ಗುರುವಾರ, ಜನವರಿ 13, 2011

ಅಂತರ್ಗಾಮಿ

ಕೃಪೆ : "ತರಂಗ"
"ಅಲ್ಲಾ...ಈ ಅಣ್ಣಯ್ಯಂಗೆ ಎಂತಾ ಆಜು ಹೇಳಿ.... ಬಂಗಾರದಂಥ ಮಾಣಿ....ಮುತ್ತಿನಂಥ ಕೂಸು....ಇಬ್ರೂ ಗೊತ್ತಿದ್ದವೇಯಪಾ... ಆದ್ರೂ ಹೀಂಗೆಲ್ಲಾ ಮಳ್ಳು ಹರೀತಾ ಇದ್ದ ಇಂವ....ಎಂತಾ ಆಯ್ದೋ ಸುಬ್ಬಣ್ಣಂಗೆ ಮಾದೇವಿ.." ಎಂದು ಪಿಸುಗುಟ್ಟಿದ ಕಮಲತ್ತೆಯ ಮಾತು, ತುಸುವೇ ದೂರ ಕುಳಿತು ಹಿಟ್ಟು ರುಬ್ಬುತ್ತಿದ್ದ ಸೀತೆಗೆ ಬೇಡ ಬೇಡವೆಂದರೂ ಕೇಳಲು, ಹೊಟ್ಟೆಯೊಳಗೆ ವಿಚಿತ್ರ ಸಂಕಟವಾಯಿತು. ಎಡಗೈ ಬೀಸುಗುಂಡನ್ನು ಶಕ್ತಿ ಮೀರಿ ರುಬ್ಬುತ್ತಿದ್ದರೆ ಬಲಗೈ ಆಗೀಗ  ಹೊರ ಬರುತ್ತಿದ್ದ ಅಕ್ಕಿ ಉದ್ದನ್ನು ಗುಂಡಿಗೆ ಮರು ದೂಡುತ್ತಿತ್ತು. ಮನಸೆಲ್ಲಾ ಅಷ್ಟು ದೂರ ಕುಳಿತು ಊಟಕ್ಕಾಗಿ ಬಾಳೆ ತೊಳೆಯುತ್ತಿದ್ದ ಮಾದೇವಿ ಚಿಕ್ಕಿ ಹಾಗೂ ಕಮಲತ್ತೆಯ ಮಾತುಗಳೆಡೆಯೇ ಇದ್ದುದರಿಂದಲೋ ಏನೋ..ಅವಳರಿವಿಲ್ಲದಂತೆಯೇ ಬೀಸುತಿದ್ದ ಗುಂಡು ಅಕ್ಕಿ ಉದ್ದು ದೂಡುತ್ತಿದ್ದ ಬಲಗೈ ಕಿರುಬೆರಳಿಗೆ ತುಸು ಸೋಕಲು ಜೀವ ನಿಂತಂತಾಗಿ "ಅಯ್ಯೋ ಅಬ್ಬೇ.." ಎಂಬ ಚೀತ್ಕಾರ ಹೊರ ಬಿತ್ತು. ಅಲ್ಲೇ ಸಮೀಪ ಇದ್ದ ಅವಳ ಚಿಕ್ಕಮ್ಮ ಹಾಗೂ ಅತ್ತೆಯರು ಓಡಿ ಬರಲು, ತನ್ನ ಪೆದ್ದು ತನವ ಮುಚ್ಚಲು, "ಎಂತೂ ಆಯ್ದ್ರಿಲ್ಯೆ....ಅದು ಕೈ ತಪ್ಪಿ ಗುಂಡು ತಾಗೋತು.. ಚೂರು ತಾಗ್ದಾಂಗಾತಪ... ಗ್ಯಾನ ಎಲ್ಲೋ ಇತ್ತು... ಅಂಥದ್ದೆಂತೂ ಆಜಿಲ್ಲೆ .."ಎಂದು ಸಮಜಾಯಿಸುತ್ತಾ ಅಲ್ಲೇ ಹತ್ತಿರದ ತೋಪಿನಲ್ಲಿದ್ದ ತಣ್ಣೀರಿನೊಳಗೆ ಬಲಗೈ ಕಿರುಬೆರಳನ್ನು ಅದ್ದಿ ತೆಗೆದಳು. ಅಷ್ಟೇನೂ ಪೆಟ್ಟಾಗದಿದ್ದರೂ ಅವಳ ಕಣ್ಣಾಲಿಗಳನ್ನು ತುಂಬಿದ್ದ ನೀರನ್ನು ನೋಡಿ ಮಾದೇವಿ ಚಿಕ್ಕಿಗೆ ಕೆಡುಕೆನಿಸಿತು.

"ತಂಗಿ...ನಿನ್ನ ಕಷ್ಟ ಅರ್ಥ ಆಗ್ತು... ಹೆತ್ತಪ್ಪನೇ ಈ ರೀತಿ ಮಾತಾಡಿದ್ರೆ ಯಾರಿಗೂ ಬೇಜಾರಾಗ್ತು. ನೀ ತಲೆ ಕೆಡ್ಸಕಳಡ. ಎಲ್ಲಾ ಸರಿಯಾಗ್ತು.... ನಿಮ್ಮನೆ ತಮ್ಮಂಗೆ ಸ್ವಲ್ಪ ತಾಳ್ಮೆ ತಗಂಬ್ಲೆ ಹೇಳು. ಸುಬ್ಬು ಭಾವನೋರ ಹಠ ಗೊತ್ತಿಲ್ಲದ್ದಲ್ಲ.... ಈಗಂತೂ ಎಪ್ಪತ್ತು ವರ್ಷ ಆತು... ಅನಾರೋಗ್ಯನೂ ಕಾಡ್ತಿದ್ದು.. ಏನೋ ಹಠ ಹಿಡದ್ದ.... ಚಿಂತೆ ಮಾಡಡ..."ಎಂದು ತನಗೆ ತಿಳಿದಷ್ಟು ಸಮಾಧಾನಿಸಿ ಒಳಕೆಲಸದ ನೆಪಮಾಡಿಕೊಂಡು ಕಮಲತ್ತೆಯನ್ನೂ ಕರೆದೊಯ್ದಳು.....ಸೀತೆಗೆ ಬೇಕಾಗಿರುವ ಏಕಾಂತದ ಅರಿವು ಅವಳಿಗೆ ಚೆನ್ನಾಗಿ ಗೊತ್ತಿತ್ತು.

ಹೊನ್ನಗದ್ದೆ ಸುಬ್ಬಯ್ಯ ಭಟ್ಟರ ಸಂಸಾರ ಬಹಳ ದೊಡ್ಡದಲ್ಲದಿದ್ದರೂ ತೀರ ಚಿಕ್ಕದೂ ಆಗಿಲ್ಲ. ಎರಡು ಜನ ತಮ್ಮಂದಿರು, ಓರ್ವ ತಂಗಿಯ ಅಣ್ಣನಾಗಿದ್ದ ಅವರೇ ಮನೆಯ ಯಜಮಾನ. ಹಾಗಾಗಿಯೇ ಸ್ವಭಾವತಃ ತುಸು ದರ್ಪ, ಅಹಂ, ಶಂಠಂ ಎಲ್ಲವೂ ಮೈಗೂಡಿತ್ತು. ಆದರೆ ನಿಷಕ್ಷಪಾತಿ.....ತಪ್ಪು, ಸರಿಯ ಜ್ಞಾನ ಉಳ್ಳುವನು. ತೀರಾ ಮೊಲಕ್ಕೆ ಮೂರೇ ಕಾಲು ಎನ್ನುವವರಲ್ಲದಿದ್ದರೂ ಸಂದರ್ಭ ಬಂದರೆ ನಾಲ್ಕು ಕಾಲೇ ಇರುವುದೆಂಬ ಸತ್ಯವನ್ನೂ ಅಲ್ಲಗಳೆಯುವವರು. ಐವತ್ತು ವರುಷದ ಹಿಂದೆಯೇ ಸಣ್ಣ ಕುಟುಂಬಕ್ಕೆ ಒತ್ತಾಸೆ ಕೊಟ್ಟವರು. ದುಡ್ಡಿದ್ರೆ ದೊಡ್ಡಪ್ಪ... ದುಡ್ಡು ಸದಾ ನಮ್ಜೊತೆ ಇರವು ಅಂದ್ರೆ ಮನೆಲಿ ತಿಂಬವೂ ಕಡ್ಮೆ ಇರವು... ಉಂಬಲೆ ಗತಿ ಇಲ್ಲೆ.. ಮಕ್ಕ ಮಾತ್ರ ಹತ್ತಿಪ್ಪತ್ತು ಅಂತಾದ್ರೆ ಎಂಥಾ ನಾಚ್ಕೆ... ಎಂದು ಸದಾ ಹೇಳುತ್ತಿದ್ದರು. ಅಂತೆಯೇ ಮಗಳು ಸೀತೆ, ಮಗ ನಾರಾಯಣ ಮಾತ್ರ ಅವರ ಕುಡಿಗಳಾಗಿದ್ದರು. ಊರವರೆಲ್ಲಾ "ಭಟ್ರು ಬ್ರಿಟೀಷರ ಪ್ರಭಾವಕ್ಕೆ ಬಿದ್ದು ಮಳ್ಳಾಗೋಜ್ರು... ಸತ್ಮೇಲೆ ಹೊರಲೆ ನಾಲ್ಕು ಜನಬೇಕು... ಅದ್ಕಾದ್ರೂ ನಾಲ್ಕು ಗಂಡ್ಮಕ್ಳಾದ್ರೂ ಬ್ಯಾಡ್ದ? ಇದೆಂಥ ಮಳ್ಳನಪಾ...."ಎಂದು ಗೇಲಿ ಮಾಡಿಕೊಳ್ಳುತ್ತಲೇ..."ಸುಬ್ಬುಮಾವ ಮನೇಲಿ ತಾಪತ್ರಯ ಒಂದು ಹತ್ತು ರೂಪಾಯಿದ್ರೆ ಕೊಟ್ಟೀರು... ಅಡಕೆ ವಕಾರಿ ಆದ್ಕೂಡ್ಲೇ ಕೊಡ್ತಿ.."ಎಂದು ಕೈಗಡ ಪಡೆದು ತಿಂಗಳುಗಟ್ಟಲೇ ತಲೆಮರೆಸಿಕೊಳ್ಳುತ್ತಿದ್ದರು. ಸೀತೆಗೆ ಹತ್ತುವರುಷವಾಗುವಾಗಲೇ ಭಟ್ಟರಿಗೆ ಪತ್ನಿ ವಿಯೋಗ ಉಂಟಾಗಿತ್ತು. ಮಕ್ಕಳ ಮೋಹ ಅವರ ಕಾಮನೆಗಳಿಂಗಿಂತ ಜಾಸ್ತಿಯೇ ಆಗಿತ್ತೆಂದು ಕಾಣುತ್ತದೆ....ಹಾಗಾಗಿ ಮತ್ತೊಂದು ಮದುವೆಗೆ ಮನಸು ಮಾಡಲೇ ಇಲ್ಲ. ಹಳೆ ತಲೆಮಾರಿನವರಾಗಿದ್ದರೂ ಸುಬ್ಬಯ್ಯ ಹೆಗಡೆ ತೀರಾ ಗೊಡ್ಡು ಸಂಪ್ರದಾಯ, ಆಚರಣೆಯನ್ನು ನೆಚ್ಚಿದವರೂ ಅಲ್ಲ. ಊರಿನ ಜಾತ್ರೆಯಲ್ಲಿ ಕಂಡು...ಪರಸ್ಪರ ಮೆಚ್ಚಿ, ಮದುವೆ ಪ್ರಸ್ತಾಪ ತಂದ ನೀಲೇಕಣಿ ಶ್ರೀನಿವಾಸ ಜೋಯಿಸನಿಗೇ ತಮ್ಮ ಮಗಳನ್ನು ಧಾರೆ ಎರೆದು ಕೊಟ್ಟಿದ್ದರು. "ಜಾತ್ಕ, ಪಾತ್ಕ ಎಲ್ಲಾ ನಮ್ಮ ಮನ್ಸಿನ ಮುಂದೆ ಎಂತೂ ಅಲ್ಲ... ಕೂಸು ಮಾಣಿ ಮೆಚ್ಕಂಡಾತಲಿ... ಸಾಕು ಎಲ್ಲಾ ಸರಿ ಆದ ಹಾಂಗೇಯಾ..."ಎಂದು ಸಾರಿ ಹದಿನೈದು ದಿನದೊಳಗೇ ಮದುವೆ ಮಾಡಿ ಮುಗಿಸಿದ್ದರು. ಹಣಕಾಸಿನಲ್ಲಿ ತಮಗಿಂತ ಉತ್ತಮರಾಗಿದ್ದ ಅವರ ಮಗಳನ್ನು ತಮ್ಮ ಮನೆತುಂಬಿಸಿಕೊಂಡಿದ್ದರೂ ಮನದೊಳಗೆ ಮಾತ್ರ ಪ್ರವೇಶ ನೀಡಲಿಲ್ಲ ಶ್ರೀನಿವಾಸನ ತಾಯಿ ಜಗದಂಬಾ. ತನ್ನ ಸೋದರಿಕೆಯ ಸಂಬಂಧ ತರಬೇಕೆಂದು ಆಶಿಸಿದ್ದ ಅವರಿಗೆ ಮಗನ ಆಶಯ ಅಡ್ಡ ಬಂದಿತ್ತು. ಸೀತೆಯೇ ಏನೋ ಮಂಕು ಬೂದಿ ಎರಚಿ ಒಳಹಾಕಿಕೊಂಡು ಮದುವೆಯಾಗಿದ್ದಾಳೆಂದೇ ವಾದಿಸಿದ ತಾಯಿ ಹೃದಯ, ಮೊದಲ ದಿನದಿಂದಲೇ ಅಸಮಾಧಾನ ಪ್ರಕಟಿಸತೊಡಗಿದ್ದಳು. ಇದಕ್ಕೆ ಇಂಬುಕೊಟ್ಟಿದ್ದು ಸೀತೆಯ ಬಂಜೆತನ. ವರುಷ ಹತ್ತಾಗಿದ್ದರೂ ವಂಶಕ್ಕೊಂದು ಕುಡಿ ಕಾಣಿಸಿದ ಆಕೆಯನ್ನು ಮನಸೋ ಇಚ್ಛೆ ಜರೆದ ಜಗದಾಂಬ ಒಂದು ದಿನ ನಿರ್ಧಾರ ತಳೆದವಳಂತೇ ಭಟ್ಟರ ಬಾಗಿಲ ಮುಂದೆ ಮೊಕ್ಕಾಂ ಹೂಡಿಬಿಟ್ಟಿದ್ದಳು.

