮೊಗವ ಹೊತ್ತು, ಮೌನವಾಗಿ ಪ್ರಾರ್ಥಿಸುತಿರುವೆ ಅನುದಿನ ನಾ ಆ ದೇವನ-

ದೀಪವು ನಿನ್ನದೇ ಗಾಳಿಯೂ ನಿನ್ನದೇ
ಆರದಿರಲಿ ಬೆಳಕು
ಕಡಲೂ ನಿನ್ನದೇ ಹಡಗೂ ನಿನ್ನದೇ
ಮುಳುಗದಿರಲಿ ಬದುಕು....

ನಿನ್ನೊಲವಿನ,


*****



(ಹಿಂಸೆ ಎಂದೂ ಸುಖ ನೆಮ್ಮದಿಯ ತರದು. ಕೆಲವು ಪಾತಕಿಗಳ ಕ್ರೌರ್ಯದಿಂದಾಗಿ ಅದೆಷ್ಟೋ ಅಮಾಯಕರು ಬಲಿಯಾಗಿದ್ದಾರೆ..ಆಗುತ್ತಲೂ ಇದ್ದಾರೆ. ಆದರೆ ಹಾಗೆ ಚಿರ ನಿದ್ರೆಯಲ್ಲಿ ಹೋದವರು, ದೂರ ದಿಗಂತದಲ್ಲೆಲ್ಲೋ ಕಳೆದು ಚುಕ್ಕಿಯಾದವರು, ತಮ್ಮ ಹಿಂದೆ ನೂರಾರು ಸ್ನೇಹಿತರನ್ನು, ಆತ್ಮೀಯರನ್ನು, ಪ್ರೀತಿಪಾತ್ರರನ್ನು ಶೋಕಸಾಗರದಲ್ಲೇ ಮುಳುಗಿಸಿ ಬಿಡುತ್ತಾರೆ. ಅಕಾಲದಲ್ಲಿ ಅಗಲಿತ ಬಾಳಸಂಗಾತಿಯ ನೆನಪಲೇ ಕೊರಗುವ, ಕಾರಣವಿಲ್ಲದೇ ದೂರ ಮರೆಯಾಗಿ..ಬದುಕಿರುವನೋ ಇಲ್ಲವೋ ಎಂಬ ಸಂದೇಹದಲ್ಲೇ ತಪಿಸುವ ವಿರಹಿಣಿಯರ ಮಾನಸಿಕ ತುಮುಲಗಳನ್ನು ಕಲ್ಪಿಸಲೂ ಅಸಾಧ್ಯ. ಎದೆಯೊಳಗೆ ನೋವುಗಳ ಮೂಟೆಯನ್ನೇ ಹೊತ್ತು, ಮೊಗದಲ್ಲಿ ಮಾತ್ರ ನಗುವ ಲೇಪನ ಹಚ್ಚಿ ಬದುಕ ಜೀವಿಸುತಿರುವ ಅಂತಹ ಸಾವಿರಾರು ತಪಸ್ವಿನಿಯರಿಗಾಗಿ ನನ್ನೀ ಬರಹವನ್ನು ಅರ್ಪಿಸುತ್ತಿದ್ದೇನೆ. )
- ತೇಜಸ್ವಿನಿ

ಭಾನುವಾರ, ನವೆಂಬರ್ 8, 2009

ಎಲ್ಲ ಮರೆತಿರುವಾಗ....

ಹೊರಗೆ ಮುಸಲಧಾರೆಯ ಆರ್ಭಟಕ್ಕೆ ಸುಯ್ಯೆಂದು ಬೀಸುವ ಗಾಳಿ ಸಾಥ್ ನೀಡುತ್ತಿದ್ದರೆ, ಒಳಗೆ ಬೆಚ್ಚಗೆ ಸ್ವೆಟರ್ ಹಾಕಿಕೊಂಡು ಒಂದು ಕೈಯಲ್ಲಿ ಬಿಸಿ ಕಾಫಿಯನ್ನೂ ಇನ್ನೊಂದು ಕೈಯಲ್ಲಿ ಕಾರಂತರ "ಮೂಕಜ್ಜಿಯ ಕನಸುಗಳನ್ನೂ" ಹಿಡಿದುಕೊಂಡು ಕುಳಿತಿದ್ದಳು ಪಾವನಿ. ಹಾಗಂತ ಇದೇ ಮೊದಲೇನಲ್ಲ ಆಕೆ ಈ ಕಾದಂಬರಿಯನ್ನು ಓದುತ್ತಿರುವುದು. ಕಳೆದ ನಾಲ್ಕೈದು ವರ್ಷಗಳಲ್ಲಿ ಮೂರು ಸಲ ಓದಿ ಮುಗಿಸಿದ್ದಾಗಿದೆ. ಇದು ನಾಲ್ಕನೆಯ ಬಾರಿ ಅಷ್ಟೇ. ಅದೇನೋ ಎಂತೋ ಮೂಕಜ್ಜಿಯ ಕನವರಿಕೆಗಳು, ವಿಚಿತ್ರ ಕನಸುಗಳು ಹಾಗೂ ಆಕೆಯೊಳಗಿನ ವಿಶೇಷತೆಯಾದ ವಸ್ತು ಸ್ಪರ್ಶ ಮಾತ್ರದಿಂದ ಜನರನ್ನೇ ಅಳೆಯುವ ಪರಿ, ಎಲ್ಲವೂ ಪ್ರತಿ ಸಲ ಓದುವಾಗಲೂ ಅವಳಲ್ಲೊಂದು ವಿನೂತನ ಭಾವವನ್ನು ಭಿತ್ತುತ್ತಿದ್ದವು. ಇವೆಲ್ಲವುಗಳ ಜೊತೆಗೇ ಸದಾ ಆಕೆಯನ್ನು ಕಾಡುತ್ತಿದ್ದುದು ತನ್ನ ಮೂರೂರಜ್ಜಿಯ ನೆನಪುಗಳು. ಎಲ್ಲೋ ಒಂದು ಮೂಲೆಯಲ್ಲಿ ಪಾವನಿ ಮೂರೂರಜ್ಜಿಯನ್ನು ಮೂಕಜ್ಜಿಯೊಂದಿಗೆ ಹೋಲಿಸಿಕೊಂಡು ನೋಡುತ್ತಿದ್ದಳು. ಕ್ರಮೇಣ ಅವಳ ಮನಃಪಟಲದಲ್ಲಿ ಮೂಕಜ್ಜಿಯೇ ಮೂರೂರಜ್ಜಿಯಾಗಿ ಮಾರ್ಪಾಡಾಗುತ್ತಿದ್ದಳು. ಇದಕ್ಕೆ ಮೂಲ ಕಾರಣ ಇಬ್ಬರ ಹೆಸರೂ ಮೂಕಾಂಬಿಕೆಯಾಗಿದ್ದುದೂ ಹೌದು.

ಪಾವನಿಯ ಅಜ್ಜ ಅಂದರೆ ತಾಯಿಯ ತಂದೆಯ ಏಕಮಾತ್ರ ತಂಗಿಯೇ ಈ ಮೂರೂರಜ್ಜಿ. ಅಣ್ಣ ತಂಗಿಯರ ಅನುಬಂಧ, ವಾತ್ಸಲ್ಯವನ್ನು ಸ್ವತಃ ತನ್ನಜ್ಜಿ ಅಂದರೆ ತಾಯಿಯ ತಾಯಿಯ ಮೂಲಕವೇ ಅನೇಕ ಬಾರಿ ಕೇಳಿದ್ದಳು. "ಆಯಿ ನಿಜ ಹೇಳು ನೀನೂ ಮೂರೂರಜ್ಜಿ ಯಾವತ್ತೂ ಠೂ ಬಿಟ್ಟಿದ್ದಿಲ್ಯ? ಜಗ್ಳ ಆಡಿದ್ದಿಲ್ಯ? ಆವಾಗ ಅಜ್ಜ ಯಾರ ಪಕ್ಷ ವಹಿಸ್ತಿದ್ದ? ನಿಂದೋ ತನ್ನ ತಂಗಿದೋ?" ಎಂದು ಪಾವನಿ ಕೆಣಕಲು ಸರಸಮ್ಮ ತನ್ನ ಬೊಚ್ಚು ಬಾಯಿ ತೆಗೆದು ಗೊಳ್ಳೆಂದು ನಕ್ಕಿದ್ದರು. "ಎಂತ ಕೂಸೇ ನಂಗವೆಂತ ನಿಂಗ್ಳ ಈಗಿನ ಆ ಸುಡುಗಾಡು ಧಾರಾಹಿ ತರಹ ಹೇಳಿ ಮಾಡ್ಕಂಜ್ಯ? ಅದು ನನ್ನ ನಾದ್ನಿಗಿಂತ ಹೆಚ್ಚಾಗಿದ್ದು ತಿಳ್ಕ. ಅದೂ ಅಲ್ದೇ ಪಾಪ ಅದ್ರ ಜೀವ್ನವೇ ಒಂದು ಗೋಳಾಟ ಆಗಿರಕಿರೆ ನಾ ಎಂತಕ್ಕೆ ಸುಮ್ನೆ ಜಗ್ಳ ಆಡ್ಲಿ ಹೇಳು? ಆ ಬಡ್ವೆಯಾದ್ರೂ ಎಂತಕ್ಕೇ ಹೇಳಿ ನನ್ನ ಜೊತೆಗೆ ಮಾತಿಗೆ ನಿಲ್ಗು? ಹಾಂಗೆ ನೋಡಿದ್ರೆ ಮೂಕಾಂಬೆ ಹುಟ್ಟಿ, ಬದ್ಕಿದ್ದೇ ಒಂದು ಪವಾಡ.. ಆದ್ರೆ ಅದು ಜೀವನ್ದಲ್ಲಿ ಕಂಡ ದುಃಖ, ಸಂಕ್ಟ ಎಣ್ಸಿದ್ರೆ ಒಂದೊದ್ಸಲ ಅದು ಬದ್ಕಿದ್ದಾದ್ರೂ ಎಂತಕ್ಕನೋ ಕಂಡಿತ್ತು ನನ್ಗೆ ನೋಡು..." ಎಂದು ಹೇಳುತ್ತಾ ಆಕೆಯ ಕಣ್ಣಂಚಿನಲ್ಲಿಣುಕಿದ ವ್ಯಥೆಯ ಬಿಸಿ ಪಾವನಿಯನ್ನೂ ತಾಗಿದಂತಾಗಿತ್ತು.

"ಕೂಸೆ ಮೂಕಾಂಬೆ ಹುಟ್ಟಿದಾಗ ಮಾವ್ನೋರಿಗೆ ರಾಶಿ ಖುಶಿ ಆಗಿತ್ತಡ.. ಹೆರಿಗೆ ರಾಶಿ ಕಷ್ಟ ಆಗಿ ಅತ್ತೇರು ಬದ್ಕಿದ್ದೇ ದೊಡ್ಡದು.... ಹುಟ್ಟು ಒಂದು ದಿವ್ಸ ಕೂಸು ಕುಂಯ್ಯಿ..ಕುಂಯ್ಯಿ.. ಅಂದಿದ್ದು, ಮಾರನೇ ದಿವ್ಸ ಸದ್ದೇ ಇಲ್ಯಡ ನೋಡು. ಆಗೋತು... ಕಥೆ ಮೂಗ್ದೇ ಹೋತು... ಋಣ ಇಷ್ಟೇ ಇದ್ದಿತ್ತು ಇದ್ರಿದ್ದು.. ಹೇಳಿ ಅಂದ್ಕಂಡು ಮಾವ್ನೋರು ನಿನ್ನಜ್ಜ ಎಲ್ಲಾ ಸೇರಿ ಕಣ್ಣೀರ‍ಿಡ್ತಾ ಗುಂಡಿ ತೋಡಿ ಅದ್ನ ಹಾಕಿದ್ದೇ ತಡ ನೋಡು.. ಮತ್ತೆ ಸಣ್ಣಕೆ ಕುಂಯ್ಯಿ ಅಂತಡ. ಇವ್ಕೆ ಒಂದ್ಸಲ ಕೈಕಾಲೇ ಆಡಿದ್ದಿಲ್ಯಡ. ಒಂದು ಚೂರು ಆಚೀಚೆ ಆಗಿದ್ರೆ ಎಂತಾ ಅನಾಹುತ ಆಗ್ತಿತ್ತು ಹೇಳು? ಅದ್ರ ಪ್ರಾಣಾನ ಆ ಯಮರಾಜ ಹಿಂದೇನೆ ಕಳ್ಸುವುಟ ನೋಡು.. ಇಲ್ಲೇ ಅನುಭವಿಸ್ಲಿ ಹೇಳಾದಿಕ್ಕು.. ಹ್ಮಂ.. ಎಲ್ಲಾ ಬ್ರಹ್ಮರಾಯನ ಹಣೆಬರಹ.. ಪಾಪ.. ಸತ್ತೇಹೋತು ಹೇಳಿ ಅಂದ್ಕಂಡಿದ್ದು ಬದಿಕಂಡು ಇವತ್ತಿನವರೆಗೂ ಸಾಯ್ತಾನೇ ಇದ್ದು.." ಎಂದು ಸೆರಗಂಚಿನಿಂದ ಕಣ್ಣೊರೆಸಿಕೊಂಡಿದ್ದಳು ಸರಸಮ್ಮ.

ಆಯಿ ಹೇಳಿದ್ದ ಈ ಕಥೆಯನ್ನು ತನ್ನ ತಾಯಿಯ ಬಾಯಿಯಲ್ಲಿ ಅದೆಷ್ಟೋ ಬಾರಿ ಕೇಳಿ ವಿಸ್ಮಿತಳಾಗಿದ್ದಳು ಪಾವನಿ. ಇನ್ನೇನು ಮಣ್ಣಾಗ ಬೇಕಿದ್ದ ಕೂಸು ಉಸಿರಾಡಿ ಬಾಳಿ ಬದುಕಿದ್ದು ಒಂದು ಅಪೂರ್ವ ಸಂಗತಿ ಎನಿಸಿತ್ತು ಅವಳಿಗೆ. ಪಾವನಿಯ ತಾಯಿ ತನ್ನ ಬಾಲ್ಯವನ್ನೆಲ್ಲಾ ಕಳೆದದ್ದು ಸೋದರತ್ತೆಯ ಮನೆಯಾದ ಮೂರೂರಿನಲ್ಲೇ ಆಗಿತ್ತು. ಹಾಗಾಗಿ ಇನ್ನೂ ಆಕೆಗೆ ಅವಳ ಕಂಡರೆ ವಿಶೇಷ ಮಮತೆ. ಹೆತ್ತ ಮಕ್ಕಳು ಬರಲು ಹಿಂದೆ ಮುಂದೆ ನೋಡಿದರೂ ಅವಳು ಮಾತ್ರ ವರುಷಕ್ಕೆರಡು ಬಾರಿಯಾದರೂ ಪಾವನಿಯ ಕರೆದುಕೊಂಡು ಸೋದರತ್ತೆಯನ್ನು ಕಂಡು ಬರುತ್ತಿದ್ದಳು. ಆದರೂ ಪಾವನಿಗೆ ಕೆಲವೊಂದು ವಿಷಯಗಳ ಸ್ಪಷ್ಟತೆ ಈವರೆಗೂ ಆಗಿರಲಿಲ್ಲ. ಯಾಕೆ ತನ್ನಜ್ಜ, ಮೂರೂರಜ್ಜಿಯನ್ನು ಮುಖ ನೋಡಿ ಮಾತಾಡಿಸೊಲ್ಲ?.. ಯಾಕೆ ಮೂರೂರಜ್ಜಿ ತನ್ನ ಅಣ್ಣಯ್ಯನೆದುರು ಬರಲು ಆದಷ್ಟು ಹಿಂದೇಟು ಹಾಕುತ್ತಾಳೆ? ಅಂಥದ್ದೇನು ನಡೆದಿರಬಹುದು ಎಂದು ಎಷ್ಟೋ ಸಲ ಅಮ್ಮನನ್ನೂ ಕೇಳಿದ್ದಳು. ಆದರೆ ಅಷ್ಟೊಂದು ಸಮರ್ಪಕ ಉತ್ತರವೇನೂ ಆಕೆಗೆ ಸಿಕ್ಕಿರಲಿಲ್ಲ. ತನ್ನತ್ತೆಯ ಗೋಳಿನ ಕಥೆಯನ್ನು ಮತ್ತೆ ಹೇಳಲಿಚ್ಚಿಸದೆಯೋ ಇಲ್ಲಾ ಹಿಂದೆ ನಡೆದ ಕಹಿ ನೆನಪುಗಳನ್ನು ಮತ್ತೆ ಹಸಿರಾಗಿಸಲು ಇಷ್ಟವಾಗದೆಯೋ ಹಾರಿಕೆಯ ಉತ್ತರವನ್ನಷ್ಟೇ ನೀಡಿದ್ದಳು. ಆದರೆ ತನ್ನ ಸಂಶಯಗಳಿಗೆಲ್ಲಾ ಸರಿಯಾದ ಉತ್ತರಗಳನ್ನು ಪಾವನಿ ಮುಂದೊಂದು ದಿನ ತನ್ನ ಆಯಿಯ ಬಳಿಯೇ ಕೇಳಿದಳು. ಸರಸಮ್ಮನ ಸ್ಮೃತಿಪಟಲದಲ್ಲಿ ಆ ಕಹಿ ಘಟನೆ ಎಂದೂ ಮರೆಯಲಾಗದ ಛವಿಯನ್ನೊತ್ತಿತ್ತು. ಹೇಗೆ ತಾನೇ ಆಕೆ ಮರೆತಾರು ತನ್ನ ಪ್ರಿಯ ನಾದಿನಿಯ ಆ ಕರುಣಾಜನಕ ಸ್ಥಿತಿಯನ್ನು.

ಮೂಕಾಂಬಿಕೆ ಹುಟ್ಟಿ ಮರುಜನ್ಮ ಪಡೆದದ್ದೇ ಒಂದು ಪವಾಡವಷ್ಟೇ. ಆದರೆ ಆಕೆಯ ಬದುಕಿನಲ್ಲೇನೂ ಪವಾಡ ನಡೆಯಲೇ ಇಲ್ಲಾ. ಇಲ್ಲೇ ಸ್ವರ್ಗ..ಇಲ್ಲೇ ನರಕ ಎಂಬತೆ ಜೀವ ಪಡೆದದ್ದೇ ಸ್ವರ್ಗ ಉಳಿದದ್ದೆಲ್ಲಾ ನರಕ ಎಂಬಂತಾಗಿತ್ತು ಆಕೆಯ ಬದುಕು ಮುಂದೆ. ನರಸಿಂಹ ಜೋಯಿಸರು ಸರಸಮ್ಮನ ವರಿಸಿ ಗುಬ್ಬಿಮನೆಗೆ ತಂದ ವರುಷದೊಳಗೇ ಮೂಕಾಂಬಿಕೆಯನ್ನೂ ಕನ್ಯಾದಾನ ಮಾಡಿ ಕಳುಹಿಸಿದ್ದರು. ಏಕ ಮಾತ್ರ ತಂಗಿಯ ಮದುವೆಯನ್ನು ಗೊತ್ತುಮಾಡುವ ಮೊದಲು ಯೋಗ್ಯ ವರನಿಗಾಗಿ ಜೋಯಿಸರು ಚೆನ್ನಾಗಿಯೇ ಹುಡುಕಿದ್ದರು. ಅಂತೂ ಕೊನೆಗೆ ಸಿಕ್ಕಿದ್ದು ಕುಮಟಾದಿಂದ ೬-೭ ಕಿ.ಮೀ ದೂರದ ಮೂರೂರಿನ ಶ್ರೀಪತಿ ಹೆಗಡೆ. "ಜೋಯ್ಸ್‌ರೇ ಚಿನ್ನದ ತುಂಡು ಮಾಣಿ.. ಕಣ್ಮುಚ್ಕ ಮದ್ವೆ ಮಾಡ್ಲಕ್ಕು.. ದೊಡ್ಡ ಮಾತೇ ಆಡ್ತ್ನಿಲ್ಲೆ ನೋಡಿ.. ನಿಮ್ಮ ಕೂಸು ಆರಾಮಾಗಿರ್ತು" ಎಂದು ಮೂರೂರು, ಕಲ್ಲಬ್ಬೆಯ ಆಚೀಚೆ ಮನೆಯವರು ಹೇಳಿದ್ದು ಕೇಳಿಯೇ ಜೋಯಿಸರು ಧಾರೆ ಎರೆದು ಕೊಟ್ಟಿದ್ದರು. ಹದಿನಾರರಲ್ಲಿಯೇ ಹಸೆಮಣೆ ಏರಿ ಹೊಸಬದುಕ ಕನಸ ಹೊತ್ತು ಗುಬ್ಬಿಮನೆಯಿಂದ ಮೂರೂರು ಸೇರಿದ ಮೂಕಾಂಬೆಯ ಬಾಳು ಮೂರಾಬಟ್ಟೆ ಆಗಲು ಹೆಚ್ಚು ಸಮಯವೇನೂ ಬೇಕಾಗಲಿಲ್ಲ.

ಊರವರ ಮಾತಿಗೆ ಮರುಳಾಗಿ ಮೋಸ ಹೋಗಿದ್ದ ಮೂಕಾಂಬೆಯ ಅಣ್ಣಯ್ಯ ಹಾಗೂ ತಂದೆಗೆ ಶ್ರೀಪತಿಯ ನಿಜ ಬಣ್ಣ ತಿಳಿಯಲು ತಿಂಗಳೂ ಬೇಕಾಗಲಿಲ್ಲ. ಹದಿನೈದು ದಿನಕ್ಕೊಮ್ಮೆ ಉಕ್ಕೇರುವ ಆತನ ಹುಚ್ಚುತನ ಮೂಕಾಂಬೆಯ ಜೊತೆಗೆ ಅವಳ ತವರನ್ನೂ ಮಂಕಾಗಿಸಿಬಿಟ್ಟಿತು. ತಿಂಗಳಲ್ಲಿ ಹದಿನೈದು ದಿನ ಮಂಕಾಗಿ ಕುಳಿತಿದ್ದು, ತನಗರಿತ ಕೆಲಸ ಕಾರ್ಯ ಮಾಡಿಕೊಂಡಿರುತ್ತಿದ್ದ ಶ್ರೀಪತಿ ತಿಂಗಳು ಕಳೆಯುವುದರೊಳಗೆ ಬುದ್ಧಿಭ್ರಮಣೆಗೊಳಗಾಗಿ ಅಸಂಬದ್ಧವಗಿ ವರ್ತಿಸುತ್ತಿದ್ದ. "ಕೂಸೆ ಎಂತ ಕೇಳ್ತೆ ನೀನು....ಹುಣ್ಣಿಮೆ ಅಮಾವಾಸ್ಯೆಗೆಲ್ಲಾ ಹುಚ್ಚೇರಿ ಸರ ಸರನೆ ತೆಂಗಿನ ಮರ, ಅಡ್ಕೆ ಮರ ಹತ್ತಿ ಬರ ಬರನೆ ಕಾಯೆಲ್ಲಾ ಉದ್ರಿಸಿ ಹಾಕ್ತಿದ್ದ.... ಓಡೋಗಿ ಎಲ್ಲಾ ಅವ್ನ ಎಳ್ಕ ಬರಕಾಗಿತ್ತು. ಆಗಿನ ಕಾಲ್ದಲ್ಲಿ ಸುಟ್ಟ್ ಕುಮ್ಟೇಲೂ ಹುಚ್ಚಿನ ಡಾಕ್ಟ್ರ ಇದ್ದಿದ್ನಿಲ್ಲೆ. ಅದ್ರ ಕಷ್ಟ ನೋಡಲಾಗ್ದೇ ನಂಗವೇ ಎಂಥದೋ ಹಳ್ಳಿ ಔಷ್ದಿನೇ ಮಾಡ್ಸಿ ನೋಡ್ದೋ.. ಆದ್ರೂ ಕಡ್ಮೆ ಆಜಿಲ್ಲೆ...ಹದ್ನೆಂಟು ವರ್ಷಕ್ಕೇ ಮೂಕಾಂಬೆಗೆ ಅರ್ವತ್ತಾದಾಂಗೆ ಅನಿಸ್ತಿತ್ತು. ಚಿಂತೆ ಮಾಡಿ ಮಾಡಿ ಮಾವ್ನೋರು ಹಾಸ್ಗೆ ಹಿಡ್ದಾಗಿತ್ತು ನೋಡು. ಮಧ್ಯೆ ಎರ್ಡು ಪುಟ್ಟ ಗಂಡು ಮಕ್ಕ ಬೇರೆ. ಎಂತ ಮಾಡ್ತೆ ಹೇಳು? ನಿನ್ನಜ್ಜ ಮಾಡ್ದೇ ಹೋದ ಪೂಜೆಯಿಲ್ಲೆ...ಊಹೂಂ ಎಂತೂ ಪ್ರಯೋಜ್ನ ಆಜಿಲ್ಲೆ... ಪಾಪ ಅವ್ನ ಹುಚ್ಚಿಗೋ ಇಲ್ಲ ಮೂಕಾಂಬೆ ವ್ಯಸನಕ್ಕೋ ಕೊನೆ ಹೇಳು ಹಾಂಗೆ ಇಪ್ಪತ್ನಾಲ್ಕು ವರ್ಷಕ್ಕೇ ಮೂಕಾಂಬೆಕೆ ಗಂಡ ಹೇಳಂವ ಇಲ್ಲಗಿದ್ದಾಂಗಾದ..ಇದ್ರ ನರ್ಕಕ್ಕೆ ದೂಡಿ ತಾನು ಸತ್ತು ಸ್ವರ್ಗ ಸೇರ್ದ...ಹ್ಮ್ಂ... ಮೊದ್ಲಾದ್ರೂ ಎನು ಸುಖಾ ಇತ್ತು ಹೇಳಿ ಇದು ದುಃಖ ಪಡವು ಹೇಳು.. ಸ್ವಲ್ಪ ದಿನ ಇಲ್ಲೇ ಇತ್ತು ನಂಗ್ಳ ಜೊತೆಗೆ.. ಎರ್ಡು ಗಂಡುಮಕ್ಕನೂ ಇಲ್ಲೇ ಶಾಲೆಗೆ ಹೋಗ್ತಿದ್ದೋ..." ಎಂದು ಸರಸಮ್ಮ ಕಣ್ಣೀರೊರೆಸಿಕೊಂಡಾಗ ಪಾವನಿಯ ಕಣ್ಣಂಚೂ ಒದ್ದೆಯಾಗಿತ್ತು.

ಗಂಡ ಸತ್ತ ಮರುದಿವಸವೇ ಮೂಕಾಂಬೆ ತವರಿಗೆ ಬಂದಿದ್ದಳು. ಮಗಳ ದುರ್ಗತಿ ಕಂಡು ದೊಡ್ಡ ಜೋಯಿಸರು ಅತೀವ ದುಃಖ ಪಟ್ಟರೂ ಹಳೆಕಾಲದ ಸಂಪ್ರದಾಯ ಮಾತ್ರ ಮರೆಯಲಿಲ್ಲ. ಮೊದಲಿನಿಂದಲೂ ಮೂಕಾಂಬೆಗೆ ತನ್ನ ಮಾರುದ್ದದ ಕೂದಲ ಮೇಲೆ ಅತೀವ ಅಭಿಮಾನ. ಬಿಗಿಯಾಗಿ ಒಂದು ಜಡೆಹಾಕಿದರೆ ಅದು ಕರಿನಾಗರದಷ್ಟು ಉದ್ದವಾಗುತ್ತಿತ್ತು. ಮಿರಮಿರನೆ ಮಿಂಚುವ ಆ ಕೂದಲನ್ನು ಮೊಗ್ಗಿನದಂಡೆಗಳಿಂದ ಅಲಂಕರಿಸುವುದೆಂದರೆ ಅವಳಿಗದೆಂಥದೋ ಸಂತೋಷ. ಆದರೆ ವೈಧವ್ಯ ಅವಳ ಆ ಜಡೆಯ ಸುಖಕ್ಕೂ ಕತ್ತರಿ ಹಾಕಿತ್ತು. "ಅಪ್ಪಯ್ಯ ಬ್ಯಾಡ... ಈಗ ಕಾಲ ಬದ್ಲಾಜು.. ಮೂಕಾಂಬೆಗೆ ಮನಸ್ಸಿಲ್ಲೆ ಅಂದ್ರೆ ಬಿಟ್ಬುಡು.. ಪಾಪ ಬಡವೆ ಮೊದ್ಲೇ ಬೇಜಾರದಲ್ಲಿದ್ದು.. ಕೂದ್ಲೆಲ್ಲಾ ತೆಗ್ಸದು ಬೇಡ.."ಎಂದು ಗೋಗರೆದ ಮಗನ ಮಾತಿಗೂ "ಅತ್ಗೆ ನೀನಾದ್ರೂ ಹೇಳೆ.. ನಾ ಬಳೆ, ಕುಂಕಮ, ಹೂವು ಎಲ್ಲಾ ಬಿಡ್ತಿ ಆದ್ರೆ ಈ ಕೂದ್ಲೊಂದು ತೆಗ್ಸದು ಬ್ಯಾಡ ಹೇಳೆ.. ಕೈ ಮುಗಿತಿ.." ಎಂದು ಗೋಳಾಡಿದ ಮಗಳ ದುಃಖವನ್ನೂ ಮರೆತು.."ಮಾವಯ್ಯ ಯಾರೇನಾರ ಹೇಳ್ಕಳ್ಲಿ..ಎಲ್ಲದಕ್ಕಿಂತ ಮೂಕಾಂಬೆ ದುಃಖ ದೊಡ್ಡದು ಇದೆಲ್ಲಾ ಬೇಡ.." ಎಂದು ಮೊದಲಬಾರಿ ಎದುರು ನಿಂತು ಮಾತಾಡಿದ ಸೊಸೆಯ ಮಾತನ್ನೂ ಮೀರಿ ದೊಡ್ಡ ಜೋಯಿಸರು ಹಠ ಹೊತ್ತು ಆ ಸುಂದರ ಕೇಶರಾಶಿಯನ್ನು ಹೊಳೆಪಾಲು ಮಾಡಿಬಿಟ್ಟರು. "ನಿನ್ನ ಕೂದ್ಲಿಂದ ನೀರು ತೊಟ್ಟಿಕ್ಕಿರೆ ನಮ್ಗೆ ಒಳ್ಳೇದಾಗ್ತಿಲ್ಲೆ..ಒಂದೋ ನೀ ಕೂದ್ಲು ತೆಗ್ಸು.. ಇಲ್ಲಾ ನಾ ಊಟ, ಆಸರಿ ಬಿಟ್ಟು ಪ್ರಾಣ ಬಿಡ್ತಿ.." ಎಂದು ಪಣ ತೊಟ್ಟ ಅಪ್ಪನ ಮುಂದೆ ಕೊನೆಗೂ ಮಗಳು ತಲೆಯೊಡ್ಡಿದ್ದಳು. ಅವಳ ಬದುಕು ಅಲ್ಲಿಗೆ ಸಂಪೂರ್ಣ ಬೋಳಾಗಿಹೋಯಿತು. ತಂಗಿಯ ಸಂತೋಷಕ್ಕಾಗಿ ಈ ಒಂದು ಸಂಪ್ರದಾಯವನ್ನಾದರೂ ತಡೆಯಬೇಕೆಂದು ಎಣಿಸಿದ್ದ ನರಸಿಂಹ ಜೋಯಿಸರಿಗೆ ಅತೀವ ನಿರಾಸೆ ದುಃಖಗಳಾದವು. ತದನಂತರ ಅವರಿಗೆ ಮೂಕಾಂಬೆಯ ಮೊಗನೋಡುವುದೇ ಕಷ್ಟವಾಗಿ ಹೋಯಿತು. ಅಂತೆಯೇ ಆಕೆಗೂ ಅಣ್ಣನ ನೋವಿನ ಅರಿವಾಗಿ, ಆದಷ್ಟು ಅವರ ಎದುರಿಗೆ ಬರುವುದನ್ನೇ ಕಡಿಮೆ ಮಾಡತೊಡಗಿದಳು. ಅವರಿಬ್ಬರ ಹೆಚ್ಚಿನ ಮಾತುಗಳೆಲ್ಲಾ ಸರಸಮ್ಮನ ಮೂಲಕವೇ ಆಗತೊಡಗಿತು.

