ಸೋಮವಾರ, ಸೆಪ್ಟೆಂಬರ್ 20, 2010

ಪಯಣ ನಾಳೆಯ ಕಡೆಗೆ...

ಸುಟ್ಟುಹಾಕಬೇಕಿದ ಈ ಎದೆಯ 
ಚುಚ್ಚಿ ರಕ್ತಜಿನುಗಿಸುವಾ ನೆನಪುಗಳ,
ಉರಿಯೆಬ್ಬಿಸಿ ನಗುವ ಸತ್ತ ಕನಸುಗಳ,
ಆ ಚಾಣಾಕ್ಯ ಕಾಲಿಗೆ ಸಿಕ್ಕ
ಮುಳ್ಳನ್ನು ಕಿತ್ತು ಸುಟ್ಟಂತೆ....

ನುಗ್ಗಬೇಕಿದೆ ಮುಂದೆ, ಸರಿಸಿ ಈ
ಕಷ್ಟ-ನಷ್ಟಗಳ, ದುಃಖ-ನೋವುಗಳ
ಆ ಕಡಲು ತಡಿಯನು ಒಡೆದು ಮುನ್ನುಗ್ಗಿ
ಸುನಾಮಿಯಾಗಿ ಬೆಳೆದು, ಎಳೆದೆಲ್ಲವ
ನುಂಗಿ, ಮತ್ತೆ ನಿರುಮ್ಮಳವಾಗುವಂತೆ....

ಹಾರಬೇಕಿದೆ ಮೇಲೆ ಹಕ್ಕಿಯನೂ ಮೀರಿ
ಒಳಗೆಳೆದು ಹುದುಗಿಸುವ ನಿನ್ನೆಗಳ,
ಹಿಂಸಿಸುವ ಮಾತುಗಳ ಬಿಟ್ಟು,
ಆಗಸವನಿಣುಕಿ ತಾರೆಗಳನೋದುವ
ಆ ಉಪಗ್ರಹದಂತೆ, ತಿಳಿಯಬೇಕಿದೆ ನನ್ನ ನಾಳೆಗಳ...

ಆ ಲೋಕದಲ್ಲಿರುವ ಪರಮಾತ್ಮನ
ಈ ಲೋಕದಲ್ಲಿ ಕಾಣುವುದೆಂತೋ?!
ನಮ್ಮೊಳಗಿರುವ ಆತ್ಮನ ಕಂಡು
ಇಂದೊಮ್ಮೆ ಮನಸಾರೆ ನಗಬೇಕಿದೆ
ನನಗಾಗಿ ನಗುವವರನ್ನು ನಾ ನಗಿಸಬೇಕಿದೆ...

-ತೇಜಸ್ವಿನಿ ಹೆಗಡೆ

ಬುಧವಾರ, ಸೆಪ್ಟೆಂಬರ್ 15, 2010

ಕೃಷ್ಣಾರ್ಪಣಮಸ್ತು


http://devotionalonly.com/2009/11/

 
ಮೂಕಂ ಕರೋತಿ ವಾಚಾಲಂ ಪಂಗುಂ ಲಂಘಯತೇ ಗಿರಿಂ
ಯತ್ಕೃಪಾ ತಮಹಂ ವಂದೇ ಪರಮಾನಂದಮಾಧವಮ್
(ಭಗವದ್ಗೀತೆ, ಧ್ಯಾನಶ್ಲೋಕ)

[ಮೂಗನನ್ನು ಮಾತಾಡಿಸುತ್ತಾನೆ, ಕಾಲಿಲ್ಲದವನನ್ನು ಪರ್ವತವನ್ನು ಹತ್ತುವಂತೇ ಮಾಡುತ್ತಾನೆ, ಅಂತಹ ಕೃಪಾಳುವಾಗಿರುವ, ಪರಮಾನಂದವನ್ನು ನೀಡುವ ಮಾಧವನನ್ನು ನಾನು ವಂದಿಸುವೆ]

