ಬುಧವಾರ, ಜುಲೈ 21, 2010

ಅವಲಕ್ಕಿ ಶಿರಾ


ಕೆಲವೊಮ್ಮೆ ಮನೆಗೆ ಅತಿಥಿಗಳು ದಿಢೀರನೆ ಬಂದಾಗ ಯಾವ ತಿಂಡಿ ತಯಾರಿಸಬೇಕು? ಇದು ಯಾವತ್ತಿಗೂ ಬಗೆಹಹರಿಯದ ಜಿಜ್ಞಾಸೆಗಳಲ್ಲಿ ಒಂದು. ಇಂಥ ಜಟಿಲ ಪರಿಸ್ಥಿತಿಯಲ್ಲಿ ಅಡುಗೆ ಮನೆ ಕೆಲಸ ನಿರ್ವಹಿಸುವ ಮಹಿಳೆಯರಿಗೆ ದಿಕ್ಕೇ ತೋಚದಂತಾಗುವುದು. ಅದೂ ಅಲ್ಲದೇ ಸಮಯದ ಅಭಾವವೂ ಜೊತೆಗೆ ಕಾಡುವುದರಿಂದ ಮನದೊಳಗೆ ಗಲಿಬಿಲಿ, ಅಡುಗೆಮನೆಯೊಳು ಗಡಿಬಿಡಿ.

ಆ ಸಮಯದಲ್ಲಿ ಸುಲಭದಲ್ಲಿ ತಯಾರಿಸಬಹುದಾದಂತಹ ಪದಾರ್ಥಗಳ ಬಗೆಗೆ ಕಣ್ಣು ಹಾಯುವುದು ಸಹಜ. ಬೇಗಬೇಗ ರುಚಿಯಾದದ್ದನ್ನೇನಾದರೂ ತಯಾರಿಸುವ ಹವಣಿಕೆ ಆರಂಭ. ಚಕ್ ಅಂತ ಒಂದು ಸ್ವಾದಭರಿತ ಸಿಹಿ ತಿಂಡಿ ತಯಾರಿಕೆ ಕುರಿತು ಯೋಚಿಸಲು ತೊಡಗುತ್ತೇವೆ. ಡಬ್ಬದಲ್ಲಿ ಅವಲಕ್ಕಿ ಇದ್ದರೆ ಆ ಕ್ಷಣದ ಸಮಸ್ಯೆ ಬಗೆಹರಿದಂತೆಯೇ. ಅವಲಕ್ಕಿ ಶಿರಾ ಮಾಡಿಬಿಡಿ. ಅದು ಸುಲಭ, ಸರಳ ಹಾಗೂ ಮಿತ ಸಮಯದಲ್ಲಿ ತಯಾರಿಸಲು ಸಾಧ್ಯವಾಗುವಂತಹ ಸಿಹಿ ತಿಂಡಿಗಳಲ್ಲೊಂದು.

ಅದೂ ಅಲ್ಲದೇ ಉತ್ತರಕನ್ನಡದ ಕಡೆ ಅವಲಕ್ಕಿ ಶಿರಾವನ್ನು ವಿಶೇಷವಾಗಿ ಬಾಣಂತಿಯರಿಗೆ ಮಾಡಿಕೊಡುತ್ತಾರೆ. ಇದನ್ನು ತಯಾರಿಸುವಾಗ ಬಳಸುವ ತುಪ್ಪ, ಗೋಡಂಬಿ, ದ್ರಾಕ್ಷಿ ಹಾಗೂ ಏಲಕ್ಕಿ ಪುಡಿಗಳು ಬಾಣಂತಿಯರಿಗೆ ವಿಶಿಷ್ಟವಾದ ಪೌಷ್ಟಿಕತೆಯನ್ನು ಕೊಡುತ್ತದೆ. ಜೀರ್ಣಿಸಿಕೊಳ್ಳಲೂ ತುಂಬಾ ಸುಲಭ ಈ ಸಿಹಿ ತಿಂಡಿ.