ಮುಂದೆ ತವರು ಪಾಲಾದ ಮೂಕಾಂಬೆಯ ಆಸ್ತಿಹೊಡೆಯಲು ಅವಳ ಮೈದುನರು ಸಂಚುಹಾಕುತ್ತಿರುವುದನ್ನರಿತ ಜೋಯಿಸರು ಗಟ್ಟಿ ಮನಸುಮಾಡಿ ತಂಗಿಯನ್ನೂ ಅವಳ ಮಕ್ಕಳನ್ನೂ ಮೂರೂರಿಗೆ ತಂದು ಅವಳ ಮನೆಯಲ್ಲೇ ಬಿಡಬೇಕಾಯಿತು. ಆದರೂ ತಿಂಗಳಲ್ಲೆರಡು ಸಾರಿಯಾದರೂ ಅಲ್ಲಿಗೆ ಹೋಗಿ ಎಲ್ಲಾ ವಿಚಾರಿಸಿಕೊಂಡು ಬರುತ್ತಿದ್ದರು. ತವರು ಮನೆ ಬೆಂಬಲವೊಂದಿಲ್ಲದಿದ್ದರೆ ಅವಳಾಸ್ತಿಯನ್ನು ನುಂಗಿ ನೀರು ಕುಡಿಯುತ್ತಿದ್ದರು ಮೈದುನರು. ಮನೆಯವರ ಅಸಡ್ಡೆಗೆ, ಕೊಂಕು ನುಡಿಗೆ, ತನ್ನ ಮಕ್ಕಳಿಗಾಗುತ್ತಿರುವ ಅನ್ಯಾಯಕ್ಕೆ, ಎಲ್ಲವುದಕ್ಕೂ ಅವಳ ಉತ್ತರ ಬರಿಯ ಮೌನವಾಗಿರುತ್ತಿತ್ತು. ಅಖಂಡ ನಿರ್ಲಿಪ್ತತೆ ಅವಳ ಪಾಲಿಗೆಂದೋ ಒಲಿದಿತ್ತು. ಓದಿನಲ್ಲಿ ಮುಂದಿದ್ದರೂ ಓದಲಾಗದ ಸಂಕಟದ ಜೊತೆಗೆ, ಮನೆಯೊಳಗಿನ ಅಸಮಾನತೆ, ಪಕ್ಷಪಾತಿ ಗುಣಗಳಿಗೆಬೇಸತ್ತು ಬೆಂಗಳೂರನ್ನು ಸೇರಿ, ಯಾವುದೋ ನೌಕರಿ ಹಿಡಿದು, ಅಲ್ಲೇ ಒಂದು ಹುಡುಗಿಯನ್ನು ಮದುವೆಯಾಗಿ ನೆಲೆಸಿದ ಮೊದಲ ಮಗನ ಉದಾಸೀನತೆಗೆ, ತಮ್ಮ ಈ ಪಾಡಿಗೆ ಯಾರು ಹೊಣೆ ಎಂದು ಹುಡುಕುತ್ತಾ ಉತ್ತರ ಸಿಗದೇ ತಾನೇ ಕುದಿದು ಕುದಿದು ಬಡ ತಾಯಿಯ ಮೇಲೆ ಲಾವಾವನ್ನು ಹೊರಹಾಕಿ ದೂರಾದ ಎರಡನೆಯ ಮಗನ ನಿರ್ಲಕ್ಷತನಕ್ಕೂ ಮೂರೂರಜ್ಜಿಯದು ಈಗ ಒಂದೇ ಉತ್ತರ.."ದೇವರ ಹಣೆಯಲ್ಲಿ ಭಗವಂತ ಬರ್ದ ಹಾಂಗೆ ಆಗ್ತು.."
ವರುಷದ ಹಿಂದೆ ಊರಿಗೆ ಹೋಗಿದ್ದಾಗ ಮಾತು ಮಾತಿನ ಮೇಲೆ ಸರಸಮ್ಮ ಪಾವನಿಯಲ್ಲಿ ಹೇಳಿದ್ದರು. "ನಮ್ಮನೆ ಮೂಕಾಂಬೆ ಸ್ಥಿತಿ ನೋಡಿರೆ ಬೇಜಾರಾಗ್ತು ತಂಗಿ.. ಕಷ್ಟ ಪಟ್ಟು ಬೆಳ್ಸಿದ ಮಕ್ಕ ಹತ್ರ ಇಲ್ಲೆ. ಈಗ ಅವು ಮದ್ವೆ ಆಗಿ ಅವ್ರವ್ರ ಸಂಸಾರದಲ್ಲಿದ್ದೋ.. ಪಾಪ ಮೂಕಾಂಬೆ ಮನ್ಸು ಬಂದಾಗ ಇಲ್ಲಿಗೆ ಬಂದ್ಕತ್ತ... ಶ್ರೀಪತಿ ಕಿರಿ ತಮ್ಮನ ಮೊಮ್ಮಕ್ಳ ಆಡ್ಸಕತ್ನ ಇದ್ದು ಬಡ್ವೆ. ಇಲ್ಲೇ ಬಂದಿರು ಅಂದ್ರೂ ಅದ್ಕೆ ಮನಸಿಲ್ಲೆ.."ಇಷ್ಟು ವರ್ಷನೇ ಅಲ್ಲಿದ್ದಾಜು ಅತ್ಗೆ.. ಇನ್ನೆಂತಾ ಅಲ್ಲಿ ಇಲ್ಲಿ.. ಸುಮ್ನೇಯಾ.. ಆ ದೇವ್ರು ಈಗ್ಲಾದ್ರೂ ಅವ್ನಲ್ಲಿಗೇ ಕರ್ಸಕಂಡಿದ್ರೆ ಆರಾಮಾಗಿತ್ತು ನೋಡು.." ಹೇಳ್ತಿ ಕೊರಗತಾ ಇರ್ತು.. ಹ್ಮಂ.. ನೀ ಒಂದ್ಸಲ ಮೂರೂರಿಗೂ ಹೋಗ್ಬಾ. ನಿನ್ನ ರಾಶಿ ಕೇಳ್ತಿರ್ತು. ಸಣ್ಣಕಿರ್ಬೇಕಿದ್ರೆ ನೀನು ಅದ್ರ ಜೊತೆಗೇ ಇರ್ತಿದ್ದೆ ನೆನ್ಪಿಲ್ಯಾ.." ಎನ್ನಲು ಪಾವನಿಯ ಮನಸೆಲ್ಲಾ ಹಳೆ ನೆನಪುಗಳಿಂದ ಹಸಿರಾಗಿತ್ತು. ಮರುದಿವಸವೇ ಆಕೆ ಕುಮ್ಟೆಯ ಬಸ್ಸು ಹತ್ತಿ ಮೂರೂರನ್ನು ಸೇರಿದ್ದಳು.

ಹಿಂದೆ ಹರಿದ್ವರ್ಣ ಮರಗಳಿಂದ, ಹೂವಿನ ಗಂಧ, ಹಕ್ಕಿಗಳಿಂಚರದಿಂದ ನಳನಳಿಸುತ್ತಿದ್ದ ಕಾಡೊಂದು, ಮನುಜನ ಕ್ರೌರ್ಯಕ್ಕೆ ಬಲಿಯಾಗಿ ಬೋಳುಗುಡ್ದೆಯಾದಂತೆ ಕಾಣುತ್ತಿದ್ದ ಬೋಳು ತಲೆ, ಮಾಸಲು ಮಡಿಸೀರೆಯೊಂದನ್ನು ಸುತ್ತಿದ್ದ ಕೃಶ ಶರೀರ, ಗುಳಿ ಬಿದ್ದ ಕಳಾಹೀನ ಕಣ್ಗಳು, ವಯಸ್ಸಿನ ಪ್ರಭಾವದಿಂದಲೋ ಇಲ್ಲಾ ಬದುಕು ಕೊಟ್ಟ ಹೊಡೆತಗಳಿಂದಲೋ ತುಸು ಹೆಚ್ಚೇ ಬಾಗಿದ್ದ ಬೆನ್ನು, ಕಣ್ಣ ಕಿರಿದಾಗಿಸಿ ತನ್ನನ್ನೇ ದಿಟ್ಟಿಸಿ ನೋಡುತ್ತಾ ನಿಂತ ಮೂರೂರಜ್ಜಿಯನ್ನು ಕಂಡ ಪಾವನಿಗೆ ವಿಪರೀತ ಸಂಕಟವಾಯಿತು. ಆದರೆ ಈಗತಾನೇ ಅರಳಿದ ಹೂವಂತೆ ಕಂಗೊಳಿಸುತ್ತಿದ್ದ ಪಾವನಿಯನ್ನು ಅಚಾನಕ್ಕಾಗಿ ಅಲ್ಲಿ ಕಂಡು ಮೂಕಾಂಬೆಯ ಸಂತೋಷ ಹೇಳತೀರದು.

"ಕೂಸೆ, ನಿನ್ನಮ್ಮ ನನ್ನ ತೊಡೆಮೇಲೇ ಬೆಳ್ದಿದ್ದು. ಅತ್ಗೆಗಾದ್ರೂ ಎಲ್ಲಿತ್ತು ಪುರ್ಸೊತ್ತು ಮಕ್ಳ ಆಡ್ಸಲೆ? ಬೆನ್ನಿಗೇ ನಾಲ್ಕೈದು ಮಕ್ಕ ಆಗಿದ್ದ. ನಿನ್ನಾಯಿ ಹೆಚ್ಚಿನ ದಿವ್ಸ ಇದ್ದಿದ್ದು ಮೂರೂರಲ್ಲೇಯಾ.. ಕೇಳು ಬೇಕಿದ್ರೆ.. ಅಂತೂ ನೀನು ಈ ಮೂರೂರಜ್ಜಿ ನೆನ್ಪು ಮಾಡ್ಕಂಡು ಬಂದ್ಯಲಿ.. ಖುಶಿ ಆತು ನೋಡು.. ಈ ಮುದ್ಕಿನಾ ಮಾತಾಡ್ಸವೇ ಇಲ್ಲೆ ಈಗ..."ಎಂದು ಮುಕ್ತವಾಗಿ ನಕ್ಕರೂ ಆ ದನಿಯೊಳಡಗಿದ್ದ ವಿಷಾದ ಪಾವನಿಯನ್ನು ತಾಗಿತ್ತು.

ಬಂದ ನಾಲ್ಕು ದಿನ ಕಳೆದದ್ದೇ ಗೊತ್ತಾಗಿರಲಿಲ್ಲ ಆಕೆಗೆ. ಹೊಸ ಹುರುಪು ಬಂದಂತೆ ಮೂಕಾಂಬೆ ತನ್ನೂರನ್ನು ಸುತ್ತಿಸಿದ್ದಳು. ಅಪರೂಪವಾಗಿದ್ದ ತನ್ನ ಸ್ವಂತ ಮೊಮ್ಮಕ್ಕಳನ್ನು ಬಹುಶಃ ಪಾವನಿಯಲ್ಲಿ ಕಂಡಿದ್ದಿರಬೇಕು ಆ ಜೀವಿ. ಮೊದಮೊದಲು ತಂದೆಯೊಂದಿಗೆ ವರುಷಕ್ಕೊಮ್ಮೆಯಾದರೂ ಬರುತ್ತಿದ್ದ ಮೊಮ್ಮಕ್ಕಳು ಈಗ ತಮ್ಮ ಹೆತ್ತವರನ್ನು ಕೆಳುಹಿಸಿಕೊಟ್ಟೇ ದೊಡ್ಡುಪಕಾರ ಮಾಡುತ್ತಿದ್ದಂತಿತ್ತು. ಆಕೆಯ ಉತ್ಸಾಹ, ಸಂತೋಷ ಕಂಡು ಹಿಂತಿರುಗುವ ಅವಸರವನ್ನು ಮತ್ತೂ ಮೂರುದಿನಕ್ಕೆ ಮುಂದೂಡಿದ್ದಳು ಪಾವನಿ.

ಅಂದೂ ಹಾಗೆಯೇ ಹೊರೆಗೆ ಭೋರೆಂದು ಮಳೆ ಸುರಿಯುತ್ತಿದ್ದರೆ ಮೂರೂರಜ್ಜಿ ಬಿಸಿಬಿಸಿ ಹಲಸಿನಕಾಯಿ ಸೊಳೆ ಕರಿದು ತಂದಿಟ್ಟಿದ್ದಳು. ಬಟ್ಟಲು ತುಂಬಾ ತಿಂಡಿಯಿದ್ದರೂ ಒಂದೊಂದೇ ತಿನ್ನುತ್ತಾ ಅದೇನನ್ನೋ ಕಿವೊಯೊಳಗಿಟ್ಟುಕೊಂಡು ಗುನುಗುತ್ತಿದ್ದ ಪಾವನಿಯನ್ನು ನೋಡಿ ಮೋಜೆನಿಸಿತ್ತು ಮೂರೂರಜ್ಜಿಗೆ.
"ಕೂಸೆ ಎಂತದೇ ಅದು.. ಕೆಮಿ ಸರಿ ಕೇಳ್ಸದೇ ಹೋದವು ಹಾಕ್ಕಂಬಥಾ ವಸ್ತುನಾ ಇಟ್ಕಂಜೆ....?" ಎಂದು ಆಕೆಯನ್ನು ಕೇಳಿದಾಗ ಪಾವನಿಗೆ ನಗೆಯುಕ್ಕಿ ಬಂದಿತ್ತು.
"ಅಜ್ಜಿ ಇದು ಅದಲ್ಲ.. ಇದಕ್ಕೆ ಎಂ.ಪಿ. ತ್ರೀ ಹೇಳ್ತೋ.. ಇದ್ರಲ್ಲಿ ಚೊಲೋ ಚೊಲೋ ಹಾಡಿದ್ದು. ಈ ದಾರಾನ ಕಿವಿಗಿಟ್ಕಂಡ್ರೆ ಕೇಳ್ತು.." ಎಂದಾಗ ಆಕೆಗೆ ಅರ್ಥವೇ ಆಗಿರಲಿಲ್ಲ.
"ಎಂಥಾ ಸುಡಗಾಡೋ.. ಬಿಸಿ ಆರೋಗ್ತು ಮೊದ್ಲು ಇದ್ನ ತಿನ್ನು.. ಅಮೇಲೆ ಕೇಳ್ಲಕ್ಕು... ಅದ್ರಲ್ಲಿ ಎಲ್ಲಾ ಹಾಡೂ ಬತ್ತಾ? ಭಜನೆ ಎಲ್ಲಾ ಬತ್ತಾ?"ಎಂದು ಮುಗ್ಧವಾಗಿ ಪ್ರಶ್ನಿಸಲು ಪಾವನಿ.."ಅಜ್ಜಿ ಸದ್ಯಕ್ಕೆ ಇದ್ರಲ್ಲಿ ಭಾವಗೀತೆಗಳಿದ್ದು. ಅದ್ನೇ ಕೇಳ್ತಾ ಇದ್ದಿದ್ದಿ. ತಡಿ..ಕೊಡ್ತಿ..ಕೇಳು.."ಎನ್ನುತ್ತಾ ಆಕೆಯ ಕಿವಿಗಿಟ್ಟಿದ್ದಳು.
ಹಾಡು ಪ್ರಾರಂಭವಾಗಿ ಮುಗಿಯುವ ತನಕವೂ ಬಿಮ್ಮನೆ ಕುಳಿತಿದ್ದ ಮೂರೂರಜ್ಜಿಯ ಕಣ್ಣ ತುಂಬೆಲ್ಲಾ ನೀರು ತುಂಬಿತ್ತು. "ಕೂಸೆ ಈ ಹಾಡು ರಾಶಿ ಚೊಲೋ ಇದ್ದು.. ನಿಂಗೆ ಬರ್ತಾ ಹಾಡಲೆ? ಎಷ್ಟು ಚೊಲೋ ಹಾಡಿದ್ದು ಅದು.. ಈ ಹಾಡಿನಾಂಗೇಯಾ ನನ್ನ ಬದ್ಕೂವಾ ಅನಿಸ್ತಾ ಇದ್ದು ನೋಡು.. "ಎನ್ನಲು ಯಾವ ಹಾಡು ಬರುತ್ತಿತ್ತಪ್ಪಾ ಎಂಡು ರೆವೈಂಡ್ ಮಾಡಿ ಕೇಳಿದ್ದಳು ಪಾವನಿ.

ಬೇಸರದ ಬಯಲಿನಲಿ ಬೋಳು ಮರ ಕರೆಯುತಿದೆ
ಬನ್ನಿ ನನ್ನೆಲೆಗಳೆ ಶಿಶಿರದಲ್ಲಿ
ಕಳುಹಿಸಿದ ಪತ್ರಗಳು ತಲುಪುದಿವೋ ಇಲ್ಲವೋ
ಎಲ್ಲಿ ಗುರಿ ತಪ್ಪಿದವೋ ಇರುಳಿನಲ್ಲಿ....

ಹೊರಗೆ ಬಿರುಮಳೆ, ಒಳಗೆ ಅಜ್ಜಿಯ ಕಣ್ಣೀರು, ಕಿವಿಯೊಳಗೆಲ್ಲಾ ಹಾಡಿನ ಮೊರೆತ... ವಿಚಿತ್ರ ಸಂಕಟವಾಗಿತ್ತು ಪಾವನಿಗೆ. ಅಪ್ರಯತ್ನವಾಗಿ ಆಕೆಯ ಕೆನ್ನೆಗಳೂ ಒದ್ದೆಯಾಗಿದ್ದವು.

"ಅಯ್ಯೋ ನನ್ನ ಮಳ್ಳೇ.. ಅಪ್ರೂಪಕ್ಕೆ ಬಂದ ನಿನ್ನ ಅಳ್ಸಿದೆ. ಬೇಜಾರಾಗಡ ತಂಗಿ. ಎಂತೋ ನೆನ್ಪಾತು.. ಹೋತು. ಬಿಟ್ಬುಡು. ಹಾಂ.. ಅದೆಂತದೋ ಸುಡುಗಾಡು ಹೆಸ್ರು ಅಂದ್ಯಲೆ ಇದ್ಕೆ? ನಂಗೆ ಇದ್ನ ನೋಡಿ ಅಣ್ಣಯ್ಯ ಮೊದ್ಲನೇ ಬಾರಿ ರೇಡ್ಯೋ ತಂದ ನೆನ್ಪಾತು ನೋಡು.."ಎಂದಾಗ ಇಬ್ಬರ ಕಣ್ಗಳೂ ಮಿನುಗಿದ್ದವು.
"ಎಂತಾ ಎಡವಟ್ಟಾಗಿತ್ತು ಅಜ್ಜಿ? ಅಜ್ಜ ತಂದ ರೇಡಿಯೋ ಸರಿ ಇತ್ತಿಲ್ಯ?"
"ಕೇಳು ಕೂಸೆ.. ಆಗಿನ ಕಾಲ್ದಲ್ಲಿ ರೇಡಿಯೋ ಇಟ್ಕಂಬದೇ ದೊಡ್ಡ ಪ್ರತಿಷ್ಠೆ ಆಗಿತ್ತಾ.. ಅಣ್ಣಯ್ಯನೂ ಮನಿಗೆ ತಂದ ರೇಡಿಯೋ. ಆದ್ರೆ ಆಗೆಲ್ಲಾ ಆ ಮೂಲೆ ಊರಿಗೆ ಸರಿಯಾಗಿ ಎಲ್ಲಿ ದನಿ ಬರ್ತಿತ್ತು ಹೇಳು? ಒಂದಿನ ರ‍ೇಡ್ಯೋ ಕೇಳಿದ್ರೆ ಮರ್ದಿನ ಕೇಳ್ತಿತ್ತಿಲ್ಲೆ.. ಅಣ್ಣಯ್ಯಂಗೆ ತಲೆ ಬಿಸಿ ಆತು. ಒಂದಿನ ಕುಪ್ಪಾ ಭಟ್ರ ಮನೆಗೆ ಹೋಗಿ ಅವ್ರ ಮಗ್ನ ಎಂತ ವಿಷ್ಯ ಕೇಳ್ದಾ? ಅಂವ ದೊಡ್ಡೂರಲ್ಲಿ ಓದಿ ಬಂದವ. ಅವಂಗೆಲ್ಲಾ ಗೊತ್ತಿರ್ತು ಹೇಳಿ. ಆ ಮಾಣಿ ಅಣ್ಣಯ್ಯನ್ನ ತಮಾಷೆ ಮಾಡವು ಹೇಳಿ.."ಜೋಯ್ಸ್ರೆ.. ಅದು ‘ಸಿಗಿನೆಲ್ಲು’ ನಿಮ್ಮಲ್ಲಿಗೆ ಬಪ್ಪಲೆ ನಮ್ಮನೆ ಗೊಬ್ರದಗುಂಡಿ ದಾಟಿ ಬರವಲ್ರಾ.. ಅದ್ಕೇ ಲೇಟಾಗ್ತು.. ಅದೂ ಅಲ್ದೇ ಕೆರೆ ಬದಿ ಶಿವ ಭಟ್ರ ಮನೆ ಏರಿ ಬೇರೆ ಹತ್ತಿ ಬರವು.. ಹಾಂಗಾಗಿ ನಿಮ್ಗೆ ಸರಿ ಬತ್ತಿಲ್ಲೆ ಕಾಣ್ತು.." ಹೇಳಿ ಕಳ್ಸದ. ಆಮೇಲೆ ಗೊತ್ತಾತು ನೋಡು ಅಂವ ಮಳ್ಳು ಮಾಡಿದ್ದ ಅಣ್ಣಯ್ಯನ ಹೇಳಿ.. ಗೊತ್ತಾದಾಗ ಅಣ್ಣಯ್ಯಂಗೆ ರಾಶಿ ಸಿಟ್ಟು ಬಂದಿತ್ತು.. ಎರ್ಡು ತಾಸು ಹಾರಾಡಿದ್ದ.." ಎಂದು ನಗಲು, ಆ ನಗು ಪಾವನಿಯ ಮೊಗವನ್ನು ಸೇರಿತ್ತು. ವಾರವಿಡೀ ತನ್ನ ಮೂರೂರಜ್ಜಿಯ ಬೆನ್ನಿಗಂಟಿಕೊಂಡೇ ಕಳೆದ ಪಾವನಿ ಬೆಂಗಳೂರಿಗೆ ಹಿಂತಿರುಗುವಾಗ ಮಧುರ ನೆನಪುಗಳ ಮೂಟೆಯನ್ನೇ ಹೊತ್ತೊಯ್ದಿದ್ದಳು.

ಹಳೆಯ ನೆನಪುಗಳನ್ನು ಮೆಲುಕುತ್ತಾ, ಕಾರಂತರ ಮೂಕಜ್ಜಿಯ ಕನಸುಗಳನ್ನು ಕಾಣುತ್ತಾ, ಮೆಲುವಾಗಿ ಸಿ.ಡಿ.ಪ್ಲೇಯರ್‌ನಿಂದ ಹೊರ ಹೊಮ್ಮುತ್ತಿದ್ದ ಭಾವಗೀತೆಯನ್ನು ಆಲಿಸುತ್ತಾ ಮೈಮರೆತಿದ್ದ ಪಾವನಿಯನ್ನೆಬ್ಬಿಸಿದ್ದು ಆಕೆಯ ಮೊಬೈಲ್ ರಿಂಗ್.
"ಪಾವನಿ ನಾನು ಶಂಕ್ರಮಾವ.. ಮೂರೂರತ್ತೆಗೆ ಹಾರ್ಟ್ ಅಟ್ಯಾಕ್ ಆಗಿ ಎರ್ಡುತಾಸಿನ ಹಿಂದೆ ಹೋಗೋತಡ ಮಾರಾಯ್ತಿ..ಲ್ಯಾಂಡ್‍ಲೈನಿಗೆ ಟ್ರೈ ಮಾಡಿಟ್ಟಿ.. ಹೋಜಿಲ್ಲೆ.. ಅಮ್ಮಂಗೆ ಹೇಳ್ಬುಡು. ನಾ ಅರ್ಜೆಂಟ್ ಮೂರೂರಿಗೆ ಹೊರ್ಟಿದ್ದಿ.." ಎಂದು ಕಟ್ ಮಾಡಲು ಆಕೆಯ ಮಡಿಲಲ್ಲಿದ್ದ "ಮೂಕಜ್ಜಿಯ ಕನಸುಗಳು" ಕೆಳಗೆ ಬಿತ್ತು. ಪ್ಲೇಯರ್ -
ಮರದ ಬುಡವನು ಕೊಡಲಿ
ಕಡಿವ ಮೊದಲೇ ಬನ್ನಿ.....
ತಾಯಿ ಬೇರಿನ ತವರ ದಾರಿ ಹಿಡಿದು...
ಬೇಸರದ ಬಯಲಿನಲಿ ಬೋಳು ಮರ ಕರೆಯುತಿದೆ.. - ಹಾಡನ್ನು ಹಾಡತ್ತಲೇ ಇತ್ತು.
(ಕನ್ನಡ ಪ್ರಭ ಪತ್ರಿಕೆಯ ಸಾಪ್ತಾಹಿಕ ಪ್ರಭ ವಿಭಾಗದಲ್ಲಿ ಪ್ರಕಟಿತ)
-ತೇಜಸ್ವಿನಿ ಹೆಗಡೆ

----****----


ಬುಧವಾರ, ಅಕ್ಟೋಬರ್ 28, 2009

ಪ್ರಳಯಾಂತಕವೀ ಪ್ರಳಯದ ಆತಂಕ!

"ಅಯ್ಯೋ ಅಮ್ಮೋರೆ...ಯಾಕಾಗಿ ನಾನು ದುಡೀ ಬೇಕು? ಯಾರಿಗಾಗಿ ದುಡ್ಡು ಜೋಡಿಸಬೇಕು ಅಂತಾನೇ ಗೊತ್ತಾಗ್ತಿಲ್ಲ ನೋಡಿ...." ಎಂದು ಗೊಣಗುತ್ತಾ, ಸಪ್ಪೆ ಮುಖ ಹೊತ್ತು ಬಂದ ಸರೋಜಮ್ಮನ ಈ ಹೊಸ ವರಸೆಕಂಡು ತುಸು ಚಕಿತಳಾದೆ.
"ಯಾಕಮ್ಮಾ? ಏನಾಯ್ತು? ಗಂಡ ಏನಾದ್ರೂ ಮತ್ತೆ ಕುಡ್ದು ಬಂದು ಬೈದ್ನಾ? ಇಲ್ಲಾ ಮಗ ಮತ್ತೆ ಸ್ಕೂಲ್‌ಗೆ ಚಕ್ಕರ್ ಹಾಕಿದ್ನಾ?"ಎಂದು ಕೇಳಿದೆ.

"ಅಯ್ಯಾ.. ಬಿಡಿಯಮ್ಮ... ಇನ್ನು ಹಾಂಗೆಲ್ಲಾ ಆದ್ರೂ ಅಷ್ಟು ತಲೆಕೆಡ್ಸಿಕೊಳಾಕೆ ಹೋಗೋದಿಲ್ಲ... ಏನೇ ಆದ್ರೂ ಎಷ್ಟು ವರ್ಷ ಹೇಳಿ? ಅಬ್ಬಬ್ಬಾ ಅಂದ್ರೆ ಇನ್ನೊಂದ್ ಮೂರು ವರ್ಷ ತಾನೆ? ಆಮೇಲೆ ಎಲ್ಲಾ ಗೋಳಿಗೂ ಮುಕ್ತಿನೇಯಾ.. ಇರೋಷ್ಟು ದಿನಾ ಚೆನ್ನಾಗಿ ತಿಂದುಂಡು, ಆ ಸ್ವಾಮಿ ಪೂಜಿಸ್ತಾ ಇದ್ಬಿಡೋನಾ ಅಂತಿದ್ದೀನಿ.. ಕೂಡಿಟ್ಟಿದ್ನೆಲ್ಲಾ ನೀರು ಪಾಲು ಮಾಡೋಕೆ ನಾನ್ಯಾಕೆ ಹೀಂಗೆ ದುಡೀಲಿ ಅನ್ನೀ? ಎಲ್ಲಾರೂ ಎಲ್ಲಾನೂ ಮುಳ್ಗೇ ಹೋಗೋವಾಗ ನನ್ನ ಪುಡಿಗಾಸಿಗೇನು ಬೆಲೆ?" ಎನ್ನುತ್ತಾ ಎಲ್ಲಾ ಸಿಟ್ಟು, ಸಿಡುಕು, ಹತಾಶೆಗಳನ್ನೇ ಗುಡಿಸಿ ಗುಂಡಾಂತರ ಮಾಡುವಂತೆ ನೆಲವೇ ಕಿತ್ತು ಹೋಗುವಂತೆ... ಗುಡಿಸತೊಡಗಿದಳು. ಇನ್ನೇನು ನನ್ನೂ ಕಸದ ಜೊತೆ ಸೇರಿಸಿ ಬಿಡುತ್ತಾಳೇನೋ ಅಂತ ಹೆದರಿಕೆಯಾಗಿ ಆದಷ್ಟು ಪಕ್ಕಕ್ಕೆ ಸರಿದೆ. ಅಂಥದ್ದೇನು ಆಗಿರಬಹುದಪ್ಪಾ? ಎಲ್ಲಾರೂ ಎಲ್ಲದೂ ಮುಳುಗಿಹೋಗೋವಂಥದ್ದು? ಎನ್ನುವ ಕುತೂಹಲ ಮಾತ್ರ ಗುಡಿಸಿ ಹೋಗಲಿಲ್ಲ.

"ಅಲ್ಲಾ.. ಬೆಳಿಗ್ಗೆ ಬೆಳಿಗ್ಗೆ ಏನಾಯ್ತು ನಿಂಗೆ? ಹೀಗೆಲ್ಲಾ ಮಾತಾಡ್ತಿದ್ದೀಯಲ್ಲಾ? ಎಲ್ಲರೂ.. ಎಲ್ಲಾದೂ ಮುಳ್ಗಿ ಹೋಗೋಕೆ ಬೆಂಗ್ಳೂರಲ್ಲೇನು ಸುನಾಮಿ ಬರತ್ತೆ ಅಂದ್ರಾ? ಹಾಂಗೆ ಬರೋದಿದ್ರೂ ಅದು ಶಿರಾಡಿ ಘಟ್ಟ ಹತ್ತಿ ಬರ್ಬೇಕು ನೋಡು.." ಎಂದು ನನ್ನ ತಮಾಶೆಗೆ ನಾನೇ ನಕ್ಕರೂ ಆಕೆ ನಗಲೇ ಇಲ್ಲ!

"ಅಲ್ರಮ್ಮಾ.. ನೀವು ಟೀವಿ ನೋಡಿಲ್ವಾ ನಿನ್ನೆ? "ಹೀಗೂ ಉಂಟೆ..?" ಕಾರ್ಯಕ್ರಮದಲ್ಲಿ ಪ್ರಳಯ ಆಗತ್ತಂತೆ... ಅದೂ ಸರಿಯಾಗಿ ಮೂರುವರ್ಷದಲ್ಲಿ.. ಅಂದ್ರೆ ೨೦೧೨ ಡಿಸೆಂಬರ್ ೨೧ಕ್ಕಂತ್ರವ್ವ... ನಮ್ಮ ವಠಾರದಲ್ಲೆಲ್ಲಾ ಇದೇ ಮಾತು ನೋಡಿ.. ನೀವು ನೋಡಿದ್ರೆ ಎನೂ ಗೊತ್ತೆ ಇಲ್ಲಾ ಅಂತಿದ್ದೀರಾ..." ಎನ್ನಲು ನಿಜಕ್ಕೂ ನಾನು ಆಶ್ಚರ್ಯಚಕಿತಳಾದೆ. ನಾನು ಈ ಪ್ರೊಗ್ರಾಂ ನೋಡಿರಲಿಲ್ಲ.(ಹೀಗೂ ಉಂಟೆಗಿಂತಲೂ ಹೀಗಿರಲು ಸಾಧ್ಯವೇ ಇಲ್ಲಾ ಎನ್ನುವಂತೆ ಚಿತ್ರಿಸುವ ಆ ಚಾನಲ್ ಸ್ವಲ್ಪ ನನ್ನ ಕಣ್ಣಿಂದ ದೂರವೇ. ವೈಭವೀಕರಣಕ್ಕೆ ಇನ್ನೊಂದು ಹೆಸರು ಅದು ಎನ್ನುವುದು ನನ್ನ ಅಭಿಮತ...).

"ಅಲ್ವೇ.. ೨೧ಕ್ಕೇ ಎಲ್ಲಾ ಸರ್ವನಾಶ ಅಂತಾದ್ರೆ ಮರುದಿನದಿಂದ ಯಾವ ಜೀವಿಯೂ ಇರೋದಿಲ್ವಂತೋ? ಆಮೇಲೆ ಏನಾಗೊತ್ತಂತೆ?" ಎಂದು ಅವಳನ್ನು ಮತ್ತೆ ಪ್ರಶ್ನಿಸಿದೆ ನನ್ನ ನಗುವನ್ನು ಅದುಮಿಟ್ಟುಕೊಂಡು.

"ಹಾಂಗಲ್ಲಾ.. ಕೆಲವು ಒಳ್ಳೇವ್ರು ಮಾತ್ರ ಬುದ್ಧಿಭ್ರಮಣೆ ಆಗಿ ಬದ್ಕತಾರಂತೆ... ಅವ್ರಿಗೆ ಈ ಯುಗದ ನೆನಪ್ಯಾವ್ದೂ ಇರೋದಿಲ್ವಂತೆ.. ಎಲ್ಲಾ ಹೊಸತಾಗೇ ಶುರು ಆಗೊತ್ತಂತೆ.. ಅದ್ಯಾವ್ದೋ ಮಾಯಾಂಗನೆ ಕ್ಯಾಲೆಂಡರ್ ಪ್ರಕಾರವಂತೆ ಕಾಣಮ್ಮ..." ಎನ್ನಲು ನನ್ನ ನಗೆಬುಗ್ಗೆ ಯಾವ ತಡೆಯೂ ಇಲ್ಲದೇ ಹೊರಬಂತು. "ಅದು ಮಾಯಾಂಗನೆ ಕ್ಯಾಲೆಂಡರ್ ಅಲ್ವೇ.. ಮಾಯನ್ ಕ್ಯಾಲೆಂಡರ್... ಸರಿ ಸರಿ.. ಪ್ರಳಯ ಆಗೋಕೆ ಇನ್ನೂ ಸಮಯ ಇದೆ ಅಲ್ವಾ? ಈಗ ಸಧ್ಯಕ್ಕೆ ನನ್ನ ಕೆಲ್ಸ ಮಾಡ್ಕೊಡು ಮಾರಾಯ್ತಿ. ಪ್ರಳಯ ಅಗೊತ್ತೆ ಅಂತ ಕೆಲ್ಸ ಬಿಟ್ಟು ಹೋಗ್ಬಿಡ್ಬೇಡ.. ಹಾಗೇನಾದ್ರೂ ಆದ್ರೆ ಮುಂದೆ ಆಗೋ ಪ್ರಳಯ ಇಂದೇ ಇಲ್ಲೇ ನನ್ನ ಜೊತೆ ಆಗ್ಬಿಡೊತ್ತೆ.." ಎಂದು ಅವಳನ್ನೂ ನಗಿಸಿ ಕೆಲ್ಸದ ಕಡೆ ಗಮನ ಹರಿಸಿದೆ.

