ಭಾನುವಾರ, ಜುಲೈ 5, 2026

ಅವ್ವರಸಿಯ ಸಾರ್ಥಕ ಬದುಕಿನ ಅನಾವರಣ

 

ಬಾಲ್ಯದಲ್ಲಿ ಶಾಲಾದಿನಗಳಲ್ಲಿ ನಡೆಯುತ್ತಿದ್ದ ಛದ್ಮವೇಷ ಸ್ಪರ್ಧೆಯಲ್ಲಿ ಹಲವು ಹೆಣ್ಮಕ್ಕಳು ಹಾಕುತ್ತಿದ್ದುದು ಕಿತ್ತೂರು ರಾಣಿ ಚೆನ್ನಮ್ಮ, ಉಳ್ಳಾಲದ ಅಬ್ಬಕ್ಕ ರಾಣಿ, ಒನಕೆ ಓಬವ್ವ, ಝಾನ್ಸಿ ರಾಣಿ ಲಕ್ಷ್ಮೀ ಬಾಯಿ - ಇವರುಗಳ ವೇಷವನ್ನೇ. ಹೀಗಾಗಿ ನಮಗೆಲ್ಲ ಕೆಚ್ಚೆದೆಯ ರಾಣಿಯರೆಂದರ ತಕ್ಷಣ ನೆನಪಿಗೆ ಬರುತ್ತಿದ್ದುದೇ ಇವರೆಲ್ಲರು. ಆದರೆ ಯುರೋಪಿನ ಕೆಲವು ಕುತ್ಸಿತ ಬುದ್ಧಿಯ ಇತಿಹಾಸಕಾರರು ಮತ್ತು ಓರ್ವ ಹೆಣ್ಣಿನ ಚಾರಿತ್ರ್ಯವನ್ನು ಪ್ರಶ್ನಿಸಿದ ತಕ್ಷಣ ಅದನ್ನೇ ಶಿರಸಾ ನಂಬಿ ಮೂಲೆಗುಂಪಾಗಿಸುವ ಪುರುಷಪ್ರಧಾನ ವ್ಯವಸ್ಥೆಯ ದೆಸಿಯಿಂದಾಗಿ ಮೇಲೆ ಉಲ್ಲಾಖಿಸಿದ ಎಲ್ಲ ಮಹಾನ್ ರಾಣಿಯರ ಸಾಲಿಗೆ ನಿಲ್ಲುವ, ಅದಕ್ಕಿಂತಲೂ ತುಸು ಹೆಚ್ಚೇ ಸ್ಥಾನ ಪಡೆಯಬಹುದಾದ ಸಾಧ್ಯತೆಯಿದ್ದ ಗೇರುಸೊಪ್ಪೆಯ ರಾಣಿ ಚೆನ್ನಭೈರಾದೇವಿಯ ಯಶೋಗಾಥೆಯನ್ನು ಕರುನಾಡಿನ ಜನತೆಯಿಂದಲೇ ಮುಚ್ಚಿಡಲಾಯಿತು! ಮಕ್ಕಳ ಪಠ್ಯದಲ್ಲಿ, ಕಥೆ-ನಾಟಕ-ಲೇಖನಗಳಲ್ಲಿ ರಾಜಾಜಿಸಬೇಕಾಗಿದ್ದ ಧೀರ, ಧೀಮಂತ, ಜನರಿಗಾಗಿಯೇ ತನ್ನ ಸುದೀರ್ಘ ಬದುಕನ್ನೇ ಮುಡಿಪಾಗಿಟ್ಟ ನಗಿರೆಯ ರಾಣಿಯನ್ನು ದುಷ್ಟ ಬುದ್ಧಿಯೋರ್ವನ ಅಪಪ್ರಚಾರದ ಕಾರಣದಿಂದ ಮೂಲೆಗುಂಪಾಗಿಸಿಬಿಟ್ಟರು. ಇದಕ್ಕೆ ಕಾರಣ ಹಲವು. ವೈವಾಹಿಕ ಬದುಕನ್ನಪ್ಪದೇ, ಯಾವುದೇ ಸಂತಾನ ಹೊಂದದೇ ವಿರಕ್ತಿಯನ್ನೇ ಹೊದ್ದು, ಕೇವಲ ತನ್ನ ರಾಜ್ಯ, ಪ್ರಜೆಗಳ ಹಿತಾಸಕ್ತಿಗಾಗಿ ದುಡಿದು ಹಣ್ಣಾದ ಆ ಜೀವವನ್ನು ಗೌರವಿಸಲು ಕಾರಣ ಸಿಕ್ಕಿರಲಿಕ್ಕಿಲ್ಲ! ಯಾವುದೇ ಶಾಸನ ಬರೆಸದೇ, ತಾನು ಕೊಟ್ಟ ದಾನ-ದತ್ತಿ, ಮಾಡಿಸಿದ ಅಭಿವೃದ್ಧಿಗೆ ಯಾವ ಪುರಾವೆಯನ್ನಿಡಲು ಹೋಗದೇ ಎಲ್ಲವೂ ದೇವರ ಇಚ್ಛೆ ಎಂದು ನಿರ್ಲಿಪ್ತಳಾಗಿ ಬದುಕಿನ ಸಾಳುವ ವಂಶದ ಕೊನೆಯ ಕೊಂಡಿಯಾದ ಈ ರಾಣಿಯ ಕುರಿತು ಅಸಡ್ಡೆ ಬೆಳೆದಿರಬಹುದು! ಆದರೆ ತಡವಾಗಿಯಾದರೂ ಸರಿ, ಇಂದು ಈ ಒಂದು ಸಮಗ್ರ ಕಥನವನ್ನೋದಿದ ಮುಗಿಸಿದಾಗ ನನ್ನ ಮನಸ್ಸು ಆರ್ದ್ರಗೊಂಡಿತು. ಹೀಗಾಗಿ, ‘ಚೆನ್ನಭೈರಾದೇವಿ’ ಎಂಬ ಈ ಒಂದು ಅಪೂರ್ವ ಕೃತಿಯನ್ನು ರಚಿಸಿ, ಆ ಮೂಲಕ ನಮಗೆ ಮತ್ತು ಮುಂಬರುವ ಪೀಳಿಗೆಗೆ ಒಂದು ಮಹಾನ್ ವ್ಯಕ್ತಿಯನ್ನು ಸಶಕ್ತವಾಗಿ ಪರಿಚಿಯಿಸಿದ್ದಕ್ಕೆ ಲೇಖಕರಾದ ಡಾ. ಗನಾನ ಶರ್ಮ ಅವರಿಗೆ ಅನಂತ ಧನ್ಯವಾದಗಳು. ಅವರೇ ಹೇಳಿರುವಂತೆ ಇದು ಕೇವಲ ಓರ್ವ ರಾಣಿಯ ಕಥೆ ಮಾತ್ರವಲ್ಲ, ಹೆಣ್ಣೋರ್ವಳ ಬದುಕಿನ ಹಲವು ಮಗ್ಗಲುಗಳನ್ನು ಪರಿಚಯಿಸುವ ಕಾದಂಬರಿ.   

