ಸೋಮವಾರ 20 ಸಪ್ಟೆಂಬರ್ 2010

ಪಯಣ ನಾಳೆಯ ಕಡೆಗೆ...

ಸುಟ್ಟುಹಾಕಬೇಕಿದ ಈ ಎದೆಯ 
ಚುಚ್ಚಿ ರಕ್ತಜಿನುಗಿಸುವಾ ನೆನಪುಗಳ,
ಉರಿಯೆಬ್ಬಿಸಿ ನಗುವ ಸತ್ತ ಕನಸುಗಳ,
ಆ ಚಾಣಾಕ್ಯ ಕಾಲಿಗೆ ಸಿಕ್ಕ
ಮುಳ್ಳನ್ನು ಕಿತ್ತು ಸುಟ್ಟಂತೆ....

ನುಗ್ಗಬೇಕಿದೆ ಮುಂದೆ, ಸರಿಸಿ ಈ
ಕಷ್ಟ-ನಷ್ಟಗಳ, ದುಃಖ-ನೋವುಗಳ
ಆ ಕಡಲು ತಡಿಯನು ಒಡೆದು ಮುನ್ನುಗ್ಗಿ
ಸುನಾಮಿಯಾಗಿ ಬೆಳೆದು, ಎಳೆದೆಲ್ಲವ
ನುಂಗಿ, ಮತ್ತೆ ನಿರುಮ್ಮಳವಾಗುವಂತೆ....

ಹಾರಬೇಕಿದೆ ಮೇಲೆ ಹಕ್ಕಿಯನೂ ಮೀರಿ
ಒಳಗೆಳೆದು ಹುದುಗಿಸುವ ನಿನ್ನೆಗಳ,
ಹಿಂಸಿಸುವ ಮಾತುಗಳ ಬಿಟ್ಟು,
ಆಗಸವನಿಣುಕಿ ತಾರೆಗಳನೋದುವ
ಆ ಉಪಗ್ರಹದಂತೆ, ತಿಳಿಯಬೇಕಿದೆ ನನ್ನ ನಾಳೆಗಳ...

ಆ ಲೋಕದಲ್ಲಿರುವ ಪರಮಾತ್ಮನ
ಈ ಲೋಕದಲ್ಲಿ ಕಾಣುವುದೆಂತೋ?!
ನಮ್ಮೊಳಗಿರುವ ಆತ್ಮನ ಕಂಡು
ಇಂದೊಮ್ಮೆ ಮನಸಾರೆ ನಗಬೇಕಿದೆ
ನನಗಾಗಿ ನಗುವವರನ್ನು ನಾ ನಗಿಸಬೇಕಿದೆ...

-ತೇಜಸ್ವಿನಿ ಹೆಗಡೆ

30 comments:

  1. ತುಂಬಾ ಚನ್ನಾಗಿದ್ದು ತೇಜಕ್ಕ... ನಿಜವಾಗಲೂ ನಾವು ಹಳೆಯ ನೋವನ್ನು ಮರೆತು ಹೊಸ ನಿರೀಕ್ಷೆಗಳಿಗೆ ಮುಖ ಮಾಡಕ್ಕು. Very inspiring

    ಪ್ರತ್ಯುತ್ತರಅಳಿಸು
  2. very nice....... nija nimma kavanada saalugaLante irabekide

    ಪ್ರತ್ಯುತ್ತರಅಳಿಸು
  3. ತೇಜಕ್ಕ...

    ತು೦ಬಾ ಚೆನ್ನಾಗಿದೆ ಕವನ... ಕಹಿ ನೆನಪುಗಳನ್ನು ಸುಟ್ಟರೆ ಚೆನ್ನಾಗಿರುತ್ತದೆ... ಅದರೆ ಕಷ್ಟ.. :) ನನಗೂ ಸುಡಬೇಕಿದೆ ಒ೦ದಿಷ್ಟು ಕಹಿ ನೆನಪುಗಳನ್ನು... ನಿಮಗೆ ಯಾವುದಾದರೆ ದಾರಿ ಕ೦ಡರೆ ಹೇಳಿಕೊಡಿ ಪ್ಲೀಸ್ :)

    ತು೦ಬಾ ಇಷ್ಟ ಆಯಿತು ಕವನ...

