ಗುರುವಾರ, ಜೂನ್ 17, 2010

ಗೂಡಿನಿಂದ ಗೂಡಿಗೆ ಕನಸು ತೇಲಿ ಸಾಗಿದೆ....

ಹಲವು ವರುಷಗಳ ಹಿಂದಿನ ಮಾತು. ಆಗ ಈ ವಿವಿಧ ಚಾನಲ್‌ಗಳ ಹಾವಳಿ ಇರಲಿಲ್ಲ. ಇದ್ದುದೊಂದೇ ಚಾನಲ್ ಅದೇ ದೂರದರ್ಶನ. ಆ ಕಾಲದಲ್ಲಿ ಬರುತ್ತಿದ್ದ ಕನ್ನಡ ಧಾರಾವಾಹಿಗಳು, ಚಿತ್ರಗೀತೆಗಳು, ವಿವಿಧ ಕಾರ್ಯಕ್ರಮಗಳ ನೆನಪುಗಳು ಇನ್ನೂ ಹಸಿರಾಗಿದೆ. ಅಂತಹ ಧಾರಾವಾಹಿಗಳಲ್ಲೊಂದು "ಗೂಡಿನಿಂದ ಬಾನಿಗೆ". ಸುಧಾ ನರಸಿಂಹರಾಜು ಅವರ ಪ್ರೌಢ ಅಭಿನಯದ ಜೊತೆಗೆ ಬಿ.ಆರ್. ಛಾಯಾ ಕಂಠದಲ್ಲಿ ಹೊಮ್ಮುತ್ತಿದ್ದ ಸುಶ್ರಾವ್ಯವಾದ ಶೀರ್ಷಿಕೆ ಗೀತೆಯಾದ "ಗೂಡಿನಿಂದ ಬಾನಿಗೆ ಕನಸು ತೇಲಿ ಸಾಗಿದೆ......" ಇನ್ನೂ ಮನದತುಂಬೆಲ್ಲಾ ಗುನಗುನಿಸುತ್ತಿರುತ್ತದೆ. ಅದೇಕೋ ಏನೋ ಇತ್ತೀಚಿಗೆ ನನ್ನ ಬಾಡಿಗೆ ಮನೆಯನ್ನು ಮತ್ತೊಂದು ಕಡೆ ಸ್ಥಳಾಂತರಿಸುವಾಗಲೂ ಇದೇ ಹಾಡು ಮತ್ತೆ ಮತ್ತೆ ರಿಂಗಣಿಸುತ್ತಿತ್ತು. ಆದರೆ ಇಲ್ಲಿ ಒಂದು ಸಣ್ಣ(!?)ಬದಲಾವಣೆ ಅಷ್ಟೇ.....ಇದು ಗೂಡಿನಿಂದ ಬಾನಿನತ್ತ ಪಯಣವಲ್ಲ....ಒಂದು ಗೂಡಿನಿಂದ ಇನ್ನೊಂದು ಗೂಡಿಗೆ ಸ್ಥಳಾಂತರ. ಹಳೆಯ ಕನಸುಗಳ ಜೊತೆ ಹೊಸ ಕನಸುಗಳ ಪಯಣ ಕೂಡ. ಅದೇ ಗಡಿಯಾರ, ಟಿ.ವಿ. ಮೇಜು, ಕುರ್ಚಿ ಇತ್ಯಾದಿ ವಸ್ತುಗಳು. ಆದರೆ ಅವುಗಳನ್ನಿಡುವ ಜಾಗ ಮಾತ್ರ ಹೊಸತು.