 ದೈಹಿಕವಾಗಿ ಅಶಕ್ತನಾಗಿರುವವನನ್ನೂ ಮಾನಸಿಕವಾಗಿ ಸಶಕ್ತನನ್ನಾಗಿಸುವ ಕರುಣಾಳು ಶ್ರೀಕೃಷ್ಣ ಎಂಬುದು ಮೇಲಿನ ಶ್ಲೋಕದೊಳಗಿನ ತಿರುಳು. "ಉದ್ಧರೇದಾತ್ಮನಾತ್ಮಾನಂ.." ಅಂದರೆ ನಿನ್ನ ಆತ್ಮದ ಉದ್ಧಾರ, ನಿನ್ನ ಏಳು ಬೀಳು ಎಲ್ಲಾ ನಿನ್ನ ಕೈಯಲ್ಲೇ ಇದೆ...ನಿನ್ನ ಮನೋಬಲದಲ್ಲಿದೆ. ನೀನೇ ನಿನ್ನ ಉನ್ನತಿಗೆ ಹಾಗೂ ಅವನತಿಗೆ ಮೂಲ ಕಾರಣ ಎಂಬ ಸುಂದರ ಸಂದೇಶವನ್ನಿತ್ತ ಶ್ರೀಕೃಷ್ಣ ಹುಟ್ಟಿದ್ದು ಶ್ರಾವಣ ಬಹುಳ, ಅಷ್ಟಮಿಯಂದು ರೋಹಿಣಿ ನಕ್ಷತ್ರದಲ್ಲಿ. ಹಾಗಾಗಿ ಈ ದಿನವನ್ನು ಕೃಷ್ಣಾಷ್ಟಮಿ ಎಂದು ಕರೆಯುತ್ತಾರೆ. ಕೃಷ್ಣನ ಜನ್ಮದಿನಾಚರಣೆಯನ್ನು ಎರಡು ರೀತಿಯಲ್ಲಿ ಆಚರಿಸುವ ಸಂಪ್ರದಾಯವಿದೆ. ಸಾಮಾನ್ಯವಾಗಿ ಎಲ್ಲರೂ ಒಂದೇ ದಿನ ಆಚರಿಸಿದರೂ ಕೆಲವೊಮ್ಮೆ ತಿಥಿ ಹಾಗೂ ನಕ್ಷತ್ರಗಳು ಬೇರೆಯಾಗಲು ಭಿನ್ನವಾಗಿಯೂ ಆಚರಿಸುತ್ತಾರೆ. ಈ ದಿನವನ್ನು ಸೌರಮಾನದವರು ಸಿಂಹಮಾಸದಲ್ಲಿ, ರೋಹಿಣಿ ನಕ್ಷತ್ರದ ದಿನದಂದು ಜಯಂತಿ ಎಂದು ಆಚರಿಸಿದರೆ, ಚಾಂದ್ರಮಾನದವರು ತಿಥಿ ಪ್ರಕಾರ ಅಂದರೆ ಶ್ರಾವಣ ಮಾಸದ ಕೃಷ್ಣಪಕ್ಷದಲ್ಲಿ ಬರುವ ಅಷ್ಟಮಿಯಂದು ಆಚರಿಸುತ್ತಾರೆ. ಇದೇ ದೇಶದ ಹಲವೆಡೆ ಪ್ರಚಲಿತವಾಗಿರುವ ಕೃಷ್ಣಾಷ್ಟಮಿ. ಸೌರಮಾನದವರೂ ಇದೇ ದಿನ ರೋಹಿಣಿ ನಕ್ಷತ್ರವೂ ಕೂಡಿ ಬಂದರೆ ಅಂದೇ ಕೃಷ್ಣಾಷ್ಟಮಿಯನ್ನು ಆಚರಿಸುವರು. ಆಗ ಏಕದಿನದಂದೇ ಜನ್ಮಾಷ್ಟಮಿಯ ಆಚರಣೆ ಎಲ್ಲಾ ಕಡೆಯೂ ಆಗುವುದು. ಈ ರೀತಿ ಸೌರಮಾನದವರಿಗೆ ಈ ದಿನ ನಕ್ಷತ್ರ ಪ್ರಧಾನವಾಗಿದ್ದರೆ, ಚಾಂದ್ರಮಾನದವರಿಗೆ ತಿಥಿ ಪ್ರಧಾನ. ಹಾಗಾಗಿ ಒಮ್ಮೊಮ್ಮೆ ಕೃಷ್ಣಾಷ್ಟಮಿ ಎರಡೆರಡು ಬಾರಿ ಬರುವುದೂ ಉಂಟು.

