ಮಂಗಳವಾರ, ಸೆಪ್ಟೆಂಬರ್ 10, 2013

ಹಬ್ಬ ಮತ್ತು ವ್ರತದ ನಡುವಿನ ವ್ಯತ್ಯಾಸ.

ಹಬ್ಬಕ್ಕೂ ವ್ರತಕ್ಕೂ ವ್ಯತ್ಯಾಸವಿದೆ. ಹಬ್ಬ/ಉತ್ಸವ ಸಾಮೂಹಿಕ, ಸಾರ್ವಜನಿಕ ಆಚರಣೆಯಾಗಿದೆ. ವ್ರತ ವೈಯಕ್ತಿಕ/ಕೌಟುಂಬಿಕ... ಒಮ್ಮೊಮ್ಮೆ ಒಂದು ಸಮುದಾಯಕ್ಕೆ ಸೀಮಿತ.

ಗಣೇಶ ಚತುರ್ಥಿ ಮೂಲತಃ ಶ್ರೀ ಸಿದ್ಧಿವಿನಾಯಕ ವ್ರತವೇ. ತಿಲಕರು ಸ್ವಾತಂತ್ರ್ಯ ಪೂರ್ವದಲ್ಲಿ ಸಂಘಟನೆಗಾಗಿ, ಎಲ್ಲಾ ಸಮುದಾಯಗಳ ಏಕತೆಗಾಗಿ ಇದಕ್ಕೆ ಒಂದು ಉತ್ಸವದ ಮೆರುಗುಕೊಟ್ಟು ಆಚರಿಸಲು ಕರೆಕೊಟ್ಟಿದ್ದರು. ಅದು ಈಗ ಹಬ್ಬವಾಗಿ, ಸಾಂಸ್ಕೃತಿಕ ಉತ್ಸವವಾಗಿ ಬೆಳೆದಿದೆ.

ನವರಾತ್ರಿ, ಗಣೇಶ ಚತುರ್ಥಿ ಇವೆಲ್ಲಾ ವ್ರತಗಳೇ. ನಾಗರ ಪಂಚಮಿಯೂ ಒಂದು ವ್ರತವೇ. ಆದರೆ ನವರಾತ್ರಿ, ನಾಗರ ಪಂಚಮಿ ಈಗ ಹಬ್ಬಗಳಾಗಿ ಆಚರಿಸಲ್ಪಡುತ್ತಿವೆ. ಕೃಷ್ಣಾಷ್ಟಮಿ, ರಾಮ ನವಮಿ - ಇವು ಕೃಷ್ಣ, ರಾಮರ ಹುಟ್ಟು ಹಬ್ಬಗಳಾಗಿವೆ. ಆದರೆ ಕೆಲವು ಮತಗಳಲ್ಲಿ ಕೃಷ್ಣ ಜಯಂತಿಯನ್ನೂ ವ್ರತವನ್ನಾಗಿ ಆಚರಿಸುತ್ತಾರೆ.

ನಿಜಾರ್ಥದಲ್ಲಿ ಉತ್ಸವವೆಂದು ಪರಿಗಣಿಸಲ್ಪಡುವುದು ದೀಪಾವಳಿಯೇ. ಕತ್ತಲೆಯಿಂದ ಬೆಳಕಿನೆಡೆಗೆ ನಮ್ಮನ್ನು ಒಯ್ಯುವ ಬೆಳಕಿನಹಬ್ಬ ನಿಜವಾಗಿಯೂ ಒಂದು ಸಾಮೂಹಿಕ, ಸಾರ್ವತ್ರಿಕ ಉತ್ಸವ/ಹಬ್ಬವಾಗಿದೆ.

