ಗುರುವಾರ 31 ಮಾರ್ಚ್ 2011

ನೆನೆದಷ್ಟೂ ನೆನೆವ ಮನ

ಕಳೆದುಹೋಗಿದೆ ನನ್ನ
Courtesy : http://marcell86.deviantart.com/
ಬಹು ಅಮೂಲ್ಯ ಘಳಿಗೆಯೊಂದು
ಅದರ ನೆನಪಾದಾಗಲೆಲ್ಲಾ
ಎದೆಯೊಳಗೆ ಅವ್ಯಕ್ತ ಭಾವ ನೂರು

ಮಣ್ಣೊಳಗೆ ಹೊರಳಾಡಿ
ಒಳಗೆಲ್ಲಾ ಬೆಳಕಾಗಿ ಹಬ್ಬಿ ಬೆಳೆದ,
ಅವರಿವರ ಮಾತುಗಳಿಗೆ
ಕಿವಿಯಾಗದೇ ನಾನು ನಾನಾಗೇ ಉಳಿದ,
ಗೇರು ಹಣ್ಣುಗಳ ಆ
ಮತ್ತೇರಿಸುವ ಪರಿಮಳವ ಹೀರಿ...
ಬಿದ್ದು ಬಿರಿದ ಹಲಸಿನ
ತೊಳೆಗಳ ಎಳೆದೆಳೆದು ಹರಿದು ಮುಕ್ಕಿ
ನಾಳೆಯ ಪರಿವಿರದೇ
ನಿನ್ನೆಯ ನೆನೆ ನೆನೆದು ಹೊರಳದೇ,
ಇಂದು, ಆ ಕ್ಷಣದ
ಪ್ರತಿ ನಿಮಿಷವನ್ನೂ ಬಿಡದೇ
ನಿರುಮ್ಮಳಳಾಗಿ ನಕ್ಕು ನಗಿಸುತಾ
ನನ್ನ ಜೊತೆ ಕಳೆದ ಆ
ಅನುಬಂಧ ಮತ್ತೆ ಸಿಗದಾಗಿದೆ!

ನೆನೆದಂತೆಲ್ಲಾ ನೆನೆವ
ಈ ಹುಚ್ಚು ಮನವ
ಪರಿ ಪರಿಯಾಗಿ ಬೇಡಿ
ಮರೆವ ಬೇಡಿಯೊಳಗೆ ಹಾಕ ಹೊರಟರೂ
ಮರಳು ಸೋರಿದಂತೇ ನುಸುಳಿ ಜಾರಿ
ಮತ್ತೆ ಮತ್ತೆ ಕೊರೆಯುತಿದೆ ನನ್ನ...
ಗೇರು ಹಣ್ಣಿನ ಪರಿಮಳದಲ್ಲಿ,
ಹಲಸಿನ ಸಿಹಿ ತೊಳೆಗಳಲ್ಲಿ,
ಗುಡ್ಡ - ಬೆಟ್ಟಗಳ ಸಿರಿ ನೋಟದಲ್ಲಿ,
ಹುದುಗಿ ಕುಳಿತು ಅವಿರತವಾಗಿ
ಮತ್ತೆ ಮತ್ತೆ ಮರುಕಳಿಸಿ,
ಕಬಳಿಸುತಿದೆ ಉಳಿದಿರುವ ನೆಮ್ಮದಿಯನೂ....

ಕಳೆದುಹೋಗಿದೆ ನನ್ನ
ಬಹು ಅಮೂಲ್ಯ ಕಾಲವೊಂದು
ಅದರ ನೆನಪಾದಾಗಲೆಲ್ಲಾ
ಎದೆಯೊಳಗೆ ಅವ್ಯಕ್ತ ಭಾವ ನೂರು

-ತೇಜಸ್ವಿನಿ ಹೆಗಡೆ

15 comments:

  1. ಚಿಕ್ಕವಿದ್ದಾಗ ಗೇರು ಹಣ್ಣು, ನೆಲ್ಲಿ ಕಾಯಿ ಹೇಳಿ ಗುಡ್ಡ ಬೆಟ್ಟ ತಿರ್ಗದು ನೆನಪಾತು.. ಚೆನ್ನಾಗಿ ಬರದ್ರಿ

    ಪ್ರತ್ಯುತ್ತರಅಳಿಸು
  2. ತೇಜಸ್ವಿನಿ,
    ಬಾಲ್ಯದ ಸುಖವನ್ನು ನೆನಪಿಸುವ ಸುಂದರ ಕವನ.
    ‘ಎಲ್ಲಿ ಹೋದವೊ ಗೆಳೆಯಾ, ಆ ಕಾಲ?’