ಅವಲಕ್ಕಿಯನ್ನು ಸ್ವಲ್ಪ ಪರಿಮಳ ಬರುವ ತನಕ ಹುರಿದಿಟ್ಟುಕೊಂಡು(ತುಪ್ಪ ಹಾಕದೇ ಹಾಗೆಯೇ ಹುರಿಯಬೇಕು) ಗಾಳಿಯಾಡದ ಡಬ್ಬದಲ್ಲಿ ತುಂಬಿಟ್ಟುಕೊಂಡರೆ ಮೂರುತಿಂಗಳವರೆಗೂ ಕೆಡದು. ಹಾಗೆ ಮಾಡಿಟ್ಟುಕೊಂಡಲ್ಲಿ ಈ ಸಿಹಿ ತಿಂಡಿಯನ್ನು ತಯಾರಿಸುವುದು ಮತ್ತೂ ಸುಲಭ. ದಿಢೀರನೆ ಶಿರಾ ತಯಾರಿಸುವಾಗ ಹುರಿದಿಟ್ಟಿರುವ ಅವಲಕ್ಕಿಯನ್ನು ನೇರವಾಗಿ ಬಳಸಬಹುದು. ಕೇವಲ 15 ನಿಮಿಷದೊಳಗೆ ಸ್ಪೆಷಲ್ ತಿಂಡಿಯನ್ನು ಮಾಡಿ ಅತಿಥಿಗಳಿಗಳನ್ನು ಸತ್ಕರಿಸಬಹುದು.

ಬೇಕಾಗುವ ಸಾಮಗ್ರಿಗಳು:

* ಅವಲಕ್ಕಿ - 8 ದೊಡ್ಡ ಚಮಚ

* ಸಕ್ಕರೆ - 8 ಚಮಚ (ಅವಲಕ್ಕಿಯ ಅಳತೆಯಲ್ಲೇ ಸಕ್ಕರೆ ಹಾಕಬೇಕು. ೧-೨ ಚಮಚ ಹೆಚ್ಚಾದರೂ ನಡೆಯುವುದು.)

* ನೀರು - 1 ಲೋಟ (ಹದಮಾಡುವಾಗ ನೋಡಿಕೊಂಡು ಬೇಕಷ್ಟೇ ನೀರನ್ನು ಹಾಕಿಕೊಳ್ಳಬೇಕು. ಇಲ್ಲಿ ಕೊಟ್ಟಿದ್ದು  ಅಂದಾಜಿನಲ್ಲಷ್ಟೇ. ಜಾಸ್ತಿ ನೀರಾದರೆ ತುಂಬಾ ಮೆದುವಾಗುವುದು. ತಣಿದನಂತರ ಸ್ವಲ್ಪ ಹದಕ್ಕೆ ಬರುವುದು)
* ತುಪ್ಪ - 6 ಚಮಚ

* ಏಲಕ್ಕಿ ಪುಡಿ - 1/2 ಚಮಚ

* ದ್ರಾಕ್ಷಿ, ಗೋಡಂಬಿ ಚೂರುಗಳು - ನಮಗೆ ಬೇಕಾದಷ್ಟು.

ಮಾಡುವ ವಿಧಾನ

* ಮೊದಲಿಗೆ ಅವಲಕ್ಕಿಯನ್ನು ಹಾಗೇಯೇ ಸ್ವಲ್ಪ ಹುರಿದು ಮಿಕ್ಸಿಯಲ್ಲಿ ಹುಡಿಮಾಡಿಟ್ಟುಕೊಳ್ಳಬೇಕು. (ಮೇಲೆ ಹೇಳಿರುವಂತೆ ಮೊದಲೇ ಹುರಿದಿಟ್ಟುಕೊಂಡು ಡಬ್ಬದಲ್ಲಿ ಹಾಕಿಟ್ಟಿರುವ ಅವಲಕ್ಕಿಯಾದರೆ ಮತ್ತೆ ಹುರಿಯಬೇಕೆಂದಿಲ್ಲ)

* 1 ಲೋಟ ನೀರನ್ನು ಚೆನ್ನಾಗಿ ಕುದಿಸಿಟ್ಟುಕೊಳ್ಳಬೇಕು.

