ಬುಧವಾರ, ಆಗಸ್ಟ್ 27, 2014

ಮೂರ್ಖನಿಗೆ ಮದ್ದಿಲ್ಲ

ಮೂರ್ಖ, ಮೂರ್ಖತನ, ಹಾಗೂ ಮೂರ್ಖನ ಲಕ್ಷಣ ಕುರಿತು ಸಂಸ್ಕೃತ ಸಾಹಿತ್ಯದಲ್ಲಿ ಅನೇಕ ಶ್ಲೋಕಗಳಿವೆ. ಅವುಗಳನ್ನು ಹೆಕ್ಕಿ ‘ಸುಭಾಷಿತ ರತ್ನಾಕರ’ದಲ್ಲಿ ನೀಡಲಾಗಿದೆ. ಇವು ಹಳೆಯ ನಾಡು ನುಡಿಗಳಂತೇ ನಮಗೆ ಜೀವನಾನುಭವ ನೀಡುವ ಸರಳ ಸಾಹಿತ್ಯ ಮಾಧ್ಯಮವಾಗಿವೆ. ಈ ಲೇಖನದಲ್ಲಿ ಅವುಗಳ ಆಧಾರದಲ್ಲಿ ಪ್ರಮುಖಾಂಶವನ್ನು ಗಮನಿಸೋಣ.
ಕವಿಯೊಬ್ಬ ಹೇಳುತ್ತಾನೆ ‘ಬೆಂಕಿಯನ್ನು ನೀರಿನಿಂದ, ಸೂರ್ಯನ ಪ್ರಖರಕಿರಣಗಳನ್ನು ಕೊಡೆಯಿಂದ, ಮದವೇರಿದ ಆನೆಯನ್ನು ಹರಿತವಾದ ಅಂಕುಶದಿಂದ, ದಂಡದಿಂದ ಪಶುಗಳನ್ನು ಹಾಗೂ ರೋಗಗಳನ್ನು ಔಷಧಗಳಿಂದಲೂ, ವಿಷವನ್ನು ಮಂತ್ರಪ್ರಯೋಗಗಳಿಂದಲೂ ತಡೆಯಬಹುದು’. ಹೀಗೆ ಎಲ್ಲವುದಕ್ಕೂ ಶಾಸ್ತ್ರಸಿದ್ಧ ಔಷಧವಿದೆ, ಆದರೆ ಮೂರ್ಖನಿಗೆ ಮಾತ್ರ ಔಷಧವಿಲ್ಲ!! ೧

ಮೂರ್ಖತನವನ್ನು ಗುರುತಿಸಲು ಅವನ ಲಕ್ಷಣವನ್ನು ಕವಿಯೊಬ್ಬನು ಹೀಗೆ ಹೇಳಿದ್ದಾನೆ. ಗರ್ವ, ದುರ್ವಚನ, ಸುಮ್ಮನೇ ವಿರೋಧ, ಹಾಗೂ ಕೃತ್ಯ-ಅಕೃತ್ಯಗಳನ್ನು (ಅವಿವೇಕ)೨ ಒಪ್ಪದಿರುವುದು ಈ ಗರ್ವ ಹೇಗೆ ಮದವೇರಿಸುತ್ತದೆ ನೋಡಿರಿ.
‘ನನಗೆ ಸ್ವಲ್ಪಗೊತ್ತಿದೆ’ ಅಂದು ಕೊಂಡರೆ ಆನೆಗೆ ಮದವೇರಿದಂತೆ ನಮಗೂ ಸೊಕ್ಕುಬರುತ್ತದೆ. [ಅಲ್ಪ ವಿದ್ಯಾ ಮಹಾ ಗರ್ವೀ] ಹಾಗೂ ತಾನೇ ಸರ್ವಜ್ಞನೆಂದು ಮನದಲ್ಲಿ ಅಂದುಕೊಳ್ಳುತ್ತಾನೆ.
ಅದೇ ಬುಧಜನರಿಂದ ಸ್ವಲ್ಪಸ್ವಲ್ಪ ಸಂಗ್ರಹಿಸಿ ಕಲಿತುಕೊಂಡಿದ್ದೇನೆಂಬ ಭಾವವಿದ್ದಲ್ಲಿ ಅದೇ ಮದ ಜ್ವರದಂತೇ ಜರ್ರನೇ ಇಳಿದು ‘ಛೇ ನಾನೆಂಥ ಮೂರ್ಖ’ ಎಂಬ ಭಾವನೆ ಬರುತ್ತದೆ.೩

