ಶುಕ್ರವಾರ, ಆಗಸ್ಟ್ 27, 2010

ನಿನ್ನೊಳಿದೆ ನನ್ನ ಮನಸು...

ಚಿತ್ರ ಕೃಪೆ: www.yobserver.com/reports/10015111.html

ಈ ಸಂಜೆ ಎಂದಿನಂತಿಲ್ಲ ಎಂದೆನಿಸುತ್ತಿದೆ ನನಗೆ. ಏನೋ ಕಾತುರ....ಅರಿಯದ ತಳಮಳ. ಅದೆಷ್ಟು ತಿಂಗಳುಗಳಾದವೋ ಆತನನ್ನು ನಾನು ಕಾಣದೇ....ಮಾತನಾಡಿಸದೇ....ಸ್ಪರ್ಶಿಸದೇ. ಇಂದು ಅವನ ಭೇಟಿ ನಿಶ್ಚಿತ....ಆತನಿದ್ದಲ್ಲಿಗೇ ಸಾಗುತಿದೆ ನನ್ನ ಪಯಣ. ಗಮ್ಯ ದೂರವೇನಿಲ್ಲ...ಆದರೂ ಪ್ರತಿ ನಿಮಿಷವೂ ಅಸಹನೆಯನ್ನು ತರುತ್ತಿದೆ. ಉದ್ವೇಗದಿಂದ ನನ್ನ ಹಣೆಯ ಮೇಲೆ ಹೊಳೆಯುತಿದ್ದ ಸ್ವೇದ ಬಿಂದುಗಳನ್ನು ಕರಗಿಸಲು, ಮಂದವಾಗಿ ಬೀಸುತ್ತಿದ್ದ ತಂಗಾಳಿ ಕೂಡ ಸೋಲುತಿದೆ. ಅಗೋ... ಅಲ್ಲೇ ದೋರದಲ್ಲಿ ಕಾಣುತ್ತಿದ್ದಾನೆ...ಅವನೇ ಹೌದೋ ಅಲ್ಲವೋ? ಇಲ್ಲಾ ಈ ಹಾಳಾದ ರವಿಯ ಪ್ರಖರತೆಯಿಂದ ಉಂಟಾದ ಮರೀಚಿಕೆಯೋ...? ಮನಸೊಳಗೇ ಶಪಿಸುತ್ತಲೇ ಮತ್ತೂ ಕಣ್ಗಳನ್ನು ಹಿರಿದಾಗಿಸಿ ನೋಡಿದೆ. ಸಂಶಯವೇ ಇಲ್ಲ... ಇದು ಅವನೇ. ಕಡುನೀಲ ಬಣ್ಣದ ನಡುವೆ ಬಿಳಿ ಬಣ್ಣದ ಗೆರೆಗಳಿರುವ ಶರ್ಟ್ ತೊಟ್ಟು, ಶುಭ್ರವಾಗಿ ನಗುತ್ತಾ ನನಗಾಗಿ ಕಾಯುತ್ತಿರುವವನನ್ನು ಅಷ್ಟು ದೂರದಿಂದಲೇ ನೋಡಿ ಸಂತಸ ತಡೆಯಲಾಗಲಿಲ್ಲ. ಹಾರಿ ಆತನ ತೆಕ್ಕೆಯೊಳಗೆ ಸೇರಬೇಕೆಂದಿದ್ದ ನನ್ನ ಏನೋ ಜಗ್ಗಿದಂತಾಯಿತು. ಇಷ್ಟು ದಿನ ಕಾಣಲಾಗದಿದ್ದ ತವಕ, ಅಸಹನೆ, ಅರಿಯದ ಮುಜುಗರವನ್ನು, ಮುನಿಸನ್ನು ನನ್ನೊಳಗೆ ತುಂಬಲು, ಅವನ ಬಳಿಯಲ್ಲೇ.....ಆದರೆ ತುಸು ದೂರ ಸರಿದು ಕುಳಿತೆ.

ನನ್ನ ಈ ಪರಿಯನ್ನು ಕಂಡೋ ಏನೋ ಅವನು ಪಕ ಪಕನೆ ನಗುತ್ತಲೇ ಇದ್ದ....ಆಗೀಗ. ಆತನ ಅದೇ ಶುಭ್ರ ಬಿಳಿ ಹಾಲಿನಂತಹ ನಗುವ ಕಂಡಾಗಲೆಲ್ಲಾ ನನ್ನೊಳಗೆ ಸಂಚಲನ. ಸಾಕಿನ್ನು ಈ ಬಿಗುಮಾನ ಈಗಲೇ ಹೋಗಿ ಹಿಡಿಯಲೇ ಆ ನಗುವ ಎನ್ನುವಷ್ಟು ತವಕ. ಆತ ನನ್ನ ಸತಾಯಿಸುತ್ತಿರುವನೋ ಇಲ್ಲಾ ನಾನೇ ನನ್ನ ಸತಾಯಿಸುತ್ತಿರುವೇನೋ ಅರಿಯದ ಅಯೋಮಯ ಸ್ಥಿತಿಯಿಂದ ಅಸಹನೆ ಹೆಚ್ಚಾಗುತ್ತಿತ್ತು. ಬರುವುದಿದ್ದರೆ ಬಳಿ ಅವನೇ ಮೊದಲು ಬರಲೆಂಬ ನನ್ನ ಎಂದಿನ ಹಠಕ್ಕೇ ಮಣಿದಿರಬೇಕು... ಆತನೇ ಮೆಲ್ಲ ಮೆಲ್ಲನೆ ಅದೇ ನಗೆಯ ತುಳುಕಿಸುತ್ತಾ ಹತ್ತಿರ ಬರತೊಡಗಿದ. ಕಿರುಗಣ್ಣಿನಂದಲೇ ಅವನನ್ನು ನೋಡುತ್ತಾ, ತಡೆಯಲಾಗದೇ ಸೋತು....ಕಿರುನಗೆಯ ಮೂಲಕ ನಾನೂ ಸ್ವಾಗತಿಸಿದೆ. ಇದರಿಂದ ಹುಮ್ಮಸ್ಸು ಪಡೆದ ಆತ ತುಸುವೇ ನನ್ನ ಕಾಲ್ಬೆರಳುಗಳನ್ನು ಸೋಕಿ ಮತ್ತೆ ಹಿಂದೆ ಸರಿದು ಬಿಟ್ಟ. ಈಗ ನನ್ನೊಳಗೂ ಅವನದೇ ಹುಚ್ಚು ನಗು ತುಂಬಿತು. ಇಬ್ಬರೂ ಮನಸೋ ಇಚ್ಛೆ ನಕ್ಕುಬಿಟ್ಟೆವು. ಅಗೀಗೊಮ್ಮೆ ಕೇವಲ ಕಾಲ್ಬೆರುಗಳನ್ನಷ್ಟೇ ಸ್ಪರ್ಶಿಸಿ ದೂರ ಸರಿಯುತ್ತಿದ್ದ ಆತನ ಹೊಸ ಪರಿಯಿಂದ ನನ್ನ ಮನದ ತುಂಬೆಲ್ಲಾ ನೂರು ನವಿಲುಗಳ ನರ್ತನ!

"ಇವತ್ಯಾಕೆ ಇಷ್ಟೊಂದು ಮುನಿಸು ನನ್ಮೇಲೆ ತೇಜು?" ಮೌನ ಮುರಿದಿತ್ತು ಅವನ ಶಾಂತ ಗಂಭೀರ ವಾಣಿ.

"ಹೂಂ ಮತ್ತೆ... ಎಷ್ಟು ತಿಂಗ್ಳಾದ್ವು... ನಾವಿಬ್ರೂ ಹೀಗೆ ಸೇರದೇ...ನಿನ್ನ ನೋಡ್ದೇ ನಂಗೆ ತುಂಬಾ ಬೇಜಾರು ಬಂದಿತ್ತು ಗೊತ್ತಾ?" ನನಗೂ ಮೌನ ಸಾಕಾಗಿತ್ತು.