* ಒಂದು ತೋಪಿನಲ್ಲಿ ಹುಡಿಮಾಡಿಟ್ಟಿರುವ ಅವಲಕ್ಕಿ, ಕುದಿಸಿದ ನೀರು(ಬಿಸಿ ಬಿಸಿ ಇರುವಾಗಲೇ), ಸಕ್ಕರೆ ಹಾಗೂ ತುಪ್ಪವನ್ನು ಹಾಕಿ ಚೆನ್ನಾಗಿ ಕಲಕಬೇಕು. ಹಾಗೆ ಕದಡುತ್ತಲೇ ಇರುವಾಗ ಹತ್ತು ನಿಮಿಷದೊಳಗೆ ಮಿಶ್ರಣ ಶಿರಾದ ಹದಕ್ಕೆ ಬರುತ್ತದೆ.

* ಹಾಗೆ ಹದ ಬಂದ ಮಿಶ್ರಣಕ್ಕೆ ಗೋಡಂಬಿ, ದ್ರಾಕ್ಷಿ ಹಾಗೂ ಏಲಕ್ಕಿ ಪುಡಿಯನ್ನು ಹಾಕಿ ಮತ್ತೊಮ್ಮೆ ಕಲಕಿ ಬಿಸಿ ಇರುವಾಗಲೇ ತಿನ್ನಲು ಕೊಡಬೇಕು. ಹೀಗೆ, ಸ್ವಾದಿಷ್ಟ ಆರೋಗ್ಯಕರ ಅವಲಕ್ಕಿ ಶಿರವನ್ನೊಮ್ಮೆ ತಿಂದರೆ ಮತ್ತೂ ಇನ್ನಷ್ಟು ಬೇಕೆನಿಸಿದರೆ ಅದು ನಮ್ಮ ತಪ್ಪಲ್ಲ!

ಸೂಚನೆ :ವಿಶೇಷ ಸಂದಂರ್ಭಗಳಲ್ಲಿ ಬೇಕಿದ್ದರೆ ಕೇಸರಿ ಎಳೆಗಳನ್ನು ಸ್ವಲ್ಪ ಹಾಲಲ್ಲಿ ಕದಡಿ ಗೋಡಂಬಿ ಹಾಗೂ ದ್ರಾಕ್ಷಿಗಳ ಜೊತೆಗೆ ಹಾಕಬಹುದು.
 
[ವರುಷದ ಹಿಂದೆ ದಟ್ಸ್‌ಕನ್ನಡದಲ್ಲಿ ಬರುತ್ತಿದ್ದ ನನ್ನ ಅಂಕಣವಾದ ಶಿರಸಿ ಭವನದಲ್ಲಿ ಪ್ರಕಟಿತ]
 

ಇದರ ರುಚಿಯನ್ನೂ ನೋಡಿ : ಆರೋಗ್ಯಕರ ಅತ್ತಿಕುಡಿ ತಂಬುಳಿ
 
*ತೇಜಸ್ವಿನಿ ಹೆಗಡೆ

ಗುರುವಾರ, ಜುಲೈ 15, 2010

ಏನೆಂದು ಕರೆಯಲೇ ನಾ ನಿನ್ನ?