ಆದರೂ ತಲೆಯೊಳಗೆ ಇದೇ ಯೋಚನೆ. ಏನಿದು ಮಾಯನ್ ಕ್ಯಾಲೆಂಡರ್ ಮಹಿಮೆ? ಜನ ಮರುಳೋ ಜಾತ್ರೆ ಮರುಳೋ? ಇತರರೂ ಈ ಪ್ರೊಗ್ರಾಂ ನೋಡಿರಬಹುದು.. ಇಲ್ಲಾ ಇದ್ರ ಬಗ್ಗೆ ಉಳಿದವರ ಯೋಚನೆ ಏನಾಗಿರಬಹುದು? ಎಂದು ತಿಳಿಯುವ ಸಣ್ಣ ಆಶಯ ಮನದೊಳಗೆ ಮೂಡಿತು. ನನಗೆ ಪರಿಚಯ ಇದ್ದವರೊಡನೆ, ಕೆಲವು ಸ್ನೇಹಿತರೊಡನೆ, ಆತ್ಮೀಯರೊಡನೆ, ಸಹ ಬ್ಲಾಗಿಗರೊಡನೆ ಮಾತಾಡುವಾಗ.. ಚಾಟ್ ಮಾಡುವಾಗ.. ಈ ವಿಷಯ ಪ್ರಸ್ತಾಪಿಸಿದೆ. ಚಾಟಿಂಗ್ ಸ್ಟೇಟಸ್‌ಬಾರ್ ನಲ್ಲೂ ಇದನ್ನು ಹಾಕಿದಾಗ ಹಲವರು ಪ್ರತಿಕ್ರಿಯಿಸಿದರು. ಈ ವಿಚಾರ ಮಂಥನದಲ್ಲಿ ಹಲವು ಸುಂದರ, ಹಾಸ್ಯಮಯ, ಚಿಂತನಾಶೀಲ ಅಭಿಪ್ರಾಯಗಳು ಹೊರಹೊಮ್ಮಿದವು. ಅವುಗಳನ್ನೆಲ್ಲಾ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ಮೊದಲಿಗೆ ನಾನು ಕಾಲ್ ಮಾಡಿದ್ದು ನನ್ನ ಬರಹಕ್ಕೆ ಅದರಲ್ಲೂ ವಿಶೇಷವಾಗಿ ಕಥಾರಚನೆಗೆ ಸ್ಪೂರ್ತಿಯಾಗಿರುವ ಭುವನೇಶ್ವರಿ ಹೆಗಡೆಯವರಿಗೆ. ಇದಕ್ಕೆ ಕಾರಣವೂ ಇದೆ. ಹತ್ತನೆಯ ತರಗತಿಯಲ್ಲೋ ಇಲ್ಲಾ ಒಂಭತ್ತನೆಯ ತರಗತಿಗೋ ನಮಗೆ ಅವರ ಲೇಖನವೊಂದರ ಪಾಠವಿತ್ತು. ಅದು ಪ್ರಳಯದ ಕುರಿತೇ ಆಗಿತ್ತು. ತುಂಬಾ ಹಾಸ್ಯಮಯವಾಗಿ ಬರೆದಿದ್ದರು. ಅದು ಇನ್ನೂ ನನ್ನ ಮನಃಪಟಲದಲ್ಲಿ ಹಸಿರಾಗಿಯೇ ಇದೆ. ಅಲ್ಲಿ ಅವರು "ಮೊಸರೊಳಗೆ ಬೆಣ್ಣೆ ಮುಳುಗಿದಾಗ ಪ್ರಳಯ ಆಗುತ್ತದೆಂದು" ಹೇಳಿ ಬರೆದಿದ್ದರು. ಅದನ್ನೋದಿ ನಾವೆಲ್ಲಾ ತುಂಬಾ ನಕ್ಕಿದ್ದೆವು. ಅದು ನೆನಪಾಗಿ ಅವರಿಗೇ ಕಾಲ್ ಮಾಡಿದೆ. ವಿಷಯ ತಿಳಿದ ಅವರು ಕೊಟ್ಟ ಮೊದಲ ಪ್ರತಿಕ್ರಿಯೆ ಒಂದು ದೊಡ್ಡ ನಗು. "ಮೊಸ್ರಲ್ಲಿ ಬೆಣ್ಣೆ ಮುಳ್ಗ್‌ದಾಗ ಪ್ರಳಯ ಆಗ್ತು ಹೇಳಿದ್ನಲೇ.. ಈಗೆಂತ ಮೊಸ್ರೊಳ್ಗೆ ಬೆಣ್ಣೆ ಮುಳ್ಗಿದ್ದಡ?" ಎಂದು ಕೇಳಿದಾಗ ನಗು ಈ ಕಡೆಯೂ ಹರಿದಿತ್ತು. ಮಾತು ಮಾತಲ್ಲಿ ಅವರೊಂದು ಸ್ವಾರಸ್ಯಕರ ಘಟನೆಯನ್ನೂ ಹಂಚಿಕೊಂಡರು.

ಕೆಲವು ವರುಷಗಳ ಹಿಂದೆ ಜನಪ್ರಿಯ ವಾರ ಪತ್ರಿಕೆಯೊಂದು ೨೦೦೦ದಲ್ಲಿ ಜಗತ್ ಪ್ರಳಯವಾಗುತ್ತದೆ ಎಂದು ಪ್ರಕಟಿಸಿತ್ತು. ಅತಿ ರಂಜಿತ, ಅದ್ಭುತ ಚಿತ್ರಗಳ ಮೂಲಕ ಓದುಗರನ್ನು ಸೆಳೆದಿತ್ತು. ನಾನಾಗ ಬಿ.ಎಸ್ಸಿ. ಓದುತ್ತಿದ್ದೆ. ಇನ್ನೂ ನನಗೆ ನೆನಪಿದೆ. ಕನ್ನಡ ಎಂದರೆ ಎನ್ನಡ ಎನ್ನುವ ಕಲವರೂ ಆಗ ಈ ಪತ್ರಿಕೆಯನ್ನು ತಂದು ಎಲ್ಲೆಂದರಲ್ಲಿ ಓದುತ್ತಿದ್ದರು. ಲ್ಯಾಬ್, ಕಾರಿಡಾರ್ ಎಲ್ಲ ಕಡೆ ಇದೇ ಸುದ್ದಿ... ಸಾವಿನ ಭೀತಿ ಅವರನ್ನು ಆ ರೀತಿ ಆಡಿಸಿತ್ತೇನೋ...! ಇದೇ ಸಮಯದಲ್ಲೇ ಭುವನೇಶ್ವರಿಯವರು ಕಾಲೇಜ್ ವಾರ್ಷಿಕೋತ್ಸವಕ್ಕೆಂದು ಗೆಸ್ಟ್ ಆಗಿ ಹೋಗಿದ್ದರಂತೆ. ಆ ಕಾಲೇಜಿನ ಪ್ರಿನ್ಸಿಪಾಲರು ಇವರಲ್ಲೊಂದು ಕೋರಿಕೆ ಮಾಡಿಕೊಂಡರಂತೆ. "ದಯವಿಟ್ಟು ನೀವು ನಿಮ್ಮ ಭಾಷಣದಲ್ಲಿ ಸ್ವಲ್ಪ ತಿಳಿ ಹೇಳಿ... ಪ್ರಳಯ ಆಗೋವಂಥದ್ದು ಏನೂ ಇಲ್ಲ ಎಂದು. ಭಯ ಬೇಡ ಎಂದು ಹೇಳಿ... ಹಲವು ವಿದ್ಯಾರ್ಥಿಗಳು ಭಯ ಪಟ್ಟು, ನಿರುತ್ಸಾಹಗೊಂಡು ಓದೂ ಬೇಡ ಎಂದು ಹೇಳುತ್ತಿದ್ದಾರೆ.." ಎಂದರಂತೆ! ಇದನ್ನು ಕೇಳಿ ಭುವನೇಶ್ವರಿ ಅವರಿಗೆ ತುಂಬಾ ಆಶ್ಚರ್ಯವಾಗಿತ್ತಂತೆ. ಅಂತೆಯೇ ಅಲ್ಲಿಯೂ ತಮ್ಮ ಹಾಸ್ಯ ಚಟಾಕಿಯ ಮೂಲಕ ನಗೆಬುಗ್ಗೆಯನ್ನು ಚಿಮ್ಮಿಸಿ, ಪ್ರಳಯದ ಭಯವನ್ನೋಡಿಸಲು ಬಹುಪಾಲು ಯತ್ನಿಸಿದ್ದರಂತೆ. ಇದನ್ನು ಕೇಳಿ ನನಗೆ ಮತ್ತೂ ಆಶ್ಚರ್ಯ ವಾಯಿತು.. "ಹೀಗೂ ಉಂಟೆ? " ಎಂದೆನಿಸಿಯೇ ಬಿಟ್ಟಿತು.

"ಪ್ರಳಯ ಅನ್ನೋದು ಕಪೋ ಕಲ್ಪಿತ. ಎಲ್ಲವೂ ಒಂದೇ ದಿವಸ ನಾಶ ಆಗೋಕೆ ಸಾಧ್ಯನೇ ಇಲ್ಲ. ಹಾಂ.. ಮನುಷ್ಯನ ದುರಾಸೆಗಳಿಂದಾಗಿ ಅಪಾರ ಜೀವ ಹಾನಿ ಆಗಬಹುದು. ಅದು ಆಗಾಗ ಆಗುತ್ತಲೇ ಇದೆ ಕೂಡ.. ಸುಮ್ಮಸುಮ್ಮನೇ ಜನರನ್ನು ಭೀತಿಗೊಳಿಸುವ ಯತ್ನವಿದೆಲ್ಲಾ.." ಎಂದು ಮೂರು ವರುಷದಲ್ಲಿ ಆಗುವ ದಿಢೀರ್ ಪ್ರಳಯದ ಯೋಚನೆಯೇ ಶುದ್ಧ ತಪ್ಪು ಎಂದರು.
ತದನಂತರ ನಾನು ಕೆಲವು ಬ್ಲಾಗಿಶ್ಚರುಗಳನ್ನು, ಸ್ನೇಹಿತರನ್ನು ಅವರ ಅಭಿಪ್ರಾಯ ತಿಳಿಯಲು ಸಂಪರ್ಕಿಸಿದೆ. ಅವರ ಉತ್ತರಗಳು, ಅನಿಸಿಕೆಗಳು ಈ ಕೆಳಗಿನಂತಿವೆ..

೧. "ವಿಕಾಸವಾದ"ದಲ್ಲಿ ತೊಡಗಿರುವ ವಿಕಾಸ್ ಹೆಗಡೆ - "ಹೌದಾ.. ಹಾಂಗೆ ಹೇಳಿದ್ವಾ? ಅಯ್ಯೋ... ಸರಿ ಹಾಂಗಿದ್ದ್ರೆ... ಮೂರುವರ್ಷದೊಳ್ಗೆ ನಾನು ಮದ್ವೆ ಮಾಡ್ಕೊಬೇಕು... ಬ್ಯಾಚುಲರ್ ಆಗಿ ಸಾಯೋಕೆ ಇಷ್ಟ ಇಲ್ಲೆ.. ಹ್ಹ ಹ್ಹ ಹ್ಹ.." (ಹ್ಮಂ.. ಆದಷ್ಟು ಬೇಗ ನಾಲ್ಕನೆ ಗೆಟಗರಿಯಿಂದ ಭಡ್ತಿ ಪಡೀತೆ ಹೇಳಾತು ಹಾಂಗಿದ್ರೆ....:) )
೨. "ನಾವೇಕೆ ಹೀಗೆ?" ಎನ್ನುವ ಲಕ್ಷ್ಮಿ - "ನಂಬೊಲ್ಲ ಒಂದ್ಸರ್ತಿ.. ನಂಬೊಲ್ಲ ಎರಡಸರ್ತಿ.. ನಂಬೊಲ್ಲ ಮೂರಸರ್ತಿ....ಮಾಯನ್ ಕ್ಯಾಲೆಂಡರ್ ತುಂಬಾ ಕ್ರೂಡ್ ರಚನೆ ಆಗಿರೋದು. ಅವರು ಚಂದ್ರನ ದೂರ ತಿಳ್ಕೊಂಡ ತಕ್ಷಣ ಅವ್ರ ಎಲ್ಲಾ ಪ್ರಿಡಿಕ್ಷನ್ನೂ ಸರಿ ಎನ್ನೋಕೆ ಆಗಲ್ಲ.. ಇದೆಲ್ಲಾ ಬರೀ ಸುಳ್ಳು.."

೩. "ಅಂತರ್ವಾಣಿ"ಯನ್ನು ಹಂಚಿಕೊಂಡ ಜಯಶಂಕರ್ - "ಹೌದಾ ತೇಜಕ್ಕ.. ಗೊತ್ತಿರ್ಲಿಲ ನೋಡಿ.. ಒಂದು ಲೆಕ್ಕದಲ್ಲಿ ಒಳ್ಳೇದು ಬಿಡಿ.. ಮನೆಕಟ್ಟಿ ಸಾಲದಲ್ಲಿದ್ದೀನಿ. ಜೀವ್ನ ಪೂರ್ತಿ ತೀರ್ಸೊದಲ್ಲೇ ಆಗೊತ್ತೆ ಅಂತಿದ್ದೆ. ಪ್ರಳಯ ಆಗಿ ಸಾಲದಿಂದನೂ ಮುಕ್ತಿ ಸಿಗೊತ್ತೆ ಬಿಡಿ... :) " (ಇದನ್ನು ಕೇಳಿ ಮನಃಪೂರ್ತಿ ನಕ್ಕು ಬಿಟ್ಟಿದ್ದೆ..:)).
೪. "ತುಂತುರು ಹನಿ" ಸಿಂಪಡಿಸುವ ಶ್ರೀನಿಧಿ - "ಅಯ್ಯೋ ನಿಂಗೆ ತೀರಾ ಮಳ್ಳಾಗೋಜೆ ಅತ್ಗೆ.. ನೀ ಇಂಥದ್ದನ್ನೆಲ್ಲಾ ಪ್ರಶ್ನೆ ಕೇಳೋದೇ ಅಲ್ಲಾ.." (ಮುಂದೆ ನಾನು ಮಾತಾಡೋ ಹಾಂಗೇ ಇಲ್ಲಾ.. ಗಪ್‌ಚುಪ್!)
೫. "ಮೌನ ಗಾಳ" ಹಾಕಿ ಕುಂತ ಸುಶ್ರುತ - "ಹೋದ್ರೆ ಹೋಗ್ಲಿ ಬಿಡೆ.. ಎಲ್ರ ಜೊತೆ ನಾವೂ ಹೋಗೋದಾದ್ರೆ ಹೋಗಾಣ ಅದ್ಕೇನಂತೆ.. ಎಲ್ಲಾ ಒಂದ್ಸಲ ಫಿನಿಶ್ ಆಗ್ಬೇಕು.. ಒಬ್ಬಿಬ್ರು ಉಳ್ಯೋದಾದ್ರೆ ಬೇಡ.. ಎಲ್ಲಾ ಹೋಗ್ಲಿ.. ನಂದಂತೂ ಸಹಮತಿ ಇದ್ದು ನೋಡು.." (ಪ್ರಳಯಕ್ಕೆ ಇವರ ಸಹಮತಿ ಇದೆ,, ನೋಟೆಡ್!!! :) ).

೬. "ಮನಸೆಂಬ ಹುಚ್ಚು ಹೊಳೆಯಲ್ಲಿ" ಈಜುತ್ತಿರುವ ಚಿತ್ರ - "ಅಯ್ಯೋ.. ನಿಂಗೇನಾಯ್ತೆ? ಇನ್ನೂ ನೀನು ಈ ಪ್ರಳಯದ ಹುಚ್ಚಿಂದ ಹೊರ್ಗೆ ಬಂದಿಲ್ವಾ? ಹ್ಮ್ಂ.. ಹಾಂಗಾಗೋದಾದ್ರೆ ಅಮೇರಿಕಾಕ್ಕೆ ಪ್ಲೇನ್ ಟಿಕೆಟ್ ಮೊದ್ಲೇ ಮಾಡ್ಸಿ ಇಟ್ಕೋಬೇಕು.. " ನಂಗೆ ಆಶ್ಚರ್ಯ "ಯಾಕೆ ಚಿತ್ರಕ್ಕ? ಎಲ್ಲಾ ಕಡೆನೂ ಪ್ರಳಯ ಆಗಿರೊತ್ತಲ್ಲಾ..?" "ಅಯ್ಯೋ ಅವ್ರ ಪ್ರಕಾರ ಡಿಸೆಂಬರ್ ೨೧ಕ್ಕೆ ಅಲ್ದಾ? ಅಮೇರಿಕಾಕ್ಕೆ ೨೧ ಡೇಟ್ ಆಗೋದು ಮರುದಿನ...ಸೋ... ಈ ದಿನ ನಾವು ಪ್ಲೇನ್ ಹತ್ತಿದ್ರೆ ಅಲ್ಲಿ ಪ್ರಳ ಆಗೋಮುಂಚೆ ಇರ್ತಿವಿ. ಭಾರತದಲ್ಲಿ ಪ್ರಳಯ ಶುರು ಆಗೋವಾಗ ನಾವು ಪ್ಲೇನ್‍ನಲ್ಲಿ ಇರ್ತಿವಲ್ಲಾ... ಹಾಗೆಯೇ ಅಲ್ಲಿ ಪ್ರಳಯ ಶುರು ಆಗೋ ಮೊದಲು ಮತ್ತೆ ಹೊರಟ್ರೆ ಇಲ್ಲಿಗೆ ನೀರ ಮೇಲೆ ಲ್ಯಾಂಡ್ ಆಗ್ಬಹುದು ನೋಡು.." (ಭಾರೀ ಯೋಚನೇನೆ.. ಆದ್ರೆ ಜೊತೆಗೆ ಹಡಗಿನ ಟಿಕೆಟ್ ಕೂಡಾ ಮಾಡ್ಸಿ ಇಟ್ಕೊಂಡಿರ್ಬೇಕು... ಲ್ಯಾಂಡ್ ಆಗೋಕೆ ಹಡಗು ಬೇಕು ತಾನೆ? :)).
೭. "ಕ್ಷಣ ಚಿಂತನೆಯ" ಚಂದ್ರಶೇಖರ್ - "ಹೌದು ಮೇಡಂ... ಹೀಗೂ ಉಂಟೆ? ಪ್ರೋಗ್ರಾಂನಲ್ಲಿ "ಬ್ರಹ್ಮ ರಹಸ್ಯ" ಅಂತ ಬಂದಿತ್ತು ಅದನ್ನ ನೋಡಿದ್ದೆ. ಈ ಬ್ರಹ್ಮ ರಹಸ್ಯ ಬರೆದಿದ್ದು ಪಿ.ಯು.ಸಿ ಓದಿದ ಹುಡುಗನಂತೆ ಮೇಡಂ... ಅದು ಭಾಗ-೧, ೨ ಹಾಗೂ ೩ ಇದೆಯಂತೆ.. ನಂಬೋಕಂತೂ ಆಗೊಲ್ಲಾ ನೋಡಿ..." (ಓಹೋ ಇದು ಬ್ರಹ್ಮ ರಹಸ್ಯದ ಕಥೆಯೋ... ಹಾಗಿದ್ದರೆ ಇದೊಂದು ಸುಳ್ಳಿನ ಬ್ರಹ್ಮ ಗಂಟೇ ಸರಿ ಎಂದೆನಿಸಿತು ನನಗೆ).
೮. "ಮಧುವನದಲ್ಲಿ" ವಿಹರಿಸುತ್ತಿರುವ ಮಧುಸೂದನ್ - "ಇದ್ರಲ್ಲಿ ನಂಬಿಕೆ ಇಲ್ಲಾ...ಸಾಕಷ್ಟು ವೈಜ್ಞಾನಿಕ ಸಾಕ್ಷಿಗಳೂ ಇಲ್ಲಾ... ಆದ್ರೆ ಒಂದೇ ಸಲ ಎಲ್ಲರೂ ಹೋಗೋದಾದ್ರೆ ಒಳ್ಳೇದೇ.. ಆಗ್ಲಿ ಬಿಡು.... ಎಲ್ಲರಿಗೂ ಒಟ್ಟಿಗೇ ಮೋಕ್ಷ ಸಿಕ್ಕಿದಂತಾಗ್ತು.."

ತಮ್ಮ ತಮ್ಮ ಕ್ಷೇತ್ರದಲ್ಲಿ ವಿಜ್ಞಾನಿಗಳಾಗಿರುವ "ಸಾಗರದಾಚೆಯ ಇಂಚರ"ಹೊರಡಿಸುವ ಡಾ.ಗುರುಮೂರ್ತಿ ಹಾಗೂ "ಜಲನಯನ"ದ ಮೂಲಕ ನೋಡುವ ಡಾ.ಆಝಾದ್ ಅವರು ವೈಜ್ಞಾನಿಕ ನೆಲೆಯಲ್ಲಿ ಈ ವಿಷಯವನ್ನು ಅಲ್ಲಗಳೆದರು.

ಗುರುಮೂರ್ತಿ - "ನೋ ಛಾನ್ಸ್... ಪ್ರಳಯ ಆಗೋಕೆ ಸಾಧ್ಯನೇ ಇಲ್ಲಾ. ಇನ್ನೇನಾದ್ರೂ ಭೂಮಿ ತನ್ನ ಅಕ್ಷಾಂಶದಿಂದ ದಿಕ್ಕು ತಪ್ಪಿದರೆ ಮಾತ್ರ ಹಾಗಾಗಬಹುದಷ್ಟೇ. ಆದರೆ ಅದೂ ಅಷ್ಟು ಸುಲಭವಲ್ಲ. ಇನ್ನು ಸಮುದ್ರ ಮಟ್ಟ ಪ್ರತಿ ವರ್ಷ ಏರುತ್ತಲೇ ಇದೆ. ಇದೆಲ್ಲಾ ಗ್ಲೋಬಲ್ ವಾರ್ಮಿಂಗ್‌ನಿಂದಾಗುತ್ತಿದ್ದು.. ಇದು ಸುಮಾರು ೨೦೦ ವರ್ಷಗಳಿಂದಲೂ ನಡೆಯುತ್ತಿದೆ. ಎಲ್ಲೋ ಒಂದಿಷ್ಟು ಭೂಭಾಗಳು ಮುಳುಗಡೆ ಆಗಬಹುದು ಕ್ರಮೇಣ... ಬಿಟ್ಟರೆ ಸಂಪೂರ್ಣ ನಾಶ ಸಾಧ್ಯವೇ ಇಲ್ಲ. ಇನ್ನು ಮನುಷ್ಯರೇ ಅಣುಬಾಂಬುಗಳ ಮೂಲಕ ಕೃತ್ರಿಮ ಪ್ರಳಯ ತಂದರೆ ತರಬಹುದಷ್ಟೇ. ಸ್ವಾಭಾವಿಕವಾಗಿ ಭೂಮಿಯ ಸಂಪೂರ್ಣ ನಾಶ ಆಗೊಲ್ಲ.. ನನ್ನ ಅಭಯ ಇದ್ದು..೨೦೦% ಹೆದ್ರಿಕೆ ಬೇಡ.. ಪ್ರಳಯ ಆಗ್ತಿಲ್ಲೆ....:)" (ಇಷ್ಟು ಅಭಯ ಸಿಕ್ಕರೆ ಸಾಕಲ್ಲಾ....:) ).

ಆಝಾದ್ - "ನಿಮ್ಗೆ ಈ ಪ್ರಳಯದ ಯೋಚ್ನೆ ಯಾಕೆ ತಲೆ ತಿನ್ತಾ ಇದೆ?... ಆ ಮಾಯನ್ ಕ್ಯಾಲೆಂಡರ್ ಅವರ ಸಂಖ್ಯಾಕ್ರಮ ವಿಚಿತ್ರವಾಗಿದೆ. ಹಾಗೊಂದು ವೇಳೆ ೨೦೧೨ಗೆ ಪ್ರಳಯ ಆಗ್ಬೇಕು ಅಂತಾಗಿದ್ರೆ ಅದ್ರ ಇಫೆಕ್ಟ್ ಸುಮಾರು ೫೦-೬೦ ವರ್ಷಗಳ ಮೊದಲೇ ಆಗಬೇಕಾಗುತ್ತಿತ್ತು. ಸಿಂಪಲ್ ರೊಟೇಷನ್, ರೆವಲ್ಯೂಷನ್, ಲೈಟ್ ಟ್ರಾವೆಲ್, ಎನರ್ಜಿ ಡಿಸಿಪೀಷನ್ ಇವುಗಳನ್ನು ಲೆಕ್ಕ ಹಾಕಿ ಎಲ್ಲ ಡೈನಾಮಿಸಮ್ ಎಕ್ಸ್ಟ್ರಾಪೊಲೇಟ್ ಮಾಡಿದ್ರೆ.. ಇದು ಇನ್ನು ಮೂರುವರ್ಷದೊಳಗಂತೂ ಅಸಾಧ್ಯ. ರಾತ್ರಿ ಆಗುವ ಮೊದಲು ಸಂಜೆ ಆಗ್ಬೇಕು ತಾನೆ? ಹಾಗೇ ಏನಾದ್ರೂ ಒಂದು ದೊಡ್ಡ ವಿಪತ್ತು ಬರುವ ಮೊದಲು ಅದರ ಮುನ್ಸೂಚನೆ ಸಿಗ್ಬೇಕು. ದೊಡ್ಡ ಉಲ್ಕೆಯೋ ಇನ್ನಾವುದೋ ಈ ಭೂಮಿಯನ್ನು ಬಡಿಯಬೇಕೆಂದರೆ ಅದು ಬಹು ದೂರವನ್ನು ಕ್ರಮಿಸಬೇಕಾಗುತ್ತದೆ. ಅದಕ್ಕೆ ಸಮಯ ಹಿಡಿಯುವುದು ಮತ್ತು ಅದು ನಮ್ಮ ಗಮನಕ್ಕೂ ಬರುವುದು. ನಿಮಗೆ ಇನ್ನೊಂದು ವಿಷಯ ಗೊತ್ತೇ?.... ಸೌದಿ ರಾಷ್ಟ್ರಗಳಲ್ಲಿ ಇತ್ತೀಚಿಗೆ ಕೆಲವಡೆ ಸ್ನೋ ಫಾಲ್ ಆಗುತ್ತಿದೆಯಂತೆ..!!! ಸುಮಾರು ೫೩ ಡಿಗ್ರಿ ತಾಪಮಾನ ಇರುವ ಪ್ರದೇಶವದು. ಜನರ ದುರಾಸೆ, ಪ್ರಕೃತಿಯೊಂದಿಗಿನ ದುರ್ವರ್ತನೆಯಿಂದ ಹವಾಮಾನ ವೈಪರೀತ್ಯವಾಗುತ್ತಿದೆ. ಇದರಿಂದ ಅನೇಕ ಜೀವ ಹಾನಿ ಮುಂದೆ ಆಗಬಹುದಷ್ಟೇ. ಅಲ್ಲಾರಿ ಅಷ್ಟಕ್ಕೂ ಪ್ರಳಯ ಆಗೇ ಆಗೊತ್ತೆ ಅಂತಾದ್ರೆ ಏನು ಮಾಡೋಕೆ ಆಗೊತ್ತೆ? ಒಂದು ಬಿಲ್ಡಿಂಗ್ ಬೀಳೊತ್ತೆ ಅಂದ್ರೆ ಜನ ಓಡಿ ಬಚಾವ್ ಆಗ್ತಾರೆ. ಆದ್ರೆ ಇಡೀ ಭೂಮಿನೇ ಇರೊಲ್ಲ ಅಂದ್ರೆ ಏನು ಮಾಡೋಕೆ ಆಗೊತ್ತೆ?...." (ಹ್ಮ್ಂ.. ನಿಜ. ಆಗದೇ ಹೋಗದೇ ಇರೋ ವಿಚಾರಕ್ಕೆ ಜನ ಯಾಕೆ ಇಂದೇ ಈಗಲೇ ತಲೆ ಕೆಡಿಸಿಕೊಂಡು ಕಾಣದ ಪ್ರಳಯದ ಆತಂಕಕ್ಕೆ ಕೆಲ ಕಾಲವಾದರೂ ತುತ್ತಾಗುತ್ತಾರೋ ನಾ ಕಾಣೆ!!!).

ಇವಿಷ್ಟು ನನ್ನ ಮಂಥನದೊಳಗೆ ಸಿಕ್ಕ ವಿಚಾರಧಾರೆಗಳು. ಅದೆಷ್ಟೋ ಸಹಮಾನಸಿಗರಲ್ಲೂ ಕೇಳಬೇಕೆಂದಿದ್ದೆ. ಆಗಲಿಲ್ಲ. ಈ ವಿಷಯದ ಕುರಿತಾಗಿ ನೀವೂ ನಿಮ್ಮ ಅಭಿಪ್ರಾಯಗಳನ್ನು... ಇತರರಿಂದ ಕೇಳಿದ, ಓದಿದ ವಿಷಯಗಳನ್ನು ಇಲ್ಲಿ ಹಂಚಿಕೊಳ್ಳಬೇಕಾಗಿ ವಿನಂತಿ.

ಇನ್ನು ಕೊನೆಯದಾಗಿ ನಾನು ಅಂದರೆ "ಮಾನಸ" -

ಆ ಚಾನಲ್‌ನಲ್ಲಿ ಈ ಪ್ರೋಗ್ರಾಂ ಪ್ರಸಾರವಾಗಿದ್ದು ನಾನು ನೋಡಲಿಲ್ಲ ಎಂದು ಮೊದಲೇ ಹೇಳಿದ್ದೇನೆ. ಮೊದಲಸಲ ನಾನು ಕೇಳಿದ್ದೇ ನಮ್ಮ ಮನೆಯ ಕೆಲಸಕ್ಕೆ ಬರುತ್ತಿದ್ದ ಸರೋಜಳ ಮೂಲಕ. ಆಮೇಲೆ ನೋಡಿದರೆ ನಮ್ಮ ಫ್ಲ್ಯಾಟ್ ತುಂಬಾ ಇದೇ ಸುದ್ದಿ. ಏನೋ ಆಗುವುದಿದೆ.. ಅದು ನಾಳೆಯೇ ಘಟಿಸುತ್ತದೆ ಅನ್ನೋ ರೀತಿಯಲ್ಲಿ ಎಲ್ಲರೂ ಇದನ್ನೇ ಮಾತಾಡಿಕೊಳ್ಳುತ್ತಿದ್ದರು. "ಅಲ್ಲಾರೀ.. ಹೀಗಾದ್ರೆ ಹೇಗೆ? ಎಷ್ಟು ಕಷ್ಟ ಪಟ್ಟು ಮಗ್ನ "ಆ" ಸ್ಕೂಲ್‌ಗೆ ಒಂದೂವರೆ ಲಕ್ಷ ಕೊಟ್ಟು ಸೇರ್ಸಿದೀವಿ. ಅದೆಲ್ಲಾ ವೇಸ್ಟ್ ಆಗೊಲ್ವಾ? ಛೇ ಏನೂ ಬೇಡ ಅನ್ಸೊತ್ತೆ ಇದ್ನ ಕೇಳಿದ್ರೆ.." ಎಂದು ಒಬ್ಬರು ಅಂದ್ರೆ... "ನಾನಂತೂ ನನ್ನ ಮಗ್ಳ ಇಂಜಿನೀಯರಿಂಗ್ ಸೀಟ್‌ಗೆ ಡೊನೇಷನ್ ಒಟ್ಟು ಹಾಕಲ್ಲ ಇನ್ನು.. ಸುಮ್ನೇ ಒದ್ದಾಡಿ ಸಾಯೋಕಾ...!" ಅಂತ ಇನ್ನೊಬ್ರ ವರಾತ. "ಯೇ ಸಬ್ ಪ್ರಭೂಕಿ ಪ್ರಕೋಪ್ ಹೈ... ಅಗರ್ ಆಪ್ ಕಲ್ಕಿ ಭಗವಾನ್ ಕೋ ಪೂಜತೇ ಹೈಂ ತೋ ಕುಛ್ ನಹಿ ಹೋಗಾ.. ಆಜ ಸೇ ಹೀ ಕಲ್ಕಿ ಭಗವಾನ್ ಕೋ ಮಾನಿಯೇ,,"(="ಇದೆಲ್ಲಾ ದೇವರ ಕೋಪದಿಂದಾಗುತ್ತಿರುವುದು.. ನೀವು ಕಲ್ಕಿ ಭಗವಾನ್‌ರನ್ನು ಪೂಜಿಸಿ.. ಅವರನ್ನು ಪೂಜಿಸುವವರಿಗೆ ಎನೂ ಆಗೊಲ್ಲವಂತೆ... ಇವತ್ತಿನಿಂದಲೇ ಅವರ ಅನುಯಾಯಿಯಾಗಿ...") ಅಂತ ಮತ್ತೋರ್ವರ ಪುಕ್ಕಟೆ ಸಲಹೆ. ಈ ಕಲ್ಕಿ ಭಗವಾನ್‌ನ ಮಾಯೆಯ ಪ್ರಭಾವದ ಕುರಿತು ಈ ಮೊದಲೇ ಲೇಖನವೊಂದನ್ನು ಬರೆದಿದ್ದೆ. ಓದಿದ್ದರೆ ನಿಮಗೂ ಅನಿಸಬಹುದು ಈಗ "ಜೈ ಕಲ್ಕಿ ಭಗವಾನ್" ಎಂದು :) ಸಾವಿಗಂಜಿ ಬದುಕಲು ಹೆದರುವ ಮನುಷ್ಯರಿಗೆ ಏನೆನ್ನೋಣ? ಪ್ರಳಯಾಂತಕವೀ ಪ್ರಳಯದ ಆತಂಕ ಎಂದೆನಿಸಿತು!

