ಶನಿವಾರ, ಆಗಸ್ಟ್ 3, 2013

ಶ್ರೀಯುತ ಟಿ.ಎನ್.ಎಸ್ ಅವರಲ್ಲೊಂದು ವಿನಮ್ರ ವಿನಂತಿ.

ಗೌರವಾನ್ವಿತ, ಆದರಣೀಯ ಶ್ರೀಯುತ ಟಿ.ಎನ್.ಸೀತಾರಾಮ್ ಅವರಿಗೆ,

ನನ್ನ ಹೆಸರು ತೇಜಸ್ವಿನಿ ಹೆಗಡೆ. ಮೊದಲಿನಿಂದಲೂ ನಿಮ್ಮ ಎಲ್ಲಾ ಧಾರಾವಾಹಿಗಳನ್ನೂ ತಪ್ಪದೇ ವೀಕ್ಷಿಸುತ್ತಾ ಬಂದವಳು ನಾನು. ನನ್ನ ಅಚ್ಚುಮೆಚ್ಚಿನ ಧಾರಾವಾಹಿಗಳೆಲ್ಲಾ ತಮ್ಮ ನಿರ್ದೇಶನದ್ದೇ ಎಂದರೆ ಅದರಲ್ಲೇನೂ ಉತ್ಪ್ರೇಕ್ಷೆಯಿಲ್ಲ. ನೀವು ಪಾತ್ರ ಚಿತ್ರಣವನ್ನು ಮನಸ್ಸಿಗೆ ನಾಟುವಂತೆ ಕಟ್ಟಿಕೊಡುವ ರೀತಿ.. ಅವುಗಳನ್ನು ಬೆಳೆಸುವ ರೀತಿ, ಸಂಭಾಷಣೆಗಳಲ್ಲಿನ ಚುರುಕುತನ, ನವೀನತೆ  ಅಷ್ಟೇ ಅಲ್ಲಾ ನಿಮ್ಮ ಧಾರಾವಾಹಿಗಳಲ್ಲಿ ಅಭಿನಯಿಸುವ ನಟ/ನಟಿಯರಿಂದ ನೀವು ಹೊರಹೊಮ್ಮಿಸುವ ನಟನಾಸಾಮರ್ಥ್ಯ, ಎಲ್ಲಕ್ಕಿಂತ ಮುಖ್ಯವಾಗಿ ಶೀರ್ಷಿಕೆ ಗೀತೆಗಳೊಳಗಿನ ಮಾಧುರ್ಯ, ಅರ್ಥವತ್ತಾದ ಸಾಹಿತ್ಯ... ಎಲ್ಲವೂ ನನಗೆ ಬಲು ಮೆಚ್ಚು. ಮನಃಪೂರ್ವಕವಾಗಿ ನಾನು ನಿಮ್ಮ ನಿರ್ದೇಶನದ ಧಾರಾವಾಹಿಗಳನ್ನು ಹೊಗಳಿದ್ದೇನೆ... ಮೆಚ್ಚಿದ್ದೇನೆ.
courtesy : http://www.in.com