    ಪ್ರತ್ಯುತ್ತರಅಳಿಸು
  4. ನಿಮ್ಮ "ನಾಳೆಯ ಕಡೆಗಿನ ಪಯಣ" ಚೆನ್ನಾಗಿದೆ.

    ಪ್ರತ್ಯುತ್ತರಅಳಿಸು
  5. ಕವನದ ಆಶಯದಂತೆ ಕಹಿಯೆಲ್ಲವ ಮರೆತು ಮುನ್ನುಗ್ಗಬೇಕಿದೆ.ಕುಗ್ಗಿದ ಮನಕ್ಕೆ ಸಾಂತ್ವನ ನೀಡುವ ಕವನ.ತುಂಬಾ ಇಷ್ಟವಾಯಿತು.

    ಪ್ರತ್ಯುತ್ತರಅಳಿಸು
  6. @ಶರಶ್ಚಂದ್ರ,

    ನಿಜ.... ನಿನ್ನೆಯ ಸವಿನೆನಪನ್ನಷ್ಟೇ ಜೊತೆಗೊಯ್ಯುತ್ತಾ, ನೋವುಗಳ ನೆನಪುಗಳನ್ನು ಹಿಂದೆ ಬಿಟ್ಟು ಮುನ್ನುಗ್ಗುವುದೇ ಜೀವನ. ಇದು ಬಲು ಕಷ್ಟ ನಿಜ. ಆದರೆ ಮನಸ್ಸಿದ್ದರೆ ಮಾರ್ಗ ಅಲ್ಲವೇ? ಧನ್ಯವಾದ.

    @ಮನಸು,

    ಕವನದಿಂದ ಸ್ಪೂರ್ತಿ ಪಡೆದು ಅಂತೆಯೇ ನಡೆವಂತಾದರೆ ಬಲು ಚೆನ್ನ. ಆದರೆ ಕವನಗಳೆಲ್ಲಾ ದಾರಿ ತೋರುವ ಮಿಣುಕು ದೀಪದಂತೇ ಸರಿ. ನಿಜವಾದ ಬೆಳಕನ್ನು ನಮ್ಮೊಳಗೇ ಹುಡುಗಿ ಅದನ್ನು ಉದ್ದೀಪನಗೊಳಿಸಿಕೊಳ್ಳಬೇಕು. ಧನ್ಯವಾದ.

    @ಸುಧೇಶ್,

    ಮೆಚ್ಚುಗೆಗೆ ಧನ್ಯವಾದ. :)

    ಕಹಿ ನೆನಪುಗಳನ್ನು ಸುಡುವುದು ಕಷ್ಟವೇ ಸರಿ. ಆದರೆ ಅಸಾಧ್ಯವಲ್ಲ. ಒಂದು ಉತ್ತಮ ಉಪಾಯ ಇಲ್ಲಿದೆ ನೋಡಿ. ಅಂತೆಯೇ ಮಾಡಿ ನಿಮಗೆ ಪರಿಹಾರ ದೊರಕಿದರೆ ನನ್ನೊಂದಿಗೆ ಹಂಚಿಕೊಳ್ಳಿ. :)