ಯಾರು ಈ ಚೆನ್ನಭೈರಾದೇವಿ?

 1552ರ ಸುಮಾರಿಗೆ ಪಟ್ಟವನ್ನೇರಿ, ಸುಮಾರು ಐವತ್ತಾರು ವರ್ಷಗಳ ಕಾಲ ಹೈವ, ಕೊಂಕಣ ತುಳುನಾಡುಗಳ ಮಹಾಮಂಡಳೇಶ್ವರಿಯಾಗಿ ಮೆರೆದವಳು. ಪೋರ್ಚುಗೀಸರಿಂದಲೇ ‘ರೈನಾ ದ ಪಿಮೆಂಟಾ’ ಎಂದು ಕರೆಸಿಕೊಂಡು, ತನ್ನ ಮುತ್ಸದ್ದಿತನ, ಚತುರತೆ, ಕುಶಾಗ್ರಮತಿ, ಧೈರ್ಯದಿಂದ ಪೋರ್ಚುಗೀಸರನ್ನೇ ಹಿಮ್ಮೆಟ್ಟಿಸಿದವಳು. ಎಂತಹ ಕಠಿಣ ಪರಿಸ್ಥಿತಿಯಲ್ಲೂ ತನ್ನ ಆದರ್ಶ, ನಿಷ್ಠೆಯನ್ನು ಬಿಟ್ಟವಳಲ್ಲ. ಬದುಕು ಅವಳಿಗೆ ಕಲ್ಲು-ಮುಳ್ಳಿನ ಹಾಸಿಗೆಯಷ್ಟೇ ಕಠಿಣವಾಗಿತ್ತು. ಆದರೆ ಆಕೆ ಅದನ್ನೇ ಬಗ್ಗಿಸಿ ಪ್ರಜೆಗಳಿಗೆ ಬದುಕನ್ನು ಸರಳಗೊಳಿಸಿದವಳು. "ಬದುಕು ಚೆನ್ನಭೈರಾದೇವಿಗೆ ಅತ್ಯುತ್ತಮವಾದದ್ದನ್ನು ಕೊಟ್ಟಿತ್ತೋ ಇಲ್ಲವೋ ಆದರೆ ಅವಳಂತೂ ಪ್ರಜೆಗಳಿಗೆ ಅತ್ಯುತ್ತಮ ಬದುಕನ್ನು ಕಟ್ಟಿಕೊಟ್ಟಿದ್ದಳು" - ಕಾದಂಬರಿಯಲ್ಲೊಂದೆಡೆ ಬರುವ ಈ ಸಾಲು ಅಕ್ಷರಶಃ ಅವಳಿಗೊಪ್ಪುವಂಥದ್ದು. ಅಂತಹ ಧೀಮಂತ ವ್ಯಕ್ತಿತ್ವಕ್ಕೆ ಅವಳದೇ ಸೋದರಮಾವ ಕೃಷ್ಣದೇವರಸ ತನ್ನ ಸ್ವಾರ್ಥಕ್ಕಾಗಿ, ಮತ್ಸರದಿಂದ ಅವಳ ಬೆಂಗಾವಲಿನ ಗೊಂಡನಾಯಕನ ಜೊತೆಗೆ ಅವಳ ಅನೈತಿಕ ಸಂಬಂಧದ ಪುಕಾರನ್ನು ಹಬ್ಬಿಸಿದ. ಮುಂದೆ ಅವಳಿಂದ ಸೋತು ಸುಣ್ಣವಾಗಿದ್ದ  ಪೋರ್ಚುಗೀಸರ ಸೇಡನ್ನು ತೀರಿಸಲೋ ಎಂಬಂತೆ ಯುರೋಪಿನ ಕೆಲವು ಇತಿಹಾಸಕರರು ಅದನ್ನೇ ಎತ್ತಿಹಿಡಿದರು! ವಿದೇಶಿ ಇತಿಹಾಸ ತಜ್ಞರು ಹೇಳಿದ್ದೆ ಪರಮ ಐತಿಹಾಸಿಕ ಸತ್ಯವೆಂದು ಬಗೆವ ನಮ್ಮವರೂ ಅದನ್ನೇ ನಂಬಿ ಅವಳ ಅಪಾರ ಕೊಡುಗೆ, ಹೋರಾಟ, ಹೃದಯ ವೈಶಾಲ್ಯತೆ, ರಾಜನೀತಿಯ ಮುತ್ಸದ್ದಿತನ ಎಲ್ಲವನ್ನೂ ಬದಿಗೆ ತಳ್ಳಿ, ಭವಿಷ್ಯದಲ್ಲಿ ಎಲ್ಲರೂ ವಿಶೇಷವಾಗಿ ಕರ್ನಾಟಕದವರು ಸದಾ ನೆನಪಿನಲ್ಲಿಡಬೇಕಾದಂಥ ಅದ್ಭುತ ವ್ಯಕ್ತಿಯನ್ನು ಸಂಪೂರ್ಣ ಕತ್ತಲಿಗೆ ನೂಕಿಬಿಟ್ಟರು!