ಆದರೆ...... ಅದ್ಯಾಕೋ ಎಂತೋ "ಮಹಾಪರ್ವ" ಧಾರಾವಾಹಿಯಲ್ಲಿನ "ಮಂದಾಕಿನಿ" ಪಾತ್ರ ಮಾತ್ರ ಯಾಕೋ ಸರಿಯಾದ ಸಂದೇಶವನ್ನು ಸಮಾಜಕ್ಕೆ, ಅಂಗವಿಕಲರಿಗೆ ನೀಡುತ್ತಿಲ್ಲ ಎನ್ನುವ ಮನದಾಳದ ಅನಿಸಿಕೆ ನನ್ನದು. ನಾನೂ ಓರ್ವ ಹುಟ್ಟಾ ಅಂಗವಿಕಲೆಯಾಗಿದ್ದು, ವ್ಹೀಲ್ ಚೇರ್ ಉಪಯೋಗಿಸುತ್ತಿರುವ.. ಅದಿಲ್ಲದೇ ಹೊರ/ಹೊಳ ಜಗತ್ತನ್ನು ಸಂಚರಿಸಲಾಗದ, ಆದರೆ ಅದೊಂದು ಬಿಟ್ಟರೆ ಮಿಕ್ಕೆಲ್ಲಾ ವಿಷಯಗಳಲ್ಲೂ ಇತರ ಸಾಮಾನ್ಯರಂತೇ ಬದುಕನ್ನು  ಸಂಪೂರ್ಣವಾಗಿ ಆಸ್ವಾದಿಸುತ್ತಿರುವ ವ್ಯಕ್ತಿ. ಆರು ವರುಷದ ಮಗಳ ತಾಯಿ. ಹಾಗಾಗಿ ವ್ಹೀಲ್‌ಚೇರ್ ಬೌಂಡೆಡ್ ವ್ಯಕ್ತಿಗಳ ಸಮಸ್ಯೆ, ಅವರ ಹೋರಾಟ, ಅವರ ಸವಾಲುಗಳು ಹೇಗೆ ಚೆನ್ನಾಗಿ ಗೊತ್ತೋ ಹಾಗೇ ಅವರಿಂದ ಎಲ್ಲಾ ರೀತಿಯ ಮನೆಗೆಲಸಗಳು, ಉನ್ನತ ವಿದ್ಯಾಭ್ಯಾಸಗಳು, ಹೊರ-ಒಳ ಜಗತ್ತಿನ ಕೆಲಸಕಾರ್ಯಗಳು "ಮನಸ್ಸು ಇದ್ದರೆ.. ಸದೃಢವಾಗಿದ್ದರೆ" ಸಾಧ್ಯ ಅನ್ನೋದನ್ನು ನಂಬಿದವಳು.. ಅಂತೆಯೇ ನಡೆದವಳು.. ಇನ್ನೂ ನಡೆಯುತ್ತಿರುವವಳು. ಬಟ್ಟೆ, ಪಾತ್ರೆ, ಅಡುಗೆ, ಮನೆಯವರ ಬೇಕು ಬೇಡಗಳು, ಎಲ್ಲಾ ಕೆಲಸಗಳನ್ನು ಚೆನ್ನಾಗಿ ನಿರ್ವಹಿಸಿದವಳು.. ಈಗಲೂ ನಿರ್ವಹಿಸುತ್ತಿರುವವಳು. ಇದನ್ನೆಲ್ಲಾ ನಾನು ನನ್ನ ಮೆರೆಸುಲೋಸುಗ ಖಂಡಿತ ಹೇಳುತ್ತಿಲ್ಲ. ನನಗೆ ಯಾರ ಅನುಕಂಪ ಅಥವಾ ಅತಿ ಹೊಗಳಿಕೆಯಂತೂ ಖಂಡಿತ ಬೇಕಾಗಿಲ್ಲ. 

ಮೊದಲಿನಿಂದಲೂ ನನಗೆ ಸರಿ ಕಾಣದ್ದು ಮಂದಾಕಿನ ಪಾತ್ರ ಚಿತ್ರಣ. ಓರ್ವ ಅಂಗವೈಕಲ್ಯವುಂಟಾದ ವ್ಯಕ್ತಿಯ ಚಿತ್ರಣ ನಿಮ್ಮಿಂದ ಯಾವ ರೀತಿ ಬರುವುದೆಂದು ಬಹು ಉತ್ಸುಕಳಾಗಿದ್ದೆ ಮೊದಮೊದಲು. ಆದರೆ ಕ್ರಮೇಣ ಅಸಹನೆ ತುಂಬತೊಡಗಿತು. ಮಂದಾಕಿನಿ ಸದಾ ನಿಸ್ಸಾಯಕಳಾಅಗಿ ಕೂತಿರೋದು.... "ನನ್ನಿಂದಂತೂ ಯಾವ ಕೆಲಸವೂ ಮಾಡಿಕೊಡಾಲು ಆಗುತ್ತಿಲ್ಲ...." ಅನ್ನೋ ಮಾತನ್ನೇ ಪದೇ ಪದೇ ಆಗಾಗ ಹೇಳುವುದು... ಅಲ್ಲದೇ, ಅದರಲ್ಲೂ ನಿನ್ನೆಯ ಅಂದರೆ ೦೨-೦೮-೨೦೧೩ ಶುಕ್ರವಾರದ ಕಂತಿನಲ್ಲಿ ಒಂದು ತಪ್ಪು ಸಂದೇಶವನ್ನು ಸಾರುವ ಮಾತನ್ನು ಅವಳ ಸ್ವಂತ ಮಗಳಾದ, ಅತೀವ ಸೂಕ್ಷ್ಮ ಮನಸ್ಸಿನ ಪರಿಣಿತಳ ಬಾಯಿಯಿಂದಲೇ ಹೇಳಿಸಿದ್ದು ಮಾತ್ರ ಒಪ್ಪಿಕೊಳ್ಳಲೇ ಆಗಲಿಲ್ಲ.