ಒಂದೊಂದಾಗಿ ಹಳೆಯ ವಸ್ತುಗಳನ್ನೆಲ್ಲಾ ಅವುಗಳಿಗಾಗಿ ಮೀಸಲಿಟ್ಟ ಹೊಸ ಜಾಗಗಳಲ್ಲಿಡುವಾಗ ಕಣ್ಸೆಳೆದದ್ದು ಆ ನೇರಳೆ ಬಣ್ಣದ ಹೂಗಳಿಂದ ಕಂಗೊಳಿಸುತ್ತಿದ್ದ ಪುಟ್ಟ ಪ್ಲಾಸ್ಟಿಕ್ ಹೂದಾನಿ. ಕಲವು ಸಮಯದ ಹಿಂದೆ ಇದನ್ನು ನನಗೆ ಕೊಟ್ಟಿದ್ದ ಆ ವ್ಯಕ್ತಿಯ ಹಿಂದಿನ ಭಾವ ಅಂದು ಬಹು ನವಿರಾಗಿತ್ತು, ನನ್ನೊಳಗೂ ಅದೇ ಭಾವವಂದು ಪ್ರತಿಫಲಿಸಿತ್ತು. ಆದರೆ ಕಾಲಕ್ರಮೇಣ ಈ ಹೂದಾನಿಯನ್ನು ಪಡೆಯುವಾಗಿದ್ದ ನನ್ನ ಹಾಗೂ ಕೊಟ್ಟಿದ್ದ ಆ ವ್ಯಕ್ತಿಯ ಸುಂದರ ಬಂಧವೂ ಈ ಪ್ಲಾಸ್ಟಿಕ್ ಹೂವಿನ ನಿರ್ಭಾವುಕತೆಯಂತೇ ಬಣ್ಣಗೆಟ್ಟಿತು..... ಹಳತಾಯಿತು... ಮನದೊಳಗಿಂದಲೂ ಮರೆಯಾಗಿ ಮೂಲೆ ಸೇರಿತು. ಕಾರಣ ಅಸ್ಪಷ್ಟವಾದರೂ, ಬಿರುಕು ಮಾತ್ರ ಸ್ಪಷ್ಟವಾಗಿದೆ.

ಅದು ಹೇಗೋ ಏನೋ, ಹೊಸ ಗೂಡಿಗೆ ಬಂದಾಕ್ಷಣ ಹಳೆ ಹೂದಾನಿ ಮತ್ತೆ ಹೊರಬಂದಿದೆ....ನನ್ನೆಡೆ ನೋಡುತ್ತಾ, ಒಳಗಿನ ಭಾವನೆಗಳತ್ತ ಇಣುಕು ನೋಟವನ್ನೆಸೆಯುವಂತಿದ್ದರೂ......ಮೊದಲಿನಂತೆ ನೋಯಿಸುತ್ತಿಲ್ಲ.....ಕಣ್ಗಳನ್ನು ತೋಯಿಸುತ್ತಿಲ್ಲ. ಭಾವನೆಗಳು ಬಣ್ಣಗೆಟ್ಟು, ಮಾಸಲಾಗಿ ಸತ್ತಮೇಲೆ ಪ್ಲಾಸ್ಟಿಕ್‌ನಂತೇ ಅಲ್ಲವೇ? ಆದರೆ ಪ್ಲಾಸ್ಟಿಕ್ ಅನ್ನು ಸುಟ್ಟರೂ ನಶಿಸದು, ಅಂತೆಯೇ ಈ ಹೂದಾನಿಯನ್ನಿತ್ತ ವ್ಯಕ್ತಿಯ ನೋವು ನಲಿವಿನ ನೆನಪುಗಳೂ ಕೂಡ. ನಿಜ... ಎಲ್ಲಕ್ಕಿಂತ ದೊಡ್ಡದು ಬಂಧವೇ....ಅದು ರಕ್ತ ಸಂಬಂಧವೇ ಆಗಿರಬೇಕೆಂದಿಲ್ಲ. ಆದರೆ ಎಲ್ಲಾ ನೋವು ನಲಿವಿಗೂ ಮೂಲ ಇದೇ ಬಂಧ ಎನ್ನುವುದೂ ಅಷ್ಟೇ ಸತ್ಯ. ಆದರೆ ಭಾವರೂಪದಲ್ಲಿ ಬಣ್ಣಗೆಟ್ಟು ಬಾಹ್ಯರೂಪದಲ್ಲಿನ್ನೂ ಕಂಗೊಳಿಸುತ್ತಿರುವ ಈ ಪ್ಲಾಸ್ಟಿಕ್ ಹೂದಾನಿಯೀಗ ಮೊದಲಿನಂತೇ ಹಿಂಸಿಸುತ್ತಿಲ್ಲ ನನ್ನ. ಎಷ್ಟೆಂದರೂ ಇದು ಪ್ಲಾಸ್ಟಿಕ್.... ಕೊಟ್ಟವರೂ ಸವಿನೆನಪನ್ನಿತ್ತಿಲ್ಲ.... ಇದೂ ಅಷ್ಟೇ ಎಂದೂ ಸುಗಂಧವನ್ನು ಬೀರದು. ಎಷ್ಟೇ ಗೂಡು ಬದಲಾಗಲಿ, ಈ ಹೂದಾನಿಯೂ ಜೊತೆಯಲ್ಲೇ ಪಯಣಿಸುವುದು ಮಾತ್ರ ಇನ್ನು ನಿಶ್ಚಿತ. ನನ್ನೊಳಗಿನ ಈ ಸ್ಥಿತಪ್ರಜ್ಞತೆಗೆ ದ್ಯೋತಕವಾಗಿ, ನಿರ್ಭಾವುಕತೆಗೆ ಕನ್ನಡಿಯಾಗಿ, ಧನಾತ್ಮಕತೆಯ ಪ್ರತೀಕವಾಗಿ, ಹೊಸ ಭಾವಗಳಾಗಮನದ ಮುನ್ಸೂಚನೆಯಾಗಿ....ಕಣ್ಣೆದುರಿಗೇ ಇರಿಸಿಕೊಂಡಿರುವೆ ಈಗ ಕೇವಲವೊಂದು ಪ್ಲಾಸ್ಟಿಕ್ ಹೂದಾನಿಯಾಗಿ.