"ಆಹಾ.... ಇದಪ್ಪಾ ವರಸೆ.... ನಾನು ನೀನಿದ್ದಲ್ಲಿಗೇ ಬರೋಕೆ ಆಗೊತ್ತಾ? ಅದು ಅಸಾಧ್ಯ ಅಂತ ನಿಂಗೂ ಗೊತ್ತು. ನಾನೇನಾದ್ರೂ ಅಲ್ಲಿಗೆ ಬಂದ್ರೆ...ಗತಿ ಅಷ್ಟೇ! ಹಾಗಿದ್ಮೇಲೆ ನೀನೇ ತಾನೇ ಇಲ್ಲಿಗೆ ಬರೋದು? ನೀನು ಯಾವಾಗ್ಬೇಕಾದ್ರೂ ಬಾ....ನಾನಿಲ್ಲೇ ನಿನ್ನ ಸ್ವಾಗತಿಸ್ತೀನಿ ಅಂತ ಪ್ರಾಮಿಸ್ ಮಾಡಿದ್ದೆ ನೆನ್ಪಿದ್ಯಾ? ಹಾಗಿದ್ಮೇಲೆ ಯಾಕೆ ನೀನೂ ಬಂದಿಲ್ಲ? ಸಿಟ್ಟು ನಾನು ಮಾಡ್ಕೋಬೇಕು ನೋಡು ಈಗ.." ಬಾಣ ನನ್ನೆಡೆ ತಿರುಗಿದ್ದು ಕಂಡು ಸ್ವಲ್ಪ ಮೆತ್ತಗಾದೆ.

"ಹೌದಪ್ಪಾ.. ಎಲ್ಲಾ ನಂದೇ ತಪ್ಪು ಸರೀನಾ... ನೀನು ನನ್ನ ಹತ್ರ ಬರೋಕೆ ಆಗೊಲ್ಲಾ ಆಯ್ತು.... ಆದ್ರೆ ನಾನೂ ಮನ್ಸಾದಾಗೆಲ್ಲಾ ನಿನ್ನ ಹತ್ರ ಬರೋಕೆ ಆಗೊಲ್ಲ ಅನ್ನೋದೂ ನಿಂಗೆ ಗೊತ್ತಿರ್ಬೇಕು. ನನ್ನವರ, ಮನೆಯವರ ಕಣ್ತಪ್ಪಿಸಿ ಇಲ್ಲಿಗೆ ಬರೋದು ಅಂದ್ರೆ ಎಷ್ಟು ಕಷ್ಟ ಗೊತ್ತಾ? ಇವತ್ತಾದ್ರೂ ನಾನು ಎಷ್ಟು ಕಷ್ಟ ಪಟ್ಟು ಎಲ್ಲರಿಂದ ತಪ್ಪಿಸಿಕೊಂಡು ಇಲ್ಲಿಗೆ ಬಂದಿದ್ದೀನಿ... ನಾನೇನಾದ್ರೂ ಒಬ್ಳೇ ಇಲ್ಲಿಗೆ ಹೀಗೆ ನಿನ್ನ ನೋಡೋಕೆ ಬಂದಿದ್ದು ನನ್ನವ್ರಿಗೆ ಗೊತ್ತಾದ್ರೆ.... ಅಷ್ಟೇ! ನಿಂಗೇನೂ ಮಾಡೊಲ್ಲ... ಮಾಡೋಕೂ ಆಗೊಲ್ಲ ಬಿಡು... ಆದ್ರೆ ನನ್ಗತಿ? ಆದ್ರೂ ಬಂದಿದ್ದೀನಿ ನೋಡು..." ನನಗೇ ನನ್ನ ಸಾಹಸ ಕಂಡು ಹೆಮ್ಮೆ ಮೂಡಿತು.

"ತುಂಬಾ ಸಂತೋಷ ತೇಜು.... ಅದ್ಕೇ ನಂಗೆ ನೀನು ಅಂದ್ರೆ ಎಲ್ರಿಗಿಂತಲೂ ಪಂಚಪ್ರಾಣ. ನೀನು ಎಲ್ಲಿದ್ರೂ, ಹೇಗಿದ್ರೂ ನನ್ನ ಮರೆಯೊಲ್ಲ. ಬೇರೆಯೋರಿಗೆಲ್ಲಾ ನಾನು ಏನೂ ಅಂತ ಗೊತ್ತಿಲ್ಲ... ಆದ್ರೆ ನಿಂಗೆ ಮಾತ್ರ ನಾನಂದ್ರೆ ತುಂಬಾ ಮೆಚ್ಚು ಅಂತ ಚೆನ್ನಾಗಿ ಗೊತ್ತು..." ಅಭಿಮಾನ ಅವನ ಮೊಗದತುಂಬಾ ಬೆಳಗುತಿತ್ತು. ನನ್ನೊಳಗೇನೋ ಸಾರ್ಥಕತೆ.

"ಹ್ಮ್ಂ.... ಇಷ್ಟೆಲ್ಲಾ ಗೊತ್ತಿದ್ದೋನು.. ಅಪರೂಪಕ್ಕೆ ಬರ್ತೀನಿ ಅಂತ ಗೊತ್ತಿದ್ದೂ ಯಾಕೆ ಬರೀಕೈಲಿ ಬಂದೆ? ಇಲ್ಲೊಂದೇ ಅಲ್ದೇ ವಿದೇಶಗಳಿಗೂ ಮುತ್ತು, ಹವಳಗಳನ್ನ ಎಕ್ಸ್‌ಪೋರ್ಟ್ ಮಾಡ್ತೀಯಂತೆ.... ನಂಗೇ ಅಂತ ಅಟ್‌ಲೀಸ್ಟ್ ಒಂದು ಪರ್ಲ್ ಸೆಟ್ ತರೋಕೆ ಆಗ್ಲಿಲ್ವಾ? ಬರೀ ಕಂಜೂಸು ನೀನು" ನನ್ನ ಛೇಡಿಸುವಿಕೆ ಅವನಿಗೇನೂ ಹೊಸತಲ್ಲ.

"ಛೇ... ಏನು ಮಾತಾಡ್ತೀಯಮ್ಮಾ.... ಅಷ್ಟೊಂದು ದೊಡ್ಡ ಬಿಸ್ಸಿನೆಸ್ ಮ್ಯಾಗ್ನೆಟ್ ಆಗಿರೂ ನಾನೇ ನಿನ್ನೆದುರಿಗೆ ಸಲಾಮು ಹೊಡೀತಿದ್ದೀನಿ... ಹಾಗಿರೋವಾಗ ನೀನು ಯಕಃಶ್ಚಿತ್ ಪರ್ಲ್ ಸೆಟ್ ಕೇಳೋದಾ? ಇಡೀ ಮುತ್ತು, ಹವಳದ ಮೆನುಫ್ಯಾಕ್ಚರಿಂಗ್ ಫ್ಯಾಕ್ಟರಿಯೇ ನಿಂದು ಸರೀನಾ?" ಅವನ ನಾಟಕೀಯತೆಯೂ ನಂಗೆ ಹೊಸತಲ್ಲ.

"ಆಹಾ... ಇದಕ್ಕೇನೂ ಕಮ್ಮಿಯಿಲ್ಲ.... ಹೋಗ್ಲಿ ಬಿಡು. ನಾನು ಅವ್ರ ಹತ್ರ ಕೊಡ್ಸೋಕೆ ಹೇಳ್ತೀನಿ... ನೀನಿಲ್ದೇ ಹೋದ್ರೆ ನಂಗೆ ಅವ್ರಿಲ್ವಾ? ನಿಂದೇನು ಮಹಾ..."ಎಂದು ಧೈರ್ಯ ಮಾಡಿ ಕಟಕಿಯೇ ಬಿಟ್ಟೆ. ಇವನ ಹುಚ್ಚು ಕೋಪದ ಅರಿವು ನೋಡಿ ಬಲ್ಲೆ ನಾನು. ಆದರೂ ಇಂದು ಬಾಯಿ ತಪ್ಪಿ ಆಡಿಬಿಟ್ಟಿದ್ದೆ. ತುಸು ಅಧೈರ್ಯದಿಂದ ಅವನೆಡೆ ನೋಡಿದರೆ ಅವನೊಳಗೆ ಅದೇ ಶಾಂತ ಶುಭ್ರ ನಗು. ಅಬ್ಬಾ! ಬದುಕಿದೆ ಬಡಜೀವವೇ ಎಂದೆನಿಸಿತು.

