ಶುಕ್ರವಾರ, ಅಕ್ಟೋಬರ್ 9, 2015

`ಓದಿರಿ’ ಓದಿದ ಮೇಲೆ....


`ಓದಿರಿ' ಕಾದಂಬರಿಯ ಲೇಖಕರಾದ ಬೊಳುವಾರು ಮಹಮದ್ ಕುಂಞಿಯವರ ಪರಿಚಯ ‘ಓದಿರಿ’ಯನ್ನು ಓದುವ ಮೊದಲು ನನಗೆ ಇರಲೇ ಇಲ್ಲಾ! ಮುಖಗೋಡೆಯಲ್ಲಿ ಮೊತ್ತ ಮೊದಲ ಬಾರಿ ‘ಓದಿರಿ’ ಐತಿಹಾಸಿಕ ಕಾದಂಬರಿಯ ಕುರಿತು ಪ್ರಸ್ತಾವನೆಯಾದಾಗಲೇ ಗಮನ ಅತ್ತ ಹೋಗಿದ್ದು. ಈ ಮೊದಲು ಪ್ರಕಟಗೊಂಡಿದ್ದ ಎನ್ನಲಾಗಿರುವ ಅವರ ಕಾದಂಬರಿಗಳಾದ ಜಿಹಾದ್, ಸ್ವಾತಂತ್ರ್ಯದ ಓಟ ಮತ್ತು ಅವರ ಸಣ್ಣ ಕಥೆಗಳ ಪ್ರಾಕಾರಗಳನ್ನು.. ಯಾವುದನ್ನೂ ನಾನು ಓದಿಲ್ಲ. ಹಾಗಾಗಿ ನಾನು ಈಗ ಓದಿರುವ ‘ಓದಿರಿ’ ಕಾದಂಬರಿಯೇ ಈ ಲೇಖಕರ ಮೊತ್ತ ಮೊದಲ ಬರಹ ಎನ್ನಬಹುದು. ಮುಖಗೋಡೆಯಲ್ಲೂ ಅಷ್ಟೇ.., ‘ಓದಿರಿ’ ಕಾದಂಬರಿಯ ಕುರಿತು ನನ್ನ ಓದಲು ಪ್ರೇರೇಪಿಸಿದ್ದು ಅವರೇ ಹಾಕಿಕೊಂಡಿದ್ದ ಈ ಸಾಲು.. “ಪ್ರವಾದಿ ಮುಹಮ್ಮದರ ಜೀವನಾಧಾರಿತ ಮೊತ್ತ ಮೊದಲ ಐತಿಹಾಸಿಕ ಕಾದಂಬರಿ”! ಹೌದು ಇದು ಸುಮಾರು ಒಂದೂವರೆ ಸಾವಿರ ವರ್ಷಗಳ ಹಿಂದೆ ಹುಟ್ಟಿದ ಇಸ್ಲಾಮ್ ಧರ್ಮದ ಪ್ರವಾದಿಯೊಬ್ಬರ  ಕಥೆ.

ನಾನು ಈ ಮೊದಲೆಲ್ಲೂ ಪ್ರವಾದಿ ಮುಹಮ್ಮದರ  ಕುರಿತಾದ ಯಾವುದೇ ಖಚಿತ ಪುಸ್ತಕವನ್ನೋದಿರಲೂ ಇಲ್ಲಾ. ಇಸ್ಲಾಂ ಬಗ್ಗೆ ಹಲವು ಮಾಹಿತಿಗಳನ್ನು ಓದಿದ್ದೆನಾದರೂ ಅವೆಲ್ಲಾ ತುಣುಕುಗಳಲ್ಲಿ.. ಸಣ್ಣ ಪುಟ್ಟ ಲೇಖನಗಳಲ್ಲಿ... ಮುಲ್ಲಾಗಳ ಪ್ರವಚನಗಳನ್ನು ಸಾರುವ ವಿಡಿಯೋ ತುಣುಕುಗಳಲ್ಲಿ.. ಧಾರಾವಾಹಿ/ಚಲನಚಿತ್ರಗಳಲ್ಲಿ ಬರುವ ಕೆಲವು ಆಚರಣೆ/ಕಟ್ಟಳೆಗಳಲ್ಲಿ ಅಷ್ಟೇ. ಆ ನಿಟ್ಟಿನಲ್ಲಿ ಈ ಕಾದಂಬರಿ ನನ್ನಂಥವರಿಗೆ ಇಸ್ಲಾಂ ಅನ್ನು, ಮುಸ್ಲಿಮರ ಪ್ರವಾದಿ ಮುಹಮ್ಮದರನ್ನು ಸ್ಪಷ್ಟವಾಗಿ ತೆರೆದು ಕೊಡುವ ಪುಸ್ತಕ ಎಂದೆನ್ನಬಹುದು. ಇಂದು ನಾನು ಸ್ಪಷ್ಟವಾಗಿ ಹಿಂದು, ಮುಸ್ಲಿಂ, ಕ್ರಿಶ್ಚನ್ ಎಂಬ ಆಯಾ ಧರ್ಮದ ಹೆಸರಿನಲ್ಲೇ ಉಲ್ಲೇಖಿಸಲು (ಪ್ರಸ್ತುತ ಲೇಖನದುದ್ದಕ್ಕೂ) ಈ ಕಾದಂಬರಿಯ ಲೇಖಕರೇ ಕಾರಣ. ಅವರು ‘ಆ ಪ್ರವಾದಿಯ ಹೆಸರಲ್ಲಿ ನಿತ್ಯ ಮಾರಣ ಹೋಮಗಳೇ ನಡೆಯುತ್ತಿರುವಾಗ ಅವರ ತಂಟೆಗೆ ಹೋಗದಿರುವುದೇ ಕ್ಷೇಮ’ ಎಂದು ಹಿಂಜರಿಯದೇ, ಪ್ರಾಮಾಣಿಕವಾಗಿ, ಅಪಾಯದ ಮಟ್ಟ ಮೀರದಿರುವ ಜಾಗೃತಿಯೊಂದಿಗೇ, ಓರ್ವ ಮೂರನೆಯ ವ್ಯಕ್ತಿಯಾಗಿ ಬರೆದಿದ್ದಾರೆ ಈ ಪುಸ್ತಕ, ಎಂದೆನಿಸಿತು.

