ಬುಧವಾರ 17 ನವೆಂಬರ್ 2010

ಸಾವಿನಾಚೆಯ ಬದುಕು...

ಗೋಲಿಯಾಡುತಿದ್ದ ಪುಟ್ಟನ ಕೈಯಿಂದ
ಗೋಲಿಯೊಂದುರುಳಿ ಮಾಯವಾಗಲು,
ಅಳುತ್ತಳುತ್ತಾ ಅಮ್ಮನ ಬಳಿ ಓಡಿದ.
‘ಅಳದಿರು ಕಂದಾ, ಕೊಡುವೆ ಹೊಸ ಗೋಲಿಯನ್ನೊಂದ’
ಎಂದು ತಬ್ಬಿ ಮುತ್ತನಿತ್ತ ಅಮ್ಮನ ಕಣ್ಗಳೊಳಗೆ
ಪುಟ್ಟನಿಗೇನೂ ಕಾಣಿಸಲೇ ಇಲ್ಲ!

ನಗುನಗುತ್ತಾ ಆಡ ಹೊರಟ ಪುಟ್ಟನ
ತಲೆಯೊಳಗೆಲ್ಲಾ ಹೊಸ ಗೋಲಿಯದೇ ಯೋಚನೆ....
ಆಕೆಯ ಮುಚ್ಚಿದ ಕಣ್‌ರೆಪ್ಪೆಗಳಂಚಿಂದ
ಅವ್ಯಾಹತ ನೀರ ಧಾರೆಯ ಕೋಡಿ....
ಆಕೆಯೂ ಬೇಡುತಿಹಳು ಎರಡೇ ಎರಡು ಗೋಲಿಗಳ
ಎರಡಿಲ್ಲದಿರೆ ಬೇಡ, ಒಂದಾದರೂ ಬೇಕಾಗಿದೆ,
ಗೋಲಿಯಾಡುವ ಪುಟ್ಟನ ಮುದ್ದು ಮೊಗವ ಸೆರೆ ಹಿಡಿಯಲು

ಪುಟ್ಟನ ಆಟದ ಗೋಲಿಗಳೋ
ತಟ್ಟೆಂದು ತರಬಲ್ಲಂಥವುಗಳೇ.
ಆದರೆ ಅವಳ ನಿರ್ಜೀವ ಖಾಲಿ ಕಣ್ಗಳಿಗೆ,
ಉಸಿರಿಲ್ಲದ ದೇಹದ ಗೋಲಿಗಳೇ ಜೀವ ತುಂಬ ಬಲ್ಲವು!
ತಡವರಿಸುವ ಕೈಗಳಿಗೆ, ಎಡವುವ ಕಾಲ್ಗಳಿಗೆ
ದಾರಿದೀವಿಗೆಯಾಗಬಲ್ಲ ಗೋಲಿಗಳ ದಾನವನ್ನಿತ್ತರೆ,
‘ಆತನ’ ಸನ್ನಿಧಿಯಲ್ಲೊಂದು ಸ್ಥಾನ ಖಾಯಂ ಆಗುವುದಂತೆ.

- ತೇಜಸ್ವಿನಿ ಹೆಗಡೆ

6 comments:

  1. ನೇತ್ರದಾನಕ್ಕೆ ತುಂಬಾ ಉಪಯುಕ್ತ ಪ್ರೇರಕ ಕವನ ಬರೆದಿದ್ದಿರಾ...

    ಪ್ರತ್ಯುತ್ತರಅಳಿಸು
  2. ಅರ್ಥಪೂರ್ಣ ಕವನ ತೇಜಸ್ವಿನಿ .

    ಪ್ರತ್ಯುತ್ತರಅಳಿಸು
  3. ಅರ್ಥಪೂರ್ಣ ಕವನ . ಇಷ್ಟವಾಯಿತು.

    ಪ್ರತ್ಯುತ್ತರಅಳಿಸು
  4. ತೇಜಕ್ಕಾ,

    ತುಂಬಾ ಚೆನ್ನಾಗಿದೆ ಕವನ. ಎಷ್ಟು ಅರ್ಥಗರ್ಭಿತ!

    ಪ್ರತ್ಯುತ್ತರಅಳಿಸು