ಮಂಗಳವಾರ, ಮೇ 21, 2013

ನಿರಂತರ

ಉಸಿರಾಡಬೇಕಿದೆ, ಉಸಿರಾಡಿಸಲೇಬೇಕಿದೆ
ಅಹಲ್ಯೆಯಂತೂ ನಾನಲ್ಲಾ,
ಕಲ್ಲಾಗಿ ಕುಳಿತು ಒಳಗೊಳಗೇ ನರಳಾಡಲು!

ಬದುಕಬೇಕಾಗಿದೆ, ಬದುಕಲೇಬೇಕಿದೆ
ಇಚ್ಚಾಮರಣಿಯಂತೂ ನಾನಲ್ಲಾ,
ಮನಸೋ ಇಚ್ಛೆ ಸತ್ತು ಮುಕ್ತಿ ಪಡೆಯಲು!

ಆತ್ಮಹತ್ಯೆ ಮಹಾಪಾಪ ಎಂದ
ಮಹಾನುಭಾವರಿಗೆ ತಿಳಿದಿತ್ತು
‘ನಾಯಂ ಹಂತಿ ನ ಹನ್ಯತೇ’!

ಆ ಕ್ಷಣದ ವಿರಹ, ಕ್ಲೇಶ
ವೈಶಾಖದ ನದಿಗಳಂತಷ್ಟೇ .....
ವರ್ಷ ಋತುವ ತಡೆಯಲು ಯಾರಿಂದ ಸಾಧ್ಯ?
ತುಸುಗಾಲ ನಿಧಾನಿಸಿದರೂ, ನಿಲ್ಲದು!
ಉರಿವ ತಾಪಕ್ಕೆ ಘನೀಭವಿಸಿದ ಕಾರ್ಮೋಡ
ಸುರಿಯಲೇಬೇಕು, ಸುರಿದು ಹೊಳೆಯಾಗಲೇಬೇಕು
ಬತ್ತಿದ್ದೆಲ್ಲಾ ತುಂಬಿ ಮತ್ತೆ ಚಿಗುರೊಡೆಯಲೇಬೇಕು.

-ತೇಜಸ್ವಿನಿ ಹೆಗಡೆ.