ಪ್ರಳಯ ಅನ್ನೋದು ಎಂದೋ ಮುಂದಾಗುವಂತದ್ದಲ್ಲ. ಅದು ಆಗದೆಯೂ ಇರಬಹುದು. ಆಗಲೂ ಬಹುದು. ಆದಿ ಇದ್ದ ಮೇಲೆ ಅಂತ್ಯ ಇದ್ದೇ ಇದೆ ಎಂದು ನಂಬುವವಳು ನಾನು. ಆದರೆ ಆ ಅಂತ್ಯ ದಿಢೀರ್ ಎಂದು... ಇಂಥದ್ದೇ ದಿನವೆಂದು ಹೇಳಿದರೆ ಖಂಡಿತ ನಂಬಲಾಗದು. ಮುಂದಾಗುವ ದುರಂತದ ಸಣ್ಣ ಚಿತ್ರಣ ಇಂದೇ ಕೆಲವು ಕಡೆ ದೊರಕಿದೆ.. ದೊರಕುತ್ತಲೂ ಇದೆ... ಮುಂದೆಯೂ ಕಾಣಸಿಗುವುದು. ಮನುಷ್ಯ ತನ್ನ ಉಳಿವಿಗೆ ಹಾಗೂ ಅಳಿವಿಗೆ ತಾನೇ ಜವಾಬ್ದಾರ ಎಂದು ಮೊದಲು ತಿಳಿಯಬೇಕು. ಪ್ರಕೃತಿಯೊಡನೆ ಚೆಲ್ಲಾಟ ಪ್ರಾಣ ಸಂಕಟ ಎನ್ನು ಸತ್ಯ ಮನದಟ್ಟಾದರೆ ಇನ್ನೂ ಸ್ವಲ್ಪ ಕಾಲ ಈ ಕಲಿಯುಗ ಬಾಳಿಕೆಗೆ ಬರಬಹುದು. ಹುಟ್ಟು ಹೇಗೆ ಅನಿಶ್ಚಿತವೋ ಸಾವೂ ಹಾಗೆಯೇ... ಯಾರ ಸಾವನ್ನೂ ಯಾರೂ ಮೊದಲೇ ನಿಶ್ಚಯ ಮಾಡಲಾರರು. ಅದನ್ನು ಊಹಿಸಬಹುದಷ್ಟೇ! ಊಹೆ ಯಾವತ್ತೂ ಸತ್ಯವಲ್ಲ. ಅದಕ್ಕೆ ಅದರದ್ದೇ ಆದ ಅಸ್ತಿತ್ವವೂ ಇಲ್ಲ! ಪ್ರಳಯವೇ ಆಗಿರಲಿ..ಇಲ್ಲಾ ಇನ್ನಾವುದೇ ವಿಷಯವಾಗಿರಲಿ.. ಅದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯದೇ.. ಕೇವಲ ಕಪೋ ಕಲ್ಪಿತ ಸುದ್ದಿಯನ್ನು ನಂಬುವುದರ ಮೂಲಕ ನಾವು ನಮ್ಮ ಇಂದಿನ ಬಾಳ್ವೆಯನ್ನು ಮಾತ್ರ ನಾಶ ಮಾಡಿಕೊಳ್ಳುತ್ತೇವೆ. ಇದು ಮಾತ್ರ ಸತ್ಯ.

- ತೇಜಸ್ವಿನಿ ಹೆಗಡೆ.

ಗುರುವಾರ, ಅಕ್ಟೋಬರ್ 22, 2009

"ನಿಂತು ನೋಡುವ ಜನರೇ ನಿಮ್ಮ ಸರದಿ ದೂರವಿಲ್ಲ"

ನಾ ಮೆಚ್ಚಿದ ಕೃತಿ(ಒಳಗೊಂದು ಕಿರುನೋಟ)-೩

"ನಿಂತು ನೋಡುವ ಜನರೇ ನಿಮ್ಮ ಸರದಿ ದೂರವಿಲ್ಲ" - ಹೀಗೊಂದು ಎಚ್ಚರಿಕೆಯ ಜೊತೆಗೆ ಅನ್ಯಾಯ ಎಲ್ಲೇ ಆಗಲಿ ಅದನ್ನು ಹಿಮ್ಮೆಟ್ಟಿಸಲು ಸಂಘಟಿತ ಪ್ರತಿಭಟನೆಯೇ ಸರಿಯಾದ ಮದ್ದು ಎನ್ನುವ ಸುಂದರ ಸಂದೇಶವನ್ನೂ ನೀಡುವ ಅಪರೂಪದ ಕಾದಂಬರಿ "ಯಾದ್ ವಶೇಮ್". ಇತ್ತೀಚಿಗೆ ನಾನು ಓದಿದ ಕಾದಂಬರಿಗಳಲ್ಲೇ ಬಹು ಇಷ್ಟಪಟ್ಟ, ಸತ್ಯಕ್ಕೆ ಬಲು ಹತ್ತಿರವಾದ ಈ ಕೃತಿಯನ್ನು ಬರೆದವರು ಪ್ರಸಿದ್ಧ ಲೇಖಕಿ "ನೇಮಿಚಂದ್ರ".


೧೯೪೩ರ ಸುಮಾರಿಗೆ ಯುರೋಪಿನಿಂದ "ಹಿಟ್ಲರ್"ನ ಪಾಶವೀ ಹಿಡಿತದಿಂದ ಹೇಗೋ ಪಾರಾಗಿ ಶಾಂತಿದೂತನಾಗಿದ್ದ ಬಾಪೂಜಿಯ ನಾಡಿಗೆ ಓಡಿ ಬಂದ ಹ್ಯಾನಾಳ ಬದುಕಿನ ಕಥೆಯಿದು. ಆದರೆ ಮೇಲ್ನೋಟಕ್ಕೆ ಹಾಗೆನಿಸಿದರೂ ಇದು ಪ್ರತಿಯೊಬ್ಬನ ಬದುಕನ್ನೇ ಬಗೆದು ನೋಡುವ, ಆತನ ಎದೆಯಾಳದೊಳಗೆ ಬೇರೂರಿದ ದ್ವೇಷವನ್ನೇ ಅಲುಗಾಡಿಸುವ, ಪ್ರೀತಿಯ, ಶಾಂತಿಯ ಹೊಸ ಬೀಜ ಬಿತ್ತುವ...ಒಟ್ಟಿನಲ್ಲಿ ಬದುಕನ್ನು ಪ್ರೀತಿಸುವ ಹಾಗೆ ಪ್ರೀತಿಸಲು ಕಲಿಸುವ ಸುಂದರ ಕಥೆಯಿದು. ಇದರಲ್ಲಿ ಅಸಹನೀಯ ನೋವಿದೆ, ಯಾತನೆಯಿದೆ, ಪಾಪಪ್ರಜ್ಞೆಯಿದೆ, ಆಕ್ರೋಶವಿದೆ, ತಿರಸ್ಕಾರವಿದೆ, ಕೊನೆಯಿಲ್ಲದ ಪ್ರಶ್ನೆಗಳಿವೆ, ಸಿಕ್ಕು ಸಿಕ್ಕಾದ ಉತ್ತರಗಳಿವೆ...ಆದರೆ ಜೊತೆಜೊತೆಗೇ ಎಲ್ಲವುದಕ್ಕೂ ಕಾರಣ ನಾವೇ ಅಂದರೆ ಮನುಷ್ಯರೇ ಎನ್ನುವ ಸಮರ್ಪಕ ಉತ್ತರವೂ ಇದೆ.

ಅಂದು ನಾಜಿಗಳಿಂದಾಗುತ್ತಿದ್ದ ಅತ್ಯಾಚಾರಗಳಿಂದ ಮುಕ್ತಿಗೊಳಿಸಿರೆಂದು ಜಗತ್ತನ್ನೇ ಮೊರೆಯಿಟ್ಟಿದ್ದರು ಯಹೂದಿಯರು. ಅದರಲ್ಲೂ ವಿಶೇಷವಾಗಿ ಬ್ರಿಟಿಷರ ಸಹಾಯವನ್ನು ನಿರೀಕ್ಷಿಸಿದ್ದರೆಂದು ಈ ಪುಸ್ತಕವು ಹೇಳುತ್ತದೆ. ಆದರೆ ಸಕಾಲದಲ್ಲಿ ನೆರವು ಸಿಗದೇ, ಹಿಟ್ಲರನ ನರಮೇಧ ಕ್ಯಾಂಪ್‌ಗೆ ಸುಮಾರು ಆರು ಮಿಲಿಯ ಅಮಾಯಕ ಯಹೂದಿಯರು ಬಲಿಯಾಗುತ್ತಾರೆ. ಒಂದೇ ಉಸುರಿಗೆ ಅವರೆಲ್ಲರ ಪ್ರಾಣ ಹೋಗಿರುವುದಿಲ್ಲ. ಕ್ರಮೇಣ, ಹಂತ ಹಂತವಾಗಿ, ನಿಧಾನವಾಗಿ, ಅತ್ಯಂತ ಕ್ರೂರ ರೀತಿಯಲ್ಲಿ ಬದುಕನ್ನು ಇಷ್ಟಿಷ್ಟೇ ಎಂಬಂತೆ ಕಸಿದುಕೊಂಡಿದ್ದ ಆತ!! ಅಂತಹ ಒಂದು ದುರ್ದಿನಗಳಲ್ಲಿ ತಾಯಿ, ಅಕ್ಕ ಹಾಗೂ ತಮ್ಮನನ್ನು ನಾಜಿಗಳು ತನ್ನ ಕಣ್ಮುಂದೇ ಎಳೆದೊಯ್ದ ಕರಾಳ ನೆನಪನ್ನೇ ಹೊತ್ತು ಅಸಹಾಯಕತೆ ಬೆರೆತ ಕ್ರೋಧ, ನೋವು, ಅನಾಥಪ್ರಜ್ಞೆಯೊಂದಿಗೆ ತನ್ನ ತಂದೆಯೊಡಗೂಡಿ, ಅಹಿಂಸೆಯಿಂದ ಮಾತ್ರ ವಿಮೋಚನೆ ಸಾಧ್ಯವೆಂದು ಸಾರುತ್ತಿದ್ದ ಗಾಂಧಿಯ ನಾಡಿಗೆ ಬಂದವಳು ಹ್ಯಾನಾ. ಬ್ರಿಟಿಷರ ನೆರವನ್ನು ಆಶಿಸಿ ಸಿಗದೇ ಅವರಿಂದಲೇ ತುಳಿತಕ್ಕೊಳಗಾಗಿ ಹೋರಾಡುತ್ತಿದ್ದ ಭಾರತ ಅವಳಿಗೆ ಹೊಸ ಬದುಕನ್ನೇ ನೀಡಿತು. ಇಲ್ಲಿನ ಸಂಸ್ಕೃತಿ, ನೆಲ, ಜನ ಎಲ್ಲವೂ ಅವಳ ಕತ್ತಲು ತುಂಬಿದ್ದ ಮನಸಿಗೆ, ಬಾಳಿಗೆ ಬೆಳಕಾಗಿ ಬಂದವು. ತನ್ನ ಗತಕಾಲದ ನೆನಪಿನ ಕಡೆಯ ಕೊಂಡಿಯಾಗಿದ್ದ ತಂದೆಯನ್ನೂ ಕಳೆದುಕೊಂಡ ಮೇಲೆ ಹ್ಯಾನಾ "ಅನಿತಾ" ಆದಳು. ಆಶ್ರಯವಿತ್ತು ಆದರ ತೋರಿದ ಮನೆಯವರ ಮಗನನ್ನೇ ಮದುವೆ ಆಗಿ ತಾನು ಕನಸಲ್ಲೂ ಆಶಿಸದ ಸುಂದರ ಸುಭದ್ರ ಬದುಕನ್ನು ಪಡೆದಳು. ಅನಿತಾ ಎಂದು ಅನಿಸಿಕೊಂಡ ಮೇಲೂ ಹ್ಯಾನಾಳಾಗಿಯೇ ಅವಳು ಬದುಕಲು ಸಾಧ್ಯವಾಗಿದ್ದು ಆಕೆ ಇಲ್ಲಿ ಅಂದರೆ ಈ ನಾಡಿನಲ್ಲಿದ್ದುದರಿಂದ ಮಾತ್ರ ಎಂಬುದನ್ನು ಲೇಖಕಿ ಹಲವಾರು ಉದಾಹರಣೆಗಳ ಮೂಲಕ, ಘಟನಾವಳಿಗಳ ಮೂಲಕ ಮನಗಾಣಿಸಿದ್ದಾರೆ. ಅವೆಲ್ಲಾ ಬಲು ಸುಂದರವಾಗಿವೆ. ಮಾಸದ ನೆನಪನ್ನು ನಮ್ಮೊಳಗೂ ಮೂಡಿಸುತ್ತವೆ.

ಲೇಖಕಿಯೇ ಒಂದು ಕಡೆ ಹೇಳಿದಂತೆ, "ಮನುಷ್ಯನನ್ನು ಧರ್ಮದ ಹೆಸರಿನಲ್ಲಿ ಒಡೆಯುವ ಚರಿತ್ರೆಗಿಂತ ಒಂದುಗೂಡಿಸುವ ಚರಿತ್ರೆಯೇ ಮಹತ್ವದ್ದು..." - ಈ ಒಂದು ವಾಕ್ಯ ಅದೆಷ್ಟು ನಿತ್ಯ ಸತ್ಯ ಎನ್ನುವುದು ಈ ಕಾದಂಬರಿಯನ್ನೋದಿದಮೇಲೆ ಸರಿಯಾಗಿ ಮನದಟ್ಟಾಗುತ್ತದೆ. ಯಾವುದೋ ಪೂರ್ವಾಗ್ರಹಕ್ಕೀಡಾಗಿ, ಕೇವಲ ನೆಪವನ್ನು ಮಾತ್ರ ದ್ವೇಷಕ್ಕೆ ಕಾರಣವನ್ನಾಗಿಸಿಕೊಂಡು ಅಮಾಯಕ ಯಹೂದಿಗಳ ಮಾರಣಹೋಮ ಮಾಡಿದ ಹಿಟ್ಲರ್ ಹಾಗೂ ಆತನ ಸಂಗಡಿಗರಾದರೂ ನೆಮ್ಮದಿಯ ಬದುಕು ಕಂಡಿರಬಹುದೇ? ಖಂಡಿತ ಇಲ್ಲವೆನ್ನುತ್ತದೆ ಮನಸ್ಸು. "ಬದುಕಬಹುದು ಹಂಚಿಕೊಂಡು ಬದುಕಬಹುದೇ ಕಿತ್ತುಕೊಂಡು?" ಎಂದು ಹ್ಯಾನಾಳ ಮೂಲಕ ಪ್ರಶ್ನಿಸುವ ಲೇಖಕಿಯ ಈ ಒಂದು ಪ್ರಶ್ನೆಗೆ ಉತ್ತರವೂ ನಮ್ಮೊಳಗೇ ಅಡಗಿದೆ. ಹಿಟ್ಲರ್ ಅವನ ಜನಾಂಗಕ್ಕೆ ಸ್ವಾತಂತ್ರ್ಯ ಪಡೆದುಕೊಂಡದ್ದು ಇತರರ ಸ್ವಾತಂತ್ರ್ಯವನ್ನು ಹರಣಮಾಡುವುದರ ಮೂಲಕ. ಆದರೆ ನಾವು ಬಹು ಭಾಗ್ಯಶಾಲಿಗಳು. ನಮ್ಮ ಸ್ವಾತಂತ್ರ್ಯವನ್ನು ಕಸಿದಾಳುತ್ತಿದ್ದ ಬ್ರಿಟಿಷರನ್ನು ಅಹಿಂಸಾ ಮಾರ್ಗವನ್ನೇ ಪ್ರಮುಖವಾಗಿ ಅನುಸರಿಸಿ ಹೊರದಬ್ಬಿದೆವು. "ನಮ್ಮ ಸ್ವಾತಂತ್ರ್ಯ ಯಾರದೋ ಸ್ವಾತಂತ್ರ್ಯದ ಹರಣದ ಮೇಲೆ ನಿಂತಿಲ್ಲ" ಎನ್ನುವ ಸಮಾಧಾನವಾದರೂ ನಮ್ಮೊಂದಿಗಿದೆ.

ಬಿಟ್ಟು ಬಂದ ಆ ನೆಲದವಳಾಗಿಯೂ ಬಾಳದೇ, ಈಗಿರುವ, ಆಶ್ರಯಿಸಿದ ಈ ನೆಲವನ್ನೂ ಸೇರದೇ ಅನಾಥಪ್ರಜ್ಞೆಯಿಂದ ಬಳಲುವ ಅದೆಷ್ಟು ಹ್ಯಾನಾರನ್ನು ನಾವು ಅಫಘಾನಿಸ್ತಾನ, ಪಾಕಿಸ್ತಾನ, ಅಸ್ಸಾಂ, ಬಾಂಗ್ಲಾದೇಶ ಇತ್ಯಾದಿ ನಿರಾಶ್ರಿತರಲ್ಲಿ ಕಂಡಿಲ್ಲ?! ಇವರೆಲ್ಲಾ ಯಾರದೋ ಅಟ್ಟಹಾಸಕ್ಕೆ, ಅಂಹಕಾರಕ್ಕೆ, ಮೂರ್ಖತನದ ಪರಮಾವಧಿಗೆ ಬಲಿಯಾದವರು. ಏನೂ ತಪ್ಪನ್ನು ಮಾಡದೇ ತಮ್ಮವರಿಂದ, ಮನೆ, ಮಠದಿಂದ ವಂಚಿತರಾದವರು. ಅಂದು ಹಿಟ್ಲರ್‌ನ ಹುಚ್ಚುತನದ ಪರಮಾವಧಿಯನ್ನು ಇಡೀ ಜಗತ್ತೇ ನಿಂತು ನೋಡಿತ್ತು ನಿಜ.. ಆದರೆ ಇಂದು ಅದೆಷ್ಟೋ ಹಿಟ್ಲರ್‌ಗಳು ಅಸಂಖ್ಯಾತ ಅಮಾಯಕರ ನರವಧೆಯನ್ನು ಬಹು ಸುಲಭವಾಗಿ ಯಾವುದೇ ನಾಜಿ ಕ್ಯಾಂಪಿನ ಸಹಾಯವಿಲ್ಲದೆಯೇ ಮಾಡುತ್ತಿದ್ದಾರೆ.. ನಮ್ಮ ಕಣ್ಮುಂದೆಯೇ. ಇಂದೂ ನಾವು ಅಂದರೆ ಜಗತ್ತು ದೂರದಲ್ಲೆಲ್ಲೋ ನಡೆಯುವ ಈ ನರಮೇಧವನ್ನು ನಿಂತು ನೋಡುತ್ತಲೇ ಇದ್ದೇವೆ.!!! "ನಿಂತು ನೋಡುವ ಜನರೇ ನಿಮ್ಮ ಸರದಿ ದೂರವಿಲ್ಲ" ಎಂದು ಹ್ಯಾನಾ ಎಚ್ಚರಿಸುವ ಈ ಮಾತು ಕಾದಂಬರಿಯನ್ನೋದಿದ ಮೇಲೆಯೂ ಸದಾ ತಲೆಯೊಳಗೇ ಗುಂಯ್ಯ್ ಎನ್ನುತ್ತಿರುತ್ತದೆ. ಎಚ್ಚರಿಕೆಯ ಗಂಟೆಯನ್ನು ಅರಿತು ನಡೆದರೆ ನಮ್ಮ ಸರದಿಯನ್ನಾದರೂ ನಾವು ತಪ್ಪಿಸಿಕೊಳ್ಳಬಹುದೇನೋ ಎಂದೆನಿಸುತ್ತದೆ.

"ಟ್ರಾನ್ಸ್‌ಯುರೇನಿಕ್ಸ್" ಕಂಡು ಹಿಡಿದ ಜಗತ್ ಪ್ರಸಿದ್ಧ ಯಹೂದಿ ವಿಜ್ಞಾನಿ ಲೀ ಮೆಟ್ನರ್. ಈಕೆ ಕೂಡಾ ಹಿಟ್ಲರ್‌ನ ಹಿಡಿತದಿಂದ ಪಾರಾಗಲು ಪರದಾಡಿದವಳು. ಅಂದು ಯಹೂದಿಗಳಲ್ಲಿ ಕೆಲವರು ತಲೆಮರೆಸಿಕೊಂಡು ತಮ್ಮ ವ್ಯಕ್ತಿತ್ವವನ್ನೇ ನಶಿಸಿಕೊಂಡು ಬಾಳಿದರೆ ಅಸಂಖ್ಯಾತರು ಆತನ ಕ್ರೂರತ್ವಕ್ಕೆ, ಪಾಶವೀ ಕೃತ್ಯಕ್ಕೆ ಗುರಿಯಾಗಿ, ನಾಜಿ ಕ್ಯಾಂಪ್‌ಗಳಲ್ಲಿ ಸತತ ಅತ್ಯಾಚಾರಕ್ಕೆ ಒಳಗಾಗುತ್ತಾ ಬದುಕಿ ಬದುಕಿ ಸತ್ತವರು. ಎಷ್ಟು ಅಮಾನವೀಯವಾಗಿ ಪಶುವಂತೆ, ಮನುಷ್ಯರೆಂದೂ ಪರಿಗಣಿಸದೇ ಆತ ಯಹೂದಿಗಳನ್ನು ನಡೆಸಿಕೊಂಡನೆಂದು ಹ್ಯಾನಾಳ ಅಕ್ಕ ರೆಬೆಕ್ಕಳ ಕಥೆಯ ಮೂಲಕ ನಮಗೆ ತೋರಿಸುತ್ತಾರೆ ನೇಮಿಚಂದ್ರ. ಓದುವುದೇ ಅಷ್ಟು ಕಷ್ಟವೆನಿಸುವಾಗ ಅದು ಹೇಗೆ ಆ ಮುಗ್ಧರು ಸಹಿಸಿದರೋ!!!? ಆ ಭಗವಂತನ ಬಿಟ್ಟರೆ ಹಿಟ್ಲರ್ ಒಬ್ಬನಿಗೆ ತಿಳಿದರಬಹುದೇನೋ!!

ಹಿಂದೆ ಆಗಿದ್ದ ಅನ್ಯಾಯವನ್ನು ಮರೆತೋ ಇಲ್ಲಾ ಅಂದು ಆಗಿದ್ದ ಅನ್ಯಾಯದ ಸೇಡಿಗೋ ಎಂಬಂತೆ ಇಂದು ಯಹೂದಿಗಳ ರಾಷ್ಟ್ರ ಇಸ್ರೇಲ್ ವರ್ತಿಸುತ್ತಿರುವುದು ಈ ಕಾದಂಬರಿಯಲ್ಲಿ ನಿಚ್ಚಳವಾಗಿ ಕಾಣುತ್ತದೆ. ಒಡೆದು ಆಳುವ ನೀತಿಯನ್ನು ಅನುಸರಿಸುವ ಬ್ರಿಟಿಷರು, ೧೯೪೮ರಲ್ಲಿ ಯಹೂದಿಗಳಿಗಾಗಿಯೇ, ಅಂದು ಮುಸಲ್ಮಾನರು ಆಳುತ್ತಿದ್ದ ಪ್ಯಾಲಿಸ್ಟೈನ್ ಅನ್ನು ನೀಡುತ್ತಾರೆ. ಅಲ್ಲಿದ್ದ ಮುಸಲ್ಮಾನರನ್ನು ಹೊರಗಟ್ಟುವ ಯಹೂದಿಗಳು ಇಸ್ರೇಲ್ ಅನ್ನು ಸ್ಥಾಪಿಸುತ್ತಾರೆ. ಅಳಿದುಳಿದ ಪ್ಯಾಲಿಸ್ಟೈನ್‌ರು ತುಂಡು ನೆಲದಲ್ಲಿ ಅವರದೇ ರಾಷ್ಟ್ರದಿಂದ ಬೇರಾಗಿ ಜೀವಿಸುತ್ತಾರೆ. ಎಂತಹ ವಿಪರ್ಯಾಸ!!! ಹಿಂದೆ ಜರ್ಮನಿಯಲ್ಲಿ ನಡೆದ ಚರಿತ್ರೆಯನ್ನೇ ಮರೆತು ಇಂದು ಹೊಸ ಇತಿಹಾಸವನ್ನು ಬರೆದವರು ಇದೇ ಯಹೂದಿಗಳು. ಆದರೆ ಇದಕ್ಕೆಲ್ಲಾ ಕಾರಣವೇನು? ಯಾಕೆ ಇತಿಹಾಸ ಮತ್ತೆ ಮತ್ತೆ ಪುನರಾವರ್ತಿಸುತ್ತದೆ? "ಇತಿಹಾಸವನ್ನು ಮರೆತವರು ಮತ್ತೆ ಚರಿತ್ರೆಯ ಪುನಾರವರ್ತನೆಗೆ ಕಾರಣರಾಗುತ್ತಾರೆ.. ನೆನಪಿರಲಿ.. ನೆನಪಿರಲಿ.." ಎಂದು ಇಸ್ರೇಲಿನ "ಯಾದ್ ವಶೇಮ್" ಮ್ಯೂಸಿಯಂನ ಗರುಡಗಂಬದಲ್ಲಿ ಕೆತ್ತಿದ ಈ ಸಾಲು ಎಷ್ಟು ಪರಮಸತ್ಯವೆಂದು ಅನಿಸುತ್ತದೆ.

ತಮ್ಮ ಇತಿಹಾಸವನ್ನೇ ಮರೆತು ಇಸ್ರೇಲ್ ಈಗ ಸದಾ ಕಾಲ ಕದನದಲ್ಲೇ ತೊಡಗಿದೆ. ಶಾಂತಿಗಾಗಿ ಪರಿತಪಿಸಿದ ಅದೇ ಜನ ಇಂದು ಪ್ರತಿ ನಿಮಿಷವೂ ಯುದ್ಧದ ಭೀತಿಯಲ್ಲಿ, ಅಶಾಂತಿಯ ನಡುವೆಯೇ ಜೀವಿಸುತ್ತಿದ್ದಾರೆ. ಒಂದು ಕಡೆ ಲೇಖಕಿ ಹ್ಯಾನಾಳ ಮೂಲಕ ಹೀಗೆ ಕೇಳುತ್ತಾರೆ.... "ತುಂಡು ನೆಲ ಗಾಜಾವನ್ನು ಪ್ಯಾಲಿಸ್ಟೈನ್‌ರಿಗೇ ಬಿಟ್ಟುಕೊಟ್ಟು ಇಡಿಯ ಇಸ್ರೇಲ್ ಅನ್ನು ಶಾಂತಿಯಿಂದ ಜೀವಿಸಲು ಬಿಡಬಹುದಲ್ಲಾ" ಎಂದು. ಇದು ಹೌದು..ನಿಜ... ಎಂದೆನಿಸಿದರೂ ನನ್ನ ಮನದೊಳಗೊಂದು ಪ್ರಶ್ನೆ ಮೂಡುತ್ತದೆ. ಇಂದು ನಾವೂ ಅದೇ ಕೆಲಸವನ್ನು ಮಾಡಿಯೂ ಏಕೆ ಶಾಂತಿಯಿಂದ ಯಾವುದೇ ಭಯೋತ್ಪಾದನೆಯ ಭೀತಿಯಿಂದ ಜೀವಿಸುತ್ತಿಲ್ಲ? ಗಾಂಧಿಜಿ ಅಂದು ತೆಗೆದುಕೊಂಡ ನಿರ್ಧಾರ ಸರಿಯೆಂದೆಣಿಸಿದರೆ, ಪಾಕಿಸ್ತಾನದ ಹುಟ್ಟು ಚಿರ ಶಾಂತಿ, ಸ್ನೇಹದ ಬಾಂಧವ್ಯಕ್ಕಾಗಿಯೇ ಇತ್ತೆಂದು ಸಮರ್ಥಿಸಿಕೊಂಡರೆ, ಇಂದಿನ ಭಾರತದ/ಭಾರತೀಯರ ಸ್ಥಿತಿಯೇ ಪರಿಹಾಸಕ್ಕೆ ಒಳಗಾಗದೇ? ಕುಟಿಲ ನೀತಿಯ ಇಂಗ್ಲೀಷರೇನೋ ಇಬ್ಭಾಗ ಮಾಡಿದರು. ಸೌಹಾರ್ದತೆಯ ಸಂಕೇತವಾಗಿ ಭಾರತವೂ ಸುಮ್ಮನಾಯಿತು. ಆದರೆ ಅದೇ ತುಂಡು ನೆಲ ಪಡೆದುಕೊಂಡ ಪಾಕಿಸ್ತಾನ ಮಾಡಿದ್ದೇನು? ಮಾಡುತ್ತಿರುವುದೇನು? ಇಸ್ರೇಲ್ ಕೂಡಾ ಈ ಭೀತಿಯಿಂದಲೇ ಎಲ್ಲವನ್ನು ತನ್ನೊಳಗೇ ಎಳೆದುಕೊಳ್ಳಲು ಹೊರಟಿರಬಾರದೇಕೆ? ಭವಿಷ್ಯದ ಚಿಂತೆ ಭೂತದ ಕರಿ ನೆನಪನ್ನೇ ಅಳಿಸಿಹಾಕಿರ ಬಾರದೇಕೆ? "ಕಾಲದ ಕಡಲಲಿ ನೆನಪಿನ ದೋಣಿಯ ತೇಲಿಸಿದವರಿಲ್ಲ..." ಅಲ್ಲವೇ?

ಆದರೆ ಹ್ಯಾನಾಳ ಒಂದು ಮಾತಿಗೆ ನನ್ನ ಸಂಪೂರ್ಣ ಒಪ್ಪಿಗೆ ಇದೆ. "ಯುದ್ಧದಲ್ಲಿ ಸೋತವರು ಗೆದ್ದವರು ಎಂಬವರಿಲ್ಲ. ಇಲ್ಲಿ ಗೆದ್ದವರೂ ಸೋಲುತ್ತಾರೆ." ನಿಜ. ಪ್ರೀತಿ, ಸ್ನೇಹವೂ ಇದೇ ತರಹವೇ. ಇಲ್ಲಿಯೂ ಸೋಲು ಗೆಲುವೆಂಬುದಿಲ್ಲ. ಆದರೆ ಇಲ್ಲಿ ಮಾತ್ರ ಸೋತವರೂ ಗೆದ್ದಿರುತ್ತಾರೆ. ಸೋತರೂ ಗೆಲ್ಲುವ ಈ ಪ್ರೀತಿಯನ್ನು ಹೊರಹಾಕಿ ಗೆದ್ದರೂ ಸೋಲುವ ಯುದ್ಧವನ್ನು, ದ್ವೇಷವನ್ನು ಮನುಷ್ಯ ಏಕೆ ಅಪ್ಪಿಕೊಳ್ಳುತ್ತಾನೋ?

