ಮಂಗಳವಾರ, ಫೆಬ್ರವರಿ 21, 2012

ಸುಖಿಯಾಗಿರಲೊಂದೇ ಸೂತ್ರ!?

ನೋಟ ಚಾಚುವಷ್ಟೂ ಚಾಚಿ,
ಇದ್ದ ಬಿದ್ದ ದೃಶ್ಯಗಳನ್ನೆಲ್ಲಾ ಸೆರೆ ಹಿಡಿದರೂ,
ತನಗೆ ಬೇಕಾದ್ದನ್ನಷ್ಟೇ ಮನಸೊಳಗೆ
ಪ್ರಿಂಟ್ ಹಾಕುವ ಈ ಕಣ್ಗೋಲಿಗಳಂತೇ ಈ
ಬದುಕೂ ಜಾಣ್ಮೆಯನ್ನು  ಕಲಿತಿದ್ದರೆ......
ಸುಖಿಯಾಗಿರುತ್ತಿದ್ದೆನೇನೋ!

ತನಗೆಸೆದ ಎಲ್ಲಾ ಕಸ ಗುಡ್ಡೆಗಳ
ಒಂದಿನಿತೂ ಬೇಸರಿಸದೇ ಕ್ಷಣ ಒಳಗೆಳೆದುಕೊಂಡು,
ಅಲೆಗಳ ತಲೆಯ ಮೇಲೇರಿಸಿಕೊಂಡು ಬಂದು,
ಎಲ್ಲವನೂ ಮತ್ತೆ ದಡಕೆಸೆದು, ಮರಳ ಕೊಡಗುವ ಆ
ಸಾಗರನಂತೆ ನಾನಿರುವಂತಾಗಿದ್ದರೆ....
ಸುಖಿಯಾಗಿರುತ್ತಿದ್ದೆನೇನೋ!

ಗೆಳತಿ ಮುರಿದ ಕಡ್ಡಿ, ಗೆಳೆಯ ಎಳೆದ ಜಡೆ
ಎಲ್ಲವನೂ ಮರೆತು, ಮತ್ತೆ ಬೆರೆತು
ನಗುವಿನಾಚೆಯ ನೋವ ಅನುಭವವ
ಅರಿಯಲಾಗದ ಬಾಲ್ಯದ ಎಳೆತನವ ನಾನೂ-
ಒಳಗೆಳೆದುಕೊಳ್ಳುವಂತಿದ್ದರೆ....
ಸುಖಿಯಾಗಿರುತ್ತಿದ್ದೆನೇನೋ!

-ತೇಜಸ್ವಿನಿ ಹೆಗಡೆ.

ಬುಧವಾರ, ಫೆಬ್ರವರಿ 8, 2012

ಇದ್ದಲ್ಲೇ ಇಡು ದೇವ್ರೆ....

ರಿಯೊಳ್ಗೆ ಒಲೆ ಹತ್ರ ಕುಂತ್ಕಂಡು ಅಮ್ಮ ಹಾಕಿದ್ದ ಬಿಶಿ ದೋಸೆಗೆ ಅದ್ಕಂಡು ತಿಂಬಲೆ ನಾಲ್ಕು ಚಮ್ಚ ಬೆಲ್ಲಕ್ಕೆ ಒಂದು ದೊಡ್ಡ್ ಚಮ್ಚ ಆಕಳ ತುಪ್ಪ ಹಾಯ್ಕಂಡು, ಅದನ್ನೇಯಾ ಗಿರಗಿರನೆ ತಿರ್ಗ್ಸಿ ಪಾಯ್ಸ ಮಾಡ್ತಿದ್ದಿದ್ರ ತಲೆಯೊಳ್ಗೆಲ್ಲಾ ಕಲ್ಲೆದೇ ಯೋಚ್ನೆ ಗಿರ್ಕಿ ಹೊಡೀತಾಯಿತ್ತು. ‘ಈ ಕಲ್ಲೆ ಎಂತಕ್ಕೆ ಇನ್ನೂ ಬಂಜಿಲ್ಯನಪ...!? ಇಷ್ಟೊತ್ತಿಗಾಗ್ಲೇ ಯನ್ನ ದೋಸೆ ಪಾಲು ಕೇಳಲೆ ಹಾಜರಾಗಕಾಗಿತ್ತು...ಇನ್ನೂ ಪತ್ತೆಯಿಲ್ಲೆ ಅಂದ್ರೆ ಎಂತೋ ಪರಾಮಶಿ ಆಗಿರವಪ್ಪ...’ ಹೀಂಗೆಲ್ಲಾ ಯೋಚ್ನೆಲಿ ಬಿದ್ದಿದ್ದಕ್ಕೆ ತಾನು ಬರೀ ಬೆಲ್ಲ ತುಪ್ಪನೇ ನೆಕ್ತಾಯಿದ್ದಿ ಹೇಳಿ ಗೊತ್ತೇ ಆಜಿಲ್ಲೆ. ಆದ್ರೆ ಅಲ್ಲೇ ಒಲೆ ಪಕ್ಕ ಕುತ್ಕಂಡು ದೋಸೆ ಎರ್ದು ಹಾಕ್ತಿದ್ದ ಅದ್ರಮ್ಮ ಶಾರದೆಗೆ ಕಂಡ್ಬುಡ್ಚು. "ಕೂಸೆ.. ಅನಘ... ಅದೆಲ್ಲಿದ್ದೇ ನಿನ್ತಲೆ? ಯೆಂತ ಮಳ್ವೇಶನೇ ಇದು? ಇದ್ಯಾವ್ರೀತಿ ತಿನ್ನಾಣ್ವೋ ಎಂತೋ! ಬಿಶಿ ದೋಸೆನೇ ಬೇಕು ಹೇಳಿ ಯನ್ನ ಜೀವ ತಿಂತೆ... ಈಗ ನೋಡಿರೆ ಹೀಂಗೆ! ಏಳ್ವರ್ಷದ ಕೋಣಾದ್ರೂ ಬುದ್ಧಿ ಮಾತ್ರ ಎರಡ್ರದ್ದೇ ಸೈ..." ಹೇಳಿ ಗದ್ರಿದ್ದೇ ತಡ ಬಿರ್‌ಬಿರ್ನೆ ದೋಸೆ ಮುರ್ಕಂಡು ಬಾಯಿಗೆ ಹಾಕ್ತೋ ಇಲ್ಯೋ... ಹೆಬ್ಬಾಗ್ಲಲ್ಲಿ ಕಲ್ಲೆ ದನಿ ಕೇಳಿಶ್ಚು.

