Thursday, March 26, 2009

ಯುಗಾದಿಯ ಸಂಭ್ರಮದ ಜೊತೆಗೆ ಮಾನಸವು ಪಡೆಯುತಿದೆ ಅಲ್ಪವಿರಾಮ,

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ.



ಎಲ್ಲರಿಗೂ ಯುಗಾದಿಯ ಹಾರ್ದಿಕ ಶುಭಾಶಯಗಳು.




ನಿಮ್ಮೆಲ್ಲರ ಬಾಳಲ್ಲಿ ಹೊಸ ವರುಷವು ಹೊಸ ಹರುಷವ ಹೊಸತು ಹೊಸತು ತರಲಿ ಎಂದು ಮನಃಪೂರ್ವಕವಾಗಿ ಹಾರೈಸುತ್ತಿದೆ ನನ್ನ ಮಾನಸ.




ಹಾಗೆಯೇ ಮಾನಸವೂ ಮರೆಯಾಗುತ್ತಿದೆ ಅಲ್ಪ ಕಾಲಕ್ಕೆ. ಬಹು ಬೇಗ ಹಿಂತಿರುಗುವ ಆಶಾವಾದದೊಂದಿಗೆ ಪಡೆಯಹೊರಟಿದೆ ಅಲ್ಪವಿರಾಮ,

ಅಲ್ಲಿಯವರೆಗೆ ಸದಾ ಹಸಿರಾಗಿರುವಿರಿ ನೀವೆಲ್ಲಾ ನನ್ನ ಮಾನಸದಲ್ಲಿ ಸವಿ ನೆನಪಾಗಿ.

ಶುಭಾಶಯಗಳೊಂದಿಗೆ,
ತೇಜಸ್ವಿನಿ ಹೆಗಡೆ.

Monday, March 9, 2009

ಲಘುವಾಗೆಲೆ ಮನ..ಗೆಲವಾಗೆಲೆ ಮನ...

ಬಾಲ್ಯದಿಂದಲೂ ನನಗೆ ಸಾಗರವೆಂದರೆ ಅದೇನೋ ಹುಚ್ಚು ಸೆಳೆತ. ಅದಮ್ಯ ಕುತೂಹಲ. ತೀರದ ಆಕರ್ಷಣೆ. ಉಷೆಯ ರಂಗು ಚೆಲ್ಲಿ ಮಂಕಾಗಿ, ಮಂದವಾಗಿ ಕೊನೆಗೆ ನಿಶೆಯಲ್ಲಿ ಕರಗಿ, ಇಂದುವಿನ ನಗೆಯ ಬೆಳಕು ಚೆಲ್ಲುವವರೆಗೂ ಶರಧಿಯ ಕಪ್ಪು-ಬಿಳುಪಿನಾಟವನ್ನು ನೋಡುವಾಸೆ. ಹಾಗೇ ನೋಡುತ್ತಾ ಕಡುನೀಲಿ ಬಣ್ಣದ ಮೇಲ್ಮೈ ಹೇಗೆ ಬಿಳಿ ನೊರೆಯಾಗಿ ಹೊಮ್ಮಿ ನನ್ನ ಪಾದವ ಮುತ್ತಿಕ್ಕಿ ನನ್ನಿರುವನ್ನೇ ನನಗೆ ಅರಿವಾಗಿಸುವಾಗ ಮಹದಾನಂದವನ್ನು ಹೊಂದಿದ ಅನುಭವ. ಅಂದೂ ಹಾಗೇ ಥಟ್ಟೆಂದು ಸಸಿಹಿತ್ಲು ಬೀಚ್‌ಗೆ ಹೊರಟೇ ಬಿಟ್ಟೆ. ಒಂಟಿಯಾಗಲ್ಲ, ಜಂಟಿಯಾಗಿ.

ಮಂಗಳೂರಿನಿಂದ ಸಸಿಹಿತ್ಲುವಿಗೆ ಸುಮಾರು ೪೫ ನಿಮಿಷಗಳ ಪ್ರಯಾಣವಷ್ಟೇ. ಸುರತ್ಕಲ್ ದಾಟಿ ಮತ್ತೆ ಸುಮಾರು ಅರ್ಧಗಂಟೆಯ ನಂತರ ಸಿಗುವ ಮುಕ್ಕದಲ್ಲಿ ಎಡರಸ್ತೆಗೆ ಸಾಗಿದರೆ ಸಿಗುವುದು ಸಸಿಹಿತ್ಲು. ಅದೇಕೋ ಎಂತೋ ಎಲ್ಲಾ ಸಮುದ್ರಗಳಿಗಿಂತಲೂ ಈ ಸಮುದ್ರ ನನ್ನ ಹೆಚ್ಚು ಸೆಳೆದಿದೆ. ತುಸು ಚರಂಡಿ ವಾಸನೆಗಳು ಮೊದಲು ಮೂಗಿಗೆ ಬಡಿದರೂ ಸ್ವಲ್ಪ ದೂರ ಸಾಗಿದರೆ ಆ ವಾಸನೆಯೂ ಮಾಯವಾಗಿ ಪ್ರಶಾಂತ ಸ್ಥಳ ಸಿಗುವುದು. ಅದೂ ಅಲ್ಲದೇ ಈ ಜಾಗ ಜನರಿಂದ ಗಿಜುಗುಟ್ಟುವ ತಣ್ಣೀರುಬಾವಿ, ಮಲ್ಪೆ, ಕಾಪು ಬೀಚ್ ಗಳಿಗಿಂತಲೂ ಹೆಚ್ಚು ಜನವಿರಳವಾಗುರುವುದೂ ನನ್ನ ಸೆಳೆತಕ್ಕೆ ಕಾರಣವಾಗಿತ್ತು.

ಆದಷ್ಟು ಹೊತ್ತು ಕಪ್ಪು-ಬಿಳಿ ತೊರೆಗಳ ತೆರೆ-ಮರೆಯಾಟವನ್ನೂ ಕಣ್ಣೋಟದಲ್ಲೇ ತುಂಬಿಕೊಂಡು ಬರಬೇಕೆಂದು ಮೂರುಗಂಟೆಗೆಲ್ಲಾ ಮನೆ ಬಿಟ್ಟಿದ್ದೆವು. ಸುರತ್ಕಲ್ ಹತ್ತಿರ ಬರಲು, ಇನ್ನು ಕೆಲವೇ ಸಮಯಗಳಲ್ಲಿ ಗಮ್ಯತಲುಪುವ ಹುರುಪು ಬಂತು. ಸಿ.ಡಿ.ಯಿಂದ ಹೊರಹೊಮ್ಮುತ್ತಿದ್ದ "ಯಾವ ಮೋಹನ ಮುರಳಿ ಕರೆಯಿತೋ ದೂರತೀರಕೆ ನಿನ್ನನ್ನು.." ಹಾಡನ್ನು ಮನದಲ್ಲಿ ತುಂಬಿಕೊಳ್ಳುತ್ತಾ ಕಣ್ಮುಚ್ಚಿ ಒರಗಬೇಕೆಂದೆಣಿಸುವಷ್ಟರಲ್ಲೇ, ಕಾರು ಸುರತ್ಕಲ್ ಬಸ್‌ನಿಲ್ದಾಣದಲ್ಲಿರುವ ಎಡರಸ್ತೆಗೆ ತಿರುಗುತ್ತಿರುವುದನ್ನು ಕಂಡು ಗಲಿಬಿಲಿಗೊಂಡೆ.

"ಹೇ ಮಾನ್ಯ... ನಾವು ಹೋಗ್ತಾ ಇರೋದು ಎಲ್ಲಿಗೆ? ಸಸಿಹಿತ್ಲುವಿಗೆ ತಾನೆ? ಅದಿನ್ನೂ ದೂರ ಇದ್ಯಲ್ಲೇ!! ನೊಡು ನೀನು ಬೀಚ್‌ಗೆ ಹೋಗೋಣ ಅಂದಿದ್ದಕ್ಕೇ ನಾನು ಹೊರಟಿದ್ದು. ಅದು ಬಿಟ್ಟು ಇನ್ನೆಲ್ಲಿಗೋ ಹೋಗೋದಾದ್ರೆ ಸುಮ್ನಿರೊಲ್ಲಾ ನೋಡು.. ಕಾರ್ ಹಿಂದೆ ತೊಗೋ.." ಎಂದು ಸ್ವಲ್ಪ ಗಟ್ಟಿಯಾಗಿ ಕೇಳಿದರೆ, ಆಕೆಯಿತ್ತಿದು ಮಾತ್ರ ಅದೇ ಎಂದಿನ ಸುಂದರ ಮುಗುಳ್ನಗೆಯ ಉತ್ತರವನ್ನು.
"ನೋಡು ಮಾನ್ಯ... ನೀ ಹೀಂಗೆ ಬರೀ ನಕ್ಕು ಬಿಟ್ರೆ ನಂಗೇನೂ ತಿಳಿಯೊಲ್ಲ. ನಾನೇನೂ ನಿನ್ನ ಹಾಗೆ ಸೈಕೋಲಜಿಸ್ಟ್ ಅಲ್ಲ. ಮನಃಶಾಸ್ತ್ರ ಓದಿರೋಳು ನೀನು.. ನಾನಂತೂ ಅಲ್ಲ. ಅದ್ಕೇ ಹೇಳಿದ್ದು ಬಿಡ್ಸಿ ಹೇಳು ಎಲ್ಲಿ? ಎತ್ತ? ಅಂತ... ಇಲ್ದೇ ಹೋದ್ರೆ ನಾನಂತೂ ನೀ ಕರ್ಕೊಂಡು ಹೋಗೋ ಜಾಗಕ್ಕೆ ಬರೋಳಲ್ಲ ನೋಡು.." ಎಂದು ಈ ಸಲ ಧಮ್ಕಿಯನ್ನೇ ಹಾಕಿದಾಗ ಗೊಳ್ಳೆಂದು ನಕ್ಕುಬಿಟ್ಟಳು ಮಾನ್ಯ.

"ಅಲ್ವೇ ಮಂಕೆ.. ಕೇವಲ ಸೈಕೋಲಜಿ ಓದಿದ್ ಮಾತ್ರಕ್ಕೆ ಥಟ್ಟೆಂದು ಇನ್ನೊಬ್ರ ಮನಸ್ಸು ತಿಳ್ಯೋ ಹಾಗಿದ್ದಿದ್ರೆ ಯಾಕೆ ಈ ನಾರ್ಕೋ ಅಲಾಲಿಸ್ ಟೆಸ್ಟ್, ಹಿಪ್ನಾಟಿಸಂ ಎಲ್ಲಾ ಮಾಡ್ಬೇಕಾಗಿತ್ತು ಹೇಳು? ನೀ ಹೇಳೊದ್ನ ಕೇಳಿದ್ರೆ ಯಾರಾದ್ರೂ ನಕ್ಕಾರು ಕಣೆ.... ಹೋಗ್ಲಿ ಬಿಡು. ನಾನೇನೋ ನಿಂಗೆ ಸರ್‌ಪ್ರೈಸ್ ಕೊಡೋಣ ಅಂತಿದ್ದೆ... ಆದ್ರೆ ನೀನೆಲ್ಲಿ ಬಿಡ್ತೀಯಾ ನಿನ್ನ ತರಾತುರಿನಾ.. ಹಾಂಗೆ ಕೋಪ ಮಾಡ್ಕೋ ಬೇಡ. ನೀ ಈಗ ಸಸಿಹಿತ್ಲು ಬೀಚ್‌ಗೇ ಹೋಗುದು ಎರಡು ಕಾರಣಗಳಿಗೆ ತಾನೆ? ಒಂದು ಅಲ್ಲಿ ಜನಜಾತ್ರೆ ಇರೊಲ್ಲಾ ಅಂತ ಇನ್ನೊಂದು ಹಾಗೂ ಪ್ರಮುಖವಾಗಿ ನಿನ್ನೊಲವಿನ ಸಾಗರ ನಿನಗೋಸ್ಕರ ಕಾಯ್ತಿದ್ದಾನೆ ಎಂದು ಸರಿ ತಾನೆ? ಇವೆರಡೂ ಫುಲ್‌ಫಿಲ್ ಆಗೋ ಜಾಗಕ್ಕೇ ಕರ್ಕೊಂಡು ಹೋಗ್ತಾ ಇದ್ದೀನಿ ಅಲ್ಲೀ ತನ್ಕ ಸುಮ್ನಿರು. ಇದು ಒಂದು ಹೊಸ ಜಾಗ ಇತ್ತೀಚಿಗೆ ನಾ ಕಂಡಕೊಂಡದ್ದು. ನಿಂಗೂ ತೋರ್ಸೋಣ ಅಂತಾನೇ ಕರ್ಕೊಂಡು ಬಂದಿದ್ದು.." ಎಂದು ಹೇಳಲು ತುಸು ನಿರಾಳಳಾದೆ.

ಟಾರ್ ಹೊದೆಸಿದ ಪುಟ್ಟ ರಸ್ತೆಯ ಎಡಗಡೆಗೆ ಮಂಗಳೂರು ಹಂಚು ಹೊದೆಸಿದ ಪುಟ್ಟ ಮನೆಗಳು. ಬಲಗಡೆಗೆ ರಸ್ತೆಯುದ್ದಕ್ಕೂ ಮೇಲೆತ್ತಿ ನಿಂತಿದ್ದ ಸಾಲು ತೆಂಗಿನ ಮರಗಳು. ಮರಗಳ ಬುಡದಿಂದ ಪ್ರಾರಂಬವಾಗುವ ಮರಳು ಕೊನೆಗೊಳ್ಳುವುದು ತೆರೆಗಳ ತೆಕ್ಕೆಯೊಳಗೇ. ಅಬ್ಬಾ..!! ತುಂಬಾ ಸುಂದರ ಜಾಗವದು. ಹಿಂದೆಂದೂ ನಾ ನೊಡಿರಲಿಲ್ಲ. ಸಸಿಹಿತ್ಲುವಿಗಿಂತಲೂ ಜನವಿರಳ, ಪ್ರಶಾಂತ. ಎಲ್ಲಕ್ಕಿಂತ ಹೆಚ್ಚಾಗಿ ಅಲ್ಲಿಯ ಕೆಟ್ಟವಾಸನೆ ಕೊನರೂ ಇಲ್ಲೆಲ್ಲೂ ಇರಲಿಲ್ಲ. ಅಲ್ಲಿಯಾದರೆ ಆ ವಾಸನೆ ಮಾಯವಾಗುವವರೆಗೂ ಪ್ರಯಾಣಿಸಿ ಸೂಕ್ತ ಜಾಗ ಹುಡುಕಿ ಕೂರಬೇಕಿತ್ತು. ಪ್ರತಿಸಲವೂ ಹೊಸ ಜಾಗದ ಬೇಟೆಯಾಗುತ್ತಿತ್ತು. ಇಲ್ಲಿಯಾದರೋ ಕಣ್ಣು ಚಾಚಿದಷ್ಟೂ ದೂರ ಚಿಪ್ಪು ತುಂಬಿದ ಮರಳ ರಾಶಿಗಳು ಕೈ ಬೀಸಿ ಕರೆಯುತ್ತಿದ್ದವು. ಸಾಗರನ ಭೋರ್ಗರೆತದ ಜೊತೆ ಹಸಿಮರಳ ಕಂಪು ಸ್ವಾಗತ ಕೋರುತ್ತಿದ್ದವು.

ಉಪ್ಪಾದರೂ ಕಡಲು ನೀರ ಒಡಲಲ್ಲಿಟ್ಟು
ಸೀನೀರ ಮೋಡಗಳ ತಾರದೇನು ?
ಸಾಗರಕೆ ಬಿದ್ದ ಜಲ ಕೂಡಿಟ್ಟ ಅನ್ನ ಬಲ,
ಕಾಯುವುದು ಸಮಯದಲಿ ಲೋಕವನ್ನು - ಎನ್.ಎಸ್.ಲಕ್ಷ್ಮೀನಾರಾಯಣರ ಕವನದ ತುಣುಕೊಂದು ಹಾಗೇ ನೆನಪಾಗಲು ತುಂಬಾ ಖುಶಿಯಾಗಿ ಮಾನ್ಯತಾಳ ಕಡೆ ನೊಡಿ ಮುಗುಳ್ನಕ್ಕೆ. ಅವಳ ಮುಖದ ತುಂಬೆಲ್ಲಾ ನನ್ನ ಸಂತಸದ ನಗುವೇ ಪ್ರತಿಫಲಿಸುತ್ತಿತ್ತು.