ಕರಿಮೋರೆಯ ತುಂಬ ಬಿಳಿ ನಗುವಿನಾ ತೆರೆಗಳು
ಮುಟ್ಟಹೋದರೆ ಸಾಕು ಹಿಂದೋಟ,
ಮರುಗಳಿಗೆ ಮುನ್ನುಗ್ಗಿ ಸೆರೆಹಿಡಿವ ಮರುಳಾಟ
ತೆಕ್ಕೆಯೊಳಗಗೆಳೆದು ಒಡಲೊಡಳಗಡಗಿಸದೇ
ಎಲ್ಲವನೆಸೆದು ನಿರುಮ್ಮಳಳಾಗುವ
ಕಡುನೀಲ ಸುಂದರಿ, ಸುವಿಶಾಲ ಸಾಗರಿ...
-
ಸ್ವಲ್ಪ ಒಗರು, ಅತಿಯಾದ ಚೊಗರು, ರುಚಿಗೆ
ಬೇಕಾಗಿರುವ ಉಪ್ಪುತುಂಬಿದಾ ನಿನ್ನೊಡಲು....
ಕೊರಳನಲಂಕರಿಸಿದ ಕೆಂಪಿನಲ್ಲೂ,
ಕಿವಿಯೊಳಗೆ ಝಗಮಗಿಸುವ ಓಲೆಯಲ್ಲೂ,
ಮೂಗುತಿಯ ಮಿನುಗಿನಲ್ಲೂ, ನಿನ್ನ ಚೆಲುವು
ಆ ಚೆಲುವಿನೊಳಗೆಲ್ಲಾ ನಿನ್ನದೇ ಹೆಸರು

ಕಾವೇರಿ, ತುಂಗೆ, ನೇತ್ರಾವತಿ, ಗಂಗೆ...
ಎಣಿಸಲಸದಳ ಸಖಿಯರು ನಿನಗಾಗಿ ಕಾಯುವರು
ನೀ ಮಾತ್ರ ಇಂದು ಮುಖಿ, ವಿರಹಿಣಿ ಆ ಶಶಿಯ
ಆಗೊಮೆ ಈಗೊಮ್ಮೆ ಏರಿಳಿವ ನಿನ್ನ ಎದೆಬಡಿತವ
ಸೆರೆ ಹಿಡಿ ಹಿಡಿದು ಆಗುವನಾತನೂ,
ಅರ್ಧ ಹಿಡಿ, ಒಮ್ಮೊಮ್ಮೆ ಪೂರ್ಣ ಹುಡಿ....

ಮುಗಿಯದ ಅಚ್ಚರಿ, ಅರಿಯದ ಸೆಳೆತ,
ಸೋರುವ ಮರಳ ತುಂಬೆಲ್ಲಾ ನಿನ್ನಡಿಯ ಪುಟಿತ
ನೆನಪಿನ ಕಂಪು ಬಂದಾಗಲೆಲ್ಲಾ
ಹರಿದು ಹೋಗುವ ಹುಚ್ಚು ಹಂಬಲ ನಿನ್ನೆಡೆಗೆ...
ಸದಾ ವಿಸ್ಮಯಿ ನೀ, ಮಾನಸ ಸಮ್ಮೋಹಿನಿ,
ಹುಟ್ಟಿದ-ಹುಟ್ಟದ ನನ್ನೊಳಗಿನ ಕವಿತೆಯೂ ನೀ...

- ತೇಜಸ್ವಿನಿ ಹೆಗಡೆ

ಮಂಗಳವಾರ, ಜುಲೈ 6, 2010

ಅವ್ಯಕ್ತ

ಸುತ್ತಮುತ್ತಲೆಲ್ಲಾ ಕಡು 
ಹಸಿರು ತುಂಬಿದಾ ಕಾಡು
ಮಳೆಹನಿಗಳ ತಂಪಿಂದ
ಬಿಸಿಯಾಗಿದ್ದ ಭುವಿ
ತನ್ನೆಲ್ಲಾ ಧಗೆಯನ್ನು
ಹೊಗೆಯಾಗಿಸಿ, ಆಗಸಕ್ಕೆ
ಹಾರಿ ಬಿಡುತಿತ್ತು ಬೆಳ್ಮುಗಿಲಾಗಿ....

