ಶುಕ್ರವಾರ, ಸೆಪ್ಟೆಂಬರ್ 22, 2017

‘ಪ್ರತಿ ಉಸಿರೂ ಹೇಳುತ್ತದೆ, ನೀನು ಜೀವಂತವಾಗಿದ್ದೀಯಾ ಎಂದು’

ಹಿಮಾಲಯ ಸದಾ ನನ್ನನ್ನು ಗುಂಗಾಗಿ ಕಾಡುವ ತಾಣ. ಅನೇಕ ಸಾವಿರ ವರ್ಷಗಳವರೆಗೂ ಇದ್ದಲ್ಲಿಂದ ಕದಲದೇ ಬಿಳಿ ಗಡ್ಡದ ಮುನಿಯೋರ್ವ ಅಖಂಡ ತಪಸ್ಸಿನಲ್ಲಿ ಕಳೆದುಹೋಗಿರುವ ಕಲ್ಪನೆಯೇ ನನಗೆ ಸದಾ ಮೂಡುತ್ತಿರುತ್ತದೆ ಅದನ್ನು ನೆನೆದಾಗೆಲ್ಲಾ. ಅಲ್ಲಿಗೆ ಹೋಗಿ ಹಿಮದೊಳು ಹುದುಗಿ... ಹೇಳ ಹೆಸರಿಲ್ಲದ ತೊರೆಗಳಲ್ಲಿ ಮುಳುಗುವ ಕನಸು ಕಾಣುತ್ತಲೇ ಇರುತ್ತೇನೆ. ಆದರೆ ಈ ಪುಸ್ತಕವನ್ನೋದಿದ ಮೇಲೆ, ಇನ್ನು ಮುಂದೆ ನಾನು ಕಾಣುವ ಇಂಥಾ ಕನಸುಗಳಲ್ಲಿ.. ಒಂದು ಎಚ್ಚರಿಕೆ, ಕಟು ವಾಸ್ತವಿಕತೆ, ಬದುಕಿಗಂಟಿಗೊಂಡೇ ಇರುವ.. ಬದುಕಿನಿನ್ನೊಂದು ಮುಖವೇ ಆಗಿರುವ ಸಾವಿನ ಇರುವಿಕೆಯನ್ನೂ ಕಾಣುವಂತಾಗಿಬಿಟ್ಟಿದೆ! 


ಸಂಯುಕ್ತಾ ಪುಲಿಗಲ್ ಅವರು ಅನುವಾದಿಸಿದ ‘ಪರ್ವತದಲ್ಲಿ ಪವಾಡ’ (Miracle in the Andes) ಪುಸ್ತಕದ ಕುರಿತು ಬಹಳಷ್ಟು ಮೆಚ್ಚುಗೆಗಳನ್ನು ಕೇಳಿದ್ದೆ. ಈ ಪುಸ್ತಕವನ್ನು ವಿಶ್ಲೇಷಿಸಿ ಬರೆದ ಒಂದೆರಡು ಲೇಖನಗಳನ್ನೂ ಪತ್ರಿಕೆಯಲ್ಲಿ ಓದಿದ್ದೆ. ಉರುಗ್ವೇಯ ನ್ಯಾಂಡೋ ಪರಾಡೋ, ಆಂಡಿಸ್ ಹಿಮಪರ್ವತಶ್ರೇಣಿಯಲ್ಲಿ ವಿಮಾನ ಅಪಘಾತವಾಗಿ ಬಿದ್ದು ನರಕ ಅನುಭವಿಸಿ ಹೋರಾಡಿದ ಕಥೆಯಿದು ಎಂದು ಅರ್ಥವಾಗಿತ್ತು. ಬಹಳ ಚೆನ್ನಾಗಿದೆ ಓದಿ ಎಂದು ಅನೇಕರು ಹೇಳಿದ್ದರು. ಆದರೆ ನನಗೇನೋ ಒಳಗೊಳಗೇ ಹಿಂಜರಿಕೆ! ಅದೇನೋ ಎಂತೋ ಚಲನಚಿತ್ರ, ನಾಟಕ, ಕಥೆ, ಕಾದಂಬರಿ ಇವೆಲ್ಲವುಗಳಲ್ಲೂ ನಾನು ಆದಷ್ಟು ದುರಂತಮಯ ಅಂತ್ಯವಿರುವ.. ಹೆಚ್ಚು ದುಃಖವಿರುವ ಚಿತ್ರವನ್ನು, ಬರಹವನ್ನು ಇಷ್ಟಪಡುವುದಿಲ್ಲ. ನಮ್ಮೊಳಗೇ ಅನೇಕ ದುಃಖ, ನೋವುಗಳು ತುಂಬಿರುವಾಗ ಮತ್ತೊಂದಿಷ್ಟನ್ನು ನೋಡಿ ಹೆಚ್ಚಿಸಿಕೊಳ್ಳುವುದು ನನಗಿಷ್ಟವಾಗದ ಕೆಲಸ. ಬದುಕೆಂದರೆ ಅದೂ ಕೂಡ.. ಅನಿವಾರ್ಯ ಕರ್ಮ.. ಎನ್ನುವ ಸತ್ಯಗಳೆಲ್ಲಾ ಗೊತ್ತಿದ್ದೂ, ನೋಡಿ, ಓದಿ ಎಳೆದುಕೊಳ್ಳುವ ಅನವಶ್ಯಕ ದರ್ದು ಬೇಡವೆಂಬುದು ನನ್ನ ನಿಲುವು. ಹೀಗಿರುವಾದ ಈ ಪುಸ್ತಕದ ಕಥೆಯ ಎಳೆ ಗೊತ್ತಾಗಲು, ಇದರ ತುಂಬೆಲ್ಲಾ ಖಂಡಿತ ಯಾತನಾಮಯ ಚಿತ್ರಣ, ನೋವು, ಸಾವು, ನರಳಾಟವೇ ತುಂಬಿರುವುದು ಸಹಜ ಎಂದೆನಿಸಿತ್ತು. ಅಲ್ಲದೇ, ದುರಂತಕ್ಕೊಳಗಾದವರು, ಕೊನೆಗೆ ಮನುಷ್ಯರ ಮಾಂಸವನ್ನೇ ತಿಂದು ಬದುಕಿದ ಕಥೆಯೂ ಚಿತ್ರಿತವಾಗಿರುವ ಸುಳಿವೂ ಕೆಲವು ಲೇಖನಗಳನ್ನೋದಿ ತಿಳಿದಿತ್ತು. ಹೀಗಾಗಿ ಓದುವುದೋ ಬೇಡವೋ ಎಂಬ ಅಸಮಂಜಸತೆಯಲ್ಲೇ ಕುಳಿತುಬಿಟ್ಟಿದ್ದೆ. ಆದರೆ ಒಳ್ಳೆಯ ಪುಸ್ತಕ.. ಓದಲೇಬೇಕೆಂಬ ತುಡಿತವೂ ಇತ್ತು. ಜೊತೆಗೇ ಸಂಯುಕ್ತಾರವರ ಅನೇಕ ಬರಹಗಳನ್ನು ಈ ಮೊದಲೇ ಅವಧಿಯಲ್ಲಿ ಓದಿ ಮೆಚ್ಚಿದ್ದೆ. ಅವರ ಶೈಲಿ ಇಷ್ಟವಾಗಿತ್ತು. ಬದುಕನ್ನು ವಿಶ್ಲೇಷಿಸುವ, ನೋಡುವ ಅವರ ದೃಷ್ಟಿಕೋನ ಮೆಚ್ಚುಗೆಯಾಗಿತ್ತು. ಹೀಗಾಗಿ ಧೈರ್ಯಮಾಡಿ ಅವರನ್ನೇ ಕೇಳಿ ಪುಸ್ತಕ ತರಿಸಿಕೊಂಡು ಓದಿದೆ.

ಓದಿದಮೇಲೆ ಎನಿಸುತ್ತಿದೆ.. ಇಷ್ಟು ದಿನ ಓದಲೇಕೆ ನಾನು ಹಿಂಜರಿದೆನೆಂದು! ಬದುಕೊಡ್ಡಿದ, ಒಡ್ಡುತ್ತಲೇ ಇರುವ ಅನೇಕ ಸಮಸ್ಯೆಗಳು, ತೊಂದರೆಗಳಿಂದ ನನ್ನೊಳಗಿನ ಆಂಡಿಸ್ ಪರ್ವತವನ್ನು ಇಳಿಯಲು ಹೋರಾಡಿ ಹೈರಣಾಗುತ್ತಿದ್ದ ಈ ಸಮಯದಲ್ಲಿ.. ಇದನ್ನು ಮೊದಲೇ ಓದಿದ್ದರೆ, ನ್ಯಾಂಡೋನ ಜೀವನೋತ್ಸಾಹ, ಛಲ, ಅಗಾಧ ತಿಳಿವು ನನ್ನ ಹೋರಾಟವನ್ನು ಬಹಳ ಕಡಿಮೆ ಮಾಡುತ್ತಿತ್ತಲ್ಲ ಎಂದೆನಿಸಿತು. ಆದರೆ ಎಲ್ಲವುದಕ್ಕೂ ಮುಹೂರ್ತವೆನ್ನುವುದಿದೆಯಂತೆ. ಅದನ್ನು ನಾನು ನಂಬುತ್ತೇನೆ. ಅದರಂತೇ ಈ ಅತ್ಯುತ್ತಮ ಪುಸ್ತಕವನ್ನೋದಲೂ ಆ ಘಳಿಗೆ ಈಗ ಕೂಡಿ ಬಂತೆಂದು ಸಮಾಧಾನ ಪಟ್ಟುಕೊಂಡೆ. ಇದೇ ಪುಸ್ತಕದಲ್ಲೇ ಒಂದೆಡೆ ಉಲ್ಲೇಖಿಸಿರುವಂತೆ.. “ನಮ್ಮೆಲ್ಲರಲ್ಲೂ ವೈಯಕ್ತಿಕವಾದ ಒಂದೊಂದು ಆಂಡೀಸ್ ಇದ್ದೇ ಇದೆ” ಎಂಬುದನ್ನು ಮನಸಾರೆ ಒಪ್ಪಿಕೊಳ್ಳುತ್ತಾ.. ಪ್ರತಿಯೊಬ್ಬರೂ ತಮ್ಮೊಳಗಿನ ಈ ಹಿಮಪರ್ವತದಶ್ರೇಣಿಯನ್ನು ಇಳಿಯಲು ನಾವು ಮಾಡಬೇಕಾಗಿರುವ ತಯಾರಿ, ತುಂಬಿಕೊಳ್ಳಬೇಕಾದ ಭಾವ, ಜೀವನ ಪ್ರೀತಿ ಎಲ್ಲವನ್ನೂ ಎಳೆಯೆಳೆಯಾಗಿ ವಿವರಿಸುವ ಅನುವಾದವಿದು. ಸದಾ ನಾನು ನಂಬಿರುವ ತತ್ವಕ್ಕೇ ಇಂಬನ್ನು ಕೊಡುವಂಥ ಹೊತ್ತಗೆಯಿದು.. ಅದೇನೆಂದರೆ “ನೋವನ್ನು ಅನುಭವಿಸುತ್ತಲೇ ಬದುಕಲು ಸಾಧ್ಯ"! ನಾವೇನನ್ನಾದರೂ ಕಳೆದುಕೊಂಡರೆ, ಆ ಜಾಗದಲ್ಲಿಯೇ, ಕಳೆದುಕೊಂಡುದರ ಬದಲು, ಅದೇ ರೂಪಾಂತರವಾಗಿ ಹೊಸತನ್ನು ಪಡೆಯಬಹುದೆಂಬ ಸಾಧ್ಯತೆಯನ್ನು ಕಾಣಿಸುವ ಅನುಭವ ಕಥನವಿದು.

ನ್ಯಾಂಡೊನ ಜೊತೆಗೇ ನಾವು ಅವನ ಸ್ನೇಹಿತರು, ತಾಯಿ, ತಂಗಿಯರೊಡಗೂಡಿ ವಿಮಾನದಲ್ಲಿ ಪ್ರಯಾಣಿಸಿ.. ಅದು ಪತನಗೊಂಡ ಕ್ಷಣದಿಂದ ಅವನ ದುಃಖ, ಉದ್ವೇಗ, ಹತಾಶೆ, ನೋವು, ಹೋರಾಟ, ಛಲ, ಸೋಲು ಎಲ್ಲವನ್ನೂ ಅನುಭವಿಸುತ್ತಲೇ, ನಾವು ಕಂಡು ಕೇಳರಿಯದ ದುರ್ಗಮ ಜಾಗಗಳಲ್ಲಿ ಅವನಂತೇ ವಿಮಾನದ ಸೀಟಿನ ದಿಂಬಿನ ಬೂಟು ಧರಿಸಿ, ಹಿಮದ ಮೇಲೆ ಕಷ್ಟಪಟ್ಟು ಸಾಗಿ, ಅವನು ವಿಶ್ರಮಿಸಿದಾಗ ತುಸು ಸುಧಾರಿಸಿಕೊಂಡು, ಅವನು ಏದುಸಿರುಬಿಡುವಾಗ ನಾವೂ ಬಿಟ್ಟು.. ಕೊನೆಯಲ್ಲಿ ಅವನು ಬದುಕೆಂಬೋ ಬಯಲು ಸೇರುವಾಗ ಸುರಿವ ಆನಂದಬಾಷ್ಪದಲ್ಲಿ ನಮ್ಮ ಪಾಲನ್ನೂ ಪಡೆಯುತ್ತೇವೆ. ಆದರೆ ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವೆ.. ಹಸಿಮಾಂಸ ಅದೂ ತಮ್ಮದೇ ಸ್ನೇಹಿತರ ಮೃತ ದೇಹದ ಮಾಂಸ ಭಕ್ಷ್ಯವನ್ನು ಮೊದಲ ಬಾರಿ ಅವರು ಸೇವಿಸುವ ಒಂದೆರಡು ಪುಟಗಳನ್ನು ಹಾರಿಸಿಯೇ ಓದಿಬಿಟ್ಟೆ. ಖಂಡಿತ ಆಗ ಅಸಹ್ಯ ನನ್ನಲ್ಲಿ ತುಂಬಿರಲಿಲ್ಲ. ಅಪಾರ ನೋವು.. ಯಾತನೆ.. ಸಂಕಟ ನನ್ನಿಂದ ಈ ಕೆಲಸ ಮಾಡಿಸಿತ್ತು. ಓದುವ ನನಗೇ ಇಷ್ಟು ಕಾಡುವಾಗ.. ಅನಿವಾರ್ಯತೆಯಲ್ಲಿ.. ಬೇರಾವ ಮಾರ್ಗವೂ ಇಲ್ಲವಾಗಿ.. ಬದುಕುವುದು.. ಉಸಿರಾಡುವುದು.. ಬೆಳಕ ಕಾಣುವುದಷ್ಟೇ ಮುಖ್ಯವೆನಿಸಿದಾಗ ಅವರು ತೆಗೆದುಕೊಂಡ ಆ ನಿರ್ಧಾರ ಎಂಥ ಯಾತನಾಮಯವಾಗಿದ್ದಿರಬಹುದೆಂಬುದನ್ನು ಊಹಿಸುವುದೂ ಕಷ್ಟವೆನಿಸಿಬಿಡುತ್ತದೆ! ಬದುಕು ಬಹಳ ಕಷ್ಟ.. ಸಾವು ಬಹಳ ಸುಲಭವೆಂದೆನಿಸುವ ಆ ಸ್ಥಿತಿಯಲ್ಲಿ ಅವರು ಬದುಕನ್ನು ಆರಿಸಿಕೊಂಡಿದ್ದರು ಎಂಬ ನಿಲುವೇ ನಮ್ಮೊಳಗೆ ಹೊಸ ಚೈತನ್ಯವನ್ನು ತುಂಬುತ್ತದೆ.

“ನಮ್ಮ ಆಸೆ, ನಿರೀಕ್ಷೆಗಳು ಸುಳ್ಳಾಗುತ್ತಿವೆ ಎಂದು ಯಾವಾಗ ಅರಿವಾಗುತ್ತದೆಯೋ ಅಂದು ಮನಸ್ಸು ನಿರಾಕರಣೆಯ ಭಾವದೊಂದಿಗೆ ನಮ್ಮನ್ನು ಕಾಡುತ್ತದೆ ಮತ್ತು ಮುಂದೊಂದು ದಿನ ಒಪ್ಪಿಕೊಳ್ಲಬೇಕಾದ ಸತ್ಯವನ್ನು ಅರಗಿಸಿಕೊಳ್ಳಲು ನಮ್ಮನ್ನು ನಿಧಾನವಾಗಿ ಸಿದ್ಧಗೊಳಿಸುತ್ತದೆ” - ನ್ಯಾಂಡೊನ ಈ ಮಾತುಗಳನ್ನು ಓದಿ ಅಕ್ಷರಶಃ ಹನಿಗಣ್ಣಾಗಿದ್ದೇನೆ. “ಸತ್ಯವನ್ನು ಒಪ್ಪಿಕೊಳ್ಳುವ ಮುನ್ನ ಅದನ್ನು ಅಲ್ಲಗಳೆಯುವುದು ಸಹಜ.. ಹಾಗೆ ಅಲ್ಲಗಳೆಯುತ್ತಲೇ ಅದರ ಇರುವಿಕೆ ನಿನಗೇ ದಟ್ಟವಾಗುತ್ತಾ ಹೋಗುತ್ತದೆ... ಸತ್ಯ ಒಪ್ಪಿತವಾದಾಗಲೇ ಹೊಸ ಸಾಧ್ಯತೆಗೆ ತೆರೆದುಕೊಳ್ಳಬಹುದು..” ಎಂದು ಬಾಲ್ಯದಲ್ಲಿ ಅಪ್ಪ ನನಗೆ ಹೇಳಿದ್ದ ಮಾತುಗಳೇ ಮತ್ತೆ ಮತ್ತೆ ನೆನಪಾದವು ನನಗೆ. 

ನ್ಯಾಂಡೊ ಅಂತಹ ದುಃಸ್ಥಿತಿಯಲ್ಲೂ ಉಸಿರಾಡಲು, ಮತ್ತೆ ಸ್ವಸ್ಥ ಸ್ಥಾನ ಸೇರಲು ಏನು ಅಗತ್ಯ.. ಯಾವ ಕಾಲಕ್ಕೆ ಯಾವ ಕ್ರಿಯೆ ಮುಖ್ಯ ಎನ್ನುವುದನ್ನು ಸ್ವಯಂ ಹೇಳಿಕೊಂಡು ಗಟ್ಟಿಮಾಡಿಕೊಳ್ಳುತ್ತಾ.. ಸ್ನೇಹಿತರನ್ನೂ ಅದಕ್ಕೆ ತಯಾರುಗೊಳಿಸುತ್ತಾ ತನ್ನೊಳಗಿನ ನಿರಾಸೆ, ದುಗುಡಗಳನ್ನು ತಾನೇ ನುಂಗಿಕೊಂಡು ಹದಗೊಳ್ಳುವ ಆ ಪ್ರಕ್ರಿಯೆ ನಮ್ಮನ್ನೂ ಆವರಿಸಿ ನಾವು ನಮ್ಮೊಳಗಿನ ದೌರ್ಬಲ್ಯಗಳನ್ನು ನಿವಾರಿಸಿಕೊಳ್ಳಲು ಪ್ರೇರೇಪಿಸಿಬಿಡುತ್ತದೆ. “ಪ್ರತಿ ಕೆಲಸಕ್ಕೂ ಸರಿಯಾದ ನೆಟ್ಟು, ಬೋಲ್ಟುಗಳಿರುತ್ತವೆ. ನಾವು ಅದನ್ನು ಗುರುತಿಸಿಕೊಳ್ಳಬೇಕಷ್ಟೇ” ಎನ್ನುವ ನ್ಯಾಂಡೊನ ತಂದೆಯ ಮಾತು ಸಾರ್ವಕಾಲಿಕ ಸತ್ಯ. 

ಆ ದುರಂತದ ಮೊದಲು ಯಾವುದೇ ಆತಂಕ, ಕಷ್ಟಗಳ ಅನುಭವವಿಲ್ಲದೇ ಮೋಜಿನಲ್ಲಿರುತ್ತಿದ್ದ ನ್ಯಾಂಡೊ, ಧುತ್ತನೆ ಎದುರಾದ ಅಪಘಾತದ ಸಮಯದಲ್ಲಿ ಮತ್ತು ಅದರಿಂದ ಪಾರಾಗಿ ಬಂದ ನಂತರ.. ಓರ್ವ ಮಾಗಿದ, ಪಕ್ವಗೊಂಡ ಅಧ್ಯಾತ್ಮ ಚಿಂತಕನಾಗಿ, ದೇವರು-ಧರ್ಮ ಮುಂತಾದ ವಿಷಯಯಗಳ ಕುರಿತು ತನ್ನದೇ ಸ್ಪಷ್ಟ ನಿಲುವುಳ್ಳವನಾಗಿ, ಬದುಕೆಂದರೆ ಜೀವನ ಪ್ರೀತಿ ಹಂಚುವ ಕಾರ್ಯವೆಂಬುದನ್ನು ಮನಗಾಣುವ ವಿಶಿಷ್ಟ ವ್ಯಕ್ತಿಯಾಗಿ ರೂಪುಗೊಳ್ಳುವ ಆ ಪರಿ, ವಿವಿಧ ಹಂತಗಳು ಅಪೂರ್ವ ಬೆರಗನ್ನು ನಮ್ಮೊಳಗೆ ತುಂಬಿಬಿಡುತ್ತವೆ.

ಈ ಎಲ್ಲಾ ಅನುಭವಗಳನ್ನು ಸಮರ್ಥವಾಗಿ, ಸಶಕ್ತವಾಗಿ ಓದುಗರ ಮನಸಿನೊಳಗೆ, ಭಾವನೆಯೊಳಗೆ ಕಟ್ಟಿಕೊಡುತ್ತಾರೆ ಲೇಖಕಿ ಸಂಯುಕ್ತಾ ಪುಲಿಗಲ್. ನಿಜಕ್ಕೂ ಭಾಷೆಯ ಮೇಲೆ ಇವರಿಗಿರುವ ಹಿಡಿತ ಮನಸೂರೆಗೊಂಡುಬಿಡುತ್ತದೆ. ಇದು ಅನುವಾದಿತ ಕೃತಿಯೇ ಅಲ್ಲವೇನೋ ಎಂಬಷ್ಟು ಸರಳವಾಗಿ, ಸ್ಪಷ್ಟವಾಗಿ ಈ ಕೃತಿಯನ್ನು ರಚಿಸಿದ್ದಾರೆ. ಇಂತಹ ಅಪೂರ್ವ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ ಸಂಯುಕ್ತಾರವರಿಗೆ, ಪ್ರಕಟಿಸಿದ ಛಂದ ಪ್ರಕಾಶನಕ್ಕೆ.. ಎಲ್ಲವುದಕ್ಕಿಂತ ಮುಖ್ಯವಾಗಿ ತಮ್ಮ ಬದುಕನ್ನು ಬದಲಿಸಿದ ಈ ದುರ್ಘಟನೆಯನ್ನು ಸ್ವಯಂ ಪಾಠವಾಗಿಸಿಕೊಂಡು, ನಮಗೂ ಪಾಠಕಲಿತುಕೊಳ್ಳಲು ಅವಕಾಶವನ್ನಿತ್ತ, ಹಂಚಿಕೊಂಡ ನ್ಯಾಂಡೊ ಪರಾಡೊ ಅವರಿಗೆ ತುಂಬು ಮನದ ಕೃತಜ್ಞತೆಗಳು. 

~ತೇಜಸ್ವಿನಿ ಹೆಗಡೆ.

ಶನಿವಾರ, ಜುಲೈ 29, 2017

ಪಳಮೆಗಳು

ಸೇಡಿಯಾಪು ಕೃಷ್ಣ ಭಟ್ಟರ ‘ಪಳಮೆಗಳು’ ಕಥಾಸಂಕಲನ ಬಹಳ ಮೆಚ್ಚುಗೆಯಾಯಿತು.


ಇದರಲ್ಲಿನ ‘ನಾಗರ ಬೆತ್ತ’ ಕಥೆಯನ್ನು ಬಹಳ ಹಿಂದೆಯೇ ಓದಿದ್ದೆ. ನನಗೆ ತುಂಬಾ ಇಷ್ಟವಾದ ಕಥೆಯಿದು. ಕಥೆಯಲ್ಲಿ ಬರುವ ಬಾಲಕನೊಂದಿಗೆ ಬಹಳ ಬೇಗ ನಾವೂ ಒಂದಾಗಿ ಬಿಡುತ್ತೇವೆ. ಅದರಲ್ಲೂ ಅಷ್ಟು ಅಕ್ಕರಾಸ್ಥೆಯಿಂದ ತಂದಿದ್ದ ಆ ಪುಟ್ಟ ಬಾಲಕನ ಬೆತ್ತವನ್ನು ನಿರ್ಧಾಕ್ಷಿಣ್ಯವಾಗಿ, ಕಾರಣವಿಲ್ಲದೇ ಅವನಜ್ಜ ಮುರಿದದ್ದು ಓದುವಾಗ ಹಿಂದೆಯೂ ಸಂಕಟವಾಗಿತ್ತು.. ಇಂದೂ ಮತ್ತೊಮ್ಮೆ ಓದುವಾಗಲೂ ಅಷ್ಟೇ ಬೇಸರವಾಯಿತು. ನಾಗರ ಬೆತ್ತ ಎಂದಕೂಡಲೇ ನನಗೆ ನೆನಪಿಗೆ ಬರುವುದು ನನ್ನ ಬಾಲ್ಯ. ನಾನು ಪ್ರೈಮರಿಯನ್ನು ಕಲಿತಿದ್ದ ನನ್ನ ಕನ್ನಡ ಶಾಲೆಯ ಮಾಸ್ತರರೋರ್ವರ ಕೈಯೊಳಗಿನ ಬೆತ್ತ! ಅವರ ಕೈಲಿದ್ದುದು ನಾಗರ ಬೆತ್ತವೋ ಹೌದೋ ಎಂಬುದು ಗೊತ್ತಿಲ್ಲ. ಅದನ್ನು ಮುಟ್ಟಿ ನೋಡುವುದಿರಲಿ.. ಅದರತ್ತ ದಿಟ್ಟಿ ಹಾಯಿಸುವುದು ಭಯಂಕರದ ಕೆಲಸವಾಗಿತ್ತು ಬಿಡಿ. "ಎಂತ ದಡ್ಡರೋ ನೀವೆಲ್ಲಾ.. ಸುಮ್ಮನೆ ಬೆಂಚು ಬಿಸಿ ಮಾಡಲು ಇಲ್ಲಿಗೆ ಬರುವುದೋ? ಎತ್ತಿ ಕೈಯನ್ನ’ ಎಂದು ಪ್ರಶ್ನೆಗೆ ಉತ್ತರಿಸದ ಮಕ್ಕಳ ಕೈ ಬಿಸಿ ಮಾಡುತ್ತಿದುದು ಅದೇ ಬೆತ್ತದಲ್ಲೇ

. ಆ ದೃಶ್ಯ ಇನ್ನೂ ನನ್ನಿಂದ ಮರೆಯಾಗಿಲ್ಲ. ಆದರೆ ಪುಟ್ಟನ ಮೆಚ್ಚಿನ ನಾಗರ ಬೆತ್ತ ಮುರಿದಾಗ ಉಂಟಾಗಿದ್ದ ನೋವು.. ದೇವಜ್ಜಿಯ ಆ ಯಾತನಾಮಾ ಪ್ರಸಂಗವನ್ನೋದಿದಾಕ್ಷಣ ಅದೇಕೋ ಥಟ್ಟನೆ ಹಾಗೆ ಬೆತ್ತ ಮುರಿದದ್ದೇ ಒಳ್ಳೆದಾಯಿತು ಎಂದೇ ಅನಿಸಿಬಿಡುತ್ತದೆ! ಬಹುಶಃ ಇದಕ್ಕೆ ಕಾರಣ ದೇವಜ್ಜಿಯ ಆ ಎಳೇ ಬದುಕಿನಲ್ಲಿ ನಡೆದ ಕರುಣಾಜನಕ ಘಟನೆಯೇ ಇದ್ದಿರಬಹುದು. ಅವರಿಗೆ ಆ ನಾಗರ ಬೆತ್ತ ಅನಿಷ್ಟವನ್ನುಂಟು ಮಾಡಿದಂತೇ ಆ ಹುಡುಗನಿಗೂ ಉಂಟು ಮಾಡಿದ್ದಿದ್ದರೆ.. ನಿಜಕ್ಕೂ ಅಂಥದೊಂದು ಬೆತ್ತದ ಅವಶ್ಯಕತೆಯಾದರೂ ಏನು? ಒಳ್ಳೆಯದೇ ಆಯಿತು ಹೋಗಿದ್ದು ಎಂದೆಲ್ಲಾ ಅಪ್ರಯತ್ನವಾಗಿ ನಮ್ಮ ಮನಸ್ಸೇ ಆ ಹುಡುಗನ ನೋವಿನೊಂದಿಗೆ ಸ್ಪಂದಿಸಿದ ನಮ್ಮನ್ನು ಸಾಂತ್ವನಗೊಳಿಸಿಬಿಡುತ್ತದೆ. ಆದರೆ ಮೂಲೆಯಲ್ಲೆಲ್ಲೋ ಬೆತ್ತವನ್ನು ಪ್ರೀತಿಯಿಂದ ಕೊಟ್ಟಿದ್ದ ಲಿಂಗಯ್ಯ ಅಳುತ್ತಿರುತ್ತಾನೆ. ಬಹಳ ಚೆಂದದ ಕಥೆ.. ಹತ್ತು ಹಲವು ರೀತಿಯನ್ನು ನಮ್ಮನ್ನು ಕಾಡುವಂಥದ್ದು.

ಪಳಮೆಗಳಲ್ಲಿ ನಾಗರ ಬೆತ್ತದ ನಂತರ ನನ್ನ ಬಹಳ ಕಾಡಿದ ಕಥೆ ಧರ್ಮಮ್ಮ. ಬಹಳ ವಿಶಿಷ್ಟವಾಗಿ ನೇಯ್ದಿರುವ ಕಥೆಯಿದು. ಜಿಜ್ಞಾಸೆಗಳನ್ನು ಹುಟ್ಟಿಸಿ.. ತರ್ಕವನ್ನು ಬೆಳೆಸಿ.. ಉತ್ತರ ಕೊಟ್ಟೂ ಅದು ಪೂರ್ತಿ ಅರಿವಾಗದಂಥ ಕಥೆಯಿದು. ಇದರ ಕೊನೆಯೇಕೋ ನನಗಷ್ಟು ಸ್ಪಷ್ಟವಾಗಿ ಅರ್ಥವಾಗಲಿಲ್ಲ. ಬಲ್ಲವರಲ್ಲಿ ಚರ್ಚಿಸಬೇಕೆಂದಿರುವೆ. ಮತ್ತೊಮ್ಮೆ ಮಗದೊಮ್ಮೆ ಓದನ್ನು ಬೇಡುವಂಥ ಕಥೆಯಿದು. ಮನಸ್ಸು, ಅಭ್ಯಾಸ, ಸ್ವಭಾವ - ಈ ಮೂರರೊಳಗೆ ಯಾವುದು ಮೆಚ್ಚಾಗಬೇಕು ಎಂದು ಚಿಂತಿಸುತ್ತಲೇ ಇದ್ದೇನೆ ಇನ್ನೂ.

ಚೆನ್ನೆಮಣೆ ಕಥೆಯೂ ಚೆನ್ನಾಗಿದೆ. ಮನುಷ್ಯನ ‘ಅಹಂ’ ಎನ್ನುವುದು ಪರಾಕಷ್ಟೆಯನ್ನು ತಲುಪಿದಾಗ ಎಷ್ಟೆಲ್ಲಾ ದುರಂತಗಳು ನಡೆಯಬಲ್ಲವು ಎಂಬುದಕ್ಕೊಂದು ಸ್ಪಷ್ಟ ನಿದರ್ಶನ ನೀಡುವಂಥ ಕಥೆಯಿದು. ಹಣೆದ ರೀತಿ ಬಲು ಇಷ್ಟವಾಯಿತು.

ಚಿನ್ನದ ಚೇಳು ಕಥೆ ಮಕ್ಕಳಿಗೆ ಹೇಳಿ ಮಾಡಿಸಿದಂತಿದೆ. ನೀತಿ ಪಾಠವನ್ನು ನೇರವಾಗಿ ಸಾರುವ ಕಥೆಯನ್ನು ರಮ್ಯವಾಗಿ ಕಣ್ಣಿಗೆ ಕಟ್ಟುವಂತೇ ಮಕ್ಕಳಿಗೆ ಹೇಳಿದರೆ, ಅವರ ಹಾವ ಭಾವವನ್ನು ನೋಡಿ ನಾವೂ ರಂಜಿಸಬಹುದು. ಅದರಲ್ಲೂ ಈ ಕಥೆಯಲ್ಲಿ ಬರುವ ಭೂತ "ನಾನು ಹಾರಲೋ! ಹಾರಲೋ!" ಎಂದು ಹೇಳುವುದನ್ನು ಓದಿದಾಕ್ಷಣ ಯಾಕೋ ನಗು ಅವ್ಯಾಹತವಾಗಿ ಉಕ್ಕಿತು. :) ಭೂತವೊಂದು ಹೀಗೆ ಕೇಳಿ ಹಾರಿ.. ಸುರಿಸುವ ಧನವನ್ನು ಬಾಚಲು ಸಾಧ್ಯವಾಗುವಂತಿದ್ದರೆ ಇಂದಿನ ಯುಗದಲ್ಲಿ ಎಷ್ಟು ಜನ ಆ ಭೂತವನ್ನೇ ಹಾರಿಸಿಕೊಂಡು ಹೋಗುತ್ತಿದ್ದರೇನೋ ಎಂದೇ ಊಹಿಸಿಕೊಂಡು ಮನಸಾರೆ ನಕ್ಕುಬಿಟ್ಟೆ.

ಶಕುಂತಳೆ ಕಥೆಯಲ್ಲೇನೂ ವಿಶೇಷ ಕಾಣಲಿಲ್ಲ. ಮೊದಲೇ ಈ ಕಥೆಯ ವಿವಿಧ ರೂಪಗಳನ್ನು ಹತ್ತು ಹಲವೆಡೆ ಓದಿದ್ದರಿಂದಲೋ ಏನೋ.. ವಿಶೇಷತೆ ಕಾಣಲಿಲ್ಲ.

