ಶುಕ್ರವಾರ, ಏಪ್ರಿಲ್ 15, 2016

ಶಬರಿ


“ಕಾದಿರುವಳು ಶಬರಿ, ರಾಮ ಬರುವನೆಂದು,
ತನ್ನ ಪೂಜೆಗೊಳುವನೆಂದು..” - ವಿ.ಸೀತಾರಮಯ್ಯನವರ ಈ ಸುಪ್ರಸಿದ್ಧ ಹಾಡನ್ನು ಕೇಳದವರೇ ಇಲ್ಲ ಎನ್ನಬಹುದು. ಅಷ್ಟು ಜನಪ್ರಿಯ ಹಾಡಿದು. ಈ ಹಾಡಿನಷ್ಟೇ ಜನಪ್ರಿಯ ರಾಮಾಯಣದಲ್ಲಿ ಬರುವ ಶಬರಿಯ ಪಾತ್ರವೂ ಕೂಡ.
pic courtesy : http://devdutt.com/

ಮೊತ್ತ ಮೊದಲ ಬಾರಿ ರಾಮಾಯಣ ಕಥೆಯನ್ನೋದುವಾಗ ನನ್ನನ್ನು ಬಹುವಾಗಿ ಸೆಳೆದದ್ದು ಶಬರಿಯ ಕಥೆಯೆ. ಶರಣಾಗತಿಯಿಂದ ಕೂಡಿದ ಭಕ್ತಿ ಅದೆಷ್ಟು ಶ್ರೇಷ್ಠವೆಂದು ತೋರಿದ ಕಥಾನಕವಿದು. ‘ಪುರಾಣ ಭಾರತಕೋಶ’ ಪುಸ್ತಕದಲ್ಲಿ ಉಲ್ಲೇಖಿಸಿರುವಂತೆ, ಶಬರಿ ಆನೆಗೊಂದಿಯಲ್ಲಿದ್ದ ಓರ್ವ ಬೇಡತಿ. ಬೇಡರ ರಾಜನ ಮಗಳಾಗಿದ್ದ ಶಬರಿ ವೈರಾಗ್ಯದಿಂದ ಮನೆಯನ್ನು ತೊರೆದು, ಮಾತಂಗ ಮುನಿಯ ಶಿಷ್ಯೆಯಾಗುತ್ತಾಳೆ. ಮುಂದೆ ಮುಕ್ತಿಗಾಗಿ ಆಕೆ ಪರಿತಪಿಸುತ್ತಿದ್ದಾಗ, ಋಷಿವರ್ಯರು ‘ನೀನು ಶ್ರೀರಾಮನ ಜಪ ಮಾಡಿದರೆ, ಆತ ನಿನ್ನ ಬಳಿ ಬರುತ್ತಾನೆ. ಹಾಗೆ ಬಂದಾಗ, ಅವನನ್ನು ಪ್ರೀತ್ಯಾದರಗಳಿಂದ ಸತ್ಕರಿಸಿದರೆ ಖಂಡಿತ ಮುಕ್ತಿ ಪ್ರಾಪ್ತಿಯಾಗುವುದು’ ಎನ್ನಲು ಅಂತೆಯೇ ಶಬರಿ ರಾಮನಿಗಾಗಿ ಉತ್ಕಠ ಭಕ್ತಿಯಿಂದ ಕಾಯುತೊಡಗುತ್ತಾಳೆ. ಮೂಲ ವಾಲ್ಮೀಕಿ ರಾಮಾಯಣದಲ್ಲಿ ಬರುವ ಶಬರಿಯ ಕಥೆಗೂ, ಪುರಾಣಗಳಲ್ಲಿ ಬರುವ ಅವಳ ಕಥನಕ್ಕೂ ಕೆಲವು ವ್ಯತ್ಯಾಸಗಳಿವೆ.   

