ಸೋಮವಾರ, ನವೆಂಬರ್ 17, 2008

ಆರೋಗ್ಯಕರ ಹಾಗೂ ರುಚಿಕರ ಅತ್ತಿ (Fig)

ದಟ್ಸ್‌ಕನ್ನಡದಲ್ಲಿ ಪ್ರಕಟವಾಗುತ್ತಿರುವ ನನ್ನ ಅಂಕಣವಾದ "ಶಿರಸಿ ಭವನದ"ಲ್ಲಿ ಬಂದ ಈ ವಾರದ ಪಾಕ ವಿಧಾನ
-------------------------------------
ಹಾದಿಬೀದಿಗಳಲಿ ಸಿಗುವ ಅತ್ತಿ ಗಿಡದ ಚಿಗುರೆಲೆಗಳನ್ನು ಆಯ್ದು ತಂದು ಶ್ರದ್ಧೆಯಿಂದ ಅಡುಗೆ ಮಾಡಿ ಸವಿದು ಆರೋಗ್ಯ ವೃದ್ಧಿಸಿಕೊಳ್ಳುವವರಿಗೆ ಪರಿಣತರು ಹೇಳುವ ಕಿವಿಮಾತುಗಳಿವು. ಅನೇಕ ರೋಗಗಳಿಗೆ ಏಕೈಕ ರಾಮಬಾಣ ಅತ್ತಿ ತಂಬುಳಿ.
ಅತ್ತಿ ಮರದ ಉಪಯೋಗಗಳು ಹಲವಾರು. ಹಾಗಾಗಿ ಮೊದಲಿಗೆ ಅತ್ತಿ ಮರದ ಕಿರು ಪರಿಚಯ ಮಾಡಿಕೊಳ್ಳೋಣ : 10ರಿಂದ 15 ಮೀಟರ್ ಎತ್ತರ ಬೆಳೆಯುವ, ನಿತ್ಯ ಹರಿದ್ವರ್ಣ ಮರ ಎಂದೇ ಪರಿಚಿತವಾಗಿರುವ ಸಸ್ಯಪ್ರಬೇಧ ಅತ್ತಿಮರ. ಸಂಸ್ಕೃತದಲ್ಲಿ ಉದುಂಬರ(ಔದುಂಬರ**), ಹಿಂದಿಯಲ್ಲಿ ಗುಲೇರ್, ಇಂಗ್ಲೀಷಿನಲ್ಲಿ Fig, ತೆಲುಗಿನಲ್ಲಿ ಅತ್ತಿ ಮಾನು ಹಾಗೂ ತಮಿಳಿನಲ್ಲಿ ಅತ್ತಿ ಮರಂ ಎನ್ನುತ್ತಾರೆ. ಅತ್ತಿ ಮರದ ಎಲೆಗಳನ್ನು ವಿಶೇಷವಾಗಿ ಹೋಮ ಹವನಗಳಲ್ಲಿ ಸಮಿತ್ತಾಗಿಯೂ ಉಪಯೋಗಿಸುತ್ತಾರೆ.ವೈದ್ಯ ಎ.ಅರ್.ಎಂ.ಸಾಹೇಬ್ ಅವರ 'ಅಪೂರ್ವ ಗಿಡಮೂಲಿಕೆಗಳು ಹಾಗೂ ಸರಳ ಚಿಕಿತ್ಸೆಗಳು' ಎಂಬ ಪುಸ್ತಕದಲ್ಲಿ ಯಾವ ರೀತಿ ಈ ಅತ್ತಿ ಮರದ ಎಲೆ, ಕಾಯಿ, ಹಣ್ಣು, ತೊಗಟೆ, ಹಣ್ಣಿನಿಂದೊಸರುವ ಬಿಳಿ ಹಾಲು ಎಲ್ಲವೂ ಸರಳ ಚಿಕಿತ್ಸೆಗಳಿಗೆ, ಕಾಯಿಲೆಗಳಿಗೆ ಮದ್ದು ಎಂಬುದನ್ನು ಸವಿಸ್ತಾರವಾಗಿ ವಿವರಿಸಲಾಗಿದೆ. ಉರಿಮೂತ್ರ, ವಿಪರೀತ ಬಾಯಾರಿಕೆ, ಬಾವು, ಸಕ್ಕರೆ ಕಾಯಿಲೆ ಮುಂತಾದ ರೋಗಗಳ ಉಪಶಮನಕ್ಕೆ ಅತ್ತಿ ಮರದ ವಿವಿಧ ಭಾಗಗಳಿಂದ ತಯಾರಿಸಿದ ಮನೆಮದ್ದುಗಳು ತುಂಬಾ ಪರಿಣಾಮಕಾರಿ.ಅತ್ತಿ ಮರ ಸಸ್ಯಪ್ರಬೇಧದ ಕೆಲವು ವಿವರಣೆಗಳು ಇಂತಿವೆ:-