‘ಮಹಾರಾಣಿ ಲಕ್ಷ್ಮೀಬಾಯಿ’ ಕಥೆಯಿಂದ
ಆದರೆ ಈ ಮೊದಲೇ ಹಲವೆಡೆ ಓದಿದ್ದರೂ "ಮಹಾರಾಣಿ ಲಕ್ಷ್ಮೀಬಾಯಿ’ ಕಥೆ ವಿಶಿಷ್ಟವೆನಿಸಿತು! ಅದರಲ್ಲೂ ಈ ಕಥೆಯಲ್ಲಿ ಬರುವ ಒಂದೆರಡು ಪ್ಯಾರ ವಿಶೇಷ ಗಮನ ಸೆಳೆಯಿತು. ಅವುಗಳ ಫೋಟೋ ಲಗತ್ತಿಸಿದ್ದೇನೆ ಓದಿಕೊಳ್ಳಿ ಬೇಕಿದ್ದರೆ. ಲಕ್ಷ್ಮೀಬಾಯಿಯ ಕುರಿತು ಅನೇಕ ಅತಿ ರಂಜಿತ ಕಥೆಗಳನ್ನೋದಿದ್ದೇನೆ.. ಈವರೆಗೂ ತಿಳಿಯದ ಕೆಲವು ವಿಷಯಗಳನ್ನು ಇಲ್ಲಿ ಓದಲು ಸಿಕ್ಕಿತು. ಈ ರಾಣಿಯ ಬಗ್ಗೆ ಖಚಿತ ಮಾಹಿತಿಯುಳ್ಳ.. ಕೆಲವು ಇತಿಹಾಸಗಾರರಿಂದ ತಿರುಚಲಾಗದೇ ಹಾಗೇ ಉಳಿದಿರುವ ನಿಜ ಇತಿಹಾಸವನ್ನು ಓದುವ ಮನಸ್ಸಾಗಿದೆ. ಸಾಧ್ಯವಾದರೆ ಓದಬೇಕು.
‘ಮಹಾರಾಣಿ ಲಕ್ಷ್ಮೀಬಾಯಿ’ ಕಥೆಯಿಂದ

ಪಳಮೆಗಳು ಕಥಾಸಂಕಲನದಲ್ಲಿ ಬರುವ ಕಥೆಗಳನ್ನು ಆ ಕಾಲಘಟ್ಟದ ನೆಲೆಯಲ್ಲಿಟ್ಟು ನೋಡಿದರೆ ಅವುಗಳೊಳಗಿನ ವಿಶೇಷತೆಗಳು ನಮಗೆ ಹೊಳೆಯುತ್ತವೆ. ನಿರೂಪಣೆಯಲ್ಲಿರುವ ಮುಗ್ಧತೆ, ಸಹಜತೆ, ನಿಷ್ಕಲ್ಮಶತೆ ಸಹೃದಯ ಓದುಗರನ್ನು ಸಹಜವಾಗಿ ಸೆಳೆದು ಬಿಡುತ್ತವೆ. ಆ ಕಾಲದಲ್ಲಿ, ಆ ಪ್ರದೇಶದಲ್ಲಿ ಪ್ರಚಲಿತವಾಗಿದ್ದ ಅನೇಕ ದೇಸೀಯ ಶಬ್ದಗಳ ಪರಿಚಯವಾಗುತ್ತದೆ.. ಜನ ಜೀವನದ ಪರಿಚಯವಾಗುತ್ತದೆ.. ಅಂದಿನ ಜನರಲ್ಲಿ ಉಳಿದಿದ್ದ ಸತ್ಯ ಸಂಧದತೆ.. ಸಮಾಜದ ಪ್ರತಿ ಅವರಿಗಿದ್ದ ಜವಾಬ್ದಾರಿ, ಪರಸ್ಪರ ಮನುಷ್ಯರೊಳಗಿದ್ದ ಕಾರುಣ್ಯ, ಸಹನಶೀಲತೆ ಪ್ರಕಟಗೊಳ್ಳುತ್ತದೆ. ಹಾಗೆಯೇ ಕ್ರೌರ್ಯ, ಮನೋ ವಿಕೃತಿ, ದಬ್ಬಾಳಿಕೆಗಳು ಕಾಲಾತೀತ, ದೇಶಾತೀತ ಎನ್ನುವುದು ಮತ್ತೆ ಸ್ಪಷ್ಟವಾಗುತ್ತದೆ.

~ತೇಜಸ್ವಿನಿ ಹೆಗಡೆ.

ಶುಕ್ರವಾರ, ಜುಲೈ 14, 2017

‘ದಕ್ಕಿದಷ್ಟು ಸಾಗರ, ಸಿಕ್ಕಿದಷ್ಟು ಹಿಮಾಲಯ...’

ಛಾಯಾ ಭಗವತಿಯವರ ಸರಿಯಾದ ಪರಿಚಯ ನನಗಾಗಿದ್ದು ತೀರಾ ಇತ್ತೀಚಿಗೆ. ಅದೂ ಸೋಶಿಯಲ್ ಮೀಡಿಯಾಗಳ ಮೂಲಕ. ಆದರೂ ಅವರ ಬಗ್ಗೆ ಅಷ್ಟೊಂದು ತಿಳಿದಿರಲಿಲ್ಲ. ಆಗೊಮ್ಮೆ ಈಗೊಮ್ಮೆ ಒಂದೆರಡು ಕಥೆಗಳ ಕುರಿತು ಸಂವಾದಿಸಿದ್ದು ಬಿಟ್ಟರೆ. ಬಹಳ ಹಿಂದೆ ಅವರ ಫೇಸ್ಬುಕ್ ವಾಲ್ನಲ್ಲಿ ಅವರ ಪ್ರವಾಸ ಕಥನವಾದ "ಹಿಮಗಿರಿಯಾನ" ಬಿಡುಗಡೆಗೊಳ್ಳುತ್ತಿರುವುದರ ಕುರಿತು ಓದಿ ಅಚ್ಚರಿಗೊಂಡಿದ್ದೆ. ಇದಕ್ಕೆ ಕಾರಣ.. ಹಿಮಾಲಯ ಎಂದರೇ ಏನೋ ಅನಿರ್ವಚನೀಯ ಆನಂದ ಪುಳಕ ನನ್ನೊಳಗಾಗುವುದು. ಆದರೆ ಮತ್ತೆಂದಾದರೂ ಓದಿದರಾಯಿತು ಎಂದು ಅಲ್ಲೇ ಸುಮ್ಮನಿದ್ದುಬಿಟ್ಟಿದ್ದೆ. ಮೊನ್ನೆ ಹೀಗೇ ಅಚಾನಕ್ಕಾಗಿ ಆ ಪುಸ್ತಕದ ನೆನಪಾಯಿತು. ಎರಡ್ಮೂರು ತಿಂಗಳಿಗಾದರೂ ಒಮ್ಮೆ ಒಂದಾದರೂ ಹೊಸ ಪುಸ್ತಕದ ಸುವಾಸನೆ ನೋಡದಿದ್ದರೆ ನನಗೇನೋ ಅನ್ನಿಸಿಬಿಡುತ್ತದೆ. ಈ ಸಲ ರೇಖಾ ಕಾಖಂಡಕಿಯವರ ‘ವೈವಸ್ವತ’ದ ಜೊತೆ ಛಾಯಾ ಅವರ ‘ಹಿಮಗಿರಿಯಾನ’ವನ್ನೂ ಆನ್‌ಲೈನ್‌ನಲ್ಲಿ ಬುಕ್ ಮಾಡಿದ್ದಾಯಿತು. ಮೊದಲು ವೈವಸ್ವತವನ್ನೇ ಓದಬೇಕೆಂದು ಆಶಿಸಿದ್ದೆ.. ಅದಕ್ಕೆ ಕಾರಣ ಕಾದಂಬರಿಯ ಶೀರ್ಷಿಕೆಯ ಮೇಲಣ ಸೆಳೆತ!! ಆದರೆ ಇಂದು ಮಧ್ಯಾಹ್ನ ಕೊರಿಯರ್ ಬಂದಾಗ ಅದರ ಸೈಜ್ ನೋಡಿಯೇ ತಿಳಿಯಿತು ಇದು ಹಿಮಗಿರಿಯಾನವೆಂದು. ಈ ಮೊದಲೇ ಓದಲು ಕೈಗೆತ್ತಿಕೊಂಡಿದ್ದ, ಮೆಲ್ಲನೆ ಪೆಪ್ಪರ್ಮೆಂಟಿನಂತೇ ಸವಿಯುತ್ತಿದ್ದ ‘ಯೇಗ್ದಾಗೆಲ್ಲಾ ಐತೆ’ ಪುಸ್ತಕವನ್ನೇ ಮೊದಲು ಪೂರ್ತಿ ಮುಗಿಸಬೇಕೆಂದು ಸುಮ್ಮನಾದೆ. ಊಟವಾದ ನಂತರ ಹಾಗೇ ಕಣ್ಣಾಡಿಸಲೋಸುಗ ಪುಸ್ತಕ ತೆರೆದದ್ದೇ ಬಂತು.. ಮಧ್ಯ ಮಗಳು ಸ್ಕೂಲಿಗೆ ಬಂದಾಗ ಕೊಟ್ಟ ಅರ್ಧಗಂಟೆಯ ಬ್ರೇಕ್ ಬಿಟ್ಟರೆ ಮತ್ತೆ ಓದಿನ ಯಾನ ಮುಗಿಸಿದ್ದು ಪುಸ್ತಕದ ಕೊನೆಯ ಪುಟಕ್ಕೇ! ಸದ್ಯದಲ್ಲಿ ಯಾವ ಪುಸ್ತಕವೂ ನನ್ನ ಹೀಗೆ ಸೆಳೆದು ಓದಿಸಿಕೊಂಡಿದ್ದಿಲ್ಲ ಎಂದೆನ್ನಬಹುದು. ಇದಕ್ಕೆ ಕಾರಣ ಬಹುಶಃ ನನ್ನೊಳಗೆ ಸುಪ್ತವಾಗಿ ಅಡಗಿರುವ ಹಿಮಾಲ ಯಾನದ ಆಶಯವೂ ಕಾರಣವಾಗಿದ್ದಿರಬಹುದು. ಆದರೆ ನನ್ನ ಗಟ್ಟಿಯಾಗಿ ಹಿಡಿದಿಟ್ಟಿದ್ದು ಮುನ್ನುಡಿಯಿಂದ ಹಿಡಿದು ಕೊನೆಯ ಪುಟದವರೆಗು ಅರಳಿದ್ದ ಅಕ್ಷರ ಮಲ್ಲಿಗೆಗಳ ಘಮ!

79 ಪುಟಗಳ ಈ ಪುಟ್ಟ ಹೊತ್ತಿಗೆಯೊಳಗೆ ತುಂಬಿರುವುದು ಅಗಾಧ! ಲೇಖಕಿಯ ಬರಹದೊಳಗೆ ಅಡಗಿರುವ ಸರಳತೆ, ಪ್ರಾಮಾಣಿಕತೆ, ಜೀವನೋತ್ಸಾಹ, ಒಳ ಧ್ವನಿಗಳಿಗೆ ಆಕೆ ಕೊಡುವ ಸ್ಪಂದನ, ತಾನು ಅನುಭವಿಸಿದ್ದನ್ನು ಓದುಗನಿಗೆ ದಾಟಿಸುವ ಅಪಾರ ಕೌತಕ, ಮಗುವಿನ ಉತ್ಸಾಹ.. ಎಲ್ಲವೂ ನಮ್ಮನ್ನಾವರಿಸಿಕೊಂಡುಬಿಡುತ್ತದೆ. ಹಿಮಾಲಯದ ‘ಬೃಹತ್-ಮಹತ್’ಗಳನ್ನು ಅರಿಯಲು ಹಿಮ ಪರ್ವತವನ್ನೇ ಏರಬೇಕೆಂದಿಲ್ಲ.. ಅಲ್ಲಿಯ ಕಂಡು ಕೇಳರಿಯದ ಪುಟ್ಟ ಹಳ್ಳಿಗಳಲ್ಲಿ ಹತ್ತು ದಿನಗಳ ಕಳೆದರೂ ಸಾಕು ಎಂಬುದನ್ನು ಚೆಂದವಾಗಿ ಮನಗಾಣಿಸುತ್ತದೆ ಈ ಪ್ರವಾಸ ಕಥನ. ಮತ್ತೊಂದು ವಿಶೇಷವೆಂದರೆ.. ಪ್ರತಿಯೊಂದ ಪುಟ್ಟ ಅಧ್ಯಾಯಕ್ಕೂ ಸುಂದರ, ಅರ್ಥವತ್ತಾದ ಶೀರ್ಷಿಕೆಯನ್ನಿತ್ತು ಅದರೊಳಗಿನ ಸತ್ವದ ಎಳೆಯನ್ನು ಬಿಟ್ಟುಕೊಡುತ್ತಾ ಹೋಗುವುದು.  ಶೀರ್ಷಿಕೆಯನ್ನೋದುತ್ತಿರುವಂತೇ ಮನಸು ಕಲ್ಪನೆಗೆ ಎಳೆದೊಯ್ದು ಬಿಡುತ್ತದೆ.. ಉದಾ: ಚಂಢೀಗಢವೆಂಬ ಕೊಯಿದಿಟ್ಟ ಕೇಕಿನಂತಹ ನಗರ.."
ಚಂದ್ರಶೇಖರ ಆಲೂರು ಅವರ ಮುನ್ನುಡಿ ಪ್ರಯಾಣದೊಳಗಿನ ಕುತೂಹಲಕ್ಕೆ ನೀರೆರೆವಂತಿದ್ದು.. ಈ ಯಾನದೊಳಗಿನ ಅಂತಃಸತ್ವವನ್ನು ಹಿಡಿದಿಡುವಲ್ಲಿ ಸಫಲವಾಗಿದೆ. ಇದನ್ನು ಪ್ರಕಟಿಸಿದ್ದು ಗುಬ್ಬಚ್ಚಿ ಸತೀಶ್ ಅವರ ಗೋಮಿನಿ ಪ್ರಕಾಶನ.
********

ಈ ಕಥನದ ಆರಂಭದಲ್ಲಿ ಲೇಖಕಿಯವರು ತಮ್ಮ ಪುಟ್ಟ ಮಕ್ಕಳನ್ನು, ಪತಿಯನ್ನು ಬಿಟ್ಟು ಹತ್ತು ದಿನ ಅಷ್ಟು ದೂರ ಹೊರಡುವಾಗ ಎಷ್ಟೆಲ್ಲಾ ಮಾನಸಿಕ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಯಿತೆಂಬುದನ್ನು ಎಷ್ಟು ಮನಮುಟ್ಟುವಂತೇ ಬರೆದಿದ್ದಾರೆಂದರೆ.. ಪುಟ್ಟ ಮಕ್ಕಳಿರುವ.. ಆ ಬಾಲ್ಯಾವಸ್ಥೆಯನ್ನು ಕಂಡಿರುವ ಪ್ರತಿಯೊಬ್ಬ ತಾಯಿಗೂ ಇದು ಮೆಚ್ಚಾಗುತ್ತಾ ಹೋಗುತ್ತದೆ. ಓರ್ವ ತಂದೆ ದೂರದ ಪ್ರವಾಸಕ್ಕೆ ಹೋಗುವುದಕ್ಕೂ, ತಾಯಿ ಹೊರಡುವುದಕ್ಕೂ ನಮ್ಮಲ್ಲಿ ಎಷ್ಟು ವ್ಯತ್ಯಾಸವಿರುತ್ತದೆ ಎಂಬುದು ಎಲ್ಲಾ ತಾಯಂದಿರಿಗೂ ಚೆನ್ನಾಗಿ ಗೊತ್ತಿರುತ್ತದೆ. ಅಂಥ ಸಮಯದಲ್ಲಿ ಪತಿಯ, ಮನೆಯವರ ಆಸರೆ ಬಹು ಮುಖ್ಯ. ಅದು ಲಭಿಸಿದರೂ ಮಕ್ಕಳ ಗೋಳು, ಸ್ವತಃ ಮನದೊಳಗಿನ ಆತಂಕ, ದೌರ್ಬಲ್ಯ ಮೀರಿ ಹೊರಡುವುದು ನಿಜಕ್ಕೂ ಯಾವುದೇ ಹಿಮಾಲಯವನ್ನೇರುವುದಕ್ಕೂ ಕಡಿಮೆಯದ್ದೇನಲ್ಲಾ ಎಂಬುದು ನನ್ನ ಸ್ವಂತ ಅನುಭವವೂ ಹೌದು. ಸ್ವತಃ ನನ್ನ ಪುಟ್ಟಿಯೇ ಒಂದು ರಾತ್ರಿ ಅಜ್ಜಿ ಮನೆಯಲ್ಲಿರುವಾಗಲೂ ನಿದ್ದೆ ಬೀಳುವವರೆಗೂ ಆಗೀಗ ಕಾಲ್ ಮಾಡ್ತಿರ್ತಾಳೆ. ಈ ಅಧ್ಯಾಯವನ್ನೋದುತ್ತಿರುವಾಗಲೇ ನನ್ನ ಮಗಳು ಸ್ಕೂಲಿನಿಂದ ಬಂದಳು. ಅವಳ ಶಾಲಾ ಪ್ರವರಕ್ಕಾಗಿ ನಾನೊಂದು ಒತ್ತಾಯದ ಪಾಸ್ ಓದಿಗೆ ಕೊಡಲೇಬೇಕಾಯಿತು. ಆಗ ಲೇಖಕಿ ಇಲ್ಲೊಂದೆಡೆ ಸಣ್ಣ ಟ್ರಯಲ್ ಮಕ್ಕಳಿಗೆ ಮಾಡಿದಂತೇ ನಾನೂ ಮಾಡುವ ತುಂಟ ಆಲೋಚನೆ ಬಂದು ಮಗಳನ್ನು ಕೇಳಿದೆ.. "ಅಮ್ಮ ಕೆಲವು ದಿವ್ಸ ಏನೋ ಅರ್ಜೆಂಟ್ ಕೆಲ್ಸದ ಮೇಲೆ ಹೊರಗೆ ಹೋಗ್ತೀನಿ.. ಅಜ್ಜಿ, ಅಪ್ಪ ಎಲ್ಲಾ ಇರ್ತಾರೆ.. ಇರ್ತೀಯಾ ಪುಟ್ಟಾ.." ಎಂದಿದ್ದೇ, ಐದನೇ ತರಗತಿಯ ಆ ಪೋರಿ ಥಟ್ಟನೆ ನನ್ನ ಕಾಲಿಗೆ ಬಿದ್ದು ಗೋಳಾಡಿ.. ಸೀನ್ ಕ್ರಿಯೇಟ್ಮಾಡಿ.. ನಾನು ಹೋಗಲ್ಲಾ ಮಾರಾಯ್ತಿ ಎಂದು ಗಟ್ಟಿಯಾಗಿ ಹೇಳಿದಾಕ್ಷಣ.. ಅದೆಲ್ಲೆಂದಲೋ ಧುಮಕಲು ರೆಡಿಯಾಗಿದ್ದ ಕಣ್ಣಿರುಗಳೆಲ್ಲಾ ಇಂಗಿ ಹೋಗಿ.. ಜೋರಾಗಿ ನಕ್ಕು ತನ್ನ ಕ್ಲಾಸ್ ಪ್ರವರ ಮುಂದುವರಿಸಿದಳು. ದೊಡ್ಡ ನಾಟಕ್ ಬಾಜ್! ಆದರೆ ಹೊರಟು ನಿಂತರೆ ಇದು ದೊಡ್ಡ ರಾಮಾಯಣವೇ ಆಗಬಹುದಾದ ಎಲ್ಲಾ ಲಕ್ಷಣ ಆ ಐದು ನಿಮಿಷದೊಳಗೇ ನನಗೆ ದೊರಕಿ ಬಿಟ್ಟೀತು!

ಬಹಳ ಹಿಂದೆ ಯಾರೋ ಹಿರಿಯರು ನನಗೆ ಹೇಳಿದ್ದರು.. "ಈ ಕ್ಷಣ ನಿನ್ನ ಕಣ್ಮುಂದಿರುವುದಷ್ಟೇ ಬದುಕು.. ಜೀವನ ಅಂತ ಜೀವಿಸ್ಬಿಡ್ಬೇಕಮ್ಮಾ.. ನಾಳೆಯ ಬಗ್ಗೆ ಬಹಳ ಚಿಂತಿಸಿದರೆ ಆತಂಕವಾಗುವುದು.. ನಿನ್ನೆಯ ಕುರಿತು ಕೊರಗುತ್ತಾ ಹೋದರೆ ವ್ಯಸನ ಬೆಳೆವುದು.." ಎಂದು. ಅದು ನಿಜ ಎಂದು ಬಹಳ ಸಲ ಅನ್ನಿಸಿದ್ದರೂ, ಹಾಳಾದ ಮನಸು ಮಾತ್ರ ತನ್ನ ಚಾಳಿ ಆಗೀಗ ಮುಂದುವರಿಸಿ ಲೈಟಾಗಿ ಕೆಟ್ಟು.. ಹೇಗೋ ರಿಪೇರಿಯಾಗುತ್ತಿರುತ್ತದೆ. ಈ ಪ್ರವಾಸ ಕಥನದಲ್ಲೊಂದೆಡೆ ಲೇಖಕಿ "ಈ ಕ್ಷಣವೇ ಸತ್ಯ, ಸತ್ಯದ ಈ ಕ್ಷಣವನ್ನಷ್ಟೇ ಮನಸಾರೆ ಜೀವಿಸು" ಎಂದು ಹೇಳಿದ್ದನ್ನು ಓದಿದಾಗ ಆಹ್.. ಎಷ್ಟು ನಿಜ..! ಅಂದು ಅವರೂ ಹಾಗೇ ಹೇಳಿದ್ದರಲ್ಲಾ.. ಎಂದೆನಿಸಿ ಹಳೆಯ ಎಳೆಗೊಂದು ಬಲ ಸಿಕ್ಕಂತಾಯ್ತು. ಲೇಖಕಿಯೇ ಹೇಳುವಂತೇ.. ಜೀವನದ ಅಚ್ಚರಿಗಾಗಿ ಸಮಯ ವ್ಯರ್ಥ ಮಾಡದೇ, ಅಚ್ಚರಿ ಘಟಿಸಿದಾಗ ಮನಸೋ ಇಚ್ಛೆ ಅನುಭವಿಸಿಬಿಡಬೇಕು.

ಹಿಮಾಲಯದ ತಪ್ಪಲಿನಲ್ಲಿದ್ದ ಸೋಲನ್, ಶಿಲ್ಲಿ, ಶಿಮ್ಲಾ, ಸಾಂಗ್ಲ.. ಮುಂತಾದ ನಾನೀವರೆಗೂ ಕಂಡು ಕೇಳರಿಯದ (ಶಿಮ್ಲಾ ಹೆಸ್ರು ಮಾತ್ರ ಕೇಳಿದ್ದೇನೆ ಹಲವು ಬಾರಿ..) ಪುಟ್ಟ ಪುಟ್ಟ ಹಳ್ಳಿಗಳ ಸುಂದರ, ಸ್ಪಷ್ಟ, ಮನದೊಳಗೆ ಮನಮಾಡುವಂಥ ಚಿತ್ರಣ.. ನಾನಲ್ಲಿ ಇಲ್ಲದೆಯೂ.. ಹೋಗದೆಯೂ ಅವರೊಂದಿಗೇ ಆ ಕಾಡು, ಹಿಮ, ಬಯಲುಗಳಲ್ಲಿ ಓಡಾಡಿದಂಥ ಕಲ್ಪನೆ ಮಾಡಿಕೊಂಡು ಖುಶಿ ಪಡುವಂಥ ರಮ್ಯ ನಿರೂಪಣೆ.. ಎಲ್ಲವುದರ ಇಂಚಿಂಚಿನ್ನೂ ಚಪ್ಪರಿಸಿದೆ.

ಈ ಪ್ರವಾಸ ಕಥನದಲ್ಲಿ ಒಂದೆಡೆ ಒಂದು ಹಳ್ಳಿಯಲ್ಲಿ ಚಾಲ್ತಿಯಲ್ಲಿದ್ದ ವಿಚಿತ್ರ, ಬೇಸರ ತರುವಂಥ ಪದ್ಧತಿಯ ಉಲ್ಲೇಖವಿದೆ. ಅದಕ್ಕವರು "ಆಧುನಿಕ ದ್ರೌಪದಿಯರು" ಎಂದು ಶೀರ್ಷಿಕೆ ಕೊಡುತ್ತಾರೆ. ಅದನ್ನೋದಿಯೇ ಒಳಗಿರಬಹುದಾದಂಥ ಮಾಹಿತಿಯ ಸುಳಿವು ಸಿಕ್ಕಿತ್ತು. ಗಂಡು ಸಂತಾನಗಳಿಲ್ಲ ಎಂಬ ನೆಪವೊಡ್ಡಿಯೋ ಇಲ್ಲಾ ಮನೆಯಲ್ಲಿರುವ ನಾಲ್ಕೈದು ಗಂಡು ಮಕ್ಕಳಿಗೆ ಬೇರೆ ಬೇರೆ ಮದುವೆ ಮಾಡಿಸಿದರೆ ಅವರ ಹೊಟ್ಟೆ ಹೊರೆಯುವಷ್ಟು ಆರ್ಥಿಕಾನುಕೂಲತೆ ಇಲ್ಲವೆಂಬ ಕಟು ವಾಸ್ತವಿಕತೆಗೋ ಅಲ್ಲಿಯ ಸಮಾಜ ಬಹುಪತಿತ್ವ ಪದ್ಧತಿಯನ್ನು ಜಾರಿಯಲ್ಲಿಟ್ಟಿದೆಯಂತೆ. ನಿಜ.. ಹೆಣ್ಣಿನ ಮರ್ಜಿ ಇದೆಯೋ ಇಲ್ಲವೋ ಅವಳು ಒಪ್ಪಲೇಬೇಕು ಇಂಥಾ ಬಲಾತ್ಕಾರಕ್ಕೆ! ಆದರೆ ಒಂದೆಡೆ ಅವರು "ಮೂವರು ಅಕ್ಕತಂಗಿಯರು ಒಬ್ಬನನ್ನೇ ವರಿಸಿ ಸುಖವಾಗಿರುವುದನ್ನೂ ಕೇಳಿಸಿಕೊಂಡೆ.."ಎಂದು ಹೇಳುತ್ತಾರೆ. ಆಗ ನನಗನಿಸಿದ್ದೇನೆಂದರೆ.. ಇದು ಸರಿಯಲ್ಲ.. ಇದು ನಮ್ಮ ಮೇಲಾಗುತ್ತಿರುವ ಹೇರಿಕೆ, ದೌರ್ಜನ್ಯ.. ಖಂಡಿಸಬೇಕು.. ಎಂಬ ಈ ಯಾವ ಭಾವಗಳೂ ಹುಟ್ಟಿಲ್ಲದಿದ್ದಾಗ ಮನುಷ್ಯ(ಹೆಣ್ಣಿರಲಿ/ಗಂಡಿರಲಿ) ಅದನ್ನು ಮನಸಾರೆ ಒಪ್ಪಿ ಬಿಡುತ್ತಾನೆ ಮತ್ತು ಅದು ಅವನಿಗೆ ಯಾವುದೇ ಮಾನಸಿಕ/ದೈಹಿಕ ಬಾಧೆ ನೀಡದು. ಮನಸೊಪ್ಪಿದಾಗ ಎಲ್ಲವೂ ಸರಿಯೇ.. ಆದರೆ ಪ್ರಶ್ನೆಯೆದ್ದು ಬಿಟ್ಟಾಗ.. ಧಿಕ್ಕರಿಸಲು ಮನಸು ತೊಡಗಿದಾಗ, ತಿರಸ್ಕರಿಸಿದಾಗ ಮಾತ್ರ ಅದು ಇನ್ನಿಲ್ಲದ ಹಿಂಸೆ!

ದಿಲ್ಲಿಯಾದರೇನು ಶಿವಾ.. ಹಳ್ಳಿಯಾದರೇನು ಶಿವಾ ಎಂಬ ಹಾಡಿನಂತೇ ಕೆಲವೊಂದು ಬವಣೆಗಳಿಗೆ ಎಲ್ಲಿ ಹೋದರೂ ಮುಕ್ತಿಯಿಲ್ಲ. ಅದಕ್ಕೆ ಮತ್ತೆ ಮತ್ತೆ ನಿದರ್ಶನ ಸಿಗುತ್ತಾ ಹೋಗುತ್ತದೆ. ಇಲ್ಲಿಯೂ ಲೇಖಕಿ ಹಿಮಾಲಯದ ಆ ಹಳ್ಳಿಗಳ ಹೆಣ್ಮಕ್ಕಳು ದುಡಿವ ರೀತಿಗೆ, ಶ್ರಮ ಜೀವನ ನೆಡೆಸುತ್ತಾ ನಗುವ ಪರಿಗೆ.. ಗಂಡು ಮಕ್ಕಳಿಗಿಂತಲೂ ಬಹು ಪಾಲು ಜಾಸ್ತಿ ಶಕ್ತಿ ಹಾಕುತ್ತಾ ಮನೆಯ ಒಳ ಹೊರಗನ್ನು ನಿಭಾಯಿಸುವ ಛಾತಿಗೆ ಬೆರಗಾಗುತ್ತಾ "ಎಲ್ಲಾ ಊರುಗಳ ಒಲೆಯ ಮಾದರಿ ಬೇರೆಯಾದರೇನಂತೆ, ಕುದಿ, ಉರಿ, ಝಳ, ಸಿಡಿವ ಕಿಡಿಯ ಗಾಯ ಒಂದೇ ಅಲ್ಲವೇ?" ಎನ್ನುತ್ತಾರೆ. ಇದನ್ನೋದಿ ಛಕ್ಕನೆ ಹೊಸ ಕಿಡಿಯೊಂದು ನನ್ನೊಳಗು ಹೊತ್ತಿ ಅಷ್ಟೊತ್ತೂ ಹಿಮಗಿರಿಯ ಯಾನದಲ್ಲಿ ತಂಪೆದ್ದ ಮೈ, ಮನಸು ಬಿಸಿಯಾಯಿತು. ಇಂತಹ ಅನೇಕ ಸಣ್ಣ ಪುಟ್ಟ ಚುರುಕು ಮುಟ್ಟಿಸುವ, ಸಣ್ಣ ಏಟು ಕೊಟ್ಟು ಎಬ್ಬಿಸುವಂಥ ಮಾತುಗಳು, ಅರಳಿಸುವ ಉಪಮೆಗಳು ಆಗಾಗ ಹಿಮನದಿಯ ಝರಿಯಂತೇ ಬರಹದ ನಡುವೆ ನಮಗೆ ಸಿಗುತ್ತಾ ಹೋಗುವವು.

‘ಹಿಮಗಿರಿಯಾನ’ ನನಗೇಕೆ ಇಷ್ಟು ಇಷ್ಟವಾಯಿತೋ.. ಇಷ್ಟು ಒಳಕ್ಕಿಳಿದು ಕಾಡುತಿಹುದೋ ಎಂದು ಅರೆಕ್ಷಣ ಆಲೋಚಿಸಿದಾಗ ಅನಿಸಿದ್ದು.. ಇದರಲ್ಲಿ ಉಲ್ಲೇಖಿಸಲ್ಪಟ್ಟ ಬಹಳಷ್ಟು ವಿಷಯಗಳು, ಪ್ರಸಂಗಗಳು ನನ್ನ ಬದುಕಿನ ಗತಕಾಲದ, ಪ್ರಸ್ತುತ ನಡೆಯುತ್ತಿರುವ ಹಳೆಯ/ಹೊಸ ಘಟನಾವಳಿಗಳ ಜೊತೆ ನನ್ನ ಮಾನಸು ಥಳಕು ಹಾಕಿದ್ದು.. ನಾನು ಅವುಗಳನ್ನು ಸಮೀಕರಿಸಿಕೊಂಡಿದ್ದು.. ಇದೇ ಕಾರಣಗಳಿಂದಲೇ ಬಹುಶಃ ಇದು ನನಗೆ ಪುಟ್ಟದಾಗಿದ್ದರೂ ಮಹತ್ತಾದ ವಿಷಯಗಳನ್ನು ಅರುಹಿದೆ ಎಂದೆನಿಸಿದೆ. ಯಾವುದೇ ಪುಸ್ತಕವನ್ನೋದುವಾಗ ಅದರ ಜೊತೆ ನಮ್ಮ ಅಂತಃಸತ್ವ, ಒಳಧ್ವನಿಯೂ ಜೊತೆಗೂಡಿ ಬಿಟ್ಟರೆ ಅದರ ಜೊತೆ ಒಂದು ಅವಿನಾಭಾವ ನಂಟು ಏರ್ಪಡುತ್ತದೆಯಂತೆ.. ಅದೇ ಇಲ್ಲಿ ನನ್ನೊಂದಿಗೂ ಆಯಿತು. ಬಹಳ ಬೇಗ ಮುಗಿದೇ ಹೋಯಿತೇ ಈ ಯಾನ ಎಂಬ ವಿಷಾದವೊಂದು ಕೊನೆಗೆ ಸಣ್ಣಗೆ ಕಾಡಿತು.. ಜೊತೆಗೆ ಈ ಜನ್ಮದಲ್ಲಿ ನಾನೆಂದೂ ಈ ಎಲ್ಲಾ ರಮ್ಯತಾಣಗಳನ್ನು ಇವರಂತೇ ಕಣ್ತುಂಬಿಕೊಳ್ಳಬಲ್ಲೆನೆ?! ಎಂಬ ಕೊರಗೂ... (ಪ್ರಶ್ನಾರ್ಥಕವೇಕೆಂದರೆ.. ‘ಎಂದಾದರೊಂದು ದಿನ..’ ಎಂದ ಎಕ್ಕುಂಡಿಯವರ ಸಾಲು ನನಗೆ ಆಶಾದೀಪದಂತೇ..).

ಮನದೊಳಗೆ ಅಚ್ಚಾಗುವಂಥ ಹಲವು ಚಿತ್ರಣಗಳು ಇಲ್ಲಿ ಸಿಕ್ಕಿದ್ದರೂ... ನನ್ನ ಬಹಳ ತಾಗಿದ್ದು ಈ ಸಾಲುಗಳು..
"ಬದುಕಿನಲ್ಲಿ ಎಡವಿದ್ದು, ಏನೂ ಆಗಿಯೇ ಇಲ್ಲವೇನೋ ಎಂಬಂತೆ ಮತ್ತೆ ಮತ್ತೆ ಎದ್ದು ನಿಂತದ್ದು, ಮುಂದೆ ನಡೆದದ್ದು ಅದೆಷ್ಟು ಸಲವೋ! ಲೆಕ್ಕ ಮಾಡುತ್ತ ಕೂತರೆ ತಲೆ ಕೆಟ್ಟ ಮೊಸರಿನ ಗಡಿಗೆಯಾಗುತ್ತದೆ. ಅದೊಂಥರಾ ಸೈಕಲ್ ಕಲಿಯುವಾಗ ಬಿದ್ದೂ ಎದ್ದೂ ಮಾಡಿದಂತೆ! ಇಳಿಜಾರಿನಲ್ಲಿ ಸಲೀಸು, ಏರು ದಿಬ್ಬಗಳಿದ್ದಾಗ ಉಸಿರೇ ನಿಂತಂತೆ! ಕೈಕಾಲುಗಳ ತುಂಬೆಲ್ಲಾ ಗಾಯ, ಆದರೂ ಸೈಕಲ್ ಓಡಿಸಲು ಕಲಿತ ರೋಮಾಂಚನ! ಜೀವನದ ಸೈಕಲ್ ತುಳಿಯುವಾಗಲೂ ಹಲವು ಸಲ ಇದೇ ಉದಾರಹಣೆಯನ್ನು ಮನಸಿಗೆ ತಂದುಕೊಂಡು, ಬಿದ್ದಾಗೊಮ್ಮೆ ಎದ್ದು ಮೈಕೊಡವಿಕೊಂಡು ಮತ್ತೆ ಮುನ್ನಡೆಯುವುದನ್ನು ಮುಂದುವರಿಸಿಯೇ ಇದ್ದೇನೆ."

ಇಂಥಾ ಒಂದು ಚೆಂದದ ಹೊತ್ತಗೆಯನ್ನು ನಮಗೆ ಓದಲು ಕೊಟ್ಟಿರುವ ಲೇಖಕಿಗೆ ಪ್ರೀತಿಯ ಅಪ್ಪುಗೆ. ಒಳ್ಳೆಯ ಓದು ಮನಸಿಗೆ ಕೊಡುವಷ್ಟು ನೆಮ್ಮದಿ, ಸಂತಸ ಬೇರೇನೂ ಕೊಡದು ಎಂದು ನಾನೇ ನಂಬಿರುವ ವಿಶ್ವಾಸ ಮತ್ತೆ ಮತ್ತೆ ಬಲಗೊಳ್ಳುತ್ತಿರುತ್ತದೆ.

~ತೇಜಸ್ವಿನಿ ಹೆಗಡೆ.