ಯುದ್ಧ ಹುಟ್ಟುವುದು ಕೆಲವು ನರರೂಪಿ ರಾಕ್ಷಸರ ಹೃದಯದಲ್ಲಿ ಎನ್ನುತ್ತಾಳೆ ಹ್ಯಾನಾ.. ಒಪ್ಪುವೆ. ಆದರೆ ನನ್ನ ಪ್ರಕಾರ ಇದಕ್ಕೆ ಪ್ರಮುಖ ಕಾರಣ ಮೂರು. ಅಹಂ, ಸ್ವಾರ್ಥದ ಪರಮಾವಧಿ ಹಾಗೂ ಕೊಳಕು ರಾಜಕೀಯ. ಹಿಟ್ಲರ್‌ನ ಹುಚ್ಚಿಗೂ ಆತನ ಪಾಶವೀ ಕೃತ್ಯಕ್ಕೂ ಇದೇ ಕಾರಣವೆನ್ನುತ್ತದೆ ಚರಿತ್ರೆ ಹಾಗೂ ಈ ಕಾದಂಬರಿ. ಜಗತ್ತು, ಆ ದೇಶದ ಜನರೂ, ಅಮಾಯಕ ಯಹೂದಿಯರ ಬಲಿಗೆ ಮೂಕ ಪ್ರೇಕ್ಷಕರಾಗಿರಲೂ ಈ "ಸ್ವಯಂ ಲಾಭ"ವೇ ಕಾರಣವೆನ್ನುತ್ತಾಳೆ ಹ್ಯಾನಾ. ಅದು ನಿಜ ಕೂಡ. ಶ್ರೀಮಂತ ಯಹೂದಿಗಳ ಪರ್ಯಾವಸಾನದಿಂದ ಅವರ ಹಣ, ಆಸ್ತಿ ಎಲ್ಲಾ ಸಿಗುವುದು ಯಾರಿಗೆ ಹೇಳಿ? ಈ ಒಂದು ಲಾಭಕೋರತನವೇ ಬಹುಶಃ ಅಂದು ಅಲ್ಲಿಯ ಆರ್ಯ ಜನರು ನಿಂತು ನೋಡಲು ಸಾಧ್ಯವಾಗಿದ್ದು. ತಮ್ಮ ಬುಡಕ್ಕೆ ಬಂದಾಗ, ಜಗತ್ತನ್ನೇ ಆಳುವ ಭ್ರಮೆಗೆ ಹಿಟ್ಲರ್ ಒಳಗಾದಾಗ ಅಮೇರಿಕಾ, ಬ್ರಿಟನ್ ಮುಂತಾದ ಬಲಿಷ್ಠರು ಎದುರು ನಿಂತಿದ್ದು. ಈ ಸರದಿಗಾಗಿ ಕಾಯುವ ಅಗತ್ಯವಿತ್ತೆ? ಆರು ಮಿಲಿಯ ಯಹೂದಿಗಳ ಅಂತ್ಯಕ್ಕೆ ತಾಳ್ಮೆಯ ಲೇಪನ ಬೇಕಿತ್ತೆ? ನರರೂಪಿ ರಾಕ್ಷಸರ ಅಟ್ಟಹಾಸಕ್ಕೆ ಮನುಷ್ಯತ್ವವನ್ನೇ ಕಳೆದುಕೊಂಡು ಲಾಭಕ್ಕಾಗಿ ಸುಮ್ಮನಿದ್ದ ಅಂದಿನ ಜರ್ಮನರನ್ನು ಇತಿಹಾಸ ಕ್ಷಮಿಸಿದರೂ ಅವರ ಅಂತರಾತ್ಮ ಕ್ಷಮಿಸಿರಬಹುದೇ? ಊಹೂಂ ಇಂತಹ ಪ್ರಶ್ನೆಗಳಿಗೆ ಉತ್ತರ ನಾವೇ ಕಂಡು ಹಿಡಿದುಕೊಳ್ಳಬೇಕಿದೆ.

ಮುಂದೆ ಎಂದೂ ಹಿಟ್ಲರ್ ನಮ್ಮೊಳಗೆ, ನಮ್ಮ ನಡುವೆ, ನಮ್ಮಿಂದ ದೂರವೇ ಆಗಿರಲಿ ಹುಟ್ಟದಿರುವಂತೆ ನೋಡಬೇಕು. ಆತನ ದಮನಕ್ಕೆ ನಮ್ಮ ಎದೆಯಗೂಡನ್ನೆ ಬಗೆದು ಅದರೊಳಗೆ ಬಿತ್ತಿರುವ ನೆಪಮಾತ್ರದ ದ್ವೇಷವನ್ನೇ ಕೆಡವಿಹಾಕಬೇಕು. ಹೊಸ "ಮಾಯಾದೀಪವನ್ನು" ಬೆಳಗಿದರೆ ಮಾತ್ರ ಸ್ವಾರ್ಥದ ಕತ್ತಲೆ ನಮ್ಮ ಮನದ ಮೂಲೆಯಿಂದಲೂ ಮರೆಯಾಗಬಹುದು. "ಇತಿಹಾಸ ತಿಳಿದರಬೇಕು ಅಷ್ಟೇ. ಆದರೆ ಅದೇ ಆದರ್ಶವಾಗಿರಬಾರದು" ಎಂಬ ಸುಂದರ ಸಂದೇಶವನ್ನು ನೀಡುವ ಈ ಕಾದಂಬರಿ ಇಸ್ಲಾಂ, ಯಹೂದಿ, ಕ್ರಿಶ್ಚನ್ - ಈ ಮೂರು ಧರ್ಮಗಳೂ ಹೇಗೆ ಒಂದು ಜೆರೂಸಲೇಂ‌ನೊಳಗೇ ಬೆಸೆದಿವೆ.. ಯಾವ ರೀತಿ ಈ ಮೂರು ಧರ್ಮಗಳು ಒಂದೇ ಹಳೆಯ ಒಡಂಬಡಿಕೆಯಡಿ ನೆಲೆನಿಂತಿವೆ ಎನ್ನು ಸತ್ಯವನ್ನೂ ಕಾಣಿಸುತ್ತದೆ. ಈವರೆಗೆ ನಾವು ಓದಿದರದ, ತಿಳಿದಿರದ ಹಲವಾರು ವಿಷಯಗಳ ಕುರಿತು, ನಿಷ್ಪಕ್ಷ್ಯಪಾತವಾಗಿ ಹೊಸ ಬೆಳಕನ್ನು, ಆಯಾಮವನ್ನು ನೀಡಿದ್ದಾರೆ ಲೇಖಕಿ.

"ನಮ್ಮ ನಡುವೆ ಎಲ್ಲಿ ಕೂಡ ಹುಟ್ಟಿಬಿಡಬಲ್ಲ, ನಮ್ಮೊಳಗೇ ಜನಿಸಿಬಿಡಬಲ್ಲ ಹಿಟ್ಲರ್‌ನನ್ನು ತಡೆಹಿಡಿವ ಹೊಣೆ ನಮ್ಮದು" ಎನ್ನುವ ಸುಂದರ, ಅಪೂರ್ವ ಸಂದೇಶವನ್ನು ನೀಡುವ "ಯಾದ್ ವಶೇಮ್" ಎಲ್ಲರೂ ಓದಬೇಕಾದ, ಸಂಗ್ರಹಕ್ಕೆ ಯೋಗ್ಯವಾದ ಅತ್ಯುತ್ತಮ ಪುಸ್ತಕ ಎನ್ನಲು ಯಾವುದೇ ಸಂಶಯವಿಲ್ಲ.

- ತೇಜಸ್ವಿನಿ ಹೆಗಡೆ

ಬುಧವಾರ, ಅಕ್ಟೋಬರ್ 14, 2009

ಕತ್ತಲೆಯಿಂದ ಬೆಳಕಿನೆಡೆಗೆ....

ಹಚ್ಚೇವು ಸಂತಸದ ದೀಪ....

ಮನದ ಮೂಲೆಯ
ಕಡೆಯ ಕೊಳೆಯನೂ
ಕಳೆದು ಹಾಕುವ ಬನ್ನಿರಿ...
ಕನಸುಗಳ ರಂಗೋಲಿಯೆಳೆದು
ನಡುವೆ ದೀಪವ ಹಚ್ಚಿರಿ...


ನರನೊಳಿಹ ಅಸುರನನ್ನು
ನಶಿಸಿ ಬೆಳಗುವ ಹಣತೆಯು
ಬೆಳಗಬೇಕಿದೆ...
ಎಲ್ಲ ಮನದೊಳು
ಹೊಸತು ಆಕಾಶಬುಟ್ಟಿಯು.


ದಣಿದ ಮನಸಿಗೆ,
ಹಸಿದ ತನುವಿಗೆ,
ಅನ್ನ, ಸೂರು ಬೇಕಿದೆ...
ಅದನು ಇತ್ತು, ಆತ ನಕ್ಕರೆ,
ಹಗಲಲೂ ದೀಪಾವಳಿ...

-ತೇಜಸ್ವಿನಿ ಹೆಗಡೆ

-----------------------

ಜಲಪ್ರಳಯದಿಂದ ತತ್ತರಿಸಿದ ಜನತೆಯ ಮನದೊಳು ಹೊಸ ಆಶಾದೀಪವನ್ನು ಬೆಳಗುವ ದೀಪಾವಳಿ ಈ ವರುಷದ್ದಾಗಲೆಂದು ಹಾರೈಸುತ್ತೇನೆ. ಇದಕ್ಕಾಗಿ ನಮ್ಮಿಂದಾದಷ್ಟು...ನಮ್ಮಿಂದಾಗುವ ಸಹಾಯವನ್ನು ನಾವು ಮಾಡುವ ಸಂಕಲ್ಪದ ಜ್ಯೋತಿಯನ್ನು ಮನದೊಳಗೆ ಬೆಳಗಿಸಿ, ನನಗಾಗಿ... ನಾನು ಮಾತ್ರ ಎಂಬ ಸ್ವಾರ್ಥಪೂರಿತ ನರಕಾಸುರನ್ನು ಹೊಡೆದೋಡಿಸುವ.


ಎಲ್ಲರಿಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು.

ಜೊತೆಗೆ ಜಿ.ಎಸ್.ಶಿವರುದ್ರಪ್ಪನವರ ಈ ಸುಂದರ ಕವಿತೆ ನಿಮ್ಮೆಲ್ಲರಿಗಾಗಿ...


ಹಣತೆ

ಹಣತೆ ಹಚ್ಚುತ್ತೇನೆ ನಾನೂ

ಈ ಕತ್ತಲನ್ನು ಗೆದ್ದು ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ

ಲೆಕ್ಕವೇ ಇರದ ದೀಪಾವಳಿಯ ಹಡಗುಗಳೆ

ಇದರಲ್ಲಿ ಮುಳುಗಿರುವಾಗ

ನಾನು ಹಚ್ಚುವ ಹಣತೆ ಶಾಶ್ವತವೆಂಬ ಭ್ರಾಂತಿ ನನಗಿಲ್ಲ...


ಹಣತೆ ಹಚ್ಚುತ್ತೇನೆ

ಕತ್ತಲೆಯನ್ನು ದಾಟುತ್ತೇನೆಂಬ ಭ್ರಮೆಯಿಂದಲ್ಲ

ಇರುವಷ್ಟು ಹೊತ್ತು ನನ್ನ ಮುಖ ನೀನು

ನಿನ್ನ ಮುಖ ನಾನು

ನೋಡಬಹುದೆಂಬ ಒಂದೇ ಒಂದು ಆಸೆಯಿಂದ


-----------------------

ಬುಧವಾರ, ಅಕ್ಟೋಬರ್ 7, 2009

ಕವನ

ವಿಶ್ವಾಸ

ಸಿಗಲಾರದು ಯಾರಿಗೂ ಅದು
ಒಂದೇ ಕ್ಷಣದಲಿ,
ಕಳೆದುಕೊಳ್ಳುವರು ಅದನ
ಒಂದೇ ನಿಮಿಷದಲಿ!

ಕಸಿಯಲಾಗದು ಅದನ,
ನಶಿಸಬಹುದು ನಿಧಾನ....
ಸ್ನೇಹದಿಂದ ನಡೆ,
ಪ್ರೀತಿಯಿಂದ ಪಡೆ,
ಆದರೂ ಅದು....

ಗಾಳಿಗೋಪುರದಂತೆ,
ತೂರಿ ಹೋಗಬಹುದು!?
ಮರೀಚಿಕೆಯಂತೆ,
ದೂರವಾಗಬಹುದು!
ಮಂಜುಕರಗುವಂತೆ,
ನೀರಾಗಬಹುದು!
ನನ್ನಿಂದ, ನಿನ್ನಿಂದ,
ಈ ಜಗದಿಂದ...!!!!

(ಕೆಲವು ವರ್ಷಗಳ ಹಿಂದೆ ತರಂಗದಲ್ಲಿ ಪ್ರಕಟವಾಗಿದ್ದ ನನ್ನ ಕವನ...)

ಮಂಗಳವಾರ, ಅಕ್ಟೋಬರ್ 6, 2009

ಎಚ್ಚರಿಕೆ!!!!


ಬ್ಲಾಗ್ ಜಗತ್ತೊಳಗೊಂದು ವಿಕೃತ ಮನಸ್ಸಿದೆ....... ಎಚ್ಚರಿಕೆ!!!!



ನಿನ್ನೆ ರಾತ್ರಿಯವರೆಗೂ ನಾನು ಈ ಒಂದು ಕಹಿ ಸತ್ಯದಿಂದ ವಂಚಿತಳಾಗಿದ್ದೆ. ಅದೇನೆಂದರೆ... ನಮ್ಮೊಳಗೇ ಓರ್ವ ವ್ಯಕ್ತಿ ಹೆಣ್ಣಿನ ಹೆಸರನ್ನಿಟ್ಟುಕೊಂಡು ಓರ್ವ ಟೀನೇಜ್ ಹುಡುಗಿ ಹೇಗೆ ಅನುಭಾವಿಸುತ್ತಾಳೋ ಅದೇ ರೀತಿಯಂತೇ ಯೋಚಿಸುತ್ತಾ ಅದನ್ನೇ ತನ್ನ ಬ್ಲಾಗಿನಲ್ಲಿ(ಹುಡುಗಿ ಹೆಸರಿನಲ್ಲಿ..) ಹಾಕುತ್ತಿದ್ದ. ಈ ಬ್ಲೋಗ್ ಎಷ್ಟೋ ಜನರಿಗೆ ಗೊತ್ತು. ಅದರೊಳಗಿನ ಬರಹಗಳೆಲ್ಲಾ ಸುಪರಿಚಿತ. ತುಂಬಾ ಚೆನ್ನಾಗಿಯೂ ಇದ್ದವು... ಹಾಗಾಗೇ ಬಹಳಷ್ಟು ಜನ ಓದಿದ್ದರು.. ಕಮೆಂಟಿಸಿದ್ದರು. ಆದರೆ ಅಸಲಿಗೆ ಅದು ಹುಡುಗಿಯಲ್ಲ.. ನಮ್ಮೊಳಗೇ ಸುಪರಿಚಿತವಾಗಿರುವ ಓರ್ವನದ್ದು ಎಂದು ತಿಳಿಯಿತು.!!!!

ಏಷ್ಟೋ ಜನ ಅಂಕಣಕಾರರು ಹುಡುಗಿಯ ಹೆಸರಲ್ಲಿ ಬರಹಗಳನ್ನು, ಕಥೆಗಳನ್ನು, ಲೇಖನಗಳನ್ನು ಬರೆದಿದ್ದಾರೆ. ನಮಗೆಲ್ಲಾ ಗೊತ್ತು. ಅದು ತಪ್ಪೂ ಅಲ್ಲ.. ಅವರವ ಇಚ್ಚೆ. ವೈಯಕ್ತಿಕ ಅಭಿಪ್ರಾಯವಷ್ಟೇ. ಇದರಿಂದ ಯಾವುದೇ ಅಪಾಯವೂ ಇಲ್ಲ.

ಆದರೆ ಅದೇ ಬೇನಾಮಿ ಹೆಸರನಡಿ ನಮಗೆ ಮೈಲ್/ಚಾಟಿಂಗ್ ಮಾಡಿ, ನಮ್ಮ ಭಾವನೆಗಳ ಜೊತೆ, ಸೂಕ್ಷ್ಮ ಸಂವೇದನೆಗಳ ಜೊತೆ ಆಟವಾಡಿ ಸಂತೋಷಪಡೆಯುವ ಮನಃಸ್ಥಿತಿ ಖಂಡಿತ ಆರೋಗ್ಯಕರವಾಗಿದ್ದಲ್ಲ. ವಿಕೃತವೇ ಸರಿ. ಇದೇ ಅನುಭವವೇ ನನ್ನೊಂದಿಗಾಗಿದ್ದು.

ಕರ್ನಾಟಕದ ಹುಡುಗಿಯ ಹೆಸರಿನಡಿ ಬ್ಲಾಗ್ ನಡೆಸುತಿದ್ದ ಆ ವ್ಯಕ್ತಿ ಅದೇ ಹೆಸರಿನೊಂದಿಗೆ ನನ್ನೊಡನೆ ಮೈಲ್ ಸಂಪರ್ಕ ಬೆಳೆಸಿದ. ಬ್ಲಾಗ್ ಬರಹಗಳಿಂದ ಸುಪರಿಚಿತ ಹುಡುಗಿ..ಉತ್ತಮ ಬರಹಗಾರ್ತಿ(????) ಎಂದು ಎಣಿಸಿ ನಾನೂ ಉತ್ತರಿಸುತ್ತಾ ಹೋದೆ. ಮೈಲ್‌ಗಳಲ್ಲೆಲ್ಲೂ "ಆಕೆ" "ಆತ" ಎನ್ನುವ ಯಾವ ಸೂಚನೆಯೂ ತಿಳಿಯಲಿಲ್ಲ. ಅಷ್ಟೊಂದು ಹುಡುಗಿಯಂತೇ ಬರವಣಿಗೆಯಿತ್ತು ಆ ಮಹಾಶಯನದ್ದು...!!!
ನಿನ್ನೆ ಓರ್ವ ಹಿತಚಿಂತಕರ ಮೂಲಕ ಆ ಬ್ಲಾಗ್ ಓರ್ವನದೆಂದೂ ಆತನಿಗೆ ಮದುವೆಯಾಗಿ ಮಗುವಿದೆಯೆಂದೂ ನಮ್ಮೊಳಗೇ ತನ್ನ ನಿಜ ನಾಮಧೇಯದಲ್ಲೇ ಮತ್ತೊಂದು ಬ್ಲಾಗ್ ನೆಡೆಸುತ್ತಿದ್ದಾನೆಂದೂ.. ಸುಪರಿಚಿತ ಬರಹಗಾರನೆಂದೂ ತಿಳಿಯಿತು. ಸುದ್ದಿ ಕೇಳಿ ಅರೆಕ್ಷಣ ಮಾತೇ ಹೊರಡಲಿಲ್ಲ. ಆತನ ಮೈಲ್‌ಗಳಲ್ಲಿ ಆತನೇ ಹೇಳಿಕೊಂಡಿರುವಂತೆ ಇರುವ ಖಿನ್ನತೆಗೆ ನಾನು ನನ್ನ ಜೀವನದ ಕಷ್ಟಗಳನ್ನು, ಹೋರಾಟವನ್ನು, ನೋವುಗಳನ್ನು ನಾನು ಹೇಗೆ ಎದುರಿಸಿ ಬಂದೆ, ಯಾವ ರೀತಿ ಬದುಕನ್ನು ಸ್ವೀಕರಿಸಬೇಕು ಎಂದೆಲ್ಲಾ ಧೈರ್ಯತುಂಬಿದ್ದೆ. ನನ್ನ ಭಾವನೆಗಳನ್ನು ಸೂಕ್ಷ್ಮತೆಗಳನ್ನು ಓರ್ವ ಹುಡುಗಿಯ ರೂಪದಲ್ಲಿ ಬಂದು ಜಗ್ಗಾಡಿ, ಅಪಹಾಸ್ಯಮಾಡಿ, ಇನ್ನು ಯಾವತ್ತೂ ಯಾರನ್ನೂ ಮುಖತಃ ಪರಿಚಯವಿಲ್ಲದೆಯೇ ಮಾತಾಡಿಸಲೂ ಬಾರದೆಂಬ ನಿರ್ಧಾರಕ್ಕೆ ಎಳೆದೊಯ್ದ ಆ ವ್ಯಕ್ತಿಗೆ ನನ್ನ ಧಿಕ್ಕಾರವಿದೆ. ನಿಜಕ್ಕೂ ಮಾನಸಿಕತೆಯಿಂದ ಬಳಲುತ್ತಿರುವಂತೆ ಕಾಣುವ ಆ ಮನಃಸ್ಥಿತಿಗೆ ಸಹಾನುಭೂತಿಯೂ ಇದೆ. ಅನುಕಂಪವಿದೆ. ಕೇವಲ ಒಬ್ಬರ ಮಾತು ಕೇಳಿ ನಾನು ಈ ಪೋಸ್ಟ್ ಹಾಕುತ್ತಿಲ್ಲ.. ಇಲ್ಲಾ ತೀರ್ಮಾನಕ್ಕೆ ಬಂದಿಲ್ಲ.. ಇನ್ನೂ ಕೆಲವರನ್ನು ವಿಚಾರಿಸಿಯೇ ಈ ರೀತಿ ಬರೆಯುತ್ತಿದ್ದೇನೆ.

ನೀವೂ ಇದೇ ರೀತಿಯ ಮೋಸಕ್ಕೆ ಒಳಗಾಗಿರಬಹುದು. ಒಳಗಾಗಲೂ ಬಹುದು ಎಚ್ಚರಿಕೆ!!!! ಈ ರೀತಿ ಆ ವ್ಯಕ್ತಿ ನನ್ನೊಂದಿಗೆ ಮಾತ್ರವಲ್ಲ. ಬೇರೆ ಕೆಲವರೊಡನೆಯೂ ಆಡಿದ್ದು ತಿಳಿದು ಬಂತು. ಆದರೆ ಅವರೆಲ್ಲಾ ಬಾಯಿ ಮುಚ್ಚಿ ಕುಳಿತರು. ಆತನ ಖ್ಯಾತಿಗೋ(?) ಇಲ್ಲಾ "ನಮಗೇಕೆ ಸುಮ್ಮನೆ ಎಂದೋ..." ಇದೇ ರೀತಿ ಮೋಸಹೋದ ಒಬ್ಬನಿಂದ ಆತನ ನಿಜ ಹೊರಬೀಳುತ್ತಿದ್ದಂತೇ ಆ ವ್ಯಕ್ತಿ ಬಹುಶಃ ಹುಡುಗಿ ಹೆಸರಿನಲ್ಲಿರುವ ಬ್ಲಾಗ್‌ನಲ್ಲಿ ಬರವಣಿಗೆಯನ್ನೂ ನಿಲ್ಲಿಸಿದ...ಅಂತೆಯೇ ನನ್ನ ಮೈಲ್‌ಗೆ ಉತ್ತರಿಸುವುದು ನಿಲ್ಲಿಸಿದ..... ಆದರೆ ಆಗ ನಾನು ಯಾವುದೋ ಸಮಸ್ಯೆಯಿಂದ ಆಕೆ(???) ನನ್ನ ಮೈಲ್‌ಗೆ ಉತ್ತರಿಸುತ್ತಿಲ್ಲ, ಬ್ಲಾಗ್‌ಕೂಡಾ ಬರೆಯುತ್ತಿಲ್ಲ ಎಂದು ಸುಮ್ಮನಿದ್ದೆ.

ಆದರೆ......

ಇಂದು ಸತ್ಯ ನನಗೆ ತಿಳಿದಿದೆ. ಹೆಸರನ್ನು ಹಾಕದೇ ನಾನು ಈ ಘಟನೆಯನ್ನು ಮುಂದಿಟ್ಟಿದ್ದೇನೆ. ಆ ವ್ಯಕ್ತಿಗೆ ಇನ್ನಾದರೂ ತನ್ನ ತಪ್ಪಿನ ಅರಿವಾದರೆ ನನ್ನಲ್ಲಿ ಕ್ಷಮೆ ಕೇಳಲಿ. ದೇವರು ಆತನಿಗೆ ಮುಂದೆ ಈ ರೀತಿ ಯಾರೊಂದಿಗೂ ಅವರ ಭಾವನೆಗಳ ಜೊತೆ ಆಡದಂತಹ ಬುದ್ಧಿಕೊಡಲೆಂದು ಪ್ರಾರ್ಥಿಸುವೆ. ತಮ್ಮ ತೆವಲಿಗೋಸ್ಕರ, ಇನ್ನೊಬ್ಬರನ್ನು ಬಲಿಪಶುಮಾಡಿಕೊಂಡು ಈ ರೀತಿ ಸಂತೋಷಪಡುವವರನ್ನು ಏನೆನ್ನೋಣ ಹೇಳಿ?! ಆ ವ್ಯಕ್ತಿ ಇದನ್ನೆಲ್ಲಾ ಕೇವಲ ತನ್ನ ಕ್ಷಣಿಕ ಸಂತೋಷಕ್ಕಾಗಿ ಹುಡುಗಿಯಂತೆಯೇ ನಟಿಸುತ್ತಾ, ಮೈಲ್ ಕಳಿಸುತ್ತಾ ಇದ್ದನೆಂದಾದಲ್ಲಿ ಆತನಿಗೆ ಮೆಡಿಕಲ್ ಟ್ರೀಟ್‌ಮೆಂಟಿನ ಅಗತ್ಯವಿದೆ. he may be suffering from "Personality disorder"!!!.

ಇಲ್ಲಿ ನಾನೇನೂ ದೊಡ್ಡ ಮೋಸಕ್ಕೆ ಬಲಿಯಾದನೆಂದು ಕೂಗಾಡುತ್ತಿದ್ದೇನೆ... ಕೇವಲ ಹುಡುಗಿ ಹೆಸರಿನಲ್ಲಿ ಮೈಲ್ ಸಂಪರ್ಕ ಮಾಡಿದ್ದಕ್ಕೆ ಇಷ್ಟು ಗಲಾಟೆನಾ ಎಂದೂ ಕೆಲವರಿಗೆ ಅನಿಸಬಹುದು. ಆದರೆ ಇಲ್ಲಿ ಬಲಿಯಾಗಿರುವುದು ನನ್ನ ಭಾವನೆಗಳು, ಮನುಷ್ಯರ ಮೇಲಿನ ನಂಬಿಕೆಗಳು. ನಂಬಿಕೆ ಬಹು ಅಮೂಲ್ಯವಾದದ್ದು. ನಮ್ಮೊಳಗಿನ ಭಾವನೆಗಳನ್ನು ಹಂಚಿಕೊಳ್ಳುವಾಗ ಇರಬೇಕಾದದ್ದು ಇದೇ. ನನ್ನ ಅಂಗವೈಕಲ್ಯವನ್ನು ಉದಾಹರಿಸುತ್ತಾ ಹೇಗೆ ನೀನು ಮೇಲೆ ಬರಬೇಕೆಂದು ನಾನು ಉಪದೇಶಿಸಿದಾಗಲೂ ಆ ವ್ಯಕ್ತಿಗೆ ನೈತಿಕತೆ ಚುಚ್ಚಲಿಲ್ಲವೇ? ಮತ್ತೂ ಅದೇ ಹೆಸರಿನಡಿ.."ಅಕ್ಕಾ... ಅಕ್ಕಾ.." ಅನ್ನುತ್ತಾ ಖಿನ್ನತೆ, ಒಂಟಿತನ ಎನ್ನುತ್ತಾ ನನ್ನ ಮೋಸಗೊಳಿಸುತ್ತಾ ಹೋದ. ಅಕ್ಕಾ ಅನ್ನುವ ಪದಕ್ಕೂ ಅದರ ಘನತೆಗೂ ಅಪಾರ ಹಾನಿಯನ್ನೂ ತಂದಿಟ್ಟ...:( :(

ಇಂತಹವರಿಂದ ಬ್ಲಾಗ್ ಜಗತ್ತೇ ಕೊಳಕಾಗುತ್ತಿದೆ. ಮಾನಸವೂ ಮಂಕಾಗುತ್ತಿದೆ. ಮತ್ತೆ ಈ ವ್ಯಕ್ತಿ ಇನ್ನೋರ್ವ ಹುಡುಗಿಯ ಹೆಸರಿನಡಿಯಲ್ಲೋ ಇಲ್ಲಾ ಬೇರಾವ ರೀತಿಯಲ್ಲೋ ಇನ್ಯಾರ ಭಾವನೆಗಳೊಂದಿಗೂ ಆಡದಿರಲೆಂದು, ಮೋಸಮಾಡದಿರಲೆಂದು ನಿಮ್ಮೆಲ್ಲರ ಎಚ್ಚರಿಸುತ್ತಿರುವೆ. ಸಂಪೂರ್ಣ ಮುಸುಕು ಹಾಕಿ ಕೇವಲ ಹೆಸರನ್ನು ಮಾತ್ರ ಹೇಳುತ್ತಾ ವ್ಯವಹರಿಸುವವರೊಂದಿಗೆ ಜಾಗೃತೆಯಾಗಿರಿ.


ಎಚ್ಚರಿಕೆ!!!!!!!!!


- ತೇಜಸ್ವಿನಿ ಹೆಗಡೆ

ಭಾನುವಾರ, ಸೆಪ್ಟೆಂಬರ್ 13, 2009

ಒಳಗೊಂದು ಕಿರುನೋಟ-೨


ಜೀವನ ಪ್ರೀತಿಯ ಮಳೆ ಸುರಿವ ಬೆಟ್ಟದ ಜೀವ...


"ಬಾನಿನಲ್ಲಿ ಸೂರ್ಯನು ತುಸುವಾಗಿ ಮೇಲಕ್ಕೇರುತ್ತಾನೆ- ಎಂದಂತೆ ಒಮ್ಮೆಗೇ ಅವನ ರಶ್ಮಿಗಳು ಬೆಟ್ಟದ ತೆಂಕು ಮಗ್ಗಲಿನ ಹಸುರನ್ನೆಲ್ಲ ಬೆಳಕಿಂದ ತೊಯ್ಯಿಸಿಬಿಟ್ಟವು! ಆ ಅಪೂರ್ವದ ನೋಟವು ಎಂದೂ ಮರೆಯುವಂಥದಲ್ಲ. ಆ ತನಕ- ಕಠಿಣವೂ ನಿರ್ದಾಕ್ಷಿಣ್ಯವೂ ಆಗಿ ನಿಂತ ಬೆಟ್ಟಕ್ಕೆ ಒಂದು ಬದಿಯಲ್ಲಿ ಮೃದುವಾದ ಹೃದಯವಿದ್ದಂತೆ ಕಂಡಿತು. ನೋಡುತ್ತಾ ನಿಂತಂತೆ, ಕೆಂಪಡರಿದ ಬಾನಿನ ಕಣ್ಣು ಕ್ರೂರವಾಗುತ್ತ ಬೆಂದ ಕಬ್ಬಿಣವನ್ನು ಕರಗಿಸಲು ಬಂದಂತೆ ಕಾಣಿಸಿತು. ಆ ಬಾನಿನ ಮುಂದೆ, ಬೆಟ್ಟವು ಗಂಡುಗಲಿಯಂತೆ ಈ ತನಕ ಕಂಡುದು, ನಮ್ರತೆಯ ಮುದ್ದೆಯಾದ ಹೆಣ್ಣಾಯಿತು. ಹಸುರು ಕವಚದ ಮೇಲೆ ನೀರ ಸೀರೆ ತೊಟ್ಟು ಬೇಟಕ್ಕೆ ನಿಂತ ಅಂಗನೆಯಾಯಿತು, ಆದರೆ ದಿಗಂಗನೆಯ ಧಿಮಾಕಿನ ಮುಂದೆ ಬೆಟ್ಟದಂಗನೆ, ಅತ್ತೆಯ ಮುಂದೆ ನಾಚಿಕೊಂಡು ನಿಂತ ಸೊಸೆಯಾದಳು."

-ಶಿವರಾಮ ಕಾರಂತರ "ಬೆಟ್ಟದ ಜೀವ" ಕಾದಂಬರಿಯಲ್ಲಿ ಒಂದು ಕಡೆ ಬರುವ ಈ ಮೇಲಿನ ಪಕೃತಿ ವರ್ಣನೆಯನ್ನೋದುತ್ತಾ ಮನಸ್ಸು ಮನೋವೇಗದಲ್ಲಿ ಆ ಬೆಟ್ಟದ ತುದಿಯನ್ನೇರಿದ್ದಂತೂ ಸುಳ್ಳಲ್ಲ. ಆದರೆ ಎಷ್ಟು ಪ್ರಯತ್ನಿಸಿದರೂ ಅವರು ಕಂಡ ಆ ಅಪೂರ್ವ ಚೆಲುವನ್ನು ಕಲ್ಪಿಸಿಕೊಳ್ಳಲೂ ಆಗಲಿಲ್ಲ. ಕಾರಣ ನಿರ್ಜೀವ ಯಂತ್ರಗಳು ಕಪ್ಪು ಹೊಗೆ ಚೆಲ್ಲಿ ತಿಳಿ ನೀಲ ಬಾನ ತುಂಬೆಲ್ಲಾ ತುಂಬಿರುವ ಮಲಿನ ಮುಸುಕೊಳಗೆ ಗುದ್ದಾಡುವ ನಾವು ಅಂತಹ ಒಂದು ನಿಶ್ಕಲ್ಮಶ, ಅಲೌಕಿಕ ಅನುಭೂತಿಯನ್ನು ಕಲ್ಪಿಸುವುದಾದರೂ ಹೇಗೆ?!!

ಮೊದಲಿನಿಂದಲೂ ನನಗೆ ಕಾರಂತರ ಕಾದಂಬರಿಗಳೆಂದರೆ ಬಲು ಅಚ್ಚುಮೆಚ್ಚು. ಕಾರಣ ಇವರ ಹೆಚ್ಚಿನ ಕೃತಿಗಳಲ್ಲೆಲ್ಲೂ ಕ್ಲಿಷ್ಟಕರ ಹಾಗೂ ಸಂಕೀರ್ಣ ಭಾಷಾ ಪ್ರಯೋಗಗಳು ತೀರ್‍ಆ ಕಡಿಮೆಯಾಗಿರುವುದು. ಅಂತೆಯೇ ಸರಳ, ಹೃದ್ಯ ಹಾಗೂ ಬಹು ಬೇಗನೆ ಮನಮುಟ್ಟುವ, ಅರ್ಥೈಸಿಕೊಳ್ಳಲು ಸುಲಭವಾಗಿರುವಂತಹ ಚಿತ್ರಣ ಹಾಗೂ ಭಾಷಾ ನಿರೂಪಣೆಯನ್ನು ಇವರ ಕೃತಿಯುದ್ದಕ್ಕೂ ಕಾಣಬಹುದು. ಇವರ "ಮೂಕಜ್ಜಿಯ ಕನಸು" ಕಾದಂಬರಿಯಂತೂ ಎಷ್ಟು ಸಲ ಓದಿದರೂ ಸಾಲದೆನಿಸುವಂತಹ ಮೇರು ಕೃತಿ. ಅದರ ಬಗ್ಗೆ ಬರೆಯುವುದೂ ಬಹು ಕಷ್ಟವೇ ಸರಿ. ಹಾಗಾಗಿ ಆ ಪ್ರಯತ್ನಕ್ಕೆ ಮೊದಲು ಅವರ ಇನ್ನೊಂದು ಮೇರು ಕೃತಿಯಾದ ಬೆಟ್ಟದ ಜೀವದೊಳಗಿನ ಜೀವನ ಪ್ರೀತಿಯನ್ನೂ, ಅದರೊಳಗೆ ಹದವಾಗಿ ಮಿಳಿತವಾಗಿರುವ ಮಾನವ ಸಂಬಂಧದ ಪರಿಶುದ್ಧತೆಯನ್ನೂ ನಿಮ್ಮ ಮುಂದಿರಿಸುವ ಅಲ್ಪ ಯತ್ನಕ್ಕೆ ಕೈಹಾಕಿದ್ದೇನೆ. ಈ ಮೊದಲೇ ನೀವೂ ಈ ಕೃತಿಯನ್ನೋದಿದವರಾಗಿದ್ದರೆ ದಯಮಾಡಿ ನನ್ನೊಂದಿಗೆ ನಿಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ಹಂಚಿಕೊಳ್ಳಬೇಕಾಗಿ ವಿನಂತಿ. ಪುಸ್ತಕ ಪ್ರೀತಿ ಹಂಚುವುದು, ಅದರೊಡನೆ ಜೀವನ ಪ್ರೀತಿಯನ್ನು ಬೆಸೆಯುವುದು "ಒಳಗೊಂದು ಕಿರುನೋಟದ" ಮುಖ್ಯೋದ್ದೇಶವಾಗಿದೆ.