ಜಗ್ಲೀಲಿ ಕುತ್ಕಂಡು ಕವ್ಳದ್ ಸಂಚಿ ಸೊಂಯಿಸ್ತಿದ್ದ ಅಜ್ಜಮ್ಮನ್ನ "ಆಯಮ್ಮಾ ಅಂದಿ.." ಎಂದು ಮಾತಾಡಿಸ್ತಾನೇ ಪ್ರಧಾನ್‌ಬಾಗ್ಲು ದಾಟಿ ಒಳ ಜಗ್ಲಿಗೆ ಜಿಗೀತಾ ಹೋತು ಕಲ್ಲೆ. "ಅನು... ಒಳಗಿದ್ಯನೇ...? ಆಸರಿ ಕುಡ್ದಾತಾ...?" ಕೇಳ್ತಾ ಅಡ್ಗೆ ಮನೆ ಕಡೆ ಹೋದ ಕೂಸ್ನ ಕಂಡು ಶಾರದೆ ಅತ್ತೆ ಸೀತಮ್ಮಂಗೆ ಕಿರಿಕ್ ಆತು. "ಶುದ್ಧ ಆಶೆಬುರ್ಕ್ ಕೂಸು... ಸಮಾ ಟೇಮಿಗೆ ಬದ್ವುಡ್ತು ದೋಸೆ ಮುಕ್ಕಲೆ... ನಮ್ಮನೆ ಕೂಸಿಗೂ ತಲೆ ಇಲ್ಲೆ.. ಲಗೂನೆ ತಿಂದ್ಕಂಡು ಹೊರ್ಗೆ ಇರ್ದೇ ಅದ್ನೂ ಕೂರ್ಸಿ ತಿನ್ಸಿ ಸಂಭ್ರಮ ಮಾಡ್ತು..." ಹೇಳಿ ವಟಗುಡದೇನೂ ಅಡ್ಗೆ ಮನೇಲಿ ದೋಸೆ ಮುಕ್ತಿದ್ದ ಕಲ್ಲೆ ಕಿವಿಗೆ ಬೀಳು ಹಾಂಗಿತ್ತಿಲ್ಲೆ... ಬಿದ್ರೂವಾ ಅದ್ಕೆ ಎಂತೂ ಅನಿಸ್ತಾನೂ ಇತ್ತಿಲ್ಲೆ. ಅನಘೆಗಿಂತ ಎರಡೇ ವರ್ಷ ದೊಡ್ಡಕಿದ್ದ ಕಲ್ಲೆ ಮನೇಲಿ ತುಂಬ್ಕ ಇದ್ದಿದ್ದು ಬರೀ ಬಡತನ. ಅದ್ರ ಅಪ್ಪಯ್ಯ ಶ್ರೀನಿವಾಸ ಭಟ್ಟ ಶುದ್ಧ ಸೋಂಬೇರಿ. ಹೆಸ್ರಿಗ್‌ಪೂರ್ತೆ ಪುರೋಹಿತ ಭಟ್ಟ.... ಹೊರ್ಗೆ ಬಿದ್ದು ದುಡ್ಯದು ಅಂದ್ರೆ ನೂರಾಯೆಂಟು ನೆಪ. ಇಂಥದ್ರಲ್ಲಿ ಅವ್ನ ಹೆಂಡ್ತಿ ಲಕ್ಷ್ಮೀನೇ ಅವ್ರಿವ್ರ ಮೆನೇಲಿ ಕಸ-ಮುಸ್ರೆ, ಹಿಟ್ಟು-ಹುಡಿ ಮಾಡ್ಕಂಡು ಹೇಂಗೋ ಗಂಡಂದು, ಮೂರ್ಮಕ್ಕಳಿಂದು ಹೊಟ್ಟೆ ಹೊರೀತಿತ್ತು. 

ಸಣ್ಣಿರ್ಬೇಕಿಂದ್ರೂವಾ ಅನಘ, ಕಲಾವತಿ ಕಡ್ಡಿ ದೋಸ್ತ್ರು. ಕಡ್ಡಿ ಅಂದ್ರೆ ಬಳಪದ ಕಡ್ಡಿ... ಶಾಲೆ ಅಂದ್ರೆ ಎಂತು ಹೇಳೇ ಗೊತ್ತಿಲ್ದೇ ಇಪ್ಪು ಕಲ್ಲೆಗೆ ಬಿಳೀ ಬಣ್ಣದ ಬಳಪದ ಕಡ್ಡಿ ಅಂದ್ರೆ ರಾಶಿ ಪ್ರೀತಿ. ಅದ್ಕೆ ಅಕ್ಷರ ಕಲ್ಸಿದ್ದೇ ಅನಘೆ. ತನ್ನ ಹತ್ರಿದ್ದ ಬಳಪನೆಲ್ಲಾ ಚೂರು ಮಾಡಿ ಅದ್ಕೂ ಕೊಡ್ತಿತ್ತು. ಇದ್ರಿಂದಾಗಿ ಮನೇಲಿ ಎಷ್ಟೋ ಸಲ ಬೈಸ್ಕಂಡಿದ್ದೂ ಇದ್ದು...."ನೀ ಎಂತ ಬಳ್ಪನೇ ತಿಂತ್ಯನೇ ಕೂಸೆ... ಬರ್ಯದು ನಾಲ್ಕು ಅಕ್ಷರನೂ ಇಲ್ಲೆ.. ಕಡ್ಡಿ ಮಾತ್ರ ಎರ್ಡು ದಿನಕ್ಕೇ ನಾಪತ್ತೆ..." ಹೇಳಿ ಅಪ್ಪಯ್ಯ ಅದೆಷ್ಟು ಸಲ ಗದ್ರಿಸಿದ್ನೋ ಅದ್ಕೇ ಗೊತ್ತಿಲ್ಲೆ. ಮನೇಲಿ ಸಿಗ್ತಾಯಿದ್ದ ಗಂಜಿ ಬೇಜಾರು ಬಂದ್ ಕೂಡ್ಲೇ ಶಾರದೆ ಹಿಂದೆ ಮುಂದೆ ಸುತ್ತದು. ಪಾಪದ್ ಕೂಸ್ನ ಕಷ್ಟ ಗೊತ್ತಿಪ್ಪು ಶಾರದೆ ಅದ್ರ ತಂಗ್ಯಕ್ಕಗೂ ಸೇರ್ಸಿ ಸ್ವಲ್ಪ ಜಾಸ್ತಿನೇ ತಿಂಡಿ ಕಟ್ಟಿ ಕೊಡ್ತಿತ್ತು. 

