ಶುಕ್ರವಾರ, ಏಪ್ರಿಲ್ 5, 2019

ಜೀವಿಸುವ ಪರಿ ಎಂತು ಸ್ಪಂದನೆಯನು ಮರೆತು!


ಜೀವಿಯಲ್ಲಿ ಜೀವಂತಿಕೆಯ ಉಳಿವಿಗೆ ಮತ್ತು ಬೆಳವಣಿಗೆಗೆ ಬಹು ಮುಖ್ಯವಾಗಿ ಇರಬೇಕಾದದ್ದು ‘ಸ್ಪಂದನೆ’. ನೋವಿಗೆ, ನಲಿವಿಗೆ, ಹಸಿವಿಗೆ, ನಿದಿರೆಗೆ ಹೀಗೆ ಪ್ರತಿ ಕ್ಷಣದ ಚಲನೆಗೆ ಅತ್ಯವಶ್ಯಕ ಈ ಸ್ಪಂದನೆ. ಸ್ಪಂದಿಸುವುದನ್ನು ನಿಲ್ಲಿಸಿದ ದಿವಸವೇ ಸಾವು ಎಂದೆನ್ನುತ್ತಾರೆ. ಹೃದಯ ಮಾತ್ರ ಬಡಿತವಿದ್ದು, ದೇಹದಲ್ಲಿ ಬೇರಾವುದೇ ಚಲನೆಯಿಲ್ಲದ್ದರೆ ಅವರನ್ನು ಜೀವಚ್ಛವ ಎನ್ನಲಾಗುತ್ತದೆ. ಹೀಗಾಗಿ ‘ನಿಂತ ನೀರಲ್ಲ ಈ ಬದುಕು, ಹರಿವ ನದಿಯಂತೇ’ ಎಂದು ಹೇಳುವುದು. ಸ್ಪಂದನೆ ಕಾಲಕಾಲಕ್ಕೆ ಬದಲಾಗಬಹುದು, ಸ್ಪಂದಿಸುವ ರೀತಿ ಬದಲಾಗಬಹುದು, ಆದರೆ ಸ್ಪಂದಿಸುವುದೆಂದೂ ನಿಲ್ಲದು, ನಿಲ್ಲಲೂ ಬಾರದು! 
ಬದಲಾವಣೆ ಎನ್ನುವುದು ಜಗದ ನಿಯಮ. ಆದರೆ ಎಷ್ಟೋ ಸಲ ಬದಲಾವಣೆಯ ಕಾಲಗಣನೆಯಲ್ಲಿ ಬಹಳ ಅಂತರವಿರುತ್ತದೆ. ಕೆಲವೊಂದು ಬದಲಾವಣೆಗಳು ಕಡಿಮೆ ಕಾಲಾವಧಿಯಲ್ಲಾದರೆ, ಎಷ್ಟೋ ಸಲ ಒಂದು ಸಣ್ಣ ಬದಲಾವಣೆಗೂ ವರ್ಷಾನುಗಟ್ಟಲೆ ಕಾಯಬೇಕಾಗುತ್ತದೆ. ಆದರೆ ಯಾವುದೇ ಬದಲಾವಣೆ ಪ್ರಕಟಗೊಂಡು ವಿಸ್ತರಿಸಲು ಬಹುಮುಖ್ಯವಾಗಿ ಬೇಕಾಗಿರುವುದು ಸ್ಪಂದನೆಯೇ. ಇಲ್ಲದಿದ್ದರೆ ಬದಲಾದದ್ದು ಯಾವುದು? ಎಲ್ಲಿ? ಹೇಗೆ? ಎಂಬಿತ್ಯಾದಿ ವಿವರಗಳೇ ದಾಖಲಾಗುವುದಿಲ್ಲ. ಮನುಷ್ಯ ಮಾತ್ರವಲ್ಲ ಸಕಲ ಜೀವಿಗಳೂ ಕಾಲ ಹೊತ್ತು ತರುವ ಈ ಬದಲಾವಣೆಗೆ ತಮ್ಮದೇ ಆದ ರೀತಿಯಲ್ಲಿ ಸ್ಪಂದಿಸುತ್ತಲೇ ಇರುತ್ತವೆ. ಹೀಗಾಗಿ ಅದು ಬದಲಾಗುತ್ತಿರುವುದು ಅರಿವಿಗೆ ಬರುತ್ತದೆ. 
ಜೀವೋತ್ಪತ್ತಿಗೆ ಬಹು ಮುಖ್ಯವಾಗಿ ಬೇಕಾದದ್ದು ಕಾಲ ಮತ್ತು ಸ್ಥಳ. ಸಮಯಕ್ಕೆ ಮುನ್ನ ಮತ್ತು ಅದನ್ನು ಮೀರಿ ಯಾವುದೂ ಎಲ್ಲಿಯೂ ಹುಟ್ಟುವುದಿಲ್ಲ, ನಶಿಸುವುದೂ ಇಲ್ಲ ಎನ್ನುತ್ತಾರೆ ಪ್ರಾಜ್ಞರು. ಇಂಥ ದಿವಸ ಹಾಗೂ ಸ್ಥಳದಲ್ಲಿ ಈ ಜೀವದ ಹುಟ್ಟು ನಿಗದಿಯಾಗಿದ್ದಿರುತ್ತದೆ ಎನ್ನಲಾಗುತ್ತದೆ; ಅದು ಸಣ್ಣ ಸಸಿಯೇ ಇರಲಿ ಅಥವಾ ಮಗುವಿನ ಜನನವೇ ಆಗಿರಲಿ. ಈ ಹುಟ್ಟು ಅವ್ಯಕ್ತವಾಗಿರುತ್ತದೆ. ಬೆಳೆದಂತೇ ಅನುಭವಕ್ಕೆ ಬರುತ್ತದೆ. ಕಾಲವೂ ಅಷ್ಟೇ ಅದು ಆದಿ, ಅಂತ್ಯವಿಲ್ಲದ್ದು; ಅನಂತವಾದದ್ದು. ಆದರೆ ಅದು ಹೊತ್ತು ತರುವ ಬದಲಾವಣೆಗಳು ಮಾತ್ರ ಗೋಚರವಾಗುತ್ತವೆ. ‘ಯುಗಾದಿ’ ಇಂತಹ ಬದಲಾವಣೆಗೆ ನಾಂದಿಯಿಡುವ ಪಕ್ವ ಕಾಲ ಎನ್ನಬಹುದು. 
ದ.ರಾ.ಬೇಂದ್ರೆಯವರ ‘ಹಕ್ಕಿಹಾರುತಿದೆ ನೋಡಿದಿರಾ?’ ಕವನದ ಈ ಕೆಳಗಿನ ಸಾಲುಗಳನ್ನು ಗಮನಿಸೋಣ:
ಯುಗ-ಯುಗಗಳ ಹಣೆಬರಹವ ಒರಸಿ
ಮನ್ವಂತರಗಳ ಭಾಗ್ಯವ ತೆರೆಸಿ
ರೆಕ್ಕೆಯ ಬೀಸುತ ಚೇತನೆಗೊಳಿಸಿ
ಹೊಸಗಾಲದ ಹಸುಮಕ್ಕಳ ಹರಸಿ
ಹಕ್ಕಿ ಹಾರುತಿದೆ ನೋಡಿದಿರಾ? 
ಇಲ್ಲಿ ಹಕ್ಕಿ ಕಾಲ ಸೂಚಕವಾಗಿ, ರೂಪಕವಾಗಿ ಬಂದಿದೆ ಎಂಬುದು ನನ್ನ ಅನಿಸಿಕೆ. ಕಾಲವೆಂಬೋ ಈ ಹಕ್ಕಿ ಜೀವಿಗಳ ಬದುಕಲ್ಲಿ ಬದಲಾವಣೆ ತರುತ್ತಾ ಹಾರುತ್ತಲೇ ಇರುತ್ತದೆ. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಕಾಲವು ಚಕ್ರದಂತೇ, ಮರುಕಳಿಸುತ್ತಲಿರುತ್ತದೆ. ಬಾಲ್ಯ, ಯೌವನ, ವೃದ್ಧಾಪ್ಯಗಳನ್ನು ಕಳೆದು, ಪುನರಪಿ ಜನನಿ ಜಟರೇ ಶಯನಂ ಆಗಿ ಮತ್ತೆ ಹುಟ್ಟುತ್ತಲೇ ಇರುತ್ತಾನೆ ಮನುಷ್ಯ. ಸಸ್ಯದ ಗರ್ಭ ಬೀಜದೊಳಡಗಿದ್ದರೆ ಪ್ರಾಣಿ ಹಾಗೂ ಮಾನವರು ತಾಯಿ ಗರ್ಭದ ಮೂಲಕ ಜನ್ಮ ತಾಳುತ್ತಾರೆ. ಪುನರಪಿ ಮರಣಂ ಆಗುತ್ತಲೇ ಇರುತ್ತದೆ. ಇದು ಯುಗಯುಗಗಳಿಂದಲೂ ನಡೆದುಬರುತ್ತಿದೆ. ಅದಕ್ಕೇ ಅಂಬಿಕಾತನಯದತ್ತರು ಸಾಂಕೇತಿಕವಾಗಿ ಹೇಳಿದ್ದು ‘ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ’ ಎಂದು.