ಬನ್ನಿ ಭಾವಗಳೆ ಬನ್ನಿ ನನ್ನೆದೆಗೆ
ಕರೆಯುವೆ ಕೈ ಬೀಸೀ...
ಬತ್ತಿದೆದೆಯಲಿ ಬೆಳೆಯಿರಿ ಹಸಿರನು
ಪ್ರೀತಿಯ ಮಳೆ ಸುರಿಸಿ...

[- "ಭಾವನೆಗಳ" ಮಾತು ಹೊರಡುವಾಗ, ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರ ಕವನ ನೆನಪಾಗದಿರುವುದುಂಟೇ? :)]

-ತೇಜಸ್ವಿನಿ ಹೆಗಡೆ.

32 ಕಾಮೆಂಟ್‌ಗಳು:

ಸಾಗರಿ.. ಹೇಳಿದರು...

ನೆನಪುಗಳೇ ಹಾಗೆ, ನಾವಿರುವವರೆಗೂ ನಮ್ಮೊಂದಿಗಿರುತ್ತದೆ. ಕೆಲವು ನೆನಪುಗಳು ದಿನ ಕಳೆದಂತೆ ಮರೆಯದಿದ್ದರೂ ಭಾವನೆಗಳನ್ನು ಬಡಿದೆಬ್ಬಿಸುವಷ್ಟು ಗಾಢವಾಗಿರುವುದಿಲ್ಲ. ಅಷ್ಟು strongnes ಇರುವುದಿಲ್ಲ. ಚೆನ್ನಾಗಿದೆ ತಮ್ಮ ಲೇಖನ.

ಸೀತಾರಾಮ. ಕೆ. / SITARAM.K ಹೇಳಿದರು...

ಗೂಡಿನಿ೦ದ ಗೂಡಿಗೆ ತಮ್ಮ ಪಯಣ ಸುಖಕರವಾಗಲಿ. ಹೊಸ ಮನೆ ನೆಮ್ಮದಿ, ಶಾ೦ತಿ ಮತ್ತು ಸಮೃದ್ಧಿ ತರಲಿ. ಕಹಿನೆನಪುಗಳ ಹೊರಹಾಕುವದು ಒಳ್ಳೆಯದು. ಮಾಸಲು ಹೂದಾನಿಯನ್ನು ಬದಲಿಸಿ (ಕನಿಷ್ಟ ಹೂಗಳನ್ನಾದರೂ).
ಭಾವಪೂರ್ಣ ಬರಹ.
ನನ್ನ ಬ್ಲೊಗ್-ಗೆ ತಮ್ಮ ಭೇಟಿಯೇ ಇಲ್ಲ ಬಹು ದಿನಗಳಿ೦ದ!

ಸುಮ ಹೇಳಿದರು...

ಎಂತಹ ಕಹಿನೆನಪೂ ಕಾಲಕ್ರಮೇಣ ಅದರ ತೀವ್ರತೆಯನ್ನು ಕಳೆದುಕೊಳ್ಳುತ್ತದೆ .... ಹಾಗಾದಾಗ ಮಾತ್ರ ಬಾಳು ನೆಮ್ಮದಿಯಾಗಿರಲು ಸಾದ್ಯ . all the best Tejasvini .

ಸವಿಗನಸು ಹೇಳಿದರು...

ಭಾವ ತುಂಬಿದ ಬರಹ....
ಹೊಸ ಗೂಡು ನಿಮಗೆ ಶಾ೦ತಿ ಸಮೃದ್ಧಿ ತರಲಿ. ...

ಚುಕ್ಕಿಚಿತ್ತಾರ ಹೇಳಿದರು...

bhaavanegalannu chennaagi bimbisiddeeri...
hoodaaniyolagina kahi bhaavavannu kittuhaaki hosa bhaavapushpa tumbuvalli nimma stitaprajnate sahaaya maadali.. all d best...

