ಮಂಗಳವಾರ, ಅಕ್ಟೋಬರ್ 25, 2011

ಭೂಮಿ-ಸ್ತ್ರೀ-ಗೋವು : ಇವರ ನಡುವಿನ ಅವಿನಾಭಾವ ಬಂಧ



Courtesy- http://www.gits4u.com/women/womenf21.htm 
ಗೋವು ಧರ್ಮದ ಸಂಕೇತ. ಇಲ್ಲಿ ಧರ್ಮ ಎಂದರೆ ಗೌರವಿಸುವುದು. ಗೋವನ್ನು ಪೂಜಿಸುವುದು, ಆದರಿಸುವುದೇ ನಿಜ ಧರ್ಮ ಹಾಗೂ ನಮ್ಮ ಕರ್ತವ್ಯ. ಧರ್ಮ ಎಂದರೆ ಜೀವನವೂ ಹೌದು. ಜೀವನಕ್ಕೆ ಆಧಾರವಾಗುರುವಂಥದ್ದೇ ನಿಜವಾದ ಧರ್ಮ. ಆ ನಿಟ್ಟಿನಲ್ಲಿ- ಆರ್ಥಿಕವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ ನಮ್ಮೊಡನೆ ಒಂದಾಗಿ ಸಹಜೀವಿಯಾಗಿರುವ ಗೋವು  ಸುಖಜೀವನಕ್ಕೆ ಮೂಲಾಧಾರ ಎನ್ನಬಹುದು.

ಕೌಟಿಲ್ಯ ತನ್ನ ಅರ್ಥಶಾಸ್ತ್ರದಲ್ಲಿ ಹೇಳಿದ್ದಾನೆ... ಸುಖದ ಮೂಲ ಧರ್ಮ-ಧರ್ಮದ ಮೂಲ ಅರ್ಥ-ಅರ್ಥದ ಮೂಲ ರಾಜ್ಯ-ರಾಜ್ಯನಿರ್ವಹಣೆ ಸಮರ್ಪಕವಾಗಿದ್ದಲ್ಲಿ ಸುಖಜೀವನ ತನ್ನಿಂದ ತಾನೇ ಪ್ರಾಪ್ತಿಯಾಗುವುದೆಂದು. ಸಹಜೀವಿಗಳೊಡನೆ ಪರಸ್ಪರ ಗೌರವದಿಂದ ಇದ್ದರೆ, ಸ್ಪಂದಿಸುವ, ಸ್ಪಂದನೆಗೆ ಪ್ರತಿಸ್ಪಂದಿಸುವ ಮಾನವೀಯತೆಯಿದ್ದರೆ ಸುಖ ತನ್ನಿಂದ ತಾನೇ ಲಭ್ಯವಾಗುತ್ತದೆ... ಅಲ್ಲಿ ಧರ್ಮ ನೆಲೆಯಾಗಿರುತ್ತದೆ.

ಗೋವು ಎಂದರೆ ಮಾತೆ. ಮಕ್ಕಳನ್ನು ಸಲಹುವವಳು. ಹುಟ್ಟಿದ ಶಿಶುವಿಗೆ ತಾಯಿಯ ಹಾಲು ಎಷ್ಟು ಪ್ರಾಮುಖ್ಯವೋ, ತಾಯಿಯ ಹಾಲಿನ ಮುಂದೆ ಬೇರೆಲ್ಲವೂ ನಗಣ್ಯವೋ ಹಾಗೇ ಬೆಳೆವ ಮಕ್ಕಳಿಗೆ ಹಸುವಿನ ಹಾಲು ಅತ್ಯವಶ್ಯಕ. ಹಸುವಿನ ಹಾಲಿನೊಳಗಿರುವ ಪೌಷ್ಟಿಕತೆಯನ್ನು ಬೇರಾವ ಕೃತಕ ಪಾನೀಯಗಳೂ ನೀಡಲಾರವು. ಹುಟ್ಟಿದ ಕಂದನಿಗೆ ಕಾರಣಾಂತರಗಳಿಂದ ತಾಯಿಯ ಹಾಲು ಲಭ್ಯವಾಗದಿದ್ದಲ್ಲಿ ಥಟ್ಟನೆ ನೆನಪಿಗೆ ಬರುವುದು ಹಸುವಿನ ಹಾಲೇ, ಕುರಿ ಅಥವಾ ಆಡಿನ ಹಾಲಲ್ಲ. ಹಾಗಾಗೇ ಪುರಾಣಕಾಲದಿಂದಲೂ ಗೋವಿಗೆ ಮಾತೆಯ ಸ್ಥಾನ ನೀಡಿದ್ದಾರೆ. 