"ಆಯ್ತಮ್ಮಾ.. ನೀನು ನಿನ್ನ ಆ ಅವರ ಹತ್ತಿರನೇ ತಗೋ.. ನಾನು ಕೊಟ್ರೂ ಅವ್ರು ಕೊಟ್ರೂ ಒಂದೇ. ಅವ್ರು ಕೊಡೋ ಮುತ್ತಿನ ಸೆಟ್‌ನಲ್ಲೂ ನನ್ನ ಫ್ಯಾಕ್ಟರೀ ಮುತ್ತುಗಳೇ ಇರೋದು ತಿಳ್ಕೋ..." ಅವನ ಈ ವರಸೆಗೆ ನಾನು ಸುಸ್ತು.

"ಹಂ....ಅಂತೂ ನೀನು ಕೊಡೊಲ್ಲ ಅಂತಾಯ್ತು. ಸರಿ.... ನಂಗೇನೂ ನಿನ್ನ ಆಸ್ತಿ ಬೇಡಪ್ಪಾ... ನನ್ನವ್ರು ನಂಗಾಗಿ ಏನು ಬೇಕಿದ್ರೂ ಕೊಡ್ತಾರೆ.." ಮೊದಲಿನ ಧೈರ್ಯದಿಂದಲೇ ಇರಿದಿದ್ದೆ.

"ಗೊತ್ತು... ನಿಂಗೆ ನನ್ನಷ್ಟೇ... ಅಲ್ಲಲ್ಲಾ... ನನಗಿಂತ ಒಂದು ಪಟ್ಟು ಹೆಚ್ಚು ನಿನ್ನ ಆ ಅವರು ನಿನಗಿಷ್ಟ ಎಂದು. ಅದ್ರ ಬಗ್ಗೆ ನಾನೆಂದೂ ಆಕ್ಷೇಪ ಎತ್ಲೇ ಇಲ್ಲ....ಆದ್ರೂ ನೀನು ನನ್ನ ಮರೀದೇ ನನಗಾಗಿ ಬರ್ತೀಯಲ್ಲಾ ಅದೇ ನಂಗೆ ಸಾಕು..." ಈ ಆತ್ಮೀಯತೆಯೇ, ನಿಸ್ವಾರ್ಥ ಪ್ರೀತಿಯೇ ಪ್ರತಿಸಲ ನನ್ನ ಇವನ ಕಡೆ ಸೆಳೆಯುವುದು.

"ಪ್ಲೀಸ್.. ನಂಗೋಸ್ಕರ.... ನನ್ನಿಷ್ಟದ ಆ ಹಾಡನ್ನು ಹಾಡ್ತೀಯಾ..?" ಏಕೋ ಆ ಭಾವಗೀತೆಯನ್ನು ಕೇಳಬೇಕೆನಿಸಿತು ಆ ಕ್ಷಣ.

"ನೀ ಕೇಳೊದು ಹೆಚ್ಚೋ..ನಾನು ಹಾಡೋದೋ... ಆದ್ರೆ ಪೂರ್ತಿ ಹಾಡು ಮರ್ತು ಹೋಗಿದೆ.... ಒಂದು ಚರಣ ನೆನ್ಪಿದೆ.... ಅಷ್ಟೇ ಹಾಡ್ತೀನಿ.. ಏನದು... ಹಾಂ..

ಸಾಗರನ ಹೃದಯದಲಿ ರತ್ನಪರ್ವತಮಾಲೆ
ಮಿಂಚಿನಲಿ ಮೀವುದಂತೆ
ತೀರದಲಿ ಬಳುಕುವಲೆ ಕಣ್ಣಚುಂಬಿಸಿ ಮತ್ತೆ
ಸಾಗುವುದು ಕನಸಿನಂತೆ

ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ
ನಿನ್ನೊಳಿದೆ ನನ್ನ ಮನಸು
ಹುಣ್ಣಿಮೆಯ ರಾತ್ರಿಯಲಿ ಉಕ್ಕುವುದು ಕಡಲಾಗಿ
ನಿನ್ನೊಲುಮೆ ನನ್ನ ಕಂಡು
ನಿನ್ನೊಳಿದೆ ನನ್ನ ಮನಸು.....

ಮಂದವಾಗಿದ್ದ ಗಾಳಿ ಈಗ ಸ್ವಲ್ಪ ಸ್ವಲ್ಪವಾಗಿ ವೇಗ ಪಡೆಯುತ್ತಿತ್ತು. ರವಿಗೂ ಶಶಿಗೂ ಬಾನಂಚಿನಲ್ಲಿ ಯುದ್ಧವಾಗುವ ಸಮಯ. ಹಗಲ ಸಾಮ್ರಾಜ್ಯವನ್ನು ಕೊನೆಗೊಳಿಸಿ, ಚಂದ್ರಮನಿಗೆ ಪಟ್ಟಾಭಿಷೇಕ ಮಾಡಿ, ತನ್ನ ರಾಜ್ಯ ಪ್ರತಿಷ್ಠಾಪನೆಗೆ ಇರುಳು ನಕ್ಷತ್ರಗಳ ಸೈನ್ಯದೊಂದಿಗೆ ಬರುವ ಹೊತ್ತು. ಇವನ ಸಾಮೀಪ್ಯ, ಈ ಹಾಡು, ನನ್ನ ಆ ಅವರ ನೆನಪು.... ನನ್ನೊಳಗೆ ಹೊಸ ಆಹ್ಲಾದತೆಯನ್ನು ತುಂಬಿತ್ತು. ಅದು ಹೇಗೋ ಮನದೊಳಗೇ ನಾನು ಗುನಗುನಿಸುತ್ತಿದ್ದ ನನ್ನಿಷ್ಟದ ಇನ್ನೊಂದು ಭಾವಗೀತೆ ತುಟಿಯ ದಾಟಿ ಹೊರ ಬರತೊಡಗಿತು...

ಕಾಣದ ಕಡಲಿಗೆ ಹಂಬಲಿಸಿದೆ ಮನ
ಕಾಣಬಲ್ಲನೆ ಒಂದು ದಿನ ಕಡಲನು
ಕೂಡಬಲ್ಲನೆ ಒಂದು ದಿನ

ಸಾವಿರ ಹೊಳೆಗಳು ತುಂಬಿ ಹರಿದರೂ
ಒಂದೇ ಸಮನಾಗಿಹುದಂತೆ
ಸುನೀಲ ವಿಸ್ತರ ತರಂಗ ಶೋಭಿತ
ಗಂಭೀರಾಂಬುಧಿ ತಾನಂತೆ
ಮುನ್ನೀರಂತೆ ಅಪಾರವಂತೆ
ಕಾಣಬಲ್ಲೆನೇ ಒಂದು ದಿನ
ಅದರೊಳು ಕರಗಲಾರನೇ ಒಂದು ದಿನ....

ಇನ್ನೂ ಹಾಡುತ್ತಿದ್ದೆನೋ ಏನೋ...ಪಕ್ಕದಲ್ಲಿದ್ದ ಅವನ ಸಿಟ್ಟಿನ ನಿಟ್ಟುಸಿರು ಕ್ರಮೇಣ ಬುಸುಗುಡ ತೊಡಗಿದ್ದು ನನ್ನ ಎಚ್ಚರಿಸಿತು. ಅವನೆಡೆ ನೋಡಿದರೆ ಮೊಗದ ಬಣ್ಣ ಕಡುಗಪ್ಪಾಗಿತ್ತು!

"ಏನಾಯ್ತು? ಯಾಕೋ ಸಿಟ್ಟು ಬಂದಹಾಗಿದೆ ತಮಗೆ!" ನನ್ನೊಳಗೇನೋ ತಳಮಳ.