ದಾರಿಯಿಂದ ತುಸು ದೂರದಲ್ಲಿದ್ದ, ಯಾವತ್ತೋ ಗಾಳಿ ಮಳೆಯ ರಭಸಕ್ಕೆ ಉರುಳಿ ಬಿದ್ದಿದ್ದ ತೆಂಗಿನ ಮರದ ತುಂಡೊಂದು ನಮ್ಮ ಆಸನವಾಯಿತು. ಅಲ್ಲಿಂದ ಕಡಲೂ ಚೆನ್ನಾಗಿ ಕಾಣುತ್ತಿತ್ತು. ತೆರೆಗಳ ಏರಿಳತದ ನೃತ್ಯ ಕಣ್ಮುಂದೆ ಕುಣಿಯುತ್ತಿತ್ತು. ರವಿ ಬಾನಂಚನ್ನು ಮೆಲ್ಲನೆ ಜಾರುವ ಸಂಚಿಗೆ ಹೊಂಚು ಹಾಕುವಂತಿದ್ದ. ತನ್ನ ತೆಕ್ಕೆಗೆ ಸಿಕ್ಕಿದ ಮರಳಷ್ಟನ್ನೂ ನುಂಗಿ, ತನ್ನ ಹಸಿವನ್ನು ನೀಗಿಸಿಕೊಳ್ಳುತ್ತಾ, ಹೆಚ್ಚಾದುದ ಮರಳನ್ನು ಮತ್ತೆ ಹೊರಕಾರಿ ದಬ್ಬುತ್ತ, ಮತ್ತೆ ಸೆಳೆಯುತ್ತಾ ಇದ್ದ ತೆರೆಗಳನ್ನು ಕಂಡು ಏಕೋ ಇದ್ದಕಿದ್ದಂತೆ ನನಗೆ ಆ ಹುಡುಗಿಯ ನೆನಪಾಯಿತು. ಮನಸಿನೊಳಗೆ ಕ್ರಮೇಣ ಕಡಲ ಗಾಢ ನೀಲಿಯೇ ತುಂಬಿದಂತ ಅನುಭವ. ನನ್ನೊಳಗಿನ ಅನ್ಯಮನಸ್ಕತೆ ನನ್ನ ಮುಖದಲ್ಲೂ ಪ್ರಕಟವಾಗಿರಬೇಕು. ಅದನ್ನು ಗಮನಿಸಿದ ಮಾನ್ಯತಾ - "ಏನೇ ರಾಮೇಶ್ವರಕ್ಕೆ ಹೋದ್ರೂ ಶನೀಶ್ವರ ಬಿಡ ಎನ್ನುವಂತೆ ಇಷ್ಟೊಳ್ಳೆ ಜಾಗಕ್ಕೆ ಕರ್ಕೊಂಡು ಬಂದ್ರೂ ಏನೋ ಬೇಡದ ವಿಚಾರ ತಲೆಕೊರೀತಾ ಇದ್ದಾಂಗಿದೆ" ಎನ್ನಲು ನಗು ಮೂಡಿತು.

"ಇಲ್ವೇ ಮಾನ್ಯ. ಇದು ಬೇಡದ ವಿಚಾರ ಅಲ್ಲಾ.. ಬೇಕಾದ್ದೇ. ಕೆಲದಿನಗಳ ಹಿಂದೆ ನಡೆದ ಒಂದು ಘಟನೆ ಈಗ ನೆನಪಿಗೆ ಬಂತು. ಹಾಗೆ ನೊಡಿದ್ರೆ ಇದು ನನಗಿಂತಲೂ ನಿನಗೇ ಬೇಕಾದ್ದು. ನಿನ್ನ ಅನಿಸಿಕೆ ಏನೂ ಅಂತಾ ತಿಳ್ಕೊಳ್ಳೋ ಆಸೆ ಇದೆ.." ಎಂದಾಗ ಗೊಂದಲಕ್ಕೆ ಬಿದ್ದಳು ಆಕೆ.

"ನೋಡು ಮತ್ತೆ ನಾ ಓದಿದ್ದನ್ನು ಟೆಸ್ಟ್ ಮಾಡ್ಬೇಕು ಅಂತಿದ್ರೆ ಬಿಟ್ಬಿಡು. ನಿನ್ನೊಳಗಿನ ಆಲೋಚನೆ ನನ್ಗೆ ನೀ ಹೇಳ್ದೆ ಗೊತ್ತಾಗೊಲ್ಲ. ಅದೇನೂ ಅಂತ ಸರಿಯಾಗಿ ಹೇಳಿ. ಆಮೇಲೆ ನಂಗೇನು ಅನ್ಸೊತ್ತೆ ಅಂತ ಹೇಳ್ತೀನಿ" ಎನ್ನಲು ನಾನು ನೇರವಾದೆ.
"ನೋಡು ನಾ ಹೇಳೋ ಕಥೆ ನಿಜವಾದದ್ದು. ಈ ಕಥೆಯೊಳಗಿನ ವ್ಯಕ್ತಿಯೇ ನನಗೆ ಹೇಳಿದ್ದು. ಮತ್ತೆ ಆ ವ್ಯಕ್ತಿಯ ಊರು, ಕೆಲಸ, ಕಂಪನಿ ಹೆಸ್ರೂ ಏನನ್ನೂ ಕೇಳಕೂಡ್ದು. ಇಷ್ಟಕ್ಕೂ ವ್ಯಕ್ತಿಯ ವೈಯಕ್ತಿಕ ಗೌಪ್ಯತೆಯನ್ನು ಕಾಪಾಡುವ ಬದ್ಧತೆಯ ಬಗ್ಗೆ ನನ್ಗಿಂತ ನಿನ್ನ ಪ್ರೊಫೆಷನ್‌ಗೇ ಸರಿಯಾಗಿ ಗೊತ್ತು.." ಎಂದು ಗೊತ್ತಿಲ್ಲದೇ ಮತ್ತೆ ಅವಳ ಕಾಲೆಳೆದು ಬಿಟ್ಟಿದ್ದೆ. ಪುಣ್ಯಕ್ಕೆ ಆಕೆಗೂ ನನ್ನ ಮಾತಿನೊಳಗಿದ್ದ ಗಂಭೀರತೆಗೆ ಗಮನವಿದ್ದುದರಿಂದ ಸರಿಹೋಯ್ತು. ನನ್ನ ಶರತ್ತುಗಳಿಗೆ ಒಪ್ಪಿಕೊಂಡು ನಾ ಹೇಳುವುದನ್ನು ಕೆಳಲು ಉತ್ಸುಕಳಾದಳು. ನನ್ನೊಳಗಿನ ಕಥೆಗೆ ನಾಂದಿಯಿಟ್ಟೆ.

"ಮಾನ್ಯ ನಿಂಗೇ ಗೊತ್ತು ನನ್ನ ಈ ಕಥೆ, ಕವನ, ಲೇಖನ ಬರೆಯೋ ಹುಚ್ಚು, ಓದೋ ಆಸಕ್ತಿ ನನ್ನ ಬ್ಲಾಗ್ ಪ್ರಪಂಚಕ್ಕೆ ಎಳೆದೊಯ್ತು. ಈ ಒಂದು ಪ್ರಪಂಚ ನನಗೆ ಹಲವಾರು ಸಮಾನ ಆಸಕ್ತರನ್ನು, ಪ್ರತಿಭಾವಂತರನ್ನು, ಸ್ನೇಹಿತರನ್ನು ಪರಿಚಯಿಸಿದೆ. ಅಪರಿಚಿತರನ್ನು ಆತ್ಮೀಯರನ್ನಾಗಿಸಿದೆ. ಹೀಗಿರಲು ಒಂದು ದಿನ ನನಗೊಂದು ಹುಡುಗಿಯ ಇ-ಮೈಲ್ ಬಂತು.
ಅದ್ರಲ್ಲಿ ಆಕೆ ತನ್ನ ಹೆಸರು ಸೌಮ್ಯ ಎಂದೂ, ನನ್ನ ಬರಹಗಳನ್ನೆಲ್ಲ ಓದುತ್ತಾ ಬಂದಿರುವೆ ಎಂದೂ, ಬಹು ಮೆಚ್ಚುಗೆಯಾಗಿವೆಯೆಂದೂ ಬರೆದಿದ್ದಳು. ಜೊತೆಗೆ ತನ್ನ ಕಿರುಪರಿಚಯವನ್ನೂ ಕೊಟ್ಟಿದ್ದಳು. ಅಂದರೆ ಊರು, ಮಾಡುತ್ತಿರುವ ಕೆಲಸ, ಕಂಪನಿ ಹೆಸರು ಇತ್ಯಾದಿ. ಆಕೆಯ ಮೈಲ್‌ಗೆ ನಾನೂ ಉತ್ತರಕೊಟ್ಟೆ. ಹೀಗೇ ಒಂದೆರಡೂ ಮೈಲ್ ಎಕ್ಸ್‌ಚೇಂಜ್ ಆದ ಮೇಲೆ ಒಂದಿ ದಿನ ಆಕೆ, "ನಿಮ್ಮನ್ನು ನೋಡಬೇಕೆಂದೆನಿಸುತ್ತಿದೆ... ನಿಮ್ಮ ಪುಸ್ತಕಗಳನ್ನು ಕೊಂಡೂ ಓದುವಾಸೆಯಾಗಿದೆ....ಬರಬಹುದೇ?" ಎಂದು ಕೇಳಿದಳು. ಜೊತೆಗೆ ಮೊಬೈಲ್ ನಂಬರ್ ಕೂಡಾ ಇತ್ತು. ನನಗೋ ಏನೋ ಅಳುಕು. ಕಂಡು ಪರಿಚಯ ಇಲ್ಲದ ವ್ಯಕ್ತಿಯೊಡನೆ ಎಂತು ಭೇಟಿಯಾಗುವುದು ಎಂದು. ಆದರೆ ಆಕೆಯು ಹೇಳಿದ್ದೆಲ್ಲಾ ಸತ್ಯವೇ ಆಗಿದ್ದಲ್ಲಿ, ನಾನು ತಿರಸ್ಕರಿಸಿದರೆ ಚೆನ್ನಾಗಿರದು ಎಂಬ ಗೊಂದಲ ಬೇರೆ. ಕೊನೆಗೆ ಅವಳ ನಂಬರಿಗೆ ಕಾಲ್ ಮಡಿದೆ. ಹೆಸರಿಗೆ ತಕ್ಕಂತಿತ್ತು ಆಕೆಯ ಧ್ವನಿ. ಮೊದಲ ಕರೆಯಲ್ಲೇ ಮನೆಗೆ ಕರೆಯದೇ ಹಾಗೇ ಸುಮ್ಮನೆ ಮಾತಾಡಿಯಿಟ್ಟೆ. ಕ್ರಮೇಣ ಅಂದರೆ ಸುಮಾರು ಒಂದು ತಿಂಗಳ ನಂತರ ನಮ್ಮ ಪರಿಚಯ ಸಾಕಷ್ಟಾಗಿತ್ತು. ಆಕೆಯನ್ನು ನಂಬಲು ನನಗೆ ಕಲವಾರು ಪುರಾವೆಗಳೂ ಸಿಕ್ಕಿದ್ದವು. ತನ್ಮಧ್ಯೆ ಅವಳ ಗೆಳತಿಯೊಬ್ಬಳು ನನಗೂ ಬಹು ಮೊದಲೇ ಸುಪರಿಚಿತಳಾಗಿದ್ದುದು ತಿಳಿದುಬಂತು. ಇದೂ ಸೌಮ್ಯಳನ್ನು ಮನೆಗೆ ಕರೆಯಲು ಸಹಾಯವಾಯಿತು.ಅಂತೆಯೇ ಒಂದು ದಿನ ಆಕೆ ಮನೆಗೆ ಬಂದಳು. ಸುಮಾರು ೨೨-೨೩ ವರುಷದ ಹುಡುಗಿ. ಮುಖದಲ್ಲೂ ಸೌಮ್ಯ ಕಳೆಯೇ. ಒಂದು ಭೇಟಿಯೇ ಆಕೆಯ ಪ್ರತಿಯಿದ್ದ ಅಳಿದುಳಿದ ಸಂಶಯವನ್ನೂ ತೊಡೆದುಹಾಕಿತು.

ಹೀಗಿರಲು ಒಮ್ಮೆ ಇದ್ದಕಿದ್ದಂತೆ ಆಕೆ ಕೇಳಿದಳು "ನಾನೊಂದು ಕಥೆ ಹೇಳ್ತೀನಿ. ನೀವು ಅದನ್ನು ಕಥೆ ಬರೀತೀರಾ. ನಿಮ್ಮ ಕೈಲಿ ಆ ಕಥೆ ಚೆನ್ನಾಗಿ ಮೂಡೊತ್ತೆ ಅನ್ನೋ ನಂಬಿಕೆ ನಂದು. ಅದ್ಯಾಕೋ ಏನೋ ನಿಮ್ಮಲ್ಲಿ ಹೇಳಬೇಕೆಂದೆನಿಸುತ್ತಿದೆ.." ಎಂದಳು. ನನಗೋ ಸ್ವಲ್ಪ ಆಶ್ಚರ್ಯವಾಯಿತು. ತುಸು ಅನುಮಾನಿಸಿದರೂ ಆಮೇಲೆ ಒಪ್ಪಿಕೊಂಡೆ. ಆಮೇಲೆ ಆಕೆ ಕಥೆಯನ್ನು ಹೇಳಿದಾಗ ಮಾತ್ರ ದಂಗಾಗಿ ಹೋದೆ. ಹೀಗೂ ಇರಬಹುದೆಂದು ಎಣಿಸಿಯೇ ಇರಲಿಲ್ಲ. ನಿನಗೆ ಈ ವಿಷಯವೆಲ್ಲಾ ಹೇಗೆ ಗೊತ್ತು? ಇಷ್ಟು ಸರಿಯಾಗಿ ನಡೆದದ್ದನ್ನು ಇದ್ದ ಹಾಗೇ ಹೇಗೆ ಹೇಳುತ್ತಿರುವೆ? ನೀನು ಎಲ್ಲವನ್ನೂ ವಿವರವಾಗಿ ಹೇಳಿದರೆ ಮಾತ್ರ ನಾ ಬರೆಯಬಹುದು ಎಂದೆ. ತುಸು ಕಾಲ ಮೌನವಾಗಿದ್ದ ಆಕೆ ಮೆಲ್ಲನೆ ನುಡಿದಳು.."ಇದು ನನ್ನ ಸ್ವಂತ ಕಥೆ ಮೇಡಂ. ದಯವಿಟ್ಟು ಯಾರಲ್ಲೂ ಹೇಳದಿರಿ. ಈ ಕಥೆ ನಿಮಗೆ ಮಾತ್ರ ಹೇಳುತ್ತಿರುವೆ. ನಿಮ್ಮನ್ನಲ್ಲದೇ ನನ್ನ ಬದುಕಿಸಿದ ದೂರದ ಸಂಬಂಧಿಗೆ ಮಾತ್ರ ಗೊತ್ತು ಇದು. ನನ್ನಲ್ಲಿ ಕೆಲವು ಸಂದೇಹಗಳಿವೆ ಅದೇ ಸಂದೇಹ ನಿಮಗೂ ಈ ಕಥೆ ಕೇಳಿದಮೇಲೆ ಬರಬಹುದು. ನಿಮಗೆಂದಾದರೂ ಉತ್ತರ ಸಿಕ್ಕರೆ ನನಗೂ ತಿಳಿಸಿ..." ಎಂದಳು. ಕೆಲವೊಂದು ಪ್ರಶ್ನೆಗಳನ್ನು ಹಾಕಿ ಕೆಲವು ಸಂದೇಹಗಳಿಗೇನೋ ಉತ್ತರ ಪಡೆದೆ. ಆದರೆ ಇನ್ನೂ ಹಲವು ಸಂದೇಹಗಳು ಹಾಗೇ ಉಳಿದಿವೆ. ಅದು ಮನಸಿಗೆ ಸಂಬಂಧಿಸಿದ್ದು. ಮನಃಶಾಸ್ತ್ರದಲ್ಲಾದರೂ ಉತ್ತರ ಸಿಗಬಹುದೇನೋ ಎಂದು ನಿನ್ನಲ್ಲಿ ಕೇಳುತ್ತಿರುವೆ. ಹಾಂ.. ನಾನು ಆಕೆಯ ಒಪ್ಪಿಗೆ ಪಡೆದೇ ನಿನ್ನಲ್ಲಿ ಅವಳ ಕಥೆ ಹೇಳುತ್ತಿದ್ದೇನೆ. ಕೇವಲ ಘಟನೆಯನ್ನು ಮಾತ್ರ ವಿವರಿಸುವೆ. ಹೆಸರೊಂದನ್ನು ಬಿಟ್ಟು ಆಕೆಯ ಬೇರಾವ ವೈಯಕ್ತಿಕ ವಿವರಗಳನ್ನೂ ನೀಡಲಾರೆ" ಎಂದು ಅಷ್ಟೊತ್ತೂ ಮಾತಾಡಿ ಒಣಗಿದ ಗಂಟಲಿಗೆ ತುಸು ವಿಶ್ರಾಂತಿ ನೀಡುತ್ತಾ, ಮಾನ್ಯಳ ಕಡೆ ನೋಡಿದೆ.