ಕಾಲ ಮತ್ತು ಜೀವಿ ಯುಗಾದಿಯೊಂದಿಗೆ ಬೆಸೆದಿರುವ ರೀತಿ:-
ಯುಗ ಎಂದರೆ ಯುಜು, ಇದರ ಅರ್ಥ ಜೋಡಿಸುವುದು, ಹೊಂದಿಸುವುದು. ಹೀಗಾಗಿ ‘ಯುಗಾದಿ’ ಕಾಲ ಮತ್ತು ಸೃಷ್ಟಿ ಎರಡನ್ನೂ ಪ್ರತಿನಿಧಿಸುತ್ತದೆ; ಜೊತೆಗೇ ಅಂತ್ಯವನ್ನೂ ಕೂಡ! ಕಾಲ ಎನ್ನುವ ಪದಕ್ಕೆ ಎರಡರ್ಥವಿದೆ. ಕಾಲ ಎಂದರೆ ಸಮಯವೂ ಹೌದು; ಅಂತ್ಯ ಸೂಚಕ ಪದವೂ ಹೌದು. ಹೀಗಾಗಿ ಜೀವ ಸೃಷ್ಟಿಯಾದ ಕ್ಷಣದಿಂದಲೇ ಕಾಲಗಣನೆಯೂ ಆ ಜೀವಿಯ ಜೊತೆ ಬೆಸೆದುಕೊಂಡಿರುತ್ತದೆ. ನಾವೇನು ‘ಸೃಷ್ಟಿಯಾಯಿತು’ ಎನ್ನುತ್ತೇವಲ್ಲ, ಅದು ಇನ್ನೊಂದು ರೀತಿಯಲ್ಲಿ ಆ ಜೀವಿಯ ಅಂತ್ಯಕ್ಕೆ ಕ್ಷಣಗಣನೆಯೂ ಆಗಿರುತ್ತದೆ. ಆದರೆ ಸಂಭ್ರಮ, ನಿರೀಕ್ಷೆಗಳು ಸಮಯವನ್ನು ಸುಲಭದಲ್ಲಿ, ವೇಗವಾಗಿ ದಾಟಲು ಸಹಕಾರಿಯಾದರೆ, ದುಃಖ ಹಾಗೂ ನಿರಾಸೆ ಆ ಹಾದಿಯನ್ನು ಕಠಿಣಗೊಳಿಸಿಬಿಡುತ್ತವೆ. ಈ ಕಾರಣದಿಂದಲೇ ಜನ್ಮದಿವಸದ ಸಂಭ್ರಮದ ಆಚರಣೆಗೆ ಹೆಚ್ಚು ಮಹತ್ವ ಸಿಗುತ್ತಿರುವುದು. ಇದೇ ದೃಷ್ಟಿಕೋನದಲ್ಲಿ ನೋಡಿದಾಗ, ಯುಗಾದಿಯ ಆಚರಣೆಗೆ ಬಹಳ ಪ್ರಾಮುಖ್ಯತೆ ಕಾಣುತ್ತದೆ.
‘ಯುಗಾದಿ’ ಕೇವಲ ವರ್ಷದಾರಂಭ, ಸಿಹಿ-ಕಹಿಗಳನ್ನು ಸಮಧಾತುವಿನಲ್ಲಿ ಸ್ವೀಕರಿಸುವ ಹಬ್ಬ ಮಾತ್ರವಲ್ಲ. ಬದುಕನ್ನು ಅರಿಯುವ, ಜೋಡಿಸುವ, ಹೊಂದಿಸುವ ಆರಂಭವೂ ಹೌದು. ಯುಗಾದಿ ಎನ್ನುವುದೇ ಕಾಲವನ್ನು ಮತ್ತು ಸೃಷ್ಟಿಯನ್ನು ಸೂಚಿಸುವುದು. ಕಾಲಕ್ಕೆ ಆದಿಯಿಲ್ಲ ಅಂತ್ಯವಿ ಎಂಬುದೇನೋ ನಿಜ. ಆದರೆ ಮಾನವ ಸೃಷ್ಟಿಯಾದ ಮೇಲೆಯೇ ಕಾಲಗಣನೆ ಆರಂಭವಾಗಿದ್ದು! ಅದಕ್ಕಿಂತ ಮೊದಲೂ ಕಾಲ ಇತ್ತು. ಆದರೆ ಅದು ನಮ್ಮ ಅರಿವಿಗೆ ಬರದೇ ಇದ್ದುದರಿಂದ ಮಹತ್ವ ಕಳೆದುಕೊಂಡಿದ್ದು. ಈ ರೀತಿ ಸಮಯಕ್ಕೆ ನಾವು ಕೊಟ್ಟ ಸ್ಪಂದನೆಯೇ ಅದಕ್ಕೊಂದು ವಿಶೇಷ ಪ್ರಾಮುಖ್ಯತೆಯನ್ನು ನೀಡಿದ್ದೆನ್ನಬಹುದು. 
ಪ್ರತಿ ಸಂತತ್ಸರದಲ್ಲೂ ಪ್ರಕೃತಿಯಲ್ಲಿ ಉಂಟಾಗುವ ಬದಲಾವಣೆಗಳು, ಅವುಗಳಿಗೆ ಪ್ರತಿ ಜೀವಿಯೂ ಸ್ಪಂದಿಸುತ್ತಾ ತಾನೂ ಮೆಲ್ಲನೆ ಬದಲಾಗುತ್ತಾ, ಬೆಳೆಯುತ್ತಾ ಹೋಗುವುದು, ಈ ಪ್ರಕ್ರಿಯೆಗಳೇ ಅನನ್ಯ; ಅದು ತೋರುವ ಬೆರಗು ಅನೂಹ್ಯ. ಆದರೆ ಅಂತ್ಯ ಹಾಗಲ್ಲ. ಸಾವು ಸಂಭವಿಸಿದಾಕ್ಷಣ ಕಾಣಿಸಿಕೊಂಡರೆ, ಹುಟ್ಟು ಥಟ್ಟನೆ ಗೋಚರಿಸದೇ ಕ್ರಮೇಣ ಪ್ರಕಟಗೊಳ್ಳುತ್ತದೆ. ನಾವು ಹುಟ್ಟಿದ ನಂತರ ಬೆಳೆಯುತ್ತಾ ಹೋಗುತ್ತೇವೆ. ಹಾಗೆ ಭಾವಿಸಿಕೊಂಡು ಅದರಲ್ಲೇ ಕಳೆದುಹೋಗುತ್ತೇವೆ. ನಾವು ಈ ಬೆಳವಣಿಗೆಗೆ ಬೆಲೆ ಕೊಡುತ್ತೇವೆ. ಆದರೆ ಕಾಲ ಮೆಲ್ಲನೆ ಕಳೆಯುತ್ತಾ ಹೋಗುತ್ತಿರುತ್ತದೆ. ಕಳೆದುಹೋಗುವುದು ಅದರ ಗುಣ. ಸೃಷ್ಟಿ ಹಾಗಲ್ಲ; ಅದರ ಕಾರ್ಯವೇ ಬೆಳೆಸುವುದು ಮತ್ತು ಬೆಳಗುವುದು. ಉದಾಹರಣೆಗೆ:
ನಾವು ಈ ಸಸ್ಯಸಂಕುಲಗಳನ್ನೇ ತೆಗೆದುಕೊಂಡರೆ, ವರ್ಷ ಋತು ಅಂದರೆ ಮಳೆಗಾಲದ ಸಮಯದಲ್ಲಿ ಸೃಷ್ಟಿ ಭೂಮಿಯೊಳಗೆ ಅಂಕುರವಾಗುತ್ತದೆ. ಅಲ್ಲಿ ಬೀಜಾಂಕುರವಾಗಿ ಕಾಲಕ್ರಮೇಣ ಅದು ಭೂಮಿಯನ್ನು ಸೀಳಿಕೊಂಡು ಜೀವ ಹೊರಹೊಮ್ಮುತ್ತದೆ. ಹೀಗೆ ವರ್ಷ ಋತುವಿನಲ್ಲಿ ಭೂಮಿಯ ಗರ್ಭದಲ್ಲಿ ಸೃಷ್ಟಿ ಕಾರ್ಯ ನಡೆದರೆ, ವಸಂತ ಋತುವಿನಲ್ಲಿ ಭೂಮಿಯ ಮೇಲೆ ಚಿಗುರು ಹುಟ್ಟಿಕೊಳ್ಳುತ್ತದೆ. ಶಿಶಿರದಲ್ಲಿ ಎಲೆಗಳೆಲ್ಲಾ ಉದುರಿ ವಸಂತದಾಗಮನಕ್ಕೆ ಸ್ಥಳ ನಿರ್ಮಿಸಲಾಗುತ್ತದೆ. ಈ ರೀತಿ ಸೃಷ್ಟಿ ಪ್ರಕ್ರಿಯೆಗೆ ಸ್ಥಳ ಮತ್ತು ಕಾಲ ಪರಸ್ಪರ ಜೋಡಿಸಿಕೊಂಡು, ಹೊಂದಿಕೊಂಡು ಕಾರ್ಯನಿರ್ವಹಿಸುತ್ತವೆ. ಇದಕ್ಕೆ ನಾಂದಿ ಹಾಡುತ್ತದೆ ಯುಗಾದಿ; ಸಂವತ್ಸರಗಳ ಆದಿ.