ಮನುಜನಿಗೆ, ಗೋವಿಗೆ ಸಕಲ ಜೀವಜಂತುಗಳಿಗೆ ಮೂಲಾಧಾರ "ಭೂಮಿ". ಇಳೆ, ಧರಾ - ಎಂಬೆಲ್ಲಾ ಹೆಸರನ್ನು ಹೊತ್ತಿರುವ ಭೂಮಿಯಲ್ಲೂ ಮಾತೆಯನ್ನೇ ಕಂಡಿದ್ದಾರೆ ನಮ್ಮ ಪೂರ್ವಿಕರು. ಭೂತಾಯಿಯ ಗರ್ಭದಿಂದ ಮೊಳಕೆ ಚಿಗುರೊಡದು ಫಲ ಹೊರಬಂದು ನಮ್ಮೆಲ್ಲರ ಹಸಿವು ನೀಗಲು ನೇಗಿಲೂಡಬೇಕು. ನೇಗಿಲೂಡಿ, ಪೈರು ಹೊರ ಹೊಮ್ಮಲು ಗೋಮಾತೆಯ ಪಾತ್ರವೇ ಮಹತ್ವವಾದದ್ದು. ತೆನೆಯೊಳಗಿನ ಹಾಲಿಗೆ ಸಗಣಿಯ ಗೊಬ್ಬರವೇ ಶ್ರೇಷ್ಠ. ಗೋವಿನ ಎಲ್ಲಾ ವಿಸರ್ಜನೆಗಳೂ ಅಮೂಲ್ಯವೇ. ಸಗಣಿಯಿಂದ ಹಿಡಿದು ಹಾಲಿನವರೆಗೂ, ಗೋಮೂತ್ರದಿಂದ ಹಿಡಿದು ತುಪ್ಪದವರೆಗೂ ಅತ್ಯವಶ್ಯಕ. ವೈಜ್ಞಾನಿಕವಾಗಿಯೂ ಪಂಚಗವ್ಯ ಅಂದರೆ ಗೋಮಯ (ಸಗಣಿ), ಗೋಮೂತ್ರ, ತುಪ್ಪ, ಮೊಸರು, ಹಾಲು - ಇವು ಔಷಧೀಯ ತತ್ವವನ್ನು ಒಳಗೊಂಡಿವೆ ಎಂಬುದು ಸಾಬೀತಾಗಿದೆ.

ಕುಟುಂಬ ನಿರ್ವಹಣೆಗೆ, ಜೀವನಾಧಾರಕ್ಕೆ ಗೋವಿನ ಸಂತತಿಯ ಹೆಚ್ಚಳಿಕೆಯಾಗಬೇಕಾಗಿದೆ. ಗೋಪಾಲನೆಗೆ ಮುಖ್ಯವಾಗಿ ಬೇಕಾಗಿರುವುದು ಸಹನೆ, ಸಂಯಮ ಹಾಗೂ ವಾತ್ಸಲ್ಯ. ಸ್ತ್ರೀ ತನ್ನ ಮಗುವನ್ನು ಕಾಪಿಡುವಂತೇ ಜೋಪಾನವಾಗಿ ಗೋವನ್ನು ಸಲಹುವಳು. ಗೋವಿನೊಡನೆ ಸಂಭಾಷಣೆಯನ್ನೂ ನಡೆಸಬಲ್ಲಳು. ತನ್ನ ಕುಡಿಯ ನೋವನ್ನು ಅರಿಯುವಂತೇ ಮೂಕಪ್ರಾಣಿಯ ಮೂಕಭಾಷೆಯನ್ನೂ ತಿಳಿಯಬಲ್ಲಳು. ಹಿಂದೆ ಕೊಟ್ಟಿಗೆಯೇ ಆಕೆಗೆ ಪ್ರಧಾನವಾಗಿತ್ತು. ಮುಂಜಾನೆಯ ಆರಂಭ ಮುಸ್ಸಂಜೆಯ ಸೂರ್ಯಾಸ್ತ ಕೊಟ್ಟಿಗೆಯಲ್ಲೇ ಆಗುವುದು ಪ್ರತೀತಿ. ಆಕೆಯ ಸ್ಪರ್ಶ, ಅನುನಯಿಸುವ ಮಾತು, ವಾತ್ಸಲ್ಯದಿಂದ ನೀಡುವ ಹಿಂಡಿ, ಹುಲ್ಲು-ಇವೆಲ್ಲವುಗಳಿಗೆ ಗೋವುಗಳೂ ಸ್ಪಂದಿಸುತ್ತವೆ. ಹಾಗಾಗಿಯೇ ಪ್ರತಿನಿತ್ಯ ತಮ್ಮನ್ನು ಮುದ್ದಿಸುವ ಒಡತಿ ಒಂದು ದಿನ ಕಾಣದಾದರೂ ತಿನ್ನುವುದನ್ನೂ, ಹಾಲು ನೀಡುವುದನ್ನೂ ನಿಲ್ಲಿಸಿಬಿಡುತ್ತವೆ. ಅಪರಿಚಿತರು, ಹೆಚ್ಚು ಕೊಟ್ಟಿಗೆಯನ್ನು ಹೊಕ್ಕದವರು ಹಾಲು ಕರೆಯಲೋ, ಹಿಂಡಿ ನೀಡಲೋ ಬಂದರೆ ತಿವಿಯಲೂ ಹಿಂಜರಿಯವು. ಅಷ್ಟೊಂದು ಉತ್ಕಟ ಬಂಧ ಅವರಿಬ್ಬರ ನಡುವೆ ಉಂಟಾಗಿರುತ್ತದೆ. 