ಅವಳಿಗಂತೂ ಮತ್ತೂ ಕುತೂಹಲವಾಗಿತ್ತು ಈಗ.."ಆಯ್ತಮ್ಮಾ ಆಯ್ತು. ನೀ ಎಷ್ಟು ಬೇಕೋ ಅಷ್ಟೇ ಹೇಳು. ಸಾಧ್ಯವಾದರೆ ನಾನು ನಿನ್ನ ಸಂದೇಹಗಳಿಗೆ ಉತ್ತರಿಸುವೆ. ಈಗ ಮೊದ್ಲು ವಿಷಯ ಹೇಳು.." ಎಂದು ಗಡಿಬಿಡಿ ಮಾಡಲು, ಮತ್ತೆ ಕಥೆಗೆ ಶುರುವಿಟ್ಟೆ.

"ಸೌಮ್ಯಾಳ ಬಾಲ್ಯ ಎಲ್ಲರಂತೆ ನಿರಾತಂಕವಾಗಿರಲಿಲ್ಲ. ಆಕೆಯ ತಂದೆ ಎನಿಸಿಕೊಂಡವ, ಅವಳ ತಾಯಿಯನ್ನು ಮೋಸದಿಂದ, ಮೊದಲೇ ಮದುವೆಯಾಗಿದ್ದರೂ ಮರೆಮಾಚಿ ಮದುವೆಯಾಗಿದ್ದ. ಆ ಮುಗ್ಧ ಹೆಣ್ಣಿಗೆ ಗಂಡನ ಇನ್ನೊಂದು ಮುಖ ಗೊತ್ತಾಗುವಾಗ ಕಾಲ ಮಿಂಚಿಹೋಗಿತ್ತು. ಸೌಮ್ಯಳು ಹುಟ್ಟಿಯಾಗಿತ್ತು. ತವರುಮನೆಯ ಬಡತನ ಮತ್ತೆ ಹಿಂತಿರುಗಲು ಪ್ರೇರೇಪಿಸಲಿಲ್ಲ. ಸೌಮ್ಯಳಿಗೊಂದು ತಮ್ಮನನ್ನು ಕೊಟ್ಟ ಆ ತಂದೆ ನಾಪತ್ತೆಯಾಗಿ ಹೋದ. ಮತ್ತೆ ಇತ್ತ ಸುಳಿಯಲೂ ಇಲ್ಲ. ಪುಟ್ಟಮಕ್ಕಳನ್ನು ಕಟ್ಟಿಕೊಂಡು ಆಕೆಯ ತಾಯಿ ಪಡಬಾರದ ಕಷ್ಟಪಟ್ಟಳು. ಈ ನಡುವೆ ತಮ್ಮ ಸಣ್ಣವನಿರುವಾಗಲೇ ಆತನಿಗೆ ಆಕ್ಸಿಡೆಂಟ್ ಆಗಿ ಒಂದು ಕೈ ಸ್ವಾಧೀನ ತಪ್ಪಿಹೋಯಿತು. ಅವರಿವರ ಮನೆಕೆಲಸವನ್ನು ಮಾಡುತ್ತಾ, ಬೀಡಿ ಕಟ್ಟುತ್ತಾ ಮಕ್ಕಳನ್ನು ಬೆಳೆಸುತ್ತಿದ್ದಳು. ಈ ರೀತಿ ಬಾಲ್ಯದಿಂದಲೂ ಕಷ್ಟದ ಅರಿವಿನಲ್ಲೇ, ದಾರಿದ್ರ್ಯತೆಯಲ್ಲೇ ಬೆಳೆದವಳು ಸೌಮ್ಯ. ಹೀಗಿದ್ದರೂ ಅವರಿವರ ಸಹಾಯದಿಂದ ಅಂತೂ ಇಂತೂ ಪಿ.ಯು.ಸಿಗೆ ಸೇರಿದಳು. ಅಲ್ಲಿ ಅವಳ ಬಾಳಿಗೆ ಹೊಸ ಆಯಾಮ ದೊರೆಕಿತು. ಒಂದೇ ತರಗತಿಯಲ್ಲಿದ್ದ ವಿಸ್ಮಯಳ ಪರಿಚಯವಾಗಿ, ಸ್ನೇಹ ಚಿಗುರಿ, ಗಾಢ ಆತ್ಮೀಯತೆ ಬೆಳೆಯಿತು. ಶ್ರೀಮಂತ ಮನೆತನದವಾಳಗಿದ್ದರೂ ವಿಸ್ಮಯಳಲ್ಲಿ ಸೊಕ್ಕು, ಬಿಗುಮಾನ ಒಂದಿನಿತೂ ಇರಲಿಲ್ಲ. ಅವಳ ಅಪ್ಪನ ದೊಡ್ಡ ಹುದ್ದೆಯಲ್ಲಿದ್ದರು. ಅವರೂ ಅಷ್ಟೇ ಸೌಮ್ಯ ಬಡತನದಲ್ಲಿರುವುದನ್ನು ಕಂಡು ತಿರಸ್ಕಾರದಿಂದ ನೋಡದೇ, ಮಗಳ ಗೆಳತಿಯನ್ನು ಗೌರವದಿಂದ ಆತ್ಮೀಯತೆಯಿಂದ ಕಾಣುತ್ತಿದ್ದರು. ದಿನೇ ದಿನೇ ವಿಸ್ಮಯ ಸೌಮ್ಯರ ಗೆಳೆತನ ಗಾಢವಾಗತೊಡಗಿತು. ಬಡತನ, ಸಿರಿತನವನ್ನೂ ಮೀರಿ ಅವರ ಗೆಳೆತನ ನಿಂತಿತ್ತು.

ಪಿ.ಯು.ಸಿಯ ನಂತರ ಮುಂದಿನ ವ್ಯಾಸಂಗಕ್ಕಾಗಿ ವಿಸ್ಮಯ ಎಂ.ಬಿ.ಬಿ.ಎಸ್ ಮಾಡಲು ಬೆಂಗಳೂರಿಗೆ ತೆರೆಳಿದರೆ, ಮನೆಯ ಆರ್ಥಿಕ ಪರಿಸ್ಥಿತಿ ಸೌಮ್ಯಳನ್ನು ಬೀಡಿಕಟ್ಟುವಂತೆ ಮಾಡಿತು. ಇದ ತಿಳಿದ ವಿಸ್ಮಯಳ ತಂದೆ ತಾನೇ ಒತ್ತಾಯಿಸಿ ಫೀಸ್ ತುಂಬಿ, ಡಿಗ್ರಿಗೆ ಸೇರಿಸಿದರು. ಈ ರೀತಿ ಗೆಳತಿಯ ತಂದೆಯ ಸಹಾಯದಿಂದ ಸೌಮ್ಯಳೂ ಡಿಗ್ರಿ ಮುಗಿಸುವಂತಾಯಿತು. ಸೌಮ್ಯ ಕೊನೆಯ ವರ್ಷದ ಡಿಗ್ರಿಯಲ್ಲಿದ್ದಾಗ ವಿಸ್ಮಯ ಊರಿಗೆ ಬಂದವಳು ಅವಳನ್ನು ಕಂಡು ತನ್ನಲ್ಲಿಗೇ ಬರಬೇಕೆಂದೂ ಅಲ್ಲಿಯೇ ಯಾವುದಾದರೂ ನೌಕರಿಯನ್ನು ಹುಡುಕಬಹುದೆಂದೂ ಬಹುವಾಗಿ ಒತ್ತಾಯಿಸಿದ್ದಳು. ಗೆಳತಿಯ ಆತ್ಮೀಯತೆಗೆ, ಪ್ರೀತಿಗೆ ಮನಸೋತ ಆಕೆ ಡಿಗ್ರಿ ಮುಗಿಸಿದ ಕೆಲ ದಿನಗಳ ನಂತರ ಊರಿನ ಪರಿಚಿತರೊಬ್ಬರೊಡನೆ ಪ್ರಥಮ ಬಾರಿ ಈ ದೊಡ್ಡ ನಗರೆಕ್ಕೆ ಹೊರಟಳು. ಪುಟ್ಟ ಹಳ್ಳಿಯಿಂದ ದೊಡ್ಡ ಪಟ್ಟಣಕ್ಕೆ ಬರುತ್ತಿರುವುದು ಇದೇ ಪ್ರಥಮಬಾರಿಯಾಗಿತ್ತು ಆಕೆ. ಪರಿಚಿತರಿಗೆ ಬೆಂಗಳೂರಿನಲ್ಲಿ ಕೆಲಸವಿತ್ತು ಹಾಗಾಗಿ ಬಸ್ಟಾಂಡ್‌ವರೆಗೆ ಮಾತ್ರ ಅವಳನ್ನು ತಲುಪಿಸುವುದೆಂದೂ, ಅಲ್ಲಿಗೆ ವಿಸ್ಮಯ ಬಂದು ಆಕೆಯನ್ನು ಕರೆದೊಯ್ಯುವಳೆಂದೂ ಮಾತಾಗಿತ್ತು.

ಯೋಚಿಸಿದಂತೇ ಗೆಳತಿಯನ್ನು ಸ್ವಾಗತಿಸಲು ವಿಸ್ಮಯಳೇ ಬಂದಿದ್ದಳು. ವಿಸ್ಮಯಳು ತಂದೆಯೊಡನೆ ತಾನು ಹಾಸ್ಟೆಲ್‌ನಲ್ಲಿದ್ದು ಕೊಂಡೇ ಓದುತ್ತಿರುವೆ ಎಂದು ಸುಳ್ಳು ಹೇಳಿದ್ದಳು. ನಿಜವಾಗಿ ಆಕೆ ಇತ್ತೀಚಿಗೆ ತನ್ನ ದೂರದ ಸಂಬಂಧಿಯಾದ ಆಂಟಿಯೊಬ್ಬರೊಡನೆ ರೂಂ ಮಾಡಿಕೊಂಡಿದ್ದಳು. ಈ ಸತ್ಯ ಸೌಮ್ಯಳಿಗೆ ಮಾತ್ರ ಗೊತ್ತಿತ್ತು. ಈಗ ಅವರಿಬ್ಬರೊಡನೆ ಇವಳೂ ಮೂರನೆಯವಳಾಗಿ ಸೇರಿಕೊಂಡಳು.

ಬಂದ ಒಂದು ತಿಂಗಳು ಅಂತಹ ವಿಶೆಷವೇನೂ ನಡೆಯಲಿಲ್ಲ. ನೌಕರಿ ಹುಡುಕುತ್ತೇನೆ ಎಂದೇ ಭರವಸೆಕೊಡುತ್ತಿದ್ದಳು ವಿಸ್ಮಯ. ಬೇಸರ ಕಳೆಯಲು ಅಡುಗೆ, ರೂಂ ಕ್ಲೀನ್ ಮಾಡುವುದು ಇತ್ಯಾದಿ ಸಣ್ಣ ಪುಟ್ಟ ಕೆಲಸಗಳನ್ನು ಮಾಡತೊಡಗಿದಳು ಸೌಮ್ಯ. ಈ ನಡುವೆ ಗೆಳತಿಯಲ್ಲಾದ ಸೂಕ್ಷ್ಮ ಬದಲಾವಣೆಯನ್ನು ಗಮನಿಸುತ್ತಲೇ ಬಂದಿದ್ದಳು. ಆದರೆ ಇದು ನಗರಜೀವನ ಪ್ರಭಾವದಿಂದ ಆಗಿರಬಹುದೆಂದು ಸುಮ್ಮನಾದಳು. ಆದರೆ ಕ್ರಮೇಣ ವಿಸ್ಮಯಳ ಹೊಸ ಮುಖದ ಪರಿಚಯವಾಗ ತೊಡಗಿತು. ಮೊದಲು ತನ್ನ ಒಂದಿನಿತೂ ಬಿಟ್ಟಿರದ ವಿಸ್ಮಯ ಈಗ ಇಲ್ಲಿಗೆ ಬಂದ ಮೇಲೆ ಹೆಚ್ಚು ಆಂಟಿಯನ್ನೇ ಹಚ್ಚಿಕೊಂಡಿರುವುದು ಕಂಡು ಬಂತು. ಆಂಟಿಯೂ ಅಷ್ಟೇ ವಿಸ್ಮಯ ತನ್ನನ್ನು ಮಾತಾಡಿಸುವುದು, ತನ್ನೊಂದಿಗೆ ಕಾಲ ಕಳೆಯುವುದು ಸಹಿಸದಂತೆ ಭಾಸವಾಯಿತು. ಎಲ್ಲೋ ಒಂದು ಅಪಸ್ವರ ಕಾಣತೊಡಗಿತ್ತು ಸೌಮ್ಯಳಿಗೆ. ಎಲ್ಲಕ್ಕಿಂತ ಹೆಚ್ಚಾಗಿ ರಾತ್ರಿ ಎಲ್ಲಿಯಾದರೂ ಎಚ್ಚರವಾದರೆ ತನ್ನ ಪಕ್ಕದಲ್ಲಿ ಹಾಸಿಕೊಂಡಿದ್ದ ವಿಸ್ಮಯಳ ಹಾಸಿಗೆ ಖಾಲಿಯಾಗಿರುತ್ತಿತ್ತು. ಈ ರಹಸ್ಯಮಯ ವರ್ತನೆಗಳಿಂದ ದುಃಖಿತಳಾದ ಸೌಮ್ಯ ಮೌನವಾಗಿ ರೋಧಿಸತೊಡಗಿದಳು. ಆಕೆ ಅಳುವುದು ಗೊತ್ತಾದಾಗ ವಿಸ್ಮಯ ಸಮಾಧಾನಿಸುವ ಬದಲು ಗದರತೊಡಗಿದಳು.

ಒಂದು ರಾತ್ರಿ ಎಚ್ಚರವಾದಾಗ ಸೌಮ್ಯ ವಿಸ್ಮಯಳನ್ನು ಕಾಣದೇ, ಮೆಲ್ಲನೆ ಸದ್ದಾಗದಂತೆ ರೂಮಿನ ಇನ್ನೊಂದು ಕೋಣೆಗೆ ಹೋದಳು. ಎರಡೇ ಕೋಣೆಗಳಿದ್ದಾ ಆ ಒಂದು ರೂಮಿನಲ್ಲಿ ಬಾಗಿಲುಗಳ ತಡೆಯೇನೂ ಇರಲಿಲ್ಲ. ಹಾಗಾಗಿ ಸಲೀಸಾಗಿ ಸೌಮ್ಯ ಒಳ ಹೋದಳು. ಆದರೆ.... ಅಲ್ಲಿಯ ದೃಶ್ಯಕಂಡು ಅವಳಿಗೇ ತಲೆಯೇ ತಿರುಗಿದಂತಾಯಿತು. ಗೆಳತಿಯ ಬದಲಾದ ವರ್ತನೆಯ ಹಿಂದಿನ ರಹಸ್ಯ ಹೊರಬಂದಿತ್ತು. ಆಂಟಿ ಹಾಗೂ ವಿಸ್ಮಯಳ ದೈಹಿಕ ಸಂಬಂಧ ಅವಳ ಕಣ್ಮುಂದೆ ಬಂದಿತು.