ಹುಟ್ಟಿದ ಪ್ರತಿ ಜೀವಿಯೂ ಕಾಲನ ಮಿತಿಯಲ್ಲೇ ಇರುತ್ತದೆ (ಈ ಮೊದಲೇ ಹೇಳಿರುವಂತೆ ಇಲ್ಲಿ ಕಾಲ ಎಂದರೆ ಸಮಯ ಮತ್ತು ಅಂತ್ಯ ಎರಡೂ ಹೌದು). ಈ ಕಾಲಗಣನೆಯಲ್ಲಿ ಮೂರು ವಿಧವಿದೆ ಎನ್ನುತ್ತದೆ ಯುಗಧರ್ಮ. 
೧. ಮಾನವ ಕಾಲ ೨. ಗ್ರಹಗಳ ಕಾಲ ೩. ದೇವ ಕಾಲ. 
ಹೀಗೆ ಯುಗಧರ್ಮದ ಪ್ರಕಾರ ದೇವತೆಗಳೂ ಕಾಲಗಣನೆಯ ಮಿತಿಯಲ್ಲಿರುವವರೇ! ಇನ್ನು ಈ ಕಾಲಗಣನೆಯನ್ನು ಮಾನವ ಕಾಲದಲ್ಲಿ ಸುಲಭಗೊಳಿಸಲು ಹಗಲು ಮತ್ತು ಕತ್ತಲಿನ ಪರಿಮಾಣವನ್ನು ತೆಗೆದುಕೊಳ್ಳಲಾಗಿದೆ. ಹನ್ನೆರಡು ತಾಸು ಹಗಲು ಮತ್ತು ಹನ್ನೆರಡು ತಾಸು ಕತ್ತಲು ಎನ್ನುವುದು ಕಾಲ ಸೂಚಕಕ್ಕೆ ಇಲ್ಲಿ ಸಹಕಾರಿಯಾಗಿದೆ.
ಯುಗಾದಿಯ ಜೊತೆಗೆ ಬೆಸೆದಿರುವ ನಮ್ಮ ಭಾವ ಸ್ಪಂದನೆ:-
ಆದಿ, ಆರಂಭ, ಹುಟ್ಟು - ಈ ಪದಗಳೇ ಮನದೊಳಗೆ ಸಂತೋಷವನ್ನು ತುಂಬುವಂಥವು. ಪ್ರಕೃತಿ ವಸಂತನ ಆಗಮಕ್ಕೇ ಕಾದಿತ್ತೇನೋ ಎಂಬಂತೇ ಆ ಋತುವಿನಲ್ಲಿ ಎಳೆ ಹಸಿರು ಬಣ್ಣದ ಚಿಗುರುಗಳನ್ನು ಹೊತ್ತು, ಹೂವೊಳಗೆ ಗಂಧ, ಮಕರಂದವನ್ನು ತುಂಬಿಕೊಂಡು, ನಳನಳಿಸುತ್ತಿರುವುದನ್ನು ನೋಡುವುದೇ ನಮಗೊಂದು ಸಂಭ್ರಮ. ಅಂತೆಯೇ, ಖ್ಯಾತ ಕವಿ ಹಾಗೂ ನಾಡಿನ ಜನಪ್ರಿಯ ಸಹೃದಯ ಸಾಹಿತಿಯಾಗಿರುವ ಶ್ರೀಯುತ ಕೆ.ಎಸ್. ನಿಸಾರ್ ಅಹಮದ್ ಅವರು ತಮ್ಮ ‘ವರ್ಷಾದಿ’ ಕವಿತೆಯಲ್ಲಿ ಯುಗಾದಿಯ ಪ್ರಕೃತಿ ಚೆಲುವನ್ನು ಹೀಗೆ ಹಾಡಿ ಹೊಗಳಿದ್ದಾರೆ... 

        ಬೆವರ ಹೀರಿ ಬೆಳೆದ ಪೈರು 
ಕಣಕಣದಲಿ ಹೊನ್ನ ತೇರು
ಕಣಜ ತುಂಬಿ ತುಳುಕಿ ಹಿಗ್ಗಿ 
ನಾಡಿಗೊದಗಿ ಬಂತು ಸುಗ್ಗಿ
ಆದರೆ, ಸದಾ ಒಂದು ಪ್ರಜ್ಞೆ ನಮ್ಮೊಳಗೆ ಸುಪ್ತವಾಗಿ ಮಿಡಿಯುತ್ತಲೇ ಇರುತ್ತದೆ. ಅದೇನೆಂದರೆ ಈ ಸೃಷ್ಟಿಯ ಬೆನ್ನಿಗೇ ಅಂತ್ಯವೂ ಇದೆ, ಅದನ್ನೂ ನಾವು ಸಮವಾಗಿಯೇ ಸ್ವೀಕರಿಸಬೇಕು ಎಂಬುದು. ಉದುರುವ ಎಲೆಗಳಿಗೆ ಶೋಕಿಸದೇ ಅದನ್ನೂ ಸೃಷ್ಟಿಯ ಭಾಗವೆಂದು ಭಾವಿಸಬೇಕು ಎಂಬುದಕ್ಕೆ ಪ್ರತೀಕವಾಗಿಯೇ ಆ ದಿವಸ ಸi ಪ್ರಮಾಣದಲ್ಲಿ ಕಹಿಬೇವು-ಸಿಹಿಬೆಲ್ಲದ ಹಂಚುವಿಕೆ ತಪ್ಪದೇ ನಡೆದುಕೊಂಡು ಬಂದಿದೆ. 
ಹುಟ್ಟಿನ ಸಂಭ್ರಮಕ್ಕೆ ಕೊಡಲಿಯಾಗುತ್ತಿರುವ ಮನುಜನ ವಿಕೃತಿ :-
ಈ ವರುಷದ ಯುಗಾದಿ ‘ವಿಕಾರಿ ನಾಮ ಸಂವತ್ಸರ’. ಅದಕ್ಕನುಗುಣವಾಗಿಯೇ ಸಕಲ ಜೀವಿಗಳಲೇ ಶ್ರೇಷ್ಠರೆಂದೆನಿಸಿಕೊಂಡಿರುವ ಮನುಷ್ಯನ ವಿಕಾರತೆಯೂ ಇತ್ತೀಚಿಗೆ ಹೂಂಕರಿಸಿ ಅಬ್ಬರಿಸುತ್ತಿದೆ! ಪ್ರತಿ ಜೀವಿಯೂ ಬದುಕುವುದು ಅದರ ಅಸ್ತಿತ್ವಕ್ಕೆ, ಜೀವಂತಿಕೆಗಾಗಿಯೇ. ಪ್ರಾಣಿ, ಪಕ್ಷಿಗಳು ತಮ್ಮ ಉಳಿವಿಗೋಸ್ಕರ ಆಹಾರ, ನೆಲೆ ಹುಡುಕಿಕೊಳ್ಳುತ್ತವೆ. ತಮ್ಮ ಅಳಿವಿಗೆ ಪ್ರತಿರೋಧ ತೋರಿಸಲು, ಪ್ರಾಣ ರಕ್ಷಿಸಿಕೊಳ್ಳಲು ಬೇಟೆಯಾಡುತ್ತವೆ ಅಥವಾ ಹಲ್ಲೆ ನಡೆಸುತ್ತವೆ. ಮರ-ಗಿಡ-ಸಸ್ಯಗಳಂತೂ ಅದನ್ನೂ ಮಾಡಲು ಹೋಗದೆ ಮಣ್ಣಿನ ಸಾರವನ್ನು ಹೀರಿಹೀರಿ ಫಲ ತಮ್ಮದಲ್ಲ, ಕಾರ್ಯ ಮಾತ್ರ ತಮ್ಮದು ಎಂಬಂತೇ ನಿರಂತರ ಹಣ್ಣು, ಕಾಯಿ, ಸೊಪ್ಪು, ಧವಸ-ಧಾನ್ಯಗಳನ್ನು ಸಹಜೀವಿಗಳಿಗೆಲ್ಲಾ ನಿಸ್ವಾರ್ಥವಾಗಿ ಉಣಬಡಿಸುತ್ತಿರುತ್ತವೆ. ಹೀಗಿರುವಾಗ, ಮನುಷ್ಯ ಮಾತ್ರ ಅವ್ಯಾಹತವಾಗಿ ಸಹಜೀವಿಗಳ ಮೇಲೆ ಪ್ರಹಾರವನ್ನು ಸುಖಾಸುಮ್ಮನೇ ನಡೆಸುತ್ತಿರುತ್ತಾನೆ. ತನ್ನ ಸ್ವಾರ್ಥಕ್ಕಾಗಿ ಮರ-ಗಿಡಗಳನ್ನು, ಪ್ರಾಣಿಗೆ-ಪಕ್ಷಿಗಳನ್ನು ನಿರ್ಧಾಕ್ಷಿಣ್ಯವಾಗಿ ಕೊಲ್ಲುತ್ತಾ, ತನ್ನ ಆಪ್ತೇಷ್ಟರನ್ನು, ಸಹ ಮಾನವರನ್ನೂ ಬಿಡದೇ ಹಿಂಸಿಸುತ್ತಿರುತ್ತಾನೆ. ಅಂತ್ಯ ಎನ್ನುವುದು ತಮಗೂ ಖಚಿತ ಎನ್ನುವ ಪರಿವೆ ಇಂಥವರಲ್ಲಿ ಸಂಪೂರ್ಣ ಮಗುಮ್ಮಾಗಿಬಿಟ್ಟಿರುತ್ತದೆ ಎಂದೆನಿಸುತ್ತದೆ. ಇಂಥಾ ಮನುಷ್ಯರೂಪಿ ರಕ್ಕಸರ ವಿಕೃತಿ ಕಂಡಾಗ ‘ಒಂದೇ ಒಂದು ಜನ್ಮದಲ್ಲಿ ಒಂದೇ ಬಾಲ್ಯ, ಒಂದೇ ಹರೆಯ’ ಇಟ್ಟಿದ್ದೇ ಒಳ್ಳೆಯದಾಯಿತು ಎಂದೆನಿಸಿಬಿಡುತ್ತದೆ. ಪು.ತಿ.ನರಸಿಂಹಾಚಾರ್ ಅವರ ಕವಿತೆಯೊಂದರ ಈ ಕೆಳಗಿನ ಸಾಲುಗಳು ನೆನಪಾಗಿ ಕಾಡುತ್ತಿರುತ್ತವೆ.