ಆಪತ್ಕಾಲದಲ್ಲಿ ಕುಟುಂಬ ನಿರ್ವಹಣೆಗೆ, ತನ್ನ ಸಣ್ಣ ಪುಟ್ಟ ಖರ್ಚು ವೆಚ್ಚಗಳಿಗೆ ಮಹಿಳೆ ಆಧರಿಸುವುದು ಗೋಮಾತೆಯ ಹಾಲನ್ನೇ. ಹಾಲು, ಮೊಸರು, ತುಪ್ಪ-ಇವುಗಳ ಮಾರಾಟವೇ ಮಹಿಳೆಯ ಧನಸಂಗ್ರಹಕ್ಕೆ ಮೂಲ ಆಧಾರ. ಹಿಂದೆ ಋಷಿ-ಮುನಿಗಳ ಕಾಲದಲ್ಲಿ ಒಂದು ಗೋವಿನಿಂದಲೇ ಅವರ ಕುಟುಂಬದ ನಿರ್ವಹಣೆಯಾಗುತ್ತಿತ್ತು. ಈಗಲೂ ಹಳ್ಳಿಯ ಅದೆಷ್ಟೋ ಕುಟುಂಬ ತಮ್ಮ ಜೀವನ ನಿರ್ವಹಿಸುವುದು ಗೋಮಾತೆಯ ಕೃಪೆಯಿಂದಲೇ. ಭೂಮಿ, ಗೋವು, ಸ್ತ್ರೀ - ಈ ಮೂವರೊಳಗಿನ ಅವಿನಾಭಾವ ಬಂಧವೇ ಜೀವಿಯ ಹುಟ್ಟಿಗೆ, ಬೆಳವಣಿಗೆಗೆ ಮೂಲಕಾರಣ ಎನ್ನಬಹುದು. 

ಹೆಣ್ಣು ಹುಟ್ಟಿದಾಗಿನಿಂದ ಅಂತ್ಯದವರೆಗೂ ಪರರಿಗಾಗಿ ಬದುಕುವುದನ್ನು ಕಲಿಯುತ್ತಾ ಬೆಳೆವಳು. ಹೊಸ ಜೀವಿಗೆ ಜನ್ಮವನಿತ್ತು, ತನ್ನೊಳಗಿನ ಸತ್ವವನ್ನು ಉಣಿಸಿ ಸಲಹಿ ಪೋಷಿಸುವಳು. ಹಳೆ ಸಂಬಂಧದ ಜೊತೆ ಹೊಸ ಬಂಧವ ಬೆಸೆವ ಕೊಂಡಿಯಾಗುವಳು. ತನ್ನ ಅಸ್ತಿತ್ವನ್ನೇ ಅಳಿಸಿಹಾಕಿ ಸಿಕ್ಕ ಪಾತ್ರದೊಳಗೆ ಒಂದಾಗುವಳು. ಅಂತೆಯೇ ಗೋವು ತನಗಾಗಿ ಮಾತ್ರ ಏನನ್ನೂ ಉಳಿಸಿಕೊಳ್ಳದೇ ಎಲ್ಲವನ್ನೂ ತನ್ನ ಸಲಹುವವರಿಗೆ ನೀಡುವುದು. ಹಾಗಾಗಿಯೇ ಅದನ್ನು "ಕಾಮಧೇನು", "ಪುಣ್ಯಕೋಟಿ" ಎಂದೆಲ್ಲಾ ಹಾಡಿ ಹೊಗಳಿರುವುದು. ಅಲ್ಲದೇ ನಮ್ಮ ಪೂರ್ವಿಕರು ಪಂಚ ಮಹಾ ಪಾತಕಗಳಲ್ಲಿ, ಗೋ ಹತ್ಯೆ ಹಾಗೂ ಸ್ತ್ರೀ ಹತ್ಯೆಯನ್ನು ಸೇರಿಸಿ ಇವರಿಬ್ಬರಿಗೂ ಸಲ್ಲಬೇಕಾಗಿರುವ ಆದ್ಯತೆ, ಗೌರವವನ್ನು ಎತ್ತಿಹಿಡಿದಿದ್ದಾರೆ.