Kingdom: Plantae
Division: Magnoliophyta
Class: Magnoliopsida
Order: Rosales
Family: Moraceae
Genus: Ficus
Species: F. racemosa


ಹೆಚ್ಚಿನ ವಿವರಣೆಗಳಲ್ಲಿ ಆಸಕ್ತಿ ಇರುವವರು ಈ ಕೆಳಗಿನ ಲಿಂಕ್‌ಗಳಿಂದ ಬಡೆಯಬಹುದಾಗಿದೆ.
http://en.wikipedia.org/wiki/Ficus_racemosa
http://www.exoticnatural.com/ficus.htm

ಅತ್ತಿ ಮರದ ಚಿಗುರೆಲೆಗಳಿಂದ ತಯಾರಿಸುವ ಈ ತಂಬುಳಿ ದೇಹಕ್ಕೆ ತುಂಬಾ ತಂಪು. ಅತ್ತಿ ಮರ ತುಂಬಾ ಎತ್ತರವಿರುವುದರಿಂದ ಚಿಗುರು(ಕುಡಿ)ಗಳನ್ನು ತೆಗೆಯಲು ತುಸು ಕಷ್ಟವಾಗಬಹುದು. ಆದರೆ ಎಲ್ಲೆಂದರಲ್ಲಿ, ದಾರಿಯಂಚಿನಲ್ಲೆಲ್ಲಾ ಬೆಳೆಯುವ ಈ ಮರದ ಸಣ್ಣ ಸಣ್ಣ ಗಿಡಗಳಿಂದ ಕುಡಿಗಳನ್ನು ಧಾರಾಳವಾಗಿ ಹೆಕ್ಕಬಹುದು.ಉತ್ತರ ಕನ್ನಡದ ಕಡೆ ವಿಶೇಷವಾಗಿ ತಯಾರಿಸುವ ಈ ಅತ್ತಿ ಕುಡಿ ತಂಬುಳಿ ಉಷ್ಣದೇಹದ ಪ್ರಕೃತಿಯವರಿಗೆ, ಬಾಯಿ ಹುಣ್ಣಿನಿಂದ ಬಳಲುತ್ತಿರುವವರೆ ತುಂಬಾ ಉಪಯುಕ್ತ. ತಯಾರಿಸಲೂ ಬಹು ಸುಲಭ ಹಾಗೂ ಸರಳ. ಕೇವಲ 15 ನಿಮಿಷಗಳ ಒಳಗೆ ತಯಾರಿಸಬಹುದಾಗಿದೆ.
ಬೇಕಾಗುವ ಸಾಮಗ್ರಿಗಳು:
* ಅತ್ತಿ ಕುಡಿಯ ಹಸಿರಾದ ಚಿಗುರೆಲೆಗಳು, ಬಲಿತ ದೊಡ್ಡ ಎಲೆಗಳಲ್ಲ. 10-15
* ಜೀರಿಗೆ - 1/4 ಚಮಚ
* ಬಿಳೇ ಎಳ್ಳು - 1/2 ಚಮಚ
* ಚಿಟಿಕೆ ಇಂಗು
* ಕಡೆದ ಮಜ್ಜಿಗೆ - 1 ಲೋಟ
* ಹುರಿಯಲು ತುಪ್ಪ - 2 ಚಮಚ
* ತೆಂಗಿನ ತುರಿ - 1/4 ಭಾಗ
* ಬೆಲ್ಲ - ರುಚಿಗೆ ತಕ್ಕಷ್ಟು (ಬೆಲ್ಲ ಹಾಕಲು ಇಷ್ಟಪಡದವರು ಸಿಹಿ ಹಾಕದೆಯೂ ತಯಾರಿಸಬಹುದು)
* ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ:
ಮೊದಲಿಗೆ ಅತ್ತಿ ಕುಡಿಗಳನ್ನು ಚೆನ್ನಾಗಿ ತೊಳೆದು ಹೆಚ್ಚಿಟ್ಟುಕೊಳ್ಳಬೇಕು.
ಬಾಣಲೆಗೆ 2 ಚಮಚ ತುಪ್ಪ ಹಾಕಿ ಸಣ್ಣ ಉರಿಯಲ್ಲಿ ಜೀರಿಗೆ, ಇಂಗು ಹಾಗೂ ಬಿಳೇ ಎಳ್ಳುಗಳನ್ನು ಹಾಕಿ ಹುರಿಯಬೇಕು.
ಜೀರಿಗೆ ಹಾಗೂ ಎಳ್ಳುಗಳು ಚಟಗುಡಲು ಹೆಚ್ಚಿಟ್ಟಿರುವ ಅತ್ತಿ ಕುಡಿಗಳನ್ನು ಹಾಕಿ ಸಣ್ಣ ಉರಿಯಲ್ಲೇ ಹುರಿಯಬೇಕು.10 ನಿಮಿಷದೊಳಗೇ ಕುಡಿಗಳೆಲ್ಲಾ ಹುರಿದು ಗರಿಗರಿಯಾಗುತ್ತವೆ.
ಹುರಿದಿಟ್ಟ ಪದಾರ್ಥಗಳು ಚೆನ್ನಾಗಿ ತಣಿದ ನಂತರ ಕಾಯಿತುರಿಯನ್ನು ಸೇರಿಸಿ ನುಣ್ಣಗೆ ರುಬ್ಬಬೇಕು.
ರುಬ್ಬಿದ ಪದಾರ್ಥಕ್ಕೆ ಕಡೆದ ಮಜ್ಜಿಗೆಯನ್ನೂ, ರುಚಿಗೆ ತಕ್ಕಷ್ಟು ಉಪ್ಪನ್ನೂ, ಬೆಲ್ಲವನ್ನೂ ಹಾಕಿ ಕಲಕಿದರೆ ರುಚಿಯಾದ ಆರೋಗ್ಯಕರ ತಂಬುಳಿ ಸಿದ್ಧ. ಅತ್ತಿಕುಡಿ ತಂಬುಳಿಯನ್ನು ಅನ್ನಕ್ಕೆ ಕಲಸಿಕೊಂಡೋ ಇಲ್ಲಾ ಹಾಗೇ ಕುಡಿಯಲೂಬಹುದು.