ಹಾಸಿದ್ದ ಡಾಮರು ರಸ್ತೆಯ ಮೇಲೆ
ಉರುಳುತಲಿದ್ದ ನಾಲ್ಕು ಗಾಲಿಗಳೂ
ನಿಸರ್ಗದ ಸೊಬಗ ಕಣ್ತುಂಬಿಕೊಂಡು
ನಿಧಾನವಾಗಿ ಹಿಂಬಿಡುತ್ತಿರಲು,
ತಟ್ಟೆಂದು ನನ್ನ ನೋಟ
ಪಚ್ಚೆ ಹಸಿರು ಗದ್ದೆಯ
ನಟ್ಟ ನಡುವೆ ನಿಂತಿದ್ದ
ಒಂಟಿ ಮರದಲ್ಲೇ ನೆಟ್ಟಿತೇಕೋ....!


- ತೇಜಸ್ವಿನಿ ಹೆಗಡೆ

ಗುರುವಾರ, ಜುಲೈ 1, 2010

ದೃಷ್ಟಿ ಬೊಟ್ಟು

ಮಳೆಗಾಲಕ್ಕೂ ಮಾವಿನಕಾಯಿಗೂ ಅವಿನಾಭಾವ ನಂಟು. ಬೇಯಿಸದ ಮಾವು, ಬೇಯಿಸಿದ ಮಾವು, ಉಪ್ಪಿನಲ್ಲಿ ಹಾಕಿದ ಮಿಡಿ, ಗಳಿತ ಮಾವಿನ ಹಣ್ಣು, ತುಸುವೇ ಹಣ್ಣಾದ ಮಾವಿನಕಾಯಿ - ಹೀಗೇ ಮಾವಿನಕಾಯಿಯ ವಿವಿಧ ರೂಪಾಂತರಗಳನ್ನು ಉಪಯೋಗಿಸಿ ತಯಾರಿಸಿದ ಹಲವು ಬಗೆಯ ಪದಾರ್ಥಗಳ ಭರಾಟೆಯು ಮಳೆಯ ಆರ್ಭಟದೊಂದಿಗೆ ಮೇಳೈಸಿದರೆ ಸ್ವರ್ಗಕ್ಕೆ ಕಿಚ್ಚು ಹಾಕಿದಂತೆಯೇ ಸರಿ :) ಮೊದಲು ಅಮ್ಮನಿಂದ ಕಲಿತ ಮಾವಿನ ಗೊಜ್ಜು, ತಂಬುಳಿ, ಹಣ್ಣಿನ ಸಾಸಿಮೆ ಹಾಗೂ ಅಪ್ಪೇ ಹುಳಿಯ ರುಚಿಯನ್ನು ದುಪ್ಪಟ್ಟುಗೊಳಿಸುವಂತೆ ಈ ಸಲ ಅತ್ತೆಯಿಂದ ಇನ್ನೂ ಹತ್ತಾರು ವಿಧದ ಪದಾರ್ಥಗಳನ್ನು ಕಲಿಯುವ ಅವಕಾಶ ನನ್ನದಾಯಿತು. ಪ್ರತಿ ಸಲ ಅತ್ತೆ ಬರುವ ಕಾಲ ಶಿಶಿರ ಋತುವಾಗಿತ್ತು. ಆದರೆ ಈ ಸಲ ಗ್ರೀಷ್ಮ ಋತುವಿಗೆ ಬದಲಾದದ್ದೇ ನನ್ನ ಅಡುಗೆ ಮನೆ ಬೆಳ್ಳುಳ್ಳಿ, ಸೂಜಿ ಮೆಣಸು, ಈರುಳ್ಳಿ, ಇಂಗಿನ ಒಗ್ಗರಣೆಗಳಿಂದ ಘಮಘಮಿಸಿತು. "ಈ ಸರ್ತಿ ನಾನು ಮಾವಿನ್ಕಾಯಿ, ಸೂಜ್‌ಮೆಣ್ಸು ತಗ ಬತ್ತಿ......" ಎಂದಾಗಲೇ ಬಾಯಲ್ಲಿ ನೀರೂರಿತ್ತು. ಸರಿ...ಬಂದ ದಿನದ ಸಾಯಂಕಲಾದಿಂದ ಹಿಡಿದು ಮೊನ್ನೆ ಅವರೆಲ್ಲಾ ಊರಿಗೆ ಹೊರಟ ದಿನದವರೆಗೂ ಮಾವಿನಕಾಯಿ/ಹಣ್ಣಿನ ಹಲವು ಪದಾರ್ಥ/ಖಾದ್ಯಗಳ ಮೆರವಣಿಗೆ ಸರಾಗವಾಗಿ ನಡೆಯಿತು. ಮಾವಿನ್ಕಾಯಿ ಗೊಜ್ಜು (ವಿವಿಧ ರೀತಿಯ), ಭೂತ್ನ್‌ಗೊಜ್ಜು, ಮೂರು ಬಗೆಯ ಅಪ್ಪೆಹುಳಿ, ಮಾವಿನಕಾಯಿ+ಸೂಜಿ ಮೆಣಸಿನ ಕಾಯಿರಸ, ಅಪ್ಪೆಮಿಡಿ ತಂಬುಳಿ, ಮಾವಿನ ಹಣ್ಣಿನ ಪಾಯಸ, ಸಾಸಿಮೆ - ಹೀಗೇ ಇನ್ನೂ ಹತ್ತು ಹಲವು. ಅಬ್ಬಾ! ಇಷ್ಟೆಲ್ಲಾ ಬಗೆಗಳಿದ್ದೂ ನಾನು ಕಲಿತಿದ್ದು ಕೇವಲ ೨-೩ ಬಗೆಗಳನ್ನಷ್ಟೇ ಎಂದು ನನ್ನನ್ನೇ ಬೈದುಕೊಂಡೆ. ಈಗ ಅವೆಲ್ಲಾ ನನ್ನ ಮೆಮೊರಿ ಕಾರ್ಡ್‌ನಲ್ಲಿ ಸೇಫ್ ಆಗಿ ಕೂತಿವೆ... ಜೊತೆಗೆ ಅಳಿದುಳಿದ ಮಾವಿನ ಮಿಡಿಗಳು ಕೂಡ. ಮುಂದಿನ ಮಳೆಗಾಲದವರೆಗೂ ವೈರಸ್(ಬೂಸ್ಟ್) ಬರದಂತೇ ಉಪ್ಪಿನ ನೀರಿನ ಮಿಶ್ರಣವನ್ನು ಹಾಕುತ್ತಿರಬೇಕಷ್ಟೇ!