    ನಿಮ್ಮ ಮನಸ್ಸನ್ನು ಕಾಡುವ, ಹಿಂಸಿಸುವ ನೆನಪುಗಳನ್ನು, ಘಟನೆಗಳನ್ನೆಲ್ಲಾ ಒಂದು ಉದ್ದದ ಬಿಳಿಹಾಳೆಯಮೇಲೆ ಬರೆಯುತ್ತಾ ಹೋಗಿ. ಬರೆಯುವ ಮುನ್ನ ಏನನ್ನೂ ಯೋಚಿಸಬೇಡಿ. ಕೇವಲ ಕಾಡುವ ನೆನಪುಗಳನ್ನಷ್ಟೇ ನೆನೆಸಿಕೊಂಡು ಅದಕ್ಕೆ ಪೂರಕವಾಗಿರುವ ಘಟನಾವಳಿಗಳನ್ನು, ಕಾರಣಗಳನ್ನು ಬರೆಯಿರಿ. ಹಾಗೇಯೇ ಆ ನೋವಿಗೆ ಪರಿಹಾರವಾಗಿ ನೀವೇನು ಮಾಡಿದ್ದೀರಿ..ಮಾಡುತ್ತಿರುವಿರಿ ಅನ್ನುವುದನ್ನೂ ಬರೆಯಿರಿ. ಎಲ್ಲಾ ಬರೆದಾದಮೇಲೆ ಮಗದೊಮ್ಮೆ ಅದನ್ನೇ ಓದಿ. ತದನಂತರದ ಪರಿಣಾಮ ನಿಮಗೇ ಅರಿವಾಗುವುದು :) (ಹಾಂ... ಹಗುರಾದ ಭಾವ ಬಂದಮೇಲೆ ಬೇಕಿದ್ದಲ್ಲಿ ಆ ಪೇಜುಗಳನ್ನು ಹರಿದುಹಾಕಬಹುದು. ಮತ್ತೂ ಮನಸು ನಿರಾಳವಾಗುವುದು ನಿಶ್ಚಿತ... ಹಾಂ... ಪೇಪರ್ ಉಳಿಸಿ ಎಂದು ಕೂಗುವವರು ಟೈಪ್ ಮಾಡುವ ಸಲಹೆಯನ್ನು ನೀಡಬಹುದೇನೋ ಅಷ್ಟೇ:))

    @ಪರಾಂಜಪೆ ಅವರೆ, ಕೃಷ್ಣಮೂರ್ತಿ ಅವರೆ,

    ಕವನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಧನ್ಯವಾದಗಳು.

    ಪ್ರತ್ಯುತ್ತರಅಳಿಸು
  7. ತೇಜಸ್ವಿನಿ,
    ಕೊನೆಯ ಸಾಲು ನನಗೆ ತುಂಬ ಇಷ್ಟವಾಯಿತು. ಇದೇ ಬಾಳಿನ ನಿಜವಾದ ದಾರಿ:
    "ನನಗಾಗಿ ನಗುವವರನ್ನು ನಾ ನಗಿಸಬೇಕಿದೆ..."

    ಪ್ರತ್ಯುತ್ತರಅಳಿಸು
  8. ಆಶಾವಾದದ ಕವಿತೆ ಇಂಥ ಕವಿತೆ ಆಗಾಗ ಓದುತ್ತಿದ್ದರೆ ಸುತ್ತಲೂ ಅಡರಿದ ತಮ ಕರಗೀತೇನೋ

    ಪ್ರತ್ಯುತ್ತರಅಳಿಸು
  9. ಆಶಾವಾದದ ಗೀತೆ ಸುಂದರವಾಗಿದೆ

    ಹೊಸ ಸೌಧ ನಿರ್ಮಾಣವಾಗಲು ಹಳೆಯ ನೋವುಗಳನ್ನು ಹೊಸಕಿ ಹಾಕಲೇಬೇಕು

    ಪ್ರತ್ಯುತ್ತರಅಳಿಸು
  10. ಅರ್ಥಪೂರ್ಣ ಕವಿತೆ. ಚೆನ್ನಾಗಿದೆ.

    ಪ್ರತ್ಯುತ್ತರಅಳಿಸು
  11. ನಮ್ಮೊಳಗಿರುವ ಆತ್ಮನನ್ನು ಕಂಡು ಒಮ್ಮೆ ನಕ್ಕರೆ... ಆ ಪರಮಾತ್ಮನನ್ನು ಕಂಡಂತೇ ಅನ್ಕೊಳ್ತೀನಿ...ನಮಗಾಗಿ ನಗುವವರನ್ನು ನಾವು ನಗಿಸುವ ಪ್ರಯತ್ನ ಮಾಡುವುದೇ.. ಆತ್ಮನ, ಪರಮಾತ್ಮನ ದರ್ಶನವೆಂದು ನನ್ನ ಅಭಿಪ್ರಾಯ. ಕವನ ಚೆನ್ನಾಗಿದೆ ತಂಗೀ....