"ಸುಬ್ಬಣ್ಣ... ನಮ್ಮನೆ ಮಾಣಿ ನಿಮ್ಮನೆ ಕೂಸ್ನ ಇಷ್ಟ ಪಟ್ಟ.... ಆನು ದೂಸರಾ ಮಾತಾಡ್ದೇ ಒಪ್ಪಿ ಮನೆ ತುಂಬ್ಸ್‌ಕಂಡಿ...ನಿನ್ನ್ ಮಗ ನಾರಾಯಣಂಗೋ ಈಗಾಗ್ಲೇ ಒಂದು ಗಂಡು ಮಗು ಆಯ್ದು..... ಹಾಂಗಾಗಿ ನಿಂಗಕಿಗೆ ಈ ಬಿಸಿ ತಾಗಿದ್ದಿಲ್ಲೆ.....ಆದ್ರೆ ನಂಗೂ ಮೊಮ್ಮಕ್ಕಳ ಆಡ್ಸವು ಅನ್ನಿಸ್ತಿಲ್ಯ? ನಂಗೂ ಒಬ್ನೇ ಮಗ....ಬೇರೆ ಮಕ್ಕನೂ ಇಲ್ಲೆ. ನಮ್ಮನೆಯವ್ರಂತೂ ಇದೇ ಕೊರ್ಗಲ್ಲೇ ಸತ್ತು ಸ್ವರ್ಗ ಕಂಡ್ರು. ನನ್ಗೂ ಅದೇ ಗತಿನೇ ಕಾಣ್ತು...ಇನ್ನೊಂದ್ವರ್ಷ ಆನು ಕಾಯ್ತಿ...ಆಮೇಲೆ ನಾನು ನಮ್ಮನೆ ಮಾಣಿಗೆ ಇನ್ನೊಂದು ಮದ್ವೆ ಮಾಡವ್ನೇಯಾ...ಅಂವೇನಾದ್ರೂ ಕೊಂಯ್ ಪಂಯ್ ಅಂದ್ರೆ ಇಲ್ಲೇ... ನಿಮ್ಮನೆ ಮುಂದೇನೇ ವಿಷ ತಗ ಸಾಯ್ತಿ... ಆ ಪಾಪಕ್ಕೆ ನಿಂಗವೇ ಹೊಣೆ ಆಗ್ತ್ರಿ. ಈಗಿಂದನೇ ನಿಮ್ಮ ಮಗ್ಳಿಗೂ ಹೇಳಿಡಿ ಮತ್ತೆ..."ಎಂದವಳೇ ಒಳಗೂ ಬರದೇ ಬಿರ ಬಿರನೆ ಬಿರು ಬಿಸಿಲಿನಲ್ಲೇ ಹೋಗಿದ್ದಳು. ಸೀತೆಯ ಅತ್ತೆ ತುಸು ಒರಟೆಂದು ತಿಳಿದಿದ್ದರೂ ಇಷ್ಟೊಂದೆಂದು ಭಟ್ಟರಿಗೂ ತಿಳಿದಿರಲಿಲ್ಲ. ಹುಟ್ಟಿಕೊಂಡ ದೊಡ್ಡ ಸಮಸ್ಯೆಯ ಪರಿಹಾರಕ್ಕಾಗಿ ಪೂರ್ತಿ ನಂಬದ ದೇವರನ್ನೇ ಮೊರೆ ಹೋಗಿದ್ದರು. ಸೀತೆಯ ಗೋಳಿಗೋ ಇಲ್ಲಾ ಭಟ್ಟರ ಪ್ರಾರ್ಥನೆಗೋ...ಒಲಿದ ದೇವರು ವರುಷದೊಳಗೇ ಸೀತೆಯ ಒಡಲೊಳಗೆ ಜೀವವನ್ನು ತುಂಬಿದ. ಅದೇ ಸಮಯದಲ್ಲೇ ಭಟ್ಟರ ಮಗನಾದ ನಾರಾಯಣನ ಹೆಂಡತಿಗೂ ಎರಡನೆಯ ಮಗುವಾಗುವ ಶುಭ ಸೂಚನೆ ಕಾಣಲು, ಸುಬ್ಬಯ್ಯನವರ ಸಂತೋಷಕ್ಕೆ ಪಾರವೇ ಇರದಂತಾಯಿತು. ಚೊಚ್ಚಿಲ ಹೆರಿಗೆಗಾಗಿ ಮಗಳನ್ನು ಮನೆಗೆ ತಂದ ಭಟ್ಟರು, ಸೊಸೆಯನ್ನು ತವರಿಗೆ ಕಳಿಸಲಿಲ್ಲ. ಸೊಸೆಯ ತವರಲ್ಲಿ ನೋಡುವವರೇ ಇಲ್ಲದುದ್ದರಿಂದ ಅವರೇ ಎಲ್ಲಾ ಏರ್ಪಾಡನ್ನೂ ಮಾಡಿದ್ದರು. ನುರಿತ ಸೊಲಗಿತ್ತಿ, ಮನೆಯ ಒಳ ಹೊರಗಿನ ಕೆಲಸಕ್ಕೆ ಆಳು-ಕಾಳು ಎಲ್ಲವುದನ್ನೂ ಓಡಾಡಿ ಹೊಂದಿಸಿದ್ದರು. ಪತ್ನಿಯ ವಿಯೋಗ ಮೊದಲೇ ಆಗಿದ್ದರೂ ತಮ್ಮಂದಿರ ಹೆಂಡಿರ ಅನುಭವ ಶಿಶುಗಳ ಲಾಲನೆಗೆ ಬಹು ಸಹಾಯವಾಗಿತ್ತು. ಹೆರಿಗೆ ಸಮಯ ಸನಿಹವಾಗಲು...ಒಂದೇ ದಿನ, ಒಂದೇ ಕಡೆ, ಒಂದೇ ಸಮಯದಲ್ಲೇ ಸೀತೆ ಗಂಡು ಮಗುವಿಗೆ ಜನ್ಮವಿತ್ತರೆ, ನಾರಾಯಣನ ಹೆಂಡತಿ ಶಾರದೆ ಹೆಣ್ಣುಮಗುವಿಗೆ ಜನ್ಮವಿತ್ತಳು.