ಅಷ್ಟೇ. ನಿಜ ಗೊತ್ತಾದ ಆ ದಿನದಿಂದ ವಿಸ್ಮಯಳು ಸೌಮ್ಯಳನ್ನು ದೈಹಿಕವಾಗಿ ಹಿಂಸಿಸತೊಡಗಿದಳು. ಅವಳು ಹೇಳಿದ್ದಕ್ಕೆ ಸೌಮ್ಯ ಏನಾದರೂ ತಿರುಗೆ ಹೇಳಿದರೆ ಹೊಡೆಯುವುದು, ಮಾತು ಮಾತಿಗೆ ಬೈಯುವುದು. "ನನ್ನ ಅಪ್ಪನ ಸಹಾಯವಿಲ್ಲದಿದ್ದರೆ ನೀನೆಲ್ಲಿರುತ್ತಿದ್ದಿ.. ಈಗಾದರೂ ಇಲ್ಲಿಗೆ ಕರೆದು ತಂದು ನಿನಗೆ ನೌಕರಿ ಕೊಡಿಸುತ್ತಿರುವವಳು ನಾನು. ಇಲ್ಲಿಂದ ಹೊರ ಹೋದರೆ ನಿನಗ್ಯಾರು ಗತಿ..?" ಎಂದೆಲ್ಲ ಹಂಗಿಸತೊಡಗಿದಳು. ಎದುರಿಸಲೊಮ್ಮೆ ಸೌಮ್ಯ ಹೋದಾಗ ಆಕೆಗೆ ಸಿಕ್ಕಿದ್ದು ಚಪಾತಿ ಲಟ್ಟಣಿಗೆಯಿಂದ ಹೊಡೆತ! ಆತ್ಮೀಯ ಗೆಳತಿಯ ಈ ವರ್ತನೆ ಆಕೆಯನ್ನು ಜರ್ಝರಿತಗೊಳಿಸತೊಡಗಿತು. ಯಾರನ್ನೂ ಸಂಪರ್ಕಿಸುವಂತಿಲ್ಲ. ಹೊರ ಬಿದ್ದರೆ ಕಾಣದ ಊರು. ನೋಡದ ಜನ. ಪುಟ್ಟ ಊರಿನಿಂದ ಬಂದ ಅಳುಕು ಬೇರೆ. ಎಲ್ಲೂ ಅಂಧಕಾರವೇ ತುಂಬಿತ್ತು.

ಹೇಗೋ ಒಂದು ದಿನ ಸಮಯಸಾಧಿಸಿ ವಿಸ್ಮಯಳ ಮೊಬೈಲ್ ಮೂಲಕ ಆಕೆಯ ಸೋದರ ಸಂಬಂಧಿಯನ್ನು ಸಂಪರ್ಕಿಸಿದಳು. ಅದೃಷ್ಟವಶಾತ್ ಆತನೂ ಆಗ ಬೆಂಗಳೂರಿಗೇ ಬಂದಿದ್ದ. ಅವನಲ್ಲಿ ತನ್ನ ಪರಿಸ್ಥಿತಿ ತಿಳಿಸಿ ಇಲ್ಲಿಂದ ಬಿಡಿಗಡೆ ಮಾಡಿಸಲು ಕೋರಿದಳು. ಅವನೂ ಒಪ್ಪಿದ. ಬೆಳಗ್ಗೆ ವಿಸ್ಮಯ ಹಾಗೂ ಆಂಟಿ ಹೊರ ಹೋದ ನಂತರ ತನ್ನ ಬಟ್ಟೆ ಬರೆ ತುಂಬಿಕೊಂಡ ಸೌಮ್ಯ ಕಸಿನ್‌ನ ಬರುವಿಕೆಗಾಗಿ ಕಾಯತೊಡಗಿದಳು. ಆತ ಬರಲು ಇನ್ನೂ ಸಮಯವಿತ್ತು. ದುರದೃಷ್ಟವಶಾತ್ ಬೇಗ ಹಿಂತಿರುಗಿದ ವಿಸ್ಮಯ ವಿಷಯ ತಿಳಿಯಲು ಸೌಮ್ಯಳನ್ನು ತೀವ್ರವಾಗಿ ದಂಡಿಸಿದಳು. ರಕ್ತ ಸುರಿಯುತ್ತಿದ್ದ ಆಕೆಯನ್ನು ಮನೆಯಿಂದ ಹೊರದಬ್ಬಿ ಬಾಗಿಲು ಹಾಕಿಕೊಂಡಳು. ಅಷ್ಟರಲ್ಲಿ ಅಲ್ಲಿಗೆ ಬಂದ ಕಸಿನ್ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಕೊಡಿಸಿದ. ನಂತರ ಆಕೆ ತನಗಾದ ಮಾನಸಿಕ ಆಘಾತಕ್ಕೆ ನಿಮ್ಹಾನ್ಸಿನಲ್ಲಿ ಒಂದೆರಡು ತಿಂಗಳು ಚಿಕಿತ್ಸೆ ಪಡೆದು ಈಗ ಉತ್ತಮ ಕೆಲಸದಲ್ಲಿದ್ದಾಳೆ. ಇದೆಲ್ಲಾ ನೆಡೆದು ಈಗ ೨ ವರುಷಗಳೇ ಕಳೆದಿವೆ. ಆದರೆ ಹೊಡೆತದಿಂದಾದ ಗಾಯದ ಕಲೆ ಮಾತ್ರ ನೆನಪನ್ನು ಹಸಿರಾಗಿಟ್ಟಿದೆ.

ಮಾನ್ಯ ಇವಳ ಕಥೆ ಕೇಳಿದ ನಂತರ ನನಗೆ ಹಲವು ಸಂದೇಹಗಳುಂಟಾದವು ಅದರಲ್ಲಿ ಕೆಲವಕ್ಕೆ ಆಕೆ ಉತ್ತರಿಸಿದರೂ ಸಮಾಧಾನವಾಗಲಿಲ್ಲ..ಇನ್ನು ಕೆಲವಕ್ಕೆ ಆಕೆಯೂ ಉತ್ತರ ಹುಡುಕುತ್ತಿದ್ದಾಳೆ.
*ವಿಸ್ಮಯ ಯಾಕೆ ಆ ರೀತಿ ಬದಲಾದಳು? ಆಕೆ ಒಂದು ದಿನ ಹೊಡೆದು, ಬೈಯ್ದು ಮಾಡುತ್ತಿದ್ದರೆ ಮರುದಿನ ಅದೇ ಹಳೆಯ ಗೆಳತಿಯಂತೇ ಪ್ರೀತಿ, ಆತ್ಮೀಯತೆ ತೋರುತ್ತಿದ್ದಳಂತೆ. ಏನು ಕಾರಣ ಈ ವಿಕ್ಷಿಪ್ತ ಮನಸಿಗೆ?
* ಸೌಮ್ಯ ಯಾಕೆ ಇದನ್ನೆಲ್ಲಾ ೪ ತಿಂಗಳವರೆಗೂ ಸಹಿಸಿದಳು? ರೂಂಗೆ ಬೀಗವೇನೂ ಹಾಕುತ್ತಿರಲಿಲ್ಲ. ಹಾಗಿದ್ದಾಗ ಆಕೆ ಯಾವತ್ತೋ ಹೊರಬರಬಹುದಿತ್ತು. ಹೋಗ್ಲಿ.. ಹೊರ ಬಂದಮೇಲಾದರೂ ವಿಸ್ಮಯಳ ವರ್ತನೆಯ ಕುರಿತು ಆಕೆಯ ಮನೆಗಾಗಲೀ ಪೋಲೀಸರಿಗಾಗಲೀ ತಿಳಿಸಲಿಲ್ಲ. ಇದನ್ನೇ ನಾನು ಸೌಮ್ಯಳನ್ನು ಕೇಳಿದಾಗ ಆಕೆ "ನಾನು ಅಸಹಾಯಕಳಾಗಿದ್ದೆ. ಗೆಳತಿಯ ಆ ಸಂಬಂಧದ ಕುರಿತು ಇತರರಿಗೆ ತಿಳಿಸಲಾಗಲಿಲ್ಲ. ಅದೂ ಅಲ್ಲದೇ ನಂಗೆ ಭಯವಾಗ್ತಿತ್ತು ಹೊರಬರಲು. ಅವಳ ಅಪ್ಪನ ಋಣಬೇರೆ ಇತ್ತಲ್ಲಾ.." ಎಂದಳು. ಆದರೂ ನನಗೆ ಸಮಾಧಾನವಾಗಲಿಲ್ಲ ಆಕೆಯ ಉತ್ತರ.. ಬಿಡು.
* ಇನ್ನು ಕೊನೆಯದಾಗಿ ವಿಸ್ಮಯಳ ಆ ಕ್ರೂರ ವರ್ತನೆಗೆ ಸಲಿಂಗ ಕಾಮ ಕಾರಣವೇ ಇಲ್ಲಾ ಬೇರೇನಾದರೂ ಇರಬಹುದೇ? ತನ್ನ ಗುಟ್ಟು ರಟ್ಟಾಗಬಾರದು ಎಂದಿದ್ದರೆ ಯಾಕೆ ಆಕೆ ಸೌಮ್ಯಳನ್ನು ಅಷ್ಟು ಒತ್ತಾಯಮಾಡಿ ಕರೆಸಿಕೊಂಡಳು?! ವಿಚಿತ್ರವೆಂದರೆ ಅವಳಾಗಲೀ ಆಂಟಿಯಾಗಲೀ ಎಂದೂ ಸೌಮ್ಯಳನ್ನು ದೈಹಿಕ ಕಾಮನೆಗಾಗಿ ಬಲಾತ್ಕಾರಿಸಲಿಲ್ಲ. ಕೋರಲಿಲ್ಲ. ಸೌಮ್ಯಳು ಅತ್ತಾಗ, ಇಲ್ಲಾ ಎದುರು ಉತ್ತರವಿತ್ತಾಗ ಹೊಡೆದು ಬೈಯ್ದು ಮಾತ್ರ ಮಾಡುತ್ತಿದ್ದಳು ವಿಸ್ಮಯ. ಇವಳು ಹೇಳಿದ್ದಕ್ಕೆ "ಇಲ್ಲಾ.. ಹಾಗಲ್ಲಾ.. ಸರಿಯಲ್ಲ" ಎಂಬ ಸಣ್ಣ ಮಾತು ಸೌಮ್ಯಳಿಂದ ಹೊರಬಂದರೂ ಸಾಕಿತ್ತು, ಹೊಡೆತ ಇಲ್ಲಾ ಬೈಗಳು ಸೌಮ್ಯಳಿಗೆ ಕಾದಿರುತ್ತಿತ್ತಂತೆ.

ಹೂಂ.. ಈಗ ನೀನೇ ಹೇಳು ನಿನ್ನ ಸೈಕೋಲಾಜಿ ಇದಕ್ಕೇನು ಹೇಳುತ್ತೆ ಎಂದು..ಇಲ್ಲಿ ನನಗೆ ಸೌಮ್ಯಳ ಅತೀ ಸಹನಾಶಕ್ತಿ ಹಾಗೂ ವಿಸ್ಮಯಳ ವಿಚಿತ್ರ ಮನಃಸ್ಥಿತಿ ಎರಡಕ್ಕೂ ಕಾರಣ ಸಿಕ್ಕರೆ ತುಂಬಾ ಒಳ್ಳೆಯದು ನೊಡು...ಏನಾದ್ರೂ ಉತ್ತರ ಇದೆಯೇ ನಿನ್ನ ಮನಃಶಾಸ್ತ್ರದಲ್ಲಿ? " ಎಂದು ಕೇಳುತ್ತಾ ಹಾಗೆ ಮರದ ದಿಮ್ಮಿಗೆ ಒರಗಿ ಕಣ್ಮುಚ್ಚಿದೆ. ಅಷ್ಟು ಹೊತ್ತಿನ ಮಾತಿನಿಂದಾಗಿ ನನಗೆ ಬಹು ಆಯಾಸವೆನಿಸುತ್ತಿತ್ತು. ತುಸು ದೂರದಲ್ಲಿದ್ದ ಗೂಡಂಗಡಿಯ ಎಳೆನೀರು ಒಣಗಿದ ನನ್ನ ಗಂಟಲಿಗೆ ಓಯಾಸಿಸ್‌ನಂತಾಯಿತು.

"ಹ್ಮಂ.. ಇಂಟರೆಸ್ಟಿಂಗ ಆಗಿದೆ ಕಥೆ. ನೋಡು ನಾನು ಮೊದಲೇ ಹೇಳಿಬಿಡುತ್ತೇನೆ. ಇಲ್ಲಿ ನಾನು ಸಾಧ್ಯತೆಗಳನ್ನು ಹೇಳಬಹುದೇ ಹೊರತು ಇದೇ ಹೌದು, ಹೀಗೇ ಆಗಿದೆ ಎಂದು ಹೇಳಲಾಗದು. ಸೌಮ್ಯಳನ್ನಾಗಲೀ, ವಿಸ್ಮಯಳನ್ನಾಗಲೀ ನಾನು ಪರ್ಸನಲ್ ಆಗಿ ಕಂಡಿಲ್ಲ. ಇಬ್ಬರಲ್ಲಿ ಯಾರೊಬ್ಬರಿಂದಲೂ ಖುದ್ದಾಗಿ ಕೇಳಿಲ್ಲ. ಕೌನ್ಸಲಿಂಗ್ ಮಾಡಿಲ್ಲ. ನೀ ಹೇಳಿದ್ದರ ಮೇಲೆ.. ಕೊಟ್ಟ ಚಿತ್ರಣದ ಮೇಲೆ.."ಪ್ರೊಬೇಬಲಿಟಿ"ಯನ್ನು ಮಾತ್ರ ಹೇಳಬಹುದು." ಎಂದು ಎಚ್ಚರಿಸಲು.." ಆಯ್ತು.. ಹಾಂಗೆ ಮಾಡು. ಅದಾದರೂ ನನ್ನ ಸಂದೇಹಗಳನ್ನು ಸ್ವಲ್ಪವಾದರೂ ನಿವಾರಿಸಬಹುದು" ಎಂದು ಒಪ್ಪಿದೆ. ಮಾನ್ಯ ಉತ್ತರುಸಲು ಸಿದ್ಧವಾದಳು.

"ಮನುಷ್ಯನ ಮನಸ್ಸೆಂಬುದು ಹೀಗೇ ಎಂದು ಅಳೆಯಲಾಗದು. ಹಿಂದೆ ಹೀಗಿದ್ದ, ಮುಂದೆಯೂ ಹೀಗೇ ಇರುವ ಎಂದು ಹೇಳಲಾಗದು. ವಿಸ್ಮಯ ಹಿಂದೆ ಮುಗ್ಧವಾಗಿದ್ದು, ಸೌಮ್ಯಳ ಜೊತೆ ಆತ್ಮೀಯವಾಗಿ, ಸ್ನೇಹಪೂರ್ಣವಾಗಿದ್ದರೂ ಆಮೇಲೆ ಬದಲಾಗಲು ಇಂಥದ್ದೇ ಕಾರಣವನ್ನು ಕೊಡಲಾಗದು. ಇನ್ನು ಸಲಿಂಗಕಾಮ ಒಂದು "ವಿಕೃತಿ"ಯಲ್ಲ. ಮಾನಸಿಕ ಅಸ್ವಸ್ಥೆಯೂ ಅಲ್ಲ. ಇದೂ ಗಂಡು ಹೆಣ್ಣಿನ ಕಾಮನೆಯಷ್ಟೇ ಸಾಮಾನ್ಯ ಎನ್ನುತ್ತದೆ ಮನಃಶಾಸ್ತ್ರ. ಅವರವರ ಲೈಕಿಂಗ್ ಅಷ್ಟೇ. ಇದರಿಂದಾಗಿಯೇ ವಿಸ್ಮಯ ಆ ರೀತಿ ಬದಲಾದಳೆಂದು ಹೇಳುವುದು ತಪ್ಪು. ಸೌಮ್ಯಳು ಅವಳೊಟ್ಟಿಗೆ ಇದ್ದಷ್ಟು ದಿನ ವಿಸ್ಮಯ ತನಗೆ ಈ ಸಂಬಂಧ ಇಷ್ಟವಿಲ್ಲ ಎಂದೋ, ಇದರಿಂದ ನನಗೆ ತೊಂದರೆ ಯಾಗುತ್ತಿದೆಯೆಂದೋ ಹೇಳಿದ್ದಳೇ? ಇಲ್ಲಾ ಸೌಮ್ಯಳಿಗೆ ಆ ರೀತಿ ಅನಿಸಿದ್ದಿದೆಯೇ?" ಎಂದು ಪ್ರಶ್ನಿಸಲು, ನಾನು..."ಹಾಂ.. ನಾನೂ ಇದನ್ನೇ ಕೇಳಿದ್ದೆ ಅವಳಲ್ಲಿ. ಆಗ ಸೌಮ್ಯ ‘ಇಲ್ಲ.. ವಿಸ್ಮಯ ತುಂಬಾ ಗಟ್ಟಿಗಾರ್ತಿ. ಒತ್ತಾಯದಿಂದ ಏನನ್ನೂ ಮಾಡುವವಳಲ್ಲ. ನನಗೇನೂ ಆ ರೀತಿ ಅನಿಸಲಿಲ್ಲ..ನನ್ನೊಡನೆ ಆಕೆ ಹಾಗೇನೂ ಹೇಳಲೂ ಇಲ್ಲ..’ ಅಂದಿದ್ಲು".