ಸೋಮವಾರ, ಜೂನ್ 26, 2017

ನೊಸಲ ಬೆಳಕು

ಘಮ್ಮೆನ್ನುತ್ತಿದ್ದ ಸುರಗಿ ಹೂವನ್ನೇ ಆಘ್ರಾಣಿಸುತ್ತಿದ್ದ ವಿನೇತ್ರಿಗೆ ಹೊಳೆಯ ಬದಿಯಿಂದ ವತ್ಸಲಕ್ಕ ಮತ್ತು ಪುರುಷೋತ್ತಮ ನಾಯ್ಕ ಇಬ್ಬರೂ ಒಟ್ಟಿಗೇ ಕುಲು ಕುಲು ನಗುತ್ತಾ ಬರುತ್ತಿರುವುದು ನೋಡಿ ಏನೋ ಒಂಥರವಾಯಿತು. “ತನ್ನ ಅಪ್ಪ ಮಾಡಿದ್ದು ಅನಾಚಾರ ಅಂತ ಬೊಬ್ಬೆ ಹೊಡೆದಿದ್ದೋಳು, ಈಗ ತಾನೇ ನಾಚ್ಗೆ ಬಿಟ್ಟು, ಆ ನಾಯ್ಕನ ಜೊತೆ ಸಂಬಂಧ ಇಟ್ಕೊಂಡಿದೆ ನೋಡು.....” ತೇರು ಬೀದಿಯ ಜಾತ್ರೆಯಲ್ಲಿ ಸಿಕ್ಕಿದ್ದ ಗೆಳತಿ ಪದ್ಮಾವತಿ, ದೇವಸ್ಥಾನಕ್ಕೆ ಕಾಯೊಡೆಯಿಸಲು ಬಂದಿದ್ದ ವತ್ಸಲೆಯನ್ನುದ್ದೇಶಿಸಿ ಹೇಳಿದ್ದ ಮಾತುಗಳು ನೆನಪಾಗಿ, ಅಪ್ರಯತ್ನವಾಗಿ ಅವಳಲ್ಲಿ ಹೇವರಿಕೆ ಮೂಡಿತು.

“ಅರೆರೆ ವಿನೇತ್ರಿ ಇಲ್ಲೆಂತ ಮಾಡ್ತಿದ್ದೀ? ಒಬ್ಳೇ ಬಂದ್ಯಾ?! ಏನಾದ್ರೂ ಸಹಾಯ ಬೇಕಾ ಕೂಸೆ? ಬೇಕಿದ್ರೆ ಕರೆ.. ಇಲ್ಲೇ ಏಲಕ್ಕಿ ತೋಟದಲ್ಲಿ ಏಲಕ್ಕಿ ಬೀಜ ತೆಗೀತಾ ಇರ್ತೇನೆ..” ವತ್ಸಲಕ್ಕ ಅವಳ ಮೊಗದಲ್ಲಿ ಬದಲಾಗುತ್ತಿರುವ ಬಣ್ಣಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ, ಹಾಗೆ ಹೇಳುವುದು ತನ್ನ ಕರ್ತವ್ಯವೆಂಬಂತೇ ಹೇಳಿ, ಮತ್ತದೇ ಲಹರಿಯೊಂದಿಗೆ ಪುರುಷೋತ್ತಮನ ಜೊತೆಗೂಡಿ ಪಿಸುನುಡಿಯುತ್ತಾ ಮುನ್ನೆಡೆಯಲು ಮುಷ್ಟಿ ಬಿಗಿದಳು ವಿನೇತ್ರಿ. “ಕರ್ಮ.. ಈಕೆಯೇನು ನನ್ನ ಸಂಪೂರ್ಣ ಹಾಸಿಗೆ ಹಿಡಿದವಳು ಎಂದುಕೊಂಡಿದ್ದಾಳೋ ಏನೋ?! ಮೊನ್ನೆಯಷ್ಟೇ ಇವ್ಳ ಮುಂದೆಯೇ ಜಾತ್ರೆಯನ್ನೆಲ್ಲಾ ಸುತ್ತಿದ್ದೀನಿ.. ಅಂಥದ್ರಲ್ಲಿ ಸುಮ್ ಸುಮ್ನೇ ಸಹಾಯ ಕೇಳ್ತಿದ್ದಾಳೆ.. ಛೇ.. ತಾನಾದರೂ ಯಾಕೆ ಸಮಾ ಉತ್ತರ ಕೊಡ್ಲಿಲ್ವೋ.. ಗೋಪಜ್ಜಿ ಹೇಳೋದು ಸುಳ್ಳಲ್ಲ.. ಬಸ್ಸು ಹೋದ್ಮೇಲೆ ಓಡೋ ಬುದ್ಧಿನೇ ನಂದು..” ಒಳಗಿನಿಂದ ಅಸಹಾಯಕತೆ, ಸಂಕಟ ನಗ್ಗಲು, ನಿಧಾನಕ್ಕೆ ತಲೆ ತಗ್ಗಿಸಿ ತನ್ನ ಬಲಗಾಲನ್ನೇ ದಿಟ್ಟಿಸತೊಡಗಿದಳು ವಿನೇತ್ರಿ.

“ವಿನು.. ಮದರಂಗಿ ಹಚ್ಚೋವಾಗ ನಿನ್ನ ಈ ನುಣುಪಾದ, ಹಾಲು ಬಿಳುಪಿನ ಕಾಲ್ಗಳ ಮೇಲೆ ಅಚ್ಚಗೆಂಪು ಮದರಂಗಿ ಬಣ್ಣದ ಚಿತ್ತಾರ ಬಿಡ್ಸಿ, ಈ ಬಲಗಾಲ ಪಾದದ ಮೇಲೆ ನನ್ನ ಹೆಸರಿನ ಮೊದಲ ಪದವನ್ನು ಗುಟ್ಟಾಗಿ ಬರೆದಿಟ್ಟುಕೋ.. ಮದುವೆಯ ದಿನ ಇದೇ ಕಾಲಲ್ಲಿ ಅಕ್ಕಿ ಶಿದ್ದೆಯನ್ನುರುಳಿಸಿ ನೀ ನನ್ನ ಮನೆಯ ತುಂಬಿ, ರಾತ್ರಿ ಸಿಕ್ಕಾಗ, ನಾನೇ ಆ ಅಕ್ಷರವ ಹುಡುಕಿ ತೆಗಿವೆ.. ಇದು ನನ್ನ ಎದೆಯಾಳದ ಕೋರಿಕೆ.. ಪೂರೈಸ್ತೀಯಲ್ಲಾ..” ಮೂರು ವರುಷದ ಹಿಂದೆ, ಒಂದು ಸುಂದರ ಸಂಜೆ, ಸಾಗರ ಉಷೆಯ ಸೇರಿದ್ದನ್ನು ಕಂಡ ಬಾನು ಕೆಂಪೇರಿದ್ದ ಹೊತ್ತಲ್ಲಿ, ತನ್ನ ಬಲಗಾಲಿನನ್ನು ಸವರುತ್ತಾ ನುಡಿದಿದ್ದ ಮನೋಹರನ ನೆನಪಾಯಿತು ವಿನೇತ್ರಿಗೆ. 

“ಪಾಪಿಷ್ಟ.. ನನ್ನ ಬದುಕುಲ್ಲಿ, ಅವನ ಹೆಸರನ್ನು ಶಾಶ್ವತವಾಗಿ ರಕ್ತವರ್ಣದಲ್ಲೇ ಕೊರೆದು ಹೋಗ್ಬಿಟ್ಟ.. ಬೇಡ್ವೋ ಬೇಡ್ವೋ ಜಾಸ್ತಿ ಸ್ಪೀಡ್ ಬೇಡ.. ಇದು ಘಟ್ಟ.. ಕತ್ಲಾಗ್ತಿದೆ ಬೇರೆ.. ಅಂತ ಎಷ್ಟು ಬಡ್ಕೊಂಡ್ರೂ.. ಆವತ್ತು ಹುಚ್ಚು ಆವೇಶದಲ್ಲಿ ಹೋಗಿ, ತಿರುವಿನಲ್ಲಿ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು.. ದಢಕ್ಕನೆ ಬಿದ್ದಿದ್ದೊಂದು ಗೊತ್ತು. ಕಣ್ಬಿಟ್ಟಾಗ ಸುತ್ತಲೂ ಕತ್ತಲೇ ತುಂಬಿತ್ತಲ್ಲ... ಪೂರ್ತಿ ಪ್ರಜ್ಞೆ ಬಂದಾಗಲೇ ಗೊತ್ತಾಗಿದ್ದು.. ಬಲಗಾಲು ಮಣ್ಣುಪಾಲಾಗಿದೆ ಎಂದು. ಅಳಲೂ ಆಗದಂಥ ಆಘಾತದ ಸ್ಥಿತಿಯಲ್ಲಿದ್ದವಳು ಪ್ರತಿ ಕ್ಷಣ ಮನೋಹರನಿಗಾಗಿ ಕಾದಿದ್ದೆ. ತನಗಾದರೂ ಎಲ್ಲಿ ಬೋಧವಿತ್ತು? ಮನುವಿನ ಬಗ್ಗೆ ಕೇಳಿದಾಗೆಲ್ಲಾ ಏನೋ ಹೇಳಿ ಹಾರಿಸುತ್ತಿದ್ದ ಮನೆಯವರ ಮನಃಸ್ಥಿತಿಯ ಅರಿವೂ ಇರಲಿಲ್ಲ. ಅಂತೂ ಎರಡುವಾರಗಳ ಮೇಲೆ ಹಣೆಗೊಂದು ಪಟ್ಟಿ ಸುತ್ತಿಕೊಂಡು ಎದುರು ಪ್ರತ್ಯಕ್ಷನಾದವ.. ದೊಪ್ಪನೆ ನನ್ನ ಎಡಗಾಲಿನ ಮೇಲೆ ಬಿದ್ದು, ಗೋಳಾಡಿಬಿಟ್ಟಿದ್ದ! ಆಗಲೇ ನಾನೂ ಒಳಗೆ ಕಟ್ಟಿಟ್ಟಿದ್ದ ದುಃಖವನ್ನೆಲ್ಲಾ ಕರಗಿಸಿ ಭೋರಿಟ್ಟಿದ್ದು. ಪಾಪ ನನಗಾಗಿ ಅಳುತ್ತಿರುವ, ಮರುಗುತ್ತಿರುವ, ಎಂದೇ ಸಂಕಟ ಪಡುತ್ತಿದ್ದರೆ.. ಆತನೋ ಮೆಲ್ಲನೆ ಕಾದ ಸೀಸವ ಹೊಯ್ದಿದ್ದ. ‘ವಿನು.. ನಾನು ಪಾಪಿ ಕಣೆ.. ನನ್ನಿಂದ ನಿನ್ನ ಕಾಲು ಹೋಗೋಯ್ತು.. ಎಂಥ ಶಿಕ್ಷೆ ಆದ್ರೂ ಕೊಡು ಅನುಭವಿಸ್ತೀನಿ.. ಆದ್ರೆ.. ಏನೂ ತಪ್ಪು ಮಾಡದ ಅಪ್ಪ, ಅಮ್ಮಂಗೆ ಹೇಗೆ ಶಿಕ್ಷೆ ಕೊಡಲೇ?’ ಎಂದುಬಿಟ್ಟ. ನನಗೋ ಎಲ್ಲಾ ಅಯೋಮಯ.. ಏನಂತ ಹೇಳಲಿ? ಅರ್ಥವಾಗದೇ ಬಿಕ್ಕುತ್ತಾ ಅವನತ್ತ ನೋಡಲು, ಕಣ್ಣೋಟವ ತಪ್ಪಿಸಿದ್ದ. ‘ಅಮ್ಮ, ಅಪ್ಪ ಹಗ್ಗ ತಗೋತಾರಂತೆ ವಿನು.. ಅಮ್ಮಂಗೆ ಹಾರ್ಟ್ ಪ್ರಾಬ್ಲೆಮ್ಮಿದೆ ಗೊತ್ತಲ್ಲ.. ಅವ್ರ ಹತ್ರ ಮನೆ ಕೆಲ್ಸ ಆಗಲ್ಲ ಬೇರೆ.. ಹೀಂಗೆಲ್ಲಾ ಆದ್ಮೇಲೆ ನೀನು ಸುಮ್ನೇ ಅವ್ರ ಚುಚ್ಚು ಮಾತುಗಳನ್ನೆಲ್ಲಾ ಕೇಳ್ಕೊಂಡು.. ಪ್ರತಿ ದಿವ್ಸ ಹಿಂಸೆ ಅನುಭವಿಸೋದನ್ನು ನನ್ನಿಂದ ನೋಡಲಾಗದು.. ಈಗಾಗ್ಲೇ ನಾ ನಿಂಗೆ ಕೊಟ್ಟಿರೋ ದುಃಖವೇ ಸಾಕು.. ಎಲ್ಲರ ದ್ವೇಷ ಕಟ್ಕೊಂಡು ಮದ್ವೆ ಆಗಿ ಮತ್ತಷ್ಟು ಕಷ್ಟವನ್ನ ನಿಂಗೆ ಕೊಡಾಲಾರೆ. ವಿನು, ಎಷ್ಟೇ ದೊಡ್ಡ ಬಿಲ್ ಆಗ್ಲಿ.. ಆಸ್ಪತ್ರೆ ಖರ್ಚೆಲ್ಲಾ ನಂದೇ ಅಂತ ಮೊದ್ಲೇ ಡಾಕ್ಟರಿಗೆ ಹೇಳಿಬಿಟ್ಟಿದ್ದೀನಿ.. ನೀನು ದೊಡ್ಡ ಮನಸ್ಸು ಮಾಡಿ ದಯವಿಟ್ಟು ನನ್ನ...’ ಉಗುಳು ನುಂಗುತ್ತಾ ಆತ ಹೇಳಿದ ಮಾತುಗಳನ್ನು ಅರಗಿಸಿಕೊಳ್ಳಲಾಗದೇ ಕಲ್ಲಿನಂತೇ ಕೂತಿದ್ದೆನಲ್ಲಾ ನಾನು. ಮತ್ತೂ ಆತ ಅದೇನೇನೋ ಹಲುಬುತ್ತಿದ್ದ.. ಅದೊಂದೂ ಈಗ ನೆನಪಿಲ್ಲ. ಕ್ರಮೇಣ ಎಲ್ಲವೂ ಸ್ಪಷ್ಟವಾಗಿ, ಅಸಹ್ಯ, ತಿರಸ್ಕಾರ ನಾಭಿಯಿಂದೆದ್ದು ಬಂದು... ನನ್ನ ತಲೆಯ ಮೇಲಿಂದ ಕೈಮುಗಿದು ದೊಡ್ಡದಾಗಿ ಗೆಟ್ ಔಟ್ ಎಂದಾಗ.. ಆ ಬೊಬ್ಬೆಗೆ ಹೊರಗೆಲ್ಲೋ ಇದ್ದ ಅಪ್ಪಯ್ಯ ಓಡಿ ಬರಲು, ಫಟ್ಟನೆ ಹೊರಗೋಡಿದ್ದನಲ್ಲ ರಣ ಹೇಡಿ. ಹೇಗೆ ಆ ದಿವಸಗಳ ಕಳೆದನೋ ಈಗಲೂ ನೆನೆದರೆ ಚಳಿ ಬೆನ್ನ ಹುರಿಯಿಂದೆದ್ದು ಬರುತ್ತದೆ. ಆದರೂ ಮತ್ತೆ ಮತ್ತೆ ಹಳೆಯದೆಲ್ಲಾ ನೆನಪಾಗಿ ನನ್ನ ಜೀವವನ್ನು ಹಿಂಡೋದು ಯಾಕೋ..! ದರಿದ್ರದವ.. ಥೂ..” ಇರಿಯುತ್ತಿದ್ದ ಅವನ ನೆನಪುಗಳ ಯಾತನೆಯನ್ನು ತಡೆಯಲಾಗದೇ, ಅತೀವ ಅಸಹ್ಯದಿಂದ ಪಕ್ಕದಲ್ಲೇ ಉಗಿದು ಬಿಟ್ಟಳು ವಿನೇತ್ರಿ. ದಳ ದಳ ಹರಿವ ನೀರಿಗೆ ತಡೆಯೊಡ್ಡಲು ಸುತ್ತ ಮುತ್ತ ಯಾರೂ ಇಲ್ಲದ್ದರಿಂದ ತೊಟ್ಟಿದ ಅವಳ ಕಾಟನ್ ಮ್ಯಾಕ್ಸಿ ಚೆನ್ನಾಗಿ ಬಾಯಾರಿಸಿಕೊಳ್ಳತೊಡಗಿತು.

“ವಿನು ಅಕ್ಕ.. ಗೋಪಜ್ಜಿ ಕಾಲಿನ ತೈಲ ಕಾಣ್ತಿಲ್ವಂತೆ.. ಹುಡುಕ್ತಾ ಇದ್ದಾಳೆ.. ನಿನ್ನೆ ನಿನ್ನ ಬೆನ್ನುನೋವಿಗೆ ಕೊಟ್ಟಿದ್ಳಂತಲ್ಲ.. ಎಲ್ಲಿಟ್ಟಿದ್ದೀ? ನಿನ್ನ ಕಪಾಟಿನಲ್ಲೆಲ್ಲೂ ಕಾಣ್ತಿಲ್ಲಪ್ಪ.. ಬೇಗ್ಬಾ...” ಚಿಕ್ಕಮ್ಮನ ಮಗಳು ಶೋಭಾ ದಣಪೆಯಾಚೆಯಿಂದ ಕೂಗಿದ್ದೇ ಎಚ್ಚೆತ್ತಳು ವಿನೇತ್ರಿ. ಮ್ಯಾಕ್ಸಿ ಮೇಲೆ ಹಾಕಿಕೊಂಡಿದ್ದ ಹಳೆಯ ಚೂಡಿದಾದರ ಶಾಲಿನಿಂದ ಕಣ್ಣು, ಮೊಗಗಳನ್ನೊರೆಸಿಕೊಂಡು ಮೆಲ್ಲನೆ ಎರಡೂ ಕಂಕುಳಲ್ಲಿ ಊರುಗೋಲುಗಳನ್ನು ಸಿಕ್ಕಿಸಿಕೊಂಡು ಮನೆಯತ್ತ ನಡೆದಳು ಮೊಗದ ಮೇಲೊಂದು ಸಣ್ಣ ನಗುವನ್ನೇರಿಸಿ.

~೨~

“ಕೂಸೆ.. ಮೊನ್ನೆ ನಡೆದ ಊರ ಜಾತ್ರೆಯಲ್ಲಿ ಮುಖವಾಡಗಳನ್ನಿಟ್ಟಿದ್ರಂತೆ.. ನೀನೂ ಒಂದು ಹಿಡ್ಕಂಡು ಬಂದಿರೋ ಹಾಗಿದೆ..?” ವಿನೇತ್ರಿಯನ್ನೇ ನೇರವಾಗಿ ದಿಟ್ಟಿಸುತ್ತಾ ಕೇಳಿದಳು ಗೋಪಜ್ಜಿ. ಜಗುಲಿಯಲ್ಲಿ ಕಾಲ್ಗಳನ್ನು ನೀಡಿ ಕುಳಿತಿದ್ದ ಅಜ್ಜಿಯ ಪಕ್ಕದಲ್ಲೀ ತಾನೂ ಕುಳಿತು, ಒತ್ತಾಯದಿಂದ ತಾನೇ ಅವಳ ಕಾಲ್ಗಳಿಗೆ ನೋವಿನ ತೈಲ ನೀವುತ್ತಿದ್ದ ವಿನೇತ್ರಿಗೆ ಫಕ್ಕನೆ ಅಜ್ಜಿಯ ಒಗಟಿನ ಮಾತು ಅರ್ಥವಾಗಲಿಲ್ಲ. “ಅಯ್ಯೋ ಯಾರಂದ್ರು ಅಜ್ಜಿ? ನಾನೆಂತಕ್ಕೆ ಆ ಮಳ್ಳು ಮುಖವಾಡ ತರ್ಲಿ? ನಂಗೆಂತ ಹುಚ್ಚೇ..?” ಕಿರುನಕ್ಕಳು ವಿನೇತ್ರಿ. “ಸರಿ ಮತ್ತೆ.. ಬಿಸಾಕು ಈ ಸುಳ್ಳು ನಗೆಯ ಮುಖವಾಡವ.. ನೀ ಬೇರೆಯವ್ರ ಮುಂದೆ ಇದ್ನ ಹಾಕ್ಕೋಬಹುದು... ಆದ್ರೆ ಈ ಅಜ್ಜಿಯ ಮುಂದೆ ನಡ್ಯಲ್ಲ ತಿಳ್ಕ. ಹೌದು, ಎಲ್ಲೋಗಿದ್ದೆ ಬೆಳ್ ಬೆಳ್ಗೆ? ದೋಸೆನೂ ತಿಂದಿಲ್ವಂತೆ... ನಿನ್ನಮ್ಮ ಸುಧಾ ಬೇಜಾರು ಮಾಡ್ಕೊಂಡು ತಾನೂ ತಿಂದಿಲ್ಲ ಗೊತ್ತಾ? ನಂಗೆ ನಿನ್ನ ಮನಸು ಗೊತ್ತಾಗತ್ತೆ ಕೂಸೆ.. ಆದ್ರೆ ನೀನೂ ಹೆತ್ತಮ್ಮನ ಸಂಕ್ಟಾನ ಅರ್ಥ ಮಾಡ್ಕೊಬೇಕು.. ಅವ್ಳ ಸಮಾಧಾನಕ್ಕಾದ್ರೂ ಸ್ವಲ್ಪ ತಿಂಡಿ ತಿನ್ಬಾರ್ದಿತ್ತಾ? ಹೌದು.. ಯಾಕೆ ಇಷ್ಟೊಂದು ಕಣ್ಣು ಊದಿಕೊಂಡಿದೆ? ಅಳ್ತಾ ಇದ್ಯಾ? ವಿಷ್ಯ ಏನು ಅಂತ ಹೇಳು ಮೊದ್ಲು..” ಕುಕ್ಕಲತೆಯಿಂದ ಮೊಮ್ಮಗಳ ತಲೆ ಸವರಲು, ಒಳಗೆಲ್ಲೋ ಕಟ್ಟಿದ್ದ ಅವಳ ದುಃಖದ ಭಾರ ಜಗ್ಗಲು, ತಲೆ ತಗ್ಗಿಸಿದಳು ವಿನೇತ್ರಿ.