"ಅಂಬಾ..." ಎನ್ನುವ ಪದಕ್ಕೂ "ಅಮ್ಮಾ..." ಎನ್ನುವ ಪದಕ್ಕೂ ತುಂಬಾ ಸಾಮಿಪ್ಯವಿದೆ. ಸ್ತ್ರೀ-ಗೋವಿನ ನಡುವಿನ ಅವಿನಾಭಾವ ಬಂಧಕ್ಕೆ ಮುಗಿಯದ ನಂಟು ನಮ್ಮ ಅರಿವಿನಾಚೆಯಿಂದ ಅಂಟಿ ಬಂದಿದೆ ಎನ್ನುವುದನ್ನು ಸೂಚಿಸುತ್ತದೆ. ಪ್ರಸಿದ್ಧ ಗೋವಿನ ಹಾಡಾದ "ಧರಣಿ ಮಂಡಲ ಮಧ್ಯದೊಳಗೆ.." ಪದ್ಯದಲ್ಲಿ ಬರುವ ಗೋಮಾತೆಯ ತಳಮಳ, ಸಂಕಟ ಮಾನವೀಯತೆಯುಳ್ಳವರ ಹೃದಯವನ್ನು ತಟ್ಟದೇ ಬಿಡದು. ಹುಲಿರಾಯನಲ್ಲಿ ಕಾಡಿ ಬೇಡಿ, ತನ್ನ ಮಗುವಿಗೆ ಹಾಲೂಡಲು ಓಡಿಬಂದು, ತದನಂತರ ಕೊಟ್ಟ ಮಾತಿನಂತೇ ಸಾಯಲು ಹೊರಟ ಸತ್ಯವಂತ ಗೋವಿನೊಳಗಿನ ಸ್ತ್ರೀ ಪಾತ್ರ ನಮ್ಮ ನಡುವೆಯೂ ಅಡಗಿದೆ. ತನ್ನ ಕುಡಿಗಾಗಿ ತನ್ನನ್ನೇ ಮಾರಿಕೊಳ್ಳುವ, ತನ್ನವರಿಗಾಗಿ ತನ್ನ ಪ್ರಾಣವನ್ನೇ ಪಣವಾಗಿಡುವ ತ್ಯಾಗಶೀಲೆ ಹಿಂದಿನಿಂದ ಇಂದಿನವರೆಗೂ ಇದ್ದಾಳೆ. ಗೋವಿನ ಹಾಡಿನಲ್ಲಿ ಗೋವು ಸಾಂಕೇತಿಕ. ಅದರೊಳಗಿನ ಸ್ತ್ರೀತ್ವ ಸಾರ್ವತ್ರಿಕ. ಹೆಣ್ಣಿನೊಳಗಿನ ಸಹನೆ, ತ್ಯಾಗ, ವಾತ್ಸಲ್ಯ, ದೃಢತೆಯ ಪ್ರತೀಕವಾಗಿ ಗೋವನ್ನು ಕಂಡಿದ್ದಾರೆ ಪುಣ್ಯಕೋಟಿ ಹಾಡನ್ನು ಹೊಸೆದ ನಮ್ಮ ಜನಪದರು.

ಹೆಣ್ಣು ಹೊತ್ತಾಗ, ಹೆತ್ತಾಗ, ಆಧರಿಸಿದಾಗ, ಪೋಷಿಸಿದಾಗ ತಾಯಾಗುತ್ತಾಳೆ... ಪೂಜನೀಯಳೆನಿಸುತ್ತಾಳೆ. ಅದೇ ರೀತಿ ಗೋಮಾತೆ ತನ್ನವರಿಗಾಗಿ ಹಾಲನಿತ್ತು, ತನ್ನೆಲ್ಲಾ ವಿಸರ್ಜನೆಯನ್ನೂ ಕೊಟ್ಟು, ಇಳೆಯ ಸಮೃದ್ಧಿಗೆ ನೇಗಿಲಾಗಿ, ಗೊಬ್ಬರವಾಗಿ ಹಸಿವನ್ನು ತಣಿಸುತ್ತಾಳೆ, ಮನುಕುಲವನ್ನೇ ಪೋಷಿಸುತ್ತಾಳೆ. ಮಕ್ಕಳಿಂದ ವೃದ್ಧರವರೆಗೂ ನೈಸರ್ಗಿಕ ಪೌಷ್ಟಿಕತೆಯನ್ನು ತುಂಬಿ ಸಲಹುವ ಗೋಮಾತೆ ಸದಾ ಪೂಜನೀಯಳು, ಮಾನನೀಯಳು. ಅವಳ ಪ್ರಾಣ ರಕ್ಷಣೆ, ಪೋಷಣೆ ಸರ್ವರ ಕರ್ತವ್ಯವೂ ಹೌದು. ಅವಳೊಳಗಿನ ನಿಃಸ್ವಾರ್ಥತೆಯನ್ನು ಅರಿತು ನಡೆದರೆ ಬತ್ತಿದ ಗೋವಿನ ಸಗಟು ಮಾರಾಟವನ್ನು ನಿಶ್ಚಲವಾಗಿ ತಡೆಯಬಹುದು.

("ಬೋಧಿ ವೃಕ್ಷ"  ಪತ್ರಿಕೆಯಲ್ಲಿ ಪ್ರಕಟಿತ)

Copy right : Tejaswini Hegde


ಎಲ್ಲರಿಗೂ ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಕಾಮನೆಗಳು. ಮನ-ಮನದೊಳಗೆ ಹೊಸ ಜ್ಞಾನ ದೀವಿಗೆಯನ್ನು ಹಚ್ಚಿ ಎಲ್ಲೆಡೆ ಸುವಿಚಾರಗಳನ್ನು ಬೆಳಗುವ ಸಂಕಲ್ಪ ನಮ್ಮೊಳಗೆ ತುಂಬಲೆಂದು ಹಾರೈಸುವೆ.