ಮನುಷ್ಯ ಸಮಯದ ಕೈಗೊಂಬೆ. ಒಂದು ಸಮಸ್ಯೆ ಪರಿಹಾರವಾಯಿತೆಂದಲ್ಲಿ, ಇನ್ನೊಂದು ಎದುರಾಗಿರುತ್ತದೆ. ಮಗಳು ಸೀತೆಯ ಬಾಳು ಸುಸ್ಥಿತಿಗೆ ಬಂತೆನ್ನುವಾಗಲೇ ಬೆಳೆದ ಮೊಮ್ಮಕ್ಕಳ ಮೂಲಕ ದೊಡ್ಡ ಸಮಸ್ಯೆಯೊಂದು ವೃದ್ಧ ಭಟ್ಟರೆದುರು ಬಂದು ನಿಂತಿತ್ತು. ಒಂದೇ ಕಡೆ ಹುಟ್ಟಿ, ಬೇರೆ ಬೇರೆ ಕಡೆ ಬೆಳೆದ ಎರಡು ಕುಡಿಗಳು ಕಾಲಕ್ರಮೇಣ ಮನಸನ್ನೂ ಒಂದಾಗಿಸಿದ್ದೇ ಈಗ ಭಟ್ಟರ ಪಾಲಿಗೆ ದೊಡ್ಡ ಪ್ರಮಾದವಾಗಿತ್ತು. ಸೀತೆಯ ಮಗ ವಿನಾಯಕ, ತನ್ನದೇ ಓರಗೆಯವಳಾದ, ಸೋದರ ಮಾವನ ಮಗಳೂ ಆದ ವೀಣಾಳನ್ನು ಮೆಚ್ಚಿ, ಮದುವೆಗೆ ತಯಾರಾಗಿದ್ದ. ಇದನ್ನು ತಿಳಿದದ್ದೇ ಭಟ್ಟರು ಕೆಂಡಾಮಂಡಲರಾಗಿದ್ದರು. "ಈ ಮನೆಹಾಳ ಬುದ್ಧಿ ಅವಂಗೆ ಎಲ್ಲಿಂದ ಬಂತು? ಸೀತೆಗಾದ್ರೂ ಬಿದ್ಧಿ ಇರಡ್ದ? ನಾರಾಯಣ....ನಿನ್ನ ಹೆಂಡ್ತಿಗೆ ಹೇಳು ಸ್ವಲ್ಪ.....ಮಗ್ಳ ಹದ್ದುಬಸ್ತಿನಲ್ಲಿಡದು ಗೊತ್ತಿಲ್ಯ ಅದ್ಕೆ? ಇಂಥ ಅಪಾರ್ಥ ಅಪ್ಪಲೆ ನಾನು ಪ್ರಾಣ ಇಪ್ಪುವರೆಗೂ ಬಿಡ್ತ್ನಿಲ್ಲೆ....ಕೊಲೆಯಾದ್ರೂ ತೊಂದ್ರೆ ಇಲ್ಲೆ ಯನ್ನ ಕೈಲಿ..."ಎಂದೆಲ್ಲಾ ಕೂಗಾಡಿದ್ದ ಅಪ್ಪ ಹೊಸಬನಾಗಿ ಕಂಡಿದ್ದ ಸೀತೆಗೆ. ಹಲವಾರು ವರ್ಷಗಳ ಹಿಂದೆಯೇ ತನ್ನ ಮೆಚ್ಚಿ ಮುಂದೆ ಬಂದ ಶ್ರೀನಿವಾಸನಿಗೆ ತನ್ನ ಕೊಟ್ಟಿದ್ದ ಅಪ್ಪ ಇಂದು ಎಲ್ಲಾ ತಿಳಿದು, ಬಲ್ಲ ತನ್ನ ಮಗನಿಗೆ, ಅವರ ಮೆಚ್ಚಿನ ಮೊಮ್ಮಗನಿಗೆ ತನ್ನ ಮೊಮ್ಮಗಳನ್ನು ಕೊಡಲು ತೀವ್ರ ವಿರೋಧಿಸಿದ್ದು ದೊಡ್ಡ ಆಘಾತವಾಗಿತ್ತು.  ‘ಛೇ...ಎಲ್ಲಾ ಗೊತ್ತಿದ್ದೂ ಈ ಅಪ್ಪಯ್ಯ ಯಾಕೆ ಹೀಗಾಡ್ತಿದ್ದಾನೋ.... ವೀಣಾ, ವಿನಾಯಕ ಒಂದೇ ಓರಗೆಯವ್ರಾಗಿದ್ದೇ ದೊಡ್ಡಾ ಅಪವಾದವೇ? ಪ್ರೀತಿಯ ಮೊಮ್ಮಗನಿಗೇ ಮನೆಯ ಮೊಮ್ಮಗಳನ್ನು ಕೊಡಲೇಕೆ ಅಪ್ಪಯ್ಯ ಹಿಂದೇಟು ಹಾಕ್ತಿದ್ದಾರೋ? ಅವ್ರಿಗೆ ಅವ್ರ ಪ್ರತಿಷ್ಠೆಯೇ ದೊಡ್ಡದಾಯ್ತೇ? ವಿನುವಿನ ನಂತರ ಬೇರೆ ಮಕ್ಕಳ ಭಾಗ್ಯವೂ ನನಗಿಲ್ಲದಾಯ್ತು.... ಈಗ ಇದ್ದೊಬ್ಬ ಮಗನ ಇಚ್ಛೆಯನ್ನಾದರೂ ಪುರೈಸ ಹೊರಟರೆ... ಅಲ್ಲಾ ಎಲ್ಲಾರೂ ಒಪ್ಪಿದ್ರೂ.. ಸ್ವತಃ ನನ್ನ ಅತ್ತೆಯೇ ಒಪ್ಪಿರುವಾಗ... ಯಾಕಾದ್ರೂ ಅಪ್ಪ ತಡೆ ಹಾಕ್ತಿದ್ದಾನೋ..." ಎಂದೆಲ್ಲಾ ಯೋಚಿಸಿ ಹಣ್ಣಾಗಿದ್ದಳು ಸೀತೆ. ತನ್ನ ಮನದ ಇಂಗಿತವನ್ನೆಲ್ಲಾ ಅಪ್ಪನ ಮುಂದೆ ನಿವೇದಿಸಿಕೊಂಡು, ಬೇಡಿಕೊಂಡರೂ ಭಟ್ಟರು ಹಠ ಬಿಟ್ಟಿರಲಿಲ್ಲ. "ನೀ ಎಂತಾ ಗೋಳಾಡಿದ್ರೂ ನನ್ನ ಪ್ರಾಣ ಇಪ್ಪಲ್ಲಿವರೆಗೆ ನಾನು ಒಪ್ಪದಿಲ್ಲೆ. ವೀಣಾನ್ನ ಈಗಾಗಲೇ ನಾನು ನನ್ನ ಗೆಳೆಯ ಶ್ರೀಹರಿ ಮಗಂಗೆ ಮದ್ವೆ ಮಾಡಿ ಕೊಡ್ತಿ ಹೇಳಾಜು....ಆಣೆ ಮಾಡಿಕಿದ್ದಿ ಆ ದೇವ್ರ ಮುಂದೆ....ಹಾಂಗಾಗಿ ದುಸರಾ ಮಾತಿಲ್ಲೆ ಇನ್ನು... ಹೋಗ್ತಾ ಇರು.."ಎಂದು ತೀರಾ ಕಟುವಾಗಿ ನುಡಿದಾಗ ಅಲ್ಲೇ ಇದ್ದ ವಿನಾಯಕ ದುರ್ದಾನ ಪಡೆದವನಂತೇ ತಾಯಿಯನ್ನು ಕರೆದೊಯ್ದಿದ್ದು. ಹೋಗುವ ಮುನ್ನ "ಅಜ್ಜಯ್ಯ.. ನಾನೂ ನಿಂದೇ ಮೊಮ್ಮಗ.. ಅದು ಹೇಂಗೆ ನೀ ಈ ಮದ್ವೆ ತಡೀತೆ ನಾನೂ ನೋಡ್ತಿ.... ಮುಂದಿನ ತಿಂಗ್ಳ ಊರಿಗೆ ಬಂದವ ದೇವಸ್ಥಾನದಲ್ಲಿ ವೀಣಂಗೆ ತಾಳಿಕಟ್ಟೀ ಕರ್ಕಂಡೇ ಹೋಗ್ತಿ.. ನೋಡ್ತಿರು.. ನಿನ್ನ ಹಠ, ಒಣ ಪ್ರತಿಷ್ಠೆ ಎಲ್ಲಾ ನಂಗ್ಳ ಹತ್ರ ನಡೀತಿಲ್ಲೆ..."ಎಂದು ಸವಾಲು ಹಾಕಿಯೇ ಹೋಗಿದ್ದ. ಒಳಮನೆಯೊಳಗೆ ಎಲ್ಲಾ ಕೇಳಿಸಿಕೊಳ್ಳುತ್ತಿದ್ದ ವೀಣಾಳ ಮೊಗದಲ್ಲಿ ನೆಮ್ಮದಿ ಮೂಡಿತ್ತು. ಅವನ ದೃಢ ನಿರ್ಧಾರದಿಂದ ನಿಟ್ಟುಸಿರು ಬಿಟ್ಟಿದ್ದಳು.