"ನೀನು ಯಾವಾಗಲೂ ವ್ಹೀಲ್‌ಚೇರನಲ್ಲೇ ಕೂತಿರ್ತಿಯಲ್ಲಾ.. ಅದ್ಕೇ ನಿಂಗೇ ಅಂತ ಮಾಯಾಮೃಗ ಸಿ.ಡಿ. ತಂದಿದ್ದೀನಿ.." ಅಂತ ಮಗಳು ತಾಯಲ್ಲಿ ಹೇಳಿದ್ದು ನೋಡಿ ಮೊದಲು ಸಿಟ್ಟು ಬಂದರೂ ಮರುಕ್ಷಣ ನಗುವೂ ಬಂತು. ಇಲ್ಲಿ "ನೀನು ಸದಾ ವ್ಹೀಲ್‍ಚೇರ್‌ನಲ್ಲೇ ಕೂತಿರ್ತೀಯಲ್ಲಾ ಅದ್ಕೇ ತಂದೇ" ಅನ್ನೋ ಒಂದು ಪುಟ್ಟ ವಾಕ್ಯದ ಅವಶ್ಯಕತೆ ಇರಲಿಲ್ಲ. ನಿಜ, ಸಾಮಾನ್ಯವಾಗಿ ಸಮಾಜದ, ಜನರ ಎಲ್ಲರ ವಿಚಾರಧಾರೆಯೂ ಇದೇ ಆಗಿದೆ. ಸಮಾಜ ಅಂಗವಿಕಲರು, ವ್ಹೀಲ್‌ಚೇರ್‌ನಲ್ಲಿ ಇರುವವರ ಪ್ರತಿ ಅಪಾರ, ಅನವಶ್ಯಕ ಅನುಕಂಪವನ್ನಷ್ಟೇ ತೋರುತ್ತಿರುತ್ತದೆ. ಅವರಿಂದ ಏನೇನು ಸಾಧ್ಯ ಅನ್ನೋದನ್ನು ಯೋಚಿಸುವುದು ತೀರಾ ಕಡಿಮೆ ಜನ. ಇಲ್ಲಿಯೂ ಅದೇ ಆಗುತ್ತಿರುವುದು. ಮಂದಾಕಿನ ವ್ಹೀಲ್‌ಚೇರ್‌ನಲ್ಲೇ ಕುಳಿತು ಎಷ್ಟೆಲ್ಲಾ ಕೆಲಗಳನ್ನು ಮಾಡಬಹುದು ಯೋಚಿಸಿ? ತರಕಾರಿ ಹೆಚ್ಚೋದು, ಅಡಿಗೆ ಮಾಡೋಡು (ಅಡಿಗೆ ಕಟ್ಟೆಯನ್ನು ತುಸು ತಗ್ಗಿಸಿ.. ಕುಳಿತಲ್ಲೇ...) ಪುಸ್ತಕ ಓದುವ ಹವ್ಯಾಸವಿರೋದನ್ನು ಹೇಳಿದ್ದೀರಿ.. ಬರೆಯೋದು, ಅದರಲ್ಲೇ ಪ್ರಗತಿ ಸಾಧಿಸೋದು... ಗಿಡಗಳಿಗೆ ನೀರುಣಿಸೋದು... ಎಲ್ಲವೂ ಸಾಧ್ಯ. ಹೀಗಿರೋವಾಗ ಅದರಲ್ಲೇ ಕುಳಿತು ಬೋರಾಗೊತ್ತೆ ಹಾಗಾಗಿ ಸಿ.ಡಿ. ಅಂತ ಮಗಳು ಅನ್ನೋದು.. ನನ್ನಿಂದ ಎನೂ ಆಗೊಲ್ಲಾ ಅನ್ನೋ ರೀತಿಯ ಮಾತುಗಳನ್ನು ಮಂದಾಕಿನಿ ಆಡೋದು ತುಂಬಾ ಅಸಹನೆ ತುಂಬುತ್ತದೆ. ಇದು ಇತರೆಲ್ಲಾ ನೋಡುಗರಿಗೆ ಏನೂ ಅನ್ನಿಸದೇ ಇರಬಹುದು.. ಸಾಮಾನ್ಯದಲ್ಲಿ ಸಾಮಾನ್ಯವೆಂದೇ ಹೇಳಬಹುದು ಆದರೆ ಇದರಿಂದ ಸಮಾಜಕ್ಕೆ, ಅಂಗವಿಕಲರಿಗೆ ತಪ್ಪು ಸಂದೇಶ ಹೋಗುವುದು ಎನ್ನುವುದು ನನ್ನ ಅಭಿಪ್ರಾಯ.

