ಸೋಮವಾರ, ಜನವರಿ 16, 2012

ಬಾ ತಂಗಿ ಊರಿಗೆ ಬರಗಿದ್ದೆ ಇರಡ....


ಸೋಗೆಮನೆ ಶೀನುಮಾವಂಗೊಂದೇ ಚಿಂತೆ ಮನ್ಸೊಳ್ಗೆ
ಗನಾದೊಂದು ಕೂಸು ಬೇಕು ಮನೇಲಿಪ್ಪ ಮಗಂಗೆ

ಕಾಲೇಜ್ ಮುಖ ಕಂಡವ್ಕೆಲ್ಲಾ ಬರೀ ಕನ್ಸು ಪ್ಯಾಟಿದೇ
ಊರು ಬ್ಯಾಡ, ಕೇರಿ ಬ್ಯಾಡ, ಕಾಣುದೊಂದು ಬೆಂಗ್ಳೂರೇ!

ಲವ್ವು-ಗಿವ್ವು ಮಾಡೋ ಯೋಚ್ನೆ ಇದ್ದವೆಲ್ಲಾ ಕೇಳ್ಕಳಿ
ಮೊದ್ಲೇ ಎಲ್ಲಾ ಸ್ಕೆಚ್ ಹಾಯ್ಕಂಡು ಹುಡ್ಗಿ ನೋಡಿ ಇಟ್ಕಳಿ

ಬರ್ಗಾಲ್ ಬಂದ್ರೂ ತೊಂದ್ರೆಯಿಲ್ಲೆ ಬಾವಿ ತೋಡಿ ಬದ್ಕಲಕ್ಕು
ಹೆಣ್ಣ್ ಸಿಗದೇ ಕಷ್ಟ ಆದ್ರೆ ಹೇಂಗೆ ವಂಶ ಬೆಳೆಸಕ್ಕು?

ಯಂಗ್ಳ ಕಾಲದ್ ಗಂಡಿಗೇನು ಕಡ್ಮೆ ಡೌಲು ಇದ್ದಿತ್ತಾ?
ಈಗ್ಮೇಲೆ ಕೆಳ್ಗೆ ನೋಡ್ತೋ, ಮೊದ್ಲು ಸೊಕ್ಕು ಕಡ್ಮಿತ್ತಾ?

ಅದ್ಕೊಂದ್ಕಾಲ, ಇದ್ಕೊಂದ್ಕಾಲ ಸುಮ್ನೆ ದೇವ್ರು ಮಾಡಿದ್ನಾ?
ಹಿಂದಿದ್ ತಿಳ್ಕಂಡ್ ಮುಂದಿದ್ ಯೋಚ್ಸಿ ಚೆನ್ನಾಗ್ ಬಾಳ್ಸಿ ಜೀವ್ನನಾ

-ತೇಜಸ್ವಿನಿ ಹೆಗಡೆ.

------


ಈ ಕವಿತೆಯನ್ನು ಪ್ರತಿಬಿಂಬ ೨೦೧೨- ಏಪ್ರಡಿಸಿದ್ದ ಹವಿಗವನ ಸ್ಪರ್ಧೆಗಾಗಿ ಬರೆದು ಕಳಿಸಿದ್ದು... ಹವ್ಯಕದಲ್ಲಿ ಕವಿತೆ ಬರೆಯುತ್ತಿರುವುದು ಇದೇ ಮೊದಲ ಪ್ರಯತ್ನ.... ನೂತನ ಅನುಭವವನ್ನು ನೀಡಿತು :)


ಹವಿಗಥಾ ಸ್ಪರ್ಧೆಯಲ್ಲಿ ನನ್ನ "ಇದ್ದಲ್ಲೇ ಇಡು ದೇವ್ರೆ" ಕಥೆಗೆ ಪ್ರಥಮ ಬಹುಮಾನ ದೊರಕಿದೆ :)



ಜನವರಿ ೧೩ಕ್ಕೆ ನನ್ನ ಬ್ಲಾಗ್ ಮರಿ "ಮಾನಸ" ಹುಟ್ಟಿ ವರುಷಗಳಾದವು :)



ಶುಕ್ರವಾರ, ಡಿಸೆಂಬರ್ 23, 2011

‘ಇಲ್ಲ’ದೊಳಗಿನ ಇರುವಿಕೆಗೆ...

ಬೇಕಿಲ್ಲ...
ತಿರುಗಿ ನೋಡಬೇಕಾಗಿಲ್ಲ..
ಅಡ್ಡ ತಿಡ್ಡ, ತಿರುವು ಮುರುವು, ಕೊರಕಲು ದಾರಿಯನ್ನು,
ಬತ್ತಿದ, ಒರತೆಯ ಒಸರನ್ನೂ ಕಾಣಿಸದ
ಹಳ್ಳ, ತೊರೆ, ಕೆರೆ, ನದಿ ಕಾಲುವೆಗಳನ್ನು

ಸೋತಿಲ್ಲ...
ಸೋಲಬೇಕಾಗಿಲ್ಲ ಭಾರ ಹೊತ್ತು ಹತ್ತು,
ನೀರು ಕುಡಿದು ದಪ್ಪಗಾದ ಹತ್ತಿಯೂ
ತೂಗಿದರೆ ತೋರಬಲ್ಲದು ಮಣ ಭಾರವನ್ನು
ಹಿಂಜಿ ಹಗುರಾದರೆ ತಲುಪಬಲ್ಲದು ಆಗಸವನ್ನು!

ಕಂಡಿಲ್ಲ...
ಕಾಣಲೇಬೇಕೆಂದಿಲ್ಲ ನಾನು-ನೀನು,
ಎಲ್ಲರನೂ ಕುಣಿಸುತಿಹ ಸೂತ್ರಧಾರನನ್ನು
ಕಂಡರೆ ಸಾಕು ಮಿಡಿವ ಎದೆಬಡಿತದಲಿ,
ಮನದ ತಿಳಿಗೊಳದಲವನ ಪ್ರತಿಬಿಂಬವನು

-ತೇಜಸ್ವಿನಿ ಹೆಗಡೆ