‘ಓದಿರಿ’ಕಾದಂಬರಿಯನ್ನೋದುತ್ತಾ ಕಾಡಿದ ಹತ್ತು ಹಲವು ಸಂದೇಹಗಳ ಪರಿಹಾರಕ್ಕಾಗಿ ಈ ಬರಹದ ಲೇಖಕರನ್ನೇ ಸಂಪರ್ಕಿಸುವುದು ಉತ್ತಮ ಎಂದು ನಿರ್ಧರಿಸಿದ ನಾನು ಗೆಳೆಯನೋರ್ವನಿಂದ ಬೋಳುವಾರು ಅವರ ನಂಬರ್ ಪಡೆದು ಮೊದಲ ಬಾರಿ ಫೋನಾಯಿಸಿದಾಗ ಸಹಜವಾಗಿಯೇ ಹಿಂಜರಿಕೆ ಬಲು ಇತ್ತು. ಆದರೆ ಅವರ ಮಾತುಗಳೊಳಡಗಿದ್ದ ಮುಕ್ತತೆ, ಪ್ರಾಮಾಣಿಕತೆ, ಸರಳತೆ, ನಿಸ್ಸಂಕೋಚವಾಗಿ ಹಿಂಜರಿಯುತ್ತಲೇ ಪ್ರಶ್ನಿಸುತ್ತಿದ್ದ ನನ್ನ, “ಮಗು ನಿಂಗೆ ಅನಿಸಿದ್ದು ಕೇಳು..” ಎಂದು ಪ್ರೋತ್ಸಾಹಿಸಿದಾಗ ಮುಂದಿನ ಸಂವಹನಗಳೆಲ್ಲಾ ಸರಾಗವಾಗಿಬಿಟ್ಟವು. ಲೇಖಕರು ಸ್ವಯಂ ಯಾವುದೇ ತಡೆಯನ್ನು ಹಾಕಿಕೊಳ್ಳದೇ, ನನಗೂ ಹಾಕದೇ ಆದಷ್ಟು ನನ್ನ ಸಂದೇಹಗಳನ್ನು ಪರಿಹರಿಸಿ, ಆ ಮೂಲಕ ನನ್ನೊಳಗೆ ನಿರ್ಭೀತಿಯನ್ನು ತುಂಬಿದ ಅವರಿಗೆ ತುಂಬು ಮನದ ಕೃತಜ್ಞತೆಗಳು. ಅವರೊಂದಿಗೆ ಸಂವಹಿಸುವಾಗ ‘ನಮ್ಮಲ್ಲಿ’, ‘ನಿಮ್ಮಲ್ಲಿ’ ಎಂದೇ ಮೊದ ಮೊದಲು ನಾನು ಪ್ರಶ್ನಿಸತೂಡಗಿದ್ದೆ. ಆಗ ಅವರು ಸ್ಪಷ್ಟವಾಗಿ, ‘ಹಾಗೆ ಹೇಳುವುದೇ ತಪ್ಪು, ಹಿಂದುಗಳಲ್ಲಿ, ಮುಸ್ಲಿಮ್ಮರಲ್ಲಿ ಎಂದೇ ಹೇಳಿ.’. ಅದು ಸತ್ಯ, ವಾಸ್ತವ.. ಎಂದು ಹೇಳಿದಾಗ, ಅರೆ ಹೌದಲ್ಲಾ ಅದ್ಯಾಕೆ ಹಾಗೆ ಸಂಬೋಧಿಸಲೂ ಮುಜುಗುರ ಇರಬೇಕು ನನ್ನಲ್ಲಿ? ಎಂದೇ ಅರಿವಾಗಲು ಲೇಖನದುದ್ದಕ್ಕೂ ಆ ಹಿಂಜರಿಕೆಯನ್ನು ಬಿಟ್ಟು, ‘ಓದಿರಿ’ ಓದಿದ ನನ್ನೊಳಗಿನ ಹರಿವನ್ನು, ಹರವನ್ನು, ಸಂದೇಹಗಳನ್ನು ಪ್ರಾಮಾಣಿಕವಾಗಿ ಯಾವುದೇ ಪೂರ್ವಾಗ್ರಹವಿಲ್ಲದೇ ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಇಲ್ಲಿ ನಾನು ಹೇಳಿಕೊಳ್ಳುತ್ತಿರುವ ನನ್ನ ಅಭಿಪ್ರಾಯಗಳು, ಪ್ರಶ್ನೆಗಳು, ಸಂದೇಹಗಳು ಎಲ್ಲವೂ ನನ್ನ ವೈಯಕ್ತಿಕ ಅನಿಸಿಕೆಗಳು ಮತ್ತು ಯಾವುದೇ ವ್ಯಂಗ್ಯ, ಕೊಂಕು, ತಿವಿತಗಳ ಕುರುಡತ್ವವನ್ನು ಹೊಂದಿದವಂಥವಲ್ಲ ಎಂದು ಮೊದಲೇ ಸ್ಪಷ್ಟ ಪಡಿಸುತ್ತಿದ್ದೇನೆ. ಓದುಗರೂ ಇರುಳುಗಣ್ಣಿನಿಂದ ನೋಡದೇ ಅರ್ಥೈಸಿಕೊಳ್ಳುವಿರೆಂದು ಆಶಿಸುವೆ.

ಪ್ರಸ್ತಾವನೆ:-


‘ಓದಿರಿ’ಯ ಪ್ರಸ್ತಾವನೆಯನ್ನೋದುವಾಗ ನನ್ನ ಬಹುವಾಗಿ ಹಿಡಿದಿಟ್ಟ ಸಾಲುಗಳಿವು :-“ದೈವ ನಂಬುಗೆಯ ಸಾಮಾನ್ಯನಿರಲಿ, ಕಟ್ಟಾ ಕೋಮುವಾದಿ ಅಥವಾ ರೋಸಿಹೋಗಿರುವ ನಿರೀಶ್ವರವಾದಿಯೇ ಆಗಿರಲಿ, ಅನ್ಯರ ಪ್ರಾಮಾಣಿಕ ಧಾರ್ಮಿಕ ನಂಬುಗೆಯನ್ನು ಅಷ್ಟೇ ಪ್ರಾಮಾಣಿಕತೆಯಿಂದ ತಿರಸ್ಕರಿಸುತ್ತಾನೆ ಅಥವಾ ಮೌನವಾಗಿರುತ್ತಾನೆ. ಅಂತ್ಯಪ್ರವಾದಿಯ ಮಾತುಗಳನ್ನೇ ಪರಮ ಸತ್ಯವೆಂದು ನಂಬುವವರು, ಶ್ರೀಕೃಷ್ಣನನ್ನು ಪರಮಾತ್ಮನೆಂದು ಹೇಗೆ ಒಪ್ಪಲಾರರೋ, ಅಂತೆಯೇ ಶ್ರೀರಾಮನ ಪೂಜಕರು ಪ್ರವಾದಿಯ ಮಾತುಗಳಿಗೆ ಮತ ಹಾಕಲಾರರು. ಆದ್ದರಿಂದಲೇ, ಯಾವುದೇ ಬಗೆಯ ಧರ್ಮ ಪ್ರಚಾರದ ಬರಹಗಳು ಅನ್ಯ ಧರ್ಮದ ಓದುಗರನ್ನು - ಉಚಿತ ವಿತರಣೆಯಾದಾಗಲೂ ಪ್ರೀತಿಯಿಂದ ಓದಿಸಿಕೊಳುವುದಿಲ್ಲ.” ಎಂಬ ಈ ಸಾಲುಗಳು  ಎಷ್ಟು ನಿಜ ಅನ್ನಿಸಿತು.