****

ಹಾಗೆ ಹೋದ ಸೀತೆ ಬಂದಿದ್ದು ಇಂದೇ...ಅದೂ ಹಾಸಿಗೆಯಲ್ಲಿ ಆಗೋ ಇಗೋ ಅನ್ನುವಂತಿದ್ದ ಅಪ್ಪನಿಗಾಗಿ ಮಾತ್ರವಲ್ಲ... ಮರುದಿವಸವಿದ್ದ ತಾಯಿಯ ಶ್ರಾದ್ಧಕ್ಕಾಗಿಯೂ ಕೂಡ. ನಡೆದ ರಾದ್ಧಾಂತವೆಲ್ಲಾ ಭಟ್ಟರ ಮನೆಯವರಿಗೆ ತಿಳಿದಿದ್ದರಿಂದ...ಸೀತೆಯ ಮುಖ ಕಂಡೊಡನೇ ಅದೇ ಮಾತು ಹೊರಡುತಿತ್ತು. ಯಾಂತ್ರಿಕವಾಗಿ ಕೆಲಸಗಳಲ್ಲಿ ಭಾಗಿಯಾಗುತ್ತಿದ್ದ ಸೀತೆಯ ಮನಸೆಲ್ಲಾ ಅಪ್ಪನ ಅನಾರೋಗ್ಯದೆಡೆಗೊಮ್ಮೆ ಎಳೆದರೆ, ಮಗದೊಮ್ಮೆ ಮಗನ ಮನದಾಸೆಯೆಡೆಗೆ...ನಡುವೆ ತನ್ನ ಹಿಂದೆ ಮುಂದೆ ಸುಳಿದಾಡುತ್ತಿದ್ದ ಸೋದರ ಸೊಸೆ ವೀಣಾಳ ಪರದಾಟವನ್ನು ನೋಡುವಾಗ ಕಿರುನಗೆಯೂ ಮೂಡುವುದು. ಶ್ರಾದ್ಧದ ಊಟ ಮುಗಿಯುತ್ತಿದ್ದಂತೆಯೇ ಭಟ್ಟರು ಮಗ ನಾರಾಯಣನನ್ನು ತಮ್ಮ ಕೋಣೆಗೆ ಕರೆಸಿಕೊಂಡು ತುರ್ತಾಗಿ ಮೊಮ್ಮಗ ವಿನಾಯಕನನ್ನು ಕರೆಸುವಂತೆ ಹೇಳಲು ಎಲ್ಲರೂ ಗಾಬರಿಬಿದ್ದರು. ನಾಲ್ಕು ತಾಸಿನ ದೂರದಲ್ಲಿದ್ದ ವಿನಾಯಕ ಟ್ಯಾಕ್ಸಿ ಹಿಡಿದು ಊರು ಸೇರುವಾಗ ರಾತ್ರಿ ಒಂಬತ್ತು ಗಂಟೆ. ಆತ ಬರುವವರೆಗೂ ಗಳಿಗೆಗೊಮ್ಮೆ "ವಿನು ಬಂದ್ನನ್ರೇ? ಬಂದ್ಕೂಡ್ಲೇ ಯನ್ನ ಹತ್ರ ಕಳ್ಸಿ.... ನಾ ಹೀಂಗೇ ಸತ್ರೆ ದೇವ್ರು ಮೆಚ್ಚ.... ಸಮಯ ಹತ್ರ ಬತ್ತಿದ್ದು... ತಮ್ಮಾ ವಿನಾಯ್ಕ ಬೇಗ ಬಾರೋ...."ಎಂದು ಹಲುಬುತ್ತಲೇ ಇದ್ದ ಅಜ್ಜನ ಬಳಿ ಮೊಮ್ಮಗನನ್ನು ಬಂದ ಕೂಡಲೇ ಕಳುಹಿಸಿದ್ದರು ಎಲ್ಲಾ. "ವಿನಾಯ್ಕನ್ನ ಒಬ್ನೇ ಕಳ್ಸಿ.. ನಿಂಗವು ಯಾರೂ ಬಪ್ಪದಿಲ್ಲೆ.. ನಂಗೆ ಅವ್ನ ಹತ್ರನೇ ಮಾತಾಡವು..."ಎಂದು ಕ್ಷೀಣವಾದ ದನಿಯಲ್ಲಿ ಒತ್ತಿ ಹೇಳಿದ್ದ ಅವರ ಮಾತಿಗೆ ಒಪ್ಪಿದ ನಾರಾಯಣ, ಅವನೊಬ್ಬನನ್ನೇ ಬಿಟ್ಟು ಬಾಗಿಲೆರೆಸಿಕೊಂಡು ಹೊರಹೋದ. ಆದರೆ ಒಳ ಹೋಗುತ್ತಿದ್ದ ಮಗನ ಬೆನ್ನನ್ನು ನೋಡುತ್ತಿದ್ದ ಸೀತೆಗೆ ವಿಚಿತ್ರ ಸಂಕಟವಾದರೆ, ವೀಣಾಳ ಮನದ ತುಂಬೆಲ್ಲಾ ಆತಂಕ ತುಂಬಿತು. "ಈ ಅಜ್ಜ ಎಲ್ಲಾದರೂ ಕೊನೆಗಳಿಗೆಯಲ್ಲಿ ತನ್ನ ಮದುವೆಯಾಗದಿರಲು ವಿನುವಿನ ಬಳಿ ಮಾತು ತೆಗೆದುಕೊಂಡರೆ ಏನು ಗತಿಯಪ್ಪಾ?" ಎಂದು ಅವಳ ಬುದ್ಧಿ ಯೋಚಿಸುತ್ತಿದ್ದರೆ, ಹೃದಯ ತನ್ನ ವಿನು ಇಂತಹ ಆಣೆ, ಭಾಷೆಗೆ ಸೊಪ್ಪು ಹಾಕುವವನಲ್ಲ ಎನ್ನುವ ಅಭಯ ನೀಡುತಿತ್ತು. ಎಲ್ಲೋ ಒಂದು ಕಡೆ..‘ಛೇ... ಇಷ್ಟು ವರುಷ ಪ್ರೀತಿ ತೋರಿದ ಅಜ್ಜಯ್ಯನ ಕೊನೆಗಳಿಗೆಯಲ್ಲೂ ತಾನು ಸ್ವಾರ್ಥಿಯಂತೇ ಯೋಚಿಸುತ್ತಿದ್ದೆನೇಯೇ?’ ಎಂಬ ಪಾಪಪ್ರಜ್ಞೆಯೂ ತಿವಿಯುತಿತ್ತು. ತಮ್ಮಂದಿರ, ನಾದಿನಿಯರ, ತಂಗಿ ಕಮಲಿಯ, ಎಲ್ಲಕ್ಕಿಂತ ಹೆಚ್ಚಾಗಿ ಮಗಳು ಸೀತೆಯ - ಎಲ್ಲರ ದೃಷ್ಟಿಯೂ ಕೋಣೆಯೆಡೆಗೇ ನೆಟ್ಟಿತ್ತು. 

ತನ್ನ ಬಳಿ ಬಂದ ಮೊಮ್ಮಗನ ಕೈ ಹಿಡಿದ ಭಟ್ಟರು, ತನ್ನ ಕಿವಿಯ ಬಳಿ ಎಳೆದರು ಪ್ರಯಾಸದಿಂದ. ‘ಅಜ್ಜಯ್ಯ ಬಹುಶಃ ಪಶ್ಚಾತ್ತಾಪ ಪಡುತ್ತಿರಬೇಕು....ಮದುವೆಗೆ ಅಸ್ತು ಎನ್ನಲು ಕರೆದಿರಬೇಕು..... ಇಲ್ಲಾ ತನ್ನ ಕೊನೆಯಾಸೆ, ಮಾತು ತಪ್ಪಡ..... ತಾನು ಬೇರೆ ಕಡೆ ಮಾತು ಕೊಟ್ಟಾಜು... ಮಣ್ಣು ಮಸಿ ಎಂದೆಲ್ಲಾ ಕೊರೆದು ತನ್ನ ಮಳ್ಳು ಮಾಡಲೂ ಕರೆಸಿರಬಹುದು. ಹಾಗೇನಾದ್ರೂ ಆಗಿದ್ದರೆ ಅವರ ಸಮಾಧಾನಕ್ಕೆ ಅಸ್ತು ಎಂದು.... ಕೆಲ ತಿಂಗಳು ಬಿಟ್ಟು ಮದುವೆಯಾಗುವುದು ವೀಣಾನ್ನ...’ ಎಂದೆಲ್ಲಾ ಯೋಚಿಸುತ್ತಾ ಬಂದಿದ್ದ ವಿನಾಯಕನಿಗೆ, ಅಜ್ಜ ತನ್ನ ಕಿವಿಯಲ್ಲುಸುರಿದ ಮಾತುಗಳನ್ನು ಕೇಳಿ ತಲೆಕೆಟ್ಟಂತಾಯಿತು. ಗೊರಗುಡುವ ದನಿಯಲ್ಲೂ ನುಡಿದ ನಾಲ್ಕೇ ನಾಲ್ಕು ಮಾತುಗಳು ಸ್ವತಃ ಸುಬ್ಬಯ್ಯ ಭಟ್ಟರಿಗೇ ಕೇಳಿಸಿತೋ ಇಲ್ಲವೋ....ಅವುಗಳನ್ನು ಕೇಳಿದ ವಿನಾಯಕನ ಮುಖದ ಬಣ್ಣ ಆ ಕತ್ತಲೆಯ ಕೋಣೆಯ ಬಣ್ಣಕ್ಕೆ ಸ್ಪರ್ಧಿಯಾಗಿತ್ತು.  "ಅಜ್ಜಯ್ಯ....ನೀನೇ ಪೂರ್ತಿ ಸತ್ಯ ಹೇಳು... ಇಷ್ಟೇ ಹೇಳಿರೆ ನಂಗೆ ಎಂತೂ ಅರ್ಥ ಆಗದಿಲ್ಲೆ... ನಾ ಈಗೆಲ್ಲಿ ಆ ನೀಲವ್ವನ ಹುಡ್ಕಿ ತೆಗೀಲಿ? ಸಿಕ್ರೂ ಎಂತಾ ಹೇಳಿ ಕೇಳ್ಲಿ? ದಯಮಾಡಿ ಅಜ್ಜಯ್ಯ.... ಎಲ್ಲಾ ನೀನೇ ಹೇಳೋ... ಒಂದ್ಸಲ ಎದ್ಕೋ..."ಎಂದು ಅಜ್ಜನ ಕೈ ಎಳೆದೆಬ್ಬಿಸುತ್ತಿದ್ದ ಮೊಮ್ಮಗನ ಮಾತುಗಳು ಕೇಳದಷ್ಟು ದೂರ ಸಾಗಿಯಾಗಿತ್ತು ಅವರ ಪಯಣ. ಅದನ್ನರಿಯಲೇ ಆತನಿಗೆ ಐದು ನಿಮಿಷ ಬೇಕಾಯಿತು. ಸುಮಾರು ಹತ್ತು ನಿಮಿಷದ ನಂತರ ಹೊರ ಬಂದ ಅವನೆಡೆಗೇ ಎಲ್ಲರೂ ನೋಡಲು, "ಎಲ್ಲದೂ ಮುಗತ್ತೂ... ಎಲ್ಲದೂ ಮುಗ್ದೇ ಹೋತು..."ಎನ್ನುತ್ತಾ ಅಲ್ಲೇ ಕುಸಿದು ಗೋಡೆಗೆ ಆತು ಕುಳಿತ. ಮನೆಯೊಳಗೆಲ್ಲಾ ರೋಧನ ತುಸುವೇ ಗತಿಯನ್ನು ಪಡೆಯತೊಡಗಿತು.

ಎಲ್ಲಾ ವಿಧಿಗಳು ಮುಗಿಯುವವರೆಗೂ ಮೌನವಾಗಿದ್ದು, ಯಾವುದೋ ಗುಂಗಿನಲ್ಲಿದ್ದಂತೆ ಕಾಣುತ್ತಿದ್ದ ವಿನಾಯಕನ ಪರಿ ಸೀತೆಗೆ ಹಾಗೂ ವೀಣಾಳಿಗೆ ಅರ್ಥವೇ ಆಗಿರಲಿಲ್ಲ. "ಸುಬ್ಬಯ್ಯ ಒಳಗೆ ಏನು ಹೇಳಿರಬಹುದೆಂಬ ಕುತೂಹಲದ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದ್ದರೂ ಅತೀ ಹೆಚ್ಚು ಹಿಂಸಿಸುತಿದ್ದುದು ವೀಣಾಳನ್ನು. ‘ಅಜ್ಜಯ್ಯ ನಮ್ಮ ಮದುವೆಗೆ ಸಮ್ಮತಿ ಕೊಟ್ಟಿದಿದ್ರೆ ವಿನು ತನ್ನ ಬಳಿ ಈಗಾಗಲೇ ಹೇಳುತ್ತಿದ್ದ.. ಎಲ್ಲರಿಗೂ ತಿಳಿಸಿಯೂ ಆಗುತಿತ್ತು..... ಒಂದೊಮ್ಮೆ ಮದ್ವೆ ಆಗದಿರುವಂತೇ ಆಣೆ-ಭಾಷೆ ತೊಗೊಂಡಿದ್ದ್ರೂ ಹೇಳಬೇಕಾಗಿತ್ತಲ್ಲಾ....ಯಾಕೆ ಇಷ್ಟೊಂದು ಮೌನವಾಗಿದ್ದನೋ ಈ ವಿನು...’ ಎನ್ನುವ ಗೊಂದಲ, ಅಸಹನೆ ಅವಳನ್ನು ಕಾಡುತಿದ್ದರೂ ಸೂಕ್ತ ಸಮಯಾವಕಾಶಕ್ಕಾಗಿ ಕಾಯುತ್ತಿದ್ದಳು. ಆ ಸಮಯ ಅವಳಿಗೆ ದೊರಕಿದ್ದು ನಾಲ್ಕನೆಯ ದಿನ... ಅದೂ ಅತ್ತೆ ಸೀತೆಯ ಜೊತೆ ಹಿತ್ತಲಿನ ತೋಟಕ್ಕೆ ಬಾಳೆ ಎಲೆಗಾಗಿ ಹೋದಾಗ ಅಲ್ಲೇ ಕೆರೆಯ ಬದುವಿನಲ್ಲಿ ಕುಳಿತಿದ್ದ ಭಾವನನ್ನು ಕಂಡು ಅವಳಿಗೆ ಸುಮ್ಮನಿರಲೇ ಆಗಲಿಲ್ಲ. "ಅತ್ತೆ ಅಲ್ನೋಡು... ಒಬ್ನೇ ಹೇಂಗೆ ಕೂತಿದ್ದ... ನಾಲ್ಕು ದಿನದಿಂದ ಯಾರ್ಜೊತೆಗೂ ಮಾತಿಲ್ಲೆ ಕತೆಯಿಲ್ಲೆ... ಊಟ ಅಂತೂ ಮಾಡಿದ್ರೆ ಮಾಡ್ದ... ಇಲ್ಲೆ ಅಂದ್ರೆ ಇಲ್ಲೆ... ನೀನೇ ಒಂದ್ಸಲ ಮಾತಾಡ್ಸು.."ಎಂದು ಕೋರಲು ಅದಕ್ಕಾಗಿಯೆ ತಾನೂ ಕಾಯುತ್ತಿದ್ದ ಸೀತೆ ಮಗನ ಬಳಿ ಬಂದಳು.