ಮಾವಿನಕಾಯಿಯ ಅಡುಗೆಯಷ್ಟೇ ಹಿತಕೊಟ್ಟಿದ್ದು ನನ್ನತ್ತೆಯ ಜಾನಪದ ಗೀತೆಗಳ, ಭಜನೆಗಳ ಸಂಗ್ರಹ. ನಾನೂ ಅಮ್ಮನಿಂದ ಕಲಿತ ಒಂದೆರಡು ಭಜನೆಗಳನ್ನು ಹೇಳಿದ್ದೇ ತಡ ಮತ್ತೂ ಹುರುಪಿನಿಂದ ಶುರು ಮಾಡಿದ ಅತ್ತೆ ನಿಲ್ಲಿಸಿದ್ದು ಅವರ ಮೊಮ್ಮಗಳು ರಾಗ ತೆಗೆದಾಗಲೇ :) ವಯಸ್ಸು ಐವತ್ತೆಂಟಾದರೂ ಆ ಧ್ವನಿಯೊಳಗಿರುವ ಇಂಪು, ಸ್ವರ ಮಾಧುರ್ಯ ನನ್ನನ್ನು ಬೆರುಗುಗೊಳಿಸಿದ್ದು ಸುಳ್ಳಲ್ಲ. ನನಗೆ ಗೊತ್ತಿದ್ದ ಹಾಡೊಂದು ಅವರಿಗೆ ಬಲು ಮೆಚ್ಚುಗೆಯಾಗಲು, "ನಂಗಿದ್ನ ಹೋಪದ್ರೊಳ್ಗೆ ಬರ್ಕೊಡವೇ.."ಎಂದಿದ್ದೇ ತಡ ಏನನ್ನೋ ಸಾಧಿಸಿದ ಹಮ್ಮು ನನ್ನೊಳಗೆ. ಸಾಗರದೊಳಗೆ ತೊರೆ ಸೇರಿದರೂ ಅದು ಸಾಗರವೆಂದೆನಿಸಿಕೊಳ್ಳುವುದು ತಾನೇ? ಸೇರಿದ ಮೇಲೆ ಸಾಗರವೇನು ತೊರೆಯೇನು? ಎಲ್ಲವೂ ಒಂದೇ. ಅದೇ ರೀತಿ ನಮ್ಮೊಳಗಿನ ಕೆಲವು ಸಂಬಂಧಗಳು ಹಾಗೂ ಭಾವಗಳು ಕೂಡ...

