ಮಂಗಳವಾರ, ಮಾರ್ಚ್ 11, 2008

ಕಾರ್ಯಕ್ರಮದ ವರದಿ

ವಿಶ್ವಮಹಿಳಾದಿನಾಚರಣೆಗೆ ‘ಕಾಣ್ಕೆ’ಯಾದ ‘ಪ್ರತಿಬಿಂಬ’





ಮಾರ್ಚ್ 8ರಂದು ನಡೆದ ಪುಸ್ತಕ ಬಿಡುಗಡೆಯ ಸಮಾರಂಭ ಆಪ್ತರ, ಸಮಾನಮನಸ್ಕರ, ಅಪ್ಪಟ ಸಾಹಿತ್ಯಾಭಿಮಾನಿಗಳ ವೇದಿಕೆಯಾಗಿತ್ತೆನ್ನಬಹುದು. ಸುಮಾರು ೭೫ ಸಾಹಿತಿಗಳು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಸಾಹಿತ್ಯಪ್ರೇಮಿಗಳು ಉಪಸ್ಥಿತರಿದ್ದರು.
---
ಕಾರ್ಯಕ್ರಮ ಸುಮಾರು 5.14ಕ್ಕೆ ಹಳೆವಿದ್ಯಾತರ್ಥಿಸಂಘದ ಅಧ್ಯಕ್ಷರಾಗಿರುವ ಶ್ರೀ ವಿಠಲ ಕುಡ್ವ ಎಂ. ಅವರ ಸ್ವಾಗತದೊಡನೆ ಪ್ರಾರಂಭವಾಯಿತು. ತದನಂತರ ಕಾಲೇಜಿನ ಹಿರಿಯ ಪ್ರೊಫೆಸರ್ ಹಾಗೂ ಕಾರ್ಯಕ್ರಮದ ವ್ಯವಸ್ಥಾಪಕರೂ ಆಗಿರುವ ಡಾ.ಜಿ.ಎನ್.ಭಟ್ಟರು ವೇದಿಕೆಯಲ್ಲಿದ್ದ ಗಣ್ಯರ ಪರಿಚಯ ನೀಡಿದರು. ರಾಜ್ಯಮಟ್ಟದಲ್ಲಿ ಸಾಹಿತ್ಯ ಹಾಗೂ ಪತ್ರಿಕಾ ಕ್ಷೇತ್ರದಲ್ಲಿ ಅರ್ಹ ಗೌರವ ಪಡೆದಿರುವ ಶ್ರೀ ಮನೋಹರ ಪ್ರಸಾದ್ ಅವರು (ಮಂಗಳೂರು ಕರ್ಯಾಲಯದ ಉದಯವಾಣಿ ಮುಖ್ಯಸ್ಥರು) ಹಾಗೂ ‘ಸಂಪ್ರಭಾ’ ಕಿರು ಪತ್ರಿಕೆಯ ಸಂಪಾದಕರೂ, ಲಿಟ್ಲಫ್ಲವರ್ ಪ್ರೌಢ ಶಾಲೆಯಲ್ಲಿ ಕನ್ನಡ ಪ್ರಾಧ್ಯಾಪಕರೂ, ಕವಿಗಳೂ, ಲೇಖಕರೂ ಆಗಿರುವ ಶ್ರೀ ಸುಮುಖಾನಂದ ಜಲವಳ್ಳಿಯವರು ಸಂಕಲನಗಳ ಕುರಿತು ವಿಮರ್ಶೆ, ಸಲಹೆಗಳನ್ನಿತ್ತು ಶುಭಾಶಂಸನೆಗೈದರು.
---