ನಿಮ್ಮ ಧಾರಾವಾಹಿ ಎಂದರೆ ಅದಕ್ಕೆ ಅಪಾರ ಪ್ರೇಕ್ಷಕ ವರ್ಗವಿದೆ. ನಿರೀಕ್ಷೆಗಳಿವೆ. ಮೆಚ್ಚುಗೆ ಇದೆ. ಅಭಿಮಾನಿಗಳಿದ್ದಾರೆ (ನನ್ನನ್ನೂ ಸೇರಿಸಿ). ಹೀಗಿರುವಾಗ ಅಂಗವಿಕಲರೆಂದರೆ ನಿಸ್ಸಹಾಯಕರು, ಕೆಲಸ ಮಾಡಲಾಗದವರು.. ಕುಳಿತಲ್ಲೇ ಕುಳಿತು ಬೋರ್ ಹೊಡಿಯುತ್ತಿರುವವರೆಂದು ಜನಸಾಮಾನ್ಯರಿಗೂ... ಅಂತೆಯೇ "ನನ್ನಿಂದ ಏನೂ ಆಗೊಲ್ಲಾ ನಿಜ.. ನನಗೆ ಎಲ್ಲವುದಕ್ಕೂ ಇತರರ ಸಹಾಯ ಅನಿವಾರ್ಯ... ಛೇ.." ಅನ್ನೋ ಸ್ವ-ಅನುಕಂಪ ಪಡೋ ಅಂಗವಿಕಲರಿಗೆ ಪುಷ್ಟಿಕೊಡೋ ರೀತಿ ಇದೆ ಎಂದೆನಿಸಿತು. (ನನಗೆ ಖಂಡಿತ ಅನುಕಂಪ ಮೂಡಿದ್ದು ಹೌದು.. ನನ್ನ ಮೇಲೆ ಅಲ್ಲವೇ ಅಲ್ಲಾ.. ಈ ಆಲೋಚನೆಯ ಮೇಲಷ್ಟೇ.).

ನಿಮ್ಮ ಧಾರಾವಾಹಿಗಳ ಕಟ್ಟಾ ಅಭಿಮಾನಿಯಾಗಿ, ಅಂಗವಿಕಲರ ಸಹಚಾರಿಣಿಯಾಗಿ.... ಮಹಾಪರ್ವವನ್ನು ತಪ್ಪದೇ ವೀಕ್ಷಿಸುತ್ತಿರುವ ಓರ್ವ ವೀಕ್ಷಗಳಾಗಿ, ದಯವಿಟ್ಟು ಇನ್ನಾದರೂ "ಅಂಗವೈಕಲ್ಯತೆ"ಯನ್ನು ಪ್ರೊಜೆಕ್ಟ್ ಮಾಡುತ್ತಿರುವ ಈ ರೀತಿಯ ಋಣಾತ್ಮಕ ಚಿತ್ರಣವನ್ನು ಬಿಟ್ಟು, ಧನಾತ್ಮಕತೆಯನ್ನು ಹೆಚ್ಚು ಕಾಣಿಸುವ ಚಿತ್ರಣ ಮೂಡಿಬರಲೆಂದು ವಿನಮ್ರವಾಗಿ ವಿನಂತಿಸುತ್ತಿದ್ದೇನೆ. ನೀವು ಆ ಪಾತ್ರವನ್ನು ಅಸಾಮಾನ್ಯಳಂತೇ ಬಿಂಬಿಸಬೇಕೆಂದು ಖಂಡಿತ ಕೇಳುತ್ತಿಲ್ಲ.... ಅತಿ ಯಾವತ್ತೂ ಸಲ್ಲ ಕೂಡ. ಸಾಮಾನ್ಯವನ್ನೇ ತೋರಿಸಿ.. ಏನೆಲ್ಲಾ ಸಾಮಾನ್ಯ, ಸಹಜ, ಸಾಧ್ಯವೆನ್ನುವುದನ್ನಷ್ಟೇ ತೋರಿಸಿ.... ಸಾಮಾನ್ಯರಿಗೆ, ನನ್ನಂಥಹ ಇತರರಿಗೆ. ಆದರೆ ಅಸಹಾಯಕತೆಯ, ಅನುಕಂಪದ ನೆರಳೂ ಸೋಕದಿರಲಿ. ನಿಮ್ಮಂತ ಉತ್ತಮ ನಿರ್ದೇಶಕರು, ಸಹೃದಯ ವ್ಯಕ್ತಿಗಳು ನನ್ನ ಮಾತಿನೊಳಗಿರುವ ನೈಜ ಕಾಳಜಿ, ವಿನಂತಿ, ಕಳಕಳಿಯನ್ನು ಯಾವುದೇ/ಯಾರದೇ ತಪ್ಪು ಗ್ರಹಿಕೆಗೆ ಎಡೆಗೊಡದೇ ತಿಳಿದುಕೊಳ್ಳುತ್ತೀರೆಂದು ನಂಬಿದ್ದೇನೆ.... ಹಾಗೇ ಆಶಿಸುತ್ತೇನೆ. :)