ವಾಲ್ಮೀಕಿ ರಾಮಾಯಣದಲ್ಲಿ ಚಿತ್ರಿಸಲ್ಪಟ್ಟಿರುವಂತೇ, ರಾಮನ ಆಗಮನಕ್ಕಾಗಿ ಕಾತುರಳಾಗಿದ್ದ ಶಬರಿ, ಶ್ರೀರಾಮ ಬರಲು, ಆತನಿಗೆ ಅರ್ಘ್ಯಪಾದ್ಯಗಳನ್ನಿತ್ತು ಉಪಚರಿಸಿ, ಬಗೆ ಬಗೆಯ ಪದಾರ್ಥಗಳನ್ನು ತಿನ್ನಲು ನೀಡಿ ಸತ್ಕರಿಸುತ್ತಾಳೆ. ಇದರಿಂದ ಸಂಪ್ರೀತನಾದ ರಾಮ ಅವಳಿಗೆ ಮುಕ್ತಿ ಕರುಣಿಸುತ್ತಾನೆ. 

ಆದರೆ ಪದ್ಮಪುರಾಣದಲ್ಲಿರುವಂತೇ, ಶಬರಿ ರಾಮನನ್ನು ಸಂಪ್ರೀತಿಗೊಳಿಸಲು, ಪ್ರತಿ ದಿವಸ ಕಾಡಿಗೆ ಹೋಗಿ, ಬೋರೆ ಹಣ್ಣುಗಳನ್ನು ಕೊಯ್ದು, ಹಣ್ಣು ಸಿಹಿಯೇ? ಹುಳಿಯೇ? ಎಂದರಿಯಲು ಚೂರು ಕಚ್ಚಿ ತಿಂದು ನೋಡಿ, ಸಿಹಿಯಿರುವ ಹಣ್ಣುಗಳನ್ನೆಲ್ಲಾ ಆಯ್ದು, ಬೇರ್ಪಡಿಸಿ, ರಾಮನಿಗಾಗಿ ತೆಗೆದಿಡುತ್ತಾಳೆ. ರಾಮ ಇಂದು ಬರುವ, ನಾಳೆ ಬರುವ ಎಂದುಕೊಳ್ಳುತ್ತಲೇ, ಇನಿತೂ ಬೇಸರಿಸದೇ ಪ್ರತಿ ದಿವಸ ಅವನಿಗಾಗಿ ಈ ಹಣ್ಣುಗಳನ್ನಾಯ್ದು ಇಡುವ ಕಾರ್ಯವನ್ನು ಮಾಡುತ್ತಿರುತ್ತಾಳೆ. ಅಂತೂ ಕೊನೆಗೆ ಆಕೆಯ ಈ ನಿಃಸ್ವಾರ್ಥ ತಪಸ್ಸಿಗೆ ಮೆಚ್ಚಿ ಬರುವ ರಾಮ, ಅವಳು ಎಂಜಲು ಮಾಡಿಟ್ಟ ಆ ಹಣ್ಣುಗಳನ್ನೇ ಸಂತೋಷದಿಂದ ಸ್ವೀಕರಿಸಿ ಅವಳಿಗೆ ಮುಕ್ತಿ ಕರುಣಿಸುತ್ತಾನೆ.