“ಅತ್ತೆ ರಾತ್ರಿಗೇನು ಮಾಡ್ಲಿ? ಮಧ್ಯಾಹ್ನದ ಸಾರೊಂದು ಸರಿಯಾಗಿದೆ.. ಮಜ್ಗೆಹುಳಿ ಯಾಕೋ ಕೆಟ್ಟಿರೋ ಹಾಗಿದ್ಯಪ್ಪ..” ಚಿಕ್ಕ ಸೊಸೆ ವಿಮಲಾ ಕೇಳಲು, “ಏನಾದ್ರೊಂದು ಮಾಡೆ.. ನಾನು ವಿನು ಇಬ್ರೂ ಹೊರಗೆ ಅಂಗಳದಲ್ಲಿ ಆಲದ ಕಟ್ಟೆಯ ಮೇಲೆ ಕೂತಿರ್ತೇವೆ.. ಸದ್ಯಕ್ಕೆ ನಮ್ಮನ್ನ ಊಟಕ್ಕೆ ಕರೀಬೇಡ್ರಿ.. ಆಮೇಲೆ ವಿನೇತ್ರಿ ನಾನು ಬಡಿಸ್ಕೊಂಡು ಉಣ್ತೇವೆ..” ಎಂದ ಗೋಪಮ್ಮ ಅಂಗಳದ ಕಡೆ ಮೆಲ್ಲನೆ ಸಾಗಲು, ಅವಳನ್ನೇ ನಿಧಾನಕ್ಕೆ ಹಿಂಬಾಲಿಸಿದಳು ವಿನೇತ್ರಿ.

~~~~

ಗೋಪಜ್ಜಿಯ ಪತಿ ನಾರಾಯಣ ರಾಯರು ತಮ್ಮ ಬಾಲ್ಯದಲ್ಲಿ ನೆಟ್ಟಿದ್ದ ಆಲದ ಗಿಡ ಬೆಳೆದು, ಮರವಾಗಿ, ಅದಕ್ಕೆ ಮಗ ಶ್ರೀಹರಿಯೇ ಆಸ್ಥೆಯಿಂದ ಕಟ್ಟೆ ಕಟ್ಟಿಸಿದ್ದ. ಐದು ವರುಷದ ಹಿಂದೆ ತೊರೆದು ಹೋದ ಪತಿಯ ಸಾಂಗತ್ಯದ ಬೆಚ್ಚನೆಯ ಅನುಭವ ಕೊಡುವ ಈ ಆಲದ ಮರದ ಕಟ್ಟೆಯೆಂದರೆ ಗೋಪಮ್ಮನಿಗೆ ಬಲು ಅಕ್ಕರೆ. ಪ್ರತಿ ದಿವಸ ತಾಸೊಪ್ಪತ್ತಾದರೂ ಅಲ್ಲೇ ಕುಳಿತು, ಹಬ್ಬಿಸಿರುವ ಜಾಜಿ ಬಳ್ಳಿಯಿಂದ ನಾಲ್ಕು ಮೊಗ್ಗು ಕೊಯ್ದು ತಲೆಗೆ ಸೂಡಿಕೊಂಡು ಆಘ್ರಾಣಿಸುವುದು ಅವಳ ತಪ್ಪದ ದಿನಚರಿ. ಇವತ್ತೂ ಅಷ್ಟೇ, ನಾಲ್ಕೇ ನಾಲ್ಕು ಮೊಗ್ಗನ್ನು ತನ್ನ ಮುಡಿಗೇರಿಸಿಕೊಂಡು ಮೊಮ್ಮಗಳ ಬೆನ್ನು ಸವರಿದ್ದೇ ಅವಳ ಅಣೆಕಟ್ಟು ಸಡಿಲವಾಗಿತ್ತು.

“ಅಜ್ಜಿ ನಾನು ಯಾರಿಗೆ ಯಾವಾಗ ಅನ್ಯಾಯ ಮಾಡ್ದೆ ಅಂತ ಭಗವಂತ ಹೀಗೆ ಮಾಡ್ದ? ಅಷ್ಟೊಂದು ಪ್ರೀತಿ ತೋರಿಸ್ತಿದ್ದ ಮನೋಹರ, ತನ್ನ ನಿರ್ಲಕ್ಷ್ಯದಿಂದ್ಲೇ ನನ್ನ ಕಾಲು ಹೋಗಿದ್ರೂ, ಯಕಃಶ್ಚಿತ್ ದುಡ್ಡು ಕೊಟ್ಟು ಕೈ ತೊಳ್ಕೋಳೋವಷ್ಟು ನೀಚ ಮಟ್ಟಕ್ಕೆ ಬಂದ್ಬಿಟ್ಟ ಪಾಪಿ.. ಅವ್ನೀಗ ಆರಾಮಾಗಿರ್ಬಹುದು.. ಆದ್ರೆ ನಂಗೆ ಮಾತ್ರ ಈ ನೋವು ನಿತ್ಯ ಸತ್ಯ..” ನಿಃಶ್ಯಬ್ದವಾಗಿ ಬಿಕ್ಕಿದಳು ವಿನೇತ್ರಿ.

“ವಿನು.. ಆಗೋಗಿದ್ದಕ್ಕೆ ಹೀಗೆ ಕೊರ್ಗೋದ್ರಿಂದ ನಯಾ ಪೈಸೆ ಪ್ರಯೋಜನವಿಲ್ಲವೆಂದು ಎಷ್ಟು ಸಲ ಹೇಳ್ತೀನಿ ನಿಂಗೆ! ಆಗಿದ್ದಾಗೋಯ್ತು.. ಸರಿ.. ಮುಂದೆ? ಜೀವ್ನ ಪೂರ್ತಿ ಹೀಗೇ ಕೊರಗ್ತಾ, ಅಳ್ತಾ ಇರ್ತೀಯಾ? ಆಗ ನಿನ್ನ ಕಾಲು ಬೆಳ್ದು ಬಿಡತ್ತಾ ಹೇಳು? ಆ ಅಯೋಗ್ಯ ನಿನ್ನ ಪತಿಯಾಗೋದನ್ನ ವಿಧಿ ಹೀಗೆ ತಪ್ಪಿಸ್ತು ಅನ್ಕೊ.. ಹೌದು, ಆವತ್ತೇ ಕೇಸ್ ಹಾಕ್ತಿನಿ ಅಂದಿದ್ದ ನಿನ್ನಪ್ಪ ಶ್ರೀಧರ.. ನೀನೇ ಬೇಡ ಅಂತ ನಿಲ್ಲಿಸ್ಬಿಟ್ಟೆ..” ಊಹೂಂ.. ಇಂದೇಕೋ ಅವಳಿಗೆ ಅಜ್ಜಿಯ ಯಾವ ಮಾತೂ ಸಮಾಧಾನ ನೀಡುತ್ತಿಲ್ಲ.

“ಹೌದಜ್ಜಿ ಬೇಡ ಅಂದಿದ್ದೆ... ಕೇಸ್ ಹಾಕಿ, ಆತ ಒಂದು ದಿನ ಒಳ್ಗೆ ಹೋಗಿದ್ರೂ, ಅವನಿಗೆ ಸಮಾಧಾನ ಸಿಕ್ಬಿಡೋದು... ಅದೂ ಅಲ್ದೇ ಆಗ ಈ ಕೇಸು, ಕೋರ್ಟು ಅಂತೆಲ್ಲಾ ಓಡಾಡೋದು, ಅವ್ನ ಮುಸುಡಿಯನ್ನೇ ಪದೇ ಪದೇ ನೋಡೋದು, ಇವೆಲ್ಲಾ ನಂಗೆ ಸಾಧ್ಯವೇ ಇರ್ಲಿಲ್ಲ. ಅಜ್ಜಿ ನಾನ್ಯಾವತ್ತೂ ಯಾರಿಗೂ ನೋವು ಕೊಟ್ಟ ನೆನಪೂ ಇಲ್ಲ.. ಅನ್ಯಾಯದ ದಾರಿ ಹಿಡಿದಿಲ್ಲ.. ಆದ್ರೂ ನಂಗೆ ಹೀಗಾಯ್ತು.. ಆದ್ರೆ ನೋಡು, ಆ ವತ್ಸಲಕ್ಕ ತನ್ನ ಗಂಡನಿಗೆ ಎಂಥಾ ದೊಡ್ಡ ಮೋಸ ಮಾಡ್ತಿದ್ರೂ ಆರಾಮಾಗಿ ಖುಶಿಯಿಂದಿದ್ದಾಳೆ..” ಬೇಡವೆಂದರೂ ತಿರಸ್ಕಾರ ಅವಳ ಮುಖದಲ್ಲಿ ಸ್ಪಷ್ಟವಾಗಿ ಮೂಡಿತ್ತು. ಮೊಮ್ಮಗಳ ಕೊನೆಯ ಮಾತಿನಿಂದ ಅವಳ ಬೆನ್ನು ಸವರುತ್ತಿದ್ದ ಗೋಪಜ್ಜಿಯ ಕೈಗಳು ಗಕ್ಕನೆ ನಿಂತುಬಿಟ್ಟವು.

“ವಿನು ವತ್ಸಲೆ ಸರಿಯಿಲ್ಲ ಅಂತ ನಿಂಗ್ಯಾರಂದ್ರು? ನೀನೇ ಕಣ್ಣಾರೇ ಕಂಡ್ಯಾ? ಅವ್ಳ ಬದುಕಿನ ಬಗ್ಗೆ ನಿಂಗೇನು ಗೊತ್ತು? ಏನೂ ಅರಿವಿಲ್ದೇ ಇಂಥಾ ಕೆಟ್ಟ ಆರೋಪ ಸರಿಯಲ್ಲಮ್ಮ..” ಅಜ್ಜಿಯ ಖಡಕ್ ನೇರ ಮಾತಿಗೆ ಅಪ್ರತಿಭಳಾದಳು ವಿನೇತ್ರಿ. 

“ಅಜ್ಜಿ ಎಷ್ಟೋ ವರ್ಷದಿಂದ ಅಕ್ಕ-ಪಕ್ಕದ ಎಲ್ರೂ ಮಾತಾಡ್ತಿರೋದೂ ಇದೇ ಅಲ್ವಾ? ಮೊನ್ನೆ ಜಾತ್ರೆಯಲ್ಲಿ ಸಿಕ್ಕ ಪದ್ಮಾವತಿ ಏನಂದ್ಳು ಗೊತ್ತಾ..? ‘ಕಟ್ಕೊಂಡ ಗಂಡ ಹಾಸ್ಗೆ ಹಿಡ್ದು ಮಲ್ಗಿರೋವಾಗ, ಈಕೆ ಮಾತ್ರ ಆ ನಾಯ್ಕನ ಜೊತೆ ಸೇರಿ ಲಲ್ಲೆ ಹೊಡಿತಿರ್ತಾಳೆ’ ಅಂತ. ಅದೇನೋ ಅಂದ್ಳಪ್ಪ.. ವತ್ಸಲಕ್ಕನ ಅಪ್ಪ ಏನೋ ಅಪರಾಧ ಮಾಡಿದ್ನಂತೆ.. ಅದ್ರ ಸೇಡಿಗೆ ಈ ಮದ್ವೆ ಆಗಿದ್ದಂತೆ.. ಅಲ್ಲಾ, ಪ್ರೀತಿಸಿ ಮದ್ವೆಯಾದ್ಮೇಲೆ ಸರಿಯಾಗಿ ನಿಭಾಯಿಸ್ಬೇಕಲ್ವಾ? ಪಾಪ.. ಶ್ರೀಧರಣ್ಣ ಮಲ್ಗಿದಲ್ಲೇ ಇರ್ತಾನೆ ಅಂತ ಈಕೆ ಅವನ ಅಸಹಾಯಕತೆಯನ್ನು ಉಪಯೋಗಿಸ್ಕೊಳ್ಬಹುದಾ? ಇವತ್ತೂ ತೋಟದಲ್ಲಿ ಕೂತಿದ್ದಾಗ ಹೊಳೆ ಬೇಲಿಯಿಂದ ಇಬ್ರೂ ಮಜವಾಗಿ ನಗ್ತಾ ಬರ್ತಿದ್ದನ್ನ ಕಂಡೆ. ಸ್ವಲ್ಪನೂ ಹೆದ್ರಿಕೆ, ನಾಚ್ಗೆ ಇಲ್ಲಾ ಇಬ್ರಿಗೂ.. ಅದ್ರ ಮೇಲೆ ನನ್ನ ಮೇಲೆ ಕರುಣೆ ತೋರಿಸ್ತಾಳೆ.. ಇವತ್ತು ನನ್ನ ತಲೆ ಕೆಟ್ಟೋಗಿದ್ದೇ ಅವ್ಳು ತೋರಿದ ಅನುಕಂಪದಿಂದ..” ಧ್ವನಿಯಲ್ಲಿ ಆಕ್ರೋಶ ತುಂಬಿತ್ತು.

ಗೋಪಜ್ಜಿ ಅರೆ ಕ್ಷಣ ಕಣ್ಮುಚ್ಚಿ ಕುಳಿತುಬಿಟ್ಟಳು. ಅಜ್ಜಿಯ ಈ ಮೌನದಿಂದ ತುಸು ಹೆದರಿದಳು ವಿನೇತ್ರಿ. “ತಾನೇನಾದರೂ ಆಡಬಾರದ್ದನ್ನು ಹೇಳಿದೆನೆ? ಸ್ವತಃ ನೋಡಿದ್ದನ್ನೇ ಹೇಳಿದ್ದೇನಪ್ಪಾ.. ಅಜ್ಜಿ ಯಾಕೋ ಬೇಜಾರಾಗ್ಬಿಟ್ಳು..” ಚಡಪಡಿಸಿದಳು ಒಳಗೇ. ಎರಡು ನಿಮಿಷದ ನಂತರ ಕಣ್ಬಿಟ್ಟ ಗೋಪಮ್ಮ, ನಿಟ್ಟುಸಿರ ಬಿಟ್ಟು..

“ವಿನೇತ್ರಿ.. ನೀನ್ಯಾವಾಗ ಅವರಿವರ ಮಾತಿಗೆ ಬೆಲೆ ಕೊಡೋಕೆ ಶುರು ಮಾಡ್ದೆ? ನಿನ್ನ ಒಳ ಧ್ವನಿ ಮಂಕಾಗಿ ಹೋಗಿದ್ಯಾ? ವತ್ಸಲೆ ಬಗ್ಗೆ ನಿನಗೇನೂ ಗೊತ್ತಿಲ್ಲ.. ಇಷ್ಟಕ್ಕೂ ಇವತ್ತು ನೀ ನೋಡಿದ್ದಾದ್ರೂ ಏನು? ಅವ್ರಿಬ್ರೂ ಒಟ್ಟಿಗೆ ನಗ್ತಾ ಇದ್ದಿದ್ದು.. ಅಷ್ಟೇ ತಾನೇ? ಹೌದು ಪ್ರೀತ್ಸಿ ಕಟ್ಕೊಂಡ್ಮೇಲೆ ನಿಭಾಯಿಸ್ಬೇಕು ಅಂದ್ಯಲ್ಲಾ.. ಬೇಜಾರಾಗ್ಬೇಡ.. ಈಗ, ಒಂದ್ವೇಳೆ ಆ ಮನೆಹಾಳ ಮನೋಹರ ಆಸ್ತಿಗೋಸ್ಕರ ನಾಟ್ಕದ ಪ್ರೀತಿ ತೋರ್ಸಿ ನಿನ್ನ ಮದ್ವೆಯಾಗಿ, ಆಮೇಲೆ ಬರೀ ಕಟುಕಿಯಾಡ್ತಾ, ನಿರ್ಲಕ್ಷ್ಯಮಾಡಿ ನಿನ್ನ ಮೂಲೆಗುಂಪು ಮಾಡಿದ್ದಿದ್ರೆ ನೀನು ಸುಮ್ನಿದ್ದು ನಿಭಾಯಿಸ್ತಿದ್ಯಾ? ನಾವಾದ್ರೂ ಹಾಗೆ ಮಾಡೋಕೆ ಬಿಡ್ತಿದ್ವಾ? ಬದುಕು ನಿಷ್ಕರುಣಿ ವಿನೇತ್ರಿ. ಇಲ್ಲಿ ಕಾಣದೇ ಇರೋ ಸತ್ಯ ಸಾವ್ರ ಇವೆ. ವತ್ಸಲೆಯ ಮೇಲೆ ಈ ದಡ್ಡ ಜನರು ಕಟ್ಟಿರೋ ಬಣ್ಣಕ್ಕೆ ಮೋಸ ಹೋಗ್ತಿದ್ದಿ ನೀನು. ಹ್ಮ್ಂ..  ಹೋಗ್ಲಿ ಬಿಡು.. ನಿಂಗಿವತ್ತು ವತ್ಸಲೆಯ ಕಥೆಯನ್ನೇ ಹೇಳ್ತಿನಿ ನಾನು.. ಆದ್ರೆ ಯಾವ್ದೇ ಕಾರಣಕ್ಕೂ ಇದು ನಿನ್ನಿಂದ ಹೊರ ಬೀಳ್ಕೂಡ್ದು. ಈ ಕಥೆಗೆ ರೆಕ್ಕೆ ಪುಕ್ಕ ಕಟ್ಟಿ ಬೇರೇ ರೂಪ ಸಿಗೋದು ನಂಗೆ ಸುತಾರಾಂ ಇಷ್ಟವಿಲ್ಲ. ಈ ಗಾಳಿ ಮಾತುಗಳನ್ನ ಎಂದೂ ನಂಬ ಬಾರ್ದು ವಿನೇತ್ರಿ. ನಿನ್ನಜ್ಜ ಈ ಮನೆಗೆ ಮದ್ವೆಯಾಗಿ ಕರ್ಕೊಂಡು ಬಂದಾಗ ಪಕ್ಕದಲ್ಲಿ ಕೂರಿಸ್ಕೊಂಡು ಹೇಳಿದ್ದ.. ‘ಗೋಪಿ.. ನೀನು ಇಲಿ ಕಂಡ್ರೂ ಇಲಿ ಅಂತಾನೇ ಹೇಳ್ಬೇಕು.. ಹುಲಿ ಅನ್ಬಾರ್ದು ಅಷ್ಟೇ.. ಇಷ್ಟು ಮಾಡಿದ್ರೆ, ಈ ಒಟ್ಟು ಕುಟುಂಬ ನಿನ್ನಿಂದ ಇಬ್ಭಾಗ ಆಗಲ್ಲ ಅನ್ನೋ ವಿಶ್ವಾಸ ನನ್ಗಿದೆ’ ಅಂತ. ಈ ಮಾತೊಳಗಿನ ಅರ್ಥ ಕ್ರಮೇಣ ನಂಗಾಯ್ತು.. ನೀನೂ ನೆನ್ಪಿಟ್ಕೋ. ನಿನ್ನ ಮೇಲಿನ ವಿಶ್ವಾಸದಿಂದ ಹೇಳ್ತಿದ್ದೀನಿ ಎಲ್ಲಾ...” ಎಪ್ಪತ್ತೆಂಟರ ಹಿರಿಯ ಜೀವದ ನೇರ ಮಾತಿನ ಮೊನಚಿನಿಂದ ತನ್ನ ತಪ್ಪಿನ ಅರಿವಾಗಲು, ನಾಚಿ ತಲೆ ತಗ್ಗಿಸಿದಳು ವಿನೇತ್ರಿ.

“ಸ್ಸಾರಿ ಅಜ್ಜಿ.. ಅದೇನು ಮಂಕು ಕವಿದಿತ್ತೋ ನಂಗೆ.. ಏನೇನೋ ಅಂದ್ಬಿಟ್ಟೆ.. ವತ್ಸಲಕ್ಕನ ಬಗ್ಗೆ ತುಂಬಾ ಕೆಟ್ಟದಾಗಿ ಯೋಚಿಸ್ಬಿಟ್ಟೆ... ಇಷ್ಟಕ್ಕೂ ನಂದೇ ಹಾಸಿ ಹೊದ್ಕೊಳೋವಷ್ಟಿದ್ರೂ.. ಸುಮ್ನೇ ಅವ್ಳ ಮೇಲೆ...” ಮಾತು ಮುಂದೆ ಹೊರಳದೇ ಸುಮ್ಮನಾದಳು.

“ನಿಂದೇನೂ ತಪ್ಪಿಲ್ಲ ಕೂಸೆ.. ಮನಸೊಳಗೆ ಒಬ್ರ ಮೇಲೆ ಪೂರ್ವಾಗ್ರಹವಿದ್ರೆ, ಅವರು ಸಹಜ ಕಾಳಜಿ  ತೋರಿದ್ರೂ ಅದು ವ್ಯಂಗ್ಯ ಅನ್ನಿಸ್ತದೆ ನಾಮ್ಗೆ. ಈ ಜಗತ್ತಿನ ಜನ ಹೀಗೇ.. ತಾವೇ ಒಂದು ಚೌಕಟ್ಟು ಹಾಕಿ, ನಮ್ಮನ್ನು ಅದ್ರೊಳ್ಗೆ ಕೂರ್ಸಿ.. ಇಲ್ಲೇ ಇರು.. ಹೊರ ಬಂದ್ರೆ ಕಚ್ತೀವಿ, ಹೊಡೀತೀವಿ ಅಂತಾರೆ. ಆದರೆ ಇದಕ್ಕೆ ಹೆದರದೇ ಹೊರ ಬಂದ್ರೆ, ನಮ್ಮ ಕೆಚ್ಚು ಕಂಡು, ಹೆದರಿ.. ಎದುರ್ಸೋಕೆ ಆಗ್ದೆ ಹೀಗೆಲ್ಲಾ ಆಡ್ತಾರೆ. ಬಿಟ್ಬಿಡು ಇನ್ನು ಈ ವಿಷ್ಯವ.. ಈಗ ಕಥೆ ಕೇಳು..” ಸಮಾಧಾನಿಸಲು, ತುಸು ಗೆಲುವಾದಳು ವಿನೇತ್ರಿ.

“ವಿನು, ನಾನು ಈ ಮನೆಗೆ ಬಂದಾಗ ವತ್ಸಲೆಯ ಅಮ್ಮ ಸರಸ್ವತಿಗಿನ್ನೂ ಮದುವೆಯೂ ಆಗಿರಲಿಲ್ಲ ಗೊತ್ತಾ? ಗೋಧಿ ಬಣ್ಣದ ಬಡಕಲು ಶರೀರದ ಕೂಸಾಗಿತ್ತದು. ಎಳವೆಯಲ್ಲೇ ಅಪ್ಪ ತೀರಿಹೋಗಿದ್ದ. ತಮ್ಮ ಪಾಲಿಗೆ ಬಂದಿದ್ದ ಅಲ್ಪ ಸ್ವಲ್ಪ ತೋಟ, ಗದ್ದೆಯ ಅದಾಯದಿಂದ ಹೇಗೋ ಅಬ್ಬೆ ಆನಂದಿಬಾಯಿ ಮತ್ತು ಮಗಳ ಬದುಕು ನಡೀತಿತ್ತು. ನಂಗೆ ಮಾಲತಿ ಹುಟ್ಟಿದಾಗ ಅವ್ಳ ತೊಟ್ಲು ತೂಗಿ, ಲಾಲಿ ಹಾಡಿ ನಂಗೆ ತುಸು ಬಿಡುವು ಕೊಟ್ಟಿದ್ದೆಲ್ಲಾ ಈ ಸರಸ್ವತಿಯೇ. ಅದೇನು ಪ್ರೀತಿನೋ ಅವ್ಳಿಗೆ ನಮ್ಮ ಮಾಲತಿ ಮೇಲೆ... ನನ್ನನ್ನು ‘ಮಾಲ್ತಿ ಆಯಿ’ ಎಂದೇ ಕರ್ಯೋಕೆ ಶುರು ಮಾಡಿದ್ಳು. ಮುಂದೆ ಅವ್ಳ ಮಗ್ಳು ವತ್ಸಲೆಯೂ ಇದನ್ನೇ ಅಭ್ಯಾಸ ಮಾಡ್ಕೊಂಡ್ಬಿಟ್ಳು. ಹಾಗಾಗಿ ಈಗ್ಲೂ ಆಕೆ ನನ್ನ ಕರ್ಯೋದು ‘ಮಾಲ್ತಿ ಆಯಿ’ ಎಂದೇ. ಪಾಪದ ಕೂಸಾಗಿದ್ದ ಸರಸ್ವತಿಗೆ ಅದೆಲ್ಲಿಂದ ಆ ಕಚ್ಚೆ ಹರುಕ ರಾಜಾರಾಮ ಗಂಟು ಬಿದ್ನೋ...! ಪುಂಡು ಪೋಕರಿಯಂತಿದ್ದ ಆತ, ಆಸ್ತಿಯ ಮೇಲೆ ಕಟ್ಟಿಟ್ಟು ಆನಂದಿಬಾಯಿಯನ್ನು ಏಮಾರಿಸಿ, ಅವಳ ಮಗಳನ್ನು ಮದುವೆಯಾಗಿಬಿಟ್ಟ. ನಿನ್ನಜ್ಜ ಅದೇ ಸಮಯದಲ್ಲೇ ಕೆಲಸದ ನಿಮಿತ್ತ ಘಟ್ಟಕ್ಕೆ ಹೋಗಿದ್ದ. ಇಲ್ಲದಿದ್ದಲ್ಲಿ ವಿಚಾರಿಸಿ ಬೇಡಾ ಹೇಳ್ತಿದ್ರೇನೋ... ಎಲ್ಲಾ ಹಣೆಬರಹ. ಆದ್ರೆ ಮೂವತ್ತು ವರುಷಗಳ ಹಿಂದೆ, ಆ ಕರಾಳ ರಾತ್ರಿಯಲ್ಲಿ ನಡೆದ ಘೋರ ಘಟನೆ ಸರಸ್ವತಿಯ ಬದುಕನ್ನೇ ಕಸಿದುಕೊಂಡ್ರೆ, ವತ್ಸಲೆಯ ಬದುಕನ್ನೇ ಬದಲಿಸಿ ಬಿಟ್ಟಿತು...” ಗೋಪಜ್ಜಿ ಗತಕಾಲದಲ್ಲೆಲ್ಲೋ ಅರೆಕ್ಷಣ ಕಳೆದೇ ಹೋದಳು. ಆದರೆ ಇತ್ತ ವಿನೇತ್ರಿಯ ಕಾತುರತೆ ಎಲ್ಲೆ ಮೀರತೊಡಗಿತ್ತು.

“ಅಜ್ಜಿ ಹೊತ್ತಾಗ್ತಾ ಬಂತು.. ಅದೂ ಅಲ್ದೇ, ಯಾರಾದ್ರೂ ಇಲ್ಲಿಗೆ ಬಂದ್ರೆ, ನೀನು ಕಥೆ ಹೇಳೋದನ್ನ ನಿಲ್ಲಿಸ್ಬಿಡ್ತೀಯಾ... ನಂಗೆ ನಾಳೆಯವರೆಗೂ ಕಾಯೋಕಾಗಲ್ಲ.. ದಯವಿಟ್ಟು ಬೇಗ ಹೇಳಿ ಮುಗಿಸಿಬಿಡು ಪ್ಲೀಸ್..” ಅಜ್ಜಿಯ ಬಳಸಿ, ಅವಳ ಭುಜಕ್ಕೆ ತನ್ನ ತಲೆಯೊರಗಿಸಿಕೊಂಡು ವಿನಂತಿಸಿದಳು ವಿನೇತ್ರಿ.

“ಒಂದಿಡೀ ಬದುಕನ್ನೇ ಸ್ವಾಹಾ ಮಾಡಿದ ಕಥೆಯನ್ನು ಹೇಳೋಕೆ ಸ್ವಲ್ಪವಾದ್ರೂ ಸಮಯ ಬೇಡ್ವೇ ಹುಡ್ಗಿ? ಹ್ಮ್ಂ.. ಈಗ ವತ್ಸಲೆಗೆ ಮೂವತ್ತಾಲ್ಕೋ ಮೂವತ್ತೈದೋ ಆಗಿರ್ಬಹುದು.. ಹೌದು.. ನನ್ನ ಮದುವೆಯಾಗಿಯೇ ಅರವತ್ತು ವರ್ಷದ ಮೇಲಾಯ್ತಲ್ಲ. ವತ್ಸಲೆಯ ಅಪ್ಪ ರಾಜಾರಾಮ ಶುದ್ಧ ಗುಳ್ಳೆ ನರಿ ಬುದ್ಧಿಯವ ಎಂದು ಮೊದಲೇ ಅಂದೆನಲ್ಲಾ. ಸ್ವಂತ ಗಟ್ಟಿ ನೆಲೆಯಿಲ್ಲದೇ ಅವರಿವರ ಮನೆಯಲ್ಲೇ ಬಿದ್ದುಕೊಂಡಿರುತ್ತಿದವ ಮದುವೆಯಾದ ಮೇಲೆಯೇ ಒಂದು ಸೂರು ಕಂಡಿದ್ದು. ಶುರುವಿನಲ್ಲಿ ಸರಸ್ವತಿಯ ಅಬ್ಬೆ ಆನಂದಿಬಾಯಿಗೋ ಮನೆಯಳಿಯನ ರೂಪದಲ್ಲಿ ಮನೆಮಗನೇ ಸಿಕ್ಕಷ್ಟು ಖುಶಿ. ಆದರೆ ಪಾಪ ಆಗಿದ್ದೇ ಬೇರೆ. ಮದುವೆಯಾಗಿ ತಿಂಗಳಾಗುತ್ತಲೇ ಪತ್ನಿಯನ್ನು ಜರೆಯತೊಡಗಿದ್ದ. ‘ಕಪ್ಪು ತೊಗಲಿನ ಕಡ್ಡಿ ಗೂಟ ನೀನು.. ಏನು ಸುಖ ಬಂತೋ ನಂಗೆ.. ಒಟ್ನಲ್ಲಿ ಮೋಸವಾಗೋಯ್ತು.. ಆಸ್ತಿಯಾದ್ರೂ ಪಾಲಿಗೆ ಬರತ್ತ ನೋಡ್ಬೇಕು..’ ಎಂದು ಅತ್ತೆ ಆನಂದಿಯ ಮುಂದೆಯೇ ಹೀಯಾಳಿಸುತ್ತಿದ್ದನಂತೆ. ಪಾಪ ಸಂಕ್ಟ ತಡೀಲಾಗ್ದೇ ನನ್ನ ಬಳಿ ಬಂದು ಎಷ್ಟೋ ಸಲ ಹೇಳ್ಕೊಂಡು ಕಣ್ಣೀರಿಟ್ಟಿದ್ಳು ಆನಂದಿಬಾಯಿ. ಮದುವೆಯಾಗಿ ವರುಷದೊಳಗೆ ಹೆಣ್ಣು ಮಗು ಹುಟ್ಟಲು, ಬಡಪಾಯಿ ಹೆಂಡತಿಯ ಜರೆಯಲು ಹೊಸತೊಂದು ಅಸ್ತ್ರ ಸಿಕ್ಕಿತ್ತು ರಾಜಾರಾಮನಿಗೆ. ಆದರೆ ಆತ ನಿನ್ನಜ್ಜನ ಮುಂದೆ ಮಾಹನ್ ಸಭ್ಯಸ್ಥನಂತಿರುತ್ತಿದ್ದ. ಆದರೇನಂತೆ.. ಈತನ ಕಂತ್ರಿ ಬುದ್ಧಿ ಚೆನ್ನಾಗಿ ಗೊತ್ತಿತ್ತು ರಾಯರಿಗೆ. ಸುಮ್ಮನೇ ಆ ಸಾಧ್ವಿ ಸರಸ್ವತಿಗೆ ಮತ್ತೆ ಏಟು ಬೀಳಬಾರದೆಂದು ಗಟ್ಟಿ ಹೇಳದೇ ಸುಮ್ಮನಾಗುತ್ತಿದ್ದರು. ಹಾಗೂ ಒಮ್ಮೊಮ್ಮೆ ತಡಿಯದೇ ಬುದ್ಧಿ ಹೇಳುತ್ತಿದ್ದುದುಂಟು. ಆಗೆಲ್ಲಾ ಆ ದುರುಳ ಇವರ ಮುಂದೆ ತಿಪ್ಪೆ ಸಾರಿಸಿ.. ಅಂದು ಸಮಾ ಚಚ್ಚುತ್ತಿದ್ದನಂತೆ ಸರಸ್ವತಿಯ. ಹೀಗಾಗಿ ದಿನಗಳೆದಂತೇ ಅದು ಮೂಕಿಯೇ ಆಗೋಯ್ತು ಅನ್ಬೇಕು. ಅಬ್ಬೆ ಹತ್ರನೂ ಏನೂ ಹೇಳ್ಕೊಳ್ದೇ ಒಳಗೊಳಗೇ ಕುದಿಯತೊಡಗಿದ್ಳು. ಆದರೆ ಅವಳ ಮುಖದಲ್ಲಿ ತುಸು ನಗು, ಸಂತೋಷ ಕಾಣ್ತಿದ್ದುದು ವತ್ಸಲೆ ತೊಡೆಯೇರಿದಾಗಲೇ. ಅದೂ ಅವಳಪ್ಪ ಮನೆಯಲ್ಲಿದ್ದಾಗ ಮುದ್ದಾಡುವಂತಿರಲಿಲ್ಲ. ‘ಹೆಣ್ಣು ಕೂಸ್ನ ತಲೆ ಮೇಲೆ ಕೂರ್ಸಿ ಕೆಡಿಸ್ಬೇಡ..’ ಎಂದು ಕೂಗಾಡ್ತಿದ್ದ. ಇಸ್ಪೀಟು, ಜೂಜಿನಲ್ಲೆ ತೋಟದ ಆದಾಯದ ಬಹುಪಾಲನ್ನು ಪೋಲು ಮಾಡುತ್ತಿದ್ದ. ಮನೆಯೊಳಗೆ ಏನಿಲ್ಲ, ಏನುಂಟು ಎಂದು ಒಮ್ಮೆಯೂ ನೋಡಿದವನಲ್ಲ. ಇಬ್ಬರು ಹೆಂಗಸರು ಹೇಗೋ ಜಾಣ್ಮೆಯಿಂದ ಮೂರು ಹೊತ್ತು ಅನ್ನ ಬೇಯಿಸಿಕೊಳ್ಳಲು ಬೇಕಾದ್ದಷ್ಟನ್ನು ಕೂಡಿಟ್ಟುಕೊಳ್ತಿದ್ರು. ಮಜ್ಗೆ, ಮೊಸ್ರು, ತುಪ್ಪದ ಆಸೆಯಾದಾಗೆಲ್ಲಾ ಪುಟ್ಟ ಕುಸು ವತ್ಸಲೆ ನಮ್ಮನೆಗೆ ಬರ್ತಿತ್ತು. “ಮಾಲ್ತಿ ಆಯಿ ನಂಗೆ ಮಜ್ಗೆಗೆಗೆ ಚೂರು ಬೆಲ್ಲಾ ಹಾಕಿ ಕೊಡೇ” ಅಂತ ಕೇಳ್ತಿತ್ತು. ಆವಾಗೆಲ್ಲಾ ಸಂಕ್ಟ ಒದ್ದು ಬರೋದು ನಂಗೆ. ಎಷ್ಟೋ ಸಲ ಒಳ್ಳೆ ಅಡುಗೆ ಮಾಡಿ ಏನೋ ನೆಪದಲ್ಲಿ ಅವ್ರ ಮನೆಗೆ ಕಳಿಸ್ತಿದ್ದೆ. ಸ್ವಾಭಿಮಾನಿ ಸರಸ್ವತಿ ಪ್ರತಿ ವರ್ಷ ಹಪ್ಳ ಸಂಡಿಗೆ ಮಾಡೋವಾಗ್ಲೂ ಬಂದು ಎಷ್ಟು ಬೇಡ ಅಂದ್ರೂ ಕೇಳ್ದೆ, ಇಡೀ ದಿನ ಇದ್ದು ಮಾಡಿ ಕೊಟ್ಟು ಹೋಗೋಳು. 

ಪಾಪ, ಬಡಪಾಯಿಯ ಗ್ರಹಚಾರ ಅಲ್ಲಿಗೇ ನಿಲ್ಲಲಿಲ್ಲ ನೋಡು.. ಗಂಡು ಬೇಕು ಅಂತ ಕುಣೀತಿದ್ದ ರಾಜಾರಾಮನ ಅವತಾರಕ್ಕೋ ಏನೋ.. ಮತ್ತೆ ಮಕ್ಕಳಾಗ್ಲೇ ಇಲ್ಲಾ ಸರಸ್ವತಿಗೆ. ಪ್ರತಿ ದಿವ್ಸ ಆಚೆ ಮನೆಯಿಂದ ಅಳು, ಕೂಗಾಟ ಮಾಮೂಲಾಯ್ತು. ತನ್ನ ನೋವನ್ನ ಹಲ್ಲು ಕಚ್ಚಿ ಸಹಿಸುವುದನ್ನು ಸರಸ್ವತಿ ಕಲಿತಿದ್ದಳು. ಆದರೆ ಅಮ್ಮನ ಸಿಟ್ಟನ್ನು ತನ್ನ ಮೇಲೆ ಅಪ್ಪ ತೋರಿದಾಗೆಲ್ಲಾ ಪುಟ್ಟ ವತ್ಸಲೆ ಸೂರು ಹಾರಿ ಹೋಗುವಂತೇ ಕೂಗುತ್ತಿದ್ದಳು. ಅದನ್ನು ಕೇಳುವಾಗೆಲ್ಲಾ ನಮಗೆ ಅವನ ತದುಕಿ ಬಿಡುವಷ್ಟು ರೋಷ ಉಕ್ಕೋದು. ಏನು ಮಾಡೋದು.. ಆನಂದಿಬಾಯಿ, ಸರಸ್ವತಿ ಸುಮ್ನಿದ್ಬಿಡಿ ಮಾವಯ್ಯ ಅಂತ ರಾಯರನ್ನು ಬೇಡ್ಕೊಳ್ಳೋರು. ಆದ್ರೂ ಒಂದಿನ ಎಳೇ ಕೂಸನ್ನ ಹೊಡೀವಾಗ, ಅದ್ರ ಕೂಗನ್ನು ಕೇಳಲಾಗ್ದೇ ಇವ್ರು ಎದ್ದು ಹೋಗಿ ಅವನಿಗೆ ಸಮಾ ಬೈದು, ಪಂಚಾಯ್ತಿಗೆ ಕರ್ಕೊಂಡು ಹೋಗ್ತೀನಿ ಅಂತ ಧಮ್ಕಿ ಹಾಕಿ ಬಂದಿದ್ರು. ಆಮೇಲೆ ಅದೇನಾಯ್ತೋ.. ಒಂದ್ವಾರ ಎಲ್ಲವೂ ಶಾಂತವಾಗಿತ್ತು. ಆದರೆ ಸರಸ್ವತಿ ಮತ್ತೂ ಮೌನವಾಗ್ಬಿಟ್ಟಿದ್ಳು. ಮಗ್ಳ ಹತ್ರಾನೂ ಅವ್ಳ ಮಾತು ತೀರಾ ಕಡ್ಮೆಯಾಗೋಯ್ತು. ಆ ದಿನದ ಕರಾಳ ರಾತ್ರಿಯ ನೆನೆದರೆ ಈಗಲೂ ಮೈ ಜುಮ್ಮಾಗುತ್ತದೆ. ಅಂದು ಬೆಳಗ್ಗಿನಿಂದಲೇ ನಿಲ್ಲದ ಮಳೆ.. ರಾತ್ರಿಯಂತೂ ರಚ್ಚೆ ಹಿಡಿದಂತೇ ಹೊಯ್ಯತೊಡಗಿತ್ತು.. ಮಿಂಚು, ಗುಡುಗಿನ ಆರ್ಭಟ ಬೇರೆ..” ಇದ್ದಕ್ಕಿದ್ದಂತೇ ಸುಮ್ಮನಾದಳು ಗೋಪಜ್ಜಿ. ಆ ಕೆಟ್ಟ ಘಟನೆಯ ಸ್ಮರಣೆಯಿಂದ ಅವಳಿಗೆ ನಿಃಶ್ಯಕ್ತಿ ಆವರಿಸಿದಂತಾಗಿತ್ತು. ಎರಡು ನಿಮಿಷ ಮೌನವಾಗಿದ್ದು, ತನ್ನ ಸಂಭಾಳಿಸಿಕೊಂಡು ಮುಂದುವರಿಸಿದಳು.