ವಂದನೆಗಳು.

ಆದರಾಭಿಮಾನಗಳೊಂದಿಗೆ,
ತೇಜಸ್ವಿನಿ ರಾಮಕೃಷ್ಣ ಹೆಗಡೆ.

9 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

ನಾನೂ ಈ ಧಾರಾವಾಹಿ ನೋಡುತ್ತೇನೆ. ನಿಮ್ಮ ಅನಿಸಿಕೆಯೇ ನನ್ನದೂ ಕೂಡ. ನಿಜ ಪರಿಣಿತಾ ಹಾಗೆ ಹೇಳಬೇಕಾಗಿರಲಿಲ್ಲ. ಮಂದಾಕಿನಿ ಕೆಲಸವಿಲ್ಲದೆ ಕೂರುವಂಥ ತರಹ ತೋರಿಸುವ ಅಗತ್ಯವೂ ಇರಲಿಲ್ಲ. ಸತ್ಯ ಹೇಳುವುದಾದರೆ ಈಗ ವಿಕಲಚೇತನರು ಮಾಡುವಷ್ಟು ಕೆಲಸವನ್ನು ಅಂಗ ಸರಿ ಇದ್ದವರು ಮಾಡಲ್ಲ ಎನ್ನಬಹುದು.
ಮಾಲಾ

sunaath ಹೇಳಿದರು...

ತೇಜಸ್ವಿನಿ,
ನಿಮ್ಮ ಈ ಪತ್ರ-ಲೇಖನವು ಸಮಾಚಾರ ಪತ್ರಿಕೆಯೊಂದರಲ್ಲಿ ಪ್ರಕಟವಾದರೆ ಚೆನ್ನಾಗುವುದು. ಕಳುಹಿಸಲು ವಿಜ್ಞಾಪಿಸುತ್ತೆನೆ.

VidyaShankar Harapanahalli ಹೇಳಿದರು...

I completely agree. The episode you mentioned and dialogue you mentioned was quite insensitive.

Anitha Naresh Manchi ಹೇಳಿದರು...

ನಾನು ಮೊದಲೊಮ್ಮೆ ನೋಡಿದ ಸಂಗೀತ ಸ್ಪರ್ಧಾ ಕಾರ್ಯಕ್ರಮದಲ್ಲಿ ಕಣ್ಣಿಲ್ಲದವರೊಬ್ಬರು ತಕ್ಕ ಮಟ್ಟಿಗೆ ಹಾಡುತ್ತಿದ್ದರು.ಚೆನ್ನಾಗಿ ಹಾಡುವ ಎಷ್ಟೋ ಮಂದಿ ಕಾರ್ಯಕ್ರಮದಿಂದ ಹೊರ ಹೋಗಿದ್ದರೂ ಕಾರ್ಯಕ್ರಮದ ಯಶಸ್ಸಿಗಾಗಿ ಅವರನ್ನು ಕೊನೆಯವೆರೆಗೆ ಉಳಿಸಿಕೊಂಡಿದ್ದರು. ಇದು ಅನುಕಂಪವನ್ನು ಕ್ಯಾಶ್ ಮಾಡಿಕೊಳ್ಳುವ ಕೀಳು ಅಭಿರುಚಿ

Suni ಹೇಳಿದರು...