"ಮತ್ತೆ.. ನೀನು ಹಾಡಿದ್ದು ಸರೀನಾ? ಯಾರೋ ಕಾಣದ ಕಡಲನ್ನು ಸೇರೋಕೆ.. ನೋಡೋಕೆ ನಿನ್ನ ಮನ ಇಷ್ಟ ಪಡೋದು ಅಂದ್ರೆ ಏನು? ನಿನ್ನೆದುರಿಗೇ ನಾನು ಕಾಣ್ತಿರೋವಾಗ... ಕಾಣದ ಕಡಲಿಗೆ ಹಂಬಲವಂತೆ... ಸುನೀಲವಂತೆ....ಗಂಭೀರವಂತೆ...ಕಾಣದೇನೇ ಅದು ಹೇಗೆ ಹೊಗಳ್ತಿದ್ದೀಯಾ ನೋಡು....ಶುದ್ಧ ತರ್ಲೆ....ನಿಂಗೆ ಮಾಡ್ತೀನಿರು ಇವತ್ತು..."ಎಂದವನೇ ಬೀಸಿ ನನ್ನ ಕೆನ್ನೆಗೆ ತನ್ನ ದೊಡ್ಡ ತೆರೆಯಿಂದ ಹೊಡೆದಾಕ್ಷಣ ಧಿಗ್ಗನೆದ್ದು ಕುಳಿತಿದ್ದೆ.

ವಾಸ್ತವಕ್ಕೆ ಮರಳಲು ಕೆಲನಿಮಿಷಗಳೇ ಬೇಕಾದವು. ನನ್ನ ಮೆಚ್ಚಿನ ಸಾಗರದ ಸವಿಗನಸಿನಿಂದ ನನ್ನೆಬ್ಬಿಸಿದ ಆ ಕಾಣದ ಕಡಲಿಗೆ ಹಿಡಿ ಶಾಪ ಹಾಕುತ್ತಿರುವಾಗಲೇ....ಪಕ್ಕದ ಮನೆಯಲ್ಲಿ ಯಾರೋ ಹಾಡೊಂದನ್ನು ಮತ್ತೆ ಮತ್ತೆ ಅರಚುತಿದ್ದರು.....
"ನೀರಿನ ಮೇಲೆ ಗುಳ್ಳೆ ಉಂಟು....ಬಾಳಿನ ಬಣ್ಣ ನೂರ ಎಂಟು...ನಮ್ಮದೇನಿದ್ರು ಬ್ಲಾಕ್ ಅಂಡ್ ವೈಟು...ಲೈಫು ಇಷ್ಟೇನೆ... ಲೈಫು ಇಷ್ಟೇನೆ..."

-ತೇಜಸ್ವಿನಿ ಹೆಗಡೆ.



ಸೋಮವಾರ, ಆಗಸ್ಟ್ 23, 2010

(ಅ)ಪೂರ್ಣ

ಬಿದಿಗೆ ಚಂದ್ರಮನಿಂದ ಮುನಿದ ಹುಣ್ಣಿಮೆ
ಇರುಳ (ಆ)ವರಿಸುವಾಗ...
ನಿನ್ನ ನೆನಪು ಹಿಂಡುವುದು ಎದೆಯ,
ನಿನ್ನೆಡೆಗೆ ಹಾರುವುದು ಮನವು...

ನನ್ನ ನೆನಪೇ ನಿನ್ನ ಕಾಡುವಾಗ,
ಆ ನೆನಪಿನ ಕಂಪಿನ ಮತ್ತು
ನಶೆ ತರಿಸಿ ಅಮಲೇರಿಸಿ, ನಿನ್ನ
ಉಸಿರಾಟದ ಪ್ರತಿ ಉಸಿರು ನನ್ನ ನೆನೆವಾಗ,
ನೀ ಬಾ ನನಗಾಗಿ,
ಎಲ್ಲವನೂ ತೊರೆದು, ಎಲ್ಲರನೂ ಮರೆತು
ಮತ್ತೆಂದೂ ಅಗಲದಂತೇ...
ಈ ಹುಣ್ಣಿಮೆ ಕರಿಗತ್ತಲೆಯನಪ್ಪಿದಂತೇ...

ಸಾಗರ ಸದಾ ಪೌರ್ಣಿಮೆಯ ವಿರಹಿ
ಅವಳ ನೆನಪಲೇ ಕರಗಿ ಕೊರಗಿ
ಬಳಲುತಿರುವ ಅಸ್ತಮಾ ರೋಗಿ!
ಅವನುಬ್ಬಸದ ಆರ್ಭಟಕೆ ಹೆದರದೇ,
ಹೊಡೆವ ತೆರೆ ಹೆಡೆಗಳಿಗಂಜದೇ
ಕಪ್ಪಾಗಿ ಕರಟಿರುವ ಕರಿಗತ್ತಲ ಬೆಳದಿಂಗಳು
ಸೇರಲಿಲ್ಲವೇ? ನೀ ನೋಡಲಿಲ್ಲವೇ?

ಅಣಕಿಸುವ ಈ ಹುಣ್ಣಿಮೆಯ ಉರಿಸಲು
ನೀನೊಮ್ಮೆ ಬಾ ನನಗಾಗಿ,
ಎಲ್ಲವನೂ, ಎಲ್ಲರನೂ ತೊರೆದು,
ಜಗದ ಅರಿವ ಮರೆತು, ಮತ್ತೆಂದೂ ಅಗಲದಂತೇ...

ಭಾನುವಾರ, ಆಗಸ್ಟ್ 15, 2010

ಭಾರತದಲ್ಲಿ ಜನಿಸಿ ಕೊಟ್ಟಿದ್ದೇನು?! ಪಡೆದಿದ್ದೇನು?!

ಇಂದು ಭಾರತ ೬೩ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿದೆ. ನಿಜ ಹೇಳಬೇಕೆಂದರೆ ವರ್ಷದಿಂದ ವರ್ಷಕ್ಕೆ ಇದರ ಮಹತ್ವವೇ ಈಗ ಕಳೆಗುಂದುತಿದೆ. ನಮ್ಮಲ್ಲಿ ಆಪ್ತರು, ಆತ್ಮೀಯರು, ಸಂಬಂಧಿಗಳು ತೀರಿಹೋದಾಗ, ಮೊದಲ ಒಂದು ವರುಷ ತಿಂಗಳಿಗೊಮ್ಮೆ ತರ್ಪಣ ಕೊಡುತ್ತೇವೆ.....ಆಮೇಲೆ ವರ್ಷಾಂತಿಕವೆಂದು ಮಾಡಿ ಎಲ್ಲರೂ ಅವರ ಆತ್ಮ ಶಾಂತಿಗೋಸ್ಕರ ಪ್ರಾರ್ಥಿಸುತ್ತೇವೆ. ಇದೇ ರೀತಿಯಾಗಿಬಿಟ್ಟಿದೆ ಸ್ವಾತಂತ್ರೋತ್ಸವ ಇಂದು!! ಮಗು ಹುಟ್ಟಿದಾಗ, ಅದರ ಮೊದಲ ಜನ್ಮದಿನಾಚರಣೆಯ ಹಬ್ಬವನ್ನಾಚರಿಸಿ, ತದನಂತರವೇನೂ ನಾವು ಆ ದಿನದ ಸವಿ ನೆನಪನ್ನು ಮರೆಯೊಲ್ಲ ತಾನೇ? ಅದು ದೊಡ್ಡದಾಗಿ ಏನೇ ಆಗಿರಲಿ... ಒಳಿತನ್ನೇ ಮಾಡಲಿ, ನೋವನ್ನೇ ನೀಡಲಿ.... ಹೆತ್ತವರು ಮಾತ್ರ ತಮ್ಮ ಮಗುವಿನ ಜನ್ಮದಿನವನ್ನೆಂದೂ ಮರೆಯರು. ಆ ದಿನದ ಮಹತ್ವ ಅವರಿಗೆಂದೂ ನಿತ್ಯನೂತನವೇ ಸರಿ. ಹೀಗಿರುವಾಗ ದಾಸ್ಯದಿಂದ ಮುಕ್ತಿಸಿಕ್ಕಿ, ನಮ್ಮ ಬದುಕಿಗೆ, ವಿಚಾರಕ್ಕೆ, ಆಚಾರಕ್ಕೆ, ವ್ಯವಹಾರಕ್ಕೆ ಸ್ವಾತಂತ್ರ್ಯ ಸಿಕ್ಕ ಈ ದಿನ.. ಮಗುವಿನ ಜನ್ಮದಿನದ ಸಂಭ್ರಮವನ್ನು ಪಡೆಯುವ ಬದಲು, ತೀರಿಹೋದವರ ನೆನಪನ್ನು ಕ್ರಮೇಣ ಮಸುಕಾಗಿಸುವಂತಹ ದಿನವಾಗಿ ಬದಲಾಗಿರುವುದು... ಬದಲಾಗುತ್ತಿರುವುದು ಅತ್ಯಂತ ಖೇದಕರ! ತಮ್ಮ ತಮ್ಮ ಸ್ವಾರ್ಥಕ್ಕಾಗಿ, ಲಾಲಸೆಗಾಗಿ, ಅಧಿಕಾರಕ್ಕಾಗಿ ಮಾತ್ರ ಈ ದಿನದ ನೆನಪನ್ನು, ಇದಕ್ಕಾಗಿ ಹೋರಾಡಿ ಹುತಾತ್ಮರಾದವರ ಹೆಸರನ್ನು ಅಲ್ಲಲ್ಲಿ, ಅಪರೂಪಕ್ಕೆ ಸ್ಮರಿಸುವ ಸಮಾಜ/ರಾಜರಾಣಿಗಳು ಅಂದಿನವರ ಬಲಿದಾನದ ಮಹತ್ವವನ್ನೇ ಮರೆಯುತ್ತಾರೆ...ಅಕ್ಷರಶಃ ಮರೆತಿದ್ದಾರೆ! :( ನಾನು ಭಾರತೀಯ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಶ್ರೀಸಾಮಾನ್ಯನೂ ಕಡಿಮೆಯಾಗುತ್ತಿದ್ದಾನೆ. ಆ ಮನಃಸ್ಥಿತಿಯೂ ಕಡಿಮೆಯಾಗುತ್ತಿದೆ.