ಅವರು ಹಾಡಿದ ಭಜನೆ/ಜಾನಪದ ಹಾಡುಗಳಲ್ಲೇ ನನಗೆ ಈ ಕೆಳಗಿನ ಹಾಡು ಮಾತ್ರ ತುಂಬಾ ಇಷ್ಟವಾಯಿತು. ಅತ್ತೆಯ ಇಂಪಾದ ಧ್ವನಿಯಿಂದ ಈ ಹಾಡುನ್ನು ಮತ್ತೆ ಮತ್ತೆ ಕೇಳಿ ಕಲಿತು ಈಗ ನಾನೂ ತಕ್ಕಮಟ್ಟಿಗೆ ಮನದಟ್ಟು ಮಾಡಿಕೊಂಡಿರುವೆ. ಎಲ್ಲಿಂದಲೋ ಹುಟ್ಟಿ, ಹಲವರಲ್ಲಿ ಬೆಳೆದು ನನ್ನತ್ತೆಯ ಕೈಗೆ ಸಿಕ್ಕಿದ ಈ ಸುಂದರ ಹಾಡಿನ ಸಾಹಿತ್ಯ ಈಗ ನಿಮಗೆಲ್ಲರಿಗಾಗಿ. ಹಾಡಿನ ಎಡೆ ಶೃಂಗರಿಸಲು ರೂಪದರ್ಶಿಗಳಿಗಾಗಿ ಅದಿತಿ ಹೆಗಡೆ (ನನ್ನ ಪುಟ್ಟಿ)ಹಾಗೂ ಆದಿತ್ಯ ಹೆಗಡೆ (ನನ್ನ ತಂಗಿಯ ಮಗ) ತಮ್ಮ ತಮ್ಮ ಬಾಲ್ಯದ ( = ಅವರು ಆರೆಂಟು ತಿಂಗಳಿದ್ದಾಗಿನ) ಫೋಟೋಗಳನ್ನು ಕೊಡಲು ಒಪ್ಪಿದ್ದೂ ಆಯಿತು. ಈ ಇಬ್ಬರು ಮುದ್ದು ಕಂದಮ್ಮಗಳಿಗೆ ಯಾವ ಜನರ ದೃಷ್ಟಿಯೂ ತಾಗದಿರಲೆಂದು ಹಾರೈಸುತ್ತಾ...... :)

ಯಾವ ಜನರ ದೃಷ್ಟಿ ತಾಗಿತೋ..
ಗೋಪಾಲ ನಿನಗಿನ್ಯಾವ ನಾರಿ ದೃಷ್ಟಿ ತಾಗಿತೋ..
ಗೋಪಾಲ ನಿನಗನ್ಯಾವ ಪಾಪಿ ದೃಷ್ಟಿ ತಾಗಿತೋ...
ಯಾವ ಜನರ ದೃಷ್ಟಿ ತಾಗಿತೋ
ಬಾಲ ಮುದ್ದು ರಂಗಯ್ಯ ನಿನಗೆ
ಕಾವೇರಿ ರಂಗನ ಕೂಡೆ
ಯಂತ್ರವನ್ನು ಕಟ್ಟಿಸಲು
ಮಂತ್ರವನ್ನು ಮಾಡಿಸಲು
ಯಾವ ಜನರ ದೃಷ್ಟಿ ತಾಗಿತೋ.....
ಗೋಪಾಲ ನಿನಗಿನ್ಯಾವ ಪಾಪಿ ದೃಷ್ಟಿ ತಾಗಿತೋ...