PARAANJAPE K.N. ಹೇಳಿದರು...

ಹೊಸ ಗೂಡಿನಲ್ಲಿ ನಿಮಗೆ ನೆಮ್ಮದಿ, ಸುಖ ಶಾಂತಿ ಪ್ರಾಪ್ತ ವಾಗಲಿ. ಬರಹ ಚೆನ್ನಾಗಿದೆ

sunaath ಹೇಳಿದರು...

ತೇಜಸ್ವಿನಿ,
ನೆನಪುಗಳು ಮಾಸುತ್ತವೆ. ಕನಸುಗಳು ಚಿರನೂತನ. ಅವು ನಿಮ್ಮ ಜೊತೆಗೆ ಯಾವಾಗಲೂ ಬರುತ್ತಿವೆಯೆಲ್ಲ!

Narayan Bhat ಹೇಳಿದರು...

ನೆನಪುಗಳು ಅದೆಷ್ಟು ಅಮೂಲ್ಯ ಅಲ್ಲವೇ? ಲೇಖನ ಚೆನ್ನಾಗಿದೆ.

ಮನದಾಳದಿಂದ............ ಹೇಳಿದರು...

ಅಕ್ಕಾ.....
ಮೊದಲಾಗಿ ನಿಮ್ಮ ಬದಲಾದ ಗೂಡು ಶಾಂತಿ ನೆಮ್ಮದಿಯನು ನೀಡಲಿ.
ನೆನಪುಗಳ ಮಹಿಮೆಯೇ ಅಂತದಲ್ಲವೇ? ಒಮ್ಮೆ ಮರೆತು ಹೋದ ಘಟನೆಗಳು ದುತ್ತನೆ ಪ್ರತ್ಯಕ್ಷವಾಗುತ್ತವೆ ನೆನಪುಗಳಾಗಿ. ಕಾಡುತ್ತವೆ ಕೆಲವೊಮ್ಮೆ ನೋವಾಗಿ, ಕೆಲವೊಮ್ಮೆ ನಲಿವಾಗಿ.
ನಿರ್ಭಾವುಕ ಭಾವನೆಯನ್ನು ನಿರ್ಜೀವ ಹೂದಾನಿಗೆ ಹೋಲಿಸಿದ್ದು ಚನ್ನಾಗಿದೆ.

ಈ ತಮ್ಮನ ಬ್ಲಾಗ್ ಕಡೆನೂ ಒಮ್ಮೆ ಬನ್ನಿ........

Subrahmanya ಹೇಳಿದರು...

:D. ಎಲ್ಲಾ ಇಳ್ಳೆಯದಾಗಲೆಂದು ಪ್ರಾರ್ಥಿಸುತ್ತೇನೆ.

ಜಲನಯನ ಹೇಳಿದರು...

ತೇಜಸ್ವಿನಿ...ಗೂಡು ಬದಲಾಯಿಸುವ ಯೋಚನೆಯೇನೋ ಮುದಕೊಡುತ್ತೆ...ಆದರೆ ಆ ಬದಲಾವಣೆ ಪ್ರಕ್ರಿಯೆಯಲ್ಲಿರುವ ಜಂಜಾಟ ..ಉಫ್...!! ಯಾರಾದ್ರೂ ನೀನು ಸುಮ್ನೆ ಕೂತ್ಕೋ ಅನಾಯಾಸವಾಗಿ ನಾನು ನಿನ್ನ ಮನೆಯ ಎಲ್ಲ ವಸ್ತುಗಳನ್ನು ಅನಾಮತ್ ಹೇಗಿತ್ತೋ ಹಾಗೆ ವರ್ಗಾಯಿಸಿ ಕೊಡುತ್ತೇನೆ ಅಂದರೆ....???!! ಬಹುಶಃ ನಿಮಗಿದು ಅನಿಸಿರಬೇಕು...ಅದೂ ಸೆಕೆಯ ಬೇಗೆಯಲ್ಲಿ ಈ ಕೆಲ್ಸ ಮಾಡಬೇಕಾಗಿ ಬಂದಾಗ........ಹಾಂ ಅಂದಹಾಗೆ ಈ ಸಮಯದಲ್ಲಿ ನಿಮ್ಮ ಕಣ್ಣಿಂದ ಮರೆಯಾಗಿದ್ದ ಹಲವು ಮಹತ್ವಪೂರ್ಣ ವಸ್ತುಗಳು (ಇಲ್ಲಿ ಹೂದಾನಿ) ನಿಮಗೆ ಆಶ್ಚರ್ಯ ಕೊಟ್ಟಿದ್ದು....ಇದು ಎಲ್ಲರ ಅನುಭವಕ್ಕೂ ಬರಬಹುದು.....ಅಭಿನಂದನೆ ಕಡೆಗೂ ಗೂಡಿಂದ ಗೂಡಿಗೆ ಸಫಲ ವಲಸೆಗೆ...