ಇವತ್ತೆಂತಕ್ಕೋ ಕಲ್ಲೆ ಮನ್ಸು ಎಲ್ಲೋ ಇದ್ದಾಂಗೆ ಇತ್ತು... ದೋಸೆ ತಿಂತಾ ಇದ್ರೂ ಎಂತೋ ಯೋಚ್ನೆಲಿ ಬಿದ್ದಾಂಗೆ ಇದ್ದ ಕೂಸ್ನ ಕಂಡು ಶಾರದೆ ಕೇಳ್ಚು.."ಎಂತಾ ಆತೆ ತಂಗಿ? ಮನೇಲಿ ಎಲ್ಲಾ ಆರಮಾ? ಸಮಾ ತಿಂತಾ ಇಲ್ಲೆ ಇಂದು..." ಹೇಳಿ ಕೇಳಿದ್ದೇ ತಡ, ಇದ್ಕೇ ಕಾಯ್ತಾ ಇದ್ದಾಂಗೆ... ತಾನು ಬರ್ಬೇಕಿದ್ರೆ ಕೇಳ್ದ ಹೊಸ ವಿಷ್ಯವನ್ನ ಹೊರ್ಗೆ ಹಾಕಲೆ ಶುರು ಮಾಡ್ಚು ಕಲ್ಲೆ.

"ಶಾರ್ದತ್ತೆ... ಆನು ಬರ್ತಿರ್ಬೇಕಿರೆ... ನಿಮ್ಮನೇ ತೋಟ್ದ ಕೆಳ್ಗೆ ಮೂಲೆ ಮನೆ ಶಂಕ್ರಣ್ಣ, ಯನ್ನಪ್ಪಯ್ಯ, ಆಚೆಕೇರಿ ಗಣಪಣ್ಣ, ಶಾನಭೋಗ್ರು, ಸುಬ್ಬುಮಾಮ ಎಲ್ಲಾ ನಿತ್ಕಂಡು ಅದ್ಯಾವ್ದೋ ಪ್ಯಾಟೆಯಿಂದ ಬಂದ ದೊಡ್ಡ ಜನ್ರ ಸಂತಿಗೆ ಗಟ್ಟಿಯಾಗಿ ಮಾತಾಡ್ತಾ ಇದ್ದಿದ್ವಪ್ಪಾ... ಎಲ್ರೂ ಒಂಥರಾ ಇದ್ದಿದ್ದೊ... ನಂಗೆಂತೂ ಸಮಾ ಗೊತ್ತಾಜಿಲ್ಲೆ... ನೀನು ಸುಬ್ಬು ಮಾಮನ್ನ ಕೇಳು.. ಈಗ ಒಳ್ಗೆ ಬಕ್ಕು ಅಂವ.." ಹೇಳಿ ಮುಗ್ಸಿದ್ದೋ ಇಲ್ಯೋ ಶಾರದೆ ಗಂಡ ಸುಬ್ಬರಾಯ ಹೆಗಡೆ ಒಳ್ಗೆ ಬಂದ. ಒಳ್ಗೆ ಬಂದವ್ನೇ ಸುಸ್ತು ಹೊಡ್ದು ಅಲ್ಲೇ ಮಣೆ ಹಾಕ್ಕಂಡು ಕೂತ್ಕಂಡ ರೀತಿ, ಗಾಬ್ರಿ ಬಿದ್ದ್ ಮುಖ.. ಎಲ್ಲಾ ನೋಡಿ ರಾಶಿ ಹೆದ್ರಿಕೆ ಆತು ಅದ್ಕೆ. ಹಾಂಗೆ ನೋಡಿರೆ ಸುಬ್ಬಣ್ಣ ಮೊದ್ಲಿಂದ್ಲೂ ಸ್ವಲ್ಪ ಪುಕ್ಲೇಯಾ. ಊರಲ್ಲೆಂತಾ ಸಣ್ಣ ಪುಟ್ಟ ಗದ್ಲ ಆದ್ರೂ ಒಂದೆರ್ಡು ದಿನ ಮನೆಯಿಂದ ಹೊರ್ಗೇ ಬೀಳಂವಲ್ಲ. ಶಾರದೆನೇ ಎಷ್ಟೋ ಗಟ್ಟಿಗಿತ್ತಿ. ಆದ್ರೆ ಇವತ್ತೆಂತಕ್ಕೋ ಯಜಮಾನ್ರು ಜಾಸ್ತಿನೇ ಭಯ ಬಿದ್ದಾಂಗೆ ಕಂಡು, ಕಣ್ಸನ್ನೆ ಮಾಡು ಗಂಡನ್ನ ಹಿತ್ಲಿಗೆ ಕರತ್ತು. ಸೊಕಾಶಿ ಹಿತ್ಲಕಡೆ ಬಂದವ್ನೇ ಅಲ್ಲೇ ಇದ್ದ ಬಟ್ಟೆ ಒಗ್ಯ ಕಲ್ಮೇಲೆ ಕುಂತ್ಕಂಡು ವಿಷ್ಯಾನೆಲ್ಲಾ ಸಮಾ ಹೇಳಿದ್ದೇ ತಡಾ ಶಾರದೆ ಎದೆನೂ ಜೋರಾಗಿ ಹೊಡ್ಕಳಲೆ ಶುರುವಾತು.