"ಕೃಷ್ಣ" ಪದದ ಅರ್ಥ ಕಪ್ಪು. ಶ್ರೀಕೃಷ್ಣ ಶ್ರೀವಿಷ್ಣು ಅಂದರೆ ಹರಿಯ ಅವತಾರ. ವಿಷ್ಣುವಿನ ಆಕರ, ಮೂಲ ತತ್ವ ಆಕಾಶ. ಆಕಾಶ ನೀಲಬಣ್ಣದ್ದಾಗಿರುವುದರಿಂದ, ಆತನ ಅಂಶವಾಗಿರುವ ಕೃಷ್ಣನಿಗೆ ನೀಲಮೇಘ ಶ್ಯಾಮ ಎಂದೂ ಕರೆಯುತ್ತಾರೆ. ಕೃಷ್ಣ ಎಂದರೆ ಎಲ್ಲರನ್ನೂ ಆಕರ್ಷಿಸುವವ ಎಂದೂ ಆಗುತ್ತದೆ. ಅಂತೆಯೇ ಆತನ ಮಾಯೆಯ ಸೆಳೆತದಿಂದ ಯಾರೂ ತಪ್ಪಿಸಿಕೊಳ್ಳಲಾಗದು. ಹಾಗಾಗಿಯೇ ಆತ ಮಾಯಾವಿ...ಈಭವದ ಬಂಧನದಿಂದ, ಮೋಹಜಾಲದಿಂದ, ಮಾಯೆಯಿಂದ ನಮ್ಮನ್ನು ಬಿಡಿಸಿ, ತನ್ನೆಡೆಗೆ ಸೆಳೆಯುವ ಮಾಯಾವಿ. ಆತ ಹುಟ್ಟಿದ್ದು ಕೃಷ್ಣಪಕ್ಷದ ನಡುರಾತ್ರಿಯಲ್ಲಿ. ಕಡುಗತ್ತಲೆಯಲ್ಲಿ ಬೆಳಕತೋರಲು ಜನಿಸಿದವ. ಇದರಿಂದಲೂ ಆತನಿಗೆ ಕೃಷ್ಣ ಎಂಬ ಹೆಸರು ಬಂತೆನ್ನಬಹುದು. ವಸುದೇವ, ದೇವಕಿಯರ ಎಂಟನೆಯ ಮಗುವಾಗಿ ಜನಿಸಿದ್ದರಿಂದ "ವಾಸುದೇವ" ಎಂಬ ಹೆಸರೂ ಬಂತು. ಹುಟ್ಟಿದ್ದು ಮಥುರಾದಲ್ಲಿರುವ ಸೋದರಮಾವನ ಸೆರೆಮನೆಯಲ್ಲಾದರೂ ಬೆಳೆದದ್ದೆಲ್ಲಾ ಗೋಕುಲದಲ್ಲಿದ್ದ ಯಶೋದೆಯ ಮಡಿಲಲ್ಲಿ... ಹಾಗಾಗಿ ಈ ದಿನವನ್ನು ಗೋಕುಲಾಷ್ಟಮಿ ಎಂದೂ ಕರೆಯುತ್ತಾರೆ.