ಹೊಸ ವರುಷವು ಬಹುದೆಂದಿಗೆ?
ಮಹಾಪುರುಷ ತರುವಂದಿಗೆ
ಅಲ್ಪಾಹಂಕಾರಗಳ ನುಂಗುತಲಿ
ಮಹಾಹಂಕಾರದೊಂದಿಗೆ
ಮನುಷ್ಯನ ಹೊರತು ಮತ್ತೆಲ್ಲಾ ಜೀವ ಸಂಕುಲಗಳಲ್ಲೂ ಜೀವೊತ್ಪತ್ತಿ ತಣ್ಣಗೆ, ಪ್ರೀತಿಯಿಂದ, ಶಾಂತಿಯಿಂದ ಆಗುತ್ತಿರುತ್ತದೆ. ಆದರೆ ಮನುಜನಲ್ಲಿ ಜನನದ ಜೊತೆಗೇ ಅಹಂಕಾರದ ಹುಟ್ಟೂ ಆಗಿಬಿಡುತ್ತದೆ. ಅದು ಆತನ ಶಾರೀರಿಕ ಬೆಳವಣಿಗೆಯ ಜೊತೆಗೇ ಬೆಳೆಯುತ್ತಾ ಹೋಗುತ್ತಿರುತ್ತದೆ. ಅಹಂಕಾರ ವಿಧವಿಧ ರೂಪು ತಳೆದು ಬೃಹದಾಕಾರವಾಗಿ ಬೆಳೆದಷ್ಟೂ ವಿವೇಕ, ಸುವಿಚಾರಗಳು ಕಳೆಗುಂದುತ್ತಾ ಹೋಗಿ ಕೊನೆಗೊಮ್ಮೆ ಕಳೆದುಹೋಗಿಬಿಡುತ್ತವೆ. ತನ್ನ ಅಹಂಕಾರವನ್ನು ಹತೋಟಿಯಲ್ಲಿಟ್ಟುಕೊಳ್ಳದೇ, ನಿರ್ದಾಕ್ಷಿಣ್ಯವಾಗಿ ಅದರ ಕೈಗೇ ತನ್ನ ವಿವೇಕವನ್ನು ಕೊಟ್ಟುಬಿಡುವುದೇ ಸಕಲ ವಿಕಾರಗಳಿಗೂ ಕಾರಣವಾಗಿದೆ.
ಹಬ್ಬಗಳ ಮಹತ್ವ ಮತ್ತು ಸ್ಪಂದನೆಯ ಪ್ರಸ್ತುತತೆ:-
ಬದಲಾವಣೆ ಹೇಗೆ ಜಗದ ನಿಯಮವೋ, ಕತ್ತಲು ಹೇಗೆ ಶಾಶ್ವತವಲ್ಲೋ ಹಾಗೇ ಸಮಾಜದೊಳಗೆ ಕ್ಯಾನ್ಸರಿನಂತೇ ಹಬ್ಬುತ್ತಿರುವ ಈ ವಿಕೃತಿಗಳು, ಪ್ರಭೃತಿ ಜೀವಿಗಳು ಶಾಶ್ವತವಲ್ಲ. ಈ ವಿಕಾರ ಮನೋಭಾವದ ತಮ ಕಳೆದು, ಹೊಳೆವ ಹೊಸ ಭಾವಗಳು ಮನುಜನ ಎದೆಯೊಳಗೆ ಹುಟ್ಟಿ, ಬೆಳೆದು, ಮಾತು-ಕೃತಿಗಳಲ್ಲಿ ಚಿಗುರೊಡೆದು ಸಮಾಜಕ್ಕೆ, ವಿಶ್ವಕ್ಕೆ, ನವ ಚೈತನ್ಯವನ್ನು ತುಂಬುವ ಯುಗಾದಿ ಬಂದೇ ಬರುತ್ತದೆ ಎಂಬ ಆಶಾಭಾವನೆ ಈ ಕಾಲದ ತುರ್ತಾಗಿದೆ. ಸುತ್ತಲೂ ಕಾಣಿಸುವ ಕೊಳಕಿಗೆ ಮಾತ್ರ ಸ್ಪಂದಿಸುತ್ತಾ ಹೋದರೆ, ಅದರ ಆಸುಪಾಸಿದಲ್ಲೇ ಇರುವ ಒಳಿತಿನ ಬೆಳಕೂ ಮಸುಕಾಗಿಬಿಡುತ್ತದೆ. ಇದರಿಂದ ಹತಾಶೆ ಹೆಚ್ಚಾಗಿ ಕ್ರಮೇಣ ಸ್ಪಂದನೆಯೇ ಕುಂಠಿತವಾಬಿಡಬಹುದು. ಇದರ ಪರಿಣಾಮವಾಗಿ ಮನುಜ ಸಜೀವ ಶವವಾದರೂ ಆಶ್ಚರ್ಯವಿಲ್ಲ! 
ಈಗಾಗಲೇ ನಮ್ಮಲ್ಲಿ ಹಬ್ಬಗಳು ತಮ್ಮ ಪ್ರಸ್ತುತೆಯನ್ನು ಕಳೆದುಕೊಳ್ಳುತ್ತಿವೆ. ಯುಗಾದಿಯಿಂದ ಹಿಡಿದು ದೀಪಾವಳಿಯವರೆಗೂ ಬರುವ ಹಬ್ಬಗಳನ್ನು ಬಹುತೇಕರು ಯಾಂತ್ರಿಕವಾಗಿ ಸ್ವಾಗತಿಸುವುದು, ಆಚರಿಸುವುದು ಹೆಚ್ಚಾಗುತ್ತಿದೆ. ಇದಕ್ಕೆ ಕೂಡು ಕುಟುಂಬದ ಅವಗಣನೆ, ಜಾಗತೀಕರಣ ಎಲ್ಲವುದರ ಕೊಡುಗೆಯೂ ಇದ್ದಿರಬಹುದು. ಆದರೆ ಜೀವಂತಿಕೆಯನ್ನು ಕಾಪಿಟ್ಟುಕೊಳ್ಳುವುದು ಅನಿವಾರ್ಯು ಮತ್ತು ಅಗತ್ಯ. ಎಂಥಾ ಮಹಾ ಕಷ್ಟಗಳು, ಕೌಟುಂಬಿಕ ಸಂಕಟಗಳು ಧುತ್ತನೆ ಎರಗಿದರೂ, ಜೀವನೋತ್ಸಾಹ, ಜೀವನ್ಮುಖಿತ್ವವನ್ನು ಕಳೆದುಕೊಳ್ಳದೇ ಹುರಿದುಂಬಿಸುವ ನಮ್ಮ ಹಿರಿಯರು, ನಾಡಿನ ಹಿರಿಯ ಶ್ರೇಷ್ಠ ಕವಿಗಳು ನಮಗೆ ಸದಾ ಮಾದರಿಯಾಗುತ್ತಾರೆ. ಉದಾಹರಣೆಗೆ:
ಋತುಗಳರಳುತ ಚಕ್ರಗತಿಯಲಿ
ಹೊರಳಿ ಸರಿವುವು ನಿನ್ನೆಗೆ
ನೋವು ನಲಿವಿನ ನಡುವೆ ಕಾದೆವು
ಕರೆವ ಬೆಳಕಿನ ಸನ್ನೆಗೆ...
ಎಂದು ಯುಗಾದಿಯನ್ನು ಸಮಚಿತ್ತದಿಂದ ಸ್ವಾಗತಿಸಿ ಸಂಭ್ರಮಿಸಿದ ನಮ್ಮ ನಾಡಿನ ಪ್ರಸಿದ್ಧ ಕವಿಯಾಗಿರುವ ಶ್ರೀಯುತ ಸುಬ್ರಾಯ ಚೊಕ್ಕಾಡಿಯವರ ಕವಿತೆಯೊಂದರ ಮೇಲಿನ ಸಾಲುಗಳು ಸದಾ ಸ್ಮರಣೀಯ.