‘ಕಾಣ್ಕೆ’ ಕಥಾಸಂಕಲನಕ್ಕೆ ಮುನ್ನುಡಿ ಬರೆದಿರುವ ಶ್ರೀಮತಿ ಭುವನೇಶ್ವರಿ ಹೆಗಡೆಯವರು ಹಾಗೂ ‘ಪ್ರತಿಬಿಂಬ’ ಕವನ ಸಂಕಲನಕ್ಕೆ ಮುನ್ನುಡಿ ಬರೆದಿರುವ ಶ್ರೀ ಶ್ರೀಧರ ಡಿ.ಎಸ್.ಅವರು ಆಯಾ ಸಂಕಲನದ ಕುರಿತು ಕಿರುಪರಿಚಯಮಾಡಿಕೊಟ್ಟು , ಲೇಖಕಿಯ ಹಿನ್ನಲೆಗಳನ್ನು ತಿಳಿಸಿದರು.
---
ಅಧ್ಯಕ್ಷರಾಗಿದ್ದ ಶ್ರೀ ಏರ್ಯ ಲಕ್ಷ್ಮೀನಾರಾಯಣ ಆಳ್ವರು ಕಥಾಸಂಕಲನವನ್ನೂ ಹಾಗೂ ಮುಖ್ಯ ಅತಿಥಿಗಳಾಗಿದ್ದ ಶ್ರೀ ಪ್ರದೀಪಕುಮಾರ್ ಕಲ್ಕೂರ್ ಅವರು ಕವನ ಸಂಕಲನವನ್ನು ಬಿಡುಗಡೆ ಮಾಡಿ, ಪುಸ್ತಕಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ, ಲೇಖಕಿಯನ್ನು ಆಶೀರ್ವದಿಸಿದರು.
---.
ಇತ್ತೀಚಿಗಷ್ಟೇ ರಾಜ್ಯಪ್ರಶಸ್ತಿ ವಿಜೇತ ಶ್ರೀ ಮನೋಹರ ಪ್ರಸಾದ್ ಅವರನ್ನೂ ಹಾಗೂ ಸಂಕಲನಗಳ ಲೇಖಕಿಯನ್ನೂ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರು ಶಾಲು ಹೊದೆಸಿ ಸನ್ಮಾನಿಸಿದರು.
‘ಪ್ರತಿಬಿಂಬ’ ಕವನ ಸಂಕಲನದಿಂದಾಯ್ದ ಕವನಗಳಾದ ‘ಆಸೆ’, ‘ಆರಿವು’ ಹಾಗೂ ‘ಸುಪ್ತಾಗ್ನಿ’ ಕವನಗಳಿಗೆ ರಾಗಸಂಯೋಜಿಸಿ ಸುಶ್ರಾವ್ಯವಾಗಿ ಹಾಡಿ ಕಾರ್ಯಕ್ರಮವನ್ನು ಮತ್ತಷ್ಟು ಸುಂದರವಾಗಿಸಿದವರು ಶ್ರೀಮತಿ ಜಯಶ್ರೀ ಅರವಿ0ದ್ ಅವರು. ಅವರಿಗೆ ತಬಲಾ ಸಾಥ್ ನೀಡಿದವರು ಅವರ ಮಗನಾದ ಮಾ.ಸನತ್.
--
ವಂದನಾರ್ಪಣೆಯೊಂದಿಗೆ ಸಮಾರಂಭವು ಸುಮಾರು ೮ ಗಂಟೆಯ ಹೊತ್ತಿಗೆ ಮುಕ್ತಾಯಗೊಂಡಿತು.
ಸಮಾರಂಭದ ಹೆಚ್ಚಿನ ಫೋಟೋಗಳು ಇಲ್ಲಿವೆ.