"ಬೆಟ್ಟದ ಜೀವ" ಮೊದಲು ಮುದ್ರಿತಗೊಂಡಿದ್ದು ೧೯೪೩ರಲ್ಲಿ. ಧಾರವಾಡದ ಮನೋಹರ ಗ್ರಂಥಮಾಲೆ ಪ್ರಥಮ ಬಾರಿಗೆ ಈ ಕಾದಂಬರಿಯನ್ನು ಮುದ್ರಿಸಿದ್ದು, ತದನಂತರ ಬಹುಶಃ ೩ ಬಾರಿ ಮರು ಮುದ್ರಣಗೊಂಡಿದೆ. ಈ ಕಾದಂಬರಿಯಲ್ಲಿ ಬರುವ ಪಾತ್ರಗಳು ಬಲು ಕಡಿಮೆ. ಹಾಗಾಗಿ ನೆನಪಲ್ಲಿ ಉಳಿಯುವುದೂ ಸುಲಭ. ಕಥಾ ನಾಯಕ ಗೋಪಾಲಯ್ಯ, ಅವರ ಧರ್ಮ ಪತ್ನಿಯಾದ ಶಂಕರಮ್ಮ, ಸಾಕು ಮಗ ನಾರಾಯಣ, ಆತನ ಪತ್ನಿ ಲಕ್ಷ್ಮಿ, ಇವರಿಬ್ಬರ ಮಕ್ಕಳಾದ ಸುಬ್ಬರಾಯ ಹಾಗೂ ಸಾವಿತ್ರಿ, ಬಾಲ್ಯದಲ್ಲೇ ತೀರಿಹೋದ ಗೋಪಾಲಯ್ಯ ದಂಪತಿಗಳ ಮಗಳು ವಾಗ್ದೇವಿ, ಆಳುಗಳಾದ ಬಟ್ಯ, ಮಾನ ಗೌಡ, ಕೆಂಚ ಹಾಗೂ ಕಥೆಯುದ್ದಕ್ಕೂ ಹರಿವ ಕಥಾ ನಿರೂಪಕನಾದ ಕಾರಂತರು ಹಾಗೂ ಕಥಾ ವಸ್ತುವಿಗೆ ಪ್ರಮುಖ ಕಾರಣಕರ್ತನಾದ ಓಡಿಹೋದ ಗೋಪಾಲಯ್ಯನವರ ಕುಲಪುತ್ರ ಶಂಭು. ಈ ಎಲ್ಲಾ ಪಾತ್ರಗಳನ್ನೂ ಕೇವಲ ೧೫೦ ಪುಟಗಳೊಳಗೇ ಹಿಡಿದಿಟ್ಟಿದ್ದಾರೆ ಕಾರಂತರು.

"ಬೆಟ್ಟದ ಜೀವ" ಉಸಿರಾಡುವುದು ಸುಬ್ರಹ್ಮಣ್ಯ ಹಾಗೂ ಅದರ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ....ಅಲ್ಲಿನ ದಟ್ಟಡವಿ, ಗುಡ್ಡ, ಬೆಟ್ಟ, ಕುಮಾರ ಪರ್ವತದ ತಪ್ಪಲಿನ ಪ್ರದೇಶಗಳಲ್ಲಿ. ಗುತ್ತಿಗಾರು, ಬೆಳ್ಳಾರೆ, ಮುಂಡಾಜೆ, ಪಾಂಜ, ವಿಟ್ಲ ಮುಂತಾದ ತಾವುಗಳ ಕಿರು ಪರಿಚಯ ಕಥೆಯ ಒಳಗೇ ನಮಗಾಗುತ್ತದೆ. ಅಂದಿನ ಕಾಲದ ಅಲ್ಲಿಯ ಹಳ್ಳಿ ಜನರ ಮನೋಭಾವ, ಉದಾರತೆ, ನಿಃಸ್ವಾರ್ಥತೆ, ಮುಗ್ಧತೆ, ಮಾನವೀಯ ಸಂಬಂಧಗಳಿಗೆ ಅವರು ಕೊಡುತ್ತಿದ್ದ ಬೆಲೆ ಎಲ್ಲವುದರ ದರ್ಶನವೂ ಈ ಕೃತಿಯನ್ನೋದುವಾಗ ನಮಗಾಗುತ್ತದೆ. ಜೀವನ ಪ್ರೀತಿ ಎಂದರೇನು? ಬದುಕುವುದು ಎಂದರೆ ಹೇಗೆ? ನಾವು ನಮ್ಮ ಬದುಕನ್ನು ಹೇಗೆ ಸಾರ್ಥಕ್ಯಗೊಳಿಸಬಹುದು ಎಂಬುದನ್ನು ಕಾರಂತರು ತಮ್ಮ ಈ ಪುಟ್ಟ ಕೃತಿಯಲ್ಲಿ ಸವಿವರವಾಗಿ, ಬಲು ಸುಂದರವಾಗಿ ತಿಳಿಸಿದ್ದಾರೆ.

ಸಂಕ್ಷಿಪ್ತವಾಗಿ ಕಥಾ ಸಾರವನ್ನು ಹೇಳಬೇಕೆಂದರೆ - ತಮ್ಮ ಕಳೆದು ಹೋದ ದನವೊಂದನ್ನರಸುತ್ತಾ, ಯಾರ ಯಾರನ್ನೋ ಕೇಳುತ್ತಾ ಪುತ್ತೂರಿನಿಂದ ಹೊರಟ ಕಥಾ ನಿರೂಪಕ(ಕಾರಂತರು) ದಾರಿ ತಪ್ಪಿ ಸುಬ್ರಹ್ಮಣ್ಯಕ್ಕೆ ಬಂದು, ಅಲ್ಲಿಂದ ಪಂಜಕ್ಕೆ ಹೋಗುವ ಬದಲು ದಾರಿತಪ್ಪಿ ಗುತ್ತಿಗಾರಿನ ಕಡೆ ನಡೆಯುತ್ತಾರೆ. ಸುತ್ತಲೂ ದಟ್ಟಡವಿ, ಕಾಣದ ಊರು, ಗುರಿಯಿಲ್ಲ ದಾರಿಯಿಂದ ಭಯಗೊಂಡು ಕೆಂಗೆಡುತ್ತಾರೆ. ಆದರೆ ಆಗ ಅದೇ ದಾರಿಯಲ್ಲಿ ತನ್ನೂರಾದ ಗುತ್ತಿಗಾರಿಗೆ ಹೋಗುತ್ತಿದ್ದ ದೇರಣ್ಣ ಗೌಡನ ಸಹಾಯದಿಂದ ಆತನ ಧಣಿಯಾದ ಗೋಪಾಲಯ್ಯನ ಮನೆಗೆ ಆಶ್ರಯಕೋರಿ ಬರುತ್ತಾರೆ. ಆಗಿನ ಕಾಲದಲ್ಲಿ ಈಗಿನಂತೆ ನಿಮಿಷಕ್ಕೋಂದು ಬಸ್ಸಾಗಲೀ, ಕಾರು, ಜೀಪುಗಳ ವ್ಯವಸ್ಥೆಯಾಗಲೀ ಇರಲಿಲ್ಲ. ಹಾಗಾಗಿ ಕಲ್ನಡಿಗೆಯಲ್ಲೇ ಹುಡುಕುತ್ತಾ ಹೊರಟಿದ್ದರು. ನಡುವೆ ದಾರಿ ತಪ್ಪಿ ದಿಕ್ಕು ಗಾಣದೆ ಅಲೆದಲೆದು ಬಳಲಿ ಬೆಂಡಾಗಿ, ವಿಶ್ರಮಿಸಿ ಕೊಂಡು ಮುಂದೆ ಪಯಣಿಸಲು ಅವರಿಗೊಂದು ತಾವು ಬೇಕಿತ್ತು. ರಾತ್ರಿಯ ನೀರವತೆಗೆ ಹೆದರಿದ್ದ ಅವರನ್ನು ಬಲು ಪ್ರೀತ್ಯಾದಾರಗಳೊಂದಿಗೆ ಬರ ಮಾಡಿಕೊಂಡರು ಗೋಪಾಲಯ್ಯ ದಂಪತಿಗಳು.
ಸುತ್ತಲೂ ಹಬ್ಬಿರುವ ಕಾಡು ಹಾಗೂ ಕುಮಾರ ಪರ್ವತ, ಅಕ್ಕಿ ರಾಶಿ ಪರ್ವತಗಳ ತಪ್ಪಲಿನಲ್ಲಿ ಅಡಿಕೆ, ಕಬ್ಬು, ತೆಂಗಿನ ತೋಟಗಳನ್ನು ಮಾಡಿಕೊಂಡು, ಅನ್ಯೋನ್ಯತೆಯಿಂದ ಬಾಳ್ವೆ ಮಾಡುತ್ತಿರುವ ಆ ಶ್ರಮ ಜೀವಿಗಳನ್ನು ನೋಡಿ ನಿರೂಪಕನಿಗೆ ಆನಂದ ಆಶ್ಚರ್ಯವಾಯಿತು. ಕಾರಣಾಂತರಗಳಿಂದಾಗಿ ೪-೫ ದಿನಗಳ ಕಾಲ ನಿರೂಪಕ ಅವರ ಮನೆಯಲ್ಲೇ ಉಳಿಯಬೇಕಾಯಿತು. ಅದೂ ಆ ದಂಪತಿಗಳ ನಿಃಸ್ವಾರ್ಥ ಪ್ರೀತಿಯಿಂದ ಕೂಡಿದ ಒತ್ತಾಯದ ಮೇರೆಗೆ. ಆ ನಡುವೆ ಆತನಿಗೆ ಅವರ ಬದುಕೊಳಗೆ ಹಾಸು ಹೊಕ್ಕಾಗಿರುವ ಅಪಾರ ನೋವು, ಯಾತನೆ, ಚಿಂತೆಗಳ ಪರಿಚಯವಾಗಿ ಅಲ್ಪ ಕಾಲದಲ್ಲಿಯೇ ಆತನೂ ಅವರ ಮನೆಯಲ್ಲೋರ್ವನಂತಾಗುವನು.
ಚಿಕ್ಕ ವಯಸ್ಸಿನ ಮಗಳನ್ನು ಕಳೆದು ಕೊಂಡ ಶಂಕರಮ್ಮ ಹಾಗೂ ಗೋಪಾಲಯ್ಯನವರ ದುಃಖ ಅಲ್ಲೇ ಮುಗಿಯದು. ೧೮ರ ಹರಯದಲ್ಲೇ ಮನೆಯನ್ನು ಬಿಟ್ಟು ಓಡಿಹೋದ ಮಗ ಶಂಭು ಹತ್ತು ವರುಷಗಳ ಕಾಲವಾದರೂ ಇನ್ನೂ ಇವರನ್ನು ವಿಚಾರಿಸಿಕೊಳ್ಳಲು ಬರದಿರುವುದೇ ಅವರನ್ನು ಪ್ರತಿದಿನ ಕಾಸರ್ಕದ ಮುಳ್ಳಂತೇ ಕಾಡುತ್ತಿದೆ. ಪತಿ-ಪತ್ನಿಯರಿಬ್ಬರೂ ತಮ್ಮ ತಮ್ಮ ನೋವನ್ನು ಅಪರಿಚಿತರೊಡನೆ ವಾತ್ಸಲ್ಯ ತೊರುವುದರ ಮೂಲಕ, ಅವರನ್ನು ಆದರಿಸುವುದರ ಮೂಲಕ, ಎಲ್ಲಿಂದಲೋ ಬಂದು ಅವರ ತೋಟದಲ್ಲೇ ಗೇಣಿದಾರನಾಗಿ ನೆಲೆಸಿ ಮನೆಮಗನಂತಾದ ನಾರಾಯಣ ಹಾಗೂ ಆತನ ಮಕ್ಕಳನ್ನಾಡಿಸುವುದರ ಮೂಲಕ ಮರೆಯಲೆತ್ನಿಸುತ್ತಾರೆ. ಆದರೂ ಅದೆಲ್ಲಿಂದಲೋ ಏನೋ ಬದುಕೊಳಗಿನ ಏಕಾಂಗಿತನ ಅವರನ್ನು ಮತ್ತೆ ಹಳೆ ನೋವುಗಳತ್ತ ಎಳೆಯುತ್ತಿರುತ್ತದೆ ಆಗಾಗ. ಇದನ್ನು ಕಂಡ ನಿರೂಪಕನೂ ಮರುಗುತ್ತಾನೆ. ಮನದೊಳಗೆ ಮನೆ ಮಾಡುವ ಸಣ್ಣ ಪುಟ್ಟ ಘಟನಾವಳಿಗಳು, ನಾಟುವ ಸಂಭಾಷಣೆಗಳ ಮೂಲಕ ಪ್ರವಹಿಸುವ ಕಥೆಯ ಅಂತ್ಯ ಮಾತ್ರ ಒಂದು ಅಪೂರ್ವ, ಅನೂಹ್ಯ ಅನೂಭೂತಿಯನ್ನು ಮನಸೊಳಗೆ ಭಿತ್ತುವುದು.

ಈ ಕಾದಂಬರಿಯನ್ನೋದಿದ ಮೇಲೆ ನನ್ನ ಮನದೊಳಗೆ ಅಚ್ಚಳಿಯದೇ ಉಳಿದ ಕೆಲವು ಪ್ರಮುಖ ಅಂಶಗಳು ಇಂತಿವೆ..

(ಅ) ಕಾದಂಬರಿಯುದ್ದಕ್ಕೂ ನಾವು ಕಾಣುವುದು ಜೀವನ ದರ್ಶನ. ಇದನ್ನು ಕಾರಂತರು ಗೋಪಾಲಯ್ಯನವರ ಮೂಲಕ ನಮಗೆ ಕಾಣಿಸುತ್ತಾರೆ. ಇದನ್ನರಿಯಲು ಬೆಟ್ಟದ ಜೀವವನ್ನು ಓದಿಯೇ ತಿಳಿಯಬೇಕಷ್ಟೇ! ಇದನ್ನು ಕೇವಲ ಅಕ್ಷರಗಳ ಜೋಡಣೆಯಿಂದ ತಿಳಿಸಲಾಗದು. ಕಥಾನಿರೂಪಕನೊಂದಿಗೆ ಹೊರಟು, ಪಯಣಿಸಿ, ಪಾತ್ರಗಳೊಳಗೆ ಹೊಕ್ಕಾಗ ಮಾತ್ರ ಬೆಟ್ಟದ ಜೀವದೊಳಗಿನ ಜೀವನ ಸೆಲೆ ಕಾಣಸಿಗುವುದು.ಇದಲ್ಲದೇ ಸತಿ-ಪತಿಯರೊಳಗೆ ಯಾವ ರೀತಿ ಹೊಸತನ, ಅನ್ಯೋನ್ಯತೆ ಸದಾ ಕಾಲ ಮಿಳಿತವಾರುತ್ತದೆ, ಹಾಗಿರಲು ಏನು ಮಾಡಬೇಕು ಎಂಬ ದಾಂಪತ್ಯ ಪಾಠವನ್ನೂ ಕಾರಂತರು ಆ ವೃದ್ಧ ದಂಪತಿಗಳ ಸಂಭಾಷಣೆಗಳ ಮೂಲಕ ಬಲು ಸುಂದರವಾಗಿ ಅಷ್ಟೇ ಸರಳವಾಗಿ ವಿವರಿಸಿದ್ದಾರೆ.ದಾಂಪತ್ಯವೆಂದರೆ ನಾಲ್ಕು ದಿನ ಹೊಸತನವನ್ನು ಕಂಡು ಕ್ರಮೇಣ ಹಳತಾಗಿ ಹಳಸಲಾಗುವುದಲ್ಲ. ಹೇಗೆ ಚಿಕ್ಕ ಮಕ್ಕಳು ಪ್ರತಿಯೊಂದರಲ್ಲೂ, ಪ್ರತಿದಿನವೂ ಹೊಸತನವನ್ನು ಕಾಣುತ್ತಾರೋ, ತಮ್ಮ ತಮ್ಮಲ್ಲಿ ಜಗಳವಾಗಲು ಹೇಗೆ ನಾಳೆ ಮರೆತು ಮತ್ತೆ ಸ್ನೇಹವನ್ನು ಹೊಂದುತ್ತಾರೋ ಅದೇ ರೀತಿ ನಮ್ಮ ದಾಂಪತ್ಯವೂ ಇರಬೇಕು. ಇಬ್ಬರಲ್ಲೂ ಹೊಸತನವನ್ನು ಕಾಣುವ ಮನೋಭಾವ, ಮರೆಯುವ, ಕ್ಷಮಿಸುವ ಗುಣ ಇದ್ದರೆ ದಾಂಪತ್ಯ ನಾಲ್ಕುದಿನದ ಹಸಿರಾಗಿರದು, ನಿತ್ಯ ಹರಿದ್ವರ್ಣವಾಗಿರುವುದೆಂದು ಹಲವಾರು ಉದಾಹರಣೆಗಳ ಮೂಲಕ ಆ ದಂಪತಿಗಳು ನಮಗೆ ಮನಗಾಣಿಸುತ್ತಾರೆ.

(ಆ) ಅಂದಿನ ಕಾಲದಲ್ಲೂ ಅಂದರೆ ಪವನಿಗೆ ಹತ್ತು ರೂಪಾಯಿ ಇದ್ದ ಕಾಲದಲ್ಲೂ ಭ್ರಷ್ಟಾಚಾರ, ಲಂಚ ಹಾಗೂ ಲಂಪಟತನ ಹೇಗೆ ತನ್ನ ಕೈಚಳಕ ತೋರಿಸುತ್ತಿತ್ತೆಂದು ದೇರಣ್ಣ ಗೌಡನ ಒಂದು ಪ್ರಸಂಗದ ಮೂಲಕ ನಮಗೆ ತಿಳಿಯುತ್ತದೆ.

(ಇ) ಆಗಿನ ಕಾಲದಲ್ಲಿ ಈ ಬೆಟ್ಟದ ತಪ್ಪಲಿನ ಜನರನ್ನು ಬಹುವಾಗಿ ಕಾಡುತ್ತಿದ್ದುದು ಪ್ರಮುಖವಾಗಿ ಎರಡು ವಿಷಯ. ಒಂದು ಜ್ವರದ ಗಡ್ಡೆ! ಇದರಿಂದಾಗಿ ಕೊಯಿನು(ಕ್ವಿನೈನ್ ಟ್ಯಾಬ್ಲೆಟ್) ಅಲ್ಲಿನವರ ಮನೆಯೊಳಗೆ ಸದಾ ತುಂಬಿರುತ್ತಿತ್ತೆಂದು ತಿಳಿದುಬರುತ್ತದೆ. ಆದರೆ ಇದೇ ಇಂದು ಎಚ್೧ ಎನ್೧ ರೂಪ ತಾಳಿ ಹಳ್ಳಿ, ಪಟ್ಟಣ ಎಂಬ ಬೇಧವಿಲ್ಲದೇ ನಮ್ಮನ್ನು ಕಾಡುತ್ತಿರುವುದು ವಿಪರ್ಯಾಸವೋ ಇಲ್ಲಾ ಅದರ ರೂಪಾಂತರವೋ ತಿಳಿಯುತ್ತಿಲ್ಲ!ಇನ್ನೊಂದು ಕಾಡು ಪ್ರಾಣಿಗಳ ಕಾಟ. ಆನೆಗಳ ಹಿಂಡು, ಕಡಮೆ, ಹಂದಿ, ಕಾಡೆಮ್ಮೆ ಗಳ ಕಾಲ್ತುಳಿತಕ್ಕೆ ಸಿಲುಕಿ ನಳನಳಿಸುತ್ತಿದ್ದ ತಮ್ಮ ತೋಟಗಳು ಧರೆಗುರುಳಿ ಬಿದ್ದಾಗ ಸಂಕಟ ಪಡುವ ಗೋಪಾಲಯ್ಯ ಹಾಗೂ ನಾರಾಯಣರ ವೇದನೆಯ ಜೊತೆಗೆ ನಾವೂ ಸ್ಪಂದಿಸದೇ ಇರಲಾಗದು. ಜೊತೆಗೇ ಇಂದು ಇಂತಹ ದಟ್ಟಡವಿಯಾಗಲೀ, ಅಂತಹ ಪ್ರಾಣಿಗಳ ಹಿಂಡಾಗಲೀ ನಾವು ಕಾಣುವುದು ಕನಸೇ ಸರಿ ಎಂದೂ ಎಣಿಸಿ ವಿಷಾದವೂ ಆಗದಿರದು. ಹಾಗೆಯೇ ಕಾದಂಬರಿಯೊಳಗೆ ಒಂದು ಕಡೆ ಬರುವ "ಪಾಂಜ"ಅಂದರೆ ಪಾರಂಬೆಕ್ಕಿನ(ಹಾರಾಡುವ ಅಳಿಲು) ವಿಶ್ಲೇಷಣೆಯನ್ನೋದುವಾಗ ತೇಜಸ್ವಿಯವರ ಕರ್ವಾಲೋ ಕ್ಷಣ ನೆನಪಾಗದೇ ಇರದು.

(ಈ) ಬಯಲು ಸೀಮೆಯವರಾದ ಕಾರಂತರು ತಮ್ಮ ಊರಲ್ಲಿ ಕಟ್ಟಿಗೆಗಳು ಸಿಗುವುದು ಕಷ್ಟವೆಂದು ಹೇಳಿದಾಗ ಬೆಟ್ಟದ ಜೀವಿಯಾದ ಗೋಪಾಲಯ್ಯ ಹೀಗೆನ್ನುತ್ತಾರೆ..."ನಿಮ್ಮ ಊರಲ್ಲಿ ಹೆಣ ಸುಡುವುದಾದರೂ ಕಷ್ಟವೇ! ನಮ್ಮಲ್ಲಿ ಸಾಯುವುದಂತೂ ತೀರ ಸುಲಭ; ಹೆಣ ಸುಡುವುದು ಮತ್ತೂ ಸುಲಭ. ಇಲ್ಲಿ ಬದುಕುವುದೇ ಕಷ್ಟ ನೋಡಿ" ಆದರೆ ಈ ಮಾತು ಅಂದಿನ ಕಾಲಕ್ಕೆ ಮಾತ್ರವಲ್ಲದೇ ಇಂದೂ ಅಷ್ಟೇ ಪ್ರಸ್ತುತವಾಗಿದೆ ಎನ್ನಲು ಯಾವುದೇ ಸಂಶಯವಿಲ್ಲ!! ಹಾಗೆಯೇ ಕಾರಂತರು ಗೋಪಾಲಯ್ಯನವರ ಮೂಲಕ ಹೇಳಿಸಿದ ಒಂದು ವಾಕ್ಯ ಮನದೊಳಗೆ ಮನೆಮಾಡಿದೆ. ಅದೇನೆಂದರೆ "ಮನುಷ್ಯನಿಗೆ ತಾನು ಬದುಕಿದ ಮೇಲಲ್ಲವೇ ವೇದಾಂತದ ಪಾಠ, ಬದುಕುವುದಕ್ಕೇನೆ ಮೊದಲು ವೇದಾಂತವನ್ನು ಹೇಳಿ ಫಲವಿಲ್ಲ..."

(ಉ) ಕಥೆಯ ಅಂತ್ಯದವೇಳೆ ಬರುವ ಹುಲಿಬೇಟೆಯ ಪ್ರಸಂಗವಂತೂ ಮನಸೂರೆಗೊಳ್ಳುವಂತಿದೆ. ಅದರೊಳಗೆ ಬೆರೆತಿರುವ ವಿನೋದ, ಆಹ್ಲಾದ ನಮ್ಮನೂ ಆ ಬೇಟೆಯೊಳಗೆ ಸೇರುವಂತೆ ಮಾಡುತ್ತದೆ. ಅದೇ ರೀತಿ ಕಥೆಯ ಅಂತ್ಯವೂ ಹಲವು ಭಾವನೆಗಳನ್ನು ಮನದೊಳಗೆ ಹುಟ್ಟುಹಾಕಿ ಓದುಗನ ಕಲ್ಪನೆಯ ಓಟಕ್ಕೇ ಬಿಟ್ಟುಕೊಡುವಂತಿದೆ.

(ಊ) ೧೫೦ ಪುಟಗಳ ಕಿರು ಕಾದಂಬರಿಯಾದರೂ ಜೀವನ ಪ್ರೀತಿಯನ್ನೂ, ಬದುಕನ್ನು ಜೀವಿಸುವ ಬಗೆಯನ್ನೂ ನಮಗೆ ಕಲಿಸಿಕೊಡುತ್ತದೆ. ಕಥಾ ನಾಯಕರಾದ ಗೋಪಾಲಯ್ಯನವರ ವ್ಯಕ್ತಿತ್ವ, ಕಥೆಯ ಹರಿವು ಒಳ ಹರಿದಂತೆಲ್ಲಾ ಕುಮಾರ ಪರ್ವತದಷ್ಟೇ ಎತ್ತರವನ್ನು, ವಿಶಾಲತೆಯನ್ನು, ವೈವಿಧ್ಯತೆಯನ್ನು, ಅಚಲತೆಯನ್ನೂ ಹೊಂದಿರುವುದು ಸ್ಪಷ್ಟವಾಗುತ್ತಾ ಹೋಗುತ್ತದೆ. "ಯಾರು ಸಾವಿಗೆ ಅಂಜುವುದಿಲ್ಲವೋ ಅಂಥವ ಬದುಕಿಗೆ ಹೆದರಬೇಕಿಲ್ಲ, ಅಂಥವನು ಬದುಕ ಬಲ್ಲ..."-ಗೋಪಾಲಯ್ಯನವರು ಒಂದು ಕಡೆ ಹೇಳುವ ಈ ಮಾತು ಸಾರ್ವಕಾಲಿಕ ಸತ್ಯವೆಂದೆನಿಸುತ್ತದೆ.

ಕೊನೆಯಲ್ಲಿ : ಇಂತಹ ಒಂದು ಮೇರು ಕೃತಿಯನ್ನು ಹೀಗೇ ಎಂದು ವಿಮರ್ಶಿಸಲು ಖಂಡಿತ ಸಾಧ್ಯವಿಲ್ಲ. ಅದನ್ನು ಓದಿಯೇ ಅನುಭವಿಸಬೇಕು. ಬೆಟ್ಟದ ಜೀವವನ್ನು ಕಂಡುಕೊಳ್ಳಲು ಕಥೆಯೊಳಗೆ ಹೊಕ್ಕಿ, ಕಥಾಗಾರನ ನಿರೂಪಣೆಯೊಳಗೇ ಕೊಚ್ಚಿಹೋಗಿ, ಆ ಪಾತ್ರಗಳಲ್ಲೊಂದಾಗಿ ಅಲ್ಲೇ ನಾವು ಸ್ಥಿರವಾಗಬೇಕೆಂದು ಮನ ಬಯಸಿದರೆ ನಿಮಗೆ ನಿಜವಾದ ಅನುಭೂತಿಯಾಗಿದೆ ಎನ್ನಬಹುದೇನೋ!! ಅಗಾಧ ಜೀವನ ಪ್ರೀತಿಯನ್ನು ಕಾಣಿಸುವ, ಕಲಿಸುವ ಬೆಟ್ಟದ ಜೀವವನ್ನು ಓದಿ ಮುಗಿಸಿದಾಗ ತಕ್ಷಣ ನನಗೆ ನೆನಪಾದದ್ದು ಬಿ.ಆರ್. ಲಕ್ಷ್ಮಣ ರಾವ್ ಅವರ ಈ ಕವನ.

ಮಳೆ

ಸುರಿಯಲಿ ತಂಪೆರೆಯಲಿ
ಜೀವನ ಪ್ರೀತಿಯ ಮಳೆ ;
ಹರಿಯಲಿ ಭೋರ್ಗರೆಯಲಿ
ಬತ್ತಿದೆದೆಗಳಲಿ ಹೊಳೆ ;
ಕೊಚ್ಚಿ ಹೋಗಲಿ ಸ್ವಾರ್ಥ , ದುರಾಸೆ ;
ಸ್ವಚ್ಛವಾಗಲೀ ಇಳೆ.

ಚಿಮ್ಮಲಿ ಹಚ್ಚನೆ ಹಸಿರು,
ನಿರ್ಮಲವಾಗಲಿ ಉಸಿರು,
ಮತ್ತೆ ಆಗಲೀ ವಸುಂಧರೆ
ಸಕಲ ಜೀವಿಗಳಿಗಾಸರೆ.

ಧುಮ್ಮಿಕ್ಕಿ ಧುಮುಕಿ ಜಲಪಾತ
ನೀಡಿ ಜಡತೆಗಾಘಾತ
ಹೊಮ್ಮಿಸಲಿ ಹೊಸ ಚೇತನ,
ಕ್ರಿಯಾಶೀಲತೆಗೆ ಇಂಧನ.

ತೊನೆಯಲಿ ತೆನೆ ಹೊಂದೇರು,
ಅಡಗಲಿ ಹಸಿವಿನ ಚೀರು,
ಅರಳಲಿ ಎಲ್ಲೆಡೆ ಹೂನಗೆ,
ಹಾಯೆನಿಸಲಿ ಭೂತಾಯಿಗೆ.

-----***-----

ಗುರುವಾರ, ಸೆಪ್ಟೆಂಬರ್ 10, 2009

ಇರುವುದೆಲ್ಲವ ಬಿಟ್ಟು...

ಅದೇಕೋ ಎಂತೋ!?
ಬಾನ ಚಂದಿರನೇ ನೊಸಲ ಬಿಂದಿಯಾಗಿದ್ದರೂ,
ನೀಲಾಕಾಶದ ತುಂಬೆಲ್ಲಾ ಚೆಲ್ಲಿ,
ಅಣಕಿಸುವಂತಿರುವ ತಾರೆಗಳಿಗಾಗಿ
ಕೈಚಾಚುತಿರುವೆ ನಾನು!

ಅದೇಕೋ ಎಂತೋ!?
ಋತುಗಳ ರಾಜ ವಸಂತನೇ ತಾನಾಗಿ
ನನ್ನರಸಿ ಬಳಿಬಂದರೂ,
ಶಿಶಿರನಾಸರೆಗಾಗಿ ಕಾಯುತ್ತಾ
ಬಳಲಿ ಬಾಡುತಿರುವೆ ನಾನು!

ಅದೇಕೋ ಎಂತೋ?!
ಸುತ್ತಲೂ ಸಿಹಿನೀರಗೊಳಗಳೇ
ತುಂಬಿ ತುಳುಕಾಡುತಿದ್ದರೂ,
ಶರಧಿಯೊಳಗೇ ಮುಳುಗೇಳಿ,
ದಾಹ ತಣಿಸ ಬಯಸುವೆ ನಾನು!!

(ಬಹುಕಾಲದ ಹಿಂದೆ ಎಲ್ಲೋ ಗೀಚಿ ಮರೆತುಬಿಟ್ಟಿದ್ದ ತುಣುಕೊಂದು ಸಿಗಲು, ಅವು ಇದ್ದಹಾಗೇ ಮಾನಸದಲ್ಲಿ ಮೂಡಿಸುತ್ತಿದ್ದೇನೆ.)

ಬುಧವಾರ, ಸೆಪ್ಟೆಂಬರ್ 2, 2009

ಮಂಥನ

ಹಳೆಯ ನೆನಪುಗಳ ಶರಧಿಯೊಂದು
ಭೋರ್ಗರೆಯುತಿದೆ ಮನದ ಧರೆಯೊಳು
ತುಂಬಿದ್ದ ಬದುಕ ಹಸಿರಗಾಣಿಸಿ,
ಸಿಹಿ ನಗುವಿನಾಮೃತವನಿತ್ತು ಒಮ್ಮೊಮ್ಮೆ
ಬರಿದಾದ ಬದುಕ ಬಯಲಗಾಣಿಸಿ,
ಕಹಿ ನೋವಿನ ವಿಷವನಿತ್ತು ಮಗದೊಮ್ಮೆ..