ದೇಶ ನಮಗೇನು ಕೊಟ್ಟಿದೆ? ಸ್ವಾತಂತ್ರ್ಯ ಪೂರ್ವದ ಭಾರತವೇ ಚೆನ್ನಾಗಿತ್ತು... ಅಂದಿಗೂ ಇಂದಿಗೂ ಏನೊಂದೂ ವ್ಯತ್ಯಸವಾಗಿಲ್ಲ... ಎಂದೆಲ್ಲಾ ಬೊಬ್ಬಿರಿವವರು ಕೇವಲ ತಮ್ಮ ವೈಯಕ್ತಿಕ ನೆಲೆಯಲ್ಲಷ್ಟೇ ಯೋಚಿಸುತ್ತಾರೆ.... ತಮಗಾದ, ತಮ್ಮವರಿಗಾದ, ತಮ್ಮ ಸಮುದಾಯಕ್ಕಾದ, ತಮ್ಮ ಜಾತಿಗಾದ ಕೆಲವೊಂದು ಅನ್ಯಾಯವನ್ನು ಮಾತ್ರ ಮೇಲೆರಿಸಿಕೊಂಡು ತೀರಾ ಸಂಕುಚಿತ ಮನೋಭಾವವನ್ನು ಹೊಂದಿ, ಇಂದಿನ ದಿನವನ್ನೇ ಧಿಕ್ಕರಿಸುವಂತವರ ಅನಾರೋಗ್ಯಕರ ಮನಃಸ್ಥಿತಿಗೆ ನನ್ನ ಸಂಪೂರ್ಣ ಅನುಕಂಪವಿದೆ. ಅಂತಹವರಿಗೆ ದಾಸ್ಯತನದಲ್ಲೇ ದಿನಗಳೆಯಬೇಕಾಗಿದ್ದ ಅಂದಿನ ಜೀವನದ ಅರಿವನ್ನು ಆ ಭಗಂವತ ನೀಡದಿರುವುದೇ ಅವರ ಇಂದಿನ ಈ ಅನಾರೋಗ್ಯಕರ ಮನಃಸ್ಥಿತಿಗೆ ಕಾರಣ ಎಂದೆನ್ನಿಸುತ್ತದೆ ನನಗೆ! ತನ್ನ ದೇಶವನ್ನು, ಸ್ವಂತ ನೆಲವನ್ನು, ಅದರ ಮೇಲಿನ ಅಭಿಮಾನವನ್ನು ಅಲ್ಲಗಳೆಯುವ, ದೇಶಾಭಿಮಾನವನ್ನು ಧಿಕ್ಕರಿಸುವ ಸ್ವಾತಂತ್ರ್ಯ ಸಿಕ್ಕಿರುವುದು ಸ್ವತಂತ್ರ ಭಾರತದಲ್ಲೇ.... ಹುಟ್ಟಿದ ನೆಲದ ಬಗ್ಗೇ ಸದಾ ಅಸಮಾಧನ ತೋರುತ್ತಾ, ವ್ಯಂಗ್ಯವಾಡುತ್ತಾ, ಕ್ರಾಂತಿಯ ನೆಪದಲ್ಲಿ ದೇಶವನ್ನೇ ಇಬ್ಭಾಗಿಸಿ ರಕ್ತದೋಕುಳಿ ಚೆಲ್ಲುವ ಮನೋಭಾವ ಹುಟ್ಟಲು, ಬೆಳೆಯಲು ಸಾಧ್ಯವಾಗಿದ್ದೂ ಇದೇ ಸ್ವತಂತ್ರ ಭಾರತದಲ್ಲೇ! ಇಂತಹ ಸಮಾಜಘಾತುಕ ಜನರನ್ನು, ಅವರ ಅಹಿತಕರ ಚಿಂತನೆಗಳನ್ನು ಬೇರು ಸಮೇತ ಕಿತ್ತೊಗೆಯಲು ನಿಜವಾಗಿಯೂ ಇಂಗ್ಲೀಷರ ಹತ್ತಿರ ಮಾತ್ರ ಸಾಧ್ಯವಿತ್ತೇನೋ...... ಇಂದಿನ ಭಾರತದ ದುರ್ಬಲ ಮನಃಸ್ಥಿತಿಯವರಿಂದ ದೇಶದ್ರೋಹಿ ಮನಃಸ್ಥಿತಿಯುಳ್ಳವರನ್ನು ಸರಿ ಮಾಡಲು ಸಾಧ್ಯವಾಗದೇನೋ! ಹಾಗೆ ನೋಡಿದರೆ ಇಂದಿನ ಸಮಾಜದಲ್ಲಿ ಅಂತಹವರಿಗೇ ಮನ್ನಣೆ ಜಾಸ್ತಿ!

ಭಗಸತ್‌ಸಿಂಗ್, ಸುಖದೇವ್, ಲಾಲ್ ಬಹದ್ದೂರ್ ಶಾಸ್ತ್ರಿ, ಸಾವರ್ಕರ್, ಗಾಂಧಿಜೀ- ಮುಂತಾದವರ, ಬಿಡುಗಡೆಗಾಗಿ ಹೋರಾಡಿದ ಹಳ್ಳಿ ಹಳ್ಳಿಯ, ಮೂಲೆ ಮೂಲೆಯ ಶ್ರೀಸಾಮಾನ್ಯನ - ಇವರೆಲ್ಲರ ನಿಃಸ್ವಾರ್ಥ ದೇಶಸೇವೆ, ದೇಶಪ್ರೇಮದಿಂದಾಗಿಯೇ ಇಂದು ನಾವೆಲ್ಲಾ ಸ್ವತಂತ್ರವಾಗಿ ಯೋಚಿಸಲು, ಅಂತೆಯೇ ಬದುಕಲು ಸಾಧ್ಯವಾಗಿರುವುದು ಎನ್ನುವ ಸಾಮಾನ್ಯ ಅರಿವೂ ಮಾಯವಾಗುತ್ತಿರುವುದು ನಿಜಕ್ಕೂ ದುಃಖಕರ. ಮುಂದೊಂದು ದಿನ ಈ ದಿನವೇ ಜನಮಾನಸದಿಂದ ಮರೆಯುವಂತಾದರೂ ಆಶ್ವರ್ಯಪಡಬೇಕಿಲ್ಲ. ಪಟ್ಟ ಭದ್ರ ಹಿತಾಸಕ್ತಿಗಳು, ಸಮಾಜ ಘಾತುಕ ಕ್ರಾಂತಿಕಾರಿಗಳಿಂದ ಮತ್ತೆ ನಾವು ದಾಸ್ಯತನದೆಡೆ (ನಮ್ಮ ಸಂಕುಚಿತತೆ, ಸ್ವಾರ್ಥ ಬುದ್ಧಿಯೊಳಗೇ ನಾವು ಬಂಧಿಯಾಗಿ...) ಮುನ್ನಡೆಯುವ ಕಾಲ ದೂರವಿಲ್ಲವೇನೋ ಎಂದೆನಿಸುತ್ತದೆ!