ನನ್ನ ನಂಬುಗೆಯು ನನಗೆ ಸತ್ಯ.. ಉಳಿದೆದ್ದಲ್ಲಾ, ಉಳಿದವರ ನಂಬುಗೆಯೆಲ್ಲಾ ಸುಳ್ಳು ಎನ್ನುವ ಭಾವವೇ ಘರ್ಷಣೆಗೆ, ಗಲಭೆಗೆ ನಾಂದಿಯಾಗಿದ್ದು, ಆಗುತ್ತಿದ್ದುದು ಎಂದೆನಿಸಿತು. ಕಾದಂಬರಿಯ ಮೊತ್ತ ಮೊದಲು ಹೇಳಿರುವಂತೇ ಯಾವುದೇ ಧರ್ಮದ ಕುರಿತು ಓದಿಕೊಳ್ಳದೇ, ಪೂರ್ವಾಗ್ರಹದಿಂದ, ಅಲ್ಲಲ್ಲಿ ಕೇಳಿದ್ದನ್ನೇ ನಂಬಿ ವ್ಯಾಖ್ಯಾನಿಸುವುದು, ಟೀಕಿಸುವುದು ಬಲು ತಪ್ಪು ಎಂಬುದನ್ನೂ ಒಪ್ಪುವೆ. ಆ ನಿಟ್ಟಿನಲ್ಲಿ ‘ಓದಿರಿ’ ಬಲು ಸಹಕಾರಿಯಾಗಿದೆ. ಈ ಪುಸ್ತಕವನ್ನೋದಿ ಮುಗಿಸಿದ ಮೇಲೆ, ನಾನು ನನ್ನ ನಂಬುಗೆ, ವಿಶ್ವಾಸ, ಸಿದ್ಧಾಂತಗಳ ಜೊತೆಯೂ, ಇಸ್ಲಾಂನಲ್ಲಿ ಮುಹಮ್ಮದ್ ಅವರು ಹೇಳಿರುವ ಸಂದೇಶಗಳಲ್ಲಿ ನನಗೆ ಸ್ಪಷ್ಟವಾದ, ಅರ್ಥವಾದ ಕೆಲವು ಒಳ್ಳೆಯ ಮಾತುಗಳನ್ನೂ ಒಪ್ಪಿರುವೆ, ಸತ್ಯವಿದೆಯೆಂದು ಅರಿತಿರುವೆ! ಈ ಮೊದಲು ಅಂದರೆ ಪುಸ್ತಕವನ್ನೋದುವ ಮೊದಲು ನನ್ನಲ್ಲಿ ಹಲವು ತಪ್ಪು ಗ್ರಹಿಕೆಗಳಿದ್ದವು. ಅದರಲ್ಲಿ ಕೆಲವಷ್ಟಕ್ಕಾದರೂ ಪರಿಹಾರ ಕಂಡಿವೆ.

ನನ್ನ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಕ್ಕಿದೆಯೆಂದಲ್ಲಾ.. ಆದರೆ ಕೆಲವು ತಪ್ಪು ಗ್ರಹಿಕೆಗಳು ನಿವಾರಣೆಯಾಗಿವೆ. ಈವರೆಗೂ ಶೂನ್ಯ ಜ್ಞಾನವಿದ್ದ (ಇಸ್ಲಾಂ ಬಗ್ಗೆ), ಕೆಲವು ಋಣಾತ್ಮಕ ವಿಷಯಗಳನ್ನೇ ಎಷ್ಟೋ ಕಡೆ ನೋಡಿ, ಕಂಡು, ಓದಿದ್ದ ನನ್ನೊಳಗೆ ಎಲ್ಲಾ ನೋಟಗಳಾಚೆ ಇನ್ನೊಂದು ದೃಶ್ಯವಿದೆ ಎಂಬ ನನ್ನ ನಂಬುಗೆಗೆ ಮತ್ತಷ್ಟು ಇಂಬು ಕೊಟ್ಟಿತು ಈ ‘ಓದಿರಿ’ಯ ಓದು. ಆ ನಿಟ್ಟಿನಲ್ಲಿ ಲೇಖಕರು ಇದನ್ನೊಂದು ಐತಿಹಾಸಿಕ ಕಾದಂಬರಿ ಎಂಬ ಗಡಿ ರೇಖೆಹಾಕಿ ಎದುರಾಗಬಹುದಾದ ಅಪಾಯವನ್ನು ತಡೆದಿದ್ದರೂ, ‘ಓದಿರಿ’ ನನ್ನಂಥವರಿಗೆ ಅದಕ್ಕೂ ಮೀರಿದ, ಒಂದು ಹೊಸ ಧರ್ಮವನ್ನರಿವ, ಸ್ಥೂಲವಾಗಿ ಅರ್ಥೈಸಿಕೊಳ್ಳುವ ಪಾಠ ಪುಸ್ತಕವಾಗಿದೆ ಎನ್ನಬಹುದು. ಉದಾಹರಣೆಗೆ ಹಿಂದುಗಳಲ್ಲಿರುವಂತೇ ಇಸ್ಲಾಂ’ನಲ್ಲೂ ಗೋತ್ರ ಪದ್ಧತಿಯಿತ್ತು ಎನ್ನುವ ಸತ್ಯ ನನಗೆ ಗೊತ್ತಾಗಿದ್ದೇ ಇಲ್ಲಿ!