“ಆವತ್ತು ಇಲ್ಲಿಗೆ ಬಂದಿದ್ದ ವತ್ಸಲೆ, ನಮ್ಮ ಮಾಲತಿಯ ಮೂರು ತಿಂಗಳ ಶಿಶುವಿನ ಜೊತೆ ಆಡ್ಕೊಳ್ತಾ ಇಲ್ಲೇ ನಿದ್ದೆ ಮಾಡ್ಬಿಟ್ಟಿದ್ಳು. ಆನಂದಿಬಾಯಿ ಬೇರೆ ತನ್ನ ತೋಟದ ಮನೆ ಹತ್ರ ಹೋಗಿದ್ಳು. ಬೆಳ್ಗಾಗೋವಷ್ಟರಲ್ಲಿ ಸರಸ್ವತಿ ತನ್ನ ಕೋಣೆಯಲ್ಲಿ ಹೆಣವಾಗಿದ್ಳು. ಅವ್ಳ ಪಕ್ಕ ನಿಪ್ಪೋ ಬ್ಯಾಟರಿ ಶೆಲ್ ಚೂರುಗಳಿದ್ವು. ‘ಅಯ್ಯಯಪ್ರೋ.. ವಿಷ ತಿಂದು ಸತ್ತೋಗ್ಬಿಟ್ಳು ನನ್ನ ಹೆಂಡ್ತಿ.. ಇವತ್ತೇ ವಿಪರೀತ ಸೆಖೆ ಅಂತ ಹೊರ ಜಗುಲಿಯಲ್ಲಿ ಮಲ್ಗಿದ್ದೆ ನಾನು.. ಗೊತ್ತೇ ಆಗ್ಲಿಲ್ಲ..’ ಅಂತ ಬಾಯ್ಬಂಡ್ಕೊಂಡು ನಾಟ್ಕ ಮಾಡ್ದ ರಾಜಾರಾಮ. ಆವತ್ತು ಅವ್ನ ನಾಟ್ಕ ನೋಡಿದ್ಮೇಲೆ, ಊರಿನ ಯಾವ ನಾಟ್ಕನೂ ನೋಡ್ಬೇಕು ಅನ್ನಿಸ್ಲಿಲ್ಲ ನೋಡು! ಅದೇನು ಗೋಳಾಡೋದು.. ಅಳೋದು.. ಅತ್ತೆಯ ಕಾಲಿಗೆ ಬಿದ್ದು ಮೂರ್ಚೆ ಬೀಳೋ ಥರ ಮಾಡೋದು.. ಅಯ್ಯಪ್ಪಾ! ಪೋಲೀಸ್ರಿಗೆ ಏನು ಕೊಟ್ನೋ ಏನೋ.. ತಿಂಗಳೊಳಗೆ ಎಲ್ಲಾ ಥಂಡಾಗೋಯ್ತು. ಆನಂದಿಬಾಯಿಯೂ ಮೊಮ್ಮಗ್ಳ ಮುಖ ನೋಡಿ, ಅಳಿಯನ ಗೋಳಾಟವನ್ನೇ ನಂಬಿ ತೆಪ್ಪಗಾಗ್ಬಿಟ್ಳು. ಆದರೆ ವತ್ಸಲೆ ಮಾತ್ರ ಆವತ್ತಿಂದ ಗಂಭೀರಳಾಗ್ಬಿಟ್ಳು. ನಾನು, ಮಾಲತಿ, ಶ್ರೀಧರ ಎಲ್ಲಾ ಸೇರಿ ಎಷ್ಟೇ ಪ್ರಯತ್ನ ಪಟ್ರೂ ಮೊದ್ಲಿನ ಥರ ಆಗ್ಲೇ ಇಲ್ಲಾ. ಬರೋಳು.. ಕೊಟ್ಟಿದ್ದು ತಿನ್ನೋಳು, ನಿದ್ದೆ ಬಂದ್ರೆ ಇಲ್ಲೇ ನಮ್ಜೊತೆ ಮಲ್ಗಿ ಬಿಡೋಳು. ಕಲಿಕೆಯಲ್ಲೂ ಅಷ್ಟಕಷ್ಟೇ ಇದ್ದ ವತ್ಸಲೆ ಸ್ವಲ್ಪ ಸಲಿಗೆಯಿಂದ ಇರ್ತಿದ್ದುದು ನಮ್ಮ ಮಾಲತಿಯ ಜೊತೆಗೇ. ಹದಿನೆಂಟಕ್ಕೆಲ್ಲಾ ಓದು ಬಿಟ್ಟ ಅವ್ಳಿಗೊಂದು ಗಂಡು ಕಟ್ಟಲು, ಎರಡನೇ ಸಂಬಂಧದ ಭಾರೀ ಕುಳವನ್ನೇ ಆರಿಸಿ ತಂದಿದ್ದ ಅಪ್ಪ ಎನ್ನಿಸಿಕೊಂಡವ. ಆದರೆ ಅವನಿಗೆ ದೊಡ್ಡ ಆಘಾತ ಕಾದಿತ್ತು. ಮದುವೆಗೆ ಎರಡು ತಿಂಗಳಿದೆ ಎನ್ನುವಾಗ ವತ್ಸಲೆ ಶ್ರೀಧರನನ್ನು ದೇವಸ್ಥಾನದಲ್ಲಿ ವರಿಸಿ ಅಪ್ಪನ ಮುಂದೆ ನಿಂತಿದ್ದಳು. ನಮಗಂತೂ ನಂಬೋಕೇ ಆಗಿರ್ಲಿಲ್ಲ ಗೊತ್ತಾ? ಅದ್ಯಾವಾಗ ಈಕೆ ಇವನನ್ನು ಪ್ರೀತಿಸಿ, ಗುಟ್ಟಾಗಿ ತಿರುಗಿ.. ಸುಳಿವೂ ಕೊಡದೇ ಮದುವೆಯಾಗಿ ಬಿಟ್ಳಪ್ಪಾ ಅಂತ ತಲೆ ಕೆಡ್ಸಿಕೊಂಡಿದ್ವಿ. ಆದರೆ ಏನೇನೋ ಮನಸಲ್ಲೇ ಮಂಡಿಗೆ ತಿಂದಿದ್ದ ರಾಜಾರಾಮ ಮಾತ್ರ ಮಗಳ ಈ ಕ್ರಾಂತಿಯಿಂದ ಉರಿದು ಹೋಗಿದ್ದ. ಆಸ್ತಿಯಲ್ಲಿ ಚಿಕ್ಕಾಸೂ ಕೊಡಲ್ಲ ಎಂದು ಕೂಗಾಡಿ ಬಿಟ್ಟಿದ್ದ. ಆದರೆ ವತ್ಸಲಾ ಶಾಂತವಾಗಿ ಹೇಳಿದ್ದು ನಾಲ್ಕೇ ನಾಲ್ಕು ಮಾತು.. ‘ನನ್ನಮ್ಮನ ಆಸ್ತಿ ಅದು.. ಕೊಡ್ದೇ ಹೋದ್ರೆ ಲಾಯರ್ ಹಿಡ್ದು ಕೇಸ್ ಹಾಕ್ತೀನಿ.. ಅಮ್ಮನ ಸಾವಿನ ಬಗ್ಗೂ ತನಿಖೆ ಮಾಡಿಸ್ತೀನಿ.. ಹುಶಾರ್!’ ಅಷ್ಟೇ, ಥಂಡಾಗಿ ಬೆವರಿ ತೆಪ್ಪಗೆ ಕೂತು ಬಿಟ್ಟಿದ್ದ ರಾಜಾರಾಮ. ಆದರೂ ಮಗಳ ಮೇಲಿನ ಹಠಕ್ಕೆ, ಗಂಡು ಸಂತಾನ ತರ್ತೀನಿ ಅಂತ ಯಾರನ್ನೋ ಮದ್ವೆ ಮಾಡ್ಕೊಂಡು ಇಲ್ಲಿಗೆ ತಂದ. ಅವ್ಳು ಕನ್ನಡ ಶಾಲೆಯಲ್ಲಿ ಟೀಚರ್ ಆಗಿದ್ಳಂತೆ. ಸರಿ.. ಮದ್ವೆ ದಿನ ಸಂಜೆ ಗೋಧೂಳಿ ಮುಹೂರ್ತದಲ್ಲಿ ಪ್ರವೇಶವಾಗುವಾಗಲೇ, ಪ್ರಧಾನ ಜಗುಲಿಯ ಮೇಲ್ಛಾವಣಿ ಕುಸಿದು ಇಬ್ರ ಮುಂದೆಯೂ ದಢಾರನೆ ಬಿತ್ತು ನೋಡು.. ಪುಸಕ್ಕನೆ ನಕ್ಕಿದ್ಳು ವತ್ಸಲಾ. “ಅಮ್ಮನ ಉಡುಗೊರೆ ಸಿಕ್ತಪ್ಪಾ.. ಇನ್ನು ಒಳಗ್ಬನ್ನಿ.. ಯಾವ್ದಕ್ಕೂ ಹುಶಾರು ಹೇಳು ನಿನ್ನ ಹೊಸ ಹೆಂಡ್ತಿಗೆ” ಅಂತ ಹೇಳಿ ದುಡುದುಡುನೆ ತೋಟದಮನೆಗೆ ಹೋಗ್ಬಿಟ್ಟಿದ್ಳು ತನ್ನ ಗಂಡನ ಕಟ್ಕೊಂಡು. ಭಯ ಬಿದ್ದ ಅವನ ಹೊಸ ಹೆಂಡ್ತಿ, ಆವತ್ತೇ ಅಲ್ಲಿಂದ ಕಾಲ್ಕಿತ್ತವಳು, ವರುಷದೊಳಗೆ ರಾಜಾರಾಮನಿಗೆ ಸೋಡಾ ಚೀಟಿ ಕೊಟ್ಟು ಹೊರ ದೂಡಿದ್ಳು ತನ್ನ ಮನೆಯಿಂದ. ಸ್ವಂತ, ಮಗಳು, ಅಳಿಯ, ಅತ್ತೆ ಎಲ್ಲಾ ಇದ್ರೂ ಕೊನೆಗಾಲದಲ್ಲಿ ಒಂಟಿ ಪಿಶಾಚಿಯಾಗಿ ಸತ್ತ ಅಂವ. ಆವತ್ತೊಂದು ದಿನ ಬೆಳಗ್ಗೆ ಹಾಲಿನ ಶೇಷಿ ಎಷ್ಟು ಕರೆದರೂ ಆತ ಬಾಗಿಲ ತೆಗೆಯದ್ದು ನೋಡಿ, ನಿನ್ನಜ್ಜನ ಕರೆಯಲು.. ಇವರಿಗೆ ಸಂಶಯ ಬಂದು, ಬಾಗಿಲು ಒಡೆದು ನೋಡಿದಾಗಲೇ ಗೊತ್ತಾಗಿದ್ದು! ಸರಸ್ವತಿ ಸತ್ತ, ಅದೇ ಕೋಣೆಯಲ್ಲೇ ಅಂಗಾತ ಮಲಗಿ, ಎದೆಯೊಡೆದು ಸತ್ತು ಆತ ಎರಡ್ಮೂರು ದಿವಸಗಳೇ ಆಗಿದ್ದವು. ಆವತ್ತು ನಮ್ಮ ಸರಸ್ವತಿ ಆತ್ಮಕ್ಕೆ ತುಸು ಶಾಂತಿ ಸಿಕ್ಕಿರ್ಬಹುದು ನೋಡು..” ತಡೆಯಲಾಗದೇ, ಕಣ್ಣೊರೆಸಿಕೊಂಡಳು ಗೋಪಜ್ಜಿ.

ಪಶ್ಚಾತ್ತಾಪದ ದಳ್ಳುರಿಯಿಂದ ವಿನೇತ್ರಿಯ ಹೊಟ್ಟೆಯೊಳಗೆಲ್ಲಾ ಸಂಕಟವೆದ್ದಿತ್ತು. “ತಪ್ಪಾಗೋಯ್ತಜ್ಜಿ.. ವತ್ಸಲಕ್ಕನ ಬಗ್ಗೆ ತಿಳಿದೇ ಕೆಟ್ಟ ಮಾತಾಡ್ಬಿಟ್ಟೆ. ಆದರೆ ಶ್ರೀಧರಣ್ಣ ಯಾಕೆ ಹೀಗಾಗಿದ್ದು? ತಾನೇನೂ ತಪ್ಪು ಮಾಡ್ದಿರೋವಾಗ, ಊರ ಜನರ ಕೆಟ್ಟ ಮಾತಿಗೆ ಉತ್ರ ಕೊಡ್ದೇ ಸುಮ್ನಿರೋದ್ಯಾಕೆ ವತ್ಸಲಕ್ಕ?” ಈ ಸಲ ಅವಳ ಧ್ವನಿಯಲ್ಲಿ ಕಾಳಜಿಯಿತ್ತು.

“ಹ್ಮ್ಂ.. ಯಾಕೆ ಯಾರಿಗಾದ್ರೂ ಆಕೆ ತನ್ನ ಬದುಕಿನ ಬಗ್ಗೆ ಸಮಜಾಯಿಷಿ ಕೊಡ್ಬೇಕು ಹೇಳು? ಅವ್ಳಿಂದ ನಮ್ಗೇನು ನಷ್ಟವಾಗ್ತಿದೆ? ಪ್ರಶ್ನಿಸಲು ಅವ್ಳಿಗೆ ನಾವೇನಾಗ್ಬೇಕು ಹೇಳು? ನಿಜ..ಆಕೆ ತನ್ನಪ್ಪನ ಮೇಲಿನ ಸೇಡಿಗೆ ಹೈಸ್ಕೂಲಿನ ಗೆಳೆಯ ಶ್ರೀಧರನ ಮದ್ವೆಯಾಗಿದ್ದು ಹೌದು. ಆದ್ರೆ ಇಬ್ಬರಲ್ಲಿ ಪ್ರೀತಿ ಹುಟ್ಟಿತ್ತೋ ಇಲ್ವೋ ಗೊತ್ತಿಲ್ಲ. ಆದರೆ ಆತ ಗಂಡಸೇ ಅಲ್ಲಾ ಅನ್ನೋ ಘೋರ ಸತ್ಯ ಅವ್ಳಿಗೆ ಗೊತ್ತಾಗಿದ್ದು ಮದ್ವೆಯಾದ್ಮೇಲೇ. ಹೀಗಿದ್ರೂ ಆಕೆ ಗುಟ್ಟು ರಟ್ಟು ಮಾಡ್ದೇ, ಸುಮ್ನಿದ್ಳು. ಆದರೆ ಶ್ರೀಧರನೊಳಗೊಂದು ವಿಕೃತಿಯಿತ್ತು. ತನಗಿಲ್ಲದ ಗಂಡಸ್ತನದ ಅಹಂ ಎದ್ದಾಗ, ತಾನು ಕಾಣದ ಸುಖವ ತನ್ನ ಮುಂದೇ ಹೆಂಡತಿ ಸುಖಿಸಿ ತನ್ನ ಕಣ್ಣಿಗೆ ಹಬ್ಬ ಕೊಡಬೇಕೆಂಬ ಕೊಳಕು ಬಯಕೆಯದು. ಅದ್ಕಾಗಿ ಅವ್ಳ ಹಿಂದೆ ತನ್ನ ಕೆಲವು ಫಟಿಂಗ ಗೆಳೆಯರ ಛೂ ಬಿಟ್ಟು... ಇದು ಆಕೆಗೆ ಗೊತ್ತಾಗಿ ಅವರನ್ನೆಲ್ಲಾ ಉಗಿದು, ಒದ್ದು... ಒಂದು ದಿನ ಇವಳ ಮೇಲೆ ಕೈ ಮಾಡಲು ಬಂದ ಗಂಡನ ದೂಡಿ ಕೆಡವಿದ್ದೇ ನೆಪವಾಗಿ, ಪಾರ್ಶ್ವವಾಯು ಬಡಿದು ಬಿದ್ಕೊಂಡ ಶ್ರೀಧರ. ತನ್ನಿಂದಲೇ ಹೀಗಾಯಿತೇನೋ ಎಂಬ ಒಳ ಕೊರಗು ಅವಳದ್ದು.. ಅದಕ್ಕೇ ಇನ್ನೂ ಅವನ ಹೊರ ಹಾಕದೇ ಹಳ್ಳಿ ಚಿಕಿತ್ಸೆ ಕೊಡಿಸುತ್ತಿದ್ದಾಳೆ.. ಹೊತ್ತು ಹೊತ್ತಿಗೆ ಬೇಯಿಸಿ ತಿನ್ನಿಸುತ್ತಿದ್ದಾಳೆ. ಪಾಪ ತಡೆಯಲಾಗದೇ ಅಜ್ಜಿಯ ಬಳಿ ಎಲ್ಲಾ ಹೇಳಿಕೊಂಡು ಅತ್ತಿದ್ದಳಂತೆ ಒಮ್ಮೆ. ಆನಂದಿಬಾಯಿ ನನ್ನಲ್ಲಿ ಗುಟ್ಟಾಗಿ ಹೇಳಿ ತಲೆ ಚಚ್ಚಿಕೊಂಡಿದ್ದಳು. ಏಕೈಕ ಬಂಧುವಾಗಿದ್ದ ಅಜ್ಜಿಯೂ ಈಗ ಅವಳ ಜೊತೆಗಿಲ್ಲ. ಒಂಟಿನತವ ಹತ್ತಿಕ್ಕಲು ಸ್ತ್ರೀ ಶಕ್ತಿ, ಸ್ವ ಸ್ವಸಾಯ ಮುಂತಾದ ಗುಂಪುಗಳಿಗಾಗಿ ದುಡಿಯುತ್ತಿದ್ದಾಳೆ. ಇದಕ್ಕೆ ಸಾಮಾಜಿಕ ಕಾರ್ಯಕರ್ತನಾಗಿರೋ ಆ ಪುರುಷೋತ್ತಮ ಸಹಾಯ ಮಾಡ್ತಿದ್ದಾನಂತೆ... ನನ್ನ ಬಳಿ ಒಮ್ಮೆ ಖುದ್ದಾಗಿ ಹೇಳಿದ್ದಳು. ಇಷ್ಟಕ್ಕೂ ಅವರಿಬ್ಬರ ನಡುವೆ ಸಂಬಂಧ ಇದ್ದರೂ ನನಗೇನೂ ತಪ್ಪು ಕಾಣಿಸದು ಕೂಸೆ. ತಪ್ಪೆನಿಸಿಕೊಳ್ಳುವುದು ಇಲ್ಲದ್ದನ್ನು ಇದೆ ಅಂತ ನಾಟಕವಾಡಿದಾಗ. ಆದ್ರೆ ಆಕೆ ಹೇಗಿದ್ದಾಳೋ ಹಾಗೆ ಕಾಣಿಸುತ್ತಾಳೆ. ವಿನೇತ್ರಿ.. ಅವ್ಳ ಮನೆಗೆ ನಾನು ಹೋಗಿದ್ದಾಗ ಎಷ್ಟೋ ಸಲ ನೋಡಿದ್ದೇನೆ.. ತನ್ನ ಮನೆಯ ಒಳ ಜಗುಲಿಯ ಗೋಡೆಗೆ ನೇತು ಹಾಕಿರುವ, ಸರಸ್ವತಿಯ ಫೋಟೋದ ಮೇಲೊಂದು ಪುಟ್ಟ ದೀಪ ಹಚ್ಚಿಟ್ಟುಕೊಂಡು ಗಂಟೆಗಟ್ಟಲೇ ಅಮ್ಮನ ಮುಖವನ್ನೇ ನೋಡುತ್ತಾ ಕುಳಿತು ಬಿಡ್ತಾಳೆ.. ‘ದೀಪ ಕೆಳ್ಗಿಡ್ದೇ ಮೇಲ್ಯಾಕೆ ಹಚ್ಚೀಡ್ತೀಯಾ?’ ಅಂತ ಒಮ್ಮೆ ಕೇಳಿದ್ದಕ್ಕೆ.. ‘ಮಾಲ್ತಿ ಆಯಿ, ಮೇಲಿನಿಂದ ಬೀಳೋ ಕಿರು ದೀಪದಲ್ಲಿ ಅಮ್ಮನ ನಿಷ್ಕಲ್ಮಶ ಕಣ್ಗಳು ಎಷ್ಟು ಚೆಂದ ಹೊಳೀತವೆ ಅಲ್ವಾ? ಆದ್ರೆ ದೀಪ ಕೆಳ್ಗಡೆ ಇಟ್ರೆ ಯಾಕೋ ಅಷ್ಟು ಸರಿ ಕಾಣೋದೇ ಇಲ್ಲಪ್ಪಾ..” ಅಂದಿದ್ಳು. ನಮ್ಮ ವತ್ಸಲೆ ಅವಳಮ್ಮನ ಪಡಿಯಚ್ಚು... ಆ ಫೊಟೋದ ನೆತ್ತಿಯ ಮೇಲಿನ ಬೆಳಕಿನಷ್ಟೇ ಪವಿತ್ರಳಾಗಿ ಕಾಣ್ತಾಳೆ ನೋಡು ನನ್ನ ಕಣ್ಣಿಗೆ.” ಗೋಪಜ್ಜಿಯ ಮೊಗದಲ್ಲಿ ತುಂಬಿದ್ದ ವಿಶಿಷ್ಟ ಹೊಳಪನ್ನೇ ನೋಡುತ್ತಾ, ಹನಿಗಣ್ಣಾದಳು ವಿನೇತ್ರಿ.
[೨೦೧೭, ಜುಲೈ ತಿಂಗಳ ತುಷಾರದಲ್ಲಿ ಪ್ರಕಟಿತ]
******
~ತೇಜಸ್ವಿನಿ ಹೆಗಡೆ

ಸೋಮವಾರ, ಮೇ 29, 2017

ವೇಣೀಸಂಹಾರ


‘ವೇಣೀಸಂಹಾರ’ - ಈ ಅಪರೂಪದ ಪುಸ್ತಕದ ಕುರಿತು ಮೊತ್ತ ಮೊದಲು ಮಾಹಿತಿ ಕೊಟ್ಟವರು ಶ್ರೀ ವಿಘ್ನೇಶ್ವರ ಭಟ್  ಅವರು. ಕೆಲವು ದಿನಗಳ ಹಿಂದೆ ಕೋರಿಕೆಯ ಮೇರೆಗೆ ಆ ಪುಸ್ತಕವನ್ನು ಓದಲೂ ಕೊಟ್ಟರು. ಕಥೆಗಳ ಮುನ್ನ ಬರುವ ಸುದೀರ್ಘ ಪೀಠಿಕೆಯೇ ಒಂದು ಮಿನಿ ಕಾದಂಬರಿಯಂತಿದ್ದು.. ಲೇಖಕಿಯ ಪ್ರಬುದ್ಧತೆಗೆ, ವಿಶಿಷ್ಟ ವ್ಯಕ್ತಿತ್ವಕ್ಕೆ ಸ್ಪಷ್ಟ ಕನ್ನಡಿಯನ್ನು ಹಿಡಿದಿದೆ.

ಈ ಪುಸ್ತಕದ ವಿಶಿಷ್ಟತೆ ಏನೆಂದರೆ..

೧೯೨೫ರಲ್ಲಿ ಗೋಕರ್ಣದಲ್ಲಿ ಹುಟ್ಟಿದ ದೇವಾಂಗನಾ ಶಾಸ್ತ್ರಿಯವರು ಬದುಕಿದ್ದು ಕೇವಲ ೨೫ ವರುಷಗಳು ಮಾತ್ರ. ೧೯೫೧ರಲ್ಲಿ ಅವರ ಬದುಕಿನಲ್ಲಿ ನಡೆದ ಒಂದು ದುರ್ಘಟನೆಯಿಂದಾಗಿ ಅವರು ತೀರಿಕೊಂಡಾಗ ಅವರಿಗೆ ಮೂರುವರುಷದ ಓರ್ವ ಮಗಳಿದ್ದಳು. ಮುಂದೆ ಅವರ ಮಗಳು ಉಷಾ ಹೆಗಡೆ, ಅಳಿಯ ಎಸ್.ವ್ಹಿ.ಹೆಗಡೆ ಹಾಗೂ ಆಪ್ತೇಷ್ಟರು ಸೇರಿ ಅಂದಿನ ಪ್ರಸಿದ್ಧ ಸಹಿತ್ಯ ಪತ್ರಿಕೆಗಳಲ್ಲಿ ಪಕಟಗೊಂಡಿದ್ದ ಲಭ್ಯ ಕಥೆಗಳನ್ನು ಮತ್ತು ಲೇಖನಗಳನ್ನು ಒಗ್ಗೂಡಿಸಿ, ‘ವೇಣಿಸಂಹಾರ’ ಪುಸ್ತಕದ ರೂಪದಲ್ಲಿ ೨೦೦೫ರಂದು ಹೊರ ತಂದಿದ್ದಾರೆ. ಇದರಲ್ಲಿ ದೇವಾಂಗನಾ ಅವರ ಎಂಟು ಲಭ್ಯ ಕಥೆಗಳಲ್ಲದೇ, ಐದು ಪ್ರಬಂಧಗಳು, ಅವರನ್ನು ಅತ್ಯಂತ ಸಮೀಪದಿಂದ ನೋಡಿದ, ಬಲ್ಲ ಆಪ್ತರ ಬೆಚ್ಚನೆಯ ಅನಿಸಿಕೆಗಳು ಎಲ್ಲವೂ ಪ್ರಕಟಗೊಂಡಿವೆ.


ಪ್ರಸ್ತುತ ಪುಸ್ತಕದಲ್ಲಿ ಲೇಖಕಿ ದೇವಂಗನಾ ಶಾಸ್ತ್ರಿಯವರು ತಮಗೆ ಅಂದು ಲಭ್ಯವಾಗಿದ್ದ ಅತ್ಯಲ್ಪ ಸ್ವಾತಂತ್ರ್ಯದಲ್ಲೇ  ತೋರಿದ ಪ್ರೌಢ, ಪ್ರಬುದ್ಧ ಚಿಂತನೆಗಳು, ದಿಟ್ಟ ಕ್ರಾಂತಿಕಾರಿ ಆಲೋಚನೆಗಳು, ಪೆನ್ನಿನ ಖಡ್ಗದಿಂದಲೇ ಹೋರಾಡಿದ ಕೆಚ್ಚು ಎಲ್ಲವೂ ತುಸು ಬೆಚ್ಚುವಂತೆ ಮಾಡಿ, ಹೆಚ್ಚು ಅಚ್ಚುಮೆಚ್ಚೂ ಆಗುತ್ತಾರೆ. ಅಂದಿನ ಸಮಾಜದಲ್ಲಿ ಅದರಲ್ಲೂ ವಿಶೇಷವಾಗಿ ಬ್ರಾಹ್ಮಣರಲ್ಲಿ ಹಾಸು ಹೊಕ್ಕಾಗಿದ್ದ ವೈಧವ್ಯ.. ಅದರಾನಂತರ ಹೆಣ್ಣಿನ ಮೈ-ಮನಗಳ ಮೇಲೆ ನಡೆಯುವ ದೌರ್ಜನ್ಯ (ಕೇಶ ಮುಂಡನೆ, ಸಕಲ ಶುಭ ಕಾರ್ಯಗಳಿಗೆ ಬಹಿಷ್ಕಾರ ಇತ್ಯಾದಿ..), ವರದಕ್ಷಿಣೆ (ಇದು ಈಗಲೂ ಎಲ್ಲಾ ಜಾತಿಗಳಲ್ಲೂ ಹಾಸು ಹೊಕ್ಕಾಗಿದೆ..), ಬಾಲ್ಯವಿವಾಹ, ಗಂಡನ ಮನೆಯಲ್ಲಿ ಆಕೆಗೆ ಲಭ್ಯವಗುತಿದ್ದ ನಾನ ವಿಧದ ಪೀಡನೆ.. ಇವೆಲ್ಲವನ್ನೂ ಸಶಕ್ತವಾಗಿ ಎಂಟೇ ಕಥೆಗಳಲ್ಲೇ ಹಿಡಿದಿಟ್ಟಿದ್ದಾರೆ. ಎಂಟು ಕಥೆಗಳು ಪುಟ್ಟ ಪುಟ್ಟ ಕಥೆಗಳೇ! ಆದರೆ ಅವುಗಳೊಳಗೆ ಹೊಕ್ಕಿರುವ ಪಾತ್ರಗಳು ತೆರೆದಿಡುವ ಭಾವ ಪ್ರಪಂಚ ಮಾತ್ರ ಅದ್ಭುತ! ಅಂದಿನ ಪಿಡುಗಗಳನ್ನೆಲ್ಲಾ ಅವರು ತಮ್ಮ ಕಥೆಗಳ ಮೂಲಕ, ಕಥಾ ಪಾತ್ರಗಳ ಮೂಲಕ ಅದೆಷ್ಟು ಗಟಿ ಧ್ವನಿಯಲ್ಲಿ ಎತ್ತಿ ಹಿಡಿದು ರಾಚಿದಾರೆಂದರೆ.. ಅಂದಿನ ಸಮಾಜ ಇದನ್ನೆಲ್ಲಾ ಅರಗಿಸಿಕೊಂಡಿತ್ತೇ? ಎಂಬ ಅನುಮಾನವೂ ಮೂಡುತ್ತದೆ. ಅದೆಷ್ಟು ಅವಹೇಳನ, ಮೂದಲಿಕೆಗಳನ್ನು ಇವರು ಅಂದು ತನ್ನ ಇಂಥ ಬರಹಗಳಿಗಾಗಿ ಎದುರಿಸಿದ್ದಿರಬಹುದು ಎಂದೂ ಅನಿಸುತ್ತದೆ. ಅದೇನೇ ಇದ್ದರೂ ಕತೆಯಿಂದ ಕತೆಗೆ ಲೇಖಕಿ ಇನ್ನಷ್ಟು ಗಟ್ಟಿಯಾಗಿ, ಸ್ಪಷ್ಟ ಧ್ವನಿಯಲ್ಲಿ ತನ್ನೊಳಗಿನ ಬೇಗುದಿ, ಸುತ್ತ ಮುತ್ತಲೂ ಆಗುತ್ತಿದ್ದ ಅನಾಚಾರಗಳಿಂದ ತಪ್ತವಾದ ಮನಸ್ಸಿನ ನೋವುಗಳು - ಇವೆಲ್ಲವನ್ನೂ ಬಿಡಿ ಬಿಡಿಯಾಗಿ ಹರಹಿದ್ದಾರೆ. ಹೆಣ್ಣೆಂದ ಕೂಡಲೇ ಆಕೆ ಭೋಗವಸ್ತು ಅಥವಾ ದೌರ್ಜನ್ಯಕ್ಕೆ ಹೇಳಿ ಮಾಡಿಸಿದವಳು.. ಎಂದಷ್ಟೇ ಬಗೆದು ನಡೆಸಿಕೊಳ್ಳುತ್ತಿದ್ದ ಅಂಥ ಸಮಾಜವನ್ನು ತುಂಬಾ ಸತ್ವಯುತವಾಗಿ ತುದಿ ಬೆರಳಲ್ಲೆತ್ತಿ ತಿದಿಯೊತ್ತಿದ ರೀತಿಗೆ, ಆ ಶೈಲಿಗೆ ಶರಣು.

ಕಥೆಗಳ ಕುರಿತು ಹೆಚ್ಚೇನೂ ಹೇಳೆನು.. ಆ ಸೂಕ್ಷ್ಮ ನೇಯ್ಗೆ.. ಇರಿವ ಪ್ರಶ್ನಾವಳಿಗಳು, ಸ್ತ್ರೀಯರ ಮೇಲೆ ನಡೆವ ನಾನಾ ವಿಧದ ದೌರ್ಜನ್ಯಗಳನ್ನು ಸರ್ವೇಸಾಮಾನ್ಯವೆಂದೇ ಪರಿಗಣಿಸಿದ್ದ ಅಂದಿನ ಆ ಸಮಾಜವನ್ನು ಆ ಕಾಲದಲ್ಲೇ ಎಳೆ ಎಳೆಯಾಗಿ ಹರವಿ ಕೊಡವಿದ ರೀತಿ.. ದಿಟ್ಟತನ ಎಲ್ಲವೂ ನಿಬ್ಬೆರಗಾಗಿಸುತ್ತದೆ. ಜಯಂತಿ ಪತ್ರಿಕೆ ನಡೆಸಿದ ಕಥಾಸ್ಪರ್ಧೆಯಲ್ಲಿ ಪ್ರಥಮ ಬಹುಮಾನಿತ ವೇಣೀಸಂಹಾರ (ಅಕ್ಟೋಬರ್ ೧೯೪೧)ಕಥೆಯಂತೂ ಮನಮಿಡಿವಂತಿದೆ. ಜೊತೆಗೆ ಆಣೆ ಪಾವಲಿ, ಅಡ-ಕತ್ತರಿ, ಹಾರೇಗೋಲು ಬಹಳ ಹಿಡಿದಿಟ್ಟ ಕಥೆಗಳು.

ಬಾಲ ವೈಧವ್ಯ, ಕೇಶಮುಂಡನೆ - ಇವೆರಡು ಈಗ ಎಷ್ಟೋ ಕಡಿಮೆಯಾಗಿವೆ.. (ಅಂದಿನ ಕಾಲಘಟ್ಟವನ್ನು ತೆಗೆದುಕೊಂಡರೆ..) ಆದರೂ ಅಂದು ಆಳದಲ್ಲಿ ಬೇರೋರಿದ್ದ ಅದೆಷ್ಟೋ ಸಾಮಾಜಿಕ ಹುಳುಕುಗಳು ಇನ್ನೂ ಹಾಗೇ ಇವೆ. ತಮ್ಮ ಪ್ರಬಂಧದಲ್ಲಿ ದೇವಾಂಗನಾ ಅವರು ಮಂಡಿಸುವ ಚಿಂತನಾ ಲಹರಿಯನ್ನೋದುತ್ತಾ ಮಂತ್ರಮುಗ್ಧಳಾಗಿ ಹೋದೆ. ಆದರೆ ಅವರ ಕೆಲವೊಂದು ಚಿಂತನೆಗಳು ಇಂದಿನ ಕಾಲಘಟ್ಟಕ್ಕೆ ತುಸು ಸಾಂಪ್ರದಾಯಿಕ ಎಂದೆನಿಸಿದರೂ, ಅವರು ಬದುಕಿದ್ದ ಕಾಲಘಟ್ಟ, ಆ ಪರಿಸರವನ್ನು ಗಣನೆಗೆ ತೆಗೆದುಕೊಂಡಾಗ ಅಲ್ಲಗಳೆಯಲಾಗದು.
ಓದುಗರಿಗಾಗಿ ಅವರ ಲೇಖನವೊಂದರ (‘ಇಂದಿನ ಸ್ತ್ರೀಯರ ಕರ್ತವ್ಯ’) ಆಯ್ದ ಈ ಭಾಗದ ಫೋಟೋವನ್ನು ಹಾಕುತ್ತಿರುವೆ.



ಈ ಪುಸ್ತಕದ ಕುರಿತು ಮಾಹಿತಿಯನ್ನಿತ್ತು, ಓದಲೂ ಒದಗಿಸಿದ ವಿಘ್ನೇಶ್ವರ ಭಟ್ ಅವರಿಗೆ ತುಂಬಾ ಕೃತಜ್ಞತೆಗಳು.

~ತೇಜಸ್ವಿನಿ ಹೆಗಡೆ.

ಸೋಮವಾರ, ಮಾರ್ಚ್ 13, 2017

ಇದ್ದಲ್ಲೇ ಇಡು ದೇವ್ರೆ...

ಲೆ ಹತ್ತಿರ ಕುಳಿತುಕೊಂಡು ಅಮ್ಮ ಹಾಕಿದ್ದ ಬಿಸಿ ಬಿಸಿ ದೋಸೆಗೆ ಹಚ್ಚಿ ತಿನ್ನಲು ನಾಲ್ಕು ಚಮಚ ಬೆಲ್ಲಕ್ಕೆ ಒಂದು ದೊಡ್ಡ ಚಮಚ ಆಕಳಿನ ತುಪ್ಪ ಹಾಕಿಕೊಂಡು, ಅದನ್ನೇ ಗಿರಗಿರನೆ ತಿರುಗಿಸಿ, ಪಾಯಸ ಮಾಡುತ್ತಿದ್ದವಳ ತಲೆಯೊಳಗೆಲ್ಲಾ ಕಲ್ಲೆಯದೇ ಯೋಚನೆ ಗಿರಕಿ ಹೊಡೆಯುತ್ತಿತ್ತು. ‘ಈ ಕಲ್ಲೆ ಯಾಕೆ ಇನ್ನೂ ಬಂದಿಲ್ಲಾ?! ಇಷ್ಟೊತ್ತಿಗಾಗ್ಲೇ ನನ್ನ ದೋಸೆಯಲ್ಲಿ ಪಾಲಿ ಕೇಳಲೆ ಹಾಜರಿರಕಾಗಿತ್ತು... ಇನ್ನೂ ಪತ್ತೆಯಿಲ್ಲೆ ಅಂದ್ರೆ ಎಲ್ಲೋ ಏನೋ ಪರಾಮಶಿ ಆಗಿರವು...’ ಹೀಗೆಲ್ಲಾ ಯೋಚನೆಯಲ್ಲಿ ಬಿದ್ದ ಅವಳಿಗೆ ತಾನು ಬರೀ ಬೆಲ್ಲ, ತುಪ್ಪವನ್ನೇ ನೆಕ್ಕುತ್ತಿರುವುದರ ಅರಿವೇ ಆಗಲಿಲ್ಲ. ಆದರೆ ಅಲ್ಲೇ ಒಲೆ ಪಕ್ಕ ಕುಳಿತುಕೊಂಡು ದೋಸೆ ಎರೆದು ಹಾಕುತ್ತಿದ್ದ ಅವಳಮ್ಮ ಶಾರದೆಗೆ ಇವಳ ಕಳ್ಳಾಟ ಕಂಡುಬಿಟ್ಟಿತು. “ಕೂಸೆ... ಅನಘ... ಅದೆಲ್ಲಿದ್ದೇ ನಿನ್ತಲೆ? ಎಂತಾ ಮಳ್ಳುರೂಪವೇ ಇದು? ಇದ್ಯಾವ್ರೀತಿ ತಿನ್ನಾಣ್ವೋ ಎಂತೋ! ಬಿಸೀ ದೋಸೇನೇ ಬೇಕು ಹೇಳಿ ನನ್ನ ಜೀವ ತಿಂತೆ... ಈಗ ನೋಡಿರೆ ಹೀಂಗೆ! ಏಳು ವರ್ಷದ ಕೋಣಾ ಆದ್ರೂ ಬುದ್ಧಿ ಮಾತ್ರ ಎರಡ್ರದ್ದೇ ಸೈ...” ಹೇಳಿ ಗದರಿದ್ದೇ ತಡ ಬಿರಬಿರನೆ ದೋಸೆ ಮುರಿದು ಬಾಯಿಗೆ ಹಾಕಿದಳೋ ಇಲ್ವೋ... ಹೆಬ್ಬಾಗಿಲಿನಲ್ಲಿ ಗೆಳತಿ ಕಲ್ಲೆಯ ದನಿ ಕೇಳಿತು.