ಈ ಯಾತನೆಯ ಸುನಾಮಿ ಅಲೆಗಳ ಧಾಳಿಗೆ
ಬಳಲಿ ಬೆಂಡಾಗಲು ಜೀವ(ನ),
ಪುನರ್ನಿವಾಸಕ್ಕೆ ನಾಂದಿ ಹಾಕಬಯಸಿದರೂ ಮನ,
ಹೊಸ ಕನಸುಗಳ ತೆಕ್ಕೆಗೆಳೆದುಕೊಳ್ಳಲು ಮಾತ್ರ,
ಯಾಕೋ ಈ ಶರಧಿ ತೆರೆಗಳನು ಹಿಂತೆಗೆಯುತಿದೆ....!!!?

ಜೇನು ಸವಿಯಾದರೇನಂತೆ, ಬಿಸಿ ಶಾಖಕ್ಕೆ ಒಡ್ಡುತಿರೆ,
ಬುರುಗೆದ್ದು ಹುಳಿಹೆಂಡವಾದೀತು ತಾನೇ?!
ಹೊಸ ಜೇನ ತುಂಬಲು ಹಳೆ ಮನವೇ ಬೇಕು.
ಸವಿನೆನಪುಗಳು ನೀಡುವ ಕಹಿ ಭಾವಗಳ ಮರೆಯಲು
ಹೊಸ ನೆನಪುಗಳಿಗಿಂದೇ ಬದುಕು ಹುಟ್ಟು ಹಾಕಬೇಕು.

ಭಾನುವಾರ, ಆಗಸ್ಟ್ 9, 2009

ಹಿನ್ನೀರಿನ ಜೊತೆಗೆ ಮುನ್ನೀರಿನತ್ತ ಪಯಣ....

"ಸಾವಿರ ಹೊಳೆಗಳು ತುಂಬಿ ಹರಿದರೂ
ಒಂದೇ ಸಮನಾಗಿಹುದಂತೆ
ಸುನೀಲ, ವಿಸ್ತರ, ತರಂಗ ಶೋಭಿತ
ಗಂಭೀರಾಂಬುಧಿ ತಾನಂತೆ -"
ನಿಜ.. ಈ ಮನಸ್ಸೆಂಬುದು ಆ ಶರಧಿಗೇ ಸಮ. ಇದರಾಳವ ಅಳೆಯಬಲ್ಲವರು ಯಾರೂ ಇಲ್ಲ. ಬರೆಯಲಾಗದು, ಬರೆಯಲಾರೆ, ಬರೆಯಬಾರದೆಂದು ಬಯಸಿ ಬಯಸಿ, ಮನಸ ರಮಿಸಿ ಸಾಕಾಯಿತು. ಜಟಿಲಕಾನನದ ಕುಟಿಲ ಪಥದೊಳು ಹರಿವ ತೊರೆ ನಾನಾಗಿರುವಾಗ ಮನಸೆಂಬ ಸಾಗರವನ್ನು ಹೇಗೆ ತಾನೇ ಮೀರಬಲ್ಲೆನು?! ಕಾಣದ ಕಡಲಿಗೆ ಹಂಬಲಿಸಿದ ಮನ.. ಆದರೆ ಅರಿಯದೇ ಹೋಯಿತು ನನ್ನೀ ಮನ, ಸ್ವತಃ ತಾನೇ ಆ ನಿಗೂಢ ಕಡಲಿಗೆ ಸಮವೆಂದು!! ಹಾಗಾಗಿಯೇ ಶರಣಾದೆ ಭಾವನೆಗಳ ತೆರೆಗಳಬ್ಬರದ ಧಾಳಿಗೆ... ತೆರೆತೆರೆದು ತೆರೆದಿಡುವ ಅವುಗಳ ಕಪ್ಪು-ಬಿಳಿಪಿನಾಟಕ್ಕೆ... ಹಳೆಯ ನೆನಪುಗಳ ತಾಕಲಾಟಕ್ಕೆ... ಮಾನಸವನ್ನು ತೆರೆಯಲೇಬೇಕಾಯಿತು.

ಮಂಗಳೂರಿಗೆ ಹೋಗಿದ್ದಾಗ ಹೀಗೇ ಸುಮ್ಮನೆ ನನ್ನ ಹಳೆಯ ಪುಸ್ತಕಗಳನ್ನೆಲ್ಲ ಮಗುಚಿ ಹಾಕುವ ಮನಸ್ಸಾಯಿತು. ಹಾಗೆ ಜೋಡಿಸಿಡುವಾಗ ಎಲ್ಲೋ ಮೂಲೆಯಲ್ಲಿ ಕುಳಿತಿದ್ದ ಒಂದು ಪುಟ್ಟ ನೋಟ್‌ಪುಸ್ತಕ ನನ್ನ ಗಮನ ಸೆಳೆಯಿತು. ಒಳ ಇಣುಕಿ ನೋಡಿದರೆ, ೨೦೦೧ನೆಯ ಇಸವಿಯಲ್ಲಿ ಅಂದರೆ ಸುಮಾರು ಎಂಟೊಂಭತ್ತು ವರುಷಗಳ ಹಿಂದೆ ಹರಿ ಬಿಟ್ಟಿದ್ದ ನನ್ನ ಪಕ್ವ-ಅಪಕ್ವ ಭಾವನೆಗಳೆಲ್ಲಾ ಒಮ್ಮೆಲೇ ನನ್ನ ಮನಮಂದಾರವನ್ನು ಹೊಕ್ಕು ಹೊಸ ಕಂಪನ್ನು ಸೂಸತೊಡಗಿದವು. ಇವುಗಳನ್ನೆಲ್ಲಾ ಆಗ ನಾನೇ ಬರೆದಿದ್ದೆನೇ? ಇವು ನನ್ನ ಮನದಾಳದ ಮಾತುಗಳಾಗಿದ್ದವೇ?! ಅಥವಾ ಇದನ್ನು ಹಿಂದಿನ ತೇಜಸ್ವಿನಿ ಬರೆದು ಮುಚ್ಚಿ ಮರೆತುಬಿಟ್ಟಿದ್ದಳೋ? ಆಗಿನ ನನ್ನ ಮನದಾಳದ ಮಾತುಗಳನ್ನು ಓದಿದಾಗ ನನ್ನೊಳಗಿನ ನಾನು ಹೊರ ಬಂದು ನನ್ನನ್ನೇ ದುರುಗುಟ್ಟಿ ನೋಡಿ ಮುಗುಳ್ನಕ್ಕು ಪರಿಚಿತವಾಗಿಯೂ ಅಪರಿಚಿತ ಅನ್ನಿಸುವಂತಹ ಭಾವನೆ ಮೂಡಿದ್ದಂತೂ ಸುಳ್ಳಲ್ಲ. ಅವುಗಳಲ್ಲಿ ಕೆಲವನ್ನಾದರೂ ನಿಮ್ಮೊಂದಿಗೆ ಹಂಚಿಕೊಂಡು ಮತ್ತೆ ನನ್ನನ್ನು ನಿಮಗೆ (ಜೊತೆಗೆ ನನಗೂ) ಪರಿಚಯಿಸಿಕೊಳ್ಳುವ ಸಣ್ಣ ಆಸೆ ಮೂಡಿತು. ಅಂತೆಯೇ ಆ ಭಾವಲಹರಿಗಳನ್ನು ಮಾನಸದಲ್ಲಿ ಮೂಡಿಸುತ್ತಿದ್ದೇನೆ.

-------------------------------------------

೨೦-೦೪-೨೦೦೧

೧. ನಮ್ಮ ಹಲವಾರು ಸಮಸ್ಯೆಗಳಿಗೆ ಪರಿಹಾರ ಕೆಲವು ಬಾರಿ ಬೇರೊಬ್ಬರಿಂದಲೇ ಸಿಗುವುದು. ಆದರೆ ಆ ಪರಿಹಾರ ನೀಡುವ ಬೇರೊಬ್ಬರು ನಮ್ಮವರಾಗಿರಬೇಕು ಅಷ್ಟೇ!

೨. ಮನಸಿಗಾಗುವ ನೋವು, ಹೃದಯದ ಬೇನೆಗಿಂತಲೂ ದೊಡ್ಡದೇ. ಮನದಾಳದ ನೋವನ್ನು ತಿಳಿಸಲಾಧ್ಯವಾದರೆ, ಹೃದಯಾಳದ ನೋವನ್ನು ಮುಚ್ಚಿಡಲು ಅಸಾಧ್ಯ. ಒಂದಂತೂ ನಿಜ. ಗಾಯ ತೆರೆದಿಟ್ಟಷ್ಟೂ ಬಲುಬೇಗ ವಾಸಿಯಾಗುವುದು. ಮುಚ್ಚಿಟ್ಟರೆ ಪ್ರಾಣಕ್ಕೇ ಅಪಾಯ!

೩. ಪ್ರೀತಿಯ ಅರ್ಥವನ್ನು ತಿಳಿಯ ಹೋದಂತೆಲ್ಲಾ ನಿಗೂಢವಾಗಿಯೇ ಕಾಣುತ್ತದೆ. ಹೌದು.. ಇದರರ್ಥ ಇದಾಗಿರಬಹುದೆಂದು ಒಂದು ಕ್ಷಣ ಅನಿಸಿದರೆ, ಮರುಕ್ಷಣವೇ ಅದು ಸುಳ್ಳೆನಿಸುತ್ತದೆ. ಈ ಯುಗದಲ್ಲೂ ನಿಶ್ಕಲ್ಮಶ ಪ್ರೀತಿ ನಮ್ಮ ಸಮಾಜದಲ್ಲಿ ಜೀವಂತವಾಗಿದೆಯೇ?! ಈ ಪ್ರಶ್ನೆಗೆ ನಿಸ್ಸಂಶಯವಾದ ಉತ್ತರ ಸಿಗದಿರುವಾಗ, ಪ್ರೀತಿಯ ಅರ್ಥ ತಿಳಿಯುವುದಾದರೂ ಹೇಗೆ?!

೪. "ಕಣ್ಣ ಭಾಷೆಯನ್ನು ತಿಳಿಯಬಹುದು" - ಇದು ಹಲವರ ಅಭಿಪ್ರಾಯ. ಆದರೆ ಅರ್ಥೈಸಿಕೊಂಡ ಭಾಷೆಯೂ, ಕಣ್ಣೊಳಗಿನ ಭಾವವೂ ಒಂದೇ ಎಂದು ಅರಿಯುವ ಮಾಪನ ಯಾವುದು? ಅದಿಲ್ಲದೇ ಇದೊಂದು ಅರ್ಧ ಸತ್ಯವೇ ಸರಿ.

೫. ನಗು ನೂರು ತರಹದ್ದಾಗಿರಬಹುದು. ಅದರ ಭಾಷೆ ಹಲವಾರು ಆಗಿರಬಹುದು. ಆದರೆ ಅಳುವಿನ ಭಾಷೆ ಒಂದೇ. ಅದು ದುಃಖದ ಪರಿಕಲ್ಪನೆಯ, ನೋವಿನ ಪರಿಭಾಷೆಯ ಸಾಧನ. ನೋವ ಮರೆಮಾಚಲು ಮನಃಪೂರ್ವಕವಾಗಿ ನಗಲೂಬಹುದು. ಆದರೆ ನಲಿವ ಬಚ್ಚಿಡಲು ಮನಃಪೂರ್ವಕವಾಗಿ ಅಳುವುದು ಸಾಧ್ಯವೇ?!

೬. ತಿಳಿದುಕೊಂಡಿರುವೆ, ತಿಳಿಯುತ್ತಿರುವೆ, ತಿಳಿದುಕೊಳ್ಳಬಲ್ಲೆ..ಎನ್ನುತ್ತಲೇ ಸಾಗಿಸುವೆವು ಜೀವನವ. ಆದರೆ ಕೊನೆಯಲ್ಲಿ ಮಾತ್ರ ತಿಳಿಯುವೆವು ನಾವು.. ತಿಳಿದುಕೊಳ್ಳದೇ ಹೋದೆ, ತಿಳಿದುಕೊಳ್ಳಲಾರೆ, ತಿಳಿದುಕೊಳ್ಳುವುದು ಬಲು ಕಷ್ಟ ಎಂಬ ಕಟು ಸತ್ಯವನ್ನು ಮಾತ್ರ!

೭. ಮನುಷ್ಯನಿಗೆ ಅತೀವ ನೋವು, ದುಃಖ ಉಂಟಾಗುವುದು ಆತನ ಪ್ರೀತಿಪಾತ್ರರಿಂದಲೇ. ಪ್ರೀತಿಪಾತ್ರರ ಮಾತುಗಳು ಸದಾ ನೆನಪಿರುತ್ತವೆ. ಅಪಾತ್ರರ ಮಾತುಗಳು ಎಷ್ಟೇ ಕಟುವಾಗಿದ್ದರೂ ಮಳೆಹೊಯ್ದು ಮಾಯವಾಗುವಂತೆ ಕೆಲಸಮಯದಲ್ಲೇ ಮರೆಯಾಗಿಹೋಗುತ್ತದೆ. ಆದರೆ ಆತ್ಮೀಯರ ನುಡಿಗಳು(ಸಿಹಿ/ಕಹಿ) ಸದಾ ಸ್ಮೃತಿಯಲ್ಲಿರುತ್ತವೆ.

೮. ಮನಸ್ಸು ಬಯಸಿದ್ದೆಲ್ಲಾ ಸರಿಯಾಗಿರುತ್ತದೆ ಎಂದು ಹೇಳಲಾಗದು. ಆದರೆ ಹೃದಯ ಬಯಸಿದ್ದು ಮಾತ್ರ ತಪ್ಪಾಗಿರುವುದು ತೀರಾ ಕಡಿಮೆಯೇ. ಕಾರಣ ಮನಸ್ಸು ಚಂಚಲ, ಹೃದಯ ಸ್ಥಿರ. ಮನಸ್ಸು ಸ್ಥಿರಗೊಂಡರೆ ಜೀವನ ಸುಗಮ. ಆದರೆ ಹೃದಯ ನಿಂತರೆ ಜೀವಿಯ ಅಂತ್ಯ. ಆಗ ಮನಸಿಗೂ ಕೊನೆಯುಂಟಾಗುವುದು.

೯. ಪ್ರೀತಿಸುವುದು ಬಲು ಸುಲಭ. ಆದರೆ ದ್ವೇಷಿಸುವುದು ಬಲು ಕಷ್ಟ. ದ್ವೇಷದಲ್ಲೇ ಜೀವಿಸುವುದು ಅಸಾಧ್ಯ ಕೂಡ. ಆದರೆ ಪ್ರೀತಿಯ ನಂಟಿಗಿಂತ ದ್ವೇಷದ ನಂಟು ಬಲು ಹೆಚ್ಚಾಗಿರುತ್ತದೆ. ದ್ವೇಷಿಸುವಾಗ ಅದರ ಉರಿ ನಮ್ಮನ್ನೂ ಬಿಡದು. ಪ್ರೀತಿ ಏಕ ಮುಖವಾಗಿದ್ದರೂ ತಂಪನ್ನೀಯುವುದು. ದ್ವೇಷ ಸದಾ ಉರಿಯಲ್ಲಿ ಆರಂಭಗೊಂಡು ಬೂದಿಯಲ್ಲಿ ಅಂತ್ಯವಾಗುವುದು.

೧೦. ಮನುಜನ ಆಸೆ ಮರೀಚಿಕೆಯಂತೆ. ದೂರದಲ್ಲೆಲ್ಲೋ ಇದ್ದಂತೆ ಕಾಣುವುದು, ಕೈಗೆಟಕುವಂತೇ ಅನಿಸುವುದು, ಹತ್ತಿರ ಹೋದಾಗ ಮಾತ್ರ ಮರೆಯಾಗುವುದು. ಒಂದು ಕಡೆ ಓಯಾಸಿಸ್ ಸಿಕ್ಕರೆ ಮತ್ತೊಂದು ಕಡೆ ಸುಡು ಬಿಸಿಲು.

೧೧. ಗೆಲುವಿಗೆ ಆತ್ಮವಿಶ್ವಾಸ ಅಗತ್ಯವೋ ಇಲ್ಲಾ ಆತ್ಮವಿಶ್ವಾಸವನ್ನು ಗೆಲುವಿನಿಂದ ಮಾತ್ರ ಪಡೆಯಬಲ್ಲೆವೋ ಎಂಬ ತರ್ಕ ನನ್ನ ಮನದಲ್ಲಿ ಸದಾ ನಡೆಯುತ್ತಿರುತ್ತದೆ. ಆದರೆ ಒಂದಂತೂ ಸತ್ಯ... ಆತ್ಮವಿಶ್ವಾಸ ಹೆಚ್ಚಿಸಲು, ಸ್ಥಿರಗೊಳಿಸಲು ಒಂದಾದರೂ ಗೆಲುವಿನ ಅಗತ್ಯತೆ ಬೇಕೇ ಬೇಕು.

೧೨. ಸೋಲನ್ನು ಒಪ್ಪಿಕೊಳ್ಳುವುದು ಒಂದು ಕಲೆ. ಇದು ಒಳ್ಳೆಯತನ. ಆದರೆ ಶ್ರಮ ಪಟ್ಟು ಪಡೆದ ನಮ್ಮ ಗೆಲುವನ್ನು ಇತರರಿಗೆ(ನಮ್ಮವರಿಗೇ ಆದರೂ ಸರಿ) ಬಿಟ್ಟುಕೊಡುವುದು ಉದಾರತನವಲ್ಲ, ಮೂರ್ಖತನ. ಕಾರಣ ಗೆಲುವನ್ನು ದಾನವಾಗಿ ಪಡೆದಾಗ ಉಂಟಾಗುವುದು ಕೀಳಿರಿಮೆ. ಗಳಿಸಿಕೊಂಡಾಗ ಮಾತ್ರ ಸಿಗುವುದು ನಿಜ ಹಿರಿಮೆ.

೧೩. ಗುಂಪಿನಲ್ಲಿದ್ದೂ ಏಕಾಂಗಿತನವನ್ನು ಅನುಭವಿಸುವುದು, ಏಕಾಂಗಿಯಾಗಿದ್ದರೂ ಗುಂಪೊಳಗೆ ಸೇರಿ ಬೆರೆಯುವುದು ಸೂರ್ಯ ಮತ್ತು ಚಂದ್ರರಿಗಿರುವಷ್ಟೇ ವ್ಯತ್ಯಾಸವನ್ನು ಹೊಂದಿದೆ ಎಂದೆನ್ನಿಸುತ್ತದೆ. ಮೊದಲನೆಯ ಭಾವ ತನಗೂ ತನ್ನ ಸುತ್ತಲಿನವರಿಗೂ ಬಿಸಿಲನ್ನು, ಸುಡು ತಾಪವನ್ನು ನೀಡಿದರೆ, ಎರಡನೆಯದು ಉರಿವ ಬಿಸಿಲಿನಲ್ಲೂ ತಂಪಾದ ನೆರಳನ್ನು ನೀಡುತ್ತದೆ.

೧೪. ಚಿತ್ರಗೀತೆಯ ಸಾಲೊಂದು ಸದಾ ಕಾಡುತ್ತಿರುತ್ತದೆ...
"ಓ ಚಂದಮಾಮ ಏಕೆ ಹೀಗೇ?
ತಂಗಾಳಿಯಲ್ಲೂ ಬಿಸಿಲ ಬೇಗೆ
ಅಂಗಳದ ತುಂಬ ನಿನ್ನ ಬಿಂಬ ಇದ್ದರೂ
ಮನೆಯೊಳಗೆ ಮಾತ್ರ ಬೆಳಕಿಲ್ಲ!!" - ಮನದೊಳಗೆ ದೀಪ ಹೊತ್ತಿಸಲಾಗದವರು ಬದುಕೆಂಬ ಮನೆಯೊಳಗೆ ಕತ್ತಲನ್ನೇ ತುಂಬಿಕೊಳ್ಳುತ್ತಾರೇನೋ!! ಹೀಗಿದ್ದಾಗ ನಿಜ ಬೆಳಕು ಬಂದಾಗಲೂ ಕಣ್ಕುಕ್ಕುವ ಭಯದಿಂದಾಗೋ ಇಲ್ಲ ಭ್ರಮೆಗೊಳಗಾಗೋ ಕಣ್ಮುಚ್ಚುತ್ತಾರೆ. ಬದುಕನ್ನಿಡೀ ಕತ್ತಲೆಯಲ್ಲೇ ಕಳೆಯುತ್ತಾರೆ...ಕೊಳೆಯುತ್ತಾರೆ.

೧೫. ಹಲವಾರು ಸೋಲುಗಳು ಒಂದನ್ನೊಂದು ಅರಸಿ ಬಂದಾಗ ನಡುವೆ ಆಗಾಗ ಸಿಗುವ ಗೆಲವುಗಳೂ ಅಲ್ಪವಾಗಿಯೋ ಇಲ್ಲಾ ಸೋಲಾಗಿಯೋ ಕಾಣುತ್ತವೆ. ಅದೇರೀತಿ ಗೆಲುವೇ ತುಂಬಿರುವಾಗ ನಡುವೆ ಸಿಗುವ ಆಗೊಂದು ಈಗೊಂದು ಸೋಲೂ ಅಲ್ಪವಾಗಿಯೋ ಇಲ್ಲಾ ಮುಂದಿನ ಗೆಲುವಿಗೆ ಒಂದು ಮಜಲಾಗಿಯೋ ಭಾಸವಾಗುವುದು.

೧೬. "ಆಸೆಯೇ ದುಃಖಕ್ಕೆ ಮೂಲ" ನಿಜ. ಆದರೆ ಆಸೆಯ ಪ್ರಭಾವ, ಋಣಾತ್ಮಕ ಹಾಗೂ ಧನಾತ್ಮಕ ಪರಿಣಾಮಗಳು- ಇವುಗಳನ್ನೆಲ್ಲಾ ಆ ಆಸೆಯನ್ನು ಹೊಂದಿ ಪಡೆಯಲು ಹವಣಿಸಿದಾಗ ಮಾತ್ರ ಅರಿವಾಗಬಹುದೇನೋ!? ನಿರಾಸೆಗೂ ನಿರ್ಲಿಪ್ತತೆಗೂ ಹೆಚ್ಚಿನ ಅಂತರವೇನೂ ಕಂಡುಬರದು. ನಿರಾಸೆ ಹೊಸ ಆಸೆಯ ಅನ್ವೇಷಣೆಗೆ ಹೊರಟೆರೆ ನಿರ್ಲಿಪ್ತತೆ ಬದುಕುವ ಆಶಯವನ್ನೇ ಹೊಸಕಿಹಾಕಬಹುದು!!

ಅದೇ ಪುಸ್ತಕದ ಮೂಲೆಯಲ್ಲೊಂದು ಕಡೆ ಗಾಂಧೀಜಿಯವರ ಹಾಗೂ ರಾಮಕೃಷ್ಣ ಪರಮಹಂಸರ ನುಡಿಮುತ್ತುಗಳನ್ನೂ ದಾಖಲಿಸಿಟ್ಟಿದ್ದೆ. ಅವೂ ನನ್ನ ಕಣ್ಣ ಹೊಕ್ಕಿ ಮನದೊಳಗೆ ಮನೆಮಾಡಿಕೊಂಡವು. ಆ ಸಾಲೂಗಳೂ ಈಗ ನಿಮಗಾಗಿ ಇಲ್ಲಿ ಭಿತ್ತರಿಸುತ್ತಿದ್ದೇನೆ.

"ಹೃದಯದಲ್ಲಿ ಗೊಂದಲವಿದ್ದರೂ ಹೊರಗೆ ಮುಗುಳು ನಗು ಬೀರಲು ನನ್ನ ಪಳಗಿಸಿದ್ದೇನೆ."

"ದುಃಖ ಬರುವಾಗಲೂ ನಕ್ಕು ಬಿಡು. ಆ ದುಃಖವನ್ನು ಗೆಲ್ಲುವುದಕ್ಕೆ ನಗುವಿಗಿಂತ ಮೇಲಿನದಾದ ಬೇರೆ ಯಾವುದೇ ಶಕ್ತಿ ಇರುವುದಿಲ್ಲ"

"ಮಾನಸಿಕ ದುಗುಡ ಜೀವನದ ತಪ್ಪು ದೃಷ್ಟಿಕೋನದಿಂದ ಉಂಟಾಗುತ್ತದೆ."

--------------------------------------------------------

ಇವಿಷ್ಟು ಸುಮಾರು ಒಂಭತ್ತು ವರುಷಗಳ ಹಿಂದೆ ನಾನೇ ಬರೆದು ಮರೆತಿಟ್ಟ ಪಕ್ವ-ಅಪಕ್ವ ಸಾಲುಗಳು. ಈ ಸಾಲುಗಳ ಕುರಿತಾಗಿ ನಿಮಗಿರುವ ಅಭಿಪ್ರಾಯ-ಭಿನ್ನಾಭಿಪ್ರಾಯಗಳನ್ನು ಸ್ವೀಕರಿಸಲು ನನ್ನ ಮಾನಸ ಸಿದ್ಧವಾಗಿದೆ. ನಿಮಗೆಲ್ಲರಿಗೂ ಆದರದ ಸ್ವಾಗತ :)

- ತೇಜಸ್ವಿನಿ.

ಗುರುವಾರ, ಮಾರ್ಚ್ 26, 2009

ಯುಗಾದಿಯ ಸಂಭ್ರಮದ ಜೊತೆಗೆ ಮಾನಸವು ಪಡೆಯುತಿದೆ ಅಲ್ಪವಿರಾಮ,

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ.



ಎಲ್ಲರಿಗೂ ಯುಗಾದಿಯ ಹಾರ್ದಿಕ ಶುಭಾಶಯಗಳು.




ನಿಮ್ಮೆಲ್ಲರ ಬಾಳಲ್ಲಿ ಹೊಸ ವರುಷವು ಹೊಸ ಹರುಷವ ಹೊಸತು ಹೊಸತು ತರಲಿ ಎಂದು ಮನಃಪೂರ್ವಕವಾಗಿ ಹಾರೈಸುತ್ತಿದೆ ನನ್ನ ಮಾನಸ.




ಹಾಗೆಯೇ ಮಾನಸವೂ ಮರೆಯಾಗುತ್ತಿದೆ ಅಲ್ಪ ಕಾಲಕ್ಕೆ. ಬಹು ಬೇಗ ಹಿಂತಿರುಗುವ ಆಶಾವಾದದೊಂದಿಗೆ ಪಡೆಯಹೊರಟಿದೆ ಅಲ್ಪವಿರಾಮ,

ಅಲ್ಲಿಯವರೆಗೆ ಸದಾ ಹಸಿರಾಗಿರುವಿರಿ ನೀವೆಲ್ಲಾ ನನ್ನ ಮಾನಸದಲ್ಲಿ ಸವಿ ನೆನಪಾಗಿ.

ಶುಭಾಶಯಗಳೊಂದಿಗೆ,
ತೇಜಸ್ವಿನಿ ಹೆಗಡೆ.

ಶುಕ್ರವಾರ, ಫೆಬ್ರವರಿ 27, 2009

ಒಳಗೊಂದು ಕಿರುನೋಟ....ಭಾಗ-೧

ಮಲೆಯ ಮದುಮಗಳ ತುಂಬೆಲ್ಲಾ ಮಲೆಯದೇ ಸ್ನಿಗ್ಧ ಸೌಂದರ್ಯ!
-------------------------------------------
ಕುವೆಂಪು ಅವರ "ಮಲೆಗಳಲ್ಲಿ ಮದುಮಗಳು" ಕೃತಿ ಮೊದಲು ಬಿಡುಗಡೆಗೊಂಡಿದ್ದು ೧೯೬೭ರಲ್ಲಿ. ಇಂತಹ ಒಂದು ಬೃಹತ್ ಕಾದಂಬರಿಯನ್ನು ಇಷ್ಟು ನಾಜೂಕಾಗಿ, ಸುಂದರವಾಗಿ, ಸಾರ್ವಕಾಲಿಕ ಶೇಷ್ಠವಾಗಿ, ಕಾಲಾತೀತವಾದ ಕೃತಿಯನ್ನು ರಚಿಸಲು ಅವರಿಗೆ ಎಷ್ಟು ಸಮಯ ಬೇಕಾಯಿತೋ ಕಾಣೆ. ಈವರೆಗೆ ಒಟ್ಟೂ ಹನ್ನೆರಡು ಮುದ್ರಣವನ್ನು ಕಂಡಿರುವುದೇ ಇದರ ಪ್ರಖ್ಯಾತಿಗೆ, ಮೆಚ್ಚುಗೆಗೆ ಹಾಗೂ ಕಾದಂಬರಿಯೊಳಗಿನ ಸೊಬಗು, ಮಾರ್ದವತೆ, ನೈಜತೆಯ ಮೋಡಿಗೆ ಸಾಕ್ಷಿ. ಆಗಿನ ಕಟು ವಾಸ್ತವಿಕತೆಗಳು, ಪಶುತ್ವ ವರ್ತನೆಗಳು, ಗ್ರಾಮ್ಯ ಭಾಷೆಗಳ ಒರಟುತನ, ಆಹಾರ ವಿಹಾರಗಳಲ್ಲಿನ ರೂಕ್ಷತೆಗಳನ್ನು ಮೊದಮೊದಲು ಅರಗಿಸಿಕೊಳ್ಳಲು ತುಸು ಕಠಿಣ ಎಂದೆನಿಸಿದರೂ, ಕ್ರಮೇಣ ಅದರೊಳಗಿನ ಪಾರದರ್ಶಕತೆ ನಮ್ಮನ್ನು, ನಮ್ಮರಿವನ್ನೂ ಮರೆವಂತೆ ಮಾಡುವುದು ಸುಳ್ಳಲ್ಲ. ಈ ಕಾದಂಬರಿಯನ್ನು ನಾನು ಸುಮಾರು ೭-೮ ವರ್ಷಗಳ ಹಿಂದೆ ಓದಿದ್ದೆ. ಈಗ ಇತ್ತೀಚಿಗೆ ಮತ್ತೊಮ್ಮೆ ಈ ಕಾದಂಬರಿಯನ್ನೋದಿದೆ. ಓದುತ್ತಿದ್ದಂತೆ ನನಗನಿಸಿತು ಇದರ ಕುರಿತು ನನ್ನ ಅಭಿಪ್ರಾಯ, ಅನಿಸಿಕೆಗಳನ್ನು ಸಹಮಾನಸಿಗರಾದ ನಿಮ್ಮೆ ಮುಂದೆಯೂ ತೆರೆದಿಡಬೇಕೆಂದು. ಅದಕ್ಕಾಗಿಯೇ ಈ ಪುಟ್ಟ ಪ್ರಯತ್ನ.
ಆರಂಭದಲ್ಲಿ ಕುವೆಂಪು ಅವರೇ ಹೇಳಿದಂತೆ-"ಇಲ್ಲಿ ಯಾರೂ ಮುಖ್ಯರಲ್ಲ; ಯಾರೂ ಅಮುಖ್ಯರಲ್ಲ; ಯಾವುದೂ ಯಃಕಶ್ಚಿತವಲ್ಲ! ಇಲ್ಲಿ ಅವಸರವೂ ಸಾವಧಾನದ ಬೆನ್ನೇರಿದೆ!"

ಕಾದಂಬರಿಯೊಳಗೆ ಕಥೆ ಪ್ರಾರಂಭವಾಗುವುದು ಸಿಂಬಾವಿಯ ಭರಮೈಹೆಗ್ಗಡೆಯವರ ಚೌಕಿಮನೆಯಿಂದಾದರೆ, ಕೊನೆಗೊಳ್ಳದೇ ನಿರಂತರತೆಯನ್ನು ಸಾರುತ್ತಾ ಓದುಗನ ಕಲ್ಪನೆಯಲ್ಲಿ ನಿಲ್ಲುವುದು ಹೂವಳ್ಳಿ ಚಿನ್ನಮ್ಮ ಹಾಗೂ ಮುಕುಂದಯ್ಯನವರು ಒಂದಾಗುವ ಸಂಕೇತದೊಂದಿಗೆ. ಈ ನಡುವೆ ಬರುವ ಅನೇಕ ಕಥೆಗಳು ಉಪಕಥೆಗಳು, ಹಲವಾರು ಜಾತಿ, ಮತ, ಪಂಥಗಳು, ಪಂಗಡಗಳು, ಪಾತ್ರಗಳು, ಪ್ರಸಂಗಗಳು ಎಲ್ಲವೂ ಸಾವಧಾನವಾಗಿ ಮೆಲ್ಲಮೆಲ್ಲನೆ ಮನದೊಳಗಿಳಿದು..ಆಳವ ಹುಡುಕಿ ತಮ್ಮ ತಮ್ಮ ಜಾಗವನ್ನು ಹಿಡಿದು ಬೇರನ್ನೂರಿ ಚಿರಸ್ಥಾಯಿಯನ್ನು ಪಡೆಯುತ್ತವೆ.


ಸಿಂಬಾವಿ ಭರಮೈಹೆಗಡೆ, ಹಳೆಮನೆ ಸುಬ್ಬಣ್ಣ ಹೆಗ್ಗಡೆ, ಹೂವಳ್ಳಿ ವೆಂಕಟನ್ಣ, ಬೆಟ್ಟಳ್ಳಿ ಕಲ್ಲೇಗೌಡ್ರು ಹಾಗೂ ಅವರ ಮಗ ದೇವಯ್ಯ, ಕೋಣೂರಿನ ರಂಗೇಗೌಡ್ರು ಹಾಗೂ ಅವರ ತಮ್ಮ ಮುಕುಂದಯ್ಯ, ಹೊಲೆಯನಾದ ಗುತ್ತಿ ಹಾಗೂ ಆತನ ಹುಲಿ ಗಾತ್ರದ ನಾಯಿ ಹುಲಿಯ, ತಿಮ್ಮಿ, ಚಿನ್ನಮ್ಮ, ಪಿಂಚಲು, ಐತ - ಇವರು ಮಲೆಯ ಮದುಮಗಳನ್ನು ಸಿಂಗರಿಸುವಲ್ಲಿ ಪ್ರಮುಖ ಪಾತ್ರಧಾರಿಗಳು.