-ತೇಜಸ್ವಿನಿ ಹೆಗಡೆ. 

ಶುಕ್ರವಾರ, ಅಕ್ಟೋಬರ್ 7, 2011

ಚಂದಿರನೇತಕೆ ಓಡುವನಮ್ಮಾ...

http://www.desktopnexus.com/tag/seaside/
ದೆಷ್ಟು ಹೊತ್ತಾಗಿತ್ತೋ ಆಕೆ ಹಾಗೆ ತದೇಕ ಚಿತ್ತದಿಂದ ನೀಲಾಗಸವನ್ನೇ ದಿಟ್ಟಿಸುತ್ತಾ ಕುಳಿತು. ಎತ್ತಿದ್ದ ತಲೆಯ ಭಾರವನ್ನು ಹೊತ್ತು, ಕುತ್ತಿಗೆಯೂ ಸೋತು ಬಂದು, ಆ ನೋವಲ್ಲೇ ಹಿತಕಾಣುವಷ್ಟು ಹೊತ್ತು ನೋಡುತ್ತಲೇ ಇದ್ದಳು. ಅಲ್ಲಲ್ಲಿ ಚೆಲ್ಲಿರುವ ತಾರೆಗಳಿಂದ ಆಗೊಮ್ಮೆ ಈಗೊಮ್ಮೆ ಮಿನುಗುತ್ತಿರುವ ಆಗಸದೊಳಗೇ ನೆಟ್ಟ ನೋಟವಿಟ್ಟವಳ ಕಣ್ಗೋಲಿಗಳು ಒಳಗೊಳಗೇ ಹುಡುಕುತ್ತಿದ್ದುದು ಆ ಚಂದಿರನನ್ನೇ. ಮೋಡದ ಮರೆಯೊಳಗೆ, ತೆಂಗಿನ ಗರಿ ನಡುವೆ, ಹಬ್ಬಿರುವ ಚಪ್ಪರ ಬಳ್ಳಿಯ ಕಿರು ಸಂದಿ ಗೊಂದಿಗಳೊಳಗೆಲ್ಲಾ ಹುಡುಕಿ ಸುಸ್ತಾಗಿ ಕೊನೆಗೆ ಮಿನುಗು ತಾರೆಗಳನ್ನಷ್ಟೇ ತುಂಬಿಕೊಳ್ಳುತ್ತಿದ್ದಳು. ಕಾಲು ಚಾಚಿ ಕೈಗಳನ್ನು ಊರಿ ಕುಳಿತಿದ್ದರೂ, ಅಡಿಯಿದ್ದ ಮರಳು ತನ್ನ ಎಳೆದೆಳೆದು ಒಳಗೆಳೆಯುವಂತಹ ಭಾಸ... ನಿಮಿಷಕೊಂದು ನಿಟ್ಟುಸಿರು.... ಎದೆಯೊಳಗೆಲ್ಲಾ ಭಾವದಲೆಗಳ ಭೋರ್ಗರೆತ. ಕ್ಷಣ ಕ್ಷಣಕ್ಕೂ ಶಶಿಯಿಲ್ಲದ ಸುವಿಶಾಲ ಬಾನು ತನಗೆ ಆಪ್ತವಾಗುತ್ತಿರುವಂತೆ ಅವಳಿಗನಿಸತೊಡಗಿದ್ದು ಅವನಿಲ್ಲದ ತನ್ನ ಈ ಬದುಕಿನಿಂದಲೋ ಎಂತೋ ಎಂದೆನಿಸಿ ಕಣ್ಮುಚ್ಚಿದವಳ ರೆಪ್ಪೆಯ ಮೇಲೆ ಬಿದ್ದವು ಎರಡು ದಪ್ಪ ಹನಿಗಳು.

ಹೊರಗೆ ತೊಯ್ದು ತೊಪ್ಪೆಯಾದರೂ ಒಳಗೆಲ್ಲಾ ಉರಿಯ ತಾಪ... ಸುಡುವ ಸೂರ್ಯನನೇ ಹಿಡಿದು ಒಡಲೊಳಗೆ ನೂಕಿದಂತಹ ಅನುಭವ. ಚಂದ್ರಮನಿಲ್ಲದ ನೀಲಾಗಸದ ಖಾಲಿತನವನ್ನೇ ಹೋಲುತ್ತಿರುವ ಬರಡು ಬದುಕು. ಬೋಳು ಹಣೆಗೆ ಕೆಂಪಿಟ್ಟರೇನು? ಕಪ್ಪಿಟ್ಟರೇನು? ಇಟ್ಟ ಮಾತ್ರಕೆ ಬೆಳಗುವುದೇ ಸಿಂದೂರ ಅವನ ಸ್ಪರ್ಶವಿಲ್ಲದೇ!!? ನೀಲಾಗಸಕಾದರೂ ಹದಿನೈದು ದಿನಕ್ಕೊಮ್ಮೆ ಮತ್ತೊಂದು ಸದವಕಾಶವಿದೆ. ಆದರೆ ತನ್ನ ಬಾಳ ಚಂದಿರ ಆ ಆಗಸವನ್ನೂ ದಾಟಿ ಇನ್ನೆಲ್ಲೋ ಅವಿತಿರುವಾಗ ಯಾವ ಹುಣ್ಣಿಮೆ ಯಾವ ಅಮವಾಸ್ಯೆ?? ಗರ್ಭದೊಳಗೆ ಮಿಸುಕಾಡುವ ಜೀವದ ಚಲನೆ ಆಗೀಗ ನೆನಪಿಸುತ್ತಿರುತ್ತದೆ.... ಬದುಕು ನಿನ್ನದೊಂದೇ ಹಕ್ಕಲ್ಲಾ ಎಂದು ಸದಾ ಎಚ್ಚರಿಸುತ್ತಿರುತ್ತದೆ.