ಶೀಕೃಷ್ಣನ ಅವತಾರದ ಮೂಲೋದ್ದೇಶ :

ಭೂಭಾರಹರಣ...ಅಂದರೆ ಭೂಮಿಯ ಮೇಲೆ ತುಂಬಿದ್ದ ಅಸುರರನ್ನು, ದುಷ್ಟರನ್ನು ಸಂಹರಿಸುವುದು. ಕ್ರೂರಿಯಾಗಿದ್ದ ಮಾವ ಕಂಸನನ್ನು ಸಂಹರಿಸುವುದು, ಪಾಂಡವರನ್ನು ಕಾಪಾಡಲಿಕ್ಕಾಗಿ. ಅಲ್ಲದೇ ಅಧರ್ಮಾಲ್ಲಿ ನಡೆಯುತ್ತಿದ್ದ ವೃಷ್ಣಿ ವಂಶಸ್ಥರನ್ನು ಅಂದರೆ ಅವನ ವಂಶವಾದ ಯಾದವ ಕುಲದವರನ್ನೂ ನಾಶಗೈದ. ಇವೆಲ್ಲಾ ಕಾರ್ಯಗಳ ಸಿದ್ಧಿಗಾಗಿ ಸ್ವಯಂ ಹರಿಯೇ ಕೃಷ್ಣನಾಗಿ ಧರೆಗೆ ಅವತರಿಸಿದ. ಆ ದಿನವನ್ನೇ ನಾವು ಕೃಷ್ಣಾಷ್ಟಮಿಯನ್ನಾಗಿ ಆಚರಿಸುತ್ತೇವೆ. ಕೃಷ್ಣ ಅಧರ್ಮವನ್ನು ನಾಶಗೈಯಲು, ಧರ್ಮವನ್ನು ಎತ್ತಿಹಿಡಿಯಲು ತನ್ನವರನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. ಇದಕ್ಕೆ ಅಧರ್ಮದಲ್ಲಿ ಸಾಗುತ್ತಿದ್ದ ತನ್ನದೇ ಸೋದರಮಾವನ ವಧೆ ಹಾಗೂ ಅನೀತಿಯಲ್ಲಿ ಸಾಗುತಿದ್ದ ತನ್ನದೇ ಯಾದವ ಕುಲದವರ ಪತನವೇ ಸಾಕ್ಷಿ. ಧರ್ಮದ ರಕ್ಷಣೆಯಲ್ಲಿ ಸಂಬಂಧದ ಬಂಧವಿಲ್ಲ ಎಂದು ತೋರಿದವ ಶ್ರೀಕೃಷ್ಣ.

ಈ ದಿನದಂದು ಭಕ್ತಾದಿಗಳು ತಮ್ಮ ಇಂದ್ರಿಯಗಳಿಗೆ ಆಹಾರವನ್ನೊದಗಿಸದೇ ಅಂದರೆ ರಾಗ, ದ್ವೇಷಗಳಿಂದ ದೂರವುಳಿದು, ನಿರಾಹಾರ ಅಥವಾ ಅಲ್ಪ ಆಹಾರವನ್ನಷ್ಟೇ ದೇಹಕ್ಕೆ ಒದಗಿಸಿ, ಆತನನ್ನು ಧ್ಯಾನದಮೂಲಕ ಸಾಕ್ಷಾತ್ಕಾರಗೊಳಿಸಲೆತ್ನಿಸುತ್ತಾರೆ. ಹಾಲು, ಅಕ್ಷತ, ಹೂವಿನ ಅರ್ಘ್ಯಕೊಡುತ್ತಾರೆ. ರಾತ್ರಿಯಲ್ಲಿ ಆತನ ಜನನವಾದ್ದರಿಂದ ಮಧ್ಯರಾತ್ರಿಯ ಹೊತ್ತಿಗೆ ದೇವಾಲಯಗಳಲ್ಲಿ, ಮನೆಗಳಲ್ಲಿ ವಿಶೇಷ ಪೂಜೆ, ಭಜನೆಗಳನ್ನು ಏರ್ಪಡಿಸುತ್ತಾರೆ. ಹೊದ್ದಲಿನಿಂದ ತಯಾರಿಸಿದ ಲಡ್ಡು, ಸಿಹಿ ಅವಲಕ್ಕಿ, ತುಳಸಿಮಾಲೆಯನ್ನು ಅರ್ಪಿಸುತ್ತಾರೆ. ಕೃಷ್ಣ ತುಲಸಿ(ಕಪ್ಪು ತುಲಸಿ) ಆತನಿಗೆ ಬಲು ಪ್ರಿಯ. ಅಂತೆಯೇ ಅವಲಕ್ಕಿಯೂ ಕೂಡ. ಬಡ ಸುಧಾಮನಿಂದ ಆತ ಬಯಸಿದ್ದು ಬರೀ ಅವಲಕ್ಕಿಯನ್ನೇ. ಆ ಮೂಲಕ ಆತ ಸ್ಪಷ್ಟಪಡಿಸುತ್ತಾನೆ, ತನಗೆ ಭಕ್ತಿಯಿಂದ ಪತ್ರೆಯನ್ನಾಗಲೀ, ಫಲವನ್ನೇ ಆಗಲೀ ಕೊನೆಗೆ ಬರೀ ನೀರನ್ನೇ ಆಗಲಿ ನೀಡಿದರೆ ಸಾಕು, ನಾನು ಅವನೊಳಗೆ, ಅವನು ನನ್ನೊಳಗೆ ಇರುತ್ತಾನೆಂದು.