** ಔದುಂಬರ : ತಮ್ಮ ಜೀವನದ ಒಂದು ಭಾಗವೇ ಎಂಬಂತಿದ್ದ ಅತ್ತಿ ಮರ ಅಥವಾ ಔದುಂಬರ ಮರದ ಕುರಿತು ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು 'ಔದುಂಬರ ಗಾಥೆ' ಎಂಬ ಕವನವನ್ನು ಬರೆದಿದ್ದಾರೆ. ಇದರ ಬಗ್ಗೆ ಬಲ್ಲವರು ಇನ್ನಷ್ಟು ಬೆಳಕು ಚೆಲ್ಲಬೇಕಾಗಿ ವಿನಂತಿ.

ಗುರುವಾರ, ನವೆಂಬರ್ 6, 2008

ಜನಮಾನಸದೊಳಗೆ ತನ್ನ ಛಾಪನ್ನು ಗಾಢವಾಗಿ ಮೂಡಿಸುವ "ಬಾಲಿಕಾ ವಧು"

ಸಾಮಾಜಿಕ ಸಮಸ್ಯೆಗಳನ್ನು, ವ್ಯವಸ್ಥೆಯೊಳಗಿನ ಅವ್ಯವಸ್ಥೆಗಳನ್ನು, ಡಾಂಭಿಕತೆ, ಮೂಢನಂಬಿಕೆಗಳನ್ನು ಕಾಣಿಸುವ ಧಾರಾವಾಹಿ ಬಾಲಿಕಾ ವಧು.


ಈ ಧಾರಾವಾಹಿಯ ಕುರಿತು ಮೊದಲೇ ಬರೆಯಬೇಕೆಂದಿದ್ದೆ. ಆದರೆ ಸಮಯಾವಕಾಶವಾಗಲಿಲ್ಲ. ಚಂದ್ರಕಾಂತ ಎಸ್. ಅವರ "ಬತ್ತದ ತೊರೆ" ಬ್ಲಾಗಿನಲ್ಲಿ ಈ ಧಾರಾವಹಿಯ ಕುರಿತಾದ ಕಿರು ಬರಹವನ್ನೋದಿ ತುಂಬಾ ಸಂತಸವಾಯಿತು.