ಭಾರತವೆಂದರೆ ಏನು? ಭಾರತೀಯ ಸಂಸ್ಕೃತಿ, ಪ್ರಂಪರೆ ಎಂದರೆ ಏನೆಂದು ಅಂದೇ ಇಡೀ ಜಗತ್ತಿಗೇ ತೋರಿಕೊಟ್ಟವರು "ಸ್ವಾಮಿ ವಿವೇಕಾನಂದರು". ಅಂತಹವರ ಸದ್ವಿಚಾರಗಳು, ಚಿಂತನೆಗಳು ಇಂದಿನವರಿಗೆ ಮಾರ್ಗದರ್ಶಿಯಾಗಲು ಸಂಪೂರ್ಣ ಸಫಲವಾಗದಿದ್ದರೂ ನಮ್ಮ ಮುಂದಿನ ಪೀಳಿಗೆಗೆ ದಾರಿದೀವಿಗೆಯಾಗಲು ನಾವು ಶ್ರಮಿಸಬೇಕಿದೆ. ಇಂದು ನಮ್ಮ ಅಭಿಪ್ರಾಯವನ್ನು, ವ್ಯಕ್ತಿತ್ವವನ್ನು ಅಭಿವ್ಯಕ್ತಿಪಡಿಸಲು, ಅನ್ಯಾಯವನ್ನು ಪ್ರತಿಭಟಿಸಲು, ಎದುರಿಸಲು ನಮಗೆ ಉದಾರವಾಗಿ ಕೊಟ್ಟಿರುವ ಈ ಸ್ವಾತಂತ್ರ್ಯಕ್ಕಾಗಿ, ಈ ದಿನಕ್ಕಾಗಿ ನಾನು ಕೃತಾರ್ಥಳಾಗಿದ್ದೇನೆ. ಅಂದಿನವರ ಅವಿರತ ಹೋರಾಟದ, ಬಲಿದಾನದ, ತ್ಯಾಗದ ಫಲವೇ ಈ ಸ್ವಾತಂತ್ರ್ಯ. ಈದಿನದ ಮಹತ್ವ ನಿಜಕ್ಕೂ ನಮ್ಮೆಲ್ಲರೊಳಗಿನ ಸಣ್ಣತನಕ್ಕಿಂತಲೂ ತೀರಾ ದೊಡ್ಡದು. ಹಾಗಾಗಿಯೇ ನಾನು ಸ್ವತಂತ್ರ ಭಾರತದ ನಾಗರೀಕಳೆಂದು ಹೇಳಿಕೊಳ್ಳಲು ನನಗೆ ಅಪಾರ ಹೆಮ್ಮೆಯಿದೆ. ಅಂದಿನ ಇಂಗ್ಲೀಷರಿಗೂ ಇಂದಿನ ನಾಗರೀಕರಿಗೂ ಏನೊಂದೂ ವ್ಯತ್ಯಾಸವಿಲ್ಲ... ಅಂದಿನ ಪರಿಸ್ಥಿತಿಗೂ ಇಂದಿನದಕ್ಕೂ ವ್ಯತ್ಯಾಸವೇ ಇಲ್ಲ ಎನ್ನುವ ಧೋರಣೆಗೆ ಧಿಕ್ಕಾರವಿದೆ. ದೇಶಕ್ಕೆ ನಾವೇನು ಕೊಟ್ಟಿದ್ದೇವೆ.. ಕೊಡುತ್ತಿದ್ದೇವೆ ಎನ್ನುವುದನ್ನು ನೋಡದೇ ಕೇವಲ ಪಡೆಯುವಿಕೆಯ ಹುನ್ನಾರದಲ್ಲೇ ತೊಡಗಿರುವವರ ಪ್ರತಿ ಅಪಾರ ಅನುಕಂಪವಿದೆ (ಅವರ ಮಾನಸಿಕ ಅಸ್ವಸ್ಥತೆಗಾಗಿ...). ಸ್ವಾತಂತ್ರ್ಯಕ್ಕೂ ಸ್ವಚ್ಛಂದತೆಗೂ ವ್ಯತ್ಯಾಸ ತಿಳಿಯದೇ ನಾವು ದಾಸ್ಯದಲ್ಲಿದ್ದೇವೆಂದು ಕೂಗುವ ಮನಃಸ್ಥಿತಿಗೂ ಧಿಕ್ಕಾರ!

ಎಲ್ಲರಿಗೂ ೬೩ನೇ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಕಾಮನೆಗಳ ಜೊತೆ,
ಎಲ್ಲರಲ್ಲೂ ದೇಶಪ್ರೇಮ ಬೆಳೆಯಲಿ, ಇಲ್ಲದವರಲ್ಲಿ ಚಿಗುರೊಡೆಯಲಿ ಎಂದು
 ಮನಃಪೂರ್ವಕವಾಗಿ ಹಾರೈಸುವೆ.


ಜೈ ಹಿಂದ್!

(ಚಿತ್ರ ಕೃಪೆ - http://hindisms.org/greetings-sms/republic-day-sms-26th-january-sms.html) 



*******************

ಸ್ವಾತಂತ್ರ್ಯೋತ್ಸವದ ಅಂಗವಾಗಿ ನನ್ನ ಮೂರುವರುಷದ ಮಗಳು "ಅದಿತಿ"ಯ ಶಾಲೆಯಲ್ಲಿ ಛದ್ಮವೇಷದ ಕಾರ್ಯಕ್ರಮವಿತ್ತು. ಇದರ ವಿಶೇಷವೆಂದರೆ ಇದು ಸ್ಫರ್ದೆಯಾಗಿರದೇ ಎಲ್ಲರನ್ನೂ ಪ್ರೋತ್ಸಾಹಿಸುವ, ಭಾಗವಹಿಸಲು ಹುರಿದುಂಬಿಸುವ ಕಾರ್ಯಕ್ರಮವಾಗಿತ್ತು. ಅದಿತಿ "ವಿವೇಕಾನಂದರ"ವೇಷವನ್ನು ತೊಟ್ಟಿದ್ದಳು. ಪುಟ್ಟ ಪುಟ್ಟ ಮಕ್ಕಳಲ್ಲಿ ದೊಡ್ಡ ದೊಡ್ಡ ವ್ಯಕ್ತಿಗಳ ವೇಷ ಭೂಷಣಗಳನ್ನು ಕಂಡು ಮನದುಂಬಿ ಬಂತು. ಆ ವ್ಯಕ್ತಿಗಳ ವ್ಯಕ್ತಿತ್ವವೂ ಈ ಬೆಳೆವ ಮೊಳಕೆಯಲ್ಲಿ ಚಿಗುರೊಡೆಯುವಂತಾದರೆ ಎಷ್ಟು ಚೆನ್ನಾ.. ಎಂದೂ ಮನಸು ಹಾರೈಸಿತು. ಇಂದಿನ ಮಕ್ಕಳು ನಾಳಿನ ಪ್ರಜೆಗಳು. ಹಾಗಾಗಿ ಇಂದಿನ ಮಕ್ಕಳಲ್ಲಾದರೂ ಆರೋಗ್ಯಕರ ಮನಃಸ್ಥಿತಿಯನ್ನೂ, ತಮ್ಮ ದೇಶದ ಕುರಿತು ಅಭಿಮಾನ, ಪ್ರೀತಿಯನ್ನೂ ನಾವು ಬೆಳೆಸುವಂತಾದರೆ ಭವಿಷ್ಯತ್ತು ಸುಂದರವಾಗವುದು. ಎಲ್ಲಕ್ಕಿಂತ ಮೊದಲು "ನಾನು ಮನುಜ.... ನಾನು ಭಾರತೀಯ" ಎನ್ನುವ ಕಲ್ಪನೆ ಕೊಟ್ಟರೆ ಸಾಕು....ಸುವಿಚಾರಗಳು ಅವರನ್ನರಸಿ ಬರುತ್ತವೆ.