-೨-

ಶಿರ್ಸಿ ತಾಲೂಕಿನ ಆಸ್ಪಾಸಿಪ್ಪು ಹತ್ತು ಹಳ್ಳಿ ಸುತ್ತ ತಣ್ಣಗೆ ಹರಿಯೋ ಅಘನಾಶಿನೀ ನದಿಗೆ ಅಣೆಕಟ್ಟು ಹಾಕವು ಹೇಳಿ ಸರ್ಕಾರದವು ಪರಾಮರ್ಶಿ ನಡಿಸ್ತಾಯಿದ್ದೊ..... ಇಷ್ಟಲ್ದೇ ನದಿಗೆ ಒಡ್ಡನ್ನ ಯಮ್ಮನೆ ಹತ್ರನೇ ಎಲ್ಲೋ ಹಾಕ್ತ್ವಡ ....ಇದ್ರಿಂದೆಲ್ಲಾ ಯಂಗಕಿಗೇ ಭಯಂಕರ ತೊಂದ್ರೆ ಅಪ್ಪುದಿದ್ದು ಎಂದೆಲ್ಲಾ ಹೇಳಿ ತಲೆ ಮೇಲೆ ಕೈಹೊತ್ಕಂಡು ಕೂತ್ಕಂಡ ಮಗನ ಮಾತೆಲ್ಲಾ ಕೇಳಿ ಮುದಿ ಅಜ್ಜಮ್ಮಂಗೆ ವಿಪರೀತ ಸಂಕ್ಟ ಆಗೋತು. ಕಣ್ಣೀರು ಹರಿಸ್ತಾ ಕವ್ಳ ತುಪ್ಪಲೆ ಕಡವಾರದ ಕಡೆ ಹೋದ್ರೆ ಗಡದ್ದಾಗಿ ಆಸ್ರಿ ಹೊಡ್ದು, ಕಲ್ಲೆ ಸಂತಿಗೆ ಸುತ್ತಲೆ ಹೋಗವು ಹೇಳಿ ಜಗ್ಲಿಗೆ ಬಂದ ಅನಘೆಗೆ ಅಪ್ಪನ ಮಾತು ಕೇಳಿ ಶಿರಾತಿಂದಷ್ಟು ಖುಶಿ ಆತು.

"ಅಪ್ಪಯ್ಯ.. ದೊಡ್ಡೊಳೆಗೆ ಒಡ್ಡು ಹಾಕ್ತ್ವಡಾ?! ಹಾಂಗಾದ್ರೆ ದೊಡ್ಡೊಳೆ ನಮ್ಮನೆ ಮೆಟ್ಲ ಮುಂದೇ ಹರೀತಾ? ದಣಪೆ ಆಚೆ ಇಪ್ಪು ದಪ್ಪ ಮೆಟ್ಲು ಇದ್ದಲೋ ಅದ್ರ ಹತ್ರಾನೋ ಇಲ್ಲಾ ಕೆಳ್ಗೆ ಇಪ್ಪು ತೋಟದ ಹತ್ರಾನೋ? ಅಯ್ಯಬ್ಬಾ.. ಮಸ್ತಾಗ್ತು ಅಲ್ದಾನೆ ಕಲ್ಲೆ ದಿನಾ ನೀರಾಡಲೆ.." ಎಂದೆಲ್ಲಾ ಹೇಳ್ತಾ ಸಂಭ್ರಮ ಮಾಡ್ತಿದ್ದ ಕೂಸಿನ್ ಬೆನ್ನಿಗೊಂದು ಗುದ್ದು ಬಿತ್ತು ಅಮ್ಮನಿಂದ. "ಇಲ್ಲಿ ಊರು ಹೊತ್ಕಂಡ್ ಉರೀತಿದ್ರೂ ಇದ್ಕಿನ್ನೂ ಬೆಂಕಿದೇ ಚಿಂತೆ...... ಹೆಡ್ಡ್ ಕೂಸೆ... ಅಘನಾಶಿನಿ ಇಲ್ಲಿಗೆ ಬಂದ್ರೆ ನಾವೆಲ್ಲಾ ಮುಳ್ಗದೇಯಾ.... ತೋಟ ಗದ್ದೆ ಎಲ್ಲಾ ಹೋದ್ಮೆಲೆ ಬರೀ ನೀರು ಕುಡ್ಕ ಬದ್ಕಕಾಗ್ತು ತಿಳ್ಕ... ಹೊಟ್ಟೆಗೆ ಸರಿ ಬೀಳ್ದೆ ಹೋದಾಗ ನಿನ್ನ ನೀರಿನ ಭೂತನೂ ಬಿಡ್ತೇನೋ..." ಹೇಳ್ತಾ ಅಳಲೆ ಶುರು ಮಾಡ್ಕಂಡ ಅಮ್ಮನ ಹೊಸ ಅವತಾರ ನೋಡಿ ಅನಘೆಗೆ ವಿಚಿತ್ರ ಅನಿಸ್ತು. ದೋಸ್ತಿ ಮುಂದೆನೇ ಅಮ್ಮ ಹೀಂಗೆಲ್ಲಾ ಬೈದು ಹೊಡ್ದಿದ್ದಕ್ಕೆ ಸುಮಾರಾಗಿ, ಅಳು ಬಂದ್‌ಹಾಂಗೆ ಆದ್ರೂ ಗೊತ್ತಗಿರೋ ದೊಡ್ಡ ಸುದ್ದಿನ ಬಾಕಿ ಗೆಳ್ತೀರಿಗೆಲ್ಲಾ ಹೇಳು ಉತ್ಸಾಹ ತುಂಬ್ಕಂಡು ಕಲ್ಲೆ ಸಂತಿಗೆ ಹೊರ್ಗೆ ಓಡೋತು.