ಕೇವಲ ಅಸಂಬದ್ಧ ಪ್ರೀತಿ, ಮದುವೆ, ಡೈವೊರ್ಸ್, ಅತ್ತೆ-ಸೊಸೆ ಜಗಳ, ಷಂಡ್ಯಂತ್ರಗಳಂತಹ ಜಾಳು ಜಾಳಾದ ಕಥೆಗಳನ್ನೊಳಗೊಂಡ, ವಾಸ್ತವಿಕತೆಯ ಗಂಧಗಾಳಿಯೂ ಇಲ್ಲದಂತಹ ಧಾರಾವಾಹಿಗಳ ನಡುವೆ "Colors" ಚಾನೆಲ್‌ನಲ್ಲಿ ಬರುತ್ತಿರುವ "ಬಾಲಿಕಾ ವಧು" ಧಾರಾವಾಹಿ ತುಂಬಾ ಭಿನ್ನವಾಗಿ ನಿಲ್ಲಿತ್ತದೆ ಎಂದರೆ ಖಂಡಿತ ತಪ್ಪಾಗಲಾರದು. ಬಾಲಿಕಾ ವಧುವಾಗಿರುವ "ಆನಂದಿ" ಹಾಗೂ ವರನಾಗಿರುವ "ಜಗದೀಶ"ನ ಅಭಿನಯ ಯಾರನ್ನೂ ಬೆರಗುಗೊಳಿಸುತ್ತದೆ. ಈ ಧಾರಾವಾಹಿಯ ಕುರಿತಾದ ಹೆಚ್ಚಿನ ಮಾಹಿತಿಗಾಗಿ "ಬತ್ತದ ತೊರೆ" ಬ್ಲಾಗ್‌ಗೆ ಭೇಟಿಕೊಡಬಹುದು.


-ತೇಜಸ್ವಿನಿ ಹೆಗಡೆ.

ಮಂಗಳವಾರ, ನವೆಂಬರ್ 4, 2008

ನಾ ಮೆಚ್ಚಿದ ಕವಿತೆ - ೩

ಕವಿ : ಡಾ ದ.ರಾ.ಬೇಂದ್ರೆ (ಅಂಬಿಕಾತನಯದತ್ತ)


ನಾನು ಬಡವಿ ಆತ ಬಡವ

ಒಲವೇ ನಮ್ಮ ಬದುಕು
ಬಳಸಿಕೊಂಡೆವದನೆ ನಾವು
ಅದುಕು ಇದುಕು ಎದುಕು.

ಹತ್ತಿರಿರಲಿ ದೂರವಿರಲಿ
ಅವನೆ ರಂಗಸಾಲೆ
ಕಣ್ಣುಕಟ್ಟುವಂಥ ಮೂರ್ತಿ
ಕಿವಿಗೆ ಮೆಚ್ಚಿನೋಲೆ.

ಚಳಿಗೆ ಬಿಸಿಲಿಗೊಂದೆ ಹದನ
ಅವನ ಮೈಯ ಮುಟ್ಟೆ
ಅದೇ ಗಳಿಗೆ ಮೈಯ ತುಂಬ
ನನಗೆ ನವಿರುಬಟ್ಟೆ.

ಆತ ಕೊಟ್ಟ ವಸ್ತು ಒಡವೆ
ನನಗೆ ಅವಗೆ ಗೊತ್ತು
ತೋಳುಗಳಿಗೆ ತೋಳಬಂದಿ
ಕೆನ್ನೆ ತುಂಬ ಮುತ್ತು.


**ಬೇಂದ್ರೆಯವರ ಈ ಕವನ ನನ್ನ ಅಚ್ಚುಮೆಚ್ಚಿನ ಕವನಗಳಲ್ಲೊಂದಾಗಿದೆ. ಪ್ರೀತಿಯ ಸಾರ್ಥಕತೆ, ಅದರ ಸರಳತೆ, ಪರಿಪಕ್ವತೆಯನ್ನು ತುಂಬಾ ಸರಳವಾಗಿ, ಸುಂದರವಾಗಿ ಸದಾ ಮನಸಿನಲ್ಲಿ ಹಸಿರಾಗಿರುವಂತೆ ಚಿತ್ರಿಸಿದ್ದಾರೆ ಈ ಕವನದಲ್ಲಿ. ಪ್ರೀತಿಯನ್ನು ಕೊಡುವುದರಲ್ಲಿ, ಪಡೆಯುವುದರಲ್ಲಿ ಇರಬೇಕಾದದ್ದು ಮನಸಿನೊಳಗಿನ ಶ್ರೀಮಂತಿಕೆಯೇ ವಿನಃ ಲೌಕಿಕ ಸಿರಿತನವಲ್ಲ ಎನ್ನುವುದನ್ನು ಅದೆಷ್ಟು ಸ್ಪಷ್ಟವಾಗಿ, ಕಾವ್ಯಮಯವಾಗಿ ಹೇಳಿದ್ದಾರೆ ಅಲ್ಲವೇ? ಈ ಕವನದ ಸುಮಧುರ ಹಾಡೂ ಲಭ್ಯವಿದೆ.**