ಇದು ಸಾಮಾನ್ಯ ಅಥವಾ ಸಾಂದರ್ಭಿಕ ಮೂರ್ಖತನವಾಯಿತು. ಆದರೆ ಇನ್ನು ಕೆಲವರು ಸ್ವಭಾವತಃ ಮೂರ್ಖರಿರುತ್ತಾರೆ; ಅವರನ್ನು ರಂಜಿಸಲು ಅಥವಾ ನಂಬಲೂ ಎಂದೂ ಹೋಗಬಾರದೆಂದು ಈ ಎರಡು ಸುಭಾಷಿತಗಳು ಹೇಳುತ್ತವೆ.
‘ಅಜ್ಞಾನಿಯನ್ನು ಸಮಾಧಾನ ಪಡಿಸುವುದಾಗಲಿ, ತಿಳಿಯುವಂತೆ ಮಾಡುವುದಾಗಲಿ ಸುಲಭ, ವಿಶೇಷಜ್ಞಾನದಲ್ಲಿ ಅವನೊಡನೆ ವ್ಯವಹರಿಸುವುದು ಇನ್ನೂ ಸುಲಭ. ಆದರೆ ಅಲ್ಪಜ್ಞಾನದಿಂದ ಠೇಂಕರಿಸುವವನನ್ನು ಬ್ರಹ್ಮನೂ ಸಹ ರಂಜಿಸಲಿಕ್ಕೆ ಸಾಧ್ಯವಿಲ್ಲವಂತೆ.೪ ಹಾಗೇ ಜನ್ಮತಃ ಮೂರ್ಖರಾಗಿರುವವನನ್ನು ತಿದ್ದುವುದು ವ್ಯರ್ಥಸಾಹಸ ಹಾಗೂ ಅಪಾಯಕಾರಿ ಎಂದು ಎಚ್ಚರಿಸಲಾಗಿದೆ. ಮೂರ್ಖರಿಗೆ ಉಪದೇಶ ಹೇಳಿದರೆ ಅದು ಅವರನ್ನು ಕೆರಳಿಸುತ್ತದೆ. ಹಾವಿಗೆ ಹಾಲೆರೆದರೆ ವಿಷವನ್ನು ಕಕ್ಕುವುದು ಸಹಜವಲ್ಲವೇ?೫ ಜಗತ್ತಿನಲ್ಲಿ ಅಸಾಧ್ಯವಾದ ಹಲವಿರೆ... “ಭುಸುಗುಟ್ಟುವ ವಿಷ ಸರ್ಪವನ್ನು ತಲೆಯಮೇಲೆ ಹೂವಿನಂತೆ ಇಟ್ಟುಕೊಳ್ಳಬಹುದು. ಮೊಸಳೆಯ ದವಡೆಯಿಂದ ಮಣಿಯನ್ನು ಕೈಹಾಕಿ ತೆಗೆಯಬಹುದು. ಭೀಕರ ಅಲೆಗಳಿರುವ ಸಮುದ್ರವನ್ನು ದಾಟಬಹುದು, ಮರಳನ್ನು ಹಿಸುಕಿ ತೈಲವನ್ನು ಹಿಂಡಬಹುದು, ಕೋಡಿರುವ ಮೊಲವನ್ನೂ ಹುಡುಕಿ ತರಬಹುದು, ಆದರೆ ವಿತಂಡವಾದದ ಮೂರ್ಖನ ಮನಸ್ಸನು ಪ್ರಸನ್ನುಗೊಳಿಸಲು ಸಾಧ್ಯವಿಲ್ಲವೆಂದು”6, ಅಸಾಧ್ಯಗಳಲ್ಲಿ ಅಸಾಧ್ಯವೆಂದು ಕಾವ್ಯಾಲಂಕಾರದಿಂದ ತಿಳಿಸಿದ್ದಾರೆ. ಅಂತಹ ದುಸ್ಸಾಹಸಕ್ಕೆ ತೊಡಗಿ ನಮ್ಮ ಸಮಯ, ಮನಸ್ಸು ಎರಡನ್ನೂ ಹಾಳುಮಾಡಿಕೊಳ್ಳದಿರುವುದೇ ಸಾಧು ಲಕ್ಷಣ.