ಮಗಳ ಮುಗ್ಧತೆ, ತುಂಟಾಟ ಗೊತ್ತಿದ್ರೂ ಆ ಕ್ಷಣಕ್ಕೆ ಭವಿಷ್ಯದ ಚಿಂತೆ ಹೆಚ್ಚಾಗಿತ್ತು ಶಾರದೆಗೆ. ಅದ್ರಲ್ಲೂ ಗಂಡನ ಮೆದು ಸ್ವಭಾವ ಗೊತ್ತಿದ್ದಿದ್ರಿಂದ ಅದ್ಕೆ ಮತ್ತೂ ಭಯವಾಗ್ತಾ ಇತ್ತು. "ಎಲ್ಲಾ ನಮ್ಮ್ ಕರ್ಮ... ಸುಖ ಅನುಭವ್ಸಲೂ ಪಡ್ಕ ಬರವು... ಹೋಯ್...ನೀವೊಂಚೂರು ಪ್ಯಾಟಿಗ್‌ಹೋಗಿ ತಹಶೀಲ್ದಾರ್ರನ್ನ ಮತ್ತೆ ವಿಚಾರ್ಸಿಯಲ್ಲಾ.. ಹೀಂಗೇ ಕುಂತ್ರೆ ಎಂತೂ ಅಪ್ಪದಲ್ಲಾ ಹೋಪದಲ್ಲಾ... ಶಂಕ್ರಣ್ಣ, ಶಾನುಭೋಗ್ರು ಎಲ್ಲಾ ಇದ್ವಲಿ.. ನೀವೂ ಏನಾದ್ರೂ ಮಾಡುಲಾಗ್ತಾ ನೋಡಿ..." ಎಂದದ್ದೇ ಅಲ್ಲಿಂದೆದ್ದು ಕೊಟ್ಗೆ ಕಡೆ ಹೋತು. ಮೊದ್ಲಿಂದ್ಲೂ ಅಷ್ಟೇ ದುಃಖ ಜಾಸ್ತಿ ಆದ್ರೆ ಅದು ಹೋಪದು ತನ್ನ ಪ್ರೀತಿ ಆಕಳು ಗೌರಿ ಇದ್ದಲ್ಲೇಯಾ. ಸೀತಮ್ಮನೂ ಸಂಕ್ಟದಿಂದ ವಿಪರೀತ ಸುಸ್ತಾದಂಗೆ ಅನ್ಸಿ, ತನ್ನ ಹಾಸ್ಗೆ ಹತ್ರ ಹೋಗಿ ಹಾಂಗೇ ಬಿದ್ಕಂಡ್ತು. "ಅವು ಕಷ್ಟದಲ್ಲಿ ಬೆವ್ರು ಸುರ್ಸಿ, ಮೈ ಬಗ್ಸಿ ಗುಡ್ಡ ಕಡ್ದು ಮಾಡಿದ್ ತೋಟ, ಗದ್ದೆ... ಎಷ್ಟು ತ್ರಾಸು ತಗಂಡು ಮೇಲೆ ತಂದ ಆಸ್ತಿ.. ಅವೇನೋ ಪರಲೋಕ ಸೇರಿ ಪಾರಾದೋ.. ಯನ್ನೆಂತಕ್ಕೆ ದೇವ್ರು ಇದ್ನೆಲ್ಲಾ ನೋಡಲೆ ಇನ್ನೂ ಇಟ್ಟಿದ್ನೋ... ಭಗವಂತ ಮುಳ್ಗದನ್ನ ನೋಡೋ ಮೊದ್ಲೇ ಯನ್ನೂ ತಗಂಡು ಹೋಗಪ್ಪ..’ ಕಣ್ಣೀರ್‌ಹಾಕ್ತಾ... ಮನ್ಸೊಳ್ಗೇ ಬೇಡ್ಕತ್ತಾ ಮಗ್ಲಾತು ಸೀತಮ್ಮ.