"ತಮ್ಮಾ... ಇದೆಂಥ ವೇಶ್ವೋ? ಹೋಪವು ಹೋಗ್ತೋ... ಎಂತ ಮಾಡಲೆ ಬತ್ತು. ಅಪ್ಪಯ್ಯ ಹೋದ ದುಃಖ ಎಲ್ಲರಿಗೂ ಇದ್ದು. ನಾನೂ ನುಂಗಿ ಉಣ್ತಾ ಇಲ್ಯಾ? ನೀನು ನೋಡಿದ್ರೆ ಎಲ್ಲಾ ಬಿಟ್ಟು ಒಂಟಿ ಆಗ್ತಾ ಇದ್ದೆ... ಅಜ್ಜಯ್ಯ ಹೋದ ಬೇಜಾರೊಂದೇಯೋ ಇಲ್ಲಾ ಮತ್ತೇನಾದ್ರೂವೋ.... ಹೌದು ಅಪ್ಪಯ್ಯ ಆವತ್ತು ಎಂತ ಅಂದ ನಿನ್ನ ಹತ್ರ?" ಎಂದು ಕೇಳಲು, ಅಮ್ಮನಿಗೆ ಉತ್ತರಿಸುವ ಬದಲು ಪಕ್ಕದಲ್ಲೇ ಇದ್ದ ದೊಡ್ಡ ಕಲ್ಲೊಂದನ್ನು ಬೀಸಿ ಕೆರೆಗೆಸೆದ ವಿನಾಯಕ, ಗುಳುಂ ಎಂದು ಸದ್ದು ಮಾಡುತ್ತಾ ಮುಳುಗಿದ ಅದು ಮೇಲ್ಗಡೆ ತರಂಗಗಳ ಅಲೆಯನ್ನು ಎಬ್ಬಿಸಿದ್ದನ್ನೇ ತದೇಕವಾಗಿ ನೋಡತೊಡಗಿದ.

"ಅಮ್ಮಾ... ನನ್ನ ಎಂತೂ ಕೇಳಡ.... ನೀ ಎಷ್ಟು ಕೇಳಿದ್ರೂ ಅಷ್ಟೇಯಾ... ಅಂಥದ್ದೇನೂ ಹೇಳಿದ್ನಿಲ್ಲೆ... ಈಗ ಸದ್ಯ ನನ್ನ್ ಪಾಡಿಗೆ ನನ್ನ್ ಬಿಟ್ವುಡು ಪ್ಲೀಸ್..."ಎಂದು ತುಸು ಗಟ್ಟಿಯಾಗಿ ಹೇಳಿದವನೇ ಕೆರೆಯ ಇನ್ನೊಂದು ತುದಿಗೆ ನಡೆದ. ಮಗನ ಸ್ವಭಾವವನ್ನು ಚೆನ್ನಾಗಿ ಅರಿತಿದ್ದ ಸೀತೆ ಕಣ್ಸನ್ನೆಯಲ್ಲೇ ವೀಣಾಳಿಗೆ ಮಾತನಾಡಿಸಲು ತಿಳಿಸಿ ಅಲ್ಲಿಂದ ಮೆಲ್ಲನೆ ಮನೆಯಕಡೆ ನಡೆದಳು. ಹುಟ್ಟಿದಂದಿನಿಂದ ಆಡಿ ಬೆಳೆದು, ನೋವು ನಲಿವು ಹಂಚಿಕೊಂಡು ಈಗ ತನ್ನವನಾಗಲು ಹೊರಟ ಭಾವನ ಈ ಪರಿ ತುಸು ಹೊಸತೆನಿಸಿತು ವೀಣಾಳಿಗೂ. ಆದರೂ ಸಮಾಧಾನ ತಂದುಕೊಂಡು ಮೆಲ್ಲನೆ ಅವನ ಬಳಿ ಬಂದವಳೇ ಮೃದುವಾಗಿ ಅವನ ಕೈ ಅಮುಕಿ ಕುಳಿತಳು. ಆದರೆ ಎಂದಿನಂತೇ ಸ್ಪಂದಿಸದ ವಿನಾಯಕ ಆಕೆಯ ಕೈಯನ್ನು ಬಿಡಿಸಿಕೊಂಡು ತುಸು ದೂರ ಸರಿದವನೇ "ವೀಣಾ ಪ್ಲೀಸ್ ನೀನಾದ್ರೂ ಸುಮ್ನಿರು.... ಅಮ್ಮಂಗೆ ಹೇಳಿದ್ದು ನಿಂಗೂ ಅನ್ವಯಿಸ್ತು ಅಲ್ದಾ? ದಯಮಾಡಿ ಯಾರೂ ನನ್ನ ಎಂತೂ ಕೇಳಡಿ... ಈಗ ನಾನು ಎಂತಾ ಕೇಳೂದಾಗ್ಲೀ.. ಹೇಳೂದಾಗ್ಲೀ ಮಾಡೋ ಪರಿಸ್ಥಿತಿಯಲ್ಲೇ ಇಲ್ಲೆ... ನನ್ನ ಒಬ್ನೇ ಬಿಡಿ..." ಎಂದು ಒರಟಾಗಿ ನುಡಿಯಲು ಅವಳ ಗಲ್ಲ ತೋಯತೊಡಗಿತು. ಅವಮಾನವಾದಂತಾಗಿ, ಧಿಗ್ಗನೆದ್ದು ಹೊರಟವಳನ್ನು "ಒಂದ್ನಿಮ್ಷ ವೀಣಾ..." ಎಂದ ಆತನ ಕರೆಗೆ ಥಟ್ಟನೆ ತಿರುಗಿದವಳ ಕಣ್ಗಳಲ್ಲಿ ಏನೋ ನಿರೀಕ್ಷೆ. "ವೀಣಾ ಸ್ಸಾರಿ....ಬೇಜಾರಾಗಿದ್ರೆ ... ಆದ್ರೆ ಈಗ ನಾನು ನನ್ನ ನಿಯಂತ್ರಣದಲ್ಲೇ ಇಲ್ಲೆ... ಹ್ಮ್ಂ.... ನೋಡು.. ನಾನು ಬೆಳ್ಗೆ ಬೇಗ ಎದ್ದು ಹೊರ್ಡ್ತಾ ಇದ್ದಿ... ಎಲ್ಲಿಗೋ ತುರ್ತಾಗಿ ಹೋಕಗಾಜು.. ಬೇಡ.. ನೀ ಈಗ್ಲೇ ಎಂತೂ ಕೇಳದೇ ಬೇಡ... ನಾನು ಬಪ್ಪಲೆ ಎರಡ್ಮೂರು ದಿನ ಆಗ್ತು... ಅಮ್ಮಂಗೇ ಹೇಳಿರೆ ಹತ್ತೆಂಟು ಪ್ರಶ್ನೆ ಕೇಳ್ತು.. ಅದ್ಕೇ ನಿಂಗೇ ಹೇಳ್ತಾ ಇದ್ದಿ.. ನೀನೇ ಹೇಳ್ವುಡು ಎಲ್ಲವ್ಕೂವಾ.....ಅಮ್ಮನ್ನ ಚೆನ್ನಾಗಿ ನೋಡ್ಕ....ನಾ ಹೋಗಿ...."ಎಂದವನಿಗೆ ಮುಂದೇನೂ ಹೇಳದಂತಾಯಿತು...ಕಣ್ಣೀರು ಉಕ್ಕಿಬರಲು, ಅವಳಿಗೆ ಬೆನ್ನು ಹಾಕಿ ಗುಡ್ಡದೆಡೆ ನಡೆದು ಬಿಟ್ಟ. ಯಾರೋ ತನ್ನ ಅಟ್ಟಿಸಿಕೊಂಡು ಬಂದಂತೇ ಬಿರ ಬಿರನೆ ಹತ್ತಿದ್ದ ಅವನನ್ನೇ ನೋಡುತ್ತಿದ್ದಳು ವೀಣಾ. 

ಬೆಳ್ಳಂ ಬೆಳಗ್ಗೆ ನಾಲ್ಕಕ್ಕೇ ಮನೆಯಿಂದ ಹೊರ ಬಿದ್ದ ವಿನಾಯಕ ಕುಮಟೆಯ ಸಾಲಕೇರಿಯ ಬಸ್ಸು ಹತ್ತುವಾಗ ಸೂರ್ಯ ಎಳೆ ಕಿರಣಗಳನ್ನು ಬೀರುತ್ತಿದ್ದ. ಚುಮು ಚುಮು ಚಳಿಗೆ ಬೆಚ್ಚಗೆ ಹೊದ್ದು ಮಲಗಿದ್ದ ಮನೆಯವರಿಗೆಲ್ಲಾ ಅವನ ನಿರ್ಗಮನ ತಿಳಿಯುವ ಸಾಧ್ಯತೆಯೇ ಇರಲಿಲ್ಲ. ರಾತ್ರಿಯಿಡೀ ಮಗನ ವರ್ತನೆಯನ್ನೇ ಚಿಂತಿಸುತ್ತಿದ್ದ ಸೀತೆಯೂ ಗಾಢ ನಿದ್ರೆಗೆ ಜಾರಿದ್ದರೆ, ವೀಣಾ ಮಾತ್ರ ನಿದ್ದೆಯನ್ನೇ ಮಾಡದೇ ಬಿರುಗಣ್ಣು ಬಿಟ್ಟುಕೊಂಡೇ ಅತ್ತೆಯ ಬಳಿ ಬಿದ್ದುಕೊಂಡಿದ್ದಳು. ಆ ನಿಶ್ಯಃಬ್ದತೆಯಲ್ಲಿ ವಿನುವಿನ ಹೊರಡುವಿಕೆಯ ಸಪ್ಪಳ ಸರಿಯಾಗಿ ಕೇಳುತಿತ್ತು. ಚಪ್ಪಲು ಮೆಟ್ಟಿ, ದಣಪೆ ಸರಿಸಿ ಮಣ್ಣಿನ ರಸ್ತೆಯಲ್ಲಿ ನಡೆದು ದೂರವಾಗುತ್ತಿದ್ದ ತನ್ನವನ ಆಕೃತಿಯನ್ನು ಕಿಟಕಿಯಿಂದ ನೋಡುತ್ತಾ ಅಲ್ಲೇ ಶಿಲೆಯಾದಳು.