ಸೀತಾರಾಂರವರು ಉದ್ದೇಶಪೂರ್ವಕ್ವಾಗಿ ಹೀಗೆ ಮಾಡದಿರಬಹುದು. ಈ ಹಿಂದಿನ ಮಾಯಾಮೃಗ ಧಾರಾವಾಹಿಯಲ್ಲಿಯೂ ಕೂಡ ಎಂ.ಡಿ.ಪಲ್ಲವಿಯವರು ಅಂಗವಿಕಲೆಯ ಪಾತ್ರ ನಿರ್ವಹಿಸಿದ್ದು,ಆ ಪಾತ್ರ ಪೋಷಣೆ ತುಂಬಾ ಚೆನ್ನಾಗಿ ಮೂಡಿಬಂದಿತ್ತು.

ಪ್ರವೀಣ್ ಭಟ್ ಹೇಳಿದರು...

yaake idanna FB yalli avarige direct aagi kelabaradu ? alli share madale?

ತೇಜಸ್ವಿನಿ ಹೆಗಡೆ ಹೇಳಿದರು...

ಸ್ಪಂದಿಸಿದ ಎಲ್ಲರಿಗೂ ಧನ್ಯವಾದಗಳು... ಈ ಪತ್ರವನ್ನು FB ಯಲ್ಲಿ Share ಮಾಡಿಕೊಂಡಿದ್ದೆ.. ಅದಕ್ಕೆ ಸೂಕ್ತ, ಸಮಾಧಾನಕರ ಪ್ರತಿಕ್ರಿಯೆಯನ್ನೂ ಟಿ.ಎನ್.ಸರ್ ಅವರು ಕೊಟ್ಟಿದ್ದಾರೆ.

ಧನ್ಯವಾದಗಳು.

ತೇಜಸ್ವಿನಿ ಹೆಗಡೆ ಹೇಳಿದರು...

Reply from TNS sir..

ತೇಜಸ್ವಿನಿ ಹೆಗಡೆ ಅವರಿಗೆ ನಮಸ್ಕಾರ
ಬ್ಲಾಗ್ ನಲ್ಲಿ ನಿಮ್ಮ ಲೇಖನ ಓದಿದೆ
ನಿಮ್ಮ ಅಭಿಪ್ರಾಯ ಖಂಡಿತ ಸ್ವಾಗತಾರ್ಹ
ಕಥೆ ಮುಗಿಯುವವರೆಗೆ ಕಾದು ನೋಡಿದರೆ ಒಳ್ಳೆಯದು ಎಂದು ನನ್ನ ಅಭಿಪ್ರಾಯ
ಅಸಹಾಯಕರು ಯಾವುದೋ ನಿರ್ಣಾಯಕ ಕ್ಷಣದಲ್ಲಿ ಜಯ ಸಾಧಿಸುವುದು ನನ್ನ ಕಥೆಯ ರೀತಿ. ಇದೇ ರೀತಿ ಅಸಹಾಯಕರಾಗಿದ್ದ
ನನ್ನ ಹತ್ತಿರದ ವ್ಯಕ್ತಿಯೊಬ್ಬರು ಅನುಕಂಪ ಬಯಸುತ್ತಿದ್ದುದು ನನಗೆ ಗೊತ್ತು
ಅವರು ಅದನ್ನು ಮೀರಿ ನಿಂತ ಕ್ಷಣದ ಚಿತ್ರಣ ನನ್ನ ಕಥೆ

ನಿಮ್ಮ ಬಗ್ಗೆ ನನಗೆ ಅಪಾರ ಗೌರವ ಇದೆ. ನಿಮ್ಮ ಅಭಿಪ್ರಾಯ ಅತ್ಯಂತ ಪ್ರಾಮಾಣಿಕ ಎಂದು ನನಗೆ ಗೊತ್ತು
ನನಗೆ ಸಮಾಜಕ್ಕೆ ತಪ್ಪು ಸಂದೇಶ ಕೊಡುವ ಅಸೂಕ್ಷ್ಮ ಮನಸಾಗಲಿ, ಅಂತಹ ಅಗತ್ಯವಾಗಲಿ ನನಗೆ ಇಲ್ಲ
ನಮಸ್ಕಾರ

ದಿನಕರ ಮೊಗೇರ ಹೇಳಿದರು...

TNS sir uttara noDi samadhaanavaayitu madam...
nivu bredaddakke nanna sahamata ide...