ಜಗುಲಿಯಲ್ಲಿ ಮಂಚದ ಮೇಲೆ ಕುಳಿತುಕೊಂಡು ಕವಳದ ಸಂಚಿ ತಡಕಾಡುತ್ತಿದ್ದ ಅಜ್ಜಮ್ಮನನ್ನು ಕಂಡಿದ್ದೇ “ಆಯಮ್ಮಾ ಆರಮಾ?” ಎಂದು ಮಾತಾಡಿಸುತ್ತಲೇ ಪ್ರಧಾನ ಬಾಗಿಲನ್ನು ದಾಟಿ ಒಳಗೆ ಜಿಗಿಯುತ್ತಾ ಹೋದಳು ಕಲ್ಲೆ. “ಅನು... ಒಳಗಿದ್ಯನೇ...? ತಿಂಡಿ ತಿಂದಾತಾ...?” ಕೇಳುತ್ತಾ ಅಡುಗೆಮನೆಯ ಕಡೆ ಹೋದ ಹುಡುಗಿಯನ್ನು ಕಂಡು ಶಾರದೆಯ ಅತ್ತೆ ಸೀತಮ್ಮನಿಗೆ ಕಿರಿಕ್ ಆಯಿತು. “ಶುದ್ಧ ಆಸೆಬುರುಕ ಕೂಸು... ಸಮಾ ಟೇಮಿಗೆ ಬಂತು ದೋಸೆ ಮುಕ್ಕಲೆ... ನಮ್ಮನೆ ಕೂಸಿಗೂ ತಲೆ ಇಲ್ಲೆ... ಲಗೂನೆ ತಿಂದ್ಕಂಡು ಹೊರಗೇ ಇರ್ದೇ, ಗೆಳತೀನೂ ಕೂರ್ಸಿ ತಿನ್ಸಿ ಸಂಭ್ರಮ ಮಾಡ್ತು...”  ಎನ್ನುವ ಅವಳ ವಟಗುಡುವಿಕೆ ಅಡುಗೆ ಮನೆಯಲ್ಲಿ ದೋಸೆ ಮುಕ್ಕುತ್ತಿದ್ದ ಕಲ್ಲೆಯ ಕಿವಿಗೆ ಬೀಳುವಹಾಗಿರಲಿಲ್ಲ. ಬಿದ್ದರೂ ಅವಳಿಗೆ ಏನೂ ಅನಿಸುತ್ತಲೂ ಇರಲಿಲ್ಲ. ಅನಘೆಗಿಂತ ಎರಡೇ ವರ್ಷ ದೊಡ್ಡವಳಾದ ಕಲಾವತಿಯ ಮನೆಯಲ್ಲಿ ತುಂಬಿದ್ದುದು ಕೇವಲ ಬಡತನ ಮಾತ್ರ. ಅವಳ ಅಪ್ಪ ಶ್ರೀನಿವಾಸಭಟ್ಟ ಶುದ್ಧ ಸೋಂಬೇರಿ. ಹೆಸರಿಗೆ ಮಾತ್ರ ಪುರೋಹಿತ ಭಟ್ಟ... ಹೊರಗೆ ಬಿದ್ದು ದುಡಿಯುವುದೆಂದರೆ ಆಗದು... ನೂರಾಯೆಂಟು ನೆಪ. ಇಂತಹ ಸ್ಥಿತಿಯಲ್ಲಿ ಅವನ ಹೆಂಡತಿ ಶ್ರೀಲಕ್ಷ್ಮಿಯೇ ಅವರಿವರ ಮೆನೆಯಲ್ಲಿ ಕಸ-ಮುಸರೆ, ಹಿಟ್ಟು-ಹುಡಿ ಮಾಡಿಕೊಡುತ್ತಾ ಹೇಗೋ ಗಂಡ ಮಕ್ಕಳ ಹೊಟ್ಟೆ ಹೊರೆಯುತ್ತಿದ್ದಳು. 

ಬಾಲ್ಯದಿಂದಲೂ ಅನಘ, ಕಲಾವತಿ ಕಡ್ಡಿ ದೋಸ್ತರು. ಇಲ್ಲಿ ಕಡ್ಡಿ ಅಂದ್ರೆ ಬಳಪದ ಕಡ್ಡಿ. ಶಾಲೆಯ ಮೆಟ್ಟಿಲನ್ನೂ ಕಾಣದಿರುವ ಕಲಾವತಿಗೆ ಬಿಳೀ ಬಣ್ಣದ ಬಳಪದ ಕಡ್ಡಿ ಎಂದರೆ ಬಹು ಪ್ರೀತಿ. ಅವಳಿಗೆ ಅಕ್ಷರ ಕಲಿಸಿದ್ದೇ ಅನಘಾ. ತನ್ನ ಹತ್ತಿರವಿದ್ದ ಬಳಪವನ್ನೆಲ್ಲಾ ಚೂರು ಮಾಡಿ ಅವಳಿಗೂ ಕೊಡುತ್ತಿದ್ದಳು. ಅವಳ ಈ ಕೃತ್ಯದಿಂದಾಗಿ ಮನೆಯಲ್ಲಿ ಎಷ್ಟೋ ಸಲ ಬೈಸಿಕೊಂಡಿದ್ದೂ ಇದೆ... “ನೀ ಎಂತ ಬಳ್ಪನೇ ತಿಂತ್ಯನೇ ಕೂಸೆ... ಬರ್ಯದು ನಾಲ್ಕು ಅಕ್ಷರನೂ ಇಲ್ಲೆ... ಕಡ್ಡಿ ಮಾತ್ರ ಎರ್ಡು ದಿನಕ್ಕೇ ನಾಪತ್ತೆ...” ಹೇಳಿ ಅನಘೆಯ ಅಪ್ಪಯ್ಯ ಅದೆಷ್ಟು ಸಲ ಗದರಿಸಿದ್ದನೋ ಲೆಕ್ಕವಿಲ್ಲ. ಮನೆಯಲ್ಲಿ ಸಿಗುತ್ತಿದ್ದ ಹೆಸರು ಗಂಜಿ ಬೇಸರ ಬಂದ ತಕ್ಷಣ ಕಲ್ಲೆ ಶಾರದೆಯ ಹಿಂದೆಮುಂದೆ ಸುತ್ತುತ್ತಿದ್ದಳು. ಪಾಪದ ಹುಡುಗಿಯ ಕಷ್ಟ ಗೊತ್ತಿದ್ದರಿಂದ ತಿಂಡಿ, ಪದಾರ್ಥಗಳನ್ನು ತುಸು ಹೆಚ್ಚೇ ತಯಾರಿಸಿ, ಅವಳಿಗೂ ಅವಳ ತಂಗಿಯಂದಿರಿಗೂ ಸೇರಿಸಿ ಕಟ್ಟಿಕೊಡುತ್ತಿದ್ದಳು ಶಾರದಾ.
ಇವತ್ತೇಕೋ ಕಲ್ಲೆಯ ಮನಸು ಬೇರೆಲ್ಲೋ ಇದ್ದಹಾಗಿತ್ತು. ದೋಸೆ ತಿನ್ನುತ್ತಿದ್ದರೂ ಏನೋ ಯೋಚನೆಯಲ್ಲಿ ಬಿದ್ದಂತಿದ್ದ ಹುಡುಗಿಯನ್ನು ಕಂಡು ಶಾರದೆಗೆ ಕುತೂಹಲವಾಯಿತು. “ಎಂತಾ ಆತೆ ತಂಗಿ? ಮನೇಲಿ ಎಲ್ಲಾ ಆರಮಾ? ಸಮಾ ತಿಂತಾ ಇಲ್ಲೆ ಇಂದು...” ಎಂದು ಕೇಳಿದ್ದೇ ತಡ, ಇದಕ್ಕಾಗಿಯೇ ಕಾಯುತ್ತಿದ್ದವಳಂತೇ ತಾನು ಬರುವಾಗ ಕೇಳಿದ ಹೊಸ ವಿಷಯವನ್ನು ಹೊರಹಾಕತೊಡಗಿದಳು ಕಲಾವತಿ.

“ಶಾರ್ದತ್ತೆ... ಆನು ಬರ್ತಿರ್ಬೇಕಿರೆ... ನಿಮ್ಮನೇ ತೋಟ್ದ ಕೆಳ್ಗೆ ಮೂಲೆ ಮನೆ ಶಂಕ್ರಣ್ಣ, ಯನ್ನಪ್ಪಯ್ಯ, ಆಚೆಕೇರಿ ಗಣಪಣ್ಣ, ಶಾನಭೋಗ್ರು, ಸುಬ್ಬುಮಾಮ ಎಲ್ಲಾ ನಿತ್ಕಂಡು ಅದ್ಯಾವ್ದೋ ಪ್ಯಾಟೆಯಿಂದ ಬಂದ ದೊಡ್ಡ ಜನ್ರ ಸಂತಿಗೆ ಗಟ್ಟಿಯಾಗಿ ಮಾತಾಡ್ತಾ ಇದ್ದಿದ್ವಪ್ಪಾ... ಎಲ್ರೂ ಒಂಥರಾ ಇದ್ದಿದ್ದೊ... ನಂಗೆಂತೂ ಸಮಾ ಗೊತ್ತಾಜಿಲ್ಲೆ... ನೀನು ಸುಬ್ಬು ಮಾಮನ್ನ ಕೇಳು... ಈಗ ಒಳ್ಗೆ ಬಕ್ಕು ಅಂವ...” ಎಂದು ಹೇಳಿ ಮುಗಿಯಿತೋ ಇಲ್ಲವೋ ಶಾರದೆಯ ಗಂಡ ಸುಬ್ಬರಾಯ ಹೆಗಡೆ ಒಳಗೆ ಬಂದ. ಒಳಹೊಕ್ಕ ಪತಿಯ ಚಹರೆ ಎಂದಿನಂತಿಲ್ಲದ್ದನ್ನು ಕೂಡಲೇ ಗ್ರಹಿಸಿದಳು ಶಾರದೆ. ಎಂದಿನಂತೆ ತಿಂಡಿಯ ತಟ್ಟೆಗೆ ಕೈ ಹಾಕದೆ ಸುಸ್ತಾದವನಂತೇ ಅಲ್ಲೇ ಮೂಲೆಯಲ್ಲಿ ಮಣೆ ಹಾಕಿಕೊಂಡು ಕುಳಿತ ರೀತಿ, ಗಾಬರಿಗೊಂಡಂತಿದ್ದ ಮೊಗ... ಇವೆಲ್ಲವನ್ನೂ ನೋಡಿ ತುಸು ಹೆದರಿಕೆಯಾಯಿತು ಶಾರದೆಗೆ. ಹಾಗೆ ನೋಡಿದರೆ ಸುಬ್ಬಣ್ಣ ಸ್ವಭಾವತಃ ಸ್ವಲ್ಪ ಪುಕ್ಕಲು. ಊರಲ್ಲಿ ಏನೇ ಸಣ್ಣಪುಟ್ಟ ಗದ್ದಲ, ಗಲಾಟೆ ಆದರೂ ಒಂದೆರಡು ದಿನಗಳನ್ನು ಮನೆಯೊಳಗೇ ಕುಂತು ಕಳೆಯುವಂತಹವನು. ಅವನ ಹೆಂಡತಿಯೇ ಎಷ್ಟೋ ಗಟ್ಟಿಗಿತ್ತಿ. ಆದ್ರೆ ಇವತ್ಯಾಕೋ ಯಜಮಾನ್ರು ಸ್ವಲ್ಪ ಜಾಸ್ತಿಯೇ ಭಯ ಬಿದ್ದಿರುವ ಹಾಗೆ ಕಂಡಿತವಳಿಗೆ. ಪತಿಯನ್ನು ಕಣ್ಸನ್ನೆಯಲ್ಲೇ ಕರೆದು ಹಿತ್ತಲಿಗೆ ಹೊರಟಳು. ನಿಧಾನವಾಗಿ ಅವಳನ್ನು ಅನುಸರಿಸಿದ ಸುಬ್ರಾಯ, ಹಿತ್ತಲಿನಲ್ಲಿದ್ದ ಬಟ್ಟೆ ಒಗೆಯುವ ಕಲ್ಲಿನ ಮೇಲೆ ಕುಳಿತವನೇ ವಿಷಯವನ್ನೆಲ್ಲಾ ಅರುಹಲು, ಸಂಗತಿ ತಿಳಿದ ಶಾರದೆಯ ಎದೆಯೂ ಜೋರಾಗಿ ಹೊಡೆದುಕೊಳ್ಳತೊಡಗಿತು. ಒಳಗಿದ್ದ ಅಮ್ಮನಿಗೂ ವಿಷಯವನ್ನು ತಿಳಿಸಲು ಒಳಹೊಕ್ಕವನನ್ನು ಶಾರದೆಯೂ ಅನುಸರಿಸಿದಳು.
-೨-
ಶಿರಸಿ ತಾಲೂಕಿನ ಆಸುಪಾಸಿರುವ ಹತ್ತು ಹಳ್ಳಿ ಸುತ್ತ ತಣ್ಣಗೆ ಹರಿಯೋ ಅಘನಾಶಿನೀ ನದಿಗೆ ಅಣೆಕಟ್ಟು ಹಾಕಬೇಕೆಂದು ಸರಕಾರದವರು ಯೋಚಿಸುತ್ತಿರುವುದಾಗಿಯೂ, ಅದೂ ಆ ಒಡ್ಡು ನಮ್ಮ ಮನೆಯ ಸಮೀಪವೇ ಎಲ್ಲೋ ಹಾಕುತ್ತಾರೆಂದೂ, ಇದರಿಂದಾಗಿ ನಮಗೇ ಭಯಂಕರ ತೊಂದರೆ ಆಗುವುದೆಂದೂ, ಗದ್ದೆ, ತೋಟ, ಬೇಣವೆಲ್ಲಾ ಮುಳುಗಡೆಯಾಗುವ ಸಂಭವವಿದೆಯೆಂದೂ ಹೇಳಿದ ಸುಬ್ರಾಯ ತಲೆಯ ಮೇಲೆ ಕೈಹೊತ್ತು ಕೂರಲು, ತುಂಬಿದ ಕವಳದ ರಸ ಬಾಯಿಯ ಕವಾಟೆಯಿಂದ ಇಣುಕುತ್ತಿರುವುದನ್ನೂ ಗಮನಿಸದಷ್ಟು ದಂಗಾಗಿಹೋಗಿದ್ದಳು ಸೀತಮ್ಮ. ಉಕ್ಕಿ ಬರತೊಡಗಿದ ಕಣ್ಣೀರನ್ನು ಹೇಗೋ ತಡೆದು ಕವಳ ತುಪ್ಪುವ ನೆಪ ಮಾಡಿ ಕಡಾವಾರದ ಕಡೇ ಹೋದರೆ, ಆಗಷ್ಟೇ ಗಡದ್ದಾಗಿ ತಿಂಡಿ ತಿಂದು ಜಗುಲಿಯ ಕಡೆ ಬಂದಿದ್ದ ಅನಘೆಗೆ ಅಪ್ಪಯ್ಯನ ಮಾತು ಕೇಳಿ ಪಾಯಸ ಕುಡಿದಷ್ಟು ಸಂತಸವಾಯಿತು.

“ಅಪ್ಪಯ್ಯ... ದೊಡ್ಡೊಳೆಗೆ ಒಡ್ಡು ಹಾಕ್ತ್ವಡಾ?! ಹಾಂಗಾದ್ರೆ ದೊಡ್ಡೊಳೆ ನಮ್ಮನೆ ಮೆಟ್ಲ ಮುಂದೇ ಹರೀತಾ? ದಣಪೆ ಆಚೆ ಇರೋ ದಪ್ಪ ಮೆಟ್ಲು ಇದ್ದಲೋ ಅದ್ರ ಹತ್ರಾನೋ ಇಲ್ಲ ಕೆಳ್ಗೆ ಇಪ್ಪು ತೋಟದ ಹತ್ರಾನೋ? ಅಯ್ಯಬ್ಬಾ... ಮಸ್ತಾಗ್ತು ಅಲ್ದಾನೆ ಕಲ್ಲೆ ದಿನಾ ನೀರಾಡಲೆ...” ಎಂದೆಲ್ಲಾ ಹೇಳಿ ಸಂಭ್ರಮಪಡತೊಡಗಿದ ಮಗಳ ಬೆನ್ನಿಗೊಂದು ಗುದ್ದು ಬಿತ್ತು ಅಮ್ಮನಿಂದ. “ಇಲ್ಲಿ ಊರು ಹೊತ್ಕಂಡ್ ಉರೀತಿದ್ರೂ ಇದ್ಕಿನ್ನೂ ಬೆಂಕೀದೆ ಚಿಂತೆ..... ಹೆಡ್ಡ್ ಕೂಸೆ... ಅಘನಾಶಿನಿ ಇಲ್ಲಿಗೆ ಬಂದ್ರೆ ನಾವೆಲ್ಲಾ ಮುಳ್ಗೋದೇ... ತೋಟ ಗದ್ದೆ ಎಲ್ಲಾ ಹೋದ್ಮೆಲೆ ಬರೀ ನೀರು ಕುಡ್ದು ಬದ್ಕಕಾಗ್ತು ತಿಳ್ಕ... ಹೊಟ್ಟೆಗೆ ಸರಿ ಬೀಳ್ದೆ ಹೋದಾಗ ನಿನ್ನ ನೀರಿನ ಭೂತನೂ ಬಿಡ್ತೇನೋ...” ಹೇಳುತ್ತಲೇ ಅಳಲು ಶುರು ಮಾಡಿದ ಅಮ್ಮನ ಹೊಸ ಅವತಾರ ನೋಡಿ ಅನಘೆಗೆ ಭಯ, ಆಶ್ಚರ್ಯ ಎರಡೂ ಉಂಟಾಯಿತು. ಗೆಳತಿಯ ಎದುರಿಗೇ ಅಮ್ಮ ಹೀಗೆಲ್ಲಾ ಬೈದು ಹೊಡೆದಿದ್ದಕ್ಕೆ ಕೊಂಚ ಅವಮಾನವಾಗಿ ಅಳು ಉಕ್ಕಿದಂತಾದರೂ, ನದಿಯೇ ಮನೆಯ ಹತ್ತಿರ ಬರುತ್ತಿರುವ ಸಿಹಿ ಸುದ್ದಿ ಎಲ್ಲವನ್ನೂ ಮರೆಸಿತು. ತನ್ನ ಉಳಿದ ಗೆಳತಿಯರಿಗೆಲ್ಲಾ ಒಡ್ಡಿನ ಸುದ್ದಿಯನ್ನು ಆರುಹಲು ಉತ್ಸಾಹದಿಂದ ಕಲ್ಲೆಯ ಕೈ ಹಿಡಿದು ದಣಪೆ ದಾಟಿದಳು.

ಮಗಳ ಮುಗ್ಧತೆ, ತುಂಟಾಟ ಗೊತ್ತಿದ್ದರೂ ಆ ಕ್ಷಣಕ್ಕೆ ಭವಿಷ್ಯತ್ತಿನ ಚಿಂತೆ ಹೆಚ್ಚಾಗಿತ್ತು ಶಾರದೆಗೆ. ಅದರಲ್ಲೂ ಗಂಡನ ಮೆದುತನ ಗೊತ್ತಿದ್ದರಿಂದ ಮತ್ತೂ ಆತಂಕವಾಗತೊಡಗಿತ್ತು. “ಎಲ್ಲಾ ನಮ್ ಕರ್ಮ... ಸುಖ ಅನುಭವ್ಸಲೂ ಪಡ್ಕ ಬರವು... ಹೋಯ್... ನೀವೊಂಚೂರು ಪ್ಯಾಟಿಗ್‌ಹೋಗಿ ತಹಶೀಲ್ದಾರ್ರನ್ನ ಮತ್ತೆ ವಿಚಾರ್ಸಿಯಲ್ಲಾ... ಹೀಂಗೇ ಕುಂತ್ರೆ ಎಂತೂ ಅಪ್ಪದಲ್ಲಾ ಹೋಪದಲ್ಲಾ... ಶಂಕ್ರಣ್ಣ, ಶಾನುಭೋಗ್ರು ಎಲ್ಲಾ ಇದ್ವಲಿ... ನೀವೂ ಏನಾದ್ರೂ ಮಾಡುಲಾಗ್ತಾ ನೋಡಿ...” ಎಂದದ್ದೇ ಅಲ್ಲಿಂದೆದ್ದು ಕೊಟ್ಟಿಗೆಯ ಕಡೆ ಹೋದಳು. ಮೊದಲಿನಿಂದಲೂ ಅಷ್ಟೇ.... ದುಃಖ ಜಾಸ್ತಿ ಆದಾಗೆಲ್ಲಾ ಆಕೆ ಹೋಗುವುದು ತನ್ನ ಪ್ರೀತಿಯ ಆಕಳು ಗೌರಿ ಇರುವಲ್ಲಿಗೇ. ಸೀತಮ್ಮನಿಗೆ ವಿಪರೀತ ಸುಸ್ತಾದಂತೆ ಅನಿಸಿ, ಹಾಗೇ ಹಾಸಿಗೆಯ ಕಡೆ ನಡೆದರು. “ನನ್ನವರು ಕಷ್ಟದಲ್ಲಿ ಬೆವರು ಹರಿಸಿ, ದುಡಿದು, ಗುಡ್ಡವನ್ನು ಕಡಿದು ಮಾಡಿರುವ ತೋಟ, ಗದ್ದೆ... ಅದೆಷ್ಟು ಕಷ್ಟ, ನಷ್ಟ ಕಂಡಿಲ್ಲಾ ಇಷ್ಟು ಮೇಲೇರಿ ಬರುವಂತಾಗಲು!! ಅವರೇನೋ ತನಗಿಂತ ಮೊದಲೇ ಪರಲೋಕ ಸೇರಿ ನೆಮ್ಮದಿಯಾಗಿದ್ದಾರೆ. ನಾನಿನ್ನೂ ಯಾಕೆ ಇಲ್ಲೇ ಇದ್ದೇನೋ... ಆ ದೇವರು ಇದನ್ನೆಲ್ಲಾ ನೋಡಲೆಂದೇ ಇನ್ನೂ ಬದುಕಿಸಿಟ್ಟಿದ್ದಾನೆಯೋ! ಭಗವಂತ, ಮುಳುಗಡೆ ಆಗೋ ಮೊದಲೇ ನನ್ನೂ ಕರೆಸಿಕೊಳ್ಳಪ್ಪಾ...” ಎಂದು ಮನದೊಳಗೇ ಹಲುಬುತ್ತಾ, ಕಣ್ಣೀರಿಡುತ್ತಾ ಪ್ರಾರ್ಥಿಸತೊಡಗಿದಳು ಸೀತಮ್ಮ.
-----
ಎಲ್ಲಿ ನೋಡಿದರಲ್ಲಿ ಫಳಫಳ ಹೊಳೆಯುತ್ತಿರುವ ಜಲರಾಶಿ. ಈಕಡೆಯ ದಡದವರಿಗೆ ಆ ಕಡೆಯವರ ಕುರುಹೂ ಕಾಣದಿರುವಷ್ಟು ಅಗಾಧ ವಿಶಾಲ! ತನ್ನ ಮುಂದಿದ್ದ ನೀರನ್ನೇ ಕಣ್ತುಂಬಿಕೊಳ್ಳುತ್ತಾ ಅನಘೆ ಕಲ್ಲೆಯ ಕಡೆ ತಿರುಗಿದಳು. “ಹೇ ಕಲ್ಲೆ... ನಿನ್ಗೆ ಗೊತ್ತಿದ್ದಾ... ಅಜ್ಜ-ಆಯಮ್ಮ ನನ್ನ ಇದೇ ಹೊಳೀಗೆ ಸಣ್ಣಿದ್ದಾಗ ಕರ್ಕೊಂಡ್ಬಂದು ನೀರಾಡಿಸ್ತಿದ್ದೋ... ಎಷ್ಟು ಖುಶಿ ಆಗ್ತಿತ್ತು ಅಂಬೆ... ಹೋದ್ವರ್ಷ ನಮ್ಮ್ ಸ್ಕೂಲ್ನವು ಗೋಕರ್ಣಕ್ಕೆ ಪ್ರವಾಸ ಹಾಕಿಯಿದ್ವಲೇ... ಅಲ್ಲಿಪ್ಪು ಸಮುದ್ರನೂ ಇಷ್ಟೇ ದೊಡ್ಡಕಿತ್ತು ಗೊತ್ತಿದ್ದಾ? ಅಘನಾಶಿನಿಯಲ್ಲಿ ತೆರೆ ಒಂದ್ ಕಮ್ಮಿ ನೋಡು... ನಮ್ ಹೊಳೆ ಸಮುದ್ರಕ್ಕೆ ಸಮ ಅಲ್ದಾ?!” ಸ್ನೇಹಿತೆಯ ಮಾತುಗಳನ್ನು ಕೇಳಿದ ಕಲ್ಲೆಯ ಮೊಗ ಅರಳಿತು. “ಹೌದನೇ... ಸಮುದ್ರನೂ ಹೀಂಗೇ ಇರ್ತಾ? ದೊಡ್ಡ್ ದೊಡ್ಡ್ ತೆರೆ ಬತ್ತಡ ಅಲ್ದಾ? ಅಪ್ಪಯ್ಯಂಗೆ ಹೇಳಿ ಸಾಕಾತು... ಒಂದ್ಸಲ ನಂಗೂ ಸಮುದ್ರ ತೋರ್ಸು ಅಂತ ಹೇಳಿ. ಕರ್ಕಂಡೇ ಹೋಗದಿಲ್ಲೆ. ಆಯಿಗಂತೂ ಪುರ್ಸೊತ್ತೆ ಇರ್ತಿಲ್ಲೆ. ನಾ ಯಾವಾಗೇನ ಸಮುದ್ರ ನೋಡದು” ಬೇಸರದಿಂದ ನುಡಿದ ಕಲ್ಲೆಯ ಸಣ್ಣಮುಖ ನೋಡಿ ಪಿಚ್ಚೆನಿಸಿತು ಅನಘೆಗೆ. “ಹೋಗ್ಲಿ ಬಿಡೆ... ಅದ್ಯಾವ ಮಹಾಕಾರ್ಯ... ನಾನೇ ನಿನ್ನ ಕರ್ಕ ಹೋಗ್ತಿ... ಹಾಂಗೆ ನೋಡಿರೆ ಈ ನೀರು ಸಿಹೀ ಇದ್ದು... ಅದು ಬರೀ, ಉಪ್ಪುಪ್ಪು ಗೊತ್ತಿದ್ದಾ? ಯಾರಿಗೊತ್ತು... ನಾಳೆ ದಿನ ಅಘನಾಶಿನೀ ನೋಡಲೆ ಸಮುದ್ರನೇ ಇಲ್ಲಿಗ್ಬಂದ್ರೂ ಬಂತು...” ಎಂದಿದ್ದೇ ತಡ ತೆರೆತೆರೆಯಾಗಿ ನಗುವುಕ್ಕಿ ಬಂತು ಕಲಾವತಿಗೆ. ಗೆಳತಿಯರಿಬ್ಬರೂ ಮನಸೋ ಇಚ್ಛೆ ನೀರಾಡಿ, ಕುಣಿದು ಕುಪ್ಪಳಿಸಿ ಸುಸ್ತಾಗಲು, ಅಲ್ಲೇ ತುಸು ದೂರದಲ್ಲಿದ್ದ ಅಮ್ಮನವರ ಗುಡಿಯತ್ತ ಸಾಗಲು, ಅಲ್ಲೇ ಗುಡಿಕಟ್ಟೆಯ ಮೇಲೆ ಕೂತು ಬಿಸಿಲು ಕಾಯಿಸಿಕೊಳ್ಳುತ್ತಿದ್ದ ವೆಂಕಜ್ಜನಿಗೆ ಒಂದೊಳ್ಳೆ ಕಂಪೆನಿ ಸಿಕ್ಕಿದಂತಾಯಿತು.

“ಎಂತದೇ ಕೂಸ್ಗಳ್ರಾ... ಎಲ್ಲಿಗೆ ಹೊಂಟಿದ್ದು ಸವಾರಿ. ನೀರಾಡಿ ಸಾಕಾತಾ? ಇಲ್ಲೆಂತಕ್ಬಂದ್ರಿ... ಮನಿಕಡೆ ಹೋಗದಲ್ದಾ? ಉಣ್ಣೋ ಯೋಚ್ನೆ ಇಲ್ಯನ್ರೇ...?” ಕೇಳುತ್ತಾ ಮಕ್ಕಳನ್ನು ಸಮೀಪ ಕರೆದ ವೆಂಕಜ್ಜ. ಊಟದ ಹೆಸರು ಕೇಳಿದಮೇಲೆಯೇ ಪೋರಿಗಳಿಗೆ ಗೊತ್ತಾಗಿದ್ದು ನಡುಮಧ್ಯಾಹ್ನ ಮೀರಿಹೋಗಿದೆ ಎಂದು. ಇದ್ದಕ್ಕಿದ್ದಂತೆ ಹೊಟ್ಟೆ ಚುರುಚುರು ಎಂದು ಹೇಳತೊಡಗಲು, ಗುಡಿಯೊಳಗೆ ಶಂಭಟ್ರು ಏನಾದ್ರೂ ಪ್ರಸಾದ ಕೊಡವರೇನೋ ಎಂಬ ಆಸೆಯಿಂದ ಅಜ್ಜಯ್ಯನ ಬಳಿ ಕೂರದೆ ಗುಡಿಯೊಳಗೇ ಹೊಕ್ಕಿಬಿಟ್ಟರು. ದೇವಿಗೆ ಅಡ್ಡಬಿದ್ದ ಶಾಸ್ತ್ರಮಾಡಿದ್ದಕ್ಕೋ, ಇಲ್ಲ ಪುಟ್ಟಮಕ್ಕಳ ಮೇಲಿನ ಪ್ರೀತಿಯಿಂದಲೋ, ಎರಡೆರಡು ಬಾಳೆಹಣ್ಣುಗಳನ್ನು ಅವರಿಬ್ಬರ ಕೈಯೊಳಗಿಟ್ಟರು ಭಟ್ಟರು. ಒಂದು ಹಣ್ಣನ್ನು ಗಬಗಬನೆ ಹೊಟ್ಟೆಗಿಳಿಸಿ, ಇನ್ನೊಂದರ ಸಿಪ್ಪೆ ಸುಲಿಯುತ್ತಾ ಹೊರಬಂದ ಮಕ್ಕಳನ್ನು ಎಳೆದುಕೊಂಡ ವೆಂಕಜ್ಜ ಪ್ರೀತಿಯಿಂದ ಬಳಿ ಕೂರಿಸಿಕೊಂಡ. ಮೊದಲಿನಿಂದಲೂ ಪುಟ್ಟಮಕ್ಕಳೆಂದರೆ ವಿಪರೀತ ಪ್ರೀತಿ ಅವನಿಗೆ. ಮಕ್ಕಳಿಗೂ ಅಷ್ಟೇ... ಅದರಲ್ಲೂ ಅನಘೆ, ಕಲ್ಲೆಯರಿಗೆ ಅವನು ಕೊಡುವ ಪೆಪ್ಪರ್‌ಮಿಂಟ್, ದೆವ್ವ, ಭೂತ, ಪಿಶಾಚಿಗಳ ಕಥೆಗಳೆಂದರೆ ಬಲು ಇಷ್ಟ.

“ಎಂತ ಕೇಳ್ಕಂಡ್ರೆ ದೇವಮ್ಮನಲ್ಲಿ...?” ಅಜ್ಜಯ್ಯ ಕೇಳಿದ್ದೇ ತಡ, ಶುರುವಿಟ್ಟೇ ಬಿಟ್ಟಳು ಅನಘೆ. “ಅಜ್ಜಾ... ದೊಡ್ಡ್‌ಹೊಳೆಗೆ ಒಡ್ಡು ಹಾಕ್ತ್ವಡಲೋ... ಆವಾಗ ನೀರು ನಮ್ಮನೆ ಮುಂದೇ ಬತ್ತಡ ಮಾರಾಯಾ... ಆದ್ರೆ ಯಮ್ಮನೆಯವ್ಕೆ ಸುತಾರಾಂ ಇಷ್ಟ ಇಲ್ಲೆ... ಹೇಂಗಾರೂ ಮಾಡಿ ತಡೆ ಒಡ್ಡವು ಹೇಳಿ ಯೋಚ್ನೆ ಮಾಡ್ತಾ ಇದ್ದೋ... ಇಷ್ಟ್ ದೂರ ನೀರಾಡಲೆ ಬಪ್ಪ ಬದ್ಲು... ಮನೆ ಕೆಳ್ಗೇ ನೀರ್ ಬತ್ತಪಾ... ಹಾಂಗಾಗಿ ಅವು ಎಂತ ಬೇಕಿದ್ರೂ ಮಾಡ್ಕಳ್ಲಿ... ದೇವಮ್ಮಾ, ನೀ ಮಾತ್ರ ನೀರನ್ನ ನಮ್ಮನೇ ಮುಂದೇ ತಗಂಬಾ ಹೇಳಿ ಕೇಳ್ಕಂಡಿ...” ಎಂದು ಅವಳು ಮಾತು ಮುಗಿಸಿದಳೋ ಇಲ್ಲವೋ ತಡೆಯಲಾಗದೇ ಕಲ್ಲೆಯೂ ಆರಂಭಿಸಿದಳು. “ವೆಂಕಜ್ಜ ನನ್ನ ಅಪ್ಪಯ್ಯನಿಗಂತೂ ಇಷ್ಟ ಇದ್ದು ನೋಡು ಒಡ್ಡು ಹಾಕದು. ನಮ್ಮ ಜಾಗ ಮುಳ್ಗೀರೆ ನಮ್ಗೆ ಪರಿಹಾರ, ದುಡ್ಡು ಕೊಡ್ತ್ವಡ... ಆವತ್ತು ಯಾರ್‌ಹತ್ರಾನೋ ಹೇಳ್ತಾ ಇದ್ದಿದ್ದ ಅಪ್ಪಯ್ಯ. ನಮಗೆಲ್ಲಾ ಬೇಷ್ ಆಗ್ತು ಆವಾಗ... ಅಮ್ಮ ಮಾತ್ರ ಬೇಜಾರು ಮಾಡ್ಕತ್ತನ ನೋಡು...” ಹೇಳ್ತಾ ಮತ್ತೊಂದು ಬಾಳೆಹಣ್ಣನ್ನು ಗುಳುಂ ಮಾಡೇಬಿಟ್ಟಳು. ಮಕ್ಕಳ ಮುಗ್ಧತೆ ಕಂಡು ಅಜ್ಜಯ್ಯನಿಗೆ ನಗು ಬಂದರೂ ಒಳಗೆಲ್ಲೋ ಸಂಕಟವೂ ಆಯಿತು. 

“ಎಲ್ಲಾ ಸರಿ ಮಕ್ಕಳ್ರಾ... ನಿಂಗಕಿಗೆ ನೀರೊಂದೇ ಮುಖ್ಯಾನೋ ಇಲ್ಲ ಶಾಲೆ, ಓದು, ಆಟದ ಬಯ್ಲು; ಇವೆಲ್ಲಾ ಮುಖ್ಯಾನೋ?” ಅವನ ಪ್ರಶ್ನೆ ಕೇಳಿದ ಅವರಿಬ್ಬರಿಗೂ ತುಸು ಗೊಂದಲವಾಯಿತು. ಆದರೆ ಅನಘೆ ಮಾತ್ರ ಸೋಲೊಪ್ಪದೆ “ನಂಗೆ ಎಲ್ಲಾದೂ ಬೇಕು... ಹಾಂಗೇ ನೀರೂ ಆಡಲೆ ಹತ್ರ ಬೇಕು...” ಎಂದಿದ್ದಕ್ಕೆ ಮತ್ತೆ ವೆಂಕಜ್ಜ... “ಆತು ತಗ. ನೀರು ಸಿಗ್ತು ಇಟ್ಗ. ಆದ್ರೆ ದೇವಿಮನೆ ಮಾವಿನ್‌ತೋಪು, ಕಲ್ಲೆಮನೆ ಹೂವಿನ್ಗಿಡ, ನಿನ್ನ ಆಯಿ ಕಷ್ಟಪಟ್ಟು ಬೆಳ್ಸಿದ್ ಹಿತ್ಲು, ಕಾಯಿಪಲ್ಲೆ... ನೀ ಲಗೋರಿ ಆಡೋ ಜಡ್ಡಿಗೆದ್ದೆ ಎಲ್ಲಾದೂ ಮುಳ್ಗೋಗ್ತು... ನೀ ಬರೀ ಮನೆ ಮುಂದೆ ನೀರಾಡ್ಕತ್ತ ಬರೀ ಸಾರನ್ನ ಉಂಡ್ಕತ್ತ ಇರವು... ತರಕಾರಿ ಬೆಳ್ಯಲೆ ಜಾಗ ಇರ್ತಿಲ್ಲೆ... ಪ್ಯಾಟೆಗೆ ಹೋಪಲೆ ಮೋಟಾರ್ ಬತ್ತಿಲ್ಲೆ... ಅಡ್ಡಿಲ್ಯ ಹಾಂಗಾದ್ರೆ?!” ಎಂದಿದ್ದೇ ತಡ ಇಬ್ಬರೂ ಗಾಭರಿಗೊಂಡರು. ‘ಪಾಪ... ಅಮ್ಮ ಅದೆಷ್ಟು ಖುಶಿಯಿಂದ ಹೂವಿನ ತೋಟ ಮಾಡಿದ್ದಾಳೆ! ಅದರಲ್ಲಾಗುವ ಹೂವಿನ ಮಾಲೆ ಮಾರಿಯೇ ಅಲ್ವೇ... ಹೋದ ವರುಷದ ತೇರಿನಲ್ಲಿ ನಮಗೆಲ್ಲಾ ಬಳೆ, ರಿಬ್ಬನ್ನು, ಸರ ಎಲ್ಲಾ ತೆಗೆಸಿಕೊಟ್ಟಿದ್ದು... ಇದೆಲ್ಲಾ ಮುಳುಗಿಹೋದರೆ ಅವಳಿಗೆಷ್ಟು ಬೇಸರವಾಗಬಹುದು! ಬೇಡ್ವೇಬೇಡ ಈ ನೀರಿನುಸಾಬ್ರಿ... ಹೊಳೆ ಇಲ್ಲೇ ಇದ್ಕೊಳ್ಲಿ...” ಎಂದು ಮನಸಲ್ಲೇ ಕಲಾವತಿ ಅಂದುಕೊಂಡ್ರೆ... ಅನಘೆಯ ಯೋಚನೆ ಹೀಗೆ ಸಾಗಿತ್ತು... ‘ಇಶ್ಯೀ... ಬರೀ ಸಾರನ್ನ ತಿನ್ನೋದು ಜ್ವರ ಬಂದವ್ರು. ನನಗಂತೂ ಹಶೀ, ಹುಳಿ, ಪಲ್ಯ ಬೇಕಪ್ಪಾ! ಅಮ್ಮ, ಆಯಮ್ಮ ಕೂಡಿ ಹಿತ್ಲಲ್ಲಿ ಎಷ್ಟೆಲ್ಲಾ ತರಕಾರಿ ಹಾಕಿದ್ದಾರೆ... ಲಗೋರಿ ಆಡ್ದೇ ನಿದ್ದೆ ಬರೋದಾದ್ರೂ ಹೇಗೆ? ಸ್ಕೂಲಿಗೆ ಹೋಗದಿದ್ದರೆ ದನ ಕಾಯೋದೇ ಗತಿ ಅಂತಿರ್ತಾನೆ ಅಪ್ಪಯ್ಯ. ಇಶ್ಯೀ... ಅವೆಲ್ಲಾ ಬೇಡ್ದಪ್ಪಾ ಬೇಡ... ಅಘನಾಶಿನಿ ಇಲ್ಲೇ ಹರೀತಾ ಇರ್ಲಿ... ಕಷ್ಟಾ ಅದ್ರೂ ಇಲ್ಲಿಗೇ ಬಂದುಹೋದ್ರಾತು...” ಎಂದುಕೊಳ್ಳುತ್ತಾ ಕಲ್ಲೆಯ ಮುಖ ನೋಡಿದರೆ ಅಲ್ಲೂ ಅದೇ ಭಾವ ಕಂಡಂತಾಯಿತು ಅವಳಿಗೆ. ಇಬ್ಬರೂ ತಮ್ಮೊಳಗೇ ಗುಸುಗುಸು ಪಿಸಪಿಸ ಎಂದು ಮಾತಾಡಿಕೊಂಡು, ತಕ್ಷಣ ಮತ್ತೆ ಗುಡಿಯೊಳಗೆ ಓಡಿದರು... ದೇವಮ್ಮನಲ್ಲಿ ಹೊಸ ಬೇಡಿಕೆಯನ್ನು ಮಂಡಿಸಲು. ವೆಂಕಜ್ಜನಿಗೆ ಮಕ್ಕಳಿಗೆ ಅರಿವಾಗಿದ್ದು ಅರ್ಥವಾಗಿ ಸಮಾಧಾನವಾಯಿತು. ‘ಪುಟ್ಟ ಮಕ್ಕಳ ಈ ಪ್ರಾರ್ಥನೆಯೇ ನೆರವೇರಲಿ ತಾಯಿ...’ ಎಂದು ಅವನೂ ಕುಳಿತಲ್ಲಿಂದಲೇ ಅಮ್ಮನೋರಿಗೆ ದೊಡ್ಡ ನಮಸ್ಕಾರ ಹಾಕಿದ.