ಕೆಲವರು ಅಮಲಿನಲ್ಲಿ ಮೂರ್ಖರಂತೆ ವರ್ತಿಸುತ್ತಾರೆ. ಕುಡಿದ ಅಮಲಿನಲ್ಲಿ ರಾತ್ರಿಯಲ್ಲಿ ಆಕಾಶನೋಡಿ ಅದು ಸೂರ್ಯನೋ ಚಂದ್ರನೋ ಕೇಳುತ್ತಾರೆ? ನಿಜ ಹೇಳಿದರೂ ಸೂರ್ಯನೆಂದು ಅದು ಹಗಲೆನ್ನುತ್ತಾರೆ. ಸುಳ್ಳು ಹೇಳಿದರೆ ನಮ್ಮನ್ನೇ ಕುಡಿದವರೆಂದು ದುರ್ವಚನ ನುಡಿಯುತ್ತಾರೆ.

ಇದೆಲ್ಲವನ್ನು ಗಮನಿಸಿ ಕವಿಯೊಬ್ಬ ವಿಡಂಬನಾತ್ಮಕವಾಗಿ “ಮೂರ್ಖನಾಗಿರುವುದೇ ವಾಸಿ ಯಾಕೆಂದರೆ ಅದರಲ್ಲಿ ೮ ಗುಣಗಳಿವೆಯೆಂದು” ಹೀಗೆ ವರ್ಣಿಸುತ್ತಾನೆ:
ಏ ದುರ್ಬುದ್ಧಿ! ಮೂರ್ಖನಾಗಿರುವುದು ಸುಲಭ ಹಾಗೇ ಇರು ಯಾಕೆಂದರೆ ಅದು   ರಹಿತ, ಬಹುಭೋಜಕ, ಮೂರ್ಖರಸ್ವಭಾವ (ಹಲುಬುವುದು), ಹಗಲು-ರಾತ್ರಿ ಕನಸು ಕಾಣಬಹುದು. ಕಾರ್ಯ-ಅಕಾರ್ಯ ವಿವೇಚನೆಯ ವಿಷಯದಲ್ಲಿ ಕುರುಡ ಮತ್ತು ಕಿವುಡ, ಮಾನ-ಅಪಮಾನ ಎರಡೂ ಸಮ, ರೋಗರಹಿತ (ಎಂದೇವಾದ) ಸು ಶರೀರ. ಇದರಿಂದ ಸುಖಜೀವನ ತಾನೇ?!೭ (ಅಂದರೆ, ನಾವು ಹೇಗಿದ್ದಲ್ಲಿ ನಮ್ಮಲ್ಲಿ ಮೂರ್ಖರ ಗುಣವಿದೆ ಎಂದು ಅರಿತುಕೊಳ್ಳಲು ಹೇಳಿದ್ದಾರೆ)
ಮೂರ್ಖರಿಗೆ, ಸಾಹಿತ್ಯ, ಸಂಗೀತ, ಕಲೆ ಇವುಗಳಲ್ಲಿ ಯಾವುದೊಂದೂ ರುಚಿಸದು. ಅವರು ಬಾಲ ಕೂಡ ಇಲ್ಲದ ಪ್ರಾಣಿಗಳು. ಹುಲ್ಲನ್ನು ತಿನ್ನುವುದಿಲ್ಲ, ಅದು ಪಾಪ ಆ ಪಶುಗಳ ಪುಣ್ಯ!೮

ಅದೇ ರೀತಿ ಮೂರ್ಖರು ವಿದ್ಯೆ, ತಪ, ದಾನ, ಜ್ಞಾನ, ಶೀಲ, ಗುಣ, ಧರ್ಮಗಳೆಂದು ದೂರವಿರುತ್ತಾರೆ. ಅವರು, ಈ ಮಾನವ ಲೋಕದಲ್ಲಿ ಭೂಭಾರಕ್ಕಾಗಿರುವವರು. ಮಾನವ ರೂಪಿ ಮೃಗಗಳು ೯ ಎಂದು ಕವಿಯೊಬ್ಬ ಅಕ್ರೋಶ ವ್ಯಕ್ತಪಡಿಸಿದ್ದಾನೆ.
ಮೂರ್ಖರಿಗೆ ಧರ್ಮಕಥಾ ಪ್ರಸಂಗ ಹೇಳುವ ದಡ್ಡತನವನ್ನು ಸಜ್ಜನರು ಮಾಡಬಾರದು. ೧೦ ಅದು, ಕುರುಡನಿಗೆ ದೀಪ ಹಿಡಿದಂತೆ, ಕಿವುಡನಿಗೆ ಸಂಗೀತದಂತೆ, ಈ ರೀತಿ ಮೂರ್ಖರ ಗುಣಲಕ್ಷಣಗಳನ್ನು ವಿವರಿಸಲಾಗಿದೆ. ಇದರಿಂದ ನಮ್ಮಲ್ಲಿ ಎರಡಂಶ ಅರಿವಾಗಿರಬೇಕು. ಒಂದು ಎಂತಹ ಗುಣ ಸ್ವಭಾವದವರು ಮೂರ್ಖರು, ಅವರೊಡನೆ ಹೇಗೆ ವ್ಯವಹರಿಸಬೇಕು ಹಾಗೂ ಇನ್ನೊಂದು ನಾನು ನನ್ನಲ್ಲಿರುವ ಮೂರ್ಖತನವನ್ನು ತ್ಯಜಿಸುವುದು ಹೇಗೆ? ಎಂದು. ಅಂತೂ, ‘ಕಷ್ಟಂ ಬಲು ಮೂರ್ಖತ್ವಂ’ ಎಂಬುದನ್ನು ನೆನಪಿಸೋಣ.