-೩-

ಎಲ್ನೋಡಿರಲ್ಲಿ ಫಳಫಳ ಹೊಳೀತಿದ್ದ ನೀರಿನ್ ರಾಶಿ. ಇಚೆ ಬದಿಯವ್ಕೆ ಆಚೆ ಬದಿಯವು ಕಾಣ್ದೇ ಹೋಪಷ್ಟು ಅಗಲ.... ತನ್ಮುಂದಿಪ್ಪ ನೀರನ್ನೇ ಕಣ್ತುಂಬ್ಕತ್ತಾ ಅನಘೆ ಕಲ್ಲೆ ಹತ್ರ ಅಂತು.. "ಹೇ ಕಲ್ಲೆ.. ನಿನ್ಗೆ ಗೊತ್ತಿದ್ದಾ... ಅಜ್ಜ-ಆಯಮ್ಮ ಯನ್ನ ಇದೇ ಹೋಳಿಗೆ ಸಣ್ಣಿರ್ಬೇಕಿದ್ರೆ ಕರ್ಕಕಂಡ್ಬಂದು ನೀರಾಡಿಸ್ತಿದ್ದೋ... ಎಷ್ಟು ಖುಶಿ ಆಗ್ತಿದ್ದು ಅಂಬೆ... ಹೋದ್ವರ್ಷ ಯಂಗ್ಳ ಸ್ಕೂಲ್ನವು ಗೋಕರ್ಣಕ್ಕೆ ಪ್ರವಾಸ ಹಾಕಿಯಿದ್ವಲೇ.... ಅಲ್ಲಿಪ್ಪು ಸಮುದ್ರನೂ ಇಷ್ಟೇ ದೊಡ್ಡಕಿತ್ತು ಗೊತ್ತಿದ್ದಾ? ಇದ್ರಲ್ಲಿ ತೆರೆ ಒಂದ್ ಕಮ್ಮಿ ನೋಡು.. ನಮ್ ಅಘನಾಶಿನಿ ಸಮುದ್ರಕ್ಕೆ ಸಮ ಅಲ್ದಾ?" ಇದ್ನ ಕೇಳಿದ್ ಕಲ್ಲೆ ಮುಖ ಅರಳ್ಚು. "ಹೌದನೇ.. ಸಮುದ್ರನೂ ಹೀಂಗೇ ಇರ್ತಾ? ದೊಡ್ಡ್ ದೊಡ್ಡ್ ತೆರೆ ಬತ್ತಡ ಅಲ್ದಾ? ಅಪ್ಪಯ್ಯಂಗೆ ಹೇಳಿ ಸಾಕಾತು.. ಒಂದ್ಸಲನೂ ಕರ್ಕ ಹೋಗದಿಲ್ಲೆ... ಆಯಿಗಂತೂ ಪುರ್ಸೊತ್ತೆ ಇರ್ತಿಲ್ಲೆ.. ನಾ ಯಾವಾಗೇನ ಸಮುದ್ರ ನೋಡದು.. ಆ ತೆರೇಲಿ ಆಡದು.." ಬೇಜಾರ್‌ಬಿಟ್ಕಂಡ ಕಲ್ಲೆ ಸಣ್ಣ್ ಮುಖ ನೋಡಿ ಪಾಪ ಅನಿಶ್ಚು ಅನಘೆಗೆ. "ಹೋಗ್ಲೇ ಬಿಡೆ... ಅದ್ಯಾವ ಮಾಹಾ ಕಾರ್ಯ.. ನಾನೇ ನಿನ್ನ ಕರ್ಕ ಹೋಗ್ತಿ.. ಹಾಂಗೆ ನೋಡಿರೆ ಈ ನೀರು ಸೀ ಇದ್ದು.. ಅದು ಬರೀ, ಉಪ್ಪುಪ್ಪು ಗೊತ್ತಿದ್ದಾ? ಯಾರಿಗೊತ್ತು... ನಾಳೆ ದಿನ ಅಘನಾಶಿನೀ ನೋಡಲೆ ಸಮುದ್ರನೇ ಇಲ್ಲಿಗ್ಬಂದ್ರೂ ಬಂತು.." ಎಂದಿದ್ದೇ ತಡ ನಗಿ ತಡ್ಕಂಬ್ಲೇ ಆಜಿಲ್ಲೆ ಕಲ್ಲೆಗೆ. ಗೆಳ್ತೀರಿಬ್ರೂ ಮನ್ಸಿಗೆ ಖುಶಿ ಆಪಷ್ಟು ಹೊತ್ತು ನೀರಲ್ಲೆ ಆಡಿ... ಸಾಕಾಗಿ ಅಲ್ಲೇ ಪಕ್ದಲ್ಲಿದ್ದ ಅಮ್ಮನೋರ ಗುಡಿ ಹತ್ರ ಹೋದ್ವಾ, ಗುಡಿಕಟ್ಟೆ ಮೇಲೆ ಕೂತ್ಕಂಡು ಬಿಸ್ಲ್ ಕಾಯಿಸ್ಕತ್ತಿದ್ದ ವೆಂಕಜ್ಜಂಗೆ ಒಂದ್ ಕಂಪನಿ ಸಿಕ್ದಾಂಗಾತು.

"ಎಂತದೇ ಕೂಸ್ಗಳ್ರಾ.. ಎಲ್ಲಿಗೆ ಹೊಂಟಿದ್ದು ಸವಾರಿ. ನೀರಾಡೀ ಸಾಕಾತಾ? ಇಲ್ಲೆಂತಕ್ಬಂದ್ರಿ... ಮನಿಕಡೆ ಹೋಪದ್ನ ಬಿಟ್ಟು... ಉಂಬ ಯೋಚ್ನೆ ಇಲ್ಯನ್ರೇ...?" ವೆಂಕಜ್ಜನ ಮಾತಿಂದ್ಲೇ ಗೊತ್ತಾಗಿದ್ದು ಅವ್ಕೆ ಊಟಕ್ಕೆ ಹೊತ್ತಾತು ಹೇಳಿ... ನೆನ್ಪಾದ್‌ಕೂಡ್ಲೇ ಹೊಟ್ಟೆ ಚುರುಚುರು ಹೇಳಲೆ ಶುರು ಮಾಡ್ಚಾ, ಗುಡಿ ಒಳ್ಗೆ ಶಂಭಟ್ರು ಪ್ರಸಾದಯೇನಾದ್ರೂ ಕೊಡ್ತ್ರಾ ಹೇಳಿ ನೋಡಲೆ ಸೀದಾ ಒಳ್ಗೆ ಓಡ್ಜ. ಕೈಯಲ್ಲೊಂದೊಂದು ಬಾಳೆಹಣ್ಣ ಹಿಡ್ಕಂಡು... ಬಾಯೊಳ್ಗೊಂದು ತುರ್ಕ್ಸಂಡು ತನ್ನ ಪಕ್ಕದಲ್ಲೇ ಕೂತ್ಕಂಡ ಕೂಸ್ಗಳನ್ನೇ ಪ್ರೀತಿಯಿಂದ ನೋಡ್ದ ವೆಂಕಜ್ಜ. ಮಕ್ಕ ಅಂದ್ರೆ ವಿಪರೀತ ಪ್ರೀತಿ ಅವಂಗೆ... ಇವ್ಕಿಬ್ರಿಗೂವಾ ವೆಂಕಜ್ಜ ಹೇಳು ಪಿಶಾಚಿ ಕತೆ, ಎಲ್ಲಾದ್ರೂ ತೆಗ್ಸಿಕೊಡೋ ಲಿಂಬು ಪೆಪ್ಪರ್‌ಮೆಂಟ್ ಅಂದ್ರೆ ರಾಶಿ ಇಷ್ಟ.