ಓದಿರಿ ಕಾದಂಬರಿಯೊಳಗಿನ ಸ್ಥೂಲ ಕಥಾ ಚಿತ್ರಣ. :- ಹಾಶಿಮ್ ಗೋತ್ರದ ಅಬ್ದುಲ್ ಮುತ್ತಲಿಬರ ಪುತ್ರ ಅಬ್ದುಲಾರವರು ಮತ್ತು ನಜ್ಜಾರ್ ಗೋತ್ರದ ಆಮಿನಾರ ಪುತ್ರ ಮುಹಮ್ಮದರು. ‘ಮುಹಮ್ಮದ್’ ಎಂದರೆ ಎಲ್ಲರಿಂದ ಹೊಗಳಿಸಿಕೊಳ್ಳುವವನು ಎಂಬಲ್ಲಿಂದ ಆರಂಭವಾದ ಕಥೆ.. ಬೆಳೆಯುತ್ತಾ ‘ಸಫಾ’ ಬೆಟ್ಟದ ಗುಹೆಯಲ್ಲಿ ಅಲ್ಲಾಹು ಕಳುಹಿಸಿದ ದೇವದೂತ ಜಿಬ್ರೀಲರಿಂದ ಜನರನ್ನು ಸಂಘಟಿಸಿ, ಇಸ್ಲಾಂ ಅನ್ನು ಬೆಳೆಸುವ ಸಂದೇಶ ಪಡೆದು, ಅಂತೆಯೇ ಪ್ರವಾದಿಯಾಗಿ ಅರಬರನ್ನು ಎಚ್ಚರಿಸಿ, ಹಲವು ವಿರೋಧಗಳನ್ನೆದುರಿಸುತ್ತಾ, ಕುರೈಶ್ ಮನೆತನದ ಒಡೆತನದಲ್ಲಿದ್ದ ಕ‌ಅಬಾದಲ್ಲಿನ ಬಹು ವಿಗ್ರಹಗಳನ್ನು ಒಡೆದು, ಹಜರುಲ್ ಅಸ್ವದ್ ಪವಿತ್ರ ಕಲ್ಲೊಂದನ್ನು ಮಾತ್ರ ಉಳಿಸಿ, ಯಸ್ರಿಬ್‌ನಲ್ಲಿ [ಮದೀನಾದಲ್ಲಿ] ಮಸೀದಿಯೊಂದನ್ನು ಕಟ್ಟಿಸಿ, ಏಕದೇವೋಪಾಸನೆಯನ್ನು ಎಲ್ಲೆಡೆ ಪಸರಿಸಬೇಕೆಂಬ ಸಂದೇಶ ಕೊಟ್ಟು ನಿರ್ಗಮಿಸಿದ ಪ್ರವಾದಿಯವರು, ಅಲ್ಲಾಹು ಭೂಮಿಗೆ ಕಳುಹಿಸಿದ ಅಂತ್ಯಪ್ರವಾದಿ ಎಂದೆನಿಸಿಕೊಂಡಿದ್ದಾರೆ. ‘ಕುರ್‌ಆನ್’ ಮುಸ್ಲಿಮರ ಏಕೈಕ ಪವಿತ್ರ ಗ್ರಂಥ. ಇವಿಷ್ಟು ಸ್ಥೂಲ ಚಿತ್ರಣ. ಪೂರ್ಣ ಕಥೆಗೆ, ಕಥೆ ಬೆಳೆದ ರೀತಿಗ, ಪ್ರವಾದಿಯವರ ಸಂದೇಶಗಳಿಗೆ ‘ಓದಿರಿ’ಯನ್ನೇ ಓದಿಬಿಡಿ.

ಈಗ ಮೊದಲಿಗೆ ನನ್ನಲ್ಲಿದ್ದ ಕೆಲವು ಪ್ರಶ್ನಗಳಿಗೆ ಪಡೆದ ಉತ್ತರ. (ಸ್ಪಷ್ಟವಾಗಿ ಹೇಳಿ ಬಿಡುವೆ.. ಈ ಉತ್ತರಗಳೆಲ್ಲಾ ನನಗೆ ‘ಓದಿರಿ’ಯಲ್ಲಿ ಸಿಕ್ಕಂಥವು, ಕೆಲವು ಲೇಖಕರನ್ನು ದೂರವಾಣಿಯಲ್ಲಿ ಸಂಪರ್ಕಿಸಿ ಪಡೆದುಕೊಂಡು ನನ್ನದೇ ಮಾತುಗಳಲ್ಲಿ ಬರೆದುಕೊಂಡಂಥವು)

ಪ್ರ. ೧ ಇಸ್ಲಾಂ ಧರ್ಮ ಎಂದರೆ ಏನು? ಮುಸಲ್ಮಾನರು ಎಂದರೆ ಯಾರು?
ಉ: ಇಸ್ಲಾಂ ಎಂದರೆ ಶಾಂತಿ, ಸಮರ್ಣಣೆ. ಇಸ್ಲಾಂ ಧರ್ಮದಲ್ಲಿ ವಿಶ್ವಾಸವಿರಿಸಿದವರೆಲ್ಲ, ಅದನ್ನು ಪ್ರಶ್ನಿಸದೆ ಅನುಸರಿಸುವವರೆಲ್ಲರೂ ಮುಸ್ಲಿಮರು.

೨) ಪ್ರವಾದಿ ಮುಹಮ್ಮದ್ ಮುಸ್ಲಿಮರ ದೇವರೇ?
ಉ: ಅಲ್ಲ. ಅವರು ಸಾಮಾನ್ಯ ಮನುಷ್ಯರೇ. ಆದರೆ ಮನುಷ್ಯರಲ್ಲಿ ಅತಿ ಒಳ್ಳೆಯ ಗುಣವುಳ್ಳವರು. ಮುಸಲ್ಮಾನರ ಏಕೈಕ ಆರಾಧ್ಯನಾಗಿರುವ ‘ಅಲ್ಲಾಹು’ ಕಳುಹಿಸಿದ ದೇವದೂತ ಜಿಬ್ರೀಲರಿಂದ ಸಂದೇಶ ಪಡೆದು ಇಸ್ಲಾಮಿನ ಪುನರುತ್ಥಾನಕ್ಕಾಗಿ ಕಳುಹಿಸಲ್ಪಟ್ಟ ಸಂದೇಶವಾಹಕ.  ತನ್ನನ್ನು ಅಂತಿಮ ಪ್ರವಾದಿ ಎಂದು ಸಾರಿ, ಅಲ್ಲಾಹುವಿನ ಸಂದೇಶವನ್ನು ಜನರಿಗೆ ಹೇಳಿದವರು. ‘ಕುರ್‌ಆನ್’ ಪ್ರವಾದಿಯ ಮೂಲಕ  ಭೂಮಿಗೆ ಇಳಿದ ಅಲ್ಲಾಹುವಿನ ಆದೇಶಗಳು

೩) ಯಹೂದೀಯರು, ಕ್ರೈಸರು ಮುಸ್ಲಿಮ್ಮರು ಹೇಗೆ ಲಿಂಕ್ ಆಗಿದ್ದಾರೆ?
ಉ: ಇಸ್ಲಾಮ್ ನಂಬಿಕೆಯ ಪ್ರಕಾರ ಯಹೂದಿಯರು, ಕ್ರಿಸ್ತರು ಮಾತ್ರವಲ್ಲ ಭೂಮಿಯ ಮೇಲೆ ಹುಟ್ಟಿದವರೆಲ್ಲರೂ ಮೂಲತಃ, ಆದಿ ಪ್ರವಾದಿಯಾದ ಆದಮ್ ಮತ್ತು ಈವ್ ಎಂಬ ಗಂಡು ಹೆಣ್ಣಿನಿಂದ ಹುಟ್ಟಿದವರೇ. ಎಲ್ಲರೂ ಮೂಲತಃ ಇಸ್ಲಾಂ ಧರ್ಮದವರೇ. ಅವರೆಲ್ಲರ ಪ್ರವಾದಿ ಹಾಗೂ ಇಸ್ಲಾಮಿನ ಪ್ರವಾದಿಗಳೆಲ್ಲಾ ಒಬ್ಬರೇ. ಆದರೆ ಕಾಲ ಕ್ರಮೇಣ ಅಭಿಪ್ರಾಯ ಬೇಧಗಳಿಂದ ತಮ್ಮ ತಮ್ಮ ಸಿಧ್ದಾಂತಗಳಿಗಾಗಿ ಬೇರ್ಪಟ್ಟವರು.