    ಶ್ಯಾಮಲ

    ಪ್ರತ್ಯುತ್ತರಅಳಿಸು
  12. ತೇಜಸ್ವಿನಿಯವರೆ,
    ನೀವು ಬರೆದ ಕವನ ಇಷ್ಟವಾಯ್ತು...ಕೊನೆಯ ಸಾಲುಗಳ೦ತೂ ತು೦ಬಾ ಚೆನ್ನಾಗಿದೆ. ನಿಜ ಮನಸಾರೆ ನಗಬೇಕು..
    ಕವನ ಓದಿದವಳು, ಅಡುಗೆ ಮಾಡುತ್ತಾ ಹಾಗೆಯೇ ಯೋಚಿಸುತ್ತಿದ್ದೆ..ಎಷ್ಟೋ ಸಾರಿ ಯಾರದ್ದೋ ಕಟು ಮಾತುಗಳು,ನಮ್ಮೊಡನೆ ಅವರ ವರ್ತನೆಗಳು, ಮನಸ್ಸಿಗೆ ತು೦ಬಾ ಹಿ೦ಸೆ ಮಾಡುತ್ತವೆ.ನೆನಪಾದಾಗೆಲ್ಲಾ ಮನಸ್ಸು ಮುದುಡುತ್ತದೆ..ನಿಜ ಮನಸ್ಸನ್ನು ನಿರಮ್ಮಳಗೊಳಿಸಿಕೊಳ್ಳಬೇಕು.
    ಹೀಗೆಯೇ ಚೆ೦ದದ ಕವನಗಳು ಬರುತ್ತಿರಲಿ...

    ಈ ದಿನ ಪೇಪರ್ನಲ್ಲಿ ಬ೦ದಿತ್ತು..
    ನಾನು ಓದುವ ಮುನ್ನವೇ, ನನ್ನವರು ಹೇಳಿದರು.
    As long as we don't forgive people who have hurt us they accupy a rentless space in our mind.

    ಪ್ರತ್ಯುತ್ತರಅಳಿಸು
  13. ತೇಜಸ್ವಿನಿ ಮೇಡಮ್,
    ತುಂದರ ಸಂದೇಶವಿರುವ ಕವನ..... ಅದರಲ್ಲೂ
    ಹಾರಬೇಕಿದೆ ಮೇಲೆ ಹಕ್ಕಿಯನೂ ಮೀರಿ
    ಒಳಗೆಳೆದು ಹುದುಗಿಸುವ ನಿನ್ನೆಗಳ,
    ಹಿಂಸಿಸುವ ಮಾತುಗಳ ಬಿಟ್ಟು,
    ಆಗಸವನಿಣುಕಿ ತಾರೆಗಳನೋದುವ
    ಆ ಉಪಗ್ರಹದಂತೆ, ತಿಳಿಯಬೇಕಿದೆ ನನ್ನ ನಾಳೆಗಳ...
    ಈ ಸಾಲುಗಳು ತುಂಬಾ ಸೊಗಸಾಗಿದೆ.....

    ಪ್ರತ್ಯುತ್ತರಅಳಿಸು
  14. ತೇಜಕ್ಕ...

    ಇದು ಒಳ್ಳೆ ಉಪಾಯದ ತರಹವೇ ಅನಿಸುತ್ತದೆ. ಒಳ್ಳೆಯ ಮುಹೂರ್ತ ಸಿಕ್ಕಿದ ಕೂಡಲೇ ಅದನ್ನು ಕಾರ್ಯರೂಪಕ್ಕೆ ತ೦ದು ನಿಮ್ಮಲ್ಲಿ ಫಲಿತಾ೦ಶ ಹ೦ಚಿಕೊಳ್ಳುತ್ತೇನೆ ;)