ಆಚರಣೆ ಹಬ್ಬದ ರೀತಿಯಲ್ಲಾಗಿರಲಿ ಅಥವಾ ವ್ರತವಾಗಿರಲಿ... ಅದರ ಆಚರಣೆಯಿಂದ, ಅವರವರು ಆಚರಿಸುವ ರೀತಿ-ನೀತಿಯಿಂದ, ಆಚರಿಸುವವರಿಗೆ ಮತ್ತು ಆ ಆಚರಣೆಯನ್ನು ಹತ್ತಿರದಿಂದಲೋ ಇಲ್ಲಾ ದೂರ ನಿಂತೋ ನೋಡುವವರಿಗೆ ಸಂತಸ, ಸಮಾಧಾನ, ನೆಮ್ಮದಿ ತರುವಂಥದ್ದಾಗಿರಬೇಕು ಅಷ್ಟೇ. ಇಷ್ಟಕ್ಕೂ ಯಾವುದೇ ಹಬ್ಬಗಳಿರಲಿ, ವ್ರತಗಳಿರಲಿ, ಯಾವುದೇ ಆಚರಣೆ, ಸಂಪ್ರದಾಯಗಳಿರಲಿ... ಎಲ್ಲವೂ ಅವರವರ ಭಾವಕ್ಕೆ ಭಕುತಿಗೆ.  ಸಾಮಾಜಿಕ ಏಕತೆಯ ಜೊತೆ, ಸಹಿಷ್ಣುತೆಯೊಂದಿದ್ದರೆ ಎಲ್ಲವೂ ರಮಣೀಯ, ಆದರಣೀಯವೇ. "ಯದ್ಭಾವಂ ತದ್ಭವತಿ" :)

ನನಗಂತೂ "ತತ್ತ್ವಮಸಿ" ಇಷ್ಟ. ಸಮುದ್ರದಲ್ಲಿ ತೆರೆಗಳಿರುವಂತೇ... ಪರಮಾತ್ಮನಲ್ಲಿ ಆತ್ಮ.... ನನ್ನ ಆತ್ಮದಲ್ಲಿ ‘ಅವನ’ ಒಂದು ಅಂಶ.... :)

-ತೇಜಸ್ವಿನಿ.

ಭಾನುವಾರ, ಸೆಪ್ಟೆಂಬರ್ 8, 2013

"ಮದ್ರಾಸ್ ಕೆಫೆ" : ಒಳಗೊಂದು ಕಿರುನೋಟ

Courtesy : http://www.tehelka.com
ಸಾಮಾಜಿಕ ಜಾಲಗಳಲ್ಲಿ ಈ ಚಲನಚಿತ್ರದ ಬಗ್ಗೆ ಅತ್ಯುತ್ತಮ ಪ್ರತಿಕ್ರಿಯೆಯನ್ನು ನೋಡಿದ ಮೇಲೆ ನೋಡಲೇಬೇಕೆಂಬ ತುಡಿತ ಜಾಸ್ತಿಯಾಗಿ "ಮದ್ರಾಸ್ ಕೆಫೆ" ರುಚಿಯನ್ನು ನೋಡಿದ್ದಾಯಿತು. ಕೆಫೆಯ ಪರಿಮಳ ಎಷ್ಟು ಗಾಢವಾಗಿ ಬಂತೋ, ನೋಡಿದ ಮೇಲೆ ಅದರ ಸ್ವಾದ ಓದಿದಷ್ಟು /ಕೇಳಿದಷ್ಟು ಅದ್ಭುತ ಎಂದೆನಿಸಲಿಲ್ಲ! ಏನೋ ಸಂಭವಿಸಲಿದೆ... ಅದೇನೆಂದು ಗೊತ್ತಿದ್ದರೂ, ಅದಕ್ಕಿಂತಲೂ ಭಿನ್ನವಾದದ್ದನ್ನು ಕಥೆ ಹೇಳುತ್ತದೆ ಎಂದು ನಿರೀಕ್ಷಿಸುತ್ತಲೆ, ನಿರೀಕ್ಷೆ ಹುಟ್ಟಿಸುತ್ತಲೇ ಸಾಗುವ ಚಿತ್ರ, ಕೊನೆಯಲ್ಲಿ ನಿರಾಸೆಹುಟ್ಟಿಸಿಬಿಟ್ಟಿತು. ಬಹುಶಃ ಪ್ರತಿಕ್ರಿಯೆಗಳಿಂದ ಒಂದು ಕಲ್ಪನೆಕಟ್ಟಿಕೊಂಡು ಅತಿ ನಿರೀಕ್ಷೆಯಿಂದ ನೊಡಿದ್ದಕ್ಕೇ ಇದ್ದಿರಲೂಬಹುದು.... ತುಸು ಭ್ರಮನಿರಸನವಾಯಿತು. 