೪) ಡೇವಿಡ್-ದಾವೂದ್, ಏಸು-ಈಸಾ, ಅಬ್ರಹಾಂ-ಇಬ್ರಾಹಿಂ, ಮೋಸೆಸ್-ಮೂಸಾ ಇವರೆಲ್ಲಾ ಯಾರು?
ಉ: ಯಹೂದಿಯರ ಪ್ರವಾದಿ ಡೇವಿಡ್. ಅವರೂ ದಾವೂದರೂ ಒಬ್ಬರೇ. ಅಲ್ಲಿ ಡೇವಿಡ್ ಇಸ್ಲಾಮಿನಲ್ಲಿ ದಾವೂದ್ ಎಂದು ಕರೆದರು. ಅದೇ ರೀತಿ ಅಬ್ರಾಹಾಂ, ಇಬ್ರಾಹಿಂ, ಮೋಸೆಸ್ಸ್ ಮೂಸಾ. ಏಸು ಈಸಾ. ಇದನ್ನು ಯಹೂದಿಗಳು, ಕ್ರೈಸ್ತರು ಒಪ್ಪುತ್ತಾರೋ ಬಿಡುವರೋ ಗೊತ್ತಿಲ್ಲ.. ಆದರೆ ಇಸ್ಲಾಂ ಹಾಗೇ ಹೇಳುತ್ತದೆ.

೫) ಇಸ್ಲಾಂ ಹುಟ್ಟಿದ್ದು ಹೇಗೆ? ಯಾಕೆ? ಮುಸ್ಲಿಮರೇಕೆ ವಿಗ್ರಹಾರಾಧನೆಯನ್ನು ವಿರೋಧಿಸುತ್ತಾರೆ?
ಉ: ಇಸ್ಲಾಂ ಹುಟ್ಟಿದ್ದು ಅಲ್ಲಾನಿಂದ ಎಂಬ ನಂಬಿಕೆ ಮುಸ್ಲಿಮರದ್ದು. ಮೂಲ ಪ್ರವಾದಿಯಾದ ಆದಮ್ ಮತ್ತು ಅವರ ಪತ್ನಿ ಈವ್‌ನಿಂದ ಹುಟ್ಟಿದ್ದು. ಕ‌ಅಬಾದಲ್ಲಿದ್ದ ಮಸೀದಿಯಲ್ಲಿ ಹಿಂದೆ ಅರಬರು ತಾವು ತಾವು ನಂಬಿದ್ದ, ಅನೇಕರ ಮೂರ್ತಿಗಳನ್ನು ತಂದು ಸ್ಥಾಪಿಸಿ ಪೂಜಿಸುತ್ತಿದ್ದರು. ಅದರಲ್ಲಿ ಹಲವು ಮೂರ್ತಿಗಳು ಆಯಾ ಮನೆತನದವರ ಪೂರ್ವಿಕರ ಮೂರ್ತಿಗಳೂ ಆಗಿದ್ದವು. ಅವನ್ನೆಲ್ಲಾ ತ್ಯಜಿಸಿ ಏಕದೇವೋಪಾಸನೆಯನ್ನು ಪ್ರತಿಪಾದಿಸಿದವರು ಮುಹಮ್ಮದರು.

೬) ಬುರ್ಖಾ ಪದ್ಧತಿಯನ್ನು ಪ್ರವಾದಿಯವರೇ ಹೇಳಿದ್ದೇ? ಮಹಿಳೆಯ ಮೇಲಿರುವ ಅಷ್ಟು ಕಟ್ಟುನಿಟ್ಟಿನ ಕಟ್ಟಳೆಗಳು ಹೇಗೆ ಬಂದವು?
ಉ: ಇದಕ್ಕೆ ಲೇಖಕರು ನೀಡಿದ ಉತ್ತರ ನನಗೆ ಸ್ಪಷ್ಟವಾಗಲಿಲ್ಲ. ತಾವು ಓದಿರುವ ಸಾವಿರಗಟ್ಟಲೆ ಪುಟಗಳ ನೂರಾರು  ಗ್ರಂಥಗಳ ಸಾರವನ್ನು ೩೦೦ ಪೇಜಿಗೆ ಇಳಿಸಿದ್ದೇನೆ. ಹಾಗಾಗಿ ಇಲ್ಲಿ ಕೆಲವನ್ನಷ್ಟೇ ಕೊಟ್ಟಿರುವೆ ಎಂದರು. ‘ಓದಿರಿ’ಯಲ್ಲೆಲ್ಲೂ ಪ್ರವಾದಿಯವರು ಹೆಣ್ಮಕ್ಕಳು ಬುರ್ಖಾ ಧರಿಸಬೇಕು ಎಂಬ ನಿಯಮ ಹೇಳಿದ್ದು ಕಂಡು ಬಂದಿಲ್ಲ. ಅಲ್ಲದೇ ಈಗ ಮುಸ್ಲಿಮ್ ಹೆಣ್ಮಕ್ಕಳಿಗೆ ಹಾಕಿರುವ ಕಟ್ಟುಪಾಡುಗಳ ಉಲ್ಲೇಖವೂ ಪುಸ್ತಕದಲ್ಲಿ ದೊರಕುವುದಿಲ್ಲ.

೭) ಶಿಯಾ, ಸುನ್ನಿ ಪಂಗಡಗಳ ಹುಟ್ಟು ಹೇಗಾಗಿದ್ದು? ಮತ್ತು ಯಾಕೆ?
ಉ: ಮುಹಮ್ಮದರ ದೇಹಾಂತ್ಯದ ಬಳಿಕದ ದಿನಗಳಲ್ಲಿ ಹುಟ್ಟಿದ ಅಧಿಕಾರ ಲಾಲಸೆ, ಗೊಂದಲ, ಗಲಾಟೆಯಿಂದಾಗಿ ಪ್ರವಾದಿಯವರ ಸಾಕು ಪುತ್ರನ ಬೆಂಬಲಿಗರು ಶಿಯಾ ಎಂದು ಕರೆಸಿಕೊಂಡರೆ, ಉಳಿದವರು ಸುನ್ನಿ ಪಂಗಡವಾಗಿ ಉಳಿದುಕೊಂಡರು.