ಒಮ್ಮೊಮ್ಮೆ ಅವಳಿಗನ್ನಿಸಿದ್ದಿದೆ... ಶಪಿಸಿಬಿಡಬೇಕು ಆ ಚಂದಿರನ, ನನ್ನವನ ನೆನಪ ಕೊರೆಕೊರೆದು ತನ್ನ ಶೀತಲ ಕಿರಣಗಳಿಂದ ಘಾಸಿಗೊಳಿಸುವ ಹಾಳು ಶಶಿಯ ಸುಟ್ಟು ಬಿಡಬೇಕು ಆ ರವಿಯ ಛೂ ಬಿಟ್ಟು. ಮರುಕ್ಷಣ ಮರುಕವುಕ್ಕುವುದು ನೀಲಾಗಸದ ಮೇಲೆ... ಕೈ ಅಪ್ರಯತ್ನವಾಗಿ ಹುಬ್ಬುಗಳ ಮಧ್ಯೆ ನಿಂತು ನಡು ಬೆರಳಿಂದ ಹಾಗೇ ಸವರುವುದು ಎಂದೂ ಮಾಗದ ಗಾಯವೊಂದನು.

"ಅಂತಕನ ದೂತರಿಗೆ ಕಿಂಚಿತ್ತೂ ದಯವಿಲ್ಲ ..." ಒಳಮನೆಯ ಮೂಲೆಯಲ್ಲಿ ಮಗ್ಗುಲಾಗಿದ್ದ ಅಜ್ಜಮ್ಮನ ಒಡಲೊಳಗಿಂದ ಎದ್ದು ಬರುತ್ತಿದ್ದ ಹಾಡು ಮತ್ತಷ್ಟು ಇವಳ ಉರಿಗೆ ತುಪ್ಪಹಾಕುತ್ತಿದೆ. ಆಗೊಮ್ಮೆ ಈಗೊಮ್ಮೆ ಗಂಟಲು ಅಮುಕಿದಂತಾಗಿ ಅಲ್ಲಲ್ಲಿ ತುಂಡರಿಸುವ ದನಿ ಮತ್ತೆ ಮತ್ತೆ ಮೆಲ್ಲನೆದ್ದು ತಾರಕಕ್ಕೇರಿ ಅಪ್ಪಳಿಸುವ ಅಲೆಯಂತೆ ಎದೆಯ ತಟ್ಟಿ ಭೋರ್ಗರೆಯುತಿದೆ. ಅವಳ ಮನಸು ಸಾವಿರಸಲ ಅದನೇ ಗುನುಗುನಿಸುತ್ತಿದೆ... ಬೆರಳುಗಳು ಮರಳೊಳಗೆ ಅಂತಕನ ದೂತರಿಗೆ ಓಲೆಯೊಂದನು ಗೀಚುತ್ತಲೇ ಇವೆ. ನಿರ್ದಯಿ ಅಲೆಗಳು ಉರುಳುರುಳಿ ಬಂದು ಅಳಿಸುತ್ತಲೇ ಇವೆ....

----

ಓಡುವ ಚಂದಿರನ ನೋಡು ನೋಡುತಲೇ, ತೆರೆಗಳು ಹೊತ್ತು ತರುವ ಮರಳುಗಳ ಮೇಲೆ ಗೀಚುತ್ತಲೇ... ವರುಷ ನಾಲ್ಕು ಕಳೆದುಹೋದವು. ದೃಶ್ಯ ಒಂದೇ, ಆದರೆ ನೋಟ ಬೇರೆ! ಪುಟ್ಟನಿಗೆ ಚಂದ್ರಮ ವಿಶಿಷ್ಟನಾಗಿ ಕಂಡರೆ, ಆಕೆಗೆ ಸದಾ ಒಳ ಬೇಗುದಿಯ ಕೆದಕಿ ಕೆಣಕಿಯಾಡುವ ಕಟುಕ. ಒಳಮನೆಯಜ್ಜಿಯ ಯಾತನೆಯ ಕಂಡು ಅಂತಕನ ದೂತರಿಗೂ ಎಲ್ಲೋ ಸಣ್ಣ ಕರುಣೆ ಬಂದಿರಬೇಕು... ಅವಳನ್ನೂ ಜೊತೆಗೊಯ್ದಿದ್ದರು ವರುಷದ ಹಿಂದೆಯೇ! ತೆರೆಗಳು ಮಾತ್ರ ತನ್ಮಯತೆಯಿಂದ ಅವಳು ಅವನ ಹೆಸರು ಬರೆದಷ್ಟೂ ಬೇಸರಿಸದೇ, ತುಸು ನಿಮಿಷವೂ ಕಾಯದೇ, ಹಾಗೇ ಅಳಿಸುತ್ತಲೇ ಇದ್ದವು ಅವನ ಹೆಸರನ್ನೂ ಅವಳನ್ನೂ....