---
ಕೊನೆಯದಾಗಿ...ಸಮಾರಂಭಕ್ಕೆ ಬಂದು ಶುಭಕೋರಿದ, ಬರಲಾಗದೇ ಈ-ಮೈಲ್ ಹಾಗೂ ಪೋಸ್ಟುಗಳ ಮೂಲಕ ನನ್ನನ್ನು ಪೋತ್ಸಾಹಿಸಿದ, ಮನದಲ್ಲೇ ಶುಭ ಹಾರೈಸಿದ ಸರ್ವರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಗಳು.

-
- ತೇಜಸ್ವಿನಿ ಹೆಗಡೆ.

14 ಕಾಮೆಂಟ್‌ಗಳು:

sunaath ಹೇಳಿದರು...

ಶುಭಾಶಯಗಳು, ತೇಜಸ್ವಿನಿ! ಸುಂದರವಾದ ಮುಖಪುಟವನ್ನು ಹೊತ್ತ ಈ ಸಂಕಲನದ ಕವನಗಳೂ ಸುಂದರವಾಗಿವೆ ಅನ್ನುವ ನಂಬುಕೆ ನನಗಿದೆ.

ಅಂತರ್ವಾಣಿ ಹೇಳಿದರು...

ಸಮಾರಂಭಕ್ಕೆ ಬರೋಕೆ ಆಗಲಿಲ್ಲ. ಆದರೂ ಅದರ ಮಧುರ ಕ್ಷಣಗಳನ್ನು ಕಣ್ತುಂಬಾ ನೋಡಿದೆ.

ಸಿಂಧು sindhu ಹೇಳಿದರು...

ತೇಜಸ್ವಿನಿ,

ಕಾರ್ಯಕ್ರಮ ಚೆನ್ನಾಗಿ ನಡೆದ ವಿವರ ತಿಳಿದು ಖುಶಿಯಾಯಿತು.
ಇನ್ನೂ ಹಲವು ಕಾಣ್ಕೆಗಳು ಹೊರಬರಲಿ.
ಒಳ್ಳೆಯದಾಗಲಿ.

ಪ್ರೀತಿಯಿಂದ
ಸಿಂಧು

sritri ಹೇಳಿದರು...

ತೇಜಸ್ವಿನಿ, ಕಾರ್ಯಕ್ರಮ ಚೆನ್ನಾಗಿ ನಡೆದಿದ್ದು ತಿಳಿದು ಸಂತೋಷವಾಯಿತು. ಎಲ್ಲಾ ಫೋಟೋಗಳನ್ನು ನೋಡಿದೆ. ಪುಟ್ಟಿ ಯಾರೂಂತ ಗೊತ್ತಾಯಿತು. ಹೆಗಡೆಯವರು ಗೊತ್ತಾಗಲಿಲ್ಲ :)

ಮತ್ತೊಮ್ಮೆ ಅಭಿನಂದನೆಗಳು.

ಸುಪ್ತದೀಪ್ತಿ suptadeepti ಹೇಳಿದರು...

ಅಭಿನಂದನೆಗಳು ತೇಜು. ಇನ್ನೂ ಹಲವಾರು ಹೊತ್ತಗೆಗಳು ನಿನ್ನ ಹೆಸರು ಹೊತ್ತು ಹೊರಬರಲಿ.

ಶಾಂತಲಾ ಭಂಡಿ (ಸನ್ನಿಧಿ) ಹೇಳಿದರು...

ತೇಜಸ್ವಿನಿ ಅವರೆ...
ಕಾರ್ಯಕ್ರಮದ ವರದಿ ಹಾಗೂ ಛಾಯಾಚಿತ್ರಗಳನ್ನು ಕಣ್ದುಂಬಿಕೊಂಡೆ. ಖುಷಿಯಾಯಿತು ಕಾರ್ಯಕ್ರಮ ಯಶಸ್ವಿಯಾದುದನ್ನು ತಿಳಿದು.
ಇನ್ನೊಂದಿಷ್ಟು ಪುಸ್ತಕಗಳು ನಿಮ್ಮ ಹಸ್ತದಿಂದರಳಿದ ಸಾಲುಗಳಿಂದ ಉದಯಿಸಲಿ.

ಶ್ಯಾಮಾ ಹೇಳಿದರು...

ಕಾರ್ಯಕ್ರಮದ ವರದಿ, ಫೋಟೋ ಎಲ್ಲ ನೋಡ್ದಿ ಖುಷಿ ಆತು. ನೀವು ಮತ್ತೆ ಮತ್ತೆ ಇನ್ನಷ್ಟು ಪುಸ್ತಕಗಳನ್ನು ಬರೆಯುವಂತಾಗಲಿ.