    ಪ್ರತ್ಯುತ್ತರಅಳಿಸು
  15. ಕೆಲ ನೆನಪುಗಳು ಸುಟ್ಟರೂ ಹೋಗವು . ಅವುಗಳನ್ನು ಮನದ ಮೂಲೆಯ ಕತ್ತಲೆ ಕೋಣೆಯಲ್ಲಿ ಕೂಡಿ ಹಾಕಿ ಬಾಗಿಲು ಮುಚ್ಚಬೇಕಾಗುತ್ತದೆ .
    ಚಂದದ ಬದುಕಿಗಾಗಿ , ಮುಕ್ತ ನಗುವಿಗಾಗಿ, ನಮ್ಮೊಳಗಿನ ನಮ್ಮನ್ನೇ ಹುಡುಕಲಿಕ್ಕಾಗಿ ......
    ಚಂದದ ಕವನ ತೇಜೂ ..

    ಪ್ರತ್ಯುತ್ತರಅಳಿಸು
  16. ತೇಜಸ್ವಿನಿ ಅವ್ರೆ,

    ಎಷ್ಟೊಂದು ಅರ್ಥಪೂರ್ಣ ಕವನ, ಪ್ರತಿಯೊಂದು ಸಾಲುಗಳು ಅರ್ಥಪೂರ್ಣ, ತುಂಬಾ ಚೆನ್ನಾಗಿದೆ.

    ಆ ಲೋಕದಲ್ಲಿರುವ ಪರಮಾತ್ಮನ
    ಈ ಲೋಕದಲ್ಲಿ ಕಾಣುವುದೆಂತೋ?!
    ನಮ್ಮೊಳಗಿರುವ ಆತ್ಮನ ಕಂಡು
    ಇಂದೊಮ್ಮೆ ಮನಸಾರೆ ನಗಬೇಕಿದೆ
    ನನಗಾಗಿ ನಗುವವರನ್ನು ನಾ ನಗಿಸಬೇಕಿದೆ...

    ಈ ಸಾಲುಗಳು ತುಂಬಾನೇ ಹಿಡಿಸಿದವು.

    ಪ್ರತ್ಯುತ್ತರಅಳಿಸು
  17. "ಪರಮಾತ್ಮನ ಈ ಲೋಕದಲ್ಲಿ ಕಾಣುವುದೆಂತೋ?!"
    ನೊ೦ದವರಿಗೆ ಸಾ೦ತ್ವನವೇ ಆಗಿ ಮಿಡಿಯುವ ಸಾತ್ವಿಕ ಹೃದಯದಲ್ಲಿ ಪರಮಾತ್ಮ ಸಾರೂಪಿಯಾಗಿರುತ್ತಾನೆ ಎ೦ದು ನ೦ಬುವವ ನಾನು.
    ಕವನ ತು೦ಬಾ ಇಷ್ಟವಾಯಿತು ಹಾಗೆಯೇ "ಕಹಿ ನೆನಪುಗಳನ್ನು ಮರೆಯಲು" ನಿರೂಪಿಸಿದ ಪರಿಹಾರ(ಉಪಾಯ)ಕೂಡ..ವ೦ದನೆಗಳು.

    ಅನ೦ತ್

    ಪ್ರತ್ಯುತ್ತರಅಳಿಸು
  18. ತೇಜಕ್ಕ,
    ಕವನ ತುಂಬಾ ಇಷ್ಟವಾಯಿತು, ಮನಮುಟ್ಟಿತು........
    ನಿನ್ನೆಗಳ ನೆನಪುಗಳ ಜೊತೆಗೇ ಇಂದಿನದನ್ನು ಸೇರಿಸಿ ನಾಳೆಯನ್ನು ಎದುರುಗೊಳ್ಳಲೇ ಬೇಕಲ್ವಾ?
    ಕಹಿ ನೆನಪುಗಳೂ ಒಮ್ಮೊಮ್ಮೆ ಸಾಂತ್ವಾನ ಹೇಳಬಲ್ಲವು ಅಲ್ವಾ?