"ಎಂತ ಕೇಳ್ಕಂಡ್ರೆ ದೇವಮ್ಮನಲ್ಲಿ..?" ಕೇಳಿದ್ದೇ ತಡ ದೊಡ್ಕಣ್ಣು ಮಾಡಿ, ಇಷ್ಟಗಲಾ ಬಾಯಿ ತೆಗ್ದು ಅನಘೆ ಶುರು ಮಾಡೇವುಡ್ಚು. "ಅಜ್ಜಾ... ದೊಡ್ಡೊಳೆಗೆ ಒಡ್ಡು ಹಾಕ್ತ್ವಡಲೋ.. ಆವಾಗ ನೀರು ನಮ್ಮನೆ ಮುಂದೇ ಬತ್ತಡ ಮಾರಾಯಾ... ಆದ್ರೆ ಯಮ್ಮನೆಯವ್ಕೆ ಸುತಾರಾಂ ಇಷ್ಟ ಇಲ್ಲೆ.. ನಿಲ್ಸವು ಹೇಳಿ ಮಾಡ್ತಾ ಇದ್ದೊ... ಇಷ್ಟ್ ದೂರ ನೀರಾಡಲೆ ಬಪ್ಪ ಬದ್ಲು.. ಮನೆ ಕೆಳ್ಗೇ ನೀರ್ ಬತ್ತಪಾ... ಹಾಂಗಾಗಿ ಅವು ಎಂತ ಬೇಕಿದ್ರೂ ಮಾಡ್ಕಳ್ಲಿ.. ನೀ ಮಾತ್ರ ನೀರನ್ನ ಯಮ್ಮನೆ ಮುಂದೇ ತಗಂಬಾ ಹೇಳಿ ಕೇಳ್ಕಂಡಿ..." ಹೇಳಿ ಅದು ಮಾತು ಮುಗ್ಸಿದ್ದೋ ಇಲ್ಯೋ ಕಲ್ಲೆನೂ ಶುರು ಮಾಡ್ಚು.... "ವೆಂಕಜ್ಜ ಯನ್ನಪ್ಪಯ್ಯಂಗಂತೂ ಮನ್ಸಿದ್ದಪ.... ಜಾಗ ಮುಳ್ಗೀರೆ ನಮ್ಗೆ ದುಡ್ಡು ಕೊಡ್ತ್ವಡ... ಆವತ್ತು ಯಾರ್‌ಹತ್ರಾನೋ ಹೇಳ್ತಾ ಇದ್ದಿಯಿದ್ನಪ.... ಯಂಗಕಿಗೆಲ್ಲಾ ಬೇಷ್ ಆಗ್ತು ಆವಾಗ.. ಅಮ್ಮ ಮಾತ್ರ ಬೇಜಾರು ಮಾಡ್ಕತ್ತನ ನೋಡು..." ಹೇಳ್ತಾ ಮತ್ತೊಂದು ಬಾಳೇ ಹಣ್ಣ ಗುಳುಂ ಮಾಡೇವುಡ್ತು. ಮಕ್ಳ ಮುಗ್ಧತೆ ಕಂಡು ನಗಿ ಬಂದ್ರೂ ಒಳ್ಗೊಳ್ಗೇ ಸಂಕ್ಟಾನೂ ಆತು ವೆಂಕಜ್ಜಂಗೆ.