ಬಂಗಾಲದ ಮೈತ್ರಾದೇವಿ ಅವರ ‘ನ ಹನ್ಯತೆ’ ಎಂಬ ಆತ್ಮಚರಿತ್ರೆಯಲ್ಲೊಂದು ಸಾಲು ಬರುತ್ತದೆ... "ಅಪ್ರಿಯವಾದ ಸತ್ಯವನ್ನು ಒಪ್ಪಿಕೊಳ್ಳಲು ಮನಸ್ಸನ್ನು ಸಿದ್ಧಪಡಿಸಿಕೊಳ್ಳಬಹುದು. ಆದರೆ ಅಪ್ರಿಯವಾದ ಸುಳ್ಳನ್ನು ಎದುರಿಸುವ ಬಗೆಯಾದರೂ ಹೇಗೆ?" - ಇದು ಅಕ್ಷರಶಃ ಗೇರುಸೊಪ್ಪೆಯ ಈ ರಾಣಿಗೂ ಅನ್ವಯಿಸುತ್ತದೆ. ತಾನಾಗೇ ಎಂದೂ ಯಾರ ಮೇಲೂ ದಂಡೆತ್ತಿ ಹೋಗದ ಈ ರಾಣಿ, ತನ್ನ ಮೇಲೆರಿಗಿದ ಯಾರನ್ನೂ ಸುಮ್ಮನೆ ಬಿಟ್ಟಿಲ್ಲ, ಸೋತಿಲ್ಲ ಎನ್ನುವುದನ್ನು ಈ ಕಾದಂಬರಿ ಎತ್ತಿ ತೋರಿದೆ.

ಇಷ್ಟಕ್ಕೂ ಹೆಣ್ಣನ್ನು ಹಣಿಯ ಬೇಕೆಂದರೆ ಯುದ್ಧದಲ್ಲಿ ಸೋಲಿಸಲೇಬೇಕೆಂದಿಲ್ಲವಲ್ಲ. ಒಂದು ಚಾರಿತ್ರ್ಯಹನನದ ಸುಳ್ಳಿನ ಕಿಡಿ ಸಾಕು! ಹಾಗೆ ನೋಡಿದರೆ ರಾಣಿ ಇಲ್ಲೂ ಸೋಲು ಕಂಡಿಲ್ಲ ಎಂದೇ ಹೇಳಬಹುದು. ತನ್ನ ಮೇಲೆ ಹೊರೆಸಿದ ಆಪಾದನೆಯನ್ನು ಮೆಟ್ಟಿ ಸೆಟೆದು ನಿಂತು ಬಾಯಿ ಮುಚ್ಚಿಸಿದವಳು.

ಆದರೆ ಕೊನೆಗೆ 75ರ ಹರೆಯದ (1606) ತನ್ನ ಮುಪ್ಪಿನಗಾಲದಲ್ಲಿ  ತನ್ನದೇ ನಿರ್ಲಿಪ್ತ, ಅಲಕ್ ನಿರಂಜನ್ ಭಾವನೆಯಿಂದ ಕೆಳದಿಯ ವೆಂಕಟಪ್ಪ ನಾಯಕನಿಗೆ ಸ್ವಯಂ ಶರಣಾಗಿ ಕೊನೆಗೆ ಸಲ್ಲೇಖನ ವೃತದ ಮೂಲಕ ದೇಹ ತ್ಯಜಿಸಿದ್ದು ಬಿಟ್ಟರೆ ಬಿಜಾಪುರ, ಪೋರ್ಚುಗೀಸ್, ಕೆಳದಿ - ಹೀಗೆ ಎಲ್ಲರನ್ನೂ ಹಿಮ್ಮೆಟ್ಟಿಸಿದ್ದ ಸಾಹಸಿ! 