****

"ಇಲ್ಲಿ ನೀಲವ್ವ ಅಂತ ಇದ್ದಾರಂತಲ್ರೀ... ಅದೇ ಘಟ್ಟದ ಮೇಲೆ ಕೆಲವರ್ಷದ ಹಿಂದೆ ಬಿಡಾರ ಹೂಡಿದ್ರಲ್ಲ... ಆ ನೀಲವ್ವ.... ಅವ್ರ ಮನೆ ಸ್ವಲ್ಪ ತೋರಿಸ್ತೀರಾ? ಎಂದು ಕೇರಿಯ ಮನೆಯೊಂದರ ಬಳಿ ಬಂದು ಕೇಳಿದವನನ್ನೇ ವಿಚಿತ್ರವಾಗಿ ನೋಡಿದ ಯಜಮಾನ. ಏನು ಎತ್ತ ಎಂದೆಲ್ಲಾ ವಿಚಾರಿಸಿ, ಅವನಿಂದ ಸಂಕ್ಷಿಪ್ತ ಉತ್ತರ ಪಡೆದ ನಂತರ ತನ್ನ ಮಗನ ಜೊತೆ ಮಾಡಿ ಕೇರಿಯ ಆ ತುದಿಯಲ್ಲಿದ್ದ ಹಣ್ಣು ಮುದುಕಿ ನೀಲವ್ವಳ ಮನೆಯ ಬಾಗಿಲಿಗೆ ಬಂದಾಗ ಸೂರ್ಯ ನೆತ್ತಿಯ ನಡುವಿಗೆ ಬಂದಿದ್ದು.

"ನೀಲವ್ವಾ...ಯಾರೋ ಘಟ್ಟದಿಂದ ಬಂದವ್ರೆ ನಿನ್ನ ಕೇಳ್ಕಂಡು ನೋಡು..."ಎಂದು ಕೂಗಿದವ್ನೇ ತನ್ನ ಮನೆಕಡೆ ನಡೆಯಲು ವಿನಾಯಕನ ಎದೆಬಡಿತ ಜೋರಾಯಿತು. ಗೊರಲು ಕೆಮ್ಮಿನ ಸದ್ದು ಒಳಗಿಂದ ಜೋರಾಗಲು ಆಕೆಯ ಆಗಮನದ ಅರಿವಾಯಿತು ವಿನಾಯಕನಿಗೆ. ಹಣ್ಣು ಹಣ್ಣಾದ ತಲೆ, ಸುಕ್ಕುಗಟ್ಟಿ ಪಕ್ಕದ ಚರ್ಮ, ಮಾಸಲು ಬಣ್ಣದ ಸೀರೆಯೊಂದನ್ನು ಸುತ್ತಿಕೊಂಡು, ದೊಣ್ಣೆಯೂರಿ ಮುದುಕಿ ಸಮೀಪವಾಗುತ್ತಿದ್ದಂತೇ ಆವರೆಗೂ ಹೊತ್ತು ತಂದಿದ್ದ ತ್ರಾಣವೆಲ್ಲಾ ಸೋರಿದಂತಾಗಿ, ಅಲ್ಲೇ ಕುಸಿದು ಕುಳಿತ ವಿನಾಯಕ. ಅವನ ಈ ಪರಿಯ ಕಂಡು ಗಾಬರಿ ಬಿದ್ದ ಮುದುಕಿ ತನ್ನ ಸೊಸೆಯನ್ನು ಕೂಗಿ ಗಂಗಾಳದ ತುಂಬಾ ನೀರು ತರಿಸಿ ಕೊಡಲು, ಜೀವರಸವನ್ನೇ ಹನಿ ಹನಿಯಂತೇ ಗಂಟಲಿಗೆ ಸುರಿದುಕೊಂಡ.

"ಎಲ್ಲಾತ್ರ ನಿಮ್ಗೆ? ನಂಗೆ ನಿಮ್ಮ ನೋಡಿದ್ದ್ ನೆಪ್ಪಿಲ್ಲಾ... ದೇಹದ್ ಜೊತೆ ಮನಸೂ ಮುಪ್ಪಾತು ನೋಡಿ... ಘಟದವ್ರಾ ತಾವು? ಅಲ್ಲಿ ಯಾವೂರು? ಯಾರ್ಮನೆ? ಇಲ್ ಬಂದಿದ್ದು?"ಎಂದು ಅಲ್ಲೇ ಕುಳಿತು ಕೇಳಿದಾಗ ಮಾತೇ ಹೊರಡದಂತಾಗಿ ತುಸು ಹೊತ್ತು ಸುಮ್ಮನೇ ಕುಳಿತ. ಅಜ್ಜಿಗೂ ಬೇರೆ ಕೆಲಸವಿಲ್ಲದ್ದರಿಂದ ಅಲ್ಲೇ ಕುಳಿತು ಉತ್ತರಕ್ಕಾಗಿ ಕಾಯತೊಡಗಿತು.

"ನೀಲವ್ವ... ನಾನು ಹೊನ್ನಗದ್ದೆ ಕಡೆಯಿಂದ ಬಂದಿದ್ದು... ಸುಬ್ಬಯ್ಯ ಹೆಗಡೇರ ಮೊಮ್ಮಗ.."ಎಂದಷ್ಟೇ ಹೇಳಿ ಅವಳ ಮೊಗವನ್ನೇ ನಿರೀಕ್ಷಿಸಲು ಅಲ್ಲಿ ನಿರೀಕ್ಷಿಸಿದ್ದ ಬದಲಾವಣೆ ಕಂಡಿತವನಿಗೆ.
 "ಎಂತಾ.. ಹೊನ್ನಗದ್ದೆ ದೊಡ್ಮನೆ ಭಟ್ರ ಮೊಮ್ಮಗನಾ? ಎಸ್ಟು ದೊಡ್ಡ ಕಾಣಿಸ್ತ್ರೀ ಒಡೆಯಾ... ದಿಟ್ಟಿ ಆಗೋವಂಗೆ ಇದ್ದ್ರಿ... ಭಟ್ರು ಹೇಂಗವ್ರೆ? ಇಲ್ಲಿಗೆ ಬಂದ ಇಸ್ಯ?"ಎಂದು ಕೇಳಿದವಳ ಮಾತೊಳಗೆ ಮೊದಲಿನ ನಿರುಮ್ಮಳತೆ, ಜೋರು ಕಾಣದಾಗಲು ಸತ್ಯ ಮತ್ತಷ್ಟು ಬಲವಾಯಿತು.
 "ನೀಲವ್ವ ಅಜ್ಜಯ್ಯ ಈಗಿಲ್ಲ... ಹೋದ್ವಾರಷ್ಟೇ ಹೋಗ್ಬಿಟ್ಟ... ಆದರೆ ಹೋಗೋ ಮುಂಚೆ ನಿಂಗೆ, ಅಜ್ಜಯ್ಯಂಗೆ ಮಾತ್ರ ಗೊತ್ತಿರೋ ಸತ್ಯ ಹೇಳಿದ್ದ ನಂಗೆ... ಆದ್ರೆ ಪೂರ್ತಿ ಅಲ್ಲಾ.... ನಂಗೆ ಸತ್ಯ ಪೂರ್ತಿ ಬೇಕು... ಇದು ನನ್ನ ಜೀವ್ನದ ಪ್ರಶ್ನೆ... ನೀನೇ ಹೇಳ್ಬೇಕು ನಂಗೆ"ಎನ್ನಲು ಮುದುಕಿಯ ಕೈಯೊಳಗಿದ್ದ ದೊಣ್ಣೆ ಅಲುಗಾಡಿತು. ಅವನ ಒತ್ತಾಯ ಜಾಸ್ತಿಯಾದಷ್ಟೂ ಅವಳ ಹಠ ಬಿಗಿಯಾಯಿತು. ಕೊನೆಗೆ ವಿಧಿಯಿಲ್ಲದೇ ಆತ ತಾನು ಸೋದರತ್ತೆ ಮಗಳಾದ ವೀಣಾಳನ್ನು ಮದುವೆಯಾಗುತ್ತಿರುವ ಸತ್ಯ ಹೊರ ಹಾಕಿದ್ದೇ ಅಜ್ಜಯ್ಯನಂತೇ ಹೌಹಾರಿ ಬಿದ್ದಳು.
 "ಈ ಅನರ್ಥ ಮಾಡ್ಬೇಡಿ ಒಡೆಯ... ಇದು ಸಲ್ಲ... ಅವ್ರಂತೂ ಬುದ್ಧಿ ಇಲ್ಲದಂತೇ ಮಾಡಿದ್ದ್ರು ಆಗ... ನೀವೂ ಈಗ.... ಬ್ಯಾಡ... ನಾ ಸತ್ಯ ಹೇಳ್ತೆ... ಎಲ್ಲಾ ಹೇಳ್ತೆ...ಆದ್ರೆ ನೀವು ಮಾತ್ರ ಈ ಕೆಲ್ಸ ಮಾಡ್ಕೂಡ್ದು..."ಎಂದವಳೇ ಸಮಯದ ಒಡಲಲ್ಲಿ ಭೂಗತವಾಗಿದ್ದ ಸತ್ಯವನ್ನು ಹೊರಹಾಕಿದ್ದಳು.