ಸೇನಾನಾಯ್ಕ, ಅಂತಕ್ಕ ಸೆಟ್ತಿ ಆಕೆಯ ಮಗಳು ಕಾವೇರಿ, ಮತಾಂತರಿ ಫಾದರ್ ಜೀವರತ್ನಯ್ಯ, ಕಾಮುಕ ಚೀಂಕ್ರ, ಆತನ ದುರ್ಬಾಗ್ಯ ಹೆಂಡತಿ ದೇಯಿ, ರೋಗಿಷ್ಠ ಗಂಡನ ಶುಶ್ರೂಷೆಯಲ್ಲೇ ನೆಮ್ಮದಿ ಕಾಣುವ ಅಕ್ಕಣಿ, ಕೇಡಿ/ಪುಂಡಾಡಿ ಕರೀಂಸಾಬ, ಆತನ ಚೇಲ ಪುಡಿಸಾಬ, ಸಾಧ್ವಿಯರಾದ ಜಟ್ಟಮ್ಮ, ದೇವಮ್ಮ, ರಂಗಮ್ಮ, ಜಿಪುಣ ಮಂಜಭಟ್ಟ, ಅಂತರ್ಯಾಮಿಯಾದ ಹೊಳೆದಂಡೆಯ ಸಂನ್ಯಾಸಿ ಮುಂತಾದವರೆಲ್ಲಾ ಮದುಮಗಳ ಸಹಚಾರರು. ಅಂದರೆ ಉಪಕಥೆಗಳಿಗೆ ಕಾರಣಕರ್ತರು.

ಆದರೆ ಇಲ್ಲಿ ಉಪಕಥೆಯ ಮೂಲಕವೇ ಪ್ರಮುಖ ಕಥೆಯನ್ನೂ ಘಟನಾವಳಿಗಳನ್ನೂ ಹೇಳಿದ, ಹಾಗೆ ಹೇಳಲು ಹಣೆದ ನಿರೂಪಣಾಶೈಲಿಗೆ ಎರಡು ಮಾತಿಲ್ಲ. ನಿಜವಾಗಿಯೂ ಇಲ್ಲಿ ಯಾರೂ ಮುಖ್ಯರಲ್ಲ. ಅಮುಖ್ಯರೂ ಅಲ್ಲ!

ಕುವೆಂಪು ಅವರು ಇಲ್ಲಿ ಪ್ರಮುಖವಾಗಿ ಮೂವರು ಮದುಮಗಳನ್ನು ಪ್ರತಿಪಾದಿಸುತ್ತಾರೆ. ಒಬ್ಬಳು ಬೆಟ್ಟಳ್ಳಿ ಕಲ್ಲೇಗೌಡರ ಹೊಲೆಯಕೇರಿಯಲ್ಲಿರುವ ಹೊಲೆಯನಾದ ಗುತ್ತಿ. ಇನ್ನೊಬ್ಬಳು ಗೌಡತಿಯಾದ ಹೂವಳ್ಳಿ ಚಿನ್ನಮ್ಮ. ಇಬ್ಬರೂ ಕಾರಣಾಂತರಗಳಿಂದ ತಮಗಿಷ್ಟವಿಲ್ಲ ಮದುವೆಯಿಂದ ತಪ್ಪಿಸಿಕೊಳ್ಳಲು ತಮ್ಮ ಪ್ರಿಯಕರನೊಂದಿಗೆ (ತಿಮ್ಮಿಯ ಪ್ರಿಯಕರ ಸಿಂಬಾವಿ ಒಡೆಯರ ಹೊಲಗೇರಿ ವಾಸಿಯಾದ ಗುತ್ತಿಯಾದರೆ ಚಿನ್ನಮ್ಮಳ ಪ್ರಿಯತಮ ಕೋಣೂರಿನ ಮುಕುಂದಯ್ಯ ಗೌಡ್ರು) ಓಡಿಹೋಗಿ ಸದಾ ಮದುಮಗಳಾಗಿ ಕಂಗೊಳಿಸುತ್ತಿದ್ದ ದಟ್ಟ ಮಲೆಯಲ್ಲಡಗಿರುತ್ತಾರೆ. (ಸಂದರ್ಭ ಹಾಗೂ ಕಾಲ ಎರಡೂ ಭಿನ್ನವಾಗಿರುತ್ತದೆ. ಒಂದೇ ದಿನ/ಒಂದೇ ಸಮಯದಲ್ಲೇ ಇಬ್ಬರೂ ಓಡಿ ಹೋಗುವುದಿಲ್ಲ.)
ಆದರೆ ಹೊಲೆಯನಾದ ಗುತ್ತಿಯ ಪಲಾಯನದಲ್ಲೂ ಹೂವಿನಂತಹ ಚೆಲುವೆ ಚಿನ್ನಮ್ಮಳ ಪಲಾಯನದಲ್ಲೂ ಇರುವ ಸಾಮ್ಯತೆ/ವಿರುದ್ಧತೆಯನ್ನು ಕಣ್ಣಿಗೆ ಕಟ್ಟಿದಂತೇ ಚಿತ್ರಿಸುತ್ತಾರೆ ಕುವೆಂಪು. ಮೈನವಿರೇಳಿಸುವ ಪ್ರಸಂಗ, ಕಾನನ ಚಿತ್ರಣ, ಹೋರಾಟ, ಅಂತರ್ಯುದ್ಧದ ಜೊತೆ ಬಹಿರ್ಯುದ್ಧ, ಮನದೊಳಗಿನ ತಲ್ಲಣ, ಹೊಯ್ದಾಟ, ಹೆಣ್ಮನಸಿತ ನೋವು, ಯಾತನೆ, ಕೊರಗು, ಮುಗ್ಧತೆ ತುಂಬಿದ ಆಶಯ ಎಲ್ಲವೂ ನಮ್ಮನ್ನು ಓದುತ್ತಿದ್ದಂತೆ ಮಂತ್ರಮುಗ್ಧರನ್ನಗಿಸುತ್ತದೆ. ಎಲ್ಲೋ ಒಂದು ಕಡೆ ನಡೆಯುವ ಪ್ರತಿಘಟನೆಯೊಳಗೇ ನಾವೂ ನಮ್ಮನ್ನು ಒಂದಾಗಿಸಿಕೊಂಡು ಬಿಡುತ್ತೇವೆ. ಕೆಲವೊಂದು ಘಟನೆಗಳಲ್ಲಿ ಸಿನಿಮೀಯತೆಯೂ ಮೇಳೈಸಿರುವುದರಿಂದ ಈ ಕಾಲಕ್ಕೂ ಅವು ಪ್ರಸ್ತುತವೆನಿಸುತ್ತವೆ. ರೋಮಾಂಚಕತೆ, ಕುತೂಹಲ, ಮೈ ನವಿರೇಳಿಸುವ ಕಥಾಕಾನನ ಸರಾಗವಾಗಿ ನಮ್ಮನ್ನು ಓದಿಸಿಕೊಂಡು ಹೋಗುತ್ತದೆ.

ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಪ್ರಧಾನವಾಗಿ ಮೂರು ಅಂಶಗಳನ್ನು ಕಾಣುತ್ತೇವೆ.

ಮೊದಲಿಗೆ ಆ ಕಾಲದ ಜನಜೀವನ ಹಾಗೂ ಸಾಮಾಜಿಕ ಚಿತ್ರಣ

ಈ ಕಾದಂಬರಿಯುದ್ದಕ್ಕೂ ಕಾಣಸಿಗುವುದು ಆ ಕಾಲದ ಸಾಮಾಜಿಕ ಚಿತ್ರಣ. ಅಂದರೆ ವಿವೇಕಾನಂದರು ಭವ್ಯ ಭಾರತವನ್ನುದ್ದೇಶಿಸಿ ಅಮೇರಿಕಾದಲ್ಲಿ ಸಂದೇಶವನ್ನಿತ್ತು ನಮ್ಮ ಸಂಸ್ಕೃತಿಯನ್ನು ಸಾರಿದ, ಸಾರುತ್ತಿದ್ದ ಸಮಯ. ಆ ಕಾಲದಲ್ಲಿ ಪುಟ್ಟ ಹಳ್ಳಿಯಾದ ದಟ್ಟ ಕಾಡು, ಮಲೆಗಳಿಂದಲೇ ಕೂಡಿದ್ದ, ತೀರ್ಥಳ್ಳಿ, ಮೇಗರವಳ್ಳಿ, ಕೋಣೂರು, ಬೆಟ್ಟಳ್ಳಿ, ಹೂವಳ್ಳಿ, ಸಿಂಬಾವಿ ಹಳ್ಳಿಗಳೊಳಗಿನ ಅರಾಜಕತೆ, ದಾರಿದ್ರ್ಯತೆ, ಅಸಂಸ್ಕೃತಿಯಲ್ಲೂ ಒಂದು ವಿಶಿಷ್ಟವಾದ ಸಂಸ್ಕೃತಿಯನ್ನೆಳೆದುಕೊಂಡು, ಜಾತಿ, ಮತ, ಮೂಢನಂಬಿಕೆ, ಕಂದಾಚಾರಗಳನ್ನೇ ಹೊದ್ದು ಹಾಸಿಕೊಂಡು, ಪಶುವಿಗೂ ಹೊಲೆಯನಿಗೂ ಏನೊಂದೂ ವ್ಯತ್ಯಾಸವನ್ನೇ ಕಾಣದ, ಸಾಮಾಜಿಕ ಜನ ಜೀವನ.

ವಿಶೇಷವೆಂದರೆ ಇಲ್ಲಿ ಹೊಲೆಯನೇ ತಾನು ಪರಿತ್ಯಕ್ತ ಎಂದು ಸಾರಿಕೊಂಡು ಹಾಗೇ ಜೀವಿಸುತ್ತಾ. ತನ್ನನ್ನೂ ಪಶುವಿಗೇ ಹೋಲಿಸಿಕೊಂಡು, ಪಶೂತ್ವವನ್ನೇ ಸುಖಿಸುತ್ತಾ, ತುಸು ಗೌರವ ಸಿಕ್ಕರೂ ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸಿ ಆ ಜೀವನದಲ್ಲೇ ಸಾರ್ಥಕತೆಪಡೆಯುವ ಒಂದು ಮನೋಭಾವ ಬಲು ಬೆರಗು ಮೂಡಿಸುತ್ತದೆ. ಹಾಗೆಯೇ ಮನಭಾರಗೊಳಿಸುವುದೂ ದಿಟ.
ಜೊತೆಗೇ ಮೂಕಪ್ರಾಣಿಗಳ ಪ್ರತಿ ಅವರಿಗಿದ್ದ ಪ್ರೀತಿ, ವಿಶ್ವಾಸ, ಭಾವಾನಾ ಸಂಬಂಧವನ್ನರಿಯಲು ಗುತ್ತಿ ಹಾಗೂ ಆತನ ನಾಯಿ ಹುಲಿಯನ ಪ್ರಸಂಗಗಳನ್ನೂ, ಕೊನೆಯಲ್ಲಿ ಕೊನೆಯಾಗುವ ಅವರ ಋಣಾನುಬಂಧವನ್ನೂ ಓದಲೇಬೇಕು. ಎಂತಹವರಿಗಾದರೂ ಒಮ್ಮೆ ಪಿಚ್ಚೆನಿಸುವಂತೆ ಆಗುವುದು.

ಎರಡನೆಯ ಅಂಶವೆಂದರೆ ಮತಾಂತರದ ಅವಾಂತರ

ಕಾದಂಬರಿಯಲ್ಲಿ ಈ ಪಿಡುಗು ಯಾವ ರೀತಿ ಆ ಕಾಲದಲ್ಲೇ ಬೇರುಬಿಡತೊಡಗಿತ್ತೆಂದು ನಿಚ್ಚಳವಾಗಿ ತಿಳಿಯತೊಡಗುತ್ತದೆ. ಊರಿಗೆ ಫಾದರ್ ಆಗಿ ಬಂದ ಪಾದರಿ ಜೀವರತ್ನಯ್ಯ, ಹೇಗೆ ಅಮಾಯಕರ, ಮುಗ್ಧರ ಮನಸನ್ನು ಅಮಿಶಗಳೊಂದಿಗೆ ಸೆಳೆದುಕೊಂಡು, ಅವರ ದಾರಿದ್ರ್ಯತೆಯನ್ನೇ ಬಂಡವಾಳವನ್ನಾಗಿಸಿ ಮತಾಂತರಕ್ಕೆ ಹುನ್ನಾರು ನಡೆಸುತ್ತಿದ್ದ ಎನ್ನುವುದನ್ನು ಕಣ್ಣಿಗೆ ಕಟ್ಟುವಂತೇ ಚಿತ್ರಿಸಿದ್ದಾರೆ ಕುವೆಂಪು. ಆದರೆ ಇದರಲ್ಲಿ ಬ್ರಾಹ್ಮಣರ ಹಾಗೂ ತುಸು ಮೇಲ್ ಪಂಗಡದವರಾದ ಗೌಡರ ಕೊಡುಗೆಯೂ ಅಪಾರವಾಗಿತ್ತೆಂದು ಹೇಳಲು ಮರೆಯರು. ಹಾಗಾಗಿ ಕುವೆಂಪು ಅವರೇ ಹೇಳುವಂತೆ ಇಲ್ಲಿ ಯಾವುದೂ ಯಕಃಶ್ಚಿತವಲ್ಲ!
ಮೂರನೆಯ ಹಾಗೂ ಪ್ರಮುಖ ಅಂಶವೆಂದರೆ ಪ್ರಾಕೃತಿಕ ವರ್ಣನೆ.

ಮಳೆಕಾಡಿನ ಚಿತ್ರಣ ರುದ್ರಭಯಂಕರವೆನಿಸುತ್ತದೆ. ಹುಲಿಕಲ್ ಗುಡ್ಡದ ಚಿತ್ರಣ ಇಲ್ಲೇ ಎಲ್ಲೋ ಪಕ್ಕದಲ್ಲೇ ಗುಡ್ಡವಿರುವಂತೆ, ಎಲ್ಲೋ ದೂರದಿಂದ ಹುಲಿ ಗರ್ಜನೆ ಕೇಳಿದಂತೆ ಓದುಗನಿಗೂ ಭಾಸವಾಗುವಷ್ಟು ವಾಸ್ತವವಾಗಿದೆ.
ಕಾದಂಬರಿಯಲ್ಲಿ ಒಂದು ಕಡೆ ಕುವೆಂಪು ಅವರು ಪ್ರಕೃತಿಯಲ್ಲುಂಟಾಗುವ ಬದಲಾವಾಣೆ ಹೇಗೆ ಅಸಂಸ್ಕೃತ, ಅನಕ್ಷರಸ್ಥ, ಭಾವನೆಗಳೇ ಬತ್ತಿ ಹೋದ ಮನುಷ್ಯನೊಳಗೂ ಎಲ್ಲೋ ಸುಪ್ತವಾಗಿ ಅಡಗಿರುವ ವಿಸ್ಮೃತಿಯೊಳಗನ ಸ್ಮೃತಿಯನ್ನು ಬಡಿದಬ್ಬಸಿ ವರ್ಣನಾತೀತ ಅನುಭೂತಿಯನ್ನು ಕೊಡುತ್ತದೆ ಎನ್ನುವುದನ್ನು ಈ ರೀತಿ ವರ್ಣಿಸುತ್ತಾರೆ.

ಸಂದರ್ಭದ ಹಿನ್ನಲೆ : ಇಲ್ಲಿ ಬರುವ ಹಳೆಮನೆ ಸುಬ್ಬಣ್ಣ ಹೆಗ್ಗಡೆ ಸ್ವಭಾವತಃ ಅಸಂಸ್ಕೃತ. ಸಂಸ್ಕಾರ ವಿಹೀನ. ಹಂದಿದೊಡ್ಡಿ, ಕುರಿದೊಡ್ಡಿ, ಕೋಳಿ ಹಿಕ್ಕೆಯಲ್ಲೇ ಮೈತಿಕ್ಕಿ ಕೊಂಡು ವಾರದಲ್ಲಿ ಒಮ್ಮೆ ಮಾತ್ರ ಸ್ನಾನ ಮಾಡಿ ಬಟ್ಟೆ ಒಗೆಯುವವ ಮನುಷ್ಯ. ಪ್ರತಿದಿನ ಸ್ನಾನ ಮಾಡುವವ ಈ ಲೋಕಕ್ಕೇ ಸಲ್ಲದವ ಎಂದು ಬಲವಾಗಿ ನಂಬಿದವ. ನಂಬಿದಂತೇ ಬಾಳುತ್ತಿರುವವ. ಅಂತಹವನಲ್ಲೂ ಬೆಳಗಿನ ಪ್ರಾಕೃತಿಕ ಬದಲಾವಣೆ ಯಾವರೀತಿ ಆನಂದಾನುಭೂತಿಯನ್ನು ತುಂಬಿತು!!.. ಇದಕ್ಕೆ ಎಲ್ಲೋ ಏನೋ ಪೂರ್ವಜನ್ಮದ ಸ್ಮರಣೆಯೋ ಇಲ್ಲಾ ಸುಪ್ತವಾಗಿರುವ ‘ಅಸ್ಮೃತಿ’ಯೋ ಕಾರಣವಾಗಿರಬಹುದು ಎಂಬುದನ್ನು ಕುವೆಂಪು ಅವರು ಈ ರೀತಿ ವಿವರಿಸುತ್ತಾರೆ. ಅವರ ಈ ಕೆಳಗಿನ ವರ್ಣನೆ ನನ್ನ ಸ್ಮೃತಿಗೂ ಸಂಪೂರ್ಣ ಎಟುಕಿತೆಂದು ಹೇಳೆನು. ಅರ್ಥೈಸಿಕೊಳ್ಳಲು ಯತ್ನಿಸಿದಷ್ಟೂ ದೂರಾಗುವ ಇದರೊಳಗಿನ ಮರ್ಮ ನಿಮಗೆ ಸಂಪೂರ್ಣವಾಗಿ ತಿಳಿದಲ್ಲಿ ನನಗೂ ತಿಳಿಸಬೇಕಾಗಿ ವಿನಂತಿ.

"ಮನುಷ್ಯನು ತಿಳಿದುಕೊಂಡಿರುವುದಕ್ಕಿಂತಲೂ ಹೆಚ್ಚಾಗಿಯೇ ಅವನ ಅಂತಃಪ್ರಕೃತಿ ಸೃಷ್ಟಿಯ ಬಹಿಃಪ್ರಕೃತಿಗೆ ಅನುಯಾಯಿಯಾಗಿರುತ್ತದೆ. ಆತನ ಆತ್ಮಕೊಶವು ಬಹು ಜನ್ಮಗಳ ಸಂಸ್ಕಾರಗಳಿಂದ ತುಂಬಿರುವಂತೆ ಆತನ ಅನ್ನಮಯಕೋಶವೂ ಪೃಥ್ವಿಯಲ್ಲಿ ಪ್ರಾಣೋತ್ಪತ್ತಿಯಾದಂದಿನಿಂದ ಮೊದಲುಗೊಂಡು ಇಂದಿನವರೆಗೆ ಜೀವವು ಕೈಗೊಂಡ ನಾನಾರೂಪದ ನಾನಾ ಪ್ರಯೋಗದ ನಾನಾ ಕಷ್ಟ ಸಂಕಟಗಳ ನಾನಾ ಸುಖ ಸಂತೋಷಗಳ ಮಹಾ ಸಾಹಸಯಾತ್ರೆಗಳ ಸಮಗ್ರ ಪರಿಣಾಮ ಮುದ್ರೆಯನ್ನೂ ‘ಅಸ್ಮೃತಿ’ ರೂಪದಲ್ಲಿ ಪಡೆದಿರುತ್ತದೆ. ಆ ಅಪಾರ್ಥಿವ ಮತ್ತು ಪಾರ್ಥಿವ ಸಂಸ್ಕಾರ ಕೋಶಗಳೆರಡೂ ನಮ್ಮ ಬಾಳ್ವೆಯ ಹೃದಯದ ಇಕ್ಕೆಲಗಳಲ್ಲಿ ಶ್ವಾಸಕೋಶಗಳಂತಿವೆ. ಅಪ್ರಜ್ಞಾಸೀಮೆಯಲ್ಲಿರುವ ಆ ಸಂಸ್ಕಾರಗಳಲ್ಲಿ ಯಾವುದನ್ನಾದರೂ ಮುಟ್ಟಿ ಎಚ್ಚರಿಸುವಂತಹ ಸನ್ನಿವೇಶ ಒದಗಿದರೆ ನಮಗೆ ಬಹುತೇಕ ಆನಂದವೂ ಅಕಾರಣ ಸಂಕಟವೂ ಸಂಭವಿಸಿದಂತಾಗುತ್ತದೆ. ಅಲ್ಪ ಕಾರಣದಿಂದ ಮಹತ್ತಾದ ಅನುಭವ ಉಂಟಾದಂತೆ ಭಾಸವಾಗಿ ಆಶ್ಚರ್ಯವಾಗುತ್ತದೆ. ಎಳೆಬಿಸಿಲಿನಲ್ಲಿ ಹಸುರು ಗರಿಕೆಯ ಕುಡಿಯಲ್ಲಿ ಮಿರುಗುವ ದುಂಡು ಮುತ್ತಿನ ತೆರೆದ ಇಬ್ಬನಿ, ಪ್ರಾಣದ ಪ್ರಪ್ರಾಚೀನಾನುಭವದ ಮಹಾ ಸಾಗರದ ‘ಅಸ್ಮೃತಿ’ಯನ್ನು ಕೆರಳಿಸಿ, ಸಮುದ್ರದರ್ಶನದ ಭೂಮಾನುಭೂತಿಯನ್ನುಂಟುಮಾಡಬಹುದು. ಕಾಡಿನಂಚಿನಲ್ಲಿ ಬೈಗುಗಪ್ಪಿನ ಮಬ್ಬಿನಲ್ಲಿ, ಹೆಮ್ಮರದ ದಿಂಡಿನಲ್ಲಿರುವ ಮರಕುಟಿಗನ ಗೂಡಿನ ಪೊಟ್ಟರೆ, ಅತ್ಯಂತ ಪೂರ್ವಕಾಲದ ಬಾಳಿನ ಯಾವುದೊ ಒಂದು ಕಗ್ಗವಿಯನ್ನೋ ಪೆಡಂಭೂತದ ಕಣ್ಣನ್ನೋ ‘ಅಸ್ಮೃತಿ’ಗೆ ತಂದು, ಅನಿರ್ವಚನೀಯವಾದ ಭೀತಿಯನ್ನುಂಟುಮಾಡಬಹುದು. ಪರ್ವತಾರಣ್ಯಗಳ ಭಯಂಕರ ಪ್ರಕೃತಿಯ ಮಧ್ಯೆ ವಾಸಮಾಡುವವರಿಗೆ ಅರ್ಥವಾಗದ, ಆದ್ದರಿಂದ ಅರ್ಥವಿಲ್ಲದ, ಆ ಅನುಭವಗಳು ಪಿಶಾಚಿಗಳಂತೆಯೊ ದೆಯ್ಯ ದ್ಯಾವರುಗಳಂತೆಯೊ ತೋರುತ್ತವೆ. ಕತ್ತಲೆಯಲ್ಲಿ ಆಕಾಶಕ್ಕೆದುರಾಗಿ ಚಾಚಿರುವ ಭೀಮಾಕಾರದ ಕೋಡುಗಲ್ಲಿನಲ್ಲಿ ಪ್ರಾಚೀನಾನುಭವ ಸಮಷ್ಟಿರೂಪದ ‘ಅಸ್ಮೃತಿ’ ಆವಿರ್ಭಾವವಾಯಿತೆಂದರೆ ಬ್ರಹ್ಮರಾಕ್ಷಸ ದರ್ಶನವಾಗುವುದರಲ್ಲಿ ಆಶ್ಚರ್ಯವೇನಿದೆ? ಕಬ್ಬಿಣದ ಪೆಟ್ಟಿಗೆಯ ಖಜಾನೆಯನ್ನು ತೆರೆಯುವುದಕ್ಕೆ ಸಣ್ಣ ಬೀಗದ ಕೈ ಸಾಕಾಗುವಂತೆ ‘ಅಸ್ಮೃತಿ’ಯ ಮಹದೈಶ್ವರ್ಯವನ್ನು ಕೆರಳಿಸಲು ಅತ್ಯಲ್ಪ ಕಾರಣಗಳೂ ಸಾಕಾಗುತ್ತವೆ."
(ಮುದ್ರಣ:೨೦೦೭, ಪುಟ ಸಂಖ್ಯೆ : ೪೪)

ಈ ಮೂರೂ ಅಂಶಗಳನ್ನೂ ಮೀರಿದ, ಕಾದಂಬರಿಯ ಜೀವನಾಡಿಯಾಗಿ, ಜೀವನದಿಯಾಗಿ ಕಥೆಯುದ್ದಕ್ಕೂ ಹರಿಯುವುದು ಸ್ತ್ರೀ ಮನೋಧರ್ಮ :-

ಪ್ರಾರಂಭದಲ್ಲಿ ಗುತ್ತಿ ತಿಮ್ಮಿಯನ್ನು ಹಾರಿಸಿಕೊಂಡು ಹೋಗುವದಕ್ಕೆ ಯೋಚಿಸುವುದರಿಂದ ಶುರುವಾಗುವ ಕಥೆ, ನಿಲ್ಲುವುದು ತಾನು ವರಿಸಬೇಕೆಂದು ಬಯಸಿದ್ದ ಚಿನ್ನಮ್ಮನ್ನು ಅಂತೂ ಕೊನೆಗೆ ಪಡೆಯುವ ಮುಕುಂದಯ್ಯನಲ್ಲಿ. ಸ್ತ್ರೀಯೇ ಇಲ್ಲಿ ಪ್ರಮುಖಳು. ಸ್ತ್ರೀ ಪ್ರಧಾನ ಕಾದಂಬರಿ ಇದೆಂದರೂ ತಪ್ಪಾಗದು. ಪ್ರಕೃತಿ ಹಾಗೂ ಹೆಣ್ಣಿನೊಳಗಣ ಅವಿನಾಭಾವ ಸಂಬಂಧವನ್ನು ಕಥೆಯುದ್ದಕ್ಕೂ ಕಾಣಬಹುದು. ಹೆಣ್ಣಿನ(ಹೊಲೆಯ ಗೌಡ ಎಂಬ ಬೇಧವಿಲ್ಲದೇ)ಮನೋಕಾಮನೆಗಳಿಗೆ, ವಿಪ್ಲವಗಳಿಗೆ, ಹೊಯ್ದಾಟಕ್ಕೆ, ತುಮುಲಕ್ಕೆ, ಅನಿಶ್ಚಿತತೆಗೆ, ನಿರ್ಧಾರಕ್ಕೆ ಸದಾ ಸಾಥ್ ನಿಡುತ್ತದೆ ರಮ್ಯ ಮನೋಹರ ಪ್ರಕೃತಿ. ಅದು ಗುತ್ತಿಯೊಡನೆ ಅಮಾವಾಸ್ಯೆ ರಾತ್ರಿಯಲ್ಲಿ ಹುಲಿಕಾಡಿನ ಮೂಲಕ ಓಡಿಹೋಗುವ ತಿಮ್ಮಿಯ ಜೊತೆಗಾಗಿರಲಿ ಇಲ್ಲಾ ಸುಂಸ್ಕೃತೆ ಚಿನ್ನಮ್ಮ ಮದುವೆಯ ದಿನ ಸಂಜೆಯೇ ಪ್ರಿಯಕರ ಮುಕುಂದಯ್ಯನೊಂದಿಗೆ ಅದೇ ಕಾಡಿನ ದಾರಿಯಾಗಿ ಓಡಿಹೋಗುವ ಸಂದರ್ಭವೇ ಆಗಿರಲಿ..ಪ್ರಕೃತಿಯೇ ಇಲ್ಲಿ ಕಾರಣಕರ್ತ ಹಾಗೂ ಕತೃ.

ಹೆಣ್ಣಿಗೆ ಪರಿಶುದ್ಧತೆ ಇರಬೇಕಾದದ್ದು ಮನಸಿಗೇ ಹೊರತು ಮೈಗಲ್ಲಾ ಎಂಬ ಸಂದೇಶವನ್ನು ತುಂಬಾ ಸರಳವಾಗಿ, ಸುಂದರವಾಗಿ ಯಾರೂ ಒಪ್ಪುವಂತೆ, ಪಿಂಚಲು, ತಿಮ್ಮಿ, ಅಕ್ಕಣಿ, ರಂಗಮ್ಮ ಹಾಗೂ ಚಿನ್ನಮ್ಮರ ಪಾತ್ರದ ಮೂಲಕ ತೋರಿಸಿದ್ದಾರೆ. ಈ ಐವರು ನಾರಿಮಣಿಗಳು ಯಾವ ಪತಿವ್ರತೆಯರಿಗೂ ಕಡಿಮೆಯೆನಿಸರು. ಕುಲ/ಕಸುಬಿನಲ್ಲಿ ಬಹು ಅಂತರವಿದ್ದರೂ ಈ ನಾರಿಯರ ಮನಸಿನೊಳಗಿನ ಮುಗ್ಧತೆಗೆ, ಪರಿಶುದ್ಧತೆಗೆ ಯಾವ ಸೀಮೆಯಾಗಲೀ, ಅಂತರವಾಗಲೀ ಕಾಣಸಿಗದು. ಆಗಿನ ಕಾಲದ ದುಃಸ್ಥಿಗೋ ಪರಿಸ್ಥಿಗೋ ಸಿಲುಕಿ, ಅರಿಯದ ಮುಗ್ಧತೆಗೋ ಇಲ್ಲಾ ಆಮಿಶಕ್ಕೋ ಬಲಿಪಶುವಾಗಿ ಬಿಡಿಸಿಕೊಳ್ಳದಂತಿರುವಾಗ ಆ ಕಾಲದ ಹೆಣ್ಣು ತನ್ನ ಮೈ ಮಾರಿಕೊಂಡರೂ, (ಒಂದು ರೀತಿ ಬಲಾತ್ಕಾರಕ್ಕೊಳಪಡುವುದು) ಅವರ ಮನಸು ಮಾತ್ರ ಅವರ ಮನದಿನಿಯನ ಬಳಿಯೇ ಇರುತ್ತದೆ. ಮಾನಸಿಕ ಭದ್ರತೆ, ನೆಮ್ಮದಿ ಸುಖ-ಸಂತೋಷಗಳಿಗೇ ಅವರ ಮನಸು ತುಡಿಯುತ್ತಿರುತ್ತದೆ. ಅದಕ್ಕಾಗಿಯೇ ಹಂಬಲಿಸುತ್ತಿರುತ್ತದೆ.
ಕೊನೆಯಲ್ಲಿ ಕುವೆಂಪು ಅವರೇ ಹೇಳಿದಂತೆ-
"ಯಾವುದೂ ಎಲ್ಲಿಯೂ ನಿಲ್ಲುವುದೂ ಇಲ್ಲ; ಕೊನೆಮುಟ್ಟುವುದೂ ಇಲ್ಲ"

ನಾನು ಕುವೆಂಪು ಅವರ ಕಾದಂಬರಿಯನ್ನು ವಿಮರ್ಶಿಸುವಷ್ಟು ದೊಡ್ಡವಳಲ್ಲ. ಇದು ನನ್ನ ಉದ್ದೇಶವೂ ಅಲ್ಲ. ಅವರ ಈ ಕೃತಿ "ಕಾನೂರು ಹೆಗ್ಗಡತಿ ಸುಬ್ಬಮ್ಮ" ಕೃತಿಗಿಂತಲೂ ಅತ್ಯುತ್ತಮವಾಗಿದೆ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯವಷ್ಟೇ. ಎಷ್ಟೆಂದರೂ ಅವರ ಕೃತಿ ಹೋಲಿಕೆಗೆ ಅವರ ಕೃತಿಯೇ ಸಾಟಿ. ಆದಷ್ಟು ಸ್ಪಷ್ಟವಾಗಿ, ಸರಳವಾಗಿ, ಕ್ಲುಪ್ತವಾಗಿ ನನ್ನ ಅಭಿಪ್ರಾಯಗಳನ್ನು(ವಿಮರ್ಶೆಯನ್ನಲ್ಲ!!) ವಿಶದಪಡಿಸಿರುವೆ. ಏನಾದರೂ ಲೋಪದೋಷಗಳಿದ್ದಲ್ಲಿ, ಈ ಮೊದಲೇ ಈ ಕಾದಂಬರಿಯನ್ನು ಓದಿದವರು ತಿದ್ದಿದಲ್ಲಿ, ಸ್ವಾಗತಾರ್ಹ. ವಿಚಾರ ವಿನಿಮಯಗಳಿಗೆ ಸದಾ ಸ್ವಾಗತ. ಉತ್ತಮ ಕೃತಿಗಳನ್ನು ಓದುವಂತೆ ಪ್ರೇರೇಪಿಸುವುದು, ಓದಿರುವುದನ್ನು ಪುನರ್ ಸ್ಮರಿಸುವಂತೆ ಮಾಡುವುದು ಈ ನನ್ನ ಲೇಖನದ ಉದ್ದೇಶ ಅಷ್ಟೇ.

--------*****--------