ಭೈರಾದೇವಿಯ ಧರ್ಮ ಸಹಿಷ್ಣುತೆ

ತಾನು ನಂಬಿದ ಧರ್ಮ, ದೇವರ ಮೇಲೆ ನಿಶ್ಕಾಮ ಪ್ರೇಮ, ಶರಣಾಗತ ಭಾವ ಇದ್ದಾಗ ಇತರ ಎಲ್ಲ ಸಂಪ್ರದಾಯ, ಆಚಾರ, ವಿಚಾರ, ನಂಬಿಕೆಗಳ ಮೇಲೂ ಅದೇ ಅಭಿಮಾನ, ಶ್ರದ್ಧೆ ಇರುತ್ತದೆ ಎನ್ನುವುದಕ್ಕೇ ಈಕೆಯ ಎಲ್ಲ ಧಾರ್ಮಿಕ ಜೀರ್ಣೋದ್ಧಾರಗಳೇ ಸಾಕ್ಷಿ. ಜಿನ ಬಸದಿಗಳಷ್ಟೇ ದೇವಾಲಯಗಳ ಜೀರ್ಣೋದ್ಧಾರ ಮಾಡಿಸಿದವಳು. ಆದರೆ ಎಲ್ಲೂ ಇದು ತನ್ನ ಕೊಡುಗೆ ಎಂಬ ಲಿಪಿ, ಶಾಸನಗಳನ್ನು ಬರೆಸುವ ಕೊಡವೆಗೂ ಹೋಗದೇ ಇದೆಲ್ಲ ದೇವರ ದೇಣಿಗೆ ಎಂದುಬಿಟ್ಟಳು. ಬಹುಶಃ ಇದಕ್ಕೇ ಚರಿತ್ರೆಯೂ ಅವಳನ್ನು ಮರೆತುಬಿಟ್ಟಿತೇನೋ! ಕೇವಲ ಧರ್ಮೋದ್ಧಾರ ಮಾತ್ರವಲ್ಲ, ಪ್ರಜೆಗಳಿಗಾಗಿ ರಸ್ತೆ, ಕುಡಿವ ನೀರಿನ ಸರಬರಾಜು, ಸುಭದ್ರ ನೆಲೆ, ಆಯಾ ಕಾಲಕ್ಕೆ ತಕ್ಕುದಾದ ಬೆಳೆಯ ವ್ಯಾಪಾರಕ್ಕೆ ಪ್ರೋತ್ಸಾಹ - ಹೀಗೆ ಸಕಲ ರೀತಿಯಲ್ಲೂ ಏಳಿಗೆಗೆ ಶ್ರಮಿಸಿದವಳು.

ತನ್ನ ರಾಜ್ಯದ ಶಕ್ತಿ ಮತ್ತು ಬಲಹೀನತೆಯನ್ನು ಚೆನ್ನಾಗಿ ಅರಿತಿದ್ದ ಚೆನ್ನಭೈರಾದೇವಿ ಕಾಳುಮೆಣಸಿನ ವ್ಯಾಪಾರದ ಮೂಲಕ ಬೊಕ್ಕಸಕ್ಕೆ ಅಪಾರ ಧನರಾಶಿ ತುಂಬಿದರೆ, ಶಬಲೆಯಂತಹ ಗೂಢಚರ್ಯೆಯರನ್ನು ನಿರ್ಮಿಸಿ ದೇಶದೊಳಗಿನ ಗೆದ್ದಲುಗಳನ್ನು ಮಟ್ಟ ಹಾಕಿದವಳು. ಇವಳಂತಹ ರಾಣಿ ನನ್ನ ಕರ್ನಾಟಕವನ್ನಾಳಿದ್ದಳು ಅದೂ ನನ್ನ ಹುಟೂರಾದ ಉತ್ತನ ಕನ್ನಡದಲ್ಲೇ ಇದ್ದಳು ಎಂಬ ಭಾವವೇ ರೋಮಾಂಚನ ತರುವಂಥದ್ದು.

    
     ಪೂರ್ಚುಗೀಸರ ಕ್ರೌರ್ಯದ ಅನಾವರಣ

ವಲಸೆ ಎಂದರೆ ಕೇವಲ ಒಂದು ಸಮುದಾಯದ ಗುಳೆ ಅಲ್ಲ. ಒಂದು ಬೃಹತ್ ವೃಕ್ಷವನ್ನು ಬೇರು ಸಮೇತ ಕಿತ್ತು ಅದು ಬೆಳೆಯಲು ಅನುಕೂಲ ವಾತಾವರಣವಿರುವ ಪ್ರದೇಶದಿಂದ ಬಲವಂತದಿಂದ ತೆಗೆದು, ಪ್ರತಕೂಲ ಜಾಗವೊಂದಕ್ಕೆ ತಂದು ಹುಗಿವ ಪ್ರಯತ್ನ! ‘ಸ್ವಪ್ನ ಸಾರಸ್ವತ’ದಂಥ ಅದ್ಭುತ ಕಾದಂಬರಿಗಳು ಸಾರಸ್ವತರ ಕರುಣಾಜನಕ ವಲಸೆಯ ಕಥೆಯನ್ನು ಸ್ಪಷ್ಟವಾಗಿ ತೆರೆದಿಟ್ಟಿವೆ.