 ಆದರೆ ಇದು ಖಂಡಿತ ಒಂದು ಉತ್ತಮ ಚಿತ್ರವೆನ್ನುವುದರಲ್ಲಿ ಸಂಶಯವಿಲ್ಲ. ಕಥೆಯನ್ನು ಕಟ್ಟಿಕೊಟ್ಟ ರೀತಿ, ಓಘ, ಬೆಳವಾಡಿಯವರ ಅದ್ಭುತ ನಟನೆ, ಹಾಗೇ ಜಾನ್ ಅಬ್ರಹಾಂ‌ನಲ್ಲಿನೊಳಗಿನ ನಟನೊಬ್ಬನ ಕಿರು ಪರಿಚಯ, ಆ ಸಮಯದಲ್ಲಿ ಏನೇನು ಒಳಸಂಚುಗಳೆಲ್ಲಾ ಆಗಿದ್ದಿರಬಹುದು ಎಂಬ ಒಂದು ಸ್ಥೂಲ ಚಿತ್ರಣವನ್ನು ಪ್ರೇಕ್ಷರಮುಂದೆ ತಂದ ರೀತಿ, ಎಲ್ಲವೂ ಇಷ್ಟವಾಯಿತು. ಆದರೆ ಕೆಲವು ಅಸಂಗತಗಳು, ಅಸಹಜ ಸಂಗತಿಗಳೂ ಕಂಡುಬಂದವು. (ಇದು ನನಗೆ ಅನಿಸಿದ್ದು.. ನನ್ನ ವೈಯಕ್ತಿಕ ಅಭಿಪ್ರಾಯವಷ್ಟೇ!). 
ಧನಾತ್ಮಕ ಹಾಗೂ ಋಣಾತ್ಮಕ ಎರಡೂ ಅಂಶಗಳನ್ನು ಹೀಗೇ ಪಟ್ಟಿಮಾಡಬಹುದು.

ಧನಾತ್ಮಕ ಅಂಶಗಳು.... 

೧. ಈ ಮೊದಲೇ ಇಂತಹ ಕಥೆಗಳು ಬಂದಿದ್ದರೂ ನಿರೂಪಿಸಿದ ಶೈಲಿಯಲ್ಲಿ ವಿಭಿನ್ನತೆಯಿದೆ. ಖಳನಾಯಕ ಪಾತ್ರದಲ್ಲಿ ಬಹುಬೇಗ ಮಿಂಚಲು ಅವಕಾಶವಿದ್ದರೂ, ಅತಿಯಾಗದಂತೇ ಆ ಪಾತ್ರವನ್ನು ಸಂಯಮದಿಂದ ನಿರೂಪಿಸುವುದೂ ಅತ್ಯವಶ್ಯಕವಾಗುತ್ತದೆ. ಅದನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ ಪ್ರಕಾಶ್ ಬೆಳವಾಡಿಯವರು. ಅವರ ನಟನೆ ನಿಜಕ್ಕೂ ತುಂಬಾ ಮೆಚ್ಚುಗೆಯಾಯಿತು. ಫೋರ್ಸ್, ಪಾಪ್, ಝಿಂದಾ, ಟ್ಯಾಕ್ಸಿ ನಂ. ೯೨೧೧, ಕರಮ್ ಮುಂತಾದ ಚಲನಚಿತ್ರಗಳಲ್ಲಿ ಜಾನ್ ಅಬ್ರಾಹಂದು ಗಂಭೀರ ಪಾತ್ರವೇ. ಪ್ರಸ್ತುತ ಚಿತ್ರದಲ್ಲೂ ಆತ ಅದೇ ರೀತಿ ನಟಿಸಿದ್ದಾನೆ. ಅಂತಹ ಹೊಸತನವಿಲ್ಲದಿದ್ದರೂ, ನಟನಾಗುವ ಪ್ರಕ್ರಿಯೆಯಲ್ಲಿ ಪಳಗುತ್ತಿರುವುದು ಕಂಡುಬರುತ್ತದೆ.