೮) ಹದೀಸ್ ಬರೆದದ್ದು ಯಾರು? ಪ್ರವಾದಿಯವರೇ ಖುದ್ದಾ ಹೇಳಿ ಬರೆಸಿದ್ದೆ?
ಉ : ಹದೀಸ್ ಬರೆದದ್ದು ಪ್ರವಾದಿಯವರಲ್ಲ. ಅವರ ಜೊತೆಯಲ್ಲಿ ಸಂಗಾತಿಗಳಾಗಿದ್ದವರು ಬರೆದಿರಿಸಿಕೊಂಡಿದ್ದ ಪ್ರವಾದಿಯವರ ಮಾತುಗಳನ್ನು, ಅವರಾನಂತರದ ತಲೆಮಾರುಗಳಲ್ಲಿ ಅವರ ನಿಕಟವರ್ತಿಗಳಿಂದ ಸಂಗ್ರಹಿಸಿದ ಮಾಹಿತಿಗಳಿಂದ ಕ್ರೂಢೀಕರಿಸಿ ಬರೆದದ್ದು. ಇದರಲ್ಲಿ ಬುರ್ಖಾ ಪದ್ಧತಿ, ಇನ್ನಿತರ ಕಟ್ಟು ಪಾಡುಗಳ ಉಲ್ಲೇಖವಿದೆಯೆಂದು ಕೇಳಿದ್ದೇನೆ.

ಈಗ ಬರುವ ಬಹು ಮುಖ್ಯ ಪ್ರಶ್ನೆಯೆಂದರೆ ಕುರ್‌ಆನ್‌ನಲ್ಲಿ ಏನು ಹೇಳಿದ್ದಾರೆ ಮುಹಮ್ಮದರು? ಪೂರ್ಣ ಕುರ್‌ಅನ್ ನಾನು ಓದಿಲ್ಲ. ಆದರೆ ‘ಓದಿರಿ’ಯಲ್ಲಿ ಬರುವ ಕೆಲವೊಂದು ಸಂದೇಶಗಳನ್ನೋದಿದಾಗ ಅಲ್ಲಲ್ಲಿ ನನಗೆ ದ್ವಾಪರಯುಗದಲ್ಲಾದ ನನ್ನ ಗೀತೆಯಕೃಷ್ಣನ ಗೀತೋಪದೇಶ, ತ್ರೇತಾಯುಗದಲ್ಲಾದ ರಾಮಾಯಣದ ಶ್ರೀರಾಮ ಹೇಳಿದ್ದ ಹಿತವಚನಗಳು, ವೇದಗಳಲ್ಲಿನ ಉಪನಿಷತ್ತುಗಳ ಕೆಲವು ಸಂದೇಶಗಳೇ ನೆನಪಿಗೆ ಬಂದವು! ಹಾಗೇ ಹನ್ನೆರಡನೆಯ ಶತಮಾನದ ಬಸವಣ್ಣನವರು ಹೇಳಿದ್ದೂ ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ ಎಂಬುದೂ ನೆನಪಾಯ್ತು.

ಅಲ್ಲದೇ ರಾಮಾಯಣದಲ್ಲಿ ಸೀತೆಗುಂಟಾದ ಅನುಮಾನದ ಅಗ್ನಿಪರೀಕ್ಷೆ, ಮಹಾಭಾರತದ ಧರ್ಮಯುದ್ಧ, ದೇವಿಕಿಯಿಂದ ಬೇರ್ಪಟ್ಟು ಯಶೋದೆಯ ಮಡಿಲಲ್ಲಿ ಬೆಳೆವ ಬಾಲ ಕೃಷ್ಣ ಇತ್ಯಾದಿ ಘಟನಾವಳಿಗಳೆಲ್ಲವೂ ದಿಟ್ಟೋ ಪ್ರವಾದಿಯವರ ಬದುಕಿನಲ್ಲೂ ನಡೆದಿರುವುದು! (ಕಥೆಯ ತಿಳಿಯಲು ಪುಸ್ತಕ ಓದಿರಿ) ಆದರೆ ಬಹು ಮುಖ್ಯ ವ್ಯತ್ಯಾಸವೆಂದರೆ ಮುಹುಮ್ಮದರು ಅಲ್ಲಾನ ಸಂದೇಶವಾಹಕರು. ನಾವು ಪೂಜಿಸುವ ಶ್ರೀರಾಮ ಕೃಷ್ಣರು ಭಗವಂತನ ಅವತಾರಿಗಳು.