~ತೇಜಸ್ವಿನಿ ಹೆಗಡೆ
(ಸಂಹಿತಾ ಕಥಾಸಂಕಲನದಿಂದ)
(2012ರ ಹವಿಗನ್ನಡ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಕಥೆ)

----****----

ಮಂಗಳವಾರ, ಮಾರ್ಚ್ 7, 2017

B-ಪಾಸಿಟಿವ್ ಎಂಬ ಮೆಸ್ಸೇಜ್ ಕೊಡುವ B-ಕ್ಯಾಪಿಟಲ್

ಜೋಗಿಯವರ B-ಕ್ಯಾಪಿಟಲ್ ಪುಸ್ತಕವನ್ನೋದಿ ಮುಗಿಸಿದೆ. ತುಂಬಾ ಇಷ್ಟವಾಯಿತು... ಆಪ್ತವೆನಿಸಿತು. ಅವರ ಕುರಿತು ಗೌರವ ಹೆಚ್ಚಾಯಿತು ಈ ಪುಸ್ತಕವನ್ನು ಓದಿ. ಬರೆದರೆ ಇಂಥಾ ಬಯೋಗ್ರಾಫಿ (ಈ ಶೈಲಿಯಲ್ಲಿ, ತಂತ್ರದಲ್ಲಿ.. ಕಥಾವಸ್ತು ರೂಪದಲ್ಲಿ) ಬರೆಯಬೇಕು ಎಂದೆನಿಸಿತು. ಬೆಂಗಳೂರನ್ನು ನಮ್ಮ ಬಳಿ ತರುತ್ತಲೇ ಅವರನ್ನೂ ಓದುಗರಿಗೆ ಪರಿಚಯಸುತ್ತಾ ಹೋಗಿದ್ದಾರೆ. “ಸಾಕಪ್ಪಾ ಈ ಬೆಂಗಳೂರು.. ಇಷ್ಟ ಇಲ್ಲದಿದ್ದರೂ ಇರಬೇಕಾಗಿದೆ.. ಊರು ಕರೆಯುತ್ತಿದೆ..” ಎಂದು ಗೋಳಾಡಿದವರ ಪಟ್ಟಿಯಲ್ಲಿ ನಾನೂ ಇದ್ದೇನೆ. ಮದುವೆಗೂ ಮುನ್ನ ಬೆಂಗಳೂರಿಗೆ ಬಂದಿದ್ದು ಅನಿವಾರ್ಯ ಕಾರಣಕ್ಕೆ ಮಾತ್ರ ಆಗಿತ್ತು. ಒಂದು ದಿನದ ಆ ಒಂದೆರಡು ಭೇಟಿಯಲ್ಲೇ ಜಪ್ಪಯ್ಯಾ ಅಂದ್ರೂ ಈ ಊರು ಬೇಡ ಅಪ್ಪಾ ಅಂದು ಬಿಟ್ಟಿದ್ದೆ. ಆದರೆ ನಿಯತಿ ಬಿಡಲಿಲ್ಲ.. ಮದುವೆಯಾದ ಮೂರು ತಿಂಗಳಿಗೇ ಉಡುಪಿಯ ಸಂತೆಕಟ್ಟೆಯಲ್ಲಿದ್ದ ನಮ್ಮ ಬೆಚ್ಚನೆಯ ಗೂಡನ್ನು ಇಲ್ಲಿಗೆ ತಂದು ಹಾಕಿತ್ತು. ಹೊಸ ಊರು, ಹೊಸ ಜನ, ಹೊಸ ಬದುಕು ಎಂಬುದೆಲ್ಲವನ್ನೂ ಮೀರಿ, ನಾನು ಎಂದೂ ಬರಲು ಇಷ್ಟಪಡದಿದ್ದ ಊರಿಗೆ ಇಷ್ಟ ಪಟ್ಟವನ ಜೊತೆ ಬಂದಿದ್ದೆ. ಒಂದು ಗುಮಾನಿ, ಅನುಮಾನ, ಅಸಹನೆ, ನಿರಾಕರಣೆಯ ಜೊತೆಗೇ ಮೊದಲ ಕೆಲವು ವರ್ಷಗಳನ್ನು ಈ ಊರಲ್ಲಿ ಕಳೆದದ್ದಾಯಿತು. ಕ್ರಮೇಣ ಸಹಾನುಭೂತಿಯಿಂದ ಈ ಊರು ನನ್ನ ಸಂಭಾಳಿಸಿತೋ ಇಲ್ಲಾ ನಾನಿದನ್ನು ಒತ್ತಾಯದಲ್ಲಿ ಒಪ್ಪಿಕೊಂಡೆನೋ ತಿಳಿಯೆ. ಆದರೆ ಇಂದು ಇಲ್ಲೊಂದು ನಮದೇ ಮನೆ ಬೇಕೆಂದು ಬಯಸಿ, ಹಾಗೇ ಕಟ್ಟಿಕೊಂಡು.. ಬೆಂಗಳೂರು ಮತ್ತಷ್ಟು ಹಾಳಾಗದಿರಲಿ, ವೃಷಭಾವತಿ ಶುದ್ಧಳಾಗಲಿ, ಬೆಳ್ಳಂದೂರು ಕೆರೆ ಸ್ವಸ್ಥವಾಗಲಿ.. ಕುಡೀವ ನೀರಿನ ಸಮಸ್ಯೆ ನೀಗಲಿ.. ಕಾವೇರಿ ಜಗಳ ಆಗದಿರಲಿ.. ಇಂಬಿತ್ಯಾದಿ ಹಾರೈಕೆ ಮನಸು ನೀಡುತ್ತಿದೆ. ಇದು ನನ್ನ ಸ್ವಾರ್ಥವೋ ಇಲ್ಲಾ ನಿಜಕ್ಕೂ ಈ ಊರಿನ ಮೇಲೆ ಕಾಳಜಿ ಬಂದಿದೆಯೋ ಎಂದು ಸ್ಪಷ್ಟವಾಗಿ ಹೇಳಲು ಆಗದು. ಎರಡೂ ಇದ್ದಿರಬಹುದು. ಇಷ್ಟೆಲ್ಲಾ ಸ್ವ ವಿಮರ್ಶೆ, ಚಿಂತನೆಗೆ ಎಳೆಸಿದ್ದು ಇದೇ B-ಕ್ಯಾಪಿಟಲ್ ಪುಸ್ತಕ!

ಇಡೀ ಪುಸ್ತಕದಲ್ಲಿ ನನಗೆ ಬಲು ಮೆಚ್ಚುಗೆಯಾದ ಭಾಗವೆಂದರೆ “ಪರರ ಮನೆಯ ಪರಸಂಗ”. ಓದುತ್ತಿರುವಂತೇ ನಾನೇ ಅಲ್ಲಿ ಬರೆದಂತೆ ಭಾಸವಾಯ್ತು. ಬೆಂಗಳೂರಿಗೆ ಬಂದು ೧೨ ವರುಷಗಳಾದ್ವು. ಈವರೆಗೂ ಏಳು ಮನೆಗಳನ್ನು ಬದಲಾಯಿಸಿದ್ದೇವೆ. ಪ್ರತಿ ಸಲ ಬದಲಾಯಿಸುವಾಗಲೂ ಥತ್.. ಇದೆಂಥಾ ಗೋಳು.. ಕಷ್ಟದ ಬಾಳು.. ಸ್ವಂತದ್ದು ಅಂತ ಒಂದಿದ್ರೆ ಈ ಎಲ್ಲಾ ಪರದಾಟಕ್ಕೆ ತಿಲಾಂಜಲಿ ಆಗ್ತಿತ್ತು ಎಂದು ಹಳಿದಿದ್ದೇವೆ. ಆದರೆ ಇಲ್ಲಿ ಬರೆದಿರುವಂತೇ ಪ್ರತಿ ಸಲ ಮನೆ ಹುಡುಕುವಾಗಲೂ ಏನೋ ಕಾತುರ, ಖುಶಿ, ಕುತೂಹಲ ಮತ್ತು ನಿರೀಕ್ಷೆ.. ಈ ಸಲದ ಮನೆ ಹೇಗಿದ್ದಿರಬಹುದು? ಯಾವ ಆಕಾರ, ಬಣ್ಣ, ನೆರೆ-ಕೆರೆ, ಗೇಟು, ಹೂದೋಟ, ಜಾಗವನು ಹೊಂದಿರಬಹುದು? ಎಂಬೆಲ್ಲಾ ಕಾತುರತೆಯಿಂದ ಮನೆ ಹುಡುಕುತ್ತಿದ್ದ ಆ ಜೀವಂತಿಕೆಗೆ ಫುಲ್ಸ್ಟಾಪ್ ಬಿದ್ದೀಗ ವರುಷ ಕಳೆದಿದೆ! ನಮ್ಮದೇ ಮನೆಯಾಗಿ ನಾವು ಸ್ಥಳಾಂತರಗೊಂಡಿದ್ದೇವೆ. ಇಲ್ಲೀಗ ಬದುಕು ಒಂದು ಗಮ್ಯವನ್ನು ಸೇರಿದಂತೆ ಆಗಿದೆ. ಅದೇ ಬಾಡಿಗೆ ಮನೆ ಹುಡುಕುವಾಗ “ಇದು ಬೇಡ.. ಸರಿ ಇಲ್ಲ.. ಅಲ್ಲಿ ಸಮಸ್ಯೆ ಇದೆ..” ಎಂದೆಲ್ಲಾ ಕಡ್ಡಿಗೂ ಗುಡ್ಡ ಮಾಡಿಯೋ.. ಥಟ್ಟನೆ ತಿರಸ್ಕರಿಸಿ, ಮುಂದೆ ಬೇರೆ ಹುಡುಕುವ ಗತ್ತು, ಗಮ್ಮತ್ತು ಇತ್ತು. ಈಗ ಇದ್ದಿರುವ ಮನೆಯೇ ಈವರೆಗೆ ನಾವು ಉಳಿದಿದ್ದ ಮನೆಯೆಲ್ಲದುಕ್ಕಿಂತಲೂ ಅದ್ಭುತ, ಚೆಂದ, ಸರಿಯಾಗಿದೆ ಎಂದುಕೊಳ್ಳಲೇಬೇಕು ಮತ್ತು ಇದು ನಿಜವೂ ಆಗಿದ್ದಿರಬಹುದು. “ಒಳ್ಳೆಯ ಮಾಲೀಕ ಸಿಗುವುದು ಬಾಡಿಗೆದಾರದ ಪುಣ್ಯ, ಒಳ್ಳೆಯ ಬಾಡಿಗೆದಾರ ಸಿಗುವುದು ಮಾಲೀಕನ ಪುಣ್ಯ” ಎಂಬ ಸಾಲು ಬಹಳ ಇಷ್ಟವಾಯಿತು. ಇದನ್ನೋದುತ್ತಿದ್ದಂತೇ ಮನಸು ಬೇರೇನನ್ನೋ ಚಿಂತಿಸಿಬಿಟ್ಟಿತು. ಆತ್ಮ ದೇಹವನ್ನು ತ್ಯಜಿಸಿದ ಮೇಲೆಯೂ ಅದಕ್ಕೆ ಹಳೆಯ ಜನ್ಮದ ಸ್ಮರಣೆಯ, ಪುಣ್ಯ, ಪಾಪ ಫಲಗಳ ವಾಸನೆ ಮೆತ್ತಿಯೇ ಇರುತ್ತದೆ. ಅದರಿಂದ ಬಿಡುಗಡೆ ಬೇಕೆಂದರೆ ಮುಕ್ತಿ ಪ್ರಾಪ್ತಿಯಾಗಬೇಕು. ಇಲ್ಲಾ ಅದು ಮತ್ತೆ ಮತ್ತೆ ಈ ಭವಕ್ಕೇ ಮರಳಿ ಹೊಸ ದೇಹ ಧರಿಸುತ್ತಿರುತ್ತದೆ ಎಂದು ಎಲ್ಲೋ ಓದಿದ್ದೆ/ಹಿರಿಯರಿಂದಲೂ ಕೇಳಿದ್ದೆ. ಅದು ನೆನಪಾಯಿತು. ಒಂದೊಮ್ಮೆ ಇದು ನಿಜವಾಗಿದ್ದರೆ.. ಒಳ್ಳೆಯ ಸ್ಮರಣೆ, ಉತ್ತಮ ವಿಚಾರಗಳಿಂದ ಮೆತ್ತಿರುವ ಆತ್ಮಕ್ಕೆ ಸದೃಢ ದೇಹ ಸಿಗುವುದು.. ಅದೇ ಒಳ್ಳೆಯ ಕಾಯಕ್ಕೆ ಅಷ್ಟೇ ಉತ್ತಮ ಆತ್ಮ ದೊರಕುವುದು ಅದೂ ಪುಣ್ಯವೇನೋ ಎಂದೆನಿಸಿತು. 

ಕೆಲಸದ ಹುಡುಗಿಯ ಪ್ರಕರಣ, ಸೈಕಲ್ ಪ್ರಕರಣ, ಮಗಳಿಗೊಂದು ಗೊಂಬೆ, ನಾಯಿ ಮತ್ತು ಪಾಪಪ್ರಜ್ಞೆ - ಈ ಭಾಗಗಳು ಮಾತ್ರ ಬಹಳ ಕಾಡುತ್ತಿವೆ.. ಕಾಡುವಂಥವು ಕೂಡ.

ಒಂದೊಳ್ಳೆಯ ಓದನ್ನು, ಪ್ರಾಮಾಣಿಕವಾಗಿ ಓದುಗರಿಗೆ ಕೊಟ್ಟಿದ್ದಕ್ಕೆ ಜೋಗಿಯವರಿಗೆ ಧನ್ಯವಾದಗಳು. ಅವರ ಬೆಂಗಳೂರು ಮಾಲಿಕೆಯ ಮುಂದಿನ ಭಾಗಕ್ಕಾಗಿ ಕಾಯುತ್ತಾ...

~ತೇಜಸ್ವಿನಿ.

ಸೋಮವಾರ, ಫೆಬ್ರವರಿ 20, 2017

ಅಂಗೈಯಲ್ಲಿ ಅಡುಗೆ ಮನೆ....

ಈ ವಾರದ (೧೯-೦೨-೨೦೧೭) ನನ್ನ ಉದಯವಾಣಿ ಅಂಕಣವನ್ನೋದಿ ಬಹಳ ಜನ ನನ್ನ ಹೊಸ ಮನೆಯ ಅಡುಗೆಮನೆಯ ವಿಶಿಷ್ಟ ಜೋಡಣೆಯನ್ನು ನೋಡ ಬಯಸಿದ್ದರಿಂದ ಅದರ ಚಿತ್ರಗಳನ್ನು ವಿವರಣೆ ಸಮೇತ ಹಾಕುತ್ತಿದ್ದೇನೆ. ಇದರ ಉದ್ದೇಶ, ನಿಂತು ಅಡುಗೆ ಮಾಡಲು ಅಸಾಧ್ಯವಾದವರು ಇಂಥದ್ದೊಂದು ಸಾಧ್ಯತೆಯ ಬಗ್ಗೆ ಅರಿತುಕೊಳ್ಳಲೆಂಬುದೇ ಆಗಿದೆ. ಅಲ್ಲದೇ, ಹಳೆಯ ಕಾಲದಲ್ಲೂ ಇಂಥದ್ದೇ ಮಾದರಿಯಿತ್ತು.. ಫಿಸಿಯೋ ಥೆರಪಿಸ್ಟ್ಸ್ ಕೂಡ ಸ್ವಸ್ಥರಾಗಿದ್ದವರೂ ಬಹು ಕಾಲ ನಿಂತು ಅಡುಗೆ ಮಾಡುವುದು ಒಳ್ಳೆಯದಲ್ಲ ಆರೋಗ್ಯಕ್ಕೆ ಎಂದೇ ಹೇಳುತ್ತಾರೆ. ಅದಕ್ಕೆಂದೇ ಬಹುಶಃ ಹಿಂದೆ ಕುಳಿತಡಿಗೆಯೇ ಮಾಡುತ್ತಿದ್ದರು!

ಚಿತ್ರ - ೧




ಇದು ನನ್ನ ಅಡಿಗೆ ಕಟ್ಟೆ..  ಸ್ಟೂಲ್ ಇದೆಯಲ್ಲಾ .. ಅದರ ಮೇಲೆ ಕುಳಿತು ಅಡುಗೆ ಮಾಡುತ್ತೇನೆ.. ಒಮ್ಮೊಮ್ಮೆ ಸೀದಾ ಕಟ್ಟೆಯ ಮೇಲೇ ಕುಳಿತು ಒಲೆಯನ್ನು ನನ್ನತ್ತ ತಿರುಗಿಸಿಕೊಂಡು ಮಾಡುವುದೂ ಇದೆ. ಒಲೆಯ ಪೈಪ್ ಬಹಳ ಉದ್ದವಿಟ್ಟುಕೊಂಡು ಸಿಕ್ಕಿಸಿಕೊಂಡಿರುವೆ. ಬೇಕಾದಾಗ ಸಡಿಲಗೊಳಿಸಿಕೊಂಡು ಎಷ್ಟು ದೂರದವರೆಗೂ ಎಳೆದುಕೊಳ್ಳಲು ಸಹಕಾರಿಯಾಗುವಂತೆ. ಅಲ್ಲಿರುವ ಎಲ್ಲಾ ಸಾಮಾನುಗಳೂ ನನಗೆ ಸಿಗುವಂತಿವೆ. ಅಲ್ಲೇ ಪಕ್ಕದಲ್ಲಿ ಕೆಳಗೆ ಸಿಂಕ್ ಇದೆ.

ಚಿತ್ರ - ೨




ಈ ಚಿತ್ರದಲ್ಲಿ ಫ್ರಿಜ್ ಇದೆ. ಅದರ ಬಾಗಿಲು ಕಿಚನ್ ಎಂತ್ರೆನ್ಸ್ ಅಭಿಮುಖವಾಗಿಟ್ಟುಕೊಂಡಿರುವೆ.. ಕಾರಣ.. ವ್ಹೀಲ್ ಚೇರಿನಲ್ಲಿ ಸೀದಾ ಬಂದೂ ಬಾಗಿಲು ತೆಗೆದು ಬೇಕಾದ್ದನ್ನು ಪಡೆಯುವಂತೆ ಇಲ್ಲಾ ಕುಳಿತಿರುವಾಗಲೂ ಸ್ಟೂಲ್ ನಿಂದಲೇ ಬಾಗಿಲು ತೆಗೆದುಕೊಳ್ಳುವಂತೇ.. ಸದ್ಯಲ್ಲೇ ಅಂಥದ್ದೇ ಮರದ ಪುಟ್ಟ ಸ್ಟೂಲ್ ಮಾಡಿಸಿ ಅದ ಕಾಲ್ಗಳಿಗೆ ಪುಟ್ಟ ವ್ಹೀಲ್ಸ್ ಹಾಕಿಕೊಂಡು ಕಿಚ ಸುತ್ತಾ ಕುಳಿತಲ್ಲೇ ತಿರುಗುವಂತೇ ಮಾಡಿಸಿಕೊಳ್ಳಬೇಕೆಂದಿರುವೆ. ಆಫೀಸ್ ಚೇರ್ನಂತೇ. ಅದು ಎತ್ತರವಾಗುತ್ತದೆ.. ಜಾಗ ಬಹಳ ತಿನ್ನುತ್ತದೆ.. ಎಕ್ಸ್‍ಪೆನ್ಸಿವ್ ಕೂಡ. ಅದೇ ಇಂಥಾ ಪುಟ್ಟ ಸ್ಟೂಲ್ ಸಕಲ ರೀತಿಯಲ್ಲೂ ಅನುಕೂಲಕರ. ಯಾರೂ ಬಳಸಬಹುದು. ಉಳಿತಾಯವೂ ಕೂಡ.. ವ್ಹೀಲ್ ಹಾಕಿಸಿಕೊಂಡರೆ ಆಯಿತು ಕೆಳಗೆ.

ಚಿತ್ರ - ೩




ಇದು ಪಕ್ಕದಲ್ಲೇ ಇರುವ ತುಸು ಎತ್ತರದ ಅಡುಗೆ ಕಟ್ಟೆ. ಆದರೆ ಅದರ ಕೆಳಗೆ ಇರುವುದೆಲ್ಲಾ ಕಪಾಟುಗಳು.. ನನಗೆ ಸಿಗುವ ರೀತಿಯಲ್ಲಿವೆ. ಮೇಲಿನ ಕಟ್ಟೆಯಲ್ಲಿ ಬಾಸ್ಕೆಟ್ ಇಡುವೆ. .ವ್ಹೀಲ್‍ಚೇರಿನಲ್ಲಿ ಬಂದಾಗ ಸಿಗುವಂತೆ. ಒಮ್ಮೊಮ್ಮೆ ಅಮ್ಮ ಅಡುಗೆ ಅಲ್ಲೂ ಒಂದು ಸಿಂಕ್ ಇದೆ.. ಕೆಳಗೆ ಬಗ್ಗಲು ತೊಂದರೆ ಆಗುವವರಿಗೆ ಮೇಲೆಯೇ ಕೈ ತೊಳೆಯಲೆಂದು ಒಂದು ಪುಟ್ಟ ಸಿಂಕ್.

ಚಿತ್ರ ೪



ಸಿಂಕ್ ತುಂಬಾ ತಳಮಟ್ಟದಲ್ಲಿದೆ.. ಅಡುಗೆ ಕಟ್ಟೆಯನ್ನು ನಾನು ತೊಳೆದರೂ ನೀರೆಲ್ಲಾ ಅದರೊಳಗೇ ಬೀಳುವಂತಿದೆ. ಅದರ ಮೇಲೆಯೇ ಸೌಟು, ಚಮಚಗಳನ್ನು ತೂಗುಹಾಕುವ ಸ್ಟ್ಯಾಂಡ್. ಸಿಂಕ್ ಪೈಪ್ ಕೂಡ ಅದಕ್ಕೆ ಪೂರಕವಾಗಿ ಬೇಕಾದಂತೆ ಹಾಕಿಕೊಂಡಿರುವೆ. ನೆನಪಿರಲಿ.. ಇದೂ ಅಷ್ಟು ಎಕ್ಸ್‌ಪೆನ್ಸಿವ್ ಅಲ್ಲಾ. :)


ಚಿತ್ರ ೫


ಇದು ಕುಡಿವ ನೀರಿನ ಫ್ಲಿಲ್ಟರ್. ಇದೂ ತಗ್ಗಿನಲ್ಲಿದೆ. ಇದರ ನೀರು ಹೊರಗೆ ಹೋಗಲು ಪೈಪ್ ಕೂಡ ಕೆಳಗಿರಿಸಲಾಗಿದೆ. ಕಟ್ಟೆಯ ಮೇಲೆ ಕುಳಿತರೆ ಸರಾಗವಾಗಿ ನೀರು ಸಿಗುವುದು.

ಚಿತ್ರ ೬




ಫ್ರಿಜ್ ಪಕ್ಕದಲ್ಲೇ ಒಂದು ಪುಟ್ಟ ಕಪಾಟು. ನನಗೇ ಸಿಗುವಷ್ಟು ಎತ್ತರದಲ್ಲಿದೆ. ಬೇಕಾದ ರೀತಿಯಲ್ಲಿ ಡಿಸೈನ್ ಮಾಡಿಸಿ ಮಾಡಿಕೊಂಡಿದ್ದು.


ಚಿತ್ರ ೭


ಅಡುಗೆ ಮನೆಯ ಪಕ್ಕದಲ್ಲೇ ಪುಟ್ಟ ಸ್ಟೋರೇಜ್, ಹಾಗೆಯೇ ಅತ್ತ ಕಡೆ (ಮಿಶನ್ನಿಗೆ ಅಭಿಮುಖವಾಗಿದೆ.. ಇಲ್ಲಿ ಸ್ಪಷ್ಟವಾಗಿ ಕಾಣುತ್ತಿಲ್ಲ..) ಕುಳಿತೇ ಪಾತ್ರೆ, ಸಣ್ಣ ಪುಟ್ಟ ಬಟ್ಟೆ ತೊಳೆಯುವ ಜಾಗ ಮತ್ತು ವಾಶಿಂಗ್ ಮೆಶಿನ್ ಇಟ್ಟಿದ್ದೇವೆ. ನಾನೇ ಬಟ್ಟೆಗಳನ್ನು ಕೆಳಗೇ ಕುಳಿತೂ ತೊಳೆಯಬಹುದು.. ಇಲ್ಲಾ ಮಿಶಿನ್ನಿಗೆ ಹಾಕಿ ತೊಳೆಯಲೂಬಹುದು. ಇನ್ನು ಬಹು ಮುಖ್ಯವಾಗಿ ಅಲ್ಲಿ ಹಾಲಿನಲ್ಲಿ ಚೌಕಾಕಾರದ ಬಾಗಿಲು ಕಾಣಿಸುವುದೇ? ಅದೇ ಲಿಫ್ಟ್ ಬಾಗಿಲು. ಕಡಿಮೆ ವೆಚ್ಚದಲ್ಲಿ ಬೇಸಿಕ್ ಸೆಟ್ಟಿಂಗ್ಸ್ ಮೂಲಕ ಸ್ಪೆಶಲ್ ಆಗಿ ಚೆನ್ನೈನಿಂದ ಜನ ಕರೆಸಿ ಡಿಸೈನ್ ಮಾಡಿಸಿದ್ದು. ಮಾಮೂಲಿ ಲಿಪ್ಟ್ ಆದರೆ ತುಂಬಾ ಖರ್ಚಾಗುವುದು.

ಇದಿಷ್ಟು ನನ್ನ ಪುಟ್ಟ ಅಡುಗೆಮನೆ :) ನಮ್ಮದು ೩೦*೪೦ ಕಾರ್ನರ್ ಸೈಟ್. ಅದರೊಳಗೇ ಸಾಕಷ್ಟು ವಿಶಾಲವಾಗಿ.. ಸರಾಗವಾಗಿ ವ್ಹೀಲ್‍ಚೇರ್ ತಿರುಗುವಂತೇ, ಜೊತೆಗೇ ನನಗೆ ಬೇಕಾದ ರೀತಿಯಲ್ಲಿ.. ಕೈಯಳತೆಗೆ ಎಟಕುವ ರೀತಿಯಲ್ಲಿ ಆದಷ್ಟು ಡಿಸೈನ್ ಮಾಡಿಸಿಕೊಂಡಿದ್ದು. ಬದುಕಲು ಬೇಕಾಗುವ ಅನುಕೂಲಕ್ಕೆ ಪ್ರಧಾನ ಆದ್ಯತೆ ನೀಡಿದ್ದೇವೆಯೇ ಹೊರತು ಯಾವುದೇ ರೀತಿಯ ದುಬಾರಿ ಇಂಟೀರಿಯರಿಗಲ್ಲ. ಈ ಚಿತ್ರಗಳಿಂದ, ವಿವರಣೆಯಿಂದ ಯಾರೋ ಒಬ್ಬರಿಗೆ ಅನುಕೂಲವಾದರೂ ಅದೇ ಸಂತೋಷ. ಹೆಚ್ಚಿನ ಮಾಹಿತಿಗೆ ನನಗೆ ಮೈಲ್ ಮಾಡಬಹುದು. ಪ್ರಾಮಾಣಿಕ, ನೈಜ ಮೈಲ್‍ಗಳಿಗೆ ಖಂಡಿತ ಉತ್ತರಿಸುವೆ..


~ತೇಜಸ್ವಿನಿ ಹೆಗಡೆ. 

ಬುಧವಾರ, ಫೆಬ್ರವರಿ 8, 2017

ನೆನಪುಗಳ ಬೆನ್ನೇರಿ....

ಹೈಸ್ಕೂಲ್‍ನಲ್ಲಿದ್ದಾಗ ಕನ್ನಡ ಮೇಷ್ಟ್ರು ಹೇಳ್ತಿದ್ರು.. ಓದುವ ಅನುಭವವೇ ಬೇರೆ, ಕೇಳುವ ಅನುಭವವೇ ಬೇರೆ ಎಂದು. ಬರೆದದ್ದನ್ನು ಸ್ವತಃ ನಾವೇ ಓದಿಕೊಳ್ಳುವಾಗ ನಮಗೆ ಹಲವು ರೀತಿಯ ಅನುಭೂತಿಗಳಾಗುತ್ತಿರುತ್ತವೆ. ಯಾವುದೇ ಒಂದು ಓದಿನ ವೇಗಕ್ಕೆ, ನಡು ನಡುವೆ ಓದಿನೊಳಗಿನ ವಿಷಯ ಹೊತ್ತು ತರುವ ನಮ್ಮ ಗತ ದಿನದ ನೆನಪುಗಳ ತಡೆಗೆ, ಓದುತ್ತಿರುವುದು ಬಲು ಇಷ್ಟವಾದಾಗ ಅಲ್ಲೇ ತುಸು ಹೊತ್ತು ನಿಂತು ವಿಹರಿಸುವಂತೆ ಮಾಡುವ ನಿಲ್ದಾಣಕ್ಕೆ, ಓದು ಕೊನೆಯಾದ ಮೇಲೂ ಬಿಟ್ಟೂ ಬಿಡದೇ ಕಾಡುವ ಹಲವು ಚಿಂತನೆಗಳ ತಾಕಲಾಟಕ್ಕೆ.. ಹೀಗೇ ನಾವೇ ಓದಿಕೊಳ್ಳುವುದರಲ್ಲಿ ಹಲವು ಲಾಭಗಳಿವೆ. ಅದೇ ಯಾರೇ ಬರೆದಿದ್ದಿರಲಿ, ಆ ಬರಹವನ್ನು ಬೇರೊಬ್ಬರು ಒದುವುದನ್ನು ಕೇಳುವಾಗ, ನಮ್ಮ ಕಲ್ಪನೆಗಳಿಗೆ, ವಿಹಾರಕ್ಕೆ, ಚಿಂತನೆಗೆ ಅತ್ಯಲ್ಪ ಸಮಯಾವಕಾಶಗಳು ದೊರಕಿಬಿಡುತ್ತವೆ. ಓದುಗರ ದಾಟಿ (ಟೋನ್), ಶೈಲಿ, ಉಚ್ಛಾರ, ಅವರು ತೆಗೆದುಕೊಳ್ಳುವ ಸಮಯ, ಅವರ ಭಾವನೆಗಳ ಹೂರಣದಲ್ಲಿ ಹೊಮ್ಮಿ ಬರುವ ಧ್ವನಿಗಳು.. ಇವೆಲ್ಲವುಗಳಿಂದ ಸ್ವಂತ ಅನುಭೂತಿಗೆ ಅವಕಾಶ ಹೆಚ್ಚು ಸಿಗದು. ಈ ಕಾರಣಕ್ಕಾಗಿ ಈಗಲೂ ನಾನು ಕಾವ್ಯ, ಕಥೆ ಕೇಳುವುದಕ್ಕಿಂತ, ನಾನೇ ಸ್ವಯಂ ಓದುವುದನ್ನೇ ಹೆಚ್ಚು ಪಡುತ್ತೇನೆ.

ಇದೇ ರೀತಿಯ ಅನುಭವವಾಗುವುದು ಹಾಡುಗಳನ್ನು ಕೇಳುವಾಗ. ಸುಮ್ಮನೇ ಭಾವಗೀತೆಯ ಕೇಳಿದರೆ ಅಂಥ ವ್ಯತ್ಯಾಸವಾಗದು. ಆ ಹಾಡಿನ ಸಂಗೀತಕ್ಕೆ, ಅದು ಸ್ಫುರಿಸುವ ಭಾವನೆಗಳಿಗೆ ಮೈಮರೆಯುತ್ತೇವೆ, ತಲೆದೂಗುತ್ತೇವೆ. ಹಾಡಿನ ಸಾಹಿತ್ಯಕ್ಕೆ ಮೆರುಗು ಬರುವುದೇ ಅದಕ್ಕೊಪ್ಪುವ ಚಂದದ ರಾಗದ ಉಡುಗೆ ತೊಡಿಸಿದಾಗಲೇ. ಆ ಉಡುಗೆಯ ಜೊತೆಗೇ ಅದ್ಭುತ ಕಂಠಸಿರಿಯ ಶೃಂಗಾರ ಮಾಡಿಬಿಟ್ಟರಂತೂ ಕೇಳುವುದೇ ಬೇಡ. ಅದಕ್ಕೇ ಅಲ್ಲವೇ ಇಂದಿಗೂ "ನೀನಿಲ್ಲದೇ ನನಗೇನಿದೆ..", "ಯಾವ ಮೋಹನ ಮುರಳಿ ಕರೆಯಿತೋ...", "ಎಲ್ಲಿ ಜಾರಿತೋ ಮನವು.." "ನಿನ್ನ ಪ್ರೇಮದ ಪರಿಯ.." ಮುಂತಾದ ಹಾಡುಗಳು ಬಿಟ್ಟೆನೆಂದರೂ ಬಿಡದೀ ಮಾಯೆ ಎಂಬಂತೇ ನಮ್ಮನ್ನೆಲ್ಲಾ ಸುತ್ತಿಕೊಂಡಿರುವುದು! ಆದರೆ ಕೆಲವು ಸಿನೆಮಾ ಹಾಡುಗಳು ಮಾತ್ರ ಹಲವು ಸ್ವಾರಸ್ಯಕರ ಘಟನೆಗಳನ್ನು, ನೆನೆದಾಗೆಲ್ಲಾ ನಗುವುಕ್ಕಿಸುವಂಥ ಅನುಭವಗಳನ್ನು ನನಗೆ ಕೊಟ್ಟಿವೆ. ಹಲವರಿಗೂ ಇಂಥಾ ಅನುಭವಗಳು ಅನೇಕಾನೇಕ ಆಗಿರಬಹುದು.

ಹಿಂದೆ ಅಂದರೆ ನಮ್ಮ ಬಾಲ್ಯದಲ್ಲಿ ಈಗಿನಷ್ಟು ದೃಶ್ಯ ಮಾಧ್ಯಮಗಳ ಹಾವಳಿ ಇರಲಿಲ್ಲ. ಇದ್ದಿದ್ದೊಂದೇ ಚಾನಲ್, ಅದೇ ಡಿ.ಡಿ.೧. ಆಮೇಲೆ ಕನ್ನಡಕ್ಕಾಗಿ ಬಂದಿದ್ದು ಡಿ.ಡಿ.ಚಂದನ. ವಾರಕ್ಕೊಮ್ಮೆ, ವಾರಾಂತ್ಯದಲ್ಲಿ ಬರುವ ರಂಗೋಲಿಯನ್ನೋ, ಕನ್ನಡ/ಹಿಂದಿ ಸಿನಿಮಾವನ್ನೋ ನೋಡುವುದಕ್ಕೇ ಚಾತಕ ಪಕ್ಷಿಯಂತಾಗುತ್ತಿದ್ದೆವು. ಆವೇಗೇನಿದ್ದರೂ ರೇಡಿಯೋನೇ ಪ್ರಪಂಚ. ಅದರಲ್ಲಿ ಬರುವ ಕೋರಿಕೆಯೇ ನಮ್ಮ ಸಕಲ ಇಚ್ಛೆಗಳನ್ನೂ ನೆರವೇರಿಸುವ ಮಾಯಾಪಟ್ಟಿಗೆ. ವಿವಿಧ ಕನ್ನಡ ಹಾಡುಗಳನ್ನು, ಸಿನೆಮಾ ಗೀತೆಗಳನ್ನು ಕೇಳಿ ಮನಸು ತಣಿದದ್ದೇ ಅಲ್ಲಿಂದ. ರೇಡಿಯೋದಲ್ಲಿ ಎಷ್ಟೇ ಹಾಡುಗಳು ಬರಲಿ, ಅಂಥ ಹಾಡುಗಳನ್ನು ಕಲ್ಪಿಸಿಕೊಳ್ಳುವ ಸುವಿಶಾಲ ಮೈದಾನ ನಮ್ಮ ಮನಸ್ಸಿನೊಳಗಿರುತ್ತಿತ್ತು. ಹೇಗೆ ಚಿತ್ರಿಸಿದ್ದಾರೆ? ಯಾರೆಲ್ಲಾ ನಟಿಸಿದ್ದಾರೆ ಎಂಬಿತ್ಯಾದಿ ಯಾವ ಮಾಹಿತಿಯೂ ಇಲ್ಲದೇ ಹಾಡನ್ನು ಆಸ್ವಾದಿಸುತ್ತಾ ಕಳೆದುಹೋಗಿಬಿಡುತ್ತಿದ್ದೆವು. ಹಾಗೇ ಕಲ್ಪಿಸಿಕೊಂಡು, ಈ ಹಾಡಿಗೆ ಹೀಗೆ ಚಿತ್ರಿಸಿರಬಹುದೇ? ಅದು ಹೇಗೆ ನಟಿಸುತ್ತಾರೆ? ಎಂಬಿತ್ಯಾದಿ ಕುತೂಹಲದ ಬೆರಗು ಬೇರೆ ನಮ್ಮನ್ನು ಮೈಮರೆಸುತ್ತಿತ್ತು.