"ಹ್ಮಂ..ಅವ್ಳ ಅನಿಸಿಕೆಯೇ ಸರಿ ಎಂದು ತಗೊಂಡ್ರೆ, ಇಲ್ಲಿ ವಿಸ್ಮಯ ಹಾಗೂ ಆಂಟಿಯ ಸಂಬಂಧದಿಂದಲೇ ಈ ರೀತಿಯ ವಿಕೃತ ಮನಸ್ಥಿತಿಗೆ ಕಾರಣ ಎನ್ನುವುದು ಸರಿಯೆನಿಸದು. ನೋಡು..ಇಲ್ಲಿ "ವಿಕೃತ" ಎಂದರೆ ಏನೋ ದೊಡ್ಡ , ಭಯಂಕರ ಎನ್ನುವರ್ಥ ಬೇಡ. ಯಾರಿಗೂ ಅವರ ಮನಃಸ್ಥಿತಿ ಅರ್ಥವಾಗದಿರುವುದಕ್ಕೇ ವಿಕೃತ ಎನ್ನುವುದು ಅಷ್ಟೇ. ವಿಸ್ಮಯಳ ವರ್ತನೆಯ ಚಿತ್ರಣ ಅಂದರೆ ಒಮ್ಮೆ ಪ್ರೀತಿ, ಮಗದೊಮ್ಮೆ ಅತೀವ ಸಿಟ್ಟು, ಆಕ್ರೋಶ ದೈಹಿಕ ಹಿಂಸೆ-ಇದು "ನಾರ್ಸಿಸಿಸ್ಟಿಕ್ ಪರ್ಸನಾಲಿಟಿ ಡಿಸೊರ್ಡರ್"(Narcissistic Personality Dissorder) ಕಡೆ ಬೆರಳು ತೋರುತ್ತದೆ. ಮತ್ತೆ ಹೇಳ್ತಿತಿದ್ದೀನಿ ಇಟ್ ಕುಡ್ ಬಿ ಎ ಪ್ರೊಬಾಬಿಲಿಟಿ ಅಷ್ಟೇ.

ಈ ರೀತಿಯ ಡಿಸ್ಸೊರ್ಡರ್ ಇರುವ ವ್ಯಕ್ತಿ ತನಗೆ ತಾನೇ ತುಂಬಾ ಪ್ರಾಮುಖ್ಯತೆಯನ್ನು ಕೊಟ್ಟಿಕೊಳ್ಳುತ್ತಾನೆ. ತನ್ನನ್ನು ಬಲುವಾಗಿ ಪ್ರೀತಿಸುತ್ತಾನೆ. ತಾನೇ ಸುಪೀರಿಯರ್ ಅಂದೊಕೊಂಡು ಮೆರೆಯುತ್ತಾನೆ. ಅದೇ ರೀತಿ ಅತಿಯಾದ ಭಾವನಾತ್ಮಕ ಅಭದ್ರತೆಯಿಂದಲೂ ಬಳುತ್ತಿರುತ್ತಾನೆ. ಹಾಗಾಗಿ ಇನ್ನೊಬ್ಬರಿಂದ ಅಂದರೆ ಆತ್ಮೀಯರಿಂದ ತೀವ್ರವಾದ ಭಾವನಾತ್ಮಕ ಭದ್ರತೆಯನ್ನು, ಸಾಂತ್ವನವನ್ನು ಬಯಸುತ್ತಾನೆ. ತಾನೇ ದೊಡ್ಡವ, ತನ್ನಲ್ಲೇನೋ ಅದ್ಭುತವಿದೆ ಎಂದು ಒಂದು ರೀತಿಯ ಟ್ರಾನ್ಸ್‌ನಲ್ಲಿರುವ ಈತ ಇತರರ ಭಾವನೆಗಳಿಗೆ, ಆಲೋಚನೆಗೆಳಿಗೆ ಚೂರು ಸ್ಪಂದಿಸಲಾರ...ಗೌರವಿಸಲಾರ. ಈ ಒಂದು ಸ್ಥಿತಿಯಿಂದಾಗಿ ಯಾರಾದರೂ ಆತನ ವಿರುದ್ಧ ತುಸುವಾದರೂ ಪ್ರತಿರೋಧ ವ್ಯಕ್ತ ಪಡಿಸಿದರೆ ಅದನ್ನು ಇನಿತೂ ಸಹಿಸಲಾರ. ಆಗ ತುಂಬಾ ಆಕ್ರೋಶಗೊಂಡು ಹಿಂಸಾತ್ಮಕವಾಗಿ ವರ್ತಿಸುತ್ತಾನೆ.
ಉದಾಹರಣೆಗೆ ವಿಸ್ಮಯಳನ್ನೇ ತೆಗೆದುಕೋ. ಆಕೆಗೆ ಸೌಮ್ಯಳಿಂದ ಬೇಕಾಗಿದ್ದು ದೈಹಿಕ ವಾಂಛೆ ಅಲ್ಲ. ಅದು ಅವಳಿಗೆ ಅವಳಿಚ್ಛೆಯಂತೇ ಆಂಟಿಯಿಂದ ದೊರಕುತ್ತಿತ್ತು. ಆದರೆ ಎಲ್ಲಿಯೋ ಒಂದು ಕಡೆ ತನ್ನನ್ನು ಅರಿತ, ತನ್ನೊಡನೆ ಭಾವನಾತ್ಮಕವಾಗಿ ಬೆಸಿದಿದ್ದ ಸೌಮ್ಯಳಿಂದ ಒಂದು ಮಾನಸಿಕ ಭದ್ರತೆ ಬೇಕಿತ್ತು ಎಂದೆನಿಸುತ್ತದೆ. ಹಾಗಾಗಿಯೇ ಮುಂದಾಲೋಚನೆ ಇಲ್ಲದೇ ಅವಳನ್ನು ಒತ್ತಾಯವಾಗಿ ಕರೆಸಿಕೊಂಡಳು. ಆದರೆ ಇಲ್ಲಿಗೆ ಬಂದಮೇಲೆ ಆಂಟಿಯಿಂದಲೂ ಬಹುಶಃ ವಿಸ್ಮಯ ಪ್ರತಿರೋಧ ಪಡೆದಿರಬಹುದು. ಆದರೆ ದೈಹಿಕ ಸಂಬಂಧದ ಕಾರಣದಿಂದ ಆಂಟಿಯನ್ನು ವಿರೋಧಿಸಲಾಗದೇ ಇತ್ತ ಸೌಮ್ಯಳನ್ನೂ ಬಿಡಲಾರದೆ ಮತ್ತೂ ಗೊಂದಲಕ್ಕೊಳಗಾದಳು. ಕ್ರಮೇಣ ತನ್ನ ಸತ್ಯ ತಿಳಿದು ಸೌಮ್ಯ ಬದಲಾಗಿ ತನ್ನನ್ನು ತೊರೆದರೆ ಏನು ಗತಿ ಎಂದು ಹಿಂಸಾತ್ಮಕವಾಗಿಯಾದರೂ ಇಲ್ಲಾ ಮೊದಲಿನ ಪ್ರೀತಿ ತೋರುವ ರೀತಿಯಿಂದಾದರೂ ಸರಿ ಅವಳನ್ನು ಹಿಡಿದಿಟ್ಟುಕೊಳ್ಳಬೇಕು..ಆಕೆ ತನ್ನ ಜೊತೆಯಲ್ಲೇ ಇರಬೇಕೆಂದು ಬಯಸಿದ್ದಳು. ಅಂದರೆ By hook or crook ಆಕೆಯನ್ನು ತನ್ನ ಅಧೀನದಲ್ಲಿಟ್ಟುಕೊಳ್ಳಬೇಕೆಂಬ ಬಯಕೆ ಇದ್ದಿರಬಹುದು. ಆದರೆ ಸೌಮ್ಯ ಹೋಗುತ್ತೇನೆ ಎಂದು ಹೇಳಿದಾಗ ಒಂದು ರೀತಿಯ ಹತಾಶೆಯಿಂದ ಹಾಗೂ ಸಿಟ್ಟಿನಿಂದ ಒಂದೇ ಸಮನೆ ಹೊಡೆದು ಘಾಸಿಗೊಳಿಸಿದ್ದಾಳೆ. ಅದೂ ಅಲ್ಲದೇ ಈ ರೀತಿಯ ಮಾನಸಿಕ ತೊಂದರೆ ಇರುವವರು ಯಾವುದೇ ಸಂಬಂಧವನ್ನೂ ಸರಿಯಾಗಿ ನಿಭಾಯಿಸಲಾರರು. ಯಾವುದೇ ರಂಗದಲ್ಲಿಯೂ ಸಾಧನೆ ಮಾಡಲಾರರು. ಈ ಒಂದು ಡಿಸ್ಸೊರ್ಡರ್ ಹೇಗೆ ಬಂತು? ಕಾರಣವೇನು? ಅಂತ ಮಾತ್ರ ಕೇಳ್ಬೇಡ. ಅದನ್ನು ಹೀಗೇ ಎಂದು ಹೇಳಲು ನಾನು ವಿಸ್ಮಯಳನ್ನೇ ಮಾತಾಡಿಸಬೇಕಾಗುತ್ತದೆ. ಒಬ್ಬರದೂ ಒಂದೊಂದು ಕಾರಣವಾಗಿತ್ತದೆ. ಬಾಲ್ಯದಲ್ಲೆಂದೋ ಘಟಿಸಿದ ಬೇಡದ ಘಟನೆಯೂ ಈಗ ಈರೀತಿ ಹೊರಬಂದಿರಲೂ ಬಹುದು..." ಎನ್ನಲು ನನಗೇನೋ ಹೊಳೆಯಿತು..."ಹೌದೇ ಮಾನ್ಯ.. ಸೌಮ್ಯ ಹೇಳಿದ್ದಳು ಇವಳು ಹೊರಬಂದ ಮೇಲೂ ಒಮ್ಮೆ ವಿಸ್ಮಯಳ ಕುರಿತು ವಿಚಾರಿಸಿದ್ದಳಂತೆ. ಆಗ ತಿಳಿದು ಬಂದದ್ದೇನೆಂದರೆ ಆಕೆಯೂ ಇವಳ ಅಗಲಿಕೆಯಿಂದ ಕೊರಗಿ ನಿಮ್ಹಾನ್ಸ್‌ಗೆ ಸೇರಿದ್ದಳಂತೆ. ಇವಳ ಹೆಸರನ್ನೇ ಉಚ್ಚರಿಸುತ್ತಿದ್ದಳಂತೆ. ಓದಿನಲ್ಲಿ ಮೊದಲು ಬಹಳ ಚುರುಕಾಗಿದ್ದ ಹುಡುಗಿ ಈಗ ಎಲ್ಲಾ ವಿಷಯಗಳಲ್ಲೂ ಫೈಲ್ ಆಗಿದ್ದಾಳಂತೆ. ಸೌಮ್ಯಳಿಗೂ ಒಮ್ಮೆ ಹೋಗಿ ನೋಡೋಣ ಎಂದೆಣಿಸಿದರೂ ಹಿಂದಿನ ನೆನಪಾಗಿ ಸುಮ್ಮನಾಗಿಬಿಟ್ಟಳಂತೆ. ದುರದೃಷ್ಟವೆಂದರೆ ಇದಾವುದೂ ಆಕೆಯ ತಂದೆಗೆ ತಿಳಿಯದು. ಇನ್ನೂ ವಿಸ್ಮಯ ಆಂಟಿಯ ಜೊತೆಗೇ ಇದ್ದಾಳಂತೆ.."ಎಂದೆ.

"ಹಾಗಿದ್ದಮೇಲೆ... ವಿಸ್ಮಯಳಿಗೆ ಸೌಮ್ಯಳ ಮೇಲೇನೂ ದ್ವೇಷವಿಲ್ಲದಿರಬಹುದು. ನಾನು ಹೇಳಿದ ರೀತಿಯಿಂದಾಗಿಯೇ ಆ ರೀತಿ ವರ್ತಿಸಿದ್ದಿರಬಹುದು. ಅವಳಿಗೆ ಸೂಕ್ತ ಚಿಕಿತ್ಸೆಯ ಜೊತೆಗೆ ಮನೆಯವರ ಸಹಕಾರ, ಸಲಹೆಗಳು ಸಕಾಲದಲ್ಲಿ ಸಿಕ್ಕರೆ ಅವಳೂ ಇತರರಂತಾದಾಳು.."ಎಂದ ಮಾನ್ಯಳ ವಿವರಣೆಗಳಿಂದ ನನ್ನ ಕೆಲವು ಸಂದೇಹಗಳು ತುಸು ನಿವಾರಣೆಯಾದವು.

"ಅದೆಲ್ಲಾ ಸರಿ ಮಾನ್ಯ. ಆದರೆ ಒಬ್ಬ ವ್ಯಕ್ತಿ ಇಷ್ಟನ್ನೆಲ್ಲಾ ಸಹಿಸಿಕೊಂಡು ಈ ರೀತಿಯಲ್ಲಿ ಅಲ್ಲೇ ಅಷ್ಟು ತಿಂಗಳಾದರೂ ಇರಲು ಹೇಗೆ ಸಾಧ್ಯ? ಸೌಮ್ಯ ಯಾಕೆ ಅಲ್ಲಿಂದ ತಕ್ಷಣ ಹೊರಬರಲಿಲ್ಲ?.. ಹಾಗೆ ಬರಲು ಸಾಧ್ಯತೆಗಳಿದ್ದಾಗಲೂ, ಅದೇಕೋ ಆಕೆ ಕೊಟ್ಟ ಕಾರಣಗಳು ನನಗೆ ಅಷ್ಟು ಸಮಾಧಾನ ತರಲಿಲ್ಲ ನೋಡು.."ಎಂದೆ.

"ನೋಡು.. ಇಲ್ಲಿ ಎರಡು ಸಾಧ್ಯತೆಗಳಿರಬಹುದು. ಒಂದನೆಯದು ತುಂಬಾ ಕಡಿಮೆ ಸಾಧ್ಯತೆ ಉಳ್ಳದ್ದು. ಆದರೂ ಹೇಳುವೆ ಕೇಳು. ಕೆಲವು ತಿಂಗಳುಗಳ ಕಾಲ ಜನರನ್ನು ಭಯೋತ್ಪಾದಕರು ಕೈದಿಯಾಗಿಟ್ಟುಕೊಂಡು, ಅವರಿಗೆ ಮೊದಮೊದಲು ಹಿಂಸೆ ನೀಡಿದರೂ ಆಮೇಲೆ ತುಸುವೇ ಆದರೂ ಪ್ರೀತಿ ತೊರಿದರೆ, ಬಿಡುಗಡೆಯ ನಂತರವೂ ಆ ಕೈದಿಗಳು ತಮ್ಮನ್ನು ಸೆರೆಯಲ್ಲಿಟ್ಟಿದ್ದ ಭಯೋತ್ಪಾದಕರನ್ನು ಬಿಡಲೊಲ್ಲರು. ಇದು ಎಲ್ಲಾ ಕೈದಿಗಳಲ್ಲೂ ಕಂಡುಬರಬೇಕೆಂದಿಲ್ಲ. ಕೆಲವೊಂದು ಕಡೆ ಈ ಘಟನೆ ನಡೆದಾಗ ಆಳವಾದ ಸಂಶೋಧನೆ ನಡೆಸಲು ಈ ಅಂಶ ಕಂಡು ಬಂತು. ಈ ಒಂದು ಮಾನಸಿಕ ಅಸ್ವಸ್ಥತೆಗೆ ಕಾರಣ "ಸ್ಟಾಕ್‌ಹೋಮ್ ಸಿಂಡ್ರೋಮ್"(Stockholm Syndrome) ಎನ್ನುತ್ತೇವೆ. ಇಲ್ಲಿ ಕೈದಿ ಕ್ರಮೇಣ ತನಗೆ ಪ್ರೀತಿ ತೋರಿದ, ತನ್ನನ್ನು ಬದುಕಲು ಬಿಟ್ಟ ಜನರಿಗೇ ಹೊಂದಿಕೊಂಡು ಅವರ ಜೊತೆಯಲ್ಲೇ ಇರಲು ಇಚ್ಛಿಸುತ್ತಾನೆ. ಆದರೆ ಇಲ್ಲಿ ಈ ಸಾಧ್ಯತೆ ತೀರಾ ಕಡಿಮೆ. ಕಾರಣ ಸೌಮ್ಯಳನ್ನು ಕೈದಿಯಂತೇನೂ ಇಟ್ಟಿರಲಿಲ್ಲ. ಅದೂ ಅಲ್ಲದೇ ಆಕೆ ಕೆಲ ತಿಂಗಳ ನಂತರವಾದರೂ ಅಲ್ಲಿಂದ ಹೊರಬಂದಿದ್ದಾಳೆ. ಅಲ್ಲೇ ಇರುವ ಇಚ್ಛೆಯಂತೂ ಇರಲಿಲ್ಲವೆಂದಾಯಿತು.. ಒಳ್ಳೆಯದು.. ಈಗ ಇನ್ನೊಂದು ಕಾರಣವನ್ನು ನೋಡೋಣ. ಇದೇ ಹೆಚ್ಚು ಸಮಂಜಸ ಎನ್ನಬಹುದು.