Srinidhi ಹೇಳಿದರು...

ಹೊಸ ಪುಸ್ತಕಗಳು ಆಕರ್ಷಕವಾಗಿವೆ. ಕಾರ್ಯಕ್ರಮ ಚೆನ್ನಾಗಾಯ್ತು ಅಂತ ತಿಳಿದು ಖುಷಿ ಆಯ್ತು. ಇನ್ನೊಮ್ಮೆ ಅಭಿನಂದನೆಗಳು!

ಪೂರ್ಣ ವಿ-ರಾಮ ಹೇಳಿದರು...

ಹೆಗಡೆಯವರೇ ನಿಮ್ಮ ಪುಸ್ತಕದ ಮುಖಪುಟವೇ ಇಷ್ಟೊಂದು ಚೆನ್ಣಾಗಿದೆ. ಇನ್ನು ಒಳಹೂರಣ ಹೇಗಿರಬಹುದು ಎಂಬ ಕುತೂಹಲ ಕಾಡುತ್ತಿದೆ......!

ನಾವಡ ಹೇಳಿದರು...

ಪುಸ್ತಕ ಬಿಡುಗಡೆ ಕಾರ್ಯಕ್ರಮದ ವರದಿ ಓದಿ ಖುಷಿಯಾಯಿತು.ಬರಲಾಗಲಿಲ್ಲ.ಮನ್ನಿಸಿ. ಒಳ್ಳೆಯದಾಗಲಿ. ಇನ್ನಷ್ಟು ಪುಸ್ತಕ ಬರಲಿ. ಆದರೆ ರಜೆ ಹಾಕಿ ಬೇಸರಗೊಳಿಸುತ್ತೀದ್ದೀರಲ್ಲಾ ?
ನಾವಡ

ತೇಜಸ್ವಿನಿ ಹೆಗಡೆ ಹೇಳಿದರು...

@ ಸುನಾಥರೆ, ಜಯಶಂಕರ್, ಸಿಂಧು, ತುಳಸಿಯಮ್ಮ, ಜ್ಯೋತಿಯಕ್ಕ, ಶಾಂತಲ, ಶ್ಯಾಮಾ, ಟಿ.ಟಿ.ಶ್ರೀನಿಧಿ, ಪೂರ್ಣ ವಿ-ರಾಮ, ನಾವಡರೆ,

ನಿಮ್ಮೆಲ್ಲರ ಅಭಿನಂದನೆಗಳಿಗೆ ನನ್ನ ತುಂಬು ಹೃದಯದ ಕೃತಜ್ಞತೆಗಳು. ಸ್ನೇಹ ಸದಾ ಹೀಗೇ ಇರಲಿ.

VENU VINOD ಹೇಳಿದರು...

HARDIKA ABHINANDANEGALU TEJASWINI HEGDEYAVARIGE

ಅಮರ ಹೇಳಿದರು...

ಪುಸ್ತಕ ಬಿಡುಗಡೆ ಸಮಾರಂಭ ಸೋಗಸಾಗಿ ಮೂಡಿ ಬಂತು ಎಂದು ಅರಿತು ಖುಷಿಯಾಯಿತು.
-ಅಮರ

Anveshi ಹೇಳಿದರು...

ಓಹೋ.... ಹೀಗಾ ಸಮಾಚಾರ? ಗೊತ್ತಾಯ್ತು ಗೊತ್ತಾಯ್ತು...

ಆದ್ರೆ ಪುಸ್ತಕ ಬಿಡುಗಡೆಯಾಗುವಾಗ ಸಮಾರಂಭದಲ್ಲಿ ಕುಳಿತೇ ಇದ್ದವರು ಯಾರು? ಲೇಖಕಿಯೇ ಅನ್ನುವ ಸಂಶಯ ನನಗೆ.

ಸಂಶಯ ನಿವಾರಿಸುವುದು... ಇಲ್ಲವಾದಲ್ಲಿ ನಮ್ಮದೇ ತಲೆ ನೂರು ಸಾವಿರ ಹೋಳು...! ;0