ಉಲ್ಲೇಖ ಶ್ಲೋಕಗಳು:

೧] ಶಕ್ಯೋವಾರಯಿತುಂಜಲೇನ ಹುತಭುಕ್ ಛತ್ರೇಣ ಸೂರ್ಯss ತಪೋ
   ನಾಗೇಂದ್ರೋ ನಿಶಿತಾಂಕುಶೇನ ಸಮದೋ ದಂಡೋನಗೋಗರ್ದಭೌ |
   ವ್ಯಾಧಿರ್ಭೇಷಜ ಸಂಗ್ರಹೇಶ್ಚ ವಿವಿಧೈರ್ಯಂತ್ರ ಪ್ರಯೋಗೈರ್ವಿಷಂ 
   ಸರ್ವಸಸ್ಯೊಷದಮಸ್ತಿ ಶಾಸ್ತ್ರ ವಿಹಿತಂ ಮೂರ್ಖಸ್ಯ ನಾಸ್ತ್ಯುಷಧಮ್ ||

೨] ಮೂರ್ಖಚಿನ್ಹಾನಿ ಷಡಿತಿ ಗರ್ವೋ ದುರ್ವಚನಂ ಮುಖೇ | 
   ವಿರೋಧೀ ವಿಷವಾದೀಚ ಕೃತ್ಯಾs ಕೃತ್ಯಂ ನ ಮನ್ಯತೇ ||

೩] ಯದಾ ಕಿಂಚಿಜ್ಞೋs ಹಂ ದ್ವಿಪ ಇವ ಮದಾಂಧಃ ಸಮಭವಂ |
   ತದಾ ಸರ್ವಜ್ಞೇಸ್ಮಿತ್ಯಭವದವಲಿಪ್ತಂ ಮಮ ಮನಃ |
   ಯದಾ ಕಿಂಚಿತ್ ಕಿಂಚಿತ್ ಬುಧಜನ ಸಕಾಶಾದವಗತಂ
   ತದಾ ಮುರ್ಖೋsಸ್ಮಿsತ ಜ್ವರ ಇವ ಮದೋ ಮೆ ವ್ಯಪಗತಃ ||

೪] ಆಜ್ಞಃ ಸುಖಮಾರಾಧ್ಯಃ ಸುಖತರಮಾರಾಧ್ಯತೇ ವಿಶೇಷಜ್ಞಃ |
   ಜ್ಞಾನ ಲವ ದುರ್ವಿದಗ್ಧಂ ಬ್ರಹ್ಮಾsಪಿ ತಂ ನರಂ ನ ರಂಜಯತಿ ||

೫] ಉಪದೇಶೋ ಹಿ ಮುರ್ಖಾಣಾಂ ಪ್ರಕೋಪಾಯನ ಶಾಂತಯೇ |
   ಪಯಃ ಪಾನಂ ಭುಜಂಗಾನಾಂ ಕೇವಲಂ ವಿಷವರ್ಧನಮ್ ||

೬] ಪ್ರಸಹ್ಯಮಣಿಮುದ್ಧರೇತ್ ಮಕರವಕ್ತ್ರದಂಷ್ಟ್ರಾಂಕುರಾತ್ |
   ಸಮುದ್ರಮಪಿ ಸಂಚರೇತ್ ಪ್ರಚಲದುರ್ಮಿಮಾಲಾ  ಕುಲಮ್ |
   ಭುಜಂಗಮಪಿ ಕೋಪಿತಂ ಶಿರಸಿ ಪುಷ್ಪ ವದ್ಧಾರಯೇತ್ | 
   ನತು ಪ್ರತಿನಿವಿಷ್ಟ ಮೂರ್ಖಜನಚಿತ್ತಮಾರಾಧಯೇತ್ ||