ಬಾಲ್ಯದಿಂದಲೂ ಸೌಮ್ಯ ಬೆಳೆದದ್ದು ಗಂಡಿನ ಆಶ್ರಯವಿಲ್ಲದೇ. ಅಂದರೆ ಅಪ್ಪನ ವಾತ್ಸಲ್ಯ, ಪ್ರೀತಿ, ಪಾಲನೆ, ಒಂದು ರೀತಿಯ ಭದ್ರತೆ ಇಲ್ಲದೇ ಬೆಳೆದಳು. ತಮ್ಮನಿದ್ದರೂ ಆತನಿಂದ ಇವಳಿಗೇನೋ ಮಾನಸಿಕ ಭದ್ರತೆ ಸಿಗಲಿಲ್ಲ. ಇಂತಹ ಒಂದು ಪರಿಸ್ಥಿಯಿಯಲ್ಲಿ ಬೆಳೆದ ವ್ಯಕ್ತಿ ತುಂಬಾ "ವಲ್ನರೇಬಲ್"(vulnerable) ಆಗಿರುತ್ತಾನೆ. ಅಂದರೆ Susceptibility to injury or attack. ತನ್ನೊಂದಿಗೆ ಆಗುತ್ತಿರುವ ಹಿಂಸೆ ತಪ್ಪು ಎಂದು ಅರಿವಾದರೂ ಅದನ್ನು ವಿರೋಧಿಸುವ, ಧಿಕ್ಕರಿಸಿ ಮುನ್ನೆಡವ ಒಂದು ಛಲ ಇಲ್ಲವಾಗಿರುತ್ತದೆ ಇವರಲ್ಲಿ. ತೀರಾ ಅದಕ್ಕೇ ಹೊಂದಿಕೊಂಡು ಇರುವಂತಹ ಮನಃಸ್ಥಿತಿ ಉಂಟಾಗಿರುತ್ತದೆ. ಯಾವುದೋ ಒಂದು ಅವ್ಯಕ್ತ ಭಯ ಆತನನ್ನು ಕಾಡುತ್ತಿರುತ್ತದೆ. ಹೀಗಿರುವಾಗ ಬೇರೆ ಯಾರೇ ವ್ಯಕ್ತಿಯಿಂದ ತುಸುವಾದರೂ ಮಾನಸಿಕ ಸಂತೋಷ, ಪ್ರೀತಿ, ಸ್ನೇಹ ಸಿಕ್ಕರೂ ಆ ವ್ಯಕ್ತಿ ತುಂಬಾ ಸಂತೋಷಪಡುತ್ತಾನೆ. ಇದೇ ನಡೆದಿರಬಹುದು ಸೌಮ್ಯಳ ಜೊತೆಯೂ. ಮೊದಲು ವಿಸ್ಮಯಳಿಂದ ಪಡೆದ ಸ್ನೇಹ, ಪ್ರೀತಿಯ ಋಣದ ಜೊತೆ ಅವಳ ತಂದೆಯ ಆರ್ಥಿಕ ಸಹಾಯದ ಋಣವೂ ಅವಳನ್ನು ಕಟ್ಟಿಹಾಕಿರಬಹುದು. ಅದೂ ಅಲ್ಲದೇ ಇಂತಹ ಒಂದು ದೊಡ್ಡ ನಗರದಲ್ಲಿ ಇವಳನ್ನಲ್ಲದೇ ಯಾರನ್ನು ನೆಚ್ಚುವುದು? ತನಗೆ ಯಾರು ಗತಿ ಎಂದೂ ಅಳುಕಿರಬಹುದು. ಮುಂದೆ ಸೋದರ ಸಂಬಂಧಿಯೋರ್ವರು ಇಲ್ಲೇ ಇರುವುದನ್ನು ತಿಳಿದು ತುಸು ಧೈರ್ಯ ಮೂಡಿ ಪಾರಾದಳು.
ಹ್ಮ್....ನನಗೆ ಅನ್ನಿಸಿದ್ದು ಈ ಕಾರಣಗಳು ನೋಡು.. ಇನ್ನೂ ಬೇರೆ ಬೇರೆ ಕಾರಣಗಳು, ಪರಿಸ್ಥಿತಿಗಳು ಇದ್ದಿರಬಹುದು... ಖುದ್ದಾಗಿ ನೋಡಿ ಮಾತನಾಡಿಸಿದರೆ ಮಾತ್ರ ಅವುಗಳನ್ನೆಲ್ಲ ತಿಳಿಯಬಹುದಷ್ಟೇ...." ಎನ್ನಲು ನನ್ನ ತಲೆಕೊರೆಯುತ್ತಿದ್ದ ಸಂದೇಹಗಳಿಗೆ ಬಹುತೇಕ ಉತ್ತರ ದೊರಕಿದಂತಾಯಿತು.

ಅಬ್ಬಾ! ಈ ಮನಸ್ಸೆಂಬುದು ಎಂತಹ ಒಂದು ಮಾಯೆ.. ಇದರೊಳಗೆ ಮುಳುಗಿದವರು ಏಳುವುದೆಂತು? ಎದ್ದರೂ ಮತ್ತೆ ಬೀಳದಿರುವುದೆಂತು?.. ಎಲ್ಲವುದಕ್ಕೂ ಮನಸೇ ಕಾರಣ. ಮನಸಿದ್ದರೆ ಮಾರ್ಗ ಎಂದು ಬಲ್ಲವರು ಹೇಳಿದ್ದು ಸುಳ್ಳಲ್ಲ ಎನಿಸಿತು. ಆದಿ ಅಂತ್ಯ ಎಲ್ಲವೂ ಮನಸಿನಿಂದಲೇ. ಇದೊಂದಿಲ್ಲದಿದ್ದರೆ ಎಲ್ಲವೂ, ಎಲ್ಲಾ ಸಂಬಂಧಗಳೂ ಶೂನ್ಯ ಎಂದೆನಿಸಿತು.

ಮಾತುಮಾತಿನ ಮೇಲೆ ಗಂಟೆ ಆರಾಗಿ ಹೋಗಿತ್ತು. ರವಿ ಯಾವಾಗಲೋ ಶರಧಿಯನ್ನು ಸೇರಿಯಾಗಿತ್ತು. ಆತ ಬಿಟ್ಟುಹೋದ ಕೆಂಪು ರಂಗು ಮಾತ್ರ ನೀಲ ನಭವನ್ನೆಲ್ಲಾ ರಂಗಾಗಿಸಿ ಹೊಸಕಳೆಯನ್ನು ತುಂಬಿದ್ದವು.

ಯಾಕೋ ಇಬ್ಬರಿಗೂ ಮುಂದೆ ಏನೂ ಮಾತು ಬೇಡವೆನಿಸಿತು. ಕಾರನ್ನು ಮನೆಯ ಕಡೆ ತಿರುಗಿಸಿದೆವು. ಸ್ಟಾರ್ಟ್ ಆದ ಕೂಡಲೇ ರಾಜ್‌ಕುಮಾರ್ ಹಾಡಿದ ‘ಲಘುವಾಗೆಲೆ ಮನ..’ ಹಾಡು ಸುಶ್ರಾವ್ಯವಾಗಿ ಹೊರ ಹೊಮ್ಮಲು ನನ್ನ ಮನಸೂ ಹಗುರಾದಂತಾಗಿ ಹಾಗೇ ಸೀಟಿಗೆ ಕಣ್ಮುಚ್ಚಿ ಒರಗಿದೆ. ಮನೆ ಮುಟ್ಟಿದ ಮೇಲೂ ಎಷ್ಟೋ ಹೊತ್ತಿನವರೆಗೂ ಆ ಹಾಡು ಮನದೊಳಗೆ ಗಿರಕಿ ಹೊಡೆಯುತ್ತಲೇ ಇತ್ತು....
"ಲಘುವಾಗೆಲೆ ಮನ, ಗೆಲವಾಗೆಲೆ ಮನ
ಹಾರು ನನ್ನ ಬಿಟ್ಟು, ಹಾರಿ ಹರಿಯ ಮುಟ್ಟು.
ನನಗಂಟಲು ನೀನಾಗುವೆ ಕಶ್ಮಲ
ನನ್ನ ತೊರೆಯೆ ನೀ ನಿರ್ಮಲ ನಿಶ್ಕಳ
ಹರಿಯೋ ನನ್ನ ಬಿಟ್ಟು, ಮುಂಬರಿದು ಹರಿಯ ಮುಟ್ಟು..."
-----***-----

Friday, February 27, 2009

ಒಳಗೊಂದು ಕಿರುನೋಟ....

ಮಲೆಯ ಮದುಮಗಳ ತುಂಬೆಲ್ಲಾ ಮಲೆಯದೇ ಸ್ನಿಗ್ಧ ಸೌಂದರ್ಯ!
-------------------------------------------
ಕುವೆಂಪು ಅವರ "ಮಲೆಗಳಲ್ಲಿ ಮದುಮಗಳು" ಕೃತಿ ಮೊದಲು ಬಿಡುಗಡೆಗೊಂಡಿದ್ದು ೧೯೬೭ರಲ್ಲಿ. ಇಂತಹ ಒಂದು ಬೃಹತ್ ಕಾದಂಬರಿಯನ್ನು ಇಷ್ಟು ನಾಜೂಕಾಗಿ, ಸುಂದರವಾಗಿ, ಸಾರ್ವಕಾಲಿಕ ಶೇಷ್ಠವಾಗಿ, ಕಾಲಾತೀತವಾದ ಕೃತಿಯನ್ನು ರಚಿಸಲು ಅವರಿಗೆ ಎಷ್ಟು ಸಮಯ ಬೇಕಾಯಿತೋ ಕಾಣೆ. ಈವರೆಗೆ ಒಟ್ಟೂ ಹನ್ನೆರಡು ಮುದ್ರಣವನ್ನು ಕಂಡಿರುವುದೇ ಇದರ ಪ್ರಖ್ಯಾತಿಗೆ, ಮೆಚ್ಚುಗೆಗೆ ಹಾಗೂ ಕಾದಂಬರಿಯೊಳಗಿನ ಸೊಬಗು, ಮಾರ್ದವತೆ, ನೈಜತೆಯ ಮೋಡಿಗೆ ಸಾಕ್ಷಿ. ಆಗಿನ ಕಟು ವಾಸ್ತವಿಕತೆಗಳು, ಪಶುತ್ವ ವರ್ತನೆಗಳು, ಗ್ರಾಮ್ಯ ಭಾಷೆಗಳ ಒರಟುತನ, ಆಹಾರ ವಿಹಾರಗಳಲ್ಲಿನ ರೂಕ್ಷತೆಗಳನ್ನು ಮೊದಮೊದಲು ಅರಗಿಸಿಕೊಳ್ಳಲು ತುಸು ಕಠಿಣ ಎಂದೆನಿಸಿದರೂ, ಕ್ರಮೇಣ ಅದರೊಳಗಿನ ಪಾರದರ್ಶಕತೆ ನಮ್ಮನ್ನು, ನಮ್ಮರಿವನ್ನೂ ಮರೆವಂತೆ ಮಾಡುವುದು ಸುಳ್ಳಲ್ಲ. ಈ ಕಾದಂಬರಿಯನ್ನು ನಾನು ಸುಮಾರು ೭-೮ ವರ್ಷಗಳ ಹಿಂದೆ ಓದಿದ್ದೆ. ಈಗ ಇತ್ತೀಚಿಗೆ ಮತ್ತೊಮ್ಮೆ ಈ ಕಾದಂಬರಿಯನ್ನೋದಿದೆ. ಓದುತ್ತಿದ್ದಂತೆ ನನಗನಿಸಿತು ಇದರ ಕುರಿತು ನನ್ನ ಅಭಿಪ್ರಾಯ, ಅನಿಸಿಕೆಗಳನ್ನು ಸಹಮಾನಸಿಗರಾದ ನಿಮ್ಮೆ ಮುಂದೆಯೂ ತೆರೆದಿಡಬೇಕೆಂದು. ಅದಕ್ಕಾಗಿಯೇ ಈ ಪುಟ್ಟ ಪ್ರಯತ್ನ.
ಆರಂಭದಲ್ಲಿ ಕುವೆಂಪು ಅವರೇ ಹೇಳಿದಂತೆ-"ಇಲ್ಲಿ ಯಾರೂ ಮುಖ್ಯರಲ್ಲ; ಯಾರೂ ಅಮುಖ್ಯರಲ್ಲ; ಯಾವುದೂ ಯಃಕಶ್ಚಿತವಲ್ಲ! ಇಲ್ಲಿ ಅವಸರವೂ ಸಾವಧಾನದ ಬೆನ್ನೇರಿದೆ!"

ಕಾದಂಬರಿಯೊಳಗೆ ಕಥೆ ಪ್ರಾರಂಭವಾಗುವುದು ಸಿಂಬಾವಿಯ ಭರಮೈಹೆಗ್ಗಡೆಯವರ ಚೌಕಿಮನೆಯಿಂದಾದರೆ, ಕೊನೆಗೊಳ್ಳದೇ ನಿರಂತರತೆಯನ್ನು ಸಾರುತ್ತಾ ಓದುಗನ ಕಲ್ಪನೆಯಲ್ಲಿ ನಿಲ್ಲುವುದು ಹೂವಳ್ಳಿ ಚಿನ್ನಮ್ಮ ಹಾಗೂ ಮುಕುಂದಯ್ಯನವರು ಒಂದಾಗುವ ಸಂಕೇತದೊಂದಿಗೆ. ಈ ನಡುವೆ ಬರುವ ಅನೇಕ ಕಥೆಗಳು ಉಪಕಥೆಗಳು, ಹಲವಾರು ಜಾತಿ, ಮತ, ಪಂಥಗಳು, ಪಂಗಡಗಳು, ಪಾತ್ರಗಳು, ಪ್ರಸಂಗಗಳು ಎಲ್ಲವೂ ಸಾವಧಾನವಾಗಿ ಮೆಲ್ಲಮೆಲ್ಲನೆ ಮನದೊಳಗಿಳಿದು..ಆಳವ ಹುಡುಕಿ ತಮ್ಮ ತಮ್ಮ ಜಾಗವನ್ನು ಹಿಡಿದು ಬೇರನ್ನೂರಿ ಚಿರಸ್ಥಾಯಿಯನ್ನು ಪಡೆಯುತ್ತವೆ.


ಸಿಂಬಾವಿ ಭರಮೈಹೆಗಡೆ, ಹಳೆಮನೆ ಸುಬ್ಬಣ್ಣ ಹೆಗ್ಗಡೆ, ಹೂವಳ್ಳಿ ವೆಂಕಟನ್ಣ, ಬೆಟ್ಟಳ್ಳಿ ಕಲ್ಲೇಗೌಡ್ರು ಹಾಗೂ ಅವರ ಮಗ ದೇವಯ್ಯ, ಕೋಣೂರಿನ ರಂಗೇಗೌಡ್ರು ಹಾಗೂ ಅವರ ತಮ್ಮ ಮುಕುಂದಯ್ಯ, ಹೊಲೆಯನಾದ ಗುತ್ತಿ ಹಾಗೂ ಆತನ ಹುಲಿ ಗಾತ್ರದ ನಾಯಿ ಹುಲಿಯ, ತಿಮ್ಮಿ, ಚಿನ್ನಮ್ಮ, ಪಿಂಚಲು, ಐತ - ಇವರು ಮಲೆಯ ಮದುಮಗಳನ್ನು ಸಿಂಗರಿಸುವಲ್ಲಿ ಪ್ರಮುಖ ಪಾತ್ರಧಾರಿಗಳು.