"ಹೃದಯ ಬಯಸುವುದು ಸಿಗದ ಬಯಕೆಗಳನ್ನೇ... ಅದುಮಿದಷ್ಟೂ ಒತ್ತಡದ ಪ್ರಕ್ರಿಯೆ ಹೆಚ್ಚು....ಬಿಟ್ಟು ಬಿಡು ಒಮ್ಮೆ.. ಹಾರಿದಷ್ಟು ಹಾರಲಿ... ಉಳಿದಷ್ಟು ಉಳಿಯಲಿ... ಮಿಕ್ಕಿದ ಜಾಗದಲ್ಲಿ ತುಂಬು ಹೊಸ ಆಸೆ, ಕನಸುಗಳನ್ನ.." ಎಂದು ಸ್ವಾಂತನ ನೀಡಿದ್ದ ಗೆಳತಿಗೇನು ಗೊತ್ತು.... ನನ್ನೊಳಗಿನ ಕುದಿವ ಲಾವಾ ಉಕ್ಕಿದಷ್ಟೂ ಅಕ್ಷಯವಾದದ್ದೆಂದು! ನಿಟ್ಟುಸಿರ ರಭಸವೂ ಯಾರಿಗೂ ಕೇಳದು ಉಬ್ಬರಗಳ ಅಬ್ಬರಗಳ ಭರದಲ್ಲಿ! ಓಡುವ ಚಂದ್ರಮನ ಹಿಡಿದೊಮ್ಮೆ ನಿಲ್ಲಿಸಿ, ನೀಲಾಗಸದಿಂದ ಕಿತ್ತು ತನ್ನ ಭ್ರೂಮಧ್ಯೆ ನಿಲ್ಲಿಸಬೇಕೆಂಬ ಹುಚ್ಚು ಕಲ್ಪನೆಗಳಿಗೇನೂ ಕೊನೆಯಿರಲಿಲ್ಲ. ಆದರೇನಂತೇ.... ತಕ್ಷಣ ನೆನಪಿಗೆ ಬರುವುದು, ಶಶಿಯ ನೋಡಿ ಸಂಭ್ರಮಿಸುವ ತನ್ನ ಕುಡಿಯ ಮೊಗ. ಕಣ್ಣಂಚಿನ ಬಿಂದುವಿಗೆ ತಡೆಯಾಗುವ ಕೈ ನಸುನಗುತ್ತಾ ಮಗುವ ಕೈ ಹಿಡಿದು ಹಿಂತಿರುಗುವಳು. ಮತ್ತೆ ಮರುದಿನದ ಸಂಜೆಯ ನಿರೀಕ್ಷೆಯಲ್ಲಿ... ಅತ್ತ-ಇತ್ತ, ಸುತ್ತ-ಮುತ್ತಲೆಲ್ಲಾದರೂ ಚಂದ್ರಮನ ಚೂರೇನಾದರೂ ಸಿಗಬಹುದೇನೋ ಎಂಬ ಹೊಸ ಹುಡುಕಾಟದಲ್ಲಿ....

---

ಚಂದ್ರನ ಚೂರನ್ನು ಅರಸಿ ಹೋದಂತೆಲ್ಲಾ ಸಿಕ್ಕಿದ್ದು ಬೆಳಚು ಕಲ್ಲೇ ಆಗಿದ್ದು ಅವಳ ದುರದೃಷ್ಟವೋ ಇಲ್ಲಾ ಕಲ್ಲುಗಳು ಚುಚ್ಚುವ ಮೊದಲೇ ಅವಳು ಎಚ್ಚೆತ್ತುಕೊಂಡಿದ್ದು ಅದೃಷ್ಟವೂ.... ಆದರೆ ವರುಷಗಳು ಮತ್ತೆ ನಾಲ್ಕು ಕಳೆದಿದ್ದವು. ಮಗನ ಆಟ ಪಾಠಗಳ ನಡುವೆ ಹಳೆನೆನಪುಗಳ ಹರಿತಗೊಳಿಸಲು ಸಮಯ ಸಾಲುತ್ತಿರಲಿಲ್ಲ..... ನೋವಿನ ತೀವ್ರತೆ ಸ್ಥಿತ್ಯಂತರಗೊಂಡಿತ್ತು ಅಲ್ಲೇ ಹೆಪ್ಪುಗಟ್ಟಿ. ಒಂದು ಸುದಿನ ಬೆಳಚುಕಲ್ಲೆಂದೇ ಬಗೆರು ಎಸೆಯ ಹೊರಟಿದ್ದ ಚಂದ್ರಮನ ಚೂರೊಂದು ಅವಳ ಬದುಕನ್ನು ಬೆಳಗಲು, ಒಳಗೆಲ್ಲೋ ತಿಂಗಳ ಬೆಳಕಿನ ಶೀತಲತೆ! 