ಶ್ರೀಕೃಷ್ಣ ಸದಾ ಮನುಜನ ಮನಸಿಗೆ ಹೆಚ್ಚು ಪ್ರಾಧಾನ್ಯತೆ ಕೊಟ್ಟವನು. ನಮ್ಮ ಮನಸ್ಸೇ ನಮ್ಮನ್ನು ನಿಗ್ರಹಿಸುತ್ತದೆ. ಅದನ್ನೊಮ್ಮೆ ನಾವು ನಿಗ್ರಹಿಸತೊಡಗಿದರೆ ನಮ್ಮ ಏಳಿಗೆ ನಿಶ್ಚಿತ. ಯಾವ ಕೆಡುಕೂ ನಮಗಾಗದು....ನಮ್ಮಿಂದಲೂ ಯಾರಿಗೂ ಕೆಡುಕಾಗದು ಎಂಬ ಸಂದೇಶವನ್ನು ತನ್ನ ಭಗವದ್ಗೀತೆಯಲ್ಲಿ ಸಾರುತ್ತಾನೆ. "ಕರ್ಮವನ್ನು ಮಾಡುತ್ತಿರು. ನಿನ್ನ ಕರ್ಮದಲ್ಲಿ ನಿನಗೆ ನಿಷ್ಠೆಯಿರಲಿ. ಆದರೆ ಅದರಿಂದ ಬರುವ ಫಲದ ಪ್ರತಿ ಅಪೇಕ್ಷೆ ಸಲ್ಲ. ನಾವು ನಮ್ಮ ನಮ್ಮ ಕರ್ಮವನ್ನು ಮಾಡುತ್ತಿರಬೇಕು. ಅದನ್ನು ನಿಲ್ಲಿಸುವುದೇ ದೊಡ್ಡ ಅಪರಾಧ" ಎಂದು ಸಾರಿದ್ದಾನೆ. "ನಾವು ನಮ್ಮ ಹೃದಯ ದೌರ್ಬಲ್ಯಗಳಿಂದ ಮೇಲೆದ್ದಾಗ ಮಾತ್ರ ಬದುಕಿನ ಹೋರಾಟದಲ್ಲಿ ಗೆಲ್ಲಬಲ್ಲೆವು" ಎಂಬ ಪಾಠವನ್ನು ಅರ್ಜುನನ ಮೂಲಕ ನಮಗೆ ತಿಳಿಸಿದ್ದಾನೆ. ಭಗವದ್ಗೀತೆಯನ್ನು ಸರಿಯಾದ ರೀತಿಯಲ್ಲಿ ಅರ್ಥೈಸಿಕೊಂಡು ಅಳವಡಿಸಿಕೊಂಡರೆ ಯಾವ ಸೋಲೂ ನಮ್ಮನ್ನು ಕುಗ್ಗಿಸದು...ಎಂತಹ ಗೆಲವೂ ನಮ್ಮನ್ನು ಉಬ್ಬಿಸದು.