-ತೇಜಸ್ವಿನಿ ಹೆಗಡೆ
********** 


ಮಂಗಳವಾರ, ಸೆಪ್ಟೆಂಬರ್ 18, 2018

ಮರ್ಯಾದಾ ಹತ್ಯೆ : ಕಾರಣಗಳು ಮತ್ತು ಪರಿಹಾರ


ತ್ತೀಚಿಗಷ್ಟೇ ನಾನು ಮರಾಠಿಯ ಪಸಿದ್ಧ ‘ಸೈರಾಟ್’ ಚನಲನಚಿತ್ರವನ್ನು ನೋಡಿ ಬಹಳ ಇಷ್ಟಪಟ್ಟಿದ್ದೆ ಮತ್ತು ಅದರ ಅಂತ್ಯಕ್ಕೆ ಬಹಳ ಬೇಸರವೂ ಆಗಿತ್ತು. ಹಾಗೇ ಕೆ. ನಲ್ಲತಂಬಿಯವರ ಅನುವಾದಿತ ಕಾದಂಬರಿಯಾದ ‘ಹೂ-ಕೊಂಡ’ವನ್ನೂ ಓದಿ ಮೆಚ್ಚಿದ್ದೆ, ಬೆಚ್ಚಿದ್ದೆ! ಎರಡೂ ಒಂದೇ ವಿಷಯವನ್ನು ಎತ್ತಿಹಿಡಿಯುತ್ತವೆ. ಅದೇ ಮರ್ಯಾದಾ ಹತ್ಯೆ!

ಈಗ ನೋಡಿದರೆ ತೆಲಂಗಾಣದ ಯುವ ಜೋಡಿಯ ದಾರುಣ ಕತೆ ಹೊರಬಿದ್ದಿದೆ! ಮಗಳು ತಮ್ಮ ಜಾತಿಯಲ್ಲದವನನ್ನು ಮದುವೆಯಾಗಿ ಸುಖವಾಗಿದ್ದಾಳೆ ಎಂಬ ಒಂದೇ ಕಾರಣಕ್ಕೆ, ತಮ್ಮ ಹುಸಿ ಪ್ರತಿಷ್ಠೆಗೆ ಕುಂದಾಯಿತು ಎಂದು ಕ್ರೋಧಗೊಂಡು ಸ್ವಂತ ತಂದೆಯೇ, ಹೆತ್ತ ಮಗಳ ಗಂಡನನ್ನು ಅವಳ ಕಣ್ಮುಂದೆ ಇರುದು ಕೊಲ್ಲಿಸಿದ ವೀಡಿಯೋ ಎಲ್ಲೆಡೆ ವೈರಲ್ ಆಗಿ ಎಲ್ಲರನ್ನೂ ತಲ್ಲಣಗೊಳಿಸಿದೆ. ಮಗಳು ಗರ್ಭಿಣಿಯಾಗಿದ್ದಾಳೆ, ಆ ಮಗುವಿಗೆ ಭವಿಷ್ಯವಿದೆ, ತಮಗೆ ಇಷ್ಟ ಇಲ್ಲದಿದ್ದರೆ ದೂರವಿದ್ದುಬಿಟ್ಟರಾಯಿತು ಎಂಬ ಕನಿಷ್ಟ ಕಾಳಜಿಯೂ ಇಲ್ಲದೆ ಪಶುವಿಗಿಂತ ಕಡೆಯಾಗಿಬಿಟ್ಟ ಆ ತಂದೆ ಎಂದೆನ್ನಿಸಿಕೊಂಡವನ ಕ್ರೌರ್ಯವಾದರೂ ಎಂಥದ್ದಪ್ಪಾ ಎಂದೆನಿಸಿಬಿಟ್ಟಿತು. ನಿಜಕ್ಕೂ ಇದೊಂದು ಹೇಯ ಮತ್ತು ತೀವ್ರ ಖಂಡನೀಯ ಘಟನೆ. ಆ ಯುವ ಜೋಡಿಯ ಕನಸುಕಂಗಳ ಭಾವಚಿತ್ರ ಇನ್ನೂ ಕಾಡುತ್ತಿದೆ ನನ್ನನ್ನು. ಕ್ಷುದ್ರ ಮನುಷ್ಯನ ವಿಕೃತಿಗಿಂತ ಅಪಾಯಕಾರಿಯಾದ್ದು ಬೇರೊಂದಿಲ್ಲ ಅನ್ನಿಸಿಬಿಟ್ಟಿತು. ಇದಾದ ನಂತರ ಸಹಜವಾಗಿಯೇ ಇಂಥಾ ದುರ್ಘಟನೆಯ ಹಿನ್ನಲೆ, ನಡೆಯುತ್ತಿರುವ ಪ್ರದೆಶಗಳ ಕುರಿತು ಮಾಹಿತಿ ಪಡೆಯಬೇಕೆಂದೆನ್ನಿಸಿತು. ಎಲ್ಲೆಲ್ಲಿ ಈ ಮರ್ಯಾದಾ ಹತ್ಯೆ ನಡೆದಿದೆ/ನಡೆಯುತ್ತಿದೆ ಎಂದು ಸ್ವಲ್ಪ ಹುಡುಕಾಡುತ್ತಿರುವಂತೆ ಇದರ ಆಳ, ಅಗಲ, ವಿಸ್ತಾರ ಜಗತ್ತಿನಾದ್ಯಂತ ಹರಡಿಕೊಂಡಿರುವುದು ಸ್ಪಷ್ಟವಾಗುತ್ತಾ ಹೋಯಿತು.
*HBV ಸರ್ವೆಯ ಪ್ರಕಾರ ಜಗತ್ತಿನಾದ್ಯಂತ ಪ್ರತಿವರುಷ ಸರಿಸುಮಾರು ೫,೦೦೦ ಹೆಣ್ಮಕ್ಕಳು ಮತ್ತು ಹುಡುಗಿಯರು ಈ ಮರ್ಯಾದಾ ಹತ್ಯೆಗೆ ಬಲಿಯಾಗುತ್ತಿದ್ದಾರೆ! ಇದು ವಿಶೇಷವಾಗಿ ಮಧ್ಯ ಪೂರ್ವ ಹಾಗೂ ದಕ್ಷಿಣ ಏಷ್ಯಾ ದೇಶಗಳಲ್ಲಿ ಹೆಚ್ಚು ಕಾಣಿಸುತ್ತಿದೆಯಂತೆ. ಇದರಲ್ಲಿ ಭಾರತ ಮತ್ತು ಪಾಕಿಸ್ತಾನ ದೇಶಗಳಲ್ಲಿ ಪ್ರತಿ ವರುಷ ತಲಾ ೧,೦೦೦ ಹತ್ಯೆಗಳಾಗುತ್ತಿದ್ದರೆ, ಇಂಗ್ಲೇಂಡಿನಲ್ಲೂ ವರುಷದಲ್ಲಿ ೧೨ ಇಂಥಾ ಹತ್ಯೆಗಳು ರಿಪೋರ್ಟ್ ಆಗುತ್ತಿರುತ್ತವಂತೆ. ಇನ್ನು ರಿಪೋರ್ಟೇ ಆಗದ ಪ್ರಕರಣಗಳು ಅದೆಷ್ಟು ಇರುತ್ತವೆಯೋ ಗೊತ್ತಿಲ್ಲ!  ಬಾಂಗ್ಲಾದೇಶ, ಭಾರತ, ಪಾಕಿಸ್ತಾನ, ಈಜಿಪ್ಟ್, ಇರಾನ್, ಇಸ್ರೇಲ್, ಜೋರ್ಡಾನ್, ಮೊರೊಕ್ಕೋ, ಯು.ಕೆ., ಅಮೇರಿಕಾ ಹೀಗೆ ಎಲ್ಲೆಡೆ ಈ ಒಂದು ದುರಂತ ಅವ್ಯಾಹತವಾಗಿ ನಡೆದುಹೋಗಿತ್ತಿದೆ.
*ಎಷ್ಟೋ ದೇಶಗಳಲ್ಲಿ ಇದನ್ನು ತಡೆಯಲು ಸಶಕ್ತ ಕಾನೂನೂ ಇಲ್ಲ, ಇದ್ದರೂ ಅದು ಸೂಕ್ತ ರೀತಿಯಲ್ಲಿ ಜಾರಿಗೆ ಬರುತ್ತಿಲ್ಲ. ಕೆಲವೆಡೆಯಂತೂ ಇದೊಂದು ಸಾಮಾನ್ಯ ವಿಷಯ!
*Iranian and Kurdish Rights Organization ಪ್ರಕಾರ ಯುರೋಪ್ ಮತ್ತು ಅಮೇರಿಕಾದಲ್ಲೂ ಮರ್ಯಾದ ಹತ್ಯೆಯ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿವೆಯಂತೆ!
* ಅಮೇರಿಕಾದ ೨೦೧೪ರ ಜನಾಂಗ ಸ್ಥಿತಿ (demographics) ವರದಿಯ ಪ್ರಕಾರ ಪ್ರತಿ ವರ್ಷ ಈ ದೇಶದಲ್ಲೇ ೨೩ ರಿಂದ ೨೭ ಮರ್ಯಾದಾ ಹತ್ಯೆಯ ಪ್ರಕರಣಗಳು ಕಾಣಿಸುತ್ತಿವೆಯಂತೆ! ಆದರೆ ಸಾಕಷ್ಟು ಮಾಹಿತಿ ದೊರಕದೇ ಇದರ ಬಗ್ಗೆ ಬೆಳಕಿಗೆ ಬರದೇ ಹೋಗುತ್ತಿದೆ ಎನ್ನಲಾಗಿದೆ.