    ಪ್ರತ್ಯುತ್ತರಅಳಿಸು
  3. ತೇಜಸ್ವಿನಿಯವರೆ,
    ಕವನ ಬಾಲ್ಯದ ನೆನಪುಗಳನ್ನು (ನಾವು ಸಿಟಿಯಲ್ಲಿ ಬೆಳೆದವರು) ನಮ್ಮದೇ ಆದ ರೀತಿಯಲ್ಲಿ ನೆನಪಿಗೆ ಬಂದವು. ಧನ್ಯವಾದಗಳು.

    ಪ್ರತ್ಯುತ್ತರಅಳಿಸು
  4. ಗೇರುಹಣ್ಣು, ಗುಡ್ಡೆ ಗೇರುಹಣ್ಣು...ಹಲಸಿನ ಹಣ್ಣು.....ವಾಹ್!!
    ಬಾಲ್ಯದ ನೆನಪುಗಳೆಲ್ಲಾ ಮರುಕಳಿಸಿತು.

    ಪ್ರತ್ಯುತ್ತರಅಳಿಸು
  5. ತೇಜೂ ...
    ಬಾಲ್ಯದ ನೆನಪಾಯಿತು .. ಗೇರು ಹಣ್ಣು , ಕೌಳಿ ಮಟ್ಟಿ , ರಂಜಲ ಹಣ್ಣು , ಕರಿ ಮುಳ್ಳ ಹಣ್ಣು , ಬಿಳಿ ಮುಳ್ಳ ಹಣ್ಣು ......ಏನೆಲ್ಲಾ ಹಣ್ಣುಗಳು
    ತಿನ್ನ ಬೇಕೆನಿಸುತ್ತಿದೆ ಮತ್ತೆ ಈಗ. ಊರಕಡೆಗೂ ಇದೆಯೋ ಇಲ್ಲವೋ ಗೊತ್ತಿಲ್ಲ !!!

    ಪ್ರತ್ಯುತ್ತರಅಳಿಸು
  6. ತೇಜಸ್ವಿನಿ ಮೇಡಮ್,

    ಕಳೆದುಹೋಗಿದೆ ನನ್ನ
    ಬಹು ಅಮೂಲ್ಯ ಕಾಲ...ಎಷ್ಟು ನಿಜವಲ್ವ...ಸೊಗಸಾದ ಕವನ.,..

    ಪ್ರತ್ಯುತ್ತರಅಳಿಸು
  7. ಬಾಲ್ಯ... ಅದರ ನೆನಪು... ಎರಡೂ ಅತಿ ಸುಂದರ.. ಯಾವಾಗಲು... ಓದುವಾಗ ನಮ್ಮ ಬಾಲ್ಯದ ಅನೇಕ ನೆನಪುಗಳ ಛಲಕ್ ಬಂದೇ ಬಿಡುತ್ತದೆ ತಂಗೀ.. ಚೆನ್ನಾಗಿದೆ...

    ಶ್ಯಾಮಲ

    ಪ್ರತ್ಯುತ್ತರಅಳಿಸು
  8. ಕವನವನ್ನು ಮೆಚ್ಚಿ ಸ್ಪಂದಿಸಿದ ಎಲ್ಲರಿಗೂ ತುಂಬಾ ಧನ್ಯವಾದಗಳು...

    ಆದರಗಳೊಡನೆ,
    ತೇಜಸ್ವಿನಿ ಹೆಗಡೆ.

    ಪ್ರತ್ಯುತ್ತರಅಳಿಸು