    ಪ್ರತ್ಯುತ್ತರಅಳಿಸು
  19. ತೇಜಸ್ವಿನಿ ಮೇಡಮ್,

    ಕಹಿನೆನಪುಗಳನ್ನು ಸುಟ್ಟರೆ, ಕತ್ತಲಲ್ಲಿ ಮುಚ್ಚಿಹಾಕಿ ಹೊಸ ಸೌದವನ್ನು ಕಟ್ಟಲೇಬೇಕು..ಎಷ್ಟು ನಿಜ ಅಲ್ವಾ...ನನಗಾಗಿ ನಗುವವರನ್ನು ನಾ ನಗಿಸಬೇಕು ಎನ್ನುವ ಅಂತ್ಯವೂ ತುಂಬಾ ಇಷ್ಟವಾಯಿತು.

    ಪ್ರತ್ಯುತ್ತರಅಳಿಸು
  20. ಮೊದಲ ಐದು ಸಾಲುಗಳು ತುಂಬಾ ಹಿಡಿಸಿದವು..

    ಪ್ರತ್ಯುತ್ತರಅಳಿಸು
  21. ತೇಜಸ್ವಿನಿಯವರೆ, ಕವನ ಚೆನ್ನಾಗಿದೆ ಮತ್ತು ಸ್ಫೂರ್ತಿದಾಯಕವಾಗಿದೆ.

    ಪ್ರತ್ಯುತ್ತರಅಳಿಸು
  22. ತೇಜಸ್ವಿನಿ..ಮನದಾಳದ ಮಂಥನ ಹೇಗಿರಬಹುದು ಎನ್ನುವುದರ ವಿವಿಧ ಆಯಾಮ ಚನ್ನಾಗಿ ಮೂಡಿದೆ ಸಾಲುಗಳಲ್ಲಿ...ಅದರಲ್ಲೂ ನನಗೆ ಇಷ್ಟವಾದ ನಾಲ್ಕು ಸಾಲುಗಳಲ್ಲಿ..
    ಹಾರಬೇಕಿದೆ ಮೇಲೆ ಹಕ್ಕಿಯನೂ ಮೀರಿ
    ಒಳಗೆಳೆದು ಹುದುಗಿಸುವ ನಿನ್ನೆಗಳ,
    ಹಿಂಸಿಸುವ ಮಾತುಗಳ ಬಿಟ್ಟು,
    ಆಗಸವನಿಣುಕಿ ತಾರೆಗಳನೋದುವ
    ಆ ಉಪಗ್ರಹದಂತೆ, ತಿಳಿಯಬೇಕಿದೆ ನನ್ನ ನಾಳೆಗಳ...

    ಪ್ರತ್ಯುತ್ತರಅಳಿಸು
  23. ಸುಂದರ ಸಾಲುಗಳು, ಅದ್ಬುತ ಕಲ್ಪನೆ, ಸುಮಧುರ ಸಾಹಿತ್ಯ ,,,,,,
    ಪ್ರೀತಿಯ ತೇಜಸ್ವಿನಿ ಮೇಡಮ್,ನಾನು ನಿಮ್ಮ ಬ್ಲಾಗಿಗೆ ಇದೆ ಮೊದಲ ಬೇಟಿ ಸುಂದರ ನಿಮ್ಮ ಕವೊತೆಗಳನ್ನು ಕಂಡ ನನ್ನೀ ಮನಸು ಮೃದುವಾಗಿದೆ ಕವಿತೆಗಳು ತುಂಬಾ ಚನ್ನಾಗಿ ಮೊಡಿ ಬಂದಿವೆ , ಬಿಡುವು ಮಾಡಿಕೊಂಡು ನನ್ನವಳಲೋಕಕ್ಕೆ ಒಮ್ಮೆ ಬೇಟಿ ನೀಡಿ . ನಾನು ನಿಮ್ಮನ್ನು ಆತ್ಮೀಯವಾಗಿ ಸ್ವಾಗತಿಸುತ್ತೇನೆ