*ಈ ಕೆಳಗಿನ ಲಿಂಕಿಗೆ ಹೋಗಿ ನೋಡಿದರೂ ಸಾಕು, ಜಗತ್ತಿನಾದ್ಯಂತ ಈ ಒಂದು ಮಾರಕ ಪಿಡುಗು ಹೇಗೆ ಹಬ್ಬಿ ಬಲಿತಿದೆ ಎಂದು ನಿಚ್ಚಳವಾಗುವುದು! (ಇನ್ನೂ ಕೆಲವು ಕೊಂಡಿಗಳನ್ನು ಕೊನೆಯಲ್ಲಿ ನೀಡಿದ್ದೇನೆ.)

ಭಾರತದಲ್ಲಿ ಮರ್ಯಾದಾ ಹತ್ಯೆ:-
ಭಾರತದಲ್ಲಿ ಇದು ಮತ್ತೆಮತ್ತೆ ಕೇಳಿಬರುತ್ತಿರುವ, ಕಂಡು ಬರುತ್ತಿರುವ ಹೇಯ ಕೃತ್ಯವಾಗಿದೆ. ವಿಶೇಷವಾಗಿ ಹರ್ಯಾಣ, ರಾಜಸ್ಥಾನ, ಉತ್ತರ ಪ್ರದೇಶ, ಬಿಹಾರ ರಾಜ್ಯಗಳಲ್ಲಿ ಗಣನೀಯವಾಗಿ ಹೆಚ್ಚಿವೆ. ಹರ್ಯಾಣದಲ್ಲಿ ಬಲಶಾಲಿಯಾಗಿರುವುದೇ ಅಲ್ಲಿಯ ‘ಖಾಪ್’ ಪಂಚಾಯಿತಿ! ಇಲ್ಲಿ ಕೋರ್ಟು, ಪೋಲೀಸ್ಟೇಶನ್ ಯಾವುದೂ ನಡೆಯುವುದಿಲ್ಲ ಎಂದು ಓದಿರುವೆ. ಮರ್ಯಾದಾ ಹತ್ಯೆಗೆ, ಹೆಣ್ಮಕ್ಕಳ ಹಕ್ಕು ಚ್ಯುತಿಗೆ ಈ ಖಾಪ್ ಪಂಚಾಯಿತಿಯ ಅಂಧಾ ಕಾನೂನೇ ಕಾರಣ. ನಮ್ಮ ಸುಪ್ರೀಂ ಕೋರ್ಟೇ ಇಂಥಾ ಪಂಚಾಯಿತಿಗಳನ್ನು ತೆಗೆದುಹಾಕಬೇಕೆಂದು ಅಲ್ಲಿನ ಎಸ್ಪಿಗಳಿಗೆ ಮಾಹಿತಿ ನೀಡಿದ್ದರೂ ಅವರ ರಾಜ್ಯಭಾರ ನಿಂತಂತಿಲ್ಲ. ಅವರ ಪ್ರಕಾರ ಸರ್ವೋಚ್ಚ ನ್ಯಾಯಾಲಯಕ್ಕೇ ಸರಿಯಾದ ನ್ಯಾಯ ಗೊತ್ತಿಲ್ಲ... ಅವರೇ ಸರಿ ಎಂಬಂತೇ ಧಿಮಾಕು ತೋರುವ ಹೇಳಿಕೆ ನೀಡಿದ್ದರು. ‘ಖಾಪ್’ ಪಂಚಾಯತಿಯ ದೌರ್ಜನ್ಯದ ವಿರುದ್ಧ ಸಿಡಿದೇಳುವ, ಜನರಲ್ಲಿ ಜಾಗೃತಿ ಮೂಡಿಸುವ ಅನೇಕ ಚಲನಚಿತ್ರಗಳು ಬಂದಿವೆ.
ಉದಾಹರಣೆಗೆ : ಹಿಂದಿಯ “ಖಾಪ್” ಎಂಬ ಹೆಸರನಿದೇ ಚಲನಚಿತ್ರ.
ಮದುವೆ ಎಂಬುದು ಎರಡು ಕುಟುಂಬಗಳ ನಡುವಿನ ಸುಂದರ ಬಂಧ, ಎರಡೂ ಕಡೆಯವರ ಅದರಲ್ಲೂ ವಿಶೇಷವಾಗಿ ಹೆತ್ತವರ ಸಮ್ಮತಿ ಇದ್ದರೆ ಅದಕ್ಕೊಂದು ಮೆರುಗು, ಹೆಚ್ಚು ಸಾಮಾಜಿಕ ಭದ್ರತೆ ದೊರಕುತ್ತದೆ, ಹೀಗಾಗಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂಬುದನ್ನೆಲ್ಲಾ ಒಪ್ಪೋಣ. ಆದರೆ ಎಷ್ಟೋಸಲ ಹೆತ್ತವರಿಗೆ ತಮ್ಮ ಮಕ್ಕಳ ಒಳಿತು ಕೆಡುಕು ತಮಗಿಂತ ಚೆನ್ನಾಗಿ ಬಲ್ಲವರು ಯಾರೂ ಇಲ್ಲ ಎಂಬ ಭ್ರಮೆ ಇದ್ದಿರುತ್ತದೆ. ತಮ್ಮ ಮಕ್ಕಳೂ ತಮ್ಮಷ್ಟೇ ಅವರ ಬದುಕನ್ನು ಇರ್ಧರಿಸುವ ಹಕ್ಕುಳ್ಳುವರು, ಅವರೂ ತಿಳುವಳಿಕೆ ಹೊಂದಿರುತ್ತಾರೆ ಎಂಬುದನ್ನು ಮರೆತುಬಿಡುವರು. ಅವರ ಇಷ್ಟವನ್ನರಿಯದೇ ತಮ್ಮ ದೃಷ್ಟಿಯಲ್ಲಿ ಸೂಕ್ತ ಎನ್ನಿಸುವ ಕಡೆಗೆ ಒತ್ತಾಯದಿಂದ ಮದುವೆಮಾಡಿಸಲು ನೋಡುವರು. ಹೆಚ್ಚಿನ ಸಮಯದಲ್ಲಿ ಆರ್ಥಿಕ ಅಸಮಾನತೆ, ಜಾತಿ ಅಸಮಾನತೆಯೇ ಇದಕ್ಕೆ ಮೂಲಕಾರಣವಾಗಿರುತ್ತದೆ. ಆದರೆ, ಪರಸ್ಪರರಲ್ಲಿ ಪ್ರೀತಿ, ವಿಶ್ವಾಸ, ಹೊಂದಾಣಿಕೆ ಇದ್ದರೆ ಎಲ್ಲದರೂ ಹೊಂದಾಣಿಕೆ ಸಾಧ್ಯ ಎನ್ನುವುದನ್ನೇ ಮರೆತುಬಿಡುತ್ತಾರೆ. ಇಷ್ಟಕ್ಕೂ ಸುದೀರ್ಘ ಬಾಳುವೆ ಮಾಡುವವರೇ ಅವರಿಬ್ಬರು ಎಂಬುದನ್ನು ಮರೆತು ತಾವು ಆಜೀವನ ಅವರಜೊತೆ ಇರುವವರು ಎಂದೇ ಭ್ರಮಿಸಿರುತ್ತಾರೆ. ಇದರ ಅರ್ಥ ಅಂತರ್ಜಾತೀಯ ವಿವಾಹಗಳೆಲ್ಲಾ ಯಶಸ್ವಿಯಾಗುತ್ತವೆ ಎಂದಲ್ಲ. ಹಾಗೆಯೇ ವಿಚ್ಛೇದನಗಳು ಸ್ವಜಾತೀಯ ವಿವಾಹಗಳಲ್ಲೂ ಸಾಕಷ್ಟು ಇರುತ್ತವೆ ಎಂಬುದನ್ನೂ ಮರೆಯದಿರೋಣ. ಯಾವುದೂ ಇದ ಮಿತ್ಥಂ ಎನ್ನುವಂತಿಲ್ಲ. ಹೀಗಿರುವಾಗ ತಮ್ಮ ಜಾತಿಯಲ್ಲ ಎಂದೋ, ತಮಗಿಂತ ಹಣಕಾಸಿನಲ್ಲಿ ದುರ್ಬಲರಾಗಿದ್ದಾರೆಂದೋ ತುಚ್ಛೀಕರಿಸುವುದು, ಹೀಗಳೆಯುವುದು, ತಿರಸ್ಕರಿಸುವುದು – ಹೋಗಲಿ ಅದೆಲ್ಲಾ ಮಾಡಿ ಅವರನ್ನು ಅವರಷ್ಟಕ್ಕೆ ಬಿಟ್ಟರೂ ಪುಣ್ಯ ಬರುವುದೇನೋ! ತಮ್ಮ ಇಲ್ಲದ ಪ್ರತಿಷ್ಠೆ, ಇರದ ಮಾನದ ಉಳಿವಿಗಾಗಿ ಕೊಲ್ಲಿಸುವಷ್ಟು ಕ್ರೌರ್ಯಕ್ಕೆ ಹೋಗುತ್ತಾರಲ್ಲ ಅದೆಂಥಾ ಮರ್ಯಾದೆ ಇವರದಪ್ಪಾ ಎಂದೆನಿಸಿಬಿಡುತ್ತದೆ!