ಇಂಥಾ ಸುಮಧುರ ಕಾಲದಲ್ಲೇ ನಾನು ಕೇಳಿದ್ದ ಎರಡು ಹಾಡುಗಳ ಪ್ರಸಂಗವನ್ನು ಹಂಚಿಕೊಳ್ಳುತ್ತಿರುವೆ. ರಾಜ್‍ಕುಮಾರ್ ಹಾಡು ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ? ಅವರ ಧ್ವನಿಗೆ ಮಾರು ಹೋಗದಿರುವವರೇ ಕಡಿಮೆ. ನನಗೂ ಬಲು ಇಷ್ಟ ಅವರೆಲ್ಲಾ ಹಾಡುಗಳು. ‘ಧ್ರುವತಾರೆ’ ಚಲನಚಿತ್ರದ "ಆ ರತಿಯೇ ಧರೆಗಿಳಿದಂತೆ, ಆ ಮದನ ನಗುತಿರುವಂತೆ" ಎಂಬ ಹಾಡು ರೇಡಿಯೋದಲ್ಲಿ ಆಗಾಗ ಪ್ರಸಾರವಾಗುತ್ತಿತ್ತು. ನನಗೋ ಅದರ ಸಂಗೀತ ತುಂಬಾ ಇಷ್ಟವಾಗಿ ಹೋಗಿತ್ತು. ಆದರೆ ರಾಜ್‍ಕುಮಾರ್ ಹಾಡಿದ್ದು "ಆರತಿಯೇ ಧರೆಗಿಳಿದಂತೇ.." ಎಂದು ಕೇಳಿಸಿಕೊಂಡು, ಹಾಗೇ ಹೇಳಿದ್ದೆಂದೇ ವಾದಿಸಿ, ನಟಿ ಆರತಿಯ ಮೇಲೇ ಈ ಪದ ರಚಿಸಲಾಗಿದ್ದೆ ಎಂದೇ ಭಾವಿಸಿಕೊಂಡಿದ್ದೆ. ಹಾಗೇ, ಆರತಿಯನ್ನು ಮೇಲಿನಿಂದ ಕೆಳಗಿ ಇಳಿಸಿದಂತೇ ಮಾಡಿ ಚಿತ್ರಿಸಲ್ಪಟ್ಟಿರಬಹುದೆಂಡು ಕಲ್ಪಿಸಿಕೊಂಡು, ಬಲವಾಗಿ ನಂಬಿಯೂ ಬಿಟ್ಟಿದ್ದೆ, ಇಲ್ಲಾ ನನ್ನ ನಾನೇ ನಂಬಿಸಿಕೊಂಡು ಬಿಟ್ಟಿದ್ದೆ. ಮುಂದೆ ಕೆಲವು ಸಮಯದ ನಂತರ ಆ ಹಾಡಿರುವ ಚಲನಚಿತ್ರ ಟಿ.ವಿ.ಯಲ್ಲಿ ಟೆಲಿಕಾಸ್ಟ್ ಮಾಡಿದಾಗಲೇ ನನಗೆ ನಿಜ ಗೊತ್ತಾಗಿತ್ತು. ಆ ಹಾಡಿನಲ್ಲಿ ನಟಿಸಿದ್ದು ‘ಆರತಿ; ಆಲ್ಲ.. ‘ಗೀತಾ’ ಮತ್ತು ಅದು ‘ಆರತಿಯಲ್ಲ’.... ‘ಆ ರತಿಯೇ’ ಎಂದು. ಈ ಸತ್ಯವನ್ನು ಅರಗಿಸಿಕೊಳ್ಳಲೇ ನನಗೆ ತುಸು ಕಾಲ ಬೇಕಾಗಿತ್ತು. ಆಮೇಲೆ ಸ್ವಯಂ ಪೆದ್ದು ಬಿದ್ದ ಈ ಪ್ರಸಂಗವನ್ನು ನೆನೆ ನೆನೆದು ನಕ್ಕಿದ್ದಿದೆ. ಈಗಲೂ ಈ ಹಾಡು ಪ್ರಸಾರವಾದರೆ ಅಪ್ರಯತ್ನವಾಗಿ ನಗುವುಕ್ಕಿಬಂದುಬಿಡುತ್ತದೆ.

ಅದೇ ರೀತಿ ನನ್ನ ನಾನು ಬೆಸ್ತು ಬೀಳಿಸಿಕೊಂಡ ಇನ್ನೊಂದು ಹಾಡಿನ ಪ್ರಸಂಗವಿದೆ. "ನಿನ್ನೆ ಕನಸಲ್ಲಿ ಬಂದೆ, ಇಂದು ಎದುರಲ್ಲಿ ನಿಂದೆ, ನಾಳೆ ಕೈ ಹಿಡಿದು ನನ್ನನು ಜೋಡಿ ನೀನಾಗುವೆ.." ಎಂಬ ಸುಮಧುರ ಹಾಡೊಂದಿದೆ. ಇದು ‘ನಾರಿ ಸ್ವರ್ಗಕ್ಕೆ ದಾರಿ’ ಚಲನಚಿತ್ರದ ಗೀತೆ. ಆರತಿ ಮತ್ತು ಲೋಕೇಶ್ ಅವರ ಮೇಲೆ ಚಿತ್ರಿತವಾಗಿದೆ. ಆದರೆ ಮೊತ್ತ ಮೊದಲ ಬಾರಿ ಈ ಹಾಡನ್ನು ಕೇಳಿದಾಗ, ಚಿಕ್ಕವಳಿದ್ದ ನಾನು ಬೆರಗಾಗಿ ಹೊಗಿದ್ದೆ. ಅದು ಹೇಗೆ ಆಕೆ ಕನಸಲ್ಲಿ ಬಂದಿದ್ಲಪ್ಪ? ಆಮೇಲೆ ಮರುದಿವ್ಸ ಪ್ರಕಟ ಆಗಿ, ಅದ್ರ ಮರ್ದಿವ್ಸನೇ ಮದ್ವೆ ಆಗೋಯ್ತಾ? ಎಂದು. ಈ ಸೀಕ್ವೆಲ್‍ನಲ್ಲೇ ಚಿತ್ರಿಸಿದ್ದಾರೆ ಎಂದೇ ಭಾವಿಸಿದ್ದೆ. ಆಮೇಲೆ ನೋಡಿದರೆ ಉಲ್ಟಾ ಚಿತ್ರೀಕರಣ. ಒಟ್ಟಿನಲ್ಲಿ ಆಗ ನಮಗೆ ಕಲ್ಪನೆಗೆ ಭರಪೂರ ಅವಕಾಶವಿತ್ತು. ಈ ಹಾಡಿನ ಜೊತೆಜೊತೆಗೇ ದೃಶ್ಯ ಕಣ್ಣೆದುರು ನಿಲ್ಲುವುದರಿಂದ ಈ ಪೆದ್ದುತನಗಳಿಗೆ ಅವಕಾಶವಿಲ್ಲ.

ಇನ್ನೂ ಕೆಲವು ಹಾಡುಗಳು ನಮ್ಮ ಬದುಕಿನಲ್ಲಿ ಘಟಿಸುವ ಕೆಲವು ಹಿತ/ಅಹಿತ ಘಟನೆಗಳ ಜೊತೆಗೆ ತಳುಕು ಹಾಕಿಕೊಂಡುಬಿಟ್ಟು, ವಿನಾಕಾರಣ ಬದ್ನಾಮ್ ಆಗಿ ಹೋಗುತ್ತವೆ. ನನ್ನ ಆತ್ಮೀಯ ಗೆಳತಿ ನನ್ನೊಂದಿಗೆ ಹೇಳಿಕೊಂಡಿದ್ದಳು. ಅವಳ ತಂದೆ ತೀರಿ ಹೋದ ಸುದ್ದಿ ಬರುವಾಗ ಆಕೆ ಖುದಾ ಗವಾ ಚಲನಚಿತ್ರವನ್ನು ನೊಡುತ್ತಿದ್ದಳಂತೆ, ಆಗ ಅದೇ ಫಿಲ್ಮಿನ ಟೈಟಲ್ ಸಾಂಗ್ ಬರುತ್ತಿತ್ತಂತೆ. ಆಗಿನಿಂದ ಆ ಹಾಡನ್ನು ಅವಳಿಗೆ ಕೇಳಲಾಗುತ್ತಿಲ್ಲ ಎಂದು. ನನಗೂ ಅಷ್ಟೇ.. ಈಗಲೂ ಆ ಫಿಲ್ಮ್ ಪ್ರಸಾರವಾಗುತ್ತಿರುವಾಗ ಒಮ್ಮೆ ಗೆಳತಿ ತೋಡಿಕೊಂಡ ದುಃಖವೂ ನೆನಪಾಗುತ್ತದೆ.

ಇನ್ನು ಕೆಲವು ಎಡವಟ್ಟು ಪ್ರಸಂಗಗಳೂ ಹಾಡಿನ ಜೊತೆ ಸೇರಿಕೊಳ್ಳುತ್ತವೆ. ಚಿಕ್ಕವಳಿದ್ದಾಗ ರೇಡಿಯೋದಲ್ಲಿ ಒಂದು ಹಳೆಯ ಹಿಂದಿ ಹಾಡು ಬರುತ್ತಿತ್ತು. ಸಾಯಿರಾ ಬಾನುವಿನ ಮೇಲೆ ಚಿತ್ರಿತವಾಗಿರುವ "ಶಾಗಿರ್ದ್" ಎನ್ನುವ ಹಿಂದಿ ಚಲನಚಿತ್ರದ "ವೋ ಹೈ ಝರಾ ಕಫಾ ಕಫಾ.. ತೊ ನೈನ್ ಯೂ ಚುರಾಯೆ ಹೈ.." ಎಂಬ ಹಾಡು ಈಗಲೂ ಪ್ರಸಿದ್ಧವೇ. ಆದರೆ ಆಗ ಹಿಂದಿ ಅಷ್ಟಾಗಿ ಅರ್ಥವಾಗುತ್ತಿರಲಿಲ್ಲ. ಅದರಲ್ಲೂ ಕಫಾ ಅನ್ನೋ ಶಬ್ದ ಉರ್ದು ಎಂಬುದು ಈಗ ತಿಳಿದಿದೆ. ಕಫಾ ಎಂದರೆ ಬೇಸರ, ನಾರಾಝ್ ಎಂಬುದನ್ನು ಅರಿಯದೇ.. ನಟಿ, ಆ ನಟನಿಗೆ ಶೀತ ಕಫವಾಗಿದೆ, ಹುಶಾರಿಲ್ಲ ಎಂದೇ ಹಾಡಿ ಬೇಸರಗೊಳ್ಳುತ್ತಿದ್ದಾಳೆಂದು ಭಾವಿಸಿದ್ದೆ.

ನೆನಪುಗಳು ಯಾತನೆಯನ್ನು ಮಾತ್ರವಲ್ಲ, ಸಿಹಿ, ಕಹಿ, ಹುಳಿ ರಸಾಸ್ವಾದನೆಯನ್ನೂ ನಮಗೆ ಮಾಡುತ್ತಿರುತ್ತವೆ. ಅಂತಹ ನೆನಪುಗಳು ಇಂತಹ ಹಾಸ್ಯ ಪ್ರಸಂಗಗಳೊಡನೆ ತಳಕು ಹಾಕಿಕೊಂಡಾಗ ಅದು ಸ್ಮೃತಿಯನ್ನು ಪಡಿದು ಎಬ್ಬಿಸುವ ಚುಲ್‍ಬುಲಿ ಅಲೆಗಳ ಮಜವೇ ಬೇರೆ. ನಗುವುದಕ್ಕೆ ಕಾರಣಗಳು ಸುತ್ತಲೂ ಸಾವಿರವಿರುತ್ತವೆ. ಆದರೂ ಅಳು ಅದಕ್ಕಿಂತ ಮೊದಲು ಎಡಗಾಲನ್ನಿಟ್ಟು ಹೊಕ್ಕಿ ಬಿಡುತ್ತದೆ. ಇಲ್ಲಾ ನಾವೇ ಅದಕ್ಕೆ ಮೊದಲು ಪ್ರವೇಶ ನೀಡಿ ಬಿಡುತ್ತೇವೆ. ಹಾಡುಗಳ ಜೊತೆ ಮಧುರ ನೆನಪುಗಳು, ವಿರಹದುರಿಗಳು ಮಾತ್ರವಲ್ಲ, ಕಿಸಕ್ ಅನ್ನೋ ನಗೆಯರಳಿಸುವ ನೆನಪುಗಳೂ ತಳಕು ಹಾಕಿಕೊಂಡಿದ್ದರೆ ನೀವೂ ಒಮ್ಮೆ ಅವುಗಳನ್ನು ಹೊರಗೆಳೆದು ಚೆನ್ನಾಗಿ ನಕ್ಕು ಬಿಡಿ.

~ತೇಜಸ್ವಿನಿ.

ಗುರುವಾರ, ಜನವರಿ 19, 2017

ಆನೆಯ ಭಾರವನ್ನು ತಾನು ಹೊತ್ತ ನೇಗಿಲಿಗೆ ಹೆಗಲುಕೊಟ್ಟ ದಿಟ್ಟ ಎತ್ತಿನ ‘ಉತ್ತರ’ಕಾಂಡ..

ಭೈರಪ್ಪನವರ ಕಾದಂಬರಿಗಳನ್ನು ಕುತೂಹಲದಿಂದ, ಆಸ್ಥೆಯಿಂದ, ಆಸಕ್ತಿಯಿಂದ ಓದುವ ಅಸಂಖ್ಯಾತರಲ್ಲಿ ನಾನೂ ಓರ್ವಳು. ಅವರ ಗೃಹಭಂಗ, ಪರ್ವ, ಆವರಣ, ದಾಟು, ವಂಶವೃಕ್ಷ - ಈ ಕಾದಂಬರಿಗಳು ಈಗಲೂ ನನಗೆ ಬಲು ಮೆಚ್ಚು. ಮೊದ ಮೊದಲು ಅಂದರೆ ಕಾಲೇಜು ದಿನಗಳಲ್ಲಿ ಇವರ ಕಾದಂಬರಿಗಳಲ್ಲಿನ ಸ್ತ್ರೀ ಪಾತ್ರಗಳೆಲ್ಲಾ ಬಲು ಗಟ್ಟಿಯಾಗಿ, ಗೆಲ್ಲುವ ಪಾತ್ರಗಳೆಂದೇ ಅನಿಸಿತ್ತು ಮತ್ತು ಇದು ಸ್ವಲ್ಪ ಮಟ್ಟಿಗೆ ನಿಜವೂ ಹೌದು. ಆದರೆ ಕ್ರಮೇಣ ಮತ್ತೆ ಮತ್ತೆ ಚಿಂತಿಸಿದಾಗ ಪರ್ವದ ದ್ರೌಪದಿ, ಕುಂತಿಯರಾಗಲೀ, ದಾಟುವಿನ ಸತ್ಯಳಾಗಲೀ, ದಿಟ್ಟೆಯರಾಗಿಯೂ, ಆ ಕಾಲದ ಸಾಮಾಜಿಕ ಚೌಕಟ್ಟನ್ನು ಮೀರಿ ಸ್ವಂತಿಕೆ ಕಂಡುಕೊಳ್ಳಲು ಹೋರಾಡಿದವರಾಗಿಯೂ ಅಂತಿಮದಲ್ಲಿ ಸೋಲಿನ ನೋವುಂಡವರಂತೇ ಕಂಡು ಬಂದರು. ಇನ್ನು ಕವಲು, ಮತ್ತು ಯಾನದ ವಿಷಯವೇ ಬೇಡ. ಪ್ರಸ್ತುತ ನಾನು ಎರಡು ದಿವಸಗಳಲ್ಲಿ ಓದಿ ಮುಗಿಸಿದ ‘ಉತ್ತರಕಾಂಡ’ದ ಕುರಿತು ನನ್ನ ನೇರ, ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದೇನೆ.

ಉತ್ತರಕಾಂಡಕ್ಕೂ ಪರ್ವಕ್ಕೂ ಅಜಗಜಾಂತರವಿದೆ. ಅದನ್ನು ಹೋಲಿಸಲೂ ಹೋಗಬಾರದು.. ಹೋಸಲಿಸಲಾಗದು ಕೂಡ. ಆದ್ರೆ ಪರ್ವವನ್ನು ಓದುವಾಗ ನನ್ನೊಳಗೆ ಅನೇಕಾನೇಕ ಭಾವನೆಗಳ ಸಮ್ಮಿಶ್ರಣ ಹುಟ್ಟಿತ್ತು. (ಈವರೆಗೆ ಎರಡು ಬಾರಿ ಓದಿರುವೆ ಪರ್ವವನ್ನು.. ಎರಡೂ ಬಾರಿಯೂ ಹೊಸ ಹೊಸ ಹೊಳಹುಗಳು ಹೊಳೆದಿವೆ). ಆದರೆ ಉತ್ತರಕಾಂಡ ಹಾಗಲ್ಲ.. ಇದು ಕೇವಲ ‘ಸೀತೆ, ಸೀತೆ ಮತ್ತು ಸೀತೆಯೋರ್ವಳ’ ಕಥೆ ಮಾತ್ರ! ಇಲ್ಲೆಲ್ಲಿಯೂ ಬೇರೊಬ್ಬ ಪಾತ್ರದ ಅಂತರಂಗವು ತುಸುವೂ ಬಿಚ್ಚಿಕೊಳ್ಳದು (ತಕ್ಕ ಮಟ್ಟಿಗೆ ಉರ್ಮಿಳೆಯನ್ನು ಬಿಟ್ಟು). ನೀವೇ ಸೀತೆಯಾಗಿ, ಬಸಿರುಗಟ್ಟಿ, ಲವ-ಕುಶರ ಹೆತ್ತು, ಭೂತಕಾಲದ ಬೆನ್ನೇರಿ ಹೊರಟರೆ ಮಾತ್ರ ಬೇರಾವ ಪಾತ್ರದ ಗೊಡವೆಯೂ ನೆನಪಿಗೆ ಬಾರದು. ಅಷ್ಟರಮಟ್ಟಿಗೆ ಉತ್ತರಕಾಂಡ ಯಶಸ್ವಿಯಾಗಿದೆ. ಇಡೀ ಕಾದಂಬರಿಯುದ್ದಕ್ಕೂ ನನಗೆಲ್ಲೂ ರಾಮನ ಅಂತರಂಗವೇನಿದ್ದಿರಬಹುದು? ಏನಾಗಿತ್ತೋ? ಲಕ್ಷ್ಮಣ, ಭರತರ ಸ್ವಗತ ಏಕಿಲ್ಲ? ಎಂಬಿತ್ಯಾದಿ ಯಾವ ಚಿಂತೆನೆಯೂ ಮೂಡಲೇ ಇಲ್ಲಾ. ಆದಿಯಿಂದ ಅಂತ್ಯದವರೆಗೂ ಇದು ಸೀತೆ ಬರೆದ ರಾಮಾಯಣ. ನಿರಾಸೆಯೆಂದರೆ ಭೈರಪ್ಪನವರ ಉತ್ತರಕಾಂಡದ ಸೀತೆಗೂ ಕೊನೆಯಲ್ಲಿ ತನ್ನ (ನನ್ನಂಥ ಸ್ತ್ರೀಯರ ಮನದೊಳಗಿನದ್ದೂ ಕೂಡ..) ಅನೇಕ ಪ್ರಶ್ನೆಗಳಿಗೆ ಸೂಕ್ತ ಉತ್ತರವೇ ಸಿಗದ್ದು! ಉತ್ತರದ ಬೆನ್ನೇರಿ ಹೊರಟ ಸೀತೆಯ ಬದುಕಿಡೀ ಹಲವು ಹಲವಂಡಗಳು, ಕಾಂಡಗಳು ಎದುರಾಗಿ, ಆಕೆ ಅವನ್ನೆಲ್ಲಾ ತನ್ನದೇ ದಿಟ್ಟತನದ ನೇಗಿಲಿನ ಮೂಲಕ ಸೀಳಿಕೊಂಡು ಮುನ್ನೆಡೆದು, ಮಣ್ಣಲ್ಲಿ ಹುಟ್ಟಿ, ಕೊನೆಗೆ ಅದೇ ಮಣ್ಣೊಳಗೆ ಒಂದಾಗುವ ಕಥನ ವಿಶಾದವನ್ನೂ ಮೀರಿದ ಅನೂಹ್ಯ ಭಾವವೊಂದನ್ನು ನನ್ನೊಳಗೆ ತುಂಬಿಬಿಟ್ಟಿತು. 

ಹದಿಹರೆಯದ ಮುಗ್ಧ, ಸ್ನಿಗ್ಧ ಚೆಲುವಿನ ಸೀತೆ, ಯೌವನದ ಅರೆಬಿರಿದ ಸೌಂದರ್ಯದ ಸೀತೆ, ವನವಾಸದಲ್ಲಿ ಕಾಡ ಚೆಲುವನ್ನು ಹೊದ್ದು ಹಸಿರಾದ ಸೀತೆ, ಅಪಹರಣದಲ್ಲಿ ಬಳಲಿ, ಬೆಂಡಾದ ಬಿದಿರಿನಂಥ ಸೀತೆ, ಪತಿಯಿಂದ ಪರಿತ್ಯಕ್ತಳಾದಾಗ ಕೆರಳಿ, ಸೆಟೆದು ನಿಂತು, ಧಿಕ್ಕರಿಸಿದ ಧೀರ ಸೀತೆ... ಅವಳ ವಿವಿಧ ರೂಪವನ್ನು ಅವಳದೇ ಮಾತು, ಚಿಂತನೆ, ಕೃತಿಯ ಮೂಲಕ ತೋರಿಸಿಕೊಟ್ಟ ಶ್ಲಾಘನೆಗಂತೂ ಲೇಖಕರು ಪಾತ್ರರಾಗುತ್ತಾರೆ. ಆದರೂ ಅದೇನೋ ಎಂತೋ.. ಕೊನೆಯಲ್ಲಿ ನನ್ನೊಳಗೆ ಯಾವುದೋ ಕೊರತೆ, ಅಪೂರ್ಣತೆಯ ಭಾವ ತುಂಬಿಕೊಂಡಿತು. ಎಲ್ಲವೂ ಓದಿದ ನಂತರವೂ ಎಲ್ಲೋ ಏನೋ ಸರಿಯಾಗಿಲ್ಲ.. ಸೀತೆಯ ಇನ್ನಾವುದೋ ಭಾವ, ಇಲ್ಲಾ ತೋರಿದ್ದ ರೂಪಗಳಲ್ಲೇ ಯಾವುದೋ ಮಾಯವಾಗಿರುವಂತೆ ಭಾಸವಾಗಿ ತುಸು ನಿರಾಸೆಯಾಗಿದ್ದಂತೂ ಹೌದು. 

ಸೀತೆಯನ್ನು ನಮ್ಮಂತೇ ಓರ್ವ ಸಾಮಾನ್ಯ ಸ್ತ್ರೀಯಂತೇ ತೋರುತ್ತಲೇ, ಎಲ್ಲಾ ಸಾಮಾನ್ಯ ಸ್ತ್ರೀಯರಲ್ಲೂ ಇರುವಂಥ, ಇರಬಹುದಾದಂಥ ಒಳಗಿನ ಅಂತಃಸತ್ವ, ದಿಟ್ಟತನ, ಛಲ, ಸ್ವಾಭಿಮಾನವನ್ನೂ ತೆರೆದಿಟ್ಟ ರೀತಿಯೂ ಮೆಚ್ಚುಗೆಯಾಯಿತು.

ಬಳಸಿದ ಉಪಮೆಗಳ/ನಾಣ್ನುಡಿಗ ಕುರಿತು

ಆಹಾ.. ಇದರಲ್ಲಿ ಬಳಸಿದ ಕೆಲವು ಉಪಮಾಲಂಕಾರಗಳಿಗೆ, ನಾಣ್ನುಡಿಗಳಿಗೆ ಮಾತ್ರ ಸಂಪೂರ್ಣ ಶರಣಾಗಿ ಹೋದೆ.. ಹೆಚ್ಚೇನು ಹೇಳಲಿ? ತಲೆಯೊಳು ಹೊಕ್ಕಿ ಅಲ್ಲೇ ನೆಲೆ ನಿಂತಿರುವ ಕೆಲವುಗಳನ್ನು ಇಲ್ಲಿ ಉದಾಹರಿಸುತ್ತಿರುವೆ..

೧.  ಸೌಮ್ಯಗುಣವಿಲ್ಲದ ಚೆಲುವು ಹಾವಿನ ಹೊಳೆವ ಸೌಂದರ್ಯದಂತೆ

೨. ಬಡ ದೇವರನ್ನು ಕಂಡರೆ ಬಿಲ್ವ ಪತ್ರೆಯೂ ಬುಸ್ ಎನ್ನುತ್ತೆ

೩. ಗಂಗೆಯು ಬಿಳಿ ಮಲ್ಲಿಗೆಯಂತೆಯೂ, ಯಮುನೆಯು ಕರಿಯ ಕಪ್ಪು ಕೂದಲಿನ ಜಡೆಯಂತೆಯೂ ನಲಿದುನಲಿಯುತ್ತಾ ಒಂದರೊಳಗೊಂದು ಬೆರೆತು ಹಾಲಿನಲ್ಲಿ ಬೆಲ್ಲವು ಕರಗಿದಂತೆ ಕಾಣುತ್ತಿತ್ತು.

೪. ಆನೆಯು ಹೊರುವ ತೂಕವನ್ನು ಎತ್ತಿನ ಮೇಲೆ ಹೇರಬಾರದು.

೫. ಪರಿವರ್ತನೆಗೆ ಪಕ್ಕಾಗುವ ತತ್ತ್ವವು ಸತ್ಯವೂ ಅಲ್ಲ, ತತ್ತ್ವವೂ ಅಲ್ಲ. ನೀರು ಎಷ್ಟೇ ಹರಿಯಬಹುದು. ಆದರೆ ನದಿಯ ನಡುವೆ ಇರುವ ಬಂಡೆಯು ಸ್ಥಿರವಾಗಿರುತ್ತದೆ.

೬. ದಪ್ಪನೆಯ ಕಂಬಳಿ ಹೊದ್ದು ನನಗೆ ಚಳಿಯನ್ನು ಹೊಡೆಯುವ ಶಕ್ತಿ ಇದೆ ಎಂದರೆ ನಿಜವಾಗುತ್ತೆಯೆ?

ಉತ್ತರಕಾಂಡದ ಸೀತೆ ಮಾತ್ರ ದಾಟುವಿನ ಸತ್ಯಳಂತೇ, ಪರ್ವದ ಕುಂತಿ, ದ್ರೌಪದಿಯರಂತೇ ಸೋಲದೇ, ಗೆಲ್ಲುವಳು. ಸೀತೆಯೆಂದರೆ ಕೇವಲ ಸಾಧ್ವಿ, ಸಹನೆಶೀಲೆ, ಅಳುಬುರುಕಿ ಎಂಬಲ್ಲಾ ದುರ್ಬಲ ಚಿತ್ರಣದಿಂದ ಹೊರತಾಗಿ, ಭಿನ್ನವಾದ ಪರಿಕಲ್ಪನೆಯನ್ನು ಕಟ್ಟಿಕೊಡುವ ಕಾದಂಬರಿ. ಕೇವಲ ಸೀತೆ ಮಾತ್ರವಲ್ಲ, ಊರ್ಮಿಳೆ, ಸುರಮೆ, ಸುಕೇಶಿ, ಶೂರ್ಪನಖಿ - ಇವರೆಲ್ಲರೂ ಸಶಕ್ತರಾಗಿ ಚಿತ್ರಿತರಾಗಿದ್ದಾರೆ. ಪ್ರಸ್ತುತ ಸಮಾಜದಲ್ಲಿ ಆಗುತ್ತಿರುವ ದೈಹಿಕ/ಸಾಮಾಜಿಕ ದೌರ್ಜನ್ಯಕ್ಕೆ ಹೇಗೆ ಲಿಂಗ ಬೇಧವಿಲ್ಲವೋ ಅಂತೆಯೇ ತ್ರೇತಾಯುಗದಲ್ಲೂ ಇದು ಹೊರತಾಗಿರಲಿಲ್ಲ ಎನ್ನುವುದಕ್ಕೆ ಸುಗ್ರೀವ ವಾಲಿ, ತಾರೆಯರ ತ್ರಿಕೋನ ಸಂಬಂಧ, ಶೂರ್ಪನಖಿ ರಾಮ-ಲಕ್ಷ್ಮಣರ ಮೇಲೇರಿ ಹೋಗಿ ಕಾಮಕ್ಕೆ ಒತ್ತಾಯಿಸುವುದು, ಒಪ್ಪದಿದ್ದುದಕ್ಕೆ ಪ್ರತೀಕಾರ ತೀರಿಸಿಕೊಳ್ಳುವುದು, ರಾವಣ ಸೀತೆಯನ್ನು ಬಂಧಿಸಿಟ್ಟಾಗ, ತನ್ನ ಮೇಲೆ ಆತ ಅತ್ಯಾಚಾರವೆಸಗಿದರೆ ತಾನೇಕೆ ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂಬುದಕ್ಕೆ ಸೀತೆ ಕೊಟ್ಟುಕೊಳ್ಳುವ ದಿಟ್ಟ ಸಮಝಾಯಿಷಿ.. ಇದಂತೂ ಇಂದಿನ ಸಮಾಜಕ್ಕೇ ಒಂದು ಒಳ್ಳೆಯ ಸಂದೇಶವೆನ್ನಬಹುದು. ಒಂದೆಡೆ ಸೀತೆ ಹೇಳಿಕೊಳ್ಳುತ್ತಾಳೆ ಹೀಗೆ.. “ದೇಹ ಶುದ್ಧಿಯು ನಷ್ಟವಾದರೆ ಯಾಕೆ ಹೆಂಗಸಿಗೆ ಸರ್ವನಾಶದ ಭಾವ ಬರುತ್ತೆ? ದೇಹವು ಆತ್ಮ ಜೀವ ಬುದ್ಧಿ ಮನಸ್ಸುಗಳಿಗಿಂತ ಜಡವಾದದ್ದಲ್ಲವೆ? ಜಡವು ಅಶುದ್ಧವಾಗಿಯೂ ಆತ್ಮ ಜೀವ ಮನಸ್ಸುಗಳು ಶುದ್ಧವಾಗಿರಲು ಸಾಧವಿಲ್ಲವೆ? ಅತ್ಯಾಚಾರ ಪಾಪವು ಅತ್ಯಾಚಾರಿಗೆ ಮಾತ್ರ ಮೆತ್ತಿಕೊಳ್ಳಬೇಕೇ ಹೊರತು ಬಲಿಯಾದವಳಿಗೆ ಯಾಕೆ ತಗುಲಬೇಕು? ಅವಳೇಕೆ ಆ ದೇಹವನ್ನು ತ್ಯಜಿಸಬೇಕು?” ಸೀತೆಯ ತಲೆಯೊಳಗೆ ಇಂತಹ ಉತ್ತಮ, ಧನಾತ್ಮಕ, ಸ್ವಾಗತಾರ್ಹ ಚಿಂತನೆಗಳನ್ನು ಬಿತ್ತಿ, ಹೊರ ಹಾಕಿಸಿದ್ದಕ್ಕೆ ಲೇಖಕರಿಗೆ ಹೃತ್ಪೂರ್ವಕ ವಂದನೆಗಳು. “ಗಂಡನಿಂದ ತ್ಯಾಜ್ಯಳಾದ ಹೆಂಡತಿ ಈಸಬಹುದು. ಹೆಂಡತಿಯಿಂದ ತ್ಯಾಜ್ಯನಾದ ಗಂಡನ ಬದುಕು ದುರ್ಬರ” - ಈ ಮಾತೊಳಗೆ ಪುರುಷಾಹಂಕಾರವೆಷ್ಟು ದುರ್ಬಲವೆನ್ನುವ ಸಂಜ್ಞೆಯನ್ನು ಕೊಡುತ್ತಿಹರೇ(?) ಎಂದೂ ಅನಿಸಿತು.


ಕೊನೆಯಲ್ಲಿ : ಶೂದ್ರತಪಸ್ವಿಯ ಕೊಲೆ, ಅಹಲ್ಯೆಯ ಅನೈತಿಕತೆಯನ್ನೂ ಕ್ಷಮಿಸಿ ಗೌತಮರು ಅವಳನ್ನು ಸ್ವೀಕರಿಸುವಂತೆ ಮಾಡಿದವ, ಯಾರದೋ ಅಸಂಬದ್ಧ ಮಾತಿಗೆ ನಿಷ್ಪಾಪಿ ಪತ್ನಿಯನ್ನು, ಅದೂ ತುಂಬು ಗರ್ಭಿಣಿಯಾಗಿದ್ದಾಗ ತ್ಯಜಿಸಿದ್ದು, ರಾವಣನ ದಾಸ್ಯದಿಂದ ಹೊರ ಬಂದಾಗ ನಡೆದುಕೊಂಡು ರೂಕ್ಷ ನೀತಿ, ಕಟು ಮಾತುಗಳು, ಶಂಕೆಯ ಭರ್ತ್ಸನೆ.. ಜೀವಮಾನವಿಡೀ ಹಲವಾರು ಪ್ರಶ್ನೆಗಳ ತುಮುಲದಲ್ಲೇ ಭೂಮಿಭಾರವನ್ನು ಹೊತ್ತು, ಧರ್ಮಸಭೆಯಲ್ಲೂ ಸೂಕ್ತ ಉತ್ತರ ಸಿದಗೇ, ಕರೆದ ಪತಿಯನ್ನು ತಿರಸ್ಕರಿಸಿ ಕೊನೆಗೆ ಭೂಮಿಯೊಳೊಂದಾದ ಸೀತೆಯ ಸ್ವಾಭಿಮಾನ, ದಿಟ್ಟ ಹೆಜ್ಜೆ, ಸುಕೋಮಲತ್ವವನ್ನೂ ಮೀರಿದ ಗಟ್ಟಿತನ - ಇವೆಲ್ಲವೂ ಇಂದಿನ ಅವಳಂಥ ಅಸಂಖ್ಯಾತ ಸ್ತ್ರೀಯರ ಪ್ರತಿನಿಧಿಯಂತೇ ಕಂಡಳು. ರಾಮನಂಥ ರಾಮನೇ ಅವಳ ಇರಿವ ಪ್ರಶ್ನೆಗಳಿಗೆ ಉತ್ತರ ಕೊಡದೇ ನಿರುತ್ತರನಾಗಿದ್ದಕ್ಕೇ ಇಂದು ಈ ಕಲಿಯುಗದ ಸಮಾಜ ಉತ್ತರವಿಲ್ಲದೇ ಬರಿಯ ಕರ್ಮ ಕಾಂಡಗಳನ್ನಷ್ಟೇ ಸೃಷ್ಟಿಸುತ್ತಿದೆಯೇನೋ ಎಂದೆನಿಸುತ್ತಿದೆ!

‘ಉತ್ತರಕಾಂಡ’ ಕಾದಂಬರಿ ನಿಜಕ್ಕೂ ಒಂದು ವಿಶಿಷ್ಟ ಪ್ರಯತ್ನವೇ. ಆದರೆ ಉತ್ತರ ಹುಡುಕಿದವರಿಗೆ, ನಿರೀಕ್ಷಿಸಿದವರಿಗೆ ಮಾತ್ರ ನಿರುತ್ತರನಾದ ರಾಮನ ನಿಟ್ಟುಸಿರ ಭಾರಕ್ಕಿಂತ ಸೀತೆಯ ನಿರಾಸೆಯ ಬಿಸಿಯುಸಿರು, ಕೆಚ್ಚಿನ ಪ್ರತ್ಯುತ್ತರವೇ  ಹೆಚ್ಚು ತಾಗುವುದು ನಿಶ್ಚಿತ.

ಕೊನೆಯದಾಗಿ ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಇದು ಸೀತಾರಾಮಾಯಣ.. ಇನ್ನೂ ಚುಟುಕಾಗಿ ಹೇಳ ಹೋದರೆ ಇದು ‘ಸೀತಾಯಣ’ ಮತ್ತು ನಮಗೆ ರಾಮನಿಗಿಂತಲೂ ಹೆಚ್ಚು ಆಪ್ತ, ಮೆಚ್ಚುಗೆಯಾಗುವುದು ಸೀತೆಯ ದೃಷ್ಟಿಕೋನದಲ್ಲಿ ಕಾಣಿಸಿಕೊಳ್ಳುವ ಲಕ್ಷ್ಮಣನ ಮೇಲೆ! 

~ತೇಜಸ್ವಿನಿ ಹೆಗಡೆ.