"ನಮ್ಮ ಮತಾಂತರ ಪ್ರಯತ್ನಗಳ ಹಿಂದಿರುವುದೂ ಇದೇ ಮನಃಸ್ಥಿತಿ. ನಾವು "ಇವ್ಯಾಂಜುಲಿಕ್" ಪಾದ್ರಿಗಳು ಕ್ರಿಸ್ತನಿಗಾಗಿ ಜೀವ ಮುಡಿಪಿಡುತ್ತೇವೋ ಇಲ್ಲವೋ, ಕ್ರಿಶ್ಚಿಯಾನಿಟಿಗಾಗಿ ಮುಡಿಪಿಡುತ್ತೇವೆ. ಕ್ರಿಶ್ಚಿಯಾನಿಟಿಗಾಗಿ ಯಾವ ಸಾಹಸಕ್ಕೂ ಸಿದ್ಧರಾಗುತ್ತೇವೆ. ನಮಗೆ ಮುಖ್ಯವಾಗಿರುವುದು ದೈವ ಶ್ರದ್ಧೆಯಲ್ಲ, ಧರ್ಮಶ್ರದ್ಧೆ. ಅದಕ್ಕಿಂತ ಮುಖ್ಯವಾಗಿರುವುದು ಸ್ವಾರ್ಥ. ನಾಳೆ ವಿಶ್ವವೆಲ್ಲ ಕ್ರಿಶ್ಚಯನ್ ಧರ್ಮವನ್ನಪ್ಪಿಕೊಂಡರೆ ನಮ್ಮ ಬದುಕಿಗೆ ಪೂರ್ಣ ಭದ್ರತೆ ದೊರೆಯುವುದೆಂಬ ಲೋಭ. ನನ್ನ ದೃಷ್ಟಿಯಲ್ಲಿ ಧರ್ಮವಿಸ್ತರಣೆಯ ಹಿಂದಿರುವುದೂ ನಮ್ಮ ದೇವರೇ ಮೇಲು ಎಂಬ ನಿರೂಪಿಸುವ ಹಠ. ಇದು ಏಕದೇವೋಪಾಸನೆಯ ದೌರ್ಬಲ್ಯ. ನಮಗೆ ಇರುವೊಬ್ಬ ದೇವರರೂ ಶ್ರೇಷ್ಠನೆಲ್ಲವೆಂದರೆ ನಾವು ಯಾರನ್ನು ಪೂಜಿಸಬೇಕು? ನಿಮ್ಮ ಜಿಂಟುಗಳಿಗೆ ಹಾಗಲ್ಲ. ಬಹುದೇವೋಪಾಸಕರಾದ ನಿಮಗೆ ದೇವರು ಒಬ್ಬನಲ್ಲ: ಕೋಟಿ ದೇವರನ್ನು ಸೃಷ್ಟಿಸಿಕೊಂಡು, ಸುಖವಾಗಿದ್ದೀರಿ. ನಿಮಗೆ ನೀರು ನೆಲ ಬಾನು ಬೆಟ್ಟ ಎಲ್ಲವೂ ದೇವರೇ. ಹಾಗಾಗಿ ನಿಮಗೆ ಒಬ್ಬ ದೇವರನ್ನು ಬಿಟ್ಟರೆ ಪೂಜಿಸಲು ಇನ್ನೊಬ್ಬನಿದ್ದಾನೆ. ನಿಮ್ಮದಲ್ಲದ ದೇವರನ್ನು ಒಪ್ಪಿಕೊಳ್ಳುವುದನ್ನೂ ಅಭ್ಯಾಸ ಮಾಡಿಕೊಂಡಿದ್ದೀರಿ." -ಕಾದಂಬರಿಯಲ್ಲಿ ಬರುವ ಬ್ರೂನೋ ಪಾದ್ರಿಯ ಈ ಮಾತುಗಳು ಎಲ್ಲ ಕಾಲಕ್ಕೂ ಎಲ್ಲ ಮತಗಳಿಗೂ ಅನ್ವಯಿಸುವಂತಿದೆ. ಇತಿಹಾಸದ ತಿಳಿವು ನಮ್ಮನ್ನು ರೊಚ್ಚಿಗೆಬ್ಬಿಸಬಾರದು ನಿಜ. ಆದರೆ ಅದು ಮತ್ತೆಮತ್ತೆ ಮರುಕಳಿಸದಿರುವ ಎಚ್ಚರಿಕೆಯನ್ನು ಹುಟ್ಟಿಸುವಂತಿರಬೇಕು. ಈ ನಿಟ್ಟಿನಲ್ಲಿ ಪರಕೀಯರ ದಾಳಿಗೆ ತುತ್ತಾಗುವವರ ಬವಣೆಯನ್ನು ಹಸಿಹಸಿಯಾಗಿ ಹರಡಿರುವ ಈ  ಕೃತಿ ಸಶಕ್ತವಾಗಿದೆ ಎನ್ನಬಹುದು. ಇನ್ನು, ಸರಿಸುಮಾರು ಅದೇ ಸಮಯದಲ್ಲಿ ಉತ್ತರ ಕನ್ನಡದ ಬಹುತೇಕ ಭಾಗವನ್ನು ಆಳುತ್ತಿದ್ದ ಗೇರುಸೊಪ್ಪೆ ರಾಣಿ ಚೆನ್ನಭೈರಾದೇವಿ ಹೇಗೆ ಆ ಗೋವೆಯ ಸಾರಸ್ವತ ವಲಸಿಗರಿಗೊಂದು ಘನತೆಯ ಬದುಕನ್ನು, ಸುಭದ್ರ ನೆಲೆಯನ್ನು ಒದಗಿಸದಳು ಎಂಬುದನ್ನೂ ಈ ಕಾದಂಬರಿ ತೆರೆದಿಡುತ್ತದೆ.

  ನಿಷ್ಕಾಮ ಪ್ರೀತಿಗೆ ವ್ಯಾಖ್ಯಾನ ಬರೆವ ಭೈರಾದೇವಿಯ ಗುರುಪುತ್ರ ಜಿನದತ್ತ

ಒಂದೆಡೆ ಕಾಮ, ಕ್ರೋಧ, ಮದ, ಮತ್ಸರಕ್ಕೊಳಗಾಗಿ ಸ್ವಂತ ಅಕ್ಕನ ಮಗಳ ಚಾರಿತ್ರ್ಯವನ್ನೇ ಹನನಗೊಳಿಸುವ ಸಾಳುವ ವಂಶದ ಕೃಷ್ಣದೇವರಸ, ಇನ್ನೊಂದೆಡೆ ದೇಹ ವಾಂಛೆ, ಮೋಹ, ಕಾಮ - ಇವೆಲ್ಲವುಗಳ ಗೊಡವೆಯಿಲ್ಲದೇ ಭೈರಾದೇವಿಯ ಅಕಳಂಕ ಮನಸ್ಸನ್ನು ಪ್ರೀತಿಸಿ ಅವಳ ಮತ್ತು ರಾಜ್ಯದ ಹಿತಾಸಕ್ತಿಗಾಗಿ ತನ್ನನ್ನೇ ಮುಡಿಪಾಗಿಟ್ಟ ಜಿನದತ್ತ! ಎರಡೂ ವೈರುಧ್ಯಗಳ ಮೂಲಕ ಮನುಷ್ಯನ ಮನೋ ವ್ಯಾಪಾರ ಮತ್ತು ಅವುಗಳಿಂದಾಗುವ ವಿನಾಶ ಮತ್ತು ಒಳಿತನ್ನು ಮನಮುಟ್ಟುವಂತೆ ಚಿತ್ರಿಸಲಾಗಿದೆ.