ಪ್ರಸ್ತುತ ಪ್ರಕರಣವನ್ನೇ ತೆಗೆದುಕೊಂಡರೆ, ತೆಲಂಗಾಣದ ಅಮೃತ ಮತ್ತು ಪ್ರಣಯ್ ಜೋಡಿಯನ್ನು ಬೇರ್ಪಡಿಸಿ, ಗರ್ಭಿಣಿಯಾಗಿರುವ ಮಗಳ ಗಂಡನನ್ನೇ ಕೊಲ್ಲಿಸಿ ಈಗ ಪೂಲೀಸರ ಕಸ್ಟಡಿಯಲ್ಲಿರುವ ಅವಳ ತಂದೆಯ ಮರ್ಯಾದೆ, ಘನತೆ ಹೆಚ್ಚಾಯಿತೇ?! ಹುಟ್ಟಿನಿಂದ ಬೆಳೆಯುವವರೆಗೂ ಮುದ್ದಿನಿಂದ ಸಾಕಿದ ಮಕ್ಕಳನ್ನೇ ತರಿಯಲು ಅವರು ಬಲಿಗಾಗಿ ತಂದು ಸಾಕಿದ ಕುರಿ, ಕೋಣ, ಪ್ರಾಣಿಗಳಲ್ಲ ಅಲ್ಲವೇ? ಅಥವಾ ಇಂಥಾ ಹೆತ್ತವರಿಗೆ ಮಕ್ಕಳೆಂದರೆ ಅಷ್ಟೇಯೋ ಎಂಬುದೇ ಗೊತ್ತಾಗುತ್ತಿಲ್ಲ!
ಇನ್ನು ಈ ಮರ್ಯಾದಾ ಹತ್ಯೆಯನ್ನು ಕೇವಲ ತಂದೆಯೋ, ಚಿಕ್ಕಪ್ಪನೋ ಮಾಡಿಸುತ್ತಾರೆಂದುಕೊಳ್ಳಬೇಡಿ. ಸ್ವಂತ ತಾಯಿ, ಅಜ್ಜಿಯೂ ಮಾಡಿಸಬಲ್ಲರು! ಉದಾಹರಣೆಗೆ ಲಾಹೋರಿನ ಝೀನತ್ ಎಂಬ ಹದಿನೆಂಟರ ಹರೆಯದ ಮಗಳನ್ನು ಅವಳ ಸ್ವಂತ ತಾಯಿ ಪರ್ವೀನ್ ರಫೀಕ್ ಎಂಬಾಕೆ ಸಜೀವ ದಹನ ಮಾಡಿದ್ದಳು. ಇದಕ್ಕೆ ಕಾರಣ ಮಗಳು ತನ್ನಿಚ್ಛೆಯಂತೇ ಮದುವೆಯಾಗದೇ ತನ್ನ ಬಾಲ್ಯದ ಗೆಳೆಯನನ್ನು ವರಿಸಿದ್ದೇ ಆಗಿತ್ತಂತೆ! ಬಿಹಾರದಲ್ಲಿ, ಹರ್ಯಾಣದಲ್ಲಿ, ಕರ್ನಾಟಕದಲ್ಲಿ ಹೀಗೆ ಎಗ್ಗಿಲ್ಲದೇ ಎಲ್ಲೆಡೆಯೂ ಇಂಥ ಹತ್ಯೆಗಳು ಆಗುತ್ತಲೇ ಇವೆ. ಎಷ್ಟೋ ಬೆಳಕಿಗೇ ಬರುವುದಿಲ್ಲ! ಈ ರೀತಿ ಇಂಥಾ ಅನೇಕಾನೇಕ ಪ್ರಕರಣಗಳು ಎಲ್ಲೆಡೆಯೂ ಹೆಚ್ಚುತ್ತಿರುವುದು ದುರದೃಷ್ಟಕರ ಮತ್ತು ಖೇದನೀಯ ಸಂಗತಿ.

ಮರ್ಯಾದಾ ಹತ್ಯೆಗೆ ಪ್ರಮುಖ ಕಾರಣಗಳು :-

ಮೊತ್ತಮೊದಲ ಕಾರಣವೇ ಸ್ವಪ್ರತಿಷ್ಠೆ, ಮೂಢತೆ ಮತ್ತು ದುರಹಂಕಾರದ ಪರಾಕಷ್ಠೆ.
ಇದರ ನಂತರ… (ಇದು ನಾನು ಅಲ್ಲಲ್ಲಿ ಓದಿದ, ಅನೇಕ ವರ್ಷಗಳಿಂದ ಕೇಳಿದ ಘಟನೆಗಳನ್ನಾಧರಿಸಿ ವಿಂಗಡಿಸುತ್ತಿರುವುದು…)
೧) ಜಾತೀಯತೆ(ಸ್ವಜಾತಿಯಲ್ಲೇ ಮೇಲ್ಜಾತಿ, ಕೀಳ್ಜಾತಿಯೆಂದು ಅಥವಾ ಅನ್ಯಜಾತಿಯವರೆಂದು)
೨) ಸಲಿಂಗಕಾಮ (ಸಲಿಂಗಕಾಮಿ ಎಂದಾಕ್ಷಣ ಆತ/ಆಕೆ ತಮ್ಮ ಮನೆತನಕ್ಕೆ ಕುಂದು ಎಂದು ಕೊಂದು ಬಿಟ್ಟಿರುವ ಅನೇಕ ಪ್ರಕರಣಗಳಿವೆ)
೩) ಅನೈತಿಕ ಸಂಬಂಧದ ನೆಪದಲ್ಲಿ (ವಿವಾಹೇತರ ಅಥವಾ ವಿವಾಹ ಪೂರ್ವದ್ದು)
೪) ಹೆಣ್ಣೆಂದರೆ ಸದಾ ತಮ್ಮ ಅಡಿಯಾಳು ಎಂದೇ ಭಾವಿಸಿಕೊಂಡು ಬಂದಿರುವ ದುಷ್ಟ ಮನಸ್ಥಿತಿ.
೫) ಆರ್ಥಿಕ ಅಸಮಾನತೆ (ತಮಗಿಂತ ಕಡಿಮೆ ದುಡ್ಡಿರವವರೆಂದೋ, ಬಡವರೆಂದೋ ತಾತ್ಸಾರದಲ್ಲಿ…)
೬) ವೈಯಕ್ತಿಕ ಅಥವಾ ಕೌಟುಂಬಿಕ ಕಲಹ/ದ್ವೇಷ (ಅಜ್ಜರ, ಪಿಜ್ಜರ ಕಾಲದ ಜಗಳದ ನೆಪದಲ್ಲಿ)
೭) ರಾಜಕೀಯ ಹಸ್ತಕ್ಷೇಪ, ಪಿತೂರಿ (ತನಗಾಗದ ಬಣದವರಿದ್ದರೆ ಅವರ ಕಡೆಯ ಹುಡುಗಿಯೋ/ಹುಡುಗನೋ ವಿರುದ್ಧ ಪಂಗಡದವರನ್ನು ಪ್ರೀತಿಸಿದ್ದು ತಿಳಿದುಬಂದರೆ, ಆ ಮನೆಯವರನ್ನು ಎತ್ತಿಕಟ್ಟಿ ಕೊಲ್ಲಿಸಿ ಅದನ್ನು ತಮ್ಮ ರಾಜಕೀಯಕ್ಕಾಗಿ ಬಳಸಿಕೊಳ್ಳುವ ಪ್ರಕರಣಗಳೂ ಹಲವು ಇರುತ್ತವೆ) ಹೀಗೆ ಕಾರಣಗಳು ಅನೇಕ.