ಸೀತೆಯ ಅತ್ತೆಯ ಬೆದರಿಕೆಯ ಭೂತ ಸದಾಕಾಲ ಬೆಂಬಿಡದೇ ಕಾಡುತಿತ್ತು ಭಟ್ಟರನ್ನು. ಇದ್ದೊಬ್ಬ ಮಗಳಿಗೇ ಹೀಗಾಗಬೇಕೆ? ಸವತಿ ಬಂದು ಅವಳ ಬದುಕು ನರಕವಾದ್ರೆ ಹೇಗೆ ಸಹಿಸಲೆಂದು ಕೊರಗಿದ ಭಟ್ಟರಿಗೆ ಮಗಳು, ಮಗ ಇಬ್ಬರೂ ಸಿಹಿ ಸುದ್ದಿ ಕೊಟ್ಟಾಗ ತುಂಬಾ ನೆಮ್ಮದಿಯಾಗಿತ್ತು. ಆದ್ರೂ ಒಳಗೆಲ್ಲೋ ಅಶಂಕೆ.... ಎಲ್ಲಾ ಸುಸೂತ್ರವಾದರೆ ಸಾಕಪ್ಪಾ.. ಎಂದೇ ಬೇಡುತ್ತಿದ್ದರು. ಸೊಸೆ ಹಾಗೂ ಮಗಳಿಗೆ ಏನೊಂದೂ ಅನಾನುಕೂಲತೆ ಆಗದಂತೆ ಏರ್ಪಾಡಾಗಿತ್ತು. ಹೆರಿಗೆಗೆ ಒಂದು ತಿಂಗಳಿರುವಾಗಲೇ ಸೊಲಗಿತ್ತಿ ನೀಲವ್ವನನ್ನು ಮನೆಯಲ್ಲಿಟ್ಟುಕೊಂಡಿದ್ದರು. ಹೆರಿಗೆಗೆ ಇಪ್ಪತ್ತು ದಿನಗಳು ಬಾಕಿಯಿದ್ದವು...ಹೀಗಿರುವಾಗ ಊರ ಜಾತ್ರೆಯ ಗೌಜು ಎದ್ದಿತ್ತು. ವರುಷಕ್ಕೊಮ್ಮೆ ಬರುವ ಈ ಸಂಭ್ರಮಕ್ಕಾಗಿ ಮನೆ ಮಂದಿಯೆಲ್ಲಾ ಹೊರಟಿದ್ದರು. ಉಳಿದದ್ದು ಸೀತೆ, ಸೊಸೆ ಶಾರದೆ, ನೀಲವ್ವ ಹಾಗೂ ದೊಡ್ಡ ತಮ್ಮನ ಹೆಂಡತಿ. ಮನೆಯ ಭದ್ರತೆಗೆಂದು ಭಟ್ಟರೇ ಸ್ವತಃ ಉಳಿದಿದ್ದರು. ಮನೆಯಲ್ಲಿ ಒಬ್ಬಳೇ ಉಳಿದು ಚಿಕ್ಕ ಮೊಗಮಾಡಿಕೊಂಡಿದ್ದ ತಮ್ಮನ ಹೆಂಡತಿಯ ನೋಡಿ, ಪಾಪವೆನಿಸಿತ್ತು ಭಟ್ಟರಿಗೆ. "ಹೇಂಗಿದ್ರೂ ನೀಲವ್ವ ಇದ್ದು... ಹೆರ್ಗೆ ದಿನ ಇನ್ನೂ ದೂರ ಇದ್ದು... ಆನಂತೂ ಇಲ್ಲೇ ಇರ್ತಿ... ನೀ ಬೇಕಿದ್ರೆ ಪಕ್ಕದ ಹಾಲ್ಕಣಿಲೀ ನಡೀತಾ ಇಪ್ಪು ಆಟಕ್ಕೆ ಹೋಗು... ಚಿಂತೆ ಬ್ಯಾಡ.."ಎಂದು ಯಕ್ಷಗಾನಕ್ಕೆ ಕಳುಹಿಸಿದ್ದರು. ಆದರೆ ಅದ್ರೃಷ್ಟವೋ, ದುರಾದೃಷ್ಟವೋ... ತುಸು ಹೊತ್ತಿನಲ್ಲೇ ಇಬ್ಬರಿಗೂ ನೋವು ಕಾಣಿಸಿಕೊಳ್ಳಲು, ಗಾಭರಿ ಬಿದ್ದಿದ್ದರು. ನೀಲವ್ವ ನುರಿತವಳು... ಗಟ್ಟಿಯಾಗಿದ್ದಳು ಕೂಡ.... ಭಟ್ಟರಿಗೆ ಹಾಗೂ ಸೀತೆ, ಶಾರದೆಯರಿಗೆ ಧೈರ್ಯ ತುಂಬುತ್ತಾ ಒಳಗೆ ಹೊರಗೆ ಓಡಾಡಿ ಹೆರಿಗೆ ಮಾಡಿಸಿಯೇ ಬಿಟ್ಟಳು. ಚೊಚ್ಚಲ ಬಸುರಿ ಸೀತೆ ಹೆದರಿಕೆಯಿಂದ ಮೂರ್ಚೆ ತಪ್ಪಿದ್ದರೆ, ಶಾರದೆ ನೋವಿನ ತೀವ್ರತೆಗೆ ಮೂರ್ಛೆ ಬಿದ್ದಿದ್ದಳು. ಸೀತೆಗೆ ಹುಟ್ಟಿದ್ದ ಗಂಡು ಮಗು ಸತ್ತಿದ್ದರೆ ಶಾರದೆಗೆ ಒಂದು ಗಂಡು, ಒಂದು ಹೆಣ್ಣು! ಸುದ್ದಿ ಕೇಳಿದ ಭಟ್ಟರಿಗೆ ಅಳಬೇಕೋ... ನಗಬೇಕೋ ಎನ್ನುವ ಸ್ಥಿತಿ. ಮಗಳ ಮುಂದಿನ ಭವಿಷ್ಯದ ಚಿಂತೆ ಅವರನ್ನು ನಿಮಿಷ ನಿಮಿಷಕ್ಕೂ ಹಿಂಡಿ ಹಾಕುತಿತ್ತು. ತಾಸೆರಡು ಕಳೆಯಲು ಅವರಿಗೊಂದು ಯೋಚನೆ ಮೂಡಿತು. ಸೀತೆ, ಶಾರದೆಯಿಬ್ಬರಿಗೂ ಪ್ರಜ್ಞೆ ಮರಳಿರಲಿಲ್ಲ. ಶಿಶುಗಳೂ ನೀಲವ್ವ ಕುಡಿಸಿದ ನೀರನ್ನು ಕುಡಿದು ಸುಮ್ಮನೆ ಮಲಗಿದ್ದವು. ಕೋಣೆಯಲ್ಲಿದ್ದ ನೀಲವ್ವಳನ್ನು ಕರೆದ ಭಟ್ಟರು ಅವಳ ಕೈಗೆ ಅವಳು ಜೀವಮಾನದಲ್ಲಿ ಕಂಡಿರದಷ್ಟು ದುಡ್ಡನ್ನು ತುರುಕಲು ಅವಳಿಗೆಲ್ಲಾ ಅಯೋಮಯ. ನೀಲವ್ವಳಿಗೆ ಸೀತೆಯ ವ್ಯಥೆಯ ಕಥೆಯನ್ನು ಅರುಹಿದ ಭಟ್ಟರು ಪರಿಪರಿಯಾಗಿ ಬೇಡಲು, ಒಪ್ಪಿದ ನೀಲವ್ವ ಗಂಡು ಮಗುವನ್ನು ಸೀತೆಯ ಮಗ್ಗುಲಿಗೆ ಹಾಕಿದ್ದಳು. ಆದರೆ ಸಮಯ ಭಟ್ಟರ ಯೋಚನೆಯನ್ನೇ ತಲೆಕೆಳಗು ಮಾಡಿತ್ತು. ಮಗಳ ಭವಿಷ್ಯವನ್ನು ಗಟ್ಟಿಮಾಡುವಾಗ, ಮೊಮ್ಮಕ್ಕಳ ಬದಲಾದ ಸಂಬಂಧದ ಭವಿಷ್ಯತ್ತಿನ ಕುರಿತು ಯೋಚಿಸಿರಲೇ ಇಲ್ಲ. ಒಂದೇ ತಾಯಿಯ ಮಕ್ಕಳಾಗಿದ್ದರೂ ವಿನಾಯಕ, ವೀಣಾ ಹೆಸರಿಗೆ ಬೇರಾದ ಸಂಬಂಧದಿಂದ ಹೊಸ ಬಂಧ ಬೆಳೆಸಲು ಮುಂದಾಗಿದ್ದು ಸುಬ್ಬಯ್ಯ ಭಟ್ಟರಿಗೆ ದೊಡ್ಡ ಆಘಾತವಾಗಿತ್ತು. ಅಂತಿಮದಲ್ಲಿ ಸತ್ಯ ವಿನಾಯಕನಲ್ಲಿ ಹೇಳಬೇಕಾಗಿ ಬಂದು "ವೀಣಾ ನಿನ್ನ ಸ್ವಂತ ತಂಗಿ.... ಇದು ನನ್ಮಗ್ಳು ಸೀತೆ ಆಣೆಗೂ ಸತ್ಯ... ನಾನು ಖಂಡಿತ ಸುಳ್ಳಾಡ್ತಾ ಇಲ್ಲೆ... ಬೇಕಿದ್ರೆ ಸಾಲಿಕೇರಿಯಲ್ಲಿಪ್ಪ ನೀಲವ್ವನ್ನ ಕಾಣು

 ಅದ್ಕೆಲ್ಲಾ ಗೊತ್ತು..."ಎಂದವರೇ ಇಹಲೋಕ ಮುಗಿಸಿಬಿಟ್ಟಿದ್ದರು. ಅಂದಿನಿಂದ ಇಂದಿನವರೆಗೂ ಈ ಸತ್ಯ ಇಂಚಿಂಚಾಗಿ ವಿನಾಯಕನನ್ನು ಇರಿಯುತ್ತಿತ್ತು. ಅತ್ತ ಯಾರಲ್ಲೂ ಹೇಳಲಾಗದೇ ಇತ್ತ ಒಬ್ಬನೇ ಸಹಿಸಲಾಗದೇ ತಲೆ ಕೆಟ್ಟು ಹೋಗತೊಡಗಿತ್ತು. ನಿಜವನ್ನು ಪೂರ್ತಿ ತಿಳಿಯಲು ನೀಲವ್ವನ ಬಳಿ ಓಡಿ ಬಂದಿದ್ದ. 