ನನ್ನ ಪ್ರಮುಖ ಸಂದೇಹಗಳಲ್ಲೊಂದು.. ಇಸ್ಲಾಂ ಧರ್ಮದ ಸ್ಥಾಪನೆಗಾಗಿ ಪ್ರವಾದಿಯವರು ಎಲ್ಲೆಡೆ ಪ್ರವರ್ತಕರನ್ನು ಕಳುಹಿಸುವುದು. ಅಲ್ಲಾಹು ಹೇಳಿದ್ದಕ್ಕೆ ತಾನು ಮುಸ್ಲಿಮ್ಮರನ್ನು ಹೆಚ್ಚು ಹೆಚ್ಚು ಬೆಳೆಸಲು ತನ್ನ ಮತಕ್ಕೆ ಬರಲು ಕೋರುತ್ತಿದ್ದೇನೆ. ಏಕ ದೇವೋಪಾಸನೆಯನ್ನು ಒಪ್ಪಲು ಹೇಳುತ್ತಿದ್ದೇನೆ ಎಂದಿದ್ದಾರೆ. ಅವರ ಪೂರ್ವಜರು, ಹೆಂಡ, ಮೋಜು, ಕಪಟ, ಸುಳ್ಳಿನಿಂದ ಹಾದಿ ತಪ್ಪಿದ್ದು ಕಂಡು ಅವರು ಆ ರೀತಿ ಆ ಕಾಲ ಘಟ್ಟದಲ್ಲಿ ಮಾಡಿದ ಆ ನಿಯಮಗಳು ಆಯಾ ಕಾಲ ಘಟಕ್ಕೆ, ಅಲ್ಲಿನ ಸ್ಥಿತಿ ಗತಿಗೆ ತಕ್ಕುದಾಗಿದ್ದವು ಎಂದೂ ಒಪ್ಪೋಣ. ಆದರೆ ಅಂದಿನ ಅವರ ಸಾರಾಂಶಗಳಲ್ಲಿನ ಉತ್ತಮ ಅಂಶಗಳನ್ನು ಮರೆತು, ಇಂದಿನ, ವರ್ತಮಾನದ ಸ್ಥಿತಿಗತಿಯ ನಿರ್ಲಕ್ಷಿಸಿ, ಎಲ್ಲರ ನಂಬಿಕೆಯನ್ನೂ ಗೌರವಿಸಿ ನಡೆಯಬೇಕೆಂದು ಅರಿಯದೇ, ರಕ್ತಪಾತವನ್ನು ಮಾಡುತ್ತಿರುವ ಕೆಲವು ಧರ್ಮಾಂಧರ ನಡೆ ನುಡಿಗಳು ಇಸ್ಲಾಂ ವಿರುದ್ಧವಲ್ಲವೇ? ಪ್ರವಾದಿಯವರೂ ರಕ್ತಪಾತ ಬಯಸಿರಲೇ ಇಲ್ಲಾ ಎಂದು ‘ಓದಿರಿ’ ಹೇಳುತ್ತದೆ. ಅನಿವಾರ್ಯವಾದಾಗ ಕತ್ತಿ ಹಿಡಿದದ್ದು ಎಂದೂ ಕಾಣಿಸುತ್ತದೆ. ಅಂಥದ್ದರಲ್ಲಿ, ಒತ್ತಾಯದಿಂದ ದಬ್ಬಾಳಿಕೆ ಮಾಡುತ್ತಿರುವುದು ಇಂದಿಗೆ ಎಷ್ಟು ಪ್ರಸ್ತುತ? ಇಂಥಾ ಕ್ರೌರ್ಯ ಸರಿಯೇ? ಎಂಬ ಪ್ರಶ್ನೆ ಕಾಡಿತು. ಅಲ್ಲದೇ ವಿಮರ್ಶಿಸಿದಾಗ, ‘ಹದೀಸ್‌’ಗಳಲ್ಲಿದೆ ಎನ್ನಲಾಗುವ ಎಷ್ಟೋ ವಿಷಯಗಳಿಗೂ, ಸ್ವತಃ ಸಂದೇಶ ನೀಡಿದ ಪ್ರವಾದಿಯವರ ನುಡಿಗಳಿಗೂ ತುಂಬಾ ವ್ಯತ್ಯಾಸ ಕಂಡು ಬಂದು ಅನುಮಾನ ಕಾಡುತ್ತದೆ. ಇಷ್ಟಕ್ಕೂ ಕಾದಂಬರಿಯ ಪ್ರಸ್ತಾವನೆಯ ಕೊನೆಗೆಯಲ್ಲಿ ಲೇಖಕರು ಹೀಗೆ ಹೇಳಿಬಿಟ್ಟಿದ್ದಾರೆ :- “ಈ ಕಾದಂಬರಿಯಲ್ಲಿ ಕಾಣಿಸಿರುವ ವಿವರಗಳಷ್ಟೇ ಪರಿಪೂರ್ಣವೂ ಅಲ್ಲ, ಅಂತಿಮ ಸತ್ಯವೂ ಅಲ್ಲ. ಆ ಹುಡುಕಾಟದ ಸಾವಿರಾರು ಮುಖಗಳಲ್ಲಿ ಮೊದಲ ಮುಖ ಮಾತ್ರ. ಈ ಕೃತಿಯನ್ನು ತಿದ್ದಿ ಮತ್ತೊಂದು ಮುಖವನ್ನು ಚಿತ್ರಿಸುವ ಸ್ವಾತಂತ್ರ್ಯ ಎಲ್ಲರಿಗೂ ಇದೆ.” ಈ ಜಾಣ್ಮೆಯ ಮಾತುಗಳು ಸಮಾಧಾನದ ಜೊತೆಗೆ ಮತ್ತಷ್ಟು ಗೊಂದಲಗಳನ್ನೂ ಕೊಟ್ಟು ಬಿಡುತ್ತವೆ.

ಶಾಂತಿಯ ಸಂಕೇತವಾದ ಇಸ್ಲಾಂ, ವೈರಿಗಳನ್ನೂ ಪ್ರೀತಿಸಿ ಎಂದ ಮುಹಮ್ಮದರು.. ಮೋಜು, ಹೆಂಡ, ಅತ್ಯಾಚಾರಗಳ ತಡೆಯಲೆಂದೇ ಹುಟ್ಟಿದ್ದು ಎಂದು ಹೇಳಲಾದ ಮುಸ್ಲಿಮ್. ಆದರೆ ಇಂದೇಕೆ ‘ಜಿಹಾದ್’ ಅನ್ನುವ ಪದವೇ ದುರ್ಬಳಕೆ ಆಗಿ ಸಿರಿಯಾದಿಂದ ಹಿಡಿದು ಭಾರತದವರೆಗೂ ಧರ್ಮಾಂಧತೆಗೆ ನಲುಗಿ ಹೋಗುತ್ತಿದೆ?! ಯಾವ ಧರ್ಮದ ಸ್ಥಾಪನೆಗಾಗಿ ರಕ್ತದ ಕೋಡಿ ಹರಿಸುತ್ತಿದ್ದಾರೋ ಅಂಥಾ ಭಯೋತ್ಪಾದಕರಿಗೆಲ್ಲಾ, ‘ಓದಿರಿ’ ಪುಸ್ತಕದ ಒಂದೊಂದು ಕಾಪಿಯನ್ನಾದರೂ ಉಚಿತವಾಗಿ ನೀಡಿದರೆ, ಸಹನೆಯಿಂದ, ಶಾಂತಿಯಿಂದ ಓದಿರಿಯನ್ನು ಅವರೂ ಓದಿದರೆ ಸಿರಿಯಾದಿಂದ ಗುಳೆಯೆದ್ದು ಹೋಗುತ್ತಿರುವ ವಲಸಿಗರಿಗೆ ನೆಲೆ ಸಿಗಬಹುದೇನೋ.. ನಮ್ಮಲ್ಲಿಯ ಕಾಶ್ಮೀರ ತಂಪಾಗಿ, ಪರಸ್ಪರರ ನಂಬುಗೆ, ಶ್ರದ್ಧೆಯ ಮೇಲೆ ಪ್ರಹಾರವಾಗದೇ, ಸೌಹಾರ್ದತೆಯಿಂದ ಬಾಳ್ವೆ ಮಾಡಲಾಗುವುದೇನೋ.. ಎಂದೆಲ್ಲಾ ಅರೆಕ್ಷಣ ಅನಿಸಿದರೂ, ಅದು ಕನಸೇ ಸರಿ ಎಂದೆನಿಸಿಬಿಡುತ್ತದೆ. ಸಂಭವಾಮಿ ಯುಗೇ ಯುಗೇ ಎಂದ ಕೃಷ್ಣನ ನೆನಪಾಗುತ್ತದೆ.