AntharangadaMaathugalu ಹೇಳಿದರು...

ತೇಜಸ್ವಿನೀ...
ಹೊಸ ಗೂಡು ನಿಮಗೆ ಬೆಚ್ಚನೆಯ ಅನುಭವಗಳನ್ನು ಕೊಡಲಿ ಎಂದು ಹಾರೈಸುವೆ. ನನ್ನ ಅನುಭವದಲ್ಲಿ ನೋವು ಎಷ್ಟೇ ತೀವ್ರವಾಗಿದ್ದರೂ... ಕಾಲ ಅದರ ತೀವ್ರತೆಯನ್ನು, ಉರಿಯನ್ನು ತಗ್ಗಿಸಿಬಿಡುತ್ತದೆ. ಕೊನೆಗೆ ತನ್ನ ಎಲ್ಲಾ extra fittings ಕಳೆದುಕೊಂಡು ಅದು ಬರಿಯ ಒಂದು ನೆನಪಾಗಿ ಉಳಿದುಬಿಡುತ್ತದೆ. ಅಲ್ಲವೇ..?
ಒಳ್ಳೆಯ ಬರಹ. ಆ ಒಂದು ಚಿಕ್ಕ ಹೂದಾನಿ ನಿಮ್ಮಿಂದ ಒಳ್ಳೆಯ ಬರಹ ಹೊರತರಲು ಕಾರಣವಾಯಿತು. ಆದ್ದರಿಂದ ಅದೀಗ ನಿಮಗೆ ಬರಹದ, ಪ್ರತಿಕ್ರಿಯೆಗಳ ಸವಿನೆನಪು ಕೊಡುವ ಒಂದು ವಸ್ತು... !!!

ಶ್ಯಾಮಲ

© ಹರೀಶ್ ಹೇಳಿದರು...

ನಿಮ್ಮ ಹಿಂದಿನ ನೆನಪುಗಳ ಸಾಲಿನ ಜೊತೆಗೆ

ಬನ್ನಿ ಭಾವಗಳೆ ಬನ್ನಿ ನನ್ನೆದೆಗೆ
ಕರೆಯುವೆ ಕೈ ಬೀಸೀ...
ಬತ್ತಿದೆದೆಯಲಿ ಬೆಳೆಯಿರಿ ಹಸಿರನು
ಪ್ರೀತಿಯ ಮಳೆ ಸುರಿಸಿ...

ನಿಮ್ಮ ನಾಲ್ಕು ಸಾಲುಗಳ ಕವನ, ವಾಹ್ , ವಾಹ್ ತುಂಬಾನೆ ಚನ್ನಾಗಿದೆ.

ಸಾಗರದಾಚೆಯ ಇಂಚರ ಹೇಳಿದರು...

ತೇಜಸ್ವಿನಿ,
ನೆನಪುಗಳೇ ಹಾಗಲ್ಲವೇ?
ಒಳ್ಳೆಯ ಬರಹ ಎಂದಿನಂತೆ

Dr.D.T.Krishna Murthy. ಹೇಳಿದರು...

ತೇಜಸ್ವಿನಿ ಮೇಡಂ ;ಎಂದಿನಂತೆ ನಿಮ್ಮ ಬರಹ ಭಾವ ಪೂರ್ಣ,ಅರ್ಥಪೂರ್ಣ.'ಹಾಡು ಹಳೆಯದಾದರೇನು ಭಾವ ನವ ನವೀನ'ಎನ್ನುವುದನ್ನು ಸ್ವಲ್ಪ ಬದಲಾಯಿಸಿ'ಹೂದಾನಿ ಹಳೆಯ ದಾದರೇನು ಭಾವ ನವ ನವೀನ'ಎನ್ನೋಣವೇ ಮೇಡಂ.ನಿಮ್ಮ ಹೊಸ ಗೂಡಿನಲ್ಲಿ ಹೊಸ ಹಾಡುಗಳು ಹೊಸಹೊಸ ಸಂತಸ ತರಲಿ ಎಂದು ಹಾರೈಸುತ್ತೇನೆ.