ಶ್ರೀಕೃಷ್ಣಾಷ್ಟಮಿ ಎಲ್ಲರಿಗೂ ಮಂಗಳವನ್ನುಂಟುಮಾಡಲಿ, ನಮ್ಮೊಳಗಿನ ಅರಿಷಡ್ವೈರಿಗಳನ್ನು ಹೊರದೂಡಿ, ಸಾತ್ವಿಕತೆಯನ್ನು ತುಂಬಲೆಂದು ಮನಃಪೂರ್ವಕವಾಗಿ ಪಾರ್ಥಿಸುತ್ತೇನೆ.

[ನನ್ನ ತಾಯಿ ಶ್ರೀಮತಿ ಜಯಲಕ್ಷ್ಮೀ ಭಟ್ ರಚಿಸಿದ ಈ ಹಾಡು ನಿಮಗಾಗಿ. ಬಾಲ್ಯದಿಂದಲೂ ನಾನು ಅಮ್ಮನೊಂದಿಗೆ ಹಾಡುತ್ತಿರುವ ಈ ಹಾಡು ನನ್ನ ಮೆಚ್ಚಿನ ಹಾಡುಗಳಲ್ಲೊಂದು]


ಜೀವಿಸುವ ಪರಿ ಎಂತು
ನಿನ್ನ ನಾಮವ ಮರೆತು
ಜೀವಿಗಳಿಗಾಧಾರ
ಗೋಪಾಲಕೃಷ್ಣ |ಜೀ|

ಬಾಲಕನು ನೀನಾಗ
ಪೂತನಿಯ ಸಂಹಾರ
ಮಾವ ಕಂಸನೆ ನಿನಗೆ ಪರಮ ಶತ್ರು
ಗೋವುಗಳ ಕಾಯ್ದಿರುವೆ
ಗೋಪಿಯರ ಕಾಡಿರುವೆ
ನಂದಗೋಪಕೆ ನೀನು ಆನಂದ ಕಂದ |ಜೀ|

ನಾರಿಮಣಿ ದ್ರೌಪದಿಯ
ಮಾನಹರಣದ ಸಮಯ
ಮಾನರಕ್ಷಕನಾಗಿ ಓ ಎಂದು ಬಂದೆ
ಧರ್ಮಮೂರ್ತಿಯು ನೀನು
ಧರ್ಮರಾಯಗೆ ಒಲಿದೆ
ಪಾರ್ಥ ಸಾರಥಿಯೆಂಬ ಬಿರುದು ನಿನಗೆ |ಜೀ|

ಕುಲದೇವ ನೀ ಎಮ್ಮ
ಕುಲವನುದ್ಧರಿಸಯ್ಯ
ಕುಲದ ಕೀರ್ತಿಯ ಬೆಳೆಸಿ ಬಾರೋ ತಂದೆ
ದುಷ್ಟರನು ಶಿಕ್ಷಿಸುವೆ
ಶಿಷ್ಟರನು ರಕ್ಷಿಸುವೆ
ನೀ ಎಮ್ಮ ಕಷ್ಟಗಳ ನೀಗೊ ತಂದೆ |ಜೀ|

 {ಈ ಲೇಖನ "ಮರಳ ಮಲ್ಲಿಗೆ" ಪತ್ರಿಕೆಯಲ್ಲಿ ಪ್ರಕಟಿತ. ಕೃಷ್ಟಾಷ್ಟಮಿಯಂದೇ ಬ್ಲಾಗಿನಲ್ಲಿ ಪ್ರಕಟಿಸಬೇಕೆಂದು ಮಾಡಿದ್ದೆ. ಆದರೆ ಅದರ ಹಿಂದಿನ ದಿನದಂದೇ ಅಕಾಲಿಕ ಮರಣಕ್ಕೆ ತುತ್ತಾದ ನನ್ನ ಚಿಕ್ಕಪ್ಪನ ಅಗಲಿಕೆಯ ಆಘಾತದಿಂದ ಪ್ರಕಟಿಸಿರಲಿಲ್ಲ...}

-ತೇಜಸ್ವಿನಿ ಹೆಗಡೆ

ಬುಧವಾರ, ಸೆಪ್ಟೆಂಬರ್ 1, 2010

ಶಕ್ತಿಯ ಕೊಡು ಹೇ ಪ್ರಭು...