"ಸ್ವಂತದ್ದನ್ನಷ್ಟೇ ಪ್ರೀತಿಸಬೇಕು ಅಥವಾ ಪ್ರೀತಿಸುವುದೆಲ್ಲ ಸ್ವಂತವಾಗಬೇಕು ಎಂಬ ಸ್ವಾರ್ಥ ನನ್ನದಲ್ಲ. ಪ್ರೀತಿಯ ಅರ್ಥ ಬಯಸುವುದರಲ್ಲಿಲ್ಲ, ಪ್ರೀತಿಸುವುದರಲ್ಲಿದೆ, ಅಷ್ಟೇ. ಪ್ರೀತಿಯೊಂದು ಅನುಭವ. ಅದು ವ್ಯಾಖ್ಯಾನಕ್ಕೆ ಸಿಗುವ ಸಂಗತಿಯಲ್ಲ" ಎಂದಿರುವ ಜಿನದತ್ತನ ವೈಶಾಲ್ಯತೆ, ನಿಷ್ಕಾಮ ಮನಸ್ಸು ರಾಣಿಯಲ್ಲೂ ಇತ್ತು ಎಂಬುದು ಮನದಟ್ಟಾಗುತ್ತದೆ. ಅವಳು ತನ್ನ ರಾಜ್ಯವನ್ನು, ಪ್ರಜೆಗಳನ್ನು ಯಾವುದೇ ಪ್ರತಿಫಲನದ ಅಪೇಕ್ಷೆ, ನಿರೀಕ್ಷೆಗಳಿಲ್ಲದೇ ಪ್ರೀತಿಸಿದಳು. ಎಷ್ಟು ವೈರಾಗ್ಯಪೂರ್ಣ ಪ್ರೀತಿ ಅವಳದಾಗಿತ್ತೆಂದರೆ ತಾನು ಕೊಟ್ಟಿದ್ದು ತನ್ನ ದೇಣಿಗೆ ಅಲ್ಲ ಅವರ ಹಕ್ಕು ಎಂಬುದು ಅವಳ ನಿಲುವಾಗಿತ್ತು. ಬಹುಶಃ ಅವಳು ಪ್ರಜೆಗಳಿಂದ ಅದರಲ್ಲೂ ಕೆಲವು ಸೈನಾಧಿಕಾರಿಗಳಿಂದ ನಿಯತ್ತನ್ನೂ ನಿರೀಕ್ಷಿಸದೇ ಹೋಗಿದ್ದೇ ಅವಳ ಮೊದಲ ಹಾಗೂ ಅಂತಿಮ ಸೋಲಿಗೆ ಕಾರಣವಾಯ್ತೇನೋ.

ಜ್ವಾಲಾಮಾನಿಯ ಪ್ರಸ್ತಾಪ

ರಾಣಿ ಪ್ರತಿ ದಿವಸ ತನ್ನ ನಿವಾಸದಲ್ಲಿದ್ದ ಜ್ವಾಲಾಮಾಲಿನಿ ಮೂರ್ತಿಗೆ ನಮಸ್ಕರಿಸುತ್ತಿದ್ದಳೆಂಬುದನ್ನು ಕಾದಂಬರಿಯಲ್ಲಿ ಓದಿ ಬಹಳ ಕುತೂಹಲವಾಯ್ತು. ಹುಡುಕಿದಾಗ ಆಸಕ್ತಿಕರ ವಿಷಯಗಳು ದೊರಕಿದವು. ಜ್ವಾಲಾಮಾಲಿನಿ ಜೈನ ಧರ್ಮದ ಎಂಟನೇ ತೀರ್ಥಂಕರರಾದ ಚಂದ್ರಪ್ರಭ ಅವರ ರಕ್ಷಕ ದೇವತೆಯಾಗಿದ್ದವಳು. ಆರಂಭಿಕ ಮಧ್ಯಕಾಲೀನ ಕರ್ನಾಟಕದಲ್ಲಿ ಅತ್ಯಂತ ವ್ಯಾಪಕವಾಗಿ ಆರಾಧಿಸಲ್ಪಟ್ಟ ಯಕ್ಷಿಣಿಯರಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದ್ದಳು ಎಂಬ ಮಾಹಿತಿ ದೊರಕಿತು. ಜೈನಧರ್ಮದ ಆಚಾರ, ಸಂಪ್ರದಾಯ, ವೃತ-ನೇಮಗಳ ಅರ್ಥ, ಅವುಗಳ ಆಚರಣೆಯ ವಿಧಾನಗಳು, ಸಲ್ಲೇಖನ ವ್ರತದ ಮೂಲೋದ್ದೇಶ ಮತ್ತು ಅದನ್ನು ಪಡೆಯಲು ಇರಬೇಕಾದ ಅರ್ಹತೆಗಳು - ಹೀಗೆ ನಮಗೆ ಗೊತ್ತಿಲ್ಲದ ಒಂದು ಧರ್ಮಾಚರಣೆಯ ಸಮಗ್ರ ವಿವರಣೆಗಳನ್ನು  ಸಂಶೋಧಿಸಿ ಒದಗಿಸಿರುವ ಮಾಹಿತಿಪೂರ್ಣ ಕಾದಂಬರಿ ಇದು.