ಸುಧೇಶ್ ಶೆಟ್ಟಿ ಹೇಳಿದರು...

ತೇಜಕ್ಕ...

ತು೦ಬಾ ಚೆನ್ನಾಗಿದೆ ಬರಹ ಎ೦ದಿನ೦ತೆ....

ನಾನು ನೋವಿತ್ತು ಮರೆಯಾದ ವ್ಯಕ್ತಿಗಳು ಕೊಟ್ಟಿರುವ ಮತ್ತು ನಮ್ಮಲ್ಲೇ ಉಳಿದು ಹೋಗಿರುವ ವಸ್ತುಗಳನ್ನು ಕಣ್ಣಿಗೆ ಕಾಣದ೦ತೆ ಎಲ್ಲಾದರೂ ಇಟ್ಟಿರುತ್ತೇನೆ. ಬಹುಶ ಈಗ ನಾನು ಆ ಬಗ್ಗೆ ಇನ್ನೊಮ್ಮೆ ಚಿ೦ತಿಸಬೇಕು. ಆ ವಸ್ತುಗಳು ಎದುರಿದ್ದರೂ ನಿರ್ಜೀವವಾಗಿರುತ್ತವೆ ಮರೆಯಾದ ವ್ಯಕ್ತಿಯ ಜೊತೆಗಿನ ಭಾವನೆಗಳ೦ತೆ ಅ೦ತ ನೀವು ಹೇಳಿರುವುದು ಸರಿ ಅನಿಸುತ್ತಿದೆ.

shivu.k ಹೇಳಿದರು...

ತೇಜಸ್ವಿನಿ ಮೇಡಮ್,

ನಿಮ್ಮ ಮನೆ ಬದಲಾಯಿಸುವಾಗಿನ ಸಮಯದಲ್ಲಿ ಕಾಡುವ ನೆನಪುಗಳ ಲೇಖನ ಓದಿ ನನ್ನ ಮನೆ ಬದಲಾಯಿಸುವಾಗಿನ ನೆನಪುಗಳು ಕಾಡಿತು. ಅದನ್ನು ನನ್ನ ಬ್ಲಾಗಿನಲ್ಲಿ ಬರೆದಿದ್ದು ನೆನಪಾಯಿತು. ಅದಕ್ಕೆ ಧನ್ಯವಾದಗಳು.

Dr.D.T.Krishna Murthy. ಹೇಳಿದರು...

ತೇಜಸ್ವಿನಿ ಮೇಡಂ;ಯಾಕೋ ನಿಮ್ಮ ಬ್ಲಾಗಿಗೆ ಮತ್ತೆ ಬರಬೇಕು ಅನ್ನಿಸಿತು.ಪ್ಲಾಸ್ಟಿಕ್ ಹೂವುಗಳನ್ನು ನಿರ್ಭಾವುಕತೆಯಿಂದ ನೋಡುವಂತೆ ,ಒಮ್ಮೆ ನಮ್ಮೊಡನೆ ಮಧುರ ಬಾಂಧವ್ಯವಿದ್ದವರು ಮನ ನೋಯಿಸಿ ದೂರವಾದರೂ ಅವರನ್ನೂ ಅದೇ ನಿರ್ಭಾವುಕತೆಯಿಂದ ನೋಡಲು ಸಾಧ್ಯವೇ?ಎಂಬ ಪ್ರಶ್ನೆ ನನ್ನನ್ನು ಬಹುವಾಗಿ ಕಾಡುತ್ತದೆ.ಈ ವಿಷಯ ನನಗೆ ಕವನವೊಂದಕ್ಕೆ
ಸ್ಪೂರ್ತಿಯಾಯಿತು !ಧನ್ಯವಾದಗಳು.

ಮನಸು ಹೇಳಿದರು...

ಹೊಸ ಗೂಡಿಗೆ ತೆರಳಿದ ಹಕ್ಕಿಗೆ ಸ್ವಚ್ಚಂದದ ನಗೆ ಹೊನಲು ಬೀರಿ, ಹೊಂಗಿರಣದ ಹೊಳೆ ಹರಿಯಲೆಂದು ಆಶಿಸುತ್ತೇವೆ. ಹೊಸ ಮನೆಗೆ ನಮ್ಮನ್ನೆಲ್ಲ ಕರೆದು ಗೃಹಪ್ರವೇಶ ಮಾಡಿದಂಗೆ ಮಾಡಿ... ನಮಗೋ ಈ ಮರುಭೂಮಿಯ ಧಗೆಗೆ ಬಾಯಿ ಕೆಟ್ಟಂತಾಗಿದೆ ಹಹಹ...
ಶುಭವಾಗಲಿ ತೇಜುರವರೆ.

ranjith ಹೇಳಿದರು...

aa serial nenapu nanage salpa maaside. aa dharavahi title, "goodininda gaganakke" anta idda nenapu..