ಪುಟಾಣಿಗಳ ಕೆಲವು ಸುಂದರ ಚಿತ್ರಗಳು ನಿಮಗಾಗಿ....:)



ಅದಿತಿ - "ಸ್ವಾಮಿ ವಿವೇಕಾನಂದ"



ಇಂದಿನ ಇಂದಿರಾಗಾಂಧಿ :)

ಪುಟಾಣಿ ಗಾಂಧೀಜಿ :)

ಆಧುನಿಕ ಮಂಗಲ ಪಾಂಡೆ :)

 ಹೂ ಮಾರುವ ಹುಡುಗಿ :)

ಭಗತ್ ಸಿಂಗ್ :) 
 ಆದಿತ್ಯ - ಪುರೋಹಿತ :)
ಕಿತ್ತೂರು ರಾಣಿ ಚೆನ್ನಮ್ಮ  :)

 ಇಂದಿರಾಗಾಂಧಿ :)

ಈ ಕಾರ್ಯಕ್ರಮದ ನಂತರ ಎಲ್ಲಾ ಪುಟಾಣಿಗಳಿಗೂ ಚಿತ್ರಕ್ಕೆ ಬಣ್ಣ ಹಾಕುವ ಕಾರ್ಯವನ್ನೂ ನೀಡಲಾಗಿತ್ತು.... :)




- ತೇಜಸ್ವಿನಿ ಹೆಗಡೆ

ಮಂಗಳವಾರ, ಆಗಸ್ಟ್ 3, 2010

ಈ ಸುದಿನ....ನನ್ನ ಪ್ರತಿಬಿಂಬವ ನಾ ಕಂಡ ದಿನ....

ಇಂದು ಬೆಳಗು ಎಂದಿನಂತಿಲ್ಲ ಎಂದೆನಿಸಿತು. ಅದೇ ಮೋಡ ಮುಸುಕಿದ ರವಿ... ಅದೇ ಚಿಟಿ ಚಿಟಿ ಮಳೆ... ಅದೇ ತಣ್ಣನೆ ಕೊರೆವ ಚಳಿ ಗಾಳಿ...ಅದೇ ಏರ ತೊಡಗಿದ ವಾಹನಗಳ ಗದ್ದಲ... ಎಲ್ಲವೂ ಅದೇ...ಆದರೂ ನನಗೆಲ್ಲದರಲ್ಲೂ ಏನೋ ಹೊಸತನ ಕಾಣತೊಡಗಿತ್ತು. ಕಾರಣ ಇಂದು ನನ್ನೊಳಗಿನ ನನ್ನ ನಾ ಪಡೆದ ದಿನ... ನನ್ನ ಪ್ರತಿಬಿಂಬವ ನಾ ಕಂಡ ದಿನ. ಈ ದಿನ ನನ್ನ ಅದಿತಿ ದಿನ. ನಮ್ಮಿಬ್ಬರ ಕನಸು, ಕಲ್ಪನೆಗಳು ಸಾಕಾರಗೊಂಡ ದಿನ... 

ಎಂದಿನಂತೇ ನಾನೆದ್ದು ಕಿಟಕಿಯ ಪರದೆ ಸರಿಸಿದಾಗ....ಸೂರ್ಯನ ಮಂದ ಕಿರಣ ಮೊದಲು ಬಿದ್ದು ಹೊಳೆದದ್ದು ಅವಳ ಮೊಗದ ಮೇಲೆ. ಇಂದಿನ ಸಂಭ್ರಮದ ಸವಿಗನಸ ಕಾಣುತ್ತಾ ಮಲಗಿದ್ದಕ್ಕೋ ಏನೋ ಅವಳ ಮುದ್ದು ಮುಖದ ಮೇಲೆ ಕಿರುನಗೆ ಹೌದೋ ಅಲ್ಲವೋ ಎಂಬಂತಿತ್ತು. ಮೃದು ಕೈಗಳು ಬೆಚ್ಚನೆ ಹೊದಕೆಯಿಂದ ಹೊರಬಂದದ್ದು ನೋಡಿ ಹಾಗೇ ಒಳಸರಿಸ ಹೋದರೆ ಪುಟ್ಟ ಅಂಗೈಯೊಳಗೆ ನನ್ನೆರಡು ಬೆರಳುಗಳು ಭದ್ರವಾಗಿ, ಏಳಲೇ ಮನಸಾಗಲಿಲ್ಲ. ವರುಷ ಅದಾಗಲೇ ಮೂರು ಕಳೆಯಿತಲ್ಲ ಇಂದಿಗೆ.... ನೋಡಿದರೆ ನಿನ್ನೆ ಮೊನ್ನೆಯಂತಿದೆ ಆ ದಿನದ ಸಂಭ್ರಮ, ರೋಮಾಂಚನ, ಅನಿರ್ವಚನೀಯ ಅನುಭೂತಿ. "ನಿಮ್ಗೆ ಹೆಣ್ಣು ಮಗು... ಚೆನ್ನಾಗಿದೆ..."ಎಂದು ಡಾಕ್ಟರ್ ಹೇಳಿದಾಗ ಮಂಪರು ಪೂರ್ತಿ ತಿಳಿದಿರಲೂ ಇಲ್ಲ... ಆಳದಿಂದೆಲ್ಲೋ ಕೇಳಿದಂತಿತ್ತು ಮಾತು. ಆದರೆ ಆ ವಿಸ್ಮೃತಿಯಲ್ಲೂ ಸುಪ್ತ ಮನಸು ನಲಿದಾಡಿತ್ತು. ಮೊದಲ ಸಲ ಕಂಡಾಗ ಜಗತ್ತಿನ ಬೆರಗೆಲ್ಲಾ ಪುಟ್ಟ ಜೀವದಲ್ಲೇ ಅಡಗಿರುವಂತೆ ಕಂಡಿತ್ತು. ಸದಾ ಕಣ್ಮುಚ್ಚಿಯೇ ಇರುತ್ತಿದ್ದವಳು ನನ್ನ ಬಳಿ ಬಂದ ಕೂಡಲೇ ಛಕ್ಕೆಂದು ಕಣ್ಬಿಟ್ಟು ಹೊರಳಿಸುವುದ ಕಂಡಾಗ ಕಾಣದ ಆತನ ಸೃಷ್ಟಿಯ ಚೆಲುವಿವೆ ಮಾರುಹೋಗಿದ್ದೆ. ನಂಬಿಕೆ ಮೊದಲಿಂದಲೂ ಇದ್ದರೂ ಆ ದಿನದಿಂದ ಮತ್ತೂ ಗಟ್ಟಿಯಾಗಿತ್ತು. "ನಂಬಿ ಕೆಟ್ಟವರಿಲ್ಲವೋ..."ಎಂದು ಅಮ್ಮ ಹಾಡುತ್ತಿದ್ದ ಭಜನೆ ಮತ್ತೆ ಮತ್ತೆ ರಿಂಗುಣಿಸುತಿತ್ತು. ಜನ್ಮ ಹೊಸ ಜೀವಕ್ಕಾಗಿದ್ದರೂ, ನಾನೂ ಪುನರ್ಜನ್ಮವನ್ನೇ ಪಡೆದಿದ್ದೆ.... ನಾನಂದು ಉಸಿರೆಳೆದು, ಉಸಿರು ಕೊಟ್ಟು, ಮತ್ತೆ ಉಸಿರು ಪಡೆದು ತಾಯಾಗಿದ್ದೆ. ಹಿಂದೊಮ್ಮೆ ಕನಸುಗಳಾಗಿದ್ದ ಅನುಭವಗಳೆಲ್ಲಾ ನನಸಾಗಿ... ಇಂದು ಬರೀ ನೆನಪುಗಳಾಗಿವೆ.....ಸದಾ ಹಸಿರಾಗಿರುವ... ಉಸಿರಾಗಿರುವ ಸವಿ ಸವಿ ನೆನಪುಗಳು.