ಲೇಖಕರ ಅಗಾಧ ಸಂಶೋಧನಾತ್ಮಕ ವಿವರಣೆ:

ಕಾದಂಬರಿಯುದ್ದಕ್ಕೂ ಶ್ರೀಯುತ ಗಜಾನನ ಶರ್ಮ ಅವರು ಈ ಒಂದು ಐತಿಹಾಸಿಕ, ಜನಮಾನಸದಲ್ಲಿ ಜಾಗ ಪಡೆಯದಿರುವ ಕಥಾವಸ್ತುವನ್ನು ನಿರೂಪಿಸಲು ಎಷ್ಟೆಲ್ಲ ಸಂಶೋಧನೆ, ಅಧ್ಯಯಯನಗಳನ್ನು ಮಾಡಿದ್ದಾರೆ ಎಂಬುದಕ್ಕೆ ಕೊನೆಯಲ್ಲಿ ಕೊಟ್ಟ ಆಕರ ಗ್ರಂಥಗಳು ಮತ್ತು ಮೂಲಗಳ ವಿವರಣೆಯೇ ಸಾಕ್ಷಿ. ಅಲ್ಲದೇ ಆ ಕಾಲದ ಉಡುಪು, ಆಚಾರ-ವಿಚಾರ, ನೇಮ-ನಿಷ್ಠೆಗಳು, ಆಹಾರ-ವಿಹಾರ, ಮುಖ್ಯವಾಗಿ ಜಿನ ಪದ್ಧತಿಗಳನ್ನು ಆಮೂಲಾಗ್ರಹವಾಗಿ ಸಂಗ್ರಹಿಸಿ ನೀಡಲಾಗಿದೆ. ದಟ್ಟಕಾಡಿನಲ್ಲಿ ಚತುರತೆಯಿಂದ ಮಾಡುವ ಯುದ್ಧಗಳು, ಗೇರುಸೊಪ್ಪೆಯ ಘಾಟನ್ನು ಏರಲಾಗದೇ ಬುಸುಗುಡುವ ಕತ್ತೆಗಳನ್ನು ವೈರಿಗಳ, ದಾಳಿಕೋರರ ಬಾಣದಿಂದ ಪಾರುಮಾಡಲು ರಾಣಿ ಮಾಡುತ್ತಿದ್ದ ಚಾಣಾಕ್ಷ ಉಪಾಯಗಳನ್ನೋದಿ ಬೆರಗು ಮೂಡಿತು.  ಕರಿಮೆಣಸು, ಬಿಳಿಕಾಳು ಮೆಣಸಿನ ವ್ಯಾಪಾರದ ಚತುರತೆ, ಅದಕ್ಕಾಗಿ ಆಕೆ ಯಾವೆಲ್ಲ ಸೌಕರ್ಯ, ಸವಲತ್ತುಗಳನ್ನು ಜನರಿಗೆ ಹೇಗೆಲ್ಲ ಏರ್ಪಡಿಸಿದಳು ಎಂಬುದರ ಸ್ಪಷ್ಟ ನಿದರ್ಶನ ಸಿಗುತ್ತದೆ. ಮಧ್ಯಕಾಲದಲ್ಲಿ ಕರ್ನಾಟಕ ಅದರಲ್ಲೂ ಕರಾವಳಿ, ಮಲೆನಾಡಿನ ಜನಜೀವನ, ಮನೋವ್ಯಾಪಾರಗಳ ಅನಾವರಣ ನಮಗಾಗುತ್ತದೆ. ಪ್ರತಿ ಅಧ್ಯಾಯದಲ್ಲೂ ಲೇಖಕರ ಸಂಶೋಧನೆ, ಸೂಕ್ಷ್ಮ ನಿರ್ವಹಣೆ ಎದ್ದುಕಂಡು ಕಥೆಯ ಗಟ್ಟಿತನಕ್ಕೆ, ನೈಜತೆಗೆ ಇಂಬುಕೊಡುತ್ತದೆ.

ತನ್ನ ನಿಸ್ವಾರ್ಥ ಪ್ರಜಾಸೇವೆ, ಧೀಮಂತ ವ್ಯಕ್ತಿತ್ವದಿಂದ ಪ್ರಜೆಗಳಿಂದ ಪ್ರೀತಿಪೂರ್ವಕವಾಗಿ ‘ಅವ್ವರಸಿ’ ಎಂದು ಕರೆಸಿಕೊಂಡ ಚೆನ್ನಭೈರಾದೇವಿ, ಪಟ್ಟದಲ್ಲಿದ್ದರೂ ಪೀಠಕ್ಕಂಟಿಕೊಳ್ಳದೇ, ಅಕ್ಷರಶಃ ಪದ್ಮಪತ್ರದ ಮೇಲಿನ ಹನಿಬಿಂದುವಿನಂತೆ ಹೇಗೆ ಬದುಕಿದಳು. ಮಹಾಮಂಡಳೇಶ್ವರಿಯಾಗಿ, ಪಂಚಾಣುವ್ರತದ ಉಪದೇಶಪಡೆದು ಜಿನಪಾದ ಪೂಜಪರಳಾದ ಶ್ರಾವಕಿಯಾಗಿ, ಯಾರ ಹಂಗಿಗೂ ಒಳಗಾಗದೇ, ಯಾರಿಗೂ ಬಗ್ಗದೇ ಕೇವಲ ಪ್ರಜೆಗಳ ಪ್ರೀತ್ಯಾದರಗಳಿಗೆ ತಲೆಬಾಗಿ, ಸಲ್ಲೇಖನ ವ್ರತ ಕೈಗೊಂಡು ಜಿನಪಾದ ಸೇರಿದ ಓರ್ವ ಅಪೂರ್ವ ಜೀವಿಯ ಆತ್ಮಕಥನವಿದು. ಕಳಂಕದ ಸುಳ್ಳು ಎಷ್ಟೇ ಕಾಡ್ಗಿಚ್ಚಿನಂತೆ ಹಬ್ಬಿದರೂ, ಸತ್ಯದ ನಂದಾದೀಪ ಸದಾ ಬೆಳಗಿ ನಿಜದ ಪ್ರಭೆ ಎಂದಾದರೊಂದು ದಿನ ಹೊರಹೊಮ್ಮುತ್ತದೆ ಎಂಬುದಕ್ಕೆ "ಚೆನ್ನಭೈರಾದೇವಿ"ಯಂತಹ ಕಾದಂಬರಿಗಳು, ಅಳಿದುಳಿದ  ಐತಿಹಾಸಿಕ ಸಾಕ್ಷಿಗಳು ಇಂದು ಬೆಳಕಿಗೆ ಬರುತ್ತಿರುವುದೇ ಸಾಕ್ಷಿ.