ಕೊನೆಯಲ್ಲಿ :
“ಈ ವೇದ, ಉಪನಿಷತ್, ತ್ರಿಪಿಟಕಾ, ಭಗವದ್ಗೀತೆ, ಜಿನಶಾಸನ, ತೌರಾಹ್, ಝಬೂರ್, ಬೈಬಲ್, ಕುರ್’ಆನ್ ಅಥವಾ ಗ್ರಂಥಸಾಹಿಬ್ ಯಾ ಮತ್ತೊಂದು; ಧರ್ಮಗ್ರಂಥಗಳು ಯಾವುದೇ ಇರಲಿ, ಅವುಗಳು ಬೆಲೆಬಾಳುವುದು ಗ್ರಂಥಾವಲಂಬಿಗಳ ಸದ್ವರ್ತನೆಗಳಿಂದ ಮಾತ್ರ” - ‘ಓದಿರಿ’ಯ ಮೊದಲಲ್ಲಿ ಲೇಖಕರು ಹೇಳಿದ, ನಾನೂ ಒಪ್ಪುವ ಈ ಮೇಲಿನ ಸಾಲುಗಳಂತೇ ಎಲ್ಲವೂ ಬೆಳೆಯುವುದು ಗ್ರಂಥಾವಲಂಬಿಗಳ ಸದ್ವರ್ತನೆಯಿಂದ ಮಾತ್ರ ಎಂಬುದನ್ನು ಎಲ್ಲರೂ ನೆನಪಿಡಬೇಕಾದ್ದು.

ನಿನ್ನೆ ರಾತ್ರಿ ಫೋನ್ ಮಾಡಿದಾಗ ಮುದ್ರಿತ ಪ್ರತಿಗಳೆಲ್ಲ ಮಾರಾಟವಾಗಿದ್ದು, ಮರು ಮುದ್ರಣದ ತಯಾರಿಯಲ್ಲಿದ್ದೇನೆ ಎಂದಿದ್ದರು. ಅವರದೇ ಮಾತಿನಂತೆ ‘ಎಲ್ಲದಕು ಕಾರಣರು  ಮುಖಗೋಡೆಯ ಗೆಳೆಯ ಗೆಳತಿಯರು’. ಎಲ್ಲರಿಗೂ ಅವರು ಕೃತಜ್ಞತೆ ತಿಳಿಸಲು ಹೇಳಿದ್ದಾರೆ.

ಪುಸ್ತಕವನ್ನು ಇಲ್ಲಿ ಕೊಳ್ಳಬಹುದು..  "ಕ್ಲಿಕ್ಕಿಸಿ-ಓದಿರಿ"

~ತೇಜಸ್ವಿನಿ ಹೆಗಡೆ.

6 ಕಾಮೆಂಟ್‌ಗಳು:

ಈಶ್ವರ ಭಟ್ ಕೆ. ಹೇಳಿದರು...

ಲೇಖನ ಬಹಳ ಸೊಗಸಾಗಿದೆ. ಅದೂ ಅಲ್ಲದೇ ಸಂದರ್ಶನದ ಮುಂದುವರೆದ ಭಾಗದಂತಿದೆ. ತಟ್ಟು ಚಪ್ಪಾಳೆಯ ಕಾಲದಿಂದ ಬೊಳುವಾರ್ ಅವರ ಅಭಿಮಾನಿ ನಾನು.

ಓದಿರಿ ಒಂದು ಬಾಗಿಲು ತೆರೆದಂತಹ ಪುಸ್ತಕ. ಒಳ್ಳೆಯ ವಿಚಾರಗಳು ಎಲ್ಲಿಂದ ಬೇಕಾದರೂ ಬರಲಿ.

ಧನ್ಯವಾದ.

Satish Shetty ಹೇಳಿದರು...

Odhiri Pusthaka Mulabuthavadhigallu odabeku ennuva nimma abipraya sariyagide..Adhare adhannu innu munduvarisi Hindu mulabuthavadigallu kuda odhuva agathya thumba idhe. Vinakarana Islam bagge enu ariyadhe Muslimrannu thucchikarisuva Janaru thumba iruvudhu ellarige thillidhiruvanthade. Lekakara Uddeshavdalli idhu ondhu agirabahudu. --Odhiri odhi nimma arivina vistharanne madabekadaddu indhina samayada agathya...Lekakaru Ella rithiyindalu yashswi agiddare..Abinandhane.



ತೇಜಸ್ವಿನಿ ಹೆಗಡೆ ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
ತೇಜಸ್ವಿನಿ ಹೆಗಡೆ ಹೇಳಿದರು...

@ Kirana-

ತುಂಬಾ ಧನ್ಯವಾದಗಳು. :)

@Satish Shetty...

ಲೇಖನದಲ್ಲೇ ಹೇಳಿದ್ದೇನೆ.. ಅಲ್ಲದೇ ಲೇಖಕರ ಮಾತುಗಳನ್ನೂ ಅನುಮೋದಿಸಿದ್ದೇನೆ. ಯಾವ ಧರ್ಮವನ್ನೂ ಟೀಕಿಸುವ ಮುನ್ನ ಅದನ್ನೋದಿಕೊಳ್ಳಬೇಕು. ಮೂಲಭೂತವಾದಿತನ ಸಲ್ಲ. ಮುಸ್ಲಿಂ ಇರಲಿ, ಹಿಂದು ಇರಲಿ.. ಅದರಲ್ಲಿ ಸಂಶಯವಿಲ್ಲ. ಆದರೆ ಈಗ ಎಲ್ಲೆಡೆ ಕೋಡಿಗಟ್ಟಲೇ ಹರಿಯುತ್ತಿರುವ, ಜಗತ್ತಿನ ಜನರನ್ನು ಬೆಚ್ಚಿಸುತ್ತಿರುವ ಐಸಿಸ್ ಉಗ್ರಗಾಮಿಗಳ ಹತ್ತಿಕಲು ಯಾರಿಂದಲೂ ಆಗುತ್ತಿಲ್ಲ ಎಂಬುದು ಬಹು ವಿಷಾದನೀಯ :( ಪ್ರತಿಕ್ರಿಯೆಗೆ ಧನ್ಯವಾದಗಳು. :)

Rj ಹೇಳಿದರು...

Please read Bolwar's 'JIHAD' novel. It's a feel good experience to read very delicate and whispering charterers.

-Rj

ತೇಜಸ್ವಿನಿ ಹೆಗಡೆ ಹೇಳಿದರು...

Rj ಅವರೆ

ಜಿಹಾದ್ ಅನ್ನೂ ಓದಿದ್ದೇನೆ :)