ಇಲ್ಲಿ ನಮ್ಮನ್ನು ಹಿಡಿದಿಡುವುದು ಪದ್ಮಪುರಾಣದಲ್ಲಿ ಬರುವ ಶಬರಿಯ ಕಥಾನಕವೇ! ಶಬರಿಯದು ಇಲ್ಲಿ “ಮುಗ್ಧ ಭಕ್ತಿ” ಮತ್ತು “ಅಖಂಡ ತಾಳ್ಮೆ”!. ತನ್ನ ದೇವರಿಗೆ ಒಳ್ಳೆಯ ಸಿಹಿಯ ಹಣ್ಣನ್ನಷ್ಟೇ ಕೊಡಬೇಕು, ಆ ಮೂಲಕ ಸತ್ಕರಿಸಬೇಕೆಂಬ ಮುಗ್ಧತೆಯಷ್ಟೇ ಅವಳಲ್ಲಿದ್ದಿದ್ದು. ಅದಕ್ಕಾಗಿ ಅವಳು ವರುಷಗಳವರೆಗೂ ಕಾಯುತ್ತಾ ಕುಂತಳು. ತನ್ನ ಎಂಜಲನ್ನು ಕೊಡಬಹುದೇ? ಯಾರಿಗಾದರೂ ಎಂಜಲನ್ನು ಬಡಿಸುತ್ತಾರೆಯೇ? ಅದು ಸೂಕ್ತವೇ? ಎಂಬಿತ್ಯಾದಿ ಜಿಜ್ಞಾಸೆಗೆ ಹೋಗದೇ, ರಾಮನಿಗೆ ಭಕ್ತಿಯಿಂದ ಹಣ್ಣುಗಳನ್ನು ಅರ್ಪಿಸಿದ್ದು. ಶ್ರೀರಾಮನೂ ಅಷ್ಟೇ... ಇನಿತೂ ಬೇಸರಿಸದೇ, ಆ ಮುಗ್ಧ ಭಕ್ತೆಯ ಭಕ್ತಿಗೆ ಒಲಿದು ಸಂತಸದಿಂದಲೇ ಸ್ವೀಕರಿಸಿದ್ದು. ಇಂಥ ಭಕ್ತಿಗೆ ಕಪಟ, ಗೊಂದಲ, ಸರಿ ತಪ್ಪುಗಳ ಪರಿವೆಯೇ ಇರದು. ಅಲ್ಲಿರುವುದು ನಿರ್ಮಲ ಪ್ರೀತಿ, ಶರಣಾಗತಿ ಅಷ್ಟೇ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ್ದೂ ಇದೇ...- “ಯಾವ ಭಕ್ತನು ನನಗೆ ಎಲೆ, ಹೂವು, ಹಣ್ಣು, ನೀರು ಇತ್ಯಾದಿಗಳನ್ನು ಭಕ್ತಿಯಿಂದ, ಪರಿಶುದ್ಧ ಮನಸ್ಸಿನಿಂದ ಅರ್ಪಿಸುತ್ತಾನೋ, ನಾನದನ್ನು ಪ್ರೀತಿಯಿಂದ ಸೇವಿಸುತ್ತೇನೆ...” ಎಂದು.

ಒಂದು ಪುಟ್ಟ ಉದಾಹರಣೆಯನ್ನು ತೆಗೆದುಕೊಂಡು ಹೇಳಬೇಕೆಂದರೆ... ಹೇಗೆ ಪುಟ್ಟ ಮಕ್ಕಳು ತಾವು ಕಚ್ಚಿ ತಿಂದ ತಿನಸನ್ನೇ ಅರ್ಧ ತಿಂದು, ತಮ್ಮ ಪ್ರೀತಿಯ ಅಪ್ಪ, ಅಮ್ಮನೂ ತಿನ್ನಬೇಕೆಂಬ ಆಶಯದಿಂದ, ಅವರ ಬಾಯೊಳಗೆ ತುರುಕಿಸಿ ನಗುತ್ತಾರೋ, ಸಂತಸ ಪಡುತ್ತಾರೋ ಅಂಥ ಭಾವ, ಭಕ್ತಿಯೇ ನನಗೆ ಶಬರಿಯಲ್ಲೂ ಕಾಣಿಸಿದ್ದು. ಹೆತ್ತ ಅಮ್ಮ ಅಪ್ಪನೂ ತಮ್ಮ ಮಗುವು ಪ್ರೀತಿಯಿಂದ ಬಾಯಿಗೆ ಹಾಕಲು ಬಂದಾಗ, ಎಂಜಲೆಂದು ಪರಿಗಣಿಸದೇ, ಥೂ ಛೀ ಎನ್ನದೇ, ತಿಂದುಬುಡುತ್ತಾರೆ... ಮುದ್ದಾಡುತ್ತಾರೆ... ಆ ಮಗುವಿಗೆ ಸಂತೃಪ್ತಿ ಕೊಡುತ್ತಾರೆ. ಅದೇ ಚಿತ್ರಣ ನನಗೆ ಶಬರಿಯಲ್ಲೂ ಕಂಡಿದ್ದು. ಅಂತಹ ಭಕ್ತಿಯ ಪರಾಕಷ್ಠೆಗೆ ಭಗವಂತ ಒಲಿಯದೇ ಇರುವನೇ?