-Ranjith

ತೇಜಸ್ವಿನಿ ಹೆಗಡೆ ಹೇಳಿದರು...

ಪ್ರತಿಕ್ರಿಯೆಯ ಮೂಲಕ ಸ್ಪಂದಿಸಿದ, ನನ್ನ ಹೊಸ ಕನಸುಗಳಿಗೆ ಇಂಬು ಕೊಟ್ಟ ಎಲ್ಲಾ ಸಹಮಾನಸಿಗರಿಗೂ ತುಂಬಾ ಧನ್ಯವಾದಗಳು.

@ಶ್ಯಾಮಲಕ್ಕ,
<> ಎಂದಿರುವಿರಿ... ತುಂಬಾ ಇಷ್ಟವಾಯಿತು ನಿಮ್ಮ ಧನಾತ್ಮಕ ದೃಷ್ಟಿಕೋನ....:)


@ಹರೀಶ್,
ಮಾನಸಕ್ಕೆ ಸ್ವಾಗತ. ಕೊನೆಯಲ್ಲಿನ ಹಾಡಿನ ಸಾಲುಗಳನ್ನು ರಚಿಸಿದ ಕವಿ ಎನ್.ಎಸ್.ಲಕ್ಷ್ಮೀನಾರಾಯಣ ಭಟ್. ಅವರ ಕವಿತೆಗಳೆಲ್ಲಾ ತುಂಬಾ ಚೆನ್ನಾಗಿವೆ. ಸಾಧ್ಯವಾದರೊಮ್ಮೆ ಓದಿ.

@ರಂಜಿತ್,
ಇರಬಹುದು....ನನಗೂ ಸರಿ ನೆನಪಿಲ್ಲ. ಆದರೆ ಧಾರಾವಾಹಿಯ ಗೀತೆಯ ಪ್ರಾರಂಭ ಮಾತ್ರ "ಗೂಡಿನಿಂದ ಬಾನಿಗೆ ಕನಸು ತೇಲಿ ಸಾಗಿದೆ.." ಎನ್ನುವುದು ಸರಿಯಾಗಿ ನೆನಪಿದೆ. :)

@ಕೃಷ್ಣಮೂರ್ತಿ ಅವರೆ,
ನಿಮ್ಮ ಪ್ರಶ್ನೆ ನನ್ನನ್ನೂ ಮೊದಲು ಕಾಡಿತ್ತು. ಆದರೆ ಇದು ಸಾಧ್ಯ. ವಸ್ತುವೇನಿದ್ದರೂ ನಿರ್ಜೀವವೇ. ಅದಕ್ಕೆ ಜೀವ ತುಂಬುವುದು ಆ ವಸ್ತುವಿನಿ ಹಿಂದ ಸಿಹಿ/ಕಹಿ ನೆನಪು ಮಾತ್ರ. ಆ ನೆನಪುಗಳನ್ನೇ ತೊಡೆದು ಹಾಕಿದರೆ ಅದನ್ನಿತ್ತ ವ್ಯಕ್ತಿಗೂ ಆ ವಸ್ತುವಿಗೂ ಏನೊಂದೂ ಸಂಬಂಧವಿರದು. ಆದರೆ ನೋವನ್ನಿತ್ತ ವ್ಯಕ್ತಿಯನ್ನು ನಿರ್ಭಾವುಕತೆಯಿಂದ ನೋಡಲು, ಎದುರಿಸಲು ತುಂಬಾ ಸ್ಥಿರ ಮನಸ್ಸು ಬೇಕಾಗುತ್ತದೆ. ಸ್ಥಿತಪ್ರಜ್ಞತೆಯನ್ನು ಸಾಧಿಸದರೆ ಯಾವುದೇ ನೋವು ಯಾವ ವ್ಯಕ್ತಿಯಿಂದಲೂ ಮುಂದೆ ಆಗುವುದಿಲ್ಲವಂತೆ.....:) ಇದನ್ನು ಸಾಧಿಸುವುದು ಬಹು ಕಷ್ಟ. ಆದರೆ ಪ್ರಯತ್ನ ಪಟ್ಟರೆ ಸಾಧ್ಯ ಕೂಡ. ಧನ್ಯವಾದಗಳು.