೨. ಕಥಾವಸ್ತುವಿಗೊಂದು ಉತ್ತಮ ವೇಗವಿದೆ... ಅಲ್ಲಲ್ಲಿ ಸ್ವಲ್ಪ ಹಿನ್ನಡೆ ಆದಂತೆ ಭಾಸವಾದರೂ, ಕುತೂಹಲ ಉಳಿಸಿಕೊಳ್ಳುತ್ತದೆ. ಹಿನ್ನೆಲೆ ಸಂಗೀತ ಪೂರಕವಾಗಿದೆ. ಕೋಡ್ ವರ್ಡ್‌ಗಳು ಹೇಗೆಲ್ಲಾ ಇರುತ್ತವೆ.. ಎಷ್ಟು ಗೂಢವಾಗಿರುತ್ತವೆ ಎನ್ನುವುದನ್ನು ನೋಡಿದಾಗ ಅಚ್ಚರಿ ಮೂಡುತ್ತದೆ.

೩. ಅಂತರ್ಯುದ್ಧದ ಕರಾಳ ಮುಖ, ಸಾವು, ನೋವು, ಕೊಳಕು ರಾಜಕೀಯವನ್ನು ಕಣ್ಮುಂದೆ ಕಟ್ಟಿಕೊಟ್ಟ ರೀತಿ ಮನಮುಟ್ಟಿತು.

ಕೆಲವು ಅಸಂಗತ, ಅಸಹಜ ಅಂಶಗಳು....

೧. ಕಥೆಯನ್ನು ನೋಡುತ್ತಿದ್ದಂತೇ, ಇಂತಹ ಕಥೆಯನ್ನೇ ಆಧರಿಸಿ ಬಂದಿದ್ದ ಕನ್ನಡ ಚಲನಚಿತ್ರವಾದ "ಸಯನೈಡ್" ಮತ್ತು ಸಂತೋಷ್ ಶಿವನ್ ನಿರ್ದೇಶನದ ತಮಿಳ್ ಚಲನಚಿತ್ರ "ದಿ ಟೆರರಿಸ್ಟ್" ತುಂಬಾ ನೆನಪಿಗೆ ಬಂತು. ನಿಜ ಹೇಳಬೇಕೆಂದರೆ ನನಗೆ ಸಯನೈಡ್ ಮತ್ತು ದಿ ಟೆರರಿಸ್ಟ್ ಚಿತ್ರಗಳ ನಿರ್ದೇಶನ, ಚಿತ್ರಣ ಮತ್ತೂ ಹೆಚ್ಚು ಗಟ್ಟಿಯಾಗಿದೆ ಎಂದೆನಿಸುತ್ತಾ ಹೋಯಿತು. (ಈ ಎರಡೂ ಚಿತ್ರಗಳನ್ನು ನಾನು ಎರಡೆರಡು ಬಾರಿ ನೋಡಿದ್ದೇನೆ.). ಸರಿ ಸುಮಾರು ಒಂದೇ ರೀತಿಯ ಕಥಾವಸ್ತುವನ್ನೊಳಗೊಂಡಿರುವ ಈ ಮೂರೂ ಚಲನಚಿತ್ರಗಳು (ಮದ್ರಾಸ್ ಕೆಫೆ, ದಿ ಟೆರರಿಸ್ಟ್ ಮತ್ತು ಸಯನೈಡ್) ಅಪ್ರಯತ್ನವಾಗಿ ಹೋಲಿಕೆಗೆ ತೊಡಗಿಬಿಡುತ್ತವೆ. 
Courtesy : www.filmlinks4u.net 