ಇನ್ನು ಈ ಪುರಾಣ ಕಥೆಗಳೆಲ್ಲಾ ಕೇವಲ ಕಾಲ್ಪನಿಕ, ರಾಮಾಯಣ ಒಂದು ಸುಂದರ ಖಂಡ ಕಾವ್ಯ ಅಷ್ಟೇ.. ನಿಜದಲ್ಲಿ ಆಗದ್ದು - ಇತ್ಯಾದಿ ಏನೇ ಪ್ರವರಗಳಿದ್ದರೂ, ಹಾಗೆಲ್ಲಾ ವಾದಿಸುವವರನ್ನೂ ಅಪ್ಪಿಕೊಳ್ಳುತ್ತಾ, ರಾಮಾಯಣದಲ್ಲಿ ಬರುವ ಇಂತಹ ಅನೇಕ ಪಾತ್ರಗಳೊಳಗಿನ ಧನಾತ್ಮಕತೆಯನ್ನು ಸ್ವೀಕರಿಸುವುದರಿಂದ ಕೆಡುಕಂತೂ ಆಗದು ಎಂಬುದನ್ನೂ ಸಾರೋಣ! ಬೇಡತಿಯಾಗಿದ್ದ ಶಬರಿಯ ಎಂಜಲನ್ನು ಸ್ವೀಕರಿಸಿದ ರಾಮನ ಈ ಕಥೆಯಿಂದ ನಾವು - ಈ ಮೇಲು, ಕೀಳು, ಎಂಬ ತಾರತಮ್ಯ ಮಾಡದೇ, ನಿಷ್ಕಲ್ಮಶ ಮನಸಿನ ವ್ಯಕ್ತಿಗಳನ್ನು, ಅವರ ಪರಿಶುದ್ಧ ಪ್ರೀತಿಯನ್ನು ಅಷ್ಟೇ ತೆರೆದ ಮನಸ್ಸಿನಿಂದ, ಸಂತೋಷದಿಂದ ಒಪ್ಪಿ, ಅಪ್ಪಿಕೊಳ್ಳಬೇಕು ಎಂಬ ಅತ್ಯುತ್ತಮ ನೀತಿಯನ್ನು ಶಬರಿಯ ಕಥೆಯಿಂದ ಕಲಿಯುತ್ತೇವೆ. 

~ತೇಜಸ್ವಿನಿ ಹೆಗಡೆ.

3 ಕಾಮೆಂಟ್‌ಗಳು:

sunaath ಹೇಳಿದರು...

ಶಬರಿಯ ಕಥೆಯಿಂದಾಗಿಯೇ ರಾಮಾಯಣಕ್ಕೆ ಇನ್ನಿಷ್ಟು ಸೌಂದರ್ಯ ಬಂದಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ವಿಷದವಾಗಿ ವಿಷಯನಿರೂಪಣೆ ಮಾಡಿದ್ದೀರಿ. ಅಭಿನಂದನೆಗಳು.

Unknown ಹೇಳಿದರು...

ನಮಸ್ಕಾರ ಮೇಡಮ್ ತುಂಬ ಸ್ವಾರಸ್ಯಪೂಣ೯ವಾಗಿ ಶಬರಿಯ ಭಕ್ತಿಪೂವ೯ಕ ಜೀವನವನ್ನು ನಿರೂಪಿಸಿದ್ದೀರಿ ಧನ್ಯವಾದಗಳು.
ಪ್ರಶ್ನೆ : ಶಬರಿಯ ತಂದೆ ತಾಯಿಯರ ಹೆಸರುಗಳನ್ನು ತಿಳಿಸಿ ದಯವಿಟ್ಟು.

Unknown ಹೇಳಿದರು...

ನಮಸ್ಕಾರ ಮೇಡಮ್ ತುಂಬ ಸ್ವಾರಸ್ಯಪೂಣ೯ವಾಗಿ ಶಬರಿಯ ಭಕ್ತಿಪೂವ೯ಕ ಜೀವನವನ್ನು ನಿರೂಪಿಸಿದ್ದೀರಿ ಧನ್ಯವಾದಗಳು.
ಪ್ರಶ್ನೆ : ಶಬರಿಯ ತಂದೆ ತಾಯಿಯರ ಹೆಸರುಗಳನ್ನು ತಿಳಿಸಿ ದಯವಿಟ್ಟು.