ಗುರುವಾರ 14 ಜುಲೈ 2011

ಇಳಿಸಂಜೆಯ ಕನವರಿಕೆ

ಮುಚ್ಚಿರುವ ಎವೆಗಳ ಹಿಂದೆ
ಗತದಿನಗಳದ್ದೇ ಸಿಹಿ-ಕಹಿ ನೆನಪು
ಸಿಗದ ಸಂತಸದ ಕ್ಷಣಗಳ ಮೆಲುಕು,
ಮುಪ್ಪಲ್ಲೂ ಕಾಡುವುದು ಸವಿಗನಸು

ಸುಕ್ಕುಗಟ್ಟಿದ ಚರ್ಮ, ದೇಹಕ್ಕಂಟಿಹುದು
ವಯಸಿನ ಲೆಕ್ಕಾಚಾರ ಒಮ್ಮೊಮ್ಮೆ
ಈ ಮನಸಿಗಂತೂ ಸಿಗದು..

ನೆರೆತ ಕೂದಲುಗಳ ಸಿಕ್ಕು
ಬಿಡಿಸುವಾಗೆಲ್ಲಾ ಮಬ್ಬು ಮಬ್ಬು
ಕೊರಳೊಳಗಿನ ಒಂಟಿ ಸರದೊಳು
ಹುಡುಕುತಿವೆ ಕಪ್ಪು ಮಣಿಗಳನೇ
ಅದುರುವ ಕೈಬೆರಳುಗಳು.

ಹಿಂತಿರುಗಿದಷ್ಟೂ ಭೂತಗಳದೇ ಕಾಟ
ಭವಿತವ್ಯದ ಕೊನೆಹೆಜ್ಜೆಯತ್ತ
ಸಾಗುತಿದೆ ಇಳಿಸಂಜೆಯ ಈ ಪಯಣ...
ಇಂದು ಮಾತ್ರ ಒಳ ಹೊರಗೆಲ್ಲಾ,
ತುಂಬಿಹುದು ಬರೀ ಶೂನ್ಯ.

--ತೇಜಸ್ವಿನಿ ಹೆಗಡೆ.

10 comments:

  1. ನಿಮ್ಮ ಇತ್ತೀಚಿನ ಕವನಗಳು ತುಂಬಾ ಚೆನ್ನಾಗಿವೆ....

    ಪ್ರತ್ಯುತ್ತರಅಳಿಸು
  2. ತುಂಬಾ ಚೆನ್ನಾಗಿದೆ ಕವನ... ಬದುಕೇ ಹಾಗೆ ಕನವರಿಸಲೇ ಬೇಕಾಗುತ್ತೆ...

    ಪ್ರತ್ಯುತ್ತರಅಳಿಸು
  3. ಚೆನ್ನಾಗಿದೆ ಕವನ ತೇಜಸ್ವಿನಿ.

    ಪ್ರತ್ಯುತ್ತರಅಳಿಸು
  4. ಸರಳ ಭಾವದಲ್ಲಿ ವ್ಯಕ್ತಪಡಿಸಿದ್ದು ಚೆನ್ನಾಗಿದೆ, ಕವನದ ಮಟ್ಟಿಗೆ. ಬದುಕಿಗೆ ಈ ನಿರಾಸೆ ಸಲ್ಲ !

    ಪ್ರತ್ಯುತ್ತರಅಳಿಸು
  5. ದಿನೇಶ್ ಅವರೆ,

    ತುಂಬಾ ಧನ್ಯವಾದಗಳು.

    ಮನಸು,

    ಹೌದು... ಬದುಕೊಂದು ಕನವರಿಕೇ ಸರಿ ಒಮ್ಮೊಮ್ಮೆ... ತುಂಬಾ ಧನ್ಯವಾದಗಳು :)

    ವಾಣಿ,

    ಥ್ಯಾಂಕ್ಸು :)

    ಸುಮ, ಪ್ರವರ ಕೆ.ವಿ.,

    ತುಂಬಾ ಧನ್ಯವಾದಗಳು.

    ಸುಬ್ರಹ್ಮಣ್ಯ ಅವರೆ,

    ಸ್ಪಂದನೆಗೆ ತುಂಬಾ ಧನ್ಯವಾದಗಳು. ಇದು ನಿರಾಸೆಯಲ್ಲಾ.. ನಿರ್ಲಿಪ್ತತೆ. ಆಶಾಕಿರಣವೂ ಜೊತೆಯಲ್ಲಿದೆ.. ಆದರೆ ಅಂತಿಮ ಪಯಣದತ್ತ ಒಂಟಿ ಹೆಜ್ಜೆ ಇಡುವಾಗ ಮೂಡುವ ಒಂದು ತರಹದ ಶೂನ್ಯಭಾವದ ಕನವರಿಕೆಯಷ್ಟೇ.. ಕಲ್ಪನೆ/ವಾಸ್ತವ ಎರಡೂ :)

    ಪ್ರತ್ಯುತ್ತರಅಳಿಸು
  6. ಇಳಿಸಂಜೆಯ ಮನದ ದುಗುಡ ಚೆನ್ನಾಗಿ ಚಿತ್ರೀಸ್ದ್ದಿರಾ... ಬೂತದ ಭೂತಗಳ ಕನವರಿಕೆ ಜೊತೆ ಇಹಿ ನೆನಪುಗಳು ಸೇರಿದ್ದಾರೆ ಚೆಂದಿತ್ತು...

    ಪ್ರತ್ಯುತ್ತರಅಳಿಸು