ಪರಿಹಾರದ ಕುರಿತು ಒಂದು ಕಿರು ಚಿಂತನೆ :-

ಯಾವುದೇ ಸಮಸ್ಯೆಯಿರಲಿ ಅದನ್ನು ಕೇವಲ ಎದುರಿಟ್ಟು ಗೋಳಾಡುತ್ತಲೋ, ದೂರುತ್ತಲೋ ಇದ್ದುಬಿಟ್ಟರೆ ಪರಿಹಾರವೇನೂ ಸಿಗದು. ಖಂಡನೆಯ ಜೊತೆಗೆ ನಿವಾರಣೆಯೂ ಅತ್ಯಗತ್ಯ. ಕೊಲ್ಲುವುದಕ್ಕೆ ಪರಿಹಾರ ಮಾನವೀಯ ಸಂಸ್ಕಾರ ಬೆಳೆಸುವುದೊಂದೇ ಎನ್ನಿಸುತ್ತದೆ ನನಗೆ! ಈ ಸಮಸ್ಯೆಗೆ ಪರಿಹಾರ ತಕ್ಷಣಕ್ಕಂತೂ ಸಾಧ್ಯವಿಲ್ಲ. ಸಮಾಜದೊಳಗೆ ಆಳವಾಗಿ ಬೇರೂರಿರುವ ಈ ಮನಃಸ್ಥಿತಿಯನ್ನು ಬದಲಾಯಿಸುವ ಮನಸ್ಸು ನಾವು ಮಾಡಬೇಕಷ್ಟೇ. ಮುಂದಿನ ಪೀಳಿಗೆಯ ತಲೆಯಲ್ಲಿ ಕೌಟುಂಬಿಕ ಮರ್ಯಾದೆ, ಸ್ವಪ್ರತಿಷ್ಠೆ, ಮನೆತನದ ಗೌರವ ಎಲ್ಲದೂ ಇರುವುದು ನಮ್ಮ ಉತ್ತಮ ನಡತೆ, ಮೌಲ್ಯಯುತ ಬದುಕು ಹಾಗೂ ಜೀವನ ಕ್ರಮ ಹಾಗೂ ಸ್ವಾಭಿಮಾನದ ಬದುಕಿನಲ್ಲಿ… ಪರಸ್ಪರ ಕೊಲ್ಲದೇ ಸಹಬಾಳ್ವೆ ಮಾಡುವುದರ ಮೂಲಕ, ಎಲ್ಲರನ್ನೂ ಗೌರವಿಸುವುದರ ಮೂಲಕ, ನಮ್ಮ ಸಂಪ್ರದಾಯವನ್ನು ಘನತೆಯಿಂದ ಆಚರಿಸುತ್ತಲೇ ಮತ್ತೊಬ್ಬರ ಆಚರಣೆಯನ್ನೂ ಸಮ್ಮಾನಿಸುವುದರಲ್ಲಿ ಎಂಬ ಮನೋಭಾವವನ್ನು ಬೆಳೆಸುವುದರ ಮೂಲಕವಷ್ಟೇ ನಿಧಾನದಲ್ಲಿ ಇದನ್ನು ಪರಿಹಾರ ಮಾಡಬಹುದು. ಮೇಲು ಕೀಳು ಎನ್ನುವುದು ಹಣದಲ್ಲಾಗಲೀ, ಜಾತಿಯಲ್ಲಾಗಲೀ ಬರದೇ, ಗುಣ, ಸ್ವಭಾವದಲ್ಲಿ ಬರುವಂಥದ್ದು ಎನ್ನುವುದನ್ನು ತಿಳಿಸಿಕೊಡಬೇಕು. ಆದರೆ ಇಂಥ ಸಮಸ್ಯೆಗೆ ಪರಿಹಾರ ಏಕಪಕ್ಷೀಯವಾಗಂತೂ ಸಾಧ್ಯವಿಲ್ಲ. ಎಲ್ಲಾ ರೀತಿಯ ಜಾತಿ ಧರ್ಮಗಳಲ್ಲೂ ಆಗುತ್ತಾ ಹೋದರೆ ಮಾತ್ರ ಕ್ಷಿಪ್ರಗತಿಯಲ್ಲಿ ಬೆಳಕು ಕಾಣಬಹುದು. ಈಗಾಗುತ್ತಿರುವುದೆಲ್ಲಾ ತಾನು, ತಮ್ಮವರು ಶುದ್ಧರು, ಕ್ಷುದ್ರರೆಲ್ಲಾ ಎದುರಿನವರೇ ಎಂಬ ಅಲ್ಪಜ್ಞಾನ ಹಾಗೂ ಪಲಾಯನವಾದವೇ ಇದಕ್ಕೆ ಕಾರಣ. ಅಲ್ಲದೇ, ಅನಿಷ್ಟಕ್ಕೆಲ್ಲಾ ಶನೀಶ್ವರನೇ ಕಾರಣವೆಂಬಂತೇ ಎಂಥದ್ದೇ ದುರಂತ ಬರಲಿ, ವಿಪತ್ತು ಕಾಡಲಿ ಈ ದೇಶವನ್ನು, ರಾಜ್ಯವನ್ನು, ಜಿಲ್ಲೆಯನ್ನು, ಜಾತಿಯನ್ನು ನಿಂದನೆ ಮಾಡುವುದರಲ್ಲೇ ಕಾಲಹರಣಮಾಡಿದರೆ, ಮತ್ತಷ್ಟು ಬಿಗಡಾಯಿಸಿದಂತಾಗುವುದು ಅಷ್ಟೇ. ತಿವಿಯುವುದರಲ್ಲಿ, ಚುಚ್ಚುವುದರಲ್ಲಿ, ಕೆಡವುದರಲ್ಲಿ ಮೇಲೆತ್ತುವಿಕೆ, ಸುಧಾರಣೆ ಅಸಾಧ್ಯ. ಸುಧಾರಣೆ ಮಾಡುವುದಾದರೆ ನಮ್ಮ ಮನೆ-ಮನಗಳಲ್ಲಿ ಆರಂಭಿಸುವ. 
*ನಮ್ಮ ಮಕ್ಕಳಿಗೆ “There is no Honor in Killing”, ಮರ್ಯಾದೆ ಹೆಚ್ಚುವುದು ಅಮಾಯಕರನ್ನು ಕೊಲ್ಲುವುದರಲ್ಲಲ್ಲ, ಕಾಪಾಡುವುದರಲ್ಲಿ ಎಂಬುದನ್ನು ತಿಳಿಸೋಣ. ಇದೆಲ್ಲದರ ಜೊತೆಗೇ,
*ನೀನು ತೆಗೆದುಕೊಳ್ಳುವ ನಿರ್ಧಾರದ ಸಾಧಕ ಬಾಧಕಗಳ, ಕಷ್ಟ, ಸುಖಗಳ ಚಿಂತನೆಯೂ ನಿನ್ನ ಹಕ್ಕು, ಜವಾಬ್ದಾರಿ ಎನ್ನುವುದನ್ನೂ ತಿಳಿಸುತ್ತಾ ಹೋಗೋಣ. ಒಳಿತು ಕೆಡುಕು ಇದಾಗಿದ್ದರಬಹುದೇ ಎಂದು ಚರ್ಚಿಸುತ್ತಾ ಹೋಗೋಣ. ಅವರ ಜೊತೆಗೆ ನಿರ್ಧಾರ ಮಾಡೋಣ. 
*ಎಲ್ಲಕ್ಕಿಂತ ಮುಖ್ಯವಾಗಿ ಗಂಡು ಮಕ್ಕಳಿಗೆ ಮನೆಯ ಹೆಣ್ಮಕ್ಕಳನ್ನು ಗೌರವಿಸುವ, ಪ್ರೀತಿಸುವ, ಅವರು ತಮಗೆ ಸಮಾನರೆಂದು ತಿಳಿಯುವ ವಿವೇಕವನ್ನು ವಿನಮ್ರತೆಯನ್ನು ಬೆಳೆಸಿದರೂ ಸಾಕು. ಇಂಥಾ ಹತ್ಯೆಯ ಜೊತೆಗೆ ಅತ್ಯಾಚಾರದಂಥ ಪಿಡುಗೂ ಕಡಿಮೆಯಾಗುತ್ತಾ ಹೋಗುವುದು. 
*ಇನ್ನು ಅವರೇನಾದರೂ ತಾವು ತೆಗೆದುಕೊಂಡ ನಿರ್ಧಾರದಲ್ಲಿ (ಯಾವುದೇ ಇರಲಿ) ಅಪ್ಪಿತಪ್ಪಿ ಎಡವಿದಾಗ ಸಾಧ್ಯವಾದಷ್ಟು ಸಾಥ್ ಕೊಡಿ. ಅದೂ ಸಾಧ್ಯವಾಗದಿದ್ದರೆ ಸುಮ್ಮನಿದ್ದು ಬಿಡಿ. ಎಡವಿದಾಗಲೇ ಬದುಕು ತೆರೆದುಕೊಳ್ಳುವುದು. ಅಲ್ಲಿಂದ ಪಾಠ ಕಲಿತರೇ ಬೆಳೆಯಲಾಗುವುದು. ಕಲಿಯದಿದ್ದರೆ ಮತ್ತೆಮತ್ತೆ ಕಲಿಸಲು ಬದುಕಂತೂ ಜೊತೆಗಿದ್ದೇ ಇರುತ್ತದೆ. 
ಈರೀತಿ, ನಮ್ಮ ಮಕ್ಕಳಿಂದ, ಮುಂದಿನ ಪೀಳಿಗೆಯಿಂದಲಾದರೂ ಮರ್ಯಾದಾ ಹತ್ಯೆಯಂಥ ಸಾಮಾಜಿಕ ದುರಂತ ನಿಲ್ಲುವಂತಾಗಲಿ ಎಂದೇ ಹಾರೈಸೋಣ, ಪ್ರಯತ್ನಿಸೋಣ.
ಸೂಚನೆ:- ಈ ಕುರಿತು ಹೆಚ್ಚಿನ ಮಾಹಿತಿ ನೀಡುವ ಕೆಲವು ಅಂತರ್ಜಾಲ ಕೊಂಡಿಗಳು ಇಲ್ಲಿವೆ. ಜಗತ್ತಿನಲ್ಲಿ ಮತ್ತು ನಮ್ಮಲ್ಲಿ ನಡೆದಿರುವ ಕೆಲವು ಪ್ರಕರಣಗಳ ವಿವರಗಳೂ ಇವೆ. ನೀವೂ ಹುಡುಕಾಡಿದರೆ ಮತ್ತೂ ಹೆಚ್ಚಿನ ಮಾಹಿತಿಗಳು ಸಿಗಬಹುದು. ಪ್ರಸ್ತುತ ಲೇಖನವನ್ನೂ ನಾನು ಅಂತರ್ಜಾಲದ ಮಾಹಿತಿಗಳನ್ನಾಧರಿಸಿಯೇ ಬರೆದಿರುವುದು.

~ತೇಜಸ್ವಿನಿ ಹೆಗಡೆ