ಮಂಗಳವಾರ, ಸೆಪ್ಟೆಂಬರ್ 10, 2013

ಹಬ್ಬ ಮತ್ತು ವ್ರತದ ನಡುವಿನ ವ್ಯತ್ಯಾಸ.

ಹಬ್ಬಕ್ಕೂ ವ್ರತಕ್ಕೂ ವ್ಯತ್ಯಾಸವಿದೆ. ಹಬ್ಬ/ಉತ್ಸವ ಸಾಮೂಹಿಕ, ಸಾರ್ವಜನಿಕ ಆಚರಣೆಯಾಗಿದೆ. ವ್ರತ ವೈಯಕ್ತಿಕ/ಕೌಟುಂಬಿಕ... ಒಮ್ಮೊಮ್ಮೆ ಒಂದು ಸಮುದಾಯಕ್ಕೆ ಸೀಮಿತ.

ಗಣೇಶ ಚತುರ್ಥಿ ಮೂಲತಃ ಶ್ರೀ ಸಿದ್ಧಿವಿನಾಯಕ ವ್ರತವೇ. ತಿಲಕರು ಸ್ವಾತಂತ್ರ್ಯ ಪೂರ್ವದಲ್ಲಿ ಸಂಘಟನೆಗಾಗಿ, ಎಲ್ಲಾ ಸಮುದಾಯಗಳ ಏಕತೆಗಾಗಿ ಇದಕ್ಕೆ ಒಂದು ಉತ್ಸವದ ಮೆರುಗುಕೊಟ್ಟು ಆಚರಿಸಲು ಕರೆಕೊಟ್ಟಿದ್ದರು. ಅದು ಈಗ ಹಬ್ಬವಾಗಿ, ಸಾಂಸ್ಕೃತಿಕ ಉತ್ಸವವಾಗಿ ಬೆಳೆದಿದೆ.

ನವರಾತ್ರಿ, ಗಣೇಶ ಚತುರ್ಥಿ ಇವೆಲ್ಲಾ ವ್ರತಗಳೇ. ನಾಗರ ಪಂಚಮಿಯೂ ಒಂದು ವ್ರತವೇ. ಆದರೆ ನವರಾತ್ರಿ, ನಾಗರ ಪಂಚಮಿ ಈಗ ಹಬ್ಬಗಳಾಗಿ ಆಚರಿಸಲ್ಪಡುತ್ತಿವೆ. ಕೃಷ್ಣಾಷ್ಟಮಿ, ರಾಮ ನವಮಿ - ಇವು ಕೃಷ್ಣ, ರಾಮರ ಹುಟ್ಟು ಹಬ್ಬಗಳಾಗಿವೆ. ಆದರೆ ಕೆಲವು ಮತಗಳಲ್ಲಿ ಕೃಷ್ಣ ಜಯಂತಿಯನ್ನೂ ವ್ರತವನ್ನಾಗಿ ಆಚರಿಸುತ್ತಾರೆ.

ನಿಜಾರ್ಥದಲ್ಲಿ ಉತ್ಸವವೆಂದು ಪರಿಗಣಿಸಲ್ಪಡುವುದು ದೀಪಾವಳಿಯೇ. ಕತ್ತಲೆಯಿಂದ ಬೆಳಕಿನೆಡೆಗೆ ನಮ್ಮನ್ನು ಒಯ್ಯುವ ಬೆಳಕಿನಹಬ್ಬ ನಿಜವಾಗಿಯೂ ಒಂದು ಸಾಮೂಹಿಕ, ಸಾರ್ವತ್ರಿಕ ಉತ್ಸವ/ಹಬ್ಬವಾಗಿದೆ.

ಆಚರಣೆ ಹಬ್ಬದ ರೀತಿಯಲ್ಲಾಗಿರಲಿ ಅಥವಾ ವ್ರತವಾಗಿರಲಿ... ಅದರ ಆಚರಣೆಯಿಂದ, ಅವರವರು ಆಚರಿಸುವ ರೀತಿ-ನೀತಿಯಿಂದ, ಆಚರಿಸುವವರಿಗೆ ಮತ್ತು ಆ ಆಚರಣೆಯನ್ನು ಹತ್ತಿರದಿಂದಲೋ ಇಲ್ಲಾ ದೂರ ನಿಂತೋ ನೋಡುವವರಿಗೆ ಸಂತಸ, ಸಮಾಧಾನ, ನೆಮ್ಮದಿ ತರುವಂಥದ್ದಾಗಿರಬೇಕು ಅಷ್ಟೇ. ಇಷ್ಟಕ್ಕೂ ಯಾವುದೇ ಹಬ್ಬಗಳಿರಲಿ, ವ್ರತಗಳಿರಲಿ, ಯಾವುದೇ ಆಚರಣೆ, ಸಂಪ್ರದಾಯಗಳಿರಲಿ... ಎಲ್ಲವೂ ಅವರವರ ಭಾವಕ್ಕೆ ಭಕುತಿಗೆ.  ಸಾಮಾಜಿಕ ಏಕತೆಯ ಜೊತೆ, ಸಹಿಷ್ಣುತೆಯೊಂದಿದ್ದರೆ ಎಲ್ಲವೂ ರಮಣೀಯ, ಆದರಣೀಯವೇ. "ಯದ್ಭಾವಂ ತದ್ಭವತಿ" :)

ನನಗಂತೂ "ತತ್ತ್ವಮಸಿ" ಇಷ್ಟ. ಸಮುದ್ರದಲ್ಲಿ ತೆರೆಗಳಿರುವಂತೇ... ಪರಮಾತ್ಮನಲ್ಲಿ ಆತ್ಮ.... ನನ್ನ ಆತ್ಮದಲ್ಲಿ ‘ಅವನ’ ಒಂದು ಅಂಶ.... :)

-ತೇಜಸ್ವಿನಿ.

1 ಕಾಮೆಂಟ್‌:

sunaath ಹೇಳಿದರು...

ಸೂಕ್ಷ್ಮ ದೃಷ್ಟಿಯ ವಿಶ್ಲೇಷಣೆ. ಧನ್ಯವಾದಗಳು.
ಮತ್ತೂ ಒಂದು point:
ವ್ರತವನ್ನು ಯಾವುದಾದರೂ ಇಷ್ಟಾರ್ಥಸಿದ್ಧಿಗಾಗಿ ಮಾಡಬಹುದು.
ಹಬ್ಬದಲ್ಲಿ ಹಾಗೇನಿಲ್ಲ.