ಕಾದಂಬರಿಯನ್ನೋದಿದ ಮೇಲೆ ಮನದಲ್ಲಿ ಅಚ್ಚೊತ್ತುವ ಕೆಲವು ಅಪೂರ್ವ ಸಾಲುಗಳು:

*  ಸಮಾಜದ ದೃಷ್ಟಿಯಲ್ಲಿ ಬೀಜ ಎಲ್ಲಿ ಉದುರಿ ಬಿದ್ದು ಮೊಳೆತರೂ ಅದಕ್ಕೆ ಮಾಲಿನ್ಯದ ಹಂಗಿಲ್ಲ. ಶುದ್ಧತೆಯ ಬದ್ಧತೆಯಿಲ್ಲದ ಅದಕ್ಕೆ ಸಂಸ್ಕಾರದ ಹಂಗೂ ಇಲ್ಲ. ಹೇಗೆ ಮೊಳೆಯಿತು ಎಂಬುದಕ್ಕಿಂತ, ಮೊಳೆಯುವುದೇ ಅದರ ಹೆಚ್ಚುಗಾರಿಕೆ. ಆದರೆ ಕ್ಷೇತ್ರಕ್ಕೆ ಮಾತ್ರ ಪಾವಿತ್ರ್ಯದ ಪಾಗಾರ, ನೇಮಗಳ ಬೇಲಿ. ಸದಾ ಶುದ್ಧವಾಗಿರುವುದೇ ಅದರ ಮೌಲ್ಯ. ಹಾಗೆಂದೇ ಅದಕ್ಕೆ ಹಲವು ಕಟ್ಟುಕಟ್ಟಳೆಗಳು. ಇದಲ್ಲವೇ ಹೆಣ್ಣುಗಂಡುಗಳ ನಡುವಿನ ಶುದ್ಧಾಶುದ್ಧತೆಗೆ ಜಗತ್ತು ಅನುಸರಿಸುತ್ತಿರುವ ಮಾನದಂಡ!?

* ಪಾತ್ರ ಮುಗಿದ ಮೇಲೂ ರಂಗದಲ್ಲಿ ಉಳಿದರೆ ಪ್ರದರ್ಶನ ಹೇಗೆ ಸ್ವಾರಸ್ಯ ಕಳೆದು ಕೊಳ್ಳುವುದೋ ಹಾಗೇ ಅವಧಿ ಮುಗಿದ ಮೇಲೆ ಪದವಿಯಲ್ಲಿ ಮುಂದುವರಿಯುವುದೂ ಆಭಾಸ. ಇಲ್ಲಿ ಯಾರೂ ಅನಿವಾರ್ಯರಲ್ಲ.

*ಒಳ್ಳೆಯವರಾಗಿರುವುದಷ್ಟೇ ಮುಖ್ಯವಲ್ಲ, ಒಳ್ಳೆಯವರೆಂದು ತೋರ್ಪಡಿಸಿಕೊಳ್ಳುವುದೂ ಅಷ್ಟೇ ಮುಖ್ಯ.

*ಗೆದ್ದು ಬೀಗುವ ಸಾಮ್ರಾಜ್ಯಗಳ ರಾಜಬೀದಿಗಳಲ್ಲಿ ಬಳ್ಳದಲ್ಲಿ ಅಳೆದು ಮಾರುವ ಮುತ್ತುರತ್ನಗಳಲ್ಲಿ ವಿಧವೆಯರ ತಾಳಿ ಓಲೆಗಳ ಪಾಲಿಲ್ಲವೇನು? ಹೋರಾಡಿ ಮಡಿದ ಯೋಧರಿಗೆ ವೀರ ಸ್ವರ್ಗ ಎಂದು ಬರೆದ ಚರಿತ್ರೆ, ಬದುಕಿರುವ ಅವರ ಪತ್ನಿಯರಿಗೆ ರೌರವ ನರಕವೆಂದು ಬರೆಯಿತೇನು?

*ಯುದ್ಧಕ್ಕಾಗಿ ಎಷ್ಟೇ ವೆಚ್ಚ ಮಾಡಿದರೂ ಚಕ್ರವರ್ತಿಗಳು ಶ್ರೀಮಂತರಾಗಿ ಉಳಿಯುವುದು ಸೋತವರನ್ನು ಸುಲಿದು ತಾನೇ?

*ಬದುಕೆಂದರೆ ತೆರೆಯೊಂದು ಬಂದರೆ ಹೆಜ್ಜೆಯ ಗುರುತೆಲ್ಲ ತೊಳೆದು ಹೋಗುವ ಮರಳು ತೀರದ ಪಯಣವಾಗಬೇಕು.

 

~ತೇಜಸ್ವಿನಿ ಹೆಗಡೆ.

*********

 

 

ಕಾಮೆಂಟ್‌ಗಳಿಲ್ಲ: