ಸೋಮವಾರ 12 ಸಪ್ಟೆಂಬರ್ 2011

ಹನಿ ಬದುಕಿನ ನಿರೀಕ್ಷೆ....

ಬಾನೊಳಗಿಂದಲೆಲ್ಲೋ ಅಲೆಯೆದ್ದ ಕಂಪನದ ಛಳಕು
ಕಣ್ಣು ಕಿರಿದಾಗಿಸಿದರೂ ಕಾಣಲಿಲ್ಲ ಮಿಂಚಿನ ಗುರುತು,
ಮೇಲೆ ನೋಡೆ, ಬಸಿರು ಹೊತ್ತ ನಿಂತ ಕಾರ್ಮೋಡಗಳು
ತಾಸುಗಳು ಕಳೆದರೂ ಹನಿ ಬಿಂದೂ ಹಣೆ ತಾಗದು!
ಮತ್ತೆ ದೂರದಲ್ಲೆಲ್ಲೋ ಸಣ್ಣ ಗುಡುಗಿದ ಸದ್ದು...

ಒಡಲಾಳದ ಧಗೆಯಿಂದ ಬೆವರಿಟ್ಟ ಧರೆಯು
ಸೀಳು ಬಾಯ್ತೆರೆದು ಹಪ ಹಪಿಸುತಿಹುದು,
ಮುತ್ತಾಗಲು ಕಾಯುತಿಹ ಅದೆಷ್ಟೋ ಚಿಪ್ಪುಗಳು
ಮಳೆಗಪ್ಪೆಗಳ ಭವಿಷ್ಯವನೇ ಬಹು ನೆಚ್ಚಿಕೊಂಡಿಹವು.
ಕೋಲ್ಮಿಂಚಿಗೆ ನಲಿಯಲು ನವಿಲುಗಳು ಕಾದಿದ್ದರೂ
ಹನಿ ನೀರ ಸುಳಿವಿಲ್ಲ, ಗಾಳಿಯೊಳು ಕಂಪಿಲ್ಲ,
ಮತ್ತಷ್ಟು ದೂರದಲಿ ಗುಡುಗಿದೆ ಸದ್ದು....

ಹಾರುವ ಪುಗ್ಗೆಯಿಂದ ಗಾಳಿ ಸುಯ್ಯೆನ್ನಲು ಸಾಕು
ಒಂದೇ ಒಂದು ಸಣ್ಣ, ಮಿರುಮಿರುಗೋ ಸೂಜಿಯ ಮೊನೆ
ಉಬ್ಬಿಹ ಕರಿ ಮೋಡಗಳು ಹಗುರಾಗಲು ಬೇಕು
ಸಣ್ಣನೆಯ ಕೋಲ್ಮಿಂಚುಗಳ ತಿವಿತದ ಬರೆ.
ಹನಿ ಹನಿ ಸೇರಿ, ಶರಧಿಗಳಾಗಿ ಒಡಲೊಳು ನೆಟ್ಟು,
ಹಸಿವು ತಣಿದು, ಹಸಿರಾಗಿ ಬೆಳೆದು, ಫಲವ ನೀಡೆ
ಚಾಚಿದ ಕೈಗಳಿಗೂ ಬಿತ್ತು ಒಂದೊಂದೇ ತುತ್ತು..
ಮತ್ತೆಲ್ಲೋ ಸಣ್ಣಗೆ ಗುಡುಗಿದ ಸದ್ದು!

-ತೇಜಸ್ವಿನಿ ಹೆಗಡೆ


11 comments:

  1. ಮಾನಸದ ಆಗಸದಲ್ಲೂ ಸಹ, ಕೋಲ್ಮಿಂಚು ಸೆಳೆದು, ಭಾವನೆಗಳು ಗುಡುಗಿ, ಕವನ ಇದೀಗ ಮಳೆಯಾಗಿ ಧರೆಯನ್ನು ಸೇರಿತೆ?

    ಪ್ರತ್ಯುತ್ತರಅಳಿಸು
  2. ವಾರೆವ್ಹಾ!
    ಪದಗಳ ಆಯ್ಕೆಯಲ್ಲೂ ಭಾವದ ದಾರದಲ್ಲಿ ಅದನ್ನೂ ಪೋಣಿಸಿ ಲಾಲಿತ್ಯ ಪೂರ್ಣ ಕಾವ್ಯವಾಗಿಸುವಲ್ಲೂ, ನಿಮಗೆ ನೀವೆ ಸಾಟಿ ಮೇಡಂ.
    ನನ್ನ ಬ್ಲಾಗಿಗೂ ಬನ್ನಿರಿ.

    ಪ್ರತ್ಯುತ್ತರಅಳಿಸು
  3. ತೇಜಸ್ವಿನಿ...ಮತ್ತೆಲ್ಲೋ ಸಣ್ಣನೆ ಗುಡುಗಿದ ಸದ್ದು...ಇದರ ಪ್ರಯೋಗ ಬಹಳ ಹಿಡಿಸಿತು..ಪ್ರತಿ ಚರಣದ ನಂತರ..ಇಲ್ಲಿ ಎಲ್ಲಾ ಆದರೂ ಮತ್ತೆಲ್ಲೋ ಮತ್ತೇನೋ ಆಗುತಿದೆ ..ಅಲ್ಲಿ ಹನಿಯಬಹುದು ಅಥವಾ ಮರೀಚಿಕೆಯಾಗಬಹುದು,,,ಆದರೆ ಆಶಯ ..ನಿರಂತರ....
    ಇಷ್ಟ ಆಯ್ತು ಕವನ..ನನಗೆ ಪ್ರಕೃತಿ ನಿಸರ್ಗ ಕವನಗಳು ಬಹಳ ಆಪ್ಯಾಯ ಎನುಸುತ್ತವೆ..ಆ ಕಾರಣಕ್ಕೂ...

    ಪ್ರತ್ಯುತ್ತರಅಳಿಸು
  4. Wow!!! sundaravaada padagala prayoga , artha tumbida kavana.. tumba ishta aatu :)

    ಪ್ರತ್ಯುತ್ತರಅಳಿಸು
  5. ಒಂದಾದನಂತರ ಮತ್ತೊಮ್ದರ ನಿರೀಕ್ಷೆ, ತಾಕಲಾಟ !. ಕವನ ಅರ್ಥಪೂರ್ಣವಾಗಿದೆ

    ಪ್ರತ್ಯುತ್ತರಅಳಿಸು
  6. ಗುಡುಗು ಸದ್ದುಗಳು ಮತ್ತೆ ಬರುತಿವೆ,
    ಹೊಸ ಬದುಕಿನ ಸಂದೇಶ
    ಹಳೆ ಬದುಕಿನ ಮೆಲುಕು
    ಸಾಲುಗಳ ಮಿಲನ ಅದ್ಭುತ

    ಪ್ರತ್ಯುತ್ತರಅಳಿಸು
  7. ಅರ್ಥವತ್ತಾದ ಸಾಲುಗಳು ಅಕ್ಕ!!
    ನಿಮ್ಮ ಕವನಗಳಿಗೆ ಸೂಕ್ತ ಚಿತ್ರ ಇದ್ದರೆ ಚೆನ್ನಾಗಿರುತ್ತೆ ಎಂದು ಹಿಂದೆ ಹೇಳಿದ್ದೆ...
    ಕ್ಷಮಿಸಿ..ಅದರ ಅಗತ್ಯ ಇಲ್ಲ...ಕವನದ ಸಾಲುಗಳೇ ಹಲವಾರು ದೃಶ್ಯಾವಳಿಗಳನ್ನು ನಿರೂಪಿಸುತ್ತವೆ..ನೇಪಥ್ಯದಲ್ಲಿರುವ ಚಿತ್ರಗಳೂ ಕಾಣುತ್ತವೆ :)

    ನಿರೀಕ್ಷೆ ಗರಿಗೆದರಿದೆ...ಎಲ್ಲ ಮೋಡಗಳು ಮಳೆ ಸುರಿಸುವುದಿಲ್ಲ..
    "ಮತ್ತೆ ದೂರದಲ್ಲೆಲ್ಲೋ...ಗುಡುಗಿದ ಸದ್ದು" ಈ ಸಾಲು ನಿರೀಕ್ಷೆ ಹೆಚ್ಚಿಸುತ್ತಿದೆ...ಭರವಸೆ ಮೂಡಿಸುತ್ತಿದೆ..
    ಬರೀ ಗುಡುಗು, ಮಿಂಚುಗಳ ಆರ್ಭಟವೇ ಆದರೆ ಏನು ಪ್ರಯೋಜನ?
    ಕಾಯುವಿಕೆಗೂ ಒಂದು ಅರ್ಥಬೇಕು ಎಂಬ ತಾತ್ಪರ್ಯ ಇದೆ!

    ಪ್ರತ್ಯುತ್ತರಅಳಿಸು
  8. ಕವನ ತುಂಬಾ ಚನ್ನಾಗಿದೆ...

    ಪ್ರತ್ಯುತ್ತರಅಳಿಸು