ಸೇನಾನಾಯ್ಕ, ಅಂತಕ್ಕ ಸೆಟ್ತಿ ಆಕೆಯ ಮಗಳು ಕಾವೇರಿ, ಮತಾಂತರಿ ಫಾದರ್ ಜೀವರತ್ನಯ್ಯ, ಕಾಮುಕ ಚೀಂಕ್ರ, ಆತನ ದುರ್ಬಾಗ್ಯ ಹೆಂಡತಿ ದೇಯಿ, ರೋಗಿಷ್ಠ ಗಂಡನ ಶುಶ್ರೂಷೆಯಲ್ಲೇ ನೆಮ್ಮದಿ ಕಾಣುವ ಅಕ್ಕಣಿ, ಕೇಡಿ/ಪುಂಡಾಡಿ ಕರೀಂಸಾಬ, ಆತನ ಚೇಲ ಪುಡಿಸಾಬ, ಸಾಧ್ವಿಯರಾದ ಜಟ್ಟಮ್ಮ, ದೇವಮ್ಮ, ರಂಗಮ್ಮ, ಜಿಪುಣ ಮಂಜಭಟ್ಟ, ಅಂತರ್ಯಾಮಿಯಾದ ಹೊಳೆದಂಡೆಯ ಸಂನ್ಯಾಸಿ ಮುಂತಾದವರೆಲ್ಲಾ ಮದುಮಗಳ ಸಹಚಾರರು. ಅಂದರೆ ಉಪಕಥೆಗಳಿಗೆ ಕಾರಣಕರ್ತರು.

ಆದರೆ ಇಲ್ಲಿ ಉಪಕಥೆಯ ಮೂಲಕವೇ ಪ್ರಮುಖ ಕಥೆಯನ್ನೂ ಘಟನಾವಳಿಗಳನ್ನೂ ಹೇಳಿದ, ಹಾಗೆ ಹೇಳಲು ಹಣೆದ ನಿರೂಪಣಾಶೈಲಿಗೆ ಎರಡು ಮಾತಿಲ್ಲ. ನಿಜವಾಗಿಯೂ ಇಲ್ಲಿ ಯಾರೂ ಮುಖ್ಯರಲ್ಲ. ಅಮುಖ್ಯರೂ ಅಲ್ಲ!

ಕುವೆಂಪು ಅವರು ಇಲ್ಲಿ ಪ್ರಮುಖವಾಗಿ ಮೂವರು ಮದುಮಗಳನ್ನು ಪ್ರತಿಪಾದಿಸುತ್ತಾರೆ. ಒಬ್ಬಳು ಬೆಟ್ಟಳ್ಳಿ ಕಲ್ಲೇಗೌಡರ ಹೊಲೆಯಕೇರಿಯಲ್ಲಿರುವ ಹೊಲೆಯನಾದ ಗುತ್ತಿ. ಇನ್ನೊಬ್ಬಳು ಗೌಡತಿಯಾದ ಹೂವಳ್ಳಿ ಚಿನ್ನಮ್ಮ. ಇಬ್ಬರೂ ಕಾರಣಾಂತರಗಳಿಂದ ತಮಗಿಷ್ಟವಿಲ್ಲ ಮದುವೆಯಿಂದ ತಪ್ಪಿಸಿಕೊಳ್ಳಲು ತಮ್ಮ ಪ್ರಿಯಕರನೊಂದಿಗೆ (ತಿಮ್ಮಿಯ ಪ್ರಿಯಕರ ಸಿಂಬಾವಿ ಒಡೆಯರ ಹೊಲಗೇರಿ ವಾಸಿಯಾದ ಗುತ್ತಿಯಾದರೆ ಚಿನ್ನಮ್ಮಳ ಪ್ರಿಯತಮ ಕೋಣೂರಿನ ಮುಕುಂದಯ್ಯ ಗೌಡ್ರು) ಓಡಿಹೋಗಿ ಸದಾ ಮದುಮಗಳಾಗಿ ಕಂಗೊಳಿಸುತ್ತಿದ್ದ ದಟ್ಟ ಮಲೆಯಲ್ಲಡಗಿರುತ್ತಾರೆ. (ಸಂದರ್ಭ ಹಾಗೂ ಕಾಲ ಎರಡೂ ಭಿನ್ನವಾಗಿರುತ್ತದೆ. ಒಂದೇ ದಿನ/ಒಂದೇ ಸಮಯದಲ್ಲೇ ಇಬ್ಬರೂ ಓಡಿ ಹೋಗುವುದಿಲ್ಲ.)
ಆದರೆ ಹೊಲೆಯನಾದ ಗುತ್ತಿಯ ಪಲಾಯನದಲ್ಲೂ ಹೂವಿನಂತಹ ಚೆಲುವೆ ಚಿನ್ನಮ್ಮಳ ಪಲಾಯನದಲ್ಲೂ ಇರುವ ಸಾಮ್ಯತೆ/ವಿರುದ್ಧತೆಯನ್ನು ಕಣ್ಣಿಗೆ ಕಟ್ಟಿದಂತೇ ಚಿತ್ರಿಸುತ್ತಾರೆ ಕುವೆಂಪು. ಮೈನವಿರೇಳಿಸುವ ಪ್ರಸಂಗ, ಕಾನನ ಚಿತ್ರಣ, ಹೋರಾಟ, ಅಂತರ್ಯುದ್ಧದ ಜೊತೆ ಬಹಿರ್ಯುದ್ಧ, ಮನದೊಳಗಿನ ತಲ್ಲಣ, ಹೊಯ್ದಾಟ, ಹೆಣ್ಮನಸಿತ ನೋವು, ಯಾತನೆ, ಕೊರಗು, ಮುಗ್ಧತೆ ತುಂಬಿದ ಆಶಯ ಎಲ್ಲವೂ ನಮ್ಮನ್ನು ಓದುತ್ತಿದ್ದಂತೆ ಮಂತ್ರಮುಗ್ಧರನ್ನಗಿಸುತ್ತದೆ. ಎಲ್ಲೋ ಒಂದು ಕಡೆ ನಡೆಯುವ ಪ್ರತಿಘಟನೆಯೊಳಗೇ ನಾವೂ ನಮ್ಮನ್ನು ಒಂದಾಗಿಸಿಕೊಂಡು ಬಿಡುತ್ತೇವೆ. ಕೆಲವೊಂದು ಘಟನೆಗಳಲ್ಲಿ ಸಿನಿಮೀಯತೆಯೂ ಮೇಳೈಸಿರುವುದರಿಂದ ಈ ಕಾಲಕ್ಕೂ ಅವು ಪ್ರಸ್ತುತವೆನಿಸುತ್ತವೆ. ರೋಮಾಂಚಕತೆ, ಕುತೂಹಲ, ಮೈ ನವಿರೇಳಿಸುವ ಕಥಾಕಾನನ ಸರಾಗವಾಗಿ ನಮ್ಮನ್ನು ಓದಿಸಿಕೊಂಡು ಹೋಗುತ್ತದೆ.

ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಪ್ರಧಾನವಾಗಿ ಮೂರು ಅಂಶಗಳನ್ನು ಕಾಣುತ್ತೇವೆ.

ಮೊದಲಿಗೆ ಆ ಕಾಲದ ಜನಜೀವನ ಹಾಗೂ ಸಾಮಾಜಿಕ ಚಿತ್ರಣ

ಈ ಕಾದಂಬರಿಯುದ್ದಕ್ಕೂ ಕಾಣಸಿಗುವುದು ಆ ಕಾಲದ ಸಾಮಾಜಿಕ ಚಿತ್ರಣ. ಅಂದರೆ ವಿವೇಕಾನಂದರು ಭವ್ಯ ಭಾರತವನ್ನುದ್ದೇಶಿಸಿ ಅಮೇರಿಕಾದಲ್ಲಿ ಸಂದೇಶವನ್ನಿತ್ತು ನಮ್ಮ ಸಂಸ್ಕೃತಿಯನ್ನು ಸಾರಿದ, ಸಾರುತ್ತಿದ್ದ ಸಮಯ. ಆ ಕಾಲದಲ್ಲಿ ಪುಟ್ಟ ಹಳ್ಳಿಯಾದ ದಟ್ಟ ಕಾಡು, ಮಲೆಗಳಿಂದಲೇ ಕೂಡಿದ್ದ, ತೀರ್ಥಳ್ಳಿ, ಮೇಗರವಳ್ಳಿ, ಕೋಣೂರು, ಬೆಟ್ಟಳ್ಳಿ, ಹೂವಳ್ಳಿ, ಸಿಂಬಾವಿ ಹಳ್ಳಿಗಳೊಳಗಿನ ಅರಾಜಕತೆ, ದಾರಿದ್ರ್ಯತೆ, ಅಸಂಸ್ಕೃತಿಯಲ್ಲೂ ಒಂದು ವಿಶಿಷ್ಟವಾದ ಸಂಸ್ಕೃತಿಯನ್ನೆಳೆದುಕೊಂಡು, ಜಾತಿ, ಮತ, ಮೂಢನಂಬಿಕೆ, ಕಂದಾಚಾರಗಳನ್ನೇ ಹೊದ್ದು ಹಾಸಿಕೊಂಡು, ಪಶುವಿಗೂ ಹೊಲೆಯನಿಗೂ ಏನೊಂದೂ ವ್ಯತ್ಯಾಸವನ್ನೇ ಕಾಣದ, ಸಾಮಾಜಿಕ ಜನ ಜೀವನ.

ವಿಶೇಷವೆಂದರೆ ಇಲ್ಲಿ ಹೊಲೆಯನೇ ತಾನು ಪರಿತ್ಯಕ್ತ ಎಂದು ಸಾರಿಕೊಂಡು ಹಾಗೇ ಜೀವಿಸುತ್ತಾ. ತನ್ನನ್ನೂ ಪಶುವಿಗೇ ಹೋಲಿಸಿಕೊಂಡು, ಪಶೂತ್ವವನ್ನೇ ಸುಖಿಸುತ್ತಾ, ತುಸು ಗೌರವ ಸಿಕ್ಕರೂ ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸಿ ಆ ಜೀವನದಲ್ಲೇ ಸಾರ್ಥಕತೆಪಡೆಯುವ ಒಂದು ಮನೋಭಾವ ಬಲು ಬೆರಗು ಮೂಡಿಸುತ್ತದೆ. ಹಾಗೆಯೇ ಮನಭಾರಗೊಳಿಸುವುದೂ ದಿಟ.
ಜೊತೆಗೇ ಮೂಕಪ್ರಾಣಿಗಳ ಪ್ರತಿ ಅವರಿಗಿದ್ದ ಪ್ರೀತಿ, ವಿಶ್ವಾಸ, ಭಾವಾನಾ ಸಂಬಂಧವನ್ನರಿಯಲು ಗುತ್ತಿ ಹಾಗೂ ಆತನ ನಾಯಿ ಹುಲಿಯನ ಪ್ರಸಂಗಗಳನ್ನೂ, ಕೊನೆಯಲ್ಲಿ ಕೊನೆಯಾಗುವ ಅವರ ಋಣಾನುಬಂಧವನ್ನೂ ಓದಲೇಬೇಕು. ಎಂತಹವರಿಗಾದರೂ ಒಮ್ಮೆ ಪಿಚ್ಚೆನಿಸುವಂತೆ ಆಗುವುದು.

ಎರಡನೆಯ ಅಂಶವೆಂದರೆ ಮತಾಂತರದ ಅವಾಂತರ

ಕಾದಂಬರಿಯಲ್ಲಿ ಈ ಪಿಡುಗು ಯಾವ ರೀತಿ ಆ ಕಾಲದಲ್ಲೇ ಬೇರುಬಿಡತೊಡಗಿತ್ತೆಂದು ನಿಚ್ಚಳವಾಗಿ ತಿಳಿಯತೊಡಗುತ್ತದೆ. ಊರಿಗೆ ಫಾದರ್ ಆಗಿ ಬಂದ ಪಾದರಿ ಜೀವರತ್ನಯ್ಯ, ಹೇಗೆ ಅಮಾಯಕರ, ಮುಗ್ಧರ ಮನಸನ್ನು ಅಮಿಶಗಳೊಂದಿಗೆ ಸೆಳೆದುಕೊಂಡು, ಅವರ ದಾರಿದ್ರ್ಯತೆಯನ್ನೇ ಬಂಡವಾಳವನ್ನಾಗಿಸಿ ಮತಾಂತರಕ್ಕೆ ಹುನ್ನಾರು ನಡೆಸುತ್ತಿದ್ದ ಎನ್ನುವುದನ್ನು ಕಣ್ಣಿಗೆ ಕಟ್ಟುವಂತೇ ಚಿತ್ರಿಸಿದ್ದಾರೆ ಕುವೆಂಪು. ಆದರೆ ಇದರಲ್ಲಿ ಬ್ರಾಹ್ಮಣರ ಹಾಗೂ ತುಸು ಮೇಲ್ ಪಂಗಡದವರಾದ ಗೌಡರ ಕೊಡುಗೆಯೂ ಅಪಾರವಾಗಿತ್ತೆಂದು ಹೇಳಲು ಮರೆಯರು. ಹಾಗಾಗಿ ಕುವೆಂಪು ಅವರೇ ಹೇಳುವಂತೆ ಇಲ್ಲಿ ಯಾವುದೂ ಯಕಃಶ್ಚಿತವಲ್ಲ!
ಮೂರನೆಯ ಹಾಗೂ ಪ್ರಮುಖ ಅಂಶವೆಂದರೆ ಪ್ರಾಕೃತಿಕ ವರ್ಣನೆ.

ಮಳೆಕಾಡಿನ ಚಿತ್ರಣ ರುದ್ರಭಯಂಕರವೆನಿಸುತ್ತದೆ. ಹುಲಿಕಲ್ ಗುಡ್ಡದ ಚಿತ್ರಣ ಇಲ್ಲೇ ಎಲ್ಲೋ ಪಕ್ಕದಲ್ಲೇ ಗುಡ್ಡವಿರುವಂತೆ, ಎಲ್ಲೋ ದೂರದಿಂದ ಹುಲಿ ಗರ್ಜನೆ ಕೇಳಿದಂತೆ ಓದುಗನಿಗೂ ಭಾಸವಾಗುವಷ್ಟು ವಾಸ್ತವವಾಗಿದೆ.
ಕಾದಂಬರಿಯಲ್ಲಿ ಒಂದು ಕಡೆ ಕುವೆಂಪು ಅವರು ಪ್ರಕೃತಿಯಲ್ಲುಂಟಾಗುವ ಬದಲಾವಾಣೆ ಹೇಗೆ ಅಸಂಸ್ಕೃತ, ಅನಕ್ಷರಸ್ಥ, ಭಾವನೆಗಳೇ ಬತ್ತಿ ಹೋದ ಮನುಷ್ಯನೊಳಗೂ ಎಲ್ಲೋ ಸುಪ್ತವಾಗಿ ಅಡಗಿರುವ ವಿಸ್ಮೃತಿಯೊಳಗನ ಸ್ಮೃತಿಯನ್ನು ಬಡಿದಬ್ಬಸಿ ವರ್ಣನಾತೀತ ಅನುಭೂತಿಯನ್ನು ಕೊಡುತ್ತದೆ ಎನ್ನುವುದನ್ನು ಈ ರೀತಿ ವರ್ಣಿಸುತ್ತಾರೆ.

ಸಂದರ್ಭದ ಹಿನ್ನಲೆ : ಇಲ್ಲಿ ಬರುವ ಹಳೆಮನೆ ಸುಬ್ಬಣ್ಣ ಹೆಗ್ಗಡೆ ಸ್ವಭಾವತಃ ಅಸಂಸ್ಕೃತ. ಸಂಸ್ಕಾರ ವಿಹೀನ. ಹಂದಿದೊಡ್ಡಿ, ಕುರಿದೊಡ್ಡಿ, ಕೋಳಿ ಹಿಕ್ಕೆಯಲ್ಲೇ ಮೈತಿಕ್ಕಿ ಕೊಂಡು ವಾರದಲ್ಲಿ ಒಮ್ಮೆ ಮಾತ್ರ ಸ್ನಾನ ಮಾಡಿ ಬಟ್ಟೆ ಒಗೆಯುವವ ಮನುಷ್ಯ. ಪ್ರತಿದಿನ ಸ್ನಾನ ಮಾಡುವವ ಈ ಲೋಕಕ್ಕೇ ಸಲ್ಲದವ ಎಂದು ಬಲವಾಗಿ ನಂಬಿದವ. ನಂಬಿದಂತೇ ಬಾಳುತ್ತಿರುವವ. ಅಂತಹವನಲ್ಲೂ ಬೆಳಗಿನ ಪ್ರಾಕೃತಿಕ ಬದಲಾವಣೆ ಯಾವರೀತಿ ಆನಂದಾನುಭೂತಿಯನ್ನು ತುಂಬಿತು!!.. ಇದಕ್ಕೆ ಎಲ್ಲೋ ಏನೋ ಪೂರ್ವಜನ್ಮದ ಸ್ಮರಣೆಯೋ ಇಲ್ಲಾ ಸುಪ್ತವಾಗಿರುವ ‘ಅಸ್ಮೃತಿ’ಯೋ ಕಾರಣವಾಗಿರಬಹುದು ಎಂಬುದನ್ನು ಕುವೆಂಪು ಅವರು ಈ ರೀತಿ ವಿವರಿಸುತ್ತಾರೆ. ಅವರ ಈ ಕೆಳಗಿನ ವರ್ಣನೆ ನನ್ನ ಸ್ಮೃತಿಗೂ ಸಂಪೂರ್ಣ ಎಟುಕಿತೆಂದು ಹೇಳೆನು. ಅರ್ಥೈಸಿಕೊಳ್ಳಲು ಯತ್ನಿಸಿದಷ್ಟೂ ದೂರಾಗುವ ಇದರೊಳಗಿನ ಮರ್ಮ ನಿಮಗೆ ಸಂಪೂರ್ಣವಾಗಿ ತಿಳಿದಲ್ಲಿ ನನಗೂ ತಿಳಿಸಬೇಕಾಗಿ ವಿನಂತಿ.