    SATISH N GOWDA
    ನನ್ನ ಬ್ಲಾಗ್ : ನನ್ನವಳಲೋಕ
    http://nannavalaloka.blogspot.com
    ನನ್ನ ಸ್ನೇಹಲೋಕ :(orkut)
    satishgowdagowda@gmail.com

    ಪ್ರತ್ಯುತ್ತರಅಳಿಸು
  24. ಹಾರಬೇಕಿದೆ ಮೇಲೆ ಹಕ್ಕಿಯನೂ ಮೀರಿ
    ಒಳಗೆಳೆದು ಹುದುಗಿಸುವ ನಿನ್ನೆಗಳ,
    ಹಿಂಸಿಸುವ ಮಾತುಗಳ ಬಿಟ್ಟು,
    ಆಗಸವನಿಣುಕಿ ತಾರೆಗಳನೋದುವ
    ಆ ಉಪಗ್ರಹದಂತೆ, ತಿಳಿಯಬೇಕಿದೆ ನನ್ನ ನಾಳೆಗಳ...
    amazing lines ....... jus loved these lines.... a big thanks for this wonderful poem..

    ಪ್ರತ್ಯುತ್ತರಅಳಿಸು
  25. ಕವನವನ್ನು ಮೆಚ್ಚಿ ಸ್ಪಂದಿಸಿದ ಎಲ್ಲರಿಗೂ ತುಂಬಾ ಧನ್ಯವಾದಗಳು. ಧನಾತ್ಮಕ ಚಿಂತನೆಯಿಂದ ನಮ್ಮ ನಾಳೆ ಉತ್ತಮವಾಗುವುದೆನ್ನುತ್ತಾರೆ. :)

    -ತೇಜಸ್ವಿನಿ.

    ಪ್ರತ್ಯುತ್ತರಅಳಿಸು
  26. ತುಂಬಾ ಧನಾತ್ಮಕ ಸಂದೇಶದ ಕವನ-ಇಷ್ಟವಾಯಿತು. ತಮ್ಮ ಸಲಹೆಯನ್ನೂ ನಾನು ಉಪಯೋಗಿಸುವೆ ಕೆಲವು ಕಹಿಗಳನ್ನು ಮರೆಯಲು.
    ಧನ್ಯವಾದಗಳು.

    ಪ್ರತ್ಯುತ್ತರಅಳಿಸು
  27. ಸುಮ್ಮನೆ ದೊಡ್ಡ ದೊಡ್ಡ ಶಬ್ದ ಹೇಳಿ ಯಾರಿಗೂ ಅರ್ಥ ಆಗದೆ ಹೋದತರ ಹೇಳೋದ್ಕಿಂತ ನನ್ಗನ್ಸಿದ್ ಇಷ್ಟು ..........ಸಕತ್ ಫೀಲ್ ಆಯಿತು ಅಷ್ಟೇ .
    ಆದರೂ ಇದು "ನಮ್ಮೊಳಗಿನ ನನ್ನತನವನ್ನು ಎದ್ದೇಳಿಸುವ ಕಾವ್ಯಪುನ್ಜ "(!!!!!)...
    ಮನದಾಸೆಯ ಹ್ರದಯದಿ ಪಿಸುಗುಡುವ ಗೋಲ ಗುಂಬಜ .
    ಮಧ್ಯದಲೊಂದು ಸಾಲು
    "ಹಾರ ಬೇಕಿದೆ ಹಕ್ಕಿಯನೂ ಮೀರಿ "
    ಭಾವವಿದೆ ಅದರೊಳಗೆ ,
    ಸ್ಪೂರ್ತಿಯದು ಹಾರಲು ಆಗಸವನೂ ಮೀರಿ !!(?)


    ಬರ್ತಾ ಇರ್ತೀನಿ ..ಹಿಂಗೆ ತರ್ಲೆ ಮಾತು ಹೊತ್ತು ,ಪ್ರತಿ ಸುತ್ತು ....
    ಬೇಜಾರಾಗ್ಬೇಡಿ ...
    ಧನ್ಯವಾದಗಳು

    ಪ್ರತ್ಯುತ್ತರಅಳಿಸು