೭] ಮೂರ್ಖತ್ವಂ ಸುಲಭಂ ಭಜಸ್ವ, ಕುಮತೇ ಮೂರ್ಖಸ್ಯಚಾಷ್ಟವ್‌ಗುಣ ವ್|
   ನಿಶ್ಚಿಂತೋ ಬಹುಭೋಜಕೋsತಿಮುಖರೋ ರಾತ್ರಿಂ ದಿವಂಸ್ವಪ್ನಭಾಕ್ | 
   ಕಾರ್ಯಕಾರ್ಯವಿಚಾರಣಾಂಧ ಬಧಿರೋ ಮಾನಾಪಮಾನೇ ಸಮಃ |
   ಪ್ರಾಯೋಣಾಮಯ ವರ್ಜಿತೋ ದೃಢವಪು ಮುರ್ಖಃ ಸುಖಂಜೀವನೆ ||

೮] ಸಾಹಿತ್ಯ ಸಂಗೀತ ಕಲಾವಿಹೀನ; ಸಾಕ್ಷಾತ್ ಪಶುಃ ಪುಚ್ಛ ವಿಷಾಣಹೀನಃ | 
   ತೃಣಂ ನ ಖಾದನ್ನ್ ಪಿಜೀವಮಾನಃ ತದ್ಭಾಗಧೇಯಂ ಪರಮಂ ಪಶುನಾಮ್ ||

೯] ಯೇಷಾಂ ನ ವಿದ್ಯಾ ನ  ತಪೋ ನ  ದಾನಂ ಜ್ಞಾನಂನಶೀಲಂನಗುಣೋ ನಧರ್ಮಃ |
   ತೇ ಮೃತ್ಯುಲೋಕೇ ಭುವಿಭಾರಭೂತಾಃ ಮನುಷ್ಯರೂಪೇಣ ಮೃಗಾಶ್ಚರಂತಿ ||

೧೦] ಮುಕ್ತಾ ಫಲೈಃ ಕಿಂಮೃಗಪಕ್ಷಿಣಾಂಚ ಮೃಷ್ಟಾನ್ನಾ ಪಾನಂಕಿಮು ಗರ್ಧಭಾನಾಮ್ |
    ಅಂಧಸ್ಯ ದೀಪೋ ಬಧಿರಸ್ಯಗೀತಂ ಮೂರ್ಖಸ್ಯಕಿಂ ಧರ್ಮಕಥಾಪ್ರಸಂಗಃ ||

-ಡಾ.ಜಿ.ಎನ್.ಭಟ್



ಬುಧವಾರ, ಆಗಸ್ಟ್ 20, 2014

ಯಾಚನೆ

ವಾದಿಸಿ ವಾದಿಸಿ ಸೋತಿರುವೆ ಬಿಟ್ಟು ತೊಲಗೊಮ್ಮೆ
ಹೆಣವಾಗುವ ಮೊದಲು ಬದುಕ ಹಣೆಯಬೇಕಿದೆ.
ಅಳಿದುಳಿದಿಹ ಶಕ್ತಿಯನೂ ತಿಣು ತುಣುಕಿ ಹಿಂಡಿ ಹೀರಿ
ಅರೆಜೀವಿಯಾಗಿಸುವ ಮರುಳೇನು ನಿನಗೆ?!

ಯುದ್ಧ ಸಾರಿಲ್ಲ ನಾ, ಕೊಸರಿಲ್ಲ, ಕಸುವಿಲ್ಲ
ಬಗೆದರೂ ಹನಿ ನೀರು ಚಿಮ್ಮದಂಥ ಬರಡು ಒಡಲು.
ಕೊರೆವ ನಿನ್ನ ಕೋರೆ ಹಲ್ಲುಗಳ ಇಳಿಸಿ ಆಳ-ಅಗಲ ತೋಡುವಿಯೇಕೆ?
ಬರಿದೆ ನಿನ್ನಯ ಸಮಯ ವ್ಯರ್ಥ ಅಳಲು.

ದಿಕ್ಸೂಚಿಯಾಗು ನೀ, ಮುನ್ಸೂಚಿಯಾಗದಿರು
ಪಂಚೇಂದ್ರಿಯಗಳೇ ಸಾಕು ಇಹ ಲೋಕಕೆ.
ಕಾಲಕ್ಕೂ ಮುನ್ನ ಕಾಲನ್ನು ಎಳೆಯದಿರು, 
ನಿನ್ನದೇ ದೇಣಿಗೆ ಈ ನನ್ನ ಬದುಕು. 

-ತೇಜಸ್ವಿನಿ