ಆಗಸದ ಮೇಲಿರುವವನ ನೆನೆಯುತ್ತಾ, ಹಣೆಗೆ ಬೆಳಕಾದವನ ಜೊತೆಗೂಡಿ, ಮತ್ತದೇ ಸಾಗರಿಯ ಬಳಿ ಬಂದಾಗ ಕೈಗಳು ಮಾತ್ರ ಏನನ್ನೂ ಬರೆಯಲೊಲ್ಲವು. ಆದರೆ ಮಗರಾಯ ಮಾತ್ರ ಎಡೆ ಬಿಡದೇ ಬರೆಯುತಿರುವ ಹೊಸ ಶಾಲೆಯಲ್ಲಿ ಕಲಿತ ಹೊಸ ಹಾಡಿನ ಸೊಲ್ಲುಗಳನ್ನು. ತೆರೆಗಳ ತೆಕ್ಕೆಗಳು ಅಳಿಸಲಾಗಷ್ಟು ದೂರದಲ್ಲಿ ಕುಳಿತು ಏಕಾಗ್ರತೆಯಿಂದ ಬರೆಯುತ್ತಲೇ ಇದ್ದವನ ಬಳಿ ಬಂದು ಇಣುಕಿ ಓದುತ್ತಿರುವಂತೇ ಕಣ್ಣ ಹನಿಗಳ ಜೊತೆ ಮುಗುಳ್ನಗುವೂ ಹೊರಬಿತ್ತು.

ಚಂದಿರನೇತಕೆ ಓಡುವನಮ್ಮಾ
ಮೋಡಕೆ ಬೆದರಿಹನೆ? 
ಬೆಳ್ಳಿಯ ಮೋಡದ ಅಲೆಗಳ ಕಂಡು 
ಚಂದಿರ ಬೆದರಿಹನೆ? - ಎಂದು ಸೊಟ್ಟ ಅಕ್ಷರಗಳಲ್ಲಿ ಓರೆಕೋರೆ ಗೀಚಿದ ಮಗನ ತಲೆಯನ್ನು ಪ್ರೀತಿಯಿಂದ ಎದೆಗೊತ್ತಿಕೊಂಡಳು ಆಕೆ. "ಪುಟ್ಟಾ, ಚಂದಿರ ಸ್ಥಿರ.... ಮೋಡಗಳೇ ಚಂಚಲ. ಚಲಿಸುವ ಅವುಗಳು ನೀರುಗಳ ಚಾದರಹೊದ್ದು, ಅವನ ಬೆಳಕನ್ನಷ್ಟೇ ಮುಚ್ಚಿಹಾಕಬಲ್ಲವು.. ಆದರೆ ಅವನೊಳಗಿನ ಬೆಳಗೋ ಗುಣವನ್ನು ತಡೆಯಲಾರವು....ಒಂದೆಲ್ಲಾ ಒಂದು ದಿನ ಸುರಿದು ಹರಿದು ಹೋಗಲೇ ಬೇಕಿರುವ ಮೋಡಗಳಿಗೆ ಬೆದರಿಕೆ ಏಕೆ? ನಿನ್ನ ಚಂದಿರ ಅನುರೂಪನೇ ಸರಿ....ಅವನು ಮೇಲಿಂದ ನಮ್ಮ ನಗುವ ನೋಡಿ ನಗುತಿರಲಿ.... ನಮಗಿಬ್ಬರಿಗೆ ಅವನ ತಿಂಗಳಷ್ಟೇ ಸಾಕು ಈ ಬದುಕ ಜೀವಿಸಲು...." ಎಂದು ನಕ್ಕವಳನ್ನೇ ನೋಡಿ ತಾನೂ ನಕ್ಕ ಪುಟ್ಟ. ಅಮ್ಮನ ಮಾತುಗಳೊಂದೂ ಅರ್ಥವಾಗದಿದ್ದರೂ ಅವಳೊಳಗಿನ ಆ ಅಪರೂಪದ ಸಂಭ್ರಮದ ಅನುಭೂತಿ, ಅವನೊಳಗೂ ಸಂತಸವ ತುಂಬಿತ್ತು. ಅವಳ ಮನ ಹಾಡಿನ ಕೊನೆಯ ಸಾಲನ್ನು ಮತ್ತೆ ಮತ್ತೆ ಹಾಡುತ್ತಿತ್ತು...
ಬಾ ಬಾ ಚಂದಿರ ಬೆಳ್ಳಿಯ ಚಂದಿರ
ನಮ್ಮಯ ಮನೆಗೀಗ
ನಿನ್ನಯ ಬೆಳಕನು ಎಲ್ಲೆಡೆ ಚೆಲ್ಲಿ
ಮನವನು ಬೆಳಗೀಗ

-ತೇಜಸ್ವಿನಿ ಹೆಗಡೆ.