೨. ಮದ್ರಾಸ್ ಕೆಫೆಯ ಆದಿ - ಅಂತ್ಯ ಎರಡೂ ಅಷ್ಟು ರುಚಿಸಲಿಲ್ಲ. ಕನ್ಫೆಶನ್ ಮಾಡಿಕೊಳ್ಳುವ ಉದ್ದೇಶವೇ ಕೊನೆಯಲ್ಲಿ ಸ್ಪಷ್ಟವಾಗುವುದಿಲ್ಲ. ಮೊದಲು ಕನ್ಫೆಶನ್ ಮಾಡಿಕೊಳ್ಳುವುದನ್ನು ನೋಡಿದಾಗ ಒಂದೋ ಈತನಿಂದಲೇ ಏನೋ ದೊಡ್ಡ ಅವಘಡ ಸಂಭವಿಸಿದೆ, ಏನೋ ಮಾಡಬಾರದ್ದನ್ನೇ ಮಾಡಿದ್ದಾನೇನೋ ಎಂದೆನಿಸಿ, ಕೊನೆಯಲ್ಲಿ ಏನೂ ಇಲ್ಲ ಅನ್ನೋ ಭಾವ ಮೂಡಿಸಿತು. ಪತ್ನಿ ತೀರಿಹೋದಗಲೂ ಅಲ್ಕೋಹಾಲಿಕ್ ಆಗದ ನಾಯಕ, ಹೋರಾಡಿ, ಗುದ್ದಾಡಿ ಪ್ರಯತ್ನಿಸಿದರೂ ಮಾಜಿ ಪ್ರಧಾನಿಯೋರ್ವರನ್ನು ಉಳಿಸಲಾಗಲಿಲ್ಲವೆಂದೇ ತನ್ನ ಕೆಲಸ, ಬದುಕು ಎಲ್ಲಾ ಬಿಟ್ಟು, ಕುಡಿತಕ್ಕೆ ದಾಸನಾಗಿ ಕೊನೆಯಲ್ಲಿ ಅಪರಾಧಿಯಂತೇ ಕನ್ಫೆಶನ್‌ಗೆ ಬಂದಿದ್ದು ಯಾಕೋ ಅಸಹಜ ಅನ್ನಿಸಿತು. ನಾಯಕನ ನಿರ್ಲಕ್ಷ್ಯ, ಅಸಡ್ಡೆತನದಿಂದಲೇ ಕೊಲೆಯಾಗಿದ್ದರೆ ಬೇರೆ ಮಾತು. ಅವನ ಕೈಮೀರಿದ ಪರಿಸ್ಥಿತಿಯಲ್ಲಾದ ದುರ್ಘಟನೆಯ ಪೂರ್ಣ ಜವಾಬ್ದಾರಿ ತಾನೆಂದು ಆತ ಭಾವಿಸಿದ್ದು ತುಸು ಅತಿರೇಕ ಎಂದೆನಿಸಿತು. 

೩. ಓರ್ವ ವಿದೇಶಿ ಪತ್ರಕರ್ತಳಿಗೆ ಸಿಗುವ ಮಾಹಿತಿಗಳು ಭಾರತದ ‘ರಾ’(ಇಂಟೆಲಿಜೆನ್ಸ್) ಸಂಸ್ಥೆಗೆ ಸಿಗದಿರುವುದು, ತುಂಬಾ ಪ್ರಮುಖ ಮಾಹಿತಿಗಳನ್ನೆಲ್ಲಾ ನಾಯಕ ಆ ಪತ್ರಕರ್ತೆಯಿಂದಲೇ ಪಡೆದುಕೊಳ್ಳಲು ಪರದಾಡುವುದು.. .ಇವೆಲ್ಲಾ ದೇಶದ ಆಂತರಿಕ ಒಳಗುಗುಟ್ಟುಗಳು ಬೇಹುಗಾರರಿಗೆ ಸಿಗದೇ ಪತ್ರಕರ್ತರಿಗೇ ಮೊದಲು ಸಿಗುತ್ತದೆ ಅನ್ನೋ ಸಂದೇಶವನ್ನು ಕೊಡುವಂತಿದೆಯೇನೋ ಅನ್ನಿಸಿತು... ಅಸಂಗತವೆನಿಸಿತು. (ಇದು ಸತ್ಯವೇ ಇರಬಹುದು... ಅದನ್ನೇ ಚಿತ್ರವೂ ತೋರಿಸಿರಬಹುದು. ಸತ್ಯವೇ ಆಗಿದ್ದರೆ ಮಾತ್ರ.....!!) 