"ಎಲ್ಲಾ ಸರಿ ಮಕ್ಕಳ್ರಾ.. ನಿಂಗಕಿಗೆ ನೀರೊಂದೇ ಮುಖ್ಯಾನೋ ಇಲ್ಲಾ ಶಾಲೆ, ಓದು, ಆಟದ ಬಯ್ಲು-ಇವೆಲ್ಲಾ ಮುಖ್ಯಾನೋ?" ಅವ್ನ ಮಾತು ಕೇಳಿ ಅವ್ಕಿಬ್ರಿಗೂ ಸ್ವಲ್ಪ ಗೊಂದ್ಲ ಆತು.. ಆದ್ರೆ ಅನಘೆ ಮಾತ್ರ ಬಿಡಲೊಪ್ಪಿದ್ದಿಲ್ಲೆ.."ನಂಗೆ ಎಲ್ಲಾದೂ ಬೇಕು.. ಹಾಂಗೇ ನೀರೂ ಆಡಲೆ ಹತ್ರ ಬೇಕು..." ಎಂದಿದ್ದಕ್ಕೆ ಮತ್ತೆ ವೆಂಕಜ್ಜ.. "ಆತು ತಗ.. ನೀರು ಸಿಗ್ತು ಇಟ್ಗ... ಆದ್ರೆ ದೇವಿಮನೆ ಮಾವಿನ್‍ತೋಪು, ಕಲ್ಲೆ ಮನೆ ಹೂವಿನ್ಗಿಡ, ನಿನ್ನ ಆಯಿ ಕಷ್ಟಪಟ್ಟು ಬೆಳ್ಸಿದ್ ಹಿತ್ಲು, ಕಾಯಿಪಲ್ಲೆ... ನೀ ಲಗೋರಿ ಆಡ್ತ್ಯಲೆ ಆ ಜಡ್ಡಿಗೆದ್ದೆ ಎಲ್ಲಾದೂ ಮುಳ್ಗೋಗ್ತು.. ನೀ ಬರೀ ಮನೆ ಮುಂದೆ ನೀರಾಡ್ಕತ್ತ ಬರೀ ಸಾರನ್ನ ಉಂಡ್ಕತ್ತ ಇರವು.. ತರಕಾರಿ ಬೆಳ್ಯಲೆ ಜಾಗ ಇರ್ತಿಲ್ಲೆ.. ಪ್ಯಾಟೆಗೆ ಹೋಪಲೆ ಮೋಟಾರ್ ಬತ್ತಿಲ್ಲೆ.. ಅಕ್ಕಾ ಹಾಂಗಿದ್ರೆ?" ಎಂದಿದ್ದೇ ತಡ ಇಬ್ರು ಹುಡ್ಗೀರೂ ಗಾಬ್ರಿ ಬಿದ್ದೊ. ‘ಪಾಪ ಅಮ್ಮಾ ಎಷ್ಟು ಖುಶಿಯಿಂದ ಹೂವಿನ್ ತೋಟ ಮಾಡೀದ್ದು.. ಅದ್ರಲ್ಲಾದ ಹೂವಿನ ಮಾಲೆ ಮಾರಿನೇ ಅಲ್ದಾ ಹೋದ್ವರ್ಷದ ತೇರಲ್ಲಿ ಯಂಗಕಿಗೆಲ್ಲಾ ಬಳೆ, ರಿಬ್ಬನ್ನು ತೆಕ್ಕೊಟ್ಟಿದ್ದು.. ಇದೆಲ್ಲಾ ಮುಳ್ಗೋದ್ರೆ ಅದ್ಕೆಷ್ಟು ಬೇಜಾರಾಗಡ... ಬ್ಯಾಡ್ದೇ ಬೇಡ ಈ ನೀರಿನುಸಾಬ್ರಿ.... ಅದಿಲ್ಲೇ ಇದ್ಕಳ್ಲಿ.." ಎಂದು ಮನ್ಸಲ್ಲೇ ಕಲಾವತಿ ಅಂದ್ಕಂಡ್ರೆ.. "ಇಶ್ಯೀ.. ಬರೀ ಸಾರನ್ನ ತಿನ್ನದು ಜ್ವರ ಬಂದವು.. ಯಂಗಂತೂ ಹಶೀ, ಹುಳಿ, ಪಲ್ಯ ಬೇಕಪ್ಪಾ... ಅಮ್ಮ, ಆಯಮ್ಮ ಕೂಡಿ ಹಿತ್ಲಲ್ಲಿ ಎಷ್ಟೆಲ್ಲಾ ತರಕಾರಿ ಹಾಕಿದ್ದೊ.... ಲಗೋರಿ ಆಡ್ದೇ ನಿದ್ದೆ ಬರ್ತಾ ಯಂಗೆ? ಸ್ಕೂಲಿಗೆ ಹೋಗ್ದೇಯಿದ್ರೆ ದನ ಕಾಯವು ಹೆಳ್ತಾ ಇರ್ತ ಅಪ್ಪಯ್ಯ.. ಇಶ್ಯೀ... ಅವೆಲ್ಲಾ ಬೇಡ್ದಪ್ಪಾ ಬೇಡ.. ಅಘನಾಶಿನಿ ಇಲ್ಲೇ ಹರೀತಾ ಇರ್ಲಿ.. ಕಷ್ಟಾ ಅದ್ರೂ ಬಂದು ಹೋದ್ರಾತು..." ಅಂದ್ಕತ್ತಾ ಕಲ್ಲೆ ಮುಖ ನೋಡಿರೆ ಅದೂ ಹಾಂಗೇ ಅಂದ್ಕತ್ತಿದ್ದಾಂಗೆ ಕಂಡ್ಚು. ಇಬ್ರೂ ಗುಸುಗುಸು ಪಿಸಪಿಸ ಮಾತಾಡ್ಕಂಡು ಮತ್ತೆ ಅಮ್ಮನೋರ ಹತ್ರ ಬೇಡ್ಕಂಬ್ಲೆ ಒಳ್ಗೆ ಓಡ್ದೋ. ವೆಂಕಜ್ಜಂಗೆ ಅವ್ರಿಬ್ರ ಭಾವ ಅರ್ಥ್ವಾಗಿ ಸಮಾಧಾನದ ನಿಟ್ಟುಸ್ರು ಬಿಟ್ಟ. ‘ಪುಟ್ಟ ಮಕ್ಳ ಈ ಸಲದ ಹಾರೈಕೆನೇ ನೆರವೇರ್ಲಿ ತಾಯಿ...’ ಹೇಳಿ ಅವ್ನೂ ಅಲ್ಲಿಂದ್ಲೇ ಅಮ್ಮನೋರಿಗೆ ದೊಡ್ಡ ನಮಸ್ಕಾರ ಹಾಕ್ದ.

"ಪ್ರತಿಬಿಂಬ- ೦೧೨" ರ ಹವಿಗಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಕಥೆ.


------
ಶಬ್ದಾರ್ಥ:-

ಬಿರ್‌ಬಿರ್ನೆ= ಲಗುಬಗನೆ.
ಕವ್ಳದ್ ಸಂಚಿ = ಎಲೆ ಅಡಿಕೆ, ಸುಣ್ಣ ತುಂಬಿರುವ ಪುಟ್ಟ ಚೀಲ.
ಸೊಂಯಿಸ್ತಿದ್ದ = ಹುಡುಕುತಿದ್ದ.
ಪ್ರಧಾನ್‌ಬಾಗ್ಲು = ಮುಖ್ಯ ದ್ವಾರ.
ಆಯಮ್ಮಾ = ಅಜ್ಜಿ.
ಸೊಕಾಶಿ = ಮೆಲ್ಲನೆ.
ಪರಾಮರ್ಶಿ = ಪರಿಶೀಲನೆ
ಕರ್ಕಂಡು= ಕರೆದುಕೊಂಡು.


*ಕಥೆ ಅರ್ಥೈಸಿಕೊಳ್ಳಲು ಬಹು ಕಷ್ಟವಾಗುತ್ತಿದೆ ಎಂದಾದಲ್ಲಿ.. ಕನ್ನಡಕ್ಕೆ ಸರಳೀಕರಿಸಿದ ಕಥೆಯನ್ನೂ ಮುಂದೆ ಮಾನಸದಲ್ಲಿ ಪ್ರಕಟಿಸಲಾಗುವುದು.

-ತೇಜಸ್ವಿನಿ ಹೆಗಡೆ.