 ಆದಿತ್ಯ
ಅದಿತಿ
 






















ಹಾಲ ಕೊಟ್ಟರೆ ಕುಡಿವುದಿಲ್ಲ
ಬಾಲರೊಡನೆ ಆಡುವದಿಲ್ಲ
ಬಾಲಮುದ್ದು ರಂಗಯ್ಯ ನಿನಗಿನ್ಯಾವ ಜನರ ದೃಷ್ಟಿ ತಾಗಿತೋ...
ಗೋಪಾಲ ನಿನಗಿನ್ಯಾವ ನಾರಿ ದೃಷ್ಟಿ ತಾಗಿತೋ..

ಬಿಂದಲೆ ನುಸಿ ಚಂದದಿಂದ ಸುಂದರಾಂಗರೆಂದು ಕರೆದರೆ
ಕಂದ ಸಲಹೋ ಎಂದು ಕುಶಲ
ಯಾವ ಜನರ ದೃಷ್ಟಿ ತಾಗಿತೋ..
ಗೋಪಾಲ ನಿನಗಿನ್ಯಾವ ಪಾಪಿ ದೃಷ್ಟಿ ತಾಗಿತೋ

ಕಡೆವ ಸಮಯದಲ್ಲೇ ಹೋಗಿ
ಕಡೆಗೋಲಾನೇ ಪಿಡಿದು ನಿಂದು
ಕಡೆಯಬೇಡಲೆಂದು ಅಮ್ಮನ ಸೆರಗ ಪಿಡಿದ ರಂಗಯ್ಯ ನೀನು
ಯಾವ ಜನರ ದೃಷ್ಟಿ ತಾಗಿತೋ..
ಗೋಪಾಲ ನಿನಗಿನ್ಯಾವ ನಾರಿ ದೃಷ್ಟಿ ತಾಗಿತೋ..
ಗೋಪಾಲನಿಗನಿನ್ಯಾವ ಪಾಪಿ ದೃಷ್ಟಿ ತಾಗಿತೋ...

ಫೋಟೋ ಕೃಪೆ : ಅದಿತಿ ಹೆಗಡೆ ಮತ್ತು ಆದಿತ್ಯ ಹೆಗಡೆ

[ವಿ.ಸೂ. - ಈ ಹಾಡಿನ ಮೂರನೇ ಸೊಲ್ಲಾದ "ಬಿಂದಲೆ ನುಸಿ ಚಂದದಿಂದ..." ಈ ಸಾಲುಗಳ ಅರ್ಥ ಸರಿಯಾಗಿ ನನಗೆ ತಿಳಿಯಲಿಲ್ಲ. ಅತ್ತೆಯ ಕೇಳಿದರೆ ನನಗೂ ತಿಳಿಯದು ಬೇರೊಬ್ಬರು ಹೇಳಿದ ಹಾಗೇ ಬರೆದು ಕೊಂಡಿದ್ದು ಅಂದರು. ಯಾರಿಗಾದರೂ ಈ ಹಾಡು ಮೊದಲೇ ಗೊತ್ತಿದ್ದರೆ, ಈ ಸೊಲ್ಲಿನಾರ್ಥ ಸರಿಯಾಗಿ ತಿಳಿದಿದ್ದರೆ ತಿಳಿಸಬೇಕಾಗಿ ವಿನಂತಿ]

-ತೇಜಸ್ವಿನಿ ಹೆಗಡೆ.