"ದಿ ಟೆರರಿಸ್ಟ್" ಚಲನಚಿತ್ರದಲ್ಲಿ ಖಳನಾಯಕಿ ಮತ್ತು ನಾಯಕಿ ಎರಡೂ ಪಾತ್ರವನ್ನು ಅತ್ಯದ್ಭುತವಾಗಿ  ನಟಿಸಿದ್ದಾರೆ ನಟಿ ಆಯೇಷಾ ಧಾರ್ಕರ್. ಆದಿಯಲ್ಲಿ ಕಾರಣಾಂತರಗಳಿಂದ ಕೊಲೆಗಡುಕಿಯಾದವಳು, ಮಾನವ ಬಾಂಬ್ ಆಗಿ ಅತಿ ಗಣ್ಯ ವ್ಯಕ್ತಿಯೋರ್ವರನ್ನು ಕೊಲ್ಲುವ ಸಂಚು ರೂಪಿಸಿ ಬರುವವಳು, ಅಂತ್ಯದಲ್ಲಿ ಜೀವವೊಂದನ್ನು ಉಳಿಸುವ ಹೆಣ್ಣಾಗಿ ಇನ್ನು ಎ.ಎಂ.ಆರ್ ರಮೇಶ್ ನಿರ್ದೇಶನದ ‘ಸಯನೈಡ್’ ಚಲನಚಿತ್ರವನ್ನು ನೋಡದವರೇ ಕಡಿಮೆ ಎಂದೆನ್ನಬಹುದು! ರವಿ ಕಾಳೆ, ತಾರಾ, ಅವಿನಾಶ್, ರಂಗಾಯಣ ರಘು ಇವರುಗಳ ಅಭಿನಯವನ್ನು ಮರೆಯಲೇ ಸಾಧ್ಯವಿಲ್ಲ. 
Courtesy : www.imdb.com
ಪರಿವರ್ತನೆಗೊಳ್ಳುವ(ಆಕೆ ಉಳಿಸುವ ಆ ಜೀವ ಯಾವುದೆನ್ನುವುದೇ ಚಿತ್ರದ ಹೈಲೈಟ್!!) ಅವಳ ಪಾತ್ರ ಚಿತ್ರಣವೇ ಮನಸೂರೆಗೊಳ್ಳುತ್ತದೆ. ಇಲ್ಲೂ ಅದೇ ಮಾಜಿ ಪ್ರಧಾನಿಯನ್ನು ಕೊಲ್ಲುವ ಸಂಚು ಕಥೆಯ ಮೂಲ ವಸ್ತುವಾಗಿರುವುದರಿಂದ ಹೋಲಿಕೆ ಬೇಡ ಬೇಡವೆಂದರೂ, ಕಥಾವಸ್ತು ಒಂದೇ ರೀತಿಯಿದ್ದಾಗ ಚಲನಚಿತ್ರಗಳು, ಪಾತ್ರವರ್ಗಗಳು ತಾವೇ ಕಣ್ಮುಂದೆ ಬಂದು ಹೋಲಿಸಿಕೊಳ್ಳಲು ತೊಡಗಿಬಿಡುತ್ತವೆ.
ಈ ಎರಡೂ ಚಿತ್ರಗಳ ಲಿಂಕ್‌ಗಳು ಈ ಕೆಳಗಿನಂತಿವೆ. ಆಸಕ್ತರು ನೋಡಬಹುದು.



ಒಟ್ಟಿನಲ್ಲಿ ಮದ್ರಾಸ್ ಕೆಫೆ ಅತ್ಯುತ್ತಮವಲ್ಲದಿದ್ದರೂ, ಒಂದು ನೈಜ ಕಥಾವಸ್ತುವನ್ನೊಳ, ಸದಭಿರುಚಿಯ ಚಿತ್ರ. ಒಮ್ಮೆ ನೋಡಲು ಖಂಡಿತ ಅಡ್ಡಿಯಿಲ್ಲ... ಅತಿ ನಿರೀಕ್ಷೆ ಬೇಡ ಎನ್ನುವುದು ನನ್ನ ಅಭಿಮತ.

-ತೇಜಸ್ವಿನಿ.