ಕ್ಷಣ... ಚಿಂತನೆ... ಹೇಳಿದರು...

ತೇಜಸ್ವಿನಿಯವರೆ, ಹೂದಾನಿ ಇಂತಹ ಒಂದು ಬರಹ ಬರೆಸಿದ್ದಕ್ಕೆ ಥ್ಯಾಂಕ್ಸ್ ತಿಳಿಸಬೇಕು. ನೆನಪುಗಳೇ ಹಾಗೆ. ಅದಕ್ಕೆಂದೇ ವಿಸ್ಮೃತಿ ಎಂಬುದನ್ನು ಮೆದುಳಿನಲ್ಲಿಡದೇ ಹೋಗಿದ್ದರೆ, ಏನೆಲ್ಲಾ ಗೊಂದಲವಾಗುತ್ತಿತ್ತು. ಬರಹ ಚೆನ್ನಾಗಿದೆ.
ನಿಮ್ಮ ಹೊಸಮನೆಯಲ್ಲಿನ ವಾಸ ಹೊಸತನ, ಮತ್ತಷ್ಟು ನವಚೇತನ ಎಲ್ಲ ಕೊಡಲಿ ಎಂದು ಆಶಿಸುವೆ.

ಸ್ನೇಹದಿಂದ,

ಶಿವಪ್ರಕಾಶ್ ಹೇಳಿದರು...

hosa mane hosa chaitanya tarali :)
nice article :)

ದಿನಕರ ಮೊಗೇರ ಹೇಳಿದರು...

ತೇಜಸ್ವಿನಿ ಮೇಡಂ,
ಕೆಲವೊಂದು ಭಾವನೆಗಳೇ ಹಾಗೆ, ರೂಪ, ಬಣ್ಣ, ವಾಸನೆಗಳು ಇರಲ್ಲ.... .... ನಿಮ್ಮ ಭಾವನೆಗಳ ಕುರಿತ ಲೇಖನ ಮನ ತಟ್ಟಿತು.... ಹೊಸ ವಾತಾವರಣ ಹೊಸ ಹುರುಪು ತರಲಿ..... nanna blog ge banni...

ಮನಸಿನ ಮಾತುಗಳು ಹೇಳಿದರು...

ತೇಜಕ್ಕ,

ಅಂತೂ ಸಮಸ್ಯೆ ಎಲ್ಲ ಬಗೆಹರ್ದು ಖುಷಿಲಿ ಇದ್ದೆ ಹೇಳಾತು... :-) love to hear that ... :-)
ನೆನಪುಗಳು, ಭಾವನೆಗಳು, ಕೆಲವೊಂದು ವಸ್ತುಗಳು ಪ್ರೀತಿ ಪಾತ್ರರು ಕೊಟ್ಟಿದ್ದು ಯಾವಾಗಲೂ 'ಹಸಿರೇ' ಅಲ್ದಾ??...:-)

ವಿ.ರಾ.ಹೆ. ಹೇಳಿದರು...

:-) :-)

Raghu ಹೇಳಿದರು...

ಗೂಡಿನಿಂದ ಗೂಡಿಗೆ.. ಮನಸ್ಸಿನಿಂದ ಮನಸ್ಸಿಗೆ ಸಾಗುವ ಕನಸುಗಳೇ ಒಂದು ಸುಂದರ ಕಾವ್ಯ.
ನಿಮ್ಮವ,
ರಾಘು.

ಮನಸಿನಮನೆಯವನು ಹೇಳಿದರು...

ತೇಜಸ್ವಿನಿ ಹೆಗಡೆ-,

ಮುಂದೋಡುವ ದಿನವೋ ಇದು
ಹಿಂದೆ ಇವೆ ನೂರು ನೆನಪು..
ನೂರೊಂದು ನೆನಪು: ಎನ್ನೋಣ ಅನಿಸುತ್ತೆ.
ಭಾವನಾತ್ಮಕ ಲೇಖನ..

Ravi ಹೇಳಿದರು...

Nimma lekhana tumba chennagide

ಅನಾಮಧೇಯ ಹೇಳಿದರು...

Yarigadaru Goodinnda baanige, kanasu telide meelge... ee hadina lyrics gotta?

cn_kiran@rediffmail.com

harsha ಹೇಳಿದರು...

Please send that song to harshamaddur@yahoo.co.in

ತೇಜಸ್ವಿನಿ ಹೆಗಡೆ ಹೇಳಿದರು...

Anonymous & Harsha,

Sorry I don't have that Song!