"ಅಮ್ಮಾ...ರಾಶಿ ಪುಗ್ಗ ಹಾಕವು ಹಾಂ... ಮತ್ತೆ ಜಿಗಿ ಬಿಗಿ ಬಣ್ಣದ್ ಕಾಗ್ದ ಎಲ್ಲಾ ತರವು ಹಾಂ... ತಮ್ಮನ ಮನೆಯಲ್ಲಿ ಮಾಡಿದ್ವಲ್ಲೆ.. ಹಾಂಗೆ ನಮ್ಮನೇಲೂ ಮಾಡವು ಹಾಂ... ಕೇಕ್ ತರವು... ನಾನೂ ಕಟ್ ಮಾಡ್ತಿ ಹಾಂ.. ಅಪ್ಪಾ ನಂಗೆ ಓರೆಂಜ್ ಕಲರ್ ಅಂಗಿ ಬೇಕು.. ಅದ್ನ ಹಾಕ್ಕಂಡೇ ಎಪ್ಪಿ ಬರ್ಡೆ ತೂ ಯೂ ಹೇಳ್ತಿ ಹಾಂ.."ಎಂದು ಒಂದೇ ಸಮನೆ ಮುದ್ದು ಮುದ್ದಾಗಿ ಆಶೆಗಳನ್ನು ಮುಂದಿಟ್ಟಿದ್ದಳು ಪುಟ್ಟಿ ಕೆಲ ದಿನಗಳ ಹಿಂದೆ. ಅವೆಲ್ಲಾ ಇಂದು ನನಸಾಗುತ್ತಿವೆ...ನನಸಾಗುವ ಹಂತದಲ್ಲಿವೆ. ದೀಪ ಆರಿಸಿ ಕೇಕ್ ಕಟ್ ಮಾಡುವ ಪರಿಗೆ ನನ್ನದೆಂದೂ ವಿರೋಧವಿದೆ. ಆದರೆ ಎಲ್ಲೆಡೆ ಇದೇ ರೀತಿಯ ಸಂಭ್ರಮ! ಇಂಗ್ಲೀಷರ ಉದಾರ ಕೊಡುಗೆ. ಆದರೆ ಆರಿಸುವ ಬದಲು ದೀಪವನ್ನು ಹಚ್ಚಿ ಸಂಭ್ರಮಿಸುವುದರಲ್ಲೇ ಹೆಚ್ಚು ಅರ್ಥ ಕಂಡವರು ನಾವು.   ಜೀವ ಪಡೆದ ದಿನ...ಪ್ರತಿ ವರುಷ ಹೊಸ ಕನಸುಗಳಿಗೆ ಜೀವ ಕೊಡುವ ದಿನ ಬೆಳಗ ಬೇಕೇ ವಿನಃ ಆರಬಾರದು. ಹಾಗಾಗಿಯೇ ಪುಟ್ಟಿಯ ಮೊದಲ ವರುಷದಲ್ಲೂ ದೀಪ ಹಚ್ಚಿದ್ದೆ.....ಅದೇ ಹಿಂದಿನ ವರುಷಕ್ಕೂ ಮುಂದುವರಿದಿತ್ತು. ...ಅದೇ ಈ ವರುಷಕ್ಕೂ ಕೂಡ....ಇದೇ ರೀತಿ ಮುಂದುವರಿಯುವ ಸಂಕಲ್ಪ. ಕೆಲವೊಂದು ಪದ್ಧತಿಗಳಲ್ಲಿರುವ ಕೆಡುಕನ್ನು ತಿಳಿ ಹೇಳಿ ತಿದ್ದಲು ಇದು ತೀರಾ ಚಿಕ್ಕ ವಯಸ್ಸು. ಬೌದ್ಧಿಕವಾಗಿ ನನ್ನ ಮಾತುಗಳನ್ನು ಅರಿಯುವ ಸಮಯ ಬರುವವರೆಗೂ ಕಾಯದೇ ವಿಧಿಯಿಲ್ಲ. ಇಷ್ಟಕ್ಕೂ ಇದು ಅವಳ ದಿನ...ಅವಳಿಗಾಗಿರುವ ದಿನ... ಈ ದಿನ ಅವಳ ಮೊಗದಲ್ಲಿ ಮಿಂಚುವ ನಗುವಿಗಾಗಿ ಮೂರೇನು? ನೂರು ಕ್ಯಾಡಲ್ ಹಚ್ಚೇನು!(ಆರಿಸುವ ಬದಲು) ಒಂದು ದೊಡ್ಡ ನಂದಾದೀಪ ಹೇಗಿದ್ದರೂ ಭಗವಂತನ ಮುಂದೆ ಬೆಳಗುತ್ತಲೇ ಇರುತ್ತದೆ. ನೀಲಾಂಜನದ ಪ್ರಖರತೆಯೊಡನೆ ಬೆಳಗುವ ಆಕೆಯ ಮುಖದೊಳಗೇ ನನ್ನ ಮರು ಹುಟ್ಟೂ, ಆಕೆಯ ಹೊಸ ಹುಟ್ಟೂ ಬೆಸೆಯುವ ಸಂಬಂಧ ಪ್ರತಿ ದಿನ ಬೆಳೆಯುತ್ತಿದೆ.. ಬೆಳೆಯುತ್ತಲೇ ಇರುತ್ತದೆ. ಮಗುವಿಗಿಟ್ಟಿದ್ದ ಐದು ಹೆಸರಗಳಲ್ಲೇ ಒಂದಾದ "ಮಾನಸ" ಹುಟ್ಟಿದ್ದೂ ಅವಳಿಂದಾಗಿಯೇ... ಅವಳಿಗಾಗಿಯೇ. ಹಾಗೆ ನೋಡಿದರೆ.....ನನ್ನೊಳಗಿನ ಬರಹಗಾರ್ತಿಯ ಮರು ಹುಟ್ಟೂ ಅವಳಿಂದಾಗಿಯೇ ಆಗಿದ್ದು. ಇಷ್ಟೆಲ್ಲಾ ಅನುಭೂತಿಗಳನ್ನಿತ್ತ.....ಅಪೂರ್ವ ಉಡುಗೊರೆಗಳನ್ನಿತ್ತ ಈ ಪುಟ್ಟ ಜೀವಕೆ ನಾನು ಏನು ಉಡುಗೊರೆ ಕೊಟ್ಟರೂ ಕಡಿಮೆಯೇ. ಆದರೂ ಅಪ್ಪ ಹೇಳುತ್ತಿರುತ್ತಾರೆ..."ಆ ತಾಯಿಯ ಆಶೀರ್ವಾದ ಇದ್ರೆ ಎಲ್ಲಾ ಒಳ್ಳೇದಾಗ್ತು...." ಅದಂತೂ ನಿಜ. ನಾ ಪೂಜಿಸುವ ತಾಯಿಯ ಆಶೀರ್ವಾದದ ಜೊತೆ ನನ್ನ ಶುಭ ಹಾರೈಕೆಗಳು ಸದಾ ಪುಟ್ಟಿಯ ಜೊತೆಗಿರುವವು.

ಹೀಗೇ ಮಾನಸದಲ್ಲಿ ತೋಚಿದ ಭಾವಗಳಿಗೆ ಅಕ್ಷರರೂಪ ಕೊಡುತ್ತಿರುವಾಗಲೇ ಕಣ್ಬಿಟ್ಟಿತ್ತು ನನ್ನ ಬೆಳಕು. ಎಂದಿನಂತೇ ಅಮ್ಮ ಅಡುಗೆ ಮನೆಯಲ್ಲಿರದೇ ಆಕೆಯ ಪಕ್ಕದಲ್ಲೇ ಕೂತು ದಿಟ್ಟಿಸುತ್ತಿದ್ದುದನ್ನು ನೋಡಿದ್ದೇ ಅವಳ ಮೊಗದಲ್ಲಿ ದೊಡ್ಡ ನಗು...ಹಾಗೇ ತಲೆ ಎತ್ತಿ ನನ್ನ ಮಡಿಲೊಳಗೆ ಹುದುಗಿ ಹೇಳಿದ್ದು "ಎಪ್ಪಿ ಬರ್ತಡೆ ತೂ ಯೂ...". ಆಕೆಯ ಮುಗ್ಧ ಮಾತಿಗೆ ಜೋರಾಗಿ ನಗು ಬಂದರೂ ಮನಸು ನಿಜವೆಂದಿತು. ಹೌದು.. ಇಂದೇ ನನಗೂ ಹೊಸಜನ್ಮ ಸಿಕ್ಕಿದ್ದು....ಹೊಸ ಕನಸು ಹುಟ್ಟಿದ್ದು.....ಹೊಸ ಸೃಷ್ಟಿ ಹುಟ್ಟಿದ್ದು....ತಾಯ್ತನದ ಅನುಭೂತಿಯನ್ನು ಹೊಂದಿದ್ದು......


-ತೇಜಸ್ವಿನಿ.