****

 ನೀಲವ್ವಳಿಂದ ಕಟು ಸತ್ಯ ತಿಳಿದ ವಿನಾಯಕ ಯಾಂತ್ರಿಕವಾಗಿ ಬಸ್ಟಾಪಿಗೆ ಬಂದಾಗ ಸೂರ್ಯ ಅದಾಗಲೇ ಪಶ್ಚಿಮದೆಡೆ ವಾಲಿದ್ದ. ಆತನಿಗೀಗ ತನ್ನ ಅಸ್ತಿತ್ವವೇ ಒಂದು ಪ್ರಶ್ನೆಯಾಗಿ ಕಾಡತೊಡಗಿತು. ಅಮ್ಮನನ್ನು ಅತ್ತೆ ಎಂದು ಕರೆಯುವುದು ಅಸಾಧ್ಯ....ಹುಟ್ಟು ಹೇಗೆ ಆಗಿರಲಿ.... ಬದುಕು ಕಟ್ಟಿ ಕೊಟ್ಟಿದ್ದು ಅವಳೇ. ಆದರೆ ಕನಸು ಕಟ್ಟಿ ಕೊಟ್ಟ ವೀಣಾಳನ್ನು.....!? ‘ಛೇ ಎಂಥ ಕೆಲ್ಸ ಮಾಡಿದೆ ನೀ ಅಜ್ಜಯ್ಯ.....ಒಂದು ಬಾಳನ್ನು ಸರಿಪಡಿಸಲು ಹೋಗಿ ಈಗ ನಾಲ್ವರ ಬದುಕನ್ನೇ ಒಂದು ಪ್ರಶ್ನೆಯಾಗಿಸಿಬಿಟ್ಟೆ....ನಾನೀಗ ಏನ್ ಮಾಡ್ಲಿ? ನೀನೇನೋ ಹೋದೆ... ಹೊಗ್ತಾ ಸುಮ್ಮನೆ ಹೋಗ್ದೇ ಈ ಉರಿ ಸತ್ಯವನ್ನ ನಂಗಾದ್ರೂ ಏಕೆ ಹೇಳ್ದೇ? ಅಮ್ಮನಿಗೆ, ಅತ್ತೆಗೆ, ಮಾವನಿಗೆ, ಸ್ವತಃ ವೀಣಾಳಿಗೂ ಹೇಳಲು ಸಾಧ್ಯವಿದೆಯೇ ನನ್ನಿಂದ ಈ ಸತ್ಯ? ಹೇಳಿದರೂ, ಕೇಳಿದ ಅವರೆಲ್ಲರ ಬದುಕು ಏನಾಗಬಹುದು?! ನಾನೀಗ ಏನ್ ಮಾಡ್ಲಿ ಅಜ್ಜಯ್ಯ? ಸತ್ಯ ಒಪ್ಕೊಂಡು ಹೋಗ್ಲಾ? ಇಲ್ಲಾ ಈಗಿರುವ ನಂಬಿಕೆಯನ್ನೇ ಸತ್ಯವೆಂದು ಸುಮ್ಮನಿದ್ದುಬಿಡ್ಲಾ?" ಇವೇ ಮುಂತಾದ ಆಲೋಚನೆಗಳು, ಅಸಂಖ್ಯಾತ ಚಿಂತೆಗಳು ವಿನಾಯಕನನ್ನು ಮುತ್ತಲು ದಾರಿಗಾಣದಂತಾಗಿ ಬಸ್ಟಾಪಿನಲ್ಲೇ ಎಷ್ಟೋ ಹೊತ್ತಿನವರೆಗೆ ಕುಳಿತಿದ್ದ...ಹೊನ್ನಗೆದ್ದೆಗೆ ಅದೆಷ್ಟೋ ಬಸ್ಸುಗಳು ಅವನ ಮುಂದೇ ಹಾದು ಹೋಗುತ್ತಿದ್ದರೂ...

[@ಜನವರಿ ೬ರ ತರಂಗದಲ್ಲಿ ಪ್ರಕಟಿತ]




ಎಲ್ಲರಿಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು.
courtesy - http://www.zazzle.com

-ತೇಜಸ್ವಿನಿ ಹೆಗಡೆ

14 ಕಾಮೆಂಟ್‌ಗಳು:

umesh desai ಹೇಳಿದರು...

good one tejaswini a touching tale.

shivu.k ಹೇಳಿದರು...

ತೇಜಸ್ವಿನಿ ಮೇಡಮ್,

ಕತೆ ತುಂಬಾ ಚೆನ್ನಾಗಿದೆ. ನಿಮಗೂ ಮಕರ ಸಂಕ್ರಾಂತಿಯ ಶುಭಾಶಯಗಳು.

ಮನಸಿನ ಮಾತುಗಳು ಹೇಳಿದರು...

ತೇಜಕ್ಕ ,ಕಥೆ ಚೊಲೋ ಇದ್ದು.ಆದ್ರೆ ಮುಂದೆ ಎಂತ್ ಆಗ್ತು ?...curiosity ಬರ್ತಿದ್ದಂಗೆ ಕಥೆ ಮುಗ್ದು ಹೊತಲೆ ...:(

ವಾಣಿಶ್ರೀ ಭಟ್ ಹೇಳಿದರು...

ತುಂಬ ಸುಂದರವಾಗಿ ಮೂಡಿ ಬಂದಿದೆ.. ಚೆನ್ನಾಗಿದೆ..ಕೊನೆಯ ವರೆಗೂ ಕುತುಹಲವನ್ನು ಕೆರಳಿಸುವಲ್ಲಿ ಸಫಲವಾಗಿದ್ದಿರಿ..

Ittigecement ಹೇಳಿದರು...

ತೇಜಸ್ವಿನಿ..

ತರಂಗದಲ್ಲಿ ನಿಮ್ಮ ಹೆಸರು ನೋಡಿ ಮೊದಲು ಓದಿದ್ದು ಇದೇ ಕಥೆ..
ತುಂಬಾ ಚೆನ್ನಾಗಿದೆ...

ಅಭಿನಂದನೆಗಳು...

ಸುಮ ಹೇಳಿದರು...

ಉತ್ತಮ ಕಥೆ ತೇಜಸ್ವಿನಿ ...ಸುಂದರ ಶೈಲಿ ...ಕೊನೆಯನ್ನು ಓದುಗರ ಕಲ್ಪನೆಗೆ ಬಿಟ್ಟದ್ದು ಇನ್ನೂ ಇಷ್ಟ ಆಯ್ತು.

Vikas ಹೇಳಿದರು...

chennagide kathe.

ಬಿಸಿಲ ಹನಿ ಹೇಳಿದರು...

ತೇಜಸ್ವಿನಿಯವರೆ,
ಒಬ್ಬ ವ್ಯಕ್ತಿಯ ಹುಟ್ಟಿನ ಸತ್ಯವನ್ನು ಗುಟ್ಟಾಗಿಟ್ಟು ಆನಂತರ ಅದವನಿಗೆ ಗೊತ್ತಾದಾಗ ಅವನ ಮಮನದಲ್ಲೇಳುವ ತಾಕಲಾಟಗಳನ್ನು ಹಾಗೂ ಸಂಘರ್ಷಗಳನ್ನು ತುಂಬಾ ಮಾರ್ಮಿಕವಾಗಿ ಚಿತ್ರಿಸಿದ್ದೀರಿ. ಕಥೆ ನಿರೂಪಣೆ ಮತ್ತು ಶಿರಸಿ ಕಡೆ ಭಾಷೆಯಿಂದಾಗಿ ಹೆಚ್ಚು ಗಮನ ಸೆಳೆಯುತ್ತದೆ. ಕಥೆ ಮುಗಿದ ನಂತರವೂ ವಿನಾಯಕ ಏನು ಮಾಡಬಹುದು ಎನ್ನುವ ಕುತೂಹಲವನ್ನು ಕಥೆ ಹಾಗೆ ಉಳಿಸಿಬಿಡುತ್ತದೆ. ಉತ್ತಮ ಕಥೆಗೆ ಧನ್ಯವಾದಗಳು ಹಾಗೂ ನಿಮಗೂ ಕೂಡ ಸಂಕ್ರಾಂತಿಯ ಶುಭಾಶಯಗಳು.

ಚುಕ್ಕಿಚಿತ್ತಾರ ಹೇಳಿದರು...

nice story...

ಸಾಗರದಾಚೆಯ ಇಂಚರ ಹೇಳಿದರು...

tumbaa chennagiddu kathe
ishta aatu
Happy Sankranthi

www.kumararaitha.com ಹೇಳಿದರು...

ಕಥೆ ತುಂಬ ಚೆನ್ನಾಗಿದೆ

ಸೀತಾರಾಮ. ಕೆ. / SITARAM.K ಹೇಳಿದರು...

tumbaa vinutana kathe. kathe doddadu amele odidaraayitu ennuttaa naalku naalku sala haydu hode. indu odalu kulitare onde usirige odi mugiside.
modala kelavu saalugalu odalu aasakti mudisadiddaru mundinda saalugalu oDisikondu odisuttave.
tumbaa chendada kathe. olle tiruvinalli antya needade mugisi odugarannu nadudaariyalli bittiddiraa... bahusha neemagu antya tale kedisirabeku allave...?

venkat.bhats ಹೇಳಿದರು...

ಕಥೆ ಇಷ್ಟ ಆತು,ಪಾತ್ರಗಳು ಪಕ್ಕದಲ್ಲೆ ಹಾದುಹೋದಹಾಗನ್ಸಿತ್ತು, ನಿರೂಪಣೆ ಸಕತ್,ಹಿಂದೊಮ್ಮೆ ಓದಿದ ಅತಿ ಹಳೆಯ ಕಥೆಯೊಂದು ಸುಮ್ಮನೆ ನೆನಪಾಯ್ತು. ಅದರಲ್ಲಿ ಒಬ್ಬ ಹಣಕ್ಕಾಗಿ ಡಾಕ್ಟರೊಬ್ಬರಿಗೆ sperm donate ಮಾಡ್ತಾನೆ, ಮುಂದೊಮ್ಮೆ ಅವನು ಮದುವೆಯಾದ ಹುಡುಗಿಯ ತಾಯಿ ಅದೇ ಡಾಕ್ಟರರ ಬಳಿ sperm ಪಡೆದು ಮಗಳನ್ನು ಹೆತ್ತಿರುತ್ತಾಳೆ,ಮದುವೆಯ ನಂತರ ಯಾವುದೋ ವಿಶಯ ಮಾತನಾಡುತ್ತ ಆ ಸಂಗತಿ ತಿಳಿದ ಅವನ ತಾಕಲಾಟ, ತಂತ್ರಜ್ನಾನದ ಇನ್ನೊಂದು ಮುಖಗಳನ್ನು ಕಥೆಗಾರ ಸುಂದರವಾಗಿ ಕಟ್ಟಿದ್ದ, ಕಥೆ ಮತ್ತು ಕಥೆಗಾರ ಎರಡೂ ನೆನಪಿಲ್ಲ.

'ಸತ್ಯ ಒಪ್ಕೊಂಡು ಹೋಗ್ಲಾ? ಇಲ್ಲಾ ಈಗಿರುವ ನಂಬಿಕೆಯನ್ನೇ ಸತ್ಯವೆಂದು ಸುಮ್ಮನಿದ್ದುಬಿಡ್ಲಾ' ಎನ್ನುವ ಮಾತುಗಳಿಗೆ ಕ್ಷಣ ಸುಮ್ಮನಾಗಿ ಹೋದೆ. ಈ ಕಥೆಗಳೇ ಹೀಗೆ..

ತೇಜಸ್ವಿನಿ ಹೆಗಡೆ ಹೇಳಿದರು...

ಕತೆಯನ್ನು ಮೆಚ್ಚಿ ಸ್ಪಂದಿಸಿದ ಎಲ್ಲಾ ಸಹಮಾನಸಿಗರಿಗೂ ತುಂಬಾ ಧನ್ಯವಾದಗಳು.