"ಮನುಷ್ಯನು ತಿಳಿದುಕೊಂಡಿರುವುದಕ್ಕಿಂತಲೂ ಹೆಚ್ಚಾಗಿಯೇ ಅವನ ಅಂತಃಪ್ರಕೃತಿ ಸೃಷ್ಟಿಯ ಬಹಿಃಪ್ರಕೃತಿಗೆ ಅನುಯಾಯಿಯಾಗಿರುತ್ತದೆ. ಆತನ ಆತ್ಮಕೊಶವು ಬಹು ಜನ್ಮಗಳ ಸಂಸ್ಕಾರಗಳಿಂದ ತುಂಬಿರುವಂತೆ ಆತನ ಅನ್ನಮಯಕೋಶವೂ ಪೃಥ್ವಿಯಲ್ಲಿ ಪ್ರಾಣೋತ್ಪತ್ತಿಯಾದಂದಿನಿಂದ ಮೊದಲುಗೊಂಡು ಇಂದಿನವರೆಗೆ ಜೀವವು ಕೈಗೊಂಡ ನಾನಾರೂಪದ ನಾನಾ ಪ್ರಯೋಗದ ನಾನಾ ಕಷ್ಟ ಸಂಕಟಗಳ ನಾನಾ ಸುಖ ಸಂತೋಷಗಳ ಮಹಾ ಸಾಹಸಯಾತ್ರೆಗಳ ಸಮಗ್ರ ಪರಿಣಾಮ ಮುದ್ರೆಯನ್ನೂ ‘ಅಸ್ಮೃತಿ’ ರೂಪದಲ್ಲಿ ಪಡೆದಿರುತ್ತದೆ. ಆ ಅಪಾರ್ಥಿವ ಮತ್ತು ಪಾರ್ಥಿವ ಸಂಸ್ಕಾರ ಕೋಶಗಳೆರಡೂ ನಮ್ಮ ಬಾಳ್ವೆಯ ಹೃದಯದ ಇಕ್ಕೆಲಗಳಲ್ಲಿ ಶ್ವಾಸಕೋಶಗಳಂತಿವೆ. ಅಪ್ರಜ್ಞಾಸೀಮೆಯಲ್ಲಿರುವ ಆ ಸಂಸ್ಕಾರಗಳಲ್ಲಿ ಯಾವುದನ್ನಾದರೂ ಮುಟ್ಟಿ ಎಚ್ಚರಿಸುವಂತಹ ಸನ್ನಿವೇಶ ಒದಗಿದರೆ ನಮಗೆ ಬಹುತೇಕ ಆನಂದವೂ ಅಕಾರಣ ಸಂಕಟವೂ ಸಂಭವಿಸಿದಂತಾಗುತ್ತದೆ. ಅಲ್ಪ ಕಾರಣದಿಂದ ಮಹತ್ತಾದ ಅನುಭವ ಉಂಟಾದಂತೆ ಭಾಸವಾಗಿ ಆಶ್ಚರ್ಯವಾಗುತ್ತದೆ. ಎಳೆಬಿಸಿಲಿನಲ್ಲಿ ಹಸುರು ಗರಿಕೆಯ ಕುಡಿಯಲ್ಲಿ ಮಿರುಗುವ ದುಂಡು ಮುತ್ತಿನ ತೆರೆದ ಇಬ್ಬನಿ, ಪ್ರಾಣದ ಪ್ರಪ್ರಾಚೀನಾನುಭವದ ಮಹಾ ಸಾಗರದ ‘ಅಸ್ಮೃತಿ’ಯನ್ನು ಕೆರಳಿಸಿ, ಸಮುದ್ರದರ್ಶನದ ಭೂಮಾನುಭೂತಿಯನ್ನುಂಟುಮಾಡಬಹುದು. ಕಾಡಿನಂಚಿನಲ್ಲಿ ಬೈಗುಗಪ್ಪಿನ ಮಬ್ಬಿನಲ್ಲಿ, ಹೆಮ್ಮರದ ದಿಂಡಿನಲ್ಲಿರುವ ಮರಕುಟಿಗನ ಗೂಡಿನ ಪೊಟ್ಟರೆ, ಅತ್ಯಂತ ಪೂರ್ವಕಾಲದ ಬಾಳಿನ ಯಾವುದೊ ಒಂದು ಕಗ್ಗವಿಯನ್ನೋ ಪೆಡಂಭೂತದ ಕಣ್ಣನ್ನೋ ‘ಅಸ್ಮೃತಿ’ಗೆ ತಂದು, ಅನಿರ್ವಚನೀಯವಾದ ಭೀತಿಯನ್ನುಂಟುಮಾಡಬಹುದು. ಪರ್ವತಾರಣ್ಯಗಳ ಭಯಂಕರ ಪ್ರಕೃತಿಯ ಮಧ್ಯೆ ವಾಸಮಾಡುವವರಿಗೆ ಅರ್ಥವಾಗದ, ಆದ್ದರಿಂದ ಅರ್ಥವಿಲ್ಲದ, ಆ ಅನುಭವಗಳು ಪಿಶಾಚಿಗಳಂತೆಯೊ ದೆಯ್ಯ ದ್ಯಾವರುಗಳಂತೆಯೊ ತೋರುತ್ತವೆ. ಕತ್ತಲೆಯಲ್ಲಿ ಆಕಾಶಕ್ಕೆದುರಾಗಿ ಚಾಚಿರುವ ಭೀಮಾಕಾರದ ಕೋಡುಗಲ್ಲಿನಲ್ಲಿ ಪ್ರಾಚೀನಾನುಭವ ಸಮಷ್ಟಿರೂಪದ ‘ಅಸ್ಮೃತಿ’ ಆವಿರ್ಭಾವವಾಯಿತೆಂದರೆ ಬ್ರಹ್ಮರಾಕ್ಷಸ ದರ್ಶನವಾಗುವುದರಲ್ಲಿ ಆಶ್ಚರ್ಯವೇನಿದೆ? ಕಬ್ಬಿಣದ ಪೆಟ್ಟಿಗೆಯ ಖಜಾನೆಯನ್ನು ತೆರೆಯುವುದಕ್ಕೆ ಸಣ್ಣ ಬೀಗದ ಕೈ ಸಾಕಾಗುವಂತೆ ‘ಅಸ್ಮೃತಿ’ಯ ಮಹದೈಶ್ವರ್ಯವನ್ನು ಕೆರಳಿಸಲು ಅತ್ಯಲ್ಪ ಕಾರಣಗಳೂ ಸಾಕಾಗುತ್ತವೆ."
(ಮುದ್ರಣ:೨೦೦೭, ಪುಟ ಸಂಖ್ಯೆ : ೪೪)

ಈ ಮೂರೂ ಅಂಶಗಳನ್ನೂ ಮೀರಿದ, ಕಾದಂಬರಿಯ ಜೀವನಾಡಿಯಾಗಿ, ಜೀವನದಿಯಾಗಿ ಕಥೆಯುದ್ದಕ್ಕೂ ಹರಿಯುವುದು ಸ್ತ್ರೀ ಮನೋಧರ್ಮ :-

ಪ್ರಾರಂಭದಲ್ಲಿ ಗುತ್ತಿ ತಿಮ್ಮಿಯನ್ನು ಹಾರಿಸಿಕೊಂಡು ಹೋಗುವದಕ್ಕೆ ಯೋಚಿಸುವುದರಿಂದ ಶುರುವಾಗುವ ಕಥೆ, ನಿಲ್ಲುವುದು ತಾನು ವರಿಸಬೇಕೆಂದು ಬಯಸಿದ್ದ ಚಿನ್ನಮ್ಮನ್ನು ಅಂತೂ ಕೊನೆಗೆ ಪಡೆಯುವ ಮುಕುಂದಯ್ಯನಲ್ಲಿ. ಸ್ತ್ರೀಯೇ ಇಲ್ಲಿ ಪ್ರಮುಖಳು. ಸ್ತ್ರೀ ಪ್ರಧಾನ ಕಾದಂಬರಿ ಇದೆಂದರೂ ತಪ್ಪಾಗದು. ಪ್ರಕೃತಿ ಹಾಗೂ ಹೆಣ್ಣಿನೊಳಗಣ ಅವಿನಾಭಾವ ಸಂಬಂಧವನ್ನು ಕಥೆಯುದ್ದಕ್ಕೂ ಕಾಣಬಹುದು. ಹೆಣ್ಣಿನ(ಹೊಲೆಯ ಗೌಡ ಎಂಬ ಬೇಧವಿಲ್ಲದೇ)ಮನೋಕಾಮನೆಗಳಿಗೆ, ವಿಪ್ಲವಗಳಿಗೆ, ಹೊಯ್ದಾಟಕ್ಕೆ, ತುಮುಲಕ್ಕೆ, ಅನಿಶ್ಚಿತತೆಗೆ, ನಿರ್ಧಾರಕ್ಕೆ ಸದಾ ಸಾಥ್ ನಿಡುತ್ತದೆ ರಮ್ಯ ಮನೋಹರ ಪ್ರಕೃತಿ. ಅದು ಗುತ್ತಿಯೊಡನೆ ಅಮಾವಾಸ್ಯೆ ರಾತ್ರಿಯಲ್ಲಿ ಹುಲಿಕಾಡಿನ ಮೂಲಕ ಓಡಿಹೋಗುವ ತಿಮ್ಮಿಯ ಜೊತೆಗಾಗಿರಲಿ ಇಲ್ಲಾ ಸುಂಸ್ಕೃತೆ ಚಿನ್ನಮ್ಮ ಮದುವೆಯ ದಿನ ಸಂಜೆಯೇ ಪ್ರಿಯಕರ ಮುಕುಂದಯ್ಯನೊಂದಿಗೆ ಅದೇ ಕಾಡಿನ ದಾರಿಯಾಗಿ ಓಡಿಹೋಗುವ ಸಂದರ್ಭವೇ ಆಗಿರಲಿ..ಪ್ರಕೃತಿಯೇ ಇಲ್ಲಿ ಕಾರಣಕರ್ತ ಹಾಗೂ ಕತೃ.

ಹೆಣ್ಣಿಗೆ ಪರಿಶುದ್ಧತೆ ಇರಬೇಕಾದದ್ದು ಮನಸಿಗೇ ಹೊರತು ಮೈಗಲ್ಲಾ ಎಂಬ ಸಂದೇಶವನ್ನು ತುಂಬಾ ಸರಳವಾಗಿ, ಸುಂದರವಾಗಿ ಯಾರೂ ಒಪ್ಪುವಂತೆ, ಪಿಂಚಲು, ತಿಮ್ಮಿ, ಅಕ್ಕಣಿ, ರಂಗಮ್ಮ ಹಾಗೂ ಚಿನ್ನಮ್ಮರ ಪಾತ್ರದ ಮೂಲಕ ತೋರಿಸಿದ್ದಾರೆ. ಈ ಐವರು ನಾರಿಮಣಿಗಳು ಯಾವ ಪತಿವ್ರತೆಯರಿಗೂ ಕಡಿಮೆಯೆನಿಸರು. ಕುಲ/ಕಸುಬಿನಲ್ಲಿ ಬಹು ಅಂತರವಿದ್ದರೂ ಈ ನಾರಿಯರ ಮನಸಿನೊಳಗಿನ ಮುಗ್ಧತೆಗೆ, ಪರಿಶುದ್ಧತೆಗೆ ಯಾವ ಸೀಮೆಯಾಗಲೀ, ಅಂತರವಾಗಲೀ ಕಾಣಸಿಗದು. ಆಗಿನ ಕಾಲದ ದುಃಸ್ಥಿಗೋ ಪರಿಸ್ಥಿಗೋ ಸಿಲುಕಿ, ಅರಿಯದ ಮುಗ್ಧತೆಗೋ ಇಲ್ಲಾ ಆಮಿಶಕ್ಕೋ ಬಲಿಪಶುವಾಗಿ ಬಿಡಿಸಿಕೊಳ್ಳದಂತಿರುವಾಗ ಆ ಕಾಲದ ಹೆಣ್ಣು ತನ್ನ ಮೈ ಮಾರಿಕೊಂಡರೂ, (ಒಂದು ರೀತಿ ಬಲಾತ್ಕಾರಕ್ಕೊಳಪಡುವುದು) ಅವರ ಮನಸು ಮಾತ್ರ ಅವರ ಮನದಿನಿಯನ ಬಳಿಯೇ ಇರುತ್ತದೆ. ಮಾನಸಿಕ ಭದ್ರತೆ, ನೆಮ್ಮದಿ ಸುಖ-ಸಂತೋಷಗಳಿಗೇ ಅವರ ಮನಸು ತುಡಿಯುತ್ತಿರುತ್ತದೆ. ಅದಕ್ಕಾಗಿಯೇ ಹಂಬಲಿಸುತ್ತಿರುತ್ತದೆ.
ಕೊನೆಯಲ್ಲಿ ಕುವೆಂಪು ಅವರೇ ಹೇಳಿದಂತೆ-
"ಯಾವುದೂ ಎಲ್ಲಿಯೂ ನಿಲ್ಲುವುದೂ ಇಲ್ಲ; ಕೊನೆಮುಟ್ಟುವುದೂ ಇಲ್ಲ"

ನಾನು ಕುವೆಂಪು ಅವರ ಕಾದಂಬರಿಯನ್ನು ವಿಮರ್ಶಿಸುವಷ್ಟು ದೊಡ್ಡವಳಲ್ಲ. ಇದು ನನ್ನ ಉದ್ದೇಶವೂ ಅಲ್ಲ. ಅವರ ಈ ಕೃತಿ "ಕಾನೂರು ಹೆಗ್ಗಡತಿ ಸುಬ್ಬಮ್ಮ" ಕೃತಿಗಿಂತಲೂ ಅತ್ಯುತ್ತಮವಾಗಿದೆ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯವಷ್ಟೇ. ಎಷ್ಟೆಂದರೂ ಅವರ ಕೃತಿ ಹೋಲಿಕೆಗೆ ಅವರ ಕೃತಿಯೇ ಸಾಟಿ. ಆದಷ್ಟು ಸ್ಪಷ್ಟವಾಗಿ, ಸರಳವಾಗಿ, ಕ್ಲುಪ್ತವಾಗಿ ನನ್ನ ಅಭಿಪ್ರಾಯಗಳನ್ನು(ವಿಮರ್ಶೆಯನ್ನಲ್ಲ!!) ವಿಶದಪಡಿಸಿರುವೆ. ಏನಾದರೂ ಲೋಪದೋಷಗಳಿದ್ದಲ್ಲಿ, ಈ ಮೊದಲೇ ಈ ಕಾದಂಬರಿಯನ್ನು ಓದಿದವರು ತಿದ್ದಿದಲ್ಲಿ, ಸ್ವಾಗತಾರ್ಹ. ವಿಚಾರ ವಿನಿಮಯಗಳಿಗೆ ಸದಾ ಸ್ವಾಗತ. ಉತ್ತಮ ಕೃತಿಗಳನ್ನು ಓದುವಂತೆ ಪ್ರೇರೇಪಿಸುವುದು, ಓದಿರುವುದನ್ನು ಪುನರ್ ಸ್ಮರಿಸುವಂತೆ ಮಾಡುವುದು ಈ ನನ್ನ ಲೇಖನದ ಉದ್ದೇಶ ಅಷ್ಟೇ.

--------*****--------