ನಿನಗೆ ಉತ್ತಮರೆಂದರೆ ಬಲು ಇಷ್ಟವಂತೆ
ನಾಲ್ಕು ಮಂದಿಗೆ ಅನ್ನ ಹಾಕುವವರು,
ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸುವವರು,
ಸದಾ ಹಸನ್ಮುಖಿಗಳು, ಮೃದು ಮಾತುಗಾರರು,
ಅನ್ಯಾಯ ಬಗೆಯದವರು, ಅಕ್ರಮ ಸಹಿಸದವರು,
ನಿನ್ನ ನಾಮವ ಜಪಿಸುತ, ನಿನ್ನ ನಂಬಿದವರು,
ಇಂಥವರೇ ನಿನಗೆ ಬಲು ಇಷ್ಟವಂತೆ....

ಆದರೆ...

ನಿನಗಿಂತಲೂ ಪ್ರೀತಿಸುವ, ಅವರ ಸ್ವಂತದವರು
ನಿನಗೇಕೆ ಕಾಣಲಿಲ್ಲವೋ? ನೀ ಸ್ವಾರ್ಥಿಯೋ?!
ಕರುಣಾಳು ಬಾ ಬೆಳಕೆ... ಎಂದು
ಸದಾ ನಿನ್ನ ಕರೆಯಬೇಕೆಂದಿದ್ದರೆ ಹೇಳು..
ನಿನ್ನಿಷ್ಟದವರ ಬಾಯಿಂದಲೇ
ಒಂದೇನು! ನೂರು ಬಾರಿ ಹೇಳಿಸಿಯೇನು....

ಆದರೆ....

ದಯಮಾಡಿ ಕೊಟ್ಟುಬಿಡು ಮತ್ತೆ
ಅವರ ಸ್ವತ್ತ ಅವರಿಗೆ ನೀ ಹೇ ದೇವ
ನಿನ್ನಿಷ್ಟದ ಆತ್ಮ ಅವರ ಅಂತರಾತ್ಮವೂ ಹೌದು
ಕಸಿದುಕೊಂಡು ನೀ ಏನು ಪಡಿದೀಯೇ?
ಕೊಟ್ಟು ಬಿಡು ನಿಜ ಧೈರ್ಯ-ಸ್ಥೈರ್ಯವ
ಬಾಳಬೇಕಿದೆ ಉಳಿದು ಹೋದವರು,
ನಿನ್ನ ಮೇಲಿರುವ ನಂಬಿಕೆಗಾಗಿ....

[ಮಂಗಳವಾರ ಹುಬ್ಬಳ್ಳಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ ತೀರಿ ಹೋದ ನನ್ನ ಆತ್ಮೀಯ, ಅತ್ಯಂತ ಆಪ್ತ ಹಾಗೂ ಪ್ರೀತಿಯ ಚಿಕ್ಕಪ್ಪ ಜಿ.ಎನ್.ಭಟ್(ನನ್ನ ತಂದೆಯವರ ಕಿರಿಯ ತಮ್ಮ) ಅವರಿಗಾಗಿ ಅರ್ಪಿತ ಈ ಕವನ...:( ಸಾವು ಅನಿವಾರ್ಯ, ಆದರೆ ದುರ್ಮರಣ ಅನ್ಯಾಯ...ಅದರ ನೋವೂ ಅಷ್ಟೇ ತೀವ್ರ ಹಾಗೂ ನಿರಂತರ.....:( ]

-ತೇಜಸ್ವಿನಿ ಹೆಗಡೆ.